ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ

ಎರಡು ಪತ್ರಗಳು

ಎರಡು ಪತ್ರಗಳು ಪತ್ರ ಒಂದು [6:27 pm, 18/10/2020] NAGRAJ HARAPANALLY: ಸಂಗಾತಿಯ ನೆನೆಯುತ್ತಾ…. ಹಿರಿಯ ಸಂಗಾತಿ ಮಧುಸೂದನ್ ಸರ್ ಗೆ ನಮಸ್ಕಾರಗಳು.. ಸಂಗಾತಿ ಕನ್ನಡ ವೆಬ್ ಒಂದು ವರ್ಷ ಪೂರೈಸಿ, ಎರಡನೇ ವರ್ಷಕ್ಕೆ ಕಾಲಿಡುತ್ತಿದೆ. ನಾನು ಸಂಗಾತಿಯ ಭಾಗವಾದುದು ಈ ವರ್ಷದ ಮಾರ್ಚನಲ್ಲಿ. ಮಧುಸೂದನ್ ಸರ್ ನನ್ನ fb ಗೆಳೆಯರು.ಹಿರಿಯರು‌ .‌ಆದರೆ ಕನ್ನಡ ವೆಬ್ ಮಾಡಿದ್ದು ಗೊತ್ತಿರಲಿಲ್ಲ. ನನ್ನ ಪತ್ರಿಕೆ ಕೆಲಸ ,ಪತ್ರಕರ್ತ ವೃತ್ತಿ ಕಾರಣವಾಗಿ‌ .ಗೆಳೆಯ ಮೋಹನ್ ಗೌಡನ ಬರಹ ಸಂಗಾತಿಯಲ್ಲಿ ಪ್ರಕಟವಾಗಿತ್ತು. ಕುತೂಹಲದಿಂದ ಅವನ ಬರಹ ಓದಿದೆ. ವಿಳಾಸ ಹುಡುಕಿದೆ. ಮೋಹನ್ ನನಗೆ ಸಂಗಾತಿಯ ಪರಿಚಯಿಸಿದ. ಹಾಗೂ ಮಧುಸೂದನ್ ಸರ್ ನಂಬರ್ ಪಡೆದು ಕವಿತೆ ಕಳಿಸಲು ಪ್ರಾರಂಭಿಸಿದೆ. ನಂತರ ನಮ್ಮ ಸ್ನೇಹ ಗಾಢವಾಯಿತು.‌ಚರ್ಚೆಗಳಾದವು. ರಹಮತ್ ತರಿಕೆರೆ ಸರ್ ಅವರನ್ನು ಕರೆತಂದೆವು. ನಂತರ ” ದುರಿತಕಾಲದ ದನಿ ” ತಲುಪಿತು. ಅದನ್ನು ಓದಿದ ಮೇಲೆ ಕನ್ನಡದ ಸಾಂಸ್ಕೃತಿಕ ಲೋಕ ಮಧುಸೂದನ್ ಅವರಂತಹ ಆಗ್ನಿ ಕುಂಡದ ಕವಿಯನ್ನು ವ್ಯವಸ್ಥಿತವಾಗಿ ನಿರ್ಲಕ್ಷಿಸಿರುವುದು ತಿಳಿಯಿತು.‌ ನಂತರ ನನ್ನ ಕಾಯಕ ನಾ ಮಾಡುತ್ತಲೇ…ಮಧುಸೂದನ್ ಸರ್ ಮತ್ತೂ ಹತ್ತಿರವಾದರು. ಮುಖಾಮುಖಿ ಅಂಕಣ ಪ್ರಾರಂಭಿಸಲು ಅವಕಾಶ ನೀಡಿದರು. ಕವಿಗಳ ಮನಸ್ಥಿತಿ, ಅವರ ಒಲವು ನಿಲುವು ನಿಷ್ಠುರತೆ ತಿಳಿಯಲು ಮುಖಾಮುಖಿ ಸಹಾಯವಾಯಿತು. ಇದರಿಂದ ಸಂಗಾತಿಗೆ ಕನ್ನಡ ಕಾವ್ಯಲೋಕದ ನಡೆ ಏನು ಎತ್ತ ಎಂದು ಅರಿಯಲು ಸಹಾಯ.‌ಮುಂದೆ ಸಾಹಿತ್ಯದ ವಿದ್ಯಾರ್ಥಿಗಳು ನಮ್ಮ ಕವಿಗಳ ರಾಜಕೀಯ ನಿಲುವು ಏನು? ಅವರಿಗೆ ದೇವರು ಧರ್ಮ ದೇಶ ಜನರ ಬಗ್ಗೆ ಏನು ನಿಲುವು ಇದ್ದವು ಎಂಬ ಸಂಗತಿ ಅಧ್ಯಯನ ಮಾಡಿದರೆ ಸಂಗಾತಿ ವೆಬ್ ಹುಡುಕಬೇಕು. ಇದು ನಮ್ಮ ಉದ್ದೇಶ. ಸಂಗಾತಿ ಸಂಪಾದಕರು ಈ ಸೂಕ್ಷ್ಮ ಅರಿತೇ ಈ ಅಂಕಣಕ್ಕೆ ಅವಕಾಶ ನೀಡಿದರು ಎಂಬುದು ನನ್ನ ಗ್ರಹಿಕೆ.‌ಸಂಗಾತಿ ನೂರಾರು ಹೊಸ ಲೇಖಕರಿಗೆ ವೇದಿಕೆಯಾಗಿದೆ. ಎಲ್ಲ ಪಂಥದವರು ಇದ್ದಾರೆ. ಜೀವವಿರೋಧಿ ನಿಲುವು ಬಿಟ್ಟು ಉಳಿದೆಲ್ಲಾ ಬರಹ ಇಲ್ಲಿ ಪ್ರಕಟವಾಗಿವೆ. ಆಗುತ್ತಿವೆ. ಅದೇ ಸಂಗಾತಿ ವೆಬ್ ಹೆಚ್ಚುಗಾರಿಕೆ. ಇದನ್ನು ವಿನಯದಿಂದ ಇಲ್ಲಿ ಸ್ಮರಿಸುವೆ. ಸಂಗಾತಿ ವೆಬ್ ಕನ್ನಡ ಸಾಹಿತ್ಯ ಲೋಕದ ಬೆಳಕಾಗಲಿ. ———————————————-ನಾಗರಾಜಹರಪನಹಳ್ಳಿ ಪತ್ರ-ಎರಡು ಪ್ರೀತಿಯ ಕ.ಮ.ಮಧುಸೂದನ್ ಸರ್ ಅವರಿಗೆ ನಮಸ್ಕಾರ..ಮೊದಲಿಗೆ ಯಶಸ್ವಿ ಒಂದು ವರ್ಷ ಪೂರೈಸಿ ಎರಡನೇ ವರ್ಷಕ್ಕೆ ಕಾಲಿಡುತ್ತಿರುವ ನಮ್ಮೆಲ್ಲರ ಹೆಮ್ಮೆಯ “ಸಂಗಾತಿ” ಗೆ ಅದರ ಸಾರಥ್ಯ ವಹಿಸಿರುವ ಮಧುಸೂದನ್ ಸರ್ ಅವರಿಗೂ ಅಭಿನಂದನೆಗಳು.ಗೆಳೆಯ ಮೋಹನ್ ಗೌಡ ಹೆಗ್ರೆ ಅವರ ಮೂಲಕ ಪರಿಚಯವಾದ ‘ಸಂಗಾತಿ’ ನಮ್ಮ ಮನಸು ಭಾವನೆಗಳ ಭಾಗವಾಗಿ ನಮ್ಮೆಲ್ಲರ ಅಭಿವ್ಯಕ್ತಿಯ ವೇದಿಕೆಯಾಯಿತು.ದಿನಪತ್ರಿಕೆಗಳ ಸಾಪ್ತಾಹಿಕ ಪುರವಣಿ (ಪ್ರಜಾವಾಣಿ ಹೊರತು ಪಡಿಸಿ) ನಿಂತು ಹೋಗಿ ಕವಿತೆಗಳು ಪ್ರಕಟವಾಗುವುದೆಲ್ಲಿ ಎಂದು ಯೋಚಿಸುತ್ತಿರುವಾಗ ಓಯಾಸಿಸ್ ನಂತೆ ಬಂದು ನಮ್ಮೆಲ್ಲರ ಆವರಿಸಿಕೊಂಡು ನಮ್ಮ ಸಾಹಿತ್ಯದ ಅಂತರ್ಜಲ ಬತ್ತದಂತೆ ಜೀವಂತವಾಗಿರಿಸಿದ್ದು ನಮ್ಮ ಸಂಗಾತಿ ಎಂದರೆ ಅತಿಶಯೋಕ್ತಿಯಲ್ಲ.ಈ ಮೂಲಕ ಹಲವಾರು ಹೊಸ ಕವಿಗಳು ಉದಯವಾದರು.ಕನ್ನಡದ ಪ್ರಬುದ್ಧ ವಿಮರ್ಶಕರಾದ ರಹಮತ್ ತರಿಕೆರೆಯಂತವರು ಬರೆಯಲು ತೊಡಗಿ ನಮಗೆ ಇನ್ನಷ್ಟು ಸುಪರಿಚಿತವಾಯಿತು.ಆಮೇಲೆ ಮಧುಸೂದನ್ ಸರ್ ಅವರ ಅದ್ಭುತ ಕವಿತೆಗಳನ್ನು ಓದಿ ಪ್ರತಿಕ್ರಿಯಿಸುವ ಅವಕಾಶ ನನಗೆ ಸಿಕ್ಕಿತು. ಒಬ್ಬ ಸಂಪಾದಕರಾಗಿ ತಮ್ಮ ಕವಿತೆಗಳನ್ನು ಪ್ರಕಟಿಸಿ ವೈಭವೀಕರಿಸದೇ ಗ್ರೂಪ್‌ನಲ್ಲಿ ಓದುವ ಅವಕಾಶ ನೀಡಿದ್ದು ನಿಮ್ಮ ಬಗ್ಗೆ ಗೌರವ ಇನ್ನಷ್ಟು ಹೆಚ್ಚಾಯಿತು.’ಸಂಗಾತಿ’ ಯನ್ನು ನಿರ್ವಹಿಸಿದ ರೀತಿ ನಿಜಕ್ಕೂ ಓದುಗರ ಮೆಚ್ಚುಗೆ ಪಡೆಯಿತು.ಈ ಒಂದು ವರ್ಷದ ನೆನಪಿಗೆ ಪತ್ರಿಕೆಯ ಓದುಗರಿಗಾಗಿ ಕವನ,ಕಥಾ ಸ್ಪರ್ಧೆ ಮಾಡವಹುದೇನೋ..ವೈಶಿಷ್ಟ್ಯಪೂರ್ಣ ಚಿತ್ರ ಲೇಖನಗಳು,ಬುಡಕಟ್ಟು ಜನಾಂಗಗಳ ಸಾಂಸ್ಕೃತಿಕ ವೈವಿಧ್ಯಗಳು,ವೈಜ್ಞಾನಿಕ,ವೈಚಾರಿಕ ಲೇಖನಗಳನ್ನು ಹಿರಿಯ ಲೇಖಕರಿಂದ ಆಹ್ವಾನಿಸಿ ಪತ್ರಿಕೆಯ ಸೊಬಗನ್ನು ಇನ್ನಷ್ಟು ಹೆಚ್ಚಿಸಬಹುದು ಎಂಬುದು ನನ್ನ ಪ್ರೀತಿಯ ಸದಾಶಯ..’ಸಂಗಾತಿ’ಗೆ ಅಭಿನಂದನೆಗಳು ಫಾಲ್ಗುಣ ಗೌಡ ಅಚವೆ

ಎರಡು ಪತ್ರಗಳು Read Post »

ಇತರೆ, ಪ್ರಬಂಧ

ಹೊರಗೋಡೆ

ಪ್ರಬಂಧ ಹೊರಗೋಡೆ ಗೋಡೆ ಎಂಬುದು ಹಲವಾರು ವಸ್ತುಗಳು, ವಿಶೇಷಗಳು ಹಾಗೂ ವಿಷಯಗಳನ್ನು ಮುಚ್ಚಿಡಬಹುದಾದ ಇಟ್ಟಿಗೆ, ಮರಳು, ಸುಣ್ಣ, ಬೆಲ್ಲ, ಸಿಮೆಂಟುಗಳಿಂದ ಕಟ್ಟಿದ ಒಂದು ರಚನೆ ಎಂದುಕೊಳ್ಳುವುದು ಒಂದು ಬಗೆಯಲ್ಲಿ ಒಪ್ಪಬಹುದಾದ ವಿಷಯವಾದರೂ, ಹಲವಾರು ಕಾರಣಗಳಿಂದ ಗೋಡೆಗಳು ನಮ್ಮನ್ನು ಪೂರ್ವಜರೊಂದಿಗೆ ಬೆಸೆಯುತ್ತಲೇ ಪ್ರಸ್ತುತ ಜೀವನದಲ್ಲಿ ಆಸಕ್ತಿ ಮೂಡಿಸುತ್ತಾ ಹೋಗುತ್ತವೆ. ಪ್ರತಿಯೊಂದು ಗೋಡೆಯನ್ನು ಕಟ್ಟಲು ಆರಂಭಿಸಿದ ಕೂಡಲೇ ಹೊರಗೋಡೆ ಹಾಗೂ ಒಳಗೋಡೆ ಎರಡೂ ಜೊತೆ ಜೊತೆಗೆ ನಿರ್ಮಾಣವಾಗುತ್ತಾ ಸಾಗುತ್ತದೆ. ನಾಗರೀಕತೆಯ ಆರಂಭವನ್ನು ನಾವು ಅರಿಯಲು ಹಾಗೂ ನಮ್ಮ ಪೂರ್ವಜರ ಇರುವನ್ನು ನಂಬಲು ಅವರುಗಳು ಕಟ್ಟಿ, ಬಿಟ್ಟು ಹೋಗಿರುವ ಗೋಡೆಗಳೇ ಸಾಕ್ಷಿ. ಅಂತೆಯೇ ಶತಮಾನಗಳೇ ಕಳೆದರೂ ಇನ್ನೂ ಸುಸ್ಥಿತಿಯಲ್ಲಿರುವಂಥಹ ಗೋಡೆಗಳಿಗೆ ಸ್ಥಳೀಯವಾಗಿ ದೊರೆಯುವ ಕಚ್ಚಾವಸ್ತುಗಳನ್ನೇ ಬಳಸಿಕೊಂಡು, ಸಾವಿರಾರು ವರ್ಷಗಳಷ್ಟು ದೀರ್ಘಕಾಲ ಬಾಳಿಕೆ ಬರುವಂತೆ ನಿರ್ಮಿಸಿರುವುದು ಮಾತ್ರ ಒಟ್ಟೊಟ್ಟಿಗೇ ಭೂಮಿಯ ಗುಣ ಹಾಗೂ ನಮ್ಮ ಪೂರ್ವಜರ ಬುದ್ಧಿವಂತಿಕೆಯನ್ನು ಅನಾವರಣಗೊಳಿಸುತ್ತದೆ. ತಮ್ಮ ವೈಯಕ್ತಿಕ ಜೀವನವನ್ನು ಅನ್ಯರಿಗೆ ಕಾಣಿಸುವ ಅಗತ್ಯವಿಲ್ಲದಾಗ ಸುರಕ್ಷತೆಯ ಹಾಗೂ ಸಂರಕ್ಷಿಸಿಕೊಳ್ಳುವ ದೃಷ್ಟಿಯಿಂದ ಸಿಂಧೂ ನಾಗರೀಕತೆಯ ಕಾಲದಲ್ಲಿಯೇ ಗೋಡೆಗಳನ್ನು ಕಟ್ಟಿರುವ ಸಾಕ್ಷಿ ಇಂದಿಗೂ ಹರಪ್ಪಾ ಹಾಗೂ ಮೊಹಾಂಜದಾರೋ ರೂಪದಲ್ಲಿ ನಮ್ಮ ಕಣ್ಣ ಮುಂದಿದೆ ಎನ್ನುವುದು, ಮಾನವರಿಗೆ ಗೋಡೆಗಳ ಅಗತ್ಯ ಹಾಗೂ ಅವರುಗಳು  ಅನಾದಿಕಾಲದಿಂದಲೂ ಗೋಡೆಗಳಿಗೆ ನೀಡುತ್ತಿದ್ದ ಮಹತ್ವ ಹಾಗೂ ಪ್ರಾಮುಖ್ಯತೆಯನ್ನು ಅರಿಯಲು ಸಹಕಾರಿಯಾಗಿದೆ. ಅಂತೆಯೇ ಕೋಟೆಯ ಗೋಡೆಗಳೂ ಸಹ ಸಾವಿರಾರು ವರ್ಷಗಳೇ ಕಳೆದರೂ, ಕೆಲವು ಅವಶೇಷ ಸ್ಥಿತಿ ತಲುಪಿ ಇಂದಿಗೂ ನೋಡಬಹುದಾದ ಗೋಡೆಗಳು ಎಂಥಹವರಲ್ಲೂ ಭೂಮಿಯ ಮೇಲೆ ಬಾಳಿ, ಆಳಿದ ನಂತರ ಅಳಿದ ಪ್ರತಿಯೊಂದು ಪರಂಪರೆಯನ್ನು ನಮ್ಮ ಕಣ್ಮುಂದೆ ತರುವ ಒಂದು ಅದ್ಭುತವೇ ಸರಿ. ಈಜಿಪ್ಟಿನ ಪೂರ್ವಜರು ನಿರ್ಮಿಸಿರುವ ಪಿರಾಮಿಡ್ಡುಗಳೂ, ಚೈನಾ ಗೋಡೆಗಳೂ ಸಹ ಇದನ್ನು ಸಾಕ್ಷೀಕರಿಸುತ್ತದೆ ಎಂದರೆ ಅತಿಶಯೋಕ್ತಿಯಲ್ಲ. ಯಾವುದೋ ಕಾಲದಲ್ಲಿ ಕಟ್ಟಿದ ಗೋಡೆಯನ್ನು ಇಂದಿಗೂ ಹೊಡೆದುಹಾಕುವುದೋ ಅಥವಾ ಇನ್ನಷ್ಟು ಬೆಳೆಸುವುದೋ ಸಾಧ್ಯವಾಗದೇ ಯಥಾಸ್ಥಿತಿ ಕಾಪಾಡಿಕೊಂಡು, ಇಂದು ದೇಶ ದೇಶಗಳ ನಡುವೆ ಸ್ವಾಭಿಮಾನ ಹಾಗೂ ಪ್ರತಿಷ್ಠೆಯ ಪ್ರತೀಕವಾಗಿಯೂ ಉಳಿದುಕೊಂಡು ಬಂದಿರುವ ಅನೇಕ ಉದಾಹರಣೆಗಳು ಸಹಾ ಇಲ್ಲದೆ ಇಲ್ಲ. ವೈರಿಗಳು ಗಡಿ ನುಸುಳದಂತೆ ಹಾಗೂ ಒಂದು ದೇಶದಲ್ಲಿ ನಡೆಯುವ ವಿಷಯಗಳನ್ನು ಗುಟ್ಟಾಗಿಡುವ ಉದ್ದೇಶದಿಂದ ಯಾವ ದೇಶವೇ ಗೋಡೆಯನ್ನು ಕಟ್ಟಿದರೂ, ಉಭಯ ದೇಶಗಳಿಗೂ ಗೋಡೆಯಾಚಿನ ಪ್ರದೇಶ “ಹೊರಗೋಡೆ” ಆಗಿರುತ್ತದೆ. ಇಂದಿಗೂ ನೋಡಲು ಲಭ್ಯವಿದ್ದು, ಗೋಡೆಗಳೇ ಹೇಳುವ ಕಥೆಯನ್ನು ತಿಳಿಯುತ್ತಲೇ, ಪ್ರಸ್ತುತ ನಾಗರೀಕರು ಗೋಡೆಯನ್ನು ಕಟ್ಟುವ ಹಾಗೂ ನಿರ್ವಹಿಸುವ ಅದರಲ್ಲಿಯೂ ಹೊರಗೋಡೆಯ ಬಗ್ಗೆ ತಿಳಿಯಬೇಕಾಗುತ್ತದೆ. ಬಹುತೇಕ ಹೊರ ಪ್ರಪಂಚದಿಂದ ನಮ್ಮನ್ನು ಬೇರ್ಪಡಿಸುವ ಗೋಡೆಗಳು ಕೆಲವರಿಗೆ ಸ್ವಂತದ್ದಾದರೆ ಹಲವರಿಗೆ ಬಾಡಿಗೆ ಅಥವಾ ಭೋಗ್ಯದವು. ಗೋಡೆಗಳನ್ನು ಕೂಡಿಸಿ, ಕೋಣೆಗಳನ್ನು ಬೇರ್ಪಡಿಸಿದ ಮನೆಗೆ ಸೇರಿಕೊಂಡು ಬಾಗಿಲು ಹಾಕಿದರೆ ಗೋಡೆಯಾಚೆ ನಡೆಯಬಹುದಾದ, ನಡೆದುಹೋದ ಹಾಗೂ ನಡೆಯುತ್ತಿರುವ ಎಷ್ಟೋ ವಿಷಯಗಳು ತಮ್ಮ ಗಣನೆಗೆ ಬರುವುದಾಗಲೀ ಅಥವಾ ತಮ್ಮ ಕಲ್ಪನೆಗೆ ಎಟುಕುವುದಾಗಲೀ ಸಾಧ್ಯವೇ ಇರುವುದಿಲ್ಲ. ಒಬ್ಬ ಕಳ್ಳನು ಕದ್ದ ವಸ್ತುಗಳನ್ನು ತಂದು ಒಂದು ಬಂಗಲೆಯ ಹಿಂಭಾಗದಲ್ಲಿ ಶೇಖರಿಸಿಟ್ಟು, ಗೋಡೆಗೆ ಒಲೆ ನಿರ್ಮಿಸಿ, ಅಡುಗೆ ಮಾಡಿಕೊಂಡು ದಿನ ಕಳೆಯುತ್ತಿದ್ದ ಘಟನೆಯು ಒಂದೊಮ್ಮೆ ಬೆಂಗಳೂರಿನ ಒಂದು ಪ್ರತಿಷ್ಠಿತ ಬಡಾವಣೆಯ ನಾಗರಿಕರ ನಿದ್ದೆ ಕೆಡುವಂತೆ ಮಾಡಿತ್ತು. ಆ ಮಟ್ಟಿಗೆ ನಮ್ಮದೇ ಮನೆಯ ಹೊರಗೋಡೆಯಲ್ಲಿ ನಡೆಯುವ ಹಲವಾರು ವಿಷಯಗಳು ನಮ್ಮ ಗಮನಕ್ಕೆ ಬಂದೇ ಇರುವುದಿಲ್ಲ ಎನ್ನುವುದು ವಿಪರ್ಯಾಸ. ಮೊದಲೆಲ್ಲಾ ನಮ್ಮ ಹೊರ ಗೋಡೆಯಲ್ಲಿ ನಡೆಯುವ ಹಲವಾರು ಘಟನೆಗಳು ಬೇರೆಯವರಿಗೆ ಕಾಣಬಹುದಿತ್ತಾಗಲೀ, ನಮಗೆ ತಿಳಿಯಬೇಕಿದ್ದರೆ, ಸ್ವತಃ ನಾವು ಹೊರ ಬಂದು ನೋಡಬೇಕಿತ್ತು. ಆದರೆ ದಿನದಿಂದ ದಿನಕ್ಕೆ ಬೆಳೆಯುತ್ತಿರುವ ತಂತ್ರಜ್ಞಾನವು ನಮ್ಮದೇ ಗೋಡೆಯಾಚೆ ನಡೆಯುವ ವಿದ್ಯಮಾನಗಳ ಮಾಹಿತಿಯನ್ನು ಮನೆಯೊಳಗೆ ಕುಳಿತು ಯಾರಾದರೂ ಗೋಡೆ ಹತ್ತಿ ಮಹಡಿ ತಲುಪುವುದನ್ನೂ ತಿಳಿದುಕೊಳ್ಳುವಷ್ಟು ಬೆಳೆದಿದೆ. ಮನೆಯ ಹೊರಗೋಡೆಗೆ ವಿಶೇಷವಾದ ಹೆಸರಿರುವುದಿಲ್ಲವಾಗಿ, ಕಟ್ಟಿಗೆ ಒಟ್ಟಿದ್ದರೆ ಕಟ್ಟಿಗೆಗೋಡೆ, ಹಿತ್ತಲಿಗೆ ತೆರೆದುಕೊಂಡಿದ್ದರೆ ಹಿತ್ತಲಗೋಡೆ, ಬೀದಿಕಡೆಗಿದ್ದರೆ ಬೀದಿಗೋಡೆ, ಅಡಿಗೆಮನೆಯ ಹೊರಗೋಡೆ ಹೀಗೆ ಕರೆಯುವುದು ಸಾಮಾನ್ಯ. ಕಾಂಪೌಂಡಿನ ಹೊರ ಗೋಡೆಯಾದರಂತೂ ನಾವೇ ಕಟ್ಟಿಸಿದ ಗೋಡೆಯನ್ನೇ ಅಕ್ಕಪಕ್ಕದವರ ಮನೆಯವರ ಹೆಸರಿನೊಂದಿಗೆ ಗುರುತಿಸುತ್ತೇವೆ. “ಮಾಚಿ ಮನೆ ಕಂಪೌಂಡಿನ ಒಳಗೆ ಇಲಿ ಸತ್ತುಹೋಗಿದೆ” ಅನ್ನುವುದು. ಅಥವಾ “ಮಂಜು ಮನೆ ಕಂಪೌಂಡಿನಲ್ಲಿ ಮಲ್ಲಿಗೆ ಹೂ ಬಿಟ್ಟಿದೆ” ಎಂದು ಆ ಬದಿ ಯಾರಿದ್ದರೆ ಅವರದೇ ಹೆಸರಿನೊಂದಿಗೆ ಕಂಪೌಂಡಿನ ಹೊರಗೋಡೆಗೆ ನಾಮಕರಣವಾಗುತ್ತದೆ. ಅಥವಾ ಪಕ್ಕದ ಮನೆಯವರು ಹಣ ಖರ್ಚು ಮಾಡಿ  ಕಂಪೌಂಡ್ ಕಟ್ಟಿಸಿದ್ದರೂ ನಮ್ಮನ್ನು ಕುರಿತು “ರೀ ನಿಮ್ಮ ಕಂಪೌಂಡ್ ಒಳಗೆ ನಮ್ಮ ಬಟ್ಟೆ ಬಿದ್ದಿದೆ” ಅನ್ನುವುದೋ ಅಥವಾ “ಪೋಸ್ಟ್ ಮಾಸ್ಟರ್ ಲೆಟರನ್ನ ನಿಮ್ಮ ಕಂಪೌಂಡ್ ಕಡೆ ಹಾಕಿದ್ದಾನೆ” ಎಂದು ಅವರು ಕಟ್ಟಿಸಿದ ಕಂಪೌಂಡಿಗೆ ನಮ್ಮನ್ನು ಒಡೆಯರನ್ನಾಗಿಸುತ್ತಾರೆ. ಹೀಗೆ ಹೊರಗೋಡೆಯು ಒಬ್ಬರಿಂದ ಖರ್ಚುಮಾಡಿಸಿ ಮತ್ತೊಬ್ಬರಿಗೆ ರಕ್ಷಣೆ ಹಾಗೂ ಒಡೆತನವನ್ನು ನೀಡುತ್ತದೆ. ಇದು ಹೊರಗೋಡೆಗಲ್ಲದೆ ಭೂಮಿ ಮೇಲಿನ ಯಾವುದೇ ಮಾನವ ರಚನೆಗೆ ಸಾಧ್ಯವಿರಲಾರದು ಎನ್ನುವುದು ಇಲ್ಲಿ ಪ್ರಸ್ತುತ. ಸಾಮಾನ್ಯವಾಗಿ ಮನೆ ಕಟ್ಟುವವರು, ತಮ್ಮ ಮನೆಯನ್ನು ಎಲ್ಲರಿಗಿಂತಲೂ ವಿಶೇಷ ಹಾಗೂ ಪ್ರತ್ಯೇಕವಾಗಿ ಕಾಣಿಸುವ ದಿಸೆಯಲ್ಲಿ ಬೀದಿಗೆ ಕಾಣುವ  ಹೊರಗೋಡೆಗೆ ಹೆಚ್ಚಿನ ಪ್ರಾಶಸ್ತ್ಯ ನೀಡುತ್ತಾರೆ. ನಗರದಲ್ಲಿಯ ಸ್ಥಿತಿವಂತರ ಮನೆಯ ಹೊರಗೋಡೆಗಳು ಮನೆಯಿಂದ ಮನೆಗೆ ಸಾಧ್ಯವಾದಷ್ಟು ವಿಭಿನ್ನ ಅಭಿರುಚಿಯಿಂದ ಕೂಡಿದ್ದು, ತಮ್ಮ ವಿಚಾರಧಾರೆಗೆ ತಕ್ಕಂತೆ ವಿನ್ಯಾಸಗೊಳಿಸಿಕೊಂಡ ಉದಾಹರಣೆಗಳು ಸಾಕಷ್ಟಿವೆ. ಇತ್ತೀಚೆಗೆ ನಗರೇತರ ಪ್ರದೇಶಗಳಲ್ಲಿಯೂ ಹೊರಗೋಡೆಗಳನ್ನು ಅಂದಗಾಣಿಸುವ ಹವ್ಯಾಸ ಬೆಳೆಯುತ್ತಿದೆ. ಹೊರಗೋಡೆಗೆ ಹೆಚ್ಚಿನ ಆಸಕ್ತಿ ತೋರುವ ಮಾಲೀಕರು ತಮ್ಮದೇ ಮನೆಯ ಅಕ್ಕಪಕ್ಕದ ಗೋಡೆಗಳನ್ನು ಚೂರುಪಾರು ಅಲಂಕರಿಸಿದರೆ, ಹಿಂದಿನ ಗೋಡೆಯದಂತೂ ಗೌಣಗಣನೆ ಅಂತೆಯೇ ಅದನ್ನು ಅಂದಗೊಳಿಸುವ ಅಗತ್ಯವೂ ಇರುವುದಿಲ್ಲ.  ವಿನ್ಯಾಸಕಾರರ ವಿಶೇಷತೆ ಹಾಗೂ ನಿರಂತರ ಆವಿಷ್ಕಾರದೊಂದಿಗೆ ಅರಳುವ ಮನೆಯ ಮುಂದಿನ ಹೊರಗೋಡೆ ವಿನ್ಯಾಸವನ್ನು ನೋಡಿಯೇ ರಸ್ತೆಯಲ್ಲಿ ಓಡಾಡುವ ಜನರು, ಮನೆಯಲ್ಲಿರುವವರ ಆರ್ಥಿಕ ಸ್ಥಿತಿ ಹಾಗೂ ಅಭಿರುಚಿಯನ್ನು ಅಳಿಯಬಹುದಾಗಿದೆ. ಇಂತಿರುವ ಹೊರಗೋಡೆಯ ಪುರಾಣವು ಇಲ್ಲಿಗೇ ಮುಗಿಯುವುದಿಲ್ಲ. ಸಾಮಾನ್ಯವಾಗಿ ಸರಕಾರೀ ಕಟ್ಟಡಗಳು, ಸಮುದಾಯ ಭವನಗಳು, ಸರಕಾರಿ ಸಿಬ್ಬಂದಿ ಕ್ವಾರ್ಟರ್ಸಿನ ಗೋಡೆಗಳಲ್ಲಿ ಮೊದಲೇ ಕಳಪೆ ಕಾಮಗಾರಿಯಿಂದ ಹಲವೆಡೆ ಹೊರಗೋಡೆಗಳಲ್ಲಿ ಬಿರುಕು ಉಂಟಾಗಿದ್ದರೆ, ಅದೇ ಗೋಡೆಯಲ್ಲಿ ಜೇಡರಬಲೆ ಜಾಳುಜಾಳಾಗಿ ನೇತಾಡುವುದನ್ನು ಕಾಣಬಹುದು. ಆಲ, ಗಸಗಸೆ, ಔದಂಬರ, ಅರಳಿ, ಕ್ಯಾಕ್ಟಸ್ ಹಾಗೂ ಮುಂತಾದ ಗಿಡಗಳು ಹುಟ್ಟಿ ಮರವಾಗುವ ಹಂತ ತಲುಪಿದ್ದರೂ ಅದನ್ನು ಕಿತ್ತೆಸೆಯುವ ಗೋಜಿಗೇ ಹೋಗದೇ ತಮಗೆ ಸಂಬಂಧಿಸಿದ ವಿಷಯವೇ ಅಲ್ಲವೆಂಬಂತೆ ವರ್ತಿಸಿ, ಸಾರ್ವಜನಿಕರ ಹಣವನ್ನು ಪೋಲು ಮಾಡುವುದರಲ್ಲಿ ಹಲವರ ಉದಾಸೀನ ಭಾವನೆ ಎದ್ದು ಕಾಣುತ್ತದೆ. ನೌಕರರು ಬಿಟ್ಟಿಯಾಗಿರಲು ಕಟ್ಟಿದ ಕಟ್ಟಡವೆಂದು ಸರ್ಕಾರವೂ, ತಾವು ಕೇವಲ ತಂಗುವವರು ಮಾತ್ರವಾದ್ದರಿಂದ ನಿರ್ವಹಣೆಯ ಉಸ್ತುವಾರಿಯನ್ನು ಸರ್ಕಾರವೇ ನೋಡಿಕೊಳ್ಳಲಿ ಎನ್ನುವ ಧೋರಣೆ ತೋರುವ ನಿವಾಸಿಗಳು, ಹೀಗೆ ಹಲವರ ತಾಕಲಾಟದಲ್ಲಿ ಹೊರ ಗೋಡೆಯಿಂದ ಹಾಳಾಗಳಾರಂಭಿಸಿ ಪೂರ್ತಿ ಕಟ್ಟಡವೇ ಪಾಳು ಬೀಳುವ ಹಂತದಲ್ಲಿರುವ ಅಸಂಖ್ಯಾತ ಕಟ್ಟಡಗಳನ್ನು ನಾವು ನಮ್ಮ ಅಕ್ಕಪಕ್ಕದಲ್ಲಿಯೇ ಕಾಣಬಹುದು. ಸರ್ಕಾರಿ ಕಟ್ಟಡಗಳಲ್ಲಿ ತಾನಾಗಿಯೇ ಗೂಡುಕಟ್ಟಿ ನೆಲೆ ನಿಂತು ಸಂತಾನಾಭಿವೃದ್ಧಿ ಮಾಡಿಕೊಳ್ಳುವ ಹಲವು ಹಕ್ಕಿಗಳು, ಈಗೀಗ  ಮಾಲೀಕರು ತಮ್ಮ ಮನೆಯ ಹೊರಗೋಡೆಯಲ್ಲಿ ಹಕ್ಕಿಗಳಿಗಾಗಿಯೇ ನಿರ್ಮಿಸಿರುವ ಗೂಡುಗಳಲ್ಲಿ ಸೇರಿಕೊಂಡು ಚಿಲಿಪಿಲಿಗುಟ್ಟುತ್ತಿವೆ. ******************************* ಶಾಂತಿವಾಸು

