ಕಾವ್ಯ ಸಂಗಾತಿ
ಕಲ್ಪನಾ ಎಸ್ ಪಾಟೀಲ
“ಭಗವಂತ ನೀ ಹಿಂಗ್ಯಾಕೋ?”


ದೊಡ್ಡ ಮಂದಿ ತಲ್ಯಾಗೆಲ್ಲ ಸಣ್ಣತನ ತುಂಬಿದಿ.
ಸಣ್ಣ ಮಂದಿಗ್ಯಾಕ ಬೇಕಾದಷ್ಟ ದೊಡ್ಡತನ ಇಟ್ಟಿ.
ಆದ್ರ ಅವರನ್ನ ಬಡವರನ್ನಾಗಿ
ಮಾಡಿ ಬಿಟ್ಟಿ.
ಯಾಕೋ ನೀ ಹಿಂಗ್ಯಾಕೋ
ಭಗವಂತ ಯಾಕೋ ನೀ ಹಿಂಗ್ಯಾಕೋ?
ಕೊಡೊ ಮನಸ್ಸಿದ್ದವಗ ಏನೂ ಇಲ್ಲದಂಗ ಬದಕಾಕ ಹಚ್ಚಿದಿ
ಹಂಚುವ ಗುಣ ಇಲ್ಲದವನ
ಸಿರಿವಂತನಾಗಿಸಿದಿ
ಯಾಕೋ ನೀ ಹಿಂಗ್ಯಾಕೋ
ಭಗವಂತ ಯಾಕೋ ನೀ ಹಿಂಗ್ಯಾಕೋ?
ಹಸಿದ ಹೊಟ್ಟಿಗಿ ಅನ್ನ ಇಲ್ಲದಂಗ
(ಸಿಗದಂಗ) ಮಾಡಿದಿ
ಎಲ್ಲ ತಿನ್ನಾಕ ಇದ್ದವಗ ಮೈ ತುಂಬ
ನೂರೆಂಟ ರೋಗ ಇರಿಸಿದಿ
ಕಷ್ಟದೊಳಗಿದ್ದವ್ರಿಗೆ ಇನ್ನಷ್ಟ ಕಷ್ಟ ಕೊಟ್ಟ ಪರೀಕ್ಷೆ ಮಾಡತಿದಿ
ಹರಾಮಿ ಮಂದಿನೆಲ್ಲ ಹೊರಗ
ತಿರಗಾಕ ಬಿಟ್ಟಿದಿ
ಯಾಕೋ ನೀ ಹಿಂಗ್ಯಾಕೋ?
ಹೇ ಭಗವಂತ ಯಾಕೋ ನೀ ಹಿಂಗ್ಯಾಕೋ?
ಕೊಲ್ಲವ್ರಿಗಿಂತ ಕಾಯಾವ ಲೇಸಂತ
ನಾ ನಿನ್ನ ನಂಬಿದ್ನಿ
ನೀನ ಕೊಂದರ ನಾ ಯಾರನ್ನ ನಂಬಲಿ
ನೀನ ಹೇಳಾಕೋ
ನೀ ಹಿಂಗ್ಯಾಕೋ?
ಹೇಳೊ ಭಗವಂತ ಯಾಕೋ,
ನೀ ಹಿಂಗ್ಯಾಕೋ?
ನೀ ಹಿಂಗ ಅಂದ್ರ ಹಿಂಗ
ನೀ ಹಂಗ ಅಂದ್ರ ಹಂಗ
ನಾ ಬೇಡೂದೊಂದ ಇರಸಬ್ಯಾಡಪ್ಪ
ನನ್ನ ಯಾರದೂ ಹಂಗನ್ಯಾಗ.
ಈ ಕಾಯ ಈ ಉಸಿರ ಕಡಿತನಕಿರಲಿ ನಿನ್ನ ಕೈಯ್ಯಾಗ.
ಕಲ್ಪನಾ ಎಸ್ ಪಾಟೀಲ




ವಾವ್ ಮೇಡಂ, ಸತ್ಯ ಹೇಳಿದ್ದೀರಾ ತುಂಬಾ ಚೆನ್ನಾಗಿ ಬಂದಿದೆ ಕವನ ಧನ್ಯವಾದಗಳು.
ಸವಿತಾ ದೇಶಮುಖ