ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ, ಜೀವನ

ಹೋಗಿ ಬರುತ್ತೇವೆ ಆ ಬೆಟ್ಟಕ್ಕೆ

ಅನುಭವ ಹೋಗಿ ಬರುತ್ತೇವೆ ಆ ಬೆಟ್ಟಕ್ಕೆ             ಪ್ರತಿ ಡಿಸೆಂಬರ್ ೨೨ಕ್ಕೆ ನಮ್ಮ ಶಾಲೆಯ ವಾರ್ಷಿಕೋತ್ಸವ, ಯಾವಾಗಲು ವಾರ್ಷಿಕೋತ್ಸವ ಮುಗಿದ ಬಳಿಕ ನಮಗೆ ಕ್ರಿಸ್ಮಸ್ರಜೆ. ರಜೆ ಕಳೆಯಲೆಂದೇ ಅಜ್ಜನ ಮನೆಗೆ ಹೋದೆವು. ನಮ್ಮ ಹಾಗೆ ಕ್ರಿಸ್ಮಸ್ ರಜೆ ಕಳೆಯಲು ನಮ್ಮಜ್ಜನ ದಾಯಾದಿಗಳ ಮನೆಮಕ್ಕಳೂ ಬಂದಿದ್ದರು. ಒಂದು ರೀತಿ ಮಕ್ಕಳ ಸೈನ್ಯವೇ ಸರಿ. ನಿಮ್ಮ ಶಾಲೆ ಹೇಗೆ? ನಿಮ್ಮ ಶಾಲೆಯಲ್ಲಿ ಏನೇನು ಕಲಿಸುತ್ತಾರೆ? ನಿಮಗೆ ಯಾವ ಟೀಚರ್ ಇಷ್ಟ? ಯಾರು ಹೇಗೆ ಬಯ್ಯುತ್ತಾರೆ? ಇತ್ಯಾದಿಗಳ ಚರ್ಚೆ ಮಾಡುತ್ತಿದ್ದೆವು. ರಜೆಗೆಂದು ಹೋದ ದಿನ ನಮಗೆ ಅಲ್ಲಿ ಭರ್ಜರಿ ಸ್ವಾಗತ. ನಮ್ಮಜ್ಜ ಅಜ್ಜಿಯಂತೂ ಬಸ್ ಬಳಿಯೇ ಬಂದು ನಮ್ಮ ಹೆಗಲ ಮೇಲೆ ಕೈಹಾಕಿ, ತಲೆನೇವರಿಸಿ ಕರೆದುಕೊಂಡು ಹೋದರು. ಇಂದು ನೆನಪಿಸಿಕೊಂಡರೆ ಕಣ್ಣಂಚಿನಲ್ಲಿ ನೀರು ತುಳುಕುತ್ತದೆ. ಅಣ್ಣನ ಮಕ್ಕಳು ಬರುತ್ತಾರೆಂಬ ಖುಷಿಯಲ್ಲಿ ನಮ್ಮತ್ತೆ (ಆಗಿನ್ನು ಲಗ್ನವಾಗಿರಲಿಲ್ಲ) ಗಸಗಸೆ ಪಾಯಸ ಮಾಡಿ ತಣಿಸಿ ನಮಗಾಗಿ ಕಾಯುತ್ತಿದ್ದರು. ಭರ್ಜರಿ ತಿಂಡಿತಿನಿಸುಗಳು ಅವುಗಳನ್ನು ತಿಂದ ನಮಗೆ ಊಟ ಬೇಡ ಅನ್ನಿಸಿ ಹಾಗೆ ಮಲಗಿಕೊಂಡೆವು. ನನ್ನಜ್ಜಿ ನಾವೆಲ್ಲ ಮಲಗಿದ ಮೇಲೆ ಬಂದು ಸರಿಯಾಗಿ ಹೊದಿಸಿ ತಾನೂ ಪಕ್ಕದಲ್ಲೆ ಕುಳಿತುಕೊಂಡು ಹೂ ಕಟ್ಟುತ್ತಾ “ಇವತ್ತೇನೊ ಹೊಸದು ಏನು ಗಲಾಟೆಯಿಲ್ಲ, ನಾಳೆಯಿಂದ ಇವರ ಜಗಳ ಬಿಡಿಸುವುದೇ ನನಗೊಂದು ಕೆಲಸ” ಎಂದರು. ಅದಕ್ಕೆ ಪ್ರತಿಯಾಗಿ “ಅವರು ಹೇಳಿದ್ದಕ್ಕೆಲ್ಲ ನಾನು ಹೂ ಅನ್ನಬೇಕು ಅದೊಂದು ನನಗೆ ತಾಪತ್ರಯ” ಎಂದು ಅತ್ತೆ ನಗುತ್ತಿದ್ದರು.              ಡಿಸೆಂಬರ್ ಅಂದರೆ ಚಳಿಗಾಲ ಜೊತೆಗೆ ಸುಗ್ಗಿಯ ಕಾಲವೂ ಹೌದು, ಭತ್ತ ಕೊಯ್ದು ಹೊರೆ ಕಟ್ಟಿ ಬಣವೆಗಳನ್ನು ಒಟ್ಟುತ್ತಿದ್ದ ಸೀಸನ್ ಅದು. ನಮಗೆ ಅದನ್ನು ಹೇಗೆ ಜೋಡಿಸುತ್ತಾರೆ ಎಂಬ ಕುತೂಹಲ, ಅಜ್ಜನ ಬಳಿಗೆ ಹೋಗಿ ಮೆಲ್ಲನೆ “ನಾವೂ ಬರ್ತೀವಿ ನಿಮ್ಮ ಜೊತೆಗೆ ಗದ್ದೆಹತ್ರ” ಅಂದೆವು ಒಂದೇ ಬಾರಿಗೆ “ಬನ್ನಿ ಅದಕ್ಕೇನಂತೆ” ಎಂದರು. ಆದರೆ ಅಜ್ಜಿ “ನೀವುಗಳು ಬಂದು ಅಲ್ಲೇನು ಮಾಡ್ತೀರಿ ಮನೆಲ್ಲೇ ಇರಿ” ಎಂದರು. ಪುರುಸೊತ್ತಿಲ್ಲದ ಕೆಲಸದ ನಡುವೆ ಈ ಮಕ್ಕಳ ತುಂಟಾಟ ತಡೆಯಲಾಗದು ಎಂಬ ಭಾವ ಆಕೆಯದ್ದು. ನಾವು ಅವರ ಬಳಿ ಇವರ ಬಳಿ ಹೇಳಿಸಿ ಶಿಫಾರಸ್ಸು ಮಾಡಿಸಿ ಕಡೆಗೆ ಗದ್ದೆ ಬಯಲಿಗೆ ಪ್ರಯಾಣ ಬೆಳೆಸಿದೆವು. ದಾರಿಯಲ್ಲಿ ಹೋಗುವಾಗ ನಮ್ಮ ಕೂಗಾಟ ಸ್ವಲ್ಪ ಹೆಚ್ಚೇ ಇತ್ತು ಅಜ್ಜಿ  ಆ ಕೂಗಾಟವನ್ನು ತನ್ನ ಕಣ್ಣುಗಳಿಂದಲೇ ನಿಯಂತ್ರಿಸುತ್ತಿದ್ದರು. ಭತ್ತವನ್ನು ಕಟಾವು ಮಾಡಿದ್ದರಿಂದ ಆ ಗದ್ದೆ ಬಯಲಿನಲ್ಲಿ ಬರಿಗಾಲಲ್ಲಿ ಹೋಗಲಿ ಚಪ್ಪಲಿ ಧರಿಸಿದ ಕಾಲುಗಳಿಂದಲೂ ಆಗುತ್ತಿರಲಿಲ್ಲ.             ಸ್ವಲ್ಪ ಹೊತ್ತು ನೋಡಿ ಪಕ್ಕದವರ ತೋಟಕ್ಕೆ ನಮ್ಮ ಪ್ರವೇಶವಾಯಿತು. ರಜೆಗೆ ಮಕ್ಕಳು ಬಂದಿದ್ದಾರೆ ಎಂದು ಎಳನೀರು, ಸೀಬೆಕಾಯಿ, ಗಣಿಕೆ ಹಣ್ಣು ಇತ್ಯಾದಿಗಳನ್ನು ಕೊಟ್ಟರು. ಹೆಣ್ಣುಮಕ್ಕಳಿಗೆಲ್ಲ ಆ ಪಕ್ಕದ ತೋಟದ ಅಜ್ಜಿ “ಕಾಕಡ, ಕನಕಾಂಬರ, ದವನ, ಮರುಗ ಎಲ್ಲಾ ಇವೆ ಎಲ್ಲಾ ಕೊಯ್ದುಕೊಂಡು ಕಟ್ಟಿ ಮುಡಿದುಕೊಳ್ಳಿ” ಎಂದು ಎಲ್ಲೊ ಸಿಕ್ಕಿಸಿ ಇಟ್ಟಿದ ದಾರವನ್ನು ನಮ್ಮೆಡೆಗೆ ಎಸೆದರು. ಅಭ್ಯಾಸವಿಲ್ಲದ ನಮಗೆ ಹೂ ಬಿಡಿಸಲು ಗೊತ್ತಾಗುತ್ತಿರಲಿಲ್ಲ ತರಚಿ ಹಾಳು ಮಾಡುತ್ತಿದ್ದೆವು ಅದನ್ನು ಕಂಡ ಅವರು “ಉಪಯೊಗಕ್ಕೆ ಬಾರದ್ಹಾಗೆ ಮಾಡ್ತೀರಲ್ಲ”  “ಓದೋ ಮಕ್ಕಳೇ ಹಿಂಗೆ ಹೂ ಬಿಡಿಸೋಕ್ಕು ಬರಲ್ವೆ?” ಎಂದು ಅವರೆ ಬಿಡಿಸಿ ಅಲ್ಲೆ ಒಂದು ಮುತ್ತುಗದ ಎಲೆ ಕೊಯ್ದು ಪೊಟ್ಟಣಕಟ್ಟಿ ನಯವಾಗಿ ಬೀಳ್ಕೊಟ್ಟರು ಇನ್ನು ಹೆಚ್ಚಿನ ನಷ್ಟವಾಗಬಾರದೆಂದು.             ನನ್ನಜ್ಜನಿಗೆ ಮೊಮ್ಮಕ್ಕಳನ್ನು ಪರಿಚಯ ಮಾಡಿಕೊಳ್ಳುವುದೇ ಖುಷಿ. ಆದರೆ ನಮ್ಮಜ್ಜಿಗೆ ಬೇರೆಯವರ ಬಳಿ ದೂರು ಹೇಳಿ ಬಯ್ಯವುದರಲ್ಲೆ ಖುಷಿ. ಅಜ್ಜ ನನ್ನನ್ನು ತೋರಿಸಿ “ಇವಳು ಕಾನ್ವೆಂಟ್ ಶಾಲೆಗೆ ಹೋಗ್ತಾಳೆ ಅಕ್ಷರವಂತೂ ಮುತ್ತು ಪೋಣಿಸಿದ ಹಾಗೆ ಬರಿತಾಳೆ” ಅಂದರೆ ಅಜ್ಜಿ ಮಧ್ಯೆ ಪ್ರವೇಶಿಸಿ “ಹೌದು ಮನೆಯಲ್ಲಿ ಒಂದೇ ಒಂದು ಕೆಲಸ ಮಾಡಲ್ಲ ಲಕ್ಷಣವಾಗಿ ಉದ್ದಲಂಗ ಹಾಕ್ಕೋಳದ್ ಬಿಟ್ಟು ಎನೋ ಹಿಜಾರ ಸಿಕ್ಕಿಸಿಕೊಂಡಿದ್ದಾರೆ ನೋಡಿ ಮೆರೆಯೋ ದೇವರುಗಳು ಇದ್ದ ಹಂಗೆ” ಎಂದರು. ನಮಗೆ ಆ ಮಾತುಗಳನ್ನು ಕೇಳಿ ನಗುಬಂತು, ತಕ್ಷಣ ಪಕ್ಕದ ಮನೆಯ ನೆಂಟರ ಹುಡುಗಿ “ ಇಲ್ಲ ನಿನ್ನ ತರ ಉದ್ದನೆ ಪಂಚೆ ಸುತ್ತೊಕಬೇಕ ಅಜ್ಜಿ” ನಮ್ಮ ಹಾಗೆ  ನೀವೂ ಹಾಕೊಳಿ ಎಷ್ಟು ಆರಾಮ್ ಫೀಲ್ ಆಗುತ್ತೆ ಗೊತ್ತ” ಎಂದೆ ಬಿಟ್ಟಳು ಎಲ್ಲರು ನಕ್ಕುಬಿಟ್ಟರು ಪಾಪ ಅಜ್ಜಿ ಬೇಜಾರು ಮಾಡಿಕೊಳ್ಳಲಿಲ್ಲ ನಕ್ಕು ಸುಮ್ಮನಾದರು. ಹೊತ್ತು ಕಳೆದ್ದು ಗೊತ್ತಾಗಲಿಲ್ಲ.             ದೊಡ್ಡ ದೊಡ್ಡ ಬಾಕ್ಸ್ಗಳಲ್ಲಿ ಊಟ ಮನೆಯಿಂದ ಬಂತು. ಗದ್ದೆ ಕೆಲಸಕ್ಕೆ ಬಂದವರೊಬ್ಬರು ಸೈಕಲ್ ಮೇಲೆ ಊಟ ಇರಿಸಿಕೊಂಡು ಬಂದರು ಅವರ ಜೋತೆಗೆ ಅತ್ತೆಯೂ ಬಂದರು. ಗದ್ದೆ ಬಯಲಿನಲ್ಲಿ ಕುಳಿತು ಊಟ ಮಾಡುವ ಖುಷಿಯೇ ಬೇರೆ ಎಲ್ಲಾ ಸೇರಿ ಊಟ ಮಾಡಿದೆವು. ನನ್ನಜ್ಜನಿಗೆ ಎಲೆಯಲ್ಲಿ ಊಟ ಬಿಡುವಂತಿರಲಿಲ್ಲ ಹಾಗೆ ಉಳಿಸಿದರೆ ಬಹಳ ಕೋಪಮಾಡಿಕೊಂಡು ಬಡಿಸಿದವರಿಗೂ, ಊಟಕ್ಕೆ ಕುಳಿತವರಿಗೂ ಬಯ್ದುಬಿಡುತ್ತಿದ್ದರು. ಗದ್ದೆ ಕೆಲಸಕ್ಕೆಂದು ಬಂದಿದ್ದ ಅಳು ಸೈಕಲ್ನಲ್ಲಿ ಊಟ ತಂದಿದ್ದರಲ್ಲ ಅದಕ್ಕೆ ಪ್ರತಿಫಲವೆಂಬಂತೆ “ಇಲ್ಲೇ ಒಂದು ನಿಮಿಷ” ಎಂದು ಹೋದವರು ಒಂದು ಗಂಟೆಯಾದರು ಪತ್ತೆಯಿರಲಿಲ್ಲ. ಕೆಲಸ ಸಾಗುತ್ತಿಲ್ಲ ಎಂದು ಅಜ್ಜ ಸಿಟ್ಟು ಮಾಡಿಕೊಂಡು ನಾವಿದ್ದ ಜಾಗ ಬಿಟ್ಟು ಮುಂದೆ ಹೋದರು. ಹಾಗೆ ಮುಂದೆ ಹೋದರು. ಹಾಗೆ ಮುಂದೆ ಹೋಗುತ್ತಾ ಹೋಗುತ್ತಾ ಇದ್ದಂತೆ ಏನೋ ಸದ್ದಾಯಿತು. ಅದನ್ನು ಗಮನಿಸಿದ ನಮ್ಮ ಸೋದರ ಅತ್ತೆ “ಅದೇನೂ ಅಲ್ಲ ಸಮಯ ಬಂದರೆ ಇರಲಿ ಅಂತ ಒಂದು ಮಡಚುವ ಚಾಕು, ಅರ, ಬೀಗದ ಕೀ ಇತ್ಯಾದಿಗಳನ್ನು ಇಟ್ಟುಕೊಂಡಿದ್ದಾರೆ”. “ಹಾಗಿದ್ದರೆ ಅಜ್ಜಿ” ಎಂದರೆ ಅವರು  “ಚಿಮ್ಮಟ, ಹೂಕಟ್ಟುವ ನೂಲು, ಸೇಪ್ಟಿಪಿನ್, ಹರಶಿಣ ಕೊಂಬು, ಅರ್ಚನೆ ಪ್ರಸಾದ ಇತ್ಯಾದಿ ಇತ್ಯಾದಿ ಅಂದರು ಅದೆಲ್ಲ ಸರಿ ನೀವು………….” ಎಂದಾಗ ಅತ್ತೆಗೆ ಕೋಪ ಬಂದು ಕೈ ಎತ್ತಿದಾಗ ನಾವೆಲ್ಲ ಚೆಲ್ಲಾಪಿಲ್ಲಿಯಾದೆವು.             