ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ

ಸಂತಾಪ

ಕನ್ನಡದ ಪ್ರಮುಖ ಕಥೆಗಾರ್ತಿ ಶಾಂತಾದೇವಿ ಕಣವಿಯವರು ಕನ್ನಡ ನಾಡಿನ ಪ್ರಮುಖ ಕಥೆಗಾರ್ತಿ,ಶುದ್ಧ ಕನ್ನಡ ಜನಪದ ಹೃದಯ ಶ್ರೀಮಂತಿಕೆಯ ಸಹಕಾರ ಮೂರ್ತಿ, ಲೇಖಕಿ,⁣ಹಿರಿಯ ಕವಿ, ವಾತ್ಸಲ್ಯಮಯಿ, ಸಮರಸವೇ ಜೀವನ ಎಂದು ಬಾಳು ಬದುಕಿದ ಕವಯಿತ್ರಿ. ಉತ್ತರ ಕರ್ನಾಟಕದ ದೇಸಿ ಸೊಬಗು, ಧ್ವನಿಪೂರ್ಣ ಭಾಷೆ, ತಂತ್ರಗಾರಿಕೆ, ಕಸರತ್ತಿಲ್ಲದ ಬರವಣಿಗೆ ವೈಶಿಷ್ಟ್ಯ ಸಾಕ್ಷಿಕರಿಸಿದ್ದ ಸಾಹಿತಿ ಶಾಂತಾದೇವಿ ಕಣವಿಯವರು.ಹಾಗಾಗಿ ಕನ್ನಡ ಸಾಹಿತ್ಯ ಲೋಕದ ಅನುಪಮ ದಂಪತಿಗಳಲ್ಲಿ ಪ್ರಮುಖವಾಗಿ ಬಂದು ನಿಲ್ಲುವ ಹೆಸರು ಶಾಂತಾದೇವಿ ಕಣವಿ ಮತ್ತು ಚನ್ನವೀರ ಕಣವಿಯವರು ಬಂಧುಗಳೆ. ಜನನ/ಜೀವನ : ವಿಜಾಪುರದಲ್ಲಿ 12-01-1933 ರಂದು ಸಿದ್ಧಬಸಪ್ಪ ಮತ್ತು ಭಾಗೀರಥಿದೇವಿ ದಂಪತಿಗಳ ಮಗಳಾಗಿ ಶಾಂತಾದೇವಿಯರು ಜನಿಸಿದರು. ಇವರ ಶಿಕ್ಷಣ ಪ್ರಾಥಮಿಕ ವಿದ್ಯಾಭ್ಯಾಸ ವಿಜಾಪುರದಲ್ಲಿ, ಮಾಧ್ಯಮಿಕ ವಿದ್ಯಾಭ್ಯಾಸ ರೋಣ ಹಾಗೂ ರಾಣಿ ಬೆನ್ನೂರು, ಬೈಲಹೊಂಗಲಗಳಲ್ಲಿ ಆಗಿರುತ್ತಿದೆ. ಶಾಂತಾದೇವಿಯವರಿಗೆ ಮನೆಯಲ್ಲಿದ್ದ ಸಾಂಸ್ಕೃತಿಕ ವಾತಾವರಣದಿಂದ ಸಹಜವಾಗೆಂಬಂತೆ ಸಾಹಿತ್ಯದ ಹುಚ್ಚು ಹೆಚ್ಚತೊಡಗಿತ್ತು. ಹಾಗಾಗಿ ಸಾಹಿತ್ಯದ ಹೆಚ್ಚಿನ ಒಲವು ಇದ್ದ ಕಾರಣದಿಂದ. ಮನೆಯಲ್ಲಿ ಇಂಗ್ಲಿಷ್, ಕನ್ನಡ ಪುಸ್ತಕಗಳ ದೊಡ್ಡ ಭಂಡಾರವನ್ನೇ ಹೊಂದಿದ್ದರು ಮತ್ತು ಶಾಂತಾದೇವಿ ಅವರಿಗೆ ತಂದೆಯಿಂದಲೇ ‘ಜೇನ್ ಆಸ್ಟಿನ್’ಳ ಕಾದಂಬರಿ ಕುರಿತು ಓದು – ಬರವಣಿಗೆಯ ಪರಿಚಯ ಬಹಳ ಆಗಿತ್ತು ಹಾಗೂ ಸಾಹಿತ್ಯ ಮತ್ತು ಅಧ್ಯಾತ್ಮ ಕೃತಿಗಳಿಗೆ ಮೊದಲ ಪ್ರಾಶಸ್ತ್ಯ ನೀಡುವ ಜೊತೆಗೆ ಹಿರಿಯ ಸಾಹಿತಿಗಳ ಮಾರ್ಗದರ್ಶನ ಸಹ ಇವರಿಗೆ ಲಭಿಸಿತು. ಹೀಗಾಗಿ ಸಾಹಿತ್ಯ ಕ್ಷೇತ್ರದಲ್ಲಿ ಅಪ್ರತಿಮ ಸಾಧನಾ ಸೇವೆ ಮಾಡಲು ಉತ್ತೇಜನ ಪಡೆದರು ಎನ್ನಬಹುದು. ಇದಲ್ಲದೆ ಚಿಕ್ಕವರಿದ್ದಾಗ ತಂದೆ ತಾಯಿಯರಂತೆ ಭಾವಗೀತೆಗಳನ್ನು ಹಾಡುತ್ತಿದ್ದರು. ಧಾರವಾಡಕ್ಕೆ ಬಂದ ಮೇಲೆ ಆಕಾಶವಾಣಿಯಲ್ಲಿಯೂ ಹಾಡಿದರು. “ಭಾವಗೀತೆಯನ್ನು ಹಾಡಿದರೂ ಭಾವಜೀವಿಯಲ್ಲ ನಾನು ಎನ್ನುತ್ತಿದ್ದರು. ಹೀಗಾಗಿ ಕಥೆ ಬರೆಯುವುದನ್ನು ರೂಢಿಸಿಕೊಂಡೆ” ಎಂಬುದು ಅವರ ಸ್ವಯಂ ನುಡಿಯಾಗಿತ್ತು.ಇದೆ ಸಮಯದಲ್ಲಿ ಚನ್ನವೀರ ಕಣವಿಯವರೊಡನೆ ಮದುವೆ ನಿಶ್ಚಯ. ಓದಿಗೆ ವಿರಾಮ ನೀಡಿದರು.1952ರಲ್ಲಿ ಮದುವೆಯಾದ ನಂತರ ಪ್ರೇರಣೆ-ಬರವಣಿಗೆ. ಶಾಂತಾದೇವಿಯವರು ಬರೆದ ಹಲವಾರು ಕಥೆಗಳು ಪ್ರಕಟಿತ. ಓದುಗರಿಂದ ಪ್ರಶಂಸೆ, ಕಥೆಗಾರ್ತಿಯ ಉದಯ. ಉತ್ತರ ಕರ್ನಾಟಕದ ದೇಸಿ ಸೊಬಗು, ಧ್ವನಿಪೂರ್ಣ ಭಾಷೆ, ತಂತ್ರಗಾರಿಕೆ, ಕಸರತ್ತಿಲ್ಲದ ಬರವಣಿಯಲ್ಲಿ ವೈಶಿಷ್ಟ್ಯಕಾಣುತ್ತೇವೆ. ಹಾಗೆ ಜಿ.ಬಿ. ಜೋಶಿಯವರ ಮನೋಹರ ಗ್ರಂಥಮಾಲೆಯ ‘ನಡೆದು ಬಂದ ದಾರಿ’ ಸಂಪುಟಕ್ಕಾಗಿ ಕೀರ್ತಿನಾಥ ಕುರ್ತಕೋಟಿಯವರು ಶಾಂತಾದೇವಿ ಅವರನ್ನು ಕಥೆ ಕೇಳಿದರು. ‘ಮಂಜು ಕರಗಿತು’ ಎಂದು ಕಥೆ ಕಳಿಸಿದರು. ದೊಡ್ಡ ದೊಡ್ಡ ಲೇಖಕರ ಜೊತೆಗೆ ತಮ್ಮ ಫೋಟೊ ಸಮೇತ ಕಥೆ ಪ್ರಕಟಗೊಂಡಾಗ ಶಾಂತಾದೇವಿ ಅವರಿಗೆ ಆದ ಆನಂದಕ್ಕೆ ಲಕ್ಕವಿಲ್ಲ. ಇದು ಅವರ ಪ್ರಥಮ ಹೆಜ್ಜೆ. ಅದೇ ಕಥೆಯನ್ನು ಮೈಸೂರು ವಿಶ್ವವಿದ್ಯಾಲಯದ ಹಿಂದಿ ವಿಭಾಗದ ಡಾ.ಎನ್. ನಾಗಪ್ಪ ಅವರು ಹಿಂದಿಯಲ್ಲಿ ‘ಹಿಮ್ ಚಲ್ ಗಯಾ’ ಎಂದು ಅನುವಾದಿಸಿದ್ದು ಕೊಲ್ಕತ್ತದ ‘ಅಣಿಮಾ’ ಪತ್ರಿಕೆಯ ಪ್ರೇಮಾಂಕ ಎಂಬ ವಿಶೇಷ ಸಂಚಿಕೆಯಲ್ಲಿ ಫೋಟೊ ಸಹಿತ ಪ್ರಕಟಗೊಂಡಿತ್ತು. ಹೀಗೆ ಪ್ರಥಮ ಹೆಜ್ಜೆಯಲ್ಲೇ ಅವರ ಸಾಹಿತ್ಯ ಸೇವೆ ವಿಶಾಲವ್ಯಾಪ್ತಿ ಹರಡಿತ್ತು ಎಂದರೆ ತಪ್ಪಾಗಲಾರದು. ಸಾಹಿತ್ಯ ಸೇವೆ : ಸಾಮಾನ್ಯ ಮಹಿಳೆಯರ ಬದುಕನ್ನು ಕಥೆಗಳಲ್ಲಿ ಅನಾವರಣಗೊಳಿಸುತ್ತ, ಉತ್ತರ ಕರ್ನಾಟಕದ ಆಡುಭಾಷೆಯನ್ನು ಹಿಡಿದಿಟ್ಟವರು ಶಾಂತಾದೇವಿ ಕಣವಿರವರು.ಹಿಂದೆ ಮಹಿಳಾ ಸಾಹಿತ್ಯ ಎಂದು ಪ್ರತ್ಯೇಕಿಸುತ್ತಿದ್ದರು. ಈಗ ಪುರುಷರ ಸಮಾನವಾಗಿ ಲೇಖಕಿಯರು ಬರೆಯುತ್ತಿದ್ದಾರೆ. ಹೀಗಾಗಿ ಮಹಿಳಾ ಸಾಹಿತ್ಯ ಎನ್ನಬೇಕಿಲ್ಲ. ಜೊತೆಗೆ ಪ್ರತ್ಯೇಕವಾಗಿ ನೋಡಬೇಕಾದ ಅಗತ್ಯವಿಲ್ಲ ಎಂಬುದು ಶಾಂತಾದೇವಿ ಅವರ ಖಚಿತ ದೃಡ ನಿಲುವಾಗಿತ್ತು.ಸಾಹಿತ್ಯ ಕ್ಷೇತ್ರದಲ್ಲಿ ಶಾಂತಾದೇವಿ ಅವರ ಮೊದಲ ಕಥಾ ಸಂಕಲನ ‘ಸಂಜೆಮಲ್ಲಿಗೆ’ 1967ರಲ್ಲಿ ಪ್ರಕಟವಾಯಿತು. ಆಮೇಲೆ ‘ಬಯಲು ಆಲಯ’, ‘ಮರುವಿಚಾರ’, ‘ಜಾತ್ರೆ ಮುಗಿದಿತ್ತು’, ‘ಕಳಚಿ ಬಿದ್ದ ಪೈಜಣ’, ‘ನೀಲಿಮಾ ತೀರ’, ‘ಗಾಂಧಿ ಮಗಳು’ ಹಾಗೂ ‘ಈಚಿನ ಕಥೆಗಳು’ ಸಂಕಲನ ಪ್ರಕಟಗೊಂಡವು. ಸಮಗ್ರ ಕಥೆಗಳು ‘ಕಥಾಮಂಜರಿ’ (2002) ಹಾಗೂ ‘ಇನ್ನೊಂದು ಸಂಪುಟ’ (2005) ಎರಡು ಸಂಪುಟಗಳಲ್ಲಿ ಪ್ರಕಟಗೊಂಡವು. ಧಾರವಾಡ ಆಕಾಶವಾಣಿಯಲ್ಲಿ ಅವರ ಕಥೆ, ರೂಪಕ, ಕಿರುನಾಟಕ, ಹಾಸ್ಯ, ಕಥೆಗಳು ಪ್ರಸಾರಗೊಂಡವು. ಜೊತೆಗೆ ಹರಟೆಗಳ ಸಂಕಲನ ‘ಅಜಗಜಾಂತರ’ ಪ್ರಕಟಗೊಂಡಿತು. ನಿಜಗುಣ ಶಿವಯೋಗಿ ಮಕ್ಕಳ ಪುಸ್ತಕವಾಗಿ ಪ್ರಕಟಿತಗೊಂಡಿತು. ಹಾಗಾಗಿ ಅವರ ಕಥೆಗಳಲ್ಲಿ ತುಂಬ ಇಷ್ಟವಾದ ಕಥೆಗಳು, ಅವರು ಬರಹದಲ್ಲೂ ಕೂಡ ಕಾಣಬಹುದಾಗಿದೆ, ಪ್ರತಿ ಪಾತ್ರ, ಹಳ್ಳಿಯ ಹೆಣ್ಣು ಮಕ್ಕಳ ನೈಜ ಮುಗ್ಧತೆ, ಕಷ್ಟ, ಸಂಕಷ್ಟ, ಹೆಚ್ಚು ಕನಸಿರದ ಇದ್ದೊಂದು ಕನಸೂ ಕೈಗೂಡದ, ಈಗಲೂ ಜೀವಂತ ಪ್ರಸ್ತುತ ಅನ್ನುವ ಕಥೆಗಳಾಗಿವೆ ಜೊತೆಗೆ ಹಲವಾರು ಕಥೆಗಳು ಹಿಂದಿ, ಇಂಗ್ಲಿಷ್, ಮಲೆಯಾಳಂಗಳಿಗೆ ಭಾಷಾಂತರಗೊಂಡಿವೆ. ಪ್ರಮುಖ ಕೃತಿಗಳು ಹೀಗಿವೆ : ಕಥಾಸಂಕಲನ – ಸಂಜೆಮಲ್ಲಿಗೆ,ಬಯಲು—ಆಲಯ, ಮರುವಿಚಾರ,ಜಾತ್ರೆ ಮುಗಿದಿತ್ತು,ಕಳಚಿ ಬಿದ್ದ ಪೈಜಣ, ನೀಲಿ ಮಾ ತೀರ,ಗಾಂಧೀ ಮಗಳು. ಲಲಿತ ಪ್ರಬಂಧ – ಅಜಗಜಾಂತರ,ಮಕ್ಕಳ ಸಾಹಿತ್ಯ ನಿಜಗುಣಿ ಶಿವಯೋಗಿ. ಸಂಪಾದನೆ – ಪ್ರಶಾಂತ ಎನ್ನುವ ಕೃತಿಗಳು ನಾಡಿಗೆ ಅರ್ಪಣೆ ಮಾಡಿದ್ದಾರೆ. ಸಂಧ ಪ್ರಶಸ್ತಿ /ಗೌರವಗಳು : ಶಾಂತಾದೇವಿ ಕಣವಿ ಅವರ ‘ಬಯಲು-ಆಲಯ’ ಕಥಾಸಂಕಲನಕ್ಕೆ 1974ರ ಸಾಹಿತ್ಯ ಅಕಾಡಮಿ ಬಹುಮಾನ. 1987ರಲ್ಲಿ ಅಕಾಡಮಿ ಪ್ರಶಸ್ತಿ ಪುರಸ್ಕಾರ, ದಾನಚಿಂತಾಮಣಿ ಅತ್ತಿಮಬ್ಬೆ ಪುರಸ್ಕಾರವೂ ಸೇರಿದಂತೆ ಇನ್ನೂ ಇವರ ಸಾಹಿತ್ಯ ಸೇವೆಗೆ ಅನೇಕ ಗೌರವ ಸನ್ಮಾನಗಳು ದೊರಕಿವೆ. ಕೊನೆಯದಾಗಿ : ಶಾಂತದೇವಿಯವರ ಸಾಹಿತ್ಯದಲ್ಲಿ ಪ್ರಖರವಾಗಿ ಗುರುತಿಸಿಕೊಳ್ಳಬಹುದಾದ ಮೌಲ್ಯಾಧಾರಿತ ವೈಜ್ಞಾನಿಕ ವೈಚಾರಿಕ ಚಿಂತನೆಗಳ ವಿಚಾರಗಳು ಅವರ ಕೃತಿಗಳಲ್ಲಿ ನಾವೆಲ್ಲರೂ ಕಾಣಬಹುದಾಗಿದೆ.ಹೀಗಾಗಿ ಅವರ ಕೃತಿಗಳು ಇಂದಿನ ಸಮಾಜಕ್ಕೆ ಅತಿ ಅವಶ್ಯ ಹಾಗೂ ಮಾರ್ಗದರ್ಶನವಾಗಿವೆ. ಭಕ್ತಿಯ ನಮನ : ಕನ್ನಡ ಸಾಹಿತ್ಯ ಲೋಕಕ್ಕೆ ಶಾಂತಾದೇವಿ ಕಣವಿಯವರು ಬಹು ದೊಡ್ಡ ಶಕ್ತಿಯಾಗಿದ್ದರು.ಶಾಂತಾದೇವಿ ಕಣವಿಯವರ ಅಗಲಿಕೆ ದುಃಖ ತಂದಿದೆ. ಈ ದುಃಖವನ್ನು ತಾಳಿಕೊಳ್ಳುವ ಶಕ್ತಿ ಹಿರಿಯ ಸಾಹಿತಿ ಚೇತನರಾದ ಚನ್ನವೀರ ಕಣವಿಯವರಿಗೂ ಮತ್ತು ಕುಟುಂಬಕ್ಕೆ ಬರಲಿ. ಅಗಲಿದ ಮಹಾನ್ ಚೇತನಕ್ಕೆ ಅಂತರಾಳದ ಭಕ್ತಿಯ ನಮನಗಳು ಸಲ್ಲಿಸುತ್ತೇವೆ. ******** ಸಂಗಮೇಶ ಎನ್ ಜವಾದಿ

