ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ

ಶಿಶುಗೀತೆ

ತಲ ಷಟ್ಪದಿಯಲ್ಲಿ ಶಿಶುಗೀತೆ ತೇಜಾವತಿ ಹೆಚ್. ಡಿ ಗೊಲ್ಲನೊಬ್ಬತೋಟದೊಳಗೆಕುರಿಯ ಮಂದೆ ಹಾಕಿದ |ಭಾರ ಹೊರಲುಕತ್ತೆ ಹಿಂಡುಎತ್ತು ಕುದುರೆ ಸಾಕಿದ || ಬೇಟೆಗೆಂದುನಾಯಿ ತಂದುಚತುರ ಸುಂಕು ಕಲಿಸಿದ |ಎಲ್ಲ ಸೇರಿಕೂಡಿ ಬಾಳ್ವಪ್ರೇಮವನ್ನು ಬೆಳೆಸಿದ || ನಿತ್ಯ ತಾನುಬೇಗ ಎದ್ದುಕುರಿಯ ಕಾಯತೊಡಗಿದ|ಸಂಜೆಯೊಳಗೆಮರಳಿ ಬಂದುತನ್ನ ಗೂಡ ಸೇರಿದ || ಒಂದು ಇರುಳುಹೊಂಚು ಹಾಕಿತೋಳವೊಂದು ಬಂದಿತು|ರೊಪ್ಪದೊಳಗೆಇದ್ದ ಕುರಿಯಮರಿಯ ನೋಡಿ ನಲಿಯಿತು|| ಇಂದು ಎನಗೆಹೊಟ್ಟೆ ತುಂಬಾರುಚಿಯ ಬೇಟೆ ಎನ್ನುತ|ಓಡಿ ಬಂದುಮರಿಯ ಮೇಲೆಹಲ್ಲು ನೆಟ್ಟು ಎರಗಲು|| ನಿದ್ರಿಸಿದ್ದನಾಯಿ ತಾನುಒಂದೇ ಸಮನೆ ಬೊಗಳಲು|ಕತ್ತೆ ಕೂಡಎದ್ದು ನಿಂತುಕಾಲು ಕೊಡವಿ ಅರಚಿತು|| ಶಬ್ಧ ಕೇಳಿಗೊಲ್ಲ ತನ್ನಡೇರೆಯಿಂದ ಬಂದನು|ಸುತ್ತಮುತ್ತಹುಡುಕಿ ಒಂದುಭಾರೀ ಕೋಲು ತಂದನು|| ಬೀಸಿ ಒಮ್ಮೆಕಾಲು ತಲೆಗೆಸಿಟ್ಟಿನಿಂದ ಹೊಡೆಯಲು|ಕೋಲು ತಗುಲಿಮುರಿದು ಕಾಲುಕುಂಟು ತೋಳವಾಯಿತು|| ಬಂದ ದಾರಿಸುಂಕವಿಲ್ಲಎಂದು ಹೆದರಿ ತೋಳವು|ಬೆಪ್ಪು ಮೋರೆಹಾಕಿಕೊಂಡುತನ್ನ ದಾರಿ ಹಿಡಿಯಿತು || ಗಾಯಗೊಂಡಕುರಿಯ ಮರಿಯುಮರಳಿ ಮಡಿಲ ಸೇರಿತು |ಅಂದಿನಿಂದಗೊಲ್ಲ ಮುಂದೆಜಾಗರೂಕನಾದನು || *************

ಶಿಶುಗೀತೆ Read Post »

ಇತರೆ

ಮರಳಿಗೂಡಿಗೆ

ಲಹರಿ ಅನುಪಮಾ ರಾಘವೇಂದ್ರ                              “ಎಲ್ಲಿ ಹೋದರೂ ಹಿಂತಿರುಗಿ ಮನೆಗೆ ತಲುಪುವವರೆಗೆ ಮನಸ್ಸಿಗೆ ಸಮಾಧಾನವೇ ಇಲ್ಲ”  ಎಂಬ  ಭಾವ ಮೂಡಿದಾಗಲೇ  ‘ಜನನೀ ಜನ್ಮ ಭೂಮಿಶ್ಚ ಸ್ವರ್ಗಾದಪಿ ಗರೀಯಸಿ’ ಎಂಬ ಮಾತು ಎಷ್ಟು ಅರ್ಥಪೂರ್ಣ ಅನಿಸಿದ್ದು.       ತಿಂಗಳ ಹಿಂದೆ ಹಕ್ಕಿಯೊಂದು ನಮ್ಮ aಮೊಟ್ಟೆಗಳನ್ನಿಟ್ಟು,ಕಾವು ನೀಡಿ , ಮರಿ ಮಾಡಿತ್ತು. ಅಷ್ಟು ದಿನಗಳಲ್ಲಿಯೇ ಆ ಹಕ್ಕಿ ಸಂಸಾರ ಹಾಗೂ ನನ್ನ ಮಧ್ಯೆ ಅನಿರ್ವಚನೀಯ ಬಂಧವೊಂದು ಬೆಳೆದುಬಿಟ್ಟಿತ್ತು. ಆ ಮರಿಗಳ ರೆಕ್ಕೆ ಬಲಿಯುವವರೆಗೂ ತಾಯಿ ತಂದೆ ತಾವೇ ಆಹಾರ ತಂದು ಬಾಯಿಗೆ ಕೊಟ್ಟು ಸಾಕುತ್ತಿದ್ದವು. ಆ ಮರಿಗಳ ರೆಕ್ಕೆ ಬಲಿತಾಗ ಎಲ್ಲ ಹಕ್ಕಿಗಳೂ ಗೂಡು ಬಿಟ್ಟು ಹೋಗಿದ್ದವು. ನನಗೊಂದು ಸಂಶಯ……. ‘ಹಾರಿ ಹೋದ ಮೇಲೆ ಮರಿಗಳಿಗೂ ,ಅದರ ಹೆತ್ತವರಿಗೂ ಯಾವ ರೀತಿಯ ಸಂಬಂಧವಿರಬಹುದು…?’ ಆ ಮರಿಗಳು ತಮ್ಮ ಹೆತ್ತವರ ಬಗ್ಗೆ ಚಿಂತೆ ಮಾಡುತ್ತವೆಯೋ………ಇಲ್ಲವೋ…….. ಆ ದೇವರೇ ಬಲ್ಲ. ಈಗಿನ ಕಾಲದಲ್ಲಿ ತಿಳುವಳಿಕೆಯುಳ್ಳ ಮನುಷ್ಯರೇ ತಮ್ಮ ಹೆತ್ತವರ ಜವಾಬ್ದಾರಿ ವಹಿಸದೆ ನುಣುಚಿಕೊಳ್ಳುವುದು ಸರ್ವೇ ಸಾಮಾನ್ಯ. ಹೀಗಿರುವಾಗ ಪ್ರಾಣಿ ಪಕ್ಷಿಗಳಲ್ಲಿ ಯಾವ ಬಂಧ….? ಆ ಹಕ್ಕಿಗಳು ಹಾರಿ ಹೋದ ಮೇಲೆ ಏನೋ ಕಳಕೊಂಡ ಅನುಭವ ನನಗೆ. ಹೆರಿಗೆಗೆ ತವರಿಗೆ ಬಂದ ಮಗಳನ್ನು ಬಾಣಂತನ ಮಾಡಿ ಕಳುಹಿಸಿ ಕೊಟ್ಟ ಭಾವ….. ಮಗಳ ಹೆಜ್ಜೆಯ ಸಪ್ಪಳದ ತಾಳವಿಲ್ಲ…. ಮಗುವಿನ ಅಳುವಿನ ಇಂಪಾದ ರಾಗವಿಲ್ಲ. ಈಗ ಎಲ್ಲೆಲ್ಲೂ ಕರ್ಣ ಕಠೋರ ಮೌನರಾಗ ಮಾತ್ರ !       ಹಾಗೂ ಹೀಗೂ ಒಂದು ತಿಂಗಳು ಕಳೆದಿತ್ತು. ಅದೊಂದು ದಿನ ಹಟ್ಟಿಯ ಬಳಿ ಏನೋ ಕೆಲಸದಲ್ಲಿದ್ದೆ. ಹಕ್ಕಿಯೊಂದು ಏನನ್ನೋ ಕಚ್ಚಿಕೊಂಡು ಹಾರಿ ಹಟ್ಟಿಯೊಳಗೆ ಬರುವುದು ಕಂಡಿತು. ಹತ್ತಿರ ಹೋದರೆ ಅದು ಓಡಿ ಹೋಗಬಹುದೆಂದು ಅಂಜಿ ದೂರದಿಂದಲೇ ಗಮನಿಸಿದೆ. ಹೋ….. ಅದೇ ಹಕ್ಕಿ….. ಅಂದು ಇಲ್ಲೇ ವಾಸವಾಗಿತ್ತಲ್ಲಾ….. ನನ್ನ ಮನಸ್ಸೂ ರೆಕ್ಕೆ ಬಿಚ್ಚಿ ಹಾರತೊಡಗಿತು. ಗೂಡಿನ ಕಡೆಗೆ ಹೋದ ಹಕ್ಕಿ ಒಂದೆರಡು ಕ್ಷಣದಲ್ಲೇ ವಾಪಾಸು ಬಂದು ಕಿಚ ಪಿಚ ಹಾಡುತ್ತಾ ನನ್ನ ಸುತ್ತ ಮುತ್ತ ತಿರುಗಿ ಹೊರಗೆ ಹಾರಿತು. ಮರಳಿ ಗೂಡಿಗೆ ಬಂದೆ ಎಂಬ ಸೂಚನೆ ನೀಡಿತ್ತೋ…… ಅದರ ಗೂಡನ್ನು ಹಾಳುಗೆಡಹದೆ ಹಾಗೇ ಇಟ್ಟದ್ದಕ್ಕೆ ಧನ್ಯವಾದ ಹೇಳಿತ್ತೋ ……… ಹಕ್ಕಿಗಳ ಭಾಷೆಯನ್ನು ಅರ್ಥ ಮಾಡಿಕೊಳ್ಳುವಂತಿದ್ದರೆ ಎಷ್ಟು ಚೆನ್ನ ಅನಿಸಿತ್ತು.    ನಮ್ಮ ಮನೆಯ ಸುತ್ತ ಮುತ್ತ ಗಿಡ ಮರಗಳಲ್ಲಿ ಹತ್ತು ಹಲವು ಹಕ್ಕಿಗಳು ಬಂದು ಗೂಡು ಕಟ್ಟಿ, ಮೊಟ್ಟೆ ಇಟ್ಟು , ಮರಿ ಮಾಡಿ ಹಾರಿ ಹೋಗಿವೆ. ಯಾವ ಹಕ್ಕಿಗಳನ್ನೂ ನಾನು ಇಷ್ಟೊಂದು ಹಚ್ಚಿಕೊಂಡಿಲ್ಲ. ಆ ಹಕ್ಕಿಗಳು ಹಾರಿ ಹೋದ ಮೇಲೆ ಆ ಗೂಡು ಅಲ್ಲೇ ಅನಾಥವಾಗಿ ಬಿದ್ದಿರುವುದು ಸಾಮಾನ್ಯ. ಕೆಲವು ದಿನಗಳು  ಕಳೆದ ಮೇಲೆ ಆಕರ್ಷಕವಾಗಿರುವ ಆ ಗೂಡುಗಳನ್ನು  ನನ್ನ ಸಂಗ್ರಹಾಲಯದೊಳಗೆ ಸೇರಿಸಿಕೊಳ್ಳುವುದು ನನ್ನ ಅಭ್ಯಾಸ. ಆದರೆ ಯಾಕೋ ಏನೋ… ಹಟ್ಟಿಯಲ್ಲಿದ್ದ ಗೂಡು ಒಂದು ತಿಂಗಳಿನಿಂದ ಅನಾಥವಾಗಿದ್ದರೂ ನನ್ನ ಸಂಗ್ರಹಾಲಯಕ್ಕೆ ಸೇರಿಸಿಕೊಳ್ಳುವ ಯೋಚನೆ ಬರಲೇ ಇಲ್ಲ. ಹಟ್ಟಿಯ ಬಳಿಗೆ ಹೋದಾಗಲೆಲ್ಲ  ನನ್ನ ಕಣ್ಣು ಓಡುತ್ತಿದ್ದದ್ದು ಆ ಗೂಡಿನ ಕಡೆಗೆ.          ಮರುದಿನ ಮಾಮೂಲಿನಂತೆ ಹಟ್ಟಿಯ ಬಳಿಗೆ ಹೋದಾಗ ಹಕ್ಕಿ ಪುರ್ರನೆ ಹಾರಿ ಹೋಯಿತು. ಮೆಲ್ಲನೆ ಇಣುಕಿ ನೋಡಿದೆ. ಮೂರು ಮೊಟ್ಟೆ. ಹೋ…… ಇನ್ನೊಂದು ಬಾಣಂತನದ ತಯಾರಿ…… ಹಕ್ಕಿಗೆ ತಿನ್ನಲು ಕಾಳು ಹಾಕಬೇಕು, ನಾಯಿ , ಬೆಕ್ಕುಗಳ ಕಣ್ಣು ಬೀಳದಂತೆ ಜಾಗ್ರತೆ ವಹಿಸಬೇಕು, ಮೊಟ್ಟೆಯೊಡೆದು ಮರಿ ಹೊರ ಬರಲು  ಕಾಯಬೇಕು , ಅದು ಹಾರಲು ಕಲಿಯುವುದನ್ನು ಕದ್ದು ನೋಡಬೇಕು , ನನ್ನ ಮೊಬೈಲಲ್ಲಿ ಸೆರೆ ಹಿಡಿಯಬೇಕು. ಅಬ್ಬಾ…..ಎಷ್ಟೆಲ್ಲಾ ಕೆಲಸ . ಸಂಭ್ರಮವೋ ಸಂಭ್ರಮ. ************

ಮರಳಿಗೂಡಿಗೆ Read Post »

ಇತರೆ, ಶಿಕ್ಷಣ

ಶಿಕ್ಷಣ ಆನ್ ಲೈನ್!

