ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಅಂಕಣ ಸಂಗಾತಿ

ಶಿವಮೊಗ್ಗ ಜಿಲ್ಲೆಯ ಚಳುವಳಿಗಳು

ಡಾ.ಸಣ್ಣರಾಮ (ಹಿಂದಿನ ವಾರದಿಂದ) ಕಳೆದ ಸಂಚಿಕೆಯಿAದ…  ಶಿವಮೊಗ್ಗ ಜಿಲ್ಲೆಯ ಚಳವಳಿಗಳು  ದೈವದ ಪ್ರೇರಣೆ ಎನ್ನುವಂತೆ ಅನಿಮಿಷ ಗುರುಗಳ ದರ್ಶನವನ್ನು ಪಡೆಯುತ್ತಾರೆ. ಅಲ್ಲಮ ಪ್ರಭುವಿನ ಬದುಕಿನಲ್ಲಿ ಕಾಮಲತೆಯ ಪ್ರವೇಶ ಮತ್ತು ಮರಣ, ಅನಿಮಿಷ ಗುರುವಿನ ಸಂದರ್ಶನ ಸಂದರ್ಭಗಳು ಹೊಸ ಸಾಧನೆಯ ದಿಕ್ಕನ್ನು ತೋರಿದವು. ಅವನ ಸಾಧನೆಯಿಂದ ಅದನು ಬಹುದೊಡ್ಡ ಅನುಭಾವಿಯಾಗಿ ಮಾರ್ಪಟ್ಟನು. ಬಸವಣ್ಣನವರ ಕ್ರಾಂತಿಗೆ ಕೈ ಜೋಡಿಸಿದ ಮಹಾ ಸಾಧಕನಾಗಿ ಗುರುತಿಸಿಕೊಂಡು ಕರ್ನಾಟಕದ ಶರಣ ಚಳುವಳಿಯ ಇತಿಹಾಸದಲ್ಲಿ ಮುಖ್ಯ ಸ್ಥಾನವನ್ನು ಪಡೆದುಕೊಂಡನು.  ಅಲ್ಲಮ ಪ್ರಭುವಿನ ಬದುಕು ಕೇವಲ ಚಿಂತನೆ, ವಚನ ರಚನೆಗೆ ಮಾತ್ರ ಸೀಮಿತವಾಗಿರಲಿಲ್ಲ. ಲೋಕದ ಜನರ ಬದುಕನ್ನು ತಿದ್ದಿ ಅವರ ಜೀವನ ಸರಿ ದಾರಿ ತೋರಲು ಶ್ರಮಿಸಿದ. ಅಲ್ಲದೆ ಸಾಧಕರು ಇದ್ದಲ್ಲಿಗೆ ಹೋಗಿ ಅವರಲ್ಲಿದ್ದ ಕುಂದು ಕೊರತೆಗಳನ್ನು ತಿದ್ದಿ ಶರಣ ಚಳುವಳಿಗೆ ಪೂರಕ ಶಕ್ತಿಯಾಗುವಂತೆ ಮಾರ್ಪಡಿಸಿದರು. ದೀನ ದಲಿತರನ್ನು ಸಂತೈಸಿ ಸಮಾಜ ಸೇವೆಗೆ ತೊಡಗಿಸಿಕೊಂಡನು. ಬಸವಣ್ಣನವರ ಸಾಮಾಜಿಕ ಕ್ರಾಂತಿಗೆ ಪೂರ್ಣ ಬೆಂಬಲವಾಗಿ ನಿಂತನು. ಅನುಭವ ಮಂಟಪದ ಅಧ್ಯಕ್ಷನಾಗಿ ವೀರಶೈವ ತತ್ವ-ಚಿಂತನಾ ಮಂಥನ ಸಭೆಗಳನ್ನು ನಿಯಂತ್ರಿಸಿ ಮಹಾಶರಣ ನೆನೆಸಿಕೊಂಡನು.  ಅಲ್ಲಮಪ್ರಭು ಚಿಂತಕನೆಂತೋ ಹಾಗೆಯೇ ವಚನ ರಚನಾ ಕೌಶಲ್ಯವನ್ನು ಪಡೆದಿದ್ದನು.ಅಂತೆಯೇ ಬೆಡಗಿನ ವಚನಕಾರನೆಂದೇ ಪ್ರಸಿದ್ದಿಯನ್ನು ಪಡೆದವರು. ಅವರ ವಚನಗಳಲ್ಲಿ ನೀತಿ ಇದೆ. ಕಟು ವಿಡಂಬನೆಯಿದೆ, ತತ್ವವಿದೆ, ಬದುಕಿನ ಪೂರ್ಣತೆಯ ಹುಡುಕಾಟವಿದೆ. ಅನುಭವವಿದೆ, ಅವರ ನಿರಾಕಾರ ತತ್ವವಂತು ಚಿಂತಕರನ್ನು ಚಕಿತಗೊಳಿಸುತ್ತದೆ.  