ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಭಾವ ಚಿತ್ರ

ಶಾಂತಾ ಕುಂಟಿನಿ ಮೇಲಿನಿಂದ ನೋಡಿದರೇತಿಳಿದೀತೇ ಅವಗುಣವೂಕೆಳಗಿಳಿದು ನೋಡಿದಾಗಒಳಗೆಲ್ಲ ಅಪಸ್ವರವೂ//೧// ಹೊರಗೆಲ್ಲಾ ನಗುಮೊಗವುಒಳಗೆಲ್ಲಾ ಬೈಗುಳವೂಅರಿತಾಗಲೆ ಮನಸುಗಳಆಂತರ್ಯ ಕಾಣುವವೂ// ಕಣ್ಣಿದ್ದರು ಕುರುಡರಂತೆನಮ್ಮದೆಲ್ಲ ವರ್ತನೆಯೂಇದು ಎಲ್ಲವು ನಮಗೇಕೆಅನ್ನುಂತಹ ಶೈಲಿಯೂ ನಿರ್ಮಲದ ಮನಸುಗಳಹುಡುಕಾಟವು ದುರ್ಲಭವುಏನಿದ್ದರು ಇಲ್ಲಿ ಎಲ್ಲವುಹೊಳಹುಗಳೇ ತೇಲಿದವು// ************* ಅದೆ ಸತ್ಯ ಎಂದಂದೂನಂಬಿರುವಾ ಜನರಿರಹರೂಪರದೆಯನು ನೀ ಸರಿಸಲುಕಂಡಿಹುದೇ ಕೆಸರೂ// ನಾಟಕವನೆ ಮಾಡುತಲೀವೇಷವನ್ನೇ ತೊಡುವರೂನಂಬಿ ನೀನು ಹೋದರಲ್ಲಿಹಳ್ಳವನೇ ತೋಡುವರೂ//

ಭಾವ ಚಿತ್ರ Read Post »

ಪುಸ್ತಕ ಸಂಗಾತಿ

ಒಂದು ಮರ ನೂರು ಸ್ವರ

ಪುಸ್ತಕಸಂಗಾತಿ ಒಂದು ಮರ ನೂರು ಸ್ವರಭಾರತೀಯ ಸಣ್ಣಕಥೆಗಳುಎನ್ ಎಸ್ ಶಾರದಾಪ್ರಸಾದ್ಸಂಚಯ ಪ್ರಕಾಶನ ಈ ಪುಸ್ತಕ ಮುದ್ರಣದ ಹಂತದಲ್ಲಿದ್ದಾಗ ಶಾರದಾಪ್ರಸಾದರು ತೀರಿಕೊಂಡಿದ್ದು ದುಃಖದ ವಿಷಯ. ಅವರು ತಮ್ಮ ಬರವಣಿಗೆಯ ಬದುಕಿನುದ್ದಕ್ಕೂ ಆಯ್ದು ಪೋಣಿಸಿದ ಕಥೆಗಳಿವು. 1981 ರಿಂದ 2014 ರ ತನಕದ ಅವರ ಎಲ್ಲಾ ಅನುವಾದಿತ ಚೆಂದದ ಕತೆಗಳು ಇಲ್ಲಿವೆ. ರಾಜಾಜಿ (ಚಕ್ರವರ್ತಿ ರಾಜಗೋಪಾಲಾಚಾರಿ) ಅವರ, ಲೋಕನಾಯಕ ಜಯಪ್ರಕಾಶ ನಾರಾಯಣ್ ಅವರ ಅಪರೂಪದ ಕತೆಗಳೂ ಇಲ್ಲಿವೆ. ಒಟ್ಟೂ 51 ಕತೆಗಳು ಇಲ್ಲಿ ಕನ್ನಡಿಸಿವೆ‌.ಅಷ್ಟೇನೂ ಪರಿಚಿತರಲ್ಲದವರ ಕತೆಗಳೂ ಇಲ್ಲಿವೆ. ಕಳೆದ ಶತಮಾನದ ಭಾರತೀಯ ಬದುಕಿನ ವಿವರಗಳನ್ನು, ಸಾಂಸ್ಕೃತಿಕ ಪಲ್ಲಟಗಳನ್ನು, ನೋವು- ನಲಿವು, ಹತಾಶೆ, ಸಾವು, ಯಶಸ್ಸು… ಹೀಗೆ ಆಯಾ ಪ್ರದೇಶದ, ಭಾಷೆಯ ಆವರಣದಲ್ಲಿ ಮೈಪಡೆದ ಮನುಷ್ಯ ಜಗತ್ತಿನ ಚಿತ್ರಣ ಈ ಕೃತಿಯಲ್ಲಿದೆ. ಇಲ್ಲಿನ ಕತೆಗಳ ಆಯ್ಕೆಯ ಹಿಂದೆ ಶಾರದಾಪ್ರಸಾದರ ಸೂಕ್ಷ್ಮತೆ ಮತ್ತು ಭಾವುಕತೆ ಎದ್ದು ಕಾಣುತ್ತದೆ.ಯಾವ ಸಾಹಿತ್ಯ ಫ್ಯಾಷನ್ನುಗಳಿಂದ ಪ್ರಭಾವಿತರಾಗದ ಅವರ ಆಯ್ಕೆ, ತಮ್ಮ ಮನಸ್ಸಿಗೆ ತಟ್ಟಿದ ಕಥೆಗಳನ್ನು ಅವರು ಕನ್ನಡಿಗರ ಓದಿಗೆ ಬಡಿಸಿದ್ದಾರೆ. ಇವು ಅಂತಃಕರಣದ ಕತೆಗಳು. ವೈವಿಧ್ಯಮಯ ಕಥೆಗಳಿಗಾಗಿ ಒಮ್ಮೆ ಓದಲೇಬೇಕಾದ ಕೃತಿಯಿದು. ******** ಡಾ.ಅಜಿತ ಹರೀಶಿ

ಒಂದು ಮರ ನೂರು ಸ್ವರ Read Post »

ಕಾವ್ಯಯಾನ, ಗಝಲ್

ಗಝಲ್

ಮಾಲತಿ ಹೆಗಡೆ ಇಳೆಯ ಕೊಳೆಯನು ತೊಳೆದು ಹರಸಿದೆ ಮುಂಗಾರು ಮಳೆಕಂಗೆಟ್ಟ ರೈತರ ಕಣ್ಣಲ್ಲಿ ಕನಸು ಬಿತ್ತುತ್ತದೆ ಮುಂಗಾರು ಮಳೆ‌‌ ಬಿರು ಬಿಸಿಲ ಕಡು ತಾಪದಲಿ ಬೆಂದಿವೆ ಜೀವಕೋಟಿಎಲ್ಲರ ಬಾಳಿಗೆ ಭರವಸೆಯಾಗಿ ಬೀಳುತ್ತದೆ ಮುಂಗಾರು ಮಳೆ ಕಾದು ಕಾದು ಬಿರಿದ ಭುವಿಯ ತಣಿಸಲು ಬೇಕು ವರ್ಷಧಾರೆಮಣ್ಣಿನಲಿ ಅವಿತ ಬೀಜವ ಮೊಳೆಯಿಸುತ್ತದೆ ಮುಂಗಾರು ಮಳೆ ಕರಿಮುಗಿಲು ಕರಕರಗಿ ಹನಿ ಮುತ್ತಾಗಿ ಬೀಳುವುದೇ ಸೊಗಎಷ್ಟೇ ಅಬ್ಬರಿಸಿ ಬೊಬ್ಬಿದರೂ ಹಿತನಿಸುತ್ತದೆ ಮುಂಗಾರು ಮಳೆ ಮಾಲತಿಯ ಮನದಲ್ಲಿ ತುಂಬಿತ್ತು ಸಾವು ನೋವಿನ ಭೀತಿಹೊಸ ಹಸುರ ಹುಟ್ಟಿನ ಹರುಷ ಹಂಚುತ್ತದೆ ಮುಂಗಾರು ಮಳೆ ************

ಗಝಲ್ Read Post »

