ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ

ನಾಗಶ್ರೀ ಕಾವ್ಯ ಪುರಸ್ಕಾರಕ್ಕೆ ಕವನ ಸಂಕಲನಗಳ ಆಹ್ವಾನ

ನಾಗಶ್ರೀ ಕಾವ್ಯ ಪುರಸ್ಕಾರಕ್ಕೆ ಕವನ ಸಂಕಲನಗಳ ಆಹ್ವಾನ ೨೦೨೦ನೆಯ ಸಾಲಿನಿಂದ ಕೊಡಮಾಡುವ ನಾಗಶ್ರೀ ಕಾವ್ಯ ಪುರಸ್ಕಾರಕ್ಕೆ ೪೦ ವರ್ಷದೊಳಗಿನ ಕವಿಗಳಿಂದ ಕೃತಿಗಳನ್ನು ಆವ್ಹಾನಿಸಲಾಗಿದೆ.ಪ್ರಶಸ್ತಿಯು ೫ ಸಾವಿರ ನಗದು,ಸ್ಮರಣಿಕೆ ಒಳಗೊಂಡಿದೆ.ಆಸಕ್ತ ಕವಿಗಳು ೨೦೨೦ ನೆಯ ಸಾಲಿನಲ್ಲಿ ಪ್ರಕಟಗೊಂಡ ತಮ್ಮ ಸ್ವರಚಿತ ಮೂರು ಕವನ ಸಂಕಲನಗಳನ್ನು ಜನವರಿ ೧೫,೨೦೨೧ ರೊಳಗೆಸಂಚಾಲಕರು, ನಾಗಶ್ರೀ ಕಾವ್ಯಪ್ರಶಸ್ತಿ ಸಮಿತಿಸಿಂದಗಿ,ವಿಜಯಪುರ ಜಿಲ್ಲೆಈ ವಿಳಾಸಕ್ಕೆ ಪ್ರೊಫೆಷನಲ್ ಕೋರಿಯರ್ ಮಾಡಬಹುದು.ಹೆಚ್ಚಿನ ಮಾಹಿತಿಗಾಗಿ +918951375140,988065654 ಸಂಪರ್ಕಿಸುವಂತೆ ಕೋರಿದ್ದಾರೆ.

ನಾಗಶ್ರೀ ಕಾವ್ಯ ಪುರಸ್ಕಾರಕ್ಕೆ ಕವನ ಸಂಕಲನಗಳ ಆಹ್ವಾನ Read Post »

ಪುಸ್ತಕ ಸಂಗಾತಿ

ಊದ್ಗಳಿ ಊದುತ್ತಾ.