ಸ್ಪಟಿಕದ ದೀಪದಂತೆ ಒಳ ಹೊರಗು ಇಲ್ಲ ನೋಡಾ  ವಿಗಡ ಚರಿತ್ರಕ್ಕೆ ನಾ ಬೆರಗಾದೆನು  ನೋಡಿದರೆ ಕಾಣ ಬರುತ್ತದೆ, ಮುಟ್ಟಿದರೆ ಕೈಗೆ ಸಿಲುಕದು  ಹೊದ್ದಿದರೆ ಸಮೀಪ ಹತ್ತ ಸಾರಿದಡೆ ಅತ್ತತ್ತ ತೋರುತಿದೆ  ಆಕಾರ ನಿರಾಕಾರವೆ ನುಂಗಿ ಬಯಲು ಸಮಾಧಿಯಲ್ಲಿ ಸಿಲುಕಿತ್ತು  ನೋಡಾ ಗುಹೇಶ್ವರಾ  ಈ ವಚನದಲ್ಲಿ ಪ್ರಭುದೇವ ಸೃಷ್ಠಿಯ ಅನಂತತೆಯನ್ನು ಕಟ್ಟಿಕೊಡಲು ಪ್ರಯತ್ನಿಸಿದ್ದಾರೆ. ಸೃಷ್ಟಿ ನಿತ್ಯ ನೂತನವಾದದು, ನಿರಂತರ ಚಲನಾಶೀಲೆ, ಅದರ ಗಹನತೆಯನ್ನು ಅರ್ಥೈಸಿಕೊಳ್ಳಲು ಸಾಧನವಲ್ಲದೆ ಸಾಮಾನ್ಯನಿಗೆ ಸಾಧ್ಯವಿಲ್ಲ. ಸೃಷ್ಟಿಯ ಆಂತರ್ಯ ಸಂಭವಿಸುವ ವಿದ್ಯಮಾನವನ್ನು ಅಲ್ಲಮನಷ್ಟು ಸಶಕ್ತವಾಗಿ ಕಟ್ಟಿಕೊಟ್ಟವರು ವಿರಳ. ಆಕಾಶ-ನಿರಾಕಾರ ಬಯಲು ಸಮಾಧಿ ಈ ಪದಗಳ ಸಂದರ್ಭೋಚಿತ ಬಳಕೆ ವಿದ್ವಾಂಸರನ್ನು ಬೆರಗುಗೊಳಿಸುತ್ತದೆ.  ಶರಣರು ಇರದ ಲೋಕಕ್ಕೆ ಮಹತ್ವವವನ್ನು ಕೊಟ್ಟವರು, ಪರಲೋಕದ ತಾಪತ್ರಯದಿಂದ ದೂರವಿದ್ದವರು. ನಮ್ಮ ಸಮಾಜದಲ್ಲಿ ನಡೆಯುತ್ತಿರುವ ಮೂಢನಂಬಿಕೆ, ಕಂದಾಚಾರವನ್ನು ನೇರ ಮಾತುಗಳಿಂದ ಖಂಡಿಸಿದವರು, ನೇರ ನುಡಿಯ ಅಲ್ಲಮಪ್ರಭು ಅಂತರAಗ ಶುದ್ದಿಗೆ ಅಪಾರ ಮಹತ್ವವನ್ನು ಕೊಟ್ಟವರು.  ಸುತ್ತಿ ಸುತ್ತಿ ಬಂದಡಿಲ್ಲ, ಲಕ್ಷ ಗಂಗೆಯ ಮಿಂದಡಿಲ್ಲ,  ತುಟ್ಟ ತುದಿಯ ಮೇಲು ಗಿರಿಯ ಮೆಟ್ಟಿ ಕೂಗಿದಡಿಲ್ಲ  ನಿತ್ಯ ನೇಮದಿಂದ ತನುವ ಮುಟ್ಟಿಕೊಂಡಡಿಲ್ಲ  ನಿಚ್ಚಕ್ಕೆ ನಿಚ್ಚ ನೆನೆವ ಮಾನವ ಅಂದAದಿಗೆ ಅತ್ತಲಿತ್ತ ಹರಿವ ಮನದ  ಚಿತ್ತದಲಿ ನಿಲಿಸಬಲ್ಲದೆ  ಬಚ್ಚ ಬರಿಯ ಬೆಳಗು ಗುಹೇಶ್ವರ ಲಿಂಗವು.  ಭಾರತೀಯ ತತ್ವಜ್ಞಾನ ಇಹಕ್ಕಿಂತ ಪರಕ್ಕೆ ಹೆಚ್ಚಿನ ಮಹತ್ವವನ್ನು ಕೊಡುತ್ತದೆ. ಪರಲೋಕ ಸಾಧಿಸಲು ಅನೇಕ ಬಗೆಯ ದೈಹಿಕ ಕಸರತ್ತನ್ನು ಆಚರಿಸಲು ಹೇಳುತ್ತದೆ. ಪರಲೋಕ ಇದೆಯೋ ಇಲ್ಲವೋ ಎಂಬುದನ್ನು ಪ್ರಮಾಣಿಸಿ ಹೇಳಿದವರು ಯಾರು ಇಲ್ಲ. ಶರಣರು ಇಹಕ್ಕೆ ಹೆಚ್ಚಿನ ಮಹತ್ವವನ್ನು ಕೊಟ್ಟವರು. ಅಲ್ಲಮಪ್ರಭು ಇದನ್ನೇ ಈ ವಚನದಲ್ಲಿ ಪ್ರತಿಪಾದಿಸಿದ್ದಾರೆ. ಮನಸ್ಸನ್ನು ನಿಯಂತ್ರಿಸದೆ ಎಷ್ಟು ಲೋಕವನ್ನು ಸುತ್ತಿದರೂ ಪೂರ್ಣತ್ವ ಪ್ರಾಪ್ತವಾಗುವುದಿಲ್ಲ ಎಂದು ಅಲ್ಲಮ ತೀಕ್ಷ÷್ಣವಾಗಿ ಪ್ರತಿಪಾದಿಸಿದ್ದಾರೆ. ಅಲ್ಲಮ ಪ್ರಭು ಒಬ್ಬ ದಾರ್ಶನಿಕ ಶರಣ. ತತ್ವಜ್ಞಾನಿಯಾಗಿ, ಸಂಘಟಕನಾಗಿ, ಸಮಾಜ ಸುಧಾರಕನಾಗಿ, ಬೆಡಗಿನ ವಚನ ರಚನಾಕಾರನಾಗಿ ಅವರ ಕೊಡುಗೆ ಅಪಾರ.  