ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಪುಸ್ತಕ ಸಂಗಾತಿ

ಲಂಕೇಶ್ ಮೋಹಕ ರೂಪಕಗಳ ನಡುವೆ

ಪುಸ್ತಕ ಪರಿಚಯ ಲಂಕೇಶ್ ಮೋಹಕ ರೂಪಕಗಳ ನಡುವೆ ಲೇಖಕರು:-ಶೂದ್ರ ಶ್ರೀನಿವಾಸ,ಪ್ರಕಟನೆ-ಪಲ್ಲವ ಪ್ರಕಾಶನ,೯೪೮೦೩೫೩೫೭,ಪುಟ-೨೮೨,ಬೆಲೆ-೨೫೦/- ..     ನಾನು ಪಿಯುನಲ್ಲಿ ಓದುವಾಗಲೇ ಲಂಕೇಶ್ ಪತ್ರಿಕೆ ಗುಂ ಬಂ ಎಂಬ ಹೊಸ ನುಡಿಗಟ್ಟಿನೊಂದಿಗೆ ಕನ್ನಡದ ಜಾಣ ಜಾಣೆಯರಿಗಾಗಿ ಎಂಬ ಟ್ಯಾಗ್ ಲೈನ್ ದೊಂದಿಗೆ ಅದೇ ಆರಂಭವಾಗಿತ್ತು.ಪ್ರಥಮ ಸಂಚಿಕೆಯಿಂದ ಆರಂಭಿಸಿ ಕೊನೆಯ ಸಂಚಿಕೆಯವರೆಗೂ ಬಿಟ್ಟು ಬಿಡದೇ ಓದಿದ ನನಗೆ ಅತ್ಯಂತ ಬೆಳೆಯುವ ವಯಸ್ಸಿನಲ್ಲಿ ಪ್ರಭಾವ ಬೀರಿದವರು ಲಂಕೇಶ್ ಹಾಗೂ ಅವರ ಪತ್ರಿಕೆಯ ಬಳಗದ ಆಗಿನ ಎಲ್ಲ ಲೇಖಕರು,ವರದಿಗಾರರು.ಇಡೀ ಪತ್ರಿಕೆಯ ಒಂದಕ್ಷರವು ಬಿಡದೇ ಓದುತ್ತಿದ್ದೆ.ಲಂಕೇಶ, ತೇಜಸ್ವಿ,ಚಂಪಾ, ಶೂದ್ರ, ರಾಮದಾಸ,ಎಂ ಡಿ ಎನ್, ಎಚ್,ಎಲ್, ಕೇಶವಮೂರ್ತಿ,ಪುಂಡಲೀಕ್ ಶೇಠ,ಬಿ.ಚಂದ್ರೆಗೌಡ, ರವಿಂದ್ರ ರೇಷ್ಮೆ,ಲಿಂಸ್, ರಾಮಚಂದ್ರ ಶರ್ಮಾ, ಚಂದ್ರಶೇಖರ ಆಲೂರು, ಸತ್ಯಮೂರ್ತಿ ಆನಂದೂರು, ಟಿ.ಕೆ.ತ್ಯಾಗರಾಜ್, ಡಿ.ಆರ್,ನಾಗರಾಜ್, ಡಾ.ಸಿದ್ದಲಿಂಗಯ್ಯ,ಹೀಗೆ ಕೊನೆಗೆ ಬಸವರಾಜುರವರೆಗೆ ಪತ್ರಿಕೆಯ ಎಲ್ಲ ಬರಹಗಾರರ ದಟ್ಟ ಪ್ರಭಾವ ಪರಿಚಯ ಅವರ್ಯಾರನ್ನು ಕಾಣದೇ ಸಹ ನನ್ನ ಮೇಲೆ ಆಗಿತ್ತು.   ಪತ್ರಿಕೆ ಇಡೀ ಕರ್ನಾಟಕಕ್ಕೆ ಹೊಸ ದೃಷ್ಟಿಕೋನ ಕೊಟ್ಟಿದ್ದು ಸುಳ್ಳಲ್ಲ.ಅಂತಹ ಲಂಕೇಶರ ಕುರಿತು ಈ ಕೃತಿ ರಚಿಸಿದ, ನಾನು ತುಂಬಾ ಗಾಢವಾಗಿ ಗಮನಿಸಿದಂತಹ ಸೂಕ್ಷ್ಮ ಸಂವೇದನೆಯ ಲೇಖಕರು ಈ ಶೂದ್ರ ಶ್ರೀನಿವಾಸ್ ಸರ್.ಅವರು ತಮ್ಮ ಒಡನಾಟದ ಮೂಲಕ ಪತ್ರಿಕೆಯ ಮುಖದ ಮೂಲಕ ಮಾತ್ರ ದಟ್ಟ ಪರಿಚಯವಿದ್ದ ಲಂಕೇಶರನ್ನು ಅವರ ಎಲ್ಲ ಕೋನಗಳಿಂದಲೂ ನಿರಂತರ ಒಡನಾಟದ ಕಾರಣವಾಗಿ, ಸೂಕ್ಷ್ಮವಾಗಿ ಅವಲೋಕನ ಮಾಡಿ ಈ ಕೃತಿಯಲ್ಲಿ ಅತ್ಯಂತ ವಸ್ತುನಿಷ್ಠವಾಗಿ, ಇದ್ದುದಿದ್ದಂತೆ ಎಲ್ಲ ಪ್ರೀತಿ ಅಭಿಮಾನ,ರಾಗ ದ್ವೇಷಗಳನು ಮೀರಿ ಒಬ್ಬ ಸಂತನ ಮನಸ್ಥಿತಿಯಿಂದ ಸುಂದರ ರೂಪಕವಾಗಿಸಿದ್ದಾರೆ. ಈ ಕೃತಿಯಲ್ಲಿ ಅತ್ಯಂತ ಕಲಾತ್ಮಕವಾಗಿ, ಓದಿದವರಿಗೆ ಬಹುಕಾಲ ಕಾಡುವಂತೆ ಕಟ್ಟಿಕೊಟ್ಟಿದ್ದಾರೆ. ಅವರ ಅನೇಕ ಮಾತುಗಳನ್ನು ಉಲ್ಲೇಖಿಸಿ ಓದುಗರು ಅವನ್ನೆಲ್ಲ ಅರ್ಥಮಾಡಿಕೊಳ್ಳುವಂತೆ ಲಂಕೇಶರನ್ನು ಬಹುದೊಡ್ಡ ಕ್ಯಾನ್ವಾಸ್ ನಲ್ಲಿ ಕಲಾಕೃತಿಯಾಗಿಸಿ ನಮ್ಮ ಮುಂದೆ ನಿಲ್ಲಿಸಿ ಈ ಕೃತಿ ಸಾರ್ಥಕತೆ ಪಡೆದಿದೆ.ಲಂಕೇಶರ ಒಳಗಿನ ಮೂರು ವ್ಯಕ್ತಿತ್ವಗಳನ್ನು ಬಹಳ ಚೆಂದ ನಿರೂಪಿಸಿದ್ದಾರೆ. ಮತ್ತೆ ಮತ್ತೆ ಓದಬಹುದೆನಿಸುವ ಕೃತಿ ಇದು. ೧೯೯೧ ರಲ್ಲಿ ಪ್ರಕಟವಾದ ಮೊಟ್ಟಮೊದಲ ನಮ್ಮ ಅಕ್ಕಾಳಿಗೊಂದು ಪ್ರಶ್ನೆ ಹಾಗೂ ಇತರ ಕವನಗಳು ಸಂಕಲನಕ್ಕೆ ಆ ಕಾಲದಲ್ಲಿ ಬೆನ್ನುಡಿ ಬರೆದು ಕೊಟ್ಟಿದ್ದರು ಈ ಶೂದ್ರ ಸರ್,ಹಲವು ವರ್ಷ ಶೂದ್ರ ಸಹ ನನಗೆ ಬರುತ್ತಿತ್ತು. ಲಂಕೇಶರ ದಟ್ಟ ಪ್ರೀತಿ, ವ್ಯಂಗ್ಯ,ವಿಡಂಬನೆ ಎಲ್ಲವೂ ಶೂದ್ರರ,ಹಾಗೂ ಇತರರ ಮೇಲಾಗುತ್ತಿದ್ದದ್ದು ಗಮನಿಸುತ್ತಾ ಬೆಳೆದಿದ್ದೇವೆ.ಜಾಗೃತ ಸಾಹಿತ್ಯ ಸಮ್ಮೇಳನದಲ್ಲಿ ಪಾಲ್ಗೊಂಡು ಇವರ ದಟ್ಟ ಪರಿಚಯ, ಪ್ರಭಾವಕ್ಕೆ ಒಳಗಾದದ್ದು ಉಂಟು.ಲಂಕೇಶ ಬಳಗ ಅಂದ್ರೆ ಓದಲು ಖುಷಿ ಆಗುತ್ತಿದ್ದ ಕಾಲವದು.    ಈ ಕೃತಿ ಎಪ್ಪತ್ತರ ದಶಕದಿಂದ ಆರಂಭಿಸಿ ಒಟ್ಟು ನಾಲ್ಕು ದಶಕಗಳವರೆಗಿನ ಇಡೀ ಸಾಹಿತ್ಯಕ ವಾತಾವರಣ,ರೈತ ಚಳುವಳಿ, ಗೋಕಾಕ ಚಳುವಳಿ,ಬೂಸಾ ಚಳುವಳಿ, ರಾಜಕೀಯ ಸ್ಥಿತ್ಯಂತರಗಳು,ಒಕ್ಕೂಟ,ಹೀಗೆ ಎಲ್ಲವನ್ನು ಒಬ್ಬ ಸಾಕ್ಷಿಪ್ರಜ್ಞೆ ಯಾಗಿ ಅವಲೋಕಿಸಿ ಅತ್ಯಂತ ಮಾನವೀಯ ನೆಲೆಯಲ್ಲಿ ಒಳಗೊಂಡು, ಖುಷಿ ಪಟ್ಟು, ನೊಂದು ಬೆಂದು ಈ ಕೃತಿ ರಚಿಸುವ ಮೂಲಕ ಹಗುರವಾಗಿದ್ದಾರೆನಿಸುತ್ತದೆ.ಅಷ್ಟೇ ಮುಖ್ಯವಾಗಿ ಈ ಎಲ್ಲ ಸಂದರ್ಭಗಳಲ್ಲೂ ಅವರ ಪಾಲ್ಗೊಳ್ಳುವಿಕೆ ತುಂಬಾ ಮಹತ್ವದ್ದೆನ್ನುವದು ಸಹ ಅಷ್ಟೇ ಮುಖ್ಯವಾಗಿದೆ.ಶೂದ್ರ ಸರ್ ನಿಮಗೆ ನೂರು ನಮನ.ಪ್ರಕಟಿಸಿ ಓದಲು ಹಚ್ಚಿದ ನಾಡಿನ ಹೆಮ್ಮೆಯ ಪ್ರಕಾಶನದ ಶ್ರೀ ವೆಂಕಟೇಶ್ ಅವರಿಗೂ ಅಭಿನಂದನೆಗಳು.ಲಂಕೇಶರು ನಮ್ಮ ಪ್ರಜ್ಞೆಯ ಒಂದು ಭಾಗವಾಗಿ ಸದಾ ನಮ್ಮೊಳಗೆ ಮತ್ತೆ ಮತ್ತೆ ಮೆಲುಕು ಹಾಕಿಕೊಳ್ಳುವಂತಹ,ಲಂಕೇಶರ ಬಗ್ಗೆ ಪ್ರೀತಿಯುಳ್ಳ ಎಲ್ಲರೂ ಒಮ್ಮೆಯಾದರು ಓದಲೇಬೇಕಾದ ಕೃತಿ ಇದು. *******************************

ಲಂಕೇಶ್ ಮೋಹಕ ರೂಪಕಗಳ ನಡುವೆ Read Post »

