ಶರಣರ ಸಂಗಾತಿ
“ಡಾ.ಶಶಿಕಾಂತ್ ಪಟ್ಟಣರಾಮದುರ್ಗ
ಸಾವಿಲ್ಲದ ಶರಣರು ಮಾಲಿಕೆ
“ರಾಜಯೋಗಿ ಶ್ರೀಬೀಳೂರುಗುರುಬಸವ ಸ್ವಾಮಿಗಳು


ಬಸವೋತ್ತರ ಕಾಲದ ಹತ್ತೊಂಬತ್ತನೆಯ ಶತಮಾನದ ಮಹಾತಪಸ್ವಿ ಶ್ರೀ ಅಥಣಿಯ ಮುರುಗೇಂದ್ರ ಸ್ವಾಮಿಗಳ ಪಡಿನೆರಳು ಅವರ ಕೃಪಾಕಟಾಕ್ಷದಲ್ಲಿ ಲಿಂಗ ಹಸ್ತದ ಆಶೀರ್ವಾದದಿಂದ ಜಗವ ಬೆಳಗುವ ಧೈತ್ಯ ಚೇತನ ರಾಜಯೋಗಿ ಬೀಳೂರು ಗುರುಬಸವ ಸ್ವಾಮಿಗಳು.
ಕಲಬುರ್ಗಿ ಸಮೀಪದ ಹತ್ತಿರವಿರುವ ಹಂಗರಗಿ ಎಂಬ ಊರು ಇದೆ ಆ ಊರಿನ ಶ್ರೇಷ್ಠ ಸದ್ಗುಣ ಮಣಿಯಾದ ರಾಮನಗೌಡ ಮತ್ತು ಚೆನ್ನಮ್ಮ ಎಂಬ ಲಿಂಗಾಯತ ಬಣಜಿಗ ದಂಪತಿಗಳ ಉದರದಿಂದ ಜನಿಸಿ ಬಂದ ಶಿಶುವೇ ಶ್ರೀ ಗುರುಬಸವ ಶಿವಯೋಗಿಗಳು.1843ರಲ್ಲಿ ರಾಮನಗೌಡ ಮತ್ತು ಚೆನ್ನಮ್ಮನ ಉದರದಿಂದ ಜನಿಸಿದ ಮಗುವಿನ ಮೊದಲ ಹೆಸರು. ಈ “ಜೀವಪ್ಪ” ಎಂಬ ಮಗು ಬಡ ಕುಟುಂಬದಲ್ಲಿ ನಾಲ್ಕನೆಯವ. ಈ ಮಗು ಅತ್ಯಂತ ಚಿರದ್ರೂಪಿ, ಸುಗುಣ ಚಾಣಾಕ್ಷ ದಷ್ಟ ಪುಷ್ಟ ಚುರುಕಾಗಿದ್ದನು. ನೋಡುವವರ ಕಣ್ಮನಗಳನ್ನು ಸೆಳೆಯುವ ಆಕರ್ಷಕ ಬಾಲಕ ಜೀವಪ್ಪನದು.
ಬಾಲ್ಯ ಮತ್ತು ಬಡತನ
——————-
ಬಾಲಕ ಜೀವಪ್ಪನು ಉಂಡು ತಿಂದು ಅಡ್ಡಾಡುವ ವಯಸ್ಸಿನಲ್ಲಿ (4-5 ವರ್ಷ) ಹಂಗರಗಿ ಗ್ರಾಮದಲ್ಲಿ ಭೀಕರ ಬರಗಾಲ ಕಾಲಿಟ್ಟಿತು. ಆ ಭಾಗದಲ್ಲಿಯ ಜೀವಿಗಳಿಗೆ ಊಟಕ್ಕೆ ಆಹಾರ ಇಲ್ಲದಾಯಿತು ಕುಡಿಯಲು ನೀರಿಲ್ಲದಾಯಿತು. ಅನ್ನ ನೀರಿಲ್ಲದೆ ಜೀವ ಬಿಡುವ ಪ್ರಸಂಗ ಬಂದೊದಗಿತು. ಆ ಬರಗಾಲ ಅತ್ಯಂತ ಭೀಕರವಾಗಿತ್ತು ಜನತೆಗೆ ಅನ್ನ, ನೀರು ಆಹಾರ ದೊರೆಯದೆ ಕೆಲವರು ಪ್ರಾಣ ಕಳೆದುಕೊಂಡರು,ಹಲವರು ಊರು ಬಿಟ್ಟು ಹೋದರು. ಊರು ಬಿಟ್ಟು ಹೊರಟವರಲ್ಲಿ ರಾಮನಗೌಡರು ಒಬ್ಬರು, ಮಡದಿ ಮಕ್ಕಳನ್ನು ಕರೆದುಕೊಂಡು ಊರೂರ ಅಲೆಯುತ್ತಾ ಅಫ್ಜಲಪುರಕ್ಕೆ ಬಂದು ನೆಲಿಸಿದರು. ಅಲ್ಲಿ ಕೆಲವು ದಿನ ಕಾಲ ಕಳೆದು, ಮತ್ತೆ ಕೆಲಸ ಹುಡುಕುತ್ತ ಹೊಟ್ಟೆ ಪಾಡಿಗಾಗಿ ಮತ್ತೆ ಊರು ಅಲೆಯುತ್ತಾ ಸಿಂದಗಿ ಊರಿಗೆ ಬಂದು ತಲುಪುತ್ತಾರೆ. ಸಿಂದಗಿಯ ವಿರಕ್ತಮಠದ ಅಧಿಪತಿಗಳಾದ ಶ್ರೀ ಷಣ್ಮುಖ ಸ್ವಾಮಿಗಳು ನೀವು ಯಾರು ಏತಕ್ಕಾಗಿ ಬಂದಿರಿ ಎಲ್ಲ ಸಮಾಚಾರವನ್ನು ವಿಚಾರಿಸಿ ತನ್ನಲ್ಲೇ ಕೆಲವು ದಿನ ಉಳಿಯಲು ಹೇಳಿದರು.
