ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ನಮ್ಮ ಕವಿ

ಕಾವ್ಯನಮನ

ಕೆ.ಬಿ.ಸಿದ್ದಯ್ಯ ನಮ್ಮನ್ನು ಅಗಲಿದ ಕವಿ ಮತ್ತು ಅದ್ಭುತ ಸಂಘಟನಾಕಾರರಾದ ಹಿರಿಯ ಚೇತನ ಶ್ರೀ ಕೆ.ಬಿ.ಸಿದ್ದಯ್ಯನವರಿಗೆ ಸಂಗಾತಿ ಬಳಗ ಶ್ರದ್ದಾಂಜಲಿ ಸಲ್ಲಿಸುತ್ತಿದೆ ಕವಿಮಿತ್ರ ಶ್ರೀಬಿದಲೋಟಿರಂಗನಾಥ್ ಅವರ ಕವಿತೆಯ ನುಡಿ ನಮನ ಹೊಳೆದು ಉರುಳಿದ ನಕ್ಷತ್ರ ಕೆ ಬಿ ಸಿದ್ದಯ್ಯ ಕತ್ತಲೊಡನೆ ಮಾತಾಡುತ್ತ ದಕ್ಲದೇವಿ ಕಥೆಗಳನ್ನು ಹೇಳುತ್ತ ಗಲ್ಲೆಬಾನಿಯಲಿ ನೆನಪುಗಳ ಕಲೆಸಿದ ಬಕಾಲ ಮುನಿಯೇ… ನಿಮ್ಮದು ಚಿಟ್ಟೆಗೆ ಜೀವ ತುಂಬಿದ ಜೀವ. ಮೌನದಲಿದ್ದು ನಲುಗಿ ಒಂದು ಮಾತೂ ಹೇಳದೆ ಎದ್ದೋದ ಕರುಳು ಬಂಧುವೇ… ಇಷ್ಟು ಬೇಗ ಹೋಗಬೇಕಿತ್ತೆ ? ನಿಮ್ಮ ಖಾಲಿಯಾದ ಪೆನ್ನಿಗೆ ಇಂಕನ್ನು ತುಂಬದೇ.. ಅನಾಥವಾಗಿ ಮಾಡಿ.. ನಿಮ್ಮ ಕರುಳು ಕಲೆತ ಮಾತುಗಳಲ್ಲಿ ಎಷ್ಟೊಂದು ಆತ್ಮೀಯ ಭಾವ ತುಂಬಿತ್ತು ಕಣ್ಣುಗಳಲ್ಲಿ ಎಷ್ಟೊಂದು ಕವಿತೆಗಳು ಮರಿಹಾಕಿ ಹೊಳಪಿನ ಕನ್ನಡಿಯಾಗಿತ್ತು ನನ್ನ ಸಂಕಲನಕ್ಕೆ ಮುನ್ನುಡಿ ಗೀಚುತ್ತೇನೆಂದು ಹೇಳುತ್ತಲೇ ಖಾಲಿ ಉಳಿದವು ನೀವು ಬರೆಯಬೇಕಿದ್ದ ಆ ಪುಟಗಳು ! ಆತ್ಮ ಅನಾತ್ಮದೊಡನೆ ಸೆಣಸಾಡಿ ದುಃಖಾತ್ಮದ ನಂಜು ನಸಿರಾಡಿ ನೆಲದ ಬೆವರಿಗೆ ಕವಿಯಾದೆ ಕರುಳ ನೋವಿಗೆ ಧ್ವನಿಯಾದೆ.. ನುಡಿವ ತಮಟೆಯ ಸದ್ದಿಗೆ ಕಿವಿಯಾಗುತ ಊರೂರು ಸುತ್ತಿ ಜಾತಿಯೆಂಬ ಬೆನ್ನಮೂಳೆಯ ಕಾವ್ಯಬಿತ್ತುತ ಮುರಿದೆ ದಹನದ ಕಥೆಗೆ ಕರುಳ ನುಡಿಗಳ ನುಡಿದು ಈ ನಾಡ ಮಣ್ಣಿನಲಿ … ಮಣ್ಣಾದವರ ಕಥೆ ಹೇಳುತ್ತಲೇ.. ಮಣ್ಣಾಗಿ ಹೋದಿರಿ … ಹೊಳೆದು ಉದುರಿದ ನಕ್ಷತ್ರದಂತೆ ಸಾಹಿತ್ಯದ ಬಾನಿನಲಿ ಕತ್ತಲು ತುಂಬಿ ನೆಲದ ಬಾಯಲ್ಲಿ ಬಿರುಕು ಮೂಡಿ ಜನಾಂಗದ ಕಣ್ಣಲ್ಲಿ ಹಾರಿದ ಬೆಳಕು ಹೋಗಿ ಬನ್ನಿ … ನೀವೆ ಬಿತ್ತಿದ ಅಕ್ಷರ ಬೀಜದ ಮೊಳಕೆಗಳು ಇಣುಕುತ್ತಿವೆ ನೆಲದ ತುಂಬಾ.. =========================== ಬಿದಲೋಟಿ ರಂಗನಾಥ್

ಕಾವ್ಯನಮನ Read Post »

ಇತರೆ

ಪ್ರಬಂದ

ಶ್ರಮಜೀವಿ ಜೇನ್ನೊಣಗಳು ನಾಗರಾಜ ಮಸೂತಿ ಶ್ರಮಜೀವಿಗಳಲ್ಲಿ ಒಂದಾದ ಜೇನುಹುಳು ಶ್ರಮದಿಂದಲೇ ತನ್ನ ಆಯಸ್ಸನ್ನು ಕಡಿಮೆ ಮಾಡಿಕೊಳ್ಳುವಂತೆ ಶ್ರಮವಹಿಸಿ ದುಡಿಮೆ ಮಾಡುತ್ತದೆ. ಇದರ ಆಯಸ್ಸು ಸುಮಾರು ಒಂದು ತಿಂಗಳು ಅಥವಾ ಮೂವತ್ತು ದಿನಗಳು ಮಾತ್ರ. ಚಗಳಿ ಇರುವೆಯ ಜೀವನ ಶೈಲಿಯನ್ನು ಹೋಲುವ ಜೇನುಹುಳು ಎಲ್ಲರ ಕೋಪಕ್ಕೆ ತುತ್ತಾದರೆ ಅದರ ಶ್ರಮದ ಫಲ ಜೇನು ಹನಿ ಮಾತ್ರ ಎಲ್ಲರ ಪ್ರೀತಿಗೆ ಪಾತ್ರವಾಗಿದೆ. ಬಹುಶಃ ಜೇನುತುಪ್ಪ ಇಷ್ಟ ಪಡದ ವ್ಯಕ್ತಿ ಭೂಮಿಯ ಮೇಲೆ ಇರಲಿಕ್ಕಿಲ್ಲ. ಈ ಜೇನುಹನಿಯನ್ನ ಪೇರಿಸಲು ಅದು ಪಡುವ ಕಷ್ಟ ಅಷ್ಟಿಷ್ಟಲ್ಲ. ತರಹೆವಾರಿ ಗಿಡಗಳು ಮೊಗ್ಗು ಬಿಟ್ಟು ಹೂವಾಗಿ ಮೈದಳಿದು ಅರಳಿ ನಾಕವೇ ಧರೆಗಿಳಿದಂತೆ ಶೃಂಗಾರಗೊಳ್ಳುವ ಸಮಯಕ್ಕಾಗಿ ಹುಳುಗಳು ಹಾತೊರೆದು ಕಾಯ್ದು ಕೂಳಿತಿರುತ್ತವೆ. ಮಕರಂದವನ್ನು ಹೀರಲು ಹೂಗಳಿಗೆ ಮುತ್ತಿಗೆ ಹಾಕಿ ಕಾರ್ಯಾರಂಭ ಮಾಡುತ್ತವೆ.      ಆದರೆ ಎಲ್ಲವೂ ಇದೇ ಕೆಲಸಕ್ಕೆ ಇಳಿಯದೆ ಚಗಳಿ ಇರುವೆಯಂತೆ ಕೆಲಸದ ಹಂಚಿಕೆ ಮಾಡಿಕೊಳ್ಳುವ ಬುದ್ಧಿವಂತಿಕೆಗೆ ಮುಂದಾಗುತ್ತವೆ. ಒಂದೇ ಕುಟುಂಬದ ಒಂದೇ ಗೂಡಿನ ಲಕ್ಷಾಂತರ ಹುಳುಗಳಲ್ಲಿ ಒಂದು ಮಾತ್ರ ರಾಣಿಜೇನು ಗೂಡು ಕಟ್ಟುವ ಸ್ಥಳವನ್ನು ಗುರುತಿಸುತ್ತದೆ. ಸಾವಿರಾರು ಕಿರಿಯ ಜೇನುಗಳು ಮನೆಯ ಶುಚಿತ್ವ ಕಾಯ್ದುಕೊಳ್ಳುವ ಹಾಗೂ ಸರಾಗವಾದ ಗಾಳಿಯ ಚಲನವಲನ ನೋಡಿಕೊಳ್ಳುವ ಕೆಲಸ ನಿರ್ವಹಿಸುತ್ತವೆ. ಇನ್ನೂ ಬಾಕಿ ಇರುವ ಹಿರಿಯ ಹಾಗು ಅನುಭವಿ ಹುಳುಗಳು ಪುಷ್ಪಗಳನ್ನು ಅರಸಿಕೊಂಡು ಕಿಲೋಮೀಟರ್ ಗಟ್ಟಲೆ ಸಂಚರಿಸಿ ಹುಡುಕಿ ಹೂಗಳ ಮಕರಂದ ಹೀರುವ ಕೆಲಸವನ್ನು ಮಾಡುತ್ತವೆ.      ಜೇನು ನೊಣಗಳು ತಮ್ಮ ಟ್ಯೂಬ್ ಆಕಾರದ ಅಥವಾ ಸೀರಂಜ್ ರೀತಿಯಲ್ಲಿರುವ ತಮ್ಮ ಕೊಂಡಿಯಿಂದ, ಆಡು ಭಾಷೆಯಲ್ಲಿ ಹೇಳುವುದಾದರೆ ಅದು ತನ್ನ ಮುಳ್ಳಿನಿಂದ ಮಕರಂದವನ್ನು ಹೀರಿಕೊಂಡು ಜಠರದಲ್ಲಿ ಶೇಖರಿಸಿಕೊಳ್ಳುತ್ತದೆ. ಶೇಖರಿಸಿಕೊಂಡ ಮಕರಂದದಲ್ಲಿ ಶೇಕಡಾ ೮೦ % ರಷ್ಟು ನೀರಿನಂಶ ಇರುತ್ತದೆ. ಹಾರುವಾಗ ಫ್ಯಾನ್ ನಂತೆ ರಭಸವಾಗಿ ರೆಕ್ಕೆ ಬೀಸುವುದು ಉದ್ದೇಶ ಭರಿತವಾಗಿದೆ. ಹೀಗೆ ವೇಗವಾಗಿ ರೆಕ್ಕೆ ಬಡಿದು ತಾನು ಹೀರಿದ ಮಕರಂದದಲ್ಲಿನ ನೀರಿನಂಶವನ್ನು ಶೇಕಡ ೬೨% ರಿಂದ ೬೬% ರಷ್ಟು ಆವಿಯಾಗುವಂತೆ ಮಾಡುತ್ತದೆ. ಹೀಗೆ ನೀರಿನಂಶ ಕಡಿಮೆ ಆದ ಮಕರಂದ ಗಟ್ಟಿಯಾದ ದ್ರವ ಪದಾರ್ಥ(liquid) ಆಗಿ ಪರಿವರ್ತನೆ ಮಾಡುವುದರ ಜೊತೆ ಜೊತೆಯಲ್ಲಿ ತನ್ನ ದೇಹದಿಂದ ಸಕ್ಕರೆ(sugar),  ಕಬ್ಬಿಣಾಂಶ(Iron content) ಹಾಗೂ ಪ್ರೋಟಿನ್ (protein) ಅಂಶಗಳನ್ನು ಸೇರ್ಪಡೆ ಮಾಡುತ್ತದೆ. ಈ ಕಾರ್ಯಕ್ಕೆ  ಅದಕ್ಕೆ ಕನಿಷ್ಠ ಅರ್ಧ ಗಂಟೆ ಸಮಯ ಬೇಕಾಗುತ್ತದೆ. ಹೀಗೆ ಹೂವಿಂದ ಹೂವಿಗೆ ಹಾರಿ ಮಕರಂದವನ್ನು ಹೀರಿಕೊಂಡು ಜೇನುಗೂಡಿಗೆ ಮರಳುತ್ತವೆ. ತನ್ನ ಜಠರದಲ್ಲಿ ಪೇರಿಸಿದ ಮಕರಂದವನ್ನು ಜೇನುತುಪ್ಪವಾಗಿ ಪರಿವರ್ತಿಸಿ ಜೇನುಗೂಡಿನ ಸಾವಿರಾರು ಮಣಿಗಳನ್ನು ಹನಿ ಹನಿಯಾಗಿ ತುಪ್ಪದಿಂದ ಭರ್ತಿಯಾಗಿಸುವ ಕೆಲಸ ಭರದಿಂದ ಬಿಡುವಿಲ್ಲದಂತೆ ಶ್ರಮವಹಿಸಿ ದುಡಿಮೆ ಮಾಡಿ ಪ್ರಾಣ ತ್ಯಾಗ ಮಾಡುತ್ತವೆ. ಇವುಗಳ ಮಧ್ಯೆ ಇರುವ ರಾಣಿಜೇನು ಮಾತ್ರ ಮೊಟ್ಟೆಯನ್ನು ಇಡುತ್ತ ಸಂತಾನೋತ್ಪತ್ತಿ ಕೆಲಸದಲ್ಲಿ ನಿರಂತರವಾಗಿ ತೊಡಗಿಸಿಕೊಳ್ಳುತ್ತದೆ. ಈ ಜೀವನ ಶೈಲಿಯನ್ನು ಚಗಳಿ ಇರುವೆಗಳಲ್ಲಿ ಕಾಣಸಿಗುತ್ತದೆ. ರಾಣಿ ಇರುವೆ ಕೂಡ ಸಂತಾನೋತ್ಪತ್ತಿ ಕೆಲಸ ಮಾಡುತ್ತದೆ. ಆದರೆ ಚಗಳಿ ಇರುವೆಗಳ ಗೂಡುಗಳಲ್ಲಿ ಇರುವೆಗಳ ಸಂಖ್ಯೆ ಜೇನಿಗಿಂತ ಕಡಿಮೆ ಇರುತ್ತದೆ. ಹಾಗೂ ಇವಗಳ ಆಹಾರ ಪದ್ಧತಿಯಲ್ಲಿ ವ್ಯತ್ಯಾಸ ಕಾಣುತ್ತೇವೆ. ಜೇನು ಸಸ್ಯ ಆಹಾರಿ ಆದರೆ ಇರುವೆ ಸಸ್ಯ ಮತ್ತು ಮಾಂಸಹಾರಿ, ಇದನ್ನು ಹೊರತು ಪಡಿಸಿದರೆ ಉಳಿದಂತೆ ರಕ್ಷಣೆ ಕಾರ್ಯ, ಕಾರ್ಯ ಹಂಚಿಕೆ, ಮತ್ತು ನಿರ್ವಹಣೆ ನೂರಕ್ಕೆ ತೊಂಭತ್ತೊಂಭತ್ತರಷ್ಟು ಹೋಲಿಕೆ ಆಗುತ್ತದೆ.          ಜೇನುಗೂಡು ಕಟ್ಟುವ ಲಕ್ಷಾಂತರ ಹುಳುಗಳು ಮಧ್ಯೆ ನಡೆಯುವ ದಿನನಿತ್ಯದ ಕೆಲಸದಲ್ಲಿ ದಿನಕ್ಕೆ ಸುಮಾರು ಎರಡು ಸಾವಿರದಷ್ಟು ಜೇನ್ನೊಣಗಳು ಅಸುನೀಗುತ್ತವೆ. ಹಿಂದೆ ರಾಜರ ಕಾಲದಲ್ಲಿ ತಾಜಮಹಲ್, ಗೋಲ ಗುಂಬಜ್ ನಂತಹ ಐತಿಹಾಸಿಕ ಸ್ಥಳಗಳನ್ನು ನಿರ್ಮಿಸುವಾಗ ದಶಾನುದಶ ವರ್ಷಗಳ ಕಾಲ ನಡೆಯುವ ಕೆಲಸದಲ್ಲಿ ಕೆಲಸಗಾರರು ಅಸುನೀಗಿದಂತೆ. ಹೀಗೆ ಒಂದು ಜೇನುಗೂಡು ಕಟ್ಟಿ ಜೇನುತುಪ್ಪವನ್ನು ಪೇರಿಸುವ ಈ ಕೆಲಸದಲ್ಲಿ ಲಕ್ಷಾಂತರ ಹುಳುಗಳು ಯೋಧರಂತೆ ವೀರಮರಣವಪ್ಪಿ ಸಾವಿರಾರು ಜನರಿಗೆ ಅಚ್ಚು ಮೆಚ್ಚಿನ ಜೇನುತುಪ್ಪವನ್ನು ನೀಡುತ್ತವೆ. ಇಂತಹ ನಿಸ್ವಾರ್ಥ ಸೇವೆಯನ್ನು ಮನುಷ್ಯನನ್ನು ಹೊರತುಪಡಿಸಿ ಅನೇಕ ಜೀವಿಗಳಲ್ಲಿ ಕಾಣಬಹುದು… ನಾಗರಾಜ ಮಸೂತಿ ಲೇಖಕರ ಪರಿಚಯ: ಶಿಕ್ಷಕರಾಗಿರುವ  ಶ್ರೀಯುತರು ಕಥೆ,ಕವಿತೆ,ಲೇಖನ, ಪ್ರಬಂದಗಳನ್ನು  ಬರೆಯುತ್ತಾ ಬರುತ್ತಿದ್ದಾರೆ. ಇವರ ಹಲವು ಬರಹಗಳು ರಾಜ್ಯಮಟ್ಟದ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.

