ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಕಾವ್ಯಯಾನ

ಕನಸಿನೂರಿನ ಅಪ್ಪ ಐಶ್ವರ್ಯ ಎಲ್.. ಬೆಳಕ ಹೊತ್ತು ಬಂದ ಸೂರ್ಯನೂ ಹೋಗುವ ಹೊತ್ತಾಯಿತು ಹೊರಗೆ ಹೋದ ಅಪ್ಪನು ಬಂದಾನೂ, ಕೈ ತುಂಬ ಬೊಂಬೆ ತಿಂಡಿಗಳ ತಂದಾನೂ ಅವರಿವರ ಮನೆಯ ಅಪ್ಪಂದಿರಂತೆಯೇ ನನ್ನಪ್ಪನೆಂದು ಕಣ್ಣಳತೆಗೆ ಎಟುಕುವವರೆಗೂ ಮನೆಯ ಮುಂದಿನ ಕಂಬವನೇರಿ ಕಾದು ಕುಳಿತೆ, ಬೆಳೆದು ಬುದ್ದಿಬರುವವರೆಗೆ…… ಏರಿದ ಕಂಬಕ್ಕಾದರೂ ಅರಿವಾಗಿರಬಹುದು ಅಪ್ಪನೆಂಬ ಕನಸು ಬೇರೂರಿದ್ದು ನನ್ನೊಳಗೆ, ಅರಿವಾಗಲೇ ಇಲ್ಲ ದೇವರಿಗೆ, ಅಪ್ಪನ ಕರೆದೊಯ್ದೆಬಿಟ್ಟಿದ್ದನು ನಂಗೆ ಬುದ್ದಿಬರುವುದರೊಳಗೆ………. ಜಡಕು ಕೂದಲಿಗೆ ಜುಟ್ಟುಕಟ್ಟಿ, ಕಪ್ಪು ಕಾಡಿಗೆಯಲಿ ಕಾಸಗಲದ ಬೊಟ್ಟಿಟ್ಟು ನನ್ನಿಷ್ಟದ ಫ್ರಾಕನ್ನೆ ತೊಟ್ಟು, ಕುಣಿವಾಗ ಕೆನ್ನೆಯ ತುಂಬೆಲ್ಲಾ ಮುತ್ತಿಟ್ಟು ಅಮ್ಮನಿಗೂ ಕದ್ದು ಮುಚ್ಚಿ ಚಾಕಲೇಟ್ ಕೊಟ್ಟು, ಭುಜದ ಮೇಲೆ ನನ್ನ ಹೊತ್ತು ಎಲ್ಲರಂತೆ ನನ್ನನ್ನೂ ಶಾಲೆಗೆ ಹೊತ್ತೊಯ್ಯುವುದು ಬಾಕಿ ಇತ್ತು ಅಪ್ಪನಿಗೆ ಅದ್ಯಾವ ಕೆಲಸ ಬಾಕಿ ಇತ್ತೊ ನಾಕಾಣೆ ಅಪ್ಪನ ಕಾಯುವಿಕೆಯಲಿ ಏರಿದ ಕಂಬ, ಇಳಿದ ನನ್ನ ಕಣ್ಣೀರಿನಲಿ ಹಸಿರಾಯ್ತು ಇಂದಲ್ಲ ನಾಳೆ ಅಪ್ಪ ಬಂದೇ ಬರುವನೆಂಬ ನಂಬಿಕೆ ಮಾತ್ರ ಹುಸಿಯಾಯ್ತು…… ಪುಟ್ಟ ಹೆಜ್ಜೆ ಇಟ್ಟಾಗ ಅಂಗಾಲಿಗೆ ಮುತ್ತಿಕ್ಕಿ, ಬೊಗಸೆಯಲಿ ಪಾದ ಹಿಡಿದು, ಅಮ್ಮ ಗದರಿದಾಗ ಅಮ್ಮನಿಗೇನೆ ಗದರಿಸಿ ನಿನ್ನ ಎದೆಗಪ್ಪಿ ನಾ ಮಲಗಿದಾಗ ಸುರಿದ ಜೊಲ್ಲು ಒರೆಸಿ ಉಪ್ಪು ಮೂಟೆಯ ಮಾಡಿ, ಊರೆಲ್ಲ ತಿರುಗಿಸಿ, ಮುದ್ದಿಸಿ ಕೈಬೆರಳ ಹಿಡಿದು ನಡೆಸುವುದರಿಂದ ಹಿಡಿದು ಕಾಲಿಗೆ ಕಾಲುಂಗುರ ಹಾಕಿಸಿಕೊಳ್ಳುವವರೆಗೂ ನೀ ಜೊತೆಗಿರಬೇಕಿತ್ತೆಂಬ ಆಸೆ ಇಂದಿಗೂ ಬದುಕಿದೆ ಆದರೇನೂ ಮಾಡುವುದು ಬಯಕೆ ಇಡೆರಿಸಲು ನೀನೆ ಬದುಕಿಲ್ಲ ……… ನೀ ಪ್ರಪಂಚಕ್ಕೆ ತಂದ ಪುಟ್ಟ ಜೀವವೇ ನಿನಗೆ ಪ್ರಪಂಚವೆಂದು ಪ್ರತಿ ಹೆಜ್ಜೆಯಲು ಮಗಳ ಮುಂದಿನ ಭವಿಷ್ಯಕ್ಕೆಂದು ರಾಣಿಯಂತೆ ಬೆಳೆದ ಮಗಳಿಗೆ, ರಾಜಕುಮಾರನ ತಂದು ಮದುವೆ ಮಾಡುವ ಕನಸ ಕಂಡು, ಮಗಳು, ಅಳಿಯ ಮೊಮ್ಮಕ್ಕಳೆಂದು ಅಜ್ಜನಾಗುವವರೆಗೂ ನೀನಿರಬೇಕಿತ್ತು ಅಪ್ಪ…… ನಾನೂ ದೊಡ್ಡವಳಾಗಿದ್ದೇನೆ, ನಿನ್ನಷ್ಟೇ ಎತ್ತರಕ್ಕೆ ಬೆಳೆದು ನೀನಿರಬೇಕಿತ್ತೆಂಬ ಬಯಕೆಯು ನನ್ನಷ್ಟೆತ್ತರಕೆ ಬೆಳೆದಿದೆ ನನ್ನೊಟ್ಟಿಗೆ ಕಾದು ಆದರೂ….. ಅಪ್ಪ ನೀನಿರಬೇಕಿತ್ತು ನನ್ನೊಟ್ಟಿಗೆ…… ಅಜ್ಜನಾಗಿ ನನ್ನಂಥವಳನ್ನೆ ಹೆಗಲ ಮೇಲೆ ಹೊರುವವರೆಗೆ….. **********

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಜರೂರು ಬಂದೊದಗಿದೆ ಗೌರಿ.ಚಂದ್ರಕೇಸರಿ ದೇವ ಮಾನವರೆಲ್ಲ ಏನಾದರು? ತಪದಲ್ಲಿರುವರಾ ಇಲ್ಲಾ ಮೌನ ವ್ರತದಲ್ಲಿರುವರಾ? ಇಲ್ಲಾ ನಿದ್ರೆಯಲ್ಲಿ ಕಳೆದು ಹೋದರಾ? ಸೂರ್ಯ ಚಂದ್ರರುದಿಸುವುದು ತಮ್ಮಿಂದ ಎಂದವರು ಸ್ಪರ್ಷ ಮಾತ್ರದಿಂದಲೇ ಕಾಯಿಲೆಗಳ ಮಾಯ ಮಾಡುವೆ ಎಂದವರು ಅಂಗೈ ನೋಡಿ ತಾಳೆ ಹಾಕುವವರು ಪೂಜೆಗೈದು ಪಾಪವ ತೊಳೆಯುವವರು ಏನಾದರು? ಕೂಗು ಕೇಳುತ್ತಿಲ್ಲವೆ ಹಾಹಾಕಾರ ಕಾಣುತ್ತಿಲ್ಲವೆ? ಭೂ ಮಂಡಲವನ್ನೇ ಆವರಿಸಿದೆ ಅನಿಷ್ಠ ಎಲ್ಲೆಲ್ಲೂ ಹಿಡಿ ಅನ್ನಕ್ಕಾಗಿ ಚಾಚಿವೆ ಕೈಗಳು ಕುಣಿಕೆ ಹಿಡಿದು ಕಾದಿದೆ ಸಾವು ಬನ್ನಿ ನಿಮ್ಮ ಜರೂರು ಈಗ ಬಂದೊದಗಿದೆ ಹೊತ್ತಿರುವ ಬೆಂಕಿಗೆ ನಿಮ್ಮ ಪ್ರಭಾವಳಿಯ ತಂಪನೆರೆಯಿರಿ ವಿಶ್ವದ ವಿಷವನೆಲ್ಲ ಹೀರಿ ಬಿಡಲಿ ನಿಮ್ಮ ಮಂತ್ರ ದಂಡ ******

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಒಂದು ಕವಿತೆ ಅಮೃತಾ ಮೆಹಂದಳೆ ಈಗ ನಿನ್ನ ವಿರಾಮ ಸಮಯವಲ್ಲವೇ? ಬಿಡುವಿನಲ್ಲಿ ನೆನೆಯುತ್ತಿರುವೆಯಾ ನನ್ನ ನೀನು? ಲಟಿಗೆ ಮುರಿದ ಬೆರಳು ಸ್ಪರ್ಶಕ್ಕಾಗಿ ಹಂಬಲಿಸಿರಬಹುದೇನು? ಚಾಚಿದ ಕಾಲು ಬಯಸಿತಾ ಸಹನಡಿಗೆಯನ್ನು? ಏನೋ ಹುಡುಕುವ ಕ್ಯಾಮರಾ ಕಣ್ಣು ನನ್ನದೇ ಚಿತ್ರ ಸೆರೆಹಿಡಿಯುತ್ತಿದೆಯೇನು? ತುಟಿಸೋಕಿ ಸುಟ್ಟ ಕಹಿಕಾಫಿ ನಿನ್ನ ಪಾಲಿನ ನಾನಲ್ಲವೇನು? ನನ್ನ ಪ್ರೀತಿಯ ಹಾಡು ನಿನ್ನ ಪಾಡಾಗಿ ಕಿವಿಯ ಸೋಕುತ್ತಿರಬಹುದೇನು? ಇಲ್ಲಿ ಬೀಸಿದ ಗಾಳಿ ಸುತ್ತಿ ಸುಳಿದು ನಿನ್ನಾತ್ಮವ ಪುಳಕಿಸಬಾರದಿತ್ತೇನು? ನನ್ನ ಕಣ್ಣು ಕತ್ತಲು ಕಪ್ಪುಪಟ್ಟಿ ಕಟ್ಟದೆಯೇ.. ಕಿವಿ ಮುಚ್ಚಿಹೋಗಿದೆ ಧ್ವನಿ ತಲುಪಲಾಗದೆಯೇ.. ನಾಲಿಗೆ ಸೀಳಿದೆ ಮತ್ತೆಂದೂ ಹೊಲಿಯಲಾಗದೆಯೇ.. ಅವಯವಗಳೇ ಸುಟ್ಟುಹೋಗಿದೆ ಭಾವ ಚಿಗುರಲಾಗದೆಯೇ.. ನಾನೇ ಹೂತುಹೋಗಿರುವೆ ಅಸ್ತಿತ್ವವಿಲ್ಲದೆಯೇ.. ಮಾತೇ ಇಲ್ಲದ ಮೌನದಾಯುಧಗಳು ಸೋತು ಎರಡೂ ಕಡೆ.. ಮನಸು ಜಾರಿ ಹೃದಯದೆಡೆ..ಕದನವಿರಾಮ ಜಾರಿಯಾಗಬಾರದೇ? **********