ಪುಸ್ತಕ ಸಂಗಾತಿ ಊದ್ಗಳಿ ಊದುತ್ತಾ.   ಬದುಕಿನ ಜೀವಂತಿಕೆ ಇರುವುದು ಬದಲಾವಣೆಗಳಲ್ಲಿ. ಕಾಲದ ಜೊತೆ ಜೊತೆಗೆ ಹೆಜ್ಜೆ ಹಾಕಲೆ ಬೇಕು, ಇಲ್ಲದಿದ್ದರೆ ನಾವು ಹಿಂದುಳಿದು ಬಿಡುತ್ತವೆ, ಸ್ಮೃತಿ ಪಟಲದಿಂದ ಮರೆಯಾಗುತ್ತೇವೆ. ಹಳೆಯದು ಹೊಸದಕ್ಕೆ ಎಡೆಮಾಡಿಕೊಡುತ್ತದೆ. ಅತೃಪ್ತಿ ಬದುಕಿನಲ್ಲಿ ಹೊಸದನ್ನು ತರುತ್ತದೆ. ಇದು ಸಾರಸ್ವತ ಲೋಕಕ್ಕೂ ಅನ್ವಯಿಸುತ್ತದೆ. ಸಾಹಿತ್ಯದಲ್ಲೂ ಕಾಲಕಾಲಕ್ಕೆ ಬದಲಾವಣೆಗಳು ನಡೆಯುತ್ತಿರುತ್ತವೆ. ಆ ಪರಿಧಿಯಲ್ಲಿ ‘Those who create nothing now, destroy” ಎಂಬ ಮಾತನ್ನು ಇಲ್ಲಿ ಸ್ಮರಿಸಬಹುದು. ನಮ್ಮ ಕನ್ನಡ ವಾಙ್ಮಯ ಇತಿಹಾಸವನ್ನು ಗಮನಿಸಿದಾಗ ಚಂಪೂ, ವಚನ, ರಗಳೆ, ಷಟ್ಪದಿ, ಸಾಂಗತ್ಯ… ಮುಂತಾದ ಹತ್ತು ಹಲವು ರೀತಿಗಳ ಮೂಲಕ ಸಾಹಿತ್ಯವು ತನ್ನ ಜೀವಂತಿಕೆಯನ್ನು ಉಳಿಸಿಕೊಂಡು ಬಂದಿದೆ. ಸಾಹಿತ್ಯ ಕಾಲಕಾಲಕ್ಕೆ ತನ್ನ ಸ್ವರೂಪವನ್ನು ಬದಲಾಯಿಸಿಕೊಳ್ಳುತ್ತಾ ತತ್ಕಾಲೀನತೆಗೆ ಸ್ಪಂದಿಸಿ, ಸಮಕಾಲೀನ ಅಗತ್ಯಕ್ಕೆ ತಕ್ಕಂತೆ ರೂಪುಗೊಳ್ಳುತ್ತ ಸಾಗುತ್ತದೆ. ಸಾಹಿತ್ಯವೆಂದರೆ ಅದೊಂದು ಉತ್ತಮವಾದ ಜೀವನಮಾರ್ಗದ ದೀವಿಗೆ. ಅದು ಜೀವನದ ಅವಿಭಾಜ್ಯ ಅಂಗ. ಈ ನೆಲೆಯಲ್ಲಿ ಕಾವ್ಯವು ಹೃದಯದ ಪಿಸುಮಾತು. ಅಲ್ಲಿ ಪದಗಳನ್ನು ಕೇವಲ ಅರ್ಥಕ್ಕಾಗಿಯೇ ಬಳಸದೆ ಅಂತರ್ಭಾವಕ್ಕಾಗಿ ಬಳಸಲಾಗುತ್ತದೆ. ಈ ಜಾಡಿನಲ್ಲಿ ಸಾಹಿತ್ಯವು ಜನಜೀವನಕ್ಕೆ ಕನ್ನಡಿಯಾಗಿರುತ್ತದೆ. ಇಲ್ಲಿ ಡಿ. ವಿ. ಗುಂಡಪ್ಪನವರ ಈ ಹೇಳಿಕೆಯನ್ನು ಸ್ಮರಿಸಬಹುದು. “ಕಾವ್ಯವು ಜೀವನದ ಮುಖ್ಯ ಲಕ್ಷಣಗಳನ್ನು ಪ್ರತಿಬಿಂಬಿಸತಕ್ಕುದಾಗಿದೆ. ಒಳ್ಳೆಯ ಸಜೀವ ಕಾವ್ಯಗಳು ಹುಟ್ಟಬೇಕಾದರೆ ಅವುಗಳನ್ನು ಬರೆಯುವವರ ಸುತ್ತ ಮುತ್ತ ಹೊಸ ಹೊಸ ಭಾವನೆಗಳ ಪರಸ್ಪರ ಸಂಘರ್ಷಣೆ ಇರಬೇಕು.”       ಊದ್ಗಳಿ ತನ್ನ ಒಡಲಲ್ಲಿ ಮನುಕುಲದ ವಿಕಾಸ ಪ್ರಕ್ರಿಯೆಯನ್ನು ಇರಿಸಿಕೊಂಡು, ತಲೆ ತಲಾಂತರದ  ತನ್ನ ನೋವು-ನಲಿವುಗಳನ್ನು ಮೌನವಾಗಿ ಅರಹುತ್ತಿದೆ.‌ ಕೇಳುವ, ಅರ್ಥೈಸಿಕೊಳ್ಳುವ ಮನಸ್ಸುಗಳು ಮಾತ್ರ ಇಂದು ಮರೀಚಿಕೆಯಾಗಿವೆಯಷ್ಟೇ. ಊದ್ಗಳಿ ಕವನ ಸಂಕಲನದ ಶೀರ್ಷಿಕೆ ನೋಡುತ್ತಲೇ ನನ್ನ ಕಣ್ಮುಂದೆ ಬಂದದ್ದು ಅಮ್ಮನ ಚಿತ್ರಣ.. ! ಒಲೆಯ ಮುಂದೆ ಕುಳಿತು ಆಹಾರವನ್ನು ಬೇಯಿಸುತ್ತಿರುವ, ಒಳಗೊಳಗೆ ತಾನೇ ಬೇಯುತ್ತಿರುವ ಸ್ತ್ರೀ ಸಂಕುಲವೇ ಸ್ಮೃತಿ ಪಟಲದ ಮೇಲೆ ಹಾದು ಹೋಗುತ್ತದೆ. ಗಂಡ-ಮಕ್ಕಳು-ಕುಟುಂಬದ ಒಡಲ ಹಸಿವನ್ನು ನೀಗಿಸುವ ‘ಅನ್ನಪೂರ್ಣೆ’ ದಿಟವಾಗಿಯೂ ಸ್ತುತ್ಯರ್ಹಳು..!! ನಾವು ೨೧ ನೇ ಶತಮಾನದಲ್ಲಿ, ವೈಜ್ಞಾನಿಕ ಯುಗದಲ್ಲಿ ಉಸಿರಾಡುತ್ತಿದ್ದೇವೆಯಾದರೂ ಪಳೆಯುಳಿಕೆಯಂತೆ ಈ ಅಸಹಾಯಕತೆ, ಶೋಷಣೆ, ಮಾನಸಿಕ ತುಮುಲ…. ಇವು ಯಾವುವೂ ಹೆಣ್ಣನ್ನೂ ತೊರೆದು ದೂರ ಹೋಗಿಲ್ಲ. ಇವತ್ತಿಗೂ ಅವಳ ಸುತ್ತವೇ ಪ್ರದಕ್ಷಿಣೆ ಹಾಕುತ್ತಿವೆ. ಎದ್ದರೂ-ಬಿದ್ದರೂ, ಗೆದ್ದರೂ-ಸೋತರೂ ಸ್ತ್ರೀ ಸಂವೇದನೆಯು ಮಾತ್ರ ಅಲ್ಪ-ಸ್ವಲ್ಪ ಬದಲಾವಣೆಗಳೊಂದಿಗೆ ಇಂದಿಗೂ ಯಥಾವತ್ತಾಗಿ ಚಲಿಸುತ್ತಿದೆ. ಕೆಲವು ಸಮಸ್ಯೆಗಳ ರೂಪಗಳು ಬದಲಾಗಿವೆಯೇ ಹೊರತು ಸಮಸ್ಯೆಗಳಲ್ಲ. ಬೆಂಕಿಯ ಸುತ್ತ ಸುತ್ತುವ ಹೆಣ್ಣಿನ ಜೀವನದಲ್ಲಿ ‘ಒಲೆ’ ಯ ರೂಪ ತುಸು ಬದಲಾದರೂ ಅದರೊಳಗಿನ ಜ್ವಾಲೆ ಇನ್ನಿತರ ರೂಪಗಳಲ್ಲಿ ಹೆಣ್ಣನ್ನು ಚುಂಬಿಸುವಲ್ಲಿ ಯಶಸ್ವಿಯಾಗುತ್ತಿದೆ…!! ಈ ನೆಲೆಯಲ್ಲಿ ಊದ್ಗಳಿ ಸ್ತ್ರೀ ಸಂವೇದನೆಯ ಆಪ್ತ ಉದ್ಯಾನವನ…!! ಮಗದೊಂದು ನೆಲೆಯಲ್ಲಿ ಈ ಊದ್ಗಳಿ ಕವನ ಸಂಕಲನವು ಊದುವ, ಊದಿಸಿಕೊಳ್ಳುವ ಪ್ರಕ್ರಿಯೆಯ ಮೂಲಕ ಸಾಮಾಜಿಕ ವ್ಯವಸ್ಥೆಯನ್ನು ಬೆತ್ತೆಲುಗೊಳಿಸುತ್ತದೆ.        ಕವಯಿತ್ರಿ ದಾಕ್ಷಾಯಣಿ ನಾಗರಾಜ್ ಮಸೂತಿಯವರು ಬಿಸಿಲೂರು ಬಳ್ಳಾರಿ ಜಿಲ್ಲೆಯ ಮುದ್ದಟನೂರು ಹಳ್ಳಿಯ ಅಪ್ಪಟ ದೇಸಿ ಪ್ರತಿಭೆ. ಕೃಷಿ ಹಿನ್ನೆಲೆಯ ಪರಿವಾರದಲ್ಲಿ ಬೆಳೆದ ಶ್ರೀಯುತರು ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿ ಮಕ್ಕಳ ಮನದಂಗಳದಲ್ಲಿ ನೆಲೆಯೂರಿದ್ದಾರೆ. ಮಕ್ಕಳ ಒಡನಾಟದೊಂದಿಗೆ ಸಮಾಜದೊಂದಿಗೆ ಮುಖಾಮುಖಿಯಾಗುತ್ತ ತಮ್ಮ ಅನುಭವವನ್ನು ಹಿಗ್ಗಿಸಿಕೊಂಡ ಇವರು ತಮ್ಮ ಭಾವನೆಗಳನ್ನು ಕಾವ್ಯಧಾರೆಯಲ್ಲಿ ಹರಿಸಿದ್ದಾರೆ.       ಊದ್ಗಳಿ ಯು ೪೦ ಭಾವನೆಗಳ ಭಾವಂತರಂಗ. ಇಲ್ಲಿ ಪ್ರೀತಿ, ಪ್ರೇಮ, ಪ್ರಣಯ, ನಿವೇದನೆ, ವಿರಹ, ಮಾನಸಿಕ ತೊಳಲಾಟ, ಜೀವನದ ಸಾಕ್ಷಾತ್ಕಾರ, ತಾತ್ವಿಕ ಚಿಂತನೆ, ರಾಜಕೀಯ ಜಿಜ್ಞಾಸೆ, ವಿಡಂಬನೆ, ವೈಚಾರಿಕತೆ, ಸಮಾಜದ ಸೂಕ್ಷ್ಮ ಚಿತ್ರಣ ಹಾಗೂ ಪ್ರಧಾನವಾಗಿ ಸ್ತ್ರೀ ಸಂವೇದನೆಯನ್ನು (ತಾಯಿ) ಗುರುತಿಸಬಹುದು. ಪ್ರೀತಿ, ಪ್ರೇಮದಲ್ಲೂ ಸಂವೇದನೆಯ ಹಂದರವಿದೆ. ಮೊದಲ ಕವನ ನಾನು ಅವಳು ಮತ್ತು ವರ್ತುಲ ದಲ್ಲಿ ಸ್ತ್ರೀಯ ಆತ್ಮಾವಲೋಕನವಿದೆ. “ಅದ್ಯಾಕೆ ಈ ಹೆಣ್ಣು ಅಲ್ಲಿಂದಿಲ್ಲಿಗೆ ಹಾರುವ ದುಂಬಿಯ ಮೇಲೆ ಕನಸು ಕಟ್ಟುತ್ತಾಳೋ ತಾನು ಉರಿದರೂ” ಎಂದು ಪ್ರಶ್ನಿಸುತ್ತಾರೆ. ಈ ಪ್ರಶ್ನೆಯ ವ್ಯಾಪ್ತಿ, ಹರಹು ಮನುಕುಲದ ಇತಿಹಾಸದೊಂದಿಗೆ ತಳುಕು ಹಾಕಿಕೊಂಡಿದೆ. ನಿಸರ್ಗದ ಯಾವುದೋ ವಿಪರೀತದ ವ್ಯಾಪಾರದಿಂದಾಗಿ ಹೆಣ್ಣು ಸಂಭಾವಿತರಿಗಿಂತ ಹೆಚ್ಚಾಗಿ ವಾಚಾಳರಿಗೆ, ಬೇಜವಾಬ್ದಾರಿ ಸಾಹಸಿಗಳಿಗೆ ತನ್ನನ್ನು ಸಮರ್ಪಿಸಿಕೊಳ್ಳುತ್ತಾಳೆ ಇಲ್ಲಿ ಪ್ರಶ್ನೆ ನೇರ ಮತ್ತು ಸರಳವಾಗಿ ಇದೆಯಾದರೂ ಉತ್ತರ ಮಾತ್ರ ಇನ್ನೂ ಬಿಸಿಲುಗುದುರೆಯೇ….!! ಇದು ಹೆಣ್ಣಿನ ಮಾನಸಿಕ ಸ್ಥಿತಿಯನ್ನು ಒರೆಗಲ್ಲಿಗೆ ಹಚ್ಚುವ ಕೆಲಸವನ್ನು ಮಾಡುತ್ತದೆ.‌        ಸಮಾಜಕ್ಕೆ ಯಾವಾಗಲೂ ತನ್ನದಲ್ಲದ ವಸ್ತು, ವಿಷಯ ಹಾಗೂ ವ್ಯಕ್ತಿಯ ಬಗ್ಗೆ ವಿಪರೀತ ಮೋಹ. ಅದರಲ್ಲಂತೂ ಹೆಣ್ಣು ಮಕ್ಕಳ ಜೀವನದ ಬಗೆಗೆ ವಿಶೇಷ ಕಾಳಜಿ..! ಎಷ್ಟರಮಟ್ಟಿಗೆ ಎಂದರೆ ಅವರನ್ನು ನೆಮ್ಮದಿಯಾಗಿ ಬದುಕಲು ಬಿಡದಿರುವಷ್ಟರ ಮಟ್ಟಿಗೆ. ಇಂತಹ ವ್ಯವಸ್ಥೆಯು ಆ ಮಹಿಳೆಯರಲ್ಲಿ ಒಂದು ವಿಚಿತ್ರವಾದ ಪ್ರತಿಭಟನೆಯನ್ನು ಹುಟ್ಟಿಸುತ್ತದೆ. “ಮತ್ತೆ ಮತ್ತೆ ಕೂಗಿ ಹೇಳಬೇಕಿನಿಸುತ್ತದೆ ಇದು ನನ್ನ ಬದುಕು -ನನ್ನ ಆಯ್ಕೆ ಎಂದು” ತಮ್ಮ ಮನದಾಳದ ನೋವು, ಆತಂಕ, ಭಾವನೆಗಳನ್ನು ಕೆಲವೊಬ್ಬರು ಧೈರ್ಯದಿಂದ ಹೇಳಲು ಪ್ರಯತ್ನಿಸಿದರೆ, ಮತ್ತೇ ಕೆಲವರು ಅಸಹಾಯಕತೆಯಿಂದ ಎಲ್ಲವನ್ನೂ ಮೌನವಾಗಿಯೇ ಸಹಿಸಿಕೊಳ್ಳುತ್ತಾರೆ. ಇನ್ನೂ ಹಲವರು ಮಾನಸಿಕ ತೊಳಲಾಟದಲ್ಲಿ ತಮ್ಮ ಬದುಕನ್ನೇ ಹಾಳು ಮಾಡಿಕೊಳ್ಳುತ್ತಾರೆ. ಈ ಮೇಲಿನ ಚರಣಗಳು ಕವಯಿತ್ರಿಯ ಸಾಮಾಜಿಕ ಸಂವೇದನೆಯ ಸೂಕ್ಷ್ಮತೆಯನ್ನು ಪ್ರತಿನಿಧಿಸುತ್ತವೆ.        