ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ

ತಮಸೋಮಾ ಜ್ಯೋತಿರ್ಗಮಯ

ತಮಸೋಮಾ ಜ್ಯೋತಿರ್ಗಮಯ ಕತ್ತಲಿನ ಬಗೆಗೆ ಸೋಜಿಗವೂ ಬೆಳಕಿನ ಬಗೆಗೆ ಬೆರಗು ಹುಟ್ಟಿಸುವ ಹಬ್ಬವೇ ದೀಪಾವಳಿ. ಮನುಷ್ಯ  ಮೊಟ್ಟಮೊದಲು ಬೆಳಕು ನೀಡಿದ ಸೂರ್ಯನ ಬಗ್ಗೆ ಪೂಜ್ಯ ಭಾವನೆ ಬೆಳೆಸಿಕೊಂಡ. ನಂತರ ಬೆಂಕಿ ಆವಿಷ್ಕಾರವಾದ ಮೇಲೆ ಬೆಳಕಿನ ಮೂಲವಾದ ಅದು ತನ್ನ ಅಗತ್ಯತೆಗಳನ್ನು ಪೂರೈಸಲು ಸಹಾಯಕವಾದಾಗ ಅದನ್ನು ದೈವತ್ವಕ್ಕೇರಿಸಿದ.  ಹೀಗೆ ಬೆಳಕು ಹಾಗೂ ಅದರ ವಿವಿಧ ಮೂಲಗಳು ಮನುಷ್ಯನ ಜೀವನದಲ್ಲಿ ಹಾಸುಹೊಕ್ಕಾಗಿ ಪ್ರಮುಖ ಸ್ಥಾನವನ್ನು ನಿರ್ಮಿಸಿಕೊಂಡವು.   ಪ್ರಾಚೀನ ಕಾಲದಿಂದಲೂ ಕತ್ತಲು ನಿಗೂಡತೆ ಅಜ್ಞಾನದ ಸಂಕೇತ .ಬೆಳಕು ಜ್ಞಾನದ ಪ್ರತಿನಿಧಿ. ಬೆಳಕಿನ ಬಲದಲ್ಲಿ ಅಜ್ಞಾನದ ಕತ್ತಲೆ ಹರಿದು ಅರಿವಿನ ವಿವೇಕ ಅರಳುತ್ತದೆ.  ಕತ್ತಲಿನ ಮಾರ್ಗದಲ್ಲಿ ಅರಿವಿನ ದಾರಿ ದೀಪ ಬೆಳಗಿ ಮನುಷ್ಯನಿಗೆ ಚೈತನ್ಯ ತುಂಬಿ ಮಾರ್ಗದರ್ಶಿಯಾಗುತ್ತದೆ. ಹಾಗಾಗಿಯೇ ಎಲ್ಲ ನಾಗರಿಕತೆ ಸಂಸ್ಕೃತಿಗಳಲ್ಲಿ ದೀಪಕ್ಕೆ ಜ್ಯೋತಿಗೆ ಅತ್ಯಂತ ಪ್ರಾಧಾನ್ಯತೆ.   ಬ್ರಹ್ಮಾಂಡದಲ್ಲಿ ಅಂಧಕಾರ ಅಥವಾ ಕತ್ತಲೆಯೆಂಬುದೇ ವ್ಯಾಪಕ ಅಂದರೆ ಕತ್ತಲೆಯೇ ಒಂದು ರೀತಿಯ ನಿರಂತರತೆ .ಆದರೆ ಒಂದು ಸಣ್ಣ ಜ್ಯೋತಿಯು ಕತ್ತಲೆಯನ್ನು ಓಡಿಸುತ್ತದೆ. ತಮಸ್ಸು ಎಂದರೆ ಮನಸ್ಸಿಗೆ ನಯನಕ್ಕೆ ಆವರಿಸಿದ ಅಂಧತ್ವ . ಅಜ್ಞಾನ ಅಂದರೆ ಮನುಷ್ಯನ ಕುರುಡುತನವೇ.  ಹಾಗಾಗಿಯೇ ಬೆಳಕು ಕಣ್ಣಿಗೆ ಕವಿದ ಕತ್ತಲೆಯನ್ನು ದೂರ ಮಾಡುತ್ತದೆ ದೃಷ್ಟಿಗೋಚರವಾಗಿಸುತ್ತದೆ. ವಿಸ್ತೃತ ಪರಿಭಾಷೆಯಲ್ಲಿ ಮನದ ಅಜ್ಞಾನ ತಮವನು ನಿವಾರಿಸಿ ಜ್ಞಾನ ದರ್ಶನ ಮಾಡಿಸುತ್ತದೆ. ಅಂಧಕಾರವೆಂದರೆ ಅದು ಕಪ್ಪು, ವಿಷ . ಬೆಳಕು ಪ್ರಕಾಶ, ಜೀವನದ ಸಂಕೇತ, ಅಮೃತತ್ವದ ದ್ಯೋತಕ . ಹೀಗಾಗಿಯೇ ಬೆಂಕಿ ಬೆಳಕು ಪ್ರಕಾಶ ಇವೆಲ್ಲವೂ ಚೈತನ್ಯದ ಸ್ವರೂಪ.  ಬೆಳಕನ್ನುಂಟು ಮಾಡುವುದು ಎಂದರೆ ದೀಪವನ್ನು ಹಚ್ಚುವುದು ಜ್ಞಾನಾರ್ಜನೆಯ ಸಂಕೇತವಾಗಿ ಶುಭದ ಸೂಚನೆಯಾಗಿ ನಂಬಿಕೆಯ, ಧಾರ್ಮಿಕತೆಯ ಅವಿಭಾಜ್ಯ ಅಂಗವಾಗಿದೆ.   ಕಾರ್ತೀಕ ಮಾಸದಲ್ಲಿ ಬೇಗ ಕತ್ತಲು. ಚಳಿಯ ಕಾಲವಾದ್ದರಿಂದ ವಾತಾವರಣವು ಚಳಿ ಹೆಚ್ಚಾಗಿ ಮಂಕುತನ.  ಇಂತಹ ಸಮಯದಲ್ಲಿ ತಮ ನಿವಾರಕ ದೀಪ ಜ್ಯೋತಿಯನ್ನು ಬೆಳಗುವ ಮೂಲಕ ಮನೆ ಮನಗಳಲ್ಲಿ ಚೈತನ್ಯ ಲವಲವಿಕೆ ಪ್ರವಹಿಸುವ ಆಚರಣೆಯೇ ದೀಪಾವಳಿಯ ಸಂಭ್ರಮದ ಆದಿ.  ಹಿಂದೂ ಧರ್ಮದ ಅತ್ಯಂತ ಜನಪ್ರಿಯ, ಪ್ರತಿ ಮನೆಯಲ್ಲೂ ಆಚರಿಸುವ ಈ ಹಬ್ಬ ನಮ್ಮ ಸಂಸ್ಕೃತಿಯಲ್ಲಿ ಅಗ್ನಿಗೆ ನೀಡಿದ ಮಹತ್ತ್ವಕ್ಕೆಉದಾಹರಣೆ. ಆದರೆ ಜಗತ್ತಿನ ವಿವಿಧ ಧರ್ಮಗಳಲ್ಲೂ ಬೆಂಕಿ ದೀಪ ಬೆಳಕುಗಳಿಗೆ ಧಾರ್ಮಿಕ ಪ್ರಾಧಾನ್ಯತೆ ಇದೆ ಎಂಬ ಅಂಶವೂ ಇಲ್ಲಿ ಗಮನಾರ್ಹ.   “ಪ್ರಜ್ವಲಿತೋ ಜ್ಞಾನಮಯಃ ಪ್ರದೀಪಃ” ಭಾರತೀಯ ಪರಂಪರೆಯಲ್ಲಿ ದೀಪವೆಂದರೆ ಶುಭ ಮಂಗಳ ಎಂಬ ಉದಾತ್ತ ಕಲ್ಪನೆ.  ಶುಭಂ ಕರೋತಿ ಕಲ್ಯಾಣಂ ಆರೋಗ್ಯ ಧನ ಸಂಪದಃ ಶತ್ರು ಬುದ್ದಿ ವಿನಾಶಾಯ ದೀಪಜ್ಯೋತಿ ನಮೋಸ್ತುತೆ  ದೀಪ ಪ್ರಾಣದ ಸಂಕೇತ ಜ್ಞಾನದ ಸಂಕೇತ ಶುಭದ ಸಂಕೇತ ಅಭಿವೃದ್ಧಿಯ ಸಂಕೇತ. ದೀಪದ ಬೆಳಗುವಿಕೆಯಿಂದ ಶುಭವಾಗಲಿ ಮಂಗಳವಾಗಲಿ ಆರೋಗ್ಯ ಧನ ಸಂಪತ್ತು ವೃದ್ಧಿಯಾಗಲಿ.  ಮನದ ಶತ್ರುಗಳು ಅಂದರೆ ರಜೋತಾಮಸ ಗುಣಗಳು, ಅರಿಷಡ್ವರ್ಗಗಳು ನಾಶವಾಗಲಿ ಎಂಬ ಆಶಯ.   ದೀಪದ ಮತ್ತೊಂದು ವಿಭಿನ್ನ ವಿಶಿಷ್ಟ ಸ್ವಭಾವ ಬೆಳಗುವುದು.  ತನ್ನನ್ನು ತಾನೇ ದಹಿಸಿಕೊಳ್ಳುವುದು . ಉರಿಯುತ್ತಲೇ ಕತ್ತಲನ್ನು ದಕ್ಕಿಸಿಕೊಂಡು ಅರಗಿಸಿಕೊಳ್ಳುವುದು .ಎಂತಹ ಗಾಢವಾದ ಕತ್ತಲೆಯನ್ನು ಸಣ್ಣ ದೀಪ ನಿವಾರಿಸುತ್ತದೆ ನುಂಗಿಬಿಡುತ್ತದೆ.  ಕತ್ತಲೆಗೆ ಹೇಗೆ ಆವರಿಸಿಕೊಳ್ಳುವ ಗುಣ ಇದೆಯೋ ಆ ಕೊನೆಯಿಲ್ಲದ ದಾಹ ಬೆಳಕಿಗೂ ಇದೆ. ಬೆಳಕಿನ ಮಹತ್ವ ತಿಳಿಯುವುದು ಕತ್ತಲೆಯಿದ್ದಾಗ. ಕತ್ತಲೆ ನೀಡುವ ಅವಕಾಶವೇ ಬೆಳಕಿನ ಪ್ರಜ್ವಲನೆ. ಅಜ್ಞಾನವಿದ್ದಾಗಲೇ ಜ್ಞಾನದ ಮಹತ್ವ.  ಜ್ಞಾನ ಗಳಿಕೆಗೆ ಮೂಲ ಅಜ್ಞಾನವೇ. ಅಂತೆಯೇ ಅಜ್ಞಾನಿಗಳಾದ ನಾವು ಜ್ಞಾನ ಪ್ರಾಪ್ತಿಗೊಳಿಸಿಕೊಳ್ಳಬೇಕೆಂಬ ಕ್ರಿಯೆಯೇ ಈ ದೀಪೋತ್ಸವ .  ಅಜ್ಞಾನ ತಿಮಿರಾಂಧಸ್ಯ ಜ್ಞಾನಾಂಜನ ಶಲಾಕಯಾ  ಇದು ಒಮ್ಮೆ ಮಾತ್ರ ಮಾಡಿ ಮುಗಿಯಿತೆಂದು ಕೊಳ್ಳುವ ಕ್ರಿಯೆ ಖಂಡಿತ ಅಲ್ಲ . ಕತ್ತಲು ಮತ್ತೆಮತ್ತೆ ಮುಸುಕುವಂತೆ ಅಜ್ಞಾನವು ಅಡರುತ್ತಲೇ ಇರುತ್ತದೆ . ಹಾಗಾಗಿ ದೀಪ ಬೆಳಗುವಿಕೆ ಪುನರಾವರ್ತನ ಕ್ರಿಯೆ. ಅಗ್ನಿ ಬಲದ ದ್ಯೋತಕವಾದ ದೀಪ ಬೌದ್ಧಿಕ ಬಲ. ಇದಕ್ಕೆ ೭ಬಣ್ಣ ಹಾಗೂ ೭ ಜಿಹ್ವೆಗಳಿವೆ ಎನ್ನುತ್ತಾರೆ. ನಮ್ಮ ಕಣ್ಣು, ಕಿವಿ, ಮೂಗು, ನಾಲಿಗೆ, ಚರ್ಮ, ಪಂಚೇಂದ್ರಿಯಗಳ ಜತೆ ಮನಸ್ಸು ಅಹಂಕಾರಗಳನ್ನು ಸಹ ಅಭಿವ್ಯಕ್ತಿಸುತ್ತದೆ .ದೀಪ  ಅನಂತ. ದೀಪದಿಂದ ದೀಪವನ್ನು ಬೆಳಗುತ್ತಾ ಹೋದಂತೆ ಅದು ಅಕ್ಷಯವಾಗಿ ಬಿಡುವುದಿಲ್ಲ. ಹಾಗೆಯೇ ಓದಿದಷ್ಟೇ ಜ್ಞಾನ ವಿಸ್ತರಿಸುತ್ತದೆ .  ಈ ದೀಪಾವಳಿಯ ಶುಭ ಸಂದರ್ಭದಲ್ಲಿ ಮನಸ್ಸಿನ ತಮಸ್ಸನ್ನು ದುಷ್ಟಬುದ್ಧಿ ರಾಕ್ಷಸಿ ಪ್ರವೃತ್ತಿ ಮೊದಲಾದ ತಮೋ ಗುಣಗಳನ್ನು ವಿನಾಶ ಮಾಡುವ ಜ್ಞಾನದ ದೀಪವನ್ನು ಮನೆಮನೆಗಳಲ್ಲಿ ಬೆಳಗೋಣ . ಈ ದೀಪ ಪ್ರಜ್ವಲನೆಯ ಸತ್ಕಾರ್ಯ ಕೆಲ ಘಳಿಗೆ, ಕೆಲದಿನ  ಅಥವಾ 1ತಿಂಗಳಿಗೆ ಸಿಮೀತ ಗೊಳಿಸದೆ ಆಜೀವ ಪರ್ಯಂತದ ವ್ರತವಾಗಿ ನೋಮಿಯಾಗಿ ನೇಮವಾಗಲಿ .  ಕೆ ಎಸ್ ನರಸಿಂಹಸ್ವಾಮಿ ಅವರು ನುಡಿದಂತೆ ಬೆಳಕಿನಸ್ತಿತ್ವವನೆ  ಅಣಕಿಸುವ ಕತ್ತಲೆಗೆ  ತಕ್ಕ ಉತ್ತರವಿಲ್ಲಿ ಕೇಳಿ ಬರಲಿ  ದೀಪಾವಳಿಯ ಜ್ಯೋತಿ  ಅಭಯ ಹಸ್ತವನೆತ್ತಿ  ಎಲ್ಲರಿಗೆ ಎಲ್ಲಕ್ಕೆ ಶುಭಕೋರಲಿ 

ತಮಸೋಮಾ ಜ್ಯೋತಿರ್ಗಮಯ Read Post »

ಕಥಾಗುಚ್ಛ

ಡೊಂಕು

ಕಥಾ ಸಂಗಾತಿ ಡೊಂಕು ವಿಜಯಾಮೋಹನ್ : ಅಕ್ಕಯ್ಯನೆದೆಯೊಳಗೆ ಬಗೆ ಬಗೆದು ಬಿತ್ತಿದ್ದ ಚಿಂತೆಗಳೆಂಬ ತರಾವರಿ ಬೀಜಗಳು, ಅವು ಒಂದಲ್ಲ ಎರಡಲ್ಲ, ಮೂರು ಸಂಗತಿಗಳು  ಮೊಳಕೆಯೊಡಕೊಂಡು.  ಪೈರುಗಳಾಗಿ ಬೆಳೆಯುವಾಗ, ಅವುಗಳನ್ನ ಬುಡ ಸಮೇತ ಕಿತ್ತೆಸೆಯಲಾಗದೆ, ಅವಳೊಳಗವಳು ಖಿನ್ನಳಾಗುತ್ತ ಕುಂತು, ಇಂಗೆ ಗರ ಬಡದೋನಂಗೆ ಕುಂತಿರುವ ಮಗನನ್ನು ನೋಡುತ್ತಿದ್ದರೆ. ಬೆಳಗಾ ಸಂಜೇಲಿ ಆ ಚಿಂತೆಯ ಪೈರುಗಳಿಗೆ ನೋವೆಂಬ ನೀರು ಜಿನುಗುತ್ತಿತ್ತು.       