ಶಿವಶರಣರ ಚಳವಳಿಯಲ್ಲಿ ಪುರುಷರಷ್ಟೇ ಮಹಿಳೆಯರಿಗೂ ಸರಿಸಮಾನ ಸ್ಥಾನಮಾನಗಳಿದ್ದವು. ಎಂದಿಲ್ಲದ ಮಹಿಳೆಯರು ಶರಣ ಚಳವಳಿಯಲ್ಲಿ ಪಾಲ್ಗೊಂಡು ಅಪರೂಪದ ವಚನಗಳನ್ನು ರಚಿಸಿದ್ದೇ ಇದಕ್ಕೆ ಸಾಕ್ಷಿ. ವಚನಗಾರ್ತಿಯರಲ್ಲಿ ಮಂಚೂಣಿಯಲ್ಲಿ ಕಂಡು ಬರುವವಳು ಅಕ್ಕಮಹಾದೇವಿ. ಅದು ಕವಯಿತ್ರಿಯಾಗಿ, ಮಹಿಳಾವಾದಿಯಾಗಿ ಅಕ್ಕಳ ಬದುಕ ಮಾದರಿಯಾದುದು ಹತ್ತನೆ ಶತಮಾನದಲ್ಲಿ ಕಂತಿ ಎಂಬ ಹೆಸರಿನ ಮಹಿಳೆಯೋರ್ವಳು ಕೆಲವು ಸಾಲುಗಳ ಸಾಹಿತ್ಯವನ್ನು ರಚಿಸಿರಬಹುದೆಂಬುದರ ಊಹೆಯ ಹೊರತಾಗಿ ಅಕ್ಕ ಆದ್ಯ ಕವಯಿತ್ರಿಯಾಗಿ ಸಾಹಿತ್ಯ ಲೋಕಕ್ಕೆ ಸ್ಮರಣೀಯ ಕೊಡುಗೆಯನ್ನು ನೀಡಿದ್ದಾಳೆ. ಕೇವಲ ಕರ್ನಾಟಕ ಮಾತ್ರವಲ್ಲ ಭಾರತೀಯ ಚರಿತ್ರೆಯಲ್ಲಿ ಮಹಿಳಾ ವಾದದ ಪ್ರಾಚೀನತೆಯನ್ನು ಹುಡುಕುತ್ತಾ ಹೋಗುವವರಿಗೆ ಮೊಟ್ಟ ಮೊದಲಿಗೆ ಕಂಡು ಬರುವ ಹೆಸರೇ ಅಕ್ಕಮಹಾದೇವಿ. ಆಧುನಿಕ ಮಹಿಳಾ ವಾದದ ಎಲ್ಲಾ ಗುಣ ಸ್ವಭಾವಗಳು, ಹೋರಾಟಗಳು ಅಕ್ಕನಲ್ಲಿ ಕಂಡು ಬರುತ್ತವೆ. ಅಕ್ಕ ಪುರುಷ ಕೇಂದ್ರಿತ ಎಲ್ಲಾ ಕಟ್ಟು ಕಟ್ಟಲೆಗಳನ್ನು ಒಡೆದು ಛೀದ್ರಗೊಳಿಸಿ 12 ನೇ ಶತಮಾನದ ವೇಳೆಗಾಗಲೇ ಮಹಿಳಾ ಸ್ವಾಭಿಮಾನವನ್ನು ಪ್ರತಿಪಾದಿಸಿದವಳು. ಅವಳ ಬದುಕೇ ಅಷ್ಟು ರೋಚಕ ಸಂಕಥನ.  ಆಧುನಿಕ ಮಹಿಳಾವಾದವು ಸ್ತ್ರೀಯ ಮೈ-ಮನಸ್ಸುಗಳ ಮೇಲೆ ಪುರುಷನ ಹಕ್ಕನ್ನು ಧಿಕ್ಕರಿಸುತ್ತದೆ. ಹೆಣ್ಣಿನ ಮೇಲಿನ ದೌರ್ಜನ್ಯವನ್ನು ಸಮಾನತೆ ಮುಕ್ತ ಆಯ್ಕೆಯ ಹಕ್ಕುಗಳನ್ನು ಪ್ರತಿಪಾದಿಸುತ್ತದೆ. ಒಂದೊಮ್ಮೆ ಈ ಹಕ್ಕುಗಳು ಲಭ್ಯವಾಗಿದಿದ್ದರೆ ಅದನ್ನು ಪ್ರತಿಭಟನೆಯ ಮೂಲಕ ಪಡೆದುಕೊಳ್ಳುವ ಹಿಂದೇಟು ಹಾಕಕೂಡದೆಂದು ಪ್ರತಿಪಾದಿಸುತ್ತದೆ. ಈ ಎಲ್ಲಾ ಬಗೆಯ ಪ್ರತಿಭಟನೆಯನ್ನು ಅಂದೇ ಅಕ್ಕಮಹಾದೇವಿ ಮಾಡಿ ತೋರಿದ್ದಳು. ಆದ್ದರಿಂದ ಅಕ್ಕ ಮಹಾದೇವಿ ಆಧುನಿಕರಿಗೆ ಆಧುನಿಕ ಮಹಿಳಾ ಹೋರಾಟಗಾರ್ತಿ ಎಂದರೆ ತಪ್ಪಾಗಲಾರದು.  