ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಸರಿ  ನನ್ನ ಹೆಸರು ಕೂಗಿದರು ಆ ದೊಡ್ಡ ಬಾಗಿಲನ್ನು ತೆಗೆದು “ಮೇ ಐ ಕಮಿನ್ ಸರ್” ಎಂದು ಕೇಳಿದಾಗ ಒಳಗಿನಿಂದ ಒಂದು ಧ್ವನಿ “ಎಸ್ ಕಮಿನ್” ಎಂದ ಹಾಗೆ ಕೇಳಿಸಿತು.

ಢವಗುಟ್ಟುತ್ತಿರುವ ಎದೆಯನ್ನು ತಹಂಬದಿಗೆ ತೆಗೆದುಕೊಂಡು ನಾಲ್ಕೈದು ಹೆಜ್ಜೆ ಒಳಗಿಟ್ಟು ಹೋದಾಗ ನಾಲ್ಕು ಜನ ಕುಳಿತಿದ್ದರು ಎದುರಿಗೆ ಒಂದು ಕುರ್ಚಿ ಇತ್ತು. ಅದನ್ನು ತೋರಿಸಿ ಪ್ಲೀಸ್ ಎಂದರು. ಹೋಗಿ ಕುಳಿತೆ ಬೆವರುತ್ತಿದ್ದ ಹಣೆ ಯಾಕೋ “ನೀರೊಳಿದ್ದು ಬೆಮರ್ದನಾ” ಎಂಬ ನುಡಿ ನೆನಪಿಗೆ ಬಂತು. ನಾನು ನೀರೊಳಗೆ ಇರಲಿಲ್ಲ ಹವಾ ನಿಯಂತ್ರಿತ ಕೊಠಡಿಯಲ್ಲಿದ್ದೆ ಅಷ್ಟೇ.

ಎಡಗಡೆಯಿಂದ ಎರಡನೆಯವರು ಅವರು ಕನ್ನಡಕ ಹಾಕಿದ್ದರು ಹಾಗಾಗಿ ಸುಲೋಚನಧಾರಿ ಎಂದು ನಾನೇ ಹೆಸರಿಟ್ಟುಕೊಂಡು ಬಿಟ್ಟೆ ಅವರ ಪಕ್ಕ ಅಂದರೆ ಬಲಗಡೆಯಿಂದ ಎರಡನೆಯವರು ಕೋಟ್ ಧರಿಸಿ ಬಂದಿದ್ದರು. ಹಾಗಾಗಿ ಕೋಟ್ ಧಾರಿ.  ಇನ್ನಿಬ್ಬರಿಗೆ ಹೆಸರಿಡಲು ಹೋಗಲಿಲ್ಲ ಎಡ ಕೊನೆಯವರು ಬಲ ಕೊನೆಯವರು ಎಂದಿಟ್ಟುಕೊಳ್ಳೋಣ.