ಪುಸ್ತಕ ಸಂಗಾತಿ

ಕನಸುಗಳು ಖಾಸಗಿ

ಪುಸ್ತಕ ಪರಿಚಯ ಕನಸುಗಳು ಖಾಸಗಿ ಕತ್ತಲದಾರಿಯ ಸಂದಿಗೊಂದಿಗಳಲ್ಲಿ ಕರೆದೊಯ್ಯುವ  ‘ಕನಸುಗಳು ಖಾಸಗಿ’          ಆಧುನಿಕ ಜಗತ್ತಿನ ಕರಾಳ ಮುಖಗಳನ್ನು ‘ಕನಸುಗಳು ಖಾಸಗಿ’ ಎಂಬ ತಮ್ಮ ಒಂಬತ್ತು ಕಥೆಗಳ ಸಂಕಲನದ ಮೂಲಕ   ನರೇಂದ್ರ ಪೈಯವರು  ಕಾಣಿಸಿಕೊಟ್ಟಿದ್ದಾರೆ.. ಇಲ್ಲಿರುವುದು ಕನಸುಗಳು ಅನ್ನುವುದಕ್ಕಿಂತ   ಕಥೆಗಳನ್ನು ಓದುತ್ತಿರುವಾಗ ಕಣ್ಣ ಮುಂದೆ ರುದ್ರ ನರ್ತನ ಮಾಡುವ ದುಸ್ವಪ್ನಗಳು ಅನ್ನುವುದು ಹೆಚ್ಚು ಸೂಕ್ತ .  ವೇಗದ ಮೇಲಿನ ನಿಯಂತ್ರಣವನ್ನೇ ಕಳೆದುಕೊಳ್ಳು ತ್ತಿರುವ ಇಂದಿನ ಜಗತ್ತಿನಲ್ಲಿ  ಸಂಬಂಧಗಳು  ಛಿದ್ರಗೊಂಡಿವೆ, ಸ್ವಾರ್ಥ ಮೇರೆ ಮೀರಿದೆ, ಹಿಂಸೆ ಹದ್ದು ಮೀರಿದೆ, ಮೌಲ್ಯಗಳು ಪಾತಾಳಕ್ಕೆ ಕುಸಿದಿವೆ. ಹಣ ಸಂಪಾದನೆ ಮತ್ತು ಭೌತಿಕ ಸುಖಾಪೇಕ್ಷೆಗಳಷ್ಟೇ ಜೀವನದ ಗುರಿಯಾಗಿ ಜನರು ಕತ್ತಲದಾರಿಗಳ ಸಂದಿಗೊಂದಿಗಳಲ್ಲಿ  ಕುರುಡರಂತೆ ನಡೆಯುತ್ತಿರುವ ಒಂದು ಸಂವೇದನಾಶೂನ್ಯ ಜಗತ್ತನ್ನು ನಮ್ಮ ಮುಂದಿಡುವ ಈ ಕಥಾಸಂಕಲನವು ಸದ್ದಿಲ್ಲದೆ   ಒಂದು ಹಾರರ್ ಚಿತ್ರವನ್ನು ನೋಡಿದ ಅನುಭವ ಕೊಡುತ್ತದೆ..   ಖಾಸಗಿ ಕನಸುಗಳು ಯಾವುದೋ ಕ್ಷಣದಲ್ಲಿ ನಿಯಂತ್ರಣ ತಪ್ಪಿ ಸಾರ್ವಜನಿಕವಾದಾಗ ಆಗುವ ಅನಾಹುತಗಳ ಚಿತ್ರಣವು   ‘ಕನಸುಗಳು  ಖಾಸಗಿ ‘ ಎಂಬ  ಮೊದಲ ಕಥೆಯಲ್ಲಿದೆ. ಹಳೆಯ ಕಾಲೇಜು ಸಹಪಾಠಿ ಕಳುಹಿಸಿದ ಇ- ಮೆಯಿಲ್ ನಲ್ಲಿ ಹಂಚಿಕೊಂಡ ನೆನಪಿನ ಮೆಲುಕುಗಳಲ್ಲಿ ಬಂದ ಚೆಲುವೆ ರಜನಿ..ಅಂದಿನ ಹುಡುಗಾಟದ ದಿನಗಳಲ್ಲಿ ಅವಳನ್ನು ಪ್ರೀತಿಸಿದ ಸಂದರ್ಭವು ಮರುಕಳಿಸುವಂತೆ ಮಾಡಿದ ಹುಕಿಯಲ್ಲಿ ಸುರೇಶ ಆ ಮೆಯಿಲ್ ನ್ನು ಯಾರು ಯಾರಿಗೋ ಫಾರ್ವರ್ಡ್ ಮಾಡುತ್ತ ಹೋಗುವಾಗ ಅದರ ಪರಿಣಾಮದ ಕಲ್ಪನೆ ಅವನಿಗಿರುವುದಿಲ್ಲ. ರಜನಿಯಲ್ಲಿ ಪ್ರೀತಿ ಹುಟ್ಟುವಂತೆ ಮಾಡಿ ತನ್ನ ಕನಸುಗಳನ್ನು ತನ್ನೊಳಗೇ ಇಟ್ಟುಕೊಂಡು ಕನಸು ಕಂಡ ಗಂಗು ಒಂದೆಡೆಯಾದರೆ ಅವನ ಪ್ರೀತಿಯ ಗುಂಗಿನಲ್ಲಿ ಗಂಡನನ್ನು ಪ್ರೀತಿಸುವಲ್ಲಿ ವಿಫಲಳಾದ ರಜನಿ ಇನ್ನೊಂದೆಡೆ. ಮೆಯಿಲ್ ಓದಿದ ಗಂಡ ಅವಳ ಕೊಲೆ ಮಾಡುವುದಂತೂ ಭೀಕರ ದುರಂತ. ಈ ಕ್ರೂರ ಕೃತ್ಯಕ್ಕೆ ಕಾರಣ ಗುಂಗನೇ, ಸುರೇಶನೇ  ಗಂಡನೇ ಅಥವಾ ಕೇವಲ ಬೆರಳೊತ್ತುವ ಮೂಲಕ ಖಾಸಗಿ ವಿಚಾರಗಳನ್ನು ಜಗಜ್ಜಾಹೀರು ಮಾಡುವಂಥ ಯಂತ್ರಯುಗವು ಕರುಣಿಸಿದ ಈ ಮೆಯಿಲ್ ಎಂಬ ಮಾಯಾಜಾಲವೇ? ಕಥೆಯು ಪ್ರಶ್ನೆಯನ್ನು ಹಾಗೆಯೇ ಉಳಿಸುತ್ತದೆ.      ಪ್ರಾಮಾಣಿಕವಾಗಿ ದುಡಿದು ಕಷ್ಟಪಟ್ಟು ಒದ್ದಾಡಿ ತನ್ನ ಮಗಳು ರುಕ್ಕುವನ್ನು ಒಂದು ಒಳ್ಳೆಯ ಸ್ಥಿತಿಗೆ ತಂದ ಅಪ್ಪಿಯಮ್ಮ (    ಕಥೆ : ರುಕ್ಕಮಣಿ) ಮಗಳು ಪಥಭ್ರಷ್ಟಳಾಗಿ ನಡೆದು ಬದುಕು ಒಡ್ಡಿದ ಚಕ್ರವ್ಯೂಹದಲ್ಲಿ ಸಿಲುಕಿ ದಿಕ್ಕುಗಾಣದೆ ಆತ್ಮಹತ್ಯೆ ಮಾಡಿಕೊಳ್ಳಲು ಕಾರಣ ಯಾರು? ಹಿರಿಯರ ಮಾತುಗಳಿಗೆ ಕಿಲುಬು ಕಾಸಿನ ಬೆಲೆಯನ್ನೂ ಕೊಡದೆ ತಾವು ಕಂಡ ದಾರಿಯಲ್ಲಿ ನಡೆದು ಅನಾಹುತಗಳಿಗೆ ಆಹ್ವಾನ ನೀಡುವ ಹಾದಿ ತಪ್ಪಿದ ಯುವ ಜನಾಂಗವೆ? ಅಥವಾ ಕೇಳಿದ್ದನ್ನೆಲ್ಲ ಕೊಡಿಸುವ ಹೆತ್ತವರೆ? ಅಥವಾ ವಿಜ್ಞಾನದ ಮುನ್ನಡೆಯಿಂದಾಗಿ ಸುಲಭ ಲಭ್ಯವಾಗಿರುವ ಸುಖ ಸಾಧನೆಗಳೆ?      ‘ಕೆಂಪು ಹಾಲು ‘ ಶೀರ್ಷಿಕೆಯಿಂದಲೇ ಕುತೂಹಲ ಮೂಡಿಸುವ ಕಥೆ. ಲೋಕದ ರೀತಿ ನೀತಿಗಳು ಅರ್ಥವಾಗದ ಪುಟ್ಟ ಹುಡುಗನ ದೃಷ್ಟಿಯಿಂದ ಈ ಕಥೆ ನಿರೂಪಿತವಾಗುತ್ತದೆ. ಹುಡುಗನಿಗೆ ‘ ‘ಪಾಪದವನಂತೆ ‘ ಕಾಣಿಸುವ ಉನ್ನಿಕೃಷ್ಣನ ಭೂತ ಬಂಗಲೆಗೆ ದಿನಾ ಹಾಲು ತರಲು ಹೋಗುವ ಪುಟ್ಟ ಹುಡುಗನ ಅನುಭವಗಳು ಇಲ್ಲಿವೆ. ಪಕ್ಕದಲ್ಲೇ ಇರುವ ಪಾಳು ಬಿದ್ದ ಶಾಲೆಯಲ್ಲಿ ಉನ್ನಿಕೃಷ್ಣ ಮತ್ತು ಸದಾ ಬೀಡಿ ಸೇದುವ ಚೀಂಕ್ರ ಏನು ಮಾಡುತ್ತಾರೆಂದು ಅವನಿಗೆ ಅರ್ಥವಾಗುವುದಿಲ್ಲ.  ಒಂದೆಡೆ       ಅವನು ಉನ್ನಿಕೃಷ್ಣನ ಮಗಳು ಮುನ್ನಿಯೊಂದಿಗೆ ಸೇರಿ   ಅಮ್ಮನ ಹಾಲು ಕುಡಿದು ಸೊಕ್ಕಿನಿಂದ ಕುಣಿದಾಡುವ ಬೆಕ್ಕಿನ ಮರಿಗಳ ಬಗ್ಗೆ ಕಾಳಜಿ ಇಟ್ಟುಕೊಂಡ ಚಿತ್ರಣವಿದ್ದರೆ ಇನ್ನೊಂದೆಡೆ  ಅವನ ಕುಡುಕ ತಂದೆ ಮಾಡುವ ಅವಾಂತರಗಳಿಂದ ಆಗುವ ಅಪಮಾನದಿಂದ ಅವನು ಕುದಿಯುವ‌ ಚಿತ್ರಣವಿದೆ. ಮುಂದೆ ಉನ್ನಿಕೃಷ್ಣ ಮತ್ತು ಚೀಂಕ್ರರನ್ನು ಪೋಲೀಸರು ಅರೆಸ್ಟ್ ಮಾಡಿ ಕೊಂಡೊಯ್ಯುವ ಚಿತ್ರಣವಿದೆ.      ಕೆಲವು ದಿನಗಳ ನಂತರ ಚೀಂಕ್ರನ ಮಗ ಕೈಯಲ್ಲಿ ಕೋವಿಯೊಂದಿಗೆ ಪೋಲೀಸರ ಕೈಗೆ ಸಿಕ್ಕು ಅವರಿಂದ ಕೊಲ್ಲಲ್ಪಡುತ್ತಾನೆ. ಹೀಗೆ ಅಮಾಯಕರಂತೆ ಪೋಸು ಕೊಡುವವರು ಕಾನೂನು ಬಾಹಿರ ಸಮಾಜ ಘಾತಕ  ಹಿಂಸಾ ಚಟುವಟಿಕೆಗಳಲ್ಲಿ ತೊಡಗಿಕೊಂಡದ್ದರಿಂದ   ದೆವ್ವದ ಕಥೆಗಳಲ್ಲಗುವಂತೆ ಹಾಲು ಕೆಂಪಾಗಿದೆ. ದುಗ್ಗಪ್ಪನೆಂಬ ಬಡ ವೃದ್ಧನ ಕರುಣಕಥೆಯನ್ನು ನಿರೂಪಿಸುವ ಕಥೆ ‘ರಿಕವರಿ’. ಕೋಮಲ ಹೃದಯದ ದುಗ್ಗಪ್ಪ ತನ್ನ ನಿವೃತ್ತಿಯ ದಿನ ಸಿಕ್ಕಿದ ನಾಲ್ಕು ಸಾವಿರ ರೂಪಾಯಿಯಲ್ಲಿ  ಅರ್ಧದಷ್ಟನ್ನು ಅಸಹಾಯಕ ಸ್ಥಿತಿಯಲ್ಲಿದ್ದ ತನ್ನ ಕಿರಿಯ ಸಹೋದ್ಯೋಗಿಗೆ ಕೊಟ್ಟವನು. ಬಾಡಿಗೆ ಮನೆಯ ಮಾಲೀಕ ದುರಾಸೆಯಿಂದ ತನಗೆ ಹೆಚ್ಚು ಬಾಡಿಗೆ ಸಿಗುವ ಅವಕಾಶ ಬಂದಾಗ ಬಡ ದುಗ್ಗಪ್ಪನ ಕುಟುಂಬವನ್ನು ಅಲ್ಲಿಂದ ಎಬ್ಬಿಸುತ್ತಾನೆ.  ದುಗ್ಗಪ್ಪ ಹಿಂದೆ ಕೊಟ್ಟಿದ್ದ ಮುಂಗಡ ಹಣ ಮೂವತ್ತು ಸಾವಿರವನ್ನು ಹಿಂಪಡೆಯಲು  ಪಡುವ ಕಷ್ಟ, ಮನೆಯಲ್ಲಿ ಹೆಂಡತಿ ಮತ್ತು ಸೊಸೆ ಆ ಹಣಕ್ಕಾಗಿ ಬಾಯಿ ಬಿಡುವುದು- ಎಲ್ಲವೂ ಓದುಗನಿಗೆ ಕ್ರೂರವಾಗಿ ಕಾಣುತ್ತದೆ.       ತನ್ನ ಅಕ್ಕನ ಋಣದಲ್ಲಿರುವ ತಮ್ಮ,  ತಾನು ಸಂಸಾರಸ್ಥನಾದ ನಂತರ ಅಕ್ಕ ಮಾಡುತ್ತಿದ್ದ ಅಡ್ಡದಾರಿಯ ಕೆಲಸಗಳನ್ನು ಬೆಂಬಲಿಸಬೇಕಾದ ಅಸಹಾಯಕ ಸ್ಥಿತಿಯಲ್ಲಿದ್ದಾಗ ಹೆಂಡತಿಯ ಬೇಡಿಕೆಗಳನ್ನು ಪೂರೈಸಲಾರದೆ ತೊಳಲಾಡುತ್ತಾನೆ.ಡ್ರಗ್ಸ್ ಜಾಲದೊಳಗೆ ಸಿಕ್ಕಿಬಿದ್ದಿರುವ ಸುನಂದಕ್ಕ ತನ್ನ ಮೇಲೆ ಹಲ್ಲೆಯಾಗಿದೆ ಎಂದು  ಸುಳ್ಳು    ದೂರು ಕೊಟ್ಟಾಗ ಕೋರ್ಟಿಗೆ ಹೋಗುವ ಕೇಸಿಗೆ ಸಾಕ್ಷಿ ನೀಡಲು ತಮ್ಮ ಹೋಗಬೇಕಾಗುತ್ತದೆ. ಆದರೆ ಕೋರ್ಟಿನಲ್ಲಿ ಹಿಯರಿಂಗ್ ಗಾಗಿ ಕಾಯುತ್ತಿದ್ದಾಗ ಅಕ್ಕ ನಾಟಕ ಮಾಡುತ್ತಿರುವುದು ಗೊತ್ತಾಗಿ ಸಹಿಸಲಾರದೆ ಆತ ಪ್ರತಿಕೂಲವಾದ ಸಾಕ್ಷಿ ಹೇಳಿ ಬರುತ್ತಾನೆ.(ಕಥೆ : ಸಾಕ್ಷಿ).   ‘ ಹಿಂಸಾರೂಪೇಣ ‘ ಅನ್ನುವ      ಕಥೆ    ಸೃಷ್ಟಿಸುವ ವಾತಾವರಣ ಮನಸ್ಸಿಗೆ ಅಸಹನೀಯ ಹಿಂಸೆಯನ್ನುಂಟು ಮಾಡುತ್ತದೆ. ತಾನು  ವಾಸವಾಗಿದ್ದ ಅಪಾರ್ಟ್ ಮೆಂಟಿನ ಹೊರಗೆ ಅತಿ ಸಮೀಪವೇ ಇದ್ದ ದೇವಸ್ಥಾನದ ಧಾರ್ಮಿಕ ಆವರಣದೊಳಗೆ ನಡೆದ ಕುಡುಕನ ಕೊಲೆಯ ಬರ್ಬರ ಕೃತ್ಯದ  ಬಗ್ಗೆ ತಿಳಿದು, ಶವವನ್ನು ನೋಡಿದ ನಂತರ ಕಥಾನಾಯಕನಿಗೆ  ರಾತ್ರಿ ಯಾರೋ ಕಿವಿಯಲ್ಲಿ ಒಂದೇ ಸಮನೆ ಪಿಸುಗುಟ್ಟಿದಂತಾಗುತ್ತದೆ. ಹಲವು ದಿನಗಳಿಂದ ಹೀಗೇ ಪಿಸುಗುಟ್ಟಿದ ಅನುಭವ. ಹೊರಗೆ ನಿತ್ಯ ಗಲಾಟೆ. ತಾನಿರುವ ರೂಮಿನ ಗೊಡೆಯಾಚೆ ಈ ಕೊಲೆ ಸಂಭವಿಸಿತೇ ಎಂಬುದನ್ನೆಣಿಸುವಾಗ ಅವನು ಭಯದಿಂದ ಕಂಪಿಸುತ್ತಾನೆ. ಒಂದೆಡೆ    ದೇವಸ್ಥಾನದ ಪವಿತ್ರ ವಾತಾವರಣ, ಯೋಗ,  ಭಜನೆ,  ಶಾಂತಿಮಂತ್ರ  ಧ್ಯಾನಗಳು ಸೃಷ್ಟಿಸುವ ವಾಯಾವರಣವಾದರೆ ಇನ್ನೊಂದೆಡೆ ಕೊಲೆ, ಹಿಂಸೆ, ಡ್ರಗ್ಸ್ ವ್ಯವಹಾರ, ಸಾಲ ವಸೂಲಿ, ಫೈಟಿಂಗನ್ನೇ ವೃತ್ತಿಯಾಗಿ ಮಾಡಿಕೊಂಡವರ ಗುಂಪು, ಬ್ಯಾಂಕಿನಲ್ಲಿನ ಬಡ್ಡಿ ವ್ಯವಹಾರ– ಹೀಗೆ ನೂರಾರು ಗೊಂದಲಗಳು ಅವನೊಳಗೆ ತುಂಬಿ  ಅಪರಿಚಿತ ಧ್ವನಿಗಳು ಪಿಸುಗುಟ್ಟುತ್ತವೆ.       ನೋಟುಬ್ಯಾನ್ ಘೋಷಣೆಯಾದ ಸಮಯದಲ್ಲಿ ಕಥಾನಾಯಕನ ಅಜ್ಜಮ್ಮ ಜತನದಿಂದ ಸೇರಿಸಿಟ್ಟಿದ್ದ ದುಡ್ಡಿನ ಗಂಟಿನೊಳಗಣ ಐನೂರರ ನೋಟುಗಳ ಬಗ್ಗೆ ಕಾಳಜಿ ತೋರಿಸುವ ನೆಪದಲ್ಲಿ ಅದರ ಮೇಲೆ ಕಣ್ಣಿಟ್ಟವರು ಹಲವಾರು ಮಂದಿ. ಪಾಪ, ಆಕೆಗೆ ಅದರ ಲೆಕ್ಕ ತಿಳಿಯದು.  ನಿರೂಪಕ ಮೊದಲು ನೋಡಿದಾಗ ಅದರಲ್ಲಿ ೩೬ ಸಾವಿರ ರೂಪಾಯಿ ಇರುತ್ತದೆ.   ಅದೇ ಸಮಯ ಮನೆಯಲ್ಲಿ ಟಿ.ವಿ.ರಿಪೇರಿಗೆ ೬೦೦೦ ರೂಪಾಯಿ ಕೊಡಬೇಕಾಗಿದೆ.‌ ಟಿ.ವಿ.ನೋಡುವವರು ಮುಖ್ಯವಾಗಿ ಅಜ್ಜಮ್ಮ.  ಆದ್ದರಿಂದ ಆ ದುಡ್ಡನ್ನು ಟಿ.ವಿ.ಗಾಗಿ ಖರ್ಚು ಮಾಡುವುದೆಂದು ನಿರ್ಧರಿಸಿದ   ನಿರೂಪಕ ಅಜ್ಜಮ್ಮನ ಗಂಟಿನಲ್ಲಿದ್ದುದನ್ನು  ಕೊನೆಗೆ ಎಣಿಸಿ ನೋಡಿದರೆ ಅಲ್ಲಿ ಇದ್ದದ್ದೂ ಅಷ್ಟೇ ಹಣ. ಉಳಿದ ಹಣ ಎಲ್ಲಿ  ಹೋಯಿತು, ಅಜ್ಜಮ್ಮನನ್ನು ಕಾಣಲು ಬಂದವರು ತೆಗೆದಿರಬಹುದೇ ಎಂದು ಆತ ಅನುಮಾನಿಸುತ್ತಾನೆ.‌ ಆ ಮೊತ್ತವು ತನ್ನ ಹೆಂಡತಿಯ ಕೈಸೇರಿದ ಬಗ್ಗೆ ಅವನಿಗೆ ಗೊತ್ತಾಗುವುದು ಕೊನೆಗೆ. ಮಾನವೀಯ ಸಂಬಂಧಗಳಿಗಿಂತ ಹಣದ ಮಹತ್ವ ಹೆಚ್ಚಾಗಿ ಮೌಲ್ಯಗಳು ಕುಸಿದ ಚಿತ್ರಣ ಈ ಕಥೆಯಲ್ಲಿದೆ.   ‘ಭೇಟಿ’ ಇತರೆಲ್ಲ ಕಥೆಗಳಿಗಿಂತ ಭಿನ್ನವಾಗಿದೆ. ನಿಸರ್ಗದ ಗರ್ಭದಲ್ಲಿ ಅಡಗಿರುವ ನಿಗೂಢ ರಹಸ್ಯಗಳತ್ತ ಇದು ಬೊಟ್ಟು ಮಾಡಿ ತೋರಿಸುತ್ತದೆ. ಕಥಾನಾಯಕ ತನ್ನ ಅಮ್ಮ, ಅಕ್ಕ, ಮತ್ತು ಮಗಳನ್ನು ಯಾವುದೋ ಆಕಸ್ಮಿಕದಲ್ಲಿ ಕಳೆದುಕೊಂಡಿದ್ದಾನೆ. ಅವರ ಅಪರಕ್ರಿಯೆಗಳನ್ನು ಮಾಡಲು ಅವನ ದೊಡ್ಡಪ್ಪ ಕಾಡು ಪ್ರದೇಶದಲ್ಲಿ ಗದ್ದೆಯ ಮಧ್ಯೆ‌ಎತ್ತರದಲ್ಲಿದ್ದ ಗುಡಿಯೊಂದಕ್ಕೆ ಕಳುಹಿಸುತ್ತಾನೆ. ಭಟ್ಟರೊಂದಿಗೆ ಅಲ್ಲಿಗೆ ಹೋಗಿ ಎಲ್ಲ ಕ್ರಿಯೆಗಳನ್ನು ಮುಗಿಸಿ ಹೊರಗೆ ಬಂದ ನಂತರ ಸಂಪ್ರದಾಯದಂತೆ ‘ಯಾರಾದರೂ ಕರೆದಂತೆ ಅನ್ನಿಸಿದರೆ ತಿರುಗಿ ನೋಡಬೇಡ ಅಂದಿದ್ದರಿಂದ ಅವನಿಗೆ ಯಾರೋ ಹಿಂದಿನಿಂದ ಪಿಸುಗುಟ್ಟಿ ಕರೆದಂತೆ ಅನ್ನಿಸಿದರೂ, ಮುಂದಿನ ಜೀವನವನ್ನೆಣಿಸಿ ತಿರುಗಿ ನೋಡದೆ ಮನೆಗೆ ಬರುತ್ತಾನೆ.‌ಅವನ ಜತೆಗೆ ಬಂದ ಅಕ್ಕ ಆ ಬಗ್ಗೆ ಬೇಸರ ವ್ಯಕ್ತಪಡಿಸಿದಾಗ ಅವನನ್ನು ಅಪರಾಧ ಪ್ರಜ್ಞೆ ಕಾಡುತ್ತದೆ. ಅವನ ಕಿವಿಗೆ ಕೇಳಿಸಿದ್ದು ಭ್ರಮೆಯೋ ನಿಜವೋ ಎಂಬುದರ ಬಗೆಗಿನ ಜಿಜ್ಞಾಸೆಯನ್ನು ಕಥೆಗಾರರು ಓದುಗರಿಗೆ ಬಿಡುತ್ತಾರೆ. ಆರ್.ಕೆ.ನಾರಾಯಣ್ ಅವರ ಕೆಲವು ಕಥೆಗಳಿಗೆ ಈ ಗುಣವಿದೆ.     ‘ಕಥನ ಕುತೂಹಲ’ ವಸ್ತುವಿನ ದೃಷ್ಟಿಯಿಂದ ಹೊಸತಲ್ಲದಿದ್ದರೂ ತಂತ್ರ, ರಚನೆ, ವಿನ್ಯಾಸಗಳು ವಿಶಿಷ್ಟವಾಗಿವೆ. ವ್ಯೂಹದೊಳಗೆ ವ್ಯೂಹಗಳು ಸುತ್ತಿಕೊಂಡಿರುವ ಒಂದು ಚಕ್ರವ್ಯೂಹವೇ ಇಲ್ಲಿದೆ. ತಮ್ಮ ಸತ್ತ ನಂತರ ತಮ್ಮನ ಆಸ್ತಿಯನ್ನು ದೋಚಿಕೊಂಡ ಧರ್ಮಪ್ಪ ತಮ್ಮನ ಮಗಳು ಸತ್ಯಭಾಮಾಳನ್ನು ಗೌತಮ್ ರಾಜ್ ಎಂಬ ‘ ಏನೂ ಗೊತ್ತಿಲ್ಲ’ದವನಿಗೆ ಮೂರು ಲಕ್ಷ ವರದಕ್ಷಿಣೆಯ ‘ವಾಗ್ದಾನ’ ನೀಡಿ ಕಟ್ಟಿದರೆ ತನ್ನ ಮಗನಿಗೆ ಬಂದ ವರದಕ್ಷಿಣೆಯಲ್ಲಿ ಕೊನೆಯ ಮಗಳ ಮದುವೆ ಮಾಡುವ ಹವಣಿಕೆ ಗೌತಮನ ತಾಯಿಯದ್ದು. ಗಂಡ ತನ್ನ ಬಗ್ಗೆ ಆಸಕ್ತಿ ತೋರಿಸಲಿಲ್ಲವೆಂದು ಅವನನ್ನು ಬಿಟ್ಟು ಬಂದು ಬೇರೊಬ್ಬನೊಂದಿಗೆ ತಿರುಗಾಡುವ ಗೌತಮನ ಅಕ್ಕ ಊರ್ವಶಿ  ಇದ್ದಾಳೆ.‌ಬೊಂಬಾಯಿಯಲ್ಲಿ ‘ವ್ಯವಹಾರ’ನಡೆಸುತ್ತಿರುವ ಅವಳ ಅಕ್ಕನ ಬಳಿಗೆ ಕಳುಹಿಸಲೆಂದು ಅಣ್ಣ ದೇವಣ್ಣನಿಗೆ ಪತ್ರ ಬರೆದು ತಮ್ಮನ ಪತ್ನಿ ಚೆಲುವೆ ಸತ್ಯಭಾಮಾಳನ್ನು ಉಪಾಯ ಮಾಡಿ ಕರೆದೊಯ್ಯಲು ಅವಳೇ ಯೋಜನೆ ಹಾಕುತ್ತಾಳೆ. ಅದಕ್ಕಾಗಿ ತಮ್ಮನ ಹೆಸರಿನಲ್ಲಿ ‘ಹೆಂಡತಿ ಕಾಣೆಯಾಗಿದ್ದಾಳೆಂಬ ಕಂಪ್ಲೈಂಟೂ ಹೋಗುತ್ತದೆ. ಇತ್ತ ಧರ್ಮಪ್ಪನೂ ವರದಕ್ಷಿಣೆ ಕೇಸ್ ಎಂದು ಗೌತಮನ ತಾಯಿಯ ಕಡೆಯಿಂದ ದುಡ್ಡು ವಸೂಲಿ ಮಾಡುವ ಯೋಜನೆಯ ಮಧ್ಯೆ ಗೌತಮನ ಕೊಲೆ ಮಾಡಿಸುತ್ತಾನೆ. ಅಬ್ಬಾ!!ಈ ಸುಳಿಯಲ್ಲಿ ಸಿಕ್ಕು ಸತ್ಯಭಾಮಾ ಎಷ್ಟು ನರಳಬೇಕೋ ಗೊತ್ತಿಲ್ಲ..      ನರೇಂದ್ರ ಅವರ ಕಥೆಗಳ ವಸ್ತುಗಳಿಗಿಂತಲೂ ಅವರ ಕಥನ ಶೈಲಿ ಇಲ್ಲಿ ಮುಖ್ಯವಾದದ್ದು. ‘ಕಥೆಗಳಲ್ಲಿ ಹೇಳುವುದಕ್ಕಿಂತಲೂ ಕಾಣಿಸುವುದು ಮುಖ್ಯ’ ಎಂದು ಅವರ ಮೊದಲ ಕಥೆಗಳ ಸಂದರ್ಭದಲ್ಲಿ   ಉಪದೇಶ ನೀಡಿದ್ದ ಕಥೆಗಾರ ವಿವೇಕ ಶಾನುಭಾಗರನ್ನು ಅವರು ತಮ್ಮ ದೀರ್ಘ ಮುನ್ನುಡಿಯಲ್ಲಿ ನೆನಪಿಸಿಕೊಳ್ಳುತ್ತಾರೆ. ಅದನ್ನನುಸರಿಸಿಯೇ ಇರಬೇಕು ಇಲ್ಲಿ ಅವರ ಕಥೆಗಳ ಚಿತ್ರಕಶಕ್ತಿಯು ಅದ್ಭುತ ಆಳವನ್ನು ಮೈಗೂಡಿಸಿಕೊಂಡಿದೆ. ಆದ್ದರಿಂದಲೇ ಎಲ್ಲ ಕಥೆಗಳೂ ಒಂದು ರೀತಿಯಲ್ಲಿ   ಕಾಫ್ಕಾನ ಕಥೆಗಳಂತೆ    ಮಬ್ಬುಗತ್ತಲಿನ ವಾತಾವರಣವನ್ನು ಸೃಷ್ಟಿಸಿ ಕಥೆಗಾರರು ಹೇಳಬಯಸುವ ಆಧುನಿಕ ಜಗತ್ತಿನ ಒಂದು ನಿರಾಶಾದಾಯಕ  ಚಿತ್ರಣವನ್ನು ನೀಡುವಲ್ಲಿ ಯಶಸ್ವಿಯಾಗುತ್ತವೆ. ಕೆಲವು ಕಥೆಗಳಲ್ಲಿ ಒಂದೇ ಓದಿಗೆ ಅರ್ಥವಾಗದ ಅಸ್ಪಷ್ಟತೆ ಇದೆ. ಇದಕ್ಕೆ ಕಾರಣ ಸಾಲುಗಳ ನಡುವೆ ಅರ್ಥವನ್ನು ಅಡಗಿಸಿಡುವ ಕಾವ್ಯಾತ್ಮಕ ಗುಣ.  ಓದಿ ಅರ್ಥವಾದ ನಂತರ ಬಹಳಷ್ಟು ಕಾಡುವ ಕಥೆಗಳಿವು. ಕನ್ನಡ ಕಥಾಜಗತ್ತಿನಲ್ಲಿ ತಮ್ಮದೇ ಆದ ದೃಢ ಹೆಜ್ಜೆಗಳನ್ನೂರುವ ಕಥೆಗಾರರ ಲಕ್ಷಣವಿದು.     ಖಾಸಗಿ ಕನಸುಗಳನ್ನು ಸಾರ್ವತ್ರಿಕವಾಗಿಸಿದಂತೆಯೇ ಮಂ  ಗಳೂರು ಕನ್ನಡ, ಕುಂದಾಪುರ ಕನ್ನಡಗಳಂತಹ ಪ್ರಾದೇಶಿಕ ಭಾಷೆಗಳ ಸವಿಯನ್ನು ಎಲ್ಲರಿಗೂ ಉಣಬಡಿಸುವ ಪ್ರಯತ್ನವನ್ನು ನರೇಂದ್ರ ಪೈಯವರು ಇಲ್ಲಿ ಮಾಡಿದ್ದಾರೆ. ಜತೆಗೆ ಅಲ್ಲಲ್ಲಿ ಬರುವ ತಿಳಿಹಾಸ್ಯದ ತುಣುಕುಗಳು ಮತ್ತು ಬಾಲ್ಯದ ನೆನಪುಗಳು ಕಥೆಗಳನ್ನು ಆಪ್ತವಾಗಿಸುತ್ತವೆ. ********************************************************** –ಪಾರ್ವತಿ ಜಿ.ಐತಾಳ್.

ಕನಸುಗಳು ಖಾಸಗಿ Read Post »

ಪುಸ್ತಕ ಸಂಗಾತಿ

ಪುಸ್ತಕ ಪರಿಚಯ

ಬೌದ್ಧ ಮದ್ಯಮಮಾರ್ಗ ( ಬುದ್ಧ ನಡೆ-೧)             ಪ್ರಜ್ಞಾಪಾರಮಿತ ಹೃದಯ ಸೂತ್ರ(ಬುದ್ಧ ನಡೆ-೨)       ಲಾವ್ ತ್ಸು ದಾವ್ ದ ಜಿಂಗ್ ಸೂತ್ರಗಳು ( ಬುದ್ಧನಡೆ-೩)      ಮನಮಗ್ನತೆ( ಬುದ್ದನಡೆ -೪) ರೇಶ್ಮಾಗುಳೇದಗುಡ್ಡಾಕರ್  ಬೌದ್ಧ ಮದ್ಯಮಮಾರ್ಗ ( ಬುದ್ಧ ನಡೆ-೧)              ಪ್ರಜ್ಞಾಪಾರಮಿತ ಹೃದಯ ಸೂತ್ರ(ಬುದ್ಧ ನಡೆ-೨)             ಲಾವ್ ತ್ಸು ದಾವ್ ದ ಜಿಂಗ್ ಸೂತ್ರಗಳು ( ಬುದ್ಧನಡೆ-೩)       ಮನಮಗ್ನತೆ( ಬುದ್ದನಡೆ -೪) ಬೆಲೆ : 170 ರೂ. ನೆಮ್ಮದಿಯ ಆಗರ ಬುದ್ಧ ಗುರುವಿನ ಮಾತು ,ಬರಹಗಳು .ಇಂದಿನ ಅಂತರ್ಜಾಲದ ತಾಣದಲ್ಲಿ‌ಯೂ ಬುದ್ಧಗುರುವಿನ ಕೋಟ್ಗಳು ಒಂದು ಪವರ್ ಫುಲ್ tonic ನಂತೆ ಓದುಗರಿಗೆ ಎದುರಾಗುತ್ತದೆ . ಬದುಕಿನ ಒತ್ತಡ,ನಿರಾಸೆ ,ನೋವಿಗೆ  ಸಮಾಧಾನ ನೀಡುತ್ತವೆ, ಇಂತಹ ಬುದ್ಧಗುರುವಿನ ಅಂಗಳ ತಣ್ಣನೆಯ ತಂಪಿನದು ಇಲ್ಲಿ ಉನ್ಮಾದ,ಉದ್ವೇಗ ದ್ವಂದ್ವಗಳಿಗೆ ತಾವಿಲ್ಲ , ಏನಿದ್ದರೂ ಸದೃಢವಾದ ಸಮಚಿತ್ತ  ಮಾತ್ರ ಇಲ್ಲಿ‌ ವಿಹರಿಸುತ್ತದೆ ! ಅದು ಯಾವಕಾಲ ,ಯಾವ ಜಾಗವಾದರೂ ಸರಿಯೇ . ಇಲ್ಲಿ‌ ಯಾವುದೇ ಅಡ್ಡಿ ಆತಂಕ‌ಗಳು ಚಿಗುರೂಡೆಯುವದಿಲ್ಲ. ಬುದ್ಧ ಯುಗ ಯುಗಗಳ ಬೆಳಕು,  ಧ್ಯಾನದ  ಬುದ್ಧ ನೋಡುಗರನ್ನು ಸೆಳೆದರೆ, ಬರಹಗಳು ಓದುಗರನ್ನು ಸೆಳೆಯುತ್ತವೆ. ಹೊಸ ಆಲೋಚನೆಗೆ ಕೊಂಡ್ಯೊಯುತ್ತವೆ.     ಈ ಬುದ್ಧದೇವನ ಅಂಗಳಕ್ಕೆ ಬುದ್ಧ ಮಾರ್ಗದ ನಾಲ್ಕು ರೈನಾ ಪರಿಮಾಣ ಪುಸ್ತಕಗಳು ನಮ್ಮನ್ನು ನೇರ ಕರೆದೊಯ್ಯುತ್ತವೆ . ನಮ್ಮೊಳಗಿನ ಬುದ್ಧಗುರುವನ್ನು ಅನಾವರಣಗೊಳಿಸುವ ಮೂಲಕ ..! ನಮಗೆ ಹತ್ತಿರವಾದ ಭಾಷಾ ಶೈಲಿಯಲ್ಲಿ , ಇಲ್ಲಿ ಬರುವ ಉದಾಹರಣೆ ಪ್ರತಿಯೊಬ್ಬರಿಗೂ ಸರಳವಾಗಿ ಬುದ್ಧ ಗುರುವಿನ ಮಾರ್ಗವನ್ನು ಅರ್ಥೈಸಿಕೊಳ್ಳಲು ನೆರವಾಗುತ್ತವೆ . ಬುದ್ಧ ಗುರುವಿನ ಸಂದೇಶದ ಹೂರಣಕ್ಕೆ ಜೊತೆಯಾಗಿ ಈ ಹೊತ್ತಿಗೆಯಲ್ಲಿ  ಸಂಧರ್ಭಕ್ಕೆ ಅನುಗುಣವಾಗಿ ಬರುವ ಸರಹಪಾದರ ನುಡಿಗಟ್ಟು ,ಅಲ್ಲಮ ಪ್ರಭುಗಳ ವಚನಗಳು ಬುದ್ಧ ಗುರುವಿನ ತಾತ್ವಿಕ ಚಿಂತನೆ , ಬದುಕಿನ ಅರಿವನ್ನು ಮತ್ತಷ್ಟು ಆಳವಾಗಿ ಅರ್ಥೈಸಿಕೊಳ್ಳಲು ನೆರವಾಗುತ್ತವೆ. ಬೌದ್ಧ ಮದ್ಯಮ ಮಾರ್ಗ   ನಿರಂತರ ಬದಲಾಗುತ್ತಿರುವ ಬದುಕಿನ ಪ್ರವಾಹವನ್ನು ಗ್ರಹಿಸಲು ಮಿಥ್ಯದ ಪರದೆ ಕಳಚಲು ನಮಗೆ ಸಹಾಯ ಮಾಡುತ್ತದೆ . ಪೂರ್ವಾಗ್ರಹ ಪೀಡಿತ ದೃಷ್ಟಿ ಕೋನವನ್ನು ನಿವಾರಿಸಿಕೊಂಡು ಹೊಸ ಆಶಾಭಾವನೆಯ ಮುನ್ನೊಟ ಹೊಂದುವದು ,ಸಾಂಧರ್ಭಿಕ ಜಗತ್ತಿನ ಮಹತ್ವ ತಿಳಿಯುವದು ಪ್ರತಿ ಮನದ ಸವಾಲೇ ಸರಿ . ಇದನ್ನು ಬುದ್ಧಗುರುವಿನ ಸಂದೇಶಗಳು ನಮಗೆ ನೆನಪು ಮಾಡುತ್ತವೆ , ಬದಲಾಗುತ್ತಿರುವ ಜಗತ್ತಿನಲ್ಲಿ  ಕಾಡುವ ಆಡಚಣೆ ,ಒತ್ತಡ , ನಿರಾಶೆ ,ಹತಾಷೆ ಭಾವಗಳು ಒಂದೆಡೆಯಾದರೆ ನಮಗರಿವಿಲ್ಲದೆ ಮನದೂಳಗೆ ಹೆಮ್ಮರವಾಗಿರುವ ಈರ್ಷ್ಯೆ ಹಲವಾರು ಸಮಸ್ಯೆಗೆ ದಾರಿಯಿರುತ್ತದೆ ಈ  ಮರವನ್ನು ಬುಡಸಮೇತ ಕಿತ್ತೊಸೆಯಲು ಬುದ್ಧ ಗುರುವಿನ ಚಿಂತನೆಗಳು ನಮಗೆ ಅಗತ್ಯ . ಮೃಗತ್ವದ ಸೆರಗಲ್ಲಿಯು ಮಮತೆಯ ಮಡಿಲು ಇರುತ್ತದೆ ಆ ಮಡಿಲಿಗೂ ಹೃದಯದ ಅಗತ್ಯವಿದೆ ಎಂಬುದನ್ನು  ಹೇಳುವ  ಪ್ರಜ್ಞಾಪಾರಮಿತ ಹೃದಯ ಸೂತ್ರ , ಲೋಕವನ್ನು ಕರುಣೆ ,ವಾತ್ಸಲ್ಯದಿಂದ ಕಣ್ಣುಗಳಿಂದ ಕಾಣಿರಿ ಎಂಬುದನ್ನು ಮನವರಿಕೆ ಮಾಡುತ್ತದೆ ಬುದ್ಧ ಸೂತ್ರ ,ಪಠಣದ ವಿಷಯವಲ್ಲ ಪಾಲನೆಯಲ್ಲಿ ಮೇಳೈಸಿ ಬದುಕಿನಲ್ಲಿ ನೆಮ್ಮದಿಯ ಕಾಣಬೇಕು . ಎಚ್ಚರದ ಪ್ರಜ್ಞೆ ನಮ್ಮ ಮನೋಕೋಶವನ್ನು ತುಂಬಬೇಕು ಅದೃಶ್ಯ ಲೋಕದ ಹಂಬಲ , ಅದರ ಆರಾಧನೆ ವರ್ತಮಾನದ ಅಮೋಘ ಕ್ಷಣಗಳನ್ನು ಕಾಣದಂತೆ ಮಾಡುತ್ತದೆ .ಇಂತಹ ಮನದಿಂದ ಹಗುರಾಗುವ, ಭಾರಗಳನ್ನು ಇಳಿಸುವ ಕಾರ್ಯ ಸುಲಭವಲ್ಲ . ಇದನ್ನು ಬುದ್ಧ ಮಾರ್ಗ  ಓದುಗರ ಮುಂದೆ ಇಡುತ್ತದೆ ಪರ್ಯಾಯ ದಾರಿ ತೋರುತ್ತದೆ . ಭೂತ ,ಭವಿಷ್ಯದ ಚಿಂತೆಯಲ್ಲಿ ವರ್ತಮಾನ ಸದ್ದಿಲ್ಲದೆ ಸರಿದು ವ್ಯರ್ಥವಾಗಿ ಹರಿದು ಹೊಗುತ್ತದೆ ,ಮತ್ತೆ ಇದೇ ವರ್ತಮಾನ ಭೂತವಾಗಿ ಕಾಡುತ್ತದೆ ..! ಮನದ ಬಹುಪಾಲು ಶಕ್ತಿ ಹೀಗೆ  ಕಳೆದು ರಾಶಿ ರಾಶಿ ಚಿಂನೆಗಳನ್ನು ಒಟ್ಟುಮಾಡುವ ಮನಕ್ಕೆ ಮಗ್ನತೆಯಿಂದ ನಿರಂತರ ಚಲನಶೀಲವಾದ ಮನಕ್ಕೆ ಏಕಾಗ್ರತೆಯ ನಿರಾಳತೆನ್ನು ನೀಡಬೇಕಾಗಿದೆ . ಮನಮಗ್ನತೆಗೆ ಇರುವ ವಿವಿಧ ರೂಪಗಳು ಓದುಗರಿಗೆ ಹೊತ್ತಗೆಯಲ್ಲಿ ಸಿಗುತ್ತವೆ .ನಾಗಾಲೋಟದಲ್ಲಿ ಓಡುವ ಮನ ಅದರ ವೇಗ ವನ್ನು ನಿಂಯತ್ರಿಸಲು ಅದು ಹೋಗುತ್ತಿರುವ ದಾರಿಯನ್ನು  ಗಮನಿಸಿ ಸೂಕ್ತವಾದ ದಾರಿಗೆ ತರಲು ಮಾರ್ಗದರ್ಶನ ಅಗತ್ಯ ಈ ಮಾರ್ಗದರ್ಶನಗಳೇ ಬುದ್ಧ ಗುರುವಿನ ಸಂದೇಶಗಳು ಮನಮಗ್ನತೆ ಎಂಬುದು ಕಣ್ಣು ಮುಚ್ಚಿ ಅರಿಯುವದಲ್ಲ ಎಚ್ಚರದ ತಿಳಿವಿದು .ಜಗವನ್ನು ಇಲ್ಲಿರುವ ದೃಶ್ಯಗಳನ್ನು ಕಾಣಲು ದೃಷ್ಟಿ ಒಂದೇ ಸಾಲದು ಆ ದೃಷ್ಟಿಯಲ್ಲಿ ಎಚ್ಚರ ,ಪ್ರಜ್ಣೆ ಇರಲೇ ಬೇಕು .ನಿರಂತರ ಚಲಿಸುವ ಜಗದ ಪ್ರವಾಹದಲ್ಲಿ ನೋಡಿದ್ದು ಬದಲಾಗಿರುತ್ತದೆ ,ಅಥವಾ ಬದಲಾದದ್ದನ್ನೆ ನಾವು ಒಪ್ಪದೆ ಹಾಗೆ ಇದೆ ಎಂದು ನಾವು ಗ್ರಹಿಸುವಲ್ಲಿ ಎಡವಿ ಸಮಸ್ಯಯ ಸರಮಾಲೆಗ ತುತ್ತಾಗುತ್ತೇವೆ . ಈ ತೊಳಲಾಟ , ತಲ್ಲಣಗಳು ಸುದೀರ್ಘವಾಗಿ ಕಾಡಿ ಮನವನ್ನು ಸಂತಸದಿಂದ ದೂರ ಮಾಡುತ್ತವೆ . ಈ ಸಂದರ್ಭದಲ್ಲಿ ಬುದ್ಧಗುರುವಿನ  ತತ್ವಗಳು ನಿಜದ ಅರಿವನ್ನು ತಿಳಿಸುತ್ತವೆ . ಬುದ್ಧಗುರುವಿನ ಸಂದೇಶಗಳು ತಕ್ಷಣ ಬಂದುದಲ್ಲ ,ಅವು ತೋರಿಕೆ,ವೈಭವಕ್ಕೆ ಶರಣಾಗುವದಿಲ್ಲ ಶಾಂತ ಸದೃಢ ಚಿತ್ತ ಹೊಂದಲು ಸಹಕಾರಿಯಾಗುತ್ತವೆ  ಈ ಚಿತ್ತವೆ ನಮ್ಮೊಳಗಿನ ಬುದ್ಧನ ಕಾಣಲು ಸಾದ್ಯ ವಾಗುವಂತೆ ಮಾಡುತ್ತವೆ . ನಮ್ಮೂಳಗಿರು ಬುದ್ಧ ಗುರುವಿನ ದರ್ಶನಕ್ಕೆ ಮನಮಗ್ನತೆ ಅಗತ್ಯವಿದೆ , ನಮ್ಮ ಬದುಕಿಗೆ ನಮ್ಮೊಳಗಿರುವ ಬುದ್ಧನ ಅನಿವಾರ್ಯ ತೆ ಇದೆ , ಬುದ್ಧ ಗುರು ಸತ್ಯದ ಬೆಳಕು ಹೌದು ,ಪ್ರಜ್ಞೆಯ ಪ್ರತೀಕವು ಹೌದು , ದೀರ್ಘ ಕಾಲ ಕಾಡುವ ಋಣಾತ್ಮಕ ಚಿಂತನೆಗಳಿಂದ ಮುಕ್ತರಾಗಿ ಜ್ಞಾನದ ಬೆಳಕಾದ ನಮ್ಮೊಳಗಿನ‌ ಬುದ್ಧನನ್ನು ನಾವು ಆಹ್ವಾನಿಸ ಬೇಕಾಗಿದೆ ಈ ಪುಸ್ತಕಗಳು  ಶಾಂತ ಚಿಂನೆಗಳನ್ನು ಓದುಗರಲ್ಲಿ ಹರಿಸುತ್ತವೆ ಇಡಿಯಾದುದನ್ನು ಬಿಡಿಯಾಗಿ ನೀಡುತ್ತವೆ ಬಿಡಿಯಾದ ವಿಚಾರವನ್ನು ಇಡಿಯಾಗಿಸುತ್ತವೆ . ಈ ಜೀವನ ದುಃಖದ ಸರಮಾಲೆ ಎಂದು ಬುದ್ಧ ಗುರು ಎಲ್ಲಿಯೂ ಹೇಳಿಲ್ಲ , ಈ ಜಗದಲ್ಲಿ ಪ್ರತಿಯೊಂದು ಘಟನೆಗಳು ಕಾರಣವಿಲ್ಲದೆ ಜರುಗವದಿಲ್ಲ , ಮಾಯೆಇಲ್ಲ , ತಂತ್ರಗಳು ಇಲ್ಲ ನಮ್ಮ ನೋಟದ ವೈಫಲ್ಯತೆಯೇ ದುಃಖದ ಮಡುವಿಗೆ ಜಾರಿಸುತ್ತದೆ , ಮಮತೆಯನ್ನು ಮರೆಸಿ ರೋಷ ,ಆವೇಶ ಗಳನ್ನು ಮನ ತುಂಬಿಕೊಂಡು ಸಹಜ ಮಾನವ ಗುಣಗಳಾದ  ಪ್ರೀತಿ ,ಕರುಣೆ , ವಾತ್ಸಲ್ಯ ಸ್ನೇಹ , ಮಾಯವಾಗಿವೆ . ಎಂಬ ತಿಳಿವನ್ನು ಬುದ್ಧ ಗುರುವಿನ ಸಂದೇಶಗಳು  .ಓದುಗರಿಗೆ  ಎರಕಮಾಡುತ್ತವೆ . ಬುದ್ಧ ಗುರುವಿನ ಮಾರ್ಗವೇ ಒಂದು ಬೆಳಕು .ಮಿಥ್ಯದ ವೈಭವತೆಯನ್ನು ಓಡಿಸಿ ಸರಳ ಜೀವನಕೆ ದಾರಿ ಮಾಡುತ್ತದೆ . ದಾವ್ ದ ಜಿಂಗ್ ಸೂತ್ರಗಳು ತತ್ವ ರಸಾನುಭವದಂತೆ ಗೋಚರಿಸುತ್ತವೆ ಬುದ್ಧ ಗುರುವಿನ‌ ಸಂದೇಶದ ಅನುಭವಗಳ ಸಾರದಂತೆ ಓದುಗರ ಮನದಲ್ಲಿ .ಬುದ್ಧ ಮಾರ್ಗವು ಸರಕುಳನ್ನು ಇಳಿಸಿ ನಮ್ಮ ಪಯಣವನ್ನು ಸರಳಗೊಳಿಸುತ್ತದೆ . ಸದಾ ಚಲಿಸುವ ಜಗದಲ್ಲಿ ಬುದ್ಧಗುರುವಿನ ಅಗತ್ಯ ಒಂದು ದಿನಕ್ಕೆ ಸೀಮಿತವಾಗಲು ಸಾದ್ಯವಿಲ್ಲ .ಅದು ನಿರಂತರ ವನಿತ್ಯ ಜೀವನದ ಸಂಜೀವಿನಿ . **************************

ಪುಸ್ತಕ ಪರಿಚಯ Read Post »

