ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಥಾಗುಚ್ಛ

ಶಾಂಭವಿ, ಬಣ್ಣ, ಜಾತಿ ಮುಂತಾಗಿ..

ಸಣ್ಣಕಥೆ ಶಾಂಭವಿ, ಬಣ್ಣ, ಜಾತಿ ಮುಂತಾಗಿ.. ಡಾ. ಅರಕಲಗೂಡು ನೀಲಕಂಠ ಮೂರ್ತಿ –01– ಮೊಬೈಲ್  ವಾಟ್ಸ್ಯಾಪ್ ರಿಂಗಾದಾಗ ಸುಮಾರು ರಾತ್ರಿ ಹತ್ತು ಗಂಟೆಯ ಸಮಯ. ಊಟ ಮುಗಿಸಿ, ಪಾತ್ರೆ ತೊಳೆಯುವುದು ಇನ್ನೂ ಬಾಕಿ. ಅಷ್ಟರಲ್ಲಿ ಫೋನ್. ಉದ್ದ ರಿಂಗ್ ಆದಾಗಲೇ ಬಹುಶಃ ಇದು ಭಾರತದ್ದಲ್ಲ ಅನ್ನಿಸಿತು. ನಿರಂಜನ್ ತಮ್ಮ ಆಫೀಸಿನ ಫೈಲ್ ಹಿಡಿದು ಮಗ್ನರಾಗಿದ್ದರು. ಇಂತಹ ಫೋನ್ ಕಾಲ್ ಗಳು ಬರುವುದೇ ಅವರಿಗೆ. ಹಾಗಿದ್ದರೂ ಸುಮ್ಮನೆ ಫೈಲೊಳಗೇ ಇಳಿದಿದ್ದಾರೆ. ನಾನು ಕಿಚನ್ನಿನಲ್ಲಿದ್ದೇನೆ, ಹಾಲ್ನಲ್ಲಲ್ಲ, ಅಂತ ಅರಿತೂ ಸಹ. ಪಾಪು ಗಾಢ ನಿದ್ದೆಯಲ್ಲಿದ್ದಳು. ಯಾರಿರಬಹುದು? ಉದ್ದವಾದ ರಿಂಗ್ ಬೇರೆ. ವಿದೇಶದ್ದೇ ಅನ್ನಿಸಿತು. “ತಮ್ಮದೇ ಕಾಲ್, ಅವರೇ ಎದ್ದು ನೋಡಬಹುದು, ಆದರೂ ನೋಡು,ಅವರನ್ನ”, ಅನ್ನಿಸಿತು. ಕೊನೆಗೆ ನಾನೇ  ಓಡಿದೆ. ನನ್ನದೇ  ಫೋನ್. ನನಗೆ ಈ ಫೋನಿನ, ಆ ಫೋನಿನ ಅಂತ  ‘ಕರೆಯ ರಿಂಗ್’ ಗಳನ್ನು ಕೇಳಿ ಗುರುತು ಹೀಡಿಯೋದು ಸ್ವಲ್ಪ ಕಷ್ಟವೇ. ಆದರೆ, ಈಗ ಆಶ್ಚರ್ಯ ಕಾದಿತ್ತು. ನನಗೆ ವಾಸ್ತವವಾಗಿ ವಿದೇಶೀ ಫೋನ್ ಬಂದದ್ದೇ ಇಲ್ಲ – ಶಾಂಭವಿ  ಹೋದ ಹೊಸದರಲ್ಲಿ ಮಾಡಿದ್ದು ಬಿಟ್ಟು. ಅವಳಲ್ಲದೆ ನನ್ನವರು ಅಂತ ವಿದೇಶದಲ್ಲಿ ಯಾರಿದ್ದಾರೆ? ಶಾಂಭವಿ! ಹೌದು, ಶಾಂಭವಿಯ ಫೋನ್, ಅಮೇರಿಕಾದಿಂದ! ನನ್ನ ಖುಷಿ ನಾನೇ ಅಮೇರಿಕಕ್ಕೆ ಒಮ್ಮೆಲೇ ಹಾರಿದಂತೆ. ನನ್ನ ಆತ್ಮೀಯ  ಗೆಳತಿಯಿಂದ. ಅವಳೂ ಅರ್ಜೆಂಟ್ನಲ್ಲಿದ್ದಳು, ಅನ್ನಿಸಿತು; ಆತುರಾತುರವಾಗೇ  ಮಾತು ಮುಗಿಸಿಬಿಟ್ಟಳು. ಮೂರ್ನಾಲ್ಕು ನಿಮಿಷಗಳು ಅಷ್ಟೇ. ಆದರೆ, ಮುಖ್ಯ ಸುದ್ದಿಯೆಂದರೆ, ಅವಳು ನಾಳೆಯೇ ಅಲ್ಲಿಂದ ಹೊರಟು  ರಜೆಗೆ ಬರುವವಳಿದ್ದಾಳೆ! ಇಷ್ಟು ತಿರುಳು…ಶಾಂಭವಿ  ನನ್ನ ಆಪ್ತ ಗೆಳತಿ. ಅವಳು ಮತ್ತು ವೈಶಾಲಿ ಇಬ್ಬರೇ ನನ್ನ ಆತ್ಮೀಯ ಗೆಳತಿಯರು . ಶಾಂಭವಿ  ನಿಜಕ್ಕೂ ಗಿಣಿಯೇ. ಅದೂ ಬಿಳೀ ಗಿಣಿ! ನಮ್ಮ ಕಾಲೇಜಿನಲ್ಲಿ ಅವಳಷ್ಟು ಬೆಳ್ಳಗಿದ್ದವರು, ಎಲ್ಲ ಕ್ಲಾಸ್ ನವರನ್ನೂ ಸೇರಿಸಿ ಹುಡುಕಿದರೂ, ಸಿಗುವುದೇ, ಬಹುಶಃ ಒಂದಿಬ್ಬರು. ಹಾಗಾಗಿ ಅವಳು ನಮ್ಮ ಬಿಳಿ ಗಿಣಿ. ಅಂದಾಕ್ಷಣ,  ಖಂಡಿತ ಗಿಣಿ ಮೂತಿಯವಳಂತೂ ಅಲ್ಲ!ಶಾಂಭವಿ ನನ್ನ ಆಪ್ತ ಗೆಳತಿ, ಆದುದರಿಂದ, ಈ ಹೊಗಳಿಕೆ, ಅಂತೇನೂ ಅಲ್ಲ. ಅವಳು ನೈಜ ಶ್ವೇತದ ಗೊಂಬೆ. ಕೇವಲ ಬಿಳಿ ಬಣ್ಣ ಮಾತ್ರವಲ್ಲ, ಸುಂದರಿಯೂ ಹೌದು! ಸಿನಿಮಾ ನಟಿಯರೂ ನಾಚುವಷ್ಟು! ಇಡೀ ಕಾಲೇಜೇನು, ಕಾಲೇಜಿನ ಪ್ರತಿ ಇಟ್ಟಿಗೆಯೂ, ಬಹುಶಃ ಅವಳ ಮೇಲೆ ಕಣ್ಣಿಟ್ಟಿತ್ತು ಅಂದರೆ ಅತಿಶಯವಲ್ಲ! ಹೌದು, ಇದೂ ವಾಸ್ತವ – ಸುಂದರಿಯರೆಲ್ಲರೂ ನಟಿಯರಾಗಿಲ್ಲ; ನಟನೆಯಲ್ಲಿ ಸಾಕಷ್ಟು  ನುರಿತಿದ್ದರೂ ಸಹ! ಹಲ್ಲು ಮತ್ತು ಕಡ್ಲೆ ಕಥೆ…ಬದುಕಿನ ಕಟು ಸತ್ಯ! ಅಷ್ಟೇ ಅಲ್ಲ; ಶಾಂಭವಿ ಇಂಟೆಲಿಜಂಟ್ ಕೂಡ. ವೆರಿ ಮಚ್! ಬ್ರಹ್ಮದೇವ ಎಲ್ಲರಿಗೂ ಇಂಥ ತಥಾಸ್ತು ಹೇಳುವುದು ಅಸಾಮಾನ್ಯ.