ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಗಜಲ್

ಪ್ರಭಾವತಿ ಎಸ್ ದೇಸಾಯಿ

ವಿರಹದುರಿಗೆ ಜೀವವು ಪತಂಗದಂತೆ ಸುಟ್ಟು ಶವವಾಗಲಿ ರಾತ್ರಿ
ಕಂಡ ಕನಸ ಹೂ ದಳಗಳು ಉದುರಿ ಉಸಿರು ಸಮಾಧಿಯಾಗಲಿ ರಾತ್ರಿ

ಎದೆಭಾರವಾಗಿದೆ ನೆನಪಿನ ಗಂಟು ಹೊತ್ತು ಬಂಡಿ ಸಾಗಲಿ ರಾತ್ರಿ
ಬದುಕು ಹಗುರಾಗಲು ಬೆಂದು ಉರಿವ ದೇಹಕೆ ತಂಬೆಳಕಾಗಲಿ ರಾತ್ರಿ

ದಣಿದ ಕಣ್ಣ ರೆಪ್ಪೆಗಳು ನಿಂತು ನಿದ್ದೆಗೆ ಬೇಲಿಯಾಗಲಿ ರಾತ್ರಿ
ಮಧುರ ಗಳಿಗೆಗಳ ಕಾಯುವ ಹೃದಯಗಳು ಒಲಿದು ಒಂದಾಗಲಿ ರಾತ್ರಿ

ಮನದಾಳದಲ್ಲಿ ಎದ್ದ ಪ್ರಶ್ನೆಗಳಿಗೆ ಉತ್ತರವಾಗಲಿ ರಾತ್ರಿ
ನೊಂದ ಜೀವಿಗಳಿಗೆ ಜಗದ ಎಲ್ಲ ಸುಖವು ಅನುಭವವಾಗಲಿ ರಾತ್ರಿ

ಅಗಲಿಕೆ ನೋವು ಹೊದ್ದ ಮೌನ ಸರಿಯಲು ತಂಗಾಳಿಯಾಗಲಿ ರಾತ್ರಿ
ಅಲೆವ ಜೋಗಿಗೆ ಚಂದಿರ”ಪ್ರಭೆ”ಮುಗಿಲ ಪಲ್ಲಂಗವಾಗಲಿ ರಾತ್ರಿ


Diya, Flame, India, Deepawali, Lamp

ಉಸಿರು ಉಸಿರಲಿ ಬೆರೆಸಿ ನಾದ ಹೊರಡಿಸಿದವನೆ ಎಲ್ಲಿ ಮರೆಯಾದೆ
ಒಲಿದ ಹೃದಯ ವೀಣೆ ಮೀಟಿ ಭಾವತುಂಬಿದವನೆ ಎಲ್ಲಿ ಮರೆಯಾದೆ

ಯಮುನೆಯ ಅಲೆಗಳು ಎದೆ ಉಸಿರಾಟ ಏರಿಳಿತ ಎಣಿಸುತಿವೆ ನೋಡು
ವಿರಹ ತಾಪದಲಿ ಮನ ಕಮಲ ಬಾಡಿಸಿದವನೆ ಎಲ್ಲಿ ಮರೆಯಾದೆ

ಯುಗ ಯುಗಗಳಿಂದ ರಾಧೆ ಯಂತೆ ಆರಾಧಿಸುತಿರುವೆ ನಿನ್ನನ್ನು
ಜನುಮ ಜನುಮದ ಪ್ರೀತಿ ಬೆಸುಗೆ ಕಳಚಿದವನೆ ಎಲ್ಲಿ ಮರೆಯಾದೆ

ಅನುರಾಗದ ಎಳೆ ಎಳೆಯಿಂದ ಹೆಣೆದ ಒಲವಿನ ಶಾಲು ಹೊದ್ದಿರುವೆ
ಪ್ರೇಮಿಗಳನು ಜನ ದೂರುವಂತೆ ಮಾಡಿದವನೆ ಎಲ್ಲಿ ಮರೆಯಾದೆ

ಪ್ರೇಮದ ಹಣತೆ ಬತ್ತಿ ಕ್ಷೀಣಿಸದಂತೆ ಕಾಯಬೇಕು ಬಾಳಿನಲಿ
ಒಲವ ತೈಲ ಹಾಕದೆ “ಪ್ರಭೆ” ನಂದಿಸಿದವನೆ ಎಲ್ಲಿ ಮರೆಯಾದೆ

**************************

About The Author

5 thoughts on “”

  1. ಮುತ್ತು ಬಳ್ಳಾ ಕಮತಪುರ { ಕಮುಲಬ}

    ಸುಂದರವಾದ ಗಜಲ್ ಮಾ ಮತ್ತೇ ಓದಿಸುವ ಹುಚ್ಚು ಹಚ್ಚುವ ಗಜಲ್‌..

Leave a Reply

You cannot copy content of this page

Scroll to Top