ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಬಾಲ್ಯದ ಬೆಳಗಿನ ಹೊತ್ತಿನಲ್ಲಿ
ನೀಲಿ ನೀರಿನ ನಿಶ್ಶಬ್ದ,
ಪ್ರಶ್ನೆಯೇ ಅರಳದ ದಿನಗಳು,
ಉತ್ತರವೇ ಕೇಳದ ಕಾಲ.

ಆಕಾಶ ತಬ್ಬಿದ ಸರೋವರ,
ಆಟದ ಕಲ್ಲು ಬಿದ್ದರೂ
ನಗು ತೇಲಿ ಹೋದಿತು
ಮಸುಕು ಮನದವರೆಗೂ ತಲುಪಲಿಲ್ಲ.

ಕಾಲ ನಡೆದು ದಾರಿಯಾದಂತೆ
ಹೆಜ್ಜೆಗಳು ಬಂತು ಹಲವು,
ಕೆಲವು ನೀರು ತಂದವು,
ಕೆಲವು ಮಣ್ಣು ಸುರಿದವು.

ನೋವುಗಳು ಇಳಿದವು
ನೀರಿನ ಆಳದೊಳಗೆ,
ಮಾತಿಲ್ಲದೆ ಕುಳಿತವು
ಸರೋವರದ ಹೃದಯದಲ್ಲಿ.

ಭೇದದ ಮೊದಲ ಸ್ಪರ್ಶ
ಅಲೆ ಎಬ್ಬಿಸಿತು,
ಹೊರಗೆ ಕದಲಿಕೆ,
ಒಳಗೆ ಮೌನ ಗಾಯ.

ಸರೋವರ ಮಾತಾಡಲಿಲ್ಲ,
ಮೌನವೇ ಅದರ ನಾಡಿ,
ಧ್ವನಿಯಿಲ್ಲದ ನೋವೇ
ನೀರಿನ ಭಾಷೆ.

ಸಮಾಜ ಬಂದು ನಿಂತು
ಬಣ್ಣ ಮಾತ್ರ ನೋಡಿತು,
ಆಳ ಕೇಳದೆ ತೀರ್ಪು
ನೀರಿನ ಮೇಲೆ ಬರೆದಿತು.

ಬಿರುಗಾಳಿ ಬೀಸಿದರೂ
ನೀರನ್ನೇ ತಪ್ಪೆಂದರೂ,
ಮೇಲ್ಮೈ ಕದಡಿದರೂ
ಆಳ ಮಾತ್ರ ನಿಂತಿತು.

ಸಂಧ್ಯದ ಹೊತ್ತಿನಲ್ಲಿ
ನೀರು ಕಡಿಮೆಯಾಯಿತು,
ಆಳ ಹೆಚ್ಚಾಯಿತು,
ಅರ್ಥಗಳು ಗಾಢವಾದವು.

ಅಲೆಗಳು ಮೌನವಾಯಿತು,
ಹೇಳದ ಕಥೆಗಳು
ನೀರಿನೊಳಗೆ
ನೆಲೆಯಾದವು.

ಆಕಾಶ ಬಿದ್ದರೆ ಹಿಡಿಯುವೆ,
ಹೂ ಬಿದ್ದರೆ ಕಾಪಾಡುವೆ,
ಕಲ್ಲು ಬಿದ್ದರೂ
ನೀರಾಗಿಯೇ ಇರುವೆ.

ಮೌನ ಸರೋವರ
ಕಲ್ಲುಗಳನ್ನು ಕ್ಷಮಿಸಿದ ನೀರು,
ಬಿರುಗಾಳಿಗೆ ಸಾಕ್ಷಿಯಾದ ಆಳ,
ತೋರಿಸದೆ ಹೊತ್ತ ನೋವು.

ಮಾತಿಲ್ಲದೆ ಉಳಿದ ಸಹನೆ,
ಒಡೆಯದೆ ನಿಂತ ಶಕ್ತಿ
ಅದೇ ಬದುಕಿನ
ಮೌನ ಸಾರ.


About The Author

10 thoughts on “ಡಾ. ಹೆಚ್. ನಟರಾಜ್ ಆರ್ಯ ಅವರ ಕವಿತೆ “ಮೌನ ಸರೋವರ””

  1. RS CHANDRASHEKAR

    ಮುಗ್ದತೆಯ ಬಾಲ್ಯದ ನಲಿವುಗಳು ಬೆಳೆದಂತೆಲ್ಲ ಅರ್ಥವಾಗುವ ನೋವುಗಳು ಆಳದಲ್ಲಿ ಹುದುಗಿರುವ ಜಟಿಲ ಸಮಸ್ಯೆಗಳ ಬಗ್ಗೆ ಅರಿವು ಮೂಡಿಸುತ್ತ ಮೌನಕ್ಕೆ ಜಾರಿದ ಮನಸ್ಸು ಹೃದಯಗಳು
    ಪ್ರಸ್ತುತ ಸನ್ನಿವೇಶಗಳಿಗೆ ಜ್ವಲಂತ ಸಾಕ್ಷಿ ಈ ಕವನ
    ಅದ್ಬುತವಾಗಿದೆ ಬ್ರದರ್..
    ಸಾಗಲಿ ನಿರಂತರವಾಗಿ ನಿಮ್ಮ ಬರವಣಿಗೆ