ಈಗ ಸೂಟ್ ದಾರಿ ತಮ್ಮ ಮುಂದಿಟ್ಟ ಫೈಲ್ ಅನ್ನು ಮತ್ತೆ ಹತ್ತಿರಕ್ಕೆ ಎಳೆದಿಟ್ಟುಕೊಂಡು “ನಿಮ್ಮ ಹೆಸರು ಸುಜಾತ ಅಲ್ವಾ ಇನ್ನೂ ಕೊನೆಯ ಬಿಕಾಂ ಓದುತ್ತಿದ್ದೀರಿ ಏಕೆ ಡಿಗ್ರಿ ಮುಗಿದ ಮೇಲೆ ಅಪ್ಲೈ ಮಾಡಬಹುದಿತ್ತಲ್ಲ”  ಅಂದರು.  ಅದಕ್ಕೇನು ಹೇಳುವುದು? ಮನೆಯಲ್ಲಿ ಏನು ಅಂತಹ ಕಷ್ಟ ಇರಲಿಲ್ಲ. ಆ ಕಾರಣ ಕೊಡಲು. ಹಾಗಾಗಿ “ಈಗಿನಿಂದ ಪ್ರಯತ್ನಿಸಿದರೆ ಡಿಗ್ರಿ ಮುಗಿಯುವಾಗ ಸಿಗುತ್ತದೆ ಸರ್ ಅದಕ್ಕೆ ಪ್ರಯತ್ನಿಸಿದೆ” ಎಂದೆ. “ಹಾಗಾದರೆ ಈಗ ಕೆಲಸ ಸಿಕ್ಕರೆ ಓದು ಪೂರ್ಣ ಆಗುವುದಿಲ್ಲವಲ್ಲ” ಎಂದರು. *ಪರವಾಗಿಲ್ಲ ಸರ್ ಇನ್ನೆರಡು ತಿಂಗಳು . ಹಾಜರಾತಿ ಸಿಗುತ್ತದೆ. ಪರೀಕ್ಷೆಗೆ ಹೋಗಿ ಬರೆದರೆ ಕೊನೆಯ ವರ್ಷ ಮುಗಿದುಬಿಡುತ್ತದೆ” ಎಂದೆ. ಸುಮ್ಮನೆ ನಕ್ಕರು. ಅವರ ಪಕ್ಕದಲ್ಲಿನ ಸುಲೋಚನಧಾರಿ. ಬಹುಶಃ ಅವರಿಗೆ ಕನ್ನಡ ಬರುತ್ತಿರಲಿಲ್ಲ ಎನಿಸುತ್ತದೆ ಬರೀ ಇಂಗ್ಲೀಷಿನಲ್ಲಿ ಪ್ರಶ್ನೋತ್ತರ ನಡೆಸಿದ್ದು.
What is the diifference between Income and expenditure Account ಎಂದು ಕೇಳಿದರು. ವಿವರಿಸಿ ಹೇಳಿದೆ. ಈಗ ಎಡ ಕೊನೆಯವರ ಸರದಿ. ವಿಮೆ ಎಂದರೇನು? ಜೀವ ವಿಮಾ‌ನಿಗಮದ ಬಗ್ಗೆ ಏನು ಗೊತ್ತು? ವಿಮೆ ಬಗ್ಗೆ ವಿವರಿಸಿದೆ. ನಿಗಮದ ಬಗ್ಗೆ ತಿಳಿದಷ್ಟು ಹೇಳದೆ. ಹೆಚ್ಚುವರಿಯಾಗಿ ನಮ್ಮ ತಂದೆ ೩ ಪಾಲಿಸಿಗಳನ್ನು ಹೊಂದಿದ್ದಾರೆ ಎಂದಾಗ ಗುಡ್ ಎಂದು ತಲೆದೂಗಿದರು. ಬಲಕೊನೆಯ ಮಹನೀಯರು ಪ್ರಾಯಶಃ ಕನ್ನಡ ಸಾಹಿತ್ಯ ಪ್ರೇಮಿ ಎನ್ನಿಸುತ್ತೆ. “ನಿಮ್ಮ ಹವ್ಯಾಸ ಓದುವುದು ಎಂದಿರಲ್ಲಾ ಕೆಲವು ಕನ್ನಡ ಲೇಖಕ ಲೇಖಕಿಯರನ್ನು ಹೆಸರಿಸಿ” ಎಂದರು. ಬೈರಪ್ಪ ಡಿವಿಜಿ ಬೇಂದ್ರೆ ಕುವೆಂಪು ಪುತಿನ  ಹಾಗೆ ಲೇಖಕಿಯರಲ್ಲಿ ತ್ರಿವೇಣಿ ಅನುಪಮಾ ನಿರಂಜನ್ ಸಾಯಿಸುತೆ ಸಿಎನ್ ಮುಕ್ತ ಹೆಚ್ ವಿ ರಾಧಾದೇವಿ ಮುಂತಾದವರನ್ನು ಹೆಸರಿಸಿದೆ. ನಿಮಗೆ ಜನಪ್ರಿಯ ಸಾಹಿತ್ಯ ಇಷ್ಟವೇ ಎಂದರೆ ಹೌದು ಮನರಂಜನೆಗಾಗಿ ಎಂದು ಓದುವಾಗ ಜನಪ್ರಿಯ ಸಾಹಿತ್ಯ ಇಷ್ಟವಾಗುತ್ತದೆ. ತುಂಬಾ ಗಂಭೀರ ಸಾಹಿತ್ಯ ಆಳವಾದ ಅಧ್ಯಯನ ಬೇಡುತ್ತದೆ . ವಿದ್ಯಾರ್ಥಿಯಾಗಿ ಸದ್ಯಕ್ಕೆ ನನಗೆ ಅದು ಸಾಧ್ಯವಿಲ್ಲ ಎಂದೆ. ಅವರಿಗೆ ತುಂಬಾ ಖುಷಿಯಾಯಿತು ಎನಿಸುತ್ತದೆ. ಈಗಲೇ ಬಹಳ ಆಳವಾಗಿ ಓದಿದ್ದೀರಿ ಬಿಡಿ ಎಂದರು. ನಂತರ ನಾನಾಗಿಯೇ ನಮ್ಮ ಕಾಲೇಜ್ ಮ್ಯಾಗ್ಝಿನ್ ಎರಡು ವರ್ಷದವನು ತೋರಿಸಿದೆ .ಒಂದರಲ್ಲಿ ಕಥೆ ಮತ್ತೊಂದರಲ್ಲಿ ನನ್ನ ಒಂಟಿಮರ ಕವನ ಇತ್ತು ಹೇಗೆ ಬರೆಯಲು ಸ್ಪೂರ್ತಿ ಎಂದರು .ತುಂಬಾ ಭಾವನೆಗಳು ಒತ್ತಡ ಜಾಸ್ತಿಯಾದಾಗ ಕವಿತೆ ಬರೆಯುತ್ತೇನೆ ಎಂದೆ. ಮೊದಮೊದಲ ರಚನೆಗಳು ಎನಿಸುವುದಿಲ್ಲ ಪ್ರೌಢವಾಗಿಯೇ ಇದೆ ಎಂದು ಸಹ ತಮ್ಮ ಅಭಿಪ್ರಾಯ ನೀಡಿದರು.