ಕವನ ಸಂಕಲನದ ಶೀರ್ಷಿಕೆಯ ಕವನ ಊದ್ಗಳಿ ಯು ಹೆಣ್ಣಿನ ಅಂತರಂಗವನ್ನು ಬಿಚ್ಚಿಡುವಲ್ಲಿ ಯಶಸ್ವಿಯಾಗಿದೆ. (ವಿಶೇಷವಾಗಿ ತಾಯಿ) ಊದ್ಗಳಿಯು ಉದ್ದನೆಯ ನುಣುಪಾದ ಸುರುಳಿಯಾಗಿ ಕಾಲವನ್ನು ಪ್ರತಿಬಿಂಬಿಸುತ್ತಿದೆ. ಇದು ಮಹಿಳೆಯರ ಆಂತರಿಕ ತುಮುಲದ ಸಂಕೇತವಾಗಿ ಬಳಕೆಯಾಗಿದೆ. “ಕೆಂಪೇರಿದ ಮೂಗನ್ನು ತಿಕ್ಕುತ್ತಾ… ಕಟ್ಟಿಗೆ ಹಸಿಯೊಂದಿಗೆ ಸೆಣೆಸುತ್ತಾ ಬಿಕ್ಕುತ್ತಲೇ… ಜಜ್ಜುತಿದ್ದಳು..” ಈ ಸಾಲುಗಳನ್ನು ಓದುತ್ತಿದ್ದಂತೆಯೇ ಪ್ರತಿಯೊಬ್ಬ ಸಹೃದಯ ಓದುಗರ ಕಣ್ಮುಂದೆ (ತಾಯಿ) ಸ್ತ್ರೀ ಸಂಕುಲವೆ ಬಂದು ನಿಲ್ಲುತ್ತದೆ..!!           ಕುಟುಂಬದಲ್ಲಿನ ಸಣ್ಣ ಸಣ್ಣ ವಿಷಯಗಳನ್ನೂ ತುಂಬಾ ಮುತುವರ್ಜಿಯಿಂದ ಗಮನಿಸಿ ಕಾವ್ಯದ ರೂಪವನ್ನು ನೀಡಿದ್ದಾರೆ. ಮನೆಗಳಲ್ಲಿ ಪಾತ್ರೆಗಳ ಸದ್ದು ಆದಾಗ ಅದು ಹೆಣ್ಣಿನ ಸಿಟ್ಟು, ಸೆಡವಿನ ಸಂಕೇತವೆಂದು ಅಂದುಕೊಳ್ಳುತ್ತೇವೆಯೇ ಹೊರತೂ ಅದರಲ್ಲಿ ಅಡಗಿರುವ ಅವಳ ಏಕತಾನತೆಯನ್ನು ನಾವು ಗುರುತಿಸುವುದೇ ಇಲ್ಲ. ಇದನ್ನು ಸದ್ದುಗಳು ಕವನವು ಸಶಕ್ತವಾಗಿ ಹಿಡಿದಿಟ್ಟಿದೆ.       ಸಾಮಾನ್ಯವಾಗಿ ಹೆಣ್ಣನ್ನು ಚಂಚಲೆಯೆಂದು ಕರೆಯುವುದು ಗಂಡಿಗೆ ಅಭ್ಯಾಸವಾಗಿ ಬಿಟ್ಟಿದೆ. ಆದರೆ ಚಂಚಲತೆ ಗಂಡಿನಲ್ಲಿಯೂ ಇರುವುದನ್ನು ದಾಕ್ಷಾಯಣಿಯವರು ಗುರುತಿಸಿದ್ದಾರೆ.‌ ಚಂಚಲ ಚಿತ್ತ ಕವನವು ಪುರುಷನನ್ನು ಪ್ರಶ್ನಿಸುವ ಬಗೆ ಈ ರೀತಿಯಲ್ಲಿದೆ. “…… ಮತ್ತೇಕೆ ? ನಿನ್ನೊಲವು ಹೂವಿಂದ ಹೂವಿಗೆ ಹಾರುವ ದುಂಬಿಯಂತೆ…” ಉತ್ತರ ಮಾತ್ರ ನಿರುತ್ತರ… !!          ಬಾವಿ ಅಂತರಂಗ ಕವನವು ಬಾವಿಯ ಮನದಾಳದ ಮಾತುಗಳನ್ನು ಸ್ವಗತದ ಮಾದರಿಯಲ್ಲಿ ಹೇಳುವ ಪರಿ ಅನನ್ಯ ಮತ್ತು ಅನುಪಮ. ಇದು ಹೆಣ್ಣು ಮಕ್ಕಳ ಅಂತರಂಗದ ಕದವನ್ನು ತೆರೆಯುವಲ್ಲಿ ಯಶಸ್ವಿಯಾಗಿದೆ. “ಮೊನ್ನೆ ಮೊನ್ನೆ ಮದುವೆಯಾದ ಖುಷಿಯಲ್ಲಿ ನೀರು ಸೇದಲು ಬಂದ ಗೌರಿ ನನ್ನೊಳಗೆ ಹೆಣವಾದಳು….”          ಈ ಭೂಮಿಯ ಮೇಲೆ ಅನ್ನವಿಲ್ಲದೆ ಬದುಕಬಹುದು, ಆದರೆ ಪ್ರೀತಿಯಿಲ್ಲದೆ ಬದುಕಲು ಸಾಧ್ಯವಿಲ್ಲ. ಅಂತೆಯೇ ಪ್ರೀತಿಯೇ ನಮ್ಮ ಜೀವನದ ತಳಹದಿ. ಬದುಕಿನ ಪಡಿಯಚ್ಚಾಗಿರುವ ಸಾಹಿತ್ಯದ ಮೂಲ ದ್ರವ್ಯವೇ ಈ ಪ್ರೀತಿ. ಇದು ಯಾರನ್ನೂ ಬಿಟ್ಟಿಲ್ಲ, ಬಿಡುವುದು ಇಲ್ಲ. ಈ ಸಂಕಲನದಲ್ಲಿಯೂ ಹಲವಾರು ಕವನಗಳು ಪ್ರೀತಿ, ಪ್ರೇಮ, ವಿರಹ…. ಮುಂತಾದವುಗಳ ಮೇಲೆ ಬೆಳಕು ಚೆಲ್ಲುತ್ತವೆ. ‘ಇರಿದ ಕೈ’, ‘ಉಳಿದ ಮಾತು’, ‘ತಪ್ಪಿದ ವಿರಹ’, ‘ನೆನಪುಗಳ ಬಿಕ್ಕಳಿಕೆ’,.’