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ನದಿಯಾಗು. ಶಾಲಿನಿ ಆರ್. ಶಾಲಿನಿ ಆರ್. ಆಸೆಗಳಿವೆ ನೂರಾರು ನೂರಾರು ಬಯಕೆ, ಎತ್ತಲಿಂದೆತ್ತಣಕೂ ನಿನ್ನ ಸೇರುವ ಹರಕೆ, ಹಸಿರುಲ್ಲಿನ ನಡುವೆ ಇಬ್ಬನಿ ಬನಿಯೊಳಗೆ ನಾನಿದಿದ್ದರೆ, ನಿನ್ನ ಪಾದ ಪ್ರಾತಃ ಸ್ಪರ್ಶಕೆ ನಾ ಸದಾ ಕಚಗುಳಿಯಿಡುತಿದ್ದೆ, ನಿನ್ನ ನೋಡುವ ಕನ್ನಡಿ ನಾನಾಗಿರೆ, ನಿನ್ನಂತರಂಗನರಿವ ಬೆರಗು ನಾನಾಗಿ ಬಳಿಯಿರುತಿದ್ದೆ, ನೀ ನಡೆವ ಹಾದಿಗೆ ಮರವು ನಾನಾದೊಡೆ, ನಿನ್ನ ದಣಿವಿಗೆ ನಾ ನೆರಳಾಗ ಬಯಸಿದ್ದೆ, ನೀ ನೋಡುವ ನೋಟದ ಕಣ್ಣು ನಾನಗಿದ್ದರೆ, ಭರವಸೆಯ ಬೆಳದಿಂಗಳ ಕಣ್ಗಿರಿಸಿ ತಣಿಯುತಿದ್ದೆ, ನಿನ್ನ ನಿಜ ಪ್ರೀತಿ ನಾನಾಗಿ ಹೃದಯಮಿಡಿವಂತಿದಿದ್ದರೆ, ಪ್ರತಿಬಡಿತದ ದನಿಗೆ ನಾ ಮೈ ಮರೆಯುತಿದ್ದೆ, ಆಸೆಗಳ ದಟ್ಟ ಕಾನನದಲಿ ಹೀಗೆ ನಡೆದು ಹೋಗಬೇಕು, ಘನಿಕರಿಸಿದೆಲ್ಲ ಅಮಲು ಭಾವಗಳಲಿ ಸುರಿದು ನದಿಯಾಗಬೇಕು. ********

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಗಝಲ್ ಬಸವರಾಜ ಕಾಸೆ ಹೊತ್ತಲ್ಲದ ಹೊತ್ತಲ್ಲಿ ಪದೇ ಪದೇ ಗುನುಗುನಿಸುವ ಹಾಡೊಂದು ನೀನು/ ತನ್ನಷ್ಟಕ್ಕೇ ತಾ ಪುಟಿದೇಳುವ ಉತ್ಸಾಹಕ್ಕೆ ಗೊತ್ತಿರದ ಸ್ಪೂರ್ತಿಯೊಂದು ನೀನು// ಆ ರೆಪ್ಪೆ ಮಿಟುಕಿದಷ್ಟು ಬಾರಿ ಕ್ಷಣಕ್ಕೊಮ್ಮೆ ಕಾಣೆಯಾಗಿ ವಾಪಸ್ಸಾಗುವ ನಾನು/ ಮೆದು ಕುಣಿತದ ಕಣ್ಣ ಹುಬ್ಬು ಹುಟ್ಟು ಹಾಕುವ ಅನುಭವವೊಂದು ನೀನು// ಸರಸರನೆ ಸೆಳೆದೆಳೆದು ಸಾಗರ ಒಳಗೆಳೆದುಕೊಂಡಂತೆ ಸಂಜೆ ಸೂರ್ಯನನ್ನು/ ಮರಳು ದಡದ ಮೇಲೆ ಮೆಲ್ಲಗೆ ಮೆಲುಕುವ ಮಲ್ಲಿಗೆ ದಂಡೆಯೊಂದು ನೀನು// ನೀ ಬರುವ ಸಮಯಕ್ಕೆ ಕಾಯುವ ಭಾವಗಳು