ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಅಭಿಷೇಕ್ ಭಾರದ್ವಾಜ್

ಬೇಡದ ಅತಿಥಿ

:ಅಂದು:

ಹಸಿರು ತುಂಬಿ ತುಳುಕುತ್ತಿತ್ತು ಬನ
ಹಣ್ಣು ಕಾಯಿಗಳಿಗಿರಲಿಲ್ಲ ಬರ
ತಿಂದು ತೇಗ ಬಹುದಿತ್ತು ಸಂತಸದಿ ತುಂಬುತಲಿತ್ತು ಉದರ
ಎಲ್ಲೆಲ್ಲೂ ಸುಮಧುರ ಹಸಿರು ತುಂಬಿದ ರಮ್ಯ ವಾತಾವರಣ|

ಗಿರಿ ಶಿಖರಗಳಿಂದ ಹರಿಯುತಲಿದ್ದ ಜಲಧಾರೆಯ ಸಿಂಚನ
ಹಕ್ಕಿ ಪಕ್ಕಿಗಳ ಮಧುರ ಇಂಪಾದ ಗಾನ
ಮನತುಂಬಿ ಬಳಕುವ ಬಳ್ಳಿಎಲೆಗಳ ಮೇಲೆ ಇಬ್ಬನಿಯ ನರ್ತನ
ಹೂವಿನ ಮೇಲಣ ಭ್ರಮರದ ಸವಿಯಾದ ಝೇಂಕಾರ|

ಬಿದಿರಿನಾ ಗಿಡಗಂಟೆ ಕಾನನದಿ ವೃಕ್ಷಗಳ ಸಂತೆ
ಮರದ ಕೊಂಬೆಗಳು ಚಾಚಿ ನಿಂತಿರುವ ಮೇಘಗಳ ಕಂತೆ
ತಿಳಿಯುತ್ತಿರಲಿಲ್ಲ ಕಾನನದ ಸೌಂದರ್ಯ ಸವಿಯುವಾಗ ಸಾಗುತಲಿದ್ದ ಹೊತ್ತು
ಹೂ ದುಂಬಿಗಳ ಝೇಂಕಾರವೇ ಕಾನನದ ಸಂಪತ್ತು|

ಅಂದು

ಕಾಣೆಯಾಗಿದೆ ಹಚ್ಚ ಹಸಿರಿನ ಕಾನನ
ಬೆಳೆದು ನಿಂತಿದೆ ಬೃಹತ್ತಾದ ಕಟ್ಟಡಗಳ ಪಟ್ಟಣ
ಕಾಣಲು ಸಿಗುತ್ತಿಲ್ಲ ಮೈದುಂಬಿ ನಿಂತಿದ್ದ ವೃಕ್ಷಗಳ ಸಾಲು
ಕಾಣುತಿದೆ ಕಡಿದ ಮರಗಳ ಅವಶೇಷದ ಅಳಲು |

ನಾಶಪಡಿಸಿರುವರಿಂದು ನಮ್ಮ ನೆಲವೀಡ ಕಾಡು
ಸ್ವಾರ್ಥ ಜನಗಳಿಗಾಗಿ ನಿರ್ಮಿಸಿದರೀ ನಾಡು
ನೆಲೆಸಲಿಲ್ಲ ನಮಗಾಗಿ ನೆಲೆವೀಡು
ಯಾರು ಕೇಳುವರು ನಮ್ಮ ಈ ಒಡಲ ದುಃಸ್ಥಿಯ ಪಾಡು|

ತಿನ್ನಲು ಏನಿಲ್ಲ ನಾಡಿನೊಳು ಹೊಟ್ಟೆಗೆ ತುಂಬುವುದು ಏನು
ತಿನ್ನಲೋದರೆ ಬಡಿವರು ಬಡಿಗೆಯಿಂದ ಮುರಿವಂತೆ ಕಾಲು
ಎಲ್ಲಿ ನೋಡಿದರೂ ಕಾಣುವುದು ಬರಿ ಕಟ್ಟಡದ ಸಾಲು
ಕಾಣದೆ ಮರಗುತಿದೆ ಮನ ಸಾಲು ಮರಗಳ ಕಾಡು
ಇಲ್ಲಿ ನಮಗಿಲ್ಲ ಜೀವಿಸಲು ಮೀಸಲು |

ಏ ಸ್ವಾರ್ಥಿ ಮನುಜ ನಮ್ಮ ಒಡಲ ವೇಧನೆಯನೊಮ್ಮೆ ಅರಿಯಿರಿ
ನಮಗೂ ನಿಮ್ಮಂತೆ ಸಹಬಾಳ್ವೆ ಜೀವನವ ನೀಡಿರಿ
ನಮಗಾಗಿ ಪ್ರಕೃತಿಯ ರಕ್ಷಿಸಿರಿ
ಜೊತೆಗೂಡಿ ಸಾಮರಸ್ಯದಿ ಬಾಳಿರಿ |

ಯಾರು ಕೇಳುವರಿಲ್ಲಿ ನಮ್ಮ ಮನದ ಗೋಳು
ಹಸಿವ ನೀಗಿಸಲು ಸಿಗುತ್ತಿಲ್ಲ ತುತ್ತು ಕೂಳು
ಅನ್ನವಿಲ್ಲದೆ ಸಾಗಿಸಲಾದಿತೆ ಈ ಬಾಳು
ಮನವ ತಣಿಸಲು ಸಿಗದಾಗಿದೆ ಮರದ ನೆರಳು
ಕಾಣೆಯಾಗಿದೆ ಮೈದುಂಬಿ ನಿಂತಿದ್ದ ಮರದ ಬಿಳಲು
ಜಗದಿ ನಮಗಿಂದು ಬಂದಿಹುದು ಅಳಲು |

ಕಂಡ ತೋಟಗದ್ದೆಳಿಗೆ ಲಗ್ಗೆಯಿಟ್ಟು ಮನಪೂರ್ತಿ ತಿಂದಿದ್ದ ಗಳಿಗೆಯದು
ಅನ್ನಕ್ಕಾಗಿ ಅಲೆದಾಡುತಿಹ ದಿನವಿದು
ಯಾರಿಗೂ ಕಾಣದಾಗಿದೆ ಈ ನಮ್ಮ ದುಃಸ್ಥಿತಿ
ಜಗದಿ ನಾವಾಗಿಹೆವು ಯಾರಿಗೂ ಬೇಡದ ಅಥಿತಿ
ಹಸಿವಿಗೆ ಬಲಿಯಾಗಿ ಆಗುತಿಹುದು ಜೀವಿಗಳ ತಿಥಿ
ಎಲ್ಲವೂ ನಾಶ ಪಡಿಸಿದ ಮಾನವ ನೀನು ಒಮ್ಮೆ ಆಗುವೆ ಪ್ರಕೃತಿಯ ವಿಕೋಪಕ್ಕೆ ಆಹುತಿ
ಇದುವೇ ಕಾಲ ಚಕ್ರದೊಳಿರುವ ನೀತಿ

—————————————

ಶೈವಾನೀಕ

About The Author

Leave a Reply

You cannot copy content of this page

Scroll to Top