ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಪುಸ್ತಕ ಸಂಗಾತಿ

ಪ್ಯಾರಿ ಪದ್ಯ

ಪುಸ್ತಕ ಸಂಗಾತಿ ಪ್ಯಾರಿ ಪದ್ಯ ನಾನಿವತ್ತು ಓದಿದ ಪುಸ್ತಕ       ” ಪ್ಯಾರಿ ಪದ್ಯ “ ******** ಎ.ಎಸ್.ಮಕಾನದಾರರು ಉತ್ತರ ಕರ್ನಾಕಟದಲ್ಲಿ ಅಪಾರ ಪ್ರೀತಿ ಗೌರವಕ್ಕೆ ಕಾರಣರಾದ ಸಾಹಿತಿಗಳ ಒಡನಾಡಿಗಳು.ಸೃಜನಶೀಲ ಸಾಹಿತಿಗಳಾಗಿ,ವಿಮರ್ಶಕರಾಗಿ,ಚಿಂತಕರಾಗಿ ಸಾಹಿತ್ಯ ವಲಯದಲ್ಲಿ ಗುರುತಿಸಿಕೊಂಡ ಸರಳ ಸಜ್ಜನಿಕೆಯ ವ್ಯಕ್ತಿಗಳು.ವೃತ್ತಿಯಿಂದ ಕೌಟುಂಬಿಕ ನ್ಯಾಯಾಲಯದ ಪ್ರಥಮ ದರ್ಜೆ ಸಹಾಯಕರಾಗಿ(ಗದಗ) ಸೇವೆ ಸಲ್ಲಿಸುತ್ತಾ,ಪ್ರವೃತ್ತಿಯಲ್ಲಿ ಉತ್ತಮ ಬರಹದ ಹತ್ತಾರು ಪುಸ್ತಕಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ನೀಡಿದ್ದಾರೆ.ಎ.ಎಸ್.ಮಕಾನದಾರರು,ಕೇವಲ ಸಾಹಿತಿಗಳಷ್ಟೇ ಅಲ್ಲ.ಸ್ವತಹಃ ನಿರಂತರ ಪ್ರಕಾಶನದ ಸ್ಥಾಪಕರು.ಈ ನಿರಂತರ ಪ್ರಕಾಶನಕ್ಕೂ ಕವಿ ಸಾಹಿತಿಗಳಿಗೂ ಅಳಿಸಲಾಗದ ಸಂಬಂಧವಿದೆ.ಅನೇಕ ಉತ್ತಮ ಬರಹಗಾರರ ಕೃತಿಗಳನ್ನು ಕನ್ನಡ ಪುಸ್ತಕ ಲೋಕಕ್ಕೆ ಮೌಲಿಕ ಕೊಡುಗೆ ಕೊಟ್ಟ ಕೀರ್ತಿಯು ಎ.ಎಸ್.ಮಕಾನದಾರರ ಮುಡಿಗೇರಿದೆ.      2020-21 ರ  ವರುಷಗಳ ಕರೋನಾ ಭೀತಿಯ ಸವಾಲು ಎದುರಿಸಿಕೊಂಡು,ಕಷ್ಟ ಕಾಲದಲ್ಲಿಯೂ ಓದು ಬರಹವನ್ನು ತಪಸ್ಸಿನಂತೆ ಮಾಡಿಕೊಂಡಿದ್ದರ ಸಿದ್ಧಿಗೆ ಪ್ಯಾರಿ ಪದ್ಯ ಕಾವ್ಯ ಸಂಕಲನವು ಮಾನವೀಯ ಮೌಲ್ಯಗಳ ನೈಜ ಚಿತ್ರಣವನ್ನೊಳಗೊಂಡು ರೂಪ ತಾಳಿದೆ. ಆಶಯ,ವಸ್ತು,ರೂಪ-ಸ್ವರೂಪಗಳ ಪ್ಯಾರಿ ಪದ್ಯ ವು ಪರಿಮಳ ಚೆಲ್ಲಿದ ಕಾವ್ಯ ಗಂಧವಾಗಿದೆ.ಕೃತಿಯು ಒಂದು ಅನುಪಮ ಮನೋಪಕಾರಗಳ ಕಾಣಿಕೆಯಾಗಿದೆ.ಪುಸ್ತಕದೊಳಗೆ ಬಿಡಿಸಿದ ಚಿತ್ರಗಳಿಗೂ ನುಡಿಗಳಿಗೂ ವಿಚಾರಗಳ ನಂಟಿದೆ.ಈ ಬಗೆಯ ಪದ್ಯಗಳು ಕನ್ನಡದಲ್ಲಿ ಹೊಸತನ ಮತ್ತು ಹಿರಿದರ್ಥ ನೀಡುವ ಸಾರ್ಥಕ ಪ್ರಯತ್ನವೆನ್ನಬಹುದು.ಓದುಗರ ಕುತುಹಲವನ್ನು ಜಾಗೃತಗೊಳಿಸಿ ಅಭಿಮಾನ  ಹೆಚ್ಚಿಸುತ್ತದೆ. ರಚನೆಯಾದ ಸಾಲುಗಳಲ್ಲಿ ಕಣ್ಣಾಯಿಸೋಣ. ನೀನು ಸೂಜಿ ನಾನು ದಾರ ಹೊಲಿಯೋಣ ಗಡಿಗಳನು ಗಂಟೆಗಟ್ಟಲೇ ಕತೆ ಹೇಳಬೇಕಿಲ್ಲ.ಗಡಿ ಸಮಸ್ಯೆಯ ಅಪವಾದ ವಿವಾದಗಳನು ಊಹಾಪೋಹಗಳಿಂದ ಲೇಖಿಸುವುದು ಬೇಕಿಲ್ಲ. ಜಟಿಲವಾದ ಸಂಗತಿಯನ್ನು ಮೃದು ಮಾತಿನಲಿ ಬಿಡಿಸಿದ್ದಾರೆ.ಗಡಿಯ ವಿವಾದಗಳೆಂದರೆ ನಾವೆಲ್ಲರೂ ಹಲುಬುತ್ತೇವೆ.ಮನುಷ್ಯ-ಮನುಷ್ಯರಿಗಿಂತ ಹಿರಿದಾದ್ದೇನಿಲ್ಲ.ಈ ಮಣ್ಣಿನ  ಋಣ,ಭ್ರಾತ್ರುತ್ವದ ನೋವು ನಲಿವುಗಳನು,ಬೆರಳಿಗೆ ಸೂಜಿಯ ಮೊನಚು ತಾಕದಂತೆ ಹೊಲಿಯುವ ನಿಲುವನ್ನು ಕಲಾತ್ಮಕವಾಗಿ ಪ್ರಕಟಪಡಿಸಿದ್ದಾರೆ. ಎ.ಎಸ್.ಮಕಾನದಾರರ ಅನುಭವ ಅಸೀಮವಾದದ್ದು.ಇವರ ಸ್ವಪ್ರತಿಭೆಯು ಓದುಗರ ಅನುರಾಗ ಸೆಳೆದುಕೊಂಡಿರುವುದಕ್ಕೆ ಸಾಕ್ಷಿಯಾಗಿ ಬುದ್ಧನಾಗಲು ಭೋದಿವೃಕ್ಷವೇ ಬೇಕಿಲ್ಲ ಅರ್ಧಾಂಗಿ ಕರುಳ ಕುಡಿಯೂ ತ್ಯಜಿಸಬೇಕಿಲ್ಲ ಮೌನದ ಹಾದಿಯಲಿ ಹಾಡಿದರೆ ಸಾಕು ಕೈಗೆಟುಕದ ಕನಸನ್ನರಸುತ್ತಾ,ಜೀವನವನ್ನು ಕಳೆದುಕೊಳ್ಳುವುದು ಮೂರ್ಖತನವೆ.ಅವರಿವರು ಹುರಿದುಂಬಿಸಿ ಆಕಾಶಕ್ಕೆ ಏಣಿ ಹಾಕುವ ಪೊಳ್ಳು ಮಾತುಗಾರರು ಅಧಿಕವಾಗಿದ್ದಾರೆ.ಬುದ್ಧ,ಬಸವ,ಗಾಂಧಿ,ಮತ್ತು ಅಂಬೇಡ್ಕರ್ ಅವರಂತಾಗಲು ಸಾಧ್ಯವಾಗದಿದ್ದರೂ,ಅವರ ನಡೆ,ನುಡಿಯನು ಜೀವನದಲ್ಲಿ ಪಾಲಿಸಿದರೆ ಸಾಕು. ಸಧ್ಯದಲಿ ನಮಗೆ ಲಭಿಸಿದ ಅವಕಾಶ,ನಮಗಿರುವ ಇತಿಮಿತಿಯನ್ನು ಹಿರಿದುಗೊಳಿಸಿ ಬದುಕಿದರೆ ಸಾಕೆನ್ನುವ  ಕವಿಯ ಚಿಂತನಾ ಕ್ರಮವಾಗಿದೆ. ” ಶಬ್ದಗಳನು ಜಾಲಾಡಿದೆ ಕೋಶವೆಲ್ಲ ತಿರುವಿದೆ ಕಿರು ನಗೆ- ಭೋಧಿ ವೃಕ್ಷವಾಯಿತು *ದೀಪವು ಮತ್ತೊಂದು ದೀಪವನು ಬೆಳಗಿಸುವಂತೆ., ಕಾಡುಗಲ್ಲಿಗೆ ಆಕಾರ ನೀಡುವ ಶಿಲ್ಪಿಯಂತೆ.,ಹೂವುಗಳ ಪೋಣಿಸಿ ಮಾಲೆ ಮಾಡಿದಂತೆ, ಶಬ್ದಗಳ ಕಟ್ಟುವಿಕೆಯೂ ಕವಿಯ ಚಾಣಾಕ್ಷತನ.ಪ್ರಗತಿಪರ ಬರಹಗಾರರ ಆಳವಾದ ಅರಿವು ಕಾಣುತ್ತದೆ. ಇರಿಯಲು ಬಂದ ಚೂರಿಗೆ ಮುತ್ತಿಕ್ಕಿದೆ ಮುತ್ತಿನ ಮತ್ತಿನಲಿ ಚೂರಿ ಮೆತ್ತಗಾಯಿತು ಹಣ,ಹೆಸರು,ಸ್ಥಾನಮಾನ ಹೊಂದಿದವರು ನಾಗರೀಕತೆಯ ಹಮ್ಮಿನಲ್ಲಿರುವವರೀಗ ವಿರಳವೇನಿಲ್ಲ.