ಹರಿಯುವವು ಮಳೆಗಾಲದ ಹೊಳೆಯಾಗಿ/ ಹೋಗಿ ಮೈಯೊಡ್ಡಿ ನೆನೆಯುವ ಗುಂಗಿಗೆ ರಂಗೇರಿಸುವ ಮಳೆಬಿಲ್ಲೊಂದು ನೀನು// ಕಂಡು ಹಿಡಿಯಬೇಕು ಹೊಸ ಸೂತ್ರ ನೀ ಕೊಟ್ಟ ಕನಸುಗಳ ಕಚಗುಳಿ ಲೆಕ್ಕ ಹಾಕಲು/ ಆ ಮೂಗಿನ ನತ್ತು ಪ್ರತಿ ರಾತ್ರಿಗಳ ಮತ್ತು ಜೀವ ತಳೆಯುವ ಜಾಗರಣೆಯೊಂದು ನೀನು// ಮಟಮಟ ಮಧ್ಯಾಹ್ನ ಕಪ್ಪು ಬಿಳಿ ಮೋಡಗಳ ಪಯಣ ಧರೆಗಿಳಿಯಲು ಅನುರಾಗ/ ಕಳೆದೋಗುವ ಮುನ್ನ ವ್ಯರ್ಥವಾಗಿ ಚಳಿಗಾಲ ಹಿಡಿದಪ್ಪಿದ ಎಳೆಬಿಸಿಲೊಂದು ನೀನು// ಇಲ್ಲದೊಂದು ಕವಿತೆಯದು ಕಾಡುವಂತಹ ಒನಪು ಹೊದ್ದುಕೊಂಡು ಬಿಸುಪು/ ಸುಮ್ಮಸುಮ್ಮ ನಗುವ ಸದ್ದಿರದ ಸಂಗತಿಗಳಿಗೆ ಸುದ್ದಿಯಾಗುವ ನೆಪವೊಂದು ನೀನು// ********

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ನನಗಷ್ಟೆ ಗೊತ್ತು! ಲೋಕೇಶ್ ಅಷ್ಟು ಸುಲಭವಲ್ಲ ನಿನ್ನ ಉಳಿಸಿಕೊಳ್ಳುವುದು ಅಷ್ಟು ಸಲೀಸು ಅಲ್ಲ ನಿನ್ನ ಕಳೆದುಕೊಳ್ಳುವುದು ನೀನೆಂದು ಉನ್ಮಾದ ರುಚಿಗೆ ತಾಕೀದೊಡನೇ ನೀ ಕರೆದೊಯ್ಯುವ ಜಗತ್ತು ನನಗಷ್ಟೇ ಗೊತ್ತು! ನೀನೆಂದು ಭಾವನ್ಮೊದಾ ಮನಕ್ಕೆ ನೆನಪದೊಡನೇ ನೀ ಆವರಿಸಿಕೊಳ್ಳುವ ನಿಯತ್ತು ನನಗಷ್ಟೇ ಗೊತ್ತು! ನೀನೆಂದು ಸವಿ ವಿನೋದ ಮಾತಿಗೆ ಜೊತೆಯಾದೊಡನೇ ನೀ ಆಪ್ತವಾಗುವ ಅವಲತ್ತು ನನಗಷ್ಟೇ ಗೊತ್ತು! ನೀನೆಂದು ಉಸಿರ ನಾದ ಏರಿ ಇಳಿದೊಡನೇ ನನ್ನ ಎದೆಯಲ್ಲೆಳೆವ ಹೆಸರಂತು ನನಗಷ್ಟೇ ಗೊತ್ತು *************