ಪುಸ್ತಕ ಸಂಗಾತಿ

ಮಲ್ಲಿಕಾರ್ಜುನ ಕಡಕೋಳ ಅವರ ‘ಯಡ್ರಾಮಿ ಸೀಮೆ ಕಥನಗಳು’ ಪುಸ್ತಕಕ್ಕೆ ಕಲ್ಯಾಣ ಕರ್ನಾಟಕ ಪ್ರಶಸ್ತಿ

ಮಲ್ಲಿಕಾರ್ಜುನ ಕಡಕೋಳ ಅವರ ‘ಯಡ್ರಾಮಿ ಸೀಮೆ ಕಥನಗಳು’ ಪುಸ್ತಕಕ್ಕೆ ಕಲ್ಯಾಣ ಕರ್ನಾಟಕ ಪ್ರಶಸ್ತಿ ಕನ್ನಡ ರಾಜ್ಯೋತ್ಸವದ ಅಂಗವಾಗಿ ಕಲಬುರ್ಗಿ ವಿಶ್ವವಿದ್ಯಾಲಯ ನೀಡುವ ಕಲ್ಯಾಣ ಕರ್ನಾಟಕ ಪ್ರದೇಶದ ಪುಸ್ತಕ ಬಹುಮಾನ ಹಾಗೂ ಲೇಖಕ/ ಪ್ರಕಾಶಕರ ಗೌರವ ಪ್ರಶಸ್ತಿಯನ್ನು ಇಂದು ಘೋಷಿಸಲಾಗಿದೆ. ಹಿರಿಯ ಸಾಹಿತಿ ಮಲ್ಲಿಕಾರ್ಜುನ ಕಡಕೋಳ ಅವರ ‘ಯಡ್ರಾಮಿ ಸೀಮೆ ಕಥನಗಳು’ ಪುಸ್ತಕಕ್ಕೆ ಕಲ್ಯಾಣ ಕರ್ನಾಟಕ ಪ್ರಶಸ್ತಿಯ ಗೌರವಕ್ಕೆ ಪಾತ್ರವಾಗಿದೆ ಎಂದು ಕಲಬುರ್ಗಿ ವಿಶ್ವವಿದ್ಯಾಲಯದ ಪ್ರಸಾರಾಂಗದ ನಿರ್ದೇಶಕರಾದ ಎಚ್ ಟಿ ಪೋತೆ ಅವರು ತಿಳಿಸಿದರು. ಕಡಕೋಳ ಅವರೊಡನೆ ಅವಧಿ’ಯ ಲೇಖಕ ವಿಜಯಭಾಸ್ಕರ ರೆಡ್ಡಿ ಅವರ ‘ನೆನಪಿನ ಪಡಸಾಲೆ’ ಕವನ ಸಂಕಲನ, ಕಪಿಲ ಪಿ ಹುಮನಾಬಾದೆ ಅವರ ‘ಹಾಣಾದಿ’ ಕಾದಂಬರಿಯೂ ಕೂಡ ಪ್ರಶಸ್ತಿಗೆ ಅಯ್ಕೆ ಆಗಿದೆ ಎಂದು ಪೋತೆ ತಿಳಿಸಿದರು. ಕನ್ನಡ ಸೃಜನ, ಸೃಜನೇತರ ಲೇಖಕರ ಕೃತಿಗಳಿಗೆ, ಜೀವನ ಕಥನ ಹಾಗೂ ಕನ್ನಡ ಪುಸ್ತಕ ಪ್ರಕಾಶಕರಿಗೆ, ಅನುವಾದ ಲೇಖಕರ ಕೃತಿಗೆ, ಸಮಾಜ ವಿಜ್ಞಾನ, ಜನಪದ ಕಲಾವಿದರಿಗೆ, ಚಿತ್ರ/ಶಿಲ್ಪಕಲಾವಿದರಿಗೆ, ಹಿಂದಿ, ಮರಾಠಿ, ಇಂಗ್ಲಿಷ ಹಾಗೂ ಉರ್ದು ಭಾಷಾ ಲೇಖಕರಿಗೆ ಈ ಗೌರವ ನೀಡಲಾಗುತ್ತದೆ. ನವೆಂಬರ್ ಕೊನೆಯ ವಾರದಲ್ಲಿ ವಿಶ್ವವಿದ್ಯಾಲಯದ ಕಾರ್ಯಸೌಧದ ‘ಮಹಾತ್ಮಾಗಾಂಧಿ ಸಭಾಂಗಣದಲ್ಲಿ’ ಆಚರಿಸಲಿರುವ ಕರ್ನಾಟಕ ರಾಜ್ಯೋತ್ಸವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಕುಲಪತಿಗಳಾದ ಪ್ರೊ. ಚಂದ್ರಕಾಂತ ಯಾತನೂರ ಅವರು ಸಮಾರಂಭದ ಅಧ್ಯಕ್ಷತೆ ವಹಿಸುವರು ಎಂದು ಪ್ರೊ ಪೋತೆ ಅವರು ತಿಳಿಸಿದರು **************************************

ಮಲ್ಲಿಕಾರ್ಜುನ ಕಡಕೋಳ ಅವರ ‘ಯಡ್ರಾಮಿ ಸೀಮೆ ಕಥನಗಳು’ ಪುಸ್ತಕಕ್ಕೆ ಕಲ್ಯಾಣ ಕರ್ನಾಟಕ ಪ್ರಶಸ್ತಿ Read Post »

ಪುಸ್ತಕ ಸಂಗಾತಿ

ಕಾಗೆ ಮುಟ್ಟಿದ ನೀರು

ಪುಸ್ತಕ ಪರಿಚಯ ಕಾಗೆ ಮುಟ್ಟಿದ ನೀರು ಪುಸ್ತಕ:- ಕಾಗೆ ಮುಟ್ಟಿದ ನೀರುಲೇಖಕರು:-ಡಾ.ಪುರುಷೋತ್ತಮ ಬಿಳಿಮಲೆಪ್ರಕಾಶನ:-ಅಹರ್ನಿಶಿ ಪ್ರಕಾಶನ,ಶಿವಮೊಗ್ಗ ಕಾಗೆ ಮುಟ್ಟಿದ ನೀರು ಪುಸ್ತಕ ಅನೇಕ ಓದುಗ ಪ್ರಭುಗಳ ಉತ್ತಮ ಅನಿಸಿಕೆಗಳ ಓದಿ ತೀರಾ ಮನಸ್ಸಾಗಿ ಓದಲು ಹಂಬಲ ಹೆಚ್ಚಾಗಿ,ತೀರಾ ಕಡಿಮೆ ರಿಯಾಯತಿಯಲ್ಲಿ ಪುಸ್ತಕ ಕೊಡುವುದಾದರೆ ಕಳಿಸಿ ಎಂದು ಪ್ರಕಾಶಕರಿಗೆ ಸಂದೇಶವನ್ನು ಕಳಿಸಿದ ಕೂಡಲೇ, ಆಯ್ತು ವಿಳಾಸ ಬರಲಿ ಎಂದು ಅತ್ತಕಡೆಯಿಂದ ಕಳುಹಿಸಿ ಕೊಟ್ಟರು.ಆತ್ಮಕತೆ ನನ್ನಿಷ್ಟದ ಒಂದು ಓದುವಿನ‌ ವಿಭಾಗ. ಪುಸ್ತಕವೂ ಕೈಸೇರಿತು, ಸಿಕ್ಕಗಳಿಗೆ ಮೊದಲು ಬೆನ್ನುಡಿ-ಮುನ್ನುಡಿ ಓದುವ ಹವ್ಯಾಸ ನನ್ನದಾಗಿದೆ. ಬಿಳಿಮಲೆರವರು ಒಬ್ಬ ಎಡಪಂಥೀಯರು, ಚಿಂತಕರೂ, JNU ಯಲ್ಲಿ ಪ್ರಾಧ್ಯಾಪಕರು ಅಂತ ಮಾತ್ರ ತಿಳಿದಿದ್ದ ನನಗೆ, ಕಾಗೆ ಮುಟ್ಟಿದ ನೀರಿನಿಂದ ಅವರೇನೂ ಅಂತ ಮತ್ತಷ್ಟು ಒಳಹೊಕ್ಕು ತಿಳಿಯಲು ಅನುಕೂಲವಾಯಿತು. ಬಂಟಮಲೆಯಿಂದ ದೆಹಲಿವರೆಗೆ ಬೆಳೆದು ದೇಶ-ವಿದೇಶ ಸುತ್ತಿ ಅನೇಕ ಕಾರ್ಯಗಳನ್ನು ಮಾಡಿದ ಇವರ ಎದೆಗಾರಿಕೆಗೆ ಮೆಚ್ಚಲೇಬೇಕು. ಅಂತರಾಷ್ಟ್ರೀಯ ಮಟ್ಟದಲ್ಲಿ ಕನ್ನಡವನ್ನು ಪಳಗಿಸುತ್ತಿರುವುದು ಸಹ ವಿಶೇಷ. ಬಾಲ್ಯದ ನೆನಪನ್ನು ಹೆಕ್ಕಿ, ಪಿಯು ಫೇಲಾಗಿ ಶಿಕ್ಷಣ ಪೂರೈಸಿ ಬದುಕು ಕಟ್ಟಿಕೊಳ್ಳಲು ಹೆಣಗಾಡುತ್ತಾ, ಬದುಕು ಬಂದಂತೆ ಎದುರಿಸಿ, ಕೊನೆಗೆ ಬದುಕು ಕಟ್ಟಿಕೊಂಡ ಇವರ ಯಶೋಗಾಥೆ ನನಗೆ ಸ್ಪೂರ್ತಿ ಆಗಬಹುದೆಂದರೆ ತಪ್ಪಾಗಲಿಕ್ಕಿಲ್ಲ. ದೊಡ್ಡ-ದೊಡ್ಡ ಮನುಷ್ಯರೆನಿಸಿಕೊಂಡವರ ಮನಸ್ಥಿತಿ ಹೇಗಿರುತ್ತದೆಂದು ಕಂಬಾರರ ಕರಾಳ ಮುಖವನ್ನ ಎತ್ತಿ ಹಿಡಿದು, ಅಮೆರಿಕನ್ ಆಫ್ ಇಂಡಿಯನ್ ಸ್ಟಡೀಸ್ ನಲ್ಲಿನ ಇವರ ಸೇವೆ, ಜೆ-ಎನ್-ಯುನಲ್ಲಿ ಕನ್ನಡ, ಕನ್ನಡಪೀಠ ಕಟ್ಟಿದ್ದು ಒಂದು ದಾಖಲೆ, ಇತಿಹಾಸ. ಮದುವೆ, ದೆಹಲಿಯಲ್ಲಿ ಮನೆ, ಪುನರ್ಜನ್ಮ, ಮಾಟಮಂತ್ರ, ಜಾತಿ, ರೋಗದಲ್ಲೂ ಗೆದ್ದಿದ್ದು ಮೇಲ್ನೊಟ್ಟಕ್ಕೆ ಕಟ್ಟುಕತೆಯಂತಿದ್ದರೂ ಇದೊಂದು ವಿಶೇಷ. ಹೋರಾಟದ ಬದುಕು ಆಪ್ತವಾಗಿ ಓದಿಸಿಕೊಂಡು ಹೋಗುವ ಪುಸ್ತಕ. ನೀರೇ ಗತಿಯಿಲ್ಲದ ಊರಲ್ಲಿ ಕಾಗೆ ಮುಟ್ಟಿದ ನೀರು ನಲ್ಲಿ, ಹಳ್ಳ-ಕೊಳ್ಳದಲ್ಲಿ ಬಂದಿದೆ ನೀವು ಮುಟ್ಟುತ್ತೀರೋ ಇಲ್ಲೋ ಕುಡಿತಿರೋ ಇಲ್ಲ, ಬಳಸುತ್ತಿರೋ ಇಲ್ಲೋ ಅಂತ ಗದ್ಗರ್ತೀತನಾಗಿ ಯಾರೋ ಗದರಿಸಿ ಹಾಡು ಹಾಡಿದಂತೆ ಕಿವಿಯಲ್ಲಿ ಇಂಪರಿಸುತಿದೆ. ಸಕಲ ರೋಗಗಳಿಂದಾನೆ ಬದುಕುತ್ತಿದ್ದಾರೋ ಏನೋ ಅನ್ನಿಸುತ್ತಿದೆ.ಇತ್ತೀಚಿಗೆ ನಿವೃತ್ತರಾಗಿರಬಹುದು ಯಕ್ಷಗಾನದಲ್ಲಿ ಅಪಾರ ಆಸಕ್ತಿ ಬೆಳೆಸಿಕೊಂಡಿರುವ ಕಲಾವಿದ, ಸಂಶೋಧಕ, ಜಾನಪದ ಸಂಶೋಧಕರು, ಕನ್ನಡವಾದಿ, ಮಹಿಳಾಪರರು ಅಪಾರ ಶಿಷ್ಯೋತ್ಸವವನ್ನು ಹೊಂದಿರುವ ನೇರ, ನಿಷ್ಠುರವಾದಿ ಇವರ ಅನುಭವಗಳನ್ನು ಓದುತ್ತಾ ಹೋದರೆ ನಾವೇ ಇದ್ದು ಅನುಭವಿಸುತ್ತಿದ್ದೇವೆನೋ ಅಂತ ಅನ್ನಿಸುವ ಮಟ್ಟಿಗೆ ಆಪ್ತತೆಯ ನಿರೂಪಣೆ ಮುನ್ನುಡಿಯಲ್ಲಿ ಅಚ್ಚುಕಟ್ಟಾಗಿ ಕನ್ನಡಿ ತೋರಿಸಿದ ದಿನೇಶ್ ಅಮಿನ್ ಮಟ್ಟುರವರು, ಒಂದು ರಾತ್ರಿಯಿಡೀ ಯಕ್ಷಗಾನ ನೋಡಿದಂತ ಅನುಭವವಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ. *********************************** ಶಿವರಾಜ್ ಮೋತಿ

ಕಾಗೆ ಮುಟ್ಟಿದ ನೀರು Read Post »

ಪುಸ್ತಕ ಸಂಗಾತಿ

ಗಿರಗಿಟ್ಟಿ

ಪುಸ್ತಕ ಪರಿಚಯ ಗಿರಗಿಟ್ಟಿ ಲೇಖಕರು: ತಮ್ಮಣ್ಣ ಬೀಗಾರ. ‌ಪ್ರಕಾಶನ: ಪ್ರೇಮ ಪ್ರಕಾಶನ ಮೈಸೂರು.ಮೊಬೈಲ ನಂ: ೯೮೮೬೦೨೬೦೮೫ಪುಟ: ೧೦೦.ಬೆಲೆ:೯೦ ರೂ.ಪ್ರಕಟಣೆ:೨೦೨೦ ಹಿರಿಯ ಕಿರಿಯರೆಲ್ಲ ಓದಬೇಕಾದ “ ಗಿರಗಿಟ್ಟಿ” ತಮ್ಮಣ್ಣ ಬೀಗಾರ ಅವರು ಮಕ್ಕಳಿಗಾಗಿ ಕತೆ, ಕವಿತೆ, ಪ್ರಬಂಧ, ಕಾದಂಬರಿಗಳನ್ನು ಬರೆಯುವುದರಲ್ಲಿ ತೊಡಗಿಸಿಕೊಂಡಿರುವ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದ ಹಿರಿಯ ಸಾಹಿತಿಗಳು. ಕಿರಿಯರನ್ನೂ ಗೌರವಿಸುವ ಸೌಮ್ಯ ಸ್ವಭಾವದವರು. ಹೀಗೆ “ಪ್ರಾಗಿ” ಕತೆಯ ಸನ್ನಿವೇಶ ಕುರಿತು ಮಾತನಾಡುವಾಗ ‘ಹುಡುಗರು ಕಪ್ಪೆಗೆ ಹಿಂಸೆ ಮಾಡುವುದು ಸಹಜ. ಅದನ್ನು ನೀವೇಕೆ ಬರವಣಿಗೆಯಲ್ಲಿ ಕಾಣಿಸಲಿಲ್ಲ ?’ಎನ್ನುವ ಪ್ರಶ್ನೆಗೆ ಹಿಂಸೆಯ ಆಚೆಗೂ ಇರುವ ಬಹಳಷ್ಟು ವರ್ತನೆಗಳನ್ನು ಕಾಣಿಸುವುದು ಮುಖ್ಯವಾಗಿದೆ ಎನ್ನುವುದರ ಮೂಲಕ ನನಗೆ ತುಂಬಾ ಅಚ್ಚರಿ ಮೂಡಿಸಿದವರು. ಕಲೆ ಮತ್ತು ಸಾಹಿತ್ಯಗಳೆರಡನ್ನು ಸಮ ಸಮವಾಗಿ ದುಡಿಸಿಕೊಂಡ ಕ್ರಿಯಾಶೀಲ ಸ್ನೇಹ ಜೀವಿಗಳು. ಇತ್ತೀಚೆಗೆ ಪ್ರಕಟವಾದ ಉಲ್ಟಾ ಅಂಗಿಯ ನಂತರ ಇದೀಗ “ಗಿರಗಿಟ್ಟಿ” ಎನ್ನುವ ೧೫ ಕತೆಗಳನ್ನು ಹೊಂದಿರುವ ಸಂಕಲನದ ಮೂಲಕ ನಮ್ಮ ಮುಂದಿದ್ದಾರೆ. ಮಲೆನಾಡಿನ ಪ್ರಕೃತಿ ಸೌಂದರ್ಯ ಮತ್ತು ಜೀವ ವೈವಿಧ್ಯತೆ ಈ ಕತೆಗಳಲ್ಲಿ ಕಂಡುಬರುವ ಪ್ರಮುಖ ಅಂಶವಾಗಿದ್ದರೂ ಈ ಬಾರಿ ಭಾವನಾತ್ಮಕ ಅಂಶಗಳೊಂದಿಗೆ ಪುಳಕಿತಗೊಳಿಸುತ್ತಾರೆ. ಇದಕ್ಕೆ ‘ಹಸಿವಾಗಿಲ್ವಾ’ ಕತೆಯಲ್ಲಿ ಹಸಿವನ್ನು ಕುರಿತು ತಾಯಿ ಆಡುವ ಮಾತು ನಡೆದುಕೊಳ್ಳುವ ರೀತಿಯ ಮೂಲಕ ಮಕ್ಕಳಲ್ಲಿ ಹುಟ್ಟುವ ಪ್ರಶ್ನೆಗಳು ಅವರ ಮತ್ತು ಓದುಗರ ಅಂತರಂಗವನ್ನು ಕಲಕುತ್ತವೆ. ನನ್ನ ಒಂದು ಅವಲೋಕನದ ಮೂಲಕ ಕಪ್ಪೆ ಇವರ ಬರವಣಿಗೆಯಲ್ಲಿ ಬಹು ವೈವಿಧ್ಯಮಯವಾಗಿ ಅಭಿವ್ಯಕ್ತಿಗೊಳ್ಳುವ ಬತ್ತದ ಒರತೆಯಾಗಿದೆ. ಇದಕ್ಕೆ “ಕಪ್ಪೆಯ ಕಣ್ಣು” ಕಥೆ ಉದಾಹರಣೆಯಾಗಿದೆ. ಮಕ್ಕಳು ಮತ್ತು ದೊಡ್ಡವರ ನಡುವಿನ ವರ್ತನೆಗಳನ್ನು ಸೂಕ್ಷ್ಮವಾಗಿ ತೌಲನಿಕವೆಂಬಂತೆ “ಕತ್ತಲು” ಕತೆಯ ಮೂಲಕ ಚಿತ್ರಿಸುವ ಇವರು ಮಕ್ಕಳ ಬೆರಗುಗಣ್ಣನ್ನು ಅರವತ್ತೊಂದರ ಹರಯದಲ್ಲೂ ಉಳಿಸಿಕೊಂಡಿದ್ದಾರೆ. “ರೋಹನ ಗಣಪು ಮತ್ತು ನಾನು” ಕತೆ ಆಧುನಿಕತೆಯಿಂದ ದೂರ ಇರುವ ಮಕ್ಕಳಲ್ಲಿ ಪ್ರತಿಭೆ ಹುದುಗಿರುವುದನ್ನು ಅನಾವರಣ ಮಾಡಿದರೆ, “ದೆವ್ವದ ಮರ” ಕತೆಯ ಮೂಲಕ ಮಕ್ಕಳ ಕಲಿಕೆಯ ಹೊಸ ಬಗೆಯ ಪ್ರಯೋಗವನ್ನು ಸೂಚ್ಯವಾಗಿ ಹೇಳುತ್ತಾರೆ. ಅಜ್ಞಾನವು ಭಯ ಹುಟ್ಟಿಸಿದರೆ ವಿಜ್ಞಾನವು ಜ್ಞಾನವನ್ನು ಹೆಚ್ಚಿಸುವುದಲ್ಲದೆ ಧೈರ್ಯವನ್ನೂ ಹೆಚ್ಚಿಸುವುದೆಂಬುದಕ್ಕೆ ಸಾಕ್ಷಿಯಾಗಿದೆ. ಓಇತಿ ರಾಜತಿರಾಜ ಕತೆಯಲ್ಲಿ ಮಕ್ಕಳ ಕುತೂಹಲ ಸೊಗಸಾಗಿ ಚಿತ್ರಿತವಾಗಿದ್ದರೆ ಹಣ್ಣು ತಿನ್ನೋ ಆಸೆ ಕತೆಯಲ್ಲಿ ಮಕ್ಕಳ ಸ್ವಭಾವಗಳ ಬಣ್ಣಗಳು ಪರಿಚಯವಾಗುತ್ತವೆ. “ಅಲ್ಲಿ ಕಂಡಿದ್ದೇನು” ಕತೆಯಲ್ಲಿ ಮಕ್ಕಳ ತುಂಟತನದ ಜೊತೆಗೆ ಹಾವಿನ ಪ್ರಸಂಗದಿಂದ ವಿಚಲಿತರಾಗಿ ಮನೆಗೆ ಬಂದಾಗ ಮನೆಯವರ ಎಲ್ಲ ಮುಖಗಳಲ್ಲಿಯೂ ಹಾವನ್ನೇ ಕಾಣುವುದು ವಾಸ್ತವಕ್ಕೆ ಹಿಡಿದ ಕನ್ನಡಿಯಂತಿದೆ. ಮಕ್ಕಳು ಸೂತ್ರ ಹರಿದ ಗಾಳಿ ಪಟದಂತೆ ಎಲ್ಲೆಂದರಲ್ಲಿ ಗಿರಕಿ ಹೊಡೆವ ಹುಮ್ಮಸ್ಸಿನ ಬುಗ್ಗೆಗಳಾಗಿರುತ್ತಾರೆ. ಇಂತಹ ಮುಕ್ತ ವಾತಾವರಣದ ಹಕ್ಕುದಾರರಿಗೆ ಪಾಲಕರು ಹಾಕುವ ಚೌಕಟ್ಟುಗಳು ವ್ಯಕ್ತಿತ್ವ ನಿರ್ಮಾಣದ ತೊಡಕುಗಳಾಗಬಲ್ಲವೆಂಬುದನ್ನು ಸೂಚ್ಯವಾಗಿ ಸೆರೆಹಿಡಿದಿದ್ದಾರೆ. ಮಣ್ಣಿನ ವಾಸನೆ ಕತೆಯಲ್ಲಿ ನಮ್ಮದಲ್ಲದ ವಸ್ತುವನ್ನು ನಮ್ಮದೆಂದುಕೊಂಡು ಬೀಗುವವರ ಗರ್ವ ಭಂಗ ನೈಜವಾಗಿ ನೈಸರ್ಗಿಕವಾಗಿಯೇ ಆಗುತ್ತದೆ ಎಂಬ ಸಿದ್ಧಾಂತವನ್ನು ಪ್ರತಿಪಾದಿಸುವಂತೆ ರಚಿಸಿದ್ದರೆ, ಹೆಗಲ ಮೇಲೆ ಕುಳಿತು ಕತೆಯ ಮೂಲಕ ಇಡೀ ಸಮಾಜದ ಚಿತ್ರಣವನ್ನೇ ಕಣ್ಣಿಗೆ ಕಟ್ಟುತ್ತಾರೆ. ಹೆಣ್ಣು ನಾಯಿ ಮರಿಯೊಂದು ಬೆಳೆದ ಮೇಲೆ ಸಾಕಷ್ಟು ಮರಿ ಹಾಕುತ್ತದೆ ಎಂಬ ಕಾರಣಕ್ಕೆ ತಾಯಿಯಿಂದ ಅಗಲಿಸುವುದು ಆ ಚಿಕ್ಕ ವಯಸ್ಸಿನಲ್ಲಿಯೇ ಆ ನಾಯಿ ಮರಿ ಹಸಿವೆಯಿಂದ ಬಳಲುವುದು ವೃದ್ಧರ ಮತ್ತು ಮಕ್ಕಳಲ್ಲಿ ಉಳಿದಿರುವ ಅಷ್ಟಿಷ್ಟು ಅಂತಃಕ್ಕರಣದಿಂದ ಜೀವ ಉಳಿಸಿಕೊಳ್ಳುವುದು ಕರುಣಾಜನಕವಾಗಿ ಮೂಡಿಬಂದಿದೆ. ಹೀಗೆ ಇಲ್ಲಿರುವ ಹದಿನೈದು ಕತೆಗಳೂ ವಸ್ತು ವೈವಿಧ್ಯತೆಯ ಮೂಲಕ ಗಮನ ಸೆಳೆಯುತ್ತವೆ . ಒಂದು ಚಂದದ ಮಕ್ಕಳ ಪುಸ್ತಕಕ್ಕೆ ಎಷ್ಟು ಹುಡಕಬೇಕೆಂದು ಪ್ರತಿಷ್ಟಿತ ಪುಸ್ತಕ ಮಳಿಗೆಗಳಿಗೆ ಭೇಟಿ ಕೊಟ್ಟವರಿಗೇ ಗೊತ್ತು. ಇಂತಹ ಸೊಗಸಾದ ಪುಸ್ತಕವನ್ನು ಮನೆಗೆ ತಲುಪಿಸಿದ ತಮ್ಮಣ್ಣ ಬೀಗಾರ ಅವರು ಸಾಂಪ್ರದಾಯಕ ಚೌಕಟ್ಟನ್ನು ಮರಿದು ಸೊಗಸಾದ ಮಕ್ಕಳ ಕತೆ ಕಟ್ಟುವುದರಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡವರು.ಮತ್ತು ಇದರಲ್ಲಿ ಯಶಸ್ಸನ್ನು ಕಂಡವರು. ನೀತಿಯನ್ನು ಹೇಳುವುದೇ ಮಕ್ಕಳ ಸಾಹಿತ್ಯವೆಂಬ ತುಂಬಾ ಬಾಲಿಶವಾದ ಹಾಗೂ ನೀರಸವಾದ ಬರವಣಿಗೆ ಕ್ರಮವನ್ನು ಅಲ್ಲಗಳೆದು ನೈಜತೆಯನ್ನು ಅಚ್ಚುಕಟ್ಟಾಗಿ ಸೆರೆಹಿಡಿಯಬಲ್ಲವರಾಗಿದ್ದಾರೆ. ಮತ್ತೊಂದು ಪುಸ್ತಕದ ನಿರೀಕ್ಷೆಯಲ್ಲಿ ಗಿರಿಗಿಟ್ಟಗೆ ಶುಭಕೋರುತ್ತೇನೆ. ಗಿರಿಗಿಟ್ಟಿ ಟೈಟಲ್ ಕತೆ ಅದ್ಭುತ ರಮ್ಯ ಸ್ವರೂಪದ್ದು ಅದನ್ನು ಓದುಗರು ಓದಿಯೇ ಆನಂದಿಸಬೇಕು. ಶುಭವಾಗಲಿ. *************************************** ವಿನಾಯಕ ಕಮತದ.

