ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಪುಸ್ತಕ ಸಂಗಾತಿ

ಪುಸ್ತಕ ಪರಿಚಯ

ತಗಿ ನಿನ್ನ ತಂಬೂರಿ , ಶರೀಫರ ತತ್ವ ಭಾಷ್ಯ” ಕೃತಿ: ತಗಿ ನಿನ್ನ ತಂಬೂರಿ(ಶರೀಫರ ತತ್ವ ಭಾಷ್ಯ) ಲೇಖಕಿ; ಚಂದ್ರಪ್ರಭ ಬಿ. ಪ್ರಕಾಶಕರು: ಅಜಬ್ ಪ್ರಕಾಶನ, ನಿಪ್ಪಾಣಿ ತಗಿ ನಿನ್ನ ತಂಬೂರಿ , ಶರೀಫರ ತತ್ವ ಭಾಷ್ಯ” ಅಜಬ್ ಪ್ರಕಾಶನ, ನಿಪ್ಪಾಣಿ ರವರ ಹೊಸ ಪ್ರಕಟಣೆ. ಬನಹಟ್ಟಿಯ ಚಂದ್ರಪ್ರಭಾ ಲೇಖನಿಯಿಂದ ಇದು ಚೊಚ್ಚಲ ಪುಸ್ತಕ. ಕನ್ನಡ ನಾಡಿನ ಬಹು ಜನಪ್ರಿಯ ಜಾನಪದ ಕವಿ, ತತ್ವ ಪದಕಾರ ಶರೀಫ ಸಾಹೇಬರ ಆಯ್ದ ೨೫ ತತ್ವ ಪದಗಳನ್ನು ಇಲ್ಲಿ ಲೇಖಕರು ಚರ್ಚೆಗೆ ಒಳಪಡಿಸಿದ್ದಾರೆ. ಪ್ರಸ್ತಾವನೆಯಲ್ಲಿ ಸ್ವತಃ ಲೇಖಕಿ ಹೇಳುವಂತೆ ಶಿವಯೋಗದ ಹಿನ್ನೆಲೆಯಲ್ಲಿ ಈ ಪದ್ಯಗಳನ್ನು ವಿಶ್ಲೇಷಣೆ ಮಾಡಲಾಗಿದೆ. ಪೂರಕವಾಗಿ‌ ಬಸವಾದಿ ಶರಣರ ವಚನಗಳನ್ನು ಅಲ್ಲಲ್ಲಿ ಉಲ್ಲೇಖಿಸಿ ಶರಣರ ವಚನಗಳು ಹಾಗೂ ಶರೀಫರ ತತ್ವ ಪದಗಳಿಗಿರುವ ತಾತ್ವಿಕ ಹಿನ್ನೆಲೆಯತ್ತ ಬಲು ಸೊಗಸಾಗಿ ಗಮನ ಸೆಳೆಯಲಾಗಿದೆ. ಸಾಮಾನ್ಯ ಜನಜೀವನದ ಆಗು ಹೋಗುಗಳನ್ನೇ ರೂಪಕವನ್ನಾಗಿ ಮಾಡಿಕೊಳ್ಳುವಾಗಲೂ ಶರೀಫರ ತತ್ವ ಪದಗಳ ಗೂಢಾರ್ಥ ಪರಮಾರ್ಥ ಸಾಧನೆಯತ್ತ ಕೈ ಹಿಡಿದು ನಡೆಯಿಸುವುದನ್ನು ಲೇಖಕಿ ಗುರುತಿಸುವ ಪ್ರಯತ್ನ ಮಾಡಿದ್ದಾರೆ. ಆಯಾ ಸಂದರ್ಭಗಳಲ್ಲಿ ಅಗತ್ಯವೆನಿಸುವ ದೃಷ್ಟಾಂತ ನೀಡುವ ಮೂಲಕ ಸಂಗತಿಗಳನ್ನು ಓದುಗ ಸ್ನೇಹಿ ಮಾಡುವ ನಿಟ್ಟಿನಲ್ಲಿ ಲೇಖಕರು ಪರಿಶ್ರಮ ಪಟ್ಟಿದ್ದು ಕಂಡು ಬರುತ್ತದೆ. ಸುದೀರ್ಘವಾದ ತಮ್ಮ ಪ್ರಸ್ಥಾವನೆಯಲ್ಲಿ ಯೋಗ, ಶಿವಯೋಗ ಇತ್ಯಾದಿ ಕುರಿತು ಹೇಳುವ ಲೇಖಕರು ಕಾವ್ಯ ಕುರಿತು ವ್ಯಕ್ತಪಡಿಸುವ ಅಧ್ಯಾಯ ಗಮನ ಸೆಳೆಯುತ್ತದೆ. ಅದೇ ರೀತಿ ಯೋಗದಲ್ಲಿ ಪ್ರಸ್ತಾಪವಾಗುವ ಹಲವಾರು ತಾಂತ್ರಿಕ ಪಾರಿಭಾಷಿಕ ಪದಗಳ ವಿವರಣೆ ಕೂಡಾ ಪೂರಕವಾಗಿದೆ. ಶರೀಫರ ಜೀವನದ ಆಗು ಹೋಗುಗಳನ್ನು ತಿಳಿಸುವ ಮೂಲಕ ಅವರೊಬ್ಬ ಸಮನ್ವಯದ ಹರಿಕಾರ ಎಂಬ ಅಂಶವನ್ನು ಕೊನೆಯಲ್ಲಿ ನಿರೂಪಿಸಲಾಗಿದೆ. ಶರೀಫರು ಬೇರೆಲ್ಲ ಆಗುವುದಕ್ಕಿಂತ ಮಿಗಿಲಾಗಿ ಓರ್ವ ಶಿವಯೋಗ ಸಾಧಕರಾಗಿದ್ದರು, ಅಪ್ಪಟ ಶರಣರಾಗಿದ್ದರು, ಮೌಢ್ಯ ವಿರೋಧಿಯಾಗಿದ್ದರು, ಜನಾನುರಾಗಿಯಾಗಿದ್ದರು ಎಂಬ ಸ್ಪಷ್ಟ ನಿಲುವನ್ನು ಲೇಖಕರು ಅತ್ಯಂತ ಶ್ರದ್ಧೆಯಿಂದ ನಿರೂಪಿಸುವುದನ್ನು ಇಲ್ಲಿ ಕಾಣಬಹುದು. ಪುಸ್ತಕ ದೊರೆಯುವ ಸ್ಥಳ: ರೂ. ೧೮೦/- ಬೆಲೆಯ ಪುಸ್ತಕ “ಅರು ಪ್ರಕಾಶನ” ಬನಹಟ್ಟಿ ಇವರಲ್ಲಿ ಲಭ್ಯವಿದೆ. ಸಂಪರ್ಕ ಸಂಖ್ಯೆ 9916542172 ಡಿ. ಎ. ಬಾಗಲಕೋಟ, ‘ಅರು ನಿಲಯ’, ಬೀಳಗಿ ಓಣಿ, ಬನಹಟ್ಟಿ 587311, ಜಿ.‌ ಬಾಗಲಕೋಟ – ಇವರನ್ನು ಸಂಪರ್ಕಿಸಬಹುದು.

ಪುಸ್ತಕ ಪರಿಚಯ Read Post »

ಪುಸ್ತಕ ಸಂಗಾತಿ

ಪುಸ್ತಕ

‘ಗಂಗವ್ವ ಗಂಗಾಮಾಯಿ‘ ಶಂಕರ ಮೊಕಾಶಿ ಪುಣೇಕರ ಕೆ.ಶಿವು ಲಕ್ಕಣ್ಣವರ ಗಂಗವ್ವ ಗಂಗಾಮಾಯಿಯಾಗುವ ಅಪೂರ್ವ ಕಥನವೇ ಶಂಕರ ಮೊಕಾಶಿ ಪುಣೇಕರರ ‘ಗಂಗವ್ವ ಗಂಗಾಮಾಯಿ’..! ಕನ್ನಡದ ಮುಖ್ಯ ಸ್ತ್ರೀಪಾತ್ರಗಳ ಜೊತೆ ನಡೆಸುವ ಈ ಸಂವಾದಕ್ಕೆ ಹಲವು ಆಸೆಗಳು, ಉದ್ದೇಶಗಳು ಇವೆ. ಕನ್ನಡ ಮನಸ್ಸನ್ನು ಆವರಿಸಿರುವ, ಕಾಡಿರುವ ಈ ಸ್ತ್ರೀಪಾತ್ರಗಳನ್ನೆಲ್ಲ ಒಂದು ವೇದಿಕೆಗೆ ತಂದಾಗ ಸೃಷ್ಟಿಯಾಗುವ ಹೆಣ್ಣಿನ ಚಿತ್ರ ಹೇಗಿರಬಹುದು ಎನ್ನುವ ಕುತೂಹಲ, ಹೆಣ್ಣನ್ನು ನೋಡುವ, ಪರಿಭಾವಿಸುವ ನಿರ್ದಿಷ್ಟ ವಿನ್ಯಾಸಗಳು ಇವೆಯೇ ಎನ್ನುವ ಹುಡುಕಾಟವೇ ಲೇಖಕನದ ಮತ್ತು ಲೇಖಕನ ದೃಷ್ಟಿಕೋನ… ಆಯ್ಕೆ, ಆದ್ಯತೆ, ಸಮಕಾಲೀನ ಒತ್ತಡಗಳನ್ನೆಲ್ಲ ಮೆಟ್ಟಿ ನಿಂತ ಸ್ತ್ರೀಪಾತ್ರಗಳು ಏನನ್ನು ಪ್ರತಿನಿಧಿಸುತ್ತವೆ? ಕಲೆಯ ಶಕ್ತಿಯನ್ನೋ, ಹೆಣ್ಣಿನ ವ್ಯಕ್ತಿತ್ವದ ನಿಜ ನೆಲೆಯನ್ನೋ? ಅಪವಾದವೆನ್ನುವಂತೆ, ಅಪರೂಪವೆನ್ನುವಂತೆ, ಮುಖ್ಯವೆನ್ನುವಂತೆ ಕಾಣುವ ಸ್ತ್ರೀ ಪಾತ್ರಗಳಾಚೆಗೆ ಅಜ್ಞಾತವಾಸದಲ್ಲಿರುವ ಪಾತ್ರಗಳೂ ಇವೆಯೆ? ಈ ಸ್ತ್ರೀ ಪಾತ್ರಗಳ ಮೂಲಕ ಭಿನ್ನ ಲೋಕದೃಷ್ಟಿಯೊಂದನ್ನು ಕಟ್ಟಲು ಸಾಧ್ಯವಿದೆಯೆ? ಕನ್ನಡ ಸಾಹಿತ್ಯವನ್ನು ಸಮೃದ್ಧಗೊಳಿಸುವಲ್ಲಿ ಈ ಪಾತ್ರಗಳ ಪಾತ್ರವೇನು..? ಇಂಥ ಹಲವು ಪ್ರಶ್ನೆಗಳ ಮುಖಾಮುಖಿಯೇ ಗಂಗವ್ವ ಗಂಗಾಮಾಯಿ… ಶಂಕರ ಮೊಕಾಶಿ ಪುಣೇಕರರ ‘ಗಂಗವ್ವ ಗಂಗಾಮಾಯಿ’ ನಿಸ್ಸಂದೇಹವಾಗಿ ಕನ್ನಡದ ಶ್ರೇಷ್ಠ ಪಠ್ಯಗಳಲ್ಲೊಂದಾಗಿರುವಂತೆಯೇ ಗಂಗವ್ವ ಕನ್ನಡ ಜಗತ್ತು ಸೃಷ್ಟಿಸಿರುವ ಸಾರ್ವಕಾಲಿಕ ಪಾತ್ರಗಳಲ್ಲೊಂದು. ತಾಯ್ತನವನ್ನು ಕುರಿತ ಎಲ್ಲ ಬಗೆಯ ರೊಮ್ಯಾಂಟಿಕ್ ನಿರೂಪಣೆಗಳನ್ನು ನಿರ್ದಾಕ್ಷಿಣ್ಯವಾಗಿ ಹೊಡೆದು ಹಾಕುತ್ತಲೇ ತಾಯ್ತನ ಮತ್ತು ಹೆಣ್ಣಿನ ಶಕ್ತಿಯನ್ನು ಈ ಕಾದಂಬರಿ ಅದ್ಭುತವಾಗಿ ಕಟ್ಟಿಕೊಡುತ್ತದೆ. ಇದನ್ನು ಈ ಕಾದಂಬರಿ ಎಷ್ಟು ಶಕ್ತವಾಗಿ ಮಾಡುತ್ತದೆ ಎಂದರೆ, ಹೆಣ್ಣಿನ ಶಕ್ತಿ ವಿಶೇಷಗಳ ಬಗ್ಗೆ ನಮ್ಮಲ್ಲಿ ಭಾವುಕವೂ, ರಮ್ಯವೂ ಆದ ಕೃತಜ್ಞತೆಯ ಭಾವವೊಂದು ಅನಾಯಾಸವಾಗಿ ಮೂಡುವಷ್ಟು..! ಗಂಡನನ್ನು, ಭಾವನಾತ್ಮಕ ಹಾಗೂ ಆರ್ಥಿಕ ಸುರಕ್ಷತೆಯನ್ನು ಒಟ್ಟಿನಲ್ಲಿ ಎಲ್ಲ ಬಗೆಯ ಆಧಾರಗಳನ್ನು ಕಳೆದುಕೊಂಡು ಮಗನನ್ನು ಬೆಳೆಸುವ, ಅವನಿಗೊಂದು ಬದುಕನ್ನು ಕಟ್ಟಿಕೊಡುವುದೇ ತನ್ನ ಬದುಕಿನ ಏಕೈಕ ಗುರಿಯೆಂದು ತಿಳಿಯುವ, ಮಾತ್ರವಲ್ಲ, ಅದನ್ನು ಅಕ್ಷರಶಃ ಬದುಕಿನ ಪ್ರತಿಘಳಿಗೆಯೂ ಪಾಲಿಸುತ್ತಾಳೆ ಗಂಗವ್ವ… ಜಗತ್ತಿನಾದ್ಯಂತ ಇಂಥ ಲಕ್ಷಾಂತರ ತಾಯಂದಿರಿದ್ದಾರೆ. ಅವರಿಗೆಲ್ಲ ತ್ಯಾಗಮಯಿಗಳೆಂಬ, ಬದುಕನ್ನು ಗಂಧದ ಹಾಗೆ ತೇಯುವ ಸಾರ್ಥಕ ಜೀವಿಗಳೆಂಬ ಪ್ರಶಸ್ತಿಯೂ ಯಾವುದೇ ವಶೀಲಿಬಾಜಿಯಿಲ್ಲದೇ ಅಪಾರ ಕೃತಜ್ಞತೆಯಲ್ಲಿ ಸಲ್ಲುತ್ತಾ ಬಂದಿದೆ. ಈ ದೃಷ್ಟಿಕೋನವು ಹೆಣ್ಣು ಇರಬೇಕಾದ್ದೇ ಹೀಗೆ ಎನ್ನುವ ಕರಾರಾಗಿಯೂ ಸ್ಥಾಪಿತವಾಗಿಬಿಟ್ಟಿದೆ. ಇದು ಹೆಣ್ಣಿನ ಶಕ್ತಿ ವಿಶೇಷ ಎನ್ನುವುದೇನೋ ಸರಿ, ಆದರೆ ತಾಯ್ತನವೆನ್ನುವುದು ಪ್ರತಿಘಳಿಗೆಯೂ ಅಪೇಕ್ಷಿಸುವ ಮನೋಚೈತನ್ಯವನ್ನು, ಅದನ್ನು ನಿರಂತರವಾಗಿ ಉಳಿಸಿಕೊಳ್ಳಲು ಏನೆಲ್ಲವನ್ನೂ ಹೆಣ್ಣು ಪಣಕ್ಕೆ ಒಡ್ಡಬೇಕಾಗುತ್ತದೆ ಎನ್ನುವುದನ್ನು ಗಂಗವ್ವನ ಪಾತ್ರ ಸಾಕ್ಷಾತ್ಕರಿಸಿ ಕೊಡುತ್ತದೆ. ಆದ್ದರಿಂದಲೇ ಇದು ‘Making of the Mother’ನ ವಾಸ್ತವವಾದಿ ಚಿತ್ರಣದ ಹಾಗೆ ಕಾಣಿಸುತ್ತದೆ… ಗಂಗವ್ವನ ಪಾತ್ರ ಗಂಗವ್ವನಿಂದ ಗಂಗಾಮಾಯಿಯಾಗುವ ಪ್ರಕ್ರಿಯೆಯ ಸಜೀವ ಚಿತ್ರಣ ಈ ಕಾದಂಬರಿಯಲ್ಲಿದೆ. ಗಂಗವ್ವನ ಪಾತ್ರದ ಪ್ರವೇಶವೇ ಕೃತಿಕಾರರ ದೃಷ್ಟಿಕೋನದ ಥಾಟನ್ನು ನಾಟಕೀಯವಾಗಿ ಓದುಗರಿಗೆ ಪರಿಚಯಿಸುತ್ತದೆ. ಭಾರತೀಯರ ಬದುಕಿನ ಅವಿಭಾಜ್ಯ ಅಂಗವೇ ಆಗಿರುವ ಗಂಗಾಜಲವನ್ನು ತನ್ನ ಮಗನನ್ನು ಪೊರೆಯಬೇಕಾದ ಜವಾಬ್ದಾರಿಯ ಸಲುವಾಗಿ ರೈಲಿನಿಂದ ಹೊರಗೆ ಚೆಲ್ಲುವ ದೃಶ್ಯದಿಂದ ಕಾದಂಬರಿ ಆರಂಭವಾಗುತ್ತದೆ. ಈ ಜವಾಬ್ದಾರಿಯ ಅರಿವು ಅವಳಿಗೆ ಆ ಘಳಿಗೆಯಲ್ಲಿ ಆಗುತ್ತದೆ ಎಂದಲ್ಲ. ಆದರೆ ಆ ಜವಾಬ್ದಾರಿ ಎಷ್ಟು ಮುಖ್ಯವಾದುದು ಮತ್ತು ಅನಂತವಾದುದು ಎಂದರೆ ಗಂಗಾಜಲ ತನ್ನ ಮನೆಯಲ್ಲಿ ಕಣ್ಣೆದುರಿಗೆ ಇರುವುದು ಅದಕ್ಕೊಡ್ಡುವ ಸವಾಲಿನ ಹಾಗೆ, ಸಾವಿನ ಅಸ್ತಿತ್ವವನ್ನು, ಆಗಮನದ ಅನಿವಾರ್ಯತೆಯನ್ನು ಆ ಗಂಗಾಜಲ ಪ್ರತಿಕ್ಷಣ ನೆನಪಿಸುವ ಮೂಲಕ ತನಗೆ ಅಡ್ಡಿಯಾಗಬಹುದೆಂದು ಆ ಗಂಗಾಜಲವನ್ನು ಹೊರಗೆ ಚೆಲ್ಲುತ್ತಾಳೆ… ಇದು ಆ ಗಂಗಾಜಲವನ್ನು ಕುರಿತ ಅವಳ ಅಪನಂಬಿಕೆಯ ಸಂಕೇತವೇನಲ್ಲ, ಸ್ವಭಾವತಃ ದೈವಶ್ರದ್ಧೆಯವಳಾದ ಗಂಗವ್ವನಿಗೆ ಧಾರ್ಮಿಕ ನಂಬಿಕೆಗಿಂತಲೂ ಮಗನನ್ನು ನೆಲೆನಿಲ್ಲಿಸುವುದು ತನ್ನ ಬದುಕಿನ ಪರಮ ಗುರಿ ಎನ್ನುವುದರಲ್ಲಿರುವ ನಂಬಿಕೆ ಮೇಲುಗೈ ಪಡೆಯುತ್ತದೆ ಎನ್ನುವ ಅಂಶ ತಾಯ್ತನದ ಸಹಜ ಗುಣವನ್ನು ಮಾತ್ರವಲ್ಲ; ಅದನ್ನು ಕಾಪಾಡಿಕೊಂಡು ಬರುವುದು ಯಾವ ಹೆಣ್ಣಿಗೂ ಒಂದು ಸವಾಲೂ ಹೌದು, ಅದೊಂದು ಸಾವಯವ ಪ್ರಕ್ರಿಯೆಯೂ ಹೌದು ಎನ್ನುವ ಬಹು ಮುಖ್ಯವಾದ ಅಂಶವನ್ನು ಹೇಳುತ್ತದೆ. ಸಾಮಾನ್ಯವಾಗಿ ಈ ಅಂಶವನ್ನು ಅವಳ ಹುಟ್ಟುಗುಣವೆನ್ನುವಂತೆ ನಿಭಾಯಿಸಲಾಗುತ್ತದೆ. ಆದರೆ ಪುಣೇಕರರ ಈ ಕೃತಿ ಅದೊಂದು ಸಿದ್ಧ ಸ್ಥಿತಿಯಲ್ಲ ಎನ್ನುವುದಕ್ಕೆ ಒತ್ತು ಕೊಡುವುದರ ಮೂಲಕ ಅದೊಂದು ಕಷ್ಟದ ದಾರಿ ಎನ್ನುವುದನ್ನು ಹೇಳುತ್ತದೆ… ಸ್ವಲ್ಪ ಉತ್ಪ್ರೇಕ್ಷಿತವಾಗಿ ಹೇಳುವುದಾದರೆ, ತಾಯ್ತನವೆನ್ನುವುದು ಅಹಂಕಾರವನ್ನು ಕಳೆದುಕೊಳ್ಳುತ್ತಾ ಹೋಗುವ ಕ್ರಿಯೆಯೂ ಹೌದು ಎನಿಸಿಬಿಡುತ್ತದೆ ಗಂಗವ್ವನನ್ನು ಅರ್ಥಮಾಡಿಕೊಳ್ಳುವಾಗ. ಮಗ–ಸೊಸೆ ತನ್ನನ್ನು ಅನಾದರದಿಂದ ಕಂಡ ಸಂದರ್ಭವೊಂದರಲ್ಲಿ ಊಟವನ್ನೂ ಮಾಡದೆ ಅವಳ ಹಿತಚಿಂತಕರಾದ ದೇಸಾಯರ ಮನೆಗೆ ಗಂಗವ್ವ ಹೋಗುತ್ತಾಳೆ. ಅಸಹನೀಯ ಅವಮಾನವಾಗಿದ್ದಾಗಲೂ ಗಂಗವ್ವ ಮನೆಗೆ ವಾಪಸಾಗುವುದಾಗಿ ಹೇಳುತ್ತಾಳೆ. ತನ್ನ ಅವಮಾನಕ್ಕಿಂತ ಮಗನ ಅಭ್ಯುದಯವೇ ದೊಡ್ಡದಾಗಿ ಅವಳಿಗೆ ಕಾಣಿಸುತ್ತದೆ. ಆದರೆ ಇದಕ್ಕಾಗಿ ಅವಳು ರಾಜಿ ಮಾಡಿಕೊಳ್ಳಬೇಕಾಗುವುದು ತನ್ನ ಆತ್ಮಗೌರವದ ಜೊತೆಗೆ. ಬಹುಕಷ್ಟದ ಈ ಸಂದರ್ಭವನ್ನು ಅವಳು ಹಾಯುವ ಘಳಿಗೆಯ ತಲ್ಲಣಗಳನ್ನು ಪುಣೇಕರರು ಅಬ್ಬರವಿಲ್ಲದ ತೀವ್ರತೆಯಲ್ಲಿ ಹಿಡಿಯುತ್ತಾರೆ. ತಾನು ಎನ್ನುವ ಅಹಂಕಾರವನ್ನು ಗೆಲ್ಲಬೇಕಾದ ಅನಿವಾರ್ಯತೆಯನ್ನು ಅವಳು ಸಾಂಪ್ರದಾಯಿಕ ಹೆಣ್ಣಿನ ಮಾಮೂಲಿ ಧಾಟಿಯಲ್ಲಿಯೇ ನಿಭಾಯಿಸಲು ಯತ್ನಿಸುವ ಹಾಗೆ ಕಾಣಿಸುತ್ತದೆ. ‘ಹೆಂಗಸಿನ ಜನ್ಮ ಇರೋದೇ ಅನುಭೋಗಿಸೋಕೆ… ಅನುಭೋಗಿಸ್ತೀನಿ ಬಿಡು ಗೋಪಣ್ಣಾ…’ ಎನ್ನುತ್ತಾಳೆ… ಆದರೆ ಇಡೀ ಕಾದಂಬರಿಯ ಭಿತ್ತಿಯಲ್ಲಿ ಅವಳ ಪಾತ್ರದ ಚಲನೆಗಳು ಅಸಹಾಯಕ ಹೆಣ್ಣಿನ ಗೋಳಾಟವಾಗಿ ಕಾಣಿಸುವುದಿಲ್ಲ. ಬದುಕಿನ ಯಾವುದೇ ಸನ್ನಿವೇಶಗಳನ್ನೂ ನಿರ್ಭೀತಿಯಿಂದ, ಕುಂದಿಲ್ಲದ ಆತ್ಮವಿಶ್ವಾಸದಿಂದ ಎದುರಾಗುತ್ತಾಳೆ. ಈ ಸನ್ನಿವೇಶವೂ ಕೂಡ ಅವಳ ಜೀವನದೃಷ್ಟಿಯ ನಿದರ್ಶನವೇ ಆಗಿದೆ. ಮಗನ ಹಾಗೂ ಸೊಸೆಯ ಎದುರಿಗಿನ ಸೋಲಾಗಬಹುದು ಎನ್ನುವುದಕ್ಕಿಂತ, ತನ್ನ ಆತ್ಮಗೌರವಕ್ಕೆ ಭಂಗವಾಗುತ್ತದೆ ಎನ್ನುವ ಸಾಧ್ಯತೆಗಿಂತ, ಮಗನ ಬದುಕು ಹಳಿ ತಪ್ಪಬಾರದು ಎನ್ನುವ ಪ್ರಜ್ಞಾಪೂರ್ವಕವಾದ, ಕಷ್ಟದ ಆಯ್ಕೆ ಇದು. ಆದರೆ ಅದು ಕಾಣಿಸಿಕೊಳ್ಳುವುದು ಮಾತ್ರ ಹೆಣ್ಣಿನ ಜನ್ಮ ಎನ್ನುವ ಸಾಂಪ್ರದಾಯಿಕ ಭಾಷೆಯಲ್ಲಿ. ಆದ್ದರಿಂದಲೇ ಗಂಗವ್ವನ ಪಾತ್ರ ಹೆಣ್ಣಿನ ವ್ಯಕ್ತಿತ್ವದ ಹುಡುಕಾಟ ಮತ್ತು ರಚನೆಯ ಅನೇಕ ಆಯಾಮಗಳನ್ನು ಅನಾವರಣಗೊಳಿಸುತ್ತದೆ… ಮುಖ್ಯವಾಗಿ ಹೆಣ್ಣಿನ ಸಾಮಾಜಿಕ, ಕೌಟುಂಬಿಕ ನೆಲೆಗಳಿಗೆ ಕೊಡುವ ಒತ್ತು ಇಲ್ಲೂ ಮುಂದುವರಿದಿರುವ ಹಾಗೆ ಮೇಲ್ನೋಟಕ್ಕೆ ಕಾಣಿಸುತ್ತದೆ. ಆದರೆ ಗಂಗವ್ವನ ಪಾತ್ರದ ಶಕ್ತಿ ಮತ್ತು ಅನನ್ಯತೆ ಇರುವುದೇ ಹೆಣ್ಣಿನ ಬದುಕಿನ ಸಾಮಾಜಿಕ, ಕೌಟುಂಬಿಕ ನೆಲೆಗಳನ್ನು ಸ್ಪಷ್ಟ ರಾಜಕೀಯ ಹಾಗೂ ನೈತಿಕ ಪ್ರಜ್ಞೆಯಲ್ಲಿ ಪ್ರತಿಪಾದಿಸುವುದರಲ್ಲಿ. ಗಂಗವ್ವ ಮುನ್ನೆಲೆಗೆ ತರುವ ಈ ಅಂಶಗಳು ಅವಳ ವ್ಯಕ್ತಿತ್ವ ಮತ್ತು ಹೋರಾಟಕ್ಕೆ ಅಪಾರ ಬಲ ಕೊಡುತ್ತವೆ. ಇಡೀ ಲೋಕವನ್ನು ಎದುರು ಹಾಕಿಕೊಳ್ಳಬಲ್ಲ ಛಾತಿಯನ್ನು ಅವಳು ಪಡೆಯುವುದು ಈ ರಾಜಕೀಯ ಪ್ರಜ್ಞೆಯಲ್ಲಿ. ಈ ಕಾರಣಕ್ಕಾಗಿಯೇ ಅವಳಿಗೆ ತನ್ನ ನಡೆಯಲ್ಲಿ ಯಾವ ದ್ವಂದ್ವಗಳೂ ಇಲ್ಲ. ತನ್ನ ಖಾಸಾ ತಮ್ಮ ರಾಘಪ್ಪನ ಮಗಳನ್ನೇ ತನ್ನ ಸೊಸೆಯಾಗಿ ಮಾಡಿಕೊಳ್ಳುವ ಸಂದರ್ಭದಲ್ಲೂ ಒಪ್ಪಂದದಂತೆ ಒಂದು ಸಾವಿರ ರೂಪಾಯಿ ಕೊಡದಿದ್ದರೆ ‘ಅಕ್ಕಿಕಾಳು’ ಇಲ್ಲ ಎಂದು ತುಂಬಿದ ಮದುವೆ ಮನೆಯಲ್ಲಿ ಘಂಟಾಘೋಷವಾಗಿ ಹೇಳಬಲ್ಲಳು. ಇಷ್ಟಾಗಿ ಆ ಹಣ ಯಾಕಾಗಿ? ತಾನು ಉಡುವ ಹರಕು ಸೀರೆಯ ಬದಲು ರೇಷ್ಮೆ ಸೀರೆ ಉಡಲಂತೂ ಅಲ್ಲ. ಮಗನ ಭವಿಷ್ಯದ ಆಪದ್ಧನವಾಗಿ ಅದು ಅವಳಿಗೆ ಬೇಕು… ಯಾರನ್ನು ಬೇಕಾದರೂ ತನ್ನ ಖೆಡ್ಡಾದಲ್ಲಿ ಬೀಳಿಸಿಕೊಳ್ಳಬಲ್ಲ, ಗೆದ್ದು ಬೀಗಬಲ್ಲ ಪ್ರಚಂಡ ರಾಘಪ್ಪನನ್ನು ಗಂಗವ್ವ ಸೋಲಿಸುವುದು ಇದೇ ಪ್ರಖರ ರಾಜಕೀಯ ಪ್ರಜ್ಞೆಯಲ್ಲಿ. ತಾಯಿಯಾಗಲ್ಲದೆ ತನಗೆ ಇನ್ನೊಂದು ಅಸ್ತಿತ್ವವೇ ಇಲ್ಲವೇನೋ ಎನ್ನುವ ಮಟ್ಟದಲ್ಲಿ ಗಂಗವ್ವ ವ್ಯವಹರಿಸುತ್ತಾಳೆ. ಕೆಲವು ಸನ್ನಿವೇಶಗಳು ಗಂಗವ್ವನ ವ್ಯಕ್ತಿತ್ವದ ಅಪ್ರತಿಮ ಸಾಕ್ಷಿಗಳಾಗಿವೆ. ಗಂಗವ್ವನ ಗಂಡ ಸ್ವಾಮಿರಾಯನ ಆಸ್ತಿಯೆಲ್ಲ ಹರಾಜಿಗೆ ಬಂದ ಹೊತ್ತಿನಲ್ಲಿ ಇವಳು ಮಗ ಕಿಟ್ಟಿಯ ಕೈಗೆ ಕೆಲವು ಒಡವೆಗಳನ್ನು ಕೊಟ್ಟು ಹಿತ್ತಲಿನಲ್ಲಿ ಒಗೆಸುತ್ತಾಳೆ. ನಂತರ ಅವುಗಳನ್ನು ಮಾರಿ, ಬಂದ ಹಣವನ್ನು– ರಕ್ಷಕ ದೈವದಂತೆ ಅವಳನ್ನು, ಮಗ ಕಿಟ್ಟಿಯನ್ನು ಸದಾ ಪೊರೆದ ದೇಸಾಯರ ಬಳಿ ಇಡುತ್ತಾಳೆ. ಎಂಥ ದುರ್ಭರ ಸನ್ನಿವೇಶದಲ್ಲೂ ಕಂಗೆಡದ ಈ ಗುಣವೊಂದು ಅವಳ ವ್ಯಕ್ತಿತ್ವದ ಅಸಾಧಾರಣ ಲಕ್ಷಣ. ಇದೇ ಹಣದ ಮೇಲೆ ತಮ್ಮ ರಾಘಪ್ಪ ಕಣ್ಣಿಟ್ಟು ಏನೆಲ್ಲಾ ಹುನ್ನಾರಗಳನ್ನು ಮಾಡಿದರೂ ಆ ಹಣ ಅವನ ಕೈಗಾಗಲಿ, ಮಗ ಕಿಟ್ಟಿಯ ದಂದುರಾಳಿತನಕ್ಕಾಗಲಿ ದಕ್ಕದಂತೆ ನೋಡಿಕೊಳ್ಳುತ್ತಾಳೆ… ನಿದ್ದೆ ಎಚ್ಚರಗಳಲ್ಲಿ ತನ್ನ ಜವಾಬ್ದಾರಿಯನ್ನೇ ಉಸಿರಾಡುವ ಗಂಗವ್ವ ಈ ಕಾರಣಕ್ಕಾಗಿಯೇ ಸದಾ ಚಡಪಡಿಸುತ್ತಿರುತ್ತಾಳೆ. ಆದ್ದರಿಂದಲೇ ಇವಳ ವ್ಯಕ್ತಿತ್ವದಲ್ಲಿ ಪ್ರಸನ್ನತೆ ಎನ್ನುವುದು ಇಲ್ಲವೇ ಇಲ್ಲ ಎನ್ನುವಷ್ಟು ಕಡಿಮೆ. ಹಾಸ್ಯವೂ ಇವಳ ಬಳಿ ಸುಳಿಯುವುದಿಲ್ಲ. ಗಂಗವ್ವನ ವ್ಯಕ್ತಿತ್ವದ ಅಪೂರ್ಣತೆ ನಮ್ಮ ಅರಿವಿಗೆ ಬರುವುದು ಇಂಥ ಸಂಗತಿಗಳಿಂದ. ಮಗ ಕಿಟ್ಟಿಯನ್ನು ಕುರಿತ ಗಂಗವ್ವನ ಕಾಳಜಿ, ಸದೋದಿತವಾಗಿ ಅವಳು ನಡೆಸುವ ಪ್ರಯತ್ನಗಳನ್ನು, ಅವಳ ಭಂಗವಿರದ ಏಕೋನಿಷ್ಠೆಯನ್ನು ವೈಭವೀಕರಿಸುವ, ನಾಟಕೀಯಗೊಳಿಸುವ, ಓದುಗರ ಕಣ್ಣಾಲಿಗಳನ್ನು ಒದ್ದೆಯಾಗಿಸುವ ಎಲ್ಲ ಅವಕಾಶಗಳೂ ಈ ಕೃತಿಗಿದ್ದವು. ಆದರೆ ಈ ಕಾದಂಬರಿ ಅದ್ಯಾವುದನ್ನೂ ಮಾಡದೆ ಗಂಗವ್ವನನ್ನು ಅವಳ ನಿಜದಲ್ಲಿ ನೋಡುವ ಪ್ರಯತ್ನ ಮಾಡುತ್ತದೆ. ಅವಳ ದೌರ್ಬಲ್ಯಗಳನ್ನು ಮುಚ್ಚಿಡುವ ಪ್ರಯತ್ನ ಮಾಡುವುದಿಲ್ಲವೆಂದೇ ಅವಳ ಶಕ್ತಿಯೂ ನಮ್ಮ ಅರಿವಿಗೆ ದಕ್ಕುವುದು ಸಾಧ್ಯವಾಗುತ್ತದೆ. ತಮ್ಮ ರಾಘಪ್ಪ ಹತ್ತು ವರ್ಷಗಳ ನಂತರ ಮೊದಲ ಬಾರಿಗೆ ಮನೆಗೆ ಬಂದಾಗ ಮಗ ಚಹಾ ಮಾಡು ಎಂದರೆ, ‘ರಾಘಪ್ಪ ಚಹಾದ ಮನುಷ್ಯ ಅಲ್ಲೇಳಪ್ಪ’ ಎನ್ನುವ ಕ್ರೌರ್ಯ, ಸಣ್ಣತನ, ದಿಗಿಲು ಹುಟ್ಟಿಸುತ್ತದೆ (ಚಹಾದ ಪುಡಿ ತೀರಿತ್ತು ಎಂದು ನಂತರ ಮಗನಿಗೆ ಅವಳು ಕೊಡುವ ಸಮರ್ಥನೆ ಅವಳ ನಡವಳಿಕೆಯ ಕ್ರೌರ್ಯವನ್ನೇನು ಕಡಿಮೆ ಮಾಡುವುದಿಲ್ಲ)… ಗಂಗವ್ವನ ಪಾತ್ರದ ಮಹತ್ವ ಇರುವುದು, ಸ್ಥಾಪಿತ ನಿಲುವೊಂದನ್ನು ಅಗೋಚರ ನೆಲೆಯಲ್ಲಿ ಮುರಿಯುವ ಪ್ರಯತ್ನದ ಕಾರಣಕ್ಕಾಗಿ. ಸಾಮಾನ್ಯವಾಗಿ ತಾಯ್ತನವು ಮಕ್ಕಳನ್ನು ತಮ್ಮ ಅಧಿಕಾರ ಮತ್ತು ಪ್ರೀತಿಯ ಅಧೀನತೆಯಲ್ಲಿ ನಿಯಂತ್ರಿಸಲು ಇರುವ ಒಂದು ಆವರಣವಾಗಿ ಬಳಕೆಯಾಗುತ್ತದೆ. ಅಲ್ಲಿ ಅಧಿಕಾರ ಕೇಂದ್ರದ ಪ್ರಶ್ನೆಯೂ ಸಹಜವಾಗಿಯೇ ಇರುತ್ತದೆ. ಎಂದರೆ ತಾಯಿ ಕೇಂದ್ರವಾಗಿ ಮಕ್ಕಳು ಅಧೀನವಾಗುವ ಕ್ರಮ. ಆದರೆ ಗಂಗವ್ವನ ಪಾತ್ರ ಇದಕ್ಕಿಂತ ಭಿನ್ನ. ಅದು ಮಗ ಕೇಂದ್ರ ಎನ್ನುವುದನ್ನು, ತನ್ನ ವೈಯಕ್ತಿಕ ಬದುಕಿನ ಸುಖದುಃಖಗಳು ಎರಡನೆಯವು ಎನ್ನುವುದನ್ನು ಗಂಗವ್ವ ಮತ್ತೆ ಮತ್ತೆ ಸಾಬೀತು ಮಾಡುತ್ತಾ ಹೋಗುತ್ತಾಳೆ… ಆದ್ದರಿಂದಲೇ ಆರಂಭದಲ್ಲಿ ಇದು ಅಹಂಕಾರವನ್ನು ಕಳೆದುಕೊಳ್ಳುವ ದಾರಿಯಾಗಿ ಕಾಣುತ್ತದೆ ಎಂದಿದ್ದು. ತಮ್ಮ ಈಡೇರದ ಆಸೆಗಳ ಪೂರೈಕೆಯ ವಾಹಕಗಳಾಗಿ ಮಕ್ಕಳನ್ನು ಪರಿಭಾವಿಸುವ ಮಾಮೂಲಿ ದಾರಿಯಲ್ಲ ಇದು. ಅಥವಾ ಮಗ ತನ್ನ ರಾಜ್ಯದ ನಿಷ್ಠಾವಂತ ಪ್ರಜೆಯಾಗಿರಬೇಕು ಎನ್ನುವ ನಿಲುವಿನಳಾಗಿಯೂ ಗಂಗವ್ವ ಕಾಣಿಸುವುದಿಲ್ಲ. ಜೀವ ಕೊಟ್ಟ ಮಗನಿಗೆ ಬದುಕು ಕಟ್ಟಿಕೊಡಬೇಕು ಎನ್ನುವ ಮೂಲಧಾತು ಇವಳನ್ನು ಬೇರೆ ಪಾತಳಿಯಲ್ಲಿಡುತ್ತದೆ. ಅಧಿಕಾರ, ವಾತ್ಸಲ್ಯ, ಕಾಳಜಿ ಮತ್ತು ಜವಾಬ್ದಾರಿ– ಇದು ಸಾಮಾನ್ಯವಾಗಿ ತಾಯ್ತನದಲ್ಲಿ ನಾವು ನೋಡುವ ಶ್ರೇಣೀಕೃತ ನೆಲೆಗಳು. ಗಂಗವ್ವನಲ್ಲಿ ಇದು ತಿರುವುಮುರುವಾಗಿದೆ. ಜವಾಬ್ದಾರಿ ಮೊದಲಾಗಿ ಅಧಿಕಾರ ಕೊನೆಯದಾಗಿದೆ. ಗಂಗವ್ವನನ್ನು ಗಂಗಾಮಾಯಿಯಾಗಿಸುವ ಅಂಶ ಇದೇ. ಇದನ್ನೇ ಮುಂದುವರೆಸಿ ಹೇಳುವುದಾದರೆ ತಾಯ್ತನವನ್ನು ಗ್ರಹಿಸಬೇಕಾದ ವಾಸ್ತವ ದೃಷ್ಟಿಕೋನವನ್ನು ಪುಣೇಕರರ ಈ ಕಾದಂಬರಿ ಶಕ್ತವಾಗಿ ಸ್ಥಾಪಿಸುತ್ತದೆ. ಸಣ್ಣತನ, ಕೊಂಕು, ಕೆರೆದಾಟ ಕೋತಿಯ ಹಾಗೆ… ಎನಿಸಿದಾಗಲೂ ಅವಳ ಬಗ್ಗೆ ಪ್ರೀತಿ, ಕೃತಜ್ಞತೆ ಮಾತ್ರವಲ್ಲ ಗೌರವವೂ ಹುಟ್ಟುವುದು ಈ ಕಾರಣಕ್ಕಾಗಿ. ಕನ್ನಡದಲ್ಲಿ ಹಲವು ಅಮರ ತಾಯಂದಿರಿದ್ದಾರೆ. ಅವರಲ್ಲಿ ಗಂಗವ್ವನಿಗೆ ಹತ್ತಿರದ ಸಂಬಂಧಿಗಳೆಂದರೆ, ಲಂಕೇಶರ ‘ಅವ್ವ’ ಮತ್ತು ದೇವನೂರರ ‘ಸಾಕವ್ವ’..! ಇಂತಹ ಕೃತಿಕಾರರ ಪರಿಚಯ ಹೀಗಿದೆ– ಶಂಕರ ಮೊಕಾಶಿ ಪುಣೇಕರ ಅವರು ಹುಟ್ಟಿದ್ದು 1928, ಧಾರವಾಡದಲ್ಲಿ. ಅಲ್ಲಿಯೇ ತಮ್ಮ ಶಿಕ್ಷಣವನ್ನು ಮುಗಿಸಿದರು. ಬಿ.ಎ.ಪದವಿ ಮುಗಿದ ನಂತರ ನಾಲ್ಕು ವರ್ಷಗಳ

ಪುಸ್ತಕ Read Post »

