ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಕಾವ್ಯಯಾನ

ಮಾತು ಡಾ.ಗೋವಿಂದ ಹೆಗಡೆ ಮಾತು ಏನನ್ನಾದರೂ ಹೇಳುತ್ತಲೇ ಇರಬೇಕೆಂದು ಯಾರಾದರೂ ಏಕೆ ಒತ್ತಾಯಿಸಬೇಕು ಪಟ್ಟು ಹಿಡಿಯಬೇಕು ಮಾತು ಮಾತ್ರವಲ್ಲ ಮೌನ ಕೂಡ ಮಾತಿಗೂ ಇದ್ದೀತು ಬೇಸರ ಆಯಾಸ ಅಥವಾ ಬರೀ ಆಕಳಿಕೆ ಮತ್ತು ಮೌನ ಹೊದ್ದು ಉಸ್ಸೆನ್ನುವ ಕೇವಲ ಬಯಕೆ ಈ ಮಾತು ಕೂಡ ಎಷ್ಟು ಅಸಹಾಯ! ಕುಬ್ಜ ಹೆಳವ ಮತ್ತು ಚೂರು ಕಿವುಡ ಮತ್ತು ಉಬ್ಬಸ ಪಡುತ್ತ ಅದು ಹೇಳುವುದೇನನ್ನು? ಬಿಡು, ಕವಿತೆಯೆಂದರೆ ಬರಿ ಗೋಳಲ್ಲ ಎಲ್ಲ ಅಸಂಗತತೆಯಲ್ಲಿ ಏನೋ ಸೂತ್ರ ಅಥವಾ ವಿಪರೀತವೂ ಸರಿಯೇನು ಯಾರಿಗೆ ಗೊತ್ತು ಮೊನ್ನೆ ಅಷ್ಟೊಂದು ಮಾತಿನ ಲೋಕದಲ್ಲಿ ಮುಳುಗಿ ಎದ್ದು ಹೊರಟಾಗ ಊರಿಗೆ ಊರೇ ಮಾಗಿಯ ಸಂಜೆಗೆ ಮೈಯೊಡ್ಡುತ್ತ ಮಂಕು ಸೂರ್ಯನ ಮಾತಿಲ್ಲದೆ ಕಂತಿಸುತ್ತ ಹಿಂದಿನ ಸೀಟಿನಲ್ಲಿ ಅಮ್ಮನ ಕೈಯಲ್ಲಿ ಬೆಚ್ಚಗೆ ಮೊಲೆಗೂಸು ಥಟ್ಟನೆರಗಿ “ಉವ್ವೇ ಉವ್ವೇ” ರಚ್ಚೆ ಚಕಿತತೆಯಲ್ಲಿ ದಿಟ್ಟಿಸಿ ಮಾತಿಲ್ಲದೆ ಅದೊಂದು ದಿವ್ಯ ಆ ಮಗು ಆ ಸಂಜೆ ಆ ಪಯಣ- ಕ್ಕೆ ಪಕ್ಕಾದ ನನ್ನ ಪಕ್ಕ ಒರಲೆ ಹತ್ತಿದಂತೆ ಮಾತು ಸೋತಂತೆ ಆದರೂ ತಾನೇ ಮಾತಾದಂತೆ ಮುದುಕಿ ತಾಯಿ ಮಾತು ಮೌನದಲ್ಲಿ ರಮಿಸಿ ಮೌನ ಮಾತಿನಲ್ಲಿ ಕಲಸಿ ಮಾತಾದರೆ ‘ಆರಾಂ ಮಾಡು ಆಮೇಲೆ ಮಾತು’ ಸುಮ್ಮನಾದರೆ “ಅರೇ ಏನಾಯಿತು?” ಆತಂಕದಲ್ಲಿ ಮಾತು ಏನಾದರೂ ಹೇಳಲೆಂದು ಯಾರಾದರೂ ಯಾಕೆ ಒತ್ತಾಯಿಸುತ್ತಾರೆ… ===========

ಕಾವ್ಯಯಾನ Read Post »

