ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ

ನುಡಿ ನಮನ

ನುಡಿ ನಮನ ಹೊರಗಣ್ಣ ಮುಚ್ಚಿದರೆ ಒಳಗಣ್ಣು ತೆರೆಯುವುದು ಕಾಣುವುದು ಎಲ್ಲೆಲ್ಲು ವಿಶ್ವರೂಪ_ _ಕೆ.ಎಸ್.ನಿಸ್ಸಾರ ಒಬ್ಬ ಕವಿಯಾಗಿ,ಭಾವ ಜೀವಿಯಾಗಿ,ನಾನೆಂಬ ಪರಕೀಯರೊಳು ಒಂದಾಗಿ,ಪ್ರೇಮ ಕವಿಯಾಗಿ, ನಿತ್ಯೋತ್ಸವದ ಜೀವವಾದ ಕವಿ,ಲೇಖಕನ ಸೇವೆ ಅಗಣಿತವಾದ ಪರಿಧಿಯೋಳು ನೆಲೆನಿಲ್ಲಲು ಇವರ ಕವಿತೆಗಳೇ ಸಾಕ್ಷಿ..! ನಾಡು ನುಡಿಗೆ ಕಹಳೆಯುದಿದ ನಿಷ್ಠಾವಂತ ಯೋಧ… ** “ಕನ್ನಡವೆಂದರೆ ಬರಿ ನುಡಿಯಲ್ಲ ಹಿರಿದಿದೆ ಅದರರ್ಥ ನೀರೆಂದರೆ ಬರಿ ಜಲವಲ್ಲ ಅದು ಪಾವನತೀರ್ಥ”…. ಇಡೀ ಕರುನಾಡ ಸೊಗಡನ್ನು ಕನ್ನಡಿಗರಿಗೆ ಎಳೆಎಳೆಯಾಗಿ ಕಟ್ಟಿಕೊಟ್ಟಿದ್ದಾರೆ.ಕನ್ನಡ ನಾಡಲ್ಲಿ ಹುಟ್ಟುವುದೇ ಪುಣ್ಯ.ಇದು ಬರಿ ಗಡಿನಾಡಲ್ಲಿ ಗುರುತಿಸಿದ ನಾಡಲ್ಲ..ಕನ್ನಡಿಗರ ಉಸಿರು‌ ಬೆರೆತ ನಾಡು..ಎಂದು ನುಡಿವಲ್ಲಿ ಅವರ ಆಂತರ್ಯದ ಅಭಿಮಾನಕ್ಕೆ ಹಿಡಿದ ಕನ್ನಡಿಯಾಗಿದೆ. ನಿತ್ಯೋತ್ಸವ * *೧೯೭೮ *ರಲ್ಲಿ ಇಡೀ ನಾಡಿನಾದ್ಯಂತ ಕನ್ನಡಿಗರ ತನು ಮನದಲ್ಲಿ ಚಿರಸ್ಥಾಯಿಯಾದ ಕವಿತೆಗಳ ಗುಚ್ಛ. “ಜೋಗದ ಸಿರಿ ಬೆಳಕಿನಲ್ಲಿ,ತುಂಗೆಯ ತೆನೆ ಬಳುಕಿನಲ್ಲಿ ಸಹ್ಯಾದ್ರಿಯ ಲೋಹದದಿರ ಉತ್ತುಂಗದ ನಿಲುಕಿನಲ್ಲಿ ನಿತ್ಯಹರಿದ್ವರ್ಣವನದ ತೇಗ,ಗಂಧ ತರುಗಳಲ್ಲಿ ನಿತ್ಯೋತ್ಸವ ತಾಯಿ ನಿತ್ಯೋತ್ಸವ ನಿನಗೆ”… ಈ ‌ಕವಿತೆಯ ಸಾಲುಗಳು ನಾವ್ ಪ್ರೀತಿಸುವ ಕನ್ನಡಾಂಬೆಯ ಉಸಿರು ಪ್ರತಿಯೊಬ್ಬ ಕನ್ನಡಿಗನ ನಾಡಿ ಮಿಡಿತವೆಂದರೆ ತಪ್ಪಾಗಲಾದು. ಪ್ರೇಮಕವಿಯ ಅಂತರಂಗದಾ ಸೆಳೆತಗಳು* ನೆನೆದೆ ನೆನೆಯುವೆ. “ಕಂಡ ಸಾವಿರ ಅನ್ಯ ಮೊಗದ ಭಂಗಿಗಳಲ್ಲಿ ನನ್ನ ದೈನ್ಯವ ನೊಂದು ಹೋಲಿಸಿದಾಗ ಕಣ್ಣಂಚ ಹೆದೆಯಲ್ಲಿಬಿಗಿಗೊಂಡ ನೋವೊಂದು ನೇರ ನಿನ್ನೆದೆಯತ್ತ ತೂರಿದಾಗ”. ಎಂಬ ಭಾವ ಕವಿಯ ಮನಸ್ಸಿಗಾದ ಗಾಯವನ್ನು ಸುಲಭವಾಗಿ ಅರ್ಥೈಸುವಂತೆ ನನ್ನ ನೆನಪು ಛಾಯೆಯಂತೆ ನಿನ್ನೆದುರಿಗೆ ನಿಲ್ಲುವಾಗ ನೆನೆಯದೆ ಇರಲಾರೆಯೆಂಬ ಸತ್ಯ ಪ್ರೇಮದ ಸ್ವರೂಪವಾಗಿದೆ. ** ನಾ ನಿನ್ನ ಕಂಡಾಗ… ನಾ ನಿನ್ನ ಕಂಡಾಗ ಎಷ್ಟೊಂದು ನಲಿವಿತ್ತು ಎಷ್ಟೊಂದು ಗೆಲುವಿತ್ತು,ಅಷ್ಟೊಂದು ನಗುವಿತ್ತು ಹಗಲೆಲ್ಲ ನಿನ್ನ ಧ್ಯಾನ,ಇರುಳೆಲ್ಲ ನಿನ್ನ ಸ್ವಪ್ನ ನೀ ನಡೆವ ದಾರಿಯಲ್ಲಿ ಅನುದಿನವು ನನ್ನ ಪಯಣ ನೀ ಸುಳಿದರೆನ್ನ ಬಳಿಗೆ ನೆರೆ ಬಂದ ಹಾಗೆ ಹೊಳೆಗೆ ನನ್ನೆದೆಯ ತೋಟದಲ್ಲಿ ಆಡಾಡು ಓ ನವಿಲೇ.. ನೆನೆದಾಗ ನಿನ್ನ ರೂಪ ಎದೆಗತ್ತಲಲ್ಲಿ ದೀಪ…! ” ಕವಿಯ ಸುಕೋಮಲ ಹೃದಯ ಪ್ರೇಮವೆಂಬ ಆಕಾಶದಲ್ಲಿ ಪ್ರೇಯಸಿಯ ನೆನೆದು ಅಗೋಚರ ಪ್ರೀತಿಯ ಸುಧೆಯ ಹರಿಸಿ ಆರಾಧಿಸುವ ಕಲೆ ಒಬ್ಬ ಪ್ರೇಮಿಗೆ ಮಾತ್ರ ದೇವರು ಕೊಟ್ಟ ವರವೆಂದರೆ ವಿಶೇಷವೆನಿಲ್ಲ..ಆ ಪ್ರೇಮಿ ಕವಿ ನಿಸ್ಸಾರರು. ** ನೆನಪು ಕವಿತೆ ನಿನ್ನ ನಗೆಗಳ ಜಾಹಿರಾತಿಗೊಲವಿನ ಅರ್ಜಿ ಗುಜರಾಯಿಸುತ ಪ್ರತಿಸಲವು ಉತ್ತರಕೆ ತತ್ತರಿಸಿ ಮುಖಭಂಗವಾಗಿರುವ ಹಣೆಬರಹ ಚಿತ್ತದ ‘ನಿರ್ಭಾಗ್ಯ’ ನಿನ್ನಾಸೆಗೆಳ್ಳುನೀರನು ಬಿಟ್ಡು ವರ್ಷಗಳ ಕಳೆದಿವೆ ಚಿಹ್ನೆಗಳು ಉಳಿದಿವೆ ನನ್ನೆದೆಯ ಹಸುರಲ್ಲಿ… ” ಹಿಂದಿನಪಘಾತಕ್ಕೆ ಎಚ್ಚರಿಕೆ ಕೆತ್ತಿಹುದು ನಿನ್ನತ್ತ ಧಾವಿಸುವ ಭಾವಗಳು ಸತ್ತಿಹವು…….. ಪ್ರೇಮದ ಕರಿನೆರಳಿಗೆ ಆಘಾತವಾದ ಮನಸು ಚೇತರಿಸಿಕೊಂಡು ಬದುಕ ಕಟ್ಡಿದರು,ಪ್ರೇಮದ ಅಲೆಯಲಿ ನೋವ ಮರೆತು,ಮತ್ತೆ ಮರಳಲಾರದ ಸ್ಥಿತಿ ಪ್ರತಿಯೊಬ್ಬನದೆಂಬಂತೆ ನೆನಪ ಹಂಚಿರುವುದು.