ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ, ಜೀವನ

ಬದಲಾಗುತ್ತ ಹೋದ ಅವಳ ದೇವರು

ಬದಲಾಗುತ್ತ ಹೋದ  ಅವಳ ದೇವರು  ಎಂ. ಆರ್. ಅನಸೂಯ ಅವಳು ಏಳೆಂಟು ವರ್ಷದವಳಿದ್ದಾಗ  ಅಮ್ಮ ಹೇಳಿದ್ದು ಕೇಳಿದಾಗ ದೇವರೆಂದರೆ ಭಕ್ತಿಯಿಂದ ಕೇಳಿದರೆ ಸಾಕು ಕೇಳಿದ್ದನ್ನೆಲ್ಲಾ ಕೊಡುವಂಥಾ ಸರ್ವಶಕ್ತನೆಂಬ ನಂಬಿಕೆ. ತಾಯಿಯ ಕೈ ಹಿಡಿದು ನಡೆವ ಮಗುವಿನ ನಂಬಿಕೆ, ಮಳೆ ಬರುವುದೆಂದು ಬೀಜ ಬಿತ್ತನೆ ಮಾಡುವ ರೈತನ ನಂಬಿಕೆ ದೇವರ ಪ್ರಸಾದವೆಂದು ಕಣ್ಣಿಗೊತ್ತಿಕೊಂಡು ತಿನ್ನುವಂಥ  ಭಕ್ತರ ನಂಬಿಕೆ. ಭಕ್ತಿಯೆಂದರೆ ಹೇಗಿರಬೇಕು ಎಂಬುದಕ್ಕೆ ಅಮ್ಮನ ಮಾತೇ ವೇದವಾಕ್ಯ.ದಾಸವಾಳ ಹಾಗೂ ಗಿಡದ ಮೇಲೆ ಮೊಸರು ಚೆಲ್ಲಿದಂತೆ ಮೈತುಂಬ ಹೂ ಬಿಟ್ಟ ನಂದಿ ಬಟ್ಟಲ ಹೂಗಳನ್ನು ಬಿಡಿಸಿ ತಂದು ಮಾಲೆಯನ್ನು ಕಟ್ಟಿ ಪುಟ್ಟ ದೇವರ ಗೂಡನ್ನು ಒರೆಸಿ ಸಾರಿಸಿ ದೇವರ ಭಾವ ಚಿತ್ರಗಳಿಗೆ ನಂದಿ ಬಟ್ಟಲ ಹೂವಿನ ಹಾರ ಹಾಕಿ, ದೇವರ ವಿಗ್ರಹಗಳಿಗೆ ದಾಸವಾಳ ಹೂಗಳನ್ನು ಮುಡಿಸಿ, ಹಣತೆ ಹಚ್ಚಿ ಕೈ ಮುಗಿದು ನಿಂತು ಕಣ್ಮುಚ್ಚಿ ಚಿತ್ರ ವಿಚಿತ್ರ ಬೇಡಿಕೆ ಗಳನ್ನಿಡುವುದು ಏಕೆಂದರೆ ದೇವರು ಸರ್ವಶಕ್ತ ಹಾಗೂ ದಯಾಮಯಿ ! ಆ ಮುಗ್ಧ ಮನಕ್ಕೆ ಅದೊಂದು ತನ್ಮಯಗೊಳಿಸುವ ಆಪ್ಯಾಯಮಾನವಾದಂಥ ಪ್ರೀತಿಯ ಕೆಲಸ.  ಬೇಡಿಕೆಗಳು ಈಡೇರದಿದ್ದರೂ ದೇವರನ್ನೇನು ದೂರಲಿಲ್ಲ ಕಡಿಮೆಯಾಗದ ಭಕ್ತಿ ನಿಷ್ಠೆ. ಏಕೆಂದರೆ ತನ್ನ ಭಕ್ತಿಯಲ್ಲೇ ಏನೋ ಕೊರತೆಯೆಂಬ ಭಾವವಷ್ಟೆ. ಗಣೇಶೋತ್ಸವದ ಹಾಗು ರಾಮನವಮಿಯ ಹರಿಕಥೆಗಳನ್ನು ನಿದ್ದೆಮಾಡದೆ ಕೇಳಿದ ಕಥೆಗಳು ಇದಕ್ಕೆ ಪೂರಕ. ಪ್ರತಿ ನವರಾತ್ರಿಯಲ್ಲಿ ಅಮ್ಮನೂ ಅನೂಚಾನವಾಗಿ ಮಾಡಿದ ದೇವಿ ಮಹಾತ್ಮೆಪಾರಾಯಣವನ್ನು ಬಾಲ್ಯದಿಂದಲೆ ಮುಂದುವರೆಸಿದಳು ಕೌಮಾರ್ಯದ ತನಕ ಸೊಗಸಾದ ಬದುಕಿನಿಂದಾಗಿ ಎಲ್ಲ ಚಂದವೇ.