ಪ್ರಬಂದ Read Post »

ಇತರೆ

ಅಂಕಣ

ಮುಟ್ಟು! ಚಂದ್ರಪ್ರಭ ಮುಟ್ಟು .. ಮುಟ್ಟು.. ಮುಟ್ಟು.. ಪ್ರಜಾವಾಣಿ ಭಾನುವಾರದ ಪುರವಣಿ (೨೩/೧೦/೧೯) ಯಲ್ಲಿ ಬಾನು ಮುಷ್ತಾಕ್ ರವರ ಲೇಖನ  “ಮುಟ್ಟು ಮುಟ್ಟೆಂದೇಕೆ..?”  ಓದುವಾಗ ‘ಮುಟ್ಟು’ ಕುರಿತು ಹತ್ತಾರು ಸಂಗತಿಗಳು ತಲೆಯಲ್ಲಿ ಸುಳಿದಾಡತೊಡಗಿವೆ. ನಮ್ಮ ಬಾಲ್ಯ ಕಾಲಕ್ಕಿಂತ ಈಗ ಸ್ವಲ್ಪ ಮಟ್ಟಿಗೆ ಧೋರಣೆಗಳು ಬದಲಾಯಿಸಿದಂತೆ ತೋರುವುದಿದೆ. ಆಗ ಅದನ್ನು ಕುರಿತು ಹೆಣ್ಮಕ್ಕಳು ತಮ್ಮ ತಮ್ಮಲ್ಲಿಯೂ ಮುಕ್ತವಾಗಿ ಮಾತನಾಡಲು ಹಿಂಜರಿಕೆಯಿತ್ತು. ಆಗ ಆ ಸಂಗತಿ ಮಕ್ಕಳು, ಇತರರ ತಿಳಿವಳಿಕೆಗೆ ಬರುವ ಸಂಭವನೀಯತೆ ಇದ್ದುದು ತೀರ ಕಡಿಮೆ. ತರಗತಿಯಲ್ಲಿ ಅಂಡಾಣು, ವೀರ್ಯಾಣು, ಗರ್ಭಧಾರಣೆ, ಋತುಚಕ್ರಗಳ ಕುರಿತು ಇದ್ದ ಅಧ್ಯಾಯವನ್ನು ಮಕ್ಕಳೆದುರು ಪಾಠ ಮಾಡಲು ಶಿಕ್ಷಕಿಯರೇ ಹಿಂದೇಟು ಹಾಕುತ್ತಿದ್ದುದನ್ನು ನಾನು ಹತ್ತಿರದಿಂದ ನೋಡಿರುವೆ. ಅದೊಂದು ನಿಸರ್ಗ ಸಹಜ ಕ್ರಿಯೆ, ಮನುಕುಲದ ಉಳಿವು, ಬೆಳವಣಿಗೆಯ ಮೂಲ ಸ್ರೋತ ಎಂಬ ಅದ್ಬುತ ಸತ್ಯವನ್ನು ಮಕ್ಕಳೆದುರು ಅನಾವರಣ ಮಾಡಲು ಇರುವ ಒಂದು ಸದವಕಾಶ ಅದು. ಅಂಥದೊಂದು ಅಧ್ಯಾಯ ಗೌಣವಾಗಿ ಬಿಡುವುದು ನಿಜಕ್ಕೂ ವಿಷಾದನೀಯ. ನನ್ನೂರು ಬನಹಟ್ಟಿ ನೇಕಾರರ ಬೀಡು. ಲಿಂಗ, ಜಾತಿ, ಮತ, ಪಂಥ ಮರೆತು ಎಲ್ಲ ಜೀವಗಳೂ ನೇಕಾರಿಕೆಯನ್ನು ವೃತ್ತಿ ಮಾಡಿಕೊಂಡ ಜನರು ನನ್ನವರು. ದಿನ ಬೆಳಗಾಗುವುದು, ಸಂಜೆಗತ್ತಲು ಕವಿಯುವುದು ನೂಲೆಳೆಯೊಂದಿಗೇ. ಅಲ್ಲಲ್ಲಿ ಕೆಲವರು ನೌಕರದಾರರು ಸಹ ಕಾಣಸಿಗುತ್ತಾರೆ. ತೀರ ಚಿಕ್ಕವಳಿದ್ದಾಗ ನನ್ನವ್ವ ಮುಟ್ಟಿನ ದಿನಗಳಲ್ಲಿ ತಲೆ ಮೇಲೆ ನೀರು ಹಾಕಿಸಿಕೊಂಡು ಕೆಲಸದಲ್ಲಿ ತೊಡಗುತ್ತಿದ್ದುದನ್ನು ನೋಡುತ್ತಿದ್ದರೂ ಅದೇಕೆ ಹಾಗೆ ಅಂತ ತಿಳಿದೇ ಇರಲಿಲ್ಲ. ಅವ್ವ ನನಗೆ ನೀರು ಹಾಕುವಂತೆ ಆಗುವವರೆಗೂ ಹೊತ್ತಲ್ಲದ ಹೊತ್ತಿನಲ್ಲಿ ಅಜ್ಜಿ ಅವ್ವನಿಗೆ ನೀರು ಹಾಕುವುದೇಕೆ ಎಂಬುದು ವಿಸ್ಮಯದ ಸಂಗತಿಯಾಗೇ ಉಳಿದಿತ್ತು! ಈ ದಿನದ ವರೆಗೂ ಆ ದಿನಗಳಲ್ಲಿ ಮೂಲೆ ಹಿಡಿದು ಕೂತವರನ್ನು ನಾ ಕಂಡಿಲ್ಲ. ಕೆಲವು ಸಮುದಾಯದವರು ಅದನ್ನು ಪಾಲಿಸುತ್ತಾರೆ ಎಂದು ಕೇಳಿ ಮಾತ್ರ ಗೊತ್ತು. ನೇಕಾರಿಕೆ ಪ್ರತಿ ದಿನದ ಪ್ರತಿ ಕ್ಷಣದ ದುಡಿಮೆ ಬಯಸುವ ಕಾಯಕ. ಮುಟ್ಟು ಕಾಣಿಸಿಕೊಂಡ ಕೂಡಲೇ ತಲೆ ಮೇಲೆ ನೀರು ಹಾಕಿಕೊಂಡು ಕೆಲಸಕ್ಕೆ ತೊಡಗುವುದು ಇವರಿಗೆ ಅನಿವಾರ್ಯ. ಮೂರು-ನಾಲ್ಕನೇ ದಿನ ಮತ್ತೊಮ್ಮೆ ನೀರು ಹಾಕಿಕೊಂಡರೆ “ಶುದ್ಧ” ಆದ ಹಾಗೆ. ಆ ದಿನಗಳಲ್ಲಿ ದೇವರ ಪೂಜೆ, ನೈವೇದ್ಯ ಇತ್ಯಾದಿಗಳಿಂದ ದೂರ ಉಳಿಯುವುದೇ  ಅವರು ಪಾಲಿಸುವ ‘ಮಡಿ’. ಅವರೇ ಹೇಳುವ ಕೆಲವು ಖಡಕ್ ದೇವರುಗಳ ವಿಶೇಷ ಆಚರಣೆ, ಜಾತ್ರೆಗಳ ಸಂದರ್ಭದಲ್ಲೂ ಅವರು ಅದರಿಂದ ದೂರ. ಇದು ಅವರು ಪಾಲಿಸುವ ಮಡಿಯ ಒಂದು ಭಾಗ. ಆರನೇ ತರಗತಿ ಕಳೆದ ನಂತರದ ರಜೆಯಲ್ಲಿ ನಾನು ಋತುಮತಿಯಾದ ನೆನಪು. ಆಗೆಲ್ಲ ಮೊದಲ ಋತುವನ್ನು ಸಂಭ್ರಮಿಸುವುದು ಜನಗಳಿಗೆ ಪ್ರಿಯವಾದ ಸಂಗತಿ. ೫ ದಿನ, ೯ದಿನ, ೧೧ ದಿನ ಹೀಗೆ ಹುಡುಗಿಯನ್ನು ಮಂಟಪದಲ್ಲಿ ಕೂರಿಸಿ ಸೋಬಾನೆ ಪದ ಹಾಡುವುದು. ದಿನಕ್ಕೊಂದು ರೀತಿಯ ಅಲಂಕಾರ ಮಾಡುವುದು.. ಆಕೆಗೆ ಬಗೆ ಬಗೆ ಊಟ, ಪೌಷ್ಟಿಕ ಆಹಾರ ತಿನ್ನಿಸುವುದು. ‘ಸಾಲಿಗಿ ಹೋಗೂ ಹುಡುಗಿ.. ಕುಂಡ್ಸೂದು ಏನೂ ಬ್ಯಾಡ’ ಅಂತ ನನ್ನಜ್ಜಿ ಫರ್ಮಾನು ಹೊರಡಿಸುದಳು. ಜನಗಳಿಗೆ ಗೊತ್ತಾದರೆ ಅಡುಗೆ ತಂದು ಕೊಟ್ಟು ಕಾರ್ಯ ಮಾಡುವುದು ಅನಿವಾರ್ಯ ಆದೀತೆಂದು ಗುಟ್ಟಾಗಿ ನನ್ನ ಒಳ ಮನೆಯಲ್ಲೇ ಇರಿಸಿದ ನೆನಪು. ಅವ್ವ ನನಗೆ ಸ್ರಾವದ ದಿನಗಳಲ್ಲಿ ಬಟ್ಟೆ ಉಪಯೋಗಿಸುವುದು ಹೇಗೆ ಅಂತ ಹೇಳಿ ಕೊಟ್ಟಳು. ಆದರೆ ಅದನ್ನೆಲ್ಲ ತೊಳೆದು ಸ್ವಚ್ಛ ಮಾಡುವುದು.. ಗುಟ್ಟಾಗಿ ಮುಟ್ಟಿನ ಬಟ್ಟೆ ಒಣಗಿಸಿಕೊಳ್ಳುವುದು ಎಲ್ಲ ಬೇಡದ ಸಂಗತಿಗಳಾಗಿದ್ದವು. ಒಬ್ಬೊಬ್ಬರಾಗಿ ಗೆಳತಿಯರು “ದೊಡ್ಡವ”ರಾಗ ತೊಡಗಿದರು. ಆದರೂ ನಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತಿದ್ದುದು ಕಡಿಮೆ. ನಮ್ಮೂರಲ್ಲಿ ಆಗ ಇದ್ದುದು ಕೆಲವೇ ಕೆಲವು ಔಷಧಿ ಅಂಗಡಿ. ಶೋಕೇಸಿನಲ್ಲಿಟ್ಟ ವಸ್ತುಗಳನ್ನು ನೋಡುವುದೆಂದರೆ ನಮಗೆ ಖುಷಿ. ಅದೊಂದು ದಿನ ಸ್ನಾನದ ಸೋಪಿನ ಮಾದರಿಯಲ್ಲಿ ಸುತ್ತಿಟ್ಟ ಪ್ಯಾಕೆಟ್ ಒಂದನ್ನು ನಾನೂ ತಮ್ಮನೂ ಕುತೂಹಲದಿಂದ ನೋಡ ತೊಡಗಿದೆವು. ಅಷ್ಟು ದೊಡ್ಡ ಸಾಬೂನು ಇರುವುದೇ? ಅಂತ ಅಚ್ಚರಿ. ಕೊನೆಗೆ ಅದೇನೆಂದು ಅಂಗಡಿಯವರನ್ನೇ ಕೇಳಿದೆವು. ‘ನಿಮಗ ಗೊತ್ತಾಗೂದಿಲ್ಲ ಹೋಗರಿ’ ಅಂತ ಗದರಿ ಕಳಿಸಿ ಬಿಟ್ಟರು ಅವರು. ‘ಸುಧಾ’ ಆ ಕಾಲದ ಜನಪ್ರಿಯ ವಾರ ಪತ್ರಿಕೆ. ಅದರಲ್ಲಿ ವಸುಮತಿ ಉಡುಪ, ಅನುಪಮಾ ನಿರಂಜನ ಮೊದಲಾದವರ ಸ್ತ್ರೀ ಆರೋಗ್ಯ ಕುರಿತು ಲೇಖನಗಳು. ಮುಟ್ಟಿನ ದಿನಗಳಲ್ಲಿ ಅನುಸರಿಸಬೇಕಾದ ಸಂಗತಿಗಳ ಬಗ್ಗೆ ಕೊಟ್ಟ ಮಾಹಿತಿಯಲ್ಲಿ ಸ್ಯಾನಿಟರಿ ಪ್ಯಾಡ್ ಬಳಕೆ ಕುರಿತು ವಿವರ ಓದಿದ ನಂತರವಷ್ಟೇ ಅದೆಲ್ಲ ಅರ್ಥ ಆಗಿದ್ದು. ಹಾಗಿದ್ದೂ ದುಡ್ಡು ಕೊಟ್ಟು ಅದನ್ನು ಖರೀದಿಸುವ ಅವಕಾಶ ಇರಲಿಲ್ಲ. ಹೈಸ್ಕೂಲು ಮುಗಿಸಿ ಕಾಲೇಜಿಗೆ ಸೇರುವಾಗ ಅವರಿವರು ಕೊಟ್ಟ ಹತ್ತಿಪ್ಪತ್ತು ರೂಪಾಯಿಗಳನ್ನು ಉಳಿತಾಯ ಮಾಡಿ ಅದರಿಂದ ಸ್ಯಾನಿಟರಿ ಪ್ಯಾಡ್ ಕೊಳ್ಳಲು ಆರಂಭಿಸಿದೆ. ಬಳಸಿದ ಮೇಲೆ ಒಪ್ಪವಾಗಿ ಸುತ್ತಿ ಅದನ್ನು ಕಸದ ಡಬ್ಬಿಗೆ ಎಸೆಯುವುದು ಅಭ್ಯಾಸ ಆಯ್ತು. ಅಂಗಡಿಗೆ ಹೋಗಿ ಪ್ಯಾಡ್ ಕೇಳಿದರೆ ಸಾಕು, ಅಂಗಡಿಯಾತ ಗುಟ್ಟಾಗಿ ಅದನ್ನು ಕಾಗದದ ಹಾಳೆಯಲ್ಲಿ ಸುತ್ತಿಯೊ ಕಪ್ಪು ಬಣ್ಣದ ಪ್ಲಾಸ್ಟಿಕ್ ಹಾಳೆಯಲ್ಲಿ ಇರಿಸಿಯೊ ಕೊಡುವುದು ಈಗಲೂ ಕಾಣುವ ವಿದ್ಯಮಾನ. ತೀವ್ರ ಹೊಟ್ಟೆ ನೋವು ಕಾಡಿದಾಗ ವೈದ್ಯರ ಬಳಿ ಹೋಗಿ ಮಾತ್ರೆ ತರುವುದಿತ್ತು. ಬಟ್ಟೆ, ಪ್ಯಾಡ್ ಯಾವುದೇ ಆಗಿರಲಿ ಸ್ರಾವವುಂಡು ಒಣಗಿ ತೊಡೆಯ ಸಂದುಗಳಲ್ಲಿ ಉಂಟು ಮಾಡುತ್ತಿದ್ದ ಗಾಯಗಳದೇ ಒಂದು ಸಮಸ್ಯೆ. ಅದನ್ನು ನಿವಾರಿಸಲು ವೈದ್ಯರಲ್ಲಿಗೆ ತೆರಳಿ ಮುಲಾಮು ತರುವುದು. ಈ ತಿಂಗಳ ಗಾಯ, ನೋವು ಕಡಿಮೆಯಾಗುತ್ತಿದೆ ಎನ್ನುವಷ್ಟರಲ್ಲಿ ಮುಂದಿನ ತಿಂಗಳ ಋತು ಹಾಜರ್!! ಇದರೊಂದಿಗೆ ಅವ್ವ, ಅಜ್ಜಿ ಹಾಕುತ್ತಿದ್ದ ಅಲ್ಲಿ ಬರಬೇಡ, ಇಲ್ಲಿ ಬರಬೇಡ.. ಅದನ್ನು ಮಾಡಬೇಡ, ಇದನ್ನು ಮಾಡಬೇಡ ಇವೆಲ್ಲ ಕಿರಿಕಿರಿ ತಾಳಬೇಕಿತ್ತು. ಮದುವೆ, ವೃತ್ತಿ, ತಾಯ್ತನಗಳ ಮೂಲಕ ಹಾದು ಬರುವಾಗ ಅವ್ವ ನಮ್ಮೊಂದಿಗೆ ಹೊಂದಾಣಿಕೆ ಮಾಡಿಕೊಳ್ಳತೊಡಗಿದಳು. ಮುಟ್ಟು ಕಾಣಿಸಿಕೊಂಡ ತಕ್ಷಣ ತಲೆ ಸ್ನಾನ ಮಾಡಬೇಕಿರಲಿಲ್ಲ. ದೇವರು, ನೇಮಗಳ ವಿಷಯದಲ್ಲಿಯೂ ಅವಳು ಆಕ್ಷೇಪಿಸುವುದನ್ನು ನಿಲ್ಲಿಸಿದಳು. ಆದರೂ ನಮ್ಮಲ್ಲಿ ಮೊದಲಿನ ಭಯ ಹಾಗೇ ಉಳಿದಿತ್ತು. ಮುಟ್ಟು ನಿಲುಗಡೆಯ ಹೊಸ್ತಿಲಲ್ಲಿರುವ ಈ ಹೊತ್ತು ಮುಟ್ಟಿನ ಬಟ್ಟಲುಗಳ ಬಳಕೆ ವ್ಯಾಪಕವಾಗಿ ಕೇಳಿ ಬರುತ್ತಿದೆ. ಅರವತ್ತರ ದಶಕದಲ್ಲಿಯೇ ಶೋಧಿಸಲ್ಪಟ್ಟ ಮುಟ್ಟಿನ ಬಟ್ಟಲು ಮಾರುಕಟ್ಟೆಗೆ ಬರದಿರುವಂತೆ ತಡೆಯುವ ಹಿಂದೆ ಸ್ಯಾನಿಟರಿ ಪ್ಯಾಡ್ ಮಾರಾಟ ಮಾಡುವ ಕಂಪನಿಗಳ ಕೈವಾಡ ಇತ್ತೆಂಬುದನ್ನು ಪತ್ರಿಕೆಗಳು ವರದಿ ಮಾಡುವುದನ್ನು ಓದುವಾಗ ಆಘಾತವಾಗುತ್ತದೆ. ಮಣ್ಣಿನಲ್ಲಿ ಕರಗದ, ನಾಶವಾಗದ, ನೂರಾರು ವರ್ಷಗಳ ವರೆಗೆ ಇದ್ದ ಸ್ಥಿತಿಯಲ್ಲಿಯೇ ಉಳಿಯುವ, ಕ್ರಿಮಿಗಳ ಉತ್ಪಾದನೆಗೆ ಆಕರವಾದ ಅದೆಷ್ಟು ಪ್ಯಾಡ್ ಗಳನ್ನು ವರ್ಷಗಟ್ಟಲೇ ನಾವು ಎಸೆಯುತ್ತಲೇ ಬಂದಿದ್ದೇವೆ ಎಂದು ಊಹಿಸಲೂ ಭಯವಾಗುವದು. ಹೆಂಗಳೆಯರ ಸೌಕರ್ಯ, ಪರಿಸರ ಕಾಳಜಿ ಯಾವುದೂ ಇಲ್ಲದ ಕಂಪನಿಗಳಿಗೆ ತಮ್ಮ ಹಿತಾಸಕ್ತಿಗಳೇ ಮುಖ್ಯ ಆಗುವುದು ಆಗಲೂ ಇತ್ತು.. ಈಗಲೂ ಇದೆ.. ಮುಂದೆಯೂ ಇದ್ದರೆ ಅಚ್ಚರಿಯಿಲ್ಲ. ಮುಟ್ಟಿನ ಕುರಿತು ಮುಕ್ತವಾಗಿ ಮಾತನಾಡಲು ಹಿಂಜರಿಯದ ವಾತಾವರಣ ಇನ್ನೂ ನಿರ್ಮಾಣ ಆಗಿಲ್ಲ. ಅದು ಸಾಧ್ಯ ಆಗಬೇಕು. ಹಾಗಾಗುವುದು ಆರೋಗ್ಯವಂತ ಸಮಾಜದ ಲಕ್ಷಣ. ನಮ್ಮ ಮಕ್ಕಳಿಗೆ ಗಂಡು ಹೆಣ್ಣು ಭೇದವಿಲ್ಲದೆ ಇಬ್ಬರಿಗೂ ಈ ಕುರಿತ ವಾಸ್ತವಾಂಶಗಳ ಅರಿವಾಗಬೇಕು. ಅದು ಪರಸ್ಪರರ ಕುರಿತ ಮಾನವೀಯ ನಿಲುವು ವೃದ್ಧಿಸಲು ಸಹಕಾರಿ. ಮುಟ್ಟಿನ ಬಟ್ಟಲು ಬಳಕೆ ವ್ಯಾಪಕ ಆಗಬೇಕು. ಒಣ ಅನುಕಂಪ, ಸಹಾನುಭೂತಿಗೆ ಬದಲಾಗಿ ಅವಳ ‘ಆ ದಿನಗಳ’ಲ್ಲಿ ಆಕೆಗೆ ಇತರರ ಸಹಕಾರ, ಸಾಂತ್ವನ ಸಿಗುವಂತಾಗಬೇಕು. ಎಲ್ಲ ಹೆಣ್ಣು ಜೀವಗಳಲ್ಲಿ ನನ್ನದೊಂದು ವಿನೀತ ಪ್ರಾರ್ಥನೆ.. ಮುಟ್ಟು ಕುರಿತು ನಿಮ್ಮ ಅನುಭವವನ್ನು ಮುಕ್ತವಾಗಿ ಹಂಚಿಕೊಳ್ಳಲು ಆರಂಭಿಸಿ. ಒಂದು ಅಭಿಯಾನದ ರೀತಿಯಲ್ಲಿ ಅದು ಸಾಗಲಿ. ಅದರಿಂದ ಪುರುಷ ಜಗತ್ತಿನೆದುರು ಹೊಸತೊಂದು ಲೋಕದ ಅನಾವರಣವಾಗಲಿ. ಮಿಡಿಯುವ ಮನಗಳು ಮಿಡಿದಾವು -ಚಂದ್ರಪ್ರಭಾ.

