ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ನಾನೂ ರಾಧೆ

ಕವಿತೆ

ಪೂರ್ಣಿಮಾ ಸುರೇಶ್

ನಮ್ಮೂರಿನ ತುಂಬೆಲ್ಲಾ
ಅವರದೇ ಮಾತು- ಕತೆ
ಕಾಡಿದೆ ಅವರ ಕಾಣುವ
ತವಕದ ವ್ಯಥೆ

ಆ ಹಾಲು ತುಳುಕುವ ಕೊಡ
ಮೊಸರ ಮಡಕೆ
ಅವಳ ಅರ್ಧ ಬಿಚ್ಚಿದ ಮುಡಿ
ನವಿಲು ನಡಿಗೆಯ ಅಡಿ
ಅವಳ ಮಿದುನುಡಿಯ ಚೆದುರು
ಆ ವಿಜನ ಬೀದಿ
ದಟ್ಟನೆ ಬಿದಿರ ಮೆಳೆ

ಯಮುನೆಯ ಕಚಗುಳಿ ಇಡುವ
ಆ ಮೆಲ್ಲೆಲರು
ಅವನ ಗುನುಗಿನ ಬೆರಳು
ಅವಳ ಕಣ್ಣವೀಣೆಯ ಮೇಲೆ
ಅವಳ ಅಕ್ಷತ ಬಿಂಬ
ಅವನ ದಿಟ್ಟಿಯನು ತೊಳಗುವ
ಬೆಳಕಿನ ಕಂಬ

ಎಲ್ಲವನೂ ಇಣುಕಿ
ಕಾಣುವ ಬಯಕೆ
ಈ ಕಾತರ ದಗ್ಧ ಮನಕೆ,
ಗೋಕುಲದ ಬಾಗಿಲಲ್ಲೆ
ಒಲವ ಘಮಲು
ಪರಿಸರದ ತುಂಬ
ರಾಸಲೀಲೆಯ ಅಮಲು
ಒಳಗೆ ಸುಳಿದಾಡಿದೆ
ಅಲ್ಲಲ್ಲಿ ಎಡತಾಕಿದೆ
ರಾಧಾಕೃಷ್ಣರ ಅರಸುತ

ಸಿಕ್ಕಿದ ಕೃಷ್ಣ ಮುಗುಳ್ನಕ್ಕ
ಹಾಡ ಜೇನಾಗಿ
ಎದೆಯ ಒಳಹೊಕ್ಕ
ಹಾಯೆನಿಸಿದೆ ಮನದೊಳಗೆ
ಪ್ರೇಮ ಕೊಡೆ ಆಸರೆ ಮಳೆಯೊಳಗೆ

ಈಗ ಕೃಷ್ಣನ
ಪ್ರೇಮ ಕಾವ್ಯಕ್ಕೆ
ನಾನೂ ರಾಧೆ.

**************************

About The Author

8 thoughts on “ನಾನೂ ರಾಧೆ”

Leave a Reply

You cannot copy content of this page

Scroll to Top