ಶ್ರೀಗಳ ಆಶ್ರಯ ಪಡೆದ ರಾಮನಗೌಡರು ನಾಲ್ಕಾರು ದಿನ ಇದ್ದು ಜೀವನದ ಮುಂದಿನ ದಾರಿಯನ್ನು ಚಿಂತಿಸುತ್ತಾ ಚೆನ್ನಮ್ಮನಿಗೆ ಹೇಳುತ್ತಾರೆ ಈ ಚಿಕ್ಕ ಮಗ ಜೀವನ ಈ ಅಲೆದಾಟ ಮತ್ತು ಕಷ್ಟದ ಜೀವನವನ್ನು ಹೇಗೆ ಸಹಿಸಿಯಾನು ಆದ್ದರಿಂದ ಅವನನ್ನು ಈ ಮಠದಲ್ಲಿಯೇ ಬಿಟ್ಟು ನಾವು ಮುಂದೆ ಹೋಗೋಣ ಎಂದು ಹೇಳುತ್ತಾರೆ ಆಗ ಒಪ್ಪದ ತಾಯಿ ಕರುಳಿನ ಕುಡಿಯನ್ನು ಬಿಟ್ಟು ಹೋದ ಮಹಾ ಪಾಪಿ ನಾನಾಗುವುದೇ ಎಂದು ಬಿಕ್ಕಿ ಬಿಕ್ಕಿ ಅತ್ತಳು.ಕೊನೆಗೆ ತನ್ನ ನನ್ನ ಮಗ ಎಲ್ಲಿಯಾದರೂ ಇರಲಿ ಸುಖವಾಗಿರಲಿ ಎಂದು ಗಂಡನ ನಿರ್ಧಾರವನ್ನು ಒಪ್ಪಿ ಮಲಗಿದ ಕಿರಿ ಮಗನನ್ನು ಮಠದಲ್ಲಿ ಬಿಟ್ಟು ಮಕ್ಕಳೊಂದಿಗೆ ಮುಂದೆ ಹೊರಟು ಹೋದರು.
ಇತ್ತ ಮರುದಿನ ಜೀವಪ್ಪ ತನ್ನ ಕುಟುಂಬದವರು ತಂದೆ ತಾಯಿ ಕಾಣದಾಗಲು ಹೆದರಿ ಮಠದಲ್ಲಿ ಹುಡುಕುತ್ತಾ ಅಳತೊಡಗಿದನು. ಅಂದಿನ ಮಠದೊಡೆಯರಾದ ಅಧಿಪತಿಗಳು ಶ್ರೀ ಷಣ್ಮುಖ ಸ್ವಾಮಿಗಳು ಸಂತೈಷಿ ಸಮಾಧಾನಪಡಿಸಿ ಕೆಲಸಕ್ಕೆ ಬೇರೆ ಕಡೆಗೆ ಹೋಗಿದ್ದಾರೆ ಎಂಟು ದಿನಗಳಲ್ಲಿ ಬಂದು ನಿನ್ನನ್ನು ಕರೆದುಕೊಂಡು ಹೋಗುತ್ತಾರೆ ಎಂದು ಸಮಾಧಾನ ಪಡಿಸಿ ತಮ್ಮ ಶ್ರೀ ಮಠದಲ್ಲಿ ಇರಿಸಿಕೊಂಡರು.
ಕೆಲವು ದಿನ ಕಳೆದ ನಂತರ ಮಗು ಜೀವಪ್ಪ ಗುರುವಿನ ಸೇವೆಯಲ್ಲಿ ತಂದೆ ತಾಯಿಗಳನ್ನು ಮರೆತು ಅಕ್ಷರ ಜ್ಞಾನ ಕಲಿಕೆ ಓದುವಿನಲ್ಲಿ ಕಾಲ ಕಳೆಯುತೊಡಗಿದನು.
ಸುಂದರವಾದ ಜೀವಪ್ಪನನ್ನು ಚಿಕ್ಕವನಾಗಿದ್ದ ಕಾರಣ ಅವನ ಪಾಲನೆ ಪೋಷಣೆಗೆಂದು ಗುರುಗಳು ಊರಿನ ಸೆಟ್ಟರ (ಪಟ್ಟಣಶೆಟ್ಟಿ )ಅವರ ಮನೆತನದವರಿಗೆ ಜೀವಪ್ಪನ ಜವಾಬ್ದಾರಿ ಹೊರೆಯನ್ನು ವಹಿಸುತ್ತಾರೆ. ಮುಂದೆ ಜೀವಪ್ಪ ಪಟ್ಟಣಶೆಟ್ಟಿಯವರ ಮನೆಯಲ್ಲಿ ಸುಖದಿಂದ ಬೆಳೆಯುತ್ತಾನೆ.
ಮಠಗಳ ಉಸ್ತುವಾರಿ
—————-
ಜೀವಪ್ಪಾ ದೊಡ್ಡವನಾದನೆಂದು, ಮತ್ತು ಶ್ರೀ ಷಣ್ಮುಖಸ್ವಾಮಿಗಳಿಗೆ ವಯಸ್ಸಾಯಿತು ಎಂದು ತಮ್ಮ ಜೊತೆಗೆ ಜೀವಪ್ಪನನ್ನು ಮಠಗಳ ವ್ಯವಹಾರವನ್ನು ಕೊಡಲು ನಿರ್ಧರಿಸಿದರು. ಜೀವಪ್ಪನನ್ನು ಮುಂದೆ ಇತ್ತು ಕೊಂಡು ಪ್ರಶಸ್ತವಾದ ಹೊಸ ಕಲ್ಮಠದ ಕಟ್ಟಡ ಕೆಲಸ ಸಂಪೂರ್ಣ ಮುಗಿಸುತ್ತಾರೆ. ಕಲ್ಮಠವು ಪೂರ್ಣವಾದ ಮೇಲೆ ಹಲವಾರು ಮಠದ ಕೆಲಸಗಳಿಗೆ ಜೀವಪ್ಪನನ್ನು ಸ್ವಾಮಿಗಳು ಉಸ್ತುವಾರಿಗೆಂದು ನೇಮಿಸುತ್ತಾರೆ. ಗುರುಗಳು ಹೇಳಿದ ಎಲ್ಲಾ ಕೆಲಸಗಳನ್ನು ಅತ್ಯಂತ ನಿಷ್ಠೆಯಿಂದ ಶ್ರದ್ಧೆಯಿಂದ ಜೀವಪ್ಪ ಮಾಡುತ್ತಿದ್ದರು. ಇದನ್ನೆಲ್ಲಾ ನೋಡಿದ ಸಿಂಧಗಿ ಊರಿನ ಭಕ್ತರು ನೀಬ್ಬೆರಗಾಗಿ ಜೀವಪ್ಪನ ಕಾಯಕವನ್ನು ಶ್ಲಾಘಿಸುತ್ತಿದ್ದರು.