ಕದ ಇಕ್ಕಿರುವೆ’, ‘ದಣಿದಿದ್ದೇನೆ’, ‘ಹುಚ್ಚು ಹಂಬಲ’, ‘ಬಿಡಲಾರದ ಮಾಯೆ’, ‘ಇರಲಾರೆ ಗೆಳೆಯ’, ‘ಜಾರಿದ ಕಣ್ಣ ಹನಿ’, .., ಇಂತಹ ಹಲವಾರು ಕವನಗಳು ಪ್ರೇಮಲೋಕದ ಮಾಯೆಯನ್ನು, ಒಂಟಿತನದ ಕಹಿಯನ್ನು, ಒಡೆದ ಹೃದಯದ ಚೂರುಗಳನ್ನು ಸಹೃದಯ ಓದುಗರ ಅನುಭೂತಿಗೆ ದಕ್ಕಿಸುವಲ್ಲಿ ಫಲ ಕಂಡಿವೆ. ಅದಕ್ಕಾಗಿ ಕೆಲವೊಂದು ಚರಣಗಳು…. “ನೀನಿಲ್ಲದ ಘಳಿಗೆಯಲಿ ನೆನಪುಗಳ ಜಗಳ” “ಮತ್ತೊಮ್ಮೆ ಹೇಳುತ್ತೇನೆ ಹೃದಯಕ್ಕೆ ಕದ ಇಕ್ಕಿರುವೆ ಬಡಿಯದಿರು, ತಾಗಿಸದಿರು ಹಾಯದಿರು… ದಫನ್ ಆದ ಭಾವಗಳ ಕೆದುಕದಿರು..” “ಮತ್ತಷ್ಟು ಪ್ರಶ್ನೆಗಳ ಹಡೆಯುತ್ತಾ ಮತ್ತೊಂದು ಕಂಬನಿ ಮಿಡಿಯುವ ರಾತ್ರಿಗೆ ಮುನ್ನುಡಿಯಾಗಿ…” “ಉಸಿರುಗಟ್ಟಿದ ಭಾವಗಳ ಅಲೆಯಲ್ಲಿ ನಿನ್ನ ನೆನಪಿನ ಕಳೇಬರಗಳ ತೇಲಾಟ ಈ ದಿನ” “ಹೆಗಲಿಗೆ ಹೆಗಲು ಕೊಟ್ಟಾದರೂ ಇಲ್ಲವೇ ರೈಲಿನ ಹಳಿಗಳಾಗಿ ಆದರೂ ಸರಿಯೇ ಸುಮ್ಮನೆ ತುಸು ದೂರ ಸಾಗೋಣ”       ಮೇಲಿನ ಈ ಸಾಲುಗಳು ಪ್ರತಿಯೊಬ್ಬ ಪ್ರೇಮಿಯ ನಾಡಿಮಿಡಿತಗಳಾಗಿವೆ. ಇವುಗಳ ಮಧ್ಯೆ ಓದುಗ ಕಳೆದುಹೋಗುತ್ತಾನೆ, ತನ್ನ ಗತ ಬದುಕಿನ ಕವಲು ದಾರಿಯಲ್ಲಿ..!! ಇವುಗಳ ಜೊತೆಗೆ ಹಲವು ಕವನಗಳು ವೈಚಾರಿಕ ಸಂದೇಶ, ತಾತ್ವಿಕ ಚಿಂತನೆ, ಜೀವನದ ಜೋಕಾಲಿಯ ಏರಿಳಿತವು ನಮ್ಮನ್ನು ತಟ್ಟುತ್ತವೆ. ಕೋಲು ಎನ್ನುವ ಕವನವು ರಾಜಕೀಯ ವಿಡಂಬನೆಯ ಚಿತ್ರವನ್ನು ಒಳಗೊಂಡರೆ, ಮರೆತೆವೇಕೆ ನಾವು? ಕವನವು ಕೋಮು ಸೌಹಾರ್ದತೆಯ ನೆಲೆಯಲ್ಲಿ ಮಾನವನ ಪ್ರವೃತ್ತಿ ಹೇಗೆ ದಾರಿ ತಪ್ಪುತ್ತಿದೆ ಎಂಬುದನ್ನು ನವೀರಾಗಿ ಚಿತ್ರಿಸುತ್ತದೆ. ಹೀಗೇಕೆ ಕವನವು ನಮ್ಮ ಆಧುನಿಕ ಬದುಕಿಗೆ ಕನ್ನಡಿ ಹಿಡಿದಂತಿದೆ. ಬುದ್ಧ-ಬಸವರನ್ನು ಮರೆತು ನಾವು ಅನಾಗರಿಕರಂತೆ ಬಾಳುತ್ತಿರುವುದು ದುರಂತವೇ ಸರಿ. “ಮನುಜನೇಕೆ ತನ್ನ ಸುತ್ತ ತಾನೇ ಅಂತರಗಳ ಜೇಡರಬಲೆಯ ಹೆಣೆದು ಸಿಲುಕಿ ಒದ್ದಾಡುತ್ತಾನೆ ?” ಎಂದು ಕವಿಮನವು ಆತಂಕವನ್ನು ವ್ಯಕ್ತಪಡಿಸಿದೆ.       ‘ಮೌನ’, ‘ಸಂತೆ’, ‘ದಿಂಬು’, ಕವನಗಳು ಆಯಾ ವಿಷಯಗಳನ್ನು ಮನಕ್ಕೆ ಮುದ ನೀಡುವಂತೆ ಅನುಸಂಧಾನಗೈಯುವಲ್ಲಿ ನಿರತವಾಗಿವೆ.         ಇಲ್ಲಿಯ ಹೆಚ್ಚಿನ ಕವನಗಳು ನವ್ಯ ಸಾಹಿತ್ಯದ ಪ್ರಭಾವದಲ್ಲಿ ಉದಯಿಸಿವೆ. ಭಾಷೆಯ ದೃಷ್ಟಿಯಿಂದ ಹಲವು ಕಡೆ ಪ್ರಾದೇಶಿಕತೆ ಆಪ್ತವೆನಿಸುತ್ತದೆ. ಇಲ್ಲಿಯ ಕವನಗಳು ‌ವೈಯಕ್ತಿಕ ನೆಲೆಯಲ್ಲೇ ಉಳಿಯದೆ ಸಾರ್ವತ್ರಿಕ ಅನುಭವವನ್ನು ನೀಡುವಲ್ಲಿ ಯಶಸ್ವಿಯಾಗಿವೆ. ಆದರೆ ಕಾವ್ಯದ ಸಂವೇದನೆಗೆ ಯಾವ ವಿಷಯದ ಸೀಮೆ, ಎಲ್ಲೆ ಇಲ್ಲ.. ಅದು ಕಾಲಾತೀತ, ಸರ್ವವ್ಯಾಪಿ..! ಇಲ್ಲಿಯ ಕವನಗಳ ವ್ಯಾಪ್ತಿಯು ವಿಶಾಲವಾಗಿರದೆ ತುಂಬಾ ಸೀಮಿತವೆನಿಸುತ್ತದೆ. ಸ್ತ್ರೀ ಸಂವೇದನೆಯ ನೆಲೆಯಲ್ಲಿ ಪುರುಷ ಸಂವೇದನೆ ಮರೆಯಾಗಿದೆ. ಮನುಕುಲದ ಎಲ್ಲ ಸಂಬಂಧಗಳಿಗೂ ಹೆಣ್ಣೇ ಮೂಲ. ಆ ನೆಲೆಯಲ್ಲಿ ಸ್ತ್ರೀ ಸಂವೇದನೆಯನ್ನು ವಿವಿಧ ಆಯಾಮಗಳಲ್ಲಿ ಅವಲೋಕನ ಮಾಡಬಹುದಾಗಿತ್ತು. ಇದರೊಂದಿಗೆ ಸಮಾಜದ ಹಲವು ಮುಖಗಳು ಇಲ್ಲಿ ಕಣ್ಮರೆಯಾಗಿವೆ. ಎಲ್ಲ ವಿಷಯಗಳು ಕಾವ್ಯದ ರೂಪ ತೊಡಬೇಕಾದರೆ ಕವಿಮನವು ಎಲ್ಲವನ್ನೂ ಸೂಕ್ಷ್ಮ ಸಂವೇದನೆಯಿಂದ ನೋಡುವ, ಪರಿಪಕ್ವತೆಯಿಂದ ಅರ್ಥೈಸಿಕೊಳ್ಳುವ ಅಗತ್ಯವಿದೆ. ಮುಂಬರುವ ದಿನಗಳಲ್ಲಿ ಈ ಎಲ್ಲ ಓರೆ ಕೋರೆಗಳು ಮರೆಯಾಗಿ ಸರ್ವಾಂತರ್ಯಾಮಿ ರೂಪದ ಕವನ ಸಂಕಲನಗಳು ಹಾಗೂ ಇನ್ನಿತರ ಸಾಹಿತ್ಯ ರೂಪಗಳು ಮೂಡಿಬರಲಿ ಎಂದು ಹೃನ್ಮನದಿ ಹಾರೈಸುವೆ…!! ************************************* ಡಾ. ಮಲ್ಲಿನಾಥ ಎಸ್. ತಳವಾರ

