ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ, ಜೀವನ

ಪ್ರಸ್ತುತ

ಸಂವಾದ ಜ್ಯೋತಿ ಡಿ.ಬೊಮ್ಮಾ. ಹೌದು ಪಾಶ್ಚಾತ್ಯ ಸಂಸ್ಕೃತಿಯೆ ಚನ್ನ ಒತ್ತಾಯದ ಬದುಕು ಅವರಾರು ಬದುಕರು ಹೊಂದಾಣಿಕೆಯ ಪ್ರಯತ್ನವೇ ಮಾಡರವರು ನಮ್ಮಂತಲ್ಲ ಒಳಗೊಂದು ಹೊರಗೊಂದು ಇಷ್ಟವಿಲ್ಲದವನ/ಳೊಂದಿಗೆ ಏಗುವ ರಗಳೆ ಕುಡಿದು ಪೀಡಿಸುವ ಗಂಡನೊಡನೆ ಸಹಬಾಳ್ವೆ ಇಲ್ಲಿ ಮಕ್ಕಳಾಗದಿದ್ದರು ತಾನೆ ತಪಿತಸ್ಥಳು ಲೋಕಕ್ಕೆ ಅವನು ಗಂಡಸು..ಅವನಲ್ಲೆನು ಕೊರತೆ..! ಮಕ್ಕಳಾದ ಮೇಲೆ ಇನ್ನೆನಿದೆ. ಅನುಸರಿಸಿಕೊಂಡು ಹೋಗುವದೊಂದೆ. ಅವರಾದರೂ ಎಲ್ಲಿರುತ್ತಾರೆ ಕೊನೆವರೆಗೆ ನಮ್ಮವರಾಗಿ..! ಬಿಟ್ಟು ಬಿಡುವದೊಳಿತು ಮನಸ್ಸಿಗೊಪ್ಪದು ಸುಮ್ಮನಿರು ,ಮಾತು ಬೇರೆ  ಆತ್ಮ ಬೇರೆ ಎರಡು ಒಂದಾಗಬೇಕಾದರೆ ತೆರೆ ಸರಿಸಿ ಬದುಕಬೇಕು. ಬಯಸಿ ದೊರಕಿಸಿಕೊಂಡದ್ದು ಹಳತಾಗದೆ..! ಹಾಗಂತ ಹೊಂದಾಣಿಕೆಯಲ್ಲೆ ಬದುಕಬೇಕೆ.. ದೇವತೆಗಳ ನೆಲೆವೀಡು ನಮ್ಮ ನಾಡು ಸುಸಂಸ್ಕತಿ ಉಳ್ಳದ್ದು. ಪುರುಷ ದೇವರೆಲ್ಲ ಬಹುಪತ್ನಿತ್ವ ಸ್ಥರೆ ಶ್..ಕದ್ದು ಕೇಳುವ ಕಿವಿಗಳಿವೆ ಇಲ್ಲಿ. ಕದ್ದು ಏನು ಮಾಡಿದರು ನಡೆಯಬಹುದಿಲ್ಲಿ.. ಇರುವದನ್ನೆ ಒಪ್ಪಿಕೊಂಡರು ಬದುಕಿದರಾಗದೆ..? ನೀವು ಬುದ್ದಿ ಜೀವಿಗಳು ,ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಮಾತಾಡುವವರು.. ಎಡ ಬಲವೆಂದು ಎಗ್ಗಿಲ್ಲದೆ ಬಡಿದಾಡುವ ಗೊಡ್ಡು ವಾದಿಗಳು.. ನೈಜತೆ ಮರೆಮಾಚಿ ಕಲ್ಪನೆಯಲ್ಲಿ ಬದುಕುವರು.. ಯಾಕೋ..ಅಲ್ಲಗಳೆಯಲಾಗಲಿಲ್ಲ.           **********

ಪ್ರಸ್ತುತ Read Post »

ಇತರೆ, ಜೀವನ

ಪ್ರಸ್ತುತ

ಮಕ್ಕಳ ಆಯ್ಕೆಯಲ್ಲಿ ನಂಬಿಕೆ ಏಕಿಲ್ಲ….? ಅನಿತ.ಕೆ.ಬಿ.   ವಿವಾಹವೆಂಬುದು ನಮ್ಮ ಸಮಾಜದಲ್ಲಿ ಕಂಡುಬರುವಂತಹ ಒಂದು ಸಂಸ್ಥೆ. ಗಂಡಿಗೆ ಹೆಣ್ಣು,ಹೆಣ್ಣಿಗೆ ಗಂಡು ಆಸರೆಯಾಗಿರುತ್ತಾರೆಂಬ ನಂಬಿಕೆಯಿಂದ ವಿವಾಹ ಅವಶ್ಶಕ ಹಾಗೂ ಅನಿವಾರ್ಯ. ಮದುವೆಯನ್ನು ಪುರಾಣಗಳ ಕಾಲದಲ್ಲಿ ಸ್ವಯಂವರ ರೀತಿ ನಡೆಸಲಾಗಿದೆ.    ಹಾಗದರೆ ಮದುವೆ ಎಂದರೇನು…? ಎಂಬ ಪ್ರಶ್ನೆಗೆ ಸಮಾಜಶಾಸ್ತ್ರಜ್ಞರಲ್ಲಿ ಒಬ್ಬರಾದ ಮ್ಶಾಲಿನೊಸ್ಕಿರವರು “ಸ್ತ್ರೀ-ಪುರುಷರ ನಡುವೆ ಲೈಂಗಿಕ ಹಾಗೂ ಮಾನಸಿಕ ಸಂಬಂಧವನ್ನ ದೃಢಪಡಿಸುವ ಮತ್ತು ಸಂತಾನೋತ್ಪತ್ತಿಗಾಗಿ ಉದ್ದೇಶಪೂರ್ವಕವಾಗಿ ಏರ್ಪಡಿಸುವ ಒಪ್ಪಂದ” ಎಂದಿದ್ದಾರೆ.     ಮದುವೆ ಇಲ್ಲದೆ ಜೀವನ ನಡೆಸಲು ಸಾಧ್ಶವಿಲ್ಲವೇ? ಯಾಕಿಲ್ಲ,ಎಷ್ಟೋ ಮಂದಿ ತಮ್ಮ ಉದ್ದೇಶಕ್ಕಾಗಿ ವಿವಾಹವಾಗದೇ ಉಳಿದಿದ್ದಾರೆ. ಆದರೆ ಯಾರೋ ಒಬ್ಬ ವಿವೇಕಾನಂದ,ಎಲ್ಲೊ ಒಬ್ಬ ಕಲಾಂ, ಮೋದಿಯಂತವರೇ ಹೊರತು ನಮ್ಮ ಅಣ್ಣ-ತಮ್ಮ,ಅಕ್ಕ-ತಂಗಿಯರಂತು ಅಲ್ಲವೇ ಅಲ್ಲ..! ವಿವಾಹವಿಲ್ಲದೆ ಮೋಕ್ಷವಿಲ್ಲ ಎಂಬುದು ಹಿಂದೂಗಳ ನಂಬಿಕೆ ಹಾಗಾಗಿ ವಿವಾಹ ಅನಿವಾರ್ಯ. ಮದುವೆ ಎಂಬುದು ಬಂಧನವೇ? ಅಲ್ಲವೇ ಅಲ್ಲ. ಇದು ಎರಡು ಜೀವಗಳನ್ನ ಹತ್ತಿರ ತಂದು ಜೀವನವಿಡೀ ಒಂದಾಗಿ ಬಾಳಬೇಕೆಂದು ಹರಸುವಂತಹ ಒಂದು ವಿಧಿ. ವಿವಾಹದ ಕುರಿತು ಹೆಣ್ಣು-ಗಂಡುಗಳಲ್ಲಿ ಹತ್ತಾರು ಕನಸುಗಳಿರುತ್ತವೆ,ಮಾತ್ರವಲ್ಲ ಹಲವರು ತಮ್ಮ ಸಂಗಾತಿಯನ್ನ ಆಯ್ಕೆ ಮಾಡಿಕೊಂಡಿರುತ್ತಾರೆ. ಇದಕ್ಕೆ ವಿರುದ್ಧವಾದ ಸಂದರ್ಭ ಸೃಷ್ಠಿಗೊಂಡಾಗ ಮಾತ್ರ ವಿವಾಹ ಬಂಧನವಾಗುತ್ತದೆ.     ಹೌದು ಮದ್ವೆ ಒಂದೆರಡು ದಿನದ ಜವಾಬ್ದಾರಿಯಲ್ಲ, ಒಂದೆರಡು ದಿನದ ಸಂಭ್ರಮವಲ್ಲ. ಅಂದೊಂದು ಪವಿತ್ರ ಬಂಧ. ಒಂದೆರಡು ದಿನದ ಸಂಭ್ರಮ ಮುಗಿಸಿಹೋಗುವವರು ನೀವಾದರೆ, ಅವರು ಜೀವನದ ಕೊನೆಯ ಪಯಣದವರೆಗೂ ವಿವಾಹವಾದವರೊಡನೆ ನಡೆಯುವವರಾಗಿರುತ್ತಾರೆ. ಹಾಗಾಗಿ ಯಾರೋ ನೊಡುವ ಹೆಣ್ಣು-ಗಂಡನ್ನು ನಂಬುವ ನೀವೂ ನಿಮ್ಮ ಕೈಬೆರಳ ಹಿಡಿದು ಜೊತೆ ಜೊತೆ ಸಾಗಿ ಬಂದ ನಿಮ್ಮ ಮಕ್ಕಳ ಆಯ್ಕೆಯಲ್ಲಿ ನಂಬಿಕೆ ಏಕಿಲ್ಲ…? ಅವರ ಅಭಿಪ್ರಾಯಕ್ಕೂ ಮನ್ನಣೆ ಕೊಡಿ. ನೀವು ಪ್ರತಿನಿತ್ಶ ಪೂಜಿಸುವ ಆ ನಿಮ್ಮ ದೇವರುಗಳು ಕೂಡ ಸಂಗಾತಿಗಳನ್ನ ಆಯ್ಕೆಯಾಗೆ ತಾನೇ ವಿವಾಹವಾಗಿರುವುದು.    ಹೌದು ನಾವು ಸಮಾಜದ ಹೊರತಾಗಿ ಬದುಕಲು ಸಾಧ್ಶವಿಲ್ಲ. ಹಾಗಂತ ಸಮಾಜಕ್ಕಾಗಿ ಬದುಕುವುದು ಸರಿಯೇ?. ಸಂಗಾತಿಯನ್ನ ಆಯ್ಕೆ ಮಾಡಿಕೊಂಡ ಮಾತ್ರಕ್ಕೆ ಸಮಾಜ ಹದಗೆಡುವುದೇ? **********

ಪ್ರಸ್ತುತ Read Post »

ಕಾವ್ಯಯಾನ

ಕಾವ್ಯಯಾನ

ನಿನ್ನ ನೆನಪೆಂದರೆ… ವಸುಂಧರಾ ಕದಲೂರು ಆಗ ನಿನ್ನ ನೆನಪೆಂದರೆ, ಬೇಕಾದ ಮಳೆಯಂತೆತುಂಬಿಕೊಳ್ಳಲು ಹಳ್ಳಕೊಳ್ಳಜಲಾಗರ ಸಾಗರ;ಮುತ್ತುಹವಳ ಸಂಗ್ರಹಾಗಾರ. ಅಚ್ಚಬಿಳುಪಿನ ಕಾಗದದಲಿನೆಚ್ಚಿನ ಅರ್ಥ ತುಂಬಿದ ಭಾವಕೋಶಅಚ್ಚುಕಟ್ಟಾಗಿ ಅಚ್ಚು ಮಾಡಿಸಿದಪದಕೋಶ.. ಈಗ ನಿನ್ನ ನೆನಪೆಂದರೆ, ಅಕಾಲದಲ್ಲಿ ಮಳೆಗರೆದು ಆದರಾಡಿ ರಸ್ತೆಅರ್ಥಕೋಶದಲಿ ಸೇರಿಬಿಟ್ಟಖಾಲಿ ಹಾಳೆ ********

ಕಾವ್ಯಯಾನ Read Post »