ಗುರುಬಸವ ನಾಮಕರಣ
——————————-
ಜೀವಪ್ಪನ ಗುಣ ಸ್ವಭಾವವನ್ನು ಕಂಡು ಸಂತಸಗೊಂಡ ಪೂಜ್ಯರು ಅವನಲ್ಲಿ ಅತ್ಯಂತ ಪ್ರೀತಿಯ ಅದರ ಭಾವದಿಂದ ಕಾಣಲಾರಂಭಿಸಿದರು. ಈಗ ಜೀವಪ್ಪನಿಗೆ 12 ವರ್ಷ . 12 ವರ್ಷದ ಬಾಲಕನನ್ನು ಗೆಳೆಯ ರಾಚಯ್ಯನ ಜೊತೆಗೆ ಷಣ್ಮುಖ ಸ್ವಾಮಿಗಳು ಸಂಖದ ಗುರುಗಳ ಕಡೆಗೆ ಕಳುಹಿಸಿಕೊಡುತ್ತಾರೆ ಗೆಳೆಯ ರಾಚಯ್ಯನೊಂದಿಗೆ ಬಂದ ಜೀವಪ್ಪನವರು ಇಂದಿನ ಸಾಂಗ್ಲಿ ಜಿಲ್ಲೆಯ ಜತ್ತ ತಾಲೂಕಿನ ಸಂಖ ಗ್ರಾಮದಲ್ಲಿರುವ ವಿರಕ್ತಮಠದಲ್ಲಿ ಗುರುಗಳ ಅಣತಿಯಂತೆ ಗುರು ದಿಕ್ಷೆಯನ್ನು ಪಡೆದು ಗುರು ಸೇವೆಯಲ್ಲಿ ತೊಡಗಿದರು. ಇವರ ಸೇವಾ ಮನೋಭಾವವನ್ನು, ಕಾಯಕ ನಿಷ್ಠೆ ಗುರುಭಕ್ತಿಯನ್ನು ಕಂಡು ಸಂಕದ ಗುರುಗಳು “ಗುರುಬಸವ” ಎಂದು ಹೊಸ ನಾಮಕರಣ ಮಾಡಿದರು. ಮತ್ತು ಮಠದ ಅಧಿಕಾರವನ್ನು ತೆಗೆದುಕೋ ಎಂದು ಗುರುಬಸವರಿಗೆ ಹೇಳಿದರು. ಆಗ ಸ್ವತಃ ಗುರುಬಸವರೇ ಮಠದ ಅಧಿಕಾರವನ್ನು ರಾಚಯ್ಯನಿಗೆ ಕೊಡಿರಿ ಎಂದು ನಸುನಗುತ್ತಾ ಹೇಳಿದರು. ಎಳೆ ಹರಿಯದ ಆ ಗುರುಬಸವ ದೇವರು ತನ್ನ ಗೆಳೆಯನಿಗಾಗಿ ಮಾಡಿದ ಉದಾರತೆಯ ನಿಷ್ಕಾಮ ಭಾವ,ವಿರಕ್ತತೆ , ತ್ಯಾಗದ ವಿಷಯವನ್ನು ಅರಿತ ಸಂಖದ ಊರಿನ ಸಮಸ್ತರು ಆಶ್ಚರ್ಯದಿಂದ ಬೆರಗಾದರು. ಗೆಳೆಯ ರಾಚಯ್ಯನಿಗೆ ಮಠದ ಅಧಿಕಾರವನ್ನು ಒಪ್ಪಿಸಿ ಗುರುಗಳ ಆಜ್ಞೆಯಂತೆ ಮುಚ್ಚಂಡಿ ಮತ್ತು ಬೀಳೂರಿಗೆ ಹೋಗುತ್ತಾರೆ. ಮೊದಲು ಮುಚ್ಚಂಡಿಯಲ್ಲಿ ಕೆಲವು ದಿನ ಇದ್ದು, ಮುಂದೆ ಬೀಳೂರಿಗೆ ಹೋಗುತ್ತಾರೆ. ಬೀಳೂರಿನಲ್ಲಿ ವಿರಕ್ತಮಠ ಹಾಳು ಬಿದ್ದಿರುತ್ತದೆ ಅದಕ್ಕೆಂದೆ ಬೀಳೂರು( ಬಿದ್ದ ಊರು – ಹಾಲು ಬಿದ್ದ ಮಠವೊಂದಿತ್ತು ) ಎಂದು ಹೇಸರು ಬಂದಿರಬಹುದು, ಹಾಳು ಬಿದ್ದ ವಿರಕ್ತ ಮಠವನ್ನು ಅತ್ಯಂತ ಸುಪ್ರಸಿದ್ಧ ಮಾಡುವಲ್ಲಿ ಶ್ರೀ ಗುರುಬಸವ ಸ್ವಾಮಿಗಳು ಹಗಲಿರುಳು ಅತ್ಯಂತ ಪರಿಶ್ರಮ, ಕಷ್ಟಪಟ್ಟು ಕಂತಿ ಭಿಕ್ಷೆ ಬೇಡಿ, ಹೊಲ ಮೇಯುವ ಕೆಲಸ ಮಾಡಿ, ಅಲ್ಲಿಯ ಹಲವಾರು ಶರಣರ, ಶರಣೆಯರ ಸಹಕಾರ ಸಹಾಯದಿಂದ ಒಂದು ಹೆಸರಾಂತ ವಿರಕ್ತಮಠವನ್ನಾಗಿ ಮಾರ್ಪಡಿಸುತ್ತಾರೆ ಶ್ರೀ ಗುರುಬಸವ ಸ್ವಾಮಿಗಳು.
