ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಅಂಕಣ ಸಂಗಾತಿ, ಗಜಲ್ ಲೋಕ

ಅಂಕಣ ಸಂಗಾತಿ ಗಜಲ್ ಲೋಕ ರಜಪೂತರ ಗಜಲ್ ನಾದದಲ್ಲೊಂದು ಸುತ್ತು … ಹಾಯ್…. ಏನು ಯೋಚಿಸ್ತಾ ಇದ್ದೀರಾ, ಇಂದು ಯಾವ ವಾರ ಎಂದೋ…? ನಾನು ಓರ್ವ ಗಜಲ್ ಗೋ ಅವರ ಪರಿಚಯದೊಂದಿಗೆ ಬಂದಿದ್ದೇನೆ ಎಂದರೆ ಇಂದು ‘ಗುರುವಾರ’ ಎಂದಲ್ಲವೇ…!! ಶುಭೋದಯ, ನನ್ನ ಎಲ್ಲ ಕಸ್ತೂರಿ ಕನ್ನಡದ ಹೃದಯಗಳಿಗೆ ಈ ಮಲ್ಲಿನಾಥನ ಮಲ್ಲಿಗೆಯಂತ ನಮಸ್ಕಾರಗಳು.  “ಆ ಹೆಜ್ಜೆಗಳ ಸದ್ದನ್ನು ನಾವು ಬಹಳ ಮೊದಲೇ ತಿಳಿಯುತ್ತೇವೆ ಹೇಯ್ ಜೀವನವೇ..ನಾವು ನಿನ್ನನ್ನು ದೂರದಿಂದಲೇ ಗುರುತಿಸುತ್ತೇವೆ”                          –ಫಿರಾಕ್ ಗೋರಖಪುರಿ            ‘ಜೇನು’ ಎಂದ ತಕ್ಷಣವೇ ನಮ್ಮ ಬಾಯಿಯು ಒದ್ದೆಯಾಗುತ್ತದೆ, ಅಲ್ಲವೆ..! ನಾವು ಜೇನು ಸವಿಯೋದು ರುಚಿಗಾಗಿಯಾದರೂ ಅದರ ಫಲ ಮಾತ್ರ ರುಚಿಯ ಆಚೆಗೆ ಇದೆ! ಆ ಜೇನಿನ ಮಕರಂದವು ನಮ್ಮ ದೇಹವನ್ನು ಪ್ರವೇಶಿಸಿ ರಕ್ತದ ಉತ್ಪತ್ತಿಗೆ ಕಾರಣವಾಗುತ್ತದೆ, ನಮ್ಮ ಸದೃಢ ಆರೋಗ್ಯಕ್ಕೆ ಬುನಾದಿಯಾಗುತ್ತದೆ. ಇದರಂತೆಯೇ ಸಾಹಿತ್ಯದಿಂದ ಮನೋರಂಜನೆ ದೊರೆಯುತ್ತದೆ ಎಂಬುದು ಮೇಲ್ನೋಟಕ್ಕೆ ದಿಟವೆನಿಸಿದರೂ ಸಾಹಿತ್ಯದ ಕರಾಮತ್ತು ಮನೋರಂಜನೆಯನ್ನು ದಾಟಿಕೊಂಡು ವ್ಯಕ್ತಿಯ ವ್ಯಕ್ತಿತ್ವದ ವಿಕಾಸಕ್ಕೆ, ಸಂಸ್ಕಾರಕ್ಕೆ ತಳಪಾಯ ಹಾಕುತ್ತದೆ, ಹಾಕುತ್ತಿದೆ ಕೂಡ! ಕಾಂತೆಯಂತೆ ಸಂತೈಸುತ್ತದೆ, ತಾಯಿಯಂತೆ ಜೋಗುಳವಾಡುತ್ತದೆ, ಇವಾಗಲೂ ಇದನ್ನೆ ಮಾಡುತ್ತಿದೆ! ಪ್ರತಿ ಭಾಷೆಯ ಬೇರುಗಳಲ್ಲಿ ಅಕ್ಷರದ ಅಕ್ಷಯ ಪಾತ್ರೆ ಇದೆ.‌ ಇದು ಮನುಕುಲಕ್ಕೆ ಬೆಂಗಾವಲಾಗಿ, ಜ್ಯೋತಿಯಾಗಿ ಬೆಳಕನ್ನು ನೀಡಿದೆ, ನೀಡುತ್ತಿದೆ. ಕನ್ನಡದ ಹಣತೆಯು ಹಲವರ ಬೌದ್ಧಿಕ ಚಲನೆಯಿಂದ ದೇದಿಪ್ಯಮಾನವಾಗಿ ಪ್ರಕಾಶಿಸುತ್ತಿದೆ. ಇದಕ್ಕೆ ಅನ್ಯ ಭಾಷೆಯ ಸಾಹಿತ್ಯ ರೂಪಗಳು ತೈಲದಂತೆ ಸಾಥ್ ನೀಡುತ್ತಿವೆ. ಅಂತಹ ತೈಲಗಳಲ್ಲಿ ‘ಗಜಲ್’ ಗೆ ವಿಶಿಷ್ಟವಾದ ಸ್ಥಾನವಿದೆ. ಆಧ್ಯಾತ್ಮಿಕ ನೆಲೆಯಲ್ಲಿ ಜಗುಲಿ ಮೇಲೆ ರಂಗೋಲಿ ಹಾಕುತಿದೆ, ಜೊತೆ ಜೊತೆಗೆ ರಸೋಯಿ ಕೋಣೆಯಲ್ಲಿ ಅನ್ನಪೂರ್ಣೆಯಾಗಿಯೂ ಕಾರ್ಯ ನಿರ್ವಹಿಸುತಿದೆ. ಈ ನೆಲೆಯಲ್ಲಿ ಇಡೀ ಮನುಕುಲಕ್ಕೆ ದಾರಿ ದೀಪವಾಗಿದೆ. ಕನ್ನಡದಲ್ಲಿ ಇಂದು ಅಸಂಖ್ಯಾತ ಗಜಲ್ ಗೋ ಇದ್ದಾರೆ. ಅವರುಗಳಲ್ಲಿ ಉತ್ತಮ ಗಜಲ್ ಗೋ ಹಾಗೂ ಸುಶ್ರಾವ್ಯ ಕಂಠಾಧಿಪತಿಯಾದ ವಿಜಯಪುರದ ಶ್ರೀ ಪ್ರಕಾಶ್ ಸಿಂಗ್ ರಜಪೂತ್ ಅವರು ಪ್ರಮುಖರು.        