ಸ್ವಲ್ಪ ಹೊತ್ತಿನ ಬಳಿಕ ನಮ್ಮಜ್ಜಿ ಮತ್ತು ಅತ್ತೆ ಹೂಕಟ್ಟುತ್ತಾ ಕುಳಿತರು ನಾವು ಹೋಗಿ ಕುಳಿತುಕೊಂಡು ಅದೇನು ಮ್ಯಾಜಿಕ್ ಎಂಬಂತೆ ಕಣ್ಣುಬಾಯಿ ಬಿಟ್ಟು ನೋಡುತ್ತಿದ್ದೆವು. ಏನೋ ದೂರಕ್ಕೆ ಕಣ್ಣು ಹಾಯಿಸಿದರೆ ಎದರೊಂದು ಬೆಟ್ಟ ಅದರ ಮೇಲೊಂದು ಗುಡಿಕಾಣಿಸುತ್ತಿತ್ತು. ಕುತುಹಲ ತಡೆಯಲಾಗಲಿಲ್ಲ ಏನು?ಏನು?  ಎಂದು ಕೇಳಿದೆವು “ಇರಿ ಸ್ವಲ್ಪ ಪಕ್ಕದ ತೋಟದವರು ನಾವು ಕೇಳಿದ್ರೆ ಇಷ್ಟೊಂದು ಹೂ ಕೊಡ್ತಾ ಇರಲಿಲ್ಲ ಎನೋ ನೀವು ಹೋಗಿದಿರ ಅಂತ ಅಪ್ಪಿ ತಪ್ಪಿ ಕೊಟ್ಟಿದ್ದಾರೆ, ಬಾಡಿ ಹೋಗುತ್ತವೆ ಹೂಗಳು ಕಟ್ಟಣ ಇರಿ ಎಂದರು” ನಾವು ಬಿಡಲಿಲ್ಲ ನಮ್ಮ ಬಲವಂತಕ್ಕೆ “ಅದು ರಂಗನಾಥಸ್ವಾಮಿ ಬೆಟ್ಟ” ಅಂದೇ ಬಿಟ್ಟರು. ಹೋಗೋಣ!  ಹೋಗೋಣ! ಅಂದೆವು.             ಅತ್ತೆ “ಈಗ ………..” ಎಂದರೆ ನಾವು “ಹೌದು ಈಗ್ಲೆ………… ಈ ಕ್ಷಣವೇ” ಎಂದು ಅತ್ತೆಗೆ ಬಲವಂತ ಮಾಡಿದೆವು. ಇವರುಗಳು ಸುಮ್ನೆ ಇರಲ್ಲ ಎಂದು ಅಜ್ಜಿಯ ಕಡೆಗೆ ಕಣ್ಸನ್ನೆ ಮಾಡಿದರು. ಹೊ………. ಇರಲಿ ಇರಲಿ ಬನ್ನಿ ಎಂದೆವು. ನಾವು ಇನ್ಯಾವಾಗ  ಬರ್ತೀವೋ ?ಬಂದರೂ ನೀವು ಮದುವೆಯಾಗಿ ಹೋಗಿರ್ತೀರ ಬನ್ನಿ! ಬನ್ನಿ!  ಪ್ಲೀಸ್! ಪ್ಲೀಸ್! ಅಂದೆವು ಕಡೆಗೂ ಒಪ್ಪಿಗೆ ಕೊಟ್ಟೇ ಬಿಟ್ಟರು. ನಾವುಗಳು ಉತ್ಸಾಹದಿಂದ ಹೊರೆಟೆವೂ. ಹಾಗೆ ಬೆಟ್ಟದ ಕಡೆಗೆ ಹೋಗುವಾಗ ನಾವು ನಮ್ಮ ದೊಡ್ಡಜ್ಜನ ಗದ್ದೆಬಯಲು ಧಾಟಿಕೊಂಡು ಹೋಗಬೇಕಾಗಿತ್ತು ಏನೋ ಮರ ಅದರ  ಹೆಸರು ಗೊತ್ತಿಲ್ಲ  ಆ ಮರದ ಕೆಳಗೆ ಪಾರ್ಕಲ್ಲಿ ವೃತ್ತಾಕಾರದಲ್ಲಿ ಬೆಳೆದ ಸಸ್ಯಗಳಂತೆ ಪೊದೆಪೊದೆಯಾಗಿ ಕಡ್ಡಿಕಡ್ಡಿಯಾಗಿ ಕೆಲವು ಸಸ್ಯಗಳು ಬೆಳೆದಿದ್ದವು. ಅ ಗಿಡಗಳನ್ನು ನೋಡುತ್ತಲೇ “ನನಗೆ ಈ ಗ್ರೀನ್ಶೇಡ್ ಎಂದರೆ ಬಹಳ ಇಷ್ಟ” ಎಂದೆ ಇನ್ನೊಬಳು “ನನಗೆ ಆ ಡೀಪ್ ಗ್ರೀನ್” ಎಂದಳು. ಅತ್ತೆ ನಮ್ಮನ್ನು ಕರೆದು “ಇಂಗ್ಲೀಷ್ ಇಲ್ಲಲ್ಲ ಯಾವ ಗಿಡ? ಅಂತ ಹೇಳಿ” ಎಂದರು ನಮಗೆ ಗೊತ್ತಿದ್ರೆ ಅಲ್ವೆ! ಹೇಳೋದು? ಗೊತ್ತಾಗಲಿಲ್ಲ ಸ್ವಲ್ಪ ಪೊದೆಯಾಗಿ  ತಿಳಿ ಹಸಿರಿನಿಂದ ಇದ್ದ ಸಸ್ಯ ತೋರಿ ಇದು ಹರಿಶಿಣ ಎಂದರು. ಚೂಪಾದ ಗಾಡ ಹಸಿರಿನ ಚೂಪಾದ ಎಲೆ ತೋರಿಸಿ ಇದು ಶುಂಠಿ ಎಂದರು.             ಅಷ್ಟರಲ್ಲಿ ಅತ್ತೆಗೆ ನಾವು ಅದನ್ನು ನೋಡುತ್ತಿರುವ ಕ್ರಮ ಕಂಡು ಅದನ್ನು ಕಿತ್ತು ತೋರಿಸಬೇಕೆನಿಸಿತು. ಕೀಳಲು ಮುಂದಾದರೆ ಬುಡ ಗಟ್ಟಿಯಾಗಿತ್ತು. ಆಗವರು “ನಿಮ್ಮಜ್ಜಿ ಹತ್ತಿರ ಹೋಗಿ ಕೂಡುಗೋಲು ತೆಗೆದುಕೊಂಡು ಬನ್ನಿ” ಎಂದರು. ಕಣ್ಣು ಮುಚ್ಚಿ ಬಿಡುವುದರಲ್ಲಿ ತಂದು ಕೊಟ್ಟೆವು. ಅತ್ತೆ ಚೂಪಾದ ಕೂಡಗೋಲಿನಿಂದ ನಯವಾಗಿ ಗಿಡಗಳಿಗೆ ಹಾನಿಯಾಗದಂತೆ ಹರಿಶಿಣ, ಶುಂಠಿಯನ್ನು ತೆಗೆದು ತೋರಿಸಿದರು. “ಇನ್ನು ಸ್ವಲ್ಪ ತೋರಿಸಿ” ಎಂದಾಗ “ನಿಮ್ಮ ದೊಡ್ಡಜ್ಜಿ ಬಂದರೆ ಕೋಲಲ್ಲೇ ತೋರಿಸ್ತಾರೆ” ಅಂದರು. ಆದರೆ ಯಾಕೋ ಏನೋ ಅವರ ಮನಸ್ಸಿನಲ್ಲಿ ಎನನ್ನಿಸಿತೋ ಊಟ ಖಾಲಿಯಾಗಿ ತೊಳೆದು ಇಟ್ಟಿದ್ದೀವಲ್ಲ ಆ ಬಾಕ್ಸ್ ತೆಗೆದುಕೊಂಡು ಬನ್ನಿ ಎಂದರು. ನಾವೆಲ್ಲ ಹೊರೆಟೆವು. ಅತ್ತೆ ನಮ್ಮನ್ನು ಕಂಡು “ಈ ಮೆರವಣಿಗೆ ಬೇಕಾ ಯಾರದರು ಒಬ್ಬರು ಹೋಗಿ” ಅಂದರು. ಆ ಮಾತಿನ ಧಾಟಿಗೆ ಅದರಿ ಅಲ್ಲಾಡಿದಂತೆ ನಾವಿದ್ದರೂ ನಮಗೆ ಮನಸ್ಸಿನಲ್ಲಿ ತಡೆಯಲಾಗದ ನಗು ನಗು. ಅತ್ತೆ ಹರಿಶಿಣವನ್ನು, ಶುಂಠಿಯನ್ನು ಬಗೆದು ಬಗೆದು ಬಾಕ್ಸ್ನಲ್ಲಿ ತುಂಬಿಸುತ್ತಿದ್ದರೆ  ನಮಗೆ ನಗು ಮತ್ತು ಹೆದರಿಕೆ ಒಟ್ಟೊಟ್ಟಿಗೆ ಆಗುತ್ತಿತ್ತು. ಮರು ಮಾತನಾಡದೆ ಅತ್ತೆ ಬಾಕ್ಸ್ ತುಂಬಿದ ಮೇಲೆ ಎತ್ಲಾರದಂತೆ ತೆಗೆದುಕೊಂಡು ಹೋಗಿ ಅಜ್ಜಿಯ ಬಳಿ ಕುಕ್ಕರಿಸಿ ಬಂದರು.             ಹಾಗೆ ನಮ್ಮ ಬಳಿಗೆ ಬಂದವರೆ “ಹರಿಶಿಣ ಫ್ರೆಶ್ ಆಗಿದೆ ಹಾಲಲ್ಲಿ ಅರೆದು ಹಚ್ಚಿಕೊಂಡರೆ ಮುಖ  glove ಆಗುತ್ತೆ  ಗೊತ್ತ” ಎಂದರು. “ಶುಂಠಿನೂ ಹಾಗೆ ಮಾಡಬೇಕ?” ಎಂದು ಇನ್ನೊಬ್ಬರಿಂದ ಮರು ಪ್ರಶ್ನೆ ಬಂತು. ಅತ್ತೆ ಅದೆಲ್ಲ ಇರಲಿ ಬೆಟ್ಟಕ್ಕೆ ಹೋಗ್ಬೇಕೋ ಬೇಡ್ವೋ ಎಂದರು. ಹೂ ಸರಿ ಸರಿ ಎಂದು ಬೇಗನೆಹೆಜ್ಜೆ ಹಾಕಿದೆವು. ನಮಗೆ  ಆ ಗದ್ದೆ ಬಯಲಿನಲ್ಲಿ ತೆಂಗಿನ ಅಡಿಕೆ ತೋಟಗಳ ನಡುವೆ ಅಜ್ಜನ ಮನೆಗೆ ಬಂದ ಕಾರಣಕ್ಕೆ ಹಾಕಿಕೊಂಡಿರುವ ಕಾಲುಗೆಜ್ಜೆ, ಪುಟ್ಟ ಹ್ಯಾಂಗಿಗ್ಸೆಗಳನ್ನು ಕುಣಿಸಿಕೊಂಡು ಅಲುಗಾಡಿಸಿಕೊಂಡು ವೇಲ್ಗಳನ್ನು ಮತ್ತೆ ಮತ್ತೆ ಸರಿಮಡಿಕೊಂಡು ಹೋಗುವುದೇ ಸಂಭ್ರಮವಾಗಿತ್ತು. ದೂರಕ್ಕೆ ಚಿಕ್ಕದಾಗಿ ಕಾಣುತ್ತಿದ್ದ ಅ ಬೆಟ್ಟ ಹತ್ತಿರ ಹೋದಂತೆ ದೊಡ್ಡದು, ದೊಡ್ಡದು ಅನ್ನಿಸುತ್ತಿತ್ತು.             ಬೇಗ ಬೇಗ ಹತ್ತಿ ಮನಗೆ ಹೋಗಿ ಮತ್ತೆ ಕೆಲಸ ಇದೆ ಧನುರ್ಮಾಸದ ಪೂಜೆ ಬೇರೆ ಬನ್ನಿ ಎಂದರು. ಹೊರಟಾಗ ಇದ್ದ ಖುಷಿ ಬೆಟ್ಟ ಹತ್ತುವಾಗ ಇರಲಿಲ್ಲ. ಆದರೂ ಹೇಗೊ ಸಾಹಸದ ದಂಡಯಾತ್ರೆ ಎಂಬಂತೆ ಗುಡಿಯ ಮುಂಭಾಗ ತಲುಪಿದೆವು. ಬಾಗಿಲು ಕಡೆ ನೋಡಿದರೆ ಎರಡೆರಡು ಬೀಗ ಹಾಕಿದ್ದರು. ಅತ್ತೆ ಇದೇ ಬೆಟ್ಟ  ರಂಗನಾಥಸ್ವಾಮಿ ಬೆಟ್ಟ ನೋಡಿದ್ರಾ ಇಳಿರಿ ಎಂದರು. ನಮಗೆ ಕುತೂಹಲ ಗರ್ಭಗುಡಿಯ ಸುತ್ತು ಬಂದರೆ ಗುಡಿಯ ಪೂರ್ವಕ್ಕೆ ನಮ್ಮ ಹಳ್ಳಿ ಹುಲಿಕಲ್ ಕಾಣುತ್ತಿತ್ತು. ಜೊತೆಗೆ ಶ್ರೀನಿವಾಸ ದೇವಾಲಯದ ರಾಜ ಗೋಪುರ. ಸುಮ್ಮನೆ ಎಲ್ಲಿ? ಎಲ್ಲಿ? ಹುಡುಕೋಣ! ಎಂದು ನಿಂತೆವು. ಅತ್ತೆ ಬಿಡಲಿಲ್ಲ ಈಗ ಕೋಲು ತೆಗೆದುಕೊಂಡು ತೋರಿಸುತ್ತೇನೆ ಎಂದರು. ನಮ್ಮಗಲ್ಲಿ ಕಂಡಿದ್ದು ಕಾಗೆಗಳು ತಿನ್ನಲಾರದ ಮೆಣಸಿನ ಕಾಯಿ, ಕರೀಬೇವು, ಕಡಲೇಬೀಜ, ಉದ್ದನೆಯ ಕೊಬ್ಬರಿ ತುರಿ ಇತ್ಯಾದಿ ಎಲ್ಲ ಪುಳಿಯೋಗರೆಯ ಅವಶೇಷ.             ಹತ್ತುವಾಗ ಆದ ಕಷ್ಟ ಇಳಿಯುವಾಗ ಆಗಲಿಲ್ಲ. ಬೇಗನೆ ಬಂದರೂ ಮುಸ್ಸಂಜೆ ಅವರಿಸಿದ ಕಾರಣ ಅಜ್ಜಿ ನಮಗಲ್ಲ ಅತ್ತೆಯನ್ನು ಬಯ್ಯಲು ಪ್ರಾರಂಭಿಸಿದರು. “ನೀನು ಅವರುಗಳ ಜೊತೆ ಕುಣಿಯುತ್ತಾ ಇದ್ದೀಯಲ್ಲ”

