ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ

ಮೊದಲ ಕವಿತೆಯ ಹುಟ್ಟು

ಮೊದಲ ಕವಿತೆಯ ರೋಮಾಂಚನ ಅರ್ಪಣಾ ಮೂರ್ತಿ ಸುಮಾರು ಮೂರು ವರ್ಷಗಳ ಹಿಂದಿರಬಹುದು, ಸ್ಮಾರ್ಟ್ ಫೋನ್ ಬಳಸಲು ಬಾರದ ದಿನಗಳಲ್ಲಿ ಅಚಾನಕ್ಕಾಗಿ ಉಡುಗೊರೆಯಾಗಿ ಸಿಕ್ಕಿದ ಸ್ಮಾರ್ಟ್ ಫೋನ್ ಮಂತ್ರದಂಡ ಕೈಗೆ ಸಿಕ್ಕಷ್ಟೇ ಖುಷಿ ತಂದಿತ್ತು. ಸಾಮಾಜಿಕ ಜಾಲತಾಣಗಳ ಬಳಕೆ ಅಭ್ಯಾಸವಿಲ್ಲದ ನನಗೆ ಎಫ್ಬಿಯ ಕುರಿತು ಒಂದು ಸಣ್ಣ ಕುತೂಹಲವನ್ನು ನನ್ನೊಳಗೆ ಮೂಡಿಸಿತ್ತು. ಪರಿಚಯದ ಗೆಳೆಯರ ಮಾತಿನಂತೆ ಕೆಲವೇ ಕೆಲವು ಬರಹಗಾರರ ಕವಿಗಳ ಸ್ನೇಹಪಟ್ಟಿಯಲ್ಲಿ ನಾನೂ ಸಹ ಸ್ಥಾನ ಗಿಟ್ಟಿಸಿದ್ದೆ. ಎಫ್ಬಿ ಲೋಕದಲ್ಲಿ ಗುರುತಿಸಿಕೊಂಡಿದ್ದ ಕವಿಗಳ ಸಾಲಿನಲ್ಲಿ ನಾ ಕಾಣದ ಬಿಂದುವಿನಂತಿದ್ದರೂ, ಅವರುಗಳು ಕವಿತೆ ಕಟ್ಟುವ ಪರಿ ನನಗಂತೂ ಅತೀ ಸೋಜಿಗ, ಕವಿತೆಯೆಡೆಗಿನ ಕುತೂಹಲ ತಣಿಸಿಕೊಳ್ಳಲಾದರೂ ಅವರುಗಳನ್ನ ಮಾತನಾಡಿಸಿಬಿಡಲೇ ಎಂದು ಅದೆಷ್ಟೋ ಬಾರಿ ಅನಿಸಿದ್ದರೂ ಅವರ ಹಮ್ಮು ಬಿಮ್ಮುಗಳ ನಡುವೆ ನನ್ನ ಸಂಕೋಚ ದುಪ್ಪಟ್ಟಾಗಿತ್ತು. ಈ ನಡುವೆ ಅತೀ ಹೆಚ್ಚು ಪ್ರೇಮಕವಿತೆಗಳ ನವಿರಾಗಿ ಹೆಣೆಯುತ್ತಿದ್ದ ಕವಿಮಿತ್ರರೊಬ್ಬರನ್ನು ಕೇಳಿಯೇ ಬಿಟ್ಟಿದ್ದೆ, ಇಷ್ಟು ಚೆಂದದ ಪದಗಳ ಹೆಣಿಕೆ ಹೇಗೆ ಸಾಧ್ಯ ಸರ್ ಅಂತ, ಆ ಕವಿಮಿತ್ರರಂತೂ ಅವರ ಕವಿತೆಯಷ್ಟೇ ಸರಳ ವ್ಯಕ್ತಿ, ಎಷ್ಟು ಮುಕ್ತವಾಗಿ ಮಾತಿಗಿಳಿದರೆಂದರೆ ಒಂದು ಆತ್ಮೀಯತೆಯ ಪರಿಧಿಯೊಳಗೆ ಸೇರಿದ ಅನುಭವವಾಯ್ತು. ಅವರು ಹೇಳಿದ್ದಿಷ್ಟು, ನೋಡು ಹುಡುಗಿ ಕವಿತೆ ಕಟ್ಟುವುದು ಕಷ್ಟವಲ್ಲ, ನೀ ಕೂಡ ಚೆಂದವಾಗಿ ಪದ ಕಟ್ಟಬಹುದು, ಸುತ್ತಲಿನ ಲೋಕ ಅವಲೋಕಿಸು, ನಂತರ ಅದನ್ನೆಲ್ಲ ಕಣ್ಮುಚ್ಚಿ ಧ್ಯಾನಿಸು, ಮನದೊಳಗೆ ಮೂಡಿದ ಪದಗಳ ಒಂದಕ್ಕೊಂದು ನಾಜೂಕಾಗಿ ಸೇರಿಸು ಇದಿಷ್ಟೇ ಕವಿಯ ಗುಟ್ಟು ಅಂದಿದ್ರು. ನಾ ನಕ್ಕು ಸುಮ್ಮನಾಗಿದ್ದೆ. ನಾನೋ ಕಾಲೇಜು ದಿನಗಳಲ್ಲಿ ಓದಿದ ಪದ್ಯಗಳ ಹೊರತಾಗಿ ಕವಿತೆಯ ಗಂಧಗಾಳಿಯೇ ಅರಿಯದವಳು ಇನ್ನು ಕವಿತೆ ಕಟ್ಟುವುದಂತೂ ಅಸಾಧ್ಯ ಎನ್ನುತ್ತಲೇ ಸುಮ್ಮನಾಗಿದ್ದೆ. ಅಪರೂಪಕ್ಕೊಮ್ಮೆ ಮಾತಿಗಿಳಿಯುತ್ತಿದ್ದ ಕವಿಮಿತ್ರರ ಮೊದಲ ಪ್ರಶ್ನೆ, ಏನಾದರೂ ಬರೆಯಲು ಪ್ರಯತ್ನಿಸಿದಿರಾ ಎನ್ನುವುದೇ ಆಗಿತ್ತು. ಇಲ್ಲ ಗುರುಗಳೇ ನನ್ನಿಂದ ಆಗದ ಕೆಲಸ ಎಂದು ನಾ ಕೂಡ ಸುಮ್ಮನಾಗುತ್ತಿದ್ದೆ. ಈ ನಡುವೆ ಪದವಿ ಕಾಲೇಜಿನ ಪರೀಕ್ಷೆಗಳು ಶುರುವಾಗಿತ್ತು, ಇನ್ನೂ ನೆನಪು ಹಸಿಯಿದೆ, ಡಿಸೆಂಬರ್ ಎರಡನೇ ತಾರೀಖು ಮಧ್ಯಾಹ್ನದ ಪರೀಕ್ಷಾ ಕರ್ತವ್ಯ ನನ್ನದಿತ್ತು. ಪರೀಕ್ಷೆ ಶುರುವಾಗಿ ವಿದ್ಯಾರ್ಥಿಗಳು ಬರೆಯಲು ತೊಡಗಿದ ಅರ್ಧ ಗಂಟೆಗೆಲ್ಲಾ ಧೋ ಎಂದು ಮಳೆ ಶುರುವಾಗಿತ್ತು. ಮಳೆಯೆಂದರೆ ಯಾವಾಗಲೂ ಹೀಗೆ ಮನದೊಳಗೆ ಸಣ್ಣ ಪುಳಕ ಹುಟ್ಟಿಸದೇ ಇರಲಾರದೇನೋ, ಕೊಠಡಿಯಲ್ಲಿ ಅಡ್ಡಾಡುತ್ತಾ ಕಿಟಕಿ ಎದುರು ಬಂದು ನಿಂತಿದ್ದೆ. ಗುಬ್ಬಿ ಗಾತ್ರಕ್ಕಿಂದ ಸ್ವಲ್ಪವೇ ದೊಡ್ಡದಿದ್ದ ಒಂದು ಚೆಂದದ ಹಕ್ಕಿ, ವಿದ್ಯುತ್ ತಂತಿಯ ಮೇಲೆ ವೈರಾಗ್ಯ ತಳೆದಂತೆ ಮಳೆಯಲ್ಲಿ ತೊಯ್ದು ಮುದ್ದೆಯಂತೆ ಕೂತಿತ್ತು. ಅರೇ ಇದೇನಾಯ್ತು ಈ ಹಕ್ಕಿಗೆ ಎಂದು ಕೌತುಕದಲ್ಲೇ ಅದರತ್ತ ದೃಷ್ಟಿ ನೆಟ್ಟು ನಿಂತಿದ್ದೆ, ಸುಮಾರು ಎರಡು ಗಂಟೆಗಳ ಕಾಲ ಕುಂಭದ್ರೋಣ ಮಳೆಯಂತೆ ಸುರಿದ ಮಳೆಯಲ್ಲಿ ಅಲುಗದೇ ಕುಳಿತ ಆ ಹಕ್ಕಿ ನನ್ನ ಮನಸ್ಸನ್ನು ಅಲುಗಿಸಿದ್ದು ಸುಳ್ಳಲ್ಲ. ಮಳೆ ನಿಂತಂತೇ ಆ ಹಕ್ಕಿ ಅದೆತ್ತಲೋ ಹಾರಿತ್ತು. ಆಗಲೇ ಕವಿಮಿತ್ರರ ಮಾತು ನೆನಪಾಗಿತ್ತು, ಸುತ್ತ ಕಂಡದ್ದು ಅವಲೋಕಿಸು, ಧ್ಯಾನಿಸು, ಪದ ಪೋಣಿಸು… ಹೌದು, ಆಗ ಹುಟ್ಟಿದ ನನ್ನ ಮೊದಲ ಕವಿತೆಯ ಮೊದಲ ಸಾಲು “ಅದಾವ ಮುನಿಸೋ ಇಲ್ಲ ಕಲ್ಲಾದ ಮನಸೋ, ಗೌತಮನ ಹಾದಿ ಕಾದ ಅಹಲ್ಯೆಯ ಕಂಗಳ ಕಾಯುವಿಕೆಯೋ, ಇಲ್ಲ ಕಲ್ಲೊಳಗಿನ ಮನದ ವೇದನೆಯೋ” ಬಾಲಿಶವೋ, ಅಪಕ್ವವೋ ಒಟ್ಟಿನಲ್ಲಿ ಮೊದಮೊದಲು ಮನದೊಳಗೆ ನಾ ಕಟ್ಟಿದ ಪದಗಳ ಸಾಲು ಈಗಲೂ ನವಿರು ನೆನಪುಗಳ ಸಾಲಿನಲ್ಲಿ ಸೇರಿ ಹೋಗಿದೆ. ಕೊನೆಗೂ ಪೂರ್ಣಗೊಳಿಸಿದ ಈ ಕವಿತೆಯನ್ನು ಅತಿ ಹಿಂಜರಿಕೆಯಿಂದಲೇ ಮುಖಪುಸ್ತಕದ ಗೋಟೆಗಂಟಿಸಿದ್ದೆ. ಎಲ್ಲರ ಪ್ರತಿಕ್ರಿಯೆ ಹೇಗಿರಬಹುದೆಂದು ನೆನೆದು, ನೆನೆದು ಮುದ್ದೆಯಾದ ಹಕ್ಕಿಗಿಂತಲೂ ಹೆಚ್ಚಿಗೆ ಸಂಕೋಚದಿಂದಲೇ ಮುದ್ದೆಯಾಗಿದ್ದೆ. ನನ್ನ ನಿರೀಕ್ಷೆ ಹುಸಿಗೊಳಿಸುವಂತೆ ಎಲ್ಲರಿಂದಲೂ ಉತ್ತಮ ಪ್ರತಿಕ್ರಿಯೆ ಬಂತು. ಮೊದಲ ಕವಿತೆ ನನ್ನ ಉಳಿದ ಕವಿತೆಗಳಿಗೆ ಅಡಿಪಾಯವಾಯ್ತು, ಬರೆಯುವ ಉತ್ಸಾಹ ಹೆಚ್ಚಿದಂತೆಲ್ಲಾ ಈಗೀಗ ಮತ್ತಷ್ಟು ಪಕ್ವವಾಗಿ ಪದಗಳನ್ನು ಜೋಡಿಸಲು ಕಲಿಯುತ್ತಿದ್ದೇನೆ. ಅದೆಷ್ಟೇ ಕವಿತೆಗಳನ್ನು ಬರೆದರೂ, ಧೋ ಎಂದು ಸುರಿವ ಮಳೆ ನನ್ನ ಮೊದಲ ಕವಿತೆಯ ರೋಮಾಂಚನ ಇಮ್ಮಡಿಗೊಳಿಸುತ್ತದೆ ಈಗಲೂ. ************************************************************

ಮೊದಲ ಕವಿತೆಯ ಹುಟ್ಟು Read Post »

ಇತರೆ

ಬಾಯಿಬಡುಕ ಸಾಮಾಜಿಕ ಮಾಧ್ಯಮಗಳು

ಲೇಖನ ನೂತನ ದೋಶೆಟ್ಟಿ            ಭಾರತದಲ್ಲಿ ಅಸಹನೆ ಹೆಚ್ಚುತ್ತಿದೆ ಎನ್ನುವ ಮಾತು ಇತ್ತೀಚಿನ ದಿನಗಳಲ್ಲಿ ಎಲ್ಲೆಡೆ ಕೇಳಿಬರುತ್ತಿರುವುದಷ್ಟೇ ಅಲ್ಲ ;ಅದನ್ನು ಪುಷ್ಟೀಕರಿಸುವ ಅನೇಕ ಸಂಗತಿಗಳು ಮೇಲಿಂದ ಮೇಲೆ ನಡೆಯುತ್ತಿವೆ. ಮೊದ ಮೊದಲು ಇಂತಹ ಘಟನೆಗಳು ನಡೆದಾಗ  ಆಘಾತವಾಗುತ್ತಿತ್ತು , ವೇದನೆಯಾಗುತ್ತಿತ್ತು . ಕೆಲ ಸಮಯದ ನಂತರ ಅದರಲ್ಲಿ ಕ್ರೂರತೆಯ ಛಾಯೆ ಇಣುಕಿದಾಗ ಕಳವಳವಾಗುತ್ತಿತ್ತು ;ಆಶ್ಚರ್ಯವೂ ಆಗುತ್ತಿತ್ತು. ಈಗ ಗೊಂದಲವಾಗುತ್ತಿದೆ ;ಯಾವುದು, ಯಾರಿಗೆ, ಯಾಕಾಗಿ ಅಸಹನೆಯಾಗುತ್ತದೆ ಎನ್ನುವುದನ್ನು ತಿಳಿಯಲಾಗದೆ ! ಅಭಿಪ್ರಾಯ ಬೇಧಗಳ ಹಿನ್ನೆಲೆಯಲ್ಲಿ ಕಳೆದ ಮೂರು-ನಾಲ್ಕು ವರ್ಷಗಳಲ್ಲಿ ನಡೆದ ಕೆಲವು ‘ಹತ್ಯೆಗಳು’ ಯಾಕಾಗಿ ನಡೆದವು ಹಾಗೂ ಅವುಗಳನ್ನು ಮಾಡಿದ ಅಥವಾ ಮಾಡಿಸಿದವರಿಗೆ ಅದರಿಂದ ಆದ ಲಾಭವೇನು ?ಎನ್ನುವುದು ಇನ್ನೂ ಪ್ರಶ್ನಾರ್ಥಕವಾಗಿದೆ. ಈ ಹತ್ಯೆಗಳು ಸಮಾಜದಲ್ಲಿ ಒಂದು ರೀತಿಯ ಸಂಚಲನವನ್ನು ಉಂಟುಮಾಡಿ ದೌರ್ಜನ್ಯವನ್ನು ಪ್ರಶ್ನಿಸುವ ದಿಟ್ಟ ಯುವ ಸಮುದಾಯವೊಂದನ್ನು ಸಂಘಟಿಸಿದ್ದು ಆ ಸಂದರ್ಭದಲ್ಲಿ ಆದ ಗುಣಾತ್ಮಕ ಬೆಳವಣಿಗೆ ಅಷ್ಟೇ ಅಲ್ಲ. ಪಾರಂಪರಿಕ ಮಾಧ್ಯಮಗಳಲ್ಲಿ ಕಣ್ಮರೆಯಾಗುತ್ತಿರುವ ಸಾಮಾಜಿಕ ಕಳಕಳಿಯನ್ನು, ಅಭಿವ್ಯಕ್ತಿ ಸ್ವಾತಂತ್ರ್ಯದ ಘನತೆಯನ್ನು ಎತ್ತಿ ಹಿಡಿಯುವ ಮೂಲಕ ಅದನ್ನು ತಮ್ಮ ಕೈಗೆ ಸಾಮಾಜಿಕ ಮಾಧ್ಯಮಗಳು ತೆಗೆದುಕೊಂಡಿದ್ದು ಇನ್ನೊಂದು ಗುಣಾತ್ಮಕ ಬೆಳವಣಿಗೆ. ಆದರೆ ದುರದೃಷ್ಟವಶಾತ್‌ ಅದು ಹಾಗೆ ಉಳಿಯಲಾರದೇ ಕೆಚ್ಚು, ರೋಷಾವೇಶ ಹಾಗೂ ಹುಂಬತನಕ್ಕೆ ಇಳಿಯಿತು.ಇದಕ್ಕೆ ಸಾಹಿತ್ಯ ಸಮಾವೇಶಗಳಂಥ ಬೌದ್ಧಿಕ ಪ್ರಜ್ಞೆಯ ತಾಣಗಳೂ ಸಾಕ್ಷಿಯಾದವು.ಈ ಸಂದರ್ಭಗಳಲ್ಲೂ ಸಾಮಾಜಿಕ ಮಾಧ್ಯಮಗಳ ಪಾರುಪತ್ಯವೇ ಎಗ್ಗಿಲ್ಲದೇ ನಡೆಯಿತು. ಮಾತೆತ್ತಿದರೆ ಸಮಾನತೆ, ಸ್ವಾತಂತ್ರ್ಯ, ಮಹಿಳಾಪರತೆ ಎಂದು ಹುಯಿಲೆಬ್ಬಿಸುವ ಈ ಸಾಮಾಜಿಕ ಮಾಧ್ಯಮಗಳು ಈಗ ಎಲ್ಲರನ್ನೂ, ಎಲ್ಲವನ್ನೂ ಪ್ರಶ್ನಿಸುವ ಧಾರ್ಷ್ಟ್ಯ  ತೋರಿಸುತ್ತಿವೆ. ಸಿದ್ಧಗಂಗಾ ಶ್ರೀಗಳ ಕುರಿತು ನಡೆದ ಸಂವಾದ ಇದಕ್ಕೆ ಒಂದು ಉದಾಹರಣೆ.ಒಂದು ಶತಮಾನದ ಕಾಲ ಜಾತಿ, ಮತ, ಲಿಂಗ ಬೇಧಗಳಿಲ್ಲದ ಸೇವೆಯನ್ನು ಇವು ಪ್ರಶ್ನಿಸಿದ್ದವು ಆ ಪ್ರಶ್ನೆಗಳಾದರೂ ಎಂತಹವು ?ಅವರೇನುಜಾತಿ ಪದ್ಧತಿಯ ಕುರಿತು ಒಂದಾದರೂ ಹೇಳಿಕೆ ನೀಡಿದ್ದರೆ? ಸ್ತ್ರೀ  ಸಮಾನತೆಯನ್ನು ಎತ್ತಿ ಹಿಡಿದಿದ್ದರೆ ?ಎಂಬ ತಮ್ಮ ಮೂಗಿನ ನೇರದ ಪ್ರಶ್ನೆಗಳು.ಇಂತಹ ಪ್ರಶ್ನೆಗಳನ್ನು ಅಥವಾ ಈ ಮಾಧ್ಯಮಗಳು ಬಯಸುವ ಪ್ರಶ್ನೆಗಳನ್ನು ಕೇಳಿದವರು ಮಾತ್ರ ಮಹೋನ್ನತರೆ ? ಪ್ರತಿರೋಧವೆಂದರೆ ಗಂಟಲು ಬಿರಿಯುವಂತೆ ಕೂಗುವ ಮೂಲಕ, ವೇದಿಕೆಗಳಲ್ಲಿ ಆರ್ಭಟಿಸುವ ಮೂಲಕ, ಆಯಕಟ್ಟಿನ ಸ್ಥಳಗಳಲ್ಲಿ ಧರಣಿ ಮಾಡುವ ಮೂಲಕ, ಮೊದಲಾದ ಜನಪ್ರಿಯ ಮಾದರಿಗಳು ಮಾತ್ರವೇ? ಇಂಥ ಪ್ರತಿರೋಧಗಳ ಮೂಲಕ ಏನನ್ನು ಸಾಧಿಸಬಹುದು ಎಂಬುದನ್ನು ರೈತ ಚಳುವಳಿಗಳು, ಮಹಿಳಾಪರ ಚಳುವಳಿಗಳು, ಅಂಗನವಾಡಿ ಕಾರ್ಯಕರ್ತೆಯರು, ಗಾರ್ಮೆಂಟ್ ಉದ್ಯೋಗಿಗಳು ಕಾಲಕಾಲಕ್ಕೆ ಈ ನಾಡಿಗೆ ತೋರಿಸಿಕೊಟ್ಟಿದ್ದಾರೆ. ಆದರೆ ಎಲ್ಲ ಹೋರಾಟಗಳೂ ಇದೇ ರೀತಿ ಇರಲು ಸಾಧ್ಯವೆ ಎಂಬ ಪ್ರಶ್ನೆಯನ್ನು ಈ ಮಾಧ್ಯಮಗಳು ಹಾಕಿಕೊಳ್ಳುವುದಿಲ್ಲ. ಇದೇ ಮಾತನ್ನು ಅವು ಸಾಹಿತಿಗಳ ಬಗ್ಗೆಯೂ ಆಡುತ್ತವೆ. ಇಂಥ ಪಶ್ನೆಗಳನ್ನು ಸಾಮಾಜಿಕ ಮಾಧ್ಯಮಗಳ ಮೂಲಕ ಹರಿಯಬಿಡುವವರು ತಮ್ಮ ಸಾಧನೆಯನ್ನೂ ಗಮನಿಸುವುದು ಒಳಿತು.ಬಸವ, ಬುದ್ಧ, ಅಂಬೇಡ್ಕರ್‌ ಅವರೂ ಕೂಡ ವಿಶಾಲ ದೃಷ್ಟಿಕೋನವನ್ನು ಹೊಂದಿದ್ದು ಸಂಕುಚಿತತೆಯನ್ನು ಪ್ರಶ್ನಿಸಿದರು. ಹಾಗೆ ಪ್ರಶ್ನಿಸುವಾಗ ಅವರು ಅಸಹನೆಯನ್ನು ತೋರಿಸಿರಲಿಲ್ಲ ಹಾಗೂ ಅವರು ಸಮಷ್ಟಿಗಾಗಿ ಪ್ರತಿಪಾದಿಸುತ್ತಿದ್ದರು. ಒಬ್ಬರನ್ನು ಹೀಗಳೆವ, ಕುಬ್ಜರನ್ನಾಗಿಸುವ ಮೂಲಕ ಹಿರಿಮೆಯನ್ನು , ಮೇಲ್ಮೆಯನ್ನು ಸಾಧಿಸ ಹೊರಟಿರುವ ಈ ಸಾಮಾಜಿಕ ಮಾಧ್ಯಮಗಳು ಇಂದು ಅಸಹ್ಯ ಹುಟ್ಟಿಸುವರೀತಿಯಲ್ಲಿ ಬೆಳೆಯುತ್ತಿವೆ. ಹಾಗೆ ನೋಡಿದರೆ ರೆಸಾರ್ಟುಗಳಲ್ಲಿ ಕಚ್ಚಾಡುವ, ಬಡಿದಾಡುವ, ರಾಜಕೀಯ ಮೇಲ್ಮೆ ಸಾಧಿಸಲು ಕೆಸರೆರಚಾಡುವ ರಾಜಕಾರಣಿಗಳಾಗಲಿ, ಇವರಿಗಾಗಲಿ ಯಾವ ವ್ಯತ್ಯಾಸವಿದೆ ? ಈಗಂತೂ ಎಲ್ಲದಕ್ಕೂ ಪರ-ವಿರೋಧಿ ಚರ್ಚೆಗಳು ಕ್ಷಣಾರ್ಧದಲ್ಲಿ ಭೂಮಿಯನ್ನೇ ಸುತ್ತಬಲ್ಲಷ್ಟು ಸಶಕ್ತವಾಗಿವೆ. ಈ ಚರ್ಚೆಗಳಲ್ಲಿ ಅಸಹನೆ ಒಡೆದು ಕಾಣುತ್ತಿರುವುದು ಅಪಾಯಕಾರಿ ಬೆಳವಣಿಗೆ.ಕಾಫಿಯೋ ಚಹಾವೋ ಯಾವತ್ತಾದರೂ ಚರ್ಚೆಗೊಳಗಾಗಿತ್ತೇ?ಇದು ಚರ್ಚಿಸುವ ವಿಷಯವೇ? ಆದರೂ ಚರ್ಚೆಯನ್ನು ಹರಿಯಬಿಡುವುದು. ಎಲ್ಲವೂ ಸ್ವಾರಸ್ಯವಾಗಿಯೇ ಸಾಗಿದರೆ ಅಡ್ಡಿಯಿಲ್ಲ. ಆದರೆ ಒಂದು ಸಣ್ಣ ಮಾತು ಹೇಗೆ ಕಿಚ್ಚು ಹತ್ತಿ ಉರಿಸಬಲ್ಲದು ಎಂಬುದಕ್ಕೆ ನಮ್ಮೆದುರು ಅನೇಕ ನಿದರ್ಶನಗಳಿವೆ. ಇಂದಿನ ಆಧುನಿಕ ಮಾಧ್ಯಮಗಳು ಈ ಕಾಲಕ್ಕೆ ವರದಾನವಾಗಿ ದೊರೆತಂಥವು.ಇವುಗಳನ್ನು ಬಳಸುವ ಜಾಣ್ಮೆಯನ್ನು ರೂಢಿಸಿಕೊಳ್ಳುವುದೊಳಿತು. ಅಭಿಪ್ರಾಯ ಬೇಧಗಳು ಪ್ರಜಾಸತ್ತಾತ್ಮಕ ರಾಷ್ಟ್ರದ ಹೆಗ್ಗುರುತು.ನಮ್ಮ ಸಂವಿಧಾನವು ಮೂಲಭೂತ ಹಕ್ಕಿನಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನೀಡಿದೆ.ಆದರೆ ಇಂದು ಸಮಾಜದ ನಡೆ ಅಭಿವ್ಯಕ್ತಿ ಸ್ವಾತಂತ್ರ್ಯದ ನೆಲೆಯಲ್ಲಿ ಬಹಳವೇ ಸೂಕ್ಷ್ಮವಾಗುತ್ತಿದೆ. .ದೃಷ್ಟಿ ಬಹಳ ಸಂಕುಚಿತವಾಗುತ್ತಿದೆ.ಬೇಧಗಳು ವ್ಯಕ್ತಿಗತವಾಗಿ, ಗುಂಪುಗಳಿಗೆ ಅನುಗುಣವಾಗಿ, ಸಮುದಾಯಗಳಿಗೆ ಸಂಬಂಧಿಸಿದಂತೆ ತೀರ ಸಂಕುಚಿತವಾಗುತ್ತಿವೆ. ಇದು ನಮ್ಮ ಸಂವಿಧಾನ ನೀಡಿರುವ  ಮಾದರಿಯ ಸ್ವಾತಂತ್ರ್ಯ  ಅಲ್ಲ. ಬಾಯಿಬಡುಕತನಕ್ಕೂಅಭಿವ್ಯಕ್ತಿ ಸ್ವಾತಂತ್ರ್ಯಕ್ಕೂ ವ್ಯತ್ಯಾಸವಿದೆ ಎಂದು ಈ ಸಾಮಾಜಿಕ ಮಾಧ್ಯಮಗಳು ಅರಿಯಬೇಕಾಗಿದೆ.                             *************************

