ಕಾವ್ಯ ಸಂಗಾತಿ
ಡಾ ತಾರಾ ಬಿ ಎನ್ ಧಾರವಾಡ
“ಹುತಾತ್ಮರ ದಿನ”


ಭವ್ಯ ಭಾರತದ ವೀರ ಯೋಧರ
ನೆನಪುಗಳ ಲಗ್ಗೆ
ಹೃದಯಗಳಲ್ಲಿ ಹಚ್ಚಿದ ಜ್ಯೋತಿ
ಮನಸ್ಸಿನ ಹೊನ್ನೆಳೆಯಿಂದ,
ಭೂ ಮಾತೆಯ ಹೃದಯ ಕರುಣೆ
ತನ್ನೋಡಲಿನಲ್ಲಿ
ವೀರರ ರಕ್ತದ ಕಂಗುಳಿಯಿಂದ.
ಮೂಕವಾಗಿ ರೋಧಿಸಿದ
ಈ ಹದಿನಾಲ್ಕನೆಯ ದಿನ,
ಸ್ಮರಣೆಯ ಸುಗಂಧವೊಂದು
ಪಸರಿಸಿ ಹರಡಿಹುದು
ಹುತಾತ್ಮರ ಹೆಜ್ಜೆಯ ನೋವು
ಇನ್ನೂ ನಮ್ಮೊಳಗೇ ಗುನುಗುತ್ತಿದೆ.
ಪುಲ್ವಾಮದ ಕರುಣ ಕಥೆಯಲಿ
ವೀರರ ಉಸಿರಿನ ಉರಿಯೇ ಉಳಿದು,
ಭಾರತ ತಾಯಿಯ ಮಡಿಲಲ್ಲಿ
ಅಮರ ಗಾಥೆಯಾಗಿ ಮಿಂಚಿತು.
ಆ ಆತಂಕದ ನೆಲದಲಿ ಸುರಿದ ರಕ್ತ
ರಾಷ್ಟ್ರಧ್ವಜದ ಕೆಂಪು ಗಟ್ಟಿಯಾಗಿ,
ಅಮರ ವೀರರ ತ್ಯಾಗ ಕಥೆ
ಭಾರತೀಯರ ಹೃದಯದಲಿ
ಬರೆಯಲ್ಪಟ್ಟ ಕಣ್ಣೀರ ವ್ಯಥೆ
ವೀರರ ಶೌರ್ಯಗಾಥೆ
ಗಗನಕೆ ಏರಿದ ಗರ್ವದ ಗೀತೆ,
ಜೀವ ಕೊಟ್ಟು ಜಗ ಕಾಯ್ದ
ಸ್ವಾತಂತ್ರ್ಯದ ಪವಿತ್ರ ಪಾಠ.
ವೀರಗತಿ ಭಾವನ ಪಟ್ಟ
ಪ್ರತಿ ಗಾಳಿಯಲಿ ಉಸಿರು,
ಪ್ರತಿ ಹೃದಯದ ತಾಳದಲಿ
ಅವರ ಧೈರ್ಯದ ಮಿಡಿತ
ಭೂದೇವಿ ಕಣ್ಣೀರಿನ ಹನಿ
ಮುತ್ತಾಗಿ ಮಣ್ಣಿನಲಿ ಮಿನುಗಿ,
ದೇಶಪ್ರೇಮದ ದೀಪ ಬೆಳಗಿಸಿ
ಹೊಸ ಪೀಳಿಗೆಗೆ ದಾರಿ ತೋರಿತು.
ಹುತಾತ್ಮರೆ! ನಿಮ್ಮ ತ್ಯಾಗದ ನೆನಪು
ನಮ್ಮ ಬದುಕಿನ ಬೆಳಕಾಗಲಿ,
ನಿಮ್ಮ ಅಮರ ಆತ್ಮಶಕ್ತಿ
ನಮ್ಮ ಸಂಕಲ್ಪದ ಶಕ್ತಿಯಾಗಲಿ.
ಫೆಬ್ರವರಿ ಹದಿನಾಲ್ಕು ದಿನದಲಿ
ನಮಿಸುವೆವು ನಮನಗಳ ಮಾಲೆ,
ಭಾರತ ತಾಯಿಯ ವೀರಪುತ್ರರೇ
ನಿಮ್ಮ ನೆನಪು ಶಾಶ್ವತ
ನಿಮ್ಮ ತ್ಯಾಗ ಸೇವೆ ನಿಶ್ಚಿತ
ನಿಮ್ಮ ಸೇವೆ ಶ್ರೀದೇವಿಗೆ ಹಿತ
ನೀವೇ ಸದಾ ಎಲ್ಲರ ಪರಮಾಪ್ತ
ನಿಮಗಿದೋ ಕೋಟಿ ವಂದನೆ.
ಜೈ ಹಿಂದ್
ಡಾ ತಾರಾ ಬಿ ಎನ್ ಧಾರವಾಡ