ಪ್ರಾಯಶಃ ಎರಡು ಸುತ್ತಿನ ಸಂದರ್ಶನ ಅನ್ನಿಸುತ್ತೆ. ಮೊದಲ ಸುತ್ತು ಮುಗಿದಿತ್ತು. ಮತ್ತೆ ಎರಡನೆಯ ಸುತ್ತು . ಸೂಟ್ ಧಾರಿ  ಆಗಿನ ಪ್ರಚಲಿತ ವಿದ್ಯಮಾನಗಳ ಬಗ್ಗೆ ಕೆಲವು ಪ್ರಶ್ನೆಗಳನ್ನು ಕೇಳಿದರು. ಸಮರ್ಪಕವಾಗಿ ಉತ್ತರಿಸಿದೆ ಎನ್ನಿಸುತ್ತೆ. ಈಗ ಸುಲೋಚನಧಾರಿ.  ಯಾವುದೋ transaction ಹೇಳಿ ಅದಕ್ಕೆ journal entry ಏನೆಂದು ಕೇಳಿದರು. Tricky ಇತ್ತು. ಆದರೆ ಸರಿಯಾಗೇ ಹೇಳಿದೆ.. ಸರಿ ಎನ್ನುವಂತೆ ತಲೆ ಅಲುಗಿಸಿದರು. ನಂತರ in what method you prepare balance sheet from the given trial balance? ಎಂದರು. Tb Talley ಆಗಿದೆಯಾ ಅನ್ನೋ ಮೊದಲ ಸ್ಟೆಪ್ ನಿಂದ ಪೂರ್ತಿ ಹೇಳಿದೆ. ಮತ್ತೆ ಎಡಕೊನೆಯವರು ನಿಗಮದ accounting ನಲ್ಲಿ profit and loss account or income and expenditure ಅಂದಾಗ income and expenditure ಎಂದು ಉತ್ತರಿಸಿದೆ. ಬಲಕೊನೆಯವರ ಸರದಿ ಈಗ.‌ಬರೀ ಸಾಹಿತ್ಯ ಪ್ರಶ್ನೆ ಕೇಳ್ತಿದ್ದರಲ್ಲ ನನಗೆ ಅವರ ಮೇಲೆ ಅಭಿಮಾನ ಹುಟ್ಟಿಬಿಟ್ಟಿತ್ತು. ಅವರ ಕಡೆ ತಿರುಗಿದಾಗ ನಗುತ್ತಾ ನಿಮ್ಮ ತಂದೆಯ ಹೆಸರಲ್ಲಿ ಒಬ್ಬ ಸಾಹಿತಿ ಇದ್ದಾರೆ ಯಾರು ಹೇಳಿ ಅಂದರು ಬೆಳ್ಳಾವೆ ನರಹರಿ ಶಾಸ್ತ್ರಿಗಳು ಎಂದೆ ಪಟ್ ಅಂತ. ಗುಡ್ ಅಂದರು. ಆಮೇಲೆ ಕನ್ನಡ ಸಾಹಿತ್ಯರಂಗದಲ್ಲಿ ಈಗ ಐತಿಹಾಸಿಕ ಸಂದರ್ಭ ಏನು ಹೇಳಿ. ಅಂದರು ಆಗ ಮೈಸೂರಿನಲ್ಲಿ ವಿಶ್ವಕನ್ನಡ ಸಮ್ಮೇಳನ ಅದೂ ಪ್ರಥಮ ಸಮ್ಮೇಳನ ಆರಂಭವಾಗಿತ್ತು. ಅದನ್ನೇ ಹೇಳಿದೆ. ಅದರ ಬಗ್ಗೆ  ಕೆಲವು ಪ್ರಶ್ನೆಗಳನ್ನು ಕೇಳಿದರು. ಗೊತ್ತೇ ಇದ್ದ ವಿಚಾರ ಚೆನ್ನಾಗಿ ಉತ್ತರಿಸಿದೆ. ಎರಡು ಸುತ್ತುಗಳು ಮುಗಿದವು ಅವರಿಗೂ ಸಾಕು ಎನಿಸಿತು ಅನಿಸುತ್ತೆ.  ಓಕೆ ಎಂದರು. ಎದ್ದು ಧನ್ಯವಾದಗಳನ್ನು ತಿಳಿಸಿ ಹೊರಬಂದೆ. ಚೆನ್ನಾಗಿಯೇ ಮಾಡಿದ್ದೆ ಅನ್ನಿಸಿತು.