ಸಂತಾಪ Read Post »

ಕಾವ್ಯಯಾನ

ಕಾವ್ಯಯಾನ

ಮನದ ಮಾಮರ ಸುವರ್ಣ ವೆಂಕಟೇಶ್ ಮನದ ಮಾಮರಕ್ಕೆ ಮದ ಮತ್ಸರದ ಕಟ್ಟೆ ಕಟ್ಟಿ ಸ್ವಾರ್ಥದ ಜಲವ ಹರಿಸಿ ಬೇರು ಪಸರಿಸಿ ನೇರಳಾಗಿ ನಿಲ್ಲು ಎಂದೊಡನೆ ಎಂತಯ್ಯಾ!! ಮೋಹದ ಕಿರಣವ ತಾಡಿಸಿ ಬೆಂಕಿಯ ಮಳೆ ಸುರಿಸಿ ಮರಳುಗಾಡಿನಲ್ಲಿ ನೆಡಸಿ ಹಚ್ಚ ಹಸಿರಿನ ತರು ಲತೆ ಹೊತ್ತು ಎದ್ದು ನಿಲ್ಲಂದರೆ ಎಂತಯ್ಯಾ!! ಭಾವ ಇಲ್ಲದ ಭಕುತಿ ತೋರಿಸಿ ಅಹಂಕಾರದ ತೊಗಟೆ ಊಡಿಸಿ ಬಿಸಿಲಿನಿಂದ ಬಲೆಯ ಹೆಣೆದು ವಿಷ ಬೀಜವ ಬಿತ್ತಿ ಅಮೃತದ ಸಿಹಿ ಬಯಸಿದೋಡನೆ ಎಂತಯ್ಯಾ!! *********

ಕಾವ್ಯಯಾನ Read Post »

ಕಥಾಗುಚ್ಛ

ಕಥಾಯಾನ

  ಸರಸ್ವತಿ ಜಿ. ಹರೀಶ್ ಬೇದ್ರೆ ಸರಸ್ವತಿ ಮುಂಜಾನೆ ಬೇಗನೇ ಎದ್ದು ಗಂಡ ಮಕ್ಕಳಿಗೆ ಕಾಫಿ ತಿಂಡಿ ಮಾಡಿಕೊಟ್ಟು  ಅಂಗಡಿಯ ಬಳಿ ಬರುವ ಹೊತ್ತಿಗೆ ಎಂಟು ಗಂಟೆಯಾಗಿತ್ತು. ಆಗಲೇ  ಸಾಮಾಜಿಕ ಅಂತರ ಬಳಸಿ ನಿಂತಿದ್ದ ಕ್ಯೂ ಹೆಚ್ಚುಕಮ್ಮಿ ಅರ್ಧ ಕಿ.ಮೀ.ಗಿಂತ ಉದ್ದವಿತ್ತು. ಅಂಗಡಿ ತೆರೆಯಲು ಇನ್ನೂ ಒಂದು ಗಂಟೆ ಬಾಕಿ ಇತ್ತು. ಅಯ್ಯೋ ಏನಪ್ಪಾ ಮಾಡುವುದು ಎಂದು ಗೊಣಗುತ್ತಲೇ ಸರತಿಯಲ್ಲಿ ನಿಂತಳು. ಕ್ಷಣಕ್ಷಣಕ್ಕೂ ಕ್ಯೂ ಹನುಮಂತನ ಬಾಲದಂತೆ ಬೆಳೆಯುತ್ತಲೇ ಹೋಯಿತು. ಜನರನ್ನು ನಿಯಂತ್ರಿಸಲು ಒಂದಿಬ್ಬರು ಪೋಲಿಸರು ಬಂದರು. ಅವರು ಹಿಂದೆ ಮುಂದೆ ಓಡಾಡುವಾಗ ಸರಸ್ವತಿಯನ್ನು ನೋಡಿ,  ಆಶ್ಚರ್ಯವನ್ನು ತಡೆದುಕೊಳ್ಳಲಾರದೆ ನಿಮಗೂ ಬೇಕಾ ಎಂದು ಕೇಳಿದರು. ಇವಳು ಬೇಕು ಎನ್ನುವಂತೆ ತಲೆ ಆಡಿಸಿದಳು. ಸರಿ ಸರಿ ಮೊದಲು ಮುಖಕ್ಕೆ ಮಾಸ್ಕ್ ಹಾಕಿಕೊಳ್ಳಿ ಎಂದು, ಇವರಿಗೆ ಯಾವಾಗ ಏನು ಸಿಗುತ್ತೆ ಗೊತ್ತು, ಹೊರಗಡೆ ಹೇಗೆ ಬರಬೇಕು ಗೊತ್ತಿಲ್ಲ ಮುಂತಾಗಿ ಹೇಳುತ್ತಾ ಮುಂದೆ ಸಾಗಿದರು.  ಪೋಲಿಸರಷ್ಟೇ ಅಲ್ಲದೆ ಆ ದಾರಿಯಲ್ಲಿ ಹೋಗಿ ಬರುವವರು ಸರಸ್ವತಿಯನ್ನು ವಿಚಿತ್ರವಾಗಿ ನೋಡುತ್ತಾ, ಅವಳು ಬಗ್ಗೆಯೇ ಹಗುರವಾಗಿ ಮಾತನಾಡುತ್ತಾ ಸಾಗುತ್ತಿದ್ದರು. ಇದನ್ನು ಗಮನಿಸಿದರೂ ಸರಸ್ವತಿ ಕ್ಯೂನಲ್ಲಿ ಅಂಗಡಿ ತೆರೆಯುವುದನ್ನೇ ಕಾಯುತ್ತಾ ನಿಂತಳು. ಒಂಬತ್ತು ಗಂಟೆಗೆ ಹತ್ತು ನಿಮಿಷ ಇರುವಾಗಲೇ ಅಂಗಡಿ ಬಾಗಿಲು ತೆರೆಯಿತು. ಅಲ್ಲಿಯವರೆಗೆ ಸಂಯಮದಿಂದ ನಿಂತಿದ್ದ ಜನ ಸಾಮಾಜಿಕ ಅಂತರ ಮರೆತು ನುಗ್ಗಿದರು.  ಅವರಂತೆ ನುಗ್ಗಲು ಸಾಧ್ಯವಾಗದೆ, ಏನು ಮಾಡಬೇಕೆಂದು ತಿಳಿಯದೆ ಅಂಗಡಿ ಹತ್ತಿರದಲ್ಲೇ ಕಾಯುತ್ತಾ ನಿಂತಳು. ಜನರ ನುಗ್ಗಾಟ ಪೋಲಿಸರ ಹಿಡಿತಕ್ಕೂ ಬರಲಿಲ್ಲ.  ಇವಳು ಅಲ್ಲೇ ಹಾಗೆ ಕಾಯುತ್ತಲೇ ಇದ್ದಳು. ಇದನ್ನು ಗಮನಿಸಿದ ಪೋಲಿಸರು, ನೀವು ಇಲ್ಲಿ ನಿಂತಿದ್ದರೆ ನಿಂತೇ ಇರುತ್ತೀರಿ, ಏನು ಬೇಕು ಹೇಳಿ ಹಣಕೊಡಿ ತಂದುಕೊಡುತ್ತೇವೆ ಎಂದರು.  ಸರಸ್ವತಿ ಹೇಳಿ ಹಣ ಕೊಟ್ಟಳು. ಪೋಲಿಸಿನವರು ತಂದುಕೊಟ್ಟಿದ್ದನ್ನು ಹಿಡಿದು ಮನೆಗೆ ಬಂದವಳೇ , ಮನೆಯಲ್ಲೇ ಆಸೆಯಿಂದ ದಾರಿ ಕಾಯುತ್ತಿದ್ದ ಗಂಡನ ಮುಂದೆ ಇಟ್ಟಳು. ಒಂದುವರೆ ತಿಂಗಳಿಂದ ಒಂದು ಹನಿಯೂ ಸಿಗದೆ ಸತ್ತೇ ಹೋಗುವವನಂತೆ ಆಗಿದ್ದ ಅವನ ಮುಖದಲ್ಲಿ ಜೀವಕಳೆ ಮೂಡಿತು. ಇದನ್ನು ಕಂಡ ಸರಸ್ವತಿಗೆ, ಕ್ಯೂನಲ್ಲಿ ನಿಂತಾಗ ಇವಳನ್ನು ಅಸಹ್ಯವಾಗಿ ನೋಡಿ, ಮಾತನಾಡಿದ ಜನರ ಎಲ್ಲಾ ವಿಚಾರಗಳು ಮರೆತು ಹೋಯಿತು. **********