ಹೊರಗೋಡೆ Read Post »

ಇತರೆ, ವಾರ್ಷಿಕ ವಿಶೇಷ

ಸಂಗಾತಿಯೊಡನೆ ನನ್ನ ಪಯಣ

ಸಂಗಾತಿಯ ಇಬ್ಬರು ಲೇಖಕರುಬರೆದ ಅನಿಸಿಕೆಗಳು ಪ್ರಜಾಪ್ರಭುತ್ವದಲ್ಲಿ ಮಾಧ್ಯಮಗಳ ಮಹತ್ವ ಪ್ರತ್ಯೇಕವಾಗಿ ಉಲ್ಲೇಖಿಸುವ ಅವಶ್ಯಕತೆಯೇ ಇಲ್ಲ . ಮೊದಲಿನಿಂದ ಪ್ರಸಾರ ಮಾಧ್ಯಮ ಎಂದರೆ ಪತ್ರಿಕೆ ಮತ್ತು ಆಕಾಶವಾಣಿ. ಈಗ ದೂರದರ್ಶನ ಹಾಗೂ ಅಂತರ್ಜಾಲಗಳು ಈ ಪರಿಧಿಗೆ ಸೇರಿವೆ.  ದಿನಪತ್ರಿಕೆ ಓದದೇ ಬೆಳಗು ಆರಂಭವಿಲ್ಲ  ಎಂಬಂಥ ಕಾಲ ಹೋಗಿ ಎಲ್ಲವನ್ನೂ ದೃಶ್ಯ ಮಾಧ್ಯಮಗಳಲ್ಲಿ ಕಂಡುಕೊಳ್ಳುವ ಈ ಯುಗದಲ್ಲಿ ಮುದ್ರಿತ ಓದಿನ ಪತ್ರಿಕೆ, ನಿಯತ ಕಾಲಿಕೆಗಳು ತಮ್ಮ ಮೊದಲಿನ ಜನಪ್ರಿಯತೆಯನ್ನು ಕಳೆದುಕೊಳ್ಳುತ್ತಿದೆ.  ಈ ಪ್ರಚಲಿತ ವಿದ್ಯಮಾನದಲ್ಲಿ ಸುದ್ದಿ ತಿಳಿಯಲು ದಿನಪತ್ರಿಕೆಯೇ ಬೇಕೆಂದೇನಿಲ್ಲ.  ಎಲ್ಲೋ ಕೆಲವರಿಗಷ್ಟೇ ಈ ವಿದ್ಯುನ್ಮಾನದ ಓದುವಿಕೆಗಿಂತ ಅಚ್ಚಾದ ಕಪ್ಪು ಬಿಳುಪಿನ ಸುದ್ದಿಗಳ ಮೇಲೆ ಮಮಕಾರ.  ಹೀಗಿರುವಾಗ ವೆಬ್ ಮ್ಯಾಗಜಿನ್ಗಳು ಪತ್ರಿಕೆಗಳು ಮುಂಚೂಣಿಗೆ ಬರುತ್ತಿರುವುದು ವಿಶಿಷ್ಟವೂ ಅಲ್ಲ ವಿಶೇಷವೂ ಅಲ್ಲ . “ಕಾಲಾಯ ತಸ್ಮೈ ನಮಃ”  ಎನ್ನುವ ಬದಲಾದ ಪ್ರಪಂಚ ದೆಡೆಗೆ ಸಹಜ ನಡೆ . ಸಂಗಾತಿ ಪತ್ರಿಕೆಯ ಆರಂಭದ ಸಂಪಾದಕೀಯದಲ್ಲಿ ಸಂಪಾದಕರಾದ ಶ್ರೀ ಮಧುಸೂದನ ರಂಗೇನಹಳ್ಳಿ ಅವರು ಹೇಳುವ ಈ ಮಾತುಗಳು ಸಕಾಲಿಕ ಹಾಗೂ ಸಂದರ್ಭೋಚಿತ .. “ಮೊದಲಿನ ಹಾಗೆ ಪುಸ್ತಕವೊಂದನ್ಮು ಕೈಲಿ ಹಿಡಿದು ಕೂತಲ್ಲೇ ಬೇರು ಬಿಟ್ಟು ಓದುವ ಪುರುಸೊತ್ತು ಯಾರಿಗೂ ಇಲ್ಲ. ಆದರೆ ತಮ್ಮ ಟ್ಯಾಬ್,  ಫೋನುಗಳ ಮೂಲಕ ಪ್ರಯಾಣ ಮಾಡುತ್ತಾ, ಮನೆ ಕೆಲಸ ಮಾಡುತ್ತಾ, ತಮ್ಮ ವೃತ್ತಿಯಲ್ಲಿ ತೊಡಗಿಸಿಕೊಂಡಿರುತ್ತಲೆ ಓದುವ ಅಭ್ಯಾಸಕ್ಕೆ ಜನ ಒಗ್ಗಿ ಹೋಗುತ್ತಿದ್ದಾರೆ.  ಜನರ ಇಂತಹ ಸಾಹಿತ್ಯ ಓದಿನ ಅಗತ್ಯಕ್ಕಾಗಿಯೇ ಸಂಗಾತಿ ಪತ್ರಿಕೆಯನ್ನು ರೂಪಿಸಲಾಗಿದೆ” ಹೀಗೆ ರೂಪು ತಳೆದ ಸಂಗಾತಿ ಪತ್ರಿಕೆಗೀಗ ಒಂದು ವರ್ಷ.  ಈ ಸಂತಸದ ಸಂದರ್ಭದಲ್ಲಿ ಪತ್ರಿಕೆ ನಡೆದುಬಂದಿರುವ ಹಾದಿಯನ್ನು ಓದುಗಳಾಗಿ ನಾನು ಗುರುತಿಸಿರುವುದು ಹೀಗೆ.  ಮೊದಲಿಗೆ ನೂರಾರು (ಅಥವಾ ಸಾವಿರ?) ಉದಯೋನ್ಮುಖ ಕವಿಗಳಿಗೆ ಲೇಖಕರಿಗೆ ಗಜಲ್ ಕಾರರಿಗೆ ವೇದಿಕೆ ಕಲ್ಪಿಸಿಕೊಟ್ಟಿದೆ.  ಸಂಗಾತಿಯಲ್ಲಿ ನಮ್ಮ ಕವಿತೆ ಬಂದಿದೆ ಎಂದು ಹೆಮ್ಮೆಯಿಂದ ಲಿಂಕ್ ಪ್ರದರ್ಶಿಸುವವರ ದಂಡೇ ಇದೆ ನನ್ನನ್ನು ಸೇರಿಸಿ.  ನಂತರ ಅಂಕಣ ಬರಹಗಳು . ಹಳೆ ಬೇರು ಹೊಸ ಚಿಗುರು ಎಂಬಂತೆ ಪಾರ್ವತಿ ಐತಾಳರಂತಹ ಹಿರಿಯ ಸಾಹಿತಿಗಳ ಬರಹದ ಸವಿ ಉಣಿಸಿದಂತೆ ಮತ್ತೆ ಹಲ ಕೆಲವರಿಗೆ ಪ್ರಥಮ ಬಾರಿ ಅಂಕಣ ಬರೆಯುವ ಅವಕಾಶವನ್ನು ಕಲ್ಪಿಸಿಕೊಟ್ಟಿದೆ . ಹೊಸ ತರಹದ  ಕಥೆ ಕವಿತೆಗಳ ಪ್ರಕಟಣೆ, ವಿಚಾರಪೂರ್ಣ ಲೇಖನಗಳಿಂದ ಪುಸ್ತಕ ಪರಿಚಯಗಳವರೆಗೆ ಪ್ರತಿಭಾನ್ವಿತರ ಪರಿಚಯ, ಸಂದರ್ಶನ ,ಸಂದರ್ಭಾನುಸಾರ ವಿಶೇಷ ಸಂಚಿಕೆಗಳು (ಅಂಬೇಡ್ಕರ್ ಗಾಂಧಿ ಜಯಂತಿ )ಇತ್ಯಾದಿ…… ಏನುಂಟು ಏನಿಲ್ಲ?  ಮೊಗೆದಷ್ಟು ಸಾಹಿತ್ಯದ ಸವಿ ಎಳನೀರು  ಉಣಿಸುವ ಶರಧಿ ನಮ್ಮ ಸಂಗಾತಿ ಪತ್ರಿಕೆ . ಇಲ್ಲಿನ ಅಂಕಣ ಬರಹಗಳ ವಿಶೇಷಗಳನ್ನು ಇಲ್ಲಿ ಹಂಚಿಕೊಳ್ಳ ಬಯಸುವೆ. ಕವಿತೆ ಕಾರ್ನರ್ _ಶ್ರೀ  ಮಧುಸೂಧನ ರಂಗೇನಹಳ್ಳಿ ಎಲ್ಲಕ್ಕಿಂತ ಹೆಚ್ದು ಕಾದು ಕುಳಿತು ಓದುವ ಈ ಕವಿತೆಯ ಅಡ್ಡಾ ನನಗೆ ತುಂಬಾ ಇಷ್ಟದ್ದು.  ಶ್ರೀ ಮಧುಸೂಧನ ಅವರ ವಿಶಿಷ್ಟ ಕವನಗಳ ರಸಾಸ್ವಾದನೆಯ ಅವಕಾಶ ಕಲ್ಪಿಸುವ ಕವಿತೆ ಕಾರ್ನರ್ ನನ್ನಂತೆ ಇನ್ನಷ್ಟು ಅವರ ಅಭಿಮಾನಿಗಳ ಮೆಚ್ಚಿನ ಮೂಲೆ . ಹೊತ್ತಾರೆ  _  ಅಮೆರಿಕದ ಇಂಜಿನಿಯರ್ ಅಶ್ವತ್ಥ್ ಅವರ ಅಂಕಣ ನನಗೆ ನೆನಪಿರುವಂತೆ  ಸಂಗಾತಿಯಲ್ಲಿ ಮೊಟ್ಟ ಮೊದಲ ಅಂಕಣ ಹೊತ್ತಾರೆ . ಹೆಸರಲ್ಲೇ ಒಂಥರಾ ಸೆಳೆತವಿದ್ದ ಈ ಅಂಕಣದಲ್ಲಿ ಲೇಖಕರು ತಮ್ಮ ಬಾಲ್ಯದ ನೆನಪುಗಳ ಖಜಾನೆಯನ್ನೇ ಮೊಗೆಮೊಗೆದು ಸುರಿದು ಬಿಟ್ಟಿದ್ದಾರೆ.  ಹೆಚ್ಚಿನ ಅಂಶಗಳ ಸಾಮ್ಯವಿದ್ದ ವಿಷಯಗಳಿಂದ ಅಪ್ಯಾಯವೆನಿಸಿದ ನಮ್ಮದೇ ಅನುಭವಗಳ ನೆನಪಿನೂರಿಗೇ ಹೋಗಿ ಬಂದಂತೆ ಆಗಿತ್ತು . ಚೆಂದದ ಅಂಕಣದಿಂದ ಸಂಗಾತಿ ಅಂಕಣ ಬರಹಗಳ ಯಾನದ ಮುನ್ನುಡಿಯಾದ ಹೊತ್ತಾರೆ ತುಂಬಾ ಆತ್ಮೀಯವಾಗಿತ್ತು ಎಂದರೆ ಅತಿಶಯೋಕ್ತಿ ಏನಲ್ಲ . ಶಿವಮೊಗ್ಗ ಜಿಲ್ಲೆಯ ಚಳವಳಿಗಳು ಡಾಕ್ಟರ್ ಸಣ್ಣರಾಮ ಈ ಅಂಕಣವೂ ತುಂಬಾ ಮಾಹಿತಿಪೂರ್ಣ ಹಾಗೂ ವಿಚಾರ ಪ್ರಚೋದಕವಾಗಿದ್ದು ಅನೇಕ ಕುತೂಹಲಕಾರಿ ಮಾಹಿತಿಗಳನ್ನು ತೆರೆದಿಟ್ಟಿತ್ತು ದಿಕ್ಸೂಚಿ _  ಜಯಶ್ರೀ ಅಬ್ಬಿಗೇರಿ ವ್ಯಕ್ತಿಯ ವ್ಯಕ್ತಿತ್ವದ ಮೇಲೆ ಬೆಳಕು ಚೆಲ್ಲುವಂತಹ ವಿಚಾರಪೂರ್ಣ ಲೇಖನಗಳ ಮಾಲೆ.  ಹೆಸರಿಗೆ ತಕ್ಕಂತೆ ದಿಕ್ಸೂಚಿಯೇ ಸರಿ ವ್ಯಕ್ತಿತ್ವ ವಿಕಸನದ ಒಂದೊಂದೇ ಅಂಶಗಳನ್ನು ಸುಲಭ ಸರಳ ಭಾಷೆಯಲ್ಲಿ ಮನಸ್ಸಿಗೆ ಮುಟ್ಟುವಂತೆ ವಿವರಿಸುವ ಈ ಅಂಕಣದಿಂದ ತುಂಬಾ ಅನುಕೂಲ ಪಡೆದುಕೊಂಡೆ ನಾನಂತೂ.  ತುಂಬಾ ಇಷ್ಟವಾದ ಕೆಲ ಮಾಲಿಕೆಗಳು “ಆಗದು ಎಂದು ಹೇಳಲು ಕಲಿಯಿರಿ ಕಲಿಸಿರಿ”,  “ಸೋಲಿನ ಸುಳಿಯಲ್ಲಿ ಗೆಲುವಿನ ಹಾದಿ ಇದೆ” , “ತೊಂದರೆ ಕೊಡಬೇಡಿ ಎಂದು ಹೇಳಿಬಿಡಿ” ಎಲ್ಲಾ ಎಷ್ಟೋ ಬಾರಿ ಕೇಳಿದ ವಿಷಯಗಳೇ ಆದರೂ ಇಲ್ಲಿ ಓದುವಾಗ’  “ಹೌದಲ್ವಾ ಇಷ್ಟು ಸುಲಭವಾಗಿ ಮಾಡುವಂಥದ್ದನ್ನು ನಾವೇಕೆ ಪಾಲಿಸಲ್ಲ” ಅನ್ನಿಸುತ್ತೆ. ಎಲ್ಲೋ ನನ್ನ ಹಾಗೆ ಯೋಚಿಸುವವರೂ ಇದಾರಲ್ಲ ಆದರೆ ಮಾಡಬಹುದು ತಪ್ಪಲ್ಲ ಅನ್ನುವ   ಭಾವವನ್ನು ತರುತ್ತೆ. ಸಂಗಾತಿ ಓದುಗರ ಮನ ಸೆಳೆದಿರುವ ಮಾಲಿಕೆಯಿದು.  ಸಂಪ್ರೋಕ್ಷಣ _  ಅಂಜನಾ ಹೆಗಡೆ ಸುಂದರ ಭಾವಗಳನ್ನು ಅಂಕಣದ ಚೌಕಟ್ಟಿಗೆ ಹಿಡಿಸುವಂತೆ ಬಂಧಿಸಿ ಚೆಲುವಿನ ಚಿತ್ತಾರದ ರಂಗವಲ್ಲಿ ಹಾಕಿ ಮನ ಮುದಗೊಳಿಸುವ ಭಾವ ಪುಳಕದ ಸಿಂಚನದ ಸಂಪ್ರೋಕ್ಷಣ ಮಾಡಿಸುವುದು ಅಂಜನಾ ಹೆಗಡೆಯವರ ಈ ಅಂಕಣ . ಸಂಗಾತಿಗಾಗಿಯೇ ಮೊದಲ ಬಾರಿ ಅಂಕಣ ಬರೆದ ವಿಶೇಷತೆ ಇವರದು .ಸಂಗಾತಿಯ ಕೊಡುಗೆ ಎಂದರೆ ತಪ್ಪಾಗಲಾರದು.  ಬಣ್ಣದ ಕನಸುಗಳ ಮೋಹಕ ಲೋಕ ತೆರೆದಿಡುವ ಇವರು ಬಣ್ಣಗಳೇ ಇರದಿದ್ದರೆ ಲೋಕ ಹೇಗಿರುತ್ತಿತ್ತು ಎಂಬ ಯೋಚನೆಗೆ ಪ್ರಚೋದಿಸುತ್ತಾರೆ ಇವರ ಬರಹಗಳ ಸುಂದರ ಲೋಕದಲ್ಲಿ ವಿಹರಿಸುವುದೇ ಸಂಭ್ರಮದ ವಿಷಯ. ಸಂಗಾತಿಯ ಸಾನ್ನಿಧ್ಯದ ಹಿತ ಹೆಚ್ಚಿಸುವ ಸಂಪ್ರೋಕ್ಷಣ ಸಂಗಾತಿಯ ಆಕರ್ಷಣೆಗಳಲ್ಲೊಂದು ಮೂರನೇ ಆಯಾಮ _ ಶ್ರೀದೇವಿ ಕೆರೆಮನೆ ಈಗಾಗಲೇ ಸಾಕಷ್ಟು ಪುಸ್ತಕಗಳನ್ನು ಪ್ರಕಟಿಸಿ ಪ್ರಸಿದ್ಧ ಅಂಕಣ ಕರ್ತೆಯಾಗಿರುವ ಶ್ರೀದೇವಿ ಕೆರೆಮನೆಯವರ ಅಂಕಣ ಆರಂಭವಾಗಲಿದೆ ಎಂದಾಗ ಸ್ವಾಭಾವಿಕವಾಗಿಯೇ ನಿರೀಕ್ಷೆ ಹೆಚ್ಚಿತ್ತು . ಅದನ್ನು ಸುಳ್ಳು ಮಾಡದೆಯೇ ವಾರವಾರವೂ ಹೊಸ ಪುಸ್ತಕಗಳ ಸರಕು ತಂದು ನಮ್ಮ ಮುಂದೆ ಜೋಡಿಸಿಡುವ ಈ ಅಂಕಣ ಓದಿನ ಆಸಕ್ತಿಯ ಹರಿವಿಗೆ ದಿಶೆ ತೋರಿಸುತ್ತಿದೆ ಎಂದರೆ ತಪ್ಪಾಗಲಾರದು ಕವಿತೆಗಳಿರಲಿ ಕಥೆ ಇರಲಿ ಇವರ ವಿಮರ್ಶೆಯ ನಿಕಷದಲ್ಲಿ ಮತ್ತಷ್ಟು ಹೊಳೆಯುವ ಪರಿ ಓದಿಯೇ ಆಸ್ವಾದಿಸಬೇಕು ಇವರ ಬರಹದಿಂದ ಪ್ರೇರೇಪಿತಳಾಗಿ ಕೆಲ ಪುಸ್ತಕಗಳನ್ನು ಕೊಂಡು ಓದಿದ್ದೇನೆ . ಬೌದ್ಧಿಕ ಹಸಿವಿಗೆ ಬುತ್ತಿ ಒದಗಿಸುವ ಅಂಕಣ ಇದು ಅನುವಾದಿತ ಕೃತಿ ಪ್ರಪಂಚ ಪ್ರವೇಶ ಪಾರ್ವತಿ ಐತಾಳ ಬೇರೆ ಭಾಷೆಗಳಿಂದ ಕನ್ನಡಕ್ಕೆ ಅನುವಾದಗೊಂಡ ಪುಸ್ತಕಗಳ ಪರಿಚಯ ಮಾಡಿಸುವ ಅಂಕಣ.  ಉತ್ತಮ ಅನುವಾದಿತ ಹಾಗೂ ಓದಲೇ ಬೇಕಾದ ಕೃತಿಗಳನ್ನು ಸಂಗಾತಿಯ ಓದುಗರ ಗಮನಕ್ಕೆ ತರುವ ಈ ಅಂಕಣಕಾರ್ತಿ ನಿಜಕ್ಕೂ ಅಭಿನಂದನಾರ್ಹರು . ಶ್ರೇಷ್ಠ ಲೇಖಕಿ ಹಾಗೂ ಅನುವಾದಕಿಯಾದ ಇವರಿಂದ ಮತ್ತಷ್ಟು ಕೃತಿಗಳು ಸಂಗಾತಿಯ ಓದುಗರಿಗೆ ದಕ್ಕಲಿ ಎಂಬ ಅಭಿಲಾಷೆ ಹೊಸದನಿ ಹೊಸ ಬನಿ _ ಡಿ ಎಸ್ ರಾಮಸ್ವಾಮಿ ಹೆಸರಾಂತ ಕವಿಗಳು ಲೇಖಕರು ಆಗಿರುವ ನಮ್ಮ ಜೀವ ವಿಮಾ ಕುಟುಂಬದವರೇ ಆದ ಶ್ರೀ ಡಿ ಎಸ್ ರಾಮಸ್ವಾಮಿಯವರು ಬರೆಯುವ ಈ ಪುಸ್ತಕ ವಿಮರ್ಶೆಯ ಅಂಕಣ ತುಂಬಾ ಸ್ವಾರಸ್ಯಕರ . ಹಾಗೂ ಅವರ ವಿಮರ್ಶೆಯ ಹೊಳಹುಗಳನ್ನು ಅವಲಂಬಿಸಿ ನಡೆದರೆ ಹೊಸ ಬರಹಗಾರರಿಗಂತೂ ಉತ್ತಮ ಮಾರ್ಗದರ್ಶನ .ಉದಯೋನ್ಮುಖ ಕವಿ ಲೇಖಕರ ಪುಸ್ತಕ ಪರಿಚಯ ಮಾಡಿಕೊಡುವ ಈ ಅಂಕಣವಂತೂ ತಪ್ಪದೇ ಓದಿಸಿಕೊಂಡು ಹೋಗುವ ಗುಣ ಹೊಂದಿದೆ . ಮುಂದೊಂದು ದಿನ ನನ್ನ ಕವನ ಸಂಕಲನವೂ ಈ ಅಂಕಣದಲ್ಲಿ ವಿಮರ್ಶೆಯಾಗುವ ಪುಣ್ಯ ಪಡೆಯಲಿ ಎಂಬ ದೂ(ದು)ರಾಸೆಯೂ ಇದೆ . ಕಬ್ಬಿಗರ ಅಬ್ಬಿ_  ಮಹಾದೇವ ಕಾನತ್ತಿಲ ವೃತ್ತಿಯಲ್ಲಿ ವಿಜ್ಞಾನಿ ಪ್ರವೃತ್ತಿಯಲ್ಲಿ ಸಾಹಿತ್ಯ ಸಂಗೀತದ ಅಭಿಮಾನಿಯಾಗಿ ಮೆಟೀರಿಯಲ್ ಸೈನ್ಸ್ ನ ತತ್ವಗಳೊಂದಿಗೆ ರಸಾನುಭೂತಿಯ ಸ್ವಾದವನ್ನು ಪ್ರತಿವಾರ ಉಣಬಡಿಸಿ ಕಬ್ಬಿಗರ ಅಬ್ಬಿಯಲ್ಲಿ ಮೀಯುವ ಅವಕಾಶ ಮಾಡಿಕೊಡುವ ಈ ಅಂಕಣ ನಾನು ತಪ್ಪದೆ ಓದುವ ಅಂಕಣಗಳಲ್ಲೊಂದು . ವಾಸ್ತವದ ವಿದ್ಯಮಾನಗಳೊಂದಿಗೆ ಕವಿಕಲ್ಪನೆಯ ಬೆಸುಗೆಯನ್ನು ಮಾಡಿ ಅದಕ್ಕೆ ತಕ್ಕ ಕಾವ್ಯ ಕವನ ಪರಿಚಯದೊಂದಿಗೆ ಹೊಸ ವಿಸ್ಮಯ ಪ್ರಪಂಚದ ಅನಾವರಣ ಮಾಡುವುದಷ್ಟೇ ಅಲ್ಲ ಕವಿ ಮನಸ್ಸುಗಳನ್ನು ಆ ವಿಶ್ವ ಪರ್ಯಟನೆಗೆ ಜೊತೆಯಲ್ಲೇ ಕೊಂಡೊಯ್ಯುವ ಅದ್ಭುತ ಅನನ್ಯ ಬರವಣಿಗೆ ಇವರದು.  ಕವಿತೆ ಬರೆಯಬೇಕೆನ್ನುವವರೆಲ್ಲಾ  ಓದಲೇಬೇಕಾದ ಲೇಖನ ಮಾಲೆ ಇದು. ಒಂದು ಲಕ್ಷ ಓದುಗರನ್ನು ತಲುಪಿರುವ ಸಂಗಾತಿಯನ್ನು ಮತ್ತಷ್ಟು ಜನರಿಗೆ ತಲುಪಿಸುವ ಕಾರ್ಯ ನಡೆಯಬೇಕು. ಸಂಗಾತಿಯ ಪೋಸ್ಟ್ಗಳಿಗೆ  ಕಾಮೆಂಟ್ಸ್ ಮಾಡುವರು ಇನ್ನಷ್ಟಿ ಹೆಚ್ಚಾಗಬೇಕು .ತಮ್ಮ ತಮ್ಮ ಸಾಮಾಜಿಕ ಜಾಲತಾಣದ ವರ್ಗಗಳಲ್ಲಿ ಸಂಗಾತಿಯನ್ನು ಹೆಚ್ಚೆಚ್ಚು ಪರಿಚಯಿಸಿ ಎಂಬುದು ಓದುಗಳಾಗಿ ನನ್ನ ಕಳಕಳಿಯ ಮನವಿ. ಇನ್ನು ಪತ್ರಿಕೆ ಹೆಚ್ಚು ಜನರನ್ನು ಮುಟ್ಟಬೇಕಾದರೆ ಇನ್ನಷ್ಟು ವೈವಿಧ್ಯಮಯ ಸಾಹಿತ್ಯ ಪ್ರಕಾರಗಳ ಅಂದರೆ ಕಥೆಗಳು ಕಾದಂಬರಿಗಳು ಥೀಮ್ ಬರಹ ಕವಿತೆಗಳು ಸ್ಪರ್ಧೆಗಳು ಆಯೋಜಿಸಬಹುದು ಎಂದು ನನ್ನ ವೈಯಕ್ತಿಕ ಅಭಿಪ್ರಾಯ.  ಓದುಗರ ಒಳ್ಳೆಯ ಕಾಮೆಂಟ್ಗಳನ್ನು ಪ್ರಕಟಿಸಬಹುದು . ಕುವೆಂಪು ಅವರು ಒಂದೆಡೆ ಹೇಳುತ್ತಾರೆ “ಪತ್ರಿಕೋದ್ಯಮ ಉದ್ಯೋಗದ ಅಥವಾ ಲಾಭದ ಮಟ್ಟಕ್ಕಿಳಿದು ‘ಪತ್ರಿಕೋದ್ಯೋಗಿ’ಯಾಗದಿರುವುದೊಂದು ಶುಭ ಚಿಹ್ನೆ.. ಉದ್ಯೋಗದ ಅಥವಾ ಲಾಭದ ಯೋಚನೆ ಸುಳಿಯಿತೆಂದರೆ ಶಾಸ್ತ್ರೀಯವಾಗಿ ನಿಷ್ಪಕ್ಷಪಾತವಾಗಿ ಉದ್ಯಮವನ್ನು ನಿರ್ವಹಿಸಲು ಸಾಧ್ಯವಾಗುವುದಿಲ್ಲ” (ಕುವೆಂಪು _ ಲೇಖನ ಪತ್ರಿಕಾ ಮನೋಧರ್ಮ). ಈ ಮಾತನ್ನು ಪುಷ್ಟೀಕರಿಸುವಂತಹ ಕಾರ್ಯ ಸಂಗಾತಿಯದು.  ಸಾಹಿತ್ಯ ಬೆಳೆಸುವ ಹಾಗೂ ಕನ್ನಡ ಪರ ಸೇವೆಯೊಂದನ್ನೇ ದೃಷ್ಟಿಯಲ್ಲಿ ಇಟ್ಟುಕೊಂಡಿರುವ ನಿಸ್ವಾರ್ಥ ಮನೋಭಾವದ ಸಂಗಾತಿಗೆ ಮೊದಲ ವರ್ಷದ ಹುಟ್ಟುಹಬ್ಬಕ್ಕೆ ಹಾರ್ದಿಕ ಅಭಿನಂದನೆಗಳು  . ಸಂಗಾತಿಯ ಸಾಹಿತ್ಯ ಸಾಂಗತ್ಯ ಕನ್ನಡಿಗರೆಲ್ಲರಿಗೂ ಹೆಚ್ಚಾಗಲಿ, ಎಲ್ಲರ ಹೃದಯ ಮುಟ್ಟಲಿ . ಪತ್ರಿಕೆಯ ಪರಿಧಿ ಇನ್ನಷ್ಟು ವಿಸ್ತಾರಗೊಳ್ಳಲಿ ಮೇರು ಮುಟ್ಟಲಿ ಎಂಬ ಆಶಯ .  ಈ ರಥದ ಸಾರಥಿಯಾಗಿರುವ ಶ್ರೀ  ಮಧುಸೂದನ್ ಅವರಿಗೆ ಹೃದಯಾಂತರಾಳದ ವಂದನೆ ಮತ್ತು ಅಭಿನಂದನೆಗಳು.                         ಸಂಗಾತಿಯ ಆಭಿಮಾನಿ ಓದುಗಳು                              ಸುಜಾತಾ ರವೀಶ್ .                                 ಸಂಗಾತಿ ಎಂಬ ಪದವು ಸಾಂಗತ್ಯದಿಂದ ಬಂದಿತೆಂದು ಕಾಣುತ್ತದೆ.  ಸ್ನೇಹಕ್ಕೂ ಸಾಂಗತ್ಯಕ್ಕೂ ತುಂಬಾ ವ್ಯತ್ಯಾಸವಿದೆ. ಸ್ನೇಹದ ವ್ಯಾಪ್ತಿ ಚಿಕ್ಕದು. ಸಾಂಗತ್ಯದ್ದು ಹಾಗಲ್ಲ. ಅದರ ನಿಘಂಟುವಿನ ಅರ್ಥ ಹೊಂದಾಣಿಕೆ, ಸಾಮರಸ್ಯ ಎಂದು ಕಾಣುತ್ತದೆ. ಅಂದರೆ ಒಂದು ತರದ ಪರಸ್ಪರ ಗೌರವ, ಮರ್ಯಾದೆ ಕೊಟ್ಟು ತೊಗೊಳ್ಳುವುದು. ಅದು ಸಂಪಾದಕರ ಸಂದೇಶಗಳಲ್ಲಿ ಕಾಣುತ್ತದೆ. ಬರಹಗಾರರ ಬಗ್ಗೆ ಅವರು ತೋರುವ ಸೌಜನ್ಯವೇ ಸಂಗಾತಿಯ ಉಸಿರು. ನಾನು ಈ ಒಂದೆರಡು ತಿಂಗಳಿಂದ ಮಾತ್ರ ಸಂಗಾತಿಯ ಸಂಗಾತಿಯಾಗಿದ್ದರೂ, ನನ್ನ ಬಗ್ಗೆ ಪತ್ರಿಕೆಯವರು ತೋರಿದ ಆದರ ಮರೆಯಲಾರದ್ದು. ಅದೇ ಪತ್ರಿಕೆಯ ಜನಾನುರಾಗದ ಅಡಿಪಾಯವಾಗಿದೆ. ಮುಂದೆ ಪತ್ರಿಕೆಯ ಅಂತರ್ವಸ್ತು. ಅನೇಕ ಸಾಹಿತ್ಯದ ವಿಷಯಗಳನ್ನುಣ ಬಡಿಸುವ ಪತ್ರಿಕೆಯವರ ತವಕ ಪತ್ರಿಕೆಯನ್ನು ಸಾಹಿತ್ಯದ ಕಾಮನಬಿಲ್ಲಾಗಿಸಿದೆ ಎಂದರೆ ತಪ್ಪಗಲಾರದು. ನಿಜಕ್ಕೂ ಪತ್ರಿಕೆಯ ಮೊದಲನೆಯ ವಾರಿಷಿಕೋತ್ಸವ ಈ ತಿಂಗಳ ಇಪ್ಪತ್ತರಂದು ಅಂತ ನೋಡಿದಾಗ ನನಗಾದ ಆಶ್ಚರ್ಯ ಅಷ್ಟಿಷ್ಟಲ್ಲ. ಒಂದು ವರ್ಷದ ಈ ಕೂಸಿನಲ್ಲಿ ಅದೆಷ್ಟು ಪ್ರಬುದ್ಧತೆ ಕಾಣುತ್ತದೆ ಎನ್ನಿಸಿದ್ದಂತೂ ಹೌದು. ನಮ್ಮ ಹೈದರಾಬಾದಿನಲ್ಲಿ ಈ ವಾರ ಸುರಿದು ಜನಜೀವನವನ್ನು ಮತ್ತು ನಮ್ಮ ನೆಂಟರಿಷ್ಟರಿಗೆ ಕೊಟ್ಟ ಅನಾನುಕೂಲತೆಯಿಂದ ನನ್ನ ಲೇಖನ ಸ್ವಲ್ಪ ಮೊಟುಕುಗೊಳಿಸಬೇಕಾಗಿ ಬಂದಿದೆ ಬಿಟ್ಟರೆ ಇಲ್ಲಾಂದರೆ ಇನ್ನೂ ತುಂಬಾ ಬರೆಯುವುದಿತ್ತು. ಕರ್ನಾಟಕದಲ್ಲಿಯ ಕನ್ನಡ ಪತ್ರಿಕೆಗಳಲ್ಲಿ ಹೊರನಾಡ ಕನ್ನಡಿಗರ ಪರವಾಗಿ ನನ್ನದೊಂದು ವಿನಂತಿ ಇದೆ. ಹೊರನಾಡಲ್ಲಿದ್ದು ನಾವು ಕನ್ನಡಮ್ಮನ ಸೇವೆ ಮಾಡುತ್ತಿರುವವರು.