ವಿನುತಾ ಹಂಚಿನಮನಿ ವಿಕಾಸ ವಾದ (Evolution theory) ದ ಪ್ರಕಾರ ಜೀವಿಗಳ ಅಳಿವು ಉಳಿವು ಯಾವುದರ ಮೇಲೆ ಅವಲಂಬಿಸಿದೆ? ಯಾರು ಬದಲಾಗುತ್ತಿರುವ ಪರಿಸರಕ್ಕೆ ಹೊಂದಾಣಿಕೆ ಮಾಡಿಕೊಂಡರೋ ಅವರು ಗೆದ್ದವರು. ಬಲವಾನರು, ಬುದ್ಧಿವಂತರು ಇದರಲ್ಲಿ ಸೋತರು. ಪ್ರಾಣಿ ಇರಲಿ ಮನುಷ್ಯನಿರಲಿ ಪರಿಸರಕ್ಕೆ, ಪರಿಸ್ಥಿತಿಗೆ ಹೊಂದಿಕೊಂಡು ಜೀವಿಸುವದನ್ನು ಕಲಿತರಷ್ಟೇ ಬದುಕಬಹುದು. ಅದೇ ಸೂಕ್ತರು ಬದುಕುವರು ಸಶಕ್ತರಲ್ಲ ಅನ್ನುವುದು (survival of the fittest). ಈ ಬದಲಾಗುವ ಕ್ರಮ ಪ್ರಕೃತಿಯಲ್ಲಿ ಅನಿವಾರ್ಯ. ಪರಿವರ್ತನೆ ಜಗದ ನಿಯಮ. ಇದು ಎಲ್ಲ ಕ್ರಾಂತಿಗಳಿಗೂ ಅನ್ವಯಿಸುವುದು. ಹಿಂದೆ ಎಷ್ಟೋ ಆಗಿವೆ, ಮುಂದೆ ಆಗಲಿವೆ. ಕೋವಿಡ್ ೧೯ ರ ದಾಳಿಯಿಂದ, ವಿಶ್ವ ಒಂದು ಅನಿವಾರ್ಯ ಬದಲಾವಣೆ ಮಾಡಲೇ ಕೊಳ್ಳಬೇಕಾದ ಪರಿಸ್ಥಿತಿಯ ಅಂಚಿಗೆ ಬಂದು ನಿಂತಿದೆ. ಎಲ್ಲ ಕ್ಷೇತ್ರಗಳಲ್ಲಿ ಈಗ ಬದಲಾವಣೆ ಅನಿವಾರ್ಯ. ಅದರಲ್ಲಿ ಒಂದು ಮಹತ್ವದ ಕ್ಷೇತ್ರ ಶಿಕ್ಷಣ. ಕೊರೊನಾ ರೋಗ ಹಬ್ಬುವ ವೇಗ ಮತ್ತು ವ್ಯಾಪ್ತಿಯನ್ನು ನೋಡಿದರೆ ಆನ್ ಲೈನ್ ಶಿಕ್ಷಣವೇ ಸೂಕ್ತ ಸಧ್ಯದ ಪರಿಸ್ಥಿತಿಯಲ್ಲಿ. ಸಾಂಕ್ರಾಮಿಕ ರೋಗದ ಉಡಿಯಲ್ಲಿ ಭವಿಷ್ಯದ ಆಸ್ತಿಯಾಗಿರುವ ಮಕ್ಕಳನ್ನು ಹಾಕುವ ರಿಸ್ಕ್ ತೆಗೆದುಕೊಳ್ಳಲಾಗದು. ಶಾಲೆಗಳನ್ನು ಪ್ರಾರಂಭಿಸುವದನ್ನು ಅನಿಶ್ಚಿತ ಅವಧಿಗೆ ತಳ್ಳಲಾಗಿದೆ. ಹೀಗಿರುವಾಗ ಎಲ್ಲರನ್ನೂ ಕಾಡುವ ಪ್ರಶ್ನೆ – ಮುಂದೇನು? ಆನ್ ಲೈನ್ ಶಿಕ್ಷಣಕ್ಕೆ ಅದರದೇ ಆದ ಸಾಧಕ ಭಾದಕಗಳಿವೆ (Bright side and dark side). ಏನೇ ಆದರೂ ಸಧ್ಯಕ್ಕಂತೂ ಕಂಪ್ಯೂಟರ್ ಮುಖಾಂತರ ವಿದ್ಯೆಗೆ ಮಣೆ ಹಾಕಬೇಕು. ಆದರೆ ಯಾವ ವಯಸ್ಸಿನವರಿಗೆ? ದೊಡ್ಡವರು ಈಗಾಗಲೇ ಕಂಪ್ಯೂಟರ್ ಗೆ ಸ್ವಲ್ಪ ಮಟ್ಟಿಗೆ ಪರಿಚಿತರು. ಆದರೆ ಪ್ರಾಥಮಿಕ ಶಿಕ್ಷಣ ಪಡೆಯಬೇಕಾದ ಎಳೆಯರು! ಅವರಿಗೂ ಕೂಡ ಪರಿಚಯಿಸಬೇಕಾದ ಸಂದರ್ಭ. ಇದರ ಪರಿಣಾಮ ಎಲ್ಲ ಪಾಲಕರಿಗೆ, ಶಿಕ್ಷಣ ಸಂಸ್ಥೆಗಳಿಗೆ, ಸರಕಾರಕ್ಕೆ ಅಲ್ಲದೆ ಭವಿಷ್ಯಕ್ಕೆ ಆಗಲಿದೆ. ಮೊದಲು ಅನುಕೂಲ ಅನಾನುಕೂಲಗಳನ್ನು ನೋಡೋಣ. *ಬಾಧಕಗಳು *:೧. ಮನೆಯಲ್ಲಿ ಕುಳಿತು ಶಿಕ್ಷಣ ಪಡೆಯಲು ಇಂಟರ್ನೆಟ್ ಸೌಲಭ್ಯ ಬೇಕು. ಬಡವರಿಗೆ ಅಷ್ಟೇ ಯಾಕೆ ಮಧ್ಯಮ ವರ್ಗದವರಿಗೆ ಇದು ಕಷ್ಟ ಸಾಧ್ಯ.೨. ಸಹಾಯ ಮಾಡಲು ತಂದೆ, ತಾಯಿ ಮತ್ತಾರೋ ಮಗುವಿನ ಒಟ್ಟಿಗೆ ಕೊಡಬೇಕು. ಅವರಿಗೂ ಶಿಕ್ಷಕರಿಗೆ ಇರಬೇಕಾದ ತಿಳುವಳಿಕೆ ಇರಬೇಕು. ಇದು ಎಷ್ಟರಮಟ್ಟಿಗೆ ಸಾಧ್ಯ. ಅಲ್ಲದೆ ದುಡಿಯಲು ಹೊರಗೆ ಹೋಗುವವರು ಇದಕ್ಕೆ ಒಪ್ಪಿಯಾರೇ?೩. ಪೋಷಕರು ಮನೆಯಿಂದ ಹೊರಗೆ ಹೋದರೆ ಚಿಕ್ಕ ಮಕ್ಕಳು ಮನೆಯಲ್ಲಿ ಒಂಟಿಯಾಗಿರಬೇಕಾದ ಸಮಸ್ಯೆ.೪. ಇದೆಲ್ಲಾ ಕೂಡಿ ಬಂದರೂ ಮಗುವಿನ ಮನಸ್ಸು ಮತ್ತು ಬುದ್ಧಿ ಹೊಸ ವಾತಾವರಣಕ್ಕೆ ಹೊಂದಿಕೊಳ್ಳಬೇಕು. ಶಾಲೆಯಲ್ಲಿ ಸ್ನೇಹಿತರೊಂದಿಗೆ ಗುರುವಿನೊಂದಿಗೆ ಇರುವ ತೆರೆದ ವಾತಾವರಣ ಇಲ್ಲಿರುವದಿಲ್ಲ. ಏಕತಾನತೆ ಬೇಸರಕ್ಕೆ ಎಡೆಮಾಡಿಕೊಡುತ್ತದೆ.೫. ತಿಳಿಯದ ವಿಷಯ ಮತ್ತೆ ಕೇಳಿ ಸಮಸ್ಯೆ ಬಗೆಹರಿಸಿಕೊಳ್ಳುವಂತಿಲ್ಲ.೬. ಸಣ್ಣ ಊರುಗಳಲ್ಲಿ ಬಡ ಮಕ್ಕಳು ಮಧ್ಯಾಹ್ನ ಸಿಗುವ ಬಿಸಿಊಟ ತಪ್ಪಿಸಿಕೊಂಡರೆ ಆಸಕ್ತಿ ಕಡಿಮೆಯಾಗಬಹುದು. ಸರಕಾರ ಮನೆಗೆ ಧಾನ್ಯ ಒದಗಿಸುವ ಯೋಜನೆ ಇಟ್ಟುಕೊಂಡಿದೆ. ಆದರೆ ಅದರ ಸದುಪಯೋಗದ ಭರವಸೆ ಕೊಡುವವರು ಯಾರು? ೭. ಜನಸಂಖ್ಯೆ ನಿಯಂತ್ರಿಸುತ್ತಿರುವ ಹೊಸ ಪೀಳಿಗೆಯ ಈ ಕಾಲಮಾನದಲ್ಲಿ ಮಕ್ಕಳಿಗೆ ಸಹಜೀವನ ಇಲ್ಲದೆ ಹಂಚಿಕೊಳ್ಳುವ ಗುಣಕ್ಕೆ ಎರವಾಗಬಹುದು.೮. ಹಳ್ಳಿಗಳಲ್ಲಿ ಮಕ್ಕಳನ್ನು ಓದಿಸುವದರ ಬದಲು ಕೆಲಸಕ್ಕೆ ಕಳಿಸಬಹುದು.೯. ಬರೆಯುವಿಕೆ ಕಡಿಮೆಯಾಗಿ ಲಿಪಿಗಳು ಕಣ್ಮರೆಯಾಗಿ ಹೋಗಬಹುದು.೧೦. ಹೆಚ್ಚು ಸಮಯ ಕಂಪ್ಯೂಟರ್ ಪರದೆ ವೀಕ್ಷಿಸಿ ಮಕ್ಕಳ ಆರೋಗ್ಯದಲ್ಲಿ ದುಷ್ಪರಿಣಾಮ ತಲೆದೋರಬಹುದು.೧೧. ಹೆಣ್ಣು ಹುಡುಗಿಯರಿಗೆ ಶಿಕ್ಷಣ ದುರ್ಲಭವಾಗಬಹುದು. ಅವರನ್ನು ಕೆಲಸಕ್ಕೆ ಹಚ್ಚಬಹುದು ನಂತರ ಆದಷ್ಟು ಬೇಗ ಮದುವೆ ಮಾಡಬಹುದು. ಇದರಿಂದ ಬಾಲ್ಯವಿವಾಹ ಮತ್ತೆ ತಲೆದೋರಬಹುದು.೧೨. ಅಶಿಕ್ಷಿತ ಎಳೆಯ ಹುಡುಗಿಯರನ್ನು ದೈಹಿಕ ಮಾನಸಿಕ ಸಮಸ್ಯೆಗಳ ಒಟ್ಟಿಗೆ ಲೈಂಗಿಕ ಶೋಷಣೆ ಕಾಡಬಹುದು.೧೩. ಸಮಾಜದಲ್ಲಿ ಸಾಕ್ಷರತೆ ಕಡಿಮೆಯಾಗುವ ಭಯ.೧೪. ಮಕ್ಕಳಲ್ಲಿ ಶಿಸ್ತು ಕಡಿಮೆಯಾಗುವ ಸಾಧ್ಯತೆ ಇದೆ. ಶಿಕ್ಷಕರ ಮಾತನ್ನು ಕೇಳಿದಂತೆ ಪಾಲಕರ ಹಿತನುಡಿಯನ್ನು ಕೇಳುವುದಿಲ್ಲ.೧೫. ಪೂರ್ವಭಾವಿ ತಯಾರಿಗೆ ಹಣ ಒದಗಿಸುವುದು ಎಲ್ಲರಿಗೂ ಆಗಲಿಕ್ಕಿಲ್ಲ. ಇನ್ನು ಅನುಕೂಲಗಳನ್ನು ನೋಡಿದರೆ,೧. ಪಾಶ್ಚಾತ್ಯ ದೇಶಗಳಲ್ಲಿ ಈಗಾಗಲೇ ಉತ್ಕರ್ಷಣದಲ್ಲಿರುವ ಆನ್ ಲೈನ್ ಕಲಿಯುವಿಕೆ ಮತ್ತು ಕಲಿಸುವಿಕೆಯ ಓಟದಲ್ಲಿ ನಮ್ಮ ದೇಶ ಕೂಡ ಸೇರಿಕೊಂಡು, ಆಧುನಿಕತೆಯ ಸ್ಪರ್ಧೆಯಲ್ಲಿ ಪಾಲುಗೊಳ್ಳಬಹುದು.೨. ಉನ್ನತ ಶಿಕ್ಷಣ ಇ ಫೀಲ್ಡ್ ನಲ್ಲಿ ದೊರೆಯುವ ಸಾಧ್ಯತೆ ಹೆಚ್ಚಿರುವದರಿಂದ ಮುಂದಿನ ಶಿಕ್ಷಣಕ್ಕೆ ಇದು ನಾಂದಿಯಾಗಬಹುದು, ದೊರಕಿಸಿಕೊಳ್ಳುವುದು ಸುಲಭ ಸಾಧ್ಯ.೩. ಮನೆಯಲ್ಲಿಯೇ ಪಾಠ ಇರುವದರಿಂದ ತಮಗೆ ಬೇಕಾದ ವೇಳೆ ಆರಿಸಿಕೊಂಡು ಓದುವುದು ಸಾಧ್ಯ. ೪. ಪುನರ್ಮನನ ಸುಲಭ.೫. ಶಾಲೆ, ಕಾಲೇಜ್ ಗೆ ಹೋಗುವುದು ಇಲ್ಲದ್ದರಿಂದ ವಾಹನಗಳಲ್ಲಿ ಅಡ್ಡಾಡುವುದು ಕಡಿಮೆಯಾಗಿ, ಪ್ರಯಾಣದ ರಿಸ್ಕ್ ಇಲ್ಲ, ಖರ್ಚು ಇಲ್ಲ. ಸುರಕ್ಷತೆ ಹೆಚ್ಚಿದ್ದು ಮನಸ್ಸಿನ ಕಿರಿಕಿರಿ ಕಡಿಮೆಯಾಗಬಹುದು.೬. ಕೆಲವೊಂದು ಖರ್ಚು ಕಡಿಮೆಯಾಗುವ ಸಂಭವ. ಉದಾಹರಣೆಗೆ ಸ್ಕೂಲ್ ಯುನಿಫಾರ್ಮ ಇತ್ಯಾದಿ. ಪುರಾತನ ಸಂಸ್ಕೃತಿಯ ಗುರುಕುಲ ಪದ್ಧತಿ ನಮಗೆ ಶ್ರೇಷ್ಟವೆನಿಸಿದರೂ ಮತ್ತೆ ಅದರಿಂದ ಬದಲಾವಣೆಗೆ ಹೊಂದಿಕೊಂಡಂತೆ ಮುಂದೆ ಕೂಡ ಹೊಸ ಶಿಕ್ಷಣ ಪದ್ಧತಿಗೆ ಜನ ಹೊಂದಿಕೊಳ್ಳಬೇಕಾದೀತು. ಯಾವುದೇ ಹೊಸತನಕ್ಕೆ ವಿರೋಧ ಬರುವುದು ಸಾಮಾನ್ಯ. ಆದರೆ ಅದು ಅನಿವಾರ್ಯವಾಗಿದ್ದಲ್ಲಿ ಬೇರೆ ಆಯ್ಕೆ ಎಲ್ಲಿದೆ? ಸಧ್ಯಕ್ಕಂತೂ ಕೊರೊನಾದಿಂದ ತಪ್ಪಿಸಿಕೊಳ್ಳಲು ಇದೊಂದೇ ಮಾರ್ಗ. ಹಾಗಿದ್ದರೆ ಸಂತೋಷದಿಂದ ಒಪ್ಪಿ ಅನುಸರಿಸಿದರೆ ಜೀವವಿದೆ, ಜೀವನವಿದೆ ಅಲ್ಲವೇ? **************

ಶಿಕ್ಷಣ ಆನ್ ಲೈನ್! Read Post »

ಇತರೆ, ಶಿಕ್ಷಣ

ಆನ್ಲೈನ್ ಶಿಕ್ಷಣ – ಪ್ರಯೋಗ?

ಅರ್ಪಣಾ ಮೂರ್ತಿ ಪ್ರಸ್ತುತ ಪರಿಸ್ಥಿತಿಯಲ್ಲಿ ಶೈಕ್ಷಣಿಕ ವರ್ಷದ ಆರಂಭವೇ ಗೊಂದಲಗಳಿಂದ ಕೂಡಿರುವ ಈ ಸಂದರ್ಭದಲ್ಲಿ, ಅನೇಕ ಖಾಸಗಿ ಶಿಕ್ಷಣ ಸಂಸ್ಥೆಗಳು ಇದಾಗಲೇ ಕಂಡುಕೊಂಡಿರುವ ಶಿಕ್ಷಣದ ಪರ್ಯಾಯ ಮಾರ್ಗದ ಹೆಸರೇ ಈ ಆನ್ಲೈನ್ ಶಿಕ್ಷಣ, ಈ ಪರ್ಯಾಯ ಮಾರ್ಗದ ಶಿಕ್ಷಣಕ್ಕೆ ಸರ್ಕಾರವು ಸಹ ಸಮ್ಮತಿಯ ಮುದ್ರೆ ಒತ್ತಿದೆ. ಈಗಿರುವ ಪ್ರಶ್ನೆಯೆಂದರೆ ಈ ಆನ್ಲೈನ್ ಶಿಕ್ಷಣ ಎಷ್ಟು ಪರಿಣಾಮಾತ್ಮಕವಾಗಿದೆ, ಮಕ್ಕಳ ಕಲಿಕೆಯ ಮಟ್ಟಕ್ಕೆ ಅದೆಷ್ಟು ಪೂರಕವಾಗಿದೆ ಅನ್ನುವುದು. ಮೊದಲಿಗೆ ಪ್ರಾಥಮಿಕ ಶಾಲಾ ಹಂತದ ವಿದ್ಯಾರ್ಥಿಗಳಿಗೆ ಆನ್ಲೈನ್ ಶಿಕ್ಷಣ ನೀಡುವುದರ ಕುರಿತು ಹೇಳೋದಾದ್ರೆ ಒಂದರಿಂದ ಐದನೆಯ ತರಗತಿಯವರೆಗೂ ಮಕ್ಕಳು ಸಂಪೂರ್ಣವಾಗಿ ಶಿಕ್ಷಕರ ಮೇಲೆ ಅವಲಂಬಿತವಾಗಿರುವಂತವರು, ಎದುರು ನಿಂತು ತರಗತಿಯಲ್ಲಿ ಬೋಧನೆ ಮಾಡುವುದಕ್ಕೂ ಮೊಬೈಲ್ ಅಥವಾ ಲ್ಯಾಪ್ಟಾಪ್ ಮೂಲಕ ಪಾಠ ಮಾಡುವುದಕ್ಕೂ ಸಾಕಷ್ಟು ವ್ಯತ್ಯಾಸ ಇದೆ, ಹಾಗೆಯೇ ಸುಮಾರು ಎರಡರಿಂದ ಮೂರುಗಂಟೆಗಳ ಕಾಲ ಮೊಬೈಲ್ ಪರದೆಯನ್ನ ನೋಡುವ ಪುಟ್ಟ ಮಕ್ಕಳ ಕಣ್ಣುಗಳು ಮುಂದೊಂದು ದಿನ ಹಾನಿಗೊಳಗಾಗುವುದರಲ್ಲಿ ಸಂಶಯವೇ ಇಲ್ಲ, ಇದರ ಜೊತೆಗೆ ಮಕ್ಕಳ ಮೆದುಳಿನ ವಿಕಸನದ ಮೇಲೆ ಪರಿಣಾಮ ಉಂಟಾಗಬಹುದು, ನರಗಳ ಸಮಸ್ಯೆ ಉಂಟಾಗಬಹುದು, ಪುಟ್ಟ ಮಕ್ಕಳಿಗೆ ಯಾವುದೇ ಕಾರಣಕ್ಕೂ ಆನ್ಲೈನ್ ಶಿಕ್ಷಣ ಸೂಕ್ತವಲ್ಲ, ಇನ್ನು ಈ ಚಿಕ್ಕ ಮಕ್ಕಳನ್ನು ಹೊರತು ಪಡಿಸಿ ಪ್ರೌಡ ಮಕ್ಕಳ ಕುರಿತು ಹೇಳುವುದಾದರೆ ಪರಿಣಾಮಗಳಲ್ಲಿ ಯಾವುದೇ ವ್ಯತ್ಯಾಸಗಳಿಲ್ಲ, ಹಾಗಾದರೆ ಕಾಲೇಜು ಮಕ್ಕಳಿಗೆ ಆನ್ಲೈನ್ ಶಿಕ್ಷಣ ಪೂರಕತೆ ಒದಗಿಸಬಹುದಾ ಅಂತ ನೋಡೋದಾದ್ರೆ ಸುಮಾರು ಅರ್ಧದಷ್ಟು ವಿದ್ಯಾರ್ಥಿಗಳು ಹಳ್ಳಿಗಾಡಿಗೆ ಸೇರಿದವರು, ಮೊದಲ ಸಮಸ್ಯೆಯೇ ಎಲ್ಲರೂ ಮೊಬೈಲ್ ಫೋನ್ಗಳನ್ನ ಹೊಂದುವಂತದ್ದು, ಈ ಕರೋನಾ ಕಾಲದಲ್ಲಿ ಈಗಾಗಲೇ ಹಳ್ಳಿಗಾಡಿನ ಜನ ಅತಿ ಕ್ಲಿಷ್ಟಕರ ಪರಿಸ್ಥಿತಿಯನ್ನು ಎದುರಿಸುತ್ತಿರುವಾಗ ಮಕ್ಕಳಿಗೆ ಮೊಬೈಲ್ ಒದಗಿಸೋದು ಕಷ್ಟದ ವಿಷಯ, ಮನೆಯಲ್ಲಿ ಓದುತ್ತಿರುವ ಎರಡು ಮೂರು ಮಕ್ಕಳಿರುವ ಸಂದರ್ಭದಲ್ಲಿ ಎಲ್ಲರಿಗೂ ಮೊಬೈಲ್ ಕೊಡಿಸುವುದು ಆಗದ ವಿಷಯ, ಒಂದೊಮ್ಮೆ ಕೊಡಿಸಿದರೂ ಸಹ ಹಳ್ಳಿಗಳಲ್ಲಿ ಗುಡ್ಡಗಾಡು ಪ್ರದೇಶಗಳಲ್ಲಿ ನೆಟ್ವರ್ಕ್ ಅದೆಷ್ಟು ಸುಲಭವಾಗಿ ಸಿಗುತ್ತದೆ ಎನ್ನುವುದು ಹಳ್ಳಿಯ ವಾಸಿಗಳಿಗಷ್ಟೇ ಗೊತ್ತು, ನೆಟ್ವರ್ಕ್ ಕಾರಣದಿಂದಾಗಿ ಶೇಕಡಾ ಅರ್ಧದಷ್ಟು ಮಕ್ಕಳಿಗೆ ಹೆಚ್ಚಿನ ಮಾಹಿತಿ ತಲುಪಲಾರದು ಹಾಗೂ ಹಾಜರಾತಿ ಕೂಡ ನಿರೀಕ್ಷಿಸಲಾಗದು, ಒಂದೊಮ್ಮೆ ನೆಟ್ವರ್ಕ್ ದೊರೆಯುವ ಸ್ಥಳವಾದರೂ ಕೂಡ ದಿನಕ್ಕೆ ಮೂರರಿಂದ ನಾಲ್ಕು ತರಗತಿಗಳಿಗೆ ಸರಿಯಾಗುವಷ್ಟು ಮೊಬೈಲ್ ಡೇಟಾ ಹಾಕಿಸುವಷ್ಟು ಪೋಷಕರು ಶಕ್ತರಿದ್ದಾರಾ ಎನ್ನುವುದು ಯೋಚಿಸಬೇಕಾದ ವಿಷಯ, ಆನ್ಲೈನ್ ಶಿಕ್ಷಣ ಎನ್ನುವುದು ನಗರವಾಸಿಗಳ ಹಾಗೂ ಉಳ್ಳವರ ಮಕ್ಕಳಿಗಷ್ಟೇ ಒಂದಿಷ್ಟು ಉತ್ತಮ ಅನಿಸಬಹುದಾದರೂ ಹಳ್ಳಿಗಾಡಿನ ಮಕ್ಕಳು ಈ ಶಿಕ್ಷಣದಿಂದ ವಂಚಿತರಾಗುವುದೇ ಹೆಚ್ಚು, ವೈಜ್ಞಾನಿಕ ತಳಹದಿಯ ಮೇಲೆ ಹೇಳುವುದಾದರೆ ಸಣ್ಣ ಮಕ್ಕಳಿಗೆ ಆರೋಗ್ಯದ ದೃಷ್ಟಿಯಿಂದ ಆನ್ಲೈನ್ ಶಿಕ್ಷಣ ಮಾರಕವೇ ಹೊರತು ಪೂರಕವಲ್ಲ, ಕಾಲೇಜು ಹಂತದ ಮಕ್ಕಳ ಆನ್ಲೈನ್ ಶಿಕ್ಷಣದ ಕುರಿತು ಹೇಳುವುದಾದರೆ ಇದು ನಗರವಾಸಿ ಜನ ಹಾಗೂ ಉಳ್ಳವರಿಗಷ್ಟೆ ಒಂದಿಷ್ಟು ಪೂರಕವಾಗಬಹುದು ಹೊರತು ಹಳ್ಳಿಗಾಡಿನ ಜನರಿಗೆ ಆರ್ಥಿಕ ಹೊರೆಯಷ್ಟೆ.. ಒಟ್ಟಾರೆಯಾಗಿ ಸರ್ಕಾರಿ ಶಾಲಾಕಾಲೇಜಿನ ಮಕ್ಕಳಿಗೆ ಆನ್ಲೈನ್ ಶಿಕ್ಷಣ ಎನ್ನುವುದು ಹೊರೆಯಾಗದಿರಲಿ. *********

ಆನ್ಲೈನ್ ಶಿಕ್ಷಣ – ಪ್ರಯೋಗ? Read Post »

ಇತರೆ, ಶಿಕ್ಷಣ

ಆನ್ಲೈನ್ ಶಿಕ್ಷಣ – ಸಾಧ್ಯತೆ ಮತ್ತು ಜವಾಬ್ದಾರಿಗಳು.