ಕಥಾಯಾನ Read Post »

ಕಾವ್ಯಯಾನ

ಕಾವ್ಯಯಾನ

ಟಂಕಾ ರೇಖಾ ವಿ.ಕಂಪ್ಲಿ ೧ . ಲಲಿತ ರಾಗ ಕಲಿತೆನು ಈಗ ನಿನ್ನ ಜೊತೆಗೆ ಭಾವ ತುಂಬಿ ಕೊಡುವ ಪ್ರೇಮ ಸುಧೆಯೊಳಗೆ…… ೨. ನಿನಗೆ ಬೊಜ್ಜು ಮೂರ್ನಾಲ್ಕು ಗೊಜ್ಜನು ತಿಂದೆ ಏತಕೆ ಆ್ಯಸಿಡಿಟಿ ಕಾರಣ ಹಾಳಾಯಿತು ಹೊಟ್ಟೆ……. ೩. ಯಾಕೆ ಹುಡುಗ ತಂಟೆ ಮಾಡುತಿಯಾ ಒಂಟಿತನಕೆ ಭಂಗ ಮಾಡಬೇಡ ಬಿಟ್ಟು ಹೋಗ ಬೇಡ……… ೪. ನೀ ಕೊಟ್ಟ ಪೆಟ್ಟು ಮರಿಲಿಲ್ಲ ಗುರು ಆಧಾರವಾದೆ ನನ್ನ ಜೀವನದ ಬಂಡಿ ಸಾಗಿಸಲು….. ********* ರೇಖಾ ವಿ ಕಂಪ್ಲಿ

ಕಾವ್ಯಯಾನ Read Post »