ಬಾಯಿಬಡುಕ ಸಾಮಾಜಿಕ ಮಾಧ್ಯಮಗಳು Read Post »

ಇತರೆ, ಲಹರಿ

‘ಎಳೆ ಹಸಿರು ನೆನಪು ..’

ಲಹರಿ ವಸುಂಧರಾ ಕದಲೂರು    ಆಗೆಲ್ಲಾ ಮೂರ್ನಾಲ್ಕು ವರ್ಷಗಳಿಗೊಮ್ಮೆ ಮನೆಯ ಸಾಮಾಗ್ರಿಗಳನ್ನು ಗಂಟುಮೂಟೆ ಕಟ್ಟಿಕೊಂಡು ನಮ್ಮ ಕುಟುಂಬ ಊರಿಂದೂರಿಗೆ ಪ್ರಯಾಣಿಸುತ್ತಿತ್ತು. ನಾನು ಸಣ್ಣವಳಿದ್ದಾಗಿನ ವಿಷಯವಿದು. ಈ ಸಂಚಾರದ ನಿರಂತರತೆಗೆ ನಮ್ಮಪ್ಪ ಸರಕಾರಿ ನೌಕರರಾಗಿದ್ದು ಹಾಗೂ ವರ್ಗಾವಣೆಯನ್ನು ಅವರು ಸಹಜವಾಗಿ ಸ್ವೀಕರಿಸುತ್ತಿದ್ದದ್ದು ಪ್ರಮುಖವಾಗಿತ್ತು ಎನ್ನುವುದು ನನಗೀಗ ಅರ್ಥವಾಗುತ್ತಿದೆ.          ಹೀಗೆ ಪದೇ ಪದೇ ವರ್ಗವಾಗುತ್ತಿದ್ದರಿಂದ ನನ್ನ ಶಾಲಾ ಶಿಕ್ಷಣ ಮೈಸೂರು, ಹಾಸನ ಜಿಲ್ಲೆಗಳ ಹಲವು ಹಳ್ಳಿಗಳ ಸರಕಾರಿ ಶಾಲೆಗಳಲ್ಲಿ ನಡೆಯಿತು. ಮತ್ತೆ ಮತ್ತೆ  ಹೊಸ ಶಾಲೆ, ಹೊಸ ಗೆಳೆತನ, ಹೊಸ ಪರಿಸರ. ಈ ಎಲ್ಲವೂ ಆ ಬಾಲ್ಯದಲ್ಲಿ ಸಾಹಸಮಯವಾಗಿ ಕಾಣುತ್ತಿತ್ತು. ಅಂದಿನ ಸೊಗಸಿನ ದಿನಗಳ ಒಂದೆರಡು ಅನುಭವಗಳನ್ನು ಈಗ ಸುಮ್ಮನೆ ನೆನಪಿಸಿಕೊಂಡರೆ  ಸಾಕೂ ಮನಸ್ಸು ಜಿಗಿಯುವ ಹುಲ್ಲೆಮರಿಯಾಗುತ್ತದೆ.   ಆ ದಿನಗಳಲ್ಲಿ ನಮ್ಮದು ತೀರಾ ಹಗುರವಾದ ಬಟ್ಟೆಯಿಂಜ ಮಾಡಿದ ಪಾಟೀಚೀಲ. ಸ್ಲೇಟು, ಬಳಪ, ಪಠ್ಯಪುಸ್ತಕಗಳಿಗಿಂತಲೂ ಹೆಚ್ಚಾಗಿ ವಿವಿಧ ನಮೂನೆಯ ಕಲ್ಲು, ಮಿರುಗುವ ಬಟ್ಟೆ ಚೂರು, ಹಕ್ಕಿ ಪುಕ್ಕ, ಯಾವುದೋ ಹಣ್ಣು- ಕಾಯಿ-ಕಡ್ಡಿ ಚೂರು ಹೀಗೆ ಏನೇನೂ ತುಂಬಿಕೊಂಡು ಅದು ನಮ್ಮ ಅತೀ ಜೋಪಾನ ಮಾಡುವ ಆಸ್ತಿಯಾಗಿ ನಮಗದೇ ಬ್ರಹ್ಮಾಂಡವಾಗುತ್ತಿತ್ತು.  ಯಾರಾದರೂ ಹಲವು ಕೋಟಿ ರೂಪಾಯಿ ಕೊಡುತ್ತೇವೆ ಆ ಚೀಲವನ್ನು ನಮಗೆ ಕೊಡಿ ಎಂದರೆ, ಸಾರಾಸಗಟಾಗಿ ಅಷ್ಟೂ ನಗದನ್ನು ನಿರಾಕರಿಸಲು ಕಾರಣವಾಗಬಹುದಾದ ಅತ್ಯಮೂಲ್ಯ ವಸ್ತುಗಳು ಅದರಲ್ಲಿರುತ್ತಿದ್ದವು. (ಕೋಟಿಗಿರುವ ಸೊನ್ನೆ ಎಷ್ಟೆಂದು, ಅದರ ಮೌಲ್ಯ ಎಷ್ಟೆಂದು ತಾನೇ ಆಗ ಗೊತ್ತಾಗುತ್ತಿತ್ತೇ!?)     ಅದು ಒತ್ತಟ್ಟಿಗಿರಲಿ, ಸದಾ ಆರೇಳು ಮಕ್ಕಳ ಜೊತೆ ಸೇರಿ ಶಾಲಾಪಠ್ಯದೊಡನೆ ಹಲವು ಪರಿಕರಗಳನ್ನು ಹೊತ್ತು ಶಾಲೆಗೆ ಹೋಗುತ್ತಿದ್ದ ನಮ್ಮ ತಂಡವು ಯಾವ ‘ಸಾರ್ಥ’ಕ್ಕೂ (ವ್ಯಾಪಾರೀ ತಂಡ) ಕಡಿಮೆ ಇರುತ್ತಿರಲಿಲ್ಲ. ದಾರಿ ತುಂಬೆಲ್ಲಾ ಗಿಜಿಬಿಜಿ.. ಅದೇನು ಮಾತಾಡಿಕೊಳ್ಳುತ್ತಿದ್ದೆವೋ…!   ಬಟ್ಟೆಯಿಂದ ಮಾಡಿದ ಪಾಟೀಚೀಲದ ಹಿಡಿಕೆಯನ್ನು ತಲೆಯ ಮೇಲೆ ಹಾಕಿಕೊಂಡು, ಬೆನ್ನ ಹಿಂದೆ ಇಳಿಬೀಳಿಸಿ ನಡಿಗೆಯ ಲಯಕ್ಕೆ ಚೀಲವನ್ನು ಬಡಿದುಕೊಳ್ಳುತ್ತಾ, ಕೆಲವೊಮ್ಮೆ ಜೋಳಿಗೆಯಂತೆ ಹೆಗಲಿನಿಂದ ಇಳಿಸಿಕೊಂಡು, ಮತ್ತೆ ಕೆಲವೊಮ್ಮೆ ನೆತ್ತಿಯ ಮೇಲೇರಿಸಿಕೊಂಡು, ಮುಂದಿನ ಬಾರಿ ಎದೆಯ ಮುಂದಿನಿಂದ ಕುತ್ತಿಗೆಗೆ ನೇತು ಬೀಳಿಸಿಕೊಂಡು, ಸೊಂಟ ಕೈಗಳಿಗೆ ಸುತ್ತಿಕೊಂಡು, ಮೊಣಕಾಲುಗಳಿಂದ  ಚೀಲದೊಳಗೆ ಇದ್ದ ಸ್ಲೇಟನ್ನು ಬಡಿಯುತ್ತಾ ಸಾಗುತ್ತಿದ್ದಾಗ ಅದರೊಳಗಿರುವುದು ‘ಸಾಕ್ಷಾತ್ ಸರಸ್ವತಿ ಸ್ವರೂಪ’ ಎನ್ನುವುದು ಸಾಸುವೆಯ ಕಾಳಷ್ಟೂ ನೆನಪಾಗುತ್ತಿರಲಿಲ್ಲವಲ್ಲಾ ! ಅಂಥಾ ಅತಿ ಮುಗ್ಧ ಸೊಗಸುಗಾರಿಕೆಯ ಅನುಭವ ಆರೇಳು ಕೇಜಿ ಭಾರ ತೂಗುವ ಶಾಲಾ ಬ್ಯಾಗ್  ಹಾಗೂ ಮನೆಯ ಮುಂದೆಯೇ ಶಾಲಾ ವಾಹನಗಳನ್ನು ಏರಿಳಿಯುವ ನಮ್ಮೀ ಮಕ್ಕಳಿಗೆಲ್ಲಿ ಸಿಗಬೇಕು ಹೇಳಿ?       ನಾಲ್ಕನೇ ತರಗತಿಯ ವಿದ್ಯಾಭ್ಯಾಸವು ಹಾಸನ ಜಿಲ್ಲೆಯ ಅರಕಲಗೂಡು ಎಂಬ ತಾಲೂಕಿನಲ್ಲಾಯ್ತು. ಅದು ಆ ಕಾಲಕ್ಕಿನ್ನೂ ದೊಡ್ಡ ಹಳ್ಳಿಯಂತೆ ಇತ್ತೇ ಹೊರತು ಪಟ್ಟಣದ ಕುರುಹು ಅಷ್ಟಾಗಿ ಕಾಣುತ್ತಿರಲಿಲ್ಲ. ಮಧ್ಯಾಹ್ನದ ಬಿಸಿ ಊಟ ಸವಿದದ್ದು ಅಲ್ಲಿನ ಶಾಲೆಯಲ್ಲಿಯೇ ಮೊದಲು. ಜೊತೆಗೆ, ಚೈತ್ರ, ವೈಶಾಖ, ಜೇಷ್ಠ.. ಎಂಬ 12 ಮಾಸಗಳೂ, ವಸಂತ , ಗ್ರೀಷ್ಮ, ವರ್ಷ.. ಎಂಬ 6 ಋತುಗಳೂ, ಅಶ್ವಿನಿ, ಭರಣಿ, ಕೃತಿಕಾ, ರೋಹಿಣೀ.. ಎಂಬಿತ್ಯಾದಿ 27 ನಕ್ಷತ್ರಗಳ ಹೆಸರುಗಳನ್ನು ಉರುಹೊಡೆದದ್ದೂ ಸಹ ಆ ಶಾಲೆಯಲ್ಲಿಯೇ. ಆಗ ಅಭ್ಯಾಸ ಮಾಡಿದ್ದು ಈಗ ಪೂರ್ಣ ನೆನಪಿರದಿದ್ದರೂ, ಆ ಊರಿನ ಬಸ್ ನಿಲ್ದಾಣದ ಬಳಿಯಿದ್ದ ಎತ್ತರದ ಮರದ ಮೇಲೆ ತಲೆಕೆಳಗಾಗಿ ನೇತಾಡುತ್ತಿದ್ದ ನೂರಾರು ಕಪ್ಪು ಬಾವಲಿಗಳು ಮಾತ್ರ ನೆನಪಿನಾಳದಲ್ಲಿ ಹಾಗೇ ಕಪ್ಪುಬಣ್ಣದಲಿ ಹೆಪ್ಪುಗಟ್ಟಿವೆ. ಆದರೆ ಅತ್ಯಂತ ಕಡಿಮೆ ಅವಧಿಯ ಆ ಶಾಲೆಯಲ್ಲಿ ದೊರೆತ ಗೆಳೆತನದ ಹೆಸರುಗಳು ಮನದ  ನೇಪಥ್ಯಕ್ಕೆ ಸರಿದು ಮಸುಕಾಗಿರುವುದು ನನ್ನ ದುರಾದೃಷ್ಟ.         ರಾವಂದೂರು ಎಂಬ ಊರಿದೆ. ಹಾಸನ ಜಿಲ್ಲೆಯ ಪಿರಿಯಾಪಟ್ಟಣ ತಾಲ್ಲೂಕಿನಲ್ಲಿ. ಅಲ್ಲಿ ನಾನು ಐದು ಮತ್ತು ಆರನೆಯ ಇಯತ್ತೆ ಓದುವಾಗಿನ ನೆನಪುಗಳು ಮಾತ್ರ ಇನ್ನೂ ಹಸುರಾಗಿ ಸೊಗಸಾಗಿವೆ! ಅಲ್ಲಿನ  ಶಾಲಾ ಕಾರ್ಯಕ್ರಮಕ್ಕೆ ಮೋಟು ಜಡೆಗೆ ಚೌಲಿ ಹಾಕಿಸಿಕೊಂಡದ್ದು, ಡಾನ್ಸ್ ಮಾಡುವಾಗ ಸೀರೆ ಸಡಿಲವಾಗಿ ಜಾರಿಕೊಂಡದ್ದು, ಕೋಗಿಲೆ ಕಂಠವಿಲ್ಲದ ನಾನೂ ಸಹ “ಚೆಲುವಿ ಚೆಲುವಿ ಎಂದು ಅತಿಯಾಸೆ ಪಡಬೇಡ….” ಎಂದು ಜನಪದ ಗೀತೆ ಹಾಡಲು ಹೋಗಿ ಅರ್ಧಕ್ಕೇ ಬಾಯೊಣಗಿ ನನ್ನ ಸ್ವರ ನನಗೇ ಕೇಳಿಸದಂತಾಗಿ ಮುಂದೆ ಹಾಡದೇ ಬಿಟ್ಟದ್ದು, ಒಂದು ದಪ್ಪದಾಗಿರುವ ಜೀವಂತ ಮೀನನ್ನು  ಬಕೇಟಿನ ಒಳಗಿಟ್ಟುಕೊಂಡು ತಂದ ವಿಜ್ಞಾನದ ಮಾಸ್ಟರರು ಮೀನಿನ ರಚನೆ ಬಗ್ಗೆ ಪಾಠ ಮಾಡಿದ್ದು… ಎಲ್ಲವೂ ನನ್ನ ನೆನಪಿನ ಪರದೆಯ ಮೇಲೆ ಇನ್ನೂ ಚಲಿಸುತ್ತಿರುವ ಚಿತ್ರಗಳು.       ರಾವಂದೂರಿನಲ್ಲಿ ನಮಗೊಂದು ರಮಣೀಯ ಸ್ಥಳವಿತ್ತು. ಅದು ನನ್ನಣ್ಣ ಓದುತ್ತಿದ್ದ ಹೈಸ್ಕೂಲು. ಅದೇ ಊರಿನಲ್ಲಿಯೇ ತುಂಬಾ ದೂರದಲ್ಲಿತ್ತು. ಅಲ್ಲಿಗೆ ಒಂದು ಭಾನುವಾರ ನಾನು, ನನ್ನ ಗೆಳತಿಯರಾದ ಪ್ರಿಯಾ, ಬಬಿತಾ, ರೂಪ, ಶ್ವೇತಾ ಮೊದಲಾದವರು ಪಿಕ್ನಿಕ್ ಹೋಗಿದ್ದೆವು. ಬಹುಶಃ ಮನೆಯಲ್ಲಿ ಹೇಳರಲಿಲ್ಲ. ಹೇಳಿದ್ದರೆ ಅಷ್ಟು ದೂರ ಸಣ್ಣ ಮಕ್ಕಳಾದ ನಮ್ಮನ್ನು ಅವರು ಕಳಿಸುತ್ತಲೂ ಇರಲಿಲ್ಲ. ನಮಗೋ ಅದು ಮೋಸ್ಟ್ ಅಡ್ವೆಂಚರಸ್ ಪಿಕ್ನಿಕ್..! ನಾವೆಲ್ಲಾ ಆ ಹೈಸ್ಕೂಲಿನ ವಿಶಾಲ ಜಾಗ, ದೊಡ್ಡ ಕಟ್ಟಡ, ಆ ಶಾಲಾ ಆವರಣದ ಕಾರಂಜಿ ಕೊಳ, ಮರಗಳ ಸಾಲು, ವಿಶಾಲ ಮೈದಾನ ನೋಡಿ ಕಣ್ಣರಳಿಸಿಕೊಂಡು ಸಂಭ್ರಮಿಸಿದ್ದೆವು.     ಹುಣಸೇಹಣ್ಣು, ಉಪ್ಪು , ಸಕ್ಕರೆ, ಖಾರದಪುಡಿ ಬೆರೆಸಿ ಜಜ್ಜಿ ಮಾಡಿಕೊಂಡ ಅದ್ಭುತ ರುಚಿಯ ಉಂಡೆಯೇ ನಮ್ಮ ಪಿಕ್ನಿಕ್ಕಿನ ಊಟ, ಅಲ್ಲಿ ಆಡಿದ ಮರಕೋತಿ ಆಟ.. ಎಷ್ಟು ಸೊಗಸಿತ್ತು! ಮಕ್ಕಳಿನ್ನೂ ಮನೆ ಸೇರಿಲ್ಲವೆಂದು ದೊಡ್ಡವರ ಆತಂಕವು ಅಮೋಘ ಸಾಹಸದಲ್ಲಿ ಮೈ ಮರೆತಿದ್ದ ನಮಗೆ ಹೇಗೆ ಗೊತ್ತಾಗಬೇಕು?       ಸಂಜೆ ಸೂರ್ಯನನ್ನು ಅವನ ಮನೆಗೆ ಕಳಿಸಿಯೇ ನಾವು ನಮ್ಮ ನಮ್ಮ ಮನೆಗೆ  ಬಂದದ್ದು. ಈ ಬೇಜವಾಬ್ದಾರಿತನದ ಸಾಹಸಕ್ಕೆ ನನಗೆ ಮನೆಯಲ್ಲಿ ಬಹುದೊಡ್ಡ ಸನ್ಮಾನ ಕಾಯುತ್ತಿತ್ತು. ಬಾಗಿಲ ಸಂದಿಗೆ ಸೇರಿಸಿ ಕಣ್ಣು ಅಗಲಿಸಿಕೊಂಡು  ರೊಟ್ಟಿ ಮಗುಚುವ ಕೋಲಿನಿಂದ ಅಮ್ಮ ಬಿಸಿಯಾಗಿ ಕೊಟ್ಟ ಏಟಿನ ರುಚಿಯು ಇವತ್ತಿಗೆ ನಗು ಬರಿಸುವುದು ನಿಜವಾದರೂ ಆ ಹೊತ್ತಿನಲ್ಲಿ ಇನ್ಮುಂದೆ ಗೆಳೆಯರೂ ಬೇಡ, ಅವರೊಡನೆ ಮಾಡಬೇಕೆಂದಿರುವ ಪಿಕ್ನಿಕ್ಕೂ ಬೇಡವೆನಿಸುವಂತೆ ಮಾಡಿತ್ತು. ಇಷ್ಟಾದ ಮೇಲೂ ಆ ಶಾಲೆಯ ರಮ್ಯತೆಗೆ, ಅದರ ಸೊಗಸುಗಾರಿಕೆಗೆ ಸೋತ ಮನಸ್ಸು ಹೈಸ್ಕೂಲ್ ಅನ್ನು ಆ ಶಾಲೆಯಲ್ಲಿಯೇ ಓದಬೇಕೆಂದು ಸಂಕಲ್ಪಿಸಿಕೊಂಡಿತ್ತು. ಅದನ್ನು ಮಾತ್ರ ಇನ್ನೂ ಮರೆಯಲಾಗಿಲ್ಲ. ಆದರೆ ನನಗೆ ಅದೊಂದು ಈಡೇರಲಾಗದ ಕನಸಾಗಿಯೇ ಉಳಿದು ಬಿಟ್ಟದ್ದು ಮಾತ್ರ ನನ್ನ ಜೀವನದ ಪರಮ ನಿರಾಸೆಯ ವಿಷಯವಾಗಿದೆ..      ಅಷ್ಟರಲ್ಲಿ ನನ್ನ ಅಪ್ಪನಿಗೆ ಮಂಡ್ಯ ಜಿಲ್ಲೆಯತ್ತ ವರ್ಗವಾಗಿ ಹಳ್ಳಿಗಳ ಗಮ್ಮತ್ತು ನಿಧಾನವಾಗಿ ದೂರವಾಗುತ್ತಾ ಪಟ್ಟಣವೆಂಬ ಬೆರಗಿನ ಬೆಳಕು ಕಣ್ಣೊಳಗೆ ಹಾಯಲು ಶುರುವಾಯಿತು. ***********************