ಇತರೆ

ಚಿಂತನೆ

ಅರಿಷಡ್ಬರ್ಗಗಳನು  ದಾಟಿ….. ಅಶ್ವಥ್ ಕಳೆದ ವಾರ ಗೆಳೆಯನೊಬ್ಬನಿಗೆ ಏನೋ ಗೊಂದಲವಾಗಿ ಕೆಲವು ಪ್ರಶ್ನೆಗಳನ್ನು ಒಂದಕ್ಕೊಂದು ಪೋಣಿಸಿ ಪ್ರಶ್ನೆಗಳ ಒಂದು ಮಾಲೆಯನ್ನೇ ಮಾಡಿಟ್ಟುಕೊಂಡಿದ್ದ. ನಾವು ಕತೆ ಕೇಳ್ತೇವೆ, ಇತಿಹಾಸ ಅಧ್ಯಯನ ಮಾಡ್ತೇವೆ, ಪುರಾಣ ಪುಣ್ಯಕತೆಗಳನ್ನು ಓದುವುದು ಕೇಳುವುದು ನೋಡುವುದು ಇದ್ದೇ ಇದೆ. ಇಷ್ಟೇ ಅಲ್ಲದೇ ನಮ್ಮ ತಲೆಮಾರಿನವರಿಗೆ ಬಾಲ್ಯದಲ್ಲಿ ಪೌರಾಣಿಕ ನಾಟಕಗಳು, ಹರಿಕತೆಗಳು, ಬೀದಿನಾಟಕ, ಗೊಂಬೆನಾಟಕ ಹೀಗೆ ಹತ್ತು ಹಲವು ರೀತಿಯಲ್ಲಿ ನಮ್ಮ ಹೊರಗನ್ನು ತಿಳಿಯುವ ಸಾಮಾನ್ಯ ಸಾಧ್ಯತೆಗಳಿದ್ದವು. ಈಗ ಹಳೆಯ ಈ ಮಾಧ್ಯಮಗಳೆಲ್ಲ ಹಿನ್ನೆಲೆಗೆ ಸರಿದು, ಸಿನಿಮಾ, ಅಥವಾ ಕಿರುತೆರೆ (ಟಿವಿ, ಅಮೇಜಾನ್, ನೆಟ್ಫ್ಲಿಕ್ಸ್, ಯೂಟ್ಯೂಬ್ ಆದಿಯಾಗಿ ಮೊಬೈಲ್ಗಳನ್ನೂ ಸೇರಿಸಬಹುದು) ಇವೇ ವಿಜೃಂಭಿಸುವ ಕಾಲದಲ್ಲಿ ನಾವಿದ್ದೇವೆ. ಓದುವುದು ಒಂದು ಹವ್ಯಾಸ ಆಗಿರುವವರಿಗೆ ಕಾಲಾತೀತವಾಗಿ ವರ್ತಮಾನವನ್ನು ಗ್ರಹಿಸಿಕೊಳ್ಳುವುದು ಸಾಧ್ಯ. ಆದರೆ ಓದು ಅಂದರೆ ಪರೀಕ್ಷೆಯಲ್ಲಿ ಪಾಸಾಗುವುದಕ್ಕೆ, ಪುಸ್ತಕಗಳನ್ನೋ, ಅಥವಾ ಮೇಷ್ಟರು ಬರೆಸಿದ ನೋಟ್ಬುಕ್ಗಳನ್ನೋ ಓದುವುದಕ್ಕೆ ಮೀಸಲಾದರೆ ಅದರಿಂದ ಏನೂ ಪ್ರಯೋಜನವಾಗಲಾರದು. ಆ ರೀತಿಯದ್ದಲ್ಲದ ವಿಷಯ, ವಿದ್ಯಮಾನಗಳ ಗ್ರಹಿಕೆಯ ಓದು ಒಂದು ಹವ್ಯಾಸವಾದವರಿಗೆ ಯಾವ ಮಾಧ್ಯಮ ಹಿನ್ನೆಲೆಗೆ ಸರಿದರೂ, ಯಾವ ಹೊಸ ಮಾಧ್ಯಮ ಚಾಲನೆಗೆ ಬಂದರೂ ಅಂತಹವುಗಳಿಂದ ಹೆಚ್ಚಿನ ಪರಿಣಾಮ ಬೀರುವುದಿಲ್ಲ. ನಮ್ಮಂತಹವರು ಅಂದರೆ ಸಾಮಾನ್ಯವಾಗಿ ಹೈಸ್ಕೂಲು, ಆನಂತರ ಎರಡು ಮೂರು ವರ್ಷ ಕಾಲೇಜು ಅಥವಾ ಒಂದು ಪದವಿ ಮುಗಿಸಿಕೊಂಡವರು ಅತ್ತ ಹಳೇಕಾಲದ ಗ್ರಹಿಕೆಯ ಮಾಧ್ಯಮದ ಅವಕಾಶಗಳೂ ಇಲ್ಲದೇ, ಇತ್ತ ಹೊಚ್ಚ ಹೊಸ ಆಕರ್ಷಣೀಯ ಮಾಧ್ಯಮಗಳ ಕಡೆ ಹೊರಳಿಕೊಂಡು ಸಿನಿಮಾ ಹೀರೋಗಳ ಡೈಲಾಗುಗಳಿಗೋ, ಅಥವಾ ಹೆಚ್ಚು ಕಡಿಮೆ ಇದೇ ರೀತಿಯಲ್ಲೇ ಡೈಲಾಗು ಬರೆದುಕೊಂಡು (ಬಹುತೇಕ ಬರೆಯಿಸಿಕೊಂಡು) ಭಾಷಣಭೀರುಗಳ ದಾಳಿಗೆ ಒಳಪಟ್ಟು, ಅವರವರ ಅಭಿಮಾನಿ ಸಂಘಗಳಿಗೆ ಸದಸ್ಯರುಗಳಾಗಿ, ಅಂತಹ ಡೈಲಾಗುಗಳನ್ನೊಂದಿಷ್ಟು ಕರತಲಾಮಲಕ ಮಾಡಿಕೊಂಡು ನಮ್ಮ ಗ್ರಹಿಕೆ ಹಿಗ್ಗಿದೆ ಅಂದುಕೊಂಡಿರ್ತೇವೆ. ಮೊನ್ನೆ ಪ್ರಶ್ನೆ ಮಾಡಿದ ಗೆಳೆಯನನ್ನು ಕಾಡಿದ ಆ ಗೊಂದಲಗಳು ಅವನೊಬ್ಬನವೇ ಅಲ್ಲ; ಬಹುತೇಕ ನಮ್ಮೆಲ್ಲರವೂ ಹೌದು. ಅದಕ್ಕೆ ಉತ್ತರ ಹುಡುಕಲು ಹೊರಡುವುದು ಅಂದರೆ ಬದುಕೆಂದರೆ ಏನು ಅನ್ನುವುದನ್ನೆಲ್ಲ ಕ್ರೋಢೀಕರಿಸಲು ಹೊರಟಂತಹ ಸಾಹಸವಾಗಬಹುದು. ಆದರೂ ಸಂಕ್ಷಿಪ್ತವಾಗಿ ಕಡಿಮೆ ಹೊತ್ತಿನ ಆಲೋಚನೆಗೆ ಹೊಳೆದ ಕೆಲವು ಹೊಳಹುಗಳನ್ನು ಹಿಡಿದಿಡುವ ಪ್ರಯತ್ನ ಇದು. ಆ ಪ್ರಶ್ನೆಗಳ ಸರಮಾಲೆಯನ್ನು ಸಂಕ್ಷಿಪ್ತವಾಗಿ ಹೇಳುವುದಾದರೆ ಬದುಕು ಹೇಗಿರಬೇಕು. ಎಲ್ಲರಂತೆ ಬದುಕುವುದು ಅಂದರೆ ಈಗ ಕಿತ್ತಾಡಿಕೊಂಡೇ ಬದುಕಬೇಕಾದ ಅನಿವಾರ್ಯತೆಯಿದೆ. ಹೇಗೋ ಬದುಕುವುದಾದರೆ ಈ ಪ್ರಶ್ನೆಗಳು ಮೂಡುವುದೇ ಇಲ್ಲ. ಅಂತಃಕರಣದಲ್ಲಿ ಏನೋ ಸರಿಯಿಲ್ಲವೆನ್ನುವ ಭಾವನೆಯಿಂದಲೇ ಈ ಪ್ರಶ್ನೆಗಳ ಅಲೆಗಳು ಶುರುವಾಗುವಂತಹದ್ದು. ಹೈಸ್ಕೂಲಲ್ಲಿ “ಹೃದಯವಂತಿಕೆಯ ಸಮಸ್ಯೆಗಳು” (ವಿ.ಕೃಗೋಕಾಕರದ್ದು) ಅಂತ ನಮಗೊಂದು ಪಾಠ ಇತ್ತು . ಅಂತಹ ಹೃದಯವಂತಿಕೆ ಕಿಂಚಿತ್ತು ಇದ್ದಾಗ ನಮ್ಮ ತಪ್ಪುಗಳ ಬಗ್ಗೆ ನಾವೇ ಯೋಚಿಸುವ, ಪ್ರಶ್ನೆ ಮಾಡಿಕೊಳ್ಳುವ ಆ ಮೂಲಕ ಬದುಕು ಕಾಲದ ಹರಿವಿನೊಟ್ಟಿಗೇ ಕೊಚ್ಚಿಕೊಂಡು ಹೋಗಲು ಬಿಡದೇ, ಅಂಬಿಗನು ನಡೆಸುವ ಹರಿಗೋಲಿನ ಹಾಗೆ ಮುನ್ನಡೆಸುವುದು ಸಾಧ್ಯವಾಗಬಹುದು. ಮಾನವನಿಗೆ ನೆಮ್ಮದಿಯಾಗಿರುವುದಕ್ಕೆ ಅನ್ನ, ಅರಿವು, ಉಡುಪು, ಆರೋಗ್ಯಮತ್ತು ವಸತಿ (ಮನೆ) ಈ ಐದು ಮೂಲಭೂತ ಸೌಕರ್ಯಗಳು ಅತ್ಯಗತ್ಯವಾದವು. ಈ ಐದನ್ನೇ ಸಂಪಾದಿಸಲು ಅಲ್ಲವೇ ಆ ಲಕ್ಷಾಂತರ ವಲಸೆ ಕಾರ್ಮಿಕರು; ಕಾಲಿಗೆ ಚಪ್ಪಲಿಯಿಲ್ಲದೆ, ಅನ್ನ ನೀರಿನ ಏರ್ಪಾಡೂ ಇಲ್ಲದೇ ನಡೆದವರು; ತಮ್ಮ ಸ್ವಂತ ಊರುಗಳನ್ನು ಬಿಟ್ಟು ಸಾವಿರಾರು ಮೈಲಿ ದೂರದಿಂದ ಅವಕಾಶಗಳನ್ನು ಅರಸಿಕೊಂಡು ಬಂದಿದ್ದು? ಈ ಐದು ಸೌಲಭ್ಯಗಳಿಗಾಗಿಯೇ ಬಹುತೇಕ ತೊಂಭತ್ತಕ್ಕೂ ಹೆಚ್ಚು ಶೇಕಡಾ ಜನ ಹೋರಾಡುವುದು. ಇದರಲ್ಲಿ ಕೆಲವು ಶೇಕಡಾ ಜನ ಮಾತ್ರ ಈ ನೆಮ್ಮದಿಯ ಟಾನಿಕ್ಕುಗಳಾಚೆಗೆ, ಕೆಲಸದ ಸುರಕ್ಷತೆ, ಭವಿಷ್ಯಕ್ಕೆಂದು ಒಂದಿಷ್ಟು ಗಂಟು, ಸಮಾಜದಲ್ಲಿ ಅಂತಸ್ತು, ಅಸ್ವಾಭಾವಿಕ ಮನ್ನಣೆ ಗಳಿಸುವ ಸರ್ಕಸ್ಸು, ಇಂಗ್ಲೀಷಿನಲ್ಲಿ ʼಲೈಮ್ಲೈಟ್ʼನ್ನುವ ನಿಂಬೆಹುಳಿಬೆಳಕಿನಲ್ಲಿ ಹೊಳೆಯುವ ವಿಲಕ್ಷಣ ಬಯಕೆ ಇತ್ಯಾದಿಗಳ ಮೊರೆಹೋಗಿ ತಾವು ನೆಮ್ಮದಿಯ ಆಚೆ ಒದ್ದಾಡುವುದರ ಜೊತೆಜೊತೆಯಲ್ಲೇ ತಮಗೆ ಬೇಕಾದ್ದಕ್ಕೆ ಬೇರೆ ಬಡ, ಮಧ್ಯಮ ವರ್ಗದ ಒಂದಿಷ್ಟು ಮಂದಿಯನ್ನೂ ಸೇರಿಸಿಕೊಂಡು ಗೌಜಿ ಸೃಷ್ಟಿ ಮಾಡ್ತಾರೆ. ಈ ರೀತಿಯ ಗೌಜಿಯೇ ಈ ಕಾಲದ ವಿಶೇಷ. ಕಾಂಟ್ರಾವರ್ಸಿ ಎಲ್ಲಿದೆ ಅಂದರೆ ?ಎಲ್ಲಿಲ್ಲ ಅಂತ ಕೇಳಿಕೊಳ್ಳಬೇಕಾದ ಪರಿಸ್ಥಿತಿ ಈಗ ಇದೆ ಅನಿಸಲ್ವೇ? “ರಾಮನುಕಾಡಿಗೆಹೋದನು”.  