ಕಥಾಗುಚ್ಛ

ಮಕ್ಕಳ ಕಥೆ

“ಕತ್ತೆಗೊಂದು ಕಾಲ”  ಅದು ಗಿರಿಕಂದರ ಪರ್ವತ ಶ್ರೇಣಿಗಳ ನಾಡು. ಅಲ್ಲಿ ಜಯದೇವ ಅರಸನು ರಾಜ್ಯ ಆಳುತಿದ್ದನು. ಆತ ತನ್ನ ಆಸ್ಥಾನದಲ್ಲಿ ಕುದುರೆಗಳ ಜೊತೆಗೆ ಕತ್ತೆಗಳನ್ನು ಸಾಕಿದ್ದನು. ಎಲ್ಲ ರಾಜರು ಕುದುರೆ ಸಾಕುತಿದ್ದರೆ, ಈತ ಮಾತ್ರ ಎರಡನ್ನು ಸಾಕುತಿದ್ದನು. ಈ ಮಾತು ರಾಜ್ಯದ ಎಲ್ಲ ಜನರಿಗೆ ಅಷ್ಟೆ ಅಲ್ಲ, ಕುದುರೆಗಳಿಗೂ ಆಶ್ಚರ್ಯವಾಗಿತ್ತು.                ಒಂದು ದಿನ ಸೇವಕರು ಕುದುರೆ ಮತ್ತು ಕತ್ತೆ ಒಟ್ಟಿಗೆ ಬಯಲಲ್ಲಿ ಮೈಯಲು ಬಿಟ್ಟರು. ಆಗ ಮೈಯುತ್ತಾ ಕುದುರೆ ಒಮ್ಮೇಲೆ ಹುಂಕರಿಸುತ್ತಾ ಕತ್ತೆಗೆ, “ಏ.. ಕತ್ತೆ, ನಿನ್ನದೇನೆ ಇಲ್ಲಿ ಕೆಲಸ..?” ಎಂದು ತೆಗಳಿ ನಕ್ಕಿತು. ಆಗ ಕತ್ತೆ, “ಕುದುರೆಯಣ್ಣಾ, ನಾವು  ಏನಾದರೂ ರಾಜನಿಗೆ ಉಪಯೋಗ ಬರುತ್ತಿರಬಹುದು, ಆ ಕಾರಣವೇ ಆತ ನಮಗೆ ಸಾಕಿರಬೇಕಲ್ಲ..!” ಎಂದು ಹೇಳಿ  ಸುಮ್ಮನೆ ಹುಲ್ಲು ತಿನ್ನುವದು. ಆದರೆ ಕುದುರೆ ಸುಮ್ಮನಾಗದೆ, “ ಏ.. ಮುರ್ಖ ಕತ್ತೆ, ನಿನಗೆ ತಿನ್ನುವದನ್ನು ಬಿಟ್ಟು ಮತ್ತೇನು ಬರುತ್ತೆ ಹೇಳು. ನೋಡು, ಯುದ್ಧ ಮಾಡಲು ನಾವು ಹೋಗುತ್ತೇವೆ, ಪ್ರಯಾಣ ನಮ್ಮಿಂದಲೆ, ಓಟದ ಸ್ಪರ್ಧೆಯಾಗಲಿ ಹಬ್ಬ ಉತ್ಸವ ಆಗಲಿ ನಮ್ಮನ್ನೆ ಬಳಿಸುವರು. ನಿನ್ನ ಒಂದಾದರೂ ಉಪಯೋಗ ಹೇಳು ನೊಡೋಣ..” ಎಂದು ಮತ್ತೆ ಕೆಣಕಿತು. ಆಗ ಅದು, “ಕುದುರೆಯಣ್ಣಾ ನೀನು ಜಾಣ ಎಂಬುದು ನನಗೆ ಗೊತ್ತು. ಆದರೆ ಪ್ರತಿಯೊಂದು ಪ್ರಾಣಿಗಳು ಹುಟ್ಟಿದ್ದು, ಏನಾದರೂ ಮಾಡಲಿಕ್ಕೆ. ನಮಗೂ ಒಂದು ಕಾಲ ಬರುತ್ತೆ..” ಎಂದು ಹೇಳಿ ಕತ್ತೆ ದೊಡ್ಡಿಗೆ, ಕುದುರೆ ಲಾಯಕ್ಕೆ ಹೋದವು.              ಕೆಲ ದಿನಗಳ ನಂತರ ವೈರಿ ರಾಜನು ಯುದ್ಧ ಸಾರಿ ಹೊರಟಾಗ ಜಯದೇವನು ಪ್ರತಿ ಹಲ್ಲೆಗಾಗಿ ಅಶ್ವದಳದ ಸಿದ್ಧತೆ ಮಾಡಿಕೊಳ್ಳಿ ಎಂದು ಅಪ್ಪಣೆ ಕೊಟ್ಟನು. ಆಗ ಸೇವಕರು ಕುದುರೆಗಳಿಗೆ ಹೆಚ್ಚಿನ ಶಕ್ತಿದಾಯಕ ಆಹಾರ ಕೊಡಲು ಪ್ರಾರಂಭ ಮಾಡುತ್ತಾರೆ. ಕುದುರೆ ಲಾಯ ಮತ್ತು ಕತ್ತೆಯ ದೊಡ್ಡಿಯ ಮಧ್ಯ ತಂತಿಯ ಸಂರಕ್ಷಣೆ ಅಷ್ಟೆ. ಆಗ ಕತ್ತೆಯನ್ನು ನೋಡಿ ಕುದುರೆ, “ನೋಡಿದಿಯಾ ಕತ್ತೆ, ನಾವು ಯುದ್ಧಕ್ಕೆ ಹೊರಟಿದ್ದೇವೆ. ಅದಕ್ಕೆ ನಮಗೆ ಒಳ್ಳೊಳ್ಳೆ ರುಚಿಕರ ಚಂದಿ, ನಿನಗೆ ಬರಿ ಹುಲ್ಲು..” ಎಂದು ಹುಂಕರಿಸಿ ನಗುತ್ತದೆ. ಆಗ ಅದು ಮರು ಏನು ಮಾತನಾಡದೆ, “ಶುಭಾಶಯ ಕುದುರೆಯಣ್ಣಾ, ಗೆಲುವು ನಿನ್ನದಾಗಲಿ..” ಎಂದು ಶುಭ ಕೋರುತ್ತದೆ.          ಕುದುರೆ ರಣರಂಗದಲ್ಲಿ ಭೀಮ ಪರಾಕ್ರಮದಿಂದ ಕಾದಾಡಿ ಯುದ್ಧ ಗೆದ್ದು ಬರುತ್ತದೆ. ಅಲ್ಲಿಂದ ಓಡುತ್ತಾ ಓಡುತ್ತಾ ತನ್ನ ಲಾಯಕ್ಕೆ ಬರುವಾಗ ಮತ್ತೆ ಕತ್ತೆಯನ್ನು ನೋಡಿ, “ಎಲೇ.. ಕತ್ತೆ, ನಾವು ಯುದ್ಧ ಗೆದ್ದು ಬಂದೇವು. ವೈರಿ ಸೈನ್ಯ ಕಾಲಲ್ಲಿ ಹಾಕಿ ತುಳಿದೇವು. ಇದರಿಂದ ಸಂತೋಷನಾದ ರಾಜ, ನಾಳೆ ನಮ್ಮ ಮೆರವಣಿಗೆ ಇಟ್ಟಿದ್ದಾನೆ..” ಎಂದು ಜೋರಾಗಿ ಹೇಳಿತು. ಅದಕ್ಕೆ ಕತ್ತೆ, “ಗೆಲುವಿಗಾಗಿ ಶುಭಾಶಯ, ಕುದುರೆಯಣ್ಣಾ..”ಎಂದು ಹೇಳಿ ಸುಮ್ಮನೆ ಹುಲ್ಲು ತಿನ್ನುತ್ತದೆ. ಆದರೆ ಕುದುರೆ ಮಾತ್ರ ಸುಮ್ಮನಾಗುವದಿಲ್ಲ, “ಇಲ್ಲಾ, ನಮ್ಮ ರಾಜನು ಎಷ್ಟು ಮುರ್ಖನಿರಬಹುದು. ನಿಮ್ಮಂತಹ ಮೂರ್ಖ ಪ್ರಾಣಿಗಳನ್ನು ಕಟ್ಟಿಕೊಂಡು ಸುಮ್ಮನೆ ರಾಜ್ಯದ ವೆಚ್ಚ ಹೆಚ್ಚಿಗೆ ಮಾಡಿಕೊಳ್ಳುತಿದ್ದಾನೆ..” ಎಂದಾಗಲೂ ಕತ್ತೆ ಏನು ಮಾತನಾಡದೆ ಸುಮ್ಮನಿರುತ್ತದೆ.                     ಮರುದಿನ ರಾಜಧಾನಿಯಲ್ಲಿ ರಾಜನ ಮೆರವಣಿಗೆ ಆಗುತ್ತದೆ. ಅಲ್ಲಿ ಕುದುರೆಗಳ ಹೊಗಳಿಕೆ ಆಗುತ್ತದೆ. ಎಲ್ಲ ಜನರು ರಾಜ ಮತ್ತು ಕುದುರೆಗಳ ಮೇಲೆ ಪುಷ್ಪಾರ್ಪಣೆ ಮಾಡುತ್ತಾರೆ. ಅಂದು ರಾಜ ವೈರಿ ಮುಕ್ತನು ಆಗಿರುತ್ತಾನೆ. ಆದರೂ ಆತ ದೂರದ ಶತ್ರುಗಳಿಂದ ಯಾವ ತೊಂದರೆ ಆಗಬಾರದೆಂದು ಸಮೀಪದ ಎತ್ತರ ಪರ್ವತದ ಮೇಲೆ ಕೋಟೆ ಕಟ್ಟುವದಾಗಿ ಘೋಷಣೆ ಮಾಡುತ್ತಾನೆ. ಕೋಟೆ ಕಟ್ಟಬೇಕಾದರೆ ಕಲ್ಲು, ಮಣ್ಣು, ಕಟ್ಟಿಗೆ, ಸಿಮೇಂಟ್‍ಗಳಂತಹ ಭಾರವಾದ ವಸ್ತುಗಳನ್ನು ಮೇಲೆ ತಲುಪಿಸಬೇಕಿತ್ತು. ಕುದುರೆಗಳಿಂದ ಈ ಕಾರ್ಯ ಅಸಾಧ್ಯ ಎಂಬುದು ರಾಜನಿಗೆ ಮಾತ್ರ ಗೊತ್ತಿರುತ್ತದೆ. ಅದಕ್ಕಾಗಿ ಆತ, ‘ಕೋಟೆಯ ಕೆಲಸಕ್ಕೆ ಕತ್ತೆಗಳನ್ನು ಬಳಿಸಿಕೊಳ್ಳಿ..’ಎಂದು ಅಪ್ಪಣೆ ಕೊಡುತ್ತಾನೆ. ಎಲ್ಲ ಜನರಿಗೆ ಇದು ವಿಚಿತ್ರ ಅನಿಸುವದು, ಆದರೂ ಸೇವಕರು ಬಂದು ಕತ್ತೆಗಳನ್ನು ಒಯ್ಯುವಾಗ ಮತ್ತೆ ಕುದುರೆ ಕತ್ತೆಯನ್ನು ನೋಡಿ, “ಹೋಗು ಕತ್ತೆ ಹೋಗು.. ಅದು ನಿಮ್ಮಿಂದ ಆಗದ ಕೆಲಸ. ರಾಜನಿಗೆ ನಾಳೆಯಿಂದ ಮತ್ತೆ ನಮ್ಮನ್ನೆ ಕರೆಸಬೇಕಾಗುತ್ತದೆ..” ಎಂದು ನಸು ನಕ್ಕಿತು.             ಕತ್ತೆಗಳೆಲ್ಲಾ ಹೋಗಿ ಸಂಯಮದಿಂದ ಭಾರ ವಸ್ತುಗಳನ್ನು ಅತ್ಯಂತ ಕಾಳಜಿಯಿಂದ ಒಯ್ದು ಪರ್ವತದ ಮೇಲೆ ಚೆಲ್ಲುತ್ತವೆ. ಆ ದಿನ ಕತ್ತೆಗಳ ಶ್ರಮ ಮತ್ತು ಪ್ರಾಮಾಣಿಕತೆ ನೋಡಿ ರಾಜನಿಗೆ ಬಹಳ ಸಂತೋಷವಾಯಿತು. ಆಗ ಆತ, “ನಮ್ಮ ಕೋಟೆಯ ಕೆಲಸ ಮುಗಿಯುವ ವರೆಗೆ ಕುದುರೆಗಳ ಆಹಾರ ಕಡಿಮೆ ಮಾಡಿ ಕತ್ತೆಗಳಿಗೆ ಕೊಡಿ..” ಎಂದು ಸೇವಕರಿಗೆ ಅಪ್ಪಣೆ ಮಾಡುತ್ತಾನೆ. ಅಂದು ಕತ್ತೆಗೆ ಬಹಳ ದಣಿವು. ಅದು ಹುಲ್ಲು, ಚಂದಿ ತಿಂದು ಸುಮ್ಮನೆ ಮಲಗಿ ಬಿಟ್ಟಿತು. ಆದರೆ ಕುದುರೆ ಮಾತ್ರ ಅದನ್ನು ನೋಡಿ ಮೂಗು ಮುರಿಯುತ್ತಿತ್ತು. ಪ್ರತಿ ದಿನ ಕುದುರೆ ಕತ್ತೆಯನ್ನು ಏನಿಲ್ಲಾ ಒಂದು ಮಾತು ಹೇಳಿ ಹಿಯಾಳಿಸುತ್ತಿತ್ತು. ಆದರೆ ಅದು ಮಾತ್ರ ಕೋಟೆಯ ಕೆಲಸ ಮುಗಿಯುವ ವರೆಗೆ ಕುದುರೆಯ ಯಾವ ಮಾತಿನತ್ತ ಗಮನ ಕೊಡಲಿಲ್ಲ.              ಕತ್ತೆಗಳ ಪರಿಶ್ರಮದಿಂದ ಬ್ರಹತ್ ಕೋಟೆ ನಿರ್ಮಾಣ ಆಯಿತು. ಇದರಿಂದ ಸಂತೋಷನಾದ ರಾಜನು ಅಲ್ಲಿಯೆ ಪಟ್ಟಾಭಿಷೇಕ ಮಾಡಿಕೊಳ್ಳುವದಾಗಿ ಡಂಗುರು ಸಾರಿದನು. ಸುತ್ತಲಿನ ರಾಜರಿಗೆ ಆಮಂತ್ರಣ ಕಳುಹಿಸಿದನು. ರಾಜನ ಸಿಂಹಾಸನ ಕೂಡ ಕತ್ತೆಗಳೆ ಮೇಲಕ್ಕೆತ್ತಿ ಒಯ್ದವು. ಅಲ್ಲಿ ಬಂದವರೆಲ್ಲಾ ಕೋಟೆಯ ಅದ್ಭುತತೆ ಮಾತನಾಡುತ್ತಿದ್ದರು. ಇಷ್ಟು ಎತ್ತರ ರಾಜ ಭಾರವಸ್ತು ಹೇಗೆ ತಂದನು ಎಂದು ಆಶ್ಚರ್ಯ ಪಟ್ಟರು. ಆಗ ಜಯದೇವನು ಇದರ ಎಲ್ಲ ಶ್ರೇಯ ಕತ್ತೆಗಳಿಗೆ ಕೊಡುತ್ತಾನೆ. ಅಲ್ಲಿ ಬಂದ ರಾಜರು ಸಹ ಕತ್ತೆಗಳ ಕೆಲಸವನ್ನು ಮೆಚ್ಚುತ್ತಾರೆ. ಅಂದು ಮಾತ್ರ ಅಲ್ಲಿಯ ಭವ್ಯ ಕಾರ್ಯಕ್ರಮಕ್ಕೆ ಕತ್ತೆಗಳ ಉಪಸ್ಥಿತಿ ಇತ್ತು ಆದರೆ ಕುದುರೆಗಳನ್ನು ಕೆಳಗಡೆಯ ಮೈದಾನದಲ್ಲಿ ಕಟ್ಟಲಾಗಿತ್ತು.               ಮರುದಿನ ಕತ್ತೆ ಬಂದು ಕುದುರೆಗೆ, “ನೋಡಿದಿಯಾ ಕುದುರೆಯಣ್ಣಾ, ನಾನು ಅಂದು ಹೇಳಿದಂತೆ ಈ ಜಗತ್ತಿನಲ್ಲಿ ಪ್ರತಿಯೊಬ್ಬನಿಗೂ ಒಂದು ಒಳ್ಳೆಯ ಕಾಲ ಬರುತ್ತದೆ. ಅದಕ್ಕೆ ಕಾಯಬೇಕು ಅಷ್ಟೆ. ಆದರೆ ಎಲ್ಲಕ್ಕಿಂತ ಮಹತ್ವದ್ದು ನಮಗೆ ಸಿಕ್ಕ ಅವಕಾಶವನ್ನು ನಾವು ಪರಿಶ್ರಮದಿಂದ ಪ್ರಾಮಾಣಿಕವಾಗಿ ಮಾಡಬೇಕು. ಆವಾಗ ಎಲ್ಲರು ಜಯಕಾರ ಹಾಕುತ್ತಾರೆ..” ಎಂದು ವಿನಯದಿಂದ ಹೇಳಿತು. ಕುದುರೆಗೆ ತನ್ನ ತಪ್ಪಿನ ಅರಿವಾಯಿತು. ಮುಂದೆ ಅದು ತನ್ನ ಅಹಂಕಾರ ಬಿಟ್ಟು ಸ್ನೇಹದಿಂದ ಬಾಳುತ್ತದೆ. ********* ಮಲಿಕಜಾನ ಶೇಖ

ಮಕ್ಕಳ ಕಥೆ Read Post »

ಕಾವ್ಯಯಾನ

ಕಾವ್ಯಯಾನ

ತಿಪ್ಪೆಗುಂಡಿಯಲ್ಲಿ ಮಗು ಫಾಲ್ಗುಣ ಗೌಡ ಅಚವೆ ಅಲ್ಲಿ ಮುರ್ಕಿಯಲ್ಲಿರುವತಿಪ್ಪೆಗುಂಡಿಯಲ್ಲಿ ಎಸೆದು ಹೋಗಿದ್ದಾಳೆಇದೀಗ ಎಂಬಂತೆ ಒಂದು ಮಗು. ನವೆಂಬರ್ ಬೆಳಗಿನ ಚುಮು ಚುಮುಚಳಿಯಲ್ಲಿ ಅಮ್ಮನ ಮಡಿಲಲ್ಲಿರಬೇಕಾದಂತೆಅಲ್ಲೇ ಗುಲ್ ಮೋಹರ್ ಮರಗಳಲ್ಲಿಹೊಡೆದು ಕೂಡ್ರಿಸಿದಂತೆಬೆಳ್ಳಕ್ಕಿಗಳು ಸಣ್ಣಗೆ ಮುಸುಗುತ್ತಿವೆ. ಗಸ್ತು ತಿರುಗುವ ಇರುವೆಗಳುಯಾರನ್ನೋ ಕರೆತರಲು ಹೊರಟಂತೆಎಲ್ಲಿಗೋ ಪಯಣ ಹೊರಟಿವೆ. ತುಸು ತಡವಾಗಿ ವಾಕಿಂಗ್ ಹೊರಟವರುಮಂಕಿ ಕ್ಯಾಪ್ ಬಿಟ್ಟು ಬಂದವರಂತೆತಡವರಿಸುತ್ತ ಎದೆಗೆ ಕೈ ಕಟ್ಟಿಕೊಂಡುಹೊರಡುವ ಸನ್ನಾಹದಲ್ಲಿಅವರದೇ ರಾತ್ರಿಯಹಳಸಿದ ಕನಸುಗಳ ಜೊತೆಗೆ. ಹಾಸಿಗೆ ಮಡಚಿಟ್ಟು ಆಗಸಮುಖ ತೊಳೆದು ಕೊಳ್ಳುತ್ತಿದೆಮೋಡಗಳ ಮರೆಯಲ್ಲಿಬೆಳಗಿನ ಕೆಲಸಕ್ಕೆ ತಡವಾಯಿತೆಂಬರಾತ್ರಿ ನರಳಿಕೆಯ ಮುಖ ಭಾವದಲ್ಲಿ. ಪುರಸೊತ್ತು ಮಾಡಿಕೊಂಡುಬಸುರಾದವಳಿಗೆ ತೀಟೆಗೆಂಬಂತೆಹೊಟ್ಟೆಯ ತಿಂಗಳುಗಳಜವಾಬ್ದಾರಿಯಿಂದ ಯಾವಮುಸುಕಿನಲ್ಲಿ ಹುಗಿಸಿದ್ದಳೊ? ತಮ್ಮದೇ ಧಾವಂತದಲ್ಲಿ ಹಾಲು ತರಲುಹೊರಟವರಿಗೇನು ಗೊತ್ತುಅಲ್ಲೆ ಮಗು ಅಳುವ ಸದ್ದು?ಆಚೆ ಮನೆಯಲ್ಲಿ ದಿನ ಬೆಳಗಾದರೆಅಳುವ ಸದ್ದುಗಳುಅನವರತ ಧಾವಿಸುತ್ತಿರುತ್ತವೆ. ತಮ್ಮ ಏಕಾಂತಕ್ಕೆ ಭಂಗ ಬರುವದೆಂದುಬಿಟ್ಟು ಹೊರಟವರ ಮನಸುಇಡೀ ಜಗವನೊಂದು ಮಾಡುವಅಳುವ ಆಲಿಸುತ್ತಿದ್ದರೂಅಲೆಯದ ಸಮುದ್ರದಂತೆಸ್ತಬ್ಧಗೊಂಡಂತಿದೆಕೀಳರಿಮೆಯ ಬೇಲೆಯಲ್ಲಿ. ಹೊಸ ವಾತಾವರಣಕ್ಕೆ ಹೊಂದಿಕೊಳ್ಳದೇಕರಳು ಕತ್ತರಿಸಿದ ರಕ್ತ ಒಸರುತ್ತಿರುವಮಗು ಮುಂದುವರೆಸಿದೆ ತನ್ನ ಪ್ರತಿಭಟನೆಇದನಾಲಿಸದೇ ಎಸೆದವರುನಸುಕಿನ ರೈಲು ಹತ್ತಿ ಹೊರಟಿದ್ದರುಅದು ಹೋದ ನಿಲ್ದಾಣದೆಡೆಗೆ. ರಸ್ತೆಯಲ್ಲಿ ಹೊರಟ ಹೆಂಗಸರ ಬಾಯಲ್ಲಿಪ್ರಕಟವಾದ ತಾಜಾ ಸುದ್ದಿಯೆಂದರೆಎಲ್ಲಿಂದಲೋ ಬಂದ ನಾಯಿಹೊತ್ತು ಹೋಯ್ತಂತೆ! *******

