ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ನಿಮ್ಮೊಂದಿಗೆ

ಸಂಪಾದಕೀಯ

ಗೆಳೆಯರೆ, ಸಂಗಾತಿ ಪತ್ರಿಕೆಯನ್ನು ಕೇವಲ ರಂಜನೆಗಾಗಿ ರೂಪಿಸಿಲ್ಲ-ಜೊತೆಗೆ ಕೇವಲ ಕತೆ-ಕತೆಗಳಿಗೆ ಮಾತ್ರ ಮೀಸಲಿರಿಸಿಯೂ ಇಲ್ಲ.ಪತ್ರಿಕೆಯಲ್ಲಿ ಪ್ರಖರವಾದ ವೈಚಾರಿಕ ಲೇಖನಗಳನ್ನು,ಸಮಕಾಲೀನ ಸಮಸ್ಯೆಗಳ ಬಗ್ಗೆ ವಸ್ತುನಿಷ್ಠ ವಿಮರ್ಶಾತ್ಮಕ, ಬರಹಗಳನ್ನು ಪ್ರಕಟಿಸಬೇಕೆಂಬುದು ನಮ್ಮಬಯಕೆ. ಈ ವಿಷಯಗಳಬಗ್ಗೆ ಬರೆಯುವವರು ಸಾಕಷ್ಟು ಜನ ಲೇಖಕರಿದ್ದರೂ ಅವರಿನ್ನೂ ನಮ್ಮ ಪತ್ರಿಕೆಗೆ ಬರೆಯುವ ಮನಸ್ಸು ಮಾಡಿಲ್ಲ. ಬಹುಶ: ಪತ್ರಿಕೆಯ ನಡೆಯನ್ನು ಕಾದುನೋಡುವ ಉದ್ದೇಶವಿದ್ದರೂ ಇರಬಹುದೇನೊ. ಈ ದಿಸೆಯಲ್ಲಿ ಬಹಳಷ್ಟು ಲೇಖಕರನ್ನು ಈಗಾಗಲೇ ಸಂಪರ್ಕಿಸಿ ಬರೆಯಲು ಕೋರಿದ್ದೇನೆ.ಜನಪ್ರಿಯತೆಗಾಗಿ ಸಂಗಾತಿ ತನ್ನಗುಣಮಟ್ಟ ಮತ್ತು ಸ್ವಂತಿಕೆಯನ್ನುಯಾವತ್ತಿಗೂ ಬಿಟ್ಟು ಕೊಡುವುದಿಲ್ಲೆಂದು ಈ ಮೂಲಕ ತಮಗೆ ಮನವರಿಕೆ ಮಾಡಿಕೊಡುತ್ತಿದ್ದೇನೆ. ಅದಕ್ಕೆ ತಕ್ಕಂತೆ ಹಿರಿಯ ಬರಹಗಾರರುಸಹ ನಮಗೆ ಬರೆಯುತ್ತಾರೆಂದು ಆಶಿಸುತ್ತೇನೆ ಕು.ಸ.ಮಧುಸೂದನರಂಗೇನಹಳ್ಳಿ

ಸಂಪಾದಕೀಯ Read Post »

ನಿಮ್ಮೊಂದಿಗೆ

ಕಾವ್ಯಯಾನ

ದಾರಿಯುದ್ದಕ್ಕೂ…… ಮುಗಿಲಕಾವ್ಯ ನೀ ಬರುವ ದಾರಿ ಉದ್ದಕ್ಕೂ ಒಲವಿನ ಹೂ ಹಾಸಿ ಗರಿಗೆದರಿದ ನನ್ನೊಳಗಿನ ಹೃದಯದ ಭಾವಗಳನ್ನು,,, ಒಪ್ಪವಾಗಿ ಜೋಡಿಸಿಕೊಳ್ಳುತ್ತಾ ಕಣ್ಣು ಕೀಲಿಸುತ್ತೇನೆ,, ಹಾದಿಯೂ ಒಮ್ಮೊಮ್ಮೆ ಸಿಟ್ಟಿಗೇಳುತ್ತದೆ ಅಲ್ಲಲ್ಲ ಕರುಬುತ್ತದೆ ನಿನ್ನ ಮೇಲಿನ ನನ್ನೊಲವಿನ ಕಂಡು ಇದರ ಮತ್ಸರ ಎಷ್ಟಿದೆ ಗೊತ್ತಾ? ಬೇಕೆಂತಲೇ ಭಾರವಾಗಿ ದೂರವಾಗಿ ಕ್ಷಣಗಳನ್ನು ಯುಗಗಳಾಗಿ ಮಾಡುತ್ತಾ,,, ಮತ್ತಷ್ಟು ನನ್ನ ಕಾಯಿಸಲು ಶುರುವಿಟ್ಟುಕೊಳ್ಳುತ್ತದೆ ಮೊದಮೊದಲಿಗೆ ನಾನು ಜಿದ್ದಿಗಿಳಿಯುತ್ತೇನೆ ಸೋಲಲಾರೆ ಎಂದೂ ನಿನ್ನ ಕಾಣುವ ತವಕ ಮೂಡಿದಂತೆಲ್ಲಾ ನಾನೇ ನಾನಾಗಿ ಸೋತುಬಿಡುತ್ತೇನೆ; ನಿನ್ನ ಸಂಧಿಸುವ ಗಳಿಗೆಯ ಮುಂದೆ ,,ನನ್ನ ಜಿದ್ದು ಮಂಡಿಯೂರಿ ಬಿಡುತ್ತದೆ,, ನಿನಗೋಸ್ಕರ ತಾನೇ ಎಂಬ ಭಾವ ಮೂಡಿ ಮನ ಸಮಾಧಾನಿಸಿಕೊಂಡು; ದಾರಿ ಉದ್ದಕ್ಕೂಕಣ್ಣು ಕೀಲಿಸುತ್ತದೆ ನೀನು ಈ ಹಾದಿಯಿಂದ ಎಂದೋ ಕವಲೊಡೆದು ಬಹುದೂರ ಸಾಗಿದ್ದರೂ ಮತ್ತೆ ದಾರಿಯಲಿ ಒಲವಿನ ಹೂ ಹಾಸಿ ಪ್ರೀತಿಸುವುದಷ್ಟೆ ಗೊತ್ತಿರುವ ಈ ಮನಸ್ಸು,,,, ದಾರಿ ಉದ್ದಕೂ ಕಣ್ಣುಕೀಲಿಸುತ್ತದೆ. ===========