ಅಥಣಿಯ ಶ್ರೀ ಮುರುಗೇಂದ್ರ ಶಿವಯೋಗಿಗಳ ಸಂಪರ್ಕದಲ್ಲಿ
—————————————————————————-
ಅಥಣಿಯ ಶ್ರೀ ಮುರುಗೇಂದ್ರ ಶಿವಯೋಗಿಗಳ ಸಮಕಾಲೀನರಾದ ಶ್ರೀ ಗುರುಬಸವ ಸ್ವಾಮಿಗಳು ಸಮಾಜದ ಏಳಿಗೆಗಾಗಿ ಸಮಾಜದ ಉದ್ಧಾರಕ್ಕಾಗಿ ತಮ್ಮನ್ನು ತಾವು ಸಮಾಜಕ್ಕೆ ಅರ್ಪಿಸಿಕೊಂಡು ಹಲವಾರು ಸಮಾಜಮುಖಿ ಸೇವಾ ಕಾರ್ಯಗಳನ್ನು ಮಾಡುವಲ್ಲಿ ಸೈ ಎನಿಸಿಕೊಂಡ ಶ್ರೀ ಗುರುಬಸವ ಶಿವಯೋಗಿಗಳು ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಕ್ಷೇತ್ರದಲ್ಲಿ ಸೇವೆಗೈಯುವದರ ಮೂಲಕ ಕಾರ್ಯ ಮಾಡುವುದನ್ನು ಕಂಡು ಅವರನ್ನು ಗಚ್ಚಿನ ಮಠಕ್ಕೆ ಬರ ಹೇಳುತ್ತಾರೆ. ಅಂದು ಅಥಣಿಯ ಗಚ್ಚಿನ ಮಠವೆಂದರೆ ಶ್ರೀ ಮುರುಗೇಂದ್ರ ಶಿವಯೋಗಿಗಳ ಸಮ್ಮುಖದಲ್ಲಿ ನಿತ್ಯ ಶಿವಯೋಗ ಅನುಭಾವ ಚಿಂತನಾ ಗೋಷ್ಠಿಗಳು ಜರುಗುತ್ತಿದ್ದವು. ಬಿದರಿ ಶಿವಕುಮಾರಸ್ವಾಮಿಗಳು, ಹುಲ್ಯಾಳ ಶ್ರೀಗಳು, ಧಾರವಾಡದ ಮೃತ್ಯುಂಜಯ ಸ್ವಾಮಿಗಳು, ಅವರ ತಂಡದಲ್ಲಿ ದೊಡ್ಡ ಧಡೂತಿ ಮೈಕಟ್ಟನ್ನು ಹೊಂದಿದ ಶ್ರೀ ಗುರು ಬಸವ ಸ್ವಾಮಿಗಳು ಸೇರಿಕೊಳ್ಳುತ್ತಾರೆ.
ಶ್ರೀ ಗುರುಬಸವರ ದೈವಿಕ ಶಕ್ತಿಗೆ ಮಾರುಹೋದ ಭಕ್ತರು ಬೀಳೂರಿನ ಮೂರ ಅಂಕಣದ ಕೋಣೆಯ ಮುಂದೆ ಒಂದು ಮಠವನ್ನು ಕಟ್ಟಿಸುತ್ತಾರೆ. ಇವರ ಪ್ರಭಾವ ಕರ್ನಾಟಕ ಮಹಾರಾಷ್ಟ್ರಗಳಲ್ಲಿ ಬೆಳೆದಂತೆ ಇವರಿಗಾಗಿ ಕಟ್ಟಿಸಿದ ಮಠ ಸಣ್ಣದಾಗುತ್ತದೆ. ಅಥಣಿಯ ಮುರುಗೇಂದ್ರ ಶ್ರೀಗಳ ಮಾರ್ಗದರ್ಶನದ ಮೇರೆಗೆ ಭವ್ಯವಾದ ಮಠವನ್ನು ಕಟ್ಟಿಸುತ್ತಾರೆ. ಜತ್ತ ಮತ್ತು ಉಮರಾಣಿಯ ಸಂಸ್ಥಾನಿಕರು ಹತ್ತಾರು ಎಕರೆ ಭೂಮಿಗಳನ್ನು ಬೀಳೂರು ಮಠಕ್ಕೆ ದತ್ತಿಯಾಗಿ ಕೊಟ್ಟು ಪುನೀತರಾಗುತ್ತಾರೆ .
ಅಸೂಹೆಯ ಕಿಚ್ಚು ಆರಿತು
—————————————
ಬೀಳೂರು ಶ್ರೀ ಗುರುಬಸವವರ ಸ್ವಾಮಿಗಳ ಸಾಧನೆಯನ್ನು ಕಂಡು ದ್ವೇಷ ಮತ್ಸರದ ವ್ಯಕ್ತಿ ಗಣಪತಿಯೆಂಬುವನು ಶ್ರೀ ಗುರುಬಸವರು ಒಬ್ಬರೇ ಮಠದಲ್ಲಿದ್ದಾಗ ಗುರುಬಸವವರ ಚಾರಿತ್ರ್ಯಕ್ಕೆ ಕುಂದುಂಟು ಮಾಡಲು ಚೆನ್ನವ್ವ ಎಂಬ ವೇಶ್ಯೆಗೆ ಹಣ ಕೊಟ್ಟು ಗುರುಬಸವರಿರುವ ಕೋಣೆಗೆ ಕಳುಹಿಸಿದ. ಆ ವೇಶ್ಯೆಯ ಕೈಗಳ ಬಳೆಯ ಸಪ್ಪಳವನ್ನು ಆಲಿಸಿದ ಶ್ರೀ ಗುರುಬಸವವರು ಯಾರು ತಾಯಿ ಅಲ್ಲಿಯೇ ನಿಲ್ಲು ನಾನೇ ಹೊರಗೆ ಬರುತ್ತೇನೆ ಅವ್ವ ಎಂದರಂತೆ
.
