ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಅನುವಾದ

ಮನೆಯಲ್ಲೇ ಉಳಿದರು ಜನರು

ಮೂಲ: ಕ್ಯಾಥಲೀನ್ ಓ ಮಿಯರಾ ಕನ್ನಡಕ್ಕೆ: ನಂದಿನಿ ವಿಶ್ವನಾಥ್ ಹೆದ್ದುರ್ಗ ನಂದಿನಿ ವಿಶ್ವನಾಥ್ ಹೆದ್ದುರ್ಗ ಆಗ…ಮನೆಯಲ್ಲೇ ಉಳಿದರು ಜನರುಓದಿದರುಕೇಳಿದರುಪದ ಕಟ್ಟಿ ಹಾಡಿಒಟ್ಟಾಗಿ ಉಂಡುವಿರಮಿಸಿ,ಹೊಸದೆಂಬಂತೆ ರಮಿಸಿದುಡಿದು ಬೆವರಿಗೋಡೆಗೊಂದು ಕಲಾಕೃತಿ ಮಾಡಿ ಕಣ್ತುಂಬಿಕೊಂಡು.. ಮರೆತ ಹಳೆಯ ಆಟಗಳ ಆಡಿಮನೆಯಲ್ಲೇ ಉಳಿದುಹೊಸತುಗಳ ಅನ್ವೇಷಣೆ ಹೂಡಿಹೊರಗಡಿಯಿಡುವುದರ ತಮ್ಮಷ್ಟಕ್ಕೇ ತಡೆದುತಮ್ಮೊಳಗಿನ ಧ್ವನಿಯ ತದೇಕ ಕೇಳಿ..ಕೆಲವರು ಧ್ಯಾನಿಸಿಕೆಲವರು ಪ್ರಾರ್ಥಿಸಿಕೆಲವರು ನರ್ತಿಸಿತಮ್ಮ ನೆರಳನ್ನೇ ಮುಖಾಮುಖಿಯಾಗಿಸಿ ಮಾತಾಡಿ..ಬೇರೆಯದೇ ಬಗೆಯಲ್ಲಿ ಬದುಕ ಅರ್ಥೈಸಿಆರಾಮಾದರು ಅವರ ಪಾಡಿಗೆ ಅವರು.. ನಿರ್ಲಕ್ಷದಲಿ ಬದುಕಿದವರ ಗೈರಿನಲ್ಲಿ.,ಹೃದಯವಿಲ್ಲದವರ,ಅರ್ಥವಿಲ್ಲದವರಅಪಾಯಕಾರಿಗಳಹಾಜಾರಾತಿಯ ಕುಂದಿನಲ್ಲಿಧರಣಿಯೂ ಕ್ರಮೇಣ ಕಳೆಕಳೆಯಾಗಿಜಗವನ್ನಾವರಿಸಿದ್ದ ಬೇಗೆ ಅಂತೂ ಮುಗಿಯಲೂ., ಜಗದ ಅದದೇ ಜನರು ಹೊಸದಾಗಿ ಪರಿಚಯಿಸಿಕೊಂಡರು ಒಬ್ಬರಿಗೊಬ್ಬರು..ತೀರಿಕೊಂಡವರಿಗಾಗಿ ಕಣ್ಣೀರು ಮಿಡಿದರು..ಕೈಗೊಂಡರು ಬದುಕಿಗೆ ಹೊಸದಾದ ಆಯ್ಕೆಹೊಸ ದೃಷ್ಟಿಕೋನಹೊಸದಾದ ಬದುಕುವ ವಿಧಾನ.. ನೋಡನೋಡುತ್ತಲೇಹೊಸ ಜನ್ಮ ಪಡೆದು ಸಂಭ್ರಮಿಸಿದರು ಮಂದಿ…!ಹೊಸ ಹುಟ್ಟು ಪಡೆದಳು ನೆಲದಾಯಿ…!! *************************

ಮನೆಯಲ್ಲೇ ಉಳಿದರು ಜನರು Read Post »

ಕಾವ್ಯಯಾನ

ಅರಳದ ಮೊಗ್ಗು

ಸೌಜನ್ಯ ದತ್ತರಾಜ ಜಗದ ಜಾತ್ರೆಯೊಳಿದ್ದೂನೀನು ಲೋಕಕಂಟದ ಜಂಗಮನಿನ್ನಾಚೆ ಈಚೆ ತಿರುತಿರುಗಿಯೂಪಲ್ಲವಿಸುತ್ತಿಲ್ಲ ನಿನ್ನೊಳಗೆ ಪ್ರೀತಿ ಪ್ರೇಮ ಆಗುವುದಾದರೆ ಆಗಬೇಕಿತ್ತುಇಷ್ಟರೊಳಗೆ ನಮ್ಮಿಬ್ಬರ ಸಂಗಮಕಠೋರತೆಯನೇ ಕವಚವಾಗಿಸಿಕೊಂಡಿರುವನಿನಗೆ ಬೇಕಿಲ್ಲ ಪ್ರೇಮ ಮೋಹದ ಸಂಭ್ರಮ ಕಾದೆ ನಾನು ಶಬರಿಯಂತೆಅದೆಷ್ಟು ಕಾಲ ನಿನ್ನೊಂದು ಕಾಣ್ಕೆಗಾಗಿಕಾಣದಾದೆಯಲ್ಲ ನೀನುನನ್ನ ಪ್ರೇಮವ ಕಣ್ಣಿದ್ದೂ ಕುರುಡನಾಗಿ ಅರಳದಿರುವ ಮೊಗ್ಗಿಗಾಗಿಕಾಯಬೇಕು ತಾನೇ ಯಾವ ಹಿಗ್ಗಿಗಾಗಿನಡೆಯುತಿರುವೆವು ಇಬ್ಬರೂ ರಸ್ತೆಯತ್ತ ಇತ್ತಕೈಗೆಟುಕದ ಅದಾವುದೋ ಗುರಿಯೆಡೆಗೆ ನೋಡುತ್ತಾ **********************

ಅರಳದ ಮೊಗ್ಗು Read Post »

ಕಾವ್ಯಯಾನ

ಜೀವ ತುಂಬಿದ ಚಿತ್ರ

ಬಿದಲೋಟಿ ರಂಗನಾಥ್ ಅಲೆಯುವ ಕನಸುಗಳನ್ನುಹಿಡಿದು ಮಾತಾಡಿಸಿದೆಮಣ್ಣಲ್ಲಿ ಮಣ್ಣಾದ ಅವುಗಳ ಜೀವನೋಯ್ಯುತಿತ್ತು ನೆಲದ ಪದರಗಳ್ನು ಬಿಡಿಸುತ್ತಾದಾರಿಯಿಲ್ಲದ ದಾರಿಯ ಮೇಲೆ ನಡೆದುಉಸಿರಾಡಿದ ಜೀವಗಳನ್ನು ಮುಟ್ಟಿನೆವೆಯುವ ಕಣ್ಣಂಚಿನ ದೀಪಗಳುಮರುಗುತ್ತಿದ್ದವು ಮಣ್ಣಲ್ಲಿ ಬೆರೆತು ಬೆತ್ತಲಾಗದ ಕಳಂಕಿತ ಮನಸನು ಸುಡಲುಅರೆಬೆಂದ ಜೀವ ಕೊರಗುತ್ತಿದೆಅಲೆಯುತ ನಿರಾಕಾರವಾಗಿ..ನೆಲಕೆ ಬೆನ್ನಾಕಿ. ಮಾಡಿದ ದೋಕಕೆಬೆವರಿದ ಮೆದುಳುಕರಗುತ್ತಿದೆ ಕೊರಳನು ತಬ್ಬಿಅವನೋ ಮರೆಯಲಾಗದ ನೆನಪುಮಣ್ಣಿನಲಿ ಮೂಡಿದ ಕಣ್ಣುನೋಡುತಿದೆ…ಕಾಣದ ಕಡಲಿನ ಗೆರೆಯ ಕಡೆ… ಜೀವ ತುಂಬಿದ ಚಿತ್ರಎದೆಯಲಿ ಅರಳುತ್ತಲೇ ಇದೆ. **************

ಜೀವ ತುಂಬಿದ ಚಿತ್ರ Read Post »

ಇತರೆ, ಜೀವನ

ಕೋವಿಡ್-19,ಆತ್ಮಾವಲೋಕನ

ಸುರೇಶ್ ಎನ್.ಶಿಕಾರಿಪುರ ಕೋವಿಡ್ -೧೯ ಆತ್ಮಾವಲೋಕನದ ಅದೃಶ್ಯ ದೂತ. ತೊಂಬತ್ತರ ದಶಕದಿಂದ ಇಲ್ಲಿಯ ವರೆಗೆ ಅಂದರೆ ಸುಮಾರು ಮೂವತ್ತು ವರ್ಷಗಳಿಂದ ಈ ದೇಶದಲ್ಲಿ ಮಂದಿರ – ಮಸೀದಿಗಾಗಿ ನಡೆದ ಕಲಹ ಕಿತ್ತಾಟ ಹೋರಾಟ ರಾಜಕೀಯ ಈಗ ಫಲ ನೀಡುತ್ತಿದೆ. ಬಿತ್ತಿದ್ದೇ ಬೆಳೆಯುವುದು. ಜ್ಞಾನವನ್ನು ಬಿತ್ತಿದರೆ ಜ್ಞಾನ ಅಜ್ಞಾನವನ್ನು ಬಿತ್ತಿದರೆ ಅಜ್ಞಾನ. ಈ ದೇಶದ ಬಹುದೊಡ್ಡ ಯುವ ಸಮುದಾಯವನ್ನು ಮಂದಿರ ನಿರ್ನಾಮ ಮತ್ತು ನಿರ್ಮಾಣಕ್ಕೆ ಹುರಿದುಂಬಿಸಿ ನಾನಾ ಬಗೆಯ ಧಾರ್ಮಿಕ ತಳಹದಿಯ ಸಂಘಟನೆಗಳನ್ನು ಕಟ್ಟಿ ಹಿಂದೂ ರಾಷ್ಟ್ರ ನಿರ್ಮಾಣದ ಕಾರ್ಯಕ್ಕೆ ಯೋಧರನ್ನಾಗಿ ಪ್ರಯೋಗಿಸಲಾಯಿತು. ಈಗಲೂ ಅದು ಮುಂದುವರೆದೇ ಇದೆ. ಈ ಮತೀಯ ಹೋರಾಟಗಳು ಸೃಷ್ಟಿಸಿದ ಹಿಂಸೆ ಒಡಕು ಅಶಾಂತಿ ಅಂಧಕಾರ ಅಪನಂಬಿಕೆ ಅಂತಿಂಥಾದ್ದಲ್ಲ. ಪ್ರಗತಿಪರವಾಗಿ ಯುವ ಸಮುದಾಯವನ್ನು ಕಟ್ಟದೇ ಹೋದರೆ ಏನೇನು ಯಡವಟ್ಟುಗಳಾಗಬೇಕೊ ಅವೆಲ್ಲವೂ ಆಗುತ್ತವೆ‌ ಎಂಬುದಕ್ಕೆ ನಮ್ಮ ದೇಶದ ಇಂದಿನ ಸ್ಥಿತಿ ತಾಜಾ ಉದಾಹರಣೆ. ರಾಜಕೀಯ ಪಕ್ಷಗಳು ಧರ್ಮಾಧಾರಿತವಾದಾಗ ಅವು ಮಂದಿರ ಮಸೀದಿ ಇಗರ್ಜಿ, ಮಠಗಳು, ಬಾಬಾಗಳು, ದೇವರು ದಿಂಡಿರುಗಳ ಕಡೆಗೇ ಯೋಚಿಸುತ್ತವೋ ಹೊರತು ಒಂದು ಸಶಕ್ತ ವೈಜ್ಞಾನಿಕ ವೈಚಾರಿಕ ಸಮಾಜವನ್ನು ದೇಶವನ್ನು ಕಟ್ಟಲು ಅವುಗಳಿಂದ ಸಾಧ್ಯವಿಲ್ಲ‌. ಅದರ ಪ್ರತಿಫಲವೇ ಇಂದು ಭಾರತ ಎದುರಿಸುತ್ತಿರುವ ಕೋವಿಡ್-19 ಸಮಸ್ಯೆ. ಇದು ಒಂದು ಉದಾಹರಣೆಯಷ್ಟೆ. ಭಾರತದ ದಾರಿದ್ರ್ಯದ ಹಿಂದೆ ಇರುವುದೂ ಈ ವಿಚಾರಗಳೇ. ಈ ದೇಶದಲ್ಲಿ ಮಂದಿರ ಮಸೀದಿಗಾಗಿ ನಡೆದ ಮೆರವಣಿಗೆ, ಹೊಡೆದಾಟ, ವಾಗ್ವಾದ, ವಿಮರ್ಶೆ, ಊರು, ದೇಶ, ರಾಜ್ಯಗಳ ಬಂದ್ ಗಳು, ಸಮಾವೇಷಗಳು, ಬೈಟಕ್ ಗಳು, ರ್ಯಾಲಿಗಳು, ಭಾಷಣಗಳು, ಚುನಾವಣಾ ಪ್ರಣಾಳಿಕೆಗಳು, ಘೋಷಣೆಗಳು, ಶಂಕನಾದಗಳು, ರಥ ಯಾತ್ರೆಗಳು, ರಸ್ತೆ ತಡೆಗಳು, ಬಯ್ಕಾಟುಗಳು, ಆರೋಗ್ಯ ಶಿಕ್ಷಣ, ಸದೃಢ ಆರೋಗ್ಯ ವ್ಯವಸ್ಥೆ, ಆಸ್ಪತ್ರೆಗಳ ನಿರ್ಮಾಣ, ಸಂಶೋಧನೆಗಳು, ಪ್ರಯೋಗಾಯಲಗಳು, ಹೊಸಹೊಸ ವೈದ್ಯಕೀಯ ಆವಿಷ್ಕಾರಗಳು, ಔಷಧ, ಅಂಬ್ಯುಲೆನ್ಸ್, ಸಿಬ್ಬಂಧಿ ನೇಮಕಾತಿ ಮೊದಲಾದ ಮೂಲಭೂತ ಸೌಕರ್ಯಗಳು, ಶಿಕ್ಷಣ ಮೊದಲಾದವಕ್ಕಾಗಿ ನೆಡೆದಿದ್ದರೆ ಇಂದು ಭಾರತ ಅತ್ಯಂತ ಮುಂದುವರೆದ ದೇಶಗಳೆನಿಸಿಕೊಳ್ಳುತ್ತಿರು ಯಾವುದೇ ರಾಷ್ಟ್ರಗಳಿಗಿಂತ ಉನ್ನತ ಸ್ಥಿತಿಯಲ್ಲಿರುತ್ತಿತ್ತು. ಚಿಕಿತ್ಸೆ ಸಿಗದೆ, ಅನ್ನ ಸಿಗದೆ, ಆಶ್ರಯ ಸಿಗದೆ ಜನರು ಗುಳೇ ಹೋಗುವ, ಬೀದಿ ಬೀದಿಯಲ್ಲಿ ಬಿದ್ದು ಸಾಯುವ ಸ್ಥಿತಿ ಬರುತ್ತಿರಲಿಲ್ಲ. ಕೋವಿಡ್ – 19ರ ಈ ತುರ್ತು ಪರಿಸ್ಥಿತಿಯಲ್ಲಿ ಮಂದಿರ ಮಸೀದಿಗಳು ಜನರನ್ನು ರಕ್ಷಿಸಲಾರವು ಎಂಬುದನ್ನು ಈಗಲಾದರೂ ನಮ್ಮ ಯುವ ಸಮುದಾಯ ಅರ್ಥ ಮಾಡಿಕೊಳ್ಳಬೇಕು‌. ದಶಕಗಳಿಂದ ಯುವಕರನ್ನು ಧಾರ್ಮಿಕ ವಿಚಾರಗಳಿಗೆ ಪ್ರಚೋದಿಸಿ ಬಳಸಿಕೊಂಡದ್ದೇನಾದರೂ ಇಂದು ಉಪಯೋಗಕ್ಕೆ ಬರುತ್ತಿದೆಯೇ ಎಂಬುದನ್ನು ಆಲೋಚಿಸಬೇಕು. ಮನುಷ್ಯರ ಜೀವವನ್ನು ಉಳಿಸಲು, ರಕ್ಷಿಸಲು ಉಪಯೋಕ್ಕೆ ಬಾರದ ಮಂದಿರ – ಮಸೀದಿ ಧರ್ಮಗಳ ಗುಂಗಿನಿಂದ ಈಗಲಾದರೂ ಹೊರಬರಬೇಕು. ನಮ್ಮ ದೇಶ ಗಡ್ಡಕ್ಕೆ ಬೆಂಕಿ ಹತ್ತಿದಾಗ ಬಾವಿ ತೋಡುವ ಪ್ರಯತ್ನ ಮಾಡುತ್ತಿದೆ. ನಮಗೆ ಸರಿಯಾದ ಸುರಕ್ಷತಾ ವ್ಯವಸ್ಥೆಗಳು ಇಲ್ಲ ಎಂದು ವೈದ್ಯಕೀಯ ವಲಯದಿಂದ ಹತಾಷೆಯ ಕೂಗುಗಳು ಅಲ್ಲಲ್ಲಿ ಕೇಳಬರುತ್ತಿವೆ. ಯಾರನ್ನು ಯೋಧರು ಎಂದು ಈಗ ಪರಿಗಣಿಸಲಾಗಿದೆಯೋ ಅವರು ಚಿಕಿತ್ಸೆ ನೀಡಲು ಹೆದರುತ್ತಿದ್ದಾರೆ ಹಿಂಜರಿಯುತ್ತಿದ್ದಾರೆ. ಜನ ಭೀತಿಯಿಂದ ಕಂಗಾಲಾಗಿದ್ದಾರೆ. ಖಾಸಗೀ ಆಸ್ಪತ್ರೆಗಳು ಕೊರೋನಾ ರೋಗಿಗಳಿಗಾಗಿ ಬಿಲ್ ಬುಕ್ಕು ಹಿಡಿದು ರೆಡ್ ಕಾರ್ಪೆಟ್ ಹಾಸಿ ಕಾಯುತ್ತಿವೆ‌. ಸರ್ಕಾರಿ ವ್ಯವಸ್ಥೆ ವಿಫಲವಾಗಿದೆ, ಸೋತು ಕೈ ಚೆಲ್ಲವ ಹತಾಶ ಹಂತ ತಲುಪಿಯಾಗಿದೆ. ಇದೆಲ್ಲವೂ ಅವಿವೇಕದ ಅವೈಜ್ಞಾನಿಕ ಹಾಗೂ ಅವೈಚಾರಿಕ ವಿಚಾರಗಳಿಗೆ ಮನ್ನಣೆ ಕೊಟ್ಟದ್ದರ ಫಲ. ಭ್ರಷ್ಟಾಚಾರದ ಫಲ ಹಾಗೂ ಹೊಣೆಗೇಡಿತನದ, ಸ್ವಾರ್ಥದ ಫಲ. ಸರ್ಕಾರವೂ ವಿಫಲವಾಗಿದೆ. ಹಣವೂ ಇಲ್ಲ ಸುಸಜ್ಜಿತ ವೈದ್ಯಕೀಯ ಸೌಲಭ್ಯಗಳೂ ಇಲ್ಲ. ಕೋವಿಡ್ ಹೆಸರಿನಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂಬ ಕೂಗೂ ಎದ್ದಿದೆ. ಇದೇ ಸರಿಯಾದ ಹೊತ್ತು ಎಂದು ಕೊರೋನಾಕ್ಕೆ ಮದ್ದು ಕಂಡು ಹಿಡಿದಿರುವುದಾಗಿ ಸುಳ್ಳು ಪ್ರಚಾರ ಮಾಡಿ ಆ ಮೂಲಕ ಜನರ ಆರೋಗ್ಯದ ಜೊತೆ ಆತಂಕದ ಜೊತೆ ಚಲ್ಲಾಟವಾಡುತ್ತಾ ಅವರ ಮಾನಸಿಕ ದೌರ್ಬಲ್ಯವನ್ನೇ ಬಂಡವಾಳ ಮಾಡಿಕೊಂಡು ಕೋಟಿ ಕೋಟಿ ಹಣ ಲಪಟಾಯಿಸುವ ಔಷಧ ದಂಧೆ ಕೋರರು ಕುಣಿದಾಡುತ್ತಿದ್ದಾರೆ. ಹಾಗಿದ್ದರೂ ಆಳುವ ವ್ಯವಸ್ಥೆ ಅಂತವರ ಮೇಲೆ ಮೃದು ಧೋರಣೆಯನ್ನು ತಾಳಿದೆ. ಇದರ ವಿರುದ್ಧ ಯುವ ಸಮುದಾಯ ಜನತೆ ದಂಗೆ ಏಳುವುದಿಲ್ಲ ಎಂಬ ಖಾತ್ರಿ ಮೇಲಿನವರಿಗಿದೆ ಏಕೆಂದರೆ ಜನತೆಯನ್ನು ಹೇಗೆ ಭಾವನಾತ್ಮಕವಾಗಿ ವಂಚಿಸಿದ್ದೇವೆ ಅದು ಯಾವ ರೀತಿಯ ಕೆಲಸ ಮಾಡುತ್ತಿದೆ ಎಂಬ ಸತ್ಯ ಅವರಿಗೂ ಚನ್ನಾಗಿಯೇ ಗೊತ್ತಿದೆ. ಒಂದು ಸಂಸ್ಥೆಯಂತೂ ಈಗಾಗಲೇ ಕೋವಿಡ್ ಗೆ ತಾನು ಔಷಧ ಕಂಡು ಹಿಡಿದಿದ್ದು ಮುಂಬರು ಅಗಸ್ಟ್ ೧೫ ಕ್ಕೆ ಅದನ್ನು ಬಿಡುಗಡೆ ಮಾಡುವುದಾಗಿಯೂ ಘೋಷಿಸಿದೆ ಅದರ ವೈಜ್ಞಾನಿಕ ಸಾಧ್ಯಾಸಾಧ್ಯತೆಗಳ ವಿರುದ್ಧ  ದನಿ ಎದ್ದಾಗ ಎಚ್ಚೆತ್ತು ಮುಂಬರುವ ವರ್ಷಕ್ಕೆ ಔಷದ ಲಭ್ಯತೆಯ ಸಾಧ್ಯತೆಯನ್ನು ಮುಂದೂಡಿದೆ. ಯೋಗ ಗುರುವೊಬ್ಬರು ಕೆಮ್ಮು ಮತ್ತು ಜ್ವರಕ್ಕೆ ತಾನು ಔಷಧ ತಯಾರಿಸಿರುವುದಾಗಿ ಕೇಂದ್ರ ಆಯುಷ್ ಇಲಾಖೆಗೆ ಅನುಮತಿ ಕೋರಿ ಅರ್ಜಿ ಹಾಕಿ ಇತ್ತ ತಾನು ಕೊರೋನಾ ಜ್ವರಕ್ಕೆ ಕೊರೋನಿಲ್ ಎಂಬ ಔಷಧ ತಯಾರಿಸಿರುವುದಾಗಿ ದೊಡ್ಡ ಜಾಹಿರಾತು ನೀಡುವ ಮೂಲಕ ಲಾಭಿಗೆ ನಿತ್ತಿದೆ. ಆಯುಷ್ ಇಲಾಖೆ ನೋಟಿಸ್ ನೀಡಿದ್ದರೂ, ಬಾಬಾ ರಾಮದೇವ ಅವರ ಮೇಲೆ ಹಾಗೂ ಅವರ ಆಪ್ತರೊಬ್ಬರ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸಿರುವುದಾಗಿ ಹೇಳುತ್ತಿದ್ದರೂ ಕೇಂದ್ರದ ಮಂತ್ರಿಗಳು ಮಾತ್ರ ವಿಶ್ವಾಸಾರ್ಹವಲ್ಲದ ಲಾಭದ ದಂಧೆಯಾಗಿರುವ ಇದನ್ನು ಸಮರ್ಥಿಸಿಕೊಳ್ಳುತ್ತಾರೆ‌. ಇದನ್ನೆಲ್ಲ ಹ್ಞೂ ಎನ್ನಲು ದೇಶದ ಮೂಲೆ ಮೂಲೆಯಲ್ಲಿ ಅಂಧಾಭಿಮಾನಿಗಳ ದೊಡ್ಡಪಡೆಯೂ ಅವರ ಬೆನ್ನಿಗೆ ಇದೆ. ಅಂತಿಮವಾಗಿ ಇದರ ಫಲಿತಾಂಶ ಪ್ರಜಾ ಸಮೂಹದ ಮೇಲೆಯೇ. ವೈಜ್ಞಾನಿಕ ಮನೋಭಾವವನ್ನು ದೇಶದ  ಯುವಕರಲ್ಲಿ ಸಮಸ್ತ ಪ್ರಜಾ ಸಮೂಹದಲ್ಲಿ ಬೆಳೆಸದೆ ಧಾರ್ಮಿಕ ಮನೋಭಾವವನ್ನು ಬಿತ್ತಿ ಬೆಳೆದಿದ್ದರ ಫಲ ಇಂದು ಕಣ್ಣೆದುರೇ ಕಾಣುತ್ತಿದೆ. ಬಾಲ್ಕನಿಗೆ ಬಂದು ಚಪ್ಪಾಳೆ ಹೊಡೆದೂ ಆಯಿತು, ಮನೆ ಮನೆಯಲ್ಲಿ ಹಣತೆ ಹಚ್ಚಿಯೂ ಆಯಿತು. ಬಾಲ್ಕನಿಗೆ ಬಂದು ಚಪ್ಪಾಳೆ ತಟ್ಟಿದರೆ ಊರೊಳಗೆ ನುಗ್ಗಿದ ಮಾರಿ ಹೆದರಿ ಓಡಿ ಹೋಗಲು ಅದೇನು ಗದ್ದೆಯ ಫಸಲಿಗೆ ಮುತ್ತಿದ ಹಕ್ಕಿಯ ಹಿಂಡೇ…? ಕೊನೆಗೆ ಇದೆಲ್ಲವನ್ನೂ ಮಾಡಲು ಹೇಳಿ ಮಾಡಿಸಿದ ಆಳುವ ನಾಯಕ ‘ಕೋವಿಡ್ ನೊಂದಿಗೆ ಜೀವಿಸುವುದ ಕಲಿಯಿರಿ’ ಎಂದುಬಿಟ್ಟ. ಇಂತಹ ಸ್ಥಿತಿ ನಿರ್ಮಾಣವಾಗುವುದು ದೌರ್ಬಲ್ಯದಿಂದ. ದೌರ್ಬಲ್ಯವು ಬರುವುದು ಮೌಢ್ಯ ಮತ್ತು ಮತೀಯ ಸೈದ್ಧಾಂತಿಕತೆಯನ್ನು ಬಿತ್ತಿ ವೈಜ್ಞಾನಿಕತೆಯನ್ನು ಉದಾಸೀನ ಮಾಡುವುದರಿಂದ. ಲಂಕೇಶ್ ಅಂದೇ ಹೇಳಿದ್ದರು ‘ಇಟ್ಟಿಗೆ ಪವಿತ್ರವಲ್ಲ ಜೀವ ಪವಿತ್ರ’ ಎಂದು. ಆ ಮಾತು ಈಗ ನೆನಪಾಗುತ್ತಿದೆ. ಪವಿತ್ರವಾದ ಜೀವಗಳನ್ನು ಉಳಿಸಲು ಈಗ ಯಾವ ಮಂದಿರ ಮಸೀದಿಗಳೂ ಆ ಕುರಿತ ರಾಜಕೀಯ ವಿಚಾರ ವಾಗ್ವಾದಗಳೂ ಬರುವುದಿಲ್ಲ ಹಾಗೂ ಸಶಕ್ತವಾಗಿಲ್ಲ. ಜಢ ಸಿದ್ಧಾಂತಗಳಿಂದ ಹೊರಬಂದು ನಾವೀಗ ಅವಲೋಕಿಸಬೇಕಾಗಿದೆ. ನಾವು ಮಾತ್ರವಲ್ಲ ನಮ್ಮನ್ನಾಳುವ ನಾಯಕರೂ… “ಓ ಬನ್ನಿ ಸೋದರರೆ ಬೇಗ ಬನ್ನಿ ಗುಡಿ ಚರ್ಚು  ಮಸಜೀದಿಗಳ ಬಿಟ್ಟು ಹೊರ ಬನ್ನಿ ಬಡತನವ ಬುಡಮಟ್ಟ ಕೀಳ ಬನ್ನಿ ಮೌಡ್ಯತೆಯ ಮಾರಿಯನು ಹೊರದೂಡಲೈ ತನ್ನಿ ವಿಜ್ಞಾನ ದೀವಿಗೆಯ ಹಿಡಿಯ ಬನ್ನಿ ಓ ಬನ್ನಿ ಸೋದರರೆ ಬೇಗ ಬನ್ನಿ……. ಸಿಲುಕದಿರಿ ಮತವೆಂಬ ಮೊಹದಜ್ಞಾನಕ್ಕೆ ಮತಿಯಿಂದ ದುಡುಯಿರೈ ಲೋಕ ಹಿತಕೆ ಆ ಮತದ ಈ ಮತದ ಹಳೆಮತದ ಸಹವಾಸ ಸಾಕಿನ್ನು ಸೇರಿರೈ ಮನುಜ ಮತಕ್ಕೆ ಓ ಬನ್ನಿ ಸೋದರರೇ ವಿಶ್ವ ಪಥಕೆ…..” ಎಂದು ಕವಿ ಕುವೆಂಪು ಸುಮ್ಮನೇ ಕರೆ ನೀಡಲಿಲ್ಲ. ದೇಶದ ಯುವಕರನ್ನು ಕುರಿತು ವಿವೇಕಾನಂದರು ಸುಮ್ಮಸುಮ್ಮನೇ ಕಂಠಶೋಷಣೆ ಮಾಡಿಕೊಂಡು ಕರೆನೀಡಲಿಲ್ಲ. ಅವರೆಲ್ಲರ ಧಾರ್ಮಿಕ ದೃಷ್ಟಿ ವೈಜ್ಞಾನಿಕತೆಯಿಂದ ಕೂಡಿತ್ತು. ದೇಶ ಮತ್ತು ಅದರ ಸಮಸ್ತ ಅಭಿವೃದ್ಧಿಯ ಕುರಿತು ಅವರ ದಾರ್ಶನಿಕತೆ ದೂರದೃಷ್ಟಿಯಿಂದ ಕೂಡಿತ್ತು. ಅದೆಂದೂ ಅವೈಜ್ಞಾನಿಕವೂ ಮತೀಯಾಂಧಕಾರಿಯೂ ಆಗಿರಲಿಲ್ಲ. ಅವರು ಬದುಕಿದ್ದ ಕಾಲದಲ್ಲೂ ಸಾಂಕ್ರಾಮಿಕ ರೋಗಗಳು ದೇಶವನ್ನು ನುಗ್ಗಿ ಜನರನ್ನು ಇನ್ನಿಲ್ಲದಂತೆ ಬಾದಿಸಿದ್ದವು. ದೇಶದ ವಿಜ್ಞಾನಿಗಳು ಆಗ ಔಷಧ ಶೋಧದಲ್ಲಿ ತೊಡಗಿದರು. ಸರ್ಕಾರಗಳು ನೈಜ ಕಾಳಜಿಯಿಂದ ಕೆಲಸ ಮಾಡಿದವು. ಭಾರತವೇ ಕ್ಷಯ ರೋಗಕ್ಕೆ, ರೇಬಿಸ್ಸಿಗೆ, ಪ್ಲೇಗ್, ಕಾಲರಾ, ಪೋಲಿಯೋ ಮೊದಲಾದ ಖಾಯಿಲೆಗಳಿಗೆ ಮದ್ದು ಅರೆಯಿತು. ಇದು ಸಾಧ್ಯವಾದದ್ದು ವಿಜ್ಞಾನಕ್ಕೆ ನೀಡಿದೆ ಒತ್ತಿನಿಂದ ಪ್ರಾಮುಖ್ಯತೆಯಿಂದ. ಇಂದು ಭಾರತ ಮೇಲ್ಕಂಡ ಕಾಯಿಲೆಗಳನ್ನು ಯಶಸ್ವಿಯಾಗಿ ಎದುರಿಸಿದೆ. ಈಗ ಬಂದಿರುವ ಕೊರೋನಾ ಹಾಗೆ ನೋಡಿದರೆ ಹಿಂದಿನ ವಿನಾಶಕಾರಿ ಸಾಂಕ್ರಾಮಿಕಗಳ ಸ್ವರೂಪದ್ದಲ್ಲ ‘ಹುಲಿಗಿಂತ ಹುಲಿಯ ಬಣ್ಣನೆಯೇ ಹೆದರಿಸಿತ್ತು’ ಎಂಬ ಗಾದೆ ಮಾತಿನಂತೆ ಕೊರೋನಾಕ್ಕಿಂತ ಅದರ ಬಗೆಗಿನ ವರ್ಣನೆಗಳು, ಭಯಾನಕ ಸುದ್ಧಿಗಳು ಎಬ್ಬಿಸುವ ಬೊಬ್ಬೆಯೇ ಇಂದು ಭಯಾನಕತೆಯನ್ನು ಸೃಷ್ಟಿಸಿದೆ. ಇಲ್ಲಿಯೂ ಆಳುವ ವ್ಯವಸ್ಥೆ ಕೋಮು ರಾಜಕೀಯವನ್ನೇನೂ ಬಿಡಲಿಲ್ಲ. ಮಾದ್ಯಮಗಳು ಮುಸ್ಲಿಮ್ ತಬ್ಲಿಘಿಗಳನ್ನು  ಕೊರೋನಾ ಪ್ರಸಾರಕರು ಎಂಬಂತೆ ಬಿಂಬಿಸಿದವು. ಹಳ್ಳಿಹಳ್ಳಿಗಳಲ್ಲಿ ಡಂಗುರ ಹೊಡೆಸಿದರು, ಸಣ್ಣಪುಟ್ಟ ಬಡ ವ್ಯಾಪಾರಿಗಳನ್ನು ಹೆದರಿಸಿ ಗದರಿಸಿ ಹೊಡೆದು ಬಡಿದು ಓಡಿಸಿದರು. ಎಸ್ಟೋ ಬಡವರು ಮನೆ ಹೊಟ್ಟೆಗಿಲ್ಲದೆ ನರಳುವ ಸ್ಥಿತಿ ಸೃಷ್ಟಿ ಮಾಡಿದರು. ಕೊರೋನಾದ ಹೆಸರಲ್ಲಿ ಒಂದು ಸಮುದಾಯವನ್ನು ಅಸ್ಪೃಷ್ಯರನ್ನಾಗಿಸುವ, ಪರಕೀಯರರನ್ನಾಗಿಸುವ ಕೆಲಸವನ್ನು ಯಶಸ್ವಿಯಾಗಿ ಮಾಡಿ ಮುಗಿಸಿದರು. ಇದು ಧಾರ್ಮಿಕ ಮನೋಭಾವ ಎಂಥಹಾ ಅಮಾನವೀಯ ಮನಸ್ಥಿತಿಗಳನ್ನು ಪರಿಸ್ಥಿತಿಗಳನ್ನು ಸೃಷ್ಟಿಸಬಲ್ಲದು ಎಂಬುದಕ್ಕೆ ಉದಾಹರಣೆ. ಈಗಾಗಲೇ ದ್ವೇಷದ ಮೂಟೆಗಳಾಗಿರುವ ಯುವ ಸಮುದಾಯ ಒಂದು ನಿರ್ದಿಷ್ಟ ಸಮುದಾಯದ ಮೇಲೆ ಕೃದ್ಧರಾಗಿ ಕುದಿಯುವಂತಾಯಿತು. ಸಾಂಕ್ರಾಮಿಕ ರೋಗದಲ್ಲೂ ಧರ್ಮದ ವಿಷಬೀಜ ಬಿತ್ತಿ ರಾಜಕೀಯ ಅಧಿಕಾರದ ಫಸಲು ತೆಗೆಯುವ ಕೃಷಿಯನ್ನು ಭಲೆ ನಾಜೂಕಿನಿಂದ ನಿರ್ವಹಿಸಲಾಯಿತು. ಕೋಟ್ಯಾಂತರ ಕಾರ್ಮಿಕರು ಅನ್ನ ಆಶ್ರಯವಿಲ್ಲದೆ ಗುಳೇ ಹೊರಟು ಹಾದಿಬೀದಿಯಲ್ಲಿ ಬಿದ್ದು ಸತ್ತದ್ದು ಲೆಕ್ಕಕ್ಕಿಲ್ಲವಾಯಿತು.‌ ದೇಶ ಕಟ್ಟಿದವರು ಸೋಂಕಿತರಾದರು ದೇಶ ದೋಚಿದವರು ತಮ್ಮ ಬಹು ಮಹಡಿಯ ಕಟ್ಟಡಗಳಲ್ಲಿ ಸುರಕ್ಷಿತರಾದರು. ಒಟ್ಟಿನಲ್ಲಿ ಅವಿವೇಕದ ಪರಮಾವಧಿ, ಅಲಕ್ಷ್ಯ, ಬಡವರು ದುಡಿಯುವ ವರ್ಗದ ಬಗೆಗಿನ ಅಸಡ್ಡೆ ತಿರಸ್ಕಾರ ಮನೋಭಾವಗಳು ಈ ದೇಶದಲ್ಲಿ ಕಾಯಿಲೆ ವ್ಯಾಪಕವಾಗಿ ಹಬ್ಬಲು ಕಾರಣವಾದವು. ವಿಶ್ವ ಆರೋಗ್ಯ ಸಂಸ್ಥೆಯು ಭಾರತದಂತಹಾ ದೇಶದಲ್ಲಿ ಸೋಂಕು ಸಮುದಾಯದ ಹಂತವನ್ನು ತಲುಪಿದರೆ ಏನು ಅನಾಹುತ ಆಗಬಹುದು ಎಂದು ಎಚ್ಚರಿಸಿತ್ತೋ ಅದು ನಮಗೆ ಎಚ್ಚರವಾದಂತೆ ಕಾಣಲಿಲ್ಲ. ನಾವು ಯಾವುದನ್ನು ಪ್ರಶ್ನಿಸಬೇಕೊ ಅದನ್ನು ಪ್ರಶ್ನಿಸಲಿಲ್ಲ ಯಾವುದನ್ನು ಬೆಂಬಲಿಸ ಬಾರದೊ ಯಾವುದನ್ನು ಒಪ್ಪ ಬಾರದೊ‌ ಯಾವುದನ್ನು ಹಿಂಬಾಲಿಸಬಾರದೋ ಅವುಗಳನ್ನು ಬೆಂಬಲಿಸಿದ್ದರ ಹಿಂಬಾಲಿಸಿದ್ದರ ಒಪ್ಪಿದ್ದರ ಫಲವನ್ನೀಗ ಉಣ್ಣುತ್ತಿದ್ದೇವೆ. ದಶಕಗಳಿಂದ ಧರ್ಮದ ನಿದ್ದೆ ಗುಳಿಗೆ ನುಂಗಿ ಮತ್ತೇರಿ ನಿಶೆಯೊಳಗೆ ನಿದ್ದೆಹೋದದ್ದರ ಫಲ ಇಂದು ಅಸಹಾಯಕ ಸ್ಥಿತಿಗೆ ಸೃಷ್ಟಿಯಾಗುವಂತೆ ಮಾಡಿದೆ. ಇನ್ನಾದರೂ ಈ ಅವಿಚಾರಗಳಿಂದ ಹೊರ ಬಂದು ಪ್ರಗತಿಪರವಾಗಿ ಯೋಚಿಸುವುದನ್ನು ಕಲಿಯಬೇಕು ವೈಜ್ಞಾನಿಕ ಮನೋಧರ್ಮವನ್ನು ರೂಢಿಸಿಕೊಳ್ಳುವ ಮೂಲಕ ಧರ್ಮ ದೇವರು ಜಾತಿಗಳೆಂಬ ಶ್ರೇಷ್ಟತೆಯ ವ್ಯಸನಗಳಿಂದ ಹೊರಬಂದು ದೇಶವನ್ನು ಆಂತರಿಕವಾಗಿ ಬಲಪಡಿಸಬೇಕು. ಶಿಕ್ಷಣ ಮತ್ತು ಆರೋಗ್ಯ ವ್ಯವಸ್ಥೆ ಕುಸಿದರೆ ಅಂತಹಾ ದೇಶಕ್ಕೆ ಯಾವತ್ತಿಗೂ ಭವಿಷ್ಯವಿಲ್ಲ. ಧರ್ಮದ ಅಂಧಾಕಾರದ ತಳಹದಿಯ ಮೇಲೆ ದೇಶ ಕಟ್ಟಲು ಹೊರಟರೆ ಅಂತಹಾ ದೇಶ ಎಂದಿಗೂ ಸದೃಢ ದೇಶವಾಗಲಾರದು. *******************