ಅವಳ ಮನೇಲಿ ಅವಳಿಗಿದ್ದದ್ದು ಒಂದೇ ಒಂದು ಗಂಡುಡಗ. ನೆಲಕ್ಕೆ ಬಿಟ್ಟರೆ ಎಲ್ಲಿ ಮಣ್ಣಾಗ್‌ತ್ತಾನೊ? ಅನ್ನುವಂತ ನಯಾ-ನಾಜೋಕಿನೊಳಗೆ ಸಾಕಿದ್ದಳು. ಅವನು ಅಂಗೆ ಅಷ್ಟೇ ಭಯ-ಭಕುತಿಯಿಂದ ಬೆಳೆದು ವಯಸ್ಸಿಗೆ ಬಂದು ನಿಂತ ಹುಡುಗ. ನಾನೆಂದರೆ ನನ್ನ ಇರುವೆಂದರೆ ಎಲ್ಲೂ ಮುಕ್ಕಾಗಬಾರದು. ಅನ್ನುವಂತ ಮಗನನ್ನ ಪಡೀಬೇಕಾದ್ರೆ. ಅಕ್ಕಯ್ಯ ಕೂಡ ಯಾವ ಜನುಮದಲ್ಲಿ? ಯಾವ್‌ದೇವ್ರಿಗೆ? ಅದೆಂತ ಹೂವ್ವಾ ಮುಡಿಸಿದ್ಲೋ ಏನೊ? ಅಂತ ಮಗನ ಹೆಸರು ಪ್ರಸನ್ನ, ಹೆಸರಿಗೆ ಸರಿಯಾಗಿ ತೂಕವಾದ ಹುಡುಗ, ಅಂತವನು ಕೂಡ ಅವಳ ಜೊತೇಲಿ ಹಿಟ್ಟು ನೀರು, ನಿದ್ದೆ ನಿಲುವು ಅನ್ನುವುದನ್ನೆ ಬಿಟ್ಟು. ಚಿಂತೆಯ ಸಂತೇಲಿ ಕುಂತು- ಮಕನಾಗೆ ಕುಂತು ಬಿಡಂಗಾದ, ಅದು ಯಾಕೆನ್ನುವ ಪ್ರಶ್ನೆಗಳು, ಅಕ್ಕಯ್ಯ ಮತ್ತು ಪ್ರಸನ್ನನ ಎದೆಯೊಳಗೆ ಗುಂಗೆ ಹುಳುವಾಗಿ ಕೊರಿಯಾಕಿಡಿದವು. ಬ್ಯಾರೆಯವರಿಗೆ ಅಷ್ಟಾಗಿ ಗೊತ್ತಾಗ್‌ಲಿಲ್ಲ,   ಪ್ರಸನ್ನ ಹುಟ್ಟಿ-ಬೆಳೆದ ಇಷ್ಟೊರುಷದಲ್ಲಿ, ಯಾರ್ ತಂಟಿಗು ಹೋಗದ ಹುಡುಗ. ಈಗ ಐದಾರು ವರ‍್ಷದಿಂದ ಈಚೆಗೆ, ಅದು ಯಂತ ಶನಿ ಎಗಲೇರಿಬಿಡತೊ ಏನೊ? ಅವನು ಮಾಡದ ತಪ್ಪುಗಳೆಲ್ಲ ಅವನಿಗೆ ತಿರುಗಿಸಿ ಛಾಟಿಯಂತೆ ಬೀಸಾಕಿಡದ್‌ವು. ಅಂಗಾಗೆ ಅವನು ಕುಂತು ಮಕನಾಗೆ ಕುಂತಿದ್ದ. ಅವನ ಮುಂದೆ ಬಾಯಿ ಬಿಟ್ಟುಕೊಂಡು ಉರಿಯುತ್ತಿರುವ ಸೂರ‍್ಯನು ಇದ್ದ. ಕವ-ಕವನೆಂದು ಕಣ್ಣು ಮುಚ್ಚಿಕೊಂಡು ಸುರಿಯುತ್ತಿರುವ ಕತ್ಲೇನು ಇತ್ತು. ಆದರೆ ಇದ್ಯಾವುದುನ್ನು ನಿಗಾ ಮಾಡಲಾರದಂತ ಮನಸ್ಸಿನೊಳಗೆ ಮನಸ್ಸಿಲ್ಲದ ಪ್ರಸನ್ನನೆಂಬುವನನ್ನು.ನೋಡಿದ-ಮಕನಾಗಿ ನೋಡುತ್ತಿರುವ ಅಕ್ಕಯ್ಯನ ಎದೆಯೊಳಗೆ. ಆ ಚಿಂತೆಯ ಪೈರುಗಳು ತರಾವರಿಯಾಗಿ ತೂಗಾಡುತ್ತಿದ್ದವು. ಇದ್ಯಾಕಲ ಪ್ರಸನ್ನ ಕೆಲಸಿಲ್ಲ ಕಾರ‍್ಯವಿಲ್ಲ, ಬರಿ ಕುಂತು ಮಕನಾಗೆ ಸುಮ್ಮನೆ ಕುಂತಿದ್ದೆ ಆಯಿತಲ್ಲಲೆ? ಎಂದು  ಆ ಪಕ್ಕದ ಮನೆ ಮಲ್ಲೇಶನ ಮಾತೆನ್ನುವುದು. ಆಗತಾನೆ ಅವನ ಮೊಣಕಾಲಿನವರೆಗು ಮೊಡಚಿಕೊಂಡಿದ್ದ ಮಾಸಲು ಲುಂಗಿಯನ್ನ. ಕಾಲಿನ ಪಾದದವರೆಗೆ ಇಳಿಯ ಬಿಟ್ಟು, ಅವನ ಎದೆ ತಳ್ಳಿ ಬಂದ ದೊಡ್ಡುಸಿರು ಕಕ್ಕಿ, ಆ ಕಲ್ಲು ಬೆಂಚಿನ ಮ್ಯಾಲೆ ಕುಂಡಿ ಊರಿದ್ದ ಪ್ರಸನ್ನನ ಕಿವಿಗೆ ತಾಕತು. ರಭ-ರಭನೆ ಯಾರೊ ಕೆನ್ನೆಗೆರಡು ಬಾರಿಸಿದಂತಾಯಿತು. ಲೇ ನಾನ್ ನಮ್ಮನೆ ಬಾಗ್ಲಲ್ಲಿ ಕುಂತಿದ್ರೆ ನಿನಗೇನಲ ಇಕ್ಕಟ್ಟು? ಏನ್ ನಿನ್ ಪಂಚೆ ಬಾಗ್ಲಿಗೇನಾರ ಬಂದು ಕುಂತಿದ್ದಿನೇನಲ? ಪ್ರಸನ್ನನ ಬಾಯೊಳಗೆ ಬಂದ ಮಾತು ಅಷ್ಟೇ ಗಡುಸಾಗಿ ಇತ್ತು. ಎಂದು ಯಾವತ್ತು ಅವನ ಬಾಯಲ್ಲಿ ಅಂತ ಗಡುಸಿನ ಮಾತುಗಳೆ ಬರ್‌ತಿರಲಿಲ್ಲ. ಕೆಲಸಿಲ್ಲ-ಕಾರ‍್ಯವಿಲ್ಲದಂಗೆ ಕುಂತುಬಿಟ್ಟಲ್ಲೊ? ಎಂದ ಪಕ್ಕದ ಮನೆ ಮಲ್ಲೇಶನ ಮಾತು ದಿಟದಲ್ಲಿ ದಿಟವಾದ ಸುಳ್ಳು. ಯಾಕೆಂದರೆ ಪ್ರಸನ್ನನನ್ನು ಹುಡುಗನಿಂದಲು ಹೆತ್ತು ಹೊತ್ತು ಸಾಕಿರುವ. ನಮ್ಮ ಅಕ್ಕಯ್ಯನಿಗೆ ಗೊತ್ತು. ಯಾವತ್ತು ಅವನು ಕೆಲಸ ಕಾರ‍್ಯವಿಲ್ಲದೆ ಅಷ್ಟು ಸಲೀಸಾಗಿ ಹಿಟ್ಟುಂಡ ಹುಡುಗನೆ ಅಲ್ಲ. ಅಂತ ಸೊಂಬೇರಿ ಊಟವೆನ್ನುವುದು ನನ್ ಮನಸ್ಸಿಗೆ ಹಿಡಿಯೋದು ಇಲ್ಲ, ನನ್ ಮೈಗೆ ದಕ್ಕೋದು ಇಲ್ಲ, ಎಂದು ಸದಾ ಹೇಳುತ್ತಿದ್ದ ಪ್ರಸನ್ನ. ಬೆಳಕರಿದು ಎದ್ದರೆ ಸಾಕು ಏನಾದರೊಂದು ಕೆಲಸವನ್ನ ಹುಡುಕೇ ಹುಡುಕ್‌ತ್ತಿದ್ದ. ಅಕಸ್ಮಾತ್ತಾಗಿ ಆವತ್ತೇನು ಕೆಲಸಿಲ್ಲವೆಂದ್ರೆ ನಿಂತಿರೊ ಕಂಬಾನಾದ್ರು ಸುತ್ತುತೀನಿ ಬಿಡಮ್ಮ, ಅನ್ನುವಂತ ಉಮ್ಮಸ್ಸಿನ ಹುಡುಗ.  ಅಂತವನು ಇದ್ದೂರಿನ ಏಳನೇ ಕ್ಲಾಸಿನ್‌ವರೆಗು ಅಷ್ಟೇ ಚೆನ್ನಾಗಿ ಓದಿ, ಪಕ್ಕದೂರಿನ ಮುದ್ದೇನಹಳ್ಳಿ ಐಸ್ಕೂಲಿನಲ್ಲು, ನೂರಕ್ಕೆ ಎಂಬತ್ತು ಪರ‍್ಸೆಂಟು ನಂಬರ್ ತಗದು. ಎಸ್.ಎಸ್.ಎಲ್.ಸಿ ಪಾಸ್ ಮಾಡಿಕೊಂಡಿದ್ದ. ಜೊತೆಗೆ ಮನೆಯ ದನಕರುಗಳನ್ನ ಮೇಯಿಸುತ್ತಿದ್ದ. ಸೊಪ್ಪು-ಸೌದೆ ಹುಲ್ಲು ನೀರೆನ್ನುವ ಉಸಿರುಳಿಯುವ ಆದಾರಗಳನ್ನು ಆ ಮನೆಗಾಗಿ ಹೊಂಚಿಕೊಡುತ್ತಿದ್ದ. ಅಂಗೆ ಬ್ಯಾಸಿಗೆ ರಜ ದಸರ ರಜೆಯೊಳಗೆಲ್ಲ, ಯಾವ ನೆಂಟ್ರು ಗಿಂಟ್ರು ಊರುಗಳಿಗೆ ಹೋಗ್‌ದಂಗೆ. ತೆಂಗಿನ ತೋಟಗಳಲ್ಲಿ ಕಾಯಿ ಕೀಳುವ ನಿಪುಣನಾಗಿದ್ದ. ಯಾರು ಎಷ್ಟೊತ್ತಿನಲ್ಲಿ ಕರದ್ರು ಹೋಗಿ,ಕಾಯಿಗಳನ್ನು ಕಿತ್ತುಕೊಡುತ್ತಿದ್ದ ಮಗನನ್ನು ಕಂಡು. ಲೇ ನೀನು ಬರಿ ಕಾಯಿ ಕೀಳದ್ರಲ್ಲೆ ಕಾಲ ನೂಕ್‌ಬ್ಯಾಡವೊ? ಮುಂದಕ್ಕೆ ಇನ್ನೇನಾದ್ರು ದೊಡ್‌ದಾಗಿ ಓದ್‌ಬೇಕ್ ಕಣಪ್ಪ ಎಂದು ಕೊರಗುತ್ತಿದ್ದ. ಅಮ್ಮನ ಮಾತನ್ನು ಅಂಗೆ ಮನಸ್ಸಿಗಾಕಿಕೊಂಡ. ಅವನ ಜೊತೆಗಾರರು ಮೇಷ್ಟುç ಟ್ರೆöನಿಂಗ್  ಮುಗಿಸಿಕೊಂಡಿದ್ದವರು ಕೆಲಸಕ್ಕು ಸೇರ್ ಕಂಡ್ರು, ನಾನು ಸುಮ್ಮನಿದ್ರೆ ಆಗಲ್ಲ? ಇಂತಾ ಮೇಷ್ಟ್ರು ಆಗ್‌ಬೇಕೆಂಬ ಛಲ ಅವನಲ್ಲು ಬಂತು, ಎರಡೊರುಷ ಸಿ.ಪಿ.ಎಡ್ ಟ್ರೈನಿಂಗ್ ಅನ್ನೊದನ್ನ ಮುಗಿಸಿಕೊಂಡು ಬಂದ, ಬರಿ ಒಂದರಿಂದೆ ಒಂದು ಮೂರು ಹೆಣ್ಣುಮಕ್ಕಳನ್ನೆ ಸಾಕಿ ಬೆಳಸಿದ್ದ. ಅವನ ಸ್ವಾದ್ರಮಾವ ಸರ‍್ವೆ ಅಪೀಸೊಂದರಲ್ಲಿ ಕೆಲಸದಲ್ಲಿದ್ದವನು. ಅವನ ಕಣ್ಣೇಂಬೋವು ಜನವನ್ನಾಗ್‌ಲಿ-ನೆಲವನ್ನಾಗ್‌ಲಿ ಅಷ್ಟಾಗಿ ನೋಡ್‌ತಿರಲಿಲ್ಲ. ಅಂತ ದಿಮಾಕಿನ ಮಾವನ ಮುಂದೆ, ಅಣ್ಣಯ್ಯ ನಿಮ್ಮುಡುಗುರು ಮಾತ್ರ ಜಾಸ್ತಿ-ಜಾಸ್ತಿ ಓದ್‌ಕಂತಾ ಅವರೆ. ನನ್ನುಡುಗನ ಬದುಕು ಬರಿ ಕೂಲಿ ನಾಲಿ ಅನ್ನೋದರಲ್ಲೆ ಮುಗಿಬೇಕಾ? ಎಂದು  ಯಾವಾಗ್‌ಲು  ಮುಖಾ ಕಿವುಚಿಕೊಂಡು ಮಾತಾಡ್‌ತಿದ್ದ. ಪ್ರಸನ್ನನ ಅಮ್ಮನ ಮಾತಿಗೆ. ಅಣ್ಣನೆಂಬೋನು ಕಟ್ಟು ಬಿದ್ದು. ಒಳ್ಳೆ ಪ್ರವೇಟ್ ಇಸ್ಕೂಲಿಗೆ ಪ್ರಸನ್ನನನ್ನು ಪಿ.ಟಿ ಮೇಷ್ಟ್ರಾಗಿ ಕೆಲಸಕ್ಕೆ ಸೇರಿಸಿಬಿಟ್ಟಿದ್ದ. ಅಂತ ಇಸ್ಕೂಲು ಮುಂದೊಂದು ದಿನ ಪರಮ್‌ನೆಂಟು ಸಂಬಳ ಕೊಡುತ್ತೆ ಕಣಮ್ಮ, ಎಂದು ನೆಚ್ಚಿಕೊಂಡಿದ್ದ ಪ್ರಸನ್ನನ ಭರವಸೆಯ ಮಾತಿಗೆ. ಅವಳು ನಮ್ಮಕ್ಕಯ್ಯನಿಗಿದ್ದ ಬಂಗಾರ್‌ದಂತ ಅರ‍್ದ ಎಕರೆ ಹೊಲಾನು ಮಾರಿ. ಲಕ್ಷದ ಇಪ್ಪತ್ತು ಸಾವಿರ ದುಡ್ಡು ಕಟ್ಟೀಳು.     