ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ, ಶಿಕ್ಷಣ

ಮಕ್ಕಳಿಗೂ ಒಂದು ವ್ಯಕ್ತಿತ್ವವಿದೆ

ಲೇಖನ ಮಕ್ಕಳಿಗೂ ಒಂದು ವ್ಯಕ್ತಿತ್ವವಿದೆ ಡಾ. ಸಹನಾ ಪ್ರಸಾದ್ ಇಂದಿನ ಜೀವನ ಬಹಳ ಸ್ಪರ್ಧಾತ್ಮಕವಾದುದು.ನಮ್ಮ ಯುವ ಜನಾಂಗವನ್ನು ನೋಡಿದಾಗ ಕೆಲವೊಮ್ಮೆ “ ಅಯ್ಯೋ ಪಾಪ” ಎನ್ನಿಸುವುದುಂಟು.ಎಷ್ಟು ಓದಿದರೂ ಸಾಲದು, ಎಷ್ಟು ಕಷ್ಟಪಟ್ಟರೂ, ಎಷ್ಟು ಅಂಕೆಗಳು ತೆಗೆದರೂ ಸಾಕಾಗುವುದಿಲ್ಲ. ಯಾವಾಗಲೂ ಒತ್ತಡದ ಬದುಕು. ಚಿಕ್ಕ ತರಗತಿಗಳಿಂದಲೇ ಶುರು.ತರಹ ತರಹದ ಕ್ಲಾಸುಗಳು, ಮನೆ ಪಾಠಗಳು, ಒಂದು ತರಗತಿಯಿಂದ ಇನ್ನೊಂದಕ್ಕೆ ಯಾವಾಗಲೂ ಓಟ. ನರ್ಸರಿಗೆ ಸೇರುವ ಮೊದಲೇ “ಕೋಚಿಂಗ್”. ವಿಧ ವಿಧವಾದ ಬಣ್ಣಗಳು,ಆಕೃತಿಗಳು, ಪದ್ಯಗಳನ್ನು ಕಂಠ ಪಾಠ ಮಾಡಬೇಕು. ತಾಯಿ ಪ್ರೀತಿಯಿಂದ ಮುದ್ದು ಮಾಡುತ್ತಾ ಕಲಿಸಬೇಕಾದ ವಿಷಯಗಳನ್ನು ಈಗ ದುಡ್ಡು ಕೊಟ್ಟು ಶಿಕ್ಷೆಯ ತರಹ ಕಲಿಸುವ ತರಗತಿಗಳು, ಅವನ್ನು ಅಳು ಮುಖದಿಂದ ಕಲಿವ ಮಕ್ಕಳು.ಸಂಜೆ ಆರಾಮವಾಗಿ ಆಟವಾಡಿಕೊಂಡಿರಬೇಕಾದ ಮಕ್ಕಳು ತರಗತಿಯಲ್ಲಿರುವುದನ್ನು ನೋಡಿದರೆ ಬೇಸರವಾಗುತ್ತದೆ, ಆಟವಾಡಿ ಬೆಳೆಯಬೇಕಾದ ಎಳೆ ಮನುಸ್ಸುಗಳು ಈ ರೀತಿಯ ಸತತವಾದ ಧಾಳಿಯಿಂದ ಕೊರಗುವ ಸಾಧತೆಗಳೂ ಇವೆ. ಎಷ್ಟೋ ಸಲ ತಾವು ಮಾಡಲಾಗದಿದ್ದನ್ನು ಮಕ್ಕಳಿಂದ ಮಾಡಿಸುವ, ತಮ್ಮ ಅಪೂರ್ಣ ಕನಸುಗಳನ್ನು ಅವರ ಮೂಲಕ ಸಾಕಾರಗೊಳಿಸುವ ಪೋಷಕರೂ ಸಿಗುತ್ತಾರೆ.ನಮ್ಮ ಮಕ್ಕಳ ಅಭಿವೃದ್ಧಿ ಎಲ್ಲಾ ರೀತಿಯಲ್ಲೂ ಆಗಲಿ, ಅವರ ಬೆಳವಣಿಗೆ ಪರಿಪೂರ್ಣವಾಗಲಿ ಎಂದು ಸದ್ದುದ್ದೇಶ ಹೋಂದಿರುವ ಮಾತಾ ಪಿತೃಗಳೂ ಇದ್ದಾರೆ. ಕೆಲವು ಮಕ್ಕಳು ಅತಿಯಾಗಿ ಚೂಟಿಯಾಗಿರುತ್ತಾರೆ.ಅಂತಹ ಮಕ್ಕಳನ್ನು ಹಿಡಿಯುವುದು ಬಲು ಕಷ್ಟ., ತಂಟೆ ಮಾಡದೆ, ಏನೋ ಒಂದು ತೊಂದರೆಗೆ ಸಿಕ್ಕಿಹಾಕಿಕೊಳ್ಳದೆ ಇದ್ದರೆ ಆ ಮಕ್ಕಳಿಗೆ ಸಮಾಧಾನವೇ ಇಲ್ಲ. ಅಂತಹ ಮಕ್ಕಳಿಗೆ ಈ ರೀತಿಯ ತರಗತಿಗಳಿಗೆ ಸೇರಿಸುವುದರಿಂದ ಸ್ವಲ್ಪ ಮಟ್ಟಿಗೆ ಅವರ ತುಂಟತನ ಕಡಿಮೆಯಾಗುತ್ತದೆ ಹಾಗೂ ಜ್ನಾನಾಭಿವೃದ್ಧಿ ಕೂಡ ಆಗುತ್ತದೆ.“ಮಕ್ಕಳಿಗೆ ಕಷ್ಟ ಎಂದರೇನು, ಅವರಿಗೆ ಇನ್ನೇನು ಕೆಲಸವಿರುತ್ತದೆ? ಎಲ್ಲ ಕಡೆ ಕರೆದೊಯ್ಯಲು,ಕೇಳಿದ್ದೆಲ್ಲಾ ಕೊಡಿಸಲು ನಾವಿದ್ದೇವೆ, ಕಲಿಯಲು ಏನು ಕಷ್ಟ” ಎಂದು ಕೇಳುವ ಪೋಷಕರು ಬಹಳ. ಅದು ನಿಜವೇ ಆದರೂ, ಮಕ್ಕಳ ಇಷ್ಟ ಹಾಗೂ ಆಸಕ್ತಿಯನ್ನೂ ಗಮನಿಸಿ ಪೋಷಕರು ಮುಂದುವರೆಯುವುದು ಮುಖ್ಯ.ಎಷ್ಟೋ ಜನ ವಿದ್ಯಾರ್ಥಿಗಳಿಗೆ ವಿಜ್ಞಾನ ಕಷ್ಟ. ಅದರಲ್ಲೂ ಗಣಿತವೆಂದರೆ ಅಲರ್ಜಿ.ಅಂತಹ ಮಕ್ಕಳನ್ನು ಬಲವಂತವಾಗಿ ವಿಜ್ಞಾನ ಓದುವುದಕ್ಕೆ ನೂಕಿದರೆ ಅದು ತುಂಬಾ ತಪ್ಪು.ಎಷ್ಟೂ ಜನ ಪೀಯೂಸೀಯಲ್ಲಿ ಗಣಿತ ತೆಗೆದುಕೊಂಡು, ಒದ್ದಾಡಿ, ಆಮೇಲೆ ತಮ್ಮ ತಮ್ಮ ಆಸಕ್ತಿಯ ಮೇಲೆ ಬೇರೆ ವಿಷಯ ಓದುವುದುಂಟು. ಕೆಲವು ಪೋಷಕರು ಇದನ್ನು ಅರ್ಥ ಮಾಡಿಕೊಂಡು ಮಕ್ಕಳಿಗೆ ಉತ್ತೇಜನ ನೀಡಿದರೆ,, ಇನ್ನೂ ಕೆಲವರು ಇದರಿಂದ ತಮ್ಮ ಅಭಿಮಾನಕ್ಕೆ ಧಕ್ಕೆ ಎಂದೇ ಭಾವಿಸುತ್ತಾರೆ. ಖ್ಯಾತ ವೈದ್ಯರೊಬ್ಬಳ ಮಗಳು ಕಲಾ ವಿಭಾಗಕ್ಕೆ ಸೇರಲು ಬಂದಿದ್ದಳು.ಅವಳು ಮುಂಚೆ ಓದಿದ್ದು ವಿಜ್ಞಾನ. ಅಂಕೆಗಳೂ ಸುಮಾರು ಚೆನ್ನಾಗಿಯೇ ಬಂದಿತ್ತು. ಸಾಮಾನ್ಯವಾಗಿ ಕೇಳುವಂತೆ ಯಾಕೆ ಈ ಬದಲಾವಣೆ ಎಂದು ವಿಚಾರಿಸಿದಾಗ , ಅವಳು ಹೇಳಿದ್ದು “ ನನಗೆ ಮುಂಚಿಂದಲೂ ಕಲೆಯ ಬಗ್ಗೆ ಒಲವು,ಅದರಲ್ಲೂ ಆಂಗ್ಲ ಸಾಹಿತ್ಯ ನನ್ನ ಅಚ್ಚು ಮೆಚ್ಚಿನ ವಿಷಯ.ಆದರೆ ನಮ್ಮ ಕುಟುಂಬದಲ್ಲಿ ಎಲ್ಲರೂ ವಿಜ್ಞಾನ ಓದಿದವರೆ, ವೈದ್ಯ ಅಥವಾ ಎಂಜಿನಿಯರ್ ಆಗಿರುವರೆ. ಇದುವರೆಗೂ ನಾನು ತೆಗೆದಿರುವ ಅಂಕಿಗಳಿಗೂ, ನನ್ನ ಆಸಕ್ತಿಗೂ ಏನೂ ಸಂಭಂಧವಿಲ್ಲ.ಅದೆಲ್ಲ ಟ್ಯೂಷನ್ ಮಹಿಮೆ ಅಷ್ಟೇ”. ಅವಳ ತಾಯಿಯ ಮುಖ ಕೋಪದಿಂದ ಗಂಟಿಕ್ಕಿತ್ತು.” ನಾನು ನನ್ನ ಆಸ್ಪತ್ರೆಯನ್ನು ಇವಳು ಮುಂದುವರೆಸುತ್ತಾಳೆ,ಅದನ್ನು ಬೆಳೆಸುತ್ತಾಳೆ ಎಂದು ಕನಸು ಕಟ್ಟಿದ್ದೆ.ಇವಳಿಗೆ ಅದರ ಪರಿವೆಯೇ ಇಲ್ಲ”. ಅವರ ಮಾತಿಗೆ ಸೊಪ್ಪು ಹಾಕದೆ ಆ ಹುಡುಗಿಗೆ ಸೀಟ್ ಕೊಡುವುದೆಂದು ನಿರ್ಧರಿಸಿದೆವು. ಆದರೆ ಸ್ವಲ್ಪ ದಿನದ ನಂತರ ತಿಳಿದುದೆಂದರೆ ಅವಳಿಗೆ ಬಲವಂತವಾಗಿ ಇಂಜಿನೀರಿಂಗ್ ಸೀಟ್ ಕೊಡಿಸಿದ್ದರು.ಕೆಲವು ವರುಷದ ನಂತರ ಸಿಕ್ಕಾಗ ಹೇಗಿದ್ದೆಯ ಎಂದು ಕೇಳಿದರೆ, ಅವಳ ಮಾತಿನಲ್ಲಿ ರೋಷ ಹೆಪ್ಪುಗಟ್ಟಿತ್ತು. ಎಲ್ಲ ಸೆಮ್ಮಿಸ್ಟರ್ನಲ್ಲೂ “ ಬ್ಯಾಕ್ ” ಇದೆ.ನಮ್ಮ ಮನೆಯವರ ಸಮಾಧಾನಕ್ಕಾಗಿ ಓದುತ್ತಿದ್ದೇನೆ. ಆದರೆ ಮನಸ್ಸೆಲ್ಲ ಸಾಹಿತ್ಯದ ಮೇಲೆ. ಕೆಲವೊಮ್ಮೆ, ಅವರಿಗೆ ಬುದ್ಧಿ ಕಲಿಸಲಿಕ್ಕಾದರೂ ಇದೆ ರೀತಿ ನಪಾಸಾಗುತಲೇ ಇರೋಣ ಎನಿಸುತ್ತದೆ”. ಅವಳ ಬಿಚ್ಚು ಮನಸ್ಸಿನ ಮಾತು ಕೇಳಿ ಎದೆ ಧಸಕ್ಕೆಂದಿತು. “ ನೋಡಮ್ಮ, ಇದು ನಿನ್ನ ಬದುಕು. ನೀನು ಇದೇ ರೀತಿ ಅಂಕಿಗಳು ತೆಗೆಯುತ್ತಿದ್ದರೇ , ನಿನಗೆ ಒಳ್ಳೆಯ ಕೆಲಸ ಸಿಗುವುದು, ನೀನು ನಿನ್ನ ಸಾಹಿತ್ಯದ ಕಡೆ ಗಮನ ಕೊಡುವುದಕ್ಕಾಗುವುದೇ ಇಲ್ಲ.ಯೋಚಿಸು, ಅವರಿಗೆ ಬುದ್ಧಿ ಕಲಿಸಲು ಹೋಗಿ ನಿನ್ನ ಬದುಕನ್ನು ನೀನೆ ನಾಶ ಮಾಡಿಕೊಳ್ಳಬೇಡ “ ಎಂದು ಹೇಳಿದಾಗ ಅವಳ ಕಣ್ಣಲ್ಲಿ ಅರ್ಥವಾದ ಭಾವ ಕಂಡು ಬಂದಿತು.”. ಅಡ್ಮಿಷನ್ ಸಮಯದಲ್ಲಿ ಮಕ್ಕಳ ಜತೆ ಪೋಷಕರಿಗೂ “ ಕೌನ್ಸಿಲ್ಲಿಂಗ್” ಬೇಕಾಗುತ್ತದೆ.ಮಕ್ಕಳಿಗೆ ನಮ್ಮ ಬದುಕಿನ ಒಂದು ಭಾಗದಂತೆ ನೋಡದೆ, ಅವರಿಗೂ ಅವರದೇ ಆದ ವ್ಯಕ್ತಿತ್ವ ಇದೆಯೆಂದು ಅರಿತು ಅವರನ್ನು ಗೌರವಿಸಿದಾಗ, ಅವರ ಬದುಕೂ ಸುಂದರ, ನಮ್ಮ ಬದುಕೂ ಸಾರ್ಥಕ! *****************************************