ಡಿಎಸ್.ರಾಮಸ್ವಾಮಿ ಆನ್ಲೈನ್ ಶಿಕ್ಷಣ – ಸಾಧ್ಯತೆ ಮತ್ತು ಜವಾಬ್ದಾರಿಗಳು. ಈ ಕರೋನಾದ ಭಯ ನಮ್ಮೆಲ್ಲರನ್ನೂ ಎಷ್ಟು ಜರ್ಝರಿತಗೊಳಿಸಿದೆ ಎಂದರೆ ನಮ್ಮ ನಿತ್ಯದ ಜೀವನದ ಕನಿಷ್ಠ ಕೆಲಸ ಕಾರ್ಯಗಳಲ್ಲೂ ವಿಪರೀತ ಎಚ್ಚರಿಕೆಯ ಹೆಜ್ಜೆಯನ್ನು ಇಡಬೇಕಾಗಿದೆ. ಒಂದೇ ಸೂರಿನೊಳಗಿದ್ದೂ ಅಪರಿಚಿತರಂತೆ ಬಾಳುವುದು ಅಭ್ಯಾಸವೇ ಆಗಿಬಿಟ್ಟಿದೆ. ನಿತ್ಯವೂ ಬೇಕಾಗುವ ತರಕಾರಿ, ಹಣ್ಣು, ಹೂವು, ದಿನಸಿ ತರುವುದಕ್ಕೂ ಸಮಯ ಹೊಂದಿಸಿಕೊಂಡು ಅವು ಯಾವ ಜಾಗದಲ್ಲಿ ಸಿಗುತ್ತವೆಯೋ ಅಲ್ಲಿಗೆ ದೌಡಾಯಿಸುವ ಪರಿಸ್ಥಿತಿ ಎಲ್ಲ ಊರಲ್ಲೂ ಸಾಮಾನ್ಯ ಸಂಗತಿಯಾಗಿದೆ. ಸರ್ಕಾರದ ಕಛೇರಿಗಳು ಅತಿ ಜರೂರು ಎಂದು ಅವು ಭಾವಿಸಿರುವ ಕೆಲಸಗಳನ್ನು ಮಾತ್ರ ನಿರ್ವಹಿಸುತ್ತಿವೆ. ಬ್ಯಾಂಕುಗಳು ವ್ಯವಹಾರಕ್ಕೆ ಇಂಟರ್ನೆಟ್ ಬಳಸಲು ಗ್ರಾಹಕರಿಗೆ ಸಂದೇಶ ಕಳಿಸುತ್ತಿವೆ. ವಿದ್ಯುತ್ ಬಿಲ್ ಕಟ್ಟುವುದು, ಗ್ಯಾಸ್ ಬುಕ್ ಮಾಡುವುದು, ಪ್ರಯಾಣಕ್ಕಾಗಿ ಬಸ್ಸು,ರೈಲು,ವಿಮಾನದ ಟಿಕೆಟ್ ಪಡೆಯುವುದೂ ಸೇರಿದಂತೆ ಅನೇಕ ವಿಚಾರಗಳು ಈಗ ಅಂಗೈ ಅಗಲದ ಮೊಬೈಲಿನಲ್ಲಿ ಸಾಧ್ಯ ಆಗಿ ಅದನ್ನು ಬಳಸುವವರ ಪ್ರಮಾಣ ಕೂಡ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದನ್ನು ಯಾರೂ ಅಲ್ಲಗಳೆಯಲಾರರು. ಕಾಯ್ದಿರಿಸದ ಅಂದರೆ ಸೀಟು ಗ್ಯಾರಂಟಿ ಇಲ್ಲದ ಓಪನ್ ಟಿಕೆಟ್ ಪಡೆಯುವ ಇಂಡಿಯನ್ ರೇಲ್ವೆಯ ಯಾಪ್ ಇರದ ಮೊಬೈಲ್ ಬಳಕೆದಾರರೂ ಇಲ್ಲವೇ ಇಲ್ಲ. ಬೇಕೆನಿಸಿದಾಗ ಎಲ್ಲಿಗೆ ಬೇಕಾದರೂ ಟಿಕೆಟ್ ಖರೀದಿಸುವ ಅವಕಾಶ ಗಂಟೆಗಟ್ಟಲೆ ಕ್ಯೂ ನಿಲ್ಲಬೇಕಾಗುವ ಮತ್ತು ಚಿಲ್ಲರೆಗಾಗಿ ಒದ್ದಾಡಬೇಕಿದ್ದ ಸಂಗತಿಗಳಿಂದ ಮುಕ್ತಿ ದೊರಕಿಸಿದೆ. ಇದೆಲ್ಲಕ್ಕಿಂತ ಮುಖ್ಯವಾಗಿ ನಮ್ಮ ಮನೆ ಕಂದಾಯ, ನೀರಿನ ವಾರ್ಷಿಕ ಪಾವತಿ ಕೂಡ ಈಗ ಬ್ಯಾಂಕಿನ ಖಾತೆಗೆ ನೇರ ಪಾವತಿ ಮಾಡಬಹುದಾದ ಅವಕಾಶ ಪುರಸಭೆ, ನಗರಸಭೆಗಳು ಮಾಡಿವೆ. ಬಿಲ್ ಕಲೆಕ್ಟರ್ ಹಿಡಿದು, ದುಡ್ಡು ಪಾವತಿಸಿದರೂ ಸಿಗದೇ ಇದ್ದ ರಸೀತಿ ಈಗ ಕ್ಷಣಾರ್ಧದಲ್ಲಿ ಸಿಕ್ಕುವಂತಾಗಿದೆ. ಜೀವ ವಿಮೆ ಮತ್ತು ಸಾಮಾನ್ಯ ವಿಮೆಯ ಪಾವತಿ ಈಗ ಸಲೀಸು. ಅವಧಿಗೆ ಮುನ್ನವೇ ಮೊಬೈಲಿಗೆ ಬಂದು ಬೀಳುವ ಸಂದೇಶವನ್ನದುಮಿ ಕ್ಷಣ ಮಾತ್ರದಲ್ಲಿ ಪೇ ಮಾಡುವುದು ಈಗ ಎಲ್ಲರಿಂದಲೂ ಸಾಧ್ಯವಾಗಿದೆ. ಈ ಎಲ್ಲಕ್ಕೂ ಕಾರಣವಾದದ್ದು ಅಂಡ್ರಾಯಿಡ್ ಫೋನು ಮತ್ತು ಎಲ್ಲರಿಗೂ ಲಭ್ಯವಾಗಿರುವ ಇಂಟರ್ನೆಟ್ ಸಂಪರ್ಕ. ಮೊದಲೆಲ್ಲ ತಂತಿಯ ಮೂಲಕವೇ ನಡೆಯ ಬೇಕಿದ್ದ ಸಂಪರ್ಕ ಸಾಧನಗಳು ಯಾವಾಗ ತಂತಿ ರಹಿತ ಆದವೋ ಆಗಿನಿಂದಲೇ ಈ ಎಲ್ಲವೂ ಸಾಧ್ಯವಾಯಿತು. ಈಗ ಅಂಡ್ರಾಯಿಡ್ ಫೋನು ಗತ್ತಲ್ಲ, ಅನಿವಾರ್ಯ ಸಂಪರ್ಕ ಸೇತು. ಸರ್ಕಾರವು ಕೊಡುವ ತಿಂಗಳ ರೇಷನ್ ಕೂಡ ಒಟಿಪಿ ಇಲ್ಲದೇ ನಡೆಯಲಾರದ ಅನಿವಾರ್ಯತೆ ಈಗ ಸೃಷ್ಟಿಯಾಗಿದೆ. ನಿತ್ಯ ಸೌಲಭ್ಯಗಳ ಬಳಕೆಗೆ ಇವತ್ತು ಇಂಟರ್ನೆಟ್ ಅನಿವಾರ್ಯವೇ ಆಗಿ ಬದಲಾಗಿದೆ. ಅದು ಎಂಭತ್ತರ ದಶಕದ ಮಧ್ಯದ ದಿನಗಳು. ಬದುಕಿನ ಅನಿವಾರ್ಯದ ಸಿಲುಕಿಗೆ ಸಿಕ್ಕು ತಮ್ಮ ವಿದ್ಯಾಭ್ಯಾಸ ಅರ್ಧಕ್ಕೇ ಬಿಟ್ಟು ಅತಂತ್ರರಾಗಿದ್ದ ಹಲವರ ಕನಸನ್ನ ನನಸು ಮಾಡಿದ್ದು ಸಂಜೆ ಕಾಲೇಜು ಎಂಬ ಸಂಜೀವಿನಿ. ಮೊಟಕಾಗಿದ್ದ ವಿದ್ಯಾಭ್ಯಾಸವನ್ನು ಮುಂದುವರೆಸಿ ಪದವಿ ಪಡೆದ ಅನೇಕರು ಈಗ ಉನ್ನತ ಅಧಿಕಾರಿಗಳೇ ಆಗಿದ್ದಾರೆ. ಈ ಸಂಜೆ ಕಾಲೇಜುಗಳು ಜಿಲ್ಲಾ ಕೇಂದ್ರಗಳಲ್ಲೂ ಕಾರ್ಮಿಕರು ಅಧಿಕ ಸಂಖ್ಯೆಯಲ್ಲಿದ್ದ ಕೈಗಾರಿಕಾ ಪ್ರದೇಶಗಳಲ್ಲೂ ಇದ್ದವು. ಅದರ ಮುಂದಣ ಹೆಜ್ಜೆಯೆಂದರೆ ದೂರ ಶಿಕ್ಷಣ ಎಂಬ ಓಪನ್ ಯೂನಿವರ್ಸಿಟಿಯ ಪರಿಕಲ್ಪನೆ. ಅನೇಕ ಕಾರಣಗಳಿಂದ ಅರ್ಧಕ್ಕೇ ನಿಂತಿದ್ದ ತಮ್ಮ ವಿದ್ಯಾಭ್ಯಾಸವನ್ನು ಮುಂದುವರೆಸಿ ಸ್ನಾತಕ,ಸ್ನಾತಕೋತ್ತರ ಪದವಿ ಪರೀಕ್ಷೆಗಳಲ್ಲಿ ನಿಯತ ವಿದ್ಯಾರ್ಥಿಗಳ ಸರಿ ಸಮಕ್ಕೆ ಬರೆದು, ಆ ಪರೀಕ್ಷೆಗಳಲ್ಲಿ ಚಿನ್ನದ ಪದಕ ಪಡೆದ ಅನೇಕ ಪ್ರತಿಭಾವಂತರು ನಮ್ಮ ಮುಂದಿದ್ದಾರೆ. ಈ ಸಂಜೆ ಕಾಲೇಜು ಮತ್ತು ದೂರ ಶಿಕ್ಷಣದ ಮೂಲಕ ಅನೇಕ ಪ್ರತಿಭಾವಂತರು ತಮ್ಮ ಬದುಕು ಕಟ್ಟಿ ಕೊಂಡದ್ದು ಆ ಕಾಲದ ಕೊಡುಗೆಯೇ. ಇವತ್ತಿಗೂ ಬಹುತೇಕ ವಿವಿಗಳು ಅಂಚೆ ಮತ್ತು ತೆರಪಿನ ದೂರ ಶಿಕ್ಷಣವನ್ನು ನೀಡುತ್ತ ವಿದ್ಯಾ ದಾಹಿಗಳನ್ನು ಪೊರೆಯುತ್ತಿವೆ. ಎಲ್ಲ ರಂಗಗಳಲ್ಲಿ ಇರುವ ಹಾಗೆಯೆ ಮೋಸ ವಂಚನೆಗಳ ಜಾಲವೂ ಈ ದೂರ ಶಿಕ್ಷಣ ಕ್ಷೇತ್ರದಲ್ಲಿ ನಡೆದು ಕೆಲವು ಖೊಟ್ಟಿ ವಿವಿಗಳು ಈಗಾಗಲೇ ನಿಷೇದದ ಹಣೆಪಟ್ಟಿ ಪಡೆದಿವೆ. ಇಂಟರ್ನೆಟ್ ಎಂಬ ಸಂಪರ್ಕ ವಿಶ್ವದ ಯಾವುದೋ ಮೂಲೆಯನ್ನು ಮತ್ತೊಂದು ಮೂಲೆಯಿಂದ ತಲುಪ ಬಲ್ಲ ದೂರಗಾಮೀ ಸಂವೇದಿ. ಈ ಅಂತರ್ಜಾಲದ ಯುಗ ವಸುದೈವ ಕುಟುಂಬಕಂ ಎಂಬ ಆರ್ಷೇಯ ಕಲ್ಪನೆಗೆ ಮತ್ತೊಂದು ಭಾಷ್ಯವನ್ನೇ ಬರೆದಿದೆ ಎಂದರೆ ಅತಿಶಯೋಕ್ತಿ ಅಲ್ಲವೇ ಅಲ್ಲ. ತಿಳಿಯದೇ ಇರುವ ಹಲವು ಸಮಸ್ಯೆಗಳಿಗೆ ಗೂಗಲ್ ಎನ್ನುವ ಸರ್ಚ್ ಎಂಜಿನ್ ತತ್ ಕ್ಷಣವೇ ಉತ್ತರವನ್ನು ಹುಡುಕಿ ಕೊಟ್ಟರೆ ಯಾರೇ ಹೇಳುವ ಸುಳ್ಳನ್ನು ಕ್ಷಣಾರ್ಧದಲ್ಲಿ ಬಯಲು ಮಾಡುವ ಅವಕಾಶ ಕೊಟ್ಟದ್ದೂ ಈ ಅಂತರ್ಜಾಲವೇ. ಈ ನಡುವೆಯೇ ಕಳೆದ ಹತ್ತು ವರ್ಷಗಳಲ್ಲಿ ನಮ್ಮ ಜೀವನ ಅನೇಕ ಆಧುನಿಕ ತಂತ್ರ ಜ್ಞಾನದ ಸಹಾಯದಿಂದ ಸುಲಭ ಸಾಧ್ಯವಾಗುತ್ತಿದೆ. ಮೇಲೆ ಹೇಳಿದ ಅನೇಕ ಕೆಲಸಗಳು ಇಂಟರ್ನೆಟ್ ಇಲ್ಲದೇ ನಡೆಯಲಾರವು. ಬ್ಯಾಂಕು, ವಿಮೆ, ಆರ್ಟಿಓ, ಸಾರಿಗೆ, ಪೋಲೀಸ್ ಇಲಾಖೆ ಕೂಡ ಈಗ ಡಿಜಿಟಲೈಸ್. ಅಂದರೆ ಕಂಪ್ಯೂಟರಿಲ್ಲದ ಯಾವ ಕಛೇರಿಯೂ ಇವತ್ತು ಹೊಸ ಕಾಲದ ವೇಗಕ್ಕೆ ತೆರೆದುಕೊಳ್ಳಲಾರವು. ಗ್ರಾಮ ಲೆಕ್ಕಿಗನ ಕೃಪೆ ಇದ್ದರೆ ಮಾತ್ರ ಸಿಗುತ್ತಿದ್ದ ಪಹಣಿ ಈಗ ಹತ್ತು ರೂಪಾಯಿ ಕಟ್ಟಿದ ಕೂಡಲೇ ಕೈಯಲ್ಲಿ ಇರುತ್ತದೆ. ಯವುದೇ ಇಲಾಖೆಯ ಯಾರ ಮೇಲೆ ಬೇಕಾದರೂ ಈಗ ನೇರ ದೂರು ಸಲ್ಲಿಸಬಹುದು. ಅಂಥ ಹಲವು ಸ್ತರಗಳ ಮ್ಯಾನೇಜ್ಮೆಂಟ್ ಸಾಧ್ಯವಾಗಿರುವುದೇ ಆಧುನಿಕ ತಂತ್ರಾಂಶಗಳ ಅಭಿವೃದ್ಧಿಯಿಂದಾಗಿ. ಇವತ್ತು ನಮ್ಮ ಕೈಯಲ್ಲಿ ಮೊಬೈಲ್ ಇರಲಾಗಿ ಪ್ರತಿಭೆ ಇದ್ದೂ ಮುನ್ನೆಲೆಗೆ ಬಾರದೇ ಇದ್ದ ಅದೆಷ್ಟು ಜೀವಗಳು ಎಫ್ಬಿಯಲ್ಲಿ ಮಿಂಚುತ್ತಿವೆ ಎಂದರೆ ಅದು ಕೂಡ ಈ ಕಾಲ ನಮಗೆ ಕೊಟ್ಟ ಬಳುವಳಿಯೇ. ಈಗ ಹಲವು ಇಲಾಖೆಗಳು ಅನಗತ್ಯ ಖರ್ಚು ಮಾಡಿ ನಡೆಸುತ್ತಿದ್ದ ಸಮ್ಮೇಳನಗಳನ್ನು, ತರಬೇತಿಗಳನ್ನು ತಂತ್ರಾಂಶದ ನೆರವು ಪಡೆದು ಇದ್ದಲ್ಲೇ ಆನ್ಲೈನ್ ಸಭೆಗಳ ಮೂಲಕ ನಡೆಸುತ್ತಿವೆ. ಇಂಥೆಲ್ಲ ಅವಕಾಶಗಳೂ ಸಾಧ್ಯತೆಗಳೂ ಇರುವಾಗ ಶಿಕ್ಷಣ ಕ್ಷೇತ್ರದಲ್ಲೂ ಈ ಸೌಲಭ್ಯ ಬಳಸುವುದು ನಿಜಕ್ಕೂ ಅತ್ಯಗತ್ಯ ವಿಚಾರವೇ. ಮೊದಲೆಲ್ಲ ಸಂಗೀತ ಕಲಿಯಲು, ಕಂಪ್ಯೂಟರಿಗೆ ಸಂಬಂಧಿಸಿದ ಹಲವು ಕೋರ್ಸುಗಳನ್ನು ಕಲಿಯಲು ಬೆಂಗಳೂರಿಗೇ ಓಡಬೇಕಿತ್ತು. ಇವತ್ತು ನಮಗೆ ಬೇಕಿರುವ ಯಾವುದೇ ವಿದ್ಯೆಯನ್ನು ಕಲಿಯಲು ಎಲ್ಲಿಗೂ ಹೋಗಬೇಕಾಗಿಲ್ಲ, ಪ್ರಯಾಣ ಮಾಡಬೇಕಿಲ್ಲ, ಸಮಯದ ಹೊಂದಾಣಿಕೆ ಮತ್ತು ಅನಗತ್ಯ ಮಾನಸಿಕ ಒತ್ತಡಗಳೇ ಇಲ್ಲದೆ ನಮಗೆ ನಿಜಕ್ಕೂ ಬೇಕಿರುವುದನ್ನು ಅಂತರ್ಜಾಲದ ತರಗತಿಗಳ ಮೂಲಕ ಕಲಿಯುವುದು ಸಾಧ್ಯವಿದೆ. ಅಲ್ಲದೇ ಕೆಲವೊಂದು ಸಂಸ್ಥೆಗಳು ತಮ್ಮ ಕಲಿಕಾ ತರಗತಿಗಳಿಗೆ ಬೇಕಾದ ಲಿಂಕುಗಳನ್ನು ತರಗತಿಯ ಆರಂಭದಲ್ಲೇ ಕಳಿಸಿ ಆ ತರಗತಿಯು ಪಾಸ್ ವರ್ಡ್ ಕೊಟ್ಟರಷ್ಟೇ ತೆರೆಯುವ ವ್ಯವಸ್ಥೆಯನ್ನೂ ಮಾಡಿ ಕೊಂಡಿವೆ. ಕಂಪ್ಯೂಟರ್ ನೆಟ್ ವರ್ಕಿಂಗ್ ಮತ್ತು RDBMS ಥರದ ಕೋರ್ಸುಗಳು ಯುಟ್ಯೂಬ್ ಛಾನೆಲ್ಲಿನಲ್ಲಿ ಅದೆಷ್ಟಿವೆ ಎಂದರೆ ಆಸಕ್ತಿ ಮತ್ತು ಕಲಿಕೆಯ ಉತ್ಸಾಹವಿದ್ದವರು ತಾವಿದ್ದೆಡೆಯಿಂದಲೇ ಅದನ್ನು ಕಲಿಯಬಲ್ಲರು. ಸದ್ಯ ಚರ್ಚೆಯಲ್ಲಿರುವ ಆನ್ಲೈನ್ ಶಿಕ್ಷಣದ ಅಗತ್ಯತೆ ಇಷ್ಟೆಲ್ಲ ಬರೆದ ಮೇಲೆ ಅತ್ಯಗತ್ಯ ಮಾನ್ಯ ಮಾಡಲೇ ಬೇಕಿರುವ ಶಿಕ್ಷಣ ವ್ಯವಸ್ಥೆಗೆ ಪೂರಕವಾಗಿಯೇ ಇದೆ ಎನ್ನುವುದು ಸತ್ಯವಾದರೂ ಯಾವ ತರಗತಿಯಿಂದ ಮತ್ತು ಯಾವ ವಯಸ್ಸಿನ ನಂತರ ಈ ವ್ಯವಸ್ಥೆಯನ್ನು ಜಾರಿಗೊಳಿಸಬೇಕು ಎನ್ನುವುದರಲ್ಲಿ ವಿಭಿನ್ನ ನಿಲುವು ಮತ್ತು ವಿಭಿನ್ನ ವಾದಗಳೂ ಸಹಜವಾಗಿಯೇ ಹುಟ್ಟಿವೆ. ಏಕೆಂದರೆ ಶಿಕ್ಷಣ ತಜ್ಞರ ಪ್ರಕಾರ ಕಲಿಕೆಯು ವಯಸ್ಸು ಮತ್ತು ಕಲಿಕಾ ಪಠ್ಯ ಹಾಗೂ ಕಲಿಕಾ ಸಾಮಗ್ರಿಗಳ ಮೇಲೆ ನಿಂತಿದೆ. ಈ ಸಂಗತಿಯನ್ನು ಗಮನಿಸಿದರೆ ಪ್ರಸ್ತುತ ಇರುವ ಶೈಕ್ಷಣಿಕ ವ್ಯವಸ್ಥೆಯು ಆನ್ಲೈನ್ ತರಗತಿಗೆ ಬದಲಿಸಿಕೊಳ್ಳುವ ಸಾಮರ್ಥ್ಯ ಹೊಂದಿದೆಯೇ ಎಂದರೆ ಉತ್ತರ ನಿರಾಶೆಗೆ ತಳ್ಳುತ್ತದೆ. ಏಕೆಂದರೆ ನಮ್ಮ ಬಹುತೇಕ ಸರ್ಕಾರಿ ಶಾಲೆ ಕಾಲೇಜುಗಳಲ್ಲಿ ವಿದ್ಯುತ್ ಮತ್ತು ಕಂಪ್ಯೂಟರ್ ಇರಲಿ ಶೌಚಾಲಯಗಳು ಮತ್ತು ಅತ್ಯಗತ್ಯ ಬೇಕಿರುವ ನೀರು ಕೂಡ ಇಲ್ಲದಿರುವ ಸ್ಥಿತಿ ಇದೆ. ಹಳ್ಳಿಗಾಡಿನ ಶಾಲೆಗಳ ಶಿಕ್ಷಕರನ್ನೇ ನಿಯಂತ್ರಿಸಲಾಗದ ಶೈಕ್ಷಣಿಕ ವ್ಯವಸ್ಥೆ ನಮ್ಮದು. ಎಲ್ಲ ಇಲಾಖೆಗಳ ಹಾಗೆ ಇಲ್ಲೂ ತುಂಬ ಪ್ರಾಮಾಣಿಕರೂ ನಿಸ್ಪೃಹರೂ ಶಾಲೆ ಎಂದರೆ ತೇದು ಕೊಳ್ಳುವವರೂ ಇದ್ದಾರೆ. ಆದರೆ ಊರಿನ ರಾಜಕೀಯ ಶಾಲೆಗಳ ಮೇಲೂ ಪ್ರಭಾವ ಬೀರುವುದರಿಂದ ಕೆಲವೇ ಕೆಲವರು ಮಾತ್ರ ಇದನ್ನೆಲ್ಲ ಮೆಟ್ಟಿ ನಿಲ್ಲಬಲ್ಲರು. ಎಲ್ಲರೂ ಶ್ರೀರಾಮರೇ ಆದರೆ ರಾವಣನ ಪಾತ್ರ ಯಾರಿಗೆ ಬೇಕು? ವಯಸ್ಸು ಮತ್ತು ಕಲಿಕೆಯ ದೃಷ್ಟಿಯಿಂದ ಗಮನಿಸಿದರೆ ಪಿಯುಸಿ ಮತ್ತು ಅದರಾಚೆಯ ಓದಿಗೆ ಆನ್ಲೈನ್ ತರಗತಿ ಬಳಸಬಹುದು. ಹದಿನಾರರ ನಂತರ ದೈಹಿಕವಾಗಿ ಮಾನಸಿಕವಾಗಿ ಪ್ರಬುದ್ಧತೆ ಕೂಡ ಇರುತ್ತದೆ. ಆದರೆ ಹದಿ ಹರಯದ ವಿದ್ಯಾರ್ಥಿಗಳನ್ನು ಪಾಲಕರು ಆಗಾಗ ಗಮನಿಸುತ್ತ ತರಗತಿ ಇದ್ದಾಗ ಮಾತ್ರವೇ ಮೊಬೈಲ್ ಅಥವ ಲ್ಯಾಪ್ ಟಾಪ್ ಬಳಸುವಂತೆ ತಾಕೀತು ಇರಬೇಕು.ಇಲ್ಲವಾದಲ್ಲಿ ಬೇಡವಾದ ವೆಬ್ ಸೈಟುಗಳನ್ನೇ ಹದಿ ಹರಯದವರು ಕದ್ದು ಮುಚ್ಚಿ ನೋಡುತ್ತಾರೆ. ಇದಕ್ಕೆ ಅವಕಾಶ ಸಿಕ್ಕಲೇ ಬಾರದು. ಪ್ರಾಥಮಿಕ ಮಾಧ್ಯಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಈ ಆನ್ಲೈನ್ ತರಗತಿ ವ್ಯರ್ಥ. ಏಕೆಂದರೆ ಕಿರು ವಯಸ್ಸಿನ ಮಕ್ಕಳನ್ನು ಅನುನಯದಿಂದ ಪ್ರೀತಿ ಮತ್ತು ಸ್ಪರ್ಶದಿಂದ ಗೆಲ್ಲುತ್ತಲೇ ಕಲಿಸಬೇಕು. ಮನಸ್ಸನ್ನು ಕೇಂದ್ರೀಕರಿಸದೆ ಪಾಠವನ್ನು ಈ ಮಕ್ಕಳು ಹೇಗೆ ಕಲಿತಾವು? ಮನಸ್ಸನ್ನು ನಿಗ್ರಹಿಸಿ ಎಂದು ಹೇಳುವುದು ಸುಲಭ. ಆದರೆ ಸಣ್ಣ ವಯಸ್ಸಿನ ಹುಡುಗ ಬುದ್ಧಿಯ ವಿದ್ಯಾರ್ಥಿಗಳಿಗೆ ಪಾಠವನ್ನು ಆಟದ ಮೂಲಕವೇ ಕಲಿಸಲು ಸಾಧ್ಯ. ನಿಜಕ್ಕೂ ಸರ್ವ ಶಿಕ್ಷಣ ಅಭಿಯಾನದ ಉದ್ದೇಶ ಇಲ್ಲಿ ಸ್ಮರಿಸಲೇ ಬೇಕು. ಇನ್ನು ಪಾಲಕರ ಆರ್ಥಿಕ ಸಾಮರ್ಥ್ಯ ತುಂಬ ಮುಖ್ಯ. ಸರ್ಕಾರಿ ಶಾಲೆಗಳಲ್ಲಿ ಉಚಿತವಾಗಿ ಸಮ ವಸ್ತ್ರ, ಪಠ್ಯ ಪುಸ್ತಕ, ಮಧ್ಯಾಹ್ನದ ಊಟ ಕೊಟ್ಟರೂ ಮಕ್ಕಳ ಸಂಖ್ಯೆ ಕುಸಿಯುತ್ತಲೇ ಇದೆ. ಅತ್ತ ಖಾಸಗಿಯವರ ಆಕರ್ಷಣೆ ಇಂಗ್ಲಿಷ್ ಮೋಹ ಕೂಡ ಕನ್ನಡ ಶಾಲೆಗಳನ್ನು ಮುಚ್ಚಿಸುತ್ತಿದೆ. ಇನ್ನು ಸರ್ಕಾರವೇ ಆನ್ಲೈನ್ ಎಂದರೆ ಹಳ್ಳಿಗಾಡಿನ ಮಕ್ಕಳು ಸಂಪೂರ್ಣವಾಗಿ ಶಿಕ್ಷಣ ವಂಚಿತರಾಗುತ್ತಾರೆ. *********