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ದೂರದ ಊರು ನಡೆಯುತ್ತಾ ನಡೆಯುತ್ತಾ ಹೋರಟ ಅಪ್ಪನ ಎದೆಯ ಉಸಿರು ಜೋರಾಗಿತ್ತು. ಬೀಸುವ ಬಿರುಗಾಳಿಯ ತಂಪಿಗೆ ನನ್ನಪ್ಪನ ಹೆಗಲು ಬಿಸಿಕಾವು ನೀಡುತ್ತಿತ್ತು. ನನ್ನ ಪಾದಗಳಿಗೆ ನೋವಾಗಬಾರದೆಂದು ನನ್ನಪ್ಪ ತನ್ನ ಪಾದಗಳ ನೆತ್ತರನು ಲೆಕ್ಕಿಸಲೇ ಇಲ್ಲ. ಹಸಿವು ಎನ್ನ ಕಾಡದಿರಲೆಂದು ದಾರಿ ಮಧ್ಯ ಮಧ್ಯದಲಿ ಕೈತುತ್ತ ನೀಡುತ್ತಲೇ ಇದ್ದ . ತನಗೆ ಹಸಿವಾಗದೆಂದು ಮುಗುಳು ನಗೆ ನಕ್ಕು ಮುಂದೆ ನಡೆಯುತ್ತಲೇ ಇದ್ದ. ಊರಿನ ದಾರಿಯು ಕಂಡ ಮೇಲೆ ಅಪ್ಪ ಬಲು ಸಂತಸ ಪಟ್ಟು ನನ್ನನ್ನು ಸುರಕ್ಷಿಸಿದೆ ಎಂದು ನಿರಾಳತೆಯಲ್ಲಿ ನಿಟ್ಟುಸಿರು ಬಿಟ್ಟ. ನಾ ಮತ್ತೊಮ್ಮೆ ಎದೆಗವಚಿಕೊಂಡಾಗ ನನ್ನಪ್ಪನ ಬಿಗಿ ಉಸಿರು ತಂಪಾಗೆ ಇತ್ತು. ಎಂದೂ ಬಿಸಿ ಉಸಿರಿನ ಅಪ್ಪುಗೆ‌ ನನಗೆ‌ ಸಿಗಲೇ‌ ಇಲ್ಲ. ಕಾರಣ ಅಪ್ಪ ನನ್ನ ಬಿಟ್ಟು ಬಹು ದೂರ ಹೋದನಲ್ಲ. ತನ್ನ ಉಸಿರಂತೆ ಇದ್ದ ನನ್ನ ತಬ್ಬಲಿ ಗೈದನಲ್ಲ. ( ಕೋರಾನಾ ಮಹಾಮಾರಿಯು ತಂದ ದಾರುಣ ಕಥೆಯ ವ್ಯಥೆ ಇದು.) ******** ರಜಿಯಾ ಕೆ.ಬಾವಿಕಟ್ಟೆ

ಕಾವ್ಯಯಾನ Read Post »