ಸಂಗಾತಿಯೊಡನೆ ನನ್ನ ಪಯಣ Read Post »

ಇತರೆ, ಮಕ್ಕಳ ವಿಭಾಗ

ಅಲಕ್ಷ್ಯಕ್ಕೊಳಗಾಗಿರುವ ಮಕ್ಕಳ ಸಾಹಿತ್ಯ

ಲೇಖನ ಅಲಕ್ಷ್ಯಕ್ಕೊಳಗಾಗಿರುವ ಮಕ್ಕಳ ಸಾಹಿತ್ಯ ವಿಜಯಶ್ರೀ ಹಾಲಾಡಿ ಕರ್ನಾಟಕದ ಸಾಹಿತ್ಯ ಜಗತ್ತಿನಲ್ಲಿ `ಮಕ್ಕಳ ಸಾಹಿತ್ಯ’ ಎಂಬೊಂದು ಪ್ರಕಾರ ಹೇಗಿದೆ ಎನ್ನುವ ಕಡೆಗೆ ಯೋಚನೆ ಹರಿಸಿದರೆ ಬಹಳ ಖೇದವೂ, ಆಶ್ಚರ್ಯವೂ ಉಂಟಾಗುತ್ತದೆ. ಖೇದ ಏಕೆಂದರೆ ಏಕಕಾಲದಲ್ಲಿ ನಮ್ಮ ವರ್ತಮಾನವೂ, ಭವಿಷ್ಯವೂ ಆಗಿರುವ ಮಕ್ಕಳಿಗಾಗಿ ಇರುವ ಸಾಹಿತ್ಯ ಅಲಕ್ಷ್ಯವಾಗಿರುವುದಕ್ಕೆ. ಆಶ್ಚರ್ಯವೇಕೆಂದರೆ ಇಂತಹ ತಿರುಳನ್ನೇ ನಿರ್ಲಕ್ಷಿಸಿ ಇಡೀ ಸಾಹಿತ್ಯಲೋಕ ನಿಶ್ಚಿಂತೆಯಿಂದ ಇದ್ದು ಬಿಟ್ಟಿರುವುದಕ್ಕೆ! ಸಾಹಿತ್ಯ ವಲಯದ ಹಲವರೂ, ಸಂಸ್ಥೆ-ಅಂಗಸಂಸ್ಥೆಗಳೂ, ಸ್ವತಃ ಬರಹಗಾರರೂ, ಓದುಗರು ಎಲ್ಲರೂ ಸೇರಿ ಪಕ್ಕಕ್ಕೆ ಎತ್ತಿಟ್ಟು ಮರೆತುಬಿಟ್ಟ ಒಂದು ಸೃಜನಶೀಲ ಮಾಧ್ಯಮವಿದು. ಆದರೆ ಈ ಸಾಹಿತ್ಯ ಪ್ರಕಾರವನ್ನು ಅಲಕ್ಷಿಸಿದರೆ ನಮ್ಮ ಬದುಕಿನ ಆಶಾವಾದವಾದ ಮಕ್ಕಳನ್ನು, ಅವರ ಕನಸುಗಳನ್ನು ತುಳಿದಂತೆ ಎನ್ನುವುದಂತೂ ಸತ್ಯ!  ಶಿಶುಸಾಹಿತ್ಯದ ಕುರಿತು ಚಿಂತಿಸುವಾಗ ಏಳುವ ಬಹುಮುಖ್ಯ ಪ್ರಶ್ನೆಗಳೆಂದರೆ ಮಕ್ಕಳ ಸಾಹಿತ್ಯ ಕಡಿಮೆಯಾಗುತ್ತಿದೆಯೇ? ಗುಣಮಟ್ಟದ ಮಕ್ಕಳ ಸಾಹಿತ್ಯ ಕಡಿಮೆಯಾಗುತ್ತಿದೆಯೆ? ಈ ಸಾಹಿತ್ಯವನ್ನು ಓದುವವರು ಕಡಿಮೆಯೆ ಅಥವಾ ಗಾಂಭೀರ್ಯದ ಹೆಸರಲ್ಲಿ ಮಕ್ಕಳ ಸಾಹಿತ್ಯವನ್ನು ಮೂಲೆಗುಂಪಾಗಿಸಲಾಗಿದೆಯೆ? ಇಷ್ಟಕ್ಕೂ `ಮಕ್ಕಳ ಸಾಹಿತ್ಯ’ ಎನ್ನುವುದಕ್ಕೆ ವ್ಯಾಖ್ಯೆ ಏನು? ಮುಂತಾದವು. ಇಂತಹ ಹತ್ತಾರು ಪ್ರಶ್ನೆಗಳನ್ನಿಟ್ಟುಕೊಂಡು ಯೋಚಿಸುತ್ತ ಹೊರಟರೆ ಕನಿಷ್ಟ ಉತ್ತರದ ಹಾದಿಗಾದರೂ ತಲುಪಿಕೊಳ್ಳಬಹುದು ಎಂಬ ಆಶಯ ನನ್ನದು.    `ಮಕ್ಕಳ ಸಾಹಿತ್ಯ’ ಎಂದರೆ ಪ್ರೌಢ ಬರಹಗಾರರು ಮಕ್ಕಳಿಗಾಗಿಯೇ ಬರೆದ ಸಾಹಿತ್ಯ. ನಮ್ಮ ಮಕ್ಕಳಿಗೆ ಏನನ್ನು ಕೊಡಬೇಕು ಎಂಬ ದೃಷ್ಟಿಯನ್ನಿಟ್ಟುಕೊಂಡು ಅವರಿಗೆ ಇಷ್ಟವಾಗುವಂತೆ ಹಿರಿಯರು ಬರೆಯುವ ಕವಿತೆ, ಕತೆ ಇನ್ನಿತರ ಗದ್ಯ ಪ್ರಕಾರವೇ ಮಕ್ಕಳ ಸಾಹಿತ್ಯ. ಹಾಗಾದರೆ ಮಕ್ಕಳೇ ಬರೆದ ರಚನೆಗಳಿವೆಯಲ್ಲ; ಅವು ಏನು ಎನ್ನುವುದಕ್ಕೆ ಉತ್ತರ – ಅದು `ಸಾಹಿತ್ಯ’. ಮಗುವೊಂದು ಬರೆದದ್ದು ಇತರ ಮಕ್ಕಳಿಗಾಗಿ ಬರೆದ ಸಾಹಿತ್ಯವಾಗಿರಬಹುದು ಅಥವಾ ಅಲ್ಲದೆಯೂ ಇರಬಹುದು. ಈ ವಿಷಯದ ಕುರಿತು ಈಗಾಗಲೇ ಚರ್ಚೆಗಳಾಗಿವೆ ಮತ್ತು ಸಂವಾದಗಳು ನಡೆಯುತ್ತಲೂ ಇವೆ. ಏನೇ ಆದರೂ `ಮಕ್ಕಳಿಗಾಗಿ ಹಿರಿಯರು ಬರೆದದ್ದು’ ಮತ್ತು `ಮಕ್ಕಳೇ ಬರೆದದ್ದು’ ಈ ಎರಡು ಬಗೆಯ ಬರಹಗಳನ್ನೂ ಪ್ರತ್ಯೇಕವಾಗಿ ಪರಿಗಣಿಸುವುದು ಒಳ್ಳೆಯದು.   ಮುಖ್ಯವಾಗಿ ನಮ್ಮ ವ್ಯವಸ್ಥೆಯಲ್ಲಿ ಮಕ್ಕಳು ಅಲಕ್ಷಿತರು. ಪ್ರಸ್ತುತ ದಿನಗಳಲ್ಲಿ ಅವರವರ ಒಂದೋ, ಎರಡೋ ಮಕ್ಕಳಿಗೆ ಜನರು ಬಹಳ ಪ್ರಾಮುಖ್ಯತೆ ಕೊಡುತ್ತಿದ್ದಾರೆ ಎಂದು ನಮಗನ್ನಿಸಿದರೂ ಹೀಗಿಲ್ಲದ ಪೋಷಕರೂ ಬಹು ಸಂಖ್ಯೆಯಲ್ಲಿದ್ದಾರೆ. ಅದಲ್ಲದೇ ಊಟ, ವಸತಿ, ಪ್ರೀತಿ ಎಲ್ಲದರಿಂದ ವಂಚಿತರಾಗಿ ಅಕ್ಷರಶಃ ತಬ್ಬಲಿಗಳಾದ ಮಕ್ಕಳ ಸಂಖ್ಯೆಯೂ ನಾವು ಗಾಬರಿಬೀಳುವ ಪ್ರಮಾಣದಲ್ಲಿದೆ! ಪ್ರಾಮುಖ್ಯತೆ ಕೊಡುತ್ತಿರುವ ಪಾಲಕರಾದರೂ ತಮ್ಮ ಮಕ್ಕಳ ಬೇಕು-ಬೇಡಗಳನ್ನು ಗಮನಿಸುತ್ತಾರೋ ಅಥವಾ ತಮ್ಮ ಇಷ್ಟ ಅನಿಷ್ಟಗಳನ್ನು ಮಕ್ಕಳ ಮೇಲೆ ಹೇರುತ್ತಿದ್ದಾರೋ ಎಂದು ಗಮನಿಸಿದರೆ ಎರಡನೆಯ ಅಂಶವೇ ಉತ್ತರವೆಂಬುದು ಕಣ್ಣಿಗೆ ರಾಚುತ್ತದೆ. ತಮ್ಮ ಆಸೆಯಂತೆ ತಮ್ಮ ಮಕ್ಕಳನ್ನು `ತಿದ್ದುವುದೇ’ ಹೆಚ್ಚಿನ `ಪ್ರಜ್ಞಾವಂತ’ರ ಕಾಳಜಿ! ಈ ಕಾಳಜಿಯಲ್ಲಿ ಮಕ್ಕಳ ವಿದ್ಯಾಭ್ಯಾಸ ಕೂಡ ಭವಿಷ್ಯದ ದೊಡ್ಡ ಹುದ್ದೆ, ದೊಡ್ಡ ಹಣದ ಮೇಲೆ ಅವಲಂಬಿತವಾಗಿದೆ ಎಂದಾಗ ಮಕ್ಕಳ ಹವ್ಯಾಸ, ಆಸಕ್ತಿಯ ಕುರಿತಾದ ಜಾಗ್ರತೆ ಬಹುತೇಕ ಶೂನ್ಯ! ತಮ್ಮ ಮಕ್ಕಳು ಅವರಿಷ್ಟದ ಸೃಜನಶೀಲ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳಲಿ; ಕತೆ, ಕವಿತೆ, ಕಾದಂಬರಿಗಳನ್ನು ಓದಲಿ ಎನ್ನುವವರು ಪ್ರಜ್ಞಾವಂತರಲ್ಲೂ ವಿರಳ. ಪರಿಸ್ಥಿತಿ ಹೀಗಿರುವಾಗ ಇನ್ನುಳಿದ ಮಂದಿ ಇಂಥವರ ಅನುಕರಣೆಯನ್ನು ಮಾತ್ರ ಮಾಡುವುದು ತಪ್ಪೆನ್ನಲಾಗದು! ಇದಕ್ಕೆ ಹೊರತಾಗಿ ಪೋಷಕರ ಆಸರೆಯೇ ಇಲ್ಲದೆ ಬದುಕುತ್ತಿರುವ ದೊಡ್ಡ ಸಂಖ್ಯೆಯ ಮಕ್ಕಳ ಅಭಿರುಚಿ, ಭಾವನೆಗಳನ್ನು ಕೇಳುವವರಾರು? ಹೀಗಾಗಿ ಮಕ್ಕಳ ಸಾಹಿತ್ಯ ಅಲಕ್ಷಿತವಾಗುವುದಕ್ಕೂ ಮಕ್ಕಳು ಅಲಕ್ಷಿತರಾಗಿರುವುದಕ್ಕೂ ಬಹು ಮುಖ್ಯ ಸಂಬಂಧವಿದೆ. ಇನ್ನು, ಮಕ್ಕಳ ಸಾಹಿತ್ಯವೇ ಕಡಿಮೆಯಾಗುತ್ತಿದೆಯೇ ಅಥವಾ ಗುಣಮಟ್ಟದ ಬರಹಗಳು ಕಡಿಮೆಯಾಗುತ್ತಿದೆಯೆ? ಎಂಬ ಎಳೆಯನ್ನಿಟ್ಟುಕೊಂಡು ಹೊರಟರೆ ಎರಡಕ್ಕೂ ‘ಹೌದು’ ಎನ್ನುವ ಉತ್ತರವೇ ದೊರಕುತ್ತದೆ. ಇದಕ್ಕೆ ಕಾರಣ, ಪರಿಸ್ಥಿತಿ, ಸಂದರ್ಭಗಳು ಹಲವು. ಈ ಕುರಿತುಅಧ್ಯಯನ ಮಾಡಿದ ವಿದ್ವಾಂಸರ ಪ್ರಕಾರ ನಮ್ಮರಾಜ್ಯದಲ್ಲಿ ಮಾತ್ರವಲ್ಲದೆ ಇತರ ಕಡೆಯೂ ಮಕ್ಕಳ ಸಾಹಿತ್ಯದ ಸ್ಥಿತಿ ಹೀಗೆಯೇ ಇದೆ. ಮಲಯಾಳಂ ಮತ್ತು ಹಿಂದಿಯಲ್ಲಿ ಬೇರೆಲ್ಲ ಭಾಷೆಗಿಂತ `ಅಡ್ಡಿಲ್ಲ’ ಎನ್ನುವ ವಾತಾವರಣಇದೆ ಅಷ್ಟೇ. ಅಮೇರಿಕಾದಂತಹ ದೇಶದಲ್ಲಿ ಮಕ್ಕಳ ಸಾಹಿತ್ಯಕ್ಕೆ ಬಹು ಬೇಡಿಕೆ, ಜನಪ್ರಿಯತೆ ಇರುವುದು ಹೌದಾದರೂ ಪ್ರೌಢ ಸಾಹಿತ್ಯಕ್ಕೆ ಹೋಲಿಸಿಕೊಂಡರೆ ಅಲ್ಲೂ ಮಕ್ಕಳ  ಸಾಹಿತ್ಯ ಒಂದು ಹೆಜ್ಜೆ ಹಿಂದೆಯೇ! ನಮ್ಮಲ್ಲಿ ಶಿಶು ಸಾಹಿತ್ಯದ ಪ್ರಮಾಣ ಪ್ರೌಢ ಸಾಹಿತ್ಯಕ್ಕಿಂತ ಕಮ್ಮಿ ಹೌದು. ಆದರೆ ಬರವಣಿಗೆ ಕಡಿಮೆ ಎನ್ನುವುದಕ್ಕಿಂತ ಗುಣಮಟ್ಟದ ಬರಹಗಳು ಕಮ್ಮಿ ಎಂಬ ಮಾತು ಮತ್ತಷ್ಟು ಸರಿಯೆನಿಸುತ್ತದೆ. ಮಕ್ಕಳ ಸಾಹಿತ್ಯವೆಂದರೆ `ಲಘು ಸಾಹಿತ್ಯ, ಯಾರೂ ಬರೆಯಬಹುದಾದದ್ದು, ಪಾಂಡಿತ್ಯ ತಿಳುವಳಿಕೆ ಬೇಡದಿರುವುದು’ ಎಂಬ ಅಭಿಪ್ರಾಯ ಸರ್ವೇಸಾಮಾನ್ಯವಾಗಿದೆ. ಹಾಗಾಗಿ ಹೊಸತನವೇ ಇಲ್ಲದ, ಅದೇ ಹಳೆಯ ಪ್ರಾಸಗಳಿಗೆ ಜೋತುಬಿದ್ದ, ಸಾಂಪ್ರಾದಾಯಿಕ ವಸ್ತು- ನಿರೂಪಣೆಗೆ ನಿಷ್ಠವಾದ ಶಿಶುಸಾಹಿತ್ಯ ಧಂಡಿಯಾಗಿ ರಚನೆಯಾಗುತ್ತಿದೆ. ಇಂತಹ ಸವಕಲು ಸರಕೇ ಈಚೆ ಯಾರೂ ಕಣ್ಣೆತ್ತಿ ನೋಡದಿರುವುದಕ್ಕೆ ಒಂದು ದೊಡ್ಡ ಕಾರಣವೂ ಆಗಿದೆ! `ಮಕ್ಕಳಿಗಾಗಿ ಪ್ರಕಟಿಸಿದ ಪುಸ್ತಕಗಳು ಮಾರಾಟವಾಗುವುದಿಲ್ಲ’  ಎಂದು ಪ್ರಕಾಶಕರು ಚಿಂತೆ ವ್ಯಕ್ತಪಡಿಸುವುದಕ್ಕೂ ಇದೊಂದು ಪ್ರಮುಖ ಕಾರಣ. ಆದರೆ ಈ ಹೊತ್ತಲ್ಲೇ ಹೇಳಬೇಕಾದ ಮಾತೆಂದರೆ ಇತ್ತೀಚಿನ ವರ್ಷಗಳಲ್ಲಿ ಕನ್ನಡ ಮಕ್ಕಳ ಸಾಹಿತ್ಯ ಬದಲಾವಣೆಗೆ ತೆರೆದುಕೊಳ್ಳುತ್ತಿದೆ; ಅನೇಕ ಹೊಸಬರ, ಸೃಜನಶೀಲ ಬರಹಗಾರರ ಕಲ್ಪನೆಯ ಮೂಸೆಯಲ್ಲಿ ರೂಪು ಪಡೆಯುತ್ತಾ ಸಾಗಿದೆ ಎಂಬುದು. ಮಕ್ಕಳಿಗಾಗಿ ಫ್ರೆಶ್‌ ಆದ ಗದ್ಯ, ಪದ್ಯಗಳನ್ನು ಕೊಡಬೇಕೆಂಬ ತುಡಿತದಲ್ಲಿ ಇಂತವರು ಗಂಭೀರವಾಗಿ ತೊಡಗಿಸಿಕೊಂಡಿದ್ದಾರೆ. ನವೋದಯದ ಕಾಲದಲ್ಲಿ ಪಂಜೇ ಮಂಗೇಶರಾಯರು, ಕುವೆಂಪು, ಶಿವರಾಮ ಕಾರಂತ, ಹೊಯ್ಸಳ, ಜಿ.ಪಿ ರಾಜರತ್ನಂ, ಸಿದ್ದಯ್ಯ ಪುರಾಣಿಕರು ಮೊದಲಾದ ಹಿರಿಯರನೇಕರು ಬಹಳ ಆಸ್ಥೆಯಿಂದ ಮಕ್ಕಳಿಗಾಗಿ ಬರೆದಿದ್ದರು. ಅದರ ನಂತರ ಸುದೀರ್ಘಕಾಲದ ಬಳಿಕ ಕಳೆದ ಶತಮಾನದ ಕೊನೆಯ ದಶಕಗಳಲ್ಲಿ ಮತ್ತೊಮ್ಮೆ ಮಕ್ಕಳ ಸಾಹಿತ್ಯ ಚಿಗುರಿತು. ಈಗ ಪುನಃ ಅಂತಹ ದಿನಗಳು ಬರಲಾರಂಭಿಸಿವೆ ಎಂಬ ಆಶಾವಾದವನ್ನು ಮಕ್ಕಳ ಕ್ಷೇತ್ರದಲ್ಲಿ ತೊಡಗಿಕೊಂಡ ತಜ್ಞರು ವ್ಯಕ್ತಪಡಿಸುತ್ತಿದ್ದಾರೆ ಎಂಬುದನ್ನು ಈ ಸಂದರ್ಭದಲ್ಲಿ ಉಲ್ಲೇಖಿಸಬೇಕಾಗಿದೆ.    ಮಕ್ಕಳ ಸಾಹಿತ್ಯಕ್ಷೇತ್ರದ ವಿಕಾಸಕ್ಕೆ ತಡೆಯಾಗಿರುವ ಇನ್ನೊಂದು ಮುಖ್ಯ ಸಮಸ್ಯೆ `ಶ್ರೇಷ್ತ್ರತೆಯ ವ್ಯಸನ’! ಬಹಳ ಓದಿಕೊಂಡವರು, ಚಿಂತಕರು, ಗಂಭೀರ ಸಾಹಿತ್ಯ ಬರೆಯುವವರು ಮಕ್ಕಳ ಸಾಹಿತ್ಯಕೃಷಿ ಮಾಡಿದರೆ ಬೆಲೆ ಕಮ್ಮಿ ಎಂಬ ಒಂದು ಮನಸ್ಥಿತಿ ಪ್ರಚಲಿತದಲ್ಲಿದೆ. ಇದರಿಂದಾಗಿ ಮಕ್ಕಳ ಸಾಹಿತ್ಯಕ್ಕೆ ನಷ್ಟವಾಗಿದೆ ಎಂದೇ ಹೇಳಬಹುದು. ಅಂತಹ ಬರಹಗಾರರ ಸೃಜನಶೀಲತೆ, ಯೋಚನೆಗಳು ನಮ್ಮ ಮಕ್ಕಳಿಗೆ ದೊರಕಲಿಲ್ಲ. ನವೋದಯಕಾಲದ ಹಿರಿಯ ಕವಿಗಳನ್ನು ನೆನಪಿಸಿಕೊಂಡು ಈ ವಿಷಯದಲ್ಲಿ ಇನ್ನಾದರೂ ನಾವು ಬದಲಾಗಬೇಕಾದ ತುರ್ತಿದೆ. ಮಕ್ಕಳಿಗಾಗಿ ಬರೆಯುವುದು, ಮಕ್ಕಳ ಸಾಹಿತ್ಯ ಓದುವುದು ಇವೆರಡೂ ಬದುಕಿನ ಪ್ರೀತಿ, ಸರಳ ಖುಷಿ ಎಂದು ಪರಿಗಣಿಸಬೇಕಾಗಿದೆ. “ಮಕ್ಕಳಿಗಾಗಿ ಬರೆಯಬೇಕೆಂದರೆ ಮಕ್ಕಳ ಮಟ್ಟಕ್ಕೆ ನಾವು ಏರಬೇಕು” ಎನ್ನುತ್ತಾರೆ. ಏರುವುದೋ, ಇಳಿಯುವುದೋ ಒಟ್ಟಿನಲ್ಲಿ ಬರಹಗಾರನೇ/ಳೇ ಮಗುವಾಗಬೇಕಾದದ್ದು ಮೊದಲ ಅಗತ್ಯ. ಮಗುವಿನ ಮುಗ್ಧತೆ, ಕುತೂಹಲ, ಪ್ರಾಮಾಣಿಕತೆ ಮೊದಲಾದವು ಈ ಬರಹಗಾರರಲ್ಲಿ ಹುದುಗಿರಬೇಕಾದ ಬಹು ಮುಖ್ಯ ಅಂಶ. ಹೀಗೆ ಮಗುವೇ ಆಗಿ ಪರಕಾಯ ಪ್ರವೇಶ ಮಾಡಿದಾಗ ಮಾತ್ರ ಒಂದೊಳ್ಳೆ ಪದ್ಯವೋ, ಕತೆಯೋ ಬರೆಯಲು ಸಾಧ್ಯ. ದಿನನಿತ್ಯದ ದಂದುಗದಲ್ಲಿ ಏಗಿ ಸೂಕ್ಷ್ಮತೆಯನ್ನು, ಮಗುತನವನ್ನು ಕಳೆದುಕೊಂಡು ಜಡ್ಡುಬಿದ್ದಿರುವ ನಮ್ಮಂತಹ ದೊಡ್ಡವರಿಗೆ ಇದು ಕಷ್ಟವೆ! ಈ ಕಾರಣಕ್ಕಾಗಿಯೂಗುಣಮಟ್ಟದ ಮಕ್ಕಳ ಸಾಹಿತ್ಯ ಕಡಿಮೆಯಾಗಿರಬಹುದು. ಇಲ್ಲಿಯೇ ಚರ್ಚಿಸಬೇಕಾದ ಮತ್ತೊಂದು ಅಂಶವೆಂದರೆ ಮಕ್ಕಳ ಸಾಹಿತ್ಯಎಂದೊಡನೆ ಅದು `ಸರಳ’ ಆಗಿರಬೇಕು ಎಂಬ ತೀರ್ಮಾನಕ್ಕೆ ಬಂದುಬಿಡುವುದು! ಕೇಳಿ ಕೇಳಿ ಬೇಸರ ತರಿಸಿರುವ ಮಾದರಿಯನ್ನೇ ಆಯ್ದುಕೊಂಡು ಸರಳತೆಯ ಹೆಸರಲ್ಲಿ ಏನೋ ಬರೆದು ಬಿಡುವುದು! ಪುಟಾಣಿ ಮಗುವಿನಿಂದ ಹಿಡಿದು ಹದಿನೈದು-ಹದಿನಾರು ವರ್ಷದವರೆಗಿನ ಮಕ್ಕಳೂ ಈ ಸಾಹಿತ್ಯದ ವ್ಯಾಪ್ತಿಯಲ್ಲಿ ಪರಿಗಣಿತವಾಗುವುದರಿಂದ ರಚನೆಗಳಲ್ಲೂ ವೈವಿಧ್ಯತೆ ಇರಬೇಕಾದದ್ದು ಸಹಜ. ಆದರೆ ಯಾವ ವಯಸ್ಸಿನ ಮಕ್ಕಳಿಗೆ ಬರೆದದ್ದೇ ಇರಲಿ; ಗುಣಮಟ್ಟದ್ದಾಗಿದ್ದರೆ ಅದು ದೊಡ್ಡವರೂ ಓದಿ ಖುಷಿಪಡುವಂತಿರುತ್ತದೆ! ಹೀಗಾಗಿ ಮಕ್ಕಳ ಸಾಹಿತ್ಯ ಎಂದು ಪ್ರತ್ಯೇಕಿಸುವುದು ಸಾಹಿತ್ಯದ `ಪ್ರಕಾರ’ ಗುರುತಿಸುವುದಕ್ಕಾಗಿ, ವಿಮರ್ಶೆಯ ಸವಲತ್ತಿಗಾಗಿ ಮತ್ತೂ ಹೆಚ್ಚೆಂದರೆ ಪ್ರಶಸ್ತಿಗಳ ಪ್ರವೇಶಾತಿಗಾಗಿ ಅಷ್ಟೇ. ಪೂರ್ಣಚಂದ್ರ ತೇಜಸ್ವಿ ಅವರ ವಿಸ್ಮಯ, ದೇಶ-ವಿದೇಶ ಸರಣಿಯ ಪುಸ್ತಕಗಳು, ಅಮೇರಿಕಾದ ಲಾರಇಂಗಲ್ಸ್ ವೈಲ್ಡರ್ ಬರೆದ ಕಾದಂಬರಿ ಸರಣಿ ಇಂತಹ ಸಾಹಿತ್ಯವನ್ನು ಗಮನಿಸಿದರೆ ದೊಡ್ಡವರು-ಮಕ್ಕಳು ಎಂಬ ಭೇದವಿಲ್ಲದೆ ಓದುವಿಕೆ ಇರುತ್ತದೆ ಎಂಬುದು ನಮ್ಮ ಗಮನಕ್ಕೆ ಬರುತ್ತದೆ. ಮಕ್ಕಳ ಸಾಹಿತ್ಯವೆಂದರೆ ಬರೀ ಪಂಚತಂತ್ರದ ಕತೆಗಳು, ಪ್ರಾಸಪದ್ಯಗಳು, ಕಥನಕವನಗಳು, ರಾಜರಾಣಿಯ ಕತೆಗಳು, ಪೌರಾಣಿಕ ವಿಷಯಗಳು ಅಲ್ಲ; ಇದರಾಚೆಗೆ ಅನೇಕ ವಸ್ತು-ವಿಷಯ-ನಿರೂಪಣೆಯ ಮಾಧ್ಯಮವಿದೆ ಎಂಬುದನ್ನು ಅರ್ಥೈಸಿಕೊಳ್ಳಬೇಕಾಗಿದೆ. ಅಳಿಲು, ಬೆಕ್ಕು, ನಾಯಿ, ಇರುವೆ, ಗೂಬೆ, ಬಸವನ ಹುಳು, ಇಲಿ, ಹೂವು, ಗಿಡಮರಗಳು, ಬದಲಾದ ಈ ಕಾಲದ ಮಗುವೊಂದರ ಖುಷಿ-ಸಂಕಷ್ಟಗಳು ಹೀಗೆ… ವಿಫುಲ ವಿಷಯಗಳಿವೆ. ಲಲಿತ ಪ್ರಬಂಧ, ಕಾದಂಬರಿ, ಪುಟಾಣಿಕತೆ, ಅನುಭವಕಥನ, ಫ್ಯಾಂಟಸಿಗಳು ಹೀಗೆ ವಿವಿಧ ಅಭಿವ್ಯಕ್ತಿಯ ಪ್ರಕಾರಗಳಿವೆ…..  ಈ ಸಂದರ್ಭದಲ್ಲಿ ಒಂದು ಮುಖ್ಯ ಪ್ರಶ್ನೆಯನ್ನು ಎತ್ತಿ ಈ ಬರಹವನ್ನು ಮುಗಿಸುತ್ತೇನೆ. `ಮಕ್ಕಳ ಸಾಹಿತ್ಯ’ ಒಂದು ಸಾಹಿತ್ಯ ಪ್ರಕಾರವಲ್ಲವೆ? ಸಣ್ಣಕತೆ, ಕವಿತೆ, ನಾಟಕ, ಕಾದಂಬರಿ, ಆತ್ಮಕಥೆ, ಜೀವನಚರಿತ್ರೆ, ವಿಚಾರಸಾಹಿತ್ಯ, ಪ್ರಬಂಧ ಹೀಗೆ ಇವೆಲ್ಲವೂ ವಿಮರ್ಶೆಗೆ, ಓದಿಗೆ, ಮರುಓದಿಗೆ ಒಳಪಡುತ್ತಿರುವ ಈ ಹೊತ್ತಿನಲ್ಲಿ ಮಕ್ಕಳ ಸಾಹಿತ್ಯವನ್ನೇಕೆ ಮೂಲೆಗುಂಪಾಗಿಸಲಾಗಿದೆ? ಕನಿಷ್ಠ ಒಂದು ಓದು, ವಿಮರ್ಶೆ, ಒಂದು ಗಮನಿಸುವಿಕೆಯನ್ನಾದರೂ ಈ ಸಾಹಿತ್ಯ ಕೃತಿಗಳು ಬಯಸಬಾರದೇ? ಕನಿಷ್ಠ ಒಂದು ಮೆಚ್ಚುಗೆಯ ಮಾತಾದರೂ ಮಕ್ಕಳ ಸಾಹಿತಿಗೆ ದೊರಕಬಾರದೆ? ಪ್ರೌಢ ಸಾಹಿತ್ಯದ ಮನ್ನಣೆಯ ಅಬ್ಬರದಲ್ಲಿ ನಿರ್ಲಕ್ಷಿತ ಮಕ್ಕಳ ಸಾಹಿತ್ಯ ಕೊಚ್ಚಿಹೋಗಬೇಕೆ? ಇದು ಖಂಡಿತಾ ಸರಿಯಲ್ಲ. ಪ್ರಜ್ಞಾವಂತ ಓದುಗರು, ವಿಮರ್ಶಕರು ಈ ಕುರಿತು ಗಮನ ಹರಿಸಲೇಬೇಕು. (ಪ್ರೋತ್ಸಾಹದದೃಷ್ಟಿಯಿಂದ ಸಾಹಿತ್ಯಅಕಾಡಮಿಯಿಂದ ತೊಡಗಿಇತರ ಕೆಲವು ಸಂಸ್ಥೆಗಳು ಕೊಡಮಾಡುವ ಕೆಲ ಪ್ರಶಸ್ತಿ, ಪುರಸ್ಕಾರಗಳು ಮಕ್ಕಳ ಸಾಹಿತ್ಯಕ್ಕಿವೆ ಎಂದು ಇಲ್ಲಿ ನೆನಪಿಸಿಕೊಳ್ಳುವೆ). ಮಕ್ಕಳ ಸಾಹಿತ್ಯ ಅಲಕ್ಷಿತವಾದರೆ ನಮ್ಮ ಮಕ್ಕಳು ಅಲಕ್ಷಿತವಾದಂತೆ, ಅವರು ಮೂಲೆಗುಂಪಾದರೆ ಇಡೀ ಸಮಾಜವೇ ಮೂಲೆಗುಂಪಾದಂತೆ ಎಂಬ ಎಚ್ಚರಿಕೆ ನಮ್ಮಲ್ಲಿರಬೇಕಾದದ್ದು ಅತ್ಯಗತ್ಯ.  ಪ್ರೌಢ ಸಾಹಿತ್ಯ ಮತ್ತು ಮಕ್ಕಳ ಸಾಹಿತ್ಯ ಎರಡರಲ್ಲೂ ಗಂಭೀರವಾಗಿ ತೊಡಗಿಕೊಂಡು ಉತ್ತಮ ಕೃತಿಗಳನ್ನು ನೀಡುತ್ತಿರುವ ಬರಹಗಾರರ ಸಂಖ್ಯೆ ಹೆಚ್ಚುತ್ತಿದೆ ಎಂಬುದು ಸಂತಸದ ಸಂಗತಿ. ಹಾಗೇ ಪುಸ್ತಕವನ್ನು ಕೊಂಡು ಓದುವ ಸಂಸ್ಕೃತಿಯೂ ಬೆಳೆಯಲಿ. ಮಕ್ಕಳ ಸಾಹಿತ್ಯ ಕೃತಿಗಳನ್ನು ಮಕ್ಕಳು, ದೊಡ್ಡವರು ಸಮಾನವಾಗಿ ಓದಬಲ್ಲ ಪೂರಕ ವಾತಾವರಣ ಸೃಷ್ಟಿಯಾಗಲಿ ಎನ್ನುವುದು ಪ್ರಜ್ಞಾವಂತರೆಲ್ಲರ ಆಶಯ. **************************************************