ಮಕ್ಕಳಿಗೂ ಒಂದು ವ್ಯಕ್ತಿತ್ವವಿದೆ Read Post »

ಇತರೆ, ಶಿಕ್ಷಣ

ಗುರುವಿನ ಗರಿಮೆ

ಲೇಖನ ಗುರುವಿನ ಗರಿಮೆ ನೂತನ ದೋಶೆಟ್ಟಿ ಬಾಲ್ಯದಲ್ಲಿ ಶಿಕ್ಷಣವೆಂದರೆ ಶಿಕ್ಷೆ  ಯೌವನದಲ್ಲಿ ಶಿಕ್ಷಣವೆಂದರೆ ಪರೀಕ್ಷೆಗಳು ಹಾಗೂ ಮೋಜು, ಆನಂತರದಲ್ಲಿ ಅದೇ ಶಿಕ್ಷಣ ವೃತ್ತಿಗೆ ರಹದಾರಿ.ಈ ರೀತಿಯಾಗಿ ಶಿಕ್ಷಣವನ್ನು ಸರಳೀಕರಿಸಬಹುದಾದ ಕಾಲಘಟ್ಟದಲ್ಲಿ ನಾವಿದ್ದೇವೆ. ಈ ಹಿನ್ನೆಲೆಯಲ್ಲಿ ಎರಡು ಸರಳ ಸೂತ್ರಗಳನ್ನು ನಿಮ್ಮ ಮುಂದೆ ಇಡಬಯಸುತ್ತೇನೆ.  ಶಿಕ್ಷಣ= ಶಿಕ್ಷಣ ಸಂಸ್ಥೆ+ ವಿದ್ಯಾರ್ಥಿ ಉದ್ಯೋಗ= ಮಾರ್ಕ್ಸ+ ವಶೀಲಿ ಈ ಎರಡು ಸೂತ್ರಗಳನ್ನು ಇಟ್ಟುಕೊಂಡು ಇಂದಿನ ಶಿಕ್ಷಣದ ಬಗ್ಗೆ ನೋಡೋಣ. ಮೊದಲ ಸೂತ್ರದಲ್ಲಿ ಶಿಕ್ಷಣ ಸಂಸ್ಥೆಗಳು ಬಹು ಮುಖ್ಯವಾಗುತ್ತವೆ. ಉನ್ನತ ಶಿಕ್ಷಣದಲ್ಲಿ ಈ ಸಂಸ್ಥೆಗಳು ನೀಡುವ ಶಿಕ್ಷಣದ ಗುಣಮಟ್ಟ ಮುಖ್ಯವಾದರೂ ಆ ಸಂಸ್ಥೆಗಳ ಮೂಲಕ ದೊರೆಯಬಹುದಾದ ಉದ್ಯೋಗಾವಕಾಶ ಹಾಗೂ ಸಂಬಳದ ಪ್ಯಾಕೇಜ್ ಬಹಳ ಮುಖ್ಯವಾಗುತ್ತದೆ.ಈ ಕಾರಣದಿಂದಲೇ ತಾಂತ್ರಿಕ ಹಾಗೂ ವೈದ್ಯಕೀಯ ಉನ್ನತ ಶಿಕ್ಷಣ ವಿದ್ಯಾಲಯಗಳು ಪರಸ್ಪರ ಪೈಪೋಟಿಗೆ ಬಿದ್ದಂತೆ ವಿದ್ಯಾರ್ಥಿಗಳನ್ನು ತಮ್ಮತ್ತ ಸೆಳೆದುಕೊಳ್ಳಲು ಹೊಸ ಹೊಸ ಆಮಿಷಗಳನ್ನು ಒಡ್ಡುತ್ತಿರುವುದು.ಪ್ರತಿವರ್ಷ ಸಮರೋಪಾದಿಯಲ್ಲಿ ವಿದ್ಯಾಸಂಸ್ಥೆಗಳು ಹಾಗೂ ವಿದ್ಯಾರ್ಥಿಗಳು ಪರೀಕ್ಷೆಗೆ ಸಿದ್ಧವಾಗುತ್ತಿರುವುದು.ಈ ಸೂತ್ರದಲ್ಲಿ ಗುರು ಇಲ್ಲದಿರುವುದುದನ್ನು ಗಮನಿಸಬೇಕು. ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ಗುರುವಿನ ಸ್ಥಾನ ಮಹತ್ವವನ್ನು ಕಳೆದು ಕೊಳ್ಳುತ್ತಿರುವುದನ್ನು ಈ ಸಂಸ್ಥೆಗಳು ನಡೆಸುವ ಪರೀಕ್ಷೆಗಳು, ಗುರುಗಳ ಬದಲಾಗಿ ಕೋಚಿಂಗ್ ಸೆಂಟರುಗಳ ಗುರುವಲ್ಲದ ತರಬೇತುದಾರರ ಮೇಲೆ ಹೆಚ್ಚು ಅವಲಂಬಿತರಾಗುವ ವಿದ್ಯಾರ್ಥಿಗಳು ಹಾಗೂ ಅವರ ಪಾಲಕರು ಮತ್ತೆ ಮತ್ತೆ ಪುಷ್ಟೀಕರಿಸುತ್ತಿದ್ದಾರೆ. ಎರಡನೇ ಸೂತ್ರ ವಿದ್ಯಾಭ್ಯಾಸದ ಗುರಿಯನ್ನು ನಿರ್ಧರಿಸುತ್ತದೆ.ಅದೆಂದರೆ ಉದ್ಯೋಗ.ಕೋರ್ಸಗಳನ್ನು ಆಯ್ಕೆ ಮಾಡಿಕೊಳ್ಳುವಾಗ ಅದರಿಂದ ದೊರೆಯಬಹುದಾದ ಸಂಬಳದ ಪ್ಯಾಕೇಜಿನ ಮೇಲೆ ಅದು ನಿರ್ಧರಿಸಲ್ಪಡುತ್ತದೆ.ಇದಕ್ಕೆ ಮುಖ್ಯವಾಗಿ ಬೇಕಾಗಿರುವುದು ವಿದ್ಯಾರ್ಥಿ ಪಡೆಯುವ ಅಂಕಗಳು, ಅಗತ್ಯ ಸಂದರ್ಭದಲ್ಲಿ ಮಾಡಬಹುದಾದ ವಶೀಲಿ.ಇಲ್ಲಿಯೂ ಕೂಡ ಗುರುವಿನ ಮಾತೇ ಇಲ್ಲ. ಇಂತಹ ಅನೇಕ ಸೂತ್ರಗಳನ್ನು ಸಿದ್ಧಪಡಿಸುತ್ತ ಹೋಗಬಹುದು.ಪ್ರಯತ್ನಿಸಿ ನೋಡಿ.ಆದರೆ ಎಲ್ಲಿಯೂ ಗುರುವಿನ ಅಗತ್ಯತೆ ಕಂಡುಬರದಿರುವುದು ಇಂದಿನ ಶಿಕ್ಷಣ ವ್ಯವಸ್ಥೆಯ ವಾಸ್ತವ.ಆಚಾರ್ಯದೇವೋ ಭವ ಎಂದು ಗುರುವನ್ನು ದೈವತ್ವಕ್ಕೇರಿಸಿದ  ನಮ್ಮ ನಾಡಿನಲ್ಲಿ ಹೀಗೆ ಗುರುವಿನ ಸ್ಥಾನ ಗೌಣವಾಗಲು ಆರಂಭವಾದದ್ದು ತೀರ ಇತ್ತೀಚಿನ ವರ್ಷಗಳಲ್ಲಿ. ನಮ್ಮ ದೇಶದಲ್ಲಿ ಗುರುಕುಲ ಪದ್ಧತಿಯಲ್ಲಿ ಮಾತ್ರಇದ್ದ ಶಿಕ್ಷಣ ನಿಲುಕುತ್ತಿದ್ದುದು ಕೂಡ ಸಮಾಜದ ಉನ್ನತ ವರ್ಗಕ್ಕೆ ಸೇರಿದ ಕೆಲ ಗಣ್ಯಾತಿಗಣ್ಯರಿಗೆ ಮಾತ್ರ. ಕಾಲಾಂತರದಲ್ಲಿ ಆದ ಸಾಮಾಜಿಕ ಬದಲಾವಣೆಗಳಿಂದ, ಶೈಕ್ಷಣಿಕ ಕ್ರಾಂತಿಯಿಂದ.  ಶಿಕ್ಷಣ ಸಾರ್ವತ್ರಿಕವಾದದ್ದು ಆಧುನಿಕ ಭಾರತದ ಅತಿ ದೊಡ್ಡ ಸಾಧನೆ. ಆದರೆ ಸ್ವಾತಂತ್ರ್ಯಾನಂತರ ಆದ ಆರ್ಥಿಕ ಬದಲಾವಣೆಯ ಬಿರುಗಾಳಿಯಲ್ಲಿ ಶಿಕ್ಷಣ ಕ್ಷೇತ್ರವೂ ಸಿಲುಕಿ ಅದರ ವ್ಯಾಪಾರೀಕರಣವಾದದ್ದರಿಂದಲೇ ‘ಗುರು’ಸ್ಥಾನ ಈ ಹಿಂದಿನ ಮಹತ್ವವನ್ನು ಕಳೆದುಕೊಳ್ಳಲಾರಂಭಿಸಿತು.‘ ಹಿಂದೆ ಗುರುವಿದ್ದ; ಮುಂದೆ ಗುರಿ ಇತ್ತು. ಸಾಗುತಿತ್ತು ಧೀರರದಂಡು. ಇಂದು ಹಿಂದೆ  ಗುರುವಿಲ್ಲ; ಮುಂದೆ ಗುರಿ ಇಲ್ಲ. ಸಾಗುತಿಹುದು ರಣಹೇಡಿಗಳ ಹಿಂಡು’ ಎಂಬ ನುಡಿ ಶಿಕ್ಷಣ ಕ್ಷೇತ್ರಕ್ಕೆ ಬಿದ್ದ ಕೊಡಲಿಪೆಟ್ಟಿನಿಂದ ಘಾಸಿಗೊಂಡು ಆಡಿದ್ದಾಗಿದೆ. ಇತ್ತೀಚಿನ ವರ್ಷಗಳಲ್ಲಿ ಈ ರಣಹೇಡಿತನವನ್ನೂ ಮೀರಿಸಿದ ಶಿಕ್ಷಣ ವ್ಯವಸ್ಥೆಗೆ ನಮ್ಮ ದೇಶ ಸಾಕ್ಷಿಯಾಗುತ್ತಿದೆ. ಉನ್ನತ ಶಿಕ್ಷಣದ ದೇಗುಲಗಳಾಗಿದ್ದ ವಿಶ್ವವಿದ್ಯಾಲಯಗಳೂ ಅನೀತಿಯ ತಾಣಗಳಾಗುತ್ತಿವೆ. ಶಿಕ್ಷಕರಿಂದಲೇ ವಿದ್ಯಾರ್ಥಿಗಳ ಮೇಲೆ ದೌರ್ಜನ್ಯ, ಅತ್ಯಾಚಾರದಂತಹ ಪ್ರಕರಣಗಳು ಹೆಚ್ಚು ಹೆಚ್ಚು ದಾಖಲಾಗುತ್ತಿವೆ. ಈ ಪಿಡುಗು ಶಾಲೆ ಕಾಲೇಜುಗಳನ್ನೂ ಬಿಟ್ಟಿಲ್ಲ. ಇಂತಹ ವಾತಾವರಣದಲ್ಲಿ ನಲುಗುತ್ತಿರುವುದು ವಿದ್ಯೆಯೇ ಹೊರತು ಶಿಕ್ಷಕರಾಗಲೀ, ವಿದ್ಯಾರ್ಥಿಗಳಾಗಲೀ ಅಲ್ಲ. ಶಿಕ್ಷಕರಿಗೆ ಸಂಬಳ, ಭತ್ಯೆಗಳು, ಪರೀಕ್ಷಾ ಡ್ಯೂಟಿಗಳು, ಜೊತೆಗೆ ಒಂದಷ್ಟು ತರಗತಿಗಳಲ್ಲಿ ಪಾಠ ಇವಿಷ್ಟು ಶಿಕ್ಷಣ ವ್ಯವಸ್ಥೆಯಾಗಿ ಕಂಡರೆ ವಿದ್ಯಾಥಿಗಳಿಗೆ ಹಾಜರಿ ಹಾಗೂ ಪರೀಕ್ಷೆಗಳೇ ಶಿಕ್ಷಣ ವ್ಯವಸ್ಥೆಯಾಗಿವೆ. ಇದರಿಂದ ಸರಿಯಾದ ಶಿಕ್ಷಣ ಯಾವ ಹಂತದಲ್ಲೂ ದೊರೆಯದೇ ಇಡಿಯ ಶಿಕ್ಷಣ ವ್ಯವಸ್ಥೆ ಬಡವಾಗುತ್ತಿದೆ. ಅವ್ಯವಹಾರ, ಅನೈತಿಕತೆ ಈ ಶಿಕ್ಷಣ ವ್ಯವಸ್ಥೆಯಲ್ಲಿ ಅಟ್ಟಹಾಸವನ್ನು ಮೆರೆಯುತ್ತಿದೆ ಎಂದರೆ ತಪ್ಪಾಗಲಾರದು. ಪರೀಕ್ಷಾ ಗೊಂದಲಗಳು, ಪ್ರತಿವರ್ಷ ಕಾಡುವ ಪ್ರಶ್ನೆ ಪತ್ರಿಕೆ ಗೊಂದಲಗಳು, ಪರೀಕ್ಷೆಗೆ ಮುನ್ನವೇ ಅವುಗಳು ಬಯಲಾಗುವುದು, ಪರೀಕ್ಷಾ ನಂತರವೂ ಫಲಿತಾಂಶಗಳಲ್ಲಿ ಗೊಂದಲ, ಅವ್ಯವಹಾರಗಳು ಈ ವ್ಯವಸ್ಥೆಯನ್ನುಗುರುವಿನ ಹೊರತಾಗಿ ಬೇರೆ ಶಕ್ತಿಗಳು, ಪಟ್ಟಭದ್ರ ಹಿತಾಸಕ್ತಿಗಳು ಆಳುತ್ತಿರುವುದನ್ನು ಕಣ್ಣಿಗೆ ರಾಚುವಂತೆ ತೋರಿಸುತ್ತಿವೆ. ಈ ಹಿನ್ನೆಲೆಯಲ್ಲಿ ‘ಗುರು’ ಎಂಬ ಪದ ತನ್ನ ಗರಿಮೆಯನ್ನು ಕಳೆದುಕೊಂಡಿದೆ. ಕೇವಲ ಮೂರು ದಶಕಗಳ ಹಿಂದೆ ಗುರು-ಶಿಷ್ಯ ಸಂಬಂಧ ಭಯ-ಭಕ್ತಿಯ ಸಂಬಂಧವಾಗಿತ್ತು. ತಮ್ಮನ್ನು ಗೌರವಿಸುವ ಅಪಾರ ಶಿಷ್ಯವೃಂದ ಗುರುಗಳಿಗೆ ಇತ್ತು.