ಅಂಕಣ ಸಂಗಾತಿ

ಅವ್ಯಕ್ತಳ ಅಂಗಳದಿಂದ

ಅವ್ಯಕ್ತ ಕನಸು-ಮನಸು-ನನಸು ಮಕ್ಕಳಲ್ಲಿ ಭವಿಷ್ಯದ ಬಗ್ಗೆ ಬೇರೆ ಬೇರೆ ತರಹದ ನಿಲುವುಗಳು ಇರುತ್ತವೆ. ಕೆಲವರು ಅವರಿಗೆ, ಪ್ರತಿವರ್ಷ ಪರೀಕ್ಷೆಯಲ್ಲಿ ಬರುವ ಅಂಕಗಳನ್ನು ಮನಸ್ಸಲ್ಲಿಟ್ಟುಕೊಂಡು ಅದಕ್ಕೆ ಅನುಕೂಲಕರವಾಗಿ ಮುಂದೋಗ್ತಾರೆ ಇನ್ನು ಕೆಲವರು, ಮನೆಯಲ್ಲಿ ತಂದೆ-ತಾಯಿ ಹೇಳುವುದನ್ನು ಬಿಟ್ಟು ಬೇರೆ ಸ್ವಂತಿಕೆಯನ್ನು ಉಪಯೋಗಿಸುವುದೇ ಇಲ್ಲ. ಇನ್ನು ಮೂರನೇ ತರಹದ ಮಕ್ಕಳು ಯಾವುದೋ ಒಂದು ವಿಷಯದಲ್ಲಿ ಆಕರ್ಷಿತರಾಗಿ ಆ ವಿಷಯದ ವಿಶೇಷ ಗಳನ್ನೆಲ್ಲಾ ತಿಳಿದುಕೊಂಡು, ಅದನ್ನು ಗುರಿಯಾಗಿಟ್ಟುಕೊಂಡು ಹಂತಹಂತವಾಗಿ ಸಾಧಿಸುತ್ತ ಹೋಗೋರು.ಯಾವುದೇ ರೀತಿ ಮಕ್ಕಳಾದರೂ ಅವರಲ್ಲಿ ಆತ್ಮ ವಿಶ್ವಾಸ ಇರುವುದು ಅತಿಮುಖ್ಯ ಆಗುತ್ತದೆ. ಅದೇ ಅವರ ಸಾಧನೆಗಳಿಗೆ ಅಥವಾ ಹಂತಹಂತದ ಬೆಳವಣಿಗೆಗಳಿಗೆ ನಾಂದಿ ಹಾಡುವುದು. ಹೀಗೆ ಒಬ್ಬ ಇದ್ದ ಹಗಲು ಕನಸುಗಾರ ರಾತ್ರಿ ಕನಸುಗಾರ ಯಾವಾಗಲೂ ಒಂದೇ ಕನಸು ಅದನ್ನು ನನಸು ಮಾಡಲಿಕ್ಕೆ ಬೇಕಾದಷ್ಟು ಸರ್ಕಸ್ ಮಾಡ್ತಾನೆ. ಪಿಯುಸಿಗೆ ಸೇರಿದವನು, ಎಲ್ಲರೂ ಇರೋಹಾಗೆ ಸಹಜ ಜೀವಿ. ತೆಳ್ಳಗೆ ಪೇಪೇತ್ಲಾಂಡ ತರನೇ ಇದ್ದ ಸ್ವಲ್ಪ. ಆದರೆ ಮಕ್ಕಳಲ್ಲಿ ಇರಬೇಕಾದ ಕಳೆ ಅವನಲ್ಲಿ ಕೂಡ ಇತ್ತು. ಮೊದಲನೇ ಪಿಯುಸಿ ನಲ್ಲಿ ಒಳ್ಳೆ ಮಾರ್ಕ್ ಬರದಿದ್ದರು ತುಂಬಾ ಚೆನ್ನಾಗಿ ಟೇಬಲ್ ಟೆನ್ನಿಸ್ ಆಡುತ್ತಿದ್ದ. ಸುಮಾರು ಪ್ರಶಸ್ತಿಗಳು ಬರುತಿತ್ತು. ಹೀಗೆ ಒಂದು ದಿನ ಎಲ್ಲಾ ಮಕ್ಕಳಿಗೂ ಕೇಳೋ ಹಾಗೆ ಅವನನ್ನು ಕೇಳಿದೆ ನಿನಗೇನಾಗಬೇಕು ಮುಂದೆ ಎಂತಹ ಆಸೆ? ಮೇಡಂ ನಾನು ನೇವಿ ಸೇರ್ತೀನಿ……. ಅವನ ಮಾತು ಕೇಳಿದಾಗ ಅಲ್ಲಿದ್ದ ಕೆಲವರು ನಗಲು ಶುರು ಮಾಡಿದರು. ಸಹಜವೇ, ಮೇಲುನೋಟಕ್ಕೆ ಹುಡುಗನಲ್ಲಿ ಸೈನಿಕ ಆಗುವ ಯಾವುದೇ ಗುಣಗಳು ಕಾಣುತ್ತಿರಲಿಲ್ಲ-ತಾಳ್ಮೆ ಹಾಗೂ ಶಾಂತ ಮನೋಭಾವ‌… ಅಂಥಾ ವಿಶೇಷವಾದ ವರ್ಚಸ್ಸು ಏನೂ ಇರಲಿಲ್ಲ, ಆದ್ರೂ ನಾನು ಹೇಳ್ದೆ ಉಳಿದವರಿಗೆ “ಯಾಕೆ ನಗ್ತಾ ಇದ್ದೀರಾ?ಅವನ್  ಮನಸ್ ಮಾಡಿದ್ರೆ ಎಲ್ಲಾ ಆಗುತ್ತೆ……ಅವನು, ಆ ಅವನ ಕನಸನ್ನು ನನಸು ಮಾಡಬೇಕೆಂದರೆ ಅದರ ನಿಟ್ಟಿನಲ್ಲಿಯೇ ತನ್ನನ್ನು ತಾನು ಬದಲಾಯಿಸಿಕೊಳ್ಳುತ್ತಾ ಹೋಗ್ಬೇಕು ಆಗ ಮಾತ್ರ ಸಾಧ್ಯ” ಅವನು ತಟ್ಟನೆ ಹೇಳಿದ “ಹೌದು ಮಿಸ್, ನಾನು ಅದರ ಕಡೆ ಕೆಲಸ ಮಾಡ್ತಾ ಇದ್ದೀನಿ..” ನನಗೆ ಕೇಳಿ ಖುಷಿ ಆದರೂ ಅದನ್ನು ಹೆಚ್ಚು ತೋರಿಸಿಕೊಳ್ಳಲಿಲ್ಲ.“ಕನಸೊಂದನ್ನು ಕಟ್ಟಿದ್ದೀಯ ಅದನ್ನು ನನಸು ಮಾಡಿಕೊಳ್ಳಲು ಬೇಕಾಗುವ ಮೆಟ್ಟಿಲುಗಳನ್ನು ನೀನೇ ಕಟ್ಟಿ ಹತ್ತಬೇಕು.. ಈಗ ಕಷ್ಟಪಟ್ಟರೆ ಮಾತ್ರ ಮುಂದೆ ಸುಖ ಸಿಗುವುದು” ಎಂದೆ. ಅವನಿಗೆ ಹಾದಿ ಅಷ್ಟು ಸುಲಭವಾಗಿರಲಿಲ್ಲ. ಕೆಲವು ಸ್ನೇಹಿತರು ನಗುವರು, ಕೆಲವುಸಾರಿ ಗುರುಗಳು ಅವನ ಪ್ರತಿಭೆಯನ್ನು ಅನುಮಾನದಿಂದ ನೋಡುತ್ತಿದ್ದರು.. ವಿಶೇಷ ಅಂದ್ರೆ ಅವನು ಅದರ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ತಾ ಇರಲಿಲ್ಲವೇನೋ. ಫಸ್ಟ್ ಪಿಯುಸಿ, ಸೆಕೆಂಡ್ ಪಿಯುಸಿ,2 ಆಯ್ತು. ಅವನ ಅಂಕಗಳು ಸಾಧಾರಣವಾಗಿ ಬಂದಿದ್ವು. ಮಧ್ಯಮಧ್ಯ ಕೆಲವು ಬಾರಿ ಬಂದು ನನ್ನ ಬಳಿ ಅವನ ಕನಸುಗಳ ಬಗ್ಗೆ ಮಾತಾಡುತ್ತಿದ್ದ. ಸಲಹೆಗಳನ್ನು ಕೇಳುತ್ತಿದ್ದ, ಓದುವುದು ಬಿಟ್ಟು ಬೇರೆ ಏನೇ ಸಾಧನೆ ಮಾಡಿದರು ನನಗೆ ಕಂಡಿತ ತಿಳಿಯುತ್ತಿತ್ತು ಅವನೇ ಹೇಳಿಕಕೊಳ್ಳುತ್ತಿದ್ದ ನನ್ನತ್ರ. ಹೀಗೆ ದಿನಗಳು ವರ್ಷಗಳು ಕಳೆದುಹೋದವು. ಮುಂದೆ ಅವನಿಲ್ಲ ಎಂಬುದೇ ನನಗೆ ತಿಳಿದಿರಲಿಲ್ಲ .  !,ಒಂದು ದಿನ ಸಡನ್ನಾಗಿ ನನ್ನೆದುರು ಬಂದುಬಿಟ್ಟ “ನನಗೆ ಡಿಫೆನ್ಸ್ ಅಲ್ಲಿ ಕೆಲಸ ಸಿಕ್ತು…109 ಜನ ಮಕ್ಕಳಲ್ಲಿ ಎಲ್ಲಾ ಹಂತಗಳಲ್ಲೂ ಮೊದಲ ಬಾರಿಯೇ ಸೆಲೆಕ್ಟ್ ಆದೆ ಮಿಸ್…..!ನಿಮ್ಮೊಬ್ಬರಿಗೆ ನನ್ನ ಮೇಲೆ ಎಷ್ಟು ನಂಬಿಕೆ ಇದ್ದಿದ್ದು” ಎಂದ. ಬಹಳ ಖುಷಿಯಾಯ್ತು ನನಗೆ. ಅದಕ್ಕಿಂತ ಹೆಚ್ಚು ಖುಷಿ  ಇದ್ದಿದ್ದು ಏನೆಂದರೆಅವನ ಮುಖದಲ್ಲಿ ವರ್ಚಸ್ಸು ಹೆಚ್ಚಾಗಿತ್ತು, ಜವಾಬ್ದಾರಿ ಇರುವುದು ಎದ್ದುಕಾಣುತ್ತಿತ್ತು “ಎಲ್ಲಾ ಒಳ್ಳೇದಾಗ್ಲಿ” ಅಂತ ಹೇಳಿ ಬಿಟ್ಟು ಬಿಟ್ಟೆ.. ಸಾವಿರಾರು ಮಕ್ಕಳು ಬರುತ್ತಾರೆ ಹೋಗುತ್ತಾರೆ ಎಲ್ಲರ ಲೆಕ್ಕ ಇಡಲು ಸಾಧ್ಯವೇ. ಅದಾದ ನಂತರ ಸಹಜವಾಗಿ ಸಿಗುತ್ತಿದ್ದ, ಮಾತಾಡುತ್ತಿದ್ದ ಕಷ್ಟ-ಸುಖವನ್ನು ಹಂಚಿಕೊಳ್ಳುತ್ತಿದ್ದ. ನನಗೂ ಅವನ ಮೇಲೆ ಅಭಿಮಾನ ಹೆಚ್ಚುತ್ತಿತ್ತು.. ಒಬ್ಬ ಸಾಮಾನ್ಯ ಹುಡುಗ ತನ್ನ ಕನಸಿನ ದಾರಿಯನ್ನು ಹಿಡಿದು, ಅದರ ಮೇಲೆ ಕೆಲಸ ಮಾಡಿ, ಈಗ ಸಬ್ ಲೆಫ್ಟನೆಂಟ್ ಆಗಿದ್ದಾನೆ, ಇನ್ನು ಸಿ ಡಿಪಿ ಡೈವಿಂಗ್ ಟ್ರೈನಿಂಗ್ ತಗೋಬೇಕು ಎಂಬ ಹೊಸ ಗುರಿ ಇದೆ. ಕಮಾಂಡೋ ಆದರೂ ಏನು ಅಚ್ಚರಿಯ ವಿಷಯವಲ್ಲ… ಕನಸು ಕಾಣುವುದಷ್ಟೇ ಅಲ್ಲ ಅದನ್ನು ನನಸಾಗಿಸುವ ನಿಟ್ಟಿನಲ್ಲಿ ಸಾಧನೆಗಳನ್ನು ಮಾಡಬೇಕು… ===================================================