‘ಎಳೆ ಹಸಿರು ನೆನಪು ..’ Read Post »

ಇತರೆ

ಕಾಫೀನೊ -ಚಹಾನೊ

ಚರ್ಚೆ ರಾಮಸ್ವಾಮಿ ಡಿ.ಎಸ್. ಕಾಫಿ ಮೇಲೋ ಚಹಾ ಮೇಲೋ ಎಂದು ಕುಸ್ತಿ ಆಡುತ್ತಿರುವವರ ಫೇಸ್ಬುಕ್ ಪೇಜುಗಳನ್ನು ಬ್ರೌಸ್ ಮಾಡುತ್ತ ಇರುವಾಗ ಗಂಡು ಹೆಚ್ಚೋ ಹೆಣ್ಣು ಹೆಚ್ಚೋ ಎಂಬ ಹೈಸ್ಕೂಲ್ ದಿನಗಳ ಡಿಬೆಟ್ ವಿಷಯಗಳೇ ನೆನಪಾದುವು. ಕಾಫಿ, ಚಹಾ, ಹೆಣ್ಣು, ಗಂಡು, ಸಾಹುಕಾರಿಕೆ, ಬಡತನ, ಜಾತಿ, ಧರ್ಮ ಅಂತೆಲ್ಲ ನಾವು ಗುದ್ದಾಟ ಮಾಡಿದರೂ ಯಾರಿಗೆ ಯಾವುದು ಮುಖ್ಯ ಅನ್ನಿಸುತ್ತದೋ ಅದನ್ನು ಅವರವರು ಅನುಸರಿಸುತ್ತಾರೆ. ಯಾರೋ ಹೇಳಿದರೆಂದು ಕಾಫಿ ಟೀ ಬಿಟ್ಟು ಈಗ ಎಲ್ಲರ ಮನೆಯಲ್ಲೂ ಅಮೃತ ಬಳ್ಳಿ ಕಷಾಯ ಕುಡೀತಿರೋದನ್ನು ಇವರ್ಯಾರೂ ಹೇಳಲೇ ಇಲ್ಲವಲ್ಲ… Jogi Girish Rao Hatwar ಮತ್ತು Sumithra Lc ಅವರ ಬರಹಗಳನ್ನು ಮತ್ತು ಅವರಿಬ್ಬರೂ ಕಾಫಿಯ ಪರವಾಗಿ ನಡೆಸಿದ ಡಿಬೇಟುಗಳನ್ನೂ ಕಂಡು ಖುಷಿಯಾಗಿ ನನ್ನ ಬರಹವನ್ನೂ ಇಲ್ಲಿ ಸೇರಿಸುತ್ತ ಇದ್ದೇನೆ. ಚಹಾ ಕುಡಿಯೋ ಅಭ್ಯಾಸ ಇರುವವರು ಕಾಫಿಯನ್ನು , ಕಾಫಿಯಷ್ಟೇ ಅಮೃತ ಎಂದು ನಂಬಿದವರು ಟೀಯನ್ನು ದ್ವೇಷಿಸುತ್ತಾರೆ. ಆದರೆ ಇವೆರಡೂ ಒಳ್ಳೆಯದು ಅಲ್ಲವೇ ಅಲ್ಲ ಅಂತ ತಿಳಿದ ಮಲೆನಾಡಿನವರು ಇವತ್ತಿಗೂ ಬೆಳಿಗ್ಗೆ ಮೊದಲು ಕುಡಿಯುವುದು ಕಷಾಯವನ್ನೇ…ಶುಂಠಿ, ಮೆಣಸು, ಬೆಲ್ಲ, ಜೀರಿಗೆ, ದ‌ನಿಯ ಪುಡಿಯನ್ನು ಬೆಲ್ಲದ ನೀರಿನ ಅರ್ಧಾಂಶಕ್ಕೆ ಕುದಿಸಿ ಕೊಂಚ ಹಾಲು ಸೇರಿಸಿ ಕುಡಿಯುವುದು ಉತ್ತಮ ಆರೋಗ್ಯಕ್ಕೂ ಒಳ್ಳೆಯದು ಎಂಬುದು ಕರೋನಾ ಕಾಲದ ಸತ್ಯ … ಈ ಟೀ ಮಾಡುವುದು ಕೂಡ ಕಷಾಯ ಮಾಡಿದಂತೆಯೇ. ಟಿ ಪುಡಿಯನ್ನು ನೀರು + ಹಾಲಿನ ಜೊತೆ ಕುದಿಸಿ ಕುದಿಸಿ ಸೋಸುವ ಮೊದಲು ಪರಿಮಳಕ್ಕೆ ಶುಂಠಿಯನ್ನು ಕೂಡ ಸೇರಿಸಿ ಶೋಧಿಸಿ ಕುಡಿಯುತ್ತಾರೆ. ಒಪ್ಪಿ ಬಿಡಿ ಯಾವತ್ತೂ ಟೀ ಪಿತ್ತ ಹೆಚ್ಚಿಸುವಂಥದೇ. ಬಹಳ ಟೀ ಕುಡಿಯವರಿಗೆ ಆರೋಗ್ಯ ಇರೋಲ್ಲ ಹೌದೋ ಅಲ್ಲವೋ ನೀವೇ ಹೇಳಿ‌. ಅಷ್ಟಕ್ಕೂ ಟೀ ಮಾಡೋದು ಬ್ರಹ್ಮ ವಿದ್ಯೆ ಏನಲ್ಲ. ಹಾಲು ಮತ್ತು ಟೀ ಪುಡಿ ಚನ್ನಾಗಿದ್ದರೆ ಕುದಿಸಲಿಕ್ಕೆ ದೊಡ್ಡ ಪಾತ್ರೆ ಇದ್ದರೆ ಸಾಕಾದೀತು. ಆದರೆ ಕುದಿಯುವಾಗ ಅದು ಉಕ್ಕಿ ಸೊಕ್ಕಿ ಸ್ಟೋವನ್ನು ಆರಿಸಬಾರದು ಅಷ್ಟೆ. ಆದರೆ ಕಾಫಿ ಮಾಡೋದು ಎಲ್ಲರಿಂದಲೂ ಆಗೋಲ್ಲ. ಹಾಗಾಗಿ ಎಲ್ಲರೂ ಒಳ್ಳೆಯ ಕಾಫಿ ಕುಡಿಯದೇ ಇರೋದರಿಂದ ಒಳ್ಳೆಯ ಕಾಫಿಯ ರುಚಿ ಮತ್ತು ಸ್ವಾದ ಗೊತ್ತಿರದೇ ಟೀ ಚಂದ ಅನ್ನುತ್ತಾರೆ. ಜೊತೆಗೆ ಟೀ ಎಷ್ಟು ಕುದಿಯುತ್ತೋ ಅಷ್ಟು ರುಚಿ. ಆದರೆ ಕಾಫಿ ಯಾವತ್ತೂ ಕುದಿಯಲೇ ಬಾರದು. ಒಮ್ಮೆ ಕುದಿಯಿತೋ ಅದರ ರುಚಿ ಮತ್ತು ಬಣ್ಣ ಎರಡೂ ಕೆಡುತ್ತವೆ. ಟೀ ಮಾಡಲು ಹಾಲಿನ ಗುಣಮಟ್ಟ ಅಥವ ಟೀ ಪುಡಿಯ ಗುಣ ಮುಖ್ಯ ಆಗುವುದಿಲ್ಲ. ಯಾವುದೇ ಗುಣಮಟ್ಟದ ಹಾಲಲ್ಲೂ ಯಾವುದೇ ಕಂಪನಿಯ ಟೀ ಪುಡಿ ಹಾಕಿ ಕುದಿಸಿ ಮೇಲಷ್ಟು ಏಲಕ್ಕಿಯನ್ನೋ ಶುಂಠಿಯನ್ನೋ ಸೇರಿಸಿದರೆ ಟೀ ಸಿದ್ಧವಾದೀತು. ಆದರೆ ಕಾಫಿ ಮಾಡುವುದು ಅತ್ಯಂತ ಶ್ರದ್ಧೆ ಮತ್ತು ತೀವ್ರ ತಾಳ್ಮೆ ಇರದೇ ಇದ್ದರೆ ಆಗುವುದೇ ಇಲ್ಲ. ಜೊತೆಗೆ ಒಳ್ಳೆಯ ಕಾಫಿ ಪುಡಿ ಮತ್ತು ಹೊಸ ಗುಣ ಮಟ್ಟದ ಹಾಲು ಇಲ್ಲದೇ ಕಾಫಿ ಮಾಡಲಾಗುವುದಿಲ್ಲ. ನಿಮ್ಮಲ್ಲಿ ಬಹಳಷ್ಟು ಟೀ ಪ್ರಿಯರು ಕಾಕ ಹೋಟೆಲ್ಲಿನ ಟೀ ಇಷ್ಟ ಪಟ್ಟು ಕುಡಿಯುತ್ತೀರಿ. ಟೀ ಯಾವುದೇ ಗುಡಿಸಲು ಹೋಟೆಲ್ಲಿನಲ್ಲಿ ಸ್ಟಾರ್ ಹೋಟೆಲ್ಲಿನಲ್ಲಿ ಸಿಗುತ್ತೆ. ಆದರೆ ಒಳ್ಳೆಯ ಕಾಫಿ ಸಿಗುವುದು ಅದನ್ನು ಕುಡಿದು ಗೊತ್ತಿರುವರಿಗಷ್ಟೇ ಗೊತ್ತಿರುವ ಸತ್ಯ. ಜೊತೆಗೆ ಇತ್ತೀಚೆಗೆ ಟೀ ಪುಡಿಯನ್ನೇ ಉಪಯೋಗಿಸದೇ ಮಾಡುವ ವಿವಿಧ ರೀತಿಯ ಟೀಗಳು ಮಾರ್ಕಟ್ಟಲ್ಲಿ ಇರೋದು ಕೂಡ ಪಾಪ ಆ ಟೀ ಪುಡಿಗೆ ಮಾಡಿದ ಅವಮಾನವೇ!! ಗುಲಾಬಿ ಹೂವ ಪಕಳೆಯಲ್ಲಿ, ಹಾಲನ್ನೇ ಹಾಕದ ಲೆಮನ್ ಟೀನಲ್ಲಿ, ಅದೇನು ಖುಷಿ ಇದೆಯೋ ಆ ಟೀ ಪ್ರಿಯರೆ ಹೇಳಬೇಕು. ಕಾಫಿ ಯಾವತ್ತೂ ಉಪಮೆ ಮತ್ತು ಪ್ರತಿಮೆ ತುಂಬಿದ ಕಾವ್ಯದಂತೆ. ಅದನ್ನು ಬರೆಯುವುದೂ ಕಷ್ಟ, ಓದಿ ಅರ್ಥ ಮಾಡಿಕೊಳ್ಳೋದೂ ಕಷ್ಟ. ಆದರೆ ಒಮ್ಮೆ ರುಚಿ ಹತ್ತಿತು ಅಂದರೆ ಕಾವ್ಯ ಹೇಗೆ ಕಾಡುತ್ತದೋ ಹಾಗೆ ಕಾಫಿ ಕೂಡ. ರೋಬೋಸ್ಟಾ ಅರೇಬಿಕಾ ಇತ್ಯಾದಿ ಪ್ರಬೇಧ ಏನೇ ಇರಲಿ ಅದರ ಜೊತೆ ಬೆರಸುವ ಚಿಕೋರಿ ಇಲ್ಲದ ಕಾಫಿ ಕಾಫಿಯೇ ಅಲ್ಲ. ಈ ಚಿಕೋರಿ ಅನ್ನೋದು ಕಾವ್ಯ ಪ್ರಿಯರ ಚಕೋರ ಮತ್ತು ಚಂದ್ರಮರ ಹಾಗೆ, ಕಾಫಿ ಮತ್ತು ಚಿಕೋರಿಗಳು. ಒಂದಿಲ್ಲದ ಮತ್ತೊಂದು ಶೋಭಿಸಲಾರದು. ಅದೂ ಹದವರಿತ ದಾಂಪತ್ಯ ಇರಬೇಕು. ೮೦ ಕಾಫಿ ೨೦ ಚಕೋರಿ ಒಕೆ. ೭೦:೩೦ ಆದರೂ ಪರವಾಯಿಲ್ಲ. ಅದೇನಾದರೂ ೬೦:೪೦ ಅಥವ ೫೦:೫೦ ಆಯಿತೋ ಕಾಫಿ ಕಹಿ ಕಾರ್ಕೋಟಕ ವಿಷವಾಗಿ ಬದಲಾಗುತ್ತೆ. ಚಕೋರಿ ಬೇಡವೇ ಬೇಡ ಅಂದರೆ ಡಿಕಾಕ್ಷನ್ನು ಗಟ್ಟಿಯಾಗದೇ ಕಾಫಿ ಕಳೆಗಟ್ಟುವುದೇ ಇಲ್ಲ. ಕಾಫಿ ಕಾಸುವುದಲ್ಲ, ಅದು ಬೆರಸುವುದು ಮಾತ್ರ. ಹದವಾಗಿ ಕಾಯಿಸಿದ ಗಟ್ಟಿಹಾಲಿಗೆ ಗಟ್ಟಿ ಡಿಕಾಕ್ಷನ್ ಬೆರೆಸಿದರೆ ಅಮೃತವೇ ಸಿದ್ಧ ಆಗುತ್ತದೆ. ಟೀ ಕುದಿಸಿದ ಹಾಗೆ ಕಾಫಿ ಪುಡಿ ಹಾಲು ಸಕ್ಕರೆ ಕುದಿಸಿದರೆ ಯಾವತ್ತೂ ಕಾಫಿ ಆಗುವುದಿಲ್ಲ ಮತ್ತು ಹಾಗೆ ಮಾಡಿದ ಕಾಫಿ ಯಾರೋ ಒಬ್ಬ ಪಾಪಿಯ ಫಸಲು ಅಷ್ಟೆ.. ಕಾಫಿ ತಯಾರಿಕೆಯ ಹದ ಮತ್ತು ಸಮಯ ಬಹು ಮುಖ್ಯ. ಯಾವತ್ತೂ ಹಳೆಯ ಕಾಫಿಯನ್ನು ಬಿಸಿ ಮಾಡಿ ಟೀ ತರಹ ಕುಡಿಯಲು ಆಗುವುದಿಲ್ಲ. ಅದರದೇನಿದ್ದರೂ ಯಾವತ್ತೂ ಫ್ರೆಷ್ & ಪ್ಯಾಷನ್… ನೀರು ಕುದಿಸಿ ಕಾಫಿ ಪುಡಿ ತುಂಬಿದ್ದ ಫಿಲ್ಟರಿಗೆ ಹಾಕುವುದು ಹಳೆಯ ಕ್ರಮ. ಫಿಲ್ಟರಿನ ಮೇಲಂತಸ್ತಿನಿಂದ ಕೆಳಗಿನ ಸ್ಟೋರ್ ರೂಮಿಗೆ ಬಿದ್ದ ಡಿಕಾಕ್ಷನ್ನಿಗೆ ಬೇಕಾದಾಗ ಹಾಲು ಬಿಸಿ ಮಾಡಿ ಬೆರಸುವುದು ಕಾಫಿ ತಯಾರಿಕೆಯ ಆರಂಭದ ಹಂತ. ಯಾವಾಗ ನಮಗೆ ಸಲಕರಣೆ ಮತ್ತು ಸೌಕರ್ಯಗಳು ಬೇಕಾದವೋ ಆಗ ತಯಾರು ಮಾಡಿದ್ದು ಕಾಫಿ ಮೇಕರ್ ಎಂಬ ಎಲೆಕ್ಟ್ರಿಕ್ ಮಷೀನು. ‌ನೀರನ್ನು ಒಲೆಯ ಮೇಲಿಟ್ಟು ಕುದಿಸಿ ಅದನ್ನು ಇಕ್ಕಳ ಹಿಡಿದು ಫಿಲ್ಟರಿಗೆ ಸುರಿಯುವ ಶ್ರಮ ಮತ್ತು ಹೆದರಿಕೆ ಕಳೆದದ್ದೇ ಈ ಕಾಫಿ ಮೇಕರು‌. ಅರ್ಧ ಲೀಟರು ನೀರು ತುಂಬಿ ಪಕ್ಕದ ಜಾಡಿಗೆ ನಾಲ್ಕು ಚಮಚ ಕಾಫಿ ಪುಡಿ ಸುರಿದು ಸ್ವಿಚ್ ಒತ್ತಿದರೆ ಹತ್ತು ನಿಮಿಷದಲ್ಲಿ ಜಾಡಿಯ ತುಂಬ ಗಟ್ಟಿ ಡಿಕಾಕ್ಷನ್ ಸಿದ್ಧ!! ಪ್ರಿಯಾ, ಪ್ರೆಸ್ಟೀಜ್, ಜಾನ್ಸನ್ ಎಷ್ಟೊಂದು ಕಂಪನಿಗಳ ಅತ್ಯಾಕರ್ಷಕ ಕಾಫಿ ಮೇಕರು ಇದ್ದಾವೆ ಅಂದರೆ ಅದನ್ನು ಅಮೆಜಾನಲ್ಲಿ ಫ್ಲಿಪ್ ಕಾರ್ಟಲ್ಲಿ ನೋಡೇ ತಣಿಯಬೇಕು… ಇನ್ನು ಕಾಫಿಯ ಸ್ಪೆಷಲ್ ಸಂಚಿಕೆ ಬೇಕಾದವರು ಕಾಫಿ ತಯಾರಿಕೆಗೆ ಬಳಸುವುದು ಪರ್ಕ್ಯುಲೇಟರನ್ನು. ಅದನ್ನು ಉರಿವ ಬೆಂಕಿಯ ಮೇಲಾಗಲೀ ಅಥವ ಎಲೆಕ್ಟ್ರಿಕ್ ಮೂಲಕ ಕೂಡ ಆಗಿಸುವ ವಿಧಾನಗಳು ಈಗ ಚಾಲ್ತಿ ಇದೆ. ಕಾಫಿ ನಿಯಂತ್ರಣ ಮಾರುಕಟ್ಟೆ ಇದ್ದಾಗ “ಕಾಫಿ ಬೋರ್ಡ್” ಎಂಬ ಸಂಸ್ಥೆ ತಯಾರಿಸಿ ಕೊಟ್ಟಿದ್ದ ಪರ್ಕ್ಯುಲೇಟರ್ ಅದೆಷ್ಟು ಚನ್ನಾಗಿ ಡಿಕಾಕ್ಷನ್ ಇಳಿಸುತ್ತೆ ಎಂದರೆ ಅದನ್ನು ಇನ್ನೂ ನಾನು ಇವತ್ತಿಗೂ ಬಳಸುತ್ತಿದ್ದೇನೆ‌. ಕೆಫೆ ಕಾಫಿ ಡೇ ಕೂಡ ₹೫೦೦/ರ ಆಸುಪಾಸಲ್ಲಿ ಸಣ್ಣ ಪರ್ಕ್ಯುಲೇಟರ್ ಮಾರುತ್ತೆ. ಅದು ಕೂಡ ಚನ್ನಾಗೇ ಇದೆ. ಫಿಲ್ಟರು, ಮೇಕರು, ಪರ್ಕ್ಯುಲೇಟರು ಇಲ್ಲದೇ ಕುದಿಕುದಿವ ನೀರಿಗೆ ಕಾಫಿ ಪುಡಿ ಹಾಕಿ, ಮುಚ್ಚಿಟ್ಟು ಐದು ನಿಮಿಷ ಬಿಟ್ಟು ಕೋರಾ ಬಟ್ಟೆಯಲ್ಲಿ ಸೋಸಿ ತಯಾರಿಸಿದ ಡಿಕಾಕ್ಷನ್ ಕೂಡ ತಕ್ಷಣಕ್ಕೆ ಕುಡಿಯಲು ಅಡ್ಡಿ ಇಲ್ಲ. ಫಿಲ್ಟರು ಮತ್ತು ಮೇಕರುಗಳ ಡಿಕಾಕ್ಷನ್ ಅವತ್ತವತ್ತೇ ಖಾಲಿ ಮಾಡಬೇಕು‌‌. ತಂಗಳಾದರೆ ಕಾಫಿಯ ರುಚಿ ಮತ್ತು ಘಮ ಎರಡೂ ಕೆಡುತ್ತವೆ. ಆದರೆ ಪರ್ಕ್ಯುಲೇಟರಿನ ಡಿಕಾಕ್ಷನ್ ಯಾವತ್ತಿಗೂ ಸ್ಟಾರ್ ಹೋಟೆಲ್ಲಿನ ಅಂದ ಇದ್ದ ಹಾಗೆ. ಅದು ಕೆಲವರಿಂದಷ್ಟೇ ಆಗುವ ಕೆಲಸ. ಕೆಳಹಂತದಲ್ಲಿ ನೀರು ಕುದಿದು ಆವಿಯಷ್ಟೇ ಮೇಲಂತಸ್ತಿನ ಪುಡಿಯನ್ನು ಮುಟ್ಟಿ ತೊಟ್ಟು ತೊಟ್ಟೇ ಡಿಕಾಕ್ಷನ್ ಇಳಿಯುವಾಗ ಹುಟ್ಟುವ ಘಮ ಇದೆಯಲ್ಲ ಅದೇ ಸಾಕು ಆ ಹೊತ್ತಿನ ಹಸಿವು ಮತ್ತು ಆಯಾಸವನ್ನು ಪರಿಹರಿಸಲು. ಕಾಫಿಯ ರುಚಿ ಸ್ವಾದ ಮತ್ತು ಗುಣ ಗೊತ್ತುರುವವರು ಗೆಳೆಯ Katte Gururaj ಥರ ಗ್ರಹಿಸಬಲ್ಲರು ಮತ್ತು ಜೊತೆಗಿರುವವರನ್ನೂ ತಣಿಸಬಲ್ಲರು… **********************************