ಪುಸ್ತಕ ಸಂಗಾತಿ

ಮುಟ್ಟಬಾರದವರ ಕಥೆ

‘ಉಚಲ್ಯಾ’ ಕೆ.ಶಿವುಲಕ್ಕಣ್ಣವರ ಲಕ್ಷ್ಮಣ ಗಾಯಕವಾಡರ ‘ಉಚಲ್ಯಾ’ ಎಂಬ ಹೀಗೊಂದು ಮುಟ್ಟಬಾರದವರ ಮರಾಠಿ ಕಥೆ..! ಅನುವಾದಕರು- ಚಂದ್ರಕಾಂತ ಪೋಕಳೆ Pages 120 ₹ 75.00 Year of Publication: 2017 Published by: ನವಕರ್ನಾಟಕ ಪ್ರಕಾಶನ Address: ಎಂಬೆಸಿ ಸೆಂಟರ್, ನಂ.11, ಕ್ರೆಸೆಂಟ್ ರಸ್ತೆ, ಬೆಂಗಳೂರು-560 001 Phone: 080-22203580/01/02 ಉಚಲ್ಯಾ’ ಮರಾಠಿಯ ಪ್ರಖ್ಯಾತ ಲೇಖಕ ಲಕ್ಷ್ಮಣ ಗಾಯಕವಾಡರ ಆತ್ಮಕತೆಯ ಕನ್ನಡಾನುವಾದ. ಚಂದ್ರಕಾಂತ ಪೋಕಳೆಯವರು ಉಚಲ್ಯಾವನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಬುಡಕಟ್ಟು ಸಮುದಾಯದಿಂದ ಬಂದ ಲೇಖಕ ತನ್ನ ಜೀವನದ ಭೀಕರೆಯನ್ನು ಬಿಚ್ಚಿಟ್ಟ ಈ ಕೃತಿ ಅತ್ಯಂತ ಪ್ರಸಿದ್ಧ ಕೃತಿಯಾಗಿದೆ. ’ರಕ್ತ ಸುರಿಸಿ ದುಡಿಯುವ ಸಮುದಾಯದ ನಾನು ಸಮಾಜಮುಖಿ ಕಾರ್ಯಕರ್ತ. ನಾನು ಹುಟ್ಟಿದ ಸಮುದಾಯವನ್ನು ಸಮಾಜ ಮತ್ತು ವ್ಯವಸ್ಥೆ ತಿರಸ್ಕರಿಸಿತ್ತು. ಸಾವಿರಾರು ವರ್ಷಗಳಿಂದಲೂ ನಮ್ಮನ್ನು ಪ್ರಾಣಿಗಳಿಂತಲೂ ಕಡೆಯಾಗಿ ಕಾಣುವ ಸಮಾಜದಲ್ಲಿ ಪ್ರಾಣಿ ಸಮಾನಜೀವನ ನಡೆಸುಂತ ಸ್ಥಿತಿ ಇತ್ತು. ಬ್ರಿಟಿಷ್ ಸರ್ಕಾರವಂತೂ ನಮ್ಮ ಜಾತಿಗೆ ಕ್ರಿಮಿನಲ್ ಟ್ರೈಬ್ ಎಂಬ ಹಣೆಪಟ್ಟಿಯನ್ನೇ ಹಚ್ಚಿತ್ತು ಎನ್ನುತ್ತಾರೆ’ ಮೂಲ ಲೇಖಕ ಲಕ್ಷ್ಮಣ ಗಾಯಕವಾಡರು… ಬುಡಕಟ್ಟು ಸಮುದಾಯವೊಂದರ ಬದುಕಿನ ನರಕ ಸದೃಶ್ಯ ಜೀವನವನ್ನು ಎಳೆಎಳೆಯಾಗಿ ಬಿಚ್ಚಿಟ್ಟ ಉಚಲ್ಯಾ ಕೃತಿ ಹಲವು ಭಾಷೆಗಳಿಗೆ ಅನುವಾದಗೊಂಡಿದೆ. ಮೂಲ ಕೃತಿಗೆ 1988ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ. ಇಂಥಹ ಮೌಲ್ಯಯುತ ಕೃತಿಯನ್ನು ಚಂದ್ರಕಾಂತ ಪೋಕಳೆಯವರು ಅಷ್ಟೇ ಸೂಕ್ಷ್ಮವಾಗಿ ಕನ್ನಡೀಕರಿಸಿದ್ದಾರೆ… ಹೀಗೆ ಕನ್ನಡಿಕರಿಸಿದ ಲೇಖಕರು, ಪ್ರಖ್ಯಾತ ಅನುವಾದಕರೂ ಆದ ಚಂದ್ರಕಾಂತ ಪೊಕಳೆ ಅವರು 20-08-1949 ರಂದು ಜನಿಸಿದರು. ಹುಟ್ಟೂರು ಉತ್ತರ ಕನ್ನಡ ಜಿಲ್ಲೆಯ ಮಂಚಿಕೇರಿ. ತಂದೆ- ಮಹಾಬಲೇಶ್ವರ, ತಾಯಿ- ಪಾರ್ವತಿ. ಹೈಸ್ಕೂಲುವರೆಗೆ ಮಂಚಿಕೇರಿಯಲ್ಲಿ ಓದಿದ ಅವರು, ಧಾರವಾಡದ ಕಾಲೇಜಿನಿಂದ ಬಿ.ಎ ಪದವಿ ಮತ್ತು ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ. ಪದವಿಗಳಿಸಿದ್ದಾರೆ. ಧಾರವಾಡದಲ್ಲಿ ವಿದ್ಯಾರ್ಥಿಯಾಗಿದ್ದಾಗಲೇ ಗೌರೀಶ ಕಾಯ್ಕಿಣಿ, ಶಂಬಾ, ಬೇಂದ್ರೆ, ಇವರುಗಳ ಸಾಹಿತ್ಯದಿಂದ ಪ್ರೇರಿತರಾದ ಪೊಕಳೆ, ಅಧ್ಯಾಪಕ ವೃತ್ತಿಯನ್ನು ಆಯ್ಕೆ ಮಾಡಿಕೊಂಡವರು… ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಬೇಡಕಿಹಾಳದ ಲಠ್ಠೆ ಶಿಕ್ಷಣ ಸಂಸ್ಥೆಯಲ್ಲಿ ಅಧ್ಯಾಪಕ ವೃತ್ತಿ ಆರಂಭಿಸಿದ ಅವರು ಪ್ರಾಂಶುಪಾಲರಾಗಿ ಕಾರ್ಯ ನಿರ್ವಹಿಸಿ ನಿವೃತ್ತಿ ಹೊಂದಿದ್ದಾರೆ. ಚಂದ್ರಕಾಂತ ಅವರು ಕನ್ನಡ, ಮರಾಠಿ ಎರಡು ಭಾಷೆಗಳಲ್ಲೂ ಪ್ರಭುತ್ವ ಪಡೆದಿದ್ದು, ಮರಾಠಿ ಸಾಹಿತ್ಯದ ಎಲ್ಲ ಪ್ರಕಾರಗಳನ್ನೂ ಕನ್ನಡಿಗರಿಗೆ ಪರಚಯಿಸುತ್ತಿದ್ದಾರೆ. ಅಲ್ಲದೇ ಕನ್ನಡ-ಮರಾಠಿ ಭಾಷಾ ಸೇತುವೆಯಾಗಿ ಕೆಲಸಮಾಡುತ್ತಿದ್ದಾರೆ… ಅನುವಾದಕ್ಷೇತ್ರಕ್ಕೆ ತಮ್ಮನ್ನು ಸಮರ್ಪಿಸಿಕೊಂಡು ಅನುವಾದ ಯಜ್ಞದಲ್ಲಿ ತಮ್ಮ ಹವಿಸ್ಸನ್ನೂ ಧಾರೆಎರೆದು ಮರಾಠಿ ಸಾಹಿತ್ಯದಿಂದ ಬಹುಮೌಲಿಕ ಕೃತಿಗಳನ್ನು ಕನ್ನಡಕ್ಕೆ ನೀಡುತ್ತಾ ಬಂದಿರುವ ಲೇಖಕರಲ್ಲಿ ಅತ್ಯಂತ ಪ್ರಮುಖರು… ಬೆಳಗಾವಿಯ ಗಡಿಭಾಗದಲ್ಲಿ ನೆಲೆಸಿರುವ ಚಂದ್ರಕಾಂತ ಪೊಕಳೆ ಆಗಾಗ್ಗೆ ಮರುಕಳಿಸುವ ಭಾಷಾ ವಾದ-ವಿವಾದ, ಏಕೀಕರಣ ಹೋರಾಟ, ಕನ್ನಡದ ಅಸ್ತಿತ್ವದ ಪ್ರಶ್ನೆ, ರಾಜಕಾರಣಿಗಳ ಮಸಲತ್ತುಗಳು ಇವುಗಳ ಮಧ್ಯೆಯೂ ಭಾಷಾ ಸ್ನೇಹಕ್ಕಾಗಿ ನಿರಂತರವಾಗಿ ದುಡಿಯುತ್ತಿದ್ದಾರಿ. ಭಾಷಾ ಬೆಳವಣಿಗೆಗೆ ತಮ್ಮದೇ ಆದ ಹಾದಿ ಕಂಡುಕೊಂಡಿದ್ದಾರೆ. ಕನ್ನಡ-ಮರಾಠಿ ಭಾಷೆಯ ಮೇಲಿನ ಪ್ರಭುತ್ವ, ವಿದ್ವತ್‌, ಅಧ್ಯಯನಶೀಲತೆಯಿಂದ ಸಾಹಿತ್ಯದ ಯಾವುದೇ ಪ್ರಕಾರವನ್ನು ಆಯ್ಕೆಮಾಡಿ ಅನುವಾದಿಸಿದರೂ ಅದು ಸಹಜವಾಗಿ ಅನುವಾದಿತ ಭಾಷೆಗೆ ಹೊಂದಿಕೊಂಡು ಸ್ವಾಭಾವಿಕವೆನಿಸುವಂತಹ ಶೈಲಿ ಇವರ ಬರವಣಿಗೆಯದ್ದು… ಇವರ ಮನೆಮಾತು ಕೊಂಕಣಿ, ಕಲಿತದ್ದು ಕನ್ನಡ, ತಾಯಿ ಹಾಗೂ ಹೆಂಡತಿ ಮರಾಠಿ ಪರಿಸರದಿಂದ ಬಂದವರು. ಇದರಿಂದ ಕೊಂಕಣಿ-ಕನ್ನಡ-ಮರಾಠಿ ಭಾಷೆಗಳ ಸಹಜ-ಒಡನಾಟದಿಂದ ಅನುವಾದ ಕ್ರಿಯೆಗೆ ದೊರೆತ ಭಾಷಾ ಬಂಧುರ. ಭಾಷಾಂತರದ ಹಿಂದೆ ಯಾವುದೇ ಸೈದ್ಧಾಂತಿಕ ನೆಲೆಗಟ್ಟಿರದಿದ್ದರೂ ತಮ್ಮದೇ ಹಾದಿಯಲ್ಲಿ, ಮೂಲದಲ್ಲಿ ಓದಿದಷ್ಟೇ ತೃಪ್ತಿಕೊಡುವಂತಹ ಬರವಣಿಗೆಯಿಂದ ಸುಮಾರು 60 ಕ್ಕೂ ಹೆಚ್ಚು ಕೃತಿಗಳನ್ನು, ಇನ್ನೂರಕ್ಕೂ ಹೆಚ್ಚು ಕಥೆಗಳನ್ನು, 50 ಕ್ಕೂ ಹೆಚ್ಚು ಕವಿತೆಗಳನ್ನು ಕನ್ನಡಕ್ಕೆ ತಂದಿದ್ದಾರೆ… ಇವರು ಮೊದಲು ಅನುವಾದಿಸಿದ ಕೃತಿ ಜಯವಂತ ದಳವಿಯವರ ‘ಚಕ್ರ’ ಕಾದಂಬರಿ. ಈ ಕಾದಂಬರಿಯನ್ನು ಕಸ್ತೂರಿ ಮಾಸ ಪತ್ರಿಕೆಯ ಪುಸ್ತಕ ವಿಭಾಗಕ್ಕಾಗಿ ಸಂಕ್ಷಿಪ್ತವಾಗಿ ಸಂಗ್ರಹಿಸಿದರು. ಈ ಅನುವಾದವನ್ನೂ ಓದಿದ ಐಬಿಎಚ್‌. ಪ್ರಕಾಶನ ಸಂಸ್ಥೆಯು ಪೂರ್ಣ ಪ್ರಮಾಣದಲ್ಲಿ ಅನುವಾದಿಸಿಕೊಡುವಂತೆ ಕೋರಿದಾಗ, ಅನುವಾದದ ಪೂರ್ಣ ಕೃತಿಯು ಪುಸ್ತಕ ರೂಪದಲ್ಲಿ ಪ್ರಕಟಗೊಂಡಾಗ ಕಾದಂಬರಿ ವಲಯದಲ್ಲಿ ಉತ್ತಮ ಪ್ರಾರಂಭ ದೊರೆತು ಅನೇಕ ಕಾದಂಬರಿಗಳನ್ನು ಅನುವಾದಿಸಿದರು… ಮುಂಬಯಿಯ ಜೋಪಡಪಟ್ಟಿಯ ಜೀವನ ಕ್ರಮವನ್ನೂ ನಿರೂಪಿಸುವ ‘ಚಕ್ರ’ (ಮೂಲ ಮರಾಠಿ ಲೇಖಕರು-ಜಯವಂತ ದಳದಿ); ಗೋವೆಯ ದೇವದಾಸಿ ಸಮಸ್ಯೆಯ ಮೇಲೆ ಬೆಳಕುಚೆಲ್ಲುವ ‘ಮಾನು’ (ಜಯವಂತದಳವಿ); ಅನ್ನಕ್ಷುಧೆ-ಕಾಮಕ್ಷುಧೆಯ ತಾಕೂಟದ ವರ್ಣನೆಯ ‘ಶ್ವಪಥ’ (ರಂಗನಾಥ್‌ ಪಠಾರೆ); ದಲಿತರ ಸಾಂಸ್ಕೃತಿಕ ಹೋರಾಟದ ನೆಲೆಗಟ್ಟಿನ ಮೇಲೆ ರೂಪಗೊಂಡಿರುವ ‘ಉಚಲ್ಯಾ’ (ಲಕ್ಷ್ಮಣಗಾಯಕವಾಡ); ಹೆಣ್ಣಿನ ಒಳತುಡಿತಗಳನ್ನು ಎಳೆಎಳೆಯಾಗಿಬಿಡಿಸುವ ‘ಒಂದೊಂದೇ ಎಲೆಯುದುರಿದಾಗ’ (ಗೌರಿದೇಶಪಾಂಡೆ); ಲೇಖಕನ ಬದುಕು ಬರೆಹದಲ್ಲಿ ಇಬ್ಬಂದಿ ಬದುಕಿನ ‘ಕುಣಿಯೆಘುಮಾ’ (ಮಾಧವಿ ದೇಸಾಯಿ); ಮರಾಠ-ಮೊಗಲರ ನಡುವಣ ಚಾರಿತ್ರಿಕ ಸಂಘರ್ಷವನ್ನು ಗುರುತಿಸುವ ‘ಪಾಣಿಪತ’ (ವಿಶ್ವಾಸ ಪಾಟೀಲ)-ಹೀಗೆ ಒಂದೊಂದು ಅನುವಾದಿತ ಕೃತಿಗಳೂ ವಿಶಿಷ್ಟವಾಗಿದ್ದು, ಕನ್ನಡಿಗರಿಗೆ ಹೊಸ ಅನುಭವ ಸಂವೇದನೆಗಳನ್ನೂ ನೀಡುವಂತಹ ಕೃತಿಗಳಾಗಿವೆ. 2004 ರ ಕೇಂದ್ರ ಸಾಹಿತ್ಯ ಅಕಾಡಮಿಯ ಅನುವಾದ ಪ್ರಶಸ್ತಿ ಪಡೆದಿರುವ ‘ಮಹಾನಾಯಕ’ ಕಾದಂಬರಿಯು (ವಿಶ್ವಾಸ ಪಾಟೀಲ) ಮರಾಠಿ ಸಾಹಿತ್ಯ ವಲಯದಲ್ಲಿ ಬಹು ಚರ್ಚಿತ ಕೃತಿಯಾಗಿದ್ದು, ಜನಮನ್ನಣೆ ಗಳಿಸಿದೆ. ಸುಭಾಶ್‌ ಚಂದ್ರ ಬೋಸರ ಬದುಕಿನ ಸಂಘರ್ಷದ ಕಥೆಯ ನಿರೂಪಣೆಯೇ ಈ ಕಾದಂಬರಿಯ ಮುಖ್ಯ ಉದ್ದೇಶವಾಗಿದ್ದು, ಇಂಗ್ಲಿಷ್‌ ಹಾಗೂ ಜಪಾನಿ ಭಾಷೆಯೂ ಸೇರಿ ಭಾರತದ ಹಲವಾರು ಭಾಷೆಗಳಿಗೆ ಅನುವಾಗೊಂಡಿರುವ ವಿಶಿಷ್ಟ ಕೃತಿ. ಕನ್ನಡದಲ್ಲಿ ಎರಡನೆಯ ಮುದ್ರಣ ಕಂಡಿರುವುದಷ್ಟೇ ಅಲ್ಲದೆ ಮರಾಠಿಯಲ್ಲಿ ಹಲವಾರು ಮುದ್ರಣಗಳನ್ನು ಕಂಡಿದ್ದು 80,000 ಕ್ಕೂ ಹೆಚ್ಚು ಪ್ರತಿಗಳು ಮಾರಾಟವಾಗಿ ದಾಖಲೆಯನ್ನೇ ನಿರ್ಮಿಸಿದೆ. ಮಾರಾಠಿ ಸಾಹಿತ್ಯದಿಂದ ಹೀಗೆ ಸುಮಾರು 30 ಕಾದಂಬರಿಗಳು, 8ಆತ್ಮಕಥೆಗಳು,7 ಕಥಾ ಸಂಕಲನಗಳು, 8 ಸಂಶೋಧನ ಕೃತಿಗಳು, ವೈಚಾರಿಕ, ವೈಜ್ಞಾನಿಕ, ಜೀವನ ಚರಿತ್ರೆಗಳು, ನಾಟಕಗಳು, ಕವಿತೆಗಳು, ಪ್ರಬಂಧಗಳು ಸೇರಿ ಒಟ್ಟು 60ಕ್ಕೂ ಹೆಚ್ಚು ಕೃತಿಗಳನ್ನೂ ಕನ್ನಡಕ್ಕೆ ತಂದಿದ್ದಾರೆ. ಕೆಲವೊಂದು ಕಾದಂಬರಿಗಳಲ್ಲಿ ಬರುವ ಪ್ರಾದೇಶಿಕ ಭಾಷೆಯ ವರ್ಣನೆಯನ್ನು ಕನ್ನಡದಲ್ಲಿ ಹಿಡಿದಿಡುವುದು ಬಹುಪ್ರಯಾಸದ ಕೆಲಸವೆಂದು ಪ್ರಾಂಜಲ ಮನಸ್ಸಿನಿಂದ ಒಪ್ಪಿಕೊಂಡರೂ ಸವಾಲೆನಿಸುವ ಕೃತಿಗಳನ್ನೂ ಅನುವಾದಿಸಿದ್ದಾರೆ. ಜೊತೆಗೆ ಇವರ ಸ್ವತಂತ್ರ ಕೃತಿಗಳಾದ ‘ಮರಾಠಿ ದಲಿತ ರಂಗಭೂಮಿ’, ಮರಾಠಿ ಭಾಷಾ ಸಾಹಿತ್ಯ, ಗಡಿಸಮಸ್ಯೆ ಮುಂತಾದ ವಿಷಯಗಳ ವೈಚಾರಿಕ ಲೇಖನಗಳ ಸಂಕಲನಗಳಾದ ‘ಅನುಸಂಧಾನ’ ಹಾಗೂ ‘ಜಾಗರ’ ಮತ್ತು ವ್ಯಕ್ತಿ ಪರಿಚಯದ ‘ಬಾಬಾ ಅಮ್ಟೆ’ ಕೃತಿಗಳು ಪ್ರಕಟವಾಗಿವೆ. ಇವುಗಳಲ್ಲದೆ ಕನ್ನಡದಿಂದ ಮರಾಠಿ ಭಾಷೆಗೆ ಆಧುನಿಕ ಬರಹಗಳನ್ನು ಭಾಷಾಂತರಿಸಿ ಶಾಂತಿನಾಥ ದೇಸಾಯಿಯವರೊಡನೆ ಹೊರತಂದ ಕೃತಿ ‘ಸಂಬಂಧ’ ಎಂಬ ಮರಾಠಿ ಸಂಕಲನ… ಬಹುಭಾಷೆಯಲ್ಲಿ ಎಷ್ಟೇ ಪಾಂಡಿತ್ಯ ಪಡೆದಿದ್ದರೂ ಅನುವಾದವೆನ್ನುವುದು ಬಹುಕ್ಲಿಷ್ಟಕರವಾದ ಕೆಲಸ. ಒಂದು ಭಾಷೆಯ ಆಡುನುಡಿ, ಗ್ರಾಮ್ಯಭಾಷೆ, ಜನಾಂಗೀಯ ಭಿನ್ನಭಿನ್ನ ಸಂಸ್ಕೃತಿಯ ಮತ್ತೊಂದು ಭಾಷೆಯಲ್ಲಿ ದೊರೆಯುವುದು ವಿರಳವೇ. ಇದಕ್ಕೆ ಮೂಲವಾಗಿ ಬೇಕಾಗಿರುವುದು ಸಾಂಸ್ಕೃತಿಕ, ಜನಾಂಗೀಯ ಅಧ್ಯಯನ ಹಾಗೂ ಭಾಷಾ ಸಂಪತ್ತು. ಇಷ್ಟೆಲ್ಲಾ ಪೂರ್ವ ಸಿದ್ಧತೆಗಳೊಡನೆ ಅನುವಾದ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಚಂದ್ರಕಾಂತ ಪೋಕಳೆಯವರಿಗೆ 1999 ಮತ್ತು 2004 ರಲ್ಲಿ ಶ್ರೀದೇವಿ ಶಾನಭಾಗ ಪ್ರಶಸ್ತಿ, 2001ರಲ್ಲಿ ವರದರಾಜ ಆದ್ಯಪ್ರಶಸ್ತಿ, 2002 ರಲ್ಲಿ ಸಂಗಾತಿ ಅಕಾಡಮಿ ಪ್ರಶಸ್ತಿ , 2002 ಮತ್ತು 2005 ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ, 2004 ರಲ್ಲಿ ವಿಶ್ವೇಶ್ವರಯ್ಯ ಸಾಹಿತ್ಯ ಪ್ರಶಸ್ತಿ ಹಾಗೂ ಕೇಂದ್ರ ಸಾಹಿತ್ಯ ಅಕಾಡಮಿ ಅನುವಾದ ಪ್ರಶಸ್ತಿ, 2008ರಲ್ಲಿ ಕುವೆಂಪು ಭಾಷಾ ಭಾರತಿ ಪ್ರಶಸ್ತಿಗಳು ದೊರೆತಿವೆ… ಲೇಖಕರು, ಪ್ರಖ್ಯಾತ ಅನುವಾದಕರೂ ಆದ ಚಂದ್ರಕಾಂತ ಪೊಕಳೆ ಅವರು 20-08-1949 ರಂದು ಜನಿಸಿದರು. ಹುಟ್ಟೂರು ಉತ್ತರ ಕನ್ನಡ ಜಿಲ್ಲೆಯ ಮಂಚಿಕೇರಿ. ತಂದೆ- ಮಹಾಬಲೇಶ್ವರ, ತಾಯಿ- ಪಾರ್ವತಿ. ಹೈಸ್ಕೂಲುವರೆಗೆ ಮಂಚಿಕೇರಿಯಲ್ಲಿ ಓದಿದ ಅವರು, ಧಾರವಾಡದ ಕಾಲೇಜಿನಿಂದ ಬಿ.ಎ ಪದವಿ ಮತ್ತು ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ. ಪದವಿಗಳಿಸಿದ್ದಾರೆ. ಧಾರವಾಡದಲ್ಲಿ ವಿದ್ಯಾರ್ಥಿಯಾಗಿದ್ದಾಗಲೇ ಗೌರೀಶ ಕಾಯ್ಕಿಣಿ, ಶಂಬಾ, ಬೇಂದ್ರೆ, ಇವರುಗಳ ಸಾಹಿತ್ಯದಿಂದ ಪ್ರೇರಿತರಾದ ಪೊಕಳೆ, ಅಧ್ಯಾಪಕ ವೃತ್ತಿಯನ್ನು ಆಯ್ಕೆ ಮಾಡಿಕೊಂಡವರು. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಬೇಡಕಿಹಾಳದ ಲಠ್ಠೆ ಶಿಕ್ಷಣ ಸಂಸ್ಥೆಯಲ್ಲಿ ಅಧ್ಯಾಪಕ ವೃತ್ತಿ ಆರಂಭಿಸಿದ ಅವರು ಪ್ರಾಂಶುಪಾಲರಾಗಿ ಕಾರ್ಯ ನಿರ್ವಹಿಸಿ ನಿವೃತ್ತಿಯಾಗಿದ್ದಾರೆ… **********************************

ಮುಟ್ಟಬಾರದವರ ಕಥೆ Read Post »

ಪುಸ್ತಕ ಸಂಗಾತಿ

ಪುಸ್ತಕ ವಿಮರ್ಶೆ

ಕಾಮೋಲವೆಂಬ ಅಂತರಂಗದ ಶೋಧ. ಸ್ಮಿತಾ ಅಮೃತರಾಜ್ ಕೃತಿ: ಕಾಮೋಲ (ಕಥಾ ಸಂಕಲನ) ಲೇಖಕ: ಅಜಿತ್ ಹರೀಶಿ ವೃತ್ತಿಯಲ್ಲಿ ವೈದ್ಯರಾಗಿ ಪ್ರವೃತ್ತಿಯಲ್ಲಿ  ಬರಹಗಾರರಾಗಿರುವ ಡಾ. ಅಜೀತ್ ಹರೀಶಿ ಶಿವಮೊಗ್ಗದ ಸೊರಬದವರು. ಕೃಷಿ, ವೈದ್ಯವೃತ್ತಿಯ ಬಿಡುವಿಲ್ಲದ ಕಾರ್ಯ ಬಾಹುಳ್ಯದ ನಡುವೆಯೂ ಕತೆ, ಕವಿತೆ ಬರೆಯುತ್ತಾ ತನ್ನ ಸೃಜನಶೀಲತೆಯನ್ನು ಬತ್ತದಂತೆ ಕಾಪಿಟ್ಟುಕೊಂಡಿರುವ  ಅಜೀತ್ ಹೆಗಡೆಯವರು ಈಗಾಗಲೇ ತಮ್ಮ ಬರಹಕ್ಕೆ ಅನೇಕ ಬಹುಮಾನ ಮತ್ತು ಪ್ರಶಸ್ತಿಗಳನ್ನು ಪಡೆದುಕೊಂಡವರು.   ಅವರ  ವೈವಿಧ್ಯಮಯ ಬರಹದ ಓಘದ ಕುರಿತು ನನಗೆ ಯಾವೊತ್ತು ತೀರದ ಅಚ್ಚರಿ. ಈಗಷ್ಟೇ ಓದಿ ಮುಗಿಸಿದ ,ವಿಶಿಷ್ಟ ಕುತೂಹಲ ಶಿರೋನಾಮೆ ಹೊಂದಿದ ಅವರ ಕಥಾಸಂಕಲನ ಕಾಮೋಲ. ಪ್ರೀತಿ,ಪ್ರೇಮ, ಕಾಮ,ಕ್ರೌರ್ಯ, ಹೀಗೆ  ಮನುಷ್ಯನ ಒಳಗೆ ಅಡಗಿರುವ ಅನೇಕ ಸುಪ್ತ ಭಾವಗಳನ್ನೆಲ್ಲಾ ಅನಾವರಣಗೊಳಿಸುತ್ತಾ ಹೋಗುತ್ತದೆ. ನಾವು ಕಂಡ ಕೆಲವೊಂದು ನಮ್ಮ ಸುತ್ತ ಮುತ್ತಲಿನ ಚರ್ಯೆಗಳು ಕೂಡ ಇದೇ ಕತೆಯ ಪಾತ್ರದಂತೆ ಭಾಸವಾಗುತ್ತದೆ. ಇದು ಅಜಿತ್ ರವರ ಕಥನಗಾರಿಕೆಯ ಕುಶಲತೆಗೆ ಸಾಕ್ಷಿ. ಮನುಷ್ಯನ ಪ್ರತಿಯೊಂದು ಕ್ರಿಯೆಯ ಹಿಂದೆ ಅವನಿಗೆ ದಕ್ಕಿದ ,ಬದುಕಿನಲ್ಲಿ ಘಟಿಸಿ ಹೋದ ಕೆಲವೊಂದು ಅಘಾತಕಾರಿ ಸಂಗತಿಗಳು ಆಳವಾಗಿ ಬೇರು ಬಿಟ್ಟು ಅವನಿಗೂ ಗೊತ್ತಿಲ್ಲದೆ  ಹೇಗೆ ಪ್ರಕಟಗೊಳ್ಳುತ್ತವೆ ಅನ್ನುವಂತದ್ದು ನಮಗೆ  ಕತೆಗಳನ್ನು ಓದುತ್ತಾ ಹೋದ ಹಾಗೆ ಮನದಟ್ಟಾಗುತ್ತದೆ. ಬಹುಷ; ತಮ್ಮ ವೃತ್ತಿಯಲ್ಲಿ ಅವರು ಇಂತಹ ವ್ಯಕ್ತಿತ್ವದವರಿಗೆ ಮುಖಾಮುಖಿಯಾಗುವ ಕಾರಣ ಜೊತೆಗೆ ವೈಜ್ಞಾನಿಕ ತಿಳುವಳಿಕೆ ಕೂಡ ಇರುವ ಕಾರಣ ಇಲ್ಲಿಯ ಕತೆಗಳು ಶೋಧನೆಗೆ ತೊಡಗುತ್ತವೆ. ಕಂಡುಂಡ ಘಟನೆಗಳನ್ನು ಕಲಾತ್ಮಕವಾಗಿ ಹೊರ ಹಾಕುವುದರಲ್ಲಿ ಅಜಿತ್ ಹೆಗಡೆಯವರು ಕುಶಲಿಗರು.  ಬದುಕಿನ ಪ್ರತಿಯೊಂದು ಸನ್ನಿವೇಶಗಳನ್ನು ಸೂಕ್ಷ್ಮವಾಗಿ ದಿಟ್ಟಿಸುತ್ತಾ ಅದರ ಒಳ ಹೊರಗನ್ನು ಬಗೆಯುವ ಇಲ್ಲಿನ ಕತೆಗಳಲ್ಲಿ ಜೀವಂತಿಕೆ ಇದೆ. ಒಟ್ಟು ೧೪ ಕತಾಗುಚ್ಚವಿರುವ ಈ ಕತಾಸಂಕಲನದಲ್ಲಿ ಮನುಷ್ಯ ಸಂಬಂಧದ ವಿವಿಧ ಮಗ್ಗುಲುಗಳ ಪರಿಚಯವಿದೆ. ಲೌಕಿಕ ಬದುಕಿನಲ್ಲಿ ಪರಿಶುದ್ಧ ಪ್ರೇಮಕ್ಕೆ ಅವಕಾಶವಿಲ್ಲದಾಗ  ಅಕ್ಕನಂತೆ ಅಲೌಕಿಕ ಪೇಮದಲ್ಲೇ ಮನಸನ್ನು ನೆಲೆಗೊಳಿಸಿ ಅದರಲ್ಲಿ ನೆಮ್ಮದಿಯನ್ನು ಹುಡುಕುವ  ಇಲ್ಲಿನ ಕತೆ ಒಂದು ವಿಭಿನ್ನ ಪ್ರಯತ್ನ.  ಮನುಷ್ಯನ ಒಳಗಿನ  ಭಾವದ ಸೆಲೆ ಹೇಗೆ ಬದುಕನ್ನು ಅರಳಿಸಬಲ್ಲದು ಅನುವಂತದ್ದನ್ನು ಹೇಳುತ್ತಾ ಕವಿತೆಯ ಸೆಲೆ ಅನ್ನುವಂತದ್ದು ನೋವು ನಿವಾರಣೆಯಂತೆ ಅನ್ನುವಂತದ್ದನ್ನ ಬರೆಯುತ್ತಾರೆ. ಸ್ವತ; ಕತೆಗಾರರು ಕವಿಯಾದ ಕಾರಣ ಕವಿತೆಯ ಸಾಂಗತ್ಯದಿಂದ ಬದುಕು ಹಸನಾಗುವುದೆಬುದನ್ನು ಕಟ್ಟಿಕೊಡುತ್ತಾರೆ. ಇಲ್ಲಿಯ ಕಾಡುವ  ಆಯಿಯ ಕತೆಯ ತುಂಬಾ ವಿವರಣೆಯಂತೆ ಅನ್ನಿಸಿದರೂ ಓದಿ ಮುಗಿಸಿದಾಗ  ಅಲ್ಲಿರುವ ಅಂತ;ಕರಣ ಕಣ್ಣಂಚನ್ನು ತೇವಗೊಳಿಸಿ ಬಿಡುತ್ತದೆ. ಮನುಷ್ಯನ ವರ್ತನೆಗಳನ್ನು ವಿಭಿನ್ನ ನೆಲೆಯಲ್ಲಿ ಶೋಧಿಸುತ್ತಾ ಅಂತರಂಗದ ತುಮುಲಗಳನ್ನು ಚಿತ್ರಿಸುವ ಕೆಲಸವನ್ನ ಇಲ್ಲಿನ ಕತೆಗಳು ಮಾಡಿವೆ. ಹೊಸ ದೃಷ್ಟಿಕೋನದಿಂದ ಬದುಕನ್ನು ನೋಡಲು ಪ್ರೇರೇಪಿಸುವ ಇಲ್ಲಿನ ಕತೆಗಳು ಸ್ನೇಹಕ್ಕೆ ಯಾವುದೇ ಸಿದ್ಧಾಂತಗಳ ಕಟ್ಟುಪಾಡುಗಳಿರಬಾರದು  ಅನ್ನುವಂತದ್ದನ್ನ ಕಟ್ಟಿಕೊಡುತ್ತಾ ಮಾನವೀಯ ಪ್ರೇಮದ ನೆಲೆಯಲ್ಲಿ ಕತೆಗಳು ಪ್ರಕಟಗೊಳ್ಳುತ್ತವೆ. ಪ್ರಾಧೇಶಿಕ ಭಾಷೆಯನ್ನು ಕತೆಗಳ ಮೂಲಕ ಸಮರ್ಥವಾಗಿ ದುಡಿಸಿಕೊಂಡ  ಅಜಿತ್ ರವರ ಪ್ರತಿಭೆ, ಶ್ರದ್ಧೆ, ಶ್ರಮ ಶ್ಲಾಘನೀಯ. ಕಾಮೋಲ ಓದುತ್ತಾ ಹೋದಂತೆ ಮನುಷ್ಯನ ದು;ಖ, ಸಂಕಟ, ಪ್ರೇಮ,ಕಾಮ, ಎಲ್ಲ ತಳಮಳಗಳಿಗೂ  ಹೊಸ ಅರ್ಥ ಕಂಡುಕೊಳ್ಳುವಲ್ಲಿ ಕತೆ ಯಶಸ್ವಿಯಾಗಿವೆ.ಅಜಿತ್ ಹೆಗಡೆಯವರ ಕಥನ ಕುತೂಹಲ ಮತ್ತಷ್ಟು ಕತೆಗಳಿಗೆ ಸಾಕ್ಷಿಯಾಗಲಿ.     ************

