ಸಾಹಿತ್ಯ ಸಂಗಾತಿ
ಸುಮನಾ ರಮಾನಂದ,ಕೊಯ್ಮತ್ತೂರು
“ಭೈರಪ್ಪನವರಿರದ
ಸಾಹಿತ್ಯಲೋಕದ ಶೂನ್ಯತೆ”

ನಮ್ಮ ಕರ್ನಾಟಕದ ಸಾಹಿತ್ಯಲೋಕದಲಿ ಚಿರಪರಿಚಿತವಾದ ಹೆಸರು ಎಸ್.ಎಲ್.ಭೈರಪ್ಪನವರದು.ಯಾವುದೇ ಗ್ರಂಥಾಲಯವಿರಲಿ,ಸಾಹಿತ್ಯ ಸಮ್ಮೇಳನವಿರಲಿ ಅಥವಾ ಪುಸ್ತಕ ಪ್ರದರ್ಶನದಂತಹ ಕಾರ್ಯಕ್ರಮದಲ್ಲಿ ಇವರ ಕಾದಂಬರಿ,ಕೃತಿಗಳು ಹೇರಳವಾಗಿ ಮಾರಾಟವಾಗದೇ ಜನಮನ್ನಣೆ ಪಡೆಯದೇ ಇರದು.ಅಂತಹ ಧೀಮಂತ ಸಾಹಿತಿ ಇವರು.
ಭೈರಪ್ಪನವರ ಜನ್ಮದ ಊರು ಚನ್ನರಾಯಪಟ್ಟಣದ ಸಂತೇಶಿವರ.ತಮ್ಮ ಪ್ರಾಥಮಿಕ ಹಾಗೂ ಉನ್ನತ ಶಿಕ್ಷಣವನ್ನು ಮುಗಿಸಿ ಹಲವಾರು ಕಾಲೇಜುಗಳಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ.ಇವರು ಬರೆದ ಅನೇಕ ಕಾದಂಬರಿಗಳು ಕನ್ನಡ ಚಲನಚಿತ್ರವಾಗಿ ತೆರೆ ಕಂಡು ಕಾದಂವರಿಗಳಷ್ಟೆ ಯಶಸ್ಸನ್ನು ಕಂಡಿದೆ. ಮೂವತ್ತು ನಲವತ್ತು ವರ್ಷಗಳ ಹಿಂದಿನ ಜನತೆಗೆ ಮೋಡಿ ಮಾಡಿದಂತೆಯೇ ಈಗಿನ ತಲೆಮಾರಿನ ಯುವಜನಾಂಗವನ್ನೂ ಸಹ ತಮ್ಮ ಕಾದಂಬರಿಗಳ ವೈಶಿಷ್ಟ್ಯದಿಂದ ಹಿಡಿದಿಟ್ಟಂತಹ ಮಹಾನ್ ಸಾಧಕ ,ಲೇಖಕ ನಮ್ಮ ಭೈರಪ್ಪನವರು.