ಅವ್ಯಕ್ತಳ ಅಂಗಳದಿಂದ Read Post »

ಕಾವ್ಯಯಾನ

ಕಾವ್ಯಯಾನ

ಸೃಷ್ಟಿಯ ಮಿಲನ. ರಾಮಾಂಜಿನಯ್ಯ ವಿ ಕಾಡ ಕಗ್ಗತ್ತಲು ಆವರಿಸಿ ಮುತ್ತಿರಲು ಜೇನ್ ಪರಾಗ ರಿಂಗಣ! ಚೆಲುವ ಮಧು ಮೃದಂಗ, ಅಧರಗಳ ಮಧುರ ಗಾನ. ಚಂದಿರನವೆ ಬಡಿತ, ಪಕಳೆಗಳ ಚಿಟಪಟ ಕೇಸರಗಳ ಆಗಮನದಿ ಸೃಷ್ಟಿಯ ಮಿಲನ.. ದುಂಬಿ ಮದರಂಗಿ ಚಲನ.. ಪೇಳ್,ಹೆಣ್ಣೆ ನಾಭಿಯಲಿ ನೆತ್ತರು ಬಿಸಿ ಎದೆಯಲ್ಲಿ ಸಮುದ್ರದಲೆ ಭೋರ್ಗರೆವ ನಾದ ತನ್ಮಯ ವಿನೋದ.. ಕರಗುವ ಮುನ್ನ ಕರಗಿಸೆನ್ನ; ಪೆಣ್ಣೆ, ಅರಳುವ ಹೂವೆ.. ಮದನದ ವದನಕ್ಕಿದು ತನು ತರುಲತೆ ಗಾನ. ಸ್ಪರ್ಶಿಸುವ ನೆಲೆಯಲ್ಲಿ ಪರಾಗಗಳ ಸೆಲೆ! ಸುಳಿಯಿರದ ಸಮುದ್ರದಿ ಕವಲುಗಳ ಕಲನ ಇದೋ, ಸೃಷ್ಟಿಯ ಮಿಲನ! =============

ಕಾವ್ಯಯಾನ Read Post »

