ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ, ಗಝಲ್

ಗಝಲ್

ಗಝಲ್ ಭಾಗೆಪಲ್ಲಿ ಕೃಷ್ಣಮೂರ್ತಿ ನೀ ದರ್ಷನಕೆ ಸಿಗದೆ ಕಾಡಿ ಕಾಡಿ ನೋಯಿಸುವೆನಿನ್ನ ಭಾವ ಚಿತ್ರವ ನೀಡದೆ ಕಾಡಿ ನೋಯಿಸುವೆ ನಮ್ಮ ಅಗಲಿಕೆ ಇಷ್ಟು ಧೀರ್ಘ ಕಾಲ ಆಗಿರುವಾಗಕನಸಲೂ ಅಪ್ಪಲು ಸಿಗದೆ ಹಿಂಸಿಸಿ ನೋಯಿಸುವೆ ನಮ್ಮ ಪ್ರೀತಿಯ ವಿಷಯ ಎಷ್ಟು ಗೋಪ್ಯ ವೆನೆನನ್ನ ಅಂತಿಮ ಕ್ಷಣವೂ ಅರಿಯದೆ ಬಹಳ ನೋಯಿಸುವೆ ಬೇರ್ಪಡಿಕೆಯಲಿ ನಮ್ಮ ಪ್ರೀತಿ ಇಷ್ಟು ಗಾಢವಾಗಿರೆಸೇರ್ಪಡಿಕಯ ಊಹೆ ಇದ್ದೂ ಹೀಗೇಕೆ ನೋಯಿಸುವೆ ಯಾವುದಾದರೂ ಬಹನೇ ಹುಡುಕಿ ಭೇಟಿಯಾಗು ಬಾಸುಮ್ಮನೆ ಹೆದರಿ ನೀನೂ ನೊಂದು ನನ್ನನೂ ನೋಯಿಸುವೆ ಕಾಲಕೂಡಿ ಬರಬೇಕೆಂದು ಕಾರಣ ಹೇಳುತ ‘ಮಂಕೇ ‘ಕೈಲಿರುವ ಅದ್ಭುತ ಕ್ಷಣ ಕಳೆದು ವೃಥಾ ನೋಯಿಸುವೆ. *************************

ಗಝಲ್ Read Post »

ಕಾವ್ಯಯಾನ

ಗಮ್ಯದಾಚೆ

ಕವಿತೆ ಗಮ್ಯದಾಚೆ ವಿಜಯಶ್ರೀ ಹಾಲಾಡಿ ಧೂಪ. ಹಿಡಿದು ಊರಿಡೀಘಮಲು ಹತ್ತಿಸುತ್ತಅಲೆವ ಅವಳಕೋಮಲ ಪಾದಕ್ಕೆತುಂಬು ಹೆರಳ ಗಂಧಕ್ಕೆಜೀವವಿದೆ. ….ಮಣ್ಣಿನಂತೆ ನೀರಿನಂತೆಕಡಲು -ಗಾಳಿಯಂತೆ ನಾರಿನ ಬೇರು ಅರೆಯುತ್ತಅರೆಮುಚ್ಚಿದ ಕಣ್ಣೆವೆಆಳದ ಹೊಳಪಿನೊಂದಿಗೆಮಾತಿಗಿಳಿಯುತ್ತಾಳೆತುಟಿ ಲಘು ಕಂಪಿಸುತ್ತವೆಅವಳ ಮೈಮಾಟಕ್ಕೆಚಿರ ಯೌವನಕ್ಕೆಮಿಂಚುಹುಳುಗಳ ಮಾಲೆ-ಯೇ ಕಾಣ್ಕೆಯಾಗುತ್ತದೆ. ಸಂಜೆಸೂರ್ಯನ ಬೆವರೊರೆಸಿಮನೆಗೆ ಹೆಜ್ಜೆಹಾಕುವ ನನ್ನಕಂಡು ಅವಳ ಕಾಲ್ಗೆಜ್ಜೆನಸು ಬಿರಿಯುತ್ತವೆಗುಡಾರದೊಳಗಿಂದ ತುಸುಬಾಗಿದ ಅವಳ ಸ್ಪರ್ಶಕ್ಕೆದಿನವೂ ಹಾತೊರೆಯುತ್ತೇನೆಗುನುಗಿಕೊಳ್ಳುವ ಹಾಡೆಂಬನೀರವಕ್ಕೆ ಪದವಾಗುತ್ತೇನೆ‘ಲಾಟೀನು ಬೆಳಗುವುದೇಕೆಇವಳೇ ಇಲ್ಲವೇ ‘ ಎಂದುಫಕ್ಕನೆ ತಿರುಗುವಾಗೊಮ್ಮೆಗುಡುಗುಡಿಯ ಸೇದಿನಿರುಮ್ಮಳ ಹೀರುತ್ತಾಳೆಒದ್ದೆಮಳೆಯಾದ ನಾನುಛತ್ರಿ ಕೊಡವುತ್ತ ಕೈಚಾಚಿದರೆ ತುಸುವೇನಕ್ಕುಬಿಡುತ್ತಾಳೆ.ಡೇರೆಯೊಳಗಿನ ಮಿಶ್ರಘಮಕ್ಕೆ ಸೋತು ಅವಳಅಲೆ ಅಲೆ ಸೆರಗ ಚುಂಗನ್ನು ಸೋಕಿ ಬೆರಳುಹಿಂತೆಗೆಯುತ್ತೇನೆ …ನಿಡಿದು ಉಸಿರಬಿಸಿಗೆ ಬೆಚ್ಚುತ್ತ ! ದಿನವೊಂದು ಬರುತ್ತದೆಹಿಡಿ ಗಂಟು ಇಟ್ಟಿದ್ದೇನೆಹೂವಿನಾಚೆಕಣಿವೆಯಾಚೆಅವಳ ಜೊತೆಪಯಣಿಸಿಯೇತೀರುತ್ತೇನೆ ! *********************************************************** ಚಿತ್ರಕೃಪೆ:ವಿಜಯಶ್ರೀ ಹಾಲಾಡಿ

ಗಮ್ಯದಾಚೆ Read Post »

