ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಬನ್ನಿ ಗೆಳೆಯರೆ ಮತ್ತೆ ಜ್ಯೋತಿ ಹಚ್ಚೋಣ
ಕಡು ಬಿಸಿಲಿನೊಳು ಕತ್ತಲಾಗುತಿದೆ
ಸೂರ್ಯನು ಕೂಡಾ ಹೆದರುತಿಹನು
ಓಡಾಡುವ ಕುಹಕ ನೆರಳಿಗೆ

ಆತ್ಮದ ಆತ್ಮವೂ ನೊಂದು ಮಂಕಾಗಿದೆ
ದೊರಕದ ಮಾತಿನ ಸಾಫಲ್ಯಕೆ
ನಿತ್ಯದ ಬೆಳಕಿಗೆ ನಿತ್ಯವೂ ಗ್ರಹಣ
ಸಾಕಾಗಿದೆ ವಿಧಿ ವಿಧಾನದ ರೀತಿಗೆ

ತೃಣ ಮಾತ್ರದ ಸಫಲತೆ ಗುರಿಸಾಧನೆ ಎಂದೆವು
ಕಣ್ಣುಗಳಲ್ಲಿ ಮಾತ್ರ ಕಾಣುತ್ತಿಲ್ಲಾ
ವರ್ತಮಾನದ ಮೋಹಕೆ ಬಿದ್ದು
ಬರುವ ದಿನಗಳನೇ ಮರೆತಿಹೆವು

ಪೂರ್ಣಾಹುತಿಯಾಗದ ಯಜ್ಞಕ್ಕೆ
ನಮ್ಮವರಿಂದಲೇ ವಿಘ್ನದ ಬಳುವಳಿ
ತುಂಬಿದ ಶಕುನಿಗಳ ಕೈಯಲ್ಲಿ
ನಮ್ಮದೇ ಎಲುಬಿನ ದಾಳದ ದಾಳಿ

ನಲುಗುತಿದೆ ಹಲಬುತಿದೆ ಜೀವ
ಬೆಳಕಲ್ಲೇ ಕತ್ತಲು ಕಾಣುತಿರಲು
ಎಗ್ಗಿಲ್ಲದೆ ಮಬ್ಬಾದ ಜೀವಕೆ ಬೆಳಕಾಗಲು
ಬನ್ನಿ ಗೆಳೆಯರೆ ಮತ್ತೆ ಜ್ಯೊತಿ ಹಚ್ಚೋಣ

ಹಿಂದಿನ ದಿನ ಮರೆಯೋಣ
ಇಂದಿನ ದಿನ ಅರಿಯೋಣ
ನಾಳಿನ ದಿನದ ಬೆಳಕಿಗಾಗಿ
ಬನ್ನಿ ಗೆಳೆಯರೆ ಹಚ್ಚೋಣ ಜ್ಯೋತಿ

About The Author

2 thoughts on “ಪ್ರಮೋದ ಜೋಶಿ ಕವಿತೆ-ಬನ್ನಿ ಗೆಳೆಯರೆ ಮತ್ತೆ ಜ್ಯೋತಿ ಹಚ್ಚೋಣ”

  1. ಹಚ್ಚೋಣ ದೀಪದಿಂದ ಇನ್ನೊಂದು, ಇನ್ನೆಂದೂ ಆರದ ದೀಪವ ಹಚ್ಚೋಣ …..

Leave a Reply

You cannot copy content of this page

Scroll to Top