ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಗಜಲ್

ಶಂಕರಾನಂದ ಹೆಬ್ಬಾಳ

ಹೃದಯ ಸಂದೂಕಕ್ಕೊಂದು ಬೀಗ
ಜಡಿದಿದ್ದೇನೆ ಇಂದು
ಕದನಗೈದು ಕ್ರೋಧವೆಂಬ ವಿಷವ
ಕುಡಿದಿದ್ದೇನೆ ಇಂದು

ತಪ್ತ ಕನಸುಗಳ ಮೂಟೆ ಕಟ್ಟಿ
ಮೂಲೆಗೆಸೆದೆ ಏತಕೆ
ಸುಪ್ತ ಮನಸ್ಸಿನ ಅನುರಾಗಕೆ
ತುಡಿದಿದ್ದೇನೆ ಇಂದು

ಪ್ರೀತಿಯ ಗಲ್ಲಾಪೆಟ್ಟಿಗೆಯು
ಖಾಲಿಯಾಗಿದೆ ನೋಡು
ಭೀತಿಯ ಮೊಳೆಗಳ ಸುತ್ತಲೂ
ಬಡಿದಿದ್ದೇನೆ ಇಂದು

ಗರಿಮುರಿದ ಹಕ್ಕಿಯಂತೆ ಒದ್ದಾಡಿ
ಹೋಗುತಿರುವೆ
ಮುರಿದ ವೀಣೆಯಲಿ ಒಲವ
ಮಿಡಿದಿದ್ದೇನೆ ಇಂದು

ನಡೆವ ದಾರಿಯಲಿ ಮುಳ್ಳುಗಳ
ಹಾಕದಿರು ಅಭಿನವ
ಸೆಡುವ ತೊರೆಯುತ ದುಃಖದಲಿ
ನಡೆದಿದ್ದೇನೆ ಇಂದು


About The Author

Leave a Reply

You cannot copy content of this page

Scroll to Top