ಪ್ರಬಲ ಶಕ್ತಿಯ ವಿರುದ್ಧ ತುಟಿ ಬಿಚ್ಚಿದರೆ,ಕೊರಳಿಗೆ ಕುತ್ತು ಬರುವುದು.ಇರಿಯಲು ಬಂದ ಚೂರಿಯೆಂದರೆ ಸಮಾಜದಲ್ಲಿರುವ  ಕೆಲವು ಕೆಟ್ಟ ಹುಳುಗಳೆ  ಹೊರತು ಇನ್ನಾವುದಾಗಿರಲು ಸಾಧ್ಯವಿಲ್ಲ.ಒಳ್ಳೆಯತನದಿಂದ ಒಂದು ಆದರ್ಶ ಮಾರ್ಗದರ್ಶಕರಾಗಿ ಮೃದು ಮಾತಿನಲ್ಲಿ ಸರಿ ದಾರಿಗೆ ತಂದಾಗ ಮಾತ್ರ ಗರ್ದಿತನವು ಮೆತ್ತಗಾಗುತ್ತದೆ. ಶಾಂತಿ ಮಂತ್ರದಿಂದ ನಮ್ಮ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಮಹಾತ್ಮ ಗಾಂಧಿಯು ಜಗದ ಪ್ರಖ್ಯಾತರು. ಸುಟ್ಟುಕೊಂಡ ಬದುಕಿಗೆ ಇದ್ದಿಲು ಆಗುವ ಭಾಗ್ಯವೂ ಇಲ್ಲ ಮೇಲ್ನೋಟಕ್ಕೆ ಬಹು ಸರಳವೆನಿಸದರೂ,ಆಂತರ್ಯದಲ್ಲಿ ಬದುಕಿನ ತತ್ವ ಅಡಗಿದೆ. ದರ್ದಿನ ಮರುಹುಡುಕಾಟವಿದೆ. ಆರಿದ ದೀಪ ಉರಿಸು,ಉರಿವ ದೀಪ ಆರಿಸದಿರು ಜಗದ ಕತ್ತಲೆ ಕಳೆಯಲು ಸಮೆಯ ಬೇಕಾಗಿವುದು ಕನಸುಗಳಿಗೆ ಸಾಕಾಷ್ಟು ಚಿಗರು ಕವಲುಗಳಿವೆ.ಕಡಿಯುತ್ತಾ ಸಾಗಿದರೆ,ದಣಿದವರಿಗೆ ನೆರಳಿಲ್ಲ.ಜ್ಞಾನವು ಬೆಳಕಿನ ಸಂಕೇತವಾಗಿದೆ.ಜ್ಞಾನ ನೀಡುವ ಪರಿಣಿತರನ್ನು ಗೌರವಿಸಬೇಕು.ಸಮೆಯ ಎನ್ನುವುದೂ ಪ್ರಜ್ಞೆಯ ಸೂಚಕ ಪದವೆ.  ಎ.ಎಸ್.ಮಕಾನದಾರರ ಭಾವದ ಹರವು ವಿಶಾಲವಾಗಿದೆ.ಎದೆಯೊಳಗೆ ಉಳಿದು ಬಿಡುವ ವಾಸ್ತವದ ಸಂವೇದನೆಗಳನ್ನು ದಾಖಲಿಸಿದ್ದಾರೆ. ಉಸಿರಾಡುವವರು ಜೀವಂತ ಅದಾರಂತ ಏನು ಗ್ಯಾರಂಟಿ ಸತ್ತವರಲ್ಲಿ ಕೆಲವರು ಜೀವಂತ ಅದಾರಲ್ಲ ಇದಕ ನೀ ಏನಂತಿ? ಒಬ್ಬರು,ಇನ್ನೊಬ್ಬರನ್ನು ತುಳಿದು ಬದುಕುವ ವೃತ್ತಿಯನು ಕರಗತ ಮಾಡಿಕೊಂಡ ವಂಚಕರು ನಿರ್ಭಯದಿಂದ ಇದ್ದಾರೆ. ನೀತಿ ನಿಯಮ,ನಿಯತ್ತುಗಳ ಗಾಳಿಗೆ ತೂರಿ,ದುರ್ಬಲರ ಕನಸು ಕನವರಿಕೆ ಕಸಿದುಕೊಂಡು,ಮನುಷ್ಯತ್ವವನ್ನು ಮರೆತವರು ನಮ್ಮ ನಡುವೆ ಬದುಕುತ್ತಿದ್ದಾರೆ.ಹೀಗೆ ಅಂತವರು ತುಳಿತಕ್ಕೊಳಗಾದವರು,ಸತ್ತೂ ಜೀವಂತ ಉಸಿರಾಡುತ್ತಿದ್ದಾರೆ. ಈ ಪ್ಯಾರಿ ಪದ್ಯ ಸಂಕಲನದೊಳಗೆ ಹಲವಾರು ಸಾಲುಗಳು ಹೃದಯ ಸಂಬಂಧದ ಅನೇಕ ಭಾವುಕ ಎಳೆಗಳು ಪ್ರತಿಬಿಂಬಿತವಾಗಿವೆ. ಶತಮಾನದ ನಂಜಿಗೆ ಯಾವ ಹೊಳೆಯಲ್ಲಿ ತೊಳೆಯಬೇಕಿದೆ ಸಂತ ಶರಣರು ತಿಕ್ಕಿ ತೊಳೆದರೂ ಇನ್ನೂ ಉಳಿದಿದೆ. ಜಾತಿ, ಮತ ,ಪಂಥ, ಧರ್ಮ,ಮತ್ತು ಮೇಲು ಕೀಳು ಗಳ ಕಲಹವು ನಿನ್ನೆ ಮೊನ್ನೆಯದಲ್ಲ.,ಶತ ಶತಮಾನಗಳಿಂದ ಬಂದಿದೆ.ಒಂದೆಡೆಗೆ ಶರಣರು,ಪ್ರವಾದಿಗಳು,ದಾರ್ಶನಿಕರು,ಹಿರಿಯ ಕವಿಗಳು ಹರಗುತ್ತಾ ಬಂದರೂ,ಹಿಂದೆ ಹಿಂದೆಯೇ ರಕ್ತ ಬೀಜಾಸುರನಂತೆ ಜನ್ಮ ತಾಳಿದೆ ನಂಜು.ಇವತ್ತೇ ಈಗಿಂದೀಗಲೇ  ಕಡಲೊಳಗೆ ಅವಿತಿಟ್ಟು ಬಂದರೂ,ನಾಳೆಯ ದಿನ ತುರಿಕೆ ತೊಪ್ಪಲಿನಂತೆ ತೆರೆಯ ಮೇಲೆ ಉರಿದುರಿದು ಬೆವರಿಳಿಸುತ್ತದೆ ವ್ಯವಸ್ಥೆ. ಇಂತಹ ಗ್ರಹಿಕೆಯ ಅನುಭವ ನೀಡಿರುವ ಮಕಾನದಾರರ ಬರಹವು ಬೆರಗು ಮೂಡಿಸುತ್ತವೆ. ಸೋತ ಶಬ್ದಕೆ ಗಂಜಿ ಕುಡಿಸಿದೆ ಒಣಗಿದ ಎದೆಗೂಡಲಿ ಚಿತ್ತಾರ ಬಿಡಿಸಿದೆ **** ಸತ್ಯದ ಕತ್ತು ಹಿಸುಕಿದ ದಿಕ್ಕೇಡಿ ಸುಳ್ಳಿಗೆ ದತ್ತು ಪಡೆದ. ***** ಪುಟ ಪುಟವೂ ತಿರುವಿದೆ ಬಿಳಿಯ ಕಾಗದದಲಿ ಕಣ್ಣೀರು ಶಾಹಿ ಅಸ್ಪಷ್ಟ ಪದಗಳು ಹನಿಸುವ ಹನಿ ಹನಿಗೆ ತೇವಗೊಂಡ ಕಾಗದ ಕಾಗದದ ಕನಿಕರ ಹೃದಯಕ್ಕಿಲ್ಲ. ಪ್ಯಾರಿ ಪದ್ಯ ಸಂಕಲನದ ತುಂಬ, ಭಾವಗಳ ಹೊದಿಕೆ ಮಾತ್ರವಲ್ಲ.,ಪ್ರಭಾವ ಬೀರುವ ಅನುಭವ ತುಂಬಿದೆ.ನಾಡಿನ ನೆಲ,ಜಲ,ಗಡಿ,ಭಾನು,ಸ್ನೇಹದ ಕುರುಹು,ಪ್ರೇಮದ ನಿವೇದನೆಗಳು,ಹಪಾ ಹಪಿಯ ಚಾಪುಗಳು,ಜೀವಪರ ತುಡಿತಗಳು,ಓದಿಗೆ ದಕ್ಕುವ ಹೊಳಹುಗಳಿವೆ.ಎ.ಎಸ್.ಮಕಾನದಾರರು ಚಿಕ್ಕಂದಿನಿಂದಲೂ ಹಸಿವು,ಬಡತನ ಸೋಸಿ ಬಂದವರಾಗಿದ್ದರಿಂದ ಬದುಕು ಬರಹದ ಅನುಭವವು ಓದುಗರ ಚಿತ್ರಣ ಬದಲಿಸುತ್ತವೆ.ಇವರ ಕಾವ್ಯದ ಒಳಗಣ್ಣು ಸಾತ್ವಿಕ ವಿಚಾರಗಳ ದಿಟ್ಟಿಸುವ ಅಬಾಬಿಗಳಾಗಿವೆ.ನಿತ್ಯ ಮಗ್ಗಲು ಬದಲಿಸುವ ಮನಸುಗಳಿಗೆ  ಮತಿಯ ಯನ್ನೆಚ್ಚರಿಸುವ ವಾಣಿಯಾಗಿವೆ ಸಾಲುಗಳು.ಶುದ್ಧ ಭಾಷೆ,ತೂಕವುಳ್ಳ ಚಿಕ್ಕ ಚಿಕ್ಕ ಚೆಲ್ನುಡಿಗಳು ಸಹೃದಯರ ಸ್ಪೂರ್ತಿಗೆ ಈ ಪುಸ್ತಕವು ಕಾರಣವಾಗಿದೆ.ಎ.ಎಸ್.ಮಕಾನದಾರರ ಅವಿರತ ಸಾಹಿತ್ಯ ಸೇವೆ ಮುಂದುವರೆಯಲಿ,ಓದುಗರು ಪ್ರೋತ್ಸಾಯಿಸಲಿ ಎಂದು ಅಭಿನಂದಿಸುವೆ. ***       **** ಶರಣಪ್ಪ ತಳ್ಳಿ ಕುಪ್ಪಿಗುಡ್ಡ