ಅಂಕಣ Read Post »

ಅಂಕಣ ಸಂಗಾತಿ

ಅಂಕಣ

ನೋಟ! ಕಮಲಾ ಹೆಮ್ಮಿಗೆ ಮೂರು ಬೆಟ್ಟದ ತಪ್ಪಲ ಮದ್ಯದಲ್ಲಿ ಆಡುವ ಹಿಡಿದು ಮೇಯಿಸುತ್ತಿರಲಾಗಿ ಅಡ್ಡ ಬೆಟ್ಟದಲ್ಲಿ ದೊಡ್ಡ ಹುಲಿ ಹುಟ್ಟಿ ಹಾಯಿತ್ತು ಹಸುವ ಉದ್ದಿಹ ಬೆಟ್ಟದಲ್ಲಿ ಭದ್ರ ಗಜ ಬಂದು ಎಸೆದಿತ್ತು ಎತ್ತ ಮಧ್ಯದ ಬೆಟ್ಟದಲ್ಲಿತೋಳ ಕೋದಿತ್ತು  ಕರುವಿನ ಕರುಳ ಕಿತ್ತು ಹುಲಿ,ಗಜ,ತೋಳನ ಉಡ ನುಂಗಿದ್ದ ಕಂಡೆ ಗೋಪತಿನಾಥ ವಿಶ್ವೇಶ್ವರ ಲಿಂಗವನರಿಯಲಾಗಿ……      ಹನ್ನೆರಡನೆಯ ಶತಮಾನದ ತಳಮಟ್ಟದಿಂದ ಬಂದು ಜ್ಞಾನ ಪ್ರಸಾರ ಮಾಡಿದ  ಅಂಬಿಗರ ಚೌಡಯ್ಯ,ನುಲಿಯ ಚಂದಯ್ಯ,ಹೆಂಡದ ಮಾರಯ್ಯ, ಉರಿಲಿಂಗ ಪೆದ್ದಿ,ಕದಿರ  ರೇಮವ್ವೆ, ಕಾಳವ್ವೆ ಮುಂತಾದವರ ಗುಂಪಿನಲ್ಲಿ ಎದ್ದು ಕಾಣುವ ಹೆಸರು. ಈ ವಚನಕತೃ,ತುರುಗಾಹಿ ರಾಮಣ್ಣನವರದು ಒಂದರ್ಥದಲ್ಲಿ ಶರಣಚಳುವಳಿಯ ಮೊದಲ ದಲಿತ ಚಳುವಳಿಯೇ ಆಗಿದೆ ಎಂಬ ಡಾ.ಅರವಿಂದ ಮಾಲಗತ್ತಿಯವರ ಮಾತು ಅರ್ಥಪೂರ್ಣವಾಗಿದೆ. ಬಸವಣ್ಣನವರ ಅನುಭವ ಮಂಟಪದಲ್ಲಿ ಸಕಲ ಜಾತಿಯವರೂ ಇದ್ದರು. ತಂತಮ್ಮ ಕಾಯಕ ಮಾಡುತ್ತಲೇಅನುಭಾವಿಗಳೂ ಆಗಿದ್ದುದು ವಿಶೇಷ. ಈ ವಚನದತಿರುಳು: ಕುರುಬ ರಾಮಣ್ಣ  ಎಂದಿನಂತೆ ಕುರಿಮಂದೆಯಲ್ಲಿದ್ದಾನೆ. ಮೂರು ಬೆಟ್ಟದ ತಪ್ಪಲು ಅವನಿರುವ ಸ್ಥಾನ.ಹಸು,ಎತ್ತು, ಕರುಗಳೂ ಹಸಿರ ಮೇಯುತ್ತಿವೆ ಒಂದು ಗುಡ್ಡದಿಂದ ನೆಗೆದ ಹುಲಿ ಹಸುವನ್ನು ತಿಂದು ಬಿಡುತ್ತದೆ.ಇನ್ನೊಂದು ಗುಡ್ಡದಿಂದಿಳಿದು ಬಂದ ಆನೆ ಎತ್ತನ್ನು ಎತ್ತಿಬಿಸಾಕುತ್ತದೆ.ನಡುವಿನ ಬೆಟ್ಟದ ತೋಳ ಕರುವಿನ ಕರುಳು ಹಿಡಿದು ಎತ್ತಿಒಯ್ದು ಬಿಡುತ್ತದೆ. ಇಂತಹ ದಾರುಣ, ಭೀಷಣ ಚಿತ್ರಕಂಡ ಕುರಿಗಾಹಿ ತನ್ನನ್ನು ಸಂತೈಸಿಕೊಳ್ಳುತ್ತಾನೆ: ಗೋಪತಿನಾಥನ ವಿಶ್ವೇಶ್ವರಲಿಂಗ ಅರಿವುಂಟಾದಾಗ,ಹುಲಿ, ಆನೆ. ತೋಳಗಳನ್ನುಅರಿವೆಂಬ ಉಡವು ನುಂಗುತ್ತದೆ. ಮೇಲಿನ ಶಬ್ದ ಚಿತ್ರವನ್ನುಬಿಡಿಸಿದರೆ-ತನುವು ಹುಲಿ,ಮನ ಸಾಧುಹಸು,ಮದಗಜ ಅಹಂನ ಸಂಕೇತ. ಎತ್ತಿನಂತ ದುರ್ಬಲ ಪ್ರಾಣಿಯನ್ನು ಸುಖಾಸುಮ್ಮನೆ ಎತ್ತಿಎಸೆಯುತ್ತದೆ.ನಮ್ಮಲ್ಲೇ ಇರುವ ಲೋಭವು, ನಮ್ಮಲ್ಲೇ ಇರುವ ಮುಗ್ದತೆಯ ಮೇಲೆ ದಾಳಿ ಮಾಡವುದು, ತೋಳಕರುವಿನ ದೃಶ್ಯವನ್ನು ಸಂಕೇತಿಸುತ್ತದೆ.  ಜ್ಞಾನದ ಸಂಕೇತವಾದ ‘ಉಡ’ವು ಮೇಲೆ ಹೇಳಿದ ಎಲ್ಲಪ್ರಾಣಿಗಳನ್ನೂ ನಿಯಂತ್ರಿಸುತ್ತದೆ.. ಕ್ರೋಧ,ಮದ, ಲೋಭ ಈ ಮೂರೂ ಅವಗುಣಗಳ್ನು ಜ್ಞಾನಿ ಮಾಡುವುದು ಅನುಭಾವದಿಂದ ಎಂಬುದು ಸರಳವಾದ ಈ ವಚನದ ಅರ್ಥ! ಇವೆಲ್ಲ ಮನದ ಕಾಳಿಕೆಗಳು. ‘ಕರಗಿಸಿ ಎನ್ನ ಮನದ ಕಾಳಿಕೆಯ ಕಳೆಯಯ್ಯಾ’ ಎಂದುಬಸವಣ್ಣನವರು     ಆರ್ತರಾಗಿಪ್ರಾರ್ಥಿಸಿದ್ದನ್ನು ಇಲ್ಲಿ ನೆನೆಯಬಹುದು. ಮಾನವ ಮನಸ್ಸು   ‘ಅರಿಷಡ್ವರ್ಗ’ ಗಳಿಂದತುಂಬಿ ತುಳುಕುತ್ತಿರುತ್ತದೆ.(ಕಾಮ,ಕ್ರೋಧ, ಲೋಭ, ಮೋಹ, ಮದ, ಮಾತ್ಸರ್ಯ) ಅರಿವಿನ ಶಸ್ತ್ರದಿಂದ,ಅವನ್ನು ಹೆರೆದು ಹಾಕಬೇಕು.ಧ್ಯಾನದಿಂದ ಅದನ್ನು ಸಾದಿಸಬಹುದು ಎಂಬುದು ಶರಣರ  ಇಂಗಿತ. ಇವೆಲ್ಲ ಸೆರಗಿನ ಕೆಂಡದಂತೆ-ನಮ್ಮಲ್ಲಿದ್ದು ನಮ್ಮನ್ನೇ ಸುಡುವಂತಹವು.ಋಜು ಮಾರ್ಗದಲ್ಲಿ ನಡೆವುದೊಂದೆ ಇದಕ್ಕೆ ಮದ್ದು. ಪಾಪವೆಸಗಿದರೂ ಪಶ್ಚಾತ್ತಾಪದ ಬೆಂಕಿಯಿಂದ ಅದನ್ನು ಸುಡಬಹುದು.ಕುರುಬ ವೃತ್ತಿಯ ತುರುಗಾಹಿ ರಾಮಣ್ನ ಕಂಡುಕೊಂಡ ಸತ್ಯವಿದು.. ಹನ್ನೆರಡನೆಯ ಶತಮಾನ, ಕನ್ನಡದ ‘ಕ್ರಾಂತಿಯುಗ’ ವೇ ಸರಿ. ಅಲ್ಲಮಪ್ರಭು, ಬಸವೇಶ್ವರರ ದಿವ್ಯ ಮಾರ್ಗದರ್ಶನದಲ್ಲಿ ಲೌಕಿಕವನ್ನು ಬಿಡದೆ, ಅಲೌಕಿಕದೊಟ್ಟಿಗೆ ಅನುಸಂಧಾನ  ಮಾಡಿದ ಶರಣರ  ಒಳಹೊರಗಿಲ್ಲದ ಬದುಕು, ವಿಸ್ಮಯ ಹುಟ್ಟಿಸುವಂತದ್ದು! ಓರ್ವ ಕುರಿಗಾಹಿಯ ಎದೆಯಲ್ಲಿ ಅರಿವಿನಬೆಳಕು ಕಂಡು, ಅದನ್ನಾತ,ತನಗೆ ಪರಿಚಿತವಾದ, ಆವರಣವನ್ನುಬಳಸಿಕೊಂಡು, ವಚನ ಕಟ್ಟಬೆಕೆಂದರೆ ಅದಕ್ಕೆಷ್ಟು ಸಾಧನೆ ಬೇಕು! ಅವನು, ಕಾಯದ ವೃತ್ತಿಯನ್ನುತಾತ್ವಿಕನೆಲೆಯಲ್ಲಿ ನೋಡಿದ್ದಾನೆ.ಬೆಡಗಿನ ಮಾತುಗಳಲ್ಲಿ ‘ನೀತಿ’ ಯನ್ನು ಹೇಳಿದ್ದಾನೆ.ಇದನ್ನಾತ ಜಪತಪ ಮಾಡದೆ ತನ್ನ ದೈನಂದಿನ ಕಾಯಕದಿಂದಲೇ ನಿರೂಪಿಸಿ ಉತ್ತಮ ಸಂದೇಶ ನೀಡಿರುವುದು ಮಹತ್ವದ ಸಂಗತಿ. ಡಾ.ಕಮಲಾ ಹೆಮ್ಮಿಗೆ                                                                               ಲೇಖಕರ ಪರಿಚಯ: ಕಮಲಾ ಹೆಮ್ಮಿಗೆಯವರು ಆಕಾಶವಾಣಿ, ದೂರದರ್ಶನದಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ.ಕನ್ನಡ ಸಾಹಿತ್ಯದ ಬಹುತೇಕೆ ಎಲ್ಲ ಪ್ರಭೇದಗಳಲ್ಲಿಯೂ ಕೈಯಾಡಿಸಿರುವ ಇವರು ಜನಪದ,ಅನುವಾದ,ವಿಮರ್ಶೆ,ಕಾವ್ಯ,ಕಥೆ ಕಾದಂಬರಿಗಳನ್ನು ರಚಿಸಿದ್ದಾರೆ.ಕರ್ನಾಟಕ ರಾಜ್ಯ ಪ್ರಶಸ್ತಿ ಸೇರಿದಂತೆಅನೇಕ  ಮನ್ನಣೆಗಳಿಗೆ ಬಾಜನರಾಗಿದ್ದಾರೆ.ಸವದತ್ತಿ ಎಲ್ಲಮ್ಮ ಹಾಗು ದೇವದಾಸಿಯರ ಕುರಿತಾದ ಸಂಶೋದನೆಗೆ ಪಿ.ಹೆಚ್.ಡಿ. ಪಡೆದಿದ್ದಾರೆ.ಸದ್ಯ ಕೇರಳದ ತಿರುವನಂತಪುರದಲ್ಲಿ ನೆಲೆಸಿದ್ದಾರೆ.