ವೈಶಾಲಿ ಕೂಡ ಬಹಳ ಬುದ್ಧಿವಂತೆ. ಅವಳೂ ಸಹ ನನಗಿಂತ ಚೆನ್ನಾಗಿದ್ದಳು. ಹಾಗಾದರೆ, ನಾನು? ಅದನ್ನ ಅವರಿಬ್ಬರಲ್ಲಿ ಯಾರೋ ಒಬ್ಬರಾದರೂ ಹೇಳಬೇಕು ಅಲ್ಲವೇ-“ಲೇ,ನೀರಜ, ನೀನೂ ಚೆನ್ನಾಗಿದ್ದೀಯ” ಅಂತ… ನಾವು ಮೂವರು ಕೂಡ ಈಗ, ನಮ್ಮ ನಮ್ಮ  ಮದುವೆಯ ನಂತರ ಬೇರೆ ಬೇರೆ ದಿಕ್ಕು. ವೈಶಾಲಿ ಬೆಳಗಾವಿಯಲ್ಲಿ, ಶಾಂಭವಿ ಅಮೆರಿಕದ ಫ್ಲಾರಿಡದಲ್ಲಿ ಮತ್ತು ನಾನು ಬೆಂಗಳೂರಿನ  ಮಲ್ಲೇಶ್ವರದ ಹತ್ತಿರ.  ಶಾಂಭವಿಯ ಪತಿ ಬೆಂಗಳೂರಲ್ಲೇ ಸೆಟ್ಲಾಗುವ ಐಡಿಯಾದಿಂದ ಅಲ್ಲೇ ಕೋರಮಂಗಲದ ಹತ್ತಿರ ಮನೆ ಮತ್ತು ಸಾಕಷ್ಟು ಇತರ ಆಸ್ತಿ ಮಾಡಿಟ್ಟಿದ್ದಾರೆ. ನಾವು ಮೂವರು ಇಷ್ಟೊಂದು ಗಾಢ ಸ್ನೇಹಿತರು, ನಿಜ. ಆದರೂ ಸಹ, ‘ಎಲ್ಲರ ಬಗ್ಗೆ ಯಾರಿಗೂ ಅಥವಾ ಎಲ್ಲರಿಗೂ, ಒಬ್ಬೊಬ್ಬರ ವೈಯಕ್ತಿಕವಾದ ಸಂಪೂರ್ಣ ಅರಿವಿರುವುದಿಲ್ಲ’ ಅನ್ನುವುದೂ ಅಷ್ಟೇ ಸತ್ಯ! ಹಾಗೆಯೇ ಶಾಂಭವಿಯ ವಿಷಯದಲ್ಲೂ, ಅವಳ ಆತ್ಮೀಯ ಗೆಳೆತಿಯಾದ ನೀರಜ, ಅಂದರೆ ನನಗೂ ಸಹ ಸಂಪೂರ್ಣ ಮಾಹಿತಿ ಇರಲಿಲ್ಲ ಅಂತ ಅನ್ನಿಸುತ್ತೆ…ಅದೂ ಸಹ ಶಾಂಭವಿಯ ಮದುವೆಯ ನಂತರದ ಬದುಕಿನ ಬಗ್ಗೆ. ಕಾರಣ ಮದುವೆಯ ಹೊಸ್ತಿಲಿನಿಂದಲೇ ಅನ್ನಿಸುವಂತೆ, ಅವಳು ತರಾತುರಿಯಿಂದ ಗಂಡನ ಜೊತೆ ಅಮೆರಿಕದ ವಿಮಾನ ಏರಿಬಿಟ್ಟಿದ್ದಳು. ಆಮೇಲೆ ಕಷ್ಟ-ಸುಖ ಅಂತಿರಲಿ, ಹೆಚ್ಚು ಫೋನ್ ಕೂಡ ಇಲ್ಲ. ವಾಟ್ಸ್ಯಾಪ್ ಇನ್ನೂ ಉಗಮ ಆಗದಿದ್ದ ಕಾಲದಲ್ಲಿ, ಫೋನಿನಲ್ಲಿ, ಅದೂ ಅಷ್ಟು ದೂರದ ಕರೆಗಳಲ್ಲಿ ಏನೇನು ಅಂತ ಮಾತಾಡಲು ಸಾಧ್ಯ? ಅವಳ ಅಪ್ಪ ಅಮ್ಮ ನನ್ನ ಜೊತೆ ಸಲಿಗೆಯಿಂದ ಇದ್ದರೂ, ಸುಮಾರು ಬಾರಿ ಫೋನ್ ಮಾಡಿದ್ದರೂ ಸಹ, ಎಲ್ಲ ರೀತಿಯ ವಿಚಾರ ವಿನಿಮಯ ಅವರೊಂದಿಗೆ ನನಗೆ ಸಾಧ್ಯವೇ? ಅವರೇನು ನನ್ನ ಓರಗೆಯವರೇ? ಶಾಂಭವಿಯ ಮದುವೆ,  ನನ್ನ ಮತ್ತು ವೈಶಾಲಿಯ ಮದುವೆಯಾಗಿ ಬರೋಬ್ಬರಿ ಎರಡೂವರೆ ವರ್ಷದ ನಂತರ, ಆದದ್ದು. ಅದಕ್ಕೆ ಕಾರಣವೂ, ಇಲ್ಲದಿಲ್ಲ. ನನಗೆ ಗೊತ್ತಿರುವುದು ಅಷ್ಟಿಷ್ಟು ಮಾತ್ರ;  ಶಾಂಭವಿ ಮಧ್ಯೆಮಧ್ಯೆ ಹೇಳುತ್ತಿದ್ದಷ್ಟು. ನಮ್ಮ ಎಜುಕೇಷನ್ ಮುಗಿದ ಮೇಲಂತೂ, ನಾನು ಮಲ್ಲೇಶ್ವರದಲ್ಲಿ, ಅವಳು ಕೆಂಗೇರಿಯಲ್ಲಿ; ಆಗಾಗ ಫೋನ್ ಕರೆ ಬಿಟ್ಟು, ಪರಸ್ಪರ ಹೋಗೋದು ಬರೋದು ಅಂತಲೂ ಇರಲಿಲ್ಲ. ಇನ್ನೆಲ್ಲಿಯ ವಿಚಾರ ವಿನಿಮಯ? ಮದುವೆಯ ನಂತರ ಅಂತೂ ಏನೇನು ಗೊತ್ತಿಲ್ಲ. ಪೂರ್ತಿ ಮಾಹಿತಿಯಂತೂ ಇಲ್ಲವೇ ಇಲ್ಲ. ಹಾಗಾಗಿ, ಅದರ ಬಗೆಗೆ….. –02– ನಾವೀಗ ಬೆಂಗಳೂರು ನಗರದ ಹೊರವಲಯದಲ್ಲಿ ವಾಸವಿದ್ದೇವೆ – ಕೆಂಗೇರಿಯಲ್ಲಿ. ನಾನು ಪದವಿ ಕಾಲೇಜಿನಲ್ಲಿ ಪ್ರಾಧ್ಯಾಪಕನಾಗಿ ರಿಟೈರ್ ಆಗಿ, ಸರಿ ಸುಮಾರು ಹತ್ತು ವರ್ಷಗಳೇ ಸಂದಿವೆ. ನನ್ನದು ಅಂತರ್ಜಾತೀಯ ವಿವಾಹ. ನಾನಾಗ ಲೆಕ್ಚರರ್ ಆಗಿದ್ದಾಗಿನಿಂದ ನನ್ನ ಪ್ರೇಮಕಥಾ ಪ್ರಸಂಗ ಆರಂಭ. ನನಗೆ ಡೆಪ್ಯೂಟೇಶನ್ ಮೇಲೆ ಚಿತ್ರದುರ್ಗಕ್ಕೆ ಎರಡು ತಿಂಗಳ ಕಾಲ ಕಳಿಸಿದ್ದರು. ಆಗ ಒಂದು ದಿನ ಲೈಬ್ರರಿಯಲ್ಲಿ ಯಾವುದೋ ಪುಸ್ತಕದ ಶಿಕಾರಿಯಲ್ಲಿ ಬಿಜಿಯಾಗಿದ್ದಾಗ, ಬಹುಶಃ ನನ್ನ ಕಷ್ಟ ನೋಡಲಾರದೆ ಇವಳು, ಪ್ರಭ – (ಹೌದು, ಈಗಿನ ಈ ಇವಳು, ಪ್ರಭ; ಆಗ ಇವಳಾಗಿರಲಿಲ್ಲ ಅಥವಾ ಪ್ರಭ ಕೂಡ ಆಗಿರಲಿಲ್ಲ; ಬದಲಿಗೆ, ಅವಳು ಮತ್ತು ಪ್ರಭಾಮಣಿ ಆಗಿದ್ದಾಗಿನ ಕಾಲ), – ತಾನೆ ಖುದ್ದು ಬಂದು, “ಎನಿ ಹೆಲ್ಪ್ ನೀಡೆಡ್” ಅಂತ ಕೇಳಿದ್ದಳು, ಕೇಳಿ ಒಂದು ಹೊಸ ಅಧ್ಯಾಯದ ಆರಂಭಕ್ಕೆ ಕಾರಣವಾಗಿ ಆಶ್ಚರ್ಯ ಮೂಡಿಸಿದ್ದಳು! ಹಾಗೆ ಪರಿಚಯವಾಗಿ, ಅಲ್ಲಿದ್ದ ಆ ಎರಡು ತಿಂಗಳ ಅವಧಿಯಲ್ಲಿ, ಅದು ಪ್ರೀತಿ- ಪ್ರೇಮ ಅಂತಲೂ ತಿರುವು ಪಡೆದು, ‘ನಮ್ಮ ಕಥೆ ನಾವೇ ದಿಗ್ಧರ್ಶಿಸಿಕೊಂಡ  ಹಾಗೆ’ ಡೆಪ್ಯೂಟೇಶನ್ ಮುಗಿಸಿ ವಾಪಸ್ ಆದ ಎರಡು ವರ್ಷಗಳ ನಂತರ ತಾಳಿ ಅಂತ ಭದ್ರ ಬಿಗಿದದ್ದು! ನಮ್ಮ ಆ ಬೆಚ್ಚನೆಯ ಭಾವನಾ ಬದುಕಿನ, ಕೆಚ್ಚಿನ ಸಮಯದಲ್ಲಿ, (ಮತ್ತು ಆಮೇಲೆ ಹಾಗೂ ಈಗ ಕೂಡ, ಅಥವ ಎಂದೆಂದಿಗೂ-ಬಹುಶಃ ನಾವು ಬದುಕಿರುವವರೆಗೂ) ನಮ್ಮ ಬಗ್ಗೆ ಯಾರು ಯಾರು ಏನೇನು ಕಥೆ ಹೆಣೆದಿದ್ದಾರೆ, ಏನೇನು ಹಿಂದೆಮುಂದೆ, ಸುತ್ತ ಮುತ್ತ ತಿವಿದು ತಿವಿದು ಅಣಕಿಸಿದ್ದಾರೆ, ಅದೆಲ್ಲ ಆಗಲೂ ನಮಗೆ ಮುಖ್ಯವಾಗಿರಲಿಲ್ಲ, ಹಾಗೂ ಈಗಲೂ ಇಲ್ಲ! ಆದರೆ…ನನ್ನ ಪ್ರೀತಿಯ ಅಪ್ಪ ಅಮ್ಮ? ಅವರಾದರೂ, ನನ್ನ ‘ಭುಜದೊಡನೆ ಭುಜವಾಗಿ’ ನಿಂತಿದ್ದರೆ, ಆ ದಿನಗಳಲ್ಲಿ, ಆನಂದ ಹಾಗೂ ಹಿಂಸೆಗಳ ದ್ವಂದ್ವ ಪರಿಸ್ಥಿತಿಯ ಆ ದಿನಗಳಲ್ಲಿ, ಮುಖ್ಯವಾಗಿ ಮದುವೆಯಾದ ತಕ್ಷಣದ ಕಾಲದಲ್ಲಿ, “ನಾವಿರುವೆವು ನಿಮ್ಮೊಂದಿಗೆ” ಅಂದಿದ್ದರೆ, ಅಷ್ಟಕ್ಕೇ ನಾನು ‘ಕೆಚ್ಚೆದೆಯಾಗಿರುತ್ತಿದ್ದೆ’! … ಆದರದು ಹಾಗಾಗಲೇ ಇಲ್ಲ. ಎಣಿಕೆಯೇ ಬೇರೆ, ನಡೆಯುವುದೇ ಬೇರೆ…! ಹಾಗಂತ ನಾನು ಹೇಡಿಯಾದೆ ಅಂತಲೂ ಅಲ್ಲ. ಹಾಗಾದರೆ ನನ್ನ ಹೆತ್ತವರನ್ನು ನಾನು ದೂಷಿಸಬಹುದೇ? ಅಕಸ್ಮಾತ್ ನಾನೇ ಅವರ ಸ್ಥಾನದಲ್ಲಿ ಇದ್ದಿದ್ದರೆ; ಆಗ ನನ್ನ ಯೋಚನೆಗಳು ಯಾವ ಕೋನದತ್ತ ತಿರುಗುತ್ತಿದ್ದವು? ಮೇಲಾಗಿ,  ಮನೆಗೆ ನಾನೇ ಹಿರಿಯನಾಗಿದ್ದೆ; ಆದರೆ ನನ್ನ ನಂತರ ಹೆಣ್ಣು ಮಕ್ಕಳು ಅಂತಲೂ ಇರಲಿಲ್ಲ. ಇದ್ದವರಿಬ್ಬರೂ ಅವಳಿ ತಮ್ಮಂದಿರು. ಈ ದಿಕ್ಕಿನಲ್ಲಿ ಯೋಚಿಸುವುದೂ ಸಹ ತಪ್ಪಾಗಿ, ನನ್ನ ಮೂತಿ ನೇರಕ್ಕೆ ನನ್ನದೇ ಮಾತಾದಂತೆ,  ಆಗಬಿಡಬಹುದು ಅಲ್ಲವೇ? ಹೌದು, ಜಾತಿ! ಹ್ಞೂ, ಜಾತಿ ಅನ್ನುವುದು  ಎಷ್ಟು ಕಠೋರ. ಇದು ಯಾವ ಬೇತಾಳ-ಸೃಷ್ಟಿ ಅನ್ನಿಸಿಬಿಡುತ್ತದೆ! ಕನಿಷ್ಠ ವಿಷಮ ಘಳಿಗೆಗಳಲ್ಲಿ… ನನ್ನ ಮೊದಲ ಮಗಳು, ಶಕುಂತಲ ಹುಟ್ಟಿದ ನಂತರ, ಏಳು ವರ್ಷಗಳು ಮಕ್ಕಳೇ ಆಗಿರಲಿಲ್ಲ. ವಾಸ್ತವವಾಗಿ, ನಮ್ಮಿಬ್ಬರಿಗೇ ಬೇಡ ಅನ್ನಿಸಿ, ಒಂದೇ ಸಾಕು, ಅವಳನ್ನೇ ಚೆನ್ನಾಗಿ ಸಾಕಿ ಸಲಹಿ, ಉತ್ತಮ ವಿದ್ಯಾವಂತಳನ್ನಾಗಿ ಬೆಳೆಸಿದರಾಯಿತು, ಅಂದುಕೊಂಡು ಸುಮ್ಮನಿದ್ದೆವು. ಶಕ್ಕುವಿನ  (ಶಕುಂತಲೆಯನ್ನು ನಾವು ಕರೆಯುವ ಹ್ರಸ್ವ ಹೆಸರು), ಆರನೇ ಹುಟ್ಟು ಹಬ್ಬದ ನಂತರ, ಅಥವಾ ಅಷ್ಟರಲ್ಲಿ, ಇದ್ದಕ್ಕಿದ್ದಂತೆ ಪ್ರಭಾಳಿಗೆ, ಇನ್ನೊಂದು  ಮಗು, ಗಂಡುಮಗು, ಬೇಕೆಂಬ ಹೆಬ್ಬಯಕೆ ಉಂಟಾಗಿ, ಮತ್ತು ತನ್ನ ಮೊದಲ ಮಗಳು ಮದುವೆಯಾಗಿ ಗಂಡನ ಮನೆ ಸೇರಿದ ಮೇಲೆ, ಈ ನಮ್ಮ ಮನೆ ಭಣಗುಡುವುದಲ್ಲ, ಅನ್ನುವ ಭ್ರಮೆ ಅಥವಾ ಭಯ ಕಾಡಲು ಆರಂಭಿಸಿ, ಹಠ ಹಿಡಿದ ಕಾರಣ ಬಂದವಳೇ ಈ ನಮ್ಮ ಶಾಂಭವಿ! ಪ್ರಭಾಳ ದುರದೃಷ್ಟ, ಗಂಡಾಗಲೇ ಇಲ್ಲ! ನಮ್ಮ ಶಕುಂತಲೆಯ ಮದುವೆ ಬಹಳವೇ ಕೆಟ್ಟಕಾಲದಂತೆ ಕಾಡಿ, ನಮ್ಮನ್ನು ಹಿಂಸಿಸಿ ಹಿಂಡಿಬಿಟ್ಟಿತ್ತು. ಯಾರು ಬಂದರೂ, ಹುಡುಗಿ ಒಪ್ಪಿಗೆಯಾಗಿದೆ, ತೀರ್ಮಾನ ಮಾಡಿ ತಿಳಿಸುವೆವು ಅಂತ ಹೇಳಿ ಹೋಗುತ್ತಿದ್ದರು; ಕ್ರಮೇಣ ಬ್ರೋಕರ್ ಮೂಲಕವೋ, ಇನ್ನಾರದೋ, ಅಥವ ಇನ್ನಾವುದೋ  ಮುಖಾಂತರವೋ, ಈಗಲೇ ಮದುವೆ ಮಾಡಲ್ಲ ಅಂತಲೋ, ಬೇರೊಂದು ಕಾರಣವನ್ನೋ, ಅಥವಾ  ಕಾರಣವೇ ಇಲ್ಲದ ಕಾರಣವೊಂದನ್ನು  ತೂರಿ, ನಿರ್ಗಮಿಸುತ್ತಿದ್ದರು. ಸತ್ಯ ಅಂದರೆ ನಮ್ಮಿಬ್ಬರ ಅಂತರ್ಜಾತಿ ಅಡ್ಡಲಾಗಿ ನಿಂತ  ಮುಳ್ಳು ಅಂತ ನಮಗೆ ಅರಿವಂತೂ ಆಗಿಬಿಡುತ್ತಿತ್ತು; ಈ ತೆರನಾದ   ಅನುಭವಗಳು ವಿಪುಲವಾಗಿ  ನಮ್ಮಿಬ್ಬರನ್ನೂ ಹೈರಾಣಾಗಿಸಿದ್ದವು.. ಅಂತಹ ಸಂದರ್ಭಗಳಲ್ಲಿ ಪ್ರಭ ಬೆಡ್ ರೂಮಿನಲ್ಲಿ  ಬಳ್ಳಗಟ್ಟಲೆ ಕಣ್ಣೀರು ಹರಿಸಿದ್ದಳು. ಕೊನೆಗೆ, “ಯಾವುದೇ ಕಾರ್ಯ ಆಗುವ ಹಾಗಿದ್ದರೆ, ಯಾವ ಪ್ರಚೋದನೆ ಇಲ್ಲದೆಯೂ, ಆಗಿಯೇ ತೀರುತ್ತದೆ, ಆ ಸುವರ್ಣ ಸಮಯಕ್ಕೆ ಸರಿಯಾಗಿ”, ಅನ್ನುವಂತೆ ನಮ್ಮ ಪಾಲಿನ ಭಗವಂತ ಒಮ್ಮೆ ಕಣ್ತೆರೆದೇಬಿಟ್ಟ! ನನ್ನ ಹಳೆಯ ಕೊಲೀಗ್ ಒಬ್ಬರ ಮೂಲಕ…ಅವರ ಆಪ್ತರ ಮಗ, ಫಿಸಿಕ್ಸ್ ಲೆಕ್ಚರರ್, ಶಶಾಂಕ್ ಎಂಬೊಬ್ಬರು ಒಪ್ಪಿ ಮದುವೆ ಅಂತ ಆಯಿತು! ಶಕುಂತಲೆಯ ರೂಪ ಕೂಡ ತೆಗೆದುಹಾಕುವ ಹಾಗೇನಿರಲಿಲ್ಲ. ಶಾಂಭವಿಯಷ್ಟು ಬಣ್ಣ ಮತ್ತು ಸೌಂದರ್ಯ  ಇಲ್ಲದಿದ್ದರೂ ಸಹ. ಆದರೂ ಸಹ, ನಮ್ಮ ಶಾಂಭವಿ ಬಹಳವೇ ರೂಪವಂತೆ ಆಗಿದ್ದುದರಿಂದ, ಯಾರೇ ಶಕುಂತಲೆಯನ್ನು ನೋಡಲು ಬಂದಾಗ, ಶಾಂಭವಿಯನ್ನು ಹೊರಗೆ ಏಲ್ಲಾದರೂ ಕಳಿಸಿ, ಅವಳು ಕಾಲೇಜಿಗೆ ಹೋಗಿದ್ದಾಳೆ, ಎಂದು ಕೇಳಿದವರಿಗೆ ಸುಳ್ಳು ಹೇಳುತ್ತಿದ್ದೆವು. ಇಷ್ಟಕ್ಕೂ ಈ ಜಾತಿ! ಜಾತಿ ಯಾರ ಅಪ್ಪನ ಮನೆ ಸ್ವತ್ತು, ಅಲ್ಲವೇ…! ನನ್ನ ಅಳಿಯ, ಶಶಾಂಕ್ ಕೂಡ, ಅಂತರ್ಜಾತೀಯ ತಾಯಿತಂದೆಯ ಮಗನೇ ಆಗಿದ್ದರು. ಅದೇ ನಮಗೆ ವರಪ್ರದಾಯವಾದದ್ದು! ಆಗ ನನಗೆ ಅನಿಸಿದ್ದು ಹೀಗೆ ಮತ್ತು ಇಷ್ಟು: ನಾನು ಮತ್ತು ಪ್ರಭಾಮಣಿ ಮಾತ್ರ ಈ ಪರಿಸ್ಥಿತಿಯ “ಯಜ್ಞಪಶು”ಗಳಾಗಿರಲಿಲ್ಲ”, ಬದಲಿಗೆ ನಮ್ಮಂಥಹವರು ಈ ಜಗತ್ತಿನಲ್ಲಿ, ಕನಿಷ್ಠ ನನ್ನ ಸುತ್ತಮುತ್ತಲಿನ ಜಗತ್ತಿನಲ್ಲಿ, ಅನೇಕ- ರಿದ್ದಾರೆ ಅನ್ನಿಸಿ ಸಮಾಧಾನ ಆಗಿತ್ತು! “ಅಯ್ಯಾ, ಗೆದ್ದುಬಿಟ್ಟೆಕಣೋ, ಮನೋಹರ!” ಅಂದುಕೊಂಡು ಸಮಾಧಾನ ಪಟ್ಟಿಕೊಂಡು , ಪ್ರಭಾಳಿಗೂ ಬೆನ್ನು ತಟ್ಟಿದ್ದೆ…ಆದರೆ, ಇನ್ನೂ ಮುಂದೆ ಮುಂದೆ ಬೃಹತ್ತಾಗಿ, ಬೆನ್ನುಫಣಿಯ ಹಾಗೆ ಅದೇ ಸಾಂಕ್ರಾಮಿಕ, ಅವಳ ತಂಗಿಯ ಮೂಲಕ, ಶಾಂಭವಿಯ ಮದುವೆ ಮೂಲಕ, ಕಾಡಬಹುದು ಅನ್ನಿಸಿರಲಿಲ್ಲ… ನಮ್ಮಪ್ಪ ಅಮ್ಮನಿಗೆ ನನ್ನ ನಂತರ ಹುಟ್ಟಿದ್ದು ನನ್ನ ಇಬ್ಬರು ತಮ್ಮಂದಿರು, ಅವಳಿ ಎಂದು ಆಗಲೇ ಹೇಳಿದ್ದೇನೆ. ಆದರೂ, ಅಷ್ಟಕ್ಕೇ ಅವರಿಗೆ ನನ್ನ ಅಂತರ್ಜಾತಿ ವಿವಾಹದ ‘ಭಯಂಕರ ಭೂತ’ ಹೊಕ್ಕಂತೆ ಜಿಗುಪ್ಸೆ ಕಾಡತೊಡಗಿ,  ನನ್ನನ್ನು ದೂರ

