ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
jugal
ಕಾವ್ಯಯಾನ

ನಮ್ಮ ನಡುವಿನ ಯುವ ಕವಯಿತ್ರಿಯರಾದ ಸ್ಮಿತಾಭಟ್ ಮತ್ತು ರೇಖಾಭಟ್ ಅವರು ಸಂಗಾತಿಗಾಗಿ ಗಜಲ್ ಜುಗಲ್ ಬಂದಿ ಯಲ್ಲಿ ಬರೆಯಲಿದ್ದಾರೆ

Read Post »

ಕಥಾಗುಚ್ಛ

ತಟ್ಟಿದ ತಾಳ

ಕಥೆ ತಟ್ಟಿದ ತಾಳ ಎಂ. ಆರ್. ಅನಸೂಯ ಮಂಜು,  ಟೀ  ಮಾಡ್ತೀಯಾ”  ಎಂದು  ಸುರೇಶ್  ಕೂಗಿ ಹೇಳಿದಾಗ  ಅಡುಗೆಮನೆಯಲ್ಲಿ  ಮಗುವಿಗೆ  ಕುಡಿಸಲು ಹಾಲು ಬಿಸಿ ಮಾಡುತ್ತಿದ್ದ ಮಂಜುಳ ಅವನಿಗೆ  ಉತ್ತರ ಕೊಡದೆ ಟೀಗಿಡುತ್ತಲೇ ಇದಕ್ಕೆಲ್ಲಾ ಏನು. ಕಡಿಮೆಯಿಲ್ಲ ಎಂದು ಮನದಲ್ಲಿಯೆ ಗೊಣಗಿದಳು.  ಟೀ ಕೊಡಲು ಬಂದಾಗ ಬಂದವರು ” ನಮಸ್ಕಾರ” ಎಂದರು. ಇವಳು ಪ್ರತಿ ನಮಸ್ಕರಿಸಿದಳು.  ಆ ಅತಿಥಿ ಸುಮಾರು ಇಪ್ಪತ್ತೈದು ವರ್ಷದ ಯುವಕ. ಒಳಬಂದವಳು  ಮಗುವಿಗೆ ಹಾಲು  ಕುಡಿಸಿ ಮಲಗಿಸುತ್ತಿರುವಾಗ ಸುರೇಶ  ಅ ಯುವಕನಿಗೆ ಹೇಳುತ್ತಿದ್ದ ಮಾತುಗಳು ಕಿವಿಗೆ ಬಿದ್ದವು. ಯುವಕನಿಗೆ ಕೆಲಸ ಕೊಡಿಸುವ ವಿಚಾರವೆಂದು ತಿಳಿಯಿತು.”ಕೆಲಸಕ್ಕೆ ಸಂಬಂಧಿಸಿದಂತೆ ನೀವು ಸ್ವಲ್ಪ ದುಡ್ಡು ಖರ್ಚು ಮಾಡಲು ರೆಡಿಯಿರಬೇಕು. ಎಷ್ಟು ಬೇಕಾಗುತ್ತೆ ಅಂತ ಸ್ವಲ್ಪ  ದಿನ ಬಿಟ್ಟು ಹೇಳ್ತೀನಿ. ಒಳ್ಳೇ ಪರ್ಸೆಂಟೇಜ್ ಇದ್ದರೂ ದುಡ್ಡು ಕೊಡದು ತಪ್ಪಲ್ಲಾ. ನೋಡೋಣ ಪ್ರಯತ್ನ ಮಾಡೋಣ” ಎಂದೆಲ್ಲಾ ಹೇಳಿ ಕಳುಹಿಸಿದ. ಇದ್ಯಾವುದೊ ಹೊಸ ಮಿಕ ಬಿತ್ತು .