ಇವರು ಬರೆದಂತಹ “ಪರ್ವ,ವಂಶವೃಕ್ಷ,ಯಾನ,ಆವರಣ,ನಿರಾಕರಣ,ಗೃಹಭಂಗ,ತಬ್ಬಲಿಯು ನೀನಾದೆ ಮಗನೆ,ದಾಟು,
ಮಂದ್ರ,ದೂರ ಸರಿದರು,ಅನ್ವೇಷಣ,ನಾಯಿ – ನೆರಳು,ಸಾರ್ಥ,ಸಾಕ್ಷಿ,ಧರ್ಮಶ್ರಿ,ಗ್ರಹಣ,ಕವಲು” ಇನ್ನೂ ಮುಂತಾದ ಕಾದಂಬರಿಗಳು ಒಂದಕ್ಕಿಂತ ಒಂದು ವಿಭಿನ್ನವಾಗಿವೆ.ಒಂದು ವಿಷಯವನ್ನು ಆಳವಾಗಿ ಅಭ್ಯಯಿಸದೆ ಅವರೆಂದಿಗೂ ಬರವಣಿಗೆಗೆ ಕೂರುತ್ತಿರಲಿಲ್ಲವಂತೆ.ಅಂತಹ ಶ್ರೇಷ್ಠ ಮಟ್ಟದ ಲೇಖಕರಾದ ಭೈರಪ್ಪನವರ ಮುಂದಿನ ಕಾದಂಬರಿ ಇನ್ನು ನಾವು ನಿರೀಕ್ಷಿಸುವಂತಿಲ್ಲ ಅನ್ನುವುದೇ ಒಂದು ಸಂಕಟದ ವಿಷಯವಾಗಿದೆ.ಅವರಂತಹ ನೇರ ನಡೆನುಡಿಯ,ಸಮಾಜದ ಅಂಕುಡೊಂಕುಗಳನು ತಮ್ಮ ಬರವಣಿಗೆಯ ಮೂಲಕ ಅದನು ತಿದ್ದುವ ಅಪರೂಪದ ವ್ಯಕ್ತಿತ್ವದ ಅನನ್ಯ ಲೇಖಕ ನಮ್ಮ ಕರುನಾಡಿನ ಭೈರಪ್ಪನವರು.

ನನಗೆ ಬಹಳ ಇಷ್ಟವಾದ ಅವರ ಕಾದಂಬರಿ “ಯಾನ”.ನಮ್ಮ ಖಗೋಳಶಾಸ್ತ್ರದಲಿ ನಡೆಯುವ ವಿದ್ಯಮಾನಗಳನ್ನು,ಅದರಲಿ ಸಂಭವಿಸುವ ಘಟನೆಗಳನ್ನು,ಆ ಸಾಹಸದ ಒಳ ಆಂತರ್ಯವನ್ನು,ಅದರಲಿ ನಮ್ಮ ದೇಶ ಮುಂಬರುವ ಜನಾಂಗಕ್ಕಾಗಿ ನಡೆಸುವ ಪ್ರಯೋಗಗಳನ್ನು ಬಹಳ ವಿವರವಾಗಿ,ಆಳವಾದ ಅಧ್ಯಯನದಿಂದ ಕೂಡಿದ ಬರವಣಿಗೆಯಲಿ ಸರಳವಾಗಿ ನಮಗೆ ಮನದಟ್ಟು ಮಾಡುವ ಅವರ ಅಧ್ಯಯನದ ಪರಿ ಬಹಳ ಅನನ್ಯವಾದದ್ದು.
ಇಂತಹ ಮಹಾನ್ ಸಾಧಕನನ್ನು,ಧೀಮಂತ ವ್ಯಕ್ತಿತ್ವದ ಹಿರಿಯ ಸಾಹಿತಿಯನ್ನು ಕಳೆದುಕೊಂಡ ನಮ್ಮ ಕನ್ನಡ ಸಾಹಿತ್ಯ ಲೋಕ ಇಂದು ಅಕ್ಷರಶಃ ಮಂಕು ಬಡಿದಂತಾಗಿದೆ ಅನ್ನುವುದು ನುಂಗಲಾರದ ಕಹಿಸತ್ಯವಾಗಿದೆ.
ನಮ್ಮನ್ನಗಲಿದ ವಿಶ್ವಮಾನ್ಯರಾದ ನಮ್ಮ ಅಚ್ಚುಮೆಚ್ಚಿನ ಹಿರಿಯ ಸಾಹಿತಿ ಭೈರಪ್ಪನವರಿಗೆ ನನ್ನ ಬರಹದ ಪುಷ್ಪಾಂಜಲಿ ಸಲ್ಲಿಸುತ್ತಾ ಆ ಭಗವಂತ ಚಿರಶಾಂತಿಯ ಅವರಿಗೆ ಕರುಣಿಸಲೆಂದು ಬೇಡುವೆ.
ಸುಮನಾ ರಮಾನಂದ,ಕೊಯ್ಮತ್ತೂರು





ಅರ್ಥಪೂರ್ಣ ನುಡಿ ಶ್ರದ್ಧಾಂಜಲಿ..
ಮೇಡಮ್.