ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಕಾವ್ಯಯಾನ

ತಂಗಾಳಿ! ಕೆ.ಬಿ.ವೀರಲಿಂಗನಗೌಡ್ರ ಅವಳೆಂದರೆ.. ತೊರೆದವನಿಗೆ ಅರಳಿಮರವಾದವಳು ಅವಳೆಂದರೆ.. ಕೂಡಬೇಕೆಂದವನಿಗೆ ಅನುಭವಮಂಟಪವಾದವಳು ಅವಳೆಂದರೆ.. ಹೋರಾಟಗಾರನಿಗೆ ಊರುಗೋಲಾಗಿ ನಿಂತವಳು ಅವಳೆಂದರೆ.. ಸಮತೆಯೆಂದವನಿಗೆ ತಕ್ಕಡಿ ಹಿಡಿದು ನಿಂತವಳು ಅವಳೆಂದರೆ.. ಎದೆಯದನಿಗೆ ಸ್ವಾತಿ ಹನಿಯಾದವಳು ಅವಳೆಂದರೆ.. ಬೆಳೆಸಲೆಂದೇ ಬೇರಾಗಿ ಕೆಳಗಿಳಿದವಳು ಅವಳೆಂದರೆ.. ಕಾಣದ ತಂಗಾಳಿ ಅರ್ಥವಾಗದ ಅಮೂರ್ತ. *******

ಕಾವ್ಯಯಾನ Read Post »

ಕವಿತೆ ಕಾರ್ನರ್

ಕವಿತೆ ಕಾರ್ನರ್

ಕಣ್ನೀರಾಗುತ್ತೇನೆ! ಕಗ್ಗತ್ತಲ ಇರುಳೊಳಗೆ ಬೀದಿ ದೀಪಗಳ ನೆರಳುಗಳಾಟದೊಳಗೆ ಮುಸುಕೊದ್ದು ಮಲಗಿದ ನಿನ್ನ ಶಹರದೊಳಗೆ ಅಡ್ಡಾಡುತ್ತೇನೆ ನಿಶಾಚರನಂತೆ ಹಗಲು ಕಂಡ ಬೀದಿಯ ಹುಡುಕಿ ಇರುಳು ಅಲೆಯುತ್ತೇನೆ ಎತ್ತರದ ನಿನ್ನ ಮನೆಯ ಮಹಡಿಯಮೇಲೆ ಕವಿದ ಕಪ್ಪು ಮೋಡಗಳಾಚೆ ಇಣುಕುತ್ತಿರುವ ಚಂದ್ರನ ನಿದ್ದೆಗಣ್ಣಿನ ನಗುವಿಗೆ ಹೋಲಿಸಿ ನಿನ್ನ ಮಂದಹಾಸವ ನಾಚುತ್ತೇನೆ! ಮೂಡಿದ ಸೂರ್ಯನ ಎಳೆ ಕಿರಣಗಳು ನಿನ್ನಂಗಳದಲ್ಲಿ ಚಿತ್ತಾರ ಬಿಡಿಸುವ ದಿವ್ಯ ಮುಂಜಾವದಲ್ಲಿ ಮೈಮುರಿಯುತ್ತ ಹೊರಬಂದ ನಿನ್ನ ಮುದುಡಿದ ಸೀರೆಯ ನಿರಿಗೆಗಳಲ್ಲಿ ಅಡಗಿರಬಹದಾದ ಹಿಂದಿನ ರಾತ್ರಿಯ ಕನಸುಗಳಲ್ಲಿ ನನ್ನ  ಹುಡುಕುತ್ತೇನೆ! ಕಾಣದ ಕನಸುಗಳ ನೆನೆದು ಕಣ್ನೀರಾಗುತ್ತೇನೆ ************ ಕು.ಸ.ಮಧುಸೂದನ

ಕವಿತೆ ಕಾರ್ನರ್ Read Post »

ಪುಸ್ತಕ ಸಂಗಾತಿ

ಪುಸ್ತಕ ಸಂಗಾತಿ

ನಾನು ಅಘೋರಿಯಲ್ಲ “ನಾನು ಅಘೋರಿಯಲ್ಲ”” – Santoshkumar Mehandale 10 ವರ್ಷದ ಹಿಂದೆಯೇ ತರಂಗದಲ್ಲಿ ಧಾರಾವಾಹಿಯಾಗಿ ಪ್ರಕಟವಾಗಿ, ರಾಜ್ಯಮಟ್ಟದ ಜನಪ್ರಿಯ ಕಾದಂಬರಿ ಎಂದೆನಿಸಿಕೊಂಡ, (ಬಹುಶ ಹಲವು ಪ್ರಶಸ್ತಿಯೂ ) ಪುಸ್ತಕ….    ನನ್ನ ಬಹುದೊಡ್ಡ ಹೊಟ್ಟೆಯುರಿ ಅಂದ್ರೆ ಈ ಲೇಖಕರು,  ಇವರ ಬರಹಗಳು ನಂಗೆ ಪರಿಚಯವಾದದ್ದು ತೀರ ಇತ್ತೀಚಿಗೆ, ಇಷ್ಟು ವರ್ಷ ನಾನೀ ಲೇಖಕರ ಪುಸ್ತಕ ಬರಹ ಎಲ್ಲಾ ಮಿಸ್  ಮಡ್ಕೊಂಡೇ ಅಂತನ್ನಿಸೋದು ಇವರ ಕೆಲವು ಪುಸ್ತಕಗಳು ಸಿಗದಿದ್ದಾಗ, ಅವನು ಗಂಧರ್ವ….  ಯಾವ ಪ್ರೀತಿಯೂ…. ಓದಿದ ನಂತರ ಸರ್ ನಿಮ್ಮ ಯಾವ್ಯಾವ ಬುಕ್ಸ್ ಲಭ್ಯ ಇದೇ ಕಳಿಸಿಬಿಡಿ ಅಂತಾ ತರಿಸಿಕೊಂಡಿದ್ದೆ ಆದರೇ ಮಿಸ್ ಆದ ಪುಸ್ತಕಗಳಲ್ಲೊಂದು “”ನಾನು ಅಘೋರಿಯಲ್ಲ “”   ನನ್ನದೊಂದು (ದುರ )ಅಭ್ಯಾಸ ಅಂದ್ರೆ ನಂಗೆ ಯಾವುದೇ ಬುಕ್ ಬೇಕಂದ್ರೂ ಇನ್ನೊಬ್ರತ್ರ ಇಸ್ಕೊಳೋದು ಲೈಬ್ರರಿಲಿ ತರೋದು ಆಗೋಲ್ಲ, ಆದ್ರೆ ಮಾರ್ಕೆಟ್ ನಲ್ಲಿ ಸಿಗದಿದ್ದಾಗ ಲೈಬ್ರರಿ ಮೊರೆ ಅನಿವಾರ್ಯ, ಹೀಗೇ ಯಾವ್ದೋ ಬುಕ್ ತರೋದಿತ್ತು ಹಾಗೂ ಈ ಮೆಹಂದಳೆ ಸರ್ ದು, ನಂದೂ ಬುಕ್ಸ್ ಅಲ್ಗೆ ತಳ್ಪಸೋಣಾ ಅಂತಾ ಹೋದಾಗ ಕಣ್ಣಿಗೆ ಬಿದ್ದದ್ದು ಈ ನಾನು ಅಘೋರಿಯಲ್ಲ, ಒಂದ್ಸಲ ಆದ ಖುಷಿಗೆ ಪಾರವಿರಲಿಲ್ಲ, ನಿನ್ನೆ ಇಡೀ ದಿನ ಮಾಡಬೇಕಾದ ಎಲ್ಲಾ ಕೆಲ್ಸ ಬಿಟ್ಟು ಕೂತು ಓದಿ ಮುಗ್ಸಿದ್ದೀನಿ, ನನ್ನನಿಸಿಕೆ ಕೇವಲ ಅನಿಸಿಕೆ ನಿಮ್ಮ ಮುಂದೆ…   ಈ ಅಘೋರಿ ಅನ್ನೋ ಪದಾನೇ ನನ್ನ ವಿಚಿತ್ರವಾಗಿ ಸೆಳೆಯತ್ತೆ, ಇದರ ಬಗ್ಗೆ ಓದಿಲ್ಲ ಕೇಳಿಲ್ಲ ಅಂತಲ್ಲ, ಬಹುಶ: ಅಘೋರಿ ಅಂದ್ರೆ ಒಂಥರಾ ಭಯ ಗಾಬರಿ ಏನೋ ಮುಜುಗರದಂತಹ ಫೀಲಿಂಗ್, ಅವ್ರೇನೋ ಬೇರೇ ಗ್ರಹದವರ ಎಂಬ ಅಸ್ಪೃಶ್ಯ ಅಲ್ದೇ ಸರಿಯಾಗಿ ಹೇಳ್ಬೇಕಂದ್ರೆ ಅಸಹ್ಯ ಅನ್ನೋ ಭಾವನೇನೇ ಜಾಸ್ತಿ, ಆದರೇ ಈ ಪುಸ್ತಕದ ವಿಶೇಷ ಅಂದ್ರೆ ಇದನ್ನ ಓದಿದರೆ ಸರಿಯಾಗಿ ಅರ್ಥೈಸಿಕೊಂಡರೆ ಲೇಖಕರು “”ಅಘೋರಿಗಳ “” ಬಗೆಗಿನ ಎಲ್ಲಾ ಪೂರ್ವಗ್ರಹಗಳನ್ನೂ ನಿವಾರಿಸಿಬಿಡುತ್ತಾರೆ ಮಾತ್ರವಲ್ಲ ಅವರೊಂದಿಗೆ ಒಂದು ಮಾನವೀಯ ಗೌರವ ಭಾವವೂ ಹುಟ್ಟಿಕೊಳ್ಳುತ್ತೆ, ಮತ್ತೆಂದೂ ಪೂರ್ವಾಪರ ವಿವೇಚನೆ ಇಲ್ದೆ ಅಘೋರಿಗಳನ್ನ ನೀವು ನಿರಾಕರಿಸಲಾರಿರಿ ಡ್ಯಾಮ್ ಶ್ಯೂರ್…..    ಸಾಮಾಜಿಕ ವ್ಯವಸ್ಥೆಯ ಮೂರ್ನಾಲ್ಕು ರಂಗಗಳನ್ನು ಒಂದಕ್ಕೊಂದು ಕೊಂಡಿಗಳನ್ನ ಜೋಡಿಸೋದನ್ನು ಪರಸ್ಪರ ಒಬ್ರಿಗೊಬ್ರು ದ್ರೋಹವೆಸಗೋದನ್ನೂ , ಅದರೊಳಗೂ ಹರಡಿ ಘಮಿಸುವ ನಿರ್ಮಲ ನಿಷ್ಕಲ್ಮಶ ಪ್ರೀತಿಯನ್ನು ಅದ್ಬುತವಾಗಿ ಎಲ್ಲೂ ಕಿಂಚಿತ್ತು ಬೇಸರವಾಗದಂತೆ ಎಲ್ಲಿಯೂ ಯಾವ ಚಿಕ್ಕ ಲೋಪವೂ ಬಾರದಂತೆ,  ಬೇಸರವಾಗದoತೆ ಕಥೆ ಹೆಣೆದಿರುವ ಲೇಖಕರ ಕೌಶಲ್ಯ ಮನಸೆಳೆಯುತ್ತದೆ.. ವೈಜ್ಞಾನಿಕಥೆಗೆ  ಅಧ್ಯಾತ್ಮದ,  ವಾಮಲೋಕದ ಅಘೋರ ವಿಜ್ಞಾನ, ಹೇಗೆ ಒಂದಕ್ಕೊಂದು ತಳುಕು ಹಾಕಿಕೊಳ್ಳಬಲ್ಲದು ಹಾಗೂ ಪರಸ್ಪರರ ಅವನತಿಗೂ ಕಾರಣವಾಗಬಲ್ಲದು ಎಂಬುದನ್ನು ಮಾರ್ತಾಂಡ ಬಾಬಾ ಹಾಗೂ ಅಧ್ವೈತ ಸ್ವಾಮಿ ಮೂಲಕ ಅರಿವನ್ನು ನೀಡಿದ್ದಾರೆ ಹಾಗೂ ಅಘೋರಿಗಳೂ ತಮ್ಮ ಸಿದ್ಧಿಯನ್ನು ಲೋಕ ಕಲ್ಯಾಣಕ್ಕೆ ಉಪಯೋಗಿಸುವ ಬಗ್ಗೆ ಖಂಡಿತವಾಗಿಯೂ ಸಾಮಾನ್ಯ ಜನಕ್ಕೆ ತಿಳುವಳಿಕೆ ಇರಲಾರದು, ಅಘೋರ ವಿಜ್ಞಾನ ಕೂಡ ವೈಜ್ಞಾನಿಕ ಆಧಾರಿತ ಅನ್ನೋದನ್ನೂ ಸರಳವಾಗಿ ಅರ್ಥವಾಗುವಂತೆ ಬಿಡಿಸಿಟ್ಟಿದ್ದಾರೆ, ನಮ್ಮ  ಆಡಳಿತ ವೈಖರಿ ಅಧಿಕಾರಿ ವರ್ಗದ ಕೆಲವು ವಿಫಲತೆ, ಭ್ರಷ್ಟಾಚಾರ, ಧರ್ಮವನ್ನು ದುರುಪಯೋಗ ಪಡಿಸಿಕೊಳ್ಳುವ ದುರವಸ್ಥೆ ಖೇದವೆನಿಸುತ್ತದೆ, ಮನುಷ್ಯನ ದುರಾಸೆಯಿಂದ ಸಮಾಜಕ್ಕಾಗುವ ಹಾನಿ ನಷ್ಟವನ್ನು ಅಗ್ನಿಹೋತ್ರಿ ಎಂಬ ವಿಜ್ಞಾನಿ ತನ್ನ ಅದ್ಬುತ ಪಾಂಡಿತ್ಯದಾಚೆಗೂ ಪ್ರಯೋಗವನ್ನು ಅಧೂರಿಯಾಗಿ ಬಿಟ್ಟು ತನ್ನನ್ನು ತನ್ನ ದಶಕಗಳ ಶ್ರಮವನ್ನು ಬೂದಿ ಮಾಡಿಕೊಳ್ಳುವ ಅಸಾಹಾಯಕತೆ ಗಲಿಬಿಲಿಗೊಳಿಸತ್ತೆ, ಅಘೋರಿಗಳ ವಾಮಮಾರ್ಗದ  ಭೀಭಿತ್ಸ  ಭೀಕರ ಆಚರಣೆಯ ಬಗ್ಗೆ ಮಾತ್ರಾ ತಿಳಿದವರಿಗೆ ಅದರ  ಹಿಂದಿನ ಸಾಮಾಜಿಕ ಕಳಕಳಿ, ಹಿತದೃಷ್ಟಿ ಅರಿವಿಗೆ ಬಂದ್ರೆ ಅಘೋರ ಲೋಕ ಹಾಗೂ ಅಘೋರಿಗಳ ಬಗೆಗಿನ ತಪ್ಪು ತಿಳುವಳಿಕೆ ಅಂತರ ಕಡಿಮೆಯಾಗಿ ಅವರೊಂದಿಗೆ ಒಂದು ಮಾನವೀಯ ಸಂವಹನ ಸಾದ್ಯವಾಗಬಲ್ಲದು, ಇದು  ಇನ್ನೊಮ್ಮೆ ಪ್ರತಿಲಿಪಿಯಲ್ಲಾದರೂ ಬರಲಿ ಎಂಬುದು ನನ್ನ ಕೋರಿಕೆ, ಇಲ್ಲಿನದೇ ಒಂದಷ್ಟು ಓದುಗರು ಓದಲು ಅನುಕೂಲ ಆಗಬಹುದೆಂಬುದು ನನ್ನಾಶಯ,   ಇನ್ನು ರೇಶಿಮೆ ಜರತಾರಿನ ಸೀರೆಯಲ್ಲಿ ಬೆಳ್ಳಿ ಝರಿಯಂತೆ ನಿಕ್ಷಿಪ್ತವಾಗಿ ಎಲ್ಲರಲ್ಲಿಯೂ ಸೇರಿಕೊಂಡಿರೋದು, “”ಪ್ರೇಮ ಎಂದರೆ ಆಕಾರಕ್ಕೆ ನಿಲುಕದ….    ಕಲ್ಪನೆಗೆ ನಿಲುಕದ……. ಮನಸ್ಸು… !!       ಒಂದು   “”ಪ್ರಚ್ಚನ್ನ ಮೌನ “”” ಆದಿ ಪುರಾಣ ಕಾಲದಿಂದಲೂ ಇಂದಿನವರೆಗೂ ಸಾವಿರಾರು ಪ್ರೇಮ ಕಥೆಗಳು ಆಗಿಹೋಗಿವೆ, ಒಂದಷ್ಟು ಸುಖಾಂತ ಒಂದಷ್ಟು ದುಃಖಾಂತ, ಎರಡರ ಬಯಕೆಯೂ ನಿಸ್ವಾರ್ಥ… ತ್ಯಾಗ…. ಅದೆಲ್ಲಕಿಂತ ತಾದ್ಯಾತ್ಮತೆಯನ್ನ…. ಎಂದು ಇತಿಹಾಸಗಳಿಂದ ಅರಿತವರು ತುಂಬಾ ಕಡಿಮೆ ಮಂದಿ…. ಈ  ಲೇಖಕ ಮಹಾನುಭಾವರ ಪ್ರೇಮದ ಪ್ರೀತಿಯ ವ್ಯಾಖ್ಯಾನಗಳು ಅತೀ ಸುಂದರ ಚೇತೋಹಾರಿ ಮನೋಲ್ಲಾಸಗೊಳಿಸುವಂತದ್ದು, ನಮ್ಮಂತ ಆಡಲಾರದ ಅನುಭವಿಸಲಾರದ ಬಿಸಿತುಪ್ಪದಂತೆ ನುಂಗಲಾರದೆ ಉಗುಳಲಾರದೇ ಸಂಕಟ ಪಡುವ ಮನಗಳಿಗೆ ಕೊಂಚ ಧೈರ್ಯ ತುಂಬಿ ಅಗತ್ಯವಾದದ್ದನ್ನು ಕೇಡಿಲ್ಲದ, ಅನ್ಯಾಯವಲ್ಲದ ರೀತಿಯಲ್ಲಿ ಎಟುಕಿಸಿಕೊಳ್ಳುವ, ಮನಃಸ್ಥಿತಿಗೆ ತಂದು ಬದುಕಿಗೆ ಅಲ್ಪ ಸ್ವಲ್ಪ  ನೆಮ್ಮದಿ ಚೈತನ್ಯ ತುಂಬುವಂತಹುದು, ಹೌದು ಇನ್ನೊಬ್ಬರಿಗೆ ಕೇಡೆಣಿಸದಂತ ಯಾವ ಪ್ರೀತಿಯೂ ಅನೈತಿಕವಲ್ಲ ಎಂದೇ ಸಾರಿದವರಲ್ಲವೇ….?? ಮನಸ್ಸಿನ ಅನುಭೂತಿಗೊಂದು ಆಯಾಮ ಕಲ್ಪಿಸುವುದೇ ಪ್ರೇಮವಾ?? ಇದ್ದಷ್ಟೂ ಮತ್ತಷ್ಟು ಬೇಕೆಂದುಕೊಳ್ಳುವುದು ಪ್ರೇಮವಾ?? ಜಾಜಿ ಮಲ್ಲೆಯ ಘಮಲಾ??  ಮುಂಜಾವಿನ ಇಬ್ಬನಿಯ ಮೃದುತ್ವವಾ?? ನಗುವ ಗಾಳಿಯ ಸಣ್ಣಸುಳಿಯ ಕಲರವವಾ?? ಮೊದಲ ಮಳೆಯ ಮಣ್ಣಿನ ವಾಸನೆಯ ಗಾಢತೆಯಾ?? ಪ್ರೇಮವೊಂದು ನೆರವೇರುವುದಕ್ಕಿಂತ ಅದು ನೆರವೇರಲಿರುವ ನಿರೀಕ್ಷೆ ತುಂಬಾ ಹಿತವಾಗಿರುತ್ತದೆಂದು ಯಾಕೆನಿಸುತ್ತದೆಯೋ… ಮಲ್ಲಿಗೆ ಬಳ್ಳಿಯ ತೂಗುವಿಕೆಯ  ಲಾಸ್ಯವಾಗಿ ಮನದಲ್ಲಿ ಬೆಳದಿಂಗಳಾಗಿ, ಇಂಧ್ರಧನುಸ್ಸಾಗಿ,, ಚಿನ್ನದ ಮೋಡಗಳ ಗರಿಗಳಾಗಿ… ಇದಕ್ಕಿಂತ ಹಿತವಾದುದು ಖಂಡಿತಾ ಇದರ ಮೀರಿದ ಹಿತವಿಲ್ಲ ಎಂದೇ ನಮ್ಮನಿಸಿಕೆಯೂ ಲೇಖಕರೇ… ಮೈನವಿರೇಳಿಸುವ ಅಘೋರ ಲೋಕದ ವಿದ್ಯಮಾನಗಳಾಗಲಿ…., ಹಿಪ್ನಾಟೈಸ್…., ಆರತ್ಯುಂಗ…. ವರ್ಣಗೋಲ….  ಕಡೆಗೆ ಕಾನ್ಫಿಡೆನ್ಸ್ ಏನೇ ಇರಲಿ, ಯಾವುದೇನು ಮಾಡಿದರೂ ಮನಸ್ಸನ್ನು ಕಂಡು ಹಿಡಿಯುವ ತಂತ್ರಜ್ಞಾನ ಮಾತ್ರಾ ಎಟುಕಲಾರದೇನೋ…???  ಅಂತದ್ದೊಂದು ಎಟುಕಬಾರದು ಕೂಡಾ… ಅದೇ ಈ ಸಕಲ ಜೀವಗಳಿಗೂ ಜಗತ್ತಿಗೂ ಶುಭ……   ಹೌದು ಪ್ರೇಮವೆಂದರೆ ಅಪೂರ್ವ ಶಾಂತಿ….        “”””ಪ್ರಚ್ಚನ್ನ ಮೌನ  “””” ಅದ್ಬುತ ಪ್ರೇಮ ರಾಸಾಯನದೊಂದಿಗೆ ಅಘೋರಿಗಳ ಹೊಸಮುಖ ಪರಿಚಯಿಸಿದ, ಒಂದು ನಿಗೂಢವನ್ನ ಅನಾವರಣಗೊಳಿಸಿದ ಲೇಖಕರಿಗೆ ವಂದನೆ ಅಭಿನಂದನೆಗಳು… ಹೀಗೇ ಬರೀತಾ ಇರಿ… ನಮ್ಮೆಲ್ಲ ಅಭಿಮಾನಿಗಳ ಪ್ರೀತಿಯ ಕಸುವು ನಿಮಗಿರಲಿ… ************ ಪದ್ಮಜಾ ಜೋಯಿಸ್

