ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಅಂಕಣ ಸಂಗಾತಿ

ಮುಚ್ಚಿದ ಬಾಗಿಲು-ತೆರೆಯದ ಕಿಟಕಿ

ಮಾಲತಿಹೆಗಡೆಯವರ ಹೊಸ ಅಂಕಣ, ಪ್ರತಿನಿತ್ಯ ಪ್ರಕಟವಾಗಲಿದೆ ಮುಚ್ಚಿದ ಬಾಗಿಲು-ತೆರೆಯದ ಕಿಟಕಿ ಭಾಗ-5 ಮಾಲತಿಹೆಗಡೆಯವರ ಹೊಸ ಅಂಕಣ, ಪ್ರತಿನಿತ್ಯ ಪ್ರಕಟವಾಗಲಿದೆ ಯಾರದ್ದೋ ತಪ್ಪಿಗೆ ಯಾರಿಗೋ ಶಿಕ್ಷೆ. ‘ಅಮ್ಮಾ ನನ್ನ ಜೊತೆ ಆಟಾ ಆಡು ಬಾ ಎಂದು ನಾಲ್ಕು ವರ್ಷದ ಪುಟ್ಟ ಶಿಶಿರನ ಕರೆ ಕೂಗಾಟ ಚೀರಾಟವಾದರೂ ಆ ಅಮ್ಮನಿಗೆ ಅಡುಗೆ ಮನೆಯಲ್ಲಿ ಕೆಲಸ ಮುಗಿಯುವುದಿಲ್ಲ. ತೊಳೆದಷ್ಟೂ ಮುಗಿಯದ ಮುಸುರೆ ಪಾತ್ರೆಗಳು, ಬಟ್ಟೆಗಳು …ಬಿಡುವೆಲ್ಲಿದೆ?ಈಗಿನ್ನೂ ತಿಂಡಿ ತಿಂದಾಗಿದೆ ಆದರೆ ಮತ್ತೆ ಅಡುಗೆ ಮಾಡುವ ಸಮಯ ಬಂದೇ ಹೋಯ್ತು ಎನ್ನುವ ಟೆನ್ಶನ್ ನಲ್ಲಿ ಮಗುವಿನೊಂದಿಗೆ ಸಂತೋಷವಾಗಿ ಆಟ ಆಡಲಾಗುವುದೇ.. ಮೊದಲಿನಂತೆ ಗಂಡನೂ ಆಫೀಸಿಗೆ ಹೋಗುತ್ತಿಲ್ಲ. ಮೊಬೈಲ್ ನೋಡುತ್ತ ನ್ಯೂಸ್ ಕೇಳುತ್ತ ಟೈಂಪಾಸ್ ಮಾಡುವ ಬದಲು ಮಗನ ಜೊತೆ ಕೊಂಚ ಆಟ ಆಡಿದರೆ ಆಗುವುದಿಲ್ಲವೇ? ಎಂಬ ಸಿಡಿಮಿಡಿಯನ್ನು ಮನದಲ್ಲೇ ಹುಗಿದು ‘ಕಳ್ಳ ಪೋಲಿಸ್ ಆಡೋಣವೇ ಮಗನೇ?’ ಕೇಳಿದಳು. ಅಮ್ಮ ಆಟಕ್ಕೆಂದು ಬಂದೊಡನೆ ಮಗುವಿನ ಮೂಡ್ ಬದಲಾಗಿ ಹೋಯ್ತು ಆ ಪುಟ್ಟ ಮನೆಯ ಮೂಲೆ ಮೂಲೆಯಲ್ಲಿ ಅವಿತು ಕುಳಿತ ಕಳ್ಳನನ್ನು ಅಮ್ಮ ಪೋಲೀಸ್ ಹುಡುಕಿದ್ದೇ ಹುಡುಕಿದ್ದು. ಒಂದೆರಡು ದಿನ ಪ್ರೇಕ್ಷಕನಾದ ಅಪ್ಪನೂ ಕ್ರಮೇಣ ಆಟದಲ್ಲಿ ಸೇರಿಕೊಂಡ.. ಎಲ್ಲಾ ಲಾಕ್ ಡೌನ್ ಮಹಾತ್ಮೆ.. ಮನೆಯ ಬಾಗಿಲು ಕಿಟಕಿ ಮುಚ್ಚಿದರೆ ಪುಟ್ಟ ಮಕ್ಕಳ ಕ್ರಿಯಾಶೀಲತೆ ಮುಚ್ಚಿಡಲಾಗುವುದೇ? ದಿನವಿಡೀ ಆಡುವ ಉತ್ಸಾಹ, ಪ್ರಶ್ನೆ ಕೇಳುವ ಕುತೂಹಲ, ಅತ್ತಾದರೂ ತನಗೆ ಬೇಕಾಗಿದ್ದನ್ನು ಗಿಟ್ಟಿಸಿಕೊಳ್ಳುವ ಮಕ್ಕಳಿಗೆ ಲಾಕ್ ಡೌನ್ ಒಂದರ್ಥದಲ್ಲಿ ಶಿಕ್ಷೆ ಎನಿಸಿದರೂ ಇನ್ನೊಂದು ಅರ್ಥದಲ್ಲಿ ಸಂತೋಷವನ್ನೂ ತಂದಿದೆ. ನಗರವಾಸಿಗಳಲ್ಲಿ ಅಪ್ಪ ಅಮ್ಮ ಇಬ್ಬರೂ ಉದ್ಯೋಗಿಗಳಾಗಿದ್ದರಂತೂ ಇಬ್ಬರೂ ಮಗುವಿಗೆ ಕೊಡುವುದು ಸಂಜೆಯಿಂದ ಮುಂಜಾನೆಯವರೆಗೆ ಮಾತ್ರ. ಉಳಿದಂತೆ ಪುಟ್ಟ ಮಕ್ಕಳು ಶಾಲೆ, ಬೇಬಿಸಿಟ್ಟಿಂಗ್ ನಲ್ಲೇ ಕಳೆಯಬೇಕು. ದಿನವಿಡೀ ದುಡಿದು ದಣಿವ ಅಪ್ಪ ಅಮ್ಮಂದಿರಿಗೆ ಆಟ ಅಡುವ ಹುಮ್ಮಸ್ಸಿರುವುದು ಅಷ್ಟಕ್ಕಷ್ಟೇ. ಕೊನೆಪಕ್ಷ ಈ ಬಿಡುವಿನಲ್ಲಾದರೂ ಹೆತ್ತವರು ಮಕ್ಕಳ ಕುತೂಹಲಕ್ಕೆ ತಕ್ಕ ಉತ್ತರ ಕೊಡಲಿ. ಮುಚ್ಚಿದ ಬಾಗಿಲ ಮನೆಯಲ್ಲಿ ಮಕ್ಕಳ ಜೊತೆ ಮೈದಣಿಯುವಂತಹ ಆಟ ಆಡಲಿ, ಹಾಡು ಹೇಳಲಿ, ಮತ್ತೊಮ್ಮೆ ಬಾಲ್ಯವನ್ನು ಸವಿಯುವಂತಾಗಲಿ, ಅಮ್ಮಂದಿರ ಕಷ್ಟವನ್ನು ಅಪ್ಪಂದಿರೂ ಅರಿಯುವಂತಾಗಲಿ.. ಎಂದು ಹಾರೈಸುವಷ್ಟರಲ್ಲಿ ಪಕ್ಕದ ಮನೆಯಲ್ಲಿ ಎಳೆಯ ಕಂಠವೊಂದು ‘ಮನೆಯ ಬಾಗಿಲು ತೆಗೆಯಮ್ಮಾ.. ಪಾರ್ಕಿಗೆ ಹೊಗೋಣಾ ಎಂದು‌ ಹೇಳಿದ್ದು ಕೇಳಿತು.. ಬೇಡ ಮಗು ಅಲ್ಲೆಲ್ಲಾ ಕೊರೋನಾ ಹುಳು ಇರುತ್ತೆ ಕಚ್ಚಿದರೆ ಜ್ವರಾ ಬರುತ್ತೆ ಹೋಗಬಾರದು ಮಗು ಎಂದು ಅಮ್ಮ ನಂಬಿಸುತ್ತಿರುವುದೂ ಕೇಳಿ ಬಂತು.. ಅಂತ್ಯವರಿಯದ ಈ ದಾರಿಯಲ್ಲಿ ಸಾಗುವುದೆನಿತು ದಿನ? ಹಿಂದೆಲ್ಲ ಮುಂದಿನ ತಲೆಮಾರಿನವರು ತಿನ್ನಲೆಂದು ಒಳ್ಳೆಯ ಹಣ್ಣಿನ ಗಿಡಗಳನ್ನು, ತೆಂಗಿನ ಗಿಡಗಳನ್ನು ನೆಡುತ್ತಿದ್ದರು. ನಾವೇಕೆ ಎಳೆಯರಿಗೆ ಇಂತಹ ದಿನಗಳನ್ನು ತಂದಿಟ್ಟೆವು? ***************************************** ಮುಂದುವರಿಯುವುದು ಮಾಲತಿ ಹೆಗಡೆ

ಮುಚ್ಚಿದ ಬಾಗಿಲು-ತೆರೆಯದ ಕಿಟಕಿ Read Post »

ಕಾವ್ಯಯಾನ

ಕಾವ್ಯಯಾನ

ಹನಿಗಳು ಬಸವರಾಜ ಕಾಸೆ ಅವಳ ಕೈಗುಣ ಕೇಳಿ ತಿಳಿದು ಕಟ್ಟಿಕೊಂಡೆ ಮಾಡಿ ಅವಳ ಗುಣಗಾನ! ಆಹಾ ಎಂತಹ ನಶೆ ಕಂಡು ಅವಳ ಕೈಗುಣ!!! ಸಂಜೆ ಮಿಕ್ಸ್ ಮಾಡಿ ಕೊಡುವಳು ಎಣ್ಣೆಯೊಂದಿಗೆ ಸೋಡಾ!! ರುಚಿ ಹೇಗಿದೆ ಎಂದು ಪರೀಕ್ಷಿಸಿ!!! ಪಿಜ್ಜಾ ಬರ್ಗರ್ ಕೊಡಿಸದಿದ್ದರೂ ಪರವಾಗಿಲ್ಲ ಪಿಜ್ಜಾ ಬರ್ಗರ್ ಸ್ಯಾಂಡವಿಚ್!!! ಕೊಡಿಸಿದರೆ ಸಾಕೆಂದಳು ಲಿಪಸ್ಟಿಕ್ ಕ್ರೀಮ್ ಬಿವಟಿ ಕಿಟ್!!! ಅಮಾಯಕಿ ಗುಟ್ಕಾ ಸಿಗರೇಟು ಎಣ್ಣೆ ಏನೆಲ್ಲಾ ಬಿಡಿಸಿದಳು ನಲ್ಲೆ! ಹುಚ್ಚು ಪ್ರೀತಿಯ ಅಡ್ಡ ಪರಿಣಾಮ!! ಜೇಬಲ್ಲಿ ಯಾವುದಕ್ಕೂ ಕಾಸಿಲ್ಲದಂತೆ ಮಾಡಿದಳು ಅಮಾಯಕಿ!!! ಸಿಂಗಲ್ ಸ್ಟೇಟಸ್ ಮಗುವಾದರೂ ಒಂದು ಸಿಂಗಲ್ ಎಂದೇ ಇದೆ ಇಂದಿಗೂ ನನ್ನ ಸ್ಟೇಟಸ್! ನಿನ್ನ ಮುಸುಡಿಗೆ ಈಗಲೂ ಯಾವಳು ಬೀಳಲ್ಲ ಚೇಂಜ್ ಮಾಡೆಂದಳು ಮಿಂಗಲ್ ಆದಾಕೆ!!! ***********