ಶಿಶುಪಾಲಸಿಂಗ್ ರಘುನಾಥಸಿಂಗ್ ರಜಪೂತ್ ಹಾಗೂ ಶ್ರೀಮತಿ ಶಶಿಕಲಾಬಾಯಿ ದಂಪತಿಗಳ ಮುದ್ದಿನ ಮಗುವಾಗಿ ಶ್ರೀ ಪ್ರಕಾಶ್ ಸಿಂಗ್ ರಜಪೂತ್ ಅವರು 1954ರ ಅಕ್ಟೋಬರ್ 24 ರಂದು ಜನಿಸಿದ್ದಾರೆ. ಡಿಪ್ಲೋಮಾ ಇನ್ ಇಲೆಕ್ಟ್ರೀಕಲ್ ಇಂಜಿನಿಯರಿಂಗ್ ಶಿಕ್ಷಣ ಪೂರೈಸಿ ತಮ್ಮನ್ನು ತಾವು ಓರ್ವ ವ್ಯಾಪಾರಿಯಾಗಿ ತೊಡಗಿಸಿಕೊಂಡಿರುವ ಶ್ರೀಯುತರು ಪ್ರವೃತ್ತಿಯಿಂದ ಬಹುಭಾಷಾ ಕವಿಗಳು ಹಾಗೂ ಗಾಯಕರು ಆಗಿ ಸಾಂಸ್ಕೃತಿಕ ಲೋಕದಲ್ಲಿ ಚಿರಪರಿಚಿತರಾಗಿದ್ದಾರೆ.‌ ಕನ್ನಡ, ಹಿಂದಿ, ಇಂಗ್ಲೀಷ್, ಮರಾಠಿ, ಗುಜರಾತಿ ಹಾಗೂ ಉರ್ದು ಭಾಷೆಗಳನ್ನು ಬಲ್ಲವರಾಗಿದ್ದು, ಈ ಭಾಷೆಗಳಲ್ಲಿ ಸಾಹಿತ್ಯ ಕೃಷಿಯನ್ನು ಮಾಡಿದ್ದಾರೆ, ಮಾಡುತ್ತಿದ್ದಾರೆ. ವಿಶೇಷವಾಗಿ ಭಾಷಾಂತರ ಕಾರ್ಯದಲ್ಲಿ ನಿರತರಾಗಿರುವ ರಜಪೂತ್ ರವರು ಬಸವಣ್ಣ, ಅಕ್ಕಮಹಾದೇವಿ, ಅಲ್ಲಮಪ್ರಭು.. ಮುಂತಾದ ಶರಣರ ವಚನಗಳನ್ನು ಹಿಂದಿ ಭಾಷೆಗೆ ಅನುವಾದಿಸಿದ್ದಾರೆ.‌ ಹೆಸರಾಂತ ಹಿಂದಿ, ಉರ್ದು ಕವಿಗಳ 80 ಗಜಲ್ ಗಳನ್ನು ಕನ್ನಡಕ್ಕೆ ಪರಿಚಯಿಸಿದ್ದಾರೆ. ಹರಿವಂಶರಾಯ ಬಚ್ಚನ್ ಅವರ ‘ಮಧುಶಾಲಾ’ ಕೃತಿಯನ್ನು ಕನ್ನಡ ಮತ್ತು ಮರಾಠಿ ಭಾಷೆಗೆ ಅನುವಾದಿಸಿದ್ದಾರೆ.‌ ಕಬೀರ್ ದಾಸ್, ರಹೀಮ್, ತುಳಸಿದಾಸರ ದೋಹೆಗಳನ್ನು ಕನ್ನಡಕ್ಕೆ ತಂದಿದ್ದಾರೆ. ಇದರೊಂದಿಗೆ ಹಲವಾರು ಹಿಂದಿ ಕವಿಗಳ ಕಾವ್ಯವನ್ನು ಕನ್ನಡ ಅಂಗಳದಲ್ಲಿ ಬಿತ್ತನೆ ಮಾಡಿದ್ದಾರೆ.‌ ಇನ್ನೂ 2014ರಲ್ಲಿ “ಬಾಳಿನ ರಾಗ” ಎಂಬ 54 ಗಜಲ್ ಗಳ ಸಂಕಲನವನ್ನು ಪ್ರಕಟಿಸಿದ್ದಾರೆ. ಶಾರದೆಯ ಆರಾಧಕರಾದ ಶ್ರೀಯುತರು ಹಲವಾರು ಸಾಹಿತ್ಯ, ಸಂಗೀತ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ನಿರಂತರವಾಗಿ ಸಕ್ರೀಯರಾಗಿದ್ದು, ವಿವಿಧ ಸಾಹಿತ್ಯ ಸಮ್ಮೇಳನಗಳು, ಕವಿಗೋಷ್ಠಿ, ಗಜಲ್ ಮುಶಾಯಿರಾ ದಂತಹ ಮಧುರ ಕ್ಷಣಗಳಲ್ಲಿ ತಮ್ಮ ನೆನಪುಗಳನ್ನು ಶಾಶ್ವತಗೊಳಿಸಿಕೊಂಡಿದ್ದಾರೆ. ಆಕಾಶವಾಣಿ, ದೂರದರ್ಶನ ಕಾರ್ಯಕ್ರಮಗಳಲ್ಲಿಯೂ ಭಾಗವಹಿಸಿ ನಾಡಿನ ಜನರಿಗೆ ರಂಜಿಸಿದ್ದಾರೆ. ಹತ್ತು ಹಲವಾರು ಸಂಘ ಸಂಸ್ಥೆಗಳು ಪ್ರಕಾಶ್ ಸಿಂಗ್ ರಜಪೂತ್ ರವರ ಪಾರದರ್ಶಕ ವ್ಯಕ್ತಿತ್ವವನ್ನು ಪ್ರೀತಿಸುತ್ತ ಸನ್ಮಾನಿಸಿವೆ, ಗೌರವಿಸಿವೆ!!        