ನೊಂದವರಿಗೆ ಮಾದರಿ. ** ಬೇಸರವಾಗಿದೆ ಮಾತು ಕವಿತೆಯಂತು…… ಭಾರವಾಗಿದೆ ಮೌನ ನೋವು ಕರಗಿದ ಕಣ್ಣಲಿ ಅಡಿಗೆ ಚುಚ್ಚಿದ ಮುಳ್ಳು ಒಳಗಡೆ ಮುರಿದಂತೆ ಭಾವ ಕುಟಿಕಿದೆ ಮನದಲಿ ಮುರಿದ ಪ್ರೀತಿಯ ಮರೆಯೇ ಬಾಳಿನೊಳ ಹೊಕ್ಕಿರಲು ಸಾವ…ಭಯ ತಾನೆರಗಿತೋ ಯಾವ ಗವಿ ಗತ್ತಲಿನಲಿ ಮೌನಭಾರವ ಕನಸಿ‌ ಇದ್ದ ಹಕ್ಕೆಯ ಬಿಟ್ಟಿತೋ…. ಹೃದಯದಲಡಗಿದ ಪ್ರೀತಿ ಕಮರಿ ಕಣ್ಮರೆಯಾದ ಗಳಿಗೆಗಳು ಪುನಃ ಬೇರುರದೇ.ನಶಿಸುವ ಕ್ಷಣಗಳ ಕವಿಯು ಅನುಭವಿಸದೇ ಹೇಳಲಾರನೆಂಬುದಕೆ ಸಾಕ್ಷಿ… ನಿನ್ನ ಮೈತ್ರಿ..ಕವನದ ಸಾಲುಗಳು ಅತ್ಯದ್ಭುತ. ನಿನ್ನೆದೆಯ ಗೆದ್ದಿರುವ ಹೆಮ್ಮೆಯಿಂದೆಷ್ಟೋಸಲ ಎನಿಸುವುದು,ನನಗಿಂತ ಇಲ್ಲ ಧನ್ಯ.ನನಾ ಪಾತ್ರನೋ ಏನೋ ನಿನ್ನಮಲ ಪ್ರೇಮಕ್ಕೆ,ನನಗಂತೂ ದಕ್ಕಿಹುದು ಜೀವದಾನ. ಬಾಳ ದುರ್ಗಮ ಪಥದ ಪಾದಯಾತ್ರೆ ಚಿರರಕ್ಷೆಯಾಗಿರಲಿ ನಿನ್ನ ಮೈತ್ರಿ…… ಕವಿ ನಿಸ್ಸಾರರ ಅಭೂತಪೂರ್ವ ಕವಿತೆಗಳಲ್ಲಿ ಒಂದಾದ ಕವಿತೆ… ಎಲ್ಲ ಮರೆತಿರುವಾಗ ಇಲ್ಲಸಲ್ಲದ ನೆವವ ಹೂಡಿ ಬರದಿರು ಮತ್ತೆ ಹಳೆಯ ನೆನಪೆ…..ಕವಿಯೆಯಂತೂ ಇಹಪರ ಚಿಂತನೆಗೆ ಒರೆಹಚ್ಚದಿರಲಾರದು. ** ಇನ್ನೊಂದು ಕವನ “ಮತ್ತದೇ ಬೇಸರ”… ಕವಿತೆ ಮತ್ತದೇ ಬೇಸರ ಅದೇ ಸಂಜೆ ಅದೇ ಏಕಾಂತ ನಿನ್ನ ಜೊತೆಯಿಲ್ಲದೆ ಮಾತಿಲ್ಲದೆ ಮನ ವಿಭ್ರಾಂತ ಆಸೆಗಳ ಹಿಂಡಿನ ತುಳಿತಕ್ಕೆ ಹೋಲನನ್ನೀದೇಹ ಬರುವೆಯೇ,ಬಾರೆಯೇ ನೀ ನೆನಿಸುತಿದೆ ಹಾ.ಸಂದೇಹ.. *ಕವಿ ಬರೆದ ಕವಿತೆ…. ಕವಿ ಬರೆದ ಲೆಕ್ಕಣಿಕೆಯಲ್ಲಿ ತನ್ನ ಎದೆಯನ್ನೆ ಇರಿದಿರಿದು ಆಂತರ್ಯ ಸಂಚಯಿತ ಬಾಧೆಯನೇ ಸುರಿದೆರೆದು.. ಬರೆದಾಗ ಪ್ರೇಮದ ಕುಣಿಕೆ ಆಂತರ್ಯದಲಿ ಚಿಗುರೊಡೆದಿದ್ದು ಆಶ್ಚರ್ಯವೇ… ** ರೂಪ ಕವಿತೆ….ಅಮೂರ್ತದಿಂದ ಮೂರ್ತದೆಡೆಗೆ… ಕವಿತೆಯಲ್ಲಂತೂ ಕವಿಯ ತುಮುಲಗಳು,ತುಡಿತಗಳು, ಮೇಳೈಸಿದಂತೆ ” ಮತ್ತೆ ಆ ರೂಪ ಎದೆಗೆ ಹಾಯುತಿದೆ ಚಿತ್ತ ಸಂತಾಪದಲ್ಲಿ ಬೇಯುತಿದೆ. ಎಂದೋ ಹುಗಿದಂಥ ನೆನಹ ಕೆದಕುತಿದೆ ಮೌನದುತ್ತಾಪದಲ್ಲಿ ಹೊಗೆಯಿತಿದೆ ಇದ್ದಕ್ಕಿದ್ದಂತೆ ಹೃದಯ ಹೌಹಾರಿ ಸದ್ದೆ ಇರದಂತೆ ರೋಧಿಸಿದೆ ಬೇಲಿ ಇಲ್ಲಮೆಯ ಭಾವ ಮುಸುಕಿ ಮಿಡುಕುತಿದೆ ಜೀವ ಏನನ್ನೋ ಬೇಡಿ ದುಡುಕುತಿದೆ ….ಮತ್ತೆ ಆ ರೂಪ.! ಹೇಳುತ್ತಾ ಹೊರಟರೆ ಕವಿಯ ಮನವರಳುತ್ತಾ ಸಾಗುವುದು.ಕಾರಣ ಕನ್ನಡ ನಾಡಿನ ಅಪರೂಪದ ರತ್ನ..ಜಾತಿ ಮತ ಧರ್ಮ ಭೇದಗಳ ಮೆಟ್ಟಿನಿಂತು. ಸಾಗಿದ ಬದುಕು ದಿಗಂತದಂತೆ ಅನಂತ. ಕವಿಯೇ ಹೇಳುವಂತೆ… ಸಂಜೆ ಐದರಮಳೆ ಕವನ ಸಂಕಲನದೊಂದು ಕವಿತೆ… “ನಿಮ್ಮೊಡನಿದ್ದೂ ನಿಮ್ಮಂತಾಗದ ಜಗ್ಗಿದ ಕಡೆ ಬಾಗದೇ ನಾನು ನಾನೆ ಆಗಿ ಈ ನೆಲದಲ್ಲೆ ಬೇರೂತ್ತಿದ್ದರು ಬೀಗಿ ಪರಕೀಯವಾಗಿ ತಲೆಯೆತ್ತುವುದೆದೆ ನೋಡಿ ಅದು ಬಲು ಕಷ್ಟದ ಕೆಲಸ………..ವೆಂದು ನುಡಿಯುವಾಗ ಕವಿಯ ಅಂತರಾತ್ಮ ಎಷ್ಟೊಂದು ಮರುಗಿರಬಹುದು.. ಕವಿಯೆಲ್ಲವನ್ನು ಮೀರಿ ತನ್ನಾತ್ಮದೊಳು ನೆಲೆನಿಂತು ಸಾಗಿ ಮನೆಮನಗಳಲ್ಲಿ ಮನೆಮಾತಾಗಿರುವ ಅಚ್ಚ ಕನ್ನಡಿಗ ನಮ್ಮ ಮೆಚ್ಚಿನ ಕವಿ ನಿತ್ಯೋತ್ಸವದ ಹರಿಕಾರ….ಕೆ.ಎಸ್.ಎನ್…….ಇಂದು ನೆನಪಿನ ಬಿತ್ತಿಯೋಳು ಮಿನುಗುವ ನಕ್ಷತ್ರ. “ನಾದವಿರದ ಬದುಕು ಇದ್ದು ಸತ್ತಂತೆ ಎಂದು ಸಾರುತ್ತಾ”……ಬದುಕಿರುವಷ್ಟು ಗಳಿಗೆ ನಾಡು.ನುಡಿಗೆ ಮಿಸಲಿಟ್ಟು………..” ಬಿಸುಸುಯ್ಯುವ ಹಂಬಲವೋ ಶುಭ ಸಮ್ಮಿಲನದ ಕಾತರವೋ ಬಾ ಇನಿಯ,ಕರೆವ ನೊಂದು ಬರದೆ ಹೋದೆ ನೀನು,ಮರೆತು ಹೋದೆ ನೀನು.” ನೋವಿನಧಾರೆಯ ನಮ್ಮೊಡಲಿಗಿಟ್ಟು ಮತ್ತದೇ ಬೇಸರದ ನಾದವಾಗಿ ಮರೆಯಾದ ಪ್ರೇಮ ಕವಿಗೆ ಕೋಟಿಕೋಟಿ ನಮನಗಳು. ************************** ಶಿವಲೀಲಾ ಹುಣಸಗಿ

