ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ

ಬಾಯಿಬಡುಕ ಸಾಮಾಜಿಕ ಮಾಧ್ಯಮಗಳು

ಲೇಖನ ನೂತನ ದೋಶೆಟ್ಟಿ            ಭಾರತದಲ್ಲಿ ಅಸಹನೆ ಹೆಚ್ಚುತ್ತಿದೆ ಎನ್ನುವ ಮಾತು ಇತ್ತೀಚಿನ ದಿನಗಳಲ್ಲಿ ಎಲ್ಲೆಡೆ ಕೇಳಿಬರುತ್ತಿರುವುದಷ್ಟೇ ಅಲ್ಲ ;ಅದನ್ನು ಪುಷ್ಟೀಕರಿಸುವ ಅನೇಕ ಸಂಗತಿಗಳು ಮೇಲಿಂದ ಮೇಲೆ ನಡೆಯುತ್ತಿವೆ. ಮೊದ ಮೊದಲು ಇಂತಹ ಘಟನೆಗಳು ನಡೆದಾಗ  ಆಘಾತವಾಗುತ್ತಿತ್ತು , ವೇದನೆಯಾಗುತ್ತಿತ್ತು . ಕೆಲ ಸಮಯದ ನಂತರ ಅದರಲ್ಲಿ ಕ್ರೂರತೆಯ ಛಾಯೆ ಇಣುಕಿದಾಗ ಕಳವಳವಾಗುತ್ತಿತ್ತು ;ಆಶ್ಚರ್ಯವೂ ಆಗುತ್ತಿತ್ತು. ಈಗ ಗೊಂದಲವಾಗುತ್ತಿದೆ ;ಯಾವುದು, ಯಾರಿಗೆ, ಯಾಕಾಗಿ ಅಸಹನೆಯಾಗುತ್ತದೆ ಎನ್ನುವುದನ್ನು ತಿಳಿಯಲಾಗದೆ ! ಅಭಿಪ್ರಾಯ ಬೇಧಗಳ ಹಿನ್ನೆಲೆಯಲ್ಲಿ ಕಳೆದ ಮೂರು-ನಾಲ್ಕು ವರ್ಷಗಳಲ್ಲಿ ನಡೆದ ಕೆಲವು ‘ಹತ್ಯೆಗಳು’ ಯಾಕಾಗಿ ನಡೆದವು ಹಾಗೂ ಅವುಗಳನ್ನು ಮಾಡಿದ ಅಥವಾ ಮಾಡಿಸಿದವರಿಗೆ ಅದರಿಂದ ಆದ ಲಾಭವೇನು ?ಎನ್ನುವುದು ಇನ್ನೂ ಪ್ರಶ್ನಾರ್ಥಕವಾಗಿದೆ. ಈ ಹತ್ಯೆಗಳು ಸಮಾಜದಲ್ಲಿ ಒಂದು ರೀತಿಯ ಸಂಚಲನವನ್ನು ಉಂಟುಮಾಡಿ ದೌರ್ಜನ್ಯವನ್ನು ಪ್ರಶ್ನಿಸುವ ದಿಟ್ಟ ಯುವ ಸಮುದಾಯವೊಂದನ್ನು ಸಂಘಟಿಸಿದ್ದು ಆ ಸಂದರ್ಭದಲ್ಲಿ ಆದ ಗುಣಾತ್ಮಕ ಬೆಳವಣಿಗೆ ಅಷ್ಟೇ ಅಲ್ಲ. ಪಾರಂಪರಿಕ ಮಾಧ್ಯಮಗಳಲ್ಲಿ ಕಣ್ಮರೆಯಾಗುತ್ತಿರುವ ಸಾಮಾಜಿಕ ಕಳಕಳಿಯನ್ನು, ಅಭಿವ್ಯಕ್ತಿ ಸ್ವಾತಂತ್ರ್ಯದ ಘನತೆಯನ್ನು ಎತ್ತಿ ಹಿಡಿಯುವ ಮೂಲಕ ಅದನ್ನು ತಮ್ಮ ಕೈಗೆ ಸಾಮಾಜಿಕ ಮಾಧ್ಯಮಗಳು ತೆಗೆದುಕೊಂಡಿದ್ದು ಇನ್ನೊಂದು ಗುಣಾತ್ಮಕ ಬೆಳವಣಿಗೆ. ಆದರೆ ದುರದೃಷ್ಟವಶಾತ್‌ ಅದು ಹಾಗೆ ಉಳಿಯಲಾರದೇ ಕೆಚ್ಚು, ರೋಷಾವೇಶ ಹಾಗೂ ಹುಂಬತನಕ್ಕೆ ಇಳಿಯಿತು.ಇದಕ್ಕೆ ಸಾಹಿತ್ಯ ಸಮಾವೇಶಗಳಂಥ ಬೌದ್ಧಿಕ ಪ್ರಜ್ಞೆಯ ತಾಣಗಳೂ ಸಾಕ್ಷಿಯಾದವು.ಈ ಸಂದರ್ಭಗಳಲ್ಲೂ ಸಾಮಾಜಿಕ ಮಾಧ್ಯಮಗಳ ಪಾರುಪತ್ಯವೇ ಎಗ್ಗಿಲ್ಲದೇ ನಡೆಯಿತು. ಮಾತೆತ್ತಿದರೆ ಸಮಾನತೆ, ಸ್ವಾತಂತ್ರ್ಯ, ಮಹಿಳಾಪರತೆ ಎಂದು ಹುಯಿಲೆಬ್ಬಿಸುವ ಈ ಸಾಮಾಜಿಕ ಮಾಧ್ಯಮಗಳು ಈಗ ಎಲ್ಲರನ್ನೂ, ಎಲ್ಲವನ್ನೂ ಪ್ರಶ್ನಿಸುವ ಧಾರ್ಷ್ಟ್ಯ  ತೋರಿಸುತ್ತಿವೆ. ಸಿದ್ಧಗಂಗಾ ಶ್ರೀಗಳ ಕುರಿತು ನಡೆದ ಸಂವಾದ ಇದಕ್ಕೆ ಒಂದು ಉದಾಹರಣೆ.ಒಂದು ಶತಮಾನದ ಕಾಲ ಜಾತಿ, ಮತ, ಲಿಂಗ ಬೇಧಗಳಿಲ್ಲದ ಸೇವೆಯನ್ನು ಇವು ಪ್ರಶ್ನಿಸಿದ್ದವು ಆ ಪ್ರಶ್ನೆಗಳಾದರೂ ಎಂತಹವು ?ಅವರೇನುಜಾತಿ ಪದ್ಧತಿಯ ಕುರಿತು ಒಂದಾದರೂ ಹೇಳಿಕೆ ನೀಡಿದ್ದರೆ? ಸ್ತ್ರೀ  ಸಮಾನತೆಯನ್ನು ಎತ್ತಿ ಹಿಡಿದಿದ್ದರೆ ?ಎಂಬ ತಮ್ಮ ಮೂಗಿನ ನೇರದ ಪ್ರಶ್ನೆಗಳು.ಇಂತಹ ಪ್ರಶ್ನೆಗಳನ್ನು ಅಥವಾ ಈ ಮಾಧ್ಯಮಗಳು ಬಯಸುವ ಪ್ರಶ್ನೆಗಳನ್ನು ಕೇಳಿದವರು ಮಾತ್ರ ಮಹೋನ್ನತರೆ ? ಪ್ರತಿರೋಧವೆಂದರೆ ಗಂಟಲು ಬಿರಿಯುವಂತೆ ಕೂಗುವ ಮೂಲಕ, ವೇದಿಕೆಗಳಲ್ಲಿ ಆರ್ಭಟಿಸುವ ಮೂಲಕ, ಆಯಕಟ್ಟಿನ ಸ್ಥಳಗಳಲ್ಲಿ ಧರಣಿ ಮಾಡುವ ಮೂಲಕ, ಮೊದಲಾದ ಜನಪ್ರಿಯ ಮಾದರಿಗಳು ಮಾತ್ರವೇ? ಇಂಥ ಪ್ರತಿರೋಧಗಳ ಮೂಲಕ ಏನನ್ನು ಸಾಧಿಸಬಹುದು ಎಂಬುದನ್ನು ರೈತ ಚಳುವಳಿಗಳು, ಮಹಿಳಾಪರ ಚಳುವಳಿಗಳು, ಅಂಗನವಾಡಿ ಕಾರ್ಯಕರ್ತೆಯರು, ಗಾರ್ಮೆಂಟ್ ಉದ್ಯೋಗಿಗಳು ಕಾಲಕಾಲಕ್ಕೆ ಈ ನಾಡಿಗೆ ತೋರಿಸಿಕೊಟ್ಟಿದ್ದಾರೆ. ಆದರೆ ಎಲ್ಲ ಹೋರಾಟಗಳೂ ಇದೇ ರೀತಿ ಇರಲು ಸಾಧ್ಯವೆ ಎಂಬ ಪ್ರಶ್ನೆಯನ್ನು ಈ ಮಾಧ್ಯಮಗಳು ಹಾಕಿಕೊಳ್ಳುವುದಿಲ್ಲ. ಇದೇ ಮಾತನ್ನು ಅವು ಸಾಹಿತಿಗಳ ಬಗ್ಗೆಯೂ ಆಡುತ್ತವೆ. ಇಂಥ ಪಶ್ನೆಗಳನ್ನು ಸಾಮಾಜಿಕ ಮಾಧ್ಯಮಗಳ ಮೂಲಕ ಹರಿಯಬಿಡುವವರು ತಮ್ಮ ಸಾಧನೆಯನ್ನೂ ಗಮನಿಸುವುದು ಒಳಿತು.ಬಸವ, ಬುದ್ಧ, ಅಂಬೇಡ್ಕರ್‌ ಅವರೂ ಕೂಡ ವಿಶಾಲ ದೃಷ್ಟಿಕೋನವನ್ನು ಹೊಂದಿದ್ದು ಸಂಕುಚಿತತೆಯನ್ನು ಪ್ರಶ್ನಿಸಿದರು. ಹಾಗೆ ಪ್ರಶ್ನಿಸುವಾಗ ಅವರು ಅಸಹನೆಯನ್ನು ತೋರಿಸಿರಲಿಲ್ಲ ಹಾಗೂ ಅವರು ಸಮಷ್ಟಿಗಾಗಿ ಪ್ರತಿಪಾದಿಸುತ್ತಿದ್ದರು. ಒಬ್ಬರನ್ನು ಹೀಗಳೆವ, ಕುಬ್ಜರನ್ನಾಗಿಸುವ ಮೂಲಕ ಹಿರಿಮೆಯನ್ನು , ಮೇಲ್ಮೆಯನ್ನು ಸಾಧಿಸ ಹೊರಟಿರುವ ಈ ಸಾಮಾಜಿಕ ಮಾಧ್ಯಮಗಳು ಇಂದು ಅಸಹ್ಯ ಹುಟ್ಟಿಸುವರೀತಿಯಲ್ಲಿ ಬೆಳೆಯುತ್ತಿವೆ. ಹಾಗೆ ನೋಡಿದರೆ ರೆಸಾರ್ಟುಗಳಲ್ಲಿ ಕಚ್ಚಾಡುವ, ಬಡಿದಾಡುವ, ರಾಜಕೀಯ ಮೇಲ್ಮೆ ಸಾಧಿಸಲು ಕೆಸರೆರಚಾಡುವ ರಾಜಕಾರಣಿಗಳಾಗಲಿ, ಇವರಿಗಾಗಲಿ ಯಾವ ವ್ಯತ್ಯಾಸವಿದೆ ? ಈಗಂತೂ ಎಲ್ಲದಕ್ಕೂ ಪರ-ವಿರೋಧಿ ಚರ್ಚೆಗಳು ಕ್ಷಣಾರ್ಧದಲ್ಲಿ ಭೂಮಿಯನ್ನೇ ಸುತ್ತಬಲ್ಲಷ್ಟು ಸಶಕ್ತವಾಗಿವೆ. ಈ ಚರ್ಚೆಗಳಲ್ಲಿ ಅಸಹನೆ ಒಡೆದು ಕಾಣುತ್ತಿರುವುದು ಅಪಾಯಕಾರಿ ಬೆಳವಣಿಗೆ.ಕಾಫಿಯೋ ಚಹಾವೋ ಯಾವತ್ತಾದರೂ ಚರ್ಚೆಗೊಳಗಾಗಿತ್ತೇ?ಇದು ಚರ್ಚಿಸುವ ವಿಷಯವೇ? ಆದರೂ ಚರ್ಚೆಯನ್ನು ಹರಿಯಬಿಡುವುದು. ಎಲ್ಲವೂ ಸ್ವಾರಸ್ಯವಾಗಿಯೇ ಸಾಗಿದರೆ ಅಡ್ಡಿಯಿಲ್ಲ. ಆದರೆ ಒಂದು ಸಣ್ಣ ಮಾತು ಹೇಗೆ ಕಿಚ್ಚು ಹತ್ತಿ ಉರಿಸಬಲ್ಲದು ಎಂಬುದಕ್ಕೆ ನಮ್ಮೆದುರು ಅನೇಕ ನಿದರ್ಶನಗಳಿವೆ. ಇಂದಿನ ಆಧುನಿಕ ಮಾಧ್ಯಮಗಳು ಈ ಕಾಲಕ್ಕೆ ವರದಾನವಾಗಿ ದೊರೆತಂಥವು.ಇವುಗಳನ್ನು ಬಳಸುವ ಜಾಣ್ಮೆಯನ್ನು ರೂಢಿಸಿಕೊಳ್ಳುವುದೊಳಿತು. ಅಭಿಪ್ರಾಯ ಬೇಧಗಳು ಪ್ರಜಾಸತ್ತಾತ್ಮಕ ರಾಷ್ಟ್ರದ ಹೆಗ್ಗುರುತು.ನಮ್ಮ ಸಂವಿಧಾನವು ಮೂಲಭೂತ ಹಕ್ಕಿನಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನೀಡಿದೆ.ಆದರೆ ಇಂದು ಸಮಾಜದ ನಡೆ ಅಭಿವ್ಯಕ್ತಿ ಸ್ವಾತಂತ್ರ್ಯದ ನೆಲೆಯಲ್ಲಿ ಬಹಳವೇ ಸೂಕ್ಷ್ಮವಾಗುತ್ತಿದೆ. .ದೃಷ್ಟಿ ಬಹಳ ಸಂಕುಚಿತವಾಗುತ್ತಿದೆ.ಬೇಧಗಳು ವ್ಯಕ್ತಿಗತವಾಗಿ, ಗುಂಪುಗಳಿಗೆ ಅನುಗುಣವಾಗಿ, ಸಮುದಾಯಗಳಿಗೆ ಸಂಬಂಧಿಸಿದಂತೆ ತೀರ ಸಂಕುಚಿತವಾಗುತ್ತಿವೆ. ಇದು ನಮ್ಮ ಸಂವಿಧಾನ ನೀಡಿರುವ  ಮಾದರಿಯ ಸ್ವಾತಂತ್ರ್ಯ  ಅಲ್ಲ. ಬಾಯಿಬಡುಕತನಕ್ಕೂಅಭಿವ್ಯಕ್ತಿ ಸ್ವಾತಂತ್ರ್ಯಕ್ಕೂ ವ್ಯತ್ಯಾಸವಿದೆ ಎಂದು ಈ ಸಾಮಾಜಿಕ ಮಾಧ್ಯಮಗಳು ಅರಿಯಬೇಕಾಗಿದೆ.                             *************************

