ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಕಾವ್ಯಯಾನ

ಖಾಲಿ ದೀಪ ಮತ್ತು ಕತ್ತಲು ಬಿದಲೋಟಿ ರಂಗನಾಥ್ ಕಟ್ಟಿದ ಮಣ್ಣಗೋಡೆಯು ತಪ ತಪನೆ ಬೀಳುತ್ತಿದೆ ನಿದ್ದೆಯಿಲ್ಲದ ರಾತ್ರಿಗಳ ಕನಸು ಆ ಮನೆ  ಪ್ರತಿ ಇಟ್ಟಿಗೆಯ ಮೇಲೂ  ನಿನ್ನ ಶ್ರಮದ ಬೆವರ ವಾಸನೆ ನೀನು ಮಲಗೆದ್ದ ಜಾಗದ ನಿಟ್ಟುಸಿರು ಕಣ್ಣೀರಾಕುತ್ತಿದೆ ನೀನೆ ನೆಟ್ಟ ನಂಬಿಕೆಯ ಗಿಡದ ಬುಡಕ್ಕೆ ಪಾದರಸ ಸುರಿದ ಅವಳು  ಇವತ್ತು ಬೀದಿ ನಾಯಿಯ ಬಾಲ ಅವಮಾನದ ಗಾಯ ನಂಜಾಗಿ ನಸಿರಾಡಿ ಬದುಕುವ ಭರವಸೆಯು ಕುಂದಿ ನೆಲದ ಮೇಲಿಟ್ಟ ಅಷ್ಟೂ ಹೆಜ್ಜೆಗಳು ಕೆಂಡಗಳಾಗಿ ಧಗ ಧಗಿಸಿ ಉರಿದು ಜೀವವನ್ನೇ ಸುಟ್ಟ ನರಳುವಿಕೆಯ ಧ್ವನಿಯಲ್ಲಿ ಮಕ್ಕಳ ಮೇಲಿನ ಪ್ರೀತಿ ಹಸಿ ಹಸಿಯಾಗಿತ್ತು ಮಣ್ಣು ತಿನ್ನುತ್ತಿರುವ ನಿನ್ನದೆ ದೇಹದ ಮೂಳೆಯನ್ನು ಒರಸಿ ನೋಡಿದೆ ಎಷ್ಟೊಂದು ಕನಸುಗಳು ಜೀವಂತವಾಗಿದ್ದವು ರೆಕ್ಕೆ ಪುಕ್ಕ ಎತ್ತಿಕೊಂಡು ಮುಚ್ಚಿದ ರೆಪ್ಪೆಗಳಡಿಯಲ್ಲಿ ಸವೆಯದ ಹಾದಿ ತೆರೆದೇ ಇತ್ತು  ಮಾತಾಡಿಸಿದೆ ತಮ್ಮನೆಂಬ ಹೆಸರು ಎದೆಯೊಳಗೆ ಬಿರಿದು ಮೌನದ ಗುಂಡಿಯಲಿ ಮಾತುಗಳು ಸತ್ತಿರುತ್ತವೆಂಬ ಸಣ್ಣ ಅರಿವೂ ಇಲ್ಲದೆ. ಅಲ್ಲಿಂದ ಎದ್ದು ಮಾರು ದೂರ ನಡೆದೆ  ಬಂದ ದಾರಿಗೆ ಸುಂಕವಿಲ್ಲದೆ. ತಡೆಯದ ಮನಸು ಮತ್ತೆ ತಿರುಗಿ ನೋಡಿತು ಮಣ್ಣ ಹೊದಿಕೆಯ ‘ಮಾಡಿ‘ನೊಳಗೆ ಎಷ್ಟೊಂದು ಶಾಂತತೆಯಲಿ ಮಲಗಿದೆ ಹಾರಿ ಹೋದ ಪ್ರಾಣ ಪಕ್ಷಿಯ ದೇಹ ತಲೆದೆಸೆಯ ಗೂಡ ದೀಪದೊಳಗಿನ ಬತ್ತಿ ಎಣ್ಣೆ ಇರುವವರೆಗೆ ಮಾತ್ರ ಉರಿಯುತ್ತದೆ. ನಂತರ ಉಳಿಯುವುದು ಕೇವಲ ಖಾಲಿ ದೀಪ ಮತ್ತು ಕತ್ತಲು. ***********************************

ಕಾವ್ಯಯಾನ Read Post »

ಇತರೆ

ವರ್ತಮಾನ

“ಓಟದಿಂದ ಕಲಿಯುವ ಆಡಳಿತದ ಪಾಠ” ಗಜಾನನ ಮಹಾಲೆ  ಓಟದ ಸ್ಪರ್ಧೆಯಲ್ಲಿ ಬೇರೆ ಬೇರೆ ರೀತಿಯ ಓಟಗಳಿರುತ್ತವೆ. 5000 ಮೀಟರ್‌ ಹಾಗೂ 100 ಮೀಟರ್‌ ಓಟಗಳ ಎರಡು ವಿಭಾಗದ ಮಧ್ಯೆ ಬಹಳಷ್ಟು ವ್ಯತ್ಯಾಸವಿರುತ್ತದೆ. ವ್ಯತ್ಯಾಸ ಓಡುವ ದೂರದ ಬಗ್ಗೆ ಮಾತ್ರವಲ್ಲ. ಓಡುವ ವಿಧಾನದಲ್ಲಿಯೂ ವ್ಯತ್ಯಾಸವಿದ್ದು ಸರಿಯಾದ ವಿಧಾನದಲ್ಲಿ ಓಡಿದ ಸ್ಪರ್ಧಿ ಮೊದಲಿಗನಾಗುವ ಸಂಭವ ಹೆಚ್ಚಿರುತ್ತದೆ. 100 ಮೀಟರ್ ಓಟದಲ್ಲಿ ಪ್ರಾರಂಭದಿಂದ ಅತ್ಯಂತ ವೇಗವಾಗಿ ಓಡಿದವರು ಮತ್ತು ಆ ಸಾಮರ್ಥ್ಯವಿದ್ದವರು ಪ್ರಥಮ ಸ್ಥಾನ ಗಳಿಸುತ್ತಾರೆ. 5000 ಮೀಟರ್ ಓಟದಲ್ಲಿ ಈ ವಿಧಾನ ಪ್ರಯೋಜನಕಾರಿಯಲ್ಲ. ಈ ವಿಭಾಗದಲ್ಲಿ ಮೊದಲು ನಿಧಾನವಾಗಿ ಪ್ರಾರಂಭಿಸಿ, ನಿರಂತರವಾಗಿ ಓಡುತ್ತಿದ್ದು,ಗುರಿಗೆ ಸಮೀಪ ಬಂದಾಗ ವೇಗವನ್ನು ಹೆಚ್ಚು ಮಾಡಿ ಗುರಿ ತಲುಪಲು ಪ್ರಯತ್ನಿಸುವವರು ಯಶಸ್ವಿಯಾಗುತ್ತಾರೆ. 100 ಮೀಟರ್ ಓಟದಲ್ಲಿ ಓಡಿದಂತೆ ಮೊದಲೇ ವೇಗವಾಗಿ ಓಡಲು ಪ್ರಾರಂಭಿಸಿದರೆ, ಮಧ್ಯದಲ್ಲಿಯೇ ಸುಸ್ತಾಗಿ ಹೊರ ಹೋಗುವ ಸಂಭವ ಹೆಚ್ಚು. ಒಂದು ರಾಜ್ಯದ ಅಥವಾ ಒಂದು ದೇಶದ ಆಡಳಿತ ಚುಕ್ಕಾಣಿ ಹಿಡಿದವರಿಗೆ ಈ ಓಟದ ಸ್ಪರ್ಧೆಯ ಟೆಕ್ನಿಕ್ನ ಅರಿವಿದ್ದರೆ ತಮ್ಮ ಗುರಿ ತಲುಪುವುದರಲ್ಲಿ ಯಶಸ್ವಿಯಾಗುತ್ತಾರೆ. ದೇಶದ ಅಥವಾ ರಾಜ್ಯದ ಪ್ರಗತಿಯ ದೃಷ್ಟಿಯಿಂದ ಪ್ರಾರಂಭಿಸುವ ಯೋಜನೆಗಳು, ಜಾರಿಗೊಳಿಸುವ ಅಭಿವೃದ್ಧಿ ಕಾರ್ಯಗಳು,ಆಡಳಿತದ ವಿವಿಧ ಹಂತಗಳಲ್ಲಿ ಮಾಡುವ ಬದಲಾವಣೆಗಳು, ಕಾನೂನಿನಲ್ಲಿ ಅಥವಾ ಸಂವಿಧಾನದಲ್ಲಿ ಮಾಡುವ ತಿದ್ದುಪಡಿಗಳು ಇವು ಯಶಸ್ವಿಯಾಗಬೇಕಾದರೆ, ಓಟದ ಟೆಕ್ನಿಕ್ ನ ಅರಿವಿದ್ದರೆ ಯಶಸ್ಸು ಸಾಧ್ಯ.  ಯಾವುದನ್ನು ವೇಗವಾಗಿ ಮಾಡಬೇಕು ಹಾಗೂ ಯಾವುದನ್ನು ನಿಧಾನವಾಗಿ ಪ್ರಾರಂಭಿಸಿ ಅನಂತರ ವೇಗವನ್ನು ಹೆಚ್ಚಿಸಬೇಕು ಎಂಬ ಅರಿವಿಲ್ಲದಿದ್ದರೆ, ಅವಸರವೇ ಅಪಘಾತಕ್ಕೆ ಕಾರಣ ಎಂಬ ಮಾತು ಆಡಳಿತದ ವಿಷಯದಲ್ಲಿಯೂ ಅನ್ವಯಿಸುತ್ತದೆ… *********************************************************

ವರ್ತಮಾನ Read Post »