ಆಗ ಊಟದ ವಿರಾಮದ ಸಮಯ. ಕಮಿಟಿಯ ಎಲ್ಲರೂ ಹೊರ ಹೋದರು.ಸುತ್ತ ಸೇರಿದವರಲ್ಲಿ ಯಾರೋ ೩೫ ನಿಮಿಷ ಆಯಿತು ನಿಮ್ಮ ಸಂದರ್ಶನ ಅಂದರು. ಸಾಮಾನ್ಯ ಎಲ್ಲರದೂ ೨೦ ನಿಮಿಷ ಆಗುತ್ತಿತ್ತು. ಅಷ್ಟೊಂದು ಸಮಯ ಆಯಿತು ಅನ್ನಿಸಿಯೇ ಇರಲಿಲ್ಲ. ಮತ್ತೆ ಕೇಳಿದವರ ಪ್ರಶ್ನೆಗಳಿಗೆಲ್ಲ ಉತ್ತರಿಸುವ ಮೊದಲು ದೂರದಲ್ಲಿ ನಿಂತಿದ್ದ ಅಣ್ಣನಿಗೆ ಚೆನ್ನಾಗಿ ಮಾಡಿದೆ ಎನ್ನುವಂತೆ ಸಂಙ್ಞೆಯಲ್ಲೇ ತಿಳಿಸಿದೆ. ೧೦ ನಿಮಿಷವಾಯಿತು ಬಿಡಿಸಿಕೊಂಡು ಹೊರ ಬರಲು. ನಂತರ ದೊಡ್ಡಮ್ಮನ ಮನೆಗೆ ಹೋಗುವ ದಾರಿಯಲ್ಲಿ ಅಣ್ಣನಿಗೆ ವಿವರವಾಗಿ ಹೇಳಿದೆ. ಮನೆಗೆ ಹೋಗಿ ಲಗೇಜು ತೆಗೆದುಕೊಂಡು ಅಂದೇಮೈಸೂರಿಗೆ ವಾಪಸಾದೆವು.  
ತುಂಬಾ ಸ್ನೇಹಪರ ವಾತಾವರಣದಲ್ಲಿ ನಡೆದ ಸಂದರ್ಶನ ಸಂದರ್ಶನಗಳ ಬಗ್ಗೆ ಇದ್ದ ನನ್ನ ಹಿಂಜರಿಕೆ ಹಾಗೂ ಭಯವನ್ನು ಹೋಗಲಾಡಿಸಲು ಸಹಾಯಕವಾಯಿತು ಮುಂದಿನ ಸಂದರ್ಶನಗಳಿಗೆ ಧೈರ್ಯವಾಗಿ ಹೋಗುವಂತೆ ಮಾಡಿತು ಎಂದು ಖಂಡಿತ ಹೇಳಿ ಕಮಿಟಿಯ ಸದಸ್ಯರಿಗೆ ನನ್ನ ಹೃತ್ಪೂರ್ವಕ ಧನ್ಯವಾದಗಳನ್ನು ತಿಳಿಸಬಯಸುತ್ತೇನೆ.