ಕೋವಿಡ್-19,ಆತ್ಮಾವಲೋಕನ Read Post »

ಅಂಕಣ ಸಂಗಾತಿ, ದಿಕ್ಸೂಚಿ

ಅವಮಾನದ ತಿರುವುಗಳು ಗೆಲುವಿನ ಮೈಲಿಗಲ್ಲುಗಳು ನಾನೀಗ ತಮ್ಮೊಂದಿಗೆ ಹಂಚಿಕೊಳ್ಳುತ್ತಿರುವುದು ಅವಮಾನದ ಒಂದು ಪ್ರಸಿದ್ಧ ಉದಾಹರಣೆ; ಪವಿತ್ರ ನರ್ಮದಾ ನದಿಯಲ್ಲಿ ಒಮ್ಮೆ ಸಂತ ಏಕನಾಥ ಸ್ನಾನ ಮಾಡಿ ಹೊರ ಬರುತ್ತಿದ್ದ.ಆಗ ಪಠಾಣನೊಬ್ಬ ಮನದಲ್ಲಿ ವಿಷ ತುಂಬಿಕೊಂಡು ಸಂತನ ಮೇಲೆ ಉಗುಳಿದ. ಏಕನಾಥ ‘ಜೈ ವಿಠ್ಠಲ’ ಎನ್ನುತ್ತ ಮತ್ತೆ ನರ್ಮದೆಗಿಳಿದ. ಈ ರೀತಿ ಮುಂಜಾನೆಯಿಂದ ಸಂಜೆಯವರೆಗೂ ಇಬ್ಬರ ನಡುವೆ ನಡೆಯಿತು ಯಾರು ಸೋಲುತ್ತಾರೆಂದು ನದಿ ತಟದಲ್ಲಿ ಜನ ನಿಂತು ನೋಡುತ್ತಿದ್ದರು. ಕೊನೆಗೆ ಪಠಾಣ, ಸಂತರನ್ನು ಉದ್ದೇಶಿಸಿ ನಾನು ಯಾವುದೇ ಕಾರಣವಿಲ್ಲದೇ ನಿಮ್ಮನ್ನು ಹೀಗೆ ಅವಮಾನಗೊಳಿಸುತ್ತಿದ್ದೇನೆ ಅಶುದ್ಧಿಗೊಳಿಸುತ್ತಿದ್ದೇನೆ.ಆದರೆ ನೀವು ನನ್ನ ಮೇಲೆ ಕೋಪಿಸಿಕೊಳ್ಳದೇ ನಗುತ್ತಲೇ ನನ್ನನ್ನು ಸ್ವೀಕರಿಸುತ್ತಿದ್ದೀರಿ ಇದು ಹೇಗೆ ಸಾಧ್ಯವೆಂದು ಕೇಳಿದ.’ನೀನು ನನ್ನ ಪೋಷಕ.’ನಿನ್ನಿಂದಾಗಿ ಇಂದು ಪವಿತ್ರ ನರ್ಮದೆಯಲ್ಲಿ ಇಷ್ಟು ಬಾರಿ ಮಿಂದೆದ್ದೆ. ನನ್ನನ್ನು ಶುದ್ಧೀಕರಿಸಿಕೊಳ್ಳಲು ಒಂದು ಅವಕಾಶ ನೀಡಿದೆ ಎಂದನಂತೆ. ಫೋರ್ಡ್ ಕಾರಿನ ಹೆನ್ರಿ ,ವಿಮಾನ ಸಂಶೋಧಿಸಿದ ರೈಟ್ ಬ್ರದರ್ಸ್, ಅಬ್ರಹಾಂ ಲಿಂಕನ್,ಇತಿಹಾಸ ಪ್ರಸಿದ್ಧ ಚಾಣಕ್ಯ, ಮಹಾತ್ಮ ಗಾಂಧಿ, ಹಿಂದಿ ಚಿತ್ರ ಲೋಕದ ದಿಗ್ಗಜ ಅಮಿತಾಬ್ ಬಚನ್, ಸಾವಿರ ಸಂಶೋಧನೆಗಳ ಸರದಾರ ಥಾಮಸ್ ಅಲ್ವಾ ಎಡಿಸನ್ನಂಥ ಸಾವಿರ ಗೆಲುವಿನ ಸರದಾರರು ಅವಮಾನದ ತಿರುವುಗಳನ್ನೇ ಗೆಲುವಿನ ಮೈಲಿಗಲ್ಲುಗಳನ್ನಾಗಿ ರೂಪಿಸಿಕೊಂಡಿದ್ದು ಈಗ ಇತಿಹಾಸ. ಅವಮಾನವನ್ನು ಹೇಗೆ ಸ್ವೀಕರಿಸುತ್ತೇವೆ ಎನ್ನುವುದರ ಮೇಲೆ ಅವು ಮೈಲಿಗಲ್ಲುಗಳಾಗುವುದು ಅವಲಂಬಿತವಾಗುತ್ತದೆ. ಅವಮಾನವನ್ನು ಅನುಭವಿಸಿದವರು ಕೋಟಿ ಕೋಟಿ ಜನ ಆದರೆ ಅದನ್ನು ಗಂಭೀರವಾಗಿ ಕೈಗೆತ್ತಿಕೊಂಡವರ ಸಂಖ್ಯೆ   ಸಾವಿರ ಇಲ್ಲವೇ ಲಕ್ಷ ದಾಟುವುದಿಲ್ಲ. ಉಳಿದವರಿಗೆ ಸವಾಲಾಗದೇ ಕಾಡದೇ ಇದ್ದುದು ಎದುರಿಸಿ ನಿಲ್ಲಬೇಕೆನ್ನುವವರಿಗೆ ಸವಾಲಾಗಿ ಕಂಡಿದ್ದು ನಿಜ. ಅಳ್ಳೆದೆಯವರಿಗೆ ಅವಮಾನವೆಂಬ ಪದವೇ ದೂರ ಸರಿಯುವಂತೆ ಮಾಡುವುದೂ ಅಷ್ಟೇ ಸತ್ಯ. ದೂರು ಸರಿಯುವ ಬದಲು ಗಟ್ಟಿ ಧೈರ್ಯ ಮಾಡಿದರೆ ಅವಮಾನದೊಂದಿಗೆ  ಮುಖಾಮುಖಿಯಾಗಬಹುದು. ಹಾಗಾದರೆ ಅವಮಾನವೆಂದರೇನು? ಅದರ ಲಕ್ಪ್ಷಣಗಳೇನು? ಪರಿಣಾಮಗಳು ಎಂಥವು? ಅದನ್ನು ನಿರ್ವಹಿಸುವ ಕಲೆ ಹೇಗೆ ಎಂಬುದನ್ನು ತಿಳಿಯೋಣ ಬನ್ನಿ. ಅವಮಾನವೆಂದರೆ. . . . .? ಯಾರಿಗೂ ಹೇಳಿಕೊಳ್ಳಲಾಗದ ಅವಮಾನದ ನೋವುಗಳನ್ನು ಎದೆಯ ತೆಕ್ಕೆಯಲ್ಲಿ ಬಚ್ಚಿಟ್ಟುಕೊಂಡು ತಿರುಗುವ ನೋವು ನಮ್ಮ ಶತ್ರುಗಳಿಗೂ ಬೇಡ. ‘ನಮ್ಮ ಭೀಮ ಗಾತ್ರದ ಶಕ್ತಿಗಳನ್ನು ಲವಲೇಶಕ್ಕೂ ಬೆಲೆ ಇಲ್ಲದಂತೆ ಲಘುವಾಗಿಸುವ ಪ್ರಯತ್ನ ನಡೆಸುವುದೇ ಅವಮಾನ.’ಅವಮಾನಿಸಿಯೇ ನಮ್ಮ ಗಮನ ಸೆಳೆಯುವವರೂ ಕಾಣ ಸಿಗುತ್ತಾರೆ. ಅದಕ್ಕೆಲ್ಲ ಬೇಸರಿಸಿಕೊಳ್ಳುವ ಹಾಗಿಲ್ಲ. ಅವರ ಹೀಯಾಳಿಕೆಯನ್ನೇ ಹೆಗ್ಗಳಿಕೆಯಾಗಿಸಿಕೊಳ್ಳುವುದೇ ಜಾಣತನ. ಭಯ ಆತಂಕದಿಂದಲೇ ಪಡೆಯಬೇಕಾದುದನ್ನು ಮನಸಾರೆ ಸ್ವೀಕರಿಸಿದರೂ ಅಗಾಧ ಬದಲಾವಣೆಯನ್ನು ತರುವ ಅಪಾರ ಶಕ್ತಿ ಅವಮಾನಕ್ಕೆ ಉಂಟು. ಅವಮಾನಿಸಿದವರ ಮುಂದೆ ತಲೆ ಎತ್ತಿ ಬದುಕಬೇಕೆಂದರೆ ಅವಮಾನವನ್ನೇ ಉತ್ಸಾಹವಾಗಿಸಿಕೊಳ್ಳಬೇಕು. ಅದೇ ಉತ್ಸಾಹ ನಮ್ಮನ್ನು ಉತ್ತೇಜಿಸುತ್ತದೆ. ಹೀಗೆ ದೊರೆತ ಉತ್ಸಾಹ ಬದಲಾಗುತ್ತ ಬೆಳೆಯುತ್ತ ಹೋಗುತ್ತದೆ. ಸನ್ಮಾನದತ್ತ ತಂದು ನಿಲ್ಲಿಸುತ್ತದೆ. ಲಕ್ಷಣ ಕಪಾಳ ಮೋಕ್ಷ,ಗುದ್ದುವುದು, ಅಪಹಾಸ್ಯದ ನಗು, ಮುಖದಲ್ಲಿಯ ಅಭಿವ್ಯಕ್ತಿ  ಹೀಗೆ ದೈಹಿಕವಾಗಿರಬಹುದು. ಇಲ್ಲವೇ ಸಾಮಾನ್ಯವಾಗಿ ವ್ಯಂಗ್ಯವಾಡುವುದು, ಅಣಕಿಸುವುದು, ಅವಾಚ್ಯ ಶಬ್ದಗಳ ಬಳಕೆ ಅಸಂಬದ್ಧ ಟೀಕೆಗಳನ್ನು ಮಾಡುವುದಿರಬಹುದು. ಪರಿಣಾಮಗಳು ಅವಮಾನ ಮಾಡುವ ಅಡ್ಡ ಪರಿಣಾಮಗಳು ಒಂದೇ ಎರಡೇ? ಅದರ ಪಟ್ಟಿ ಮಾಡುತ್ತ ಸಾಗಿದರೆ ಹನುಮನ ಬಾಲದಂತೆ ಬೆಳೆಯುತ್ತಲೇ ಹೋಗುತ್ತದೆ. ಮೊದಲನೆಯದಾಗಿ ನಮ್ಮ ಸಂತೋಷವನ್ನೇ ಹಾಳು ಮಾಡುತ್ತದೆ. ಆತ್ಮವಿಶ್ವಾಸವನ್ನು ಸ್ವ ಗೌರವವನ್ನು ಒಮ್ಮಿಂದೊಮ್ಮೆಲೇ ಕೆಳಕ್ಕೆ ತಳ್ಳುತ್ತದೆ. ಏಕಾಂಗಿಯಾಗಿಸುತ್ತದೆ. ಸಿಟ್ಟು ತರಿಸುತ್ತದೆ. ಆತಂಕಕ್ಕೆ ಒಳಪಡಿಸುತ್ತದೆ. ಅಷ್ಟೇ ಅಲ್ಲ ಇನ್ನೂ ಮುಂದಕ್ಕೆ ಹೋಗಿ ಖಿನ್ನತೆಯೂ ಆವರಿಸುವಂತೆ ಮಾಡುತ್ತದೆ. ನಿರ್ವಹಿಸುವ ಬಗೆ ಹಲವು ಅವು ಇಲ್ಲಿವೆ ನೋಡಿ ಸಿಟ್ಟು ಅವಮಾನಕ್ಕೆ ಸಿಟ್ಟಿನಿಂದ ಉತ್ತರಿಸುವುದು ನಿಜಕ್ಕೂ ತುಂಬ ಅಶಕ್ತವೆನಿಸುತ್ತದೆ. ಅವಮಾನಿಸಿದವರನ್ನು ಮತ್ತು ಅವಮಾನವನ್ನು ಅತಿ ಗಂಭೀರವಾಗಿ ತೆಗೆದುಕೊಂಡಿದ್ದೇವೆ ಎನ್ನುವುದನ್ನು ಎತ್ತಿ ತೋರಿಸುತ್ತದೆ. ಅವಮಾನದಲ್ಲಿ ಸತ್ಯವಿದೆ ಎನಿಸುತ್ತದೆ. ಮನದ ಸ್ಥಿರತೆಯನ್ನು ತಗ್ಗಿಸುತ್ತದೆ. ಮತ್ತಷ್ಟು ಅವಮಾನಕ್ಕೆ ಎಡೆಮಾಡುತ್ತದೆ. ಹೀಗಾಗಿ ಅವಮಾನವನ್ನು ಸಿಟ್ಟಿನಿಂದ ಎದುರಿಸುವುದ ಅಷ್ಟು ಸೂಕ್ತವಲ್ಲ ಎನಿಸುತ್ತದೆ. ಸ್ವೀಕರಿಸುವಿಕೆ ಮೇಲ್ನೋಟಕ್ಕೆ ಅವಮಾನವನ್ನು ಸ್ವೀಕರಿಸುವುದು ಅಶಕ್ತವೆನಿಸಿದರೂ ಸಶಕ್ತ ವಿಧಾನವಾಗಿದೆ. ಅವಮಾನಿತಗೊಂಡಾಗ ಮೂರು ವಿಷಯಗಳನ್ನು ಪರಿಗಣಿಸಬೇಕು. ಅವಮಾನ ಸತ್ಯದ ಆಧಾರದ ಮೇಲಿದೆಯೇ? ಅವಮಾನಿಸಿದವರು ಯೋಗ್ಯರೇ? ಅವಮಾನ ಏಕೆ ಮಾಡಲ್ಪಟ್ಟಿತು? ಸತ್ಯವೆನಿಸಿದರೆ, ಯೋಗ್ಯರೆನಿಸಿದರೆ, (ಪಾಲಕರು, ಗುರುಗಳು, ಗೆಳೆಯರು) ಉದ್ದೇಶ ಒಳ್ಳೆಯದಿತ್ತು ಎನಿಸಿದರೆ ಅವಮಾನವ ಮಾಡಿದವರು ನೀವು ಗೌರವಿಸುವ ವ್ಯಕ್ತಿಯಾಗಿದ್ದರೆ ಆ ಅವಮಾನವನ್ನು ಉಡಾಫೆ ಮಾಡುವಂತಿಲ್ಲ. ಅದನ್ನು ಗಂಭೀರವಾಗಿ ಪರಿಗಣಿಸಬೇಕು. ಸತ್ಯಾಸತ್ಯತೆಯನ್ನು ಅರಿತು ಬದಲಾಗಲು ಸ್ವೀಕರಿಸಬೇಕು. ಮರಳಿಸುವಿಕೆ ಅವಮಾನವನ್ನು ಮರಳಿಸುವಿಕೆಯಲ್ಲಿ ಕೆಲವೊಂದಿಷ್ಟು ವಿಷಯಗಳು ಹುದುಗಿವೆ. ಆದ ಅವಮಾನ ಮರಳಿಸಲು ಯೋಗ್ಯವಾಗಿರಬೇಕು. ಸರಿಯಾದ ಸಮಯಕ್ಕೆ ಜಾಣತನದಿಂದ ಉತ್ತರಿಸುವಂತಿರಬೇಕು. ‘ಪರಿಪೂರ್ಣತೆಯನ್ನು ಕಡಿಮೆ ಮಾಡುವುದು ವಿರಳವಾಗಿ ಉತ್ತಮ ಪ್ರತಿಕ್ರಿಯೆ’ ಎಂದಿದ್ದಾನೆ ಆಸ್ಕರ್ ವೈಲ್ಡ್. ಆದರೆ ಹೀಗೆ ಕಡಿಮೆ ಮಾಡುವ ಪ್ರತಿಕ್ರಿಯೆಯ ಒಂದು ಮುಖ್ಯ ಸಮಸ್ಯೆ ಎಂದರೆ ಎಷ್ಟೇ ಜಾಣರಾಗಿದ್ದರೂ ಅದು ನಮ್ಮನ್ನು ಅವಮಾನಿಸಿದವರ ಮಟ್ಟಕ್ಕೆ ಇಳಿಸುತ್ತದೆ. ಹೀಗಾಗಿ ಇದು ಅಂದವಾದ ದುರ್ಬಲವಾದ ವಿಧಾನ. ಇದರಲ್ಲಿನ ಅವಮಾನಿಸಿದವರನ್ನು ಕೆರಳಿಸಿ ಮತ್ತಷ್ಟು ಆಕ್ರಮಣಗಳನ್ನು ಹೆಚ್ಚಿಸುವ ಸಾಧ್ಯತೆ ಹೆಚ್ಚು. ಆದರೆ ಈ ವಿಧಾನವನ್ನು ಹಾಸ್ಯಮಯವಾಗಿ ಗೆಳೆಯರೊಂದಿಗೆ ಸಮವಯಸ್ಕರೊಂದಿಗೆ ಬಳಸಬಹುದು. ಅಲಕ್ಷಿಸುವಿಕೆ ಹಾಸ್ಯ, ಶೋಚನೀಯವಾಗಿ ಮರಳಿಸುವಿಕೆಯ ಫಲಿತಾಂಶವನ್ನು ಪಡೆದಿದೆ. ನಿಮ್ಮ ಉತ್ತರ ಮೋಜಿನದಾಗಿರಬೇಕು. ಸರಿಯಾದ ಸಮಯಕ್ಕೆ ಸರಿಯಾದ ಭಾವದೊಂದಿಗೆ ಹೇಳುವಂತಿರಬೇಕು. ನಿಜದಲ್ಲಿ ಅವಮಾನವನ್ನು ಅಲಕ್ಷಿಸುವಿಕೆ ಬಹು ಸರಳ ಮತ್ತು ಹೆಚ್ಚು ಪರಿಣಾಮಕಾರಿ ವಿಧಾನ ಎನ್ನಬಹುದು. ಈ ವಿಧಾನವು ಅಪರಿಚಿತರೊಂದಿಗೆ ಸರಿಯಾಗುತ್ತದೆ. ಆದರೆ ಇದು ನಮ್ಮ ವೈಯಕ್ತಿಕ ವೃತ್ತಿಪರ ಸಂಬಂಧಗಳೊಂದಿಗೆ ಸರಿ ಹೊಂದುವುದಿಲ್ಲ.ಇಂಥ ಸಂದರ್ಭದಲ್ಲಿ ಸರಿಯಾದ ಶಬ್ದವನ್ನು ಬಳಸುವುದು ಆಯ್ಕೆಗೆ ಅರ್ಹವಾದುದು.ಶಬ್ದ ಬಳಸುವಾಗ ನಮ್ಮ ಎಲ್ಲೆಗಳನ್ನು ಮೀರದಂತೆ ಪುನಃ ದೃಢಪಡಿಸಲು ಪ್ರಯತ್ನಿಸಬೇಕು. ವೈಯಕ್ತಿಕ ಮತ್ತು ವೃತ್ತಿಪರ ಆರೋಗ್ಯಕರ ಪರಿಸರ ನಿರ್ಮಿಸುವುದು ಒಂದು ಸವಾಲಿನ ಸಂಗತಿಯೇ ಸರಿ. ಇಲ್ಲಿ ಶಾರೀರಿಕ  ಎಲ್ಲೆಗಳನ್ನು ಎಷ್ಟರಮಟ್ಟಿಗೆ ನಿರ್ದಿಷ್ಟವಾಗಿ ಕಾಪಾಡಿಕೊಳ್ಳುತ್ತೇವೆ ಎನ್ನುವುದು ಮುಖ್ಯವಾಗುತ್ತದೆ. ಇದೊಂದು ನಾಯಿ ಬಾಲವನ್ನು ನೆಟ್ಟಗಾಗಿಸಿದಂತೆ.ಪ್ರತಿ ಬಾರಿ ಅದನ್ನು ಪುನಃ ದೃಢಪಡಿಸುವಾಗಲು ಅದು ಬಿಡಿಸದಂತೆ ಡೊಂಕಾಗಿರುತ್ತದೆ. ಇದಕ್ಕೆ ಸಾಕಷ್ಟು ಪ್ರಯತ್ನ ಬೇಕು. ಕೆಲವು ಬಾರಿ ಧೈರ್ಯವೂ ಬೇಕಾಗುತ್ತದೆ. ಆದರೆ ಈ ವಿಧಾನವನ್ನು ಪ್ರಾರಂಭದಿಂದಲೇ ರೂಢಿಸಿಕೊಂಡರೆ ಇದು ಬಹು ಪರಿಣಾಮಕಾರಿ ವಿಧಾನ. ಅವಮಾನ ಅಪರಾಧವಲ್ಲ ಅವಮಾನವನ್ನು ಅಪರಾಧವೆಂದು ಎಂದೂ ತಿಳಿಯಬಾರದು. ಅಪರಾಧವು ನಾವು ಅವಮಾನಕ್ಕೆ ಪ್ರತಿಕ್ರಿಯಿಸುವುದರಲ್ಲಿದೆ. ನಮ್ಮ ಪ್ರತಿಕ್ರಿಯೆಗಳು ನಮ್ಮ ಹತೋಟಿಯಲ್ಲಿರುತ್ತವೆ. ಒಬ್ಬ ಗಮಾರನನ್ನು ಗಮಾರನೆಂದು ನಿರೀಕ್ಷಿಸುವುದು ಅಸಮಂಜಸವಾಗಿದೆ. ಅವನ ಕೆಟ್ಟ ನಡುವಳಿಕೆಯಿಂದ ನಮ್ಮನ್ನು ಅಪರಾಧಿಗಳೆಂದುಕೊಂಡರೆ ನಮ್ಮನ್ನು ನಾವು ದೂಷಿಸಿಕೊಳ್ಳಬೇಕಾಗುತ್ತದೆ. ಆಯ್ಕೆ ಆದ್ಯತೆಗಳೂ ಕಾರಣವಾಗುತ್ತವೆ. ಅದಕ್ಕಾಗಿಯೇ ಸುತ್ತಲಿನ ಲೋಕ ಚಾಲ್ತಿ ಪಡೆಯುತ್ತದೆ. ಮೇಲ್ನೋಟದಲ್ಲಿ ಅವಮಾನವೆನಿಸುವುದು ಅವಮಾನಕ್ಕೆ ಮಾತ್ರ ಸೀಮಿತವಾಗಿರುವುದಿಲ್ಲ. ಅದು ನಮ್ಮೊಳಗಿನ ಚೇತನವನ್ನು ಬಡಿದೆಬ್ಬಿಸುವ ದೊಡ್ಡ ಕೆಲಸವನ್ನು ಮಾಡುವ ಮಾಯಾ ಶಕ್ತಿಯನ್ನು  ಹೊಂದಿರುತ್ತದೆ ಎಂಬುದನ್ನು ತಿಳಿದು ನಮ್ಮ ಶಕ್ತಿ ದೌರ್ಬಲ್ಯವನ್ನು ಅಳೆದು ತೂಗಿ ನೋಡಿ ಸಾಧಿಸಬೇಕಾದ ಗುರಿಗೆ ಗುರಿ ಇಡಬೇಕು. ಅನುಮತಿಯಿಲ್ಲದೇ ಅವಮಾನವಿಲ್ಲ ‘ನಿನ್ನ ಅನುಮತಿ ಇರಲಾರದೇ ನಿನ್ನನ್ನು ಯಾರೂ ಅವಮಾನಿಸಲಾರರು.’ ಎಂಬುದು ಅನುಭವಿಕರ ನುಡಿ. ಅವಮಾನದ ಭೀತಿ ಇರುವವರೆಗೂ ಅವಮಾನಗಳು ನಮ್ಮನ್ನು ಸುತ್ತುವರೆಯುತ್ತವೆ. ಅವಮಾನದ ಭೀತಿ ತೊರೆದ ಮೇಲೆ ನಮ್ಮನ್ನು ಬಿಟ್ಟು ತೊಲಗುತ್ತವೆ. ಅವಮಾನಕ್ಕೆ ಪ್ರತಿಕ್ರಿಯಿಸಿ ಮತ್ತೆ ಅವಮಾನಿಸಿಕೊಳ್ಳುವುದು ಮೂರ್ಖತನವೇ ಸರಿ.ಅವಮಾನಕ್ಕೆ ಪ್ರತಿಯಾಗಿ ಅಸಂಬದ್ಧ ರೀತಿಯಲ್ಲಿ ಪ್ರತಿಕ್ರಿಯಿಸುತ್ತ ಕುಳಿತರೆ ನಡೆಯುವ ದಾರಿ ತಪ್ಪಿ ಹೋಗುತ್ತದೆ. ಅವಮಾನ ಎದುರಿಸುವಾಗ ಎಚ್ಚರದಿಂದಿರು. ಅವಮಾನವೆಂಬ ಹೆಸರಿನಲ್ಲಿ ಜೀವನದ ಖಾತೆಗೆ  ನಷ್ಟ. ಜನರ ದೃಷ್ಟಿಯಲ್ಲಿ ಅವಮಾನ ಸಣ್ಣದಿರಲಿ ದೊಡ್ಡದಿರಲಿ ನಮ್ಮ ಪಾಲಿಗಂತೂ ಅದು ದೊಡ್ಡ ಕಹಿಯೇ ‘ಅವಮಾನ ಹೆಚ್ಚಿದಷ್ಟು ಹೆಚ್ಚು ಲಾಭ ಅದನ್ನು ಸಕಾರಾತ್ಮಕವಾಗಿ ಸ್ವೀಕರಿಸಿದರೆ ಮಾತ್ರ..’ ಕೊನೆ ಹನಿ ಗೆಲುವಿನೆಡೆಗೆ ಪಯಣ ಬೆಳೆಸುವಾಗ ಅವಮಾನ ಕಟ್ಟಿಟ್ಟ ಬುತ್ತಿ. ಇಲ್ಲಿ ಅವಮಾನ ಯಾರಿಗಿಲ್ಲ ಹೇಳಿ.ಲೋಕದಲ್ಲಿ ಹುಟ್ಟಿದ ಎಲ್ಲರೂ ಅವಮಾನ ಅನುಭವಿಸಿದವರೆ. ಹೆಜ್ಜೆ ಹೆಜ್ಜೆಗೂ ಕಾಡುವ ಅವಮಾನ ಗೆಲುವಿನ ಏಣಿ ಏರಿ ಯಶಸ್ಸಿನ ಶಿಖರವನ್ನು ಮುಟ್ಟಲು ಕಾರಣವಾಗತ್ತದೆ.ಸಣ್ಣ ಪುಟ್ಟ ಘಟನೆಗಳ ಅವಮಾನವೂ ಗಮನ ಸೆಳೆಯುತ್ತದೆ. ಒಮ್ಮೊಮ್ಮೆಯಂತೂ ನಿರುತ್ಸಾಹ ಮೂಡಿಸಿ ಹಿಂಡಿ ಹಿಪ್ಪಿ ಮಾಡಿ ಬಿಡುತ್ತದೆ. ಅವಮಾನಗಳಿಗೆ ಹೆದರುವ ಅಗತ್ಯವಿಲ್ಲ. ಅನಗತ್ಯ ಅವಮಾನವಾಗಿದ್ದರೆ ಅದಕ್ಕೆ ತಲೆ ಕೆಡಿಸಿಕೊಳ್ಳುವ ಅಗತ್ಯತೆಯಿಲ್ಲ. ಎಲ್ಲರೂ ನಮ್ಮನ್ನು ಮೆಚ್ಚಿಕೊಂಡರೆ ನಾವು ಶುದ್ಧರಾಗುವುದಿಲ್ಲ. ಶುದ್ಧೀಕರಣ ಇತರರು ನಮ್ಮನ್ನು ಪರೀಕ್ಷೆಗೆ ಒಡ್ಡಿದಾಗ ಟೀಕಿಸಿದಾಗ ಉಂಟಾಗುತ್ತದೆ. ಅವಮಾನವೆಂಬ ದೌರ್ಬಲ್ಯವನ್ನು ಮೆಟ್ಟಿ ನಿಲ್ಲಬೇಕು. ಅವಮಾನದ ಸಂದರ್ಭದಲ್ಲಿ ಗೆಳೆಯರು ಬಂಧುಗಳು ಕೈ ಬಿಟ್ಟರೂ ಸಂಗಾತಿಯಾಗಿ ನಿಲ್ಲುವುದೇ ಆತ್ಮವಿಶ್ವಾಸ.ಅವಮಾನದ ಪ್ರತಿ ತಿರುವನ್ನು ಸವಾಲಾಗಿ ಸ್ವೀಕರಿಸಿದರೆ ಒಂದೊಂದು ಅವಮಾನದ ಪ್ರತಿ ತಿರುವೂ ನಿಮ್ಮ ಗೆಲುವಿನ ಮೈಲಿಗಲ್ಲುಗಳಾಗಿ ಜನರು ನಮ್ಮನ್ನು ಅಭಿಮಾನದಿಂದ ತಿರುಗಿ ನೋಡುವಂತೆ ಮಾಡುತ್ತವೆ.ಅವಮಾನಿಸಿದವರೇ ಸನ್ಮಾನಿಸುವಂತೆ ಬೆಳೆದು ತೋರಿಸುವುದೇ ಅವಮಾನಕ್ಕೆ ತಕ್ಕ ಉತ್ತರವಲ್ಲವೇ? ******** ಜಯಶ್ರೀ ಜೆ.ಅಬ್ಬಿಗೇರಿ