ಇತರೆ

ಪ್ರಸ್ತುತ

ಮಹಾರಾಷ್ಟ್ರದ ಗಡಿ ತಗಾದೆ ಕೆ.ಶಿವು ಲಕ್ಕಣ್ಣವರ ಮತ್ತೆ ಭುಗಿಲೆದ್ದ ಬೆಳಗಾವಿ ಗಡಿ ವಿವಾದವೂ..! ‘ಮಹಾರಾಷ್ಟ್ರ’ ಗಡಿ ಕ್ಯಾತೆ ಕಥೆಯ ಪೂರ್ಣ ಚಿತ್ರಣವೂ..!! ಮಹಾರಾಷ್ಟ್ರಕ್ಕೆ ಏನೋ ಗತಿ ಕಾದಿದೆ. ಅದಕೇ ಅದು ಮೇಲಿಂದ ಮೇಲೆ ಗಡಿ ಕ್ಯಾತೆ ತೆಗೆಯುತ್ತಿದೆ. ಈ ಬಾರಿ ಸಮಗ್ರ ಕರ್ನಾಟಕ ಈ ಗಡಿ ಕ್ಯಾತೆಯ ವಿರುದ್ಧ ಮಹಾರಾಷ್ಟ್ರದ ನೀರು ಇಳಿಸಲು ಸಿದ್ಧವಾಗಿ ಈ ಗಡಿ ಕ್ಯಾತೆ ಹೋರಾಟದಲ್ಲಿ ದುಮುಕಿದೆ… ಮಹಾರಾಷ್ಟ್ರದ ಜತೆಗಿನ ಗಡಿ ವಿವಾದ ಸದಾ ಬೂದಿ ಮುಚ್ಚಿದ ಕೆಂಡದಂತೆ. ಸುಮ್ಮನಿರುವ ಕರ್ನಾಟಕವನ್ನು ಪದೇ ಪದೇ ಕೆಣಕುವುದು ಅದರ ಕಾಯಕವಾಗಿಬಿಟ್ಟಿದೆ. ವಿವಾದ ಸರ್ವೋಚ್ಚ ನ್ಯಾಯಾಲಯದಲ್ಲಿ ಇರುವಾಗಲೇ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಗಡಿ ವಿಚಾರವಾಗಿ ಲಘುವಾಗಿ ಮಾತನಾಡಿ ವಿವಾದ ಎಬ್ಬಿಸಿದ್ದಾರೆ… ಬೆಳಗಾವಿ, ನಿಪ್ಪಾಣಿ, ಕಾರವಾರ ಪ್ರದೇಶಗಳು ‘ಕರ್ನಾಟಕ ಆಕ್ರಮಿತ ಮಹಾರಾಷ್ಟ್ರ ಪ್ರದೇಶವಾಗಿದೆ’ ಎಂಬ ಉದ್ಧಟತನದ ಹೇಳಿಕೆ ನೀಡಿದ್ದಾರೆ ಉದ್ದವ್ ಠಾಕ್ರೆ. ಬೆಳಗಾವಿ, ಕಾರವಾರ ಪಾಕಿಸ್ತಾನದಲ್ಲಿದೆಯೋ, ಬ್ರಹ್ಮದೇಶದಲ್ಲಿದೆಯೋ? ಅಥವಾ ಭಾರತದಲ್ಲಿದೆಯೋ? ಎಂದು ಉದ್ಧವ್ ಪ್ರಶ್ನೆ ಮಾಡಿದ್ದಾರೆ. ಇದು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದ್ದು, ರಾಜ್ಯಾದ್ಯಂತ ವ್ಯಾಪಕ ಖಂಡನೆ ವ್ಯಕ್ತವಾಗಿದೆ… ಬೆಳಗಾವಿ ಗಡೆ ತಂಟೆ ಭುಗಿಲೆದ್ದಿರುವುದು ಇದೇ ಮೊದಲೇನಲ್ಲ. ಈ ಹಿಂದೆಯೂ ಹಲವಾರು ಬಾರಿ ಗಡಿ ವಿವಾದ ಅತಿರೇಕಕ್ಕೇರಿದ ಇತಿಹಾಸವಿದೆ. ಈ ಕುರಿತು ಹಲವು ಸಮಿತಿಗಳು ರಚನೆಯಾಗಿದ್ದರೂ, ವಿವಾದಕ್ಕೆ ಪೂರ್ಣ ವಿರಾಮ ನೀಡಲಾಗಿಲ್ಲ. ಇಂದಿಗೂ ಈ ವಿವಾದ ಸುಪ್ರೀಂಕೋರ್ಟ್‌ನಲ್ಲಿ ಬಾಕಿ ಉಳಿದಿದೆ. ಎರಡೂ ರಾಜ್ಯಗಳ ನಿರ್ಣಾಯಕ ಗಡಿ ಯುದ್ಧದ ಪೂರ್ಣ ಚಿತ್ರಣವೇ ಆಗಿದೆ… ಇಲ್ಲಿಂದಲೇ ಹುಟ್ಟಿಕೊಂಡಿದ್ದು ಗಡಿವಿವಾದ– ಸ್ವಾತಂತ್ರ್ಯ ಪೂರ್ವದಲ್ಲಿ ಕರ್ನಾಟಕದ ಭಾಗಗಳು ಹರಿದು ಹಂಚಿಹೋಗಿದ್ದವು. ಸ್ವಾತಂತ್ರ ಬಂದು 9 ವರ್ಷಗಳ ನಂತರ 1956ರಲ್ಲಿ ಚದುರಿ ಹೋಗಿದ್ದ ಭಾಗಳೆಲ್ಲವನ್ನೂ ಏಕೀಕರಣಗೊಳಿಸಿ ಮೈಸೂರು ರಾಜ್ಯವನ್ನಾಗಿ ಮಾಡಲಾಯಿತು. (1973ರ ನವೆಂಬರ್‌ 1 ರಂದು ಕರ್ನಾಟಕ ಎಂದು ಪುನರ್‌ ನಾಮಕರಣ ಮಾಡಲಾಗಿದೆ) ನೆರೆಹೊರೆಯ ರಾಜ್ಯಗಳ ಆಳ್ವಿಕೆಯಲ್ಲಿದ್ದ ಕನ್ನಡ ಮಾತಾಡುವ ಪ್ರದೇಶಗಳನ್ನೆಲ್ಲಾ ಆಯಾ ಪ್ರದೇಶಗಳಿಂದ ಬಿಡುಗಡೆ ಮಾಡಿ ಮೈಸೂರು ರಾಜ್ಯಕ್ಕೆ ಸೇರಿಸಲಾಯಿತು. ಬಾಂಬೆ ಪ್ರಾಂತ್ಯದಲ್ಲಿದ್ದ ಕೆಲ ಪ್ರದೇಶಗಳೂ ಕರ್ನಾಟಕಕ್ಕೆ ಸೇರಿದವು. ಆದರೆ ನೆರೆ ರಾಜ್ಯಗಳು ಇದಕ್ಕೆ ಸಿದ್ಧವಿರಲಿಲ್ಲ. ಆ ಕಾರಣದಿಂದಲೇ ನ್ಯಾಯವಾಗಿ ಕನ್ನಡ ನೆಲವಾಗಿದ್ದ ಹೊಸೂರು, ಕೃಷ್ಣಗಿರಿ ತಮಿಳುನಾಡಿನಲ್ಲಿಯೇ ಉಳಿದವು. ಅನಂತಪುರ, ರಾಮದುರ್ಗ, ಅದೋಣಿ, ಮಂತ್ರಾಲಯಗಳು ಆಂಧ್ರದಲ್ಲಿ ಉಳಿದವು. ಕಾಸರಗೋಡು ಕೇರಳದ ಪಾಲಾಯಿತು. ಅಕ್ಕಲಕೋಟೆ, ಜತ್ತ, ಸೊಲ್ಲಾಪುರಗಳು ಮಹಾರಾಷ್ಟ್ರದಲ್ಲೇ ಉಳಿದು ಹೋದವು. ಇದಷ್ಟೇ ಅಲ್ಲದೇ ಕರ್ನಾಟಕದ ಭಾಗವಾಗಿದ್ದ ಮತ್ತಷ್ಟು ಪ್ರದೇಶಗಳ ಮೇಲೆ ನೆರೆ ರಾಜ್ಯಗಳು ಹಕ್ಕು ಮಂಡಿಸತೊಡಗಿದವು. ಬೆಳಗಾವಿ ಜಿಲ್ಲೆ, ಬೀದರ್, ಕಾರವಾರ ಜಿಲ್ಲೆಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕು ಎಂದು ಮಹಾರಾಷ್ಟ್ರ ಕೂಗೆಬ್ಬಿಸಿತು. ಇಲ್ಲಿಂದ ಬೆಳಗಾವಿ ಗಡಿ ವಿವಾದ ಆರಂಭವಾಯಿತು… ಮಹಾರಾಷ್ಟ್ರ ಒತ್ತಾಯಕ್ಕೆ 4 ಸದಸ್ಯರ ಆಯೋಗ ರಚನೆ-– ಮಹಾರಾಷ್ಟ್ರ ಸರಕಾರದ ಒತ್ತಾಯಕ್ಕೆ ಮಣಿದ ಕೇಂದ್ರ ಸರಕಾರ 1960ರ ಜೂನ್ 5 ರಂದು ನಾಲ್ವರು ಸದಸ್ಯರನ್ನೊಳಗೊಂಡ ಆಯೋಗವನ್ನು ರಚಿಸಿತು. ಇದರಲ್ಲಿ ಇಬ್ಬರು ಸದಸ್ಯರನ್ನು ಕರ್ನಾಟಕದಿಂದ ಹಾಗೂ ಇನ್ನಿಬ್ಬರು ಸದಸ್ಯರನ್ನು ಮಹಾರಾಷ್ಟ್ರದಿಂದ ಆಯ್ಕೆ ಮಾಡಲಾಗಿತ್ತು. ಸರ್ವೋಚ್ಛ ನ್ಯಾಯಾಲಯದ ನ್ಯಾಯಮೂರ್ತಿಗಳಾದ ಮಹಾಜನ್ ಹಾಗೂ ಇತರೆ ಪರಿಣಿತರ ತಂಡ ಗಡಿ ಭಾಗದ ಅಧ್ಯಯನ ನಡೆಸಿ ಕನ್ನಡ ಭಾಷಿಕರು ಹೆಚ್ಚಿರುವ ಆಧಾರದಲ್ಲಿ ಬೆಳಗಾವಿಯು ಕರ್ನಾಟಕದಲ್ಲೇ ಉಳಿಯಬೇಕೆಂಬ ತೀರ್ಪು ನೀಡಿತು… ಮಹಾಜನ್ ಸಮಿತಿ ರಚನೆ-– ನಾಲ್ಕು ಜನರ ಆಯೋಗ ನೀಡಿದ ತೀರ್ಪನ್ನು ಮಹಾರಾಷ್ಟ್ರ ಒಪ್ಪಲಿಲ್ಲ. ಗಡಿ ವಿವಾದಕ್ಕೆ ಸ್ವತಂತ್ರ ಸಮಿತಿ ರಚಿಸುವಂತೆ ಮಹಾರಾಷ್ಟ್ರದ ನಾಯಕರಾದ ಸೇನಾಪತಿ ಬಾಪಟ್ ಅವರು ಆಮರಣಾಂತ ಉಪವಾಸ ಸತ್ಯಾಗ್ರಹದ ಮೂಲಕ ಕೇಂದ್ರ ಸರಕಾರದ ಮೇಲೆ ಒತ್ತಡ ಹೇರಿತು. ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರು 1966 ಅಕ್ಟೋಬರ್‌ 25ರಂದು ಸುಪ್ರಿಂಕೋರ್ಟಿನ ಮುಖ್ಯನ್ಯಾಯಮೂರ್ತಿಗಳಾಗಿ ನಿವೃತ್ತರಾಗಿದ್ದ ಮೆಹರ್ ಚಂದ್ ಮಹಾಜನ್ ಅವರ ನೇತೃತ್ವದಲ್ಲಿ ಸಮಿತಿಯನ್ನು ರಚಿಸಿದರು. ಮಹಾಜನ್ ಸಮಿತಿಯಲ್ಲಿ ಇಬ್ಬರು ಕನ್ನಡಿಗರು, ಇಬ್ಬರು ಮರಾಠಿಗರು ಇದ್ದು ಸಮಿತಿ ಸಮತೋಲನದಿಂದ ಕೂಡಿತ್ತು. ಈ ಸಮಿತಿಯವರು ಗಡಿಭಾಗದ ಎಲ್ಲ ಊರುಗಳನ್ನು ಭೇಟಿ ಮಾಡಿ ಅಲ್ಲಿನ ಸಂಘ ಸಂಸ್ಥೆಗಳ, ಜನಸಾಮಾನ್ಯರ ಅಭಿಪ್ರಾಯವನ್ನು ಸಂಗ್ರಹಿಸಿದರು. ಒಟ್ಟು 2240 ಮನವಿಗಳನ್ನು ಸ್ವೀಕರಿಸಿ ಸಮಗ್ರ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿತು… ಮಹಾಜನ್ ವರದಿ ಏನು?– ಮಹಾಜನ್‌ ಸಮಿತಿ ಸಲ್ಲಿಸಿ ವರದಿಯಲ್ಲಿಯೂ ಬೆಳಗಾವಿ ಕರ್ನಾಟಕ ರಾಜ್ಯದಲ್ಲೇ ಉಳಿಯಬೇಕು ಎಂದು ಶಿಫಾರಸು ಮಾಡಲಾಯಿತು. ಈ ಸಮಿತಿಯ ಪ್ರಮುಖ ಶೀಫಾರಸುಗಳೆಂದರೆ, 1) ಬೆಳಗಾವಿ ಕರ್ನಾಟಕದಲ್ಲೇ ಉಳಿಯಬೇಕು. 2) ಜತ್ತ, ಅಕ್ಕಲಕೋಟೆ, ಸೊಲ್ಲಾಪುರವೂ ಸೇರಿದಂತೆ ಒಟ್ಟು 247 ಹಳ್ಳಿಗಳು ಕರ್ನಾಟಕಕ್ಕೆ ಸೇರಬೇಕು. 3) ನಂದಗಡ, ನಿಪ್ಪಾಣಿ, ಖಾನಾಪುರ ಸೇರಿದಂತೆ 264 ಹಳ್ಳಿಗಳು ಮಹಾರಾಷ್ಟ್ರಕ್ಕೆ ಸೇರಬೇಕು. 4) ಕಾಸರಗೋಡು ಕರ್ನಾಟಕಕ್ಕೆ ಸೇರಬೇಕು ವರದಿಯನ್ನು ನಿರಾಕರಿಸಿದ ಮಹಾರಾಷ್ಟ್ರ ಮಹಾಜನ್‌ ವರದಿಯನ್ನು ಕರ್ನಾಟಕ ಸ್ವೀಕರಿಸಿತಾದರೂ, 1951ರ ಜನಗಣತಿಯನ್ನು ಆಧಾರವಾಗಿಟ್ಟುಕೊಂಟು ಮಹಾರಾಷ್ಟ್ರವು ವರದಿಯ ಶಿಫಾರಸ್ಸನ್ನು ತಿರಸ್ಕರಿಸಿತು. ಜತಗೆ ರಾಜ್ಯಗಳ ಮರುವಿಂಗಡಣಾ ಕಾಯಿದೆ– 1956ರನ್ನು ಶಿಫಾರಸುಗಳು ಉಲ್ಲಂಘಿಸಿವೆ ಎಂಬ ಕಾರಣ ನೀಡಿತು. ಬೆಳಗಾವಿಯಲ್ಲಿ ಶೇ.60ರಷ್ಟು ಜನ ಮರಾಠಿ ಭಾಷಿಕರಿದ್ದಾರೆ. ಹೀಗಾಗಿ ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಬೇಕು ಎಂದು ಕ್ಯಾತೆ ತೆಗೆಯಿತು. ಐವತ್ತು ವರ್ಷಗಳು ಕಳೆದರೂ ಇಂದಿಗೂ ಈ ವರದಿ ಜಾರಿಯಾಗಿಲ್ಲ. ಮಹಾಜನ್ ವರದಿ ಜಾರುಗಿ ಕರ್ನಾಟಕದ ಹೋರಾಟ ಇಂದಿಗೂ ಮುಂದುವರಿದೇ ಇದೆ… 1980ರ ದಶಕದಲ್ಲಿ ಮಹಾರಾಷ್ಟ್ರವಾದಿ ಹೋರಾಟ-– ಧರ್, ನೆಹರು, ಫಜಲ್ ಅಲಿ ಆಯೋಗಗಳು ಸಹ ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗವೆಂದು ಹೇಳಿದ್ದು ಎಂಇಎಸ್ ಮಾತ್ರ ಯಾವುದೇ ಆಯೋಗದ ವರದಿಗಳನ್ನು ಪುರಸ್ಕರಿಸದೇ ತನ್ನ ವಾದವನ್ನು ಮುನ್ನಡೆಸುತ್ತ ಬಂದಿದೆ. 