ಮೊದಲ ಮಹಿಳಾವಾದಿ ಅಕ್ಕಮಹಾದೇವಿ ಜನಿಸಿದ್ದು ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲ್ಲೂಕಿನ ಉಡುತಡಿಯಲ್ಲಿ. ಈಗ ಅದು ಉಡುಗಣಿಯಾಗಿದೆ. ತಂದೆ ನಿರ್ಮಲಶೆಟ್ಟಿ ತಾಯಿ ಸುಮತಿ, ಗುರು ಲಿಂಗದೇವರು ಲಿಂಗಧಾರಣೆ ಮಾಡಿದವರು. ಚಿಕ್ಕಂದಿನಿಂದಲೇ ಶಿವಭಕ್ತಳಾದ ಅಕ್ಕಮಹಾದೇವಿ ಲೌಕಿಕ ಜೀವನದಲ್ಲಿ ನಿರಾಶಕ್ತಿಯನ್ನು ಹೊಂದಿದ್ದಳು. ಯೌವನದ ಹೊಸ್ತಿಲಲ್ಲಿ ಅಕ್ಕ ಅಸಾಧಾರಣ ಸೌಂದರ್ಯವತಿಯಾಗಿದ್ದಳು. ಅನಿರಿಕ್ಷಿತ ಸಂದರ್ಭದಲ್ಲಿ ಅಕ್ಕನನ್ನು ಕಂಡ ಕೌಶಿಕ ಮಹಾರಾಜ ಮದುವೆಯಾಗಲು ಬಯಸುತ್ತಾನೆ. ತಂದೆ-ತಾಯಿಯರಿಗೆ ಕೌಶಿಕನನ್ನು ಮದುವೆ ಮಾಡಲು ಇಷ್ಟವಿಲ್ಲದಿದ್ದರೂ ಅವನಿಂದ ತನ್ನ ತಂದೆ ತಾಯಿಗೆ ಆಗಬಹುದಾದ ಹಿಂಸೆಯನ್ನು ಮನಗಂಡು ಷರತ್ತುಬದ್ದ ಮದುವೆಯಾಗಲು ಒಪ್ಪುತ್ತಾಳೆ. ಕೌಶಿಕ ಅಕ್ಕಳ ಷರತ್ತನ್ನು ಒಪ್ಪಿ ಮದುವೆಯಾಗುತ್ತಾನೆ. ಅಕ್ಕಳ ಷರತ್ತನ್ನು ಪಾಲಿಸದ ಕೌಶಿಕ ಅಕ್ಕ ಶಿವಪೂಜೆಯಲ್ಲಿ ನಿರತಳಾಗಿದ್ದಾಗ ಮುಟ್ಟಲು ಮುಂದಾಗುತ್ತಾನೆ. ಆ ಸಂದರ್ಭದಲ್ಲಿ ಅಕ್ಕಳ ಮುಂದೆ ಎರಡು ಆಯ್ಕೆಗಳಿರುತ್ತವೆ. ಕೌಶಿಕನೊಂದಿಗೆ ಹೊಂದಿಕೊಂಡು ಸಂಸಾರವನ್ನು ಒಪ್ಪಿಕೊಳ್ಳುವುದು, ಇನ್ನೊಂದು ಇಹದ ವೈಭೋಗವನ್ನು ದಿಕ್ಕರಿಸಿ ಸ್ವತಂತ್ರವಾಗಿ ಬದುಕುವುದು. ಅಕ್ಕ ಎರಡನೆಯದ್ದನ್ನೆ ಆಯ್ಕೆ ಮಾಡಿಕೊಳ್ಳುತ್ತಾಳೆ. ಭಕ್ತಿ ಭಂಡಾರಿಯಾಗಿದ್ದ ಅಕ್ಕಮಹಾದೇವಿ ಪರಾಧೀನತೆಯ ಬದುಕನ್ನು ದಿಕ್ಕರಿಸಿ ನಿಲ್ಲುತ್ತಾಳೆ. ಈ ನಿರ್ಧಾರ ಅಕ್ಕಳ ಬದುಕಿನ ಬಹುದೊಡ್ಡ ತಿರುವಾಗಿ ಮಹಿಳೆಯರ ಸ್ವಾಭಿಮಾನದ ಬದುಕಿಗೆ ಮಾದರಿಯಾಗಿ ನಿಂತಿದ್ದಾಳೆ. ಇತಿಹಾಸದ ಪುಟದಲ್ಲಿ ಚಿರಸ್ಥಾಯಿಯಾಗಿ ಉಳಿಯುವಂತೆ ಮಾಡಿದೆ.  ಹಿಡಿಯದಿರು ತಡೆಯದಿರು ಬಿಡು ಬಿಡು ಕೈಯ ಸೆರಗ  ಭಾಷೆಯ ಬರೆದುಕೊಟ್ಟು ಸತ್ಯಕ್ಕೆ ತಪ್ಪಿದರೆ  ಅಘೋರ ನರಕ ವೆಂದರಿಯ- ಎಂದು ಅಕ್ಕಮಹಾದೇವಿ ಪರಿಪರಿಯಾಗಿ ಬೇಡುತ್ತಾಳೆ. ಒಪ್ಪದಿದ್ದಾಗ ತಿರಸ್ಕರಿಸಿ ಉಟ್ಟ ಬಟ್ಟೆಯನ್ನು ಬಿಚ್ಚೊಗೆದು ಕೇಶಾಂಬರಿಯಾಗಿ ಕೂಡಲ ಸಂಗಮಕ್ಕೆ ಹೊರಟು ಬಿಡುತ್ತಾಳೆ. – ಮುಂದುವರೆಯುತ್ತದೆ…