ಕಥಾಗುಚ್ಛ

ಕಥಾಯಾನ

ಕೆಪ್ಪ ಅಂಜನಾ ಹೆಗಡೆ ಕೆಪ್ಪನ ಕಥೆ ಶುರುವಾಗುವುದು ನವರಾತ್ರಿಯಿಂದ. ನವರಾತ್ರಿಯೆಂದರೆ ಅದು ಅಂತಿಂಥ ನವರಾತ್ರಿಯಲ್ಲ. ಹಳೇಮನೆ ರಾಮಚಂದ್ರಣ್ಣನ ನವರಾತ್ರಿಯೆಂದರೆ ಯಲ್ಲಾಪುರ ತಾಲೂಕಿನಲ್ಲೆಲ್ಲ ಮನೆಮಾತಾದ ನವರಾತ್ರಿ ಅದು. ಚೌತಿ ಹಬ್ಬ ಮುಗಿದು ಇನ್ನೇನು ಹತ್ತೋ ಹದಿನೈದೋ ದಿನವಾಗುವಷ್ಟರಲ್ಲಿ ರಾಮಚಂದ್ರಣ್ಣನ ನವರಾತ್ರಿಯ ಧಾವಂತ ಶುರುವಾಗುತ್ತಿತ್ತು. ಅಟ್ಟದ ಮೇಲಿನ ಅಡಿಕೆ ಕಂಬಗಳನ್ನು ಒಂದೊಂದಾಗಿ ಕೆಳಗಿಳಿಸಿ ದೇವರಮನೆಯಲ್ಲಿ ನಿಲ್ಲಿಸುವುದರಿಂದ ಶುರುವಾಗುವ ನವರಾತ್ರಿ ಸಂಭ್ರಮ ಹಳೆಮನೆಯಲ್ಲಿ ವಿಜಯದಶಮಿಯವರೆಗೂ ಇರುತ್ತಿತ್ತು. ಅಲ್ಯೂಮಿನಿಯಂ ಬೋಗುಣಿಯೊಂದರಲ್ಲಿ ತಾನೇ ಕೈಯಾರೆ ತಯಾರಿಸಿಕೊಂಡ ಗೋಧಿಅಂಟಿನೊಂದಿಗೆ ಪ್ರತೀರಾತ್ರಿ ರಾಮಚಂದ್ರಣ್ಣ ಶಾರದೆಯ ಮಂಟಪ ರೆಡಿಮಾಡಲು ಕೂತುಬಿಡುತ್ತಿದ್ದ. ‘ಅಚ್ಯುತಂ ಕೇಶವಂ ರಾಮನಾರಾಯಣಂ’ ಎನ್ನುವ ತನ್ನ ಪ್ರೀತಿಯ ಭಜನೆಯೊಂದನ್ನು ಲಯಬದ್ಧವಾಗಿ ಹಾಡುತ್ತಾ ರಾಮಚಂದ್ರಣ್ಣ ಮಂಟಪ ಕಟ್ಟಲು ಕೂತನೆಂದರೆ ಇಡೀ ಹಳೇಮನೆ ಕೇರಿಯೇ ಅಲ್ಲಿ ನೆರೆಯುತ್ತಿತ್ತು. ಯೋಚಿಸಿದರೆ, ಕೆಪ್ಪನಿಗೂ ನನಗೂ ಅಂಥ ವ್ಯತ್ಯಾಸವೇನಿಲ್ಲ. ನಾನು ರಾಮಚಂದ್ರಣ್ಣನ ಮನೆ ಸೇರಿದಾಗ ನನಗೆ ಹನ್ನೊಂದು ವರ್ಷ. ಐದನೆಯ ಕ್ಲಾಸಿನವರೆಗೆ ಮಾತ್ರವೇ ಓದಲು ಅವಕಾಶವಿದ್ದ ಅಂಕೋಲೆಯ ಚಿಕ್ಕ ಹಳ್ಳಿಯೊಂದರಲ್ಲಿ ನಾನು ಹುಟ್ಟಿದ್ದು. ಅಮ್ಮನ ತಂಗಿ ಗಂಗಾಚಿಕ್ಕಿಯನ್ನು ರಾಮಚಂದ್ರಣ್ಣನ ತಮ್ಮನಿಗೆ ಮದುವೆ ಮಾಡಿಕೊಟ್ಟಿದ್ದರು. ರಾಮಚಂದ್ರಣ್ಣ ವಯಸ್ಸಿನಲ್ಲಿ ನನ್ನ ಅಪ್ಪನಿಗಿಂತ ದೊಡ್ಡವನಾಗಿದ್ದರೂ ನಾವೆಲ್ಲ ಅವನನ್ನು ಕರೆಯುತ್ತಿದ್ದದ್ದು ರಾಮಚಂದ್ರಣ್ಣ ಅಂತಲೇ. ರಾಮಚಂದ್ರಣ್ಣನಿಗೆ ಇದ್ದ ಒಬ್ಬನೇ ಮಗ ಹಾವು ಕಚ್ಚಿ ಸತ್ತುಹೋದನೆಂದು ಗಂಗಾಚಿಕ್ಕಿ ಯಾವಾಗಲೋ ಹೇಳಿದ್ದು ಬಿಟ್ಟರೆ, ಆ ವಿಷಯವನ್ನು ಯಾರೂ ಮಾತಾಡುತ್ತಿರಲಿಲ್ಲ. ರಾಮಚಂದ್ರಣ್ಣ ಮಾತ್ರ ಯಾವ ದುಃಖವೂ ಶಾಶ್ವತವಲ್ಲವೆಂಬ ನಿರ್ಲಿಪ್ತತೆಯಲ್ಲಿ ಊರಿನ ಮಕ್ಕಳನ್ನೆಲ್ಲ ವಿಶ್ವಾಸದಿಂದ ನೋಡುತ್ತಾ ತಾನಾಯಿತು ತನ್ನ ನವರಾತ್ರಿಯಾಯಿತು ಎಂಬಂತೆ ಇದ್ದುಬಿಡುತ್ತಿದ್ದ. ನಾನು ಐದನೇ ಕ್ಲಾಸು ಮುಗಿಸಿ ಬೇಸಿಗೆರಜೆಯ ಮಜವನ್ನೆಲ್ಲ ಚಿಕ್ಕಮ್ಮನ ಮನೆಯಲ್ಲಿಯೇ ಅನುಭವಿಸಿ ಮುಗಿದಮೇಲೆ, ಮನೆಗೆ ವಾಪಸ್ಸು ಕರೆದೊಯ್ಯಲು ಅಪ್ಪ ಬಂದಿದ್ದ. ಅಪ್ಪ, ಚಿಕ್ಕಪ್ಪ, ರಾಮಚಂದ್ರಣ್ಣ ಮಧ್ಯಾಹ್ನದ ಮೇಲೆ ಬಾಳೆಕಾಯಿ ಚಿಪ್ಸ್ ತಿನ್ನುತ್ತಾ ಚಾ ಕುಡಿಯುವಾಗ ನನ್ನ ಆರನೇ ಕ್ಲಾಸಿನ ಸಮಸ್ಯೆ ಧುತ್ತೆಂದು ಚಿಪ್ಸ್ ಪ್ಲೇಟಿಗೆ ಬಿತ್ತು. “ಅದೆಂಥ ಸಮಸ್ಯೆ, ಅವಳು ನಮ್ಮನೇಲೇ ಶಾಲೆಗೆ ಹೋಗಲಿ; ನಮ್ಮನೆಲ್ಲೂ ನವರಾತ್ರಿಗೊಂದು ದುರ್ಗೆ ಬೇಕು ಮಾರಾಯ” ಎಂದವನೇ ರಾಮಚಂದ್ರಣ್ಣ ಚಾ ಲೋಟಾ ತೊಳೆಯಲು ಎದ್ದುಹೋದ. ಆವತ್ತಿಂದ ಹಳೇಮನೆ ನವರಾತ್ರಿಯ ಪರ್ಮನೆಂಟ್ ದುರ್ಗೆ ಆದೆ ನಾನು. ನನಗೆ ನೆನಪಿದ್ದಂತೆ ಅದು ನನ್ನ ಏಳನೇ ಕ್ಲಾಸಿನ ನವರಾತ್ರಿಯಿರಬೇಕು. ವಿಜಯದಶಮಿಯ ದಿನ ಶಾರದೆಯನ್ನು ಕಳುಹಿಸಿ, ಕೇರಿಯ ಹೆಂಗಸರೆಲ್ಲ ‘ಹರಸಿದಳೆಲ್ಲರಿಗೂ ಶಾರದೆ ಒಲಿದು’ ಎಂದು ಹಾಡುತ್ತಿದ್ದ ಎಮೋಷನಲ್ ಸನ್ನಿವೇಶದಲ್ಲಿ ಈ ಕೆಪ್ಪ ಕೇರಿಗೆ ಕಾಲಿಟ್ಟಿದ್ದ. ಅವನು ತೊಟ್ಟಿದ್ದ ಬೆಳ್ಳನೆಯ ಬಟ್ಟೆಯಿಂದಲೂ ಇರಬಹುದು ತುಸು ಜಾಸ್ತಿ ಕಪ್ಪಗೆ ಕಾಣಿಸುತ್ತಿದ್ದ. ಹಳೇಮನೆ ಕೇರಿಯ ಮೊದಲ ಮನೆಯಾಗಿದ್ದ ರಾಮಚಂದ್ರಣ್ಣನ ಮನೆಯ ಅಂಗಳದ ಮೆಟ್ಟಿಲಮೇಲೆ ತನ್ನದೇ ಮನೆಯೆಂಬಂತೆ ಬಂದು ಕುಳಿತುಕೊಂಡ. ಬಸ್ ಸ್ಟಾಪಿಗೆ ಹತ್ತಿರದಲ್ಲೇ ಇದ್ದ ಹಳೇಮನೆಗೆ ಬಸ್ಸು ತಪ್ಪಿಸಿಕೊಂಡವರು ನೀರು ಕುಡಿಯಲೆಂದೋ ಅಥವಾ ಮುಂದಿನ ಬಸ್ಸಿನ ಸಮಯ ಕೇಳಲೆಂದೋ ಬರುತ್ತಿದ್ದದ್ದು ಸಾಮಾನ್ಯವಾಗಿತ್ತು. ಹಾಗೇ ಯಾರೋ ಬಂದಿರಬಹುದು ಎಂದುಕೊಂಡ ನಮಗೆಲ್ಲ ಅವನಿಗೆ ಮಾತು ಬರುವುದಿಲ್ಲ ಎನ್ನುವುದು ಅರ್ಥವಾಗಿದ್ದು ಅವನು ಅದೇನನ್ನೋ ಹೇಳಲು ಪ್ರಯತ್ನಿಸಿದಾಗಲೇ. ಅವನು ಪ್ರಯತ್ನಿಸಿದ ಮಾತುಗಳೆಲ್ಲ ವಿಚಿತ್ರ ಶಬ್ದಗಳನ್ನು ಹೊರಡಿಸಿದವಾದರೂ ಯಾವುದೂ ಅರ್ಥವಾಗಲಿಲ್ಲ. ರಾಮಚಂದ್ರಣ್ಣ ಆಗಷ್ಟೇ ಪೂಜೆ ಮುಗಿಸಿ, ಉಟ್ಟಿದ್ದ ಮಡಿ ಬಿಚ್ಚಿ ಲುಂಗಿ ಉಡುತ್ತ “ಯಾರೇ ಅದು, ಬಸ್ಸು ತಪ್ಪಿಸಿಕೊಂಡರಂತಾ ಏನು” ಎಂದು ಹೆಂಡತಿಯನ್ನು ಕೇಳುತ್ತ ಹೊರಬಂದಾಗ ಕೆಪ್ಪ ಅವನ ಮುಖ ನೋಡುತ್ತಾ ಏನೇನೋ ಶಬ್ದಗಳನ್ನು ಹೊರಡಿಸಿದ. ರಾಮಚಂದ್ರಣ್ಣ ಅವನನ್ನು ಮಧ್ಯದಲ್ಲಿ ತಡೆದು ಪ್ರಶ್ನೆ ಕೇಳಲು ಪ್ರಯತ್ನಿಸಿದನಾದರೂ ಯಾವುದಕ್ಕೂ ಸ್ಪಂದಿಸದ ಅವನಿಗೆ ಕಿವಿಯೂ ಕೇಳುವುದಿಲ್ಲ ಎನ್ನುವುದು ನಮಗೆಲ್ಲ ಖಚಿತವಾಯಿತು. ಮಾತೂ ಬರದ ಕಿವಿಯೂ ಕೇಳಿಸದ ಅವನಿಂದ ಯಾವ ವಿವರಗಳನ್ನೂ ಪಡೆದುಕೊಳ್ಳಲಾಗಲೇ ಇಲ್ಲ. ಪೆನ್ನು ಹಾಳೆಗಳನ್ನು ಕೊಟ್ಟರೆ ಅವು ತನಗೆ ಸಂಬಂಧಪಟ್ಟ ವಸ್ತುಗಳೇ ಅಲ್ಲವೆನ್ನುವಂತೆ ಅವುಗಳೆಡೆಗೆ ತಿರುಗಿಯೂ ನೋಡದ ಅವನಿಗೆ ಅಕ್ಷರಜ್ಞಾನ ಇದ್ದಿರಬಹುದಾದ ಯಾವ ಲಕ್ಷಣಗಳೂ ಕಾಣಿಸಲಿಲ್ಲ. ಅವನಿಗೆ ಹೆಸರೊಂದು ಇದ್ದಿರಬಹುದಾದರೂ ಅದನ್ನು ಕಂಡುಹಿಡಿಯುವ ಯಾವ ಮಾರ್ಗವೂ ಯಾರಿಗೂ ಗೋಚರಿಸಲಿಲ್ಲ. ಗಂಗಾಚಿಕ್ಕಿ ಬಡಿಸಿದ ಹಬ್ಬದೂಟ ಉಂಡವನೇ ತಟ್ಟೆ ಲೋಟಾಗಳನ್ನು ತೊಳೆದು ತನ್ನದೇ ಆಸ್ತಿ ಎಂಬಂತೆ ಜಗಲಿಯ ಮೂಲೆಯಲ್ಲಿಟ್ಟುಕೊಂಡ. ಅದೆಲ್ಲಿಂದ ಬಂದ, ಹಳೇಮನೆ ಕೇರಿಗೇ ಯಾಕೆ ಬಂದ, ಬಂಧುಬಳಗದವರು ಯಾರಾದರೂ ಇದ್ದಾರೋ ಇಲ್ಲವೋ ಎಂಬಿತ್ಯಾದಿ ಪ್ರಶ್ನೆಗಳಿಗೆ ಯಾರಲ್ಲಿಯೂ ಉತ್ತರವಿರಲಿಲ್ಲ. ನನಗೆ ಯಾವತ್ತಿಗೂ ಬಗೆಹರಿಯದ ಒಂದು ವಿಚಿತ್ರವೆಂದರೆ ಕೇರಿಯ ಯಾರೊಬ್ಬರೂ ಅವನನ್ನು ಸಂಶಯದ ದೃಷ್ಟಿಯಿಂದ ನೋಡಲೇ ಇಲ್ಲ. ರಾಮಚಂದ್ರಣ್ಣನ ಪ್ರೀತಿ ವಿಶ್ವಾಸ ನಂಬಿಕೆಗಳೆಲ್ಲ ಜಾಜಿ ಬಳ್ಳಿಯಂತೆ ಕೇರಿಯನ್ನೆಲ್ಲ ಹಬ್ಬಿದಂತೆ ನನಗೆ ಈಗಲೂ ಅನ್ನಿಸುತ್ತದೆ. ಹೀಗೆ ಕೆಪ್ಪ ಎಂಬ ಹೊಸ ಹೆಸರಿನೊಂದಿಗೆ ಕೆಪ್ಪ ರಾಮಚಂದ್ರಣ್ಣನ ಮನೆಯ ಖಾಯಂ ಸದಸ್ಯನಾದ. ಆದರೆ ಕೆಪ್ಪನ ವಾಸಕ್ಕೆ ತಕ್ಕ ಜಾಗ ಕೇರಿಯ ಯಾವ ಮನೆಯಲ್ಲೂ ಇರಲಿಲ್ಲ. ಹಳೇಮನೆಯ ಯಾವ ಕುಟುಂಬವೂ ಅಂಥ ಸ್ಥಿತಿವಂತ ಕುಟುಂಬವೇನೂ ಆಗಿರಲಿಲ್ಲ. ರಾಮಚಂದ್ರಣ್ಣನ ಅಪ್ಪನ ಕಾಲದಲ್ಲಿ ಖಾಂದಾನಿ ಎನ್ನಬಹುದಾಗಿದ್ದ ಕುಟುಂಬ, ಮಕ್ಕಳ ಕಾಲಕ್ಕೆ ಹೊಂದಾಣಿಕೆಯಾಗದೇ ಎಂಟು ಮನೆಗಳಾಗಿ ಒಡೆದುಹೋಗಿತ್ತು. ಅವರುಗಳ ಮಧ್ಯ ತಲೆಹೋಗುವಂತಹ ಜಗಳಗಳು ಆಗುತ್ತಿರಲಿಲ್ಲವಾದರೂ ಗದ್ದೆಕಾಯುವ ರಾತ್ರಿಪಾಳಿಯ ವಿಷಯಕ್ಕೋ, ಅವರ ಮನೆಯ ಬೆಕ್ಕು ಅರ್ಧತಿಂದುಬಿಟ್ಟ ಇಲಿ ಇವರ ಮನೆ ಅಟ್ಟದ ಮೇಲೆ ಕೊಳೆತು ವಾಸನೆ ಬರುತ್ತಿರುವ ವಿಷಯಕ್ಕೋ ಆಗಾಗ ಚಿಕ್ಕಪುಟ್ಟ ಮನಸ್ತಾಪಗಳಾಗುತ್ತಿದವು. ಈ ಮನಸ್ತಾಪಗಳೇನಾದರೂ ಜಗಳಕ್ಕೆ ತಿರುಗಿದರೆ ರಾಮಚಂದ್ರಣ್ಣ ಮಧ್ಯಸ್ಥಿಕೆ ವಹಿಸಿ ಸಮಸ್ಯೆಗೊಂದು ಜಾಣತನದ ಪರಿಹಾರ ಹುಡುಕುತ್ತಿದ್ದ. ಹೆಚ್ಚೇನೂ ಓದಿರದ ರಾಮಚಂದ್ರಣ್ಣ ತನ್ನ ಅಚ್ಚುಕಟ್ಟಾದ ಮಾತಿನಿಂದಲೇ ಕೇರಿಯವರಷ್ಟೇ ಅಲ್ಲದೇ ಊರಿನವರ ಗೌರವವನ್ನೂ ಗಳಿಸಿಕೊಂಡಿದ್ದ. ಯಾವತ್ತೂ ಧ್ವನಿ ಎತ್ತರಿಸಿ ಮಾತನಾಡದ ರಾಮಚಂದ್ರಣ್ಣ, ಏರುಧ್ವನಿಯಲ್ಲಿ ಮೂರೂ ಹೊತ್ತು ಹಲಬುತ್ತಲೇ ಇರುತ್ತಿದ್ದ ಕೆಪ್ಪನೊಂದಿಗೆ ಸೌಹಾರ್ದ ಬೆಳೆಸಿಕೊಳ್ಳಬಹುದಾದ ಯಾವ ನಿರೀಕ್ಷೆಯೂ ಕೇರಿಯವರ್ಯಾರಿಗೂ ಇರಲಿಲ್ಲವಾದರೂ ಕೆಪ್ಪನ ವಾಸಕ್ಕೊಂದು ಜಾಗ ಹುಡುಕುವ ಜವಾಬ್ದಾರಿ ರಾಮಚಂದ್ರಣ್ಣನ ತಲೆಗೇ ಬಂತು. ರಾಮಚಂದ್ರಣ್ಣನ ಮನೆ ಕೇರಿಯ ಮೊದಲ ಮನೆಯಾದದ್ದರಿಂದ ಜಾಗವನ್ನು ಕೊಂಚ ವಿಸ್ತರಿಸಿ ಮನೆಯನ್ನು ನವೀಕರಿಸುವ ಅವಕಾಶ ಮನೆಗಳೆಲ್ಲ ಹಿಸೆಯಾದ ಸಮಯದಲ್ಲೇ ರಾಮಚಂದ್ರಣ್ಣನಿಗೆ ಒದಗಿಬಂದಿತ್ತು. ಅಣ್ಣತಮ್ಮಂದಿರು ಒಟ್ಟಿಗೇ ಇದ್ದಿದ್ದರಿಂದ ಸ್ವಲ್ಪ ಅನುಕೂಲಸ್ಥನಾಗಿದ್ದ ರಾಮಚಂದ್ರಣ್ಣ ಮನೆ ಹಿಂದೆ ಇದ್ದ ಸೊಪ್ಪಿನ ಬೆಟ್ಟದ ಸ್ವಲ್ಪ ಜಾಗವನ್ನು ಸಮತಟ್ಟು ಮಾಡಿಸಿ ವಿಶಾಲವಾದ ಕೊಟ್ಟಿಗೆಯನ್ನು ಕಟ್ಟಿಸಿಕೊಂಡಿದ್ದ. ಆ ಕೊಟ್ಟಿಗೆಯಲ್ಲೇ ಸಣ್ಣದೊಂದು ಭಾಗದಲ್ಲಿ ಮಣ್ಣಿನ ಗೋಡೆಯನ್ನೆಬ್ಬಿಸಿ ಬಾಗಿಲು ಕಿಟಕಿಗಳಿಲ್ಲದ ರೂಮೊಂದನ್ನು ಕಟ್ಟಿಸಿ, ರಾಮಚಂದ್ರಣ್ಣ ಕೆಪ್ಪನ ಪಾಲಿನ ಆಪತ್ಬಾಂಧವನಾದ. ಎರಡೇ ದಿನದಲ್ಲಿ ರಾಮಚಂದ್ರಣ್ಣ ಮಾಡಿಸಿಕೊಟ್ಟ ಹಲಸಿನ ಮಂಚದ ಮೇಲೆ ಆಸೀನನಾದ ಕೆಪ್ಪ ಕೊಟ್ಟಿಗೆಯ ಒಡೆಯನೂ, ಕೇರಿಯ ಕಾವಲುಗಾರನೂ ಆಗಿಹೋದ. ಗಂಗಾಚಿಕ್ಕಿಯ ಕೊಟ್ಟಿಗೆಯ ಜವಾಬ್ದಾರಿಯನ್ನು ತಾನಾಗಿಯೇ ವಹಿಸಿಕೊಂಡ. ದಿನ ಬೆಳಗಾದರೆ ಒಂದು ಎಮ್ಮೆ, ಒಂದು ಹಸುವಿನ ಹಾಲು ಕರೆದು, ಸೊಪ್ಪು ಕಡಿದು ತಂದು, ಸಗಣಿ ತೆಗೆದು, ಹೊಸ ಸೊಪ್ಪು ಹಾಸುವವರೆಗೂ ಅವನಿಗೆ ಸಮಾಧಾನವಿರುತ್ತಿರಲಿಲ್ಲ. ರಾತ್ರಿಗಳಲ್ಲಿ ಗದ್ದೆ ಕಾಯುವ ಕೆಲಸವನ್ನೂ ತಾನೇ ವಹಿಸಿಕೊಂಡು ಕೇರಿಯವರ ನಿದ್ರೆಯನ್ನೂ ಸಲಹತೊಡಗಿದ. ಬೆಕ್ಕು ಕೂಡಾ ಯಾರ ಭಯವೂ ಇಲ್ಲದೇ ತಾನು ಹಿಡಿದ ಇಲಿಗಳನ್ನೆಲ್ಲ ತಂದು ಕೆಪ್ಪನ ರೂಮಿನಲ್ಲೇ ರಾಜಾರೋಷವಾಗಿ ತಿನ್ನತೊಡಗಿತು. ಅರ್ಥವಾಗದ ಭಾಷೆಯಲ್ಲಿ ಬೆಕ್ಕಿಗೋ, ಇಲಿಗೋ ಬಾಯ್ತುಂಬ ಬೈಯುತ್ತ ಅಳೆದುಳಿದ ಇಲಿಯ ಅವಶೇಷಗಳನ್ನು ಬಳಿದು ಗೊಬ್ಬರದ ಗುಂಡಿಗೆ ಎಸೆದು ಬೆಕ್ಕು ಓಡಾಡಿದ ಜಾಗವನ್ನೆಲ್ಲ ಸಗಣಿನೀರು ಹಾಕಿ ತೊಳೆದುಬಿಡುತ್ತಿದ್ದ. ಯಾರ ಮನೆಯ ಅಂಗಳವಾದರೂ ಸರಿಯೇ, ಒಂದು ಹುಲ್ಲುಕಡ್ಡಿ ಬಿದ್ದರೂ ಅದನ್ನೆತ್ತಿ ಬಿಸಾಕುತ್ತಿದ್ದ ಕೆಪ್ಪನ ಚೊಕ್ಕು, ಶಿಸ್ತು ನೆನಪಾದಾಗಲೆಲ್ಲ ನನಗೆ ಬಾಲ್ಯದ ಅದೆಷ್ಟೋ ಪಾಠಗಳನ್ನ ಮಾತೇ ಬರದ ಕೆಪ್ಪ ಕಲಿಸಿಕೊಟ್ಟಂತೆನ್ನಿಸುತ್ತದೆ. ಕಾಲಕಳೆದಂತೆ ಕೆಪ್ಪ ಊರಿನವರ ಬಾಯಲ್ಲಿ ‘ಹಳೇಮನೆ ಕೆಪ್ಪ’ನೇ ಆಗಿಹೋದ. ನಾನು ಏಳನೇ ಕ್ಲಾಸು ಮುಗಿಸಿ, ಹಳೇಮನೆಯಿಂದ ಮೂರು ಕಿಲೋಮೀಟರು ದೂರದ ಗೋಳಿಮಕ್ಕಿ ಹೈಸ್ಕೂಲಿಗೆ ಸೇರಿದೆ. ಬೆಳಿಗ್ಗೆ ನಾನು ಏಳುವಷ್ಟರಲ್ಲಿ ಬಚ್ಚಲ ಒಲೆಗೆ ಬೆಂಕಿ ಹಾಕಿ, ಬಾವಿಯಿಂದ ನೀರು ಸೇದಿ ಹದಮಾಡಿದ ನೀರು ಹಂಡೆ ತುಂಬಾ ಇದೆಯೆಂದು ಖಾತ್ರಿಯಾದ ಮೇಲೆಯೇ ಕೆಪ್ಪ ಕೊಟ್ಟಿಗೆ ಕೆಲಸಕ್ಕೆ ಹೋಗುತ್ತಿದ್ದ. ಈ ಕೆಪ್ಪನಿಗಿದ್ದ ಒಂದೇ ಒಂದು ಚಟವೆಂದರೆ ಬೀಡಿ. ಕೆಪ್ಪ ಹಳೇಮನೆ ಸೇರಿ ಒಂದು ವಾರವಾಗುತ್ತಿದ್ದಂತೆ ಒಂದಿನ ರಾಮಚಂದ್ರಣ್ಣ ಊಟ ಮಾಡಿ ಕೈ ತೊಳೆಯುತ್ತಿದ್ದಾಗ ಅವನ ಪಕ್ಕ ಬಂದು ಅದೇ ಏರುಧ್ವನಿಯಲ್ಲಿ ಮಾತಾಡತೊಡಗಿದನಂತೆ. ಅರ್ಥವಾಗದ ರಾಮಚಂದ್ರಣ್ಣ ಅವನ ಮುಖ ನೋಡಿದ್ದಕ್ಕೆ, ಬೀಡಿಕಟ್ಟು ಹೊರತೆಗೆದು ಕಟ್ಟಿನಲ್ಲಿದ್ದ ಕೊನೆಯ ಬೀಡಿಯನ್ನು ತೋರಿಸುತ್ತಾ ತಂದುಕೊಡುವಂತೆ ಕೈಸನ್ನೆ ಮಾಡಿದನಂತೆ. ಕೈ ಒರೆಸುತ್ತಾ ರಾಮಚಂದ್ರಣ್ಣ “ಇವನಿಗೆ ಬೀಡಿ ಬೇಕಂತೆ, ನಾಳೆ ಯಲ್ಲಾಪುರಕ್ಕೆ ಹೋಗಿಬರ್ತೀನಿ; ಮನೆ ಸಾಮಾನು ಪಟ್ಟಿ ಮಾಡಿಕೊಡು” ಎಂದಿದ್ದು ಯಲ್ಲಾಪುರ ಬಸ್ಸು ನೋಡಿದಾಗೆಲ್ಲ ನೆನಪಾಗುತ್ತದೆ ನನಗೆ. ಆ ಬೀಡಿಕಟ್ಟಿನ ಬಾಂಧವ್ಯ ಅವರಿಬ್ಬರನ್ನೂ ವಿಚಿತ್ರವಾಗಿ ಬೆಸೆದಿತ್ತು. ಬೀಡಿ ಸಿಗರೇಟು ಹಾಗಿರಲಿ, ಕವಳವನ್ನೂ ಹಾಕದ ರಾಮಚಂದ್ರಣ್ಣ ಪ್ರತೀಸಲ ಯಲ್ಲಾಪುರಕ್ಕೆ ಹೋದಾಗಲೂ ಕೆಪ್ಪನಿಗೆಂದು ಬೀಡಿಕಟ್ಟು ತರುತ್ತಿದ್ದ. ಮನೆಯಲ್ಲಿದ್ದ ಮಕ್ಕಳಲ್ಲೇ ದೊಡ್ಡವಳಾಗಿದ್ದ ನನ್ನ ಕೈಯಲ್ಲಿ ಹಳೇ ಪೇಪರಿನಲ್ಲಿ ಸುತ್ತಿದ ಬೀಡಿಪೊಟ್ಟಣವನ್ನು ಕೊಟ್ಟು ಕೆಪ್ಪನಿಗೆ ಕೊಡುವಂತೆ ಹೇಳುತ್ತಿದ್ದ. ಅದರಲ್ಲಿರುವುದು ಬೀಡಿಪೊಟ್ಟಣ ಎನ್ನುವುದು ನನಗಾಗ ಗೊತ್ತಾಗದೇ ಇದ್ದರೂ ಅದನ್ನು ನೋಡಿದ ತಕ್ಷಣ ಕೆಪ್ಪನ ಮುಖ ಅರಳಿದ್ದು ಮಾತ್ರ ಗೊತ್ತಾಗುತ್ತಿತ್ತು. ಕೇರಿಯ ಮಕ್ಕಳಿಗೆ ಕಾಣಿಸದಂತೆ ಬೆಟ್ಟದಮೇಲೋ, ಕೊಟ್ಟಿಗೆಯ ಮೂಲೆಯಲ್ಲೋ ಕುಳಿತು ಬೀಡಿ ಸೇದುತ್ತಿದ್ದ ಕೆಪ್ಪ ಉಳಿದ ಬೀಡಿಮೋಟನ್ನು ಮಾತ್ರ ಗೊಬ್ಬರದ ಗುಂಡಿಗೇ ಬಿಸಾಕುತ್ತಿದ್ದ. ನನಗೆ ಹೈಸ್ಕೂಲು ಮುಗಿಯುತ್ತಿದ್ದ ಸಮಯದಲ್ಲಿ ಕೆಪ್ಪನ ಬೀಡಿಪ್ರೇಮ, ಅವನು ಹಲಬುತ್ತಿದ್ದ ಕೆಲವು ಶಬ್ದಗಳೆಲ್ಲ ಅರ್ಥವಾಗತೊಡಗಿ, ‘ಪಾಪ ಕೆಪ್ಪ!’ ಅನ್ನಿಸುತ್ತಿತ್ತು. ಈಗಲೂ ಯಾರಾದರೂ ಯಾರಿಗಾದರೂ ಪಾಪ ಅಂದಾಗಲೆಲ್ಲ, ಬೀಡಿಕಟ್ಟು ಸಿಕ್ಕಿದಾಗ ಅರಳಿದ ಕೆಪ್ಪನ ಮುಖ ನೆನಪಾಗುತ್ತದೆ. ನಾನು ಹೈಸ್ಕೂಲು ಮುಗಿಸಿ ಕುಮಟಾದಲ್ಲಿ ಪಿಯುಸಿಗೆ ಸೇರಿ ಅಲ್ಲೇ ಡಿಗ್ರಿಯನ್ನೂ ಮುಗಿಸಿ, ಕಾರವಾರದ ರೆಸಾರ್ಟ್ ಒಂದರಲ್ಲಿ ಫ್ರಂಟ್ ಆಫೀಸ್ ಕೆಲಸಕ್ಕೆ ಸೇರಿಕೊಂಡೆ. ಪ್ರತೀವರ್ಷ ನವರಾತ್ರಿಯ ಹತ್ತು ದಿನವೂ ಕೆಲಸಕ್ಕೆ ರಜೆ ಹಾಕುತ್ತಿದ್ದ ನಾನು ರೆಸಾರ್ಟಿನ ಗಿಡಗಳನ್ನು ಮೆಂಟೇನ್ ಮಾಡುತ್ತಿದ್ದ ರಾಜಣ್ಣನ ಬಾಯಲ್ಲೂ ರಾಮಚಂದ್ರಣ್ಣನ ಮನೆಯ ದುರ್ಗೆಯೇ ಆಗಿದ್ದೆ. ಈ ಸಲ ನವರಾತ್ರಿಗೆ ಹಳೇಮನೆಗೆ ಹೋದಾಗ ಗಂಗಾಚಿಕ್ಕಿ, ಕಳೆದ ಮಳೆಗಾಲ ಕೆಪ್ಪ ತೀರಿಕೊಂಡ ಸುದ್ದಿಯನ್ನು ಹೇಳುತ್ತಾ ಕುಡಿಯಲು ಮಜ್ಜಿಗೆ ಬೆರೆಸಿಕೊಟ್ಟಳು. ಹೊಸ ಬಟ್ಟೆ ತಂದುಕೊಟ್ಟರೂ ಅದನ್ನು ಗೋಣೀಚೀಲದಲ್ಲಿ ಕಟ್ಟಿಟ್ಟು ರಾಮಚಂದ್ರಣ್ಣನ ಹಳೆಯ ಬಿಳಿ ಅಂಗಿಯನ್ನೇ ತೊಡುತ್ತಿದ್ದ ಕೆಪ್ಪ, ಸಾಯುವ ದಿನ ರಾಮಚಂದ್ರಣ್ಣ ಕಳೆದವರ್ಷ ನವರಾತ್ರಿಗೆ ತಂದುಕೊಟ್ಟ ಹಸಿರು ಅಂಗಿಯನ್ನು ತೊಟ್ಟಿದ್ದನಂತೆ. ಜೀವಹೋಗುವ ಅರ್ಧಗಂಟೆ ಮೊದಲು ರಾಮಚಂದ್ರಣ್ಣನನ್ನು ಕರೆದು ಹೊಸ ಅಂಗಿ ತೋರಿಸುತ್ತಾ ಅದೇನನ್ನೋ ಹೇಳಲು ಪ್ರಯತ್ನಿಸಿದನಂತೆ. ಮಳೆಗಾಲದ ದಿನಗಳಲ್ಲಿ ನಾವು ಶಾಲೆಯಿಂದ ಬರುವ ಹೊತ್ತಿಗೆ ಬಚ್ಚಲೊಲೆಯ ಬೆಂಕಿಯಲ್ಲಿ ಹಲಸಿನಬೀಜ ಸುಡುತ್ತಾ ನಮಗಾಗಿ ಕಾಯುತ್ತಿದ್ದ ಕೆಪ್ಪ ನೆನಪಾಗಿ, ಬಾಲ್ಯದ ಬೆಚ್ಚನೆಯ ನೆನಪೆಲ್ಲ ಹೇಳದೇಕೇಳದೇ ಕೆಪ್ಪನೊಂದಿಗೇ ಹೊರಟುಹೋದಂತೆನ್ನಿಸಿತು. ಶಾರದೆಗೆ ಸೀರೆ ಉಡಿಸುತ್ತಿದ್ದ ರಾಮಚಂದ್ರಣ್ಣನ ಕೈ ಸ್ವಲ್ಪ ನಡುಗುತ್ತಿರುವಂತೆನ್ನಿಸಿ ಗಂಗಾಚಿಕ್ಕಿಯ ಹತ್ತಿರ ವಿಚಾರಿಸಿದೆ. ರಾಮಚಂದ್ರಣ್ಣನ ಶುಗರ್ ಲೆವಲ್ ಕಡಿಮೆಯಾಗಿದ್ದು, ಈಗ ಕಿವಿಯೂ ಸ್ವಲ್ಪ ಮಂದವಾಗಿರುವುದು, ಕೆಪ್ಪ ಸತ್ತುಹೋದಮೇಲೆ ರಾಮಚಂದ್ರಣ್ಣ ಯಲ್ಲಾಪುರಕ್ಕೆ ಹೋಗುವುದನ್ನೇ ನಿಲ್ಲಿಸಿದ್ದು, ರಾಯ್ಸದ ಡಾಕ್ಟ್ರು ತಿಂಗಳಿಗೊಮ್ಮೆ ಮನೆಗೇ ಬಂದು ಚೆಕಪ್ ಮಾಡುವುದು ಎಲ್ಲವನ್ನೂ ಗಂಗಾಚಿಕ್ಕಿ ನಡುಗುವ ಧ್ವನಿಯಲ್ಲಿ ಹೇಳಿದಳು. ತಾನು ನೆಟ್ಟ ಮೌಲ್ಯಗಳನ್ನು ನೀರು ಗೊಬ್ಬರ ಹಾಕಿ ಪೊರೆಯುತ್ತಿದ್ದ ಕೆಪ್ಪ ಇಲ್ಲದೇ ರಾಮಚಂದ್ರಣ್ಣ ಅನಾಥನಾದಂತೆ ಎನ್ನಿಸಿತು. ಊರಿನ ಹೆಣ್ಣುಮಕ್ಕಳನ್ನೆಲ್ಲ ಸಾಲಾಗಿ ಕೂರಿಸಿ, ಹತ್ತು ರೂಪಾಯಿ