ಕನ್ನಡದ ಕಾಪಿರೈಟಿಂಗ್ ಪುಸ್ತಕದಲ್ಲಿ ಸಾಮಾನ್ಯವಾಗಿ    ಇದು ಮೊದಲ ವಾಕ್ಯ. ಅಲ್ಲೊಂದು ಕುತೂಹಲ ಮೂಡಿಸುವ ಉದ್ದೇಶವಿದ್ದಿರಬಹುದು ಅನಿಸತ್ತೆ. ಪ್ರೈಮರಿ ಸ್ಕೂಲಿನ ಮಗುವೊಂದಕ್ಕೆ ರಾಮನು ಕಾಡಿಗೆ ಹೋದನು ಅಂದರೆ ರಾಮ ಯಾರು? ಕಾಡು ಅಂದರೆ ಏನು? ರಾಮ ಕಾಡಿಗೆ ಯಾಕೆ ಹೋಗಿದ್ದು? ಈ ರೀತಿಯ ಪ್ರಶ್ನೆಗಳು ಮನಸ್ಸಿನಲ್ಲಿ ಮೂಡಿದರೆ ಕಾಪಿರೈಟಿಂಗಿನ ಜೊತೆಯಲ್ಲೇ ರಾಮಾಯಣ ತಿಳಿಯುವುದಕ್ಕೆ ಮಗುವಿಗೆ ಮಾರ್ಗಸೂಚಿ ಆಯ್ತು. ಪ್ರಚಲಿತ ವಿದ್ಯಮಾನಗಳ ಬಗ್ಗೆ ಆಗ್ಗಾಗ್ಗೆ ನಾವು ಇದೇ ರೀತಿ ಪ್ರಶ್ನಿಸಿಕೊಳ್ಳುವ, ಕೆಲವು ಕುತೂಹಲಗಳನ್ನು ಮೂಡಿಸಿಕೊಳ್ಳುವ, ಅಂತಹ ಕುತೂಹಲಗಳಿಗೆ ಉತ್ತರಗಳನ್ನು ಹುಡುಕಿಕೊಳ್ಳುವ ಒಂದಿಷ್ಟು ಅಭ್ಯಾಸ ಮಾಡುತ್ತಾ ಹೋಗುವುದು ವೈಯಕ್ತಿಕ ಮಟ್ಟದಲ್ಲಿ ಆರೋಗ್ಯಕರ. ಸಧ್ಯ  ಸಮೂಹ ಮಾಧ್ಯಮಗಳಲ್ಲೆಲ್ಲ, ಬೂಟಾಟಿಕೆಗಳೇ ತುಂಬಿ ಹೋಗುವ ಮಟ್ಟಕ್ಕೆ ನಮ್ಮನ್ನು ನಾವೇ ತಂದು ನಿಲ್ಲಿಸಿಕೊಂಡಿರುವ ಈ ಕಾಲದಲ್ಲಿ ಗೆಳೆಯನ ಗೊಂದಲಗಳ್ಯಾವೂ ಬೇರೆ ಯಾರಿಗೂ ಹೊಳೆಯದ ವಿಚಾರಗಳಲ್ಲ. ಆದರೂ ಅಂತಹ ಪ್ರಶ್ನೆಗಳು ಮೂಡುತ್ತಿವೆ ಅಂದರೆ ಕನಿಷ್ಟಪಕ್ಷ ಬೂಟಾಟಿಕೆಗಳನ್ನು ಮೀರಿ ಬದುಕುವ ಸಹಜದಾರಿಯೊಂದನ್ನು ಹುಡುಕುವ ಪ್ರಯತ್ನವೊಂದು ಮನಸ್ಸಿನೊಳಗೆ ನಡೆಯುತ್ತಿದೆ ಎಂದರ್ಥ. ಸನಾತನ ಅಂತ ಕರೆಯುವ ಅನಾದಿಕಾಲದಿಂದಲೂ ಮನುಷ್ಯ ಹೀಗೇನೇ ಬದುಕಬೇಕು ಅನ್ನುವ ಚೌಕಟ್ಟು ಕಾಲಕಾಲಕ್ಕೆ ಕಟ್ಟಿಕೊಳ್ಳುತ್ತಾ ಕಾಲಾಂತರದಲ್ಲಿ ಸವೆತಕ್ಕೆ ಸಿಕ್ಕಿ ನವೀಕರಣಗೊಳ್ಳುತ್ತಾ ಬಂದಿರುವುದರಿಂದಲೇ ಸಾವಿರಾರು ವರ್ಷಗಳ ಹಿಂದೆ ಬದುಕಿದ್ದ ದಶರಥನ ಮಗ ರಾಮನೂ, ದೇವಕಿ-ಯಶೋಧೆಯರ ಮಗ ಕೃಷ್ಣನೂ, ಪಾಂಡವರೂ ಕೌರವರೂ ನಮಗೆ ಈಗಲೂ ಕತೆಗಳ ರೂಪದಲ್ಲಿ ಸಿಕ್ಕಿರುವುದು, ಸಿಗುತ್ತಿರುವುದು. ಆದರೆ ಕತೆ ಹರಿಯುವಾಗ ಯಥಾರೂಪಕ್ಕೆ ವೈಭವೀಕರಣವೆಲ್ಲ ಸೇರಿಕೊಂಡು ಅವೆಲ್ಲ ಅವತಾರಗಳು ಪೌರುಷಗಳು ಪವಾಡಗಳೆಲ್ಲ ಮಿಶ್ರಣವಾಗಿ ಮಾನವನ ಬದುಕಿಗೆ ಒಂದೊಳ್ಳೆ ಮಾರ್ಗದರ್ಶಿ ಆಗುವ ಅವಕಾಶಗಳೇ ಹೊರಟುಹೋಗಿವೆ. ಉದಾಹರಣೆಗೆ ಗಮನಿಸಿ, ಕುರುಕ್ಷೇತ್ರ ಅಂತ ಸಿನಿಮಾ ಮಾಡಿದ್ದಾರಲ್ಲ, ನಿತ್ಯದ ಬದುಕಿನಲ್ಲಿ ಆ ಸಿನಿಮಾ ಕುರುಕ್ಷೇತ್ರದ ಯಾವ ಭಾಗವನ್ನು ಅಳವಡಿಸಿಕೊಳ್ಳಲು ಸಾಧ್ಯವಾದೀತು? ಹಾಗೆ ಮಾಡಲೇಬೇಕೆಂದರೆ ನಾವೂ ಒಂದು ಸೆಟ್ ನಿರ್ಮಿಸಿಕೊಂಡು ನಾಟಕ ಆಡುವುದಾಗುತ್ತೆ ಅಷ್ಟೇ! ಅಥವಾ ಅವೆಲ್ಲ ಕೇವಲ ಮನರಂಜನೆಗೋಸ್ಕರ ಇರುವ ಪಾತ್ರಗಳೆಂದೂ, ಪಾತ್ರಗಳ ಮೂಲಕ ವರ್ಗಾವಣೆಯಾಗಬೇಕಾದ ನೀತಿ, ಮಾನವೀಯತೆಯ ಅಂಶಗಳೆಲ್ಲವೂ ಸಣ್ಣಗೆ ಸದ್ದುಮಾಡಿ ಮರೆಯಾಗಿ ಹೋಗುತ್ತವೆ. ಆಧ್ಯಾತ್ಮ ಮಾನವನ ಒಳಜಗತ್ತಿನ ಆವಿಷ್ಕಾರಕ್ಕೆ, ವಿಹಾರಕ್ಕೆ ಆ ಮೂಲಕ ಮಾನಸಿಕ ನೆಮ್ಮದಿಗೆ ಒಂದು ಸಾಧನವಾಗಬೇಕು. ಆಧ್ಯಾತ್ಮ ಪ್ರತಿವ್ಯಕ್ತಿಗೂ ವೈಯಕ್ತಿಕವಾದದ್ದು. ಪ್ರತಿಯೊಬ್ಬರೂ ತಮಗೆ ಒಪ್ಪುವ ದೈವಿಕತೆಯನ್ನು ತಾವೇ ತಮ್ಮ ವಿಚಾರವಂತಿಕೆಯಿಂದ ಸಿದ್ಧಿಸಿಕೊಳ್ಳುವ ಹಾದಿ ತೆರೆದುಕೊಳ್ಳಬೇಕು, ಈ ದಾರಿಯಲ್ಲಿ ಪರಮಹಂಸರು, ವಿವೇಕಾನಂದರೂ ಕೆಲಸ ಮಾಡಿದ್ದಾರೆ. ಅದು ಬಿಟ್ಟು ಎಲ್ಲೋ ಯಾರೋ ಗುನುಗಿದ ಮಂತ್ರಕ್ಕೆ ಕಿವಿಯೊಡ್ಡುವ, ಯಾರೋ ಕೊಡುವ ತೀರ್ಥ ಪ್ರಸಾದಗಳೊಳಗಷ್ಟೇ ಭಕ್ತಿ ತೋರಿಸಿ ಅದನ್ನೇ ಆಧ್ಯಾತ್ಮ ಅಂದುಕೊಂಡು ಭ್ರಮೆಯಲ್ಲಿರುವುದು ಸೂಕ್ತ ಅಲ್ಲ.ವ್ಯಕ್ತಿ,   ವ್ಯಕ್ತಿತ್ವಗಳ ವಿಕಸನಕ್ಕೆ ಬೇಕಾದ ಪರಿಸರವನ್ನು ರೂಢಿಸುವುದಕ್ಕಾಗಿ ಪುರಾಣದ ಪಾತ್ರಗಳಿದ್ದರೆ, ಅವುಗಳ ಉಪಯೋಗ ಮಾತ್ರ ರಾಜಕಾರಣಕ್ಕೆ, ಮುಜರಾಯಿ ಇಲಾಖೆಯ(ಮುಜರಾಯಿಗೆ ಒಳಪಡದ ಖಾಸಗಿ ಸಂಸ್ಥೆಗಳನ್ನೂ ಸೇರಿಸಿಕೊಳ್ಳಬಹುದು) ಆದಾಯಕ್ಕೆ ಸೀಮಿತವಾಗಿಬಿಟ್ಟಿವೆ. ಅಂತಹವು ಬದಲಾಗಬೇಕು ಅಂತ ಕುವೆಂಪು ತರದ ನಮ್ಮ ಕಾಲದ ದಾರ್ಶನಿಕರು ಎಷ್ಟೇ ಪ್ರಯತ್ನಪಟ್ಟರೂ ಈ ಮೊದಲು ಹೇಳಿದ ಗೌಜಿಯ ಕಾರಣದಿಂದಾಗಿ ಅವರ ದರ್ಶನ, ಮಾರ್ಗದರ್ಶನಗಳೆಲ್ಲ ಹೊಳೆಯಲ್ಲಿ ಹುಣಸೆ ಕಲಸಿದ ಹಾಗೆ. ಯಾವ ಮೂಲೆಗೂ ಸಾಲುವುದಿಲ್ಲ. ಹಾಗಾಗಿ ಗೆಳೆಯನಿಗೆ ಇಷ್ಟೇ ಹೇಳಬೇಕು ಅಂದುಕೊಂಡೆ. ನೆಮ್ಮದಿಗೆ ಬೇಕಾಗಿರುವುದನ್ನು ಸಂಪಾದಿಸಲು ಸಮಾಜದಲ್ಲಿರುವ ಸರಿಯಾದ, ನೈತಿಕವಾದ ದಾರಿ ಯಾವುದಿದೆಯೋ ಆ ಮೂಲಕ ಬದುಕು ಕಟ್ಟಿಕೊಳ್ಳಲು ಏನು ಬೇಕೋ ಅದು ಮಾಡೋಣ. ಇಲ್ಲಿ ನೆಮ್ಮದಿಯ ಅಗತ್ಯಗಳನ್ನು ಇಲ್ಲಿ ಹೇಳಿರುವ ಕ್ರಮದಲ್ಲಿಯೇ ಆದ್ಯತೆಯಾಗಿ ತೆಗೆದುಕೊಳ್ಳೋಣ.  ೧. ಅನ್ನ  ೨. ಅರಿವು .೩ಅರಿವೆ (ಬಟ್ಟೆ). ೪. ಆರೋಗ್ಯ (ದೈಹಿಕಹಾಗೂಮಾನಸಿಕ) ೫. ವಸತಿ. (ಹೇಳ್ಕಾಳಾಕ್ಒಂದೂರುತಲೆಮ್ಯಾಲೆಒಂದ್ಸೂರು). ಇದರಾಚೆಗೆ ಏನೇ ಬಂದರೂ ಬರದಿದ್ದರೂ ಅಡ್ಡದಾರಿಯ ಕಡೆ ಯೋಚನೆಯನ್ನು ಹರಿಯಗೊಡದಿದ್ದರೆ, ಇದ್ದುದ್ದರಲ್ಲಿ ನೆಮ್ಮದಿ ಕಾಣುವುದು ಸಾಧ್ಯ ಇದೆ. ಹೀಗೇ ಇದ್ದಾಗಲೂ ಗೌರವ, ಮನ್ನಣೆ, ಅಂತಸ್ತು ಇತ್ಯಾದಿಗಳೆಲ್ಲವೂ ಬಂದರೂ ಸಹ ಮತ್ತೆ ನಿಂಬೆಹುಳಿಬೆಳಕಿನ ಕಡೆ (ನನ್ನ ಪ್ರಕಾರ ಇದನ್ನ ʼಹುಸಿಬೆಳಕುʼ ಅನ್ನಬಹುದು) ಜಿಗಿಯುವ ಮಿಡತೆಯಂತಾಗದೇ ನಮ್ಮ ಸ್ವಕರ್ಮವನ್ನು ಬಿಟ್ಟುಕೊಡದೇ ಇದ್ದರೆ ಅಷ್ಟು ಸಾಕು. ಈಗಿರುವ ತಲೆಮಾರಿನವರಿಗೂ, ಮುಂದೆ ಬರುವ ತಲೆಮಾರಿನವರಿಗೂ ಇದರಿಂದ ನಾವು ಗಳಿಸಿ ಗುಡ್ಡೆಹಾಕಿದ್ದು ಏನನ್ನೂ ತೋರ್ಪಡಿಸುವುದು ಸಾಧ್ಯವಾಗದೇ ಇದ್ದರೂ, ಯಾರನ್ನೂ, ಏನನ್ನೂ ನಾಶಮಾಡಿ ನಾವು ಬದುಕು ಕಟ್ಟಿಕೊಂಡಿಲ್ಲ ಅನ್ನುವ ನೆಮ್ಮದಿಯ ಮುಂದೆ ಬೇರೆ ಯಾವ ಗುಡ್ಡೆ ಐಶ್ವರ್ಯಗಳೂ   ನಗಣ್ಯ. ಇಷ್ಟರ ಬಗ್ಗೆ ಯೋಚಿಸಿ ಮುಂದುವರಿಯುವ ಆತ್ಮಶಕ್ತಿ ಬರಲಿ. ಆತ್ಮಶಕ್ತಿಗಿಂತ ಬೇರೆ ಕಲ್ಪವೃಕ್ಷ ಎಲ್ಲಿದೆ? ಸತ್ಯವಾದ ಘನತೆ ಸೋಲೇ ಕಾಣದಂತೆ. ************