ಇತರೆ

ಜಂಬಿಕೊಳ್ಳಿ ಮತ್ತು ಪುಟ್ಟವಿಜಿ

ಅನುಭವ ಕಥನ ಕಾಡಿನಲ್ಲಿ ಓದು ವಿಜಯಶ್ರೀ ಹಾಲಾಡಿ  ವಿಜಿ ಮತ್ತು ಅವಳಂತಹ ಆಗಿನ ಕಾಲದ ಮಕ್ಕಳು ಸಣ್ಣ ವಯಸ್ಸಿನಲ್ಲಿದ್ದಾಗ ಎದ್ದುಬಿದ್ದು ಓದುವುದೆಲ್ಲ ಏನೂ  ಇರಲಿಲ್ಲ. ಮನೆಕೆಲಸ, ಆಟ, ಹಾಡಿ-ಗುಡ್ಡಗಳ ಸುತ್ತಾಟ,   ಎಲ್ಲದರ ನಡುವೆ ಶಾಲೆಗೂ ಹೋಗಿಬರುತ್ತಿದ್ದರು!  ಪರೀಕ್ಷೆ ಬಂದಾಗ ಅಲ್ಪಸ್ವಲ್ಪ ಓದಿಕೊಳ್ಳುತ್ತಿದ್ದರು. ಹಾಗಂತ ಶಾಲೆಗೆ ಹೋಗುವುದು ಅವರಿಗೆ ಸುಲಭವೇನೂ ಆಗಿರಲಿಲ್ಲ.  ಗದ್ದೆ, ತೋಡು, ಕಾಡುಗಳಲ್ಲಿ ಮೈಲಿಗಟ್ಟಲೆ ನಡೆದು ಹೋಗಿಬರಬೇಕಿತ್ತು . ಆದರೆ ‘ಓದಿ ಓದಿ’ ಎಂದು ಶಾಲೆಯಲ್ಲೂ ಮನೆಯಲ್ಲೂ ಯಾರೂ ಅವರ ತಲೆ ತಿನ್ನುತ್ತಿರಲಿಲ್ಲ. ಹಾಗಾಗಿ ಮನಸ್ಸಾದರೆ ಓದಿಕೊಳ್ಳುತ್ತಿದ್ದರು. ಆದರೆ ತರಗತಿಯಲ್ಲಿ ಪಾಠಗಳನ್ನು ಚೆನ್ನಾಗಿ ಕೇಳಿಸಿಕೊಳ್ಳುತ್ತಿದ್ದರು. ಒಂಬತ್ತನೇ ತರಗತಿಯವರೆಗೂ ಇದೇ ತರ ತಲೆಬಿಸಿ ಇಲ್ಲದೆ ಇದ್ದರು. ವಿಜಿ ಶಾಲೆ ಪುಸ್ತಕಗಳ ಜೊತೆಗೆ ಕಥೆ ಪುಸ್ತಕಗಳನ್ನೂ ಓದುತ್ತಿದ್ದಳು. ಹತ್ತನೇ ತರಗತಿಯಲ್ಲಿ ಮಾತ್ರ ತುಸು ಗಂಭೀರವಾಗಿ ಓದಬೇಕಿತ್ತು. ಪರೀಕ್ಷೆಯ ತಯಾರಿ ಎಂದರೇನೆಂದು ತಿಳಿದದ್ದು ಆಗಲೇ. ಈ ಮಕ್ಕಳ ಓದುವಿಕೆಯೂ ವಿಚಿತ್ರವಾಗಿತ್ತು. ಕೋಣೆಯೊಳಗೆ ಕುರ್ಚಿ, ಮೇಜುಗಳನ್ನಿಟ್ಟುಕೊಂಡು ಶಿಸ್ತಾಗಿ ಕೂತು ಓದುತ್ತಿದ್ದುದು ಭಾರೀ ಕಮ್ಮಿ. ಅಲ್ಲದೆ ಹಾಗೆಲ್ಲ ಓದಲು ಹೆಚ್ಚಿನ ಮಕ್ಕಳ ಮನೆಯಲ್ಲಿ ಟೇಬಲ್ಲು ಕುರ್ಚಿಗಳು ಇರಲಿಲ್ಲ. ನೆಲದಲ್ಲಿ ಚಿಮಣಿದೀಪದ ಎದುರಿಗೆ ಕೂತು ಪುಸ್ತಕಗಳನ್ನು ಹರಡಿಕೊಂಡು ಬರೆದುಕೊಳ್ಳುತ್ತಿದ್ದರು. ವಿಜಿ ದಿನವೂ ರಾತ್ರಿ ಒಂದರ್ಧ ಗಂಟೆಯಾದರೂ ಹೀಗೆ ಅಜ್ಜಿ, ಅಮ್ಮನಎದುರಿಗೆ ಬರೆಯಲೇಬೇಕಿತ್ತು .ಇದು ಊಟದ ಮುಂಚೆ ನಡೆಯುತ್ತಿತ್ತು. ಆಮೇಲೆ ಊಟ ಮಾಡಿ ಒಂಭತ್ತು ಗಂಟೆಗೆಲ್ಲ ಮಲಗಿಬಿಡುತ್ತಿದ್ದರು.  ಪರೀಕ್ಷೆಯ ಸಮಯದಲ್ಲಿ ವಿಜಿ ಮತ್ತು ಅವಳ ಗೆಳತಿಯರು ಓದುತ್ತಿದ್ದುದು ಹೆಚ್ಚಾಗಿ ತೋಟ ಹಾಡಿಗಳಲ್ಲಿ. ತೋಟದಲ್ಲಿ ಹುಲ್ಕುತ್ರೆ ಇರುತ್ತಿತ್ತು. ಸೂಡಿಹಲ್ಲುಕುತ್ರೆಯಾದರೆ  ಹುಲ್ಲನ್ನು ಜಪ್ಪಿ ಭತ್ತವನ್ನು ಪೂರ್ತಿಯಾಗಿ ಬೇರ್ಪಡಿಸಿ ಹುಲ್ಲನ್ನು ಸೂಡಿ ಮಾಡಿ ಜೋಡಿಸಿಡುತ್ತಿದ್ದ ಕುತ್ರೆ. ಇಂತಹ ಒಣಹುಲ್ಲನ್ನು ಸಂಗ್ರಹಿಸಿ ಇಟ್ಟು ವರ್ಷಪೂರ್ತಿ ದನಕರುಗಳಿಗೆ ತಿನ್ನಲು ಬಳಸುತ್ತಿದ್ದರು . ಹಟ್ಟಿಯ ಅಟ್ಟದಲ್ಲಿ ಕೂಡಿಟ್ಟು ಉಳಿದ  ಹುಲ್ಲನ್ನು ಹುಲ್ಕುತ್ರೆ ಮಾಡಿ ಇಡುತ್ತಿದ್ದರು. ಬೇಕಾದಾಗ ಇದರಿಂದ ಹುಲ್ಲನ್ನು ತೆಗೆದುಕೊಳ್ಳುತ್ತಿದ್ದರು. ಇಂತಹ ಕುತ್ರೆಗಳು ಮೂರ್ನಾಲ್ಕು ಇರುತ್ತಿದ್ದವು. ಇದಲ್ಲದೆ ತಳು ಹುಲ್ಲಿನ ಕುತ್ರೆಯೂ ಇರುತ್ತಿತ್ತು. ಇದು ಸೂಡಿ ಮಾಡದ ಬಿಡಿ ಹುಲ್ಲು. ಸ್ವಲ್ಪ ಸ್ವಲ್ಪ ಹುಲ್ಲು ತೆಗೆದು ಅರ್ಧ ಆದ ಇಂತಹ ಕುತ್ರೆಗಳ ಮೇಲೆ ಆರಾಮವಾಗಿ ಕುಳಿತು ಅಥವಾ ಕಾಲು ಚಾಚಿ ಮಲಗಿ ಓದುತ್ತಿದ್ದರು. ನಾಲ್ಕೈದು ಜನ ಅಂದರೆ ನೀಲಿಮಾ,ಮಾಣಿಕ್ಯ ಮತ್ತು ಅವಳ ತಂಗಿಯರು ಸೇರಿದರೆ ಮಾತ್ರ ಓದು ನುಗುಳಿ (ಜಾರಿ ) ಹೋಗಿ ಮಾತು ಜೋರಾಗುತ್ತಿತ್ತು…. ಅಂತಹ ಸಂದರ್ಭದಲ್ಲಿ ಹುಲ್ಕುತ್ರೆ ಮೇಲೆ  ಕುಣಿಯುತ್ತ ಆಟವಾಡುತ್ತಿದ್ದುದೂ ಉಂಟು.   ಆಟ ಎಂದಮೇಲೆ ಜಗಳವೂ ಇರುತ್ತಿತ್ತು; ರಾಜಿಯೂ ಆಗುತ್ತಿತ್ತು! ಅಜ್ಜಿಯೇನಾದರೂ  ತೋಟದ ಕಡೆಗೆ ಬಂದರೆ “ಎಂತಾ ಮಕ್ಳೆ ಅದ್ ನಳಿನಳಿ ಓಡೂದ್, ನೀವ್ ಓದೂಕ್ ಬಂದದ್ದಾ, ಕೊಣೂಕ್ ಬಂದದ್ದಾ?” ಎಂದು ಜೋರು ಮಾಡುತ್ತಿದ್ದರು. ಅವರು ಆಚೆ ದಾಟುವವರೆಗೆ ಸುಮ್ಮನೆ ಹೆಡ್ಡರ ತರ ನಿಂತುಕೊಂಡು ಮತ್ತೆ ಮೊದಲಿನಂತೆ ಓಡುವುದು, ಹಾರುವುದು ಬೀಳುವುದು ಮಾಡಿ ಕುತ್ರೆ ಹರಡುತ್ತಿದ್ದರು . ಆದರೆ ಹೆಚ್ಚು ಶಬ್ದ ಆಗದಂತೆ ಬಾಯಿ ಒತ್ತಿ ಹಿಡಿಯುತ್ತಿದ್ದರು. ಮನೆಗೆ ಹೊರಡುವಾಗಂತೂ ಹುಲ್ಲನ್ನೆಲ್ಲ ಮೊದಲಿನಂತೆ ಇಟ್ಟು ಜಾಗ್ರತೆ ಮಾಡುತ್ತಿದ್ದರು ವಿಜಿ, ನೀಲಿಮಾ.  ಇಲ್ಲದಿದ್ದರೆ ಅಜ್ಜಿ ಬೆನ್ನಿಗೆ ಬಾರಿಸುತ್ತಾರೆ ಎಂದು ಅವರಿಗೆ ಗೊತ್ತಿತ್ತು.ಕೆಲವೊಮ್ಮೆ ಹಾಡಿಗೆ ಪುಸ್ತಕ ಹಿಡಿದು ಹೋಗಿ ಕೂತುಕೊಳ್ಳುತ್ತಿದ್ದರು. ಹತ್ತಲಿಕ್ಕಾಗುವ ಸಣ್ಣ ಮರ ಇದ್ದರೆ ಮಂಗಗಳಂತೆ ಅದರ ಮೇಲೆ ಹತ್ತಿ ಕೂತು ಪುಸ್ತಕ ಬಿಡಿಸುತ್ತಿದ್ದರು.  ಒಂದೈದು ನಿಮಿಷ ಓದಲಿಕ್ಕಿಲ್ಲ, ಅಷ್ಟೊತ್ತಿಗೆ ಎಂತದೋ ನೆನಪಾಗಿ ಒಬ್ಬರನ್ನೊಬ್ಬರು ಕರೆದುಕೊಂಡು ಮಾತು ಶುರು ಮಾಡುತ್ತಿದ್ದರು. ಅದೂ ಸಹ ಒಂದ್ಹತ್ತು ನಿಮಿಷ ಅಷ್ಟೇ….. ಮರ ಇಳಿದು ಹಾಡಿ ತಿರುಗಲು ಆರಂಭಿಸುತ್ತಿದ್ದರು. ಯಾವುದಾದರೂ ಹಣ್ಣೋ, ಕಾಯೋ , ಚಿಗುರೋ, ಎಲೆಯೋ  ಹೀಗೆ ತಿನ್ನಲಿಕ್ಕಾಗುವುದು ಏನಾದರೂ ಇದೆಯಾ ಎಂದು ಹುಡುಕುತಿದ್ದರು. ಈ ವಿಷಯದಲ್ಲಿ ಇವರು ಮಂಗಗಳಿಗೇನೂ ಕಮ್ಮಿ ಇರಲಿಲ್ಲ. ವರ್ಷದ ಯಾವುದೇ ಕಾಲವಾಗಲಿ, ಈ ಮಕ್ಕಳಿಗೆ ಹಾಡಿಯಲ್ಲಿ ಎಂತಾದರೂ ತಿನ್ನಲು ಸಿಗುತ್ತಿತ್ತು!  ಮಳೆಗಾಲದ ಆರಂಭದಲ್ಲಾದರೆ ರಾಶಿರಾಶಿ ನೇರಳೆ, ಸಳ್ಳೆ ಹಣ್ಣು ಇರುತ್ತಿತ್ತು . ನೇರಳೆ ಹಣ್ಣು ತಿಂದು ಮುಖ ಮೈ ಅಂಗಿಗೆಲ್ಲ ಬಣ್ಣ ಮೆತ್ತಿಕೊಂಡು ಥೇಟ್ ಮಂಗನಾಗುತ್ತಿದ್ದರು ! ವೈಶಾಖದಲ್ಲಂತೂ ಕೇಳುವುದೇ ಬೇಡ; ಗರ್ಚ (ಕರಂಡೆ),  ಜಡ್ಡ್ ಮುಳ್ಳ್ ಹಣ್ಣು,ಸೂರಿಹಣ್ಣು, ಚಾಂಪಿಹಣ್ಣು ಇನ್ನೂ ಎಂತೆಂತದೆಲ್ಲ ಸಿಗುತ್ತಿತ್ತು. ಹಾಡಿಯಲ್ಲಿ ಹಣ್ಣೇ ಇಲ್ಲ ಎಂದಾದರೆ, ಗರ್ಚನ ಗಿಡ ಮತ್ತು ದುರ್ಕಲ ಗಿಡದ ಎಳೆಕಾಂಡವನ್ನು ತಿನ್ನುತ್ತಿದ್ದರು. ಗರ್ವಾಳ ಕಾಯಿ ಹುಡುಕುತ್ತಿದ್ದರು. ಯಾವ್ಯಾವುದೋ ಹುಳಿ ಸೊಪ್ಪನ್ನು ಬಾಯಿಗೆ ತುಂಬಿಕೊಳ್ಳುತ್ತಿದ್ದರು. ಇಷ್ಟೆಲ್ಲ ಆಗುವಾಗ ಓದುವುದು ಮರೆತುಹೋಗಿ ಕಾಡಿನ ಹಣ್ಣೋ, ಎಲೆಯೋ,  ಹಕ್ಕಿಯೋ, ಮೊಲವೋ ಯಾವ್ಯಾವುದರ ಕುರಿತೋ ಪಂಚಾಯಿತಿಗೆ ಮಾಡುತ್ತಾ ಮನೆ ತಲುಪುತ್ತಿದ್ದರು.  ಇನ್ನು ಕೆಲವೊಮ್ಮೆ ಓದುವ ರಜೆ ಕೊಟ್ಟಾಗ ಗಂಟಿ(ದನಕರು) ಎಬ್ಬಿಕೊಂಡು ಸುಮಾರು ದೂರ ಹೋಗುತ್ತಿದ್ದರು. ದನಗಳು ತಮ್ಮಷ್ಟಕ್ಕೆ ಹಸಿ ಮೇಯ್ದುಕೊಳ್ಳುವಾಗ ಅಲ್ಲೇ ಮರಗಳ ಬುಡದಲ್ಲಿ ದರಲೆಗಳ ಮೇಲೆ ಕುಳಿತು ಓದುತ್ತಿದ್ದರು . ಪರೀಕ್ಷೆಯ ರಜೆಯಲ್ಲಿ ಸ್ವಲ್ಪ ಗಂಭೀರವಾಗಿ ಓದಲು ತೊಡಗುತ್ತಿದ್ದರು. ಆಗಲೂ ಮಧ್ಯೆ ಎದ್ದು ಹೋಗಿ ಹಣ್ಣುಗಳನ್ನು ಹೊಟ್ಟೆಗೆ ಸೇರಿಸದೆ ಬಿಡುತ್ತಿರಲಿಲ್ಲ. ಹತ್ತನೇ ಕ್ಲಾಸಿನ ಪರೀಕ್ಷೆಗೆ ರಜೆ ಕೊಟ್ಟಾಗ ಚೋರಾಡಿ ಎಂಬಲ್ಲಿಗೆ ಹೋಗುವ ದಾರಿಯಲ್ಲಿ ಇರುವ ಗರ್ಚನ ಗಿಡಗಳ ಗುಡ್ಡೆಯಲ್ಲಿ ಗಂಟಿ ಬಿಟ್ಟುಕೊಂಡು ಒಬ್ಬಳೇ ಓದುತ್ತಾ ಕುಳಿತಿರುತ್ತಿದ್ದುದು ವಿಜಿಗೆ ಕಣ್ಣಿಗೆ ಕಟ್ಟಿದಂತೆ ನೆನಪಿಗೆ ಬರುತ್ತದೆ. ಪಿಯುಸಿಗೆ ಹೋಗುವಾಗ ನಾಗ್ ದೇವ್ರ್ ಬನದ ಸುರುಳಿ ಸುರುಳಿ ಸುತ್ತಿದ ದಪ್ಪ ಬೀಳಿನ ಮೇಲೆ ಕುಳಿತು ಓದಿದ್ದು ಅವಳಿಗೆ ನೆನಪಿದೆ. ಕೆಲವು ವಿಷಯಗಳನ್ನು ಅಲ್ಲಿ ಕೂತು ಬಾಯಿಪಾಠ ಮಾಡುತ್ತಿದ್ದಳು. ಅವಳಿಗೆ ಇಂಗ್ಲಿಷ್ ಸ್ವಲ್ಪ ಕಷ್ಟವಾದ್ದರಿಂದ ಹಾಗೆ ಕೆಲವು ಉತ್ತರಗಳನ್ನು ಕಂಠಪಾಠ ಮಾಡಿಕೊಳ್ಳುತ್ತಿದ್ದಳು.  ವಿಜಿಯ ಮನೆಯಲ್ಲಿ’ ಆಚೆ ಒಳ’ ಅಂತ ಒಂದು ಪುಟಾಣಿ ಕೋಣೆಯಿತ್ತು. ಅದಕ್ಕೊಂದು ಸಣ್ಣ ಕಿಟಕಿ. ಮೇಲೆ ಮುಚ್ಚಿಗೆಯ ಮಾಡು. ಆ ಕೋಣೆಯಲ್ಲಿ ಅಕ್ಕಿಮುಡಿ ಗಳನ್ನು ಸಂಗ್ರಹಿಸಿಡುತ್ತಿದ್ದರು. ಉಳಿದ ಜಾಗದಲ್ಲಿ ಒಂದು ಮರದ ಪೆಟ್ಟಿಗೆ, ಟ್ರಂಕ್ ಮತ್ತು ಕೆಲವು ದಿನನಿತ್ಯ ಉಪಯೋಗಿಸದ ಪಾತ್ರೆಗಳು , ಹಪ್ಪಳದ ಕಟ್ಟಿನ ಡಬ್ಬಗಳು, ಹಿಟ್ಟಿನ ಡಬ್ಬ, ಶಾವಿಗೆ ಒರಳು ಮುಂತಾದುವೆಲ್ಲ ಇದ್ದವು. ತುಂಬಾ ಚಳಿ ಇದ್ದಾಗ ಅಥವಾ ಮನೆಗೆ ಯಾರಾದರೂ ನೆಂಟರು ಬಂದು ಹೊರಗೆ ಕುಳಿತು ಓದಲಾಗದ ಸಮಯದಲ್ಲಿ ಆ ಸಣ್ಣ ಕೋಣೆಯ ಸಣ್ಣಜಾಗದಲ್ಲಿ ವಿಜಿ ಓದಿ ಕೊಳ್ಳುತ್ತಿದ್ದಳು. ಹಾಗೊಂದು ಸಲ ಚಿಮಣಿದೀಪ ಇಟ್ಟುಕೊಂಡು ಕುಳಿತಿದ್ದಳು. ಮನೆಗೆ ಯಾರೋ ನೆಂಟರೆಲ್ಲ ಬಂದ ಸಮಯವಾದ್ದರಿಂದ ಗಲಾಟೆ ಕೇಳುತ್ತದೆ ಎಂದು ಕೋಣೆಯ ದಪ್ಪಬಾಗಿಲನ್ನು ಎಳೆದು ಹಾಕಿದ್ದಳು .ಕಿಟಕಿಯು ಮಾಮೂಲಿಯಂತೆ ಹಾಕಿಕೊಂಡಿತ್ತು .ಅದಲ್ಲದೆ ಅಕ್ಕಿ ಮುಡಿಗಳು ಬೆಚ್ಚಗಿರಬೇಕು ಎಂದು ಆ ಕಿಟಕಿಗೆ ಯಾವಾಗಲೂ ಒಂದು ಪ್ಲಾಸ್ಟಿಕ್ಕಿನ ಹಾಳೆಯನ್ನು ಹೊಡೆದಿರುತ್ತಿದ್ದರು. ಈ ಸಂದರ್ಭದಲ್ಲಿ ಬಾಗಿಲು ತೆಗೆದು  ಬಂದ ಅಣ್ಣ” ಅಯ್ಯೋ ಇಂಥ ಹೊಗೆಯಲ್ಲಿ ಕುಳಿತು ಓದುವುದಾ!? ಆರೋಗ್ಯಕ್ಕೆ ಒಳ್ಳೆಯದಲ್ಲ, ಕಿಟಕಿ ತೆಗೆದಿಡಬೇಕು ” ಎಂದು ಉದ್ಗರಿಸಿದ್ದ, ಏಕೆಂದರೆ ಹೊಗೆ ಕೋಣೆಯನ್ನೆಲ್ಲಾ ತುಂಬಿ ಉಸಿರುಕಟ್ಟುವಂತೆ ಆಗಿತ್ತು . ಆದರೂ ಅದು ವಿಜಿಗೆ ಗೊತ್ತಾಗಿರಲಿಲ್ಲ. ಆದರೆ ಸಾಮಾನ್ಯವಾಗಿ ಅವಳು ಓದುತ್ತಿದ್ದುದು ಹೊರಗೆ ಚಾವಡಿ – ಜಗಲಿಯಲ್ಲಿ ಅಥವಾ ಉಪ್ಪರಿಗೆಯಲ್ಲಿ. ಅಲ್ಲಾದರೆ ಚೆನ್ನಾಗಿ ಗಾಳಿಯಾಡುವಂತಿತ್ತು . ಈ ಮೊದಲೇ ಹೇಳಿದಂತೆ ವಿಜಿಯ ಊರಿಗೆ ಕರೆಂಟ್ ಬರುವಾಗ ಅವಳಂತಹ ಮಕ್ಕಳೆಲ್ಲ ಪಿಯುಸಿ ಮುಗಿಸಿಯಾಗಿತ್ತು. ಚಿಮಣಿ ದೀಪದ ಬೆಳಕಲ್ಲಿ ಓದುವಾಗ ದೀಪಕ್ಕೆ ಆಕರ್ಷಿತವಾಗಿ ಕುಟ್ಟೆ, ಹಾತೆ, ಮಿಡತೆ, ಮಳೆಹಾತೆ ಒರ್ಲೆಹಾತೆ ಹೀಗೆ ವಿಧವಿಧ ಕೀಟಗಳು ಬಂದು ದಾಳಿ ಮಾಡುತ್ತಿದ್ದವು. ಕೆಲವು ದೀಪಕ್ಕೆ ಬಿದ್ದು ಸುಟ್ಟು ಸತ್ತೂ ಹೋಗುತ್ತಿದ್ದವು. ಮತ್ತೆ ಕೆಲವು ಮೈಮುಖದ ಮೇಲೆ ಕೂತು ಕಿರಿಕಿರಿ ಕೊಡುತ್ತಿದ್ದವು. ಕೆಲವೊಮ್ಮೆ ದೀಪದ ಬುಡದಲ್ಲಿ ರಾಶಿರಾಶಿ ಬಂದು ಬೀಳುತ್ತಿದ್ದವು. ಚಿಮಣಿದೀಪದಲ್ಲಿ ಮಕ್ಕಳು ಓದುವುದು ಕಷ್ಟ ಎಂದು ಮನಗಂಡ ಅಪ್ಪಯ್ಯ ಲ್ಯಾಂಪು ತರುತ್ತಿದ್ದರು. ಸಣ್ಣ ಲ್ಯಾಂಪು ಕೋಣೆಯಲ್ಲಿ ಮೊಳೆಗೆ ಸಿಕ್ಕಿಸಿ ಇಡಲಾದರೆ , ದೊಡ್ಡ ಲ್ಯಾಂಪು ಓದಲಿಕ್ಕೆ. ಒಂದು ಸಲ ಸುಮಾರು ದೊಡ್ಡ ಲ್ಯಾಂಪ್ ತಂದಿದ್ದರು. ಅದರ ಬುರುಡೆ ಸೋರೆಕಾಯಿಯ ಗಾತ್ರಕ್ಕಿತ್ತು! ಮತ್ತೊಂದು ಸಲ ಸಪೂರ ಬುರುಡೆಯ ನೋಡಲು ವಿಚಿತ್ರವಾಗಿರುವ ಲ್ಯಾಂಪನ್ನು ತಂದುಕೊಟ್ಟಿದ್ದರು . ಅದು ಚೀನಿ ಲ್ಯಾಂಪಂತೆ! ಯಾಕೆ ಆ ಹೆಸರು ಬಂದದ್ದೋ ಗೊತ್ತಿರಲಿಲ್ಲ. ಚೀನಾದವರು ಅಂತಾ ಲ್ಯಾಂಪು ಉಪಯೋಗಿಸುತ್ತಾರೋ  ಏನೋ ಎಂದು ಅವಳು ಅಂದುಕೊಂಡಿದ್ದಳು. ಇಂತಹ ಲ್ಯಾಂಪುಗಳಲ್ಲಾದರೆ ಓದಲು ಸ್ವಲ್ಪ ಆರಾಮವೆನಿಸುತ್ತಿತ್ತು. ಹೊಗೆ ಮುಖಕ್ಕೆ ಬಡಿಯುವುದಿಲ್ಲ ಮತ್ತು ಜಾಸ್ತಿ ಪ್ರಕಾಶ ಬೀರುತ್ತಿತ್ತು. ಅವರ ಮನೆಯ ಎಡಬದಿಯಲ್ಲಿ ಒಂದು ಸಪೂರ ಚಿಟ್ಟೆ (ದಂಡೆ ) . ಅದರ ಕೆಳಗೆ ಗದ್ದೆ. ಅಲ್ಲಿ ಉದ್ದಾನುದ್ದಕ್ಕೆ ಊರಿನ ಎಲ್ಲರ ಮನೆಯ ಗದ್ದೆಗಳು ಹಬ್ಬಿಕೊಂಡಿದ್ದವು. ಗದ್ದೆಯ ಇನ್ನೊಂದು ಬದಿಗೆ ಕಾಡು . ಮನೆಯ ಬಲಭಾಗದಲ್ಲಿ ತೋಟ; ಅದನ್ನು ದಾಟಿದರೆ ಕಾಡು. ಇಂತಹ ಗದ್ದೆ, ಕಾಡುಗಳ ನಡುವೆ ರಾತ್ರಿಯ ದಟ್ಟಕತ್ತಲು, ನೀರವತೆ…. ನಡುನಡುವೆ ಇರುಳ ಸದ್ದುಗಳು, ಕೆಲವೊಮ್ಮೆ ತೋಟದ ಕಡೆಯಿಂದ ಗುಮ್ಮಗಳ ಕೂಗು. ಒಂದು ಗುಮ್ಮ ‘ಹೂಂ’ ಎಂದರೆ ಇನ್ನೊಂದು ಗುಮ್ಮ ‘ಹೂಂಊಂಹೂಂ’ ಎಂದು ಉತ್ತರ ಕೊಡುತ್ತಿತ್ತು! ಹಾಡಿಯಲ್ಲಿ ನೀರಿಗೆ ಕಲ್ಲು ಹಾಕಿದಂತೆ ಕೂಗುವ ಯಾವುದೋ ರಾತ್ರಿಹಕ್ಕಿಯ ಕೂಗು . ಆಗಾಗ ನಾಯಿಗಳ ನೀಳ ಬೊಗಳು. ಮಳೆಗಾಲವಾದರೆ ಮನೆಯೆದುರಿನ ಗದ್ದೆಯಲ್ಲಿ ಅಸಂಖ್ಯಾತ ಕಪ್ಪೆಗಳ, ಕೀಟಗಳ  ಸದ್ದು ಅಥವಾ’ಜೈಲ್’ ಎಂದು ಸುರಿಯುವ ಮಳೆಯ ಶಬ್ದ. ಮನೆಯೊಳಗೆ ಕುಳಿತು ಓದಿನಲ್ಲಿ ಮುಳುಗುವ ವಿಜಿಗೆ ಸುತ್ತಲಿನ ಪರಿಸರ ನಿಜಕ್ಕೂ ಸಹಕಾರಿಯಾಗಿತ್ತು. ಓದು ಎಂದರೆ ಬರೀ ಶಾಲೆ ಪುಸ್ತಕದ ಓದಷ್ಟೇ ಅಲ್ಲ, ಆರನೇ ತರಗತಿಯಲ್ಲೇ ಅವಳು ಕತೆ ಕಾದಂಬರಿಗಳನ್ನು ಓದಲು ಶುರು ಮಾಡಿದ್ದಳು. ಅವರ ಮನೆಯಲ್ಲಿದ್ದ ಕುವೆಂಪು, ಕಾರಂತರ ಪುಸ್ತಕಗಳು ಮತ್ತು ಇತರ ಪುಸ್ತಕಗಳು, ವಾರಪತ್ರಿಕೆ, ಮಾಸ ಪತ್ರಿಕೆಗಳನ್ನು ಓದುತ್ತಿದ್ದಳು.  ಹಗಲೆಲ್ಲ ಶಾಲೆ, ಮನೆಕೆಲಸ ಹೀಗೆ ಸಮಯ ಕಳೆದುಹೋಗುತ್ತಿತ್ತು. ರಾತ್ರಿ ಶಾಲೆಯ ಓದಿನ ನಂತರ ಕಥೆ ಪುಸ್ತಕಗಳನ್ನು ಓದುವುದು ಸ್ವಲ್ಪ ದೊಡ್ಡವಳಾಗುತ್ತಿದ್ದಂತೆ ಪ್ರಾರಂಭವಾಗಿ ಮುಂದುವರೆಯಿತು. ಶಾಲೆಯ ಓದು ಅನಿವಾರ್ಯವಾಗಿತ್ತು ; ಅದಲ್ಲದೆ ಓದಲೇಬೇಕೆಂಬ ಛಲ, ಹಠವೂ ಇತ್ತು. ಇತರ ಪುಸ್ತಕಗಳ ಓದು ಮಾತ್ರ ಹೊಸ ಲೋಕವೊಂದನ್ನು ಪರಿಚಯಿಸಲು ಸಹಕಾರಿಯಾಯಿತು. ***

ಜಂಬಿಕೊಳ್ಳಿ ಮತ್ತು ಪುಟ್ಟವಿಜಿ Read Post »

ಕಾವ್ಯಯಾನ

ಮನುಜ ಮತ

ಕವಿತೆ ರೇಶ್ಮಾಗುಳೇದಗುಡ್ಡಾಕರ್ ಗೆಲ್ಲ ಬೇಕಿದೆ ಕ್ಷಣ ಕ್ಷಣಕ್ಷಣಕೂಹೊಸ ಅವತಾರದಿದಂದ ಮರಳುಮಾಡುವಹನಿ ವಿಷಕೂ ಹೆಣದ ಹೊಳೆಹರಿಸುವಅಂತರಂಗದ ಯುದ್ದವ ನೆಡ ಬೇಕಿದ ಮಾನವೀಯತೆ ಸಸಿಯಬೆಳಸಿ ಉಳಿಸ ಬೇಕಿದೆ ಮನದರಹದಾರಿಯತುಂಬಾ ಪ್ರೀತಿಯನೆರಳ ಪಡೆಯಲು ಬದುಕಿನಲ್ಲಿ ಒತ್ತರಿಸಿ ಬರುವ ದುಃಖ ವ ಹತ್ತಿಕುವಬದಲು ಒರೆಸುವ ನೊಂದ ಕಣ್ಣುಗಳನುಮರೆಯುವ ನಮ್ಮೊಡಲ ಬೇನೆಯನುನಿಸ್ವಾರ್ಥ ದ ತೊಡೆತಟ್ಟಿ ಆಖಾಡಕೆಇಳಿಯುವ “ನಾನು “ಎಂಬ ಅಹಂಗೆಲ್ಲುತ ಸಾಗುವ ಬಾಳ ಪಯಣವ ಊರು ಯಾವುದಾದರೇನು ದಾರಿಯಾವುದಾದರೇನು ನಾನು ನನ್ನೋಳಗೆ ಇರುವ ನೀವು ಒಂದೇ ಅಲ್ಲವೇನು?ನಾಲಿಗೆಯ ಬಂದೂಕು ಮಾಡಿಬದುಕಿದರೆ ಮನುಷ್ಯ ತ್ವ ಉಳಿಯುವದೇನು? ***********************

ಮನುಜ ಮತ Read Post »

ಕಾವ್ಯಯಾನ, ಗಝಲ್

ಗಝಲ್

ಗಝಲ್ ನೂರ್ ಸಾಘರ್ ಹಾದಿಗಳಿಂದ ಹಾದಿಗಳು ಹಾಯಿದಷ್ಟು ಕೈಮರಗಳಿವೆ ಇಲ್ಲಿ ಸಖಿಬೀದಿಗಳಿಂದ ಬೀದಿಗೆ ಬದುಕುಗಳು ಬೆತ್ತಲಾಗಿವೆ ಇಲ್ಲಿ ಸಖಿ ಜಗದ ಒಡಲು ಮನದ ಕಡಲುತಟ್ಟದಿದ್ದರೂ ಮುಟ್ಟದಿದ್ದರೂ ಔರ್ವ ಸ್ಪರ್ಶದಲೆಗಳಿವೆ ಇಲ್ಲಿ ಸಖಿ ಒಂದೇ ಒಂದು ಮಾತಿನ ಶಬ್ದಗಳು ಬಯಲಲಿ ಬಯಲಾಯಿತುಅರಿತು ಅರಿಯದ ಮರೆತು ಮರೆಯದ ಪುರಾವೆಗಳಿವೆ ಇಲ್ಲಿ ಸಖಿ ಬಾಳು ಬಿಕ್ಕಳಿಕೆಯ ಕಥೆಗಳಿವೆ ನೂರಾರು ಅನಾಥದ್ದು ಅನಾತ್ಮದ್ದು ಇನ್ನು…ತಡೆದರೂ ತಡೆಯದ ಪಡೆದರೂ ಪಡೆಯದ ನೋವುಗಳಿವೆ ಇಲ್ಲಿ ಸಖಿ ಕದವಿಲ್ಲದ ಎದೆಯನು ಪದಗಳಿಂದ ಆವರಿಸಲಾಗದುತಬಿದ ತಬ್ಬದ ಬಾಹುಗಳನು ಕಲ್ಪಿಸಲು ಖಾಲಿ ಕನಸುಗಳಿವೆ ಇಲ್ಲಿ ಸಖಿ *************

ಗಝಲ್ Read Post »

ಕಾವ್ಯಯಾನ

ಮುನಿಸು ಸೊಗಸು

ಕವಿತೆ ರೇಖಾ ಭಟ್ ಹೋದವಾರಮೂಲೆ ಮೂಲೆ ಹುಡುಕಿಹೊಸಕಿ ಹೊರಹಾಕಿದ ಮುನಿಸುಅದಾವ ಕಿಂಡಿಯಲ್ಲಿಒಳಸೇರಿತೋಕಾಣೆಈಗ ಮತ್ತೆ ಬಲೆ ಹಬ್ಬುತಿದೆಒಬ್ಬರಿಗೊಬ್ಬರು ಕಾಣದಷ್ಟುದಟ್ಟವಾಗಿ ಎಲ್ಲೆಲ್ಲೂಬೆಳಕಿನ ಹೂಗಳೇ ಅರಳಿದಕನಸು ಕಾಣುತ್ತಕತ್ತಲೆ ಬೇರಿಗೆನೀರೆರೆಯಲು ಮರೆತಾಗಲೇನಗು ಮಾಯಮನದ ಅರಸನಂತಿದ್ದಸರಸ ಸರಿದು ಹೋಗಿ: ಕಿರೀಟವ ಮುನಿಸು ಧರಿಸಿ ನಿಂತಿದ್ದುನಾವು ಅಡಿಯಾಳಾಗಿನಮ್ಮೊಳಗೆ ಅಡಗಿಕೊಂಡಿದ್ದು ಅವನೇ ಮಾತಾಡಲಿ ಎನ್ನುವ ನಾನುನಾನೇ ಏಕೆ ಮೊದಲು ಎಂಬುವ ಆತಇನ್ನೆಷ್ಟು ಹೊತ್ತುಅಹಮ್ಮುಗಳನ್ನೇ ಹೊದ್ದು ಮಲಗುವುದು!? ಆಗಲೇಒಳಸೆಲೆಯ ಒಲುಮೆಯಿಂದಹೊಸ ಸೂತ್ರವೊಂದು ಸಿದ್ಧವಾಗಿಪರದೆ ಸರಿಯುತ್ತದೆಓಡಿಹೋದ ಅರಸ ಮತ್ತೆಸಿಂಹಾಸನ ಏರುತ್ತಾನೆನಾವು ಕಣ್ಣಲ್ಲೇ ನಗುತ್ತೇವೆ *************

ಮುನಿಸು ಸೊಗಸು Read Post »

