ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com


ಕಾವ್ಯ ಸಂಗಾತಿ

ಜ್ಞಾನಯೋಗಿಗೆ ಶರಣು

ರೋಹಿಣಿ ಯಾದವಾಡ

ನಡೆದಾಡುವ ದೇವರು ನೀವು
ನಡಿಗೆ ನಿಲ್ಲಿಸಿಬಿಟ್ಟಿರಿ ಇಂದು
ಭಕ್ತ ಜನಸಾಗರವನು ಬಿಟ್ಟು
ಹೋಗುವ ಮನಸೇಕೆ ಮಾಡಿದಿರಿ

ಅಧ್ಯಾತ್ಮದ ಬೆಳಕು ಹರಿಸಿ
ಮನ ಮನಸ್ಸುಗಳ ಬೆಳಗಿಸಿದಿರಿ
ಬಾಳ ಬದುಕಿನ ಪಯಣಕೆ
ಮನದ ನೆಮ್ಮದಿ ಅರುಹಿದಿರಿ

ಬದುಕಿನ ಸಾರ ಪ್ರವಚನದಿ
ಸಾರಿ ಹೇಳಿದಿರಿ ಲೋಕಕೆ
ಬರಿಗೈಲಿ ಬಂದಿರುವ ನಾವು
ಕೊಂಡು ಹೋಗಲೆನಿಲ್ಲವೆಂದಿರಿ

ಸರಳತೆಗೆ ಸಾಕಾರ ಮೂರ್ತಿ
ಜೇಬಿಲ್ಲದ ಅಂಗಿ ಉಟ್ಟು
ಬೇಡೆಂಬ ದೀಕ್ಷೆ ತೊಟ್ಟು
ಬೇಕೆಂಬ ಶಬ್ದವನೆ ಅಳಿದಿರಿ

ಜ್ಞಾನ ಭಂಡಾರದ ಕಣಜ
ಸುಜ್ಞಾನ ಸಾಮ್ರಾಟರು ತಾವು
ಲೋಕ ಬೆಳಗಿಸಿ ಹೊರಟಿರಿ
ಸದ್ದಿಲ್ಲದ ಸುದ್ದಿ ಆಗಿಸಿ

ಜ್ಞಾನಕ್ಕೆ ಹೊನ್ನ ಕಳಸ
ಅಮೃತ ಉಣ ಬಡಿಸಿದ
ದಾಸೋಹ ಮುಕುಟ ಮಣಿ
ಸರ್ವ ಸಮರ್ಪಿತರು ತಾವು

ಇಹದ ಗೊಡವೆಗೆ ಅಂಟದೆ
ಕರೆದಾಗ ಬರುವೆ ಎಂದಿರಿ
ದೇವನ ಅಣತಿಗೆ ಒಪ್ಪುತ
ನಿಶ್ಯಬ್ದ ನಿರ್ಗಮನಗೈದಿರಿ.


ರೋಹಿಣಿ ಯಾದವಾಡ

About The Author

1 thought on “ಜ್ಞಾನಯೋಗಿಗೆ ಶರಣು-ರೋಹಿಣಿ ಯಾದವಾಡ”

Leave a Reply

You cannot copy content of this page

Scroll to Top