ಏನು ಪಾಪ ಮಾಡಿತ್ತೋ ಎಂದುಕೊಳ್ಳುತ್ತಲೇ ರೂಮಿಗೆ ಬಂದು ಮಗುವನ್ನು ಮಲಗಿಸುತ್ತ  ಮಲಗಿದ್ದ ಮಂಜುಳನಿಗೆ  ಕೇಳಿಸುವಂತೆ ” ಸಿಟ್ಟು ಕಡಿಮೆಯಾಗಿದೆ  ಸಧ್ಯ  ಟೀ ಮಾಡಿ ನನ್ನ ಮರ್ಯಾದೆ ಉಳಿಸಿದ್ದಕ್ಕೆ ತುಂಬ ಥ್ಯಾಂಕ್ಸ್” ಎಂದು ಅವಳ ತೋಳು ಮುಟ್ಟಿದ. ತಕ್ಷಣವೇ  ಮಂಜುಳ ಅವನ ಕೈಯನ್ನು ಒರಟಾಗಿ  ದೂಕಿ  ಕಣ್ಮುಚ್ಚಿ ಕೊಂಡಳು. ” Ok, no problem” ಎನ್ನುತ್ತ ಪಡಸಾಲೆಗೆ ಹೋಗಿ T. V. ನೋಡುತ್ತಾ ಕುಳಿತೆವು. “ಹೌದು,  ನನಗೆ ತಾನೇ ಎಲ್ಲಾ ಪ್ರಾಬ್ಲಮ್”” ಎಂದು ಮನದಲ್ಲೇ ಅಂದು ಕೊಳ್ಳುವಾಗ  ಅವಳಿಗರಿವಿಲ್ಲದೆ ಕಣ್ಣಾಲಿಗಳು ತುಂಬಿ  ಬಂದವು. ಮಗುವಿನ ಮುಖ ನೋಡುತ್ತಾ ಮೌನವಾಗಿ ಅಳುತ್ತಿದ್ದಳು.  ಸುರೇಶ ರೂಮಿಗೆ ಬರುವ ಸದ್ದು ಕೇಳಿ  ಕಣ್ಣೊರೆಸಿಕೊಂಡು ಕಣ್ಣು ಮುಚ್ಚಿಕೊಂಡಳು. ಕನ್ನಡಿಯ ಮುಂದೆ ನಿಂತು ತಲೆಬಾಚಿಕೊಂಡು ಮಂಬಾಗಿಲನ್ನೆಳೆದು ಕೊಂಡು ಹೊರಟ  ಸದ್ದಾಯಿತು.  ಸುರೇಶ ತಾಲ್ಲೂಕು ಕೇಂದ್ರದ ಕೃಷಿ ಇಲಾಖೆಯ ಅಧಿಕಾರಿ ಮಂಜುಳ ಎಂ.ಎಸ್ಸಿ. ಬಿ.ಇಡಿ. ಮುಗಿಸಿದ್ದರೂ ಸಹ ಕೆಲಸ ಮಾಡುವ ಇರಾದೆಯೇನೂ ಇರಲಿಲ್ಲ. ತಂದೆತಾಯಿಗಳಿಗೆ ಮಂಜುಳ ಮತ್ತು ಅವಳ ತಮ್ಮ ಪ್ರಕಾಶ ಇಬ್ಬರೆ ಮಕ್ಕಳು ಮಂಜುಳಾಳ ತಂದೆಯು ಬ್ಯಾಂಕ್ ಮ್ಯಾನೇಜರ್ ಆಗಿದ್ದು ನಿವೃತ್ತರಾಗಿದ್ದರು. ಪ್ರಕಾಶ ಸಾಪ್ಟ್ ವೇರ್ ಇಂಜಿನೀಯರ್  ಆಗಿ ವಿದೇಶಿ ಕಂಪನಿಯಲ್ಲಿ ಒಳ್ಳೆಯ ಉದ್ಯೋಗದಲ್ಲಿದ್ದ. ಸುರೇಶನ ತಂದೆ  ಕೃಷ್ಣಮೂರ್ತಿ ಪ್ರೌಢಶಾಲಾ ಶಿಕ್ಷಕರು, ತಾಯಿ ಸುಶೀಲಾ ಗೃಹಿಣಿ. ವೃತ್ತಿಯ ಜೊತೆಗೆ  ಪಾಲಿಗೆ ಬಂದಿದ್ದ ಐದು ಎಕರೆ ತೆಂಗಿನ ತೋಟದ ಆದಾಯವೂ ಇತ್ತು. ಎಲ್ಲವೂ ಸೇರಿ ಸಾಕಷ್ಟು ಅನುಕೂಲವಾಗಿದ್ದರು. ಅವರ ಮಗಳು ಹೇಮ ಸರ್ಕಾರಿ ಪ.