ಪುಸ್ತಕ ಸಂಗಾತಿ Read Post »

ಇತರೆ

ಪ್ರಸ್ತುತ

ಕ್ವಾರಂಟೈನ್ ರಜೆ ಯಲ್ಲಿ ಆತ್ಮಾವಲೋಕನ.. ವಿದ್ಯಾಶ್ರೀ. ಎಸ್.ಅಡೂರ್ ಹಿಂದೆಂದೂ ಕಂಡು, ಕೇಳಿ ಅರಿಯದ…..ಮುಂದೆಂದೂರ ಈ ರೀತಿಯೂ ಆಗಬಹುದೇ ಎಂದು ಖಾತ್ರಿಯೇ ಇಲ್ಲದಂತಹ ವಿದ್ಯಮಾನವೊಂದು ಜಗತ್ತಿನಾದ್ಯಂತ ತಾಂಡವವಾಡುತ್ತಿರುವುದು ಎಲ್ಲರಿಗೂ ತಿಳಿದಿರುವ ಸಂಗತಿ. ಹೌದು…ನಾನು ಕೊರೊನ ಬಗೆಗೆಯೇ ಹೇಳುತ್ತಿರುವುದು.         ಯಾರಿಗೆ ಪಥ್ಯವಾದರೂ…ಆಗದಿದ್ದರೂ…ಪ್ರಕೃತಿಯ ಮುಂದೆ ಹುಲುಮಾನವ ತೃಣಕ್ಕೆ ಸಮಾನವಾಗಿದ್ದಾನೆ.ಜಗತ್ತಿನ ದೊಡ್ಡಣ್ಣ ಎನ್ನಲಾಗುವ ಅಮೇರಿಕಾದಂತಹ ದೇಶವೇ ಸೋತು ಸುಣ್ಣವಾಗಿದೆ. ವೈಜ್ಞಾನಿಕವಾಗಿ,… ವೈಚಾರಿಕವಾಗಿ….ಯೋಚಿಸುವಾಗ ಅನೇಕ ತರ್ಕಬದ್ಧ ವಿಚಾರಗಳನ್ನು ಪುಟಗಟ್ಟಲೆ ಮಂಡಿಸಬಹುದು..ಚರ್ಚಿಸಬಹುದು. ನಾನು..ನೀನು ಎಂದು ಅನೇಕ ತಾಕಲಾಟ-ಮೇಲಾಟ ಗಳನ್ನು ಮಾಡಬಹುದು. ದೊಂಬಿ-ಗಲಾಟೆಗಳನ್ನು ಎಬ್ಬಿಸಬಹುದು.           ಆದರೆ ವೈಯಕ್ತಿಕವಾಗಿ ಕೂತು ಮೌನವಾಗಿ ಯೋಚಿಸಿದರೆ  ಮನುಷ್ಯನ ಅಲ್ಪತನದ ಅನಾವರಣವಾಗಿತ್ತ ಹೋಗುತ್ತದೆ. ದೊಡ್ಡ ದೊಡ್ಡ ವಿಚಾರಗಳ ಮಾತೇ ಬೇಡ;ನಮ್ಮ ನಿತ್ಯದ ಜೀವನದ ಮಗ್ಗಲುಗಳನ್ನು ವಿಮರ್ಶಿಸಿದಾಗಲೇ ನಮಗೆ ಅರಿವಾಗುತ್ತದೆ, “ನಮ್ಮ ನಿಜವಾದ ಅಗತ್ಯವೇನು??ಮತ್ತು ನಾವು ನಮಗೆ ಏನೆಲ್ಲಾ ಅಗತ್ಯ ಎಂದುಕೊಂಡಿದ್ದೇವೆ??”ಎಂದು.           ಈ ಕ್ವಾರಂಟೈನ್ ರಜೆಗಳಲ್ಲಿ ನಾನು ಅನೇಕ ಹಳೆ ಕಾಲದ  ತಿಂಡಿ ತಿನಿಸು ಗಳನ್ನು ಮಾಡಲು ಪ್ರಯತ್ನಿಸಿದೆ. ಚೆನ್ನಾಗಿ ಬಂತು ಕೂಡ. ಆದರೆ ದುರದೃಷ್ಟವಶಾತ್ ನಮ್ಮ ಮಕ್ಕಳಿಗೆಅವುಗಳ ಹೆಸರುಗಳೇ ಗೊತ್ತಿಲ್ಲ. ಆದರೆ  ಅದು  ಅವರ ತಪ್ಪಲ್ಲವೆಂದು ಸ್ಪಷ್ಟವಾಗಿ ನನಗೆ ಗೊತ್ತು.ಬಗೆ ಬಗೆಯ, ರುಚಿ ರುಚಿಯಾದ ತಿಂಡಿ ತಿನಿಸು ಗಳು ಮಾರ್ಕೆಟ್ ನಲ್ಲಿ ಹೋಗುವಾಗ,ಮಕ್ಕಳಿಗೂ ಮೋಹ ಆಚೆ ಕಡೆಗೆಯೇ ..ಜಾಸ್ತಿ. ನಮ್ಮಂತಹ ದೊಡ್ಡವರಿಗೂ ಸುಲಭವಾಗಿ ಕೆಲಸ ಆಗುತ್ತದಲ್ಲ ಎನ್ನುವ ಭಾವ. ಅದರಿಂದ ಆರೋಗ್ಯ ಹಾಳಾಗುತ್ತದೆ ಎಂದು ಗೊತ್ತಿದ್ದರೂ ದಿವ್ಯ ನಿರ್ಲಕ್ಷ್ಯವನ್ನು ತಳೆದುಬಿಡುತ್ತೇವಲ್ಲ. ಈ ರಜೆ ಗಳಲ್ಲಿ ಇದಕ್ಕೆ ಕಡಿವಾಣ ಬಿದ್ದಿದೆ ತಾನೇ….??        ಎಷ್ಟೋ ಜನ ನನ್ನ ಗೆಳೆಯ, ಗೆಳತಿಯರ ವಾಟ್ಸಾಪ್ ಸ್ಟೇಟಸ್ ಗಳಲ್ಲಿ ನಾನು ಅವರವರ ಮಕ್ಕಳು ಮಾಡಿದ ಅಡಿಗೆಯದ್ದಿರಬಹುದು,ರಂಗೋಲಿ-ಪೇಂಟಿಂಗ್ ಗಳದ್ದಿರಬಹುದು,ಅವರು ಆಡುವ ಆಟಗಳದ್ದಿರಬಹುದು,…ಫೋಟೋ-ವಿಡಿಯೋ ಗಳನ್ನು ಹೆಚ್ಚಾಗಿ ನೋಡುತ್ತಿದ್ದೇನೆ. ಇದನ್ನು ನೋಡಿದ ನಿಮಗೆ ಏನನ್ನಿಸುತ್ತದೆ?ಮಕ್ಕಳು ಮೊದಲು ಪೇಂಟಿಂಗ್..ರಂಗೋಲಿ ಗಳನ್ನು ಮಾಡದೆ, ಈಗ ಮಾತ್ರ ಮಾಡುತ್ತಿದ್ದಾರೆ ಎಂದೇ..?? ಮೊದಲು ಮಾಡುತ್ತಿದ್ದರೂ ಈಗ ಮಾಡುತ್ತಿರುವುದು ಮಾತ್ರ ರಜೆಯಲ್ಲಿ ಕೆಲಸವಿಲ್ಲದೆ ಖಾಲಿ ಕೂತ ಅಪ್ಪ-ಅಮ್ಮಂದಿರಿಗೆ ಕಾಣಿಸುತ್ತಿದೆ ಎಂದೇ..??ಅಲ್ಲ..ಎಲ್ಲರ ಹಾಗೆ ತಾನೂ ಏನಾದರೂ ಮಾಡಿ ಎಲ್ಲರ ಗಮನ ಸೆಳೆಯಬೇಕೆಂದು ಮಗು ಬಯಸುತ್ತಿದೆ ಎಂದೇ..?? ಯಾವ ರೀತಿಯಲ್ಲಿ ಅಳೆದು ತೂಗಿ ನೋಡಿದರೂ ಇದರಲ್ಲಿ ಎಳ್ಳಷ್ಟೂ ತಪ್ಪು ಕಾಣಿಸುತ್ತಿಲ್ಲವಲ್ಲ. ಈಗ …ಈ ರಜೆ ಗಳಲ್ಲಿ ಮಾತ್ರ ಮಕ್ಕಳು, ಈ ಎಲ್ಲಾ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆಂದರೆ…ಅವರು ಇಷ್ಟು ಸಮಯದ ತಮ್ಮ ಶೈಕ್ಷಣಿಕ “ಜೀತದಿಂದ”ಬಿಡುಗಡೆಹೊಂದಿ,ತಮ್ಮ ತನವನ್ನು ಅರಸುತ್ತಿದ್ದಾರೆಂದು ಅರ್ಥವಲ್ಲವೇ??? ಈ ಹಿಂದೆ ಶಾಲಾಸಮಯಗಳಲ್ಲಿ ಶಿಕ್ಷಕರ,ಪೋಷಕರ ಕಣ್ಣು ತಪ್ಪಿಸಿ ತಮ್ಮ ಇಷ್ಟ ವಿಷಯಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಿದ್ದು,ಈಗ ಈ ರಜೆ ಗಳಲ್ಲಿ ತಮ್ಮ ತಮ್ಮ ಪೋಷಕರ ಪ್ರೋತ್ಸಾಹದಿಂದ ಆ ಕಾರ್ಯ ಗಳಲ್ಲಿ ತೊಡಗಿಸಿಕೊಂಡಿದ್ದಾರಾದರೆ, ಆ ಮಕ್ಕಳ ಆತ್ಮಸ್ತೈರ್ಯ ಅದೆಷ್ಟು ಪಟ್ಟು ಹೆಚ್ಚಾಗಿರಬೇಡ??ಯೋಚಿಸಿ ನೋಡಿ.            