ಕಾವ್ಯಯಾನ Read Post »

ಪುಸ್ತಕ ಸಂಗಾತಿ

ನಾನು ಓದಿದ ಪುಸ್ತಕ

ಚಿಗುರಿದ ಕನಸು ಡಾ.ಶಿವರಾಮ ಕಾರಂತ ಮೊನ್ನೆ ನಮ್ಮ ಬತ್ತಲಹಳ್ಳಿಗೆ ಹೊರಟಾಗ ಎದುರಿಂದ ಕುರುಚಲು,ಸಣ್ಣ ಕಾಡು ಗಿಡಗಳಿಂದಲೇ ತುಂಬಿರುವ ಹಸಿರುಟ್ಟ ಬೆಟ್ಟ ಸಾಲುಗಳು ಬರಮಾಡಿಕೊಂಡವು. ಬೆಟ್ಟದ ತಪ್ಪಲಿನಲ್ಲಿ ಇರುವ ನಮ್ಮ ಹೊಲ,ತುಂಡು ಭೂಮಿಯ ಕಂಡಾಗ ಎಂತದೋ ಖುಷಿ. ಈ ದಿನ ಅದೆಲ್ಲವನ್ನೂ ಮತ್ತೆ ಮತ್ತೆ ನೆನೆಯಲು ಕಾರಣವಾಯ್ತು ಈ “ಚಿಗುರಿದ ಕನಸು”. ಈ ಕಾದಂಬರಿಯು ಶಿವರಾಮ ಕಾರಂತರು  ‌ಬರೆದಿರುವ‌ ಕಾದಂಬರಿಗಳಲ್ಲಿ ಒಂದಾಗಿದ್ದು ತುಂಬಾ ಅದ್ಭುತವಾದ ಕಾದಂಬರಿಯಾಗಿದೆ.                   ಈ ಕಾದಂಬರಿಯನ್ನು ಓದಿ ಮುಗಿಸಿದ ನನಗೆ ಈ ಒಂದು ವಿಷಯ ಮನಸ್ಸಿಗೆ ಬರದೆ ಇರಲು ಸಾಧ್ಯವಾಗಲಿಲ್ಲ ಅದೇನೆಂದರೆ ನಾವು ಸಹ ಈ ನಗರದ ಜೀವನವನ್ನು, ಯಾಂತ್ರಿಕ ಬದುಕನ್ನು ಬಿಟ್ಟು ಹಳ್ಳಿಗೆ ಹೋಗಿ ಅಲ್ಲಿ ಇರುವಂತಹ ಅಲ್ಪ ಸ್ವಲ್ಪ ಜಮೀನಿನಲ್ಲಿ ವೈಜ್ಞಾನಿಕವಾಗಿ ವ್ಯವಸಾಯವನ್ನು ಮಾಡಿಕೊಂಡು ನಿಸರ್ಗದ ಮಡಿಲಲ್ಲಿ ಸುಸ್ಥಿರವಾದಂತಹ ಜೀವನವನ್ನು ತೃಪ್ತಿಯಿಂದ ಜೀವಿಸಬಹುದಲ್ಲವೇ ಎಂಬುದು.                ಈ ಕಥೆಯ ನಾಯಕ ಶಂಕರ ರವರ ಪಾತ್ರ ಮಹತ್ವದ್ದು. ಅವರ ವ್ಯಕ್ತಿತ್ವ, ಯೋಚನಾ ಲಹರಿ, ಸಾಧನೆ, ಅವರ ಮಿತಭಾಷೆ ಎಲ್ಲವೂ ಇತರರಿಗೆ ಮಾದರಿಯಾಗಿದೆ.             ಉನ್ನತ ವ್ಯಾಸಂಗವನ್ನು ಮಾಡಿ ಮುಂಬಯಿ, ದೆಹಲಿಯಂತಹ ಮಹಾ ನಗರಗಳಲ್ಲಿ ಓದಿ, ಬೆಳೆದು ತಾನು ಬೆಳೆದ ವಾತಾವರಣಕ್ಕೆ ತೀರಾ ವಿರುದ್ಧವಾದಂತಹ ತನ್ನ ತಾತ ಮುತ್ತಾತಂದಿರು ಬಾಳಿ ಬದುಕಿದ ಒಂದು ಪುಟ್ಟ ಹಳ್ಳಿಗೆ ಬಂದು ಅಲ್ಲಿ ಅವರ ತಾತಂದಿರ ಜಮೀನು ಕಾಡು ಪಾಲಾಗಿದ್ದನ್ನು ದಕ್ಕಿಸಿಕೊಂಡು ತನ್ನ ಶ್ರಮ ಮತ್ತು ವೈಜ್ಞಾನಿಕ ವಿಧಾನಗಳಿಂದ ಆ ಭೂಮಿಯನ್ನು ಸಾಗುವಳಿ ಭೂಮಿಯನ್ನಾಗಿ ಮಾಡಿದ ಕೀರ್ತಿ ಶಂಕರ್ ರವರದ್ದಾಗಿದೆ.               ಶಂಕರ ರವರ ತನ್ನ ಆಸೆ, ಕನಸು ಆಗಿದ್ದಿದ್ದು ಏನೆಂದರೆ ತನ್ನ ತಾತ ನವರು ಬಾಳಿ ಬದುಕಿದ ಹಳ್ಳಿಯಲ್ಲಿ ಅವರ ಜಮೀನಿನಲ್ಲಿ ತಾನು ವ್ಯವಸಾಯವನ್ನು ಮಾಡಿಕೊಂಡು ಬದುಕಬೇಕು ಎಂಬುದು.ತನ್ನ ಈ ಆಸೆಯನ್ನು ತನ್ನ ಅಪ್ಪ ಅಮ್ಮನಿಗೆ ತಿಳಿಸಿದಾಗ ಅವರಿಂದ ಒಪ್ಪಿಗೆ ಸಿಗುವುದಿಲ್ಲ.ಕಾರಣ ಅವರಿಗೆ ಹಳ್ಳಿ, ವ್ಯವಸಾಯ ಇವು ತಮ್ಮ ಪ್ರತಿಷ್ಠೆಗೆ ಸರಿಹೊಂದುವುದಿಲ್ಲ ಎಂಬುದು.ತನ್ನ ಅಪ್ಪ ಅಮ್ಮ ನವರಿಂದ ಯಾವುದೇ ರೀತಿಯ ಆರ್ಥಿಕ ಸಹಾಯ ಸಿಗುವುದಿಲ್ಲ. ಆದರೂ ಛಲ ಬಿಡದೆ ಹಳ್ಳಿಗೆ ಬಂದು ಕೃಷಿಯನ್ನು ಮಾಡಿ ಯಶಸ್ವಿಯಾಗುತ್ತಾರೆ. ತನ್ನ ತಮ್ಮ ಅಣ್ಣನ ಆಸೆ ಕನಸುಗಳಿಗೆ ತನ್ನ ಕೈಲಾದಷ್ಟು ಹಣ ಸಹಾಯ ಮಾಡುತ್ತಾನೆ.                 ಶಂಕರ ರವರು ಹಳ್ಳಿಗೆ ಬಂದು ಕಾಡು ಬೆಳೆದುಕೊಂಡ ಜಮೀನಿನಲ್ಲಿ ವೈಜ್ಞಾನಿಕವಾಗಿ ಕೃಷಿ ಮಾಡಲು ಶುರು ಮಾಡುತ್ತಾರೆ.ಅವರ ಈ ಹಾದಿಯಲ್ಲಿ ಮೇಲಿಂದ ಮೇಲೆ ಕಷ್ಟಗಳು, ಆಘಾತಗಳು ಎಷ್ಟು ಬಂದರು ಧೃತಿಗೆಡುವುದಿಲ್ಲ.ಆ ಕಷ್ಟಗಳನ್ನು ಮೇಲಿಂದ ಮೇಲೆ ಬಂದ ತನ್ನ ಆಪ್ತರ ಸಾವುಗಳನ್ನು ಸಹನೆಯಿಂದ, ಧೈರ್ಯದಿಂದ ಎಲ್ಲಾ ತೊಂದರೆಗಳನ್ನು ನಿಭಾಯಿಸಿ ತನ್ನ ಕನಸನ್ನು ನನಸು ಮಾಡಿಕೊಳ್ಳುತ್ತಾರೆ.       ಇವರ ಈ ಸಾಧನೆ ಸುತ್ತಾ ಹತ್ತಾರು ಹಳ್ಳಿಗಳಿಗೆ ಹಬ್ಬಿ ಇವರ ಮಾದರಿಯ ಕೃಷಿ ವಿಧಾನಗಳನ್ನು ಬೇರೆಯವರು ತಮ್ಮ ಕೃಷಿಯಲ್ಲಿ ಅಳವಡಿಸಿಕೊಳ್ಳಲು ಮನಸ್ಸು ಮಾಡುವರು. ಇದರಲ್ಲಿ ಮೊದಲಿಗರು ಶಂಕರರ ಗೆಳೆಯನಾದ ಸೀತಾರಾಮನ ತಮ್ಮ ಕೃಷ್ಣನೂ ಸಹ ಕೆಲವು ವರ್ಷಗಳು ಶಂಕರರೊಂದಿಗೆ ಕೆಲಸ ಮಾಡಿ ತಮ್ಮದೇಯಾದ ಹೊಸ ಜಮೀನನ್ನು ಕೊಂಡು ಅದನ್ನು ಶಂಕರ ರವರ ಮಾರ್ಗದರ್ಶನದಲ್ಲಿ ಸಾಗುವಳಿ ಮಾಡಿ ಯಶಸ್ವಿಯಾಗುತ್ತಾರೆ.               ಕಥಾನಾಯಕ ಶಂಕರ ರವರ ವ್ಯಕ್ತಿತ್ವ, ಸಾಧನೆ ಇಂದಿನ ಯುವಜನತೆಗೆ ಮಾದರಿಯಾಗಿದೆ. ಇತ್ತೀಚಿನ ದಿನಗಳಲ್ಲಿ ಹಳ್ಳಿಯಿಂದ ಸುಮಾರು ಜನ ನಗರಗಳಿಗೆ ಉದ್ಯೋಗ ಹುಡುಕಿಕೊಂಡು ಹೋಗುತ್ತಿದ್ದಾರೆ. ಇದರಿಂದ ಕೃಷಿಯ ಮೇಲೆ,ಅದರ ಪ್ರಗತಿಯ ಮೇಲೆ ತುಂಬಾ ದುಷ್ಪರಿಣಾಮಗಳುಂಟಾಗುತ್ತಿವೆ. ಯುವ ಜನತೆ ಇಂತಹ ದುಷ್ಪರಿಣಾಮಗಳಿಗೆ ಅವಕಾಶ ಕೊಡದೆ ವೈಜ್ಞಾನಿಕ ವಿಧಾನಗಳನ್ನು ಅನುಸರಿಸಿ ಕೃಷಿಯನ್ನು ಆಧುನಿಕ ರೀತಿಯಲ್ಲಿ ಮಾಡಿ ಅಲ್ಲಿಯೇ ತಮ್ಮ ಬದುಕನ್ನು ಸುಸ್ಥಿರವಾಗಿ ಕಟ್ಟಿಕೊಂಡು ಇತರರಿಗೂ ನೆರವಾಗಬೇಕು ಎಂಬುದು ನನ್ನ ಆಶಯ…. ******** ಸೌಮ್ಯ.ವಿ.

ನಾನು ಓದಿದ ಪುಸ್ತಕ Read Post »

ಕಾವ್ಯಯಾನ

ಕಾವ್ಯಯಾನ

ಎಚ್ಚರವಾಗಿದ್ದರೂ ಏಳದೆ! ಧಾಮಿನಿ ಅವಳು ಮಲಗೇ ಇದ್ದಾಳೆ… ಬೆಳಗು ಮುಂಜಾನೆದ್ದು ರಂಗೋಲಿ ಹಾಕುತ್ತಿದ್ದವಳು ಇವತ್ತೇನೋ ನೀರು ಹಾಕಿದರೆ ಸೂರ್ಯನ ಮುಖಕ್ಕೇ ರಾಚುವಷ್ಟು ಸಮಯವಾಗಿದ್ದರೂ ಮಲಗೇ ಇದ್ದಾಳೆ. ಹಾಗಂತ ರಾತ್ರಿಯೆಲ್ಲ ಕ್ರೀಡೆಯಾಡಿರಲಿಲ್ಲ ಲೀಲೆಯಾಡಿದಂತ ಕಸಸೂ ಕಂಡಿರಲಿಲ್ಲ, ಶತಮಾನವಾಗಿದ್ದರೂ. ಹಾಗಂತ ಮೈಮರೆತು ಮಲಗಿರಲಿಲ್ಲ ಎಲ್ಲದರಿಂದ ವಿಮುಖವಾದವಳೂ ಅಲ್ಲ ಬದುಕೇ ಎಲ್ಲದರಿಂದ ದೂರ ಸರಿದಿದೆ ಸುಮ್ಮನೆ ಮಲಗೇ ಇದ್ದಾಳೆ ವೇಳೆ ಸರಿದಿದ್ದರೂ. ಹಾಗಂತ ಕೆಲಸವಿಲ್ಲದೇ ಏನಿಲ್ಲ ಶುರು ಮಾಡಿದರೆ ಅತ್ತಿತ್ತ ತಿರುಗಲೂ ಪುರುಸೊತ್ತಿಲ್ಲ ಒಂದೊಂದು ಘಳಿಗೆ ಮುಂದಕ್ಕೋಗುತ್ತಿದ್ದರೂ ಮಲಗೇ ಇದ್ದಾಳೆ. ಹಾಗಂತ ಹೇಳುವವರು ಕೇಳುವವರು ಇಲ್ಲವೇನು ? ಇಲ್ಲದೇ ಏನು ! ಇವಳೇ ಎಲ್ಲರ ದೂರ ತಳ್ಳಿ ನಿಡುಸುಯ್ದಿದ್ದಾಳೆ. ಬೆನ್ನು ತಿರುಗಿಸಿ ಮಲಗೇ ಇದ್ದಾಳೆ ಕ್ಷಣ ಕ್ಷಣವೂ ಓಡುತ್ತಿದ್ದರೂ. ನಿರ್ಲಿಪ್ತ ಮುಖ, ಕಣ್ಣು ಮರೆಮಾಡಿಕೊಂಡ ಕೈ, ಹರಡಿದ ಕೂದಲು, ಅಸ್ತವ್ಯಸ್ತ ಬಟ್ಟೆ, ಮಲಗಿರುವ ರೀತಿ, ಇವೆಲ್ಲವೂ ಕವಿಯ ಕಣ್ಣಿಗೆ ಬಿದ್ದರೆ ಒಂದು ಸುಂದರ ಕವಿತೆ ಒಬ್ಬ ಕಲಾಕಾರ ನೋಡಿದರೆ ಒಂದು ಸುಂದರ ಚಿತ್ರ ಒಬ್ಬ ರಸಿಕ ನೋಡಿದರೆ ಒಂದು ಸುಂದರ ಹಾಡು ಅವಳು ಮಲಗೇ ಇದ್ದಾಳೆ ಎಚ್ಚರವಾಗಿದ್ದರೂ ಏಳದೇ… ******

ಕಾವ್ಯಯಾನ Read Post »

ಇತರೆ

ಅವನಿಗೆ ನಾಳೆ ಬಾ ಎನ್ನಿ

ಕೊರೋನಾ ಅವನಿಗೆ ನಾಳೆ ಬಾ ಎನ್ನಿ ಡಿ.ಯಶೋದಾ ಕೊರೋನಾ ಅವನಿಗೆ ನಾಳೆ ಬಾ ಎನ್ನಿ ಇತ್ತೀಚೆಗೆ ಪ್ರತಿದಿವಸ ಅವನು ಕನಸಿನಲ್ಲಿ ಬರುತ್ತಾನೆ, ತನ್ನ ಜೊತೆ ಬಂದುಬಿಡು ಎಂದು ಬಲವಂತ ಮಾಡುತ್ತಾನೆ, ನನಗೂ ಅವನೊಂದಿಗೆ ಹೋಗಿಬಿಡುವ ಮನಸ್ಸಾಗುತ್ತಿದೆ.ನಿಜ ಹೇಳಬೇಕೆಂದರೆ ಹಗಲೆಲ್ಲಾ ಅವನನ್ನೇ ನೆನಪಿಸಿಕೊಳ್ಳುತ್ತಿರುತ್ತೇನೆ, ಇರುಳಲ್ಲಿ ಅವನು ಬಂದು ಕರೆಯುತ್ತಾನೆ. ಇಲ್ಲಿ ಇದ್ದು ನಾನು ಮಾಡುವುದಾದರೂ ಏನಿದೆ? ಹೋಗಿಬಿಡಲೇ?…ಹೋಗಿಬಿಡಲೇ ಎಂದು ಕೇಳುವ ಆಕೆಯಮನಸ್ಸು ಅರ್ಥವಾಗಿತ್ತು ಹಾಗೆಯೇ ನನ್ನ ಮನಸ್ಸುಆರ್ದ್ರವಾಯಿತು.. ಕರೆಯುವವನು ಜೀವ ಕೊಡುವವನಾಗಿದ್ದರೆ ಹೋಗಿಬಿಡು ಎನ್ನಬಹುದಿತ್ತು, ಆದರೆ ಜೀವ ತೆಗೆಯುವವನ ಜೊತೆ ಕಳುಹಿಸುವುದು ಹೇಗೆ? ಇನ್ನೊಬ್ಬರದು ಇನ್ನೂ ವಿಚಿತ್ರ ಲೆಕ್ಕಾಚಾರ- ಹಿಂದೆಯೆಲ್ಲ ನನಗೆ ಸರಿಯಾದ ಕಾರಣ ದೊರೆತಿರಲಿಲ್ಲ. ಈಗ ನನಗೆ ಬರೆದಿಡಲು ಒಂದು ಒಳ್ಳೆಯ ಕಾರಣವಿದೆ, ಇದನ್ನು ಬಹಳಷ್ಟು ಜನ ಒಪ್ಪಿಕೊಳ್ಳಬಹುದು. ಹಾಗಾಗಿ ನಾನು ಅದಕ್ಕೆ ಪ್ರಯತ್ನಿಸಲೇಬೇಕು.ಅವರ ಸ್ಪಷ್ಟ ನುಡಿಗಳು ನನ್ನನ್ನು ಬೆಚ್ಚುಬೀಳಿಸಿದವು. ಇಂಥ ಪ್ರಕರಣಗಳು ಒಂದು, ಎರಡು ಮಾತ್ರವಲ್ಲ. ಕೊರೊನಾ ಲಾಕ್ಡೌನ್ನಿಂದಾಗಿ ಯಾರನ್ನೂ ಭೇಟಿಯಾಗದ ಕಾರಣ ಆನ್ಲೈನ್ನಲ್ಲೇ ಕೌನ್ಸೆಲಿಂಗ್ ನಡೆಯುತ್ತಿದ್ದು,ಕೌನ್ಸೆಲಿಂಗ್ ಮೊರೆ ಹೋಗುತ್ತಿರುವವರೂ ಹೆಚ್ಚಾಗಿದ್ದಾರೆ. ಕೆಲವು ಮಹಿಳೆಯರು ಈ ರೀತಿ,ಜೀವನದಿಂದ ವಿಮುಕ್ತರಾಗಿ ಸಾವಿನ ಬಗ್ಗೆ ಆಸಕ್ತಿ ಹೊಂದಿರುವುದಾಗಿ ಹೇಳಿಕೊಂಡಿದ್ದಾರೆ. ಕೆಲವರಂತೂ ಈಗ ಆತ್ಮಹತ್ಯೆಗೆ ದೇವರೇ ತಮಗೆ ದಾರಿ ತೋರಿಸಿದ್ದಾನೆ ಎನ್ನುತ್ತಿದ್ದಾರೆ. ಇಡೀ ವಿಶ್ವವೇ ಕೊರೊನಾ ಮಾರಕ ರೋಗದ ಮುಕ್ತಿಗಾಗಿ ಶ್ರಮಿಸುತ್ತಿದೆ. ವೈದ್ಯೋ ನಾರಾಯಣೋ ಹರಿಃ ಎನಿಸಿಕೊಂಡವರು ತಮ್ಮ ಪ್ರಾಣವನ್ನೂ ಲೆಕ್ಕಿಸದೆ ಇತರರ ಪ್ರಾಣ ಉಳಿಸಲು ಶತಪ್ರಯತ್ನ ಮಾಡುತ್ತಿದ್ದಾರೆ. ಸಮಾಜದಲ್ಲಿ ಸಾಮರಸ್ಯ ಕಾಪಾಡಲು ಸಂಬಂಧಿಸಿದವರೆಲ್ಲಾ ಟೊಂಕ ಕಟ್ಟಿ ಶ್ರಮಿಸುತ್ತಿದ್ದಾರೆ. ಜೀವ ಉಳಿಸಿಕೊಳ್ಳುವುದೇ ಒಂದು ಸಾಧನೆ ಎಂಬ ರೀತಿಯಲ್ಲಿ ಎಲ್ಲರೂ ಬದುಕುತ್ತಿರುವಾಗ ಇದಕ್ಕೆ ವ್ಯತಿರಿಕ್ತವಾಗಿ ತಮಗೆ ಸಾಯಲು ಒಂದು ಕಾರಣ ಸಿಕ್ಕಿತೆಂದು, ಸಾವಿನ ಕನಸೇ ಬೀಳುತ್ತದೆಂದು, ಯಮ ಬಂದು ಕರೆಯುತ್ತಿದ್ದಾನೆಂದು, ಇಲ್ಲಿಯವರೆಗೂ ಹೇಗೋ ಬದುಕಿದ್ದಾಯಿತು, ಇನ್ನು ಬದುಕುವುದು ಬೇಡ ಎಂದು ಕೊರೊನಾವನ್ನೇ ನೆಪ ಮಾಡಿಕೊಂಡು ಆತ್ಮಹತ್ಯೆಗೆ ಪ್ರಯತ್ನಿಸುವುದು ಯಾರೂ ಒಪ್ಪುವಂತಹದ್ದಲ್ಲ. ಸಹಜ ಸಾವಲ್ಲದೆ ಅನಾರೋಗ್ಯ, ಅಪಘಾತ, ಇನ್ನಿತರ ಸಂಧರ್ಭಗಳಲ್ಲೂ ಅವುಗಳಿಂದ ತಪ್ಪಿಸಿಕೊಂಡು ಸಾವನ್ನು ದೂರ ಮಾಡಿಕೊಳ್ಳುವುದೇ ಜೀವನದ ಸಾರ್ಥಕತೆ. ಹೀಗಿರುವಾಗ ಆತ್ಮಹತ್ಯೆ ಸರಿಯೇ? ಕೊರೊನಾ ಸಲುವಾಗಿ ಎಲ್ಲಾ ಕಡೆ ಲಾಕ್ಡೌನ್ ಆಗಿರುವ ಹಿನ್ನೆಲೆಯಲ್ಲಿ ಕೆಲವರು ತೀವ್ರ ಖಿನ್ನತೆಗೆ ಗುರಿಯಾಗಿದ್ದಾರೆ. ಇವರಲ್ಲಿ ಕೆಲವರು ಮೊದಲಿನಿಂದಲೂ ಖಿನ್ನತೆಗೆ ಒಳಗಾದವರು, ಇನ್ನೂ ಕೆಲವರು ಇತ್ತೀಚೆಗೆ ಖಿನ್ನತೆಗೆ ಹತ್ತಿರವಾಗುತ್ತಿರುವವರು. ಕೊರೊನಾ ಯಾರೋ ಒಬ್ಬರ ಮೇಲೆ ದಾಳಿ ಮಾಡಿಲ್ಲ, ಇಡೀ ವಿಶ್ವವನ್ನೇ ಆಕ್ರಮಿಸಿಕೊಂಡಿದೆ. ಇಂತಹ ಸಂಕ್ರಮಣ ಕಾಲದಲ್ಲಿ ಅನಗತ್ಯ ವಿಚಾರಗಳಿಗೆ ತಲೆಕೆಡಿಸಿಕೊಳ್ಳದೇ, ಆರೋಗ್ಯಕ್ಕಷ್ಟೇ ಗಮನಕೊಟ್ಟು, ಎಚ್ಚರಿಕೆಯಿಂದ ಜೀವ ಕಾಪಾಡಿಕೊಡರೆ ಮುಂದೆ ಜೀವನ. ಆತ್ಯಹತ್ಯೆಯ ಕುರಿತು ಯೋಚಿಸುತ್ತಿರುವವರ ಬಗ್ಗೆ ಅವರ ಕುಟುಂಬ ಸದಸ್ಯರು, ಆಪ್ತರಿಗೆ ಮೊದಲು ಗೊತ್ತಾಗುತ್ತದೆ. ತಕ್ಷಣ ಗಮನ ವಹಿಸಿದರೆ ಆತ್ಮಹತ್ಯೆ ತಡೆಗಟ್ಟಬಹುದು. ವ್ಯಕ್ತಿ ಅನುಭವಿಸುತ್ತಿರುಬಹುದಾದ ತಳಮಳ, ಕಷ್ಟಗಳ ಬಗ್ಗೆ ತಿರಸ್ಕಾರದಿಂದ ನೋಡದೆ, ಅವರನ್ನು ಗಂಭೀರವಾಗಿ ಪರಿಗಣಿಸಿ, ಸಾಂತ್ವನ ನೀಡಬೇಕಾಗುತ್ತದೆ ಯಾವುದೋ ಒಂದು ಸಂದರ್ಭದಲ್ಲಿ ಕೆಲವರಿಗೆ ಆ ರೀತಿ ತೀವ್ರವಾಗಿ ಅನಿಸಬಹುದು, ಸರಿಯಾದ ಮಾರ್ಗದರ್ಶನ, ಅಗತ್ಯವಿರುವವರಿಗೆ ಚಿಕಿತ್ಸೆ ಸಿಕ್ಕ ಮೇಲೆ ಆಆಲೋಚನೆಯಿಂದ ದೂರಾಗುತ್ತಾರೆ . ವಿವಿಧ ರೀತಿಯ ನ್ಯೂನತೆಗಳಿಂದ ಹುಟ್ಟಿದ ಹಲವಾರು ಜನರು ಯಾವುದೇ ಸಮಸ್ಯೆ ಇರದವರಿಗಿಂತಲೂ ಚೆನ್ನಾಗಿ ಬದುಕುತ್ತಿರುವ ಉದಾಹರಣೆಗಳಿವೆ. ಅಪಘಾತಗಳಿಂದ ದೈಹಿಕ ತೊಂದರೆಗಳಿಗೆ ತುತ್ತಾದವರೂ ಸಹ ನ್ಯೂನತೆಗಳನ್ನೇ ಅಪ್ಪಿಕೊಂಡು ಬದುಕನ್ನು ಒಪ್ಪಮಾಡಿಕೊಂಡಿದ್ದಾರೆ. ನಾನು ಪಡುವ ಕಷ್ಟ ಯಾರಿಗೂ ಇಲ್ಲ ಎಂದು ಹೇಳಲಾಗುವುದಿಲ್ಲ, ಎಲ್ಲರಿಗೂ ಕಷ್ಟವೇ. ಒಬ್ಬೊಬ್ಬರದು ಒಂದೊಂದು ಬಗೆ. ಈಗ ಕೊರೊನಾದಿಂದ ನಮ್ಮ ಜೀವನ ಕ್ರಮದಲ್ಲಿ ಸ್ವಲ್ಪ ಏರುಪೇರು ಆಗಿರುವುದು ನಿಜ. ಅದರಿಂದ ನಾವು ಇನ್ನಷ್ಟು ಗಟ್ಟಿಗೊಳ್ಳಬೇಕು. ಈ ಪರಿಸ್ಥಿತಿಯಿಂದ ಪಾರಾಗಲು ಸಿದ್ಧತೆಗಳನ್ನು ಮಾಡಿಕೊಳ್ಳಬೇಕು. ಎಚ್ಚರಿಕೆಯೇ ಗುರಿ, ಸ್ವಚ್ಛತೆಯೇ ಬದುಕು, ಆರೋಗ್ಯವಾಗಿ ಬದುಕುವುದೇ ಈಗ ದೊಡ್ಡ ಸಾಧನೆಯಾಗಿದೆ; ಎಲ್ಲರೂಸಾಧಕರಾಗೋಣ. ಪ್ರತಿದಿನ ಒಂದಿಬ್ಬರು ಆತ್ಮೀಯರೊಡನೆ ಮಾತುಕತೆ, ಅವರು ಇಂದಿನ ಸಂಧರ್ಭದಲ್ಲಿ ಹೇಗೆ ತಮ್ಮ ದಿನಚರಿಯನ್ನು ರೂಢಿಸಿಕೊಂಡಿದ್ದಾರೆ ಎಂಬುದನ್ನು ತಿಳಿದುಕೊಳ್ಳುವುದು, ತೀರ ಕಷ್ಟದಲ್ಲಿರುವವರ ಪರಿಸ್ಥಿತಿಯ ಅವಲೋಕನ, ಸಾಧ್ಯವಾಗುವುದಾದರೆ ಈ ಸಂದರ್ಭದ ಕಾರಣವಾಗಿ ಸಂಕಷ್ಟಕ್ಕೆ ಗುರಿಯಾದವರಿಗೆ ಕೈಯಲ್ಲಾದ ಸಹಾಯ ಮಾಡುವುದು… ಈ ಮೂಲಕ ಜೀವನ ಉತ್ಸಾಹವನ್ನು ಕಾಯ್ದಿಟ್ಟುಕೊಂಡು ಮುಂದಿನ ದಾರಿಯ ಬಗ್ಗೆ ಯೋಚಿಸಬೇಕು. ನೀವು ಎಷ್ಟು ಎಚ್ಚರಿಕೆಯಿಂದ ಇರುತ್ತೀರೋ ಅಷ್ಟು ನೀವು ಸುರಕ್ಷಿತರು ಹಾಗೂ ನಿಮ್ಮ ಸುತ್ತಮುತ್ತಲಿನವರು ಸುರಕ್ಷಿತರಾಗಿರುತ್ತಾರೆ. ನೀವು ಬದುಕಿದ್ದರಲ್ಲವೇ ಎಲ್ಲಾ? ಹಾಗಾಗಿ ಯಾವತ್ತೂ ಯಮನನ್ನು ನೆನಪಿಸಿಕೊಳ್ಳಬೇಡಿ, ಕರೆಯಬೇಡಿ, ಅವನು ಕರೆದಾಗೆಲ್ಲಾ ನಾಳೆ ಬಾ ಎನ್ನಿ. ************* ನಾಳೆ ಬಾ ಎನ್ನಿ **************                                

ಅವನಿಗೆ ನಾಳೆ ಬಾ ಎನ್ನಿ Read Post »