ನುಡಿ ನಮನ Read Post »

ಇತರೆ

ನಿತ್ಯೋತ್ಸವದ ಕವಿಗೆ ನಮನ

ನಿತ್ಯೋತ್ಸವದ ಕವಿಗೆ ನಮನ ಜೋಗದ ಸಿರಿ ಬೆಳಕಿನಲ್ಲಿ, ತುಂಗೆಯ ತೆನೆ ಬಳುಕಿನಲ್ಲಿ ಸಹ್ಯಾದ್ರಿಯ ಲೋಹದದಿರ ಉತ್ತುಂಗದ ನಿಲುಕಿನಲ್ಲಿ ನಿತ್ಯಹರಿದ್ವರ್ಣವನದ ತೇಗ ಗಂಧ ತರುಗಳಲ್ಲಿ ನಿತ್ಯೋತ್ಸವ ತಾಯಿ ನಿತ್ಯೋತ್ಸವ ನಿನಗೆ ನಿತ್ಯೋತ್ಸವ ತಾಯಿ ನಿತ್ಯೋತ್ಸವ…. ಈ ಹಾಡು ಕೇಳದವರಾರು, ಈ ಹಾಡು ಹಾಡದವರಾರು.ಕನ್ನಡಮ್ಮನಿಗೆ ನಿತ್ಯೋತ್ಸವದ ಹಾಡು ಬರೆದು ಕನ್ನಡದ ಹಿರಿಮೆ ಹೆಚ್ಚಿಸಿದ ಕವಿ ನಿಸಾರ್ ಅಹಮದ್ ಅವರು ನಮ್ಮನ್ನು ಅಗಲಿದ್ದು ಸಾರಸ್ವತ ಲೋಕಕ್ಕೆ ಅಪಾರ ನಷ್ಟವಾಗಿದೆ. ಪ್ರೊ. ನಿಸಾರ್ ಅಹಮದ್ ಎಂದೇ ಖ್ಯಾತರಾದ ಕೊಕ್ಕೆರೆ ಹೊಸಳ್ಳಿ ಹೈದರ ನಿಸಾರ್ ಅಹಮದ್ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿಯಲ್ಲಿ ಫೆಬ್ರವರಿ 5, 1936ರಂದು ಜನಿಸಿದರು. 1959ರಲ್ಲಿ ಭೂ ವಿಜ್ಞಾನ ವಿಷಯದಲ್ಲಿ ಪದವಿ ಪಡೆದವರು. ಅಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತ ಸಾಹಿತ್ಯ ಕೃಷಿ ಆರಂಭಿಸಿದರು. ನಿಸಾರ್ ಅಹಮದ್ ಸುಮಾರು 25 ಕೃತಿಗಳನ್ನು ರಚಿಸಿದ್ದು, ನಿತ್ಯೋತ್ಸವ ಹಾಗೂ ಗಾಂಧಿ ಬಜಾರ್ ಇವರ ಪ್ರಸಿದ್ಧ ಕವನ ಸಂಕಲನಗಳು. ಅಲ್ಲದೇ ಕನ್ನಡದಲ್ಲಿ ಪ್ರಥಮ ಬಾರಿಗೆ ಭಾವಗೀತೆ ಕ್ಯಾಸೆಟ್ ತಂದ ಕೀರ್ತಿ ಕೂಡಾ ಇವರಿಗೆ ಸಲ್ಲುತ್ತದೆ. ರಾಜಕಾರಣಿಗಳನ್ನು ಕುರಿತು ಬರೆದ ಕವಿತೆ ಕುರಿಗಳು ಸಾರ್ ಕುರಿಗಳು ವಿಡಂಬನಾತ್ಮಕ ಗೀತೆಯಾಗಿ ಪ್ರಸಿದ್ಧಿಯಾಗಿ ನಿಸಾರ್ ಅಹಮದ್ ಅವರಿಗೆ ಹೆಚ್ಚು ಜನಪ್ರಿಯತೆ ತಂದುಕೊಟ್ಟ ಕವಿತೆ. “ಕೃಷ್ಣನ ತುಂಟತನವನ್ನು ವರ್ಣಿಸುವ ಬೆಣ್ಣೆ ಕದ್ದ ನಮ್ಮ ಕೃಷ್ಣ ಬೆಣ್ಣೆ ಕದ್ದ ನಮ್ಮ, ಬೆಣ್ಣೆ ಕದ್ದು ಜಾರುತ ಬಿದ್ದು “ಈ ಹಾಡಿಗೆ ಮರುಳಾಗದವರಾರು. “ನಾಡದೇವಿಯೆ ಕಂಡೆ ನಿನ್ನ ಮಡಿಲಲ್ಲಿ ಎಂಥ ದೃಶ್ಯ, ಒಂದೆದೆಯ ಹಾಲ ಕುಡಿದವರ ನಡುವೆ ಎಷ್ಟೊಂದು ಭೇದ ತಾಯಿ “ಎಂದು ಅಸಮಾನತೆ ವಿರುದ್ದ ಬರೆದ, ಕುರಿಗಳು ಸಾರ್ ಎಂದು ವ್ಯವಸ್ಥೆಯ ಬಗ್ಗೆ ವ್ಯಂಗ್ಯವಾಡಿದ ಜೋಗದ ಸಿರಿಯ ಕವಿ ಕೆ ಎಸ್ ನಿಸಾರ್ ಅಹಮದ್ ಈ ನಾಡಿನ ಜನಮಾನಸದಲ್ಲಿ ಶಾಶ್ವತವಾಗಿ ನೆಲೆಸಿರುವ ಕವಿ. ಕನ್ನಡಾಂಬೆಯ ತೇರು ಎಳೆದಿರುವ, ಎಳೆಯುತ್ತಾ ಇರುವ ನನ್ನ ಅಚ್ಚುಮೆಚ್ಚಿನ ಅನೇಕ ಕವಿಗಳಲ್ಲಿ ಪ್ರೊ.ಕೆ.ಎಸ್.ನಿಸಾರ್ ಅಹಮದ್ ಕೂಡ ಒಬ್ಬರು. “ಎಲ್ಲಾ ಮರೆತಿರುವಾಗ ಇಲ್ಲಾ ಸಲ್ಲದ ನೆವವಾ ಹೂಡಿ ಬರದಿರು ಮತ್ತೆ ಹಳೆಯ ನೆನಪೇ “ಈ ಕವಿತೆ ನಾನು ಸದಾ ಗುನುಗುನಿಸುತ್ತಿದ್ದ ಅಚ್ಚುಮೆಚ್ಚಿನ ಭಾವಗೀತೆ ಯಾಗಿತ್ತು. ಗಾಂಧಿಬಜಾರು ಮತ್ತು ನಿತ್ಯೋತ್ಸವ ನಿಸಾರ್ ಅಹಮದ್ ಅವರಿಗೆ ಅತಿ ದೊಡ್ಡ ಹೆಸರು ತಂದುಕೊಟ್ಟವು. ನಿತ್ಯೋತ್ಸವ ಗೀತೆ ಕನ್ನಡ ನಾಡಿನಲ್ಲಿ ತನ್ನದೆ ಹೊಸ ಸಂಗೀತ ಮತ್ತು ಸಾಹಿತ್ಯ ಲೋಕ ಸೃಷ್ಟಿಗೆ ಕಾರಣವಾಯಿತು.ಅದರಲ್ಲಿದ್ದ ಅಷ್ಟೂ ಹಾಡುಗಳೂ ಜನರಿಗೆ ಅತ್ಯಂತ ಇಷ್ಟವಾದ ಹಾಡುಗಳಾಗಿದ್ದವು.ಇವತ್ತಿಗೂ ಅಷ್ಟೇ ಜನಪ್ರಿಯತೆ ಉಳಿಸಿಕೊಂಡಿವೆ.ಸುಗಮ ಕ್ಷೇತ್ರದಲ್ಲಿ ಇವತ್ತಿಗೂ ಜನ ಆಸಕ್ತಿ ಮತ್ತು ಇಷ್ಟ ಪಟ್ಟು ಕೇಳುವ ಬಹುಪಾಲು ಗೀತೆಗಳಲ್ಲಿ ನಿಸಾರ್ ಅಹಮದ್ ಅವರ ಕವನಗಳ ಪಾಲು ಬಹುದೊಡ್ಡದು . ಇವರಿಗೂ ಸುಗಮ ಸಂಗೀತ ಕ್ಷೇತ್ರಕ್ಕೂ ಬಿಡಸಲಾರದ ನಂಟು.  ನಿಸಾರ್ ಕವನಗಳನ್ನು ಆಧರಿಸಿದ ಅನೇಕ ಆಲ್ಬಂಗಳು ಸದಭಿರುಚಿಯ ಹೊಸ ಕೇಳುಗ ಲೋಕ ಸೃಷ್ಟಿಗೆ ಕಾರಣವಾಯಿತು . ಸಂವೇದನೆ, ವಿಡಂಬನೆ, ತಿಳಿಹಾಸ್ಯ ನಿಸಾರ್ ಅಹಮದ್ ಅವರ ವಿಶೇಷತೆ. ಚಿಂತನೆ, ಜಾಗೃತಿ, ಮತ್ತು ವೈಚಾರಿಕತೆ ಇವರ ರಚನೆಯಲ್ಲಿ ಹೆಚ್ಚು ಪ್ರಾಮುಖ್ಯತೆ ಪಡೆದಿದೆ. ರಾಮನ್ ಸತ್ತ ಸುದ್ದಿ’. ಇದು ಕವಿ ಕೆ.ಎಸ್.ನಿಸಾರ್ ಅಹಮದ್ ಅವರ ಅತ್ಯಂತ ಪ್ರಸಿದ್ಧ ಕವನಗಳಲ್ಲೊಂದು. ತಾವು ಬರೆದ ಕವನಗಳ ಪೈಕಿ ತಮಗೆ ಎಲ್ಲಕ್ಕಿಂತ ಹೆಚ್ಚು ಇಷ್ಟವಾದ ಕವನ ಇದೆಂದು ಸ್ವಯಂ ನಿಸಾರರೇ ಹೇಳಿದ್ದಾರೆ. . ನಿತ್ಯೋತ್ಸವ ಕವಿಯೆಂದೇ ಮನೆಮಾತಾಗಿದ್ದ, ನಿಸಾರ್ ಅಹಮದ್ ಅವರು, ಸಾಹಿತ್ಯೋತ್ಸವ ನಿಲ್ಲಿಸಿದರು ಅನ್ನೋ ಸುದ್ದಿ ನಿಜಕ್ಕೂ ಆಘಾತಕಾರಿ ವಿಷಯ.ನಾಡು ನುಡಿಯ ಪ್ರಿಯರಾದ ನಿಸಾರ್ ಅಹಮದ್ ಎಂದರೆ ಎಲ್ಲರಿಗೂಅಚ್ಚುಮೆಚ್ಚು. ಅದ್ಬುತ ವ್ಯಕ್ತಿತ್ವದ ಅಪರೂಪದ ಕವಿ ಶ್ರೀ ನಿಸಾರ್ ಅಹಮದ್ ರವರು.ಅವರ ಅಗಲುವಿಕೆ ಕನ್ನಡ ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ . ನಿತ್ಯೋತ್ಸವದ ಕವಿಗೆ ಭಾವಪೂರ್ಣ ಶ್ರದ್ಧಾಂಜಲಿ ********** ಶೈಲಜ ಹಾಸನ

ನಿತ್ಯೋತ್ಸವದ ಕವಿಗೆ ನಮನ Read Post »