ಪೂರ್ವ ಕಾಲೇಜು  ಉಪನ್ಯಾಸಕಿಯಾಗಿ  ಸೇವೆ ಸಲ್ಲಿಸುತ್ತಿದ್ದಳು. ಮಗನಾದ ಸುರೇಶ ಕೃಷಿ ಇಲಾಖೆಯ ಅಧಿಕಾರಿ. ಮಂಜುಳ ಮತ್ತು ಸುರೇಶರ  ಮದುವೆಯಾಗಿ ಎರಡು ವರ್ಷದೊಳಗಾಗಿ ಅವರಿಬ್ಬರ ದಾಂಪತ್ಯದ ಫಲವಾಗಿ “ಸಿರಿ” ಹುಟ್ಟಿದಳು. ಬಾಣಂತನ ಮುಗಿಸಿ ಮಂಜುಳ  ಬಂದು ಸ್ಪಲ್ಪ ದಿನಗಳು ಕಳೆದಾದ ನಂತರ  ಸುರೇಶನ ನಿಜವಾದ ಬಣ್ಣ ಅರಿವಿಗೆ ಬಂದಿತ್ತು. ಮನೆಯ ಸಣ್ಣ ಪುಟ್ಟದ್ದಕ್ಕೆಲ್ಲ ಸಿಡುಕು, ಜಗಳ ಕೂಗಾಟಗಳು ಸಾಮಾನ್ಯವಾಗಿ ಬಿಟ್ಟಿದ್ದು ವಾದವಿವಾದ ಗಳು ಬೆಳೆದು ಜಗಳದಲ್ಲಿ ಅಂತ್ಯಗೊಳ್ಳುತ್ತಿದ್ದವು. ಗಂಡ ಹೆಂಡತಿ ಜಗಳವು ಉಂಡು ಮಲಗುವ ತನಕ ಎಂಬಂತೆ ಜಗಳಗಳು  ದೀರ್ಘ ಕಾಲದ ತನಕ ಎಳೆಯುತ್ತಿರಲಿಲ್ಲ. ಆದರೂ ಕೆಲವೊಮ್ಮೆ ಅವನ ಮಾತಿನ ಒರಟುತನ, ಕೆಟ್ಟ ಬೈಗುಳಗಳಿಂದಾಗಿ ಮಂಜುಳ ಮಾನಸಿಕವಾಗಿ ನೊಂದು ಬಿಟ್ಟಿದ್ದಳು. ಒಮ್ಮೊಮ್ಮೆ ಅವನ ವರ್ತನೆ ಒಗಟಿನಂತೆಯೆ ಭಾಸವಾಗಿ ಅರ್ಥವಾಗಲು  ಕಷ್ಟವಾಗುತ್ತಿತ್ತು. ಅಂದು ಭಾನುವಾರ. ಅವನಿಗಿಷ್ಟದ ಚಿಕನ್ ಬಿರೀಯಾನಿ ಮತ್ತು ಫ್ರೈ ಮಾಡಲು ಚಿಕನ್ ತಂದುಕೊಟ್ಟು ಮಗಳೊಡನೆ ಆಟ  ಆಡುತ್ತ ಟಿ.ವಿ. ನೋಡುತ್ತ ಕುಳಿತಿದ್ದ. ಮಂಜುಳ ಅಡುಗೆ  ಮಾಡುತ್ತಿದ್ದಳು. ಇದ್ದಕ್ಕಿದ್ದ ಹಾಗೆ  ಅಡುಗೆ ಮನೆಗೆ ಬಂದ ಸುರೇಶ ” ಮಂಜು, ನನ್ನ ಫ್ರೆಂಡ್ಸನ ಮೀಟ್ ಮಾಡಿ ಬೇಗ ಬರ್ತಿನಿ. ಒಂದರ್ಧ ಗಂಟೆ ಅಷ್ಟೆ.