ಪ್ಯಾರಿ ಪದ್ಯ Read Post »

ಪುಸ್ತಕ ಸಂಗಾತಿ

ಅಂಬೇಡ್ಕರ್

ಆತ್ಮ ಚರಿತ್ರೆ ಬರೆಯಲು ಸಮಯ ಎಲ್ಲಿದೆ?’ ಎಂಬುದು ಅಂಬೇಡ್ಕರ್ ಅವರ ಬಗೆಹರಿಯದ ಪ್ರಶ್ನೆಯಾಗಿತ್ತು. ‘ನನ್ನ ಜನರಿಗೊಂದು ಮಾತೃಭೂಮಿ ಇಲ್ಲ’ ಎಂದ ಬಾಬಾಸಾಹೇಬರು,ಮಾತು ಸೋತ ಎಲ್ಲರಿಗೂ ಮಾತೃಭೂಮಿಯ ಹಕ್ಕು ಕೊಟ್ಟವರು, ಅವರು ಬರೆದದ್ದೆಲ್ಲ ಆತ್ಮಚರಿತ್ರೆಯೇ ಆದೀತು.

ಅಂಬೇಡ್ಕರ್ Read Post »

ಪುಸ್ತಕ ಸಂಗಾತಿ

ನಿರುತ್ತರ : ಒಂದು ಅವಲೋಕನ

ಹೀಗೆ ನಿರುತ್ತರದಲ್ಲಿ ಬದುಕಿನ ಪ್ರಶ್ನೆಗಳಿಗೆ ಹಲವು ಉತ್ತರಗಳಿವೆ. ಕೆಲ ಕವಿತೆಗಳು ತಾತ್ವಿಕವಾಗಿವೆ. ಗ್ರಾಮೀಣ ಮಹಿಳೆಯ ಬದುಕಿನ ಏರಿಳಿತಗಳ ತೂಗಿಸಿಕೊಂಡು ಹೋಗುವ ಒಳನೋಟ ಸಂಗೀತ ಅವರ ಕವಿತೆಗಳಲ್ಲಿ ಕಾಣಸಿಗುತ್ತದೆ

ನಿರುತ್ತರ : ಒಂದು ಅವಲೋಕನ Read Post »

ಪುಸ್ತಕ ಸಂಗಾತಿ

ಮಾತು ಮೀಟಿ ಹೋಗುವ ಹೊತ್ತು

ಕೊಡಗಿನ ಕಾನನದ ಮಡಿಲೊಳಗಿದ್ದುಕೊಂಡು ಯಾವ ವಾದ-ಪಂಥಗಳಿಗೂ ಪಕ್ಕಾಗದೆ, ಆಪ್ತವೆನಿಸುವಂತಹ ತಮ್ಮದೇ ಶೈಲಿ, ಭಾಷೆ, ತಂತ್ರ ಮತ್ತು ರೂಪಕಗಳನ್ನು ಕಂಡುಕೊಳ್ಳುತ್ತಾ ಕಾವ್ಯ ಕೃಷಿ ಮಾಡುತ್ತಿದ್ದಾರೆ ಸ್ಮಿತಾ. ಹೀಗೆಯೇ ಕಾವ್ಯದ ಸುಗ್ಗಿಯಾಗಿ ಅವರು ಸಾಹಿತ್ಯ ಶಿಖರದ ಉತ್ತುಂಗಕ್ಕೇರಲಿ ಎಂಬುದು ಓದುಗರ ಆಶಯ.

ಮಾತು ಮೀಟಿ ಹೋಗುವ ಹೊತ್ತು Read Post »

ಪುಸ್ತಕ ಸಂಗಾತಿ

ವೀರ ಸಿಂಧೂರ‌ಲಕ್ಷ್ಮಣ

ಯಾವು ಯಾವುದೋ ಹಾಡುಗಾರರ ದನಿಗಳಲ್ಲಿ ಅವರು ಬರೆದಿಟ್ಟ ಚೋಪಡಿ ಪುಸ್ತಕಗಳಲ್ಲಿ ಉಳಿದು ಹೋಗುತ್ತಿದ್ದ ಇಂಥ ಮೌಲಿಕ ವಿಷಯವನ್ನು ಹೆಕ್ಕಿ ತಗೆದು ನಮ್ಮ ಮುಂದಿನ ಯುವ ಪೀಳಿಗೆಗೆ ಒಬ್ಬ ಕ್ರಾಂತಿಕಾರಿ ದೇಶಭಕ್ತನ ಜೀವನವನ್ನು ಅನಾವರಣಗೊಳಿಸಿದ ಸಂಶೋಧಕ ಡಾ.ಚಂದ್ರು ತ಼ಳವಾರ ಅವರು ಅಭಿನಂದನೀಯರಾಗಿದ್ದಾರೆ.

ವೀರ ಸಿಂಧೂರ‌ಲಕ್ಷ್ಮಣ Read Post »