ಕಾವ್ಯಯಾನ

ಕಾವ್ಯಯಾನ

ಜೀತ ಸ್ವಪ್ನ ಆರ್.ಎ. ಜೀತದಾಳು ಆಗಿ ಹುಟ್ಟಿ ಜೀತದ ಆಳಾಗಿ ದುಡಿ ಯೋ ಕಾಲ ನಮ್ಗೆ ಹೋಗಲಿಲ್ಲ ವ ಲ್ಲೋ ಕರ್ಮ ತಮ್ಮ ಹೋಗಲಿಲ್ಲ ವಲ್ಲೋ!!! ಜೀತ ಪದ್ದತಿ ಬೇಡ ಕಣೋ!! ನಮ್ಮ ರಕ್ತ ಸುರಿಸಿ ಅವ್ರು ಜಗ್ಗಿ ಕೂಳು ಕೊಡದೆ ಚಿತ್ರ ಹಿಂಸೆ ಕೊಡ್ತರಲ್ಲೋ ಶಿವನೇ ನಮ್ಮ ಕಷ್ಟ ದಿನಕ್ಕೆ ಕಷ್ಟ ಕೊಡ್ತಾರಲ್ಲೋ ಜೀತ ಪದ್ದತಿ ಬೇಡ ಕಣೋ!! ಬಟ್ಟೆ ಇಲ್ಲ ಬರೆ ಇಲ್ಲ ,ಸ್ನಾನ ಇಲ್ಲ ಮೈ ಮೈಲಿಗೆ ಎಲ್ಲ ನಮ್ಮ ಪಾಡು ನಾಯಿ ಗಿಂತ ಕೀಳು ಕಣೋ ಜೀತ ಪದ್ದತಿ ಬೇಡ ಕಣೋ!! ನಮ್ಗೆ ಮನೆಯಿಲ್ಲ,ನೆಲೆ ಇಲ್ಲ, ಬಂಧು ಇಲ್ಲ,ಭಗಿನಿ ಇಲ್ಲ ತಂದೆಯಿಲ್ಲ ತಾಯಿ ಇಲ್ಲ ಸಾಯೋವಾರ್ಗು ನಾವೇ ಕತ್ತೆ ತರ ದುಡಿಯೋ ಕರ್ಮ ನಮ್ದು ಜೀತ ಪದ್ದತಿ ಬೇಡ ಕಣೋ!! ಎಲ್ಲೋ ಹುಟ್ಟಿ ಎಲ್ಲೋ ಬೆಳೆದು ದೂರ ಹೋಗಿಲ್ಲ ನಮ್ಮ ಊರ ಜೀತ ದ ಎತ್ತುಗಳು ನಾವೇ ಕಣೋ , ರಕ್ತ ಮುಗಿಯೋ ವರ್ಗೂ ಜೀವ ಅಷ್ಟೆ ಕಣೋ ಜೀತ ಪದ್ದತಿ ಬೇಡ ಕಣೋ!! ಚಪ್ಲಿ ಇಲ್ಲ,ಚಂದ ಇಲ್ಲ ನಮ್ಮ ಗೋಳು ಕೇಳೋರು ಇಲ್ಲ ತುತ್ತು ಊಟ ಕೂಡ ನಟ್ಟ ಗೆ ಕೊಡುವ ಜೀವ,ಜೀವನ ನಮ್ಗಿ ಇಲ್ವಲ್ಲೋ ಸುಖ ಅನ್ನೋದು ನಮ್ಮ ಬಾಳಲ್ಲಿ ಬರಲ್ವಲ್ಲೋ. ಜೀತ ಪದ್ದತಿ ಬೇಡ ಕಣೋ *******

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಗಝಲ್ ರತ್ನರಾಯಮಲ್ಲ ನೆಮ್ಮದಿಯ ಜೀವನಕ್ಕಾಗಿ ಮನಸ್ಸನ್ನು ಮರೆತುಬಿಡು ಶಾಂತಿಯುತ ಬದುಕಿಗಾಗಿ ಬುದ್ಧಿಯನ್ನು ಮರೆತುಬಿಡು ಬಾಳೊಂದು ಸುಂದರ ಸ್ವಪ್ನ ಎಂಬುದನ್ನು ಮರೆಯದಿರು ನಿರ್ಮಲ ಸಹಯೋಗದ ಸಾಂಗತ್ಯವನ್ನು ಮರೆತುಬಿಡು ಪರಪಂಚದಲ್ಲಿ ಶೂನ್ಯ ಸಂಪಾದನೆ ಮಾಡಬೇಕಾಗಿದೆ ಎಲ್ಲಾ ಬಲ್ಲೆನೆಂಬ ಸಿಹಿಯಾದ ಭ್ರಮೆಯನ್ನು ಮರೆತುಬಿಡು ಮನುಷ್ಯ ಸಮಾಜ ಜೀವಿ ಎಂದು ಸಾರಲು ಹೋಗಬೇಡ ಜಿಂದಗಿಯ ಸವಿಯನುಣಲು ಸಂಸಾರವನ್ನು ಮರೆತುಬಿಡು ‘ಮಲ್ಲಿ’ ಮರೆವು ಪ್ರಜ್ಞಾವಂತ ಜಗತ್ತಿನ ಬಹುದೊಡ್ಡ ಆಸ್ತಿ ಶಾಶ್ವತವೆಂಬ ಮಾಯಾ ಜಿಂಕೆಯನ್ನು ಮರೆತುಬಿಡು ******

ಕಾವ್ಯಯಾನ Read Post »

ಅನುವಾದ

ಅನುವಾದ ಸಂಗಾತಿ

 ಕೊನೆಯ ಮು೦ಜಾನೆ ಮೂಲ: ಆಕ್ತೇವಿಯೋ ಪಾಜ಼್  ಕನ್ನಡಕ್ಕೆ : ಮೇಗರವಳ್ಳಿ ರಮೇಶ್ ಮೇಗರವಳ್ಳಿ ರಮೇಶ್ ಕಗ್ಗಾಡಿನೊಡಲ ಕತ್ತಲಲಿ ಕಳೆದಿದೆ ನಿನ್ನ ಕೂದಲು ನನ್ನ ಪಾದವನ್ನು ಸೋಕುತ್ತಿದೆ ನಿನ್ನ ಪಾದ ಮಲಗಿರುವೆ ನೀನು ರಾತ್ರಿಗಿ೦ತಲೂ ಹಿರಿದಾಗಿ. ಆದರೆ ನಿನ್ನ ಆ ಕನಸು ಈ ಕೋಣೆಗಷ್ಟೇ ಸೀಮಿತ. ಎಷ್ಟೊ೦ದು ಜನ ಇದ್ದೇವೆ ನಾವು ನೋಡು ಇಷ್ಟು ಚಿಕ್ಕದಾಗಿ! ಭೂತಗಳನ್ನು ತು೦ಬಿಕೊ೦ಡ ಟ್ಯಾಕ್ಸಿಯೊ೦ದು ಸರಿದು ಹೋಗುತ್ತಿದೆ ಹೊರಗೆ. ಹತ್ತಿರದಲ್ಲಿ ಹರಿವ ನದಿ ಯಾವಗಲೂ ಹಿಮ್ಮುಖ ಪ್ರವಾಹಿಯಾಗಿದೆ. ನಾಳೆ ಇನ್ನೊ೦ದು ದಿನವಾದೀತೆ? ****

ಅನುವಾದ ಸಂಗಾತಿ Read Post »

ಕಾವ್ಯಯಾನ

ಕಾವ್ಯಯಾನ

ಯುದ್ದ ಮಲ್ನಾಡ್ ಮಣಿ ಮಾಯ ಜಾಲದ ಮಾಂತ್ರಿಕನೊಬ್ಬನ ಮಾಯೆಯಾಟದ ಛಾಯೆಯ ಕರಿನೆರಳು ಸುಡುತಿದೆ ಭೂಮಂಡಲವನ್ನು. ತುಪಾಕಿಗಳ ಗುಂಡಿನ ಘನಘೋರ ಶಬ್ದ ಗಗನ ಚುಂಬಿಯಾಗಿತ್ತು ನರ ಮಂಡಲದ ವಿಷವರ್ತುಲದಲ್ಲಿ ವಿಲವಿಲ ಒದ್ದಾಡಿ ಬೆತ್ತಲಾಗಿ ನಿಂತಿದೆ ಬದುಕು. ಅರೆಗಳಿಗೆಯ ಅಲ್ಪಸುಖದಲ್ಲಿ ತಲ್ಲೀನನಾಗಿದ್ದೆ, ಚಾಟಿಯ ಏಟು ಬೀಸಿ ಬರುತ್ತಿತ್ತು ನನ್ನೆಡೆಗೆ, ತಂಗಾಳಿಯಲ್ಲಿ ವಿಷ ಬೆರತದ್ದು‌ ಗೊತ್ತಾಗಲೆ ಇಲ್ಲ. ಯದ್ಧಕ್ಕೆ ಸಜ್ಜು ಮಾಡುತ್ತಿದ್ದೆ ತುಕ್ಕು ಹಿಡಿದ ಅಲಗನ್ನು ಮಸೆಯುತ್ತಿದ್ದೆ, ವೈರಿಯು ಅದನ್ನೆ ನಡೆಸಿರಬೇಕು. ನನಗೆ ಶತ್ರು ಭಯ, ಶತ್ರುವಿಗೆ ನನ್ನ ಭಯ, ಆದರು ಮೆರೆಯುತ್ತಿದ್ದೆವು ಐಶ್ವರ್ಯ ಮದದಿಂದ. ಯುದ್ಧಕ್ಕೆ ಕ್ಷಣಗಣನೆ,ಹುಮ್ಮಸ್ಸು, ಹುರುಪು, ಕತ್ತಿಗೆ ತಣಿಯದ ರಕ್ತ ದಾಹ. ಶತ್ರು ವಿನಾಶದಲ್ಲಿ ನನಗೆ ತಿಳಿಯಲಿಲ್ಲ ನನ್ನವರ ಹಸಿವು ಏಕೆ? ನನ್ನದು ತೋರಿಕೆಯ ಸಂಭ್ರಮ, ಶ್ರೀಮಂತಿಕೆಯ ತೋರು ನೋಟ. ಅಸ್ತ್ರ ಪ್ರಯೋಗಕ್ಕೆ ಸನ್ನದ್ದರಾಗಿದ್ದ ನಮ್ಮಿಬ್ಬರಿಗು ಅದಾವ ಮಾಟಗಾರ ಮಂತ್ರಿಸಿದನೊ…. ಆ ಮಾಯೆ ನಮ್ಮಿಬ್ಬರ  ದೇಹದ ರಕ್ತ ಹೀರುತ್ತಿರುವುದು ತಿಳಿಯಲೆ  ಇಲ್ಲ. ಆ ಮಾಯೆ ಅಮಾಯಕ ನನ್ನ ಜನರನ್ನು ಹೆಣಮಾಡುತ್ತಿರುವುದು ತಿಳಿಯಲೇ ಇಲ್ಲ. ಮದ್ದು ನನ್ನಲ್ಲಿರಲಿಲ್ಲ ನನ್ನಲ್ಲಿದ್ದ ಮದ್ದು‌ ರಕ್ತ ಸುರಿಸುವುದಕ್ಕೆ ಮಾತ್ರ.