ಇತರೆ, ಪ್ರಬಂಧ

ಶಿಶುತನದ ಹದನದೊಳು ಬದುಕಲೆಳಸಿ

ಪ್ರಬಂಧ ಶಿಶುತನದ ಹದನದೊಳು ಬದುಕಲೆಳಸಿ ಡಾ.ಲಕ್ಷ್ಮಿನಾರಾಯಣ ಭಟ್ ಈ ಸುಂದರ ಮುಂಜಾನೆ ನನಗೆ ತುಂಬಾ ಪ್ರಿಯವಾದ ಹಾಡೊಂದರ ಸಾಲುಗಳು ನನ್ನ ಮನ:ಪಟಲದಲ್ಲಿ ಭಾವ ತರಂಗಗಳನ್ನು ಎಬ್ಬಿಸುತ್ತಿವೆ. ನಾನು ಹಾಡುಗಾರನಲ್ಲದಿದ್ದರೂ, ಈ ಸಾಲುಗಳಿಗೆ ದಯವಿಟ್ಟು ಕಿವಿಗೊಡಿ. ನೆನಪಿದೆಯೇ ನಿನಗೆ? ನಾವಿಬ್ಬರೂ ಅಂದು ಹೊಳೆಯ ದಡದಲ್ಲಿ ನಿಂದು ಮರಳು ಮನೆಗಳ ಕಟ್ಟಿ ಆಟವಾಡಿದ್ದು ನಿನಗೆ ನೆನಪಿದೆಯೇ ನಿನಗೆ? ಬಾ ಗೆಳೆಯ ಬಾರಯ್ಯಾ, ಆಟವಾಡೋಣ ಬಾಲ್ಯದ ನೆನಪನು ಮರಳಿ ಕಟ್ಟೋಣ. ನೆನಪಿದೆಯೇ ನಿನಗೆ? ನನಗೆ ಬೇಜಾರಾದಾಗಲೆಲ್ಲಾ ಈ ಸಾಲುಗಳನ್ನು ಗುಣುಗುಣಿಸುತ್ತೇನೆ. ಆಗ ಬಾಲ್ಯದ ದಿನಗಳು ಮತ್ತೆ ಜೀವ ತಳೆಯುತ್ತವೆ. ಕನಸುಗಳು ಗರಿಬಿಚ್ಚಿ ಕುಣಿಯತೊಡಗುತ್ತವೆ. ನೆನಪಿನ ದೋಣಿಯಲ್ಲಿ ತೇಲುತ್ತಾ, ಕಾಲಾತೀತ ಭಾವಪ್ರಪಂಚಕ್ಕೆ ಮನಸ್ಸು ತೆರೆದುಕೊಳ್ಳುತ್ತದೆ. ಆದರೆ ಯಾವುದೇ ದಿನಪತ್ರಿಕೆಯ ಮುಖಪುಟದ ಸುದ್ದಿ, ಅಂತೆಯೇ ಟಿವಿ ಚ್ಯಾನೆಲ್-ಗಳ ಆರ್ಭಟ ಓದಿದೊಡನೆ/ನೋಡಿದೊಡನೆ ಕನಸಿನ ಈ ಸುಂದರ ಲೋಕ ನುಚ್ಚುನೂರಾಗಿ ಹೋಗುತ್ತದೆ. ದುರಂತಗಳ ಸರಮಾಲೆ –- ರಾಜಕೀಯ ದೊಂಬರಾಟ, ರೇಪ್, ಕೊಲೆ, ಸುಲಿಗೆ, ವಂಚನೆ, ಭಯೋತ್ಪಾದನೆ, ಅಪಘಾತ, ಈಗಂತೂ ಕೊರೊನಾ ಕೊರೊನಾ ಸಹಸ್ರನಾಮ ಕಣ್ಣಿಗೆ ಹೊಡೆಯುವಂತೆ ರಾರಾಜಿಸುತ್ತಿರುತ್ತದೆ. ಕೇವಲ ಯೋಚಿಸಿದರೂ ಭಯ, ಜಿಗುಪ್ಸೆ ಹುಟ್ಟಿಸುವ ಮಾನವನ ಅತೀ ಆಸೆ, ತೀರದ ದಾಹ -– ಹಣ, ಅಧಿಕಾರ, ಭೋಗಲಾಲಸೆಗಳೇ ನಮ್ಮನ್ನು ಈ ದುಃಸ್ಥಿತಿಗೆ ದೂಡಿವೆ. ಇದಕ್ಕೆ ಕಾರಣ, ಪರಿಹಾರ ಏನೆಂದು ಯೋಚಿಸಬೇಡವೇ? ಜೀವ ಪ್ರಪಂಚದಲ್ಲಿ ಮನುಷ್ಯ ಮಾತ್ರ ಕನಸು ಕಾಣಬಲ್ಲ, ನಗಬಲ್ಲ ಅದ್ಭುತ ಸಾಮರ್ಥ್ಯ ಪಡೆದಿದ್ದಾನೆ. ಇತರ ಯಾವ ಪ್ರಾಣಿಯೂ – ಪ್ರಾಣ ಇರುವುದೆಲ್ಲವೂ ‘ಪ್ರಾಣಿ’ಯೇ – ನಗುವುದೂ ಇಲ್ಲ, ಕನಸು ಕಾಣುವುದೂ ಇಲ್ಲ. ಹುಲಿ, ಸಿಂಹಗಳಂತಹ ಕೂರ ಪ್ರಾಣಿಗಳೂ ಕೂಡಾ ಭಾವನೆಗಳಿಗೆ, ನಾವು ತೋರುವ ಪ್ರೀತಿಗೆ ಸಕಾರಾತ್ಮಕವಾಗಿ ಸ್ಪಂದಿಸುತ್ತವೆ. ಇದಕ್ಕೆ ಏಕೈಕ ಅಪವಾದವೆಂದರೆ ಮನುಷ್ಯ ಪ್ರಾಣಿ ಮಾತ್ರ! ಪ್ರೀತಿಗೆ ದ್ರೋಹ; ನಂಬಿಕೆ, ವಿಶ್ವಾಸಕ್ಕೆ ಪ್ರತಿಯಾಗಿ ಮೋಸ, ದಗಲ್ಬಾಜಿ ಎಲ್ಲವನ್ನೂ – ತನ್ನವರನ್ನೂ ಸೇರಿಸಿ – ಭಾವನಾರಹಿತವಾಗಿ, ಅಷ್ಟೇ ಚಾಣಾಕ್ಷತನದಿಂದ ಮನುಷ್ಯ ಮಾಡಬಲ್ಲ. ಇಲ್ಲಿ ನಾವು ಮುಖ್ಯವಾಗಿ ಗಮನಿಸಬೇಕಾದದ್ದು ಏನು ಎಂದರೆ ಯಾವಾಗ ಮನುಷ್ಯ ಕನಸು ಕಾಣುವ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತಾನೋ ಆವಾಗಲೆಲ್ಲಾ ಭಾವನೆಗಳಿಗೆ ಎರವಾಗುತ್ತಾನೆ. ಎಲ್ಲಿಲ್ಲದ ದುರಂಹಕಾರ ಆತನ ರಾಕ್ಷಸೀ ಪ್ರವೃತ್ತಿಯನ್ನು ಬಡಿದೆಬ್ಬಿಸಿ, ವಿನಾಶದಂಚಿಗೆ ಆತನನ್ನು ತಳ್ಳುತ್ತದೆ. ಸುನಾಮಿ, ಭೂಕಂಪಗಳಂತಹ ಪ್ರಕೃತಿ ವಿಕೋಪಗಳು, ಹಾಗೆಯೇ ನಮ್ಮನ್ನೆಲ್ಲಾ ಕಾಡುತ್ತಿರುವ ಕೊರೊನಾ ವೈರಸ್-ನಂತಹ ಮಹಾವ್ಯಾಧಿಜನಕ ಹೆಮ್ಮಾರಿಗಳು ಉಂಟುಮಾಡುವ ವಿನಾಶಕ್ಕಿಂತಲೂ ಹೆಚ್ಚು ದುರಂತವನ್ನು ಕೆಟ್ಟ ಮನಸ್ಸಿನ ಕೇವಲ ಒಬ್ಬನೇ ಒಬ್ಬ ಮನುಷ್ಯ ಮಾಡಬಲ್ಲ! ಇದರಿಂದ ಬಿಡುಗಡೆ ಬೇಕಾದರೆ, ಮನುಷ್ಯ ಮತ್ತೆ ತನ್ನ ಬಾಲ್ಯದ ಮುಗ್ಧ, ಸ್ನಿಗ್ಧ ಭಾವಪ್ರಪಂಚಕ್ಕೆ ಹಿಂತಿರುಗಬೇಕು. ಸಹಜ ಮುಗ್ಧತೆ, ನಗು, ನಲಿವು, ಸಂಭ್ರಮಗಳ ಆ ದಿನಗಳನ್ನು ಪುನಃ ಜೀವಂತಗೊಳಿಸಬೇಕು. ಕನಸು ಕಾಣಬೇಕು. ಇದಕ್ಕೆ ಪೂರಕವಾಗಿ ಸಾಹಿತ್ಯ, ಸಂಗೀತ, ನಾಟಕ ಇತ್ಯಾದಿ ಭಾವ ಪ್ರಧಾನ ಮಾಧ್ಯಮಗಳಲ್ಲಿ ಅಭಿರುಚಿ ಬೆಳೆಸಿಕೊಂಡು ಮನಸ್ಸನ್ನು ಉದಾತ್ತ ಭಾವಗಳತ್ತ ಹರಿಯಬಿಡಬೇಕು. ಕನಸು ಕಾಣುವ, ಶಿಶುವಿನೋಪಾದಿಯಲ್ಲಿ ನಿರ್ಮಲವಾಗಿ ನಗುವ ಸಹಜ ಪ್ರವೃತ್ತಿಗೆ ಮತ್ತೆ ಮರಳಬೇಕು. ಪ್ರಸಿದ್ಧ ಆಂಗ್ಲ ದಾರ್ಶನಿಕ ಕವಿ ವಿಲಿಯಂ ಬ್ಲೇಕ್-ನ (೧೭೫೭-೧೮೨೭) ‘Auguries of Innocence’ ಎಂಬ ಕವನದಲ್ಲಿ ಬರುವ ಈ ಸಾಲುಗಳನ್ನು ಗಮನಿಸಿ: It is right it should be so Man was made for Joy & Woe And when this we rightly know Thro the World we safely go ಕಷ್ಟ, ಸುಖಗಳನ್ನು ಅನುಭವಿಸಲೆಂದೇ ದೇವರು ಮನುಷ್ಯನನ್ನು ಸೃಷ್ಟಿಸಿ ಈ ಪ್ರಪಂಚಕ್ಕೆ ತಂದ. ಇದರಲ್ಲಿ ಮನುಷ್ಯನಿಗೆ ಆಯ್ಕೆಯ ಅವಕಾಶವೇ ಇಲ್ಲ. ಎರಡನ್ನೂ ಅನುಭವಿಸಬೇಕು. ಹಾಗಿದ್ದಾಗ ಅದನ್ನು ಸಮಚಿತ್ತದಿಂದ ಸ್ವೀಕರಿಸುವುದೊಂದೇ ದಾರಿ. ಮಗುವಿಗೂ, ಅನುಭಾವಿಗೂ ಇರುವ ಸಾಮ್ಯತೆ ಎಂದರೆ ಈ ಸಮಚಿತ್ತತೆ; ಅನುಭಾವಿ ನಕ್ಕು ಸುಮ್ಮನಾಗುತ್ತಾನೆ, ಮಗು ಅತ್ತು, ನಗುತ್ತದೆ. ಮರುಕ್ಷಣ ನಕ್ಕದ್ದೇಕೆ, ಅತ್ತದ್ದೇಕೆ ಎಂಬುದನ್ನು ಮರೆತುಬಿಡುತ್ತದೆ. ದೊಡ್ಡವರು ನಾವು ಹೀಗಲ್ಲ. ಎಂದೋ ಆಗಿ ಹೋದ ಘಟನೆಗಳನ್ನು ಮತ್ತೆ ಮತ್ತೆ ನೆನಪಿಸಿಕೊಂಡು ನಿತ್ಯ ದುಃಖಿಗಳಾಗುತ್ತೇವೆ. ವಿಸ್ಮಯ ಎಂದರೆ ಇದು ‘ಸುಖದ ಕ್ಷಣಗಳಿಗೆ’ ಅನ್ವಯವಾಗುವುದಿಲ್ಲ. ಎಂದೋ ಅನುಭವಿಸಿದ ಸುಖವನ್ನು ಮತ್ತೆ ಮತ್ತೆ ನೆನಪಿಸಿಕೊಂಡರೆ ಆಗುವುದು ದುಃಖವೇ ಹೊರತು ಸಂತೋಷವಲ್ಲ! ಬ್ಲೇಕ್-ನ ಕವನದ ಇನ್ನೊಂದೆರಡು ಸಾಲುಗಳನ್ನು ನೋಡೋಣ: The Childs Toys & the Old Mans Reasons Are the Fruits of the Two seasons ಮಗುವಿನ ಆಟಿಕೆಗಳೇ ಅದರ ಪ್ರಪಂಚ ಹಾಗೂ ಸರ್ವಸ್ವ. ಮಲಗಿ ನಿದ್ರಿಸುವಾಗಲೂ ಒಂದು ಗೊಂಬೆಯನ್ನೋ, ಅಥವಾ ಇನ್ಯಾವುದಾರೊಂದು ಆಟದ ವಸ್ತುವನ್ನೋ ಎದೆಗವಚಿಕೊಂಡು ಮಗು ಸುಖ ನಿದ್ರೆಗೆ ಜಾರುವುದನ್ನು ನಾವೆಲ್ಲಾ ಕಂಡವರೇ. ಅಂತೆಯೇ ಜೀವನ ಸಂಧ್ಯಾಕಾಲದಲ್ಲಿರುವ ಒಬ್ಬ ಹಿರಿಯ ತನ್ನ ಅನುಭವದಿಂದ ಮಾಗಿ, ಹಣ್ಣಾಗಿ, ಪಕ್ವವಾಗಿರುತ್ತಾನೆ. ಈಗ ಆ ಹಿರಿಯನ ನಿಜವಾದ ಗಳಿಕೆ, ಆಸ್ತಿ ಎಂದರೆ ಈ ಅನುಭವದ ಮೂಟೆಗಳೇ. ಅವು ಸುಖಾಸುಮ್ಮನೆ ಬಂದವುಗಳಲ್ಲ. ಪ್ರತಿಯೊಂದು ಅನುಭವದ ಹಿಂದೆಯೂ ಒಂದೊಂದು ಕಾದಂಬರಿಗಾಗುವಷ್ಟು ಸರಕು ಇದ್ದಿರಬೇಕು. ಅವನ ಮುಖದ ಸುಕ್ಕುಗಳೇ ಅದಕ್ಕೆ ಸಾಕ್ಷಿ. ಹಲ್ಲಿಲ್ಲದ ಬೊಚ್ಚು ಬಾಯಲ್ಲಿ ಅವನು ನಗುವಾಗ ಅದೆಷ್ಟೋ ಅನುಭವಗಳು ಸದ್ದಿಲ್ಲದೇ ತೂರಿಹೋಗುತ್ತಾವೋ ಏನೋ! ವಾರ್ಧಕ್ಯ ಎಂದರೆ ಮತ್ತೆ ಶಿಶುತನಕ್ಕೆ ಜಾರುವುದು: ಹಣ್ಣೆಲೆಯನ್ನು ನೋಡಿ ಚಿಗುರೆಲೆ ಹಾಸ್ಯ ಮಾಡುವುದೂ ಉಂಟು. ಸಂದಿಗ್ಧ ಕಾಲದಲ್ಲಿ ಕಿರಿಯನಾದವನು ಹಿರಿಯನೊಡನೆ ಪರಾಮರ್ಶೆ ಮಾಡುವುದೂ ಉಂಟು. ತೀರಾ ಚಿಕ್ಕವನಾದರೆ ಕಥೆ ಹೇಳು ಎಂದು ಗೋಗರೆಯುವುದೂ ಉಂಟು. ಹೀಗೆ ಮಗುವಿಗೂ ಮುದಿಯನಿಗೂ ಬಿಡಿಸಲಾರದ ನಂಟು ಉಂಟೇ ಉಂಟು. ಮಗುವಿಗೆ ಆಟವಾಡಲು ಓರಗೆಯ ಸಮವಯಸ್ಕ ಮಕ್ಕಳಿಲ್ಲದಿದ್ದರೆ ಒಳ್ಳೆಯ ಜತೆ ಅಂದರೆ ಆಜ್ಜ, ಅಜ್ಜಿಯೇ ಅಲ್ಲವೇ? ಏಕೆಂದರೆ ಇಬ್ಬರಿಗೂ ಸಮಯದ ಒತ್ತಡ, ಧಾವಂತ ಇಲ್ಲ. ಎಲ್ಲವನ್ನೂ ನಿಧಾನವಾಗಿ ಮಾಡಿದರಾಯಿತು, ಸಲ್ಪ ಹೆಚ್ಚು ಕಡಿಮೆಯಾದರೂ ಆಕಾಶ ಕಳಚಿ ಬೀಳುವುದಿಲ್ಲ ಎನ್ನುವ ವಾಸ್ತವ ಹಿರಿಯನಿಗೆ ಅನುಭವದಿಂದ ದಕ್ಕಿದರೆ, ಮಗುವಿಗೆ ಅದು ಸಹಜ ಪ್ರಾಪ್ತಿ. ಅದಕ್ಕಾಗಿಯೇ ಮರಳಿ ಬಾಲ್ಯಕ್ಕೆ ಹೋಗೋಣ. ಬದುಕಿನ ನಿತ್ಯದ ಜಂಜಾಟದಲ್ಲಿ ನಾವು ಕಳೆದುಕೊಂಡ ಆ ಶಿಶು-ಸಹಜ-ವರ್ತನೆಯನ್ನು ಮತ್ತೆ ಆವಾಹಿಸಿಕೊಳ್ಳೋಣ. ಇದು ಕೇವಲ ಹಗಲುಕನಸು, ಸಾಧಿಸಾಲಾಗದ ಗೊಡ್ಡು ಆದರ್ಶ, ಕೈಲಾಗದವ ಮೈ ಪರಚಿಕೊಂಡಂತೆ ಎಂದೆಲ್ಲಾ ಅಂದುಕೊಂಡು ಒಳಗೊಳಗೇ ನೀವೂ ನಗುತ್ತಿಲ್ಲ ತಾನೇ? ಸರಿ ಹಾಗಾದರೆ, ಈ ನೆವದಿಂದಲಾದರೂ ನಿಮ್ಮ ಮುಖದಲ್ಲಿ ಒಂದಿಷ್ಟು ಮುಗುಳ್ನಗೆ ಬಂತಲ್ಲ, ಅಷ್ಟೇ ಸಾಕು ನನಗೆ. ಈಗ ನೋಡಿ, ನಕ್ಕು ಹಗುರಾಗುವುದೊಂದೇ ಇದಕ್ಕಿರುವ ಪರಿಹಾರ ಎಂದು ನೀವೂ ನಂಬುತ್ತೀರಲ್ಲ? ಹಾಗಾದರೆ ಒಮ್ಮೆ ಜೋರಾಗಿ ನಕ್ಕುಬಿಡಿ. ನಮಸ್ಕಾರ. ****************************