ಅಲಕ್ಷ್ಯಕ್ಕೊಳಗಾಗಿರುವ ಮಕ್ಕಳ ಸಾಹಿತ್ಯ Read Post »

ಇತರೆ

ಕೊಂಕಣಿ ಕವಿ ಪರಿಚಯ

ಕೊಂಕಣಿ ಕವಿ ಪರಿಚಯ ಫೆಲ್ಸಿ ಲೋಬೊ ಶ್ರೀಮತಿ ಫೆಲ್ಸಿ ಲೋಬೊಶಿಕ್ಷಕಿ, ಸಂತ ಎಲೋಶಿಯಸ್ ಪ್ರೌಢಶಾಲೆ, ಮಂಗಳೂರು.ಹವ್ಯಾಸ: ಕವನ, ಲೇಖನ ಬರಹಕನ್ನಡ, ಕೊಂಕಣಿ, ತುಳು ಭಾಶೆಗಳಲ್ಲಿ.ಕೊಂಕಣಿಯ, ರಾಕ್ಣೊ, ಉಜ್ವಾಡ್, ಸೆವಕ್, ಮುಂತಾದ ಪತ್ರಿಕೆಗಳಲ್ಲಿ, ವೀಜ್ ಪಾಕ್ಶಿಕ ದಲ್ಲಿ, ಕವಿತಾ ಡಾಟ್ ಕಾಮ್ ಗಳಲ್ಲಿ ಬರಹಗಳ ಪ್ರಕಟವಾಗಿದೆ. ಕವಿಗೋಶ್ಟಿಗಳಲ್ಲಿ ಭಾಗವಹಿಸುವಿಕೆ, ವಿವಿಧ ಸಾಹಿತ್ಯ ಸ್ಪರ್ಧೆಗಳಲ್ಲಿ ಬಹುಮಾನ ಗಳಿಸಲಾಗಿದೆ. ಆಕಾಶವಾಣಿ ಮಂಗಳೂರು ರೇಡಿಯೊ ಹಾಗೂ ಸಾರಂಗ್ ರೇಡಿಯೊ ದಲ್ಲಿ ಕಾರ್ಯಕ್ರಮಗಳು ಪ್ರಸಾರ ಕಂಡಿವೆ. ” ಗರ್ಜೆತೆಕಿದ್ ಗಜಾಲಿ” ಎಂಬ ಚೊಚ್ಚಲ ಲೇಖನ ಪುಸ್ತಕ ಪ್ರಕಟವಾಗಿದೆ. ವಿದ್ಯಾರ್ಥಿಗಳನ್ನು ಸಾಹಿತ್ಯಾಸಕ್ತಿ ಬೆಳೆಸಲು ವಿವಿಧ ಸ್ಪರ್ಧೆಗಳಿಗೆ ಪ್ರೋತ್ಸಾಹಿಸಿ ಕಳುಹಿಸಲಾಗಿದೆ. ಸೃಜನಾತ್ಮಕ ಬರಹಗಳಿಗೆ ಪ್ರೋತ್ಸಾಹಿಸಿ, ಚುಟುಕುಗಳ ಸಂಗ್ರಹ” ಝೇಂಕಾರ” ಪ್ರಕಟಗೊಂಡಿದೆ. ಜೆಸಿಐ ಮಂಗಳೂರು, ಲಾಲ್ ಭಾಗ್ ರವರು ಶಿಕ್ಷಕರ ದಿನದಂದು, ಬಹುಮುಖ ಪ್ರತಿಭಾ ಶಿಕ್ಷಕಿ ಸನ್ಮಾನ ನೀಡಿ ಗೌರವಿಸಿರುತ್ತಾರೆ. ಫೆಲ್ಸಿ ಲೋಬೊ ಅವರು ಬರೆದ ಕೊಂಕಣಿ ಮತ್ತು ಕನ್ನಡ ಕವಿತೆಗಳು ನಿಮ್ಮೆಲ್ಲರಿಗಾಗಿ. ತಾಂಚೆ ಫಾತರ್ ಆನಿ ಹಾಂವ್~~~ ಕೊಣಾಯ್ಚ್ಯಾ ಹೆಳ್ಕೆ ವಿಣೆಕಿರ್ಲೊನ್ ವಾಡ್ಲೆಲ್ಯಾ ದೆಣ್ಯಾಂರುಕಾರ್ ಕಾಳಾ ತೆಕಿದ್ಕೊಂಬ್ರೆ, ಫಾಂಟೆ ವಿಸ್ತಾರ್ಲೆಸೊಪ್ಣಾಂಚ್ಯಾ ಪಿಶ್ಯಾ ಫುಲಾಂನಿದೆಖ್ತೆಲ್ಯಾಕ್ ಪಿಶ್ಯಾರ್ ಘಾಲೆಂ ಬರಿಂ ಫುಲಾಂ ಘೊಸ್ ಭಾಂದ್ತಾನಾಫಳಾಂನಿ ಆಸ್ರೊ ಸೊದ್ಲೊಫಳಾ ರುಚಿಂನಿ ಗರ್ಜೊಥಾಂಭಯ್ತಾನಾ, ತಾಣಿಂಫಾತರ್ ವಿಂಚ್ಲೆ ಸುರ್ವೆರ್ ಹಳ್ತಾಚೆ ಮಾರ್ವಾಡಾತ್ತ್ ಗೆಲೆ ವರ್ಸಾಂಭರ್ಮಾರ್ಲೆಲ್ಯಾ ಹರ್ ಫಾತ್ರಾಂಕಿಹಗೂರ್ ವಿಂಚುನ್ ಪೆಳಿ ಭಾಂದ್ಲಿ ತುಮಿ ಮಾರ್ಲೆಲ್ಯಾ ಹರ್ ಫಾತ್ರಾಂಕಿಮೋಲ್ ಭಾಂದ್ಲಾಂವೆಂಪೆಳಿಯೆರ್ ಬಸೊನ್ಲಿಖ್ತಾಂ ಆಜ್ ಯಾದಿಂಚ್ಯೊ ವೊಳಿ ತುಮಿ ಛಾಪ್ಲೆಲ್ಯಾ ಪಯ್ಲ್ಯಾ ಪಾನಾಕ್ಆಜ್ ಹಾಂವೆ ಲಿಖ್ಚ್ಯಾ ಹರ್ ಪಾನಾಂಕ್ಫರಕ್ ಇತ್ಲೊಚ್ಫಾತ್ರಾಂ ಪೆಳಿಯೆ ಥಾವ್ನ್ ಖಾಂತ್ಚ್ಯಾಉತ್ರಾಂ ಪಾಟ್ಲ್ಯಾನ್ ನಾಂವ್ ಆಸಾಅನಾಮಿಕ್ ನೈಂ ನಿಮ್ಮ ಕಲ್ಲ ಬೆಂಚು~~~~ನನಗರಿವಿಲ್ಲದೆಯೆ ಬೆಳೆದುಹೆಮ್ಮರವಾದ ಸದ್ಗುಣದ ಮರದಎಳೆ ಚಿಗುರು, ಕೊಂಬೆಬಲಿತ ರೆಂಬೆಗಳೆಡೆಯಲಿಅದಾಗಲೆ ಹುಚ್ಚು ಹೂಗಳ ಸರದಿ ಹೀಚು ಕಾಯದು ಬೆಳೆದುಕಾಯಾಗಿ ಬಲಿತು ಬಲು ರುಚಿಯಿಂದ ನಿಮ್ಮ ಒಲಿದಾಗಕಲ್ಲೆಸೆದು ಕೊಯ್ದವರೆತುಸು ತಾಳಿ ಎಸೆದ ಒಂದೊಂದು ಕಲ್ಲತಾಳ್ಮೆಯಿಂ ಶೇಖರಿಸಿ ಬೆಂಚೊಂದಕಟ್ಟಿರುವೆನುಅಲ್ಲೆ ಕುಳಿತು ತಿರುಚುವ ಒಂದೊಂದುಕಾಗುಣಿತಕ್ಕು ಎತ್ತಣಿಂದೆತ್ತ ಸಂಬಂಧ ! ಪ್ರಹಾರಗಳ ನೋವು ಆರಿಕಲ್ಲು ಬೆಂಚು ಬೆಳೆದಿದೆ ಹೆಗಲೇರಿನಿಮ್ಮ ಹಾಳೆಯಂತಲ್ಲಇಲ್ಲಿ ಪೋಣಿಸುವ ಒಂದೊಂದುಅಕ್ಷರದ ಹಿಂದೊಂದು ಹೆಸರಿದೆಇದು ಅನಾಮಿಕವಲ್ಲ ಪ್ರಶಸ್ತಿ ನಾತ್ಲೆಲೆ ಪಾತ್ರ್ # ಜಿವಿತಾಚ್ಯೆ ರಂಗ್ ಮಾಂಚಿಯೆರ್ಉಂಚ್ಲೆ ಪಾತ್ರ್ ತುಜೆಪಾಳ್ಣ್ಯಾ ಥಾವುನ್ ಪೆಟೆ ಪರ್ಯಾಂತ್ವಿಚಾರ್ ಖೂಬ್ ಗರ್ಜೆಚೆ ರಂಗಾಳ್ ಆಂಗ್ಲಿಂ ನ್ಹೆಸೊನ್ಆಂಗಣ್ ಭರ್ ಚರ್ಲೆಲಿಂ ಪಾವ್ಲಾಂವಾಡೊನ್ ಎತಾಂ ಭಂವ್ತಿಲ್ಯಾ ದೊಳ್ಯಾಂಚಿಭುಕ್ ಥಾಂಭಂವ್ಚೆಂ ಆಹಾರ್ ಜಾತಾತ್ ಘರ್ಚ್ಯಾ ಚಲಿಯೆ ಖಾತಿರ್ಸೆಜ್ರಾ ಉಠ್ತಾ ಆಕಾಂತ್ದೊಳೆಚ್ಚ್ ಕೆಮರಾ ಜಾವುನ್ ಬಾಬಾಚಾರ್ ಕುಶಿಂ ಥಾವುನ್ ರಾಕೊನ್ ಥಕ್ತಾತ್ ಪಾಯ್ಜಾಣಾಂಗೊ ತುಜಿಂ ಆವಾಜಾವಿಣ್ಝಳ್ಜಳಿತ್ ವಸ್ತ್ರಾಂ ಬಾವ್ಲ್ಯಾಂತ್ ರಂಗ್ ಉಬೊವ್ನ್ದಿವ್ಳಾ ಭಿತರ್ ವೆಶಿ ದೇವ್ ಕೊಪ್ತಾ ಮಣ್ತಾತ್ವಚಾನಾ ಜಾಶಿ ಬುರ್ಬುರೆಂ ವೊಡುನ್ದೆವಾ ಹುಜ್ರಿಂಚ್ ಮಾನ್ ಲುಟ್ತಾತ್ ದೇವಿ ತೂಂ , ನಾ ತುಕಾ ಪೂಜಾ ಸನ್ಮಾನ್ಉಜ್ವಾಡ್ ತೂಂ , ನಾ ತುಕಾ ಸಂಭ್ರಮ್ಕಾಂಪಿಣ್ ಮಾರ್ತೆಲ್ಯಾ ಪೂಜಾರಿಕ್ ಯಿಗುಪ್ತಿಂ ಲಿಪ್ತಿಂ ಗರ್ಜ್ ತೂಂಬಗ್ಲೆ ನಿದ್ತೆಲ್ಯಾಚ್ಯಾ ನಿಳ್ಯಾ ಪಿಂತುರಾಂಕ್ ಯಿಸಂಪನ್ಮೂಳ್ ತೂಂ ಕೆನ್ನಾ ಪಾಪ್ಸುಂಕ್ ತುಕಾ ದಾವ್ಲ್ಯೊ ರಾಕ್ತಾತ್ಪ್ರತಿಭಾ ಪಿಸ್ಡುಂಕ್ ಸುಣಿಂ ವಾಗ್ಟಾಂ ವಾವುರ್ತಾತ್ಗುಡ್ಡಾಯ್ತೆಲ್ಯಾಂ ಮಧೆಂ ಮಿಲಾವಾಚಿ ಪುತ್ಳಿ ಜಾ — ರಾವ್ ಉಭೆಂತುಜ್ಯಾ ವೆಕ್ತಿತ್ವಾಚಿ ವಳಕ್ ತರಿ ಜಾಯ್ತ್ ? ಉಭಾರುನ್ ವರ್ ಪರ್ವತಾಚೆರ್ ತುಜೊ ತಾಳೊಕಿಂಕ್ರಾಟೆಂತ್ ಆಸೊಂ ಜಯ್ತಾಚೊ ವ್ಹಾಳೊಅಬಲ್ ನೈಂ ತುಂ , ಪೌರುಷಾಚ್ಯೆ ನದ್ರೆಂತ್ಲೆಂಅಬಲ್ಪಣಾಚೆಂ ಕೂಸ್ ಹುಮ್ಟಿಲಾಂಯ್ ತೆಂ ಪಾಚಾರ್ ಕುಟ್ಮಾ ಸಂಸಾರ್ ಸೆಜ್ ಸಾಮಾರಾಂತ್ಖೂಬ್ ಜಾಗ್ ಉಠಯ್ತಾಂ ತುಜಿ ಹಾಜ್ರಿಮೆಲ್ಲ್ಯಾ ಮೊಡ್ಯಾಂಕ್ ಕಳಾತ್ ಕಶಿ ಶಾಥಿ ತುಜಿ?ಸಾಧನೆಚ್ಯಾ ಧಾಂವ್ಣೆಂತ್ ಥಾಂಭ್ಚಿ ಗರ್ಜ್ ನಾಕಾ ಆಜಿ , ಆವಯ್ , ಧುವ್ , ಸುನ್ , ಭಯ್ಣ್ವಿಭಿನ್ನ್ ಪಾತ್ರಾಂನಿ ಭರ್ಪೂರ್ ಜೀವ್ ಭರ್ತಾಯ್ಆಧಾರ್ ಗರ್ಜ್ ಆಸ್ಚ್ಯಾ ನಾಸ್ಚ್ಯಾಂಕಿತೆಂಕೊ ದಿಲಾಯ್ಪ್ರಶಸ್ತಿ ನಾಸ್ಲೆಲೆ ಪಾತ್ರ್ ತುಜೆ ನಿಮ್ಣೆಂ ಪಯ್ಣ್ ಸಂಪ್ತಚ್ಆವಯ್ ಗರ್ಭಾಂತ್ ಆಸ್ರೊ ಘೆತಾಯ್ಮಾತಿಯೆ ವಾಸ್ ಚಡಂವ್ಕ್ಜರೂರ್ ಕಾಡ್ತಾಂ ಯಾದ್ ತುಜಿಪಯ್ಲ್ಯಾ ಪಾವ್ಸಾ ಥೆಂಬ್ಯಾಚ್ಯಾ ಪರ್ಮೊಳಾಂತ್ ಪ್ರಶಸ್ತಿಗಳಿಲ್ಲದ ಪಾತ್ರಗಳು ಬಾಳ ರಂಗಮಂಚದಲಿ ನಿನ್ನ ಪಾತ್ರಗಳೆಲ್ಲವು ಉನ್ನತವೆತೊಟ್ಟಿಲಿನಿಂದ ಶವದ ಪೆಟ್ಟಿಗೆಯ ತನಕವಿಚಾರಗಳು ಮನಮುಟ್ಟುವಂತವೆ ಬಣ್ಣದಂಗಿಯ ತೊಟ್ಟು ಅಂಗಳದೆಲ್ಲೆಡೆಓಡಾಡಿದ ಪುಟ್ಟಪಾದಗಳುಬೆಳೆದಂತೆಲ್ಲ ಸುತ್ತಲ ಹಸಿದ ಕಂಗಳಿಗೆಆಹಾರವಾಗುವವು ಅರಿಯದೆಯೆ. ಈ ಮನೆಯ ಮಗಳಿಗಾಗಿ ನೆರೆಮನೆಗಳಲಿ ಯಾತಕೋ ಆತಂಕ!ತೆರೆದ ಕಣ್ಣೇ ಕ್ಯಾಮೆರಾಗಳಾಗುತನಾಲಕ್ಕು ದಿಕ್ಕುಗಳಲೂ ಕಾವಲು ಝಣ್ ಗುಡುವ ಗೆಜ್ಜೆಗಿಂದು ವಿಶ್ರಾಂತಿಝಗಮಗಿಸುವ ಉಡುಗೆಗಿಲ್ಲ ಕಳೆಗುಡಿಯೊಳಗ ಹೋದೆಯೆಂದುಕೋಪಿಸುವ ಜನಹೋಗದಿರೆ ಧರಧರನೆಳೆದು ನಿನ್ನದೇವನೆದುರೆ ಮಾನಗೆಡಿಸುವರಣ್ಣಾ ದೇವಿಯಲ್ಲವೆ ನೀ ನಿನಗೇತಕೊಪೂಜೆ ಸನ್ಮಾನ?ಬೆಳಕಂತೆ ನೀ ಏತಕೋ ಸಂಭ್ರಮವು?ಗುಡಿಯ ದೇವನ ತೊಳೆತೊಳೆದುಪೂಜೆಗೈವ ಪೂಜಾರಿಗೂಗುಟ್ಟಿನಲಿ ಬೇಕಲ್ಲ ನೀನೆನೀಲಿ ಚಿತ್ರಗಳಿಗು ಸಂಪನ್ಮೂಲ? ಕೆನ್ನಾಲಗೆಯಾಗಿ ಸುಡಲುಪ್ರತಿಭೆಗಳ ದಮನಿಸಲು ಕಾದಿವೆನರಿ ತೋಳಗಳ ಹಿಂಡು ಹಸಿದುಕಂಚಿನ ಪ್ರತಿಮೆಯಾಗಿ ನಿಂತುಬಿಡುಒದ್ದು ತುಳಿವವರ ಮಧ್ಯೆಭವ್ಯ ವ್ಯಕ್ತಿತ್ವದ ಅರಿವಾಗಲವರಿಗೆ ! ಉತ್ತುಂಗಕೇರಿಸು ಪರ್ವತಗಳ ಸೀಳಿಪ್ರತಿಧ್ವನಿಸಲಿ ನಿನ್ನುಲಿಯುಪ್ರತಿ ಚೀರಾಟದಲೂ ಬೆಸೆದಿರಲಿಜಯದ ಹರಿವುಅಬಲೆಯಲ್ಲ ನೀನು ಪೌರುಷದ ದಿಟ್ಟಿಯಲ್ಲಡಗಿದ ಅಪನಂಬಿಕೆಯ ಬೇರಕಿತ್ತು ಜಗಕೆ ಸಾರು ಕುಟುಂಬ ನೆರೆಯ ವಠಾರದಿ ಬೀರುವಸಾಂತ್ವನದ ಎಚ್ಚರದ ಹಾಜರಿಯಲಿನಿನ್ನಿರುವ ಲಕ್ಷಣದ ಅರಿವಾದರುಎಲ್ಲಿಹುದು ಸತ್ತ ಹೆಣಗಳಿಗೆ?ಸಾಧನೆಯ ಹಾದಿಯಲಿ ಹಿಂದೆನೋಡದಿರು, ತಂಗದಿರು ಅಜ್ಜಿ, ತಾಯಿ, ಮಗಳುಸೊಸೆ, ತಂಗಿಯಂದದಿ ವಿಭಿನ್ನಪಾತ್ರಗಳ ಜೀವವಾಗಿಬೇಡಿದ, ಬೇಡದವಗೂ ಆಸರೆಯನೀಡಿದ ನಿನ್ನೆಲ್ಲ ಪಾತ್ರಗಳಿಗೆಪ್ರಶಸ್ತಿಗಳಿಲ್ಲ ಕಾಣು ! ಬಾಳಪಯಣವು ಅಂತ್ಯವಾದಂತೆಭುವಿಯ ಗರ್ಭದೊಳು ಲೀನವಾಗಿರುವನಿನ್ನ ಸ್ಮರಣೆಯೆ ಪುನರಪಿ ಎನಗೆಮೊದಲ ಹೂಮಳೆಯು ಸೂಸ್ವ ಕಂಪಿಗೆಊರೆಲ್ಲ ಪಸರಿಸುವ ತಂಪಿಗೆ. *************************************** ಶೀಲಾ ಭಂಡಾರ್ಕರ್