ಹೋಗಿ ಬರುತ್ತೇವೆ ಆ ಬೆಟ್ಟಕ್ಕೆ Read Post »

ಅನುವಾದ

ಕಣ್ಣ ಕಸ

ಅನುವಾದಿತ ಕವಿತೆ ಕಣ್ಣ ಕಸ ಕನ್ನಡ ಮೂಲ: ಶೈಲಜಾ ಬಿ. ಇಂಗ್ಲೀಷಿಗೆ: ಸಮತಾ ಆರ್. ಈ ಕಸ ಹೇಗೆಬಿತ್ತೋ ಗೊತ್ತಿಲ್ಲಕಣ್ಣಿಂದ ಇಳಿವಒಂದೊಂದೇ ಹನಿಗಾಗಿಕಾಯುತಿರುವೆಕರವಸ್ತ್ರದ ತುದಿಸೆರಗಿನ ಚುಂಗುಉಫ್..ಅಂತಊದಿದ ಮಗಳ ಉಸಿರುಯಾವುದಕ್ಕೂ ಸಿಗದೆಅವಿತು ಕಾಡಿಸುತಿದೆ ತುಂಬಿದ ಕಣ್ಣುಗಳಲ್ಲಿಜಗತ್ತನ್ನು ನೋಡುವುದೂಒಂದು ಅನುಭವ ತಾನೇಹೀಗಂದುಕೊಳ್ಳುತ್ತಲೇಕನ್ನಡಿಯ ಮುಂದೆ ಬಂದುಮನಸ ಓಲೈಸಲುಹೆಣಗುತಿರುವೆ ಈ ನಶ್ವರ ಬದುಕಲ್ಲಿಪ್ರತಿ ಘಳಿಗೆಯನಿರಿಯುತಿದೆಕಣ್ಣ ತುಂಬ ಬಾವುಕಣ್ಣೊಳಗೆ ಬಿದ್ದ ನೋವು I just don’t knowHow this speck of dustGot in to the eyeAnd haunting me hiding inside.And kept me waiting forevery drop dripping. Corner of a hand kerchiefEdge of my saree,“Uff” the air blown by my kid,Nothing could get rid of this. To see the world with filled eyes,Is also an experience,Thinking so,Stood before the mirrorStruggling hard to console the soul. In this immortal life,Eye swelled and the pain filledAre stabbing each moment.

ಕಣ್ಣ ಕಸ Read Post »

ಕಾವ್ಯಯಾನ

ಕವಾಟಗಳ ಮಧ್ಯೆ ಬೆಳಕಿಂಡಿ

ಕವಿತೆ ಕವಾಟಗಳ ಮಧ್ಯೆ ಬೆಳಕಿಂಡಿ ಸುತ್ತು ಗೋಡೆಗಳ ಕಟ್ಟಿತೆರೆಯದ ಕವಾಟಗಳ ಮಧ್ಯೆನಾನೆಂಬ ನಾನು ಬೇಧವಳಿದುಒಂದಾಗಲಿಜೀವ ಪರಮಾತ್ಮಸಂತ ಶರಣರ ಅಹವಾಲು ನೋವಿರದ ಹಸಿದ ಸ್ವಾರ್ಥಬರಡಾದ ಎದೆಯ ಅಮೃತಬರಿದೆ ಬಡಿಯುವ ಮಿಡಿತ ಕಳೆದು ಹೋಗಿಹ ನಾವುಕದ ತಟ್ಟಿ ಕರೆಯೋಣಇಂದಲ್ಲ ನಾಳೆ ತೆರೆದೀತುತಟ್ಟಿದ ಕೈಗಳ ತಬ್ಬೀತುಸಂತ ಶರಣರು ನಕ್ಕಾರು. ***************************

ಕವಾಟಗಳ ಮಧ್ಯೆ ಬೆಳಕಿಂಡಿ Read Post »

ಕಾವ್ಯಯಾನ

ಹಾಯ್ಕುಗಳು

ಹಾಯ್ಕುಗಳು ವಿ.ಹರಿನಾಥ ಬಾಬು ಕೂಗಿತು ಕೋಳಿಹರಿಯಿತು ಬೆಳಕುನಗುವ ಸೂರ್ಯ ಉರಿವ ಬೆಂಕಿಒಲೆಯ ಮೇಲೆ ಅನ್ನಹಸಿದ ಕಂದ ಸೂರ್ಯ ಸಿಟ್ಟಾದಭೂಮಿ ಬಳಲಿ ಬೆಂಡುಹಾಳಾದ ರೈತ ಜೋರಾದ ಮಳೆಕೊಚ್ಚಿಹೋದ ಫಸಲುಹತಾಷ ರೈತ ತುಂತುರು ಹನಿಪುಲಕಗೊಂಡ ಭೂಮಿಪ್ರಸನ್ನ ಜನ ****************************

ಹಾಯ್ಕುಗಳು Read Post »

ಅಂಕಣ ಸಂಗಾತಿ, ಸಂಪ್ರೋಕ್ಷಣ

ಅಂಕಣ ಬರಹ ರಾತ್ರಿಬಸ್ಸುಗಳೊಂದಿಗೆ ಮಾತುಕತೆ ರಾತ್ರಿಬಸ್ಸಿನಲ್ಲಿ ಎಷ್ಟೆಲ್ಲ ಕನಸುಗಳು ಪಯಣಿಸುತ್ತಿರುತ್ತವೆ; ತಲುಪಬೇಕಾದ ಸ್ಥಳವನ್ನು ಗಮನದಲ್ಲಿಟ್ಟುಕೊಂಡು ಹವಾಮಾನಕ್ಕೆ ತಕ್ಕ ಬಟ್ಟೆ ತೊಟ್ಟು ಬೆಳಗೆನ್ನುವ ಬೆರಗಿಗೆ ಕಣ್ಣುಬಿಡಲು ತಯಾರಾಗಿ ಹೊರಟುನಿಂತಿರುತ್ತವೆ! ಬಗಲಲ್ಲೊಂದು ಹಗುರವಾದ ಪರ್ಸು, ಕೈಯಲ್ಲೊಂದು ಭಾರವಾದ ಬ್ಯಾಗು, ಕೂದಲನ್ನು ಮೇಲೆತ್ತಿ ಕಟ್ಟಿದ ರಬ್ಬರ್ ಬ್ಯಾಂಡು ಎಲ್ಲವೂ ಆ ಕನಸುಗಳೊಂದಿಗೆ ಹೆಜ್ಜೆಹಾಕುತ್ತಿರುತ್ತವೆ. ಅವಸರದಲ್ಲಿ ಮನೆಬಿಟ್ಟ ಕನಸುಗಳ ಕಣ್ಣಿನ ಕನ್ನಡಕ, ಕೈಗೊಂದು ವಾಚು, ಬಿಸಿನೀರಿನ ಬಾಟಲಿಗಳೆಲ್ಲವೂ ಆ ಪಯಣದ ಪಾತ್ರಧಾರಿಗಳಂತೆ ಪಾಲ್ಗೊಳ್ಳುತ್ತವೆ. ಅರಿವಿಗೇ ಬಾರದಂತೆ ಬದುಕಿನ ಅದ್ಯಾವುದೋ ಕಾಲಘಟ್ಟದಲ್ಲಿ ಹುಟ್ಟಿಕೊಂಡ ಆ ಕನಸುಗಳನ್ನೆಲ್ಲ ಅಪರಿಚಿತ ರಾತ್ರಿಯೊಂದರ ಬೋರ್ಡಿಲ್ಲದ ಬಸ್ಸು ತನ್ನದಾಗಿಸಿಕೊಂಡು ಸಾಗಿಸುತ್ತಿರುತ್ತದೆ. ಒಂದೊಂದೇ ಬೀದಿದೀಪಗಳನ್ನು ದಾಟುತ್ತ ಚಲಿಸುತ್ತಲೇ ಇರುವ ಅವು ಆ ಸ್ಥಾನಪಲ್ಲಟದ ಮಾರ್ಗಮಧ್ಯದಲ್ಲಿ ಹುಟ್ಟು-ಕೊನೆಗಳ ಆಲೋಚನೆಯನ್ನು ಬದಿಗಿಟ್ಟು, ಬಸ್ಸಿನ ಚಲನೆಯನ್ನೇ ತಮ್ಮದಾಗಿಸಿಕೊಂಡು ಸೀಟಿಗೊರಗಿ ಸುಧಾರಿಸಿಕೊಳ್ಳುತ್ತವೆ. ಹಾಗೆ ದಣಿವಾರಿಸಿಕೊಳ್ಳುತ್ತಿರುವ ಕನಸುಗಳನ್ನು ಹೊತ್ತ ಬಸ್ಸು ಹಳೆ ಸಿನೆಮಾವೊಂದರ ರೊಮ್ಯಾಂಟಿಕ್ ಹಾಡಿನ ಟ್ಯೂನಿನಂತೆ ತನ್ನದೇ ಆದ ಗತಿಯಲ್ಲಿ ದಾರಿಯೆಡೆಗೆ ದೃಷ್ಟಿನೆಟ್ಟು ಓಡುತ್ತಿರುತ್ತದೆ. ಈ ರಾತ್ರಿಬಸ್ಸುಗಳೆಡೆಗಿನ ಮೋಹವೂ ಹಳೆಯ ಹಾಡುಗಳೆಡೆಗಿನ ಮೋಹದಂತೆ ತನ್ನಿಂತಾನೇ ಹುಟ್ಟಿಕೊಂಡಿತು. ಚಿಕ್ಕವಳಿದ್ದಾಗ ಜಾತ್ರೆಗೆ ಹೋದಾಗಲೋ ಅಥವಾ ಮಳೆಗಾಲದ ದಿನಗಳಲ್ಲಿ ಸಂಚಾರವ್ಯವಸ್ಥೆಗಳೆಲ್ಲ ಅಸ್ತವ್ಯಸ್ತವಾಗಿ ಬಸ್ಸುಗಳೆಲ್ಲ ಕ್ಯಾನ್ಸಲ್ ಆಗುತ್ತಿದ್ದ ಸಂದರ್ಭಗಳಲ್ಲೋ, ಲಾಸ್ಟ್ ಬಸ್ಸಿಗಾಗಿ ಬಸ್ ಸ್ಟ್ಯಾಂಡಿನಲ್ಲಿ ಕಾಯುತ್ತಿದ್ದ ಸಮಯಗಳಲ್ಲಿ ಹೊರಊರುಗಳಿಗೆ ಸಂಚರಿಸುತ್ತಿದ್ದ ರಾತ್ರಿಬಸ್ಸುಗಳು ಬಂದು ನಿಲ್ಲುತ್ತಿದ್ದವು. ಹಾಗೆ ಬಸ್ಸು ಬಂದು ನಿಲ್ಲುತ್ತಿದ್ದಂತೆಯೇ ಒಂದು ಕೈಯ್ಯಲ್ಲಿ ಟಿಕೆಟ್ ಹಿಡಿದುಕೊಂಡು ಇನ್ನೊಂದು ಕೈಯಲ್ಲಿ ಲಗೇಜು ಎತ್ತಿಕೊಂಡು ಗಡಿಬಿಡಿಯಲ್ಲಿ ಬಸ್ಸಿನೆಡೆಗೆ ಓಡುವವರನ್ನು ಕಂಡಾಗಲೆಲ್ಲ, ಈ ರಾತ್ರಿಯ ಸಮಯದಲ್ಲಿ ಇಷ್ಟೊಂದು ಜನರು ಊರು ಬಿಟ್ಟು ಅದೆಲ್ಲಿಗೆ ಹೋಗುತ್ತಿರಬಹುದು ಎನ್ನುವ ಪ್ರಶ್ನೆ ಹುಟ್ಟಿಕೊಳ್ಳುತ್ತಿತ್ತು. ಪರ್ಸನ್ನು ಭದ್ರವಾಗಿ ಹಿಡಿದುಕೊಂಡು ಸ್ವೆಟರನ್ನು ಸರಿಪಡಿಸಿಕೊಳ್ಳುತ್ತ ಬಸ್ಸಿನಿಂದ ಇಳಿದು ಟಾಯ್ಲೆಟ್ಟಿನ ಬೋರ್ಡನ್ನು ಹುಡುಕುವವರನ್ನು ನೋಡುವಾಗಲೆಲ್ಲ, ಅವರೆಲ್ಲ ಅದ್ಯಾವುದೋ ಬೇರೆಯದೇ ಆದ ಲೋಕದೊಂದಿಗೆ ನನ್ನನ್ನು ಕನೆಕ್ಟ್ ಮಾಡುತ್ತಿರುವಂತೆ ಭಾಸವಾಗುತ್ತಿತ್ತು. ಹಾಗೆ ಒಂದೊಂದಾಗಿ ಸ್ಟ್ಯಾಂಡಿಗೆ ಬರುತ್ತಿದ್ದ ರಾತ್ರಿಬಸ್ಸುಗಳಿಂದಾಗಿ ಬಸ್ ಸ್ಟ್ಯಾಂಡಿನ ಬೇಕರಿಯ ಬ್ರೆಡ್ಡು-ಬಿಸ್ಕಿಟ್ಟುಗಳೂ ಒಂದೊಂದಾಗಿ ಖಾಲಿಯಾಗಿ ಅಂಗಡಿಯವನ ಮುಖದಲ್ಲೊಂದು ಸಮಾಧಾನ ಕಾಣಿಸಿಕೊಳ್ಳುತ್ತಿತ್ತು. ಆ ರೀತಿಯ ಹಗಲಲ್ಲಿ ಕಾಣಸಿಗದ ಒಂದು ವಿಚಿತ್ರವಾದ ಅವಸರದ, ಉಮೇದಿನ, ಸಮಾಧಾನದ ವಾತಾವರಣವನ್ನು ಸೃಷ್ಟಿ ಮಾಡುತ್ತಿದ್ದ ರಾತ್ರಿಬಸ್ಸುಗಳು ಒಂದನ್ನೊಂದು ರಿಪ್ಲೇಸ್ ಮಾಡುತ್ತಿರುವ ಸಮಯದಲ್ಲಿ ಲಾಸ್ಟ್ ಬಸ್ಸುಗಳು ಒಂದೊಂದಾಗಿ ಬಸ್ ಸ್ಟ್ಯಾಂಡಿನಿಂದ ಜಾಗ ಖಾಲಿಮಾಡುತ್ತಿದ್ದವು. ಹಾಗೆ ಲಾಸ್ಟ್ ಬಸ್ಸಿನಲ್ಲಿ ಕಿಟಕಿಪಕ್ಕದ ಸೀಟಿನಲ್ಲಿ ಕುಳಿತ ನಾನು ರಾತ್ರಿಬಸ್ಸಿನೊಳಗೆ ಕುಳಿತ ಜನರನ್ನು ಬೆರಗಿನಿಂದ ಇಣುಕಿ ನೋಡುತ್ತ, ಅವುಗಳ ಬಗ್ಗೆಯೇ ಯೋಚಿಸುತ್ತ ಬಸ್ಸಿನ ಸರಳಿಗೊರಗಿ ನಿದ್ರೆ ಮಾಡುತ್ತಿದ್ದೆ. ನಾನೂ ಅಂಥದ್ದೇ ರಾತ್ರಿಬಸ್ಸಿನೊಳಗೆ ಕುಳಿತು ಊರುಬಿಟ್ಟು ರಾತ್ರಿಪಾಳಿಯಲ್ಲಿ ಕೆಲಸ ಮಾಡುತ್ತಿದ್ದ ಸಮಯದಲ್ಲಿ, ಕ್ಯಾಬ್ ಗಳಿಗೆ ಎದುರಾಗುತ್ತಿದ್ದ ರಾತ್ರಿಬಸ್ಸುಗಳ ಬೋರ್ಡಿನೆಡೆಗೆ ದೃಷ್ಟಿ ಹಾಯಿಸುತ್ತಿದ್ದೆ; ಬೋರ್ಡುಗಳೇ ಇರದ ಬಸ್ಸುಗಳ ಡ್ರೈವರುಗಳೆಡೆಗೆ ಇಣುಕಿ ನೋಡುವ ಒಂದು ವಿಚಿತ್ರವಾದ ಚಟವೂ ಅಂಟಿಕೊಂಡಿತ್ತು. ಅವರ ಕಣ್ಣುಗಳಲ್ಲಿರುತ್ತಿದ್ದ ತೀಕ್ಷ್ಣತೆ-ಜಾಗರೂಕತೆಗಳೆಲ್ಲ ಕಂಪ್ಯೂಟರಿನೆದುರಿಗೆ ಕುಳಿತು ಮಂಜಾಗಿರುತ್ತಿದ್ದ ನನ್ನ ಕಣ್ಣುಗಳಲ್ಲೊಂದು ಹೊಸ ಚುರುಕನ್ನು ತುಂಬಿದಂತೆನ್ನಿಸಿ ಖುಷಿಯಾಗಿ, ಆ ಡ್ರೈವರುಗಳ ಮತ್ತು ನನ್ನ ಬದುಕಿನ ನಡುವಿನಲ್ಲೊಂದು ವಿಚಿತ್ರವಾದ ಹೋಲಿಕೆಯಿರುವಂತೆ ಭಾಸವಾಗುತ್ತಿತ್ತು. ಆ ಸಾಮ್ಯತೆಯೇ ಎಲ್ಲ ಬದುಕುಗಳ ನಿಜಸ್ಥಿತಿಯನ್ನು ಕಣ್ಣೆದುರು ತೆರೆದಿಟ್ಟಂತೆನ್ನಿಸಿ, ಹುಟ್ಟು-ಕೊನೆಗಳನ್ನು ಮರೆತು ಬಸ್ಸಿನಲ್ಲಿ ಚಲಿಸುತ್ತಿರುವ ಕನಸುಗಳು ಒಂದಿಲ್ಲೊಂದು ನಿಲುಗಡೆಯಲ್ಲಿ ಇನ್ನೊಂದು ಬಸ್ಸಿನ ಕನಸುಗಳೊಂದಿಗೆ ಸಂಧಿಸಿ ಎಲ್ಲರ ಬದುಕುಗಳನ್ನು ನಿರ್ಧರಿಸುತ್ತಿರುವಂತೆ ತೋರುತ್ತಿತ್ತು. ರಾತ್ರಿಬಸ್ಸಿನ ಮುಚ್ಚಿದ ಕಿಟಕಿಗಳ ಕರ್ಟನ್ನಿನ ಹಿಂದಿರುವ ಕನಸುಗಳೆಲ್ಲ ಬೆಳಗಾಗುವುದನ್ನೇ ಕಾಯುತ್ತಿರಬಹುದು, ಆ ಕಾಯುವಿಕೆಯ ಪ್ರಕ್ರಿಯೆಯೊಂದಿಗೇ ಅವುಗಳ ಸತ್ಯತೆಯೂ ಕೆಲಸ ಮಾಡುತ್ತಿರಬಹುದು ಎನ್ನುವಂತಹ ಯೋಚನೆಗಳೆಲ್ಲ ಪ್ರತಿದಿನವೂ ಬಸ್ಸಿನೊಂದಿಗೆ ಎದುರಾಗುತ್ತಿದ್ದವು. ಇಷ್ಟೆಲ್ಲ ಯೋಚನೆಗಳ ನಡುವೆಯೂ ಕೊನೆಯ ರಾತ್ರಿಬಸ್ಸು ಯಾವ ಸಮಯಕ್ಕೆ ಬಸ್ ಸ್ಟ್ಯಾಂಡನ್ನು ಬಿಡಬಹುದು, ಬಸ್ ಸ್ಟ್ಯಾಂಡಿನಲ್ಲಿರುವ ಬಿಸ್ಕಿಟಿನ ಅಂಗಡಿಯ ಬಾಗಿಲು ಯಾವಾಗ ಮುಚ್ಚಬಹುದು, ಬ್ಯಾಗಿನ ತುಂಬ ಕನಸುಗಳನ್ನು ತುಂಬಿಕೊಂಡು ರಾತ್ರಿಬಸ್ಸು ಹತ್ತಿರುವವರ ಕನಸುಗಳೆಲ್ಲ ಯಾವ ತಿರುವಿನಲ್ಲಿ ಚಲಿಸುತ್ತಿರಬಹುದು ಎನ್ನುವ ಪ್ರಶ್ನೆಗಳೆಲ್ಲ ಪ್ರಶ್ನೆಗಳಾಗಿಯೇ ಉಳಿದಿವೆ. ಈ ರಾತ್ರಿಬಸ್ಸಿಗಾಗಿ ಕಾಯುವವರೆಲ್ಲ ಸೇರಿ ಅಲ್ಲೊಂದು ಹಗಲುಗಳಿಂದ ಬೇರೆಯದೇ ಆದ ಪ್ರಪಂಚವನ್ನು ಸೃಷ್ಟಿ ಮಾಡಿರುತ್ತಾರೆ. ಸ್ಕರ್ಟು ತೊಟ್ಟು ಅದಕ್ಕೆ ತಕ್ಕ ಹೈ ಹೀಲ್ಸ್ ಧರಿಸಿ ಎಸಿ ರೂಮಿನಲ್ಲಿ ನಿರಂತರವಾಗಿ ಕ್ಲೈಂಟ್ ಮೀಟಿಂಗಿನಲ್ಲಿರುವ ಹುಡುಗಿಯೊಬ್ಬಳು ಸಾಧಾರಣವಾದ ಚಪ್ಪಲಿ ಕಾಟನ್ ಬಟ್ಟೆಯನ್ನು ಧರಿಸಿ ಮೆಟ್ಟಿಲುಗಳ ಮೇಲೆ ಕುಳಿತು, ಎಣ್ಣೆಹಾಕಿ ತಲೆಬಾಚಿ ಕನಕಾಂಬರ ಮುಡಿದ ಅಪರಿಚಿತ ಹೆಂಗಸಿನೊಂದಿಗೆ ತರಕಾರಿ ರೇಟಿನ ಬಗ್ಗೆ ಮಾತನಾಡುತ್ತಿರುತ್ತಾಳೆ; ಕೆಲಸದ ಒತ್ತಡದಲ್ಲಿ ತಮ್ಮವರೊಂದಿಗೆ ಮಾತನಾಡಲು ಸಮಯವೇ ಸಿಗದ ಹುಡುಗನೊಬ್ಬ ಬಸ್ಸು ತಡವಾಗಿ ಬರುತ್ತಿರುವುದಕ್ಕೆ ಕಾರಣವನ್ನೋ, ಆಫೀಸಿನ ಪ್ರಮೋಷನ್ ವಿಷಯವನ್ನೋ, ಸ್ನೇಹಿತನ ಮದುವೆಯ ಸಂಗತಿಯನ್ನೋ ಅಕ್ಕ-ತಂಗಿಯರೊಂದಿಗೆ ಹರಟುತ್ತ ಆಚೀಚೆ ಓಡಾಡುತ್ತಿರುತ್ತಾನೆ; ಹೆಂಡತಿಯನ್ನು ಬಸ್ ಹತ್ತಿಸಲು ಬಂದವನ ಕಾರಿನಲ್ಲಿ ಹಳೆಯ ಗಝಲ್ ಗಳು ಒಂದೊಂದಾಗಿ ಪ್ಲೇ ಆಗುತ್ತ ಹೊಸದೊಂದು ಸಂವಹನವನ್ನು ಹುಟ್ಟುಹಾಕುತ್ತವೆ; ಡಿಸ್ಕೌಂಟಿನಲ್ಲಿ ಖರೀದಿಸಿದ ರೇಷ್ಮೆ ಸೀರೆ, ಹೊಸ ಸಿನೆಮಾವೊಂದರ ನಾಯಕನ ಹೇರ್ ಸ್ಟೈಲ್, ಕ್ರಿಕೆಟ್ಟಿನ ಬೆಟ್ಟಿಂಗ್ ನಲ್ಲಿ ಕಳೆದುಕೊಂಡ ಹಣ, ಟ್ರೆಕ್ಕಿಂಗ್ ನಲ್ಲಿ ಸಿಕ್ಕಿದ ಹೊಸ ಗೆಳೆಯರು, ಅತ್ತೆ-ಸೊಸೆಯರ ಮನಸ್ತಾಪಗಳೆಲ್ಲವೂ ಮಾತಾಗಿ ಹೊರಬಂದು ಬಸ್ ಸ್ಟಾಪಿನ ಪ್ಲಾಟ್ ಫಾರ್ಮ್ ಮೇಲೆ ಒಂದರೊಳಗೊಂದು ಸೇರಿಹೋಗುತ್ತವೆ. ಹಾಗೆ ಸಂಧಿಸಿದ ಮಾತುಕತೆಗಳೆಲ್ಲವೂ ಆ ಕ್ಷಣದ ಬದುಕನ್ನು ತಮ್ಮದಾಗಿಸಿಕೊಂಡು ಬಸ್ಸನ್ನೇರಲು ರೆಡಿಯಾಗುತ್ತವೆ. ರಾತ್ರಿಬಸ್ಸಿನೊಳಗಿನ ಮಾತುಕತೆಗಳದ್ದೂ ಒಂದು ವಿಶಿಷ್ಟವಾದ ಪ್ರಪಂಚ. ಸ್ನೇಹವೊಂದು ಅದೆಷ್ಟು ಸುಲಭವಾಗಿ ಹುಟ್ಟಿಕೊಳ್ಳಬಹುದೆನ್ನುವ ಪ್ರಾಕ್ಟಿಕಲ್ ಎನ್ನಬಹುದಾದಂತಹ ಕಲ್ಪನೆ ಈ ಬಸ್ಸುಗಳೊಳಗೆ ಸಿದ್ಧಿಸುತ್ತದೆ. ಅಂಥದ್ದೊಂದು ಸ್ನೇಹ ಹುಟ್ಟಿಕೊಳ್ಳಲು ಒಂದೇ ರೀತಿಯ ಆಸಕ್ತಿಯಾಗಲೀ, ಹವ್ಯಾಸಗಳಾಗಲೀ, ಮನೋಭಾವಗಳಾಗಲೀ ಅಗತ್ಯವಿಲ್ಲ; ವಯಸ್ಸಿನ ಇತಿಮಿತಿಗಳಂತೂ ಮೊದಲೇ ಇಲ್ಲ! ಪಕ್ಕದಲ್ಲಿ ಕುಳಿತವರೆಲ್ಲ ಸಲೀಸಾಗಿ ಸ್ನೇಹಿತರಾಗಿ, ಕಷ್ಟ-ಸುಖಗಳ ವಿನಿಮಯವೂ ಆಗಿ, ಮಧ್ಯರಾತ್ರಿಯಲ್ಲಿ ಅದ್ಯಾವುದೋ ಊರಿನಲ್ಲಿ ಬಸ್ಸು ನಿಂತಾಗ ಒಟ್ಟಿಗೇ ಕೆಳಗಿಳಿದು ಜೊತೆಯಾಗಿ ಟೀ ಕುಡಿದು, ಬೆಳಗ್ಗೆ ಬಸ್ಸಿಳಿದ ನಂತರ ಸಂಪರ್ಕವೇ ಇಲ್ಲದಿದ್ದರೂ, ರಾತ್ರಿಬಸ್ಸಿನಲ್ಲಿ ಜೊತೆಯಾಗಿ ಪ್ರಯಾಣ ಮಾಡಿದವರ ಚಹರೆ-ಸಂಭಾಷಣೆಗಳೆಲ್ಲವೂ ಮನಸ್ಸಿನಲ್ಲಿ ಉಳಿದುಹೋಗಿರುತ್ತವೆ. ಆ ವ್ಯಕ್ತಿಯನ್ನು ಮತ್ತೆಂದೂ ಭೇಟಿಯಾಗದಿದ್ದರೂ ಅಲ್ಪಕಾಲದ ಆ ಸ್ನೇಹದ ತುಣುಕೊಂದು ನೆನಪಾಗಿ ಉಳಿದು, ಯಾವುದೋ ಸಂದರ್ಭದ ಯಾವುದೋ ಸಂಗತಿಗಳೊಂದಿಗೆ ತನ್ನನ್ನು ತಾನು ಜೋಡಿಸಿಕೊಂಡು ಸದಾಕಾಲ ಜೊತೆಗಿರುತ್ತದೆ. ಅಂತಹ ಚಿಕ್ಕಪುಟ್ಟ ಸ್ನೇಹಗಳೇ ಒಂದಾಗಿ ಮಾನವೀಯ ನೆಲೆಯಲ್ಲಿ ಅಂತರಂಗದೊಂದಿಗೆ ಮಾತುಕತೆ ನಡೆಸುತ್ತ ಚಾಕಲೇಟ್ ಬಾಕ್ಸಿನೊಳಗಿನ ಬೊಂಬೆಗಳಂತೆ ಬದುಕಿನ ಸವಿಯನ್ನು ಹೆಚ್ಚಿಸುತ್ತಿರುತ್ತವೆ. ಈ ರಾತ್ರಿಬಸ್ಸುಗಳನ್ನು ಏರುವಾಗಲೆಲ್ಲ ನನ್ನನ್ನೊಂದು ವಿಚಿತ್ರವಾದ ಭಯವೂ ಆವರಿಸಿಕೊಳ್ಳುತ್ತಿತ್ತು. ಚಿಕ್ಕವಳಿದ್ದಾಗ ವಿಧಿ-ಹಣೆಬರಹಗಳ ಕಥೆಗಳನ್ನೆಲ್ಲ ಕೇಳುತ್ತ ಬೆಳೆದಿದ್ದ ನನಗೆ ಈ ಬೋರ್ಡುಗಳಿಲ್ಲದ ಬಸ್ಸುಗಳನ್ನು ಏರುವಾಗಲೆಲ್ಲ, ಹಣೆಬರಹವನ್ನೇ ಬರೆದಿರದ ಬದುಕಿನೊಂದಿಗೆ ಓಡುತ್ತಿರುವ ಅನುಭವವಾಗಿ ವಿಚಿತ್ರವಾದ ತಳಮಳವಾಗುತ್ತಿತ್ತು. ಐದನೇ ಕ್ಲಾಸಿನಲ್ಲಿ ಕಲಿತ ಇಂಗ್ಲಿಷ್ ಅಕ್ಷರಮಾಲೆಯನ್ನು ಮತ್ತೊಮ್ಮೆ ಮನನ ಮಾಡಿಕೊಂಡು, ಬೋರ್ಡಿನ ಬದಲಾಗಿ ಗ್ಲಾಸಿನ ಮೇಲೆ ಬರೆದಿರುತ್ತಿದ್ದ ಅಕ್ಷರವನ್ನು ಮತ್ತೆಮತ್ತೆ ಓದಿಕೊಂಡು, ವಿಧಿಯ ಮೇಲೆ ಭಾರ ಹಾಕುತ್ತಿರುವ ಭಾವದಲ್ಲಿ ಬಸ್ಸಿನೊಳಗೆ ಲಗೇಜು ಇಳಿಸುತ್ತಿದ್ದೆ. ಲಗೇಜಿನಲ್ಲಿರುವ ಟೆಡ್ಡಿಬೇರ್-ಚಾಕಲೇಟುಗಳೆಲ್ಲ ಸುಸೂತ್ರವಾಗಿ ಮಕ್ಕಳ ಕೈಯನ್ನು ತಲುಪುವಂತಾಗಲಿ ಎಂದು ಪ್ರಾರ್ಥಿಸುತ್ತ ಡ್ರೈವರಿನ ಮುಖವನ್ನೊಮ್ಮೆ ನೋಡುತ್ತಿದ್ದೆ. ಎರಡು ತಿಂಗಳಿಗೊಮ್ಮೆಯಾದರೂ ರಾತ್ರಿಬಸ್ಸಿನೊಂದಿಗೆ ಒಡನಾಟವಿಟ್ಟುಕೊಂಡಿದ್ದ ನನಗೆ ಎಷ್ಟೋ ಸಲ ಮುಖಪರಿಚಯವಿರುವ ಡ್ರೈವರಿನ ದರ್ಶನವಾಗಿ, ವರುಷಗಳಿಂದ ಬದಲಾಗದೇ ಪೀಠದಲ್ಲಿ ಕುಳಿತಿರುವ ದೇವರನ್ನು ನೋಡಿದ ಸಮಾಧಾನವಾಗುತ್ತಿತ್ತು. ಆ ನೆಮ್ಮದಿಯ ಭಾವದಲ್ಲಿಯೇ ಸೀಟಿನ ನಂಬರನ್ನು ಹುಡುಕಿ ಕಾಲುಚಾಚಿದ ತಕ್ಷಣ, ಅದೇ ಲಾಸ್ಟ್ ಬಸ್ಸಿನ ಕಿಟಕಿಪಕ್ಕದ ಸೀಟು ತಪ್ಪದೇ ನೆನಪಾಗುತ್ತಿತ್ತು. ರಾತ್ರಿಬಸ್ಸೊಂದು ಕನಸಿನಂತೆ ಮನಸ್ಸನ್ನಾವರಿಸಿಕೊಂಡು, ನಿಧಾನವಾಗಿ ನೆನಪುಗಳೊಂದಿಗೆ ಒಡನಾಡುತ್ತಿರುವ ಸಮಯದಲ್ಲಿಯೂ ಅವುಗಳೆಡೆಗಿನ ಮೋಹ ಮಾತ್ರ ಟಿವಿ ಸ್ಟ್ಯಾಂಡಿನಲ್ಲಿರುವ ಹಳೆಯ ಹಾಡುಗಳ ಸಿಡಿಗಳಂತೆ ಹಳತಾಗದೇ ಉಳಿದುಕೊಂಡಿದೆ. ಮಾತುಕತೆಗಳೆಲ್ಲ ಮೊಬೈಲಿಗೆ ಸೀಮಿತವಾಗಿಹೋಗುತ್ತಿರುವ ಕಾಲದಲ್ಲಿಯೂ ರಾತ್ರಿಬಸ್ಸುಗಳಲ್ಲಿ ಸುಂದರವಾದ ಸಂಬಂಧವೊಂದು ಹುಟ್ಟಿಕೊಂಡು ಕಾಂಟ್ಯಾಕ್ಟ್ ನಂಬರುಗಳನ್ನು ವಿನಿಮಯ ಮಾಡಿಕೊಳ್ಳುತ್ತಿರಬಹುದು; ನಿಲುಗಡೆಯ ಚಹಾದ ಅಂಗಡಿಯಲ್ಲೊಬ್ಬ ಬಿಸ್ಕಿಟ್ ಪ್ಯಾಕೆಟ್ಟುಗಳಲ್ಲಿ ಸ್ನೇಹವನ್ನು ಹಂಚುತ್ತಿರಬಹುದು; ಲಗೇಜಿನೊಳಗಿನ ಮಾರ್ಕ್ಸ್ ಕಾರ್ಡು, ಲಗ್ನಪತ್ರಿಕೆ, ನೆಲ್ಲಿಕಾಯಿ, ತುಳಸಿಬೀಜಗಳೆಲ್ಲವೂ ನಿಶ್ಚಿಂತೆಯಿಂದ ಕನಸುಕಾಣುತ್ತಿರಬಹುದು. *************************************** ಮೂಲತ: ಉತ್ತರ ಕನ್ನಡದವರಾದ ಅಂಜನಾ ಹೆಗಡೆಯವರು ಸದ್ಯ ಬೆಂಗಳೂರಲ್ಲಿ ನೆಲೆಸಿರುತ್ತಾರೆ. ‘ಕಾಡ ಕತ್ತಲೆಯ ಮೌನ ಮಾತುಗಳು’ ಇವರು ಪ್ರಕಟಿಸಿದ ಕವನಸಂಕಲನ.ಓದು ಬರಹದ ಜೊತೆಗೆ ಗಾರ್ಡನಿಂಗ್ ಇವರ ನೆಚ್ಚಿನ ಹವ್ಯಾಸ