ಕಥಾಯಾನ Read Post »

ನಿಮ್ಮೊಂದಿಗೆ

ಕಾವ್ಯಯಾನ

ದೂರದ ಊರು ಅಪ್ಪ ರಜಿಯಾ ಕೆ.ಬಾವಿಕಟ್ಟೆ ನಡೆಯುತ್ತಾ ನಡೆಯುತ್ತಾ ಹೋರಟ ಅಪ್ಪನ ಎದೆಯ ಉಸಿರು ಜೋರಾಗಿತ್ತು. ಬೀಸುವ ಬಿರುಗಾಳಿಯ ತಂಪಿಗೆ ನನ್ನಪ್ಪನ ಹೆಗಲು ಬಿಸಿಕಾವು ನೀಡುತ್ತಿತ್ತು. ನನ್ನ ಪಾದಗಳಿಗೆ ನೋವಾಗಬಾರದೆಂದು ನನ್ನಪ್ಪ ತನ್ನ ಪಾದಗಳ ನೆತ್ತರನು ಲೆಕ್ಕಿಸಲೇ ಇಲ್ಲ. ಹಸಿವು ಎನ್ನ ಕಾಡದಿರಲೆಂದು ದಾರಿ ಮಧ್ಯ ಮಧ್ಯದಲಿ ಕೈತುತ್ತ ನೀಡುತ್ತಲೇ ಇದ್ದ . ತನಗೆ ಹಸಿವಾಗದೆಂದು ಮುಗುಳು ನಗೆ ನಕ್ಕು ಮುಂದೆ ನಡೆಯುತ್ತಲೇ ಇದ್ದ. ಊರಿನ ದಾರಿಯು ಕಂಡ ಮೇಲೆ ಅಪ್ಪ ಬಲು ಸಂತಸ ಪಟ್ಟು ನನ್ನನ್ನು ಸುರಕ್ಷಿಸಿದೆ ಎಂದು ನಿರಾಳತೆಯಲ್ಲಿ ನಿಟ್ಟುಸಿರು ಬಿಟ್ಟ. ನಾ ಮತ್ತೊಮ್ಮೆ ಎದೆಗವಚಿಕೊಂಡಾಗ ನನ್ನಪ್ಪನ ಬಿಗಿ ಉಸಿರು ತಂಪಾಗೆ ಇತ್ತು. ಎಂದೂ ಬಿಸಿ ಉಸಿರಿನ ಅಪ್ಪುಗೆ‌ ನನಗೆ‌ ಸಿಗಲೇ‌ ಇಲ್ಲ. ಕಾರಣ ಅಪ್ಪ ನನ್ನ ಬಿಟ್ಟು ಬಹು ದೂರ ಹೋದನಲ್ಲ. ತನ್ನ ಉಸಿರಂತೆ ಇದ್ದ ನನ್ನ ತಬ್ಬಲಿ ಗೈದನಲ್ಲ. ( ಕೋರಾನಾ ಮಹಾಮಾರಿಯು ತಂದ ದಾರುಣ ಕಥೆಯ ವ್ಯಥೆ ಇದು.)

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಹೀಗೆಯೇ ಬಂದು ಬಿಡುತ್ತಾರೆ ಕೆಲವರು ಶೀಲಾ ಭಂಡಾರ್ಕರ್ ಹೀಗೆಯೇ ಬಂದು ಬಿಡುತ್ತಾರೆ ಕೆಲವರು ಮೌನವಾಗಿದ್ದ, ಶೂನ್ಯವಾಗಿದ್ದ, ಏಕಾಂಗಿ ಬದುಕಿನೊಳಗೆ, ಒಮ್ಮೆಲೇ ಬಂದು ಬಿಡುತ್ತಾರೆ ಕೆಲವರು ಇದ್ದಕ್ಕಿದ್ದಂತೆ ಅಕಾಲದ ಮಳೆ ಹನಿಗಳು ರಸ್ತೆಯಲ್ಲಿ ನಡೆಯುವವರನ್ನು ತೋಯಿಸಿದ ಹಾಗೆ. ಛತ್ರಿಯನ್ನು ಮನೆಯಿಂದ ತರುವುದರೊಳಗೆ ತಂದರೂ ಬಿಚ್ಚುವುದರೊಳಗೆ ಅಥವಾ ಹಾಗೇ ಸುಮ್ಮನೆ ತೋಯುವುದು ಕೂಡ ಅಪ್ಯಾಯವೆನಿಸುವ ಹಾಗೆ ಭೋರೆಂದು ಸುರಿಸುರಿದು ಬಟ್ಟೆಗಳ ಮೇಲೆ, ಮುಚ್ಚದ ಅಂಗಾಂಗಗಳ ಮೇಲೆ, ಕಣ್ಣುಗಳೊಳಗೆ, ಕಿವಿಗಳಲ್ಲಿ, ಮುಟ್ಟಲಾಗದ ದೇಹದ ಸಂಧಿಗೊಂದಿಗಳಲ್ಲಿ, ದಾರಿ ಹುಡುಕುತ್ತಾ, ನುಸುಳಿದಂತೆ ಬಂದು ಬಿಡುತ್ತಾರೆ ಕೆಲವರು ಮೌನವಾಗಿದ್ದ ಏಕಾಂಗಿ ಬದುಕಿನೊಳಗೆ. ಖುಷಿಯೆನಿಸುತ್ತದೆ ರಸ್ತೆಯಲ್ಲಿ ನಡೆಯುತ್ತಿರುವಾಗ ಅಚಾನಕ್ಕಾಗಿ ಹೀಗೆ ಒದ್ದೆಯಾಗುವುದು ಏನೋ ಒಂದು ರೀತಿಯ ಖುಷಿ ಕೊಡುತ್ತದೆ. ಮಳೆ ಸಂಪೂರ್ಣ ನಿಂತ ಮೇಲೆ ಇನ್ನೂ ನಡೆಯುತ್ತಲೇ ಇರುವಾಗಲೇ ಮೋಡಗಳೆಡೆಯಿಂದ ಇಣುಕುವ ಬಿಸಿಲಿಗೆ ಬಟ್ಟೆ ಮತ್ತು ನಾನು ನನ್ನ ಮೈಮೇಲಿನ ಹನಿಗಳು ಒಣಗುತಿದ್ದೇವೆ. ಇನ್ನು ಮನೆವರೆಗಿನ ದಾರಿ ಮಳೆ ಬರದೆ ಬಿಸಿಲು ಸುರಿದರೆ ಸಾಕು. ಮಳೆಗೆ ತೋಯ್ದ ಎಲ್ಲವೂ ಒಣಗಿದರೆ ಖುಷಿ ಇದೆ..ಹೀಗೆ ಒದ್ದೆಯಾಗುವುದರಲ್ಲೂ. ಹೀಗೆಯೇ ಬಂದು ಬಿಡುತ್ತಾರೆ ಕೆಲವರು ಇದ್ದಕ್ಕಿದ್ದಂತೆ ಅಕಾಲದ ಮಳೆ ಹನಿಗಳು ರಸ್ತೆಯಲ್ಲಿ ನಡೆಯುವವರನ್ನು ತೋಯಿಸುವ ಹಾಗೆ. ********

ಕಾವ್ಯಯಾನ Read Post »

You cannot copy content of this page

Scroll to Top