ಶಿಶುತನದ ಹದನದೊಳು ಬದುಕಲೆಳಸಿ Read Post »

ಕಾವ್ಯಯಾನ

ಕಾವ್ಯಯಾನ

ಅಳುತ್ತಿರಬೇಕು ಅವನು! ಪುರುಷೋತ್ತಮ ಭಟ್ ಕೆ ನಿಯಾಮಕನೆಲ್ಲಿದ್ದಾನೆ,ತಿರುಗಿನಿಂತಿದ್ದಾನೆಬೆನ್ನು ತೋರಿಸಿದ್ದಾನೆತನ್ನದೇ ಸೃಷ್ಟಿಯ ದುರಂತ ಕಾಣಲಾಗದೆಅಳುತ್ತಿರಬೇಕು ಪಾಪ ತುಂಬಿದ ಕೊಡವ ಏನುಮಾಡೋಣವೆಂದು/ ಆಲಯಗಳ ಕಲ್ಲು-ಸಂದುಗಳಲ್ಲಿಕೆತ್ತಿದ ಕೆಡವಿದ ಹೆಸರುಗಳೆಷ್ಟುಹಾಸಿಗೆಗೆಳೆದು ಚೀರಾಡಿಸಿ ಗೋಳಾಡಿಸಿದ ಕಥೆಗಳೆಷ್ಟುಪರರ ಕಿಸೆಯೊಳಗಿನ ದ್ರವ್ಯದಾಸೆಗೆ ಧಮನಿಯ ಕೊಯ್ದವರೆಷ್ಟುಅಳುತ್ತಿರಬೇಕು ಬೆನ್ನು ಕಾಣಿಸುತ್ತಿದೆ ಬೆಣ್ಣೆಯಲಾಡಿದವನ/ ಕವಾಟುಗಳೊಳಗೆ ಪೇರಿಸಿಟ್ಟ ಹೊತ್ತಗೆಗಳಿಗೆ ತುಂಬಿದೆ ಧೂಳುತುಳುಕುವ ಮಾನಪತ್ರಗಳನ್ನು ಆಪೋಶನಗೈಯ್ಯುತ್ತಿವೆ ಗೆದ್ದಲುವಿದ್ಯಯಾಚೆಯ ಬುದ್ದಿ, ವಿವೇಕ ಪಾತಾಳಕೆಹೆಣ್ಣು-ಹೆಸರುಗಳ ಬಾಂಡಲೆಯ ಹೊತ್ತು ಸಾಗುತ್ತೇವೆಅಳುತ್ತಿರಬೇಕು ಬೆನ್ನಷ್ಟೇ ಕಾಣಿಸುತ್ತಿದೆನವಿಲಗರಿ ಮುರಿದು ಮುಪ್ಪಾಗಿದೆ/ ಪೂಜೆ-ಪ್ರಾರ್ಥನೆ ಆಡಂಬರಒಳಗೆಲ್ಲ ಕೊಳಕು-ದಿಗಂಬರಪ್ರಚಾರದ ಪ್ರವಚನಹುಡುಕುತ್ತಿದ್ದಾನೆ ತನ್ನಸೃಷ್ಟಿಯಊನ ಕಳೆಯಲು ದಾರಿ ಮಹಾಮಳೆ, ಕೇಳರಿದ ವ್ಯಾದಿ, ಲೋಹದ ಹಕ್ಕಿ ಇನ್ನೇನೋ/ ****************************

ಕಾವ್ಯಯಾನ Read Post »