ಪುಸ್ತಕ ವಿಮರ್ಶೆ Read Post »

ಪುಸ್ತಕ ಸಂಗಾತಿ

ಪುಸ್ತಕ ವಿಮರ್ಶೆ

ವಲಸೆ, ಸಂಘರ್ಷ ಮತ್ತು ಸಮನ್ವಯ ಪುಸ್ತಕ ವಿಮರ್ಶೆ ಪುಸ್ತಕದ ಹೆಸರು: ವಲಸೆ ಸಂಘರ್ಷ ಸಮನ್ವಯ ಲೇಖಕರು: ಪುರುಷೋತ್ತಮ ಬಿಳಿಮಲೆ ಪ್ರಕಟನ ವರ್ಷ: 2019 ಬೆಲೆ: 400 ರೂಪಾಯಿ  ಪ್ರಕಾಶಕರು: ಅಕೃತಿ ಆಶಯ ಪಬ್ಲಿಕೇಶನ್ ಮಂಗಳೂರು ಲೋಕೇಶ ಕುಂಚಡ್ಕ ಡಾ. ಪುರುಷೋತ್ತಮ ಬಿಳಿಮಲೆಯವರ 400 ಪುಟಗಳ ಈ ಕೃತಿಗೆ 1985ರಲ್ಲಿ ಮಂಗಳೂರು ವಿಶ್ವವಿದ್ಯಾಲಯವು ಡಾಕ್ಟರೇಟ್ ಪದವಿಯನ್ನು ನೀಡಿದೆ. ಅಲ್ಪ ಸ್ವಲ್ಪ ಬದಲಾವಣೆಯೊಂದಿಗೆ ಪ್ರಸ್ತುತ ಸಂಶೋಧನ ಕೃತಿಯು ಇದೀಗ ಪ್ರಕಟವಾಗಿದೆ. ಒಮ್ಮೆ ಬರೆದಾದ ಸಂಶೋಧನ ಪ್ರಬಂಧವನ್ನು ಪರಿಷ್ಕರಣೆ ಮಾಡುವುದು ಸುಲಭದ ಕೆಲಸವಲ್ಲ, ಇನ್ನೊಂದು ಪ್ರಬಂಧವನ್ನು ಬರೆದ ಹಾಗೆ ಆಗುತ್ತದೆ. ದೆಹಲಿಯಲ್ಲಿ ಕುಳಿತುಕೊಂಡು ಈ ಕೆಲಸ ಮಾಡಿದ ಡಾ.ಬಿಳಿಮಲೆಯವರ ಸಾಹಸ ಅಭಿನಂದನೀಯವಾಗಿದೆ. ಇವತ್ತು ಪ್ರತಿಯೊಬ್ಬ ಗೌಡರ ಮನೆಯಲ್ಲಿ ಇರಬೇಕಾದ ಪುಸ್ತಕವಿದು. ಮುನ್ನುಡಿಯಲ್ಲಿ ಪ್ರೊ. ವಿವೇಕ ರೈಅವರು ಹೇಳಿದಂತೆ ‘ನಿಚ್ಚಮ್ ಪೊಸತು’ ಎನ್ನುವ ಮಾತಿಗೆತಕ್ಕಂತೆ ಈ ಕೃತಿ ಸಿದ್ದಗೊಂಡಿದೆ. ಪುಸ್ತಕದಲ್ಲಿ ಅನೇಕ ಹಳೆಯ ವಿಚಾರಗಳೂ ಇವೆ, ಹೊಸ ಸಂಗತಿಗಳೂ ಇವೆ. ಈ ನಿಟ್ಟಿನಲ್ಲಿ ‘ಹಳೆ ಬೇರು, ಹೊಸ ಚಿಗುರು ಕೂಡಿರಲು ಮರ ಸೊಬಗು’ ಎಂಬ ಮಾತುಇಲ್ಲಿ ಸಾರ್ಥಕಗೊಂಡಿದೆ. ತಲೆಮಾರುಗಳ ಜೊತೆಗಿನ ನಮ್ಮ ಸಂಬಂಧಗಳನ್ನು ಈ ಕೃತಿಯು ಗಟ್ಟಿಯಾಗಿ ಬೆಸೆಯುತ್ತದೆ. ‘ಮುಂದೇನು?’ ಎನ್ನುವ ಪ್ರಶ್ನೆಗೂ ಪುಸ್ತಕವು ಕೆಲವು ಉತ್ತರಗಳನ್ನು ನೀಡುತ್ತದೆ.  ಒಂದು ಸಮುದಾಯದ ಚರಿತ್ರೆಯನ್ನು ಕಟ್ಟುವ ಸಮಯದಲ್ಲಿ ಅಧ್ಯಯನಕಾರ ಅದನ್ನು ಹೇಗೆಲ್ಲಾ ಬಳಸಿಕೊಳ್ಳಬಹುದು ಎನ್ನುವುದಕ್ಕೆ ಇದು ಒಂದು ಮಾದರಿ. ಇಂದು ಒಂದು ದೇಶ, ಒಂದು ಭಾಷೆ, ಒಂದು ಧರ್ಮ, ಒಂದು ಬಾವುಟ ಎಂಬೆಲ್ಲಾ ಮಾತುಗಳು ಕೇಳಿ ಬರುತ್ತಿರುವಾಗ ಪ್ರಸ್ತುತ ಪುಸ್ತಕವು ಗೌಡರು ಮತ್ತು ಅವರಂಥ ಅನೇಕ ಸಣ್ಣ ಸಮುದಾಯಗಳು ಭಾರತವನ್ನು ಹೇಗೆ ಕಟ್ಟಿವೆ ಎಂಬ ಕುರಿತು ನಮ್ಮ ಗಮನವನ್ನು ಸೆಳೆಯುತ್ತದೆ. ಆ ಮೂಲಕ ಸುಳ್ಯದಲ್ಲಿ ಬಹುಸಂಖ್ಯಾತರಾದ ಗೌಡ ಸಮುದಾಯದ ಕುರಿತು ನಡೆಸಿದ ಅಧ್ಯಯನಗಳಲ್ಲಿ ಈ ಕೃತಿ ಮೇರು ಪಂಕ್ತಿಯಲ್ಲಿ ನಿಲ್ಲುವ ಅರ್ಹತೆಯನ್ನು ಪಡೆದುಕೊಂಡಿದೆ. ಲಿಖಿತ ಸಾಮಗ್ರಿಗಳಿಲ್ಲದೇ ಇರುವ ಸಮುದಾಯವೊಂದg Àಚರಿತ್ರೆಯನ್ನು ಕಟ್ಟುವ ಕ್ರಮ ಹೇಗೆ ಎಂದು ಸಂಶೋಧಕರಿಗೆ ತಿಳಿದಿಲ್ಲದಿರುವಾಗ, ಅವರಿಗೆ ಮಾರ್ಗದರ್ಶನ ಮಾಡುವ ರೀತಿಯಲ್ಲಿ ಈ ಪುಸ್ತಕವನ್ನು ಬರೆಯಲಾಗಿದೆ. ಇದು ಸುಲಭದ ಕೆಲಸವೇನೂ ಅಲ್ಲ.  ವಲಸೆ ಸಂಘರ್ಷ ಸಮನ್ವಯಗಳ ಕಥನ ಪುಸ್ತಕದ ಶೀರ್ಷಿಕೆಗೆ ತಕ್ಕಂತೆ, ‘ವಲಸೆ ,ಸಂಘರ್ಷ, ಮತ್ತು ಸಮನ್ವಯ” ಎನ್ನುವ ಪರಿಕಲ್ಪನೆಗಳು ವಿಶಾಲವಾದ ವ್ಯಾಪ್ತಿಯನ್ನು ಹೊಂದಿವೆ. ಈ ಕೃತಿ ಸುಳ್ಯ ಪರಿಸರದ ಗೌಡರ ಚರಿತ್ರೆಯನ್ನು ಕಟ್ಟಿಕೊಡುತ್ತಾ, ಅಸ್ತಿತ್ವ ಮತ್ತು ಅಸ್ಮಿತೆಗಳ ನಡುವೆ ಒಂದು ರೀತಿಯಲ್ಲಿ ಕೊಂಡಿಯಾಗಿ, ಮತ್ತೊಂದು ಕಡೆ ತನ್ನೊಳಗಿನ ಅನೇಕ ಅಂಶಗಳನ್ನು ಕೃತಿಯೊಳಗೆ ದಾಖಲಿಸುತ್ತದೆ. ಗೌಡ ಸಮುದಾಯವು ತನ್ನ ವಲಸೆಯ ಸಮಯದಲ್ಲಿ, ಪ್ರಭುತ್ವದ ಜೊತೆಗೆ ನಡೆಸಿದ ಸಂಘರ್ಷ, ಮತ್ತು ಆ ಬಳಿಕ ಸಾಧಿಸಿಕೊಂಡ ಸಮನ್ವಯತೆಯನ್ನು ಕೃತಿಯು ಸಾಧಾರವಾಗಿ ವಿವೇಚಿಸುತ್ತದೆ.  ಪ್ರತಿಯೊಬ್ಬ ವ್ಯಕ್ತಿಯೂ ಜೀವನದ ಒಂದು ಹಂತದಲ್ಲಿ ನಾನು ಯಾರು? ನನ್ನ ಅಜ್ಜ ಯಾರು? ನನ್ನ ಅಜ್ಜಿ ಎಲ್ಲಿಯವರು?. ಎಲ್ಲಿಂದ ಬಂದರು? ಹೇಗೆ ಬಂದರು?  ನನ್ನ ಜಾತಿ ಯಾವುದು? ನನ್ನ ಸಮುದಾಯದ ಚರಿತ್ರೆ ಏನು? ನನ್ನ ಮೂಲ ಯಾವುದು? ಇತ್ಯಾದಿ ಪ್ರಶ್ನೆಗಳನ್ನು ಕೇಳಿಕೊಳ್ಳುತ್ತಾನೆ. ಗೌಡರಿಗೆ ಸಂಬಂಧಿಸಿದ ಹಾಗೆ ಅಂತ ಪ್ರಶ್ನೆಗಳಿಗೆ ಈ ಕೃತಿಯು ಸಮಾಧಾನಕರವಾದ ಉತ್ತರವನ್ನು ನೀಡುತ್ತದೆ. ಬೇರಿನ ಸಂಬಂಧ ಇಂದು ಬೇರಿನ ಜೊತೆಗಿನ ಸಂಬಂಧ ಕಡಿದುಕೊಳ್ಳಲಾಗುತ್ತಿದೆ. ಈ ಕಾಲದಲ್ಲಿ, ಈ ಕೃತಿಯು ಬೇರಿನ ಸಂಬಂಧದ ಪ್ರಾಮುಖ್ಯವನ್ನು ದಾಖಲಿಸುತ್ತದೆ, ಜೊತೆಗೆ ಅದರ ವಿಶ್ಲೇಷಣೆಯನ್ನು ನಡೆಸುತ್ತದೆ. ಕೂಡುಕಟ್ಟಿನ ಅಯಾಮದೊಳಗೆ ಗೌಡಸಂಪ್ರದಾಯದ ಬೇರಿನ ಅನೇಕ ಸಂಬಂಧಗಳು ಇವೆ ಎನ್ನುವುದನ್ನು ಹೇಳುತ್ತಾ, ಸಾಂಪ್ರದಾಯಿಕ ಕ್ರಮಗಳಲ್ಲಿ ಇರುವ ಅನನ್ಯತೆಯನ್ನೂ ಇಲ್ಲಿ ದಾಖಲು ಮಾಡಲಾಗಿದೆ. ಅಸ್ಮಿತೆಯ ಹುಡುಕಾಟ ಗೌಡಸಮಾಜದೊಳಗೆ ಏನೆಲ್ಲಾ ಹುದುಗಿಕೊಂಡಿದೆ ಎನ್ನುವುದನ್ನು ಈ ಕೃತಿ ಪರಿಶೀಲಿಸುತ್ತದೆ. ಗೌಡರ ಇತಿಹಾಸ, ಕಲ್ಯಾಣಪ್ಪನ ಹೋರಾಟದ°è ಗೌಡರ ಪಾತ್ರ, ಗೌಡರ ಸಾಂಪ್ರದಾಯ ವಸತಿ ಮತ್ತು ಆಹಾರ ಕ್ರಮಗಳು, ಕುಟುಂಬ ಪದ್ಧತಿ, ಬಳಿಗಳು, ಒಳಾಡಳಿತ, ಹುಟ್ಟು, ಮದುವೆ, ಸಾವಿನ ಆಚರಣೆಗಳು, ಧಾರ್ಮಿಕ ಸಂಪ್ರದಾಯಗಳು, ಸಿದ್ಧವೇಶ, ಅರೆಭಾಷೆ, ಜನಪದ ಸಾಹಿತ್ಯ, ಬೇಟೆ ಮತ್ತು ಆಟಗಳ ಜೊತೆಗೆ ಇತರೆಡೆಯ ಗೌಡರುಗಳ ಬಗೆಗೂ ಇಲ್ಲಿ ಮಾಹಿತಿಗಳಿವೆ. ಇತರ ಸಮುದಾಯದೊಳಗೆ ಇಲ್ಲದೆ ಇರುವ ಅನೇಕ ಅಂಶಗಳು ಗೌಡರಲ್ಲಿರುವುದನ್ನು ಈ ಪುಸ್ತಕದ ಮೂಲಕ ಗುರುತಿಸಬಹುದು. ಈ ಅರ್ಥದಲ್ಲಿ ಇದು ಗೌಡ ಸಂಸ್ಕøತಿಯ ಭಂಡಾರ.     ಈ ಕೃತಿಯನ್ನು ಪ್ರತಿಯೊಬ್ಬರು ಓದಿ “ನಮ್ಮದು” ಎನ್ನುವ ಸಂಸ್ಕøತಿಯ ಮರೆತ ಕಾಯಿಗಳನ್ನು ಮತ್ತೆ ಮಾಲೆಗೆ ಪೋಣಿಸಿ ಧರಿಸಿದರೆ ಗೌಡ ಸಮುದಾಯಕ್ಕೆ ತುಂಬ ಪ್ರಯೋಜನವಿದೆ. ವಲಸೆ ಸಂಘರ್ಷ ಸಮನ್ವಯ ಕೃತಿಯು ಗೌಡ ಸಮುದಾಯದ ಹೆಮ್ಮೆಯ ಕೃತಿ ಎಂದು ಹೇಳಬಹುದು. ಈ ಕೃತಿಯಲ್ಲಿ ಸಂಶೋಧನೆಗೆ ಅನೇಕ ಹೊಳಹುಗಳನ್ನು ನೀಡಲಾಗಿದೆ ಅವುಗಳನ್ನು ಆಧರಿಸಿ ಅಧ್ಯಯನ ನಡೆಸುವವರಿಗೆ ಉತ್ತಮ ಅವಕಾಶಗಳು ಸಿಗಬಹುದು. *******

ಪುಸ್ತಕ ವಿಮರ್ಶೆ Read Post »