ಶಿವಮೊಗ್ಗ ಜಿಲ್ಲೆಯ ಚಳುವಳಿಗಳು Read Post »

ಇತರೆ

ಪ್ರಬಂಧ

ಅಪ್ಪ ಅಂದರೆ ಆಕಾಶ = ಅಮ್ಮ ಅಂದರೆ ಭೂಮಿ. ಬಸನಗೌಡ ಪಾಟೀಲ ಹೆಗಲಿಗೆ ಕೊಡಲಿ ಹಾಕಿಕೊಂಡು ಸೂರ್ಯೋದಯವಾಗುತ್ತಿದ್ದಂತೆ ಹೊಲದ ಕಡೆ ಹೋದಾತ ಮರಳಿ ಮನೆಗೆ ಬರುವುದು ಸೂರ್ಯ ತಾಯಿಯ ಮಡಿಲು ಸೇರಿದ ಮೇಲೆಯೆ. ಮುಳ್ಳು ಕಂಟಿ ಕಡಿಯೋದು ನೀರು ಹಾಯೊಸೋದು, ಗೊಬ್ಬರ ಹರವುವುದು ಮಣ್ಣು ಹದ ಮಾಡುವುದು ಒಂದಾ ಎರಡಾ ಅವನ ಕೆಲಸ. ಸುರಿಯುವ ಮಳೆಯಲ್ಲಿ ಇಕ್ಕೆಲದ ರಸ್ತೆಯಲ್ಲಿ ನೀರು ತುಂಬಿದ ಗುಂಡಿಗಳಲ್ಲಿ ನಡೆದುಕೊಂಡು ಮನೆ ಸೇರೋ ಕಷ್ಟ ಅವನಿಗೆ ಮಾತ್ರ ಗೊತ್ತು. ಅದಕ್ಕೆ ಅನ್ನೋದು ಅಪ್ಪ ಅಂದ್ರೆ ಆಕಾಶ ಅಂತ. ಸಾದಾ ಸೀದಾ ಚಪ್ಪಲಿ, ವರ್ಷಕ್ಕೆರಡು ಬನೀನು, ಕಡ್ಡಿ ಕಿತ್ತು ಅನೇಕ ಬಾರಿ ರಿಪೇರಿಗೊಳಗಾಗದ ಕೊಡೆ, ಟಾರ್ಚ, ಹೊಲ, ಎತ್ತು, ಕೆರೆ, ಕುಟುಂಬ ಅವನ ದಿನ ನಿತ್ಯದ ಸರ್ವಸ್ವಗಳು. ನನ್ನ ಮಕ್ಕಳು ಹೆಂಡತಿಯನ್ನ ಪ್ರೀತಿಯಿಂದ ಸಾಕಿ ಸಲಹಬೇಕು ಎಂಬ ಉದ್ದೇಶದಿಂದ ಹಗಲಿರುಳೆನ್ನದೆ ಗಾಳಿ,ಮಳೆ ಲೆಕ್ಕಿಸದೇ ಉರಿಯುವ ಬಿಸಿಲಿನಲ್ಲಿಯೂ ಬೆವರು ಹರಿಸುತ್ತ ದುಡಿದು ಮನೆಗೆ ಬೆಳಕಾಗುವ ಮೇಣವೇ ಅಪ್ಪ. ಪ್ರತಿ ಮನೆಯಲ್ಲಿ ಶಾಲೆಯ ವಾತಾವರಣ ಇರೋಕೆ ಕಾರಣ ತಾಯಿಯಾದರೇ ಶಿಸ್ತಿನ ಕಾರ್ಖಾನೆಯೆ ಅಪ್ಪ. ಹೆಂಡತಿಯೊಡನೆ ತನ್ನ ಕಷ್ಟ ಹೇಳಿಕೋಳ್ಳದ ಆತ ಅವಳನ್ನು ರಾಣಿಯಂತೆ ಮಕ್ಕಳನ್ನು ಯುವರಾಜ ಯುವರಾಣಿಯರಂತೆ ಸಾಕಲು ಪ್ರಯತ್ನಿಸುವ. ತಾನು ಒದ್ದೆಯಾದರೆ ತನ್ನ ಎದೆಯಡಿ ಮಕ್ಕಳ ಅಪ್ಪಿ ರಕ್ಷಿಸುವ. ತಾನು ಬಿಸಿಲಲ್ಲಿ ಬೆಂದರು ಪರವಾಗಿಲ್ಲ ಮಕ್ಕಳು ಬಿಸಿಲಿಗೆ ಬರಬಾರದು ಎಂದು ಅಂದುಕೊಳ್ಳುವ. ಅದರಂತೆಯೆ ಅವರನ್ನು ಶಿಕ್ಷಣದ ಹಾದು ತುಳಿಸುವ. ಇಂತಹ ಮಹಾನ್ ತ್ಯಾಗಿಯನ್ನು ಬಿಟ್ಟು ಅದೇಷ್ಟೋ ಮಕ್ಕಳು ವಿದೇಶಕ್ಕೇ ಹೋಗುವರು..! ಇನ್ನು ಅನೇಕ ಮಾಹಾನು ಭಾವರು ವೃದ್ಧಾಶ್ರಮಕ್ಕೆ, ಅನಾಥಾಶ್ರಮಕ್ಕೆ ನೂಕುವರು..! ನಿಜವಾಗಿಯೂ ಇವರು ಇಂದಿನ ಸಮಾಜದ ಅಪರಾಧಿಗಳಲ್ಲದೆ ಮತ್ತಿನ್ನೇನು..? ಜಾತ್ರೆಯಲ್ಲಿ ತೇರು ಕಾಣದೇ ಹೋದಾಗ ತನ್ನ ಹೆಗಲ ಮೇಲೆ ಹೊತ್ತು ಕೊಂಡು ದೇವರ ದರ್ಶನ ಮಾಡಿಸುವ. ಅದ್ಯಾಗು ನಮಗೂ ಅನೇಕ ಬಾರಿ ದೇವರೇ ಕಂಡಿರುವುದಿಲ್ಲ ಯಾಕೇ ಹೇಳಿ..? ನಾವು ಕುಳಿತಿರುವ ಹೆಗಲೆ ದೇವರದು ಅಂತಾ ನಮಗೆ ಆಗ ಗೊತ್ತಿರುವುದಿಲ್ಲ. ಇನ್ನೂ ಅಪ್ಪನ ಕೋಪಕ್ಕೆ ಕೆಲಬಾರಿ ತುತ್ತಾಗಿ ಬೆತ್ತದ ಪೆಟ್ಟು ತಿನ್ನುವಾಗ ಕಾಪಾಡುವವಳೆ ಅವ್ವ. ಅಲ್ಲಿ ಇಲ್ಲಿ ಸ್ವಲ್ಪ ಉಳಿಸಿ, ವ್ಯಾಪಾರದಲ್ಲಿ ಚೌಕಾಸಿ ಮಾಡಿ ಉಳಿಸಿದ ಹಣವನ್ನು ಹಂಡನಿಗೆ ಕಾಣದ ಹಾಗೆ ಮಕ್ಕಳಿಗೆ ನೀಡುವಳು. ಅವಳೆ ನಮ್ಮ ಭಾಲ್ಯದ ಮೊದಲ ಸ್ವಿಸ್ ಬ್ಯಾಂಕ್. ತಾನು ಮಾತ್ರ ಹರಿದ ಸೀರೆಗೆ ಹೊಲಿಗೆ ಹಾಕುತ್ತ ಅದರಲ್ಲೆ ದಿನಗಳ ಕಳೆಯುವಳು. ಅಪ್ಪ ಒಂದು ದಿನವೂ ಶೋಕಿ ಮಾಡಿದವನಲ್ಲ. ಮಧ್ಯ ಸೇವಿಸಿದವನಲ್ಲ. ಎಷ್ಟೇ ಕಷ್ಟ ಬಂದರು ಕುಸಿದಿಲ್ಲ ಇನ್ನು ಅವ್ವ ತಾನು ಒಂದು ತುತ್ತು ಕಡಿಮೆ ಉಂಡು ಮಕ್ಕಳ ಗಂಡನ ಹಸಿವಿ ನೀಗಿಸುವಳು. ಇವರ ಇಷ್ಟೇಲ್ಲ ಉಳಿತಾಯ ನಿಸ್ವಾರ್ಥ ಬದುಕು ನಮಗಾಗಿ ಅಲ್ಲದೇ ಮತ್ತಿನ್ಯಾರಿಗೇ ಸ್ವಲ್ಪ ಚಿಂತಿಸಿ..? ಮಕ್ಕಳು ಬೆಳೆದು ಯುವಕ ಯುವತಿಯರಾದಾಗ ನೋಡಬೇಕು ಅವರ ಜಂಬ. ಮುಖದ ಮೇಲೆ ಮೇಸೆ ಮೂಡಿರುವುದಿಲ್ಲ ಅವನಿಗೆ ಆಗಲೆ ತಾಯಿಗೆ ಏಕವಚನದಲ್ಲಿ ನಿಂದಿಸಲೂ ಶುರು ಮಾಡುವ. ಇನ್ನು ಮಗಳೋ ರಾತ್ರಿಯೆನ್ನದೆ ಸಮಯದ ಮೀತಿ ಮೀರಿ ಮನೆಗೆ ಬರುವಳು ಪ್ರಶ್ನಿಸಿದ ಪಾಲಕರಿಗೆ ನನಗೆ ಸ್ವಾತಂತ್ರö್ಯವೇ ಇಲ್ಲ ಎಂದ ಅವರನ್ನು ದೂರುವಳು. ತಂದೆ ತಾಯಿ ಬಾವನೆಗಳಿಗೆ ಬೆಲೆ ಕೊಡದೆ ಕಲಿಯುವ ವಯಸ್ಸಲ್ಲಿ ಪ್ರೀತಿ ಪ್ರೇಮ ಎಂದು ಮೋಹದ ಬಲೆಯೊಳಗೆ ಬೀಳುವರು. ತಮ್ಮನ್ನು ಇಲ್ಲಿಯ ತನಕ ಬೆಳೆಸಲು ತಂದೆ ತಾಯತಿ ಪಟ್ಟ ಕಷ್ಟ ಮರೆತು ಬೀಡುವರು. ಇನ್ನು ಹೆಂಡತಿಯ ಮಾತು ಕೇಳಿ ತಂದೆ ತಾಯಿಯನ್ನು ವೃದ್ಧಾಶ್ರಮಕ್ಕೆ ಬಿಟ್ಟು ಬರುವುದು ಮಗನ ಮಹಾನ್ ಕಾರ್ಯವಾದರೇ ಬೇರೆ ಮನೆಗೆ ಸೊಸೆಯಾಗಿ ಹೋದಾಕೆ ಮಾವ ಅತ್ತೆಯರ ಸೇವೆ ಮಾಡದಾಕೇ ಎಂದಿಗೂ ಉತ್ತಮ ಮಗಳಾಗಲಾರಳು. ಎಲ್ಲ ತಂದೆ ತಾಯಿಗಳು ತಮ್ಮ ಕೊನೆಗಾಲದಲ್ಲಿ ತಮ್ಮ ಹತ್ತಿರ ಮಕ್ಕಳು ಇರಬೇಕು ಎಂದು ಬಯಸುವರು. ಏಕೇ ಹೇಲಿ ತಮ್ಮ ಶಕ್ತಿಯನ್ನು ಬಸಿದು ಅವರು ನಮ್ಮ ಸಾಕಿ ಸಲಹಿಹರು. ಅವರಿಗೂ ಆಸೆ ತಮ್ಮ ವದೃದ್ಧಾಪ್ಯದಲ್ಲಿ ಮಕ್ಕಳು ನಮ್ಮನ್ನು ಸಾಕುವರು ಎಂದು. ಒಂದು ಕ್ಷಣ ಯೋಚಿಸಿ ಆಡವಾಡಲು ಅಂಗಳಕ್ಕೆ ಹೋದಾಗ ಬಿದ್ದು ಮೋಣಕಾಲು ಕೆತ್ತಿಸಿಕೊಂಡಾಗ ಅವ್ವ ಓಡಿ ಬಂದು ತನ್ನ ಸೆರಗು ಹರಿದು ಕಟ್ಟಿಲ್ಲವೇ..? ಇನ್ನು ಅಪ್ಪ ನಮ್ಮ ಹೊತ್ತು ಕೂಸುಮರಿ ಮಾಡಿಲ್ಲವೇ..? ಯೌವ್ವನ ಬಂದು ನೌಕರಿ ತಗೊಂಡು ಹಣ ಜೇಬಲ್ಲಿ ಬಂದಾಕ್ಷಣ ತಂದೆ ತಾಯಿಗಳನ್ನು ಕಡೆಗಣಿಸುವುದು ಸರಿಯಲ್ಲ. ತಂದೆ ತಾಯಿಯನ್ನು ಆಶ್ರಮದಲ್ಲಿ ಬಿಟ್ಟು, ಹಳ್ಳಿಯಲ್ಲಿಯೇ ಇರಿಸಿ, ಇಲ್ಲಬೇರೆ ಮನೆ ಮಾಡಿ ಇರಿಸಿ ದಿನ ಕಳೆಯುವವರಿಗೆ ಒಂದು ಕಿವಿಮಾತು. ನೀವು ಗಳಿಸಿದ ಆಸ್ತಿ, ಕಾರು, ಮನೆ, ಅಂದು ಅವ್ವ ಅಪ್ಪನ ಒಂದು ದಿನದ ಕೂಲಿಗೆ ಸಮ. ನೆನಪಿರಲಿ ನಮಗೂ ವಯಸ್ಸಾಗುವುದು.