ಬಾಯಿಬಡುಕ ಸಾಮಾಜಿಕ ಮಾಧ್ಯಮಗಳು Read Post »

ಕಾವ್ಯಯಾನ

ಕಾವ್ಯವಾಗಿ ಕರಗುತ್ತೇನೆ

ಕವಿತೆ ಪೂಜಾ ನಾರಾಯಣ ನಾಯಕ ನಾನರಿಯಲಾಗದ  ಶೂಲೆಗಳೇ ಆಪ್ತವಾಗಿ ನನ್ನನ್ನು ಬಿಗಿದಪ್ಪಿಕೊಂಡಾಗ ಬದುಕು ಬರಡಾಗಿ ಬೆಂಬಿಡದೆ ಕಾಡಿದಾಗ ನನಗನಿಸುತ್ತದೆ, ನಾನೊಮ್ಮೆ ಜ್ವಾಲಾಮುಖಿಯಂತೆ ಭುಗಿಲೇಳಬೇಕು! ಕಳೆದುಕೊಂಡ ಮಧುರವಾದ ಪ್ರೇಮ ನೆನಪಿನಾಳದಲಿ ಪುಟಿದೆದ್ದು ಕೂತಾಗ ನನ್ನ ನಿಟ್ಟುಸಿರಿನಲೂ ಮಿಣುಕು ಹುಳುವಂತೆ ಮಿನುಗ ತೊಡಗಿದಾಗ ನನಗನಿಸುತ್ತದೆ, ನಾನೊಮ್ಮೆ ಅಗ್ನಿ ಪರ್ವತದಂತೆ ಧಗಧಗಿಸಿ ಉರಿಯಬೇಕು! ಕಗ್ಗತ್ತಲ ವೇಳೆಯಲಿ ನಿಶ್ಯಬ್ದ ನೂರಾರು ಬಯಕೆಗಳ ಹೊತ್ತ ದೂರ ದೂರ ನೇರ ಹಾದಿಗಳಲಿ ನೀರವತೆಯೇ ಮುಗುಳ್ನಕ್ಕಾಗ ನನಗನಿಸುತ್ತದೆ, ನಾನೊಮ್ಮೆ ಶಿವನಂತೆ ರುದ್ರವಾಗಿ ನರ್ತಿಸಬೇಕು! ಏಕಾಂತದಲಿ ಮರೀಚಿಕೆಯಂತ ಕನಸುಗಳು ಎಡಬಿಡದೆ ತಿವಿದಾಗ ಹಿಂದಿನ ಕಹಿ ನೆನಪೇ ತುಡಿದಾಗ ಕಂಬನಿಯೇ ಬೇರುರಿದಾಗ ನನ್ನೆದೆಯ ಶರಧಿಯಲಿ ಮತ್ತೆ ಮತ್ತೆ ಪ್ರವಾಹ ಬಂದೆರಗಿದಾಗ ನನಗನಿಸುತ್ತದೆ, ನಾನು ಹೀಗೆಯೆ ಕಾವ್ಯವಾಗಿ   ಮಂಜುಗಡ್ಡೆಯಂತೆ ಕರಗಿಬಿಡಬೇಕು!. **************

ಕಾವ್ಯವಾಗಿ ಕರಗುತ್ತೇನೆ Read Post »

ಕಾವ್ಯಯಾನ, ಗಝಲ್

ಗಝಲ್

ಗಝಲ್ ಎ.ಹೇಮಗಂಗಾ ಕಡುಗಪ್ಪು ಕುರುಳ ನಡುವೆ ಮೊಗ ಚಂದಿರನಂತೆ ಹೊಳೆದಿದೆ ಗೆಳತಿಬಿರಿದ ಅಧರಗಳ ನಡುವೆ ಮಿಂಚು ನಗು ಹೊರಹೊಮ್ಮಿದೆ ಗೆಳತಿ ಅಪೂರ್ವ ಸೌಂದರ್ಯ ಬಣ್ಣಿಸಲು ಕವಿಯಾಗುವನು ನಿನ್ನ ನಲ್ಲಸೆಳೆವ ಕಾಡಿಗೆ ಕಂಗಳ ಮೇಲಿನ ಹುಬ್ಬು ಕಬ್ಬಿನಂತೆ ಬಾಗಿದೆ ಗೆಳತಿ ಆಗಸದತ್ತ ದಿಟ್ಟಿ ನೆಟ್ಟ ನೋಟದಿ ಅದಾವ ಭಾವ ತುಂಬಿದೆಯೋವಿಚಲಿತಳಾಗದೇ ನೀ ಕುಳಿತ ಭಂಗಿ ಮೋಹಕವಾಗಿ ಕಂಡಿದೆ ಗೆಳತಿ ನಿನ್ನವನ ಚರಣಕೆ ಸಮರ್ಪಿಸಲು ಹೂಗಳ ಗುಚ್ಛ ಹಿಡಿದಿಹೆ ಏನು?ಇಹದ ಅರಿವಿಲ್ಲದೇ ನಗುತಿಹ ಅಭಿಸಾರಿಕೆ ನೀನಾದಂತಿದೆ ಗೆಳತಿ ತುಸು ಹೊತ್ತು ತಾಳಿದರೆ ಸಾಕು ಬಂದೇ ಬರುವನು ಪ್ರಿಯತಮಪ್ರತಿಕ್ಷಣವೂ ಮೆಲುಕು ಹಾಕುವ ಒಡನಾಟದ ಸವಿ ಕಾದಿದೆ ಗೆಳತಿ *************************

ಗಝಲ್ Read Post »

ಇತರೆ, ಲಹರಿ

‘ಎಳೆ ಹಸಿರು ನೆನಪು ..’