ಬಂದು ಬಿಡ್ತೀನಿ” ಎಂದ. ” ಏನಂಥಾ ಅರ್ಜೆಂಟ್ ನಾಳೆ  ಮೀಟ್ ಮಾಡಿದ್ದಾಯ್ತು ಬಿಡ್ರಿ” ಎಂದು ಮಂಜುಳ ಹೇಳಿದಳು. ” ಇಲ್ಲ ಕಣೆ. ಬೇಗ ಬಂದು ಬಿಡ್ತೀನಿ. ಅಡುಗೆ ಮಾಡಿ ಮುಗಿಸಿರು .ಬಂದ  ತಕ್ಷಣ ಊಟ ಮಾಡೋಣ” ಎನ್ನುತ್ತಾ ಹೊರಟೇ ಬಿಟ್ಟ. ಮಾಡಿದ  ಅಡುಗೆಯನ್ನೆಲ್ಲಾ ಡೈನಿಂಗ್ ಟೇಬಲ್ ಮೇಲೆ ಜೋಡಿಸಿಟ್ಟು ಸುರೇಶನಿಗಾಗಿ  ಕಾಯುತ್ತ ಕುಳಿತಳು. ಸುರೇಶನ  ಮೊಬೈಲ್ ಗೆ ಫೋನ್ ಮಾಡಿದರೆ ನಾಟ್ ರೀಚಬಲ್. ಸಿಟ್ಟು ಬಂದು ಕುಕ್ಕಿದಳು ಮಗುವಿಗೆ ಊಟ ಮಾಡಿಸಿ ಮಲಗಿಸಿದಳು. ಈಗ ಸುರೇಶನ ಮೊಬೈಲ್ ಗೆ ಫೋನ್ ಮಾಡಿದರೆ ಸ್ವಿಚ್ಡ್ ಆಫ್. ಎಲ್ಲಿಲ್ಲದ ಸಿಟ್ಟು ಉಕ್ಕಿ ಬಂತು. ಹೊಟ್ಟೆ ಹಸಿಯುತ್ತಿದ್ದರೂ ಇಬ್ರು ಜೊತೆಯಲ್ಲಿ ಮಾಡೋಣವೆಂದು ಸುಮ್ಮನಾದಳು. ಗಂಟೆ ಐದಾದರು ಸುರೇಶನ ಸುಳಿವಿಲ್ಲ. ಫೋನ್ ಸ್ವಿಚ್ಡ್ ಆಫ್ ಮನದಲ್ಲಿ ಏನೇನೋ ಕೆಟ್ಟ ಯೋಚನೆಗಳು ಬರತೊಡಗಿ ಯಾಕೋ ಭಯದಿಂದ ದಿಕ್ಕು ತೋಚದಂತಾಯಿತು. ಅಮ್ಮನಿಗೆ ಫೋನ್ ಮಾಡಿ ಹೇಳೋಣ ಎಂಬ ಯೋಚನೆ ಬಂದ ಬೆನ್ನಲ್ಲೇ ಅವರು ಗಾಬರಿಯಾಗುತ್ತಾರೆಂದು ಬೇಡವೆನಿಸಿ ಸುಮ್ಮನಾದಳು.ಆದರೂ ಮನಸ್ಸು ತಡೆಯದೆ  ನಾದಿನಿ ಹೇಮಾಗೆ ಫೋನ್ ಮಾಡಿ  ವಿಷಯವನ್ನು ಹೇಳುತ್ತಲೇ ಅಳಲು ಶುರುಮಾಡಿದಳು. ಆಗ ಫೋನ್ ಕೈಗೆತ್ತಿಕೊಂಡ ಅವಳ ಮಾವ “ನಾವು ಈಗಲೇ ಹೊರಟು ಬರುತ್ತೇವೆ. ಧೈರ್ಯವಾಗಿರು  ಗಾಬರಿಯಾಗಬೇಡಮ್ಮ” ಎನ್ನುತ್ತಾ  ಅವಳ ಅತ್ತೆಯ ಕೈಗೆ ಫೋನ್ ಕೊಟ್ಟರು. ಅತ್ತೆಯೂ ಸಮಾಧಾನ ಹೇಳಿದರು. ಮನಸ್ಸಿಗೆ ಒಂದಿಷ್ಟು ನಿರಾಳ ಅನಿಸಿದಾಗ ಹೊಟ್ಟೆ ಚುರುಗುಟ್ಟ ತೊಡಗಿತು. ಊಟ ಮಾಡಲು ಮನಸ್ಸಾಗದೆ ಟೀ ಕುಡಿದಳು. ತೊಡೆ ಮೇಲೆ ಮಗುವನ್ನು ಮಲಗಿಸುತ್ತ ಕೂತಿದ್ದಳು. ಒಂಭತ್ತು ಗಂಟೆ ಸುಮಾರಿಗೆ  ತುಮಕೂರಿನಿಂದ ಅತ್ತೆ ಮಾವ ನಾದಿನಿಯು ಬಂದರು. ಅತ್ತೆ  ಒಳಗೆ ಬಂದ ತಕ್ಷಣವೆ ಮಂಜುಳನಿಗೆ ಬಲವಂತ ಮಾಡಿ ಊಟ ತಂದು ಕೊಟ್ಟರು. ಅವಳು  ಮಾತ್ರ ಒಂದಿಷ್ಟು ಮೊಸರನ್ನ ಮಾತ್ರ ಕಲೆಸಿ ತಿಂದಳು ಹೇಮಾ ಮಗುವಿನೊಡನೆ ಆಟವಾಡುತ್ತ ಕುಳಿತುಬಿಟ್ಟಳು “ಅಲ್ಲಾ ಚಿಕನ್ ತಂದುಕೊಟ್ಟು ಅಡುಗೆಮಾಡು ಅರ್ಧ ಗಂಟೆಯೊಳಗೆ ಬರ್ತಿನಿ ಅಂತ ಹೇಳಿಹೋದವನು ರಾತ್ರಿ ಒಂಭತ್ತು ಗಂಟೆ  ಆದ್ರೂ ಬರಲಿಲ್ಲ ಅಂದ್ರೆ ಏನರ್ಥ? ಆ ಹುಡುಗಿ ಏನು ತಿಳ್ಕಬೇಕು. ಯಾಕಿಂಗಾಗ್ಬಿಟ್ಟ ಸುರೇಶ” ಎಂದು ಅಲವತ್ತುಕೊಂಡರು. “ನಿಮ್ಮಪ್ಪ ನಿಮ್ಮಮ್ಮನಿಗೆ ಫೋನ್ ಮಾಡಿ ವಿಷಯ ತಿಳಿಸಿದಿಯೇನಮ್ಮ” ಎಂದು ಮಾವನವರು ಕೇಳಿದಾಗ ಮಂಜುಳ “ಇಲ್ಲ” ಎಂದಳು. “ಈಗ ನಾವು ಬಂದಿದೀವಲ್ವ. ಬೆಳಿಗ್ಗೆ ತನಕ ನೋಡೋಣ” ಎಂದು ಮಾವನವರು ಹೇಳಿದಾಗ ” ಎಲ್ಲರಿಗು ತಾಕಲಾಟ ತಂದಿಟ್ಟು ಎಲ್ಲೋಗಿದ್ದಾನಪ್ಪ ಇವನು” ಎಂದು ಅತ್ತೆಯು ಹೇಳುವಷ್ಟರಲ್ಲಿ ಬಾಗಿಲು ತಟ್ಟಿದ ಶಬ್ದ. ಅರೆಕ್ಷಣ ನಿಶ್ಯಬ್ಧ. ” ಮಂಜು, ಮಂಜು”  ಎಂಬ ಸುರೇಶನ ಧ್ವನಿ ಕೇಳಿದ ಕ್ಷಣ ಮಂಜುಳ ಧಡಕ್ಕನೆದ್ದು ಬಾಗಿಲು ತೆಗೆದಳು. ಒಳಗೆ ಬಂದ ಸುರೇಶ ಅಪ್ಪ ಅಮ್ಮ ತಂಗಿಯನ್ನು ನೋಡಿ ಅವಾಕ್ಕಾಗಿ ನಿಂತು ” ಏನಮ್ಮಾ ಇದ್ದಕ್ಕಿದ್ದಂತೆ ಬಂದು ಬಿಟ್ರಿ” ಎಂದಾಗ “ಬರೋ ಹಾಗೆ ಮಾಡಿದ್ದು ನೀನೇ. ಬರಲೇ ಬೇಕಾಯ್ತು” ಎಂದರು ಸುಶೀಲಮ್ಮ‌.” ನಾನೇನು  ಮಾಡಿದೆಅಂಥಾದ್ದು” ಎಂದು ಸುರೇಶ್ ಹೇಳಿದಾಗ “ಅರ್ಧಗಂಟೆ ಒಳಗೆ ಬಂದು ಬಿಡ್ತೀನಿ ಅಂತ ಹೋದವನು ರಾತ್ರಿ ಹತ್ತು ಗಂಟೆ ಆದ್ರು ಬರದಿದ್ರೆ ಆ ಹುಡುಗಿ ಏನು ತಿಳ್ಕಬೇಕು. ಗಾಬರಿ ಆಗ್ಬಿಟ್ಟು ನಮಗೆ ಫೋನ್ ಮಾಡಿದಳು. ನಮಗೂ ಗಾಬರಿಯಾಗಿ ಬಂದ್ಬಿಟ್ಟವಪ್ಪ. ಎಲ್ಲೋಗಿದ್ದೆ ಇಷ್ಟು ಹೊತ್ತು. ರಾತ್ರಿ ಹತ್ತು ಗಂಟೆ ಆದ್ರೂ ಬರದೇ ಇರೋ ಅಂಥಾ ಕೆಲಸ ಏನಿತ್ತಪ್ಪ? ನೀನ್ಯಾಕೊ ಹಿಂಗಾದೆ ? ನಿನಗೆ ಹೇಳೋರು ಕೇಳೋರು ಯಾರು ಇಲ್ಲ ಅಂದುಕೊಂಡ್ಯಾ?  ಎಂದು ಜೋರುಧ್ವನಿ ಮಾಡಿ ಕೃಷ್ಣಮೂರ್ತಿ ಕೇಳಿ “ನಮಗೆ ಫೋನ್ ಮಾಡೋ ಬದ್ಲು ಅವಳು ಅವರಪ್ಪ ಅಮ್ಮನಿಗೆ ಫೋನ್ ಮಾಡಿದ್ರೆ ಏನಾಗ್ತಿತ್ತು ಅಂತ ಯೋಚನೆ ಮಾಡು” ಎನ್ನಲು ” ಫ್ರೆಂಡ್ಸ್ ಬಹಳ ಬಲವಂತ ಮಾಡಿದ್ರು. ಎಲ್ಲರೂ ನಂದಿಹಿಲ್ಸ್ ಗೆ ಹೋಗಿದ್ವಿ ಅಷ್ಟಕ್ಕೆಲ್ಲ ಇಷ್ಟು ರಾದ್ದಾಂತ ಬೇಕಿತ್ತ ಫೋನ್  ಮಾಡಿ ಕರೆಸಿಕೊಳ್ಳ ಅಂಥಾದ್ದು ಏನಾಯ್ತು ” ಎನ್ನುತ್ತ ಸುರೇಶ  ಮಂಜುಳ ಕಡೆ ನೋಡುತ್ತ ಹೇಳಿದಾಗ ರೇಗಿದ ವೆಂಕಟೇಶ್  “ಆ ಹುಡುಗಿಗೆ ಒಂದು ಫೋನ್ ಮಾಡಿದ್ರೆ ಅವಳ್ಯಾಕೆ ಗಾಬರಿ ಆಗ್ತಿದ್ದಳು. ಒಂದು ಮೆಸೇಜ್ ಹಾಕಕ್ಕೆ ಏನಾಗಿತ್ತು? ಫೋನ್ ಸ್ವಿಚ್ ಆಫ್ ಮಾಡ್ಕಂಡ್ರೆ ಏನರ್ಥ?” ನಾವ್ ಬರೋ ತನ್ಕ ಊಟಾನೂ ಮಾಡ್ದೆ ಕಾದುಕೊಂಡು ಕೂತಿದ್ದಳು. ಅದರ ಪರಿಜ್ಞಾನ ಇದ್ಯಾ”ಎಂದಾಗ ಮರು ಮಾತನಾಡದೆ  ರೂಮಿಗೆ ಹೋದನು.”