ಚಿಂತನೆ Read Post »

ಕಾವ್ಯಯಾನ

ಕಾವ್ಯಯಾನ

ಒಂದು ಕವಿತೆ ಎಂ.ಎಸ್.ರುದ್ರೇಶ್ವರ ಸ್ವಾಮಿ (he ran away from there, he preferred her. she shouted – listen, I am older than you… was he too young for her?) ನಿನ್ನೆ ಮೊನ್ನೆಯಿಂದ ಮುನಿದುದೂರವೇ ಇದ್ದಅವಳು, ಮತ್ತೆ ಬಂದು ಮಕ್ಕಳ ಆಟಆಡೋಣವಾ? ಎಂದು,ಮಗುವಿನ ಹಾಗೆ ಕೇಳಿದಳು. ಭಾಷೆ, ಮಾತಿನಅರ್ಥದ ಜಾಡು ಹಿಡಿದು ವಿಶ್ಲೇಷಣೆಗೆಸಿದ್ಧವಾಯಿತು; ಮಗುವಿನಹಾಗೆ, ಮಗುವಲ್ಲ ಅವಳು. ಮನಸ್ಸು ನದಿ-ಯ ಹಾಗೆ ಹರಿಯುತ್ತಲೇ ಹಿಂತಿರುಗಿನೋಡಬಲ್ಲದು.ಗೌರಿಶಂಕರದ ಕನಸುಕಾಣುತ್ತ ಮಳೆಯಾಗಿ ಇಳೆ ಸುತ್ತಬಲ್ಲದು. ಮಕ್ಕಳ ಆಟ ಆಡೋಣವಾ?ಮತ್ತೆ ಕೇಳಿದಳು. ಒಂದು ಮೆಟಾಫರ್-ಗಾಗಿ ಕಾಯುತ್ತಿದ್ದನನಗೆ, ಗತಿಸಿದದಿನಗಳು ಕಣ್ಣ ಮುಂದೆಥಕ ಥಕನೆಕುಣಿಯಹತ್ತಿದವು. ಅವಳು ನನಗಿಂತಒಂದು ವರ್ಷಕ್ಕೆದೊಡ್ಡವಳು, ಐದು ಇರಬಹುದು,ನನಗೆ ನಾಲ್ಕು.ನಮಗೆಲ್ಲ ಅವಳೇ ಲೀಡರ್. ಅವಳ ಜೊತೆಹುಡುಗಿಯರು; ನಾನಿದ್ದಲ್ಲಿಹುಡುಗರು. ಅದಕ್ಕೇಅವಳು ನನ್ನನ್ನೇಕೇಳಿದ್ದು. ಮದುವೆ-ಆಟ ಆಡೋಣ, ಎಂದು. ಬಟ್ಟೆಯಲ್ಲಿ ಗೊಂಬೆ-ಮಾಡಿ, ಆಟ ಶುರು…ನೀನು ಮದುವಣಿಗ,ಗೌರಿ ಮದುವಣಗಿತ್ತಿ, ಎಂದು ಹೇಳುತ್ತ,ಕೈ-ಹಿಡಿದು ನಮ್ಮಿಬ್ಬರನ್ನೂ ಕೂರಿಸಿಅರಿಸಿನದ ನೀರು-ಹಾಕುವ ಶಾಸ್ತ್ರಶುರು ಆಗುತ್ತಿದ್ದಂತೆ, ಅಲ್ಲಿಂದ ಎದ್ದು, ನೀನುಹೆಂಡತಿ ಆಗುವುದಾದರೆ,ಸರಿ. ಇಲ್ಲ, ನಾನು ಆಟಕೆಡಿಸುತ್ತೇನೆಎಂದು, ಸಿಟ್ಟಿನಿಂದ ಅವಳಿಗೆ ಹೇಳಿ ಕಾಲುಕಿತ್ತೆ. ಕಿರುಚಿ ಕೂಗಿದಳು, ನಾನು –ದೊಡ್ಡೋಳು ಕಣೋ, ನಿನ್ನ ಹೆಂಡತಿಆಗುವುದಕ್ಕೆ…. *********

ಕಾವ್ಯಯಾನ Read Post »

ಅನುವಾದ

ಅನುವಾದ ಸಂಗಾತಿ

ಸ್ವಾಮಿ ಭಕ್ತಿ ಮೂಲ:ವಿಲಿಯಂ ವರ್ಡ್ ವರ್ತ್ ಕನ್ನಡಕ್ಕೆ: ವಿ.ಗಣೇಶ್ ಬೊಗಳುವ ಸಪ್ಪಳವು ಕುರುಬನಿಗೆ ಕೇಳಿಸಿತು ನರಿಯದೋ ನಾಯಿಯದೋ ಕೂಗಿರಬೇಕೆಂದು ಅರೆ ಕ್ಷಣ ನಿಂತು ಹುಡುಕಾಡಿದನು ದಶದಿಕ್ಕುಗಳಲಿ. ಹರಿದು ಹಾಸಿದ್ದ ಕಲ್ಲುಬಂಡೆಗಳ sಸುತ್ತಲೂ ಹುಡುಕಾಡಿದಾಗ ತುದಿಯ ಗಿಡಗಂಟೆಗಳ ಮಡಿಲಲ್ಲಿ ಅಲುಗಾಡುತ್ತಿರುವ ಹಸಿರು ಪೆÇದೆಯೊಂದು ಕಾಣಿಸಿತು. ಅದರ ಅಡಿಯಲಿ ಕಣ್ಣೀರಿಡುತಿರುವ ಶುನಕವೊಂದು ಪೊದೆಯ ಕಡೆಗೇ ವೀಕ್ಷಿಸುತ ಅಳುವುದ ಕಾಣಿಸಿತು.   ಅತಿ ಸೂಕ್ಷ್ಮಮತಿಯಾದ ಆ ಶುನಕವ ನೋಡಿದರೆ ಕಾಡಿನಲಿ ಹುಟ್ಟಿ ಬೆಳೆದ ಶುನಕವಲ್ಲವೆನಿಸಿತು. ಅದರ ಅಳುವಿನಲೇನೋ ಘೋರ ದುಃಖವಿಹುದೆಂದು ಭಾವಿಸಿದ  ಕುರುಬನದರ ಚಲನವ ಗಮನಿಸಿದಾಗ ಅದರ ಸನಿಯದಲಾರ ಸುಳಿವು ಗೋಚರಿಸಲಿಲ್ಲ. ‘ಕಲ್ಲುಬಂಡೆಗಳಿಂದಾವರಿಸಿದ ಆ ಭಯಾನಕ ಸ್ಥಳದಲಿ ಸದ್ದುಗದ್ದಲಗಳಿನಿತು ಕಿವಿಗೆ ಅಪ್ಪಳಿಸದಿರುವಾಗ ಆ ಮೂಕ ಪ್ರಾಣಿ ಕುಳಿತೇನು ಮಾಡತಿದೆಯಲ್ಲಿ? ಎಂದು ಚಿಂತಿಸುತಿದ್ದನು ಆ ಕುರುಬನಲ್ಲಿ   ಸುತ್ತಲೂ ಜಲಾವೃತವಾದ ಆ ಏಕಾಂತ ಸ್ಥಳವು ಜೂನ್ ಮಾಹೆಯಲೂ ಮಂಜಿನಿಂದಲಿ ಮಸುಕಾಗಿತ್ತು ಎದುರಿನಲಿ ದೊಡ್ಡ ಇಳಿಜಾರು ಬಂಡೆ ಜೊತೆ ಕೆಳಗೆ ಕಾಣುತಿದೆ ತುಂಬಿದ ಕೆರೆಯೊಂದು. ಬೆಟ್ಟದ ತಳದಲ್ಲಿ ಅನತಿ ದೂರದ ಅಂಚಿನಲಿ ಹೆದ್ದಾರಿಯೊಂದು ಹಾದು ಹೋಗುತಲಿದೆ. ಅಲ್ಲೊಂದು ಇಲ್ಲೊಂದು ಗುಡಿಸಿಲುಗಳ ನಡುವೆ ಬಿತ್ತಿ ಬೆಳೆದಂತ ಹಸಿರಾದ ಹೊಲಗಳ ಜೊತೆ ಕಾಲು ಹಾದಿಗಳ  ಕುರುಹು ಕಾಣುತಿವೆ ಸುತ್ತಲು.   ನೆಗೆ ನೆಗೆದು ಈಜಾಡುತಿರುವ ಕೊಳದ ಮೀನುಗಳು ಚೀತ್ಕರಿಸುವ ಕೂಗು ಎಲ್ಲೆಡೆಗು ಹರಡುತಿದೆ. ಬಂಡೆಗಳ ತಳದಲಿ ವಟಗುಟ್ಟುವಾ  ಕಪ್ಪೆಗಳ ಗದ್ದಲವು ಇತ್ತ  ತಾ ಕೇಳಿ ಬರುತಲಿದೆ. ಆ ಬನದ ಸಿರಿಯನ್ನು ಹೆಚ್ಚಿಸಲೋ ಎಂಬಂತೆ ಕಾಮನ ಬಿಲ್ಲು ಉದಯಿಸಿದೆ ಬಾನಿನಂಚಿನಲಿ. ಚಲಿಸುತಿಹ ಮೋಡಗಳ ಗುಡುಗು ಸಿಡಿಲಿನಾರ್ಭಟವ ತಡೆಯಲೆಂಬಂತೆ ತಿಳಿಯಾದ ರವಿಕಿರಣಗಳು ಅವುಗಳ ಮಾರ್ಗದಿ ಬಂದು ಬೆಳಕ ಚೆಲ್ಲುತಿವೆ.   ಈ ಎಲ್ಲ ಯೋಚನೆಗಳಿಂದ ಹೊರಬರಲಾಗದೆ ಕುರುಬ ನಿಂತಿದ್ದ ಮಾರ್ಗ ಮಧ್ಯದಿ ಅಂದು ಬೆಟ್ಟದ ಮೇಲಿರುವ ಕಲ್ಲುಬಂಡೆಗಳ ದಾಟಿದವ ಶುನಕವನು ಅನುಸರಿಸಿ ಹುಡುಕಾಡುತಿರುವಾಗ ಭಯಭೀತನಾಗಿ ಬೆದರಿ ನಿಂತನಾ ಕಣಿವೆಯಲಿ. ಬಿದ್ದ ಮಾನವ ಅಸ್ಥಿಪಂಜರವೊಂದನು ಕಂಡು. ಆಶ್ಚರ್ಯಚಕಿತನಾಗಿ ಬೆದರಿದ ಕುರುಬನು ಅದರ ಚರಿತೆಯನರಿಯಲು ಸುತ್ತಲೂ ದಿಟ್ಟಿಸಿದ.     ಆ ಭಯಾನಕವಾದ  ಬಂಡೆಗಳ ಮೇಲಿಂದ ಭಯದಿಂದ ಆ ವ್ಯಕ್ತಿ ಉರುಳಿ ಬಿದ್ದಿರಬಹುದು ಮೇಲಕೇರಲಾಗದೆಯೆ ಉಸಿರು ನಿಂತಿರಬಹುದು ನಡೆದ ಘಟನೆಯ ಬಗ್ಗೆ ಹೀಗೆ ಊಹಿಸಿದನು. ಅವನ ಹೆಸರೇನು? ಎಲ್ಲಿಂದ ಬಂದಿಹನು? ಅಲ್ಲಿಗೆ ಬರುವ ಕಾರಣವೇನಿರಬಹುದೆನ್ನುತ ಮನದೊಳಗೇ ಯೋಚಿಸುತ ನಿಂತ ಬೆರಗಾಗಿ   ದಟ್ಟ ಕಾನನದ ಕಲ್ಲು ಬಂಡೆಗಳ ನಡುವಿಂದ ಶುನಕ ಪರಿತಪಿಸುತಿರಬೇಕು ಬಹುದಿನಗಳಿಂದ ಅಳುವಿನ ಮೂಲಕವೇ  ತರ್ಪಣವ ಕೊಡುತಿರುವ ಅದರ ನೋವಿನ ಆಳವನು ಬಣ್ಣಿಸಲಸದಳವು ಆ ದುಃಖದ ಕಡಲಿಂದ ಹೊರಬರಲಾಗದೆಲೆ ರೋದಿಸುತಿದೆ ಈ ಶುನಕ ಮೂರು ತಿಂಗಳುಗಳಿಂದ ದಿಕ್ಕುಕಾಣದ ಆ ದಟ್ಟ ಅಡವಿಯ ಗರ್ಭಭಾಗದಲಿ, ಆದರ ಮಾರ್ಮಿಕ ಕತೆಯ ಊಹಿಸಿದನಿಂತು.   ನತದೃಷ್ಟ ಪಯಣಿಗನು ಮರಣಿಸಿದ  ದಿನದಿಂದ ಆ ಸ್ಥಳವನು ಕಾಯುತಿದೆ ಹಗಲು ರಾತ್ರಿಯೆುನ್ನದೆಲೆ ಅಳುತಲಿದೆ ಸನಿಹದಿ ಕುಳಿತು ಅವನನೇ ನೋಡುತ ಮೂರು ತಿಂಗಳ ಕಾಲ ಹೇಗೆ ಕಳೆಯಿತೋ ಸಮಯವ ಅನ್ನಾಹಾರಗಳಿಲ್ಲದೆ ಹಸಿವಿನಲಿ ಬಳಲುತ ಮಾನವನ ಮನಕಿಂತ ಮಿಗಿಲಾದ ಹೃದಯವನು ದಯಪಾಲಿಸಿದವನಾರೋ ಆ ಮುಗ್ದ ಪ್ರಾಣಿಗೆ? ಎನುತ ಚಿಂತಿಸುತಲಿದ್ದ ಆ ಮೂಕಪ್ರಾಣಿಯ ನೋಡುತ. ******   Fedility By William Wordsworth

ಅನುವಾದ ಸಂಗಾತಿ Read Post »