ಊದ್ಗಳಿ ಊದುತ್ತಾ. Read Post »

ಕಾವ್ಯಯಾನ

ಜೀಕು ಜೋಕಾಲಿ

ಜೀಕು ಜೋಕಾಲಿ ಕೆ.ಸುನಂದಾ ಸಾಗುತಿರಲೀ ಪಯಣ ನಿಲ್ಲದೇ ಬಾಳಲಿಏಳು ಬೀಳುಗಳೆನಿತು ಬಂದರೂ ಬರಲಿಕಾರ್ಮೋಡ ಕರಗುತ ಸರಿಯಲೇಬೇಕುಹಸನಾದ ಹೊಂಬೆಳಕು ಸೂಸಲೇಬೇಕು ಬದುಕೊಂದು ಆಟ ಸವಿಯ ರಸದೂಟಆಸ್ವಾದಿಸುತ ನಡೆ ಸುಂದರದಾ ನೋಟದೇವನಿತ್ತ ಕಾಣಿಕೆ ಈ ಜಗದ ಚಲನೆಯುನಾವೆಲ್ಲರೂ ಅವನಾಟದ ಗೊಂಬೆಯು ಒಲವಿನ ಹಂದರದಿ ಜೀಕುತ ಜೋಕಾಲಿಏರಿಳಿಯುತ್ತ ಸಾಗು ನೀ ಸಮಭಾವದಲಿಸ್ಥಿರವಲ್ಲವೋ ಬಂಧನಗಳು ಭುವಿಯಲಿಇದ್ದರೂ ಇಲ್ಲದಂತೆ ಇರಬೇಕು ಜಗದಲಿ ಪ್ರೀತಿ ಪ್ರೇಮದ ಮನಸ್ಸುಗಳೆ ಆಲಯವುಅಂತರಾತ್ಮನೇ ಗರ್ಭಗುಡಿಯ ದೇವನುವರ್ಣಿಸಲಾಗದ ಪ್ರಕೃತಿಯ ಪೂಜಿಸುತ್ತನಡೆ ನೀ ಉಪಕಾರ ಸ್ಮರಣೆ ನೆನೆಯುತ್ತ **************************************