ನಮ್ಮ ಕಾಲದ ಕುಂಟೆಬಿಲ್ಲೆ,ಲಗೋರಿ ಇತ್ಯಾದಿ ಆಟಗಳನ್ನೆಲ್ಲ ಮಕ್ಕಳಿಗೆ ಹೇಳಿಕೊಟ್ಟ,ಅವರು ಖುಷಿಯಿಂದ ಅವುಗಳನ್ನು ಆಡುವಾಗ ಅದೆಷ್ಟು ಪುಳಕಿತಳಾಗಿದ್ದೇನೆ. ಮುಸ್ಸಂಜೆಯ ವೇಳೆಯಲ್ಲಿ ಅವರನ್ನು ಕೈ-ಕಾಲು ತೊಳೆದು,ದೇವರ ಮುಂದೆ ಕೂರಿಸಿ,ಭಜನೆ-ಶ್ಲೋಕ ಗಳನ್ನು ಹೇಳಿಸುವಾಗ ಅದೆಷ್ಟು ಧನ್ಯತಾಭಾವ ಆವರಿಸುತ್ತದೆ. ಮಕ್ಕಳಿಗೆ ರಜಯಲ್ಲಿ ಪೇಟೆ ಸುತ್ತುವುದು,ಪ್ರವಾಸ ಕರೆದುಕೊಂಡು ಹೋಗುವುದು ಇತ್ಯಾದಿ ಯಾವುದೂ ಇಲ್ಲದೆ ತೋಟದಲ್ಲಿ ವಾಕಿಂಗ್ ಹೋಗಿ ಬರುವುದು , ಅಡಿಕೆ-ತೆಂಗಿನಕಾಯಿ ಹೆಕ್ಕಿ ತರುವುದು , ಗುಡ್ಡೆಗೆ ಹೋಗಿ ಗೇರುಹಣ್ಣು ಕೊಯ್ಯುವುದು ಇತ್ಯಾದಿ ಸಣ್ಣ ಸಣ್ಣ ಚಟುವಟಿಕೆಗಳನ್ನು ಮಾಡುವುದರಿಂದ ದೈಹಿಕ ವ್ಯಾಯಾಮ ದೊಂದಿಗೆ ಹಳ್ಳಿ ಜೀವನದ ಕಿರುಪರಿಚಯ ಮಾಡಿ ಕೊಟ್ಟಂತೆ ಆಗುವುದಿಲ್ಲವೇ? ಈ ತರಹದ ಬೇಸತ್ತು ಹೋಗುವ ದೀರ್ಘ ರಜೆಗಳಿಲ್ಲದೇ ಹೋಗಿದ್ದರೆ ಮಕ್ಕಳಿಂದ ಇದನ್ನೆಲ್ಲ ಮಾಡಿಸಲು ಸಾಧ್ಯವಿತ್ತೇ..            ಅಂದಾಜು ಮೂವತ್ತರಿಂದ ಮೂವತ್ತೈದು ವರ್ಷಗಳನ್ನು ಹಳೆಯ ರಾಮಾಯಣ, ಮಹಾಭಾರತದ ಬಗೆಗಿನ ಟಿವಿ ಧಾರಾವಾಹಿ ಗಳ ಮರುಪ್ರಸಾರದ ಒಂದು ಎಪಿಸೋಡು ಗಳನ್ನೂ ತಪ್ಪಿಸದೇ ಅತ್ಯಂತ ಆಸಕ್ತಿಯಿಂದ ನಮ್ಮ ಮಕ್ಕಳು ನೋಡುವ ಹಾಗೆ ಮಾಡಿದ ಈ ಕ್ವಾರಂಟೈನ್ ರಜೆಗೆ ಅದ್ಹೇಗೆ ಧನ್ಯವಾದ ಹೇಳಲಿ. ಟಿವಿ ಯಲ್ಲಿ ಬರುವ ಹಾಳು ಮೂಳು ಧಾರಾವಾಹಿ, ರಿಯಾಲಿಟಿ ಷೋ ಗಳನ್ನು ಕಣ್ಣು ಎವೆಯಿಕ್ಕದೆ ನೋಡುವ ನಮ್ಮ ಮಕ್ಕಳು, ಅಷ್ಟೇ ಶ್ರದ್ಧೆಯಿಂದ ರಾಮಾಯಣ, ಮಹಾಭಾರತವನ್ನೂ ನೋಡುತ್ತಾರೆಂದರೆ ಇದರ ಅರ್ಥ ಏನು?? ನಾವು ಆದರ್ಶವಂದು ಬೋಧಿಸುವ ವಿಚಾರಗಳಲ್ಲೇ ದೋಷವಿದೆ ಎಂದಲ್ಲ?? ಒಳ್ಳೆಯ ವಿಚಾರಗಳು ನಮಗ್ಯಾರಿಗೂ ಬೇಡವಾಗಿದೆ ಎಂದಲ್ಲವೇ ?? ನೈತಿಕತೆಯ ವ್ಯಾಖ್ಯಾನ ವೇ ಬದಲಾಗಿದೆ ಎಂದಲ್ಲವೇ?? ಸುಮ್ಮನೆ ನಮ್ಮ ಮಕ್ಕಳನ್ನು ದೂರಿ ಪ್ರಯೋಜನವಿಲ್ಲ. ದುಡ್ಡು ಮಾಡುವ ದಂಧೆಕೋರರ ನಡುವೆ ಅವರ ಬಾಲ್ಯ ಮಾರಾಟವಾಗುತ್ತಿದೆ ,ಅಷ್ಟೇ .. ಇದನ್ನೆಲ್ಲ ಅರಿತುಕೊಳ್ಳಲು ಇದಕ್ಕಿಂತ ಒಳ್ಳೆಯ ಸುವರ್ಣ ಅವಕಾಶ ಬೇರೆ ಸಿಕ್ಕೀತೇ??        ನಮ್ಮ ಬಾಲ್ಯದಲ್ಲಿ ಮತ್ತು ತೀರ ಇತ್ತೀಚಿನ ವರೆಗೂ ಊರು ಬಿಟ್ಟು ಪೇಟೆ-ಪಟ್ಟಣ ಗಳಲ್ಲಿ ವಾಸಿಸುವ,ದೇಶ ಬಿಟ್ಟು  ವಿದೇಶದಲ್ಲಿರುವವರು, ಉದ್ಯೋಗ ನಿಮಿತ್ತವೇ ಹೋಗಿದ್ದರೂ ಅಪರೂಪಕ್ಕೊಮ್ಮೆ ಊರಿಗೆ ಮರಳುವಾಗ ಅವರಿಗೆ ಸಿಗುವ ಮರ್ಯಾದೆ ನೋಡಿದರೆ, ಊರಿನ ದೇವರ  ಜಾತ್ರೆ ಸುರುವಾಗಿದೆಯೇನೋ ಎಂದೆನಿಸುತ್ತದೆ.ಅಂತಹವರಲ್ಲಿ ಅನೇಕರು ಇಂದು ಪೇಟೆ-ಪಟ್ಟಣಗಳೆಂಬ ಕಾಂಕ್ರೀಟ್ ಕಾಡಿನಲ್ಲಿ,ಒಂಟೊಂಟಿ ಮನೆಗಳಲ್ಲಿ, ಬಾಗಿಲು ಜಡಿದು ಅಕ್ಷರಷಃ ಬಂಧಿಗಳಂತಾಗಿರುವ ಈ ಸಮಯದಲ್ಲಿ ತೋಟ,ಗುಡ್ಡ, ಹಸು,ಕರು ಇತ್ಯಾದಿ ವಿಶಾಲ ವ್ಯಾಪ್ತಿ ಯಲ್ಲಿರುವ ನಮ್ಮ ಹಳ್ಳಿಗರು ಅದೆಷ್ಟು ಧನ್ಯರು ಎಂದೆನಿಸದೇ ಇದ್ದರೆ ಖಂಡಿತ ಆತವಂಚನೆಯಾಗುತ್ತದೆ          ಆದರೂ ಕೂಳ್ಳುಬಾಕತನದಿಂದ ಹಳ್ಳಿಗರೂ ಹೊರಗುಳಿದಿಲ್ಲ. ಯಾವುದು ಬೇಕು, ಯಾವುದು ಬೇಡ ಎಂದು ಕಿಂಚಿತ್ತೂ ಯೋಚಿಸದೆ ಸ್ಪರ್ಧೆಗೆ ಬಿದ್ದಂತೆ ಕೊಂಡು ತಂದು ಮನೆಯಲ್ಲಿ ರಾಶಿ ಹಾಕಿದ ಯಾವುದೇ  ನಿರ್ಜೀವ ವಸ್ತುಗಳಿಗೂ ಬೆಲೆಯೇ ಇಲ್ಲ ಎಂದು ಕೊರೊನ ಹೇಳಿ ಕೊಟ್ಟಿದೆ. ತೋಟಕ್ಕೆ,ಹಟ್ಟಿಗೆ ಹೋಗುವಾಗ ಬಳಸುವ ಸ್ಲಿಪ್ಪರ್ ಒಂದನ್ನು ಬಿಟ್ಟು, ಆಸೆಬುರುಕುತನದಿಂದ ಕೊಂಡು ರಾಶಿ ಹಾಕಿದ ಎಂಟ್ಹತ್ತು ಜತೆ ಚಪ್ಪಲಿ ಗಳು ಉಪಯೋಗಕ್ಕೇ ಬರುತ್ತಿಲ್ಲ. ಮನೆಯಲ್ಲಿ ದಿನವೂ ಧರಿಸುವ ಉಡುಪುಗಳನ್ನು ಬಿಟ್ಟು ಕಪಾಟುಗಳಲ್ಲಿ ಪೇರಿಸಿಟ್ಟ ಬಣ್ಣ ಬಣ್ಣದ, ಬಗೆ ಬಗೆಯ ರಾಶಿ ರಾಶಿ ಉಡುಪುಗಳಿಗೆ ಕೆಲಸವೇ ಇಲ್ಲವಾಗಿದೆ.          ಕಾಂಕ್ರೀಟು ಹಾಕಿ ಹಾಕಿ ಕಟ್ಟಿದ ಬಿಲ್ಡಿಂಗ್ ಗಳಾಗಲೀ…ಅಪಾರ ಸಂಖ್ಯೆಯಲ್ಲಿ ಮರಗಳ ಮಾರಣಹೋಮ ಮಾಡಿ ರಚಿಸಿದ ರಸ್ತೆಗಳಾಗಲೀ…ಇವತ್ತು ನಮ್ಮ ಉಪಯೋಗಕ್ಕೆ ಬರುತ್ತಿಲ್ಲ. ಉಪಯೋಗಕ್ಕೆ ಬರುತ್ತಿರುವುದೇನಿದ್ದರೂ, ಮಣ್ಣಿನಲ್ಲಿ ಬೆಳೆದ ಹಣ್ಣು, ತರಕಾರಿ, ದವಸ,ಧಾನ್ಯ ಮಾತ್ರ.ಹಾಗಾದರೆ ನಮಗೆ ನಿಜವಾಗಿಯೂ ಏನು ಬೇಕು, ಏನು ಬೇಡ ಎಂದು ಯೋಚಿಸುವುದರಲ್ಲಿ ನಾವು ಸೋತಿದ್ದೇವೆ ಎಂದರ್ಥವಲ್ಲವೇ??          ಈ ಕೊರೊನ ರಜೆ ಯೋಚಿಸಲು ನಮಗೊಂದು ಉತ್ತಮ ಸಮಯಾವಕಾಶ ವನ್ನು ಕೊಟ್ಟಿದೆ. ಹಿಂದಿನ ತಪ್ಪುಗಳನ್ನು  ಸರಿಪಡಿಸಿ, ಬಲಹೀನರನ್ನು ಎತ್ತಿ ಎಬ್ಬಿಸಿ ಹೆಗಲು ಕೊಡುವುದಕ್ಕಾಗಿ ಒಳ್ಳೆಯ ಅವಕಾಶ ವನ್ನು ಒದಗಿಸಿದೆ. ನಮ್ಮ ಮುಂದಿನ ಪೀಳಿಗೆಗೆ ನಿಜಕ್ಕೂ ನಾವು ಮಾಡಬೇಕಾದ ದ್ದೇನು ಎಂದು ಯೋಚಿಸಿ ಕಾರ್ಯಗತಗೊಳಿಸುವ ಮೈದಾನ ವನ್ನು  ಒದಗಿಸಿದೆ. ನಾಡು,ಅಥವಾ ದೇಶ ಕಾಯಲು ಸೈನಿಕನಾಗಿ ಗಡಿಗೇ ಹೋಗಬೇಕಿಲ್ಲ, ನಮ್ಮ ನಮ್ಮ ಮಿತಿಯನ್ನರಿತು ವ್ಯಾಪ್ತಿಯನ್ನು ಬಳಸಿ ಪರೋಪಕಾರಾರ್ಥಂ ಇದಂ ಶರೀರಂ ಎಂಬಂತೆ ಬದುಕಿ “ಅನನ್ಯ”ರಾಗಬಹುದೆಂಬ ಬಹುದೊಡ್ಡ ಪಾಠವನ್ನೇ ಕಲಿಸಿದೆ.