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಮಿನುಗುವ ನಕ್ಷತ್ರ ಚೈತ್ರ ಶಿವಯೋಗಿಮಠ ಅಗೋ…. ಅಲ್ಲಿ ಮಿನುಗುವ ನಕ್ಷತ್ರ ನೀನೇ ಇರಬಹುದು ಅಪ್ಪ! ಪ್ರತಿ ಇರುಳು ಕಾಯುವೆ  ನಿನ್ನ ಬಾಂದಳದಲಿ ಕಾಣಲು! ಮಿಣುಗುವ ಚುಕ್ಕಿ ಸ್ಮೃತಿ  ಪಟಲವ ಕೆಣಕುವುದು! ನೀ ನನ್ನ ಆಡಿಸಿದ್ದು, ಟುವ್ವಿ ಟುವ್ವಿ ಎಂದು ಹಾಡಿದ್ದು ಕಣ್ಮರೆಯಾಗಿ ಕಾಡಿದ್ದು  ಮುಂಜಾನೆಯ ವಿಹಾರಕ್ಕೆ ಹೋಗಿದ್ದು ಸದ್ದು ಮಾಡುತ್ತಾ ಕಾಫಿ ಹೀರಿದ್ದು ಎಲ್ಲವೂ ಕಾಡುವುದು ಅಪ್ಪ! ಈ ನಕ್ಷತ್ರದಂತೆಯೇ ನೀನು ಕತ್ತಲು ಕವಿದಾಗ ದಾರಿ ತೋರುವೆ ಈ ಚುಕ್ಕಿಯಂತೆಯೇ ಆದೆ ನೀನು ಹಗಲೆಂಬ ಸಂತಸದಲಿ ಮಾಯವಾದೆ ಆದರೆ ಇರುಳೆಂಬ ಸಂಕಟದಲಿ ಆಸರೆಯಾಗುವೆ! ಹಗಲಲಿ ಮಾಯವಾದಂತೆನಿಸಿದರೂ  ನೀ ಇಲ್ಲೇ ಇರುವೆ ಕಣ್ಣಿಗೆ ಮಾತ್ರ ಕಾಣಲಾರೆ! ನಿನ್ನಿರುವ ನಾ ಮಾತ್ರ ಗ್ರಹಿಸುವೆ! ಅಪ್ಪ, ಈ ನಕ್ಷತ್ರದಂತೆಯೇ  ಸದಾ ಸಂತಸ ಕೊಡುವವ ನೀ!! =================================== ಪರಿಚಯ: ಮೂಲತಃ ಬಿಜಾಪುರ, ಬೆಂಗಳೂರಿನ ನಿವಾಸಿ.Mtech ಪದವಿಯನ್ನು VTU ವಿಶ್ವವಿದ್ಯಾಲಯದಿಂದ ಪಡೆದು, ವೃತ್ತಿಯಲ್ಲಿ ಸಾಫ್ಟವೇರ್ ಇಂಜಿನಿಯರ್ ಆದರೂ ಪ್ರವೃತ್ತಿಯಲ್ಲಿ ಕವಯಿತ್ರಿ.. ಕಾರ್ಯಕ್ರಮ ನಿರೂಪಣೆ, ಸಾಹಿತ್ಯಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಿರುವರು. ಸಾಹಿತ್ಯ ಪರಿಷತ್ತು ನಡೆಸುವ ಕನ್ನಡ ಕಾವ್ಯ ಪರೀಕ್ಷೆಯಲ್ಲಿ ಉತ್ತೀರ್ಣ. ಮುದ್ದೇಬಿಹಾಳ ತಾಲೂಕು ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿ ಹಾಗೂ ಇನ್ನಿತರ ಕವಿ ಗೋಷ್ಠಿಗಳಲ್ಲಿ ಭಾಗವಹಿಸಿರುವರು. ಅವಧಿ  – ಡಿಜಿಟಲ್ ಮ್ಯಾಗಝಿನ್, ಸುಗಮ – ಬ್ಲಾಗ್ಸ್ಪಾಟ್, ಪ್ರಜಾವಾಣಿ, ಸಂಯುಕ್ತ ಕರ್ನಾಟಕ, ಪ್ರಜಾಪ್ರಗತಿ, ವಾರ್ತಾಭಾರತಿ, ಕರ್ಮವೀರ ಹಾಗೂ ಜನತಾವಾಣಿ ಪತ್ರಿಕೆಗಳಲ್ಲಿ ಕವನಗಳು ಪ್ರಕಟವಾಗಿವೆ.

ಕಾವ್ಯಯಾನ Read Post »

ಕಥಾಗುಚ್ಛ

ಕಥಾಗುಚ್ಛ

ಹಬ್ಬ ಪ್ರೀತಿಯನ್ನು ಹಬ್ಬಿದರೆ ಸುಮಂಗಳ ಮೂರ್ತಿ ಬಾನುಮತಿ ಈ ಸಾರಿ ವಿಜಯದಶಮಿಯನ್ನು ವಿಶೇಷವಾಗಿ ಆಚರಿಸಬೇಕು, ಅದು ನಮ್ಮ ಕುಟುಂಬದವರಿಗೆ ಮತ್ತು ಬಂದ ಬಂಧು ಬಳಗದವರಿಗೆ ಖುಷಿ ಕೊಡುವ ಹಾಗೆ ಇರಬೇಕು,ಎಂದು ಯೋಚಿಸುತ್ತಿದ್ದ ಅವಳು,ಖರ್ಚಿನ ಬಗ್ಗೆಯೂ ನಿಗಾವಹಿಸಬೇಕಿತ್ತು. ಅವಳು ಒಂದು ಮಧ್ಯಮವರ್ಗದ ಕುಟುಂಬಸ್ಥೆ ಎನ್ನುವುದು ಮರಿಯೋ ಆಗಿಲ್ಲ .          ಬಾನುಮತಿಗೆ ಮದುವೆಯಾದ ನಂತರದ ಮೊದಲನೇ ವಿಜಯದಶಮಿ, ಹಾಗಾಗಿ ಗಂಡನ ಮನೆಯ ಪದ್ಧತಿಗಳು ಅವಳಿಗೆ ಅಷ್ಟಾಗಿ ಏನು ತಿಳಿದಿರಲಿಲ್ಲ. ಆ ಕಾರಣದಿಂದ ಅವಳ ಅತ್ತೆಯ ಸಲಹೆ ಕೇಳಿ ಅವರ ಸಲಹೆಗಳನ್ನು ಪಾಲಿಸಿದರೆ ಮತ್ತಷ್ಟು ಚಂದ ಎಂದು ಯೋಚಿಸುತ್ತಾ,ಸಂಜೆಯ ಕಾಫಿ ತಯಾರಿಸಿ, ಯಾವುದೋ ನ್ಯೂಸ್ ಚಾನಲ್ ನೋಡುತ್ತಿದ್ದ ಮಾವನವರಿಗೆ,ಮೊಬೈಲ್ ನೋಡುತ್ತಿದ್ದ ಗಂಡನಿಗೆ,ಪೂಜೆಗೆಂದು ಹೂ ಕಟ್ಟುತಿದ್ದ ಅತ್ತೆಯವರಿಗೆ ಕೊಟ್ಟು,ತಾನು ಕುಡಿಯುತ್ತಾ ಅತ್ತೆಯ ಬಳಿ ಕೂತಳು.           ಬಾನುಮತಿಯ ಕೆಲಸದ ವೈಖರಿ,ಅವಳ ಅತ್ತೆಗೆ ಬಹಳ ಇಷ್ಟವಾಗಿತ್ತು.ಬಾನುಮತಿ ಮನೆಗೆ ಬಂದ ಸ್ವಲ್ಪ ದಿನಗಳಲ್ಲಿಯೇ ಮನೆಯವರನ್ನೆಲ್ಲ ಬಹಳ ಚೆನ್ನಾಗಿ ಅರ್ಥಮಾಡಿಕೊಂಡು,ಹೊಂದಿಕೊಂಡಿದ್ದಳು. ಸಮಯ ಸಿಕ್ಕಾಗೆಲ್ಲ ಕನ್ನಡ ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಂಡಿದ್ದ ಅವಳಿಗೆ, ಪುಸ್ತಕಗಳೆಂದರೆ ಎಲ್ಲಿಲ್ಲದ ಪ್ರೀತಿ. ಅವಳು ಮೊದಲಿನಿಂದಲೂ ಯಾರಿಗಾದರೂ ಉಡುಗೊರೆ ಕೊಡಬೇಕಾದರೆ ಪುಸ್ತಕವನ್ನೇ ಕೊಡುವುದು ಅವಳ ರೂಢಿಯಾಗಿತ್ತು.ಈ ಬಾರಿ ಹಬ್ಬಕ್ಕೆ ತಾಂಬೂಲದೊಂದಿಗೆ ಪುಸ್ತಕಗಳನ್ನ ಕೊಡಬೇಕು,ಆದರೆ ಅತ್ತೆಯವರು ಏನೇಳುತ್ತಾರೋ ಎಂಬ ಯೋಚನೆಯಿಂದ,ಈ ಕುರಿತು ಅತ್ತೆಯ ಜೊತೆ ಮಾತನಾಡಬೇಕೆಂದು ಅವಳ ಮನಸ್ಸಿನಲ್ಲೇ ಆಲೋಚಿಸುತ್ತಿರುತ್ತಾಳೆ.ಅಷ್ಟರಲ್ಲಿಯೇ, ಬಾನು ನಿನ್ನ ತವರಲ್ಲಿ ವಿಜಯದಶಮಿ ಹಬ್ಬವನ್ನ ಹೇಗೆ ಆಚರಿಸುತ್ತಿದ್ದರು? ಎಂದ ಅತ್ತೆಯ ಪ್ರಶ್ನೆಗೆ ಬಾನುಮತಿ,ಹೀಗೆ ಇಲ್ಲಿಯ ರೀತಿಯೇ ಅತ್ತೆ ಶರನ್ನವರಾತ್ರಾರಂಭ ದಿಂದ ವಿಜಯದಶಮಿಯ ವರೆಗೆ ಒಂದೊಂದು ಶಕ್ತಿ ದೇವತೆಯ ಆರಾಧನೆ,ಮುತ್ತೈದೆಯರಿಗೆ ಕುಂಕುಮ ಪ್ರಸಾದ ಕೊಡುವುದು, ನಾನು ಪ್ರತೀ ಬಾರಿ ಕುಂಕುಮದೊಂದಿಗೆ ಕನ್ನಡ ಪುಸ್ತಕಗಳನ್ನು ಕೊಡುತ್ತಿದ್ದೆ.ಅತ್ತೆ ನೀವು ಒಪ್ಪುವುದಾದರೆ ಪುಸ್ತಕಕೊಡುವ ನನ್ನ ಅಭ್ಯಾಸವನ್ನ ಮುಂದುವರಿಸಲೇ ?ಎಂದ ಬಾನುಮತಿಯ ಮಾತಿಗೆ ಖಂಡಿತ ಬಾನು ಇದು ತುಂಬ ಒಳ್ಳೆಯ ಅಭ್ಯಾಸ ಮುಂದುವರೆಸು ಎನ್ನುತ್ತಾ ಮುಗುಳ್ನಗೆ ಬೀರಿದರು.           ಅತ್ತೆಯ ಸಮ್ಮತಿಗೆ ಖುಷಿಯಾದ ಬಾನುಮತಿ,ಮನದಲ್ಲೇ ಅತ್ತೆಯೂ ಅಮ್ಮನಂತೆಯೇ ನೋಡು ಇದಕ್ಕೆ ಹೇಳುವುದು, “ಪ್ರೀತಿ ಹಂಚಬೇಕು ಯಾವುದೇ ನಿರೀಕ್ಷೆ ಇಲ್ಲದೆ,ಆಗ ಹಂಚಿದಕ್ಕಿಂತ ಹೆಚ್ಚಿನ ಪ್ರೀತಿಯೇ ದಕ್ಕುತದೆ ” ನನ್ನ ಈ ಹೊಸ ಬದುಕಿನಲ್ಲೂ ಅಮ್ಮ ಜೊತೆಗಿದ್ದಾಳೆ,ಹೀಗೆ ಮನಸ್ಸಿನಲ್ಲೇ ಖುಷಿಪಡುತ್ತಿದ್ದ ಬಾನುಮತಿಯ ಅರಳಿದ ಮುಖ  ಹೊಳೆಯುವ ಚಂದ್ರನೂ ನಾಚುವಂತೆ ಕಂಗೊಳಿಸುತ್ತಿತ್ತು.              ಬಾಂಧವ್ಯ ಅಂದರೆ ಇದೇ ಅಲ್ಲವೇ,ಪರಸ್ಪರ ಹೊಂದಾಣಿಕೆ. ಬಾನುಮತಿಯ ಉತ್ತಮ ನಡುವಳಿಕೆ ಕನ್ನಡ ಸಾಹಿತ್ಯ ಓದುವುದರಿಂದ ಬಂದಿದೆ ಎಂದರೆ ತಪ್ಪಾಗಲಾರದು.           ಸಾಮಾನ್ಯವಾಗಿ ಒಂದಿಬ್ಬರು ಮೂರು ಹೆಂಗಸರು ಮಾತನಾಡಲು ಶುರುಮಾಡಿದ್ರೆ,ಇಡೀ ಒಂದು ಬಡಾವಣೆಯ ವಿಚಾರಗಳು ಬಿತ್ತರಿಕೆಯಾಗುವುದನ್ನ ಕಾಣಬಹುದು,ಅದರಲ್ಲಿ ಬೇರೊಬ್ಬರ ಕಾಲೆಳೆಯೊ ವಿಷಯಗಳೇ ಹೆಚ್ಚಾನ್ಹೆಚ್ಚು.ಇಂತಹ ಮಾತುಗಳಿಗೆ ಅವಕಾಶ ನೀಡದಂತ ಸ್ವಭಾವದವಳು ಬಾನುಮತಿ.ಹಬ್ಬ ಪ್ರೀತಿಯನ್ನ ಹಬ್ಬಿಸಬೇಕು,ಮನಗಳನ್ನ ತಣಿಸಬೇಕು,ಎನ್ನುವುದಷ್ಟೆ ಇವಳ ಹರಿಕೆ.        ಓ…ಹಬ್ಬದ ತಯಾರಿಯಲ್ಲಿ  ಮಗ್ನಳಾದ ಬಾನು,ಎಲ್ಲವನ್ನು ಅಚ್ಚುಕಟ್ಟಾಗಿ ಸಿದ್ಧಪಡಿಸಿದ್ದಾಳೆ,ಆದರೆ ಚಾಪೆ ಇದ್ದಷ್ಟು ಕಾಲುಚಾಚು ಎಂಬ ಗಾದೆ ಮಾತಿಗೆ ವಿರುದ್ಧವೇನೂ ಅಲ್ಲ. ಮತ್ತು ಅತ್ತೆ ಸೊಸೆ ಇಬ್ಬರು ಹಬ್ಬಕ್ಕೆ ದೂರದ ಬಂಧು ಮಿತ್ರರನ್ನ,ಫೋನ್ ಮೂಲಕ ಕರೆಯುತ್ತಾರೆ,ಮನೆಯ ಅಕ್ಕಪಕ್ಕದವರನ್ನೆಲ್ಲ ಖುದ್ದಾಗಿ ಹೋಗಿ ಕರೆಯುತ್ತಾರೆ.ಇವರ ಪ್ರೀತಿಯ ಕರೆಗೆ ಯಾರು ಬಾರದೆ ಉಳಿಯಲಿಲ್ಲ.           ಬಾನುಮತಿಯ ಮನೆ ಸಂಮೀಪಿಸುತ್ತಿದ್ದಂತೆ, ಅವಳ ಮನೆಯಂಗಳದ ಪುಟ್ಟ ಹಣತೆಗಳ ಬೆಳಗು ನಕ್ಷತ್ರಗಳ ಮಿಂಚಿನಂತೆ ಜಗಮಗಿಸುತ್ತಿರುವುದು ಕಣ್ಣಿಗೆ ದೇವಾಲಯದಂತೆ ಕಾಣುತ್ತದೆ.ಹಾಗೇ ಮನೆಯಂಗಳದ ಹೂವುಗಳರಳಿದ ಹಸಿರು ಕಾಶಿಗೆ ಇಬ್ಬನಿ ಮುತ್ತಿಕ್ಕಿದೆ, ಹಣತೆಗಳ ಬೆಳಗಿಗೆ,ಹೊಂಬಣ್ಣದ ಹನಿಗಳು ಪನ್ನೀರಿನಂತೆ ಜಿನುಗಿ ಮೈಮನ ಪುಳಕಗೊಂಡಂತೆ ಭಾಸವಾಯ್ತು.           ಬಂದವರನ್ನ ಪ್ರೀತಿಯಿಂದ ಮಾತನಾಡಿಸಿ,  ‘ಬನ್ನಿ’ ಬೆಳಕಾಗಲಿ,ಪ್ರೀತಿ ಬದುಕಾಗಲಿ. ಎಂದು ನುಡಿಯುತ್ತಾ ,ಕುಂಕುಮ ಹಚ್ಚಿ, ಪ್ರಸಾದದ ಜೊತೆ ಕನ್ನಡ ಪುಸ್ತಕ ಕೊಟ್ಟು,ಬಿಡುವಿನ ಸಮಯದಲ್ಲಿ ಓದಿ ಎಂದು ಅಕ್ಕರೆ ಹರಿಸಿದ ಬಾನುಮತಿಯ ಮಾತು,ಮತ್ತಷ್ಟು ಹಿತವೆಸಿತ್ತು.     ==================================== ಪರಿಚಯ: Spoken English faculty ಆಗಿ 12 ವರ್ಷಗಳಿಂದ ಕೆಲಸಮಾಡುತ್ತಿದ್ದಾರೆ.ಬಾಲ್ಯದಿಂದಲೇ ಕನ್ನಡ ಸಾಹಿತ್ಯವನ್ನ ಬರೆಯುವ ಮತ್ತು ಓದುವುದು ಹವ್ಯಾಸ. ಕಥೆ, ಕವಿತೆ,ಗಜಲ್,ವಚನ,ಲೇಖನ ಬರಹಗಳನ್ನು ಬರೆಯುತ್ತಿರುತ್ತಾರೆ.2013 ರಲ್ಲಿ Kannada to English dictionary ಬರೆದಿರುವ ಇವರ ಕವನ ಸಂಕಲನ “ಖಾಲಿಹಾಳೆ”ಬಿಡುಗಡೆಗೆ ಸಿದ್ಧವಾಗಿದೆ