ಗಿರಗಿಟ್ಟಿ Read Post »

ಪುಸ್ತಕ ಸಂಗಾತಿ

ಇರುಳ ಹೆರಳು

ಪುಸ್ತಕ ಪರಿಚಯ ಮನ ಸೆಳೆವ ಇರುಳ ಹೆರಳು [11:15 am, 11/10/2020] YAKOLLY: ತಮ್ಮ‌ಮೊದಲ ಹನಿಗವನ ಸಂಕಲನ ಪಿರುತಿ ಹನಿಗಳು ಸಂಕಲನಕ್ಕೆ  ಅತ್ಯತ್ತಮ ಸಂಕಲನ ಪ್ರಶಸ್ತಿ ಪಡೆದ ಪ್ರತಿಭಾವಂತ ಕವಿ ನೀ ಶ್ರೀಶೈಲ ಅವರು ಕವಿಯಾಗಿ ಮಾತ್ರವಲ್ಲ,ಒಳ್ಳೆಯ ಗೆಳೆಯನಾಗಿ ಹೃದಯ ಗೆದ್ದವರು.ಅವರ ಭಾವದ ಪಲಕುಗಳನ್ನು ದಿನವೂ ಮುಖ ಪುಸ್ತಕದಲ್ಲಿ ಓದಿ ಮರುಳಾಗುತ್ತಿರುವವನು ನಾನು.ಹನಿಗವನ ಲೋಕದಲ್ಲಿ ತುಂಬ ಸುಂದರವಾದ ರಚನೆಗಳನ್ನೇ ಕೊಟ್ಟಿರುವ ಶ್ರೀಶೈಲ ಅವರ ಕವಿತೆಯ ತುಂಬ ತುಂಬಿದ ಪ್ರೀತಿಯ ಬೆಳಕನ್ನು ಬೊಗಸೆ ತುಂಬಿ ಹಿಡಿಯಲೂ ಆಗದೆ ನನ್ನ ಸುತ್ತಲೂ ಹರಡಿಕೊಂಡ ಆನಂದವೂ ನನಗಿದೆ. ಹನಿಗವನ ಗಳ ಪ್ರೇಮ ಮಾಯೆಯ ಕುರಿತು ಮತ್ತೊಮ್ಮೆ ಬರೆಯುವ ಅವಕಾಶ ದೊರೆಯಬಹುದೆಂಬ ಆಸೆಯಿದೆ. ಈಗ ನನ್ನ ಮುಂದಿರುವದು ೨೦೧೭ ರಲ್ಲಿ ಪ್ರಕಟವಾದ ಅವರ ಕವನ ಸಂಕಲನ ಇರುಳ ಹೆರಳು ನನ್ನ ಮುಂದಿದೆ.ಸಮಕಾಲೀನ ಕನ್ನಡದ ಪ್ರಮುಖ ಕವಿ ಸವದತ್ತಿಯ ನಾಗೇಶ ನಾಯಕರವರು ಸಂಕಲನದ ಅಂತರಂಗವನ್ನೇ ತೆರೆದಿಡುವಂತಹ ಚಂದದ ಬೆನ್ನುಡಿ ಬರೆದಿದ್ದಾರೆ.ಜೀವ ಮುಳ್ಳೂರ ಅವರ ಎದೆ ತೆರೆದ ಮಾತುಗಳು ಸಂಕಲನದ ಅಂದಕ್ಕೆ ಮುನ್ನುಡಿ ಬರೆದಿವೆ. ಇಲ್ಲಿಯವರೆಗೆ ಹನಿಗವಿತೆಗಳನ್ನೇ ಬರೆದ ಕವಿ ಕವನಸಂಕಲನ ಪ್ರಕಟಿಸುವ ಆಸೆ ವ್ಯಕ್ತ ಪಡಿಸುತ್ತಾ ತಮ್ಮ ಬದುಕಿನ ದುರಿತದ ಬಗೆಗು ಅದಕ್ಕಿಂತ ಮಿಗಿಲು ಕಾಣೆಯಾದ ಹಿರಿಯ ಜೀವ,ಸಾಹಿತ್ಯ ಪೋಷಕ ದಿವಂಗತ ಅರ್ಜುನ ಕೊರಟಕರ ಸರ್ ಬಗೆಗೆ ಬರೆದಿರುವ ಮಾತುಗಳು ಎದೆ ಹಿಂಡುತ್ತವೆ. ಇಲ್ಲಿನ ಕವಿತೆಗಳ ಅಂದ ವಿಮರ್ಶೆಯ ಮಾನದಂಡದಾಚೆಯೂ‌ ಮರುಳಾಗುವಷ್ಟು ಚಂದವಿವೆ.ತುಂಬ ಸರಳವಾಗಿ ಶ್ರೀಶೈಲ ಬದುಕಿನ ಆತಂಕಗಳನ್ನು ಅನಾವರಣಗೊಳಿಸುತ್ತಲೇ ಬಾಳನ್ನು ತುಂಬಿರುವ ಪ್ರೀತಿ‌ ಮಾಯೆಯ ಬಗೆಗೂ ಬರೆದಿರುವದು ಮನ ಹಿಡಿಸುವದೆಂದರೆ ಅತಿಶಯೋಕ್ತಿಯ  ಮಾತಲ್ಲ..ಇಲ್ಲಿನ‌ ಕವಿತೆಗಳು ಇನಿಯಳ ಹೆರಳಿನಷ್ಟೇ ಮೃದು ಮತ್ತು ವ್ಯಾಮೋಹ ಹುಟ್ಟಿಸುವಂತಿವೆ.ನವಿರೋನ್ಮಾದ ಕವಿತೆಯ ಈ ಸಾಲುಗಳನ್ನು ನೋಡಿ, ಬಿಸಿಯುಸಿರ ಸವಿ ಸೋಕಿ ದಾಗಲೆಲ್ಲ ರೋಮಾಂಚನ ಕಣ್ ಕೊಳದಲೆಲ್ಲ ತಣ್ ಗಿರಣಗಳ ತೂರುವ ಅಗ್ನಿದಿವ್ಯ ಎನ್ನುವ ಕವಿ ಇಲ್ಲವಾಗುವದಾದರೂ ಅಲ್ಲಿಯೂ‌ ಪ್ರೇಮವೇ ಇರಲಿ ಎನ್ನುವದಕ್ಕೆ ತೆರೆಯ ನಲಿವಿನ ನವಿಲ ಹರಿಗುಂಟ ಸಾಗೋಣ ಮುಳುಗಿದರೂ ಜೇಂಗಡಲಲಿ ಹೆಣವಾಗಿ ತೇಲೋಣ ಎನ್ನುವದು ನಿಜವಾದ ಪ್ರೇಮಿಯ ಬಾಳ ಉದ್ದೇಶವೇ ಆಗಿಸೆ.ಈ ಪ್ರೇಮ ಮಾಯೆಯ ಯಾರಾದರೂ ಎಂದಾದರೂ ಬರೆದು ಮುಗಿಸಿದ್ದಾರೆಯೇ,?ಅದಕ್ಕೆ ಕವಿ ಬಾನ ದಾರಿಗುಂಟ ನಡೆವೆ ನಿನ್ನ ತೋಳ‌ಮೇಳದಲ್ಲಿ ಚಂದ್ರ ತಾರೆ ಹಿಡಿದು ತರುವೆ ಕಣ್ಣ ಬಿಂಬದಾಳದಲ್ಲಿ ಕಣ್ಣ ಬಿಂಬದಾಳದ ಚಂದ್ರ ತಾರೆ ಹಿಡಿದು ತಂದವರೇ ಧನ್ಯರು .ಅದು ಆಸೆಯಷ್ಟೇ ! ಇಲ್ಲದಿರೆ ನಲ್ಲಳ ಇರುಳಿಡೀ   ಧಾರಾಕಾರವಾಗಿ ಸುರಿಸು ಗುಡುಗು ಮಿಂಚು  ಸಹಿತ ಬಿರುಮಳೆ! ಎಂಬ ಕೋರಿಕೆಯ ಅಗತ್ಯವಿರಲಿಲ್ಲ.’ಕಂಡಿಲ್ಲ ಯಾರೂ ಆಚೆಯ ದಂಡಿ’ ಎಂದು ಕವಿ ಸುಮ್ಮನೆ ಹಾಡಿಲ್ಲ.ಬ್ರಹ್ಮ‌ಕಮಲದ ಆಸೆ ಇದ್ದಷ್ಟೂ ಬದುಕಲ್ಲಿ ಸಂತಸದ ಪಸೆಯೊಸರುತ್ತದೆ.ಈ ಅರಕೆ ನಿರಂತರ ಇದ್ದರೇನೆ ಚಂದ .ತೃಪ್ತಿಯ ಮಾತೆಲ್ಲಿ? ಈ. ಎಲ್ಲ ಅರಕೆಯ ಪಲಕುಗಳ ಸಾಕ್ಷಿಯಾಗಿ ಸಂಕಲನದ ಹಲವು‌ ಕವಿತೆಗಳನ್ನು ಉದಾಹರಿಸುತ್ತಾ ಹೋಗಬಹುದು.ನನ್ನ ಆ ಆಸೆಯನ್ನು ಬೇಕೆಂತಲೇ ತಡೆ ಹಿಡಿದಿದ್ದೇನೆ .ಮೂಗಿಗಿಂತ‌ ಮೂಗುತಿ ಭಾರವಾಗದಿರಲೆಂದು. ಸಮಕಾಲಿನ ಕಾಳ ಕೂಟಗಳತ್ತಲೂ ಕವಿ ಗಮನ ಹರಿಸಿರುವದು ಅವರ‌ ಕವಿತೆ ಏಕಮುಖಿಯಲ್ಲ  ಎನ್ನುವದಕ್ಕೆ ಸಾಕ್ಷಿ .ರೈತನ ಬದುಕು ದುಃಖದ ಸರಪಳಿಯಲ್ಕಿ ಸಿಲುಕಿನಲ್ಲಿ ನಲುಗುವದನ್ನು ಬರೆಯುವ ಕವಿ ಇದಕ್ಕೆ ಎಲ್ಲೋ ಒಂದಿಷ್ಟು ನಾವೂ ಕಾರಣರಾಗಿರುವದನ್ನು ಸೂಚಿಸುತ್ತಾರಾದ್ದರಿಂದಲೇ ಅವರ ಕವಿತೆ ಇಷ್ಟವಾಗುತ್ತದೆ. ಕವಿಗೆ ಈ‌ ಪ್ರಾಮಾಣಿಕ‌ ಪ್ರಜ್ಞೆ ಇರದಿದ್ದರೆ ಬರೆಯುವ ಸಾಲುಗಳು ಈಟಿಯಾಗಿ ಚುಚ್ಚತೊಡಗುತ್ತವೆ. ಕುಟಿಲ‌ಕೂಟ  ಕವಿತೆಯಲ್ಲಿ ಬೆಳೆದು ಬಂದ ಹೊಲಗದ್ದೆ ಗುಡಿಸಲುಗಳ ಮರೆತಿರುವ ನಮ್ಮನ್ನು  ಚುಚ್ಚಲೆಂದೇ ಕವಿ ಕುಡಿವ ನೀರಲಿ ಮನಸೋ ಇಚ್ಛೆ ಈಜಾಡಿ ತುಚ್ಛತನದಿ ಆ ಸ್ವಚ್ಛ ನೀರಲೇ ಉಚ್ಛೆ ಹೊಯ್ವ ಕೊಚ್ಚೆ ಮನಸಿನ ಲುಚ್ಛಾ ಲಪಂಗರು ನಾವು ಆಕ್ರೋಶ ಪ್ರಾಮಾಣಿಕವಾದಾಗಲೇ ಇಷ್ಟು ತೀವ್ರ ಹರಿತ ಪದಗಳಿಗೆ ಬರುವದು.ಕವಿತಾ ಸಂಕಲನದ ಕೆಲವು ಸಮಾಜಮುಖಿ ಕವಿತೆಗಳು ತಮ್ಮ ಇರವನ್ನು ಸಾರ್ಥಕಗೊಳಿಸಿವೆ. ಮಲ್ಲಿಗೆಯ ಮನದ ಈ‌ ಕವಿಯ ಬತ್ತಳಿಕೆಯಲ್ಲೂ ಬಾಣ ಬಿರುಸಿಗಳಿರುವದಕ್ಕೆ ಸಾಕ್ಷಿಯಾಗಿವೆ.      ಕೊರಗುಗೊರಳು,ಹೇಳಿ ಬಿಡೊಮ್ಮೆ, ಭಾವ ಸ್ಪುರಣ ಮೊದಲಾದ ಕವಿತೆಗಳು ಹಾಡಾಗಿಯೂ ರಾಗ ಸಂಯೋಜನೆಯ ಸಂಗ ಬಯಸುವ ಗೀತಗಳಾಗಿವೆ. ಮನೆಯ ಮುಂದಿರುವ ಸಾಕು ನಾಯಿಯೂ ಕೂಡಾ ಮನೆಗೆ ಬರುವ ಅತಿಥಿಗಳನು ನಾದಸ್ವರದೆ ಸುಮ್ಮನಿರಿಸಿ ಒಡೆಯನನ್ನು ಕೂಗಿ ಕರೆವ ಪರಮಾಪ್ತ ಬಂಧುವೇ ! ಎಂಬಂತೆ  ಕಂಡ  ಕವಿಯ ಮನುಷ್ಯತ್ವದ ಪರಮಾವಧಿ ಭಾವಕ್ಕೆ  (ಕವಿತೆಯ ಹೆಸರೂ ನಾಯಿಯಲ್ಲ,ತಾಯಿ) ಶರಣಾಗಲೇಬೆಕೆನಿಸುತ್ತದೆ. ಅಪರೂಪಕ್ಕೊಮ್ನೆ ಒಂದು ಒಳ್ಳೆಯ ಕವನಸಂಕಲನ ಸಿಕ್ಕಾಗ ಬರೆಯುತ್ತಲೇ ಹೋಗಬೇಕೆನಿಸುತ್ತದೆ.ಪ್ರತಿ ಕವಿತೆ ಎತ್ತಿ ಹೇಳಿ ಓದುಗರ  ಸವಿಯ ರುಚಿ  ಕೆಡಿಸಬಾರದಲ್ಲವೇ? ನಾಕು ಸಾಲು ಬರೆವ ನಮಗಿಂತ ಇಡೀ ಸಂಕಲನ ಓದಿ ಸಂತಸ ಪಡುವ ಮನಸುಗಳು ಹಲವಿರುವಾಗ ನಡುವೆ ನಮ್ಮಂಥವರದು ಮಿತಿ ದಾಟುವ ಹುಚ್ಚುತನವೂ ಆಗಬಹುದು. ನೀ.ಶ್ರೀಶೈಲ ಅವರ ಸಮಗ್ರ ಹನಿಗಳ ಓದಿಗೆ,ಪ್ರಾಮಾಣಿಕ ಓದುಗನಾಗಿ ನಾನು ಕಾಯ್ದಿರುವೆ *****************************. ಡಾ.ವೈ.ಎಂ.ಯಾಕೊಳ್ಳಿ

ಇರುಳ ಹೆರಳು Read Post »