ಕೊಂಕಣಿ ಕವಿ ಪರಿಚಯ Read Post »

ಇತರೆ, ಜೀವನ

ಕಡಿವಾಣವೂ ಪ್ರೀತಿಯೇ!!!!!

ಲೇಖನ ಕಡಿವಾಣವೂ ಪ್ರೀತಿಯೇ!!!!! ಮಾಲಾ ಅಕ್ಕಿಶೆಟ್ಟಿ   ಕೊರೊನಾ ಲಾಕಡೌನ್ ಕ್ಕಿಂತ ಮುಂಚೆ ನಡೆದ ಮಾತಿದು.ಆತ್ಮೀಯರೊಬ್ಬರು ಚರ್ಚಿಸಿದ ವಿಚಾರ.ಅವರು ವಿವರಿಸಿದ ಹಾಗೆ ಈಗ ಒಂದು ವರ್ಷದಿಂದ ಶಾಲೆಗೆ ಹೋಗುವ ನಾಲ್ಕು ವರ್ಷದ ಮಗಳು ದಿನಾಲು ಒಂದಿಲ್ಲೊಂದು ವಸ್ತುಗಳನ್ನು ಶಾಲೆಯಲ್ಲಿ ಕಳೆದುಕೊಂಡು ಬಂದು ತಾಯಿಗೆ ಮತ್ತೆ ಹೊಸ ವಸ್ತುಗಳನ್ನು ಕೊಡಿಸುವಂತೆ ಪೀಡಿಸುತ್ತಿದ್ದಳು. ಮಗಳು ದಿನವೂ ಪೆನ್ಸಿಲ್, ರಬ್ಬರ್, ಶಾರ್ಪನರ್, ಕ್ರೆಯಾನ್ಸ್ ಗಳನ್ನು ಕಳೆದುಕೊಂಡು ಬರುವುದು ತಾಯಿಗೆ ತಲೆನೋವಾಗಿ ಪರಿಣಮಿಸಿತ್ತು. ಬೇಸತ್ತ ತಾಯಿ ಒಂದು ದಿನ ಮಗಳಿಗೆ ಸ್ಟ್ರಿಕ್ಟಾಗಿ ಎಚ್ಚರಿಕೆ ಕೊಟ್ಟಳು. ದಿನಾಲೂ ಶಾಲೆಯಿಂದ ಬಂದ ತಕ್ಷಣ ತನ್ನಲ್ಲಿರುವ ಪೆನ್ಸಿಲ್, ರಬ್ಬರ್, ಶಾರ್ಪನರ್ ಮತ್ತು ಕ್ರೆಯಾನ್ಸ್ ಗಳನ್ನು ತಪ್ಪದೇ ತನಗೆ ತೋರಿಸಬೇಕು, ಕಳೆದುಕೊಂಡು ಬಂದರೆ ಹೊಸ ವಸ್ತುಗಳನ್ನು ಕೊಡುವುದಿಲ್ಲವೆಂದು.ಈ ನಿಯಮವನ್ನು ತಲೆಯಲ್ಲಿ ಇಟ್ಟುಕೊಂಡ ಮಗಳು ದಿನಾಲೂ ತಪ್ಪದೆ ವಸ್ತುಗಳನ್ನು ತೋರಿಸತೊಡಗಿದಳು. ಕಳೆದುಕೊಂಡು ಅಥವಾ ಶಾಲೆಯಲ್ಲಿ ಎಲ್ಲೋ ಇಟ್ಟು ಮರೆತು ಬರುವ ಪದ್ಧತಿ ಕೊನೆಗೊಂಡಿತು.           ಈಗಿನ ಪಾಲಕರು ಮಕ್ಕಳಿಗೆ ಬೇಕೆಂದು ಎಲ್ಲವನ್ನೂ ಮಕ್ಕಳು ಕೇಳುವ ಮೊದಲೇ ಬಹುವಾಗಿ ತಂದು ಬಿಡುವ ಸಂಪ್ರದಾಯ ರೂಢಿಸಿಕೊಂಡು ಬಿಟ್ಟಿದ್ದಾರೆ. ವರ್ಷದುದ್ದಕ್ಕೂ ಒಂದು ಪೆನ್ಸಿಲ್, ಒಂದು ರಬ್ಬರ್, ಒಂದು ಶಾಪ್ ನರ್, ಒಂದು ಕ್ರೆಯಾನ್ ಬಾಕ್ಸ್ ಇದ್ದರೆ ಸಾಕು. ಆದರೆ ಪಾಲಕರು ಡಜನ್ಗಟ್ಟಲೆ ವಸ್ತುಗಳನ್ನು ತಂದಿಟ್ಟಿರುತ್ತಾರೆ. ಅವು ಎಲ್ಲಿಟ್ಟಿರುತ್ತಾರೆಂದು ಮಕ್ಕಳಿಗೂ ಗೊತ್ತು. ದಿನವೂ ಯಾವುದಾದರೂ ವಸ್ತುವನ್ನು ಕಳೆದುಕೊಂಡು ಬಂದು ಪಾಲಕರಿಗೆ ಹೇಳದೆಯೇ ಹೊಸದನ್ನು ಪ್ಯಾಕೆಟ್ ನಿಂದ ಒಡೆದು ಉಪಯೋಗಿಸಲು ಪ್ರಾರಂಭಿಸುತ್ತಾರೆ. ತಿಂಗಳೊಪ್ಪತ್ತಿನಲ್ಲಿ ಡಜನ್ ಡಜನ್ ವಸ್ತುಗಳು ಮಾಯವಾಗಿರುತ್ತವೆ. ಮತ್ತೆ ಬೇಕು ಎಂದು ಹಟ ಹಿಡಿದಾಗ ಮಾತ್ರ, ಸಾಮಾನು ಖಾಲಿಯಾಗಿದೆ ಎಂಬ ಅರಿವು ಪಾಲಕರದ್ದಾಗುತ್ತದೆ. ಅಲ್ಲಿಯವರೆಗೂ ಎಷ್ಟಿತ್ತು?ಹೇಗೆ ಖಾಲಿಯಾಯಿತು? ಎಂಬುದು ಗೊತ್ತೇ ಆಗಿರುವುದಿಲ್ಲ.        ನಮ್ಮ ಬಾಲ್ಯದ ದಿನಗಳನ್ನು ನೆನಪಿಸಿಕೊಂಡರೆ ಹಟ ಎನ್ನುವ ಶಬ್ದ ಎಂದೂ ಶಬ್ದಕೋಶದಲ್ಲಿ ಇರಲೇ ಇಲ್ಲ. ಪಾಲಕರು ಕೊಡಿಸಿದ ವಸ್ತುಗಳನ್ನು ಅವು ಇನ್ನೂ ಉಪಯೋಗಕ್ಕೆ ಬರಲ್ಲ ಎನ್ನುವವರಿಗೆ ಬಳಸಲಾಗುತ್ತಿತ್ತು. ಜೂನ್ ತಿಂಗಳಲ್ಲಿ ಸಾಮಾನುಗಳನ್ನು ಕೊಡಿಸಿದರೆ ಮುಗಿಯಿತು ಮುಂದೆ ಮುಂದಿನ ಜೂನ್ನಲ್ಲಿ ಶಾಲೆಯ ವಸ್ತುಗಳನ್ನು ಖರೀದಿಸಲಾಗುತ್ತಿತ್ತು. ಕಳೆದುಕೊಂಡು ಬಂದ ಉದಾಹರಣೆಗಳು ತುಂಬಾ ಕಡಿಮೆ. ಜೊತೆಗೆ ವೆರೈಟಿ,ವೆರೈಟಿ ಅಥವಾ ಪ್ರತಿದಿನಕ್ಕೆ ಹೊಸದನ್ನು ಉಪಯೋಗಿಸಬೇಕೆಂಬ ಹಟವೂ ಇರಲಿಲ್ಲ. ಮೇಲಾಗಿ ಆಗಿನ ಪಾಲಕರು ಎಷ್ಟು ಬೇಕೋ ಅಷ್ಟೇ ತಂದು ಮಕ್ಕಳಿಗೆ ಕೊಡುತ್ತಿದ್ದರು. ಡಜನ್ಗಟ್ಟಲೆ ತಂದ ರೂಢಿಯೇ ಇರಲಿಲ್ಲ. ವರ್ಷಕ್ಕೆ ಇಂತಿಷ್ಟೇ ಎಂಬ ಕಟ್ಟುನಿಟ್ಟು ಇದ್ದುದರಿಂದ ವಸ್ತುಗಳ ಉಪಯೋಗ ಮತ್ತು ರಕ್ಷಣೆ ಸರಿಯಾಗಿಯೇ ಆಗುತ್ತಿತ್ತು.           ಕಾಲ ಬದಲಾದಂತೆ ಪಾಲಕರ ಮನಸ್ಥಿತಿಯೂ ಬದಲಾಗಿದೆ. ಮಕ್ಕಳು ಬೇಡಿದ್ದೆಲ್ಲವನ್ನು ಕೊಡಿಸುವುದು ತಮ್ಮ ಧರ್ಮ ಎಂದು ತಿಳಿದು, ಕೇಳಿದ್ದು ಕೇಳದೆ ಇದ್ದದ್ದನ್ನೆಲ್ಲ ಕೊಡಿಸುವುದನ್ನು ಪಾಲಕರು ಅನುಸರಿಸುತ್ತಿದ್ದಾರೆ. ಅವಶ್ಯಕತೆಗೆ ತಕ್ಕಂತೆ ಕೊಡಿಸುವುದು ಉತ್ತಮ. ಜೊತೆಗೆ ಅದರ ಉಪಯೋಗ ಸರಿಯಾಗಿ ಆಗುತ್ತದೆಯೋ ಇಲ್ಲವೋ ಅನ್ನುವುದನ್ನು ಪರೀಕ್ಷಿಸುತ್ತಿರಬೇಕು. ದುಂದುವೆಚ್ಚಕ್ಕೆ ಕಡಿವಾಣ ಹಾಕಬೇಕು. ದುಡ್ಡಿನ ಮಹತ್ವ ತಿಳಿಯುವಂತೆ ಮಾಡಬೇಕು.            ಇಗೀಗ ಡ್ರಗ್ಸ ಜಾಲದಲ್ಲಿ ಸಿಕ್ಕಿಕೊಂಡವರನ್ನ ನೋಡಿದರೆ ಇವರಿಗೆ ದುಡ್ಡು ಸಿಕ್ಕುವುದು ಎಷ್ಟು ಸಲೀಸು!!!ಮೈಯೊಳಗಿನ ರಕ್ತವನ್ನು ಬೆವರಿನಂತೆ ಸುರಿಸಿದರೂ ಬಡವನಿಗೆ ಎರಡು ಹೊತ್ತಿನ ಕೂಳು ದುರ್ಲಭ.ಇಂಥ ಬಡತನವನ್ನು ಉಂಡುಟ್ಟವರಿಗೆ,ಉತ್ತಮ ನೌಕರಿ, ತಮ್ಮದೊಂದು ಮನೆ,ಮಕ್ಕಳಿಗೆ ವಿದ್ಯಾಭ್ಯಾಸ ಕೊನೆಗೆ ಸಾಧ್ಯವಾದರೆ ಕಾರ್ ಒಂದು ಖರೀದಿ.ಇವಷ್ಟೇ ಕನಸುಗಳು.ಶ್ರೀಮಂತಿಕೆಯಲ್ಲೇ ಹುಟ್ಟಿದವರಿಗೆ, ಇಲ್ಲಾ ಇಗೀಗ ಶ್ರೀಮಂತ ಆದವರಿಗೆ ಅಥವಾ ತಾವಾಗಿಯೇ ದುಡ್ಡು ಗಳಿಸಿ ಪ್ರಾಥಮಿಕ ಹಂತದ ಎಲ್ಲಾ ಆಸೆಗಳು ಸಂಪೂರ್ಣಗೊಂಡವರಿಗೆ ದುಡ್ಡು ಕಷ್ಟವಲ್ಲ.ಇಂಥವರೇ ವ್ಯಸನಿಗಳಾಗುತ್ತಾರೆ.        ಮಕ್ಕಳು ಕೇಳಿದ್ದೆಲ್ಲವನ್ನೂ ಕೊಡಿಸುವುದು ಪ್ರೀತಿ ಎಂದುಕೊಂಡಿದ್ದಾರೆ ಕೊಡಿಸದಿದ್ದರೆ ಪ್ರೀತಿ ಇಲ್ಲ ಅಥವಾ ಕಡಿಮೆ ಎಂದು ಮಕ್ಕಳು ತಿಳಿದಾರು ಎಂಬ ಭಯದಲ್ಲೇ ಕೊಡಿಸುತ್ತಾರೆ. ಬೇಡಿದ್ದೆಲ್ಲವನ್ನೂ ಕೊಡಿಸುವುದು ಪ್ರೀತಿಯೇ? ಹಟ ಯಾವಾಗಲೂ ಗೆಲ್ಲಬೇಕೆ? ಇಲ್ಲ ಬೇಡಿದ್ದೆಲ್ಲವನ್ನೂ ಕೊಡಿಸದಿರುವುದು ಪ್ರೀತಿ ಎಂಬುದನ್ನು ಪಾಲಕರು ತೋರಿಸಬೇಕು.ಕಡಿವಾಣವೂ ಪ್ರೀತಿಯ ಸಂಕೇತ. ಯಾವ ವಸ್ತುವೂ ಜಗತ್ತಿನಲ್ಲಿ ಪುಗ್ಗಟ್ಟೇ ಸಿಗಲ್ಲವೆಂದು ತಿಳಿಹೇಳಬೇಕಾಗಿದೆ.ಹಣದ, ದುಡಿತದ ಮಹತ್ವವನ್ನು ಹೇಳಿಕೊಡಬೇಕು. ಬೇಕಾಬಿಟ್ಟಿ ವಸ್ತುಗಳನ್ನು ತೆಗೆದುಕೊಂಡು, ಒಂದು ದಿನವೂ ಉಪಯೋಗಿಸದೇ ಮತ್ತೆ ಹೊಸದು ಬೇಕೆನ್ನುವುದಕ್ಕೆ ಲಗಾಮ ‌ಮತ್ತು ‌ಹಟ ‌ಒಳ್ಳೆಯದಲ್ಲವೆಂದು ತಿಳಿಹೇಳಬೇಕು.  ***********************************************************

ಕಡಿವಾಣವೂ ಪ್ರೀತಿಯೇ!!!!! Read Post »

ಇತರೆ, ಜೀವನ

ಕಾಯಕದ ಮಹತ್ವ.

ಲೇಖನ ಕಾಯಕದ ಮಹತ್ವ. ಜಯಶ್ರೀ ಭ.ಭಂಡಾರಿ. ದಾಸೋಹ ಕಾಯಕವೆಂಬ ನಾಣ್ಯದ ಇನ್ನೊಂದು ಮುಖ.ಸಮಾಜದಲ್ಲಿ ಸಂಪತ್ತು ಉತ್ಪತ್ತಿಯಾಗಲು ಸತ್ಯಶುದ್ಧ ಕಾಯಕ ಬೇಕು.ಆದರೆ,ಸಂಪತ್ತು ಕೇಂದ್ರೀಕತವಾದರೆ ಎಲ್ಲಾ ಬಗೆಯ ಅಸಮಾನತೆಗಳು ಹುಟ್ಟುತ್ತವೆ.ಆದ್ದರಿಂದ ಬಸವಾದಿ ವಚನಕಾರರು ದಾಸೋಹ ತತ್ವವನ್ನು ಆವಿಷ್ಕರಿಸಿ ಆಚರಣೆಯಲ್ಲಿ ತಂದರು.ಅಣ್ಣನವರ ಸುಪ್ರಸಿದ್ಧ ವಚನ “ಕಾಗೆಯೊಂದಗುಳ ಕಂಡಡೆ ಕೂಗಿ ಕರೆಯದೆ ತನ್ನ ಬಳಗವ….”. ಸಮಾಜದಲ್ಲಿ ಸಂಪತ್ತಿನ ವಿತರಣೆಯಾಗಲೇಬೇಕೆಂದು ವಿಧಿಸುವ ನಿಯಮ. ಕಾಯಕ ಸಾರ್ಥಕವಾಗುವದೇ ದಾಸೋಹದಲ್ಲಿ.ಆದ್ದರಿಂದಲೇ “ಸೋಹಂ ಎಂದೆನಿಸದೆ ದಾಸೋಹಂ ಎಂದೆನಿಸಯ್ಯ” ಎಂದು ದೇವರಲ್ಲಿ ಪ್ರಾರ್ಥಿಸುತ್ತಾರೆ ಅಣ್ಣ.”ತನು ಮನ ಬಳಲಿಸಿ ತಂದು ದಾಸೋಹ ಮಾಡುವವ”ರನ್ನು ಸದ್ಭಕ್ತರೆನ್ನುತ್ತಾರೆ ಅಣ್ಣ. ಸಂಪತ್ತನ್ನು ಕೂಡಿಡುವ ,ಮಣ್ಣಿನಲ್ಲಿ ಹೂತಿಡುವ,ಕಂಗಳಲ್ಲಿ ನೋಡಿ ಹಿಗ್ಗುವ ಮರುಳರನ್ನು ಎಚ್ಚರಿಸಿ “ಕೂಡಲ ಸಂಗನ ಶರಣರಿಗೊಡನೆ ಸಂಪತ್ತನ್ನು ಸವೆಸಬೇಕು” ಎಂದು ಹೇಳುತ್ತಾರೆ.ಇನ್ನೊಂದು ಲೋಕೋತ್ತರ ವಚನದಲ್ಲಿ: ” ನಾನ್ಯಾವ ಕರ್ಮವ ಮಾಡಿದರೆಯೂನೀ ಕೊಟ್ಟ ದ್ರವ್ಯವ ನಿಮಗಲ್ಲದೆ ಮತ್ತೊಂದು ಕ್ರೀಯೆಯ ಮಾಡೆನುನಿಮ್ಮ ಸೊಮ್ಮಿಂಗೆ ಸಲಿಸುವೆನು ನಿಮ್ಮಾಣೆಕೂಡಲ ಸಂಗಮದೇವಾ” ಎಂದು ಹೇಳುವಾಗ ಅಸಂಗ್ರಹಾದುದನ್ನು ಸ್ಪಷ್ಟವಾಗಿ ವಿವರಿಸುತ್ತಾರೆ.ಆದ್ದರಿಂದಲೇ ಅಣ್ಣನವರನ್ನು 12 ನೇ ಶತಮಾನದ ಮಾರ್ಕ್ಸ ಎಂದು ಕೆಲವರು ಕರೆಯುತ್ತಾರೆ. ಬಸವಣ್ಣನವರ ಪ್ರಕಾರ ಐಹಿಕ ವಸ್ತುಗಳ ಮೋಹಕ್ಕೆ ಒಳಗಾಗುವವನು ಭವಿ. ಐಹಿಕ ವಸ್ತುಗಳೆಲ್ಲ ಶಿವನ ಪ್ರಸಾದವೆಂದು ಭಾವಿಸಿ ದಾಸೋಹಂ ಭಾವದ ಮೂಲಕ ಇವೆಲ್ಲ ಜಗತ್ತಿನ  ಜೀವಿಗಳಿಗೆ ಸೇರಿದ್ದು ಎಂದು ನಂಬಿದವನು ಭಕ್ತ. ಲಿಂಗಧಾರಣೆಯಿಂದ ಶರೀರವು ಭಕ್ತನ ಹಾಗೆ ಕಾಣಬಹುದೇ ಹೊರತು ವ್ಯಕ್ತಿ ಭಕ್ತ ಆಗಲಾರ. ಭಕ್ತಿ ಎಂಬುದು ಸರ್ವ ಸಮತ್ವ ಭಾವದಿಂದ ಬರುವಂಥದ್ದು.ಅಂತೆಯೇ ಬಸವಣ್ಣನವರು ‘ಎನ್ನ ತನು ಭಕ್ತ, ಮನ ಭವಿ’ ಎಂದು ಸೂಚ್ಯವಾಗಿ ಖಂಡಿಸಿದ್ದಾರೆ.ಯಾರು ಆತ್ಮಸಾಕ್ಷಿಯಾಗಿ ಬದುಕುವದಿಲ್ಲವೋ ಅವರೇ ಭವಿಗಳು ಎಂದು ಅವರು ಸೂಚಿಸಿದ್ದಾರೆ. ಕಾಯಕದಿನದ ಬಂದ  ಹಣವನ್ನು ದಾಸೋಹಕ್ಕೆ ವಿನಿಯೋಗಿಸುತಿದ್ದ ಕಕ್ಕಯ್ಯನನ್ನು ಪರೀಕ್ಷೀಸಲೆಂದು  ಬಂದ ಶಿವ ಕಂಕರಿಯ ನಾದಕ್ಕೆ ಮಾರುಹೋಗಿ ಕುಣಿಯತೊಡಗಿದ.ಕಕ್ಕರಿಯ ಕಕ್ಕಯ್ಯ ಶಿವ ಕುಣಿಯುವದನ್ನು ನೋಡಿ ಕಂಕರಿಯನ್ನು ಇನ್ನಷ್ಟು ಜೋರಾಗಿ ಸೊಗಸಾಗಿ ಬಾರಿಸಲು ಇಬ್ಬರಲ್ಲೂ ಸ್ಪರ್ಧೆ ಏರ್ಪಟ್ಟಿತು.ಮೂರು ದಿನಗಳ ನಿರಂತರ ನರ್ತನದ ಕೊನೆಗೆ ಶಿವನೇ ಸೋತು ಕುಣಿಯಲಾರದೆ ನೆಲಕ್ಕೊರಗಿದ.ಅವನ ಕೈ ಹಿಡಿದು ಎಬ್ಬಿಸಿದ ಕಕ್ಕಯ್ಯ ಕುಣಿಯುವಂತೆ ಹೇಳಿದ.ಜಂಗಮರೂಪದ ಶಿವ ತನ್ನ ನಿಜರೂಪ ತೋರಿ “ಈ ಲೋಕದ ಹಂಗು ಸಾಕು,ನನ್ನ ಜೊತೆ ಕೈಲಾಸಕ್ಕೆ ಬಾ” ಅಂದನಂತೆ.ಶಿವ ಮತ್ತು ಕೈಲಾಸ ಎರಡನ್ನೂ ಧಿಕ್ಕರಿಸಿದ ಕಕ್ಕಯ್ಯ “ಮೂರು ದಿನ ತಪ್ಪಿಹೋದ ಕಾಯಕದ ಆಯ ಕೊಡದೆ ನಿನ್ನನ್ನು ಬಿಡಲಾರೆ” ಎಂದನಂತೆ. ನಾನೂ ಮೂರು ದಿನ ಕುಣಿದೆ.ನಿಜವಾಗಿ ನೋಡಿದರೆ ನೀನೆ ನನಗೆ ಕಾಯಕದ ಪ್ರತಿಫಲವನ್ನು ಕೊಡಬೇಕು” ಎಂದ ಶಿವ.”ಕಾಯಕ ಸಿಕ್ಕುವದು ಈ ಭೂಮಿಯಲ್ಲಿ ಇರುವವರಿಗೆ ಮಾತ್ರ, ನಿನ್ನ ಕೈಲಾಸದವರು ಸೋಮಾರಿಗಳು, ನೀನು ಕಾಯಕವೆಂಬ ಪವಿತ್ರ ಭಾವನೆಯಿಂದ ಕುಣಿಯಲಿಲ್ಲ.ನನ್ನನ್ನು ಪರಿಕ್ಷಿಸಲು ಕುಣಿದೆ….ಕಾಯಕ ತೆಗೆದುಕೊಂಡು ನೀನು ಯಾರಿಗಾಗಿ ದಾಸೋಹ ಮಾಡುವೆ? ನಿನಗೆ ಕಾಯಕ ಬೇಕಾಗಿದ್ದರೆ ಈ ಭೂಮಿಯಲ್ಲಿ ವಾಸಮಾಡು. ಸತ್ಯಶುದ್ಧನಾಗಿ ದುಡಿ” ಎಂದು ಸವಾಲೆಸೆದು ಮುಲಾಜಿಲ್ಲದೆ ಕಾಯಕದ ಹಣವನ್ನು ವಸೂಲು ಮಾಡಿ ದಾಸೋಹಕ್ಕೆ ತೆರಳಿದ.   ಇದೇ ರೀತಿ ಶಿವನಿಂದ ಕಾಯಕವನ್ನು ಪಡೆದ ಮತ್ತೊಬ್ಬ ಶರಣನೆಂದರೆ ನಗೆಯ ಮಾರಿತಂದೆ.ಮುಖದಲ್ಲಿ ನಗೆಮಲ್ಲಿಗೆ ಅರಳಲು ಯಾರ ಅಪ್ಪಣೆಯೂ ಬೇಕಿಲ್ಲ.ನಗೆಯನ್ನು ದುಡ್ಡುಕೊಟ್ಟು ಕೊಳ್ಳಬೇಕಿಲ್ಲ ಆದರೂ ನಗೆ ನಮ್ಮ ಬಾಳಿನಲ್ಲಿ ಅಪರೂಪವಾಗುತ್ತಿದೆ.ನರನ ಬಾಳಿನಲ್ಲಿ ನಗೆಗಿಂತ ಹೊಗೆ,ಧಗೆಗಳೇ ಜಾಸ್ತಿ.ನಗುವ ಮನಸ್ಸಿದ್ದರೂ ಜಗದ ವೈಚಿತ್ರ್ಯದಿಂದ  ಮಿಡುಕುತ್ತ,ಸಿಡುಕುತ್ತ ದುಡಿಯುವ ಜನರಿಗೆ ನಕ್ಕು ನಗಿಸುವ ನಗೆಗಾರರು ಬೇಕಾಗುತ್ತಾರೆ. ಮಾರಿತಂದೆ ಅಂಥ ನಗೆಗಾರರಿಗೆಲ್ಲ ಗುರು.ಮ್ಲಾನಮುಖದಲ್ಲಿ ಮಂದಹಾಸವನ್ನು ಉಕ್ಕಿಸುವದೇ ಅವನ ಕಾಯಕವಾಗಿದ್ದಿತು.ಅವನ ವಿನೋದ ವಿನ್ಯಾಸದಿಂದ ನಕ್ಕು ಆನಂದ ಹೊಂದಿದ ಭಕ್ತರು ಸ್ವಸಂತೋಷದಿಂದ ಏನಾದರೂ ಕೊಟ್ಟರೆ ಅದನ್ನು ಭಕ್ತಿಯಿಂದ ಸ್ವೀಕರಿಸಿ ಅದರಲ್ಲಿಯೇ ಉದರ ನಿರ್ವಹಣೆ ಪೂರೈಸಿ,ಉಳಿದುದರಲ್ಲಿ ದಾಸೋಹ ಮಾಡುತ್ತಿದ್ದ. ಇಂಥಹ ದಾಸೋಹದ ಶರಣಸಂಕುಲವೇ ನಮ್ಮ ಮುಂದಿದೆ. ನಮಗೆ ಬಿಟ್ಟುಹೋದ ದಾಸೋಹ ಸಂಸ್ಕ್ರತಿಯನ್ನು ನಾವು ಚಾಚೂತಪ್ಪದೆ ಪಾಲಿಸೋಣ ಹಾಗೂ ಶರಣ ಸಂಸ್ಕ್ರತಿಯಲ್ಲಿ ನಡೆದು ಧನ್ಯರಾಗೋಣ. ******************************