ಇದು ಒಳ್ಳೆಯ ಶಿಕ್ಷಣ ವ್ಯವಸ್ಥೆಯ ಸೊಬಗು ಕೂಡ.ಗೌರವಕ್ಕೆ ಪಾತ್ರನಾಗುವ ಗುರು ಎಂದರೆ ಅವನು ತನ್ನ ಕರ್ತವ್ಯಗಳಿಗೆ ಚ್ಯುತಿ ಬಾರದಂತೆ ತನ್ನ ಶಿಷ್ಯವೃಂದಕ್ಕೆ ಸಲ್ಲಬೇಕಾದ ಸೇವೆಯನ್ನು ಸಲ್ಲಿಸಿದ್ದಾನೆ ಹಾಗೂ ಹೊಣೆಯನ್ನು ನಿಭಾಯಿಸಿದ್ದಾನೆ ಎಂದೇ ಅರ್ಥ. ಅದರಂತೆ ವಿದ್ಯಾರ್ಥಿಗಳೂ ಕೂಡ ಅಂತಹ ಗುರುವಿಗೆ ವಿಧೇಯರಾಗಿರುತ್ತಾರೆಂದರೆ ಅದು ಆ ಗುರುವೇ ಅವರಿಗೆ ನೀಡಿದ ಮಾರ್ಗದರ್ಶನದ ಮೂಲಕ ಎಂಬುದೂ ಕೂಡ ಸತ್ಯ. ಕಾಲ ಕಳೆದಂತೆ ಗುರು-ಶಿಷ್ಯ ಸಂಬಂಧದಲ್ಲಿ ಬದಲಾವಣೆ ಕಂಡು ಬರುತ್ತಪರಸ್ಪರ ಮಿತ್ರತ್ವದ ನೆಲೆಗೆ ಈ ಸಂಬಂಧವನ್ನು ತಂದು ನಿಲ್ಲಿಸಿತು.ಇದು ಕೂಡ ಬಹು ಸುಂದರವಾದ ಘಟ್ಟವೇ. ಏಕೆಂದರೆ ಆಜ್ಞಾಪಾಲಕ ವಿದ್ಯಾರ್ಥಿ ಸಂಸ್ಕೃತಿಯಿಂದ ಗೆಳೆತನಕ್ಕೆ ಒಗ್ಗಿಕೊಳ್ಳುವ ಸಖ್ಯ ಪರಂಪರೆ ಈ ಕಾಲದಲ್ಲೆ ಬೆಳೆಯಿತು.ಇತ್ತೀಚಿನ ದಿನಗಳಲ್ಲಿ ಇದೂ ಕೂಡ ಮಾಯವಾಗುತ್ತ ಎಲ್ಲವೂ ಕೇವಲ ವ್ಯಾವಹಾರಿಕ ನೆಲೆಗೆ ಬಂದು ನಿಂತಿರುವುದು ಶಿಕ್ಷಣ ವ್ಯವಸ್ಥೆಯ ಅರಾಜಕತೆಯನ್ನು ತೋರಿಸುತ್ತದೆ.ಇದಕ್ಕೆಲ್ಲ ಮುಖ್ಯ ಕಾರಣ ಈ ವ್ಯವಸ್ಥೆಯಲ್ಲಿ ಬದಲಾದ ಗುರುವಿನ ಸ್ಥಾನ ಮಾನ ಎಂದು ನನ್ನ ಅನಿಸಿಕೆ. ವಿದ್ಯಾರ್ಥಿಗಳಲ್ಲಿ ಆಶಿಸ್ತು ಹೆಚ್ಚುತ್ತಿದೆ. ವಿದ್ಯಾಲಯಗಳು ಅನೀತಿಯ ತಾಣಗಳಾಗುತ್ತಿವೆ ಎಂಬ ಹಳಹಳಿಕೆ ಕೇವಲ ಕ್ಲೀಷೆಯಾಗುತ್ತದೆ. ಈ ಸ್ಥಿತಿಗೆ ಶಿಕ್ಷಣ ಕ್ಷೇತ್ರವನ್ನು ವಿಧಿವತ್ತಾಗಿ ನೂಕಲು ಆರಂಭಿಸಿದ್ದು ಕೆಲ ದಶಕಗಳ ಹಿಂದಿನಿಂದಲೇ ಎಂಬುದು ನಮಗೆ ಅರಿವಿದ್ದರೂ ಅದನ್ನು ಪರಿಣಾಮಕಾರಿಯಾಗಿ ಬದಲಾಯಿಸುವ ಗೊಡವೆ ಆಡಳಿತವೂ ಸೇರಿದಂತೆಯಾರಿಗೂ ಬೇಡವಾದದ್ದು ಈ ದುರಂತಕ್ಕೆ ಕಾರಣ.ಈಗ ಹಿಂದಿರುಗಿ ಹೋಗಲಾರದಷ್ಟು ದೂರದ ದಾರಿಯಲ್ಲಿ ನಮ್ಮ ಶಿಕ್ಷಣ ವ್ಯವಸ್ಥೆ ಕ್ರಮಿಸಿಯಾಗಿದೆ.ಆದ್ದರಿಂದ ಆರಂಭದಲ್ಲಿ ಹೇಳಿದ ಸೂತ್ರಗಳಿಗೆ ಪರ್ಯಾಯವಾಗಿ ಸೂತ್ರಗಳನ್ನು ನಾವು ಸಿದ್ಧಪಡಿಸಬೇಕು.ಅವು ಜ್ಞಾನ ಹಾಗೂ ಗುರುವನ್ನು ಒಳಗೊಂಡಂತೆ ಇರಬೇಕು.ಶಿಕ್ಷಣದ ಮೂಲ ಉದ್ದೇಶ ಜ್ಞಾನವೇ ಹೊರತು ಉದ್ಯೋಗವಲ್ಲ. ಆ ಜ್ಞಾನ ಗುರುಮುಖೇನ ಬರುವಂತಾಗಬೇಕು. ಮಾತ್ರವಲ್ಲದೇ ಗುರುವೂ ಕೂಡ ತನ್ನ ಸ್ಥಾನ ಹಾಗೂ ಹೊಣೆಗೆ ಬದ್ಧತೆಯನ್ನು ಹೊಂದುವಂತಿರಬೇಕು.ಈ ಮಾತನ್ನು ಕ್ಲಾಸ್‌ರೂಂ ಶಿಕ್ಷಣಕ್ಕೆ ಸಂಬಂಧಿಸಿದಂತೆ ಹೇಳಬಹುದು.ಆದರೆಇಂದು ಶಿಕ್ಷಣ ಈ ಕ್ಲಾಸರೂಂ ಗೊಡವೆಯನ್ನು ದಾಟಿ ಅಂತರ್ಜಾಲದ  ಮೂಲಕ ಯಥೇಚ್ಛವಾಗಿ ದೊರೆಯುತ್ತಿದೆ. ಇಲ್ಲಿ ಗುರು-ಶಿಷ್ಯ ಪರಂಪರೆಗಿಂತ ನೀಡಲ್ಪಡುವ ಸಮಯ ಹಾಗೂ ಜ್ಞಾನಾಧಾರಿತ ವ್ಯಾವಹಾರಿಕ ಹಾಗೂ ಕೇವಲ ಲಾಭಾಧಾರಿತ ಶಿಕ್ಷಣಕ್ಕೆ ಮಾತ್ರ ಒತ್ತು ನೀಡಲಾಗಿದೆ.ಒಟ್ಟಿನಲ್ಲಿ ಶಿಕ್ಷಣ ಎಂದರೆ ಒಳ್ಳೆಯ ಸಂಬಳ ತರುವ ಉದ್ಯೋಗಕ್ಕೆ ರಹದಾರಿ ಎಂಬ ಸಿದ್ಧಸೂತ್ರ ಇಂದು ಪ್ರಚಲಿತದಲ್ಲಿರುವುದು ದಿಟ. ಮೊಗೆದಷ್ಟೂದೊರೆಯುವ ಮಾಹಿತಿಯ ಮಹಾಪೂರದ ಇಂದಿನ ದಿನಗಳಲ್ಲಿ ಒನ್‌ಟುಒನ್‌ ಟೀಚಿಂಗ್ ಬಹುತೇಕವಾಗಿ ನಶಿಸುತ್ತಿದೆ.ಆದರೆ ಶಿಕ್ಷಣ ಕ್ಷೇತ್ರದಲ್ಲಿ ತೆರೆದುಕೊಳ್ಳುತ್ತಿರುವ ಹೊಸ ಹೊಸ ದಾರಿಗಳು, ಅವಕಾಶಗಳು, ಇಂದಿನ ವಿದ್ಯಾರ್ಥಿಗಳ ಅಪ್ರತಿಮ ಸಾಮರ್ಥ್ಯ ಮೊದಲಾದವುಗಳನ್ನು ಖಂಡಿತ ಕಡೆಗಣಿಸುವಂತಿಲ್ಲ. ಶಿಕ್ಷಣಕ್ಕೆ ಇಂದು ಅಂತಾರಾಷ್ಟೀಯ ಆಯಾಮ ದೊರೆತಿದೆ.ಎಲ್ಲ ಸಂದರ್ಭಗಳಲ್ಲೂ ಬಂಡವಾಳಶಾಹಿ, ವಸಾಹತುಶಾಹಿ ದಾಳಿಯನ್ನು ತೀವ್ರವಾಗಿ   ಖಂಡಿಸುವ ನಾವು ಈ ಹೊಸ ಶಿಕ್ಷಣ ಆಯಾಮಕ್ಕೆ ಮಾತ್ರ ಬಂಡವಾಳಶಾಹಿಯೇ ಕಾರಣ ಎಂಬುದನ್ನೂ ಮರೆಯಬಾರದು. ಉತ್ತಮ ದರ್ಜೆಯ ಹಾಗೂ ವಿದೇಶದಲ್ಲಿ ಶಿಕ್ಷಣ ಉಳ್ಳವರಿಗೆ ಮಾತ್ರ ನಿಲುಕುತ್ತಿದ್ದ ಕಾಲ ಈಗ ಇಲ್ಲವಾಗಿದೆ.ಪ್ರತಿಭೆಗೆ ಸಲ್ಲಬೇಕಾದ ಪುರಸ್ಕಾರ ಸಲ್ಲುವ ಅವಕಾಶಗಳನ್ನೂ ಈ ಬಂಡವಾಳಶಾಹಿಯೇ ತೆರೆದಿದೆ.ಇದು ಸಧ್ಯದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಕಾಣ ಸಿಗುವ ಧನಾತ್ಮಕಗುಣ.ಅಂದ ಮಾತ್ರಕ್ಕೆ ವಿದೇಶೀ ಶಿಕ್ಷಣವೇ ಉನ್ನತ ಗುಣಮಟ್ಟದ್ದು ಎಂದಂತೂ ಅಲ್ಲ. ಭಾರತದಲ್ಲೂ ಇಂದು ಉತ್ಕೃಷ್ಟ ಮಟ್ಟದ ಶಿಕ್ಷಣ ನೀಡುವ ಅನೇಕ ಸಂಸ್ಥೆಗಳಿವೆ. ಮಾತು ಬಂದು ನಿಲ್ಲುತ್ತಿರುವುದು ಶಿಕ್ಷಣ ಸಂಸ್ಥೆಗಳಿಗೇ.ಗುರು ಮುಖ್ಯವಲ್ಲದ ಬದಲಾದ ಶಿಕ್ಷಣ ಸ್ವರೂಪದ ವಾಸ್ತವತೆಯನ್ನು ಒಪ್ಪಿಕೊಳ್ಳುವುದು ಇಂದಿನ ಶಿಕ್ಷಣ ವ್ಯವಸ್ಥೆಯ ಅಗತ್ಯ ಹಾಗೂ ಅನಿವಾರ್ಯ ಕೂಡ. ***********************************