ಕಾವ್ಯಯಾನ

ಕಾವ್ಯಯಾನ

ಗುಳಿಗೆ ಮಾರುವ ಹುಡುಗ ಅರುಣ್ ಕೊಪ್ಪ ಇವನು ಬ್ಯಾಗ್ ಹೊತ್ತು ಬೆವರು ಬಿತ್ತಿ ಜಿಪ್ಪು ಸರಿಸುತ್ತಾ ಸ್ಯಾಂಪಲ್ ಹಂಚುವ ಡಾಕ್ಟರ್ ಛೆಂಬರ್ ಲಿ ದಿನವೂ ಜ್ಞಾನಾರ್ಜನೆಯಂತೆ! ಸರತಿ ಸಾಲಿನಲ್ಲಿ ಮಾತು ಬರದವ ಹೊಡೆಯಲು ಹೋಗುತ್ತಲೇ… ಕಾಲು ಕಿತ್ತು ಬೇರೆ ವೈದ್ಯರ ಭೇಟಿಗೆ ಗೀಳಿಡುತ್ತಾನೆ ಇವ ಗುಳಿಗೆ ಮಾರುವ ಹುಡುಗನಂತೆ ಒಳ ಸೇರಿಸಿದ ಅಂಗಿ, ಕಪ್ಪು ಸೊಂಟದ ಪಟ್ಟಿ ಶೂ ಕೂಡ ಹೊಳೆವ ಹಾಗೇ ರೋಗಿಗಳು ಮತ್ತಷ್ಟು ಹಿಡಿ ಶಾಪ ಹಾಕುವ ಉತ್ತೇಜನ ನೀಡುವ ಹಾಗೇ ಅವನ ಡ್ರೆಸ್ ಕೋಡ್ ! ತನಗೂ ಇತರರಿಗೂ ಬದುಕು ಸಾಕುವ ಪಾಲಕ ಸೇವಕ, ಎಂತೆಲ್ಲ ಹಲುಬುತ್ತಾರೆ… ಅಲೆದಾಟದ ಬದುಕಲಿ ಕಾರದ ಕಲ್ಲು ಗೊತ್ತಾಗದೆ ಸವೆದ ಹಾಗೇ, ಇವ ಗುಳಿಗೆ ಮಾರುವ ಹುಡುಗನಂತೆ ಸೈಕಲ್ ತುಳಿಯುತ್ತಾನೆ ಹೆಲ್ಮೆಟ್ ಇಲ್ಲದೆ ಬೈಕ್ ಗುರ್ ಗುಡಿಸಿ ನಡೆಯುತ್ತಾ, ತಟ ತಟನೆ ಮೈ ಧಗಿಸಿ ಶ್ರಮಿಕರ ವರ್ಗದಲಿ ಇವನೂ ಒಬ್ಬ ವೈದ್ಯರ ಸಮಯಕ್ಕೆ ಇವನು ಸರಿಯಾಗಿ ಒಡೆದು ಮೂಡುತ್ತಾನೆ ತಪಸ್ಸಲಿ ದೇವರು ಕಂಡ ಹಾಗೇ ಹಪಾಹಪಿಯ ಭಾವ ಮಂದಹಾಸ ದಿನ ಕಳೆಗಟ್ಟಿದೆ ಅವಗೆ ವ್ಯಾಪಾರ ಜೋರಂತೆ ಇವ ಗುಳಿಗೆ ಮಾರುವ ಹುಡುಗನಂತೆ ಮನಸ್ಸು ಕಂಡಾಗ ಕರೆಯುವ ಕೆಲ ವಿಶೇಷ ತಜ್ಞರು ಬೆಟ್ಟಿಯಾದಾಗಲೆಲ್ಲ ತಿರುಪತಿ ವೆಂಕಟ್ರಮಣ ದರ್ಶನವಾದಂತೆ ನನಗೆ ಎನ್ನುತ್ತಾನೆ. ಒಂದಷ್ಟು ಬಿಡುವಿಲ್ಲದ ಬಿಡುವಿನಲ್ಲಿ ಮಡದಿ ಮಕ್ಕಳು ಬಂದುಗಳಿಗೆ ಇಳಿ ಪ್ರಾಯದಲ್ಲೂ ನಗುವ ಊರಲ್ಲಿ ಸಿಗುವ ತನ್ನ ಹೆತ್ತಮ್ಮನಿಗಾಗಿ ತಂದೆಗಾಗಿ ಇವನು ಗುಳಿಗೆ ಮಾರುವ ಹುಡುಗನಂತೆ ತಿಂಗಳು ಕೊನೆಯಲ್ಲಿ ಹಾಹಾಕಾರದ ಗುಬ್ಬಿಯಂತೆ ಕಡ್ಡಿ ಸೇರಿಸಿ ಗೂಡ ಹೆಣೆದಂತೆ ಸುರಿಗೂ ಇಲ್ಲದ ಆಯುಷ್ಯ ಇನ್ನು ಮನೆ ಎಲ್ಲಿ? ನೀರ ಮೇಲಿನ ಗುಳ್ಳೆಯ ಹಾಗೇ ಸ್ವಾವಲಂಭಿಯ ಒಂದು ರೂಪವಂತೆ ಇವನು ಗುಳಿಗೆ ಮಾರುವ ಹುಡುಗನಂತೆ ಉದ್ಯೋಗ ಅರಸಿ ಬಂದನಂತೆ ಕಾಂಕ್ರೀಟ್ ಕಾಡಿಗೆ, ನಿರುದ್ಯೋಗ ಮೆಟ್ಟಲು ಬದುಕ ಕಟ್ಟಲು ಮೆಟ್ಟಿಲು ಏರುತ್ತಾ ಒಂದೊಂದೇ ಆಫೀಸರ್ ಆಗುತ್ತಾನೆ, ಚಾಲಕನಾಗುತ್ತಾನೆ ಶಿಕ್ಷಕನಾಗುತ್ತಾನೆ, ವಿದ್ಯಾರ್ಥಿಯಾಗುತ್ತಾನೆ ಕೊನೆಗೆ ಹಮಾಲಿಯೂ, ಚೌಕಟ್ಟಿನ ಭಯದಲ್ಲಿ ಬದುಕ ಗೆಲ್ಲುತ್ತಾ ಇವ ಗುಳಿಗೆ ಮಾರುವ ಹುಡುಗನಂತೆ ********************************** (ಔಷಧಿ ಕಂಪನಿ ಪ್ರತಿನಿಧಿಗಳಿಗೆ (ಮೆಡಿಕಲ್ ರೇಪ್ರೆಸೆಂಟಿಟಿವ್ ) ಕವಿತೆ ಅರ್ಪಣೆ )

ಕಾವ್ಯಯಾನ Read Post »

ಅನುವಾದ

ಅನುವಾದ

ವಸಂತನಾಗಮನ ಮೂಲ ತೆಲುಗು ರಚನೆ: ಗುಂಟೂರು ಶೇಷೇಂದ್ರಶರ್ಮ ಗುಂಟೂರು ಶೇಷೇಂದ್ರ ಶರ್ಮಾ ಬಿ.ಏ.ಬಿ.ಯಲ್ 1927 -2007 ತೆಲುಗು ಸಾಹಿತ್ಯದಲ್ಲಿ ಜನಪ್ರಿಯ ಕವಿ ಯುಗಕವಿ ಎಂದು ಹೆಸರುಗಳಿಸಿದವರು. ಇವರು ಕವಿ, ವಿಮರ್ಶಕ ಹಾಗೂ ಬರಹಗಾರರು.1994 ರಲ್ಲಿ ಇವರಿಗೆ ಸಾಹಿತ್ಯ ಅಕಾಡೆಮಿ ಪುರಸ್ಕಾರ ಲಭಿಸಿದೆ. ಇವರು ನೋಬಲ್ ಬಹುಮಾನಕ್ಕೂ ಭಾರತದಿಂದ ನಾಮಿನೇಟ್ ಆಗಿದ್ದರು. ಇವರ ಹಲವಾರು ರಚನೆಗಳು ಕನ್ನಡ, ಇಂಗ್ಲೀಷು ಹಿಂದೀ ಉರ್ದೂ ಬೆಂಗಾಲೀ ನೇಪಾಲಿ ಹಾಗೂ ಗ್ರೀಕ್ ಭಾಷೆಗಳಿಗೂ ಅನುವಾದಗೂಂಡಿವೆ ಕನ್ನಡಕ್ಕನುವಾದ: ನಾರಾಯಣ ಮೂರ್ತಿ ಬೂದುಗೂರು ಹೂಗಳು ತುಟಿಯರಳಿಸಿವೆ ರಹಸ್ಯವ ತಿಳಿಸಲೂ!! ಈಗ…ಪ್ರತಿಯೊಂದು ಮರವೂ ಒಂದು ದೇವಳವೇ… ಹಕ್ಕಿಗಳೆಲ್ಲಾ ಹಾರುವಾ ದೇವತೆಯರೇ!!! ರೆಂಬೆ, ರೆಂಬೆಯಲೂ ಹಾಡಿನಾ ಸ್ಪರ್ಧೆಯೇ ಹುಲ್ಲುಕಡ್ಡೀಯಲ್ಲೂ ಗಂಧರ್ವಲೋಕವೇ.. ವೀಣೆಯು ಮೀಟಿದಂತೆ ಸ್ವರಗಳ ಅಪ್ಸರಸೆಯರು…. ಈ ಹೂಗಳಲನ್ನ ಯಾರು ಎಬ್ಬಿಸಿದರೋ…? ಏನೋ ನನ್ನ ಬೆನ್ಹತ್ತಿದೇ!!! ಯಾವುದೋ ನೆನಪುಗಳಿಗೆ ನನ್ನ ತೀಕ್ಷ್ಣವಾಗಿ ಒಳಪಡಿಸುತ್ತಿವೇ!!! ಈ ಕೋಗಿಲೆಗಳನ್ನ ಆ ಮಾವಿನಮರದ ಮೇಲೆ ಯಾರು ಇಟ್ಟರೋ ? ಅದು ಲೋಕವನ್ನ ನಿದ್ದೆ ಮಾಡಲಿಕ್ಕೆ ಬಿಡುತ್ತಿಲ್ಲ!! ವಸಂತನನ್ನ ಕರೆದು.. ಕೋಗಿಲೆಯನ್ನ, ಸುಮ್ಮನಿರಲು ಹೇಳಿದರೇ…ಅದು ಕೇಳುವುದಾ ? ನಾನು ಋಷಿಯಲ್ಲಾ..ಕೋಗಿಲೆಯ, ಸ್ವರ ಕೇಳಿ ಬೆಚ್ಚಿಬೀಳಲು… ನಮ್ಮೂರ ಮಣ್ಣಿನಿಂದ ಮಾಡಿದ ಸ್ನಾಯುಗಳು ಎನ್ನ ದೇಹದ್ದು!!! ಹಸಿರಾಗಿ ಪಂಚಮ… ದಲ್ಲಿ ಹಾಡುವಾ ಮಾವಿನಾ ಮರಾ… ನಡೆದಾಡುವದೊಂದು… ವಿನಹಾ… ಚೈತ್ರದ ಆಗಮನಕ್ಕೆ ಏನು ಬೇಕಾದರೂ ಮಾಡುವೆ ಎನ್ನುತಿದೇ!!!! ವಸಂತ ಋತುವೆಂದರೇ!!! ಕೋಗಿಲೆಗಳ ಹಾಡಿನಾ ಪಾಠಶಾಲೆ.. ಹಕ್ಕಿಗಳಾ ಸಂಗೀತ ಅಕಾಡೆಮೀ… ಒಂದೊಂದು ಹಕ್ಕೀ….ಸಾವಿರ ಹಾಡೂಗಳಾಗಿ ರೂಪಾಂತರಗೊಳ್ಳುವಾ ಋತೂ ಇದೂ!!! ಅದಕ್ಕೇ ಪ್ರಪಂಚವೆಲ್ಲಾ ಯಾವಾಗಲೂ ಒಂದು ಹೊಸ ವಸಂತಕ್ಕಾಗಿಯೇ. ನಿರೀಕ್ಷಣೇ ಮಾಡುತ್ತಿರುತ್ತೇ!!! ಚೈತ್ರವೂ…ಒಂದು ಜೇಡರಹುಳಾ…. ಹೂವುಗಳಾ ಅರಳಿಸುತ್ತೇ.. ಮೊಟ್ಟೇನೂ ಇಡುತ್ತೇ… ಹೂವುಗಳಲ್ಲೀ ಬಣ್ಣಾನೂ ತುಂಬುತ್ತೇ!!! ಬಲೆಯಲ್ಲಿ…. ಇತಿಹಾಸವನ್ನೂ.. ನೇಯುತ್ತೇ… ಏನೋ….ಪಿಸಪಿಸ ಮಾತಿನೊಂದಿಗೆ ಏಕಾಂತವನ್ನೂ ಕಾಡುತ್ತೇ!!! ಮರುಭೂಮಿಗಳ ದಾಟಿ…ದಾಟಿ.. ಹೂವರಳುವಾ ಬನಗಳಕಡೇ ಪ್ರಯಾಣ ಬೆಳಸುವೆ!!! ಸಮಯವೂ…. ಮಾವಿನಾ ಹಣ್ಣಿನಾ ಹಾಗೇ, ಮಧುರ ಸುವಾಸನೇ ಬೀರುತ್ತಾ.. ಇರುವುದನ್ನ ಅಲ್ಲಿ ಸಾಕ್ಷಾತ್ಕಾರಗೊಳಿಸುತ್ತೆ. ಉದರುವ ಎಲೆಗಾಗಿ ಭೂತಾಯಿಯಾ ನಿರೀಕ್ಷಣೇ… *****************************.

ಅನುವಾದ Read Post »

ಕಾವ್ಯಯಾನ

ಕಾವ್ಯಯಾನ

ಜೀವಾತ್ಮ ಕೊಟ್ರೇಶ್ ಅರಸೀಕೆರೆ ಯಾವುದೋ ಹಕ್ಕಿ ಹಾಕಿರುವ ಈ ಹಿಕ್ಕೆ ಈಗ ಸಸಿಯಾಗಿದೆ! ಉದರಾಂಬರದ ಕಾರಣ ನುಂಗಿ,ನೀರು ಕುಡಿದುದೆಲ್ಲಾ ಏನೆಲ್ಲಾ ಸಕಾರಣಗಳಿಗೆ ಕಾರಣ!! ಜಗಕ್ಕೆ ಬಿದ್ದ ಕಿರಣ,ಮೇಲಿಂದ ಬಿದ್ದ ನೀರ ಬಿಂದು,ಸುಯ್ಯನೇ ಬೀಸುವ ಗಾಳಿ…… ಯಾವ ಯಾವುದಕ್ಕೆ ಸಂಬಂಧ!! ಅಲ್ಲೊಂದು ಜೋಡಿ ಹಕ್ಕಿ, ಇಲ್ಲೊಂದು ಮಿಲನ, ನಳ ನಳಿಸುತ್ತಿರುವ ಹೂ… ಒಂಟಿಯಾಗಿ ಯಾವುದೋ ಶಿಖರ ತೇಲಿ ಹೋಗುತ್ತಿರುವ ಮೋಡಗಳು ಯಾವ ದಂಡಯಾತ್ರೆಗೆ……. ಜೀವ ಇರಲೇಬೇಕಿಲ್ಲ ಚಲನೆಗೆ ಸೃಷ್ಟಿಯ ಸಾರ ಯಾರು ಹೀರಿದ್ದಾರೆ? ಯಾರೋ ಮೇಲೋ ಯಾರ ವಿಜಯ? ಅವನು ಅವಳ ಮೇಲೆ,ಅವಳು ಇವನ… ಬೆತ್ತಲ ದೇಹದ ತರತರ ತಡುಕುವಿಕೆಯಲ್ಲಿ ಕಾಲ… ಹಿಂದಿಲ್ಲ…ಮುಂದಿಲ್ಲ ಬರೀ ಸದ್ದು..ಸಾವು ಜನನ ಜನೇಂದ್ರಿಯ! ದೇಶ,ರಾಜ್ಯ,ರಾಜ ಗಡಿಯಂತೆ…ಉಗಿ ಮುಖಕ್ಕೆ! ಯಾವ ಸಾಮ್ರಾಜ್ಯ ಈ ಗ್ಯಾಲಾಕ್ಸಿಯಲ್ಲಿ ಯಾವ ಪಥ,ಚಲನೆ,ಗಾಳಿ,ಅಣು ಅಣುವೂ ಯಾರೂ ತೋರದ ಮಹಾನ್ ಕಪ್ಪು ಕುಳಿ ಒಂದಷ್ಟು ಉಸಿರು,ಜೀವ… ಸಾಕಷ್ಟೇ.. ಅಹಂಕಾರದ ಬುಗ್ಗೆಗೆ? ಅದಕ್ಕೆ ಇದಿಯೋ ಮರುಳೇ ಮರಳು ಮರಳು..ಮರಳುಗಾಡು ಮರುಳೇ…ಮರುಳ ಜೀವ! ಯಾವ ಹಕ್ಕಿಯ ಹಾಡು ಯಾವ ಹಕ್ಕಿಯ ಹಿಕ್ಕೆ ನಾವೆಲ್ಲಾ….. !! ಆದರೂ ರುಜು ಬೇಕು ಅವಳ ಒಳಗೆ! ನನ್ನದೇ ಜೀವ ಅನ್ನುವ ಚಪಲಕ್ಕೋ….ಅಹಂಕಾರಕ್ಕೋ..!! ಮತ್ತದೇ ಹಕ್ಕಿ,ಹಿಕ್ಕೆ. ನೀರ ಬಿಂದು…ಸರಸರನೇ ಸರಸ…ಜೀವ ಜೀವಾತ್ಮ! ************************************ ಪರಿಚಯ: ಕವಿ,ಸಾಹಿತ್ಯಾಸಕ್ತರು ಅರಸೀಕೆರೆ,ಹಾಸನ ಜಿಲ್ಲೆ

ಕಾವ್ಯಯಾನ Read Post »