ಪುಸ್ತಕ ಸಂಗಾತಿ

ಪುಸ್ತಕ ವಿಮರ್ಶೆ

ಕೃತಿ:ಮೆಟ್ಟಿಲಿಳಿದು ಹೋದ ಪಾರ್ವತಿ’..! ಲೇಖಕಿ: ಡಾ.ಕಮಲಾ ಹೆಮ್ಮಿಗೆ ಕೆ.ಶಿವು ಲಕ್ಕಣ್ಣವರ ‘ಅಗ್ನಿದಿವ್ಯ’ದಿಂದೆದ್ದು ಬಂದ ಹೆಣ್ಣುಗಳ ಕಥೆಗಳಿವು ಈ ಡಾ.ಕಮಲಾ ಹಮ್ಮಿಗೆಯವರ ‘ಮೆಟ್ಟಿಲಿಳಿದು ಹೋದ ಪಾರ್ವತಿ’..! ಕಥೆ ಕಟ್ಟುವುದು ಧ್ಯಾನದ ಪ್ರತೀಕ. ತಾಳ್ಮೆ, ಸಾಮಾಜಿಕ ಕಳಕಳಿ, ಪಾತ್ರದ ವೈವಿಧ್ಯ, ಅಭಿಪ್ರಾಯ ಮತ್ತು ಅಭಿವ್ಯಕ್ತಿಗಳ ನಿಪುಣತೆಯನ್ನು ಬೇಡುತ್ತದೆ ಕಥೆ ಕಟ್ಟುವ ಕಲೆ. ಆ ಕಲೆ ಮತ್ತು ವೈವಿಧ್ಯ ಮತ್ತು ಕಥೆ ಕಟ್ಟುವ ತಾಳ್ಮೆಯ ನಿಪುಣತೆಯನ್ನು ಕಮಲಾ ಹೆಮ್ಮಿಗೆಯವರು ಉಳ್ಳವರುವರಾಗಿದ್ದಾರೆ… ಸೂಕ್ಷ್ಮ ಕೆನ್ವಾಸಿನಲ್ಲಿ ಒಡಮೂಡುವ ಚಿತ್ರ ಮತ್ತು ಅತೀ ಸೂಕ್ಷ್ಮ ಸಂಗತಿಗಳ ಅತಿ ಅಗತ್ಯತೆಗಳನ್ನು ಕಥೆ ಕೇಳುತ್ತದೆ. ಕಥೆಯ ಸೂಕ್ಷ್ಮತೆಯನ್ನು ಕಮಲಾ ಹೆಮ್ಮಿಗೆ ಬಲ್ಲವರಾಗಿದ್ದಾರೆ. ಮತ್ತು ಆ ಸೂಕ್ಷ್ಮ ಸಂಗತಿಗಳನ್ನು ಪೂರೈಸಿದ್ದಾರೆ ಇಲ್ಲಿ… ಕಮಲಾ ಹೆಮ್ಮಿಗೆಯವರು ತಮ್ಮ ಜೀವನದುದ್ದಕ್ಕೂ ಇಟ್ಟುಕೊಂಡೇ ಜೀವಿಸಿದ್ದವರಾಗಿರೆ. ಅದಕ್ಕಾಗಿ ಆ ಎಲ್ಲಾ ಸೂಕ್ಷ್ಮಗಳನ್ನೂ ಉಳ್ಳವರಾಗಿದ್ದಾರೆ… ಡಾ.ಕಮಲಾ ಹಮ್ಮಿಗೆಯವರು ಸಾಹಿತ್ಯ ಪ್ರಕಾರಗಳ ಎಲ್ಲಾ ವಿಧದ ಸಾಹಿತ್ಯ ರಚನೆ ಮಾಡಿದರೂ ಅವರು ಜಾನಪದ ಸಾಹಿತ್ಯಕ್ಕೆ ಬಹು ಒಲವು ಕೊಟ್ಟವರು… ಡಾ.ಕಮಲಾ ಹಮ್ಮಿಗೆಯವರ ಪ್ರತಿಯೊಂದು ಬರಹಗಳಲ್ಲೂ ಮುಖ್ಯವಾಗಿ ‘ಹೆಣ್ಣು’ ಪ್ರಧಾನವಾಗಿ ಇದ್ದೇ ಇರುತ್ತಾಳೆ. ಆ ಹೆಣ್ಣು ಗಟ್ಟಿಗಿತ್ತಿಯಾಗಿರುತ್ತಾಳೆ ಕೂಡ… ಈಗ ಮಲಯಾಳಂನ ಗ್ರೇಸಿಯವರ ಈ ಪುಸ್ತಕವನ್ನು ಡಾ.ಕಮಲಾ ಹಮ್ಮಿಗೆಯವರು ‘ಮೆಟ್ಟಿಲಿಳಿದು ಹೋದ ಪಾರ್ವತಿ’ ಕಥೆಗಳ ಸಂಕಲನ ತಂದಿದ್ದಾರೆ… ಇಲ್ಲಿ ಬರುವ ಗಟ್ಟಗಿತ್ತಿ ‘ಹೆಣ್ಣು’ ‘ಪಾತ್ರ’ ಮಾತ್ರವಾಗಿಲ್ಲ. ಅವಳು ಸ್ವತಃ ಡಾ.ಕಮಲಾ ಹಮ್ಮಿಗೆಯವರೇ ಆಗಿದ್ದಾರೆ… ಈ ಕಥೆ ಸಂಕಲನದಲ್ಲಿ ಎಲ್ಲೂ ಸಂಕೀರ್ಣವಾದ ವಾಕ್ಯಗಳಿಲ್ಲ. ಗೋಜು ಗೋಜಲುಗಳಾದ ಸಂವೇದನೆಗಳಿಲ್ಲ. ಮೂಲ ಕೃತಿಯಾದ ಗ್ರೇಸಿಯವರ ‘ಪದಿಯೆರಂಗಿ ಪೋಯಾ ಪಾರ್ವತಿ’ ಕೃತಿಯ ನೆರಳಿನಂತಿಯೂ ಇಲ್ಲ. ಅದು ಕಮಲಾ ಹಮ್ಮಿಗೆಯವರ ಸ್ವಂತ ಅಭಿವ್ಯಕ್ತಿಯೂ ಅಗಿದೆ. ಈ ಕಮಲಾ ಹಮ್ಮಿಗೆಯವರ ಅನುವಾದಿತ ಕೃತಿ ಸರಳ ಭಾಷೆಯಲ್ಲಿದೆ… ಕಥೆಗಾರರಾಗಿ, ಜಾನಪದ ವಿದುಷಿಯಾಗಿ, ಕವಿಯಿತ್ರಿಯಾಗಿ, ಅನುವಾದಕ ಲೇಖಕಿಯಾಗಿ, ತಮ್ಮ ಹೆಜ್ಜೆ ಗುರುತು ಮೂಡಿಸಿರುವ ಡಾ.ಕಮಲಾ ಹಮ್ಮಿಗೆಯವರು ಈ ಅನುವಾದಿತ ‘ಮೆಟ್ಟಿಲಿಳಿದು ಹೋದ ಪಾರ್ವತಿ’ ಕಥೆಗಳ ಸಂಕಲನ ತಂದಿದ್ದಾರೆ ಡಾ.ಕಮಲಾ ಹಮ್ಮಿಗೆಯವರು… ಸವಾಲುಗಳಿಗೆಲ್ಲ ಎದೆಯೊಡ್ಡಿ, ಅವುಗಳನ್ನೆಲ್ಲಾ ಹಿಂದಿಕ್ಕಿ ಈ ಅಕ್ಷರ ಜಗತ್ತಿನಲ್ಲಿ ಸಂಚರಿಸಿದ್ದು ಅವರ ವೈಶಿಷ್ಟ್ಯವೂ ಹೌದು… ಖ್ಯಾತ ಲೇಖಕಿ ಶಶಿ ದೇಶಪಾಂಡೆಯವರ ‘ಭಯದ ಮೂಲ ಕತ್ತಲಲ್ಲ’ ಹಾಗೂ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಡಾ.ಸೀತಾಕಾಂತ ಮಹಾಪಾತ್ರರ ‘ಶಬ್ದಭರಿತ ಆಕಾಶ’ ಕೃತಿಗಳ ಅನುವಾದದಿಂದ ಸಾಹಿತ್ಯ ಜಗತ್ತಿನಲ್ಲಿ ಹೆಸರು ಡಾ.ಕಮಲಾ ಹಮ್ಮಿಗೆಯವರು ‘ಅಗ್ನಿಶಾಕ್ಷಿ’ಯ ಮೂಲ ಮಲಯಾಳಂನ ಲಲಿತಾಂಬಿಕಾ ಅಂತರ್ಜನಂ ಮತ್ತು ಇದೇ ಮಲಯಾಳಂನ ಕಥೆಗಳು ಕಮಲಾದಾಸರ ‘ಗಂಧದ ಗಿಡಗಳು’ ಕೃತಿಗಳನ್ನು ಸುಲಭವಾಗಿ ಮತ್ತು ಸರಳವಾಗಿ ಕನ್ನಡಕ್ಕೆ ತಂದವರು ಕಮಲಾ ಹಮ್ಮಿಗೆಯವರು… ಶ್ರೀಮತಿ ಕಮಲಾದಾಸರ ಉತ್ತರಾಧಿಕಾರಿಯಾಗಿರುವ ಶ್ರೀಮತಿ ಗ್ರೇಸಿಯವರ ‘ಮೆಟ್ಟಿಲಿಳಿದು ಹೋದ ಪಾರ್ವತಿ’ಯನ್ನು ಕನ್ನಡ ಓದುಗರಿಗೆ ಉಣಬಡಿಸಾದ್ದಾರೆ ಕಮಲಾ ಹಮ್ಮಿಗೆಯವರು… ತಮ್ಮನ್ನು ಓರ್ವ ಸ್ತ್ರೀವಾದಿ ಎಂದು ಹೇಳಿಕೊಳ್ಳದಿದ್ದರೂ ಲಿಂಗ ತಾರತಮ್ಯ ಸಮಾಜದ ಅಘೋಷಿತ ನೀತಿ ಸಂಹಿತೆಗಳ ಉಲ್ಲಂಘನೆ, ಪುರಾಣ ಭಂಜನ, ಇವುಗಳಿಂದ ‘ಗೇಸಿ’ಯವರು ವಿಶಿಷ್ಟ ಛಾಪನ್ನು ಒತ್ತಿರುವುದು ಇಲ್ಲಿಯ ಕಥೆಗಳಿಂದ ಸ್ಪಷ್ಟವಾಗುತ್ತದೆ. ಇದಕ್ಕೆ ಸಾಕ್ಷಿಯಾಗಿವೆ ಇಲ್ಲಿಯ ‘ಒಂದು ಸತ್ಯಸಂಧ ಪುಟದ ನೆರಳು’ ಮತ್ತು ‘ಪಾಂಚಾಲಿ’ ಕಥೆಗಳು… ‘ಪಾಂಚಾಲಿ ಕಥೆಯ ನಾಯಕನಲ್ಲಿ ಪಾಂಡವರ‌ ಗುಣ ಲಕ್ಷಣಗಳು ಇವೆ! ಆದುನಿಕ ಭೂಮಿಕೆಯ ಇಲ್ಲಿಯ ನಾಯಕಿ ಐದು ಮಂದಿಯಲ್ಲಿ ಆಸಕ್ತಿ ತೋರಿ, ಕಡೆಗೆ ‘ಫಲ್ಗುಣ’ನನ್ನು ವರಿಸುತ್ತಾಳೆ! ಆದರೆ ಕಡೆಗೂ ಆಕೆ ಬಯಸುವುದು ಕಷ್ಟಗಳಿಗೆ ಕಿವಿಯಾಗುವ ಸಖ ‘ಕೃಷ್ಣನನ್ನು! ಮುಗ್ಧ ಬದುಕುಗಳು ನಗರದಲ್ಲಿ ಮೋಸಗಾರರಿಂದ ಹೇಗೆ ನಾಶವಾಗುತ್ತವೆ ಎಂಬುದನ್ನು ‘ದೂರದಿಂದ ಬಂದ ಜಾದೂಗಾರ’ ಹೇಳುತ್ತದೆ. ಇಲ್ಲಿ ಬರುವ ‘ಇಂದ್ರಜಾಲ’ ಅಕ್ಷರಶಃ ನಿಜವಲ್ಲದಿರಬಹುದು, ಆದರೆ ‘ಕಾಪಟ್ಯ’ ಕಣ್ಣಿಗೆ ಹೊಡೆಯುವ ಅಂಶ. ಪಿಂಗಾಣಿ ಬಟ್ಟಲು, ಬಿದ್ದು ಛಿದ್ರವಾದಂತೆ ಭಾಸವಾಗಿ ಮನ ಮರುಕ ಪಡುತ್ತದೆ… ‘ಗ್ರೇಸಿ’ಯವರಿಗೆ ಕಮಲಾದಾಸರಂತೆ ಕಾಮವೊಂದು ವ್ಯಸನವಲ್ಲ..ಬದುಕಿನ ವಿವಿಧ ಮಗಲಗಳೂ ಮುಖ್ಯವಾಗುತ್ತವೆ. ಓದುಗರಿಗೆ’ ಶಾಕ್’ ನೀಡುವ ಗೋಜಿಗವರು ಹೋಗರು. ‘ಅಳಿದ ಮೇಲೆ’ ಎಂಬ ಕಥೆಯನ್ನೇ ನೋಡಿದರೂ ಇದು ಸ್ಪಷ್ಟವಾಗುವುದು. ಗಂಡ, ತಾಯಿ, ತಂದೆ ಎಲ್ಲರೂ ಪ್ರತಿಕ್ರಿಯಿಸುವ ರೀತಿಯನ್ನು ತೀರಾ ವಾಸ್ತವವಾಗಿ, ವಿಡಂಬನಾತ್ಮಕವಾಗಿ ಚಿತ್ರಿಸಿದ್ದಾರೆ. ಇಲ್ಲೂ ತಾಯಿ ಕೂಡ ತನ್ನ ಹೆತ್ತ ಮಗಳ ದುಃಖವನ್ನು ಅರಿಯಲು ಯತ್ನಸುಲೆಸುದಿಲ್ಲವಲ್ಲ ಶವದ ‘ಸ್ವಗತ’ ಕಥೆ ಸಶಕ್ತವಾಗಿದೆ… ನನ್ನನ್ನು ತೀರಾ ಸೆಳೆದಿದ್ದೆಂರೆ ‘ಹೀಗೊಂದು ಜಾಗ’! ಆ ತಂದೆಯಿಲ್ಲದ ಪುಟ್ಟ ಹುಡುಗಿ, ಭ್ರಮಿಷ್ಠ ತಾಯಿ ನೋಡಿಕೊಳ್ಳುವ ಅನಿಯಮ್ಮನೆಂಬ ಹೆಂಗಸು, ಇದಿಷ್ಟೇ ಸೀಮಿತ ಜಗತ್ತು! ಒಮ್ಮೆ ಇದುರಿಗಿದ್ದ ಮನೆಯಲ್ಲಿ ಪತ್ನಿ ಮನೆಯಲ್ಲಿರದಾಗ ನಡೆದ ಕೆಲಸದಾಕೆಯೊಂದಗಿನ ಪತಿಯ ಭಾನಗಡಿ, ಹುಡುಗಿಯ ಮನ ಕದಕಿ, ಗವಾಕ್ಷಿ ಮುಚ್ಚಿಡುವುದು, ಆಕೆ ಪುಸ್ತಕಗಳಲ್ಲಿ ಮುಳುಗುವುದು, ತಾಯಿಯ ಸಾವು ಕೂಡ ಏನೂ ಅನ್ನಿಸದೆ, ಬೃಹದ್ಗಂಥದೊಳಗೊಂದು ಪುಟವಾಗಿ ಸೇರಿಹೋಗುವುದು… ಅಬ್ಬ! ದೀಡು ಪುಟದ ಕಥೆಯಲ್ಲಿ ಅದ್ಭುತ ‘ಫ್ಯಾಂಟಸಿ’ ಬದುಕಿನ ‘ಒಜ್ಜೆ’ ಇವನ್ನೆಲ್ಲಾ ಗ್ರೇಸಿಯವರು ಸುಲಲಿತವಾಗಿ ಮತ್ತು ಸರಳವಾಗಿ ಧ್ವನಿಪೂರ್ಣವಾಗಿ ಹೇಗೆ ಚಿತ್ರಿಸಿದ್ದಾರೆ! ಇನ್ನು ‘ಅರುಂಧತಿ’ಯಂಥ ಎಷ್ಟೋ ಹೆಣ್ಣುಗಳಿಗೆ ಗ್ರೇಸಿಯವರು ಧ್ವನಿಯಾಗಿದ್ದಾರೆ. ಆ ಧ್ವನಿಯನ್ನೇ ನಮ್ಮ ಡಾ.ಕಮಲಾ ಹಮ್ಮಿಗೆ ಕನ್ನಡಕ್ಕೆ ತಂದಿದ್ದು ಸ್ತುತಾರ್ಹ. ಇಲ್ಲಿ ಆಕ್ರೋಶವಿರದೇ ತೀವ್ರ ಅನುಕಂಪವಿದೆ. ಮನೋವಿಶ್ಲೇಷಣೆಯ ನಿರೂಪಣೆ ಇದೆ… ‘ಪರದೇಶಿಯ ಪ್ರಸಂಗ’, ‘ಬೆಕ್ಕು’ ಇವುಗಳೂ ಕೂಡ. ಅರೆ ವಾಸ್ತವವಾಗಿ ಹಾಗೂ ಕಾಲ್ಪನಿಕತೆಗಳ ನಡುವೆ ಸುಳಿವ ಕಥೆಗಳಿವು. ತೃತೀಯ ಲಿಂಗಿಯ ಅಳಲನ್ನು ಬಹುಶಃ ಮೊದಲು ಹೇಳಿದ ಕಥೆಗಳಿವು… ‘ಬೆಕ್ಕು’ ಮೂರನೇ ‘ಅವನ’ ಕುರಿತದ್ದು. ಗಂಡನಿಗೆ ಪತ್ನಿ, ಬೆಕ್ಕಿನಂತೆ ಕಾಣುವುದು, ಬಹು ದೊಡ್ಡ ‘ಐರನಿ’ಯಾಗಿದೆ. ಇಲ್ಲಿಯ ‘ಅಗ್ನಿಚಾಮುಂಡಿ’ ಒಂದು ದೀರ್ಘ ಮತ್ತು ಸಂಕೀರ್ಣ ಕಥೆ. ಧರ್ಮದಾಂತರ, ನಂತರದ ಘಟಕಗಳು, ಸರ್ಪಾರಾಧನೆ (ಲೈಂಗಿಕತೆಯ ಸಂಕೇತವೂ ಆಗುವುದು) ಅಜ್ಜನ ವಾಸ್ತವಿಕ ದೃಷ್ಟಿಕೋನ, ಹುಡುಗಿಯ ದುರಂತ, ಇವೆಲ್ಲವನ್ನೂ ಚಿತ್ರಮಯ ಭಾಷೆಯಲ್ಲಿ ಹಿಡಿದಿಟ್ಟಿದ್ದಾರೆ ಗ್ರೇಸಿ. ಈ ಗ್ರೇಸಿಯವರ ಈ ಕಥೆಗಳನ್ನು ಕನ್ನಡಕ್ಕೆ ತಂದಿದ್ದಾರೆ ಡಾ.ಕಮಲಾ ಹಮ್ಮಿಗೆ. ಇದು ಅತ್ಯಂತ ಕುತೂಹಲಕಾರಿ ನಿರೂಪಣೆಯಿಂದ ಮಹತ್ವದ್ದಾಗಿದೆ… ‘ಮೆಟ್ಟಿಲಿಳಿದು ಹೋದ ಪಾರ್ವತಿ’ ಅಲ್ಲಲ್ಲ ಮನದ ಮೆಟ್ಟಿಲಿಂದ ಇಳಿದು ಹೋದ ‘ಸಖಿ’ಯ ವೃತ್ತಾಂತವಿದು! ಇನ್ನು ‘ನಕ್ಷತ್ರ ಜಾರುವ ಸಮಯ’ದ ಬಗೆಗೆ ರಹಸ್ಯವೊಡೆಯಲಾರೆನಾದರೂ, ಗಂಡನ ಬಗೆಗೆ ಅಸಹನೆ ತಾಳಿದ ಹೆಣ್ಣೋರ್ವಳ ಉರಿಯಿದು ಎಂದಷ್ಟೇ ಹೇಳಿ ಈ ಡಾ.ಕಮಲಾ ಹಮ್ಮಿಗೆಯವರ ‘ಮೆಟ್ಟಿಲಿಳಿದು ಹೋದ ಪಾರ್ವತಿ’ ಬಗೆಗಿನ ವಿಮರ್ಶೆಯನ್ನು ನಿಲ್ಲಿಸುವೆ! ಗದ್ಯವಲ್ಲ ಇದು ಪದ್ಯವೂ ಕೂಡ ಹೌದು… ಕೊನೆಯದಾಗಿ ಡಾ.ಕಮಲಾ ಹಮ್ಮಿಗೆಯವರ ಪ್ರತಿ ‘ಬರಹ’ಗಳಲ್ಲೂ ‘ಹೆಣ್ಣು’ವೊಬ್ಬಳು ಇರುತ್ತಾಳೆ. ಈ ಕಥಾ ಸಂಕಲನದಲ್ಲೂ ಕೂಡ ಆ ‘ಹೆಣ್ಣಿ’ನ ಮೆಲಕು ಇದೆ. ಹೀಗೆ ಹೇಳುತ್ತಾ ಡಾ.ಕಮಲಾ ಹಮ್ಮಿಗೆ ಕೇರಳದಿಂದ ಹಿಂತಿರುಗಿ ಬರುವಾಗ ಇಂತಹ ಮತ್ತಷ್ಟು ‘ಕೃತಿ’ಗಳನ್ನು ಹೊತ್ತು ತರಲಿ ಎಂದು ಆಸಿಸುತ್ತಾ ಇಲ್ಲಿಗೆ ‘ಮೆಟ್ಟಿಲಿಳಿದು ಹೋದ ಪಾರ್ವತಿ’ಯ ನೆನಕೆಗಳನ್ನು ಮುಗಿಸುವೆ… -======