ವೃತ್ತಿ ಹೊಟ್ಟೆಯನ್ನು ತುಂಬಿಸಿದರೆ ಪ್ರವೃತ್ತಿ ಹೃದಯದ ಹಸಿವನ್ನು ನೀಗಿಸುತ್ತದೆ. ಅಂತೆಯೇ ವ್ಯಕ್ತಿ ಹವ್ಯಾಸದಲ್ಲಿ ತನ್ನ ದಣಿವನ್ನು ಮರೆಯುತ್ತಾನೆ. ಈ ನೆಲೆಯಲ್ಲಿ ಗಜಲ್ ಗೋ ಪ್ರಕಾಶ್ ಸಿಂಗ್ ರಜಪೂತ್ ರವರ ಗಜಲ್ ಭಾವ ದೀಪ್ತಿಯ ಚಲನೆ ನಿರಂತರವಾಗಿ ಸಾಗುತ್ತಿದೆ. ಹಿಂದಿ, ಉರ್ದು ಗಜಲ್ ತೋಟಗಳಲ್ಲಿ ಸುಳಿದಾಡಿ ಆಕರ್ಷಿತರಾದ ಇವರು ತಮ್ಮ ಗಜಲ್ ಗಳಲ್ಲಿ ಭಾವಯಾನಕ್ಕೆ ಹೆಚ್ಚು ಪ್ರಾಧಾನ್ಯತೆ ನೀಡುತ್ತ, ಸಂಗೀತಕ್ಕೆ ಅಳವಡಿಸುತ್ತ ಬಂದಿದ್ದಾರೆ. ಕೇವಲ ತಮ್ಮ ಗಜಲ್ ಗಳನ್ನು ಮಾತ್ರ ಹಾಡದೇ, ಇನ್ನಿತರರ ಗಜಲ್ ಗಳನ್ನು ಹಾಡಿ ಸಂಭ್ರಮಿಸುವುದು ಅವರ ಸಕಾರಾತ್ಮಕ ವ್ಯಕ್ತಿತ್ವದ ಕೈಗನ್ನಡಿಯಾಗಿದೆ! ಗಜಲ್ ಎಂದರೆ ಅಂತರಂಗ ಅನಾವರಣಗೊಳಿಸುವ ಧ್ಯಾನಸ್ಥ ಸ್ಥಿತಿ. ಇದು ಆಡಂಬರದ ಡಂಗುರ ಸಾರುವ ದುಡಿಯಲ್ಲ, ಇದೊಂದು ಮನಸ್ಸಿಗೆ ಮುದ ನೀಡುವ ಢಮರುಗ. ಮಧ್ಯರಾತ್ರಿಯಲ್ಲೂ ಮನದ ಸ್ಮೃತಿಯಲ್ಲಿ ನೇಸರನನ್ನು ಮೂಡಿಸುವ ಗಜಲ್ ಹೃದಯದ ಬಡಿತವಾಗಿದ್ದು, ಕಲಾರಸಿಕರನ್ನು ತನ್ನ ತೆಕ್ಕೆಯಲ್ಲಿ ಹಿಡಿದುಕೊಂಡು ವಿಶ್ವಪರ್ಯಟನ ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ಇದೊಂದು ಭಾವಪೂರ್ಣ ಕಾವ್ಯ ಪ್ರಕಾರ!! “ಅವಳ ನಗೆ ಮುತ್ತು ನಾನು ಸಂಗ್ರಹಿಸಬೇಕು ಪಾಲಿನಲ್ಲಿ ಬಂದ ಪಾತ್ರ ನಾ ವಹಿಸಬೇಕು” ಎನ್ನುವ ಮತ್ಲಾ ಬಯಕೆಗಳ ಜೊತೆ ಜೊತೆಗೆ ಕರ್ಮ ಸಿದ್ಧಾಂತವನ್ನು ಅರುಹುತ್ತಿದೆ. ನಗೆ ಮುತ್ತು ಸಂಗ್ರಹಿಸುವ ಕಾರ್ಯಕ್ಕೆ ತೊಡಗಿರುವ ಮನವು ‘ಪಾಲಿಗೆ ಬಂದದ್ದು ಪಂಚಾಮೃತ’ ಎನ್ನುವ ಸ್ಥಿತಪ್ರಜ್ಞೆಗೆ ಅಂಟಿಕೊಂಡಿರುವುದು ಮನದಟ್ಟಾಗುತ್ತದೆ. ಪ್ರೀತಿಯ ದಾರಿಯಲ್ಲಿ ಎರಡು ಕವಲುಗಳು ಇರುವುದನ್ನು ಈ ಷೇರ್ ಸೂಚ್ಯವಾಗಿ ದಾಖಲಿಸುತ್ತದೆ. ‘ಮುತ್ತು ಸಂಗ್ರಹಿಸಿದರೆ’ ಶೃಂಗಾರ, ‘ಪಾಲಿನಲ್ಲಿ ಬಂದ ಪಾತ್ರ’ ಎಂಬುದು ವಿಪ್ರಲಂಭ ಶೃಂಗಾರವನ್ನು ಪ್ರತಿಧ್ವನಿಸುತ್ತಿದೆ. “ಯಾರು ತಂದೆ, ಯಾರು ತಾಯಿ, ಬಾಳಲು ಬೇಕು ರೂಪಾಯಿ ಹೊಟ್ಟೆ ತುಂಬಾ ಜೀವ ಬೇಡಿದೆ, ನುಂಗಲು ರಾಗಿಯ ಮುದ್ದಿ“ ಎನ್ನುವ ಈ ಷೇರ್ ಜೀವನದ ಆಯಾಮಗಳ ಜೊತೆಗೆ ಬಾಳಿನ ಅಂತಿಮ ದರ್ಶನವನ್ನು ಮಾಡಿಸುತ್ತದೆ. ಇಲ್ಲಿಯ ಮಿಸರೈನ್ ಸಂವಾದ ರೂಪದಲ್ಲಿ ಮೂಡಿ ಬಂದಿವೆ. ಈ ಜಗದೊಳಗೆ ಎಲ್ಲ ಸಂಬಂಧಗಳ ರಿಂಗ್ ಮಾಸ್ಟರ್ ದುಡ್ಡು ಎನ್ನುವುದು ಎಷ್ಟು ಸತ್ಯವೋ ಅಷ್ಟೇ ಸತ್ಯ ಹಸಿದ ಒಡಲಿಗೆ ಬೇಕಾಗಿರುವುದು ತುತ್ತು ಅನ್ನ ಮಾತ್ರ!! ಈ ಕಾರಣಕ್ಕಾಗಿಯೇ ದುಡ್ಡನ್ನು ಉಪ್ಪಿಗೆ ಹೋಲಿಸಲಾಗಿದೆ.           ಮನುಷ್ಯನ ಬದುಕೆನ್ನುವುದು ಕೊಳಲಿನ ನಾದದಂತೆ, ನುಡಿಸಲು ಬಂದರೆ ಅದುವೇ ಗೆಲುವು, ಇಲ್ಲದಿದ್ದರೆ….! ಈ ಮಾತು ನಮ್ಮ ಗಜಲ್ ಅಮೃತವರ್ಷಿಣಿಗೂ ಅನ್ವಯವಾಗುತ್ತದೆ. ಗಜಲ್ ರಚನೆಯೆಂದರೆ ಗಾಢವಾದ ಮೌನದೊಳಗಿನ ಕಲರವ, ತಪಸ್ಸಿನೊಳಗಿನ ಪ್ರವಚನ ; ನಿದ್ದೆಯಲ್ಲಿನ ಸೂಪ್ತಾವಸ್ಥೆಯಂತೆ. ಗಜಲ್ ಗೋ ಪ್ರಕಾಶ್ ಸಿಂಗ್ ರಜಪೂತ್ ರವರ ಗಜಲ್ ಗಾನಯಾನ ದಣಿವರಿಯದ ಪಾರಿವಾಳದಂತೆ ಆಗಸದಲ್ಲಿ ರೆಕ್ಕೆ ಬಿಚ್ಚಿ ಹಾರಾಡಲಿ ಎಂದು ಹೃನ್ಮನದಿ ಶುಭ ಕೋರುತ್ತೇನೆ. “ಎಲ್ಲ ಕೆಲಸ ಹೂವೆತ್ತಿದಂತೆ ಹಗುರವಾಗೋದು ಕಷ್ಟ ಮನುಷ್ಯರಾಗಿ ಹುಟ್ಟಿದವರಿಗೂ ಮನುಷ್ಯರಾಗೋದು ಕಷ್ಟ!”                          –ಮಿರ್ಜಾ ಗಾ0ಲಿಬ್ ಮುಂದಿನ ವಾರ.. ಅಂದರೆ ಗುರುವಾರ, ಮತ್ತೊಮ್ಮೆ ನಿಮ್ಮ ನೆಚ್ಚಿನ ಗಜಲ್ ಉಸ್ತಾದರೊಂದಿಗೆ ನಿಮ್ಮ ಮುಂದೆ ಪ್ರತ್ಯಕ್ಷನಾಗುವೆ. ಅಲ್ಲಿಯವರೆಗೂ ಧನ್ಯವಾದಗಳು… ಡಾ. ಮಲ್ಲಿನಾಥ ಎಸ್. ತಳವಾರ ರಾವೂರ ಎಂಬುದು ಪುಟ್ಟ ಊರು. ಚಿತ್ತಾವಲಿ ಶಾ ಎಂಬ ಸೂಫಿಯ ದರ್ಗಾ ಒಳಗೊಂಡ ಚಿತ್ತಾಪುರ ಎಂಬ ತಾಲೂಕಿನ ತೆಕ್ಕೆಯೊಳಗಿದೆ. ಕಲಬುರಗಿಯಲ್ಲಿ ಶತಮಾನ ಕಂಡ ನೂತನ ಪದವಿ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿರುವ ಡಾ.ಮಲ್ಲಿನಾಥ ತಳವಾರ ಅವರು ಪುಟ್ಟ ರಾವೂರಿನಿಂದ ರಾಜಧಾನಿವರೆಗೆ ಗುರುತಿಸಿಕೊಂಡಿದ್ದು “ಗಾಲಿಬ್” ನಿಂದ. ಕವಿತೆ, ಕಥೆ, ವಿಮರ್ಶೆ, ಸಂಶೋಧನೆ, ಗಜಲ್ ಸೇರಿ ಒಂದು ಡಜನ್ ಗೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ. ಅವುಗಳಲ್ಲಿ ಜ್ಞಾನಪೀಠಿ ಡಾ.ಶಿವರಾಮ ಕಾರಂತರ ಸ್ತ್ರೀ ಪ್ರಪಂಚ ಕುರಿತು ಮಹಾಪ್ರಬಂಧ, ‘ಮುತ್ತಿನ ಸಂಕೋಲೆ’ ಎಂಬ ಸ್ತ್ರೀ ಸಂವೇದನೆಯ ಕಥೆಗಳು, ‘ಪ್ರೀತಿಯಿಲ್ಲದೆ ಬದುಕಿದವರ್ಯಾರು’ ಎಂಬ ಕವನ ಸಂಕಲನ, ‘ಗಾಲಿಬ್ ಸ್ಮೃತಿ’, ‘ಮಲ್ಲಿಗೆ ಸಿಂಚನ’ ದಂತಹ ಗಜಲ್ ಸಂಕಲನಗಳು ಪ್ರಮುಖವಾಗಿವೆ.’ರತ್ನರಾಯಮಲ್ಲ’ ಎಂಬ ಹೆಸರಿನಿಂದ ಚಿರಪರಿಚಿತರಾಗಿ ಬರೆಯುತ್ತಿದ್ದಾರೆ.’ರತ್ನ’ಮ್ಮ ತಾಯಿ ಹೆಸರಾದರೆ, ತಂದೆಯ ಹೆಸರು ಶಿವ’ರಾಯ’ ಮತ್ತು ಮಲ್ಲಿನಾಥ ‘ ಮಲ್ಲ’ ಆಗಿಸಿಕೊಂಡಿದ್ದಾರೆ. ‘ಮಲ್ಲಿ’ ಇವರ ತಖಲ್ಲುಸನಾಮ.ಅವಮಾನದಿಂದ, ದುಃಖದಿಂದ ಪ್ರೀತಿಯಿಂದ ಕಣ್ತುಂಬಿಕೊಂಡೇ ಬದುಕನ್ನು ಕಟ್ಟಿಕೊಂಡ ಡಾ.ತಳವಾರ ಅವರಲ್ಲಿ, ಕನಸುಗಳ ಹೊರತು ಮತ್ತೇನೂ ಇಲ್ಲ. ಎಂದಿಗೂ ಮಧುಶಾಲೆ ಕಂಡಿಲ್ಲ.‌ಆದರೆ ಗಜಲ್ ಗಳಲ್ಲಿ ಮಧುಶಾಲೆ ಅರಸುತ್ತ ಹೊರಟಿದ್ದಾರೆ..ಎಲ್ಲಿ ನಿಲ್ಲುತ್ತಾರೋ

Read Post »

ಅಂಕಣ ಸಂಗಾತಿ, ಗಜಲ್ ಲೋಕ