ವಾಪಸ್ ಬಂದು  ತಿಂಗಳು ಆದರೂ ಯಾವ ಸುದ್ದಿಯು ಇಲ್ಲ .ನಮ್ಮ ತಂದೆಯೇ  ನಾಗರಾಜಗುಪ್ತ ಅವರ ಮನೆಗೆ ಹೋಗಿ ಕೇಳಿದಾಗ ಸಂದರ್ಶನದ ಫಲಿತಾಂಶ ಬಂದು ಒಂದು ವಾರ ಆಯಿತು. ಮೊದಲ 25 ಜನರನ್ನು ತೆಗೆದುಕೊಂಡಿದ್ದಾರೆ ಎಂದೂ ನನ್ನ ಹೆಸರು ಆ ಪಟ್ಟಿಯಲ್ಲಿಲ್ಲ ಎಂದೂ ತಿಳಿಯಿತು. ಮುಂದಿನ ಲಿಸ್ಟ್ ಏನಾದರೂ ಬರಬಹುದೇ ಎಂದು ಅಣ್ಣ ಕೇಳಿದಾಗ ಖಂಡಿತ ಇಲ್ಲ.  ಮುಂದಿನ ವರ್ಷ ಪ್ರಯತ್ನಿಸಲಿ ಎಂದರಂತೆ ನಾಗರಾಜ ಗುಪ್ತ ಅವರು.

ಅಣ್ಣ ಬಂದು ಹೇಳಿದಾಗ ತುಂಬಾ ಅಳು ಬಂತು ಅತ್ತು ಮುಗಿಸಿ ಆಯಿತು. ಇನ್ನು 20 ವರ್ಷ ಸಹ ಆಗಿಲ್ಲ ಈಗಲೇ ಏನು ಸಮಯ ಕಳೆದಿಲ್ಲ ಮುಂದೆ ಸಿಗುತ್ತದೆ ಎಂದು ಅಮ್ಮ ಅಣ್ಣ ಎಲ್ಲ ಸಮಾಧಾನ ಮಾಡಿದರು. ಇನ್ನೇನು ಪದವಿ ಪರೀಕ್ಷೆಗಳು ಹತ್ತಿರ ಬರುತ್ತಿದ್ದರಿಂದ ಆ ಕಡೆ ಗಮನ ಹರಿಸಲೇಬೇಕಿತ್ತು ಹೆಚ್ಚು ತಲೆಕೆಡಿಸಿಕೊಳ್ಳದೆ ಓದಿನ ಕಡೆ ಗಮನ ಹರಿಸಿದೆ.

ಆದರೂ… ಅದು ನನ್ನ ಜೀವನದ ಮೊಟ್ಟ ಮೊದಲ ವೈಫಲ್ಯ. ಎಂದಿಗೂ ಎಂದೆಂದಿಗೂ ಖಂಡಿತ ನೆನಪಿನಲ್ಲಿ ಉಳಿದಿವೆ ಉಳಿದಿರುತ್ತದೆ .ಆದರೆ ಆ ಕಹಿ ತಂದುಕೊಟ್ಟ ಛಲ ಮುಂದೆ ಜೀವನದಲ್ಲಿ ಗಂಭೀರತೆ ತಾಳಲು ಸಹಾಯಕವಾಯಿತು.
ಸೋಲು ಗೆಲುವಿನ ಮೆಟ್ಟಲು ಎಂಬ ಗಾದೆ ನನ್ನ ಜೀವನದಲ್ಲೂ ಅನ್ವಯವಾಗುವ ಕಾಲ ಬಂದಿತ್ತು.
(ಮುಂದುವರತೆಯುವುದು.)


About The Author

32 thoughts on “”

  1. ಸೂಕ್ತ ಚಿತ್ರಗಳೊಂದಿಗೆ ಪ್ರಕಟಿಸಿ ಪ್ರೋತ್ಸಾಹಿಸುತ್ತಿರುವ ಸಂಪಾದಕರಿಗೆ ಧನ್ಯವಾದಗಳು.