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಯುಗಾದಿಯ ಆ ದಿನ ನೀ.ಶ್ರೀಶೈಲ ಹುಲ್ಲೂರು ಹೆದ್ದಾರಿಗಂಟೇ ಇರುವ ನನ್ನ ಮನೆ ಮಹಲಿನ ಮಹಡಿಯ ಬಾಲ್ಕನಿಯಲಿ ಬಂದು ನಿಂತೆ ಬಿಕೋ ಎನ್ನುವ ಸತ್ತುಬಿದ್ದ ರಸ್ತೆ! ಅಲ್ಲೊಂದು ಇಲ್ಲೊಂದು ಆಗೊಂದು ಈಗೊಂದು ಕಂಡು ಕಣ್ಮರೆಯಾಗುವ ಬೀದಿ ನಾಯಿ ಗಳು ತಮ್ಮ ವಿಸರ್ಜನಾ ವ್ಯೂಹ ದ ಕೊನೆಯ ಅಂಗದ ಅಂತಿಮ ಚಪಲವ ಲೈಟಿನ ಕಂಬಕೆ ಕಾಲೆತ್ತಿ ನೆಲಕೆ ತಳವೊತ್ತಿ ತೀರಿಸಿ ಕೊಂಡು ಕಂಬಿ ಕಿತ್ತವು! ಪ್ರಾಸಕ್ಕಂಟಿದ ‘ಕವಿತೆ ಸಾಲು’ ಇಂದು ನನ್ನನ್ನು ಪರದೇಶಿಯಾಗಿಸಿ ಕ್ರಾಸ್ ಕಂಟ್ರಿ ಓಟಕ್ಕಿಳಿದವು. ಸರಿ,ಬಂದಂತೆ ಬರೆದಿಡುವೆ ಬೈದವರಿಗೊಂದು ಸಲಾಂ ಹೇಳಿ! ಇಲ್ಲಿ ಹರಿದೋಡುತಿರುವ ಸಾಲುಗಳಂತೆಯೇ ಹರಕು-ಪರಕು ಚೆಲ್ಲಾಪಿಲ್ಲಿ ಮನದ ಕವಲು! ತುಂಬಿಕೊಂಡಿರುವುದೇನು ಒಳಗೆ? ಎಲ್ಲ ಖಾಲಿ ಖಾಲಿ ಮೋಡ ವಿಲ್ಲದ ಬಾನು ! ಸ್ವಾತಂತ್ರ್ಯ ದ ಹೋರಾಟದಲ್ಲಿ ನಾವಿರಲಿಲ್ಲ ,ಅವರೇಕೆ ಆ ಪರಿ ಹೋರಾಡಿದರು?ಎಂಬುದನು ಓದಿ ತಿಳಿದುದಕಿಂತ‌ ಇಂದಿನ ದಿಗ್ಬಂಧನವೇ ಎಮ್ಮೆ ಬಡಿವ ಬಾಲ್ಯ ನೆನಪಿಸಿತು! ಖಾರ ತಿಂದವನ ಒದ್ದಾಟ! ಒಳಗೊಳಗೇ ಗುದ್ದಾಟ! ನಂಮೀ ಸಂಕಟ ತೊಳಲಾಟಕೆ ಪ್ರಧಾನಿಯೇ ಕಾರಣ ಎಂದು ಫೂತ್ಕರಿಸಿದೆ! ಅಲ್ಲಿ ನಮ್ಮ ಓಣಿಯಾಚೆಯ ಆಸ್ಪತ್ರೆ ಪಕ್ಕ ಜನರ ಗೌಜು ಗದ್ದಲದ ನಡುವೆ ಬಾಯಿ ಬಿರಿವಂತೆ ಗಹಗಹಿಸಿ ನಗುತ್ತಿತ್ತು ಕರೋನಾ! *******

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಗಝಲ್ ಡಾ.