ಒಳ ಮನಸು ವಿಸ್ತರಿಸಿದ ಕತೆಗಾರ್ತಿ “ಬರವಣಿಗೆ ಮೂಲಕ ಅಸಹನೀಯ ಮೌನವೊಂದನ್ನು ಮುರಿಯುತ್ತಿದ್ದೇನೆ ಅನಿಸುತ್ತಿದೆ’ ಸುನಂದಾ ಕಡಮೆ ಕತೆಗಾರ್ತಿ ಸುನಂದಾ ಕಡಮೆ 1967 ರಲ್ಲಿ ಉತ್ತರಕನ್ನಡದ ಅಂಕೋಲಾ ತಾಲೂಕಿನ ಅಲಗೇರಿಯಲ್ಲಿ ಜನಿಸಿದ್ದು. ಪಕ್ಕದ ಭಾವಿಕೇರಿಯಲ್ಲಿ ಪ್ರೌಢ ಶಿಕ್ಷಣ, ಹುಬ್ಬಳ್ಳಿಯ ಮಹಿಳಾ ಕಾಲೇಜಿನಲ್ಲಿ ಬಿ.ಕಾಂ ಪದವಿಯ ನಂತರ ಕರ್ನಾಟಕ ವಿ.ವಿಯಲ್ಲಿ ಕನ್ನಡ ಎಂ.ಎ. ಸ್ನಾತಕೋತ್ತರ ಪದವಿ ಪಡೆದರು. ಕವಿ ಪ್ರಕಾಶ ಕಡಮೆಯವರೊಂದಿಗೆ ಹುಬ್ಬಳ್ಳಿಯಲ್ಲಿ ನೆಲೆಸಿದ್ದಾರೆ. ಕಾವ್ಯಾ ಮತ್ತು ನವ್ಯಾ ಎಂಬಿಬ್ಬರು ಮಕ್ಕಳು. 1997ರಲ್ಲಿ ಬರವಣಿಗೆ ಆರಂಭಿಸಿದರು. ಕನ್ನಡ ಸಾಹಿತ್ಯದಲ್ಲಿ ತಮ್ಮದೇ ಹೆಜ್ಜೆ ಗುರುತುಗಳನ್ನು ಸುನಂದಕ್ಕ ಮೂಡಿಸಿದ್ದಾರೆ. ಪುಟ್ಟ ಪಾದದ ಗುರುತು (2005),ಗಾಂಧೀ ಚಿತ್ರದ ನೋಟು (2008), ಕಂಬಗಳ ಮರೆಯಲ್ಲಿ (2013), ತುದಿ ಮಡಚಿಟ್ಟ ಪುಟ(2016) ಇವರ ಕಥಾ ಸಂಕಲನಗಳು. ಬರೀ ಎರಡು ರೆಕ್ಕೆ ಕನರ್ಾಟಕ ಸಾಹಿತ್ಯ ಅಕಾಡೆಮಿ ಬಹುಮಾನ ಪಡೆದ ಕಾದಂಬರಿಯೂ ಸೇರಿದಂತೆ 13 ಸೃಜನಾತ್ಮಕ ಕೃತಿಗಳು ಈಗಾಗಲೇ ಹೊರಬಂದಿವೆ. ಪ್ರಶಸ್ತಿಗಳು : ಕರ್ನಾಟಕ ಸಾಹಿತ್ಯ ಅಕಾಡೆಮಿ ಬಹುಮಾನ, ಬಾಲ ವಿಕಾಸ ಅಕಾಡೆಮಿ ಬಹುಮಾನ, ಬೆಸಗರಹಳ್ಳಿ ರಾಮಣ್ಣ ಕಥಾ ಪುಸ್ತಕ ಪ್ರಶಸ್ತಿ, ಡಿ.ಎಸ್.ಕರ್ಕಿ ಕಾವ್ಯ ಬಹುಮಾನ, ಶಾಂತಾದೇವಿ ಕಣವಿ ಕಥಾ ಪುರಸ್ಕಾರ, ಮಲ್ಲಿಕಾ ಪ್ರಶಸ್ತಿ, ಗೌರಮ್ಮ ಹಾರ್ನಹಳ್ಳಿ ಪ್ರಶಸ್ತಿ, ಸುಧಾ ಮೂರ್ತಿ ಕಥಾ ಪ್ರಶಸ್ತಿ, ಹಾಗೂ ಎಂ.ಕೆ.