ಆನ್ಲೈನ್ ಶಿಕ್ಷಣ – ಸಾಧ್ಯತೆ ಮತ್ತು ಜವಾಬ್ದಾರಿಗಳು. Read Post »

ಇತರೆ

ಲಾಕ್ಡೌನ್ ಬೇಡಿಕೆ

ಗಣೇಶ್ ಭಟ್ ಸಮೂಹ ಸನ್ನಿಯಾಗುತ್ತಿರುವ ಲಾಕ್ಡೌನ್ ಬೇಡಿಕೆ ಕೊರೊನಾ ವೈರಸ್ ಹಾವಳಿಯ ಕುರಿತಾದ ಭಯದಿಂದಾಗಿ ಲಾಕ್ಡೌನ್ಗಾಗಿ ಒತ್ತಾಯ ಪ್ರಾರಂಭವಾಗಿದೆ.ಲಾಕ್ಡೌನ್ನಿಂದಾಗಿ ಕೊರೊನಾ ಪಿಡುಗನ್ನು ಹೋಗಲಾಡಿಸಬಹುದೆಂಬುದಕ್ಕೆ ಯಾವುದೇ ಆಧಾರವಿಲ್ಲ. 10, 20 ಅಥವಾ ಇನ್ನೂ ಎಷ್ಟೇ ವಾರಗಳ ಸಂಪೂರ್ಣ ಲಾಕ್ಡೌನ್ನಂತರವೂ ಜನರ ಓಡಾಟ ಪ್ರಾರಂಭವಾದಾಗ ವೈರಸ್ನ ಹಬ್ಬುವಿಕೆ ಒಮ್ಮೆಲೇ ಹೆಚ್ಚುವುದು ಸಹಜವೆಂದು ಸೋಂಕು ರೋಗ ತಜ್ಞರು ಅಭಿಪ್ರಾಯ ಪಡುತ್ತಾರೆ.ಕೇಂದ್ರ ಸರ್ಕಾರ ರಚಿಸಿದ ತಜ್ಞರ ತಂಡ ಕೂಡಾ ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸಿ ಭಾರತದಲ್ಲಿ ಲಾಕ್ಡೌನ್ ವಿಧಿಸದಂತೆ ಕಳೆದ ಫೆಬ್ರುವರಿಯಲ್ಲಿ ಸಲಹೆ ನೀಡಿತ್ತು. ಮೇ ತಿಂಗಳಿನಲ್ಲಿ ಲಾಕ್ಡೌನ್ – ವಿಸ್ತರಿಸುವ ಮೊದಲು ಕೂಡಾ ಇದನ್ನೇ ಪುನರುಚ್ಚರಿಸಿತ್ತು.ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವುದೇ ಕೊರೊನಾ ನಿಯಂತ್ರಣಕ್ಕೆ ಇರುವ ಸರಳದಾರಿ. ಕೊರೊನಾ ಕುರಿತಾದ ಅತಿಯಾದ ಭಯವೇ ವೈರಾಣುವಿಗಿಂತ ಹೆಚ್ಚಿಗೆ ಅಪಾಯಕಾರಿ. ಅತಿಯಾಗಿ ಭಯಗ್ರಸ್ತನಾದ ವ್ಯಕ್ತಿಯ ದೇಹದಲ್ಲಿ ಉಂಟಾಗುವ ರಾಸಾಯನಿಕ ಬದಲಾವಣೆಗಳು ರೋಗ- ನಿರೋಧಕ ಶಕ್ತಿಯನ್ನು ಕುಂದಿಸುತ್ತದೆ. ಅತಿಯಾದ ಭಯದಿಂದ ಉಂಟಾಗುವ ಮಾನಸಿಕ ಒತ್ತಡವು ಹೃದಯಸ್ತಂಭನ ಅಥವಾ ಇತರೆ ಅಪಾಯಕಾರಿ ಪರಿಣಾಮಗಳನ್ನುಂಟು ಮಾಡುತ್ತದೆಂದು ತಜ್ಞ ವೈದ್ಯರು ಅಭಿಪ್ರಾಯ ಪಡುತ್ತಾರೆ. ಕಾಲುದಿನ, ಅರ್ಧ ದಿನ ಲಾಕ್ಡೌನ್ ಮುಂತಾದ ಕ್ರಮಗಳಿಂದಾಗಿ ಜೀವನಾವಶ್ಯಕ ವಸ್ತುಗಳನ್ನು ಕೊಳ್ಳಲು ಜನರು ಪೇಚೆಗೆ ಧಾವಿಸುತ್ತಾರೆ. ದಿನವಿಡೀ ನಡೆಯುತ್ತಿರುವ ವ್ಯವಹಾರ. ಸೀಮಿತ ಅವಧಿಗೆ ಮೊಟಕುಗೊಂಡಾಗ ಜನರು ಖರೀದಿಗೆ ಮುಗಿಬೀಳುತ್ತಾರೆ, ಮಾರುಕಟ್ಟೆಯಲ್ಲಿ ಅತಿಯಾದ ನೂಕುನುಗ್ಗಲು ಉಂಟಾಗುತ್ತದೆ. ಇದರಿಂದಾಗಿ ಪರಸ್ಪರ ಭೌತಿಕ ಅಂತರ ಕಾಪಾಡಿಕೊಳ್ಳುವದೂ ಸಾಧ್ಯವಾಗುವುದಿಲ್ಲ. ಜನರ ಮನದಲ್ಲಿ ಅನಗತ್ಯವಾಗಿ ಆತಂಕ ಸೃಷ್ಟಿಗೂ ಕಾರಣವಾಗುತ್ತದೆ. ಇಂತಹ ವಿಷಮ ಪರಿಸ್ಥಿತಿಯಲ್ಲೂ ಕಳೆದ ಐದು ತಿಂಗಳುಗಳಿಂದ ಯಾವುದೇ ರಕ್ಷಾ ಕವಚಗಳಿಲ್ಲದೇ ದಿನವಿಡೀ ಕಾರ್ಯ ನಿರ್ವಹಿಸುತ್ತಿರುವ ಪೌರ ಕಾರ್ಮಿಕರು, ವಿದ್ಯುತ್ ವಿತರಣಾ ವ್ಯವಸ್ಥೆಯ ಸಿಬ್ಬಂದಿಗಳು, ಆಶಾ ಕಾರ್ಯಕರ್ತೆಯರು, ಆರೋಗ್ಯ ಸಿಬ್ಬಂದಿಗಳು,ಮಾಧ್ಯಮ ಪ್ರತಿನಿಧಿಗಳು,ಪತ್ರಿಕಾ ವಿತರಕರು,ಪೋಲೀಸರು, ಹಾಲು ಮುಂತಾದ ಅಗತ್ಯ ವಸ್ತುಗಳನ್ನು ಪೂರೈಸುತ್ತಿರುವವರ ಧೈರ್ಯ, ಆತ್ಮವಿಶ್ವಾಸಗಳಳು ನಮ್ಮೆಲ್ಲರಿಗೆ ಪ್ರೇರಣೆಯಾಗಬೇಕು. ಇವರೆಲ್ಲರೂ ನಮ್ಮೊಂದಿಗೆ,ನಮ್ಮಸುತ್ತಮುತ್ತಲೇ ಬದುಕಿತ್ತಿದ್ದಾರೆ,ಅವರೂ ನಮ್ಮಂತೆಯೇ ಮನುಷ್ಯರು ಎಂಬುದನ್ನು ಮರೆಯಬಾರದು.ಮಧ್ಯಾಹ್ನ 2 ಗಂಟೆಯ ಮೊದಲು ಸಾರ್ವಜನಿಕ ಸ್ಥಳಗಳಲ್ಲಿ ಕಾಣಿಸಿಕೊಳ್ಳದೇ ನಂತರವೇ ಓಡಾಟ ಪ್ರಾರಂಭಿಸಲು ಕೊರೊನಾ ವೈರಸ್, ಸಾಕು ಪ್ರಾಣಿಯಲ್ಲ. ಕತ್ತಲೆಯಾದ ನಂತರ ಬೀದಿಗಳಲ್ಲಿ ಸಂಚರಿಸಲು, ಕೊರೊನಾ ಕಾಡಿನಿಂದ ಓಡಿ ಬಂದ ಚಿರತೆಯೂ ಅಲ್ಲ.ಅರೆಬರೆ ಮಾಹಿತಿ, ಮಾಧ್ಯಮಗಳ ಬೇಜವಾಬ್ದಾರಿ ಉತ್ಪ್ರೇಕ್ಷೆ, ಆಧಾರಹೀನ ಭಯಗಳಿಂದ ಪ್ರೇರಿತರಾಗಿ ಮಂಡಿಸಲ್ಪಡುತ್ತಿರುವ ಲಾಕ್ಡೌನ್ ಬೇಡಿಕೆಗೆ, ಒತ್ತಡಕ್ಕೆ, ಕೊರೊನಾ ಕುರಿತಾದ ಅನಗತ್ಯ ಭಯ, ಆತಂಕಕ್ಕೆ ಒಳಗಾಗದೇ, ಸಮೂಹಸನ್ನಿಗೆ ಸಿಲುಕದೇ, ಆತ್ಮವಿಶ್ವಾಸದಿಂದ ಬದುಕುವ ದಾರಿಯಲ್ಲಿ ಸಾಗೋಣ. ಸೂಕ್ತ ಆಹಾರ ಕ್ರಮ, ಯೋಗ, ಧ್ಯಾನ, ಧನಾತ್ಮಕ ಯೋಚನೆಗಳು ದೈವ ಚಿಂತನೆ, ಶೃದ್ಧೆಯಿಂದ ಇದು ಸಾಧ್ಯ. ಕೊರೊನಾ ಕುರಿತು ಜಾಗೃತಿ ಇರಲಿ, ಭಯ ಪಡುವುದು ಬೇಡ, ಭಯ ಹಬ್ಬಿಸುವುದೂ ಬೇಡ… *************

ಲಾಕ್ಡೌನ್ ಬೇಡಿಕೆ Read Post »