ಪುಸ್ತಕ ವಿಮರ್ಶೆ Read Post »

ಪುಸ್ತಕ ಸಂಗಾತಿ

ಪುಸ್ತಕ ಸಂಗಾತಿ

ಕೃತಿ-ಮುಳುಗದಿರಲಿ ಬದುಕು(ಅನುವಾದಿತ) ಲೇ:-ಡಾ.ಸುಭಾಷ್ ರಾಜಮಾನೆ ಎಪಿಕ್ಟೆಟಸ್ ನ ‘ ದಿ ಆರ್ಟ್ ಆಫ್ ಲಿವಿಂಗ್’ ಕೃತಿಯ ಬಗ್ಗೆ ಒಂದು ಟಿಪ್ಪಣಿ ಡಾ.ಮಹಾಲಿಂಗ ಪೋಳ ದಿನಾಂಕ ೦೮-೧೨-೨೦೧೯ ರಂದು ಭಾನುವಾರ ಬಿಡುಗಡೆಯಾಗುತ್ತಿರು ‘ಮುಳುದಿರಲಿ ಬದುಕು’ ಡಾ.ಸುಭಾಷ್ ರಾಜಮಾನೆಯವರ ೪ ನೇ ಕೃತಿ. ೩ ನೇ ಅನುವಾದದ ಕೃತಿ.ಈಗಾಗಲೆ ಸಿನಿಮಾಕ್ಕೆ ಸಂಬಂಧಿಸಿದ ‘ ದಿ ಆರ್ಟಿಸ್ಟ್’ ಮತ್ತು ವಿಕ್ಟರ್ ಪ್ರ್ಯಾಂಕಲ್ ನ ‘ ಬದುಕಿನ ಅರ್ಥ ಹುಡುಕುತ್ತಾ’ ಎಂಬ ಕೃತಿಗಳನ್ನು ಅನುವಾದಿಸಿದ್ದಾರೆ. ಕನ್ನಡದಲ್ಲಿ ಇಲ್ಲದ ವಿಶಿಷ್ಟವಾದ ವಸ್ತುವುಳ್ಳ ಪುಸ್ತಕವನ್ನು ಆಯ್ದುಕೊಂಡು ಅನುವಾದ ಮಾಡುವುದು ಡಾ.ಸುಭಾಷ್ ರಾಜಮಾನೆಯವರ ವಿಶೇಷತೆ.ಕ್ರಿ.ಶ ೫೫-೧೩೫ ರ ಕಾಲಾವಧಿಯಲ್ಲಿ ಬದುಕಿದ್ದ ಗ್ರೀಸ್ ನ ತತ್ತ್ವಜ್ಞಾನಿ ಎಪಿಕ್ಟೆಟಸ್ ನ ‘ ದಿ ಆರ್ಟ್ ಆಫ್ ಲಿವಿಂಗ್’ ಎಂಬ ಮಹತ್ವದ ಪುಸ್ತಕವನ್ನು ಈಗ ಕನ್ನಡಕ್ಕೆ ತಂದಿದ್ದಾರೆ.ತತ್ತ್ವಶಾಸ್ತ್ರ ವಿಷಯವನ್ನು ಓದುವ ,ಬೋಧಿಸುವ ಕಾಲ ನಿಂತುಹೋದ ಈ ಸಂದರ್ಭದಲ್ಲಿ ತತ್ತ್ವಶಾಸ್ತ್ರಕ್ಕೆ ಸಂಬಂಧಿಸಿದ ಪುಸ್ತಕವನ್ನು ಕನ್ನಡದ ಓದುಗರಿಗೆ ನೀಡುತ್ತಿರುವುದು ಸಂತೋಷದ ವಿಷಯ.ಪಾಶ್ಚಾತ್ಯ ತತ್ತ್ವಜ್ಞಾನಿಗಳ ಪುಸ್ತಕ ಕನ್ನಡದಲ್ಲಿ ಸಿಗುವುದು ಅಪರೂಪ.ಅವರ ಚಿಂತನೆಗಳನ್ನು ಓದಬೇಕೆಂದರೆ ಇಂಗ್ಲಿಷ್ ಕೃತಿಗಳ ಇಲ್ಲವೆ ಇಂಟರ್ ನೆಟ್ ನ ಮೊರೆಹೋಗಬೇಕು.( ನಾನು ಎಂ.ಎ;ತತ್ತ್ವಶಾಸ್ತ್ರ ಓದುವಾಗ ಈ ಕಹಿ ಅನುಭವ ಆಗಿದೆ.) ಈ ಎಪಿಕ್ಟೆಟಸ್ ಗ್ರೀಸ್ ನ ತತ್ತ್ವಜ್ಞಾನಿಗಳಲ್ಲಿ ಪ್ರಮುಖನಾದವನು.ಗ್ರೀಕ್ ಮತ್ತು ರೋಮನ್ನರ ಮೇಲೆ ಮತದೃಷ್ಟಿಯಿಂದ ಪ್ರಭಾವ ಬೀರಿದ ‘ಸ್ಟೋಯಿಕ್’ ಪಂಥಕ್ಕೆ ಸೇರಿದವನು.ಈ ಪಂಥ ‘ ವಿಶ್ವದೇವೈಕ್ಯವಾದ’ದಿಂದ ಪ್ರಾರಂಭವಾಗಿ ‘ ಏಕೇಶ್ವರ’ಭಾವನೆಯೆಡಗೆ ಬೆಳೆದಿದೆ.ಈ ಪಂಥಕ್ಕೆ ಎಪಿಕ್ಟೆಟಸ್ ನ ಕೊಡುಗೆ ಮಹತ್ವದ್ದಾಗಿದೆ.ಇವನ ಬೋಧನೆಗಳು ಕ್ರೈಸ್ತ್ ರ ಹೊಸ ಒಡಂಬಡಿಕೆಯ ಮಾತುಗಳಂತಿವೆ.ಅಲ್ಲದೆ ಕ್ರೈಸ್ತ್ ಧರ್ಮದ ಪ್ರಚಾರಕ್ಕೆ ಇವುಗಳನ್ನು ಬಳಸಿಕೊಳ್ಳಲಾಗಿದೆ.ಇವನು ” ಒಬ್ಬ ದೇವರಿದ್ದಾನೆ,ಅವನ ಚೇತನ ವಿಶ್ವವನ್ನು ವ್ಯಾಪಿಸಿದೆ,ಅದು ನಮ್ಮ ಕಾರ್ಯಗಳಲ್ಲದೆ ನಮ್ಮ ಆಲೋಚನೆಗಳಲ್ಲೂ ಭಾವಗಳಲ್ಲೂ ವಿಕಾಸವಾಗುತ್ತದೆ” ಎಂದಿದ್ದಾನೆ. ಗ್ರೀಸ್ ನ ಹಿಂದಿನ ತತ್ತ್ವಜ್ಞಾನಗಳೆಲ್ಲ ಭೌತಜಗತ್ತಿನ ಕುರಿತಾದ ಚಿಂತನೆಗೆ ಹೆಚ್ಚು ಒತ್ತುಕೊಟ್ಟಿದ್ದರು.ಈ ಸ್ಟೋಯಿಕ್ ಪಂಥದವರು ಭೌತಜಗತ್ತಿನ ಚಿಂತನೆಯ ಜೊತೆಗೆ ಮನುಷ್ಯನ ಬುದ್ಧಿ,ಆಲೋಚನೆ,ಬಾಹ್ಯಕ್ರಿಯೆಗಳ ಕುರಿತಾಗಿ ಚಿಂತಿಸಿದ್ದಾರೆ.ಅದರಲ್ಲೂ ಎಪಿಕ್ಟೆಟಸ್ ಮನುಷ್ಯನ ಬುದ್ಧಿಶಕ್ತಿ,ಆಲೋಚನೆ,ದೃಷ್ಟಿಕೋನ ರೂಪುಗೊಳ್ಳುವುದರ ಕುರಿತಾಗಿ ಚಿಂತಿಸಿದ್ದಾನೆ.” ಮನುಷ್ಯ ಯಾವುದೇ ಘಟನೆಗಳನ್ನೋ,ಪರಿಸ್ಥಿಗಳನ್ನೋ ಎದುರುಗೊಂಡಾಗ ಅವು ಬಾಹ್ಯ ಸಂಗತಿಗಳಾಗಿ ಬಾಧಿಸುವುದಿಲ್ಲ; ಅವುಗಳ ಬಗ್ಗೆ ನಮ್ಮ ಆಲೋಚನೆಗಳೇನು ಎನ್ನುವುದು ಮುಖ್ಯವಾಗುತ್ತದೆ.ಬರಿ ಘಟನೆಗಳು ನಮ್ಮನ್ನು ವಿಚಲಿತರನ್ನಾಗಿ ಮಾಡುವುದಿಲ್ಲ; ಅವುಗಳ ಬಗೆಗಿನ ನಮ್ಮ ವ್ಯಾಖ್ಯಾನಗಳೇ ವಿಚಲಿತರನ್ನಾಗಿಸುತ್ತವೆ.ತಮ್ಮಷ್ಟಕ್ಕೆ ತಾವು ವಸ್ತುಗಳಾಗಲಿ,ಘಟನೆಗಳಾಗಲಿ ನಮಗೆ ನೋವು ನೀಡಲಾರವು.ನಾವು ಆ ವಸ್ತುಗಳಿಗೆ ಘಟನೆಗಳಿಗೆ ಯಾವ ರೀತಿ ಸ್ಪಂದಿಸುತ್ತೇವೆ ಎಂಬುದರಿಂದ ನಮ್ಮ ಮನೋಧರ್ಮಗಳು ರೂಪುಗೊಳ್ಳುತ್ತವೆ.” ಎಂಬ ಎಪಿಕ್ಟೆಟಸ್ ನ ಮಾತುಗಳು ಆಧುನಿಕ ಮನೋವಿಜ್ಞಾನದ ಸಿದ್ಧಾಂತವನ್ನೇ ತಿಳಿಸುತ್ತವೆ. ಈ ” ಮುಳುಗದಿರಲಿ ಬದುಕು” ಕೃತಿ ಎಪಿಕ್ಟೆಟಸ್ ನ ಯಾವುದೋ ಒಂದು ಸಿದ್ಧಾಂತದ ಕುರಿತಾಗಿ ತಿಳಿಸುವ ಪುಸ್ತಕವಲ್ಲ.ಬದಲಾಗಿ ಅವನ ಒಟ್ಟು ಚಿಂತನೆಯ ಸಾರವನ್ನು ಇದರಲ್ಲಿ ಭಟ್ಟಿ ಇಳಿಸಿದಂತಿದೆ.ಕೃತಿಯು ಎರಡು ಭಾಗಗಳಲ್ಲಿದ್ದು,ಮೊದಲ ಭಾಗದಲ್ಲಿ ‘ ವ್ಯಕ್ತಿತ್ವ ವಿಕಸನ’ಕ್ಕೆ ಬೇಕಾಗುವ ಎಲ್ಲ ಮೂಲ ತತ್ತ್ವಗಳು,ಜೀವನ ಮೌಲ್ಯಗಳನ್ನು ಬೋಧಿಸುವ ಬರಹಗಳಿವೆ.ಸಮಾಜದಲ್ಲಿ ಮನುಷ್ಯ ಭ್ರಮೆಗಳಿಂದ ಮುಕ್ತನಾಗಿ ಸದ್ಗುಣಿಯಾಗಿ ಹೇಗೆ ಬದು ಕಬೇಕು,ಅದಕ್ಕೆ ಬೇಕಾಗುವ ಮೂಲದ್ರವ್ಯ ಯಾವುದು ಎಂಬುದರ ಕುರಿತಾದ ಬರಹಗಳಿವೆ.ಇಲ್ಲಿ ಇಚ್ಛಾಶಕ್ತಿ,ಪ್ರೇರಣೆ,ದೃಷ್ಟಿಕೋನ,ಯೋಗ್ಯತೆ,ಪ್ರಾಮಾಣಿಕತೆ,ವಾಸ್ತವತೆ,ಬದುಕನ್ನು ನೋಡುವ ರೀತಿ,ನೆಮ್ಮದಿ,ಧನಾತ್ಮಕತೆ,ಆದರ್ಶಗಳು,ವಿವೇಕಯುಕ್ತತೆ,ಸಚ್ಚಾರಿತ್ರ್ಯ,ಸಂಬಂಧಗಳು,ವಿಶ್ವಾಸಾರ್ಹತೆ,ಘನತೆಯ ವ್ಯಕ್ತಿತ್ವ,ಪ್ರಕೃತಿಗೆ ಹೊಂದಿಕೊಳ್ಳುವುದು ಹೀಗೆ ಒಬ್ಬ ಮನುಷ್ಯ ಆದರ್ಶದ ಮಾದರಿಯಾಗಿ ಸಾಮುದಾಯಿಕ ಬದುಕನ್ನು ಕಟ್ಟಿಕೊಳ್ಳಲು ಬೇಕಾದ ಮಾರ್ಗದರ್ಶಕ ಚಿಕ್ಕ ಚಿಕ್ಕ ಅಧ್ಯಾಯಗಳಿವೆ. ಎರಡನೆಯ ಭಾಗದಲ್ಲಿ ತತ್ತ್ವಜ್ಞಾನದ ಮೂಲ ಉದ್ದೇಶ ,ಪುಸ್ತಕಗಳ ಉಪಯುಕ್ತತೆ,ಸಜ್ಜನರ ಗೆಳೆತನ,ತಪ್ಪುಗಳ ಮನ್ನಣೆ,ಸಚ್ಚಾರಿತ್ಯದ ನಿರಂತರತೆ,ಸದ್ಗುಣತೆ,ವೈಚಾರಿಕತೆ ,ಸಂತೋಷ ಹೀಗೆ ಹಲವು ವಿಷಯಗಳ ಕುರಿತು ಮೌಲ್ಯಯುತವಾದ ಬರಹಗಳಿವೆ. ಇಲ್ಲಿಯ ಬರಹಗಳನ್ನು ಪುಸ್ತಕದ ಮೊದಲ ಅಧ್ಯಾಯದಿಂದಲೇ ಓದಬೇಕೆಂಬ ನಿಯಮವೇನೂ ಇಲ್ಲ.ಯಾಕೆಂದರೆ ಪ್ರತಿಯೊಂದು ಬರಹಗಳು ತಮ್ಮಷ್ಟಕ್ಕೆ ಮುಕ್ತಕಗಳಂತೆ ಸ್ವತಂತ್ರವಾಗಿವೆ.ಯಾವುದೇ ಪುಟ ತೆಗೆದರೂ ಅಲ್ಲೊಂದು ನಿರ್ದಿಷ್ಟ ಮೌಲ್ಯದ ಮೂಲದ್ರವ್ಯ ಇರುವುದನ್ನು ಕಾಣುತ್ತೇವೆ.ಈ ಪುಸ್ತಕದ ವಿಶೇಷವೆಂದರೆ ಇಲ್ಲಿಯ ಅಧ್ಯಾಯಗಳು ಕನಿಷ್ಟ ಮೂರು ಸಾಲಿನ ,ಹೆಚ್ಚೆಂದರೆ ಎರಡು ಪುಟ ಮೀರುವುದಿಲ್ಲ.(ಓದಲು ಸಮಯವೇ ಇಲ್ಲದ ಈ ಕಾಲದಲ್ಲಿ ಸುದೀರ್ಘವಾದ ಬರಹಗಳನ್ನು ಯಾರು ಓದುತ್ತಾರೆ? ಎನ್ನುವವರಿಗೆ ಈ ಪುಸ್ತಕ ಹೆಚ್ಚು ಇಷ್ಟವಾಗಬಹುದೇನೋ !.) ಈ ಅನುವಾದದ ಕುರಿತಾಗಿ ಹೇಳಬೇಕೆಂದರೆ ಇದು ಅನುವಾದ ಮಾಡಿದ ಪುಸ್ತಕ ಎಂಬ ಭಾವನೆ ಎಲ್ಲೂ ಬರುವುದಿಲ್ಲ.ಕನ್ನಡದ ಚಿಂತನೆಯಿಂದಲೇ ರೂಪಗೊಂಡ ಕೃತಿಯಂತೆ ಭಾಸವಾಗುತ್ತದೆ.ಇಲ್ಲಿಯ ಚಿಂತನೆಗಳು ಮನುಷ್ಯನ ಒಳಗನ್ನು ( ಅಂತರಂಗ) ಗಟ್ಟಿಗೊಳಿಸಿ ಬಾಹ್ಯ ನಡವಳಿಗಳನ್ನು ತಿದ್ದುವ ಮತ್ತು ಗ್ರಹಿಕೆಯನ್ನು ಸ್ಪಸ್ಟ ಹಾಗೂ ವಾಸ್ತವಗೊಳಿಸುವತ್ತ ನಮ್ಮನ್ನು ಕೈ ಹಿಡಿದು ನಡೆಸುತ್ತವೆ.ಅದು ತತ್ತ್ವಶಾಸ್ತ್ರದ ಉದ್ದೇಶವೂ ಹೌದು. ಒಂದು ಚಿಕ್ಕ ಅಧ್ಯಾಯ: “ಒಳ್ಳೆಯದು ಒಳ್ಳೆಯದೇ” ‘ಒಳ್ಳೆಯತನ ಸ್ವತಂತ್ರವಾಗಿದ್ದು,ನಮ್ಮ ಒಳಗಿನಿಂದಲೇ ಅದಕ್ಕೊಂದು ಅಸ್ತಿತ್ವ ದೊರಕುತ್ತದೆ.ಒಳ್ಳೆಯತನ ಎಂದಿಗೂ ಇದ್ದೇ ಇರುತ್ತದೆ.ನಮ್ಮ ಅಸ್ತಿತ್ವಕ್ಕೂ ಮೊದಲೇ ಇತ್ತು’ (ಪುಟ.೧೪೦)