ಇತರೆ

ಶಿಕ್ಷಣ

ಶಿಕ್ಷಣದ ಸವಾಲುಗಳ ಬೆಟ್ಟು ಯಾರ ಕಡೆಗೆ? ಶೃತಿ ಮೇಲಿಸೀಮೆ ಶಿಕ್ಷಣ ಎನ್ನುವುದು ಸಾಮಾಜಿಕ ಸಂರಚನೆಯಲ್ಲಿ ಮಹತ್ವದ ಪರಿವರ್ತನೆ ತರುವ ದಿವ್ಯಾಸ್ತ್ರವಾಗಿದೆ. ಈ ಶಿಕ್ಷಣವು ಮುಂದಿನ ಪೀಳಿಗೆಗೆ ಹಿಂದಿನ ಸಾಮಾಜಿಕ ಸ್ಥಿತಿಗತಿಗಳ ಬಗ್ಗೆ ವಾಸ್ತವಿಕ ಮಾಹಿತಿಗಳನ್ನು ನೀಡುತ್ತಾ, ಯುವ ಪೀಳಿಗೆಯಲ್ಲಿ ಉತ್ತಮ ಆಲೋಚನೆ, ಭಾವನೆ, ನಿರಂತರತೆಯನ್ನು ಬೆಳೆಸುವ ಗುರುತರ ಜವಾಬ್ದಾರಿಯನ್ನು ಹೊತ್ತಿದೆ. ಪೂರ್ವ ಭಾರತದಲ್ಲಿ ವಿದ್ಯಾವಂತರಿಗಿಂತ ಹೆಚ್ಚಾಗಿ ಜ್ಞಾನವಂತರು,ಸುಶಿಕ್ಷಿತರು ಇದ್ದರು. ಪ್ರಸ್ತುತ ಎಷ್ಟೇ ಪದವಿಗಳನ್ನು ಹೊತ್ತಿದ್ದರೂ ಅವರು ಪಡೆದ ವಿದ್ಯೆ ಅವರಿಗೆ ವಿನಯವನ್ನು ನೀಡುತ್ತಿಲ್ಲ . ‘ಶಿಕ್ಷಣ’ ಎಂದರೇನು? ಬೀದಿಗೊಂದು ಶಿಕ್ಷಣ ಸಂಸ್ಥೆಗಳನ್ನು ಕಟ್ಟಿ, ಕಡ್ಡಾಯ ಶಿಕ್ಷಣವೆಂದು ಶಿಕ್ಷಣ ಕಲಿಯುವವರ ಪ್ರಮಾಣ ಹೆಚ್ಚಿಸಿ, ಹಣವನ್ನು ಕಿತ್ತು ಮಾರ್ಕ್ಸ್ ಕಾರ್ಡನಲ್ಲಿ ಡಿಗ್ರಿಗಳನ್ನು ಕೊಟ್ಟು ,ಸಂಬಳಕ್ಕಾಗಿ ವೃತ್ತಿ ಪಡೆಯುವಷ್ಟು ಸಾಕ್ಷರರನ್ನಾಗಿ ಮಾಡುವುದೇ? ಇಲ್ಲಾ ಅಲ್ಲವೇ ? ಯುವ ಪೀಳಿಗೆಯನ್ನು ವಿದ್ಯಾವಂತರಾಗಿಸುವ ಜೊತೆಗೆ ಜ್ವಲಂತ ಸವಾಲುಗಳನ್ನು ಅರಿತು, ತಮ್ಮ ಮುಂದಿನ ಭವಿಷ್ಯವನ್ನು ರೂಪಿಸಿಕೊಳ್ಳಲು,ಒದಗಿದ ಸವಾಲುಗಳನ್ನು ಎದುರಿಸಲು ಅನುವಾಗುವ ಸಂರಕ್ಷಣಾತ್ಮಕವಾದ ಜ್ಞಾನವನ್ನೂ, ವಿಚಾರವಂತಿಕೆಯನ್ನು ಬೆಳೆಸುವುದಾಗಿದೆ. ಆಗಿನ ಗುರುಕುಲ ಪದ್ದತಿಯು ಶಿಕ್ಷಣಕ್ಕಿಂತ ಇಂದಿನ ಶಿಕ್ಷಣವು ವ್ಯಾಪಕವಾಗಿ ಬೆಳದಿದೆ. ಈ ವ್ಯಾಪಕತೆ ಅವ್ಯವಸ್ಥಿತವಾಗಿ ತನ್ನ ರೆಂಬೆ ಕೊಂಬೆಗಳನ್ನು ಚಾಚಿದೆ. ಶಿಕ್ಷಣ ವ್ಯವಸ್ಥೆಯಲ್ಲಿ ಅನೇಕ ಸವಾಲುಗಳು ನಮ್ಮೆದುರು ನಾಯಿಕೊಡೆಯಂತೆ ಬೆಳೆಯುತ್ತಿವೆ. ಶಿಕ್ಷಣ ವ್ಯವಸ್ಥೆಯು ಎದುರಿಸುತ್ತಿರುವ ಸವಾಲುಗಳಿಗೆ ಸರ್ಜರಿ ಮಾಡಲೇ ಬೇಕಾದ ತುರ್ತು ಇದೆ. ಯಾವುದೇ ಶಾಲೆಯಿರಲಿ ಅಲ್ಲಿರುವ ಮೂಲ ಸೌಲಭ್ಯಗಳನ್ನು ಹೇಗೆ ಉಪಯೋಗಿಸಿಕೊಳ್ಳಲಾಗಿದೆ,ಅವುಗಳ ಬಳಕೆಯನ್ನು ದಿನನಿತ್ಯದ ಬದುಕಲ್ಲಿ ಹೇಗೆ ಮಕ್ಕಳಲ್ಲಿ ರೂಢಿಸಿಕೊಳ್ಳಲಾಗಿದೆ ಎಂಬುದು ಮುಖ್ಯ. ಕೆಲವು ಕಡೆ ಕುಡಿಯುವ ನೀರಿನ ಸೌಲಭ್ಯಗಳಿದ್ದರೂ,ನೀರಿನ ಟ್ಯಾಂಕುಗಳಿದ್ದರೂ,ಅವುಗಳ ಶುದ್ಧತೆ ಎಷ್ಟರಮಟ್ಟಿಗಿದೆ? ಶಾಲೆಗೆ ಕಾಂಪೋಂಡ್ ಇದ್ದರಾಯಿತೇ!? ಆಟದ ಮೈದಾನ ವಿದ್ದರಾಯಿತೇ? ಕೇವಲ ಮೂಲಭೂತ ಸೌಲಭ್ಯಗಳ ಕೊರತೆ ಇದೆ ಎಂದು ಬೆಟ್ಟು ಮಾಡಿದರೆ ಸಾಲದು ಉಳಿದ ಸೌಲಭ್ಯದ ಬಳಕೆಯ ಮೇಲೂ ಬೆಳಕು ಬೀರಬೇಕಿದೆ. ಶಿಕ್ಷಕರೆಂದರೆ ಸಾಕು ‘ಗಂಟೆ ಹೊಡಿ, ಸಂಬಳ ತಗೋ’ ಎನ್ನುವ ಮಾತಿದೆ. ಇದು ಎಷ್ಟರಮಟ್ಟಿಗೆ ಸತ್ಯವೋ ತಿಳಿಯದು ಆದರೆ ಇಂದಿನ ಶಿಕ್ಷಕ ಸಮುದಾಯವು ಶಿಕ್ಷಣ ನೀಡುವುದನ್ನು ಒಂದು ಸಂಬಳ ದೊರೆಯುವ ಕೆಲಸವನ್ನಾಗಿಯಷ್ಟೇ ಮಾಡುತ್ತಿದ್ದಾರೆ. ಶಿಕ್ಷಕರಾಗುವವರೆಗೆ ಏನೆಲ್ಲಾ ಕಷ್ಟಪಟ್ಟು ಸ್ಪರ್ಧಾತ್ಮಕವಾಗಿ ಓದಿರುತ್ತಾರೆ. ಆದರೆ, ಶಿಕ್ಷಕರಾಗಿ ಸೇರಿದ ನಂತರ ನಮ್ಮ ವಿದ್ಯಾರ್ಥಿಗಳು ಸರಿಯಾಗಿ ಕಲಿಯುತ್ತಿಲ್ಲ, ತುಂಟಾಟ ಜಾಸ್ತಿ, ಶಾಲೆಗೆ ಸರಿಯಾಗಿ ಬರುತ್ತಿಲ್ಲ, ಶಾಲೆಯಲ್ಲಿ ಅದು ಇಲ್ಲ ಇದು ಇಲ್ಲ. ಅಬ್ಬಬ್ಬಾ! ಇಂತಹ ಸಾಲು ಸಾಲು ಸಬೂಬುಗಳನ್ನು ನೀಡಿ ತಮ್ಮ ಕರ್ತವ್ಯಗಳಿಂದ ನುಣಿಚಿಕೊಂಡು ತಮ್ಮ ಸುತ್ತಾ ರಕ್ಷಣಾತಂತ್ರ ಹೆಣೆದುಕೊಂಡು ಬಿಡುತ್ತಾರೆ.ಇಂತಹ ಸವಾಲುಗಳನ್ನು ಸ್ವೀಕರಿಸಿ ಮಗುವನ್ನು ಕಲಿಕೆಯಲ್ಲಿ ತೊಡಗುವಂತೆ ಹೇಗೆ ಮಾಡವುದು ಎಂದು ಪ್ರಾಥಮಿಕವಾಗಿಯು ಚಿಂತನೆ ನೆಡೆಸುವುದಿಲ್ಲ. ಇನ್ನೂ ಶಾಲೆ ಬಿಟ್ಟ ಮಕ್ಕಳನ್ನು ಶಾಲೆಗೆ ತರುವ ಸವಾಲಿನ ಪ್ರಮುಖ ಕಾರಣ ‘ಪೋಷಕರ ನಿರಾಸಕ್ತಿ’ ಆಶ್ಚರ್ಯದಿಂದ ನೋಡದಿರಿ, ಶಾಲೆಗೆ ಕಳಿಸಲು ನಿರಾಸಕ್ತಿಯಂತೆ! ಇಡೀ ಸಮಾಜವೇ, ಬೆಳಗ್ಗೆ ಎದ್ದು ಮಕ್ಕಳಿಗೆ ಸ್ನಾನ ಮಾಡಿಸು, ಸಮವಸ್ತ್ರ ಹಾಕು, ಶಾಲೆಗೆ ಕಳುಹಿಸುವುದೇ ತಮ್ಮ ಬೆಳಗಿನ ಕರ್ತವ್ಯವೆನ್ನುವಂತೆ ಮಾಡುತ್ತಿರುವಾಗ ಪೋಷಕರ ನಿರಾಸಕ್ತಿಗೆ ಸಮಯವೆಲ್ಲಿದೆ ಹೇಳಿ? ಬಡತನ ವಿರಬಹುದು,ಮಕ್ಕಳಿಗೆ ಉಚಿತವಾಗಿ ಸಿಗುವ ಸೌಲಭ್ಯಗಳಿಂದ ಅವರನ್ನು ವಂಚಿಸುವ ಹಕ್ಕು ಪೋಷಕರಿಗಿಲ್ಲ. ಆದರೆ ಎಷ್ಟೋ ಪ್ರಕರಣಗಳಲ್ಲಿ ಮಗುವಿಗೆ ಕಲಿಯಲ್ಲಿ ಆಸಕ್ತಿ ಮೂಡುತಿಲ್ಲ. ‘ಕುದರೆಯನ್ನ ಕೆರೆವರೆಗೂ ಕರೆದುಕೊಂಡು ಬರಬಹುದು ಕೆರೆನೀರು ಕುಡಿಸೋಕೆ ಆಗುತ್ತಾ’,ಹಾಗೆಯೇ ಮಕ್ಕಳನ್ನು ಶಾಲೆಗೆ ಕರೆತರಬಹುದೇ ವಿನಃ ಹೆಚ್ಚಿನ ಆಸ್ಥೆ ವಹಿಸಿ ಶಾಲೆಯಲ್ಲಿ ಆ ಮಗುವನ್ನೇ ನೋಡಿಕೊಳ್ಳುವುದು ಸಾಧ್ಯವಿಲ್ಲ. ಇಂತಹ ವಿದ್ಯಾರ್ಥಿಗಳಿಗೆ ಸರ್ಕಾರ ವೃತ್ತಿ ಆಧಾರಿತವಾದ ಅಥವಾ ಕೌಶಲ್ಯ ಭರಿತ ಶಿಕ್ಷಣವನ್ನು ಪ್ರಾಥಮಿಕ ಹಂತದಿಂದಲೇ ಒದಗಿಸಿದ್ದೇ ಆದಲ್ಲಿ ಪೋಷಕರಿಗೂ, ಮಕ್ಕಳಿಗೂ ಅಔಪಚಾರಿಕ ಶಿಕ್ಷಣದ ನಿರಾಸಕ್ತಿ ಹೋಗಲಾಡಿಸ ಬಹುದಲ್ಲವೇ? ಎಷ್ಟೋ ಶಿಕ್ಷಕರು ಶಾಲೆಗಳಲ್ಲಿ ನಮಗೆ ಹೆಚ್ಚಿವರಿಯಾಗಿ ಜನಗಣತಿ,ಚುನಾವಣಾ ಕರ್ತವ್ಯ, ಮಗುವಿನ ವಿದ್ಯಾರ್ಥಿ ವೇತನ, ಆಧಾರ್ ಕಾರ್ಡ್, ಪಾಸ್ ಬುಕ್ ಮಾಡಿಸುವುದು ಸಾಲದಕ್ಕೆ ಇಲಾಖೆಗೆ ಮಾಹಿತಿ ನೀಡುವುದು, ವರದಿ ತಯಾರಿಸುವುದು ,ಬಿಸಿಯೂಟ ಹೀಗೆ ಸಮಯದ ವ್ಯರ್ಥವಾಗುತ್ತಿರುವುದರ ಬಗ್ಗೆ ದೂರುಗಳು ನೀಡುತ್ತಿರುತ್ತಾರೆ, ಆದರೇ ಎಷ್ಟು ಜನ ಶಿಕ್ಷಕರು ಶಾಲಾ ಸಮಯವನ್ನು ಶಾಲೆಗಾಗಿ ,ಮಕ್ಕಳಿಗಾಗಿ ಮೀಸಲಿಟ್ಟಿದ್ದಾರೆ? ಶಾಲೆಗೆ ಸಮಯಕ್ಕೆ ಸರಿಯಾಗಿ ಹಾಜರಿರುತ್ತಾರೆಯೇ? ಶಾಲಾ ವಿಶೇಷ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆಯೇ? ಪ್ರತಿ ವರ್ಷ ಶೈಕ್ಷಣಿಕ ಪ್ರಗತಿಯ ಬಗ್ಗೆ ಬೊಬ್ಬೆ ಹೊಡೆಯುವರು ತಮ್ಮ ಬೋಧನಾ ಕೌಶಲ್ಯಗಳಲ್ಲಿ ಮಾರ್ಪಾಡುಗಳನ್ನು ಮಾಡಿಕೊಳ್ಳುತ್ತಿದ್ದಾರೆಯೇ? ಎಂಬುದನ್ನೂ ಗಮನಿಸಬೇಕಿದೆ. ಗುಣಮಟ್ಟದ ಶಿಕ್ಷಕರ ನೇಮಕಾತಿ ಮಾಡಿಕೊಳ್ಳುವ ಧಾವಂತದಲ್ಲಿ ದಿನಕ್ಕೊಂದು ಹೊಸ ನಿಯಮಗಳನ್ನು ತರುತ್ತಿರುವುದಲ್ಲದೆ, ಅನಿಯಮಿತ ನೇಮಕಾತಿಯಿಂದಾಗಿ ಎಲ್ಲಾ ಹಂತದಲ್ಲೂ ಭ್ರಷ್ಠತೆಗೆ ಮಣೆ ಹಾಕುತ್ತಿದೆ. ನೇಮಕವಾದ ಶಿಕ್ಷಕರು ವಿಷಯವಾರುವಾಗಿರದೆ ಮಕ್ಕಳ ಅನುಪಾತಕ್ಕೆ ಅನುಗುಣವಾಗಿದೆ.ಸಾಲದಕ್ಕೆ ದೈಹಿಕ ಶಿಕ್ಷಣ, ಕಲಾ ಶಿಕ್ಷಕರು, ಕಂಪ್ಯೂಟರ್ ಶಿಕ್ಷಣ ಇವುಗಳು ಕೇವಲ ಅಂಕಪಟ್ಟಿ ವಹಿಯ ದಾಖಲೆಗೆ ಸೀಮಿತವಾಗಿಯೇ ಉಳಿದಂತಿದ್ದು ಈ ವಿಷಯದ ಶಿಕ್ಷಕರ ನೇಮಕ ಕನ್ನಡಿಯೊಳಗಿನ ಗಂಟಂತಾಗಿದೆ. ಇನ್ನೂ ಶಿಕ್ಷರ ವರ್ಗಾವಣೆ ರಾಜ್ಯಾದ್ಯಂತ ಸುದ್ದಿಯಲ್ಲಿದ್ದ,ಸುದ್ದಿಯಲ್ಲಿರುವ ಸಂಗತಿಯಾಗಿದೆ. ನಿರ್ದಿಷ್ಟ ನಿಯಮ ನಿರೂಪಿಸಿ, ನಿಯಮಿತವಾಗಿ ಕ್ರಮಗಳನ್ನು ಕೈಗೊಂಡಿದ್ದೇ ಆದಲ್ಲಿ, ತನು ಮನ ಸಮರ್ಪಣಾ ಭಾವದಿಂದ ಕೆಲವಾರು ಶಿಕ್ಷಕರು ಕರ್ತವ್ಯ ನಿರ್ವಹಿಸುತ್ತಾರೆ. ಇದೆಲ್ಲದರ ಮಧ್ಯೆ ಮಾಹಿತಿ ತಂತ್ರಜ್ಞಾನದ, ಜಾಗತೀಕರಣದ, ಓಟದ ಜೊತೆ ಜೊತೆಗೆ ಗುಣಾತ್ಮಕ ಶಿಕ್ಷಣ ನೀಡುವ ಗುರುತರ ಜವಾಬ್ದಾರಿ ಹೊತ್ತ ಶಿಕ್ಷಣ ವ್ಯವಸ್ಥೆ ಭಾರಕ್ಕೆ ಬಾಗಿದೆ. ಒಟ್ಟಿನಲ್ಲಿ ಶಿಕ್ಷಣ ಎನ್ನುವುದು ಎಲ್ಲಕ್ಕಿಂತ ಭಿನ್ನ ಮತ್ತು ವಿಶಾಲ ವ್ಯಾಪ್ತಿ ಹೊಂದಿರುವ ವ್ಯವಸ್ಥೆ .ಭಾರತದ ಭವಿಷ್ಯ ತರಗತಿ ಕೋಣೆಗಳಲ್ಲಿ ಮೂಲೆಗುಂಪಾಗದೆ, ನ್ಯೂನತೆಗಳೊಂದಿಗೆ ಬೆಳೆದರೂ, ಕೇಸರಲ್ಲಿ ಬೆಳೆದ ಕಮಲದಂತೆ ತನ್ನ ಪ್ರಾಮುಖ್ಯತೆ ಗಳಿಸಿ ಉಳಿಸಿಕೊಳ್ಳಬೇಕಿದೆ. ******************************************************************* ಪರಿಚಯ: ಶೃತಿ ಮೇಲಿಸೀಮೆ, ಹವ್ಯಾಸಿ ಬರಹಗಾರರು. ಗೆಣಿಕೆಹಾಳು( ಪೋಸ್ಟ್), ಕುರುಗೋಡು ತಾಲೂಕು, ಬಳ್ಳಾರಿ ಜಿಲ್ಲೆ