ಅಂಕಣ ಸಂಗಾತಿ, ದಿಕ್ಸೂಚಿ

ಭಯದ ಬಗ್ಗೆ ಭಯ ಬೇಡ

ಇಂದಿನ ಆಧುನಿಕ ಗಡಿಬಿಡಿ ಜೀವನ ಶೈಲಿಯು ನಮ್ಮ  ಮನಸ್ಸಿನ ಮೆಲೆ ಅನೇಕ ದುಷ್ಪರಿಣಾಮಗಳನ್ನು ಬೀರುತ್ತಿದೆ. ಅದರಲ್ಲಿ ಭಯವು ಪ್ರಮುಖವಾಗಿದೆ. ಭಯದ ಜೊತೆಗೆ ಉತ್ಸುಕತೆ ಹೆಚ್ಚುತ್ತಿದೆ. ಇವೆರಡೂ ಮಾನವನ ಸಹಜ ಗುಣಗಳಾದರೂ ಇತ್ತೀಚಿನ ದಿನಮಾನಗಳಲ್ಲಿ ಇವು ನಮ್ಮ ನಿಕಟ ಸಂಗಾತಿಗಳಾಗಿವೆ. ಮನಸ್ಸಿನಲ್ಲಿ ಭಯ ಮೂಡಿತೆಂದರೆ ಅದರಿಂದ ಹೊರಬರುವದು ಅಷ್ಟು ಸುಲಭದ ಮಾತಲ್ಲ.         ಮಕ್ಕಳು ಯಾವ ಯಾವುದೋ ವಿಷಯಕ್ಕೆ ಭಯಗೊಳ್ಳುತ್ತವೆ. ಭಯ ಕೇವಲ ಮಕ್ಕಳಿಗೆ ಅಷ್ಟೇ ಅಲ್ಲ ದೊಡ್ಡವರಿಗೂ ಕಾಡುವ ಮಾನಸಿಕ ಸಮಸ್ಯೆ. ಭಯ ಅಂದರೇನು? ಅದು ಏಕೆ ಉಂಟಾಗುತ್ತದೆ ಅದನ್ನು ಹೇಗೆ ನಿವಾರಿಸುವುದು ಎಂಬ ಪ್ರಶ್ನೆಗಳು ನಮ್ಮಲ್ಲಿ  ಅದೆಷ್ಟೋ ಬಾರಿ ಸುಳಿಯುತ್ತವೆ. ಭಯ ಅಂದರೆ ಏನು ಅಂತ ಹೇಳೋಕೆ ಆಗಲ್ಲ ಆದರೆ ಅದನ್ನು ಒಂದಿಲ್ಲೊಂದು ಸಂದರ್ಭದಲ್ಲಿ ನಾವು ಅನುಭವಿಸುತ್ತೇವೆ. ಇದು ಮನಸ್ಸಿನ ನಕಾರಾತ್ಮಕ ಭಾವನೆ.  ಭಯ ಎಂದರೇನು?   ನಮ್ಮ ಶಕ್ತಿಗೆ ಮೀರಿದ ಅಸಂಭಾವ್ಯ ವಿಚಾರವು ನಮ್ಮ ಮನಸ್ಸಿಗೆ ಹೊಕ್ಕಿತೆಂದರೆ ಆಗ ನಮ್ಮಲ್ಲಿ ನಾವು ಏನೋ ಕಲ್ಪಿಸಿಕೊಳ್ಳುತ್ತೇವೆ. ಇಂತಹ ವಾಸ್ತವವಲ್ಲದ ಕಲ್ಪನೆಗಳಿಗೆ ಒಂದು ಸ್ಪಷ್ಟ ಚಿತ್ರಣವನ್ನು ಸೃಷ್ಟಿಸಿಕೊಂಡು ನೋಡಲು ಶುರು ಮಾಡುತ್ತೇವೆ. ಆಗ ಮನದಲ್ಲಿ ಸಾವಕಾಶವಾಗಿ ಭಯವು ಆವರಿಸಕೊಳ್ಳತೊಡಗುತ್ತದೆ. ನಾವು ಸೃಷ್ಟಿಸಿಕೊಂಡ ಕಾಲ್ಪನಿಕ ಚಿತ್ರಣವು ಕ್ರಮೇಣ ತನ್ನ ಸಾಮ್ರಾಜ್ಯವನ್ನು ಸ್ಥಾಪಿಸಿ ನಮ್ಮನ್ನು ಅಧೋಗತಿಗೆ ತಳ್ಳುತ್ತದೆ.          ಬಹಳಷ್ಟು ಬಾರಿ ಭಯವು ನಮ್ಮ ಭ್ರಮೆಯೇ ಆಗಿರುತ್ತದೆ. ಇಲ್ಲದ್ದನ್ನು ಇದ್ದ ಹಾಗೆ ತಿಳಿದುಕೊಳ್ಳುತ್ತೇವೆ. ಇದು ಒಂದು ಭಾವನಾತ್ಮಕ ಅನುಭವ. ಮನದಲ್ಲಿ ಆತಂಕ ಭಾವ ಸೃಷ್ಟಿ ಮಾಡಿ, ಭಾವನಾತ್ಮಕ ಅಡಚಣೆಯನ್ನುಂಟು ಮಾಡುತ್ತದೆ. ಭಯದಿಂದಾಗಿ ನಮ್ಮ ಜಾಗೃತ ಮನಸ್ಸು ನೋವನ್ನು ಅನುಭವಿಸುತ್ತದೆ. ನೋವಿನಿಂದ ಹೊರಬರಲು ನಮ್ಮ ಮನಸ್ಸು ಒದ್ದಾಡುತ್ತದೆ. ಭಯ ತಕ್ಕಷ್ಟು ಪ್ರಮಾಣದಲ್ಲಿದ್ದರೆ ಎಚ್ಚರಿಕೆಯ ಸಂಕೇತವಾಗಿ ವರ್ತಿಸುತ್ತದೆ. ಇಲ್ಲವಾದಲ್ಲಿ ಮಾನಸಿಕ ವ್ಯಾಧಿಯಾಗಿ ಕಾಡುತ್ತದೆ.          ಭಯ ಉಂಟಾಗೋದು ಯಾವಾಗ?     ನಾಳೆ ಏನಾಗುತ್ತದೆಯೋ ಏನೊ ಎಂಬ ಚಿಂತೆಯು ಭಯವಾಗಿ ಪರಿವರ್ತನೆಯಾಗುತ್ತದೆ. ಯಾವುದೇ ವಿಷಯದ ಬಗೆಗೆ ನಿರಾಶಾದಾಯಕವಾಗಿ ಆಲೋಚಿಸುವದು, ಸುಮ್ಮನೆ ಏನನ್ನೋ ಇಲ್ಲದ್ದನ್ನು ಊಹಿಸಿಕೊಳ್ಳುವದು,ಹಿಂದೆ ನಡೆದು ಹೋದ ಕಹಿ ಘಟನೆಗಳನ್ನು ಮೇಲಿಂದ ಮೇಲೆ ನೆನಪು ಮಾಡಿಕೊಳ್ಳುವದು, ನಾನೆಲ್ಲಿ ಸೋತು ಹೋಗುತ್ತೇನೋ ಎಂಬ ಸೋಲಿನ ಆತಂಕ, ನನಗಾರೂ ಇಲ್ಲ ನಾನು ಏಕಾಂಗಿ ಎಂಬ ಭಾವ, ಪರರು ನನಗಿಂತ ಮುಂದೆ ಹೋಗುತ್ತಿದ್ದಾರೆ ಎಂಬ ಮತ್ಸರ ಭಾವ ನಮ್ಮಲ್ಲಿ ಭಯವನ್ನು ಹುಟ್ಟು ಹಾಕುತ್ತವೆ. ನಾವು ಅಪಾಯದಲ್ಲಿ ದ್ದಾಗ ನಮ್ಮ ಜೀವನದ ಬಗ್ಗೆ ಹೆದರಿಕೆಯಾಗುತ್ತದೆ.    ಯಾವುದಕ್ಕೆ ಭಯಗೊಳ್ಳುತ್ತೇವೆ?     ಚಿಕ್ಕ ಪುಟ್ಟ ವಿಷಯಗಳಿಗೂ ಮನಸ್ಸು ಭಯಗೊಳ್ಳುತ್ತದೆ. ಇದು ಒಂದು ತೆರನಾದ ಮಾನಸಿಕ ಸಂಘರ್ಷ. ಇದಕ್ಕೆ ಫೋಬಿಯೋ ಅಂತಲೂ ಕರೆಯುತ್ತಾರೆ. ಕೆಲವರಿಗೆ ಕಾಡುಪ್ರಾಣಿಗಳೆಂದರೆ ಭಯ. ಇನ್ನೂ ಕೆಲವರಿಗೆ ಸಾಕು ಪ್ರಾಣಿಗಳಾದ ನಾಯಿ ಬೆಕ್ಕು ಕಂಡರೂ  ಭಯ. ಮಳೆ ಗುಡುಗು ಮಿಂಚಿಗೂ ಹೆದರುತ್ತಾರೆ. ವಿಚಿತ್ರವೆಂದರೆ ಕೆಲವರು ಜನರನ್ನು ಕಂಡರೆ ಕಾಡು ಪ್ರಾಣಿ ನೋಡಿದ ಥರ ಭಯಗೊಳುತ್ತಾರೆ. ಆಹಾರದ ಭಯ, ಎತ್ತರ ಜಾಗದ ಭಯ, ಬಸ್ಸಿನಲ್ಲಿ , ರೈಲಿನಲ್ಲಿ ವಿಮಾನದಲ್ಲಿ ಪ್ರಯಾಣ ಮಾಡುವುದೆಂದರೆ ಭಯ ಇನ್ನು ಕೆಲವರು ನೀರು ಕಂಡರೆ ಹೆದರುತ್ತಾರೆ. ಅಂದರೆ ಭಯ ಎಲ್ಲ ಹಂತಗಳಲ್ಲಿ ಇದ್ದೇ ಇರುತ್ತದೆ.ಒಬ್ಬೊಬ್ಬರಿಗೆ ಒಂದೊಂದನ್ನು ಕಂಡರೆ ಭಯ. ಆಫೀಸಿಗೆ ಹೋದ ಗಂಡ, ಸ್ಕೂಲಿಗೆ ಹೋದ ಮಕ್ಕಳು ಮನೆಗೆ ಸರಿಯಾದ ಸಮಯಕ್ಕೆ ಮರಳಿ ಬರದಿದ್ದರೂ ಭಯಗೊಳ್ಳುವ ಪ್ರಸಂಗಗಳಿವೆ.  ನಾವು ಧೈರ್ಯವಂತರು ಎಂದು ಎಷ್ಟೋ ಜಂಭ ಕೊಚ್ಚಿಕೊಂಡರೂ ಭಯಗೊಳ್ಳುತ್ತೇವೆ ಎಲ್ಲಕ್ಕಿಂತ ದೊಡ್ಡ ಭಯ ಎಂದರೆ ಸಾವಿನ ಭಯ. ಈ ಭಯ ನಮ್ಮ ಅಸ್ತಿತ್ವಕ್ಕೆ ಸಂಬಂಧಿಸಿದ್ದು. ಎಲ್ಲಿ ನಮ್ಮ ಪ್ರಾಣಕ್ಕೆ ಸಂಚಕಾರ ಬರುತ್ತೇನೋ ಎಂದು ಎಷ್ಟೋ ಬಾರಿ ಭಯಗೊಳ್ಳುತ್ತೇವೆ.             ಭಯದ ಲಕ್ಷಣಗಳೇನು?      ಭಯವುಂಟಾದಾಗ ಮೈಂಡ್ ಫುಲ್ ಬ್ಲಾಂಕ್ ಆಗಿರುತ್ತೆ ಯಾವುದೇ ವಿಚಾರಗಳು ಆಲೋಚನೆಗಳು ಹೊಳೆಯುವುದಿಲ್ಲ. ಮೈಯೆಲ್ಲ ಬೆವರುತ್ತೆ.ಕೈ ಕಾಲುಗಳಲ್ಲಿ ಶಕ್ತಿಯಿಲ್ಲದಂತೆ ಭಾಸವಾಗುತ್ತೆ. ಮಾತೇ ಹೊರಡೋದಿಲ್ಲ. ಹೊರಡಿದರೂ ತೊದಲುತ್ತೆ. ಭಯದ ವಿಚಾರವನ್ನು ಹೊರತುಪಡಿಸಿ ಬೇರೆ ಯಾವ ವಿಚಾರಗಳು ಮನಸ್ಸಿನಲ್ಲಿ ಸುಳಿಯಲಾರವು. ವಿಚಾರಗಳೆಲ್ಲ ಅಸ್ತವ್ಯಸ್ತವಾಗುವುವು. ಅಂದುಕೊಂಡ ಯಾವ ಕೆಲಸವನ್ನು ಮಾಡಲು ಸಾಧ್ಯವಾಗುವುದಿಲ್ಲ. ಸಣ್ಣ ಪುಟ್ಟ ವಿಷಯಗಳಿಗೆ ಬೆಚ್ಚಿ ಬೀಳುವುದು ಅಥವಾ ಇದಕ್ಕೆ ತದ್ವಿರುದ್ಧವಾಗಿ ಗಂಭೀರ ವಿಷಯಗಳಿಗೂ ಪ್ರತಿಕ್ರಿಯಿಸದೆ ಮೌನವಾಗಿರುವದು ಇವೆಲ್ಲ ಭಯದ ಮುಖ್ಯ ಲಕ್ಷಣಗಳು.            ಭಯ ತಡೆಯೋಕೆ ಏನು ಉಪಾಯ ?       ಪ್ರತಿಯೊಂದು ಭಯದಿಂದಲೂ ನಾವು ಮುಕ್ತರಾಗಬಹುದು. ಭಯ ತಡೆಯುವ ಉಪಾಯಗಳು ಕಠಿಣವೆನಿಸಿದರೂ ಅಸಾಧ್ಯವೇನಲ್ಲ. ನಾವು ಭಯಗೊಳ್ಳುತ್ತೇವೆ ಎನ್ನುವ ಸಂಗತಿಯನ್ನು ಒಪ್ಪಿಕೊಳ್ಳುವುದು.ಯಾವ ವಿಷಯದ ಬಗ್ಗೆ ಭಯವಿದೆಯೋ ಎಂಬುನ್ನು ತಿಳಿದು ಅದನ್ನು ಮುಕ್ತವಾಗಿ  ಆತ್ಮೀಯರೊಂದಿಗೆ ಚರ್ಚಿಸುವದು.ಯಾವಾಗಲೂ ಕೆಲಸದಲ್ಲಿ  ತೊಡಗಿಸಿಕೊಳ್ಳುವದು. ಮೂಢನಂಬಿಕೆ ಮತ್ತು ಅಪಶಕುನಗಳನ್ನು ನಂಬದೆ ಇರುವದು. ಸಕಾರಾತ್ಮಕ ದೃಷ್ಟಿಕೋನ ಬೆಳೆಸಿಕೊಳ್ಳುವುದು. ಪರಿಸ್ತಿತಿಗಳನ್ನು ಕೂಲಂಕುಷವಾಗಿ ಪರಿಶೀಲಿಸಿ ನಿರ್ಣಯ ಕೈಗೊಳ್ಳುವದು ಅನುಮಾನಕ್ಕೆ ಆಸ್ಪದ ಕೊಡದಿರುವದು ಭಯ ತಕ್ಕಷ್ಟು ಪ್ರಮಾಣದಲ್ಲಿದ್ದರೆ ನಮಗೆ ಎಚ್ಚರಿಕೆಯಂತೆ ವರ್ತಿಸುತ್ತದೆ ಎಂದು ತಿಳಿದುಕೊಳ್ಳುವುದು.ಭಯ ನಿವಾರಿಸುವುದಕ್ಕೆ ಪ್ರಯತ್ನಿಸಿ ತಜ್ಞ ವೈಜ್ಞರನ್ನು ಭೇಟಿ ಮಾಡುವುದು. ನಿಜವಾದ ಧೈರ್ಯವನ್ನು ಮನಸ್ಸಿಗೆ ತುಂಬಿಕೊಳ್ಳುವದು ಆಶಾವಾದಿಯಾಗಿರುವದು. ನಾನು ಧೈರ್ಯವಂತ ಎಂದು ನನ್ನಷ್ಟಕ್ಕೆ ನಾವೇ ಹೇಳಿಕೊಳ್ಳುವದು ಎಂದರೆ ಸೆಲ್ಪ್ ಹಿಪ್ನಾಟಿಸಂ ಮಾಡಿಕೊಳ್ಳುವದು.  ವಿವೇಕಾನಂದರ ವಾಣಿಯಂತೆ ‘ನಿಮ್ಮಿಂದ ನೀವೇ ಉದ್ದಾರವಾಗಬೇಕು. ಸ್ನೇಹಿತನೆ ನಿನಗೆ ಯಾರೂ ಸಹಾಯ ಮಾಡಲಾರರು. ನಿನಗೆ ನೀನೇ ದೊಡ್ಡ ಶತ್ರು . ನಿನಗೆ ನೀನೇ  ದೊಡ್ಡ ಮಿತ್ರ ಹಾಗಾದರೆ ನೀನು ಆತ್ಮವನ್ನು ದೃಢವಾಗಿ ಹಿಡಿದುಕೊ ಎದ್ದು  ನಿಲ್ಲು ಅಂಜಬೇಕಾಗಿಲ್ಲ. ನೀನು ಜಗತ್ತನ್ನೇ ಅಲ್ಲಾಡಿಸಲು  ಸಮರ್ಥನಾಗುವೆ. ಶಕ್ತಿಯ ರಹಸ್ಯ ವ್ಯಕ್ತಿ ಮತ್ತು ಆತನ ಜೀವನವೇ ಹೊರತು ಮತ್ತಾವುದು ಅಲ್ಲವೆಂಬುವುದನ್ನು ನೆನಪಿನಲ್ಲಿಡಿ’.          ಸ್ವಾಮಿ ವಿವೇಕಾನಂದರ ವಿವೇಕಭರಿತವಾದ ಈ ವಾಣಿಯನ್ನು  ಮೈಗೂಡಿಸಿಕೊಳ್ಳಲು ಪ್ರಯತ್ನಿಸುತ್ತ ಕೇವಲ ದೈಹಿಕ ಆರೋಗ್ಯದ ಕಡೆಗೆ ಗಮನ ಕೊಡದೆ ಮಾನಸಿಕ ಆರೋಗ್ಯದ ಬಗೆಗೆ ಗಮನವಹಿಸಿ ಆಗಾಗ ತಜ್ಞ ವೈದ್ಯರನ್ನು ಭೇಟಿಯಾಗಿ ನಮ್ಮ ವರ್ತನೆಯಲ್ಲಾದ ಬದಲಾವಣೆಯ ಕುರಿತು ಚರ್ಚಿಸಿ, ಅವರ ಸಲಹೆಗಳನ್ನು ಪಾಲಿಸಿದರೆ, ಭಯ ಮಂಗಮಾಯವಾಗುವದು ಖಚಿತ. ***************

ಭಯದ ಬಗ್ಗೆ ಭಯ ಬೇಡ Read Post »

ಅಂಕಣ ಸಂಗಾತಿ, ಮುಖಾಮುಖಿ

ಶಾಂತಿ ಬೀಜಗಳ ಜತನ’