ಅಂಕಣ Read Post »

ಅನುವಾದ

ಅನುವಾದ

ತೆಲುಗು ಮೂಲ- ಡಾ.ಕತ್ತಿ ಪದ್ಮಾರಾವು ಕನ್ನಡಕ್ಕೆ ನಾರಾಯಣಮೂರ್ತಿ ಬೂದುಗೂರು ಯಾರು ಕೊಲೆಪಾತಕರು? ಸಮುದ್ರ ಹಿಮದಿಂದ ಗಾಢವಾಗಿ ಗಡ್ಡೆಕಟ್ಟಿದೆ ನಡುವೆ ಒಂದು ನೀರಿನ ಝರೀ ತಿಮಿಂಗಲಗಳು ಈಜುತ್ತಾ ಸಾಗುತ್ತಿವೆ ಹೆಚ್ಚಾಗಿ ಇಬ್ಬನಿ ಸುರಿದಾಗ, ಅವಕ್ಕೆ ಉಸಿರಾಡಲು ಕಷ್ಟವೆನಿಸುತ್ತದೆ ಈಗ ತಿಮಿಂಗಲಗಳದೇ ಬೇಟೇ ಬಲೆಗಳೆಲ್ಲಾ ಖಾಲೀ,ಖಾಲೀ ಬಿದ್ದಿವೆ ಇತ್ತೀಚೆಗೆ ಮೀನುಗಳೂ… ಬಲೆಯನ್ನು ಗುರ್ತು ಹಚ್ಚುತ್ತಿವೆ. ಆ ಕಾಲುವೆ ಬದಿಯಲ್ಲಿ ತುಂಬಾ ನಾಯೀಕೊಡೆಗಳ ಸಾಲು ರಸ್ತೆ ಒದ್ದೆ ಒದ್ದೆಯಾಗಿ ಕಿರುಪಾದಗಳ ಸಪ್ಪಳಕೆ ನೀರು ಚೆಲ್ಲುತಿದೆ. ಮನುಷ್ಯನಿಗೆ  ಈ ಚಳೀಯಲ್ಲೂ ಬೆವರು ಕಿತ್ತುಬರುತ್ತಿದೆ ಕಟಕಟೆಯಲ್ಲಿ ಒಬ್ಬೊಬ್ಬರೇ ನಿಂತು ತಪ್ಪುಗಳನ್ನ ಒಪ್ಪಿಕೊಳ್ಳುತ್ತಿದ್ದಾರೆ. ಆ ನೀರಿನ ಮೋಟಾರುಪಂಪು ನಿಂತುಹೋಗಿದೇ ಗದ್ದೆಗಳೆಲ್ಲಾ ಒಣಗಿಹೋಗಿವೆ. ಬಿತ್ತನೆಯ ಕತ್ತನ್ನು ಯಾರೋ ಹೊಸಕಿಹಾಕಿದರು. ರಿಲಯನ್ಸ್ ಷಾಪಿನೊಳಗೆ ಹೊಳೆಯುತ್ತಿರುವ ಆಪಲ್ ಒಳಗೆಲ್ಲಾ ಕೊಳೆತುಹೋಗಿದೆ. ತಿನ್ನಬಾರದೇ ಮತ್ತೇ… ಗಾಜಿನ ಒಳಗೆ, ಏಸೀ ಯಲ್ಲಿ ಇಟ್ಟಿದ ತೊಗರೀ ಬೇಳೇ ಆರ್ಗಾನಿಕ್ ಪದ್ದತಿಯಲ್ಲಿ ಬೆಳದದ್ದು ಎನ್ನುತ್ತಾರೇ. ಬೆಲೆ ಮಾತ್ರ ಬೆಟ್ಟದಷ್ಟು. ನರಕಾಸುರನನ್ನ ಕೃಷ್ಣ ಸಾಯಿಸಿದ್ದಕ್ಕೆ ಇಷ್ಟು ಕಾಲುಷ್ಯವೇಕೇ? ನರಕಾಸುರ, ಜರಾಸಂಧ ಒಬ್ಬರೇನು ? ಎಷ್ಟೋಜನರನ್ನ ಸಾಯಿಸಿದ, ಸಾಯುವಂತೆ ಮಾಡಿದ ಕೃಷ್ಣನಿಗೆ ಯಾವ ನ್ಯಾಯಾಲಯ ಶಿಕ್ಷೆ ವಿಧಿಸಿದೆ. ಶಂಭೂಕನ ಶಿರಚ್ಚೇದನೇ ಮಾಡಿದ, ವಾಲಿಯನ್ನ ಹಿಂಬದಿಯಿಂ ಕೊಂದ ರಾಮನಿಗೆ ಯಾವ ಶಿಕ್ಷೆ ವಿದಿಸಿದರು. ಕೊಲೆಪಾತಕರೆಲ್ಲರೂ ದೇವರುಗಳೇ. ಅವರ ಕೈಯಲ್ಲಿ ಮಾರಣಾಯುಧಗಳು. ಸತ್ತವ ರಾಕ್ಷಸ ಸಾಯಿಸಿದವ ದೈವ ಇದೆಲ್ಲಿಯ ನ್ಯಾಯ ? ಅನಾರ್ಯರೆಲ್ಲಾ ದುಷ್ಟರು ಆರ್ಯರೆಲ್ಲಾ ಶಿಷ್ಟರಾ ? ನ್ಯಾಯ ಎಲ್ಲರಿಗೂ ಒಂದೇ ಅಲ್ಲವೇ ? ಈಗ ಕಾರಾಗೃಹಗಳೆಲ್ಲಾ ಸಾಮಾನ್ಯರಿಗಲ್ಲಾ….. ಅಸಾಮಾನ್ಯರಿಗೇನೇ. ಹಡುಗು ತುಂಬಾ ಮಾದಕ ವಸ್ತುಗಳು ಅಮದಾಗುತ್ತಿವೆ. ನಿಜಾನೇ ಅಕ್ಷರಗಳ ತುಂಬಾ ವ್ಯಾಪಾರವೇ ಅಕ್ಷರ ದೊಳಗಿನ ಜ್ಞಾನವೆಂಬ ತಿರುಳನ್ನು ತೆಗೆದು ಹಾಕಿ ಅಮಲನ್ನು (ನಿಷೆ) ತುಂಬಿಸುತ್ತಿದ್ದಾರೆ. ನಿರಕ್ಷರಕುಕ್ಷಿಯಾ ! ಅಕ್ಷರಸ್ಥನಾ!! ಎನ್ನುವುದಲ್ಲ ಭ್ರಷ್ಟಾಚಾರವೇ ಒಂದು ಕಿರೀಟವಾಗಿದೆ. ಈಗ ಯೋಚಿಸುವವನೇ ನಿಜವಾದ ಮನುಷ್ಯ. ಆ ಅನ್ವೇಷಣೆಯಲ್ಲೇ ಈ ಪಯಣ. ================= ಕನ್ನಡಾನುವಾದ: ನಾರಾಯಣ ಮೂರ್ತಿ ಬೂದುಗೂರು ಮೂಲ ತೆಲುಗು ರಚನೆ: ಡಾ.ಕತ್ತಿ ಪದ್ಮಾರಾವು ಬಿ.ಕಾಂ.ಎಲ್.ಎಲ್.ಬಿ ವೃತ್ತಿ: ಬೆಂಗಳೂರಿನಲಿ ವಕೀಲರು ಹವ್ಯಾಸ: ಕನ್ಶಡ ಮತ್ತು ತೆಲುಗು ಸಾಹಿತ್ಯ, ಓದುವುದು, ಸಣ್ಣಪುಟ್ಟ ಬರೆಯುವುದು, ಅನುವಾದ ಮಾಡುವುದು. ಮೊ: 9448316432

ಅನುವಾದ Read Post »

ಕಾವ್ಯಯಾನ

ಮಕ್ಕಳ ವಿಭಾಗ

ಕೆಂಚಬೆಕ್ಕಿಗೆ ಏನಾಯ್ತು? ವಿಜಯಶ್ರೀ ಹಾಲಾಡಿ ಕೆಂಚಬೆಕ್ಕಿಗೆ ಏನಾಯ್ತು ಬಾಲವು ಪೂರಾ ಮಣ್ಣಾಯ್ತು ಗಡಗಡ ಚಳಿಗೆ ಬಿಸಿಬಿಸಿ ಬೋಂಡಾ ಪಾಕಂಪಪ್ಪನು ತಿಂದಾಯ್ತು ಕೆಂಚಬೆಕ್ಕಿಗೆ ಏನಾಯ್ತು ಬಾಲವು ಪೂರಾ ಮಣ್ಣಾಯ್ತು ಮೀನಿನ ಮುಳ್ಳು ದೊಂಡೆಗೆ ಸಿಕ್ಕಿ ಕೆಮ್ಮಿ ಕೆಮ್ಮಿ ಸುಸ್ತಾಯ್ತು ಕೆಂಚಬೆಕ್ಕಿಗೆ ಏನಾಯ್ತು ಬಾಲವು ಪೂರಾ ಮಣ್ಣಾಯ್ತು ಗಡವ ಬೆಕ್ಕು ಹೊಯ್ ಕಯ್ ಮಾಡಿ ಕಾಲಿನ ಮೂಳೆ ಮುರಿದಾಯ್ತು ಕೆಂಚಬೆಕ್ಕಿಗೆ ಏನಾಯ್ತು ಬಾಲವು ಪೂರಾ ಮಣ್ಣಾಯ್ತು ಟ್ರಾಫಿಕ್ ಜಾಮಲಿ ರಸ್ತೆಯ ಕಾದು ಬೋರು ಬೋರು ಹೊಡೆದಾಯ್ತು ಕೆಂಚಬೆಕ್ಕಿಗೆ ಏನಾಯ್ತು ಬಾಲವು ಪೂರಾ ಮಣ್ಣಾಯ್ತು ನೆತ್ತಿಗೆ ಸಿಟ್ಟು ಸರ್ರನೆ ಏರಿ ಬಾಗಿಲು ಜಡಿದು ಮಲಗಾಯ್ತು!! ವಿಜಯಶ್ರೀ ಹಾಲಾಡಿ ಕವಿ ಪರಿಚಯ: ಆರು ಕೃತಿಗಳು ಪ್ರಕಟವಾಗಿವೆ.ಮಕ್ಕಳ ಸಾಹಿತ್ಯ ಕೃತಿ ‘ ಪಪ್ಪು ನಾಯಿಯ ಪೀಪಿ’ ಇದಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಿದೆ.ಸದ್ಯ ಪ್ರೌಢಶಾಲಾಶಿಕ್ಷಕರಾಗಿದ್ದಾರೆ

ಮಕ್ಕಳ ವಿಭಾಗ Read Post »