ಕಾಯಕದ ಮಹತ್ವ. Read Post »

ಇತರೆ, ವಾರ್ಷಿಕ ವಿಶೇಷ

ಜಾಲತಾಣಗಳಿಂದ ಮಹಿಳೆಯರಿಗೆ ಹೆಚ್ಚಿದ ಅವಕಾಶ ಮಾಲಾ ಅಕ್ಕಿಶೆಟ್ಟಿ   ಎಲ್ಲೋ ಇದ್ದವರನ್ನು ಇಲ್ಲೇ ಇದ್ದಾರೆನ್ನುವಂತೆ ಮಾಡುವ ಮೋಡಿ ಈ ಜಾಲತಾಣಗಳಿಗಿದೆ. ಹಳೆಯ ಕಾಲವೇ ಕಣ್ಮರೆಯಾಗಿ, ಆಧುನಿಕದ ಹೊಸತಿಗೆ ತುಸು ಜಾಸ್ತಿನೇ ಹೊಂದಿಕೊಂಡ ಮನುಷ್ಯ, ಅನುಕೂಲಕ್ಕಾಗಿ ತನಗೆ ಬೇಕಾದ್ದನ್ನೆಲ್ಲಾ ಬಳಸಿಕೊಂಡು ಜಗತ್ತನ್ನು ಸಮೀಪದಿಂದಲೇ ಆನಂದಿಸುತ್ತಿದ್ದಾನೆ. ಹೊಸದರ ಅಳವಡಿಕೆ ಖುಷಿ ನೀಡಿದೆ. ಏಕಕಾಲದಲ್ಲೇ ಆಗುತ್ತಿರುವ ಹೊಸ ಹೊಸ ಆ್ಯಪ್ ಗಳ ಆವಿಷ್ಕಾರ ಹಾಗೂ ಇಂಟರ್ನೆಟ್ ಸೌಲಭ್ಯ ಎಲ್ಲರಿಗೂ ಅವುಗಳ ಉಪಯೋಗಕ್ಕೆ ಮಾಯಾ ಕೊಂಡಿಯನ್ನು ನಿರ್ಮಿಸಿದೆ.           ಮೊದಲೆಲ್ಲಾ ಇಂಥ ಸೌಲಭ್ಯಗಳು ಅಂದರೆ ಮೊಬೈಲ್, ಇಂಟರ್ನೆಟ್ ಹಾಗೂ ಆ್ಯಪ್ಗಳನ್ನು ಜಾಸ್ತಿಯಾಗಿ ಪುರುಷರೇ ಬಳಸುತ್ತಿದ್ದರು.ದಿನಗಳು ಸರಿದಂತೆ ಮಹಿಳೆಯರೂ ಬಳಸಲು ಪ್ರಾರಂಭಿಸಿದರು. ಒಬ್ಬ ಹೆಣ್ಣು ಮಗಳು ಕಲಿತು ನೌಕರಿ ಹಿಡಿದರೆ ಅದೊಂದು ಸಾಧನೆ ಎಂಬಂತೆ ಪರಿಗಣಿಸಿ, ಮನೆಯಲ್ಲಿರುವವರಿಗೆ ಅಂಥ ಗೌರವ ಸಿಕ್ಕಿರಲಿಲ್ಲ. ಆದರೆ ಈ ಜಾಲತಾಣಗಳ ಸಹಾಯದಿಂದ ಹೊಸ ಉಪಾಯಗಳು ಹೊಳೆದು ಸೃಜನಾತ್ಮಕತೆಯನ್ನು ಒರೆಗೆ ಹಚ್ಚುವ ಚಟುವಟಿಕೆಗಳಲ್ಲಿ ಭಾಗಿಯಾಗಿ ಎಷ್ಟೋ ಮಹಿಳೆಯರು ಮನೆಯಿಂದಲೇ ಉದ್ಯೋಗ ಅಥವಾ ಹಣವನ್ನು ಸಂಪಾದಿಸುತ್ತಿದ್ದಾರೆ.            ಅಡುಗೆ ಮಾಡುವುದೆಂದರೆ ಬರೀ ಹೆಣ್ಣಿನ ಆಸ್ತಿಯಂತೆ ಬಿಂಬಿಸಿದ್ದು ಈ ಸಮಾಜ. ರುಚಿಕಟ್ಟಾದ ಆಹಾರದ ತಯಾರಿಕೆಗೆ ಒಂದು ವೇದಿಕೆಯ ಅವಶ್ಯಕತೆಯಿತ್ತು.ಅಂತಹ ವೇದಿಕೆಯನ್ನು ಮಹಿಳೆಯರು ಯೂಟ್ಯೂಬ್ ಮುಖಾಂತರ ಸಾಧಿಸಿದ್ದಾರೆ. ಒಮ್ಮೆ ಯೂಟ್ಯೂಬ್ ಅನ್ನು ಜಾಲಾಡಿಸಿದರೆ, ಹೆಚ್ಚಿನ ಅಡಿಗೆ ಸಂಬಂಧಿಸಿದ ವಿಡಿಯೊಗಳು ಹೆಣ್ಮಕ್ಕಳಿಗೆ ಸಂಬಂಧಿಸಿವೆ.ಬರೀ ಅಡಿಗೆ ಮಾಡಿ ಸಂಸಾರ ನೋಡಿಕೊಂಡು ಹೋಗುವ ಏಕತಾನತೆಯಿಂದ ಬೇಸತ್ತ ಮಹಿಳೆಯರಿಗೆ ಇದು ವರವಾಗಿದೆ. ತಮಗೆ ಗೊತ್ತಿರುವ ವಿವಿಧ ಆಹಾರದ ರೆಸಿಪಿಗಳನ್ನು ಅಪ್ಲೋಡ್ ಮಾಡಿ, ಜನರಿಂದ ಮೆಚ್ಚುಗೆಯನ್ನು ಪಡೆದಿದ್ದಾರೆ. ಇತ್ತೀಚೆಗೆ ನಾನೊಬ್ಬ ಹಳ್ಳಿ ಮಹಿಳೆಯ ವಿಡಿಯೋ ನೋಡುತ್ತಿದ್ದೆ. ಹಳ್ಳಿ ಜೀವನ ಹೇಗೆ ಎಂಬುದನ್ನು ದಿನಾಲು ವಿಡಿಯೋ ಮಾಡಿ ಹಾಕುತ್ತಾಳೆ. ವಿಚಿತ್ರ ಎಂದರೆ ಆಕೆ ಕಲಿತದ್ದು ಕೇವಲ ಎಸ್ಸೆಸ್ಸೆಲ್ಸಿ. ಹೇಗೋ ಮೊಬೈಲ್ನ ಫೀಚರ್ಸ್, ಇಂಟರ್ನೆಟ್ ಬಳಕೆ ಜೊತೆಗೆ ಈ ವಿಡಿಯೋ ಹೇಗೆ ಮಾಡುವುದನ್ನು ಕಲಿತು ಅಪ್ಲೋಡ್ ಮಾಡುತ್ತಿದ್ದಾಳೆ. ಆಕೆಯೇ ಹೇಳುವಂತೆ ಗಂಡನ ಸಹಾಯ ಸಹಕಾರ ಇದೆ. ಬೆಳಿಗ್ಗೆ ಬೇಗ ಏಳುವುದರಿಂದ ಹಿಡಿದು ತಿಂಡಿ, ಮಧ್ಯಾಹ್ನದ ಊಟದ ವಿಶೇಷ, ಸಂಜೆ ತಿಂಡಿಗಳು, ದನ ಮೇಯಿಸುವುದು, ಹಾಲು ಹಿಂಡುವುದು, ಬೆಣ್ಣೆ ತೆಗೆಯುವುದು, ಹಳ್ಳಿ ಶೈಲಿಯಲ್ಲಿ ಕಾಯಿ ಪಲ್ಯಗಳನ್ನು ಮಾಡುವುದು ಹೀಗೆ ಹಳ್ಳಿಗೆ ಸಂಬಂಧಿಸಿದ ಮಾಹಿತಿಗಳನ್ನು ಆಕೆ ವಿಡಿಯೋದಲ್ಲಿ ಸಂಗ್ರಹಿಸುತ್ತಾಳೆ. ನಿಜವಾಗಲೂ ಆಕೆಯನ್ನು ನೋಡಿದರೆ ಸಂತೋಷ. ಒಬ್ಬ ಹಳ್ಳಿಯ ಹೆಣ್ಣುಮಗಳು ಅಷ್ಟಷ್ಟೇ ಕಲಿತು ವಿಡಿಯೋ ಮಾಡಿ ಜನರಿಂದ ಸಾಕಾಗುವಷ್ಟು ಲೈಕ್ಸ್, ಕಾಮೆಂಟ್ಸ್ ಪಡೆಯುತ್ತಾಳೆ. ಜನರು ತಮಗೆ ಯಾವ ವಿಷಯ ಬೇಕು ಅನ್ನೋದನ್ನು ಅವಳಿಗೆ ಹೇಳುತ್ತಾರೆ. ಇದು ಹೆಣ್ಮಕ್ಕಳು ಜಾಲತಾಣಗಳನ್ನು ಹೇಗೆ ಬಳಸಿಕೊಳ್ಳುತ್ತೀದ್ದಾರೆ ಅನ್ನುವುದಕ್ಕೆ ಉದಾಹರಣೆ.     ಫೇಸ್ ಬುಕ್ ನಲ್ಲಿ ಸಾಹಿತ್ಯಕ್ಕೆ ಸಂಬಂಧಿಸಿದವರ ಫ್ರೆಂಡ್ಶಿಪ್ ಮಾಡಿಕೊಂಡು, ಜೊತೆಗೆ ತಮಗನಿಸಿದ್ದನ್ನು ಚುಟುಕಾಗಿ ತಮ್ಮ ವಾಲ್ ಮೇಲೆ ಬರೆಯುತ್ತಾ ಜನರಿಂದ ಪ್ರೇರಣೆ ಸಿಕ್ಕಾಗ ಲೇಖನ, ಕವಿತೆ, ಕತೆಗಳನ್ನು ಬರೆದವರು ಹಲವರು. ಎಷ್ಟೋ ಹೆಣ್ಮಕ್ಕಳು ಸಂಗೀತದ ಆಸಕ್ತಿಯಿಂದ ಫೇಸ್ ಬುಕ್ ನಲ್ಲಿ ವಿಡಿಯೋಗಳನ್ನು ಹಾಕಿ, ಜನರಿಂದ ಮನ್ನಣೆಯನ್ನು ಪಡೆದು, ಸಂಗೀತ ಲೋಕದ ಗಣ್ಯರಿಗೆ ಅದು ತಲುಪಿದಾಗ ಅವಕಾಶಗಳನ್ನು ಪಡೆದು ಉತ್ತಮ ಹಾಡುಗಾರರಿದ್ದಾರೆ. ರಾಣು ಮಂಡಲ್ ಎಂಬ ನಿರ್ಗತಿಕ ಮಹಿಳೆ ರೈಲ್ವೆ ಸ್ಟೇಷನ್ನಲ್ಲಿ ಹಾಡುವುದನ್ನು ವಿಡಿಯೊ ಮಾಡಿಕೊಂಡವ ಫೇಸ್ಬುಕ್ನಲ್ಲಿ ಹಾಕಿದಾಗ ಕ್ರಾಂತಿಯೇ ಆಗಿ ಹೋಗಿತ್ತು. ರಾತೋರಾತ್ರಿ ರಾಣು ಮಂಡಾಲ್ ಪ್ರಸಿದ್ಧರಾದಳು. ಹಿಮೇಶ್ ರೆಷಮಿಯಾ ಆಕೆಯನ್ನು ಕರೆಯಿಸಿಕೊಂಡು ತನ್ನ ಜೊತೆ ಹಾಡಲು ಅವಕಾಶ ಕೊಟ್ಟ. ಎಲ್ಲೋ ಇದ್ದವಳನ್ನು ಸಂಗೀತ ಕ್ಷೇತ್ರಕ್ಕೆ ಪರಿಚಯಿಸಿದ್ದು ಈ ಫೇಸ್ಬುಕ್. ಇತ್ತೀಚೆಗಷ್ಟೇ ಮಾನಸಿ ಸುಧೀರ್ ಹಾಡಿದ ಹಾಡುಗಳು ವೈರಲ್ ಆದವು. ಕೊರೊನಾದಿಂದ ಲಾಕ್ ಡೌನ್ ದೇಶಾದ್ಯಂತ ಘೋಷಣೆಯಾದಾಗ, ದಿನದ ಬೇಸರದ ಜೊತೆಗೆ ತನ್ನ ಕಲೆಯ ಪ್ರದರ್ಶನದ ಕಂಟಿನ್ಯೂಟಿಯನ್ನು ಫೇಸ್ ಬುಕ್ ಮುಖಾಂತರ ಮಾಡಿ, ಜನರ ಪ್ರಶಂಸೆಗೆ ಪಾತ್ರರಾದರು.ಅದೊಂದು ಪ್ರೇರಣೆಯಾಗಿ ಹಲವು ಹಾಡುಗಳನ್ನು ಹಾಡಿ, ಇತರರಿಗೂ ಪ್ರೇರಣೆಯಾದರು. ಇನ್ಸ್ಟಾಗ್ರಾಮ್ನಲ್ಲಿ ವಿವಿಧ ಬಗೆಯ ಫೋಟೊಗಳನ್ನು ಹಾಕಿಯೇ ಮನಸ್ಸಿನ ಖುಷಿಯನ್ನು ಪಡೆದವರು ಕೆಲವರು. ಮಹಿಳೆಯರು ಅದೇ ಬೇಸರದಿಂದ ಹೊರಬರಲು ಬಿಡುವಿನ ವೇಳೆಯಲ್ಲಿ ತಮ್ಮ ಕುಟುಂಬ ಸಮೇತ ಎಲ್ಲೋ ಸುತ್ತಾಡಿದ ಸ್ಥಳಗಳನ್ನು, ಭೇಟಿಕೊಟ್ಟ ಕಟ್ಟಡಗಳನ್ನು ಫೋಟೋಗಳ ಮುಖಾಂತರ ಹಂಚಿಕೊಂಡು, ಖುಷಿ ಪಡೆದವರಿದ್ದಾರೆ. ಏನೂ ಲಾಭವಿರದಿದ್ದರೂ ಮನಸ್ಸಿನ ಖುಷಿಯ ಮುಂದೆ ಯಾವುದೂ ಇಲ್ಲ ಎನ್ನುವುದಂತೂ ಅಷ್ಟೇ ನಿಜ.  ಇನ್ನು ವಾಟ್ಸಪ್ಪಿಗೆ ಬಂದರಂತೂ ಮಹಿಳೆಯರು ತಮಗೆ ಬೇಕಾದ ಗ್ರೂಪ್ಗಳನ್ನು ಮಾಡಿಕೊಂಡು ಮನದಾಳದ ವಿಷಯಗಳನ್ನು ಹಂಚಿಕೊಂಡಿದ್ದಾರೆ. ಬಾಲ್ಯದ ಸ್ನೇಹಿತರಿಂದ ಹಿಡಿದು ಪಿಜಿ ಸಹಪಾಠಿಗಳ ವರೆಗೆ ಗ್ರೂಪ್ ಹೊಂದಿದ್ದಾರೆ. ಕುಟುಂಬದವರ, ನೆರೆಹೊರೆಯವರ ಗ್ರೂಪುಗಳು ಬೇರೆ.ಇಲ್ಲೂ ಕೂಡ ತಮ್ಮಿಚ್ಛೆಯಂತೆ ಗ್ರೂಪ್ಗಳಿಗೆ ಆಹಾರ, ವಿಹಾರ, ಫೋಟೋ, ಸಾಹಿತ್ಯಿಕ ಚಟುವಟಿಕೆ, ನಾಟಕ, ನೃತ್ಯ, ಸಂಗೀತ ಹೀಗೆ ಹಲವು ವಿಷಯಗಳ ಗ್ರೂಪ್ಗಳಲ್ಲಿ ಭಾಗಿಯಾಗಿ ಮಹಿಳೆಯರು ತಮ್ಮ ಅನಿಸಿಕೆಗಳನ್ನು ಬಿತ್ತರಿಸಿದ್ದಾರೆ.ಮಹಿಳೆ ಉದ್ಯೋಗಿಯಾಗಿದ್ದರೆ ಉದ್ಯೋಗಕ್ಕೆ ಸಂಬಂಧಿಸಿದ ಗ್ರೂಪ್ ಗಳಿವೆ. ತನಗನಿಸಿದ್ದನ್ನು ತನ್ನ ಆತ್ಮೀಯರಿಗೆ ಹಂಚುವ ಮತ್ತು ಚಾಟಿಂಗ್ ಮಾಡುವ ಮೂಲಕ ಆನಂದಿಸುತ್ತಿದ್ದಾಳೆ. ಎಷ್ಟೋ ಮಾನಸಿಕ ನೋವುಗಳು ಸಮಾನ ಮನಸ್ಕರಿಗೆ ಹೇಳಿದಾಗ ಸಾಂತ್ವನವನ್ನು ಪಡೆದಿದ್ದಾಳೆ. ಆಸಕ್ತಿದಾಯಕ ವಿಷಯಗಳಿಗೆ ಸ್ಫೂರ್ತಿ ಸಿಕ್ಕಾಗ ಜಗತ್ತನ್ನೇ ಗೆದ್ದಷ್ಟು ಖುಷಿ. ಮನೆಯಲ್ಲೇ ಕುಳಿತು ಇಷ್ಟವಾದ ಕೋರ್ಸುಗಳಿಗೆ ಉದ್ಯೋಗದ ಸಂದರ್ಶನಗಳಿಗೆ ಹಾಜರಾಗಿದ್ದಾಳೆ. ಆನ್ ಲೈನ್ ಶಾಪಿಂಗ್ ಎನ್ನುವುದು ವಸ್ತುಗಳ ಮಾರಾಟ ಮತ್ತು ಕೊಳ್ಳುವಿಕೆಗೆ ಸಿಕ್ಕಾಪಟ್ಟೆ ಅವಕಾಶ ನೀಡಿದೆ. ಮನೆಯಿಂದ ಹೊರಬರಲಾರದ ಅನಿವಾರ್ಯತೆಯಲ್ಲಿರುವ ಮಹಿಳೆಯರು ಆನ್ ಲೈನ್ ಕ್ಲಾಸಸ್ ಗಳನ್ನು ತೆಗೆದುಕೊಂಡು ಇದ್ದಲ್ಲಿಂದಲೇ ಹಣವನ್ನು ಗಳಿಸುತ್ತಿದ್ದಾರೆ. ಸಾಮಾಜಿಕ ಕಾರ್ಯಗಳನ್ನು ಕೈಗೊಳ್ಳುವಲ್ಲಿ ಜನರನ್ನು ಸಮಾಜದ ಏಳ್ಗೆಗಾಗಿ ಸಂಘಟಿಸುವಲ್ಲಿ ಸಾಮಾಜಿಕ ಆಪ್ ಗಳ ಬಳಕೆ ಉಪಯೋಗಿಯಾಗಿದೆ. ಇಂತಹ ಸಾಮಾಜಿಕ ಕಾರ್ಯಗಳಲ್ಲಿ ನಿರತರಾದ ಮಹಿಳೆಯರೆಷ್ಟೋ ಜನರಿದ್ದಾರೆ. ಪುಸ್ತಕ ಪ್ರಕಟಣೆಗಾಗಿ ಪ್ರಕಾಶಕರ ಕೊರತೆಯಿದ್ದಾಗ ತಮ್ಮದೇ ಬ್ಲಾಗ್ಗಳನ್ನು ತೆರೆದು ಜನಪ್ರಿಯರಾದವರೂ ಇದ್ದಾರೆ.ಮುದ್ರಣ ಕ್ಷೇತ್ರ ಕ್ಷೀಣಿಸುತ್ತಿರುವ ಈ ಹೊತ್ತಿನಲ್ಲಿ ಆನ್ಲೈನ್ ಮ್ಯಾಗಜೀನ್ ಗಳು ಹುಟ್ಟಿಕೊಂಡಿವೆ.ಒಟ್ಟಿನಲ್ಲಿ ಮಹಿಳೆಯರು ಆಧುನಿಕತೆಗೆ ಒಗ್ಗಿಕೊಂಡು, ಜಾಲತಾಣಗಳ ಸೌಲಭ್ಯವನ್ನು ಪಡೆದುಕೊಳ್ಳುತ್ತಿದ್ದಾರೆ. ವಿಷಯದ ಮಂಡನೆ, ವಿಚಾರಗಳ ಹಂಚಿಕೆ, ಉದ್ಯೋಗ ಕೊಡುವ-ಪಡೆಯುವ, ಹಣ ಗಳಿಸುವ ಸಮಾಜಮುಖಿ ಕಾರ್ಯಗಳಿಗೆ ಜಾಲತಾಣಗಳು ಮಹಿಳೆಯರಿಗೆ ಸಹಾಯಕಾರಿಯಾಗಿವೆ. ಜೊತೆಗೆ ಅವುಗಳಿಂದ ಆಗುವ ತೊಂದರೆಗಳನ್ನು ನಿಭಾಯಿಸುವ ಜಾಕಚಕ್ಯತೆಯೂ ಮಹಿಳೆಯರಿಗೆ ಇರಬೇಕು. ಇದನ್ನೊಂದು ಹೊರತುಪಡಿಸಿದರೆ ಜಾಲತಾಣಗಳು ತುಂಬಾನೇ ಸಹಕಾರಿ. ************************************************************

Read Post »