ಅಂಕಣ ಸಂಗಾತಿ, ರಹಮತ್ ತರೀಕೆರೆ ಬರೆಯುತ್ತಾರೆ

ಯಾಕೀ ಪುನರುಕ್ತಿ? ಅಭಿಮಾನಿ ಓದುಗರೊಬ್ಬರು ಪತ್ರ ಬರೆದು ತಮ್ಮ ಪ್ರತಿಕ್ರಿಯೆ ತಿಳಿಸಲು ನನ್ನ ಫೋನ್ ನಂಬರ್ ಕೇಳಿದರು. ಕೊಟ್ಟದ್ದು ತಪ್ಪಾಯಿತು. ಅವರು ಯಾವಾಗೆಂದರೆ ಆವಾಗ ಸಣ್ಣಸಣ್ಣ ವಿಚಾರಕ್ಕೆಲ್ಲ ಕರೆಯಲಾರಂಭಿಸಿದರು. ಪ್ರತಿಸಲವೂ ಅರ್ಧ ತಾಸು ಕಮ್ಮಿಯಿಲ್ಲದ ಮಾತು. ನಿಜವಾದ ಸಮಸ್ಯೆ ಸಮಯದ್ದಾಗಿರಲಿಲ್ಲ. ಅವರು ಒಂದೇ ಅಭಿಪ್ರಾಯವನ್ನು ಬೇರೆಬೇರೆ ಮಾತುಗಳಲ್ಲಿ ಹೇಳುತ್ತಿದ್ದರು. ಸೂಚ್ಯವಾಗಿ ಹೇಳಿನೋಡಿದೆ. ಮುಟ್ಟಿದಂತೆ ಕಾಣಲಿಲ್ಲ. ಫೋನು ಎತ್ತಿಕೊಳ್ಳುವುದನ್ನು ನಿಲ್ಲಿಸಿದೆ. ಕಡೆಗೆ ನಂಬರ್ ಬ್ಲಾಕ್ ಮಾಡಬೇಕಾಯಿತು. ಮತ್ತೊಬ್ಬ ನಿವೃತ್ತ ಶಿಕ್ಷಕರು ಸಜ್ಜನರು ಹಾಗೂ ಶಿಷ್ಯವತ್ಸಲರು. ಹಿಂದೆಂದೊ ನಡೆದದ್ದನ್ನು ಇಸವಿ ದಿನ ಸಮಯ ಸಮೇತ ನೆನಪಿಟ್ಟಿದ್ದವರು. ಶಿಷ್ಯರು ಭೇಟಿಯಾಗಲು ಹೋದಾಗೆಲ್ಲ ಹಿಂದೆ ಹೇಳಿದ್ದನ್ನು ಹೊಸದಾಗೆಂಬಂತೆ ಹೇಳುತ್ತಿದ್ದರು. ನಿವೃತ್ತರಿಗೆ ಹೆಚ್ಚು ಟೈಮಿರುವುದರಿಂದ ವಿಷಯವನ್ನು ಚೂಯಿಂಗ್ ಗಮ್ಮಿನಂತೆ ಎಳೆದೆಳೆದು ವಿವರಿಸುವ ಕುಶಲತೆ ಗಳಿಸಿಕೊಂಡಿರುತ್ತಾರೆ. ನಮ್ಮ ನಂಟರಲ್ಲೂ ಇಂಥ ಒಬ್ಬರಿದ್ದಾರೆ. ಅವರು ಮನೆಗೆ ಆಗಮಿಸುತ್ತಾರೆಂದರೆ ಆತಂಕದಿಂದ ಕಿವಿಗೆ ಇಟ್ಟುಕೊಳ್ಳಲು ಅರಳೆ ಪಿಂಡಿ ಹುಡುಕುತ್ತಿದ್ದೆವು. ಅವರು ಝಂಡಾ ಹಾಕಿರುವಾಗ ಇಡೀ ದಿನ ಏನಾದರೊಂದು ವಿಷಯ ತೆಗೆದು ಸುದೀರ್ಘ ಮಾತಾಡುತ್ತಿದ್ದರು. ಹಳ್ಳಿಯಲ್ಲಿ ನಡೆದ ಸ್ವಾರಸ್ಯಕರ ಘಟನೆಗಳ ಸಂಚಿಯೇ ಅವರಲ್ಲಿರುತ್ತಿತ್ತು. ಸಮಸ್ಯೆಯೆಂದರೆ, ಬೆಳಿಗ್ಗೆ ಹೇಳಿದ್ದನ್ನೇ ಸಂಜೆಗೂ ನಿರೂಪಿಸುತ್ತಿದ್ದರು. ಅವರಿದ್ದ ಸ್ಥಳದಲ್ಲಿ ಅವರ ಭಾವನೆ ಚಿಂತನೆ ಅನುಭವ ಹಂಚಿಕೊಳ್ಳಲು ಜನರೇ ಇರುತ್ತಿರಲಿಲ್ಲ. ಹೊಸಬರು ಸಿಕ್ಕರೆ ಅವರಿಗೆ ಹತ್ತುನಾಲಗೆ ಬಂದಂತಾಗುತ್ತಿತ್ತು. ಈ ಪುನರುಕ್ತಿ ವೈಯಕ್ತಿಕ ಸ್ವಭಾವದಿಂದಲ್ಲ, ಸನ್ನಿವೇಶದಿಂದ ಹುಟ್ಟಿದ್ದು. ಪುನರುಕ್ತಿಯ ಸದ್ಗುಣ ಶಿಕ್ಷಕರಲ್ಲೂ ಇರುವುದುಂಟು. ಒಂದು ಗಂಟೆ ತರಗತಿ ನಿರ್ವಹಿಸಲು ಬೇಕಾದ ಸಿದ್ಧತೆಯಿಲ್ಲದೆ ಕೈಬೀಸಿಕೊಂಡು ಆಗಮಿಸುವ ಇವರು, ಒಂದೆರಡು ಪಾಯಿಂಟುಗಳನ್ನೇ ವಿವಿಧ ಬಗೆಯಲ್ಲಿ ದೋಸೆಯಂತೆ ಮಗುಚಿ ಹಾಕುವರು. ಇವರ ಕ್ಲಾಸಿನಲ್ಲಿ ಹತ್ತುನಿಮಿಷ ಹೊರಗೆದ್ದು ಹೋಗಿ ಬಂದರೆ ಬಹಳ ಲುಕ್ಸಾನಿಲ್ಲ. ಇವರ ಪುನರುಕ್ತಿಗೆ ಕ್ಷಮೆಯಿಲ್ಲ. ಇದು ಸನ್ನಿವೇಶದಿಂದಲ್ಲ, ಕರ್ತವ್ಯಗೇಡಿತನದಿಂದ ಬಂದಿದ್ದು. ಕೆಲವು ಶಿಕ್ಷಕರು ಜೋಕುಗಳನ್ನು ಪುನರುಕ್ತಿಸುವುದುಂಟು. ವಿದ್ಯಾರ್ಥಿಗಳು ನಗುವುದು ಜೋಕಿಗಲ್ಲ, ಈ ವರ್ಷ ಎಷ್ಟನೇ ಸಲ ಬಂದಿದೆ ಎಂದು ಲೆಕ್ಕಹಾಕಿ. 24 ಇಂಟು 7 ಟಿವಿಗಳದ್ದೂ ಇದೇ ಕಷ್ಟ. ಒಂದೇ ಸುದ್ದಿಯನ್ನು ಹತ್ತಾರು ಬಗೆಯಲ್ಲಿ ತೋರಿಸುತ್ತ ಪ್ರಾಣ ತಿನ್ನುತ್ತಿರುತ್ತಾರೆ. ಅವರಿಗೆ ದಿನದ ಸುದೀರ್ಘ ಕಾಲವನ್ನು ತುಂಬುವ ಅನಿವಾರ್ಯತೆ.ಕೆಲವು ಊರುಗಳಲ್ಲಿ ನಿಲಯದ ಕಲಾವಿದರು ವಾಗ್ ಭಯೋತ್ಪಾದಕರೆಂದು ಹೆಸರಾಗಿದ್ದಾರೆ. ಅವರು ಒಳ್ಳೆಯ ವಾಗ್ಮಿಗಳೇ. ಮೊದಲ ಸಲ ಕೇಳುವವರಿಗೆ ಅವರ ವಾಕ್ಪಟುತ್ವ ಇಷ್ಟವೂ ಆಗುತ್ತದೆ. ಸ್ಥಳೀಯರ ಪಾಡು ಬೇರೆ. ಸದರಿಯವರ ಭಾಷಣದ ಸರದಿ ಬಂದಾಗ ಅವರಿಗೆ ಪ್ರಾಣಸಂಕಟ. ಅವರು ಭಾಷಣ ತಪ್ಪಿಸಿಕೊಳ್ಳುವ ಅನಂತ ತಂತ್ರಗಳನ್ನು ಹುಡುಕಿಕೊಂಡಿರುತ್ತಾರೆ ಕೂಡ. ಕೆಲವು ವಾಗ್ಮಿಗಳ ನೆನಪಿನ ಶಕ್ತಿಯೇ ಲೋಕದ ಪಾಲಿಗೆ ಶಾಪ. ಸಣ್ಣಸಣ್ಣ ವಿವರಗಳನ್ನು ನೆನಪಿಟ್ಟು ಹೇಳುವರು. ಟಿವಿಗಳಲ್ಲಿ ಕಾಣಿಸಿಕೊಳ್ಳುವ ನಗೆಹಬ್ಬದ ಕಲಾವಿದರಿಗೆ ಇದು ಬೃಹತ್ ಸಮಸ್ಯೆ. ಮಾತು ಪುನರುಕ್ತಿಯಾಗುತ್ತಿದೆ, ಬೇಸರ ತರಿಸುತ್ತಿದೆ ಎಂಬ ಆತ್ಮವಿಮರ್ಶೆ ಹೇಳುಗರಲ್ಲಿಲ್ಲದೆ ಹೋದರೆ ಕೇಳುಗರಾದರೂ ಏನು ಮಾಡಬೇಕು? ಪುನರುಕ್ತಿ ಮಾತಿಗಿಂತ ಬರೆಹದಲ್ಲಿ ದೊಡ್ಡಶಾಪ. ಒಮ್ಮೆ ನನ್ನದೊಂದು ಲೇಖನದಲ್ಲಿ 500 ಪದಗಳನ್ನು ತೆಗೆದು ಚಿಕ್ಕದಾಗಿಸಲು ಸಾಧ್ಯವೇ ಎಂದು ಸಂಪಾದಕರು ಸೂಚಿಸಿದರು. ಅಭಿಮಾನ ಭಂಗವಾಗಿ ಬೇಸರಿಸಿಕೊಂಡು ಕಡಿಮೆಗೊಳಿಸಿದೆ. ಇಳಿಸಿದ ಬಳಿಕ ಗೊತ್ತಾಯಿತು, 500 ಪದಗಳನ್ನು ಅನಗತ್ಯವಾಗಿ ಬಳಸಿದ್ದೆನೆಂದು. ಪುನರುಕ್ತಿ ಕ್ಲೀಷೆಗಳ ತಾಯಿ ಕೂಡ. ನಮ್ಮ ರಾಜಕಾರಣಿಗಳ ಬಾಯಲ್ಲಿ `ಷಡ್ಯಂತ್ರ’ ಎಂಬ ಪದ ಎಷ್ಟು ಸವೆದುಹೋಗಿದೆ? `ಎಲ್ಲರ ಚಿತ್ತ ದೆಹಲಿಯತ್ತ’ ಎಂಬ ಪ್ರಾಸಬದ್ಧ ವಾಕ್ಯ ಮೊದಲಿಗೆ ಚಂದವಾಗಿ ಕಂಡಿತ್ತು. ಅದನ್ನು ಮಾಧ್ಯಮಗಳು ಹೇಗೆ ಉಜ್ಜಿದವು ಎಂದರೆ, ಈಗದನ್ನು ಓದುವಾಗ ಯಾವ ಭಾವನೆಯೂ ಸ್ಫುರಿಸುವುದಿಲ್ಲ. ನನ್ನ ಸಹಲೇಖಕರೊಬ್ಬರು ನನ್ನದೊಂದು ಬರೆಹದಲ್ಲಿದ್ದ `ಅಮಾಯಕ’ ಎಂಬ ಪದಕ್ಕೆ ಪ್ರತಿಕ್ರಿಯಿಸುತ್ತ, ಮಾಧ್ಯಮಗಳು ಅತಿಯಾಗಿ ಬಳಸಿ ಸವೆಸಿರುವ ಪದಗಳಲ್ಲಿ ಇದೂ ಒಂದೆಂದು ಎಚ್ಚರಿಸಿದರು. ದೋಷ ಭಾಷೆಯದಲ್ಲ; ಬರೆಯುವವರ ಶಬ್ದದಾರಿದ್ರ್ಯದ್ದು. ವಿಚಾರಗಳನ್ನು ಪುನರುಕ್ತಿ ಮಾಡುವುದು ವೈಚಾರಿಕ ಬಡತನದ ಸಂಕೇತ ಕೂಡ. ಕಡಿಮೆ ಮಾತಲ್ಲಿ ಹೆಚ್ಚು ಅರ್ಥ ಹೊರಡಿಸಬಲ್ಲ ಕವಿ ಪಂಪ ತನ್ನನ್ನು `ಹಿತಮಿತ ಮೃದುವಚನ ಚತುರ’ನೆಂದು ಬಣ್ಣಿಸಿಕೊಂಡನು. ಶರಣರ ಮತ್ತು ಸರ್ವಜ್ಞನ ವಚನಗಳ ರೂಪವಿನ್ಯಾಸವೇ ಅತಿಮಾತುಗಳಿಂದ ತನ್ನನ್ನು ಪಾರುಗೊಳಿಸಿಕೊಂಡಿತು. ಈ ಮಾತನ್ನು ಷಟ್ಪದಿಗೆ ಸಾಂಗತ್ಯಕ್ಕೆ ಹೇಳುವಂತಿಲ್ಲ. ಅಲ್ಲಿನ ವಾಚಾಳಿತನ ಹಾಡಿಕೆಯಲ್ಲಿ ಮುಚ್ಚಿಹೋಗುತ್ತದೆ. ಸಂಕ್ಷಿಪ್ತವಾಗಿ ಬರೆಯುವುದು ಪುನರುಕ್ತಿ ಮತ್ತು ಶಿಥಿಲತೆ ತಡೆಯುವ ಒಂದು ಒಳೋಪಾಯ. ಒಂದೇ ವಿಚಾರವನ್ನು ಹಲವು ಕೃತಿಗಳಲ್ಲಿ ಬೇರೆಬೇರೆ ತರಹ ಬರೆದರೆ ಜಾಣ ಓದುಗರಿಗೆ ತಿಳಿದುಬಿಡುತ್ತದೆ. ಅಡಿಗರು ರಮ್ಯ ಸಂಪ್ರದಾಯದಲ್ಲಿ ಬರೆಯುತ್ತ ಬೇಸತ್ತು `ಅನ್ಯರೊರೆದುದನೆ, ಬರೆದುದನೆ ನಾ ಬರೆಬರೆದು ಬಿನ್ನಗಾಗಿದೆ ಮನವು’ ಎಂದು ದುಗುಡಿಸಿದರು; `ನನ್ನ ನುಡಿಯೊಳಗೆ ಬಣ್ಣಿಸುವ ಪನ್ನತಿಕೆ ಬರುವನಕ ನನ್ನ ಬಾಳಿದು ನರಕ’ ಎಂದೂ ನುಡಿದರು. ತಾವೇ ಕಂಡುಕೊಂಡ ಭಾಷೆಯಲ್ಲಿ ಅಭಿವ್ಯಕ್ತಿಸಲು ಬಯಸುವ ಎಲ್ಲರಿಗೂ ಪುನರುಕ್ತಿ ಶಾಪವಾಗಿ ಕಾಡುತ್ತದೆ. ಇದರ ಒದ್ದಾಟ ಲಂಕೇಶರ ಪತ್ರಿಕಾ ಟಿಪ್ಪಣಿಗಳಲ್ಲಿ ಆಗಾಗ್ಗೆ ಕಾಣಿಸಿಕೊಳ್ಳುತ್ತಿತ್ತು. ವಾಗ್ಮಿಗಳಿಗೆ ಅವರ ಹಿಂದಿನ ಭಾಷಣವೇ ಎದುರಾಳಿ; ಸೂಕ್ಷ್ಮ ಲೇಖಕರಿಗೆ ಹಿಂದಣ ಯಶಸ್ವೀ ಕೃತಿಯೇ ಹಗೆ. ಅವು “ಭಿನ್ನವಾಗಿ ಮಾತಾಡಲು ಬರೆಯಲು ಸಾಧ್ಯವೇ ನಿನಗೆ?” ಎಂದು ಸವಾಲು ಹಾಕುತ್ತಿರುತ್ತವೆ. ಸವಾಲನ್ನು ಎತ್ತಿಕೊಂಡರೆ ಹೊಸಸೃಷ್ಟಿ; ಇಲ್ಲದಿದ್ದರೆ ಹಳತನ್ನೇ ಹೊಸತೆಂಬ ಭ್ರಮೆಯಲ್ಲಿ ಒದಗಿಸುವ ಕರ್ಮ. ಎಲ್ಲ ದೊಡ್ಡ ಬರೆಹಗಾರಲ್ಲಿ ಜೀವನದರ್ಶನವೊಂದು ಪುನರುಕ್ತಿ ಪಡೆಯುತ್ತ ಬಂದಿರುತ್ತದೆ- ಕುವೆಂಪು ಅವರಲ್ಲಿ ವಿಶ್ವಮಾನವ ತತ್ವ, ಬೇಂದ್ರೆಯವರಲ್ಲಿ ಸಮರಸ ತತ್ವ, ಕಾರಂತರಲ್ಲಿ ಜೀವನತತ್ವ, ತೇಜಸ್ವಿಯವರಲ್ಲಿ ವಿಸ್ಮಯತತ್ವ ಇತ್ಯಾದಿ. ಈ ಮೂಲತತ್ವವು ಕಾಲಕಾಲಕ್ಕೆ ಒಳಗಿಂದಲೇ ಬೆಳೆಯುತ್ತಲೂ ಬಂದಿರುತ್ತದೆ. ಹೀಗಾಗಿ ಅದು ಶಾಪವಲ್ಲ. ಆದರೆ ಇದೇ ಲೇಖಕರು ತಮ್ಮ ಕೊನೆಗಾಲದಲ್ಲಿ ಈ ತತ್ವವನ್ನು ವಿಸಕನಗೊಳಿಸದೆ, ಸ್ಟೀರಿಯೊ ರೆಕಾರ್ಡಿನಂತೆ ಪುನರುಕ್ತಿಸುವ ಕಷ್ಟಕ್ಕೆ ಸಿಕ್ಕಿಕೊಳ್ಳುವುದುಂಟು.ಸರ್ಕಸ್ ಮಾಡುವವರಿಂದ ಹಿಡಿದು ಪೂಜಾರಿಕೆ, ಪಾಠ, ವ್ಯಾಪಾರ, ಡ್ರೈವಿಂಗ್, ಅಡುಗೆ, ಕಛೇರಿ ಕೆಲಸ ಮಾಡುವವರಿಗೆ ಒಂದೇ ನಮೂನೆಯ ಕೆಲಸವನ್ನು ದಿನವೂ ಮಾಡುತ್ತ ಏಕತಾನೀಯ ಜಡತೆ ಆವರಿಸುತ್ತದೆ. ಅವರು ಪುನರಾವರ್ತನೆಯನ್ನು ಹೇಗೆ ನಿಭಾಯಿಸುತ್ತಾರೆ? ಬಹುಶಃ ಅದಕ್ಕೆ ಅನಿವಾರ್ಯತೆಯಲ್ಲಿ ಹೊಂದಿಕೊಂಡಿರುತ್ತಾರೆ. ಸತತ ತರಬೇತಿಯಿಂದ ಪಡೆದ ಪರಿಣತಿಯೇ ಅಲ್ಲಿ ಸಿದ್ಧಿಯಾಗಿ ನಿಂತುಬಿಟ್ಟಿರುತ್ತದೆ. ಆದರೆ ಸೃಜನಶೀಲರು ಪುನರಾವರ್ತನೆಯ ಇಕ್ಕಟ್ಟು ಬಂದಾಗ ಪ್ರತಿಸಲವೂ ವಿಭಿನ್ನತೆ ತೋರಲು ಹೋರಾಡುತ್ತಾರೆ. ತಾವೇ ಕಟ್ಟಿದ ಚೌಕಟ್ಟುಗಳನ್ನು ಮುರಿಯುತ್ತಾರೆ. ತಲ್ಲಣಿಸುತ್ತಾರೆ.ಆಡಿದ್ದನ್ನೇ ಆಡುವವರ ಮಾತು-ಬರೆಹ ಬೋರು ಹೊಡೆಸಬಹುದು. ಅದು ಅಪಾಯವಲ್ಲ. ಆದರೆ ಭಾಷೆ, ಧರ್ಮ, ಸಮುದಾಯ, ದೇಶ, ಸಿದ್ಧಾಂತದ ನೆಲೆಯಲ್ಲಿ ವಿದ್ವೇಷ ಹುಟ್ಟಿಸುವ ರಾಜಕಾರಣದ ಪುನರುಕ್ತಿಗಳು ಅಪಾಯಕರ. ಇಲ್ಲಿ ಪುನರುಕ್ತಿ ಅರೆಸತ್ಯವನ್ನು ಪೂರ್ಣಸತ್ಯವೆಂದು ಸಮೂಹವನ್ನು ನಂಬಿಸುತ್ತದೆ. ಈ ಮನಶ್ಶಾಸ್ತ್ರೀಯ ಪ್ರಯೋಗವನ್ನು ಜರ್ಮನಿಯ ಫ್ಯಾಸಿಸ್ಟರು ಮಾಡಿದರು. ಇದಕ್ಕಾಗಿ ಹಿಟ್ಲರನ ಪ್ರಚಾರ ಮಂತ್ರಿ ಗೊಬೆಲ್ಸ್ ಪ್ರಸಿದ್ಧನಾಗಿದ್ದ. ಜಾಹಿರಾತುಗಳು ಪುನರುಕ್ತಿಯಾಗುವುದು ಇದೇ ತಂತ್ರದಿಂದ. ತತ್ವಪದಗಳಲ್ಲಿ, ಜನಪದ ಹಾಡುಗಳಲ್ಲಿ ಪಲ್ಲವಿಯಾಗಿ ಬರುವ ಪುನರುಕ್ತಿಗೆ ಬೇರೆ ಆಯಾಮವಿದೆ. ಪ್ರತಿ ಖಂಡ ಮುಗಿದ ಬಳಿಕ ಬರುವ ಪಲ್ಲವಿ ಹೊಸಹೊಸ ಅರ್ಥಗಳನ್ನು ಹೊಳೆಸುತ್ತದೆ. `ಬಿದಿರೇ ನೀನಾರಿಗಲ್ಲದವಳು’-ಶರೀಫರ ಈ ಪಲ್ಲವಿ ಗಮನಿಸಬೇಕು. ಹಾಡಿನ ಪ್ರತಿಹೋಳಿನ ಬಳಿಕ ಬರುತ್ತ ಇದು ನವೀನ ಅರ್ಥಗಳನ್ನು ಹುಟ್ಟಿಸುತ್ತ ಬೆರಗುಗೊಳಿಸುತ್ತದೆ. ಹಿಂದುಸ್ತಾನಿ ಸಂಗೀತದಲ್ಲೂ ಒಂದೇ ಚೀಸನ್ನು ಬೇರೆಬೇರೆ ಲಯವಿನ್ಯಾಸದಲ್ಲಿ ಅಭಿವ್ಯಕ್ತಿಸಲಾಗುತ್ತದೆ. ಪ್ರತಿಯೊಂದೂ ಸ್ವರವಿನ್ಯಾಸವೂ ವಿಭಿನ್ನ ಮತ್ತು ವಿಶಿಷ್ಟವಾಗಿರುತ್ತದೆ-ಕರೆಗೆ ಅಪ್ಪಳಿಸುವ ಕಡಲ ಅಲೆಯಂತೆ, ಮರದಕೊಂಬೆ ಗಾಳಿಗೆ ಅಲುಗಿದಂತೆ, ಹಕ್ಕಿ ಹಾಡಿದಂತೆ. ಪ್ರತಿಭಾವಂತ ಗಾಯಕರು ಧ್ವನಿಮುದ್ರಿತ ಯಂತ್ರದಂತೆ ಒಂದೇ ತರಹ ಹಾಡುವುದಿಲ್ಲ. ನಮಗೆ ಪ್ರಿಯವಾದ ಹಾಡು, ಧ್ವನಿಮುದ್ರಣದಲ್ಲಿ ಅದೆಷ್ಟನೆಯ ಸಲವೊ ಕೇಳುವಾಗ ಕೂಡ, ಪುನರುಕ್ತಿ ಎನಿಸದೆ ಹೊಸದೇ ಅನುಭವ ಕೊಡುವುದು; ಹೊಸದೇ ಭಾವ ಹೊಳೆಸುವುದು. ಹಾಡು ಅದೇ. ಕೇಳುವವರ ಮನಸ್ಥಿತಿ ಬೇರೆಯಾಗಿದೆ. ನಮಗೆ ಪ್ರಿಯರಾದವರ ಮುಖವನ್ನು ಎಷ್ಟು ಸಲ ನೋಡಿದರೂ, ಅವರ ಮಾತನ್ನು ಅದೆಷ್ಟು ಸಲ ಆಲಿಸಿದರೂ ಏಕತಾನ ಎನಿಸುವುದಿಲ್ಲ. ಎಳೆಯ ಕಂದನ ಮೊಗವನ್ನು ಕನ್ನಡಿಯಂತೆ ಹಿಡಿದು ತಾಯಿ ದಣಿಯುವಳೇ? ನೋಡುವ ತಾಯಭಾವವೂ ನೋಟಕ್ಕೆ ವಸ್ತುವಾಗಿರುವ ಕೂಸಿನ ಭಾವವೂ ಪರಸ್ಪರ ಬದಲಾಗುತ್ತ ಜೀವಂತಿಕೆ ಸೃಷ್ಟಿಸುತ್ತವೆ. `ಮಲೆಗಳಲ್ಲಿ ಮದುಮಗಳು’ ಕಾದಂಬರಿಯನ್ನು ಅದೆಷ್ಟು ಸಲ ಓದಿರುವೆನೊ? ಹಳತೆನಿಸಿಲ್ಲ. ವಯಸ್ಸು ಅಭಿರುಚಿ ಆಲೋಚನಕ್ರಮ ಅನುಭವ ಬದಲಾದಂತೆ, ಹಿಂದೆ ಓದಿದ್ದು ಕೇಳಿದ್ದು, ಹೊಸ ಅನುಭವ ಮತ್ತು ಚಿಂತನೆಯಲ್ಲಿ ಬಂದು ಕೂಡಿಕೊಳ್ಳುತ್ತದೆ. ಪುನರುಕ್ತಿ ಸೃಜನಶೀಲವಾಗಿದ್ದಾಗ ಯಾಂತ್ರಿಕವಾಗಿರುವುದಿಲ್ಲ. ಹಿಂದೆ ಕೇಳಿದ ಹಾಡು ಸ್ಮತಿಯಿಂದ ಎದ್ದುಬರುವಾಗ ಹೊಸಜನ್ಮವನ್ನು ಪಡೆದಿರುತ್ತದೆ. ಪ್ರತಿವರ್ಷವೂ ಚಿಗುರುವ ಮರ ಹೊಸತನದಲ್ಲಿ ಕಾಣಿಸುವುದಕ್ಕೆ ಕಾರಣ, ಮರ ಮಾತ್ರವಲ್ಲ, ಅದನ್ನು ನೋಡುವ ಕಣ್ಣೂ ಸಹ. ********************************* ಲೇಖಕರ ಬಗ್ಗೆ: ರಹಮತ್ ತರಿಕೆರೆಯವರು- ಕನ್ನಡದ ಗಮನಾರ್ಹ ಲೇಖಕ. ಹಂಪಿ ವಿಶ್ವವಿದ್ಯಾಲಯದ ಪ್ರೋಫೆಸರ್. ನಾಡಿನ ಸಂಸ್ಕೃತಿ, ಸೌಹಾರ್ದತೆಯ ಬೇರುಗಳ ಜಾಡು ಹಿಡಿದು, ಆಯಾ ಊರುಗಳಿಗೆ ಹೋಗಿ, ಮಾಹಿತಿ ಹಾಕಿ, ಅಲ್ಲಿನ ಜನರ ಜೊತೆ ಬೆರೆತು, ಸಂಶೋಧನಾ ಲೇಖನಗಳನ್ನು ಬರೆದವರು.‌ಕರ್ನಾಟಕದ ಸಂಗೀತಗಾರರು ಹಾಗೂ ಅವರು ದೇಶದ ಇತರೆ ಭಾಗಗಳಲ್ಲಿ ನೆಲೆಸಿದವರ ಬಗ್ಗೆ ಹುಡುಕಾಡಿ ಬರೆದವರು. ಅವರ ನಿರೂಪಣಾ ಶೈಲಿ ಅತ್ಯಂತ ಆಕರ್ಷಕ. ಮನಮುಟ್ಟುವಂತೆ ಬರೆಯುವ ರಹಮತ್ ತರೀಕೆರೆ ಕನ್ನಡದ ,ಬಹುತ್ವದ ,ಸೌಹಾರ್ದತೆಯ ಪ್ರತೀಕವೂ ಆಗಿದ್ದಾರೆ