ಲಹರಿ ವಸುಂಧರಾ ಕದಲೂರು    ಆಗೆಲ್ಲಾ ಮೂರ್ನಾಲ್ಕು ವರ್ಷಗಳಿಗೊಮ್ಮೆ ಮನೆಯ ಸಾಮಾಗ್ರಿಗಳನ್ನು ಗಂಟುಮೂಟೆ ಕಟ್ಟಿಕೊಂಡು ನಮ್ಮ ಕುಟುಂಬ ಊರಿಂದೂರಿಗೆ ಪ್ರಯಾಣಿಸುತ್ತಿತ್ತು. ನಾನು ಸಣ್ಣವಳಿದ್ದಾಗಿನ ವಿಷಯವಿದು. ಈ ಸಂಚಾರದ ನಿರಂತರತೆಗೆ ನಮ್ಮಪ್ಪ ಸರಕಾರಿ ನೌಕರರಾಗಿದ್ದು ಹಾಗೂ ವರ್ಗಾವಣೆಯನ್ನು ಅವರು ಸಹಜವಾಗಿ ಸ್ವೀಕರಿಸುತ್ತಿದ್ದದ್ದು ಪ್ರಮುಖವಾಗಿತ್ತು ಎನ್ನುವುದು ನನಗೀಗ ಅರ್ಥವಾಗುತ್ತಿದೆ.          ಹೀಗೆ ಪದೇ ಪದೇ ವರ್ಗವಾಗುತ್ತಿದ್ದರಿಂದ ನನ್ನ ಶಾಲಾ ಶಿಕ್ಷಣ ಮೈಸೂರು, ಹಾಸನ ಜಿಲ್ಲೆಗಳ ಹಲವು ಹಳ್ಳಿಗಳ ಸರಕಾರಿ ಶಾಲೆಗಳಲ್ಲಿ ನಡೆಯಿತು. ಮತ್ತೆ ಮತ್ತೆ  ಹೊಸ ಶಾಲೆ, ಹೊಸ ಗೆಳೆತನ, ಹೊಸ ಪರಿಸರ. ಈ ಎಲ್ಲವೂ ಆ ಬಾಲ್ಯದಲ್ಲಿ ಸಾಹಸಮಯವಾಗಿ ಕಾಣುತ್ತಿತ್ತು. ಅಂದಿನ ಸೊಗಸಿನ ದಿನಗಳ ಒಂದೆರಡು ಅನುಭವಗಳನ್ನು ಈಗ ಸುಮ್ಮನೆ ನೆನಪಿಸಿಕೊಂಡರೆ  ಸಾಕೂ ಮನಸ್ಸು ಜಿಗಿಯುವ ಹುಲ್ಲೆಮರಿಯಾಗುತ್ತದೆ.   ಆ ದಿನಗಳಲ್ಲಿ ನಮ್ಮದು ತೀರಾ ಹಗುರವಾದ ಬಟ್ಟೆಯಿಂಜ ಮಾಡಿದ ಪಾಟೀಚೀಲ. ಸ್ಲೇಟು, ಬಳಪ, ಪಠ್ಯಪುಸ್ತಕಗಳಿಗಿಂತಲೂ ಹೆಚ್ಚಾಗಿ ವಿವಿಧ ನಮೂನೆಯ ಕಲ್ಲು, ಮಿರುಗುವ ಬಟ್ಟೆ ಚೂರು, ಹಕ್ಕಿ ಪುಕ್ಕ, ಯಾವುದೋ ಹಣ್ಣು- ಕಾಯಿ-ಕಡ್ಡಿ ಚೂರು ಹೀಗೆ ಏನೇನೂ ತುಂಬಿಕೊಂಡು ಅದು ನಮ್ಮ ಅತೀ ಜೋಪಾನ ಮಾಡುವ ಆಸ್ತಿಯಾಗಿ ನಮಗದೇ ಬ್ರಹ್ಮಾಂಡವಾಗುತ್ತಿತ್ತು.  ಯಾರಾದರೂ ಹಲವು ಕೋಟಿ ರೂಪಾಯಿ ಕೊಡುತ್ತೇವೆ ಆ ಚೀಲವನ್ನು ನಮಗೆ ಕೊಡಿ ಎಂದರೆ, ಸಾರಾಸಗಟಾಗಿ ಅಷ್ಟೂ ನಗದನ್ನು ನಿರಾಕರಿಸಲು ಕಾರಣವಾಗಬಹುದಾದ ಅತ್ಯಮೂಲ್ಯ ವಸ್ತುಗಳು ಅದರಲ್ಲಿರುತ್ತಿದ್ದವು. (ಕೋಟಿಗಿರುವ ಸೊನ್ನೆ ಎಷ್ಟೆಂದು, ಅದರ ಮೌಲ್ಯ ಎಷ್ಟೆಂದು ತಾನೇ ಆಗ ಗೊತ್ತಾಗುತ್ತಿತ್ತೇ!?)     ಅದು ಒತ್ತಟ್ಟಿಗಿರಲಿ, ಸದಾ ಆರೇಳು ಮಕ್ಕಳ ಜೊತೆ ಸೇರಿ ಶಾಲಾಪಠ್ಯದೊಡನೆ ಹಲವು ಪರಿಕರಗಳನ್ನು ಹೊತ್ತು ಶಾಲೆಗೆ ಹೋಗುತ್ತಿದ್ದ ನಮ್ಮ ತಂಡವು ಯಾವ ‘ಸಾರ್ಥ’ಕ್ಕೂ (ವ್ಯಾಪಾರೀ ತಂಡ) ಕಡಿಮೆ ಇರುತ್ತಿರಲಿಲ್ಲ. ದಾರಿ ತುಂಬೆಲ್ಲಾ ಗಿಜಿಬಿಜಿ.. ಅದೇನು ಮಾತಾಡಿಕೊಳ್ಳುತ್ತಿದ್ದೆವೋ…!   ಬಟ್ಟೆಯಿಂದ ಮಾಡಿದ ಪಾಟೀಚೀಲದ ಹಿಡಿಕೆಯನ್ನು ತಲೆಯ ಮೇಲೆ ಹಾಕಿಕೊಂಡು, ಬೆನ್ನ ಹಿಂದೆ ಇಳಿಬೀಳಿಸಿ ನಡಿಗೆಯ ಲಯಕ್ಕೆ ಚೀಲವನ್ನು ಬಡಿದುಕೊಳ್ಳುತ್ತಾ, ಕೆಲವೊಮ್ಮೆ ಜೋಳಿಗೆಯಂತೆ ಹೆಗಲಿನಿಂದ ಇಳಿಸಿಕೊಂಡು, ಮತ್ತೆ ಕೆಲವೊಮ್ಮೆ ನೆತ್ತಿಯ ಮೇಲೇರಿಸಿಕೊಂಡು, ಮುಂದಿನ ಬಾರಿ ಎದೆಯ ಮುಂದಿನಿಂದ ಕುತ್ತಿಗೆಗೆ ನೇತು ಬೀಳಿಸಿಕೊಂಡು, ಸೊಂಟ ಕೈಗಳಿಗೆ ಸುತ್ತಿಕೊಂಡು, ಮೊಣಕಾಲುಗಳಿಂದ  ಚೀಲದೊಳಗೆ ಇದ್ದ ಸ್ಲೇಟನ್ನು ಬಡಿಯುತ್ತಾ ಸಾಗುತ್ತಿದ್ದಾಗ ಅದರೊಳಗಿರುವುದು ‘ಸಾಕ್ಷಾತ್ ಸರಸ್ವತಿ ಸ್ವರೂಪ’ ಎನ್ನುವುದು ಸಾಸುವೆಯ ಕಾಳಷ್ಟೂ ನೆನಪಾಗುತ್ತಿರಲಿಲ್ಲವಲ್ಲಾ ! ಅಂಥಾ ಅತಿ ಮುಗ್ಧ ಸೊಗಸುಗಾರಿಕೆಯ ಅನುಭವ ಆರೇಳು ಕೇಜಿ ಭಾರ ತೂಗುವ ಶಾಲಾ ಬ್ಯಾಗ್  ಹಾಗೂ ಮನೆಯ ಮುಂದೆಯೇ ಶಾಲಾ ವಾಹನಗಳನ್ನು ಏರಿಳಿಯುವ ನಮ್ಮೀ ಮಕ್ಕಳಿಗೆಲ್ಲಿ ಸಿಗಬೇಕು ಹೇಳಿ?       ನಾಲ್ಕನೇ ತರಗತಿಯ ವಿದ್ಯಾಭ್ಯಾಸವು ಹಾಸನ ಜಿಲ್ಲೆಯ ಅರಕಲಗೂಡು ಎಂಬ ತಾಲೂಕಿನಲ್ಲಾಯ್ತು. ಅದು ಆ ಕಾಲಕ್ಕಿನ್ನೂ ದೊಡ್ಡ ಹಳ್ಳಿಯಂತೆ ಇತ್ತೇ ಹೊರತು ಪಟ್ಟಣದ ಕುರುಹು ಅಷ್ಟಾಗಿ ಕಾಣುತ್ತಿರಲಿಲ್ಲ. ಮಧ್ಯಾಹ್ನದ ಬಿಸಿ ಊಟ ಸವಿದದ್ದು ಅಲ್ಲಿನ ಶಾಲೆಯಲ್ಲಿಯೇ ಮೊದಲು. ಜೊತೆಗೆ, ಚೈತ್ರ, ವೈಶಾಖ, ಜೇಷ್ಠ.. ಎಂಬ 12 ಮಾಸಗಳೂ, ವಸಂತ , ಗ್ರೀಷ್ಮ, ವರ್ಷ.. ಎಂಬ 6 ಋತುಗಳೂ, ಅಶ್ವಿನಿ, ಭರಣಿ, ಕೃತಿಕಾ, ರೋಹಿಣೀ.. ಎಂಬಿತ್ಯಾದಿ 27 ನಕ್ಷತ್ರಗಳ ಹೆಸರುಗಳನ್ನು ಉರುಹೊಡೆದದ್ದೂ ಸಹ ಆ ಶಾಲೆಯಲ್ಲಿಯೇ. ಆಗ ಅಭ್ಯಾಸ ಮಾಡಿದ್ದು ಈಗ ಪೂರ್ಣ ನೆನಪಿರದಿದ್ದರೂ, ಆ ಊರಿನ ಬಸ್ ನಿಲ್ದಾಣದ ಬಳಿಯಿದ್ದ ಎತ್ತರದ ಮರದ ಮೇಲೆ ತಲೆಕೆಳಗಾಗಿ ನೇತಾಡುತ್ತಿದ್ದ ನೂರಾರು ಕಪ್ಪು ಬಾವಲಿಗಳು ಮಾತ್ರ ನೆನಪಿನಾಳದಲ್ಲಿ ಹಾಗೇ ಕಪ್ಪುಬಣ್ಣದಲಿ ಹೆಪ್ಪುಗಟ್ಟಿವೆ. ಆದರೆ ಅತ್ಯಂತ ಕಡಿಮೆ ಅವಧಿಯ ಆ ಶಾಲೆಯಲ್ಲಿ ದೊರೆತ ಗೆಳೆತನದ ಹೆಸರುಗಳು ಮನದ  ನೇಪಥ್ಯಕ್ಕೆ ಸರಿದು ಮಸುಕಾಗಿರುವುದು ನನ್ನ ದುರಾದೃಷ್ಟ.         ರಾವಂದೂರು ಎಂಬ ಊರಿದೆ. ಹಾಸನ ಜಿಲ್ಲೆಯ ಪಿರಿಯಾಪಟ್ಟಣ ತಾಲ್ಲೂಕಿನಲ್ಲಿ. ಅಲ್ಲಿ ನಾನು ಐದು ಮತ್ತು ಆರನೆಯ ಇಯತ್ತೆ ಓದುವಾಗಿನ ನೆನಪುಗಳು ಮಾತ್ರ ಇನ್ನೂ ಹಸುರಾಗಿ ಸೊಗಸಾಗಿವೆ! ಅಲ್ಲಿನ  ಶಾಲಾ ಕಾರ್ಯಕ್ರಮಕ್ಕೆ ಮೋಟು ಜಡೆಗೆ ಚೌಲಿ ಹಾಕಿಸಿಕೊಂಡದ್ದು, ಡಾನ್ಸ್ ಮಾಡುವಾಗ ಸೀರೆ ಸಡಿಲವಾಗಿ ಜಾರಿಕೊಂಡದ್ದು, ಕೋಗಿಲೆ ಕಂಠವಿಲ್ಲದ ನಾನೂ ಸಹ “ಚೆಲುವಿ ಚೆಲುವಿ ಎಂದು ಅತಿಯಾಸೆ ಪಡಬೇಡ….” ಎಂದು ಜನಪದ ಗೀತೆ ಹಾಡಲು ಹೋಗಿ ಅರ್ಧಕ್ಕೇ ಬಾಯೊಣಗಿ ನನ್ನ ಸ್ವರ ನನಗೇ ಕೇಳಿಸದಂತಾಗಿ ಮುಂದೆ ಹಾಡದೇ ಬಿಟ್ಟದ್ದು, ಒಂದು ದಪ್ಪದಾಗಿರುವ ಜೀವಂತ ಮೀನನ್ನು  ಬಕೇಟಿನ ಒಳಗಿಟ್ಟುಕೊಂಡು ತಂದ ವಿಜ್ಞಾನದ ಮಾಸ್ಟರರು ಮೀನಿನ ರಚನೆ ಬಗ್ಗೆ ಪಾಠ ಮಾಡಿದ್ದು… ಎಲ್ಲವೂ ನನ್ನ ನೆನಪಿನ ಪರದೆಯ ಮೇಲೆ ಇನ್ನೂ ಚಲಿಸುತ್ತಿರುವ ಚಿತ್ರಗಳು.       ರಾವಂದೂರಿನಲ್ಲಿ ನಮಗೊಂದು ರಮಣೀಯ ಸ್ಥಳವಿತ್ತು. ಅದು ನನ್ನಣ್ಣ ಓದುತ್ತಿದ್ದ ಹೈಸ್ಕೂಲು. ಅದೇ ಊರಿನಲ್ಲಿಯೇ ತುಂಬಾ ದೂರದಲ್ಲಿತ್ತು. ಅಲ್ಲಿಗೆ ಒಂದು ಭಾನುವಾರ ನಾನು, ನನ್ನ ಗೆಳತಿಯರಾದ ಪ್ರಿಯಾ, ಬಬಿತಾ, ರೂಪ, ಶ್ವೇತಾ ಮೊದಲಾದವರು ಪಿಕ್ನಿಕ್ ಹೋಗಿದ್ದೆವು. ಬಹುಶಃ ಮನೆಯಲ್ಲಿ ಹೇಳರಲಿಲ್ಲ. ಹೇಳಿದ್ದರೆ ಅಷ್ಟು ದೂರ ಸಣ್ಣ ಮಕ್ಕಳಾದ ನಮ್ಮನ್ನು ಅವರು ಕಳಿಸುತ್ತಲೂ ಇರಲಿಲ್ಲ. ನಮಗೋ ಅದು ಮೋಸ್ಟ್ ಅಡ್ವೆಂಚರಸ್ ಪಿಕ್ನಿಕ್..! ನಾವೆಲ್ಲಾ ಆ ಹೈಸ್ಕೂಲಿನ ವಿಶಾಲ ಜಾಗ, ದೊಡ್ಡ ಕಟ್ಟಡ, ಆ ಶಾಲಾ ಆವರಣದ ಕಾರಂಜಿ ಕೊಳ, ಮರಗಳ ಸಾಲು, ವಿಶಾಲ ಮೈದಾನ ನೋಡಿ ಕಣ್ಣರಳಿಸಿಕೊಂಡು ಸಂಭ್ರಮಿಸಿದ್ದೆವು.     ಹುಣಸೇಹಣ್ಣು, ಉಪ್ಪು , ಸಕ್ಕರೆ, ಖಾರದಪುಡಿ ಬೆರೆಸಿ ಜಜ್ಜಿ ಮಾಡಿಕೊಂಡ ಅದ್ಭುತ ರುಚಿಯ ಉಂಡೆಯೇ ನಮ್ಮ ಪಿಕ್ನಿಕ್ಕಿನ ಊಟ, ಅಲ್ಲಿ ಆಡಿದ ಮರಕೋತಿ ಆಟ.. ಎಷ್ಟು ಸೊಗಸಿತ್ತು! ಮಕ್ಕಳಿನ್ನೂ ಮನೆ ಸೇರಿಲ್ಲವೆಂದು ದೊಡ್ಡವರ ಆತಂಕವು ಅಮೋಘ ಸಾಹಸದಲ್ಲಿ ಮೈ ಮರೆತಿದ್ದ ನಮಗೆ ಹೇಗೆ ಗೊತ್ತಾಗಬೇಕು?       ಸಂಜೆ ಸೂರ್ಯನನ್ನು ಅವನ ಮನೆಗೆ ಕಳಿಸಿಯೇ ನಾವು ನಮ್ಮ ನಮ್ಮ ಮನೆಗೆ  ಬಂದದ್ದು. ಈ ಬೇಜವಾಬ್ದಾರಿತನದ ಸಾಹಸಕ್ಕೆ ನನಗೆ ಮನೆಯಲ್ಲಿ ಬಹುದೊಡ್ಡ ಸನ್ಮಾನ ಕಾಯುತ್ತಿತ್ತು. ಬಾಗಿಲ ಸಂದಿಗೆ ಸೇರಿಸಿ ಕಣ್ಣು ಅಗಲಿಸಿಕೊಂಡು  ರೊಟ್ಟಿ ಮಗುಚುವ ಕೋಲಿನಿಂದ ಅಮ್ಮ ಬಿಸಿಯಾಗಿ ಕೊಟ್ಟ ಏಟಿನ ರುಚಿಯು ಇವತ್ತಿಗೆ ನಗು ಬರಿಸುವುದು ನಿಜವಾದರೂ ಆ ಹೊತ್ತಿನಲ್ಲಿ ಇನ್ಮುಂದೆ ಗೆಳೆಯರೂ ಬೇಡ, ಅವರೊಡನೆ ಮಾಡಬೇಕೆಂದಿರುವ ಪಿಕ್ನಿಕ್ಕೂ ಬೇಡವೆನಿಸುವಂತೆ ಮಾಡಿತ್ತು. ಇಷ್ಟಾದ ಮೇಲೂ ಆ ಶಾಲೆಯ ರಮ್ಯತೆಗೆ, ಅದರ ಸೊಗಸುಗಾರಿಕೆಗೆ ಸೋತ ಮನಸ್ಸು ಹೈಸ್ಕೂಲ್ ಅನ್ನು ಆ ಶಾಲೆಯಲ್ಲಿಯೇ ಓದಬೇಕೆಂದು ಸಂಕಲ್ಪಿಸಿಕೊಂಡಿತ್ತು. ಅದನ್ನು ಮಾತ್ರ ಇನ್ನೂ ಮರೆಯಲಾಗಿಲ್ಲ. ಆದರೆ ನನಗೆ ಅದೊಂದು ಈಡೇರಲಾಗದ ಕನಸಾಗಿಯೇ ಉಳಿದು ಬಿಟ್ಟದ್ದು ಮಾತ್ರ ನನ್ನ ಜೀವನದ ಪರಮ ನಿರಾಸೆಯ ವಿಷಯವಾಗಿದೆ..      ಅಷ್ಟರಲ್ಲಿ ನನ್ನ ಅಪ್ಪನಿಗೆ ಮಂಡ್ಯ ಜಿಲ್ಲೆಯತ್ತ ವರ್ಗವಾಗಿ ಹಳ್ಳಿಗಳ ಗಮ್ಮತ್ತು ನಿಧಾನವಾಗಿ ದೂರವಾಗುತ್ತಾ ಪಟ್ಟಣವೆಂಬ ಬೆರಗಿನ ಬೆಳಕು ಕಣ್ಣೊಳಗೆ ಹಾಯಲು ಶುರುವಾಯಿತು. ***********************