ಪುಸ್ತಕ ಸಂಗಾತಿ

ಯಮನ ಸೋಲು

ಪುಸ್ತಕ ಸಂಗಾತಿ ಯಮನ ಸೋಲು    ಕುವೆಂಪು ಅವರ ಪ್ರಸಿದ್ದ ನಾಟಕಗಳಲ್ಲಿ ಒಂದು ಪುರಾಣದ ಕಥೆಯನ್ನು ಪಡೆದು ಅದನ್ನು ರಮ್ಯವಾಗಿ ನಿರೂಪಿಸುವ ಅವರ ಶೈಲಿಗೆ ಇನ್ನೊಂದು ನಿದರ್ಶನ.ಮಹಾಕವಿಯೊಬ್ಬ ತನ್ನ ಕೃತಿಗಾಗಿ ಮಹಾಕಾವ್ಯಗಳನ್ನು ಅವಲಂಬಿಸಿ ಅಲ್ಲಿಯ ಕಥೆಯನ್ನು ಸ್ವೀಕರಿಸಿದರೂ ಅದನ್ನು ತನ್ನದೆನ್ನುವಂತೆ ಮರ಼ಳಿ ನಿರೂಪಿಸುವ ಮಹಾಕವಿ ಪ್ರತಿಭೆಗೆ ಈ ನಾಟಕವೂ ಒಂದು ಉದಾಹರಣೆ.ಜಗದಲ್ಲಿ ಪಾತಿವ್ರತ್ಯದಂತಹ ಧರ್ಮ ಇನ್ನೊಂದಿಲ್ಲ . ಯಮ ಕೂಡ ಆ ಧರ್ಮಕ್ಕೆ ಸೋಲುತ್ತಾನೆ ಎಂಬ ಸತ್ಯವನ್ನು ಸಾರಲು ಈ ಕಥೆ ನಿರೂಪಿತವಾಗಿದೆ. ಸಾವನ್ನೇ ಸೋಲಿಸಿ ಗಂಡನನ್ನುಳಿಸಿಕೊಂಡ ಪತಿವ್ರತೆಯ ಕಥೆಯಿದು. ಮಾನವ ಧರ್ಮದ ಎದುರು ದೈವ ಧರ್ಮ ಸೋಲುತ್ತದೆ.ಮನುಷ್ಯ ಪ್ರೀತಿ‌ಗೆಲ್ಲುತ್ತದೆ.ಪ್ರೇಮ ಎಲ್ಲ ಧರ್ಮವನ್ನು‌ಮೀರಿದ್ದು ಎಂದು ಸಾರುವದೇ ಈ‌ ಕಥೆಯ ಉದ್ದೇಶ ” ಪ್ರೇಮಾನುರಾಗವು ಧರ್ಮವ‌ ಮೀರಿದುದೆಂಬುದನು ಸಾಧಿಸುವದೆ ಇಲ್ಲಿ ಮುಖ್ಯ. ಇದು ಎದೆಯೊಲ್ಮೆ ಗೆದ್ದ ಕಥೆ.ಅನುರಾಗವಿದ್ದಲ್ಲಿ ವೈಕುಂಠ ಪ್ರೇಮವಿದ್ದಲ್ಲಿ ಕೈಲಾಸ ಎದೆಯೊಲ್ಮೆಯಿದ್ದಲ್ಕಿ ಮುಕ್ತಿ‌ ಎಂದು ಸಾರುವ ಕಥೆ. ತು಼ಂಬ ಚಿಕ್ಕದಾಗಿರುವ ಈ ನಾಟಕ ೧೯೨೮ ರಲ್ಲಿ‌ ಮೊದಲ‌ ಮುದ್ರಣ ಕಂಡಿದ್ದು ೨೦೦೪ ರ ಅವಧಿಯೊಳಗೆ ೮ ಮರು ಮುದ್ರಣಗಳನ್ನು ಪಡೆದಿದೆ. ನಾಟಕದಲ್ಲಿ ೧೦ ಚಿಕ್ಕ ಚಿಕ್ಕ ದೃಶ್ಯಗಳಿವೆ.ಮೊದಲನೆಯದು ಪೀಠಿಕಾ ದೃಶ್ಯ ಮತ್ತು ಕಡೆಯದು ಉಪಸಂಹಾರ ದೃಶ್ಯ ಎಂದು ಹೆಸರಿಸಿದ್ದು ಮದ್ಯದಲ್ಲಿ ಇಡೀ‌ ಕಥೆ ೮ ದ್ರಶ್ಯದಲ್ಲಿ ಮೂಡಿದೆ.ನಾಟಕದ ಆರಂಭದ ಪೀಠಿಕಾ  ದೃಶ್ಯದಲ್ಲಿ ಯಕ್ಷ ಮತ್ತು ಯಮದೂತರ ಭೇಟಿಯಾಗುತ್ತದೆ.ಅವಸರದಿಂದ ಹೊರಟ ಯಮದೂತನನ್ನು ಯಕ್ಷ ತಡೆದಾಗ “ತಾನು ತುಂಬ ಅವಸರದಲ್ಲಿದ್ದೇನೆ.ಇಂದು ಸತ್ಯವಾನನನ್ನು ಎಳೆದು ಯಮನಲ್ಲಿಗೆ ಒಯ್ಯಬೇಕಾಗಿದೆ.ಇಂದವನ ಸಾವು ನಿಗದಿಯಾಗಿದೆ “ಎನ್ನುತ್ತಾನೆ.ಅದಕ್ಕೆ ಯಕ್ಷ “ಏಕೆ ಅವನೇನು ಮುದುಕನೇ? “ಎಂದು ಕೇಳಿದರೆ ಅದಕ್ಕೆ ದೂತ ಇಲ್ಲ ಅವನ‌ ಮದುವೆಯಾಗಿ ಹನ್ನೆರಡು ತಿಂಗಳೂ ತುಂಬಿಲ್ಲ ಎನ್ನುತ್ತಾನೆ. ಹಾಗಾದರೆ ಅಂಥವನನ್ನು ಏಕೆ ಸಾವಿತ್ರಿ ಆರಿಸಿದಳು ಎಂಬ ಪ್ರಶ್ನೆಗೆ “ಬೇಕೆಂದೇ ಅಂಥ ಅಲ್ಪಾಯುವನ್ನು ಆರಿಸಿದ್ದಾಳೆ ಯಾರೇನು ಮಾಡುವದು” ಎಂದುತ್ತರಿಸಿ ಆಕೆಯ ಸಾವಿತ್ರಿಯ ಕಥೆಯನ್ನು ಹೇ಼ಳುತ್ತಾನೆ. ಸಾವಿತ್ರಿ ಅಶ್ವಪತಿ ಯೆಂಬ ರಾಜನ ಕುವರಿ.ಆಕೆ ಜನಿಸಿದ್ದೇ ಶಿವನ ಆರಾಧನೆಯ ಫಲದಿಂದ.ಅತ್ಯಂತ ಸುಂದರಿ‌  ಅವಳನ್ನು ಪಾತಿವ್ರ್ಯತ್ಯದೊಳಗೂ ಮೀರಿಸುವರಾರಿಲ್ಲ. ಅವಳಿಗೆ ಅನುರೂಪನಾದ ವರ ಎಲ್ಲಿಯೂ ಸಿಗಲಾರದ್ದರಿಂದ ಅವಳ ತಂದೆ ತನಗೆ ಬೇಕಾದ ಗಂಡನನ್ನು ಹುಡುಕಿಕೊಂಡು ಬರುವಂತೆ  ಅವಳಿಗೆ ಅನುಮತಿಸಿದ.ದೇಶಗಳನ್ನು ಸುತ್ತಿದ ಸಾವಿತ್ರಿ ಅನುರೂಪ ನಾದ ವರ ಎಲ್ಲೂ ಸಿಕ್ಕದೆ ಒಂದು ಋಷ್ಯಾಶ್ರಮದಲ್ಲಿ ಶತ್ರುಗಳು ರಾಜ್ಯವನ್ನಪಹರಿಸೆ ,ಕುರುಡಾಗಿ ಕಾನನಕೆ ಬಂದು ಋಷಿಚರ್ಯೆಯಲ್ಲಿರುವ ಧ್ಯುಮತ್ಶೇನ ಅರಸನ ಸುತನೂ ಶುದ್ಧಾತ್ಮನೂ ಆದ ಸತ್ಯವಾನನನ್ನು ವರಿಸುತ್ತಾಳೆ.ಆಕೆ ಒಲಿಯಲು ಆತ‌ ಸುಂದರನೆಂಬುದಷ್ಟೇ ಕಾರಣವಿರಲಿಲ್ಲ. “ಆದರಾ ಸಾವಿತ್ರಿ ಸೌಂದರ್ಯಕೆ‌ ಮರುಳಾಗಲಿಲ್ಲ ಸೌಂದರ್ಯವನು ಮೀರಿ ಆತನೊಳು ಶುಚಿಶೀಲವಿತ್ತು” ಹೀಗೆ ಆಕೆಯ ಆಯ್ಕೆಯಲ್ಲಿ ಒಂದು ಘನತೆ ಇದ್ದಿತು.ಆಗ ಬಂದ ನಾರದರು ಆತ ಅಲ್ಪಾಯು ಎಂಬುದನ್ನು ಹೇಳಿದರೂ‌ ಕೂಡ ಆಕೆಯ‌ ಪ್ರೇಮ ಹಿಂಜರಿಯಲಿಲ್ಲ. ಪ್ರೇಮ ಮೃತ್ಯುವಿಗೆ ಬೆದರಿ ಓಡುವದೇ? ಪತಿಯ ಗತಿಯನು ಕೇಳಿ ಆಕೆಯೊಲುಮೆಯು ಚೈತ್ರಮಾಸದೊಳು ತಳತೆಸೆವ ವನದಂತೆ ಹಿಗ್ಗಿದುದು ಒಮ್ಮೆ ಒಬ್ಬರೊಲಿದ ಶುಚಿಯೊಲವು ನೋಡುವುದೇ ಕಣ್ಣೆತ್ತಿ ಎಂತಿರುವನೆಂದು ಕಡೆಗೆ? ಹೀಗೆ ಆರಂಭದಲ್ಲಿಯೇ ಆಕೆಯ ಪವಿತ್ರ ಪ್ರೇಮವನ್ನು‌ ನಾಟಕ ಘೋಷಿಸಿಯೇ ಮುಂದೆ ಹೋಗುತ್ತದೆ.ಪತಿಗೆ ಉತ್ತಮ‌ ಸತಿಯಾಗಿ ಮಾತ್ರವಲ್ಲ ,ಸಾವಿತ್ರಿ ಅತ್ತೆ‌ ಮಾವರಿಗೆ ಉತ್ತಮ‌  ಸೊಸೆಯಾಗಿ ಪತಿಯನ್ನು ಅನುಸರಿಸುತ್ತ ಕಾಡಿನೊಳಗೆ ಉಳಿಯುತ್ತಾಳೆ. ಆಕೆಗೆ ತನ್ನ ಪತಿಯ ಆಯುಷ್ಯದಲ್ಲಿ  ಕಡೆಯ‌ ಮೂರು ದಿನಗಳು ಮಾತ್ರ ಉಳಿದಿವೆ ಯಂದು ಗೊತ್ತಾಗಿದೆ‌ ಕೂಡ.ಅದಕ್ಕೆ ಆಕೆ ಪೂಜೆಯಲ್ಲಿ ತೊಡಗಿ ದ್ದಾಳೆ. ಸತ್ಯವಾನನನ್ನು ಯಮನಲ್ಲಿಗೆ‌ ಒಯ್ಯಲು ಬಂದ ದೂತನಿಗೂ ಕರುಣೆಯಿದೆ.ಇಂತಹ ನವ ಯೌವನದ ಜೋಡಿಯನ್ನು ಅಗಲಿಸುವದೆಂತು ಎಂಬ ನೋವಿದೆ.ಆದರೆ ಕರ್ತವ್ಯದ ಕರೆ ಯಾರು ಮೀರಬಲ್ಲರು,? ಆತ ಕರ್ತವ್ಯ ಬದ್ಧ.