ಅಂಕಣ ಸಂಗಾತಿ

ಶಾನಿಯ ಡೆಸ್ಕಿನಿಂದ…

ಚಂದ್ರಾವತಿ ಬಡ್ಡಡ್ಕ ನಾನು- ಛೇ ನೀವು ಎಲ್ಲಿ ಹೋದ್ದು? ಸಚಿನ್ ಸರೀ ಹೊಡ್ದ, ನೋಡ್ಬೇಕಿತ್ತು… ಅಮ್ಮ- ಹೊಡ್ದನಾ…. ಯಾರಿಗೆ ಹೊಡ್ದಾ? ಆಚೆ ಪಾರ್ಟಿಯವನಿಗೆ ಹೊಡ್ದದ್ದದ್ದಾ…. ಯಾಕೆ ಹೊಡ್ದದ್ದು…? ಶ್ರೀಪತಿ- ಅಲ್ಲಮ್ಮಾ ರನ್ ಬಾರಿಸಿದ. ಅಮ್ಮ- ಹ್ಞಾ.. ಹಾಗಾ…. ನಾನು ಆಚೆ ಪಾರ್ಟಿಗೆ ಹೊಡ್ಡದ್ದದ್ದಾ ಅಂತ ನೆನ್ಸಿದೆ. ನಾನು- ಹ್ಹೋ…. ವೋ….. ವಿಕೆಟ್…. ಇಲ್ಲ ಥರ್ಡ್ ಅಂಪಾಯರ್ ಅಮ್ಮ- ಏನಾಯ್ತು….ಏನಾಯ್ತು… ನಾನು- ಸ್ವಲ್ಪ ಇರಿ…. ಧರ್ಡ್ ಅಂಪಾಯರ್‌ಗೆ ಹಾಕಿದ್ದಾರೆ ಅಮ್ಮ- ಅದ್ಯಾರು? ನಾನು- ವಿವರಿಸಿ ಎಂಬಂತೆ ಇವರತ್ತ ನೋಡಿದೆ. ಶ್ರೀಪತಿ- ಥರ್ಡ್ ಅಂಪಾಯರ್ ಅಂದ್ರೇ….(ಸಾಗಿತು ವಿವರಣೆ) ನಾನು- ಅಬ್ಬಾ… ನಾಟೌಟ್! ಅಮ್ಮ- ಇಲ್ವಾ ಸದ್ಯ. ಸ್ವಾಮೀ ದೇವರೇ… (ಮಿಕ್ಕಂತೆ ದೇವರನ್ನು ನಂಬದವರು) ಶ್ರೀಪತಿ- ಆಹಾ…. ಆರ್ರ್ಹಾ…… ಫೋರ್… ಯೇ… ಇಲ್ಲಲ್ಲ ಸಿಕ್ಸ್ ಅಮ್ಮ- ಅದೆಂಥ? ನಾನು- ಫೋರ್ ಅಂದ್ರೇ…..(ಫೋರ್- ಸಿಕ್ಸ್ ಬಗ್ಗೆ ಸಣ್ಣ ಉಪನ್ಯಾಸ) ನಾನು- ವ್ಹಾವ್….. ಹ್ಯೂಜ್ ಸಿಕ್ಸ್! ಶ್ರೀಪತಿ- ಮತ್ತೊಂದು ಸಿಕ್ಸ್ (ಅಷ್ಟರಲ್ಲಿ ನಾನು ಎದ್ದು ಟಾಯ್ಲೆಟ್‌ಗೆ ಹೋದೆ) ಅಮ್ಮ- ನೀನು ಎಲ್ಲಿ ಹೋದ್ದು…? ಅಂವ ಸುಮಾರು ಬೌಂಡರಿ ಹೊಡ್ದ. ಆದ್ರೆ ಆಚೆಯ ಹಸಿರು ಡ್ರೆಸ್ ಹಾಕಿದವರು ಗೆರೆ ದಾಟಲು ಬಿಡುವುದೇ ಇಲ್ಲ…… ಶ್ರೀಪತಿ- ಅಯ್ಯೋ ಅದು ಅವರ ಆಟ ಅಮ್ಮಾ. ಇವರು ಬೌಂಡರಿ ಹೊಡೆಯದಂತೆ ತಡೆಯೋದೆ ಅವರ ಕೆಲಸ ಮತ್ತು ಚಾಕಚಕ್ಯತೆ. ಅಮ್ಮ- ಹೌದಾ….. ಹಾಗಾ.. (ಅಷ್ಟರಲ್ಲಿ ಮೈದುನನ ಅಗಮನ) ಅಮ್ಮ-  ಹೇ… ನೀನು ಯಾಕೆ ಊಟಕ್ಕೆ ಬರ್ಲಿಲ್ಲಾ….. ಆಞ… ಅದೆಂಥ ಕೈಯಲ್ಲಿ….. ಈಗ ಊಟ ಮಾಡ್ತಿಯಾ…. ರಾತ್ರಿ ಊಟಕ್ಕಿದ್ದಿಯಾ….. ಬೇಗ ಬಾ ಮನೆಗೆ…. (ಹೀಗೆ ಮೈದುನ ಹಿಂದೆ ಹೋಗಿ ಒಂದು ಹದ್ನೈದು ನಿಮಿಷ ಹೋಯ್ತು) ಶ್ರೀಪತಿ: ಹೇ…. ನೋಡ್ನೋಡ್ನೋಡು ಹೇಗೆ ಡೈವ್ ಹೊಡ್ದ. ಎಕ್ಸೆಲಂಟ್ ಕ್ಯಾಚ್……. (ಅವರಿಗೆ ಇಷ್ಟವಾಗಿದ್ದ ಹಳೆಯ ಕ್ಯಾಚ್‌ಗಳ ವಿವರಣೆ…..) ಅಮ್ಮ: ಮರಳಿ ಬಂದು ಅವರ ಜಾಗದಲ್ಲಿ ಕುಳಿತು, ಏನಾಯ್ತು, ಎಷ್ಟಾಯ್ತು…? ನಂಗೆ ಟೆನ್ಷನ್ ಆಗ್ತದೆ… ನಾನು:  ಯಾಕೆ? ಅಮ್ಮ: ಇಂಡಿಯಾ ಸೋತರೇ….? ನಾನು: ಸೋತರೆ ಏನಾಯ್ತು? ಆಟವನ್ನು ಆಟವಾಗಿ ನೋಡಿ, ಯಾರು ಚೆನ್ನಾಗಿ ಆಡ್ತಾರೋ ಅವರೇ ಗೆಲ್ತಾರೆ. ಅಮ್ಮ: ನಂಗೆ ಟೆನ್ಷನ್ ಆಗ್ತದೆ…. ಶ್ರೀಪತಿ: ಈ ಅಮ್ಮನಿಗೆ ಹೀಗೆ ಬೇಡದ ವಿಷಯಕ್ಕೆ ಟೆನ್ಷನ್ ಮಾಡೇ ಬಿಪಿ ಜಾಸ್ತಿ ಆಗೋದೂ…….. ಅಮ್ಮ: ಲಲಿತ್ಮಾಯಿಗೆ ಫೋನ್ ಮಾಡ್ತೇನೆ…. ನಾನು:  ಯಾಕೆ? ಅಮ್ಮ: ಅವಳಿಗೆ ಕ್ರಿಕೆಟ್ ಚೆನ್ನಾಗಿ ಗೊತ್ತು. ಭಾರತ ಸೋಲ್ತದ ಗೆಲ್ತದಾಂತ ಅವಳು ಹೇಳ್ತಾಳೆ. ನಾನು ಇವರು ಮುಖ-ಮುಖ ನೋಡ್ಕೊಂಡೆವು (ವರ್ಷಗಳ ಹಿಂದೆ ಕ್ರಿಕೆಟ್ ನೋಡ್ತಿದ್ದಾಗ ಬರೆದಿದ್ದೆ. ಅರ್ಧಕ್ಕೆ ಬರೆದಿದ್ದ ಇದು ಭೂ(ಕಂಪ್ಯೂಟರ್)ಗತ ವಾಗಿತ್ತು. ಮತ್ತೆ ಹೇಗೆ ಮುಂದುವರಿಸಬೇಕಿದ್ದೆ ಎಂಬುದ ನಂಗೆ ಈಗ ಮರೆತು ಹೋಗಿದೆ. ಹೇಗಿತ್ತೋ ಹಾಗೇ ಪೋಸ್ಟ್ ಮಾಡೋಣ ಅನ್ನಿಸಿತು, ಹಾಗೇ ಮಾಡುತ್ತಿದ್ದೇನೆ) ಚಂದ್ರಾವತಿ ಬಡ್ಡಡ್ಕ. ಲೇಖಕರ ಪರಿಚಯ: ಚಂದ್ರಾವತಿ ಬಡ್ಡಡ್ಕ, ಪತ್ರಿಕೆ ಗಳಲ್ಲಿ ಪೋರ್ಟಲ್ ಗಳಲ್ಲಿ ಕೆಲಸ ಮಾಡಿ ಅನುಭವ . ಸದ್ಯಕ್ಕೆ ವೃತ್ತಿಪರ ಅನುವಾದಕಿ

ಶಾನಿಯ ಡೆಸ್ಕಿನಿಂದ… Read Post »

ಇತರೆ

ಅಂತರಂಗದ ಅಲೆಗಳು

                         ಸುಜಾತ ರವೀಶ್ ಹೌದು. ಮನವೆಂಬುದು ಅದೆಷ್ಪೋ ಲಕ್ಷ GBಗಳಾಗಿಂತ ಶಕ್ತಿಯುತ ಚಿಪ್. ಅಂತರಾಳದ ಪದರ ಪದರಗಳಲ್ಲಿ ಅಸಂಖ್ಯಾತ ನೆನಪಿನಲೆಗಳೇಳುತ್ತಲೇ ಇರುತ್ತವೆˌ ಈ ಭರತಕ್ಕೆ ಹುಣ್ಣಿಮೆ ಅಮಾವಾಸ್ಯೆಗಳ ಹಂಗಿಲ್ಲ. ಅವಿರತ ನಿರಂತರ ಅನಂತ.ಎಂದೋ ಎಲ್ಲೋ ಆದ ಅನುಭವದ ನೆನಹು ಇನ್ನೆಂದೋ ಇನ್ನೆಲ್ಲೋ ಧುತ್ತನೆ ಮನದಂಗಳದಲಿ ಪ್ರತ್ಯಕ್ಷ.ಕವಿವಾಣಿ ನುಡಿದಂತೆ “ಹಿಂದೆ ಯಾವ ಜನ್ಮದಲ್ಲೋ ಮಿಂದ ಪ್ರೇಮಜಲದಾ ತಂಪು” ಇಂದಿಗೂ ತಾಜಾ ತಾಜಾ ಹಸಿ ಹಸಿ. ಇವತ್ತು ಬರೆಯಹೊರಟಿರುವ ವಿಷಯ ತುಂಬಾ ದಿನದಿಂದ ಮನದಲ್ಲಿತ್ತು. ಮುಂದೂಡೂತ್ತಲೇ  ಇದ್ದೆ. ಹಾಗಾಗಿ ಈಗ ನಿಮ್ಮ ಮುಂದೆ ನನ್ನ ಅಂತರಂಗದಲೆಯ ನರ್ತನ. ಮನೆಯ ಬಳಿಯೇ  ಉದ್ಯಾನವಿದ್ದರೂ ರಿಂಗ್ ರಸ್ತೆಯಲ್ಲಿ ಗೆಳತಿಯೊಡನೆ ನಡೆದಿತ್ತು ನನ್ನ ಮುಂಜಾವಿನ ವಾಯುವಿಹಾರ. ಗೆಳತಿ ಬೆಂಗಳೂರಿಗೆ ಶಿಫ್ಟ್  ಆದ್ದರಿಂದ ಒಬ್ಬಳೇ ತಾನೇ ಇನ್ನು ಮುಂದೆ ಉದ್ಯಾನವನಕ್ಕೇ ಹೋಗೋಣ ಎಂದು ನಿರ್ಧರಿಸಿದೆ. ಸರಿ ಆ ಬೆಳಿಗ್ಗೆ ಹೊರಟಿತು ನನ್ನ ಸವಾರಿ.ಹಿಂದಿನ ರಾತ್ರಿ ಜೋರಾಗಿ ಮಳೆ ಗಾಳಿ ಬಂದ ಕಾರಣ ವಾತಾವರಣವೆಲ್ಲಾ ತಂಪು ತಂಪು ಹಾಯಿ ಹಾಯಿ. ಗೇಟಿನ ಬಳಿ ಹೋಗುತ್ತಿದ್ದಂತೆ ತಡೆದು ನಿಲ್ಲಿಸಿತು  ಆ ಕಂಪು. ಏನೋ ಪರಿಚಿತ ಅನ್ನಿಸ್ತಿದೆ ಆದರೆ ನಿಖರವಾಗಿ ಗೊತ್ತಾಗ್ತಾಯಿಲ್ಲ.ಒಂದು ಕ್ಷಣ ನೆನಪಿಸಿಕೊಂಡ ನಂತರ ಯಾವುದೋ ಹೂವಿನದು ಅನ್ನಿಸಿತು.ಮೆದುಳಿಗೆ ಮತ್ತಷ್ಟು ಕೆಲಸ ಕೊಡುವಷ್ಟರಲ್ಲಿ ಕಣ್ಣಿಗೆ ಬಿತ್ತು ಆಕಾಶಮಲ್ಲಿಗೆಯ ಮರ. ತಕ್ಷಣ ಹೊಳೆಯಿತು ಅದು ಆಕಾಶಮಲ್ಲಿಗೆ ಹೂವಿನ ನರುಗಂಪು ಎಂದು.ಈ ಸುಗಂಧದ ಬಂಧ ಬಾಲ್ಯದ ನಂಟು.ಚಿಂತಾಮಣಿಯಲ್ಲಿ ಅಜ್ಜಿಮನೆಯ ದಾರಿಯುದ್ದಕ್ಕೂ ಮತ್ತು ಅಲ್ಲಿದ್ದ ಪಾರ್ಕಿನಲ್ಲೂ ಇವೇ ಮರಗಳು. ಸಾಮಾನ್ಯವಾಗಿ ನಾವು ಹೋಗುತ್ತಿದ್ದುದು ಏಪ್ರಿಲ್ ಮೇ ತಿಂಗಳಾದ್ದರಿಂದ ಮರತುಂಬಾ ನಕ್ಷತ್ರದಂತಹ ಹೂಗಳುˌ! ಬೆಳಿಗ್ಗೆ ರಸ್ತೆಯಿಡೀ ಬಿದ್ದಿರುತ್ತಿದ್ದವು. ನೋಡಲು ಥೇಟ್ ಸುಗಂಧರಾಜದಂತೆಯೇ!ಅದರೆ ಅಷ್ಟು ತೀಕ್ಷ್ಣ ಪರಿಮಳವಿಲ್ಲ.ದೇವರ ಪೂಜೆಗೆ ಅರ್ಹವಿಲ್ಲ ಅಂತಿದ್ರು ದೊಡ್ಡವರು.ನಾವು ಮಕ್ಕಳು ಅವನ್ನು ಆರಿಸಿ ತೊಟ್ಟ ಲಂಗಗಳಲ್ಲಿ ಉಡಿ ತುಂಬಿಸಿಕೊಂಡು ತರುತ್ತಿದ್ದೆವು.ಆ ನಂತರ ರಂಗವಲ್ಲಿ ಚಿತ್ತಾರ ಮಾಡಿಯೋ ಮಾಲೆಯೋ ಕಟ್ಟುತ್ತಿದ್ದೆವು. ದೇಟು (ತೊಟ್ಟು) ಉದ್ದವಾದ್ದುದರಿಂದ ಹೊಸದಾಗಿ ಹೂ ಕಟ್ಟಲು ಕಲಿಯುವವರಿಗೆ ಸುಲಭ ಆಗುತ್ತಿತ್ತು. ನಂತರದ ದಿನಗಳಲ್ಲಿ ಅದರ ಒಡನಾಟವೇ ಇಲ್ಲ.ˌ ಹಾಂ! “ಮುಗಿಲ ಮಲ್ಲಿಗೆಯೋ ಗಗನದ ತಾರೆಯೋ” ಹಾಡು ಕೇಳಿದಾಗಲೆಲ್ಲಾ ಈ ನೆನಪು ಸುಳಿದು ಹೋಗುತ್ತಿದ್ದುದು ಉಂಟು. 35_40 ವರ್ಷಗಳ ಹಿಂದೆ ಆಘ್ರಾಣಿಸಿದ ಆ ಕಂಪು ಇನ್ನೂ ಮನದಲ್ಲಿ ಉಳಿದಿದೆಯೆಂದರೆ ಮಾನವನ ಮಿದುಳು ಚಮತ್ಕಾರವಲ್ಲದೇ ಇನ್ನೇನು?ಆಗತಾನೇ ಬಿದ್ದಿದ್ದ ಕಾಲ್ತುಳಿತಕ್ಕೆ ಸಿಕ್ಕದ ಹೂಗಳನ್ನು ಆರಿಸಿ ತಂದು ಫೋಟೋ ತೆಗೆದು ಹೂದಾನಿಯಲ್ಲಿಟ್ಟೆ.3_4  ದಿನಗಳವರೆಗೂ ಬಾಡದೆ ಮನೆಯೆಲ್ಲಾ ಆ ಮಂದ್ರ ಪರಿಮಳ ಆವರಿಸಿತ್ತು ಅಂತೇ  ಮನದ ತುಂಬಾ ಕಳೆದ ಆ ಬಾಲ್ಯದ ದಿನಗಳ ಮೆಲುಕೂ! ಜೀವನವೇ ಹೀಗೇ….. ಬಾಳ ಕಡಲಿನಲಿ ನೆನಪಿನ ಹಾಯಿದೋಣಿಯ ಯಾನ. ಸುಜಾತ ರವೀಶ್ ಲೇಖಕರ ಪರಿಚಯ: ಜೀವ ವಿಮಾ ನಿಗಮದಲ್ಲಿ ಉನ್ನತ ದರ್ಜೆ ಸಹಾಯಕಿ.ಅಂತರಂಗದ ಆಲಾಪ ಕವನ ಸಂಕಲನ ಪ್ರಕಟಣೆಯಾಗಿದೆ. ಮುಖವಾಡಗಳು ಕವನ ಕುವೆಂಪು ವಿಶ್ವವಿದ್ಯಾನಿಲಯದ ಎರಡನೇ ಪದವಿ ಪಠ್ಯ ಪುಸ್ತಕಕ್ಕೆ ಆಯ್ಕೆಯಾಗಿದೆ.ಕೆಲವು ಕವನಗಳು ರಾಜ್ಯಮಟ್ಟದ ಪತ್ರಿಕೆಗಳಲ್ಲಿ ಪ್ರಕಟವಾಗಿವೆ

