ನತದೃಷ್ಟರಿವರು

ಕವಿತೆ

ನತದೃಷ್ಟರಿವರು

ಡಾ.ಶಿವಕುಮಾರ ಮಾಲಿಪಾಟೀಲ

ಹೆತ್ತವರ ಪ್ರೀತಿ ಸಿಗದ,
ಸಮಾಜಕ್ಕೂ ಬೇಡವಾದ ನತದೃಷ್ಟರಿವರು
ಎಲ್ಲರೂ ಇದ್ದರೂ ಯಾರು ಇಲ್ಲದ ಅನಾಥರಿವರು
ಮಾನವ ಜನ್ಮದಲ್ಲಿ ಹುಟ್ಟಿದರು ನಿತ್ಯ ನರಕ ಅನುಭವಿಸುವವರು

ದೀಪಾವಳಿಯ ಬೆಳಕು ಕಾಣದವರು
ದಸರಾ ಬನ್ನಿ ಮುಡಿಯದವರು
ಯುಗಾದಿಯ ಹರುಷ ಪಡೆಯದವರು
ಗೌರಿಯ ಆರತಿ ಇಲ್ಲದ ಸಹೋದರರ ರಾಖಿಯ ಪ್ರೀತಿ ಸಿಗದವರು

ದುಃಖ ಖಿನ್ನತೆ ದಿನದ ಅಡುಗೆ
ಅಪಮಾನಗಳೆ ಉಡುಗೆ ತೊಡುಗೆ
ಎದೆಯೊಳಗೆ ಬೆಂಕಿ ಇಟ್ಟುಕೊಂಡು
ಹೊರಗೆ ಶೃಂಗರಿಸಿ ನಿಂತವರು
ಅತೃಪ್ತ ಆತ್ಮಗಳಂತೆ ರಾತ್ರಿಯಲ್ಲಾ ತಿರುಗುವವರು
ಕಾಮುಕರ ಕಾಟಕ್ಕೆ ಕತ್ತಲಲ್ಲಿ ಕತ್ತಲಾದವರು

ಅತ್ತರೆ ಸಮಾಜ ಇಲ್ಲದ
ಸತ್ತರೆ ಸ್ಮಶಾನ ಸಿಗದ
ನೆಲೆ ಇಲ್ಲದ ಬೆಲೆ ಇಲ್ಲದ ಬಯಲಲಿ ಬದುಕ ಕಟ್ಟುವವರು
ಯಾರ ಶಾಪವು ಕಾಣೆ ಜಗದ
ನಿಜ ಪ್ರೀತಿ ಸಿಗದವರು

ಮಾಡದ ತಪ್ಪಿಗೆ ಯಾಕೆ ಲೈಂಗಿಕ ಅಲ್ಪಸಂಖ್ಯಾತರಿಗೆ ಶಿಕ್ಷೆ?
ಇರಲಿ ಮಾನವೀಯತೆಯ ,
ಸಮಾನತೆಯ ಶ್ರೀರಕ್ಷೆ
ಅಪಹಾಸ್ಯ ಬೇಡ ,ಕೊಡೋಣ ಅವರಿಗೂ ಸ್ವಾಭಿಮಾನದ ಬದುಕು
ಸಿಗಲಿ ಎಲ್ಲಾ ರಂಗಗಳಲ್ಲಿ ಭರವಸೆಯ ಬೆಳಕು

*************************************

Leave a Reply

Back To Top