ಶಿಕ್ಷಣ Read Post »

ಕಾವ್ಯಯಾನ

ಕಾವ್ಯಯಾನ

ಮಲ್ಲಿಗೆ-ಸಂಪಿಗೆ ಅನು ಮಹಾಲಿಂಗ ಅಂಗಳದಿ ಹರಡಿತ್ತು ಹಸಿರಿನ ಮಲ್ಲಿಗೆ ಚಪ್ಪರ ಮಳೆಹೊಯ್ದು ತಂಪಾಗೆ ಸೊಂಪಾದ ಹಂದರ ಬಳ್ಳಿಯ ತುಂಬೆಲ್ಲ ಮಲ್ಲಿಗೆ ಹೂ ರಾಶಿ ಸಂಜೆಗೆ ಕೊಯ್ದರೆ ಮನೆತುಂಬ ಘಮ ಸೂಸಿ ಮನದೊಡೆಯ ತಂದಿರುವನು ಘಂಗುಡುವ ಮಲ್ಲಿಗೆ ನಾರಿಯ ಮುಡಿಯೇರಿ ನಗುತಿರಲು ಮೆಲ್ಲಗೆ ಹಿತ್ತಲ ಮರದಲ್ಲಿ ಬಿರಿದಾಳು ಸಂಪಿಗೆ ಘಮನವಾ ಸೂಸ್ಯಾಳು ಸುತ್ತೆಲ್ಲಾ ಸುಮ್ಮಗೆ ಬಾಲೆಯ ಮನ ಸೆಳೆಯೊ ಗಗನದ ಸಂಪಿಗೆ ಮುಡಿಸೇರಿಸಲು ಪರದಾಟ ಪಕ್ಕದ ಮನೆ ಕೆಂಪನಿಗೆ ಮಲ್ಲಿಗೆ ಸಂಪಿಗೆ ಪ್ರತ್ಯೇಕ ರಾಣಿಯರುಅವರವರ ಕಕ್ಷೆಯಲಿ ಅವರವರೆ ಬೀಗುವರು. ******************************

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಪ್ರಶ್ನೋತ್ತರ ರತ್ನನಂದಿನಿ (ಲತಾ ಆಚಾರ್ಯ) ಪ್ರೀತಿ ಅಂದರೇನು ಕೇಳಿದಳು ಅವಳು ಉತ್ತರಿಸದೆ ನಾನು ಸೊಸೆಯ ಕಡೆಗೊಮ್ಮೆ ಕೈಯ ತೋರಿಸುತ ಮುಗುಳ್ನಗೆಯ ಬೀರಿದೆ ಅರ್ಥವಾಗಿರಬೇಕು ಈಗ  ಆಕೆಗೆ  ಅಮ್ಮ ಮಗುವಿಗೆ ತುತ್ತು ಉಣ್ಣಿಸುತ್ತಿದ್ದಳು. ಸ್ನೇಹವೆಂದರೇನು ಮತ್ತೊಂದು ಪ್ರಶ್ನೆ ಈಗಲೂ ನಾನು ಮೌನ ದಿಟ್ಟಿಸಿದಳು ನನ್ನ  ಗೆಳೆಯನೋರ್ವನು ಬಂದು ಹೇಗಿರುವೆ ಎಂದನು ಮತ್ತದೇ ಅಸೌಖ್ಯ ತೋರಿದರೆ ಹೆದರದಿರು ನಾನಿರುವೆ ಜೊತೆಯಲ್ಲಿ ಎಂದಾಗ ಆಕೆ ಮೌನವಾಗಿದ್ದಳು. ಬೆಸುಗೆ ಎಂದರೇನು ಕೇಳಿದಳು ಈ ಬಾರಿ ಏನು ಹೇಳಲಿ ನಾನು ಮಾತು ಬಾರದು ನನಗೆ ಅವಳ ಗಲ್ಲವನು ಹಿಡಿದೆತ್ತಿ ಚುಂಬಿಸುತ ಬಾಹು ಬಂಧನದಲ್ಲಿ ಆಲಿಂಗಿಸಿದೆ  ಏನು ಅರ್ಥವಾಯಿತೋ ಅವಳು ತುಸು ನಕ್ಕಳು. ಕರುಣೆ ಎಂದರೇನು ಮಗದೊಂದು ಪ್ರಶ್ನೆ ಉತ್ತರಿಸಲಾರೆ ಎಂದವಳು ತಿಳಿದಿದ್ದಳು ಕಾಲು ಮುರಿದಿಹ ನಾಯಿಮರಿಯೊಂದನ್ನು ಮಗರಾಯ ಎತ್ತಿ ತರುತ್ತಿರುವುದನ್ನು ಕಿಟಿಕಿಯಿಂದಲೆ ತೋರಿಸಿದೆ ಓಹೋ ಎಂದು ತಲೆಯಾಡಿಸಿದಳು. ಇನ್ನೇನೋ ಪ್ರಶ್ನೆ ಕೇಳುವವಳಿದ್ದಳು ಹೊಟ್ಟೆಯೊಳಗೇನೋ ನೋವು ಯಾರೋ ತಿವಿದಂತೆ ನರಳಿದೆನು ಹೊರಳಾಡಿ ಮುಖವ ಕಿವುಚಿದೆನು ಅಮ್ಮ ಮಗನಲ್ಲಿ ಪಿಸುಗುಟ್ಟಿದಳು ಆಗ ಗೆಳೆಯನಿಗೂ ಕರೆ ಹೋಗಿ ಆತ ಬಂದಿದ್ದನು. ಅವಳೇಕೋ ಈಗ ಮೌನ ತಾಳಿದ್ದಳು ದವಾಖಾನೆಯಲಿ ಮಲಗಿದ್ದ ನನ್ನನ್ನು ದಿಟ್ಟಿಸುತ ಕೇಳಿದಳು ಮುತ್ತೈದೆ ಭಾಗ್ಯವನು ಕೊಡುವಿರೇನು ಪ್ರಶ್ನೆಗುತ್ತರಿಸದೆಯೇ ಮೊದಲ ಬಾರಿಗೆ ನಾನು  ಸೋತು ಹೋಗಿರುವಾಗ ಯಮರಾಯ ಸನಿಹದಲೆ ನಿಂತಿದ್ದನು *******************************

ಕಾವ್ಯಯಾನ Read Post »