ಕಾವ್ಯಯಾನ

ಕಾವ್ಯಯಾನ

ಲೆಕ್ಕವಿಟ್ಟವರಿಲ್ಲ.. ಮಧುಸೂದನ ಮದ್ದೂರು ಭೂತಗನ್ನಡಿಯಲಿ ಇತಿಹಾಸ ಗರ್ಭ ಕೆದಕಿದಾಗ ಕಂಡುಂಡ ಸತ್ಯಗಳು ಮಿಥ್ಯೆಗಳವೆಷ್ಟೋ ಲೆಕ್ಕವಿಟ್ಟವರಿಲ್ಲ.. ರಾತ್ರಿ ರಾಣಿಯರ ಪಲ್ಲಂಗದಲ್ಲಿ ಕರಗಿದ ಸಾಮ್ರಾಜ್ಯಗಳೆಷ್ಟೋ ? ಉರುಳಿದ ಕೋಟೆ ಕೊತ್ತಲಗಳೆಷ್ಟೋ? ಸಾಮ್ರಾಜ್ಯ ಮುಕುಟ ಮಣಿಗಳೆಷ್ಟೋ? ತರಗಲೆಯಾದ ತಲೆಗಳೆಷ್ಟೋ? ಲೆಕ್ಕವಿಟ್ಟವರಿಲ್ಲ… ಮಣ್ಣಿನಾಸೆಯ ಹಪಹಪಿಕೆಯಲಿ ಹರಿದ ರಕುತದ ಕಾಲುವೆಗಳೆಷ್ಟೋ? ಆ ಕಾಲುವೆಗಳಲ್ಲಿ ಮುಗಿಲು ಮುಟ್ಟಿದ ವಿಧವೆಯರ ಗೋಳಿನ ಕಣ್ಣೀರ ಉಪ್ಪು ಕದಡಿ ಹರಿದ ನದಿಗಳೆಷ್ಟೋ? ಉಪ್ಪುಪ್ಪು ಕಡಲುಗಳೆಷ್ಟೋ? ಲೆಕ್ಕವಿಟ್ಟವರಿಲ್ಲ…. ಅಂಗವಿಹಿನರಾದವರ ಆರ್ತನಾದ ನಿರ್ವಂಶವಾಗಲೆಂಬ ಹಿಡಿಶಾಪವಿಟ್ಟು ಹೂಳಿಟ್ಟು ಎರಚಿದ ದೂಳಿನ ಗುಡ್ಡೆ ಗಳೆಷ್ಟೋ ಲೆಕ್ಕವಿಟ್ಟವರಿಲ್ಲ… ಹೆಣ್ಣು ಹೊನ್ನು ಮಣ್ಣಿನ ಮಾಯೆಯ ಪರಿಧಿಯಲ್ಲಿ ಕಾಲನ ತೆಕ್ಕೆಗೆ ನಿಲುಕದ ಇತಿಹಾಸದ ಪುಟಗಳೆಷ್ಟೋ..? ಕಣ್ಣಾಲಿಗೆ ನಿಲುಕುತ್ತಿಲ್ಲ.. ನಿಲುಕುವುದೂ ಇಲ್ಲ…. ******

ಕಾವ್ಯಯಾನ Read Post »