    ಸುಜಾತಾ ರವೀಶ್

    1. ಇನ್ಟ್ರವ್ಯೂ ತುಂಬಾ ಚೆನ್ನಾಗಿದೆ.
      ನೀವು ಉತ್ತರಿಸಿದ ರೀತಿ ತುಂಬಾ ಚೆನ್ನಾಗಿದೆ.ನೀವು ಸೆಲೆಕ್ಟ್ ಆಗಬೇಕಾಗಿತ್ತು. ಕಾದು ನೋಡಿ. ನಿಧಾನವಾಗಿ ಕೆಲಸಕ್ಕೆ ಆರ್ಡರ್ ಬರಬಹುದು .

    2. ಸುಜಾತ ರವೀಶ್ ಅವರ ವೃತ್ತಿ ವೃತ್ತಾಂತ ಚೆನ್ನಾಗಿ ಮೂಡಿ ಬಂದಿದೆ

    3. ಒಂದೊಂದೇ ಹೆಜ್ಜೆ ಇಡುವ, ಅದರ ಹಿಂದಿನ ತಳಮಳಗಳ ಬಗ್ಗೆ ಸೊಗಸಾಗಿ ಬರೆದಿದ್ದೀಯ ಗೆಳತಿ. ಮೆಚ್ಚಿದೆ

    4. ಚೆಂದದ ಅನುಭವದ ನಿರೂಪಣೆ. ನನ್ನ ಮನದಲ್ಲೇ ನಡೆದಂತಿತ್ತು.
      ಮುಂದುವರೆಯಲಿ.

  2. ಅದು ಸೋಲಲ್ಲ ಹಿರಿಯರ ಆಶಯ ಪದವಿ ಮುಗಿಸಲಿ ಎಂಬುದು ಕೆಲಸದ ಒತ್ತಡಕ್ಕೆ ಸಿಲುಕಿದರೆ ಓದಿನ ಕಡೆ ಗಮನ ಇರುವುದಿಲ್ಲ ಒಳ್ಳೆಯ ಸಂದರ್ಶನ ಸಾಂಬಾಷಣೆ ಮುಂದುವರಿಯಲಿ ಅಕ್ಕ

    1. ಧನ್ಯವಾದಗಳು ಸೋದರಿ. ನಿಜ ಆದುದೆಲ್ಲಾ ಒಳಿತೇ ಆಯಿತು.

      ಸುಜಾತಾ ರವೀಶ್

  3. ಎಂ. ಎಸ್. ರುದ್ರಪ್ಪ

    ಬಹಳ ಹಿಂದಿನ ಘಟನೆಯನ್ನು ಜ್ಞಾಪಕ ಇಟ್ಟು ಕೊಂಡು ಬರೆದಿದ್ದೀರಿ. ನಿರೂಪಣೆ ಚೆನ್ನಾಗಿದೆ. ಮುಂದುವರಿಸಿ ನಿಗಮದ ನೌಕರಿ ಬಗ್ಗೆಯೂ ಬರೆಯಿರಿ.

    1. ಖಂಡಿತಾ ಸರ್. ಮುಖ್ಯ ಅದನ್ನೇ ಬರೆಯಲು ಹೊರಟಿರುವುದು. ಇದು ಹಿನ್ನೆಲೆ.

      ಸುಜಾತಾ ರವೀಶ್

  4. ಅವರು ಕೇಳಿದ ಅಷ್ಟೂ ಪ್ರಶ್ನೆಗಳನ್ನು ಇನ್ನೂ ಎಷ್ಟು ಚೆನ್ನಾಗಿ ಜ್ಞಾಪಕ ಇಟ್ಟುಕೊಂಡಿದ್ದೀರಿ. ಸಂದರ್ಶನ ಕಣ್ಣಿಗೆ ಕಟ್ಟಿದಂತಿದೆ. ನಿಮ್ಮ ಜಾಣ್ಮೆ ನೋಡಿ, ನಿಮಗೆ ಮುಂದೆ ಕೆಲಸ ಸಿಕ್ಕೇ ಸಿಗುತ್ತದೆ, ಎಂಬ ಖಾತ್ರಿ ಅವರಿಗೆ ಇತ್ತು. ಆದ್ದರಿಂದ ಪದವಿ ಮುಗಿಸಲಿ ಎಂದು ಅವರೇ ಅವಕಾಶ ಕೊಟ್ಟಿದ್ದಾರೆ.