ಇಂದಿರಾ ಪ್ರಶಸ್ತಿ, ಸುಶೀಲಾ ಶೆಟ್ಟಿ ಕಥಾ ಪ್ರಶಸ್ತಿ, ಗುಡಿಬಂಡೆ ಪೂರ್ಣಿಮಾ ಕಾವ್ಯ ಬಹುಮಾನ, ಅನುಪಮಾ ನಿರಂಜನ ಕಥಾ ಪ್ರಶಸ್ತಿ, ಸೇರಿದಂತೆ ಹದಿನೆಂಟು ಪುರಸ್ಕಾರಗಳು ಕಥಾ,ಕವಿತೆ ಪುಸ್ತಕಗಳಿಗೆ ಸಂದಿವೆ. ಬರೀ ಎರಡು ರೆಕ್ಕೆ’ ಕಾದಂಬರಿಯು ಮುಂಬೈ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಎಂ.ಎ ಮೊದಲ ವರ್ಷಕ್ಕೆ ಪಠ್ಯಪುಸ್ತಕವಾಗಿದೆ. ಮಹಾರಾಷ್ಟ್ರ ಸೆಕೆಂಡರಿ ಬೋರ್ಡನ ಕನ್ನಡ ಹತ್ತನೇ ವರ್ಗಕ್ಕೆ ಇವರ ‘ಪುಟ್ಟ ಪಾದದ ಗುರುತು’ ಕತೆಯೊಂದು ಪಠ್ಯವಾಗಿದೆ. ವಿಜಯಪುರ ಅಕ್ಕಮಹಾದೇವಿ ಮಹಿಳಾ ವಿ.ವಿ ಬಿ.ಎ ಮೊದಲ ಸೆಮಿಸ್ಟರ್ ಗೆ ಇವರ ‘ಸರಸ್ವತಿಯ ಫೆಸ್ಬುಕ್ ಪ್ರಸಂಗ’ ಕತೆಯು ಪಠ್ಯವಾಗಿದೆ. ಇವರ ಹಲವು ಕತೆ, ಲೇಖನ ಹಾಗೂ ಕವನಗಳು- ಕೊಂಕಣಿ, ಮರಾಠಿ, ತಮಿಳು, ತೆಲುಗು, ಮಲಯಾಳಂ, ಉರ್ದು, ಹಿಂದಿ ಹಾಗೂ ಇಂಗ್ಲೀಷ್ ಭಾಷೆಗಳಿಗೆ ಅನುವಾದಗೊಂಡಿವೆ. ಹಲವು ಮಕ್ಕಳ ಕತೆಗಳನ್ನು ಇವರು ಇಂಗ್ಲೀಷಿನಿಂದ ಕನ್ನಡಕ್ಕೆ ಅನುವಾದಿಸಿದ್ದಾರೆ. ಸಂದರ್ಶನ ಪ್ರಶ್ನೆ : ಕತೆ ಗಳನ್ನು ಯಾಕೆ ಬರೆಯುತ್ತೀರಿ ? ವರ್ಷಕ್ಕೊಮ್ಮೆಯಾದರೂ ಕಡಲಿನಲ್ಲಿ ಮಿಂದು ಬಂದರೆ ಯಾವುದೇ ಚರ್ಮದ ಖಾಯಿಲೆಗಳಿದ್ದರೂ ವಾಸಿಯಾರುತ್ತದೆ ಎಂಬ ನಂಬಿಕೆ ನಮ್ಮ ಕಡೆಯವರದು. ಅಂತೆಯೇ ನಮ್ಮ ಮನಸ್ಸಿನ ಹಲವು ಖಾಯಿಲೆಗಳಿಗೆ ಈ ಓದು ಹಾಗೂ ಬರೆವಣಿಗೆ ಒಂದು ಹಂತದಲ್ಲಿ ಔಷಧಿಯಂತೆ ಎರವಾಗುತ್ತಿದೆ ಎಂಬುದು ನನ್ನ ನಂಬಿಕೆ. ನನ್ನಿಂದ ಹುಟ್ಟಿದ ಆರಂಭಿಕ ಬರವಣಿಗೆಗಳು ಕೌಟುಂಬಿಕವಾಗಿ ನನ್ನ ಅಸ್ತಿತ್ವವನ್ನು ಗುರುತಿಸಿಕೊಳ್ಳಲು ಮತ್ತು ಸಾಮಾಜಿಕವಾಗಿ ವ್ಯಕ್ತಿತ್ವವನ್ನು ಕಟ್ಟಿಕೊಳ್ಳಲು ಮಾತ್ರ ಸೀಮಿತವಾಗಿತ್ತು. ಆದರೆ ನಂತರದ ದಿನಗಳಲ್ಲಿ ಅದೊಂದು ಅಪ್ಪಟ ಸಾಮಾಜಿಕ ಜವಾಬ್ದಾರಿಯೆಂದು ನನಗೆ ಮನವರಿಕೆಯಾಗುತ್ತ ಬಂತು. ಬರೆವಣಿಗೆ ಕೇವಲ ಮನರಂಜನೆಗಾಗಿ ಅಥವಾ ಮೈ ಮರೆಯುವದಕ್ಕಾಗಿ ಅಲ್ಲ, ಬರೆಹ ಒಂದು ಮನೋಧರ್ಮ. ಈ ವ್ಯವಸ್ಥೆ ನನಗೆ ಸುರುಳೀತ ಮಾತಾಡಲು ಬಿಡುತ್ತಿಲ್ಲ, ಹಾಗಾಗಿ ಬರೆವಣಿಗೆಯ ಮೂಲಕ ಆ ಅಸಹನೀಯ ಮೌನವೊಂದನ್ನು ಮುರಿಯುತ್ತಿದ್ದೇನೆ ಅನಿಸುತ್ತಿದೆ. ಈ ಕರಾಳ ವ್ಯವಸ್ಥೆಯ ಸಾಮಾಜಿಕ ಪರದೆಯ ಹಿಂದೆ ನಲುಗುತ್ತಿರುವ ಜೀವಿಗಳ ಚಿತ್ರಗಳನ್ನು ಎಳೆತಂದು ರಂಗಸ್ಥಳಕ್ಕೆ ಹಾಕುವುದಷ್ಟೇ ಸದ್ಯ ನನ್ನ ಕೈಯಲ್ಲಿ ಸಾಧ್ಯವಾಗುವ ಕೆಲಸ. ಆದರೆ ಜನಸಮುದಾಯದ ನಡುವೆ ಹೋಗಿ ನಿಂತು ಅವರ ಚಡಪಡಿಕೆ ಸಂಕಷ್ಟ ಆತಂಕಗಳಿಗೆ ಕಣ್ಣಾಗುವ ಕಿವಿಯಾಗುವ ಮಿಡಿಯುವ ಸಾಂತ್ವನದ ಮಡಿಲು ನೀಡುವ ಯಾವುದಾದರೂ ಸಹೃದಯಿ ಜೀವಿಯ ಮಾನವೀಯ ಮನಸ್ಸಿನ ಬದ್ಧತೆ ನಮ್ಮೆಲ್ಲ ಬರೆವಣಿಗೆಗಳಿಗಿಂತ ಬರಹಗಾರನಿಗಿಂತ ಮೀರಿದ ಒಂದು ಅನನ್ಯತೆ ಎಂಬ ಎಚ್ಚರದ ಸ್ಥಿತಿ ಕೂಡ ನನ್ನೊಳಗಿದೆ. ಪ್ರಶ್ನೆ : ಕತೆ ಅಥವಾ ಕವಿತೆ ಹುಟ್ಟುವ ಕ್ಷಣ ಯಾವುದು ? ಅನುದಿನವೂ ಸವೆದು ಸುಕ್ಕಾಗುವ ಮಾನವತೆಯ ಬಿಕರಿ, ಭಾವನೆಗಳ ವಿಕ್ರಯ, ಎಂಥದೋ ಬಿಕ್ಕಳಿಕೆ, ಯಾರದೋ ಚಿತ್ಕಾರಗಳು ಮನಸ್ಸಿನ ಮೂಲೆಯಲ್ಲೆಲ್ಲೋ ಅಡಗಿಕೊಂಡು ಇರಿಯುತ್ತಿರುತ್ತದೆ. ಆಗ ನಾನು ಏನು ಮಾಡಲೂ ತೋಚದ ಸಂದಿಗ್ಧತೆಯಲ್ಲಿ ಅಸಹಾಯಕಳಾಗಿ ನಿಂತು ಈ ಬರೆವಣಿಗೆ ಮುಂದುವರೆಸುತ್ತೇನೆ, ಇದು ನನಗೆ ಅನಿವಾರ್ಯದ ಪಯಣ. ಸಮಾಜದ ಆಗುಹೋಗುಗಳ ಕುರಿತು ಚಿಂತನೆ ಮತ್ತು ಮನುಷ್ಯ ಸಂಬಂಧಗಳ ಕುರಿತಾದ ಆರ್ದ್ರತೆ ಇಲ್ಲದೇ ಹೋದರೆ ಬರೆವಣಿಗೆ ಸಾಧ್ಯವಿಲ್ಲ. ಯಾವುದೇ ಕಲೆಗಳಲ್ಲಿ ತೊಡಗಿಕೊಳ್ಳುವುದು ಅಥವಾ ಸಮಾಜಸೇವೆ ಕೂಡ ಅಂಥ ಆರ್ದ್ರ ಮನಸ್ಸಿನ ಲಕ್ಷಣವೇ ಆಗಿದೆ. ನಮ್ಮ ಅನುಭವದಾಳದಲ್ಲಿ ತಳಮಳಿಸುತ್ತಿರುವ ಭಾವಗಳು ಹೊರಬರಲು ಒಂದು ಸಂದರ್ಭಕ್ಕಾಗಿ ಕಾಯುತ್ತಿರುತ್ತವೆ. ಇಲ್ಲವಾದರೆ ಬರೆಯಲು ಕೂತೊಡನೆ ಅವೆಲ್ಲ ಯಾಕೆ ಅಷ್ಟು ದರ್ದನಲ್ಲಿ ಹೊರಬರಬೇಕು? ಇಳಿಜಾರಿಗೆ ನೀರು ಯಾವ ಅಡೆತಡೆಯೂ ಇಲ್ಲದೇ ರಭಸದಲ್ಲಿ ಹರಿದಷ್ಟೇ ಸಹಜ ಕ್ರಿಯೆ ಅದು. ಮೇಲಿನಿಂದ ನೀರು ಇನ್ನೂ ಹರಿದು ಬರುತ್ತಲೇ ಇದ್ದರೆ ಅದು ತಾನೇ ತನ್ನ ಅವಕಾಶವನ್ನು ಹಿಗ್ಗಿಸಿಕೊಳ್ಳುತ್ತ ಬೆಳೆಯುತ್ತದೆ ಕಾದಂಬರಿಯೊಂದು ಹೀಗೆ ರೂಪುಗೊಳ್ಳುತ್ತದೆ ಅಂದುಕೊಂಡಿರುವೆ. ಪ್ರಶ್ನೆ: ನಿಮ್ಮ ಕತೆಗಳ ವಸ್ತು ವ್ಯಾಪ್ತಿ ಹೆಚ್ಚಾಗಿ ಯಾವುದು ? ಪದೇ ಪದೇ ಕಾಡುವ ವಿಷಯ ಯಾವುದು ? ಸ್ತ್ರೀಯಾಗಿರುವದಕ್ಕೆ ಮೊದಲು ಕಾಡುವುದು ಸ್ತ್ರೀ ಸಂವೇದನೆಯ ಸಂಗತಿಗಳೇ. ಮೊದಲೆಲ್ಲ ಕೌಟುಂಬಿಕ ನೆಲೆಯಲ್ಲೇ ಏನಾದರೂ ಆಳವಾದದ್ದನ್ನು ಹೇಳಬೇಕು ಅಂದುಕೊಳ್ಳುತ್ತಿದ್ದೆ. ಕೌಟುಂಬಿಕತೆಯನ್ನೇ ಪ್ರಧಾನವಾಗಿರುವ ಕತೆಗಳು, ಆಪ್ತವಾದ ಗ್ರಹಿಣೀಗೀತ ಅಂತೆಲ್ಲ ಕೆಲವು ವಿಮರ್ಶೆಗಳು ಬಂದವು, ಆ ಮಾದರಿಯನ್ನು ಮುರಿಯಬೇಕು ಅಂತಲೇ ಆನಂತರದ ಕತೆಗಳನ್ನು ಮುದ್ದಾಮಾಗಿ ಹೊರಜಗತ್ತಿನಲ್ಲೇ ನಡೆಯುವಂತೆ ಕಟ್ಟತೊಡಗಿದೆ. ನನ್ನನ್ನು ಸದಾ ಕಾಡುವ ವಿಷಯವೆಂದರೆ ಮುದ್ದು ಬಾಲಕಿಯರ ಮೇಲೆ ಹೃದಯವಿದ್ರಾವಕವಾಗಿ ನಡೆವ ಅತ್ಯಾಚಾರ ಪ್ರಕರಣಗಳು. ಬರೀ ಕಾನೂನಿನಿಂದ ಇದರ ಸಂಪೂರ್ಣ ಪರಿಹಾರ ಸಾಧ್ಯವಿಲ್ಲ, ಅದಕ್ಕೆ ತುತ್ತಾಗುವವರಿಗೆ ಅರಿವು ಮೂಡಿಸುವದರ ಜೊತೆಗೆ, ಅದನ್ನು ಎಸಗುವವರ ಮನಸ್ಥಿತಿಗಳನ್ನು ತಿದ್ದುವುದು ಹೇಗೆ ಎಂಬ ಕುರಿತು ನಾವಿಂದು ಯೋಚಿಸಬೇಕಾಗಿದೆ. ಅವರವರ ಸ್ವತಂತ್ರ ಅವರವರಿಗೆ ಲಭ್ಯವಾಗುವ ನಿಟ್ಟಿನಲ್ಲಿ ಭಿನ್ನ ಭಿನ್ನವಾಗಿರುವುದು ಪ್ರಕೃತಿ ಧರ್ಮವನ್ನು ಬಾಲ್ಯದಲ್ಲೇ ಬಾಲಕರಿಗೂ ಮನದಟ್ಟುಮಾಡಿಕೊಡಬೇಕಿದೆ. ಹೀಗೇ ಕಾಡುವ ಇನ್ನೊಂದು ಪ್ರಕರಣವೆಂದರೆ, ನಮ್ಮ ಹುಬ್ಬಳ್ಳಿಯಲ್ಲಿ ಎಸ್ಸೆಸೆಲ್ಸಿ ಹಾಗೂ ಪಿಯೂಸಿ ವಾರ್ಷಿಕ ಪರೀಕ್ಷೆಯ ರಿಸಲ್ಟ್ ಹೊರಬೀಳುವ ದಿನ ನಗರದ ಎಲ್ಲ ಕೆರೆ ಬಾವಿಗಳಿಗೆ ಪೊಲೀಸ್ ಕಾವಲು ಹಾಕುತ್ತಾರೆ! ಅಂದರೆ ನಾವು ನಮ್ಮ ಮಕ್ಕಳ ಸುಮಧುರ ಬಾಲ್ಯವನ್ನು ಯಾವ ದಾರುಣತೆಗೆ ಒಯ್ದು ನಿಲ್ಲಿಸಿದ್ದೇವೆ ? ನಮ್ಮ ಪಾಲಕರ ಶಿಕ್ಷಕರ ಒಟ್ಟಾರೆ ಸಾಮಾಜಿಕ ಮನಸ್ಥಿತಿಗಳು ಎಲ್ಲಿಗೆ ಹೋಗಿ ತಲುಪಿವೆ? ಅಥವಾ ಇದು ಇಂದಿನ ಶಿಕ್ಷಣ ಪದ್ದತಿಯ ಲೋಪವೋ? ಈ ಕಾರಣಕ್ಕಾಗಿ ಇತ್ತೀಚೆಗೆ ನಮ್ಮ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟದಿಂದ ಶಾಲಾ-ಕಾಲೇಜು ಮಕ್ಕಳಿಗೆ ‘ಅರಿವಿನ ಪಯಣ’ ಕಾರ್ಯಕ್ರಮ ಮಾಡುತ್ತಿದ್ದೇವೆ. ಸಮಾಜದಲ್ಲಿರುವ ಅನೇಕ ತಾರತಮ್ಯ ಹಾಗೂ ಅಸಮಾನತೆಗಳೇ ಈ ಎರಡು ಸಮಸ್ಯೆಗಳ ಮೂಲ ಬೇರಾಗಿರುವದರಿಂದ, ಆ ಕುರಿತು ಮಕ್ಕಳಲ್ಲಿ ಕಿಂಚಿತ್ತಾದರೂ ಅರಿವಿನ ಬೆಳಕನ್ನು ಮೂಡಿಸುವದು ನಮ್ಮ ಅರಿವಿನ ಪಯಣದ ಉದ್ದೇಶ. ಪ್ರಶ್ನೆ : ಕತೆ ಕವಿತೆಗಳಲ್ಲಿ ಬಾಲ್ಯ, ಹರೆಯ ಇಣುಕಿದೆಯೇ ? ಬಾಲ್ಯದ ಅನುಭವಗಳು ನನ್ನ ಬಹದೊಡ್ಡ ಆಸ್ತಿ. ಕಾಲೇಜು ದಿನಗಳು ಹಾಗೂ ಮದುವೆಯಾದ ನಂತರದ ದಿನಗಳೂ ಆಯಾ ಕಾಲಕ್ಕೆ ಆಯಾ ಸಂದರ್ಭದಲ್ಲಿ ಕತೆಯ ಹೂರಣಕ್ಕೆ ಅಗತ್ಯವಿದ್ದರೆ ಅವುಗಳು ನನಗೆ ಗೊತ್ತಾಗದೇ ನುಸುಳುತ್ತವೆ. ಎಷ್ಟೆಂದರೂ ನಮ್ಮ ಕತೆಯ ವಿವರಗಳು ನಮ್ಮ ನಮ್ಮ ಅನುಭವ ಲೋಕದ ಗಾಣದಿಂದಲೇ ಕಟ್ಟಿಕೊಳ್ಳಬೇಕಲ್ಲವೇ, ಕಥನ ಕ್ರಿಯೆಯಲ್ಲಿ ಬರಿಯ ನೋಡಿದ ಕೇಳಿದ ವಿಷಯಗಳೇ ವಿವರಗಳಾಗಿ ಒಡಮೂಡಿದರೆ ಕತೆಯ ಹಂದರವು ಶುಷ್ಕವಾಗಿಬಿಡುವ ಅಪಾಯವಿದೆ. ವಿಶೇಷವಾಗಿ ಕತೆ ಕಾದಂಬರಿಗಳಲ್ಲಂತೂ ಯಾವುದೇ ವಸ್ತುವಿನ ಅಸ್ತಿಪಂಜರಕ್ಕೆ ರಕ್ತ ಮಾಂಸ ತುಂಬಲು ಬಾಲ್ಯ ಮತ್ತು ಹರೆಯದ ಅನುಭವಲೋಕವೇ ಮುಖ್ಯ ಅನಿಸುತ್ತದೆ. ಅದರ ಉಸಿರು ಮತ್ತು ಆತ್ಮ ನಿಸ್ಸಂಶಯವಾಗಿ ಮಾನವತೆಯೇ. ಉದಾಹರಣೆಗೆ ಭೂಮಿಯ ಪಸೆ ಬತ್ತದಿರಲು ಇಂಗು ಗುಂಡಿಗಳು ಅವಶ್ಯಕವಾಗಿರುವಂತೆಯೇ ಸಮಾಜದಲ್ಲಿ ಮಾನವೀಯತೆಯೆಂಬ ಪಸೆ ಬತ್ತದಿರಲು ಸಾಹಿತ್ಯ ಅಗತ್ಯ. ಮೂಲ ತಳಪಾಯವನ್ನು ಮಾನವೀಯಗೊಳಿಸುವದು, ನಮ್ಮ ಬರೆವಣಿಗೆಗಳೆಲ್ಲ ನಮ್ಮ ನಮ್ಮ ಮನೆಯ ಸಣ್ಣ ಸಣ್ಣ ಇಂಗು ಗುಂಡಿಗಳೇ. ನಮ್ಮ ಛಾವಣಿಗೆ ಬಿದ್ದ ಮಳೆಯ ನೀರು ಇಂಗುಗುಂಡಿಯಲ್ಲಿಳಿದು ಸಾಹಿತ್ಯದ ಒರತೆಗೆ ಹನಿ ನೀರು ಸೇರಿಕೊಂಡಂತೆ, ಇಡೀ ಭೂಮಿಯನ್ನು ತಂಪಾಗಿಡಲು ಒಂದೇ ಮನೆಯ ಛಾವಣಿಯ ನೀರು ಸಾಕಾಗದು. ಹಾಗೆ ಜಗತ್ತಿನಾದ್ಯಂತ ಅಸಂಖ್ಯ ಬರಹಗಾರರು ಬರೆಯುತ್ತಿದ್ದೇವೆ. ಪ್ರಶ್ನೆ : ಪ್ರಸ್ತುತ ರಾಜಕೀಯ ಸನ್ನಿವೇಶದ ಬಗ್ಗೆ ನಿಮ್ಮ ಪ್ರತಿಕ್ರಿಯೆ ಏನು ? ದೇಶ ಆಳುವ ರಾಜಕಾರಣಿಗಳು, ಸಾಹಿತಿಗಳು, ಪತ್ರಕರ್ತರು ಹಾಗೂ ಸಮಾಜ ಸೇವಕರು ಇವರುಗಳೆಲ್ಲ ಮೂಲತಃ ಸಮಾಜವಾದಿ ಮನಸ್ಥಿತಿಯವರಾಗಿರಬೇಕು ಎಂದು ವಿದ್ವಾಂಸ ಡಾ. ಗೌರೀಶ ಕಾಯ್ಕಿಣಿಯವರು ಹೇಳುತ್ತಿದ್ದರು. ಅಂತೆಯೇ ಸಮಾಜವಾದಿ ನಿಲುವಿನಿಂದ ಆಡಳಿತ ಮಾಡುವ ಮನಸ್ಸಿರುವ ಯಾವ ಆಡಳಿತ ಪಕ್ಷವಾದರೂ ಸೂಕ್ತವೇ. ಆದರೆ ಇಂದು ರಾಜಕೀಯಕ್ಕೆ ಸೇರುವುದೇ ಹಣ ಮಾಡಲು ಎಂಬಂತಾದ ಸ್ವಾರ್ಥ ರಾಜಕಾರಣಿಗಳಿಂದ ದೇಶದ ಉದ್ದಾರ ಹೇಗೆ ಬಯಸುವುದು? ಈಗಂತೂ ಮಠಾದೀಶರು, ಬಂಡವಾಳಶಾಹಿಗಳೇ ದೇಶವನ್ನು ಆಳುತ್ತಿದ್ದಾರೋ ಅನಿಸುತ್ತಿದೆ. ಲಾಲಬಹಾದ್ದೂರ ಶಾಸ್ತ್ರಿ, ಅಬ್ದುಲ ಕಲಾಂ ನಂಥವರ ಅಗತ್ಯ ಇಂದು ದೇಶವನ್ನು ಆತ್ಯಂತಿಕವಾಗಿ ಕಾಡುತ್ತಿದೆ. ಯಾವುದೇ ಪ್ರಚಾರದ ಗೀಳಿಲ್ಲದೇ ನಿಸ್ವಾರ್ಥ ಸೇವೆಗೆ ಬದ್ಧರಾಗಿರುವ ಒಂದು ಗುಂಪು ರೂಪುಗೊಳ್ಳಬೇಕಾಗಿದೆ. ಯಾವುದೇ ಸಂದರ್ಭದಲ್ಲೂ ದೇಶಕ್ಕಾಗಿ ಮಣಿಯುವ ಮನಸ್ಸುಗಳು ಇಂದಿನ ರಾಜಕೀಯದಲ್ಲಿ ಒಟ್ಟಾಗುವ ಅಗತ್ಯವಿದೆ, ಪ್ರಶ್ನೆ : ಧರ್ಮ, ದೇವರು ವಿಷಯದಲ್ಲಿ ನಿಮ್ಮ ನಿಲುವೇನು ? ಧರ್ಮ ಸಂಪ್ರದಾಯ ಸಮಸ್ಕೃತಿಯ ಕುರಿತು ನಂಬಿಕೆ ಇದ್ದವರು ಅವರವರ ಮನೆಯಲ್ಲಿ ವೈಯಕ್ತಿಕವಾಗಿ ಆಚರಿಸಿದರೆ ಯಾವ ಅಪಾಯವೂ ಇಲ್ಲ. ಧರ್ಮ ಬೀದಿಗೆ ಬಂದರೆ ತುಂಬ ಕಷ್ಟ. ಇನ್ನೊಬ್ಬ ಜೀವಿಯನ್ನು ಕೊಂದು ನೀನು ಬದುಕು ಅಂತ ಯಾವ ಧರ್ಮದಲ್ಲೂ ಹೇಳಿಲ್ಲ. ಮಾನವೀಯತೆಗಿಂತ ಮಿಗಿಲಾದ ಧರ್ಮ ಯಾವುದಿದೆ? ಭಕ್ತಿಯೂ ಒಂದು ಗುಲಾಮಗಿರಿಯ ಲಕ್ಷಣವೇ ಎಂಬ ಅರಿವಿದ್ದವರಿಗೆ ದೇವರ ಅಸ್ತಿತ್ವವನ್ನು ನಂಬುವುದು ಬಹಳ ಕಷ್ಟ. ನಮ್ಮದು ಬಹುತ್ವ ಭಾರತ, ಇಲ್ಲಿ ಎಲ್ಲ ಜಾತಿ ಧರ್ಮದ ಜನವೂ ಸಮತೆಯಿಂದ ಬದುಕುತ್ತ ಬಂದ ಬಹುದೊಡ್ಡ ಪರಂಪರೆಯಿದೆ. ‘ನಮ್ಮ ಮಾನಸಿಕ ಒತ್ತಡವನ್ನು ಹೊರಲು ಯಾರಾದರೊಬ್ಬರು ಬೇಕು ಅನ್ನಿಸಿದರೆ ಅದು ದೇವರೇ ಯಾಕಾಗಬಾರದು? ದೇವರಿಲ್ಲ ಎಂಬ ನಂಬಿಕೆಯಿದ್ದರೆ ದೇವರನ್ನು ನಿರ್ಮಿಸಿಕೊಳ್ಳಬೇಕು, ಚಹ ಕಾಫಿ ಮಾಡಿಕೊಂಡ ಹಾಗೆಯೇ ದೇವರನ್ನೂ ಮಾಡಿಕೊಳ್ಳಬೇಕು’ ಎಂದಿದ್ದರಂತೆ ಮಾಸ್ತಿ. ದೇವರು ದಿಂಡಿರನ್ನೂ ಅಷ್ಟೇ ನಮ್ಮ ನಮ್ಮ ಮನೆಯ ದೇವರ ಕೋಣೆಯಲ್ಲಷ್ಟೇ ಬೀಗ ಹಾಕಿಟ್ಟರೆ ಚೆನ್ನ. ನಾನು ದೇವರನ್ನು ನಂಬದೇ ಇದ್ದರೂ ಪ್ರತೀ ಕತೆ ಬರೆಯುವಾಗಲೂ ಏಕಾಗ್ರತೆಗಾಗಿ ನನಗೆ ಕೊಂಚ ಧ್ಯಾನದ ಅಗತ್ಯವಿದೆ ಅನಿಸುತ್ತಿದೆ. ಏನೆಂದರೆ ಏನೂ ಹೊಳೆಯದೇ ಇದ್ದ ಸಂದರ್ಭದಲ್ಲಿ ಹದಿನೈದು ನಿಮಿಷಗಳ ಕಾಲ ಮಾಡುವ ಧ್ಯಾನದಲ್ಲಿ ನನಗೆ ಏನಾದರೂ ಒಂದು ಹೊಳೆದುಬಿಟ್ಟಿದ್ದಿದೆ. ಹಾಗಾಗಿ ಧ್ಯಾನವನ್ನು ನಾನು ನಂಬುತ್ತೇನೆ, ನನಗೆ ಧ್ಯಾನವೇ ದೇವರು. ಪ್ರಶ್ನೆ : ಪ್ರಸ್ತುತ ಸಾಂಸ್ಕೃತಿಕ ವಾತಾವರಣದ ಬಗ್ಗೆ ನಿಮಗೆ ಏನನಿಸುತ್ತದೆ ? ಪ್ರಸ್ತುತ ಸಾಂಸ್ಕೃತಿಕ ವಾತಾವರಣ ಇಡಿಯಾಗಿ ವಾಟ್ಸ್ಆಪ್ , ಫೇಸ್ಬುಕ್ಗಳನ್ನೇ ಅವಲಂಬಿಸಿದೆ. ಎಲ್ಲರಿಗೂ ಎಲ್ಲ ವಿಷಯಗಳೂ ಬಹುಬೇಗ ಸುಲಭದಲ್ಲಿ ತಲುಪಿ ಹೊಸ ಮಾದರಿಯ ಯುವ ತಲೆಮಾರು ಸೃಷ್ಟಿಯಾಗಿದೆ. ಟೀವಿ ಮಾಧ್ಯಮಗಳಂತೂ ಕೃತಕತೆ ಹಾಗೂ ಸುಳ್ಳುಗಳನ್ನೇ ವಿಜೃಂಭಿಸುತ್ತಿವೆ. ಆ ಮೂಲಕ ಜನರಲ್ಲಿ ಮೌಢ್ಯಗಳನ್ನೂ ವ್ಯವಸ್ಥಿತವಾಗಿ ಹಂಚಲಾಗುತ್ತಿದೆ. ಸಂಸ್ಕೃತಿಯ ಹೆಸರಲ್ಲಿ ಎಲ್ಲ ಜಾತಿ ಧರ್ಮದವರೂ ಸೇರಿ ಆಚರಿಸುವ ಸಾಹಿತ್ಯ