ಅಂಕಣ ಸಂಗಾತಿ, ಮೂರನೇ ಆಯಾಮ

ಉದಯಿಸುತ್ತಿರುವ ಸೂರ್ಯನೊಂದಿಗೆ ಹೆಜ್ಜೆಯಿಡುವ ತವಕದಲ್ಲಿ. ತೇರೂವೋ ಮೂಲ ಗೌರಿ ದೇಶಪಾಂಡೆ ಕನ್ನಡಕ್ಕೆ- ಚಂದ್ರಕಾಂತ ಪೋಲಳೆ ಬೆಲೆ-೮೦   ನನಗೆ ಬೇರೆ ಭಾಷೆಗಳಿಂದ ಅನುವಾದಗೊಂಡ ಕಾದಂಬರಿಗಳ ಹುಚ್ಚು ಹಿಡಿಸಿದ್ದು ಸೃಷ್ಟಿ ನಾಗೇಶರವರು. ಅವರ ಸೃಷ್ಟಿ ಪ್ರಕಾಶನ ಎಂದರೆ ಅನುವಾದಗಳಿಗಾಗಿಯೇ ಮೀಸಲಾಗಿರುವ ಪ್ರಕಾಶನ. ಜಗತ್ತಿನ ಅದ್ಭುತ ಕಾದಂಬರಿಗಳ ಅನುವಾದಗಳನ್ನು ನಾನು ಓದಿದ್ದು ಸೃಷ್ಟಿ ಪ್ರಕಾಶನದ ಪುಸ್ತಕಗಳಿಂದಾಗಿಯೇ. ತಮ್ಮ ಪ್ರಕಾಶನದ ಪುಸ್ತಕಗಳನ್ನು ತಲುಪಿಸುವ ಸೃಷ್ಟಿ ನಾಗೇಶ ಇದನ್ನು ಮೊದಲು ಓದಿ, ಈ ಪುಸ್ತಕ ಅದ್ಭುತವಾಗಿದೆ ಓದಿ ಎಂದೆಲ್ಲ ಸಲಹೆ ಮಾಡಿಯೇ ಕಳುಹಿಸುತ್ತಾರೆ. ಅವರ ಸಲಹೆ ಯಾವತ್ತೂ ತಪ್ಪಾಗಿದೆ ಎನಿಸಿದ್ದೇ ಇಲ್ಲ ನನಗೆ. ತೆರೂವೋ ಕಳಿಸಿದಾಗಲೂ ಅಷ್ಟೇ. ಅದರ ಜೊತೆ ಇನ್ನೂ ನಾಲ್ಕೈದು ಪುಸ್ತಕಗಳನ್ನು ಕಳುಹಿಸಿದ್ದರೂ ‘ಮೊದಲು ತೆರೂವೋ ಓದಿ ನಂತರ ಬೇರೆಯದ್ದನ್ನು ಓದಿ’ ಎಂದೇ ಕಳುಹಿಸಿದ್ದರು. ಅವರು ಹೇಳಿರುವ ಕಾರಣಕ್ಕಾಗಿಯೇ ಮೊದಲು ತೆರೂವೋ ತೆರೆದವಳು ಕಕ್ಕಾಬಿಕ್ಕಿಯಾಗಿದ್ದೆ. ನಾಗೇಶ್ ಯಾಕೆ ಈ ಪುಸ್ತಕ ಸಜೆಸ್ಟ್ ಮಾಡಿದ್ದಾರೆ ಎಂಬುದೇ ಅರ್ಥವಾಗದೇ ಅದೆಷ್ಟು ಕಂಗಾಲಾಗಿದ್ದೆ ಎಂದರೆ ನಾನೇನು ಓದುತ್ತಿದ್ದೇನೆ ಎಂಬುದೇ ನನಗೆ ಅರ್ಥವಾಗುವಂತಿರಲಿಲ್ಲ. ಅದೇನು ‘ಜಿ’? ಅದೇನು ತಿಂಗಳುಗಳ ಹೆಸರುಗಳು? ಅದ್ಯಾಕೆ ತೆರೂವೋಗೆ ಪತ್ರ ಬರೆಯಬೇಕು? ಮಧ್ಯೆ ಬರುವ ಈ ಜಿ ಆಕೆಗೆ ಏನಾಗಬೇಕು? ಯಾವುದೂ ಅರ್ಥವಾಗದೆ ಅಯೋಮಯದ ಓದಾಯ್ತಲ್ಲ ಇದು ಎಂದುಕೊಂಡಿದ್ದೆ. ಆದರೂ ನಾಗೇಶ್ ಓದಲು ಹೇಳಿದ್ದಾರೆ ಎಂದರೆ ಅದಕ್ಕೇನೋ ಅರ್ಥವಿದ್ದಿರಲೇಬಹುದು  ಎಂದುಕೊಳ್ಳುತ್ತ ಮತ್ತೊಮ್ಮೆ ಓದಿದೆ, ಬರೀ ತೇರೂವೋಗೆ ಬರೆದ ಪತ್ರಗಳನ್ನು, ನಂತರ ಪ್ರಿಯ ಜೆ ಎಂದಿದ್ದದ್ದನ್ನು, ಮತ್ತೊಮ್ಮೆ ಬರಿದೇ ತಿಂಗಳುಗಳ ಹೆಸರಿರುವುದನ್ನು, ಇನ್ನೊಮ್ಮೆ ಅವಳ ಮಾತುಗಳನ್ನು ಓದಿಕೊಂಡೆ. ಆಗ ಶುರುವಾಯ್ತು ನೋಡಿ ಕ್ರಶ್. ಕಾದಂಬರಿಯ ಮೇಲಲ್ಲ, ಕಥಾನಾಯಕಿ ಹೇಳುವ ತೆರೂವೊ ಎಂಬ ಜಪಾನಿನ ಐವತ್ತು ವರ್ಷದ ವ್ಯಕ್ತಿಯ ಮೇಲೆ, ಅದರ ಜೊತೆಜೊತೆಗೇ ಕಥಾನಾಯಕಿಯ ನೇರವಾದ ಮಾತುಗಳ ಮೇಲೆ, ಪ್ರೀತಿಸಿದ್ದನ್ನು ಹಪಾಹಪಿಯಿಂದ ಪಡೆದುಕೊಳ್ಳುವುದರ ಮೇಲೆ, ಮತ್ತು ಪ್ರೀತಿಸಿದ್ದರೂ ಆ ಪ್ರೀತಿ ತನ್ನದಲ್ಲ ಎಂದು ಆಕೆ ಎಚ್ಚರಿಕೆ ವಹಿಸಿದ ರೀತಿಯ ಮೇಲೆ.       ಇಡಿ ಕಾದಂಬರಿ ಮೊದಲ ಓದಿಗೆ ತಲೆಬುಡವೂ ಅರ್ಥವಾಗುವುದಿಲ್ಲ ಎಂಬುದು ನಿಜವಾದರೂ ಎರಡನೆಯ ಓದಿನ ನಂತರ ಆ ಪುಸ್ತಕ ಇಷ್ಟವಾಗುವುದರ ಜೊತೆಗೆ ತೆರೂವೋ ಮೇಲೆ ಪ್ರೀತಿ ಹುಟ್ಟದಿರಲು ಸಾಧ್ಯವೇ ಇಲ್ಲ. ಯಾಕೋ ನನಗೆ ಜಪಾನಿಯರ ಮೇಲೆ ಮೊದಲಿನಿಂದಲೂ ಪೂರ್ವಾಗ್ರಹ. ಬಹುಶಃ ಎರಡನೇ ಮಹಾಯುದ್ಧದ ಸಮಯದಲ್ಲಿ ಅವರು ಬಾಂಗ್ಲಾ ದೇಶದ ಮೇಲೆ ಹಾಗೂ ಆಗಿನ ಬರ್ಮಾ ಎಂಬ ಹೆಸರಿನ ಈಗ ಮಾಯನ್ಮಾರ್ ಎಂದು ಕರೆಯಿಸಿಕೊಳ್ಳುವ ಭೂಭಾಗದ ಮೇಲೆ  ನಡೆಸಿದ ಪೈಶಾಚಿಕ ಕೃತ್ಯ ಯಾಕೋ ಮತ್ತೆ ಮತ್ತೆ ಕಣ್ಣೆದುರಿಗೆ ರುದ್ರನರ್ತನವನ್ನಾಡಿದಂತಾಗುತ್ತದೆ. ಇತಿಹಾಸದ ಓದು ಜಾಸ್ತಿಯಾದರೆ ಇಂತಹುದ್ದೊಂದು ಪೂರ್ವಾಗ್ರಹ ತಾನಾಗಿಯೇ ಮೂಡುತ್ತದೆಯೇ? ಕೆಲವು ದಿನಗಳ ಹಿಂದೆ ವಿಕಿ ಕ್ರುಕ್ ಬರೆದ ‘ಎಲಿಫಂಟ್ ಕಂಪನಿ’ ಓದುತ್ತಿದ್ದೆ. ಅಲ್ಲಿ ಜಪಾನಿಯರು ಯುದ್ಧ ಕೈದಿಗಳನ್ನು ನಡೆಸಿಕೊಳ್ಳುತ್ತಿದ್ದ ಭೀಕರ ಅನುಭವ ದಾಖಲಾಗಿತ್ತು. ಯುದ್ಧ ಕೈದಿಗಳನ್ನು ಮರಕ್ಕೆ ಕಟ್ಟಿಹಾಕಿ ಹರಿತವಾದ ಕತ್ತಿಯಿಂದ ಉದ್ದಕ್ಕೆ ಸೀಳಿಬಿಡುತ್ತಿದ್ದರಂತೆ. ನೆತ್ತಿಯಿಂದ ನಡುವೆ ಎರಡು ಭಾಗ ಮಾಡಿ ಎಸೆಯುತ್ತಿದರಂತೆ. ಸೆರೆ ಸಿಕ್ಕ ವಿರೋಧಿ ಸೈನ್ಯದ ಆನೆಗಳನ್ನು ಕೂಡ ಬಿಡದೆ ಕ್ರೂರವಾಗಿ ಹಿಂಸಿಸಿ ಕೊಲ್ಲುವ ಚಿತ್ರ ಈ ಪುಸ್ತಕ ಓದಿದ ನಂತರ ನನ್ನ ಮನದಲ್ಲಿ ಅಚ್ಚೊತ್ತಿಬಿಟ್ಟಿದೆ. ಹೀಗಾಗಿ ಜಪಾನಿಗಳು ಎಂದ ತಕ್ಷಣ ಪುಟ್ಟ ಕಣ್ಣಿನ, ಚಂದದ ನಗುವಿನ, ಕುಳ್ಳಗಿನ ಜನ ನೆನಪಾಗುವಂತೆಯೇ ಈ ಕ್ರೂರತನದ ಚಿತ್ರಣವೂ ಅದರ ಜೊತೆ ಜೊತೆಗೇ ನೆನಪಾಗಿ ಬಿಡುತ್ತದೆ. ಆದರೆ ತೆರೂವೋ ಓದಿದ ನಂತರ ನನ್ನ ಮನದೊಳಗೆ ಮೂಡಿದ್ದ ಜಪಾನಿಯರ ಚಿತ್ರ ಒಂದಿಷ್ಟು ಪಲ್ಲಟವಾಗಿ ಒಂದಿಷ್ಟು ಅಲ್ಲಲ್ಲ ತುಸು ಹೆಚ್ಚೇ ಎನ್ನಿಸುವಷ್ಟು ಪ್ರೇಮಮಯವಾದ ಒಂದು ಚಿತ್ರ ಕಾಣಿಸಿಕೊಂಡಿದ್ದಂತೂ ಸುಳ್ಳಲ್ಲ.              ಬಹಳಷ್ಟು ಸಲ ನನ್ನನ್ನು ನಾನೇ ಕೇಳಿಕೊಳ್ಳುವುದಿದೆ. ಈ ಪ್ರೀತಿ ಪ್ರೇಮವೆಲ್ಲ ಯಾವತ್ತಾದರೂ ಹೇಳಿಕೇಳಿ ಹುಟ್ಟುತ್ತವೆಯೇ? ‘ಒಬ್ಬ ಇಷ್ಟವಾದ’ ಎಂದು ಹೆಣ್ಣು ಹೇಳುವುದಕ್ಕೆ ಅದೆಷ್ಟು ಒದ್ದಾಡಬೇಕು ಎಂದರೆ ಭಾರತೀಯ ಸಂಸ್ಕೃತಿಯಲ್ಲಿ ಈಗಲೂ, ಈ ಕ್ಷಣಕ್ಕೂ ಅದು ಅಸಾಧ್ಯವೇ.  ನಾವು ತೀರಾ ಮುಂದುವರಿದಿದ್ದೇವೆ ಎಂದುಕೊಂಡ ಈ ಜಮಾನಾದಲ್ಲೂ ‘ಆತ ಇಷ್ಟವಾದ’ ಎಂದು ಬಾಯಿ ಮಾತಿಗೂ ಹೇಳುವುದು ಅಪರಾಧವೇ ಆಗಿದೆ. ಹಾಗೇನಾದರೂ ಹೆಣ್ಣೊಬ್ಬಳು ಹೇಳಿ ಬಿಟ್ಟರೆ ಈ ಸಮಾಜ ಅವಳನ್ನು ನೋಡುವ ದೃಷ್ಟಿಕೋನವೇ ಬೇರೆ. ನನ್ನ ಗೆಳತಿಯೊಬ್ಬಳು ಒಬ್ಬನನ್ನು ಇಷ್ಟಪಟ್ಟು, ಅದನ್ನು ಆತನ ಬಳಿ ಮುಚ್ಚುಮರೆ ಇಲ್ಲದೇ ಹೇಳಿಕೊಂಡು ಒದ್ದಾಡಿದ ಪರಿಯನ್ನು ತೀರಾ ಹತ್ತಿರದಿಂದ ನೊಡಿದ್ದೇನೆ. ಈ ಸಮಾಜ ರೀತಿ ರಿವಾಜುಗಳಿಂದಷ್ಟೇ ಅಲ್ಲ, ಅದು ಕಟ್ಟಳೆಗಳಿಂದ ತನ್ನನ್ನು ತಾನೇ ಬಿಗಿದುಕೊಂಡ ಬಂಧನ. ಹೀಗಾಗಿ ಯಾವ ಕಾರಣಕ್ಕೂ ಹೆಣ್ಣು ತನ್ನೊಳಗಣ ಪ್ರೇಮವನ್ನು ಬಿಚ್ಚಿಡುವಂತೆಯೇ ಇಲ್ಲ ಎಂಬುದು ಹಲವಾರು ಸಲ ಸಾಬೀತಾಗಿದೆ. ಹೆಣ್ಣು ಪ್ರೀತಿಸುವುದನ್ನು ಸಮಾಜ ಒಪ್ಪಿಕೊಳ್ಳಬಹುದು. ಆದರೆ ತಾನಾಗಿಯೇ ಮುಂದುವರೆದು ಪ್ರೀತಿಸುತ್ತೇನೆ ಎಂದರೆ ಅದನ್ನು ಯಾರಿಗಾಗಿ ಹೇಳಿದ್ದಳೋ ಆ ಹುಡುಗನೂ ಆಡಿಕೊಳ್ಳುವುದೆಂದರೆ ಅದೊಂದು ಹಿಂಸಾರತಿಯೆಂದೇ ನನಗೆ ಭಾಸವಾಗುತ್ತದೆ. ಪ್ರೀತಿಸಿ ಮದುವೆಯಾದವರನ್ನು ಕೇಳಿ ನೋಡಿ. ಅದರಲ್ಲೂ ಹುಡುಗಿಯೇ ಮುಂದುವರೆದು ಪ್ರೀತಿಸುತ್ತೇನೆ ಅಂದುಬಿಟ್ಟರಂತೂ ಮುಗಿದೇ ಹೋಯಿತು. ಪ್ರೀತಿಸುವಾಗೇನೋ ಖುಷಿಯಿಂದಲೇ ಪ್ರೀತಿಸುತ್ತಾರೆ. ಮದುವೆಯಾಗಲೂ ಅಂಂತಹುದ್ದೇನೂ ತಕರಾರು ಕಾಡುವುದಿಲ್ಲ. ಆದರೆ ಸಂಸಾರ ನಡೆಸುವಾಗ ಏನಾದರೂ ಮಾತಿಗೆ ಮಾತು ಬೆಳೆದರೆ ‘ನಂಗೊತ್ತಿಲ್ವಾ ನೀನೇನು ಅಂತ? ಯಾವ ಹೆಣ್ಣು ನಾಚಿಕೆ ಬಿಟ್ಟು ಪ್ರೀತಿಸ್ತೇನೆ ಅಂತಾ ಬರ್‍ತಾಳೆ? ನೀನಾಗೇ ಮೊದಲು ಪ್ರಪೋಸ್ ಮಾಡಿದಾಗಲೇ ನಾನು ಎಚ್ಚರಿಕೆ ವಹಿಸಬೇಕಾಗಿತ್ತು.’ ಎನ್ನುವ ತರಹದ ಮಾತುಗಳು ಬರುವ ಬಗ್ಗೆ ಹಲವಾರು ಸ್ನೇಹಿತೆಯರು ಅಂತರಂಗದಲ್ಲಿ ತೋಡಿಕೊಂಡಿದ್ದಾರೆ. ಅಂದರೆ ಪ್ರೀತಿಯನ್ನು ಹೇಳಿಕೊಳ್ಳುವುದಕ್ಕೂ ಈ ಸಮಾಜದಲ್ಲಿ ಹೆಣ್ಣಿಗೆ ಸ್ವಾತಂತ್ರ್ಯ ಇಲ್ಲದಿರುವಾಗ ಲೈಂಗಿಕತೆಯ ಬಗ್ಗೆ ಮಾತನಾಡಲು ಕನಿಷ್ಟ ಅವಕಾಶವೂ ಇಲ್ಲ ಎಂದರ್ಥ. ಆದರೆ ಅಚ್ಚರಿಯೆಂದರೆ ಅದು ಭಾರತವಿರಲಿ ಅಥವಾ ಜಪಾನ್ ಇರಲಿ, ಬಹುಶಃ ಪೌರಾತ್ಯ ದೇಶಗಳಲ್ಲಿ ಅಂತಹ ವ್ಯತ್ಯಾಸ ಕಂಡು ಬರುವುದಿಲ್ಲ. ಪಾಶ್ಚಾತ್ಯ ದೇಶಗಳಲ್ಲಿ ಅಲ್ಪಸ್ವಲ್ಪವಾದರೂ ಧಾರಾಳತನ ದೊರಕಬಹುದೇನೋ. ಯಾಕೆಂದರೆ ಜಪಾನಿನಲ್ಲಿರುವಾಗ ನಮ್ಮ ಕಥಾ ನಾಯಕಿ ತನ್ನ ಗಂಡ ಜನಕನೊಡನೆ ಮೊದಲ ಸಲ ಪಾರ್ಟಿಗೆಂದು ಬಾರಿಗೆ ಹೋದಾಗ ಅಲ್ಲಿ ನೆರೆದಿದ್ದ ಗಂಡಸರಿಗೆಲ್ಲ ಅಚ್ಚರಿ. ಅಲ್ಲಿ ಪ್ರತಿಯೊಬ್ಬ ಗಂಡಸಿಗೂ ತನ್ನದೇ ಫೆವರಿಟ್ ಬಾರ್ ಇರುತ್ತದೆ. ಅದರ ಜೊತೆಗೇ ಕಂಪನಿ ಕೊಡಲು ಮಾಮಾಸಾನ ಮತ್ತು ಪ್ರತಿಯೊಬ್ಬರಿಗೂ ಕುಡಿತದ ಖುಷಿ ಅನುಭವಿಸಲು, ಖಾಲಿಯಾದ ಮಧು ಸೀಸೆಯನ್ನು ತುಂಬಿಸಲು, ಅಪ್ಪಲು, ಮುದ್ದಿಸಲು ಪೆವರಿಟ್ ಕಂಪಾನಿಯನ್ ಕೂಡ ಇರುತ್ತಾಳೆ. ಆದರೆ ಅವರೇ ನೇರವಾಗಿ ಹೇಳುವಂತೆ ಹೆಂಡತಿಯನ್ನು ಜೊತೆಗೆ ಕರೆದುಕೊಂಡು ಹೋಗುವ ಪದ್ದತಿ ಅಲ್ಲಿಲ್ಲ. ಹೆಣ್ಣೊಬ್ಬಳು ಬಾರಿಗೆ ಬರುವುದೇ ಅವರಿಗೆ ಹೊಸ ಆಲೋಚನೆ. ಆದರೆ ಅಲ್ಲಿಯ ಗಂಡಸೊಬ್ಬ ನಿಮ್ಮೊಂದಿಗೆ ಹರಟೆ ಹೊಡೆಯಲು ತುಂಬಾ ಉತ್ಸಾಹ ಬರುತ್ತದೆ. ಆದರೆ ನಾನು ಲಗ್ನವಾದರೆ ನಿಮ್ಮಂಥವರನ್ನು ಅಲ್ಲಪ್ಪ. ಹೆಂಡತಿ ಹೇಗಿರಬೇಕೆಂದರೆ, ಸಂತೋಷದಿಂದ ಮನೆಯಲ್ಲೇ ಕುಳಿತಿರಬೇಕು. ಎನ್ನುತ್ತಾನೆ. ಅಂದರೆ ಜಗತ್ತಿನ ಸುಖಗಳೆಲ್ಲವನ್ನೂ ಸೂರೆ ಹೊಡೆಯುವುದು ಗಂಡಸರ ಕೆಲಸ. ಆದರೆ ಹೆಣ್ಣು ಮಾತ್ರ ಮನೆಯೊಳಗೇ ಜಗದ ಸುಖವನ್ನೆಲ್ಲ ಕಲ್ಪಿಸಿಕೊಂಡು ಸಂತೃಪ್ತರಾಗಬೇಕು.          ಆದರೆ ತೆರೂವೋದಲ್ಲಿ ಕಾದಂಬರಿಕಾರ್ತಿ ತುಂಬಾ ಮುಕ್ತವಾಗಿ ಹೆಣ್ಣಿನ ಬಾಯಿಂದ ಲೈಂಗಿಕ ಸ್ವಾತಂತ್ರ್ಯದ ಕುರಿತು ಹೇಳಿಸುತ್ತಾರೆ. ಕಾದಂಬರಿಯ ನಾಯಕಿಗೆ ಓಡಾಡುವ ಹೊಸ ಹೊಸ ದೇಶಗಳಿಗೆ ಪಯಣಿಸುವ ಮಹತ್ವಾಕಾಂಕ್ಷೆ. ಎಲ್ಲಿಗಾದರೂ ಪ್ರವಾಸ ಹೋಗುವುದನ್ನು ನಿರಾಕರಿಸುವುದೆಂದರೆ ಅದು ಮುದಿತನ ಆವರಿಸಿದಂತೆ ಎಂದೇ ಭಾವಿಸುವ ಸ್ವಚ್ಛಂದ ಮನಸ್ಸಿನ ಹೆಣ್ಣು. ಸ್ವತಃ ಆಕೆಯ ಗಂಡ ಒಂದೆಡೆ ತಮಾಷೆಯಿಂದ ‘ಅವಳು ಯಾರ ಯಾರ  ಪ್ರೇಮದಲ್ಲಿ ಬಿದ್ದಿದ್ದಾಳೆ ಎಂಬ ಪಟ್ಟಿಯ ಆಧಾರದಿಂದ  ಅವಳು ಯಾವ ಯಾವ ಸ್ಥಳ ನೋಡಿದ್ದಾಳೆಂದು ಪರೀಕ್ಷಿಸಬೇಕಾಗುತ್ತದೆ! ಟೋನಿ, ಯೊಹಾನ್, ಯೆಆಕಿಮ್ ಕುರ್ಟ, ಎಂಜೆಲೋ, ಪಾವುಲೋ, ನಿಕೋಣ, ಇವಾನ್. ಅಸಂಖ್ಯ ಪ್ರಾಣಿಗಳು ಅವರ ಜೊತೆಗೆ ಹಿಂದುಸ್ಥಾನದ ಜನರನ್ನು ಸೇರಿಸಿದರಂತೂ ನೋಡುವುದೇ ಬೇಡ! ಸಿಕ್ಕ ಸಿಕ್ಕವರನ್ನು ಪ್ರೀತಿಸುವ ಚಟವೇ ಬಿದ್ದಿದೆ ಅವಳಿಗೆ.’ ಎನ್ನುತ್ತಾನೆ. ಭಾರತೀಯ ಗಂಡನೊಬ್ಬ ಹೀಗೆ ಮುಕ್ತವಾಗಿ ಹೇಳಿಕೊಳ್ಳುವುದು ಅಸಂಭವವೇ ಆಗಿದ್ದಾಗಲೂ ಕೂಡ ಇದೊಂದು ತಮಾಷೆಯ ದಾಖಲಾತಿಯಾಗಿದ್ದರಿರಬಹುದೆಂದು ಕೊಂಡರೂ ಸ್ವತಃ ಕಥಾನಾಯಕಿ ಕೂಡ ಬೇರೆ ಬೇರೆ ದೇಶಗಳ ಗಂಡಸರ ಬಗ್ಗೆ ಮಾತನಾಡುತ್ತಾಳೆ. ಅದರಲ್ಲೂ ಆಕೆ ಜಪಾನಿನ ತೆರೂವೋ ಎನ್ನುವ ಯಾಮಾಹಾಸಾನನ ಪ್ರೀತಿಯಲ್ಲಿ ತೊಡಗಿಸಿ ಕೊಂಡಿದ್ದರ ಚಿತ್ರಣವಂತೂ ಅತ್ಯಪೂರ್ವ. ಅದಷ್ಟೇ ಆಗಿದ್ದರೆ ಅದೊಂದು ಅಪೂರ್ಣ ಚಿತ್ರಣವಾಗುತ್ತಿತ್ತು. ಅವಳು ಪ್ರೀತಿಸಿದ್ದಕ್ಕಿಂತ ಹೆಚ್ಚಾಗಿ ತೆರೂವೋ ಪ್ರೀತಿಸುವುದಿದೆಯಲ್ಲ ಅದು ಅತ್ಯದ್ಭುತ.  ತೆರೂವೋ ಎನ್ನುವ ನಲವತ್ತೈದು ಐವತ್ತು ವರ್ಷದ ಮಧ್ಯವಯಸ್ಸನ್ನೂ ದಾಟಿದ ಪುರುಷನೊಂದಿಗೆ ನಲವತ್ತೈದರ ಕಥಾನಾಯಕಿಯ ಪ್ರೇಮ ನಮ್ಮೆಲ್ಲ ಹೊಸ ಪ್ರೇಮಕಥೆಗಳನ್ನೂ ನಾಚಿಸುವಂತಿದೆ. ತೆರೂವೊನ ದೇಹದ ಕಣಕಣವನ್ನೂ ಹೀರಿ ಒಂದು ತುತ್ತನ್ನು ಮಾಡಿ ನುಂಗಿ ಬಿಡಬೇಕು ಎನ್ನುವ ಆಕೆಯ ಮಾತು ಒಂದು ಕ್ಷಣ ಓದುಗನನ್ನು ಪ್ರೇಮದ ಕಡಲಲ್ಲಿ ಮುಳುಗಿ ಹೋಗುವಂತೆ ಮಾಡದಿರಲು ಸಾಧ್ಯವೇ ಇಲ್ಲ.  ಹೀಗಾಗಿಯೇ Drink to me only with thine Eyes and I will pledge with mine Or leave a kiss within the cup And I’ll not look for wine ಎನ್ನುವ ಸಾಲುಗಳು ಅವಳಿಗಿಷ್ಟ. ಮತ್ತು ಅದನ್ನೆಲ್ಲ ತಿಳಿದ ನಂತರವೂ ತೆರೂವೋ ಅವಳನ್ನೆಷ್ಟು ಪ್ರೀತಿಸುತ್ತಾನೆಂದರೆ ಜಪಾನಿ ಕೌಟುಂಬಿಕ ನಿಯಮಗಳಿಗೆ ವಿರುದ್ಧವಾಗಿ ಅವಳನ್ನು ಪ್ರೀತಿಸುತ್ತಾನೆ, ಜಪಾನಿನ ಸಾಮಾಜಿಕ ನಿಯಮಗಳನ್ನು ಮೀರಿ ನಡುಮಧ್ಯಾಹ್ನವೇ ಕುಡಿದು ಮತ್ತೇರುವಷ್ಟು ಅವಳನ್ನು ಪ್ರೇಮಿಸುತ್ತಾನೆ. ಅಂತಹ ಪ್ರೇಮದಲ್ಲಿ ದೇಹ ಸಂಪರ್ಕವೆಂಬುದು ಅಷ್ಟೊಂದು ಪ್ರಧಾನವಾದ ವಿಷಯವೇ ಆಗುವುದಿಲ್ಲ. ಹಾಗೆಂದು ದೇಹದ ಮಿಲನವಾಗದೇ ಪ್ರೇಮ ಫಲಿಸುವುದೂ ಇಲ್ಲ. ಹೀಗಾಗಿಯೇ ಕಥಾನಾಯಕಿ ‘ಪರಸ್ಪರರ ಬಗೆಗಿನ ಭಾವವು ಅದೆಷ್ಟು ಸಂಪೂರ್ಣ ಮತ್ತು ಸರ್ವವ್ಯಾಪಿಯಾಗಿರುತ್ತದೆ ಎಂದರೆ  ಪ್ರಣಯಕ್ರಿಯೆಯೂ ಸಹ ಅದರದ್ದೇ ಒಂದು ಭಾಗವಾಗಿ ಬಿಡುತ್ತದೆ. ಅದನ್ನು ಮಾಡುವುದಾಗಲಿ ಮಾಡದೇ ಇರುವುದಾಗಲಿ ಅಷ್ಟೊಂದು ಮಹತ್ವದ್ದಾಗಿ ಉಳಿಯುವುದಿಲ್ಲ. ಒಬ್ಬರು ಮತ್ತೊಬ್ಬರಿಂದ ಪಡೆಯುವುದು ಒಂದು ಬಗೆಯ ಅನುಭವವಾದರೆ, ಒಬ್ಬರು ಮತ್ತೊಬ್ಬರಿಗೆ ನೀಡುವುದು ಮತ್ತೊಂದು ಬಗೆಯ ಸುಖ.’ ಎನ್ನುತ್ತಾಳೆ. ಹೀಗೆಂದೆ ತನ್ನ ಮತ್ತು ಅವಳ ಪ್ರೇಮದ ಕುರಿತಾಗಿ ಅವಳ ಗಂಡನಿಗೆ ತಿಳಿದರೆ ಏನಾಗಬಹುದು ಎಂದು ತೆರೂವೋ ಕೇಳಿದಾಗ ‘ಅದಕ್ಕೂ ಜನಕನಿಗೂ ಏನು ಸಂಬಂಧ?’ ಎನ್ನುತ್ತಾಳೆ. ‘ಮದುವೆ ಮಾಡಿಕೊಂಡಿಲ್ಲವೇ?’ ಎಂದರೆ ‘ಮಾಡಿಕೊಂಡರೇನಾಯಿತು? ಇಂಥ ಭಾವನೆ, ಇಂಥ ಅನುಭವ, ಇಂಥ ಕೃತಿಯು ಅವನ ಮಾಲಿಕತ್ವದ್ದು ಆಗಿ ಬಿಡುತ್ತದೆಯೇ?’ ಎನ್ನುವ ಮಾತುಗಳು ಅವಳೆಷ್ಟು ಸ್ವತಂತ್ರ ಮನೋಭಾವದವಳು ಎಂಬುದನ್ನು ತೋರಿಸುತ್ತದೆ. ತನ್ನ ಪ್ರೇಮ, ತನ್ನ ಕಾಮ ತನ್ನ ವೈಯಕ್ತಿಕ ಮಾತ್ರ ಎನ್ನುವ ಅವಳ ಭಾವನೆ ನಿಜಕ್ಕೂ ಒಮ್ಮೆ ನಿಟ್ಟುಸಿರಿಡುವಂತೆ ಮಾಡುತ್ತದೆ.    ಇದೆಲ್ಲದರ ನಡುವೆಯೂ ಅವಳ ಅಪ್ಪನ ಸ್ನೇಹಿತನಾದ ‘ಜಿ’ ಯನ್ನು ಆಕೆ ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಾಳೆ. ಅವರಿಬ್ಬರ ನಡುವಿನ ಸಂಬಂಧವೇ ಅಚ್ಚರಿ ಹುಟ್ಟಿಸುವಂತಹುದ್ದು. ಅವಳ ಎಲ್ಲ ಪ್ರೇಮ ಸಂಬಂಧಗಳ ಬಗೆಗೆ ಅರಿವಿರುವ ಜಿ ಕೂಡ ಅವಳನ್ನು ಆಳವಾಗಿ ಪ್ರೀತಿಸುವುದು ಅವಳ ಮಾತುಗಳಿಂದಲೇ ಅರಿವಾಗುತ್ತದೆ. ‘ನಾನೇನಾದರೂ ದೂರದ ದೇಶಕ್ಕೆ  ಹೋದರೆ ಅದರಿಂದ ಕಂದಕವುಂಟಾಗುವುದು ಜಿ ಜೀವನದಲ್ಲಿ ಮಾತ್ರ’ ಎನ್ನುವ ಅವಳ ಮಾತುಗಳು ಈ ಸತ್ಯವನ್ನೇ ಹೇಳುತ್ತದೆಯಾದರೂ ಜಪಾನಿಗೆ ಹೋದ ಮೇಲೆ ಆಕೆ ತೆರೂವೋನ ಕುರಿತಾಗಿ ‘ಜಿ’ಯಲ್ಲಿ ಹೇಳಿಕೊಳ್ಳುವುದನ್ನು ಇಷ್ಟಪಡುವುದಿಲ್ಲ. ತೆರೂವೋ ಜೊತೆಗಿನ ಪ್ರೇಮವನ್ನು ಎದೆಯೊಳಗೇ ಮುಚ್ಚಿಟ್ಟುಕೊಂಡು, ಜೀವನಪೂರ್ತಿ ಒಬ್ಬಳೇ ಆಸ್ವಾದಿಸುವ ಆಸೆ