Read Post »

ಅಂಕಣ ಸಂಗಾತಿ, ಮೂರನೇ ಆಯಾಮ

ಅಂಕಣಬರಹ ಅದುಮಿಟ್ಟ ಮನದ ಮಾತುಗಳು ಕವಿತೆಗಳಾದಾಗ ಪುಸ್ತಕ- ಸಂತೆ ಸರಕುಕವಿ- ಬಿ ಎ ಮಮತಾ ಅರಸೀಕೆರೆಪ್ರಕಾಶನ- ನಾಕುತಂತಿ  ಬೆಲೆ- ೮೦/-           ಸಿದ್ಧ ಸೂತ್ರ ಬದಲಾಗಬೇಕುಅಜ್ಜಿ ಕಥೆಯಲ್ಲಿಅರಿವು ಜೊತೆಯಾಗಬೇಕುಹೊಸ ಕಥೆಗಳ ಬರೆಯಬೇಕುಅಕ್ಷರ ಲೋಕದಲಿಅಕ್ಷರ ಲೋಕದಲ್ಲಿ ಬದಲಾವಣೆ ಬಯಸುವ ಮಮತಾ ಆಡಲೇ ಬೇಕಾದ ಮಾತುಗಳೊಂದಿಗೆ ನಮ್ಮೆದುರಿಗಿದ್ದಾಳೆ.  ಮಮತಾ ಅಂದರೇ ಹಾಗೆ. ಹೇಳಬೇಕಾದುದನ್ನು ಮನದೊಳಗೇ ಇಟ್ಟುಕೊಂಡಿರುವವಳಲ್ಲ. ಹೇಳಬೇಕಾದುದ್ದನ್ನು ಥಟ್ಟನೆ ಹೇಳಿಬಿಡುವವಳು. ಆ ಮಾತಿನಿಂದ ಏನಾದರೂ ವ್ಯತಿರಿಕ್ತವಾದರೆ ನಂತರದ ಪರಿಣಾಮಗಳ ಬಗ್ಗೆ ಕೊನೆಯಲ್ಲಿ ಯೋಚಿಸಿದರಾಯಿತು ಎಂದುಕೊಂಡಿರುವವಳು. ಹೊಸದಾಗಿ ನೋಡುವವರಿಗೆ ಇದ್ಯಾಕೆ ಹೀಗೆ ಎಂದು ಅಚ್ಚರಿಯಾದರೂ ಜೊತೆಗೇ ಇರುವ ನಮಗೆ ಇದು ಅತ್ಯಂತ ಸಹಜ. ಏನಾದರೂ ಒಂದು ಘಟನೆ ನಡೆದಾಗ ಅದಕ್ಕೆ ಮಮತಾ ತಕ್ಷಣ ಪ್ರತಿಕ್ರಿಯಿಸದೇ ಇದ್ದರೆ ಮಮತಾ ಎಲ್ಲಿ? ಆರಾಂ ಇದ್ದಾಳೆ ತಾನೆ? ಎಂದು ಸ್ನೇಹಿತ ಬಳಗದಲ್ಲಿ ಕೇಳಿಕೊಳ್ಳುವಷ್ಟು ಅವಳು ಶೀಘ್ರ ಉತ್ತರ ನೀಡುವವಳು. ಹೀಗಾಗಿ ಮಮತಾ ತಮ್ಮ ಈ ಸಂಕಲನದಲ್ಲಿ ಹೀಗೆ ನೇರಾನೇರ, ಎದೆಗೆ ಢಿಕ್ಕಿ ಹೊಡೆಯುವ  ಅನೇಕ ಸಾಲುಗಳೊಂದಿಗೆ ನಮಗೆ ಎದುರಾಗುತ್ತಾರೆ. ನಿನಗೆ ನೀನೆ ಕತೆಯಾಗುವುದನಿಲ್ಲಿಸಿ ಬಿಡಲಾಗದೇನೆ ಸಖಿಸಾಕು ಮಾಡಲಾಗದೇನೆಅವನ ಹಂಬಲಿಕೆಬರೀ ನಿನ್ನದೇ ಬಿಕ್ಕಳಿಕೆ ಎಂದು ಪ್ರಾರಂಭವಾಗುವ ‘ಅವತಾರಗಳು’ ಎಂಬ ಕವಿತೆ ಆದಿಯಿಂದ ಹಿಡಿದು ಇಡೀ ಪುರಾಣಗಳನ್ನು ಜಾಲಾಡಿ ಹೆಣ್ಣಿನ ಕಣ್ಣೀರನ್ನು ಹುಡುಕುವ ಪ್ರಯತ್ನ ಮಾಡುತ್ತದೆ. ಇಡೀ ಪುರಾಣ, ಭಾರತದ ಇತಿಹಾಸದ ತುಂಬೆಲ್ಲ ಹೆಣ್ಣಿನ ಬಿಕ್ಕಳಿಕೆಯ ನೋವುಗಳೇ ತುಂಬಿದೆ. ಕಣ್ಣಿಗೆ ಕಾಣದ ಸಂಪ್ರದಾಯಗಳ ಹೊರೆ ಇರುವ ಲಕ್ಷ್ಮಣರೇಖೆ ಎಲ್ಲಾ ಹೆಣ್ಣುಗಳ ಸುತ್ತಲೂ ಆವರಿಸಿಕೊಂಡಿದೆ. ಅದನ್ನು ಮೀರಿದರೆ ಅನರ್ಥ ಎಂದು ಆ ಕಾಲದಿಂದಲೂ ಹೆಣ್ಣನ್ನು ಬಲವಂತವಾಗಿ ನಂಬಿಸುತ್ತ ಬರಲಾಗಿದೆ. ಮತ್ತು ಆಗುವ ಎಲ್ಲಾ ಅನಾಹುತಗಳಿಗೂ ಹೆಣ್ಣೇ ಕಾರಣ ಎಂದು ಪ್ರಪಂಚವನ್ನು ಒಪ್ಪಿಸುತ್ತಲೇ ಬಂದಿದೆ ಈ ಪುರುಷಪ್ರಧಾನ ಸಮಾಜ. ಹೆಣ್ಣು ಮಾತನಾಡಿದರೆ ತಪ್ಪು, ಹೆಣ್ಣು ನಕ್ಕರೆ ತಪ್ಪು, ಹೆಣ್ಣು ಏನಾದರೂ ಆಸೆಪಟ್ಟರೆ ತಪ್ಪು, ಕೊನೆಗೆ ಹೆಣ್ಣು ಅತ್ತರೂ ತಪ್ಪು. ಆಕೆ ಗಂಡು ಆಡಿಸಿದಂತೆ ಆಡುವ ಗೊಂಬೆ ಅಷ್ಟೇ. ಆತ ಏನು ಹೇಳಿದರೂ ಮರು ಮಾತನಾಡದೇ ಒಪ್ಪಿಕೊಳ್ಳಬೇಕಾದ ಜೀವವಿರುವ ವಸ್ತು. ಆತನ ಮನೆ, ಹೊಲಗದ್ದೆ, ಬೈಕು, ಕಾರು ಮತ್ತು ಉಳಿದೆಲ್ಲ ಐಶಾರಾಮಿ ವಸ್ತುಗಳಂತೆಯೇ. ನಿರ್ಧಾರ ತೆಗೆದುಕೊಳ್ಳಬೇಕಾದವನು ಅವನು ಮತ್ತು ಅದರ ಬಗ್ಗೆ ಏನೂ ಕೇಳದೆ ಜಾರಿಗೆ ತರಬೇಕಾದವಳು ಮಾತ್ರ ಅವಳು. ಬದುಕಿನಲ್ಲಿ ತನ್ನಷ್ಟೇ ಅವಳೂ ಮುಖ್ಯವಾದವಳು ಎಂಬುದನ್ನು ಕನಸಿನಲ್ಲೂ ಯೋಚಿಸದ ಆತ ತನ್ನಷ್ಟಕ್ಕೆ ತಾನು ತೆಗೆದುಕೊಳ್ಳುವ ಏಕಮುಖಿ ನಿರ್ಧಾರಗಳಿಗೆ, ಜೀವನದ ಮಹತ್ವದ ತೀರ್ಮಾನಗಳಿಗೆ ಆಕೆ ಬದಲು ಮಾತನಾಡದೇ ಒಪ್ಪಿಕೊಳ್ಳಬೇಕು. ‘ಪ್ರೀತಿಸುತ್ತೇನೆ ಬಾ’ ಎಂದರೆ ಹರಕೆಯ ಕುರಿಯಂತೆ ಹತ್ತಿರ ಬರಬೇಕು, ‘ನೀನು ನನಗೆ ಬೇಡ’ ಎಂದರೆ ಬದಲು ಹೇಳದೇ ದೂರ ಸರಿಯಬೇಕು. ಅದರಲ್ಲಿಯೇ ಆಕೆಯ ಶ್ರೇಯಸ್ಸಿದೆ ಎಂದು ಶತಶತಮಾನಗಳಿಂದ ಹೆಣ್ಣನ್ನು ಭ್ರಮೆಯಲ್ಲಿ ಇಡುತ್ತ ಬರಲಾಗಿದೆ. ಆಕೆ ಸಮಾನತೆಯ ಬಗ್ಗೆ ಮಾತನಾಡುವುದೇ ಅಪರಾಧ. ಹೀಗಾಗಿಯೇ ಸಮಾನತೆಯ ಪ್ರತಿಭಟನೆನಿನ್ನದಲ್ಲ ಜೋಕೆಎಂದು ಅವಳನ್ನು ಎಚ್ಚರಿಸುತ್ತ ಆಕೆ ಏನಾದರೂ ಮಾತನಾಡಿದರೆಚಾರಿತ್ರವಧೆ, ಆಸಿಡ್ ದಾಳಿಕಲ್ಕಿಯ ಲೋಕದ ಕಾಣಿಕೆ ಎಂಬಂತೆ ಅವಳನ್ನು ಜೀವಂತವಿರುವಾಗಲೇ ಸಾಯಿಸಿ ಬಿಡುತ್ತದೆ. ಆದರೆ ಈ ಗಂಡುಲೋಕದ ಲೆಕ್ಕಚಾರಗಳೇ ವಿಚಿತ್ರ. ಕುಸಿದು ಬಿದ್ದರೆ ಎತ್ತಲು ಹತ್ತಾರು ಕೈಗಳು ಸಹಾಯ ಬೇಡದೆಯೂ ಮುಂದೆ ಬರುತ್ತವೆ. ‘ಮೈದಡವಿ’ ಸಾಂತ್ವಾನ ಹೇಳುತ್ತವೆ. ಕೇಳದೆಯೂ ‘ಎದೆಗೊರಗಿಸಿಕೊಂಡು’ ಸಮಾಧಾನ ಹೇಳುತ್ತವೆ. ಇಂತಹ ಪುರಾಣ ಸೃಷ್ಟಿಕೃತ ಪುರುಶೋತ್ತಮರನ್ನು ನಾವು ಪ್ರತಿದಿನವೂ ಕಾಣುತ್ತಿದ್ದೇವೆ ಎಂದು ಕವಯತ್ರಿ ಅಭಿಪ್ರಾಯ ಪಡುತ್ತಾರೆ. ಪುರುಷ ಪ್ರಪಂಚದ ಈ ದ್ರಾಷ್ಟ್ಯಕ್ಕೆ ಹೆಣ್ಣಿನ ನವಿರು ಲೋಕ ನಲುಗಿಹೋಗಿದೆ. ಕಣ್ಣಲ್ಲೇ ಅಳೆದು ಬಿಡುತ್ತೀರಿಕರಾರುವಕ್ಕಾದ ಅಳತೆಗಳುಬೇಡವೇ ಬೇಡ ನಿಮಗೆಯಾವುದೇ ಸಿದ್ಧ ಮಾಪಕಗಳುಬಾಯಿತುಂಬಾ ಚಪ್ಪರಿಸುತ್ತೀರಿಮತ್ತೆ ಮತ್ತೆ ಸವಿಯುತ್ತೀರಿಅದೆಷ್ಟು