ಅಂತರಂಗದ ಅಲೆಗಳು Read Post »

ಪುಸ್ತಕ ಸಂಗಾತಿ

ಪುಸ್ತಕ ವಿಮರ್ಶೆ

ಬಿದಲೋಟಿ ರಂಗನಾಥ್ ಕೃತಿಯ ಹೆಸರು: ನನ್ನಪ್ಪ ಒಂದು ಗ್ಯಾಲಕ್ಸಿ ( ಕವನಸಂಕಲನ) ಕವಿ: ನೂರುಲ್ಲಾ ತ್ಯಾಮಗೊಂಡ್ಲು ” ಹೊಸ  ತಲೆಮಾರಿನ ನಿಜದ ಕಾವ್ಯಾಭಿವ್ಯಕ್ತಿ ”      ಗೆಳೆಯ ನೂರುಲ್ಲಾ ತ್ಯಾಮಗೊಂಡ್ಲು ಮತ್ತು ನನ್ನ ಸ್ನೇಹ ಸುಮಾರು ಆರುವರೆ ವರ್ಷದ್ದು, ಸಿಟ್ಟು ಸಿಡುಕು ಆವೇಶ ಅವರಲ್ಲಿ ಕಂಡಂತೆ ಅವರ ಕವಿತೆಗಳಾಲ್ಲೂ ಇದೆ. ಯಾವುದನ್ನೇ ಆಗಲಿ ಖಡಕ್ಕಾಗಿ ಪ್ರತಿಭಟಿಸುವ ನೇರ ಮಾತಿನ ನಿಷ್ಠೂರವಾದಿ ಮನುಷ್ಯ. ಅಷ್ಟು ಸುಲಭವಾಗಿ ರಾಜಿಯಾಗದ ನಡತೆ.      “ನನ್ನಪ್ಪ ಒಂದು ಗ್ಯಾಲಕ್ಸಿ” ಅವರ ಎರಡನೆಯ ಕವನ ಸಂಕಲನ. ಕಾವ್ಯಮನೆ ಎಂಬ ಪ್ರಕಾಶನ ಗಝಲ್ ಮಾಂತ್ರಿಕೆ ಮೆಹಬೂಬ್ ಬೀಯವರ ಸಹಕಾರದಿಂದ ಪ್ರಕಟಿಸಿದೆ. ಇದರಲ್ಲಿ ಐವತ್ತೊಂದು ಕವಿತೆಗಳಿವೆ. ಎನ್ಟಿ ಎಂದೇ ಹೆಸರಾಗಿರುವ ಇವರ ಕವಿತೆಗಳು ಭ್ರಮೆಯ ಹಂಗನ್ನು ತೊರೆದು ನೇರವಾಗಿ ಖಡಕ್ಕಾಗಿ ಕೈ ತೋರಿಸಿ ಮಾತಾಡಿಸುತ್ತವೆ. ಹಬ್ಬಿದ ಕತ್ತಲೆಯ ಪರದೆಯನ್ನು ಸರಿಸಿ ಬೆಳಕಿನ ಕಿರಣಗಳನ್ನು ತೊಟ್ಟು ಬೆಳಗುವ ಇವರ ಈ  ಕವಿತೆಗಳನ್ನು ಐದು ಭಾಗಗಳಲ್ಲಿ ನೋಡಬೇಕಾಗುತ್ತದೆ. ಒಂದನೇ ಭಾಗದಲ್ಲಿ ಭುಗಿಲೆದ್ದ ಹಾಡು, ಗನ್ನುಹಿಡಿದ ಕೈ, ದಿನ ಪತ್ರಿಕೆ, ಟ್ರೈಗೀಸ್ ನದಿ ದಂಡೆ-ನಿಮ್ಮದು, ಹಸಿವು, ಖಾಲಿಜೇಬುಗಳು, ಮೌನ ತ್ರಿವರ್ಣಧ್ವಜ, ರಾಜಬೀದಿ, ಬಂದೂಕು …ಬದುಕು, ಒಂದು ಅಸ್ಮಿತೆ ಕವಿತೆಗಳು ಸಮಾಜದಲ್ಲಿ ಮನೆ ಮಾಡಿರುವ ಧರ್ಮಾಂಧಕಾರ ,ಜಾತಿಯತೆ ಮೌಢ್ಯತೆಯ ವಿರುದ್ಧ ನೋವಿನಿಂದಲೇ ತೊಡೆ ತಟ್ಟಿ ನಿಂತು ಗದರಿಸುವಲ್ಲಿ ಯಶಸ್ವಿಯಾಗಿವೆ.  “ಇಂಡಿಯಾದ ಇಂಡಿಪೆಂಡೆಂಟಿನ ದಿನಗಳು ಸತ್ತು ಬೂದಿಯಾಗಿ ಎಷ್ಟೋ ದಿನಗಳಾಗಿ ನಿನಗೆ ಮಾತ್ರ ಖಬರಿಲ್ಲ”        ದೇಶದ ಹೆಸರಲ್ಲಿನ ಸ್ವಾತಂತ್ರ್ಯ ನೆಪ ಮಾತ್ರ. ಇಲ್ಲಿನ ಗುಲಾಮತನ ಜಾತಿಯತೆ ಅಸಮಾನತೆ ಮೌಢ್ಯತೆ ಅಂಧಕಾರ ಇನ್ನೂ ಅಳಿಸಿಲ್ಲ. ಸಮಾನತೆಯ ಶ್ರೀರಕ್ಷೆಗಾಗಿ ಈಗಲೂ ಒದ್ದಲಾಡುತ್ತಿರುವ ದಲಿತರು ಅಲ್ಪಸಂಖ್ಯಾತರು ನಮ್ಮ ಕಣ್ಣ ಮುಂದಿದ್ದಾರೆ. ಜಾತಿಯ ಹೆಸರಲ್ಲಿ , ತಿನ್ನುವ ಆಹಾರದ ಹೆಸರಲ್ಲಿ ಶೋಷಣೆ ನಡೆಯುತ್ತಲೇ ಬಂದಿದೆ. ಖಾಕಿಯ ಕೋಮು ನಡೆ, ಬ್ರಷ್ಟತೆ; ಕಾವಿಯ  ಪಕ್ಷಪಾತದ ಕಾವು; ಖಾದಿಯ ಗುಂಡಾಗಿರಿ ಅಧಿಕಾರದ ದಾಹ, ಮದ, ಮತ ಭ್ರಷ್ಟತೆ, ಸೋಗಲಾಡಿತನ ಬಡವರ ಬದುಕನ್ನು ಹೈರಾಣಾಗಿಸಿದೆ. ಇವರೆಲ್ಲರ ಕಾಲಡಿ ಬಂಧಿಯಾಗಿರುವ ಸ್ವತಂತ್ರ ನಿಜಕ್ಕೂ ಸತ್ತು ಬೂದಿಯಾಗಿದೆ ಎಂದು ಕವಿ ಇಂದಿನ ರಾಜಕೀಯ ನಡೆ ನುಡಿಯನ್ನು ವ್ಯಂಗ್ಯವಾಗಿ ಟೀಕಿಸಿದ್ದಾರೆ.  “ಗನ್ನು ಹಿಡಿದ ಕೈ ” ಇದೊಂದು ಆಶಾವಾದದ ಕವಿತೆ. ಕ್ರೂರ ಮೃಗತ್ವದ ಮನಸುಗಳು ಅಕ್ಷರದ ವ್ಯಾಮೋಹಕ್ಕೆ ಬೀಳದೆ ಗನ್ನು ಹಿಡಿದ ರಾಕ್ಷಸಿ ಕೃತ್ಯವನ್ನು ನೇರವಾಗಿ ತಳ್ಳಿಹಾಕುತ್ತಾರೆ. ಈ ಕವಿತೆಯಲ್ಲಿ ವ್ಯಕ್ತಪಡಿಸಿರುವಂತೆ ಒಂದುವೇಳೆ ಪೆನ್ನು ಹಿಡಿದಿದ್ದರೆ ಮೃದುತ್ವದ ಬುದ್ದತ್ವ ಧೋರಣೆ  ತಾಳುತ್ತಿದ್ದರೇನೋ ಎಂಬುದು ಕವಿಯ ಆಶಯ. “ನಾಳೆಯಾದರೂ ಉಳಿಯಲಿ ಈ ನೆಲದ ನಾಗರೀಕತೆ ಸಂಸ್ಕೃತಿ-ಮನುಕುಲತೆ” ಎಂದು ಹೇಳುವ ಕವಿಯ ಆಶಯ ಪ್ರಜ್ಞೆ ಈ ಹೊತ್ತಿನ ಜೀವಂತ ಕಾವ್ಯದನಿ. “ಬಾ ಇನ್ನು ಕಾಲ ಮಿಂಚಿಲ್ಲ ಮತ ಧರ್ಮಗಳ ಬಂಧವನ್ನು ಮುರಿದು ಪ್ರೇಮದ ಋಜುತ್ವವಿದೆ ಹೃದಯದ ಚಿಲುಮೆಯಲಿ ಒಂದಿಷ್ಟು ಕುಡಿದು ನಿರಾಳಿಸೋಣ” ಎನ್ನುವ ಕವಿಯ ಪ್ರೇಮ ಭಾಷೆ ವರ್ತಮಾನಕ್ಕೆ ಅಪ್ಯಾಯಾಮಾನವಾಗಿರುವಂಥದ್ದು.        ವಿಮರ್ಶಕ ಡಿ ಆರ್ ನಾಗರಾಜ್ ರವರು ಹೇಳುವಂತೆ “ಕಾವ್ಯ ಬರೀ ಲೋಲಪತೆ ಅಲ್ಲ .ವರ್ತಮಾನದಲ್ಲಿಲ್ಲದ ಆದರೆ ಭವಿಷ್ಯದ ಗರ್ಭದಲ್ಲಿರುವ ಸಮಾಜದ ಅಮೃತಕ್ಕೆ ಹಾರುವ ಗರುಡ ಅದು. ಆದರೆ ಗರುಡನಿಗೆ ಕಾಲ ಕೆಳಗೆ ಹರಿವ ಹಾವಿನ ಕಡೆಗೂ ಗಮನವಿರಬೇಕು. ಅಂದರೆ ಸಾಮಾಜಿಕ ವೈರುಧ್ಯಗಳಿಗೂ ತೀವ್ರವಾಗಿ ಪ್ರತಿ ಸ್ಪಂದಿಸಬೇಕು. ಉದಾಹರಣೆ ಎಂಬಂತೆ ಇಲ್ಲಿನ ಮೊದಲ ಭಾಗದಲ್ಲಿನ ಕವಿತೆಗಳಲ್ಲಿ ಅಂಥಹ ವೈರುಧ್ಯತೆ, ತಳಮಳ ಬಂಡಾಯ ಪ್ರಜ್ಞೆ  ಚುರುಕಾಗಿವೆ. “ಪ್ರಶ್ನಿಸಬೇಕಿದೆ ನಮ್ಮ ಎದೆಗಳಿಗೆ ಗುಂಡು ಹೊಡೆಯುವ ಚಂಡ ಶೂರರನ್ನು ಕ್ರೂರ ಕಿರಾತಕರನ್ನು ನಮ್ಮ ಸುಂದರ ಬದುಕನ್ನು ಕಸಿಯುತ್ತಿರುವ ಗೋಮುಖ ವ್ಯಾಘ್ರರನ್ನು ದೇಶಕ್ಕೆ ದಾರಿದ್ರ್ಯದ ಮುಸುಕನ್ನು ಹೊದಿಸುತ್ತಿರುವ ಮೂಲಭೂತವಾದಿಗಳನ್ನು.” ಹೌದು ಯಾವುದನ್ನು ಪ್ರಶ್ನಿಸದ ಹೊರತು ಪಡೆಯಲಾಗದ ಸ್ಥಿತಿಯನ್ನು ತಲುಪಿರುವ ದೇಶದಲ್ಲಿ. ಪ್ರಶ್ನಿಸಲಾರದೇ ಎಷ್ಟೋ ಜನರ ಬದುಕು ಮಣ್ಣಾಗಿದೆ, ಮುರಾಬಟ್ಟೆಯಾಗಿದೆ. ಅಂಥ ದೇಶದಾರಿದ್ರ್ಯತೆಗೆ ನಮ್ಮ ಅಭಿವ್ಯಕ್ತತೆ ಪ್ರಶ್ನೆಯೇ ಪುರುಷೋತ್ತಮನ ಅಸ್ತ್ರವಾಗಲಿದೆ.  ಎರಡನೇ ಭಾಗದಲ್ಲಿ  ನೋಡುವ  ಕವಿತೆಗಳು ಸೂಫಿ ಹೃದಯ ಸಮುದ್ರದ ಬೆಳಕಿನ ಹಾದಿಯದು. ಇಲ್ಲಿನ  ರಾಬಿಯಾ ಬಸ್ರಿ, ಪ್ರೇಮ ಸಮಾಧಿ, ಆದಿ, ಒಂದಿಷ್ಟು ಕರುಣೆ ಸಾಕು, ಸಾಕಿ ನಾನೊಂದು ಹುಲ್ಲೆಸಳು, ಫಕೀರರ ಗೂಡು, ಬೆತ್ತಲೆ ಫಕೀರ , ಆತ್ಮ ಯಾವ ಕುಲ? ಯಶಸ್ವಿ ಕವಿತೆಗಳು.     ಪ್ರೇಮಾನುಸಂಧಾನ ಸೂಫಿ ಕಾವ್ಯತತ್ಪರತೆ. ಅಂಥ ಒಂದು ಕವಿತೆ “ಆತ್ಮ ಯಾವ ಕುಲ”?  “ನೀನು ಕುಲದ ಪ್ರಶ್ನೆಯೆತ್ತುಕೊಂಡಾಗ ನನ್ನೊಳಗೆ ಕಲಕಿದ್ದು ಮತ್ತೆ ಅದೇ ಪ್ರಶ್ನೆ ಆತ್ಮ ಯಾವ ಕುಲ ?”      ಆತ್ಮದ ಚಲಿಸುವ ದಾರಿಯಲ್ಲಿ ಯಾವುದೇ ಕತ್ತಲೆಯ ಕೂಪಗಳು ಇರುವುದಿಲ್ಲ . ಅದು ತತ್ವಪದ ಶಾರೀರಿಕ ನೆರಳಿನಲ್ಲಿ ವಿಶ್ರಮಿಸುವ ಒಂದು ಮುಕ್ತ ತಾವು. ತಾನು ದೇವರು ಪ್ರೀತಿಯ ನಡುವಿನ ಮುಕ್ತ ಮೆದು ಮಾತುಕತೆ. ಅಲ್ಲಿ ಯಾವ ಗೋಜಲುಗಳ ಶಂಖ ಮೊಳಗುವುದಿಲ್ಲ. ಅಲ್ಲಿ ಪ್ರೀತಿ ಮಂಪರಲ್ಲಿ ತೇಲುವ ಮತ್ತೇರಿದ ಧ್ಯಾನದ ಜಾಡು. ತನ್ನ ಶರೀರದಲ್ಲಡಗಿದ ಬೆಳಕಿನ ಹುಡುಕಾಟದಲ್ಲಿ ನಡೆಯುವ ಸೂಫಿಗಳು ಎಲ್ಲವನ್ನೂ ತ್ಯಜಿಸಿ ಬೆತ್ತಲೇ ಫಕೀರನ ಹಾಗೆ ಚಲಿಸುವ ಬೆಳ್ತಿಂಗಳು. ಅಲ್ಲಿ ಹೊಸ್ತಿಲ ಸಂಸ್ಕಾರವಿಲ್ಲದ ಚಂದನೆಯ ರೆಕ್ಕೆ ಬೀಸುವ ಮೌನ ಹಕ್ಕಿಯು ನುಲಿದ ಮೃದು ದೋರಣೆ ಎಂತಹವರನ್ನು ಮುಖವನ್ನಾಗಿಸುತ್ತದೆ. ಅದೊಂದು ಮುಕ್ತ ಭಾವ ಸಂವೇದಿ ಕ್ರಿಯೆ . ಸೂಫಿ ತತ್ವಪದಕಾರರಿಗೆ ನೆಲೆ ಕುಲವಿಲ್ಲದ ಅಲೆಮಾರಿಗಳಂತೆ ಚಲಿಸುವ ಮೌನ ಸಂಭಾಷಣೆ, ಧ್ಯಾನದ ಹಂಗು. ತನಗೇನು ಬೇಕಿಲ್ಲದ ತನಗಾಗೀ ಏನೂ ಸಂಪಾದಿಸಿ ಕೊಳ್ಳದ ಏಕತಾರಿಯ ತಂತಿಯೊಳಗಣ ಶಬ್ಧವು ಹರಿದ ಜಾಡಿನಲ್ಲಿ ಕಂಡುಕೊಂಡ ಮಮತೆ ಪ್ರೀತಿಯ ಬುತ್ತಿ ಹೊತ್ತ ಅವರಿಗೆ ಬಾಹ್ಯ ಜಗತ್ತಿನ ಕನಸುಗಳೇ ನಗಣ್ಯ.       