ವೇಶ್ಯೆಯನ್ನು ತಾಯಿಯಾಗಿ ಸಂಭೋಧಿಸಿದಾಗ ತಾನು ತಪ್ಪು ದಾರಿ ತುಳಿಯುತ್ತಿದ್ದೇನೆ ಎಂದು ಚೆನ್ನವ್ವ ನಿಧಾನವಾಗಿ ಹೆದರಿ ದೈವದ ತೇಜೋವಧೆಗೆ ಹೊರಟಿರುವುದು ತಪ್ಪು ಎಂದು ತಿಳಿದು ಪರಿತಪಿಸಿ ಹಿಂದೆ ಸರಿದಳು. ಮುಂದೆ ವೇಶ್ಯೆಯ ಕಣ್ಣು ಹೋಗಿ ಭಿಕ್ಷೆ ಬೇಡಿ ಬದುಕುವ ಕೆಟ್ಟ ಪರಿಸ್ಥಿತಿ ನಿರ್ಮಾಣವಾಯಿತು. ವೇಶ್ಯೆಯನ್ನು ಕಳಿಸಿದ ಆಗರ್ಭ ಶ್ರೀಮಂತ ಗಣಪತಿಯೆಂಬುವನ ವಂಶವು ನಿರ್ನಾಮವಾಯಿತು. ಗಣಪತಿಯ ಮಕ್ಕಳು ಅವನ ಕಣ್ಣ ಮುಂದೆ ತೀರಿಹೋದರು.
ಬ್ರಹ್ಮ ರಾಕ್ಷಸ ಬಡೆದುಕೊಂಡ ಬಾಲಕನಿಂದ ಪಾಠ ಕಲಿತ ಶ್ರೀ ಗುರುಬಸವರು
———————————————————————————————-
ಒಂದೊಮ್ಮೆ ಅಥಣಿಯ ಶ್ರೀ ಮುರುಗೇಂದ್ರ ಶಿವಯೋಗಿಗಳು ತಮ್ಮ ಜೊತೆಗೆ ಬಿದರಿ ಶಿವ ಕುಮಾರಶಿವಯೋಗಿಗಳು ಮತ್ತು ರಾಜಯೋಗಿ ಬೀಳೂರು ಶ್ರೀ ಗುರುಬಸವ ಸ್ವಾಮಿಗಳನ್ನು ಕರೆದುಕೊಂಡು ಅಥಣಿಯ ಪಕ್ಕದ ಹಳ್ಳಿಗೆ ಶ್ರಾವಣ ಮಾಸದ ಶಿವಾನುಭವ ಪ್ರವಚನಕ್ಕೆ ಹೋಗಿರುತ್ತಾರೆ. ಪ್ರವಚನ ಮುಗಿಸಿ ಮರಳಿ ಅಥಣಿಗೆ ಬರುವಾಗ ಕೃಷ್ಣಾ ನದಿ ತುಂಬಿ ಹರಿಯುತ್ತಿರುತ್ತದೆ. ಎತ್ತು ಮತ್ತು ಬಂಡಿಯಲ್ಲಿದ್ದ ಸ್ವಾಮಿಗಳು ಕೊಂಚ ದಿಗ್ಭ್ರಾಂತರಾಗುತ್ತಾರೆ . ನದಿ ಹೇಗೆ ದಾಟುವುದು. ಕೆಲ ಹೊತ್ತ ದಡದಲ್ಲಿಯೇ ಕುಳಿತು ಕೊಳ್ಳುತ್ತಾರೆ. ಏನೋ ಅಥಣಿಯ ಶ್ರೀ ಮುರುಗೇಂದ್ರ ಶ್ರೀಗಳು ಚಕ್ಕಡಿಯನ್ನು ಅಲ್ಲಿಯೇ ದಡದಲ್ಲಿ ಬಿಟ್ಟು ನದಿಯನ್ನು ದಾಟೋಣ ಎನ್ನುತ್ತಾರೆ. ಆಗ ಬಿದರಿ ಶ್ರೀಶಿವಕುಮಾರ ಸ್ವಾಮಿಗಳು ಮತ್ತು ಇತರ ಶಿಷ್ಯರು ಅಥಣಿಯ ಶ್ರೀ ಮುರುಗರೇಂದ್ರ ಸ್ವಾಮಿಗಳ ಮಾತಿಗೆ ಸಮ್ಮತಿಸಿ ಅವರ ಹಿಂದೆ ಹೋಗಲು ನಿರ್ಧರಿಸುತ್ತಾರೆ. ಆದರೆ ಮೈತುಂಬ ರೇಷ್ಮೆ ಬಟ್ಟೆ ಪೇಠಾ ಬಂಗಾರ ಹೊಂದಿದ ರಾಜಯೋಗಿ ಶ್ರೀ ಗುರುಬಸವ ಸ್ವಾಮಿಗಳು ಅಥಣಿಯ ಶ್ರೀ ಮುರುಗೇಂದ್ರ ಶಿವಯೋಗಿಗಳ ಜೊತೆಗೆ ಹೋಗುವದಿಲ್ಲ, ಚಕ್ಕಡಿಯ ಮಾಲಕನೊಂದಿಗೆ ದಡದಲ್ಲಿಯೇ ಕುಳಿತು ಮಧ್ಯ ರಾತ್ರಿ ಕೃಷ್ಣ ನದಿಯು ಇಳಿದ ಮೇಲೆ ಅಥಣಿಗೆ ಬಂದು ತಲುಪುತ್ತಾರೆ.