ಅಂಕಣ ಸಂಗಾತಿ

ಸ್ವಾತ್ಮಗತ

ಬಸವಣ್ಣನ ಕಾಲದ ಗೌಪ್ಯ ವಚನಕಾರ್ತಿಯರು..! ಕೆ.ಶಿವು ಲಕ್ಕಣ್ಣವರ  ಬಸವಣ್ಣನ ಕಾಲದ ಗೌಪ್ಯ ವಚನಕಾರ್ತಿಯರು..! ವಚನ ಸಾಹಿತ್ಯದಲ್ಲಿ ಬಸವಯುಗದ ವಚನಕಾರ್ತಿಯರಂತೆ ಕೊಡುಗೆಯಿತ್ತವರನ್ನು ಬಹುಶ: ಯಾವ ಶತಮಾನವೂ ಕಂಡಿರಲಿಲ್ಲ. ಈ ಕಾಲಘಟ್ಟದಲ್ಲಿ ಹಲವಾರು ಶರಣೆಯರು ಮುಕ್ತ ಮನಸ್ಸಿನಿಂದ ವಚನಗಳನ್ನು ರಚಿಸಿರುವುದನ್ನು ಯಾರು ಹೆಚ್ಚಾಗಿ ಪ್ರಚುರ ಪಡಿಸದೆ ಇರುವುದು ಅಚ್ಚರಿ ಯನ್ನುಂಟು ಮಾಡುತ್ತದೆ. ಇಂತಹವರನ್ನು ‘ಅಪ್ರಸಿದ್ದ ಶರಣೆಯರು/ವಚನಕಾರ್ತಿಯರು’ ಅಥವಾ ‘ಗೌಪ್ಯವಚನಕಾರ್ತಿಯರೆಂದು ‘ಕರೆಯ ಬಹುದಾಗಿದೆ. ವಚನಯುಗವು ಮಹಿಳೆಯರ ಆಂತರ್ಯದಲ್ಲಿ ನವ ಜಾಗೃತಿ, ನವಸಾಕ್ಷರತೆಯ ಅರಿವು ಮೂಡಿಸಿ, ಎಲ್ಲಾ ವರ್ಗದ ಮಹಿಳೆಯರಿಗೂ ವಿದ್ಯಾಭ್ಯಾಸ ಕಲಿಸಿ ೩೬ಕ್ಕೂ ಹೆಚ್ಚು ಜನ ಶರಣೆಯರು ವಚನರಚನೆ ಮಾಡುವ ಅವಕಾಶ ಕಲ್ಪಿಸಿ ಕೊಟ್ಟಿತು. ಅವರಲ್ಲಿ ಕೆಲವು ಶರಣೆಯರು ತಮ್ಮ ಗಂಡನ ಹೆಸರನ್ನೇ ವಚನದ ಅಂಕಿತವಾಗಿಟ್ಟು ಕೊಂಡರೆ, ಮತ್ತೆ ಕೆಲವರು ತಮ್ಮ ಇಷ್ಟದೈವವನ್ನು ವಚನದ ಅಂಕಿತವಾಗಿಟ್ಟು ಕೊಂಡಿದ್ದಾರೆ… ಕನ್ನಡ ಸಾಹಿತ್ಯದ ಪರ್ವಕಾಲ, ಸುವರ್ಣಯುಗ ‘ವಚನ ಸಾಹಿತ್ಯ ಕಾಲ’. ಹಾಗಾಗಿ ಕರ್ನಾಟಕ ಸಾಹಿತ್ಯ ಚರಿತ್ರೆಯಲ್ಲಿ ೧೨ನೇ ಶತಮಾನಕ್ಕೆ ವಿಶಿಷ್ಟ ಸ್ಥಾನವಿದೆ. ವೇದಗಳ ಕಾಲದಿಂದಲೂ ಸಾಹಿತ್ಯ ಪಂಡಿತರ, ವಿದ್ವಾಂಸರ ಸ್ವತ್ತಾಗಿ, ಸಂಸ್ಕೃತ ಭೂಯಿಷ್ಠವಾಗಿತ್ತು. ಶ್ರೀಸಾಮಾನ್ಯರಿಗೆ ಅವರ ರಚನೆಗಳೊಂದು ಅರ್ಥವಾಗುತ್ತಿರಲಿಲ್ಲ. ಭಾರತೀಯ ಮಹಿಳೆಯರ ಪಾಲಿಗೆ ಪುರಾಣ ಹಾಗೂ ಧರ್ಮಶಾಸ್ತ್ರಗಳ ಕಾಲ ‘ಕಗ್ಗತ್ತಲ ಯುಗ’ವಾಗಿತ್ತು. ಹಾಗೆ ನೋಡಿದರೆ ಆರ್ಯ ಸಂಸ್ಕೃತಿಯ ಪೂರ್ವ ಕಾಲದಲ್ಲಿ ಮಹಿಳೆಯರು ಸ್ವತಂತ್ರರಾಗಿದ್ದರು. ವೇದಗಳ ಕಾಲದಲ್ಲಿ ಗಾರ್ಗಿ, ಮೈತ್ರೇಯಿ ಯಂತಹ ಮಹಿಳಾ ವಿದ್ವಾಂಸರು ಪಂಡಿತರೊಂದಿಗೆ ಆಧ್ಯಾತ್ಮಿಕ ಚರ್ಚೆಗಳಲ್ಲಿ ಪಾಲ್ಗೊಂಡಿರುವುದಕ್ಕೆ ಅಲ್ಲಲ್ಲಿ ನಿದರ್ಶನಗಳಿವೆ. ಅಲ್ಲಿಂದ ಹೆಣ್ಣು ಮತ್ತೆ ಸ್ವತಂತ್ರಳಾಗಲು ಹಲವಾರು ಶತಮಾನಗಳವರೆವಿಗೂ ಕಾಯಬೇಕಾಯಿತು. ಶತ ಶತಮಾನಗಳಿಂದಲೂ ಸಮಾಜದಲ್ಲಿ ಹೆಣ್ಣಿನ ಬಗೆಗಿದ್ದ ಪೂರ್ವಾ ಗ್ರಹಪೀಡಿತ ದೃಷ್ಠಿ ದೋಷವನ್ನು ಸರಿಪಡಿಸಿದ ಕೀರ್ತಿ ವಚನಕಾರರಿಗೆ ಸಲ್ಲುತ್ತದೆ. ಬಸವಯುಗದ ವಚನಕಾರ್ತಿಯರಂತೆ ಕೊಡುಗೆಯಿತ್ತವರನ್ನು ಬಹುಶ: ಯಾವ ಶತಮಾನವೂ ಕಂಡಿರಲಿಲ್ಲ. ಆ ಕಾಲ ಘಟ್ಟದಲ್ಲಿ ಜಾತಿ, ಮತಗಳ ಬೇಧ ವಿಲ್ಲದೆ ಹೆಣ್ಣು-ಗಂಡು ಸಂಯುಕ್ತವಾಗಿ ‘ಅನುಭವ ಮಂಟಪ’ದಲ್ಲಿ ಸೇರಿ ವಾದ-ಸಂವಾದ, ಚರ್ಚೆಗಳಲ್ಲಿ ಪಾಲ್ಗೊಂಡಿರುವುದು ಕಂಡು ಬರುತ್ತದೆ. ವಚನಕಾರ್ತಿಯರೆಂದೊಡನೆ ತಟ್ಟನೆ ನೆನಪಿಗೆ ಬರುವವರು ಅಕ್ಕಮಹಾದೇವಿ ಮತ್ತು ಮುಕ್ತಾಯಕ್ಕ. ಇವರಿಬ್ಬರೂ ಪ್ರಸಿದ್ದ ವಚನಕಾರ್ತಿಯರೆನಿಸಿದ್ದಾರೆ. ಆದರೆ ಇವರ ಕಾಲದಲ್ಲೇ ಹಲವಾರು ಶರಣೆಯರು ಮುಕ್ತ ಮನಸ್ಸಿನಿಂದ ವಚನಗಳನ್ನು ರಚಿಸಿರುವುದನ್ನು ಯಾರು ಪ್ರಚುರ ಪಡಿಸದೆ ಇರುವುದು ಅಚ್ಚರಿಯನ್ನುಂಟು ಮಾಡುತ್ತದೆ. ಇಂತಹವರನ್ನು ‘ಅಪ್ರಸಿದ್ದ ವಚನಕಾರ್ತಿಯರು’ ಅಥವಾ ‘ಗೌಪ್ಯವಚನ ಕಾರ್ತಿಯರೆಂದು ‘ಕರೆಯ ಬಹುದಾಗಿದೆ. ವಚನಯುಗವು ಮಹಿಳೆಯರ ಆಂತರ್ಯದಲ್ಲಿ ನವ ಜಾಗೃತಿ, ನವ ಸಾಕ್ಷರತೆಯ ಅರಿವು ಮೂಡಿಸಿ, ಎಲ್ಲಾ ವರ್ಗದ ಮಹಿಳೆ ಯರಿಗೂ ವಿದ್ಯಾಭ್ಯಾಸ ಕಲಿಸಿ ೩೬ಕ್ಕೂ ಹೆಚ್ಚು ಜನ ಶರಣೆಯರು ವಚನ ರಚನೆ ಮಾಡುವ ಅವಕಾಶ ಕಲ್ಪಿಸಿ ಕೊಟ್ಟಿತು. ಇವರಲ್ಲಿ ಬಹುಪಾಲು ಶರಣೆಯರು ಸಂಸಾರದ ಸತ್ಯವನ್ನು ಅರಿತು, ಬದುಕಿನ ಶುದ್ದತೆಗಾಗಿ ಹಂಬಲಿಸಿ, ಸಂಸಾರವೆಂಬುದು ಆಧ್ಯಾತ್ಮಕ್ಕೆ ಬಾಧಕವಲ್ಲ, ಪ್ರೇರಕ, ಪೋಷಕವೆಂಬುದನ್ನು ಶ್ರುತ ಪಡಿಸಿದರು. ಇವರು ವ್ರತಾಚರಣೆ, ಜಾತೀಯತೆ, ಕುಲ ಭೇಧ, ಭಕ್ತಿ, ಜ್ಞಾನ, ಆಚರಣೆ,ನೀತಿ-ನಿಯಮಗಳ ಬಗ್ಗೆ ಸ್ಪಷ್ಟ ನಿಲುವನ್ನು ಹೊಂದಿದ್ದರು. ಇವರಲ್ಲಿ ಬಹಳಷ್ಟು ಜನ ಶರಣೆಯರು ತಮ್ಮ ಗಂಡನ ಕಾಯಕವೆಂಬ ಹಣತೆಯಲ್ಲಿ ಎಣ್ಣೆಯಾಗಿ, ಬತ್ತಿಯಾಗಿ ಪತಿಗೆ ಮಾರ್ಗಜ್ಯೋತಿಯಾಗಿದ್ದಾರೆ. ಅವರಲ್ಲೆ ಕೆಲವರು ಎಚ್ಚರ ತಪ್ಪಿದ ತಮ್ಮ ಗಂಡನನ್ನು ಸರಿದಾರಿಗೆ ತರಲು ಶ್ರಮಿಸಿ ಯಶಸ್ವೀಯಾಗಿದ್ದಾರೆ. ಕೆಲವು ಶರಣೆಯರು ತಮ್ಮ ಗಂಡನ ಹೆಸರನ್ನೇ ವಚನದ ಅಂಕಿತವಾಗಿಟ್ಟು ಕೊಂಡರೆ, ಮತ್ತೆ ಕೆಲವರು ತಮ್ಮ ಇಷ್ಟದೈವವನ್ನು ವಚನದ ಅಂಕಿತವಾಗಿಟ್ಟು ಕೊಂಡಿದ್ದಾರೆ. ಶರಣೆಯರು ತಮ್ಮ ವಚನಗಳಲ್ಲಿ- ಪ್ರಚಲಿತ ವಿದ್ಯಮಾನಗಳ ವಿಮರ್ಶೆ, ಕಾಯಕ ಪ್ರೀತಿ, ಧರ್ಮನಿಷ್ಠೆ, ಕರುಣೆ, ಮಾನವೀಯತೆ, ವಿಶ್ವಮಾನವ ಪರಿಕಲ್ಪನೆ, ನೇರನುಡಿ, ಆತ್ಮವಿಶ್ವಾಸದಿಂದ ವಚನಗಳನ್ನು ರಚಿಸಿರುವುದು ಕಂಡು ಬರುತ್ತದೆ… ಬಸವಣ್ಣನವರ ಕಾಲದಲ್ಲಿ ವಚನಕಾರ್ತಿಯರು..! ಸುಮಾರು ೮೦೦ವರ್ಷಗಳ ಹಿಂದೆ ಅಂದರೆ ೧೨ನೇ ಶತಮಾನದ ಮಧ್ಯಭಾಗದಲ್ಲಿದ್ದ ಬಸವಣ್ಣ ಜಗತ್ತಿನ ಪ್ರ ಪ್ರಥಮ ವಿಚಾರವಾದಿ, ಕ್ರಾಂತದರ್ಶಿ, ವಿಭೂತಿಪುರುಷ,ದಾರ್ಶನಿಕ, ಅನುಭಾವಿ, ಕ್ರಿಯಾಶೀಲ ಹೋರಾಟಗಾರ, ದೂರಗಾಮಿ ಚಿಂತಕ, ಮಹಿಳಾವಾದಿ, ಸತ್ಯ ಸಾಮ್ರಾಜ್ಯದ ಸಾರ್ವ ಭೌಮ. ತಾವು ಬೆಳೆಯುವುದು ಮಾತ್ರವಲ್ಲದೆ, ಲೋಕವು ತಮ್ಮೊಡನೆ ಬೆಳೆಯಬೇಕೆಂಬ ಸಂಕಲ್ಪ ತೊಟ್ಟ ವಿಶ್ವಕುಟುಂಬಿ. ವಿಶ್ವದಲ್ಲಿ ಎಲ್ಲಾ ಜಾತಿ-ಜನಾಂಗಗಳ ನಿಜ ಸಂಸ್ಕೃತಿಯ ತಾಯಿ ಬೇರು ಅಂತ:ಕರಣದಿಂದ ಕೂಡಿದ ಜೀವನ ಪ್ರೀತಿ. ಈ ಲೋಕ ಮಾನವ ಕೇಂದ್ರಿತವಲ್ಲ, ಜೀವ ಕೇಂದ್ರಿತವಾದುದು. ಅಹಿಂಸೆ, ನಿಸ್ವಾರ್ಥ ಪ್ರೇಮದಿಂದ ಕೂಡಿದ ಪ್ರಪಂಚವನ್ನು ಸೃಷ್ಠಿಸುವುದೇ ಬಸವಣ್ಣನವರ ಕನಸಾಗಿತ್ತು. ಅವರ ದೃಷ್ಟಿಯಲ್ಲಿ ಹೆಣ್ಣು ಪ್ರತಿಭೆಯಲ್ಲಿ, ಬೌದ್ಧಿಕತೆಯಲ್ಲಿ ಪುರುಷನಷ್ಟೇ ಸರಿ ಸಮಾನಳು. ಜೀವನದ ಸಕಲ ವ್ಯವಹಾರದಲ್ಲಿ ಅವಳಷ್ಟು ಕುಶಾಗ್ರಮತಿ ಬೇರ್ಯಾರಿಲ್ಲ. ಬಸವಣ್ಣ ಮಹಿಳೆಯರ ಅಂತ:ಕರಣವನ್ನು ಓರೆಗಚ್ಚಿ ನೋಡಿದರು. ಹಾಗಾಗಿ ‘ಗೌಪ್ಯ ವಚನಕಾರ್ತಿಯರು’ ವಚನ ಸಾಹಿತ್ಯ ರಚನೆಯಲ್ಲಿ ಉತ್ಸುಕರಾಗಿ ವಚನಗಳನ್ನು ರಚಿಸಿದರು. ಅವರಲ್ಲಿ ಪ್ರಮುಖರಾದವರೆಂದರೆ-ಅಮುಗೆ ರಾಯಮ್ಮ, ಅಕ್ಕಮ್ಮ, ಆಯ್ದಕ್ಕಿ ಲಕ್ಕಮ್ಮ, ಕೇತಲದೇವಿ, ಕದಿರ ರೆಮ್ಮವ್ವೆ, ಕಾಳವ್ವೆ, ಕಾಮವ್ವೆ, ಗಂಗಮ್ಮ, ಗೊಗ್ಗವ್ವೆ, ಬೊಂತಾದೇವಿ, ನೀಲಾಂಬಿಕೆ, ಲಿಂಗಮ್ಮ, ಮಸಣಮ್ಮ, ವೀರಮ್ಮ, ಲಕ್ಷಮ್ಮ, ರೆಮ್ಮವ್ವೆ, ರೇಕಮ್ಮ, ಸತ್ಯಕ್ಕ, ವೊದಲಾದವರು. ಇನ್ನು ಇರುವ ಬಹುತೇಕ ವಚನಕಾರ್ತಿಯರ ಹೆಸರಿದ್ದರೂ ಅವರ ವಚನಗಳು ಸಿಕ್ಕಿಲ್ಲ. ಉದಾ: ಕಲ್ಯಾಣಮ್ಮ, ಕದಿರ ಕಾಳವ್ವೆ ಮುಂತಾದವರು. ವಚನ ಸಾಹಿತ್ಯವು ಕನ್ನಡ ದೇಸಿಯ ಪದ್ಯಜಾತಿ. ವಚನಕಾರರು ಅಚ್ಚ ಕನ್ನಡ ಕೃಷಿಕರು… ಗೌಪ್ಯ ವಚನಕಾರ್ತಿಯರ ಸಂಕ್ಷಿಪ್ತ ಪರಿಚಯ/ವಚನಗಳು ಅಮುಗೆರಾಯಮ್ಮ— ಈಕೆ ಸೊನ್ನಲಿಗೆ(ಈಗಿನ ಸೊಲ್ಲಾಪುರ) ಊರಿನವಳು, ನೇಕಾರ ಕುಲದವಳು, ಅಮುಗೆ ದೇವಯ್ಯನ ಧರ್ಮಪತ್ನಿ. ಇವಳ ಲಿಂಗನಿಷ್ಠೆ ಗಾಢವಾದುದು. ಈಕೆಯ ಪಾಲಿಗೆ ಗುರು, ಲಿಂಗ, ಪತಿ ಮೂರು ಒಂದೇ. ಇವಳ ವಚನಗಳಲ್ಲಿ ಕೆಚ್ಚು, ಧ್ಯೆರ್ಯ,ಛಲ, ನಿಷ್ಟುರತೆ, ಆಧ್ಯಾತ್ಮ ಅಭಿಮಾನ, ವಿಡಂಬನೆ, ವಿರಾಗಿಗಳ ಕಟುಟೀಕೆ ಇತ್ಯಾದಿ ಮೂಡಿ ಬಂದಿವೆ. ರಾಯಮ್ಮನ ಅಂಕಿತ “ಅಮುಗೇಶ್ವರ”… ‘ಎನ್ನ ಕಣ್ಣೊಳಗಿನ ಕಟ್ಟಿಗೆಯ ಮುರಿದವರಾರನೂ ಕಾಣೆ ಎನ್ನ ಕಾಲೊಳಗಿನ ಮುಳ್ಳ ತೆಗೆದವರಾರನೂ ಕಾಣೆ ಎನ್ನ ಅಂಗದಲ್ಲಿಪ್ಪ ಅಹಂಕಾರವ ಸುಡುವವರಾರನೂ ಕಾಣೆ ಎನ್ನ ಮನದಲ್ಲಿಪ್ಪ ಮಾಯ ಪ್ರಪಂಚವ ಕೆಡಿಸುವರಾರನೂ ಕಾಣೆನಯ್ಯಾ ಆದ್ಯರ-ವೇದ್ಯರ ವಚನಗಳಿಂದ ಅರಿದೆವೆಂಬುವರು ಅರಿಯಲಾರರು ನೋಡಾ! ಎನ್ನ ಕಣ್ಣೊಳಗಿನ ಕಟ್ಟಿಗೆಯ ನಾನೇ ಮುರಿಯಬೇಕು ಎನ್ನ ಕಾಲೊಳಗಿನ ಮುಳ್ಳ ನಾನೇ ತೆಗೆಯಬೇಕು ಎನ್ನ ಅಂಗದಲ್ಲಿಪ್ಪ ಅಹಂಕಾರವ ನಾನೇ ಸುಡಬೇಕು ಎನ್ನ ಮನದಲ್ಲಿಪ್ಪ ಮಾಯ ಪ್ರಪಂಚವ ನಾನೇ ಕಳೆಯಬೇಕು ಅಮುಗೇಶ್ವರಲಿಂಗವ ನಾನೇ ಅರಿಯಬೇಕು’. ಅಕ್ಕಮ್ಮ– ಈಕೆ ‘ರೆಮ್ಮವ್ವೆ’ ಎಂದೂ ಗುರ್ತಿಸಲ್ಪಟ್ಟಿದ್ದಾಳೆ. ಅಕ್ಕಮಹಾದೇವಿಯ ಪ್ರಭಾವಕ್ಕೆ ಒಳಗಾಗಿ ಸಂಸಾರ ಬಂಧನಕ್ಕೆ ಸಿಲುಕದೆ, ಸ್ವತಂತ್ರವಾಗಿ ಬದುಕಲು ಹಂಬಲಿಸಿ ವೈವಾಹಿಕ ಜೀವನವನ್ನು ಧಿಕ್ಕರಿಸಿದವಳು. ವ್ರತಾಚರಣೆಗೆ ಸಂಬಂಧಿಸಿದಂತೆ ಕೆಲವು ವಚನಗಳನ್ನು ಸರಳ, ಸುಂದರ, ಸ್ಪಷ್ಟ ವಾಗಿ ಪ್ರೌಢಭಾಷೆಯಲ್ಲಿ ನಿರೂಪಿಸಿರುವಳು. ಇವಳ ಅಂಕಿತನಾಮ “ಆಚಾರ ವೇ ಪ್ರಾಣವಾದ ರಾಮೇಶ್ವರಲಿಂಗ”… ‘ಬತ್ತಲೆಯಿದ್ದವರೆಲ್ಲ ಕತ್ತೆಯ ಮರಿಗಳು ತಲೆ ಬೋಳಾದವರೆಲ್ಲ ಮುಂಡೆಯ ಮಕ್ಕಳು ತಲೆ ಜೆಡೆಗಟ್ಟಿದವರೆಲ್ಲ ಹೊಲೆಯರ ಸಂತಾನ ಆವ ಪ್ರಕಾರವಾದಡೇನು, ಅರಿವೆ ಮುಖ್ಯವಯ್ಯಾ ಆಚಾರವೇ ಪ್ರಾಣವಾದ ರಾಮೇಶ್ವರಲಿಂಗದಲ್ಲಿ’. ಅಕ್ಕನಾಗಮ್ಮ– ಅಕ್ಕನಾಗಮ್ಮನು ಬಸವಣ್ಣನವರ ಸಹೋದರಿ, ಚನ್ನಬಸವಣ್ಣನ ತಾಯಿ, ಶಿವದೇವ/ಶಿವಸ್ವಾಮಿ ಎಂಬುವರ ಪತ್ನಿ. ಈಕೆಗೆ ನಾಗಮ್ಮ, ನಾಗಲಾಂಬಿಕೆ, ನಾಗಾಂಬಿಕೆ, ನಾಗಾಯಿ ಮುಂತಾದ ಹೆಸರುಗಳಿವೆ. ಇವಳು ಧಿರೋದಾತ್ತ ಶರಣೆ. ಮಹಾ ಮನೆಯ ಸೂತ್ರಧಾರಿಣಿಯಾಗಿ, ಮಹಾ ಶಕ್ತಿಯಾಗಿ, ಅನ್ನಪೂರ್ಣೆಯಾಗಿ ‘ಅನುಭವ ಮಂಟಪದ’ ಜ್ಞಾನ ಹಾಗೂ ಅನುಭಾವ ದಾಸೋಹದಲ್ಲಿ ಭಾಗಿಯಾಗಿ ತಮ್ಮನ ಅಭ್ಯುದಯಕ್ಕೆ ನೆರವಾದವಳು. ನಾಗಮ್ಮನ ವಚನಗಳ ವಸ್ತು-ಬಸವಭಾವ, ವ್ರತಾಚಾರ, ಶರಣಸತಿ, ಲಿಂಗಪತಿ ಮನೋಧರ್ಮ, ಅದರೊಂದಿಗೆ ಜೀವನದಲ್ಲಿ ಎದುರಿಸಿದ ಎಡರು-ತೊಡರುಗಳು. ತನ್ನ ಸಮಕಾಲೀನ ಶಿವಶರಣ, ಶಿವಶರಣೆಯರನ್ನು ಕುರಿತು ಪ್ರಸ್ತಾಪಿಸಿದ್ದಾಳೆ. ಈಕೆಯ ವಚನಗಳ ಅಂಕಿತ “ಬಸವಣ್ಣ ಪ್ರಿಯ ಚನ್ನಸಂಗಣ್ಣ”… ಗುರು ಸಂಬಂಧಿ ಗುರುಭಕ್ತಯ್ಯನು ಲಿಂಗ ಸಂಬಂಧಿ ಪ್ರಭುದೇವರು ಜಂಗಮ ಸಂಬಂಧಿ ಸಿದ್ಧರಾಮನು ಪ್ರಸಾದ ಸಂಬಂಧಿ ಮರುಳ ಶಂಕರದೇವರು ಪ್ರಾಣಲಿಂಗ ಸಂಬಂಧಿ ಅನಿಮಿಷದೇವರು ಶರಣ ಸಂಬಂಧಿ ಘಟ್ಟಿವಾಳಯ್ಯನು ಐಕ್ಯ ಸಂಬಂಧಿ ಅಜಗಣ್ಣಯ್ಯನು ಸರ್ವಾಚಾರ ಸಂಬಂಧಿ ಚನ್ನಬಸವಣ್ಣನು ಇಂತಿವರ ಸಂಬಂಧ ಎನ್ನ ಸರ್ವಾಂಗದಲಿ ನಿಂದು ಬಸವಣ್ಣಪ್ರಿಯ ಚನ್ನಸಂಗಣ್ಣಯ್ಯನ ಹೃದಯ ಕಮಲದಲಿ ನಿಜ ನಿವಾಸಿಯಾಗಿದ್ದೆನು ಆಯ್ದಕ್ಕಿ ಲಕ್ಕಮ್ಮ– ರಾಯಚೂರು ಜಿಲ್ಲೆಯ ಲಿಂಗಸಗೂರು ತಾಲ್ಲೋಕಿನ ‘ಅಮರೀಶ್ವರಿ ಗ್ರಾಮ’ದವಳು. ದಲಿತ ಕುಟುಂಬದ ಸ್ವಾಭಿಮಾನಿ ಹೆಣ್ಣು. ಅವಳ ಪತಿ ‘ಮಾರಯ್ಯ’. ‘ಬಡತನ’ವೆಂಬ ದಿವ್ಯ ಅನುಭವವೇ ಲಕ್ಕಮ್ಮನಲ್ಲಿ ಸೂಕ್ಷ್ಮ ಚಿಂತನೆ ಮತ್ತು ಗಾಂಭೀರ್ಯದ ಬದುಕನ್ನು ಕಲಿಸಿತು. ದಂಪತಿಗಳು ಬಸವಣ್ಣನವರ ತತ್ವಕ್ಕೆ, ವ್ಯಕ್ತಿತ್ವಕ್ಕೆ ಮಾರು ಹೋಗಿ, ‘ಅಮರೀಶ್ವರಿ ಗ್ರಾಮ’ದಿಂದ ಕಲ್ಯಾಣಕ್ಕೆ ಬಂದು ನೆಲೆಸಿದರು. ಕಾಯಕ ಮಾಡಿ, ಜನರಿಗೆ ನೀಡಿ ಬದುಕ ಬೇಕೆ ಹೊರತು, ಹೆಚ್ಚೆಚ್ಚು ಶೇಖರಿಸಿಡಬಾರದು ಎಂಬ ನಿಲುವಿನವಳು. ಲಕ್ಕಮ್ಮ ‘ಹಿಡಿಯಕ್ಕಿ’ಯಿಂದಲೇ ಒಂದು ಲಕ್ಷದ ತೊಂಬತ್ತಾರು ಸಾವಿರದ ಜಂಗಮರಿಗೆ ಊಟ ನೀಡಿ ಬಸವಣ್ಣನವರಿಂದ “ಸೈ”ಎನಿಸಿಕೊಂಡವಳು. ಶರಣರೆಲ್ಲ ಆಕೆಯ ಪವಾಡಕ್ಕೆ ಮೂಕ ವಿಸ್ಮಿತ ರಾಗಿ ‘ಭಕ್ತಿಯ ಮುಂದೆ ಎಲ್ಲವೂ ಮಿಥ್ಯ’ವೆಂದು ಆಶ್ಚರ್ಯ ವ್ಯಕ್ತಪಡಿಸುತ್ತಾರೆ. ಒಮ್ಮೆ ಸಾಕ್ಷಾತ್ ಶಿವನೇ ಜಂಗಮ ರೂಪದಲ್ಲಿ ಬಂದು, ಅಸಾಧ್ಯ ಚಳಿಯನ್ನೂ ಸೃಷ್ಠಿಸಿ ನಡುಗುತ್ತಾ, ಶಿವಭಕ್ತರಾದ ಇವರಿಬ್ಬರು ಉಟ್ಟ ಬಟ್ಟೆಯೇ ಬೇಕೆಂದು ಕೇಳಿ ತೊಟ್ಟುಕೊಂಡು ಅವರ ಭಕ್ತಿಗೆ ಮೆಚ್ಚುಗೆ ಸೂಚಿಸಿದನಂತೆ. ಆಯ್ದಕ್ಕಿ ಲಕ್ಕಮ್ಮನ ವಚನಗಳಲ್ಲಿ ಆತ್ಮೋದ್ಧಾರ, ಲೋಕೋ ದ್ಧಾರಗಳೆಂಬ ದ್ವಿಮುಖ ಆಶಯ, ಕಾಯಕತತ್ವ , ನಿಶ್ಚಲ ನಿಲುವು, ಜ್ಞಾನದ ಅರಿವು, ಸಮತಾಭಾವ, ಇತರರ ಒಳ್ಳೆತನವನ್ನೇ ಪ್ರಶ್ನಿಸುವ ದಿಟ್ಟತನ, ಅತಿಯಾಸೆ ಒಳ್ಳೆಯದಲ್ಲವೆಂಬ ನಿಲುವು, ಆಕೆಯ ಅಚಲ ಆತ್ಮವಿಶ್ವಾಸ, ನಿರ್ಮಲ ವ್ಯಕ್ತಿತ್ವದ ಅನಾವರಣವಿದೆ. ಆಕೆಯ ಅಂಕಿತನಾಮ ‘ಮಾರಯ್ಯಾ ಪ್ರಿಯ ಅಮರೇಶ್ವರಲಿಂಗ’… ‘ಕಾಯಕ ನಿಂದಿತ್ತು ಹೋಗಯ್ಯಾ ಎನ್ನಾಳ್ದನೆ ಭಾವ ಶುದ್ಧವಾಗಿ ಮಹಾ ಶರಣರ ತಿಪ್ಪೆಯ ತಪ್ಪಲು ಅಕ್ಕಿಯ ತಂದು ನಿಶ್ಚೈಸಿ ಮಾಡಬೇಕು ಮಾರಯ್ಯಾಪ್ರಿಯ ಅಮರೇಶ್ವರಲಿಂಗಕ್ಕೆ ಬೇಗ ಹೋಗು ಮಾರಯ್ಯಾ ಅಂಗವರಿತ ಅರುವೆಯ ಅಂಗದಲ್ಲಿ ಕಟ್ಟಿ ಬಯಕೆಯರಿತ ಕೈಯಲ್ಲಿ ತಂಡುಲವನಾಯ್ದುಕೊಂಡು ಬನ್ನಿರಿ’ ಕದಿರ ರೆಮ್ಮವ್ವೆ– ನೂಲುವ ಕಾಯಕದವಳು. ತನ್ನ ಕಾಯಕದೊಂದಿಗೆ ಆಧ್ಯಾತ್ಮವನ್ನು ಸಮನ್ವಯಗೊಳಿಸಿ ಪ್ರೌಢವೆನಿಸುವ ‘ಬೆಡಗಿನ ವಚನ’ಗಳನ್ನೂ ರಚಿಸಿದ್ಧಾಳೆ. ತನಗೆ ಜೀವನ ರೂಪಿಸಿ ಕೊಳ್ಳಲು, ಸ್ವತಂತ್ರವಾಗಿ ಬದುಕಲು ಅವಕಾಶ ಕಲ್ಪಿಸಿಕೊಟ್ಟ ಶರಣರನ್ನು ಕೃತಜ್ಞತೆಯಿಂದ ಸ್ಮರಿಸಿರುವಳು. ಸೃಷ್ಠಿ, ಸ್ಥಿತಿ ,ಲಯಕಾರರಾದ ಬ್ರಹ್ಮ, ವಿಷ್ಣು, ಮಹೇಶ್ವರರೆಂಬ ತ್ರಿಮೂರ್ತಿಗಳನ್ನು ತನ್ನ ಕದಿರ ಕಾಯಕದ ದೃಷ್ಟಾಂತಗಳೊಂದಿಗೆ ಅಂತರ್ಗತಗೊಳಿಸಿರುವಳು. ಈಕೆಯ ವಚನಗಳ ಅಂಕಿತ “ಗುಮ್ಮೇಶ್ವರ”… ನಾ ತಿರುಗುವ ರಾಟೆಯ ಕುಲ-ಜಾತಿ ಕೇಳಿರಣ್ಣಾ ಅಡಿಯ ಹಲಗೆ ಬ್ರಹ್ಮ, ತೋರಣ ವಿಷ್ಣು ನಿಂದ ಬೊಂಬೆ ಮಹಾರುದ್ರ ರುದ್ರನ ಬೆಂಬಳಿಯವೆರಡು ಸೂತ್ರಕರ್ಣ ಅರಿವೆಂಬ ಕದಿರು ಭಕ್ತಿಯೆಂಬ ಕೈಯಲ್ಲಿ ತಿರುಹಲಾಗಿ ಸುತ್ತಿತು ನೂಲು ಕದಿರು ತುಂಬಿತ್ತು ರಾಟೆಯ ತಿರುಹಲಾರೆ ಎನ್ನ ಗಂಡ ಕುಟ್ಟಿಹ ಇನ್ನೇವೆ ಕದಿರರೆಮ್ಮಿಯೊಡೆಯ ಗುಮ್ಮೇಶ್ವರ ? ಕನ್ನಡಿ ಕಾಯಕದ ರೇಮವ್ವ– ಈಕೆ ಸಾಮಾನ್ಯ ಜನವರ್ಗದಿಂದ ಬಂದವಳು. ಲಿಂಗಾಯತಧರ್ಮದಲ್ಲಿ ಇವಳಿಗಿದ್ದ ನಿಷ್ಠೆ, ಶ್ರದ್ಧೆ, ನೇರ ನಡೆ-ನುಡಿ, ನಿಷ್ಠುರ ಮನೋಭಾವ ಅವಳ ವಚನಗಳಲ್ಲಿ ವ್ಯಕ್ತಗೊಂಡಿವೆ. ಕೆಲವೆಡೆ ಈಕೆ ಅಹಂಕಾರಿಗಳ ವರ್ತನೆಯ ವಿಡಂಬನೆ ಮಾಡಿದ್ದಾಳೆ. ಇವಳ ವಚನಗಳ ಅಂಕಿತ “ನಿರಂಗಲಿಂಗ”… ಕೈಯಲ್ಲಿ ಕನ್ನಡಿಯಿರಲು ತನ್ನ ತಾ ನೋಡಬಾರದೆ ? ಲಿಂಗ-ಜಂಗಮದ ಪ್ರಸಾದಕ್ಕೆ ತಪ್ಪದಲ್ಲಿ ಕೊಲ್ಲಬಾರದೆ ? ಕೊಂದಡೆ ಮುಕ್ತಿಯಿಲ್ಲವೆಂಬುವರ ಬಾಯಲ್ಲಿ ಪಡಿಹಾರನ ಪಾದರಕ್ಷೆಯನಿಕ್ಕುವೆ ಮುಂಡಿಗೆಯನೆತ್ತಿರೊ ಭ್ರಷ್ಟ ಭವಿಗಳಿರಾ! ಎತ್ತಲಾರದಡೆ ಸತ್ತ ಕುನ್ನಿ ನಾಯ ಬಾಲವ ನಾಲಗೆಯ ಮುರುಟಿರೊ ಸದ್ಗುರುಸಂಗ ನಿರಂಗಲಿಂಗದಲ್ಲಿ ಉರಿಲಿಂಗ ಪೆದ್ದಿಗಳ ಪತ್ನಿ ಕಾಳವ್ವೆ — ಈ ದಂಪತಿಗಳು ಮಹಾರಾಷ್ಟೃದ ಕಡೆಯಿಂದ ಬಂದವರು. ಒಂದೆಡೆ ಕಿತ್ತು ತಿನ್ನುವ ಬಡತನ, ಮತ್ತೊಂದೆಡೆ ಕಳ್ಳನಾಗಿದ್ದ ಗಂಡನೊಡನೆ ಕಾಳವ್ವೆ ಪ್ರಯಾಸದ ಜೀವನ ನಡೆಸುತ್ತಿರುತ್ತಾಳೆ. ಒಂದು ದಿನ ಕಳ್ಳತನ ಮಾಡಲು ಹೋದ ಉರಿಲಿಂಗಪೆದ್ದಿ