ಇನ್ನೂರರಿಂದ ಇನ್ನೂರೆಂಬತ್ತರವರೆಗು ಸ್ಟ್ರೆಂತ್ ಇದ್ದ ಮಕ್ಕಳ ಇಸ್ಕೂಲಿನೊಳಗೆ. ಮೇಷ್ಟ್ರು   ಮೇಡಮ್‌ಗಳು ಇವನಿಗಿಂತ ಒಂದು ನಾಕೆಜ್ಜೆ ಲೆವಲ್ಲಾಗಿದ್ದವರು. ಇವನು ದಿನಾ ತೊಡೊ ಬಟ್ಟೆಯಿಂದ ಹಿಡುಕೊಂಡು, ಅವನು ಮಧ್ಯಾಹ್ನ ತಿನ್ನೊ ಊಟದ್‌ವರ್‌ಗು, ಒಂತರ ವಿಚಿತ್ರವಾಗಿ ನೋಡ್‌ತಿದ್ರು. ಪ್ರಸನ್ನ ಇಂತೊರ್ ಬಗ್ಗೆ ಯಾವತ್ತು ತಲೆ ಕೆಡಸಿಕೊಂಬೊ ಹುಡುಗನಾಗಿರಲಿಲ್ಲ, ಅವನಾಯಿತು ಅವನ ಇಸ್ಕೂಲಿನ ಬದುಕಾಯಿತು ಅನ್ನಂಗಿದ್ದವನು. ಇವನು ಅಲ್ಲಿ ಕೆಲಸಕ್ಕೆ ಸೇರಿಕೊಂಡ ಮೇಲೆ ಇಸ್ಕೂಲಿನ ಕಾಂಪೋಂಡು, ಬಾತ್‌ರೂಮುಗಳು, ತರಗತಿ ರೂಮುಗಳನ್ನ ನಿಗಿ ನಿಗಿಯನ್ನಂಗೆ ಸ್ವಚ್ಚವಾಗಿಟ್ಟುಕೊಂಡ. ಬರಿ ಡ್ರಿಲ್ಲು, ಕಬ್ಬಡಿ, ಕೊಕ್ಕೊ, ಎಂಬ ಆಟಗಳಲ್ಲಿ ಕಾಲ ಕಳೆಯದೆ. ಅವುಗಳ ಜೊತೆಗೆ ಎಂಟರಿಂದ ಹತ್ತನೆ ತರಗತಿ ಹುಡುಗುರುಗೆ, ಹಿಂದಿ ಪಾಠವನ್ನ ಮಾಡ್‌ತಿದ್ದ. ಹುಡುಗುರು ತೊಡೊ ಯೂನಿ ಫಾರಮ್ಮಿನಿಂದ ಹಿಡುಕೊಂಡು. ಇಡಿ ಹುಡುಗರ ನಯಾ-ನಾಜೋಕು, ಶಿಸ್ತು ಅನ್ನೋದನ್ನ ಕಣ್ಣಾಗೆ ಕಣ್ಣಿಟ್ಟು ನೋಡ್‌ಕಳತಿದ್ದ. ಅವತ್ತೇನಾದ್ರು ರೀತಿ ನೀತಿಯ ಬದುಕು, ಭೋದನೆ, ಅನ್ನೋದು ದಕ್ಕಿದರೆ ಅಪಾರ್‌ವಾಗಿ ಆನಂದ ಪಡತಿದ್ದ. ಒಟ್ಟಿನಲ್ಲಿ ಪ್ರಸನ್‌ಮೇಷ್ಟ್ರಿಗೆ ಇಸ್ಕೂಲೆ ಸರ‍್ವಸ್ವವಾಗಿತ್ತು,ಮ್ಯಾನೇಜ್ಮೆಂಟಿನವರು ಕೂಡ ಇವನ್ ಕಂಡ್ರೆ ಒಳ್ಳೇ ಮೇಷ್ಟ್ರು ಸಿಕ್ಕೀರು ಅನ್ನೊ ಖುಷಿಯಲ್ಲಿದ್ರು. ಇಂಗಾಗೆ ಇರ್‌ಬೇಕು, ಆ ಇಸ್ಕೂಲಿನಲ್ಲಿದ್ದ ಒಂದಿಬ್ರು ಮೇಷ್ಟ್ಗರುಗಳಿಗೆ ಇವನ್ ಮ್ಯಾಲೆ ಯಾವಾಗ್‌ಲು ಒಂದು ವಕ್ರದ ಕಣ್ಣು ಬಿಟ್ಟಿದ್ದರು, ಅವರು ಕನ್ನಡ ಮತ್ತೆ ಸಮಾಜ ಪಾಠ ಮಾಡೊ ಮೇಷ್ಟ್ರುಗಳು, ಬೆಲ್ಲಿಗೆ ಸರಿಯಾಗಿ ಬರ್‌ತ್ತಿದ್ದವರು,ಬಿಲ್ಲುಗಳು ಯಾವಾಗ ಆಗ್‌ತ್ತಾವಂತೊ? ಎಂದು ಲೆಕ್ಕಾಚಾರದಲ್ಲಿದ್ದ ಆ ಇಬ್ಬರಿಗು. ಪ್ರಸನ್ನನನ್ನು ಕಂಡರೆ ಮೈಯ್ಯಿ ಮನಸ್ಸುಗಳು ನವೆಯಾಗತೊಡಗಿದವು.     ಪ್ರಸನ್ನ ಇಸ್ಕೂಲನ್ನ ಕುರುತು, ಪ್ರಗತಿಯನ್ನ ಕುರುತು,  ಮಕ್ಕಳನ್ನ ಕುರುತು,ಮಾತಾಡಕಂತೇನಾರ ಬಾಯಿತಗದ್ರೆ, ಓಹೊ ಇವನೊಬ್‌ನೆ ದೇಶ ಉದ್ದಾರ ಮಾಡಂಗ್ ಕಾಣ್‌ತಾನಲ, ಓಹೊ ಇವನಿಂದಾನೆ ಇಸ್ಕೂಲ್ ನಡಿತಾದೇನೊ? ಇವನಿಲ್ಲದಿದ್ರೆ ಸ್ಕೂಲೇ ಇಲ್ಲವೇನೊ? ಅಂಬಂಗಾಡ್‌ತಾನ್ ಕಣ್ರಿ. ಎಂದು ಸದಾ ಪ್ರಸನ್ನನ ಬೆನ್ನಿಂದೆ ಬೈಕಳತಿದ್ರು. ಈ ಕಾಲ ಈ ಜನ ಇರೋದೆ ಇಂಗೆ, ಮುಂದುವರಿಯೋರನ್ನ ಕಂಡ್ರೆ ಮೂಗು ಮುರಿತಾರೆ. ಪ್ರಸನ್ನ ಇಂತ ಯಾವ ಅಸೂಯೆಗಳಿಗು ತಲೆ ಕೆಡಿಸಿಕೊಂಡವನಲ್ಲ.  ಅವರ ಇಸ್ಕೂಲಿನೊಳಗೆ ಕನ್ನಡ ಪಾಠ ಮಾಡ್‌ತಿರೊ ಮೇಷ್ಟ್ರು ಹರೀಶನೆನ್ನುವವನು, ದಿನ ಸಂಜೆ ಸ್ಪೆಷಲ್ ಕ್ಲಾಸ್ ಮಾಡ್‌ತಿದ್ದ. ಅಲ್ಲಿ ರಮ್ಯ ಎಂಬೊ ಒಂಬತ್ತನೇ ತರಗತಿ ಹುಡುಗಿ ಜೊತೆ, ಕದ್ದು ಮುಚ್ಚಿ ಚೆಲ್ಲಾಟ್‌ವಾಡ್‌ತ್ತಾನೆ ಅನ್ನುವ ಸುದ್ದಿ ಗೊತ್ತಾಗಿ. ಸುಮ್ಮನಿರಲಾರ್‌ದ ಪ್ರಸನ್ನ ಒಂದಿನ ಆ ಹುಡುಗೀನ ಪ್ರವೇಟಾಗಿ ಕರ್‌ದು ಬುದ್ದಿ ಮಾತೇಳ್‌ದ. ಅಲ್ಲೆ ನೋಡ್ರಿ ಪ್ರಸನ್ನನಿಗೆ ಬಲವಾದ ಪರ್‌ಪಾಟಾಗಿದ್ದು, ಮಾರ್‌ನೆ ದಿನ ಹುಡುಗಿಯ ಅಪ್ಪ ಅಮ್ಮ, ಊರಿನ್ ಜನವೆಲ್ಲ ಇಸ್ಕೂಲಿನ್ ಕಾಂಪೋಂಡಿನ ತುಂಬ ಜಮಾಯಿಸಿ ಬುಟ್ರು. ಹುಡುಗಿಯ ಅಪ್ಪ ಪ್ರಾಣಿ ಕುಲದವನಿರ್‌ಬೇಕು. ಪ್ರಸನ್ನನ ಕೊಳ್ಳು ಪಟ್ಟಿ ಹಿಡುಕೊಂಡು, ಏನಲೇ ಮುಠ್ಠಾಳ, ನನ ಮಗಳನ್ನ ರೂಮಿಗೆ ಕರದು ಕೈ ಮೈ ಮುಟ್ಟಿಕೊಂಡು, ಕೆಡಸಾಕ್ ನೋಡ್‌ದಂತಲ್ಲಲೇ? ಎಂದು ಹಿಗ್ಗಾ-ಮುಗ್ಗಾ ಚಚ್ಚಿ ಬಿಟ್ಟ,ಯವ್ವ ಯವ್ವ ಇಂತ ಸುಳ್ಳೇಳಿರುವ ಮೊಗುವಿನ ಮಾತನ್ನೇ ಇಸ್ಕೂಲಿನವರು, ಊರ್‌ನವರು, ಅಧಿಕಾರಿಗಳು, ಎಲ್ಲಾರು ನಂಬಿಬಿಟ್ಟ್ರು. ಅವನು ಯಾರ್ ಕಡೆ ಕೈ ಮುಗುದು ಎಂಗ್ ಬೇಡ್‌ಕಂಡ್ರು ಯಾರು ನಂಬಲಿಲ್ಲ. ಅದೇ ದಿವಸ ಬಿ.