ಒರಗಲು ಹೆತ್ತವರ ಹಾಗೂ ಒಡಹುಟ್ಟಿದವರ  ಹೆಗಲು.ಮುಂದಿನ ಹಂತಗಳಲ್ಲಿ ಅವಳ ಬದುಕು ಸುಖದ ಸುಪ್ಪತ್ತಿಗೆಯಾಗಿರಲಿಲ್ಲ. ಬದುಕು ಬಂದಂತೆ ಸ್ವೀಕರಿಸದೆ ಗತ್ಯಂತರವಿಲ್ಲ. ಬದುಕಲ್ಲಿ ಬಂದ ನೋವು,ಅವಮಾನ,ತಿರಸ್ಕಾರಗಳನ್ನೆದುರಿಸುತ್ತಲೇ ಗಟ್ಟಿಯಾದಳು.ಬದುಕಕಲಿಸಿದ ಪಾಠಗಳಿಗೆ ಋಣಿಯಾದಳು. ಒಂಟಿಯಾಗಿ ಅಸಹಾಯಕಳಾಗಿ ಸೋತಾಗ ಕಣ್ಣೀರು ಹಾಕುತ್ತ ದೇವರ ಮುಂದೆ ಕೂತು ಕ್ಷಣಿಕ ನೆಮ್ಮದಿಯ ಕಂಡವಳು. ಎಂತಹ ಸೋಲಿನಲ್ಲು ಕಂಗಾಲಾಗದ ಸ್ವಾಭಿಮಾನಿಯಾದ ಅವಳ ಅವಿರತ ಶ್ರಮಕ್ಕೆ ಹಾಗು ಬಿಡದ ಪ್ರಯತ್ನಗಳಿಗೆ ಅವಳ ದೇವರು ಜೊತೆಗಿದ್ದಾನೆಂಬ ಭರವಸೆಯ ಭಾವವೊಂದೇ ಸಾಕು ಅವಳಿಗೆ ಹತ್ತಾಳಿನ ಬಲ ಕೊಡುತ್ತಿತ್ತು.ತನ್ನ ಗುರಿ ಮುಟ್ಟುವ ತನಕ ಅವಳಿಗೆ ಅದೇ ಧ್ಯಾನ ಅದೇ ಪ್ರಪಂಚ. ಅವಳ ದೇವರು ಮಂದಿರದಲ್ಲಿರದೆ ಅವಳು ತೊಡಗಿದ ಕಾಯಕದಲ್ಲಿ ಕಾಣುತ್ತಿದ್ದ. ಜ್ಞಾನ ದೇಗುಲವಾದ ಶಾಲೆಯ  ಶಿಕ್ಷಕಿಯಾಗಿ ಸೇವೆ ಸಲ್ಲಿಸುವ ಅವಕಾಶವೊದಗಿದ್ದು ತನ್ನ ಸುಕೃತವೆಂದೇ ಭಾವಿಸಿದಳು. ಸರ್ಕಾರಿ ಶಾಲೆಯ ಬಡ ಮಕ್ಕಳನ್ನು ದೇವರ ಮಕ್ಕಳೆಂದೇ ಭಾವಿಸಿ ಪ್ರಾಮಾಣಿಕತೆ  ಹಾಗೂ ಅರ್ಪಣಾ ಭಾವದಿಂದ ಕಲಿಸಿದಳು. ಅವಳೆಂದು ಗಂಟೆಗಟ್ಟಲೆ ಪೂಜೆ ಮಾಡಲೇ ಇಲ್ಲ.ಅವಳ ನಂಬಿಕೆಯ ದೇವರ ಮುಂದೆ  ಕೈಮುಗಿದು ಕ್ಷಣ ಕಾಲ ಕಣ್ಮುಚ್ಚಿದರೆ ಸಾಕಷ್ಟೆ. ಅಶಕ್ತರಿಗೆ ಕೈಲಾದ ಸಹಾಯ, ಹಸಿದ ಹೊಟ್ಟೆಗೆ ಅನ್ನವಿಡುತ್ತ ಅನ್ನಗಳಿಕೆಯ ದಾರಿ ತೋರುವುದು ಅವಳ ದೇವರಿಗೆ ಇಷ್ಟವೆಂಬ ಸ್ವಷ್ಟ ಅರಿವಿತ್ತು. ಪುಣ್ಯ ಕ್ಷೇತ್ರಗಳ ಯಾತ್ರೆಯೆಂದರೆ ಪ್ರವಾಸದ ಅನುಭವದೊಂದಿಗೆ  