ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯಸಂಗಾತಿ

ನನಸಿನೊಳಗೊಂದು ಕನಸು

ಹುಳಿಯಾರ್ ಷಬ್ಬೀರ್

ನನ್ನ ಕವಿತೆಯೊಳಗೆ ಬದುಕು ಮಾತನಾಡುತ್ತಿದೆ
ನಿಜವಾಗಿಯೂ ನಾವು
ಬಡವರು ಎಂದು ನೀವು ಕರೆದವರು
ದಲಿತರು
ಶ್ರಮಿಕರು
ಅಲ್ಪಸಂಖ್ಯಾತರು
ನೀವು ಹಾಕಿದ ಚೌಕಗಳೊಳಗೆ ನಡೆಸಲ್ಪಡುವ
ಚದುರಂಗದ ದಾಳಗಳು

ನನ್ನ ಕವಿತೆಯೊಳಗೆ ಬದುಕು ಮಾತನಾಡುತ್ತಿದ್ದೆ
ನಾನು ಮಾತಾಡುವಾಗ
ನಿಮ್ಮ ಕಿವಿ
ಗಬ್ಬುನಾತದ ಸಂಡಾಸಿನೊಳಗೆ ಕೂತು
ತುಕ್ಕು ಹಿಡಿದ ತಗಡಿನ ಮೇಲಿನ
ಅತೃಪ್ತ ಸಾಲುಗಳಲ್ಲಿ ಕಣ್ಣು ಹೂತು
ಸೋತು ಹೋದ ನಿಮ್ಮ ಪಂಚೇಂದ್ರಿಯಗಳ
ಪ್ರಜ್ಞಾವಂತಿಕೆಗೆ ಅಕಾಲಿಕ ಆಮಶಂಕೆ
ಈ ಅಯೋಮಯದೊಳಗೆ

ನಿಮಗೆ ಬಿತ್ತಂತೆ ಒಂದು ಕನಸು
ನಿಮ್ಮದೇ ಮಗು
ದಿಢೀರನೆ ಬಾಗಿಲು ಒದ್ದು
ಕಟ್ಟಿದ್ದ” ಉಚ್ಚೆ” ನುಗ್ಗಿಸಿ
ಹಿಂಡಿದ ನಿಮ್ಮ ಮುಖದ
ಬೆವರಲ್ಲಿ ಬೆರೆಸಿ
ಉಪ್ಪೊಳಗೆ ಉಪ್ಪಾದಂತೆ
ನನ್ನ ಕವಿತೆಯೊಳಗೆ ಬದುಕು ಮಾತನಾಡುತ್ತಿದೆ..

ನಾವು ಬಡವರು
ಕತ್ತಲೆಯ ಕಂಬಳಿಯನ್ನು
ಹಾಸಿ ಹೊದ್ದು
ಮಕ್ಕಳಿಗೂ ಹೊದಿಸಿದವರು
ಖೋಟಾ ಬೌದ್ಧಿಕತೆಯ ಬಿಟ್ಟಿ ಬೆಳಕಿನಲ್ಲಿ ಹೇಳ ಹೆಸರಿಲ್ಲದೆ
ಕೊಚ್ಚಿ ಹೋದವರು
ಖುಲ್ಲಾ ಆಗಿರುವ ಅಟ್ಟದಲ್ಲಿ
ಮರ್ಯಾದೆಗೆಟ್ಟು ಆಟವಾಡುತ್ತಿರುವ
ಇಲಿಗಳ ಸದ್ದು
ಬಂದರೂ ಬರಬಹುದು
ತಿಂದು ತೇಗುವುದಕ್ಕೆ
ದಾಸಿಮಯ್ಯನ ಇನ್ನೊಂದು ಬೆಕ್ಕು ಕದ್ದು..
ನನ್ನ ಕವಿತೆಯೊಳಗೆ ಬದುಕು ಮಾತನಾಡುತ್ತಿದೆ.


About The Author

2 thoughts on “ಹುಳಿಯಾರ್ ಷಬ್ಬೀರ್-ನನಸಿನೊಳಗೊಂದು ಕನಸು”

  1. ಗೋಪಾಲ ತ್ರಾಸಿ

    ಹಲವರ ನಿತ್ಯ ಬದುಕಿನ ವಾಸ್ತವ …ವೈರುಧ್ಯ…….ದುರಂತ…. !!!!

  2. ಇಂದ್ರಮ್ಮ

    ನಿತ್ಯ ಅನುಭವಿಸುತ್ತಿರುವ ಬಡವರ ಬದುಕನ್ನು ಕಟ್ಟಿರುವ ನಿಮಗೆ ವಂದನೆ

Leave a Reply

You cannot copy content of this page

Scroll to Top