ತೆವಲೋಅದೇ ಧ್ಯಾನ ಅದೇ ಉಸಿರುರಸಗವಳವೇ ಅಂಗಾಂಗಗಳ ಹೆಸರು ನಯವಾದ ರೇಷ್ಮೆ ಬಟ್ಟೆಯಲ್ಲಿ ಸುತ್ತಿಕೊಂಡು ಮತ್ತಗೆ ಭಾರಿಸಿದಂತಹ ಈ ಸಾಲುಗಳು ನೀಡುವ ಮೂಕೇಟು ಅತ್ತಯಂತ ಕಠೋರವಾದವುಗಳು. ರಕ್ತ ಹೊರಬರಲಾರದು. ಆದರೆ ಒಳ ಏಟಿಗೆ ಚರ್ಮ ನೀಲಿಗಟ್ಟುವುದನ್ನು ತಡೆಯಲಾಗದು. ಆದರೆ ಈ ಏಟು ತಮಗೇ ನೀಡಿದ್ದು ಎಂದು ಈ ಸಮಾಜ ಅರ್ಥ ಮಾಡಿಕೊಳ್ಳಬೇಕು ಅಷ್ಟೇ. ಪುರುಷರ ತವಲಿಗೆ ಇನ್ನೊಂದು ಪದ ಬೇಡ. ದೀಪ ಮತ್ತು ಕಲಣಿವೆ ಎನ್ನುವ ಕವಿತೆಯನ್ನೋದಿದರೆ ಈ ಪುರುಷ ವಿಕೃತಿಯ ಭೂತೋಚ್ಛಟನೆ ಆಗುವುದಂತೂ ಸತ್ಯ. ಆದರೆ ಕವನ ಓದಿ ಸಮಾಜ ಬದಲಾಗುತ್ತದೆಯೇ? ಬದಲಾಯಿಸುವ ಅವಕಾಶ ಸಿಕ್ಕರೆ ಎಲ್ಲವನ್ನು ಬದಲಿಸಿಬಿಡಬಹುದಿತ್ತು ಎನ್ನುವ ಕವಯತ್ರಿಯ ಮನದಾಳದ ಮಾತು ಇಲ್ಲಿ ಕವಿತೆಯಾಗಿದೆ ಸದ್ಯಮೂರನೇ ಕಣ್ಣುಕೊಡಲಿಲ್ಲ ಪ್ರಭುವೆಶಾಪಗಳೂ ಕೂಡ ಫಲಿಸಲಾರವು ಹಾಳಾಗಿ ಹೋಗಲಿ ಎಂದು ನಾವು ನೀಡುವ ಶಾಪ, ಬೆನ್ನ ಹಿಂದಿನ ಬೈಗುಳಗಳು ಈ ಮಾನಗೆಟ್ಟವರನ್ನು ಏನೂ ಮಾಡದು ಎನ್ನುವ ಪರಿಜ್ಞಾನ ಅವರಿಗಿದೆ. ಹೀಗಾಗಿಯೇ ಮಮತಾ ಮತ್ತೆ ಮತ್ತೆ ಅಕ್ಕನನ್ನು ಆತುಕೊಳ್ಳುತ್ತಾರೆ ಹಾದಿಯಲಿ ಹೆಜ್ಜೆ ಗುರುತು ಬೇಡಗೆಜ್ಜೆ ಸದ್ದು ಕೇಳದಾದೀತುನಾ ನಿನ್ನ ಹಿಂಬಲಿಸುವಹಂಬಲ ಬೇಡಅಕ್ಕನ ಕಾಂಬ ಗುರಿಮಾಸಿ ಹೋದೀತು ಎನ್ನುತ್ತಾರೆ. ತನ್ನ ಹಾದಿಯಲ್ಲಿ ತಾನು ದೃಢವಾಗಿ ಹೆಜ್ಜೆ ಇಡುತ್ತಿರುವಾಗ ತನ್ನ ಹಾದಿಯಲ್ಲಿ ಬಂದರೆ ಗೆಜ್ಜೆ ಸದ್ದು ಕೇಳದಾಗುತ್ತದೆ ಎನ್ನುವುದಲ್ಲದೇ ಯಾವುದೇ ಕಾರಣಕ್ಕೂ ತಾನು ಅವನನ್ನು ಹಿಂಬಾಲಿಸುವ ಗುರಿ ಹೊಂದಿಲ್ಲ ಎನ್ನುತ್ತಾರೆ. ಯಾಕೆಂದರೆ ಅವರ ಗುರಿ ಒಂದೆ. ಅಕ್ಕನ ಹಾದಿಯಲ್ಲಿ  ನಡೆದು ತಮ್ಮ ಜೀವನಕ್ಕೆ ತಾನು ಜವಾಬ್ಧಾರರೆನ್ನುವವರನ್ನು ಒಲೆಗಿಕ್ಕುವುದು. ಇದು ಮಾಮೂಲಿಯಾಗಿ ಬರುವಂಥಹುದ್ದಲ್ಲ. ಅದಕ್ಕೊಂದು ದಿಟ್ಟತನಬೇಕು.  ಅಂತಹ ದೃಢತೆಗಾಗಿ ಮತ್ತೆ ಅಕ್ಕನನ್ನೇ ಮೊರೆ ಹೋಗಬೇಕು. ಕಾಯುತಿವೆ ಜೀವಗಳುಜಿಗಿದು ಪರದೆಯಿಂದಾಚೆಸೀಳಿ ಬಲೆಗಳನ್ನುಅಕ್ಕ ಹೇಳೆನೀನ್ಹೇಗೆ ದಾಟಿದೆಬಂಧನದ ಸುಳಿಗಳನ್ನು ಎನ್ನುತ್ತ ಈ ಸಂಬಂಧಧ ಸುಳಿಗಳು ಮೇಲೇಳಲು ಪ್ರಯತ್ನಿಸಿದಷ್ಟೂ ಒಳಗೆಳೆದುಕೊಂಡು ಮುಳುಗಿಸುವ ಚೋದ್ಯಕ್ಕೆ ಬೆರಗಾಗುತ್ತಾರೆ.ಮನುಷ್ಯ ಸಂಬಂಧ ಯಾವತ್ತೂ ಕುತೂಹಲಕರವಾದದ್ದು. ಅದು ತಂದೆ ತಾಯಿಗಳೊಟ್ಟಿಗೆ ಇರುವ ಮಕ್ಕಳ ಸಂಬಂಧವಾಗಿರಬಹುದು, ಸಹೋದರ, ಸಹೋದರಿಯರ ನಡುವಣ ಬಂಧವಾಗಿರಬಹುದು ಗಂಡ ಹೆಂಡತಿಯ ನಡುವಣ ಸಂಬಂಧವಾಗಿರಬಹುದು. ಅಥವಾ ಸ್ನೇಹವಾಗಿರಬಹುದು ಇಲ್ಲವೇ ವ್ಯಾಖ್ಯಾನವೇ ಕೊಡಲು ಅಸಾಧ್ಯವಾದ ಪ್ರೇಮ ಸಂಬಂಧವಿರಬಹುದು. ಅವುಗಳಿಗೆ ಅರ್ಥ ಹಚ್ಚುವುದು ಅಸಾಧ್ಯವೇ ಸರಿ. ಮಮತಾ ಕೂಡ ‘ಮೇಲಾಟ’ ಕವನದ ಮೂಲಕ ಇಡೀ ಮನುಷ್ಯ ಸಂಬಂಧಗಳಿಗೆ ಕನ್ನಡಿ ಹಿಡಿದಿದ್ದಾರೆ. ಈ ಸಂಬಂಧಗಳ ಎಳೆ ಅದೆಷ್ಟು ಸೂಕ್ಷ್ಮ. ಕೆಲವೊಮ್ಮೆ ಎಂತಹ ಆಘಾತಗಳಿಗೂ ಕಿತ್ತು ಹೋಗದ ಸಂಬಂಧಗಳು ಒಮ್ಮೊಮ್ಮೆ ಸಣ್ಣ ಎಳೆದಾಟಕ್ಕೂ ತುಂಡಾಗಿ ಹೋಗುವ ನವಿರು ಎಳೆಗಳಂತೆ ಕಾಣುತ್ತದೆ. ಹಾಗಾದರೆ ಸಂಬಂಧಗಳು ಹದಗೊಳ್ಳುವುದು ಯಾವಾಗ? ಕವಯತ್ರಿಗೂ ಈ ಪ್ರಶ್ನೆ ಬೃಹದಾಕಾರವಾಗಿ ಕಾಡಿದೆ. ಹೀಗಾಗಿಯೇ ಸಂಬಂಧಗಳನ್ನು ಹದಗೊಳಿಸಲು ಬೇಯಲಿಡುತ್ತಾರೆ. ಕಾವು ಕೊಟ್ಟರೆ ಮಾತ್ರ ಮೊಟ್ಟೆಯೊಡೆಯುವ ಕ್ರೀಯೆಯಂತೆ ಹದವಾಗಿ ಕಾವು ಹೆಚ್ಚಿಸಿ ಒಂದು ಕುದಿತ ಬರಲಿ ಎಂದು ಕಾಯುತ್ತಾರೆ. ಇಲ್ಲಿ ಕವಿಯತ್ರಿ ಸಂಬಂಧವನ್ನು ಹದಗೊಳಿಸುವ ಪ್ರಕ್ರಿಯೆ ಅಕ್ಕಿಯನ್ನು ನೀರು ಹಾಕಿ ಕೊತಕೊತನೆ ಕುದಿಸುವ ಅನ್ನ ಮಾಡುವ ರೂಪಕದಂತೆ ಕಾಣುತ್ತದೆ. ಅನ್ನದ ಎಸರು ಕುದಿಯುವಾಗ ತಕತಕನೆ ಕುಣಿಯುತ್ತ ಮುಚ್ಚಿದ ತಟ್ಟೆಯನ್ನೇ ಬೀಳಿಸುತ್ತದೆ. ಸಂಬಂಧ ಗಟ್ಟಿಯಾಗುವಾಗಲೂ ಅಷ್ಟೇ. ಅದೆಷ್ಟು ಶಬ್ಧ, ಅದೆಷ್ಟು ರಾಣಾರಂಪ. ಕೆಲವೊಮ್ಮೆ ಈ ಸಂಬಂಧ ಮುರಿದೇ ಹೋಯಿತು ಎಂಬಷ್ಟು ಶಬ್ಧ ಮಾಡುತ್ತದೆ. ಆದರೆ ನಿಜವಾದ ಸಂಬಂಧಗಳು ಹಾಗೆ ಮುಗಿಯುವುದೂ ಇಲ್ಲ. ಚಿಕ್ಕಪುಟ್ಟ ಜಗಳಗಳಿಗೆ ಹೆದರುವುದೂ ಇಲ್ಲ. ಆದರೆ ಹಾಗೆಂದುಕೊಳ್ಳುವುದೂ ಕೆಲವೊಮ್ಮೆ ತಪ್ಪಾಗುತ್ತದೆ. ಏನೇನೂ ಮುಖ್ಯವಲ್ಲದ ವಿಷಯಗಳು ಸಂಬಂಧವನ್ನು ಮುರಿದ ಅದೆಷ್ಟೋ ಉದಾಹರಣೆಗಳು ನಮ್ಮ ಕಣ್ಣೆದುರಿಗೇ ಇವೆ. ಆದರೆ ಕೊನೆಗೂ ಒಂದು ಪ್ರಶ್ನೆ ಹಾಗೆಯೇ ಉಳಿದು ಹೋಗುತ್ತದೆ. ಅದನ್ನೇ ಮಮತಾ ಮುಖ್ಯವಾಗಿ ಎತ್ತಿ ತೋರಿಸುತ್ತಾರೆ. ಸಂಬಂಧಗಳಲ್ಲಿರುವ ಮೇಲಾಟ. ತಾನು ಹೆಚ್ಚು, ನಾನು ಹೆಚ್ಚು ಎನ್ನುವ ಅಹಂ ನಮ್ಮ ಸಂಬಂಧವನ್ನು