ಕಾವ್ಯಯಾನ Read Post »

ಇತರೆ

ಹೆಣ್ಣು ಬದುಕಿನ ಘನತೆ

  ಹೆಣ್ಣು ಬದುಕಿನ ಘನತೆ ವಸುಂಧರಾ ಕದಲೂರು. ವಸುಂಧರಾ ಕದಲೂರು. ಒಪ್ಪಿಗೆ ಇಲ್ಲದೇ ಮಹಿಳೆ ಮೈ ಮುಟ್ಟುವಂತಿಲ್ಲ ( ದೆಹಲಿ ನ್ಯಾಯಾಲಯ ತೀರ್ಪು 22-1-2018) ‘ಅರೆ.., ಹೆಣ್ಣಿನ ಮೈ ಮುಟ್ಟಲು, ಆಕೆಯ ಒಪ್ಪಿಗೆಯ ಅಗತ್ಯವಿದೆಯಾ’ ಎಂದು ಕುಹಕವಾಡುವ ಮಂದಿಯ ನಡುವಲ್ಲೇ ‘ಇದನ್ನೂ ಸಹ ನ್ಯಾಯಾಲಯವೇ ಹೇಳಿಕೊಡಬೇಕೆ ಅಷ್ಟೂ ಸೂಕ್ಷ್ಮ ಅರ್ಥವಾಗದೇ’ ಎಂದು ನೊಂದುಕೊಳ್ಳುವ ಮನಸ್ಸುಗಳು ಎಷ್ಟಿವೆಯೋ..      ಏನೆಲ್ಲಾ ಸಾಧಸಿ ಸೈ ಎನಿಸಿಕೊಂಡರೂ ಈ ಕ್ಷಣಕ್ಕೂ  ಹೆಣ್ಣುಮಗುವಾಗಿ  ಹುಟ್ಟುವ ಹಕ್ಕಿನಿಂದ ವಂಚಿತವಾಗಿ ಗರ್ಭ ಸೀಳಿಸಿಕೊಂಡು ಹೊರಬಂದು ಮಣ್ಣಾಗುತ್ತಿರುವ ಹೆಣ್ಣು ಭ್ರೂಣಗಳೆಷ್ಟೋ! ಸರ್ವೆ ಮಾಡಿ ಒಂದಷ್ಟು ಮಾಹಿತಿ ಕಲೆ ಹಾಕಬಹುದು. ಆದರೆ ಅದು ನಿಖರ ಸತ್ಯವಾಗಿರದು. ಬೆಳಕಿಗೆ ಬಾರದ, ವರದಿಯಾಗದ ಅದೆಷ್ಟು ಹೆಣ್ಣು ಭ್ರೂಣ ಹತ್ಯೆ ದಿನಂಪ್ರತಿ ನಡೆಯುತ್ತಿಲ್ಲ? ಹಾಗೋ ಹೀಗೋ ಹೆಣ್ಣಾಗಿ ಹುಟ್ಟಿದ ಮೇಲೂ ವಿದ್ಯೆ, ಉದ್ಯೋಗದ ಅವಕಾಶ ನಿರಾಕರಣೆಯಾಗಿಲ್ಲ? ಮದುವೆ, ಬಸಿರು, ಹೆರುವುದು ಮೊದಲಾದವು ಇಂದಿಗೂ ಆಕೆಯ ಆಯ್ಕೆಯ ಪರಿಧಿಯೊಳಗೆ ಬರುವುದಿಲ್ಲ ಎಂಬುದು ಗುಟ್ಟೇನಲ್ಲಾ.      ಭ್ರೂಣ ಹತ್ಯೆ, ಬಾಲ್ಯವಿವಾಹ, ಕೌಟುಂಬಿಕ ದೌರ್ಜನ್ಯ, ಲೈಂಗಿಕ ಶೋಷಣೆ ಮೊದಲಾದವು ಯಾರೋ ನಿರಕ್ಷರಿಗಳ ಮನೆಯಲ್ಲೋ, ಬಡಕುಟುಂಬಗಳಲ್ಲೋ ನಡೆದುಬಿಡುವ ಸಾಮಾನ್ಯ ವಿದ್ಯಮಾನಗಳೆನ್ನುವುದು ಖಂಡಿತಾ ತಪ್ಪು. ಸ್ತ್ರೀ ಸಮಸ್ಯೆಗಳು ಲಿಂಗಾಧಾರಿತವಷ್ಟೇ. ಇದರಲ್ಲಿ ಜಾತಿ, ಕುಲ, ಶ್ರೀಮಂತಿಕೆ, ಸ್ಥರ, ಅಧಿಕಾರಸ್ಥಾನ ಎಲ್ಲವೂ ನಗಣ್ಯವಾಗುತ್ತವೆ.        ಮರ್ಯಾದಾ ಹತ್ಯೆಗಳು, ಸಣ್ಣ ವಯಸ್ಸಿನಲ್ಲೇ ಹೆಣ್ಣು ಮಕ್ಕಳಿಗೆ ಬಹಳ ಬೇಗ ಮದುವೆ, ಓದನ್ನು ನಿರಾಕರಿಸುವುದು ಅಥವಾ ಮೊಟಕುಗೊಳಿಸುವುದು, ಉದ್ಯೋಗದ ನಿರಾಕರಣೆ, ಭ್ರೂಣಲಿಂಗಪತ್ತೆ ಮಾಡಿಸುವುದು, ಗಂಡು ಸಂತಾನಕ್ಕಾಗಿಯೇ ಮೂರೋ ನಾಕೋ ಹಡೆಯುವಂತೆ ಮಾಡುವುದು, ವೇಶ್ಯಾವಾಟಿಕೆ, ಆಸ್ತಿ ಹಕ್ಕಿನ ನಿರಾಕರಣೆ…. ಹೇಳುತ್ತಾ ಹೊರಟರೆ ಶೋಷಣೆಯ ಹಲವು ರೂಪಗಳು ಅನಾವರಣಗೊಳ್ಳುತ್ತಲೇ ಹೋಗುತ್ತವೆ.      ನಿಜಕ್ಕೂ ತನ್ನ  ಕೆಲಸದ ಸ್ಥಳದಲ್ಲಿ, ಅಕ್ಷರಿಗಳ ಎಡೆಯಲ್ಲಿ, ಬಡತನದ ನರಳಾಟವೋ, ಶ್ರೀಮಂತಿಕೆಯ ಡೌಲಿನ ನೆರಳೋ ಒಟ್ಟಿನಲ್ಲಿ ಸ್ತ್ರೀ ಮುಜುಗರಕ್ಕೆ ಒಳಗಾಗಿ ಅಭದ್ರತೆಯಿಂದ ನಲುಗುತ್ತಿರುವುದು ಇಂದು ಹೆಚ್ಚುಹೆಚ್ಚು ಬೆಳಕಿಗೆ ಬರುತ್ತಿದೆ. ಎಲ್ಲಾ ಪ್ರಕರಣಗಳು ಅಲ್ಲದಿದ್ದರೂ ಬಹಳಷ್ಟು ಹೊರಜಗತ್ತಿಗೆ ಗೊತ್ತಾಗುತ್ತಿವೆ. .   ಇನ್ನು ಸ್ತ್ರೀ ಶೋಷಣೆಯ ವಿರುದ್ಧ ದನಿ ಎತ್ತಿದರೆ ಸಾಕು ಅವಳಿಗೆ ‘ಮಹಿಳಾವಾದಿ’ ಎಂಬ ಪಟ್ಟ ಕಟ್ಟಲಾಗುತ್ತದೆ ಅಥವಾ ಆಕೆ ‘ಪುರುಷದ್ವೇಷಿ’ ಎಂದು ಬಿಂಬಿಸಲಾಗುತ್ತದೆ. ಹಾಗಾದರೆ  ಮಹಿಳೆಯಾಗಿ ಮಹಿಳೆಯರ ಕುರಿತು ಮಾತನಾಡುವುದು ತಪ್ಪೇ? ಹಾಗೇನಾದರು ಆಕೆ ನಿರಂತರವಾಗಿ ಸ್ತ್ರೀ ಶೋಷಣೆಯ ವಿರುದ್ಧ ಮಾತನಾಡಿದರೆ ಆಕೆಗೆ ಬೇರೆ ವಿಚಾರಗಳ ಬಗ್ಗೆ ಮಾತನಾಡಲು ಬರುವುದಿಲ್ಲ. ಆಕೆ ನಾಲಾಯಕ್ ಎಂದು ನಿರ್ಧರಿಸಿಬಿಡುವ ಸ್ಥಬ್ಧ ಮನಸ್ಥಿತಿಯವರಿದ  ಹಾಗೆಯೇ ಸ್ತ್ರೀಯೊಬ್ಬಳು ತನ್ನ ಪರಿಸರದಲ್ಲಾಗುತ್ತಿರುವ  ಅನ್ಯಾಯಗಳ ವಿರುದ್ಧ ಕಿಂಚಿತ್ ಪ್ರತಿಭಟನೆ ತೋರಿದರೆ ಅಥವಾ ತನ್ನ ನಿಲವುಗಳನ್ನು ಖಚಿತವಾಗಿ ಸ್ಪಷ್ಟಪಡಿಸಿದರೆ, ನಾಳಿನ ಔದ್ಯೋಗಿಕ ಸವಾಲುಗಳನ್ನು ನಿಭಾಯಿಸಲು ಆಕೆಗೆ ಅವಕಾಶಗಳನ್ನು ನಿರಾಕರಿಸುವ ಹುನ್ನಾರಗಳನ್ನು ಮಾಡಲಾಗುತ್ತದೆ. ಷಡ್ಯಂತ್ರ ರಚಿಸಿ ಆಕೆಯ ವ್ಯಕ್ತಿತ್ವಕ್ಕೆ ಚ್ಯುತಿತರುವ ಕೆಲಸ ಮಾಡುತ್ತಾರೆ. ಆಕೆ ಧೈರ್ಯವಂತೆಯೂ ಗಟ್ಟಿಗಿತ್ತಿಯೂ ಆಗಿದ್ದರೆ, ಆಕೆಯ  ಕೌಟುಂಬಿಕ ಸಾಮರಸ್ಯ  ಹದಗೆಡಿಸುವ ಮಸಲತ್ತುಗಳನ್ನು ಹೊಸೆಯಲಾಗುತ್ತದೆ.       ಹಾಗಾದರೆ ಮಹಿಳೆಯರ ಕುರಿತು  ಮಾತನಾಡುವುದು ತಪ್ಪೇ?      ಮಹಿಳೆಯರ ಕುರಿತು ಮಾತನಾಡುವುದು ತಪ್ಪೇ..? ಈ ಪ್ರಶ್ನೆ ಉತ್ತರ ಸಿಗುವುದಿರಲಿ, ಇಷ್ಟಕ್ಕೂ ಮಹಿಳೆ ಏಕೆ ಮಾತನಾಡಬೇಕು.!? ಹೇಳಿದಷ್ಟು ಮಾಡಿಕೊಂಡಿದ್ದರೆ ಸಾಕು ಎನ್ನುವ ಅಭಿಪ್ರಾಯಕ್ಕೇ ಹೆಚ್ಚು ಓಟು ಹಾಕುತ್ತಾರೆ.          ಈ ನೆಲದ ಸಂಸ್ಕೃತಿ ಹಾಗೂ ಆಚರಣೆಗಳು ಬಹಳ ವಿಭಿನ್ನವಾಗಿವೆ. ವಿವಿಧ ಕಾಲಘಟ್ಟಗಳಲ್ಲಿ ಹರಿದು ಬಂದಿರುವ ಹಲವು ಬದಲಾವಣೆಗಳಿಗೆ ಒಗ್ಗಿಕೊಂಡೂ, ತನ್ನ  ಅಸ್ಮಿತೆ ಸಾರುತ್ತಿರುವ ಹೆಣ್ಣಿಗೆ ಸಾಮಾಜಿಕವಾಗಿ ಇಂದಿಗೂ ಸಮಾನಸ್ಥಾನದ ನಿರಾಕರಣೆಯಾಗುತ್ತಿದೆ. ಕೆಳಸ್ತರದಲ್ಲೇ ಇಟ್ಟು ನೋಡುವ, ಹಿರಿತನ ( seniority)ದಲ್ಲಿ ಮುಂಚೂಣಿಯಲ್ಲಿದ್ದರೂ ಅತ್ಯುನ್ನತ ಹುದ್ದೆಗಳನ್ನು, ಅವಕಾಶಗಳನ್ನು ನೇರವಾಗಿಯೇ ನಿರಾಕರಿಸಿರುವ/ ನಿರಾಕರಿಸುತ್ತಿರುವ ಉದಾಹರಣೆಗಳು ನಮ್ಮ ಕಣ್ಣಮುಂದೆಯೇ ಇವೆ.      ಇದರ ನಡುವಲ್ಲೂ ಹಲವು ಸ್ಥಾನಮಾನಗಳು ಹೆಣ್ಣಿನ ಪ್ರತಿಭೆಯ ಕಾರಣಕ್ಕೇ ದಕ್ಕುತ್ತಿರುವುದನ್ನೂ ಕಾಣಬಹುದು. ಹಾಗೆಂದು, ಮಹಿಳೆಯ ಮೇಲಾಗುತ್ತಿರುವ ದೈಹಿಕ ದಾಳಿಗಳ ವರದಿಗಳೇನೂ ಕಡಿಮೆಯಾಗಿಲ್ಲ. ವರದಿಮಾಡಲಾಗದ ಮಾನಸಿಕ ಹಿಂಸೆಗಳದೆಷ್ಟೋ…        ಮಹಿಳೆಯರ ಪ್ರಶ್ನೆ ಇಷ್ಟೇ…, ದೇಹ ಮನಸ್ಸು ತನ್ನದು ಅಲ್ಲವೇ ಅಲ್ಲ ಎಂದು ನಿರ್ಲಿಪ್ತವಾಗಿ ಬದುಕಬೇಕಾಗಿರುವ ತಮ್ಮ ಪರಿಸ್ಥಿತಿ ಎಂದಾದರು ಕೊನೆಗೊಂಡೀತೆ ? ಹೆಣ್ಣುಜೀವ ಒಂದು ಘನತೆಯ ಬದುಕನ್ನು ಕಂಡೀತೆ..?