ಅದಕ್ಕಾಗಿ ಆತ ಯಕ್ಷನೊಂದಿಗೆ ಭೂಲೋಕಕ್ಕೆ ತೆರಳುತ್ತಾರೆ. ದೃಶ್ಯ ಒಂದರಲ್ಲಿ‌ ಸಾವಿತ್ರಿ ಋಷ್ಯಾಶ್ರಮದ ಎಲೆ‌ಮನೆಯ ಹತ್ತಿರದ ಶಿವನ ಗುಡಿಯಲ್ಲಿ ಪೂಜೆಗೆ ತೊಡಗಿದ್ದಾಳೆ .ಆ ಪತಿವ್ರತೆ,ಕಾಲಚಕ್ರಕ್ಕೆ ಅಂದು ಮುಂದುವರಿಯದಂತೆ , ಸೂರ್ಯನಿಗೆ ಉದಯವಾಗದಂತೆ ಪ್ರಾರ್ಥಿಸುತ್ತಿದ್ದಾ಼ಳೆ.ಒಂದು ವೇಳೆ ಸೂರ್ಯೊದಯವಾದರೆ ತಾನೆ? ಆಕೆಯ ಗಂಡನಿಗೆ ಸಾವು ಬರುವದು? ಸಾವಿನ‌ ನೋವು ಅವಳ ಮಾತಲ್ಲಿ ಮಡುಗಟ್ಟಿದೆ.ಗಾಳಿ ಬೀಸಿದರೆ,ಎಲ್ಲಿ ಸಪ್ಪಳವಾಗಿ ಅಂದೆ ಕಡೆಯ ದಿನವೆಂಬುದನು ಯಮನಿಗೆ ನೆನಪಿಸಿತೋ ? ಎಂದು ದಿಗ್ಭ್ರಮೆ ತಾಳುತ್ತಾಳೆ. ಆಕೆ ಆ ದುಃಖದಲ್ಲಿರುವಾಗಲೇ ಸತ್ಯವಾನನ ಪ್ರವೇಶವಾಗುತ್ತದೆ.ಆತ ಫಲ ಪುಷ್ಪಗಳಿಗಾಗಿ ವನಕೆ ಹೊರಟು ನಿಂತಿದ್ದಾನೆ. ಹೆಂಡತಿ‌ ಮೂರು ದಿನದಿಂದ ಏನು‌ಪೂಜೆ ನಡೆಸಿದ್ದಾಳೆ ಎಂಬ ಅಚ್ಚರಿ ಅವನಿಗೆ. ಆತನನ್ನು ಕಾಡಿಗೆ ಹೋಗದಂತೆ ತಡೆದ ಸಾವಿತ್ರಿ ಇಬ್ಬರೂ‌ ಕೂಡಿಯೇ ಪೂಜಿಸಬೇಕೆಂದು ಕೋರುತ್ತಾಳೆ. ಅವಳ ಒಲುಮೆಗೆ ಮಣಿದ ಸತ್ಯವಾನ ಕಾಡಿಗೆ ಹೋಗದೆ ಅಲ್ಲಿಯೇ ಉಳಿಯುತ್ತಾನೆ.ಗಂಡನಿಗೆ ಇಂದು‌ ಅವನ ಕಡೆಯ ದಿನವೆಂಬುದು ತಿಳಿದಿಲ್ಲವೆಂದು ಆಕೆಗೆ ನೋವು ತುಂಬಿದೆ.ಕಡೆಗೂ ಕಾಡಿಗೆ ಹೊರಟ ಅವನೊಡನೆ ಹೊರಟು ನಿಂತ ಅವಳು ಇಂದೇಕೆ ಹೀಗೆ ಮಾಡುತ್ತಿದ್ದಾಳೆ ಎಂದು ಅಚ್ಚರಿಯವನಿಗೆ.ಏಕೆ? ಎಂದು ಕೇಳಿದರೆ ಕನಸಿನ‌ ನೆವದಿಂದ ಮರೆಸಿ ತಾನೂ ಹೂವನಾರಿಸಲು ಬರುವೆನೆಂದು ಗಂಡನೊಡನೆ ಹೊರಡುತ್ತಾಳೆ.ಇಡೀ ದೃಶ್ಯದಲ್ಲಿ ಮುಂದಾಗುವ ನೋವು ಅರಿತ ಸಾವಿತ್ರಿಯಲ್ಲಿ  ತಳಮಳ ಮಡುಗಟ್ಟಿದೆ.ಆಕೆ ಕಾಡಿಗೆ ಎನ್ನಿನಿಯನೊಡನಿಂದು ನರಕವಾದರೆ ನರಕ ! ಸಗ್ಗವಾದರೆ ಸಗ್ಗ! ನಾಶವಾದರೆ ನಾಶ! ಯಮರಾಯನೊಡ್ಡುತಿಹ‌ ಪಾಶವಾದರೆ ಪಾಶ! ಎಂದು ತೀರ್ಮಾನಿಸಿಯೇ ಹೊರಟಿದ್ದಾಳೆ.ಇಲ್ಲಿ‌ಮತ್ತೆ ಆಕೆಯ‌ಪಾತಿವೃತ್ಯದ ಪರಿಚಯ ನಮಗಾಗುತ್ತದೆ.ಗಂಡನಿಗೆ ಸಾವು ಬಂದರೆ ತನಗೂ‌ ಬರಲಿ ಎಂಬ ಗಟ್ಟಿ ನಿರ್ಧಾರ ಅವಳದು. ಮುಂದಿನ ದೃಶ್ಯ ಫಲ ಪುಷ್ಪಗಳನರಸುತ್ತ ಸತ್ಯವಾನ ಸಾವಿತ್ರಿ ಕಾಡಲ್ಲಿ ಅಲೆಯುತ್ತಿದ್ದಾರೆ.ಬಹಳ ಸಾಂಕೇತಿಕವಾದ ಮಾತಿನಿಂದಲೇ ಈ ದೃಶ್ಯ ಆರಂಭವಾಗುತ್ತದೆ ಸತ್ಯವಾನ ” ಬಾ,ನೋಡಿಲ್ಲಿ ಹರಿಣಿಯನ್ನು ಹುಲಿಯ ಬಾಯಿಂದ‌ ನಾನು ರಕ್ಷಿಸಿದ್ದು ಇಲ್ಕಿಯೇ ” ಎಂದರೆ , ಸಾವಿತ್ರಿ ” ಆ ಪುಣ್ಯ ನಿನ್ನನೀ ದಿನ ಬಂದು ರಕ್ಷಿಸಲಿ” ಎನ್ನುತ್ತಾಳೆ..ಆತ ಸರಸಕ್ಕೆಳಸಿದರೆ ಆಕೆಗೆ ಸಾವಿನ ಬಾಯಲ್ಲೂ ಸರಸವೇ ಎಂಬ ಹೆದರಿಕೆ ಕಾಡುತ್ತದೆ. ಆಕೆಯ ಮನದಲ್ಲಿ ಸಾವೇ ಪ್ರತಿದ್ವನಿಸುತ್ತಿದೆ ಪ್ರತಿ‌ ಮಾತಲ್ಲೂ ಅದು ಸೂಸುತ್ತಿದೆ ಸತ್ಯವಾನ ನೋಡಲ್ಲಿ ಮುತ್ತುಗದ ಹೂವು ಪೃಕೃತಿದೇವಿಯ ಬರವಿಗಾಗಿ ವನದೇವಿ ಹಿಡಿಯಿಸಿದ ಪಂಜುಗಳೋ ಎಂಬಂತೆ ರಂಜಿಸಿವೆ ಎಂದರೆ,ಅದಕ್ಕೆ ಸಾವಿತ್ರಿ ” ಬಹುದೂರ ಮಸಣದೊಳು ಉರಿವ ಸೂಡುಗಳೊ ಎಂಬಂತೆ ತೋರುತಿವೆ” ಎನ್ನುತ್ತಾಳೆ . ಸತ್ಯವಾನನಿಗೆ ಅಚ್ಚರಿ ! ಅಮಂಗಳದ ನುಡಿಯೇಕೆ,? ಎನ್ನುತ್ತಾನೆ.ಆಕೆ ಹೆಜ್ಜೆ ಹೆಜ್ಜೆಗೆ  ಭಯ ಎದುರಿಸುತ್ತ ಹೋಗುವ ಕಾಲ ಚಕ್ರಕ್ಕೆ “ಕರುಣೆಯಿಲ್ಲವೇ ನಿನಗೆ” ಎನ್ನುತ್ತ ಪರಮೇಶ್ವರನಲ್ಲಿ ಪತಿಭಿಕ್ಷೆ ಬೇಡುತ್ತ ಗಂಡನೊಂದಿಗೆ ತಿಳಿನೀರ ವಾಹಿನಿಯೆಡೆ ತೆರಳುತ್ತಾಳೆ.          ಮೂರನೆಯ ದೃಶ್ಯವೂ ಅದೇ ಕಾಡಲ್ಲಿ ನಡೆಯುತ್ತದೆ. ಅಷ್ಟೊತ್ತಿಗೆ ಸಂಜೆಯಾಗಿದೆ ಯಕ್ಷ ,ಯಮದೂತ ಅಲ್ಲಿಗೆ ಬರುತ್ತಾರೆ.ಯಮದೂತನಿಗೆ ಸಂಜೆಯಾಗುತ್ತಿದ್ದಂತೆ ತನ್ನ‌ ಕಾರ್ಯದ ನೆನಪಾಗುತ್ತದೆ. ಸತ್ಯವಾನ. ಸಾವಿತ್ರಿಯರನ್ನು ನೋಡಿದ ಯಕ್ಷನಿಗೆ‌ ಮುದ್ದಾ‌ದ ಪ್ರೇಮಿಗಳು ಎಂದು ಬೇಸರವಾಗುತ್ತದೆ.ಯಮದೂತನಿಗೂ ಬೇಸರವಿದೆ. ಆದರೇನು? “ಯಮನೂರು ದಯೆಯ ಬೀಡಲ್ಲ,ನಿಷ್ಪಕ್ಷ ಪಾತವಾಗಿಹ ಧರ್ಮದೂರು , ಯಮಪಾಶ ಕಂಬನಿಗೆ ಕರಗುವಂತಹುದಲ್ಲ ರೋದನಕೆ ಮರುಳಾಗದೆಂದಿಗೂ” ಅದು ಅಸಂಖ್ಯ ಹೆಂಗಳೆಯರನ್ನು ವಿಧವೆಯರನ್ನಾಗಿಸಿದ ಧೂರ್ತ,ಗಣನೆಯಿಲ್ಲದ ಮಾತೆಯರ ಕಲ್ಲಾಗಿಸಿದ ನಿಷ್ಕರುಣಿ.,ಕೋಟಿ ವೀರರ ರಕ್ತವ ಕುಡಿದು ಕೊಬ್ಬಿರುವ ಪಾಶ, ಯೋಗಿಗಳ,ಅವತಾರಪುರುಷರು,ಋಷಿವರರು ಯಾರನ್ನು ಬಿಟ್ಟಿಲ್ಲ.ಇಂತಿರುವ ಅದು ಈ‌‌ ನೀರ ನೀರೆಯರ ಗೋಳಿಗಂಜುವದೇ ? ಎನ್ನುತ್ತಾನೆ .ಅಷ್ಟೊತ್ತಿಗೆ ಸತ್ಯವಾನ ಸಾವಿತ್ರಿಯರೆ ಅತ್ತ ಬರುತ್ತಾರೆ.ಈ ಯಕ್ಷ ಮತ್ತು‌ ಯಮದೂತ  ಇಬ್ಬರೂ  ಅದೃಶ್ಯ ಜೀವಿಗಳಾಗಿ. ಅವರ  ನಡೆ ನೋಡುತ್ತ ನಿಲ್ಲುತ್ತಾರೆ. ಸತ್ಯವಾನನಿಗೆ ಸಾಕಾಗಿದೆ‌. ಮಡದಿಯ ತೊಡೆಯ ಮೇಲೆ ತಲೆಯಿಟ್ಟು‌ ಮಲಗುತ್ತಾನೆ.ಸಾವು ಸಮೀಪಿಸಿದ ಸಂಕೆತ ವದು. ಸತ್ಯ ತಿಳಿದ ಸಾವಿತ್ರಿ ತನ್ನ‌ ಪತಿವೃತಾ ಧರ್ಮಕ್ಕೆ ” ಬಂದೆನ್ನ‌ ಕಾಪಾಡು’ ಎಂದು ಬೇಡಿಕೊಳ್ಞುತ್ತಾಳೆ.ಇಲ್ಲಿಗೆ ತುಸು ದೀರ್ಘವಾದ ಮೂರನೆಯ ದೃಶ್ಯ ಮುಗಿಯುತ್ತದೆ. ನಾಲ್ಕನೆಯ ದೃಶ್ಯದ ಆರಂಭದಲ್ಲಿಯೇ ಯಮದೂತ ತಲ್ಲಣಗೊಂಡಿದ್ದಾನೆ.ಆತನ‌ ಮನದಲ್ಲಿ ತಳಮಳ ಆರಂಭವಾಗಿದೆ.ಏನೂ ತಪ್ಪು‌ಮಾಡದ ಸಾವಿತ್ರಿಯ ಗಂಡನ ಜೀವ ಅಪಹರಿಸುವದು ಅವನಿಂದ ಸಾದ್ಯವಾಗದಾಗಿದೆ. ಪತಿವ್ರತೆಯ ಜ್ವಾಲೆಯೊಳು ಸಿಕ್ಕಿದ್ದಾನೆ. ಮೂರು ಸಲ ಸತ್ಯವಾನನ ಪ್ರಾಣ ಎಳೆಯಲು ಯತ್ನಿಸಿದರೂ ಅವನಿಂದ ಸಾದ್ಯವಾಗಿಲ್ಕ.ಅವಳ ಓಜೆಯ ಉರಿಯ ಸುಳಿಯಲ್ಲಿ ಬಿದ್ದು ಅದರಿಂದ ಪಾರಾಗುವ ದಾರಿ ಸಿಗದೆ ಯಮಧರ್ಮನಲ್ಲಿಗೇ ಓಡುತ್ತಾನೆ.ದೃಶ್ಯ ೫ ರಲ್ಲಿ ಸಾಕ್ಷಾತ್ ಯಮನೇ ಬ಼ಂದಿದ್ದಾನೆ.ತಾನು ಜಗದ ಧರ್ಮಾಧಿಕಾರಿ ತನ್ನ ಧರ್ಮದ ಮೇಲೆ ಒಪ್ಪಿಗೆಯಿಟ್ಟು ನಿನ್ನ‌ಗಂಡನನ್ನೊಪ್ಪಿಸು ಎನ್ನುತ್ರಾನ .ತನ್ನ  ಮೇಲಿನ ಕರುಣೆಯಿಂದಲಾದರೂ ತನ್ನ‌ ಇನಿಯನನ್ನು ಉ಼ಳುಹಲಾರೆಯಾ ಎಂದ ಅವಳ‌ ಮಾತಿಗೆ ” ಜಗದ ಧರ್ಮದ ನೀತಿಯನರಿತವ಼ಳು‌ ನೀನು ,ಬಿಡು ” ಋತದ ನಿಯಮ‌ ಒಪ್ಪು ಎನ್ನುತ್ತಾನೆ ಆದರೆ ಆಕೆ ಹದಿಬದೆಯ ಧರ್ಮ,ತನ್ನತನ,ನನ್ನಿ,ನಿಷ್ಕಾಮ ಪ್ರೇಮ , ಪರಮೇಶ ಭಕ್ತಿ  ಇವುಗಳಿಗಾಗಿ ಋತವು ಒಪ್ಪದೇ? ಎನ್ನುತ್ತಾಳೆ.ಆದರೆ ಯಮ ಧರ್ಮನದು ಒಂದೇ ಮಾತು.ರಾಮ‌, ಕೃಷ್ಣರಂಥವರೆ ಋತ ಧರ್ಮಕ್ಕೆ ಸಾವು ಅನುಭವಿಸಿದ್ದಾರೆ.” ಹುಟ್ಟಿದವರಿಗೆಲ್ಲರಿಗೂ ಸಾವು ಉಂಟೇ ಉಂಟು” ಎನ್ನುತ್ತಾನೆ. ಸರಿ ಹಾಗಾದರೆ,ಪತಿಯ‌ಕೂಡ ಎನ್ನನೂ ಒಯ್ಯು,ಪತಿಯಳಿದ ಮೇಲೆ ಸತಿಗೆ ಜೀವವೇ ಸಾವು! ಹರ್ಷದಿಂದೈತರುವೆ ಪತಿಯೊಡನೆ! ಇದು ಸಾವಿತ್ರಿಯ ಹಟ. ಆದರೆ ಯಮ‌ “ಯಾರ ಜೀವಿತ ಮುಗಿದಿಲ್ಲವೋ ಅವರ ಬಳಿ ಸುಳಿಯಲೆನಗೆ ಅಧಿಕಾರವಿಲ್ಲ”  ಎನ್ನುತ್ತಾನೆ.ಆದರೆ ಯಮನಿಗೆ  “ಧರ್ಮವೊಲವಿಗೆ ಶರಣು ಎಂದು ನೀನರಿತಾಗ ನನ್ನಿನಿಯನನ್ನೆನಗೆ ಹಿಂದಕೊಪ್ಪಿಸಬೇಕು “ ಎಂಬ ಮಾತನ್ನಿತ್ತು ದೂರ ನಿಲ್ಲುತ್ತಾಳೆ. ಯಮನೇನೋ ಸತ್ಯವಾನನ ಜೀವವನ್ನು ಸೆಳೆದೊಯ್ದ.  ಸಾವಿತ್ರಿ ಬಿಟ್ಟಳೇ! ಸತ್ಯವಾನನ ಜೀವವನ್ನು ತಗೆದುಕೊಂಡು ಹೊರಟ  ಯಮನನ್ನು  ಬೆನ್ನು ಹತ್ತುತ್ತಾಳೆ.ಪ್ರೇಮಾನುರಾಗ ವು  ಧರ್ಮವನು‌ ಮೀರಿರುವದೆಂಬುದನು ಸಾಧಿಸುವೆನೆಂದು ಹೊರಡುತ್ತಾಳೆ.    ದೃಶ್ಯ ೬ ರಲ್ಲಿ ಮುಂದೆ ಯಮ ಹಿಂದೆ ಸಾವಿತ್ರಿ ದೇವಲೋಕ ದತ್ತ ಹೊರಟಿದ್ದಾರೆ.ದಿಗಿಲಾದ ಯಮ ” ಏಕೆನಗನಳನ್ನುಸರಿಸಿ ಬರುತಿಹೆ ತಾಯೆ? ಎಂದು ಪ್ರಶ್ನಿಸಿದರೆ- ನಿನ್ನ ನಾನನುಸರಿಸಿ ಬರುತಿಲ್ಲ ಯಮದೇವ ಪತಿಯನನುನಸಿರಿಸಿ ಬರುತಿಹೆನು,ಹುಟ್ಟಿದವರೆಲ್ಲ ರೂ ಸಾಯುವದು ಧರ್ಮವೆಂದೊರೆದೆ, ಅಂತೆಯೆ ಸತ್ತ ಪತಿಯರ ಹಿಂದೆ ಹೋಗುವದು ಪತಿವ್ರತಾ ರಮಣಿಯರ ಧರ್ಮ ! ಒಲಿದೆದೆಗ ಳೆಂದಿಗೂ ಅಗಲಲಾರವು  ಎಂಬುದಿದು ವಿಶ್ವ ನಿಯಮ ಎನ್ನುವ ಸಾವಿತ್ರಿ ಯಮನಿಗೆ “ನಿನ್ನ ಧರ್ಮ‌ ನೀನು ಮಾಡು ,ನನ್ನ ಧರ್ಮ ನಾನು‌ ಮಾಡುತ್ತೇನೆ” ಎನ್ನುತ್ತಾಳೆ. ಆಕೆಯ ಧರ್ಮಕೆ ಮೆಚ್ಚಿದ ಯಮ ವರವನೀಯುತ್ತೇನೆ ಬೇಡು ಎಂದಾಗ ಬಹಳ ಚಾಣಾಕ್ಷತನದಿಂದ ತನ್ನ ಮಾವನಿಗೆ ಕಣ್ಣು ಬರುವಂತೆ ವರ ಬೇಡುತ್ತಾಳೆ.ಇಲ್ಲಿ ಆಕೆಯ ನಿಸ್ವಾರ್ಥತೆ ಎದ್ದು ಕಾಣುತ್ತದೆ.೭ ನೆಯ ದೃಶ್ಯದಲ್ಲಿ  ಯಮ ಮಾನವ ಲೋಕ ದ ಎಲ್ಲೆ ದಾಟಿ ತನ್ನ ಲೋಕದತ್ತ ಹೋಗುತ್ತಾನೆ.ಮರಳಿ ನೋಡಿದರೆ ಸಾವಿತ್ರಿ ಬೆನ್ನಹಿ಼ಂದೆಯೆ ಇದ್ದಾಳೆ. ಏಕೆ  ಎಂಬ ಅವನ‌ ಪ್ರಶ್ನೆ ” ದೇಹ ಮನವನರಸುವದು .ಮನದ ಧರ್ಮ‌ವ ಮನವು‌ ಮಾಡುತಲಿಹುದು …ಪತಿಯಾತ್ಮದರ್ಧ ಸತಿ ಎಂಬುದದು ಋತಸಿದ್ಧ  ಆತ್ಮವಿಹ ಕಡೆ ದೇಹ ಮನಸುಗಳು ಹೋಗುವದು ಧರ್ಮ ! ಎಂದು ಮತ್ತೆ ತನ್ನ ಧರ್ಮವನ್ನೇ ಸಾರುತ್ತಾಳೆ .ಆಕೆಯ ನಿರ್ಧಾರಕ್ಕೆ ಮೆಚ್ಚಿದ ಯಮ ಈಗಲಾದರೂ ಇನ್ನೊಂದು ವರ‌ ಕೊಟ್ಟು  ಅವಳನ್ನು ಸಾಗ ಹಾಕಬೇಕೆಂದುಕೊಂಡು ಇನ್ನೊಂದು‌ ವರ ಕೊಡುತ್ತಾನೆ .ಆಗಲೂ ತನ್ನ‌ಗಂಡನ ಜೀವ ಕೇಳದ ಸಾವಿತ್ರಿ ” ಮಾವನಿಗೆ ಕಳೆದ ಧರೆ ಆಳಿದ ಸಿರಿಗಳು ಬರಲಿ” ಎಂದು ಬೇಡಿಕೊಳ್ಳುತ್ತಾಳೆ. ಆಗಲೂ ಬೆನ್ನು ಹತ್ತಿದ ಅವಳಿಗೆ ಯಮ‌ ಇನ್ನು ಜೀವವುಳ್ಳ ಮಾನವರು ಬರಬಾರದು ಎಂದರೆ ಧರ್ಮದಿಂದ ಧರ್ಮವನ್ನು ಗೆಲ್ವೆನೆಂಬ ನಿರ್ಧಾರವನ್ನೇ ತೋರುತ್ತಾಳೆ. ೮ ನೆಯ ದೃಶ್ಯದ ಆರಂಭದಲ್ಲಿ‌ ಮತ್ತೆ ತನ್ನ ಹಿಂದೆ ಏನೋ ಸದ್ದು ಬರುವದ ಕೇಳಿದ ಯಮನಿಗೆ ದಿಗಿಲು .ಮತ್ತೆ ಸಾವಿತ್ರಿಯನ್ನು‌ ನೋಡಿದ ಯಮ‌ ಎರಡು ವರಗಳ‌ ಪಡೆದು‌ ಬೆನ್ನು ಹತ್ತುವದು ಧರ್ಮವೇ ?