ಇ.ಓ ಸಾಯಬ್ರು ಮ್ಯಾನೇಜ್ ಮೆಂಟಿನವರು ಸೇರ್‌ಕಂಡು. ಪ್ರಸನ್ನನ್ನು ಕೆಲಸದಿಂದ ಕಿತ್ತೇ ಬುಟ್ರು. ಪೇಪರ್‌ನವರು ವಿದ್ಯಾರ‍್ಥಿನಿಗೆ ಲೈಂಗಿಕ ಕಿರುಕುಳ. ಮೇಷ್ಟ್ತಿಗೆ ಗೂಸ ಅಂತ ವರ‍್ಣನೆಯಾಗಿ ಬರ್‌ದೇ ಬುಟ್ರು. ಅವನು ಮಾಡದೇ ಇರೋ ತಪ್ಪಿಗೆ ಅಪಾರ್‌ವಾದ ಅವಮಾನ ಸೋಲು, ಯಾರಿಗೆ ತಾನೆ ಮನಸ್ಸಿನೊಳಗೆ ಮನಸಿದ್ದಾತು? ಅಂಗಾಗೆ ಹಿಟ್ಟು ನೀರು ಬಿಟ್ಟು ಮಕ್ಕೊಂದು ಬಟ್ಟೆ ಹೊದ್ದುಕೊಂಡು ಕುಂತುಬುಟ್ಟ. ಆವತ್ತು ಅಕ್ಕಯ್ಯನ ದುಃಖ ಕೇಳೊವರಿರಲಿಲ್ಲ. ಯಾವ್ ಬಂದು ಬಳಗವು ಹತ್ತಿರಕ್ಕೆ ಬಂದಿರ್‌ಲಿಲ್ಲ. ಅದೇ ನೆಲ ಕಾಣ್‌ದಿರೊ ಸ್ವಾದ್ರ ಮಾವನ ಮುಂದೆ. ಅನ್ಯಾಯವಾದ ಇಂತ ಕಥೆನ ಹೇಳ್‌ಕಂಡು, ಅಮ್ಮ-ಮಗ ಗಳ-ಗಳನೆ ಅತ್ತು ಬುಟ್ರು. ಇನ್ನು ಕುಂತು-ಕಡೇನೆ ಕುಂತು ಬುಟ್ಟು, ತಲೆ ಕೆಡಿಸಿಕೊಂಡ ಪ್ರಸನ್ನ ನನ್ನ ಕೈಯಿಗೆ ಸಿಗದಂಗಾಗ್‌ ಬುಡತ್ತಾನೆ. ಎಂದ ಅಕ್ಕಯ್ಯನ ಸಂಕಟವನ್ನ ಅರ‍್ಥೈಸಿಕೊಂಡ ಅವಳ ಅಣ್ಣನಾದವನು. ಬೆಂಗಳೂರಿನ ಯಾವುದೊ ಪ್ಯಾಕ್ಟ್ರೀಲಿ ಲೆಕ್ಕ ಬರೆಯೊ ಕೆಲಸ ಕೊಡಿಸಿದ್ದ. ಅವನ ಹೆಂಡತಿ ಕಡೆಯ ನೆಂಟರ ಮನೇಲಿ ವಾಸವಿರಲಿ ಅಂತ ಬಿಟ್ಟುಬಂದ. ಅಕ್ಕಯ್ಯನಿಗು ನಿರಾಳವಾಗಿತ್ತು, ಅವಳು ಎಂಗಾದ್ರು ಮಾಡಿ ಅವನನ್ನು ಒಂದು ದಡಾ ಸೇರಿಸುವ ಹಂಬಲದವಳು.  ಅಂತದ್ದೊಂದು ಪ್ಯಾಕ್ಟ್ರಿ ಕೆಲಸಕ್ಕೆ ಸೇರ್‌ಕಂಡ ಮ್ಯಾಲೆ, ಪ್ರಸನ್ನ ದಿನ ಕಳದಂಗ್ ಕಳದಂಗೆ ದುಃಖವೆಂಬ ದೂಳಿಡುಕೊಂಡಿದ್ದ ಮನಸನ್ನ, ಕಾಲವೆಂಬ ಕಡ್ಡಿಯೊಳಗೆ ಕೊಡವಿ ಕೊಂಡ. ಹೊಸ ಬೆಂಗಳೂರು, ಹೊಸ ಕೆಲಸ, ಹೊಸ ಅಕ್ಕ ಬಾವನ ಮನೆ, ಹೊಸ ಹೊಸ ನೂರಾರು ತರಾವರಿ ಮಖಗಳು, ಊರಿಂದ ಬರುವಾಗ ಬಸ್ಸಿನೊಳಗೆ ಜೊತೇಲಿ ಕುಂತಿದ್ದ ಮಾವ, ಅಲ್ಲವಲ ನಿನ್ ಮಖ ನೀನ್ ತೊಳಕಳಾದ್ ಬುಟ್ಟು, ಆ ಹುಡುಗಿ ಮಖ ಯಾಕ್ ತೊಳಿಯಾಕೋಗಿದ್ದಲ? ಇದು ಬ್ಯಾರೆಯವರಿಗೆ ಬುದ್ದಿ ಹೇಳೊಂತ ಕಾಲ್‌ವಲ್ಲ ಕಣೊ? ಎಂದ ಮಾವನ ಮಾತಿಗೆ. ಇನ್ನೊಂದ್‌ಸಲ ಯಾರೊ ಕೆನ್ನೆಗೆರೆಡು ಪಟ-ಪಟನೆ ಹೊಡೆದಂತಾಯಿತು. ಅದಿಕ್ಕೆ ಇರ್‌ಬೇಕು  ಹನ್ನೆರಡನೇ ಶತಮಾನದ ಬಸವಣ್ಣನೆಂಬ ಪುಣಾತುಮ. ಲೋಕದ ಡೊಂಕ ನೀವೇಕೆ ತಿದ್ದುವಿರಿ? ನಿಮ್ಮ-ನಿಮ್ಮ ಮನವ ಸಂತೈಸಿಕೊಳ್ಳಿ, ಅಂತ ಘಂಟೆ ಬಾರ್‌ಸ್‌ದಂಗೆ ಹೇಳವರೆ. ಆದ್ರು ನಮಗೆ ಬುದ್ದಿ ಬರ್‌ಲಿಲ್ಲ, ಅವನ ಕಣ್ಣಂಚಲ್ಲಿ ಉದುರಿದ ಬೆಚ್ಚಗಿನ ಕಣ್ಣೀರು. ಇನ್ನೆಂದು ತೊಟ್ಟಿಕ್ಕಬಾರದು, ಅಂಬೊ ಭರವಸೇನ ಭದ್ರವಾಗಿಡುಕೊಂಡು. ಮಾವ ತೋರಿಸಿದ ಕೆಲಸಕ್ಕೋದವನು, ಅಚ್‌ಕಟ್ಟಾಗಿ ನೆಂಟರ ಮನೇಲಿ ಇರಂಗಾದ. ಜೊತಿಗೆ ಯಾರ್ ಯಾವೋಳ್ ಕತ್ತನ್ನಾರ ಇಸಗಲಿ, ನಾನಿನ್ನು ಕಣ್ಣೆತ್ತಿಯು ನೋಡಲ್ಲ ಅಂದುಕೊಂಡು ಅವನೊಳಗವನು ಶಪತ ಮಾಡ್‌ಕಂಡ.    ಪ್ಯಾಕ್ಟ್ಯರಿಯ ಲೆಕ್ಕ ಪತ್ರಗಳ ಜವಾಬ್ದಾರಿ ಕೆಲಸವನ್ನ ಹಸನಾಗಿ ಮಾಡ್‌ತಿದ್ದ. ಅವನಿಗೆ ಆಶ್ರಯ ಕೊಟ್ಟಿರುವ ಅಕ್ಕ ಬಾವನ ಜೊತೇಲಿ ಆನಂದ್‌ವಾಗಿ ಹೊಂದಿಕೊಂಡ. ಅವರು ಪ್ರಸನ್ನನಿಗು ದೂರದ ಸಂಬಂದಿಕರು,  ಆದ್ರು ಈ ಹುಡುಗನ್ನ ಅಕ್ಕರೆಯಿಂದಾನೆ ನೋಡ್‌ಕಳತಿದ್ರು, ಅವನು ಅಷ್ಟೇ ಪುಗಸಟ್ಟೆ ಉಣುತ್ತಿರ್‌ಲಿಲ್ಲ. ಅವನಿಗೆ ಬರೊ