ಅಣ್ಣಾ, ಬಾರೋ ಊಟಕ್ಕೆ “ಎಂದು ಕರೆಯಲು ಬಂದಾಗ” ನಂದು ಊಟ ಆಗಿದೆ. ನೀವು ಮಾಡ್ರಿ” ಎಂದು ಹೇಳಿ ಮಲಗಿದನು. ಆ ರಾತ್ರಿ ಗಂಡ ಹೆಂಡತಿಯ ನಡುವೆ ಮೌನ  ರಾಜ್ಯವಾಳಿತ್ತು.  ಹೇಮಾಳಿಗೆ ರಜೆಗಳು ಹೆಚ್ಚಿಲ್ಲವೆಂದು ಮಾರನೆಯ ದಿನ ತಿಂಡಿ ತಿಂದು ಹೊರಟರು. ಹೊರಡುವಾಗ ಕೃಷ್ಣಮೂರ್ತಿ ಮಗನಿಗೆ ಕಿವಿಮಾತುಗಳನ್ನು ಹೇಳಿದರು. ಮತ್ತೊಮ್ಮೆ ಇಂಥ ಘಟನೆಗಳು ಮರುಕಳಿಸಬಾರದೆಂದು ತಾಕೀತು ಮಾಡಿದ್ರು. ಅಂದು ಸಂಜೆ ಆಫೀಸಿನಿಂದ ಬಂದ ಸುರೇಶ ಹೆಂಡತಿ ಹಾಗು ಮಗುವನ್ನು ಹೊರಗಡೆ ಊಟಕ್ಕೆ ಕರೆದು ಕೊಂಡು ಹೋದ. ಸಿಡುಕು, ಕೂಗಾಟ ಕಡಿಮೆಯಾಗುತ್ತ ಬಂದಿದ್ದು ಮಂಜುವಿಗೆ ನೆಮ್ಮದಿ ತಂದಿತು. ಆಫೀಸ್ ಗೂ ಮನೆಗೂ ಬಹು ದೂರವಿದ್ದ ಕಾರಣ ಆಫೀಸ್  ಹತ್ತಿರವೇ ಮನೆ ಮಾಡುವ ಯೋಚನೆಯಿತ್ತು ಇಬ್ಬರಿಗೂ. ಎರಡು ಬೆಡ್  ರೂಂ ಹೊಂದಿರುವ ಹೊಸ ಮನೆಯೊಂದು ಖಾಲಿ ಇದೆಯೆಂದು ತಿಳಿದು ಮನೆ ನೋಡಿಕೊಂಡು ಬರೋಣ ಬಾ ಎಂದು  ಮಂಜುವನ್ನು ಜೊತೆಯಲ್ಲೇ ಕರೆದೊಯ್ದ. ಪಕ್ಕದಲ್ಲೇ ಹೊಂದಿಕೊಂಡಿದ್ದ ಎರಡು ಮನೆಗಳು ಹೊಸ ರೀತಿಯ ಎಲ್ಲಾ ಸೌಲಭ್ಯಗಳನ್ನು ಹೊಂದಿದ್ದು ಇಬ್ಬರಿಗೂ ಇಷ್ಟವಾಯಿತು. ಪಕ್ಕದ ಮನೆಯವರು ಊರಿಗೆ ಹೋದ ಕಾರಣ ಬೀಗ ಹಾಕಿತ್ತು. ಅಲ್ಲಿಂದಲೇ ಮನೆ ಮಾಲೀಕರಿಗೆ ಫೋನ್ ಮಾಡಿ ಸುರೇಶ ನಾಳೆಯೆ ಮುಂಗಡ ಹಣವನ್ನು ಕೊಡುವುದಾಗಿ ತಿಳಿಸಿದ. ಮಗು ಇರುವುದರಿಂದ  ಹೊಸ  ಮನೆಗೆ  ಸಾಮಾನುಗಳನ್ನು ಜೋಡಿಸಲು ಕಷ್ಟವಾಗುತ್ತೆ ಎಂದು