ಪ್ರಸ್ತುತ Read Post »

ಕಾವ್ಯಯಾನ

ಕಾವ್ಯಯಾನ

ಸರಸ ಬಾಲಕೃಷ್ಣ ದೇವನಮನೆ ಹುಣ್ಣಿಮೆಯ ಶೃಂಗಾರದಾಟಕೆಉದ್ರೇಕಗೊಂಡು ಮೊರೆಯುತ್ತಿದೆ ಕಡಲುದಂಡೆಯಲ್ಲಿ…ಎದೆಯಿಂದ ನಾಭಿಯಲಿ ಸುಳಿದುತೊಡೆಸಂಧಿಯಲಿ ಕುದಿಯುತ್ತಿದೆ ಉಸಿರು… ಮೌನವನು ಹೊದ್ದ ತಿಂಗಳುಮುಚ್ಚಿದ ರೆಪ್ಪೆ;  ಕಚ್ಚಿದ ತುಟಿ,ಕಿವಿಯ ಪದರದಲಿ ಮುಲುಕಾಟದಾಲಾಪ,ಕುಳಿರ್ಗಾಳಿ ಸೋಕಿದ ಬೆರಳುಮೈಮುರಿದ ತೋಳುಉಸಿರಿನೇರಿಳಿತಕಿಬ್ಬೊಟ್ಟೆಯಲಿ ಬಿಗಿತ;ನಡುವಿಂದ ಕಾಲ್ಸೆಳೆತ. ಚದುರಿದ ಮರಳುಹಾಸಿಗೆ, ಕೆದರಿದ ಮುಂಗುರುಳುಗೀರಿದ ಬೆನ್ನುಉಕ್ಕಿದ ಬೆವರು ಹರಿದುಒಡಲೊಳಗೆ ಜೀವಜಲ ಪುಟಿದುಗರ್ಭಗಡಲಲ್ಲಿ ಪುಳಕ..! ಮೊರೆತ ತಗ್ಗಿದ ಕಡಲು ಶಾಂತಪ್ರಶಾಂತ ಮುಗುಳು ಧನ್ಯ!! *******

ಕಾವ್ಯಯಾನ Read Post »