ಸಾಹಿತ್ಯದ ಬರವಣಿಗೆ ಗಂಭೀರವಾದಂತೆಲ್ಲಾ ಲೇಖಕರ ಜವಾಬ್ದಾರಿ ಹೆಚ್ಚುತ್ತದೆ  ಡಾ. ಪ್ರಕಾಶ ಗ. ಖಾಡೆ  ಬಾಗಲಕೋಟೆಯಲ್ಲಿ ಅಧ್ಯಾಪಕರಾಗಿರುವ ಡಾ. ಪ್ರಕಾಶ ಗಣಪತಿ ಖಾಡೆ ಅವರು ಜಮಖಂಡಿ ತಾಲೂಕಿನ ತೊದಲಬಾಗಿ ಗ್ರಾಮದಲ್ಲಿ ೧೦-೦೬-೧೯೬೫ ರಂದು ಜನಿಸಿದರು. ಓದಿದ್ದು ತೊದಲಬಾಗಿ, ಕೆರೂರ (ಬದಾಮಿ), ಇಳಕಲ್ಲ ಹಾಗೂ ಧಾರವಾಡಗಳಲ್ಲಿ, ಕನ್ನಡದಲ್ಲಿ ಎಂ.ಎ.ಪ್ರಥಮ ದರ್ಜೆಯಲ್ಲಿ ಪಾಸಾಗಿ , ೨೦೦೫ರಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ “ನವೋದಯ ಕಾವ್ಯದ ಮೇಲೆ ಜಾನಪದದ ಪ್ರಭಾವ” ಮಹಾ ಪ್ರಬಂಧಕ್ಕೆ ಪಿಎಚ್.ಡಿ. ಪದವಿ ಪಡೆದರು. ಬೈಲಹೊಂಗಲ,ಚಂದರಗಿ ಕಾಲೇಜುಗಳಲ್ಲಿ ಕನ್ನಡ ಉಪನ್ಯಾಸಕರಾಗಿ ,ಬಾಗಲಕೋಟ ಸಕ್ರಿ ಪತ್ರಿಕೋದ್ಯಮ ವಿಭಾಗ ಮತ್ತು ಇಳಕಲ್ಲ ವಿಜಯ ಚಿತ್ರಕಲಾ ಸ್ನಾತಕೋತ್ತರ ಕಾಲೇಜು ವಿಭಾಗದಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿ ಸೇವೆ ಮಾಡುತ್ತಿದ್ದಾರೆ.‌ ಸಾಹಿತ್ಯ, ಪತ್ರಿಕೋದ್ಯಮ, ರಂಗಭೂಮಿ, ಜಾನಪದ, ಶಿಕ್ಷಣ, ಸಂಶೋಧನೆ ಹಾಗೂ ಸಂಘಟನೆ ಕ್ಷೇತ್ರದಲ್ಲಿ ಸದಾ ಕ್ರಿಯಾಶೀಲ ವ್ಯಕ್ತಿತ್ವ, ಕನ್ನಡದ ಪ್ರಮುಖ ಪತ್ರಿಕೆ, ಆಕಾಶವಾಣಿ, ದೂರದರ್ಶನಗಳಲ್ಲಿ ನಿರಂತರವಾಗಿ ಲೇಖನ, ಕವಿತೆ, ಕಥೆ, ವಿಮರ್ಶೆ ಪ್ರಕಟ ಮತ್ತು ಪ್ರಸಾರವಾಗಿವೆ.  ಈವರೆಗೆ ಗೀತ ಚಿಗಿತ, ಪ್ರೀತಿ ಬಟ್ಟಲು, ತೂಕದವರು, ನವೋದಯ ಕಾವ್ಯದ ಮೇಲೆ ಜಾನಪದದ ಪ್ರಭಾವ, ಕೃಷ್ಣಾ ತೀರದ ಜನಪದ ಒಗಟುಗಳು, ಮುನ್ನುಡಿ ತೋರಣ, ಜತ್ತಿ ಕಾವ್ಯಾಭಿವಂದನ, ನೆಲಮೂಲ ಸಂಸ್ಕೃತಿ,  ಕನ್ನಡ ಪತ್ರಿಕೆ ಮತ್ತು ಸಾಹಿತ್ಯ, ಜಾನಪದ ಕೋಗಿಲೆ ಗೌರಮ್ಮ ಚಲವಾದಿ, ಸಾಹಿತ್ಯ ಸಂಗತಿ ,ಮೌನ ಓದಿನ ಬೆಡಗು,ಕಣ್ಣುಗಳಿಗೆ ಮೌನ ಅರ್ಥವಾಗುತ್ತದೆ,ಶಾಂತಿ ಬೀಜಗಳ ಜತನ ಸೇರಿದಂತೆ ೨೭ ಕೃತಿಗಳನ್ನು  ಪ್ರಕಟಿಸಿದ್ದಾರೆ.‌ ಮುಧೋಳ,ಶಿವಮೊಗ್ಗ, ವಿಜಾಪುರ ಮತ್ತು ಮೈಸೂರುಗಳಲ್ಲಿ ಜರುಗಿದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಹಾಗೂ ಹಂಪಿ ಉತ್ಸವ,ಮೈಸೂರು ದಸರಾ,ನವರಸಪುರ ಉತ್ಸವಗಳಲ್ಲಿ ಕವಿತೆ ವಾಚನ. ಕೇರಳದಲ್ಲಿ ಜರುಗಿದ ಕನ್ನಡ ಸಮ್ಮೇಳನದಲ್ಲಿ ಪ್ರಬಂಧ ಮಂಡನೆ. ಉತ್ತಮ ವಾಗ್ಮಿ, ಅಪರೂಪದ ಶಿಕ್ಷಣ ಚಿಂತಕ ಡಾ. ಪ್ರಕಾಶ ಖಾಡೆ  ಬಾಗಲಕೋಟ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾಗಿಯೂ ಕಾರ್ಯನಿರ್ವಹಿದ್ದಾರೆ. ಶಾಂತಿ ಬೀಜ ಜತನದ ಕವಿ ………………………………….  ನಾಗರಾಜ ಹರಪನಹಳ್ಳಿ : ಕತೆ, ಕವಿತೆಗಳನ್ನು ಯಾಕೆ ಬರೆಯುತ್ತೀರಿ? ಪ್ರಕಾಶ್ ಖಾಡೆ ;   ಮೊದಲೆಲ್ಲ ಹೆಸರಿಗಾಗಿ ಬರೆಯಬೇಕೆನಿಸುತ್ತಿತ್ತು, ಈಗ ಹಾಗಿಲ್ಲ. ಸಾಹಿತ್ಯದ ಬರವಣಿಗೆ ಗಂಭೀರವಾದಂತೆಲ್ಲಾ ಲೇಖಕರ ಜವಾಬ್ದಾರಿ ಹೆಚ್ಚುತ್ತದೆ, ನನಗೂ ಆಗಿದ್ದು ಅದೇ. ಒಂದು ಕತೆ, ಒಂದು ಕವಿತೆ ಉಂಟು ಮಾಡುವ ಪರಿಣಾಮವಿದೆಯಲ್ಲ ಅದು ಬೆರಗು ಹುಟ್ಟಿಸುವಂಥದು. ನನ್ನ ರಚನೆಯ ಇಂಥ ಸಾಲುಗಳನ್ನು ನಾನೇ ಅನೇಕ ಬಾರಿ ಓದಿ ಬೆರಗುಗೊಂಡಿದ್ದೇನೆ. ಸಾಹಿತ್ಯ ಸಾರ್ಥಕತೆ ಕಂಡಾಗ ಅದರ ಮೌಲ್ಯ ಹೆಚ್ಚುತ್ತದೆ, ರಚನೆ ಗಂಭೀರವಾಗಿ ಸಾಗುತ್ತದೆ, ಬರಹ ತನ್ನಿಂದ ತಾನೆ ಬರೆಸಿಕೊಳ್ಳುತ್ತದೆ, ಇಲ್ಲಿ ಕವಿ ಸಣ್ಣವನಾಗಬೇಕು, ಕವಿತೆ ದೊಡ್ಡದಾಗಬೇಕು, ಇಂಥ ಭಾವ ನನ್ನಲ್ಲಿ ಬಂದ ಘಳಿಗೆಯಿಂದ ನಾನೇ ಮತ್ತೆ ಮತ್ತೇ ಕೇಳಿಕೊಳ್ಳುತ್ತೇನೆ, ಹೌದು ನಾನೇಕೆ ಬರೆಯುತ್ತೇನೆ,ಕ್ಷಮಿಸಿ ಉತ್ತರಕ್ಕಾಗಿ ಇನ್ನೂ ಹುಡುಕುತ್ತಿದ್ದೇನೆ. ಪ್ರಶ್ನೆ ; ಕತೆ ಅಥವಾ ಕವಿತೆ ಹುಟ್ಟುವ ಕ್ಷಣ ಯಾವುದು. ಉತ್ತರ : ಅದೊಂದು ಕ್ಷಣಿಕದ ಸಂದರ್ಭ,ಅದು ಹುಟ್ಟಿದ ಘಳಿಗೆಯೇ ಗೊತ್ತಾಗೊಲ್ಲ,ಒಂದು ಕತೆ ,ಒಂದು ಕವಿತೆ ಹುಟ್ಟುತ್ತಿದೆ ಎಂದರೆ ,ಅದರ ಹಿಂದೆ ನಮಗರಿವಿಲ್ಲದೇ ಅನೇಕ ಅನುಭವಗಳು ,ಸಂದರ್ಭಗಳು ರೂಪು ಪಡೆದುಕೊಳ್ಳತ್ತಿರುತ್ತವೆ,ಒಂದು ರಚನೆ ಪೂರ್ಣವಾದಾಗ ಅದರ ನಿಲುಗಡೆ,ಈ ನಿಲುಗಡೆಯ ಹಿಂದಿನ ಚಲನೆಗಳು ಇವತ್ತಿಗೂ ಲೆಕ್ಕಕ್ಕೆ ಸಿಗುತ್ತಿಲ್ಲ,ಹಾಗಾಗಿ ಆ ಕ್ಷಣ ಎಂಬುದು ಒಂದು ಬಯಲು,ಒಂದು ಬೆಳಕು. ಪ್ರಶ್ನೆ ; ನಿಮ್ಮ ಕವಿತೆಗಳ ವಸ್ತು, ವ್ಯಾಪ್ತಿ ಹೆಚ್ಚಾಗಿ ಯಾವುದು ? ಪದೇ ಪದೇ ಕಾಡುವ ವಿಷಯ ಯಾವುದು.?  ಉತ್ತರ : ಮೂರು ದಶಕಗಳ ಕಾಲ ನನ್ನ ಕಾವ್ಯದ ಪಯಣ, ನಾನು ಬರೆವ ಹೊತ್ತಿಗೆ ನವ್ಯ ಮರೆಯಾಗಿ ,ಬಂಡಾಯ ಕಾವ್ಯದ ಬಿರುಸು ವಿಜೃಂಭಿಸುತ್ತಿತ್ತು. ಈಗ ಎಲ್ಲ ನಿರಾಳ ಹೊಸ ಕಾಲ, ಹೊಸ ಓದುಗ ಬಳಗ, ಅದರಲ್ಲೂ ವಿಶ್ವವ್ಯಾಪಿ. ಬಹುಬೇಗ ಕಾವ್ಯ ತಲುಪುವ ಕಾಲ.ಈಗಂತೂ ತುಂಬಾ ಅವಸರದ ಜಗತ್ತು, ಎಲ್ಲವನ್ನೂ ಅಂದರೆ ಮೇಘಸ್ಪೋಟ ಮಳೆ, ಪ್ರವಾಹ, ಪ್ರಳಯ ಇಂಥ ಪ್ರಾಕೃತಿಕ ಅವಘಡಗಳನ್ನೂ ಕಾಣಬೇಕಾದ ಕೆಟ್ಟ ಕಾಲ.ಜನತೆಯ ನೆಮ್ಮದಿ ಕೆಡಿಸುವ ಆಗುಂತಕ ವಿಷಯಗಳು,ಹಿಂಸೆ,ದುರಾಡಳಿತ,ಭ್ರಷ್ಟಾಚಾರ ಸಾರ್ವತ್ರಿಕ,ಇಂಥ ಹೊತ್ತಲ್ಲಿ ಶಾಂತಿ,ಪ್ರೀತಿ ಹುಡಕ ಹೊರಟಿರುವುದು ನನ್ನ ಕವಿತೆಗಳ ವಸ್ತು ಮತ್ತು ವ್ಯಾಪ್ತಿ.ನನ್ನ `ಶಾಂತಿ ಬೀಜಗಳ ಜತನ’ ಕಾವ್ಯ ಸಂಕಲನವು ಇಂಥ ಆಶಯಗಳನ್ನು ಹೊತ್ತ ಮೊತ್ತ.’ ಪ್ರಶ್ನೆ ; ಕತೆ,ಕವಿತೆಗಳಲ್ಲಿ ಬಾಲ್ಯ ,ಹರೆಯ ಇಣುಕಿದೆಯೇ ? ಉತ್ತರ : ಖಂಡಿತ ಸರ್,ಈಗಲೂ ಬಾಲ್ಯವನ್ನು ಕಳೆದ ನನ್ನ ತೊದಲಬಾಗಿಯ (ಜಮಖಂಡಿ ತಾಲೂಕು) ಹಳ್ಳಿಯ ನೆನಪುಗಳು ಕಾಡುತ್ತವೆ, ನನ್ನ ‘ಸೂರ್ಯ ಚಂದ್ರರು ಕಾವಲೋ’ ಕಥೆಯಂತೂ ನನ್ನೂರ ಪಾತ್ರಗಳನ್ನು,ಸಂದರ್ಭಗಳನ್ನು ಕಟ್ಟಿಕೊಡುತ್ತದೆ,  ನನ್ನ ‘ಮತ್ತೆ ಬಾಲ್ಯಕ್ಕೆ..’ ಕವಿತೆಯಂತೂ ಬಾಲ್ಯದ ದಿನಗಳ ಆಡೊಂಬಲ ಸಾರುತ್ತದೆ,ಸ್ವರ್ಗಕ್ಕಿಂತಲೂ ಮಿಗಿಲಾದ ಹುಟ್ಟಿಸಿದ ತಾಯಿ, ಹುಟ್ಟಿದ ಊರು ಮರೆಯಲಾದೀತೆ.? ಪ್ರಶ್ನೆ ; ಪ್ರಸ್ತುತ ರಾಜಕೀಯ ಸನ್ನಿವೇಶದ ಬಗ್ಗೆ ನಿಮ್ಮ ಪ್ರತಿಕ್ರಿಯೆ ಏನು ? ಉತ್ತರ : ಇಂದು ರಾಜಕೀಯ ಪರಿಕಲ್ಪನೆಯೇ ಬೇರೆ ಯಾಗಿದೆ,ನಾವೆಲ್ಲ ಕನ್ನಡದೊಂದಿಗೆ ರಾಜಕೀಯ ಶಾಸ್ತ್ರವನ್ನು  ಒಂದು ವಿಷಯವಾಗಿ ಪದವಿ ತರಗತಿಯಲ್ಲಿ ಓದಿದವರು, ಅಲ್ಲಿ ಓದಿದ್ದು , ಈಗ ನಡೆಯುತ್ತಿರುವುದು ತುಂಬಾ ಆತಂಕಾರಿಯಾಗಿದೆ. ಈಗ ಬದ್ಧತೆ ಎಂಬುದು ಉಳಿದಿಲ್ಲ,ಅಧಿಕಾರ ಹಣವುಳ್ಳವರ ಸೊತ್ತಾಗಿದೆ . ಮಠಗಳು ಸ್ವಂತದ ಕುಲ ,ಕುಲದವರನ್ನು ಉದ್ಧರಿಸಲು ಲಕ್ಷ್ಮಣ ರೇಖೆ ಹಾಕಿಕೊಂಡಿವೆ, ಬಲಿಷ್ಠ ಜಾತಿ,ಪಂಗಡ ನಾಯಕರು ಮುಂಚೂಣಿಯಲ್ಲಿದ್ದಾರೆ,ಸಣ್ಣ ಪುಟ್ಟ ಜಾತಿ ಜನಾಂಗದವರನ್ನು ಕೇಳುವವರೇ ಇಲ್ಲ,ಅಧಿಕಾರಕ್ಕಾಗಿ ಹೂಡುವ ತಂತ್ರಗಳು,ಬೆಳವಣಿಗೆಗಳು ಮಾನವತ್ವವನ್ನೂ ಮೀರಿ ಬೆಳೆದಿವೆ. ಭವಿಷ್ಯವಂತೂ ಬಹಳ ಕರಾಳವಾಗಿದೆ. ಕವಿಗಳು ಎಚ್ಚರವಾಗಿರಬೇಕು. ಪ್ರಶ್ನೆ ; ಧರ್ಮ,ದೇವರು ವಿಷಯದಲ್ಲಿ ನಿಮ್ಮ ನಿಲುವೇನು.? ಉತ್ತರ : ಧರ್ಮ ಮತ್ತ ದೇವರು ವಿಷಯ ನಮ್ಮ ತಿಳುವಳಿಕೆ ಹೆಚ್ಚಿದಂತೆಲ್ಲಾ ಬದಲಾಗುತ್ತಾ ಹೋಗುತ್ತದೆ. ಕಂದಾಚಾರ, ಡಾಂಭಿಕತೆಗಳನ್ನು ನಮ್ಮ ತಂದೆ ವಿರೋಧಿಸುತ್ತಿದ್ದರು,ನಮ್ಮಲ್ಲೂ ಅಂಥ ಆಲೋಚನೆಗಳನ್ನು ಬಿತ್ತಿದರು,ಹೀಗಾಗಿ ದೇವರು ಧರ್ಮದ ಬಗೆಗೆ ನಮಗೊಂದು ಸ್ಪಷ್ಠ ಕಲ್ಪನೆ ಇತ್ತು.ಕಲ್ಲು ದೇವರುಗಳಿಗಿಂತ ಮನುಷ್ಯರೊಳಗಿನ ದೇವರನ್ನು ಇವತ್ತಿಗೂ ಹುಡುಕುತ್ತಿದ್ದೇನೆ,ಅನೇಕರು ಸಿಕ್ಕಿದ್ದಾರೆ,ಹೀಗಾಗಿ ಬದುಕು ಸುಂದರವಾಗಲು ನಮಗೆ ನಂಬುಗೆ ಇರಬೇಕು, ಅದು ವಾಸ್ತವದ ನೆಲೆಯಲ್ಲಿದಷ್ಟೂ ದೇವರು  ಎಂಬುದು ಆಪ್ತವಾಗುತ್ತದೆ. ಪ್ರಶ್ನೆ ; ಪ್ರಸ್ತುತ ಸಾಂಸ್ಕೃತಿಕ ವಾತಾವರಣದ ಬಗ್ಗೆ ನಿಮಗೆ ಏನನ್ನಿಸುತ್ತದೆ.? ಉತ್ತರ : ಪ್ರಸ್ತುತ ಸಾಂಸ್ಕೃತಿಕ ವಾತಾವರಣ ಗಬ್ಬೆದ್ದು ಹೋಗಿದೆ.ನಿಜವಾದ ಸಾಂಸ್ಕೃತಿಕ ರಾಯಭಾರಿಗಳು ಆತಂಕಕ್ಕೆ ಒಳಗಾಗಿದ್ದಾರೆ. ಪ್ರಶಸ್ತಿಗಳು ಮೌಲ್ಯ ಕಳೆದುಕೊಳ್ಳುತ್ತಿವೆ.  ಗೌರವ ಡಾಕ್ಟರೇಟುಗಳ ಹೆಸರಿನಲ್ಲಿ ಯಾರು ಯಾರೋ ಪದವಿ ಕೊಡುತ್ತಿದ್ದಾರೆ, ಅಪಾತ್ರರು ಪಡೆದುಕೊಳ್ಳುತ್ತಿದ್ದಾರೆ, ಯಾವುದೇ ಪ್ರಶಸ್ತಿ ಘೋಷಣೆಯಾದರೂ ‘ಅರ್ಹರಿಗೆ ಮುಂದಿನ ಬಾರಿ’ ಎನ್ನುವಂತಾಗಿದೆ. ಸಂಸ್ಕೃತಿ ಇಲಾಖೆಯ ಅನುದಾನ ನಿಜ ಕಲಾವಿದರಿಗೆ ಸಿಗುತ್ತಿಲ್ಲ, ಇಲ್ಲಿಯೂ  ಬ್ರೋಕರುಗಳು ದುಡ್ಡು ಮಾಡಿಕೊಳ್ಳುತ್ತಿದ್ದಾರೆ. ಪ್ರಶ್ನೆ ; ಸಾಹಿತ್ಯ ವಲಯದ ರಾಜಕಾರಣದ ಬಗೆಗೆ ನೀವು ಹೇಗೆ ಪ್ರತಿಕ್ರಿಯಿಸುತ್ತೀರಿ.? ಉತ್ತರ : ಈಗಂತೂ ರಾಜಕಾರಣ ಎಲ್ಲ ಕ್ಷೇತ್ರವನ್ನೂ ವ್ಯಾಪಿಸಿದೆ, ಅದರ ರಾಕ್ಷಸ ಬಾಹುಗಳು ಎಲ್ಲವನ್ನೂ ಆಪೋಶನ ಮಾಡುತ್ತಾ ಸಾಗಿವೆ. ಕವಿ ಬರಹಗಾರರಿಗೆ ಯಾವ ಪಂಥವೂ ಇರಬಾರದು, ಆತ ಸಮಾಜವನ್ನು ಎಚ್ಚರಿಸುತ್ತ ಜನತೆಯನ್ನು ಸರಿಮಾರ್ಗಕ್ಕೆ ತರುವ ಕೆಲಸ ಮಾಡಬೇಕು. ಇಂಥ ಹೊತ್ತಲ್ಲಿ ಕವಿ ಸಮಾಜದೊಂದಿಗೆ ನಿಲ್ಲಬೇಕು, ಸಮಾಜದೊಂದಿಗೆ ಬೆರೆಯಬೇಕು, ಆದರೆ ಆಗುತ್ತಿರುವುದೇನು, ರಾಜಕಾರಣಿಗಳ ಸುತ್ತ ಗಿರಕಿ ಹೊಡೆಯತ್ತಾ, ಬೇಳೆ ಬೇಯಿಸಿಕೊಳ್ಳತ್ತಿರುವ ಇಂಥಹವರಿಂದ ನಿಜ ಸಾಹಿತಿಗಳು ಮರೆಯಲ್ಲಿಯೇ ಉಳಿಯುವ ಸಂದರ್ಭ ಬಂದಿದೆ, ಪ್ರಶಸ್ತಿಗಾಗಿ, ಪಠ್ಯ ಪುಸ್ತಕಗಳಲ್ಲಿ ಪದ್ಯ ಸೇರಿಸುವದಕ್ಕಾಗಿ, ಅಧಿಕಾರಕ್ಕಾಗಿ ಹಪಹಪಿಸುವ ಸಾಹಿತಿಗಳು ಸಮಾಜಕ್ಕೆ ಏನೂ ಸಂದೇಶ ಕೊಡಬಲ್ಲರು, ಕಾಲವೇ ಎಲ್ಲವನ್ನೂ ಉತ್ತರಿಸುತ್ತದೆ. ಹೊಸ ಬರಹಗಾರರು ಎಚ್ಚರದಿಂದಿರಬೇಕು. ಪ್ರಶ್ನೆ ; ಸಾಹಿತ್ಯದ ಬಗ್ಗೆ ನಿಮ್ಮ ಕನಸುಗಳು ಏನು.? ಉತ್ತರ : ವಾಸ್ತವದ ನೆಲೆಯಲ್ಲಿ ಬದುಕುತ್ತಿರುವ ನಮಗೆ ಆಶಾದಾಯಕವಾಗಿ ಒಂದಿಷ್ಟು ಕನಸುಗಳಿರಬೇಕು. ‘ಕವಿತೆಯ ಜೀವಂತಿಕೆಯಲ್ಲಿ ಕವಿ ಬದುಕಿದ್ದಕೆ ಸಾಕ್ಷಿಯಿದೆ’ ಎಂದು ನಂಬಿದವ ನಾನು, ಹಾಗಾಗಿ ನನ್ನ ಬರವಣಿಗೆ ಓದುಗರಲ್ಲಿ ಒಂದಿಷ್ಟು ಪರಿವರ್ತನೆ ತಂದರೆ ಅದೇ ನನ್ನ ಸಾರ್ಥಕತೆ ಎಂದುಕೊಂಡಿದ್ದೇನೆ, ನನಗೆ ಕನಸುಗಳಿವೆ ಒಂದು ಕಾದಂಬರಿ ಬರೆಯಲು ಆರಂಭಿಸಿದ್ದೇನೆ, ಬರೆಸಿಕೊಳ್ಳುತ್ತಾ ಸಾಗಿದೆ ಮುಗಿಯಬೇಕಷ್ಟೇ.. ಪ್ರಶ್ನೆ ; ನಿಮ್ಮ ಇಷ್ಟದ ಕವಿ,ಸಾಹಿತಿ ಯಾರು ? ಉತ್ತರ : ನನಗೆ ಲಂಕೇಶ, ಕಂಬಾರ, ತೇಜಸ್ವಿ ಅವರ ಬರಹಗಳು, ಬರಗೂರು,ಚಂಪಾ,ದೇವನೂರು,ಕಾಟ್ಕರ್ ಅವರ ಚಿಂತನೆಗಳು ತುಂಬಾ ಪ್ರಭಾವಿಸಿವೆ. ಜನಪದ ಹಾಡು,ಕಥೆಗಳಂತೂ ನನಗೆ ಜೀವದ್ರವ್ಯ. ಪ್ರಶ್ನೆ ; ಈಚೆಗೆ ಓದಿದ ಕೃತಿಗಳಾವವು ? ಉತ್ತರ : ಡಾ,ಸರಜೂ ಕಾಟ್ಕರ್ ಅವರ ಅನುವಾದಿತ ಕೃತಿಗಳನ್ನು ಓದುತ್ತಿದ್ದೇನೆ, ಅಲಕ್ಷಿತ ಸಾಹಿತ್ಯವನ್ನು ,ಸಾಹಿತಿಗಳನ್ನು ಮುಖ್ಯವಾಹಿನಿಗೆ ತರುವ ಅವರ ಕೆಲಸ ಮಾದರಿಯಾದುದು, ಹಾಗಾಗಿ ಅವರ ಬರಹಗಳು ಕುತೂಹಲದಿಂದ ಓದಿಸಿಕೊಂಡು ಹೋಗುತ್ತವೆ.ಹೊಸಬರ ಕಾವ್ಯಗಳನ್ನು ತಪ್ಪದೇ ಓದುತ್ತೇನೆ. ಪ್ರಶ್ನೆ ; ನಿಮಗೆ ಇಷ್ಟವಾದ ಕೆಲಸ ಯಾವುದು.? ಉತ್ತರ : ನನ್ನ ಕೆಲಸದಿಂದ ಇನ್ನೊಬ್ಬರು ಖುಷಿಯಿಂದಿರುವುದು. ಪ್ರಶ್ನೆ ; ನಿಮಗೆ ಇಷ್ಟವಾದ ಸ್ಥಳ ಯಾವುದು.? ಉತ್ತರ : ಬಾದಾಮಿ ಪರಿಸರ, ಕೊಡಗಿನ ಪ್ರಕೃತಿ, ಸಮುದ್ರದ ದಂಡೆ. ಪ್ರಶ್ನೆ ; ನಿಮ್ಮ ಪ್ರೀತಿಯ ,ನೀವು ಇಷ್ಟ ಪಡುವ ಸಿನಿಮಾ ಯಾವುದು ? ಉತ್ತರ : ಡಾ.ರಾಜಕುಮಾರ,ಮಾಧವಿ ಅಭಿನಯದ ‘ಭಾಗ್ಯದ ಲಕ್ಷ್ಮೀ ಬಾರಮ್ಮ’. ಪ್ರಶ್ನೆ ; ನೀವು ಮರೆಯಲಾಗದ ಘಟನೆ ಯಾವುದು ? ಉತ್ತರ : ನಮ್ಮ ತಂದೆ ಬದುಕಿನ ಅನೇಕ ಪಾಠಗಳನ್ನು ಹೇಳಿಕೊಟ್ಟರು,ಅವು ಯಾವ ಪಠ್ಯದಲ್ಲೂ ಇರಲಿಲ್ಲ,ಬದುಕು ಕಟ್ಟಿಕೊಳ್ಳಲು ಅಣ್ಣ ಮತ್ತು ಈಚೆಗೆ ಅಗಲಿದ ತಂದೆ ಅನೇಕ ಮರೆಯಲಾಗದ ಘಟನೆಗಳಿಗೆ ಸಾಕ್ಷಿಯಾಗುತ್ತಾರೆ. ************ ******** ಲೇಖಕರ ಬಗ್ಗೆ: ಹರಪನಹಳ್ಳಿ ಹುಟ್ಟೂರು. ಹರಪನಹಳ್ಳಿ ತಾಲೂಕಿನ ಮೈದೂರು-ಚಿಗಟೇರಿ ಬೆಳೆದ ಊರು. ಪಿಯು ಓದಿದ್ದು ಕೊಟ್ಟೂರಿನಲ್ಲಿ. ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಬಿ.ಎ., ಕವಿವಿಯಲ್ಲಿ ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ. ದಾವಣಗೆರೆ, ಸದಾಶಿವಗಡ ಮತ್ತು ಭಟ್ಕಳದಲ್ಲಿ ಕನ್ನಡ ಉಪನ್ಯಾಸಕರಾಗಿ ಕೆಲಸ ನಿರ್ವಹಿಸಿ, 1997 ರಿಂದ ಕಾರವಾರದಲ್ಲಿ ಪತ್ರಕರ್ತರಾಗಿ ಕೆಲಸ ಮಾಡುತ್ತಿದ್ದಾರೆ. ಜನವಾಹಿನಿ, ಜನಾಂತರಂಗ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿದ ಇವರು, ಈ ಟಿವಿ ಕನ್ನಡ ನ್ಯೂಸ್ ಚಾನೆಲ್ಲಿಗೆ ವರದಿಗಾರಿಕೆ ಬಳಿಕ ಈಗ ಉದಯವಾಣಿ , ಬೆಳಗಾವಿಯ ಲೋಕದರ್ಶನ ಪತ್ರಿಕೆಗೆ ವರದಿಗಾರರಾಗಿದ್ದಾರೆ. 2009ರಲ್ಲಿ ‘ಕಡಲದಂಡೆಗೆ ಬಂದ ಬಯಲು’ ಎಂಬ ಕಥಾ ಸಂಕಲನ, 2013ರಲ್ಲಿ ‘ಬಿಸಿಲ ಬಯಲ ಕಡಲು’ ಎಂಬ ಕವಿತಾ ಸಂಕಲನ ಪ್ರಕಟಣೆ.2019 ರಲ್ಲಿ ‘ವಿರಹಿದಂಡೆ’ ಕವಿತಾ ಸಂಕಲನ ಪ್ರಕಟಿಸಿದ್ದಾರೆ. ಕಾರವಾರ ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.‌