ಹೆಣ್ಣು ಬದುಕಿನ ಘನತೆ Read Post »

ಕಾವ್ಯಯಾನ

ಕಾವ್ಯಯಾನ

ನಿನ್ನ ಧ್ಯಾನ ಮಲ್ನಾಡ್ ಮಣಿ ಅರಳು ಮಲ್ಲಿಗೆಯ ಮಾಲೆ ಮಾಡಿ ನಿನ್ನ ಕೊರಳ ಧ್ಯಾನಿಸುತ್ತಲಿರುವೆ. ಎಂದು ಬರುವೆಯೆಂದು ದಾರಿ ಕಾಯುವ ಶಬರಿ ನಾನು. ದೇಹ ಮಲ್ಲಿಗೆ ಗೀಡವು ಭಾವ ಅದರ ಹೂವು, ನಿನ್ನ ನೆನಪಿನ ನೀರನೆರೆದು ಹೂ ಕಿತ್ತು ಕಟ್ಟಿ ಮಾಲೆ ಮಾಡಿದೆ. ನಿನ್ನ ದಾರಿ ಕಾದು ಮತ್ತೆ ಮಲ್ಲೆ ಹೂವ ಕಂಡೆ, ಅರಳು ಮಲ್ಲಿಗೆ ನಗುವ ಬೀರಿತು. ಹೊತ್ತು ಹಾದು ಹೋದರು ನಿನ್ನ ಸುಳಿವು ಕಾಣದು ಬರುವ ಸಂಜೆಗೆಂಪು ನಗುವ ಮಾಸಿತು. ನೆರಳಿನಲ್ಲಿ ನನ್ನ ನೆರಳು ಮುಳುಗಿ ಮಾಯವಾಯಿತು ಮತ್ತೆ ಮಲ್ಲೆ ಹೂವ ಕಂಡೆ ಹೂವು ಭಿರಿದು ಬಾಡಿತು. ನಿನ್ನ ದಾರಿ ಕಾಯುತಿರುವ ಕಾಯ ತಣಿಯದು. ಮತ್ತೆ ನಿನ್ನ ನೇನಪ ಎರೆದು ಭಾವದೊಲುಮೆಯ ಹೂವ ಅರಳಿಸಿ ಮತ್ತೆ ಮಾಲೆ ಮಾಡಿ ಕಾಯುವೆ. ********

ಕಾವ್ಯಯಾನ Read Post »