‘ಎಳೆ ಹಸಿರು ನೆನಪು ..’ Read Post »

ಅನುವಾದ

ಬೇಲಿ

ಅನುವಾದಿತ ಕವಿತೆ ಕನ್ನಡ ಮೂಲ: ಸುನೀತ ಕುಶಾಲನಗರ ಇಂಗ್ಲೀಷಿಗೆ:ಸಮತಾ ಆರ್. ಬೇಲಿ ಬೇಲಿ ಹಾಕಲೇಬೇಕೆಂಬುದು ಬಹುದಿನದ ಕನಸು ಹಾಗೆ,ಹೀಗೆ  ಬೇಕಾದ ಸರಕು ಜೋಡಣೆ, ಭರದ ಸಿದ್ಧತೆ ನಮ್ಮದೇ ಭದ್ರತೆಯ ಕೋಟೆಗೆ ಅದೆಂತ ಉತ್ಸಾಹ ಸಂಧಿ,ಗೊಂಧಿಗಳಲೂ ಹಾವು,ಜಂತೂ ನುಸುಳದಂತೆ ಗಿಡ ನೆಟ್ಟು ಬೇಲಿಯಲೂ ಹೂಗಳ ನಿರೀಕ್ಷೆ. ಕನಸಿನಂತೆ ಮೊಗ್ಗು  ಬಿರಿದೇ ಇಲ್ಲವೆಂದಲ್ಲ ಅವು ಆರಂಭ ಶೂರತ್ವ ಗಿಡವಿರಬೇಕು ಅರಳಿ ಉದುರಿದ ಬೀಜ ಚಿಗುರಲೇಕೋ ಆಕಳಿಸಿ ಎದುರಿದ್ದ ಬೇಲಿಯಲಿ ನಳ ನಳಿಸಿದ ನೀಲಿ ಹೂವಲಿ ಬಿದ್ದ ಕಣ್ಣ ಕೀಳಲಾಗದೆ ಝೇಂಕರಿಸುವ ಹುನ್ನಾರ ಕನಸಿನ ಬೇಲಿ ಸೊರಗಿ ಕೊರಡಾಗುವುದನೊಪ್ಪದೆ ಕೊನರಿಸಲೇಬೇಕೆಂಬ ಹಠಕ್ಕೆ ಬಿದ್ದು ಹನಿಸಿದಷ್ಟೂ ಕಣ್ಣು ಕೊಳವಲ್ಲ ಕಡಲು. ಬೇಲಿ ತುಂಬಾ ಅಂತರದ ಬಿರುಕು ಸಲಗ ಪಳಗಿಸುವಂತೆ  ಕಾಷ್ಠ ಪಲ್ಲವಿಸಲು ಹೈರಾಣು. ಮಳೆ ಹೊಯ್ಯುತ್ತಿದೆ ಈಗ  ಹೊಸ ಭರವಸೆಯ ಬೀಜ  ತಂದಿರಿಸಿರುವೆ ತಡ ಮಾಡದೆ ಬೇಲಿಗುಂಟ ಬಿತ್ತಬೇಕಿದೆ. .                A FENCE Since ages,Dreamt of building a fence,Around our own castle.Desparately collected,This and that andWhatever needed,With suchA vigour and speed. Even the smallest of gapsWere filled with plants,For not to let any snakeOr a tiny worm to creep in. The buds did bloom,As I had dreamt,Every plant at firstBlossomed,Like a new knight,Ready to fight.But the seed from the pod,Yawned to sprout.  Then could notTake the eyes offA beaming blue flowerOn the opposite fenceA plot started to buzz. As my fence of dreamsCan’t be seen so dried.Eyes shed to fillNot only pondsBut oceans.Then determinedTo bringBack to life All the sprigs dried. Struggling off to fillThe gaps of fence,Like fighting  to tameA wild elephant. Now, it has startedTo rain again,Have bought someSeeds of hope,To sow along the line Of the fence of mine. *****

ಬೇಲಿ Read Post »