ಶಾಂತಿ ಬೀಜಗಳ ಜತನ’ Read Post »

ಇತರೆ

ಕರೋನ ಮುಕ್ತ ಶಾಲೆ

ಸರಿತಾಮಧು ಎಂದಿಗೆ ಬರಲಿದೆಯೋ ಶಾಲೆಗೆ ಹೋಗಿ ನಲಿಯುವ ದಿನಗಳು ಎಂದು ಕಾತರಿಸುವ ಮಕ್ಕಳಿಗೆ ಅಪ್ಪ ಅಮ್ಮ ಇಬ್ಬರೂ ಕೆಲಸಕ್ಕೆ ಹೊರಟಾಗ ಮನೆಯಲ್ಲಿ ತಾವಷ್ಟೇ ಇರಬೇಕಾ ಎನ್ನುವ ಭಯ. ಹಾಗೆ ಮಕ್ಕಳನ್ನು ಮನೆಯಲ್ಲಿ ಬಿಟ್ಟು ಕೆಲಸಕ್ಕೆ ಹೋಗುವ ಪೋಷಕರಿಗೂ ಇದೇ ಚಿಂತೆಯಾಗಿದೆ. ಬದಲಾದ ಪರಿಸ್ಥಿತಿಯಲ್ಲಿ ಶಾಲೆಗಳು ತೆರೆಯುವ ಸೂಚನೆ ಸದ್ಯಕ್ಕೆ ಇಲ್ಲವೇನೋ? ಹೀಗಿರುವಾಗ ಮಕ್ಕಳ ಕಲಿಕೆ ಹೇಗೆ ಎಂದು ಚಿಂತಿಸಿ ಆನ್ಲೈನ್ ಮೂಲಕ ಶಿಕ್ಷಣ ನೀಡುವುದು ಒಳಿತೋ ಕೆಡುಕೋ ಎಂಬ ಜಿಜ್ಞಾಸೆ ಎಲ್ಲರ ಮನದಲ್ಲೂ ಮೂಡಿದೆ.ಪ್ರಾಥಮಿಕ ಹಂತದಿಂದಲೇ ಈ ರೀತಿಯ ಪಾಠಬೋಧನೆ ಮಕ್ಕಳ ಮನಮುಟ್ಟುವುದೇ ಎನ್ನುವ ಗೊಂದಲವೂ , ಚರ್ಚೆಯೂನಡೆಯುತ್ತಲೇ ಸಾಗಿರುವ ಬೆನ್ನಲ್ಲೇ ಕೆಲವು ಖಾಸಗಿ ಶಾಲೆಗಳು ಆನ್ಲೈನ್ ತರಗತಿ ಗೆ ನಾಂದಿ ಹಾಡಿವೆ.ಹೀಗಿರುವಾಗ ಮಕ್ಕಳ ಕೈಗೆ ಮೊಬೈಲ್ ನೀಡಿ ನೆಮ್ಮದಿಯಾಗಿ ಇರುವುದಾದರೂ ಹೇಗೆ ಎಂಬ ಗೊಂದಲ ಮನೆಯಲ್ಲಿ ಇರದ ,ದುಡಿಯಲು ಹೊರಗೆ ಹೋಗುವ ಪೋಷಕ ವರ್ಗದ್ದು. ಇನ್ನು ಕೃಷಿಯಾಧಾರಿತ ಕುಟುಂಬಗಳಲ್ಲಿನ ಮಕ್ಕಳು ಹೆಚ್ಚಾಗಿ ಗ್ರಾಮೀಣ ಪ್ರದೇಶದ ಸರ್ಕಾರಿ ಅಥವಾ ಖಾಸಗಿ ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು , ಪ್ರಸ್ತುತ ತಮ್ಮ ಹಿರಿಯರಿಗೆ ಹೊಲಗದ್ದೆಗಳಲ್ಲಿ ನೆರವಾಗುತ್ತಾ ಸಮಯ ಕಳೆಯುತ್ತಿದ್ದಾರೆ. ದನಕರುಗಳನ್ನು ಮೇಯಿಸುತ್ತಾ, ಇಲ್ಲವೇ ಬೀದಿಯಲ್ಲಿ ಅಡ್ಡಾಡುತ್ತಾ ಇರುವ ಮಕ್ಕಳನ್ನೂ ನೋಡುತ್ತಿದ್ದೇವೆ. ಇವರ ಮಟ್ಡಿಗೆ ಆನ್ಲೈನ್ ಶಿಕ್ಷಣ ಕೈಗೆಟುಕದ ತಾರೆಯಂತೆ.ಹಾಗಂತ ಗ್ರಾಮೀಣ ಪ್ರದೇಶದವರು ಮೊಬೈಲ್ ಬಳಕೆಯಲ್ಲಿ ಹಿಂದೆ ಬಿದ್ದಿಲ್ಲ.ಆದರೂ ಹಲ್ಲು ಇದ್ದವರಿಗೆ ಕಡಲೆ ಇಲ್ಲವಂತೆ ಅನ್ನುವ ಹಾಗೆ ಮೊಬೈಲ್ ಇದ್ದರೂ ನೆಟ್ವರ್ಕ್ ಸಿಗದ ಅದೆಷ್ಟೋ ಹಳ್ಳಿಗಳಿವೆ.ನಗರವಾಸಿಗಳಿಗೆ ಈ ರೀತಿಯ ಶಿಕ್ಷಣ ಸ್ವಲ್ಪ ಮಟ್ಟಿಗೆ ಅನುಕೂಲವೇ ಹೊರತು ಗ್ರಾಮಾಂತರದ ಮಕ್ಕಳಿಗಲ್ಲ. ಹಣದ ಅನುಕೂಲತೆ ಇದ್ದು ಮನೆಯಲ್ಲೇ ಇರುವ ಪೋಷಕರು ಮೊಬೈಲ್, ಲ್ಯಾಪ್‌ಟಾಪ್, ಟ್ಯಾಬ್ಲೆಟ್ ಗಳನ್ನು ಕೊಡಿಸಿ, ಜೊತೆಯಲ್ಲಿ ಕುಳಿತು ತಾವೂ ಮಕ್ಕಳಿಗೆ ನೆರವಾಗಬಹುದು.ಇಷ್ಟೆಲ್ಲಾ ಆಗು – ಹೋಗುಗಳ ನಡುವೆ ಆನ್ಲೈನ್ ಶಿಕ್ಷಣ ಎಷ್ಟರಮಟ್ಟಿಗೆ ಯಶಸ್ವಿಯಾಗಬಹುದು ಎನ್ನುವ ಬಹು ದೊಡ್ಡ ಪ್ರಶ್ನೆ ನಮ್ಮ ಮುಂದೆ ಇದೆ. ಮುಖಾಮುಖಿ ಮಕ್ಕಳೊಂದಿಗೆ ನಡೆಯುವ ಚಟುವಟಿಕೆಯುಕ್ತ ತರಗತಿಗೂ ಮನೆಯೊಳಗೆ ಕಂಪ್ಯೂಟರ್ ಪರದೆಯನ್ನು ಪಿಳಿಪಿಳಿ ನೋಡುತ್ತಾ ಜಡವಾಗಿ ಕುಳಿತು ಕೊಳ್ಳುವುದಕ್ಕೂ ಬಹಳಷ್ಟು ವ್ಯತ್ಯಾಸವಿದೆ . ಇದರಿಂದ ಚಿಕ್ಕ ವಯಸ್ಸಿಗೆ ಕಣ್ಣುಗಳ ಮೇಲೂ ದುಷ್ಪರಿಣಾಮ ಬೀರುವುದರಲ್ಲಿ ಅನುಮಾನವಿಲ್ಲ. ಎಂದಿಗೆ ಮುಗಿಯುವುದೋ ಈ ಯಾತನೆ ಎಂದು ಒಳಗೊಳಗೇ ತಳಮಳಿಸಿ ನೊಂದಿರುವ ಜೀವಗಳೇ ಹೆಚ್ಚು ‌ . ಬಡವ – ಶ್ರೀಮಂತ , ನಗರ – ಹಳ್ಳಿಗಳೆಂಬ ಭೇದ ವಿಲ್ಲದೇ ಕರೋನ ತನ್ನ ಹಿಡಿತ ಸಾಧಿಸಿ ಜನರ ಕಂಗೆಡಿಸಿದೆ.ಹೀಗಿರುವಾಗ ಶಾಲೆ ತೆರೆಯುವುದೋ ಬಿಡುವಿದೋ ಆದರೆ ಒಂದಲ್ಲ ಒಂದು ರೀತಿಯ ಸಮಸ್ಯೆ ಇದೆ. ಕರೋನ ಮುಕ್ತ ಸಾಧ್ಯವಿಲ್ಲವೇನೋ ?ಬದಲಾಗಿ ಅದರೊಂದಿಗೆ ಹೊಂದಾಣಿಕೆ ಸೂತ್ರ ಮಾತ್ರ ಕಣ್ಮುಂದೆ ಇದೆ. *********************

ಕರೋನ ಮುಕ್ತ ಶಾಲೆ Read Post »

You cannot copy content of this page

Scroll to Top