ಜೀಕು ಜೋಕಾಲಿ Read Post »

ಕಾವ್ಯಯಾನ, ಗಝಲ್

ಗಜಲ್

ಗಜಲ್ ಸಿದ್ಧರಾಮ ಕೂಡ್ಲಿಗಿ ಮನದ ದುಗುಡ ಕಳೆಯಲಿಕ್ಕೆ ಇರುವುದೊಂದು ಕಿಟಕಿ ಜಗದ ತಮವ ತೊಡೆಯಲಿಕ್ಕೆ ಇರುವುದೊಂದು ಕಿಟಕಿ – ಅರಿವ ಕುಡಿದು ಎದೆಯ ತೆರೆದು ಮೂಡಿತೊಂದು ಕನಸು ಬಯಲ ಹಕ್ಕಿ ಮೇಲೆ ಹಾರಲಿಕ್ಕೆ ಇರುವುದೊಂದು ಕಿಟಕಿ – ಏನೊಂದೂ ಇರದ ತಾಣದಿಂದ ತೇಲಿ ಬಂತೊಂದು ರಾಗ ರಾಗದೊಳಗೆ ರಾಗ ಮೂಡಲಿಕ್ಕೆ ಇರುವುದೊಂದು ಕಿಟಕಿ – ಸೂರ್ಯ ಚಂದ್ರ ತಾರೆ ಧೂಮಕೇತು ಮತ್ತದೇ ಕಾಲಚಕ್ರ ಜೀವಸೆಲೆಯ ಸುರುಳಿ ಮೂಡಲಿಕ್ಕೆ ಇರುವುದೊಂದು ಕಿಟಕಿ – ನೊಂದು ಬೆಂದು ದಹಿಸಿಕೊಂಡು ಅರಳಿತೊಂದು ಹೂವು ನೆಲದ ಒಡಲ ಹಾಡು ಕೇಳಲಿಕ್ಕೆ ಇರುವುದೊಂದು ಕಿಟಕಿ **************************************************

ಗಜಲ್ Read Post »

ಇತರೆ, ಲಹರಿ

ಒಲವಿನೋಲೆ..

ಒಲವಿನೋಲೆ.. ಜಯಶ್ರೀ.ಭ. ಭಂಡಾರಿ ಓ ಒಲವೇ ನೀ ಎಲ್ಲಿರುವೆ…. ನೀ ನನ್ನ ಹುಡುಕಿಕೊಂಡು ಬಂದು ಆಗಲೇ ೨ ವರ್ಷ ಕಳೆಯಿತು. ನೀ ಬಂದಾಗ ನನಗೆ ನಿನ್ನ ಮೇಲೆ ಅದ್ಯಾವ ಭಾವನೆ ಗಳೇ ಇರಲಿಲ್ಲ. ಈಗ ನಾನು ಈ ಭೂಮಂಡಲಕ್ಕಿಂತ ಹೆಚ್ಚು ಪ್ರೀತಿಸುತ್ತೇನೆ.  ಪ್ರತಿಕ್ಷಣ ನಿನ್ನ ಬಿಟ್ಟರೆ ಹರಿದಾಡುವ ಗಾಳಿಗೂ ಜಾಗವಿಲ್ಲ. ನನ್ನ ಬಾಳಿನ ಕಗ್ಗತ್ತಲು ಬೆಳಗಲು ನೀನೇ ಬೇಕು. ಅತಿಯಾದ ಪ್ರೀತಿಯಲ್ಲಿ ನನ್ನ ನಾ ಮರೆತಿಹೆ.ನೀನಿಲ್ಲದ ಹೊತ್ತು ನೆನೆಯಲು ಸಾಧ್ಯವಿಲ್ಲ. ನಿನ್ನಲ್ಲಿ ಒಂದು ಕೆಟ್ಟ ಹಾಬಿ ಇದೆ.ಡ್ಯೂಟಿಯಲಿ ನಿರತನಾದರೆ ನನ್ನ ಮರೆತು ತನ್ಮಯನಾಗಿ ಬಿಡತಿ. ಅನೇಕ ಸಲ ಫೋನಾಯಿಸಿದರೂ ರಿಸಿವ್ ಮಾಡಲ್ಲ.  ನಾನು ಸಿಟ್ಟಿನಿಂದ ಮುಖ ಉಬ್ಬಿಸಿ ಕೂತರೆ ಸಂಜೆ ನೇರ ಬಂದವನೇ ಕೊರಳಿಗೆ ಬೆರಳಹಾರ ಹಾಕಿ ಕೆನ್ನೆ ಚುಂಬಿಸಿ  ನಿನ್ನ ಬೆವರು ಘಮಲಿನಲ್ಲಿ ಮೀಯಿಸಿ ಬುಟ್ಟಿಗೆ ಹಾಕಿಕೊಳ್ಳುವ ಕಲೆ ಕರಗತವಾಗಿದೆ. ಹೀಗಾಗಿ ನನ್ನ‌ ಸಿಟ್ಟು ಗಾಳಿಗಿಟ್ಪ ದೀಪದಂತೆ ಆಗುತ್ತದೆ. ಅಪ್ಪಾಜಿ ಪ್ಲೀಜ್ ಕ್ಷಮಿಸು ಅಂತ ನನ್ನ ಮುದ್ದು ಮಾಡುವಾಗ ನನಗೆ ಸಿಟ್ಟಿನಲ್ಲಿಯೇ ಒಲವು ಹೆಚ್ಚು ಲವಲವಿಕೆ ನೀಡುತ್ತದೆ. ಚಿನ್ನದ ಮಲ್ಲಿಗೆ ಹೂವೆ ಬಿಡು ನೀ ಬಿಂಕದ ಚೆಲುವೆ ಎಂದು ರಾಗವಾಗಿ ಹಾಡುವ ನಿನ್ನ ದನಿಗೆ ಸೋತು ಶರಣಾಗಿ ಬಿಡುವೆ.      ನನಗೆ ಕೊಂಚ ಆರಾಮ ತಪ್ಪಿದರೂ ನಿನ್ನ ಜೀವ ಬಾಡಿ ಬಸವಳಿಯುತ್ತೆ.   ಅತಿಯಾದ ಕಾಳಜಿ ಮಾಡಿ ನನ್ನ ಆರಾಮ ಮಾಡುವೆ.  ಕಣ್ಣ ರೆಪ್ಪೆಯಂತೆ ಕಾಯುವ ನಿನ್ನ ಹೃದಯ ಅನುರಾಗಕೆ ಬಣ್ಣಿಸಲು ಪದಗಳೇ ಇಲ್ಲ ಗೆಳೆಯ. ಟೆಲಿಫೋನ್ ಗೆಳತಿ ನೀನಿಲ್ಲದೆ ಇರಲಾರೆ ಎಂದು ಛೇಡಿಸಿ ಕಾಡುವ ನೀ ಹಿಂಗ ಅಚಾನಕ್  ದೂರಾಗಿ ಹೋಗತಿ ಅಂದುಕೊಂಡಿರಲಿಲ್ಲ ಗೆಳೆಯಾ.. . ಯಾಕೆ ‌ದೂರಾದೆ ಏನಾಯ್ತು ನಿನ್ನ  ಒಲವು. ಬೊಗಸೆ ಕಂಗಳ ನಿನ್ನ ಗೆಳತಿಯನ್ನು ಮರೆಯಲು ನಾ ಮಾಡಿದ ತಪ್ಪಾದರೂ ಏನು? ನೀನಿಲ್ಲದೆ ಅರೆ ಜೀವವಾಗಿರುವೆ. ಚಂದ್ರನ ತಂಪು ಬಿಸಿಲಾಗಿದೆ.ಸುಳಿಯುವ  ಗಾಳಿಯಲೂ ನಿನ್ನನೇ ಹುಡುಕುವಂತಾಗಿದೆ. ನೀನಿಲ್ಲದೆ ಈ ಜನ್ಮದಲ್ಲಿ ನನಗೆ ಬದುಕುವ ಆಸೆಯಿಲ್ಲ. ನಿನ್ನ ಸಾನ್ನಿಧ್ಯ, ಆಲಿಂಗನ, ಬಿಸಿಯುಸಿರು ಆ ಮಿಂಚು ಕಂಗಳಲ್ಲಿ ವ್ಯಕ್ತವಾಗುವ ಮಾತು ಗಳಿಗೆ ಮೀರಿದ ಭಾವನೆಗಳನ್ನು ಹೆಂಗೆ ಮರೆಯಲಿ ದೇವರಂಥ ಗೆಳೆಯಾ… ವರ್ಷ ದ ಮೂರೂ ಕಾಲಗಳಲ್ಲಿಯೂ ಧೋ ….. ಎಂದು ಒಲವಿನ ಮಳೆ ಸುರಿಸುತ್ತಿದ್ದರೆ  ಈ ನಿನ್ನ ಗೆಳತಿ ಪುನೀತಳಾಗಿ ಅರಳುತ್ತಿದ್ದಳು. ಪ್ರೀತಿಯ ಅಮೃತಧಾರೆ ಉಣಿ‌ಸಿ ದೂರ ಹೋದೆ. ನೀ ಬರುವ ದಾರಿಯಲಿ ಕಂಗಳ ಹಾಸಿ ಕಾಯುತಿರುವ…..  ನಿನ್ನ ಕಪ್ಪು ಕಂಗಳ ಚೆಲುವೆ… ****************************************