Read Post »

ಇತರೆ

ಲಲಿತ ಪ್ರಬಂಧ

ಹಲಸಿನ ಕಡುಬು. ಶೀಲಾ ಭಂಡಾರ್ಕರ್ ನಮ್ಮೂರ ಕಡೆ ಹಲಸಿನ ಹಣ್ಣಿನ ಕಾಲದಲ್ಲಿ ಹಲಸಿನ ಹಣ್ಣಿನಿಂದ ಬಗೆ ಬಗೆಯ ಖಾದ್ಯಗಳನ್ನು ಮಾಡುತ್ತಾರೆ. ಹಪ್ಪಳ, ಚಿಪ್ಸ್, ದೋಸೆ, ಕಡುಬು, ಮುಳಕ, ಪಾಯಸ.. ಇನ್ನೂ ಎಷ್ಟೋ ಬಗೆ. ಅದರಲ್ಲಿ ಹಲಸಿನ ಕಡುಬು ನನಗೆ ಪಂಚಪ್ರಾಣ.ಅಕ್ಕಿಯನ್ನು ನೆನೆಸಿ, ತೆಂಗಿನ ತುರಿ, ಬೆಲ್ಲ, ಬಿಡಿಸಿದ ಹಲಸಿನ ತೊಳೆಯ ಜತೆ ತರಿ ತರಿಯಾಗಿ ರುಬ್ಬಿ ತೇಗದ ಎಲೆಯಲ್ಲಿ, ಕೆಂಡ ಸಂಪಿಗೆ ಎಲೆಯಲ್ಲಿ, ಅಥವಾ ತಟ್ಟೆಯಲ್ಲಿಟ್ಟು, ಹಬೆಯಲ್ಲಿ ಬೇಯಿಸಿ ಮಾಡುವ ಕಡುಬು.. ಆಹಾ..!!! ಘಮ್ ಅಂತ ನಾಲ್ಕೂ ದಿಕ್ಕಿಗೆ ಪರಿಮಳ ಸೂಸಿ ಎಲ್ಲರ ಮೂಗು ಅರಳಿಸುತ್ತದೆ.ಬಿಸಿ ಬಿಸಿ ಹಲಸಿನ ಕಡುಬನ್ನು ತಾಜಾ ಬೆಣ್ಣೆ, ಅಥವಾ ತುಪ್ಪದ ಜತೆ ತಿಂದರೆ.. ಆಹ್… ಬಿಡಿ.. ಬಲ್ಲವರೇ ಬಲ್ಲರು ಅದರ ರುಚಿಯ. ನಾನು ಆಗ ಆರನೇ ಕ್ಲಾಸಿನಲ್ಲಿದ್ದೆ. ಆಗ ನಾವೊಂದು ಚಿಕ್ಕ ಹಳ್ಳಿಯಲ್ಲಿದ್ದೆವು ಒಂದು ವರ್ಷದ ಮಟ್ಟಿಗೆ. ಅಲ್ಲಿ ನಾವು ಇದ್ದ ಕಡೆ ಹತ್ತಿರದಲ್ಲೇ ಒಂದು ಅಂಗಡಿ, ಅದರ ಮಾಲೀಕ ಶೇಷಪ್ಪ ಅಂತ. ಅವನೊಂದು ದಿನ ಒಂದು ಹಲಸಿನ ಹಣ್ಣು ತಂದು ಕೊಟ್ಟ. ಅವನು ತಂದಿಟ್ಟ ತಕ್ಷಣ ನಮಗೆಲ್ಲ ಕಡುಬು ತಿನ್ನುವ ಆಸೆಯಾಯ್ತು. ಸರಿ ಆವತ್ತು ರಾತ್ರಿ ಯಾರಿಗೂ ಊಟ ಬೇಡ, ಕಡುಬೇ ಸಾಕು ಅಂತ ನಿರ್ಧಾರವಾಯಿತು. ಆಗ ಈಗಿನ ಹಾಗೆ ಮಿಕ್ಸಿ, ಗ್ರೈಂಡರ್ ಇರಲಿಲ್ಲ ನಮ್ಮ ಮನೆಯಲ್ಲಿ. ರುಬ್ಬುವ ಕಲ್ಲಿನಲ್ಲಿ ಕಡುಬಿನ ಹಿಟ್ಟನ್ನು ತಯಾರು ಮಾಡಿ ಎರಡು ದೊಡ್ಡ ದೊಡ್ಡ ತಟ್ಟೆಗಳಲ್ಲಿ ಅಮ್ಮ ಬೇಯಿಸಲಿಕ್ಕಿಟ್ಟರು.. ಇನ್ನು ಸರಿಯಾಗಿ ಅರ್ಧ ಘಂಟೆಯಾದರೂ ಬೇಯಬೇಕು ಅಂತ ಮನಸ್ಸಿನಲ್ಲೇ ಅಂದುಕೊಂಡು ಕಾಯುತ್ತ ಕೂತಿದ್ದೆವು. ಅಜ್ಜಿ ಬೆಣ್ಣೆಯನ್ನು 2-3 ಸಲ ನೀರಿನಿಂದ ತೊಳೆದು ಇಟ್ಟರು.ಅಮ್ಮ ಮುಚ್ಚಳ ತೆಗೆದು ಬೆಂದಿದೆ ಅಂತ ಖಾತ್ರಿ ಮಾಡಿಕೊಂಡು ತಟ್ಟೆಗಳನ್ನು ಹಬೆ ಪಾತ್ರೆಯಿಂದ ತೆಗೆದು ನೆಲದಲ್ಲಿ ಆರಲು ಇಟ್ಟರು.ಅಜ್ಜಿ ಬಂದು ನೋಡಿ.. “ಎಷ್ಟು ಚಂದ ಬಂದಿದೆ ರಂಗು. ಪರಿಮಳ ಕೂಡ ವಿಶೇಷವಾಗಿದೆ “ಅದಕ್ಕೆ ಅಮ್ಮ “ಹೌದು ಶೇಷಪ್ಪ ತಂದುಕೊಟ್ಟ ಹಣ್ಣಲ್ವಾ ಅದಕ್ಕೆ ವಿಶೇಷವಾಗೇ ಪರಿಮಳ” ಅಂತ ಹೇಳುತ್ತ.. ಅಜ್ಜಿಗೆ ಒಂದು ಚಿಕ್ಕ ತುಂಡು ಕಡುಬನ್ನು ತಟ್ಟೆಯಲ್ಲಿಟ್ಟು ಬೆಣ್ಣೆ ಹಾಕಿ ಕೊಟ್ಟರು “ರುಚಿ ನೋಡಿ” ಅಂತ.“ಎಲ್ಲರೂ ಒಟ್ಟಿಗೆ ತಿನ್ನೋಣ” ಎಂದು ಹೇಳಿದರೂ ಕೂಡ ಅಜ್ಜಿ ಕಡುಬು ತಿಂದು “ಭಾಳ ರುಚಿಯಾಗಿದೆ” ಅಂತ ಸರ್ಟಿಫಿಕೇಟ್ ಕೊಟ್ಟಾಯಿತು.ಹಾಗೆ ತಮ್ಮನನ್ನು ಕರೆದು ಅಜ್ಜಿ “ಏ.. ಹೌದಾ.. ಆ ಶೇಷಪ್ಪ ಅಂಗಡಿ ಮುಚ್ಚಿ ಮನೆಗೆ ಹೋಗುವಾಗ ಬಂದು ಹೋಗಬೇಕಂತೆ ಅಂತ ಹೇಳಿ ಬಾ ಹೋಗು” ಅಂತ ಕಳುಹಿಸಿದರು.ಅವನು ಕಡುಬು ತಿನ್ನುವ ಆತುರದಲ್ಲಿ ಒಂದೇ ಏಟಿಗೆ ಓಡಿ ಹೋಗಿ ಶೇಷಪ್ಪನಿಗೆ ವಿಷಯ ಮುಟ್ಟಿಸಿ ಮನೆಗೆ ಬರುವುದರೊಳಗೆ ಹಿಂದೆಯೇ ಶೇಷಪ್ಪನೂ ಬಂದಾಯಿತು. ಅಲ್ಲೇ ಮೆಟ್ಟಲಲ್ಲಿ ಕೂತ ಅವನಿಗೆ ತಟ್ಟೆಯಲ್ಲಿ ಸಾಕಷ್ಟು ಕಡುಬು ಒಂದು ದೊಡ್ಡ ಬೆಣ್ಣೆ ಮುದ್ದೆ ಕೊಟ್ಟಾಯಿತು. ಅವನು ತಿಂದು ಹೋಗಲಿ ಆಮೇಲೆ ನಾವೆಲ್ಲ ತಿಂದ್ರಾಯ್ತು ಅಂತ ಅಮ್ಮ ಹೇಳಿದರು. ಹೂಂ … ಅಂತ ತಲೆ ಅಲ್ಲಾಡಿಸಿ ಕೂತೆವು. ಅಷ್ಟು ಒಳ್ಳೆಯ ಮಕ್ಕಳು ಆಗಿನವು. ಈಗಿನವಕ್ಕೆ ಫಿಜ್ಹಾ, ಬರ್ಗರ್, ಮುಂದೆ ಕಡುಬು ಎಲ್ಲಿ ಗಂಟಲಿಗಿಳಿಯುತ್ತದೆ.? “ಎಷ್ಟು ಒಳ್ಳೆಯ ಹಣ್ಣು..! ನಿಮ್ಮ ಮರದ್ದೇಯಾ? ತುಂಬಾ ಬಿಡ್ತದಾ ಹಣ್ಣು ? ಎಷ್ಟು ಮರ ಇವೆ..? ಎಂದೆಲ್ಲ ಪ್ರಶ್ನೆ ಮೇಲೆ ಪ್ರಶ್ನೆ ಹಾಕಿ ಅಜ್ಜಿ “ಇನ್ನೊಂದು ಹಣ್ಣು ಬೇಕು , ಮಗಳ ಮನೆಗೆ ಹೋಗ್ತಾ ಇದ್ದೇನೆ ಬರುವ ವಾರ ” ಅಂತ ಬುಕ್ ಮಾಡಿಸಿಟ್ಟರು. ಅವನೂ ಮಾತಾಡುತ್ತ .. ಕಡುಬನ್ನು ಚಪ್ಪರಿಸಿ ತಿನ್ನುವಾಗ, ಕಾದು