ಆರೋಗ್ಯ, ಇತರೆ

ಭಯ ಪಡುವುದೇನಿಲ್ಲ

  ಡಾ ಪ್ರತಿಭಾ  ಹಳಿಂಗಳಿ ಭಯ ಅಂದರೆ ಏನು ಎನ್ನುವವರು ಕೂಡ ಈ ಕೊರೊನಾ ಮಹಾಮಾರಿಗೆ ಹೆದರುವಂತಾಗಿದೆ.ತನ್ನ ಕಬಂಧ ಬಾಹುಗಳಿಂದ ಇಡಿಯ ವಿಶ್ವವನ್ನೇ ತಲ್ಲಣಗೊಳಿಸಿರುವ ಈ ರೋಗಕ್ಕೆ ಚಿಕಿತ್ಸೆ ಇನ್ನು ಲಭ್ಯವಿಲ್ಲ.            ಇದರ ಮುಖ್ಯ ಲಕ್ಷಣ ಸೀನು,ಕೆಮ್ಮು,ಜ್ವರ ನೋಡಿದರೆ ಸಾಮಾನ್ಯ ನೆಗಡಿ,ಕೆಮ್ಮಿನಂತೆ ಈ ರೋಗ ಯಾವುದೇ ಹೊತ್ತಿನಲ್ಲಿ ತನ್ನ ಅಸ್ತಿತ್ವ ಬದಲಾಯಿಸಿ ಭಯಂಕರ ವಾಗಿಬಿಡುತ್ತದೆ.ಉಸಿರಾಟದ ತೊಂದರೆ ಉಂಟಾಗಿ ಸರಿಯಾಗಿ ಉಸಿರಾಡಲು ಆಗದೆ ಆಕ್ಸಿಜನ್, ವೆಂಟಿಲೇಟರಗಳ ಬಳಕೆ ಅನಿವಾರ್ಯ ವಾಗುತ್ತದೆ.ಕೊರೊನಾ ಪೀಡಿತ ಎಲ್ಲಾ ರೋಗಿಗಳಿಗೂ ಆಕ್ಸಿಜನ್ ಮತ್ತು ವೆಂಟಿಲೆಟರ್ ಗಳ ಅವಶ್ಯಕತೆ ಇರುವುದಿಲ್ಲ ಬಹಳಷ್ಟು ಜನರಲ್ಲಿ ಅದು ಸಾಮಾನ್ಯ ಕೆಮ್ಮು, ಶೀತ ,ಜ್ವರ ದಂತಹ ಲಕ್ಷಣ ಹೊಂದಿ ಸರಿಹೋಗುತ್ತದೆ.                     ಇಷ್ಟು ಆದರೆ ಕೊರೊನಾ ಕ್ಕೆ ಯಾರ ಹೆದರುತ್ತಿರಲಿಲ್ಲವೆನೊ? ಆದರೆ ಇದು ಸಾಮಾನ್ಯ ಎನಿಸುತ್ತಲೆ ಕೆಲವರಿಗೆ ಉಸಿರಾಟದ ತೊಂದರೆ ಉಂಟಾಗಿ ರೋಗಿ ಸಾವನ್ನಪ್ಪಬಹುದು.ಇದರಲ್ಲಿ ಸಾವಿನ ಪ್ರಮಾಣ ಕಡಿಮೆ ಇರಬಹುದು ಆದರೆ ಇದು ಅತಿ ವೇಗವಾಗಿ ಹಬ್ಬುವ ,ಮತ್ತು ಸಾಂಕ್ರಾಮಿಕವಾಗಿ ಒಬ್ಬರಿಂದ ಒಬ್ಬರಿಗೆ ಕೆಮ್ಮು, ಸೀನು ಇದರ ಮೂಲಕ ಮತ್ತು ಶ್ವಾಸದ ಮೂಲಕವೂ ಈ ರೋಗ ಹೊರಡುತ್ತದೆ. ಇದರಲ್ಲಿ ನಾವೇನು ಮಾಡಲು ಸಾಧ್ಯ ಇದರ ಬಗ್ಗೆ  ಅಷ್ಟೇ ನಾವು ಗಮನ ಹರಿಸಬೇಕು. ನಾವು ನೋಡುತ್ತಿರುವ ಹಾಗೆ ಪ್ರತಿಯೊಬ್ಬ ಮನುಷ್ಯನ ಸಹಜ ಚಟುವಟಿಕೆ ಮತ್ತು ಆರ್ಥಿಕತೆಗೆ ಹೊಡೆತ ಬಿದ್ದಂತಾಗಿದೆ. ನಿತ್ಯದ ಜನಜೀವನ ಅಸ್ತವ್ಯಸ್ತ ಆಗಿದೆ.ಬಸ್ಸಿನಲ್ಲಿ ಕೂರಲು ಭಯ,ಹೊಟೆಲಿಗೆ ಹೋಗಲು ಭಯ, ಜನಸಂದಣಿ ಯಂತು ಆಗಲೇ ಬಾರದು. ಅದರಂತೆ ಸಾಮಾಜಿಕವಾಗಿಯೂ ಬಹಳಷ್ಟು ಬದಲಾವಣೆಗಳಾಗಿವೆ. ಮದುವೆಗಳನ್ನು ಸರಳವಾಗಿ ಮಾಡಬೇಕು. ಜನದಟ್ಟಣೆ ಆಗದಂತೆ ನೋಡಿಕೊಳ್ಳಬೇಕು . ಯಾರಾದರೂ ತೀರಿ ಹೋದರು ಸಹ ಜನ ಜಾಸ್ತಿ ಸೇರಬಾರದು. ಯಾವುದೇ ಕಾರ್ಯಕ್ರಮ ಮಾಡಲು ಜನ ಸೇರಬಾರದು. ಕಾರ್ಯಕ್ರಮ ಮಾಡಲೇ ಕೂಡದು ಹೀಗೆ ಜನರ ಸಾಮಾಜಿಕ ಕೊಂಡಿಗಳು ಕಳಚುತ್ತಿದ್ದು ಮನುಷ್ಯ ಒಬ್ಬಂಟಿಯಾಗಿ ಬದುಕಬೇಕಾಗಿದೆ.ಇದು ಇಂದಿನ ತುರ್ತು ಕೂಡಾ ಪ್ರತಿಯೊಬ್ಬರೂ ಇದರ ಬಗ್ಗೆ ಹೆದರದೆ ಆತ್ಮವಿಶ್ವಾಸ ದಿಂದ  ಇದನ್ನೆದುರಿಸುವ ಧೈರ್ಯ ಮಾಡಬೇಕು. ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಮಾಸ್ಕ ಕಡ್ಡಾಯವಾಗಿ ಧರಿಸಬೇಕು. ಮೇಲಿಂದ ಮೇಲೆ ಕೈ ತೊಳೆಯುತ್ತಿರಬೇಕು.ಅನಿವಾರ್ಯ ಕಾರಣ ಗಳಿದ್ದರೆ ಮಾತ್ರ ಮನೆಯಿಂದ ಹೊರ ಹೋಗಬೇಕು. ಇದು ಯಾರೋ ನಮ್ಮ ಮೇಲೆ ಹೇರಿದ ಕಾನೂನು ಆಗಬಾರದು. ನಾವೇ ಸ್ವಯಂ ಪ್ರೇರಿತರಾಗಿ ನಮ್ಮ ಮತ್ತು ನಮ್ಮ ಸುತ್ತಲಿನ ಜನರ ಸೌಖ್ಯ ಕ್ಕಾಗಿ ಇದನ್ನು ಅನುಸರಿಸಲೇಬೇಕು .      ‌‌                **********

ಭಯ ಪಡುವುದೇನಿಲ್ಲ Read Post »

ಇತರೆ

ಹಿಂಡು ಮೋಡದ ಗಾಳಿ ಸವಾರಿ

ಪ್ರಜ್ಞಾ ಮತ್ತಿಹಳ್ಳಿ ಹಿಂಡು ಮೋಡದ ಗಾಳಿ ಸವಾರಿ -ಆಷಾಢ     ಮದ್ದಾನೆಯ ಹಿಂಡೊಂದು ಧಾಳಿಯಿಟ್ಟಂತೆ ಅಲ್ಲೋಲಕಲ್ಲೋಲಗೊಳ್ಳುವ ಆಕಾಶದಂಗಳ. ಅದಾಗಲೇ ರಜೆ ಹಾಕಿ ವಿಳಾಸ ಕೊಡದೇ ನಾಪತ್ತೆಯಾದ ಸೂರ್ಯ. ಭರ‍್ರೋ ಎಂದು ಬೀಸುತ್ತ ಗಿಡ-ಮರಗಳನ್ನು ಮಲಗಿಸುವ ರಭಸದ ಗಾಳಿ. ಬೆಳಗೊ-ಬೈಗೊ ಒಂದೂ ತಿಳಿಯದಂತೆ ಮೋಡ ಮಡುಗಟ್ಟಿಕೊಂಡ ಬಾನಾಂಗನೆಯ ಮುಖಾರವಿಂದ.  ಹುರುಪು ಬಂದದ್ದೇ ಕುಮ್ಚಿಟ್ಟೆ ಹೊಡೆದು, ಗಿರಿಗಿರಿ ಮಂಡಿ ತಿರುಗುವ ಪುಂಡು ವೇಷದ ಹಾಗೆ ರಪರಪ ರಾಚುವ ಮಳೆ. ಹಾಂ ಇದು ಆಷಾಢ. ಇದರ ಮೂಲ ಲಕ್ಷಣವೇ ಗಾಳಿ. ಇದು ಮಳೆ ಆರಂಭದ ಮಾಸ. ಆದ್ದರಿಂದ ಮಳೆಗಿಂತಲೂ ಮೊದಲು ಬರುವ ಮೋಡದ ಮೆರವಣಿಗೆ, ಅದಕ್ಕೆ ಗಾಳಿಯ ಹಿಮ್ಮೇಳ ಜೋರಾಗಿರುತ್ತದೆ. ಗಗನಂ ಕೆಟ್ಟದು ಚಂದ್ರಸೂರ್ಯರಳಿದರ್ ಆಲದೊಳ್ ಪೂಳ್ದಿತ್ತು ಧಾತ್ರೀತಳಂ ಖಗಸಂಚಾರತೆ ಶೂನ್ಯಮಾದುದು ನಿರುದ್ಯೋಗಕ್ಕೆ ಪಕ್ಕಾದುದೀ ಜಗಮೆಂದೆಂಬಿನಮೆಯ್ದೆ ಕಟ್ಟಿ ಕರೆದತ್ತಾಸಾರಮೀ ಲೋಕದೊಳ್ (ಕಾವ್ಯ ಸಾರಂ) ಡಾ.ಸಿದ್ದಲಿಂಗ ಪಟ್ಟಣಶೆಟ್ಟಿಯವರು ಅನುವಾದಿಸಿದ ಮೋಹನ ರಾಕೇಶರ ನಾಟಕ “ಆಷಾಢದ ಒಂದು ದಿನ” ಅದರ ಕತೆ ಕವಿಯಾದ ಕಾಳಿದಾಸ ರಾಜನಾಗುವ ಕುರಿತಾಗಿದ್ದು.   ಪ್ರಕೃತಿಯ ಮಡಿಲಿನಿಂದ ನಗರದೆಡೆಗೆ ಅವನಿಟ್ಟ ಹೆಜ್ಜೆಗಳನ್ನು ಸೂಕ್ಷ್ಮವಾಗಿ ದಾಖಲಿಸುತ್ತದೆ. ಆತನ ಬಾಲ್ಯದ ಗೆಳತಿ ಆತನ ಒಳಿತಿಗಾಗಿ ಬಲಿಕೊಡುವ ಪ್ರೀತಿಯನ್ನು ಮತ್ತು ವಿರಹವನ್ನು ಕಟ್ಟಿಕೊಡುವುದಕ್ಕಾಗಿ ನಾಟಕಕಾರರು ಆಷಾಢದ ಪ್ರಕೃತಿಯ ಚಿತ್ರಣವನ್ನು ಬಳಸಿಕೊಂಡಿದ್ದಾರೆ. ದೂರದೂರದಿಂದ ಹಿಂಡುಗಟ್ಟಿ ಬರುವ ಕರಿಮೋಡಗಳು, ಕಿಟಕಿ ಬಾಗಿಲುಗಳನ್ನು ಮುರಿಯುವಂತೆ ಬೀಸುವ ಗಾಳಿ, ಆಗಾಗ ಆರ್ಭಟಿಸುವ ಗುಡುಗು-ಮಿಂಚು ಇವೆಲ್ಲ ಪಾತ್ರಗಳ ಮನಸ್ಥಿತಿಯನ್ನು ಪ್ರತಿಬಿಂಬಿಸುವಲ್ಲಿ ಯಶಸ್ವಿಯಾಗುತ್ತವೆ. ಕವಿದ ಕಾರ್ಮೋಡ ನಾಯಕಿಯ ಆತಂಕವನ್ನು ಧ್ವನಿಸಿದರೆ, ಸುರಿಯುವ ಮಳೆ ಅವಳ ಉಕ್ಕುವ ದು:ಖಕ್ಕೆ ಕನ್ನಡಿ ಹಿಡಿಯುತ್ತದೆ. ತನ್ನೆಲ್ಲ ಭಾವನೆಗಳನ್ನು ಮನದೊಳಗೆ ಅದುಮಿಟ್ಟು ತ್ಯಾಗಿಯಾದ ನಾಯಕಿಯ ಮನೋಭೂಮಿಕೆಯಾಗಿ ಕಾಣುವ ಆಷಾಢ ಹಾಗೆ ನೋಡಿದರೆ ಈ ನಾಟಕದಲ್ಲಿ  ಒಂದು ಪಾತ್ರವೇ ಆಗಿದೆ. ಆಷಾಢದ ರಾತ್ರಿಗಳು ಎನ್ನುವ ಒಂದು ಪತ್ತೆದಾರಿ ಕಾದಂಬರಿಯ ಉದ್ದಕ್ಕೂ ಕೊಲೆ ಇತ್ಯಾದಿ ಘಟನೆಗಳು ನಡೆಯುವುದು ಆಷಾಢದ ರಾತ್ರಿಗಳಲ್ಲಿ. ಕಾಫಿ ತೋಟ, ಜರ‍್ರನೆಯ ಮಳೆ, ಊಳಿಡುವ ಗಾಳಿ ಇವೆಲ್ಲವುಗಳು ಸೇರಿಕೊಂಡು ಈ ಕಾದಂಬರಿ ತುಂಬ ರೋಚಕವಾದ ಅವಿಸ್ಮರಣೀಯ ಅನುಭವವನ್ನು ಕಟ್ಟಿ ಕೊಡುತ್ತದೆ. ವರಕವಿ ಬೇಂದ್ರೆಯವರು ಸಖಿಗೀತದಲ್ಲಿ ಆಷಾಢವನ್ನು ವರ್ಣಿಸುವುದು ಹೀಗೆ ಆಷಾಢದಾ ಮುಗಿಲು ಬೀಸಾಡಿ ಬಂದವು ಈಸಾಡಿ ಬಂದಂಥ ಆನೆಗಳೆ ರೋಷದ ತೋಷದ ಬೆಡಗು ಬಿನ್ನಾಣವಂ ಬೀರುವ ಬಿಂಕದಿ ಮೆರೆಯುವೊಲೆ ಹೌದು ಆಷಾಢವೇ ಹಾಗೆ. ಚೈತ್ರ-ವೈಶಾಖಗಳಲ್ಲಿ ಗಿಡಗಳು ಚಿಗುರಿ ಹೊಸದಾಗಿ ಪಡೆದದ್ದನ್ನು ಬೀಸುಗಾಳಿಯಿಂದ ಆಷಾಢ ಅಲುಗಾಡಿಸುತ್ತದೆ. ಎಷ್ಟೊ ವರ್ಷಗಳ ನಿಷ್ಟೆಯ ಬೇರುಗಳನಿಳಿಬಿಟ್ಟು ನಿಂತ ಮರಗಳನ್ನೂ ಜೋರಾಗಿ ತಳ್ಳುತ್ತ “ಗಟ್ಟಿಯಾ, ನೀನು ಗಟ್ಟಿಯಾ” ಅಂತ ಪರೀಕ್ಷಿಸುತ್ತದೆ. ತನಗೆ ತಾನೇ ಗಟ್ಟಿಯಾಗದಿರುವುದನ್ನು ಉರುಳಿಸಿ ಬಿಡುತ್ತದೆ. ಸುಳ್ಳು -ಪೊಳ್ಳುಗಳು ಆಷಾಢ ಗಾಳಿಯೆದುರು ಉಳಿಯುವುದು ಕಷ್ಟ. ಹಾಗೊಮ್ಮೆ ಎದುರಿಸಿ ಉಳಿದ ಸತ್ಯಗಳು ಹಚ್ಚಗೆ ಅರಳಿ ಶ್ರಾವಣದಲ್ಲಿ ನಳನಳಿಸುತ್ತವೆ. ಉಗುಳುತ್ತುಂ ಸಿಡಿಲೆಂಬ ತೋರಗಿಂಡಿಯಂ ಕಾಲೂರಿ ಭೂಭಾಗದೊಳ್ ಗಗನಭೋಗಮನೆಯ್ದಿ ನೀಳ್ದ ಘನವೇಣೀಬಂದನಂಗೆಯ್ದು  (ಪಂಪ ರಾಮಾಯಣ) ಆಷಾಢಕ್ಕೆ ಅದರ ರುದ್ರ ರಮಣೀಯ ಪ್ರಾಕೃತಿಕ ಲಕ್ಷಣಕ್ಕೆ ಎಲ್ಲವನ್ನೂ ನೆನಪಿಸುವ ಅಸೀಮ ಬಲವಿದೆ. ಸುಯ್ಯನೆ ಶೃತಿ ಹಿಡಿದ ಹಳೆಯ ವಾದ್ಯದಂತೆ ಬೀಸುವ ಗಾಳಿ, ಅದರ ಮುನ್ನುಡಿಯ ಜೊತೆಗೆ ಧಾಂಗುಡಿಯಿಡುವ ಮಳೆ ಇವುಗಳ ಜುಗಲಬಂದಿಯ ಕಚೇರಿ ಹಳೆಯ ನೆನಪುಗಳನ್ನು ನಿಧಾನವಾಗಿ ಮೀಟುತ್ತ ಮರೆತ ರಾಗವೊಂದನ್ನು ಎಳೆದು ತರುತ್ತವೆ. ಮತ್ತೀಗ ಎದೆಯ ಬೀದಿಗಳಲ್ಲಿ ಹಳೆಯ ಕತೆಗಳ ಮೆರವಣಿಗೆ. ಒಂಥರ ಖುಷಿಯ ಇರಚಲು, ಒಂಥರ ನೋವಿನ ತುಂತುರು. ಮನಸ್ಸು ಎಷ್ಟೇ ಒಳ ಸರಿದು ಅಡಗಲು ಯತ್ನಿಸಿದರೂ ಗಾಳಿಯ ರಭಸಕ್ಕೆ ಹನಿಗಳು ತೊಯ್ಯಿಸಿಯೇ ಬಿಡುತ್ತವೆ. ನೆನಯದೆ ಉಳಿಗಾಲವಿಲ್ಲ. ಅರೆ ನಾನು ಇದನ್ನು ಮರೆತಿದ್ದೆನಾ? ಹಳೆಯ ರಾಗದ ಆಲಾಪಕ್ಕೆ ಶೃತಿಗೊಳ್ಳುವ ಹೃದಯ ಮತ್ತೊಂದು ರಿಯಾಜಿಗೆ ಸಿದ್ಧಗೊಂಡಿತಾ? ಒದ್ದೆ ಮನಸ್ಸಿನ ತುಂಬ ಜುಳುಜುಳು ಮೌನ. ಆಷಾಢದ ಮಡುಗಟ್ಟಿದ ಮುಗಿಲು ಏನೋ ಮಬ್ಬು ಕವಿಸುತ್ತದೆ. ಎಂಥದೊ ಆಲಸ್ಯ, ಮುಜುಗರ, ನಿರುತ್ಸಾಹ. ಚೆಂಬೆಳಕಿನ ಕವಿ ಚೆನ್ನವೀರ ಕಣವಿ ಬರೆಯುತ್ತಾರೆ ಏನು ಹೊಳೆಯದ ಮನಸಿನಾಗಸಕೆ ಆಷಾಢ ಆಕ್ರಮಿಸಿ ಬೆಳಕನು ಬದಿಗೆ ಸರಿಸಿ ಈಸತೊಡ ಗಿದವು ಗಾಸಿಕೊಳ್ಳುತ ಯಕ್ಷ ಯಾಚಿಸಿದ ಮೋಡ ಆಷಾಢವೆಂದರೆ- ವಿಷಮಗೊಂಡಿರುವ ಪ್ರಕೃತಿ, ಅಸಮತೋಲನದಲ್ಲಿರುವ ನಿಸರ್ಗ. ಆದ್ದರಿಂದ ಈ ಬದಲಾದ ವಾತಾವರಣಕ್ಕೆ ದೇಹ ಮನಸ್ಸುಗಳು ಒಮ್ಮಿಂದೊಮ್ಮೆಲೆ ಹೊಂದಿಕೊಳ್ಳಲಾಗದೆ ಹೆಣಗಾಡುತ್ತವೆ. ಜೀರ್ಣಶಕ್ತಿಯೂ ಕೊಂಚ ಕುಂದಿರುತ್ತದೆ. ಹೊರಗಡೆಯ ಓಡಾಟ-ಸುತ್ತಾಟಗಳೂ ಅಷ್ಟು ಸುಲಭವಲ್ಲ. ಈ ಎಲ್ಲ ಕಾರಣದಿಂದ ಪೂರ್ವಜರು ಇದನ್ನು ಶೂನ್ಯಮಾಸ ಎಂದು ಕರೆದು ಹಬ್ಬ-ಸಮಾರಂಭಗಳನ್ನು  ನಿಷೇಧಗೊಳಿಸಿದರು. ಪಕ್ವಾನ್ನಗಳನ್ನು ಅರಗಿಸಿಕೊಳ್ಳಲು ಹೊಟ್ಟೆಗೂ ಕಷ್ಟ, ಬಂಧು-ಬಳಗ ಸೇರಲಿಕ್ಕೆ ಸಂಚಾರವೂ ಕಷ್ಟ ಎಂಬುದು ಅವರ ದೂರಾಲೋಚನೆ ಇರಬಹುದು. ಜ್ಯೋತಿಷ್ಯಶಾಸ್ತ್ರದ ಪ್ರಕಾರ ಆಷಾಢ- ದಕ್ಷಿಣಾಯನ ಕಾಲ. ಅಂದರೆ ಸೂರ್ಯ ದಕ್ಷಿಣಾಭಿಮುಖನಾಗುತ್ತಾನೆ. ಕರ್ಕಾಟಕ ವೃತ್ತವನ್ನು ಪ್ರವೇಶಿಸುತ್ತಾನೆ. ಶ್ರೀ ಮಹಾವಿಷ್ಣು ಯೋಗನಿದ್ರೆಗೆ ಹೋಗುತ್ತಾನೆಂಬ ಪ್ರತೀತಿ. ಆದ್ದರಿಂದ ಆಷಾಢ ಹುಣ್ಣಿಮೆಯಿಂದ ಚಾತುರ್ಮಾಸ ವೃತಾಚರಣೆಯನ್ನು ಕೈಗೊಳ್ಳುತ್ತಾರೆ. ವೈಜ್ಞಾನಿಕವಾಗಿ ನೋಡಿದಾಗ ಆಷಾಢದಲ್ಲಿ ದಂಪತಿಗಳ ಮಿಲನವಾಗಿ ಗರ್ಭಾಂಕುರವಾದರೆ ನವಮಾಸಗಳು ತುಂಬಿ ಶಿಶು ಜನನವಾಗುವುದು ಬೇಸಿಗೆಯಲ್ಲಾಗುತ್ತದೆ. ಆ ಬಿರು ಬಿಸಿಲಿನಲ್ಲಿ ಪ್ರಥಮ ಹೆರಿಗೆ ಎಂದರೆ ಮಗು-ಬಾಣಂತಿ ಇಬ್ಬರಿಗೂ ಕಷ್ಟವಾಗುತ್ತದೆ. ಬೇಸಿಗೆಯಲ್ಲಿ ರಕ್ತಸ್ರಾವ ನಿಲ್ಲಿಸುವುದೂ ಕಷ್ಟ ಎಂಬಿತ್ಯಾದಿ ಕಾರಣಗಳಿಂದ ಹಿಂದಿನ ಜನರು ಆಗಿನ ಆಧುನಿಕ ವೈದ್ಯಕೀಯ ಬೆಳೆಯದಿದ್ದ ಕಾಲದಲ್ಲಿ ನವ ದಂಪತಿಗಳನ್ನು ಆಷಾಢದಲ್ಲಿ ದೂರ ಇಡುತ್ತಿದ್ದರು. ಹೊಸ ಸೊಸೆ ಗಾಳಿ-ಮಳೆಯ ಪ್ರತಾಪಕ್ಕೆ ಹೊಂದಿಕೊಳ್ಳುವುದು ಕಷ್ಟ ಎಂದೋ ಏನೋ ತೌರಿಗೆ ಕರೆತರುತ್ತಿದ್ದರು. ಶ್ರಾವಣ ಆರಂಭ ಆದೊಡನೆ ಗೌರಿಪೂಜೆ ಮಾಡಿಸಿ ನಾಗರ ಪಂಚಮಿಯ ಉಂಡಿಗಳನ್ನು ಬುಟ್ಟಿ ತುಂಬಿಸಿ ಕಳಿಸಿ ಕೊಡುತ್ತಿದ್ದರು. ಈಗಲೂ ಆಂಧ್ರಪ್ರದೇಶ ಮತ್ತು ಉತ್ತರ ಕರ್ನಾಟಕಗಳಲ್ಲಿ ಈ ಸಂಪ್ರದಾಯವನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಾರೆ. ಬಯಲುಸೀಮೆಯ ಹೆಣ್ಣು ಮಕ್ಕಳು ತಮ್ಮ ಪ್ರೀತಿಯ ತೌರು ಸೇರಿ, ತಾಯಿ-ತಂದೆ-ಸೋದರ ಪ್ರೀತಿಯ ಕಡಲಿನಲ್ಲಿ ಮೀಯುವ ಘಳಿಗೆಗಳನ್ನು ಕಾತುರತೆಯಿಂದ ಕಾಯುತ್ತಾರೆ. ಇಲ್ಲಿನ ಜನಪ್ರಿಯ ಜಾನಪದ ಗೀತೆ- “ಆಷಾಢ ಮಾಸ ಬಂದೀತವ್ವ ಅಣ್ಣ ಬರಲಿಲ್ಲ ಕರಿಯಾಕ” ಅದರಲ್ಲಿ ಕರೆದುಕೊಂಡು ಹೋಗಲು ಬರುವ ಅಣ್ಣನನ್ನು ಕಾಯುವ ನಾರಿ ಮುಂದುವರಿದು ಹೀಗೆ ಕನವರಿಸುತ್ತಾಳೆ “ರೊಟ್ಟಿ ಬುತ್ತಿ ಮಾಡಿಕೊಂಡು                            ಎತ್ತಿನ ಬಂಡಿ ಹೂಡಿಕೊಂಡು                            ಎಂದು ಹೋಗೇನ ತವರಿಗೆ ಇಂದಿನ ಹೊತ್ತು ಹಿಂದೇ ಇರಲಿ ಮುಂದಿನ ಹೊತ್ತು ಇಂದೇ ಬರಲಿ ಎಂದು ನೋಡೇನ ತಾಯಿಯ ಮೋರೆ ಜ್ಯೋತಿಷ್ಯಶಾಸ್ತ್ರದ ಪ್ರಕಾರ ಆಷಾಢ ಮಾಸದಲ್ಲಿ ಮಿಥುನ ರಾಶಿಯಲ್ಲಿ ಶಿವನಿರುತ್ತಾನೆ. ಅಂದರೆ ಆತ ಕಾಮಾರಿ. ದುಷ್ಟ ಕಾಮವನ್ನು ಸಂಹರಿಸುತ್ತಾನೆ. ಆದ್ದರಿಂದ ಈ ಮಾಸವು ಶೃಂಗಾರ ವಿರೋಧಿ ಮಾಸ ಎಂದು ಪರಿಗಣಿಸುತ್ತಾರೆ. ಯಾರೋ ಜೋರಾಗಿ ತಳ್ಳಿದಂತೆ ಸುಂಯ್ಗುಡುತ್ತದೆ ಗೂಳಿಯಂತೆ ಗಾಳಿ ಬಡಿದುಕೊಳ್ಳುವ ಕಿಡಕಿ ಕದ ಗಂಡನ ಖಾಲಿಯೆದೆಯ ಹಾಗೆ ಪಟಪಟ ದಿನಕ್ಕೆ ಹತ್ತು ಸಲ ಎಂದು ಬರುತ್ತಿ ಎಂಬ ಫೋನು ಕಿವಿಗಾನಿಸಿ ನಗುತ್ತಾಳೆ ಹೊಸ ವಧು ಕಿಲಕಿಲ ಆದರೆ ಈ ಪದ್ಧತಿಯನ್ನು ಶಿಕ್ಷೆ ಎಂದು ಭಾವಿಸುವ ದಂಪತಿಗಳು ಗಮನಿಸಬೇಕಾದ ಅಂಶವೊಂದಿದೆ. ವರಕವಿ ಬೇಂದ್ರೆ ಹೇಳುತ್ತಾರೆ – ಗಾಳಿ ಗೋಳಿಡುವಂತೆ ಭೋರಾಡುತಿಹುದು                       ಬಾಳುವೆಯೆ ಹೊಸತೊಂದು ಒಗಟವಾಗಿಹುದು ಅದೇ ಆಗ ಹೊಸ ಬಾಳುವೆಯ ಒಗಟು ಬಿಡಿಸಲಾರಂಭಿಸಿದ ಜೋಡಿ ಪರಸ್ಪರರನ್ನು ಅರ್ಥ ಮಾಡಿಕೊಳ್ಳಲು ಈ ಒಂದು ತಿಂಗಳ ವಿರಹ ಸಹಾಯಕವಾಗಬಹುದು. ಏಕೆಂದರೆ ಬದುಕಿನ ಪ್ರಯಾಣದಲ್ಲಿ ದೈಹಿಕ ಸಾಮಿಪ್ಯವೇ ಎಲ್ಲವೂ ಅಲ್ಲ. ಮನಸ್ಸುಗಳು ಬೆರೆತು, ಕಲೆತು, ನೆನಪುಗಳಲ್ಲಿ ಪರಸ್ಪರರನ್ನು ಮೂಡಿಸಿಕೊಳ್ಳುತ್ತ ರೂಪಿಸಿಕೊಳ್ಳುತ್ತ ಧ್ಯಾನಿಸುತ್ತ ತನ್ಮೂಲಕ ಒಂದು ಸಾಮಿಪ್ಯವನ್ನು ಖುದ್ದು ಸೃಷ್ಟಿಸಿಕೊಳ್ಳುವುದಿದೆಯಲ್ಲ ಅದು ನಿಜವಾಗಿ ಆಗಬೇಕಿರುವ ಮಿಲನ. ಇಂತಹ ದೈಹಿಕ ದೂರದ ಮಿಲನದಲ್ಲಿ ಆತ್ಮಗಾನವೊಂದು ಹುಟ್ಟಿ ಬರುತ್ತದೆ. ಮತ್ತದು ಬದುಕಿಡೀ ಕೂಡಿ ಹಾಡುವ ಯುಗಳಗೀತೆಗೆ ಸೂಕ್ತ ರಾಗ-ಪ್ರಸ್ತಾರವಾಗುತ್ತದೆ. ಮದುವೆಯ ನಂತರ ಒಟ್ಟಿಗಿದ್ದು ಪರಸ್ಪರರಿಗೆ ಕಲಿಸಿದ್ದನ್ನು ದೂರ ಕೂತು ರಿವಿಜನ್ ಮಾಡಿಕೊಂಡು ಬಂದರೆ ಬದುಕಿನ ಪರೀಕ್ಷೆಗಳನ್ನು ಎದುರಿಸಲು ಸುಲಭವಾಗಬಹುದೊ ಏನೊ. ಕಾಳಿದಾಸನ ಪ್ರಸಿದ್ಧ ಕಾವ್ಯ ಮೇಘದೂತದಲ್ಲಿ ಶಾಪಗ್ರಸ್ತನಾದ ಯಕ್ಷ ತನ್ನ ಸಂದೇಶ ರವಾನೆಗಾಗಿ ಮೋಡಗಳು ಬರುವ ಆಷಾಢ ಮಾಸವನ್ನು ಬಹಳ ಕಾತುರನಾಗಿ ಕಾಯುತ್ತಾನೆ. ಅವನಿಗೆ ಬಂಧು ಸ್ವರೂಪಿ ಮೇಘದೂತನ ಭೆಟ್ಟಿಯಾಗುವುದು “ಆಷಾಢಸ್ಯ ಪ್ರಥಮ ದಿವಸೆ ” ಬೇಂದ್ರೆಯವರು ಕನ್ನಡ ಮೇಘದೂತದಲ್ಲಿ ಬರೆಯುವಂತೆ “ಗಾಳಿ ಬೀಸುವುದು ನಿನ್ನ ನೂಕಿಸುತ ಮಂದ ಮಂದವಾಗಿ           ಚೂಚು ಚಾಚಿ ಚಾದಗೆಯು, ಎಡಕೆ ಕೂಗುವುದು ಚೆಂದವಾಗಿ ತೊಳೆದ ತುರುಬು ಕಪ್ಪಾದ ನೀನು ಗಿರಿಶಿಖರದಲ್ಲಿ ತೇಲೆ ಆಷಾಢ ಮಾವು ಸುರಿದಾವು ಗೊಂಚಲಲಿ ಬೆಟ್ಟದೆದೆಯ ಮೇಲೆ ಹೀಗೆ ಮಂಕು ಕವಿದ ಪ್ರಕೃತಿ, ವಿರಹದುರಿಯ ತೊಳಲಾಟದ ನವ ಜೋಡಿ, ಹಬ್ಬ ಹುಣ್ಣಿಮೆ ಕಾಣದ ದೇವರು ಎಲ್ಲರನ್ನೂ ಬೆದರಿಸಿ ತೆಪ್ಪಗೆ ಕೂರಿಸುವ ಗಾಳಿಯೆದುರು ನಿರುತ್ತರರಾಗುತ್ತಾರೆ. ಹೆಪ್ಪುಗಟ್ಟಿದ ಕಪ್ಪು ರಾತ್ರಿಗಳಲ್ಲಿ ನೆನಪಾದ ಹಳೆ ಸೇಡಿನಂತೆ ಎಡವಿದ ಬೆರಳಿನ ಗಾಯದಂತೆ ಜರ‍್ರನೆ ಸುರಿಯುತ್ತದೆ ಅಬ್ಬರದ ಮಳೆ ಶ್ರಾವಣದ ನಿರೀಕ್ಷೆಯನ್ನೇ ತಬ್ಬಿ ಮಲಗುತ್ತಾರೆ ಅಗಲಿದ ಗಂಡ-ಹೆಂಡಿರು ಮತ್ತು ದೇವರು ಆದರೆ ಈಗ ನಾವು ನೋಡುತ್ತಿರುವ ಆಷಾಢ ತನ್ನ ಮೊದಲಿನ ವಿಲಾಸ ವಿಭ್ರಮದಿಂದ ವಿಜೃಂಭಿಸುತ್ತಿಲ್ಲ. ನಾವು ಬರಿದಾಗಿಸಿದ ಪ್ರಕೃತಿಯ ಒಡಲು ನೋವಿನ ಮಡಿಲಾಗಿ ಋತುಮಾನಗಳು ಅಸ್ತವ್ಯಸ್ತಗೊಂಡು ಉದ್ವಸ್ಥಗೊಂಡಿವೆ. ಕುವೆಂಪು ಅವರು ತಾವು ಕಂಡ ಆಷಾಢದ ವೈಭವವನ್ನು ಚಿತ್ರಿಸಿದ ರೀತಿಗೆ ಈಗ ಪ್ರತ್ಯಕ್ಷವಾಗಿ ಕಾಣಬೇಕೆನ್ನುವ ಹಂಬಲ ಹುಸಿಹೋಗುತ್ತಿದೆ ಕದ್ದಿಂಗಳು ಕಗ್ಗತ್ತಲು ಕಾರ್ಗಾಲದ ರಾತ್ರಿ ಸಿಡಿಲ್ಮಿಂಚಿಗೆ ನಡುಗುತ್ತಿದೆ ಪರ್ವತ ವನಧಾತ್ರಿ  ಉತ್ತು ಬಿತ್ತು ನೆಲದ ಕರುಣೆಯ ಧ್ವನಿಯಂತೆ ಕುಡಿಯೊಡೆವ ಮೊಳಕೆಯ ನಿರೀಕ್ಷೆಯಲ್ಲಿರುವ ರೈತ ಆಷಾಢದ ಮಳೆಗಾಗಿ ತೀವೃವಾಗಿ ಹಂಬಲಿಸುತ್ತಾನೆ. ಪುನರ್ವಸು ಮಳೆಗೆ ಪುಳಕಗೊಳ್ಳುವ ಇಳೆ ದಳದಳವರಳಿ ಬೆಳೆಗಳ ಕಣ್ಣು ಹೊಳೆಸುತ್ತದೆ. ಆದರೆ ಈಗೀಗ ಮಳೆ ಹುಸಿ ಹೋಗುತ್ತಿದೆ. ಬೇಂದ್ರೆಯವರ ಓ ಆಷಾಢ ಪದ್ಯದಲ್ಲಿ ಈ ಬೇಡಿಕೆ ದೈನ್ಯದಿಂದ ಮಂಡಿಸಲ್ಪಟ್ಟಿದೆ. ಓ ಆಷಾಢಾ ಆಷಾಢಾ ಆಡಿಸ್ಯಾಡಬೇಡಾ ದುರುರ‍್ಹಾಂಗ | ನೆರಳು ಚಲ್ಲಿ ಆಸೀ ಹಚ್ಚೀ | ಕಸಕೊಂಢಾಂಗ ಬಂತು ಮೋಡಾ | ಹೋತು ಮೋಡಾ ನೋಡಾ ನೋಡಾ ಈಗೀಗ ಆತ್ಮಹತ್ಯೆಗಿಳಿದಿರುವ ರೈತರ ಗೋಳನ್ನು ಕಂಡಾಗ ಬೇಂದ್ರೆಯವರ ಪದ್ಯದ ಮುಂದುವರಿದ ಭಾಗ ನೆನಪಾಗುತ್ತದೆ ಮೊದಲ ಬಿತ್ತಿಗೀ ಮೊಳಕೀ ಗೋಣು ಚೆಲ್ಯಾವ ತೂಕ ತಪ್ಪಿದ ಮೂಕ ಪ್ರಾರ್ಥನೀ ಮುಗಿಲಿಗೆ ಸಲ್ಲಾö್ಯವ ಎಲ್ಲಾö್ಯವ ಎಲ್ಲಾö್ಯವ ಎಲ್ಲಾö್ಯವ ಮೋಡಾ ಮಣ್ಣೆತ್ತೂನೂ ನೀರಡಿಸ್ಯಾವ ಒಕ್ಕಲಿಗನ ಕಣ್ ಬಿಡಿಸ್ಯಾವ ಓ ಆಷಾಢಾ ಎಂತೆಂತಹ ಆಧುನಿಕ ಆವಿಷ್ಕಾರಗಳಾಗಿವೆ ಎಂದರೂ ಕೂಡ ಮನುಜನ ಬಾಳು ಸೃಷ್ಟಿಯ ಸಮಷ್ಟಿಯ ಒಟ್ಟಂದದ ಹಂದರದಲ್ಲಿಯೇ ಅರಳಬೇಕಾದ ಹೂವು. ಹಾಗಲ್ಲದಿದ್ದರೆ ಹಾಹಾಕಾರದ ಗೋಳಿನ ಬಾಳು ನಮ್ಮದಾಗುತ್ತದೆ. ನಿಸರ್ಗದ ಜೊತೆಗೆ ಅನುಸಂಧಾನ ನಡೆಸುವ ರೀತಿಯಲ್ಲಿ ಬದುಕಲು ಕಲಿತ ದಿನ ಮಾನವ ನಿಜವಾದ ಜಾಣನಾಗುತ್ತಾನೆ. ಆಯಾ ಋತುಗಳು, ಆಯಾ ಮಾಸಗಳು ತಮ್ಮ ಸಹಜ ಗುಣ-ಲಕ್ಷಣಗಳೊಂದಿಗೆ ಮೈದೋರಿ ನಮ್ಮ ಬದುಕನ್ನು ಹಸನುಗೊಳಿಸುತ್ತವೆ. *********