ಒಲವಿನೋಲೆ.. Read Post »

ಆರೋಗ್ಯ, ಇತರೆ

ಆರೋಗ್ಯದ ಬಗ್ಗೆ ಕಾಳಜಿ ಇರಲಿ

ಅನುಭವ ಆರೋಗ್ಯದ ಬಗ್ಗೆ ಕಾಳಜಿ ಇರಲಿ ಚಂದ್ರಮತಿ ಅದೊಂದು ಸಂಜೆ ! ಸಹಿಸಲಾರದ ವೇದನೆ ಆತಂಕ .ಬಲಹೀನ ತೋಳುಗಳು . ಏನಾಯ್ತು , ಹೇಗಾಯ್ತು ಮುಂದೆ ನಾನು  ಕೆಲಸ ಮಾಡೋದು ಹೇಗೆ  ಎಂದೆಲ್ಲ ಯೋಚಿಸ್ತಾ ಸಮಯ ವ್ಯರ್ಥಮಾಡಿ ಸಹಿಸಿಕೊಳ್ಳಲು ಅಸಾಧ್ಯ ವಾದಾಗ ಮೊರೆ ಹೋಗಿದ್ದು ಗೂಗಲ್ ಮಹಾಶಯನನ್ನು . ಅವನ ಸಲಹೆಯಂತೆ ಮನೆಯ ಸನಿಹದಲ್ಲೇ ಇರುವ ರೂಪೇಶ್ ಆರ್ಥೋಪೆಡಿಕ್ ಸೆಂಟರ್ಗೆ ಬೇಟಿ ಕೊಟ್ಟಾಗ ಅಲ್ಲಿಯ ಡಾ. ರೂಪೇಶ್ ಅವರು ಸರಳ ಮಾತು ಹಾಗೂ ಸೌಜನ್ಯತೆಯಿಂದ ಸರಿಯಾದ ಚಿಕಿತ್ಸೆ ಮಾಡಿಸ್ಕೊಂಡರೆ ಸರಿ ಹೋಗ್ತೀರ . ಚಿಂತೆ ಭಯವನ್ನೆಲ್ಲಾ ಬಿಟ್ಟು ಪಿಸಿಯೋತೆರಪಿ  ಹತ್ತು ಸೆಶನ್ ಮಾಡಿಸಿಕೊಳ್ಳಿ ಎಂದು ಧೈರ್ಯ ತುಂಬಿದಂತಹ ಪ್ರಾಮಾಣಿಕ ವೈದ್ಯರು. ಎಷ್ಟು ವಯಸ್ಸು ? ವಾವ್ ಹಾಗೆ ಕಾಣಸೋದೇ ಇಲ್ಲ ಎಷ್ಟು ಯಂಗ್ ಕಾಣ್ತಿದೀರ ಅದು ನಿಮಗೆ ಗೊತ್ತೇ ? ಅಂತ ಪ್ರೀತಿಯಿಂದ ಕೇಳಿದಾಗ ಮನಸ್ಸಿನಲ್ಲೇ ನಕ್ಕು  ‘ ರೋಗಿ ಬಯಸಿದ್ದು ಹಾಲು ಅನ್ನ ಡಾಕ್ಟರ್ ಕೇಳಿದ್ದು ಹಾಲು ಅನ್ನ ‘  ಅನ್ನೋ ಹಾಗೆ ಮೊದಲೇ ಸ್ವಲ್ಪ ಮಟ್ಟಿಗೆ ಆರೋಗ್ಯ ದ ಕಾಳಜಿ ಹಾಗೂ ಸೌಂದರ್ಯ ಪ್ರಜ್ಞೆ ಇರುವ ಹಾಗೂ ಅರ್ಧ ಶತಕ ಬಾರಿಸಿದ ನನಗೆ ಆ ನೋವಿನಲ್ಲೂ ಅವರ ಮಾತು ಹಿತವೆನಿಸಿ ಇದಕ್ಕಿಂತ ಹೆಚ್ಚು ರೋಗಿಗೆ ಇನ್ನೇನು ಬೇಕು ಅಂದುಕೊಂಡು ಹೌದಾ ! ಎಂದು ಅಚ್ಚರಿ ತೋರಿಸಿ ಧನ್ಯವಾದಗಳನ್ನು ತಿಳಿಸಿದೆ. ಮೃದು ಮಾತು ನಡತೆಯಿಂದಲೇ ಅರ್ಧ ನೋವು  ಕಡಿಮೆ ಮಾಡಿ ಗೆಳೆಯರಂತೆ ಚಿಕಿತ್ಸೆ ನೀಡಿದ್ದು ಭರವಸೆಯನ್ನು ತುಂಬಿದ್ದು ಫಿಸಿಯೋತೆರಪಿಷ್ಟ  ಮಿ.ಮಾನ್ತೇಷ್    ತುಂಬಾ  ಸರಳ ಹಾಗೂ ಪ್ರಾಮಾಣಿಕ ವ್ಯಕ್ತಿತ್ವ.  ‘ ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ‘ ಅನ್ನೋ ಹಾಗೆ ವಯಸ್ಸು ಚಿಕ್ಕ ದಾದರೂ  ಪಿಸಿಯೋಥೆರಪಿಯಲ್ಲಿ ಹೆಚ್ಚಿನ ಅನುಭವವುಳ್ಳ ವ್ಯಕ್ತಿ .ಕೆಲವು ತಿಂಗಳುಗಳಿಂದ ನಿದ್ದೆಯನ್ನೇ ಕಾಣದ ನನಗೆ ಹಾಗೂ ಒಂದು ಚಿಕ್ಕ ವಸ್ತು ವನ್ನೂ ಹಿಡಿಯಲು ಸಾಧ್ಯವಾಗದ ಈ ನನ್ನ ತೋಳುಗಳಿಗೆ ಭರವಸೆಯಿಂದ ಸಾಂತ್ವನ ನೀಡಿದ ಪುಣ್ಯಾತ್ಮರು ಎಂದರೂ ಅತಿಶಯೋಕ್ತಿಯಾಗಲಿಕ್ಕಿಲ್ಲ. ಎರಡು ವರ್ಷಗಳ ಅವರ ವೃತ್ತಿಯಲ್ಲಿ 2000 ಕ್ಕೂ ಹೆಚ್ಚು ಮತ್ತು ಒಂದು ವರ್ಷ ಅವಧಿಯಲ್ಲಿ ಬೆಂಗಳೂರಿನಲ್ಲಿ 800ಕ್ಕೂ ಹೆಚ್ಚು  ವಿವಿಧ ತರಹದ ಆರ್ಥೋ ಗೆ ಸಂಬಂಧ ಪಟ್ಟಂತಹ ಎಲ್ಲಾ  ರೋಗಿಗಳಿಗೆ ಫಿಸಿಯೋತೆರಪಿ ನೀಡಿ ಗಣಮುಖಮಾಡಿದಂತಹ ಅದ್ಭುತ ಫಿಸಿಯೋಥೆರಪಿಷ್ಟ್.  ಏಕೆಂದರೆ ಯಾವುದೇ ರೀತಿಯ ನೋವು ಉಪಶಮನ ಔಷಧಿಗಳನ್ನು ಸಲಹೆ ನೀಡದೆ ಕೇವಲ ಫಿಸಿಯೋ ಮತ್ತು ಬ್ರೀಥಿಂಗ್ ವಿಥ್ ಮೆಲೋಡಿ ಮ್ಯೂಸಿಕ್,  ನೀಡಲ್ ಚಿಕಿತ್ಸೆ ಹೀಗೆ ಅನೇಕ   ಥೆರಪಿ  ಯಿಂದಲೇ ನನಗೆ ಕೇವಲ ಒಂದು ತಿಂಗಳಲ್ಲೇ  ಸಂಪೂರ್ಣ ಗುಣಮುಖಳನ್ನಾಗಿಸಿದ್ದು ನನಗೆ ಸರಿಯಾದ ಸಮಯಕ್ಕೆ ಸಿಕ್ಕ ರತ್ನ ಎಂಬುದು ನನ್ನ ಅಭಿಮತ.‘ ಯಾವುದೇ ರೋಗವಿರಲಿ ಆರಂಭದಲ್ಲೇ ಅದನ್ನು ಸರಿಯಾಗಿ ಗುರುತಿಸಿ ಚಿಕಿತ್ಸೆ ನೀಡುವಂತಹ ಇಂತಹ ವೈದ್ಯರುಗಳ ಅವಶ್ಯಕತೆಯಿದೆ ‘ದೇವರನ್ನು ನಾವು ಒಂದು ಒಳ್ಳೆಯ ವ್ಯಕ್ತಿ ಯಲ್ಲೇ ಕಾಣಬಹುದು . ಬೇರೆ ಕಡೆ ಹುಡುಕುವ ಅವಶ್ಯಕತೆ ಇಲ್ಲವೆಂದನಿಸಿತು.‘ ವೈದ್ಯಃ ನಾರಾಯಣೋ ರೂಪಃ ‘   ಅನ್ನೋ ಹಾಗೆ  ವೈದ್ಯರಲ್ಲೇ ದೇವರನ್ನು ಕಂಡ  ಕ್ಷಣ . ದಿನದಿಂದ ದಿನಕ್ಕೆ ನೋವು ಗುಣಮುಖವಾದಂತೆ ಅವರಲ್ಲಿ  ನಾರಾಯಣನ ರೂಪವನ್ನೇ ಕಂಡ ನಾನು ಅವರ ಶ್ರಮಕ್ಕೆ ಹಾಗೂ ಚಿಕಿತ್ಸೆಗೆ  ಚಿರ ಋಣಿಯಾಗಿರುತ್ತೇನೆ. ಆಪತ್ಕಾಲದ ಬಾಂಧವರೆಂದರೆ ಹೃದಯವಂತ ವೈದ್ಯರು. ಹೆಚ್ಚಾಗಿ ನಲವತ್ತರ ಹರೆಯದಲ್ಲಿ ಕಾಣಿಸಿಕೊಳ್ಳುವ ಫ್ರೋಜನ್ ಶೋಲ್ಡರ್ ಎಂಬ ದೈತ್ಯ ನೋವನ್ನು ನಿರ್ಲಕ್ಷಿಸ ಬಾರದು.  ಹಾಗೂ  ಪ್ರಾರಂಭದಲ್ಲೇ ಪರೀಕ್ಷಿಸಿ  ಚಿಕಿತ್ಸೆ ಮಾಡಿಸಿ ಕೊಳ್ಳಲೇ ಬೇಕು  ಮೂಢ ನಂಬಿಕೆಗೆ ಅವಕಾಶ ಕೊಡದೆ ಮೊದಲು ವೈದ್ಯಕೀಯ ತಪಾಸಣೆ ಮಾಡಿಸ ಬೇಕು ಅನ್ನೋ ಅರಿವು ಪ್ರತಿ ಯೊಬ್ಬರಲ್ಲೂ  ಬರಬೇಕು. ಮಿತಿ ಮೀರಿದ ಸಂದರ್ಭದಲ್ಲಿ ಭಗವಂತನೂ ಅಸಹಾಯಕನಾಗಿ ಬಿಡುತ್ತಾನೆ.ವಯಸ್ಸು ಯಾವುದೇ ಇರಲಿ ಇರುವಷ್ಟೂ ದಿನ ಆರೋಗ್ಯವಂತರಾಗೇ ಇದ್ದು ಚಟುವಟಿಕೆಯಿಂದ ಕ್ರಿಯಾಶೀಲರಾಗಿ ಜೀವನ ಪಯಣ ಮುಗಿಸ ಬೇಕು ಅನ್ನೋ ಮನೋಭಾವ ಎಲ್ಲರಲ್ಲೂ ಮೂಡಬೇಕು. ಅದರ ಜೊತೆ ದೇವರಂಥ ವೈದ್ಯರು ದೊರಕಬೇಕು. *************************************

ಆರೋಗ್ಯದ ಬಗ್ಗೆ ಕಾಳಜಿ ಇರಲಿ Read Post »

You cannot copy content of this page

Scroll to Top