Read Post »

ಅಂಕಣ ಸಂಗಾತಿ, ಸಂಪ್ರೋಕ್ಷಣ

ಗುಂಡಪ್ಪೆಯ ಮಳೆಗಾಲ ಈ ಮಾವಿನಹಣ್ಣಿಗೂ ಮಳೆಗಾಲಕ್ಕೂ ಒಂಥರಾ ಅವಿನಾಭಾವ ಎನ್ನುವಂಥ ಸಂಬಂಧ. ಮೊದಲಮಳೆಯೆನ್ನುವ ಸಂಭ್ರಮ ನಮ್ಮೊಳಗೊಂದು ಹೊಸ ಚೈತನ್ಯ ತುಂಬುವ ಸಮಯದಲ್ಲಿ, ಸಕಲ ಸೊಬಗಿನ ದೇವಕನ್ಯೆಯೊಬ್ಬಳು ಭುವಿಗಿಳಿದಂತೆ ಮಾವಿನಹಣ್ಣೊಂದು ನೆಲಕ್ಕುರುಳುತ್ತದೆ. ಹೀಗೆ ಕಳಚಿಬಿದ್ದ ಮಾವಿನಹಣ್ಣಿನ ಮೇಲೆ ಮಳೆಹನಿಗಳೆಲ್ಲ ಮುತ್ತಿನಂತೆ ಹೊಳೆದು, ಗೌಜು-ಗದ್ದಲವಿಲ್ಲದ ಹೊಸ ಲೋಕವೊಂದು ಸೃಷ್ಟಿಯಾಗುತ್ತದೆ. ಹೀಗೆ ಗದ್ದೆಬಯಲಿನಲ್ಲೋ, ಬೆಟ್ಟದ ತುದಿಯಲ್ಲೋ ನಿರಾತಂಕವಾಗಿ ಹುಟ್ಟಿಕೊಳ್ಳುವ ಈ ಸೊಬಗಿನ ಪ್ರಪಂಚಕ್ಕೆ ಮಳೆಯೊಂದು ಜೀವ ತುಂಬುವ ಪರಿ ಅನನ್ಯ. ಮಳೆ ಆಗೊಮ್ಮೆ ಈಗೊಮ್ಮೆ ಅವಾಂತರಗಳನ್ನು ಸೃಷ್ಟಿಸಿದರೂ ಅದೊಂದು ಮಾಯೆಯಾಗಿ ಮೈ-ಮನಗಳನ್ನು ಆವರಿಸಿಕೊಂಡು ಹೃದಯವನ್ನು ಹಗುರಾಗಿಸುವ ಕ್ಷಣವೊಂದು ಎಲ್ಲರ ಜೀವನದಲ್ಲೂ ಇರುತ್ತದೆ. ಮುಂಗಾರು ನಮ್ಮೊಳಗೆ ಹುಟ್ಟಿಸುವ ಸಂಚಲನ ಎಷ್ಟೋ ಸಲ ಅದೆಷ್ಟು ತೀವ್ರವಾಗಿರುತ್ತದೆಯೆಂದರೆ ಹವಾಮಾನದ ವರದಿಗಳನ್ನೆಲ್ಲ ನಿರುಮ್ಮಳವಾಗಿ ಬದಿಗೊತ್ತಿ ಮೊದಲಮಳೆಗೆ ಕಾಯತೊಡಗುತ್ತೇವೆ. ಅಂಗೈಯನ್ನೋ, ಮುಖವನ್ನೋ ಅಥವಾ ಕೊನೆಪಕ್ಷ ದೃಷ್ಟಿಯನ್ನೋ ಮಳೆಗೊಡ್ಡಿ ನಿಲ್ಲುವ ಬಯಕೆಯೊಂದು ಎಲ್ಲರ ಎದೆಯೊಳಗೂ ಸದಾ ಜೀವಂತ. ಈಗಿನ್ನೂ ಪ್ರಪಂಚ ನೋಡುತ್ತಿರುವ ಮಗುವಿಗೆ ಮಳೆಯೊಂದು ವಿಸ್ಮಯವೆನ್ನಿಸಿದರೆ, ಪ್ರೀತಿ ತುಂಬಿದ ಹೃದಯವೊಂದು ಮಳೆಗೆ ಕವಿತೆಯಾಗಿ ಅರಳುತ್ತದೆ; ರೈತನೊಬ್ಬ ಭತ್ತವೊಂದು ಮೊಳಕೆಯೊಡೆವ ಕನಸ ಕಾಣತೊಡಗಿದರೆ, ಹಪ್ಪಳ-ಸಂಡಿಗೆಗಳೆಲ್ಲ ಸರತಿಯಲ್ಲಿ ಅಟ್ಟ ಹತ್ತಿ ಬೆಚ್ಚಗೆ ಕೂರುತ್ತವೆ; ಹಳೆಯ ಪಾರ್ಕೊಂದರಿಂದ ತೇಲಿಬಂದ ನೇರಳೆಹಣ್ಣಿನ ಬೀಜವೊಂದು ಬೇರುಬಿಡಲು ತವಕಿಸುತ್ತಿರುವಾಗ, ಪಾರ್ಕಿನ ಪಕ್ಕದ ಶಾಲೆಯೊಂದರಲ್ಲಿ ಕನಸುಗಳು ಅರಳುತ್ತವೆ. ಶಾಲೆ ಎನ್ನುವ ಜಾಗವೊಂದು ಜೀವನಕ್ಕೆ ಕಟ್ಟಿಕೊಡುವ ಮೌಲ್ಯಗಳು, ನೆನಪುಗಳು ಅಗಾಧ. ಜಗತ್ತನೆಲ್ಲ ಸುತ್ತಿ ಬಂದರೂ ಬಾಲ್ಯದ ನೆನಪುಗಳಿಗಾಗಿ ಹಂಬಲಿಸಿದಾಗಲೋ, ಹಳೆಯ ಕಾದಂಬರಿಯೊಂದನ್ನು ಓದಿದಾಗಲೋ ಅಥವಾ ಫೇಸ್ ಬುಕ್ ನಲ್ಲೆಲ್ಲೋ ಬಾಲ್ಯದ ಗೆಳತಿಯೊಬ್ಬಳು ಅಚಾನಕ್ಕಾಗಿ ಮಾತಿಗೆ ಸಿಕ್ಕಾಗಲೋ ಶಾಲೆ ಎನ್ನುವ ನಮ್ಮದೇ ಮುಗ್ಧ ಪ್ರಪಂಚವೊಂದನ್ನು ಆವಾಹಿಸಿಕೊಳ್ಳುತ್ತೇವೆ. ಆ ಪ್ರಪಂಚದಲ್ಲೊಂದಿಷ್ಟು ಬೆಟ್ಟದ ನೆಲ್ಲಿಕಾಯಿಗಳು ಬಾಯಲ್ಲಿ ನೀರೂರಿಸಿದರೆ, ಬಣ್ಣದ ರಿಬ್ಬನ್ನುಗಳು ಹೂವುಗಳಾಗಿ ಅರಳುತ್ತವೆ; ಬಾವಿಯ ಸಿಹಿನೀರು ತೆಂಗಿನಬುಡವನ್ನು ತಂಪಾಗಿಸಿದರೆ, ಮೇ ಫ್ಲವರ್ ಗಿಡವೊಂದು ಹೂವಿನ ಭಾರಕ್ಕೆ ಬಳುಕುತ್ತಿರುತ್ತದೆ; ಮಳೆಗಾಲವೊಂದು ಪಠಾಣ್ಸಿನ ಜೊತೆ ಕೊಡೆಯೊಂದಿಗೆ ಅಂಗಳಕ್ಕಿಳಿಯುತ್ತದೆ. ಮೊದಲಮಳೆಯೊಂದು ಮೊದಲಪ್ರೇಮದಂತೆ ಹೃದಯವನ್ನು ಅರಳಿಸಿದರೆ, ಮಳೆಗಾಲವೊಂದು ಮರೆತೂ ಮರೆಯದಂತಿರುವ ನೆನಪುಗಳನ್ನೆಲ್ಲ ತಂದು ಮಡಿಲಿಗೆ ಸುರಿಯುತ್ತದೆ. ಈ ಪಠಾಣ್ಸಿನ ಕಥೆ ಶುರುವಾಗುವುದು ಹೀಗೆ. ನಾನು ನಾಲ್ಕನೇ ಕ್ಲಾಸು ಮುಗಿಸಿ ಐದನೇ ಕ್ಲಾಸಿಗೆ ಕಾಲಿಟ್ಟ ಗರ್ವದ ಜೂನ್ ತಿಂಗಳು ಅದು. ಐದನೇ ಕ್ಲಾಸು ಎಂದರೆ ಅದರ ಗತ್ತು-ಗೈರತ್ತುಗಳೇ ಬೇರೆ. ಒಂದರಿಂದ ನಾಲ್ಕನೇ ಕ್ಲಾಸಿನ ಮಕ್ಕಳ ಎದುರಿಗೆ ಹೀರೋಗಳ ಚಮಕ್ಕನ್ನು ತೋರಿಸುತ್ತ, ಆರು ಮತ್ತು ಏಳನೇ ಕ್ಲಾಸಿನವರೆದುರಿಗೆ ಚಿಕ್ಕವರಂತೆ ಪೋಸ್ ಕೊಡುತ್ತ ಒಳ್ಳೆಯವರಾಗಿಬಿಡುವ ಜಾಣತನ ಐದನೇ ಕ್ಲಾಸಿಗೆ ಸಿದ್ಧಿಸಿರುತ್ತಿತ್ತು. ಗಾರ್ಡನ್ನಿಗೆಂದು ಅಂಗಳ ಹದಗೊಳಿಸುವ, ಬೆಳಿಗ್ಗೆ ಬೇಗ ಬಂದು ಕಸ ಗುಡಿಸಿ ಒರಸುವಂತಹ ಕೆಲಸವನ್ನೆಲ್ಲ ಆರು-ಏಳನೇ ಕ್ಲಾಸಿನವರು ವಹಿಸಿಕೊಳ್ಳುತ್ತಿದ್ದರು. ಗಾರ್ಡನ್ನಿನ ಕಳೆ ತೆಗೆಯುವುದು, ಕ್ಲಾಸ್ ರೂಮಿನ ಹೊರಗೆ ಚಲ್ಲಾಪಿಲ್ಲಿಯಾಗಿ ಬಿದ್ದಿರುತ್ತಿದ್ದ ಚಪ್ಪಲಿಗಳನ್ನು ಜೋಡಿಸುವುದು ಇಂತಹ ಕೆಲಸಗಳೆಲ್ಲ ಮೂರು-ನಾಲ್ಕನೇ ಕ್ಲಾಸಿನ ಮಕ್ಕಳ ಜವಾಬ್ದಾರಿಗಳಾಗುತ್ತಿದ್ದವು. ಐದನೇ ಕ್ಲಾಸು ಮಾತ್ರ ಕ್ಲಾಸು ತಪ್ಪಿದರೆ ಆಟದ ಮೈದಾನಕ್ಕೆ ಇಳಿಯುತ್ತಿತ್ತು. ಇಂಥ ಸೌಕರ್ಯಕರ ಐದನೇ ಕ್ಲಾಸು ಶುರುವಾದ ಜೂನ್ ನಲ್ಲಿ ಮಳೆಗಾಲವೂ ಶುರುವಾಗಿತ್ತು. ಪುಟ್ಟಪುಟ್ಟ ಮಕ್ಕಳ ಬಣ್ಣದ ರೇನ್ ಕೋಟ್ ಗಳು, ಹೊಸಹೊಸ ಹಸಿರು-ನೀಲಿ ಸ್ಕರ್ಟ್ ಗಳು, ಆಗಷ್ಟೇ ಹಳ್ಳಿಗಳಿಗೆ ಕಾಲಿಟ್ಟಿದ್ದ ಬಟನ್ ಛತ್ರಿಗಳು ಎಲ್ಲದರ ಮಧ್ಯೆ ಇಡೀ ಶಾಲೆಯ ಗಮನ ಸೆಳೆದದ್ದು ಏಳನೇ ಕ್ಲಾಸಿನ ಹುಡುಗಿಯೊಬ್ಬಳ ಪಠಾಣ್ಸು. ಕಪ್ಪು ಬಣ್ಣದಲ್ಲಿ ಮಿರಮಿರ ಮಿಂಚುತ್ತಿದ್ದ ಆ ರಬ್ಬರಿನ ಚಪ್ಪಲಿಯೊಳಗೆ ಅವಳ ಇಡೀ ಪಾದ ಮುಳುಗಿಹೋಗಿ ನಾಲ್ಕು ಬೆರಳುಗಳು ಮಾತ್ರ ಒಂದಕ್ಕೊಂದು ಅಂಟಿಕೊಂಡು, ಹೊರಗಿನಿಂದ ನೋಡುವವರಿಗೆ ಉಸಿರುಗಟ್ಟಿ ಒದ್ದಾಡುತ್ತಿರುವಂತೆ ಕಾಣಿಸುತ್ತಿದ್ದವು. ಮಳೆಗಾಲಕ್ಕೆಂದೇ ವಿಶೇಷವಾಗಿ ತಯಾರಾಗಿದ್ದ ಆ ಚಪ್ಪಲಿಯಿಂದ ಒಂದೇ ಒಂದು ಹನಿ ನೀರು ಕೂಡಾ ಅವಳ ಸ್ಕರ್ಟಿಗೆ ಸಿಡಿದಿರಲಿಲ್ಲ. ಬೆನ್ನಿನವರೆಗೂ ಮಳೆಯ ನೀರು ಸಿಡಿದು ಸ್ಕರ್ಟಿನ ತುಂಬಾ ರಂಗೋಲಿಯ ಚುಕ್ಕಿಯಂತಹ ಮಣ್ಣಿನ ಕಲೆಗಳಾಗಿ ನೊಂದಿರುತ್ತಿದ್ದ ನಮಗೆಲ್ಲ ಪಠಾಣ್ಸಿನ ಮೇಲೆ ವಿಪರೀತ ಪ್ರೇಮ ಹುಟ್ಟಿಕೊಂಡಿತು. ಆ ಪ್ರೇಮದ ತೀವ್ರತೆ ಎಷ್ಟಿತ್ತೆಂದರೆ ಮಳೆಗಾಲ ಮುಗಿಯುವುದರೊಳಗೆ ನನ್ನ ಹಠಕ್ಕೆ ಮಣಿದು ಅಪ್ಪ ನನಗೂ ಒಂದು ಮಣ್ಣಿನ ಬಣ್ಣದ ಪಠಾಣ್ಸು ತಂದುಕೊಟ್ಟ. ಹೀಗೆ ಪಠಾಣಿ ಚಪ್ಪಲಿಯೊಂದು ಪಠಾಣ್ಸಾಗಿ ಮನೆಗೆ ಆಗಮಿಸಿ ಮಳೆಗಾಲದ ಮಜಾ ಇನ್ನಷ್ಟು ಹೆಚ್ಚಿತು; ನೀಲಿ, ಹಸಿರು ಸ್ಕರ್ಟುಗಳೆಲ್ಲ ಖುಷಿಯಿಂದ ಕುಣಿದಾಡಿದಂತೆನ್ನಿಸಿತು. ಪ್ರತೀವರ್ಷ ಮಳೆಗಾಲ ಮುಗಿದೊಡನೆ ಪ್ಲಾಸ್ಟಿಕ್ ಕವರಿನೊಳಗೆ ಸೇರಿದ ಪಠಾಣ್ಸು ಭದ್ರವಾಗಿ ಜಗಲಿಯ ಮೇಲಿನ ಗೂಡೊಂದನ್ನು ಸೇರಿಕೊಳ್ಳುತ್ತಿತ್ತು. ಹೀಗೆ ಹೈಸ್ಕೂಲು ಮುಗಿಯುವವರೆಗೂ ಪಾದದ ಬೆಳವಣಿಗೆಗನುಗುಣವಾಗಿ ಹಿಗ್ಗುತ್ತಾ, ನನ್ನ ಮಳೆಗಾಲದ ಚಟುವಟಿಕೆಗಳನ್ನೆಲ್ಲ ತಕರಾರಿಲ್ಲದೇ ಸಹಿಸಿಕೊಂಡ ಪಠಾಣ್ಸು ನೆನಪಿನ ಶೂ ರ‍್ಯಾಕ್‌ ನಲ್ಲಿ ಈಗಲೂ ಭದ್ರವಾಗಿದೆ. ಪಠಾಣ್ಸಿನ ಸಂಭ್ರಮದೊಂದಿಗೆ ಮಳೆಗಾಲದ ಇನ್ನೊಂದು ಮಜವೆಂದರೆ ಮಾವಿನಹಣ್ಣಿನದು. ಕೇರಿಯ ತುದಿಯಿಂದ ಶುರುವಾಗುವ ವಿಸ್ತಾರವಾದ ಗದ್ದೆಬಯಲಿನ ತುದಿಯಲ್ಲಿ ಮಾವಿನಮರಗಳ ಸಾಲೊಂದಿತ್ತು. ಆ ಮಾವಿನಮರಗಳ ವಿಶೇಷತೆಯೆಂದರೆ ಅವು ಮಳೆಗಾಲದಲ್ಲಿ ಉದುರಿಸುತ್ತಿದ್ದ ಅಪ್ಪೆಹಣ್ಣುಗಳು. ಅತ್ತ ಹುಳಿಯೂ ಅಲ್ಲದ, ಪೂರ್ತಿ ಸಿಹಿಯೂ ಅಲ್ಲದ ಪುಟ್ಟಪುಟ್ಟ ಮಾವಿನಹಣ್ಣುಗಳಿಗೆ ವಿಶಿಷ್ಟವಾದ ರುಚಿಯಿರುತ್ತಿತ್ತು. ಸಂಜೆ ಶಾಲೆಯಿಂದ ಬರುತ್ತಿದ್ದಂತೆಯೇ ಕೇರಿಯ ಮಕ್ಕಳ ಗ್ಯಾಂಗೊಂದು ಮಾವಿನಮರದ ಬುಡವನ್ನು ತಲುಪುತ್ತಿತ್ತು. ಆ ಮರಗಳ ಸಾಲಿನಲ್ಲಿ ನಮ್ಮೆಲ್ಲರ ಪ್ರೀತಿಯ ಗುಂಡಪ್ಪೆಯ ಮರವಿತ್ತು. ನೋಡಲು ಗುಂಡುಗುಂಡಾಗಿ ಅಚ್ಚಹಸಿರು ಬಣ್ಣದಲ್ಲಿ ಹೊಳೆಯುತ್ತಿದ್ದ ಗುಂಡಪ್ಪೆಯನ್ನು ಹುಲ್ಲುಗಳ ಮಧ್ಯದಿಂದ ಹೆಕ್ಕಿ ಸ್ಕರ್ಟಿನ ಜೇಬಿಗೆ ಸೇರಿಸುವುದೆಂದರೆ ಎಲ್ಲಿಲ್ಲದ ಸಂಭ್ರಮ. ಉಳಿದ ಹಣ್ಣುಗಳೆಲ್ಲ ಮಾವಿನಹಣ್ಣು ಹೆಕ್ಕಲೆಂದೇ ಸ್ಕರ್ಟಿನ ಜೇಬಿನಲ್ಲಿರುತ್ತಿದ್ದ ಪ್ಲಾಸ್ಟಿಕ್ ಕವರನ್ನು ಸೇರಿದರೆ, ಗುಂಡಪ್ಪೆ ಮಾತ್ರ ವಿಶೇಷ ಅಕ್ಕರೆಯಿಂದ ಜೇಬನ್ನು ಸೇರುತ್ತಿತ್ತು. ಮನೆಗೆ ಬಂದು ಪಠಾಣ್ಸನ್ನು ಉಜ್ಜಿ ತೊಳೆದು ಜಗಲಿಯ ಮೂಲೆಯಲ್ಲಿಟ್ಟು, ಅಪ್ಪೆಹಣ್ಣುಗಳನ್ನು ತೊಳೆಯುವ ಕಾಯಕ ಶುರುವಾಗುತ್ತಿತ್ತು. ಯಾರ ಅಪ್ಪಣೆಗೂ ಕಾಯದೇ ಗುಂಡಪ್ಪೆಗಳೆಲ್ಲ ನಿರಾತಂಕವಾಗಿ ಹೊಟ್ಟೆ ಸೇರಿದರೆ, ಉಳಿದವು ಅಡುಗೆಮನೆಯಲ್ಲಿ ಜಾಗ ಕಂಡುಕೊಳ್ಳುತ್ತಿದ್ದವು. ಹೀಗೆ ಪಠಾಣ್ಸೆನ್ನುವ ಸಂಭ್ರಮದಿಂದ ಶುರುವಾಗುವ ಮಳೆಗಾಲವೊಂದು ಗುಂಡಪ್ಪೆಯನ್ನು ಜೀರ್ಣಿಸಿಕೊಳ್ಳುವ ಸಮಾರಂಭದಲ್ಲಿ ಮುಗಿಯುತ್ತಿತ್ತು. ಆಸ್ತಿ, ಹಣ, ಅಂತಸ್ತು ಯಾವ ಹಂಗೂ ಇಲ್ಲದ ಮಳೆಗಾಲವೆಂಬ ಸೃಷ್ಟಿಯ ಸಡಗರ ನೆನಪುಗಳಿಗೆ ಹೊಸ ಜೀವ ತುಂಬಲಿ; ಬದುಕಿಗೊಂದಿಷ್ಟು ಕನಸು ದೊರಕಿ ಗುಂಡಪ್ಪೆಯಂತೆಯೇ ಹಸಿರಾಗಿ ಹೊಳೆಯುತ್ತಿರಲಿ. ************* ಲೇಖಕರ ಬಗ್ಗೆ ಎರಡು ಮಾತು: ಮೂಲತ: ಉತ್ತರ ಕನ್ನಡದವರಾದ ಅಂಜನಾ ಹೆಗಡೆಯವರು ಸದ್ಯ ಬೆಂಗಳೂರಲ್ಲಿ ನೆಲೆಸಿರುತ್ತಾರೆ. ‘ಕಾಡ ಕತ್ತಲೆಯ ಮೌನ ಮಾತುಗಳು’ ಇವರು ಪ್ರಕಟಿಸಿದ ಕವನಸಂಕಲನ.ಓದು ಬರಹದ ಜೊತೆಗೆ ಗಾರ್ಡನಿಂಗ್ ಇವರ ನೆಚ್ಚಿನ ಹವ್ಯಾಸ

Read Post »

You cannot copy content of this page

Scroll to Top