ಸೂಫಿ ನಡೆ  ಮುಕ್ತವಾಗಿ ಚಲಿಸುವ ಹಕ್ಕಿಯ ಮುಖವಿಲ್ಲದ ದಿಕ್ಕು. ಕವಿಯೇ ಹೇಳುವಂತೆ ಹೊರಗಿನ ದೀಪ ಆರಿದರೂ ಎದೆಯೊಳಗಿನ ಬೆಳಕು ಎಂದೂ ಸಾಯುವುದಿಲ್ಲ. ಅದು ನಿರಾಢಂಬರ ಜಂಗಮ ನಿಲುವು. ಘಟಶೋಧನೆಯಲ್ಲಿ ದೇಹ  ತೊರೆಯುವ ಜೀವ ದೇವರು ಪ್ರೀತಿಯೆಂಬ ತಾದ್ಯತ್ಮದ ಮುಖಾಮುಖಿ. ಸೂಫಿಗಳು ಆ ಬೆಳಕಿನ ಹೆಗಲ ಮೇಲೆ ಕೂತು ಚಲಿಸುವ ಪರಿ ನಿಜಕ್ಕೂ ಮೆಚ್ಚುವಂತಹದ್ದು. ಈ ಸಂಕಲನದ ಸೂಫಿ ಕವಿತೆಗಳನ್ನು ಧ್ಯಾನಿಸಿದರೆ ಆ ತಾದ್ಯತ್ಮದ ಬೆಳಕು  ಘೋಚರಿಸುತ್ತದೆ. ಸೂಫಿಗಳ ಗಾಢ ಪ್ರಭಾವ ಕವಿಯ ಹೃದಯ ಕಮಲದಲ್ಲಿ ಕೂತು ಜೀಕುವ ಪರಿ ಕವಿತೆಗಳಲ್ಲಿ ಕಾಣಿಸುತ್ತಾದರೂ ಕವಿಯೊಳಗಿನ ಸಂಸಾರದ ತಾಕಲಾಟಗಳು ಧ್ಯಾನದ ಮುಕ್ತಪ್ರವೇಶಕ್ಕೆ ಅಡ್ಡಿಯ ಛಾಯೇ ಇದ್ದೆ ಇದೆ . ಸಂಸಾರಿಕ ಜೀವನದ ನೆಲೆಗಟ್ಟೇ ಎಲ್ಲಾಕ್ಕೂ ಮೂಲ ಬೇರು. ಅಲ್ಲಿದ್ದುಕೊಂಡೇ ತನ್ನೊಳಗೆ ಮಾಗುವ ಭಾವದ ಬೆಳಕು ಸೂಫಿಯ ಅಂತರಂಗವನ್ನ ತಟ್ಟಬೇಕು. ಅಪ್ಪಬೇಕು. ಆಗ ಜಂಗಮ ಫಕೀರನ ಜೋಳಿಗೆಯಲ್ಲಿ ಭೌದ್ಧಿಕತೆಯ ಕಾವು ಪಸರಿಸುತ್ತದೆ.ಅದರ ಸಿದ್ಧಾಂತ ಅರಿವಿನ ದಾರಿ ತೆರೆದುಕೊಳ್ಳುತ್ತದೆ.        ಸಂಕಲನದ ಮೂರನೇ ಭಾಗದಲ್ಲಿನೋಡುವ ಕವಿತೆಗಳು ” ‘  ಕಾಲ ಮತ್ತು ನಾನು, ಕಾವ್ಯವೆಂದರೆ, ಕವಿತೆ ನನ್ನದು, ಕವಿತೆಯ ಸತ್ಯ , ನೆರಳ ಮುಂದೆ ಬೆಳಕು. ಕಾವ್ಯದ ಬೆರಗನ್ನು ಜೀವ ಸತ್ವದ ನೆಲೆಯಲ್ಲಿ ತಳವೂರುವ ಕಾವ್ಯ ಮಿಮಾಂಸೆಯ ಜಾಡು. ಇಲ್ಲಿನ ಕವಿತೆಗಳ ನೆರಳು. “ಕಾವ್ಯವೆಂದರೆ ಹಾಗೆ ಒಂದು ಉತ್ಕಟ ಭಾವ ಕವಿಯ ಕಣ್ಣ ಒಂದು ಸಣ್ಣ ಬೆಳಗು ಕಡಲುಪ್ಪಿನ ಕಿನಾರೆಯಲಿ ಚಿಪ್ಪುಗಳನಾಯ್ವ ಗೂನು ಬೆನ್ನಿನ ಆಕ್ರಂದನ ಮೂರ್ತ ಅಮೂರ್ತ ಕಲ್ಪನೆಯ ಚಕ್ರ” “ನಾ ನೇಯುವ ಕಾವ್ಯ ಯಾವತ್ತೂ ನನ್ನದಲ್ಲ ನನ್ನ ಮತ್ತು ಕಾವ್ಯದ ಸಂಬಂಧ ಇರುವುದಾದರೂ ಒಂದಿಷ್ಟು ಹೊತ್ತು ಮಾತ್ರ” ಕವಿತೆ ಬರೆದಾದ ನಂತರ ಕವಿ ಅಲ್ಲಿರುವುದಿಲ್ಲ, ಕವಿತೆ ಮಾತ್ರ ಇರುತ್ತದೆ ಎಂಬ ಅರಿವು ಪ್ರತಿಯೊಬ್ಬ ಕವಿಗೂ ಇರಬೇಕು .ಆಗ ಮಾತ್ರ ಕವಿತೆ ಜೀವಂತ ಇರುತ್ತದೆ ಎಂಬ ಅರಿವು ಕವಿಗೆ ಇದೆ. ಆ ನಿಟ್ಟಿನಲ್ಲಿನಲ್ಲಿ ಕವಿತ್ವ ಗೆದ್ದಿದೆ.        ಕವಿ ಅಭಿವ್ಯಕ್ತಿ ತೆರೆದು ಕೊಂಡಿರುವ ಬಗೆಯೇ ವಿಭಿನ್ನ. ಕಾವ್ಯದ ಬಗ್ಗೆ ಮಿಮಾಂಸಕರು ಬರೆದ ಹೊಳಹುಗಳ ಬೆಳಕಲ್ಲಿ ಇಲ್ಲಿನ ಕವಿ ನಡೆಯುವ ಕಾವ್ಯ ದಾರಿ ಹೂವಿನೆಸಳು ಎತ್ತಿದಷ್ಟೇ ಸಲೀಸು.        ಇನ್ನು ನಾಲ್ಕನೆ ಭಾಗದಲ್ಲಿ ಗುರುತಿಸಿರುವ ಕವಿತೆಗಳು ಹೆಣ್ಣಿನ ಅಸ್ಮಿತೆಯನ್ನು , ಆಕೆಯ ಸಂಕಟದ ನೋವಿನ ನಲ್ಲಿ ಬಂದಿಯಾದ  ಕವಿತೆಗಳಾಗಿವೆ “ಅದೊಂದು ಅಸಾಹಾಯಕ ರಾತ್ರಿಯಲಿ ಕಡು ಕತ್ತಲೆಯ ಕೋಣೆಯಲಿ ನನ್ನ ಮೈ ಮನಸುಗಳ ಮೇಲೆ ಹರಿದಾಡಿ ನನ್ನಾತ್ಮವನ್ನು ನಂಜು ಮಾಡಿ ಹೋದ ಈ ಕರಿನಾಗರವನ್ನು ಸುಡುವ ಒಂದು ಕೊನೆ ಕ್ಷಣಕ್ಕಾಗಿ ಕಾಯುತ್ತಲೇ ಇದ್ದೇನೆ ಹೀಗೆ ಮತ್ತೆ ಮತ್ತೆ ಸುಟ್ಟು ಹೋಗುತ್ತಲೇ ಇದ್ದೇನೆ” ನೋಡಿ ಇಲ್ಲಿನ ಕವಿತೆಯ ಆಕ್ರೋಶದ ದನಿಯು ಹೃದಯವನ್ನೇ ಕಲಕುತ್ತದೆ ಹಾಗೂ ದ್ವನಿಸುತ್ತದೆ. ದೇಹ ಮನಸ್ಸನ್ನು ಬರ್ಬರವಾಗಿ ಶೋಷಿಸಿದ ಗಂಡೆಂಬ ಕರಿನಾಗರನನ್ನು ಸುಡುವ ಶಪಥ ಇಲ್ಲಿ ಮೊನಾಚಾಗಿ ಬಂದಿದೆ.  ಆ ನಿಟ್ಟಿನಲ್ಲಿ ಕವಿ ಹೆಣ್ಣಿನ ನೋವಿನ ಪದರುಗಳನ್ನು ಬಿಚ್ಚಿಡುತ್ತಾರೆ ಆದರೆ ಹೆಣ್ಣಿನ ಪ್ರತಿಕಾರ ಸಾಧಿಸಿದ ಅಥವಾ ಸಬಲೆಯ ಕಾವ್ಯ ಈ ಸಂಕಲನದಲ್ಲಿ  ಕೊಟ್ಟಿಲ್ಲ. ಹೆಣ್ಣು ಸಾಧಿಸಿದ ಬದುಕಿನ ಚಿತ್ರಣಗಳು ಕಾವ್ಯವಾಗಿಸುವಲ್ಲಿ ಮರೆತಿದ್ದಾರೆ ಅನ್ನಿಸುತ್ತದೆ.       ಇನ್ನು ಕೊನೆಯದಾಗಿ ಸಂಸಾರದ ಭಾಗವಾಗಿರುವ ಭವ ಬಂಧನದ ಕವಿತೆಗಳು ಓದುತ್ತಾ ಹೋದಂತೆ ಹಲವು ಪ್ರಜ್ಞೆಯ ಹೊಳಹುಗಳು ತೆರೆದುಕೊಳ್ಳುತ್ತವೆ. ಸಂಕಲನದ ಶೀರ್ಷಿಕೆಯ ಕವನವಂತೂ ಅಪ್ಪನ ಮೇಲಿನ ಪ್ರೀತಿ ಜೋಗು ನೆಲವಾಗಿದೆ. ನಿಜದ ಬದುಕಿನ ಅನಾವರಣದ ಬೆಳಕನ್ನು ಚೆಲ್ಲುವ ಕವಿತೆ ನಿಜಕ್ಕೂ ಗಮನ ಸೆಳೆಯುತ್ತದೆ. ಅಲ್ಲಿ ತಾಳಿರುವ ರೂಪಕಗಳು ಪ್ರತಿಮೆಗಳು ಕವಿತೆಯನ್ನು ಮತ್ತೆ ಮತ್ತೆ ಓದಿಸುತ್ತದೆ. ದೀಪಗಳು ಆರಬಹುದು ಆದರೆ ಎದೆಯೊಳಗಿನ ಬೆಳಕಲ್ಲ. “ಅಪ್ಪ ಆ ರುದ್ರ ಕಿರಣಗಳನ್ನು ಮುರಿದು ಬಂಡೆಗೆ ಕಾವು ಕೊಡುತ್ತಾನೆ ನನ್ನಪ್ಪ ಈಗಲೂ ನಾಳೆಯೂ ಬರಿಯ ಸೂರ್ಯನಲ್ಲ ಒಂದು ಗೆಲಾಕ್ಸಿ”        ಅಪ್ಪನ ಬದುಕನ್ನು ಕಣ್ಣಾರೆ ಕಂಡಿರುವ ಕವಿ. ಅಪ್ಪನ ಬಂಡೆ ಕೀಳುವ ಕೆಲಸದ ಮಜಲುಗಳನ್ನು ವಿವಿಧ ರೂಪಗಳಲ್ಲಿ ವರ್ಣಿಸುವ ಪರಿ ವರ್ಣಿಸಲಸದಳ. ಕವಿಯ ಎದೆಯಾಳದಲ್ಲಿ ಬೇರು ಬಿಟ್ಟ ಕಾವ್ಯದ ಕಾವು ಹೂವಾಗಿ ಅರಳಿ ಘಮಿಸುವಂತಿದೆ. ಜೀವಕೊಟ್ಟ ಅಪ್ಪನಿಗೊಂದು ಉಡುಗೊರೆಯಂತಿದೆ ಈ ಕವನ. ಇನ್ನು ಐದುವರ್ಷದ ನಡಿಗೆ ಕವನ ಮತ್ತೆ ನಮ್ಮನ್ನು ಬಾಲ್ಯಕ್ಕೆ ಕರೆದೊಯ್ಯುವಲ್ಲಿ ಯಶಸ್ವಿಯಾಗಿದೆ. ಮೃದು ತಾಯ್ತನದ ಭಾವ ಹೃದಯ ಕಲಕುತ್ತದೆ. ಅಜ್ಜನ ಸುಕ್ಕುಗಳು, ಅವ್ವನೆಟ್ಟ ಮೆಹಂದಿಗಿಡ ನೆನಪುಗಳ ಬುತ್ತಿ ಬಿಚ್ಚಿ ಉಣಬಡಿಸುವಲ್ಲಿ ಇಷ್ಟವಾಗುವ ಕವನಗಳಾಗಿವೆ.      ಈ ಸಂಕಲನದ ಅನೇಕ ಕವಿತೆಗಳಲ್ಲಿ ಹಸಿವು ಧರ್ಮಾಂಧಕರದ ವಿರುದ್ದ ಸಿಡಿದೆದ್ದಿರುವ ಲಕ್ಷಣಗಳು ಘೋಚರಿಸದಿರದು.ಆ ವಿಷಯದ ಮೇಲೆ ಪದೆ ಪದೆ ಕವನಗಳ ಶರೀರ ರೂಪುಗೊಂಡಿರುವುದು ತುಸು ಕ್ಲಿಷೆ ಎನಿಸಿದರೂ  ಸಂಕಲನದ ಎಲ್ಲಾ ಕವಿತೆಗಳು ಎದೆಗಪ್ಪಿಕೊಳ್ಳಬಹುದಾದ ಕವಿತೆಗಳೇ ಆಗಿವೆ. ಗೆಳೆಯ ಎನ್ಟಿಗೆ ಆತ್ಮೀಯ ಅಭಿನಂದನೆ. ಬಿದಲೋಟಿ ರಂಗನಾಥ್ ವಿಮರ್ಶಕರ ಪರಿಚಯ: ತುಮಕೂರು ಜಿಲ್ಲೆಯವರಾದ ಕವಿ, ಕಥೆಗಾರ, ವಿಮರ್ಶಕ, ಬಿದಲೋಟಿ ರಂಗನಾಥ ವೃತ್ತಿಯಿಂದ ವಕೀಲರು.ಅವರು ಮಾಡುವ ಕೆಲಸಕ್ಕೂ ಸಾಹಿತ್ಯಕ್ಕೂ ಅಜಗಜಾಂತರವಾದರೂ ಸಾಹಿತ್ಯವೆಂದರೆ ಅವರು, ಅವರೆಂದರೆ ಸಾಹಿತ್ಯ ಎನ್ನುವಷ್ಟು ಸಾಹಿತ್ಯ ಕೃಷಿಯಲ್ಲಿ ತೊಡಗಿರುವ ಇವರು ಬಿ ರಂ ಎಂದೇ ಹೆಸರಾದವರು.ಅವರ ಪ್ರಕಟಿತ ಸಂಕಲನಗಳು ಮಣ್ಣಿಗೆ ಬಿದ್ದ ಹೂಗಳು ,ಬದುಕು ಸೂಜಿ ಮತ್ತು ನೂಲುತಾಲ್ಲೋಕು ರಾಜ್ಯೋತ್ಸವ ಪ್ರಶಸ್ತಿ,ಸಂಕ್ರಮಣ ಕಾವ್ಯ ಬಹುಮಾನ ಬಂದಿವೆ.ನಾಡಿನ ಹೆಸರಾಂತ ಪತ್ರಿಕೆಗಳಲ್ಲಿ ಇವರ ಕವಿತೆ ಕಥೆ ವಿಮರ್ಶೆಗಳು

ಪುಸ್ತಕ ವಿಮರ್ಶೆ Read Post »

ಇತರೆ

ವಿಶೇಷ

ಕನ್ನಡ ಬರಹಗಾರ ಮತ್ತು ಜಾಲತಾಣಗಳು.  ಡಿ.ಎಸ್.ರಾಮಸ್ವಾಮಿ         ಕನ್ನಡಕ್ಕೂ ಮತ್ತು ಅದರ ಸಾಹಿತ್ಯ ಚರಿತ್ರೆಗೂ ಶತಮಾನಗಳ ಇತಿಹಾಸವೇ ಇದೆ. ಮೌಖಿಕ ಪರಂಪರೆಯಿಂದ ಹಿಡಿದು ಇವತ್ತು ನಾವು ನೀವೆಲ್ಲ ಬಳಸುತ್ತಿರುವ ಸಾಮಾಜಿಕ ಜಾಲತಾಣಗಳವರೆಗೂ ಅದರ ವಿಸ್ತರತೆ ಇದೆ. ಇಂಗ್ಲಿಷಿಗೆ ತರ್ಜುಮೆಯಾಗದ ಏಕೈಕ ಕಾರಣಕ್ಕೆ ಶ್ರೇಷ್ಠ ಸಾಹಿತ್ಯ ಕೃತಿಗಳಾಗಿದ್ದೂ ವಿಶ್ವ ಮನ್ನಣೆ ಪಡೆಯುವ ಹಲವಾರು ಬಹುಮಾನಗಳಿಂದ ಕನ್ನಡದ ಲೇಖಕರು ವಂಚಿತರಾಗಿರುವುದೂ ಮತ್ತು ಇಂಗ್ಲಿಷಿಗೆ ಅನುವಾದಗೊಂಡ ಕಾರಣಕ್ಕೇ ಸಾಮಾನ್ಯ ಲೇಖಕರೂ ವಿಶ್ವ ವ್ಯಾಪೀ ಪ್ರಚಾರ ಪಡೆದುದೂ ಇದೆ.      ಅಂದರೆ ಕನ್ನಡ ನೆಲದ ಅಸ್ಮಿತೆ ಲೋಕ ಖ್ಯಾತವಾಗಲು ಬಳಸಬಹುದಾದ ಹಲವು ಏರುಮಣೆಗಳನ್ನು ಬಳಸುವ ಚಾಕಚಕ್ಯತೆ ಇದ್ದವರು ಮುನ್ನೆಲೆಗೆ ಬಂದಿದ್ದಾರೆ ಹಾಗೇ ಆಯಾ ಕಾಲದ ಮಾಧ್ಯಮಗಳನ್ನು ಬಳಸಿಕೊಳ್ಳದ ಜಾಣ್ಮೆ ಇಲ್ಲದಿದ್ದವರು ಅವಕಾಶ ವಂಚಿತರಾಗಿದ್ದಾರೆ. ಇದು ಸಾಹಿತ್ಯ ಮತ್ತು ಸಾಂಸ್ಕೃತಿಕ ಲೋಕದೊಟ್ಟಿಗೆ ಸಂಪರ್ಕವಿರಿಸಿಕೊಂಡಿರುವ ಎಲ್ಲರ ಅನುಭವವೂ ಹೌದು. ಸಣ್ಣ ಹಳ್ಳಿಯೊಂದರಲ್ಲಿ ತನ್ನ ಪಾಡಿಗೆ ತಾನು ಸ್ವಾದಿಷ್ಠವೂ ರಸಭರಿತವೂ ಆದ ಆಹಾರವನ್ನು ತಯಾರು ಮಾಡುವ ಬಾಣಸಿಗ ಸ್ಟಾರ್ ಹೋಟೆಲಿನ ಛೆಫ್ ತರಹ ಪ್ರಸಿದ್ಧನಾಗುವುದೇ ಇಲ್ಲ! ಏಕೆಂದರೆ ಛೆಫ್ ಗೆ ಇರುವ ಅವಕಾಶ ಮತ್ತು ಅವಕಾಶವಾದಿತನ ಹಳ್ಳಿಯ ಬಾಣಸಿಗನಿಗೆ ದಕ್ಕುವುದಿಲ್ಲ. ವರ್ತಮಾನದ ಸಾಹಿತ್ಯ ಸಂದರ್ಭವೂ ಇದಕ್ಕಿಂತ ಹೆಚ್ಚೇನೂ ವ್ಯತ್ಯಾಸದಲ್ಲಿ ಇಲ್ಲ. ತನ್ನ ಪಾಡಿಗೆ ತಾನು ಒಳ್ಳೆಯ ಓದು ಮತ್ತು ಬರಹದಲ್ಲಿ ಸುಖ ಕಂಡಂತೆ ಇರುವ ಅದೆಷ್ಟೋ ಬರಹಗಾರರು ಎಲೆ ಮರೆಯ ಕಾಯಂತೆ ಇದ್ದರೆ ಒಂದಷ್ಟು ಚಾಕಚಕ್ಯತೆ ಮತ್ತು ಲೋಕನುಭವದಿಂದ ಸತ್ಯವನ್ನು ಅರಿತವರು ಯಾರನ್ನು ಯಾವಾಗ ಮತ್ತು ಹೇಗೆ ಹಿಡಿದರೆ ತಾವು ಸಲ್ಲಬಹುದು ಖ್ಯಾತರಾಗಬಹುದು ಎಂಬ ಅಂದಾಜಿದ್ದವರೇ ಇವತ್ತು ವೇದಿಕೆಗಳಲ್ಲಿ ಮಿಂಚುತ್ತಿದ್ದಾರೆ. ಅಂಥವರೇ ತಮ್ಮದೇ ಗುಂಪುಗಳನ್ನು ಕ್ಷಮಿಸಿ ಸಮಾನ ಮನಸ್ಕರನ್ನು ಒಂದೆಡೆ ಸೇರಿಸಿ ಸಾಹಿತ್ಯ ಸಾಂಸ್ಕೃತಿಕ ಲೋಕದ ನಿಯಂತ್ರಣಕ್ಕೆ ಕಟಿಬದ್ಧರಾಗಿರುತ್ತಾರೆ. ಆದರೂ ಖುಷಿಯೆಂದರೆ ಈ ಎಲ್ಲ ಗುಂಪು ಗದ್ದಲ ಮತ್ತು ಗೋಜುಗಳಾಚೆಯೂ ಅತ್ಯುತ್ತಮ ಎನ್ನಬಹುದಾದ ಹಲವು ಸಂಕಲನಗಳು ಬರುತ್ತಿವೆ ಮತ್ತು ಘೋಷಿತ ವಲಯಕ್ಕೂ ಅಚ್ಚರಿ ಮತ್ತು ಗಾಬರಿಗಳನ್ನು ಹುಟ್ಟಿಸುತ್ತಲೂ ಇವೆ. ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಇಣುಕು ಹಾಕದ ಬರಹಗಾರರು ಇಲ್ಲವೇ ಇಲ್ಲ ಎಂದು ಧೈರ್ಯವಾಗಿ ಹೇಳಬಹುದು. ಅಂಡ್ರಾಯ್ಡ್ ಫೋನು ಮತ್ತು ಅಂತರ್ಜಾಲ ಸುಲಭಕ್ಕೆ ಸಿಗುತ್ತಿರುವ ಕಾಲದಲ್ಲಿ ಸಾಮಾಜಿಕ ಜಾಲತಾಣಗಳ ನಿರ್ವಹಣೆ ಮತ್ತು ಭಾಗವಹಿಸುವಿಕೆ ಪ್ರತಿಷ್ಠೆಯಾಗಿಯೂ ಬದಲಾಗುತ್ತಿದೆ. ಫೋನಿನ ಡಾಟ ಬಟನ್ ಒತ್ತಿದ ತಕ್ಷಣವೇ ಓತ ಪ್ರೋತ ಬಂದೆರಗುವ ಹೆಚ್ಚಿನ ಸಂದೇಶಗಳು ಓದದೇ ಫಾರ್ವರ್ಡ್ ಆದವೇ ಆಗಿರುತ್ತವೆ. ಓದುವ ಮುನ್ನವೇ ಲೈಕ್ ಕೊಡುವ ಇಮೋಜಿಯನ್ನೋ ಚಿತ್ರವನ್ನೋ ಪ್ರತಿಕ್ರಿಯೆಯಾಗಿ ಹರಿಯಬಿಡುವುದು ತೀರ ಸುಲಭದ ಕೆಲಸವಾಗಿ ಬಿಟ್ಟಿದೆ. ಇಂಥ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣಗಳು ಸಾಹಿತ್ಯದ ಬೆಳವಣಿಗೆಗೆ ಪೂರಕವೋ ಮಾರಕವೋ ಎಂದು ಚಿಂತಿಸುವುದು ಪ್ರೌಢಶಾಲೆಯ ಚರ್ಚಾ ಸ್ಪರ್ದೆಯ ವಿಷಯವಾಗಬಹುದೇ ವಿನಾ ಅದರಾಚೆಗೆ ಅದರ ವ್ಯಾಪ್ತಿ ಇಲ್ಲ. ಏಕೆಂದರೆ ಈ ಜಾಲತಾಣಗಳ ಭೇಟಿ ಇವತ್ತು ಚಟವಾಗಿ ಬದಲಾಗಿದೆಯೇ ವಿನಾ ಅದು ರಸಾನುಭವದ ಕೊಡು ಕೊಳ್ಳುವಿಕೆಯ ವೇದಿಕೆಯಾಗಿ ಉಳಿದಿಲ್ಲ. ಜೊತೆಗೆ ಈ ಜಾಲತಾಣಗಳು ಸಾಮಾಜಿಕ ಆರ್ಥಿಕ ರಾಜಕೀಯ ವಲಯಗಳ ಸುಳ್ಳು ವದಂತಿಗಳ ಹಂಚುವಿಕೆಗೆ ಮತ್ತು ವ್ಯಕ್ತಿ ಹಾಗು ಪಂಥದ ವಿರುದ್ಧದ ವ್ಯವಸ್ಥಿತ ಸಂಚಾಗಿ ಬಳಕೆಯಾಗುತ್ತಿರುವುದನ್ನೂ ಯಾರೂ ಅಲ್ಲಗಳೆಯಲು ಸಾಧ್ಯವಿಲ್ಲವಾಗಿದೆ.    ಆದರೂ ಅಪರೂಪಕ್ಕೆಂಬಂತೆ ಒಂದೆರಡು ವಾಟ್ಸ್ ಅಪ್ ಗುಂಪುಗಳು ಒಳ್ಳೆಯ ಊಟ ಉಪಾಹಾರಗಳ ತಯಾರಿಕೆ ಮತ್ತು ಪ್ರದರ್ಶನಗಳಿಗೆ ವೇದಿಕೆ ಕಲ್ಪಿಸಿದಂತೆಯೇ ಕತೆ, ಕವಿತೆಗಳ ಪ್ರಕಟಣೆಗೆ ವಿಮರ್ಶೆಗೆ ಪರಸ್ಪರರ ಭೇಟಿ ಮಾತುಕತೆಗೆ ನೆರವಾಗುತ್ತಿವೆ. ಆದರೆ ಇವುಗಳ ಸಂಖ್ಯೆ ತೀರ ಕಡಿಮೆ. ಜಾತಿ,ಕೆಲಸ,ನಂಬಿಕೆಯ ತಳಹದಿಯ ಮೇಲೇ ರಚಿತವಾಗುವ ಜಾಲತಾಣಗಳು ಹೆಚ್ಚೇನನ್ನೂ ಸೃಜಿಸಲಾರವು.   ನಿಜಕ್ಕೂ ಹೇಳಬಹುದೆಂದರೆ ಸಾಮಾಜಿಕ ಜಾಲತಾಣ ಒಂದು ಬಗೆಯ ಸಂತೆ ಇದ್ದಂತೆ. ಇಲ್ಲಿ ಎಲ್ಲರಿಗೂ ಬೇಕಾದ ವಿವಿಧ ಬಗೆಯ ಸಾಮಾನು ಸರಂಜಾಮು ಮಾರಾಟಕ್ಕೆ ಇದೆ. ತನಗೆ ಬೇಕಾದ್ದನ್ನು ಬೇಕಾದವರು ಅರಸಿ ಹೋಗಿ ಖರೀದಿಸುವಂತೆ ತನ್ನಿಷ್ಟದ ಸಾಹಿತ್ಯದ ಪ್ರಕಾರಕ್ಕೆ ಚಂದಾದಾರನಾಗುವುದು ಚಂದಾ ನೀಡುವುದು ಅಥವ ಚಂದವಾಗಿ ಎದ್ದು ಹೊರ ನಡೆಯುವುದು ಆಯಾಯ ವ್ಯಕ್ತಿಯ ಬೌದ್ಧಿಕ ಮಾನಸಿಕ ಮತ್ತು ಸಾಮಾಜಿಕ ನಿಲುವು ಮತ್ತು ಒಲವುಗಳ ವಿಷಯವಾಗಿದೆಯೇ ವಿನಾ ಅದೇ ಸಾಹಿತ್ಯ ಜಗತ್ತಿನ ಹೆಬ್ಬಾಗಿಲಾಗಿಲ್ಲ ಎನ್ನುವುದು ನನ್ನ ನಿಲುವು. ಡಿ.ಎಸ್.ರಾಮಸ್ವಾಮಿ. ಲೇಖಕರ ಪರಿಚಯ: ಭಾರತೀಯ ಜೀವವಿಮಾ ನಿಗಮದಲ್ಲಿ ಆಡಳಿತಾಧಿಕಾರಿಯಾಗಿರುವ ಇವರು ಮೂಲತ: ಕವಿಯಾಗಿದ್ದು,ಇವರ ಉಳಿದ ಪ್ರತಿಮೆಗಳು ಕವನಸಂಕಲನಕ್ಕೆ 2006ರ ಮುದ್ದಣ ಕಾವ್ಯ ಪ್ರಶಸ್ತಿ ಬಂದಿರುತ್ತದೆ.

ವಿಶೇಷ Read Post »

You cannot copy content of this page

Scroll to Top