ಇತರೆ

ಭಾಷೆ

ಮರಳಿ ಮರಳಿ ಬರಲಿದೆ  ರಾಜ್ಯೋತ್ಸವ…… ಗಣೇಶ  ಭಟ್ಟ ಶಿರಸಿ ಪ್ರತಿ ವರ್ಷವೂ ನವೆಂಬರ್  ಮೊದಲನೇ ತಾರೀಕಿಗೆ  ಕನ್ನಡಿಗರಿಗೆ  ಸಂಭ್ರಮ. ಕನ್ನಡ ಭಾಷಿಕ  ಪ್ರದೇಶಗಳೆಲ್ಲವೂ ಸೇರಿ ಒಂದೇ ರಾಜ್ಯವಾದ  ದಿನ- ಕನ್ನಡದ ಹಬ್ಬವನ್ನು  ಅದ್ಧೂರಿಯಾಗಿ  ಆಚರಿಸುವ  ಹೊಸ ಹೊಸ  ವಿಧಾನಗಳನ್ನು  ಕನ್ನಡ  ಪ್ರೇಮಿಗಳು ಆವಿಷ್ಕರಿಸುತ್ತಿದ್ದಾರೆ.  ಕಿಲೋ ಮೀಟರ್‌ಗಳಷ್ಟು  ಉದ್ದದ ಕನ್ನಡ ಧ್ವಜದ ಮೆರವಣಿಗೆ , ಕನ್ನಡ ಪರ ಹಾಡುಗಳ  ಹಿನ್ನೆಲೆಯಲ್ಲಿ  ಕುಣಿತ, ಸ್ತಬ್ಧ ಚಿತ್ರಗಳ ಮೆರವಣಿಗೆ  ಇತ್ಯಾದಿ ಇತ್ಯಾದಿ…  ಆದರೆ  ಕನ್ನಡಿಗರ ಪಾಡು ಅಮಾಯಕತೆ, ಬಡತನ, ಶೋಷಣೆ,   ನಿರುದ್ಯೋಗಗಳ ಅದೇ ಹಳೇ ಹಾಡು. ಕನ್ನಡವನ್ನು ಉಳಿಸಿ, ಬೆಳೆಸುವ  ಕುರಿತು  ಚಿಂತನಾ ಗೋಷ್ಠಿಗಳು,  ಚರ್ಚೆಗಳು ನಡೆದು ಅಬ್ಬರದ ಹೇಳಿಕೆಗಳು ಬಿಡುಗಡೆಯಾಗುತ್ತವೆ.  ತಾವು  ಕನ್ನಡ ಭಾಷೆಗೆ ಉಪಕಾರ ಮಾಡುತ್ತಿದ್ದೇವೆಂಬ ಮನೋಭಾವ ಹೊಂದಿದವರು ತಮ್ಮಿಂದಲೇ ಕನ್ನಡದ ಉಳಿವು, ಉದ್ದಾರವೆಂದು  ತೋರಿಸಿಕೊಳ್ಳುತ್ತಾರೆ.    ಆದರೆ ನಮ್ಮಿಂದ  ಕನ್ನಡವಲ್ಲ, ಕನ್ನಡದಿಂದ  ನಮ್ಮ  ಅಸ್ಮಿತೆ,  ಅಸ್ತಿತ್ವ, ಉಳಿವು ಎಂಬ ಸತ್ಯದ  ಅರಿವು ಹಲವರಿಗೆ  ಇಲ್ಲವಾಗಿದೆ.  ನಾವು ಫಲಕಗಳಲ್ಲಿ  ಕನ್ನಡವನ್ನು  ಬಳಸಲಿ ಅಥವಾ ಬಳಸದೇ ಇರಲಿ, ಸರ್ಕಾರಿ ಕಛೇರಿಗಳಲ್ಲಿ  ಕನ್ನಡದ ಬಳಕೆ ಆಗಲಿ ಅಥವಾ ಆಗದೇ ಇರಲಿ ; ಕನ್ನಡ   ಮಾಧ್ಯಮದ  ಶಿಕ್ಷಣ  ಇರಲಿ ಅಥವಾ ಇಲ್ಲದಿರಲಿ; ಏನೇ ಆದರೂ  ಕನ್ನಡ ಉಳಿದೇ  ಉಳಿಯುತ್ತದೆ. ಬಳಕೆಯ ಭಾಷೆಯಾಗಿರುವ  ಬದಲಿಗೆ  ಗ್ರಂಥಸ್ಥ ಭಾಷೆಯಾಗಿ  ಉಳಿದೇ ಉಳಿಯುತ್ತದೆ. ಕನ್ನಡದ  ಬಳಕೆ ನಿಂತು ಹೋದರೆ  ಇಡೀ ಕನ್ನಡ  ಸಮುದಾಯ ತನ್ನ ಅಸ್ತಿತ್ವ ಕಳೆದುಕೊಂಡು ಗುಲಾಮಗಿರಿಗೆ  ತಳ್ಳಲ್ಪಡುತ್ತದೆ ಮತ್ತು ನಿರಂತರ ಶೋಷಣೆಗೆ  ತುತ್ತಾಗುತ್ತದೆ ಎಂಬ  ವಾಸ್ತವದ  ಅರಿವಾದಾಗ ಮಾತ್ರ ಕನ್ನಡ  ರಾಜ್ಯೋತ್ಸವಕ್ಕೆ  ಅರ್ಥ ಬರುತ್ತದೆ.    ಭೌಗೋಳಿಕ  ವೈಶಿಷ್ಟ್ಯಗಳು, ಪರಿಸರ-ಪ್ರಾಕೃತಿಕ ವೈವಿದ್ಯತೆಗಳಿಂದಾಗಿ ಮಾನವರ ರೂಪ,ಆಕಾರÀಗಳು ಭಿನ್ನವಾಗಿ ರೂಪುಗೊಂಡಿತು. ಅದೇ ವಿಧದಲ್ಲಿ  ಭಾಷೆಗಳೂ ಭೌಗೋಳಿಕವಾಗಿ ವಿಕಾಸಗೊಂಡವು.  ಇದರಿಂದಾಗಿ ಜಗತ್ತಿನಲ್ಲಿ  ವಿವಿಧ ಭಾಷೆಗಳು ಅಸ್ತಿತ್ವಕ್ಕೆ ಬಂದವು. ಇವುಗಳಲ್ಲಿ  ಯಾವುದೂ ಮೇಲಲ್ಲ ಅಥವಾ ಕೀಳಲ್ಲ.  ಆದರೆ ಆ ಭಾಷಿಕ  ಸಮುದಾಯದ  ಆಂತರಿಕ ಭಾವನೆಗಳ ಅಭಿವ್ಯಕ್ತಿಗೆ  ಅಲ್ಲಿಯದೇ ಭಾಷೆಯ ಬಳಕೆಯಾಗಿ, ಅವರಲ್ಲಿ  ಆತ್ಮವಿಶ್ವಾಸ ಮೂಡಿಸಿ,   ಒಂದು ಸಮುದಾಯವಾಗಿ ಬಾಳಲು ಸಹಾಯಕವಾಯಿತು.  ಕನ್ನಡಿಗರ   ವೈಶಿಷ್ಟ್ಯಪೂರ್ಣ ಅಸ್ತಿತ್ವಕ್ಕೆ  ಕನ್ನಡವೇ ಕಾರಣ. ಭಾಷಾ ಶಾಸ್ತ್ರಜ್ಞರು ಹೇಳುವಂತೆ  ತೆಲಗು ಮತ್ತು ಕನ್ನಡ  ಅತಿ ಹತ್ತಿರದ ಭಾಷೆಗಳು.  ಆದರೆ  ಕನ್ನಡಿಗರು  ಮತ್ತು ತೆಲುಗು  ಭಾಷಿಕರ  ಚಿಂತನಾ ಕ್ರಮ, ಜೀವನ ವಿಧಾನ , ನಂಬಿಕೆಗಳು, ಸಾಮಾಜಿಕ  ವ್ಯವಸ್ಥೆಗಳಲ್ಲಿ ಸಾಕಷ್ಟು  ಭಿನ್ನತೆಯನ್ನು ಗುರ್ತಿಸಬಹುದು.    ಯಾವುದೇ ಪ್ರದೇಶದ  ಜನರನ್ನು  ಒಂದುಗೂಡಿಸಲು ಅಲ್ಲಿಯ  ಭಾಷೆ ಸಹಕಾರಿ.  ಕನ್ನಡ ಭಾಷಿಕರ  ಸಮುದಾಯವನ್ನು  ಒಂದುಗೂಡಿಸಲು ಕನ್ನಡವೇ ಬೇಕು.  ಆದರೆ  ನಮ್ಮ  ಭಾಷಾ ಬಾಂಧವ್ಯಕ್ಕಿಂತ  ಹೆಚ್ಚಾಗಿ ಜಾತಿ, ಮತ,  ಪಂಥಗಳ  ಸಂಬಂಧಗಳೇ ಮೇಲುಗೈ ಸಾಧಿಸುತ್ತಿವೆ. ಈ ಅನಿಷ್ಟಕಾರಿ  ಪ್ರವೃತ್ತಿ ಕೇವಲ ಕರ್ನಾಟಕಕ್ಕೆ   ಮಾತ್ರ ಸೀಮಿತವಲ್ಲ.  ಇಡೀ ಭಾರತಕ್ಕೆ  ತಗಲಿರುವ  ಘೋರ ವ್ಯಾಧಿ. ಜಾತಿ, ಮತ, ಪಂಥಗಳ ಸಂಕುಚಿತತೆ, ಅತಾರ್ಕಿಕತೆಗಳಿಂದ  ಬಿಡುಗಡೆ ಹೊಂದಿ ಒಂದು ಸಮುದಾಯವಾಗಿ ಕನ್ನಡಿಗರು ತಮ್ಮನ್ನು ಗುರ್ತಿಸಿಕೊಳ್ಳಲು   ನಮ್ಮ ಭಾಷೆಯೇ ಅನಿವಾರ್ಯ.  ನಮ್ಮ ನಡುವಿನ  ಬೇಧ, ಭಾವಗಳನ್ನು ಮರೆತು ನಾವೆಲ್ಲರೂ ಕನ್ನಡಿಗರು  ಎಂಬ ಒಗ್ಗಟ್ಟಿನ ಮನೋಭಾವ ಮೂಡಿಸಲು ಸಾಧ್ಯವಾಗದಿದ್ದರೆ ರಾಜ್ಯೋತ್ಸವ ಆಚರಣೆ ಅರ್ಥಹೀನ.     ರಾಜ್ಯೋತ್ಸವದ   ಆಚರಣೆಗಾಗಿ  ರಾಜ್ಯ  ಸರ್ಕಾರ  ಸಾಕಷ್ಟು  ಹಣ ವ್ಯಯಿಸುತ್ತದೆ.  ಅದು ಬರೀ ಬಾಹ್ಯ ಆಡಂಬರಕ್ಕೇ ಖರ್ಚಾಗುತ್ತದೆಯೇ ಹೊರತು  ಕನ್ನಡ  ಸಮುದಾಯದಲ್ಲಿ  ಒಗ್ಗಟ್ಟು ಸಾಧಿಸಲು ಅಲ್ಲ.  ಕನ್ನಡ  ಬಳಸಿ,  ಉಳಿಸಿ,  ಬೆಳಸಿ ಎನ್ನುವ  ಭಾಷಣ ವೀರ ರಾಜಕಾರಣಿಗಳು, ಸಾಹಿತಿಗಳು, ಅಧಿಕಾರಿಗಳು ಮುಂತಾದವರೆಲ್ಲರೂ ತಮ್ಮ ತಮ್ಮ ಸಂಕುಚಿತತೆ , ಸ್ವಾರ್ಥದ  ಚಿಪ್ಪಿನೊಳಗೇ ಇರ ಬಯಸುತ್ತಾರೆ.  