ಅನುವಾದ, ಕಥಾಗುಚ್ಛ

ಕಥಾಯಾನ

ಒಂದು ವಿಶೇಷ ದಿನ ಮಲಯಾಳಂ ಮೂಲ: ಪೂನತಿಲ್ ಕುಞಬ್ದುಳ್ಳ ಕನ್ನಡಕ್ಕೆ ಚೇತನಾ ಕುಂಬ್ಳೆ ಹಲವು ವರ್ಷಗಳ ನಂತರ, ಅವನು ಚಂದ್ರಿಕಳ ಮನೆಗೆ ಬಂದ. ಕೇವಲ ಚಂದ್ರ ಎಂಬ ಹೆಸರು ಅವನಿಗಿದ್ದದ್ದರಿಂದ ಮಾತ್ರ ಚಂದ್ರಿಕ ಆತನನ್ನು ಧ್ಯಾನಿಸಿದ್ದಲ್ಲ.         ಅವನು ಸಿ.ಸಿ ಚಂದ್ರ. ಚಂದ್ರನ್ ಆಂಡ್ ಬ್ರದರ್ಸ್ ನ ಮ್ಯಾನೇಜಿಂಗ್ ಪಾರ್ಟ್ನರ್ ಆಗಿದ್ದ. ಅವರಿಗೆ ನೂರಾರು ಟ್ರಕ್ಕುಗಳೂ, ಹತ್ತಿ ಬಟ್ಟೆ ನೇಯುವ ಮೂರು ದೊಡ್ಡ ಮಿಲ್ಲುಗಳು ತಮಿಳುನಾಡಿನಲ್ಲಿವೆ. ವಿವಿಧ ವ್ಯಾಪಾರ ಸಂಘಟನೆಗಳ ನಾಯಕರನ್ನು ವಶೀಕರಿಸುವ ಮಾದಕ ವಸ್ತುಗಳಿವೆ. ಒಂದು ರಸತಂತ್ರ ಶಾಲೆ, ಎಲ್ಲೆಡೆಯೂ ವಿಷವನ್ನು ಬಿತ್ತರಿಸುವ ಒಂದು ಕಾರ್ಖಾನೆಯಿದೆ.    ಆಕೆಗೆ ಆತನಿಗಿಂತ ದೊಡ್ಡದಾದ ಸ್ನೇಹಿತರ ಬಳಗವೊಂದಿತ್ತು. ಅಲ್ಲಿ ಕವಿಗಳು, ಸಿನಿಮಾ ಹಾಡನ್ನು ಬರೆಯುವವರು,ಪಾಪದ ನಿರ್ಮಾಪಕರು, ನಟರು, ಚಿತ್ರಕಾರರು, ಎಂ.ಪಿ. ಡೆಪ್ಯೂಟಿ ಮಂತ್ರಿಗಳು, ಸೆಕ್ರೆಟರಿ, ಮಂತ್ರಿಗಳು ಹೀಗೆ ಎಲ್ಲ ವರ್ಗದವರೂ ಆಕೆಗೆ ಪರಿಚಿತರಾಗಿದ್ದರು.    ಆದರೂ ಚಂದ್ರಿಕಳಿಗೆ ಚಂದ್ರನ ಮೇಲೆ ಪ್ರೀತಿ. ಹಾಗೆ ಚಂದ್ರ ಅಕೆಯ ಮನೆಗೆ ಬಂದದ್ದು. ಕಾರಿನಿಂದಿಳಿದ ಚಂದ್ರ ಚಂದ್ರಿಕಳನ್ನು ನೋಡಿ ನಕ್ಕ. ಚಂದ್ರಿಕ ಆತನನ್ನು ಮನೆಯೊಳಗೆ ಆಹ್ವಾನಿಸಿದಳು. ಚಂದ್ರ ಮನೆಗೆ ಬಂದ ಸಂತೋಷಷದಲ್ಲಿ ಕ್ಷಣ ಹೊತ್ತು ಏನು ಹೇಳಬೇಕೆಂದೋ ಏನು ಮಾಡಬೇಕೆಂದೋ ಅವಳಿಗೆ ತೋಚದಾಯಿತು. ಆಕೆಯ ಬಹುದಿನಗಳ ಆಸೆಯೊಂದು ಈಡೇರಿದ ದಿನವಲ್ಲವೇ ಇಂದು.       ಕಾಲೇಜಿನಲ್ಲಿ ಕಲಿಯುತ್ತಿರುವಾಗಲೇ  ಚಂದ್ರಿಕಳ ಆರಾಧನಾ ಮೂರ್ತಿಯಾಗಿದ್ದ ಚಂದ್ರ. ಅಕೆಗೆ ಇತರ ಅನೇಕ ಸ್ನೆಹಿತರಿದ್ದರೂ, ವೈಟ್ ಲಿಫ್ಟರಾಗಿ ಮಾತ್ರ ಪ್ರಸಿದ್ಧನಾಗಿದ್ದ ಚಂದ್ರನನ್ನು  ಆರಾಧಿಸುತ್ತಿದ್ದಳು. ಚಂದ್ರನು ಅವಳೆದುರಿಗೆ ಬಂದಾಗಲೆಲ್ಲ ಆಕೆಗೆ ಗ್ರಹಣ ಬಡಿದಂತಾಗುತ್ತಿತ್ತು. ಮೂರು ವರ್ಷದೊಳಗೆ ಕಾಲೇಜಿನಾವರಣದ ವಿವಿಧ ಭಾಗಗಳಲ್ಲಿ ಅವರಿಬ್ಬರೂ ಭೇಟಿಯಾಗುತ್ತಿದ್ದರು. ಆದರೆ ಚಂದ್ರಿಕ ಚಂದ್ರನನ್ನು ನೋಡುತ್ತಿದ್ದಳಲ್ಲದೆ ಚಂದ್ರನು ಆಕೆಯನ್ನು ನೋಡುತ್ತಲೂ ಇರಲಿಲ್ಲ , ಗಮನಿಸುತ್ತಲೂ ಇರಲಿಲ್ಲ.          ಹಲವು ಹುಡುಗರು ಚಂದ್ರಿಕಳಿಗೆ ಪ್ರೇಮ ಪತ್ರ ಬರೆಯುತ್ತಿದ್ದ ಕಾಲ ಅದು. ಆದರೆ, ಚಂದ್ರಿಕ ಚಂದ್ರನ ಪ್ರೇಮ ಪತ್ರಕ್ಕಾಗಿ ಕಾಯುತ್ತಿದ್ದಳು. ಹಾಗೆ ಅವಳು ಚಂದ್ರನಿಗೆ ಅದೆಷ್ಟೋ ಪ್ರೇಮಪತ್ರಗಳನ್ನು ಬರೆದು ಕಳಿಸಿ ಉತ್ತರಕ್ಕಾಗಿ ಕಾದುಕುಳಿತರೂ ಅವನಿಂದ ಒಂದಕ್ಕೂ ಮರುಪತ್ರ ಬರಲೇ ಇಲ್ಲ.          ಕಾಲೇಜು ಜೀವನ ಮುಗಿಸಿ ಅವರಿಬ್ಬರೂ ತಮ್ಮದೇ ದಾರಿಯಲ್ಲಿ ಹೆಜ್ಜೆಹಾಕಿದರು. ಚಂದ್ರಿಕ ತನ್ನ ಕುಲಕಸುಬಿಗೆ ಸೇರಿದರೆ, ಚಂದ್ರ ತಮ್ಮ ಪೂರ್ವಜರು ನಡೆಸಿಕೊಂಡು ಬರುತ್ತಿರುವ ಕಂಪೆನಿಯಲ್ಲಿ ಸೇರಿಕೊಂಡನು.   ಚಂದ್ರನು ಕಂಪೆನಿಯ ಮ್ಯಾನೇಜಿಂಗ್ ಪಾರ್ಟ್ನರಾದಾಗ ಕ್ರಮೇಣ ಶ್ರೀಮಂತರಾದರು. ಬೇಕಾದಷ್ಟು ಆಸ್ತಿ ಪಾಸ್ತಿಗಳು ಕೈಸೇರಿದವು. ಚಂದ್ರಿಕ ಮನೆಗೆ ಬಂದಾಗ ಬಂಧುಬಳಗದವರ ಘನತೆ ಹೆಚ್ಚಿತು. ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕಲಿತ ಚಂದ್ರಿಕಳಿಗೆ ಎಲ್ಲಾ ರೀತಿಯ ಜವಾಬ್ದಾರಿಗಳನ್ನು ಹೊರಲು ಸಾಮರ್ಥಳಾಗಿದ್ದಳು. ಆದ್ದರಿಂದಲೇ ಆಕೆಯ ಅಮ್ಮ ಎಲ್ಲಾ ಜವಾಬ್ದಾರಿಗಳನ್ನೂ ಚಂದ್ರಿಕಳ ಹೆಗಲ ಮೇಲೆ ಹೊರಿಸಿ ತಾವು ನಿಶ್ಚಿಂತೆಯಿಂದ ವಿಶ್ರಾಂತಿ ಜೀವನಕ್ಕೆ ಕಾಲಿರಿಸಿದರು.    ಆಂಗ್ಲ ಭಾಷೆಯ ಪತ್ರಿಕೆಗಳನ್ನು ಓದುವ ಚಂದ್ರಿಕ ಪ್ರತಿದಿನ ಮೊದಲು ಸ್ಪೋರ್ಟ್ಸ್ ಕಾಲಂ ನೋಡುವಳು. ಕಾರಣ, ವೈಟ್ ಲಿಫ್ಟಿಂಗಲ್ಲಿ ಚಂದ್ರನು ಹೊಸ ಹೊಸ ಪ್ರಯೋಗಗಳನ್ನು ಮಾಡುತ್ತಿದ್ದ ಕಾಲ ಅದಾಗಿತ್ತು.         ಹೀಗಿರುವಾಗ  ಒಂದುದಿನ ಚಂದ್ರನ ಕಾರು ಅಪಘಾತಕ್ಕೊಳಗಾಯಿತು. ಚಂದ್ರನು ಅಪ್ರಜ್ಞಾವಸ್ಥೆಯಲ್ಲಿ ತುಂಬ ದಿನ ಆಸ್ಪತ್ರೆಯಲ್ಲಿದ್ದ. ಪಕ್ಕದ ಕೋಣೆಯಲ್ಲೇ ಚಂದ್ರಿಕಳೂ ಅಪ್ರಜ್ಞಾವಸ್ಥೆಯಲ್ಲಿದ್ದಳು. ಪ್ರಜ್ಞೆ ಬಂದಾಗಷ್ಟೇ ಅವರಿಗೆ ತಿಳಿದದ್ದು ತಮ್ಮದೇ ಕಾರುಗಳು ಪರಸ್ಪರ ಢಿಕ್ಕಿ ಹೊಡೆದದ್ದೆಂದು.    