ಕಾಫೀನೊ -ಚಹಾನೊ Read Post »

ಇತರೆ, ಸಂದರ್ಶನ

ದೇವನೂರು ಮಹಾದೇವ

ದೇವನೂರ ಮಹಾದೇವ ಸಂದರ್ಶನ ರಹಮತ್ ತರಿಕೆರೆ ಅವರಿಂದ (1999 ರಲ್ಲಿನಡೆದ ಸಂದರ್ಶನವನ್ನುಸಂಗಾತಿಯ ಓದುಗರಿಗಾಗಿ ಪ್ರಕಟಿಸುತ್ತಿದ್ದೇವೆ.) (ಕನ್ನಡದ ದೊಡ್ಡ ಲೇಖಕರ ವಿಶಿಷ್ಟತೆ ಎಂದರೆ, ಅವರು ಎಷ್ಟು ದೊಡ್ಡ ಕಲಾವಿದರೋ ಅಷ್ಟೇ ದೊಡ್ಡ ರಾಜಕೀಯ ಸಾಮಾಜಿಕ ಚಿಂತಕರು ಕೂಡ. ಇದಕ್ಕೆ ಕಾರಣ ಕರ್ನಾಟಕದ ಸಾಮಾಜಿಕ ಸನ್ನಿವೇಶಗಳೂ ಬಸವಣ್ಣ ಕುವೆಂಪು ಕಾರಂತ ಮುಂತಾದ ಚಿಂತಕ ಲೇಖಕರ ಪರಂಪರೆಯೋ ನಮ್ಮ ಲೇಖಕರ ಸಾಮಾಜಿಕ ಹಿನ್ನೆಲೆಯೊ ಗೊತ್ತಿಲ್ಲ. ‘ನನಗೆ ಏನೂ ಗೊತ್ತಿಲ್ಲ ಎಂಬ ರೀತಿಯಲ್ಲಿ ಎಂಬಂತೆ ಚಿಂತಿಸುವವರು ನಮ್ಮ ಸಂಸ್ಕೃತಿಯಲ್ಲಿ ದೊಡ್ಡ ಚಿಂತಕರು’ ಎಂದು ಪುಣೇಕರ್ ಹೇಳುವುದುಂಟು. ಈ ಮಾತು ದೇವನೂರರಿಗೆ ಅನ್ವಯವಾಗುತ್ತದೆ. ಇಲ್ಲಿರುವ ಅರೆಬರೆ ವಾಕ್ಯಗಳು, ಒಗಟಿನಂತಹ ಹೇಳಿಕೆಗಳು ಅವರ ಚಿಂತನೆಯ ಗೊಂದಲ ಅಥವಾ ಕೊರತೆಯನ್ನು ಸೂಚಿಸುವುದಿಲ್ಲ. ಬದಲಿಗೆ ಈ ಬಗ್ಗೆ ಇನ್ನೂ ಚಿಂತಿಸಬೇಕಾದ್ದಿದೆ; ಅದನ್ನು ಸರಳವಾಗಿ ಹೇಳಲು ಆಗುವುದಿಲ್ಲ ಎಂಬ ಸಂಕೀರ್ಣತೆಯನ್ನೆ ಸೂಚಿಸುತ್ತಿವೆ. ಇದನ್ನು ಸೃಜನಶೀಲತೆಯ ಬಗೆಗಿನ ವ್ಯಾಖ್ಯೆಯಲ್ಲಿ ನೋಡಬಹುದು. ಆದರೆ ಎಲ್ಲೆಲ್ಲಿ ರಾಜಕೀಯವಾಗಿ ಸ್ಪಷ್ಟ ನಿಲುವನ್ನು ತಾಳಬಹುದೊ ಅಲ್ಲೆಲ್ಲ ದೇವನೂರರು ತಾಳುತ್ತಾರೆ. ಉದಾಹರಣೆಗೆ ಜಾಗತೀಕರಣ ಕುರಿತ ವಿಚಾರದಲ್ಲಿ ಕನ್ನಡದಲ್ಲಿ ಶಿಕ್ಷಣ ಕೊಡುವ ವಿಚಾರದಲ್ಲಿ ವಚನ ಚಳವಳಿಯ ಬಗೆಗಿನ ಅವರ ವಿವರಣೆಯು ನೋಡಲು ಸರಳವಾಗಿದೆ. ಆದರೆ ಅದು ಸೃಜನಶೀಲ ಲೇಖಕನೊಬ್ಬ ಸಮಾಜವಾದಿ ಚಿಂತಕನೂ ಆಗಿ ಮಾಡಿದ ಅಪೂರ್ವ ವಿಶ್ಲೇಷಣೆಯಾಗಿದೆ. ಇಲ್ಲಿನ ಚರ್ಚೆಗಳಲ್ಲಿ ಗತದ ಬಗ್ಗೆ ಕಟು ವಿಮರ್ಶೆಯಿದೆ. ವರ್ತಮಾನದ ಬಗ್ಗೆ ಜಾಗೃತ ತಿಳಿವಿದೆ. ಭವಿಷ್ಯದ ಬಗ್ಗೆ ಕನಸಿದೆ. ಈ ಕನಸುಗಳು ವೈಜ್ಞಾನಿಕವಾಗಿ ಚಿಂತನೆ ಮಾಡುವವರ ಕಣ್ಣಲ್ಲಿ ದ್ವಂದ್ವ ಅಥವಾ ಗೊಂದಲ ಅನಿಸಬಹುದು. ಆದರೆ ಇಂತಹ ಕನಸುಗಳನ್ನು ಎಲ್ಲ ಸಮಾಜಗಳಲ್ಲಿ ಲೇಖಕರು ಕಾಣುತ್ತಾರೆ. ಹಾಗೆ ಶುದ್ಧವಾಗಿ ಅವರು ರಾಜಕೀಯ ಜೀವಿಗಳಲ್ಲ. ಯಾಕೆಂದರೆ ಸಮಸ್ಯೆಗಳನ್ನು ಲೇಖಕರು ಕೆಲವೊಮ್ಮೆ ಒಟ್ಟು ಮಾನವ ಜನಾಂಗದ ನೈತಿಕತೆಯ ಪ್ರಶ್ನೆಯನ್ನಾಗಿ ಕೂಡ ನೋಡಬಯಸುತ್ತಾರೆ. ಇದನ್ನು ದೇವನೂರರೂ ಮಾಡುತ್ತಾರೆ. ಇಲ್ಲಿ ಪ್ರಧಾನವಾಗಿ ಕಾಣುವುದು ಸಾಮಾಜಿಕ ಚಳುವಳಿಗಳ ಬಗ್ಗೆ ಆತ್ಮವಿಮರ್ಶೆ ಮಾಡಿಕೊಳ್ಳುವ ಪ್ರಾಮಾಣಿಕತೆ ಪರ್ಯಾಯಗಳ ಹುಡುಕಾಟ ಇನ್ನೂ ನಿಂತಿಲ್ಲ ಎಂಬ ಭರವಸೆ. -ರಹಮತ್ ತರೀಕೆರೆ) * ‘ದ್ಯಾವನೂರು’ ಸಂಕಲನದ ಕತೆಗಳನ್ನು ಬರೆವಾಗ ಇದ್ದ ಕನ್ನಡ ಸಾಹಿತ್ಯದ ವಾತಾವರಣ ನೆನಪು ಮಾಡಿಕೊಳ್ತೀರಾ? ನವ್ಯದ ವಾತಾವರಣ ತೀವ್ರವಾಗಿತ್ತು. ಅನಂತಮೂರ್ತಿ ಲಂಕೇಶ್ ತೇಜಸ್ವಿ ಕಂಬಾರ ಮತ್ತು ಅಡಿಗ ಮುಂತಾದವರು, ಸಾಹಿತ್ಯಾನೇ ಜೀವ ಅದೇ ಸರ್ವಸ್ವ ಅಂತ್ಹೇಳಿ ತೊಡಗಿಸಿಕೊಂಡಿದ್ದವರು, ಇದ್ರು. ಈಗ ನಾವು ಸೋಶಿಯಲ್ ಮೂಮೆಂಟ್ಸ್ ಜತೆಗೆ ಇದೂ ಅದೂ ಎರಡೂ ಮಿಕ್ಸ್ ಮಾಡ್ಕೊಳ್ತಾ ಇರ್ತೀವಿ, ಹೌದಲ್ಲ? ಆವಾಗ ಅದೇ ವಿಶ್ವ, ಅದೇ ರಾಜಕೀಯ, ಅದೇ ಬದುಕು, ಅನ್ನೊ ತರದವರು ಸುಮಾರು ಜನ ಇದ್ರು. * ನಿಮಗೆ ‘ಲೋಹಿಯಾವಾದಿ’ ಅಂತ ಗುರುತಿಸ್ತಾರೆ. ಅದನ್ನು ಕೇಳಿದಾಗ ಏನನ್ಸುತ್ತೆ? ಬರೆವಾಗಂತೂ ವಾದಗೀದ ಇರಲ್ಲ ನನ್ಹತ್ರ. ಉದಾಹರಣೆಗೆ ಹೇಳ್ತೀನಿ. ಕಮ್ಯುನಿಸ್ಟರ ಬಗ್ಗೆ ಸ್ವಲ್ಪ ರಿಸರ್ವೇಶನ್ ಇತ್ತು ನನಗೆ. ಆ ಟೈಮಲ್ಲಿ ಬರೆದದ್ದು ‘ಅಮಾಸ’ ಕತೆ. ಅಲ್ಲಿ ಒಂದು ಕ್ಯಾರಕ್ಟರ್ ಬರ್ತದೆ. ಅವನು ಗ್ಯಾಂಗ್‌ಮನ್ ಸಿದ್ದಪ್ಪ. ‘ಲೋಹಿಯಾ ಸಮಾಜವಾದ ಬರಬೇಕು’ ಅಂತ ಅವನ ಬಾಯಲ್ಲಿ ಬರೋಕೆ ಸಾಧ್ಯವಿಲ್ಲ. ಅಲ್ಲಿ ‘ಕಮ್ಯುನಿಸಂ ಬರಬೇಕು’ ಅಂತಾ ಹೇಳ್ತಾನೆ ಅವನು. ಅಂದ್ರೆ ಆ ತರಹದ ಪ್ರಾಮಾಣಿಕತೆ ನನಗೆ ಇದೆ. * ‘ಒಂದು ದಹನದ ಕತೆ’ ‘ದತ್ತ’ ಕತೆಗಳಲ್ಲಿ ಒಂಥರಾ ಅಂತರ್ಮುಖೀ ವಿಕ್ಷಿಪ್ತ ನಾಯಕರ ಲೋಕ ಬರುತ್ತೆ. ಆಮೇಲೆ ‘ಡಾಂಬರು ಬಂದುದು’ ಕತೆಗಳಲ್ಲಿ ಈ ಲೋಕಗಳು ನಾಟಕೀಯ ಅನ್ನೋ ಹಾಗೆ ಬದಲಾಗ್ತವೆ. ಈ ಬದಲಾವಣೆ ಹ್ಯಾಗಾಯ್ತು? ‘ಡಾಂಬರು ಬಂದುದು’ ಬರೆಯೊ ಮುನ್ನ ತೇಜಸ್ವಿಯವರ ‘ಅಬಚೂರಿನ ಪೋಸ್ಟಾಫೀಸು’ ಬಂದಿತ್ತು. ಅದು ಬಹಳ ಭಿನ್ನವಾಗಿದ್ದ ಕತೆ. ಅದು ಸ್ವಲ್ಪ ಮಟ್ಟಿಗೆ ಕಾರಣವಾಗಿರಬಹುದು ಅನ್ಸುತ್ತೆ. ಮತ್ತೆ ಈಗ್ಲೂನೂ ನನ್ನ ಆ ಎರಡು ಕತೆಗಳ ಬಗ್ಗೆ ಭಾಳ ಬೇಜಾರು ಇದೆ (ನಗು). ಅದೇನು ಮಾಡಕಾಗಲ್ಲ. ಒಂಥರಾ ಪ್ಲಾಟ್ ಮಾಡ್ಕೊಂಡು ಬರೆದ ಕತೆಗಳವು. * ಈಗ ಬಂಡಾಯ ಸಾಹಿತ್ಯ ಸಂಘಟನೆ ಹುಟ್ಟಿ ಸರಿಯಾಗಿ ೨೦ ವರ್ಷ. ಇದನ್ನು ಶುರು ಮಾಡುವಾಗ ನಿಮಗೆ ಯಾವ ಹಂಬಲಗಳಿದ್ದವು? ವಾಲೀಕಾರ ಅಲ್ಲಿ ನೆಪ ಆದ್ರು. ಆದ್ರೆ ಇದಕ್ಕೆ ಹೆಚ್ಗೆ ರೂಪ ಕೊಟ್ಟೋರು ಡಿ ಆರ್ ನಾಗರಾಜು ಮತ್ತು ಕಾಳೇಗೌಡ ನಾಗವಾರ, ಸಿದ್ಧಲಿಂಗಯ್ಯ ಈ ಥರದ ಗೆಳೆಯರು. ಅವರ್ದೇನು ಆಸೆ, ನೋವು-ಅಸಹಾಯಕತೆ ಈ ತರಹದವಕ್ಕೆಲ್ಲ ಧ್ವನಿಯಾಗಬೇಕು ಅಂತ. ಇದಕ್ಕೆ ನಂದೇನು ಆಕ್ಷೇಪಣೆ ಇರಲಿಲ್ಲ. ಭಾಗವಹಿಸಿದೆ ಅಷ್ಟೆ. ನಾನು ಚಾಲೂ ಮಾಡಿದೋನಲ್ಲ. * ಬಂಡಾಯ ಚಳುವಳಿ ಈಗ ಪಡೆದುಕೊಂಡಿರೊ ರೂಪಕ್ಕೆ ಕಾರಣ ಏನು ಹೇಳಬಹುದು? ಚಳವಳಿಯ ಒಳಗಿನ ಕಾರಣಗಳೋ ಹೊರಗಿನ ಒತ್ತಡಗಳೊ? ಹಂಗೆ ತೂಕ ಮಾಡಕ್ಕೆ ಆಗಲ್ಲ ಅನ್ಸುತ್ತೆ. ಸಮಾಜ ಭಾಳ ಮುಖ್ಯ. ಆ ಕಡೇನೂ ನೋಡ್ಬೇಕು ಅನ್ನೊ ಧೋರಣೆ ಕಡೆ ಇದು ಗಮನ ಕೊಡ್ತು. ಅದೇನಾಗುತ್ತೆ ಅಂತಂದ್ರೆ, ಇನ್ನೊಂದ್ ಕಡೆಗೆ ಇಲ್ಲಿ ಬರೀತಾ ಇದ್ರಲ್ಲ ನಮ್ಮಲ್ಲೆ, ಅವರಿಗೆ ಬರವಣಿಗೆ ಎರಡ್ನೇದಾಯ್ತು. ನವ್ಯ ಮೂಮೆಂಟಲ್ಲೆಲ್ಲ ತಾನೂ ತನ್ನ ಬರವಣಿಗೇನೇ ಮೊದಲ್ನೇದು ಉಳಿದಿದ್ದೆಲ್ಲ ಎರಡ್ನೇದು ಅನ್ನೋದಿತ್ತಲ್ಲ. ಅದು ಸ್ವಲ್ಪ ಉಲ್ಟಾ ಆಯ್ತು. ಇಲ್ಲಿ ಸುಮಾರ್ ಜನ ಬರೀಬಹುದಾದೋರು ಹುಟ್ಕಂಡ್ರು. ಆದ್ರೆ ಭಾಳ ದೊಡ್ಡ ಲೇಖಕರು ಬರಲಿಲ್ಲ ಅನ್ಸುತ್ತೆ. ಮತ್ತೆ ಜತೆಗೆ ಬಂಡಾಯ-ದಲಿತ ಚಳುವಳಿ, ದೊಡ್ಡ ಲೇಖಕರ ಮೇಲೇನೂ ಪರಿಣಾಮ ಮಾಡಿದೆ. ಹಿಂಗೆ ಯೋಚ್ನೆ ಮಾಡ್ಬೇಕು ಅಷ್ಟೇನೆ. * ಕನ್ನಡ ಸಾಹಿತ್ಯ ಪರಂಪರೇಲಿ ನಿಮ್ಮ ಮೇಲೆ ಪ್ರಭಾವ ಬೀರಿದ ಲೇಖಕರು… ಬೇಂದ್ರೆ, ಕುವೆಂಪು. * ಯಾಕೆ ಅಂತ ವಿವರಿಸಬಹುದಾ? ವಿಮರ್ಶೆ ಮಾಡಕ್ಕೆ ನಂಗೆ ಆಗಲ್ಲ. ‘ಮಲೆಗಳಲ್ಲಿ ಮದುಮಗಳು’ ಅದರ ಬಗ್ಗೆ ಸುಮಾರು ಆಕ್ಷೇಪಣೆಗಳು ಬಂದ್ವು. ಅದಕ್ಕೆ ಕೇಂದ್ರ ಇಲ್ಲ, ಮಣ್ಣು ಮಸಿ ಇಲ್ಲ ಅಂತ. ಆದ್ರೆ ಇವತ್ತಿಗೂ ಈಗ ತಾನೇ ಹುಟ್ಟಿದ ಥರ ಇದೆ ಆ ನಾವೆಲ್ಲು. ಆಮ್ಯಾಲೆ, ಈ ನವ್ಯ ಕಾಲದಲ್ಲಿ ಬಂದ್ವಲ್ಲ, ದಿ ಬೆಸ್ಟ್ ಅನ್ನೋ ಹತ್ತು ಕಾದಂಬರಿಗಳನ್ನ ಒಂದು ತಕ್ಕಡೀಲಿಟ್ರೂ, ಇದಕ್ಕೆ ತಡ್ಕಳೋ ಸಾಮರ್ಥ್ಯ ಇದೆ. ಜೊತೆಗೆ ಕುವೆಂಪು ಅವರ ದೃಷ್ಟಿಕೋನ-ದರ್ಶನ ಇದೆಯಲ್ಲ, ಅದು ಜೀವಸಂಕುಲವೇ ಒಂದು ಅನ್ನೊ ಥರದ್ದು… ಮತ್ತು ಬೇಂದ್ರೆ ಪದ್ಯಗಳು… ಪದ್ಯ ಅಂತಂದ್ರೆ ಹೇಳಕ್ಕೆ ಕಷ್ಟ ಅಲ್ವ? ಪದ್ಯ ಅಂದ್ರೆ ಬೇಂದ್ರೆ ಅನ್ನಿಸುತ್ತೆ. * ಪ್ರಾಚೀನ ಕನ್ನಡ ಸಾಹಿತ್ಯದಲ್ಲಿ ‘ಶೂನ್ಯ ಸಂಪಾದನೆ’ ಬಗ್ಗೆ ನೀವು ತಲೆ ಹಚ್ಚಿಕೊಂಡಿದ್ರಿ? ಯಾಕೆ ಅದು ಮುಖ್ಯ ಅನಿಸ್ತು? ವಚನ ಆಂದೋಲನ ಇದೆಯಲ್ಲ, ಇಡೀ ಜಗತ್ತಲ್ಲೇ ಹುಡುಕುದ್ರೂ ಸಿಗಲ್ವೇನೋ? ಆ ಥರದ ಒಂದು ಪ್ರಯೋಗ ಕರ್ನಾಟಕದಲ್ಲಿ ಆಗಿದೆ. ಉದಾಹರಣೆಗೆ ಹೇಳ್ತೀನಿ. ಮೊದಲ್ನೇದಾಗಿ ವರ್ಣಕ್ಕೆ ದೊಡ್ಡೇಟು ಕೊಟ್ರು ಅವರು. ಮತ್ತು ಎಲ್ರಿಗೂ ಪ್ರವೇಶ ಇಲ್ದೇ ಇರತಕ್ಕಂಥ ದೇವಸ್ಥಾನ ನಿರಾಕರಿಸಿದ್ರು. ಮತ್ತೆ ಗಂಡು ಹೆಣ್ಣು ಉಂಟಲ್ಲ, ಒಂಥರ ನೋಡಿದ್ರು. ಮತ್ತೆ ಜಾತಿ ಅಂತೂ ಬರಲೇ ಇಲ್ಲ ಅಲ್ಲಿ. ಆಮೇಲೆ ಮೋಕ್ಷಕ್ಕೆ ಕಾಡಿಗೆ ಹೋಗ್ಬೇಕು ತಪಸ್ ಮಾಡ್ಬೇಕು ಆ ಪರಿಕಲ್ಪನೇನೇ ಅವರಲ್ಲಿಲ್ಲ. ಮತ್ತು ಕಾಲ್ದಲ್ಲಿ ಒಳ್ಳೇದೊ ಕೆಟ್ಟದ್ದೊ ಅದಿಲ್ಲ; ಪವಿತ್ರ ಅಪವಿತ್ರ ಅದಿಲ್ಲ; ಸಂಸಾರ ಬಿಡಬೇಕು ಅಂತಿಲ್ಲ. ಸಂಸಾರ ಮಾಡ್ಕಂಡೇ- ಅಥವಾ ಇಬ್ಬರು ಹೆಂಡೀರ ಇಟ್ಕಂಡೇ ಮೋಕ್ಷ ಸಾಧ್ಯ. ಇವೆಲ್ಲ ಸಾಮಾನ್ಯ ಅಲ್ಲ. ಜತೆಗೆ ಕಲೆ ಬಗ್ಗೆ. ಬೇರೆಬೇರೆ ಧರ್ಮಗಳು ಕಲೆ ಒಂಥರ ದಾರಿ ತಪ್ಸದು ಅಂತಿರ್ತವೆ. ವಚನಕಾರರ ಚಿಂತನೆ ಕಾವ್ಯದಲ್ಲಿ ಆಗ್ತದೆ. ಬೌದ್ಧರಲ್ಲೊ ಇಸ್ಲಾಂನಲ್ಲೊ ಈ ಥರ ಬರೆಯೋದು ಧರ್ಮಕ್ಕೆ ಪೂರಕ ಅಲ್ಲ ಅನ್ನೋ ಭಾವನೆ ಇದೆ. ಇವರಲ್ಲಿಲ್ಲ. ಒಂದಾ ಎರಡಾ? ಈ ಥರದ್ದು ಹುಡುಗಾಟಾನ? ಸಾಮಾನ್ಯವಾಗಿ ಬೇರೆಬೇರೆ ಧರ್ಮಗಳಲ್ಲಿ ಒಬ್ಬ ಪ್ರವಾದಿ ಇರ್ತಾನೆ. ಅನುಯಾಯಿಗಳಿರ್ತಾರೆ. ಇಲ್ಲಿ ಎಲ್ರೂ ಸಮಾನರು. ಆದ್ರೂ ಇಡೀ ಚಳುವಳಿಯ ಒಳಗೇನೇ ಅನೇಕ ತಾತ್ವಿಕ ಭಿನ್ನಮತಗಳು ಸಂಘರ್ಷಗಳು ಇದ್ದವು ಅನ್ನೋದು ಮರೆಯೋಕಾಗಲ್ಲ. ಉದಾಹರಣೆಗೆ ಚೆನ್ನಬಸವಣ್ಣ. ಚೆನ್ನಬಸವಣ್ಣ ಚಿಕ್ಕೋನು ಅವನು. ಕೊನೇಲಿ ಬಂದು ಅದುಕ್ಕೆ ಒಂದು ರೂಪ ಕೊಡಕೆ ಪ್ರಯತ್ನಪಟ್ಟೋನು. ‘ಜಾತಿ ಮದುವೆ ಅನಾಚಾರ’ ಅಂತಾನಲ್ಲ. ಇದೊಂದು ಸಾಕಲ್ವ? ಇರಲಿ, ಅಂಥ ಚಳವಳೀನ ಈವತ್ಗೂ ನೆನಸ್ಕಳಕೆ ಆಗಲ್ವಲ್ಲ ನಮಗೆ. * ವಚನ ಪರಂಪರೆಯಲ್ಲಿ ಬಸವಣ್ಣನ ಧಾರೆ, ಅಲ್ಲಮನ ಧಾರೆ ಅಂತ ವಿಂಗಡಿಸಿ ನೋಡೋದಾದ್ರೆ, ನಿಮಗೆ ಯಾವ ಧಾರೆಯ ಜತೆ ಗುರ್ತಿಸಿಕೊಬೇಕು ಅನಿಸುತ್ತೆ? ಇದು ಬಲೇ ಕಷ್ಟ ಆಗುತ್ತೆ. ಮೊದಲ್ನೇದಾಗಿ ಎರಡೂ ಒಟ್ಟಿಗೆ ಹೋಗಬೇಕು ಅಂತ ಆಸೆಪಡಬೇಕು. ನನ್ನ ಆಸೆ ಈವಾಗ ಅಲ್ಲಮ, ಆಯ್ತಾ? ಆದ್ರೆ ಅಲ್ಲಮ ಒಂದು ಸ್ಪಿರಿಟ್ ಥರ. ಗಾಳಿ ಥರ. ಸಮಾಜದ ಮೇಲೆ ಅವನು ಯಾವ ಪರಿಣಾಮ ಮಾಡ್ತಾನೆ? ಯಾರು ಎನ್‌ಲೈಟನ್ಸೊ, ಅವರ ಮೇಲೆ ಪರಿಣಾಮ ಮಾಡ್ತಾನೆ. ಅವನೇನೂ ಕಟ್ಟಲ್ಲ. ಇಲ್ಲಿ ಸಮಾಜದ ಮೇಲೇನೇ ಅಲ್ಲೋಲ ಕಲ್ಲೋಲ ಆಗಬೇಕಲ್ಲ, ಬದಲಾವಣೆಗಳು ಆಗಬೇಕಲ್ಲ, ಅದಕ್ಕೆ ಯಾರ್ ಕಾರಣ? ಇವತ್ತು ನಮಗೆ ಸಂತರ ಜತೆಗೆ ಒಳ್ಳೇ ರಾಜಕಾರಣೀನೂ ಬೇಕು. ಗಾಂಧಿಯಷ್ಟೇ ಅಬ್ರಾಹಿಂ ಲಿಂಕನ್ ಕೂಡ ಬೇಕು. ಗಾಂಧಿಗೆ ಅಬ್ರಾಹಿಂ ಲಿಂಕನ್ ಸಿಕ್ಕಿದ್ರೆ ಬಾಳ ದೊಡ್ಡ ಸಂಗತಿಗಳು ಆಗ್ತಿದ್ವೇನೋ, ಅಲ್ವಾ? * ‘ಶೂನ್ಯಸಂಪಾದನೆ’ ಮೇಲೆ ಚರ್ಚೆ ಮಾಡ್ತಾ ಇದ್ದಿರಿ… ಶೂನ್ಯಸಂಪಾದನೇನ ಮೊದಲು ಸರಳವಾಗ್ ತಗೊಂಡೆ. ಸಾಹಿತ್ಯದ ದೃಷ್ಟಿಯಿಂದ ನೋಡ್‌ಬಿಟ್ಟಿದ್ದೆ. ಏನೋ ಮಾಡಬಹುದು ಅಂತ ಮಾಡ್ದೆ. ಆಮೇಲೆ ಹಂಗಲ್ಲ ಅನಸ್ತು. ಬೇರೆ ಬೇರೆ ಕೆಲ್ಸದಲ್ಲಿ ಸಿಗಹಾಕ್ಕಂಡು ಓದಕ್ಕಾಗ್ಲಿಲ್ಲ. * ಮಂಟೇಸ್ವಾಮಿ ಮಾದೇಶ್ವರ ಕಾವ್ಯಗಳ ಚರ್ಚೆ ಈಗ ಹೆಚ್ಚಾಗಿ ಆಗ್ತಿದೆ. ಈ ಪರಂಪರೆಗಳ ಜತೆ, ಆಧುನಿಕ ಲೇಖಕರ ಸಂಬಂಧ ಯಾವ ತರಹ ಇರಬೇಕು ಅಂತ? ಇವನ್ನ ವಸ್ತು ಥರ ಬಳಸಬಾರ್ದು. ಸುಮಾರ್ ಜನ ಏನ್ಮಾಡ್ ಬಿಡ್ತಾರೆ, ಒಂದು ಮೆಟೀರಿಯಲ್ ಅಂತ ಭಾವಿಸ್ ಬಿಡ್ತಾರೆ. ಜಾನಪದಾನ ಎಷ್ಟ್ ಜೀರ್ಣಿಸಿಕೊಳ್ಳಕೆ ಸಾಧ್ಯಾನೋ ಅಷ್ಟು ತಗೋಬೇಕು. ತಿಂದ ಆಹಾರ ಆಹಾರವಾಗೇ ಹೋಗಬಾರ್ದು. ರಕ್ತಗತ ಎಷ್ಟು ಸಾಧ್ಯವೊ ಅಷ್ಟನ್ನು ತಗಾಬೇಕು. ಇದೇ ಒಬ್ಬ ರೈಟರ್ ಮಾಡಬಹುದಾದ್ದು. ಇದೇ ಸೀಮೆಯಲ್ಲಿದ್ದ ಕುವೆಂಪು ಅವರಿಗೆ ಯಾವುದೊ ಚಾರಿತ್ರಿಕ ಕಾರಣಗಳಿಂದಾಗಿ ಈ ಪರಂಪರೆಗಳ ಜತೆ ಸಂಪರ್ಕ ಏರ್ಪಡಲಿಲ್ಲ. ಅವರಿಗೆ ಕಾದಂಬರಿ ಬರೆಯೊ ಬಗ್ಗೇನೆ ಹೀನ ಭಾವನೆಯಿತ್ತಂತೆ. ‘ಏನಪ್ಪ ಕವಿಗಳೆಲ್ಲ ಇದ್ನ ಮಾಡೋದಾ’ ಅಂತ. ಯಾಕ್ ಟಾಲ್‌ಸ್ಟಾಯ್ ಕಾದಂಬರಿ ಬರದಾ ಅಂತ ಆಮೇಲೆ ಸ್ವಲ್ಪ ಇದಾಗಿ, ಪುಣ್ಯಕ್ಕೆ ತಾವೂ ಬರೆದ್ರು. * ಪಶ್ಚಿಮದಲ್ಲಿ ಯಾವ ಲೇಖಕರು ನಿಮಗೆ ಮುಖ್ಯ ಆದ್ರು? ಹಾಂ! ಮೊದಲು ಶೇಕ್ಸ್‌ಪಿಯರ್, ಟಾಲ್‌ಸ್ಟಾಯ್. ಅದರ ಬಗ್ಗೆ ಸಂಶಯ ಇಲ್ಲ. ಇತ್ತೀಚೆಗೆ ನಾನು ಮಾರ್ಕ್ವೆಜ್‌ನ ಓದಿದೆ. ಬಹಳ ಗ್ರೇಟ್ ರೈಟರ್ ಅವನು. ಸಿಕ್ಕಾಪಟ್ಟೆ ದೊಡ್ಡ ಲೇಖಕ. * ಭಾರತೀಯ ಲೇಖಕರಲ್ಲಿ..? ವೈಕಂ ಓದಿದೀನಿ. ಈಗ ‘ಪಾತುಮ್ಮಳ ಆಡು’. ‘ಒಡಲಾಳ’ದಲ್ಲಿ ಅದರ ಇನ್‌ಫುಯೆನ್ಸ್ ಇರಬಹುದು ನನಗೆ. ಪ್ರೇಮಚಂದ್ ಇನ್‌ಫುಯೆನ್ಸ್ ಇರಬಹುದು. ಇನ್‌ಫುಯೆನ್ಸ್ ಹೆಂಗೆ ಅಂತಂದ್ರೆ, ಇನ್‌ಫುಯೆನ್ಸ್ ಅಂತ ಗೊತ್ತಾದ್ರೆ ತಪುಸ್ತೀನಿ. ಗೊತ್ತಿಲ್ಲದಲೆ ಬಂದಿರೊ ಸಾಧ್ಯತೆ ಇರ್ತದೆ. * ಮಾರ್ಕ್ವೆಜ್ ಯಾಕೆ ಗ್ರೇಟ್ ಅನಿಸಿದ? ಹ್ಞೂಂ! (ತುಂಬಾ ಯೋಚಿಸಿ…) ಮೊದಲ್ನೇದಾಗಿ ಸಮುದಾಯದ ಮನಸ್ಸು ಅವನದು. ಆಮೇಲೆ ಅವನಿಗೆ ಪ್ರಸ್ತುತಾನೆ ಕತೆ ಮಾಡೋ ಅಸಾಮಾನ್ಯವಾದ ಕಲೆ ಇದೆ. ಈಗ ಯಾರೋ ಬಂದ್ರು. ನಾವಿಲ್ಲಿ ಭೇಟಿಯಾದೊ. ಈ ಥರದ್ದು ಒಂದಿದೆ ಅಂತ ಇಟ್ಕೊಳಿ.