ಶಾಂಭವಿ, ಬಣ್ಣ, ಜಾತಿ ಮುಂತಾಗಿ.. Read Post »

ಅಂಕಣ ಸಂಗಾತಿ, ಕೇರಿ ಕೊಪ್ಪಗಳ ನಡುವೆ

ಅಂಕಣ ಬರಹ ರಾಮಕೃಷ್ಣ ಗುಂದಿ ಅವರ ಆತ್ಮಕಥೆ—42 ಆತ್ಮಾನುಸಂಧಾನ ಅಂಕೋಲೆಯ “ಕರ್ನಾಟಕ ಸಂಘ” ಮತ್ತು ನಾನು ೧೯೫೦ ರ ದಶಕದ ಆರಂಭದಲ್ಲಿಯೇ ಹುಟ್ಟಿ ಅಂಕೋಲೆಯ ಸಾಮಾಜಿಕ ಪರಿಸರದಲ್ಲಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳನ್ನು ಆರಂಭಿಸಿದ ಅಂಕೋಲೆಯ “ಕರ್ನಾಟಕ ಸಂಘ” ವೆಂಬ ಸಾಹಿತ್ಯ ಸಾಂಸ್ಕೃತಿಕ ಸಂಘಟನೆಯು ನನ್ನಂಥ ಹಲವರಿಗೆ ಸಾಂಸ್ಕೃತಿಕ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲು ವೇದಿಕೆಯಾದದ್ದು ಅಂಕೋಲೆಯ ಇತಿಹಾಸದಲ್ಲಿಯೇ ಒಂದು ಅಭೂತಪೂರ್ವ ಕಾಲಾವಧಿ ಎನ್ನಬಹುದು. ೧೯೫೨ ರಲ್ಲಿ ಸ್ಥಾಪನೆಗೊಂಡು ಅಂಕೋಲೆಯ ಸಾಹಿತ್ಯ-ಕಲೆ-ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಆಸಕ್ತಿ ಹೊಂದಿದ ಸಹಸ್ರಾರು ಜನರ ಆಶೋತ್ತರಗಳನ್ನು ಈಡೇರಿಸುತ್ತಲೇ ಬದುಕಿಗೆ ಸಾಂಸ್ಕೃತಿಕ ಶ್ರೀಮಂತಿಕೆಯ ಮೆರುಗನ್ನು ನೀಡಿದ ಕರ್ನಾಟಕ ಸಂಘದ ಹುಟ್ಟು ಬೆಳವಣಿಗೆಯಲ್ಲಿ ಈ ನೆಲದ ಹಲವು ಮಹನೀಯರ ಕನಸು ಮತ್ತು ಪರಿಶ್ರಮಗಳಿವೆ. ಅಂದು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥರಾಗಿದ್ದ ಹಿರಿಯ ವಿದ್ವಾಂಸರಾದ ತೀ.ನಂ.ಶ್ರೀಕಂಠಯ್ಯನವರಿಂದ ಉದ್ಘಾಟನೆಗೊಂಡ ಕನಾಟಕ ಸಂಘದ ಮೊದಲ ಅಧ್ಯಕ್ಷರಾಗಿ ಶ್ರೀ ಸ.ಪ.ಗಾಂವಕರ, ಉಪಾಧ್ಯಕ್ಷರಾಗಿ ಶ್ರೀ ಎಸ್.ವಿ.ಪಿಕಳೆ, ಕಾರ್ಯದರ್ಶಿಯಾಗಿ ಯು. ರಾಜಗೋಪಾಲಾಚಾರ್ ಕಾರ್ಯ ನಿರ್ವಹಿಸುತ್ತ ಸಂಘಕ್ಕೆ ಭದ್ರ ಬುನಾದಿ ಹಾಕಿದರು. ಈ ಪರಂಪರೆಯ ಮುಂದುವರಿಕೆಯಾಗಿ ಸಂಘವು ಸಂಘ-ಸಂಸ್ಥೆಗಳ ನೋಂದಣಿ ನಿಯಮದಂತೆ ನೋಂದಾಯಿಸಲ್ಪಟ್ಟ ೧೯೮೪-೮೫ ನೇ ವರ್ಷದಿಂದ ವರ್ಷಾವಧಿಯ ಆಡಳಿತದಲ್ಲಿ ಪ್ರಾಚಾರ್ಯ ಕೆ.ಜಿ.ನಾಯ್ಕ, ಪತ್ರಕರ್ತ ಅಮ್ಮೆಂಬಂಳ ಆನಂದ, ಮುಖ್ಯಾಧ್ಯಾಪಕ ವಿ.ಜೇ.ನಾಯಕ ವಂದಿಗೆ, ಶಾಂತಾರಾಮ ನಾಯಕ ಹಿಚ್ಕಡ, ವಿಷ್ಣು ನಾಯ್ಕ, ಶ್ಯಾಮ ಹುದ್ದಾರ, ಕಾಳಪ್ಪ ನಾಯಕ, ಮೋಹನ ಹಬ್ಬು, ವಸಂತ ಮಹಾಲೆ ಮುಂತಾದ ಮಹನೀಯರು ಸಂಘದ ಪದಾಧಿಕಾರಿಗಳಾಗಿ ಕಾರ್ಯನಿರ್ವಹಿಸುತ್ತ ಸಂಘದ ಸಾಹಿತ್ಯಿಕ ಸಾಂಸ್ಕೃತಿಕ ರಥವನ್ನು “ಬೆಳ್ಳಿಹಬ್ಬ”, “ಸುವರ್ಣ ಮಹೋತ್ಸವ” ಇತ್ಯಾದಿ ಸಂಭ್ರಮಗಳ ಕಡೆಗೆ ಯಶಸ್ವಿಯಾಗಿ ಮುನ್ನಡೆಸಿದ್ದಾರೆ. ಈ ಸತ್ಪರಂಪರೆಯಲ್ಲಿ ೧೯೯೭-೯೮, ೧೯೯೮-೯೯, ೧೯೯೯-೨೦೦೦ ಇಸ್ವಿಯ ಮೂರು ಕಾಲಾವಧಿಗೆ ಸಂಘದ ಅಧ್ಯಕ್ಷನಾಗಿ ನನ್ನ ಅಳಿಲು ಸೇವೆ ಸಲ್ಲಿಸುವ ಸುವರ್ಣಾವಕಾಶ ನನಗೆ ದೊರೆತದ್ದು ನನ್ನ ಜೀವಿತಾವಧಿಯ ಬಹುದೊಡ್ಡ ಭಾಗ್ಯವೆಂದೇ ನಾನು ಭಾವಿಸಿದ್ದೇನೆ. ಕರ್ನಾಟಕ ಸಂಘದ ಆಶ್ರಯದಲ್ಲಿ ನಿರಂತರವಾಗಿ ನಡೆಯುತ್ತಿದ್ದ ಪುಸ್ತಕ ಬಿಡುಗಡೆ, ಉಪನ್ಯಾಸ, ವಿಚಾರ ಸಂಕಿರಣ, ಕವಿಗೋಷ್ಠಿ ಇತ್ಯಾದಿ ಕಾರ್ಯಕ್ರಮಗಳಲ್ಲಿ ತಪ್ಪದೇ ಭಾಗವಹಿಸುತ್ತ ೧೯೮೦ ರಿಂದ ೨೦೦೦ ದ ಕಾಲಾವಧಿಯ ಎರಡು ದಶಕಗಳಲ್ಲಿ ಪಡೆದ ಹಿರಿಯ ಕವಿ-ವಿದ್ವಾಂಸರ ಒಡನಾಟ, ಮಾರ್ಗದರ್ಶನ, ವಿಚಾರಧಾರೆಗಳಿಂದ ಪ್ರೇರಣೆ ಪಡೆದು ಒಬ್ಬ ಬರಹಗಾರನಾಗಿ ನನ್ನನ್ನು ನಾನು ರೂಪಿಸಿಕೊಳ್ಳುವುದು ಸಾಧ್ಯವಾಯಿತು. ಕರ್ನಾಟಕ ಸಂಘವು ನನಗೆ ಮತ್ತು ನನ್ನಂಥ ಅನೇಕರಿಗೆ ಸಾಹಿತ್ಯಿಕ ಒಲವು ಮತ್ತು ಸೃಜನಶೀಲತೆಗೆ ಬಹು ದೀರ್ಘಕಾಲದ ಪೋಷಕಾಂಶಗಳನ್ನು ಪೂರೈಸಿದೆ. ಈ ದಿಸೆಯಲ್ಲಿ ನಾವೆಲ್ಲರೂ ಅಂಕೋಲೆಯ ಕರ್ನಾಟಕ ಸಂಘಕ್ಕೆ ಆ ಜನ್ಮ ಋಣಿಗಳಾಗಿದ್ದೇವೆ. ಕರ್ನಾಟಕ ಸಂಘದಿಂದ ಪಡೆದ ಸಾಂಸ್ಕೃತಿಕ ಪ್ರಭಾವ ಕೂಡ ನಮ್ಮ ಬದುಕಿನಲ್ಲಿ ಮಹತ್ವದ ಪರಿಣಾಮ ಬೀರಿತು. ನಾನು ಒಬ್ಬ ರಂಗ ಕಲಾವಿದನಾಗಿ ರೂಪುಗೊಳ್ಳಲು ಅಪೂರ್ವ ಅವಕಾಶ ದೊರೆಯಿತು. ೧೯೮೫ ರ ವರ್ಷಾವಧಿಯಲ್ಲಿ ಕರ್ನಾಟಕ ಸಂಘ ಏರ್ಪಡಿಸಿದ ನಾಟಕೋತ್ಸವ ಮತ್ತು ತನ್ನಿಮಿತ್ತ ನಡೆದ ರಂಗ ತರಬೇತಿ ಶಿಬಿರಗಳು ರಂಗಾಸಕ್ತರಿಗೆ ತುಂಬ ಪ್ರಯೋಜನಕಾರಿಯಾದವು. ಸಂಘದ ಹಿರಿಯ ಸದಸ್ಯರಾಗಿದ್ದ ವಿ.ಜೇ.ನಾಯಕ ವಂದಿಗೆ ಅವರು ಅಂದು ಕರ್ನಾಟಕ ನಾಟಕ ಅಕಾಡೆಮಿಯ ಸದಸ್ಯರಾಗಿ ಇದ್ದ ಸಂದರ್ಭ ಅದು. ಅವರು ಅಕಾಡೆಮಿಯ ನೆರವನ್ನು ದೊರಕಿಸಿಕೊಟ್ಟು ಇಂಥ ಕಾರ್ಯಕ್ರಮ ಸಂಯೋಜನೆಗೆ ಅವಕಾಶ ಕಲ್ಪಿಸಿದ್ದರು. ಅದೇ ಕಾಲಘಟ್ಟದಲ್ಲಿ ಮೈಸೂರಿನ ‘ಶ್ರೀನಿವಾಸ’ ಎಂಬ ಯುವ ರಂಗತಜ್ಞರೊಬ್ಬರು ಅಂಕೋಲೆಗೆ ಬಂದು ‘ಬೀದಿನಾಟಕ-ಪ್ರಯೋಗ’ದ ಕುರಿತು ಇಲ್ಲಿನ ರಂಗಾಸಕ್ತರಿಗೆ ತರಬೇತಿ ನೀಡಿದರು. ಇಲ್ಲಿ ತರಬೇತಿ ಪಡೆದ ಬಹಳಷ್ಟು ಸಂಘದ ಸದಸ್ಯರು ಮುಂದಿನ ದಿನಗಳಲ್ಲಿ ಅಂಕೋಲೆ ಮತ್ತು ಸುತ್ತಮುತ್ತಲಿನ ಹಳ್ಳಿಗಳಲ್ಲಿ ಹಲವಾರು ಬೀದಿ ನಾಟಕಗಳನ್ನು ಪ್ರದಶಿಸಿ ಜನಜಾಗೃತಿ ಮೂಡಿಸಲು ಅವಕಾಶವಾಯಿತು. ಇದೇ ಕಾಲಾವಧಿಯಲ್ಲಿ ರಾಜ್ಯದಾದ್ಯಂತ ಚುರುಕುಗೊಂಡ ಬಂಡಾಯ ಸಾಹಿತ್ಯ ಸಂಘಟನೆಯಲ್ಲಿ ಅಂಕೋಲೆಯ ಹಲವು ಬರಹಗಾರರು ಸಕ್ರಿಯರಾದರು. ಬೀದಿ ನಾಟಕ ಪ್ರದರ್ಶನದ ಉದ್ದೇಶದಿಂದಲೇ ‘ಬಸಂತ’ ಕಲಾವಿದರ ತಂಡವೊಂದು ರೂಪುಗೊಂಡಿತು. “ಬಂಡಾಯ ಸಂಘಟನೆ ತಂಡ” ಎಂಬುದು ಅದರ ವಿಸ್ತೃತ ರೂಪ. ಈ ತಂಡದಲ್ಲಿ ನಾನು, ಹಿರಿಯರಾದ ವಿಷ್ಣು ನಾಯ್ಕ, ಮೋಹನ ಹಬ್ಬು, ಡಾ. ಶ್ರೀಪಾದ ಶೆಟ್ಟಿ, ಸದಾನಂದ ನಾಯಕ, ಕೃಷ್ಣಾ ನಾಯಕ, ಪ್ರಕಾಶ ಕಡಮೆ, ನರೇಶ ದೇಸಾಯಿ, ಶ್ಯಾಮ ಹುದ್ದಾರ, ಮಂಗೇಶ ಶೆಟ್ಟಿ, ಸುರೇಂದ್ರ ದಫೇದಾರ, ಪ್ರೊ. ನಿರಂಜನ, ಅನಂತ ನಾಯ್ಕ ಮುಂತಾದ ಕಲಾವಿದರು ತುಂಬ ಆಸಕ್ತಿಯಿಂದ ತೊಡಗಿಕೊಂಡಿದ್ದೆವು. ‘ಬಸಂತ’ ಕಲಾವಿದರ ತಂಡವು ಹಲವು ವರ್ಷಗಳವರೆಗೆ ಬಹಳಷ್ಟು ನಾಟಕಗಳನ್ನು ಪ್ರದರ್ಶಿಸುತ್ತ ಜನಪ್ರಿಯ ಬೀದಿನಾಟಕ ತಂಡವೆಂದು ಪ್ರಸಿದ್ಧಿ ಪಡೆದುಕೊಂಡಿತ್ತು. ತಂಡವು ಪ್ರದರ್ಶಿಸಿದ ಸರಾಯಿ ಸೂರಪ್ಪ, ಕತ್ತೆ ಮೋತಿ ಪ್ರಸಂಗ, ನಾಯಿಗಳು, ರೇಶನ್ ಕಾರ್ಡ್, ಒಂದು ಹನಿ ರಕ್ತ, ಸಾವಸುತ್ತ, ವಂದೇ ಮಾತರಂ ಮುಂತಾದ ನಾಟಕಗಳು ತುಂಬ ಯಶಸ್ವಿಯಾಗಿ ಪ್ರದರ್ಶನಗೊಂಡು ಕಲಾವಿದರು ಕೂಡ ಜನಪ್ರಿಯತೆ ಪಡೆಯಲು ಅವಕಾಶವಾಯಿತು. ಬೀದಿ ನಾಟಕಗಳ ಜೊತೆ ಜೊತೆಯಲ್ಲಿಯೇ ಇದೇ ಕಾಲಾವಧಿಯಲ್ಲಿ ಕರ್ನಾಟಕ ಸಂಘವು ಹಲವಾರು ರಂಗ ನಟಕಗಳನ್ನು ಪ್ರದರ್ಶಿಸಿದ್ದು ಬಹುತೇಕ ನಾಟಕಗಳಲ್ಲಿ ನಾನು ಮುಖ್ಯ ಪಾತ್ರಧಾರಿಯಾಗಿ ಅವಕಾಶ ಪಡೆದದ್ದು ಕೂಡ ಸ್ಮರಣೀಯವೆನಿಸುತ್ತದೆ. ಕರ್ನಾಟಕ ಸಂಘವು ಪ್ರದರ್ಶಿಸಿದ ‘ಜೈಸಿದ ನಾಯ್ಕ್’ ನಾಟಕದ ಸಿದ್ಧ ನಾಯ್ಕ, ಮಾರಿಕೊಂಡವರು ನಾಟಕದ ಪೊಲೀಸ್ ಅಧಿಕಾರಿ, ‘ಕಟ್ಟು’ ನಾಟಕದ ಮುಂಗೋಪಿ ಯುವಕ, ‘ಒಂದು ಕತ್ತೆಯ ಕಥೆ’ ನಾಟಕದ ನವಾಬ, ‘ಜಾತ್ರೆ’ ನಾಟಕದ ಅಧಿಕ ಬುದ್ಧಿಯ ಮಹಾರಾಜ, ‘ಇವ ನಮ್ಮವ’ ನಾಟಕದ ಕನ್ನಮಾರಿ, ಮೊದಲಾದ ಪಾತ್ರಗಳು ರಂಗ ಕಲಾವಿದನಾಗಿ ನನಗೆ ತುಂಬ ಜನಪ್ರಿಯತೆ ಮತ್ತು ಗೌರವವನ್ನು ತಂದು ಕೊಟ್ಟಿವೆ. ನಾವು ಜಿಲ್ಲಾಮಟ್ಟದ ನಾಟಕ ಸ್ಪರ್ಧೆಯಲ್ಲಿ ಪ್ರದರ್ಶಿಸಿದ ‘ಕಟ್ಟು’ ಎಂಬ ಏಕಾಂಕ ನಾಟಕವು ಪ್ರಥಮ ಬಹುಮಾನ ಪಡೆದು ರಾಜ್ಯ ಕನ್ನಡ ಸಂಸ್ಕೃತಿ ಇಲಾಖೆಯ ಆಶ್ರಯದಲ್ಲಿ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿಯೂ ಪ್ರದಶನಗೊಳ್ಳುವ ಅವಕಾಶ ಪಡೆದುಕೊಂಡಿತ್ತು! ‘ಒಂದು ಕತ್ತೆಯ ಕಥೆ’ ನಾಟಕವು “ಏಕ-ಥಾ ಗದಾ” ಎಂಬ ಹಿಂದಿ ನಾಟಕವೊಂದರ ಕನ್ನಡ ಅನುವಾದ. ಅದನ್ನು ಪ್ರೊ. ಮೋಹನ ಹಬ್ಬು  ಕನ್ನಡಕ್ಕೆ ಅನುವಾದಿಸಿ ರಂಗಪ್ರಯೋಗಕ್ಕೆ ಅನುವು ಮಾಡಿಕೊಟ್ಟು ನಿರ್ದೇಶಕರಾಗಿಯೂ ಕಾರ್ಯನಿರ್ವಹಿಸಿದ್ದರು. ಇದು ಅಂಕೋಲಾ, ಕಾರವಾರ, ಮಂಚಿಕೇರಿ (ಯಲ್ಲಾಪುರ) ಭಟ್ಕಳ ಇತ್ಯಾದಿ ಜಿಲ್ಲೆಯ ಹಲವು ಕಡೆಗಳಲ್ಲಿ ಯಶಸ್ವಿ ಪ್ರದರ್ಶನ ಕಂಡಿತು. ಈ ಕಾಲಾವಧಿಯಲ್ಲಿ ಪ್ರೊ. ಮೋಹನ ಹಬ್ಬು ಅವರು ಬರೆದ ‘ಸಾವ ಸುತ್ತ’ ಮತ್ತು ನಾನು ರಚಿಸಿದ ‘ವಂದೇ ಮಾತರಂ’ ಎಂಬ ಎರಡು ಬೀದಿ ನಾಟಕಗಳನ್ನು ಪ್ರಕಟಿಸುವ ಮೂಲಕ ಕರ್ನಾಟಕ ಸಂಘವು ಮೊದಲ ಬಾರಿಗೆ ಪುಸ್ತಕ ಪ್ರಕಟಣೆಯ ಪ್ರಯೋಗ ಮಾಡಿದ್ದು ಮತ್ತು ಆ ಮೂಲಕ ನಮ್ಮನ್ನು ಪ್ರೋತ್ಸಾಹಿಸಿರುವುದು ಅವಿಸ್ಮರಣೀಯ ಸಂದರ್ಭವಾಗಿದೆ. ಒಟ್ಟಾರೆಯಾಗಿ ಕರ್ನಾಟಕ ಸಂಘದ ಸದಸ್ಯರಾದ ಪ್ರತಿಯೊಬ್ಬರು ಇಲ್ಲಿಯ ಸಾಹಿತ್ಯ ಸಾಂಸ್ಕೃತಿಕ ಚಟುವಟಿಕೆಗಳಿಂದ ಒಂದಲ್ಲ ಒಂದು ವಿಧದಲ್ಲಿ ಅದರ ಪ್ರಭಾವಕ್ಕೆ ಒಳಗಾಗಿದ್ದಾರೆ. ಬೇರೆ ಬೇರೆ ರೀತಿಯಲ್ಲಿ ತಮ್ಮ ವ್ಯಕ್ತಿತ್ವವನ್ನು ಅರಳಿಸಿಕೊಂಡಿದ್ದಾರೆ. ನನ್ನ ‘ಕಾಲೇಜು ಉಪನ್ಯಾಸಕ’ ಎಂಬ ಒಂದು ವ್ಯಕ್ತಿತ್ವಕ್ಕೆ ಕಲಾವಿದ, ಲೇಖಕ ಇತ್ಯಾದಿ ಪೂರಕವಾದ ಇನ್ನಷ್ಟು ಮುಖಗಳು ಅಭಿವ್ಯಕ್ತಗೊಂಡು ಸಾಮಾಜಿಕವಾಗಿ ನಾನು ಗುರುತಿಸಲ್ಪಡುವುದಕ್ಕೆ ಗೌರವಾರ್ಹನಾಗುವುದಕ್ಕೆ ಕರ್ನಾಟಕ ಸಂಘವು ಮಹತ್ವದ ಕೊಡುಗೆ ನೀಡಿದೆ ಎಂಬುದು ನಿಸ್ಸಂದೇಹ. ಪ್ರೀತ್ಯಾದರಗಳಿಂದಲೇ ನನ್ನನ್ನು ಸಂಘದ ಒಳಗು ಮಾಡಿಕೊಂಡ ಇಲ್ಲಿನ ಪದಾಧಿಕಾರಿಗಳಿಗೆ, ಸದಸ್ಯರುಗಳಿಗೆ ನಾನು ಯಾವತ್ತೂ ಋಣಿಯಾಗಿರುವೆ. ಹಾಗೆಯೇ ನನ್ನ ಪ್ರತಿಭಾ ಪ್ರದರ್ಶನಕ್ಕೆ ವೇದಿಕೆಯಾದ ನಾಟಕಕಾರರಾದ ವಿಷ್ಣು ನಾಯ್ಕ, ಮೋಹನ ಹಬ್ಬು, ಚಂದ್ರಶೇಖರ ಕಂಬಾರ, ವ್ಯಾಸ ದೇಶಪಾಂಡೆ, ಎ.