ಕೂತ ನಮಗೆ ಇವನು ಬೇಗ ಬೇಗ ತಿಂದು ಹೋಗಬಾರದಾ..? ಎಷ್ಟು ಪಂಚಾದಿಕೆ ಈ ಅಜ್ಜಿಗೂ ಅಂತ ಮನಸ್ಸಿನಲ್ಲೇ ಗೊಣಗಾಟ. ತಿಂದಾಯ್ತು.. ಅವನಿಗೆ ಕೈ ತೊಳೆಯಲು ನೀರು ಅಲ್ಲೇ ತಂದು ಕೊಟ್ಟರೆ.. ತಟ್ಟೆ ತೊಳೆದಿಟ್ಟು ಹೋಗುತ್ತೇನೆ ಈ ನೀರು ಸಾಲದು. ಅಂತ ಬೇಡ ಬೇಡ ಎಂದರೂ ಕೇಳದೆ , ನನ್ನನ್ನು ಕರೆದು ಹಿಂದಿನ ಬಾಗಿಲು ತೆಗೆದು ಸ್ವಲ್ಪ ನೀರು ಹಾಕಿ ಅಮ್ಮ ಅಂತ ಹೇಳಿದ. ನಾನು ಹೋಗಿ ಹಿಂದಿನ ಬಾಗಿಲು ತೆಗೆದು ಅವನಿಗೆ ನೀರು ಕೊಟ್ಟು ಬಂದೆ. ಆಯ, ಆಕಾರವಿಲ್ಲದ ದೊಡ್ಡ ಹಳ್ಳಿ ಮನೆ.. ಬಂದು ಕೂತರೆ.. ಶೇಷಪ್ಪ.. ಕಡುಬನ್ನು ವರ್ಣಿಸಲು ತೊಡಗಿದ. ಹಾಗೆ ಇನ್ನೂ ಸ್ವಲ್ಪ ಹೊತ್ತು ಅಪ್ಪ, ಅಜ್ಜಿ , ಅಮ್ಮ ಅಂತ ಒಬ್ಬೊಬ್ಬರದೂ ಅವನ ಜೊತೆ ಮಾತಾಗುತಿತ್ತು. ಒಳಗೆ ಏನೋ “ಢಂಯ್ ” ಎಂದು ಸದ್ದಾಯಿತು. ಹಾರಿ ಹೋಗಿ ಒಳಗೆ ನೋಡಿದರೆ ನಾಯಿಯೊಂದು ತೆರೆದಿಟ್ಟ ಹಿಂದಿನ ಬಾಗಿಲಿನಿಂದ ಒಳಗೆ ಬಂದು ಆರಲು ಇಟ್ಟಿದ್ದ ಕಡುಬಿನ ತಟ್ಟೆಗಳಲ್ಲಿ ಒಂದನ್ನು ಖಾಲಿ ಮಾಡಿ ಇನ್ನೊಂದಕ್ಕೆ ಬಾಯಿ ಹಾಕಿ ಚಪ್ಪರಿಸುತಿತ್ತು. ತಿಂದು ಮುಗಿಸಿದ ತಟ್ಟೆಯಲ್ಲಿ ನಾಯಿ ಕಾಲಿಟ್ಟಿದ್ದರಿಂದ ಆ ಸದ್ದು ಕೇಳಿಸಿದ್ದು ಹೊರಗೆ. ಬಂದ ಕೋಪಕ್ಕೆ ಅಮ್ಮ ಕೈಗೆ ಸಿಕ್ಕಿದ ದೊಣ್ಣೆಯಿಂದ ಒಂದು ಕೊಟ್ಟರು ನಾಯಿಯ ಬೆನ್ನಿಗೆ. ಅದು ಕೊಂಯ್ ಅಂತ ಒಂದೇ ಉಸಿರಿಗೆ ಮಾಯವಾಯ್ತು.ಇನ್ನೊಂದು ನನಗೆ ಗ್ಯಾರಂಟಿ ಎಂದು ನಾನು ಹೆದರಿ ಯಾವುದೋ ಒಂದು ಸಂಧಿಯಲ್ಲಿ ಅಡಗಿ ಕೂತುಕೊಂಡೆ. ಅಮ್ಮನಿಗೆ ಪಾಪ.. ಅಷ್ಟು ಕಷ್ಟ ಪಟ್ಟು ಮಾಡಿದ ಕಡುಬು ಎಲ್ಲಾ ನಾಯಿ ತಿಂದು ಹೋಯಿತು.. ಈಗ ಪುನಹ ಇವರಿಗೆಲ್ಲ ಏನು ಮಾಡಿ ಬಡಿಸಲಿ ಅನ್ನೋ ಯೋಚನೆ,ನನಗೆ.. ಛೆ!! ನಾನು ಮರೆತು ಬಾಗಿಲು ಹಾಕದಿದ್ದರಿಂದಲೇ ಇವತ್ತು ಕಡುಬು ನಾಯಿ ಪಾಲಾಯಿತು.. ಎಂಥ ಕೆಲಸವಾಯಿತು. ಅಂತ ಮನಸ್ಸಲ್ಲೇ ದುಃಖ.ಅಜ್ಜಿಗೆ ತಿಂದ ಆ ಚಿಕ್ಕ ಕಡುಬಿನ ತುಂಡಿನ ರುಚಿ ಇನ್ನೂ ಬಾಯಲ್ಲೇ ಇದೆ.. ಏನಾಗಿ ಹೋಯಿತು ಇದು ಅಂತ ಮನಸ್ಸೆಲ್ಲ ಚುರುಚುರು.ಅಪ್ಪ ಎಂದಿನಂತೆ ಸ್ಥಿತಪ್ರಜ್ಞ.. ತಮ್ಮ-ತಂಗಿ ಇಬ್ಬರೂ ಯಾವುದೋ ಆಟದಲ್ಲಿ ಮಗ್ನರಾಗಿದ್ದರು. ಈಗ ಶೇಷಪ್ಪನ ಗೋಳಾಟ ಶುರುವಾಯಿತು., “ನೀವು ಬೇಡ ಬೇಡ ಅಂದರೂ ನಾನು ಮಾಡಿದ ತಪ್ಪಿನಿಂದಲೇ ಹೀಗಾಯಿತು.. ನೀವು ಇಷ್ಟು ಕಷ್ಟ ಪಟ್ಟು ಮಾಡಿದ್ದು ನಿಮಗೆ ತಿನ್ನಲಿಕ್ಕಾಗದೇ ಹೋಯಿತು” ಅಂತ. ನಮ್ಮ ದುಃಖದ ನಡುವೆ ಅವನನ್ನು ಸಮಾಧಾನ ಮಾಡಿ ಕಳಿಸಿದರು ಅಮ್ಮ ಮತ್ತು ಅಜ್ಜಿ.ಆಮೇಲೆ ಅಮ್ಮನಿಗೆ ನನ್ನನ್ನು ಹೊಡೆಯದೆ ಬಿಟ್ಟದ್ದು ನೆನಪಾಗಿ.. ನನ್ನನ್ನು ಹುಡುಕುವುದಕ್ಕೆ ಶುರು ಮಾಡಿದರು. ಹೊರಗೆ ಬಂದರೆ ನನಗೆ ಸರಿಯಾದ ಪೂಜೆಯಾಗುತ್ತದೆ ಅಂತ ಗೊತ್ತಿತ್ತು ನನಗೆ. ಸುಮ್ಮನೆ ಉಸಿರು ಕೂಡ ಆಡದೆ ಕೂತೆ. ಅಮ್ಮನ ಕೋಪ ನೋಡಿ ಅಜ್ಜಿ.. ಅವಳನ್ನು ಹೊಡೆಯುವುದಿಲ್ಲ ಅಂತ ಭಾಷೆ ಕೊಡು ಅಂತ ಒಪ್ಪಿಸಿ ನನ್ನನ್ನು ಕರೆದರು.. “ಬಾ.. ನಿನಗೆ ಹೊಡೆಯುವುದಿಲ್ಲ” .. ನಾನು ಮೆತ್ತಗೆ ಹೊರಗೆ ಬಂದೆ.ಆಮೇಲೆ ಅದೇನು ತಿಂದು ಮಲಗಿದೆವೋ ಅದು ನೆನಪಿಲ್ಲ. ಮಾರನೆ ದಿನ ಶೇಷಪ್ಪ ಇನ್ನೂ ದೊಡ್ಡದಾದ ಹಣ್ಣನ್ನು ತಂದಿಟ್ಟರೂ ಯಾರಿಗೂ ಅಷ್ಟೊಂದು ಉತ್ಸಾಹವಿಲ್ಲ. ಕಡುಬನ್ನು ಮಾಡಿದರೂ ಶೇಷಪ್ಪನನ್ನು ಕರೆಯಲಿಲ್ಲ ಈ ಸಾರಿ. ಅಜ್ಜಿ ತಿಂದು ನೋಡಿ ನಿನ್ನೆಯಷ್ಟು ರುಚಿಯಾಗಿಲ್ಲ ಅಂದಾಗ ಇನ್ನೂ ಮನಸ್ಸು ಮುದುಡಿ ಹೋಯಿತು. ಅದಾದ ಮೇಲೆ ಏಷ್ಟೋ ಸಲ ಹಲಸಿನ ಹಣ್ಣಿನ ಕಡುಬು ಮಾಡಿ ತಿಂದರೂ ಆ ದಿನದ ನಾವು ತಿನ್ನದಿದ್ದ ಕಡುಬಿನಷ್ಟು ರುಚಿ ಅನ್ನಿಸಿದ್ದಿಲ್ಲ. ಮತ್ತು ಪ್ರತೀ ಸಲ ಕಡುಬು ಮಾಡಿದಾಗಲೂ ಶೇಷಪ್ಪನನ್ನು ಮತ್ತು ಆ ನಾಯಿಯನ್ನು ಇಂದಿಗೂ ನೆನಸುತ್ತೇನೆ. **********************************************