ಬೆಳಿಗ್ಗೆ ಎಂದಿನಂತೆ ಎದ್ದು ಶ್ರೀಗಳ ಜೊತೆಗೆ ಕುಶಲೋಪರಿ ಮಾತನಾಡಿ ಬಹಿರ್ದೆಸೆಗೆ ಹೊರಟು ನಿಲ್ಲುತ್ತಾರೆ. ಆಗ ಅಥಣಿಯ ಶ್ರೀ ಮುರುಗೇಂದ್ರ ಶ್ರೀಗಳು ಅಪ್ಪವರೆ ನಿನ್ನೆ ನಿಮಗೆ ಅಸ್ತವ್ಯಸ್ತವಾಗಿದೆ ಬೇಗ ಹೋಗಿ ಬನ್ನಿ,ಸ್ನಾನ ಪೂಜೆ ಮುಗಿಸಿ ಪ್ರಸಾದವನ್ನು ಮಾಡೋಣ ಎನ್ನುತ್ತಾರೆ. ಆಗಲಿ ಎಂದು ಒಬ್ಬ ಸೇವಕನೊಂದಿಗೆ ಊರ ಹೊರಗೆ ಹೊರಟು ನಿಲ್ಲುತ್ತಾರೆ. ದಾರಿಯಲ್ಲಿ ಹೋಗುವಾಗ ಬೆಳಿಗ್ಗೆ ಆರರ ಮುಂಜಾವು ಶ್ರಾವಣದ ತುಂತುರ ಮಳೆ ಹನಿಯ ತಂಪು, ಆಗ ಒಂದು ಬಂಡಿಯಲ್ಲಿ ಹಿಂದೆ ಕುಳಿತಿದ್ದ ಬಾಲಕ ಶ್ರೀ ಬೀಳೂರು ಗುರುಬಸವ ಸ್ವಾಮಿಗಳನ್ನು ನೋಡಿ ಅವಹೇಳನ ಮಾಡುತ್ತಾ ಕಿಸಿಕಿಸಿ ನಗುತ್ತಾನೆ, ಶ್ರೀಗಳು ಹೆಚ್ಚಿನ ಮಹತ್ವವನ್ನು ನೀಡದೆ ಮುಂದೆ ಸಾಗುತ್ತಾರೆ, ಆಗ ಹುಡುಗ ಮತ್ತೆ ಇವರತ್ತ ಕೇಕೆ ಹಾಕಿ ನಗುತ್ತಾನೆ, ಸ್ವಲ್ಪ ಮಟ್ಟಿಗೆ ವಿಚಲಿತರಾದ ಪೂಜ್ಯರು ಅಲ್ಲಿರುವ ಜನರನ್ನು ವಿಚಾರಿಸುತ್ತಾರೆ, ಸಿಟ್ಟಿನ ಗುರುಬಸವ ಸ್ವಾಮಿಗಳು ಜನರು ಅಂಜುತ್ತಲೇ ಅಪ್ಪಾರಾ ಹುಡುಗ ಗಾಳಿ ಶಕ ಆಗೈತಿ, ಬ್ರಹ್ಮ ರಾಕ್ಷಸ ಮೈಯೊಳಗ ಹೊಕ್ಕಾನ ಏನು ಮಾಡಿದರೂ ಸರಿ ಆಗಒಲ್ಲದು ಎಂದು ಹುಡುಗನ ತಂದೆ ವಿನಮ್ರವಾಗಿ
ಶ್ರೀ ಗುರುಬಸವರ ಮುಂದೆ ತಮ್ಮ ಅಳಲನ್ನು ತೋಡಿಕೊಳ್ಳುತ್ತಾನೆ, ಆ ಕಾಲದಲ್ಲಿ ಗಾಳಿ ಶಕ, ಪಿಶಾಚಿ ಕಾಟ ಬ್ರಹ್ಮರಾಕ್ಷಸರ ಕಾಟವೆಂಬ ಮಾನಸಿಕ ರೋಗಿಗಳನ್ನು ಅಂತಹ ದುಷ್ಟ ಶಕ್ತಿಗಳಿಂದ ಬಿಡಿಸುವ ವಿಮೋಚನೆ ಮಾಡುವ ಪ್ರಖ್ಯಾತ ಶಿವಯೋಗಿಗಳೆಂದು ಪ್ರತೀತಿ ಪಡೆದಿದ್ದರು.
ಇವುಗಳನ್ನು ಗಮನಿಸಿದ ಶ್ರೀ ಗುರುಬಸವ ಸ್ವಾಮಿಗಳು ಅಲ್ಲಿರುವ ಭಕ್ತರಿಗೆ ನೆಲಕ್ಕೆ ಕಂಬಳಿ ಹಾಕಲು ಹೇಳುತ್ತಾರೆ. ಶ್ರೀ ವಿಭೂತಿ ತರಿಸಿ ಬೇವಿನ ಎಳೆಯ ಚಾಬುಕ ತಮ್ಮಲ್ಲಿದ್ದ ಬೆಳ್ಳಿಯ ಛಡಿಯನ್ನು ತರಿಸುತ್ತಾರೆ. ಬಾಲಕನನ್ನು ಕಂಬಳಿಯ ಮೇಲೆ ಕುಳ್ಳಿರಿಸಿ ಬೆಳ್ಳಿಯ ಛಡಿಯಿಂದ ಬಾಲಕನ ಮೈಮೇಲೆ ಬಾರಿಸಹತ್ತಿದರು. ಇಂತಹ ಹೊಡೆತಕ್ಕೆ ಬಗ್ಗದ ಬಾಲಕನೊಳಗಿನ ಧ್ವನಿ ತಗ್ಗದೆ ನಾನು ಬಿಟ್ಟು ಹೋಗುದಿಲ್ಲೋ ಗುರುಬಸಪ್ಪ ಎಂದು ಚೀರುತ್ತಿತ್ತು. ಬೆಳಗಿನ ಆರರ ಸಮಯ ಮೀರಿ ಮಧ್ಯಾನ್ಹದ ವೇಳೆ ದಾಟಿತು ಇತ್ತ ಗಚ್ಚಿನ ಮಠದಲ್ಲಿ ಶಿವಯೋಗಿಗಳು ತಮ್ಮ ಇತರ ಶ್ರೀಗಳ ಜೊತೆಗೆ ಇವರ ಆಗಮನವನ್ನು ಕಾಯುತ್ತಿದ್ದರು. ಅಥಣಿಯ ಶ್ರೀ ಮುರುಗೇಂದ್ರ ಶಿವಯೋಗಿಗಳು ಪರಿಸ್ಥಿತಿಯ ಸೂಕ್ಷ್ಮತೆಯನ್ನು ಅರಿತು ಶ್ರೀ ಮುರುಗೇಂದ್ರ ಶಿವಯೋಗಿಗಳು ಹುಲಿ ಹುದಲಾಗ ಬಿತ್ತು