ಸ್ವಾತ್ಮಗತ Read Post »

ಕಾವ್ಯಯಾನ

ಕಾವ್ಯಯಾನ

ಗಝಲ್ ಎ. ಹೇಮಗಂಗಾ ನನ್ನ ತೊರೆದು ಹೋಗುವುದೇ ಹಿತವೆಂದಾದರೆ ಹೇಳಿ ಹೋಗು ಕಾರಣ ನನ್ನ ಮರೆತು ಬಾಳುವುದೇ ಸುಖವೆಂದಾದರೆ ಹೇಳಿ ಹೋಗು ಕಾರಣ ‘ನಿನ್ನ ಹೊರತು ಬೇರಾರೂ ಬೇಕಿಲ್ಲ’ವೆಂದೇ ಈ ತನಕ ಕನವರಿಸುತ್ತಿದ್ದೆ ನನ್ನ ಅಸೀಮ ಒಲವೇ ಈಗ ಬೇಡವೆಂದಾದರೆ ಹೇಳಿ ಹೋಗು ಕಾರಣ ಕಂಡ ಕನಸುಗಳಿಗೆ ರಂಗು ಬಳಿದು ರೆಕ್ಕೆ ಮೂಡಿಸಿದವನು ನೀನು ನನ್ನ ಸಾಂಗತ್ಯವೇ ಇ‌ಷ್ಟವಿಲ್ಲವೆಂದಾದರೆ ಹೇಳಿ ಹೋಗು ಕಾರಣ ದಿಕ್ಕು ಬದಲಿಸಿದ ನಿನ್ನ ನಿಗೂಢ ನಡೆ ಊಸರವಳ್ಳಿಯನ್ನು ನೆನಪಿಸಿದೆ ನನ್ನ ಸಂಗವೇ ಬೇಡದ ಹೊರೆಯೆಂದಾದರೆ ಹೇಳಿ ಹೋಗು ಕಾರಣ ‘ ಹೇಮ’ ಳ ಪ್ರೀತಿ ನಶೆಯೇ ಸಾಕೆಂದು ಮಧುಶಾಲೆಗೆ ಬೆನ್ನು ತಿರುವಿದ್ದೆ ನನ್ನ ಶಾಶ್ವತ ವಿದಾಯವೇ ಹೊಸಬದುಕೆಂದಾದರೆ ಹೇಳಿ ಹೋಗು ಕಾರಣ *******

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಮೌನ ಪ್ರತಿಭಾ ಹಳಿಂಗಳಿ ನಾ ಹೊದ್ದಿರುವೆ ಮೌನದ ಕಂಬಳಿಯನು ಉಸಿರು ಕಟ್ಟಿದಂತಿದೆ ಒಳಗೊಳಗೆ ಜೋರಾಗಿ ಕಿರುಚಬೇಕೆಂದಿರುವೆ ಸರಿಪಡಿಸಿಕೊಳ್ಳುತ ಗಂಟಲನ್ನು. ಒಳಗೂ,ಹೊರಗೂ ತಾಕಲಾಟ ತರತರನಾದ ಭಾವಗಳ ಎರಿಳಿತ ಮನದ ಕದ ತಟ್ಟುತಿರಲು. ಅತ್ತು ಸುಮ್ಮನಾಗುವೆ ಒಮ್ಮೆ ಜಗದ ಆಗು,ಹೋಗುಗಳಲ್ಲಿ ಮಂಡಿ ಉರಿ ಕುಳಿತಿರಲೂ ಬಂದು ನನ್ನ ಮುಂದೆ. ಶಬ್ದವೂ ನಿಲುಕುತ್ತಿಲ್ಲ ತಲೆಯೆತ್ತಿ ನೋಡಬೇಕೆನಿಸಿತು ಒಮ್ಮೆ. ನೋಡಲಾರೆನು ಎಂದುಸುರಿತು ಹುದುಗಿಸುತ ತಲೆ ಕಂಬಳಿಯೊಳಗೆ ಮರೆಯಲಾರದೆ ಮೌನ *********

ಕಾವ್ಯಯಾನ Read Post »

You cannot copy content of this page

Scroll to Top