ಕಥಾಗುಚ್ಛ Read Post »

ಕಾವ್ಯಯಾನ

ಕಾವ್ಯಯಾನ

ಗಾಯಗಳ ಎಣಿಸುತ್ತಲೇ! ದೀಪಾಜಿ ಮಾತಿಗೊಮ್ಮೆ ತುಟಿಕಚ್ಚಿ  ಹೀಗೆಂದರೆ ಎಲ್ಲಿ ಬಿಟ್ಟು ಹೋದಾನೊ ಹಾಗೆಂದರೆ ಎಲ್ಲಿ ಬಿಟ್ಟು ಹೋದಾನೊ ಎಂಬ ದುಗುಡದಲ್ಲೆ ಕಳೆದೆ ಅಷ್ಟು ದಿನಗಳನ್ನ.. ಹೆಜ್ಜೆ ಹೆಜ್ಜೆಗೊಮ್ಮೆ ಹೆಜ್ಜೇನು ಸುರಿದು ಬಾಯಿಗೆ ಸೆರಗ ಒತ್ತಿ ದುಃಖ ಉಮ್ಮಳಿಸಿದಾ -ಗೆಲ್ಲ ಹುಸಿ ನಗುವನ್ನೆ ಹೊರಚೆಲ್ಲಿ ನೋವೆಲ್ಲ ಪಕ್ಕಡಿಗೆ ಸರಿಸುತ್ತಲೆ ಕಳೆದೆ ಅಷ್ಟು ದಿನಗಳನ್ನ.. ಉಸಿರು ಬಿಟ್ಟುರು ಸಾಕು ಹೆಡೆಎತ್ತಿ ಬುಸುಗುಡುತ್ತೀ ಪ್ರೇಮ ಸರಸ ಸಮರಸ ಕಲ್ಪಸಿದವಳಿಗೆ ಸಿಕ್ಕಿದ್ದು ಬರಿಯ ಹಾಲಾಹಲ ನಿನ್ನ ಸಿಟ್ಟುರಿಯ ಹರಿವು ಅಸಮಾಧಾ -ನದ ಕೋಲಾಹಲ ಸಹಿಸುತ್ತಲೇ ಬಂದೆ ಅಷ್ಟು ದಿನಗಳನ್ನ ಅಕ್ಕರೆಯ ಸವಿಬೆಲ್ಲ ನೀ ಹರೆಸಲಿಲ್ಲ ಅನ್ನಕ್ಕೇನು ಕೊರತೆ ಮಾಡಲಿಲ್ಲ ಆದರೆ ನೀ ಹುಡುಕಿದ್ದು ಮೊಸರೊಳಗಿನ ಕಲ್ಲ, ಆ ಕಲ್ಲು ಇಲ್ಲವೆನ್ನುತ್ತಲೆ ಕಳೆದೆ ಅಷ್ಟು ದಿನಗಳನ್ನ ಕರುಣೆ ಕಕ್ಕಲಾತಿಗಳೇನು ಬೇಡ ಆದರೆ ಸಹಿಸುತ್ತ ಸವರುತ್ತ ಬಂದಿ -ರುವುದು ಬೆನ್ನ ಮೇಲಿನ ಬಾಸುಂಡೆಗಳನೆ ಗಾಯಗಳ ಎಣೆಸುತ್ತಲೆ ಕಳೆದೆ ಅಷ್ಟು ದಿನಗಳನ್ನ ಮಕ್ಕಳು ನಿನ್ನ ಹೋಲುವುದೆ ಇಲ್ಲವೆಂದು ಹೊಡೆದು ಬಡೆದು ಹಾಕುತ್ತೀ ,ನಶೆ ಎರುವ ಮುಂಚೆ ಮನೆಗೆ ಬಂದರೆ ತಿಳಿದೀತು ಹೋಲಿಕೆ,ಗರ್ತಿಯ ತಲೆಗೆ ಅಪಚಾರದ ಪಟ್ಟ  ಕಟ್ಟುತ್ತಲೆ ಬಂದಿ ಅದ ಕೇಳುತ್ತಲೆ ಉಳಿದೆ ಅಷ್ಟು ದಿನಗಳನ್ನ ಗಂಡಬಿಟ್ಟವಳೆಂದು ಅವರಿವರೆಂದಾರೆಂದು ನಿನ್ನ ಸಹಿಸುವುದು ದಂಡವೇ ಸರಿ ಗಂಡನಿಲ್ಲದಿದ್ದರು ಅದೆಂಥ ವೈನಾಗಿ ಬದುಕಿದಳೆನ್ನುವಂತೆ ಕಳೆಯುವೆ ಇನ್ನೂಳಿದ ಅಷ್ಟು ದಿನಗಳನ್ನ… ================= ಪರಿಚಯ: ಅಂಚೆಇಲಾಖೆಯಲ್ಲಿ ವೃತ್ತಿ, ಓದು, ಬರವಣಿಗೆ ಹವ್ಯಾಸ

ಕಾವ್ಯಯಾನ Read Post »

ಕಾವ್ಯಯಾನ

ತಂತಿಯೊಳಗಣ  ಶಬ್ದ !