ದೇವನೂರು ಮಹಾದೇವ Read Post »

ಇತರೆ

ಸಾಹಿತ್ಯದ ಮೇಲೆ ಸಾಮಾಜಿಕ ಜಾಲತಾಣಗಳ ಪ್ರಭಾವ

ಚರ್ಚೆ (ಈ ಲೇಖನದಲ್ಲಿ ಪ್ರಸ್ತಾಪಿಸಲಾದ ಅಂಶಗಳ ಬಗ್ಗೆ ವಸ್ತುನಿಷ್ಠ ಚರ್ಚೆ ನಡೆಸಲು ಬಯಸುವಿರಾದರೆ ನಿಮ್ಮಬರಹಗಳನ್ನು ಕಳಿಸಬಹುದು-ಸಂ) ಚಂದಕಚರ್ಲ ರಮೇಶ ಬಾಬು ಸಾಹಿತ್ಯದ ಹರಿವು ಬಾಯಿ ಮಾತಿನಿಂದ ಹಿಡಿದು, ಬರವಣಿಗೆ, ಮುದ್ರಣ, ಪುಸ್ತಕ ವಿತರಣ, ಪುಸ್ತಕ ಭಂಡಾರಗಳಲ್ಲಿ ದಾಸ್ತಾನು ಹೀಗೆ ಅನೇಕ ವಿಧಗಳಾಗಿ ನಮಗೆ ಕಂಡಿದೆ. ಬಾಯಿಮಾತಿನಿಂದ ಹರಡಿದ ಸಾಹಿತ್ಯ ದಾಖಲೆಗೊಳ್ಳದೆ ಅನೇಕ ವಚನಗಳು, ಪದಗಳು ಮತ್ತು ಕೃತಿಗಳು ನಮಗೆ ಅಲಭ್ಯವಾಗಿವೆ. ಬರವಣಿಗೆ ಆರಂಭವಾದ ಮೇಲೆ ಈ ಅಡಚಣೆ ಸ್ವಲ್ಪ ಮಟ್ಟಿಗೆ ತಹಬಂದಿಗೆ ಬಂದಿತು. . ತಾಳೆಗರಿಗಳ ಮೇಲೆ ಬರೆಯಲ್ಪಟ್ಟ ಮಹಾನ್ ಕೃತಿಗಳು ಮನುಕುಲಕ್ಕೆ ಓದಲು, ತಿಳಿಯಲು ಸಿಕ್ಕವು. ಆದರೆ ತೊಂದರೆ ಸಂಪೂರ‍್ಣವಾಗಿ ನೀಗಲಿಲ್ಲ. ಗರಿಗಳು ತುಂಬಾ ದಿನಗಳು ನಿಲ್ಲಲಾರದೆ ಹೋಗಿ, ಗೆದ್ದಲು, ಅಗ್ನಿ, ನೆರೆಗಳ ಹಾವಳಿಯಲ್ಲಿ ನಶಿಸಿ ಹೋಗುತ್ತಿದ್ದವು. ಮುದ್ರಣಾ ಸವಲತ್ತು ಬಂದ ಮೇಲೆ ಮುದ್ರಿಸಲ್ಪಟ್ಟ ಪುಸ್ತಕಗಳು ತುಂಬಾ ಸಮಯದ ವರೆಗೆ ಉಳಿದು ಸಾಹಿತ್ಯ ಹರಡಲು ನೆರವಾದವು. ಇಲ್ಲೂ ಅಗ್ನಿ ಮತ್ತು ನೆರೆ ಮುಂತಾದ ಹಾವಳಿಯ ಹೆದರಿಕೆ ಇದ್ದರೂ ಮರುಮುದ್ರಣದ ಅನುಕೂಲವಿರುತ್ತಿದ್ದರಿಂದ ಒಂದು ತರದ ನೆಮ್ಮದಿ ನೆಲೆಸಿತು. ಅಂತರ್ಜಾಲದ ಉಗಮವಾಗಿದ್ದು ಅದರ ವಾಣಿಜ್ಯ ವ್ಯವಹಾರಗಳ ಉಪಯೋಗದ ಜೊತೆಗೆ ಸಾಹಿತ್ಯವೂ ಈ ಮಾದ್ಯಮವನ್ನು ತನ್ನ ಅನುಕೂಲಕ್ಕೆ ಬಳಸಿಕೊಳ್ಳಲು ಆರಂಭಿಸಿತು. ಈ ಮಾಧ್ಯಮಕ್ಕೆ ಮತ್ತೊಂದು ಆಕರ್ಷಣೆ ಇತ್ತು. ಉಚಿತ. ಹಾಗಾಗಿ ಇದರ ಉಪಯೋಗ ಅನೇಕ ಪಟ್ಟುಗಳು ವೃದ್ಧಿಗೊಂಡಿತು. ಸ್ಥಳೀಯ ಭಾಷೆಗಳ ತಂತ್ರಾಂಶಗಳ ಆವಿಷ್ಕಾರದ ನಂತರ ಈ ಭಾಷೆಗಳಲ್ಲಿ ಸಹ ಗಣಕಗಳ ಮೇಲೆ ಬರವಣಿಗೆ ಶುರುವಾಗಿ ಅದು ಮಿಂಚಿನ ವೇಗದಲ್ಲಿ ತಲುಪಲು ನೆರವಾಗಿ ಸಾಹಿತ್ಯ ಅನೇಕ ಆಯಾಮದವರಿಗೆ ವೇಗವಾಗಿ ತಲುಪಿ, ಅದರ ಬಗ್ಗೆ ನಿರ‍್ಧಾರಗಳನ್ನು ತಗೆದುಕೊಳ್ಳಲು ಸುಲಭವಾದದ್ದಷ್ಟೇ ಅಲ್ಲದೆ ಒಂದು ಕ್ರಾಂತಿ ಬಂದ ಹಾಗಾಯಿತು. ಸರಕಾರ ಸಹ ತನ್ನದೇ ಆದ ನೆರವು ನೀಡಿ, ತಂತ್ರಾಂಶ ಬಳಸಲು ತನ್ನ ಬೆಂಬಲ ಸೂಚಿಸಿತು. ಅನೇಕ ಜನ ಬರಹಗಾರರು ಇವುಗಳನ್ನು ಕಲಿತು, ಅಳವಡಿಸಿಕೊಂಡು, ಮತ್ತೆ ಮತ್ತೆ ಬರೆದು ತಿದ್ದುವ ಕಸರತ್ತನ್ನು ಕಮ್ಮಿ ಮಾಡಿಕೊಂಡರು. ಬರೆದ ಮೂಲಪ್ರತಿಯನ್ನು ತಲುಪಿಸಲು ಅಂಚೆಯವರ ವಿಳಂಬಕ್ಕೆ ಅಥವಾ ಕಾಣೆಯಾಗುವ ಕಷ್ಟಕ್ಕೆ ನೊಂದಿದ್ದ ತಮ್ಮ ಬರಹಗಳ ಕ್ಷೇಮವಾಗಿ ತಲಪುತ್ತಿರುವುದು ಮತ್ತು ಅದು ತಮಗೆ ತಿಳಿಯುತ್ತಿರುವುದು ಕಂಡು ನಿಟ್ಟುಸಿರೆಳೆದರು. ಹಳೆಯ ಪುಸ್ತಕಗಳನ್ನು ಡಿಜಿಟಲೈಸ್ ಮಾಡಿ ಮುಂದಿನ ತಲೆಮಾರುಗಳಿಗೆ ಒದಗಿಸುವ ಅವಕಾಶ ಸಹ ಬಂದು. ಇದರಿಂದ ಅನೇಕ ಹಳೆಯ ಪುಸ್ತಕಗಳನ್ನು ಜೋಪಾನ ಮಾಡಲು ಸಾಧ್ಯವಾಗಿದೆ. ಈ ಮಾಧ್ಯಮಕ್ಕೆ ಅಂಟಿ ಬಂದ ಅದರದ್ದೇ ಆದ ಲೋಪದೋಷಗಳಿದ್ದರೂ ಅಂತರ್ಜಾಲ ತನ್ನದೇ ಒಂದು ಸ್ಥಾನ ಪಡೆದುಕೊಂಡಿತು. ಆದರೆ ಅಂತರ್ಜಾಲಕ್ಕೆ ಸಾಮಾಜಿಕ ಜಾಲತಾಣದ ಬಿರುದು ಸಿಕ್ಕಿರಲಿಲ್ಲ. ಗಣಕ ಯಂತ್ರದಲ್ಲಿ ಮಾತ್ರ ಉಪಯೋಗಿಸಬಹುದಾದ ಈ ಅಂತರ್ಜಾಲದ ಉಪಯೋಗವನ್ನು ಒಂದು ತಲೆಮಾರಿನ ಜನರು ಅದರ ಶಿಕ್ಷಣವಿಲ್ಲದೇ ಪಡೆಯಲಾರದಾದರು. ಆಗ ಬಂದಿತ್ತು ಮುಖಪುಸ್ತಕವೆನ್ನುವ ಒಂದು ಪ್ರಭಂಜನ. ಕಾಲಿಟ್ಟಾಗ ಪ್ರಭಂಜನವೆನಿಸಿಕೊಂಡಿತೋ ಇಲ್ಲವೋ ಆಗಲಿ ಅದಕ್ಕೆ ನಮ್ಮ ಭಾರತೀಯರು ಮುಗಿಬಿದ್ದದ್ದು ನೋಡಿದರೆ ಅದೊಂದು ಪಥಾನ್ವೇಷಕವಾಗಿದೆ ಎನ್ನುವುದರಲ್ಲಿ ಸಂದೇಹವಿಲ್ಲ. ಮಾರ‍್ಕ್  ಜುಕರ್  ಬರ್ಗ್ ಅವರ ಕೂಸಾದ ಈ ಸಾಮಾಜಿಕ ಮಾಧ್ಯಮ ೨೦೦೬ ರಲ್ಲಿ ಬೆಳಕಿಗೆ ಬಂತು. ಬೇಕಾದ ಮಾಹಿತಿಯನ್ನು ಒದಗಿಸುವ ಮೂಲಕ ಯಾರು ಬೇಕಾದರೂ ಖಾತೆಯನ್ನು ತೆರೆಯಬಹುದು. ನಿಮ್ಮ ಖಾತೆ ತೆರೆಯುವುದೆಂದರೆ ಅವರಲ್ಲಿಯ ಒಂದು ಗೋಡೆ ನಿಮ್ಮದಾಗುತ್ತದೆ. ಅದರ ಮೇಲೆ ನೀವು ನಿಮ್ಮ ನೆಚ್ಚಿನ ಅಂಶಗಳನ್ನು ಬರೆಯಬಹುದು, ಹಂಚಿಕೊಳ್ಳಬಹುದು, ಚಿತ್ರಗಳನ್ನು ಹಾಕಬಹುದು ಮುಂತಾದವೆಲ್ಲ ಇವೆ. ಇದು ಮುಂದುವರೆದು ಗುಂಪುಗಳಾಗುವ ಪರಿಯೂ ಬಂತು. ಸಮ ಮನಸ್ಕರ ಅಥವಾ ಕುಟುಂಬದ ಅಥವಾ ಸ್ನೇಹಿತರ ಗುಂಪುಗಳು ಸಹ ಮಾಡಿಕೊಂಡು ಒಂದೇ ಸಂದೇಶ ಅಥವಾ ಚಿತ್ರವನ್ನು ಒಮ್ಮೆ ಹಾಕಿದರೆ ಎಲ್ಲರಿಗೂ ತಲುಪುವ ಸವಲತ್ತನ್ನು ಮುಖಪುಸ್ತಕ ಒದಗಿಸಿಕೊಟ್ಟಿತು. ಈಗ ಪ್ರಪಂಚದಲ್ಲಿ ಮುಖ ಪುಸ್ತಕದ ಖಾತೆ ಹೊಂದಿದವರು ೨.೩ ಬಿಲಿಯನ್ ಇದ್ದಾರಂತೆ. ಅದರಲ್ಲಿ ಭಾರತೀಯರ ಸಂಖ್ಯೆ ೧.೫೩ ಬಿಲಿಯನ್. ಇಷ್ಟೆಲ್ಲ ಸವಲತ್ತುಗಳನ್ನ ಒದಗಿಸಿದ ಮುಖ ಪುಸ್ತಕ ಸಾಹಿತ್ಯಕ್ಕೆ ಯಾವ ರೀತಿ ಸಹಾಯವಾಯಿತು ಎನ್ನುವುದನ್ನು ನೋಡೋಣ. ನಮ್ಮಲ್ಲಿ ತುಂಬಾ ಬರಹಗಾರರಿದ್ದಾರೆ. ಅನಿಸಿದ್ದನ್ನು ಬರವಣಿಗೆಯಲ್ಲಿಟ್ಟು ಪತ್ರಿಕೆಗಳಿಗೆ ಕಳಿಸಿಕೊಟ್ಟು, ಅವರ ಪ್ರಕಟಣೆಗಾಗಿ ಹಾದಿ ಕಾದು ನಿರಾಶೆ ಹೊಂದಿದವರೇ ಬಹಳ. ಮತ್ತೆ ಪತ್ರಿಕೆಗಳು ಸಹ ಬರಹಗಾರರ ದಾಳಿ ತತ್ತರಿಸಿದ್ದು, ಮುಂಚಿನ ತರ ಬಂದ ಬರಹಗಳಿಗೆ ಸೂಕ್ತ ಉತ್ತರ ಅಥವಾ ನಿರಾಕರಣೆ ಕಳಿಸುವ ಸ್ಥಿತಿಯಲ್ಲಿಲ್ಲದಾಗಿದ್ದಾವೆ. ಹಾಗಾಗಿ ತಮ್ಮ ಬರಹ ಅಥವಾ ಕವನ ಬೆಳಕು ಕಾಣದಾದಾಗ ಬೇಸತ್ತು ಬರಹವನ್ನೇ ಬಿಟ್ಟವರು ತುಂಬಾ ಜನ ಉದಯೋನ್ಮುಖ ಬರಹಗಾರರು. ಅಂಥವರಿಗೆ ಮುಖ ಪುಸ್ತಕ ಒಂದು ದಿವ್ಯ ವೇದಿಕೆ. ತಮ್ಮ ಲೇಖನ ಅಥವಾ ಕವನ ಇಡೀ ಆ ಭಾಷೆಯ ಓದುಗರಿಗೆ ತಲುಪದಿದ್ದರೂ, ತನ್ನ ಕೆಲ ದೋಸ್ತುಗಳಿಗಾದರು ತಲುಪಿ ಅವರ ಗಮನಕ್ಕೆ ತರುವಲ್ಲಿ ಮುಖ ಪುಸ್ತಕ ತುಂಬಾ ಸಹಾಯವಾಯಿತು. ಇದರಿಂದ ಅನೇಕ ಕಿರು ಸಾಹಿತಿಗಳಿಗೆ ಒಂದು ತರ ಸಂತೃಪ್ತಿ ಒದಗಿಸುವಲ್ಲಿ ಮುಖಪುಸ್ತಕ ತನ್ನದೇ ಆದ ಪಾತ್ರವನ್ನು ವಹಿಸುತ್ತದೆ ಎಂದು ಹೇಳವುದರಲ್ಲ ತಪ್ಪೇನಿಲ್ಲ. ಅದಷ್ಟೇ ಅಲ್ಲದೇ ಪುಸ್ತಕಗಳ ಬಿಡುಗಡೆ, ಅವುಗಳ ಬಗ್ಗೆ ವಿಮರ್ಶೆ ದೊರಕುವ ಸ್ಥಳಗಳ ಬಗ್ಗೆ ಮಾಹಿತಿ ಇವೆಲ್ಲವು ಮುಖಪುಸ್ತಕದಲ್ಲಿ ಸಿಗುವ ಹಾಗೆ ಮಾಡಬಹುದಾದ ಕಾರಣ ಅವು ಸಾಹಿತ್ಯಾಸಕ್ತರಿಗೆ ಉಪಯುಕ್ತವಾಗುತ್ತಿವೆ. ಮುಖ ಪುಸ್ತಕದಲ್ಲಿ ಕಂಡು ಬರುವ ಲೈಕ್ ಗಳ ಬಗ್ಗೆ ತುಂಬಾ ಜೋಕುಗಳು ಸಹ ಹುಟ್ಟಿಕೊಂಡಿವೆ. ಮುಖಪುಸ್ತಕವನ್ನು ಪರಿಚಿಯಿಸಿದವರೇ ಇದರ ಮಿತಿಗಳನ್ನು ಸಹ ಅಧ್ಯಯನ ಮಾಡಿ ಇದರ ಮತ್ತೊಂದು ಸಂಸ್ಕರಿಸಿದ ಮಾಧ್ಯಮವನ್ನು ನೆಟ್ಟಿಗರಿಗೆ ಪರಿಚಯ ಮಾಡಿದರು. ಇದು ಪರಸ್ಪರ ವಿಚಾರ ವಿನಿಮಯಕ್ಕೆ ಮಾತ್ರ ಬಳಸ ಬಹುದಾಗಿರುವ ವಾಟ್ಸಪ್ ಸಾಮಾಜಿಕ ಜಾಲ ತಾಣ. ಮುಖ ಪುಸ್ತಕದ ಗೋಡೆಯಲ್ಲಿ ಮಾಹಿತಿ ಹಾಕಿದರೆ ಅದು ಖಾತಾದಾರನ ಎಲ್ಲ ಸ್ನೇಹಿತರಿಗೂ ಬೇಡವೆಂದರೂ ತಲುಪುತ್ತದೆ. ಹಾಗೆ ಬೇಕಾದವರ ಗುಂಪಿಗೆ ಮಾತ್ರ ತಲುಪಬೇಕಾದರೆ ಆ ಸ್ನೇಹಿತರಲ್ಲೇ ವಿಷಯದ ವಿಂಗಡನೆ ಮಾಡಿ ಮತ್ತೊಂದು ಗುಂಪುಮಾಡಬೇಕು. ಇವೆಲ್ಲವನ್ನು ಮನಗಂಡ ತಯಾರಕರು ವಾಟ್ಸಪ್ ಪರಿಚಯಿಸುತ್ತ ಅದರಲ್ಲಿ ಪರಸ್ಪರ ಮಾತ್ರ ವಿಚಾರ ವಿನಿಮಯಕ್ಕೆ ಅನುವು ಮಾಡಿಕೊಟ್ಟರು. ಇದರಿಂದ ವೈಯಕ್ತಿಕ ಮಾತುಕತೆಗಾಗಿ ಇದನ್ನು ಬಳಸುವುದು ಆರಂಭವಾಯಿತು. ಈ ವಾಟ್ಸಪ್ ಅನ್ನು ಮೊಬೈಲ್ ನಂಬರಿಗೆ ಆಧಾರವಾಗಿ ಅಳವಡಿಸುವುದರಿಂದ ಬರೀ ಸಂದೇಶಗಳನ್ನಷ್ಟೇ ಕಳಹಿಸುವುದಲ್ಲದೆ, ಎಲ್ಲಿಂದ ಬೇಕಾದರೂ ಮತ್ತೊಬ್ಬರಿಗೆ ಕರೆ ಮಾಡುವ ಸೌಲಭ್ಯ ಸಹ ಸಿಕ್ಕಿತು. ಇವೆಲ್ಲವುಗಳಿಗೂ ತುರಾಯಿ ಎಂದರೆ ಇದು ಸಹ ಉಚಿತ. ಹಾಗಾಗಿ ಈಗ ವಾಟ್ಸಪ್ ಬಳಕೆದಾರರು ( ಯಾರಿಲ್ಲ ಹೇಳಿ ) ಪ್ರಪಂಚದ ಯಾವ ಮೂಲೆಯಿಂದಾದರೂ ಕರೆ ಮಾಡಿ ಮಾತಾಡಬಹುದಾಗಿದೆ. ಇವು ವಾಟ್ಸಪ್ ನ ಪ್ರಯೋಜನಗಳಾದರೆ ಅದು ಸಾಹಿತ್ಯಕ್ಕೆ ಯಾವ ವಿಧವಾಗಿ ಉಪಯೋಗಕರವಾಗಿದೆ ಎನ್ನುವ ಅಂಶವನ್ನು ನೋಡೋಣ. ಪುಸ್ತಕದ ಗಾತ್ರ ಎಷ್ಟೇ ಇರಲಿ ಅದು ವಾಟ್ಸಪ್ ನ ಮೂಲಕ ಮತ್ತೊಬ್ಬರಿಗೆ ಕಳಿಸಬಹುದು. ತಮ್ಮ ಕವನಗಳನ್ನು ತಮಗೆ ಬೇಕಾದ ಮತ್ತೊಬ್ಬರಿಗೆ ಕಳಿಸಿ, ಓದಿಸಿ ಅವರಿಂದ ಅಭಿಪ್ರಾಯ ಪಡೆಯ ಬಹುದು. ಯಾವುದಾದರೂ ಕರಡನ್ನು ಬೇಕಾದವರಿಗೆ ಕಳಿಸಿ ಅದರ ಪರಿಷ್ಕಾರಗೊಂಡಿರುವ ಆವೃತ್ತಿಯನ್ನು ಪಡೆದು ಸರಿಪಡಿಸಬಹುದು. ಪುಸ್ತಕ ಮುದ್ರಣ, ಜಾಹಿರಾತು ಮುದ್ರಣ ಮುಂತಾದವುಗಳಲ್ಲಿ ವಾಟ್ಸಪ್ ತುಂಬಾ ಉಪಯೋಗವಾಗುತ್ತಿದೆ. ಚಿತ್ರಗಳನ್ನು ಕಳಿಸಲು ತುಂಬಾ ಅನುಕೂಲ ಮಾಧ್ಯಮ. ಆದರೆ ಮುದ್ರಣದಾರರು ಚಿತ್ರಗಳನ್ನು ಇದರಲ್ಲಿ ಕಳಿಸುವುದು ಬೇಡವೆನ್ನುತ್ತಾರೆ. ಆ ಮಾತು ಬಿಡಿ. ಕೆಲ ಉತ್ಸಾಹೀ ಸಂಚಾಲಕ ಸಾಹಿತಿಗಳು ತಮ್ಮ ಸಾಹಿತೀ ಮಿತ್ರರ ಸಹಾಯ ಸಹಕಾರ ತೆಗೆದುಕೊಂಡು ಸರಪಳಿ ಕಾದಂಬರಿಗಳನ್ನು ಬರೆಯಲು ಪ್ರೋತ್ಸಹಿಸುತ್ತಿದ್ದಾರೆ. ಇದರಿಂದ ಸಾಹಿತ್ಯ ಕೃತಿ ಎಲ್ಲರ ಬರಹದ ಶೈಲಿಗಳ ತಿರುಳನ್ನು ಒಳಗೊಂಡು ಹೊರಬರುವುದಲ್ಲದೆ ಬೇಗನೆ ಸಹ ಮುಗಿಯಬಲ್ಲದಾಗಿದೆ. ವಾಟ್ಸಪ್ ನ ಮೂಲಕ ಮೂಲ ಕತೆ, ಕವನಗಳ ಅನುವಾದ ನಡೆದು ಅದು ಅನೇಕ ಸಾಹಿತೀ ಮಿತ್ರರಲ್ಲಿ ಹರಿದಾಡುತ್ತ ವಿನಿಮಯವಾಗುತ್ತಿವೆ. ಸಾಹಿತಿಗಳಿಗೆ ಈಗ ಮೊಬೈಲು ಬರೀ ಸಂಪರ್ಕ ಕ್ಕಷ್ಟೇ ಅಲ್ಲದೆ ಅದು ತಾವು ಜೊತೆಗೆ ಕೊಂಡೊಯ್ಯುತ್ತಿರುವ ಸಾಹಿತ್ಯದ ಭಂಡಾರವಾಗಿದೆ. ಈಗ ವಾಟ್ಸಪ್ ಜನ ಜೀವನದಲ್ಲಿ ಎಷ್ಟ ಹಾಸು ಹೊಕ್ಕಾಗಿದೆ ಎಂದರೆ ಅದರ ಬಗ್ಗೆ ಹರಿದಾಡುವ ಜೋಕ್ ಗಳಿಗೆ ಸಹ ಇತಿ ಮಿತಿ ಇಲ್ಲದಾಗಿದೆ. ಇನ್ನೂ ಇನ್ಸ್ಟಾ ಗ್ರಾಮ್, ಟ್ವಿಟ್ಟರ್ ಮುಂತಾದ ಜಾಲತಾಣಗಳಿವೆ. ಇನ್ಸ್ಟಾಗ್ರಾಮ್ ಬರೀ ಚಿತ್ರಗಳಿಗೆ ಮಾತ್ರ ಪರಿಮಿತವಾಗಿದೆ. ಚಿತ್ರಗಳನ್ನು ವಿನಿಮಯ ಮಾಡಿಕೊಳ್ಳುವವರಿಗೆ ಇದು ತುಂಬಾ ಸಹಕಾರಿ. ಟ್ವಿಟ್ಟರ್ ಖಾತೆ ಸಾಮಾನ್ಯ ಜನರಲ್ಲಿ ಅಷ್ಟು ಪ್ರಚಲಿತವಾಗಿಲ್ಲ. ಟ್ವಿಟ್ಟರ್ ಬಗ್ಗೆ ಬರುವ ಕಾಮೆಂಟ್ ಗಳು ನೋಡಿದರ ಅದಕ್ಕಿರುವ ಹ್ಯಾಂಡಲ್ ಬರೀ ದೂರುವುದಕ್ಕೇ ಅಥವಾ ಬಯ್ಯುವುದಕ್ಕೆ ಅಂತ ಆದ ಹಾಗೆ ಕಾಣುತ್ತದೆ. ಎಲ್ಲ ಮಾಧ್ಯಮಗಳ ಹಾಗೆ ಈ ಜಾಲ ತಾಣಗಳಿಗೆ ಸಹ ಕೆಲ ಸೋಂಕುಗಳಿವೆ. ಒಳಿತು ಮಾತ್ರವಲ್ಲದೆ ಕೆಡಕು ಸಹ ಪಕ್ಕದಲ್ಲೇ ಇದ್ದು ಅವುಗಳ ಮಿತಿಯನ್ನು ತೋರಿಸಿಕೊಡುತ್ತದೆ. ಈ ಎರಡು ತಾಣಗಳ ಬಗ್ಗೆ ಇರುವ ಪ್ರಮುಖ ದೂರು ಎಂದರೆ ಮಾಹಿತಿ ಕಳವು. ಕಳವು ಎನ್ನುವುದಕ್ಕಿಂತ ಇದರಲ್ಲಿದ್ದ ವೈಯಕ್ತಿಕ ಮಾಹಿತಿಯನ್ನು ಸಂಸ್ಥೆಯೇ ಬೇರೊಬ್ಬರಿಗೆ ಸಾಗ ಹಾಕುತ್ತಿದೆ ಎನ್ನುವುದು. ಅದರಲ್ಲೂ ಮುಖಪುಸ್ತಕದಲ್ಲಿ ಈ ದೂರು ಇನ್ನೂ ಮಹತ್ವದ್ದಾಗಿದೆ. ಕೆಲ ದೇಶಗಳಲ್ಲಿ ಅಸ್ಮಿತೆಯ ಕಳವು ತುಂಬಾ ಆಗಿದ್ದು ಅನೇಕರು ಮುಖ ಪುಸ್ತಕವನ್ನು ತೊರೆಯುತ್ತಿದ್ದಾರೆ. ಮತ್ತೊಂದು ಅಂಶವೆಂದರೆ ಹರಡುತ್ತಿರುವ ಸುಳ್ಳು ಸುದ್ದಿಗಳು, ದ್ವೇಷ ಹುಟ್ಟಿಸುವ ಭಾಷಣಗಳು. ರಾಜಕೀಯವಾಗಿ ಪ್ರಕ್ಷುಬ್ದ ವಾತಾವರಣವಿರುವಾಗ ಈ ಜಾಲ ತಾಣಗಳಲ್ಲಿ ಕ್ಷಿಪ್ರವಾಗಿ ಹರಡಲು ಸುಲಭವಾದ ಅನೇಕ ಸುಳ್ಳು ಸುದ್ದಿಗಳು ಸಮಾಜದ ಶಾಂತಿಯನ್ನು ಕದಡುತ್ತವೆ ಮತ್ತು ದಂಗೆಗಳಿಗೆ ದಾರಿ ಮಾಡುತ್ತವೆ. ಯಾವುದೋ ಹಳೆಯ ಸುದ್ದಿಯನ್ನು ಮತ್ತೆ ಮತ್ತೆ ಹರಡಿಸಿ ಪ್ರಕೋಪಕ್ಕೆ ಒಯ್ಯುವ ಅನೇಕ ಘಟನೆಗಳು ಬೆಳಕಿಗೆ ಬಂದಿವೆ. ಸಾಹಿತ್ಯದ ವಿಷಯಕ್ಕೆ ಬಂದರೆ ಕೃತಿಗಳು ಮತ್ತು ಕವನಗಳ ಬಗ್ಗೆ ನಿರ್ದಾಕ್ಷಿಣ್ಯ ವಿಮರ್ಶೆಗಳು ಹೆಚ್ಚಾಗಿವೆ. ಮುಖತಃ ಹೇಳಲು ಸಂಕೋಚವಾಗುವ ವಿಮರ್ಶೆಗಳು ಇವುಗಳ ಮೂಲಕ ಸರಾಗ ಬರೆದವರಿಗೆ ಮುಟ್ಟುತ್ತಿವೆ. ಇದರಿಂದ ಸಹೃದಯ ಮತ್ತು ಸೌಜನ್ಯ ಪರಿಸರ ಕೆಡುತ್ತಿದೆ. ಮತ್ತೆ ಇವುಗಳ ಬಳಕೆಯಿಂದ ಈ ತಾಣಗಳಿಗೆ ಅಭ್ಯಾಸವಾಗಿ ಹೋಗಿ ಕುಡಿತ, ಮಾದಕದ್ರವ್ಯಗಳ ರೀತಿ ಇದರ ಚಟವನ್ನು ಸಹ ಬೆಳೆಸಿಕೊಳ್ಳುತ್ತಿರುವುದು ಕಂಡುಬಂದಿದೆ. ಈ ತಾಣಗಳಲ್ಲಿ ಸಿಗುವ ಲೈಕ್ ಗಳು ಅಥವಾ ಮೆಚ್ಚುಗೆಗಳಿಗೆ ಮಾರುಹೋಗಿ, ಅವುಗಳು ತಾವು ಎಣಿಸಿದ ಪ್ರಮಾಣದಲ್ಲಿ ಸಿಗದಿದ್ದಲ್ಲಿ ಮಾನಸಿಕವಾಗಿ ಅಸ್ವಸ್ಥವಾಗುವ ಅನೇಕ ವರದಿಗಳು ನಮಗೆ ಗೊತ್ತಾಗುತ್ತಿವೆ. ಮತ್ತೆ ತಮ್ಮ ತಮ್ಮ ಫೋನಿನಲ್ಲಿಯ ಜಾಲತಾಣಗಳಲ್ಲಿ ವ್ಯಸ್ತವಾಗಿ ಹೋಗಿ ಮನೆ ಕೆಲಸ, ಕಚೇರಿಯ ಕೆಲಸಗಳನ್ನು ನಿರ‍್ಲಕ್ಷ್ಯ ಮಾಡುತ್ತಿರುವ ಕೆಟ್ಟ ಅಭ್ಯಾಸ ಸಹ ಬೆಳೆದಿರುವುದು ಕಂಡು ಬಂದಿದೆ. ಅದರ ಜೊತೆಗೆ ವ್ಯಕ್ತಿಗಳ ಮಧ್ಯೆ ಇರಬೇಕಾದ ಸಂಪರ್ಕವೇ ಕಡಿದುಹೋಗುತ್ತಿದೆ. ಯಾವುದಾದರೂ ಒಂದು ಸಮಾವೇಶ ಅಥವಾ ಸಂಭ್ರಮಗಳಲ್ಲಿ ನೆರೆದ ಜನರು ಅವರವರ ನಡುವೆ ಮಾತುಕತೆಯೇ ಇಲ್ಲದೆ ಎಲ್ಲರು ತಮ್ಮ ತಮ್ಮಫೋನಿನ ತೆರೆಗಳ ಮೇಲೆ ಕಣ್ಣ ದಿಟ್ಟಿಸಿರುತ್ತಿರುವುದು ಕಂಡು ಬರುತ್ತದೆ. ಇದರಿಂದ ಒಂದು ಆರೋಗ್ಯಕರ ಸಮಾಜ ಇಂದು ಕಾಣುತ್ತಿಲ್ಲ. ಎಲ್ಲಿಂದಲೋ ಬರುವ ಸಂದೇಶಗಳ ಮೇಲೆ ದೃಷ್ಟಿ ನೆಟ್ಟಿದ್ದು, ಮೂಗಿನಡಿಯಲ್ಲಿದ್ದ ಇರುವ ಮನುಷ್ಯನ ಕಷ್ಟಕ್ಕೆ ನೆರವಾಗದಂತಾಗಿದ್ದಾನೆ ಇಂದಿನ ಸಾಧಾರಣ ಮನುಷ್ಯ. ಮತ್ತೆ ತನ್ನ ಜಾಲತಾಣದಲ್ಲಿ ಹರಿದಾಡುವ ಸಂದೇಶಗಳಲ್ಲಿರುವ ಸಾರಾಂಶದ ಬಗ್ಗೆ ಮುಖಪುಸ್ತಕ ತನ್ನ ಜವಾಬ್ದಾರಿಯನ್ನು ಕೈ ತೊಳೆದುಕೊಂಡಿದೆ. ಹಾಗಾಗಿ ಯಾವುದೇ ರೀತಿಯ ಅಡೆ ತಡೆ ಇಲ್ಲದೆ ಎಂಥದ್ದಾದರೂ ಸಂದೇಶ ಯಾರಿಗಾದರೂ ಹಾಕಬಹುದಾಗಿದೆ. ಇದರಿಂದ ಸಮಾಜದಲ್ಲಿ ಹಿಂಸೆ ಜಾಸ್ತಿಯಾಗಿದೆ ಎಂದು