ಅಂಕಣ ಸಂಗಾತಿ, ದಿಕ್ಸೂಚಿ

ಪರಿಶ್ರಮದಿಂದ ಗೆಲುವನ್ನು ಕೊಳ್ಳಬಹುದು ಇಂದಿನ ದಾವಂತದ ಬದುಕಿನಲ್ಲಿ ಎಲ್ಲ ಸುಖಗಳೂ ನಮ್ಮೆಡೆ ತಾವೇ ಬರಲಿ ಎಂದು ಆಶಿಸುತ್ತೇವೆ. ಬೆರಳ ತುದಿಯಲ್ಲಿ ಬೇಕಾದ್ದೆಲ್ಲವೂ ದೊರೆಯುತ್ತಿರುವಾಗ ಗೆಲುವಿಗೆ ಮಾತ್ರ ಇನ್ನಿಲ್ಲದ ಪರಿಶ್ರಮ ಏಕೆ ಪಡಬೇಕು ಎಂದು ಪ್ರಶ್ನಿಸುತ್ತೇವೆ. ‘ಕೆಲಸಕ್ಕೆ ಕರೆಯಬೇಡ್ರಿ ಊಟಕ್ಕೆ ಮರೆಯಬೇಡ್ರಿ.’ ಅನ್ನೋ ಜಾಯಮಾನದವರನ್ನು ಕಂಡರೆ ಯಶಸ್ಸು ಹತ್ತಿರವೂ ಸುಳಿಯುವುದಿಲ್ಲ. ಶ್ರಮವಿಲ್ಲದೇ ಏನೆಲ್ಲವೂ ತಮ್ಮ ಪಾದದ ಕೆಳಗೆ ಬಿದ್ದಿರಬೇಕೆಂಬುದು ನಮ್ಮಲ್ಲಿ ಬಹುತೇಕ ಜನರ ಅಭಿಪ್ರಾಯ. ವ್ಯಕ್ತಿತ್ವ ವಿಕಾಸದಲ್ಲಂತೂ ಪರಿಶ್ರಮ ಮೂಲ ವಸ್ತುವಿನಂತೆ ಕಾರ‍್ಯ ನಿರ‍್ವಹಿಸುತ್ತದೆ. ಶ್ರಮದ ಬೀಜಕ್ಕೆ ಅಗಾಧ ಶಕ್ತಿ ಇದೆ ಎನ್ನುವುದು ಈಗಾಗಲೇ ಮಹಾನ್ ಸಾಧಕರು ತೋರಿಸಿಕೊಟ್ಟಿದ್ದಾರೆ.  ಎಷ್ಟು ಶ್ರಮವಹಿಸಿದರೂ ಅಷ್ಟೇ ಬದುಕು ಅದೃಷ್ಟದಾಟ. ಅದೃಷ್ಟದ ಮುಂದೆ ಪರಿಶ್ರಮವೂ ಒಂದು ಆಟಿಗೆಯಂತೆ.ಎಂದು ನಂಬಿ ಜೀವನವನ್ನು ಅದೃಷ್ಟದ ಕೈಗೆ ಕೊಟ್ಟು ಹಗಲು ರಾತ್ರಿ ಹಲಬುವವರ ಸಂಖ್ಯೆಯೇನೂ ಕಮ್ಮಿಯಿಲ್ಲ. ‘ಪರಿಸ್ಥಿತಿಗೆ ಅಂಜಲಾರೆ. ನಾನೇ ಆ ಪರಿಸ್ಥಿತಿಯ ನಿರ‍್ಮಾತೃ.’ ಎಂಬ ನೆಪೋಲಿಯನ್ ಬೊನಾಪರ‍್ಟೆ ಮಾತಿಗೆ ಅಮೂಲ್ಯವಾದ ಬೆಲೆ ನೀಡಿದ ಮಹಾ ಪುರುಷರು ಇತರರಿಗೆ ಆದರ್ಶ ಪ್ರಾಯರಾಗಿದ್ದಾರೆ ಯಾವ ಆಸೆ ಆಮಿಷಗಳಿಗೆ ಬಲಿಯಾಗದ,ಎಂಥ ಸಿರಿವಂತಿಕೆಗೂ ದಕ್ಕದ ಗೆಲುವನ್ನು ಪರಿಶ್ರಮದ ಬೆವರಿನಿಂದ ಗಿಟ್ಟಿಸಿಕೊಳ್ಳಬಹುದು. ಅದು ಹೇಗೆ ಎಂಬುದಕ್ಕೆ ಮುಂದಕ್ಕೆ ಓದಿ. ಪರಿಶ್ರಮ ಎಂದರೆ . . . . ? ಗೆಲುವಿಗೆ ಬೇಕಾದ ಮೂಲ ಪರಿಕರ. ಮೂಲ ಬೀಜ. ಮೂಲತಃ ಗೆಲುವಿಗೆ ತಿಳಿಯುವ ಚೆಂದದ ಮೂಲ ಭಾಷೆ. ಪರಿಶ್ರಮ ಹೇಳಿದ ಮಾತನ್ನು ಗೆಲುವು ಶಿರಸಾವಹಿಸಿ ಪಾಲಿಸುತ್ತದೆ. ಸ್ವಲ್ಪ ತಡವಾಗಬಹುದು ಅಷ್ಟೆ. ಮನುಷ್ಯನ ಮನಸ್ಸೊಂದು ವಿಚಿತ್ರ. ಅದು ಯಾವ ಯಾವುದೋ ರೂಪದಲ್ಲಿ ರಂಜನೆಯನ್ನು ಪಡೆಯಲು ಸದಾ ಕಾಲ ತುಡಿಯುತ್ತದೆ. ಇನ್ನೂ ವಿಚಿತ್ರವೆಂದರೆ ಪರಿಶ್ರಮವೊಂದನ್ನು ಬಿಟ್ಟು. ಜೇನು ತುಪ್ಪ ಬೇಕಾದವನು ಜೇನುನೊಣಗಳಿಗೆ ಹೆದರಬಾರದು ಎಂಬುದು ದಕ್ಷಿಣ ಆಫ್ರಿಕನ್ ಗಾದೆ. ಗೆಲುವಿನ ಫಲ ಬೇಕೆನ್ನುವವರು ಪರಿಶ್ರಮದ ಬೀಜ ಬಿತ್ತಿ ಸತತ ನೀರೆರೆಯುವುದನು ಮರೆಯಬಾರದು. ನಡೆಯದು ಅದೃಷ್ಟದಾಟ  ಅದೃಷ್ಟ ಗಾಜಿನಂತೆ: ಹೊಳಪು ಹೆಚ್ಚಿದಂತೆಲ್ಲ ಬೇಗ ಒಡೆಯಬಲ್ಲದು. ಹಗಲಿರುಳೆನ್ನದೇ ಶ್ರಮ ಪಡುತ್ತಿದ್ದರೂ, ಹಣೆಯ ಮೇಲೆ ಬೆವರಿನ ಸಾಲು ಸಾಲುಗಟ್ಟಿದರೂ ಫಲಿತಾಂಶ ಮಾತ್ರ ನನ್ನ ನಿರೀಕ್ಷೆಯನ್ನು ತಲುಪುತ್ತಿಲ್ಲ. ಎಂಬುದು ಕೆಲವರ ಗೊಣಗಾಟ. ವಿಷ್ಣು ಶರ‍್ಮ ಹೇಳಿದಂತೆ,’ಆಪತ್ತು ಬಂದಾಗ ಬುದ್ಧಿಗೆಡಬಾರದು.’ಶೇ ೯೯ ರಷ್ಟು ಪ್ರಯತ್ನಕ್ಕೆ ಶೇ ೧ ರಷ್ಟು ಅದೃಷ್ಟ ಸೇರಿದಾಗ ಗೆಲುವು. ಶ್ರಮ ಎಂಬುದೊಂದು ದೊಡ್ಡ ಭಾರ ಎಂದು ಹೆಸರಿಟ್ಟು ದೂರ ಸರಿಯುವವರೂ ಇಲ್ಲದಿಲ್ಲ.ಇದನ್ನು ಕಂಡು ರವೀಂದ್ರನಾಥ ಟ್ಯಾಗೋರ್ ಹೀಗೆ ಹೇಳಿದ್ದಾರೆ; ಹೊರೆಯೇ ಮುಖ್ಯವಾಗಿರುವಾಗ ಯಾವ ಭಾರವಾದರೇನು? ಇಟ್ಟಿಗೆಯಾದರೇನು? ಕಲ್ಲಾದರೇನು? ಪ್ರತಿ ಯಶಸ್ವಿ ವ್ಯಕ್ತಿಯ ಹಿಂದೆ ಅಪಾರ ಪರಿಶ್ರಮವಿರುತ್ತದೆ. ಪರಿಶ್ರಮದ ನೋವಿನಲ್ಲೂ ನಲಿವಿದೆ ಗೆಲುವಿದೆ ಹಾಗಾದರೆ ಪರಿಶ್ರಮದ ಬೀಜ ಬಿತ್ತಿ ಗೆಲುವಿನ ಫಲ ಪಡೆಯಬಹುದು. ಭಾಗ್ಯದ ಬೆನ್ನು ಹತ್ತಿ ನಾವು ಓಡುವಂತೆ ಪರಿಶ್ರಮಿಗಳ ಬೆನ್ನು ಹತ್ತಿ ಗೆಲುವು ಓಡುತ್ತದೆ. ಬೇಡ ಕಣ್ಣೀರಿನ ಉತ್ತರ ಷೇಕ್ಸಪಿಯರ್ ತನ್ನ ಸಾನೆಟ್ ಒಂದರಲ್ಲಿ ‘ಕಾಲದ ಆಘಾತಕ್ಕೆ ಶಿಲಾ ಪ್ರತಿಮೆಗಳು ಒಡೆಯಬಹುದು. ಹೊನ್ನಲೇಪದ ಸ್ಮಾರಕಗಳು ಉರಳಬಹುದು. ಆದರೆ ಕಾವ್ಯ ಮಾತ್ರ ಮೃತ್ಯು ಹಾಗೂ ವಿಸ್ಮೃತಿಗೆ ಅತೀತವಾದುದು.’ ಎಂದು ಕಾವ್ಯದ ಅಮರತೆಯ ಕುರಿತು ಹೇಳಿದ ಅದೇ ಮಾತನ್ನು ಪರಿಶ್ರಮಕ್ಕೂ ಅನ್ವಯಿಸಬಹುದು. ಹೆಜ್ಜೆ ಹೆಜ್ಜೆಗೂ ಎದುರಾಗುವ ಸೋಲಿಗೆ ಹೆದರಿ ಹತಾಶೆಯಿಂದ ಕಣ್ಣೀರು ಸುರಿಸುತ್ತೇವೆ. ಸೋಲಿಗೆ ಕಣ್ಣೀರಿನ ಉತ್ತರ ನೀಡುತ್ತೇವೆ. ಸೋಲನ್ನು ಕಣ್ಣೀರಿನ ಕೈಯಲ್ಲಿ ಕೊಟ್ಟು ಕೈ ತೊಳೆದುಕೊಂಡು ಬಿಡುತ್ತೇವೆ. ಕತ್ತಲು ಕೋಣೆಯಲ್ಲಿ ಕಣ್ಣೀರು ಕೆಡವಿ ಮತ್ತೆ ಆಲಸ್ಯತನದ ಮರೆಯಲ್ಲಿ ಮಲಗುವ ಅಭ್ಯಾಸ ಮಾಡಿಕೊಂಡಿದ್ದೇವೆ. ಎಲ್ಲಕ್ಕಿಂತ ಹೆಚ್ಚಾಗಿ ಶ್ರಮವೆಂಬುದು ನಮಗೆ ಕಬ್ಬಿಣದ ಕಡಲೆಯಂತೆ ಕಾಣುತ್ತಿದೆ. ಆಲಸ್ಯವೆಂಬ ಮಾಯೆ ಶ್ರಮವೆಂಬ ಸತ್ಪಥವನ್ನು ನುಂಗಿ ಹಾಕಿ ಬಿಡುತ್ತದೆ. ಶ್ರಮವೆಂಬ ಜಂಜಾಟದಲ್ಲಿ ಬೀಳುವುದಕ್ಕಿಂತ ಕಣ್ಣೀರಿನಲ್ಲಿ ಕೈ ತೊಳೆಯುವುದು ಒಳ್ಳೆಯದು ಎಂದು ಕೊಂಡಿದ್ದೇವೆ. ಮಣ್ಣಿನ ಗಡಿಗೆಯಲಿ ಅಡುಗೆ ಮಾಡಿ ಉಣ್ಣುವುದು ಆರೋಗ್ಯಕ್ಕೆ ಒಳ್ಳೆಯದು. ಆದರೆ ಅದನ್ನೆಲ್ಲ ಪಾಲಿಸೋಕೆ ಸಮಯವೆಲ್ಲಿದೆ? ಶ್ರಮದ ಯೋಚನೆಗಳಿಲ್ಲದೇ ಯೋಜನೆಗಳಿಲ್ಲದೇ ಸ್ಪರ್ಧಾತ್ಮಕ ಯುಗದಲ್ಲಿ ಸುಂದರ ಬದುಕು ಪಡೆಯುವುದು ಕಷ್ಟ. ಇರಲಿ ಗಟ್ಟಿ ನಿರ್ದಾರ ಪರಿಶ್ರಮವೆಂಬುದು ಕಿರಿದಾದ ದಾರಿಯಲ್ಲಿ ಅದೂ ಪಾಚಿಗಟ್ಟಿದ ದಾರಿಯಲ್ಲಿ ನಡೆದಂತೆ. ಆದ್ದರಿಂದ ಅದರ ಸಹವಾಸವೇ ಬೇಡ. ಗೆಲುವನ್ನು ಬಾಚಿ ತಬ್ಬಿಕೊಳ್ಳಲು ಸಾಕಷ್ಟು ಅಡ್ಡ ಮಾರ‍್ಗಗಳಿವೆ. ಅವುಗಳನ್ನು ಅನುಸರಿಸುವುದೇ ಸೂಕ್ತ ಎಂದು ಅವುಗಳತ್ತ ಹೆಜ್ಜೆ ಹಾಕಿ ಕೈ ಸುಟ್ಟುಕೊಳ್ಳುತ್ತೇವೆ. ಶಾಶ್ವತ ಗೆಲುವಿನ ನಿಜವಾದ ಕೀಲಿ ಕೈ ಶ್ರಮವೆಂದು ಅರಿಯುವುದರಲ್ಲಿ ಸಾಕಷ್ಟು ಸಮಯ ಸರಿದಿರುತ್ತದೆ. ನೊಂದ ಮನಸ್ಸು ವಿಶ್ರಾಂತಿ ಬೇಕೆಂದು ಅಂಗಲಾಚುತ್ತದೆ. ಆದರೆ ಅದು ವಿಶ್ರಾಂತಿಗೆ ಸಕಾಲವಲ್ಲ. ಪ್ರಖರವಾದ ಪರಿಶ್ರಮಕ್ಕೆ ಒಡ್ಡಿಕೊಳ್ಳಬೇಕಾದ ಕಾಲ.ಮಾಡಿದ ತಪ್ಪಿಗೆ ಬೇರೆ ದಾರಿ ಇಲ್ಲ. ಶ್ರಮದೆಡೆ ಮುಖ ಮಾಡುವುದೊಂದೇ ದಾರಿ. ಪರಿಶ್ರಮವೆಂಬುದು ನಿರಂತರ ಪ್ರಕ್ರಿಯೆ. ಶ್ರಮ ಪಟ್ಟದ್ದು ಸಾಕೆಂದುಕೊಂಡರೆ ಗೆಲುವು ನಿಂತ ನೀರಿನಂತೆ ನಿಲ್ಲುತ್ತದೆ. ಜಗತ್ತಿನ ಸುಪ್ರಸಿದ್ಧ ವಿಜ್ಞಾನಿ ಥಾಮಸ್ ಅಲ್ವಾ ಎಡಿಸನ್, ೬೭ ನೇ ವಯಸ್ಸಿನಲ್ಲಿ ತಾನು ಕಟ್ಟಿ ಬೆಳೆಸಿದ ಫ್ಯಾಕ್ಟರಿ ಹೊತ್ತಿ ಉರಿಯುವುದನ್ನು ಕಂಡು.’ ನಿನ್ನ ತಾಯಿ ಮತ್ತು ಆಕೆಯ ಗೆಳತಿಯರನ್ನು ಕರೆ. ಅವರೆಂದೂ ಇಂಥ ದೊಡ್ಡ ಫ್ಯಾಕ್ಟರಿ ಉರಿಯುವ ದೃಶ್ಯವನ್ನು ಕಂಡಿರಲಾರರು.’ ಎಂದು ತನ್ನ ೨೪ ವರ‍್ಷದ ಮಗ ಚಾರ್ಲ್ಸ್ ಹೇಳುತ್ತಾನೆ. ತಂದೆಯ ಮಾತು ಕೇಳಿದ ಮಗ ಗಾಬರಿಯಾಗಿ ಇದೇನು ಹೇಳುತ್ತಿರುವಿರಿ ನೀವು? ಇಷ್ಟು ದಿನ ಶ್ರಮವಹಿಸಿ ಬೆಳೆಸಿದ ನಿಮ್ಮ ಕನಸು ಹೊತ್ತಿ ಉರಿಯುತ್ತಿದೆ ಎಂದ ಸಖೇದ ಆಶ್ಚರ್ಯದಿಂದ. ಅದಕ್ಕೆ ಥಾಮಸ್ ಕೊಟ್ಟ ಉತ್ತರ ಮಾರ‍್ಮಿಕವಾದುದು. ಪರಿಶ್ರಮ ಪಡುವ ಗಟ್ಟಿ ನಿರ‍್ಧಾರವಿದ್ದರೆ ಇಂಥ ಎಷ್ಟು ಫ್ಯಾಕ್ಟರಿಗಳನ್ನು ಕಟ್ಟ ಬಹುದೆಂದ. ಮರು ದಿನದಿಂದಲೇ ಶ್ರಮದ ಬೆವರು ಸುರಿಸಿದ. ಪರಿಶ್ರಮವೇ ಕೀಲಿಕೈ ಭವಿಷ್ಯವನ್ನು ವರ‍್ತಮಾನದಿಂದ ಕೊಳ್ಳಬಹುದು ಎಂದಿದ್ದಾರೆ ಡಾ: ಜಾನ್ಸನ್. ಹಾಗೆಯೇ ಗೆಲುವನ್ನು ಪರಿಶ್ರಮದಿಂದ ಕೊಳ್ಳಬಹುದು. ವರ‍್ತಮಾನದಲ್ಲಿ ನಾವು ತೊಡಗಿಸಬೇಕಾದ ಬಂಡವಾಳವೆಂದರೆ ಪರಿಶ್ರಮ. ಎಲ್ಲರ ಮನ ಸೆಳೆಯುವ ಬಣ್ಣ ಬಣ್ಣದ ಚಿಟ್ಟೆ ಆಗಬೇಕಾದರೆ ಕಂಬಳಿಹುಳ ಪಡುವ ನೋವು ಅಷ್ಟಿಷ್ಟಲ್ಲ. ಸಾಧಕರ ಯಶೋಗಾಥೆಯನ್ನು ಓದುವಾಗ ಅಥವಾ ಕೇಳುವಾಗ ಸ್ಪಷ್ಟವಾಗುವ ಅಂಶವೆಂದರೆ,’ಕೆತ್ತಿಸಿಕೊಳ್ಳುವ ತಾಳ್ಮೆ ಇಲ್ಲದವರು ವಿಗ್ರಹವಾಗಲು ಹಂಬಲಿಸಬಾರದು. ಕಲ್ಲಾಗಿಯೇ ಇದ್ದು ಬಿಡಬೇಕು.’ ರಭಸವಾದ ಅಲೆಗಳಂತೆ ಬಂದ ಸಮಸ್ಯೆಗಳಿಗೆ ತಮ್ಮ ಛಲ ಬಿಡದ ಪರಿಶ್ರಮದಿಂದಲೇ ಎದೆಯನ್ನೊಡ್ಡಿ ದಿಟ್ಟ ಉತ್ತರ ನೀಡಬೇಕು.. ಆಂಡ್ರೂ ಕರ‍್ನೇಗಿ, ಅಮೇರಿಕದ ಸ್ಟೀಲ್ ರಂಗದಲ್ಲಿ ಬಹು ದೊಡ್ಡ ಹೆಸರು. ಆತ ಹನ್ನೊಂದುವರ‍್ಷದ ಪುಟ್ಟ ಪೋರನಾಗಿದ್ದಾಗ ಕಾರ‍್ಮಿಕನಾಗಿದ್ದ. ಛಲ ಬಿಡದ ತ್ರಿವಿಕ್ರಮನಂತೆ ಶ್ರಮವಹಿಸಿ ತಾನು ಶ್ರೀಮಂತನಾಗುವುದಲ್ಲದೇ ನೂರಾರು ಜನ ಬಿಲಿಯನರ್‌ಗಳನ್ನು ಸೃಷ್ಟಿಸಿದ.ಇದನ್ನು ಅವಲೋಕಿಸಿದಾಗ ಗೆಲುವನ್ನು ಪರಿಶ್ರಮದಿಂದ ಕೊಳ್ಳಬಹುದು ಎಂಬುದು ಸ್ಪಷ್ಟವಾಗುತ್ತದೆ. ಹಾಗಾದರೆ ಬನ್ನಿ ಸೋಲೆಂಬ ಅವಮಾನಕ್ಕೆ ಉತ್ತರವನ್ನು ಪರಿಶ್ರಮದಿಂದ ಕೊಡೋಣ. ಗೆಲುವಿನ ದಾರಿಯಲ್ಲಿ ನಗು ನಗುತ ಹೆಜ್ಜೆ ಹಾಕೋಣ. ************************ ಲೇಖಕರ ಬಗ್ಗೆ ಲೇಖಕಿ ಜಯಶ್ರೀ ಜೆ ಅಬ್ಬಿಗೇರಿ ಸರಕಾರಿ ಪದವಿ ಪೂರ‍್ವ ಕಾಲೇಜಿನಲ್ಲಿ ಆಂಗ್ಲ ಭಾಷಾ ಉಪನ್ಯಾಸಕಿ . ಇವರ ಹನ್ನೆರಡು ಪುಸ್ತಕಗಳು ಪ್ರಕಟಗೊಂಡಿವೆ. ಓದು ಮತ್ತು ಬರಹ ಹಾಡುಗಾರಿಕೆ ಮಾತುಗಾರಿಕೆ ಇವರ ಹವ್ಯಾಸಗಳು