ಗೋವಿಂದ ಹೆಗಡೆ ನಮ್ಮ ಪೇಲವ ನಗುವ ಕಂಡು ನಗುತಿರುವನೇ ದಿನಕರ ನಿಸ್ತೇಜ ಬದುಕನು ಕಂಡು ಮರುಗಿರುವನೇ ದಿನಕರ ವಸಂತ ಬಂದಿದ್ದಾನೆ ನಿಜ, ಎಂದಿನಂತಿಲ್ಲ ದಿನ ನಮ್ಮ ಗೋಳನು ಕಂಡು ಕರಗಿರುವನೇ ದಿನಕರ ಅವನೋ ಧಗಧಗಿಸಿದ್ದಾನೆ ಎಂದಿನ ಉಗ್ರತೆಯಲ್ಲಿ ಹೂಕರಗಳಿಂದ ಎತ್ತಿ ನಮ್ಮ ಮುದ್ದಿಸುವನೇ ದಿನಕರ ಅವನಿಂದಲೇ ನಳನಳಿಸಿದೆ ಇಳೆ, ಎಲ್ಲರ ಬಾಳು ಬಂದಿರುವ ಸಂಕಟಕೆ ಮದ್ದರೆಯುವನೇ ದಿನಕರ ಹೆಣ ಬಣಬೆ ಬಿದ್ದಿದೆ ಜಗದ ಬೀದಿಬೀದಿಗಳಲ್ಲಿ ಭರವಸೆಯ ಕಿರಣ ಸುರಿದು ಪೊರೆಯುವನೇ ದಿನಕರ ಕತ್ತಲು ಸರಿದು ಬೆಳಕು, ಲೋಕದ ನಡೆ ‘ಜಂಗಮ’ ಆಪದಗಳ ಕಳೆದು ನಲವ ಎರೆಯುವನೇ ದಿನಕರ ********

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ನಾವೆಲ್ಲರೂ ಮನೆಯಲ್ಲೇ ಇದ್ದೇವೆ ರೇಖಾಭಟ್ ನಾವೆಲ್ಲರೂ ಮನೆಯಲ್ಲೇ ಇದ್ದೇವೆ ಒಂದೊಂದು ಖುರ್ಚಿಗೆ ಒಬ್ಬೊಬ್ಬರಂತೆ ಅಡುಗೆಮನೆ ಈಗ ಕೇಂದ್ರ ಸ್ಥಾನ ಟಿ.ವಿ ಹಾಲ್ ನಮ್ಮ ಆಸ್ಥಾನ ಬೀದಿಗಂತೂ ಹೋಗೋದಿಲ್ಲ ಅದಂತೂ ಈಗ – ಖಬರಸ್ಥಾನ! ಮಾವನ ವಾಕಿಂಗ್ ಸ್ಟಿಕ್ ಗೋಡೆ ಮೂಲೆಯಲ್ಲೆ ನಿದ್ರೆಗೆ ಜಾರಿದೆ! ಅತ್ತೆಯ ಹೂವಿನ ಚೊಬ್ಬೆ ದೇವಸ್ಥಾನ ಮರೆತು ಬೊರಲು ಬಿದ್ದಿದೆ! ಪುಟ್ಟ ಪಿಂಕ್ ಸೈಕಲ್ ಮರದ ಬುಡದಲಿ ಒರಗಿ ನಿಂತು ಇಷ್ಟಿಷ್ಟೇ ಬಣ್ಣವ ಕಳೆದುಕೊಳ್ಳುತ್ತಿದೆ! ಕೊರೊನಾ ಬೂತದ ಚಿತ್ರ ಬಿಡಿಸಿ ಅದಕ್ಕೆ ಕ್ರಾಸ್ ಮಾರ್ಕ್ ಹಾಕಿ ಆಗಾಗ ಕಿಟಕಿಯಲ್ಲಿ ಹಣಕುವ ಮಗಳ ಕಣ್ಣೊಳಗಿನ ಬಣ್ಣವೂ ತುಸು ಕಡಿಮೆಯೇ ಆಗಿದೆ ಕಂಪ್ಯೂಟರೊಳಗೆ ಹೊಕ್ಕು ಇ ಪೇಪರ್ ಓದುತ್ತ ಆಗಾಗ ಕೊರಾನಾ ಅಂಕಿ ಅಂಶ ವರದಿ ಮಾಡುವ ಅವಳಪ್ಪನೋ ಬಂಧಿತ- ಕಾಲು ಸುಟ್ಟ ಬೆಕ್ಕು- ಆದರೂ ಹೊತ್ತು ಸರಿಯುತ್ತಿದೆ ಅದಕೆ ಕಾರಣ ಇಂಟರ್ ನೆಟ್ಟು!! ಒಮ್ಮೆ ಗ್ರೀನ್ ಟೀ ಮತ್ತೊಮ್ಮೆ ಕಷಾಯ ತುಸು ಹೊತ್ತಿಗೆ ಚಹಾ ಬಿಸಿಲೇರಲು ಮಜ್ಜಿಗೆ ಬೆಲ್ಲ ಈ ದಾಹ ಹೆಚ್ಚುತ್ತಿರುವುದು ಬಿಸಿಲಿಗೊ, ಆತಂಕಕ್ಕೊ ಅರ್ಥವಾಗುತ್ತಿಲ್ಲ ಮನೆಯೊಳಗಿನ ಬಿಸಿಯ ಹೊರಹಾಕಲು ಫ್ಯಾನ್ ಇಪ್ಪತ್ತ್ನಾಲ್ಕು ಗಂಟೆ ತಿರುಗುತ್ತಿದೆ ಒಳಗುದಿಯ ಹೊರಹಾಕಲಾರದ ನಾನು ಯಾವ ಕವಿತೆಯನ್ನು ಪೂರ್ತಿ ಬರೆಯಲಾಗದೇ ಪೂರ್ಣವಿರಾಮ ಇಡುತ್ತಿದ್ದೇನೆ! *******************

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಗಝಲ್ ಡಾ.ಗೋವಿಂದ ಹೆಗಡೆ ನೆರಳ ಕಂಡೂ ಬೆಚ್ಚ ಬೇಕಾಗಿದೆ ಜೀವ ತಲ್ಲಣಿಸಿದೆ ಮುಂದೇನು ಕಾದಿದೆ ತಿಳಿಯದೆ ಜೀವ ತಲ್ಲಣಿಸಿದೆ ಗೋಡೆ ನಾಲ್ಕರ ನಡುವೆ ಬಂದಿಯಾಗಿದೆ ಬದುಕು ಹೊರ ದಾರಿಗಳೇ ಕಾಣದೆ ಜೀವ ತಲ್ಲಣಿಸಿದೆ ಹತ್ತಾರು ತಾಸಿನ ಬಂದ್ ಈಗ ವಾರಗಳ ಲೆಕ್ಕ ಭಯ ಕತ್ತು ಹಿಸುಕುತಿದೆ ಜೀವ ತಲ್ಲಣಿಸಿದೆ ಮೂಗು ಕಣ್ಣುಗಳನ್ನೇ ಮುಟ್ಟುವಂತಿಲ್ಲ ಈಗ ಕೈ ತೊಳೆದಿದ್ದನ್ನೇ ತೊಳೆದಿದೆ ಜೀವ ತಲ್ಲಣಿಸಿದೆ ಕಾಣದ ಕ್ರಿಮಿಯ ದಾಳಿಗೆ ಆಹುತಿಯಾದವರೆಷ್ಟು ಕೊನೆಯೆಲ್ಲಿ ಯಾವಾಗ ಅರಿಯದೆ ಜೀವ ತಲ್ಲಣಿಸಿದೆ ಎಲ್ಲಿಂದಲೂ ಎಷ್ಟು ಹೊತ್ತಿಗೂ ಎರಗೀತು ವಿಪತ್ತು ರಕ್ಷಣೆಯ ಉಪಾಯಗಳಿಲ್ಲದೆ ಜೀವ ತಲ್ಲಣಿಸಿದೆ ಒಬ್ಬರಿಗೊಬ್ಬರ ಸಾಂಗತ್ಯವಿರದೇ ಬದುಕು ಹೇಗೆ ‘ಜಂಗಮ’ ವಿಧಿಯ ದೂರಿದೆ ಜೀವ ತಲ್ಲಣಿಸಿದೆ **************************

ಕಾವ್ಯಯಾನ Read Post »

You cannot copy content of this page

Scroll to Top