ಲಲಿತ ಪ್ರಬಂಧ Read Post »

ಪುಸ್ತಕ ಸಂಗಾತಿ

ಪುಸ್ತಕ ಸಂಗಾತಿ

ಕವಿ ಶಿವಪ್ರಕಾಶ ಅವರ ಚೈತನ್ಯದ ಚಿಲುಮೆಯಾದ ಅಕ್ಕರೆಯ ಮಗಳು “ನೇರಿಶಾ”ಳ ಬಗೆಗೆ ಹೊಂದಿದ ಅಪಾರ ನಿರೀಕ್ಷೆ, ಭರವಸೆ, ವಾತ್ಸಲ್ಯ ಇಲ್ಲಿ ಕಾಣಬಹುದು.

ಪುಸ್ತಕ ಸಂಗಾತಿ Read Post »

ಅಂಕಣ ಸಂಗಾತಿ, ಅನುವಾದಿತ ಕೃತಿ ಪ್ರಪಂಚ ಪ್ರವೇಶ

ಅನುವಾದಿತ ಕೃತಿ ಪ್ರಪಂಚ ಪ್ರವೇಶ ಮೊದಲ ನುಡಿ ಅನುವಾದವೆಂಬ ಪದದ ಸರಿಯಾದ ಅರ್ಥ ತಿಳಿಯದವರು ನಮ್ಮಲ್ಲಿ ಸಾಕಷ್ಟು ಮಂದಿ ಇದ್ದಾರೆ. ಎರಡು ಭಾಷೆಗಳು ತಿಳಿದಿದ್ದರೆ ಸಾಕು ಅನುವಾದ ತಾನೇ ತಾನಾಗಿ ಆಗುತ್ತದೆ ಎಂದು ತಿಳಿಯುವವರಿದ್ದಾರೆ. ಅನುವಾದವೆಂದರೆ ಅದೊಂದು ಯಾಂತ್ರಿಕವಾದ ಕೆಲಸವೆಂದು ಹೇಳುವವರಿದ್ದಾರೆ. ಮನುಷ್ಯನ ಬದುಕಿನಲ್ಲಿ ಭಾಷೆಯ ಮಹತ್ವವೇನು, ಅನುವಾದದ ಮಹತ್ವವೇನು, ಅನುವಾದಕ/ಕಿಯಲ್ಲಿ ಇರಬೇಕಾದ ಪ್ರತಿಭೆಯೇನು, ಪಾಂಡಿತ್ಯವೇನು, ಗುಣಗಳೇನು, ಸೃಜನಶೀಲತೆಯೇನು-ಈ ಯಾವುದರ ಗೊಡವೆಯೂ ಇಲ್ಲದೆ ಸಾಹಿತ್ಯಲೋಕದಲ್ಲಿ ಅನುವಾದಕರಿಗೆ ಮೂಲ ಲೇಖಕರ ನಂತರದ ಸ್ಥಾನ ಕೊಡುವ ಹುನ್ನಾರ ಎಂದಿನಿಂದಲೂ ನಡೆಯುತ್ತಲೇ ಬಂದಿದೆ. ಅನುವಾದದ ಉದ್ದೇಶ ಮತ್ತು ಮಹತ್ವಗಳೇನು ಎಂಬುದರ ಬಗ್ಗೆ ಒಮ್ಮೆ ಚಿಂತಿಸಿದರೆ ಸಾಹಿತ್ಯದ ಸಂದರ್ಭದಲ್ಲಿ ಅನುವಾದಕರ ಅಗತ್ಯವೆಷ್ಟಿದೆ ಎಂಬುದನ್ನು ಮನಗಾಣ ಬಹುದು.ಜಗತ್ತಿನ ಉದ್ದಗಲಕ್ಕೂ ಹರಡಿರುವ ಸಾವಿರಾರು ಭಾಷೆಗಳನ್ನು ಪರಿಗಣಿಸಿದಾಗ ಇಂದಿನ ಸಂಪರ್ಕ ಸಮೃದ್ಧಿಯ ಜಾಗತೀಕರಣದ ಸಂದರ್ಭದಲ್ಲಂತೂ ಅನುವಾದಕರು ಆಮ್ಲಜನಕದಷ್ಟು ಅಗತ್ಯವಾಗಿದ್ದಾರೆಂದು ಹೇಳಿದರೆ ತಪ್ಪಾಗಲಾರದು. ಒಂದು ಭಾಷೆಯಲ್ಲಿ ಬಂದ ಸಾಹಿತ್ಯವನ್ನು ಓದುವ ಓದುಗರು ತಮ್ಮ ಭಾಷೆಗಷ್ಟೆ ಸೀಮಿತರಾದರೆ ಅವರ ಜ್ಞಾನವು ಸಂಕುಚಿತಗೊಳ್ಳುತ್ತದೆ. ಜಗತ್ತಿನ ಇತರ ಮಾನವರನ್ನೂ ಇತರ ಸಂಸ್ಕತಿ ಮತ್ತು ಜೀವನಕ್ರಮಗಳನ್ನೂ ಸಾಹಿತ್ಯ ಕೃತಿಗಳ ಮೂಲಕ ತಿಳಿದುಕೊಂಡಾಗ ಮಾತ್ರ ನಮ್ಮ ಅರಿವಿನ ವ್ಯಾಪ್ತಿ ವಿಸ್ತಾರಗೊಂಡು ನಾವು ಬೌದ್ಧಿಕವಾಗಿ ಬೆಳೆಯಲು ಸಾಧ್ಯ. ಇದು ಅನುವಾದಗಳ ಮೂಲಕವೇ ಆಗಬೇಕಷ್ಟೆ. ಹೀಗೆ ಹೇಳುವಾಗ ನನಗೆ ನನ್ನ ಆರಂಭಿಕ ಅನುವಾದಿತ ಕೃತಿಯನ್ನು ತ್ರಿಶೂರಿನಲ್ಲಿ ಬಿಡುಗಡೆ ಮಾಡುತ್ತ ಮಲೆಯಾಳದ ಮಹಾನ್ ಲೇಖಕ ಶ್ರೀ ಎಂ.ಟಿ.ವಾಸುದೇವನ್ ನಾಯರ್ ಹೇಳಿದ ಮಾತುಗಳು ನೆನಪಾಗುತ್ತವೆ : ‘ಯಾವುದೇ ಸಾಹಿತ್ಯದ ಓದುಗರು ತಮ್ಮ ಭಾಷೆಗಷ್ಟೇ ಸೀಮಿತರಾಗಿದ್ದರೆ ಅವರು ಬಾವಿಯೊಳಗಿನ ಕಪ್ಪೆಗಳಾಗುತ್ತಾರೆ. ವೈವಿಧ್ಯತೆಯಿಂದ ತುಂಬಿದ ಈ ಜಗತ್ತಿನಲ್ಲಿ ನಾವು ಇತರರ ಬಗ್ಗೆ ತಿಳಿದುಕೊಳ್ಳುವುದು ಬಹಳಷ್ಟಿದೆ. ಹಾಗೆ ತಿಳಿದುಕೊಳ್ಳುವ ಮನಸ್ಸು ನಮಗಿರಬೇಕು .ನಾವು ನಮ್ಮ ಮನಸ್ಸಿನ ಕಿಟಿಕಿ ಬಾಗಿಲುಗಳನ್ನು ಹೊಸ ಗಾಳಿ ಮತ್ತು ಬೆಳಕುಗಳಿಗಾಗಿ ಸದಾ ತೆರೆದಿಡಬೇಕು. ಇದು ಅನುವಾದಗಳನ್ನು ಓದುವ ಮೂಲಕ ಸಾಧ್ಯ ‘ ಎಂದು. ಅನುವಾದಕರಿಗೆ ಭಾಷೆಯ ಸಂಪೂರ್ಣ ಜ್ಞಾನದ ಜತೆಗೆ ಆ ಭಾಷೆಯನ್ನಾಡುವ ಜನರ ಸಂಸ್ಕೃತಿ, ಆಚಾರ ವಿಚಾರಗಳು, ಅವರಾಡುವ ವಿಶಿಷ್ಟ ನುಡಿ , ನುಡಿಗಟ್ಟು ಮತ್ತು ಗಾದೆಮಾತುಗಳು, ಅಲ್ಲಿನ ಭೌಗೋಳಿಕ ಪರಿಸರ, ಜನರ ಸ್ವಭಾವ, ವರ್ತನೆ-ಹೀಗೆ ನೂರಾರು ವಿಚಾರಗಳ ಆಳವಾದ ಅರಿವಿರಬೇಕು. ಅದಕ್ಕಾಗಿ ಅನುವಾದಕರಾಗ ಬಯಸುವವರಲ್ಲಿ ಅವಲೋಕನ ಮತ್ತು ಚಿಂತನ ಗುಣಗಳು ಸದಾ ಸಕ್ರಿಯವಾಗಿರಬೇಕು. ತಾವು ಅನುವಾದಿಸುವ ಎರಡು ಭಾಷೆಗಳ ಮೇಲಿನ ಪ್ರಭುತ್ವವನ್ನು ಮೊನಚುಗೊಳಿಸುವ ಆಸಕ್ತಿ ಮತ್ತು ಪರಿಶ್ರಮಗಳತ್ತ ಅವರ ಗಮನವಿರಬೇಕು. ಜಾಗತೀಕರಣಗೊಂಡ ಇಂದಿನ ಜಗತ್ತಿನಲ್ಲಿ ಅನುವಾದಕರ ಅಗತ್ಯ ಎಂದಿಗಿಂತ ಹೆಚ್ಚು ಗುರುತಿಸಲ್ಪಟ್ಟಿದೆ..ಅದೇ ರೀತಿ ಸಾಕಷ್ಟು ಕೃತಿಗಳೂ ಅನುವಾದಗೊಳ್ಳುತ್ತಿವೆ.ಕುವೆಂಪು ಭಾಷಾ ಭಾರತಿ, ಭಾರತೀಯ ಭಾಷಾ ಸಂಸ್ಥಾನ, ಕೇಂದ್ರ ಸಾಹಿತ್ಯ ಅಕಾಡೆಮಿ, ಮತ್ತು ಇನ್ನೂ ಅನೇಕ ಖಾಸಗಿ ಪ್ರಕಾಶನ ಸಂಸ್ಥೆಗಳು ಅನುವಾದಿತ ಕೃತಿಗಳನ್ನು ಹೊರತರುತ್ತಿವೆ. ನಾನು ಈ ಅಂಕಣದಲ್ಲಿ ನನ್ನ ಗಮನ ಸೆಳೆದ ಕೆಲವು ಅನುವಾದಿತ ಕೃತಿಗಳ ಸ್ಥೂಲ ಪರಿಚಯವನ್ನಷ್ಟೇ ಮಾಡುತ್ತೇನೆ. ಅವುಗಳ ರಕ್ಷಾಪುಟ ಮತ್ತು ಪ್ರಕಟಣಾ ವಿವರಗಳನ್ನು ನೀಡುವ ಮೂಲಕ ನೀವು ಅವುಗಳನ್ನು ಸಂಪಾದಿಸಿ ಓದುವ ಆಸಕ್ತಿ ತೋರಿಸಬೇಕೆಂಬುದು ನನ್ನ ಈ ಅಂಕಣದ ಉದ್ದೇಶ. ************************************* ಲೇಖಕರ ಬಗ್ಗೆ:- ಡಾ.ಪಾರ್ವತಿ ಜಿ.ಐತಾಳ್ ಕುಂದಾಪುರದ ಭಂಡಾರ್ ಕಾರ್ಸ್ ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ಇದೀಗ ನಿವೃತ್ತಿ ಜೀವನವನ್ನು ಸಾಹಿತ್ಯದಲ್ಲಿ ಪ್ರವೃತ್ತರಾಗಿ ಕಳೆಯುತ್ತಿದ್ದಾರೆ. ಕನ್ನಡ, ಇಂಗ್ಲಿಷ್, ಹಿಂದಿ, ತುಳು ಮತ್ತು ಮಲೆಯಾಳ ಭಾಷೆಗಳ ಮೇಲೆ ಹಿಡಿತ ಸಾಧಿಸಿರುವ ಇವರು ಈ ಎಲ್ಲ ಭಾಷೆಗಳ ನಡುವೆ ೪೦ಕ್ಕೂ ಹೆಚ್ಚು ಸಾಹಿತ್ಯಕ ಮೌಲ್ಯಗಳುಳ್ಳ ಕಾದಂಬರಿ, ಸಣ್ಣ ಕಥೆ, ನಾಟಕ, ವೈಚಾರಿಕ ಕೃತಿಗಳನ್ನು ಅನುವಾದಿಸಿದ್ದಾರೆ. ಸ್ವತಂತ್ರವಾಗಿಯೂ ಇಂಗ್ಲಿಷ್, ಕನ್ನಡ,ತುಳು ಮತ್ತು ಮಲೆಯಾಳಗಳಲ್ಲಿ ೨೭ಕೃತಿಗಳನ್ನು ಪ್ರಕಟಿಸಿದ್ದಾರೆ. ಕುವೆಂಪು ಭಾಷಾ ಭಾರತಿಯಿಂದ ಶ್ರೇಷ್ಠ ಅನುವಾದಕಿ ಎಂಬ ನೆಲೆಯಲ್ಲಿ ಗೌರವ ಪ್ರಶಸ್ತಿ ಪಡೆದಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಸಾಹಿತ್ಯಶ್ರೀ ಪ್ರಶಸ್ತಿಯನ್ನೂ ಕೇರಳದಿಂದ ಕಾಳಿಯತ್ತ್ ದಾಮೋದರನ್ ಪ್ರಶಸ್ತಿಯನ್ನೂ ಪಡೆದಿದ್ದಾರೆ. A Comparative Study of the Fictional Writings of Shivaram Karanth and Thakazhi Shivashankara Pillai from a Feminist Perspective ಎಂಬ ಇವರ ಪಿ.ಹೆಚ್.ಡಿ ಮಹಾಪ್ರಬಂಧಕ್ಕೆ ಕಣ್ಣೂರು ವಿಶ್ವವಿದ್ಯಾ ನಿಲಯವು ಡಾಕ್ಟರೇಟ್ ಪದವಿ ನೀಡಿದೆ

Read Post »

You cannot copy content of this page

Scroll to Top