Read Post »

ಕಾವ್ಯಯಾನ, ವಾರದ ಕವಿತೆ

ವಾರದ ಕವಿತೆ

ಬದುಕುಮರುಗುತ್ತಿದೆ ಸುಜಾತಾ ಲಕ್ಮನೆ ಬದುಕು ಮರುಗುತ್ತಿದೆಕನಸುಗಳು ಶಿಥಿಲಗೊಂಡು ರಚ್ಚೆ ಹಿಡಿದುಮುರುಟ ತೊಡಗಿದಂತೆಲ್ಲಬದುಕ ಭಿತ್ತಿಯ ಆಚೀಚೆ ನೀನು ಎಗ್ಗಿಲ್ಲದೇ ಜಡಿದ ಮೊಳೆಗಳುಆಳಕ್ಕಿಳಿದಂತೆಲ್ಲಾ ಹೊರಳಿ ನರಳಿ ಅನಾಮತ್ತಾಗಿ ಹರಡಿಬೆದರುಬೊಂಬೆಗಳಾಗಿ ನಿಲ್ಲುತ್ತವೆ ಭಾವಗಳು !!ದಿಕ್ಕೆಟ್ಟು, ಸೋತು ಹೆಜ್ಜೆ ಮೂಡಿಸಲಾಗದ ಕೊರಗು ತುಂಬಿ ನಿಂತಈ ಭಾವಗಳ ತಬ್ಬಿದರೆಬರೀ ನಿಟ್ಟುಸಿರ ಮೇಳಗಳು !!ಧೂಳು ಹೊದ್ದು ಮಸುಕಾದ ಗೋಡೆಗಂಟಿದ ನಮ್ಮೀವಿವಾಹದ ಜೋಡಿ ಪಟದಿಂದ ಒಳಗೊಳಗೇ ನಕ್ಕು ಸೂಸುವ ಹಳವಂಡಗಳು!ಜೇಡ ನೇಯ್ದ ಬಲೆಯೊಳಗೆ ಬಿದ್ದು ಹೊರಳಾಡುವ ಪಟದ ಬಗ್ಗೆ ನಮಗೇಕೆ ಚಿಂತೆ?ಬದುಕೇ ಚೌಕಟ್ಟು ಮೀರಿ ಮೂರಾಬಟ್ಟೆಯಾದ ಮೇಲೆ ಇನ್ನೇನಂತೆ ?ಅದೆಷ್ಟು ಬೆಳ್ಳಗೆಯಲ್ಲಿ ಮುಖವಾಡ ಹೊದ್ದು ಹಗಲು ತಳ್ಳಿದರೂಎದೆ ಸುಡುವ ಮಂಚದ ಮೇಲೆರಾಗ ಲಯಗಳು ಸತ್ತ ಬಾಳು ರಿಕ್ತಗೊಂಡ ಸತ್ಯದರ್ಶನ !ನಿದ್ದೆ ತಬ್ಬದ ರಾತ್ರಿಗಳಲ್ಲಿ ಕಣ್ಣಾಲಿಗಳ ಸುತ್ತ ಸತ್ತ ಕನಸುಗಳ ಒಸರುಗಿರಕಿ ಹೊಡೆಯುವ ತವಕ-ತಲ್ಲಣ !!ಈ ಉತ್ಕಲಿಕೆ ತಾಳಲಾರದೇ ತಟ್ಟಿ ಮಲಗಿಸಿದಂತೆಲ್ಲಾಉಟ್ಟ ಸೀರೆಯ ಸೆರಗಿನಂಚೇ ಪಿಸುಗುಡಲು ಶುರುವಿಟ್ಟುಕೊಳ್ಳುತ್ತದೆ ನನ್ನಲ್ಲಿ !ಎದೆಯ ಬೀದಿಯ ಮೇಲೆ ಗೀಚಿದ ಒಲುಮೆ ಅಕ್ಷರಗಳುಇದ್ದಕ್ಕಿದ್ದಂತೆ ಮಾಯವಾಗಿದ್ದಾದರೂ ಎಲ್ಲಿ?ಪ್ರಶ್ನೆ ಪ್ರಶ್ನೆಯಾಗಿಯೇ ಉಳಿದುಹೋಗುವ ಈ ಅನಿವಾರ್ಯತೆಯಆರ್ತನಾದಕ್ಕೆ ಕೊನೆಯಲ್ಲಿ ?ಸಾಲ್ಗೊಳಿಸಲಾಗದ ಪ್ರೀತಿಯ ವ್ಯಾಖ್ಯೆ ಎಡವಿದಂತೆಲ್ಲಸುಕರಗೊಳ್ಳದ ಬದುಕು ಅನಂತ ಸುಳ್ಳುಗಳಿಂದ ತುಂಬಿ ಅಣಕಿಸುತ್ತಿದೆ!!ನಿನ್ನ ಮೆಲ್ನುಡಿ, ಮೆಲ್ದನಿ, ಮೆಲ್ನಗೆಗೆ ಹಾತೊರೆದು ಹೀಗೆ ಗೀಚುವ ಕವನ ಕನಲುತ್ತಿದೆ: ಕರಗುತ್ತಿದೆ: ಕನವರಿಸುತ್ತಿದೆ!!ಕಂಡೂ ಕಾಣದ ಆಸೆ ಕುಡಿಯು ಚಿಗುರಲಾರದೇ ಇತ್ತ ಸಾಯಲಾರದೇ-ಗೆಜ್ಜೆಕಟ್ಟಿದ ಹೆಜ್ಜೆ ಪ್ರೀತಿಯ ರಂಗಸ್ಥಳದಲ್ಲಿ ನರ್ತಿಸಲಾರದೇಬದುಕೇ ಮರುಗುತ್ತಿದೆ : ನರಳುತ್ತಿದೆ : ನೋಯುತ್ತಿದೆ !!ಸಾಂಗತ್ಯ ಗೊಳ್ಳದ ಬದುಕ ಪದುಳಿಸಲು ಒಮ್ಮುಖವಾಗಿನಾನು ಹೆಣಗಿದಂತೆಲ್ಲ ನಿನ್ನ ವಿಮುಖತೆಯೇ ಮೂರ್ತೀಭವಿಸಿದಿನ-ರಾತ್ರಿಗಳು ಬಸವಳಿದು ಚಾದರ ದಡಿಯಲ್ಲಿ ಬಿಕ್ಕುತಿವೆ!!ನಾನು ನೀನು ದಾಂಪತ್ಯದಲ್ಲಿ ಕಾಲಿಟ್ಟ ಸಂಭ್ರಮದ ಆ ದಿನಕ್ಕೆಬೇಕಿತ್ತೇ ದಿಬ್ಬಣ ಒಡ್ಡೋಲಗ ಮಂತ್ರಗಳ ಘೋಷ ಹೂ ಮಾಲೆ?ಸನಿಹವಿದ್ದೂ ನಿನ್ನ ಬಿಸುಪೇ ತಾಗದೆ ಸಾಯುವ ನನ್ನ ಭಾವಲಹರಿಯ ಬಿಕ್ಕಿಗೆಇನ್ನೆಷ್ಟು ತೇಪೆ ಹಚ್ಚುವ ಶ್ರಮ –ಮನಸ್ಸಿಗೆ ಮನಸ್ಸೇ ಬೆಸೆಯದಿದ್ದ ಮೇಲೆ?ಪ್ರೀತಿ ಇಲ್ಲದ ಮೇಲೆ ಎಲ್ಲ ತೊರೆದು ಕಾರಣವ ಕೊಟ್ಟು ಹೊರಟು ಬಿಡು !ವಿಕ್ಷೋಭ ವಿಕ್ಲಬಗಳೆಲ್ಲ ದೂರಾಗಿ ಹೋಗಲಿನನ್ನ ಬಿಸಾಕಿ ಬಿಡು ನಿನ್ನ ಬಾಳಿಂದಒಳ ಕುದಿತ ತಹಬಂದಿಗೆ ಬಂದುಇನ್ನುಳಿದ ಎನ್ನ ಬಾಳಾದರೂ ಆಗಲಿ ಅಂದ ಚಂದ !! *******************

ವಾರದ ಕವಿತೆ Read Post »