80ರ ದಶಕದಲ್ಲಿ ಮಹಾರಾಷ್ಟ್ರವಾದಿ ಹೋರಾಟದ ಒಂದು ಶಕ್ತಿಯಾಗಿ ಬೆಳೆದ ಎಂಇಎಸ್ ಹತ್ತು ಹಲವು ಸ್ವರೂಪಗಳ ಹೋರಾಟ ನಡೆಸುತ್ತ ಬಂತು. ಈ ನಡುವೆ ಎಂಇಎಸ್‌ನ ಹೋರಾಟಗಳು ಹಿಂಸಾಚಾರಕ್ಕೆ ತಿರುಗಿ ಲಾಠಿ ಪ್ರಹಾರ, ಗುಂಡೇಟು, ಜೀವಬಲಿಯವರೆಗೂ ನಡೆದು ಅನಪೇಕ್ಷಿತ ಇತಿಹಾಸದ ಘಟನೆಗಳ ಸೃಷ್ಟಿಗೆ ಕಾರಣವಾಯಿತು… ವಿವಾದಿತ ಮಹಾರಾಷ್ಟ್ರ ಠರಾವು-– 1983ರಲ್ಲಿ ಬೆಳಗಾವಿಯ ಮಹಾನಗರ ಪಾಲಿಕೆ ಚುನಾವಣೆ ನಂತರ ಎಂಇಎಸ್ ಚುನಾಯಿತ ಪ್ರತಿನಿಧಿಗಳು ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕು ಎಂಬ ಪ್ರಯತ್ನಕ್ಕೆ ಕೈ ಹಾಕಿದರು. 1986ರ ವೇಳೆ ಖಾನಾಪುರ ಸೇರಿದಂತೆ ಕೆಲವಡೆ ಎಂಇಎಸ್ ಪ್ರಾಬಲ್ಯವುಳ್ಳ ಸ್ಥಳೀಯ ಆಡಳಿತ ಸಂಸ್ಥೆಗಳಲ್ಲಿ ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಬೇಕು ಎಂಬ ವಿವಾದಿತ ಠರಾವುವನ್ನು ಅಂಗೀಕರಿಸಲಾಯಿತು. ಎಂಇಎಸ್ ಸದಸ್ಯರ ನಿಲುವನ್ನು ಖಂಡಿಸಿ ಕನ್ನಡ ಪರ ಸಂಘಟನೆಗಳು ಬೀದಿಗಿಳಿದು ಹೋರಾಟ ಮಾಡಲು ಆರಂಭಿಸಿದವು. ಈ ಹೋರಾಟದ ಕಾವು 1990, 1996ರ ಅವಧಿಯಲ್ಲಿ ಉಗ್ರ ರೂಪ ಪಡೆಯಿತು. ಗಡಿ ವಿಚಾರವಾಗಿ ಹೊತ್ತಿಕೊಂಡ ಈ ಕಿಡಿ 9 ಜನರನ್ನು ಬಲಿ ತೆಗೆದುಕೊಂಡಿತು… ಕರ್ನಾಟಕದ ಹೋರಾಟ ಆರಂಭ-– ನಂತರದ ದಿನಗಳಲ್ಲಿ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಕನ್ನಡ ಚಳವಳಿಗಾರರ ಸಂಘ ಅಸ್ತಿತ್ವಕ್ಕೆ ಬಂದಿತು. ಬೆಳಗಾವಿ ನಗರದ ಎಲ್ಲ ಸರಕಾರಿ ಕಚೇರಿ ಹಾಗೂ ಅಂಗಡಿಗಳ ಮೇಲೆ ಮರಾಠಿ ಹೆಸರು ಬದಲು ಕನ್ನಡ ಹೆಸರನ್ನು ಬರೆಸಬೇಕು ಎಂದು ಈ ಸಂಘ ಸರಕಾರವನ್ನು ಆಗ್ರಹಿಸಿತು. ಅಲ್ಲದೇ ಅಂದಿನ ಮುಖ್ಯಮಂತ್ರಿ ಎಚ್.ಡಿ. ದೇವೇಗೌಡ ಅವರಿಗೂ ಮನವಿ ಸಲ್ಲಿಸಲಾಯಿತು. ಇದಕ್ಕೆ ರಾಜ್ಯ ಸರಕಾರ ಕೂಡ ಸಕಾರಾತ್ಮಕವಾಗಿ ಸ್ಪಂದಿಸಿತು. ಇದಕ್ಕೆ ಮರಾಠಿ ಪರ ಸಂಘಟನೆಗಳು ಆಕ್ಷೇಪ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದವು. ಹೀಗೆ ಗಡಿ ವಿಚಾರವಾಗಿ ಒಂದಲ್ಲಾ ಒಂದು ಘಟನೆಗೆ ಬೆಳಗಾವಿ ಸಾಕ್ಷಿಯಾಯಿತು. ನಂತರ ಈ ಪ್ರಕರಣ 2004ರಲ್ಲಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತು… ಸುಪ್ರೀಂಕೋರ್ಟ್‌ ಮೆಟ್ಟಿಲೇರಿದ ಮಹಾರಾಷ್ಟ್ರ– ಬೆಳಗಾವಿ ಜತೆಗೆ ಅಚ್ಚ ಕನ್ನಡ ಮಾತಾಡುವ 814 ಹಳ್ಳಿಗಳನ್ನು ಮಹಾರಾಷ್ಟ್ರಕ್ಕೆ ಹಸ್ತಾಂತರಿಸಬೇಕೆಂದು 2004ರಲ್ಲಿ ಮಹಾರಾಷ್ಟ್ರ ಸರಕಾರ ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿತ್ತು. ಅಂದು ಕರ್ನಾಟಕ ಮುಖ್ಯಮಂತ್ರಿಯಾಗಿದ್ದ ಎಸ್.ಎಂ. ಕೃಷ್ಣ ಅವರು, ಎಚ್.ಬಿ ದಾತಾರ್ ಅವರ ಅಧ್ಯಕ್ಷತೆಯಲ್ಲಿ ಸಲಹಾ ಸಮಿತಿ ರಚಿಸಿದ್ದರು. ಗಡಿ ವಿವಾದ ಕೋರ್ಟ್‌ನಲ್ಲಿ ವಿಚಾರಣೆಗೆ ಬಂದಾಗಲೆಲ್ಲಾ ದಾತಾರ್ ಅವರ ಸಮಿತಿ ಸಲಹೆ ನೀಡುತ್ತಿತ್ತು… 2009ರಲ್ಲಿ ದಾತಾರ್ ನಿಧನರಾದಾಗ ಅಂದು ರಾಜ್ಯ ಕಾನೂನು ಆಯೋಗದ ಅಧ್ಯಕ್ಷರಾಗಿದ್ದ ನ್ಯಾ. ವಿ.