ಸುಶೀಲಮ್ಮ ಹಿಂದಿನ ದಿನವೇ ಬಂದರು. ಎಲ್ಲಾ ಹೊಂದಿಸಿ ಎರಡು ದಿನ ಕಳೆಯುವಷ್ಟರಲ್ಲಿ ಪಕ್ಕದ ಮನೆ ಒಡತಿಯು ಇಬ್ಬರು ಮಕ್ಕಳೊಡನೆ ತಾವಾಗಿಯೆ ಬಂದು ತನ್ನ ಹೆಸರು ಲತಾ ಎಂದು ರಕ್ಷಿತ ಮತ್ತು ರಾಘವೇಂದ್ರ ಮಕ್ಕಳೆಂದು ತಮ್ಮ ಪರಿಚಯ ಮಾಡಿಕೊಂಡು ಅವಳ ಪತಿ ಬ್ಯಾಂಕ್ ಮ್ಯಾನೇಜರ್ ಎಂದು ತಿಳಿಸಿದರು. ಆಗ ಅಲ್ಲೆ ಇದ್ದ ರಕ್ಷಿತ ” ಆಂಟೀ ನನಗೆ ನಿಮ್ಮ ಹೆಸರು ಗೊತ್ತು” ಎಂದಳು. “ಹೌದಾ ಹೇಳು ನೋಡೋಣ”  ಮಂಜುಳ ಹೇಳಿದಾಗ ” ನಿಮ್ಮ ಹೆಸರು ವಿಜಯಾ ಅಲ್ವಾ” ಎಂದಳು. ” ನನ್ನ ಹೆಸರು ಮಂಜುಳ. ನಿನಗೆ ವಿಜಯಾ ಅಂತ ಹೇಗೆ ಗೊತ್ತಾಯ್ತು”ಎಂದಳು. ” ಅವತ್ತು ಮನೆ ಖಾಲಿಯಿತ್ತಲ್ಲ ಅವಾಗ ಅಂಕಲ್ ಜೊತೆ ನೀವು ಬಂದಿದ್ದಾಗ ಅಂಕಲ್ ವಿಜಯಾ ಅಂತ ಹೇಳ್ತಿದ್ದರು” ಎಂದರು. ತಕ್ಷಣವೇ ಲತಾ “ಇವರಲ್ಲ ಕಣೆ ಬೇರೆಯವ್ರು ” ಎಂದು ಹೇಳಿ ಮಕ್ಕಳನ್ನು ಮನೆಗೆ ಕಳಿಸಿದಳು. ಮಂಜುಳ “ನಾವು ಮನೆ ನೋಡಲು  ಬಂದಾಗ ನೀವಿರಲಿಲ್ಲ” ಎಂದಾಗ ಲತ ಅವರೆಲ್ಲ ಅವಳ  ತವರು ಮನೆ ದಾವಣಗೆರೆಗೆ ಹೋಗಿದ್ದರು ಎಂದು ಹೇಳಿ ಮನೆಗೆ ಹೊರಟಳು. ಎರಡು ದಿನ ಕಳೆದ ಮೇಲೆ ಸುಶೀಲ ಊರಿಗೆ ಹೊರಟರು. ಉಳಿದ ಕೆಲಸಗಳನ್ನು ಮುಗಿಸುವ ಕಾರ್ಯದಲ್ಲಿ ಸುರೇಶ ಸಹ ಹೆಂಡತಿಗೆ ನೆರವು ನೀಡಿದನು ಹೊಸ ಪರಿಸರದಲ್ಲಿ ತನ್ನ ಗಂಡನ ವರ್ತನೆಯಲ್ಲಾಗುತ್ತಿದ್ದ ಬದಲಾವಣೆ ನೋಡಿ ಮಂಜುಳನಿಗೆ ನಿರಾಳ.

ತಟ್ಟಿದ ತಾಳ Read Post »

You cannot copy content of this page

Scroll to Top