Read Post »

ಅಂಕಣ ಸಂಗಾತಿ, ಮುಖಾಮುಖಿ

ರೇಖಾಚಿತ್ರ ಕಲೆಯ ತಾಯಿ “ಚಿತ್ರಕಲಾ ಅಧ್ಯಾಪಕರ ಆಯ್ಕೆಯಲ್ಲಿ ಪಠ್ಯಕ್ಕೆ ಅನುಗುಣವಾದ ಪ್ರಯೋಗಿಕ ಪರೀಕ್ಷೆ ಮಾನದಂಡವಾಗಬೇಕು” …………………………………. ಹಜರತ್ ಅಲಿ ನಾಡಿನ ಖ್ಯಾತ ಕಲಾವಿದ. ಹರಪನಹಳ್ಳಿ ಬಳಿಯ ಉಚ್ಚಂಗಿ ದುರ್ಗ ಅವರ ಹುಟ್ಟೂರು. ಅವರು ನೆಲೆಸಿರುವುದು ದಾವಣೆಗರೆಯಲ್ಲಿ.  ಕಾರ್ಯ ನಿರ್ವಹಿಸುತ್ತಿರುವುದು ತುಮಕೂರು ವಿಶ್ವವಿದ್ಯಾಲಯದ ಚಿತ್ರಕಲಾ ವಿಭಾಗದಲ್ಲಿ ಉಪನ್ಯಾಸಕರಾಗಿ. ಉತ್ಸವಾಂಬ ಪ್ರೌಢಶಾಲೆಯಲ್ಲಿ ಕಲಿತ ಅವರು , ದಾವಣಗೆರೆಯ ಚಿತ್ರಕಲಾ ಶಾಲೆಯಲ್ಲಿ ಫೈನ್ ಆರ್ಟ ಮತ್ತು ಮಾಸ್ಟರ್ ಆಫ್ ಆರ್ಟ ಪದವಿಗಳಿಸಿದರು. ಹಂಪಿ ಅವರ ನೆಚ್ಚಿನ ತಾಣ. ನಿಸರ್ಗ ಮತ್ತು ಹಳ್ಳಿ ಬದುಕು ಅವರ ಚಿತ್ರಕಲೆಯ ಮೂಲ ನೆಲೆ. ರೇಖಾ ಚಿತ್ರಗಳನ್ನು ಅವರು ಅದ್ಭುತವಾಗಿ ಚಿತ್ರಿಸುತ್ತಾರೆ. ನಾಡಿನ ಹಿರಿಯ ಕಲಾವಿದ ಕೆ.ಕೆ.ಹೆಬ್ಬಾರರ ರೇಖಾ ಚಿತ್ರಗಳನ್ನು ಮೀರಿಸುವಂತೆ  ಬೆಳೆದ ಕಲಾವಿದ ಇವರು. ರೇಖೆಗಳ ಮಾಂತ್ರಿಕ ಹಜರತ್ ಅಲಿ ಅವರ ಚಿತ್ರಗಳಿಗೆ ಸೋಲದ ಚಿತ್ರರಸಿಕರೇ ಇಲ್ಲ. ಕಳೆದ ವರ್ಷ ಮೇ ತಿಂಗಳಲ್ಲಿ ಗದಗನಲ್ಲಿ ಕಲಾವಿದ ಗೆಳೆಯ ಹಜರತ್ ಮಾತಿಗೆ ಸಿಕ್ಕಿದ್ದರು. ತುಂಬಾ ಸಂಕೋಚದ, ನಾಚಿಕೆ ಸ್ವಭಾವದ ಹಜರತ್ ಅವರನ್ನು ಮಾತಿಗೆ ಎಳೆದು, ಅವರೊಳಗಿನ ಮೌನವನ್ನು ಮಾತಾಡಿಸಿ, ಸಂದರ್ಶನ ರೂಪದಲ್ಲಿ ಇಲ್ಲಿ ನೀಡಲಾಗಿದೆ. ಹಂಪಿಯ ಅವಶೇಷ ಹಾಗೂ ಅಳಿದುಳಿದ ವೈಭವವನ್ನು  ವಿದ್ಯಾರ್ಥಿಯಾಗಿದ್ದಾಗ, ಕಲಾವಿದ ಅಧ್ಯಾಪಕನಾಗಿದ್ದಾಗ ಹಲವು ಸಲ ಚಿತ್ರಿಸಿದ ಪ್ರೀತಿ ಅವರದ್ದು. ನಾಡಿನ ಶಿಲ್ಪ ಕಲೆಯ ಬಗ್ಗೆ, ರೇಖಾ ಚಿತ್ರ, ಬಣ್ಣದ ಚಿತ್ರಗಳು, ಅವುಗಳ ಬೆರಗು, ವಾಟರ್ ಕಲರ್ ಪೇಯಿಂಟಿಂಗ್ಸ, ಮಣ್ಣಿನ ಕಲಾಕೃತಿಗಳ ಬಗ್ಗೆ, ಲೋಹದ ಕಲಾಕೃತಿಗಳ ಬಗ್ಗೆ ಅವರು ಗಂಟೆಗಟ್ಟಲೆ ಮಾತಾಡಬಲ್ಲರು. ಹಾಗೂ ವಿವಿಧ ಪ್ರಕಾರಗಳಲ್ಲಿ ಚಿತ್ರಗಳನ್ನು ರೂಪಿಸಬಲ್ಲರು. ನಾಡಿನ ಶ್ರೇಷ್ಠ ಕಲಾವಿದರ ಪರಂಪರೆಯಲ್ಲಿ ಹಜರತ್ ಅಲಿ ಅವರನ್ನು ಸಹ ಕಾಣಬೇಕು. ಅಂಥ ಪ್ರತಿಭೆ ಅವರಲ್ಲಿದೆ. …………………………………. “ಸಂದರ್ಶನದಲ್ಲಿ ನಾಡಿನ ಖ್ಯಾತ ಚಿತ್ರ ಕಲಾವಿದ  ಹಜರತ್ ಅಲಿ  ಅವರು ಚಿತ್ರ ಕಲೆಯ ಕುರಿತು ಮಾತಾಡಿದ್ದು ಇಲ್ಲಿದೆ. ……………………………. ನಾಗರಾಜ ಹರಪನಹಳ್ಳಿ :  ಚಿತ್ರ ನಿಮ್ಮ ಉಸಿರು ಎಂದು ಗೊತ್ತು. ಆದರೂ ಈ ಪ್ರಶ್ನೆ ಕೆಣಕಲು ಕೇಳುತ್ತಿರುವೆ. ಚಿತ್ರ, ಬಣ್ಣಗಳ ಜೊತೆ  ಯಾಕೆ ಆಟವಾಡುತ್ತೀರಿ ಅಥವಾ   ಚಿತ್ರ ಬರೆಯುತ್ತೀರಿ ? ಹಜರತ್ ಅಲಿ  :   ಕಲೆ ಮಾನವನ ಆಲೋಚನೆಗಳು ತೀವ್ರಗೊಂಡಾಗ ಸ್ಪೋಟಗೊಳ್ಳುವ ಮೂರ್ತರೂಪದ ಅಥವಾ ದೃಶ್ಯ ರೂಪದ ಭಾವನೆಗಳೇ ಆಗಿರುತ್ತವೆ. ಅದು ಬಣ್ಣ, ರೇಖೆ, ಶಿಲ್ಪ, ಶ್ರಾವ್ಯ,ಅಭಿನಯ, ನೃತ್ಯ ಸಾಹಿತ್ಯ …..ಹೀಗೆ ಹತ್ತುಹಲವು ಬಗೆಗಳಲ್ಲಿ ಅಭಿವ್ಯಕ್ತಿಯಾಗಿರುತ್ತದೆ. ಪ್ರಶ್ನೆ :  ಕಲೆ  ಅಥವಾ ಚಿತ್ರ, ಹುಟ್ಟುವ ಕ್ಷಣ ಯಾವುದು ? ಉತ್ತರ ; ಯಾವುದೇ ಬಗೆಯ ಕಲೆಯ ಹುಟ್ಟಿಗೆ ಮೂಲ ಪ್ರೇರಕ ಶಕ್ತಿ ಪ್ರಕೃತಿಯೇ ಆಗಿರುತ್ತದೆ. ಅದು ಕಾಲ ಮತ್ತು ದೇಶಾತೀತವಾದುದು, ಹಾಗಾಗಿ ಇಂಥದ್ದೇ ಸಮಯದಲ್ಲಿ ಕಲೆ ಹುಟ್ಟುತ್ತದೆ ಎಂದೇನಿಲ್ಲ, ಕಲಾವಿದನಲ್ಲಿ ಭಾವತೀವ್ರಗೊಳಿಸುವ ಯಾವುದೇ ವಿಷಯಯವೂ ಚಿತ್ರರೂಪ ಪಡೆಯಬಲ್ಲದು. ನನ್ನನ್ನು ಹೆಚ್ಚಾಗಿ ಕಾಡುವ ವಸ್ತು ವಿಷಯ ಗ್ರಾಮೀಣ ಪ್ರದೇಶದ ಬದುಕು ಮತ್ತು ನೆಲೆ.  ನಗರದ  ಯಾಂತ್ರಿಕ ಬದುಕಿನ ನಿರ್ಭಾವುಕತೆಗಿಂತಲೂ , ಭಾವುಕ ಜಗತ್ತಿನ ಸ್ವಭಾವ ನನಗೆ ಇಷ್ಟದ ವಿಷಯ. ಪ್ರಶ್ನೆ : ನಿಮ್ಮ ರೇಖಾ ಚಿತ್ರಗಳು ತುಂಬಾ ಕಾಡುತ್ತವೆ. ಹೇಗೆ ಅದರ ಸೆಳೆತ ನಿಮಗೆ  ? ಉತ್ತರ : ಚಿತ್ರಕಲೆಯಲ್ಲಿ ರೇಖಾಚಿತ್ರ ಕಲೆಯ ತಾಯಿ ಎಂದು ಕರೆಯಲಾಗುತ್ತದೆ. ಹಾಗಾಗಿ ರೇಖಾಚಿತ್ರದ ಅಭ್ಯಾಸ ಪ್ರತಿಯೊಬ್ಬ ಕಲಾವಿದ್ಯಾರ್ಥಿಗೆ  ಹಾಗೂ  ಕಲಾವಿದನಿಗೆ ಅತ್ಯಗತ್ಯ. ಪ್ರಶ್ನೆ :  ರೇಖೆಗಳು ಚಿತ್ರ ಕಲೆಯ ಶಾಸ್ತ್ರೀಯ ನೆಲೆ ಅಂತ  ನೀವು ಹೇಳಿದ ನೆನಪು ನನಗೆ. ಬದಾಮಿ-ಬೇಲೂರು ಶಿಲ್ಪಕಲಾ ವೈಭವದ  ವಿಶೇಷತೆ ಏನು ? ಉತ್ತರ : ನಮ್ಮ ಐತಿಹಾಸಿಕ ನೆಲೆಗಳಾದ ಬಾದಾಮಿ, ಐಹೊಳೆ, ಪಟ್ಟದಕಲ್ಲು, ಹಂಪಿ, ಬಿಜಾಪುರ, ಬೇಲೂರು ಹಳೇಬೀಡು ಮೊದಲಾದ ಸ್ಥಳಗಳು ಆಯಾಕಾಲದ ಜನಜೀವನದ ಸಾರವನ್ನು ಹೊಂದಿರುವ ಆಕರ ಕೇಂದ್ರಗಳಾಗಿವೆ. ಇವು ಆ ಕಾಲದ ಕಲಾ ಪರಂಪರೆಯನ್ನು ಒಳಗೊಂಡಿದ್ದು ಇಲ್ಲಿ ರಚಿಸಲಾಗಿರುವ ಶಿಲ್ಪಕಲಾಕೃತಿಗಳು ಧಾರ್ಮಿಕ ವಿಷಯಗಳನ್ನಷ್ಟೇ ಅಲ್ಲದೆ, ಆ ಕಾಲದ ಜನರ ಉಡುಗೆ ತೊಡುಗೆಗೆಳು, ವೇಷ ಭೂಷಣಗಳು,ಕ್ರೀಡೆ, ಯುದ್ಧದ, ವೈಭೋಗ ಮುಂತಾದ, ತಮ್ಮ ಕಾಲದ ವರ್ತಮಾನವನ್ನ  