ಇತರೆ, ವಾರ್ಷಿಕ ವಿಶೇಷ

ನಮ್ಮ ಕವಿ ಸ್ಮಿತಾ ಅಮೃತರಾಜ್ ಕವಿಪರಿಚಯ–ಸಂದರ್ಶನ–ಕವಿತೆಗಳು ಪರಿಚಯ ಸ್ಮಿತಾ, ಕವಿ, ಲೇಖಕಿ, ಅಂಕಣಕಾರ್ತಿ, ಇವೆಲ್ಲಕ್ಕಿಂತ ಹೆಚ್ಚಾಗಿ ಅಪಾರ ಮಾನವೀಯ ಅಂತಃಕರಣದ, ಎಲ್ಲದರಲ್ಲೂ,ಎಲ್ಲರಲ್ಲೂ ಒಳಿತನ್ನೇ ಕಾಣುವ ಮೃದು ಹೃದಯಿ. “ಪ್ರಪಂಚ ಬಹಳ ಕೆಟ್ಟದು”ಅನ್ನುವ  ಸಿನಿಕತನ ನನ್ನನ್ನು ಕಾಡಿದಾಗೆಲ್ಲ ಅದಕ್ಕೆ ಅಪವಾದವೆಂಬಂತೆ ನನ್ನ ಮನಸ್ಸಿಗೆ ಬರುವ ನನ್ನ ಜೀವದ ಗೆಳತಿ ಸ್ಮಿತಾ ಬಗ್ಗೆ ಹೇಳಿದಷ್ಟು ಕಡಿಮೆಯೇ. ಸ್ಮಿತಾ ಅವರ  ಜನ್ಮಸ್ಥಳ ದಕ್ಷಿಣಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಪಂಜ . ಜನನ 8 ನೆ ಜನವರಿ 1978,   ತಂದೆ ಶ್ರೀಯುತ.ವೆಂಕಟ್ರಮಣ ಪಳಂಗಾಯ ಮತ್ತು ತಾಯಿ ಶ್ರೀಮತಿ.ಮೀನಾಕ್ಷಿ ಪಳಂಗಾಯ. ಓರ್ವ ಸಹೋದರಿ ಹಾಗೂ ಓರ್ವ ಸಹೋದರ ರಿದ್ದಾರೆ. ಶಿಕ್ಷಣ: ಅಜ್ಜಿ ಮನೆಯಾದ ಮಡಿಕೇರಿ ಸಮೀಪದ ಮೇಕೇರಿ ಗ್ರಾಮದಲ್ಲಿ ಇದ್ದು ಪ್ರಾಥಮಿಕ ಶಿಕ್ಷಣವನ್ನ  ಮಡಿಕೇರಿಯ ಮೇಕೇರಿ ಶಾಲೆ, ಪ್ರೌಡ ಶಿಕ್ಷಣ  ಜೂನಿಯರ್ ಕಾಲೇಜು,ಮಡಿಕೇರಿ ಯಲ್ಲಿ ಪಡೆದು,ಬಳಿಕ ಪಿ.ಯು.ಸಿ.ಸಂತ ಫಿಲೋಮಿನ ಕಾಲೇಜು,ಪುತ್ತೂರು, ಪದವಿ – ನೆಹರು ಮೆಮೋರಿಯಲ್ ಕಾಲೇಜು.ಸುಳ್ಯ. ಕನ್ನಡ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ – ಮಂಗಳೂರು ಮುಕ್ತ ವಿಶ್ವವಿದ್ಯಾನಿಲಯ ದಿಂದ ಪಡೆದಿದ್ದಾರೆ.             1998 ರಲ್ಲಿ ಅಮೃತ ರಾಜ್ ಅವರೊಂದಿಗೆ ವಿವಾಹದ ಬಳಿಕ, ಕೊಡಗಿನ ಮಡಿಕೇರಿ ತಾಲೂಕಿನ ಚಂಬು ಗ್ರಾಮದಲ್ಲಿ ವಾಸ.ಮಗಳು  ಮನಾಲಿ,ಮಗ ಆಷಯ್,ಅತ್ತೆ ಮತ್ತು ಮಾವಂದಿರೊಂದಿಗೆ ತುಂಬು ಕುಟುಂಬದಲ್ಲಿ ಜೀವನ. ತನ್ನನ್ನು ಕವಿ,ಲೇಖಕಿ ಎಂದು ಪರಿಚಯಿಸಿ ಕೊಳ್ಳುವುದಕ್ಕಿಂತ ಹೆಚ್ಚಾಗಿ “ಕೃಷಿಕ ಮಹಿಳೆ”ಎಂದು ಹೆಮ್ಮೆಯಿಂದ  ಹೇಳಿಕೊಳ್ಳುವುದು  ಅವರಿಗೆ ಹೆಚ್ಚು  ಖುಷಿ ಕೊಡುತ್ತದೆ. ಸ್ಮಿತಾರ ಮೊದಲ ಕವನ ಸಂಕಲನ “ಕಾಲ ಕಾಯುವುದಿಲ್ಲ”,(2008)  ಬಳಿಕ ಬಂದ ಕವನ ಸಂಕಲನ “ತುಟಿಯಂಚಲಿ ಉಲಿದ ಕವಿತೆಗಳು”(2014),ನಂತರ ಬಂದದ್ದು ಪ್ರಬಂಧ ಸಂಕಲನ “ಆಂಗಳದಂಚಿನ ಕನವರಿಕೆಗಳು”(2015). ವಿಜಯವಾಣಿ ಪತ್ರಿಕೆಯಲ್ಲಿ ಅಂಕಣಕಾರ್ತಿಯಾಗಿ  “ಲೇಡಿಸ್  ಡೈರಿ” ಶೀರ್ಷಿಕೆಯ ಅಂಕಣದಲ್ಲಿ ಹಲವಾರು ಲೇಖನಗಳನ್ನೂ ಬರೆದಿರುವ ಅನುಭವವಿದೆ.ಒಂದು ಕವನ ಸಂಕಲನ  ಒಂದು ಪ್ರಬಂಧ ಸಂಕಲನ  , ಅಚ್ಚಿನಲ್ಲಿವೆ. ಹಲವಾರು ಪತ್ರಿಕೆಗಳ,ಸಂಘ ಸಂಸ್ಥೆಗಳ ಕವನ ಸ್ಪರ್ಧೆ,ಪ್ರಬಂಧ ಸ್ಪರ್ಧೆ ಗಳಲ್ಲಿ ಬಹುಮಾನಗಳು ದೊರೆತಿವೆ.ಆಕಾಶವಾಣಿ ಮಡಿಕೇರಿಗೆ ಹಲವಾರು ಕಾರ್ಯಕ್ರಮಗಳನ್ನು ನಡೆಸಿ ಕೊಟ್ಟಿದ್ದಾರೆ. ಸ್ಮಿತಾರಿಗೆ ದೊರಕಿರುವ ಪ್ರಶಸ್ತಿ ,ಪುರಸ್ಕಾರಗಳಲ್ಲಿ ಕೊಡಗಿನ ಗೌರಮ್ಮ ಪ್ರಶಸ್ತಿ, ಬಿ,ಎಂ,ಶ್ರೀ ಪ್ರಶಸ್ತಿ, ಶ್ರೀಮತಿ,ಸುಶೀಲ ಶೆಟ್ಟಿ ಸ್ಮಾರಕ  ಪ್ರಶಸ್ತಿ,ಸುಳ್ಯ ತಾಲೂಕಿನ ಸಾಹಿತ್ಯರತ್ನ,ದಾರಿ ದೀಪ ಪತ್ರಿಕೆಯ ಕಾಯಕರತ್ನ ,ಪ್ರಮುಖವಾದವುಗಳು. ‌ಅಪಾರ ಪ್ರತಿಭೆಯುಳ್ಳ ಸ್ಮಿತಾ ಭವಿಷ್ಯದಲ್ಲಿ ಇನ್ನೂ ಹೆಚ್ಚಿನ ಸಾಧನೆ ಮಾಡುವುದರಲ್ಲಿ ಯಾವುದೇ ಸಂದೇಹವಿಲ್ಲ. ಸಂದರ್ಶನ ನೀವು ಕವಿತೆ ಬರೆಯಲು ಪ್ರಾರಂಭಿಸಿದ್ದು ಯಾವಾಗ? ನಾನು ಕವಿತೆ ಬರೆಯಲು ತೊಡಗಿದ್ದು ತೀರಾ ತಡವಾಗಿ, ಎರಡನೇ ವಾಣಿಜ್ಯ ಪದವಿಯಲ್ಲಿ ವ್ಯಾಸಂಗ ಮಾಡುತ್ತಿರುವಾಗ .ನನಗಾಗ ಹತ್ತೊಂಬತ್ತು ವಯಸ್ಸಿರಬಹುದು. ಆಗ ಯಾವುದೋ ಹುಕಿಯಲ್ಲಿ ಒಂದಷ್ಟು ಆರಂಭಿಕ ಕವಿತೆಗಳನ್ನು ಬರೆದದ್ದು ಬಿಟ್ಟರೆ, ನಂತರ ಮದುವೆಯಾಗಿ ಎಷ್ಟೋ ವರ್ಷಗಳ ಬಳಿಕ ಕವಿತೆಯತ್ತ ವಾಲಿಕೊಂಡೆ. ಕವಿತೆಯನ್ನೇ ಯಾಕೆ ಆಯ್ಕೆ ಮಾಡಿಕೊಂಡಿರಿ? ಮೊದಲನೆಯದಾಗಿ,  ಕವಿತೆ ಬಗ್ಗೆ ಏನೊಂದೂ ತಿಳುವಳಿಕೆ ಇಲ್ಲದಿದ್ದರೂ ಕಾಲೇಜಿನಲ್ಲಿರುವಾಗ ಉಪನ್ಯಾಕರ ಪ್ರೇರಣೆಯಿಂದ, ಅವರ ಬಳಿ ಒಳ್ಳೆ ವಿದ್ಯಾರ್ಥಿ ಅನ್ನಿಸಿಕೊಳ್ಳ ಬೇಕು ಅನ್ನುವ ನಿಟ್ಟಿನಲ್ಲಿ ಒಂದಷ್ಟು ಕವಿತೆ ಗೀಚಿದ್ದು ಬಿಟ್ಟರೆ, ನಂತರ ನನ್ನ ಅಸ್ತಿತ್ವವನ್ನು ಕಂಡುಕೊಳ್ಳುವುದಕ್ಕಾಗಿ, ಹಳ್ಳಿ ಮೂಲೆಯೊಂದರಲ್ಲಿ ವಾಸ ಮಾಡುವ ನಾನು ಲೋಕಕ್ಕೆ ತೆರೆದುಕೊಳ್ಳುವುದ್ದಕ್ಕಾಗಿ ಕವಿತೆ ಬರೆಯಲು ತೊಡಗಿದೆ. ಎಲ್ಲಕ್ಕಿಂತ ಹೆಚ್ಚಾಗಿ ನನ್ನ ಅನಿಸಿಕೆಯನ್ನು ಅಭಿವ್ಯಕ್ತಿ ಪಡಿಸಲು ಕವಿತೆ ಒಂದು ನಿರಾಪಯಕಾರಿ ಮಾಧ್ಯಮ ಅಂತ  ಅನ್ನಿಸಿ ಕವಿತೆಯ ತೆಕ್ಕೆಗೆ ಬಿದ್ದೆ. ನಿಮ್ಮ ಕವಿತೆಗಳ ಬಗ್ಗೆ ನಿಮಗೆ ಏನನಿಸುತ್ತದೆ ನನ್ನ ಬರಹಗಳ ಮೌಲ್ಯ ಮಾಪನ ಮಾಡಿಕೊಳ್ಳುವುದಕ್ಕಾಗಿ ನಾನು ಪತ್ರಿಕೆಗಳಿಗೆ ಬರೆಯುವೆ. ಪ್ರಕಟಗೊಂಡಾಗ ಸಹಜವಾಗಿ ಖುಷಿಯಾಗುತ್ತದೆ. ಅದು ಮತ್ತಷ್ಟು ಬರೆಯಲು ಪ್ರೇರೇಪಿಸುವಂತೆ ಮಾಡುತ್ತದೆ.ಆದರೆ  ಉತ್ತಮ ಕವಿತೆ ಬರೆಯಲು ಸಾಧ್ಯವಾಗಲಿಲ್ಲ ಅನ್ನುವ ಅತೃಪ್ತಿ ಮತ್ತು ಹೇಗೆ ಕವಿತೆಯನ್ನು ಒಲಿಸಿಕೊಳ್ಳುವುದು ಎನ್ನುವ ಕೊರಗು ಸದಾ ಇದೆ. ನಿಮ್ಮ ಸಾಹಿತ್ಯ ಕೃಷಿಯಬಗ್ಗೆ ನಿಮ್ಮ ಕುಟುಂಬದವರ ಅನಿಸಿಕೆಯೇನು? ನಮ್ಮ ಮನೆಯಲ್ಲಿ ಒಂದು ರೀತಿಯಾದಂತಹ ಸಾಹಿತ್ಯಿಕ ವಾತಾವರಣ ಇದೆ. ಹಾಗಾಗಿ  ನನ್ನ ಬರವಣಿಗೆಯ ಕುರಿತು ಯಾರಿಗೂ ವಿಶೇಷತೆ ಅನ್ನಿಸದಿದ್ದರೂ, ನನ್ನ ಪಾಡಿಗೆ ನಾನು ಇವುಗಳಲ್ಲಿ ತೊಡಗಿಸಿಕೊಳ್ಳುವುದಕ್ಕೆ ಯಾರ ಅಡ್ಡಿ ಇಲ್ಲ.  ಯಾರಾದರೂ ನನ್ನನ್ನು ಗುರುತಿಸಿದರೆ, ಪ್ರಶಂಸಿದರೆ ಸಹಜವಾಗಿ  ಮನೆಯಲ್ಲಿ ಖುಷಿ ಪಡುತ್ತಾರೆ ನಿಮ್ಮ ಓದಿನ ಬಗ್ಗೆ ಹೇಳಿ? ಸಾಧ್ಯವಾದಷ್ಟು ಮಟ್ಟಿಗೆ ನಾನು ಹಿರಿಯ ಕವಿಗಳ ಕವಿತೆಯನ್ನು ಓದಲು,ಅವುಗಳನ್ನು ಗ್ರಹಿಸಲು ಪ್ರಯತ್ನ ಪಡುವೆ . ಎಮ್. ಆರ್. ಕಮಲ ಮೇಡಂ, ಚೊಕ್ಕಾಡಿ ಸರ್, ಎಚ್.ಎಸ್.ವೆಂಕಟೇಶ್ ಮೂರ್ತಿ ಸರ್  ಮತ್ತು ಬಿ.ಆರ್.ಲಕ್ಷ್ಮಣ್ ರಾವ್ ಸರ್ ನನ್ನ ಇಷ್ಟದ ಕವಿಗಳು. ಕವಿತೆಯ ಹೊರತಾಗಿ ಬೇರೇನು ಬರೆದಿದ್ದೀರಿ ಕವಿತೆಯ ಜೊತೆಗೆ ನಾನು ಲಲಿತ ಪ್ರಬಂಧಗಳನ್ನ ಬರೆಯುತ್ತೇನೆ. ಆದರೆ ಕತೆ ಬರೆಯಬೇಕೆಂಬ ತುಡಿತ ಬಹಳ ಇದೆ. ಪ್ರಯತ್ನ ಜಾರಿಗೊಳಿಸಬೇಕಿದೆ ಅಷ್ಟೇ. ನಿಮ್ಮ ಇತರೇ ಹವ್ಯಾಸಗಳೇನು ನಾನೊಬ್ಬಳು ಕೃಷಿಕ ಮಹಿಳೆಯಾದ ಕಾರಣ, ಹಟ್ಟಿ, ತೋಟ, ಮನೆಕೆಲಸದಲ್ಲೇ ಸಮಯ ವ್ಯಯವಾಗುತ್ತದೆ. ಹಾಗಾಗಿ ಆಸಕ್ತಿ ಇದ್ದರೂ ಇತರ ಹವ್ಯಾಸಗಳತ್ತ ನಿಗಾ ವಹಿಸಲು ಸಾಧ್ಯವಾಗುವುದಿಲ್ಲ. ಆದ ಕಾರಣ ಬಿಡುವಿನ ವೇಳೆಯಲ್ಲಿ ಓದು ಮತ್ತು ಬರಹವಷ್ಟೇ ಸುಲಭಕ್ಕೆ ತೊಡಗಿಸಿಕೊಳ್ಳಬಹುದಾದ ಹವ್ಯಾಸ ನನಗೆ. ಇತ್ತೀಚೆಗೆ ಕವಿತೆ ಬರೆಯುವವರ ಸಂಖ್ಯೆ ಹೆಚ್ಚಾಗಿದೆಯಲ್ಲ-ಏನು ಹೇಳುತ್ತೀರಿ ಈ ಬಗ್ಗೆ ನಿಜ, ಇತ್ತೀಚೆಗೆ ಕವಿತೆ ಬರೆಯುವವರ ಸಂಖ್ಯೆ ಹೆಚ್ಚಾಗಿದೆ. ನಮ್ಮ ಯುವ ತಲೆಮಾರು ಸಾಹಿತ್ಯ ಕೃಷಿಯಲ್ಲಿ ತೊಡಗಿಸಿ ಕೊಂಡಿರುವುದು ನಿಜಕ್ಕೂ ಆಶಾದಾಯಕ ಬೆಳವಣಿಗೆ. ಪ್ರಸ್ತುತ ವಿದ್ಯಮಾನಕ್ಕೆ ಪೂರಕವಾಗಿ ಬರವಣಿಗೆಯ ಮೂಲಕ ಸ್ಪಂದಿಸುತ್ತಿರುವುದು ಖುಷಿಯೆನ್ನಿಸುತ್ತದೆ. ಬರೆಹ ಹೇಗೇ ಇರಲಿ, ಬರವಣಿಗೆಯ ತುಡಿತ ಮತ್ತು ಪ್ರಯತ್ನ ಮುಖ್ಯ ಅನ್ನಿಸುತ್ತದೆ.  ಇತರರನ್ನು ಓದುತ್ತಾ ಓದುತ್ತಾ ತಮ್ಮ ಬರವಣಿಯ ದಿಕ್ಕನ್ನು ರೂಪಿಸಿಕೊಳ್ಳಬಲ್ಲರು. ಸ್ಮಾರ್ಟಪೋನ್ ಮತ್ತು ಇಂಟರ್ ನೆಟ್ ಗಳು ಮಹಿಳೆಯರು ಹೆಚ್ಚೀನ ಸಂಖ್ಯೆ ಯಲ್ಲಿ ಸಾಹಿತ್ಯ ಕೃಷಿಯಲ್ಲಿ ಕಾರಣವಾಗಿವೆ ಎಂಬ ಮಾತನ್ನುನೀವು ಒಪ್ಪುವಿರಾ?ಇದರ ಬಗ್ಗೆ ಏನು ಹೇಳುವಿರಿ ಇದು ನಿಜ. ಸ್ಮಾರ್ಟ್ ಫೋನ್,ಇಂಟರ್ನೆಟ್ ಬಂದ ಕಾರಣವೇ ನಾ ಇಷ್ಟರ ಮಟ್ಟಿಗೆ ಬರವಣಿಗೆಯಲ್ಲಿ ತೊಡಗಿಸಿಕೊಂಡೆ ಅಂತ ಗೆಳತಿಯೊಬ್ಬಳು ಹೇಳುತ್ತಾಳೆ. ಅಂಗೈಯೊಳಗೆ ಫೋನ್ ಇರುವ ಕಾರಣ ಸಿಕ್ಕ ಸಮಯದಲ್ಲಿ ತತ್ಕ್ಷಣಕ್ಕೆ ಓದು , ಬರವಣಿಗೆಯತ್ತ ವಾಲಿಕೊಳ್ಳಲು ಸಹಕಾರಿ. ನನ್ನ ಮಟ್ಟಿಗೆ ಹೇಳುವುದಾದರೆ ನನಗೆ ಇಂಟರ್ನೆಟ್ ಸೌಲಭ್ಯ ದಕ್ಕಿದ ಮೇಲೆಯೇ ಬರವಣಿಗೆ ಸಲೀಸು ಅನ್ನಿಸ ತೊಡಗಿದ್ದು ಸ್ಮಿತಾರವರ ಎರಡು ಕವಿತೆಗಳು – ಶಹರು ನಿದ್ರಿಸುವ ಚಿತ್ರ ಅನವರತ ಕರುಬಿದ್ದಕ್ಕೋಹಲುಬಿದ್ದಕ್ಕೋಅಚಾನಕ್ ಮಹಾನಗರದ ನಡುವಿಗೆಪಾದವಿಡುವಾಗ ಮೈಯೆಲ್ಲ ಪುಳಕ. ದುಡು ದುಡು ರೈಲು ಹತ್ತಿದಡ ದಡನೆ ಇಳಿಯುವಾಗಕಣ್ಣು ಬಾಡುವ ಹೊತ್ತಲ್ಲಿನಗರ ಪಿಳಿ ಪಿಳಿ ನೋಡುತ್ತಿದೆ. ಬಹುಷ; ನನ್ನನ್ನೇ ಕಾಯುತ್ತಿದ್ದಿರಬೇಕುಅಂದುಕೊಂಡೆ.ಇನ್ನು ಅದೆಷ್ಟು ನನ್ನಂತವರೋ..?!. ನೋಟವನ್ನು ಶೂನ್ಯಕ್ಕೆ ನೆಟ್ಟುದೌಡಾಯಿಸುತ್ತಲೇ ಇದ್ದಾರೆಚೋದ್ಯವಲ್ಲ ತಾನೇ? ಮತ್ತೊಮ್ಮೆಚಿವುಟಿಕೊಂಡೆ. ನನಗೋ ಗಂಟು ನೋವು ಪಾದಕ್ಕಿಳಿದುಕುಳಿತುಕೊಳ್ಳುವ ಕಾತರಅವರಿಗೋ ಅದೆಂಥಾ ಆತುರ? ತಳ್ಳಿಸಿಕೊಂಡ ರಭಸಕ್ಕೆ ಜೋಲುಹೊಡೆದಿದ್ದೆ ಅಷ್ಟೆ.ತೆಕ್ಕೆಗೆ ಬಿದ್ದವರನ್ನ ನಗರ ಕೆಳಕ್ಕೆಬೀಳಿಸುವುದಿಲ್ಲವಂತೆಹೌದೆಂಬುದ ಖಾತ್ರಿ ಪಡಿಸಿಕೊಂಡೆ. ಬಿಡುವಿಲ್ಲದ ಯಂತ್ರದ ರೆಕ್ಕೆನೆತ್ತಿ ಸವರುವಾಗದಡಲ್ ದಡಲ್ ಸದ್ದು ಎದೆಯನಡುವಿನಿಂದ ಹಾಯುವಾಗನಿದ್ರೆ ಮರೆತ ಶಹರು ಝಗಮಗಿಸುವಾಗನಾನೋ ಜಾತ್ರೆಯಿರಬೇಕೆಂದುಕೊಂಡೆ. ಅಬ್ಭಾ! ಓಡಿ ಓಡಿ ಸುಸ್ತಾಗಿನನ್ನೂರಿಗೆ ಸಾವಕಾಶವಾಗಿ ಕಾಲಿಳಿಸಿದಣಿವು ನೀಗಿಸಿಕೊಳ್ಳುತ್ತಿದ್ದೇನೆ.ಶ್..! ಊರೀಗ ಸಕ್ಕರೆ ನಿದ್ರೆಯಲ್ಲಿದೆ. ಪ್ರಭುವೇ..ಇನ್ನೇನು ಬೇಡಲಾರೆ ಹೆಚ್ಚಿಗೆ. ಸಾಕ್ಷಾತ್ಕಾರವೆನ್ನಲೇ?, ಸತ್ಯದರ್ಶನವೆನ್ನಲೇ?ಊಹೆ ಕೆಲವೊಮ್ಮೆ ಮಾಯೆಯೇ ದಿಟದೂರದಿಂದ ನುಣ್ಣಗೆಯೇ ಬೆಟ್ಟ ನನ್ನ ನಿದ್ರೆಯಲ್ಲೂ, ಎಚ್ಚರದಲ್ಲೂಕನಸಿನಲ್ಲೂ, ಪ್ರಾರ್ಥನೆಯಲ್ಲೂ ಈಗಶಹರು ನಿದ್ರಿಸುವ ಚಿತ್ರ. ########################### ಕಾಡು ಹೂವುಗಳು ಅವೇನು ಕೇಳಲಿಲ್ಲ ತಾವುಅರಳಿಕೊಳ್ಳಲು ಇಂತದೇತಾವು ಬೇಕೆಂದುಆದರೂ ಅವರವರ ಇಷ್ಟಕ್ಕೆ ತಕ್ಕಸಾಮರ್ಥ್ಯಕ್ಕೆ ತಕ್ಕಂತೆ.. ಕೆಲವು ಕುಂಡದಲ್ಲಿ ಅರಳಿಕೊಂಡವುಇನ್ನು ಕೆಲವು ಪಾತಿಯಲ್ಲಿಹಸಿವೆಯೆಂಬುದು ಗೊತ್ತೇ ಆಗದಂತೆನೀರು ಗೊಬ್ಬರ ಹದವರಿತು ದಕ್ಕಿಸಿಕೊಂಡವು. ತುಟಿ ತುಂಬ ನಗು ತುಳುಕಿಸಿಕೊಂಡುಒಡಲ ತುಂಬ ಕಂಪು ತುಂಬಿಕೊಂಡುಬಣ್ಣ ಬಣ್ಣದ ಪಕಳೆಗಳುಬಿರಿದದ್ದೊಂದೇ ತಡ.. ದೂರದ ಮಾರುಕಟ್ಟೆಯಲ್ಲಿಬೆಲೆ ನಿಗದಿಯಾಯಿತುಪಾಪಕ್ಕೋ,ಪುಣ್ಯಕ್ಕೋ,ಶಾಪಗ್ರಸ್ಥರಂತೆಕೆಲವು ಹಿತ್ತಲಿನಲ್ಲಿಯೇ ಉಳಿದುಕೊಂಡವು. ಸAಭ್ರಮದ ಸಡಗರದ ನಗುತುರುಬಿನಲ್ಲಿ,ಉದ್ದಜಡೆಯಲ್ಲಿಮಂಟಪದಲ್ಲಿ,ವೇದಿಕೆಯಲ್ಲಿಹಾರ ತುರಾಯಿಗಳಲ್ಲಿ ಅಕಾಲಿಕ ಅವಸಾನಪೈಪೋಟಿಯ ಜಿದ್ದಿನಲ್ಲಿ. ಅಲ್ಲಿ ಬೆಟ್ಟದಿರುಕಲಿನಲ್ಲಿಯಾರ ದೇಖರೇಖಿಯೂ ಇಲ್ಲದೆಹೆಸರಿಲ್ಲದ ಕೆಂಪು,ಹಳದಿ,ಕಡುನೀಲಿಬಣ್ಣನೆಗೂ ಸಿಗದ ಬಣ್ಣಗಳು ಊರಿನೊಳಗೆ ಬೇರನ್ನೂರಲುಸುತರಾಂ ಒಪ್ಪುತ್ತಲೇ ಇಲ್ಲಬಣ್ಣದೊಳಗಿನ ಸಹಜ ನಗುಮಾಸಬಹುದೆಂಬ ದಿಗಿಲಿವೆಯೆಂಬಂತೆ. **************************************** ಕವಿ ಪರಿಚಯ ಸಮತಾ ಆರ್.

Read Post »