ಪ್ರಬಂಧ Read Post »

ಕಾವ್ಯಯಾನ

ಕಾವ್ಯಯಾನ

ಸಾವಿನ ಸಾಂಗತ್ಯದಲ್ಲಿ ಮಧುಸೂದನ ಮದ್ದೂರು ಸಾವೆಂಬ ಸೂತಕದ ಹಕ್ಕಿ ರಕ್ಕೆ ಬಿಚ್ಚಿ ಹಾರುತ್ತಿದೆ ಯಾವ ಜೀವಗಳೆಂಬೋ ಹಣ್ಣ ಕಚ್ಚಿ ತಿಂದು ರಕ್ಕೆ ಪಟಪಟಿಸಿ ಗಗನದ ಚಿಕ್ಕೆಯಾಗಲಿದೆಯೋ ಬಲ್ಲವರು ಯಾರು ? ಸಾವೆಂಬ ಮಾಂತ್ರಿಕನ ಮಂತ್ರಬೂದಿಯ ಸೆಳತೆಗೆ ಸಿಲುಕಿ ಮಾಯವಾಗುವ ಮಾಯಕಾರರೆಷ್ಟೋ ಬಲ್ಲವರು ಯಾರು? ಸಾವೆಂಬ ಬುಟ್ಟಿಯಲಿ ಕಣ್ಕಟ್ಟಿನ ಯಕ್ಷಿಣಿಕಾರನ ಯಕ್ಷಿಣಿ ಕೋಲಿನ ಮಂತ್ರಕೆ ಅತಳ ಸುತಳ ಪಾತಾಳ ಸೇರುವವರೆಷ್ಟೋ ಬಲ್ಲವರು ಯಾರು? ಬಡವ-ಬಲ್ಲಿದ ಅಧಿಕಾರಸ್ಥ-ವ್ಯವಹಾರಸ್ಥ ಕಲೆಕಾರ-ಓಲೆಗಾರ ಯಾಂತ್ರಿಕ-ಮಾಂತ್ರಿಕ ವಿಜ್ಞಾನಿ-ಅಜ್ಞಾನಿ ಎಂಬೋ ಬೇಧ ಭಾವ ಎಣಿಸದ ಸಾವೆಂಬೋ ಸಾಹುಕಾರನೆದರು ಚೆಲ್ಲಾಟಗಾರನೆದುರು ಗೋಣು ಚೆಲ್ಲಲೇಬೇಕಲ್ಲವೇ…?

ಕಾವ್ಯಯಾನ Read Post »