ಅಂಕಣ ಸಂಗಾತಿ ಗಜಲ್ ಲೋಕ ಸಾಲಿಯವರ ಗಜಲ್ ಉದ್ಯಾನವನ… ನಮಸ್ಕಾರ… ಎಂದಿನಂತೆ ಇಂದೂ ಸಹ ನಾಡಿನ ಖ್ಯಾತ ಗಜಲ್ ಕಾರರೊಬ್ಬರ ಪರಿಚಯದೊಂದಿಗೆ ತಮ್ಮ ಮುಂದೆ ಬಂದಿದ್ದೇನೆ. ಓದಲು ತಾವು ಕಾತುರರಾಗಿದ್ದೀರೆಂದು ಬಲ್ಲೆ. ಸಮಯವನ್ನು ಹಾಳು ಮಾಡದೆ, ನೇರವಾಗಿ ವಿಷಯಕ್ಕೆ ಬರುತ್ತೇನೆ. “ಪ್ರೇಮಿಯ ಕಾರಣ ಇತರ ಎಲ್ಲ ಕಾರಣಗಳಿಂದ ಪ್ರತ್ಯೇಕವಾಗಿದೆ ಪ್ರೀತಿಯು ದೇವರ ರಹಸ್ಯಗಳ ಖಗೋಳ“                                    –ರೂಮಿ              ಉರ್ದು ತುಂಬಾ ಕಾವ್ಯಾತ್ಮಕ ಭಾವದ ಭಾಷೆ.‌ ‘ಕಾವ್ಯಾತ್ಮಕ ಭಾಷೆ’ ಎಂದರೆ ಆ ಭಾಷೆಯೂ ಶಬ್ಧಗಳಿಗಿರುವ ಅರ್ಥಬಾಹುಳ್ಯ ಎಂದರ್ಥ. ಇದು ಶಿಷ್ಟತೆಯ-ಸಭ್ಯತೆಯ ಸಂಸ್ಕೃತಿಯನ್ನು ಒಳಗೊಂಡಿದ್ದು, ಸುಸಂಸ್ಕೃತರ ಭಾಷೆಯಾಗಿದೆ. ಇದು ಶಾಯರಿಗೆ, ಅದರಲ್ಲೂ ಗಜಲ್ ಗೆ ಹೇಳಿ ಮಾಡಿಸಿದಂತಹ ಭಾಷೆ!! ಅದರ ಮೃದುತ್ವ, ಆರ್ತತೆ, ಲಾಲಿತ್ಯ, ನಾಲಿಗೆಯ ಮೇಲೆ ಸಕ್ಕರೆಯಂತೆ ಕರಗುವ, ಕಿವಿಗಳಲ್ಲಿ ಗಾಜಿನ ಗೆಜ್ಜೆಯಂತೆ ಕುಣಿಯುವ ಅದರ ಬಾಗು ಬಳಕು ಬೇರೆ ಯಾವ ಭಾಷೆಗೂ ದಕ್ಕಿಲ್ಲ!! ಈ ಹಿನ್ನೆಲೆಯಲ್ಲಿ ಗಜಲ್ ಪ್ರತಿ ಓದುಗನ ಹಾಗೂ ಪ್ರತಿ ಕೇಳುಗನ ಹೃದಯದೊಂದಿಗೆ ಸಂವಾದ ಮಾಡುತ್ತದೆ. ಇಂತಹ ಉರ್ದು ಗಜಲ್ ಪರಂಪರೆಯ ಚೌಕಟ್ಟನ್ನು ಮೀರದೆ, ಕನ್ನಡಕ್ಕೆ ಅತ್ಯಂತ ಸುಂದರವಾದ ಹಾಗೂ ರಸಪೂರ್ಣವಾದ ಗಜಲ್ ಗಳನ್ನು ನೀಡಿದ ಚಿದಾನಂದ ಸಾಲಿ ಅವರು ಮೂಲತಃ ರಾಯಚೂರು ಜಿಲ್ಲೆಯ ಸಿರವಾರದವರು. ಗಣಿತಶಾಸ್ತ್ರದಲ್ಲಿ ಎಂಎಸ್ಸಿ, ಪತ್ರಿಕೋದ್ಯಮ, ಕನ್ನಡದಲ್ಲಿ ಎಂ.ಎ. ಪದವಿ ಪಡೆದಿರುವ ಇವರು ಎಂಫಿಲ್, ಪಿಜಿಡಿಎಚ್ ಇ ಮತ್ತು ಪಿಜಿಡಿಎಚ್ ಆರ್ ಎಂ ಪದವೀಧರರು. ಕೆಲಕಾಲ ಪತ್ರಕರ್ತರಾಗಿದ್ದ ಇವರು ಸರ್ಕಾರಿ ಪ್ರೌಢಶಾಲೆಯ ಗಣಿತ ಶಿಕ್ಷಕರಾಗಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ.        ಕನ್ನಡ ಸಾಹಿತ್ಯದ ಹಲವು ಪ್ರಕಾರಗಳಲ್ಲಿ ಕೃಷಿ ಮಾಡಿರುವ ಸಾಲಿಯವರು ಕವಿಗಳಾಗಿ, ಕಥೆಗಾರರಾಗಿ, ಅನುವಾದಕರಾಗಿ, ಗಜಲ್ ಕಾರರಾಗಿ  ಹಾಗೂ ಉತ್ತಮ ಸಂಪಾದಕರಾಗಿ ಹೆಸರು ಮಾಡಿದ್ದಾರೆ. ಇವರ ಒಟ್ಟು 26 ಕೃತಿಗಳಲ್ಲಿ 13 ಕೃತಿಗಳು ಸೃಜನಶೀಲತೆಗೆ ಸಾಕ್ಷಿಯಾಗಿದ್ದರೆ 10 ಕೃತಿಗಳು ಅನುವಾದವಾಗಿವೆ. ಇನ್ನೂ ಉಳಿದ 03 ಕೃತಿಗಳು ಸಂಪಾದನೆಯಾಗಿವೆ. ಇವರ ‘ಮೌನ’ ಎಂಬ ಗಜಲ್ ಸಂಕಲನವು ಓದುಗರ ಹೃದಯವನ್ನು ಗೆದ್ದು ಹಲವು ಪ್ರಕಟಣೆಗಳನ್ನು ಕಂಡಿದೆ. ಇನ್ನೂ ಕೇಂದ್ರ ಸಾಹಿತ್ಯ ಅಕಾಡೆಮಿಯಿಂದ ಪ್ರಕಟವಾದ ‘ಕನ್ನಡ ಗಜಲ್’ ಎಂಬ ಸಂಪಾದಿತ ಕೃತಿಯು ಗಜಲ್ ಸಾಹಿತ್ಯ ಲೋಕದಲ್ಲಿ ಒಂದು ಮೈಲಗಲ್ಲಾಗಿದೆ. ಇದು ಹಲವಾರು