ಇತರೆ, ವಾರ್ಷಿಕ ವಿಶೇಷ

ಒಂದು ಲೋಟ ಗಂಜಿ

ಕಥೆ ಒಂದು ಲೋಟ ಗಂಜಿ ಟಿ.ಎಸ್.ಶ್ರವಣಕುಮಾರಿ ಶುರುವಾಗಿದ್ದು ಹೀಗೆ… ಸಾವಿತ್ರಿಯ ಮಗಳು ಜಯಲಕ್ಷ್ಮಿ ಹೆರಿಗೆಗೆಂದು ಸರ್ಕಾರಿ ಆಸ್ಪತ್ರೆಯನ್ನು ಸೇರಿ ಎರಡು ದಿನವಾಗಿತ್ತು. ಹೆದರುವಂತದೇನಲ್ಲ, ಚೊಚ್ಚಲ ಹೆರಿಗೆ. ಆದರೆ ಸ್ವಲ್ಪವೇನೂ, ಸ್ವಲ್ಪ ಜಾಸ್ತಿಯೇ ನೋವು ತಿನ್ನುತ್ತಿದ್ದರೂ ಇನ್ನೂ ಹೆರಿಗೆಯಾಗಿರಲಿಲ್ಲ. ಸಾವಿತ್ರಿ, ಮೊನ್ನೆ ಬೆಳಗ್ಗೆ ಬಂದಿದ್ದವಳು ರಾತ್ರಿಯೆಲ್ಲಾ ಆಸ್ಪತ್ರೆಯ ಕಾರಿಡಾರಿನಲ್ಲೇ ತೂಕಡಿಸುತ್ತಾ ಕಾಯುತ್ತಾ ಕುಳಿತಿದ್ದಳು. ಆಸ್ಪತ್ರೆಗೆ ಮನೆ ಸ್ವಲ್ಪ ದೂರವೇ. ಗಂಡನಿಗೆ ಆಗುಂಬೆಯ ಟೋಲ್ಗೇಟಿನಲ್ಲಿ ಕೆಲಸ. ಬರುವುದು ವಾರಕ್ಕೊಂದು ಬಾರಿಯೇ. ನಿನ್ನೆ ಮತ್ತು ಇಂದು ಬೆಳಗ್ಗೆ ಒಂದು ಘಳಿಗೆ ಮನೆಗೆ ಹೋಗಿ ಸ್ನಾನ ಮಾಡಿ, ಹೊಟ್ಟೆಗಿಷ್ಟು ಹಾಕಿಕೊಂಡು ಜಯಲಕ್ಷ್ಮಿಗಿಷ್ಟು ಬಿಸಿನೀರು, ಜೀರಿಗೆ ಕಷಾಯವನ್ನು, ಉಳಿದಿದ್ದ ರಾತ್ರಿಯ ಹಾಲನ್ನೇ ಹಾಕಿ ಒಂದು ಲೋಟ ಗಂಜಿಯನ್ನು ಕಾಸಿಕೊಂಡಿದ್ದಳು. ಮಧ್ಯಾಹ್ನಕ್ಕೂ ಹುರಿಟ್ಟನ್ನೇ ತಿನ್ನುವಂತೆ ಮಕ್ಕಳಿಗೆ ಹೇಳಿ ಬಂದಿದ್ದಳು. ನೋವಿನಿಂದ ನರಳುತ್ತಿದ್ದ ಜಯಲಕ್ಷ್ಮಿಗೂ, ಆತಂಕದಿಂದ ಕಾಯುತ್ತಲೇ ಕುಳಿತಿದ್ದ ಸಾವಿತ್ರಿಗೂ ಹೆರಿಗೆಯಾಗಿ ಮಗು ಹೊರಬಂದರೆ ಸಾಕೆನ್ನಿಸಿತ್ತು. ಇವತ್ತಂತೂ ಜಯಲಕ್ಷ್ಮಿಗೆ ಹೊಟ್ಟೆಗೇನೂ ಸೇರದೆ ಅವಳು ಗಂಜಿಯನ್ನೂ ಕುಡಿಯಲಿಲ್ಲ. ಕಷ್ಟಪಟ್ಟು ಒಂದಿಷ್ಟು ಜೀರಿಗೆ ಕಷಾಯವನ್ನು ಕುಡಿಸಿದ್ದಾಯಿತು. ಮನೆಯಲ್ಲೇ ಐದು ಹೆರಿಗೆ, ಅದರಲ್ಲೆರಡು ಸಾವು ಕಂಡಿದ್ದ ಸಾವಿತ್ರಿಗೆ ಈಗ ಮಗಳನ್ನು ಮನೆಯಲ್ಲಿಟ್ಟುಕೊಂಡು ಹೆರಿಗೆ ಮಾಡಿಸುವಷ್ಟು ಧೈರ್ಯವಿಲ್ಲ. ಆಗ ಸಿಗುತ್ತಿದ್ದ ಮಿಡ್‌ವೈಫ್‌ ಗಂಗಮ್ಮನಿಗೂ ಈಗ ವಿಪರೀತ ವಯಸ್ಸಾಗಿ ಅವಳು ಹೆರಿಗೆ ಮಾಡಿಸುವುದನ್ನು ಬಿಟ್ಟು ಏಳೆಂಟು ವರ್ಷಗಳೇ ಆಗಿವೆ. ಇನ್ಯಾರ ಮೇಲೂ ಸಾವಿತ್ರಿಗೆ ನಂಬಿಕೆಯಿಲ್ಲ. ವಿಧಿಯಿಲ್ಲದೆ ಆಸ್ಪತ್ರೆಗೆ ಸೇರಿಸಿದ್ದಾಗಿದೆ. ದೇವರಾದರೂ ಪ್ರತ್ಯಕ್ಷವಾಗಬಹುದೇನೋ, ಡಾಕ್ಟರ ಮುಖವಂತೂ ಎರಡು ದಿನದಿಂದಲೂ ಕಂಡಿರಲಿಲ್ಲ. ರಜೆಯ ಮೇಲಿದ್ದಾರಂತೆ. ಇರುವ ಇನ್ನೊಬ್ಬ ಡಾಕ್ಟರಿಗೆ ಪುರಸೊತ್ತೇ ಇಲ್ಲ. ಲೇಬರ್‌ ವಾರ್ಡಿಗಷ್ಟೇ ಹೋಗುತ್ತಿದ್ದಾರೆ. ಮಿಕ್ಕ ಕಾರುಬಾರೆಲ್ಲಾ ದಾದಿಯರದೇ. ಯಾವಾಗಲೋ ಇಣುಕಿ ಹೋಗುವ ಈ ದಾದಿಯರು ಬಂದು ನೋಡಿದಂತೆ ಮಾಡಿ ಹೋಗುತ್ತಿದ್ದಾರೆಯೇ ವಿನಃ ಯಾವ ವಿವರವನ್ನೂ ಹೇಳುತ್ತಿಲ್ಲ. ಮಗುವಿಗೆ ಹೊಟ್ಟೆಯಲ್ಲೇ ಏನಾದರೂ ಆಗಿಬಿಟ್ಟರೆ ಎನ್ನುವ ಆತಂಕ ಸಾವಿತ್ರಿಗೆ. ಏನಾದರೂ ಹೆಚ್ಚು ಕಡಿಮೆಯಾದರೆ ಬೀಗಿತ್ತಿ ತನ್ನನ್ನು ಸಂತೆಯಲ್ಲಿಟ್ಟು ಹರಾಜು ಹಾಕಿಬಿಡುತ್ತಾಳೆ ಎನ್ನುವ ಭಯದಲ್ಲಿ ವಾರ್ಡಿನಲ್ಲಿ ಓಡಾಡುತ್ತಿದ್ದ ದಾದಿಯರನ್ನೆಲ್ಲಾ ವಿಚಾರಿಸುತ್ತಿದ್ದರೂ ಇವಳಿಗಿರುವ ಆತಂಕ ಅವರಿಗೇಕೆ?! ʻಇನ್ನೂ ತಡ ಆಗ್ಬಹುದು, ಡಾಕ್ಟರು ಬಂದು ನೋಡಿ ಹೇಳ್ತಾರೆʼ ಎನ್ನುತ್ತಾ ಇವಳ ಮುಖವನ್ನೂ ನೇರವಾಗಿ ನೋಡದೆ ಮರದ ಬೊಂಬೆಗಳಂತೆ ಓಡಾಡುತ್ತಿದ್ದಾರೆ. ಇವಳ ನಂತರ ಬಂದು ಅಕ್ಕ ಪಕ್ಕದ ಹಾಸಿಗೆಯಲ್ಲಿ ಮಲಗಿದವರಿಗೂ ಹೆರಿಗೆಗಳಾಗಿ ಒಂದಿಬ್ಬರು ಮನೆಗೂ ಹೋಗಿಯಾಗಿದೆ. ಇಂದು ಬೆಳಗ್ಗೆ ಪಕ್ಕದ ಬೆಡ್ಡಿಗೆ ಆಯನೂರಿನ ಕಡೆಯ ರೈತ ದಂಪತಿಗಳು ತಮ್ಮ ಮಗಳು ಮಾದೇವಿಯನ್ನು ಸೇರಿಸಿದ್ದಾರೆ. ಅವಳದ್ದೂ ಚೊಚ್ಚಲ ಹೆರಿಗೆಯೇ. ದಿನವಾಗಿದೆ, ನೋವು ಶುರುವಾಗಿಲ್ಲ; ಇಬ್ಬರೂ ಕೂತು ಒಂದಷ್ಟು ಕಷ್ಟ ಸುಖ ಹಂಚಿಕೊಂಡಿದ್ದಾಯಿತು. ಅಂತೂ ಇಂತೂ ರಜೆಯಿಂದ ವಾಪಸ್ಸು ಬಂದ ಡಾಕ್ಟರು ಮಧ್ಯಾಹ್ನ ಎರಡು ಗಂಟೆಗೆ ಊಟ ಮುಗಿಸಿ ಆರಾಮದಲ್ಲಿ ಬಂದು ಕೇಸ್‌ ಶೀಟನ್ನು ನೋಡಿ ಮೊನ್ನೆ ಬೆಳಗ್ಗೆಯಿಂದ ನೋವು ಬರುತ್ತಿದ್ದರೂ ಯಾಕೆ ಹೆರಿಗೆಯಾಗಿಲ್ಲ ಎನ್ನುವ ಸಂಶಯದಲ್ಲಿ ಕೇಸ್‌ ಶೀಟನ್ನು ಬರೆದ ದಾದಿಯನ್ನು ಕೇಳೋಣವೆಂದರೆ ಅವಳು ನಾಪತ್ತೆ. ಪರೀಕ್ಷಿಸಿದವರೇ ಸ್ವಲ್ಪ ಆತಂಕದಿಂದಲೇ ಪಕ್ಕದಲ್ಲಿದ್ದ ದಾದಿಗೆ ಕೂಡಲೇ ಲೇಬರ್‌ ವಾರ್ಡಿಗೆ ಶಿಫ್ಟ್‌ ಮಾಡಲು ಹೇಳಿ ಸಾವಿತ್ರಿಯ ಕಡೆ ತಿರುಗಿ ಕೂಡಾ ನೋಡದೆ ಹೊರಟುಹೋದರು. ಅವರು ಹೋದ ರೀತಿಯಿಂದಲೇ ಅವಳಿಗೆ ಆತಂಕ ಶುರುವಾಯಿತು. ಹಿಡಿದು ನಿಲ್ಲಿಸಿ ಕೇಳಲು ಅವಳಿಂದ ಸಾಧ್ಯವೇ! ಮಗಳ ಹಿಂದೆಯೇ ಲೇಬರ್‌ ವಾರ್ಡಿನ ತನಕ ಹಿಂಬಾಲಿಸಿ, ಅವಳ ಮುಖಕ್ಕೇ ಬಾಗಿಲು ಹಾಕಿ ಒಳಸೇರಿದ ಮೇಲೆ ಕಾಯುವುದು ಬಿಟ್ಟು ಬೇರೆ ದಾರಿಯಿಲ್ಲದೆ ಮುಚ್ಚಿದ ಬಾಗಿಲನ್ನೇ ನೋಡುತ್ತಾ ಕಾರಿಡಾರಿನಲ್ಲೇ ನಿಂತಳು. ಕಾಯುತ್ತಾ ನಿಂತವಳಿಗೆ ನಿಮಿಷಗಳು ಗಂಟೆಗಳಾಗುತ್ತಿವೆ. ಎಷ್ಟೋ ಹೊತ್ತಿನ ಮೇಲೆ ಹೊರಬಂದ ದಾದಿ ಒಂದು ಹಾಳೆಯನ್ನು ತಂದು ಅದರ ಮೇಲೆ ಸಹಿಹಾಕುವಂತೆ ಸಾವಿತ್ರಿಯ ಮುಖಕ್ಕೆ ಹಿಡಿದಳು. ಭಯದಿಂದಲೇ “ಏನಾಗಿದ್ಯಮ್ಮಾ? ಹೇಗಿದಾಳೆ ಮಗಳು” ಎಂದರೆ ಆ ದಾದಿಗೆ ಇಂತವರೆಷ್ಟೋ… “ಸರೀಗೆ ಗೊತ್ತಿಲ್ಲ, ಆಪರೇಶನ್‌ ಮಾಡ್ಬೇಕಾಗ್ಬೋದು ಅಂತಿದ್ರು ಡಾಕ್ಟ್ರು. ನೀನಿಲ್ಲಿ ರುಜು ಹಾಕಮ್ಮ” ಎನ್ನುತ್ತಾ ಪೆನ್ನನ್ನು ಕೊಟ್ಟಳು. “ಯಾಕಿದು? ನಂಗೆ ರುಜು ಹಾಕಕ್ಕೆ ಬರಲ್ಲ, ಬರೀ ಹೆಸರು ಬರೆಯಕ್ಕೆ ಬರತ್ತೆ” ಅಂದಳು ಸಾವಿತ್ರಿ. “ಅದನ್ನೇ ಬರಿ. ಆಪರೇಶನ್‌ ಮಾಡಕ್ಕೆ ಒಪ್ಗೆ ಇದೆ ಅಂತ ಬರ‍್ದಿದೆ ಇದ್ರಲ್ಲಿ” ಎನ್ನುತ್ತಾ ನಿರ್ಲಿಪ್ತಳಾಗಿ ಆ ಹಾಳೆಯನ್ನು ತೆಗೆದುಕೊಂಡು ಒಳಹೋದಳು. ಇತ್ತ ಸಾವಿತ್ರಿಗೆ ಇನ್ನಷ್ಟು ಹೆದರಿಕೆ, ಚಿಂತೆ ಶುರುವಾಗಿ ಕೈಕಾಲು ನಡುಗತೊಡಗಿತು. ಎಷ್ಟೋ ಹೊತ್ತಾಯಿತು… ಕಾದು ಕಾದು ಕಣ್ಣು ಸೋಲುವಾಗ ಮಗುವನ್ನೆತ್ತಿಕೊಂಡು ಹೊರಬಂದ ದಾದಿ “ಗಂಡು ಮಗು. ಐವತ್ರೂಪಾಯ್ ತತ್ತಾ, ತೋರಿಸ್ತೀನಿ” ಕೈಚಾಚಿದಳು. ಅರ್ಥವಾಗದೆ ಕಣ್ಕಣ್ಣು ಬಿಟ್ಟ ಸಾವಿತ್ರಿಯ ಸೀರೆಯ ಗಂಟಿನಲ್ಲಿಟ್ಟುಕೊಂಡಿದ್ದ ಐದು, ಹತ್ತು ರೂಪಾಯಿಗಳನ್ನು ಸೇರಿಸಿದರೆ ಬರೀ ನಲವತ್ತು ರೂಪಾಯಿ ಆಯಿತು. “ಏನು ದರ್ವೇಸಿಗಳೋ. ಹೆರಿಗೆಗೆ ಅಂತ ಬಂದವ್ರಿಗೆ ಒಂದಿಷ್ಟು ದುಡ್ಡಿಟ್ಕಂಡು ಬರಕ್ಕೆ ಗೊತ್ತಾಗಲ್ವಾ. ಏನು ಅಪ್ಪನ ಮನೆ, ಈಗ ಡಾಕ್ಟ್ರಿಗೆ ಐನೂರು ರೂಪಾಯಾದ್ರೂ ಕೊಡ್ಬೇಕು, ಆಪ್ರೇಶನ್‌ ಕೇಸ್‌ ಬೇರೆ. ಅಲ್ಲಿ ಓಟಿನಲ್ಲಿ ಇದ್ದವ್ರಿಗೆಲ್ಲಾ ಇಪ್ಪತ್ತು, ಮೂವತ್ತು ಕೊಡ್ಬೇಕು. ಅದ್ಹೆಂಗೆ ಮಾಡ್ತೀಯೋ ನೋಡು. ಸರಿ, ಈಗ ನಂಗೆ ನಲ್ವತ್ತನ್ನೇ ಕೊಡು ಹೋಗ್ಲಿ. ಮಿಕ್ಕವ್ರಿಗೆ ಕೊಡಕ್ಕೆ ಎಲ್ಲಾದ್ರೂ ಹೋಗಿ ದುಡ್ಡು ತಗೊಂಡು ಬಂದ್ಬಿಡು. ಆಯಾನೂ ಸೇರಿ ಇನ್ನೂ ಮೂರು ಜನ ಇದಾರೆ” ಎನ್ನುತ್ತಾ ದುಡ್ಡು ತೆಗೆದುಕೊಂಡು ಮಗುವಿನ ಮುಖವನ್ನು ತೋರಿಸಿದಳು. ಮೊಮ್ಮಗುವಿನ ಮುಖ ನೋಡಿದ ತಕ್ಷಣ ಎಲ್ಲಾ ಮರೆತ ಸಾವಿತ್ರಿಯ ಮುಖವರಳಿತು. ಎತ್ತಿಕೊಳ್ಳಲು ಕೈಚಾಚಿದರೆ ಮುಟ್ಟಕ್ಕೂ ಬಿಡದೆ “ದುಡ್ಡು ತೊಗೊಂಡು ಬಾ ಅಂದ್ನಲ್ಲಾ” ಎನ್ನುತ್ತಾ ಒಳಹೊರಟಳು. “ಅಮ್ಮಾ… ಮಗಳು ಹೇಗಿದಾಳಮ್ಮಾ?” ಕರೆದು ಕೇಳಿದಳು. “ಹುಷಾರಾಗಿದಾಳೆ. ಅವ್ಳಿಗೆ ಕೊಡಕ್ಕೆ ಗಂಜೀನೋ, ಕಾಫೀನೋ ತೊಗೊಂಡ್ಬಾ. ಇನ್ನೊಂದು ಗಂಟೇಲಿ ಬೆಡ್ಡಿಗೆ ಹಾಕ್ತಾರೆ” ಎಂದವಳು ಮುಂದಿನ ಮಾತಿಗೆ ಅವಕಾಶವಿಲ್ಲದ ಹಾಗೆ ಒಳಹೋಗಿ ಬಾಗಿಲೆಳೆದುಕೊಂಡಳು. ಏನು ಮಾಡಬೇಕೆಂದು ತೋಚದೆ ಯೋಚಿಸುತ್ತಾ ಐದು ನಿಮಿಷ ಸುಮ್ಮನೆ ಅಲ್ಲಿದ್ದ ಬೆಂಚಿನ ಮೇಲೆ ಕುಳಿತಳು. ʻಬೆಳಗ್ಗೆ ತಂದಿದ್ದ ಗಂಜಿ ಹಳಸಿ ವಾಸನೆ ಬಂದಿದೆ, ಬಾಣಂತಿಗೆ ಅದನ್ನು ಕೊಡಲು ಸಾಧ್ಯವೇ ಇಲ್ಲ. ನಡೆದುಕೊಂಡು, ಮನೆಗೆ ಹೋಗಿ, ಗಂಜಿ ಮಾಡಿಕೊಂಡು ತರಲು ಕಡೇ ಪಕ್ಷ ಎರಡು ಗಂಟೆಯಾದರೂ ಬೇಕು. ಅಷ್ಟರೊಳಗೆ ಬೆಡ್‌ಗೆ ಹಾಕಿಬಿಟ್ಟರೆ! ಅವ್ಳು ಬರೋ ಹೊತ್ತಿಗೆ ನಾನಿಲ್ದೇ ಹೋದ್ರೆ! ಪಾಪ, ಜಯ ಹೊಟ್ಟೆಗೇನಾದರೂ ಹಾಕಿಕೊಂಡು ಎರಡು ದಿನವೇ ಆಗಿದೆ. ʻಹಡ್ದ ಹೊಟ್ಟೆಗೆ ಹೇಲು ತಿನ್ನೋಷ್ಟು ಹಸ್ವುʼ ಅಂತಾರೆ. ಮೊದ್ಲು ಅವ್ಳಿಗೆ ಗಂಜಿ ತಂದುಕೊಡ್ಬೇಕಲ್ಲʼ ಎಂದುಕೊಳ್ಳುತ್ತಿರುವಾಗ, ದಿನವೂ ಅಡುಗೆ ಕೆಲಸಕ್ಕೆ ಹೋಗುತ್ತಿರುವ ಪದ್ದಮ್ಮನ ಮನೆ ಇಲ್ಲಿಗೆ ಹತ್ತು ನಿಮಿಷದ ದಾರಿ. ಹೋಗಿ ವಿಷಯ ಹೇಳಿ ಅಲ್ಲೇ ಒಂದು ಲೋಟ ಗಂಜಿ ಮಾಡಿಕೊಂಡು, ಸ್ವಲ್ಪ ದುಡ್ಡನ್ನೂ ಕೇಳಿ ತೆಗೆದುಕೊಂಡು ಬರಬಹುದೇನೋ ಅನ್ನಿಸಿತು. ʻಅದೇ ಸರಿʼ ಅನ್ನಿಸಿ ಇನ್ನು ತಡಮಾಡದೆ ಸರಸರನೆ ಪದ್ದಮ್ಮನ ಮನೆಕಡೆ ಹೆಜ್ಜೆ ಹಾಕಿದಳು. ಇವಳದೃಷ್ಟಕ್ಕೆ ಪದ್ದಮ್ಮ, ಡೆಲ್ಲಿಯಿಂದ ಬಂದಿದ್ದ ಅವರ ನಾದಿನಿ ಸೀತಮ್ಮನೊಂದಿಗೆ ಬೆಳಗ್ಗೆಯೇ ಯಾರದೋ ಮನೆಗೆ ಊಟಕ್ಕೆ ಹೋಗಿದ್ದರಂತೆ, ಇನ್ನೂ ಬಂದಿರಲಿಲ್ಲ. ಅಲ್ಲಿ ಸುತ್ತುಕೆಲಸಕ್ಕಿದ್ದ ನಟರಾಜ ಹಾಗಂದ. ನಟರಾಜನ ಹತ್ತಿರ ಎಲ್ಲವನ್ನೂ ಹೇಳಿ, “ಒಂದು ಲೋಟ ಗಂಜಿ ಮಾಡ್ಕಂಡು ಹೋಗ್ತಿನಿ. ಪದ್ದಮ್ಮ ಬಂದ್ಮೇಲೆ ಹಿಂಗಾಯ್ತು ಅಂತ್ಹೇಳ್ಬಿಡೋ. ದುಡ್ಡಿಗೇನ್ಮಾಡೋದೋ” ಎಂದು ಹೇಳುತ್ತಲೇ ಒಲೆಹೊತ್ತಿಸಿ ಗಂಜಿಯನ್ನು ಕಾಸಿಕೊಂಡು ತನ್ನೊಂದಿಗೆ ತಂದಿದ್ದ ಟಿಫಿನ್‌ ಕ್ಯಾರಿಯರನ್ನು ತೊಳೆದು ಅದರಲ್ಲಿ ಗಂಜಿಯನ್ನು, ಕಾಸಿದ ನೀರನ್ನು ತಿರುಪಿನ ಚಂಬಿನಲ್ಲೂ ತುಂಬಿಕೊಂಡಳು. ಹೊರಗೆ ಪದ್ದಮ್ಮನ ಮಾತು ಕೇಳಿಸಿತು. ʻಸಧ್ಯ! ಬಂದ್ರಲ್ಲ, ದುಡ್ನೂ ಕೇಳಬಹುದುʼ ಅನ್ನಿಸಿ ಸ್ವಲ್ಪ ನಿರಾಳವಾಯಿತು. ನಟರಾಜ ಹೊರಗೆ ಹೇಳಿದನೇನೋ, “ಹೌದಾ, ಎಂಥಾ ಮಗ್ವಾಯ್ತೇ, ಮಗೂ, ಬಾಣಂತಿ ಚೆನ್ನಾಗಿದಾರೇನೇ” ಎಂದು ಕೇಳುತ್ತಾ ಪದ್ದಮ್ಮ ಅಡುಗೆಮನೆಗೇ ಬಂದಳು. ಹಿಂದೆಯೇ ಕಾಳಿಯಂತೆ ಬಂದ ಸೀತಮ್ಮ “ನಿಂಗ್ಯಾರೆ ಇಷ್ಟು ಪಾರುಪತ್ಯ ಕೊಟ್ಟೋರು? ಏನು, ನಿನ್ನ ಮನಿ ಅನ್ನೋಂಗೆ ಬಂದು ಇಲ್ಲಿ ಗಂಜಿ ಕಾಯಿಸ್ಕತಿದೀಯಲ್ಲ. ಅದೆಷ್ಟು ಸ್ವತಂತ್ರ ನಿಂಗೆ” ಎನ್ನುತ್ತಾ ಸಾವಿತ್ರಿಯ ಮೇಲೆ ವಡವಡ ಬೈಗಳ ಪ್ರಹಾರವನ್ನೇ ಶುರುಮಾಡಿದಳು. ಜೊತೆಗೆ ವಯಸ್ಸಿನಲ್ಲಿ ತನಗಿಂತ ಚಿಕ್ಕವಳಾಗಿದ್ದ ಅತ್ತಿಗೆಯನ್ನೂ ಅಟಕಾಯಿಸಿಕೊಂಡು “ಏನ್ ಪದ್ದಾ, ಕೆಲಸದವ್ರಿಗೆ ಇಷ್ಟು ಸದ್ರ ಕೊಟ್ಟಿದೀಯಾ. ನೀನ್ ಮನೇಲಿ ಇಲ್ದಿರೋವಾಗ ಹಾಯಾಗ್ಬಂದು ಯಾರೇನು ಬೇಕಾರೂ ಮಾಡ್ಕಂಡು ಹೋಗ್ಬೋದಾ? ನಿಂಗೂ ಬುದ್ಧಿ ಇಲ್ಲ, ನಿನ್ಗಂಡಂಗೂ ಇಲ್ಲ. ಮನೇವ್ರಿಲ್ದಿದ್ದಾಗ ಹೇಳ್ದೆ, ಕೇಳ್ದೆ ಮನೇ ಸಾಮಾನು, ಸರಂಜಾಮು ಮುಟ್ಟೂದೂಂದ್ರೇನು? ಇಬ್ರೂ ಕೂಲಿಯವ್ರನ್ನ ತಲೆ ಮೇಲೆ ಕೂರಿಸ್ಕಂತೀರಿ. ಯಾರ‍್ಯಾರನ್ನ ಎಲ್ಲಿಟ್ಟಿರ‍್ಬೇಕೋ ಅಲ್ಲೇ ಇಟ್ಟಿರ‍್ಬೆಕು. ಇದು ತೀರಾ ಅತ್ಯಾಯ್ತು” ಇಬ್ಬರನ್ನೂ ವಾಚಾಮಗೋಚರ ಬೈಯುತ್ತಾ ನಿಂತಳು. ಪದ್ದಮ್ಮ ಸ್ವಭಾವತಃ ಸರಳ ಮನಸ್ಸಿನವಳು. ಅಪರೂಪಕ್ಕೆ ಡೆಲ್ಲಿಯಿಂದ ಬಂದಿರುವ ನಾದಿನಿಯನ್ನು ಬಿಟ್ಟುಕೊಡಲಾರಳು, ಇತ್ತ ದಿನವೂ ಅಡುಗೆಗೆ ಬರುವ ಸಾವಿತ್ರಿಯನ್ನೂ ಏನೂ ಅನ್ನಲಾರಳು. ಅವಳೂ ಪೆಚ್ಚಾಗಿ ನಿಂತಳು. ಸಾವಿತ್ರಿಗಂತೂ ಎರಡು ದಿನದಿಂದ ಕಟ್ಟಿಕೊಂಡಿದ್ದ ಭಯ, ಆತಂಕ, ದುಃಖ ಎಲ್ಲವೂ ಒಟ್ಟಿಗೆ ನುಗ್ಗಿ ಕಣ್ಣಲ್ಲಿ ನೀರಾಡತೊಡಗಿತು. ಇದು ಇಷ್ಟೊಂದು ದೊಡ್ಡ ಪ್ರಮಾದವಾಗಬಹುದೆಂಬ ಅರಿವಿದ್ದರೆ ಅವಳು ತಡವಾದರೂ ಮನೆಗೇ ಹೋಗಿ ಬಂದುಬಿಡುತ್ತಿದ್ದಳೇನೋ… ಈಗೇನು ಮಾಡಲೂ ತೋಚದೆ ಎರಡು ನಿಮಿಷ ತಲೆಕೆಳಗೆ ಹಾಕಿ ಮೌನವಾಗಿ ನಿಂತಳು. ಸೀತಮ್ಮನ ಕೋಪ ಇನ್ನೂ ಇಳಿದಿರಲಿಲ್ಲ, “ಮಾಡೋದ್ ಮಾಡಿ ಹೇಗ್ ನಿಂತಿದೀಯ ನೋಡು, ಏನೂ ಗೊತ್ತಿಲ್ದೇ ಇರೋವ್ರ ಥರ, ಎಲ್ಲಿ ಹೇಗಿರ‍್ಬೇಕೋ ಅದ್ನ ಮದ್ಲು ಕಲ್ತ್ಕಾ. ನೀನಾದ್ರೂ ಪದ್ದಾ, ಈ ಥರ ಸದರ ಕೊಟ್ಯೋ ಒಳ್ಳೇದಲ್ಲ ತಿಳ್ಕಾ. ಅಮ್ಮಾ ಇರ‍್ಬೇಕಿತ್ತು, ಗೊತ್ತಾಗ್ತಿತ್ತು. ಅವ್ಳು ಅಷ್ಟು ಜತನ್ವಾಗಿ ನೋಡ್ಕಂಡಿದ್‌ ಮನೇನ ನೀನು ಗುಡಿಸಿಬಿಡ್ತಿದೀಯ…. ಈ ಮನೇಲಿ ಹೆಣ್ಮಕ್ಳಿಗೂ ಇಲ್ದಿರೋ ಗೌರವ ಕೂಲಿಯಾಳುಗಳ್ಗಿದೆ” ನಿಲ್ಲುತ್ತಲೇ ಇಲ್ಲ ಬೈಗಳ ಮಳೆ. ಇನ್ನೂ ಏನೇನು ಅನ್ನುತ್ತಿದ್ದಳೋ, ಅಷ್ಟರಲ್ಲಿ ಬಚ್ಚಲಿಗೆ ಹೋಗಬೇಕೆನ್ನಿಸಿತೇನೋ ಬೈದುಕೊಂಡೇ ಹಿತ್ತಲಿಗೆ ಹೋದಳು. ತಕ್ಷಣವೇ ಪದ್ದಮ್ಮ “ಅವ್ಳು ಬರೋದ್ರೊಳ್ಗೆ ಇದ್ನ ತಗಂಡು ಈಗ್ಲೇ ಜಾಗ ಖಾಲಿ ಮಾಡೆ” ಎಂದು ಸಾವಿತ್ರಿಯನ್ನು ಹೆಚ್ಚುಕಡಿಮೆ ಓಡಿಸಿದಳು. ಸಾವಿತ್ರಿಗೆ ದುಡ್ಡು ಕೇಳಲು ಅವಕಾಶವಾಗಲೇ ಇಲ್ಲ. ದಾರಿಯುದ್ದಕ್ಕೂ ಕಣ್ಣೀರಿಡುತ್ತಲೇ ʻಇಷ್ಟೊತ್ತಿಗೆ ವಾರ್ಡಿಗೆ ಹಾಕೇಬಿಟ್ಟಿರ‍್ತಾರೇನೋʼ ಎನ್ನುವ ಅತಂಕದಲ್ಲೇ ಆಸ್ಪತ್ರೆಯನ್ನು ಸೇರಿದಳು. ಅವಳಂದುಕೊಂಡ ಹಾಗೇ ಜಯಲಕ್ಷ್ಮಿಯನ್ನು ವಾರ್ಡಿಗೆ ಹಾಕಿದ್ದರು. ಮಗುವನ್ನಿನ್ನೂ ಕರೆತಂದಿರಲಿಲ್ಲ. ತುಂಬಾ ಸುಸ್ತಾಗಿದ್ದವಳನ್ನು ನೋಡಿದ ಸಾವಿತ್ರಿಗೆ ದುಃಖ ಇಮ್ಮಡಿಸಿತು. ಗಂಜಿಯನ್ನು ಟೇಬಲ್ಲಿನ ಮೇಲಿಟ್ಟು, ಜಯಳ ತಲೆಯನ್ನು ಸವರಿ “ಹೇಗಿದೀಯೆ” ಅನ್ನುವಷ್ಟರಲ್ಲಿ ಬಂದ ನರ್ಸನ್ನು “ಮಗುವೆಲ್ಲಿ?” ಎಂದು ಕೇಳಿದಳು. “ಮಿಕ್ಕವ್ರಿಗೆ ದುಡ್ಕೊಟ್ಮೇಲೆ ಸ್ನಾನ ಮಾಡ್ಸಿ ತಂಕೊಡ್ತಾರೆ, ಅಲ್ಲೇ ಲೇಬರ್‌ ವಾರ್ಡಲ್ಲೇ ಅಳ್ತಾ ಇದೆ” ಎಂದು ಗಂಜಿಯನ್ನು ಕೊಡಲೂ ಬಿಡದೆ “ಡಾಕ್ಟ್ರು ಕರೀತಿದಾರೆ, ಬಾಯಿಲ್ಲಿ” ಎಂದು ಹೆಚ್ಚುಕಡಿಮೆ ಎಳೆದುಕೊಂಡಂತೇ ಹೋದಳು. ರಿಜಿಸ್ಟರಿನಲ್ಲಿ ಏನೋ ಬರೆಯುತ್ತಿದ್ದ ಡಾಕ್ಟ್ರಮ್ಮ ತಲೆಯೆತ್ತಿ “ನೀವೇ ಏನ್ರಿ ಜಯಲಕ್ಷ್ಮಿ ಕಡೇವ್ರು” ಎಂದರು ಉರಿಯುವ ಮುಖದಲ್ಲಿ “ಹೌದು ಡಾಕ್ಟ್ರೇ, ನಾನವಳ ತಾಯಿ” ಅಂದಳು ಸಾವಿತ್ರಿ. “ಅಲ್ರೀ, ಡೆಲಿವರಿ ಆಗ್ತಿದ್ದಂಗೆ ಕಣ್ತಪ್ಸಿ ಓಡೇಬಿಡೋದಾ. ಮಗು ಮಾಲೆ ಹಾಕ್ಕೊಂಡ್ಬಿಟ್ಟಿತ್ತು. ಇನ್ನು ಹತ್ನಿಮಿಷ ತಡ್ವಾಗಿದ್ರೆ ಉಸಿರುಕಟ್ಟಿ ಸತ್ತೋಗಿರೋದು. ಆಪರೇಶನ್‌ ಮಾಡಿ ಇಬ್ರ ಜೀವಾನೂ ಉಳ್ಸಿದೀವಿ. ಅಂತಾದ್ರಲ್ಲಿ ನಿಮ್ಗೆ ಸ್ವಲ್ಪಾನೂ ಕೃತಜ್ಞತೆ ಅನ್ನೋದಿಲ್ವಾ. ಪ್ರೈವೇಟ್‌ ಆಸ್ಪತ್ರೆಗೋಗಿದ್ರೆ ಐವತ್ತು-ಅರವತ್ತು ಸಾವಿರ ಆಗಿರೋದು, ಹೋಗ್ಲಿ, ನನ್ನ ಫೀಸು ಸಾವಿರ ರೂಪಾಯಿ ಕೊಡಿ” ಎಂದರು ವ್ಯಾಪಾರಸ್ತರ ಧೋರಣೆಯಲ್ಲಿ. ಕೈಮುಗಿದು ಬಿಟ್ಟಳು ಸಾವಿತ್ರಿ. “ಇದು ಗೌರ್ಮೆಂಟ್‌ ಆಸ್ಪತ್ರೆ,

ಒಂದು ಲೋಟ ಗಂಜಿ Read Post »

You cannot copy content of this page

Scroll to Top