ಮೊದಲು ಆಸ್ಪತ್ರೆ ಬಿಟ್ಟದ್ದು ಚಂದ್ರ. ಆತ ಚಂದ್ರಿಕಳನ್ನು ನೋಡಲು ಬಂದ. ಚಂದ್ರಿಕ ಗುಣಮುಖಳಾಗಿದ್ದರೂ ಒಂದು ವಾರ ವಿಶ್ರಾಂತಿ ತೆಗೆದುಕೊಳ್ಳಲು ವೈದ್ಯರು ತಿಳಿಸಿದ್ದರು. ಚಂದ್ರ ಅವತ್ತು ಮೊದಲ ಬಾರಿ ಚಂದ್ರಿಕಳನ್ನು ನೋಡಿದ. ಪರಸ್ಪರ ಕ್ಷೇಮಾನ್ವೇಷಣೆಯ ನಂತರ ಚಂದ್ರ ಕೇಳಿದ”ನಿಮಗಾಗಿ ನಾನೇನಾದರೂ ಮಾಡಬೇಕೇ?” ಚಂದ್ರಿಕಳು ಆತನನ್ನು ಮನೆಗೆ ಆಹ್ವಾನಿಸಲು ಆತ ಒಪ್ಪಿಕೊಂಡ.        ಹಾಗೆ ಚಂದ್ರನು ಚಂದ್ರಿಕಳ ಮನೆಗೆ ತಲುಪಿದ್ದು. ಎಲ್ಲವೂ ಒಂದು ಕಾರು ಅಪಘಾತ ತಂದಿಟ್ಟ ಭಾಗ್ಯ.   ಕುಡಿಯಲು ಪಾನೀಯ , ಕಲ್ಲುಸಕ್ಕರೆ ಸೇರಿಸಿದ ಹಾಲು, ಬದಾಮ್, ಮೊಸರು, ಬೇಯಿಸಿದ ಗೋಧಿಕಾಳು, ಕಾಯಿಸಿದ ಜೋಳ, ಸೂಪು, ದೊಡ್ಡ ತಟ್ಪೆಯಲ್ಲಿ ನೂಡಲ್ಸ್, ಎಲ್ಲವೂ ಊಟದ ಮೇಜನ್ನು ಅಲಂಕರಿಸಿದ್ದವು.   ಅಲ್ಲಿ ಗಾಢವಾದ ಮೌನವೊಂದಾವರಿಸಿತ್ತು. ತಲೆ ವಸ್ತ್ರಧರಿಸಿದ ಕೆಲಸದಾಳು ಒಂದು ಮೂಲೆಯಲ್ಲಿ ಅಪರಾಧಿಯಂತೆ ನಿಂತಿದ್ದನು. ಅವರಿಬ್ಬರೂ ಊಟಕ್ಕೆ ಬಂದು ಕುಳಿತರು. ಚಂದ್ರನು ಪಾನೀಯವನ್ನೂ ಚಂದ್ರಿಕ ಬೇಯಿಸಿದ ಗೋಧಿಕಾಳನ್ನೂ ತಿಂದು ಟಿಷ್ಯೂ ಪೇಪರಲ್ಲಿ ಕೈ ಒರೆಸುತ್ತಾ ಇಬ್ಬರೂ ಮಲಗುವ ಕೊಠಡಿಗೆ ಹೋದರು. ಇಬ್ಬರೂ  ಮಂಚದಲ್ಲಿ ಅಕ್ಕ ಪಕ್ಕದಲ್ಲಿ ಕುಳಿತು ಮಾತನಾಡಲು ತೊಡಗಿದರು. ” ನಿನಗೇನು ಬೇಕು” ಚಂದ್ರನು ಕೇಳಲು “ಕೇಳಿದ್ದೆಲ್ಲ ಕೊಡುತ್ತೀಯಾ?” ಎಂದು ಆಕೆ ಮರುಪ್ರಶ್ನೆ ಎಸೆದಳು. ಆತ ಕೊಡುವೆನೆಂದು ಒಪ್ಪಿದಾಗ ಚಂದ್ರಿಕ “ನೀವು ವೈಟ್ ಲಿಫ್ಟರಲ್ಲವೆ ಆದ್ದರಿಂದ ನನ್ನನ್ನು ನೀವು ಎತ್ತಬೇಕು. ನಿಮ್ಮ ಕೈಗಳಲ್ಲಿ ಒಂದು ಪುಟ್ಟ ಹಕ್ಕಿಯಂತೆ ನಾನು ಕುಳಿತುಕೊಳ್ಳಬೇಕೆಂಬ ಆಸೆಯಿದೆ” ಎಂದಳು. ಅದಕ್ಕೆ ಚಂದ್ರನು, “ಆದರೆ, ಇಲ್ಲಿ ಸ್ಥಳ ಸಾಕಾಗುವುದಿಲ್ಲ. ನಾವು ಕಡಲ ತೀರಕ್ಕೆ ಹೋಗುವ , ಅಲ್ಲಿ ನಾನು ನಿನ್ನನ್ನು ಮೇಲಕ್ಕೆತ್ತುತ್ತೇನೆ ಅದಾಗಿರಬಹುದು ನನ್ನ ಕೊನೆಯ ವೈಟ್ ಲಿಫ್ಟಿಂಗ್.” ಎಂದೊಡನೆ ಚಂದ್ರಿಕ ಒಪ್ಪಿದಳು.     ಆಕೆ ಬೇಗ ಬಟ್ಪೆ ಬದಲಾಯಿಸಿದಳು. ಖದರಿನ ಬಟ್ಟೆ, ಪಾದರಕ್ಷೆ ಧರಿಸಿದಳು. ಅಮೇರಿಕದಿಂದ ಗೆಳೆಯ ಕೊಟ್ಟು ಕಳುಹಿಸಿದ ಒಂದು ನೀಳವಾದ ಸ್ಕಾರ್ಫ್ ಇತ್ತು. ಮರಣಿಸಿದ ಆತನ ನೆನಪಿಗಾಗಿ ಅವಳು ಯಾವಾಗಲೂ ಜಾಗ್ರತೆಯಿಂದ ಅದನ್ನು ತೆಗೆದಿರಿಸಿದ್ದಳು.   ಅವರಿಬ್ಬರೂ ಕಾರು ಹತ್ತಿ ಹೊರಟರು. ಕಡಲ ತೀರದಲ್ಲಿ ಜನ ಕಡಿಮೆಯಿದ್ದ ಸ್ಥಳಕ್ಕೆ ಕಾರು ವೇಗವಾಗಿ ಓಡುತ್ತಿತ್ತು. ಚಂದ್ರಿಕ  “ಚಂದ್ರ ಒಂದು ಹಾಡು ಹಾಡುತ್ತೀಯಾ?” ಕೇಳಿದಳು. ಚಂದ್ರನು ಹಾಡಲು ತೊಡಗಿದ. I tried to sleep to kill the pain When I wake it’s still the same Cause am living in this world you left behind I just like a broken piece of glass You have swept me aside to pass Leaving shetterd dreams in my heart to stay I am  just a fool to sit and cry Washing years before I die In this lonely world This world you left behind ಅವಳು ಹಾಡಿನ ಗುಂಗಿನಲ್ಲಿದ್ದಳು. ಓಡುತ್ತಿರುವ ಕಾರಿನಿಂದ ಅವಳ ಸ್ಕಾರ್ಫ್ ನ ತುದಿಯೊಂದು ಹೊರಗೆ ಗಾಳಿಗೆ ಹಾರುತ್ತಿತ್ತು. ಹಾರುತ್ತಾ ಹಾರುತ್ತಾ ಅದು ಹಿಂದಿನ ಚಕ್ರಕ್ಕೆ ಸಿಕ್ಕಿಕೊಂಡರೆ, ಮತ್ತೊಂದು ತುದಿ ಅವಳ ಕುತ್ತಿಗೆಯನ್ನು ಬಂಧಿಸಿತು. ಆಕಗೆ ಉಸಿರುಗಟ್ಟಿದಾಗಲೇ ಪರಿಸರ ಪ್ರಜ್ಞೆ ಬಂದದ್ದು. ಕೈಕಾಲುಗಳನ್ನು ಅಲುಗಾಡಿಸಲು ಅವಳಿಂದ ಸಾಧ್ಯವಾಗಲಿಲ್ಲ. “ಚಂದ್ರಾ… ರಕ್ಷಿಸು” ಎಂದರೂ ಆಕೆಯ ಕಂಠದಿಂದ ಸ್ವರ  ಹೊರಬರಲೇ ಇಲ್ಲ. ಕ್ಷಣದೊಳಗೆ ಆಕೆಯ ಜೀವ ಸಂಗೀತ ಸಾಗರದಲ್ಲಿ ವಿಲೀನವಾಯಿತು. ಇದನ್ನೊಂದೂ ತಿಳಿಯದೆ ಆಗಲೂ ಚಂದ್ರ ಹಾಡುತ್ತಲೇ ಇದ್ದ. I am  just a fool to sit and cry Washing years before I die In this lonely world This world you left behind ……

ಕಥಾಯಾನ Read Post »

You cannot copy content of this page

Scroll to Top