ಪುಸ್ತಕ ಸಂಗಾತಿ

ಹಿಮದೊಡಲ ಬೆಂಕಿ

ಪುಸ್ತಕ ಪರಿಚಯ ಹಿಮದೊಡಲ ಬೆಂಕಿ ಹಿಮದೊಡಲ ಬೆಂಕಿ.ಗಜ಼ಲ್ ಸಂಕಲನ.ಬೆಲೆ:- 80/-ಲೇಖಕರು :-ಅರುಣಾ ನರೇಂದ್ರಸಿದ್ಧಾರ್ಥ ಪ್ರಕಾಶನ ,ನಂದಿ ನಗರ , ಕೊಪ್ಪಳ. ಅರುಣಾ ನರೇಂದ್ರ ಅವರ ಹಿಮದೊಡಲ ಬೆಂಕಿ ಗಜ಼ಲ್ ಸಂಕಲನದ ಒಳಗೊಂದು ಸುತ್ತು… ಅರುಣಾ ನರೇಂದ್ರ ರವರು ಕೊಪ್ಪಳ ಜಿಲ್ಲೆಯವರಾಗಿದ್ದು ಈ ನಾಡಿನ ಹೆಸರಾಂತ ಮಹಿಳಾ ಸಾಹಿತಿಗಳಲ್ಲಿ ಇವರೂ ಒಬ್ಬರು. ಮುಖತಃ ನೋಡಿಲ್ಲದ, ಮಾತನಾಡಿಲ್ಲದ ಕೇವಲ ವಾಟ್ಸ್ ಆಪ್ ಗ್ರೂಪ್‌ನಿಂದಲೇ ಅಕ್ಷರಗಳ ಮುಖೇನ ಇವರೊಂದಿಗೆ ಅನುಸಂಧಾನ ಮಾಡುತ್ತಿರುವ ನಾನು ಇವರು  ಉದಯೋನ್ಮಖ ಬರಹಗಾರರ ಬರಹಗಳಿಗೆ ಮನಬಿಚ್ಚಿ ಬೆನ್ನುತಟ್ಟುವ ಕಾರ್ಯಕ್ಕೆ  ಮನಸೋತಿರುವೆ. ಸಹೋದರಿ ಸಮಾನರಾದ  ಇವರ ಈ ಹಿಮದೊಡಲ ಬೆಂಕಿ ವಿಭಿನ್ನ ದೃಷ್ಷಿಯ ಆರ್ದ್ರ ಸ್ವರೂಪದ ಗಜ಼ಲ್ ಸಂಕಲನಕ್ಕೆ ಭಾವ ತೀವ್ರತೆಯಿಂದ ನರಳಿಸುತ್ತಾ ಬದುಕು ಅರಳಿಸುವ ಗಜ಼ಲ್ ಗಳು ಎನ್ನುವ ಶಿರೋನಾಮೆಯನ್ನು ಹೊಳಪಿಸಿ ಗಜ಼ಲ್ ನ ಆಕೃತಿ ಮತ್ತು ಆತ್ಮಕ್ಕೆ ಜೀವ ದ್ರವ್ಯ ತುಂಬಿ ಮುನ್ನುಡಿ ಬರೆದ ಬಾಗಲಕೋಟೆ ಜಿಲ್ಲೆಯ ಖ್ಯಾತ ಹಿರಿಯ ಸಾಹಿತಿಗಳಾದ ಅಬ್ಬಾಸ್ ಮೇಲಿನಮನಿಯವರ   ಮುನ್ನುಡಿಯಿಂದ ಗಜ಼ಲ್ ನಾದ ಲೋಕದ ಜೀವ ತಂತಿಯಂತಿರುವ ಅರುಣಾ ನರೇಂದ್ರ  ರವರು ಕನ್ನಡ ಸಾಹಿತ್ಯ ಲೋಕದಲ್ಲಿ ಈಗಾಗಲೇ ರುಬಾಯಿ, ಹಾಯ್ಕು, ಕವನ, ತತ್ವಪದ,ನಾಟಕ ಕಲೆ  ಮುಂತಾದ ಹಲವಾರು ಪ್ರಕಾರಗಳಲ್ಲಿ ಪಳಗಿದ ಕೈ ಎಂಬುದು ತಿಳಿದು ಖುಷಿಯಾಯಿತು ; ಜೊತೆಗೆ ಈ ಸಂಕಲನ ಇವರ ಹದಿಮೂರನೇ ಕೃತಿ. ಇವರು ಕನ್ನಡ ಸಾಹಿತ್ಯದ ಕೃಷಿಯನ್ನು ಹೇಗೆ ಹದಗೊಳಿಸಿದ್ದಾರೆ ಎಂಬುದು ಇದರಿಂದಲೇ ತಿಳಿಯಬಹುದು . ಗಜ಼ಲ್ ಅರಬಿ ಶಬ್ದ ” ಹೆಂಗಸರೊಡನೆ ಮಾತನಾಡುವುದು, ಸಂಭಾಷಿಸುವುದು, ಪ್ರೇಮ, ಮೋಹ ಅನುರಾಗ ವ್ಯಕ್ತಪಡಿಸುವುದೆಂದು ಅರ್ಥ. ಪಾರಿಭಾಷಿಕವಾಗಿ ಹೇಳುವುದಾದರೆ ” ಹೃದಯದ ವೃತ್ತಾಂತ  ಮತ್ತು ಪ್ರೇಮ ಮೋಹಗಳ ವಿದ್ಯ ಮಾನಗಳ ಹೇಳಿಕೆ “ ಗಜ಼ಲ್ ಕಾವ್ಯಕ್ಕೆ ಇಂತಹುದೇ ವಿಷಯ ಎಂಬುದಿಲ್ಲ . ಪ್ರಾರಂಭದಲ್ಲಿ ಇದೊಂದು ಸಾಂಪ್ರದಾಯಿಕ ಕಾವ್ಯವಾಗಿತ್ತು. ಆದರೆ ಇತ್ತಿಗೆ ಎಲ್ಲಾ ವಿಷಯ ವಸ್ತುಗಳ ಮೇಲೂ,  ಸಾಮಾಜಿಕ ತಲ್ಲಣಗಳ ಮೇಲೂ,  ಪ್ರಕೃತಿ, ಆಧ್ಯಾತ್ಮಿಕ ,ಸ್ವಾತಂತ್ರ್ಯ ದ ಮೇಲೂ ಗಜ಼ಲ್ ರಚಿತವಾಗಿ ಜನ ಮನವನ್ನು ಹೆಚ್ಚು ಹೆಚ್ಚು ತಲುಪಿಸುವ ಕಾರ್ಯವಾಗುತ್ತಿದೆ. ಈ ಸಂಕಲನದಲ್ಲಿ ಒಟ್ಟು ೬೧ ಗಜ಼ಲ್ ಗಳಿವೆ. ಕಾವ್ಯ ಲೋಕದ ಅನುಭವಗಳಿಂದ ಪಕ್ವಗೊಂಡ ಜೀವ ಸಂವೇದನೆಗಳನ್ನು ಒಡಲೊಳಗೆ ಹುದುಗಿಸಿಕೊಂಡು ಮನುಷ್ಯ ಸಂಬಂಧಕ್ಕಾಗಿ ತುಡಿಯುವ ,ಮಾನವೀಯತೆಯ ಅಭಿವ್ಯಕ್ತಿಗೆ  ಧಾವಂತ ತೋರಿ ಆತ್ಮದ ಶೋಧನೆಗೆ ತೊಡಗಿಸಿಕೊಂಡ ಅನುಭಾವದ ನಿಜ ನೆಲೆಯನ್ನು ದರ್ಶಿಸುವ ವ್ಯಕ್ತಿ ಎಂದು ಈ ಗಜ಼ಲ್ಗಳ ಮಿಸ್ರಗಳಿಂದ ತಿಳಿಯಬಹುದು… ಮೇಲೆ ಚರ್ಮದ ಹೊದಿಕೆ , ದೇಹ ಎಲುಬಿನ ಗೂಡು ಬರಿ ಅಸ್ಥಿಪಂಜರ ನರಳಿ ನರಳಿ ಮಣ್ಣನಪ್ಪುವ ಮುನ್ನ ಎದೆಗೊಮ್ಮೆ ಬಂದು ಒದೆದು ಹೋಗು. ಗ.೧೧ ಬರಲಿ ಬೇನೆ ಬೇಸರಿಕೆಗಳ ಮಹಾಪೂರ ನಶ್ವರ ಸುಖ ನನಗೆ ಬೇಕಾಗಿಲ್ಲ ಕೈ ಸೋಲುವವರೆಗೂ ಹುಟ್ಟು ಹಾಕಿ ಬಾಳ ನೌಕೆಯೊಂದಿಗೆ ರಾಜಿಯಾಗುತ್ತೇನೆ… ಗ.೧೪ ಮನುಜರೆದೆಯ ಗಾಯಗಳಿಗೆ ಮುಲಾಮು ಹಚ್ಚುತ್ತೇನೆ ಉಸಿರಿರುವವರೆಗೆ ಸತ್ತ ಮೇಲೆ ಅರುಣಾಳ ಶವದ ಮುಂದೆ ಕಣ್ಣೀರನು ಹಾಕಬೇಡಿ… ಗ.೧೭ ಶುದ್ಧ ನಿರಾಕಾರ ಬಹ್ಮ ತಾನೆಂದು ತಿಳಿದಾಗ ಆತ್ಮ ಪರಮಾತ್ಮನೊಡಗೂಡಿ ಮಾತು ಮೌನವಾಗುತ್ತದೆ ..ಗ.೫೫. ಬಾಳ ಬನದಲಿ ಬೆಳೆದ ಅವಗುಣದ ಕಳೆ ತೆಗೆದು ಹುಲುಸಾಗಬೇಕು ಮನದ ಬಯಲಲಿ ಅಷ್ಟಮದಗಳ ಕಳೆದು ಹಸನಾಗಬೇಕು ಬದುಕು. ಗ.೩೬. ಈ ಗಜ಼ಲ್ ತನ್ನನ್ನೇ ತಾನು ಓರೆಗಚ್ಚಿಕೊಂಡು ಆತ್ಮ ಸಾಕ್ಷಾತ್ಕಾರ ಹೊಂದುವ ಹಾದಿಗೆ ಜಾರಿದಂತೆ  ಕಂಡು ಬಂತು. ತಮ್ಮ ಸುದೀರ್ಘ ಸಾಹಿತ್ಯದ ಪಯಣದಲ್ಲಿ ಬದುಕಿನ ನಿಜ ಅರ್ಥ ತಿಳಿದ ಇವರು ಸಮಾಜದ ಅಂಧಕಾರಗಳಿಗೆ ಬೇಸತ್ತು ಕೈ ಚೆಲ್ಲಿದ ಹಲವಾರು ಸಂಕಟಗಳು, ಮನೋವ್ಯತೆಗಳು ಎದೆಗಾನಿಸಿ ಕಂಬನಿ ಮಿಡಿದು ಸೆಟೆದು ನಿಲ್ಲುವಂತೆ  ಇಲ್ಲಿ ಸುಳಿಯುತ್ತವೆ… ಗುಡಿಸಲಿನ ಜನರು ಕಂಡ  ಕನಸುಗಳು ಮಹಡಿಯಲಿ ಕೊಳೆತು ಹೋಗುತ್ತವೆ ಬಲಾತ್ಕಾರಕ್ಕೆ ಒಳಗಾದ ಹೆಣ್ಣು ಮಕ್ಕಳು ಗೋರಿಯಲಿ ನರಳುತ್ತಾರೆ ಈ ಲೋಕದಲ್ಲಿ..ಗ. ೩೫.  ಈ ಮಿಸ್ರಗಳು ಕೆಲವು ಉಲ್ಲೇಖಗಳಷ್ಟೇ….. ಶೋಷಿತರ ಧ್ವನಿಗೆ ಕಿವಿಯಾಗಿ ಎದೆಯ ಆಲಯದಲಿ ಆಸರೆ ನೀಡುವ ಬಹುತೇಕ ಗಜ಼ಲ್ ಗಳು ಒಂದಕ್ಕಿಂತ ಒಂದು ವಿಭಿನ್ನ ಅರ್ಥ ಕಲ್ಲಿಸುವ ಬರಹ  ಈ ಸಂಕಲನದಲ್ಲಿ ಮನೆ ಮಾಡಿದೆ ಆದರೆ ನಾನು ಇಲ್ಲಿ ಇದನ್ನು ಮಾತ್ರ ಉದಾಹರಿಸಿರುವೆ… ತುಳಿತಕ್ಕೆ ಒಳಗಾದ ಜನರೆಲ್ಲ ಮೇಲೆದ್ದು ಕಟಿಬದ್ದರಾಗಲು ಹರಸು ಉಂಡ ಕಹಿ ನೋವಿನ ನೆತ್ತರದ ಹಾಳೆಯಲಿ ಅರುಣಾಳ ಹೊಸ ಇತಿಹಾಸವನ್ನೇ ಬರೆಸು ಸಾಕಿ..ಗ. ೪೭. ಚಿಂದಿ ಆಯ್ದ ಕೈಗೆ ಪೆನ್ನು ಪುಸ್ತಕವಿತ್ತು ಅಕ್ಷರದ ಜಾತ್ರೆಗೆ ಅವರನ್ನು ಕಳಿಸು ಸಾಕಿ. ದ್ವೇಶ , ಅಸೂಯೆ, ವಂಚನೆ, ಮತ್ಸರ, ಹೊಡದಾಟ, ಹಾರಾಟ ,ಸ್ವಾರ್ಥ ಏಕೆ ಬೇಕು ಜೀವನ ಮೂರು ದಿನದ ಸಂತೆ  ಜನರೆಲ್ಲರನ್ನು ಪ್ರೀತಿಯಿಂದ ಕಾಣು ಮಾನವತೆಯಿಂದ ಮಹಾ ಮಾನವನಾಗು ಎನ್ನವ ಸಂದೇಶ ನೀಡಿ  , ಆ ಹಾದಿಯಲ್ಲಿ ಬದುಕು ಸವೆಸಲು  ಹೆಣಗುತ್ತಿರಬಹುದು ಎಂದೆನಿಸದಿರದು. ಹೀಗೆ ಓದುತ್ತಾ ಸಾಗಿದಂತೆ ಲೌಕಿಕ ಜಗತ್ತಿನ ಜಂಜಡಗಳಿಂದ ಅಲೌಕಿಕ , (ಅಧ್ಯಾತ್ಮ)ದತ್ತ ಹೊರಳಿಸುವ ಇವರ ಬರಹಗಳು ಜೀವಕ್ಕೆ ಸಂಜೀವನಿಯನ್ನು ಹರಿಸಿ  ಹೊಸ ಚೈತನ್ಯವನ್ನು ತಂದುಕೊಡುತ್ತದೆ. ಈ ಸಂಕಲನದ ಜೊತೆಗೆ ಇನ್ನಷ್ಟು ಮತ್ತಷ್ಟು ಸಂಕಲನಗಳು ಹೊರ ತಂದು ಸಮಾಜದ ಅಂಕು ಡೊಂಕಿನ ಕವಲು ದಾರಿಗಳನ್ನು ಸಮಸಮಾಜವಾಗಿಸುವಲ್ಲಿ ಇವರ ಸಾಹಿತ್ಯ ಧ್ವನಿಸಲಿ ಎಂದು ಈ ಸಂದರ್ಭದಲ್ಲಿ ಶುಭಹಾರೈಸುತ್ತಾ ಇವರ ನೆರಳಿನಲ್ಲಿ  ಹೊಸ ತಲೆಮಾರಿನ ಉದಯೋನ್ಮುಖ ಬರಹಗಾರರು ಸಾಹಿತ್ಯದ ಸವಿ ಉಂಡು ಬೆಳಕಿಗೆ ಬರಲೆಂದು ಆಶಿಸುತ್ತೇನೆ. ************************ ಅಶೋಕ ಬಾಬು ಟೇಕಲ್ಷ

ಹಿಮದೊಡಲ ಬೆಂಕಿ Read Post »