ಗುರುವಿನ ಗರಿಮೆ Read Post »

ಇತರೆ, ಶಿಕ್ಷಣ

ಹೊಸ ಶಿಕ್ಷಣ ನೀತಿ

ಚರ್ಚೆ ಕಠಿಣ ಕಾಯಿದೆ ಅತ್ಯಗತ್ಯ ಡಿ.ಎಸ್.ರಾಮಸ್ವಾಮಿ ಮೆಕಾಲೆ ಪ್ರಣೀತ ಶಿಕ್ಷಣ ವ್ಯವಸ್ಥೆಯನ್ನು ಅಷ್ಟು ಸುಲಭದಲ್ಲಿ ಬದಲಿಸುವುದು ಅಸಾಧ್ಯದ ಕೆಲಸ. ಮೂಲತಃ ವರ್ಣವ್ಯವಸ್ಥೆಯೇ ಪುರಾತನ ಭಾರತೀಯ ಸಮಾಜದ ಶೈಕ್ಷಣಿಕ, ಸಾಮಾಜಿಕ ಮತ್ತು ಆರ್ಥಿಕ ಸೇತುವಾಗಿತ್ತು. ಬ್ರಿಟಿಷರ ಅಪಭ್ರಂಶ ಅರ್ಥಾಂತರವೇ ಇವತ್ತಿನ ಜಾತಿ ಪದ್ಧತಿಯಾಗಿ ಬದಲಾಗಿ ಶ್ರೇಣೀಕೃತ ಸಮಾಜವನ್ನು ಜಾತಿ ಮೂಲಕ ಕಾಣಹೊರಟದ್ದೇ ಸದ್ಯದ ದುರಂತ. ಪುರಾತನ ಶಿಕ್ಷಣ ಗುರುಕುಲಗಳಲ್ಲಿ ಆಯಾ ವರ್ಣದ ಕಸುಬು ಮತ್ತು ಜೀವನ ನಿರ್ವಹಣೆಯ ಗುರಿಯಾಗಿ ರೂಪುಗೊಳ್ಳುತ್ತಿತ್ತು. ಪರಸ್ಪರ ಅವಲಂಬನೆ ಇದ್ದ ಕಾಲದಲ್ಲಿ ಪರಸ್ಪರ ಗೌರವ ಮತ್ತು ಕೊಡು ಕೊಳ್ಳುವಿಕೆ ಇರಲಿಕ್ಕೇ ಬೇಕು. ಆದರೆ ಮೆಕಾಲೆ ಸೃಷ್ಟಿಸಿದ್ದು ಕ್ಲೆರಿಕಲ್ ಶಿಕ್ಷಣ ವ್ಯವಸ್ಥೆಯನ್ನು. ಎಲ್ಲಕ್ಕೂ ಲೆಕ್ಕ ವರದಿ ಮತ್ತು ಉಸ್ತುವಾರಿ ಕಲಿಸಿತೇ ವಿನಾ ಕಸುಬನ್ನಲ್ಲ. ಜೊತೆಗೆ ಆಸಕ್ತ ವಿಷಯದ ಅಧ್ಯಯ‌ನವನ್ನು ಕೂಡ ನಿಷೇದ ಮಾಡಿತು. ವಿಜ್ಞಾನ ಮತ್ತು ಕಲೆ ಎರಡರಲ್ಲೂ ಆಸಕ್ತಿ ಇರುವವರನ್ನು ದೂರ ಇಟ್ಟಿತು. ಆನರ್ಸ್ ಇಲ್ಲದ ಬರಿಯ ತಿಳುವಳಿಕೆಯನ್ನೇ ಜ್ಞಾನ ಎಂದು ಬಿಂಬಿಸಿದ ಕಾರಣಕ್ಕೇ ಇವತ್ತು ಪರಸ್ಪರ ಅವಲಂಬನೆಗಿಂತ ಪರಸ್ಪರ ದ್ವೇಷ ಅಸೂಯೆ ತುಂಬಿಕೊಂಡಿದೆ. ಪಠ್ಯಪುಸ್ತಕ ಆಯ್ಕೆ ಸಮಿತಿಯು ಆಯಾ ಆಳುವ ಸರ್ಕಾರದ ಹುಕುಂಗಳನ್ನು ಅಂತಃ ಪಠ್ಯವಾಗಿ ಆರಿಸುವುದು ಕೂಡ ನಿಜದ ಚರಿತೆಯನ್ನು ಮುಚ್ಚಿಟ್ಟು ತಿದ್ದಿದ ಇತಿಹಾಸವನ್ನು ಕಲಿಸುವ ಮೂಲಕ ಪರಂಪರೆಯನ್ನು ದೂರ ಇರಿಸಿ ಆವಾಹಿತ ತಿಳುವಳಿಕೆಯನ್ನು ಜ್ಞಾನವೆಂದು ಬಿಂಬಿಸಲಾಯಿತು. ಈ ಕುರಿತು ಸಾದ್ಯಂತವಾದ ಅಧ್ಯಯನ ಮತ್ತು ಕಠಿಣ ಕಾಯಿದೆ ಅತ್ಯಗತ್ಯ *******************

ಹೊಸ ಶಿಕ್ಷಣ ನೀತಿ Read Post »

ಇತರೆ, ಶಿಕ್ಷಣ

ಶಿಕ್ಷಣ ಆನ್ ಲೈನ್!

ವಿನುತಾ ಹಂಚಿನಮನಿ ವಿಕಾಸ ವಾದ (Evolution theory) ದ ಪ್ರಕಾರ ಜೀವಿಗಳ ಅಳಿವು ಉಳಿವು ಯಾವುದರ ಮೇಲೆ ಅವಲಂಬಿಸಿದೆ? ಯಾರು ಬದಲಾಗುತ್ತಿರುವ ಪರಿಸರಕ್ಕೆ ಹೊಂದಾಣಿಕೆ ಮಾಡಿಕೊಂಡರೋ ಅವರು ಗೆದ್ದವರು. ಬಲವಾನರು, ಬುದ್ಧಿವಂತರು ಇದರಲ್ಲಿ ಸೋತರು. ಪ್ರಾಣಿ ಇರಲಿ ಮನುಷ್ಯನಿರಲಿ ಪರಿಸರಕ್ಕೆ, ಪರಿಸ್ಥಿತಿಗೆ ಹೊಂದಿಕೊಂಡು ಜೀವಿಸುವದನ್ನು ಕಲಿತರಷ್ಟೇ ಬದುಕಬಹುದು. ಅದೇ ಸೂಕ್ತರು ಬದುಕುವರು ಸಶಕ್ತರಲ್ಲ ಅನ್ನುವುದು (survival of the fittest). ಈ ಬದಲಾಗುವ ಕ್ರಮ ಪ್ರಕೃತಿಯಲ್ಲಿ ಅನಿವಾರ್ಯ. ಪರಿವರ್ತನೆ ಜಗದ ನಿಯಮ. ಇದು ಎಲ್ಲ ಕ್ರಾಂತಿಗಳಿಗೂ ಅನ್ವಯಿಸುವುದು. ಹಿಂದೆ ಎಷ್ಟೋ ಆಗಿವೆ, ಮುಂದೆ ಆಗಲಿವೆ. ಕೋವಿಡ್ ೧೯ ರ ದಾಳಿಯಿಂದ, ವಿಶ್ವ ಒಂದು ಅನಿವಾರ್ಯ ಬದಲಾವಣೆ ಮಾಡಲೇ ಕೊಳ್ಳಬೇಕಾದ ಪರಿಸ್ಥಿತಿಯ ಅಂಚಿಗೆ ಬಂದು ನಿಂತಿದೆ. ಎಲ್ಲ ಕ್ಷೇತ್ರಗಳಲ್ಲಿ ಈಗ ಬದಲಾವಣೆ ಅನಿವಾರ್ಯ. ಅದರಲ್ಲಿ ಒಂದು ಮಹತ್ವದ ಕ್ಷೇತ್ರ ಶಿಕ್ಷಣ. ಕೊರೊನಾ ರೋಗ ಹಬ್ಬುವ ವೇಗ ಮತ್ತು ವ್ಯಾಪ್ತಿಯನ್ನು ನೋಡಿದರೆ ಆನ್ ಲೈನ್ ಶಿಕ್ಷಣವೇ ಸೂಕ್ತ ಸಧ್ಯದ ಪರಿಸ್ಥಿತಿಯಲ್ಲಿ. ಸಾಂಕ್ರಾಮಿಕ ರೋಗದ ಉಡಿಯಲ್ಲಿ ಭವಿಷ್ಯದ ಆಸ್ತಿಯಾಗಿರುವ ಮಕ್ಕಳನ್ನು ಹಾಕುವ ರಿಸ್ಕ್ ತೆಗೆದುಕೊಳ್ಳಲಾಗದು. ಶಾಲೆಗಳನ್ನು ಪ್ರಾರಂಭಿಸುವದನ್ನು ಅನಿಶ್ಚಿತ ಅವಧಿಗೆ ತಳ್ಳಲಾಗಿದೆ. ಹೀಗಿರುವಾಗ ಎಲ್ಲರನ್ನೂ ಕಾಡುವ ಪ್ರಶ್ನೆ – ಮುಂದೇನು? ಆನ್ ಲೈನ್ ಶಿಕ್ಷಣಕ್ಕೆ ಅದರದೇ ಆದ ಸಾಧಕ ಭಾದಕಗಳಿವೆ (Bright side and dark side). ಏನೇ ಆದರೂ ಸಧ್ಯಕ್ಕಂತೂ ಕಂಪ್ಯೂಟರ್ ಮುಖಾಂತರ ವಿದ್ಯೆಗೆ ಮಣೆ ಹಾಕಬೇಕು. ಆದರೆ ಯಾವ ವಯಸ್ಸಿನವರಿಗೆ? ದೊಡ್ಡವರು ಈಗಾಗಲೇ ಕಂಪ್ಯೂಟರ್ ಗೆ ಸ್ವಲ್ಪ ಮಟ್ಟಿಗೆ ಪರಿಚಿತರು. ಆದರೆ ಪ್ರಾಥಮಿಕ ಶಿಕ್ಷಣ ಪಡೆಯಬೇಕಾದ ಎಳೆಯರು! ಅವರಿಗೂ ಕೂಡ ಪರಿಚಯಿಸಬೇಕಾದ ಸಂದರ್ಭ. ಇದರ ಪರಿಣಾಮ ಎಲ್ಲ ಪಾಲಕರಿಗೆ, ಶಿಕ್ಷಣ ಸಂಸ್ಥೆಗಳಿಗೆ, ಸರಕಾರಕ್ಕೆ ಅಲ್ಲದೆ ಭವಿಷ್ಯಕ್ಕೆ ಆಗಲಿದೆ. ಮೊದಲು ಅನುಕೂಲ ಅನಾನುಕೂಲಗಳನ್ನು ನೋಡೋಣ. *ಬಾಧಕಗಳು *:೧. ಮನೆಯಲ್ಲಿ ಕುಳಿತು ಶಿಕ್ಷಣ ಪಡೆಯಲು ಇಂಟರ್ನೆಟ್ ಸೌಲಭ್ಯ ಬೇಕು. ಬಡವರಿಗೆ ಅಷ್ಟೇ ಯಾಕೆ ಮಧ್ಯಮ ವರ್ಗದವರಿಗೆ ಇದು ಕಷ್ಟ ಸಾಧ್ಯ.೨. ಸಹಾಯ ಮಾಡಲು ತಂದೆ, ತಾಯಿ ಮತ್ತಾರೋ ಮಗುವಿನ ಒಟ್ಟಿಗೆ ಕೊಡಬೇಕು. ಅವರಿಗೂ ಶಿಕ್ಷಕರಿಗೆ ಇರಬೇಕಾದ ತಿಳುವಳಿಕೆ ಇರಬೇಕು. ಇದು ಎಷ್ಟರಮಟ್ಟಿಗೆ ಸಾಧ್ಯ. ಅಲ್ಲದೆ ದುಡಿಯಲು ಹೊರಗೆ ಹೋಗುವವರು ಇದಕ್ಕೆ ಒಪ್ಪಿಯಾರೇ?೩. ಪೋಷಕರು ಮನೆಯಿಂದ ಹೊರಗೆ ಹೋದರೆ ಚಿಕ್ಕ ಮಕ್ಕಳು ಮನೆಯಲ್ಲಿ ಒಂಟಿಯಾಗಿರಬೇಕಾದ ಸಮಸ್ಯೆ.೪. ಇದೆಲ್ಲಾ ಕೂಡಿ ಬಂದರೂ ಮಗುವಿನ ಮನಸ್ಸು ಮತ್ತು ಬುದ್ಧಿ ಹೊಸ ವಾತಾವರಣಕ್ಕೆ ಹೊಂದಿಕೊಳ್ಳಬೇಕು. ಶಾಲೆಯಲ್ಲಿ ಸ್ನೇಹಿತರೊಂದಿಗೆ ಗುರುವಿನೊಂದಿಗೆ ಇರುವ ತೆರೆದ ವಾತಾವರಣ ಇಲ್ಲಿರುವದಿಲ್ಲ. ಏಕತಾನತೆ ಬೇಸರಕ್ಕೆ ಎಡೆಮಾಡಿಕೊಡುತ್ತದೆ.೫. ತಿಳಿಯದ ವಿಷಯ ಮತ್ತೆ ಕೇಳಿ ಸಮಸ್ಯೆ ಬಗೆಹರಿಸಿಕೊಳ್ಳುವಂತಿಲ್ಲ.೬. ಸಣ್ಣ ಊರುಗಳಲ್ಲಿ ಬಡ ಮಕ್ಕಳು ಮಧ್ಯಾಹ್ನ ಸಿಗುವ ಬಿಸಿಊಟ ತಪ್ಪಿಸಿಕೊಂಡರೆ ಆಸಕ್ತಿ ಕಡಿಮೆಯಾಗಬಹುದು. ಸರಕಾರ ಮನೆಗೆ ಧಾನ್ಯ ಒದಗಿಸುವ ಯೋಜನೆ ಇಟ್ಟುಕೊಂಡಿದೆ. ಆದರೆ ಅದರ ಸದುಪಯೋಗದ ಭರವಸೆ ಕೊಡುವವರು ಯಾರು? ೭. ಜನಸಂಖ್ಯೆ ನಿಯಂತ್ರಿಸುತ್ತಿರುವ ಹೊಸ ಪೀಳಿಗೆಯ ಈ ಕಾಲಮಾನದಲ್ಲಿ ಮಕ್ಕಳಿಗೆ ಸಹಜೀವನ ಇಲ್ಲದೆ ಹಂಚಿಕೊಳ್ಳುವ ಗುಣಕ್ಕೆ ಎರವಾಗಬಹುದು.೮. ಹಳ್ಳಿಗಳಲ್ಲಿ ಮಕ್ಕಳನ್ನು ಓದಿಸುವದರ ಬದಲು ಕೆಲಸಕ್ಕೆ ಕಳಿಸಬಹುದು.೯. ಬರೆಯುವಿಕೆ ಕಡಿಮೆಯಾಗಿ ಲಿಪಿಗಳು ಕಣ್ಮರೆಯಾಗಿ ಹೋಗಬಹುದು.೧೦. ಹೆಚ್ಚು ಸಮಯ ಕಂಪ್ಯೂಟರ್ ಪರದೆ ವೀಕ್ಷಿಸಿ ಮಕ್ಕಳ ಆರೋಗ್ಯದಲ್ಲಿ ದುಷ್ಪರಿಣಾಮ ತಲೆದೋರಬಹುದು.೧೧. ಹೆಣ್ಣು ಹುಡುಗಿಯರಿಗೆ ಶಿಕ್ಷಣ ದುರ್ಲಭವಾಗಬಹುದು. ಅವರನ್ನು ಕೆಲಸಕ್ಕೆ ಹಚ್ಚಬಹುದು ನಂತರ ಆದಷ್ಟು ಬೇಗ ಮದುವೆ ಮಾಡಬಹುದು. ಇದರಿಂದ ಬಾಲ್ಯವಿವಾಹ ಮತ್ತೆ ತಲೆದೋರಬಹುದು.೧೨. ಅಶಿಕ್ಷಿತ ಎಳೆಯ ಹುಡುಗಿಯರನ್ನು ದೈಹಿಕ ಮಾನಸಿಕ ಸಮಸ್ಯೆಗಳ ಒಟ್ಟಿಗೆ ಲೈಂಗಿಕ ಶೋಷಣೆ ಕಾಡಬಹುದು.೧೩. ಸಮಾಜದಲ್ಲಿ ಸಾಕ್ಷರತೆ ಕಡಿಮೆಯಾಗುವ ಭಯ.೧೪. ಮಕ್ಕಳಲ್ಲಿ ಶಿಸ್ತು ಕಡಿಮೆಯಾಗುವ ಸಾಧ್ಯತೆ ಇದೆ. ಶಿಕ್ಷಕರ ಮಾತನ್ನು ಕೇಳಿದಂತೆ ಪಾಲಕರ ಹಿತನುಡಿಯನ್ನು ಕೇಳುವುದಿಲ್ಲ.೧೫. ಪೂರ್ವಭಾವಿ ತಯಾರಿಗೆ ಹಣ ಒದಗಿಸುವುದು ಎಲ್ಲರಿಗೂ ಆಗಲಿಕ್ಕಿಲ್ಲ. ಇನ್ನು ಅನುಕೂಲಗಳನ್ನು ನೋಡಿದರೆ,೧. ಪಾಶ್ಚಾತ್ಯ ದೇಶಗಳಲ್ಲಿ ಈಗಾಗಲೇ ಉತ್ಕರ್ಷಣದಲ್ಲಿರುವ ಆನ್ ಲೈನ್ ಕಲಿಯುವಿಕೆ ಮತ್ತು ಕಲಿಸುವಿಕೆಯ ಓಟದಲ್ಲಿ ನಮ್ಮ ದೇಶ ಕೂಡ ಸೇರಿಕೊಂಡು, ಆಧುನಿಕತೆಯ ಸ್ಪರ್ಧೆಯಲ್ಲಿ ಪಾಲುಗೊಳ್ಳಬಹುದು.೨. ಉನ್ನತ ಶಿಕ್ಷಣ ಇ ಫೀಲ್ಡ್ ನಲ್ಲಿ ದೊರೆಯುವ ಸಾಧ್ಯತೆ ಹೆಚ್ಚಿರುವದರಿಂದ ಮುಂದಿನ ಶಿಕ್ಷಣಕ್ಕೆ ಇದು ನಾಂದಿಯಾಗಬಹುದು, ದೊರಕಿಸಿಕೊಳ್ಳುವುದು ಸುಲಭ ಸಾಧ್ಯ.೩. ಮನೆಯಲ್ಲಿಯೇ ಪಾಠ ಇರುವದರಿಂದ ತಮಗೆ ಬೇಕಾದ ವೇಳೆ ಆರಿಸಿಕೊಂಡು ಓದುವುದು ಸಾಧ್ಯ. ೪. ಪುನರ್ಮನನ ಸುಲಭ.೫. ಶಾಲೆ, ಕಾಲೇಜ್ ಗೆ ಹೋಗುವುದು ಇಲ್ಲದ್ದರಿಂದ ವಾಹನಗಳಲ್ಲಿ ಅಡ್ಡಾಡುವುದು ಕಡಿಮೆಯಾಗಿ, ಪ್ರಯಾಣದ ರಿಸ್ಕ್ ಇಲ್ಲ, ಖರ್ಚು ಇಲ್ಲ. ಸುರಕ್ಷತೆ ಹೆಚ್ಚಿದ್ದು ಮನಸ್ಸಿನ ಕಿರಿಕಿರಿ ಕಡಿಮೆಯಾಗಬಹುದು.೬. ಕೆಲವೊಂದು ಖರ್ಚು ಕಡಿಮೆಯಾಗುವ ಸಂಭವ. ಉದಾಹರಣೆಗೆ ಸ್ಕೂಲ್ ಯುನಿಫಾರ್ಮ ಇತ್ಯಾದಿ. ಪುರಾತನ ಸಂಸ್ಕೃತಿಯ ಗುರುಕುಲ ಪದ್ಧತಿ ನಮಗೆ ಶ್ರೇಷ್ಟವೆನಿಸಿದರೂ ಮತ್ತೆ ಅದರಿಂದ ಬದಲಾವಣೆಗೆ ಹೊಂದಿಕೊಂಡಂತೆ ಮುಂದೆ ಕೂಡ ಹೊಸ ಶಿಕ್ಷಣ ಪದ್ಧತಿಗೆ ಜನ ಹೊಂದಿಕೊಳ್ಳಬೇಕಾದೀತು. ಯಾವುದೇ ಹೊಸತನಕ್ಕೆ ವಿರೋಧ ಬರುವುದು ಸಾಮಾನ್ಯ. ಆದರೆ ಅದು ಅನಿವಾರ್ಯವಾಗಿದ್ದಲ್ಲಿ ಬೇರೆ ಆಯ್ಕೆ ಎಲ್ಲಿದೆ? ಸಧ್ಯಕ್ಕಂತೂ ಕೊರೊನಾದಿಂದ ತಪ್ಪಿಸಿಕೊಳ್ಳಲು ಇದೊಂದೇ ಮಾರ್ಗ. ಹಾಗಿದ್ದರೆ ಸಂತೋಷದಿಂದ ಒಪ್ಪಿ ಅನುಸರಿಸಿದರೆ ಜೀವವಿದೆ, ಜೀವನವಿದೆ ಅಲ್ಲವೇ? **************

ಶಿಕ್ಷಣ ಆನ್ ಲೈನ್! Read Post »

ಇತರೆ, ಶಿಕ್ಷಣ

ಆನ್ಲೈನ್ ಶಿಕ್ಷಣ – ಪ್ರಯೋಗ?