ಬಲಿಷ್ಠ ಕನ್ನಡ ಸಮುದಾಯವನ್ನು   ರೂಪಿಸುವತ್ತ  ಇಂಥವರು  ಪ್ರಯತ್ನಿಸುವುದೇ ಇಲ್ಲ. ಇಂತಹ  ಗೋಸುಂಬೆಗಳನ್ನೇ ಆದರ್ಶವೆಂದು ಭಾವಿಸಿರುವ  ಜನಸಮಾನ್ಯರು   ಕೂಡಾ ಅದೇ ವಿಭಜಕ ಚಿಂತನೆಗಳ  ದಾಸರಾಗಿದ್ದಾರೆ.      ಕನ್ನಡ- ಕನ್ನಡ ಎಂದು ಘರ್ಜಿಸುವ  ಹೋರಾಟಗಾರರ ಬಾಯಿಯಿಂದಲೂ ಕನ್ನಡಿಗರನ್ನು ವಿಭಜಿಸಿರುವ  ಸಂಕುಚಿತತೆಯ ಸರಪಳಿಯನ್ನು ತುಂಡರಿಸುವ  ಘೋಷವಾಕ್ಯ   ಕೇಳಿ ಬರುವುದಿಲ್ಲ.  ಹಲವು ಸಂಘಟನೆಗಳು  ಪ್ರಾಮಾಣಿಕವಾಗಿ ಕನ್ನಡದ   ಕೆಲಸ ಮಾಡುತ್ತಿದ್ದಾರೆ.   ಆದರೆ ಕೆಲವು ರೋಲ್‌ಕಾಲ್  ಸಂಘಟನೆಗಳಿಂದಾಗಿ ಎಲ್ಲ ಕನ್ನಡ ಪರ ಸಂಘಟನೆಗಳನ್ನು  ಅನುಮಾನ,  ತಾತ್ಸಾರಗಳಿಂದ  ನೋಡುವ ಸನ್ನಿವೇಶ ನಿರ್ಮಾಣವಾಗಿದೆ.  ಕನ್ನಡ ಎನ್ನುವುದರ  ಜೊತೆಗೆ ಕನ್ನಡಿಗ ಎನ್ನುವ ಘೋಷಣೆಯೂ ಸ್ಥಾನ ಪಡೆದಾಗ ಈ ಹೋರಾಟಗಳ  ವಿಧಿ- ವಿಧಾನಗಳಲ್ಲಿ  ಮಹತ್ತರ  ಬದಲಾವಣೆಯಾಗಲಿದೆ.    ಕನ್ನಡ ಅನ್ನ  ಕೊಡುವ ಭಾಷೆಯಲ್ಲವೆಂದು  ಕೆಲವರ  ಹೇಳಿಕೆ-ಅತಾರ್ಕಿಕ, ಮೂರ್ಖತನದ್ದಾಗಿದ್ದರೂ ಕೂಡ  ಹೆಚ್ಚಿನ  ಜನ  ಇದನ್ನು   ನಂಬುವಂತೆ ಮಾಡಿದೆ.  ಶೇಕಡಾ ೯೦ ರಷ್ಟು ಕರ್ನಾಟಕದ   ನಿವಾಸಿಗಳು  ಕನ್ನಡದಿಂದಲೇ ಬದುಕು ಕಟ್ಟಿಕೊಂಡಿದ್ದಾರೆ.  ವೃತ್ತಿಪರ  ಕೋರ್ಸ್ಗಳನ್ನು ಅಧ್ಯಯನ  ಮಾಡಿ  ಮಾಸಿಕ ಲಕ್ಷಾಂತರ  ರೂಪಾಯಿ ಸಂಬಳ ಪಡೆಯುವ     ಕೆಲವರನ್ನು  ನೋಡಿ, ಇಂಗ್ಲೀಷ್‌ನಲ್ಲಿ  ಕಲಿತರೆ ಮಾತ್ರ ಇಷ್ಟೊಂದು ಗಳಿಕೆ ಸಾಧ್ಯವೆಂಬ ತಪ್ಪು  ಗ್ರಹಿಕೆಯೇ ಕನ್ನಡದ  ಅವಹೇಳನಕ್ಕೆ  ಕಾರಣ.    ಕನ್ನಡ   ಭಾಷಿಕರು ಒಂದೇ ರಾಜ್ಯದಲ್ಲಿ ಬಾಳಬೇಕೆಂದು ಬಯಸಿದ  ಹಿರಿಯರು,  ಕನ್ನಡಿಗರ  ಬದುಕು  ಉತ್ತಮವಾಗಿರಬೇಕೆಂದೂ ಬಯಸಿದ್ದರು. ಆದರೆ, ನಮ್ಮ ಕನ್ನಡ ನಾಡಿನಲ್ಲಿ ಇಂದು ಕನ್ನಡಿಗರೇ ಅನಾಥರಾಗಿರುವ  ಪರಿಸ್ಥಿತಿ ಉಂಟಾಗಿದೆ.  ಎಲ್ಲವೂ ಇದ್ದೂ,  ನಾವು ಏನೂ ಇಲ್ಲದಿರುವಂತವರಿದ್ದೇವೆ.    ಪ್ರತಿಯೋರ್ವ  ಕನ್ನಡಿಗನಿಗೂ ಕರ್ನಾಟಕದಲ್ಲೇ ದುಡಿಯುವ ಅವಕಾಶ  ಲಭ್ಯವಾಗಬೇಕು. ಬರ, ನೆರೆ,  ಪ್ರಾಕೃತಿಕ ವಿಕೋಪಗಳಿಂದಾಗಿ ಕನ್ನಡಿಗರು ತಮ್ಮ  ಮನೆ, ಊರು ತೊರೆದು ಪಕ್ಕದ ರಾಜ್ಯಗಳಿಗೆ  ಜೀವನೋಪಾಯಕ್ಕಾಗಿ ವಲಸೆ   ಹೋಗುವ   ಸ್ಥಿತಿ  ತಪ್ಪಬೇಕು.  ಇಂತಹ  ಕನ್ನಡ ನಾಡಿನ ನಿರ್ಮಾಣದ  ದೃಢಸಂಕಲ್ಪವನ್ನು ಮಾಡಿದರೆ ಮಾತ್ರ ರಾಜ್ಯೋತ್ಸವಕ್ಕೆ  ಬೆಲೆ ಬರುತ್ತದೆ.    ಪ್ರತಿಯೋರ್ವ ಕನ್ನಡಿಗನಿಗೂ ಕರ್ನಾಟಕದಲ್ಲೇ  ದುಡಿಯುವ ಅವಕಾಶ, ದುಡಿಮೆಯ ಪ್ರತಿಫಲದಿಂದ ತನ್ನ ಹಾಗೂ ತನ್ನ ಅವಲಂಬಿತರ  ಜೀವನದ  ಕನಿಷ್ಠ ಅಗತ್ಯತೆಗಳನ್ನು ಅಂದರೆ ಆಹಾರ, ಬಟ್ಟೆ, ವಸತಿ, ಶಿಕ್ಷಣ ಮತ್ತು ಔಷಧೋಪಚಾರ ಪೂರೈಸಿಕೊಳ್ಳುವ ಸಾಮರ್ಥ್ಯವಿರಬೇಕು. ಬಿಪಿಎಲ್  ಕಾರ್ಡ್ಗಾಗಿ  ಅರ್ಜಿ ಸಲ್ಲಿಸಿ ಕೈ ಜೋಡಿಸಿ ನಿಲ್ಲುವ  ದೈನ್ಯ ಸ್ಥಿತಿ  ಯಾವ ಕನ್ನಡಿಗನಿಗೂ  ಬರದಂತಹ  ಸ್ಥಿತಿಯನ್ನೂ ನಿರ್ಮಾಣ ಮಾಡುವ  ಪ್ರತಿಜ್ಞೆ ಮಾಡಿದಾಗ ಮಾತ್ರ ಕನ್ನಡ   ರಾಜ್ಯೋತ್ಸವ ಅರ್ಥಪೂರ್ಣ.    ಈ ಕನಸನ್ನು  ನನಸಾಗಿಸುವುದು ಸಾಧ್ಯವೇ ? ಎಂಬ ಪ್ರಶ್ನೆ ಮಾಡಿದರೆ ಆಶ್ಚರ್ಯ ಪಡಬೇಕಿಲ್ಲ.  ಯಾಕೆಂದರೆ ಇಂದು ನಾವು ಅನುಸರಿಸುತ್ತಿರುವ   ಆರ್ಥಿಕ ನೀತಿ, ಶಾಲಾ- ಕಾಲೇಜುಗಳಲ್ಲಿ  ಕಲಿಯುವ  ಇಕೊನೊಮಿಕ್ಸ್ ಕಲಿಸುತ್ತಿರುವುದೇ  ಬಂಡವಾಳವಾದಿ ತತ್ವಗಳನ್ನು  ಅಂದರೆ ಬುದ್ದಿ ಮತ್ತು ಹಣ ಬಲದಿಂದ ಎಲ್ಲರಿಗೂ ಸಲ್ಲಬೇಕಾದ ನ್ಯಾಯಯುತ  ಪಾಲನ್ನು ಕೆಲವರಷ್ಟೇ ತಮ್ಮ  ಹತೋಟಿಯಲ್ಲಿ  ಇಟ್ಟುಕೊಂಡು ಇತರರನ್ನು  ಇಲ್ಲದವರನ್ನಾಗಿಸುವ  ಅಮಾನವೀಯ ವ್ಯವಸ್ಥೆ.   ಎಲ್ಲರ  ಸುಖಕ್ಕಾಗಿ, ಎಲ್ಲರ ಅನುಕೂಲಕ್ಕಾಗಿ ಪರ್ಯಾಯ ಮಾರ್ಗದ ಕುರಿತಾಗಿ ಚಿಂತನೆ,  ಆವಿಷ್ಕಾರಗಳನ್ನು ಮಾಡುವ  ಕುರಿತು ತಥಾಕತಿಥ  ಆರ್ಥಿಕ ತಜ್ಞರು ಯೋಜಿಸುವುದೇ ಇಲ್ಲ.     ಲಾಭದಾಸೆಗಾಗಿ ಬರುವ ಹೊರಗಿನವರು ಬಂಡವಾಳ ಹೂಡುವುದರಿಂದ ಸ್ಥಳೀಯರ  ಅಭಿವೃದ್ಧಿಯಾಗುತ್ತದೆಂಬ ಭ್ರಮೆಯಲ್ಲೇ ಬದುಕುತ್ತಿದ್ದೇವೆ. ಕರ್ನಾಟಕದ  ಸಂಪನ್ಮೂಲಗಳನ್ನು ಆಧರಿಸಿ,  ಸಮಸ್ತ ಕನ್ನಡಿಗರ ಹಿತರಕ್ಷಣೆಯ ಗುರಿಯನ್ನಿಟ್ಟುಕೊಂಡು ಯೋಜನೆಗಳನ್ನು ರೂಪಿಸಿದಾಗ ಸಮೃದ್ಧ ಕರ್ನಾಟಕ ನಿರ್ಮಾಣ ಸಾಧ್ಯ.  ಸರ್ಕಾರಕ್ಕೆ  ಹೆಚ್ಚಿನ ತೆರಿಗೆ  ಹರಿದು ಬರುವುದೇ ಸಮೃಧ್ಧತೆಯ  ಲಕ್ಷಣವಲ್ಲ.  ಪ್ರತಿಯೋರ್ವ ಕನ್ನಡಿಗನಿಗೂ ಫಲಪ್ರದ ಉದ್ಯೋಗಾವಕಾಶ ಸೃಷ್ಟಿಯಾದಾಗ  ಮಾತ್ರ ಸಮೃದ್ಧ ಕರ್ನಾಟಕ  ಅರ್ಥಪೂರ್ಣ.    