ಡೊಂಕು Read Post »

ಇತರೆ

ಬದಲಾಗಲಿ ಕರ್ನಾಟಕದ ಸನ್ನಿವೇಶ

ಬದಲಾಗಲಿಕರ್ನಾಟಕದಸನ್ನಿವೇಶ ಇರಾಜ ವೃಷಭ ಎ ಎಲ್ಲರೂ ಹಬ್ಬಗಳನ್ನು ಆಚರಿಸುತ್ತಾರೆ. ಹಬ್ಬ ಅಂದರೆ ಎಲ್ಲರೂ ಹೇಳೋದು ದೀಪಾವಳಿ, ದಸರಾ, ಗಣೇಶ ಚತುರ್ಥಿ, ನಾಗರಪಂಚಮಿ ಇತ್ಯಾದಿ. ಆದರೆ ಇದು ಅವರ ಪಾಲಿಗೆ ಹಬ್ಬಗಳಲ್ಲಿ ದೊಡ್ಡದಾದ ಹಬ್ಬ. ಪಟಾಕಿ ಶಬ್ದ, ಮೆರವಣಿಗೆ, ಡ್ಯಾನ್ಸ್, ಡಿಜೆ, ಕೋಲಾಟ, ಹಾಡು ಇತ್ಯಾದಿ ಆದರೆ ಸಮಯ ಮತ್ತು ಆಚರಿಸುವ ವಿಧಾನಗಳು ಎರಡು ಜಾಸ್ತಿನೇ.  ಅದೇನೊ ಖುಷಿ ಮತ್ತು ಸ್ವಾಭಿಮಾನ  ಈ ಹಬ್ಬವನ್ನು ಹೆಚ್ಚಾಗಿ ವಿಜ್ರಂಭಣೆಯಿಂದ ಆಚರಿಸುವಂತೆ ಮಾಡುತ್ತವೆ. ಆ ಹಬ್ಬವೇ ಕರ್ನಾಟಕ ರಾಜ್ಯೋತ್ಸವ. ಕನ್ನಡಿಗರ ಪಾಲಿಗೆ ಅದರಲ್ಲೂ ಬೆಳಗಾವಿಯಲ್ಲಿ ಅತಿ ವಿಜೃಂಭಣೆಯಿಂದ ಆಚರಿಸುವ ಹಬ್ಬಗಳಲ್ಲಿ ಕನ್ನಡ ರಾಜ್ಯೋತ್ಸವವು ಒಂದು. ಹಳದಿ-ಕೆಂಪು ಬಾವುಟ, ಬಣ್ಣಬಣ್ಣದ ತೋರಣ, ತಾಯಿ ಭುವನೇಶ್ವರಿಗೆ ಮಾಡುವ ಸುಂದರ ಅಲಂಕಾರ, ಕಿತ್ತೂರರಾಣಿ ಚೆನ್ನಮ್ಮನ ಪ್ರತಿಮೆಗೆ ಸುತ್ತುವರೆದು ಹೂ ಗುಚ್ಚ ಅರ್ಪಿಸುವುದು,  ಭಿನ್ನ  ಮತ್ತು ವಿಭಿನ್ನ ರೀತಿಯಲ್ಲಿ ಸಂದೇಶ ಸಾರುವ ಕನ್ನಡದ ಘೋಷವಾಕ್ಯಗಳು, ಪರಿಸರ, ನೆಲ-ಜಲ ರಕ್ಷಿಸಿದ ಮಹಾತ್ಮರ ಭಾವಚಿತ್ರವಿಟ್ಟು ಪೂಜಿಸುವುದು, ಇದೆಲ್ಲದರ ಜೊತೆಗೆ ಕನ್ನಡ ನಾಡು ನುಡಿಗೆ ಗೌರವ ಕೊಡುವ ಕನ್ನಡ ನುಡಿಯ ಡಿಜೆ ಸಾಂಗ್ಸ್! ಅಬ್ಬಬ್ಬಾ!! ಮನಸ್ಸು ಮತ್ತು ಮೈ ಹೇಳದೆ, ಕೇಳದೆ ಕುಣಿದು ಬಿಡುತ್ತದೆ. ಅಲೆಗಳಂತೆ ಬರುವ ಜನಸಾಗರದಲ್ಲಿ ನೂಕುನುಗ್ಗಲು ಸಾಮಾನ್ಯ. ಅದರಲ್ಲಿ ನಾಮುಂದು, ತಾಮುಂದು ಎಂದು ಕುಣಿಯುವುದನ್ನು  ನೋಡುವುದು ಮತ್ತು ಅದರಲ್ಲಿ ಭಾಗಿಯಾಗುವುದಕ್ಕೆ ನಿಜಕ್ಕೂ ಅದೃಷ್ಟ ಮಾಡಿರಬೇಕು. ಕರ್ನಾಟಕದ ಮೂಲೆ ಮೂಲೆಗಳಿಂದ ಜನ ರಾಜ್ಯೋತ್ಸವ ನೋಡಲೆಂದೇ ಬರುತ್ತಾರೆ. ಮದ್ರಾಸ್, ಹೈದರಾಬಾದ್, ಮೈಸೂರು ಮತ್ತು ಮುಂಬೈ ಪ್ರಾಂತ್ಯಗಳಾಗಿ ಕರ್ನಾಟಕ ಹರಿದು ಹಂಚಿಹೋಗಿತ್ತು. ಅದನ್ನು ಸರಿಪಡಿಸಲು ಕಾರಣೀಭೂತರಾದ ನಿಜಲಿಂಗಪ್ಪ, ಬೆಳಗಲ್ ರಾಮರಾಯರು, ಹುಲ್ಲೂರು ಶ್ರೀನಿವಾಸ ಜೋಯಿಸ ಇನ್ನು ಮುಂತಾದ ಕೈಗಳಿಂದ ಭವ್ಯ ಮತ್ತು ಅಖಂಡ  ಕರ್ನಾಟಕವಾಗಿ ನಿರ್ಮಾಣವಾಗಿದೆ.  ೧೯೫೬ ರ ನವೆಂಬರ್ ೧ ರಂದು ಭಾಷಾವಾರು ಪ್ರಾಂತ್ಯಗಳಿಗೆ ಅನುವು ಕೊಟ್ಟಿದ್ದರಿಂದ, ಭಾಷೆಗಳ ಆಧಾರದ ಮೇಲೆ ರಾಜ್ಯಗಳು ರಚನೆಯಾದವು ಎನ್ನುವುದು ಗೊತ್ತಿರುವ ಇತಿಹಾಸ.       ರಾಜ್ಯೋತ್ಸವದ ದಿನ ಬೆಳಗಾವಿಯಲ್ಲಿರುವ ಕನ್ನಡ ಬರದವನು/ ಬರದವಳು ಕೂಡ ಆಟೋಮೆಟಿಕ್ ಆಗಿ ಕನ್ನಡ ಮಾತನಾಡುತ್ತಾರೆ.  