ಸಾಹಿತ್ಯದ ಮೇಲೆ ಸಾಮಾಜಿಕ ಜಾಲತಾಣಗಳ ಪ್ರಭಾವ Read Post »

ಇತರೆ, ಲಹರಿ

ಹೆಣ್ಣುಮಕ್ಕಳ ಓದು

ಲಹರಿ ವಸುಂಧರಾ ಕದಲೂರು ಒಂದು ತಮಾಷೆಯ ಲಹರಿ…     ಹೆಣ್ಣು ಮಕ್ಕಳು ಓದು ಬರಹ ಕಲಿಯೋದು ಏಕೆ? ಅವರು ಯಾವ ಸಾಮ್ರಾಜ್ಯ ಕಟ್ಟಬೇಕು? ಯಾರನ್ನ ಉದ್ಧಾರ ಮಾಡಬೇಕು? ಇವೇ ಇಂತಹವೇ ನೂರು ಪ್ರಶ್ನೆಗಳು ಹುಟ್ಟಿಕೊಳ್ತವೆ.    ಇಂಥ ಪ್ರಶ್ನೆಗಳು ಈಗ ಹೆಚ್ಚು ಇರಲಾರದು ಬಿಡಿ. ಆದರೂ ಲೇಖನಿ ಹಿಡಿದರೂ, ಕೀಲಿಮಣೆ ಕುಟ್ಟಿದರೂ ಮುಸುರೆ ತಿಕ್ಕೋದು, ತೊಟ್ಟಿಲು ತೂಗೋದು ನಿಮಗೆ ತಪ್ಪಿದ್ದಲ್ಲ ಎಂದು ಕೊಂಕು ರಾಗ ಹಾಡುವವರಿಗೇನೂ ಕಮ್ಮಿಯಿಲ್ಲ.    ಅಲ್ಲಾ ಇವರೇ.., ನಮ್ಮ ಮನೆ ಪಾತ್ರೆ ಪರಡೆಗಳನ್ನು ನಾವು ತೊಳೆದು ಸ್ವಚ್ಛ ಮಾಡಿಕೊಳ್ಳೋದ್ರಲ್ಲಿ ಏನು ತಪ್ಪಿದೆ ಹೇಳಿ? ಕೆಲಸಕ್ಕೆ ಹೊರಗೆ ಹೋಗಿ ಬಂದು ಮನೇಲಿ ಅಚ್ಚುಕಟ್ಟು ಮಾಡಬಾರದು ಅಂತ ಇದೆಯೇ? ಇಲ್ಲಾ ನಾಕಾರು ಅಕ್ಷರ ಕಲಿತರೆ ಮಕ್ಕಳನ್ನು ಹೆರಬಾರದು ಎಂದು ಎಲ್ಲಾದರೂ ಕಾನೂನಾಗಿದೆಯೇ?    ಒಟ್ಟಿನಲ್ಲಿ ಜನಕ್ಕೆ ಹೇಗಿದ್ದರೂ ತಪ್ಪೇ… ಅವರಿಗೆ ಕಂಡವರನ್ನು ಮೂದಲಿಸದೇ ಇರಲಾಗದು. ಇತರರನ್ನು ಎತ್ತಾಡದೇ ಹೋದರೆ ತಿಂದದ್ದೂ ಜೀರ್ಣವಾಗದು. ಕಲಹ ಪ್ರಿಯರು ಮೊಸರಲ್ಲಿ ಕಲ್ಲು ಹುಡುಕೀ ಹುಡುಕಿ, ಅದು ಸಿಗದೇ ಹೋದಾಗ ತಾವೇ ನಾಕಾರು ಬೆಣಚು ಚೂರು ಹಾಕಿಬರುವಷ್ಟು ಮಟ್ಟಿಗೆ ಕೆಟ್ಟಿರುತ್ತಾರೆ.   ಈಗಂತೂ ಮನೇಲಿ ಕೂರುವವರಿಗಿಂತಲೂ ಹೊರಗೆ ಒಂದಿಲ್ಲೊಂದು ಕೆಲಸಕ್ಕೆ ಹೋಗಿ ಬರುವವರೇ ಹೆಚ್ಚು. ಹಳ್ಳಿಯಿರಲಿ, ಪಟ್ಟಣವಿರಲಿ ವಿದ್ಯೆ ಕಲಿಯುವುದಕ್ಕೆ ಹಿಂದಿನಂತೆ ಅಡ್ಡಿ ಆತಂಕಗಳ ಹರ್ಡಲ್ಸ್ ಹೆಚ್ಚು ಇಲ್ಲ. ಹಾಗಾಗಿ ಹೆಣ್ಣುಮಕ್ಕಳು ವಿದ್ಯಾವತಿಯರಾಗುವ ನಾಗಾಲೋಟಕ್ಕೆ ತಡೆಯಂತೂ ಸಧ್ಯಕ್ಕಿಲ್ಲ.    ಆದರೂ ಒಂದು ಸಂದೇಹ ಯಾವಾಗಲೂ ಕಾಡುತ್ತಿರುತ್ತದೆ.     ಏಕೆ ಹಿಂದಿನವರು ಮಹಿಳೆಯರನ್ನು ಓದುವ, ಕಲಿಯುವ ಅಪೂರ್ವ ಅವಕಾಶಗಳಿಂದ ವಂಚಿತರನ್ನಾಗಿ ಮಾಡಿದ್ದರು ಎಂದು..?!      ಈಗಿನಂತೆ ಸೈನ್ಸು, ಕಾಮರ್ಸು, ಆರ್ಟ್ಸು ಎಂದೆಲ್ಲಾ ಹೆಚ್ಚೇನು ಪಠ್ಯಶಾಖೆಗಳು ಇರದಿದ್ದ ಕಾಲದಲ್ಲಿ ಏನೇನಿತ್ತು ಓದಲು? ಮಹಾಕಾವ್ಯಗಳೂ, ಕತೆ- ಪುರಾಣಗಳೂ, ವೇದೋಪನಿಷತ್ತುಗಳೂ ಇವೇ ಮೊದಲಾದವು ಅಲ್ಲವೇ?     ವೇದೋಪನಿಷತ್ತು ಕಲಿಯಲು ಅನ್ಯರಿಗೆ ನಿಷಿದ್ಧವಿದ್ದಾಗ ಪುರಾಣ ಕಾವ್ಯಗಳನ್ನಲ್ಲದೇ ವಿದ್ಯಾಕಾಂಕ್ಷಿಗಳಿಗೆ ಮತ್ತೇನು ಕಲಿಸಬೇಕಿತ್ತು? ಅಕ್ಷರಾಭ್ಯಾಸ, ಶ್ಲೋಕಾಭ್ಯಾಸ, ಸಾಮಾನ್ಯ ಲೆಕ್ಕ – ಪುಕ್ಕ ಕಲಿಯುವುದು ಬಿಟ್ಟರೆ ಉಳಿಯುವುದು ಮಹಾಕಾವ್ಯಗಳೇ…    ಅವಾದರೂ ಎಂತಹವು..!? ಲೋಕಪ್ರಸಿದ್ಧವಾದ ರಾಮಾಯಣ – ಮಹಾಭಾರತ; ಅದರ ಉಪಕತೆ – ಪುರಾಣ…   ಇನ್ನು ನಮ್ಮ ಹೆಣ್ಣುಮಕ್ಕಳು ಮಹಾಕಾವ್ಯಗಳನ್ನು ಓದಿ, ಅಭ್ಯಾಸ ಮಾಡಿ ತಿಳಿಯುವುದಾದರೂ ಏನಿತ್ತು ಹೇಳಿ? ಬರಿಯ ಶಂಕೆ, ಅಪಮಾನ, ಸೇಡಿನ ಕಿಡಿ, ಮತ್ಸರ, ಶಪಥ, ತಿರಸ್ಕಾರ, ಅಪಮಾನ, ಅಗಲುವಿಕೆ, ಯುದ್ಧ, ಸಾವು, ನೋವು ಇತ್ಯಾದಿ, ಇತ್ಯಾದಿ, ಇತ್ಯಾದಿ…     ಇಂತಹವನ್ನು ಓದುವ ಬದಲು ಮನೆವಾರ್ತೆಗಳೇ ಮುಖ್ಯ ಎಂದುಕೊಂಡು ಓದಿನತ್ತ ನಮ್ಮ ಹೆಣ್ಣುಮಕ್ಕಳು ಮುಖ ತಿರುಗಿಸಿರಲಿಕ್ಕೂ ಸಾಕು.       ಮನೆ ಕೆಲಸ ಎಂದರೆ ಬರೀ ಅಡುಗೆ, ತೊಳಿ- ಬಳಿ ಅಲ್ಲ. ಅಡುಗೆಗೆ ಪೂರಕ ಸಾಮಾಗ್ರಿಗಳು ಇವೆಯೇ ಎಂದು ನೋಡಿಕೊಂಡು ಅವನ್ನು ಸಿದ್ಧಮಾಡಿಕೊಳ್ಳಬೇಕು. ಏನೇನು ಮಾಡಬೇಕು, ಮಳೆಗಾಲಕ್ಕೆ, ಬೇಸಿಗೆಗೆ, ಚಳಿಗೆ ಹೀಗೆ ಹವಮಾನಕ್ಕೆ ಅನುಕೂಲಕರ ಸಿದ್ಧತೆಯಾಗಿರಬೇಕು. ಹಬ್ಬ ಹರಿದಿನ ಶುಭಕಾರ್ಯ ಇತರೆ ಸಮಾರಂಭಗಳಿಗೆ ತಯಾರಿ ಮಾಡಬೇಕು. ಮಕ್ಕಳು – ಹಿರಿಯರು ಹೊರಗೆ ದುಡಿಯಲು ಹೋಗುವವರ ದೇಖರೇಖಿ ನೋಡಬೇಕು. ಬಂಧು ಬಳಗ, ಅತಿಥಿ ಅಭ್ಯಾಗತರ ಯೋಗಕ್ಷೇಮ ವಿಚಾರಿಸಿಕೊಳ್ಳಬೇಕು. ಮನೆವಾರ್ತೆ ಒಂದೇ ಎರಡೇ…!    ಇವೇ ಇಷ್ಟೆಲ್ಲಾ ಇರುವಾಗ ಪುರಾಣ- ಕಾವ್ಯ ಓದಿಕೊಂಡು ಕೂರಲಿಕ್ಕಾಗುತ್ತಿತ್ತೇ? ಅದೇನು ಹೊಟ್ಟೆ ತುಂಬಿಸುತ್ತದೆಯೇ? ನೆತ್ತಿ ಕಾಯುತ್ತದೆಯೇ? ಹಾಗಾಗಿ ಕಲಿಯಲು ನಮ್ಮ ಹೆಣ್ಣು ಮಕ್ಕಳೂ ಅಸಡ್ಡೆ ಮಾಡಿರಬಹುದು ಬಿಡಿ.       ಇಲ್ಲಾ ಏನಿದೆ ಇದರೊಳಗೆ ಎಂದು ಗುರುಗಳ ಗರಡಿಗೆ ಕಲಿಯಲು ಹೋದವರಿಗೆ ಹೆಣ್ಣುಗಳನ್ನು ಕಾವ್ಯದೊಳಗೆ ಇನ್ನಿಲ್ಲದಂತೆ ಅಬಲೆಯರೂ, ಹೊಟ್ಟೆಕಿಚ್ಚಿನವರೂ, ಯುದ್ಧ ಕಾರಣರೂ, ತಂದು ಹಾಕುವವರೂ, ಕಲಹ ಪ್ರಿಯರೂ ಹೀಗೆ ಚಿತ್ರಿಸಿರುವುದನ್ನು ಕಂಡು ಕೋಪಗೊಂಡು ಇದೇಕೆ ಹೀಗೆ..?! ಎಂದು ಮಾತಿನ ಚಕಮಕಿಯಾಗಿ ವಾದವಿವಾದ ತಾರಕಕ್ಕೆ ಹಚ್ಚಿಕೊಂಡಿರಬಹುದು.      ಹಾಗಾಗಿ ಇದೆಲ್ಲಾ ಬೇಡಬಿಡು, ಚೆನ್ನಾದ ವಿಚಾರಗಳು ಕಲಿಯುವ ಸಂದರ್ಭ ಬಂದಾಗಲೇ ನಾವು ಓದುವ ಬಗ್ಗೆ ಚಿಂತಿಸೋಣ ಎಂದು ನಮ್ಮ ಹೆಣ್ಣುಮಕ್ಕಳು ವಿಚಾರ ಮಾಡಿರಬೇಕು.   ಹಾಗಾಗಿಯೇ ಆಧುನಿಕ ವಿದ್ಯಾಭ್ಯಾಸ ಕ್ರಮ ಜಾರಿಗೆ ಬಂದು ಕಲೆ, ವಿಜ್ಞಾನ, ವಾಣಿಜ್ಯ ವಿಚಾರಗಳು ಓದುವ ರೂಢಿ ಬೆಳೆದು ಬಂದ ಮೇಲೆಯೇ ನಮ್ಮ ಹೆಣ್ಣುಮಕ್ಕಳು ಓದಿನಲ್ಲಿ ಮೇಲುಗೈ ಸಾಧಿಸಿರುವುದು…  ಇದು ನನ್ನ ಒಂದು ವಿಚಾರವಷ್ಟೇ… ಸತ್ಯಕ್ಕೆ ಹಲವು ಮಗ್ಗಲುಗಳಿವೆ. – —

ಹೆಣ್ಣುಮಕ್ಕಳ ಓದು Read Post »

ಇತರೆ, ಜೀವನ

ಬದುಕು ಕಠೋರ

ಅನುಭವ ನಾಗರಾಜ ಮಸೂತಿ ಇವತ್ತು ಬದುಕು ಬಹಳ ಕಠೋರ ಅನಿಸ್ತು. ನಾವೆಲ್ಲ ಮನೆ ಮುಂದಿನ ಗೇಟ್ ಕೂಡ ದಾಟದ ಹಾಗೆ ಮನೆಯಲ್ಲಿಯೇ ಕೂತಿವಿ. ಹಳ್ಳಿ ಹೆಣ್ಣು ಮಗಳು ಮೊಸರು ಮಾರ್ತಾ ಮನೆ ಬಾಗ್ಲಿಗೆ ಬಂದ್ಲು. ನಮವ್ವಗ ಒಂದು ಒಳ್ಳೆ ಅಭ್ಯಾಸ ಏನಂದ್ರ ಯಾರೇ ಬರ್ಲಿ ಕರದ ಕುಂಡರ್ಸಿ ನೀರ ಕೊಟ್ಟ ಮಾತಾಡ್ಸುದು. ವ್ಯಾಪಾರ ಎರಡನೆ ಮಾತು. ಇದು ನಮ್ಮ ಮನೆ ಮಂದಿಗೆ ಹಿರೆರಿಂದ ಬಂದ ಬಳುವಳಿ. ಇರ್ಲಿ ಹಾಂ ಮೊಸರ ಮಾರಕ ಬಂದಾಕಿ ಮಸರು ಕೊಟ್ಲ ರೊಕ್ಕಾನು ತಗೊಂಡು ಕಥೆ ಹೇಳಾಕ ಸುರು ಮಾಡಿದ್ಲ. ಬಾಗಲಕೋಟಿ ಹತ್ರ ಪಕ್ಕದ ಹಳ್ಳಿ ಆಕೆದು . ಕಾಯಿಪಲ್ಯ, ಮೊಸರ, ಹಾಲ ಮಾರೊರು ಎಂಟತ್ತ ಮಂದಿ ಸೇರಿ ಟಾಟಾ ಎಸಿ ಗಾಡಿ ಬಾಡಗಿ ಮಾತಡ್ಕೊಂದ ಬಂದಾರ. ಇಲ್ಲಿ ನವನಗರದಾಗ ಎಲ್ಲೀ ವ್ಯಾಪರಕ್ಕ ಬಿಡವಲ್ಲರು.  ಕೊರೊನಾ ಬಂದೈತಿ ಅಂತ ಹೇಳಿ ಪೋಲಿಸರ ಮುಂಜ ಮುಂಜಾನೆ ಲಾಠಿ ಏಟ್ ಕೊಡಾಕ ಸುರು ಮಾಡ್ಯರಬೆ ಎವ್ವ, ಬುಟ್ಯಾಗಿನ ಕಾಯಿಪಲ್ಯ ಚೆಲ್ಲಾಕತ್ತಾರ, ಗಡಿಗ್ಯಾಗಿನ ಮಸೂರ ಚೆಲ್ಲಿದ್ರ. ಒಬ್ಬ ಗನಮಾಗ ಬಂದ ಕೇಳಿದ ಬೆಣ್ಣಿ ಇತ್ತಬೆ ಅರ್ಧ ಕಿಲೋ ಕೊಟ್ಟ್ಯಾ ಪೋಲಿಸ್ ಬಂದ್ರ ಹಂಗ ಓಡಿ ಹೋದನಬೇ. ರೊಕ್ಕಾನು ಕೊಡ್ಲಿಲ್ಲ, ಡಬ್ಬಿನ ಒಯ್ದಾಬೇ. ಎಡ್ನೂರು ಮುನ್ನೂರ ರೂಪಾಯಿಬೇ ಎವ್ವಾ, ಏನ್ ಮಾಡಬೇಕ ನೋಡ. ಅವ್ವಗ ತಡ್ಯಾಕಾಗಲಿಲ್ಲ ಬೈದ್ಲು ಮನಸು ಹಗರು ಮಾಡ್ಕೊಂಡಳು. ಮೊಸರ ಮಾರಾಕಿಗಿ ಸಮಾಧಾನ ಮಾಡಿದ್ಲ. ಎವ್ವ ಈ ಗಲಾಟ್ಯಾಗ ಯಾಕ್ ಬರ್ತಿ ಸುಮ್ಮನ ಮನ್ಯಾಗ್ ಇರ್ಬಾರ್ದ ಅಂದ್ಲ್. ಎಷ್ಟೇ ಆಗಲಿ ಹಳೆ ಮನುಷ್ಯಾರ ಒಬ್ಬರ ಕಷ್ಟ ತಮ್ಮ ಕಷ್ಟ ಅನ್ನುವಷ್ಟರ ಮಟ್ಟಿಗೆ ಅವರ ಪ್ರತಿಕ್ರಿಯೆ ಇರುತ್ತ. ಅಷ್ಟಕ್ಕ ಸುಮ್ಮನಾಗಲಾರದ ಮೊಸರ ಮಾರೊ ಹಳ್ಳಿ ಹೆಣ್ಣು ಮಗಳು ಒಳ್ಳೆಯದಷ್ಟ ಗೊತ್ತ , ಯಾರಾರ ಏನರ ಅಂದ್ರ ಜಗಳ ಮಾಡ್ತಾರ, ಆದರ ಕೆಟ್ಟದ ಬಯಸಾಂಗಿಲ್ಲ. ನಾವು ಮನ್ಯಾಗ ಕುಂತರ ಜನ ಎಲ್ಲಾ ಏನ್ ತಿನಬೇಕಬೇ ಎವ್ವ , ಬೆಳದಿದ್ನ ಕೆಡಿಸಿ ಏನ ಮಾಡುದೈತಿ ಅಲ್ಲನ ಬೇ? ಏನ ಒಂದೀಟು ತ್ರಾಸ್ ಆದಿತ್ತ ಬಂದ ಹೋಗಾಕ ಅಂದ ಬುಟ್ಟಿ ತೆಲಿ ಮ್ಯಾಲಿ ಹೊತ್ತ ಹೊಂಟ್ಲ. ಅವ್ವ ಹೌದು ನೀ ಕರೆಕ್ಟ್ ಅದಿಯವ, ಕಲ್ತವಕ ಬುದ್ಧಿ ಕಡಿಮೆ ಆಗ ಕತ್ತೈತಿ ಏನ್ ಮಾಡುದವ, ಹುಷಾರ್ ಹೋಗವ ಅಂತ ಹೇಳಿ ಕಳಿಸಿದ್ಲ. ಬದುಕು ಕಠೋರ ನಮ್ಮಂತವರಿಗೆ, ಏನು ಅರಿಯದ ಮುಗ್ಧರಿಗೆ ಅಷ್ಟೇ ಸರಳ. *************