ಎಸ್. ಮಳೀಮಠ ಅವರಿಗೆ ಸಲಹಾ ಸಮಿತಿಯ ಹೆಚ್ಚುವರಿ ಜವಾಬ್ದಾರಿ ವಹಿಸಲಾಗಿತ್ತು. ಎರಡು ತಿಂಗಳ ಬಳಿಕ, ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ನಿವೃತ್ತರಾಗಿದ್ದ ರಾಮಕೃಷ್ಣ ಅವರನ್ನು ಸಲಹಾ ಸಮಿತಿ ಅಧ್ಯಕ್ಷರಾಗಿ ಬಿಜೆಪಿ ಸರಕಾರ ನೇಮಿಸಿತ್ತು… ವಿಚಾರಣೆ ಕೈಗೆತ್ತಿಕೊಂಡಿದ್ದ ನ್ಯಾ. ಲೋದಾ-– ಸುಪ್ರೀಂಕೋರ್ಟ್‌ನ ಮುಖ್ಯನ್ಯಾಯಮೂರ್ತಿಯಾಗಿದ್ದ ಆರ್.ಎಂ. ಲೋಧಾ ಅವರು ನಿವೃತ್ತರಾಗುವ ಕೆಲವೇ ದಿನಗಳ ಮೊದಲು, ಮಹಾರಾಷ್ಟ್ರ-ಕರ್ನಾಟಕ ಗಡಿ ವ್ಯಾಜ್ಯದ ವಿಷಯದಲ್ಲಿ ಉಭಯ ರಾಜ್ಯಗಳ ಅಹವಾಲು ಕೇಳಲು, ಎರಡು ರಾಜ್ಯಗಳಲ್ಲಿ ಹಂಚಿಹೋಗಿರುವ ಕನ್ನಡ-ಮರಾಠಿ ಭಾಷಿಕ ಪ್ರದೇಶದ ಜನರ ಅಭಿಪ್ರಾಯ ಪಡೆಯಲು, ಎರಡೂ ಸರಕಾರಗಳ ಬಳಿ ತಮ್ಮ ಪ್ರದೇಶವೆಂದು ಪ್ರತಿಪಾದಿಸಲು ಇರುವ ದಾಖಲೆ, ಸಾಕ್ಷ್ಯಗಳ ಸಂಗ್ರಹಿಸಲು ನ್ಯಾ. ಮನೋಹರ್ ಸರೀನ್ ಅವರ ನೇತೃತ್ವದಲ್ಲಿ ಆಯೋಗ ರಚಿಸಿದ್ದರು. ಆಯೋಗವು ಎರಡೂ ರಾಜ್ಯಗಳಿಗೆ ಭೇಟಿ ನೀಡಿತ್ತು… ಸಾಕ್ಷ್ಯ ಸಂಗ್ರಹಿಸುವ ಆಯೋಗ ರಚಿಸಲು ಸಾಂವಿಧಾನಿಕವಾಗಿ ಅವಕಾಶವಿಲ್ಲ, ಆಯೋಗದ ರಚನೆಯೇ ಸಮಂಜಸವಲ್ಲ ಎಂದು ಪ್ರತಿಪಾದಿಸಿದ ಕರ್ನಾಟಕ ಸರಕಾರ ಸುಪ್ರೀಂಕೋರ್ಟ್‌ನ ಮುಂದೆ ಆಕ್ಷೇಪಣೆ ಸಲ್ಲಿಸಿತು. ಅಲ್ಲದೇ ಆಯೋಗದ ಮುಂದೆ ಅಹವಾಲು ಸಲ್ಲಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟವಾಗಿ ಹೇಳಿತ್ತು. ಒಂದು ವೇಳೆ ಆಯೋಗವು, ಸಂಸತ್ತಿನಲ್ಲಿಯೇ ಇದು ತೀರ್ಮಾನವಾಗಲಿ ಎಂದು ಹೇಳಿದಲ್ಲಿ ಕರ್ನಾಟಕ ಅದನ್ನು ಒಪ್ಪಿಕೊಳ್ಳಬೇಕಾಗುತ್ತದೆ. ಆ ಕಾರಣದಿಂದಾಗಿ ಆಯೋಗದ ಮುಂದೆ ಸಾಕ್ಷ್ಯ ನುಡಿಯುವುದಿಲ್ಲ ಎಂದು ಕರ್ನಾಟಕ ವಾದಿಸಿತ್ತು… ಈವರೆಗೆ 4 ಪ್ರತ್ಯೇಕ ಅಧ್ಯಯನ– ಈವರೆಗೆ ಕರ್ನಾಟಕ – ಮಹಾರಾಷ್ಟ್ರ ಗಡಿ ವಿವಾದಕ್ಕೆ ಸಂಬಂಧಿಸಿದಂತೆ 4 ಪ್ರತ್ಯೇಕ ಅಧ್ಯಯನಗಳು ನಡೆದಿವೆ. 1) ಗಡಿನಾಡು ವರದಿ-2000 (ಡಿ.ಎಂ.ನಂಜುಂಡಪ್ಪ), 2) ಗಡಿನಾಡು ಮಧ್ಯಂತರ ವರದಿ- 2000(ವಾಟಾಳ್ ನಾಗರಾಜ್), 3) ಗಡಿನಾಡು ಅಧ್ಯಯನ ವರದಿ-2002(ಪ್ರೊ. ಬರಗೂರು ರಾಮಚಂದ್ರಪ್ಪ), 4) ಗಡಿಕನ್ನಡಿಗರ ಕಥೆ/ವ್ಯಥೆ-2006 (‘ಮುಖ್ಯಮಂತ್ರಿ’ ಚಂದ್ರು). ಹೀಗೆ ನಾಲ್ಕು ಪ್ರತ್ಯೇಕ ಅಧ್ಯಯನ ನಡೆದವು… ಮಳೀಮಠ ಸಮಿತಿ– ಮಹಾರಾಷ್ಟ್ರದ ಜತೆಗಿನ ಗಡಿ ವಿವಾದ ಸದಾ ಬೂದಿ ಮುಚ್ಚಿದ ಕೆಂಡಂದಂತೆಯೇ ಇರುತ್ತ ಬಂದಿತು. ಸುಮ್ಮನಿರುವ ಕರ್ನಾಟಕವನ್ನು ಪದೇ ಪದೇ ಕೆಣಕುವುದು ಮಹಾರಾಷ್ಟ್ರದ ಕಾಯಕ. ಈ ಬಾರಿ ಈ ವಿವಾದ ಹಿಡಿದು ಈಗಾಗಲೇ ಸುಪ್ರೀಂಕೋರ್ಟ್ ಮೆಟ್ಟಿಲೇರಿರುವ ಮಹಾರಾಷ್ಟ್ರವು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಉನ್ನತಾಧಿಕಾರ ಸಮಿತಿ ರಚಿಸಿದೆ, ಇದರ ಗಂಭೀರತೆ ಅರಿತ ಕರ್ನಾಟಕವೂ ಈಗ ನಿವೃತ್ತ ನ್ಯಾಯಮೂರ್ತಿ ವಿ.ಎಸ್.ಮಳಿಮಠ ಅವರ ಅಧ್ಯಕ್ಷತೆಯಲ್ಲಿ ಸಮಿತಿಯೊಂದನ್ನು ರಚಿಸಿದೆ. ಇದರೊಂದಿಗೆ ಎರಡೂ ರಾಜ್ಯಗಳು ನಿರ್ಣಾಯಕ ಗಡಿ ಯುದ್ಧಕ್ಕೆ ಸಿದ್ಧತೆ ನಡೆಸಿವೆ. ಇದೀಗ ಮತ್ತೇ ಗಡಿ ವಿವಾದ ಭುಗಿಲೆದ್ದಿದೆ ಬುಗಿಲೆದ್ದಿದೆ..! ಮಹಾರಾಷ್ಟ್ರದ ಉದ್ಧವ ಠಾಕ್ರೆ ಮತ್ತೇ ಕರ್ನಾಟಕವನ್ನು ಕೆಣಕಿದ್ದಾರೆ ಕನ್ನಡ ನಾಡಿನ ಹೋರಾಟಗಾರರೆಲ್ಲ ಒಂದಾಗಿ ತೀವ್ರ ಹೋರಾಟ ಮಾಡುತ್ತಿದ್ದಾರೆ. ಈ ಕ್ಯಾತೆ ಬುಗಿಲೆದ್ದಿದೆ. ಈ ಕನ್ನಡ ಪರ ಹೋರಾಟಗಾರರು ಈ ಬಾರಿ ಮಹಾರಾಷ್ಟ್ರಕ್ಕೆ ತಕ್ಕ ಪಾಠ ಕಲಿಸಬೇಕಾಗಿರುವುದು ಇಂದಿನ ತುರ್ತಾಗಿದೆ..! ====================