ನುಂಗಿ ನೊಣೆಯುತ್ತದೆ. ಎಲ್ಲಿ ಅಹಂ ಹಾಗೂ ಸ್ವಾರ್ಥ ಇರುತ್ತದೋ ಅಲ್ಲಿ ಸಂಬಂಧಗಳು ಬಹುಕಾಲ ಬಾಳಲಾರವು. ಮತ್ಸರ ಹಾಗೂ ಅಸೂಯೆಗಳು ಸಂಬಂಧಗಳ ನಡುವೆ ಬೆಂಕಿ ಹಚ್ಚುತ್ತವೆ. ಎಲ್ಲಿ ತಾವೇ ಹೆಚ್ಚು ಎನ್ನುವ ಹೆಚ್ಚುಗಾರಿಕೆ ಇಬ್ಬರ ನಡುವೆ ಉಂಟಾಗುತ್ತದೋ ಅಲ್ಲಿ ಸಂಬಂಧ ಹಳಸಲಾಗುತ್ತದೆ. ಎಲ್ಲಿ ಒಬ್ಬರ ಉನ್ನತಿಯನ್ನು ಸಹಿಸಲಾಗದೇ ಹೊಟ್ಟೆಕಿಚ್ಚಿನ ಕಿಡಿ ಹೊಗೆಯಾಡುತ್ತದೋ ಅಲ್ಲಿ ಆ ಸಂಬಂಧ ಮುಕ್ತಾಯಗೊಳ್ಳುತ್ತದೆ ಎನ್ನುತ್ತಾರೆ. ತಕ್ಕಡಿಯಲ್ಲಿ ಒಂದು ತೂಕದ ಬಟ್ಟಲು ಒಮ್ಮೆ ಕೆಳಕ್ಕೆಳೆದರೆ ಮತ್ತೊಮ್ಮೆ ಇನ್ನೊಂದು ತೂಕದ ಬಟ್ಟಲು ಸೆಣೆಸಾಟಕ್ಕೆ ನಿಲ್ಲುತ್ತದೆ. ಕೆಳಗೆ ಜಗ್ಗುವ ಈ ಪ್ರಕ್ರಿಯೆ ನಿರಂತರ. ಇಷ್ಟಾಗಿಯೂ ಕವಯತ್ರಿ ಸಂಬಂಧಗಳನ್ನು ಸುಲಭವಾಗಿ ಬಿಟ್ಟುಕೊಡಲು ಒಪ್ಪುವುದಿಲ್ಲ. ಹೀಗಾಗಿ ಕಾದು ನೋಡುತ್ತೇನೆ ಎನ್ನುತ್ತಾರೆ. ಹಠಕ್ಕೆ ಬೀಳುವ ಸಂಬಂಧಗಳಿಗೆ ಹೊಸ ಸೂತ್ರ ಬರೆಯುತ್ತ ಏಣಿಯಾಗುವ ಮನಸ್ಸಿದೆ ಕವಯತ್ರಿಗೆ. ಸಂಬಂಧಗಳ ನಡುವೆ ಸೇತುವಾಗುವ ಹಂಬಲವಿದೆ. ರೂಪಕಗಳಲ್ಲಿ ಮಾತನಾಡುವ ಸಂಕಲನದ ಅತ್ಯುತ್ತಮ ಕವಿತೆಗಳಲ್ಲಿ ಇದೂ ಒಂದು ಎಂದು ನಿಸ್ಸಂದೇಹವಾಗಿ ಹೇಳಬಹುದು.                 ಹಾಗೆಂದು  ಯಾವ ಸಂಬಂಧಗಳೂ ಅನಿವಾರ್‍ಯವಲ್ಲ. ಅವು ಆಯಾ ಕಾಲದ ಆಯ್ಕೆಗಳಷ್ಟೇ. ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸಿದವನು ಒಂದು ಮಾತನ್ನೂ ಹೇಳದೇ ಇಬ್ಬರಿಗೂ ಸೇರಿದ್ದ ಬದುಕಿನ ನಿರ್ಧಾರವನ್ನು ಒಬ್ಬನೇ ತೆಗೆದುಕೊಂಡು ಹೊರಟುಬಿಡುವಾಗ ನೋವಾಗುತ್ತದೆ ನಿಜ. ಆದರೆ ಕಾಲ ಆ ನೋವನ್ನು ಮರೆಸುವ ಶಕ್ತಿ ಹೊಂದಿದೆ. ವಿರಹವನ್ನೂ ಕಾಲದ ತೆಕ್ಕೆಗೆ ಒಪ್ಪಿಸಿಬಿಡಬಹುದು ಎನ್ನುವ ಭಾವದ ಕವಿತೆ ನನ್ನದೀ ಸಮಯ. ನಿಜ. ಅವನಿಗಾಗಿ ಕಾದು, ಕಾತರಿಸಿ, ಪರಿಪರಿಯಾಗಿ ಬೇಡಿಕೊಂಡರೂ ತನ್ನೊಬ್ಬನ ನಿರ್ಧಾರಕ್ಕೆ ಅಂಡಿಕೊಂಡವನಿಗಾಗಿ ಯಾವ ಸಮಯ ಕಾಯುತ್ತದೆ ಹೇಳಿ? ಹೀಗಾಗಿಅನಿವಾರ್ಯವಲ್ಲ ಈಗ ನೀ ನನಗೆ ಗೆಳೆಯಜೀವಭಾವಕೆ ಹೊಸ ಚೈತನ್ಯ ನನ್ನದೀ ಸಮಯಎನ್ನುತ್ತ ತನಗಿಂತಲೂ ಮುಖ್ಯವಾದ ಗುರಿಯೊಂದನ್ನು ಹುಡುಕುವೆ ಎಂದು ಹೊರಟವನಿಗೆ ಪ್ರಸ್ತುತ ಅವನ ಸ್ಥಾನದ ಅರಿವು ಮಾಡಿಕೊಡುತ್ತಾರೆ. ಬದುಕಿನ ಗತಿ ಬದಲಾಗುತ್ತಿರುತ್ತದೆ. ಅಜ್ಜಿಯ ಕಥೆಯಲ್ಲಿ ಬರುವ ಒಕ್ಕಣ್ಣಿನ ರಾಕ್ಷಸ ಏಳುಮಲ್ಲಿಗೆ ತೂಕದ ರಾಜಕುಮಾರಿಯನ್ನು ಹೊತ್ತೊಯ್ದಾಗ ಏಳು ಸಮುದ್ರ ದಾಟಿ, ಏಳು ಸುತ್ತಿನ ಕೋಟೆಯೊಳಗಿಂದ ರಾಜಕುಮಾರಿಯನ್ನು ರಕ್ಷಿಸುವ ರಾಜಕುಮಾರ ಈಗ ಎಲ್ಲಿದ್ದಾನೆ? ಹಾಗೆ ಬೇರೆ ಯಾರಿಂದಲೋ ರಕ್ಷಿಸಿಕೊಳ್ಳಬೇಕಾದ ನಿರೀಕ್ಷೆಯಲ್ಲೂ ರಾಜಕುಮಾರಿ ಇರುವುದಿಲ್ಲ. ಯಾಕೆಂದರೆ ತನ್ನ ರಕ್ಷಣೆಯ ಹೊಣೆಯೂ ಅವಳದ್ದೇ. ತನ್ನನ್ನು ತಾನು ಸಂತೈಸಿಕೊಂಡು ನಿಭಾಯಿಸಿಕೊಳ್ಳಬೇಕಾದ ಹೊರೆಯೂ ಆಕೆಯದ್ದೇ. ಒಕ್ಕಣ್ಣಿನ ರಾಕ್ಷಸನೂ ಈಗ ಅದೆಲ್ಲೋ ಹಸಿರು ಗಿಣಿರಾಮನಲ್ಲಿ ಪ್ರಾಣವನ್ನಿಡುವುದಿಲ್ಲ. ಎನ್ನುತ್ತ ಎಲ್ಲವೂ ಬದಲಾದ ಕಥೆಯೊಂದನ್ನು ಎದುರಿಗಿಡುತ್ತಾರೆ. ಜಲಜಲನೆ ಧಾರೆಯಾಗುವ ಇಳೆ ಮೋಡವಾಗಿ ಮತ್ತೆ ಸೂರ್‍ಯನ ಕಾವಿಗೆ ಧರೆಗಿಳಿಯುವಾಗ ಎಲ್ಲ ಆಕೃತಿಗಳು ಬದಲಾಗುವಂತೆ ನಮ್ಮೆಲ್ಲರ ಬದುಕಿನ ಗತಿಗಳೂ ಆಗಾಗ ಬದಲಾಗುತ್ತವೆ ಎನ್ನುತ್ತಾರೆ. ತೆರೆದ ಹಾಗೂ ಮುಚ್ಚಿದ ಬಾಗಿಲಿನ ನಡುವೆ ಆಯ್ಕೆ ಮಾಡಿಕೊಳ್ಳಲು ಹತ್ತಾರು ಗೊಂದಲಗಳಿರುವುದು ಸಹಜ. ತರೆದ ಬಾಗಿಲು ಮುಚ್ಚದೇ, ಮುಚ್ಚಿದ ಬಾಗಿಲ ಹಿಂದೆ ಏನಿದೆ ಎಂಬ ಅರಿವಾಗದೇ ಗೊಂದಲದ ಗೂಡಾಗುವುದು ಎಲ್ಲರ ಬಾಲಿನಲ್ಲೂ ಸಹಜ. ಹಾಗೆ ನೋಡಿದರೆ ಈ ತೆರೆದ ಮತ್ತು ಮುಚ್ಚಿದ ಬಾಗಿಲುಗಳ ರಹಸ್ಯ ಬಿಡಿಸುವುದರಲ್ಲಿಯೇ ನಮ್ಮೆಲ್ಲರ ಜೀವಮಾನದ ಬಹುಕಾಲ ಸಮದುಹೋಗುತ್ತದೆ ಎಂಬುದು ಮಾತ್ರ ಸತ್ಯ. ಆದರೂನಾ ಹಾಡುವಭಾವಗೀತೆಗೆ ನೀನೇ ಸಾಹಿತ್ಯಹಾಡುವೆ ಪ್ರತಿನಿತ್ಯಎನ್ನುವ ಪ್ರಣಯದ ಸಾಲುಗಳಿಗೆ ಇಲ್ಲೇನೂ ಬರ ಇಲ್ಲ. ಆದರೂ ಒಂಟಿತನದ ಸೆಳವನ್ನು ಮೀರುವುದಾದರೂ ಹೇಗೆ? ಒಂಟಿತನವೆಂಬುದು ಏನಿರಬಹುದು. ಹಾಗೆನೋಡಿದರೆ ಒಂಟಿತನವೆಂದರೆಕೈ ಚಾಚಿತಪ್ಪಿ ಹೋದ ಪ್ರೀತಿಇಲ್ಲೆಲ್ಲೋ ನಮ್ಮ ಪ್ರೀತಿಯಿದೆ ಎಂದು ಕೈ ಚಾಚಿಯೂ ಆ ಪ್ರೀತಿ ತಪ್ಪಿ ಹೋದರೆ? ಅಥವಾ ಅದು ಅರ್ಹ ಎಂದು ಅನ್ನಿಸದೇ ಹೋದರೆ?ಒಂಟಿತನವೆಂದರೆಆಪ್ತವಿಲ್ಲದ ಸಾಮಿಪ್ಯಮಾತಿಲ್ಲದ ನಿಶ್ಯಬ್ಧಒಂಟಿತನಕ್ಕೆ ಎಲ್ಲಿ ಆಪ್ತತೆ ಇರುತ್ತದೆ ಹೇಳಿ? ಅದು

Read Post »

You cannot copy content of this page

Scroll to Top