ಗಜಲ್ ಕಾರರ ಗಜಲ್ ಗಳನ್ನು ಒಳಗೊಂಡಿದ್ದು ಗಜಲ್ ಕಾರರಿಗೆ ಆಕರ ಗ್ರಂಥವಾಗಿದೆ. ಗಜಲ್ ನ ಸರಿಯಾದ ಮಾದರಿಯನ್ನು ತಿಳಿಸಿಕೊಡುವ, ಈ ಪ್ರಕಾರವನ್ನು ಎಲ್ಲ ನೆಲೆಗಳಿಂದ ಪರಾಮರ್ಶನಕ್ಕೊಳಪಡಿಸಿರುವ ವಿದ್ವತ್ಪೂರ್ಣ ಪ್ರಬಂಧಗಳು ಮತ್ತು ಪ್ರಾತಿನಿಧಿಕ ರಚನೆಗಳ ಸಂಗ್ರಹ, ಸಂಪಾದನೆಯೇ ‘ಗಾಳಿಗೆ ಬಳುಕಿದ ಬೆಳಕು’ ಕೃತಿ. ಇದು  ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಪ್ರಕಟಗೊಂಡಿದೆ. ಕನ್ನಡ, ತೆಲುಗು, ಹಿಂದಿ, ಇಂಗ್ಲೀಷ್ … ಭಾಷೆಗಳಲ್ಲಿ ಪ್ರಭುತ್ವ ಹೊಂದಿರುವ ಇವರು ಅನ್ಯ ಭಾಷೆಯ ಹಲವು ಮೌಲ್ಯಿಕ ಕೃತಿಗಳನ್ನು ಕನ್ನಡಕ್ಕೆ ಪರಿಚಯಿಸಿದ್ದಾರೆ. ಅವುಗಳಲ್ಲಿ ‘ಇಂದ್ರಸಭಾ’ವೂ ಒಂದು. ಇದು ಉತ್ತಮ ಸದಭಿರುಚಿಯ ಗಜಲ್ ಗಳಿಂದ ಕೂಡಿದ್ದು, ಓದುಗರ ನೆಚ್ಚಿನ ಕೃತಿಯಾಗಿದೆ.        ಸಾಲಿಯವರ ಸಾಹಿತ್ಯ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಿಗೆ ಹಲವು ಪ್ರಶಸ್ತಿ, ಪುರಸ್ಕಾರಗಳು, ಗೌರವ, ಸನ್ಮಾನಗಳು ಲಭಿಸಿವೆ. ಅವುಗಳಲ್ಲಿ ಕಣವಿ ಕಾವ್ಯ ಪ್ರಶಸ್ತಿ, ಬೇಂದ್ರೆ ಗ್ರಂಥ ಬಹುಮಾನ, ಗುಲ್ಬರ್ಗಾ ವಿ.ವಿ ರಾಜ್ಯೋತ್ಸವ ಪುಸ್ತಕ ಬಹುಮಾನ, ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಪುಸ್ತಕ ಬಹುಮಾನ (ಎರಡು ಸಲ) ಕಟ್ಟಿಮನಿ ಯುವ ಸಾಹಿತ್ಯ ಪ್ರಶಸ್ತಿ, 2020ನೇ ಸಾಲಿನ ಶ್ರೀವಿಜಯ ಸಾಹಿತ್ಯ ಪ್ರಶಸ್ತಿ…. ಮುಂತಾದವುಗಳು. ಇವರ ಬರವಣಿಗೆಗಳು ರಾಜ್ಯದ ವಿವಿಧ ವಿಶ್ವವಿದ್ಯಾಲಯಗಳಲ್ಲಿ ಪಠ್ಯಪುಸ್ತಕಗಳಾಗಿವೆ. ಇವರ ಕೆಲವು ಬಿಡಿ ಬಿಡಿ-ಕತೆಗಳು ತೆಲುಗು, ತಮಿಳು, ಹಿಂದಿ ಮತ್ತು ಇಂಗ್ಲೀಷಿಗೆ ಅನುವಾದಗೊಂಡಿವೆ.        ಗಜಲ್ ಕಾವ್ಯ ಪ್ರಕಾರವು ಇಂದು ಸಾಹಿತ್ಯ ಪ್ರೇಮಿಗಳಿಗೆ ಮೃಷ್ಟಾನ್ನ ಭೋಜನವನ್ನು ಉಣಬಡಿಸುತ್ತಿದೆ, ಅದೂ ತನು-ಮನಗಳೆರಡಕ್ಕೂ!! ಈ ನೆಲೆಯಲ್ಲಿ ಗಜಲ್ ಗಜಲ್ ಗೋ ಅವರ ಅಹಮಿಕೆಯನ್ನು ನಿರಸನಗೊಳಿಸುತ್ತದೆ. ಯಾವ ಶ್ರೇಷ್ಠ ಗಜಲ್ ಅಹಮಿಕೆಯಿಂದ ರೂಪುಗೊಳ್ಳುವುದಿಲ್ಲ. ಅಹಮಿಕೆ ಯಾವ ಮಹತ್ವದ ವಸ್ತುವಿಗೂ ಜನ್ಮ ನೀಡದು. ಅಂತೆಯೇ ಗಜಲ್ ಎಂದರೆ ಬದುಕುವ ಕಲೆ, ಉಸಿರಾಡುವ ವಿಧಾನ, ಪ್ರೀತಿಯ ಊರುಗೋಲು! ಹೃದಯವನ್ನು ವಿಹ್ವಲಗೊಳಿಸುವ ಅನುಕ್ತ ವ್ಯಥೆಯಲ್ಲಿ ಮೀಯುತ್ತಲೇ ಪ್ರೇಮ ಮತ್ತು ಸೌಂದರ್ಯದ ಬಿಸಿಲು ನೆರಳಿನ ಬೀದಿಯಲ್ಲಿ ವಿಹರಿಸಿದಂತಹ ಮಧುರಾನುಭವವನ್ನು ಗಜಲ್ ನೀಡುತ್ತದೆ. ತನ್ನ ಕೊರಳ ಇನಿದನಿಯಿಂದಲೇ ಜಗದ ಕರುಳಿನ ಮಿಡಿತವನ್ನು