ಪ್ರಸ್ತುತ Read Post »

ಕಾವ್ಯಯಾನ

ಕಾವ್ಯಯಾನ

ನಾನಲ್ಲ ದೇವದಾಸಿ ನಿರ್ಮಲಾ ನನ್ನ ಬದುಕಿದು ನನ್ನ ಸ್ವತ್ತು ಬಲವಂತವಾಗಿ ಕಟ್ಟಿಸಿದಿರಿ ನನಗೆ ಮುತ್ತು ಬೆಲೆ ಇಲ್ಲವೇ ನನ್ನಾವ ಆಸೆಗೆ ಬಲಿಯಾದೆ ಕಾಮಪಿಶಾಚಿಗಳ ಲಾಲಸೆಗೆ ಭಗವಂತನ ಸೇವೆಗೆಂದೇ ಮಾಡಿದಿರಿ ನನ್ನ ದಾಸಿ ಆದರೆ ವೇಶ್ಯೆಯೆಂದೆ ನಾನಾದೆ ಹೆಸರುವಾಸಿ ಶಾಸ್ತ್ರ ಹೇಳಿತು ದೇವನಿಗೆ ಸಂಗೀತ, ನೃತ್ಯ ಪ್ರಿಯ ದೇವನ ಹೆಸರಲಿ ಸಮಾಜ ಮಾಡಿತು ನನ್ನ ಬದುಕು ಹೇಯ ಮಾಡಿದಿರಿ ನನಗೆ ಗೆಜ್ಜೆ ಪೂಜೆ ನನ್ನಾವ ತಪ್ಪಿಗಾಗಿ ಈ ಸಜೆ ನಾನಾಗ ಬೇಕಿತ್ತಲ್ಲವೇ ಸಂಸಾರಿ ಅದೇಕೆ ಮಾಡಿದಿರಿ ನನ್ನ ವ್ಯಭಿಚಾರಿ ಹುಟ್ಟುತಾ ನಾನಲ್ಲ ದೇವದಾಸಿ ಬದುಕ ಕತ್ತಲಾಗಿಸಿದಿರಲ್ಲ ನನ್ನ ಶೋಷಿಸಿ ನನ್ನ ಬದುಕು ಬಲಿಕೊಟ್ಟು ಧರ್ಮವ ಬೆಳೆಸಿದಿರಿ ನನ್ನ ರಕ್ತವ ಬಸಿದು ನಿಮ್ಮ ಭಕ್ತಿಯ ತೋರಿಸಿದಿರಿ ಧರ್ಮದ ಹೆಸರಲಿ ನಿಮ್ಮ ಭಕ್ತಿಯ ಭಾವುಟ ಆಕಾಶಕ್ಕೆ ಹಾರಿಸಿದಿರಿ ನನ್ನ ಪಾತಾಳಕ್ಕೆ ತುಳಿದಿರಿ ವಾಕರಿಕೆಯಾಗಿದೆ ಬದುಕು ಹೇ ದೇವ ಮತ್ತೆ ಹುಟ್ಟಿ ಬರಲೊಲ್ಲೆ ನಾ ಈ ಮಾನವ ಜನುಮವ. ==========

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಹೊಸ ವರ್ಷದ ಹೊಸಿಲಲ್ಲಿ…. ಡಿ.ಎಸ್.ರಾಮಸ್ವಾಮಿ ಇವತ್ತು ಈ ವರ್ಷಕ್ಕೆ ಕಡೆಯ ಮೊಳೆ ಹೊಡೆದಾಯಿತು. ಮತ್ತಷ್ಟು ಬಿಳಿಯ ಕೂದಲು ಗಡ್ಡದಲ್ಲಿ ಹಣುಕಿವೆ ತೆಲೆ ಮತ್ತಷ್ಟು ಬೊಕ್ಕಾಗಿದೆ. ಇರುವ ಸಾಲದ ಕಂತುಗಳ ಲೆಕ್ಕ ಹಾಕಿದರೆ ಬರೀ ನಿಟ್ಟುಸಿರು ಆದಾಯ ತೆರಿಗೆಯ ಸ್ಲಾಬು ಏರಿದೆ. ಎದೆ ಎತ್ತರ ಬೆಳೆದು ನಿಂತಿದ್ದಾಳೆ ಮಗಳು, ಮುಂದೆ ಹೇಗೋ ಎಂದು ತಳಮಳಿಸುವುದು ಜೀವ, ಮದುವೆಯ ಮಾತೆತ್ತಿದರೆ ಸಿಡುಕುತ್ತಾಳೆ. ಚಿನ್ನದ ಸರ ಕೊಳ್ಳುವ ಇವಳ ಮಾತು, ಅಪಥ್ಯ. ಸ್ವರ್ಣ ಬಾಂಡಿನ ಕಂತು ಮುಗಿದು ಆಭರಣಗಳ ಆಯಬೇಕಿದೆ ಅಷ್ಟೆ. ಜೊತೆಯಲ್ಲಿ ಇರದ ಸಂಜೆಗಳ ಲೆಕ್ಕ ಮಗ ಮುಂದಿಡುತ್ತಿರುವಾಗ, ತಾಳೆಯಾಗದ ಖಾತೆಗಳ ಯಾದಿಯ ಪಟ್ಟಿ ಮುಂದಿದೆ. ಅನಾರೋಗ್ಯದ ಅಮ್ಮನ ನೋಡಲು ಹೋಗದ ದಿನಗಳ ಲೆಕ್ಕ ಸಿಕ್ಕಿದರೂ ಅಂದುಕೊಂಡದ್ದೊಂದೂ ಘಟಿಸದೆ, ಬರಿಯ ನಿರಾಶೆ ಮರುಗಟ್ಟಿದೆ. ಹಳೆಯ ನಿರ್ಧಾರಗಳ ನೆನಪು ಮತ್ತೆ ಮರುಕಳಿಸಿ ತಲೆಶೂಲೆ ಗೆ ಯಾವುದು ರಾಮಬಾಣ? ಆಗೀಗ ಹುಕಿ ಹತ್ತಿದರೆ ಕರೆ ಮಾಡುವ ಗೆಳೆಯ ಇಯರ್ ಎಂಡ್ ಪಾರ್ಟಿಗೆ ಕರೆಯುತ್ತಿದ್ದಾನೆ, ಬಾರದಿದ್ದರೆ ಠೂ ಬಿಡುತ್ತೇನೆ ಎಂದಿದ್ದಾನೆ. ಹುಟ್ಟುತ್ತಿದೆ ಹೊಸ ವರ್ಷ ಬೆಚ್ಚಿಬೀಳುವ ವೇಗದಲ್ಲಿ.ಕನ್ನಡಿಯ ಹಿಂದಣ ಪಾದರಸ ಸವೆದಿದೆ ಹೊಸ ಕನ್ನಡಿ ಇನ್ನಾದರೂ ತರಬೇಕು. *****

ಕಾವ್ಯಯಾನ Read Post »

You cannot copy content of this page

Scroll to Top