ಯಮನ ಸೋಲು Read Post »

ಪುಸ್ತಕ ಸಂಗಾತಿ

ಬದರ್ ಪುಸ್ತಕದ ವಿಶ್ಲೇಷಣೆ

ಈ ಲೋಕದ ನಿಸ್ವಾರ್ಥತೆಗೆ ಪಠ್ಯವಾಗಿರುವವಳೇ ಹೆಣ್ಣು. ಭೂಮಿಗೆ ಬಿದ್ದ ಫಲ ಕೊಡಲೇಬೇಕು. ಅಂತೆಯೇ ಈ ಲೋಕದ ಉತ್ಪಾದಕತೆಯ ಶಕ್ತಿ ಇರುವುದು ಹೆಣ್ಣಿನಲ್ಲಿ ಮಾತ್ರ. ಆದ್ದರಿಂದ ಮಡದಿಯನ್ನು, ತಾಯಿಯನ್ನು, ಹೆಣ್ಣನ್ನು ಗೌರವಿಸುವುದು ನಮ್ಮ ಸಂಸ್ಕೃತಿಯಾಗಿದೆ.

ಬದರ್ ಪುಸ್ತಕದ ವಿಶ್ಲೇಷಣೆ Read Post »

ಪುಸ್ತಕ ಸಂಗಾತಿ

ಬಿಳಿಯ ಬಾವುಟ ಹಿಡಿದ ಕವಿತೆಗಳು

ಪುಸ್ತಕ ಸಂಗಾತಿ            ಶಾಂತಿ- ಪ್ರೀತಿಯ ಬಿಳಿಯ ಬಾವುಟ ಹಿಡಿದ ಕವಿತೆಗಳು ಕವಿತೆ ಅಂತರಂಗದ ಕನ್ನಡಿ ಆಗುವಷ್ಟರ ಮಟ್ಟಿಗೆ ಸಾಹಿತ್ಯದ ಇನ್ನ್ಯಾವ ಪ್ರಕಾರವೂ ಆಗುವುದಿಲ್ಲ ಎಂಬ ಮಾತು ಕವಿಯತ್ರಿ ಕವಿತಾ ಕುಸುಗಲ್ಲರ ’ಬೆಳಕಿನ ಬಿತ್ತನೆ’ ಕವನ ಸಂಕಲನ ಓದಿದಾಗ ತಟ್ಟಂತ ನೆನಪಾಯಿತು. ಡಾ.ಕವಿತಾ ಕುಸುಗಲ್ಲ ಅವರ ಮೂರನೆಯ, ಒಂದು ರೀತಿಯ ವಿಭಿನ್ನವಾದ ಸಂಕಲನವಿದು. ಈ ಸಂಕಲನದಲ್ಲಿ ಅವರು ನಾನು, ನೀನು, ಆನು, ತಾನು ಎಂದು ನಾಲ್ಕು ಭಾಗಗಳಾಗಿ ಮಾಡಿಕೊಂಡು ಒಂದೊಂದು ಭಾಗದಲ್ಲಿ ಮಹಿಳೆಯಾಗಿ ಮಗ, ಮಗಳು, ಗಂಡನನ್ನು ಸಂಬೋಧಿಸಿ, ಜೀವನಕ್ಕೆ ಸಂಬಂಧಿಸಿದಂತೆ ಹಾಗೂ ಸಾಮಾಜಿಕ, ಪರಿಸರ, ನಾಡು ನುಡಿ, ಸಂಸ್ಕೃತಿ ಕುರಿತಂತೆ ವೈಯಕ್ತಿಕ, ಕೌಟುಂಬಿಕ, ಆಧ್ಯಾತ್ಮ-ತಾತ್ವಿಕ, ಮತ್ತು ಸಾಮಾಜಿಕ ನೆಲೆಗಳು ಈ ನಿಟ್ಟಿನಲ್ಲಿ ಒಂದಕ್ಕೊಂದು ತಳುಕು ಹಾಕಿಕೊಂಡಿರುವುದನ್ನು ಅವರು ತಮ್ಮ ಕವಿತೆಗಳಲ್ಲಿ ಕಟ್ಟಿಕೊಡುತ್ತಾ ಹೋಗುತ್ತಾರೆ. ದೈನಂದಿನ ಆಗುಹೋಗುಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಾ ಹೆಣ್ಣಾಗಿ, ಹೆಂಡತಿಯಾಗಿ, ತಾಯಾಗಿ ನಾಗರೀಕಳಾಗಿ ತಮ್ಮ ಅನುಭವಗಳಿಗೆ ದಕ್ಕಿದ ಎಲ್ಲ ವಿಷಯ ವಸ್ತುಗಳನ್ನು ತಮಗೆ ಹೇಳಬೇಕೆನಿಸಿದ ಸರಳ ನೇರ ನುಡಿಗಳಿಂದ ಕವಿತೆಯಾಗಿಸಿದ್ದಾರೆ. ಸಾಕಷ್ಟು ಕವಿತೆಗಳು ತುಂಬಾ ಪುಟ್ಟದಾಗಿ ಹನಿಗವನಗಳಂತೆ ಅನಿಸಿದರೂ ಅರ್ಥವ್ಯಾಪ್ತಿಯಲ್ಲಿ ಅಗಾಧವಾದವುಗಳೂ ಆಗಿವೆ. ಆ ಕ್ಷಣಕ್ಕೆ ಅನಿಸಿದ್ದನ್ನುಯಾವ ಕವಿತಾ ಲಕ್ಷಣಗಳನ್ನೂ ಅಂಟಿಸದೆ, ಯಾವ ಕುಸುರಿ ಕೆಲಸ ಮಾಡದೆ ನಮ್ಮ ಮುಂದಿಡುತ್ತಾರೆ. ’ಇಸಂ’ ಗಳಿಗೆ ಒಳಗಾಗದೆ ಬರೆಯುವುದೂ ಅವರ ಐಡೆಂಟಿಟಿ ಆಗಿರಬಹುದು. ಅವರ ಅನಿಸಿಕೆಗಳು, ಭಾವನೆಗಳು ಪುಟ್ಟ ಪುಟ್ಟ ಕವಿತೆಗಳಾಗಿ ಮೈತಳೆದಿರುವಾಗ ನನಗನಿಸಿದ್ದಿಷ್ಟೇ…ಅಂದವಾದ ಹೂವಿಗೆ ರಂಗು ಬಳಿವುದೇತಕೆ  ಎಂದು… ಸದಾ ಹೆಣ್ಣು ಅನುಭವಿಸುವ ಆಡಲಾರದ ಅನುಭವಿಸಲಾರದ ಸಾವಿರ ಒಳತೋಟಿಗಳು, ತಲ್ಲಣಗಳು ಕವಿತೆಯಾಗಿ ಬರೆಸಿಕೊಂಡಿವೆ. ಇಲ್ಲಿ ಎಲ್ಲಾ ಧಾರಣಶಕ್ತಿಯ ತಾಯಿ, ತಾಯ್ತನದ ಅಭಿವ್ಯಕ್ತಿ ಉಂಟು. ಅಸಹಾಯಕತೆ , ಕುತೂಹಲ, ಸಂಭ್ರಮ, ನಿವೇದನೆ, ವಿಷಣ್ಣತೆ ಎಲ್ಲವೂ ಅಭಿವ್ಯಕ್ತಿಗೊಂಡಿದೆ.  ಹೆಣ್ಣಾಗಿ, ತಾಯಾಗಿ, ಹೆಂಡತಿಯಾಗಿ ಹೇಗೇ ಆದರೂ ಹೆಣ್ಣಿನ ಭಾವ ಪ್ರಪಂಚವನ್ನು ಅನಾವರಣಗೊಳಿಸುವ ಕವನಗಳಾಗಿ ಹುಟ್ಟಿಕೊಂಡಿವೆ. ಮಗಳಾಗಿ ಬಾ, ಪುರುಷಾರ್ಥ  ಸಾಧನೆಗೆ, ಗಾಂಧಾರಿ, ಸೀತೆ, ಬೆಳಕು, ಬಿನ್ನಹ, ನಾನೀಗ ಬದಲಾಗಿದ್ದೇನೆ, ಕಳೆದುಕೊಂಡಿದ್ದೇನೆ ಮುಂತಾದ ಹಲವು ಕವಿತೆಗಳಲ್ಲಿ ಗಂಡಸಿನ ಅಹಂಗಳನ್ನು ನಯವಾಗಿ ದಾಖಲಿಸುತ್ತಾ ಅವನ ಅಹಂ ಕಳೆದು ಮನುಷ್ಯನನ್ನಾಗಿಸುವಲ್ಲಿ ಸಾರ್ಥಕತೆ ಕಾಣಬಯಸುವುದು ಗೋಚರಿಸುತ್ತದೆ. ಯಾವ ಸಾಲುಗಳಲ್ಲೂ ಕವಿಯತ್ರಿ ಆಕ್ರೋಶ ದಾಖಲಿಸುವುದಿಲ್ಲ. ಆದರೂ ಪುರುಷಾಕಾರವನ್ನು ನಯವಾಗಿ ಹೇಳುತ್ತಾರೆ. ಅದೇ ಈ ಕವಿತೆಗಳ ಸೊಬಗು ಹಾಗೂ ಆಶಯ ಕೂಡ… ಇನ್ನು ತಾಯಿ ಮಕ್ಕಳ ವಾತ್ಸಲ್ಯ ಕುರಿತು ಕವಿತಾ ಅವರು ಸಂಪೂರ್ಣ ವಾತ್ಸಲ್ಯಮಯಿ ಅಮ್ಮನೇ ಆಗಿ ಗೆದ್ದಿದ್ದಾರೆ. ಕೆ ಎಸ್ ನರಸಿಂಹಸ್ವಾಮಿಯವರು ಬರೆದಿರುವ ಮಕ್ಕಳ ಕುರಿತು ಕೆಲವು ವಾತ್ಸಲ್ಯ ಗೀತೆಗಳ ಸಾಲುಗಳನ್ನು ಕವಿತಾ ಅವರ ರಚನೆಗಳು ಮತ್ತೆ ಮತ್ತೆ ನೆನಪಿಸುತ್ತವೆ. “ ಹಾಲಿನಂತೆ ಅವನ ಮನಸ್ಸು/ ದುಂಡು ಮುತ್ತಿನಂತೆ ನುಡಿ/ ಅವನ ಕೇಕೆ ನನ್ನ ಕನಸು/ದೇವರವನು ನಾನು ಗುಡಿ” ಎಂಬ ಕವಿಯ ಸಾಲುಗಳಲ್ಲಿ “ ಅಮ್ಮನ ಬಂಗಾರ/ ಅಪ್ಪನ ಮಂದಾರ/ ಮಾತಿನ ಮಲ್ಲಿಗೆ / ಕುಣಿವ ಕಾಮನ ಬಿಲ್ಲೇ ಬಾ  “ ಎಂಬ ಕವಯಿತ್ರಿಯ ಸಾಲುಗಳಿಗೆ ನೆನಪಾಗುತ್ತವೆ. ಮಕ್ಕಳ ಪ್ರೀತಿಯ ಒಡನಾಟವೇ ತಾಯ್ತಂದೆಯರ ಭಾಗ್ಯ, ಮಕ್ಕಳಿರುವ ಮನೆಯೇ ಸೌಭಾಗ್ಯದ ನಿಧಿ ಎಂಬ ಹಿರಿಯರ ಮಾತುಗಳನ್ನೂ ಸಾಬೀತು ಪಡಿಸುವಂತೆ ಕವಿಯತ್ರಿ ತಾಯಿ ಮಗಳು ವಾತ್ಸಲ್ಯಗೀತಗಳಲ್ಲಿ ಅಪ್ಪಟ ತಾಯ್ತನದ ಹೊಳೆಯನ್ನೇ ಹರಿಸಿದ್ದಾರೆ. ಎಷ್ಟು ಬರೆದರೂ ತೃಪ್ತಿ ಇಲ್ಲದಂತೆ ತಾಯಿಯಾಗಿ ದಕ್ಕಿದ ಅನುಭವಗಳ ಕಟ್ಟಿಕೊಡುತ್ತಾ ಅರಿವಿನ ದಾರಿ ಮಗುವಿನ ದಾರಿ ಎಂದು ಮನಗಾಣಿಸುತ್ತಾರೆ. ಪುಟ್ಟ ಕಂದಮ್ಮಗಳು ತೊಟ್ಟಿಲಲ್ಲಿ ಮೈಮುರಿದು ಬಟ್ಟಲುಗಣ್ಣು ತೆರೆದು ಬೆಳಗಾಯಿತು (ದೀಪದ ಮಲ್ಲಿ-ಕೆ.ಎಸ್.ನ.) ಎಂಬ ಕವಿಯ ಸಾಲಂತೆ ಬಾಳ ಬೆಳಕು ಯಾವುದು ಎಂಬುದನ್ನು  ಎಂಬುದನ್ನು ಎತ್ತಿ ಹಿಡಿದಿರುವುದು ಚಂದವೆನಿಸುತ್ತದೆ.. ಇನ್ನು “ಕತ್ತಲೆಯಲ್ಲಿ ಬೆಳಕಿನ ಬಿತ್ತನೆ” ಕವಿತೆಯಲ್ಲಿ ಮೊದಲ ಸಾಲುಗಳಲ್ಲೇ ಸಂಕಲನದ ಶೀರ್ಷಿಕೆಯ ಆಶಯಕ್ಕೆ ಸಂಪೂರ್ಣ ಒತ್ತು ಕೊಟ್ಟಂತೆ ತುಂಬಾ ಚಂದವಾಗಿ ರಚಿತವಾಗಿದೆ. “ ರಾತ್ರಿ ಮಲಗಿದ ಮೇಲೆ ನಮ್ಮ ಹಗಲುಗಳೇಳುತ್ತವೆ” ಎಂದು ಆರಂಭವಾಗುವ ಈ ಸಾಲುಗಳೇ ಅದ್ಭುತ… ರಮ್ಯ ಕಲ್ಪನೆ… ಎಲ್ಲ ಹೆಣ್ಣುಗಳ ಅಸಹಾಯಕತೆ ಅಥವಾ ಪರಿಸ್ಥಿತಿಯ ವಕಾಲತ್ತು ವಹಿಸಿದಂತ ಕವಿತೆ ಇದು ಎನ್ನಬಹುದು. ಆಧುನಿಕತೆಯ ಈ ಸಂಕ್ರಮಣ ಕಾಲದಲ್ಲಿ ಹೆಣ್ಣು ಸಾಂಸಾರಿಕ ಹಾಗು ಸಾರ್ವಜನಿಕವಾಗಿ ಅಥವಾ ಸಾಮಾಜಿಕವಾಗಿ ಅಥವಾ ವೃತ್ತಿಪರಳಾಗಿ ಹೊಣೆ ಹೊತ್ತು ಎಷ್ಟು ನಿಸ್ಸಹಾಯಕ ಪರಿಸ್ಥಿತಿಯಲ್ಲಿದ್ದಾಳೆ ಎಂದರೆ ಮನೆ ಮಕ್ಕಳು ಸಂಸಾರದ ಹೊಣೆಯನ್ನು ಅವಳಿಗೆ (ಹೊರಿಸಿದ್ದು) ಬಿಡಲಾಗುತ್ತಿಲ್ಲ, ತನ್ನ ಸ್ವಂತ ಬದುಕನ್ನೂ ರೂಪಿಸಿಕೊಳ್ಳಲು ಆಗುತ್ತಿಲ್ಲ. ಯಾವುದೋ ಕಾಣದ ಒಂದು ಅದೃಶ್ಯ ಮಂತ್ರದಂಡದಂತೆ ಅವಳನ್ನು ಕುಟುಂಬದ ಜವಾಬ್ದಾರಿಗಳು ನಿಯಂತ್ರಿಸುತ್ತಿರುವುದೆಂತಹ ದುರಂತ ಎನಿಸುತ್ತದೆ. ಪುರುಷನಿಗಿರುವ ಯಾವ ಸಹಕಾರ ಸೌಲಭ್ಯಗಳೂ ಅವಳಿಗೆ ಯಾವ ಅಡೆ ತಡೆಯಿಲ್ಲದೆ ಲಭ್ಯವಾಗುವುದಿಲ್ಲ..( ಬೇಕು ಎಂದರೆ ಎಲ್ಲವನ್ನೂ ಹೋರಾಡಿಯೇ ಪಡೆಯಬೇಕು) ಎಂಥಹುದೇ ಮನೆಯಲ್ಲಿರಲಿ ಅವಳು ತಾಯಿ, ಹೆಂಡತಿ, ಮಗಳು, ಜವಾಬ್ದಾರಿ ತೋರಿಸಬೇಕಾದ ಗೃಹಿಣಿಯಾಗಿ ಮೊದಲು ಕಾಣಬೇಕು. ಆನಂತರ ಅವಳು ಅವಳ ’ಹೆಸರಿ’ನವಳು. ಇದು ಸಾರ್ವಕಾಲಿಕ ಸತ್ಯವಾಗಿದೆ. ಹಾಗಾಗಿಯೇ ಅವಳಿಗೆ ರಾತ್ರಿ ಮಲಗಿದ ಮೇಲೆ ನಮ್ಮ ಹಗಲುಗಳೇಳುತ್ತವೆ ಎನ್ನುವಂತಾಗಿರುವುದು. ಆಗಲಾದರೂ ಅವಳ ಹಗಲಿನ ಯೋಚನೆ ಯೋಜನೆಗಳನ್ನುಇರುಳಲ್ಲಿ ಸಾಕಾರಗೊಳಿಸಿಕೊಳ್ಳಲು ಸಮಯ ಸಿಗುತ್ತದೆಯೇ? ಆಗಲೂ ಆಕೆ ತಾಯಾಗಿ ’ಪೊರೆವ’ ಕರ್ತವ್ಯ ಮುಗಿಸುವಷ್ಟರಲ್ಲಿ ಮತ್ತೆ ಬೆಳಕಾಗಿಬಿಡುವುದು ಎಂತಹ ಚೋದ್ಯ ನೋಡಿ…ಅವಳ ’ಸಮಯ’ ಅವಳಿಗೆ ಸಿಕ್ಕುವುದೇ ಇಲ್ಲ. ಇಷ್ಟಾದರೂ ಇಲ್ಲಿನ ಕವಿತೆಗಳಲ್ಲಿ ಕತ್ತಲಿನ ದಾರಿಗೆ ಬೆಳಕ ನೀಡುವ ಕಂದೀಲಿನಂತ ಆಶಯವಿದೆ. ಸಾಮಾಜಿಕ, ಸಂಸ್ಕೃತಿ ಪರಿಸರ ನಾಡುನುಡಿಗಳ ಕುರಿತ ಕವಿತೆಗಳಲ್ಲೂ ಕವಿತಾ ಅವರು ಪ್ರೀತಿಯ, ಶಾಂತಿಯ, ಸತ್ಯದ ಬಿಳಿಯ ಬಾವುಟ ಹಿಡಿದು ಬೆಳಕಿನೆಡೆಗೆ ಸಾಗಲು ಬರುವುದಕ್ಕೆ ಗಮನ ಕೊಡುತ್ತಾರೆ.  ಹಾಗಾಗಿಯೇ ಜೀವನದ ಎಲ್ಲಾ ಮಜಲುಗಳಲ್ಲಿ ಪ್ರೀತಿಯ ಬೆಳಕು ಪಸರಿಸಬೇಕು… ಅದೇ ಸತ್ಯ ಎಂಬ ನಂಬಿಕೆಯೊಂದಿಗೆ ಬರೆಯುತ್ತಾರೆ. ’ಬೆಳಕಿನ ಬಿತ್ತನೆ’ ಯೇ ಸೊಗಸಾದ ಶೀರ್ಷಿಕೆ .ಅಜ್ನಾನದ ಕತ್ತಲಿಗೆ ಪ್ರೀತಿಯ ಬೆಳಕಿನ ಬಿತ್ತನೆ ಬಿತ್ತಿ ಸಹನೀಯ – ಸಮಬಾಳ್ವೆಯ ಆಶಯ ಹೊತ್ತ ಪುಟ್ಟ ಪುಟ್ಟ ಕವಿತೆಗಳು ಸಾಲುದೀಪದಂತೆ ಸಂಕಲನದುದ್ದಕ್ಕೂ ಚೆಂದದ ಬೆಳಕು ಬೀರುತ್ತಾ ಕುಳಿತಿವೆ. ಮಹಿಳಾ ಸಂವೇದನೆಯ ಸೂಕ್ಷ್ಮ ಒಳನೋಟಗಳನ್ನು ಸರಳವಾಗಿ ದಾಖಲಿಸುವ ಆಶಯದಲ್ಲಿ ಕವಿತೆಗಳು ಮನ ತಾಕುತ್ತವೆ. ********************** ಮಮತಾಶಂಕರ್