ಬದುಕು ಕಠೋರ Read Post »

ಇತರೆ, ಲಹರಿ

ನಾನು ನಾನೇ…..

ಲಹರಿ ರಾಧಿಕಾ ಕಾಮತ್ ಜೀವನ ಒಂದು ಚಲನಚಿತ್ರ… ನಮ್ಮದು ಅದರಲ್ಲಿ ಒಂದೊಂದು ಪಾತ್ರ… ಮೇಲಿರುವ ನಿರ್ದೇಶಕ ಹಿಡಿದಿರುವ ಸೂತ್ರ… ಕೊನೆಗೆ ಎಲ್ಲರೂ ಮರಳಬೇಕು ಅವನ ಹತ್ರ… ಈ ಜೀವನ ಎಂಬ ನಾಟಕ/ ಚಲನಚಿತ್ರದಲ್ಲಿ ನಾವು ಹುಟ್ಟಿನಿಂದ  ಹಲವಾರು ಪಾತ್ರಗಳನ್ನು ನಿಭಾಯಿಸುತ್ತಲೇ ಇರುತ್ತೇವೆ. ಅದು ನಮ್ಮ ಇಷ್ಟದ್ದಾಗಲಿ ಇಷ್ಟವಿಲ್ಲದ್ದಾಗಲಿ ನಾವು ನಿರ್ವಹಿಸಲೇ ಬೇಕು. ನಾನು ಹುಟ್ಟಿದಾಗ ಒಂದೇ ಬಾರಿಗೆ ಮಗಳು ,ಮೊಮ್ಮಗಳು ತಂಗಿ ಎಂಬ ಮೂರು ಪಾತ್ರಗಳನ್ನು ಒಟ್ಟಿಗೆ ನಿಭಾಯಿಸಿದ್ದೆ. ಮುಂದೆ ನಾಲ್ಕೈದು ವರ್ಷ ಕಳೆದಾಗ ಅಮ್ಮನ ಮಮತೆ ಕಂಡು ನನಗೂ ಅಮ್ಮನ ಪಾತ್ರ ನಿರ್ವಹಿಸುವ ಆಸೆ. ಆಗ ನನಗೆ ಮಗುವಾಗಿದ್ದು ನನ್ನ ಬಳಿ ಇದ್ದ ಒಂದು ಬೊಂಬೆ.ಅದನ್ನೇ ಮಗುವೆಂದು ತಿಳಿದು ಅಮ್ಮನಾಗಿಬಿಟ್ಟಿದ್ದೆ. ಮುಂದೆ ಮುಂಬೈನಲ್ಲಿದ್ದ ನನ್ನ ಅಕ್ಕ ಊರಿಗೆ ಬಂದಾಗ ಅವಳು ಕೇಳಿದ ,ಓದಿದ ಸಿಂಡ್ರೆಲ್ಲಾ, ಸ್ನೋವೈಟ್  ಕತೆ ಕೇಳಿದಾಗ ಅದರಲ್ಲಿದ್ದ ರಾಜಕುಮಾರಿಯೂ ನಾನೇ ಆಗಿಬಿಟ್ಟಿದ್ದೆ… ಮುಂದೆ ಶಾಲೆಗೆ ಹೋದಾಗ ನಮ್ಮನ್ನು ಪ್ರೀತಿಯಿಂದ ನೋಡಿಕೊಂಡ ಶಿಕ್ಷಕಿಯನ್ನು ಕಂಡಾಗ ನನಗೂ ಶಿಕ್ಷಕಿಯಾಗಬೇಕು  ಎಂಬ ಆಸೆ. ಅದನ್ನು ನೆರವೇರಿಸಿಬಿಟ್ಟಿದ್ದ ಆ ಸೂತ್ರಧಾರ. ಮುಂದೆ ಬಂಧು ಬಳಗದ ಹೊರತಾಗಿ ಸ್ನೇಹಿತೆ ಎಂಬ ಪಾತ್ರ ನನಗಿಷ್ಟವಾಗಿತ್ತು.ಅದನ್ನು ಎಲ್ಲ ಕಡೆಗಳಲ್ಲೂ  ನಿರ್ವಹಿಸಿದೆ ಮುಂದಿನದು ಪತ್ನಿ,ಸೊಸೆ,ಅಮ್ಮನ ಪಾತ್ರ ಗಳು ನನ್ನ ಹೆಗಲೇರಿಬಿಟ್ಟವು..ಇದು ತುಸು ತ್ರಾಸಾದಯಕ ಪಾತ್ರಗಳು. ಯಾವುದೇ ರಿಹರ್ಸಲ್(ಪೂರ್ವತಯಾರಿ) ಗಳಿಲ್ಲದೆ ಮಾಡಬೇಕಾದ ಪಾತ್ರಗಳು.. ಕಷ್ಟವೋ ಸುಖವೊ ಸಧ್ಯಕ್ಕೆ ಅವನ್ನು ಕೂಡ ನಿರ್ವಹಿಸಿರುವೆ.. ಇನ್ನು ಸಧ್ಯ ಎರಡು ಪಾತ್ರಗಳು ಬಾಕಿ ಇವೆ..ಅತ್ತೆ ಹಾಗೂ ಅಜ್ಜಿಯ ಪಾತ್ರ ಆ ಸೂತ್ರದಾರನ ದಾರ ಎಷ್ಟು ಉದ್ದ ಇದೆಯೋ ಗೊತ್ತಿಲ್ಲ. ಅದನ್ನು ನನ್ನಿಂದ ಆಡಿಸುವ ಇಚ್ಛೆ ಅವನಿಗಿದೆಯೋ.. ನನ್ನಿಂದ ಅದು ನಿರ್ವಹಿಸಲು ಸಾಧ್ಯವಿದೆಯೋ ನನಗೆ ತಿಳಿದಿಲ್ಲ… ಒಟ್ಟಾರೆ ನಾನು ನಾನಾಗಿಯೇ…ನಾನೇ ಪಾತ್ರವಾಗಿ ಇದುವರೆಗೆ ನಟಿಸಿರುವೆ… ಕೆಲವೊಂದು ಕಡೆ ಪೋಷಕ ನಟಿ,ಕೆಲವೊಂದು ಕಡೆ ನಾಯಕ ನಟಿ,ಇನ್ನೂ ಕೆಲವು ಕಡೆ ಖಳನಾಯಕಿಯಾಗಿಯೂ ನಟಿಸುವ ಸಂದರ್ಭ ಬಂದಿರುತ್ತದೆ. ಈ ಜೀವನ ಎಂಬ ನಾಟಕದಲ್ಲಿ ನಾವು ನಿರ್ದೇಶಕರಾಗಲು ಖಂಡಿತಾ ಸಾಧ್ಯವಿಲ್ಲ ಕೊನೆಯದಾಗಿ ನಾವು ನೋಡುವ ಚಲನಚಿತ್ರಗಳ ನಟರಿಗೆ ಇಷ್ಟು ಪಾತ್ರಗಳಲ್ಲಿ ನಿಮಗೆ ಇಷ್ಟವಾದ ಪಾತ್ರ ಯಾವುದು ಅಂತ ಕೇಳ್ತಾರಲ್ಲ ಹಾಗೆಯೇ ನನಗೇನಾದರೂ ಕೇಳಿದರೆ ನನ್ನ ಉತ್ತರ ಸ್ನೇಹಿತೆಯ ಪಾತ್ರ *****

ನಾನು ನಾನೇ….. Read Post »

ಇತರೆ, ಜೀವನ

ಆಚರಣೆಗಳಲ್ಲಿನ ತಾರತಮ್ಯ

ವಿಚಾರ ಜ್ಯೋತಿ ಡಿ.ಬೊಮ್ಮಾ ದೇವರನ್ನು ನಂಬಿ ಕೆಟ್ಟವರಿಲ್ಲ ಎಂಬ ವಾದವನ್ನು ಒಪ್ಪಬಹುದು.ಆದರೆ ದೈವದ ಹೆಸರಲ್ಲಿ ಆಚರಿಸುವ ಆಚರಣೆಗಳಲ್ಲಿನ ತಾರತಮ್ಯ ಒಪ್ಪಲಾಗದು. ಪೂಜೆಯ ಆಚರಣೆಗಳು ನಮ್ಮ ಮನಸ್ಸಿಗೆ ಸಮಾಧಾನವಾಗಿದ್ದರಷ್ಷೆ ಸಾಲದು ,ಆ ಆಚರಣೆಗಳು ಮತ್ತೊಬ್ಬರ ಮನಸ್ಸಿಗೆ ನೊವನ್ನುಂಟು ಮಾಡಬಾರದು. ನಿರಾಕಾರನನ್ನು ಒಂದೊಂದು ರೂಪ ಕೊಟ್ಟು ಬಟ್ಟೆ ತೊಡಿಸಿ ಅಲಂಕರಿಸಿ ಒಂದೊಂದು ಹೆಸರು ಕೊಟ್ಟು ಪೂಜಿಸುವರಿಗೆ , ದೇವರನ್ನು ತಾವೆ ಸೃಷ್ಟಿಸುತ್ತಿದ್ದೆವೆ ಎಂಬ ಅರಿವಾಗದೆ..! ಹಬ್ಬಗಳು ನಮ್ಮ ಸಂಸ್ಕೃತಿಯ ಪ್ರತಿಕ  ,ಈಗ ಬರುತ್ತಿರುವ ವರಮಹಾಲಕ್ಷಿ ಹಬ್ಬವೂ ಅದಕ್ಕೊಂದು ಉದಾಹರಣೆ.ಲಕ್ಷ್ಮಿ ಎಂದರೆ ಅಡಂಬರದ ಪ್ರತಿಕ , ಭಾರಿ ಸೀರೆ ಉಡಿಸಿ ಒಡವೆ ವಸ್ತ್ರ ಗಳ ಧಾರಣೆ ಮಾಡಿ , ಹೂವಿನ ಮಂಟಪದಲ್ಲಿವಿರಾಜಮಾನಳಾಗಿಸಿ ,ಸುತ್ತಲೂ ದೀಪಗಳ ಅಲಂಕಾರ  ,ತಹರೆವಾರಿ ಅಡುಗೆಗಳ ನೈವೇದ್ಯ ,ವೆರೈಟಿ ತಿಂಡಿಗಳನ್ನು ಮೂರ್ತಿಯ ಮುಂದಿಟ್ಟು ತೃಪ್ತಿ ಪಡಿಸಿ (ಬೇರೆಯವರಿಗೂ ಕರೆದು ತೋರಿಸಿ ) ಅಥವಾ ಪಟ್ಟುಕೊಂಡು ಪೂಜೆಯ ಕಾರ್ಯ ಕೈಗೊಳ್ಳುತ್ತಾರೆ. ಆದರೆ ಅರಸಿನ ಕುಂಕುಮಕ್ಕೆ ಕೇವಲ ಮುತೈದೆಯರನ್ನೂ ಮಾತ್ರ ಕರೆಯಬೇಕು ಎನ್ನುವ ನಿಯಮ ಎಷ್ಟು ಸಮಂಜಸ..,! ಕೇವಲ ಗಂಡನ ಇರುವಿಕೆಯಿಂದಲೆ ಅವಳ ಮೌಲ್ಯ ಅರಿಯುವ ಈ ಸಮಾಜದಲ್ಲಿ  ಹೆಣ್ಣಿಗೆ ತನ್ನದೆಯಾದ ಸ್ವಂತ ಅಸ್ತಿತ್ವ ವೆ ಇಲ್ಲವೆ. ಮದುವೆಯಾದ ಮೇಲೆ ಅವಳು ಗಂಡನಿಂದ ಮುತೈದೆ ಪಟ್ಟ ಪಡೆದುಕೊಳ್ಳುತ್ತಾಳೆ .ಅವನು ಅಳಿದ ಮೇಲೆ ಆ ಪಟ್ಟ ಅವಳಿಂದ ಕಿತ್ತುಕೊಳ್ಳಲ್ಪಡುತ್ತದೆ.ಸಮಾಜವು ಕೂಡ ಅವಳು ಮುತೈದೆಯಾಗಿದ್ದರೆ ಮಾತ್ರ ಅವಳಿಗೆ ಶುಭ ಕಾರ್ಯ ಗಳಲ್ಲಿ ಪ್ರಾಮುಖ್ಯತೆ. ಎಷ್ಟೋ ಮಠಗಳಲ್ಲಿ ಮುತೈದೆಯರ ಕುಂಭಮೇಳ ಮತ್ತು ಮುತೈದೆಯರ ಉಡಿತುಂಬುವ ಕಾರ್ಯ ಕ್ರಮ ಆಯೋಜಿಸುತ್ತವೆ ,ಇಂತಹ ಆಚರಣೆಗಳ ಉದ್ದೇಶ ವೇನು..? ಸಮಾಜದಲ್ಲಿನ ಮೌಡ್ಯಗಳನ್ನು ತೊಲಗಿಸುವ ಪ್ರಯತ್ನ ಮಾಡಬೇಕಾದ ಮಠಗಳೆ ಇಂತಹ ಮೌಡ್ಯಕ್ಕೆ ಒತ್ತು ಕೊಟ್ಟರೆ ,ಬೇಲಿಯೆ ಎದ್ದು ಹೋಲ ಮೈದಂತೆ ಅಲ್ಲವೆ..! ಪೂಜೆಯ ಹೆಸರಿನಲ್ಲಿ ಮುತೈದೆಯರನ್ನು ಮಾತ್ರ ಕರೆದು ಅವರಿಗೆ ಉಡಿ ತುಂಬಿ ಭಾರಿ ಭೋಜನ ಉಣಬಡಿಸಿ (ಮುತೈದೆಯರ ಉಟದ ತಯ್ಯಾರಿ ವಿಧವೆಯರು ಮಾಡಬಹುದು ಆದರೆ  ಅವರು ಬಡಿಸುವದು ಮಾತ್ರ ನಿಷಿದ್ದ ) ತಮ್ಮ ಮುತೈದೆತನ ಧೀರ್ಘ ವಾಗಲೆಂದು ಬೇಡಿಕೊಳ್ಳುತ್ತಾರೆ ,ಇದೊಂದು ಆಶಾದಾಯಕ ಆಚರಣೆ ಆಗಿರಬಹುದು ಅವರವರ ಭಾವದಲ್ಲಿ.ಆದರೆ ಗಂಡನನ್ನು ಕಳೆದುಕೊಂಡ ಸ್ತ್ರೀಯು ತನ್ನನ್ನು ಇಂತಹ ಆಚರಣೆಗಳಿಂದ ದೂರವಿಟ್ಟಿರುವದನ್ನು ಹೇಗೆ ಸಹಿಸಿಯಾಳು. ಒಂದು ಮೂರ್ತಿಗೆ ಅಲಂಕಾರಮಾಡಿ ನೋಡಿ ಸಂತೋಷ ಪಡುವ ನಾವು , ಜೀವಂತವಾಗಿರುವ ಒಂದು ಜೀವ ಈ ಪೂಜೆಯ ಒಂದು ಭಾಗವಾಗಲಾರದೆ ದೂರದಲ್ಲಿ ನಿಂತು ಮೂಕವಾಗಿ ರೋಧಿಸುವ ತಲ್ಲಣದ ಅರಿವು ನಮಗಾಗದೆ..! ಮುತೈದೆಯರಿಗೆ ಮಾತ್ರ ಪ್ರಾಶಸ್ತ್ಯ ಕೊಟ್ಟು ತನ್ನನ್ನು ಕಡೆಗಾಣಿಸುವದರಿಂದ ಅವಳು ಮಾನಸಿಕವಾಗಿ ಕುಗ್ಗತ್ತಾಳೆ ,ಖಿನ್ನಳಾಗುತ್ತಾಳೆ ,ಅವಳ ಇಂತಹ ಸ್ಥಿತಿಗೆ ಈ ರೀತಿಯ ತಾರತಮ್ಯ ದ ಆಚರಣೆಗಳು ಪರೋಕ್ಷವಾಗಿ ಕಾರಣವಾಗುತ್ತವೆ. ಗಂಡನನ್ನು ಕಳೆದುಕೊಂಡ ಹೆಣ್ಣಿಗೆ ಸ್ಥೈರ್ಯ ತುಂಬಿ ಅವಳಲ್ಲಿ ಜೀವನ್ಮುಖಿ ಹುಮ್ಮಸ್ಸು ತುಂಬುವತ್ತ ನಮ್ಮ ಪ್ರಯತ್ನ ವಾಗಬೇಕು.ಅದು ಬಿಟ್ಟು ವಿಧವೆಯರನ್ನೂ ಕಡೆಗಾಣಿಸಿ ಮುತೈದೆಯರನ್ನೂ ವೈಭವಿಕರಿಸುವದು ಯಾವ ನ್ಯಾಯ..! ಯಾವ ದೇವರು ಈ ತಾರತಮ್ಯ ಸೃಷ್ಟಿಸಿದ್ದು..! ದೇವರೆನಾದರೂ ಮಾತಾಡುವಂತಿದ್ದರೆ ಇಂತಹ ಆಚರಣೆಗಳನ್ನು ಅವನು ಖಂಡಿತ ಖಂಡಿಸುತಿದ್ದನೆನೋ.. ನಡೆಸಿಕೊಂಡು ಬಂದ ಪೂಜೆ ಆಚರಣೆಗಳು ಕೆಲವರ ಬದುಕಿನ ಭಾಗವೆ ಆಗಿರುತ್ತವೆ. ಅವನ್ನು ಅಲ್ಲಗಳೆಯಲು ಅವರ ಮನಸ್ಥಿತಿ ಒಪ್ಪದು.ಆದರೆ ಈಗ ಎಲ್ಲರೂ ವಿದ್ಯಾವಂತರು ,ಹಿಂದಿನಿಂದ ಆಚರಿಸಿಕೊಂಡು ಬಂದ ಸ್ಂಪ್ರದಾಯ ಮುಂದುವರೆಸಿಕೊಂಡು ಹೋಗಬೇಕು ಎಂಬ ನಿಯಮವೇನಾದರು ಇದೆಯೆ…! ಆಚರಣೆಗಳಲ್ಲಿನ ಒಳಿತು ಕೆಡಕುಗಳನ್ನರಿತು ಮತ್ತೊಬ್ಬರ ಮನಸ್ಸಿಗೆ ನೋವಾಗದಂತೆ ,ಅಡಂಬರವಿಲ್ಲದೆ ತೋರಿಕೆಯಿಲ್ಲದೆ ,ಪೂಜೆಮಾಡಬಹುದಲ್ಲವೆ. ನಮ್ಮೊಳಗಿನ ನಿರಾಕಾರನು ಅದೆ ಬಯಸುವನು. ***********************************   .

ಆಚರಣೆಗಳಲ್ಲಿನ ತಾರತಮ್ಯ Read Post »

You cannot copy content of this page

Scroll to Top