ಅಂಕಣ ಸಂಗಾತಿ

ಸ್ವಾತ್ಮಗತ

ಅಭಿವೃದ್ಧಿಯಾಗಬೇಕಾದ ‘ಹೆಳವರು’..! ಅಭಿವೃದ್ಧಿಯಾಗಬೇಕಾದ ‘ಹೆಳವರು’..! ಇವರ ಒಟ್ಟು ಸಂಖ್ಯೆ ಸುಮಾರು 80 ಸಾವಿರಬಹುದು. ಇದಿಷ್ಟೇ ಈ ಜಾನಂಗದ ಜನರಿಗೆ 180 ಕ್ಕೂ ಹೆಚ್ಚು ಬೆಡಗುಗಳು ಅಥವಾ ಕುಲಗಳು ಇರಬಹುದು. ಅಂದರೆ, ಪ್ರತಿ 444 ಜನರಿಗೆ ಒಂದು ‘ಕುಲ’ವಾಯಿತು..! ಅಲ್ಪಸ್ವಲ್ಪ ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದರೂ ಇವರ ಮೂಲ ವೃತ್ತಿ ಭಿಕ್ಷಾಟನೆಯಾಗಿದೆ. ಈ ಜನಾಂಗ ಇವರ ಮೂಲ ಕಸುಬಾದ ಭಿಕ್ಷಾಟನೆ ಬಿಟ್ಟಿಲ್ಲ.ಅದೂ ಈ ಜನರು ಎಲ್ಲರ ಮನೆಗೆ ಅಂದರೆ ಕಂಡ, ಕಂಡವರ ಮನೆಗೆ ಭಿಕ್ಷಾಟನೆಗೆ ಹೋಗುವುದಿಲ್ಲ. ತಮ್ಮ ಒಕ್ಕಲು ಮನೆಯವರ ಮನೆಗೆ ಮಾತ್ರ ಭಿಕ್ಷಾಟನೆಗೆ ಹೋಗುತ್ತಾರೆ ಅಷ್ಟೇ… ಇವರು ಅಂಗವಿಕಲರಲ್ಲ. ಆದರೂ ಅಂಗವೈಕಲ್ಯತೆಗೆ ಸಮಾನವಾದ ಪದದಿಂದ ಇವರನ್ನು ಸಂಬೋಧಿಸಲಾಗುತ್ತದೆ… ಅವರೇ ಈ ಹೆಳವರು…– ಗ್ರಾಮೀಣ ಪ್ರದೇಶದಲ್ಲಿ ಹೆಳವ ಎಂದರೆ ಸ್ವಾಧೀನ ಕಳೆದುಕೊಂಡ ಕಾಲನ್ನು ಹೊಂದಿರುವವನೆಂದರ್ಥ. ಹೆಳವ ಎಂಬುದು ಒಂದು ‘ಬುಡಕಟ್ಟು ಸಮುದಾಯದ’ ಹೆಸರು ಮಾತ್ರ. ಈ ಸಮುದಾಯಕ್ಕೆ ಹೆಳವ ಎಂಬ ಹೆಸರು ಬಂದಿದ್ದಕ್ಕೆ ಹಲವಾರು ಐತಿಹ್ಯಗಳಿವೆ. ಪುರಾಣಗಳಲ್ಲಿ ಉಲ್ಲೇಖವಾಗಿರುವಂತೆ ವ್ಯವಸಾಯ ಮಾಡುವ ಒಂದು ಕುಟುಂಬದಲ್ಲಿ 6 ಮಂದಿ ಗಂಡು ಮಕ್ಕಳಿರುತ್ತಾರೆ. ಅದರಲ್ಲಿ ಒಬ್ಬನಿಗೆ ಕಾಲು ಊನವಾಗಿರುತ್ತದೆ. ಆದರೆ, ಉಳಿದ ಐವರಿಗೆ ಈತನನ್ನು ಕಂಡರೆ ಆಗಿಬರುತ್ತಿರಲಿಲ್ಲ. ಏಕೆಂದರೆ ನಾವೆಲ್ಲಾ ದುಡಿದು ತಂದಿದ್ದನ್ನು ಈತ ತಿನ್ನುತ್ತಾನೆ ಎಂಬ ಅಲಕ್ಷ್ಯ ಅವರಿಗಿತ್ತು. ಆದರೆ, ತಾಯಿಗೆ ಮಾತ್ರ ಈ ಊನ ಮಗನನ್ನು ಕಂಡರೆ ಎಲ್ಲಿಲ್ಲದ ಅಕ್ಕರೆ. ಇದರಿಂದ ಆಕ್ರೋಶಗೊಂಡ ಐವರು ಅಣ್ಣತಮ್ಮಂದಿರು ಕುಂಟ ಸೋದರನನ್ನು ಹತ್ಯೆ ಮಾಡಲೂ ಮುಂದಾಗುತ್ತಾರೆ. ಆದರೆ, ಮನೆಯಲ್ಲಿ ಸಾಕಿದ್ದ ಬಸವ(ಎತ್ತು) ಪ್ರತಿ ಸಂದರ್ಭದಲ್ಲೂ ಕುಂಟನ ನೆರವಿಗೆ ಬರುತ್ತದೆ. ಕಡೆಗೊಂದು ದಿನ ಆಸ್ತಿ ಪಾಲು ಮಾಡುವ ಸಂದರ್ಭದಲ್ಲಿ ಮನೆಯ ಹಿರಿಯರೆಲ್ಲಾ ಮಕ್ಕಳನ್ನು ಕೂರಿಸಿ ಐವರು ಮಕ್ಕಳಿಗೆ ಆಸ್ತಿ ಪಾಲು ಮಾಡುತ್ತಾರೆ. ಕುಂಟನಿಗೆ ಸ್ವಂತಕ್ಕೆ ದುಡಿದು ತಿನ್ನುವ ಶಕ್ತಿ ಇಲ್ಲ ಎಂಬ ಕಾರಣಕ್ಕೆ ಆತನ ಮುದ್ದಿನ ಎತ್ತು ಮತ್ತು ಗಂಟೆಯನ್ನು ನೀಡುತ್ತಾರೆ. ಈತ ಪ್ರತಿ ವರ್ಷ ಸುಗ್ಗಿ ಕಾಲದಲ್ಲಿ ಎತ್ತಿನ ಮೇಲೆ ಸವಾರಿ ಮಾಡಿ ಗಂಟೆಯನ್ನು ಬಾರಿಸುತ್ತಾ ಐವರು ಸೋದರರ ಮನೆಗೆ ಹೋಗಿ ತನ್ನ ಪಾಲಿನ ಕಾಳು ಕಡ್ಡಿಯನ್ನು ಭಿಕ್ಷಾ ರೂಪದಲ್ಲಿ ತಂದು ತಿನ್ನಬೇಕೆಂಬ ಷರತ್ತು ವಿಧಿಸುತ್ತಾರೆ. ಕಾಲಕ್ರಮೇಣ ಈ ಕುಂಟನ ವಂಶವೃಕ್ಷ ಬೆಳೆಯಿತಾದರೂ ಕುಟುಂಬದಲ್ಲಿ ಯಾರೂ ಊನಗೊಂಡವರಿರಲಿಲ್ಲ. ಆದರೆ, ಅಪ್ಪ ಮಾಡಿದ ಭಿಕ್ಷಾಟನೆಯನ್ನು ಮಕ್ಕಳು, ಅವರ ಮಕ್ಕಳು ಮುಂದುವರೆಸುತ್ತಾ ಬಂದರು. ಇದು ಮುಂದೊಂದು ದಿನ ದೊಡ್ಡ ಸಂಸಾರವಾಗಿ ರೂಪುಗೊಂಡಿದೆ. ಇದೇ ಕಾರಣಕ್ಕಾಗಿ ಈ ಕುಟುಂಬ ಅಥವಾ ವಂಶವನ್ನು ‘ಹೆಳವ’ ಎಂದು ಕರೆಯಲಾಯಿತು ಎಂಬ ಪ್ರತೀತಿ ಪುರಾಣಗಳಲ್ಲಿ ದಾಖಲಾಗಿದೆ..! ಭಿಕ್ಷಾಟನೆ ಒಕ್ಕಲಿಗರ ಅಥವಾ ಕೃಷಿಕರ ಮನೆಯಲ್ಲಿ ಭಿಕ್ಷೆ ಎತ್ತುವ ಈ ಕಾಯಕ ಇಂದಿಗೂ ಮುಂದುವರೆದಿದೆ… ಎತ್ತಿನ ಮೇಲೆ ಸವಾರಿ ಮಾಡುತ್ತಾ ಇಡೀ ಕುಟುಂಬದೊಂದಿಗೆ ಊರಿಂದ ಊರಿಗೆ ಅಲೆಯುತ್ತಾ ಬಂದಿದ್ದ ಈ ಸಮುದಾಯವನ್ನು ಅಲೆಮಾರಿಗಳೆಂದು ಪರಿಗಣಿಸಲಾಗಿದೆ. ಇವರನ್ನು ಬುಡಕಟ್ಟು ವರ್ಗದವರೆಂದು ಹೇಳಲಾಗುತ್ತಿದ್ದರೂ ಕಾಡು ಮೇಡುಗಳಲ್ಲಿ ಜೀವಿಸುವುದಿಲ್ಲ. ಜನವಸತಿ ಪ್ರದೇಶಗಳಲ್ಲಿ ಜನರೊಂದಿಗೆ ಬೆರೆತು ಜೀವನ ಸಾಗಿಸುತ್ತಿದ್ದಾರೆ. ಅಲೆಮಾರಿಗಳು ಎಂದು ಕರೆಯಿಸಿಕೊಂಡಿದ್ದರೂ ಇತ್ತೀಚಿನ ದಿನಮಾನದಲ್ಲಿ ಹೆಳವರು ಒಂದು ಊರಿನಲ್ಲಿ ನೆಲೆ ನಿಂತಿದ್ದಾರೆ. ಆ ಊರಿನಿಂದಲೇ ತಮ್ಮ ಭಿಕ್ಷಾಟನೆ ಕಾಯಕವನ್ನು ನಡೆಸುತ್ತಿದ್ದಾರೆ… ಈ ಸಮುದಾಯದ ಹೆಚ್ಚು ಜನ ರಾಜಧಾನಿ ಬೆಂಗಳೂರು ನಗರ ಜಿಲ್ಲೆಯಲ್ಲೇ ವಾಸವಾಗಿದ್ದರೆ. ಅಂದರೆ, ಈ ಜಿಲ್ಲೆಯಲ್ಲಿ ಸುಮಾರು 14 ಸಾವಿರದಷ್ಟು ಜನ ಇದ್ದಾರೆ. ಅದೇ ರೀತಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲೂ ಸುಮಾರು 12 ಸಾವಿರದಷ್ಟಿದ್ದಾರೆ… ಉಳಿದಂತೆ ಬಹುತೇಕ ಎಲ್ಲಾ ಜಿಲ್ಲೆಗಳಲ್ಲಿ ಹರಿದು ಹಂಚಿ ಹೋಗಿರುವ ಸಮುದಾಯದ ಒಟ್ಟು ಕುಟುಂಬಗಳ ಸಂಖ್ಯೆ ಸುಮಾರು 14 ಸಾವಿರ ಇದ್ದರೆ, ಜನಸಂಖ್ಯೆ ಸುಮಾರು 80 ಸಾವಿರ… ಈ ಸಮುದಾಯದಲ್ಲಿ ಪ್ರಮುಖವಾಗಿ ಎತ್ತಿನ ಹೆಳವರು, ಗಂಟೆ ಹೆಳವರು ಮತ್ತು ಚಾಪೆ ಹೆಳವರು ಎಂದು ಗುರುತಿಸಲಾಗಿದೆ… ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಎತ್ತಿನ ಹೆಳವರು ಕಂಡುಬಂದರೆ, ದಕ್ಷಿಣ ಕರ್ನಾಟಕದಲ್ಲಿ ಗಂಟೆ ಹೆಳವರಿದ್ದಾರೆ. ಅದೇ ರೀತಿ ಬೀದರ್, ಗುಲ್ಬರ್ಗಾ, ಬಳ್ಳಾರಿ ಮತ್ತು ಶಿವಮೊಗ್ಗ, ಗದಗ ಸುತ್ತಮುತ್ತಲಿನ ಪ್ರದೇಶಗಳ ಜಿಲ್ಲೆಗಳಲ್ಲಿ ಚಾಪೆ ಹೆಳವರು ಜೀವಿಸುತ್ತಿದ್ದಾರೆ… ಎತ್ತಿನ ಹೆಳವರು ಮತ್ತು ಗಂಟೆ ಹೆಳವರು