ನಮ್ಮ ಕಾಲಕ್ಕೂ ತೆರೆದಿಟ್ಟಿರುವ ಜ್ಞಾನ ಭಂಡಾರಗಳಾಗಿವೆ. ಇಲ್ಲನ ವಾಸ್ತುಶಿಲ್ಪ ಶಿಲ್ಪಕಲೆಗೆ ಮನಸೋಲದವರಾರು ? ಪ್ರಶ್ನೆ : ನಿಮ್ಮ ಚಿತ್ರಗಳ ವಸ್ತು, ವ್ಯಾಪ್ತಿ ಹೆಚ್ಚಾಗಿ  ಯಾವುದು  ? ಪದೇ ಪದೇ ಕಾಡುವ ವಿಷಯ ಯಾವುದು ? ಉತ್ತರ : ಹಂಪಿ ನನ್ನ ನೆಚ್ಚಿನ ಪ್ರಕೃತಿ ತಾಣ, ವಿದ್ಯಾರ್ಥಿಯಾಗಿ, ಅಧ್ಯಾಪಕನಾಗಿ  ಇಲ್ಲಿ ನೂರಾರು ನಿಸರ್ಗ ಚಿತ್ರಗಳನ್ನು ರಚಿಸಿದ್ದೇನೆ. ಪ್ರಶ್ನೆ : ಪ್ರಸ್ತುತ ರಾಜಕೀಯ ಸನ್ನಿವೇಶದ ಬಗ್ಗೆ ನಿಮ್ಮ ಪ್ರತಿಕ್ರಿಯೆ ಏನು ? ಉತ್ತರ : ಪ್ರಸ್ತುತ ರಾಜಕೀಯ ಸನ್ನಿವೇಶ ತುಂಬಾ ಕಲುಷಿತ ಗೊಂಡಿದೆ . ಜಾತಿ ಜಾತಿಗಳ ಮಧ್ಯೆ ಗೋಡೆಗಳು ನಿರ್ಮಿಸುವುದೇ ಸದ್ಯದ ರಾಜಕೀಯ ಬಂಡವಾಳ.. ಪ್ರಶ್ನೆ :  ಧರ್ಮ ,ದೇವರು ವಿಷಯದಲ್ಲಿ ನಿಮ್ಮ ನಿಲುವೇನು ? ಉತ್ತರ : ಧರ್ಮ ತೋರಿಕೆಯಾಗಬಾರದು. ಹೊಸ್ತಿಲೊಳಗಿರಬೇಕಾದ ಧರ್ಮ ಬೀದಿಗೆ ಬಂದು ಅಬ್ಬರಿಸುತ್ತಿದೆ. ಮನುಷ್ಯ ಮನುಷ್ಯನ ನಡುವೆ ಮಾನವತೆಯ ಬಿತ್ತದ ಧರ್ಮ ನನ್ನದೃಷ್ಟಿಯಲ್ಲಿ ಅಪ್ರಯೋಜಕ. ಪ್ರಶ್ನೆ :  ಪ್ರಸ್ತುತ ಸಾಂಸ್ಕೃತಿಕ ವಾತಾವರಣದ ಬಗ್ಗೆ ನಿಮಗೆ ಏನನ್ನಿಸುತ್ತಿದೆ ? ಉತ್ತರ : ಸಾಂಸ್ಕೃತಿಕ ವಲಯವ ಉಳ್ಳವರ ಪ್ರಾಯೋಜಿತ ಕಾರ್ಯಕ್ರಮವಾಗುತ್ತಿದೆ. ಅಕಾಡೆಮಿಯಗಳಲ್ಲಿ  ಬಹುತೇಕ ಜಾತಿ ಮತಗಳ ಪರವಾದ ಸ್ವಾರ್ಥವೇ ಹೆಚ್ಚಾಗಿದೆ. ನಿಜವಾದ ಕಲಾವಿದರಿಗೆ ಗುರುತಿಸಲ್ಪಡುವುದು ಅತಿವಿರಳ. ಪ್ರಶ್ನೆ : ಚಿತ್ರ, ಕಲಾ ಲೋಕ ವಲಯದ ರಾಜಕಾರಣದ ಬಗ್ಗೆ ನೀವು ಹೇಗೆ ಪ್ರತಿಕ್ರಿಯಿಸುವಿರಿ?  ಉತ್ತರ: ಚಿತ್ರಕಲಾ ಕ್ಷೇತ್ರವೂ ಈ ರಾಜಕೀಯ ಹಸ್ತಕ್ಷೇಪದಿಂದ ಮುಕ್ತವಾಗಿಲ್ಲ. ಇಂದು ಕರ್ನಾಟಕದ ಚಿತ್ರಕಲಾ ಶಿಕ್ಷಣ ಬಹುತೇಕ ಸೊರಗಿದೆ. ಇಂದು ಕಾಲೇಜುಗಳಲ್ಲಿ  ಬೋಧನೆ ಮಾಡುವ ಅಧ್ಯಾಪಕರು ಬಹುತೇಕ ಯೂಜಿಸಿ ಮಾನ್ಯತೆಯ ಪದವಿಧರರಿದ್ದಾರೆಯೇ ಹೊರತು,  ಪ್ರತಿಭಾವಂತ ರಿರುವುದು ಕಡಿಮೆಯೆ..  ವಿ.ವಿ.ಗಳ ಅಧಿಕಾರಿಗಳಿಗೆ ಚಿತ್ರಕಲಾ(ದೃಶ್ಯ ಕಲಾ) ಶಿಕ್ಷಣದ ಅರಿವಿನ ಕೊರತೆ ಇದೆ. ಪಠ್ಯಕ್ರಮದಲ್ಲಿ ಏನನ್ನು ಕಲಿಸಲಾಗುತ್ತದೆ ಎಂಬುವುದು ಅವರಿಗೆ ತಿಳಿದಿರುವುದಿಲ್ಲ. ಅಧ್ಯಾಪಕರ ಆಯ್ಕೆ ಯಲ್ಲಿ ಸರ್ಟಿಫಿಕೇಟ್ ಅಷ್ಟೇ ಮುಖ್ಯ,  ಅಧ್ಯಾಪಕ ನ ಪ್ರತಿಭೆ ನಗಣ್ಯ. ಚಿತ್ರಕಲಾ ಶಿಕ್ಷಣ ಪ್ರಾಯೋಗಿಕ ಆಧಾರಿತ ಶಿಕ್ಷಣ ವಾಗಿರುವುದರಿಂದ ಅಧ್ಯಾಪಕರ ಆಯ್ಕೆಯಲ್ಲಿ ಅಥವಾ ಸಂದರ್ಶನದಲ್ಲಿ ಪಠ್ಯಕ್ಕೆ ಅನುಗುಣವಾದ ಪ್ರಯೋಗಿಕ ಪರೀಕ್ಷೆ ಮಾನದಂಡವಾದರೆ ಶಿಕ್ಷಣದ ಗುಣಮಟ್ಟ ಸುಧಾರಿಸಬಹುದು.. ಪ್ರಶ್ನೆ :  ಈ ದೇಶದ ಚಲನೆಯ ಬಗ್ಗೆ ನಿಮ್ಮ ಮನಸು ಏನು ಹೇಳುತ್ತಿದೆ? ಉತ್ತರ :  ಸದ್ಯ ದೇಶಕ್ಕೆ ಮನುಷ್ಯ ಮನುಷ್ಯರನ್ನು ಬೆಸೆಯುವ ಧರ್ಮ ಧರ್ಮ ಗಳನ್ನ ಬೆಸೆಯುವ ಸೌಹಾರ್ದ ಸಂತನ ಅಗತ್ಯವಿದೆ. ಇದಕ್ಕೆ ವ್ಯತಿರಿಕ್ತವಾದ ಪರಿಸ್ಥಿತಿಯಲ್ಲಿ ರಾಜಕಾರಣಿಗಳು, ಧಾರ್ಮಿಕ ಮುಖಂಡರು ಯುವಜನತೆಯಲ್ಲಿ ಪ್ರಜ್ಞೆ ಮೂಡಿಸಬೇಕು. ಎಲ್ಲರಿಗೂ ಬದುಕುವ ಹಕ್ಕನ್ನು ನೀಡಿರುವ ಸಂವಿಧಾನದ ಘನತೆ ನಮ್ಮಲ್ಲಿ ಎಚ್ಚರಗೊಳ್ಳಬೆರಕು.. ಪ್ರಶ್ನೆ : ಆರ್ಟ ,ಪೇಯಿಂಟಿಂಗ್ಸ   ಬಗ್ಗೆ ನಿಮ್ಮ ಕನಸುಗಳೇನು ? ಉತ್ತರ : ಮನುಷ್ಯನ ಬದುಕು ಅರಾಜಕವಾದಲ್ಲಿ ಕಲೆ ಮತ್ತು ಸಂಸ್ಕ್ರತಿಗಳು ಅವಸಾನದ ಹಾದಿ ಹಿಡಿಯುತ್ತವೆ. ದೇಶ ಸುಭಿಕ್ಷುವಾಗಿದ್ದರೆ ಮಾತ್ರ ಕಲೆ, ಕಲಾವಿದರ ಅಸ್ತಿತ್ವ. ಇದಕ್ಕೆ ಪೂರಕವಾದ ಸಮಾಜ ನಮ್ಮದಾಗಲಿ. …………… ಲೇಖಕರ ಬಗ್ಗೆ: ಹರಪನಹಳ್ಳಿ ಹುಟ್ಟೂರು. ಹರಪನಹಳ್ಳಿ ತಾಲೂಕಿನ ಮೈದೂರು-ಚಿಗಟೇರಿ ಬೆಳೆದ ಊರು. ಪಿಯು ಓದಿದ್ದು ಕೊಟ್ಟೂರಿನಲ್ಲಿ. ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಬಿ.ಎ., ಕವಿವಿಯಲ್ಲಿ ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ. ದಾವಣಗೆರೆ, ಸದಾಶಿವಗಡ ಮತ್ತು ಭಟ್ಕಳದಲ್ಲಿ ಕನ್ನಡ ಉಪನ್ಯಾಸಕರಾಗಿ ಕೆಲಸ ನಿರ್ವಹಿಸಿ, 1997 ರಿಂದ ಕಾರವಾರದಲ್ಲಿ ಪತ್ರಕರ್ತರಾಗಿ ಕೆಲಸ ಮಾಡುತ್ತಿದ್ದಾರೆ. ಜನವಾಹಿನಿ, ಜನಾಂತರಂಗ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿದ ಇವರು, ಈ ಟಿವಿ ಕನ್ನಡ ನ್ಯೂಸ್ ಚಾನೆಲ್ಲಿಗೆ ವರದಿಗಾರಿಕೆ ಬಳಿಕ ಈಗ ಉದಯವಾಣಿ , ಬೆಳಗಾವಿಯ ಲೋಕದರ್ಶನ ಪತ್ರಿಕೆಗೆ ವರದಿಗಾರರಾಗಿದ್ದಾರೆ. 2009ರಲ್ಲಿ ‘ಕಡಲದಂಡೆಗೆ ಬಂದ ಬಯಲು’ ಎಂಬ ಕಥಾ ಸಂಕಲನ, 2013ರಲ್ಲಿ ‘ಬಿಸಿಲ ಬಯಲ ಕಡಲು’ ಎಂಬ ಕವಿತಾ ಸಂಕಲನ ಪ್ರಕಟಣೆ.2019 ರಲ್ಲಿ ‘ವಿರಹಿದಂಡೆ’ ಕವಿತಾ ಸಂಕಲನ ಪ್ರಕಟಿಸಿದ್ದಾರೆ. ಕಾರವಾರ ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.‌