ಕಾವ್ಯ ಸಂಗಾತಿ ತಂತಿಯೊಳಗಣ  ಶಬ್ದ ! ಬಿದಲೋಟಿ ರಂಗನಾಥ್ ನಾನು ಶರಾಬಿನ ದಾಸ ಘಟಶೋಧನೆಯಲ್ಲಿನ ಬಂಧವನ್ನು ಹುಡುಕುತ್ತಲೇ ಹೋದೆ ಅವನ ನೆರಳಿತ್ತು ಅವಳ ಒಲವಿತ್ತು ನಾನೇ ಇರಲಿಲ್ಲ. ಶೋಧಿಸಿಸಲು ಎದೆಗೂಡಲ್ಲಿದ್ದ ಹಂಸದ ನಡಿಗೆಯ ಹೆಜ್ಜೆಯ ಸುತ್ತಿ ಹೊಲೆದ ಪಾಪದ ಮೂಟೆಯ. ತಿರುಗಿದೆ ಕಾಡು –ಮೇಡು ಬೆಟ್ಟ ಕಣಿವೆ ಕಂದರ ನಾ ಬಯಸಿದ್ದು ಸಿಗಲಿಲ್ಲ ಧ್ಯಾನದ ಹೆಜ್ಜೆ ಮುಟ್ಟಿ ನೋಡಿದೆ ಸಕಲವೂ ನನ್ನೊಳಗೇ ಇತ್ತು ತಂತಿ ಮೀಟಿದ ಶಬ್ದ ನಿಜದ ನೆಲೆಯ ಬದುಕಿಗೆ ದಾರಿ ತೋರಿ ಬಯಲ ಪದಗಳು ಮುತ್ತಿದವು  ಎದೆಯ ತುಂಬಾ.. ಸಣ್ಣ ಬೆಳಕಿನ ದಾರಿ ಮೇಲೆ ಕಂಡು ಕಾಣದ ಹಂಸದ ನಡಿಗೆ ಬೆನ್ನ ಹಿಂದಿನ ಸತ್ಯ ನಿರಾಕಾರದಲಿ ಮಿಥ್ಯವ ಸುಟ್ಟು ನಡೆಯುತ್ತಲೇ ಹೋಯಿತು ಗೋಡೆಗಳಿಲ್ಲದ ಬಯಲ ಹರಸಿ ಯಾರೂ ಇರಲಿಲ್ಲ ನನ್ನೊಳಗೆ ನನ್ನವರು ಶರಾಬೇ ಸೌತಿ ಓಂಕಾರದೋಳಗಿನ ಗುಂಡಿಯ ಶೋಧಿಸುತ ಹಂಸ ಗೋರಿಯಾಯಿತು ತನ್ನೊಳಗೆ ಇಷ್ಟು ದಿನವಿದ್ದು ಒಂದು ಸುಳಿವೂ ಕೊಡದೆ. ತಂತಿಯೊಳಗಣ ಶಬ್ಧ ಮಾತ್ರ ಪಂಚಾಕ್ಷರಿಯ ನುಡಿಯುತ್ತಲೇ ಇತ್ತು ಗೂಡು ಬಯಲಾಗುತ್ತ… ===============

ತಂತಿಯೊಳಗಣ  ಶಬ್ದ ! Read Post »