ಪುಸ್ತಕ ಸಂಗಾತಿ Read Post »

ಪುಸ್ತಕ ಸಂಗಾತಿ

ಪುಸ್ತಕ ಸಂಗಾತಿ

ನಾನು ಕಸ್ತೂರ್ ಇತ್ತೀಚೆಗೆ ಲೋಕಾರ್ಪಣೆಗೊಂಡ ಡಾ. ಎಚ್.ಎಸ್.ಅನುಪಮಾ ಕೃತಿ. ಲಡಾಯಿ ಪ್ರಕಾಶನದಿಂದ ಪ್ರಕಟಿತ.. ಚಂದ್ರಪ್ರಭಾ ಬಿ. ಒಂದು ಒಳನೋಟು ಭಿನ್ನ ಆಲೋಚನೆ, ಭಿನ್ನ ನಿಲುವಿನ ಡಾ. ಎಚ್.ಎಸ್.ಅನುಪಮಾ ಏನು ಮಾಡಿದರೂ ಅದು ವಿಭಿನ್ನವೇ ಆಗಿರುತ್ತದೆ ಎಂಬ ಮಾತಿಗೆ ಕಸ್ತೂರ್ ಜೀವನ ಕಥನ ಒಂದು ಉದಾಹರಣೆ. ಮೈಸೂರಿನಲ್ಲಿ ಪುಸ್ತಕ ಲೋಕಾರ್ಪಣೆ ಮಾಡುತ್ತ ಮಮತಾ ಸಾಗರ್ ಹೇಳಿದ ಹಾಗೆ ಅನುಪಮಾ ಸ್ವತಃ ನಿವೇದಿಸಿದ ಪ್ರಸ್ತಾವನೆ ರೂಪದ ಬರಹವನ್ನು ಓದಿಯೇ ಪ್ರತಿ ಓದುಗ ಮುಂದೆ ಸಾಗಬೇಕು. ಕೃತಿ ರಚನೆಯ ಹಿನ್ನೆಲೆಯ ಜೊತೆಗೇ ಅದನ್ನು ಓದುವ ಕ್ರಮ ಹೇಗೆಲ್ಲ ಇರಬೇಕೆಂಬ ಸೂಕ್ಷ್ಮ ಸೂಚನೆ, ಸುಳಿವುಗಳು ಅಲ್ಲಿ ವಿಪುಲವಾಗಿ ಸಿಗುತ್ತವೆ. ಓದಿಗೆ ಒಂದು ದಿಕ್ಸೂಚಿ ದೊರಕುತ್ತದೆ. ಮೊದಲೊಮ್ಮೆ ಬರೆದು ಮುಗಿಸಿದ ಬಳಿಕ ಅದು ಕಸ್ತೂರ್ ಕಥನವಾಗುವ ಬದಲಾಗಿ ಗಾಂಧಿ ನೆರಳಾಗಿ ಕಸ್ತೂರ್ ಕಥನ ಹಿಂಬಾಲಿಸಿದ ವಿಸ್ಮಯ, ಅದನ್ನು ಅಳಿಸಿ ಹಾಕಿ ಬೇರೆಯದೇ ಮತ್ತೊಂದು ವಿಶಿಷ್ಟ ಕ್ರಮದಲ್ಲಿ, ವಿಶಿಷ್ಟ ಒಳನೋಟದಲ್ಲಿ ತಾವು ಈ ಕೃತಿ ರಚನೆ ಮಾಡಿದ್ದನ್ನು ಲೇಖಕಿ ಹಂಚಿಕೊಳ್ಳುತ್ತಾರೆ. ಅವರಿಗೆ ಈ ಕಥನದ ಅನನ್ಯತೆ ಕುರಿತ ಸ್ಪಷ್ಟ ಕಲ್ಪನೆ, ನಿರೀಕ್ಷೆಗಳಿದ್ದವು ಎಂಬುದಕ್ಕೆ ಈ ಮಾತು ಸಾಕ್ಷಿ. ಇಲ್ಲಿ ಮಾತನಾಡುವ ಎರಡು ಹೆಣ್ಣು ಜೀವಗಳಿವೆ.. ಒಂದು, ಜಗತ್ತೇ ತನ್ನತ್ತ ತಿರುಗಿ ನೋಡಿ ವಿಸ್ಮಯಪಡುವಾಗ ತನ್ನನ್ನು ತಾನು ಶೋಧನೆಗಳಿಗೆ ಒಡ್ಡಿಕೊಳ್ಳುತ್ತಲೇ ಸಾಗಿದ ಮಹಾನುಭಾವನ ಹೆಂಡತಿ ಎನಿಸಿಕೊಂಡಾಗಲೂ ಕೊನೆವರೆಗೂ ತನ್ನತನವನ್ನು ಕಾಪಿಟ್ಟುಕೊಂಡ ಸಮತೂಕದ ಜೀವ ಕಸ್ತೂರ್… ಮತ್ತೊಂದು ತಾನು ಮಾಡುವ ಪ್ರತಿಯೊಂದು ಕೆಲಸದಲ್ಲಿ, ಓದಿನಲ್ಲಿ, ಬರವಣಿಗೆಯಲ್ಲಿ ಯಾವುದರಲ್ಲೇ ಆಗಲಿ ಮನುಜ ಪ್ರೇಮ, ಸಮಷ್ಟಿ ಪ್ರಜ್ಞೆ, ಘನತೆಯ ಬದುಕನ್ನು ಮಿಡಿಯುವ, ಅವಕಾಶ ಸಿಕ್ಕಿದಲ್ಲೆಲ್ಲ ಪಿತೃ ಸಂಸ್ಕೃತಿಯನ್ನು ತರಿಯುತ್ತ ಸಾಗುವ ಸೂಕ್ಷ್ಮ ಸಂವೇದನೆಯ ಬರಹಗಾರ್ತಿ.. ಆಳದಲ್ಲಿ ಒಮ್ಮೊಮ್ಮೆ ‌ಅಖಂಡ ಹೆಣ್ಣು ಕುಲವೇ ಎದ್ದು ನಿಂತು ಪ್ರಶ್ನಿಸುತ್ತಿರುವಂತೆಯೂ ಭಾಸವಾಗುತ್ತದೆ. ನೇಯ್ಗೆಯ ಒಂದೊಂದು ಎಳೆಯೂ ಹೀಗೇ ಇರಬೇಕೆಂಬ ಲೇಖಕರ ಸಂವೇದನೆ ಸೂಕ್ಷ್ಮ ಓದಿಗೆ ದಕ್ಕುವ ಅಂಶವಾಗಿದೆ. ಒಬ್ಬ ಸಾಮಾನ್ಯ ಹೆಣ್ಣಿನ ರೂಪದಲ್ಲಿ ಕಸ್ತೂರ್ ತನ್ನನ್ನು ತಾನು ಬಿಡಿಸಿಡುತ್ತ ಹೋಗುವ ಕ್ರಮ ಲೇಖಕರ ಆಶಯಗಳ ಅನಾವರಣಕ್ಕೆ ವಿಸ್ತಾರವಾದ ಅವಕಾಶ ಒದಗಿಸುತ್ತ ಸಾಗುವ ರೀತಿಯೇ ಚಂದ. ಹೇಗಿದ್ದೀಯ ಮಗೂ ಎನ್ನುತ್ತ ಮಾತಿಗೆ ತೊಡಗುವ ಕಸ್ತೂರ್ “ಲೋಕದ ಮಾತು ಬಿಡು, ನಮ್ಮ ಪರಿಚಯ ನಮಗೇ ಇರಲ್ಲವಲ್ಲ..ನಮ್ಮ ಭಾಷೆ ಅಂಥದು” ಎಂದು ಬಿಡುತ್ತಾರೆ! ತವರ ಸೊಬಗನ್ನು, ಮೊರೆವ ಕಡಲನ್ನು ಬಣ್ಣಿಸುತ್ತಲೇ ಮದುವೆಯೆಂಬ ಆಟದ ನೆನಪುಗಳನ್ನು ಕೆದಕುತ್ತಾರೆ. ಮಗು ಹುಟ್ಟುತ್ತಲೂ ‘ಹರಿಯ ಅಪ್ಪ’ ದಕ್ಷಿಣ ಆಫ್ರಿಕೆಗೆ ಹೊರಟು ನಿಂತಾಗಿನ ಕಸ್ತೂರ್ ತಳಮಳ… ಸಂಗಾತಿಯನ್ನು ಮೋಕ ಸಂತೈಸುವ ರೀತಿಯಲ್ಲಿ ಯಾವುದೇ ಹೆಣ್ಣು ಜೀವ ತಾನು ಅನುಭವಿಸಲು ಬಯಸುವ ಆರ್ದ್ರ ಮಾಧುರ್ಯವನ್ನು ನಿರೂಪಿಸುವ ಸೊಗಸು ಆಪ್ತ. ಮಗುವಿಗೆ ಹಾಲೂಡುವ ಸೊಬಗಿನ ಜೊತೆಗೇ ತಾನು ಕಳೆದುಕೊಂಡ ಮೊದಲ ಮಗುವಿನ ನೆನಪಲ್ಲಿ ನಿದ್ರಿಸುವ ಈ ಮಗುವನ್ನು ಮುಟ್ಟಿ ಮುಟ್ಟಿ ನೋಡಲು ಬಯಸುವ ತಾಯಿಯ ವರ್ಣನೆಯಲ್ಲಿ ಓರ್ವ ವೈದ್ಯೆ, ತಾಯಿ ಇಬ್ಬರ ಬೆಚ್ಚಗಿನ ಭಾವಗಳೂ ಕಾಣಸಿಗುತ್ತವೆ. ತನ್ನ ಮೊದಲ ಕಡಲ ಯಾನದಲ್ಲಿ ತನಗೆ ಓದು,ಬರವಣಿಗೆ ಕಲಿಸುವ ಭಾಯಿ.. ಎರಡನೇ ಹೆರಿಗೆಯಲ್ಲಿ ಸ್ವತಃ ದಾದಿಯಾಗಿ ಸುಶ್ರೂಷೆಗೈಯುವ ಭಾಯಿ… ಸ್ವಚ್ಛತೆ, ಸರಳತೆ, ಸಮಾನತೆಯ ಪಾಠ ಹೇಳುವಾಗ ತನ್ನ ಮೋಕ ಭಾಯಿ ಆಗಿ ಬೆಳೆದ ಪರಿಗೆ ಕಸ್ತೂರ್ ಜೀವ ಹೆಮ್ಮೆ ಪಡುತ್ತದೆ. ಆದರೆ ಅದೇ ಭಾಯಿ ತಾನು ಪಂಚಮರ ಮಲದ ಕೊಡ ಎತ್ತಲು ನಿರಾಕರಿಸಿದಾಗ ಅಪರಿಚಿತ ನಾಡಿನಲ್ಲಿ ತನ್ನನ್ನು ‘ ಇರುವುದಾದರೆ ಇರು, ಇಲ್ಲದಿದ್ದರೆ ಹೊರಟು ಹೋಗು’ ಎಂದು ಬಿಡುವ ಮಾತಿನ ಕಟುತ್ವವನ್ನು ದಿಟ್ಟತನದಿಂದ ಎದುರಿಸಿದ ಗಳಿಗೆಯನ್ನು ತಣ್ಣಗೆ ನಿರೂಪಿಸುತ್ತಾರೆ. ಭಾಯಿ ಮೇಲೆ ಟಾಲ್ಸ್ಟಾಯ್ ಎಂಬ ‘ಋಷಿ’ಯ ಪ್ರಭಾವ.. ಅದರಿಂದ ಹೆಚ್ಚಿದ ಆಶ್ರಮವಾಸದ ತವಕ..ಸತ್ಯಾಗ್ರಹದ ಪರಿಕಲ್ಪನೆ.. ಎಲ್ಲದರ ಜಿಜ್ಞಾಸೆಗೆ ತೊಡಗುವ ಕಸ್ತೂರ್ ಮುಂದೆ ಗಾಂಧಿ ಆಗಿ ಹೊಮ್ಮಿದ ಭಾಯಿಯ ಶಕ್ತಿ ಇದ್ದುದು ಪ್ರಕೃತಿ ದತ್ತವಾಗಿ ಮನುಜರಿಗೆ ಪ್ರಾಪ್ತವಾದ ಸತ್ಯಕ್ಕಾಗಿ ಆಗ್ರಹಿಸುವ ಅವರ ನಿಲುವಿನಲ್ಲಿ ಎಂದು ಸ್ಪಷ್ಟವಾಗಿ ಗುರುತಿಸುತ್ತಾರೆ. ದಕ್ಷಿಣ ಆಫ್ರಿಕಾದಲ್ಲಿ ಜತೆಗೂಡುವ ಮಿಲಿ, ಸೋನ್ಯಾರಂಥ ಹೆಣ್ಮಕ್ಕಳು ಹೆಣ್ಣುಗಳನ್ನು ಗೆಳತಿಯಾಗಿ ನೋಡದ ಭಾರತೀಯ ಪುರುಷ ಮನಸ್ಥಿತಿಯನ್ನು ಪದೇ ಪದೇ ಪ್ರಶ್ನಿಸುವಾಗ ಭಾಯಿ ಮೇಲೆ ಆದ ಪರಿಣಾಮ.. ಅನಂತರದ ಹೋರಾಟಗಳಲ್ಲಿ ಮಹಿಳೆಯರನ್ನು ಹೋರಾಟದ ಅವಿಭಾಜ್ಯ ಅಂಗವಾಗಿ ಮಾಡಿಕೊಂಡ ಭಾಯಿ ಮೇಲೆ ಅವರ ಸುತ್ತ ಇದ್ದ ಹೆಣ್ಣು ಮಕ್ಕಳ ದೊಡ್ಡ ಪಾತ್ರವಿತ್ತು ಎಂದು ವಿವರಿಸುತ್ತಲೇ ಇದರಿಂದ ಗಾಂಧಿಯಲ್ಲಿ ಮೈದಳೆದ ಹೆಣ್ಣುತನ, ಅವರ ಮಾತಿನಲ್ಲಿ ಕರುಣೆ, ಕಳಕಳಿಯನ್ನು ತುಂಬಿದ ಈ ಹೆಣ್ಮಕ್ಕಳ ಕುರಿತು ಅಭಿಮಾನ ವ್ಯಕ್ತಪಡಿಸುತ್ತಾರೆ ಕಸ್ತೂರ್. ಸರಳ ಜೀವನದ ಸೂತ್ರಗಳಿಗೆ ಒಗ್ಗಿಕೊಳ್ಳುತ್ತಲೇ ತಾನು ಹೋರಾಟದ ದಾರಿ ತುಳಿಯುವ ಕಸ್ತೂರ್ ಭಾಯಿಯ ಸತ್ಯ ಶೋಧನೆಯ ದಾರಿಯಲ್ಲಿ ತನ್ನ ಆಂತರಿಕ ಹೊಯ್ದಾಟವನ್ನೂ ನಿರೂಪಿಸುತ್ತಾರೆ. ರೂಪಾಂತರಗೊಂಡ ತನಗೆ ಚರಕಾ ಎಂಬ ನಿತ್ಯ ಸಂಗಾತಿ ದೊರೆತ ಮೇಲೆ ಬದುಕಿನ ಗತಿಯೇ ಬದಲಾದುದನ್ನು ಬಣ್ಣಿಸುತ್ತಾರೆ.. “ನೂಲುವುದೆಂದರೆ ಧ್ಯಾನ.. ಚರಕಾ ತಿರುಗಿಸಿ ನೂಲು ತೆಗೆದಂತೆ ನಾವು ಸಹ ಹತ್ತಿಯಾಗಿ, ದಾರವಾಗಿ,ಲಡಿಯಾಗಿ,ಬಟ್ಟೆಯಾಗಿ ಬದುಕು ನಡೆಯುವುದು..” ಎಂಬ ಚರಕಾ ಫಿಲಾಸಫಿ ಮನಸ್ಸನ್ನು ಆರ್ದ್ರಗೊಳಿಸುತ್ತದೆ. ಈ ಮಾತಿಗೆ ಕಳಶವಿಟ್ಟಂತೆ ” ಮಣಿ ತಿರುಗಿಸುತ್ತ ಮಾಡುವ ಜಪಕ್ಕಿಂತ ನೂಲುವುದು ತುಂಬ ಒಳ್ಳೆಯ ಪೂಜೆ … ಜಡಗೊಂಡದ್ದೆಲ್ಲ, ಜಡಗೊಂಡವರೆಲ್ಲ ತಿರುಗುವಂತೆ ಮಾಡುವ ಶಕ್ತಿ ಆ ಪುಟ್ಟ ಚಕ್ರಕ್ಕೆ, ಆ ಎಳೆಗೆ ಇದೆ” ಎಂಬ ಒಳನೋಟ. ಸಬರಮತಿ ಆಶ್ರಮ… ಅಲ್ಲಿಂದ ಹೊರ ಬಂದ ನಂತರ ವರ್ಧಾ ಆಶ್ರಮ.. ಸೇಗಾಂವ್ ಎಂಬ ಕುಗ್ರಾಮದಲ್ಲಿ ಇಲ್ಲಗಳೆಲ್ಲ ಕಳೆದು ಇದೆ ಆಗುವ ವರೆಗಿನ ಕ್ರಮಣದಲ್ಲಿ ಭಾಯಿಗೆ ಜತೆಯಾದ ಎಳೆಯ ಜೀವಗಳು.. ಭಾಯಿಗೆ ಉಪವಾಸ ಕುರಿತು ಹೆಚ್ಚಿದ ನಂಬಿಕೆ.. ಹದಗೆಡತೊಡಗಿದ ತನ್ನ ಆರೋಗ್ಯ.. ಎಡೆಬಿಡದ ಭಾಯಿಯ ಪತ್ರ ವ್ಯವಹಾರ ಎಲ್ಲವೂ ಕಸ್ತೂರ್ ನೋಟಕ್ಕೆ ದಕ್ಕುತ್ತ ಸಾಗುತ್ತದೆ. ವಿನೋಬಾ, ರವೀಂದ್ರನಾಥ ಟಾಗೋರ್, ಬಾಬಾ ಸಾಹೇಬ್ ಅಂಬೇಡ್ಕರ್ ರಂಥವರೊಡನೆ ಭಾಯಿ ಒಡನಾಟದ ಸಂದರ್ಭ. ಬಾಬಾ ಸಾಹೇಬರ ಸಹವಾಸದಲ್ಲಿ ಅಸ್ಪೃಶ್ಯತೆ ಕುರಿತು ಅಮೂಲಾಗ್ರವಾಗಿ ಬದಲಾದ ತಮ್ಮ ಧೋರಣೆಯನ್ನು ನಿರೂಪಿಸುವ ಕಸ್ತೂರ್ ಹರಿಲಾಲ ಕುರಿತು ಹಂಚಿಕೊಳ್ಳುವ ನೋವು ಓದುಗರು ತಲ್ಲಣಿಸುವಂತೆ ಮಾಡಿ ಬಿಡುತ್ತದೆ. ಬಾಪು ಆಗಿ ಜಗತ್ತಿಗೇ ಮಾದರಿಯಾಗುವ ತನ್ನ ಭಾಯಿ ತಂದೆಯಾಗಿ‌ ಸೋತರೆಂದು ಕಸ್ತೂರ್ ಜೀವ ಮರುಗುತ್ತದೆ. ಹಾಗೆ ಹೇಳುವಾಗಲೂ ತಾಯಿಯಾಗಿ ತಾನು ನಿರ್ವಹಿಸಿದ ಪಾತ್ರದಲ್ಲೇ ಕೊರತೆ ಇತ್ತೇನೊ ಎಂದು ಕಳವಳಿಸುವ ಮಾತೃ ಹೃದಯದ ಹಿರಿಮೆಯೆದುರು ಲೋಕದ ಹಿರಿತನ ಮಂಡಿಯೂರುತ್ತದೆ. ಒಂದೊಂದಾಗಿ ಕಳಚಿಕೊಳ್ಳುತ್ತ ತಂದೆ ಸಾಗುವಾಗ ಮಗ ಎಲ್ಲ ಬಗೆಯ ವ್ಯಸನಗಳನ್ನೂ ಅಪ್ಪಿಕೊಳ್ಳುವುದು..ಮತಾಂತರ.. ನಿರುದ್ಯೋಗ.. ಎಲ್ಲವನ್ನೂ ಕಣ್ಣಿಗೆ ಕಟ್ಟುವಂತೆ ನಿರೂಪಿಸುವ ಕಸ್ತೂರ್ ‘ತಾಯಿ- ಹೆಂಡತಿ ಎರಡು ಪಾತ್ರಗಳ ನಡುವೆ ಸುಡುವ ಹೆಣ್ಣು ಜನ್ಮವೇ ಬೇಡ’ ಎಂದು ನಿಟ್ಟುಸಿರುಗರೆವಾಗ ‘ಮಾರು ಗೆಲ್ಲಬೇಕಾದವ ಮನೆಯಲ್ಲಿ ಸೋಲಲೇಬೇಕೆ’ ಎಂಬ ಪ್ರಶ್ನೆಯೊಂದು ವಾಚಕರನ್ನು ಕಾಡತೊಡಗುತ್ತದೆ. ಆಹಾರದಲ್ಲಿ ಸರಳತೆ ತರಲು ಹಂಬಲಿಸುವ ಭಾಯಿ ಅದನ್ನು ಒತ್ತಾಯಪೂರ್ವಕವಾಗಿ ಮಕ್ಕಳ ಮೇಲೆಯೂ ಹೇಳುವುದನ್ನು ಕಸ್ತೂರ್ ವಿರೋಧಿಸುತ್ತಾರೆ. ಅಷ್ಟೇ ಅಲ್ಲ ಹರಯ ಉಕ್ಕಿ ಹರಿಯುವ ಕಾಲದಲ್ಲಿ ಮಕ್ಕಳು ಸಹ ಬ್ರಹ್ಮಚರ್ಯ ಪಾಲಿಸಲಿ ಎಂದು ಬಯಸುವ ‘ಗಾಂಧಿಗಿರಿ’ ಅಸಹಜ ಎನಿಸಲಾರಂಭಿಸುತ್ತದೆ. ಯಾವುದೆಲ್ಲವನ್ನು ತಾನು ಅನುಭವಿಸಿ ಉಂಡ ಬಳಿಕ ನಿರಾಕರಿಸಲು ನಿರ್ಧರಿಸಿದರೊ ಅಂಥದೇ ಅವಕಾಶವನ್ನು ಎಳೆಯರಿಂದ ಕಸಿದುಕೊಳ್ಳುವ ಗಾಂಧಿ ನಿಲುವು ಅನುಚಿತ ಎನಿಸುತ್ತದೆ. ಉಪವಾಸಗಳ ಅಭಿಯಾನದ ಜೊತೆಗೇ ‘ಇನ್ನು ಮೇಲೆ ನಾವಿಬ್ಬರೂ ದೂರ ಇರೋಣ’ ಎಂದು ಘೋಷಿಸಿ ಬಿಡುವ ಗಾಂಧಿ ನಿರ್ಧಾರದ ಒಮ್ಮುಖತೆ… ತನ್ನ ಸಹಧರ್ಮಿಣಿಯ ಇಷ್ಟಾನಿಷ್ಟಗಳನ್ನು ಕೇಳುವ ಸೌಜನ್ಯವನ್ನೂ ತೋರದ ನಿರಂಕುಶತೆ… ಈ ಘಟನೆ ತನ್ನ ವ್ಯಕ್ತಿತ್ವಕ್ಕೆ ಎಸೆದ ಸವಾಲಿನಂತೆ ಎದುರಾದ ರೀತಿ… ಅದರೊಂದಿಗೆ ತಾನು ಹೊಂದಾಣಿಕೆ ಮಾಡಿಕೊಳ್ಳಲು ಹೆಣಗಾಡಿದ ಬಗೆ ಎಲ್ಲವೂ ಮನೋವೈಜ್ಞಾನಿಕ ಜಾಡಿನಲ್ಲಿ ಮೈದಳೆದು ವಾಚಕರು ಹಲವು ಬಗೆಯ ಪ್ರಶ್ನೆಗಳಿಗೆ ಮುಖಾಮುಖಿಯಾಗುವಂತೆ ಮಾಡುತ್ತದೆ. ಪ್ರೇಮ ಕಾಮಗಳನ್ನು ಬಾಪು ಬೇರೆ ಬೇರೆಯಾಗಿ ನೋಡಿದ್ದೇ ತಪ್ಪು.. ಅವು ಒಂದು ನಾಣ್ಯದ ಎರಡು ಮುಖಗಳು ಎಂಬ ನಿಲುವು ಒಂದರ ಇರುವಿಕೆಗೆ ಇನ್ನೊಂದರ ಅನಿವಾರ್ಯತೆಯನ್ನು ಒತ್ತಿ ಹೇಳುತ್ತದೆ. ಕಾಮವನ್ನು ಗೆಲ್ಲಲು ಹೊರಟಾತ ಸರಳಾದೇವಿ ಎಂಬ ರೂಪವತಿಗೆ ಮರುಳಾಗಿ ಅದರಿಂದ ಹೊರಬರಲು ಒದ್ದಾಡಿದ ಪರಿ ತತ್ವ ಆದರ್ಶಗಳ ಬೇರುಗಳನ್ನೇ ಅಲ್ಲಾಡಿಸುತ್ತದೆ. ಸತ್ಯ ಶೋಧನೆ, ಸರಳ ಜೀವನ, ಸತ್ಯಾಗ್ರಹ, ಚಳುವಳಿ, ಹೋರಾಟದ ಜೀವನದಲ್ಲಿ ಗಾಂಧಿ ಕಳೆದು ಹೋಗುವಾಗ ಎಲ್ಲಕ್ಕಿಂತ ಹೆಚ್ಚು ಅವರನ್ನು ಅವರ ಮಕ್ಕಳು ಕಳೆದುಕೊಂಡರು ಎಂದು ಕನವರಿಸುವ ತಾಯೊಡಲು ಎಲ್ಲರ ಬಾಪು ಆಗಲು ನನ್ನ ಮಕ್ಕಳ ಬಾಪು ಮಾಯವಾದರು ಎಂಬ ನೋವನ್ನು ತಣ್ಣಗೆ ಹಂಚಿಕೊಳ್ಳುತ್ತಾರೆ. ಬಾಪು ದೇಶಕ್ಕಾಗಿ ಎಲ್ಲವನ್ನೂ ಬಿಟ್ಟರು… ನಾನು ಬಾಪುವನ್ನೇ ಬಿಟ್ಟು ಕೊಟ್ಟೆ ಎಂದು ಕಸ್ತೂರ್ ಬಾಯಲ್ಲಿ ಹೇಳಿಸಿ ಕಸ್ತೂರ್ ಎಂಬ ಜೀವ ಬಾಪುವಿಗಿಂತ ಅದು ಹೇಗೆ ಮೇಲು ಎಂದು ಸಾಬೀತು ಪಡಿಸಲು ತೊಡಗುತ್ತಾರೆ ಲೇಖಕಿ. ಐತಿಹಾಸಿಕ ಘಟನೆಗಳನ್ನು ಕ್ರಮಬದ್ಧವಾಗಿ ಪೋಣಿಸುವಲ್ಲಿ ಲೇಖಕರು ತೋರಿಸುವ ಸೂಕ್ಷ್ಮತೆ ಅನನ್ಯ. ಸಹಜವಾಗಿ ರೂಪು ತಳೆಯುವ ರೂಪಕಗಳಂತೂ ಒಂದಕ್ಕಿಂತ ಒಂದು ಚಂದ. ‘ ಸಬರಮತಿ ನದಿಯ ನೀರು ಅವರ ಲೇಖನಿಯ ಶಾಯಿಯಾಗಿ ತುಂಬಿ ಅದು ಖಾಲಿಯೇ ಆಗುತ್ತಿಲ್ಲವೇನೊ ಎನಿಸುವಷ್ಟು ಪತ್ರಗಳನ್ನು ಬಾಪು ಬರೆಯುತ್ತಿದ್ದರು..’ ‘ತಂದೆ ಮಕ್ಕಳ ಸಂಬಂಧ ಅಳಿಸಿ ಬಿಡಲು ಸಾಧ್ಯವೇ? ಎಷ್ಟಿಲ್ಲ ಅಂದರೂ ಚರ್ಮದ ಹಾಗೆ ಅಂಟಿಕೊಂಡಿರುತ್ತದೆ..’ – ಒಂದೆರಡು ಝಲಕು ಇವು. ತನ್ನವನ ಹೆಜ್ಜೆಯಲಿ ಹೆಜ್ಜೆ ಇರಿಸುತ್ತಲೇ ಸಾಗುವಾಗಲೂ ಆತನ ಗುಣ ಅವಗುಣಗಳನ್ನು ಒರೆಗೆ ಹಚ್ಚುತ್ತದೆ ಕಸ್ತೂರ್ ಜೀವ. ಲೋಕ ಆತನನ್ನು ಮಹಾತ್ಮನೆನ್ನುವಾಗ ಆತನಲ್ಲಿನ್ನೂ ಅಳಿಯದೇ ಉಳಿದ ‘ನಾನು’ ಇತ್ತು ಎಂಬುದನ್ನು ಆ ಜೀವ ಗುರುತಿಸುತ್ತದೆ. ಇದೆಲ್ಲವೂ ಲೇಖಕಿ ತಮ್ಮ ನಿಲುವು,ನೋಟಗಳಿಗೆ ತೊಡಿಸುವ ಸುಂದರ ಹೊದಿಕೆ.‌ ಭೂಮಿಯ ಮೇಲೆ ಬೆಳೆದ ಮರದಂತೆ ಬಾಪು.. ನೆಲವನ್ನೇ ಆಶ್ರಯಿಸಿ ಬೆಳೆದ ಗರಿಕೆ ತಾನು..ಎರಡರ ಮಾಪನವೂ ಬೇರೆ.. ಎರಡರ ಸಾರ್ಥಕ್ಯ ಒಂದೇ ಎಂಬ ಷರಾದೊಂದಿಗೆ ಕಥನಕ್ಕೊಂದು ಪೂರ್ಣ ವಿರಾಮ ಇರಿಸುವ ಲೇಖಕಿ ಕೊನೆಯಲ್ಲಿ ಪ್ರಶ್ನೆಯೊಂದನ್ನು ತೂರಿ ಬಿಡುತ್ತಾರೆ – ‘ಯಾವೆಲ್ಲ ಪ್ರಯೋಗಗಳನ್ನು ಗಾಂಧಿ ಮಾಡಿದರೊ.. ಯಾವುದಕ್ಕೆಲ್ಲ ತಾನು ಉರಿವ ದೀಪದ ಬತ್ತಿಯಾಗಿ ಸುಟ್ಟುಕೊಂಡೆನೊ ಅದೇ ತಿರುವು ಮುರುವಾಗಿದ್ದರೆ!! ಗಾಂಧಿಯಾಗಿ ರೂಪಾಂತರಗೊಂಡ ಮೋಕ ತನ್ನನ್ನು ಅದೇ ಶ್ರದ್ಧೆ, ನಿಷ್ಠೆಯಿಂದ ತನ್ನನ್ನು ಹಿಂಬಾಲಿಸುತ್ತಿದ್ದರೇ? ‘ ಹೆಣ್ಣು ಕುಲ ಎಂದಿನಿಂದ ಕೇಳುತ್ತಲೇ ಬಂದಿರುವ, ನಿಶ್ಯಬ್ದವೇ ಉತ್ತರವಾಗಿರುವ ಪ್ರಶ್ನೆ ಅದು. ಇಡಿಯಾಗಿ ಕಥಾನಕ ಪ್ರಸ್ತಾವನೆಯಲ್ಲಿ ಲೇಖಕಿ ತಾವೇ ಹೇಳಿರುವಂತೆ ಮಹಿಳಾ ದೃಷ್ಟಿಕೋನ, ಸಬಾಲ್ಟ್ರನ್ ದೃಷ್ಟಿಕೋನ, ದಲಿತ ದೃಷ್ಟಿಕೋನ, ಧಾರ್ಮಿಕ – ಆಧುನಿಕ ದೃಷ್ಟಿಕೋನ ಒಂದೊಂದು ಕೋನದಲ್ಲಿಯೂ ಬಾಪುವನ್ನು ವಿಮರ್ಶಿಸುತ್ತ ಬಾ ಬದುಕನ್ನು ಅಸದೃಶ್ಯ ಬಗೆಯಲ್ಲಿ ಕಟ್ಟಿಕೊಡುವಲ್ಲಿ ಯಶಸ್ಸು ಸಾಧಿಸುತ್ತದೆ. ಬಾ ಬದುಕನ್ನು ಕಸ್ತೂರ್ ಬದುಕಾಗಿ ನೋಡುವ ನೋಟ, ನಿರೂಪಿಸುವ ಲೇಖನಿ ಎರಡರ ಹಿಂದೆಯೂ ಅದ್ವಿತೀಯ ಓದು, ಪೂರ್ವಾಗ್ರಹಗಳಿಂದ ಹೊರತಾದ ಮನೋಭೂಮಿಕೆ, ಕವಿ ಹೃದಯ, ಸಂಗೀತದ ಮೋಡಿ, ಹೆಂಗರುಳಿನ ಅದಮ್ಯ ತುಡಿತ, ಸಂವೇದನೆಗಳು ಹದವಾಗಿ ಬೆರೆತಿವೆ. ಈ ಕಥಾನಕ ಆದಷ್ಟು ಶೀಘ್ರ ಅನುವಾದಕರ ಕಣ್ಣಿಗೆ ಬೀಳಬೇಕು. ಹೆಚ್ಚೆಚ್ಚು ಜನರನ್ನು ತಲುಪಬೇಕು. ಗಾಂಧಿ ಎಂಬ ಪದ ಮಾರುಕಟ್ಟೆಯ ಸರಕಿನಂತಾಗಿರುವ ಈ ದುರಿತ