ಬಿಳಿಯ ಬಾವುಟ ಹಿಡಿದ ಕವಿತೆಗಳು Read Post »

ಪುಸ್ತಕ ಸಂಗಾತಿ

ನಾನು ದೀಪ ಹಚ್ಚಬೇಕೆಂದಿದ್ದೆ ಕವನಗಳು

ಪುಸ್ತಕ ಸಂಗಾತಿ ನಾನು ದೀಪ ಹಚ್ಚಬೇಕೆಂದಿದ್ದೆ ಕವನಗಳು ಈಗಾಗಲೇ ಆರು ಕೃತಿಗಳನ್ನು ಬರೆದಿರುವ ಅಕ್ಷತಾ ಕೃಷ್ಣಮೂರ್ತಿ ನಾಡಿಗೆ ಚಿರಪರಿಚಿತರು. ನಾನು ದೀಪ ಹಚ್ಚಬೇಕೆಂದಿದ್ದೆ ಇವರ ಏಳನೇ ಪುಸ್ತಕ. ಕಡೆಂಗೋಡ್ಲು ಶಂಕರಭಟ್ಟ ಕಾವ್ಯ ಪ್ರಶಸ್ತಿ ಪಡೆದ ಕೃತಿ ಇದು. ಅಂಕಣ, ವ್ಯಕ್ತಿಚಿತ್ರ, ವಿಮರ್ಶೆ, ಸಂಪಾದನೆ, ಕವಿತೆ ಹೀಗೆ ಅಕ್ಷತಾ ಅವರು ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಕೃಷಿ ಮಾಡಿದ್ದಾರೆ.  ೪೨ ಕವಿತೆಗಳ ಈ ಸಂಕಲನದಲ್ಲಿ ಮಕ್ಕಳ ಕವನಗಳು ಇವೆ. ನನ್ನ `ವಿಷಕನ್ಯೆ’ಯ `ಅವನು’ ಇಲ್ಲಿಯೂ ಪ್ರಧಾನವಾಗಿರುವುದು ನನಗೆ ಖುಷಿಯೆನಿಸಿತು. ಹರೆಯದ ಮಹತ್ವವೇ ಅದು. ಜೊತೆಗಿದ್ದು ಒಂಟಿಯಾದ ಭಾವ, ಸರಸ, ವಿರಸ, ಹುಸಿಮುನಿಸು ಇವೆಲ್ಲವೂ `ಯುವಕಾವ್ಯ’ದ ಲಕ್ಷಣಗಳೇ. ಅವರ ಕಾವ್ಯಾತ್ಮಕತೆಗೊಂದು ಉದಾಹರಣೆ ನೋಡೋಣ: ನೆನಪಿದೆಯಾ ಅಂದು ನಾವಿಬ್ಬರೆ                                       ಬಿದ್ದ ಎಲೆಗಳನ್ನಾರಿಸುತ್ತಿದ್ದೆವು                                           ಚಳಿ ಬೆರಗಲಿ ನಮ್ಮ ನೋಡುತ್ತಿದ್ದರೂ                                       ಲೆಕ್ಕಿಸದೆ ( ಚಳಿಗೆ ಅದರುವ ಪದಗಳು) `ನೀನು ಮತ್ತು ಚಳಿ’ ಅದರ ವಿಸ್ಕೃತ ಭಾವವೇ ಕವನದ ಕೊನೆಯ ಭಾಗದಲ್ಲಿ , ಗೋರಿಯಲ್ಲಿ ಮಲಗಿದ                                              ಅವನ ಮೈ ಮೇಲೆ                                                  ತೊಟ್ಟು ಕಳಚಿದ ಎಲೆ   ಬೀಳುತ್ತದೆ                                                       ಸದ್ದೆಬ್ಬಿಸಿ ಈ ಚಳಿಯಲಿ                                                             ಇಲ್ಲಿ ಮಾತು ಮೌನಗಳ ಅನುಸಂಧಾನವೂ ಇದೆ. ಪ್ರೀತಿಯ ಉತ್ಕಟತೆಯೂ ಹರಳುಗಟ್ಟಿದೆ. ಇಷ್ಟೇ ಆಗಿದ್ದರೆ ಅಕ್ಷತಾ `ಗಜಲ’ ಬರೆದು `ಪ್ರೇಮ ಕವಯತ್ರಿ’ ಎಂದು ಬ್ರ್ಯಾಂಡ್ ಆಗುತ್ತಿದ್ದರು. ಆದರೆ ಹಾಗಾಗದೇ ಸ್ತ್ರೀ ಪರ ವಾದ, ಕಾಳಜಿ, ದಾಂಪತ್ಯದ ಬಂಧನ, ಒಲ್ಲದ ಗಂಡನ ಆಕ್ರೋಶ, ಹೆಣ್ಣು ಈಗಲೂ ದ್ವೀತಿಯ ದರ್ಜೆಯ ಪ್ರಜೆಯಾಗಿರುವುದು.. ಹೀಗೆ ಕವನಗಳು ಕುಡಿಯೊಡೆಯುತ್ತದೆ. ನಾನು ದೀಪ ಹಚ್ಚಬೇಕೆಂದಿದ್ದೆ ಎಂಬ ಶೀರ್ಷಿಕೆ ಕವನವನ್ನು ಪರಿಶೀಲಿಸಿದರೆ, ಇದು ಸ್ಪಷ್ಟವಾಗುತ್ತದೆ. ಹೆಣ್ಣಿನ ಆಶಯ ಒಂದು, ವಾಸ್ತವ ಬೇರೊಂದು. ಹೀಗೆ ವೈರುದ್ಯಗಳನ್ನು ಕಾಣಿಸುವ `ಕವಿತೆ’ ಇದು. ದೀಪ ಹಚ್ಚುತ್ತೇನೆ                                                ಎಲ್ಲರೆದೆಯಲ್ಲಿ ಎಂದೆ                                                ಸುದ್ದಿ ಮಾಡು ಎಲ್ಲ                                                               ಗೊತ್ತಾಗಲಿ ಎಂದರು                                                ಪುಕ್ಕಟ್ಟಿನ ಜಾಹೀರಾತಾಗಿಬಿಟ್ಟೆ ಹೀಗೆ ಹೆಣ್ಣಿನ ದುಸ್ಥಿತಿ ಈಗಲೂ ಮುಂದುವರೆದಿರುವದನ್ನು ನೋವಿನಿಂದ ಚಿತ್ರಿಸಿದ್ದಾರೆ. ಒಬ್ಬರ ಅಡಿಯಾಗಬೇಕಾದ ದುರವಸ್ಥೆಗೆ ಒತ್ತು ನೀಡಿದ್ದಾರೆ. ಕತ್ತಿ ರಕ್ತ ಮೀಯುತಿದೆ, ಮಸರಿಯಾಗಬಾರದು ಈ ಎರಡು ಕವನಗಳು ನನಗೆ ವಿಶಿಷ್ಟವೆನಿಸಿದ್ದು. ನೋವಿನ ಘಳಿಗೆಯೊಂದು ನಗುವ ಅರಸುತಿದೆ ಎಂಬ ಕವನದಲ್ಲಿ ಎರಡು ಧರ್ಮಗಳ ಆತ್ಮೀಯತೆ, ಬಾಲ್ಯ ಕಳೆಯುತ್ತಿದ್ದಂತೆ ಬೇರೆಯಾಗುವ ಪರಿ, ಹುಡುಗಿ ಬೆಳೆದಂತೆ ಮಸೀದಿಗೆ ಪ್ರವೇಶವಿಲ್ಲ ಎಂದು ಸಾರುವ ಫಲಕ ಆಗಲೇ ತಿಳಿದದ್ದು                                                     ನನ್ನ ಫ್ರಾಕಿನ ಅಳತೆ ಬದಲಾಗಿದೆಯೆಂದು      ಎಂಬ ಮಾತು ಧ್ವನಿಪೂರ್ಣವಾಗಿದೆ ( ಈಗ ಮಹಿಳೆಯರಿಗೆ ಮಸೀದಿಯ ಪ್ರತ್ಯೇಕ ಭಾಗದಲ್ಲಿ ಪ್ರಾರ್ಥನೆಗೆ ಅವಕಾಶ ಕಲ್ಪಿಸಲಾಗಿದೆ ಆ ಮಾತು ಬೇರೆ) ಗ್ರಾಮೀಣ ಭಾಗದಲ್ಲಿ ಮೂಲಭೂತವಾದಿ ಸ್ತ್ರೀ ಸಮಾನತೆಯನ್ನು ಒಪ್ಪಿಕೊಳ್ಳುತ್ತಿಲ್ಲ ಎಂಬ `ಸತ್ಯ’ವನ್ನು ಒಂದು ಕಥನ ಕವನದ ಗುಣವುಳ್ಳ ಕವನದ ಮೂಲಕ ಬಿಂಬಿಸಿದ್ದಾರೆ. ಇಲ್ಲಿ ನನಗೆ ಮಲೆಯಾಳಿ ಕಥೆಗಾರ್ತಿ ಪಿ ವತ್ಸಲಾ ಅವರ ನಾನು ಅನುವಾದಿಸಿದ ಕಥೆ ನೆನಪಾಯಿತು. ಸ್ತ್ರೀ ಪರ ಹೋರಾಟದ ಕಥನಗಳು ಮುಗಿಯದು. ಇದಲ್ಲದೆ ಪ್ರವಾಹದ ಅತಂತ್ರ ಬದುಕು, ಶ್ರಮಿಕರ, ರೈತರ ಕುರಿತು ಕಾಳಜಿಗಳು ಈ ಸಂಕಲನದಲ್ಲಿ ವ್ಯಕ್ತವಾಗಿವೆ. ಭತ್ತ ಬೆಳೆಯುವ ಹೊತ್ತು                                             ರೈತನ ಹಸ್ತದಂಚಿನಲಿ                                                                 ಜನಿಸಿದ ಜಲ ಒಟ್ಟಾರೆ ಅಕ್ಷತಾ ಅವರ ಈ ಕೃತಿ ಏಕಾಂತ ಲೋಕಾಂತವಾಗುವ ಪ್ರಕ್ರಿಯೆಯಲ್ಲಿರುವುದು ಸ್ವಾಗತಾರ್ಹವಾಗಿದೆ. ************************************************                                          ಡಾ.ಕಮಲಾಹೆಮ್ಮಿಗೆ                                                                                                                                                                                                                                                                                        

ನಾನು ದೀಪ ಹಚ್ಚಬೇಕೆಂದಿದ್ದೆ ಕವನಗಳು Read Post »

You cannot copy content of this page

Scroll to Top