ಹಿಂಡು ಮೋಡದ ಗಾಳಿ ಸವಾರಿ Read Post »

ಇತರೆ

ಖಾಸಗಿರಣಮತ್ತು ಅಭಿವೃದ್ದಿ

ಗಣೇಶ್ ಭಟ್ ಶಿರಸಿ ಖಾಸಗೀಕರಣವೇ ಅಭಿವೃದ್ಧಿಯ ದಾರಿಯೆಂದು ತಪ್ಪಾಗಿ ನಂಬಿರುವ ಕೇಂದ್ರ ಸರ್ಕಾರವು, ಹಲವಾರು ರೇಲ್ವೇ ಮಾರ್ಗಗಳಲ್ಲಿ ಖಾಸಗಿಯವರಿಗೆ ಅವಕಾಶ ನೀಡಲು ಮುಂದಾಗಿದೆ.ಈ ನೀತಿಯ ಪ್ರಕಾರ ಖಾಸಗಿ ನಿರ್ವಹಣಾಕಾರರು ತಮ್ಮದೇ ಬಂಡವಾಳ ತೊಡಗಿಸಿ ಹೊಸ ಎಂಜಿನ್ ಮತ್ತು ಭೋಗಿಗಳನ್ನು ಖರೀಧಿಸಿ ನಿಗದಿತ ಮಾರ್ಗಗಳಲ್ಲಿ ರೈಲು ಓಡಿಸಬೇಕು. ಪ್ರಯಾಣ ದರವನ್ನು ನಿಗದಿ ಪಡಿಸುವ ಅಧಿಕಾರವನ್ನು ನಿರ್ವಹಣಕಾರರಿಗೇ ಬಿಡಲಾಗಿದೆ. ಅವರ ಒಟ್ಟೂ ಗಳಿಕೆಯಲ್ಲಿ ಶೇಖಡವಾರು ಪಾಲನ್ನು ರೇಲ್ವೆ ಇಲಾಖೆಗೆ ನೀಡಬೇಕಿದೆ.ಈ ವಿಧದ ಖಾಸಗೀಕರಣದಿಂದ ರೇಲ್ವೇ ಪ್ರಯಾಣ ದರದಲ್ಲಿ ಹೆಚ್ಚಳವಾಗುವದೆಂಬ ಜನಸಾಮಾನ್ಯರ ಆತಂಕಕ್ಕೆ , ಆ ರೀತಿಯಾಗುವುದಿಲ್ಲವೆಂದು ಕೇಂದ್ರ ಸರ್ಕಾರ ಹೇಳುತ್ತಿದೆ. ಖಾಸಗಿಯವರಿಗೆ ಈಗ ಕೊಡಮಾಡಿರುವ ೧೫೦ ರೇಲ್ವೇ ಮಾರ್ಗಗಳು ಪ್ರಯಾಣಿಕರ ದಟ್ಟಣೆಯಿಂದ ರೈಲ್ವೇ ಇಲಾಖೆಗೆ ಲಾಭ ತಂದುಕೊಡುತ್ತಿರುವವು. ಆದರೂ ಖಾಸಗಿರಂಗದ ಲಾಭದ ದಾಹಕ್ಕೆ ಮಣಿದು, ನಷ್ಟಕಾರಕ ಮಾರ್ಗಗಳನ್ನು ಸರ್ಕಾರವಿಟ್ಟುಕೊಂಡು, ಲಾಭದಾಯಕ ಮಾರ್ಗಗಳನ್ನು ಖಾಸಗಿಯವರಿಗೆ ನೀಡಲು ಮುಂದಾಗಿದೆ. ಈ ಕ್ರಮದಿಂದಾಗಿ ಖಾಸಗಿ ರಂಗದವರಿಂದ ಸುಮಾರು 30 ಸಾವಿರ ಕೋಟಿ ರೂಗಳ ಹೂಡಿಕೆಯಾಗಲಿದೆಯೆಂದು ರೈಲ್ವೇ ಮಂತ್ರಿ ಹೇಳಿಕೊಂಡಿದ್ದಾರೆ. ರೇಲ್ವೇ ಇಲಾಖೆಗೆ ಈ ಮೊತ್ತದ ಹೂಡಿಕೆ ಜುಜುಬಿ ಎಂಬುದು ವಾಸ್ತವ. ಖಾಸಗಿಕರಣವನ್ನೇ ಪ್ರತಿಪಾದಿಸುವ ಕೇಂದ್ರಸರ್ಕಾರದ ಜನವಿರೋಧಿ ನಿಲುವಿಗೆ ಇದು ಇನ್ನೊಂದು ಉದಾಹರಣೆ.ಸಾರ್ವಜನಿಕ ಸಂಪರ್ಕ ವ್ಯವಸ್ಥೆಯ ನಿರ್ವಹಣೆಯ ಹೊಣೆಗಾರಿಕೆ ತಾತ್ವಿಕವಾಗಿ ಕೇಂದ್ರಸರ್ಕಾರದ್ದು. ಈ ಜವಾಬ್ದಾರಿಯನ್ನು ಕೇಂದ್ರಸರ್ಕಾರಕ್ಕೆ ನಿರ್ವಹಿಸುವ ಸಾಮರ್ಥ್ಯವಿಲ್ಲದಿದ್ದರೆ ಆಸಕ್ತ ರಾಜ್ಯಗಳಿಗೆ ಅವಕಾಶ ನೀಡಬೇಕಾದುದು ಸರಿಯಾದ ದಾರಿ. ಈ ಕ್ರಮ ರೇಲ್ವೇ ಖಾಸಗಿಕರಣವಲ್ಲ, ಕೆಲವು ಮಾರ್ಗಗಳನ್ನು ಮಾತ್ರ ಖಾಸಗಿಯವರಿಗೆ ಕೊಡುತ್ತಿದ್ದೇವೆ ಎನ್ನುವ ಕೇಂದ್ರದ ಸಮಜಾಯಿಷಿ ‘ಲಾಭದ ಖಾಸಗೀಕರಣ, ನಷ್ಟದ ಸಾಮಾಜಿಕರಣ’ ನೀತಿಗೆ ತಾಜಾ ಉದಾಹರಣೆ.*************8

ಖಾಸಗಿರಣಮತ್ತು ಅಭಿವೃದ್ದಿ Read Post »