ಅದು ಹೇಗೆ ಅಂತ ತಿಳ್ಕೊಬೇಕು ಅಂದ್ರೆ, ಬೆಳಗಾವಿಯಲ್ಲಿ ಕನ್ನಡ ರಾಜ್ಯೋತ್ಸವವನ್ನು ಜೀವನದಲ್ಲಿ ಒಂದು ಸಲನಾದರೂ ನೀವು ನೋಡಲೇಬೇಕು ಮತ್ತು ಆಚರಿಸಲೇಬೇಕು ಆದರೆ ಇನ್ನೊಂದು ಕಡೆ ಕರಾಳ ದಿನ ಆಚರಿಸುವ ಮೂರ್ಖರು ಕೂಡ ಅಲ್ಲೇ ತಂಗಿದ್ದಾರೆ. ಇತ್ತ ಕನ್ನಡ ರಾಜ್ಯೋತ್ಸವನ್ನು ಕನ್ನಡಿಗರು ಆಚರಿಸುತ್ತಿದ್ದರೆ ಅಲ್ಲೇ ಹುಟ್ಟಿ ಬೆಳೆದು ಕನ್ನಡ ನಾಡಿಗೆ ಕೇಡು ಬಗೆಯುವ ಜನರು ಕಪ್ಪುಬಟ್ಟೆ ಮತ್ತು ಧ್ವಜದ ಜೊತೆ ಕನ್ನಡದ ವಿರುದ್ಧ ಮಾತುಗಳನ್ನು ಆಡುತ್ತಾ ಪ್ರತಿಭಟನೆ ಮಾಡುತ್ತಾ ಇರುವುದು ನೋವಿನ ಸಂಗತಿ. ಈ ಘಟನೆ ಇಂದು ನಿನ್ನೆಯದಲ್ಲ. ಹೆಚ್ಚು ಕಮ್ಮಿ ಕರ್ನಾಟಕ ಏಕೀಕರಣವಾದಾಗಿನಿಂದ ನಡೆಯುತ್ತಾ ಬಂದಿದೆ. ಎಲ್ಲ ಸೌಲತ್ತುಗಳನ್ನು ಕರ್ನಾಟಕ ಸರ್ಕಾರದಿಂದ ಪಡೆದುಕೊಂಡು; ಅದೇ ನಾಡಿನ ವಿರುದ್ಧ ಘೋಷಣೆ ಕೂಗುವ ದ್ರೋಹಿಗಳನ್ನು ಈಗಲೂ ಕಾಣಬಹುದು. ಇದೆಲ್ಲವೂ ಬದಲಾಗಬೇಕಿದೆ. ನಾಡು-ನುಡಿಗೆ ಸರ್ಕಾರ ಮಾಡಬೇಕಾಗಿರೋದು ಬಹಳಷ್ಟಿದೆ. * ಕರ್ನಾಟಕ ರಾಜ್ಯೋತ್ಸವ ಮತ್ತು ಕನ್ನಡದ ಕಾರ್ಯಕ್ರಮಗಳಲ್ಲಿ ಕನ್ನಡ ಧ್ವಜ ಹಾರಿಸುತ್ತಿಲ್ಲ.  ಈ ಸಮಯದಲ್ಲಿ ದೇಶದ ತ್ರಿವರ್ಣಧ್ವಜ ಹಾರಿಸುತ್ತಿದ್ದಾರೆ. ಈ ಸಮಯದಲ್ಲಿ ತ್ರಿವರ್ಣಧ್ವಜದ ಅವಶ್ಯಕತೆ ಇಲ್ಲ ಮತ್ತು ಬೇಕಾಗಿಲ್ಲ. * ನಾಡಗೀತೆಯನ್ನು ಎಲ್ಲಿ, ಯಾವಾಗ, ಎಷ್ಟು ಸಮಯ ಬಳಸಬೇಕು ಎನ್ನುವುದು ಕಾನೂನಿನಲ್ಲಿ ಬದಲಾವಣೆಯಾಗಬೇಕು ಮತ್ತು ಅದು ರೂಢಿಕೃತ ವಾಗಬೇಕು. * ಮಕ್ಕಳಿಂದ ಹಿಡಿದು ಮುದುಕರ/ಮುದುಕಿಯರ ವರೆಗೆ ನಾಡ ಗೀತೆ, ನಾಡ  ದ್ವಜಕ್ಕೆ ಗೌರವ ನೀಡುವುದು ಕಡ್ಡಾಯವಾಗಬೇಕು( ಅಂದರೆ ರಾಷ್ಟ್ರಗೀತೆ ಮತ್ತು ರಾಷ್ಟ್ರಧ್ವಜಕ್ಕೆ ನೀಡುವ ಗೌರವದ  ಹಾಗೆ ನಾಡ ಗೀತೆ, ಮತ್ತು ನಾಡ ಧ್ವಜಕ್ಕೆ ನೀಡಬೇಕು) * ಗಡಿಜಿಲ್ಲೆಗಳಲ್ಲಿ ಕನ್ನಡಿಗರಿಗೆ ಮತ್ತು ಕನ್ನಡ ನಾಡಿಗೆ ಹಾನಿ ಉಂಟಾಗದಂತೆ ಅತಿ ಹೆಚ್ಚಿನ ಭದ್ರತೆಯನ್ನು ಸರ್ಕಾರ ಒದಗಿಸಬೇಕು. ರಾಜ್ಯ ಒಡೆಯುವ, ಕೆಡಕು ಬಯಸುವ ಮತ್ತು ಮಾಡುವ ವ್ಯಕ್ತಿ ಅಥವಾ ರಾಜಕಾರಣಿ ಯಾರೇ ಆಗಲಿ ಅವರನ್ನು ಕಠಿಣ ಶಿಕ್ಷೆಗೆ ಒಳಪಡಿಸಬೇಕು. *  ಕರ್ನಾಟಕ ರಾಜ್ಯಕ್ಕೆ ಸೇರಿರುವ ಪ್ರತಿ ಶಾಲೆ-ಕಾಲೇಜು ಮತ್ತು ಕಚೇರಿಗಳಲ್ಲಿ ಕನ್ನಡ ರಾಜ್ಯೋತ್ಸವನ್ನು ಕಡ್ಡಾಯವಾಗಿ ಆಚರಿಸಬೇಕು. ತಪ್ಪಿದ್ದಲ್ಲಿ ದಂಡ ವಸೂಲಾತಿ ಮತ್ತು ಶಿಕ್ಷೆಗೆ ಒಳಪಡಿಸಬೇಕು. *  ಕನ್ನಡ ಭಾಷಾ ಶಿಕ್ಷಣಕ್ಕೆ ಹೆಚ್ಚಿನ ಒತ್ತುಕೊಟ್ಟು ಕನ್ನಡ ವಿಷಯದಲ್ಲಿ ಹೆಚ್ಚು ಪರಿಣಿತ ಹೊಂದಿದ ವಿದ್ಯಾರ್ಥಿಗಳನ್ನು ಸನ್ಮಾನಿಸುವುದು ಮತ್ತು ಅದಕ್ಕೆ ತಕ್ಕಂತೆ ಇರುವ ಉದ್ಯೋಗಗಳನ್ನು ನೀಡಬೇಕು. ಈ ಮೇಲಿನವುಗಳನ್ನೆಲ್ಲಾ ಚಾಚೂತಪ್ಪದೆ ಪಾಲಿಸುವುದರಿಂದ ಮತ್ತು ರೂಢಿಕರಿಸುವುದರಿಂದ ಕರ್ನಾಟಕದಲ್ಲಿ ಕನ್ನಡಕ್ಕೆ ಯಾವುದೇ ಕೊರತೆ ಬರುವುದಿಲ್ಲ. ಕನ್ನಡರಾಜ್ಯ ಒಂದು ಬಲಿಷ್ಠ ರಾಜ್ಯವಾಗಿ ಎದ್ದು ನಿಲ್ಲುತ್ತದೆ. ಈ ತರಹದ ಬಲಿಷ್ಠ ರಾಜ್ಯವನ್ನು ಕಣ್ತುಂಬಿಕೊಳ್ಳಲು ಕನಸು ಕಟ್ಟಿದ ಅದೆಷ್ಟು ಕನ್ನಡ ಅಭಿಮಾನಿಗಳಲ್ಲಿ ನಾನೂ ಒಬ್ಬ. ಎಲ್ಲ ಕನ್ನಡಿಗರಿಗೆ ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳು. “ಜೈ ಕರ್ನಾಟಕ, ಜೈ ಕನ್ನಡ “

ಬದಲಾಗಲಿ ಕರ್ನಾಟಕದ ಸನ್ನಿವೇಶ Read Post »

You cannot copy content of this page

Scroll to Top