ಪುಸ್ತಕ ಸಂಗಾತಿ

ಪುಸ್ತಕ ಪರಿಚಯ

ಅಲೆವ ನದಿ ಅಲೆವ ನದಿಗಜಲ್ ಗಳುಕವಿ :- ಕಿರಸೂರ ಗಿರಿಯಪ್ಪಪ್ರಕಾಶನ :- ಸನ್ಮತಿ ಪ್ರಕಾಶನ ಬಾಗಲಕೋಟೆಬೆಲೆ‌:- ೮೦ಪುಟಗಳು :- ೫೮ ಗಜಲ್ ಎಂದಾಕ್ಷಣ ನೆನಪಿಗೆ ಬರುವುದುಪ್ರೇಮಿಗಳ ಸರಸ ಸಲ್ಲಾಪ ,ಮನದಾಳದ ಸುಕೋಮಲ ಭಾವನೆಗಳು, ಹೆಂಗಳೆಯರ ಪಿಸು ನುಡಿಗಳು , ಒಳಹೊಕ್ಕು ಹೊರ ನೋಡುವ ತೀಕ್ಷ್ಣಮತಿ ಸೂಕ್ಷ್ಮವಾದ ಭಾವನೆಗಳ ಪೂರಣ, ಗಜಲ್ನಸಾಮಾನ್ಯ ಲಕ್ಷಣಗಳು ಕಾಫಿಯಾ ,ರದೀಪ್,ಮತ್ಲಾ,ಮಕ್ತಾ, ಕಾಣಬಹುದು ನೆರಳು-ಬೆಳಕಿನಾಟದಂತೆ ಇವುಗಳನ್ನು ಹೊಂದಾಣಿಕೆ ಮಾಡಿದರೆ ಮಾತ್ರ ಗಜಲ್ ಆಗಲ್ಲ ಸಹಜವಾಗಿ ಮೇಳೈಸಿಕೊಂಡು ಹೃದಯವನ್ನು ತಟ್ಟಿ ಬಡಿದೆಬ್ಬಿಸಬೇಕು. ಗಜಲ್ಗಳು ಮನಸೂರೆಗೊಂಡು ಒನ್ಸ್ ಮೋರ್ ಭಾವನೆಯನ್ನು ಹೊರ ಸೂಸಬೇಕು,ಅಂದಾಗ ಆ ಗಜಲ್ ನ ಶೇರ್ ಕೇಳಿದಾಕ್ಷಣ ವ್ಹಾ ! ಉತ್ಕಟವಾದ ಭಾವನೆ ಹೊರಹೊಮ್ಮಬೇಕು ಅದು ಗಜಲ ಶಕ್ತಿ. ಬಾಗಲಕೋಟೆ ಜಿಲ್ಲೆಯ ಕಿರಸೂರು ಗಿರಿಯಪ್ಪನವರ ಗಜಲ್ ಸಂಕಲನ ಅಲೆವ ನದಿ ಒಳಗಿನ ಅಂತರಾತ್ಮವನ್ನು ಒಂದು ಸಾರಿ ನೋಡಿ ಬರೋಣ…ಮೊದಲಿಗೆ ಪುಸ್ತಕದ ಬಗ್ಗೆ ಮಾತನಾಡುವುದಾದರೆ ಮುದ್ರಣ ಬಹಳ ಅಚ್ಚುಕಟ್ಟಾಗಿ ಮುಖಪುಟದ ಚಿತ್ರವು ಕೂಡ ಅಷ್ಟೇ ಸೊಗಸಾಗಿ ಮನ ಸೆಳೆಯುವಂತೆ ಮೂಡಿಬಂದಿದೆ, ಮುಖಪುಟ ತಯಾರಿಸಿದ ಕಲಾವಿದರಿಗೆ ನನ್ನದೊಂದು ನಮನ. ಇದೊಂದು ನಿತ್ಯ ಅಲೆದಾಟ ಕಲ್ಮಶಗಳನ್ನುತೊಳೆದು ನಿತ್ಯ ಪರಿಸರ ಮಾತೆಯು ತನ್ನೊಡಲಲ್ಲಿ ತುಂಬಿಕೊಳ್ಳುವಳು ದಾಹವನ್ನು ನೀಗಿಸಿ ,ಜಾತಿ- ಮತ-ಪಂತ ಭೇದಗಳನ್ನು ಮರೆತು ಸ್ವಚ್ಛಂದವಾಗಿ ಹರಿಯುವ ಮಾತೆ , ನಿರ್ಗುಣ ,ನಿರಾಕಾರ,ಅಲೆವ ನದಿ ಪುಸ್ತಕದ ಒಳ ಹೂರಣವನ್ನು ತಿಳಿಯೋಣ ಈ ಪುಸ್ತಕದ ಟೈಟಲ್ ಕೂಡ ಬಹಳ ಚಂದವಿದೆ. ಗಜಲ್ ಗಳೆಂದರೆ ಪ್ರೇಮಿಗಳ ವಿರಹ, ಪ್ರೇಮಿಗಳ ಉತ್ಕಟ ಭಾವನೆ, ಸರಸ-ವಿರಸ ಸಮರಸ, ಪ್ರೀತಿಯ ಉತ್ತುಂಗದ ಸ್ಥಿತಿ, ನಿರಾಸೆ, ಕಾಮನೆಗಳು, ಕುಡುಕರ ಮಾತುಗಳು, ಹೆಂಗಳೆಯರ ಮನದಾಳದ ಪಿಸು ಮಾತುಗಳು, ಬದುಕಿನ ಮಧುಪಾತ್ರೆ, ಮೊದಮೊದಲು ಒಂದೇ ಗುಂಪಿಗೆ ಗಜಲ್ ಸೇರಿಕೊಂಡಿತ್ತು ಆದರೆ ಕಾಲ ಬದಲಾದಂತೆ ಅದರ ವಿಸ್ತಾರವು ಕೂಡ ಬದಲಾಗಿದೆ‌ ಹೇಗೆ ? ತನ್ನ ವಿಸ್ತಾರದ ಹರಿವನ್ನು ಗಜಲ್ ಲೋಕವು ಬಹು ವಿಸ್ತಾರವಾಗಿ ಹರಡಿಕೊಂಡಿದೆ ಜಗದ ಜಂಜಡ ಗಳಿಗೆ ಮಿಡಿಯುವ ಮನ, ಸದ್ಯದ ಆಗು ಹೋಗುಗಳಿಗೆ ಸ್ಪಂದಿಸುವ ಗಜಲ್, ರಾಜಕೀಯ,ಆರ್ಥಿಕ ಸ್ಥಿತಿ, ಮಹಿಳಾ ಪರ ಹೋರಾಟ ಧ್ವನಿ,ದಬ್ಬಾಳಿಕೆ, ದೌರ್ಜನ್ಯ, ಶೋಷಣೆ, ಗಡಿಯಾಚೆಯು ಪ್ರೀತಿಯ ಹಂಚುವಿಕೆಯ ಹುಡುಕಾಟವನ್ನು ಬಹುತೇಕ ಗಜಲ್ ಕವಿಗಳಲ್ಲಿ ಈಗೀಗ ನೋಡಬಹುದು ಇದು ಒಳ್ಳೆಯ ಬೆಳವಣಿಗೆ. *ಬತ್ತಿದ ಬಾವಿದಂಡ್ಯಾಗ* *ಬತ್ತಿದ ಬಾವಿದಂಡ್ಯಾಗ ಗುಬ್ಬಚ್ಚಿಗಳ ಪಾದ ನಲುಗ್ಯಾದೊ |*ಬ್ಯಾಸಗಿ ಹೊಡೆತಕ್ಕೆ ಇರುವೆಗಳ ಪಾದನಲುಗ್ಯಾದೊ | ಈ ಮತ್ಲಾ ಗಮನಿಸಿದಾಗ ಈಗ ಗುಬ್ಬಚ್ಚಿ ಕಣ್ಮರೆಯಾಗಿ ಪರಿಸರದಲ್ಲಿ ಅವುಗಳ ಕಲರವ ಇಲ್ಲದೆ ಮನುಜ ಮೂಕವಾಗಿದ್ದಾನೆ .ಮಳೆ‌ವಿಲ್ಲದೆ ಸಣ್ಣ ಜೀವಿ ಇರುವೆ ಕೂಡಾ ಬಹಳ ತೊಂದರೆಯಲ್ಲಿ ಇವೆ ಎನ್ನುವ ಅವರ ಪರಿಸರ ಕಾಳಜಿಯ ಪ್ರಸ್ತುತ ಮನುಜ ದುರಾಸೆಯನ್ನು ಈ ಮತ್ಲಾದಲ್ಲಿ ಗಮನ ಸೆಳೆಯುತ್ತದೆ. *ಅಳುವ ಮೋಡದ ಕಣ್ಣಿಗೆ* *ಅಳುವ ಮೋಡದ ಕಣ್ಣಿಗೆ‌ ನೆಲದ ಬಾಯಿ ಕಂಡಾಗ ಎಂಥಾ ಚಂದ |**ಕೊರಗೊ ರೆಂಬೆಯ ಒಡಲಿಗೆ ಮಣ್ಣ ನಗು ಸಿಕ್ಕಾಗ ಎಂಥಾ ಚಂದ |* ನಾಡಿನಲ್ಲಿ ‌ಮಳೆ ಬೆಳೆ ಎಲ್ಲಾ ಕಾಲಕ್ಕೆ ತಕ್ಕಂತೆ ಸರಿಯಾಗಿ ಆದರೆ ಬಹಳ ಚಂದ ,ಸಾಯುವ ಜೀವಕ್ಕೆ ಹಿಡಿ ಆಶ್ರಯ ಸಿಕ್ಕರೆ ಎಷ್ಟೋ ಆ ಮನ ಸಂತಸ ಗೊಳ್ಳುತ್ತದೆ ಅಲ್ಲವೆ ಕಲ್ಪನೆಯನ್ನು ಕವಿ ನಿತ್ಯ ಪರಿಚರ ಮೂಲಕ ಹೇಳಿದ್ದಾರೆ.ವ್ಹಾ.! *ಕಂಬನಿಯ ಪಾತ್ರೆ* *ಅವಳು ರಾತ್ರಿಯ ಬೆದೆಗೆ ನಲುಗಿ ಕನಸುಗಳ ಕಣ್ಣೀರು ಸುರಿದಳು |**ನನ್ನ ಹೃದಯದ ಪದ ಮಧು ಶಾಲೆಯ ಜೋಗುಳವಾಗಿ ತೇಲುತ್ತಿತ್ತು |* ಕವಿ ಅವಳು ರಾತ್ರಿ ಬೆದರಿ ,ಕನಸುಗಳು ಕಮರಿ ನಯನಗಳು ಒದ್ದೆಯಾದವು ಆ ನೋವಿಗೆ ಹೃದಯ ವೀಣೆ ಜೋಗುಳವಾಗಿ ಹಾಡುತ್ತಿತ್ತು ಬಹಳ ಸುಂದರವಾದ ವರ್ಣನೆ ಸಹಜವಾಗಿ ಮೂಡಿ ಬಂದಿದೆ. *ಖುತುಮಾನಗಳಿಗೊಂದು ಪತ್ರ* *ಇಬ್ಬನಿಯ ಹಿಗ್ಗಿನಲಿ ತೇಲುವ ಕರುಳ ಕುಟುಕಿನ ಜೋಳದ ಕುಡಿ ನಾನು**ಮುಸುಕದಿರಿ ಸಂತತಿಯ ಬೀಜ ನೆಲದ ತೇವ ಹಿಡಿದಾಡಿಸುವ ಕಾಲ* ಪ್ರತಿ ಅಣುರೇಣು ಕೂಡಾ ಸಂತೋಷದಲ್ಲಿ ತೇಲುವ ಸಮಯದಲ್ಲಿ ಸ್ವಲ್ಪವಾದರೂ ಆಶೆಯ ಭಾವನೆಗಳನ್ನು ಹೊಂದಿರುತ್ತದೆ, ಜೀವ ಸಂತತಿಯ ಹಾಳು ಮಾಡದಿರಿ ನೆಲದ ಋಣವ ತೀರಿಸಲು ಬಿಡಿ ಎಂದ ಆರ್ಥಾನಾದ ಭಾವ ಬಹುತೇಕ ಇವರ ಗಜಲ್ ಗಳಲ್ಲಿ ಕಾಣಬಹುದು ‌. *ಕತ್ತಲಿನಾಚೆ* *ಪ್ರೀತಿ ಗೆಲ್ಲದ ಪದಗಳು ಎಷ್ಟು ಹಾಡಿದರೇನು ! ಬೆಳಕಿನಾಚೆ**ಎದೆಗೆ ನಾಟದ ಧರ್ಮಗಳ ಎಷ್ಟು ಹುಡುಕಿದರೇನು ಕತ್ತಲಿನಾಚೆ‌* ಹೃದಯಗಳ ಭಾಷೆಯನ್ನು ಅರಿತು ಪ್ರೀತಿಯಿಂದ ಜಗವ ಗೆಲ್ಲಬೇಕು ಆ ಪದಗಳು ಪ್ರೀತಿಯಿಲ್ಲದ ಮೇಲೆ ಹೇಗೆ ಹುಟ್ಟುತ್ತವೆ ಎಂಥಾ ಮಾತು ಈ ಸಾಲು ನಾಡಿನ ಹಿರಿಯ ಕವಿಯಾದ ಡಾ | ಜಿ.ಎಸ್.ಶಿವರುದ್ರಪ್ಪ ಕವಿತೆ ನೆನಪಿಗೆ ಬಂತು.ಎದೆಯಲ್ಲಿ ಪ್ರೀತಿಯನ್ನು ನಾಟದ ಧರ್ಮ ಇದ್ದರೆಷ್ಟೊ ಬಿಟ್ಟರೆಷ್ಟೊ ! *ಪ್ರೀತಿ ಬಟ್ಟಲು* *ಫಲವತ್ತಾದ ಪೈರನು ಬೆಳೆದ ರಾಶಿಯಾದ ಕೈಗಳು**ಹುತ್ತದ ಬಳ್ಳಿಯಲ್ಲಿ ಒಡಲ ಸವಿಗಾಗಿ ತಡಕಾಡಿದವು* ರೈತ ತನ್ನ ನೆಲದವ್ವನ್ನು ಪ್ರೀತಿಯಿಂದ ಬೆಳೆಗಳನ್ನು ಬೆಳೆದು ಜಗಕ್ಕೆ ಅನ್ನವನ್ನು ನೀಡಿದ ಕೈಗಳು ಇಂದು ಆಧುನಿಕ ಕಾಲದ ವಿಷಪೂರಿತ ಕ್ರಿಮಿನಾಶಕಗಳ ಹಾವಳಿ,ನೀರಿಲ್ಲದೆ ಒಣ ಭೂಮಿಯಲ್ಲಿ ನಾಳೆಯ ಕಾಳಿಗಾಗಿ ಪರಿತಪಿಸುವ ಕಾಲ ಬಂದಿದೆ. *ಕುರಿ ಕಾಯುವ ನನ್ನೊಳಗ* *ನೇಗಿಲ ಹೂಡೋ ನನ್ನೊಳಗೆ ನೀನು ಹದವಾದ ಮಣ್ಣಿನ್ಹಂಗ**ನೆಲಕ್ಕುರುಳೋ ಎಲೆಗಳ ದನಿಯಲಿ ಹೊಸ ಚಿಗುರಿನ ನೆಲೆಯ್ಹಂಗ* ಈ ಷೇರ್ ಗಮನಿಸಿದಾಗ ನೇಗಿಲಯೊಳಗೆ ಅಡಗಿದೆ ಕರ್ಮವೆಂಬ ಕುವೆಂಪು ನೆನಪಿಗೆ ಬರುತ್ತದೆ.ಬದುಕಿನ ಬಹು ಪಾಲು ನಾವು ಮಣ್ಣಿನೊಂದಿಗೆ ಕಲಿಯಬೇಕು ಅವಳು ಹದಭರಿತವಾದ ಮಣ್ಣು ಎಂಬ ಹೋಲಿಕೆ ಸಹಜವಾಗಿದೆ.ಹೊಸ ಬೆಳಕಿನಲಿ ಜೀವನದಲಿ ನೆಲಕ್ಕೆ ಎಲೆಗಳು ಉರುಳಿ ಮರಳಿ ನೆಲದ ಋಣವನ್ನು ತೀರಿಸಬೇಕು,ಮತ್ತೆ ಹುಟ್ಟುವ ವಸಂತ ಚಿಗುರಿನ ನೆಲೆಯ್ಹಂಗ ಬಹಳ ಮಾರ್ಮಿಕವಾದ ಸಾಲುಗಳು. *ನೆಲದ ಮಾತಾಗಿ ಉಳಿದವು* *ಅಲೆಯ ಬಡಿತಗಳ ಅರಗಿಸಿ ಮುತ್ತುಗಳ ದನಿಯಾತು ಬೆವರು**ಹಜ್ಜೆಗಳ ಸವೆತ ಉಂಡ ರಸ್ತೆಗಳು ದೀಪಗಳ ನೆರಳಾಗಿ ಉಳಿದವು* ಕಷ್ಟಕಾರ್ಪಣ್ಯಗಳನ್ನು ನುಂಗಿದ ಜೀವ ಮುಂದೊಂದು ದಿನ ಸಿಹಿಯಾದ ಸವಿಗಳಿಗೆ ಅನ್ನು ಸವಿಯಬಲ್ಲದು ಅದರಂತೆ ಇಟ್ಟ ಹೆಜ್ಜೆ ಹೋರಾಟದ ಬದುಕಿನಲ್ಲಿ ಕಳೆದು ಹೋದ ದಿನಗಳಲ್ಲಿ ಆ ರಸ್ತೆಗಳೇ ಮುಂದೆ ನಿನಗೆ ದಾರಿದೀಪವಾಗಿ ಬೆಳಗಬಲ್ಲ ವೆಂಬ ಶ್ರಮಿಕರ ದಮನಿತರ ನುಡಿ ಈ ಸಾಲಿನಲ್ಲಿ ಕಾಣಬಹುದು. ಅವರ ಗಜಲ್ ಗಳನ್ನು ಗಮನಿಸುತ್ತಾ ಹೋದರೆ ಬಹುತೇಕ ಗಜಲ್ ಗಳು ತನ್ನ ಸುತ್ತಮುತ್ತಲಿನ ಅನುಭವಿಸಿದ ನೆಲಮೂಲದ ಅನುಭವಗಳ ಕಟ್ಟಿಕೊಟ್ಟ ಗಜಲ್ ಸಂಕಲನ ಎಂದು ಹೇಳಬಹುದು ಆದರೆ ಈ ಗಜಲ್ ಸಂಕಲನದಲ್ಲಿ 35 ಗಜಲ್ ಗಳು ಒಳಗೊಂಡಿವೆ. ಆದರೆ ಕವಿ ಏಕೋ ಒಂದೇ ಬಗೆಯ ಪ್ರಕಾರಕ್ಕೆ ಸೀಮಿತಗೊಂಡಂತೆ ಚೌಕಟ್ಟನ್ನು ಹಾಕಿಕೊಂಡಿದ್ದಾರೆ ಎಂದು ನನಗನಿಸುತ್ತದೆ.ಇವರ 30 ಗಜಲ್ ಗಳು ಮುರದ್ದಪ್  ಗಜಲ್ ಗಳಾಗಿದ್ದು ,ಉಳಿದ 5 ಗಜಲ್ ಗಳು ಗೈರಮುರದ್ದಪ್, ಒಟ್ಟಾರೆಯಾಗಿ ಒಂದೇ ಪ್ರಕಾರದ ಗಜಲ್ ಪುಸ್ತಕ ಮಾಡಿದ್ದರೆ ಓದುಗರಿಗೆ ಇನ್ನೂ ಚೆನ್ನಾಗಿತ್ತೇನೋ ಓದಿದಾಗ ಅನಿಸಿದ ಭಾವನೆ. *ಗಜಲ್ ಗಳೆಂದರೆ ಹಾಡುಗಬ್ಬ* ಸುಲಭವಾಗಿ ಹಾಡಿ ಅವುಗಳು ನಮ್ಮ ಮನವನ್ನು ತನಿಸಿ ಮತ್ತೆ ಮತ್ತೆ ನಮ್ಮೊಳಗೆ ಧ್ಯಾನಿಸುವಂತೆ ಮಾಡಬೇಕು ಇವರ ಬಹುತೇಕ ಗಜಲ್ಗಳು ಹಾಡಲು ಬರುವುದಿಲ್ಲ ,ಆದರೆ ಭಾವನೆ ತೀವ್ರತೆ, ಅಭಿವ್ಯಕ್ತಿ ಉತ್ಪ್ರೇಕ್ಷೆ ಎಲ್ಲವನ್ನು ಸೇರಿಸಿ ಒಂದು ಕ್ಷಣ ನಮ್ಮೊಳಗೆ ಅವುಗಳನ್ನು ಚಿಂತಿಸುವ ಪ್ರಯತ್ನ ಮಾಡಿದ್ದಾರೆ. ಇವರ ಗಜಲ್ಗಳು ಕಂಡಂತೆ ಕಾಫಿಯಾ ಮತ್ತು ರದೀಪ್ ಬಹಳ ಉದ್ದನೆಯ ಸಾಲುಗಳನ್ನು ಒಳಗೊಂಡಿವೆ , ರದೀಪ್ ಮತ್ತು ಕಾಫಿಯಾ ಕೇಳಿದ ತಕ್ಷಣ ವ್ಹಾ ಎನ್ನುವ ಉದ್ಗಾರ ನಮ್ಮೊಳಗೆ ಪ್ರಜ್ವಲಿಸಬೇಕು.ಆ ರೀತಿಯಲ್ಲಿ ಸಮ ಸಾಲುಗಳುಳ್ಳ ಸರಳ ಪದಗಳನ್ನು ಬಳಸಿದರೆ ಇನ್ನೂ ಚೆನ್ನಾಗಿರುತ್ತದೆಯೆಂದು ಹೇಳಬಹುದು. ಕವಿಯು ಹೊಲ, ರೆಂಟೆ,ಕುಂಟೆ, ಮಣ್ಣು ,ಎಲೆ, ಬೀಜ, ಕಣ್ಣು, ಹೀಗೆ ಇತ್ಯಾದಿ ಪದಗಳ ಸುತ್ತಲೂ ಗಜಲ್ ಗಳು ಗಿರಕಿ ಹೊಡೆದುವೆಂಬ ಭಾವನೆ ವ್ಯಕ್ತವಾಗುತ್ತದೆ , ಹಲವು ಕಡೆ ಬಳಸಿದ ಪದಗಳೇ ಪದೇಪದೇ ಪುನರ್ ಬಳಕೆಯಾಗಿವೆ.ಇಂಥ ಕಡೆ ಸ್ವಲ್ಪ ಗಮನಿಸಬೇಕೆಂಬ ಗಜಲ್ ಓದುಗನಾಗಿ,ಗಜಲ್ ಕೇಳುಗನ ವಿನಂತಿ. ಹೀಗೆ ಇವರ ಗಜಲ್ ಸಂಕಲನವನ್ನು ಗಮನಿಸಿದಾಗ ಚಂದನೆಯ ಮುಖಪುಟ ಗಜಲ್ ಗಳಿಗೆ ತಕ್ಕ ಹಾಗೆ ಇರುವ ರೇಖಾ ಚಿತ್ರಗಳು. ಗಜಲ್ ನ ಮೂಲ ಆಶಯವನ್ನು ಕನ್ನಡೀಕರಿಸುವುದು ಬಹಳ ಕಷ್ಟದ ಕೆಲಸ ಆದರೂ ಕವಿವರ್ಯ ಬಹಳ ಜಾಣ್ಮೆಯಿಂದ ಜನಪದಿಯ ಶೈಲಿಯಲ್ಲಿ ಆಡುಮಾತಿನಲ್ಲಿ, ಇವರ ಗಜಲ್ ಕಟ್ಟುವಗಾರಿಕೆ ವಿಸ್ಮಯಗೊಳಿಸುತ್ತದೆ, ನಿತ್ಯ ಬದುಕಿನ ಪ್ರೀತಿಯ ಹುಡುಕಾಟ ನೆಲದ ಮೇಲಿರುವ ಅದಮ್ಯ ಪ್ರೀತಿ,ಕೆಲವು ಕಡೆಗೆ ಮತ್ಲಾ ಮಕ್ತಾ ಸೂಜಿಗಲ್ಲಿನಂತೆ ಗಮನ ಸೆಳೆದು ನಿಲ್ಲಿಸಿಬಿಡುತ್ತದೆ, ಹಿರಿಯರು ಹೇಳಿದಂತೆ ಅನುಭಾವದಲ್ಲಿ ಅಮೃತವೂ ತುಂಬಿರುತ್ತದೆ ಹಾಗೆ ತತ್ವಪದಗಳಲ್ಲಿ,ವಚನಗಳ ಆಗಲಿ, ಸೂಫಿ ಸಾಹಿತ್ಯ,ಹೀಗೆ ಎಲ್ಲವೂ ಆ ಕಾಲಘಟ್ಟದ ನಡುವೆ ನಮ್ಮ ನೆಲವನ್ನು ಒಂದು ಕ್ಷಣ ಮಂತ್ರಮುಗ್ಧ -ರನ್ನಾಗಿ ಆಗಿನ ವ್ಯವಸ್ಥೆಯನ್ನು ಬಿಂಬಿಸುತ್ತದೆ, ಇವರು ಕೂಡ ತಮ್ಮ ಸುತ್ತಲಿನ ಪರಿಸರವನ್ನು ಬಿಂಬಿಸಿ ಗಜಲ್ ಮೂಲಕ ಪುಸ್ತಕವನ್ನು ಸಾಹಿತ್ಯಲೋಕಕ್ಕೆ ನೀಡಿದ್ದಾರೆ ನಮ್ಮೆಲ್ಲರನ್ನು ಹೊಸ ಬಗೆಯ ಒಳನೋಟವನ್ನು ಇಣುಕಿ ಇಣುಕಿ ನೋಡುವಂತೆ ಈ ಪುಸ್ತಕವು ಮಾಡುತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ.ಪುಸ್ತಕ ಬಹಳ ಆಕರ್ಷಕವಾಗಿದೆ ಜೊತೆಗೆ ಬಳಸಿದ ಕಾಗದಗಳು ಮತ್ತು ಮುದ್ರಣವನ್ನು ಸುಂದರವಾಗಿ ಮಾಡಿದ್ದಾರೆ,ಅವರಿಗೂ ಪ್ರೀತಿಯ ಸಲಾಂ. ಹೊಸ ಪುಸ್ತಕಗಳು ಬಂದಾಗಲೆಲ್ಲ ಆ ಪುಸ್ತಕವನ್ನು ಕೊಟ್ಟು ಓದಿನ ರುಚಿ ಹಚ್ಚುವ ಬೆನ್ನುಬಿದ್ದು ಅದರ ಬಗ್ಗೆ ಟಿಪ್ಪಣಿ ಬರೆಸುವ ಕಥೆಗಾರರಾದ ಅನಿಲ್ ಗುನ್ನಾಪೂರ ಅವರಿಗೆ ಪ್ರೀತಿ ಪೂರ್ವಕವಾದ ಧನ್ಯವಾದಗಳು. ಪುಸ್ತಕದ ಹೆಸರಿನಲ್ಲಿಯೂ ಕೂಡ ವಿಸ್ಮಯ ಅಲೆವ ನದಿ* ಈ ಪುಸ್ತಕವನ್ನು ನೀವುಗಳು ಕೊಂಡು ಓದಿ ನಿಮಗೂ ಕೆಲವು ಬದುಕಿನ ಅಲೆದಾಟದ ಚಿತ್ರಣವು ದೊರಕುತ್ತದೆ ಎಂದು ಹೇಳಬಹುದು, ಸಾಹಿತ್ಯಲೋಕಕ್ಕೆ ಈ ರೀತಿಯ ಇನ್ನೂ ಹೆಚ್ಚಿನ ಪುಸ್ತಕಗಳು ವಿಭಿನ್ನವಾಗಿ ಕಿರಸೂರ ಗಿರಿಯಪ್ಪನವರಿಂದ ಬರಲಿ ಎಂದು ಶುಭ ಹಾರೈಸುತ್ತೇನೆ  **************************************** ಮುತ್ತು ಬಳ್ಳಾ ಕಮತಪುರ

ಪುಸ್ತಕ ಪರಿಚಯ Read Post »