ಎಂದು ನಕ್ಕರಂತೆ, ಆಗ ಒಬ್ಬ ಶ್ರೀ ಮಠದ ಭಕ್ತನಿಗೆ ಕರೆದು, ನೋಡಪಾ ಅಥಣಿಯ ಶ್ರೀ ಮುರುಗೇಂದ್ರ ಶಿವಯೋಗಿಗಳು ಸ್ನಾನ ಪೂಜೆ ಮಾಡಿ ಪ್ರಸಾದಕ್ಕೆ ನಿಮ್ಮ ದಾರಿ ಕಾಯಕ ಹತ್ತ್ಯಾರ ಲಗೂನ ಬರಬೇಕೆಂದು ಹೇಳು ಎಂದರಂತೆ. ಅಥಣಿಯ ಹೊರ ವಲಯದಲ್ಲಿ ಜನನಿಭಿಡ ಮಧ್ಯದಲ್ಲಿ ನಡೆಯುತ್ತಿರುವ ಶ್ರೀ ಗುರುಬಸ ಸ್ವಾಮಿಗಳ ಮತ್ತು ಮಾನಸಿಕ ರೋಗಿಯ ಸಂವಾದದದಲ್ಲಿ ಭಕ್ತನು ಶ್ರೀ ಗುರು ಬಸವ ಸ್ವಾಮಿಗಳಿಗೆ ಹೆದರಿ ಅವರ ಹತ್ತಿರ ಹೋಗಿ ಹೇಳದೆ ದೂರದ ಗುಂಪಿನಿಂದ ಬೀಳೂರು ಅಜ್ಜಾರ ಅಥಣಿಯ ಶ್ರೀ ಮುರುಗೇಂದ್ರ ಪೂಜ್ಯರು ಸ್ನಾನ ಪೂಜೆ ಮಾಡಿ ನಿಮ್ಮ ಸಲುವಾಗಿ ಪ್ರಸಾದಕ್ಕೆ ದಾರಿ ಕಾಯಕ ಹತ್ತ್ಯಾರಿ ಲಗೂನ ಬರಬೇಕಂತ ಅಂತ ಕೂಗಿ ಹೇಳುತ್ತಾನೆ, ಅದನ್ನು ಲೆಕ್ಕಿಸದೆ ಬೆಳ್ಳಿಯ ಛಡಿಯಿಂದ ದೆವ್ವ ಬಿಡಿಸುವ ಪ್ರಕ್ರಿಯೆಯಲ್ಲಿ ಶ್ರೀ ಗುರು ಬಸವ ಶ್ರೀಗಳು ಮುಂದುವರೆಯುತ್ತಾರೆ. ಆಗ ಬಾಲಕನಲ್ಲಿದ್ದ ಧ್ವನಿಯು ಏ ಗುರುಬಸಪ್ಪ ನನ್ನ ಬಡಿ ಬ್ಯಾಡ ನಾನು ಇವನ್ನ ಬಿಟ್ಟು ಹೊಕ್ಕೇನಿ ಎಂದು ಚಿರಿದಾಗ, ಶ್ರೀ ಗುರು ಬಸವ ಶ್ರೀಗಳು ಗೆಲುವಿನ ನಗೆ ಬೀರಿ ಜನರ ಮುಂದೆ ತಮ್ಮ ಸಾಹಸ ತೋರಿಸುತ್ತಿರಲು, ಬಾಲಕನೊಳಗಿನ ಆ ಧ್ವನಿ ಮತ್ತೆ ಕೂಗಿ ಏ ಗುರುಬಸಪ್ಪ ನಾನು ನಿನಗ ಹೆದರಿ ಹೊಂಟಿಲ್ಲ, ನಾನು ಈ ಹುಡುಗನ್ನ ಬಿಟ್ಟು ಹೋಗ ಡಿದ್ದರ ಅಲ್ಲಿ ಶ್ರೀ ಮುರುಗೇಂದ್ರ ಶಿವಯೋಗಿಗಳು ಉಪವಾಸ ಬೀಳತಾರ ಅದಕ್ಕ ಬಿಟ್ಟು ಹೊಕ್ಕಿನಿ ಎಂದಿತಂತೆ, ಇದನ್ನು ಕೇಳಿದ ತಕ್ಷಣ ಎದ್ದು ತಮ್ಮ ಕ್ರಿಯಾದಿಗಳನು ಮುಗಿಸಿ ಶ್ರೀ ಗಚ್ಚಿನ ಮಠಕ್ಕೆ ಬಂದು ಸ್ನಾನ ಪೂಜೆ ಮಾಡಿ ಅಥಣಿಯ ಶ್ರೀ ಮುರುಗೇಂದ್ರ ಶಿವಯೋಗಿಗಳಿಗೆ ಅಡ್ಡ ಬಿದ್ದು ತಂದೆ ಗರ್ವದಿಂದ ಮಾಡಿದ ಭಕ್ತಿ ಒಳ್ಳೆಯದಲ್ಲ, ನಿಮ್ಮ ಶಿವಯೋಗ ತಪ್ಪಸ್ಸಿಗೆ ರಾಕ್ಷಸ ಪಿಶಾಚಿಗಳು ಸಹ ಭಯಭೀತಿ ಪಡುತ್ತವೆ ಎಂದರೆ ನೀವು ಸ್ವತಃ ದೇವರೇ ಎಂದೆನ್ನುತ್ತಾ ಅಂದಿನಿಂದಲೇ ತಮ್ಮ ವೈಭವ ಪೂರಿತ ವೇಷ ಭೂಷಣ ಕಳಚಿ ಎಲ್ಲಾ ಒಡವೆ ವಸ್ತ್ರಗಳನ್ನು ಶ್ರೀಗಳ ಪಾದಕ್ಕೆ ಇಟ್ಟು ಅತ್ಯಂತ ಸರಳ ಶಿವಯೋಗದ ಬದುಕನ್ನು ನಡೆಸಿದರು.
ಬಾಗಲಕೋಟೆಯ ಬಸವೇಶ್ವರ ವಿದ್ಯಾವರ್ಧಕ ಸಂಸ್ಥೆ ಸ್ಥಾಪನೆಯ ರೂವಾರಿ.