ಇಂದಿನ  ರಾಜಕೀಯ  ಪಕ್ಷಗಳಿಂದ  ಸಮೃದ್ಧ  ಕರ್ನಾಟಕದ ನಿರೀಕ್ಷೆ ಇಟ್ಟುಕೊಳ್ಳುವುದು ಅವಾಸ್ತವ. ರಾಷ್ಟ್ರೀಯ  ಪಕ್ಷಗಳಿಗೆ  ಇಡೀ ದೇಶದಲ್ಲಿ  ಅಧಿಕಾರ  ಪಡೆಯುವುದೇ ಗುರಿ. ಪರಸ್ಪರ  ದೂಷಣೆ,  ಅವಹೇಳನಗಳಲ್ಲಿ ತೊಡಗಿರುವ  ಇವರೆಲ್ಲರೂ ನಂಬಿರುವ  ಆರ್ಥಿಕ ಸಿದ್ಧಾಂತವೇ  ಬಂಡವಾಳವಾದ. ಆರ್ಥಿಕ  ಅಸಮಾನತೆಯನ್ನು  ಸಹಜವೆಂದು  ಒಪ್ಪುವ  ಬಂಡವಾಳವಾದವನ್ನು  ಅನಸರಿಸಿ ಆರ್ಥಿಕ ನ್ಯಾಯ ಒದಗಿಸುವುದು ಬರೀ ಕನಸು.  ರಾಷ್ಟ್ರೀಯ ಪಕ್ಷಗಳು ಪ್ರಾದೇಶಿಕ ಸ್ವಾವಲಂಬನೆಯನ್ನು ಇಷ್ಟ ಪಡುವುದಿಲ್ಲ.  ರಾಜ್ಯಗಳ  ನೇತಾರರನ್ನು  ತಮ್ಮ ಅಡಿಯಾಳಿನಂತೆ ನಡೆಸಿಕೊಳ್ಳುವುದು  ಅವರ  ಜಾಯಮಾನ.  ತಮ್ಮ ಪಕ್ಷ ಅಧಿಕಾರದಲ್ಲಿದೆ,  ಹೈಕಮಾಂಡ್‌ಗೆ ನಿಯಮಿತವಾಗಿ ಕಪ್ಪ-  ಕಾಣಿಕೆ   ಸಲ್ಲುತ್ತಿದೆ ಎನ್ನುವುದರಲ್ಲೇ ಅವರ ಆಸಕ್ತಿ ಸೀಮಿತವಾಗಿದೆ.     ಪ್ರಾದೇಶಿಕ ಪಕ್ಷವೆಂದು ಕರೆಸಿಕೊಳ್ಳುವ  ಜೆಡಿಎಸ್‌ನ ಚಿಂತನೆಗಳು ಬಿಜೆಪಿ ಅಥವಾ ಕಾಂಗ್ರೆಸ್‌ಗಿಂತ ಭಿನ್ನವಾಗಿಲ್ಲ.  ಇತರ  ರಾಜ್ಯಗಳಲ್ಲಿ ಅದರ ಅಸ್ತಿತ್ವ ಇಲ್ಲ ಎನ್ನುವ  ಕಾರಣದಿಂದಾಗಿಯೇ ಅದು  ಪ್ರಾದೇಶಿಕ  ಪಕ್ಷ.   ಕರ್ನಾಟಕವನ್ನು ಸ್ವಾವಲಂಬಿ ಸಮೃದ್ಧ ನಾಡನ್ನಾಗಿ ಪರಿವರ್ತಿಸುವ  ಯಾವುದೇ ಕನಸು ಅಥವಾ ಕಾರ್ಯಕ್ರಮ ಅವರಿಗಿಲ್ಲ.     ಇಂತಹ ಪರಿಸ್ಥಿತಿಯಲ್ಲಿ ಜನಾಂದೋಲನದಿಂದ ಮಾತ್ರ ಪರಿವರ್ತನೆ  ಸಾಧ್ಯ.  ಕರ್ನಾಟಕದ  ದುಡಿಮೆಯ  ಅವಕಾಶಗಳು ಕನ್ನಡಿಗರಿಗೇ ಮೀಸಲಿರಬೇಕೆಂಬ ಚಿಂತನೆ  ಕಳೆದ ಕೆಲವು ತಿಂಗಳುಗಳಿಂದ   ಪ್ರಚಾರದಲ್ಲಿದೆ.  ಈ ವಿಚಾರವನ್ನು  ಹರಿಬಿಟ್ಟ ಸಂಘಟನೆಗಳ ಹುರುಪು ಕಡಿಮೆಯಾದಂತೆ  ಕಾಣುತ್ತಿದೆ.  ಪ್ರಚಾರ ಪ್ರಿಯ  ನೇತಾರರು  ಬಹುಬೇಗ ನಿರಾಸೆ  ಅನುಭವಿಸುತ್ತಾರೆ.   ಯಾಕೆಂದರೆ ಇಂತಹ  ಚಳುವಳಿ ಜನಸಾಮಾನ್ಯರನ್ನು   ಒಳಗೊಳ್ಳುವಂತಾಗಲು ಸಮಯಬೇಕು.   ಪ್ರವಾಹದ ವಿರುದ್ಧ  ಸೆಣೆಸಾಡಬೇಕಾದ  ಕ್ಷೇತ್ರವಿದು.  ಪರ್ಯಾಯ ವ್ಯವಸ್ಥೆಯ ಕಲ್ಪನೆ ಇಲ್ಲದವರಿಂದ  ಇಂತಹ  ಹೋರಾಟವನ್ನು  ದೀರ್ಘಕಾಲದವರೆಗೆ  ಜೀವಂತವಾಗಿಡುವುದು  ಸಾಧ್ಯವಾಗಲಾರದು.  ಆದರೆ ಈ  ಚಿಂತನೆ , ಹೋರಾಟ ನಡೆದೇ ನಡೆಯುತ್ತದೆ.    ಸಾಮಾಜಿಕ- ಆರ್ಥಿಕ ಪರಿವರ್ತನೆಯಾಗುವಾಗ ಸೈದ್ಧಾಂತಿಕ ನೆಲೆಗಟ್ಟು ಅತಿ ಅಗತ್ಯ.  ನೇತಾರರಲ್ಲಿ ನೈತಿಕ   ಮೌಲ್ಯಗಳು ಮತ್ತು  ಸೈದ್ಧಾಂತಿಕ ಬದ್ಧತೆ ಇದ್ದಾಗ ಮಾತ್ರ ಬದಲಾವಣೆಯ ವೇಗ ತೀವ್ರವಾಗುತ್ತದೆ.  ಸಾಮೂಹಿಕ   ಮಾನಸಿಕತೆ  ಬದಲಾದಾಗ   ಮಾತ್ರ ಹೊಸ ವ್ಯವಸ್ಥೆ ಜಾರಿಗೆ ಬರುತ್ತದೆ.  ಇದಕ್ಕಾಗಿ ಶ್ರಮಿಸುವ      ನೇತಾರರಿಗಾಗಿ  ಕನ್ನಡನಾಡು ಕಾಯುತ್ತ್ತಿದೆ.  ತಮ್ಮನ್ನೇ ವೈಭವೀಕರಿಸಿಕೊಳ್ಳುವವರು ಅಲ್ಪಕಾಲದವರೆಗೆ  ಮಿಂಚುತ್ತಾರೆ ಹಾಗೂ ಅಷ್ಟೇ ಬೇಗ ಮರೆಯಾಗುತ್ತಾರೆ.        ರಾಜ್ಯೋತ್ಸವದ ನೆಪದಲ್ಲಿ,  ಕನ್ನಡದ  ಹೆಸರಿನಲ್ಲಿ  ಕುಣಿದು  ಕುಪ್ಪಳಿಸುವವರು ಇಂದು ಗಂಭೀರವಾಗಿ  ಯೋಚಿಸಲೇಬೇಕಾಗಿದೆ.   ಕನ್ನಡ ನಾಡಿನ  ಸಂಪತ್ತನ್ನು  ಹೊರಗಿನವರು ಲೂಟಿ ಹೊಡೆಯುತ್ತಿದ್ದರೆ ಕನ್ನಡ  ನಾಡಿನ  ಉದ್ಯೋಗಾವಕಾಶಗಳು ಹೊರಗಿನವರ ಪಾಲಾಗುತ್ತಿವೆ.  ಕನ್ನಡಿಗರು  ನಿರುದ್ಯೋಗಿಗಳಾಗುತ್ತಿದ್ದಾರೆ.  ತಮ್ಮದೇ ನಾಡಿನಲ್ಲಿ  ನಿರಾಧಾರಿಗಳಾಗುತ್ತಿದ್ದಾರೆ. ಇಂತಹ ಅನ್ಯಾಯವನ್ನು  ಸರಿಪಡಿಸುವ  ಕುರಿತು ಕಾರ್ಯಪ್ರವೃತ್ತರಾಗಬೇಕಿದೆ. ರಾಜಕೀಯದ  ಥಳಕು, ಬಳುಕಿಗೆ  ಮರುಳಾಗಿ  ಕೇಂದ್ರ ನಾಯಕರ  ಗುಲಾಮಗಿರಿ ಮಾಡುತ್ತಾ,  ಕನ್ನಡಿಗರಿಗಾಗುತ್ತಿರುವ  ಅನ್ಯಾಯದ  ವಿರುದ್ಧ ಸೊಲ್ಲೆತ್ತದಿರುವ  ಜನಪ್ರತಿನಿಧಿಗಳಿಗೆ  ಬಿಸಿ ಮುಟ್ಟಿಸುವ ಕೆಲಸಮಾಡಬೇಕಿದೆ.    ಸಮೃದ್ಧ, ಸ್ವಾವಲಂಬಿ , ಸ್ವಾಭಿಮಾನಿ ಕರ್ನಾಟಕದ  ಕನಸನ್ನು ಕಾಣಬಲ್ಲವರು ಮಾತ್ರ ಇದನ್ನು  ನನಸಾಗಿಸಬಲ್ಲರು.   ವಿಕೇಂದ್ರೀಕೃತ  ಆರ್ಥಿಕ ವ್ಯವಸ್ಥೆಯ  ಜಾರಿಯಿಂದ  ಇದು ಸಾಧ್ಯ.  ನಮ್ಮ ನಡುವಿನ  ಹಲವು ಭೇದ  ಭಾವಗಳನ್ನು  ದೂರೀಕರಿಸಿ, ನಮ್ಮನ್ನು ನಾವು ಕನ್ನಡಿಗರೆಂದು  ಗುರ್ತಿಸಿಕೊಳ್ಳುವ  ಮನೋಭಾವದೊಂದಿಗೆ  ಈ ವರ್ಷದ ರಾಜ್ಯೋತ್ಸವ ಆಚರಿಸೋಣ.  ಡಿಜೆ ಸೌಂಡ್‌ನ  ಗೀತೆಗಳಿಗೆ  ಹೆಜ್ಜೆ ಹಾಕಿ ಕುಣಿಯುವಾಗ  ಅಸಹಾಯಕ ಕನ್ನಡಿಗರ  ಸ್ಥಿತಿಯನ್ನು  ಮರೆಯದಿರೋಣ.    ಶೋಷಣಾ  ರಹಿತ  ಕನ್ನಡನಾಡು  ಕಟ್ಟುವ  ದೃಢನಿರ್ಧಾರ  ತಳೆದು ರಾಜ್ಯೋತ್ಸವದ ಶುಭಾಶಯ ವಿನಿಮಯ  ಮಾಡಿಕೊಳ್ಳೋಣ.    ***********************************************************************         

ಭಾಷೆ Read Post »

You cannot copy content of this page

Scroll to Top