ಅರ್ಪಣಾ ಮೂರ್ತಿ ಪ್ರಸ್ತುತ ಪರಿಸ್ಥಿತಿಯಲ್ಲಿ ಶೈಕ್ಷಣಿಕ ವರ್ಷದ ಆರಂಭವೇ ಗೊಂದಲಗಳಿಂದ ಕೂಡಿರುವ ಈ ಸಂದರ್ಭದಲ್ಲಿ, ಅನೇಕ ಖಾಸಗಿ ಶಿಕ್ಷಣ ಸಂಸ್ಥೆಗಳು ಇದಾಗಲೇ ಕಂಡುಕೊಂಡಿರುವ ಶಿಕ್ಷಣದ ಪರ್ಯಾಯ ಮಾರ್ಗದ ಹೆಸರೇ ಈ ಆನ್ಲೈನ್ ಶಿಕ್ಷಣ, ಈ ಪರ್ಯಾಯ ಮಾರ್ಗದ ಶಿಕ್ಷಣಕ್ಕೆ ಸರ್ಕಾರವು ಸಹ ಸಮ್ಮತಿಯ ಮುದ್ರೆ ಒತ್ತಿದೆ. ಈಗಿರುವ ಪ್ರಶ್ನೆಯೆಂದರೆ ಈ ಆನ್ಲೈನ್ ಶಿಕ್ಷಣ ಎಷ್ಟು ಪರಿಣಾಮಾತ್ಮಕವಾಗಿದೆ, ಮಕ್ಕಳ ಕಲಿಕೆಯ ಮಟ್ಟಕ್ಕೆ ಅದೆಷ್ಟು ಪೂರಕವಾಗಿದೆ ಅನ್ನುವುದು. ಮೊದಲಿಗೆ ಪ್ರಾಥಮಿಕ ಶಾಲಾ ಹಂತದ ವಿದ್ಯಾರ್ಥಿಗಳಿಗೆ ಆನ್ಲೈನ್ ಶಿಕ್ಷಣ ನೀಡುವುದರ ಕುರಿತು ಹೇಳೋದಾದ್ರೆ ಒಂದರಿಂದ ಐದನೆಯ ತರಗತಿಯವರೆಗೂ ಮಕ್ಕಳು ಸಂಪೂರ್ಣವಾಗಿ ಶಿಕ್ಷಕರ ಮೇಲೆ ಅವಲಂಬಿತವಾಗಿರುವಂತವರು, ಎದುರು ನಿಂತು ತರಗತಿಯಲ್ಲಿ ಬೋಧನೆ ಮಾಡುವುದಕ್ಕೂ ಮೊಬೈಲ್ ಅಥವಾ ಲ್ಯಾಪ್ಟಾಪ್ ಮೂಲಕ ಪಾಠ ಮಾಡುವುದಕ್ಕೂ ಸಾಕಷ್ಟು ವ್ಯತ್ಯಾಸ ಇದೆ, ಹಾಗೆಯೇ ಸುಮಾರು ಎರಡರಿಂದ ಮೂರುಗಂಟೆಗಳ ಕಾಲ ಮೊಬೈಲ್ ಪರದೆಯನ್ನ ನೋಡುವ ಪುಟ್ಟ ಮಕ್ಕಳ ಕಣ್ಣುಗಳು ಮುಂದೊಂದು ದಿನ ಹಾನಿಗೊಳಗಾಗುವುದರಲ್ಲಿ ಸಂಶಯವೇ ಇಲ್ಲ, ಇದರ ಜೊತೆಗೆ ಮಕ್ಕಳ ಮೆದುಳಿನ ವಿಕಸನದ ಮೇಲೆ ಪರಿಣಾಮ ಉಂಟಾಗಬಹುದು, ನರಗಳ ಸಮಸ್ಯೆ ಉಂಟಾಗಬಹುದು, ಪುಟ್ಟ ಮಕ್ಕಳಿಗೆ ಯಾವುದೇ ಕಾರಣಕ್ಕೂ ಆನ್ಲೈನ್ ಶಿಕ್ಷಣ ಸೂಕ್ತವಲ್ಲ, ಇನ್ನು ಈ ಚಿಕ್ಕ ಮಕ್ಕಳನ್ನು ಹೊರತು ಪಡಿಸಿ ಪ್ರೌಡ ಮಕ್ಕಳ ಕುರಿತು ಹೇಳುವುದಾದರೆ ಪರಿಣಾಮಗಳಲ್ಲಿ ಯಾವುದೇ ವ್ಯತ್ಯಾಸಗಳಿಲ್ಲ, ಹಾಗಾದರೆ ಕಾಲೇಜು ಮಕ್ಕಳಿಗೆ ಆನ್ಲೈನ್ ಶಿಕ್ಷಣ ಪೂರಕತೆ ಒದಗಿಸಬಹುದಾ ಅಂತ ನೋಡೋದಾದ್ರೆ ಸುಮಾರು ಅರ್ಧದಷ್ಟು ವಿದ್ಯಾರ್ಥಿಗಳು ಹಳ್ಳಿಗಾಡಿಗೆ ಸೇರಿದವರು, ಮೊದಲ ಸಮಸ್ಯೆಯೇ ಎಲ್ಲರೂ ಮೊಬೈಲ್ ಫೋನ್ಗಳನ್ನ ಹೊಂದುವಂತದ್ದು, ಈ ಕರೋನಾ ಕಾಲದಲ್ಲಿ ಈಗಾಗಲೇ ಹಳ್ಳಿಗಾಡಿನ ಜನ ಅತಿ ಕ್ಲಿಷ್ಟಕರ ಪರಿಸ್ಥಿತಿಯನ್ನು ಎದುರಿಸುತ್ತಿರುವಾಗ ಮಕ್ಕಳಿಗೆ ಮೊಬೈಲ್ ಒದಗಿಸೋದು ಕಷ್ಟದ ವಿಷಯ, ಮನೆಯಲ್ಲಿ ಓದುತ್ತಿರುವ ಎರಡು ಮೂರು ಮಕ್ಕಳಿರುವ ಸಂದರ್ಭದಲ್ಲಿ ಎಲ್ಲರಿಗೂ ಮೊಬೈಲ್ ಕೊಡಿಸುವುದು ಆಗದ ವಿಷಯ, ಒಂದೊಮ್ಮೆ ಕೊಡಿಸಿದರೂ ಸಹ ಹಳ್ಳಿಗಳಲ್ಲಿ ಗುಡ್ಡಗಾಡು ಪ್ರದೇಶಗಳಲ್ಲಿ ನೆಟ್ವರ್ಕ್ ಅದೆಷ್ಟು ಸುಲಭವಾಗಿ ಸಿಗುತ್ತದೆ ಎನ್ನುವುದು ಹಳ್ಳಿಯ ವಾಸಿಗಳಿಗಷ್ಟೇ ಗೊತ್ತು, ನೆಟ್ವರ್ಕ್ ಕಾರಣದಿಂದಾಗಿ ಶೇಕಡಾ ಅರ್ಧದಷ್ಟು ಮಕ್ಕಳಿಗೆ ಹೆಚ್ಚಿನ ಮಾಹಿತಿ ತಲುಪಲಾರದು ಹಾಗೂ ಹಾಜರಾತಿ ಕೂಡ ನಿರೀಕ್ಷಿಸಲಾಗದು, ಒಂದೊಮ್ಮೆ ನೆಟ್ವರ್ಕ್ ದೊರೆಯುವ ಸ್ಥಳವಾದರೂ ಕೂಡ ದಿನಕ್ಕೆ ಮೂರರಿಂದ ನಾಲ್ಕು ತರಗತಿಗಳಿಗೆ ಸರಿಯಾಗುವಷ್ಟು ಮೊಬೈಲ್ ಡೇಟಾ ಹಾಕಿಸುವಷ್ಟು ಪೋಷಕರು ಶಕ್ತರಿದ್ದಾರಾ ಎನ್ನುವುದು ಯೋಚಿಸಬೇಕಾದ ವಿಷಯ, ಆನ್ಲೈನ್ ಶಿಕ್ಷಣ ಎನ್ನುವುದು ನಗರವಾಸಿಗಳ ಹಾಗೂ ಉಳ್ಳವರ ಮಕ್ಕಳಿಗಷ್ಟೇ ಒಂದಿಷ್ಟು ಉತ್ತಮ ಅನಿಸಬಹುದಾದರೂ ಹಳ್ಳಿಗಾಡಿನ ಮಕ್ಕಳು ಈ ಶಿಕ್ಷಣದಿಂದ ವಂಚಿತರಾಗುವುದೇ ಹೆಚ್ಚು, ವೈಜ್ಞಾನಿಕ ತಳಹದಿಯ ಮೇಲೆ ಹೇಳುವುದಾದರೆ ಸಣ್ಣ ಮಕ್ಕಳಿಗೆ ಆರೋಗ್ಯದ ದೃಷ್ಟಿಯಿಂದ ಆನ್ಲೈನ್ ಶಿಕ್ಷಣ ಮಾರಕವೇ ಹೊರತು ಪೂರಕವಲ್ಲ, ಕಾಲೇಜು ಹಂತದ ಮಕ್ಕಳ ಆನ್ಲೈನ್ ಶಿಕ್ಷಣದ ಕುರಿತು ಹೇಳುವುದಾದರೆ ಇದು ನಗರವಾಸಿ ಜನ ಹಾಗೂ ಉಳ್ಳವರಿಗಷ್ಟೆ ಒಂದಿಷ್ಟು ಪೂರಕವಾಗಬಹುದು ಹೊರತು ಹಳ್ಳಿಗಾಡಿನ ಜನರಿಗೆ ಆರ್ಥಿಕ ಹೊರೆಯಷ್ಟೆ.. ಒಟ್ಟಾರೆಯಾಗಿ ಸರ್ಕಾರಿ ಶಾಲಾಕಾಲೇಜಿನ ಮಕ್ಕಳಿಗೆ ಆನ್ಲೈನ್ ಶಿಕ್ಷಣ ಎನ್ನುವುದು ಹೊರೆಯಾಗದಿರಲಿ. *********

ಆನ್ಲೈನ್ ಶಿಕ್ಷಣ – ಪ್ರಯೋಗ? Read Post »

ಇತರೆ, ಶಿಕ್ಷಣ

ಆನ್ಲೈನ್ ಶಿಕ್ಷಣ – ಸಾಧ್ಯತೆ ಮತ್ತು ಜವಾಬ್ದಾರಿಗಳು.

