ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಶ್ರೀವಲ್ಲಿ ಶೇಷಾದ್ರಿ

ಜೀವದ ಜೀವಗಂಗೆ

ಕಣ್ಣೀರು ಬತ್ತಿ
ಎದೆಯಾಳ ಬಿಕ್ಕಿ
ಬಿರಿದ ನೆಲ
ಬಾಡಿದೊಡಲು
ತೀರದ ದಾಹವೀ
ತುಂಗಾ ತೀರ

ಹೊಳೆ ದಂಡೆ ಹಸಿರು
ಕರಿಯಾಯ್ತು ಗರಿಕೆ
ತಾಯಾಕಳ ಮೊಲೆ
ಕಚ್ಚಿದೆ ಕರು
ಬರಿದಾದ ಹಾಲಿದುವೆ
ಯಮುನಾ ತೀರ

ಹೂವಾಗೊ ಮುನ್ನ
ಮೊಗ್ಗಲ್ಲೆ ಕಳಚಿದೆ
ಸೌಗಂಧವಿರದು
ಈ ಕೊಳೆತ ಕೂಪ
ಪಾಪ ತೊಳೆಯೆ ಬಾ
ಗಂಗಾ ಸಮೀರ

ಪಾತಾಳ ಪಾವನಿಯ
ಅಂತರಾಳ ಕೊಳ
ಸಾರ ಸುರಿ ಸುರಿದು
ಸುಡಲು ಹಿಂಗಿದೊಡಲು
ಧಗೆ ಬೆಂಗಾವಲು
ಸುರ ಸುಧೆಯೆ ಬಾರೆ ಧರೆಗೆ

ಓ ಅಮೃತ ವರ್ಷೆ
ಹನಿ ಹನಿಯ ಭಿಕ್ಷೆ
ಮಳೆ ತರುತ ಘಳಿಗೆ ಇಳಿದಿಳೆಯೆ ಇಳೆಗೆ ಬಿಗುಮಾನವೇನೆ
ಬರಲಾರೆಯೇನೆ

ತುಸು ಹರುಷ ತಂದವಳೆ ಹೊಸ ಜೀವವಿಟ್ಟವಳೆ
ಹಸಿರೆನ್ನಲೇನ ಉಸಿರೆನ್ನಲೇನೆ

ಮಳೆಯೆನ್ನಲೇನೆ ಇಳೆಎನ್ನಲೇನೆ
ಕನಸ ಕರಗಿಸಿ ಹೊಳೆ ಹಾಸು ಬಾ
ಜೀವದ ಜೀವ ಗಂಗೆ.


ಶ್ರೀವಲ್ಲಿ ಶೇಷಾದ್ರಿ.

About The Author

Leave a Reply

You cannot copy content of this page

Scroll to Top