ಪುಸ್ತಕ ಸಂಗಾತಿ Read Post »

ಪುಸ್ತಕ ಸಂಗಾತಿ

ಪುಸ್ತಕ ವಿಮರ್ಶೆ

ಕೃತಿ ಬಿಕರಿಗಿಟ್ಟ ಕನಸು-ಕಾವ್ಯ ಲೇಖಕರು: ದೇವು ಮಾಕೊಂಡ ಡಾ.ವಿಜಯಶ್ರೀ ಇಟ್ಟಣ್ಣವರ ಕವಿಯೊಬ್ಬ ಕಾವ್ಯ ನರ‍್ಮಿತಿಯಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳಬೇಕೆಂದರೆ ಕಾವ್ಯ ಪ್ರತಿಭೆ ಅವಶ್ಯ. ಅದನ್ನೇ ಆಲಂಕಾರಿಕರು ‘ಕವಿತ್ವ ಬೀಜಂ ಪ್ರತಿಭಾನಂ’ ಎಂದಿದ್ದಾರೆ. ಹಾಗಾದರೆ ಕಾವ್ಯ ನರ‍್ಮಿತಿಗೆ ಪ್ರತಿಭೆಯೊಂದೇ ಸಾಕೆ? ಎಂಬ ಪ್ರಶ್ನೆ ಉದ್ಭವಿಸುತ್ತದೆ. ಇಲ್ಲ, ಪ್ರತಿಭೆಯ ಜೊತೆಗೆ ಬದುಕಿನ ವಿಭಿನ್ನ ಅನುಭವ, ಆಲೋಚನೆಗಳು ಕವಿಯೊಬ್ಬನನ್ನು ನರ‍್ಮಿಸುತ್ತವೆ. ಹೊಸದನ್ನು ಕಾಣುವ, ಕಾಣಿಸುವ ಮನಸ್ಸು, ಪ್ರಜ್ಞೆ ಕವಿಗೆ ಬೇಕು.ಇದನ್ನೇ ಆಲಂಕಾರಿಕರು ‘ಪ್ರಜ್ಞಾ ನವನವೋನ್ಮೇಶ ಶಾಲಿನಿ’ ಎಂದಿದ್ದಾರೆ. ಜೊತೆಗೆ ಕಟ್ಟಿದ ಕಾವ್ಯವನ್ನು ಮತ್ತೆ ಮತ್ತೆ ಓರಣಗೊಳಿಸುವ ಪ್ರಯತ್ನವೂ ಅವಶ್ಯ. ಈ ಮೂರೂ ಮುಪ್ಪುರಿಗೊಂಡಾಗ ಯಶಸ್ವಿಗೊಂಡಾಗ ಯಶಸ್ವಿ ಕವಿಯೊಬ್ಬನನ್ನು ನರ‍್ಮಿಸುತ್ತವೆ. ಮೊದಲ ಪ್ರಯತ್ನದಲ್ಲೇ ಈ ಮೂರೂ ಲಕ್ಷಣಗಳನ್ನೊಳಗೊಂಡ ಕವಿ ದೇವಿ ಮಾಕೊಂಡ. ‌‌‌‌‌ ದೇವು ಮಾಕೊಂಡ ದೇಸೀ ಸಂಸ್ಕೃತಿ-ಪ್ರಜ್ಞೆಯನ್ನುಳ್ಳ ಕವಿ. ಹಳ್ಳಿ ವಿಭಿನ್ನ ಅನುಭವಗಳ ಆಗರ. ಲೊಕಜ್ಞಾನದ ಕೇಂದ್ರ. ಮನುಷ್ಯನಿಗೆ ಹಳ್ಳಿ ಕೊಡುವ ಅನುಭವ ಸಂಪತ್ತನ್ನು ಪಟ್ಟಣ ಕಟ್ಟಿಕೊಡಲಾರದು. ಪಟ್ಟಣದ ಕಂಪೌಂಡ ಸಂಸ್ಕೃತಿಯ ಅಡಿಯಾಳಾಗಿರುವ ನಾವುಗಳು ಇಂದು ನಮ್ಮ ಸುತ್ತ ಸ್ವರ‍್ಥದ ಗೋಡೆಕಟ್ಟಿಕೊಂಡಿದ್ದೇವೆ. ಆದರೆ ದೇವು ಮಾಕೊಂಡ ಹಳ್ಳಿಯೊಳಗೊಂದಾಗಿ ಬದುಕಿದ ಆಧುನಿಕ ಮನುಷ್ಯ. ಅಂತಲೇ ಈ ವ್ಯಕ್ತಿಗೆ ಹಳ್ಳಿಯಿಂದ ದಿಲ್ಲಿ ದಿಗಂತದವರೆಗಿನ ಅಪಾರ ಲೋಕಜ್ಞಾನವಿದೆ. ಅವರಿಗೆ ತಾನು, ತನ್ನ ವೈಯಕ್ತಿಕ ಬದುಕು ಇದಿಷ್ಟೇ ಜೀವನವಲ್ಲ. ಅದರಾಚೆಗೂ ತುಡಿತ-ತಲ್ಲಣಗಳಿವೆ. ಅಂತಲೇ ಅವರಿಗೆ ಅನ್ಯಾಯ, ಅತ್ಯಾಚಾರ, ಪರಿಸರ ನಾಶ, ಕೋಮು ಸಂರ‍್ಷ, ಜಾತಿ ಅಸಮಾನತೆಗಳ ಕುರಿತು ರೋಷವಿದೆ. ವಿರೂಪಗೊಂಡ ದೇಶದ ಚಿತ್ರಣದ ಜೊತೆಗೆ ನಮ್ಮಲ್ಲಿ ಇನ್ನೂ ಜೀವಂತವಿರುವ ಪ್ರೀತಿ, ಪ್ರೇಮ, ನನ್ನೂರು. ನನ್ನ ದೇಶಗಳ ಕುರಿತು ಅಭಿಮಾನವಿದೆ. ಇದನ್ನೆಲ್ಲ ನೋಡಿದಾಗ ಕವಿಗೆ ಒಟ್ಟು ಬದುಕಿನ ಬಗೆಗಿರುವ ವಿಶಾಲ ದೃಷ್ಟಿಕೋನದ ಅರಿವುಂಟಾಗುತ್ತದೆ. ಅದಕ್ಕೆ ಸಾಕ್ಷಿ ಬಿಕರಿಗಿಟ್ಟ ಕನಸುವಿನಲ್ಲಿನ ಕಾವ್ಯಾಭಿವ್ಯಕ್ತಿಗಳು.‍ ‘ಬಿಕರಿಗಿಟ್ಟ ಕನಸು’ ಸಮನ್ವಯ ಮಾದರಿಯ ಕವನ ಸಂಕಲನ. ಇಲ್ಲಿಯ ಕವನಗಳಲ್ಲಿ ನವೋದಯದ ಜೀವನ ಪ್ರೀತಿ, ರಾಷ್ಟ್ರಭಕ್ತಿ, ಪ್ರಕೃತಿ ಪ್ರೀತಿ, ಆರ‍್ಶ ಕಲ್ಪನೆಗಳಿವೆ. ಪ್ರಗತಿಶೀಲರ ಪ್ರಗತಿಯ ದೃಷ್ಟಿಕೋನವಿದೆ, ಡೋಂಗಿ ಬಾಬಾಗಳನ್ನು ಬಯಲಿಗೆಳೆಯುವ ದಿಟ್ಟತನವಿದೆ. ನವ್ಯರ ಪ್ರತೀಕಾತ್ಮಕವಾಗಿ ಹೇಳುವ ಕಲೆಗಾರಿಕೆ ಇದೆ, ಬದುಕು-ದೇಶದ ಬಗ್ಗೆ ಭ್ರಮನಿರಸನವಿದೆ. ಬಂಡಾಯದ ಪ್ರತಿಭಟನಾ ಗುಣವಿದೆ. ಹೀಗೆ ಇದುವರೆಗಿನ ಕನ್ನಡ ಸಾಹಿತ್ಯ ಚಳುವಳಿಗಳಿಗೆಲ್ಲ ಇಲ್ಲಿ ಸ್ಪಂದನೆ ಇದೆ. ಜೊತೆಗೆ ರ‍್ತಮಾನಕ್ಕೂ ಪ್ರತಿಕ್ರಿಯೆ ಇದೆ. ಈ ಸಂಕಲನದಲ್ಲಿ ಒಟ್ಟು ೪೩ ಕವನಗಳಿವೆ. ಅವನ್ನು ಸ್ಥೂಲವಾಗಿ ಐದು ವಿಭಾಗಗಳನ್ನಾಗಿ ಮಾಡಿಕೊಂಡು ನೋಡಬಹುದು. ಕೋಮು-ಜಾತಿ ಸಂರ‍್ಷ , ಪ್ರೇಮಕವಿತೆಗಳು , ಪರಿಸರ ಕಾಳಜಿ, ರ‍್ತಮಾನಕ್ಕೆ ಪ್ರತಿಕ್ರಿಯೆ ಹೀಗೆ ಅನೇಕ ಭಾವದ ಕವಿತೆಗಳು ಈ ಸಂಕಲನದಲ್ಲಿವೆ. ಮನುಷ್ಯ ಮನುಷ್ಯನನ್ನು ಒಡೆಯುವ ರ‍್ಮ ಜಾತಿಗಳ ಕುರಿತಾಗಿ ಕವಿಗೆ ಅಪಾರವಾದ ಆಕ್ರೋಶವಿದೆ. ಅದನ್ನು ಬಿಕರಿಗಿಟ್ಟ ಕನಸು, ಗುಲಾಮಗಿರಿ, ಚಂದ್ರನ ಸಾಕ್ಷಿಯಾಗಿ, ನನ್ನೆದೆಯೇ ಮಹಾಗ್ರಂಥಗಳಂತಹ ಕವನಗಳಲ್ಲಿ ಕಾಣಬಹುದು. ಉದಾಹರಣೆಗೆ, ಬಿಕರಿಗಿಟ್ಟ ಕನಸು ಕವಿತೆಯಲ್ಲಿ “ಬಂದೂಕಿನ ನಳಿಕೆಯಲಿ ಗೂಡು ಕಟ್ಟಲು ಹೋದ ಹಕ್ಕಿ ಮೊಟ್ಟೆ ಇಟ್ಟ ಭ್ರೂಣ ತಟ್ಟದೇ ಅಳಿಯುತ್ತಿದೆ” ಎಂಬ ಸಾಲುಗಳಲ್ಲಿ ಕವಿಯ ನೋವು ಅಭಿವ್ಯಕ್ತಗೊಳ್ಳುತ್ತದೆ. ಮಾನವೀಯತೆಯ ಆಶಯ ಬಂದೂಕಿನ ಬಾಯಲ್ಲಿ ಗುಬ್ಬಚ್ಚಿ ಗೂಡುಕಟ್ಟಬೇಕೆಂಬುದು. ಆದರೆ ಗುಬ್ಬಚ್ಚಿ ಬಂದೂಕಿನ ಬಾಯಲ್ಲಿ ಗೂಡು ಕಟ್ಟಿ ಇನ್ನೇನು ಆ ಭ್ರೂಣಕ್ಕೆ ಕಾವು ಕೊಟ್ಟು ಮರಿಮಾಡಬೇಕು ಅಷ್ಟರಲ್ಲಿ ಆ ಗೂಡು ತತ್ತಿ ಸಹಿತವಾಗಿ ಇಲ್ಲವಾಗುವದು ಇಂದಿನ ಕರಾಳ ವಾಸ್ತವ. ಇಂಥ ಸಾಲುಗಳು ಕವಿಯ ಕಾವ್ಯ ಶಕ್ತಿಗೆ ಕೈಗನ್ನಡಿ. ಬಿಕರಿಗಿಟ್ಟ ಕವಿತೆ ಕೋಮು ದಳ್ಳುರಿಯ ಬೆಂಕಿ ಹೇಗೆ ಜಗತ್ತನ್ನೇ ಬೇಯಿಸುತ್ತಿದೆ, ಶಾಂತಿ ಸೌಹರ‍್ದತೆಯ ನೆಲೆವೀಡಾದ ತಾಣಗಳನೇಕ ಇಂದು ರಕ್ತದ ಮಡುವಾಗಿ ಭಯ ಹುಟ್ಟಿಸುವ ತಾಣಗಳಾಗಿರುವುದರ ಬಗ್ಗೆ ಕವಿಗೆ ವಿಶಾದವಿದೆ. ಬೆಂಕಿಯ ಮಳೆ ಕವಿತೆಯಲ್ಲಿ ಇಂದು ದೇಶಾದ್ಯಂತ ಭಯೋತ್ಪಾದನೆ, ನಕ್ಸಲ್ ಚಟುವಟಿಕೆ, ಅತ್ಯಾಚಾರ, ಅನ್ಯಾಯ, ಅಸಹಿಷ್ಣುತೆ ತಾಂಡವವಾಡುತ್ತಿವೆ. ದೇಶಕ್ಕೊದಗಿದ ಇಂಥ ದರ‍್ದೆಸೆಗೆ ಕವಿ ಮನಸ್ಸು ಘಾಸಿಗೊಂಡಿದೆ. ಗುಲಾಮಗಿರಿ, ನೊಂದವರು ನೋಯುತ್ತಲೇ ಇರುತ್ತಾರೆಯಂಥ ಕವಿತೆಗಳಲ್ಲಿ ಪರಂಪರಾಗತವಾಗಿ ಬಂದ ಯಜಮಾನ್ಯ ಸಂಸ್ಕೃತಿಯನ್ನು ಪುರೋಹಿತಶಾಹಿಯನ್ನು ಕವಿ ಪ್ರತಿಭಟಿಸುತ್ತಾನೆ. ಆದರೆ ಈ ಪ್ರತಿಭಟನೆ ಸೌಮ್ಯ ತೆರನಾದದ್ದಾಗಿದೆ. ‘ಗುಲಾಮಗಿರಿ’ ಕವಿತೆಯಲ್ಲಿ “ನನ್ನ ಸುಕ್ಕುಗಟ್ಟಿದ ನಲುಗಿ ಬಾಡಿದ ದೇಹದ ಹನಿ ರಕ್ತದಿಂದ ನಿನ್ನ ಸುಖದ ಗೋಪುರ ಕಟ್ಟಿರುವೆ ನನ್ನ ನೋವಿನ ಮಡುವಿನಿಂದ ನಿನ್ನ ಜೀವನ ಸಾಗಿದೆ” ಎಂದು ಪ್ರತಿಭಟಿಸುತ್ತಾನೆ ಕವಿ. ‘ಚಂದಿರನ ಸಾಕ್ಷಿಯಾಗಿ’ ಕವಿತೆಯಂತೂ ಕತೆಯಾಗುವ ಕವಿತೆ. ಲಂಕೇಶರ ದಾಳಿ ಕಥೆಯನ್ನು ನೆನಪಿಸುವ ಕವಿತೆ. ಪ್ರಕೃತಿ ತಾನೆ ಮನುಷ್ಯನನ್ನು “ನಿಮ್ಮ ಮನೆಯ ಮಗಳೆಂದು ರಕ್ಷಿಸಿ” ಎಂದು ಬೇಡಿಕೊಳ್ಳುವ ದಯನೀಯತೆ ಪ್ರಕೃತಿ ಎದುರಾಗಿದ್ದನ್ನು ದುಃಖದಿಂದ ಹೇಳುತ್ತಾನೆ ಕವಿ. ಸಂಬಂಧ-ಸಾಂಗತ್ಯ ಕವಿತೆಯಲ್ಲಿ “ಕಣ್ಣು-ಕಿವಿ ಮೂಗು-ಬಾಯಿ ತುಂಡರಸಿ ಕಾಮನೋಟ ಬೀರಿ ನಿತಂಬ ಕತ್ತರಿಸಿ ಹಾಕುವಾಗ ತನಿರಸ ಧಾರೆ ಎರೆದ ಗಳಿಗೆ ನೆನಪಾಗಲಿಲ್ಲವೆ?” ಎನ್ನುತ್ತಾನೆ ಕವಿ. ಇದು ಕವಿತೆಯ ಕೊನೆಯ ನುಡಿ. ಈ ನುಡಿಗೆ ಬರುವವರೆಗೂ ಕವಿ ಪ್ರಕೃತಿ ಮತ್ತು ಜೀವ ಸಂಕುಲದ ಮಧ್ಯದ ಅವಿನಾಭಾವ ಸಂಬಂಧವನ್ನು ರ‍್ಣಿಸುತ್ತಾ ಕೊನೆಗೆ ಈ ಮೇಲಿನಂತೆ ಹೇಳುತ್ತಾನೆ. ಪ್ರಕೃತಿಯ ಮೇಲೆ ಮಾನವನ ಕಾಮದ ಕಣ್ಣು ಬಿದ್ದಿದೆ. ಎಲ್ಲೆಲ್ಲ ಕಾಮದ ಕಣ್ಣು ಬೀಳುವದೋ ಅಲ್ಲೆಲ್ಲ ಸ್ವರ‍್ಥ ಮನೆ ಮಾಡುತ್ತದೆ. ಮಾನವ ದಾನವನಾಗಿ ಅಮಾನುಷವಾಗಿ ರ‍್ತಿಸಲಾರಂಭಿಸುತ್ತಾನೆ. ಅದನ್ನೇ ಕವಿ ಇಲ್ಲಿ ಹೀಗೆ ಕವಿತೆಯಾಗಿಸಿದ್ದಾನೆ. ಇನ್ನು ವಸಂತಕಾಲದ ಚಿಟ್ಟೆ, ನಲ್ಲೆ, ಬರಿ ನೋಟವಲ್ಲದಂತಹ ಮುದನೀಡುವ ಪ್ರೇಮ ಕವಿತೆಗಳಿವೆ. ಆರ‍್ಶ ಮೌಲ್ಯಗಳನ್ನು ಪ್ರತಿಪಾದಿಸುವ ನಾಡ ಕಟ್ಟತೇವ, ಭಾವಕೋಶವೊಂದೇ ಭಾರತಯಂತಹ ಕವಿತೆಗಳು ಸಂಕಲನದ ಮೌಲ್ಯ ಹೆಚ್ಚಿಸುತ್ತವೆ. ಜೊತೆಗೆ ರ‍್ತಮಾನಕ್ಕೆ ಕವಿಯ ಪ್ರತಿಕ್ರಿಯೆಯಾಗಿ ಗೋರಿಯೊಳಗಿನ ಹೂವು, ಭೀಮೆಯ ಸಿರಿಯಂತಹ ಕವಿತೆಗಳಿವೆ. ಹೀಗೆ ಕವಿ ವಿಭಿನ್ನ ವಸ್ತು, ಆಶಯ, ಸನ್ನಿವೇಶಗಳಿಗೆ ತನ್ನದೇರೀತಿಯಲ್ಲಿ ಪ್ರತಿಕ್ರಿಯಿಸುತ್ತಾನೆ, ಅಭಿವ್ಯಕ್ತಿಸುತ್ತಾನೆ. ಕವಿಯೊಬ್ಬನ ಕವಿತೆಗಳೆಲ್ಲ ಒಂದೇ ಎತ್ತರದಲ್ಲಿರಲು ಸಾಧ್ಯವಿಲ್ಲ, ಅದನ್ನು ಕವಿಯಿಂದ ನಿರೀಕ್ಷಿಸಲೂ ಬಾರದು. ಎಷ್ಟೇ ದೊಡ್ಡ ಕವಿಯಾದರೂ ಸಾರಸ್ವತಲೋಕದಲ್ಲಿ ಕವಿಯೊಬ್ಬ ನೆಲೆ ನಿಲ್ಲುವದು ಕೆಲವು ಕವಿತೆಗಳಿಂದ ಮಾತ್ರ. ಅಂತೆಯೇ ದೇವು ಮಾಕೊಂಡ ಸಹ ಸುಡಗಾಡ ಹೂ, ಬಿಕರಿಗಿಟ್ಟ ಕನಸು, ಗುಲಾಮಗಿರಿ, ನೊಂದವರು ನೋಯುತ್ತಲೇ ಇರುತ್ತಾರೆ, ಚಂದ್ರನ ಸಾಕ್ಷಿಯಾಗಿ, ಗೋರಿಯೊಳಗಿನ ಹೂ, ಬಿಳಿ ಕ್ರಾಂತಿಯ ಶಿಶು ಅಂತಹ ಕವಿತೆಗಳಿಂದ ಒಂದಿಷ್ಟು ಕಾಲ ಈ ಸಾರಸ್ವತ ಲೋಕದಲ್ಲಿ ನೆಲೆ ನಿಲ್ಲುತ್ತಾರೆ. ಎಲ್ಲಕ್ಕೂ ಮಿಗಿಲಾಗಿ ಕಾವ್ಯ ರಸಾನಂದವನ್ನು ನೀಡಬೇಕು ಎನ್ನುವರು ಅಂಥ ರಸಾನಂದವನ್ನು ನೀಡುವ ಕವಿತೆ ಬಿಳಿ ಕ್ರಾಂತಿಯ ಶಿಶು. ಹೀಗೆ ಮೋದಲ ಸಂಕಲನದಿಂದಲೇ ಭರವಸೆಯನ್ನು ಮೂಡಿಸಿದ ಕವಿ ಮುಂದಿನ ದಿನಮಾನಗಳಲ್ಲಿ ಮತ್ತೊಂದಿಷ್ಟು ಸಂಕಲನಗಳ ಮೂಲಕ ಕಾವ್ಯ ಸಂಪತ್ತನ್ನು ಹೆಚ್ಚಿಸಲಿ.

ಪುಸ್ತಕ ವಿಮರ್ಶೆ Read Post »

ಪುಸ್ತಕ ಸಂಗಾತಿ

ನಾನು ಓದಿದ ಪುಸ್ತಕ

ಮಣ್ಣಿಗೆ ಬಿದ್ದ ಹೂಗಳು ಬಿದಲೋಟಿ ರಂಗನಾಥ್ ಅರುಣ್ ಕುಮಾರ್ ಬ್ಯಾತ ಬಿದಲೋಟಿ ರಂಗನಾಥ್ ಸರ್ ಜಾಲತಾಣದ ಆತ್ಮೀಯರಾದರೂ ಅವರು ಭೇಟಿ ಆದದ್ದು, ಮೊನ್ನೆ ತುಮಕೂರಿನ ಕಾರ್ಯಕ್ರಮವೊಂದರಲ್ಲಿ. ಮಾತಾಡಿಸಿ ಕೈಗೆರಡು ಪುಸ್ತಕಗಳನಿಟ್ಟು ಓದು ಎಂದರು. ನಾನೂ ಬಿಡುವಿನಲ್ಲಿ ಹಾಗೇ ಕಣ್ಣಾಡಿಸಿದೆ ಒಂದು ಮೂರು ಹತ್ತು ಹೀಗೆ ಎಲ್ಲವೂ ಮುಗಿದುಹೋದವು…ಓದಿಕೊಂಡಾಗ ಉಳಿದ ನನ್ನವೇ ಒಂದಿಷ್ಟೇ ಇಷ್ಟು ಅನಿಸಿಕೆಯನ್ನು ಇಲ್ಲಿ ಬರೆಯುವುದಕ್ಕೆ ಪ್ರಯತ್ನಿಸಿರುವೆ… ಏನು ಮಣ್ಣಿಗೆ ಬಿದ್ದ ಹೂವುಗಳು..? ಯಾಕೆ ಇದೇ ಶೀರ್ಷಿಕೆ ಇಟ್ಟರು ಎಂದು ತಡಕಾಡಿದೆ…! ಒಂದೆರಡು ಸಾಲು ಉತ್ತರ ಹೇಳಿದಂತಿದ್ದವು..,ಬುಡ್ಡಿಯ ಬೆಳಕ ಕಳೆದುಕೊಂಡು ಬೆಳದಿಂಗಳ ಬೆಳಕಲ್ಲಿ ಗೂಡಿರಿಸಿ ಮಲಗಿದ್ದ ತಣ್ಣನೆಯ ನೆನಪುಗಳನ್ನು ಕರ ಜೋಡಿಸಿ ಕಣ್ಣಲ್ಲಿ ಕರೆದ ದಾರಿಯಲ್ಲಿ ಬಂದ ಕಾವ್ಯಗಳಿಗೆ ಜೋಕಾಲಿ ಕಟ್ಟಿದೆ..! ನಾನು ನಾನಗದೇ ಭಾವ ಬಿಂದುವಿಗೆ ಹೂ ಮುಡಿಸಿ ಅಂದ ತುಂಬಿಕೊಂಡು ಕುಣಿಯುತ್ತಿದ್ದೆ…! ಅಲ್ವಾ… ಕೊಂಚ ಶಾಂತಿ ಸಿಗಲು ನಾ, ಅಡವಿಟ್ಟ ಮೊದಲ ಎಸಳ ಕವಿತೆಯ ಸಾಲು ಕೊಡು ಅದರಿಂದ ನೂರು ಭಾವ ತುಂಬಿದ ಕವಿತೆ ಬರೆದು ಕೊಡುವೆ ನಾನು…! ಕವಿಯೊಬ್ಬನ ಅಂತರಂಗದಲ್ಲಿ ಮಂಥನ ಮಾಡಬಲ್ಲ ಭಾವಯಾನ ಇಲ್ಲಿ ವ್ಯಕ್ತವಾಗುತ್ತದೆ. ಇಲ್ಲೂ ಕವಿಗಳು ತಮ್ಮದೇ ನಿಲುವಿನಲ್ಲಿ ಜಾತಿಯನ್ನು ನಿಂದಿಸುತ್ತಾರೆ, ಒಳಗಿನ‌ ಸೇಡ ನಿರ್ಭೀತಿಯಿಂದ ಹೊರಹಾಕುತ್ತಾರೆ..”ನಾನು ನಾನಗಿರುವುದಿಲ್ಲ , ನಿನ್ನ ಜಾತಿ ಯಾವುದೆಂದರೆ ಮೈ ಕೈ ಪರಚಿಕೊಳ್ಳುತ್ತೇನೆ ಎಂದು ಒಳಗಿನ‌ ಒಡಬಾಗ್ನಿಯನ್ನು ರಾಚುತ್ತಾರೆ…! ಆಕಾಶ ಮಡಿಕೆ ತೂತು ಬಿದ್ದ ರಾತ್ರಿ ಕವಿತೆಯಲ್ಲಿ ಬಡತನದ ಅನಾವರಣ ತರೆದಿಟ್ಟಿದ್ದಾರೆ., ಹೌದು ನಾನು ಆ ತರಹದ ನಡುರಾತ್ರಿ ಬಡಿಸ ಮಳೆಗೆ ತಡಕಾಡಿದ ಅಪ್ಪನನ್ನು, ಬಡಿದಾಡಿದ ಅಮ್ಮನನ್ನು, ಮಿಸುಕಾಡದೇ ಕೂತ ನಮ್ಮನ್ನು ನಮಗೆ ನೆನಪಿಸಿದವು…ಅಸಹಾಯಕತೆಗೆ ಎಷ್ಟು ಸೇಡು…! ಅಂದು ತೊಟ್ಟಿಕ್ಕಿದ ಆ ತೂತಾದ ಸೂರಿನಲ್ಲಿ ಬಿದ್ದ ಹನಿಗಳ ಕಲರವ ಇನ್ನೂ ಕಿವಿಗಳಲ್ಲಿದೆ.. ಒಳಗೆ ನುಗ್ಗಿದ ನೀರು ಒಲೆಯ ಮೆದು ಮಾಡಿ ಎನ್ನುವಾಗ ಹಪಹಪಿಸಿದ ಹಸಿವು ಕಾಣುತ್ತದೆ…! ಕಾಲದೊಟ್ಟಿಗೆ ಪ್ರೀತಿಯನ್ನು ಅದರ ಬದಲಾವಣೆಯಲ್ಲಿ ತನ್ನನ್ನೂ ತಿರುಗಿಸುತ್ತಾ ಕವಿ ನನ್ನಿಂದಿಲ್ಲದ ಕಾಲ ಎಂಬ ಕವಿತೆಯಲ್ಲಿ ಅನುಭವವನ್ನು ಬಿಚ್ಚಿಟ್ಟಿದ್ದಾರೆ.. ಸಾಲುಗಳು ಎಷ್ಟು ಚಂದ…, ” ಪ್ರೀತಿ ಬದುಕಿದ್ದ ಕಾಲದಲ್ಲಿ ಭಾವ ಸುರುಳಿಯಾಗಿತ್ತು, ಅಕ್ಕ ಪಕ್ಕದ ಗುಳ್ಳೆಯ ಹಂಗಿರಲಿಲ್ಲ ಮನಸ್ಸು ತಿಳಿಯಾಗಿತ್ತು…ಕದಡಿರಲಿಲ್ಲ…! ಕನಸುಗಳನ್ನು ಹಾರಿ ಬಿಟ್ಟಿದ್ದೇನೆ ಎಲ್ಲಿದ್ದರೂ ಹಿಡಿದುಕೋ ಎಂಬ ಸಾಲು ಎಷ್ಟು ಸತ್ಯವಾಗಿವೆ…! ಮೂಕ ಹಕ್ಕಿಯ ಮಾತು ಕವಿತೆಯಲ್ಲಿ ” ನನ್ನನ್ನು ನಾನೇ ನೋಡಿಕೊಳ್ಳುತ್ತೇನೆ,‌ ನನಗೆ ನಾನೇ ಅರ್ಥವಾಗದ ಹಾಗೆ, ಸದ್ದು ಗದ್ದಲದ ನಡುವೆ ಒಬ್ಬನೇ ಕೂತು” ಎಂದು ಒಂಟಿತನದ ಸಂಕಟದಲ್ಲೇ ತನ್ನೊಳಗಿನ‌ ತನ್ನನ್ನು ಸಮಾಧಾನಿಸುತ್ತಾ ನೋಡುವ ಬಗೆಯ ಬರೆಯುತ್ತಾರೆ. ಹೀಗೆ ಒಂದೈವತ್ತು ಕವಿತೆಗಳು ಈ ಪುಸ್ತಕದಲ್ಲಿವೆ, ಅವರೇ ಹೇಳುವಂತೆ ದಿಕ್ಕೆಟ್ಟವರ ಅಸಹಾಯಕರ ನಿರ್ಗತಿಕರ ಕೈ ಹಿಡಿದು ಮೇಲುತ್ತವ ಕವಿತೆಗಳು ಹೆಚ್ಚು ಕಿವಿ ತಟ್ಟುತ್ತವೆ.. ನೆಲದ ಜೀವಗಳ ಅಂತಃಕರಣ ಕವಿಯನ್ನು ಹೆಚ್ಚಾಗಿ ಕಾಡಿವೆ..ಬದುಕನ್ನೇ ಅಕ್ಷರಗಳಿಗೆ ಕಟ್ಟಿಕೊಟ್ಟ ಕವಿತೆಗಳು ನಮ್ಮವೇ ಎಂಬ ಹಳೆಯ ನೆನಪುಗಳ ಮತ್ತೆ ನೆನಪಿಸುತ್ತವೆ. ಹಳ್ಳಿ ದಾಟಿ ಕವಿತೆಗಳ ವಸ್ತು ಹೊರಗೆ ಹೋಗಿಲ್ಲ…! ಅಪ್ಪ ಅಮ್ಮ ಸಂಸಾರ ಬಡತನ, ಜಾತಿ, ಬಣ್ಣ, ಹಸಿವು ಅಸಹಾಯಕತೆ, ಹೊಟ್ಟೆ ಚುರುಕಿನ ಹೊಯ್ದಾಟಗಳ ಇಲ್ಲಿ ಕಾಣಬಹುದು..! ಕವಿತೆ ಬರೆಯಲು ಹಪಹಪಿಸುವ ನಮಗೆ ಸಿಕ್ಕದ್ದನ್ನೇ ಗೀಚಾಡುವ ಸಮಯಕ್ಕೆ ಬರೆಯಲು ಇಷ್ಟು ನಮ್ಮವೇ ವಿಷಯ ಇದ್ದಾವಲ್ಲ ಎಂಬ ಅಚ್ಚರಿಯೂ ಈ ಪುಸ್ತಕ ಓದಿದ ಮೇಲೆ ಅನಿಸದೇ ಇರದು.. ಕವಿತೆಗಳಲ್ಲಿ ಕಣಬಹುದಾದ ಬಳಸಿದ ಪದಗಳಂತು ಅವರೆಕಾಯಿ ಸೊಗಡಿನಂತವು, ದಾರಿ ಬದಿಯ ಹೂಗಳ ಘಮದಂತವು, ಬಿದ್ದ ಗಾಯದ ಗುರುತಿನಂಥವು…! ಹಾಗೇ ನಮ್ಮನ್ನು ಮುಟ್ಟಿ ಹೋಗಿ ಮರೆಯಾಗಿ ಮತ್ತೆ ಬಂದು ಬಡಿದೆಬ್ಬಿಸುವಂತಹ ಪದಗಳ ಕೈ ಚಳಕವಿದೆ…! ಓದುತ್ತಾ ನನ್ನ ಬಾಲ್ಯವೂ ಮರುಕಳಿಸಿತು. ಅಗಾಧ ಶ್ರೀಮಂತಿಕೆಗೆ ಬಡತನದ ಹಸಿವಿನ ನೋವು ಅರ್ಥವಾಗುವುದಿಲ್ಲ..ನಾವು ಹಸಿದವರು ಅನ್ನದ ಬೆಲೆಯೂ ಅಕ್ಷರಗಳ ಅಕ್ಕರೆಯೂ ನನ್ನ ಹಸಿವಿಗೆ ತುತ್ತನಿಟ್ಟು ಸಂತೈಸಿದವು… ಇಂತಹದ್ದೊಂದು ಪುಸ್ತಕ ಕೈಯಲ್ಲಿ ಇರಿಸಿದ ನಿಮಗೆ ಹೃದಯ ಪೂರ್ವ ಧನ್ಯವಾದಗಳು ಸರ್..ಮತ್ತಷ್ಟು ಮಣ್ಣಿನ‌ ಸೊಗಡಿನ ಪುಸ್ತಕಗಳು ನಮ್ಮೊಳಗೆ ಉಸಿರಾಡಲಿ…. ಪ್ರೀತಿಯಿಂದ ——————————–

ನಾನು ಓದಿದ ಪುಸ್ತಕ Read Post »

You cannot copy content of this page

Scroll to Top