ಡಿಎಸ್.ರಾಮಸ್ವಾಮಿ ಆನ್ಲೈನ್ ಶಿಕ್ಷಣ – ಸಾಧ್ಯತೆ ಮತ್ತು ಜವಾಬ್ದಾರಿಗಳು. ಈ ಕರೋನಾದ ಭಯ ನಮ್ಮೆಲ್ಲರನ್ನೂ ಎಷ್ಟು ಜರ್ಝರಿತಗೊಳಿಸಿದೆ ಎಂದರೆ ನಮ್ಮ ನಿತ್ಯದ ಜೀವನದ ಕನಿಷ್ಠ ಕೆಲಸ ಕಾರ್ಯಗಳಲ್ಲೂ ವಿಪರೀತ ಎಚ್ಚರಿಕೆಯ ಹೆಜ್ಜೆಯನ್ನು ಇಡಬೇಕಾಗಿದೆ. ಒಂದೇ ಸೂರಿನೊಳಗಿದ್ದೂ ಅಪರಿಚಿತರಂತೆ ಬಾಳುವುದು ಅಭ್ಯಾಸವೇ ಆಗಿಬಿಟ್ಟಿದೆ. ನಿತ್ಯವೂ ಬೇಕಾಗುವ ತರಕಾರಿ, ಹಣ್ಣು, ಹೂವು, ದಿನಸಿ ತರುವುದಕ್ಕೂ ಸಮಯ ಹೊಂದಿಸಿಕೊಂಡು ಅವು ಯಾವ ಜಾಗದಲ್ಲಿ ಸಿಗುತ್ತವೆಯೋ ಅಲ್ಲಿಗೆ ದೌಡಾಯಿಸುವ ಪರಿಸ್ಥಿತಿ ಎಲ್ಲ ಊರಲ್ಲೂ ಸಾಮಾನ್ಯ ಸಂಗತಿಯಾಗಿದೆ. ಸರ್ಕಾರದ ಕಛೇರಿಗಳು ಅತಿ ಜರೂರು ಎಂದು ಅವು ಭಾವಿಸಿರುವ ಕೆಲಸಗಳನ್ನು ಮಾತ್ರ ನಿರ್ವಹಿಸುತ್ತಿವೆ. ಬ್ಯಾಂಕುಗಳು ವ್ಯವಹಾರಕ್ಕೆ ಇಂಟರ್ನೆಟ್ ಬಳಸಲು ಗ್ರಾಹಕರಿಗೆ ಸಂದೇಶ ಕಳಿಸುತ್ತಿವೆ. ವಿದ್ಯುತ್ ಬಿಲ್ ಕಟ್ಟುವುದು, ಗ್ಯಾಸ್ ಬುಕ್ ಮಾಡುವುದು, ಪ್ರಯಾಣಕ್ಕಾಗಿ ಬಸ್ಸು,ರೈಲು,ವಿಮಾನದ ಟಿಕೆಟ್ ಪಡೆಯುವುದೂ ಸೇರಿದಂತೆ ಅನೇಕ ವಿಚಾರಗಳು ಈಗ ಅಂಗೈ ಅಗಲದ ಮೊಬೈಲಿನಲ್ಲಿ ಸಾಧ್ಯ ಆಗಿ ಅದನ್ನು ಬಳಸುವವರ ಪ್ರಮಾಣ ಕೂಡ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದನ್ನು ಯಾರೂ ಅಲ್ಲಗಳೆಯಲಾರರು. ಕಾಯ್ದಿರಿಸದ ಅಂದರೆ ಸೀಟು ಗ್ಯಾರಂಟಿ ಇಲ್ಲದ ಓಪನ್ ಟಿಕೆಟ್ ಪಡೆಯುವ ಇಂಡಿಯನ್ ರೇಲ್ವೆಯ ಯಾಪ್ ಇರದ ಮೊಬೈಲ್ ಬಳಕೆದಾರರೂ ಇಲ್ಲವೇ ಇಲ್ಲ. ಬೇಕೆನಿಸಿದಾಗ ಎಲ್ಲಿಗೆ ಬೇಕಾದರೂ ಟಿಕೆಟ್ ಖರೀದಿಸುವ ಅವಕಾಶ ಗಂಟೆಗಟ್ಟಲೆ ಕ್ಯೂ ನಿಲ್ಲಬೇಕಾಗುವ ಮತ್ತು ಚಿಲ್ಲರೆಗಾಗಿ ಒದ್ದಾಡಬೇಕಿದ್ದ ಸಂಗತಿಗಳಿಂದ ಮುಕ್ತಿ ದೊರಕಿಸಿದೆ. ಇದೆಲ್ಲಕ್ಕಿಂತ ಮುಖ್ಯವಾಗಿ ನಮ್ಮ ಮನೆ ಕಂದಾಯ, ನೀರಿನ ವಾರ್ಷಿಕ ಪಾವತಿ ಕೂಡ ಈಗ ಬ್ಯಾಂಕಿನ ಖಾತೆಗೆ ನೇರ ಪಾವತಿ ಮಾಡಬಹುದಾದ ಅವಕಾಶ ಪುರಸಭೆ, ನಗರಸಭೆಗಳು ಮಾಡಿವೆ. ಬಿಲ್ ಕಲೆಕ್ಟರ್ ಹಿಡಿದು, ದುಡ್ಡು ಪಾವತಿಸಿದರೂ ಸಿಗದೇ ಇದ್ದ ರಸೀತಿ ಈಗ ಕ್ಷಣಾರ್ಧದಲ್ಲಿ ಸಿಕ್ಕುವಂತಾಗಿದೆ. ಜೀವ ವಿಮೆ ಮತ್ತು ಸಾಮಾನ್ಯ ವಿಮೆಯ ಪಾವತಿ ಈಗ ಸಲೀಸು. ಅವಧಿಗೆ ಮುನ್ನವೇ ಮೊಬೈಲಿಗೆ ಬಂದು ಬೀಳುವ ಸಂದೇಶವನ್ನದುಮಿ ಕ್ಷಣ ಮಾತ್ರದಲ್ಲಿ ಪೇ ಮಾಡುವುದು ಈಗ ಎಲ್ಲರಿಂದಲೂ ಸಾಧ್ಯವಾಗಿದೆ. ಈ ಎಲ್ಲಕ್ಕೂ ಕಾರಣವಾದದ್ದು ಅಂಡ್ರಾಯಿಡ್ ಫೋನು ಮತ್ತು ಎಲ್ಲರಿಗೂ ಲಭ್ಯವಾಗಿರುವ ಇಂಟರ್ನೆಟ್ ಸಂಪರ್ಕ. ಮೊದಲೆಲ್ಲ ತಂತಿಯ ಮೂಲಕವೇ ನಡೆಯ ಬೇಕಿದ್ದ ಸಂಪರ್ಕ ಸಾಧನಗಳು ಯಾವಾಗ ತಂತಿ ರಹಿತ ಆದವೋ ಆಗಿನಿಂದಲೇ ಈ ಎಲ್ಲವೂ ಸಾಧ್ಯವಾಯಿತು. ಈಗ ಅಂಡ್ರಾಯಿಡ್ ಫೋನು ಗತ್ತಲ್ಲ, ಅನಿವಾರ್ಯ ಸಂಪರ್ಕ ಸೇತು. ಸರ್ಕಾರವು ಕೊಡುವ ತಿಂಗಳ ರೇಷನ್ ಕೂಡ ಒಟಿಪಿ ಇಲ್ಲದೇ ನಡೆಯಲಾರದ ಅನಿವಾರ್ಯತೆ ಈಗ ಸೃಷ್ಟಿಯಾಗಿದೆ. ನಿತ್ಯ ಸೌಲಭ್ಯಗಳ ಬಳಕೆಗೆ ಇವತ್ತು ಇಂಟರ್ನೆಟ್ ಅನಿವಾರ್ಯವೇ ಆಗಿ ಬದಲಾಗಿದೆ. ಅದು ಎಂಭತ್ತರ ದಶಕದ ಮಧ್ಯದ ದಿನಗಳು. ಬದುಕಿನ ಅನಿವಾರ್ಯದ ಸಿಲುಕಿಗೆ ಸಿಕ್ಕು ತಮ್ಮ ವಿದ್ಯಾಭ್ಯಾಸ ಅರ್ಧಕ್ಕೇ ಬಿಟ್ಟು ಅತಂತ್ರರಾಗಿದ್ದ ಹಲವರ ಕನಸನ್ನ ನನಸು ಮಾಡಿದ್ದು ಸಂಜೆ ಕಾಲೇಜು ಎಂಬ ಸಂಜೀವಿನಿ. ಮೊಟಕಾಗಿದ್ದ ವಿದ್ಯಾಭ್ಯಾಸವನ್ನು ಮುಂದುವರೆಸಿ ಪದವಿ ಪಡೆದ ಅನೇಕರು ಈಗ ಉನ್ನತ ಅಧಿಕಾರಿಗಳೇ ಆಗಿದ್ದಾರೆ. ಈ ಸಂಜೆ ಕಾಲೇಜುಗಳು ಜಿಲ್ಲಾ ಕೇಂದ್ರಗಳಲ್ಲೂ ಕಾರ್ಮಿಕರು ಅಧಿಕ ಸಂಖ್ಯೆಯಲ್ಲಿದ್ದ ಕೈಗಾರಿಕಾ ಪ್ರದೇಶಗಳಲ್ಲೂ ಇದ್ದವು. ಅದರ ಮುಂದಣ ಹೆಜ್ಜೆಯೆಂದರೆ ದೂರ ಶಿಕ್ಷಣ ಎಂಬ ಓಪನ್ ಯೂನಿವರ್ಸಿಟಿಯ ಪರಿಕಲ್ಪನೆ. ಅನೇಕ ಕಾರಣಗಳಿಂದ ಅರ್ಧಕ್ಕೇ ನಿಂತಿದ್ದ ತಮ್ಮ ವಿದ್ಯಾಭ್ಯಾಸವನ್ನು ಮುಂದುವರೆಸಿ ಸ್ನಾತಕ,ಸ್ನಾತಕೋತ್ತರ ಪದವಿ ಪರೀಕ್ಷೆಗಳಲ್ಲಿ ನಿಯತ ವಿದ್ಯಾರ್ಥಿಗಳ ಸರಿ ಸಮಕ್ಕೆ ಬರೆದು, ಆ ಪರೀಕ್ಷೆಗಳಲ್ಲಿ ಚಿನ್ನದ ಪದಕ ಪಡೆದ ಅನೇಕ ಪ್ರತಿಭಾವಂತರು ನಮ್ಮ ಮುಂದಿದ್ದಾರೆ. ಈ ಸಂಜೆ ಕಾಲೇಜು ಮತ್ತು ದೂರ ಶಿಕ್ಷಣದ ಮೂಲಕ ಅನೇಕ ಪ್ರತಿಭಾವಂತರು ತಮ್ಮ ಬದುಕು ಕಟ್ಟಿ ಕೊಂಡದ್ದು ಆ ಕಾಲದ ಕೊಡುಗೆಯೇ. ಇವತ್ತಿಗೂ ಬಹುತೇಕ ವಿವಿಗಳು ಅಂಚೆ ಮತ್ತು ತೆರಪಿನ ದೂರ ಶಿಕ್ಷಣವನ್ನು ನೀಡುತ್ತ ವಿದ್ಯಾ ದಾಹಿಗಳನ್ನು ಪೊರೆಯುತ್ತಿವೆ. ಎಲ್ಲ ರಂಗಗಳಲ್ಲಿ ಇರುವ ಹಾಗೆಯೆ ಮೋಸ ವಂಚನೆಗಳ ಜಾಲವೂ ಈ ದೂರ ಶಿಕ್ಷಣ ಕ್ಷೇತ್ರದಲ್ಲಿ ನಡೆದು ಕೆಲವು ಖೊಟ್ಟಿ ವಿವಿಗಳು ಈಗಾಗಲೇ ನಿಷೇದದ ಹಣೆಪಟ್ಟಿ ಪಡೆದಿವೆ. ಇಂಟರ್ನೆಟ್ ಎಂಬ ಸಂಪರ್ಕ ವಿಶ್ವದ ಯಾವುದೋ ಮೂಲೆಯನ್ನು ಮತ್ತೊಂದು ಮೂಲೆಯಿಂದ ತಲುಪ ಬಲ್ಲ ದೂರಗಾಮೀ ಸಂವೇದಿ. ಈ ಅಂತರ್ಜಾಲದ ಯುಗ ವಸುದೈವ ಕುಟುಂಬಕಂ ಎಂಬ ಆರ್ಷೇಯ ಕಲ್ಪನೆಗೆ ಮತ್ತೊಂದು ಭಾಷ್ಯವನ್ನೇ ಬರೆದಿದೆ ಎಂದರೆ ಅತಿಶಯೋಕ್ತಿ ಅಲ್ಲವೇ ಅಲ್ಲ. ತಿಳಿಯದೇ ಇರುವ ಹಲವು ಸಮಸ್ಯೆಗಳಿಗೆ ಗೂಗಲ್ ಎನ್ನುವ ಸರ್ಚ್ ಎಂಜಿನ್ ತತ್ ಕ್ಷಣವೇ ಉತ್ತರವನ್ನು ಹುಡುಕಿ ಕೊಟ್ಟರೆ ಯಾರೇ ಹೇಳುವ ಸುಳ್ಳನ್ನು ಕ್ಷಣಾರ್ಧದಲ್ಲಿ ಬಯಲು ಮಾಡುವ ಅವಕಾಶ ಕೊಟ್ಟದ್ದೂ ಈ ಅಂತರ್ಜಾಲವೇ. ಈ ನಡುವೆಯೇ ಕಳೆದ ಹತ್ತು ವರ್ಷಗಳಲ್ಲಿ ನಮ್ಮ ಜೀವನ ಅನೇಕ ಆಧುನಿಕ ತಂತ್ರ ಜ್ಞಾನದ ಸಹಾಯದಿಂದ ಸುಲಭ ಸಾಧ್ಯವಾಗುತ್ತಿದೆ. ಮೇಲೆ ಹೇಳಿದ ಅನೇಕ ಕೆಲಸಗಳು ಇಂಟರ್ನೆಟ್ ಇಲ್ಲದೇ ನಡೆಯಲಾರವು. ಬ್ಯಾಂಕು, ವಿಮೆ, ಆರ್ಟಿಓ, ಸಾರಿಗೆ, ಪೋಲೀಸ್ ಇಲಾಖೆ ಕೂಡ ಈಗ ಡಿಜಿಟಲೈಸ್. ಅಂದರೆ ಕಂಪ್ಯೂಟರಿಲ್ಲದ ಯಾವ ಕಛೇರಿಯೂ ಇವತ್ತು ಹೊಸ ಕಾಲದ ವೇಗಕ್ಕೆ ತೆರೆದುಕೊಳ್ಳಲಾರವು. ಗ್ರಾಮ ಲೆಕ್ಕಿಗನ ಕೃಪೆ ಇದ್ದರೆ ಮಾತ್ರ ಸಿಗುತ್ತಿದ್ದ ಪಹಣಿ ಈಗ ಹತ್ತು ರೂಪಾಯಿ ಕಟ್ಟಿದ ಕೂಡಲೇ ಕೈಯಲ್ಲಿ ಇರುತ್ತದೆ. ಯವುದೇ ಇಲಾಖೆಯ ಯಾರ ಮೇಲೆ ಬೇಕಾದರೂ ಈಗ ನೇರ ದೂರು ಸಲ್ಲಿಸಬಹುದು. ಅಂಥ ಹಲವು ಸ್ತರಗಳ ಮ್ಯಾನೇಜ್ಮೆಂಟ್ ಸಾಧ್ಯವಾಗಿರುವುದೇ ಆಧುನಿಕ ತಂತ್ರಾಂಶಗಳ ಅಭಿವೃದ್ಧಿಯಿಂದಾಗಿ. ಇವತ್ತು ನಮ್ಮ ಕೈಯಲ್ಲಿ ಮೊಬೈಲ್ ಇರಲಾಗಿ ಪ್ರತಿಭೆ ಇದ್ದೂ ಮುನ್ನೆಲೆಗೆ ಬಾರದೇ ಇದ್ದ ಅದೆಷ್ಟು ಜೀವಗಳು ಎಫ್ಬಿಯಲ್ಲಿ ಮಿಂಚುತ್ತಿವೆ ಎಂದರೆ ಅದು ಕೂಡ ಈ ಕಾಲ ನಮಗೆ ಕೊಟ್ಟ ಬಳುವಳಿಯೇ. ಈಗ ಹಲವು ಇಲಾಖೆಗಳು ಅನಗತ್ಯ ಖರ್ಚು ಮಾಡಿ ನಡೆಸುತ್ತಿದ್ದ ಸಮ್ಮೇಳನಗಳನ್ನು, ತರಬೇತಿಗಳನ್ನು ತಂತ್ರಾಂಶದ ನೆರವು ಪಡೆದು ಇದ್ದಲ್ಲೇ ಆನ್ಲೈನ್ ಸಭೆಗಳ ಮೂಲಕ ನಡೆಸುತ್ತಿವೆ. ಇಂಥೆಲ್ಲ ಅವಕಾಶಗಳೂ ಸಾಧ್ಯತೆಗಳೂ ಇರುವಾಗ ಶಿಕ್ಷಣ ಕ್ಷೇತ್ರದಲ್ಲೂ ಈ ಸೌಲಭ್ಯ ಬಳಸುವುದು ನಿಜಕ್ಕೂ ಅತ್ಯಗತ್ಯ ವಿಚಾರವೇ. ಮೊದಲೆಲ್ಲ ಸಂಗೀತ ಕಲಿಯಲು, ಕಂಪ್ಯೂಟರಿಗೆ ಸಂಬಂಧಿಸಿದ ಹಲವು ಕೋರ್ಸುಗಳನ್ನು ಕಲಿಯಲು ಬೆಂಗಳೂರಿಗೇ ಓಡಬೇಕಿತ್ತು. ಇವತ್ತು ನಮಗೆ ಬೇಕಿರುವ ಯಾವುದೇ ವಿದ್ಯೆಯನ್ನು ಕಲಿಯಲು ಎಲ್ಲಿಗೂ ಹೋಗಬೇಕಾಗಿಲ್ಲ, ಪ್ರಯಾಣ ಮಾಡಬೇಕಿಲ್ಲ, ಸಮಯದ ಹೊಂದಾಣಿಕೆ ಮತ್ತು ಅನಗತ್ಯ ಮಾನಸಿಕ ಒತ್ತಡಗಳೇ ಇಲ್ಲದೆ ನಮಗೆ ನಿಜಕ್ಕೂ ಬೇಕಿರುವುದನ್ನು ಅಂತರ್ಜಾಲದ ತರಗತಿಗಳ ಮೂಲಕ ಕಲಿಯುವುದು ಸಾಧ್ಯವಿದೆ. ಅಲ್ಲದೇ ಕೆಲವೊಂದು ಸಂಸ್ಥೆಗಳು ತಮ್ಮ ಕಲಿಕಾ ತರಗತಿಗಳಿಗೆ ಬೇಕಾದ ಲಿಂಕುಗಳನ್ನು ತರಗತಿಯ ಆರಂಭದಲ್ಲೇ ಕಳಿಸಿ ಆ ತರಗತಿಯು ಪಾಸ್ ವರ್ಡ್ ಕೊಟ್ಟರಷ್ಟೇ ತೆರೆಯುವ ವ್ಯವಸ್ಥೆಯನ್ನೂ ಮಾಡಿ ಕೊಂಡಿವೆ. ಕಂಪ್ಯೂಟರ್ ನೆಟ್ ವರ್ಕಿಂಗ್ ಮತ್ತು RDBMS ಥರದ ಕೋರ್ಸುಗಳು ಯುಟ್ಯೂಬ್ ಛಾನೆಲ್ಲಿನಲ್ಲಿ ಅದೆಷ್ಟಿವೆ ಎಂದರೆ ಆಸಕ್ತಿ ಮತ್ತು ಕಲಿಕೆಯ ಉತ್ಸಾಹವಿದ್ದವರು ತಾವಿದ್ದೆಡೆಯಿಂದಲೇ ಅದನ್ನು ಕಲಿಯಬಲ್ಲರು. ಸದ್ಯ ಚರ್ಚೆಯಲ್ಲಿರುವ ಆನ್ಲೈನ್ ಶಿಕ್ಷಣದ ಅಗತ್ಯತೆ ಇಷ್ಟೆಲ್ಲ ಬರೆದ ಮೇಲೆ ಅತ್ಯಗತ್ಯ ಮಾನ್ಯ ಮಾಡಲೇ ಬೇಕಿರುವ ಶಿಕ್ಷಣ ವ್ಯವಸ್ಥೆಗೆ ಪೂರಕವಾಗಿಯೇ ಇದೆ ಎನ್ನುವುದು ಸತ್ಯವಾದರೂ ಯಾವ ತರಗತಿಯಿಂದ ಮತ್ತು ಯಾವ ವಯಸ್ಸಿನ ನಂತರ ಈ ವ್ಯವಸ್ಥೆಯನ್ನು ಜಾರಿಗೊಳಿಸಬೇಕು ಎನ್ನುವುದರಲ್ಲಿ ವಿಭಿನ್ನ ನಿಲುವು ಮತ್ತು ವಿಭಿನ್ನ ವಾದಗಳೂ ಸಹಜವಾಗಿಯೇ ಹುಟ್ಟಿವೆ. ಏಕೆಂದರೆ ಶಿಕ್ಷಣ ತಜ್ಞರ ಪ್ರಕಾರ ಕಲಿಕೆಯು ವಯಸ್ಸು ಮತ್ತು ಕಲಿಕಾ ಪಠ್ಯ ಹಾಗೂ ಕಲಿಕಾ ಸಾಮಗ್ರಿಗಳ ಮೇಲೆ ನಿಂತಿದೆ. ಈ ಸಂಗತಿಯನ್ನು ಗಮನಿಸಿದರೆ ಪ್ರಸ್ತುತ ಇರುವ ಶೈಕ್ಷಣಿಕ ವ್ಯವಸ್ಥೆಯು ಆನ್ಲೈನ್ ತರಗತಿಗೆ ಬದಲಿಸಿಕೊಳ್ಳುವ ಸಾಮರ್ಥ್ಯ ಹೊಂದಿದೆಯೇ ಎಂದರೆ ಉತ್ತರ ನಿರಾಶೆಗೆ ತಳ್ಳುತ್ತದೆ. ಏಕೆಂದರೆ ನಮ್ಮ ಬಹುತೇಕ ಸರ್ಕಾರಿ ಶಾಲೆ ಕಾಲೇಜುಗಳಲ್ಲಿ ವಿದ್ಯುತ್ ಮತ್ತು ಕಂಪ್ಯೂಟರ್ ಇರಲಿ ಶೌಚಾಲಯಗಳು ಮತ್ತು ಅತ್ಯಗತ್ಯ ಬೇಕಿರುವ ನೀರು ಕೂಡ ಇಲ್ಲದಿರುವ ಸ್ಥಿತಿ ಇದೆ. ಹಳ್ಳಿಗಾಡಿನ ಶಾಲೆಗಳ ಶಿಕ್ಷಕರನ್ನೇ ನಿಯಂತ್ರಿಸಲಾಗದ ಶೈಕ್ಷಣಿಕ ವ್ಯವಸ್ಥೆ ನಮ್ಮದು. ಎಲ್ಲ ಇಲಾಖೆಗಳ ಹಾಗೆ ಇಲ್ಲೂ ತುಂಬ ಪ್ರಾಮಾಣಿಕರೂ ನಿಸ್ಪೃಹರೂ ಶಾಲೆ ಎಂದರೆ ತೇದು ಕೊಳ್ಳುವವರೂ ಇದ್ದಾರೆ. ಆದರೆ ಊರಿನ ರಾಜಕೀಯ ಶಾಲೆಗಳ ಮೇಲೂ ಪ್ರಭಾವ ಬೀರುವುದರಿಂದ ಕೆಲವೇ ಕೆಲವರು ಮಾತ್ರ ಇದನ್ನೆಲ್ಲ ಮೆಟ್ಟಿ ನಿಲ್ಲಬಲ್ಲರು. ಎಲ್ಲರೂ ಶ್ರೀರಾಮರೇ ಆದರೆ ರಾವಣನ ಪಾತ್ರ ಯಾರಿಗೆ ಬೇಕು? ವಯಸ್ಸು ಮತ್ತು ಕಲಿಕೆಯ ದೃಷ್ಟಿಯಿಂದ ಗಮನಿಸಿದರೆ ಪಿಯುಸಿ ಮತ್ತು ಅದರಾಚೆಯ ಓದಿಗೆ ಆನ್ಲೈನ್ ತರಗತಿ ಬಳಸಬಹುದು. ಹದಿನಾರರ ನಂತರ ದೈಹಿಕವಾಗಿ ಮಾನಸಿಕವಾಗಿ ಪ್ರಬುದ್ಧತೆ ಕೂಡ ಇರುತ್ತದೆ. ಆದರೆ ಹದಿ ಹರಯದ ವಿದ್ಯಾರ್ಥಿಗಳನ್ನು ಪಾಲಕರು ಆಗಾಗ ಗಮನಿಸುತ್ತ ತರಗತಿ ಇದ್ದಾಗ ಮಾತ್ರವೇ ಮೊಬೈಲ್ ಅಥವ ಲ್ಯಾಪ್ ಟಾಪ್ ಬಳಸುವಂತೆ ತಾಕೀತು ಇರಬೇಕು.ಇಲ್ಲವಾದಲ್ಲಿ ಬೇಡವಾದ ವೆಬ್ ಸೈಟುಗಳನ್ನೇ ಹದಿ ಹರಯದವರು ಕದ್ದು ಮುಚ್ಚಿ ನೋಡುತ್ತಾರೆ. ಇದಕ್ಕೆ ಅವಕಾಶ ಸಿಕ್ಕಲೇ ಬಾರದು. ಪ್ರಾಥಮಿಕ ಮಾಧ್ಯಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಈ ಆನ್ಲೈನ್ ತರಗತಿ ವ್ಯರ್ಥ. ಏಕೆಂದರೆ ಕಿರು ವಯಸ್ಸಿನ ಮಕ್ಕಳನ್ನು ಅನುನಯದಿಂದ ಪ್ರೀತಿ ಮತ್ತು ಸ್ಪರ್ಶದಿಂದ ಗೆಲ್ಲುತ್ತಲೇ ಕಲಿಸಬೇಕು. ಮನಸ್ಸನ್ನು ಕೇಂದ್ರೀಕರಿಸದೆ ಪಾಠವನ್ನು ಈ ಮಕ್ಕಳು ಹೇಗೆ ಕಲಿತಾವು? ಮನಸ್ಸನ್ನು ನಿಗ್ರಹಿಸಿ ಎಂದು ಹೇಳುವುದು ಸುಲಭ. ಆದರೆ ಸಣ್ಣ ವಯಸ್ಸಿನ ಹುಡುಗ ಬುದ್ಧಿಯ ವಿದ್ಯಾರ್ಥಿಗಳಿಗೆ ಪಾಠವನ್ನು ಆಟದ ಮೂಲಕವೇ ಕಲಿಸಲು ಸಾಧ್ಯ. ನಿಜಕ್ಕೂ ಸರ್ವ ಶಿಕ್ಷಣ ಅಭಿಯಾನದ ಉದ್ದೇಶ ಇಲ್ಲಿ ಸ್ಮರಿಸಲೇ ಬೇಕು. ಇನ್ನು ಪಾಲಕರ ಆರ್ಥಿಕ ಸಾಮರ್ಥ್ಯ ತುಂಬ ಮುಖ್ಯ. ಸರ್ಕಾರಿ ಶಾಲೆಗಳಲ್ಲಿ ಉಚಿತವಾಗಿ ಸಮ ವಸ್ತ್ರ, ಪಠ್ಯ ಪುಸ್ತಕ, ಮಧ್ಯಾಹ್ನದ ಊಟ ಕೊಟ್ಟರೂ ಮಕ್ಕಳ ಸಂಖ್ಯೆ ಕುಸಿಯುತ್ತಲೇ ಇದೆ. ಅತ್ತ ಖಾಸಗಿಯವರ ಆಕರ್ಷಣೆ ಇಂಗ್ಲಿಷ್ ಮೋಹ ಕೂಡ ಕನ್ನಡ ಶಾಲೆಗಳನ್ನು ಮುಚ್ಚಿಸುತ್ತಿದೆ. ಇನ್ನು ಸರ್ಕಾರವೇ ಆನ್ಲೈನ್ ಎಂದರೆ ಹಳ್ಳಿಗಾಡಿನ ಮಕ್ಕಳು ಸಂಪೂರ್ಣವಾಗಿ ಶಿಕ್ಷಣ ವಂಚಿತರಾಗುತ್ತಾರೆ. *********

ಆನ್ಲೈನ್ ಶಿಕ್ಷಣ – ಸಾಧ್ಯತೆ ಮತ್ತು ಜವಾಬ್ದಾರಿಗಳು. Read Post »

You cannot copy content of this page

Scroll to Top