ಅಂಕಣ ಸಂಗಾತಿ, ಮುಖಾಮುಖಿ

ನಾನು ದೀಪ ಹಚ್ಚಿಕೊಂಡರೂ ಬೆಳಕು ಎಲ್ಲರಿಗೂ ಕಾಣಿಸಬೇಕು `ಈಗ ಅಕ್ಷರಸ್ಥರನ್ನು, ಶ್ರೀಮಂತರನ್ನು ನಂಬಿಸುವ- ಒಲಿಸಿಕೊಳ್ಳುವ ಸಿದ್ಧಾಂತ ಹೆಚ್ಚಾಗಿದೆ…’ ಗಣೇಶ್ ಹೆಗಡೆ ಹೊಸ್ಮನೆ   ಗಣೇಶ್ ಹೆಗಡೆ ಹೊಸ್ಮನೆ  ಶಿರಸಿ ತಾಲೂಕು ಜಾನ್ಮನೆಯವರು. ವೃತ್ತಿಯಿಂದ ಕೃಷಿಕ. ಯಾರೂ ನೆಡದ ಮರ ಇವರ ಮೊದಲ ಕವಿತಾ ಸಂಕಲನ. ಇದಕ್ಕೆ ಚೆನ್ನವೀರ ಕಣವಿ ಕಾವ್ಯ ಪ್ರಶಸ್ತಿ, ಪುತ್ತೂರು ಕನ್ನಡ ಸಂಘದ ಉಗ್ರಾಣ ಪ್ರಶಸ್ತಿ ಲಭಿಸಿವೆ. ನಂತರ ಹರಿದು ಕೂಡುವ ಕಡಲು (ಗಜಲ್) ಸಂಕಲನವನ್ನು ಲಡಾಯಿ ಪ್ರಕಾಶನ ಪ್ರಕಟಿಸಿತು. ಕಾರವಾರ ಆಕಾಶವಾಣಿ, ಧಾರವಾಡ ಆಕಾಶವಾಣಿಯಲ್ಲಿ ಕವಿತೆಗಳನ್ನು ವಾಚಿಸಿದ್ದಾರೆ. ಕತೆಗಳನ್ನು ಸಹ ಬರೆದು ಪ್ರಕಟಿಸಿದ್ದಾರೆ. ಕಾರವಾರ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತು ಏರ್ಪಡಿಸಿದ ಕಾರ್ಯಕ್ರಮಗಳಿಗೆ ಬಂದು ಕವಿತೆ ವಾಚಿಸಿದ್ದಾರೆ.  ಕೃಷಿ ಬದುಕಿನಲ್ಲಿ ಕಂಡ ಪ್ರತಿಮೆಗಳನ್ನು ಅದ್ಭುತವಾಗಿ ಗಜಲ್ ಪ್ರಕಾರದಲ್ಲಿ ಗಣೇಶ್ ಬಳಿಸಿದರು. ಅಷ್ಟರ ಮಟ್ಟಿಗೆ ಗಜಲ್‌ನಲ್ಲಿ ಹೊಸ ಪ್ರಯೋಗ ಮಾಡಿದರು. ತಣ್ಣನೆಯ ವ್ಯಕ್ತಿತ್ವದ ಗಣೇಶ್ ಅಪಾರವಾದ ವೈಚಾರಿಕತೆಯನ್ನು ಬಳಸಿಕೊಂಡವರು. ವೇದಿಕೆಗಾಗಿ ಎಂದೂ ಹಂಬಲಿಸದವರು. ಪ್ರಶಸ್ತಿಗಳ ಹಿಂದೆ ಬೀಳದವರು. ಕವನ ವಾಚನಕ್ಕೆ ಕರೆದರೆ, ಸದ್ದಿಲ್ಲದೇ ಬಂದು ಕವಿತೆ ವಾಚಿಸಿ ಹೋಗಿಬಿಡುವ, ಮಾತಿಗೆ ಎಳೆದರೆ ಮಾತ್ರ ಮಾತನಾಡುವ ಅಪರೂಪದ ವ್ಯಕ್ತಿ. ಬೌದ್ಧಿಕತೆ ಮತ್ತು ಪ್ರಾಮಾಣಿಕತೆಗಳ ಮಿಶ್ರಣದಂತಿರುವ ಕೃಷಿಕ ಗಣೇಶ್ ಅಪ್ಪಟ ಕವಿ ಮನಸ್ಸಿನವರು. ಹಳ್ಳಿಯಲ್ಲಿದ್ದು ಕೊಂಡೇ ಅಪಾರ ಜೀವನ ಪ್ರೀತಿಯನ್ನು ಕಟ್ಟಿಕೊಂಡವರು.………………………………………………………………………………………………………………………………. * ಕತೆ , ಕವಿತೆಗಳನ್ನು ಯಾಕೆ ಬರೆಯುತ್ತೀರಿ ? ಉತ್ತರ : ಯಾಕೆ ಬರೆಯುತ್ತೇನೆ ಎಂದು ಹೇಳುವುದು ಕಷ್ಟ. ಅದು ಆಯಾ ಕಾಲಕ್ಕೆ ಸಂದರ್ಭಕ್ಕೆ ಬದಲಾಗುತ್ತಲೇ ಇರುವ ಸಂಗತಿ.ಮೊದಮೊದಲು ನನ್ನ ಪಾಡಿಗೆ ನಾನು ಬರೆದುಕೊಳ್ಳುತ್ತಿದ್ದೆ. ಕ್ರಮೇಣ ಬರವಣಿಗೆಯೊಂದಿಗೆ ಒಂದು ಸಾಮಾಜಿಕ ಸಂಬAಧ- ಜವಾಬ್ದಾರಿ ಇದೆ ಅನಿಸಿತು.ನನಗೆ ಈಗೀಗ ಅನಿಸುವುದು, ನನಗಾಗಿಯೇ ನಾನು ದೀಪ ಹಚ್ಚಿಕೊಂಡAತಿದ್ದರೂ ಬೆಳಕು ಎಲ್ಲರಿಗೂ ಕಾಣಿಸಬೇಕು. * ಕತೆ  ಅಥವಾ ಕವಿತೆ ಹುಟ್ಟುವ ಕ್ಷಣ ಯಾವುದು ? ಉತ್ತರ : ಕತೆಯಾಗಲೀ ಕಾವ್ಯವಾಗಲಿ ಹುಟ್ಟಿಕೊಳ್ಳುವ ಇಂಥದೇ ಕ್ಷಣ ಎಂಬುದಿಲ್ಲ. ಯಾವುದೇ ಕೆಲಸಗಳಲ್ಲಿ ತೊಡಗಿದರೂ ಆ ಕೆಲಸ ಬಿಟ್ಟು ಇನ್ನೊಂದರ ಬಗ್ಗೆ ಸಹಾ ಆಲೋಚಿಸುತ್ತಿರುವುದು ನನ್ನ ಸ್ವಭಾವ.ಹಾಗಾಗಿ ನನ್ನ ಬಹುತೇಕ ಕವಿತೆಗಳು ನನ್ನ ಕೆಲಸ ಮತ್ತು ಆಲೋಚನೆಗಳ ನಡುವಿನ ಸಂಬAಧದಿAದ ಹುಟ್ಟಿವೆ. * ನಿಮ್ಮ ಕತೆಗಳ ವಸ್ತು, ವ್ಯಾಪ್ತಿ ಹೆಚ್ಚಾಗಿ  ಯಾವುದು  ? ಪದೇ ಪದೇ ಕಾಡುವ ವಿಷಯ ಯಾವುದು ? ಉತ್ತರ : ಇತ್ತೀಚೆಗೆ ನಾನು ಕತೆ ಬರೆದಿಲ್ಲ.ಹಿಂದೆ ಬರೆದ ಕಥೆಗಳಲ್ಲಿ ನನ್ನ ಸುತ್ತಮುತ್ತ ನಿತ್ಯ ಜರುಗಿದ- ಜರುಗುತ್ತಿರುವ ಘಟನೆಗಳ ಪ್ರಭಾವವಿತ್ತು. ಒಂದೆರಡು ಕಾಲ್ಪನಿಕ, ಪತ್ತೇದಾರಿ, ಮತ್ತು ಪುರಾಣ ಕಥೆಗಳನ್ನಾಧರಿಸಿ ಕೆಲವು ಸಣ್ಣ ಸಣ್ಣ ಕಥೆಗಳನ್ನು  ಸಹಾ ಬರೆದಿದ್ದೇನೆ. * ಕತೆ ಕವಿತೆಗಳಲ್ಲಿ ಬಾಲ್ಯ,  ಹರೆಯ  ಇಣುಕಿದೆಯೇ ? ಉತ್ತರ : ಕವಿತೆಗಳ ಮಟ್ಟಿಗೆ, ಇಣುಕಿದೆ ಎನ್ನುವುದಕ್ಕಿಂತ ಬಾಲ್ಯದ ಪ್ರಭಾವವಿದೆ ಎನ್ನಬಹುದು.ಕಥೆಗಳಲ್ಲಿ ಬಾಲ್ಯದ ನೆನಪು ಕನಸು ಆಸಕ್ತಿ ಕುತೂಹಲಗಳು ಸೇರಿಕೊಂಡಿವೆ. ‘ಹರೆಯ’ದ ಎಂಬ ಪ್ರಭಾವದಿಂದ ನಾನು ಬರೆದಿಲ್ಲ ಎನಿಸುತ್ತದೆ. * ಪ್ರಸ್ತುತ ರಾಜಕೀಯ ಸನ್ನಿವೇಶದ ಬಗ್ಗೆ ನಿಮ್ಮ ಪ್ರತಿಕ್ರಿಯೆ ಏನು ? ಉತ್ತರ : ರಾಜಕೀಯವನ್ನು ಬೇರೆ ಬೇರೆ ಉದ್ದೇಶ- ಹಾದಿಯ ಮೂಲಕ ಬಳಸಿಕೊಳ್ಳಲಾಗುತ್ತಿದೆ.ನನ್ನ ಬಾಲ್ಯದ ದಿನಗಳಿಂದ ಕಂಡAತೆ ಹೇಳುವುದಾದರೆ ಹಿಂದೆ ರಾಜಕೀಯ ಪಕ್ಷಗಳು ಅನಕ್ಷರಸ್ಥರನ್ನು ,ಬಡವರನ್ನು ನಂಬಿಸುವ ಭಾಷಣ ಮತ್ತು ಸಿದ್ಧಾಂತ ಮುಂದಿಡುತ್ತಿದ್ದರು. ಈಗ ಅಕ್ಷರಸ್ಥರನ್ನು, ಶ್ರೀಮಂತರನ್ನು ನಂಬಿಸುವ, ಒಲಿಸಿಕೊಳ್ಳುವ ಸಿದ್ಧಾಂತ ಹೆಚ್ಚಾಗಿದೆ. ಇದನ್ನು `ರಾಜಕೀಯ ತಂತ್ರಗಾರಿಕೆ’,  `ತಂತ್ರಗಾರಿಕೆಯ ಶ್ರೇಷ್ಠವಾದದ್ದು’ ಎಂದು ಜನರೂ ಸಹಾ ನಂಬುತ್ತಿದ್ದಾರೆ.ನಮ್ಮ ಸ್ವಾತಂತ್ರ‍್ಯ-ಸAವಿಧಾನ ನೀಡಿದ ಅನುಕೂಲತೆ ಇದ್ದಾಗ್ಯೂ,  ಸಮರ್ಥ ರಾಜಕೀಯ ಸಿದ್ಧಾಂತ ಮುನ್ನೆಲೆಗೆ ಬರದೇ ಹೋಗುತ್ತಿರುವುದು ವಿಷಾದನೀಯ. * ಧರ್ಮ ,ದೇವರು ವಿಷಯದಲ್ಲಿ ನಿಮ್ಮ ನಿಲುವೇನು ? ಉತ್ತರ : ದೇವರು ಇರುವ ಬಗ್ಗೆ ನನಗೆ ಯಾವುದೇ ಖಾತ್ರಿ ಸಿಕ್ಕಿಲ್ಲ.ಬಾಲ್ಯದಿಂದಲೂ ನನ್ನ ಕೌಟುಂಬಿಕ ಮತ್ತು ಸಾಂಸ್ಕೃತಿಕ ಜವಾಬ್ದಾರಿಯಾಗಿ ನಮ್ಮ ಮನೆ ಊರಿಗೆ ಸಂಬAಧಪಟ್ಟ ದೇವರು-ದಿಂಡರುಗಳ ಪೂಜೆಯನ್ನು ನಾನು ಮಾಡುತ್ತೇನೆ, ಆ ವಿಚಾರ ಬೇರೆ.ಹಾಗೆ ನೋಡಿದರೆ ದೈವ-ದೇವರು ಎಂಬುದು ಅವರವರ ವೈಯಕ್ತಿಕ ವಿಚಾರ.ನಮಗೆ ಸಮಾಧಾನವಾಗುವುದಾದರೆ ನಾವು ಒಂದು ಇರುವೆಯನ್ನೂ ಪೂಜಿಸಿಕೊಳ್ಳಬಹುದು, ಪ್ರಾರ್ಥಿಸಿ ಕೊಳ್ಳಬಹುದು. ನಮ್ಮಲ್ಲಿ ಹುಟ್ಟುವ ಎಲ್ಲ ತೊಡಕುಗಳು ದೇವರಿಂದಲ್ಲ, ಧರ್ಮದಿಂದ.ನನ್ನ ದೃಷ್ಟಿಯಲ್ಲಿ ಎಲ್ಲ ಧರ್ಮಗಳು ಕೂಡ ಆಯಾ ಕಾಲದಲ್ಲಿ ಆಯಾ ಪ್ರದೇಶದ ಜನ ಸಾಮೂಹಿಕವಾಗಿ ಬದುಕುವುದಕ್ಕೆ-ರಕ್ಷಿಸಿಕೊಳ್ಳುವುದಕ್ಕೆ ಕಂಡುಕೊAಡ ಒಂದೊAದು ಹಾದಿಗಳು. ಆ ಮಟ್ಟಿಗೆ ಅದು ಆಯಾಕಾಲದ ಸಂವಿಧಾನ.ಇವತ್ತು, ನಮ್ಮ ಕಾಲಕ್ಕೆ ಯೋಗ್ಯವೆನಿಸುವಂತಹ ಒಂದು ದೇಶವಾಗಿ ಬದುಕುವುದಕ್ಕೆ ಸಾಧ್ಯವಾಗುವಂತಹ ಒಂದು ಸಂವಿಧಾನವನ್ನು ನಮಗೆ ನೀಡಲಾಗಿದೆ. ಅದು ನಮ್ಮ ಧರ್ಮವಾಗಬೇಕು. * ಪ್ರಸ್ತುತ ಸಾಂಸ್ಕೃತಿಕ ವಾತಾವರಣದ ಬಗ್ಗೆ ನಿಮಗೆ ಏನನ್ನಿಸುತ್ತಿದೆ ? ಉತ್ತರ : ಹೇಳುವುದು ಕಷ್ಟ. ಮೇಲೆ ನೀವು ಕೇಳಿದ `ಪ್ರಸ್ತುತ ರಾಜಕೀಯ’,  `ಧರ್ಮ ದೇವರು’ ಪ್ರಶ್ನೆಗಳೊಂದಿಗೆ ಇದೂ ಬೆಸೆದುಕೊಂಡಿದೆ.