ಇತರೆ

ಲೇಖನ

ಆ ದೃಶ್ಯಗಳನ್ನು ಅಲಂಕರಿಸಿ ಹಂಚುತ್ತಿದ್ದಾರೆ! ಪಿಎಂ ಇಕ್ಬಾಲ್ ಕೈರಂಗಳ ಕೆಲವು ದೌರ್ಜನ್ಯದ ವಾರ್ತೆಗಳು, ವೀಡಿಯೋಗಳು FB ಮತ್ತು ವಾಟ್ಸಪಲ್ಲಿ ಷೇರು ಆಗಿ ನಮ್ಮ ಕಣ್ಣಿಗೆ ಬೀಳುತ್ತಿರುವುತ್ತವೆ. ನೋಡಕ್ಕಾಗದೇ ನೋಡುತ್ತೇವೆ. ಆಗೆಲ್ಲಾ ಮನಸ್ಸು ವಿಪರೀತ ಹರ್ಟುಗೊಳ್ಳುತ್ತದೆ. ಹೃದಯವನ್ನು ಯಾರೋ ಹಿಂಡಿದಂತಾಗುತ್ತದೆ. ಕೆಲವು ನಮ್ಮನ್ನು ಅಳಿಸಿಯೇ ಬಿಡುತ್ತವೆ. ವಿಕೃತ ಮನಸ್ಸಿನ ಪೈಶಾಚಿಕ ಮನುಷ್ಯರ ವಿರುದ್ಧ ರಕ್ತ ಕುದಿಯುತ್ತದೆ. ಅವರನ್ನು ಜೀವಂತ ಸುಡಬೇಕೆಂದು ಅನಿಸುತ್ತದೆ. ಕ್ರೌರ್ಯ, ದೌರ್ಜನ್ಯಗಳ ತಾಕತ್ತೇ ಹಾಗೆ. ಒಂದೆರಡು ನಿಮಿಷದ ವಾರ್ತೆಯಾಗಿ ಅಥವಾ ವೀಡಿಯೋ ಆಗಿ ಸಿಕ್ಕರೆ ನಮಗೆ ಹೀಗಾಗುತ್ತವೆ. ಅವನ್ನು ಅನುಭವಿಸಿದ ಆ ಜೀವಗಳ ಪರಿಸ್ಥಿತಿಯೆಷ್ಟು ಘೋರ ಇದ್ದೀತು! ಉಹುಂ, ಕಲ್ಪನೆ ಮಾಡೋಕೂ ಆಗುವುದಿಲ್ಲ. ಈ ಲೋಕವೇ ಬೇಡ, ಲೋಕವು ಒಮ್ಮೆ ಅವಸಾನ ಕಾಣಲಿ ಎಂದು ಅನಿಸುತ್ತದೆ. ಇತ್ತೀಚೆಗೆ ಹೊಸ ಬೆಳವಣಿಗೆಯೊಂದು ಕಾಣಸಿಗುತ್ತಿವೆ. ಗಾಯಕ್ಕೆ ಬರೆ ಹಾಕುವುದು ಅನ್ತಾರಲ್ಲಾ ಹಾಗೆ. ದೌರ್ಜನ್ಯಗಳ ವೀಡಿಯೋಗಳ ಜೊತೆಗೆ ಕೋಮುಪ್ರಚೋದಿತ ಕೆಲವು ವಾಕ್ಯಗಳು ಸೇರಿ ಷೇರ್ ಆಗುತ್ತಿವೆ. ‘ತಮ್ಮ ಧರ್ಮೀಯರ ವಿರುದ್ಧ ಇಂತಹ ಧರ್ಮೀಯರ ದೌರ್ಜನ್ಯ ಇದು’ ಎನ್ನುತ್ತಾ ಒಂದಷ್ಟು ವಾಕ್ಯಗಳು ಇರುತ್ತವೆ. ಕೆಲವು ವಾಕ್ಯಗಳಂತೂ ಅತಿ ಅಸಹ್ಯವಾಗಿರುತ್ತವೆ. ‘ಕೋಮು ಅಸಹನೆಯನ್ನು ಪ್ರಚೋದಿಸುವುದೇ ಧರ್ಮರಕ್ಷಣೆ’ಯೆಂಬ ವ್ಯಾಧಿಗೆ ತುತ್ತಾದವರು ಕಂಡುಕೊಂಡ ಹೊಸ ಫಾರ್ಮುಲಾ ಇವು. ಒಂದೇ ವೀಡಿಯೋ ಒಂದು ಕಡೆ ಮುಸ್ಲಿಮರ ಮೇಲಿನ ಹಿಂದೂಗಳ ದೌರ್ಜನ್ಯವಾಗಿಯೂ, ಮತ್ತೊಂದು ಕಡೆ ಹಿಂದುಗಳ ಮೇಲಿನ‌ ಮುಸ್ಲಿಮರ ದೌರ್ಜನ್ಯವಾಗಿಯೂ ಬರೆಯಲ್ಪಟ್ಟು ಷೇರ್ ಆಗುತ್ತಿರುವುದು ನನ್ನ ಗಮನಕ್ಕೆ ಎಷ್ಟೋ ಬಂದಿದೆ. ವೀಡಿಯೊ- ಫೋಟೋಗಳಲ್ಲಿರುವ ಬರ್ಬರತೆಯೇ ಸಾಕಾಗುತ್ತೆ ನಮ್ಮ ಮನಸ್ಸನ್ನು ಗಾಯಗೊಳಿಸಿಬಿಡಲು. ಇಂತಹ ಬರಹಗಳು ಗಾಯದ ಮೇಲಿನ ಬರೆಯಾಗಿ ಪರಿಣಮಿಸುತ್ತದೆ. ಅಂತಹ ವೀಡಿಯೋಗಳಲ್ಲಿ ಕಾಣುವ ಕ್ರೂರಿಗಳದ್ದು ಒಂದು ಮನಸ್ಥಿತಿಯಾದರೆ ಅವನ್ನು ಕೋಮು ಅಸಹನೆಗೆ ಉಪಯೋಗಿಸಲು ಉದ್ರೇಕಕಾರಿಯಾಗಿ ಬರಹದೊಂದಿಗೆ ಅಲಂಕರಿಸುವವರದ್ದು ಇನ್ನೊಂದು ಮನಸ್ಥಿತಿ. ವೀಡಿಯೋ ಜೊತೆಗೆ ಇರುವ ಬರಹ ಕನ್ಫರ್ಮಾ, ಬಹುಶ ಕನ್ಫರ್ಮು ಆದರೂ ಅದು ಆ ಪುಂಡರ ಹೆಸರು ಪ್ರತಿನಿಧಿಸುವ ಧರ್ಮದ ಎಲ್ಲರ ಕೃತ್ಯವಾ ಎಂದು ಯೋಚಿಸುವ ಗೋಜಿಗೇ ಹೋಗದೇ ಹಾಗೇ ಷೇರ್ ಮಾಡುವವರದ್ದು ಮತ್ತೊಂದು ಮನಸ್ಥಿತಿ. ಇಂತಹ ಕೋಮೋದ್ರೇಕ ಬರಹದೊಂದಿಗಿನ ವೀಡಿಯೋಗಳನ್ನು ನಾನು ವರ್ಷಗಳಿಂದ ನೋಡುತ್ತಿದ್ದೇನೆ. ಅವುಗಳಲ್ಲಿರುವ ಸಂತ್ರಸ್ತರ ಪರವಾಗಿ ಮನಸ್ಸು ಮರುಗಿ, ಆ ರಾಕ್ಷಸರ ವಿರುದ್ಧವಾಗಿ ರೋಷ ಉಕ್ಕುತ್ತದೆಯೇ ಹೊರತು ಬರಹವನ್ನು ನಂಬಿ ಆ ಕೆಟ್ಟವರ ಹೆಸರುಗಳು ಪ್ರತಿನಿಧಿಸುವ ಧರ್ಮದ ಮೇಲೋ, ಧರ್ಮೀಯರ ಮೇಲೋ ಅಸಹನೆ ಒಮ್ಮೆಯೂ ಬಂದದ್ದಿಲ್ಲ. ವಾಟ್ಸಪ್, fbಯಲ್ಲಿ ವೀಡಿಯೋ ಜೊತೆ ಅಂತಹ ಬರಹ ಷೇರ್ ಮಾಡಿದವರೊಂದಿಗೆ ನನ್ನ ರಿಯಾಕ್ಟು, “ಈ ಘಟನೆಯ ರಾಕ್ಷಸರ ಮತ್ತು ಸಂತ್ರಸ್ತರ ಧರ್ಮ ಯಾವುದೆಂದು ನಿಮಗೆ ಕನ್ಫರ್ಮಾ, ಕನ್ಫರ್ಮಾದರೆ ಹೇಗೆ? ಇರೋದನ್ನು ಹಾಗೇ ನಂಬಿ ಷೇರ್ ಮಾಡಬೇಡಿ. ವೀಡಿಯೋವನ್ನು ಷೇರ್ ಮಾಡುವುದಾದರೆ ಅದರ ಜೊತೆಗಿರುವ ಬರಹವನ್ನು ದಯವಿಟ್ಟು ಅಳಿಸಿ’ ಎಂದಾಗಿರುತ್ತದೆ. ‘ಬಹುಶ ವೀಡಿಯೋ ಜೊತೆಗಿರುವ ಬರಹ ಪ್ರಕಾರ ಅದು …ಇಂತಹ ಧರ್ಮೀಯರು ಎಂಬುದು ನಿಮಗೆ ಪಕ್ಕಾ ಆದರೂ ಅದಕ್ಕೆ ಅವರ ಇಡೀ ಧರ್ಮೀಯನ್ನು ಹೊಣೆಗಾರರನ್ನಾಗಿ ಮಾಡಬೇಡಿ” ಎಂದೂ ಹೇಳುತ್ತೇನೆ. ಕೆಲವರು ನನ್ನ ಮಾತನ್ನು ಅನುಮೋದಿಸಿದರೆ ಕೆಲವರು ಜಗಳಕ್ಕೆ ನಿಂತದ್ದು ಇವೆ. ಜಗಳ ಮಾಡಿದವರಲ್ಲಿ ನಾನು “ ‘ನಿಮ್ಮ ಅರಿವು ನಿಜವೇ ಆದರೂ ಲೋಕದಲ್ಲಿ ಕಾಣುವ ಅಮಾನುಷ ಕಾರ್ಯಗಳನ್ನೆಲ್ಲ ಒಮ್ಮೆ ಪಟ್ಟಿ ನೋಡಿ. ಆ ಕೃತ್ಯಗಳ ಇಡೀ ಧರ್ಮೀಯರನ್ನೋ ಅಥವಾ ಸಿದ್ಧಾಂತವನ್ನೋ ಹೇಗೆ ಅಪರಾಧಿ ಮಾಡೋಕ್ಕಾಗುತ್ತೆ? ಹಾಗೆ ಮಾಡೋದಾದರೆ ಲೋಕದ ಅಷ್ಟೂ ಧರ್ಮ, ಸಿದ್ಧಾಂತಗಳನ್ನು ಅಪರಾಧಿ ಮಾಡಲೇಬೇಕಾಗುತ್ತದೆ ಎಂಬುದು ನಮಗೆ ಗೊತ್ತಿರಲಿ” ಎನ್ನುತ್ತೇನೆ. ಹೆಚ್ಚಿನವರು ಕನ್ವಿನ್ಸು ಆಗ್ತಾರೆ. ತೊಟ್ಟಿಲ ಮಗುವನ್ನೂ ಹೆಣವನ್ನೂ, ಪ್ರಾಣಿಯನ್ನೂ ರೇಪು ಮಾಡುವವರಿದ್ದಾರೆ. ಸ್ವಂತ ಕರುಳ ಕುಡಿಯನ್ನೇ ಕೊಲ್ಲುವ ತಾಯಿ, ಅಪ್ಪನನ್ನೇ ಕೊಲ್ಲುವ ತಂದೆ, ಸೋದರಿಯನ್ನೇ ಬಲಾತ್ಕರಿಸುವ ಸೋದರ, ನಿಧಿಗಾಗಿ ತಾಯಿಯನ್ನೇ ಬಲಿ ಕೊಡುವ ಮಗ, ಹತ್ಯಾ ಸರಮಾಲೆಯನ್ನೇ ಮಾಡುವ ಸರಣಿ ಹಂತಕ…‌ಹೀಗೆ ನಾವು ನ್ಯೂಸುಗಳನ್ನು ಕೇಳುತ್ತಿದ್ದೇವೆ. ಇಂತಹ ಕೃತ್ಯಗಳಲ್ಲಿ ಅಪರಾಧಿಗಳ ಹೆಸರು ನೊಡಿ.. ಎಲ್ಲಾ ಧರ್ಮಗಳಲ್ಲಿರುವ ಹೆಸರಿನವರಿಂದಲೂ ಅಪರಾಧ ನಡೆಯುತ್ತವೆ. ಆದರೆ ಆಕಸ್ಮಾತ್ ಕೆಲವು ಸಂದರ್ಭಗಳಲ್ಲಿ ಅಪರಾಧಿ ಮತ್ತು ಅಪರಾಧಗೊಳಪಟ್ಟವರ ಧರ್ಮ ಬೇರೆ ಆಗಿರುತ್ತವೆ! ಅಪರಾಧಗೊಳಪಟ್ಟವರು ಮತ್ತು ಅಪರಾಧಿಗಳು ಒಂದೇ ಧರ್ಮದವಾದರೆ ಅವು ಆ ಅಪರಾಧಿಗಳ ಮಾತ್ರ ಕೃತ್ಯಗಳಾಗಿಯೂ, ಅಪರಾಧಗೊಳಪಟ್ಟವರು ಅಪರಾಧಿಗಳ ಧರ್ಮದವರಲ್ಲವಾದರೆ ಆ ಕೃತ್ಯಗಳು ಅಪರಾಧಿಗಳ ಧರ್ಮೀಯರ ಎಲ್ಲರ ಕೃತ್ಯಗಳಾಗಿಯೂ ಆಗಿ ನಮಗೆ ಕಾಣೋದು ಯಾವ ನ್ಯಾಯ? ನಾವು ಯಾವ ಮನಸ್ಥಿತಿಯಲ್ಲಿ ಹೂತುಹೋಗಿದ್ದೇವೆ? 99 ಪರ್ಸೆಂಟ್ ಜನರು ಸತ್ಯ, ನ್ಯಾಯದ ದಾರಿಯಲ್ಲಿ‌ಸಾಗಿ ಭಗವಂತನ ಕೃಪೆ ಸಿಗಬೇಕೆಂದು ಬಯಸಿ ಆ ಉದ್ದೇಶಕ್ಕಾಗಿ ಅವರು ಹುಟ್ಟಿದ ಧಾರ್ಮಿಕ ನಂಬಿಕೆಯಲ್ಲಿ ಜೀವನದ ಏರಿಳಿತವನ್ನು ಎದುರಿಸೋದರಲ್ಲೇ ಸುಸ್ತಾಗಿ ಬದುಕುತ್ತಿದ್ದಾರೆ. ಅವರಲ್ಲಿ ಕೆಲವರಂತೂ ನರಳುತ್ತಾ ‘ಯಾರಿಲ್ಲ ನಮಗೆಂದು’ ಫೀಲಾಗುತ್ತಾ ಜೀವನ ದೂಡುತ್ತಿದ್ದಾರೆ. ಅವರಲ್ಲಿ ಕೆಲವರಷ್ಟೇ ಆರ್ಥಿಕ ಸಬಲರಿದ್ದರೆ ಅವರೂ ಸೇವೆ, ದಾನ, ಪ್ರೆಸ್ಟೀಜು ಅಂತ ಬಿಝಿಯಾಗಿರ್ತಾರೆ. ಅದರೆ ಒ ಮಾನವಕುಲದ ಒಟ್ಟು ಜನರ ಒಂದು ಪರ್ಸೆಂಟು ಜನರು ವಿಕೃತರಾಗಿ ತಯಾರಾಗಿರುತ್ತಾರೆ. ಅವರು ವಿಕೃತ ಮೆರೆಯೋದು ಅವರದ್ದಲ್ಲದ ಧರ್ಮೀಯಲ್ಲಿ ಮಾತ್ರ ಅಲ್ಲ! ಪೋಲೀಸ್ ಠಾಣೆಗಳ ಕೇಸುಗಳ ಪಟ್ಟಿ ನೋಡಿ. ಕೋರ್ಟುಗಳಲ್ಲಿರುವ ಪಟ್ಟಿಗಳನ್ನು ಅವಲೋಕಿಸಿ. ಮಾಧ್ಯಮಗಳಲ್ಲಿ ಬರುತ್ತಿರುವ ವಾರ್ತೆಗಳನ್ನು ನೋಡಿ. ಏನನ್ಸುತ್ತದೆ? ಕೊಲೆ, ಅತ್ಯಾಚಾರ, ಹಿಂಶೆ ಮುಂತಾದ ಅಪರಾಧಗಳೆಲ್ಲದರಲ್ಲಿ ಅಪರಾಧಿಗಳ ಮತ್ತು ಅಪರಾಧಗೊಳಪಟ್ಟವರ ಧರ್ಮಗಳು ಬೇರೆ ಬೇರೆಯಾಗಿಯೇ ಇರುತ್ತಾ? ಒಂದು ಧರ್ಮದವರು ಒಂದಾಗಿ ಇನ್ನೊಂದು ಧರ್ಮದವರ ವಿರುದ್ಧ ಮಾಡಿದ ಯುದ್ಧವಾಗಿರುತ್ತವಾ ಅವುಗಳು? ನಮ್ಮ ಉತ್ತರ ‘ಅಲ್ಲ’ ಎಂದಾಗಿಯೇ ಇರುತ್ತದೆ! ಹಾಗಿರುವಾಗ ಕೆಲವು ಘಟನೆಗಳಲ್ಲಿ ಮಾತ್ರ ಅಪರಾಧಿ ಮತ್ತು ಅಪರಾಧಿಗಳ ಹೆಸರಿನವರ ಧರ್ಮಗಳು ಬೇರೆಯಾದರೆ ಅಪರಾಧ ಜಗತ್ತಿನ ಆಕಸ್ಮಿಕಗಳಷ್ಟೇ ಅವೆಂದು ತಿಳಿದುಕೊಳ್ಳದೆ ಅಪರಾಧಿಗಳ ಇಡೀ ಧರ್ಮೀಯರ ಮನಸ್ಥಿತಿಯ ಪ್ರತಿಬಿಂಬವೆಂದು ನಮಗೆ ಯಾಕೆ ಅನಿಸಬೇಕು? ನಮ್ಮಲ್ಲಿ ಹಿಂದುಗಳ ಬಗ್ಗೆ ಮುಸ್ಲಿಮರಿಗೆ ಮತ್ತು ಮುಸ್ಲಿಮರ ಬಗ್ಗೆ ಹಿಂದುಗಳಿಗೆ ಭಯವನ್ನು ಇಂಜೆಕ್ಟು ಮಾಡಲು ತಮ್ಮ ಆರಾಧನಾಲಯಗಳನ್ನು ತಾವೇ ಮಲಿನಗೊಳಿಸುತ್ತಾರೆ. ವಾಸ್ತವ ಏನು ಅಂತ ಗೊತ್ತಿಲ್ಲದ ಹಿಂಶಾತ್ಮಕ ವೀಡಿಯೋಗಳು ಸಿಕ್ಕಿದರೂ ಬಳಸುತ್ತಾರೆ. ಅಮಾನುಷ ಘಟನೆಗಳು‌ ನಡೆದಾಗ ಅಥವಾ ತಿಳಿದಾಗ ಆ ಅಪರಾಧಿಗಳ ಹೆಸರಿನ ಧರ್ಮದ 99.9 ಪರ್ಸೆಂಟ್ ಜನರ ಮನಸ್ಸೂ ಕರೆಳಿ ನಿಲ್ಲುತ್ತವೆ. ಅಪರಾಧಿಗಳ ವಿರುದ್ಧ ಹಿಡಿಶಾಪ ಹಾಕುತ್ತವೆ.‌ ಸಂತ್ರಸ್ತರಿಗಾಗಿ ಮರುಗುತ್ತವೆ. ಆ ನರರೂಪಿ ಚಿಶಾಚಿಗಳಿಗೆ ಶಿಕ್ಷೆ ಆಗಲು ಮನಸಾರೆ ಬಯಸುತ್ತವೆ. ಒಂದು ಧರ್ಮೀಯರು ಒಂದಾಗಿ, ಪ್ಲಾನ್ ಮಾಡಿದ ಕೃತ್ಯಗಳು ಅವುಗಳಲ್ಲ. ಅವು ಅಪರಾಧಿಗಳ ಹೆಸರುಗಳು ಪ್ರತಿನಿಧಿಸುವ ಧರ್ಮೀಯರಿಂದ ಶಹಬಾಸ್ ಪಡೆಯುವುದಿಲ್ಲ. ಅವೆಲ್ಲಾ ಧರ್ಮಯುದ್ದವಲ್ಲ, ವಿಕೃತರ ಅಟ್ಟಹಾಸವಷ್ಟೇ. ಹಿಂಶಾಪ್ರಿಯರ ಕೃತ್ಯಗಳನ್ನು ಕೋಮು ಬಣ್ಣದಿಂದ ಆಲಂಕರಿಸಬೇಡಿ. ಹಾಗೆ ಮಾಡಿದರೆ ಅದು ಆ ಹಿಂಶಾಪ್ರಿಯರಿಗೆ ಮತ್ತಷ್ಟು ಆನಂದ ತಂದುಕೊಡಬಲ್ಲದು. ಅಷ್ಟೂ ಸಮಸ್ಯೆಗಳಿಂದ ನರಳುತ್ತಿರುವ ಮನುಷ್ಯರ ನಡುವೆ ಕೋಮುರಾಕ್ಷಸನನ್ನು ಇನ್ನಷ್ಟು ಬೆಳೆಸಬೇಡಿ. ಅಪರಾಧಿಗಳನ್ನು ಅಪರಾಧವಾಗಿ ನೋಡದೇ ಅವರ ಹೆಸರು ಪ್ರತಿನಿಧಿಸುವ ಧರ್ಮದವರ ಮನಸ್ಥಿತಿ ಅಥವಾ ಕೃತ್ಯಗಳಾಗಿ ಕಂಡರೆ ಈ ಲೋಕದಲ್ಲಿ ಯಾವ ಧರ್ಮವನ್ನು ಸಾಚಾ ಅನ್ನೋಕೆ ಸಾಧ್ಯ ಎಂದು ಎದೆಯಲ್ಲಿ ಕೈಯಿಟ್ಟು ಚಿಂತಿಸಿನೋಡಿ. ================= ಪರಿಚಯ: ಮಂಗಳೂರು ಸಮೀಪದ ಕೈರಂಗಳದವರು.. ವಾರ್ತಾಭಾರತಿಯಲ್ಲಿ ಪ್ರೂಫ್ ರೀಡರ್ ಆಗಿದ್ದವನು