ಇತರೆ, ಜೀವನ

ಕೋವಿಡ್-19,ಆತ್ಮಾವಲೋಕನ

ಸುರೇಶ್ ಎನ್.ಶಿಕಾರಿಪುರ ಕೋವಿಡ್ -೧೯ ಆತ್ಮಾವಲೋಕನದ ಅದೃಶ್ಯ ದೂತ. ತೊಂಬತ್ತರ ದಶಕದಿಂದ ಇಲ್ಲಿಯ ವರೆಗೆ ಅಂದರೆ ಸುಮಾರು ಮೂವತ್ತು ವರ್ಷಗಳಿಂದ ಈ ದೇಶದಲ್ಲಿ ಮಂದಿರ – ಮಸೀದಿಗಾಗಿ ನಡೆದ ಕಲಹ ಕಿತ್ತಾಟ ಹೋರಾಟ ರಾಜಕೀಯ ಈಗ ಫಲ ನೀಡುತ್ತಿದೆ. ಬಿತ್ತಿದ್ದೇ ಬೆಳೆಯುವುದು. ಜ್ಞಾನವನ್ನು ಬಿತ್ತಿದರೆ ಜ್ಞಾನ ಅಜ್ಞಾನವನ್ನು ಬಿತ್ತಿದರೆ ಅಜ್ಞಾನ. ಈ ದೇಶದ ಬಹುದೊಡ್ಡ ಯುವ ಸಮುದಾಯವನ್ನು ಮಂದಿರ ನಿರ್ನಾಮ ಮತ್ತು ನಿರ್ಮಾಣಕ್ಕೆ ಹುರಿದುಂಬಿಸಿ ನಾನಾ ಬಗೆಯ ಧಾರ್ಮಿಕ ತಳಹದಿಯ ಸಂಘಟನೆಗಳನ್ನು ಕಟ್ಟಿ ಹಿಂದೂ ರಾಷ್ಟ್ರ ನಿರ್ಮಾಣದ ಕಾರ್ಯಕ್ಕೆ ಯೋಧರನ್ನಾಗಿ ಪ್ರಯೋಗಿಸಲಾಯಿತು. ಈಗಲೂ ಅದು ಮುಂದುವರೆದೇ ಇದೆ. ಈ ಮತೀಯ ಹೋರಾಟಗಳು ಸೃಷ್ಟಿಸಿದ ಹಿಂಸೆ ಒಡಕು ಅಶಾಂತಿ ಅಂಧಕಾರ ಅಪನಂಬಿಕೆ ಅಂತಿಂಥಾದ್ದಲ್ಲ. ಪ್ರಗತಿಪರವಾಗಿ ಯುವ ಸಮುದಾಯವನ್ನು ಕಟ್ಟದೇ ಹೋದರೆ ಏನೇನು ಯಡವಟ್ಟುಗಳಾಗಬೇಕೊ ಅವೆಲ್ಲವೂ ಆಗುತ್ತವೆ‌ ಎಂಬುದಕ್ಕೆ ನಮ್ಮ ದೇಶದ ಇಂದಿನ ಸ್ಥಿತಿ ತಾಜಾ ಉದಾಹರಣೆ. ರಾಜಕೀಯ ಪಕ್ಷಗಳು ಧರ್ಮಾಧಾರಿತವಾದಾಗ ಅವು ಮಂದಿರ ಮಸೀದಿ ಇಗರ್ಜಿ, ಮಠಗಳು, ಬಾಬಾಗಳು, ದೇವರು ದಿಂಡಿರುಗಳ ಕಡೆಗೇ ಯೋಚಿಸುತ್ತವೋ ಹೊರತು ಒಂದು ಸಶಕ್ತ ವೈಜ್ಞಾನಿಕ ವೈಚಾರಿಕ ಸಮಾಜವನ್ನು ದೇಶವನ್ನು ಕಟ್ಟಲು ಅವುಗಳಿಂದ ಸಾಧ್ಯವಿಲ್ಲ‌. ಅದರ ಪ್ರತಿಫಲವೇ ಇಂದು ಭಾರತ ಎದುರಿಸುತ್ತಿರುವ ಕೋವಿಡ್-19 ಸಮಸ್ಯೆ. ಇದು ಒಂದು ಉದಾಹರಣೆಯಷ್ಟೆ. ಭಾರತದ ದಾರಿದ್ರ್ಯದ ಹಿಂದೆ ಇರುವುದೂ ಈ ವಿಚಾರಗಳೇ. ಈ ದೇಶದಲ್ಲಿ ಮಂದಿರ ಮಸೀದಿಗಾಗಿ ನಡೆದ ಮೆರವಣಿಗೆ, ಹೊಡೆದಾಟ, ವಾಗ್ವಾದ, ವಿಮರ್ಶೆ, ಊರು, ದೇಶ, ರಾಜ್ಯಗಳ ಬಂದ್ ಗಳು, ಸಮಾವೇಷಗಳು, ಬೈಟಕ್ ಗಳು, ರ್ಯಾಲಿಗಳು, ಭಾಷಣಗಳು, ಚುನಾವಣಾ ಪ್ರಣಾಳಿಕೆಗಳು, ಘೋಷಣೆಗಳು, ಶಂಕನಾದಗಳು, ರಥ ಯಾತ್ರೆಗಳು, ರಸ್ತೆ ತಡೆಗಳು, ಬಯ್ಕಾಟುಗಳು, ಆರೋಗ್ಯ ಶಿಕ್ಷಣ, ಸದೃಢ ಆರೋಗ್ಯ ವ್ಯವಸ್ಥೆ, ಆಸ್ಪತ್ರೆಗಳ ನಿರ್ಮಾಣ, ಸಂಶೋಧನೆಗಳು, ಪ್ರಯೋಗಾಯಲಗಳು, ಹೊಸಹೊಸ ವೈದ್ಯಕೀಯ ಆವಿಷ್ಕಾರಗಳು, ಔಷಧ, ಅಂಬ್ಯುಲೆನ್ಸ್, ಸಿಬ್ಬಂಧಿ ನೇಮಕಾತಿ ಮೊದಲಾದ ಮೂಲಭೂತ ಸೌಕರ್ಯಗಳು, ಶಿಕ್ಷಣ ಮೊದಲಾದವಕ್ಕಾಗಿ ನೆಡೆದಿದ್ದರೆ ಇಂದು ಭಾರತ ಅತ್ಯಂತ ಮುಂದುವರೆದ ದೇಶಗಳೆನಿಸಿಕೊಳ್ಳುತ್ತಿರು ಯಾವುದೇ ರಾಷ್ಟ್ರಗಳಿಗಿಂತ ಉನ್ನತ ಸ್ಥಿತಿಯಲ್ಲಿರುತ್ತಿತ್ತು. ಚಿಕಿತ್ಸೆ ಸಿಗದೆ, ಅನ್ನ ಸಿಗದೆ, ಆಶ್ರಯ ಸಿಗದೆ ಜನರು ಗುಳೇ ಹೋಗುವ, ಬೀದಿ ಬೀದಿಯಲ್ಲಿ ಬಿದ್ದು ಸಾಯುವ ಸ್ಥಿತಿ ಬರುತ್ತಿರಲಿಲ್ಲ. ಕೋವಿಡ್ – 19ರ ಈ ತುರ್ತು ಪರಿಸ್ಥಿತಿಯಲ್ಲಿ ಮಂದಿರ ಮಸೀದಿಗಳು ಜನರನ್ನು ರಕ್ಷಿಸಲಾರವು ಎಂಬುದನ್ನು ಈಗಲಾದರೂ ನಮ್ಮ ಯುವ ಸಮುದಾಯ ಅರ್ಥ ಮಾಡಿಕೊಳ್ಳಬೇಕು‌. ದಶಕಗಳಿಂದ ಯುವಕರನ್ನು ಧಾರ್ಮಿಕ ವಿಚಾರಗಳಿಗೆ ಪ್ರಚೋದಿಸಿ ಬಳಸಿಕೊಂಡದ್ದೇನಾದರೂ ಇಂದು ಉಪಯೋಗಕ್ಕೆ ಬರುತ್ತಿದೆಯೇ ಎಂಬುದನ್ನು ಆಲೋಚಿಸಬೇಕು. ಮನುಷ್ಯರ ಜೀವವನ್ನು ಉಳಿಸಲು, ರಕ್ಷಿಸಲು ಉಪಯೋಕ್ಕೆ ಬಾರದ ಮಂದಿರ – ಮಸೀದಿ ಧರ್ಮಗಳ ಗುಂಗಿನಿಂದ ಈಗಲಾದರೂ ಹೊರಬರಬೇಕು. ನಮ್ಮ ದೇಶ ಗಡ್ಡಕ್ಕೆ ಬೆಂಕಿ ಹತ್ತಿದಾಗ ಬಾವಿ ತೋಡುವ ಪ್ರಯತ್ನ ಮಾಡುತ್ತಿದೆ. ನಮಗೆ ಸರಿಯಾದ ಸುರಕ್ಷತಾ ವ್ಯವಸ್ಥೆಗಳು ಇಲ್ಲ ಎಂದು ವೈದ್ಯಕೀಯ ವಲಯದಿಂದ ಹತಾಷೆಯ ಕೂಗುಗಳು ಅಲ್ಲಲ್ಲಿ ಕೇಳಬರುತ್ತಿವೆ. ಯಾರನ್ನು ಯೋಧರು ಎಂದು ಈಗ ಪರಿಗಣಿಸಲಾಗಿದೆಯೋ ಅವರು ಚಿಕಿತ್ಸೆ ನೀಡಲು ಹೆದರುತ್ತಿದ್ದಾರೆ ಹಿಂಜರಿಯುತ್ತಿದ್ದಾರೆ. ಜನ ಭೀತಿಯಿಂದ ಕಂಗಾಲಾಗಿದ್ದಾರೆ. ಖಾಸಗೀ ಆಸ್ಪತ್ರೆಗಳು ಕೊರೋನಾ ರೋಗಿಗಳಿಗಾಗಿ ಬಿಲ್ ಬುಕ್ಕು ಹಿಡಿದು ರೆಡ್ ಕಾರ್ಪೆಟ್ ಹಾಸಿ ಕಾಯುತ್ತಿವೆ‌. ಸರ್ಕಾರಿ ವ್ಯವಸ್ಥೆ ವಿಫಲವಾಗಿದೆ, ಸೋತು ಕೈ ಚೆಲ್ಲವ ಹತಾಶ ಹಂತ ತಲುಪಿಯಾಗಿದೆ. ಇದೆಲ್ಲವೂ ಅವಿವೇಕದ ಅವೈಜ್ಞಾನಿಕ ಹಾಗೂ ಅವೈಚಾರಿಕ ವಿಚಾರಗಳಿಗೆ ಮನ್ನಣೆ ಕೊಟ್ಟದ್ದರ ಫಲ. ಭ್ರಷ್ಟಾಚಾರದ ಫಲ ಹಾಗೂ ಹೊಣೆಗೇಡಿತನದ, ಸ್ವಾರ್ಥದ ಫಲ. ಸರ್ಕಾರವೂ ವಿಫಲವಾಗಿದೆ. ಹಣವೂ ಇಲ್ಲ ಸುಸಜ್ಜಿತ ವೈದ್ಯಕೀಯ ಸೌಲಭ್ಯಗಳೂ ಇಲ್ಲ. ಕೋವಿಡ್ ಹೆಸರಿನಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂಬ ಕೂಗೂ ಎದ್ದಿದೆ. ಇದೇ ಸರಿಯಾದ ಹೊತ್ತು ಎಂದು ಕೊರೋನಾಕ್ಕೆ ಮದ್ದು ಕಂಡು ಹಿಡಿದಿರುವುದಾಗಿ ಸುಳ್ಳು ಪ್ರಚಾರ ಮಾಡಿ ಆ ಮೂಲಕ ಜನರ ಆರೋಗ್ಯದ ಜೊತೆ ಆತಂಕದ ಜೊತೆ ಚಲ್ಲಾಟವಾಡುತ್ತಾ ಅವರ ಮಾನಸಿಕ ದೌರ್ಬಲ್ಯವನ್ನೇ ಬಂಡವಾಳ ಮಾಡಿಕೊಂಡು ಕೋಟಿ ಕೋಟಿ ಹಣ ಲಪಟಾಯಿಸುವ ಔಷಧ ದಂಧೆ ಕೋರರು ಕುಣಿದಾಡುತ್ತಿದ್ದಾರೆ. ಹಾಗಿದ್ದರೂ ಆಳುವ ವ್ಯವಸ್ಥೆ ಅಂತವರ ಮೇಲೆ ಮೃದು ಧೋರಣೆಯನ್ನು ತಾಳಿದೆ. ಇದರ ವಿರುದ್ಧ ಯುವ ಸಮುದಾಯ ಜನತೆ ದಂಗೆ ಏಳುವುದಿಲ್ಲ ಎಂಬ ಖಾತ್ರಿ ಮೇಲಿನವರಿಗಿದೆ ಏಕೆಂದರೆ ಜನತೆಯನ್ನು ಹೇಗೆ ಭಾವನಾತ್ಮಕವಾಗಿ ವಂಚಿಸಿದ್ದೇವೆ ಅದು ಯಾವ ರೀತಿಯ ಕೆಲಸ ಮಾಡುತ್ತಿದೆ ಎಂಬ ಸತ್ಯ ಅವರಿಗೂ ಚನ್ನಾಗಿಯೇ ಗೊತ್ತಿದೆ. ಒಂದು ಸಂಸ್ಥೆಯಂತೂ ಈಗಾಗಲೇ ಕೋವಿಡ್ ಗೆ ತಾನು ಔಷಧ ಕಂಡು ಹಿಡಿದಿದ್ದು ಮುಂಬರು ಅಗಸ್ಟ್ ೧೫ ಕ್ಕೆ ಅದನ್ನು ಬಿಡುಗಡೆ ಮಾಡುವುದಾಗಿಯೂ ಘೋಷಿಸಿದೆ ಅದರ ವೈಜ್ಞಾನಿಕ ಸಾಧ್ಯಾಸಾಧ್ಯತೆಗಳ ವಿರುದ್ಧ  ದನಿ ಎದ್ದಾಗ ಎಚ್ಚೆತ್ತು ಮುಂಬರುವ ವರ್ಷಕ್ಕೆ ಔಷದ ಲಭ್ಯತೆಯ ಸಾಧ್ಯತೆಯನ್ನು ಮುಂದೂಡಿದೆ. ಯೋಗ ಗುರುವೊಬ್ಬರು ಕೆಮ್ಮು ಮತ್ತು ಜ್ವರಕ್ಕೆ ತಾನು ಔಷಧ ತಯಾರಿಸಿರುವುದಾಗಿ ಕೇಂದ್ರ ಆಯುಷ್ ಇಲಾಖೆಗೆ ಅನುಮತಿ ಕೋರಿ ಅರ್ಜಿ ಹಾಕಿ ಇತ್ತ ತಾನು ಕೊರೋನಾ ಜ್ವರಕ್ಕೆ ಕೊರೋನಿಲ್ ಎಂಬ ಔಷಧ ತಯಾರಿಸಿರುವುದಾಗಿ ದೊಡ್ಡ ಜಾಹಿರಾತು ನೀಡುವ ಮೂಲಕ ಲಾಭಿಗೆ ನಿತ್ತಿದೆ. ಆಯುಷ್ ಇಲಾಖೆ ನೋಟಿಸ್ ನೀಡಿದ್ದರೂ, ಬಾಬಾ ರಾಮದೇವ ಅವರ ಮೇಲೆ ಹಾಗೂ ಅವರ ಆಪ್ತರೊಬ್ಬರ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸಿರುವುದಾಗಿ ಹೇಳುತ್ತಿದ್ದರೂ ಕೇಂದ್ರದ ಮಂತ್ರಿಗಳು ಮಾತ್ರ ವಿಶ್ವಾಸಾರ್ಹವಲ್ಲದ ಲಾಭದ ದಂಧೆಯಾಗಿರುವ ಇದನ್ನು ಸಮರ್ಥಿಸಿಕೊಳ್ಳುತ್ತಾರೆ‌. ಇದನ್ನೆಲ್ಲ ಹ್ಞೂ ಎನ್ನಲು ದೇಶದ ಮೂಲೆ ಮೂಲೆಯಲ್ಲಿ ಅಂಧಾಭಿಮಾನಿಗಳ ದೊಡ್ಡಪಡೆಯೂ ಅವರ ಬೆನ್ನಿಗೆ ಇದೆ. ಅಂತಿಮವಾಗಿ ಇದರ ಫಲಿತಾಂಶ ಪ್ರಜಾ ಸಮೂಹದ ಮೇಲೆಯೇ. ವೈಜ್ಞಾನಿಕ ಮನೋಭಾವವನ್ನು ದೇಶದ  ಯುವಕರಲ್ಲಿ ಸಮಸ್ತ ಪ್ರಜಾ ಸಮೂಹದಲ್ಲಿ ಬೆಳೆಸದೆ ಧಾರ್ಮಿಕ ಮನೋಭಾವವನ್ನು ಬಿತ್ತಿ ಬೆಳೆದಿದ್ದರ ಫಲ ಇಂದು ಕಣ್ಣೆದುರೇ ಕಾಣುತ್ತಿದೆ. ಬಾಲ್ಕನಿಗೆ ಬಂದು ಚಪ್ಪಾಳೆ ಹೊಡೆದೂ ಆಯಿತು, ಮನೆ ಮನೆಯಲ್ಲಿ ಹಣತೆ ಹಚ್ಚಿಯೂ ಆಯಿತು. ಬಾಲ್ಕನಿಗೆ ಬಂದು ಚಪ್ಪಾಳೆ ತಟ್ಟಿದರೆ ಊರೊಳಗೆ ನುಗ್ಗಿದ ಮಾರಿ ಹೆದರಿ ಓಡಿ ಹೋಗಲು ಅದೇನು ಗದ್ದೆಯ ಫಸಲಿಗೆ ಮುತ್ತಿದ ಹಕ್ಕಿಯ ಹಿಂಡೇ…? ಕೊನೆಗೆ ಇದೆಲ್ಲವನ್ನೂ ಮಾಡಲು ಹೇಳಿ ಮಾಡಿಸಿದ ಆಳುವ ನಾಯಕ ‘ಕೋವಿಡ್ ನೊಂದಿಗೆ ಜೀವಿಸುವುದ ಕಲಿಯಿರಿ’ ಎಂದುಬಿಟ್ಟ. ಇಂತಹ ಸ್ಥಿತಿ ನಿರ್ಮಾಣವಾಗುವುದು ದೌರ್ಬಲ್ಯದಿಂದ. ದೌರ್ಬಲ್ಯವು ಬರುವುದು ಮೌಢ್ಯ ಮತ್ತು ಮತೀಯ ಸೈದ್ಧಾಂತಿಕತೆಯನ್ನು ಬಿತ್ತಿ ವೈಜ್ಞಾನಿಕತೆಯನ್ನು ಉದಾಸೀನ ಮಾಡುವುದರಿಂದ. ಲಂಕೇಶ್ ಅಂದೇ ಹೇಳಿದ್ದರು ‘ಇಟ್ಟಿಗೆ ಪವಿತ್ರವಲ್ಲ ಜೀವ ಪವಿತ್ರ’ ಎಂದು. ಆ ಮಾತು ಈಗ ನೆನಪಾಗುತ್ತಿದೆ. ಪವಿತ್ರವಾದ ಜೀವಗಳನ್ನು ಉಳಿಸಲು ಈಗ ಯಾವ ಮಂದಿರ ಮಸೀದಿಗಳೂ ಆ ಕುರಿತ ರಾಜಕೀಯ ವಿಚಾರ ವಾಗ್ವಾದಗಳೂ ಬರುವುದಿಲ್ಲ ಹಾಗೂ ಸಶಕ್ತವಾಗಿಲ್ಲ. ಜಢ ಸಿದ್ಧಾಂತಗಳಿಂದ ಹೊರಬಂದು ನಾವೀಗ ಅವಲೋಕಿಸಬೇಕಾಗಿದೆ. ನಾವು ಮಾತ್ರವಲ್ಲ ನಮ್ಮನ್ನಾಳುವ ನಾಯಕರೂ… “ಓ ಬನ್ನಿ ಸೋದರರೆ ಬೇಗ ಬನ್ನಿ ಗುಡಿ ಚರ್ಚು  ಮಸಜೀದಿಗಳ ಬಿಟ್ಟು ಹೊರ ಬನ್ನಿ ಬಡತನವ ಬುಡಮಟ್ಟ ಕೀಳ ಬನ್ನಿ ಮೌಡ್ಯತೆಯ ಮಾರಿಯನು ಹೊರದೂಡಲೈ ತನ್ನಿ ವಿಜ್ಞಾನ ದೀವಿಗೆಯ ಹಿಡಿಯ ಬನ್ನಿ ಓ ಬನ್ನಿ ಸೋದರರೆ ಬೇಗ ಬನ್ನಿ……. ಸಿಲುಕದಿರಿ ಮತವೆಂಬ ಮೊಹದಜ್ಞಾನಕ್ಕೆ ಮತಿಯಿಂದ ದುಡುಯಿರೈ ಲೋಕ ಹಿತಕೆ ಆ ಮತದ ಈ ಮತದ ಹಳೆಮತದ ಸಹವಾಸ ಸಾಕಿನ್ನು ಸೇರಿರೈ ಮನುಜ ಮತಕ್ಕೆ ಓ ಬನ್ನಿ ಸೋದರರೇ ವಿಶ್ವ ಪಥಕೆ…..” ಎಂದು ಕವಿ ಕುವೆಂಪು ಸುಮ್ಮನೇ ಕರೆ ನೀಡಲಿಲ್ಲ. ದೇಶದ ಯುವಕರನ್ನು ಕುರಿತು ವಿವೇಕಾನಂದರು ಸುಮ್ಮಸುಮ್ಮನೇ ಕಂಠಶೋಷಣೆ ಮಾಡಿಕೊಂಡು ಕರೆನೀಡಲಿಲ್ಲ. ಅವರೆಲ್ಲರ ಧಾರ್ಮಿಕ ದೃಷ್ಟಿ ವೈಜ್ಞಾನಿಕತೆಯಿಂದ ಕೂಡಿತ್ತು. ದೇಶ ಮತ್ತು ಅದರ ಸಮಸ್ತ ಅಭಿವೃದ್ಧಿಯ ಕುರಿತು ಅವರ ದಾರ್ಶನಿಕತೆ ದೂರದೃಷ್ಟಿಯಿಂದ ಕೂಡಿತ್ತು. ಅದೆಂದೂ ಅವೈಜ್ಞಾನಿಕವೂ ಮತೀಯಾಂಧಕಾರಿಯೂ ಆಗಿರಲಿಲ್ಲ. ಅವರು ಬದುಕಿದ್ದ ಕಾಲದಲ್ಲೂ ಸಾಂಕ್ರಾಮಿಕ ರೋಗಗಳು ದೇಶವನ್ನು ನುಗ್ಗಿ ಜನರನ್ನು ಇನ್ನಿಲ್ಲದಂತೆ ಬಾದಿಸಿದ್ದವು. ದೇಶದ ವಿಜ್ಞಾನಿಗಳು ಆಗ ಔಷಧ ಶೋಧದಲ್ಲಿ ತೊಡಗಿದರು. ಸರ್ಕಾರಗಳು ನೈಜ ಕಾಳಜಿಯಿಂದ ಕೆಲಸ ಮಾಡಿದವು. ಭಾರತವೇ ಕ್ಷಯ ರೋಗಕ್ಕೆ, ರೇಬಿಸ್ಸಿಗೆ, ಪ್ಲೇಗ್, ಕಾಲರಾ, ಪೋಲಿಯೋ ಮೊದಲಾದ ಖಾಯಿಲೆಗಳಿಗೆ ಮದ್ದು ಅರೆಯಿತು. ಇದು ಸಾಧ್ಯವಾದದ್ದು ವಿಜ್ಞಾನಕ್ಕೆ ನೀಡಿದೆ ಒತ್ತಿನಿಂದ ಪ್ರಾಮುಖ್ಯತೆಯಿಂದ. ಇಂದು ಭಾರತ ಮೇಲ್ಕಂಡ ಕಾಯಿಲೆಗಳನ್ನು ಯಶಸ್ವಿಯಾಗಿ ಎದುರಿಸಿದೆ. ಈಗ ಬಂದಿರುವ ಕೊರೋನಾ ಹಾಗೆ ನೋಡಿದರೆ ಹಿಂದಿನ ವಿನಾಶಕಾರಿ ಸಾಂಕ್ರಾಮಿಕಗಳ ಸ್ವರೂಪದ್ದಲ್ಲ ‘ಹುಲಿಗಿಂತ ಹುಲಿಯ ಬಣ್ಣನೆಯೇ ಹೆದರಿಸಿತ್ತು’ ಎಂಬ ಗಾದೆ ಮಾತಿನಂತೆ ಕೊರೋನಾಕ್ಕಿಂತ ಅದರ ಬಗೆಗಿನ ವರ್ಣನೆಗಳು, ಭಯಾನಕ ಸುದ್ಧಿಗಳು ಎಬ್ಬಿಸುವ ಬೊಬ್ಬೆಯೇ ಇಂದು ಭಯಾನಕತೆಯನ್ನು ಸೃಷ್ಟಿಸಿದೆ. ಇಲ್ಲಿಯೂ ಆಳುವ ವ್ಯವಸ್ಥೆ ಕೋಮು ರಾಜಕೀಯವನ್ನೇನೂ ಬಿಡಲಿಲ್ಲ. ಮಾದ್ಯಮಗಳು ಮುಸ್ಲಿಮ್ ತಬ್ಲಿಘಿಗಳನ್ನು  ಕೊರೋನಾ ಪ್ರಸಾರಕರು ಎಂಬಂತೆ ಬಿಂಬಿಸಿದವು. ಹಳ್ಳಿಹಳ್ಳಿಗಳಲ್ಲಿ ಡಂಗುರ ಹೊಡೆಸಿದರು, ಸಣ್ಣಪುಟ್ಟ ಬಡ ವ್ಯಾಪಾರಿಗಳನ್ನು ಹೆದರಿಸಿ ಗದರಿಸಿ ಹೊಡೆದು ಬಡಿದು ಓಡಿಸಿದರು. ಎಸ್ಟೋ ಬಡವರು ಮನೆ ಹೊಟ್ಟೆಗಿಲ್ಲದೆ ನರಳುವ ಸ್ಥಿತಿ ಸೃಷ್ಟಿ ಮಾಡಿದರು. ಕೊರೋನಾದ ಹೆಸರಲ್ಲಿ ಒಂದು ಸಮುದಾಯವನ್ನು ಅಸ್ಪೃಷ್ಯರನ್ನಾಗಿಸುವ, ಪರಕೀಯರರನ್ನಾಗಿಸುವ ಕೆಲಸವನ್ನು ಯಶಸ್ವಿಯಾಗಿ ಮಾಡಿ ಮುಗಿಸಿದರು. ಇದು ಧಾರ್ಮಿಕ ಮನೋಭಾವ ಎಂಥಹಾ ಅಮಾನವೀಯ ಮನಸ್ಥಿತಿಗಳನ್ನು ಪರಿಸ್ಥಿತಿಗಳನ್ನು ಸೃಷ್ಟಿಸಬಲ್ಲದು ಎಂಬುದಕ್ಕೆ ಉದಾಹರಣೆ. ಈಗಾಗಲೇ ದ್ವೇಷದ ಮೂಟೆಗಳಾಗಿರುವ ಯುವ ಸಮುದಾಯ ಒಂದು ನಿರ್ದಿಷ್ಟ ಸಮುದಾಯದ ಮೇಲೆ ಕೃದ್ಧರಾಗಿ ಕುದಿಯುವಂತಾಯಿತು. ಸಾಂಕ್ರಾಮಿಕ ರೋಗದಲ್ಲೂ ಧರ್ಮದ ವಿಷಬೀಜ ಬಿತ್ತಿ ರಾಜಕೀಯ ಅಧಿಕಾರದ ಫಸಲು ತೆಗೆಯುವ ಕೃಷಿಯನ್ನು ಭಲೆ ನಾಜೂಕಿನಿಂದ ನಿರ್ವಹಿಸಲಾಯಿತು. ಕೋಟ್ಯಾಂತರ ಕಾರ್ಮಿಕರು ಅನ್ನ ಆಶ್ರಯವಿಲ್ಲದೆ ಗುಳೇ ಹೊರಟು ಹಾದಿಬೀದಿಯಲ್ಲಿ ಬಿದ್ದು ಸತ್ತದ್ದು ಲೆಕ್ಕಕ್ಕಿಲ್ಲವಾಯಿತು.‌ ದೇಶ ಕಟ್ಟಿದವರು ಸೋಂಕಿತರಾದರು ದೇಶ ದೋಚಿದವರು ತಮ್ಮ ಬಹು ಮಹಡಿಯ ಕಟ್ಟಡಗಳಲ್ಲಿ ಸುರಕ್ಷಿತರಾದರು. ಒಟ್ಟಿನಲ್ಲಿ ಅವಿವೇಕದ ಪರಮಾವಧಿ, ಅಲಕ್ಷ್ಯ, ಬಡವರು ದುಡಿಯುವ ವರ್ಗದ ಬಗೆಗಿನ ಅಸಡ್ಡೆ ತಿರಸ್ಕಾರ ಮನೋಭಾವಗಳು ಈ ದೇಶದಲ್ಲಿ ಕಾಯಿಲೆ ವ್ಯಾಪಕವಾಗಿ ಹಬ್ಬಲು ಕಾರಣವಾದವು. ವಿಶ್ವ ಆರೋಗ್ಯ ಸಂಸ್ಥೆಯು ಭಾರತದಂತಹಾ ದೇಶದಲ್ಲಿ ಸೋಂಕು ಸಮುದಾಯದ ಹಂತವನ್ನು ತಲುಪಿದರೆ ಏನು ಅನಾಹುತ ಆಗಬಹುದು ಎಂದು ಎಚ್ಚರಿಸಿತ್ತೋ ಅದು ನಮಗೆ ಎಚ್ಚರವಾದಂತೆ ಕಾಣಲಿಲ್ಲ. ನಾವು ಯಾವುದನ್ನು ಪ್ರಶ್ನಿಸಬೇಕೊ ಅದನ್ನು ಪ್ರಶ್ನಿಸಲಿಲ್ಲ ಯಾವುದನ್ನು ಬೆಂಬಲಿಸ ಬಾರದೊ ಯಾವುದನ್ನು ಒಪ್ಪ ಬಾರದೊ‌ ಯಾವುದನ್ನು ಹಿಂಬಾಲಿಸಬಾರದೋ ಅವುಗಳನ್ನು ಬೆಂಬಲಿಸಿದ್ದರ ಹಿಂಬಾಲಿಸಿದ್ದರ ಒಪ್ಪಿದ್ದರ ಫಲವನ್ನೀಗ ಉಣ್ಣುತ್ತಿದ್ದೇವೆ. ದಶಕಗಳಿಂದ ಧರ್ಮದ ನಿದ್ದೆ ಗುಳಿಗೆ ನುಂಗಿ ಮತ್ತೇರಿ ನಿಶೆಯೊಳಗೆ ನಿದ್ದೆಹೋದದ್ದರ ಫಲ ಇಂದು ಅಸಹಾಯಕ ಸ್ಥಿತಿಗೆ ಸೃಷ್ಟಿಯಾಗುವಂತೆ ಮಾಡಿದೆ. ಇನ್ನಾದರೂ ಈ ಅವಿಚಾರಗಳಿಂದ ಹೊರ ಬಂದು ಪ್ರಗತಿಪರವಾಗಿ ಯೋಚಿಸುವುದನ್ನು ಕಲಿಯಬೇಕು ವೈಜ್ಞಾನಿಕ ಮನೋಧರ್ಮವನ್ನು ರೂಢಿಸಿಕೊಳ್ಳುವ ಮೂಲಕ ಧರ್ಮ ದೇವರು ಜಾತಿಗಳೆಂಬ ಶ್ರೇಷ್ಟತೆಯ ವ್ಯಸನಗಳಿಂದ ಹೊರಬಂದು ದೇಶವನ್ನು ಆಂತರಿಕವಾಗಿ ಬಲಪಡಿಸಬೇಕು. ಶಿಕ್ಷಣ ಮತ್ತು ಆರೋಗ್ಯ ವ್ಯವಸ್ಥೆ ಕುಸಿದರೆ ಅಂತಹಾ ದೇಶಕ್ಕೆ ಯಾವತ್ತಿಗೂ ಭವಿಷ್ಯವಿಲ್ಲ. ಧರ್ಮದ ಅಂಧಾಕಾರದ ತಳಹದಿಯ ಮೇಲೆ ದೇಶ ಕಟ್ಟಲು ಹೊರಟರೆ ಅಂತಹಾ ದೇಶ ಎಂದಿಗೂ ಸದೃಢ ದೇಶವಾಗಲಾರದು. *******************

ಕೋವಿಡ್-19,ಆತ್ಮಾವಲೋಕನ Read Post »

You cannot copy content of this page

Scroll to Top