ಆಲಿಸುತ್ತದೆ. ಈ ಹಿನ್ನೆಲೆಯಲ್ಲಿ ಗಜಲ್ ಮಧುಬಾಲೆಯ ಅಂತಃಕರಣದ ಬೊಗಸೆಯಲ್ಲಿ ಇಡೀ ಬ್ರಹ್ಮಾಂಡವೇ ಇದೆ. ಕನ್ನಡ ಗಜಲ್ ಪರಂಪರೆಯನ್ನು ಉಳಿಸಿಕೊಂಡು ಬೆಳೆಸಿಕೊಂಡು ಬರುತ್ತಿರುವವರಲ್ಲಿ ಸಾಲಿಯವರೂ ಪ್ರಮುಖರು. ಇವರ ಗಜಲ್ ಗಳಲ್ಲಿ ಭಾವತೀವ್ರತೆ, ರೂಪಕಗಳ ದಿಬ್ಬಣವಿದೆ, ಸಂಯಮದ ನೆಲೆಯಲ್ಲಿ ಹುಡುಕುವ ಸತ್ಯದ ಹುಡುಕಾಟವಿದೆ. ಇಡೀ ಪರಪಂಚವೇ ತಮ್ಮ ತಮ್ಮ ನಿರಾಳತೆಯನ್ನು ಅರಸುತ್ತ ದೂರ ಉಳಿದ ಮಾನವೀಯ ದುರಂತವನ್ನು ಸಾಲಿಯವರು ತಮ್ಮ ಗಜಲ್ ಗಳಲ್ಲಿ ಸೆರೆ ಹಿಡಿದಿದ್ದಾರೆ. “ಜೋರು ಬಿರುಗಾಳಿಗೆದುರಾಗಿ ಪುಟ್ಟ ಹಣತೆಯನಿಟ್ಟಿದ್ದು ನಿಮ್ಮದೇ ತಪ್ಪು ಬೀಸು ಪ್ರವಾಹಕ್ಕೆದುರು ಸಣ್ಣ ನಾವೆಯ ತೇಲಿಬಿಟ್ಟಿದ್ದು ನಿಮ್ಮದೇ ತಪ್ಪು“ ಈ ಷೇರ್ ಸಾಮಾಜಿಕ ವ್ಯವಸ್ಥೆಯ ಅಸಮಾನತೆಯ ವಿರುದ್ಧ ಮೌನ ಪ್ರತಿಭಟನೆ ಮಾಡುತ್ತಿದೆ. ಸಮಸ್ಯೆಯ ಪರಿಹಾರಕ್ಕೆ ಜೋಶ್ ಜೊತೆಗೆ ಹೋಶ್ ಬೇಕು ಎಂಬುದನ್ನು ಅರಹುತ್ತಿದೆ. ಈ ಹಿನ್ನೆಲೆಯಲ್ಲಿ ‘ನಿಮ್ಮದೇ ತಪ್ಪು’ ಎಂಬ ರದೀಫ್ ತುಂಬಾ ಸಶಕ್ತವಾಗಿ ಆತ್ಮಾವಲೋಕನ ಮಾಡಿಕೊಳ್ಳಲು ಹಚ್ಚುವಂತಿದೆ. “ಸಾಲಿ ಆಡಿದ ಮಾತಿಗೇನುಂಟು? ಒಂದೇ ಹುಟ್ಟು, ಅರ್ಥ ಮತ್ತು ಸಾವು ಸುಮ್ಮನಿದ್ದೇ ಸಾವಿರ ಮಾತಾಡುತ‌ ನೂರು ಭಾವಗಳ ಮೆರೆಸಿಹುದು ಮೌನ“ ಎನ್ನುವ ಮಕ್ತಾ ಮೌನದೊಂದಿಗೆ ಮಾತಿಗಿಳಿಯುತ್ತದೆ.‌ ಮಾತು ಬದುಕಿನಲ್ಲಿರುವ ವೈರುಧ್ಯಗಳನ್ನು ತೋರಿಸಿದರೆ, ಮೌನ ವೈರುಧ್ಯಗಳನ್ನು ಪರಿಚಯಿಸುತ್ತದೆ. ಅಂತೆಯೇ ಬಿಶರ್ ಇಬ್ನ್ ಹರೀತ್ ರವರು ಹೇಳಿದ ಮಾತೊಂದನ್ನು ಇಲ್ಲಿ ಉಲ್ಲೇಖಿಸಬಹುದು. “ನಿಮಗೆ ಮಾತಾಡುವುದು ಖುಷಿಯಾಗುತ್ತದೆಂದು ಅನಿಸಿದಾಗ ಮೌನವಾಗಿರಿ! ಮೌನ ಖುಷಿ ಕೊಡುವಾಗ ಮಾತಾಡಿ!” ಸಿರಿ ಸಂಪತ್ತು ಇರುವಾಗಲೂ ಬಡತನವನ್ನು ಅನುಭವಿಸುವುದು, ಅಧಿಕಾರವಿದ್ದಾಗಲೂ ವಿನೀತ ಭಾವ ಹೊಂದಿರುವಂತಹ ಸೂಫಿ ನೆಲೆಯ ಚಿಂತನೆಯನ್ನು ಪ್ರತಿಧ್ವನಿಸುತ್ತದೆ!!        ಪ್ರೀತಿ, ಪ್ರೇಮ, ಪ್ರಣಯ, ಮಧುಶಾಲೆ… ಮುಂತಾದ ಮೂಲ ಗುಣಗಳೊಂದಿಗೆ ಕಾಲಕ್ಕನುಗುಣವಾಗಿ ತನ್ನನ್ನು ತೆರೆದುಕೊಳ್ಳುತ್ತಿರುವ ಗಜಲ್ ನ ಹೆಜ್ಜೆ ಗುರುತುಗಳನ್ನು ಚಿದಾನಂದ ಸಾಲಿಯವರ ಗಜಲ್ ಗಳಲ್ಲಿ ಗುರುತಿಸಬಹುದು. ಇಂತಹ ನೂರಾರು ಗಜಲ್ ಗಳು ಇವರಿಂದ ಹೂರಬರಲಿ, ಅಕಾಡೆಮಿಕ ಕಾರ್ಯಾಗಾರಗಳು ನಡೆಯುವಂತಾಗಲಿ ; ಅವುಗಳು ಪ್ರಕಟವಾಗಿ ಓದುಗರ ಜ್ಞಾನದ ದಾಹವನ್ನು ತಣಿಸಲಿ ಎಂದು ಶುಭಕೋರುತ್ತನೆ. “ಪ್ರೇಮದಲಿ ಸ್ವಲ್ಪ ಎಚ್ಚರಿಕೆಯಿಂದಿರುವುದು ಒಳಿತು