ಲೇಖನ Read Post »

ಕಾವ್ಯಯಾನ

ಕಾವ್ಯಯಾನ

ಹೊಸ ಹಾಡು ದೇವಯಾನಿ ನೆನಪಿಗೆಂದು ಕೊಳಲ ನಾನೆಂದೂ ಕೇಳಲೇ ಇಲ್ಲ ಚಕ್ರ ಹಿಡಿಯಲೆಂದೇ ಹೊರಟವನು ನೀನು , ಕೊಳಲು ಬೇಕಿರಲಿಲ್ಲ ಏನು ಮಾಡಲಿ ಈ ಕೊಳಲ ಗಾಳಿ ನುಸುಳಿದರೂ ರಾಧೆ ರಾಧೇ ಎಂದೇ ಉಲಿಯುತ್ತಿದ್ದ ಕೊಳಲೀಗ ಬರಿ ಬಿದಿರ ಕೊಳವೆಯಾಗಿ ಬಿದ್ದಿದೆ ನೀನು ಕೊಳಲೂದಲೆಂದೇ ಗೋಕುಲಕೆ ಈ ಜಗಕೆ ಬರಲಿಲ್ಲ ಬಿಡು ಆದರೂ ಚಕ್ರ ಹೊತ್ತ ಕೈ ಸೋತಾಗ ಕೊಳಲ ನೆನಪಾಗದ್ದೇ ನನಗೆ ವಿಸ್ಮಯ ಕೊಳಲೆಂದರೆ ರಾಧೆ ಎಂದುಕೊಂಡಿದ್ದೆ ಎಂದು ಹೆಮ್ಮೆ ಪಡುತ್ತಿದ್ದೆ ನಾನು ಕೊಳಲ ತೊರೆದಷ್ಟೇ ಸುಲಭವಾಗಿ ನನ್ನ ತೊರೆದೇ ಬಿಟ್ಟೆ ನೀನು ನಿನ್ನ ಕೊಳಲು ನಿನಗೇ ಇರಲಿ ನನ್ನ ಪಾಡು ನನಗಿರಲಿ ಕೊಳಲ ಗೀತವಿಲ್ಲದೆಯೂ ಈ ರಾಧೆ ಬದುಕುತ್ತಾಳೆ ತನ್ನದೇ ಹಾಡ ಹಾಡುತ್ತಾಳೆ ============== ದೇವಯಾನಿ ಪರಿಚಯ: ಶುಭಾ ಎ.ಆರ್, ಗಣಿತ – ವಿಜ್ಞಾನ ಶಿಕ್ಷಕಿ, ದೇವಯಾನಿ ಹೆಸರಿನಲ್ಲಿ ಕಾಲೇಜು ದಿನಗಳಿಂದಲೂ ಕಥೆ ,ಕವನ ಪ್ರಕಟವಾಗಿವೆ. ” ಧರೆಯನುಳಿಸುವ ಬನ್ನಿರಿ ” ಶಾಲಾ ಮಕ್ಕಳಿಗಾಗಿ ಮೂರು ವಿಜ್ಞಾನ ನಾಟಕಗಳು, ” ತುಂಡು ಭೂಮಿ – ತುಣುಕು ಆಕಾಶ ” ಕಥಾ ಸಂಕಲನ, ” ತುಟಿ ಬೇಲಿ ದಾಟಿದ ನಗು” ಎಂಬ ಕವನ ಸಂಕಲನ ಪ್ರಕಟವಾಗಿವೆ .6,5 ನೇ ತರಗತಿಯ ವಿಜ್ಞಾನ ಪಠ್ಯ ಪುಸ್ತಕ ಸಮಿತಿಯಲ್ಲಿ ಕಾರ್ಯ ನಿರ್ವಹಣೆ. ಈಗ ಬೆಂಗಳೂರಿನ ರಾಜಾಜಿನಗರ ಬಿ ಇ ಒ ಕಚೇರಿಯಲ್ಲಿ ಕ್ಷೇತ್ರ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯ ನಿರ್ವಹಣೆ.

ಕಾವ್ಯಯಾನ Read Post »

ಪುಸ್ತಕ ಸಂಗಾತಿ

ಪುಸ್ತಕ ಸಂಭ್ರಮ

ಪುಸ್ತಕ ಬಿಡುಗಡೆ ಕಾವ್ಯಕಂದೀಲು ಬಳಗ,ಬಾಗಲಕೋಟೆ ಹಾಗೂ ಕನ್ನಡಸಾಹಿತ್ಯಪರಿಷತ್ತು,ಬಾಗಲಕೋಟೆ ಹಾಗೂ ಫೀನಿಕ್ಸ್ ಪ್ರಕಾಶನ’_ ತೀರ್ಥಹಳ್ಳಿ,  ಇವರುಗಳ ಸಂಯುಕ್ತ ಆಶ್ರಯದಲ್ಲಿ ದಿನಾಂಕ;20/10/2019ರಬಾನುವಾರ ಬಾಗಲಕೋಟೆಯ  ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಕನ್ನಡ ಸಾಹಿತ್ಯ ಲೋಕದ ಎರಡು  ಹೊಸ ಪುಸ್ತಕಗಳೂ ಲೋಕಾರ್ಪಣೆಗೊಂಡವು ‘ನವಿಲೂರ _ದಾರಿಯಲ್ಲಿ’ (ಕಥಾಸಂಕಲನ)- ಶ್ರೀಹರಿದೂಪದ  ‘ತೊರೆದು ಜೀವಿದಬಹುದೆ?’(ಭಾವಲಹರಿಗಳ ಗುಚ್ಛ)-ಪುನರ್ವಸು ಪ್ರಶಾಂತ್         

ಪುಸ್ತಕ ಸಂಭ್ರಮ Read Post »

You cannot copy content of this page

Scroll to Top