    1. ಮುಗ್ದತೆಯ ಬಾಲ್ಯದ ನಲಿವುಗಳು ಬೆಳೆದಂತೆಲ್ಲ ಅರ್ಥವಾಗುವ ನೋವುಗಳು ಆಳದಲ್ಲಿ ಹುದುಗಿರುವ ಜಟಿಲ ಸಮಸ್ಯೆಗಳ ಬಗ್ಗೆ ಅರಿವು ಮೂಡಿಸುತ್ತ ಮೌನಕ್ಕೆ ಜಾರಿದ ಮನಸ್ಸು ಹೃದಯಗಳು
      ಪ್ರಸ್ತುತ ಸನ್ನಿವೇಶಗಳಿಗೆ ಜ್ವಲಂತ ಸಾಕ್ಷಿ ಈ ಕವನ
      ಅದ್ಬುತವಾಗಿದೆ ಬ್ರದರ್..
      ಸಾಗಲಿ ನಿರಂತರವಾಗಿ ನಿಮ್ಮ ಬರವಣಿಗೆ

  2. ನಿಮ್ಮ ​​ಮೌನ ಸರೋವರ,
    ಬಾಲ್ಯದ ಬದುಕಿನ ಬುತ್ತಿ ಬಂಡಾರ;
    ನೆನಪುಗಳ ಸೋನೆಯ ಸಾರ,
    ಈ ಮೌನ ಸರೋವರವು ಎಲ್ಲಾರ
    ಬಾಳಿನ ಪ್ರಯಣಕೆ ನಿತ್ಯವೂ ಆಧಾರ.

    1. ಮೌನ ಸರೋವರ,
      ಬದುಕಿನ ಪಯಣಕೆ ನಿತ್ಯವೂ ಆಧಾರ.
      ಕಾಲದ ಅಲೆಗೆ ಸಿಗದ ಮುತ್ತುಗಳು,
      ಬಾಲ್ಯದ ಆ ನಿಷ್ಕಲ್ಮಶ ನಗುಗಳು;
      ಸರೋವರದ ಆಳದಿ ಅಡಗಿದರೂ,
      ಬಾಳ ಪಯಣಕೆ ಇವೇ ಚೈತನ್ಯದ ಹನಿಗಳು.

      ✒️ ಅಮರ್

  3. Dr. Annapurna H

    ಬೆಲೆ ಕಟ್ಟಲಾಗದ ಮೌನದ ಮೌಲ್ಯ ಮನಮುಟ್ಟುವ ಸಾಲುಗಳಲ್ಲಿ ಆದ್ಭುತವಾಗಿ ಬರೆದಿರುವ ಡಾ. ಹೆಚ್ ನಟರಾಜ್ ಆರ್ಯ. ಅವರಿಗೆ ಅಭಿನಂದನೆಗಳು.

  4. ಮೌನ ಸರೋವರ ಬಾಲ್ಯದಿಂದ ಹಿಡಿದು ವೃದ್ಯಾಪ್ರಾದ ವರೆಗೆ ಮಾನವ ಜೀವನದ ಕಥೆ ಕಟ್ಟಿದಂತಿದೆ ನಿಮ್ಮ ವರ್ಣನೆ ಸಮುದ್ರದ ಅಲೆಗಳು ಜೀವದ ಏರುಪೇರುಗಳು ನಿಮ್ಮ ಕವಿತೆಯಲ್ಲಿ ಅದ್ಭುತವಾಗಿ ಮೂಡಿಬಂದಿವೆ . ಪ್ರತಿಯೊಬ್ಬ ಮನುಷ್ಯನ ಜೀವನ ವಿವರಣೆಯನ್ನು ನಿಮ್ಮ ಕವಿತೆಯಲ್ಲಿ ಕಾಣಬಹುದು ಕವಿತೆ ಓದುತ್ತಾ ಓದುತ್ತಾ ನಾವು ಬಾಲ್ಯದಿಂದ ಇಲ್ಲಿವರೆಗೂ ನಮ್ಮನ್ನೇ ನಾವು ಕಾಣಬಹುದು

  5. ಮೌನ ಸರೋವರ. ಮಾನವ ಜೀವನದ ಕಥೆ ನೀವು ವರ್ಣಿಸಿದ ಕವಿತೆ ಮನಮುಟ್ಟುವಂತಿದೆ ಅಭಿನಂದನೆಗಳು ಸರ್

  6. ಮೌನ ಸರೋವರ ನಿಜಕ್ಕೂ ನಮ್ಮ ಬಾಲ್ಯದ ಜೀವನ ವನ್ನು ಮತೊಮ್ಮೆ ಕಟ್ಟಿ ಕೊಟ್ಟಂತಿದೆ. ಸವಿ ಸವಿ ನೆನಪುಗಳು ಎದೆಯಾಳ ದಲ್ಲಿ ಅವಿತಿರುವ ನೂರಾರು ನೆನಪುಗಳು ಮರುಕಳಿಸುವಂತೆ ಮಾಡಿರುವ ನಿಮ್ಮ ಈ ಜೀವ ಚಿಲುಮೆ ಅದ್ಭುತ ಸರ್ ಪಾತರಾಜು. ವಿ

Leave a Reply

You cannot copy content of this page

Scroll to Top