ನೂಲಿನ ಮೇಲೆ ನಡೆದ ಹಾಗೆ, ತುಸು ಆ ಕಡೆ ಜಾರಿದರೆ ರಾಜಕೀಯದೆಡೆಗೂ, ಈ ಕಡೆ ಜಾರಿದರೆ ಧಾರ್ಮಿಕತೆಯೆಡೆಗೂ ಗುರುತಿಸಲ್ಪಡುವ ಅಪಾಯವಿದೆ. * ಸಾಹಿತ್ಯ ವಲಯದ ರಾಜಕಾರಣದ ಬಗ್ಗೆ ನೀವು ಹೇಗೆ ಪ್ರತಿಕ್ರಿಯಿಸುವಿರಿ? ಉತ್ತರ : ಸಾಹಿತ್ಯವಲಯದ ರಾಜಕಾರಣ ಉಸಾಬರಿ ಯಿಂದ ನಾನು ದೂರ. ನನ್ನ ಪಾಡಿಗೆ ನಾನು ಬರೆದುಕೊಂಡಿರುವುದೇ ನನಗಿಷ್ಟ.ನೋಡುತ್ತಿದ್ದರೂ ಕೇಳುತ್ತಿದ್ದರೂ ತಿಳಿಯುತ್ತಿದ್ದರೂ ಆ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳಲಾರೆ. * ಈ ದೇಶದ ಚಲನೆಯ ಬಗ್ಗೆ ನಿಮ್ಮ ಮನಸು ಏನು ಹೇಳುತ್ತಿದೆ? ಉತ್ತರ : ದೇಶ ಎಂದರೆ ಏನು, ಹೇಗಿರಬೇಕು? ಎಂದು ಬಾಲ್ಯದಿಂದ ತಿಳಿದುಕೊಂಡು ಬಂದಿದ್ದೆವೋ ಈಗ ಹಾಗಿಲ್ಲ, ಹಾಗಾಗುತ್ತಿಲ್ಲ ಎನಿಸುತ್ತಿದೆ.ದೇಶದ ಅಭಿವೃದ್ಧಿ-ಆರ್ಥಿಕತೆಯ ಹಿನ್ನೆಲೆಯಿಂದ ಅಷ್ಟೇ ಅಲ್ಲ, ದೇಶದೊಳಗಿನ ಜನರ ಮತ್ತು ಸಮುದಾಯಗಳ ನಡುವಿನ ನಂಬಿಕೆ ವಿಶ್ವಾಸಗಳು ಸಡಿಲಗೊಳ್ಳುತ್ತಿದೆಯೇನೋ  ಅನಿಸುತ್ತಿದೆ. * ಸಾಹಿತ್ಯದ  ಬಗ್ಗೆ ನಿಮ್ಮ ಕನಸುಗಳೇನು ? ಉತ್ತರ : ನನಗೆ ಇನ್ನೂ ತುಂಬ ಬರೆಯುವುದಿದೆ ಅನಿಸುತ್ತದೆ. ಕತೆ ಕವಿತೆಗಳೊಂದಿಗೆ, ಕೆಲ ಹಾಸ್ಯ ಬರಹಗಳನ್ನು  ಬರೆದೆ. ಎರಡು ಮೂರು ನಾಟಕಗಳನ್ನು ಬರೆದೆ.ಕವಿತೆಯಂತೆ ಮಕ್ಕಳ ಪದ್ಯಗಳನ್ನು ಬರೆಯುವುದು ಸಹ ನನಗೆ ಇಷ್ಟ, ಒಂದು ಪುಸ್ತಕ ವಾಗುವಷ್ಟು ಶಿಶುಗವಿತೆಗಳಿವೆ.ಈ ತನಕ ನಾನು ಬರೆದಿರುವುದು ಏನೂ ಅಲ್ಲ,ಇದಕ್ಕಿಂತಲೂ ಉತ್ತಮವಾಗಿ ಬರೆಯುವ ಸಾಧ್ಯತೆ ಇದೆ ಎಂದು ಆಗಾಗ ಅಂದುಕೊಳ್ಳುತ್ತೇನೆ. ಹಾಗೆ ಬರೆಯುವ ಅವಕಾಶ ಮತ್ತು ಧ್ಯಾನ ನನ್ನ ಬದುಕಿನಲ್ಲಿ ಉಳಿಯುತ್ತದೆ ಎಂದುಕೊAಡಿದ್ದೇನೆ. * ಕನ್ನಡ  ಹಾಗೂ ಆಂಗ್ಲ ಭಾಷೆಯ ಸಾಹಿತ್ಯದಲ್ಲಿ ನಿಮ್ಮ ಇಷ್ಟದ ಹಾಗೂ ಕಾಡಿದ ಕವಿ, ಸಾಹಿತಿ  ಯಾರು ? ಉತ್ತರ : ಕೇವಲ ೬ನೇ ತರಗತಿ ಓದಿರುವ ನಾನು ಆಂಗ್ಲ ಸಾಹಿತ್ಯವನ್ನು ಓದಲಾರೆ. ಹಲವು ಅನುವಾದಿತ ಸಾಹಿತ್ಯವನ್ನು ಓದಿದ್ದೇನೆ.ನಿರಂಜನರು ಸಂಪಾದಿಸಿದ ‘ವಿಶ್ವಕಥಾಕೋಶ’ದ ಪುಸ್ತಕಗಳು ನನ್ನನ್ನು ತುಂಬ ಕಾಡಿವೆ.ಇಷ್ಟದ ಸಾಹಿತಿಗಳು ಎಂದು ಒಬ್ಬ ಸಾಹಿತಿಯನ್ನು ಗುರುತಿಸಲಾರೆ. ಬೇಂದ್ರೆ, ಕುವೆಂಪು, ಕಾರಂತ, ಕಂಬಾರ, ಅಡಿಗರಿಂದ ಹಿಡಿದು ನನ್ನ ತಲೆಮಾರಿನವರೆಗಿನ ಅನೇಕರ ಕಾವ್ಯ ಕಥೆ ಪ್ರಬಂಧ ವಿಮರ್ಶೆ ಮೊದಲಾದವುಗಳನ್ನು ಇಷ್ಟಪಟ್ಟಿದ್ದೇನೆ. * ಈಚೆಗೆ ಓದಿದ ಕೃತಿಗಳಾವವು? ಉತ್ತರ : ಸಮುದಾಯದ ಗಾಂಧಿ, ಬುದ್ಧಚರಿತೆ, ವಿರಕ್ತರ ಬಟ್ಟೆಗಳು, ಜಾಂಬ್ಳಿ ಟುವಾಲು, ನಾನು ಕಸ್ತೂರ್…. ಇತ್ಯಾದಿ. * ನಿಮಗೆ ಇಷ್ಟವಾದ ಕೆಲಸ ಯಾವುದು? ಉತ್ತರ : ನಾನು ಒಪ್ಪಿಕೊಂಡ- ಅಪ್ಪಿಕೊಂಡ ನಿತ್ಯದ ನನ್ನ ಕೃಷಿ ಕೆಲಸ, ಓದು ಬರವಣಿಗೆ, ಅಪರೂಪದ ತಿರುಗಾಟ ಎಲ್ಲವೂ ನನಗೆ ಇಷ್ಟವೇ. * ನಿಮಗೆ ಇಷ್ಟವಾದ ಸ್ಥಳ ಯಾವುದು ? ಉತ್ತರ : ನನ್ನ ಮನೆ, ನೆಲ, ಊರು, ಬೆಟ್ಟ-ಗುಡ್ಡ, ಹೊಳೆ… ಹಾಗೆ ಹೇಳುವುದಾದರೆ ಇಡೀ ಭೂಮಿಯ ವೈವಿಧ್ಯತೆ ಮತ್ತು ಸಮೃದ್ಧತೆಯ ಬಗ್ಗೆ ನನಗೆ ಅತಿ ಪ್ರೀತಿ-ಕುತೂಹಲವಿದೆ. ಎಲ್ಲವನ್ನು ಕಾಣಬೇಕೆಂಬ ಹಂಬಲವಿದೆ. * ನಿಮ್ಮ ಪ್ರೀತಿಯ, ತುಂಬಾ ಇಷ್ಟ ಪಡುವ  ಸಿನಿಮಾ ಯಾವುದು? ಉತ್ತರ :ಇತ್ತೀಚಿನ ವರ್ಷಗಳಲ್ಲಿ ನಾನು ತುಂಬ ಇಷ್ಟಪಟ್ಟು  ಮತ್ತೆ ಮತ್ತೆ ನೋಡಿದ ಸಿನಿಮಾಗಳೆಂದರೆ ಕನ್ನಡದ ‘ಮೌನಿ’ ಮತ್ತು ‘ಕನಸೆಂಬೋ ಕುದುರೆಯನೇರಿ’ ‘ಬೇಲಿ ಮತ್ತು ಹೊಲ’. ಹಿಂದಿ ಭಾಷೆಯ ‘ಪಿಕೆ’. * ನೀವು ಮರೆಯಲಾರದ ಘಟನೆ ಯಾವುದು? ಉತ್ತರ : ಮರೆಯಲಾಗದ ಘಟನೆ ಎಂದು ಯಾವುದೋ ಒಂದನ್ನು ಹೇಳಲಾರೆ.ಸಾಮಾನ್ಯ ಬುದ್ಧಿ ತಿಳಿದಾಗಿನಿಂದ ನನ್ನ ವ್ಯಾಪ್ತಿಯಲ್ಲಿ ನಡೆದ ಘಟನೆಗಳನ್ನು ಸಾಮಾನ್ಯ ನೆನಪಿಟ್ಟುಕೊಳ್ಳುತ್ತ ಬಂದಿದ್ದೇನೆ. ಪ್ರತಿಯೊಂದೂ ನನಗೆ ಮರೆಯಲಾಗದ ಘಟನೆಯೇ, ಕೆಲ ಮಟ್ಟಿಗೆ ಮರೆಯಲಾಗದುದು ನನ್ನ ದೌರ್ಬಲ್ಯವೂ ಹೌದು.  ಅವುಗಳಲ್ಲಿ ನನ್ನನ್ನು ತುಂಬ ಕಾಡುವುದು ಸಾವು. ನಾನು ಆರೇಳು ವರ್ಷದವನಿದ್ದಾಗ ಸಂಭವಿಸಿದ ನನ್ನ ತಂದೆಯ ದುರ್ಮರಣದಿಂದ ಆರಂಭವಾದದ್ದು ಅದು. ಸಾವು ಅನಿವಾರ್ಯ ಮತ್ತು ಸಹಜ ಎಂಬುದು ತಿಳಿದಿದ್ದರೂ, ಪ್ರತಿ ಸಾವಿನ ನಂತರ ಉಂಟಾಗುವ ಶೂನ್ಯದ ಅನುಭವ ನನ್ನನ್ನು ಮತ್ತೆ ಮತ್ತೆ ಕದಡುತ್ತದೆ.********************************** ಲೇಖಕರ ಬಗ್ಗೆ: ಹರಪನಹಳ್ಳಿ ಹುಟ್ಟೂರು. ಹರಪನಹಳ್ಳಿ ತಾಲೂಕಿನ ಮೈದೂರು-ಚಿಗಟೇರಿ ಬೆಳೆದ ಊರು. ಪಿಯು ಓದಿದ್ದು ಕೊಟ್ಟೂರಿನಲ್ಲಿ. ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಬಿ.ಎ., ಕವಿವಿಯಲ್ಲಿ ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ. ದಾವಣಗೆರೆ, ಸದಾಶಿವಗಡ ಮತ್ತು ಭಟ್ಕಳದಲ್ಲಿ ಕನ್ನಡ ಉಪನ್ಯಾಸಕರಾಗಿ ಕೆಲಸ ನಿರ್ವಹಿಸಿ, 1997 ರಿಂದ ಕಾರವಾರದಲ್ಲಿ ಪತ್ರಕರ್ತರಾಗಿ ಕೆಲಸ ಮಾಡುತ್ತಿದ್ದಾರೆ. ಜನವಾಹಿನಿ, ಜನಾಂತರಂಗ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿದ ಇವರು, ಈ ಟಿವಿ ಕನ್ನಡ ನ್ಯೂಸ್ ಚಾನೆಲ್ಲಿಗೆ ವರದಿಗಾರಿಕೆ ಬಳಿಕ ಈಗ ಉದಯವಾಣಿ , ಬೆಳಗಾವಿಯ ಲೋಕದರ್ಶನ ಪತ್ರಿಕೆಗೆ ವರದಿಗಾರರಾಗಿದ್ದಾರೆ. 2009ರಲ್ಲಿ ‘ಕಡಲದಂಡೆಗೆ ಬಂದ ಬಯಲು’ ಎಂಬ ಕಥಾ ಸಂಕಲನ, 2013ರಲ್ಲಿ ‘ಬಿಸಿಲ ಬಯಲ ಕಡಲು’ ಎಂಬ ಕವಿತಾ ಸಂಕಲನ ಪ್ರಕಟಣೆ.2019 ರಲ್ಲಿ ‘ವಿರಹಿದಂಡೆ’ ಕವಿತಾ ಸಂಕಲನ ಪ್ರಕಟಿಸಿದ್ದಾರೆ. ಕಾರವಾರ ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.‌

Read Post »

You cannot copy content of this page

Scroll to Top