ಸಂಕ್ರಾಂತಿ ಕಾವ್ಯ ಸುಗ್ಗಿ
ಕತ್ತಲೆಯನ್ನು ಹಿಂಜಿ ಪಡೆದ ಬೆಳಕು
ಹೇಮಾ ಸದಾನಂದ್ ಅಮೀನ್
ಕಣ್ಣೆದುರು ಹಾದುಹೋಗುವ ಚಿತ್ರಗಳನ್ನು
ದಂಗಾಗಿ ನೋಡುತ್ತಿದ್ದಂತೆ ಎಲ್ಲವೂ
ಹೊಸದಾಗಿ ಕಾಣಿಸಿಕೊಳ್ಳುವವು
ಅಪರಿಚಿತ ನಗರದ ಸಂತೆಯಲ್ಲಿ
ಮಾರಾಟದ ಸರಕುಗಳಾಗಿ ಹರಾಜಿಗೆ
ಕಾದು ಕುಳಿತ ವಸ್ತುಗಳಲ್ಲಿ
ಒಂದಿಷ್ಟು ಭಾವನೆಗಳೂ ತಿಳಿಯದಂತೆ
ಮಾರಿ ಹೋಗುವುದು
ಸಾಂತ್ವನದ ಕ್ಷಣದಲ್ಲಿ ಹೊಸ ಪರಿಚಯ
ಜೀವವೀಣೆ ತಳಿದು ಮಿಡಿದ ತಂತಿಯ
ಲೆಕ್ಕ ತಪ್ಪಿಹೋದರೂ ಸೋಜಿಗವಲ್ಲ
‘ ಸಬ್ ಚಲ್ತಾ ಹೈ’ ಎಂಬ ದನಿಯಲಿ
ಕರಗಿದ ಮೌನ ಆಗಾಗ ಮಿಸುಕಾಡಿದರೂ
ಮಾತಿನ ಚೌಕಟ್ಟಿನಾಚೆ ಸ್ತಬ್ದವಾಗುವ
ಲಾಲಿ ಹಾಡುಗಳನ್ನು ನೀವೂ ಕೇಳಿರಬಹುದು
ಇದು ನಶೆ, ಇದ್ದುದ್ದನ್ನು ಮರೆತು
ಇಲ್ಲದರ ಹಿಂದೆ ಧಾವಿಸುವ ಮತ್ತು
ತೊದಲು ಹೆಜ್ಜೆಗಳನ್ನಿಡುತ್ತಾ ಕಂಪನದ ಕೈಗಳಿಂದ
ಕತ್ತಲೆಯನು ಬಿಡಿ ಬಿಡಿಯಾಗಿ ಹಿಂಜಿ
ಬೆಳಕಿನ ರೂಪ ಕೊಡುವ ಹುಚ್ಚು ಹಠದಲಿ
ಗೆದ್ದವರು ಸೋತವರು ಒಂದೇ ಗ್ರಹದ
ಒಂದೇ ಮನೆಯ ಜೀವಿಗಳೆಂದರೆ ,
ನಿಮಗೂ ಆಶ್ಚರ್ಯವಾದಿತು!
ಚೆಂದ ಕವಿತೆ. ಧ್ವನಿಪೂರ್ಣ