ಪುಸ್ತಕ ಸಂಗಾತಿ

ಅಂತರಂಗದ ಆಲಾಪ ಕವಿತೆಗಳು

ಪುಸ್ತಕ ಪರಿಚಯ ಅಂತರಂಗದ ಆಲಾಪ   ಕವಿತೆಗಳು ಅಂತರಂಗದ ಆಲಾಪ   ಕವಿತೆಗಳು ಸುಜಾತಾ ಎನ್        ” ಬೆಚ್ಚನೆಯ ಕೌದಿಯ ತುಂಡುಗಳು”             ಸುಜಾತಾ ಎನ್ ಮೈಸೂರಿನವರು. ಭಾರತೀಯ ಜೀವವಿಮಾ ನಿಗಮದ ಉದ್ಯೋಗಿ. ಕಾಲೇಜು ದಿನಗಳಲಿ ಬರವಣಿಗೆ ಇದ್ದರೂ ಎಲ್ಲವನೂ ಬಿಟ್ಟು ನೌಕರಿ, ಸಂಸಾರದಲ್ಲಿ ನೆಲೆನಿಂತು ವಾತಾವರಣಕ್ಕೆ ತಕ್ಕಂತೆ ಕಳೆದ ಮೂರ್ನಾಲ್ಕು  ವರ್ಷಗಳಿಂದ ಮತ್ತೆ ಬರವಣಿಗೆಯಲಿ ನಿರತರಾಗಿರುವರು. ಕಥೆ,ಕವಿತೆ, ವಿಮರ್ಶೆ ,ಲೇಖನಹೀಗೆ ಎಲ್ಲ ಪುಟಗಳನ್ನೂ ತಿರುವಿ ನೋಡಿದವರೇ. ಫೇಸ್ಬುಕ್ , ವಾಟ್ಸಪ್ ಗುಂಪುಗಳ ಮೂಲಕ ತಮ್ಮದೇ ಆದ ವಿಶಿಷ್ಟ ಓದುಗರನ್ನು ಕಲೆಹಾಕಿ , ಸಂಘಟಿಸಿ ಸ್ಪರ್ಧೆ , ಬಹುಮಾನಗಳ ಮೂಲಕ  ತಾವೂ ಬರೆದರು ತಮ್ಮ ಸುತ್ತಮುತ್ತಲಿನವರನ್ನೂ ಬರಹಕೆ ತೊಡಗಿಸಿಕೊಳ್ಳಲು ಪ್ರೇರೇಪಿಸಿ ಕೊಂಡ ಎಂ.ಕಾಂ. ಪಧವೀಧರೆಯಾದ ಇವರಿಗೆ ಈಗ ಕನ್ನಡ ಸಾಹಿತ್ಯವೇ ಉಸಿರಾಗಿದೆ. ಬೆಂಗಳೂರಿನ ಹೆಚ್.ಎಸ್.ಆರ್.ಎ ಪ್ರಕಾಶನ ಪ್ರಕಟಿಸಿದ ಸುಜಾತಾ ಅವರ ಮೊದಲಿನ ಸಂಕಲನವಾದ ಈ  ” ಅಂತರಂಗದ ಆಲಾಪ ” ದ  ನೂರು ಪುಟಗಳಲ್ಲಿ  76 ಕವಿತೆಗಳಿವೆ. ತನ್ನ ಮುತ್ತಮುತ್ತಲಿನ ಸಾಮಾನ್ಯ ಜನರು ಕಂಡುಂಡ  ಸಂಗತಿಗಳೇ ಇವರ ಕವನಕ್ಕೆ ಸ್ಪೂರ್ತಿಯಾಗಿದೆ. ಹೊಸ ಹುಡುಗ, ಹೊಸ ಕ್ಯಾಮರಾ ಕೊಂಡಾಗ ಕಂಡದ್ದೆಲ್ಲಾ  ಕ್ಲಿಕ್ಕಿಸುವಂತೆ ಸುಜಾತಾ ತಮ್ಮ ಅಕ್ಷರಗಳ ಮೂಲಕ ಉತ್ಸಾಹದಲ್ಲಿ ಕಂಡುಕಂಡದ್ದೆಲ್ಲಾ  ಮನನ ಮಾಡಿ  ಕವಿತೆಯ ರೂಪ ನೀಡಿರುವರು.   ಸಂಸಾರ , ಕಛೇರಿಯ ಕೆಲಸದ ಒತ್ತಡದ ನಡುವೆಯೂ  ಸದಾ ಕ್ರಿಯಾಶೀಲರಾದ ಇವರು ಕನ್ನಡ ಪ್ರೀತಿಗೆ ಅಭಿನಂದನಾರ್ಹರು ಮನೆ ಮನಗಳಲಿ ತುಂಬಿರಲು ಸ್ನೇಹ ಸೌಹಾರ್ದ ಸಂತೃಪ್ತಿಯ ಅನುಭೂತಿ ತುಂಬಿರುವ ಮನ ಆರ್ದ ಪರಸ್ಪರ ಸಹಕಾರದ ಸಹಬಾಳ್ವೆಯದೇ ಆನಂದ ವಿಶ್ವಕುಟುಂಬದೀ ಪರಿಕಲ್ಪನೆಯ ನಾ ಇಷ್ಟ ಪಟ್ಟೆ. ” ನಾ ಇಷ್ಟಪಟ್ಟೆ ” ಕವಿತೆಯಲಿ ಮಾನವೀಯ ಮೌಲ್ಯಗಳ ಕುರಿತು ಬರೆಯುತ್ತಾ , ಸ್ನೇಹ ಸೌಹಾರ್ದತೆ ಸಂತೃಪ್ತಿ , ಸಹಕಾರದ ಬಾಳ್ವೆಯಿಂದ ನಾವು ವಿಶ್ವಕುಟುಂಬದ ಪರಿಕಲ್ಪನೆಯಲಿ ಬದುಕಬೇಕು. ದ್ವೇಷ , ದುರಹಂಕಾರದಿಂದ ಬದುಕಿ ಏನು ಪ್ರಯೋಜನ. ಕಂದನ ಮುಗ್ಧ ನಗು , ಬಣ್ಣ ಬಣ್ಣದ ಹೂವು , ಜುಳುಜುಳು ನಿನಾದದ ನದಿ  ಇವುಗಳಂತರಂಗವ ಕಂಡು ನಾವು ಪರಸ್ಪರ ಪ್ರೀತಿ ವಿಶ್ವಾಸದಿಂದ ಬದುಕುವದೇ ತನಗೆ ಇಷ್ಟ ಎಂದು ಕವಿ ತಮ್ಮ ಮನದಾಳದ ಇಂಗಿತವನ್ನು ಅಕ್ಷರಗಳಾಗಿಸಿರುವರು. ” ಅಭಿನೇತ್ರಿ ” ಕವಿತೆಯಲಿ ಜೀವನದ ರಂಗಭೂಮಿಯಲಿ ಭೂಮಿಕೆಗಳ ನಿರ್ವಹಿಸುತ್ತಾ ಅಸ್ಮಿತೆಯಾಗಿ ತನ್ನ ಅಸ್ತಿತ್ವದ  ಸುಳಿವ ಹೊಳಹಿಸುತ್ತಾ ಬಾಳ ಗಮ್ಯದ ಕಡೆಗೆ ಪಯಣಿಸುತಿಹ ಯಾತ್ರಿ ಓ ಹೆಣ್ಣೆ ನಿಜ ಅರ್ಥದಲಿ ನೀನು ಶ್ರೇಷ್ಠ ಅಭಿನೇತ್ರಿ. ಎಂದು ಹೆಣ್ಣಿನ ಅಸ್ಮಿತೆಗಾಗಿ  ಮನದ ಮಾತನಾಡಿರುವರು. ಹೆಣ್ಣು ಈ ಭೂಮಿಗೆ ಬರುವ ಮೊದಲೇ ಸಾಕಷ್ಟು ಅವಮಾನವನ್ನು ಸ್ವಾಗತಿಸಬೇಕಿದೆ. ಅವಳು ಮುಂದೆ ನಿರ್ವಹಣೆ ಮಾಡಬೇಕಾದ ಪಾತ್ರಗಳು ಕಣ್ಮುಂದೆ ಬರುವದು. ಮಗಳು / ಸಹೋದರಿ/ ಸಂಗಾತಿ/ ತಾಯಿ…. ಹೀಗೆ ಎಲ್ಲವೂ ಆಗಿರುವಳು ಹೆಣ್ಣು. ಆದರೂ ಅವಳಿಗೆ ಅವಮಾನ ಅನುಮಾನಗಳು ಸದಾ ಕಟ್ಟಿಟ್ಟ ಬುತ್ತಿ. ಹೆಣ್ಣೆಂದರೆ  ಎಲ್ಲಾ ಪಾತ್ರಗಳನ್ನೂ ನಿರ್ವಹಿಸುವ ಅಭಿನೇತ್ರಿ ಎಂದಿರುವರು. ಹವ್ಯಾಸಿ ಬರಹಗಾರರಾದ ಮೈಸೂರು ನಾಗೇಶ , ಈ ಪುಸ್ತಕಕೆ ಮುನ್ನುಡಿ ಬರೆಯುತ್ತಾ ….. ” ನಿರಂತರ ಕಾವ್ಯ ಸೇವೆಯಲ್ಲಿ ತೊಡಗಿಕೊಂಡಿರುವ ಸುಜಾತಾರವರದು ಹಲವಾರು ಸಾಮಾಜಿಕ ಮಾಧ್ಯಮಗಳಲ್ಲಿ ನಿರಂತರ ಕಾಣಿಸುವ ಹೆಸರು. ದುಡಿಯುವ ನಡುವಿನ ಬಿಡುವಲ್ಲಿ ಬರೆದ ಕವನಗಳನ್ನು ಪ್ರಕಟಿಸುತ್ತಲೋ, ಹಲವಾರು ಗುಂಪಿನ ಸ್ಪರ್ಧೆಯಲ್ಲಿ ಪಾಲ್ಗೊಳ್ಳುತ್ತಲೋ, ಬರೆಯುವ ಇತರ ಬರಹಗಾರರನ್ನು ಪ್ರೋತ್ಸಾಹಿಸುತ್ತಲೋ, ಒಂದಲ್ಲ ಒಂದು ರೀತಿಯಲ್ಲಿ ಸಕ್ರಿಯವಾದ ವ್ಯಕ್ತಿತ್ವ ಇವರದು.ಹೆಣ್ಣಿನ ಅಂತಃಕರಣ, ಮನಃಸತ್ವಗಳ ಕ್ಯಾನ್ವಾಸಿನಲ್ಲಿ ಬಿತ್ತನೆಯಾಗುವ ವೈವಿಧ್ಯಮಯ ಸಂಗತಿಗಳೆಲ್ಲದ್ದಕ್ಕೂ ಕವನದ ದಿರಿಸುಡಿಸಿ ನಲಿವಿನ ರಮ್ಯೋದ್ಯಾನವಾಗಿಸುವ ಪ್ರಯತ್ನ ಇಲ್ಲಿ ಸಾಕಾರ. ವಸ್ತು, ವಿಷಯದ ಪರಿಮಿತಿ ಇಲ್ಲದೇ ದೈನಂದಿನವೆಲ್ಲದರ ಪ್ರಭಾವವನ್ನೇ ಸರಕಾಗಿಸಿಕೊಂಡ ಕವಿತೆಗಳಿವು ” ಎಂದಿರುವರು. ಹೆಣ್ಣು ತ್ಯಾಗಮಯಿ ಸಹನಶೀಲೆಎಂತೆಲ್ಲಾ ಹೊಗಳಿಕೆಯ ಪದವಿಯಿತ್ತವರು.ದುರಂತವೆಂದರೆ ಕಾಣದ್ದು ಆ ಹೊನ್ನಶೂಲದಡಿ ಭಾವನೆಗಳಿಗಾಗುತ್ತಿಹ ಶೋಷಣೆಯ ಅರ್ಧಸತ್ಯ. ಎನ್ನುತ್ತಾ “ಅರ್ಧಸತ್ಯ ” ಕವಿತೆಯಲ್ಲಿ  ಹೆಣ್ಣಿನ ನೋವನ್ನು ಅರ್ಧಸತ್ಯದಲಿ ಬಿಚ್ಚಿಡುತ್ತಾ ಹೋಗುವರು. ಈ ಸಮಯ ಸಾಧಕರದು ಬರೀ ಹೊಗಳಿಕೆಯೆ.ತಮ್ಮ ಬೇಳೆ ಬೇಯಿಸಿಕೊಳ್ಳುವ ಮುಖವಾಡಿಗರು ಹೊಗಳಿ ಹೊಗಳಿ ಅಟ್ಟಕ್ಕೆ ಏರಿಸಿ ನಂತರ ಪ್ರಪಾತಕ್ಕೆ ನೂಕಿಬಿಡುವರು. ಬೂದಿ ಮುಚ್ಚಿದ ಕೆಂಡದಂತೆ ಕಾಣುವದೆಲ್ಲಾ ಅರೆಸತ್ಯವೇ ! ಇವೆಲ್ಲವೂ ಸುಳ್ಳಿನ ಕವಚದಲಿ ಹುದುಗಿರುವುದೇ ಆಗಿರುತ್ತದೆ. ಯಾವುದೇ ದೇಶವಿರಲಿ , ಭಾಷೆಯಿರಲಿ , ಧರ್ಮವಿರಲಿ ಅಲ್ಲೆಲ್ಲಾ ಹೆಣ್ಣಿನ ಶೋಷಣೆಗಳು ನಿತ್ಯನಿರಂತರವೇ . ಕನ್ನಡ ಸಾಹಿತ್ಯವನ್ನು ಆಳವಾಗಿ ಅಭ್ಯಸಿಸಿ ಅರಿತ ಸುಜಾತಾರವರ ಸಹೋದರಿ ವೈಶಾಲಿ ರಾವ್ ಅಕ್ಕನ ಕವಿತೆಗಳ ಕುರಿತು ಬರೆಯುತ್ತಾ…..ಹೆಸರಿಗೆ ತಕ್ಕಂತೆ ಎಲ್ಲಾ ಕವನಗಳೂ ಈ ಕವಯತ್ರಿಯ ಅಂತರಂಗದ ಆಲಾಪವಾಗಿದೆ. ಸಂಗೀತದಲ್ಲಿ, ರಾಗಾಲಾಪನೆಯಿಂದ ಆಯಾ ರಾಗದ ವ್ಯಕ್ತಿತ್ವವನ್ನು ಸ್ಪಷ್ಟವಾಗಿ ಮೂಡಿಸುವದು ಹೇಗೆ ಮುಖ್ಯವೋ, ಅದೇ ರೀತಿ ಸುಜಾತಾರವರು ತಮ್ಮ ಅಂತರಂಗದ ಆಲಾಪನೆಯಿಂದ ಪ್ರತಿಯೊಂದು ಕವಿತೆಗೂ ನಿರ್ದಿಷ್ಟ ವ್ಯಕ್ತಿತ್ವವನ್ನು ರೂಪಿಸಿದ್ದಾರೆ. ಬದುಕಿನ ನಾಗಾಲೋಟದಲ್ಲಿ ಸಂಬಂಧಗಳು ಕಾಣೆಯಾಗುತ್ತಿದೆ ; ಆದರೆ ದುರದೃಷ್ಟವೆಂದರೆ ಸಂಬಂಧಗಳಿರಲಿ, ನಮ್ಮನ್ನು ನಾವೇ ಕಾಣದಂತಾಗಿರುವ ಕಾಲಘಟ್ಟದಲ್ಲಿ ನಾವಿದ್ದೇವೆ. ಭಾವನೆಗಳಿಗೆ ಅಕ್ಷರ ರೂಪ ನೀಡುವದರೊಂದಿಗೆ, ಪದಗಳ ಮಧ್ಯೆ ಪದಪುಂಜಗಳ ಲಾಲಿತ್ಯವನ್ನೂ ಸೇರಿಸಿದರೆ ಮಾತ್ರ ಅದು ಕವಿತೆ ಎನಿಸಿಕೊಳ್ಳುವದು. ಆ ಜಾಣ್ಮೆಯನ್ನು ಸುಜಾತಾ ಸಾಬೀತು ಪಡಿಸಿರುವರು…. ಎಂದಿರುವರು. ” ಅನ್ನದಾತ ” ಕವಿತೆಯಲ್ಲಿ ದೇಶದ ಬೆನ್ನೆಲುಬಾದ ರೈತರ ಕುರಿತಾಗಿ  ಬರೆಯುತ್ತಾ… ಆ ಪ್ರಕೃತಿ ಮಾತೆಗೂ ನಿನ್ನ ಮೇಲೆ ಕೋಪ  ಆಗಾಗ ತೋರುವಳು ತನ್ನ ಪ್ರತಾಪ ಅತಿವೃಷ್ಟಿ ಅನಾವೃಷ್ಟಿ ಪ್ರವಾಹಗಳ ಪ್ರಕೋಪ ಯಾವುದೇ ಇರಲಿ ಹೆಚ್ಚಿಸುವದು ಮನದ ತಾಪ ಎನ್ನುತ್ತಾ….. ನೀನು ಪಟ್ಟ ಶ್ರಮಕ್ಕೆ ತಕ್ಕ ಬೆಲೆ ನಿನ್ನ ಅಸ್ತಿತ್ವಕ್ಕೆ ಸೂಕ್ತ ನೆಲೆ ಸಿಕ್ಕಾಗ ಮಾತ್ರ ದೇಶದ ಉನ್ನತಿ ಇದಿಲ್ಲದಿದ್ದರೆ ಭವಿಷ್ಯ ಅಧೋಗತಿ.. ಎಂಬ ಅರಿವಿನೊಂದಿಗೆ  ರೈತನ ಬವಣೆಯನ್ನು ತೀರಾ ಸಾಮಾನ್ಯ ಜನರೂ ಅರ್ಥೈಸುವಂತೆ ಕವಿ ಇಲ್ಲಿ ತಮ್ಮ ಕವನವನ್ನು ಹೊಸೆದಿರುವರು. ಈ ಪುಸ್ತಕಕೆ ಬೆನ್ನುಡಿ ಬರೆದ ಕವಿ ಮನಸಿನ ಗುರುಮಾತೆ ಎಂ.ವಿಜಯ ಜಯಪ್ರಕಾಶ , ” ಸಂಪಾದನೆ ಮತ್ತು ಸುಖದ ಜೀವನದತ್ತ ವಾಲುತ್ತಿರುವ ಈ ಹೊತ್ತಿನ ಸಂದರ್ಭದಲ್ಲಿ  ಸುಜಾತಾ ವಿಶಿಷ್ಟವಾಗಿ ನಿಲ್ಲುತ್ತಿರುವದು ಅಭಿಮಾನದ ಸಂಗತಿಯಾಗಿದೆ. ತಾಜಾ  ಪ್ರತಿಭೆಯಾದ ಸುಜಾತಾ ರವೀಶ್ ರಿಗೆ ತಮ್ಮ ಬಾಲ್ಯದ ಬದುಕಿನ ಅನುಭವಗಳು ಬರವಣಿಗೆಯ ಮೇಲೆ ಪ್ರಭಾವ ಬೀರಿರುವದನ್ನು ಇಲ್ಲಿಯ ಕವನಗಳಲ್ಲಿ ಕಾಣಬಹುದು. ಕ್ರಿಯಾಶೀಲ ಮನಸ್ಸಿನ ಇವರಿಗೆ  ಸಂಬಂಧಗಳು, ಪ್ರಕೃತಿ, ಸಾಮಾಜಿಕ ಜೀವನದ ಬಗ್ಗೆ ಅತೀವ ಆಸಕ್ತಿ ಇರುವುದು ವ್ಯಕ್ತವಾಗುತ್ತದೆ “. ಎಂದಿರುವರು. ಮತ್ತೆ ಅಮ್ಮನ ಮಡಿಲ ಸೇರಿ ಮಗುವಾಗಿ ಬಿಡುವಾಸೆ ಬೆರಗುಗಣ್ಣಲಿ ಹೊಸದಾಗಿ ಈ ಜಗವ ನೋಡುವಾಸೆ ಪೂರ್ವಗ್ರಹಗಳ ಹಂಗಿಲ್ಲದೇ ಹೊಸ ನಂಟು ಬೆಸೆವಾಸೆ ಮತ್ತೊಮ್ಮೆ ಬಾಲ್ಯವೆಂಬ ಕಡಲಲಿ ಮುಳುಗಿ ಬಿಡುವಾಸೆ ಎಂದು ” ಮಗುವಾಗಿ ಬಿಡುವಾಸೆ ” ಕವಿತೆಯಲ್ಲಿ ಮಗುಮನವನ್ನು ಬಿಚ್ಚಿಡುವರು. ಈ ಧಾವಂತ ಬದುಕಿನಲಿ ಆದೇ ದ್ವೇಷ ಅಸೂಯೆಗಳು , ನಂಬಿಕೆಗಳು ಕಳೆದು ಹೋಗಿದೆ. ಎಲ್ಲೆಲ್ಲೋ ಹಣದ ವ್ಯಾಮೋಹ. ಈ ಬದುಕೇ ಸಾಕಾಗಿ ಬಿಟ್ಟಿದೆ. ಅದಕಾಗಿ ಎಲ್ಲವನೂ ಮರೆತು ಅಮ್ಮನ ಮಡಿಲು ಸೇರಿ ಬಾಲ್ಯವೆಂಬ ಕಡಲಲಿ ಮಗುಮನದಿಂದ ಮುಳುಗುವಾ ಎಂದು ಕವಿ ಆಶಿಸುವರು. ದೇಶ ಕಾಯುವ ಸೈನಿಕನ ಕುರಿತಾಗಿಯೂ ” ಪುಳಕ “ ಕವಿತೆಯಲ್ಲಿ ಬರೆಯುತ್ತಾ , ಇವರ ನಿಸ್ವಾರ್ಥ ಸೇವೆ ನೆನೆದು ಧನ್ಯತೆಯ ಪುಳಕವಾಗುವದು ಎಂಬ ಧನ್ಯತಾಭಾವ  ಮೈಗೂಡಿಸಿಕೊಂಡಿರುವರು. ಈ ಪುಸ್ತಕದ ಕವಿತೆಗಳೊಡತಿ ಸುಜಾತಾ ಎನ್.” ಚಿಕ್ಕಂದಿನಿಂದಲೂ ಕನ್ನಡ ಸಾಹಿತ್ಯ ಓದುತ್ತಲೇ ಬೆಳೆದಿದ್ದೆ.ಈಗ ನಾಲ್ಕು ವರ್ಷಗಳಿಂದೀಚೆ ಸಾಮಾಜಿಕ ಮಾಧ್ಯಮಗಳಾದ ಫೇಸ್ಬುಕ್ ವಾಟ್ಸಾಪ್ ಗಳಲ್ಲಿ ತೊಡಗಿಸಿಕೊಂಡಾಗ ಸಾಹಿತ್ಯ ಚಟುವಟಿಕೆಗಳು ಮತ್ತೆ ಗರಿಗೆದರಿದವು. ಸುಪ್ತವಾದ ಕವಿತೆಯ ಬರವಣಿಗೆಗೆ ಮರುಚಾಲನೆ ದೊರೆಯಿತು. ಮನಸ್ಸಿನ ತೀರಕ್ಕೆ ಭಾವನೆಗಳ  ಅಲೆ ಅಪ್ಪಳಿಸಿದಾಗ ಹುಟ್ಟಿದ ಅಕ್ಷರದ ಸಾಲುಗಳೇ ಈ ಕವನ ಸಂಕಲನ ” ಎಂದಿರುವರು. ಹಳೆಯ ಬಟ್ಟೆಗಳ  ಸಣ್ಣ ಚೂರುಗಳಾಗಿ ಮಾಡಿ ಹೊಲೆಯುವ ಹಾಗೆ ಮೆತ್ತಗಿನ ಬೆಚ್ಚಗಿನ ಕೌದಿ ಎಂಬ ಮನದ ಸುಜಾತಾರವರು ಈ ಎಲ್ಲಾ ಕವಿತೆಗಳನ್ನೂ ಕೌದಿಯ ತೆರನಾಗೇ ವೈವಿಧ್ಯಮಯ ವಿಷಯಗಳಿಂದ ಹೆಣೆದಿರುತ್ತಾರೆ. ಇವರ ಕವಿತೆಗಳು” ಬೆಚ್ಚನೆಯ ಕೌದಿಯ ತುಂಡುಗಳು ” ಇದ್ದಂತೆ. ಕವಿತೆಗಳೆಂದರೆ ಪ್ರಾಸದಿಂದ , ಪ್ರಾಸಕ್ಕಾಗಿ ಬರೆಯುವ ಸಾಲುಗಳಲ್ಲ ಎಂಬುದನ್ನು ಮನಗೊಂಡು ,ಹೆಚ್ಚು ಹೆಚ್ಚು ಪುಸ್ತಕಗಳನ್ನು ಓದಿ ,  ಕನ್ನಡ ಸಾಹಿತ್ಸವನ್ನು ಅಭ್ಯಸಿಸಿ , ಇದೇ ಹುರುಪಿನಿಂದ ಬರೆದರೆ ಇವರಿಂದ ಮುಂದಿನ ದಿನದಲ್ಲಿ ಇನ್ನೂ ಒಳ್ಳೆ ಕವಿತೆಗಳನ್ನು ನಿರೀಕ್ಷಿಸುವಾ ಎಂದು ಹಾರೈಸಿ , ಇವರ ಮೊದಲವೇ ಸಂಕಲನಕ್ಕಾಗಿ  ” ನಾಗಸುಧೆ ” ಯಿಂದ ಶುಭಕೋರಿ ಅಭಿನಂದಿಸುವೆ. ********************************************** ಪ್ರಕಾಶ ಕಡಮೆ

ಅಂತರಂಗದ ಆಲಾಪ ಕವಿತೆಗಳು Read Post »

You cannot copy content of this page

Scroll to Top