    1. ಇರಬಹುದೇನೋ…..ಆದರೆ ಮೊದಲ ಸೋಲು ಅದು. ಮರೆಯಲಾಗುತ್ತಿಲ್ಲ.

      ಸುಜಾತಾ ರವೀಶ್

  5. ಸೋಲು ಆಗ ನೋವಿನ ಸಂಗತಿ.ಆದರೆ ಈಗ ಅದು ಸಹಜ ಜೀವನ ಪಯಣದ ಹಾದಿಯಲ್ಲಿ ಹಿಂತಿರುಗಿ ನೋಡಿದಾಗ ಆ ಸಂಗತಿಯೇ ಸಂಗಾತಿ. ಆದ್ದರಿಂದ ಅದರ ಮೆಲುಕು ಯಾವತ್ತೂ ಸವಿಸ್ಮರಣೀಯ. ಈ ಅನುಭವದ್ರವ್ಯಗಳೇ ಬಾಳಿನ ಶಾಲೆ. ಇವೆಲ್ಲವೂ ನಮ್ಮ ಬದುಕಿನ ಪಠ್ಯಗಳು.ಅದನ್ನು ಪಥ್ಯವಾಗಿಸಿಕೊಂಡು ಪಥದಲ್ಲಿ ಮುಂದುವರೆದಿದ್ದೀರಿ.
    ನಡೆದಷ್ಟೂ ಪಯಣ ಅಲ್ಲವೇ.

    1. ಖಂಡಿತಾ ನಿಜ.ಬದುಕಿನ ಏರಿಳಿತಗಳ ಹಾದಿಯಲ್ಲಿ ಈಗ ತಿಟ್ಹತ್ತಿ ತಿರುಗಿ ನೋಡಿದಾಗ ಹಾಗೇ ಅನ್ನಿಸುತ್ತೆ. ಸವಿ ಸುಂದರ ಸ್ಪಂದನೆಗೆ ಮನಃಪೂರ್ವಕ ಧನ್ಯವಾದಗಳು.

      ಸುಜಾತಾ ರವೀಶ್

  6. ಅನುಭವದ ಘಟನೆ ಅದರಲ್ಲೂ ಕೆಲಸ ಅಂದಿನ ಕಾಲದಲ್ಲಿ ಸಿಗುವುದೇ ಅಪರೂಪ ಅಂತಹ ಕಾಲದಲ್ಲಿ ಯಶಸ್ವಿಯಾಗಿ ಪ್ರಭುದ್ದೇಯಾಗಿ ನಿಭಾಯಿಸಿದ್ದೀರಿ. ಅದಕ್ಕೆ ಅದರ ಪ್ರತಿಫಲ ಈಗ ಬಂದಿದೆ ಎಂದು ಅನಿಸುತ್ತದೆ. ತುಂಬಾ ಚೆನ್ನಾಗಿ ಜೀವನ ಕಟ್ಟಿಕೊಂಡಿದ್ದೀರಾ. ಮುಂದಿನ ಹಂತಕ್ಕೆ ಕಾಯುವೆ. ವಿಶ್ವಾಸ ಇರಲಿ.

  7. ಉತ್ತಮ ನಿರೂಪಣೆ

    ಅನಂತ ತಾಮ್ಹನ್ಕರ್ , ಮೈಸೂರು

  8. ಸುಜಾತಾ..ನಿನ್ನ ಈ ಬರವಣಿಗೆ ಎಷ್ಟೋ ಜನರಿಗೆ inspiration..

  9. ನಿಮ್ಮ ಸಂದರ್ಶನ ಓದುತ್ತಿದ್ದಾಗ ನಾವು ಕೆಲಸಕ್ಕೆ ಸೇರುವಾಗಿನ ದಿನಗಳ ನೆನಪು ಬಂದು ತುಂಬಾ ಖುಷಿ ಆಯಿತು. ಬರಹ ತುಂಬಾ ಚೆನ್ನಾಗಿ ಮೂಡಿಬಂದಿದೆ ಸುಜಾತ

  10. ಲೇಖನ ಚೆನ್ನಾಗಿದೆ. ದಟ್ಟ ಅನುಭವದ ಮಾರ್ಗದರ್ಶನ ಬೇರೆಯವರಿಗೆ ಸಿಗುತ್ತದೆ

Leave a Reply

You cannot copy content of this page

Scroll to Top