ಪುಸ್ತಕ ಸಂಗಾತಿ

ಪುಸ್ತಕ ಪರಿಚಯ

ಕೃತಿ-ಗುಣ (ಕಾದಂಬರಿ) ಲೇಖಕರು-ಡಾ.ಗುರುಪ್ರಸಾದ್ ಕಾಗಿನೆಲೆ ಛಂದ ಪುಸ್ತಕ ಡಾ.ಅಜಿತ್ ಹರೀಶಿ ಶಿವಮೊಗ್ಗದಲ್ಲಿ ಹುಟ್ಟಿ ಬಳ್ಳಾರಿಯಲ್ಲಿ ಎಂಬಿಬಿಎಸ್.ಎಂಡಿ ಮಾಡಿ ಪ್ರಸ್ತುತ ಅಮೆರಿಕದಲ್ಲಿ ಎಮರ್ಜೆನ್ಸಿ ವೈದ್ಯರಾಗಿ ಕೆಲಸಮಾಡುತ್ತಿರುವ ಗುರುಪ್ರಸಾದರು ಬರೆದಿರುವ ಕಾದಂಬರಿಯಿದು. ಬಿಳಿಯ ಚಾದರ,ಗುಣ ಮತ್ತು ಹಿಜಾಬ್ ಅವರ ಪ್ರಕಟಿತ ಕಾದಂಬರಿಗಳು. ನಿರ್ಗುಣ, ಶಕುಂತಳಾ ಕಥಾಸಂಕಲನಗಳು, ಲೇಖನ ಸಂಗ್ರಹ-ವೈದ್ಯ ಮತ್ತೊಬ್ಬ, ಆಚೀಚೆ ಕಥೆಗಳು- ಸಂಪಾದಿತ ಕಥಾಸಂಕಲನಗಳನ್ನು ಇವರು ಪ್ರಕಟಿಸಿದ್ದಾರೆ. ಹಿಂದಿನ ದಶಕದಲ್ಲಿ ಅಮೆರಿಕೆಯಲ್ಲಿ ಘಟಿಸಿರಬಹುದಾದ, ಈ ದಶಕದಲ್ಲಿ ಭಾರತದ ಮಹಾನಗರಗಳಲ್ಲಿ ನಡೆಯುತ್ತಿರಬಹುದಾದ ಮತ್ತು ಮುಂದಿನ ದಿನಮಾನಗಳಲ್ಲಿ ನಾವೇ ಕಾಣಬಹುದಾದ ವಿಶಿಷ್ಟ ಕಥಾನಕವೇ ‘ ಗುಣ ‘ ಎನ್ನಬಹುದು. ಇದು ವಿದೇಶಿ ನೆಲದಲ್ಲಿ ಚಲಿಸುವ ಘಟನಾವಳಿಗಳ ನೋಟವಾದರೂ ಇದರ ಕೇಂದ್ರ ಭಾರತೀಯ ಮನಸ್ಥಿತಿಯೇ ಆಗಿದೆ. ಗೌತಮ ಮತ್ತು ಭಾರತಿ ಎಂಬ ವೈದ್ಯರ ಬದುಕಿನ ಕಥೆಯನ್ನು ಹೇಳುತ್ತಾ ವಾಸ್ತವದ ಮೇಲೆ ಬೆಳಕನ್ನು ಚೆಲ್ಲುತ್ತದೆ. ಅಮಿಗ್ಡಲ್, ಥ್ಯಾಲಮಸ್, ಹೈಪೊಥ್ಯಾಲಮಸ್ ಸೇರಿ – ‘ಅಮಿಗ್ಡಲ ಸರ್ಕ್ಯೂಟ್’ ಆಗುತ್ತದೆ. ಈ ಸರ್ಕ್ಯೂಟ್ ಬೇಗ ಫೈರ್ ಆಗುತ್ತದೆ. ಇದರಿಂದ ಸಿಟ್ಟು ಬಲು ಬೇಗ ಬರುತ್ತದೆ. ಅದೇ ಹೈಪೊಥ್ಯಾಲಮಸ್, ಥ್ಯಾಲಮಸ್ ಜೊತೆ ಪ್ರಿಫ್ರಂಟಲ್ ಕಾರ್ಟೆಕ್ಸ್ ಸೇರಿದರೆ ‘ ಪ್ರಿಫ್ರಂಟಲ್ ಸರ್ಕ್ಯೂಟ್’ ಆಗುತ್ತದೆ. ಇದು ಶಾಂತಿ, ಪ್ರೀತಿ ಮತ್ತು ತಾಳ್ಮೆಯ ಸರ್ಕ್ಯೂಟ್ ‌. ಸೋ…. ಪ್ರಿಫ್ರಂಟಲ್ ಸರ್ಕ್ಯೂಟ್ ಸ್ಟಿಮ್ಯುಲೇಟ್ ಮಾಡಿಕೊಳ್ಳೋಣ. ಇದೇ ‘ ಮೈಂಡ್ ಫುಲ್ ಅವೇರ್ ನೆಸ್’ ಎಂಬಂತಹ ಶಕ್ತಿಯುತ ವೈದ್ಯಕೀಯ ಸಾಲುಗಳನ್ನು ಇಲ್ಲಿ ಕಾಣಬಹುದಾಗಿದೆ. ಜೊತೆಗೆ ಗೌತಮ ಮತ್ತು ಮಲಿಸ್ಸಾ ಎಂಬ ನರ್ಸ್ ಇರುವಾಗ ನಡೆಯುವ ಪೋಲಿ ಸಾಲುಗಳೂ ಇವೆ. ಗೌತಮ ಮತ್ತು ಭಾರತಿ ಅವರ ಮಗಳು ಕ್ಷಮಾಳ ಪಾತ್ರ ಸಶಕ್ತವಾಗಿದ್ದು ಗಮನ ಸೆಳೆಯುತ್ತದೆ. ಸ್ಟೀವ್ ವಾರೆನ್, ಕೀರ್ತಿ ಎಂಬ ಗೇ ಗಳ ಸಮಸ್ಯೆ ಮತ್ತು ಬದುಕು ಕಾಡುತ್ತದೆ. ಗುಂಡಪ್ಪ ಮತ್ತು ನರಸಿಂಹರಾಯರು ಈಗ ಬೆಂಗಳೂರಿನಲ್ಲಿ ಅಥವಾ ನಮ್ಮೂರಿನಲ್ಲಿ ಸಿಗಬಹುದು. ಅಂತೆಯೇ ಶಕುಂತಳಾ ಬಾಯಿ ಎಂಬ ಟಿಪಿಕಲ್ ವುಮನ್ ಕೂಡ. ಜನರೇಷನ್ ಗ್ಯಾಪ್, ಇಂದಿನ ತಲೆಮಾರು ಬಳಸುವ ಪದಪುಂಜ ಗೌತಮ ಮತ್ತು ಭಾರತಿ ಎಂಬ ಪಾಲಕರನ್ನು ಮಾತ್ರವಲ್ಲ, ನಮ್ಮನ್ನೂ ಯೋಚನೆಗೀಡುಮಾಡುತ್ತದೆ. ಫ್ರೆಂಡ್, ಬಾಯ್ ಫ್ರೆಂಡ್, ಗರ್ಲ್ ಫ್ರೆಂಡ್ ಗಳ ವ್ಯತ್ಯಾಸ ಪತ್ತೆ ಹಚ್ಚುವುದು ಅಷ್ಟು ಸುಲಭವಲ್ಲ. ಹೀಗೆ ವಿವಿಧ ಆಯಾಮಗಳನ್ನು ಹೇಳುತ್ತಾ ಕಥೆ ತೆರೆದುಕೊಳ್ಳುವ ಪರಿ ಅನನ್ಯವಾದುದು. ಒಂದು ಉತ್ತಮ ಕಾದಂಬರಿ ‘ಗುಣ’. ಗುಣಮಟ್ಟದ ಓದಿಗಾಗಿ ಖಂಡಿತಾ ಈ ಕೃತಿಯನ್ನು ಓದಿ.

ಪುಸ್ತಕ ಪರಿಚಯ Read Post »

You cannot copy content of this page

Scroll to Top