ಎನ್.ಮೂರ್ತಿರಾವ್ ಅವರ ಕೊಡುಗೆಯನ್ನೂ ಸ್ಮರಿಸದಿರಲಾರೆ. ನಮ್ಮ ನಾಟಕಗಳನ್ನು ನಿರ್ದೇಶಿಸಿ ನಮ್ಮ ಅಭಿನಯ ಸಾಮರ್ಥ್ಯಕ್ಕೆ ಸಾಣೆ ಹಿಡಿದ ನಿರ್ದೇಶಕರಾದ ಮೈಸೂರಿನ ಶ್ರೀನಿವಾಸ, ಹೊನ್ನಾವರದ ಡಾ. ಶ್ರೀಪಾದ್ ಭಟ್, ವಿಷ್ಣು ನಾಯ್ಕ, ಮೋಹನ ಹಬ್ಬು ಮೊದಲಾದ ಹಿರಿಯರೆಲ್ಲರೂ ನನ್ನ ಕಲಾವಿದ ವ್ಯಕ್ತಿತ್ವದ ಹಿಂದಿನ ಶಕ್ತಿಗಳು ಎಂದು ಕೃತಜ್ಞತಾ ಪೂರ್ವಕವಾಗಿ ಸ್ಮರಿಸುವೆ ********************* ರಾಮಕೃಷ್ಣ ಗುಂದಿ ಕನ್ನಡದ ಖ್ಯಾತ ಕತೆಗಾರ. ಅವಾರಿ, ಕಡಲಬೆಳಕಿನ ದಾರಿ ಗುಂಟ, ಅತಿಕ್ರಾಂತ, ಸೀತೆ ದಂಡೆ ಹೂವೇ …ಈ ನಾಲ್ಕು ಅವರ ಕಥಾ ಸಂಕಲನಗಳು. ಅವರ ಸಮಗ್ರ ಕಥಾ ಸಂಕಲನ ಸಹ ಈಚೆಗೆ ಪ್ರಕಟವಾಗಿದೆ.‌ಯಕ್ಷಗಾನ ಕಲಾವಿದ.‌ ಕನ್ನಡ ಉಪನ್ಯಾಸಕರಾಗಿ ಅಂಕೋಲಾದ ಜೆ.ಸಿ.ಕಾಲೇಜಿನಲ್ಲಿ ಸೇವೆ ಪ್ರಾರಂಭಿಸಿ, ಕಾರವಾರದ ದಿವೇಕರ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿದ್ದಾರೆ. ಯಕ್ಷಗಾನ ಅಕಾಡೆಮಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಮಗ ಅಮೆರಿಕಾದಲ್ಲಿ ಸಾಫ್ಟ್‌ವೇರ್ ಎಂಜಿನಿಯರ್. ಅಗೇರ ಸಮುದಾಯದಿಂದ ಬಂದ ಗುಂದಿ ಅವರು ಅದೇ ಜನಾಂಗದ ಬಗ್ಗೆ ಪಿಎಚ್ಡಿ ಪ್ರಬಂಧ ಮಂಡಿಸಿ, ಡಾಕ್ಟರೇಟ್ ಸಹ ಪಡೆದಿದ್ದಾರೆ‌ . ದಲಿತ ಜನಾಂಗದ ಕಷ್ಟ ನಷ್ಟ ನೋವು, ಅವಮಾನ, ನಂತರ ಶಿಕ್ಷಣದಿಂದ ಸಿಕ್ಕ ಬೆಳಕು ಬದುಕು ಅವರ ಆತ್ಮಕಥನದಲ್ಲಿದೆ. ಮರಾಠಿ ದಲಿತ ಸಾಹಿತಿಗಳ,‌ಲೇಖಕರ ಒಳನೋಟ , ಕನ್ನಡ ನೆಲದ ದಲಿತ ಧ್ವನಿಯಲ್ಲೂ ಸಹ ಇದೆ.‌ ರಾಮಕೃಷ್ಣ ಗುಂದಿ ಅವರ ಬದುಕನ್ನು ಅವರ ಆತ್ಮಕಥನದ ಮೂಲಕವೇ ಕಾಣಬೇಕು. ಅಂತಹ ನೋವಿನ ಹಾಗೂ ಬದುಕಿನ‌ ಚಲನೆಯ ಆತ್ಮಕಥನವನ್ನು ಸಂಗಾತಿ ..ಓದುಗರ ಎದುರು, ‌ಕನ್ನಡಿಗರ ಎದುರು ಇಡುತ್ತಿದೆ

Read Post »

ಅಂಕಣ ಸಂಗಾತಿ, ನೆಲಸಂಪಿಗೆ

ನಮ್ಮ ನಡುವಿನ ಜೀವಪರ ಕಾಳಜಿಯ ಕವಯಿತ್ರಿ ವಿಜಯಶ್ರೀ ಹಾಲಾಡಿಯವರು ಸಂಗಾತಿಗಾಗಿ ಬರೆಯುತ್ತಿದ್ದಾರೆ. ಅಂಕಣದ ಮೊದಲ ಕಂತು ನಿಮ್ಮ ಮುಂದಿದೆ. ಪ್ರತಿ ತಿಂಗಳ ಎರಡನೇ ಮತ್ತು ನಾಲ್ಕನೇ ಶನಿವಾರ ಈ ಅಂಕಣ ಪ್ರಕಟವಾಗಲಿ

Read Post »

ಅಂಕಣ ಸಂಗಾತಿ, ಸಾಧಕಿಯರ ಯಶೋಗಾಥೆ

ಸಾಧಕಿಯರ ಯಶೋಗಾಥೆ’ ಮಾಲಿಕೆಯನ್ನು ಸಂಗಾತಿ ಓದುಗರಿಗಾಗಿ ಸರಣಿ ರೂಪದಲ್ಲಿ ಪ್ರಕಟಿಸಲಿದೆ. ಈ ಸರಣಿ ಮಾಲಿಕೆಯನ್ನು ಲೇಖಕಿ ಡಾ. ಸುರೇಖಾ ಜಿ ರಾಠೋಡ ಪ್ರತಿವಾರ ಬರೆಯಲಿದ್ದಾರೆ‌.

Read Post »

You cannot copy content of this page

Scroll to Top