ಇಲ್ಲವಾದರೆ ಬಳಿಕ ಪಶ್ಚಾತ್ತಾಪ ಪಡಬೇಕಾದಿತು“                      -ಬುಲ್ಲೇ ಶಾ ಮುಂದಿನ ವಾರ.. ಅಂದರೆ ಗುರುವಾರ, ಮತ್ತೊಬ್ಬ ಗಜಲ್ ಮಾಂತ್ರಿಕರೊಂದಿಗೆ ನಿಮ್ಮ ಮುಂದೆ ಹಾಜರಾಗುವೆ. ಅಲ್ಲಿಯವರೆಗೂ ಧನ್ಯವಾದಗಳು… ಡಾ. ಮಲ್ಲಿನಾಥ ಎಸ್. ತಳವಾರ ರಾವೂರ ಎಂಬುದು ಪುಟ್ಟ ಊರು. ಚಿತ್ತಾವಲಿ ಶಾ ಎಂಬ ಸೂಫಿಯ ದರ್ಗಾ ಒಳಗೊಂಡ ಚಿತ್ತಾಪುರ ಎಂಬ ತಾಲೂಕಿನ ತೆಕ್ಕೆಯೊಳಗಿದೆ. ಕಲಬುರಗಿಯಲ್ಲಿ ಶತಮಾನ ಕಂಡ ನೂತನ ಪದವಿ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿರುವ ಡಾ.ಮಲ್ಲಿನಾಥ ತಳವಾರ ಅವರು ಪುಟ್ಟ ರಾವೂರಿನಿಂದ ರಾಜಧಾನಿವರೆಗೆ ಗುರುತಿಸಿಕೊಂಡಿದ್ದು “ಗಾಲಿಬ್” ನಿಂದ. ಕವಿತೆ, ಕಥೆ, ವಿಮರ್ಶೆ, ಸಂಶೋಧನೆ, ಗಜಲ್ ಸೇರಿ ಒಂದು ಡಜನ್ ಗೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ. ಅವುಗಳಲ್ಲಿ ಜ್ಞಾನಪೀಠಿ ಡಾ.ಶಿವರಾಮ ಕಾರಂತರ ಸ್ತ್ರೀ ಪ್ರಪಂಚ ಕುರಿತು ಮಹಾಪ್ರಬಂಧ, ‘ಮುತ್ತಿನ ಸಂಕೋಲೆ’ ಎಂಬ ಸ್ತ್ರೀ ಸಂವೇದನೆಯ ಕಥೆಗಳು, ‘ಪ್ರೀತಿಯಿಲ್ಲದೆ ಬದುಕಿದವರ್ಯಾರು’ ಎಂಬ ಕವನ ಸಂಕಲನ, ‘ಗಾಲಿಬ್ ಸ್ಮೃತಿ’, ‘ಮಲ್ಲಿಗೆ ಸಿಂಚನ’ ದಂತಹ ಗಜಲ್ ಸಂಕಲನಗಳು ಪ್ರಮುಖವಾಗಿವೆ.’ರತ್ನರಾಯಮಲ್ಲ’ ಎಂಬ ಹೆಸರಿನಿಂದ ಚಿರಪರಿಚಿತರಾಗಿ ಬರೆಯುತ್ತಿದ್ದಾರೆ.’ರತ್ನ’ಮ್ಮ ತಾಯಿ ಹೆಸರಾದರೆ, ತಂದೆಯ ಹೆಸರು ಶಿವ’ರಾಯ’ ಮತ್ತು ಮಲ್ಲಿನಾಥ ‘ ಮಲ್ಲ’ ಆಗಿಸಿಕೊಂಡಿದ್ದಾರೆ. ‘ಮಲ್ಲಿ’ ಇವರ ತಖಲ್ಲುಸನಾಮ.ಅವಮಾನದಿಂದ, ದುಃಖದಿಂದ ಪ್ರೀತಿಯಿಂದ ಕಣ್ತುಂಬಿಕೊಂಡೇ ಬದುಕನ್ನು ಕಟ್ಟಿಕೊಂಡ ಡಾ.ತಳವಾರ ಅವರಲ್ಲಿ, ಕನಸುಗಳ ಹೊರತು ಮತ್ತೇನೂ ಇಲ್ಲ. ಎಂದಿಗೂ ಮಧುಶಾಲೆ ಕಂಡಿಲ್ಲ.‌ಆದರೆ ಗಜಲ್ ಗಳಲ್ಲಿ ಮಧುಶಾಲೆ ಅರಸುತ್ತ ಹೊರಟಿದ್ದಾರೆ..ಎಲ್ಲಿ ನಿಲ್ಲುತ್ತಾರೋ

Read Post »

ಅಂಕಣ ಸಂಗಾತಿ, ಗಜಲ್ ಲೋಕ

ಗಜಲ್ ಎಂಬುದು ಆತ್ಮದ ಪಿಸುಮಾತು. ಹೃದಯದ ಮಾತುಗಳು ಜೀವಕಾರುಣ್ಯದಿಂದ ಸ್ನಿಗ್ಧವಾಗಿರುತ್ತವೆ. ಸಕಲ ಜೀವಿಗಳೊಂದಿಗಿನ ಪ್ರೇಮಭಾವದಿಂದ ಮಾಧುರ್ಯವನ್ನು ಪಡೆಯುತ್ತವೆ

Read Post »

ಅಂಕಣ ಸಂಗಾತಿ, ಗಜಲ್ ಲೋಕ

“ಬಕ್ಕಳರ ಗಝಲ್ ಗಳು” ಎಂಬ ಸಂಕಲನ ಪ್ರಕಟಿಸುವುದಕ್ಕಿಂತಲೂ ಮುಂಚೆ ‘ಮಣ್ಣ ನೆನಪಿನ ಮೇಲೆ’ ಎಂಬ ಕವನ ಸಂಕಲನದಲ್ಲಿಯೂ ಬಕ್ಕಳ ಅವರು ತಮ್ಮ ಕೆಲವು ಗಜಲ್ ಗಳನ್ನು ಪ್ರಕಟಿಸಿದ್ದಾರೆ.

Read Post »

You cannot copy content of this page

Scroll to Top