Read Post »

ಕಾವ್ಯಯಾನ

ಬಂತು ಶ್ರಾವಣ

ವೀಣಾ ರಮೇಶ್ ನಿಸರ್ಗದ ಕುಂಚದಲಿಬರೆದಳು ಶುಕ್ಲ ಪ್ರತಿಪದೆಹಸಿರ ಬಸಿರು ಹೊತ್ತುಶ್ರಾವಣದ ಶುಭಪ್ರದೆ ನವ ಶೃಂಗಾರದ ವೈಯಾರಿಮೈತುಂಬಿ ಬಂದಳುಬಿಂಕವ ತೋರಿಅಪ್ಪಿದಳು ಇಳೆಯಲಿ ಭೂರಮೆನಸುನಗೆಯ ತೂರಿ ಸಂಭ್ರಮದ ಪರ್ವಗಳ ಮಾಸಮನ ಮಾನಸದಲಿಶ್ರಾವಣಿ ತಂದಳುಮಂದಹಾಸ,ಪ್ರಕೃತಿಯ ಋತುವಿಲಾಸ ವೇದ ಮಂತ್ರಗಳ ಪಠಣಮಂಗಳ ವಾದ್ಯಗಳಶಬ್ದ ಘೋಷಣಪರ್ವಗಳ ಸಾಲಿಗೆ , ಸಂಭ್ರಮದ ಒಡಲಿಗೆಸಿಹಿಹೂರಣ **************

ಬಂತು ಶ್ರಾವಣ Read Post »

ಕಾವ್ಯಯಾನ

ನಾನೇ ರಾಧೇ…

ವಸುಂದರಾ ಕದಲೂರು ಕೃಷ್ಣನೆ ಕೊಳಲು ನುಡಿಸಿದ ಇರುಳುನಾನೂ ಆದೇನು ರಾಧೆಶ್ಯಾಮನೆ ನಿಜದಿ ನನ್ನೊಡನಿರಲುನನಗೆ ಬೇರೇನು ಬಾಧೆ ಇನಿಯನ ಇಂಪಿನ ಕೊರಳಿನ ಕರೆಯಒಲವಿನ ಚೆಲುವಿನ ಇನಿದನಿ ಸವಿಯಮರೆಯಲಿ ಹೇಗೆ ನಾ ಮಾಧವನಾತೊರೆಯಲಿ ಹೇಗೆ ನಾ ಗಿರಿಧರನಾ ಮಾಧವ ರಾಘವ ಗಿರಿಧರ ಗೋಪಾಲಹಲಬಗೆ ಹೆಸರಲಿ ಜಪಿಸಿದೆ ಸಂಕುಲಬಾರಾ ಮಾಧವ ಮುರಳಿ ಲೋಲಾತೋರಾ ಶ್ಯಾಮಲ ಅಪಾರ ಲೀಲಾ ಹುಡುಕಲಿ ಎಲ್ಲಿ ಆ ಚೆಲುವನನುಸಹಿಸಲಿ ಹೇಗೆ ನಾ ವಿರಹವನುಮೋಹಿಸದಿರಲೆಂತು ಮಾಧವನನುತೊರೆಯುವುದೆಂತು ಘನವಂತನನು ಕೃಷ್ಣನೆ ಕೊಳಲು ನುಡಿಸಿದ ಇರುಳುನಾನೂ ಆದೇನು ರಾಧೆಶ್ಯಾಮನೆ ನಿಜದಿ ನನ್ನೊಡನಿರಲುನನಗೆ ಬೇರೇನು ಬಾಧೆ ***********

ನಾನೇ ರಾಧೇ… Read Post »

ಕಾವ್ಯಯಾನ

ಕಾವ್ಯಯಾನ

ಸೋಲೆಂಬ ಸಂತೆಯಲಿ ದೀಪ್ತಿ ಭದ್ರಾವತಿ ಹೀಗೇಕೆ ಬೆನ್ನು ಬಿದ್ದಿದೆ ಸೋಲುರಚ್ಚೆ ಹಿಡಿದ ಮಗುವಿನಂತೆಹೆಜ್ಜೆ ಇಟ್ಟೆಡೆಗೆ ಕಣ್ಣು ನೆಟ್ಟಿದೆತಾಳಬಲ್ಲೆನೇಸವಾರಿ?ಕಣ್ಣಂಚಲಿಮುತ್ತಿಕ್ಕುತ್ತಿದೆ ಸೋನೆಸುಡುವ ಹರಳಿನಂತೆಒರೆಸಿಕೊಳ್ಳಲೇ ಸುಮ್ಮನೆ?ಎಷ್ಟೊಂದು ಸಂಕಟದ ಸಾಲಿದೆಸೋಲೆಂಬ ಮೂಟೆಯೊಳಗೆನಟ್ಟ ನಡು ಬಯಲಿನಲಿ ಒಂಟಿಮತ್ತು ಒಂಟಿ ಮಾತ್ರಹರಿಯಬಲ್ಲದೇ ಹರಿದಾರಿ?ನಡೆಯುತ್ತದೆಯೇ ದಿಕ್ಕು ಮರೆತ ನೌಕೆ?ಸುತ್ತ ಹತ್ತೂರಿಂದ ಬಂದ ಪುಂಡಗಾಳಿ ಹೊತ್ತೊಯ್ದು ಬಿಡುವುದೇನೆಟ್ಟ ಹಗಲಿನ ಕಂಪು?ಯಾವ ದಾರಿಯ ಕೈ ಮರವೂಕೈ ತೋರುತ್ತಿಲ್ಲಮರೆತು ಹೋಗಿದೆ ದಿಕ್ಸೂಚಿಗೂಗುರುತುಕಗ್ಗತ್ತಲ ಕಾರ್ತಿಕದಲಿಹಚ್ಚುವ ಹಣತೆಯೂ ನಂಟು ಕಳಚಿದೆಮುಖ ಮುಚ್ಚಿಕೊಂಡೀತೆಬೆಳಕು ಬಯಲ ಬೆತ್ತಲೆಗೆ?ಮುಗ್ಗರಿಸಿದ ಮಧ್ಯಹಾದಿಯಮಗ್ಗಲು ಬದಲಿಸಲೇ?ನೂರೆಂಟು ನವಿಲುಗರಿಗಳನಡುವೆ ಹಾರಿದ ಮುಳ್ಳುಎದೆ ಚುಚ್ಚಿದೆ, ಕಣ್ಣು ನೆಟ್ಟಿದೆಮತ್ತು ನೆತ್ತಿಯನ್ನೂ ಕೂಡಸೋಲು ಭಾಷೆ ಬದಲಿಸುವುದಿಲ್ಲನನಗೋ ಭಾಷೆಗಳು ಬರುವುದೇ ಇಲ್ಲ.. ***************

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಕೊರೊನ ಜಾಗೃತಿ ಶ್ವೇತಾ ಮಂಡ್ಯ ಕೊರಗ ಬೇಡಿಬಂತೆಂದು ಕರೋನಮರೆಯ ಬೇಡಿಎಚ್ಚರಿಕೆ ಕೈ ತೊಳೆಯೋದನ್ನ ಹೆದರದಿರಿ ವೈರಸ್ಸಿನ ಕಾಟಕೆಹೆದರಿಸಿ ವೈರಿಯನು ಎದೆಗುಂದದೆಸಾಮಾಜಿಕ ಅಂತರ ಎಂದೂ ನೆನಪಿನಲಿರಲಿನಿಮ್ಮ ನೆರೆಹೊರೆಯವರನ್ನೂ ಕೂಡ ಮರೆಯದಿರಿ ಮನೆಯೇ ಮಂತ್ರಾಲಯವಾಗಿಹಈ ದಿನಗಳಲಿಒಡೆದ ಮನವ ಒಂದಾಗಿಸಿಬಾಳುವುದ ಕಲಿಯೋಣ ಒಗ್ಗಟ್ಟಿನಲಿ ಬಿಸಿನೀರು,ಬಿಸಿಯೂಟ,ಹಾಲು, ಹಣ್ಣು ,ತರಕಾರಿಕರೋನ ತಡೆದು ಆರೋಗ್ಯವರ್ಧಿಸುವ ರಹದಾರಿ ಹೊರಗಡೆ ಬರುವಾಗಮುಖಕ್ಕಿರಲಿ ಮಾಸ್ಕ್ಬೇಡವೇ ಬೇಡಅನಗತ್ಯ ಓಡಾಟದ ರಿಸ್ಕ್ ಜೀವ ಉಳಿಸುವ ಕಾರ್ಯತತ್ಪರತೆಹಸಿದವರೊಡಲ ತುಂಬಿಸುವ ವಿಶಾಲತೆಮೆರೆದ ಮಂದಿಗೆಲ್ಲಾ ಸಲ್ಲಿಸೋಣನಮ್ಮ ಪ್ರೀತಿಯ ಕೃತಜ್ಞತೆ ಬದುಕ ಬಂಡಿಯ ಹಳಿ ತಪ್ಪಿಸಿಹಲವು ಜೀವಗಳ ಮಣ್ಣೊಳಗೆ ಮಲಗಿಸಿವಿಶ್ವ ಆರ್ಥಿಕತೆಯ ಬುಡಮೇಲಾಗಿಸಿಒಕ್ಕರಿಸಿದೆ ಈ ಕರೋನ ರಾಕ್ಷಸಿ ಏನಾದರೂ ಆಗಲಿ ಆತ್ಮಬಲವೊಂದಿದ್ದರೆಮೀರಬಹುದು ಎಲ್ಲವನುಸ್ವಯಂ ಜಾಗೃತರಾಗಿ ,ಗೆಲ್ಲೋಣ ಬನ್ನಿಈ ಮನುಕುಲದ ದುಸ್ವಪ್ನವಾದ ಕೊರೊನವನು. ಜೀವಕಿಂದು ಬೇಕು ಸಾಂತ್ವನಆತ್ಮ ಶಕ್ತಿಯೊಂದೇ ಬದುಕಿನ ಮಂಥನತಾಳ್ಮೆ ಸಹನೆ ಕರುಣೆಯ ಪ್ರದರ್ಶಿಸೋಣನಾವು ನಮ್ಮವರನೆಲ್ಲ ರಕ್ಷಿಸೋಣ ಮಹಾ ಮಾರಿ ಬಂತೆಂದುದೃತಿಗೆಡದೆ ಮುಂದೆಸಾಗಬೇಕು ಅಡೆತಡೆಗಳಮೀರುತ ನಡೆ ಮುಂದೆ ************

ಕಾವ್ಯಯಾನ Read Post »

You cannot copy content of this page

Scroll to Top