———————————————————————————————-
ಪೂಜ್ಯರಾದ ಶ್ರೀ ಗುರು ಬಸವ ಸ್ವಾಮಿಗಳು ಬೀಳಗಿಯ 11 ಮಂಟಪದ ಪೂಜೆ ಜರುಗುವುದಿತ್ತು ಅದಕ್ಕಾಗಿ ಬೀಳಗಿಗೆ ದಯಮಾಡಿಸಿದರು. ಬಾಗಲಕೋಟೆಯ ಭಾಗ್ಯೋದಯ ಬಾಗಿಲು ತೆರೆಯಿತು. ಕಾರ್ಯಕ್ರಮ ಮುಗಿಸಿ ಭಕ್ತರ ಆಶೆಯಂತೆ ಬಾಗಲಕೋಟೆಗೆ ಬಂದರು. ಹಲವು ವರ್ಷಗಳ ನಿರಂತರ ಪರಿಶ್ರಮದಿಂದ ಪರಮ ಪೂಜ್ಯ ಶ್ರೀ ಗುರುಬಸವ ಸ್ವಾಮಿಗಳು ಬೀಳೂರು ಇವರು 18-10-1906 ರಂದು ಬಸವೇಶ್ವರ ವಿದ್ಯಾವರ್ಧಕ ಸಂಘವನ್ನು ಸ್ಥಾಪಿಸಿ ಅದರ ಸಂಸ್ಥಾಪಕ ಅಧ್ಯಕ್ಷರಾಗಿ ಕಾರ್ಯವನ್ನು ನಿರ್ವಹಿಸಿದರು.ಬೀಳೂರು ಶ್ರೀ ಗುರುಬಸವ ಸ್ವಾಮಿಗಳು ಹೊತ್ತಿಸಿದ ಜ್ಞಾನ ಜ್ಯೋತಿ ನಾಡನ್ನು ಬೆಳಗ ತೊಡಗಿತು ಬಾಗಲಕೋಟೆ ವಿಜಯಪುರಗಳಲ್ಲಿ ನೂರಾ ಅರವತ್ತಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳನ್ನು ವಿದ್ಯಾರ್ಥಿನಿಲಯಗಳನ್ನು ಬಸವೇಶ್ವರ ವಿದ್ಯಾವರ್ಧಕ ಸಂಘವು ಹೊಂದಿ ಇಂದಿಗೂ ಅನೇಕ ಶಿಕ್ಷಣ ಸಂಸ್ಥೆಗಳನ್ನು ನಡೆಸಲಾಗುತ್ತಿದೆ.
1906ರಲ್ಲಿ ಸ್ಥಾಪಿಸಿದ ಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾಗಿ 1936 ರವರೆಗೆ 30 ವರ್ಷಗಳ ಕಾಲ ಮಾರ್ಗದರ್ಶನ ಮಾಡಿ ಜ್ಞಾನಜ್ಯೋತಿಯನ್ನು ಪ್ರಜ್ವಲವಾಗಿ ಉರಿಯುವಂತೆ ಮಾಡಿದರು ಬೀಳೂರು ಶ್ರೀ ಗುರುಬಸವ ಶ್ರೀಗಳು. ವಿದ್ಯಾ ಅಭಿವೃದ್ಧಿಗಾಗಿ ಬಸವೇಶ್ವರ ವಿದ್ಯಾವರ್ಧಕ ಸಂಘಕ್ಕೆ ತಮ್ಮ ಜೀವನದ ಬಹುಭಾಗವನ್ನು ದಾರೆಯೆದರು ಅಂದು ಅವರು ದಾರೆಯೆರೆದ ಸಾತ್ವಿಕ ಶಕ್ತಿ ಬಾಗಲಕೋಟೆಯನ್ನು, ಉತ್ತರ ಕರ್ನಾಟಕವನ್ನು ಜ್ಞಾನ ಜ್ಯೋತಿಯಾಗಿ ಬೆಳಗಿಸಿದೆ ಮತ್ತು ಬೆಳಗುತ್ತದೆ.
ಬಯಲಾದ ದಿವ್ಯ ಚೇತನ
—————————————-
ಪರಮಪೂಜ್ಯ ಶ್ರೀ ಗುರು ಬಸವ ಸ್ವಾಮಿಗಳು 1936 ರಲ್ಲಿ ತಮ್ಮ ಭೌತಿಕ ಶರೀರವನ್ನು ಬಯಲು ಭಾಮಿನಿಗೆ ಅರ್ಪಿಸಿ ಶರಣರ ಆಶಯದಂತೆ ನೆಲದ ಪುಣ್ಯವನ್ನು ನೆಲಕ್ಕೆ ಇಟ್ಟು ಬಯಲಲ್ಲಿ ಬಯಲಾದರು. ಇವರ ಮೂರ್ತಿಯು ಬಸವೇಶ್ವರ ಕಾಲೇಜಿನ ಆವರಣದ ಒಳ ಪ್ರವೇಶ ಮಾಡುವ ಮುಖ್ಯ ದ್ವಾರದಲ್ಲಿ ಸ್ಥಾಪಿಸಿದ್ದಾರೆ. ಬಸವ ತತ್ವ ಮತ್ತು ಲಿಂಗಾಯತ ಧರ್ಮದ ಏಳ್ಗೆಗೆ ಅವಿರತವಾಗಿ ದುಡಿದ ಬೀಳೂರು ಶ್ರೀ ಗುರು ಬಸವ ಸ್ವಾಮಿಗಳಿಗೆ ಭಕ್ತಿಪೂರ್ವಕ ಶರಣಾರ್ಥಿ
ಆಕರ
ಬೀಳೂರು ಶ್ರೀ ಗುರುಬಸವ ಮಹಾಸ್ವಾಮಿಗಳ ಚರಿತ್ರೆ -ಮಹಾಲಿಂಗಪ್ಪ ಕಲ್ಯಾಣಶೆಟ್ಟಿ
ಪ್ರಕಾಶಕರು -ಶ್ರೀ ಬಸವೇಶ್ವರ ವಿದ್ಯಾವರ್ಧಕ ಸಂಘ ಬಾಗಲಕೋಟೆ 1983
————————————-
ಡಾ ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ





Excellent article sir
Amazing History of the Great Shivayogi Guru Basava swamiji