ಚಾಪೆ ಹೆಳವರಿಗಿಂತ ಮೇಲ್ದರ್ಜೆಯವರೆಂದು ಹೇಳಲಾಗುತ್ತದೆ. ಏಕೆಂದರೆ, ಎತ್ತಿನವರು ಮತ್ತು ಗಂಟೆ ಹೆಳವರ ಸಂಪ್ರದಾಯಗಳಲ್ಲಿ ಬಹುತೇಕ ಸಾಮ್ಯತೆ ಕಂಡುಬರುತ್ತದೆ. ಗಂಟೆ ಹೆಳವರು ತಮ್ಮ ಬಗಲಲ್ಲಿ ದೊಡ್ಡ ಜೋಳಿಗೆ ಹಿಡಿದು ಗಂಟೆ ಬಾರಿಸುತ್ತಾ ನಿಗದಿತ ಒಕ್ಕಲುಗಳಿಗೆ ಅಂದರೆ ಕೃಷಿ ಮಾಡುವ ಒಂದು ಸಮುದಾಯದ ಮನೆಗಳಿಗೆ ಹೋಗಿ ಭಿಕ್ಷೆ ಎತ್ತುತ್ತಾರೆ. ಅವರು ಬಾರಿಸುವ ಗಂಟೆಯನ್ನು ಅವರ ಒಕ್ಕಲುಗಳೇ ಕೊಡಿಸಿರುತ್ತಾರೆ. ಅವರು ಕೊಡಿಸಿದ ಗಂಟೆಯನ್ನು ಅದೇ ಒಕ್ಕಲುಗಳಲ್ಲಿ ಬಾರಿಸಬೇಕು. ಒಂದು ಒಕ್ಕಲಿನ ಗಂಟೆಯನ್ನು ಮತ್ತೊಂದು ಒಕ್ಕಲಲ್ಲಿ ಬಾರಿಸಿದರೆ ಅದು ಅಪರಾಧವಾದಂತೆ… ಆದರೆ, ಎತ್ತಿನ ಹೆಳವರು ಎತ್ತಿನ ಮೇಲೆ ಸವಾರಿ ಮಾಡಿಕೊಂಡು ಭಿಕ್ಷಾಟನೆ ಮಾಡುತ್ತಾರೆ. ಇದೊಂದು ವೈರುಧ್ಯ ಬಿಟ್ಟರೆ ಎರಡೂ ಪಂಗಡಗಳಲ್ಲಿ ಒಂದೇ ರೀತಿಯ ಸಂಪ್ರದಾಯವಿದೆ… ಆದರೆ, ಭಿಕ್ಷಾಟನೆಯಲ್ಲಿ ತೊಡಗಿದರೂ ಚಾಪೆ ಹೆಳವರು ಹಂದಿಯನ್ನು ಸಾಕುತ್ತಾರೆ. ಇವರಿಗೆ ಇಂತಹದ್ದೇ ಒಕ್ಕಲಲ್ಲಿ ಭಿಕ್ಷೆ ಬೇಡಬೇಕೆಂಬ ನಿಬಂಧನೆಯೂ ಇಲ್ಲ. ಹೀಗಾಗಿ ಈ ಸಮುದಾಯ ಕೀಳು ಎಂಬ ಸಂಪ್ರದಾಯ ಕೆಲವರಲ್ಲಿ ಇದೆ… ಎತ್ತಿನ ಮತ್ತು ಗಂಟೆ ಹೆಳವರ ಮಧ್ಯೆ ವೈವಾಹಿಕ ಸಂಬಂಧಗಳು ಇವೆಯಾದರೂ ಈ ಪಂಗಡಗಳು ಚಾಪೆ ಹೆಳವರ ಜತೆ ಯಾವುದೇ ಸಂಬಂಧ ಇಟ್ಟುಕೊಳ್ಳುವುದಿಲ್ಲ… ಕೆಲವೇ ಕೆಲವು ಸಾವಿರದಷ್ಟು ಜನಸಂಖ್ಯೆ ಇರುವ ಈ ಮೂರು ಪಂಗಡಗಳಲ್ಲಿ ಅರಳಿ ಕುಲ, ಬಳಗಾರ ಕುಲ, ಬೆಳಗೂಗಿನವರು, ಬೇವಿನವರು, ಬೊಮ್ಮ, ಮಂಗಲವರು, ಮುತ್ತಿನ ಸತ್ತರಗಿಲವರು, ಮನೆಗಲವರು, ವಜಮೂನಿಯವರು, ಸಂಕಲವರು, ಸದರಿನವರು, ಹಾವುಲವರು, ಬಂಡಿಕುಲ, ಬಂಗಾರ ಕುಲ, ಗಂಟ ಕುಲ, ಜ್ಯೋತಿಕುಲ ಹೀಗೆ ಬರೋಬ್ಬರಿ 180 ಕ್ಕೂ ಅಧಿಕ ಬೆಡಗುಗಳಿವೆ… ಇವರನ್ನು ‘ಕುಲ ಕೊಂಡಾಡುವರು’ ಎಂತಲೂ ಕರೆಯಲಾಗುತ್ತದೆ. ಏಕೆಂದರೆ, ಕೈಲೊಂದು ದಪ್ಪನೆಯ ಪುಸ್ತಕ. ಆ ಪುಸ್ತಕದಲ್ಲಿ ಭಿಕ್ಷಾಟನೆಗೆ ಹೋಗುವ ಒಕ್ಕಲುಗಳ ವಂಶವಾಳಿಯನ್ನು ನಮೂದಿಸಿರುತ್ತಾರೆ. ಇದನ್ನೇ ಭಿಕ್ಷಾಟನೆ ಸಂದರ್ಭದಲ್ಲಿ ಹೇಳಿ ಭಿಕ್ಷೆ ನೀಡುವಂತೆ ಮನವೊಲಿಸುತ್ತಾರೆ. ಇಂತಹ ಬೃಹತ್ ಪುಸ್ತಕಕ್ಕೆ ‘ಚಿಪ್ಪೋಡು’ ಎನ್ನಲಾಗುತ್ತದೆ… ಅನಾದಿ ಕಾಲದಿಂದಲೂ ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿಯುತ್ತಾ ಬಂದಿರುವ ಹೆಳವರ ಪರಿಸ್ಥಿತಿಯಲ್ಲಿ ಪ್ರಸ್ತುತ ಯಾವುದೇ ಬದಲಾವಣೆ ಕಾಣಲು ಸಾಧ್ಯವಾಗಿಲ್ಲ. ಕೃಷಿಯನ್ನು ಅವಲಂಬಿಸಿದ್ದ ಒಕ್ಕಲುಗಳಲ್ಲಿ ಬಹುತೇಕ ಮಂದಿ ವೃತ್ತಿಯನ್ನು ಬಿಟ್ಟು ನಗರ ಪ್ರದೇಶಗಳಿಗೆ ವಲಸೆ ಹೋಗಿದ್ದಾರೆ. ಇಲ್ಲವೇ ಪರ್ಯಾಯ ಉದ್ಯೋಗ ಮಾಡುತ್ತಿದ್ದಾರೆ. ಹೀಗಾಗಿ ಈ ಒಕ್ಕಲುಗಳನ್ನೇ ನಂಬಿದ್ದ ಹೆಳವರಿಗೆ ಭಿಕ್ಷೆ ಇಲ್ಲವಂತಲ್ಲ, ಈ ಜನರು ಈಗ ಕಡಿಮೆಯಾಗಿದೆ ಅಷ್ಟೇ… ಹೀಗಾಗಿ ಭಿಕ್ಷಾಟನೆಯೂ ಕಡಿಮೆಯಾಗುತ್ತದೆ. ಬಹುತೇಕ ಕುಟುಂಬಗಳು ಕೂಲಿ ನಾಲಿ ಬದುಕು ಸವೆಸುವಂತಹ ದುಸ್ಥಿತಿ ಬಂದೊದಗಿದೆ. ಆದರೆ, ಉತ್ತರ ಕರ್ನಾಟಕದ ಕೆಲವು ಪ್ರದೇಶಗಳಲ್ಲಿ ಬೆರಳೆಣಿಕೆಯಷ್ಟು ಕುಟುಂಬಗಳು ಮೂಲ ವೃತ್ತಿಯನ್ನು ಬಿಡದೇ ಮುಂದುವರೆಸಿಕೊಂಡು ಬಂದಿವೆ. ಇನ್ನೂ ಕೆಲವರು ಅಲ್ಪಸ್ವಲ್ಪ ಕೃಷಿ ಭೂಮಿ ಹೊಂದಿ ಕೃಷಿಯತ್ತ ವಾಲಿದ್ದಾರೆ… ಇನ್ನು ಶೈಕ್ಷಣಿಕವಾಗಿ ಒಂದೊಂದೇ ಹೆಜ್ಜೆ ಮುಂದೆ ಬರುತ್ತಿರುವ ಸಮುದಾಯದ ಕೆಲವರು ನ್ಯಾಯಾಧೀಶರು, ವಕೀಲರು, ವೈದ್ಯ ವೃತ್ತಿ ಸೇರಿದಂತೆ ಮತ್ತಿತರೆ ಉನ್ನತ ಹುದ್ದೆಗೇರಿದ್ದಾರೆ. ಆದರೆ, ಇಂತಹವರ ಸಂಖ್ಯೆ ಗೌಣವಾಗಿದೆ. ಆದರೆ, ಸಾಮಾಜಿಕವಾಗಿ ತೀರಾ ಹಿಂದುಳಿದಿರುವ ಈ ಸಮುದಾಯಕ್ಕೆ ರಾಜಕೀಯ ಪ್ರಾತಿನಿಧ್ಯ ಎಂಬುದು ಮರೀಚಿಕೆಯೇ ಎನ್ನಬಹುದು… ತೀರಾ ಕೆಳಸ್ತರದ ಜೀವನ ಸಾಗಿಸುತ್ತಿರುವ ಸಮುದಾಯವನ್ನು ಸರ್ಕಾರಗಳು ಇತರೆ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಸೇರಿಸಿವೆ. ಆದರೆ, ಇದರಿಂದಾಗಿ ಇತರೆ ಸಮುದಾಯಗಳ ಜತೆ ಮೀಸಲಾತಿ ವಿಚಾರದಲ್ಲಿ ಸ್ಪರ್ಧಿಸಲಾಗದೇ ಸರ್ಕಾರದ ಸೌಲಭ್ಯಗಳಿಂದ ವಂಚಿತವಾಗುತ್ತಿದೆ… ಸಮಾಜದಲ್ಲಿ ತೀರಾ ಹಿಂದುಳಿದಿರುವ ಹೆಳವರು ಬುಡಕಟ್ಟು ವರ್ಗಕ್ಕೆ ಸೇರಿದವರಾಗಿದ್ದಾರೆ. ಆದರೆ, ಇವರನ್ನು ಇತರೆ ಹಿಂದುಳಿದ ವರ್ಗಕ್ಕೆ ಸೇರಿಸಿರುವುದರಿಂದ ಸೂಕ್ತ ರೀತಿಯಲ್ಲಿ ಸರ್ಕಾರದ ಯಾವುದೇ ಮೀಸಲಾತಿ ಸೌಲಭ್ಯಗಳು ಸಿಗಂತಾಗಿವೆ. ಈ ಹಿನ್ನೆಲೆಯಲ್ಲಿ ಹೆಳವರು ಸೇರಿದಂತೆ ಎಲ್ಲಾ ಬುಡಕಟ್ಟು ಸಮುದಾಯಗಳಿಗೆ ಎಸ್ಸಿ, ಎಸ್ಟಿ ಮಾದರಿಯಲ್ಲಿ ಪ್ರತ್ಯೇಕ ವರ್ಗವನ್ನು ರೂಪಿಸಿ ಪ್ರತ್ಯೇಕ ಮೀಸಲಾತಿ ನೀಡಬೇಕು. ಈ ಮೂಲಕ ಇವರಿಗೆ ಸಂವಿಧಾನಬದ್ಧವಾದ ಸೌಲಭ್ಯಗಳನ್ನು ಕಲ್ಪಿಸಿ ಅವರ ಶ್ರೇಯೋಭಿವೃದ್ಧಿಗೆ ನಾಂದಿ ಹಾಡಬೇಕಿದೆ… (ಡಾ.ಎ.ಎಸ್. ಪ್ರಭಾಕರ. ಬುಡಕಟ್ಟು ಅಧ್ಯಯನ ವಿಭಾಗದ ಮಾಹಿತಿ ಹೆಕ್ಕಿ ತೆಗೆಯಲಾಗಿದೆ, ಕನ್ನಡ ವಿಶ್ವವಿದ್ಯಾಲಯ) ****** ಕೆ.ಶಿವು ಲಕ್ಕಣ್ಣವರ

ಸ್ವಾತ್ಮಗತ Read Post »

You cannot copy content of this page

Scroll to Top