ದೈವ ದರ್ಶನವಷ್ಟೆ. ಕಾಶಿಯವಿಶ್ವನಾಥನ ದರ್ಶನ ಭಾಗ್ಯಕ್ಕಿಂತ ಅವಳು ಕಾಯುತ್ತಿರುವುದು ಜೀವ ಚೈತನ್ಯದಾಯಿನಿಯು ಜೀವನದಿಯಾದ ಗಂಗೆಯ ವಿಶಾಲ ಹರಿವನ್ನು ಕಣ್ತುಂಬಿ ಕೊಳ್ಳುವ  ಧನ್ಯತಾ ಭಾವದ ಅಮೃತ  ಘಳಿಗೆಗಾಗಿ. ಅವಳೇ ಕೈಯಾರೆ ಬೆಳೆಸಿದ ಹೂ ಗಿಡಗಳ ಹೂ ಬಿಡಿಸಿ ಮನೆಯಲ್ಲಿನ ದೇವರನ್ನು ಅಲಂಕರಿಸಿ ನೋಡಿ ತೃಪ್ತಿ ಪಡುವುದು ಇಂದಿಗೂ ಅವಳಿಗೆ ಇಷ್ಟವಾದ ಕೆಲಸವೇ. ಮನೆಯಲ್ಲಿ ಪೂಜಿಸುವಾಗ ಆಗುವ ತಲ್ಲೀನತೆಯನ್ನು ಅರೆಗಳಿಗೆಯಾದರೂ ಅನುಭವಿಸಿದ ಅವಳಿಗೆ ಇನ್ಯಾವ ಜಾತ್ರೆ, ಯಾತ್ರೆಗಳ ಜನ ಜಂಗುಳಿಯ ನಡುವೆ ಅಂಥಾ ಏಕಾಗ್ರತೆ ಲಭ್ಯವಾಗಲೇ ಇಲ್ಲ. ಜಿ.ಎಸ್.ಶಿವರುದ್ರಪ್ಪ ನವರ ಕವಿತೆಯಲ್ಲಿ ಕಾಣುವ “ಎಲ್ಲೊ ಹುಡುಕಿದೆ ಇಲ್ಲದ ದೇವರ ಕಲ್ಲು ಮಣ್ಣುಗಳ ಗುಡಿಯೊಳಗೆ ಇಲ್ಲೇ ಇರುವ ಪ್ರೀತಿ ಸ್ನೇಹಗಳ ಗುರುತಿಸದಾದೆನು ನಮ್ಮೊಳಗೆ” ಎಂಬ ಸಾಲುಗಳನ್ನು ಅಂತರ್ಗತ ಮಾಡಿ ಕೊಂಡವಳು  ಜನ ಮಾನಸರ ನಂಬಿಕೆಯ ಶ್ರದ್ಧಾ ಕೇಂದ್ರಗಳಾಗಿರುವ ಮಂದಿರಗಳ ವಿರೋಧಿಯೇನಲ್ಲ. ಮಂದಿರದಲ್ಲಿನ ಆದಿ ಶಕ್ತಿಗೆ ಕೈ ಮುಗಿವಂತೆ ಚರ್ಚ್ ಗಳಲ್ಲಿನ ಏಸುಮಾತೆಗೂ ಕೈಮುಗಿದು ನಿಂತವಳು. ಇಡೀ ಪ್ರಪಂಚವನ್ನೆ ಆಳುವಂಥ ಅತಿಮಾನುಷ ಶಕ್ತಿಯೊಂದಿದೆ ಎಂಬುದು ಅವಳ  ಅಚಲ  ನಂಬಿಕೆ. ಪ್ರಕೃತಿಯೇ ದೇವರೆನ್ನುತ್ತ ತನ್ನ ಇತಿಮಿತಿಯಲ್ಲೇ ಬೀದಿ ಗಿಡಗಳಿಗೆ ನೀರೆರೆದು ಗೊಬ್ಬರ ಸುರಿದು ಬೆಳೆಸುತ್ತ ತೃಪ್ತಿ ಕಂಡವಳು.ತಾನು ಬೆಳೆಸಿದ ಗಿಡಗಳಲ್ಲಿ ತನ್ನೊಂದಿಗೆ ಪಕ್ಷಿ ಪ್ರಾಣಿಗಳ ಪಾಲಿದೆ ಎಂಬುದನ್ನವಳು ಅರಿತವಳು. ಹಸಿದ ಬೀದಿನಾಯಿಗೆ ಉಣಿಸಿಡುವ ಹಾಗೆಯೇ ಬೀದಿ ಬದಿಯ ಮರಗಳಿಗೆ ನೀರೆರೆಯುತ್ತಾಳೆ ಹರಿಜನರೆಂದು ಕರೆಯುತ್ತ ಹರಿದರ್ಶನಕ್ಕೆಡೆ ಮಾಡಿಕೊಡದ ಅಸ್ಮೃಶ್ಯತಾ ಆಚರಣೆಗೆ ವಿರೋಧವಿದೆ. ಅವಳ ದೇವರು ಜೀವಪರ ಕಾಳಜಿಯುಳ್ಳ ದೇವನೂರರ  ಗ್ರಾಮ ದೇವತೆ ” ಮನೆ ಮಂಚಮ್ಮ” ನಲ್ಲಿದ್ದಾನೆ. ಜೀವಪರವಾದ ಮಾನವೀಯ ಮನಸ್ಸುಗಳಿಗೆ ದೇವರೊಲಿಯುತ್ತಾನೆಂಬುದು ಅವಳ ಗ್ರಹಿಕೆ. ಆದ್ದರಿಂದಲೇ “ತನು ಕರಗದವರಲ್ಲಿ ಪುಷ್ಪವನೊಲ್ಲೆಯಯ್ಯಾ ನೀನು ಮನ ಕರಗದವರಲ್ಲಿ ಗಂಧಾಕ್ಷತೆಯನೊಲ್ಲಯ್ಯಾ ನೀನು” ಎಂಬ ಅಕ್ಕನ ವಚನವನ್ನು ಅವಳೆಂದೂ ಮರೆಯಳು “ಬದಲಾವಣೆ ಜಗದ ನಿಯಮ” ವೆನ್ನುವಂತೆ ನಮ್ಮಲ್ಲಿನ ಚಿಂತನೆಗಳು ನಿಂತ ನೀರಾಗದೆ ಹರಿಯುವ ಹೊಳೆಯಾಗ   ಬೇಕು. ಹೂ ಅರಳಿ ದಂತೆ ವಿಕಾಸವಾಗ ಬೇಕು. ಬಾಲ್ಯದ ಅವಳ ದೇವರಂತೆ  ಮಂದಿರದ ಕೂತು ಪೂಜೆ ಪುರಸ್ಕಾರ ಇತ್ಯಾದಿಗಳಿಗೆ  ಒಲಿಯುವವನಲ್ಲ ಈಗ ಆವಳ ದೇವರು ಅಶಕ್ತರ, ದೀನ ದಲಿತರ ಸೇವೆಗೆ ಒಲಿಯುವ, ಪರಿಸರದ ವಿನಾಶವನ್ನು ತಡೆಗಟ್ಟುವುದನ್ನು ಮೆಚ್ಚುವ  ದೇವರು. ಹೀಗೆ ಅವಳ ದೇವರ ಸ್ವರೂಪವು ಕೂಡಾ ಬದಲಾಗಿದೆ  ******************************

ಬದಲಾಗುತ್ತ ಹೋದ ಅವಳ ದೇವರು Read Post »

ಇತರೆ, ವರ್ತಮಾನ

ಕೇಂದ್ರ ಕೃಷಿ ಕಾಯ್ದೆ ರೈತರಿಗೆ ಮಾರಕ ಹೇಗೆ?

ಕೃಷಿ ರಂಗದ ಸಮಸ್ಯೆಗಳಿಗೆ ಪರಿಹಾರವಿರುವುದು ವಿಕೆಂದ್ರೀಕೃತ ಅರ್ಥ ನೀತಿಯಲ್ಲಿ ; ಸಹಕಾರಿ ತತ್ವದಲ್ಲಿ. ಬೇಸಾಯ, ಉತ್ಪಾದನೆ , ಸಂಗ್ರಹಣೆ ಮತ್ತು ಮಾರಾಟ ವ್ಯವಸ್ಥೆಯನ್ನು ಸಹಕಾರಿ ರಂಗದಲ್ಲೇ ಕೈಗೊಳ್ಳುವುದು. ಕೃಷಿ ಪೂರಕ ಮತ್ತು ಕೃಷಿ ಆಧಾರಿತ ಉದ್ದಿಮೆಗಳನ್ನು ಗ್ರಾಮೀಣ ಭಾಗದಲ್ಲಿ ಪ್ರಾರಂಭಿಸಲು ಪ್ರೋತ್ಸಾಹ ನೀಡುವುದರಿಂದ. ಕೇಂದ್ರೀಕೃತ ಅರ್ಥವ್ಯವಸ್ಥೆಯಾದ ಬಂಡವಾಳವಾದಿ ನೀತಿಯನ್ನು ಕೈಬಿಡದೇ ರೈತರ ಬದುಕನ್ನು ಹಸನಾಗಿಸಲು ಸಾಧ್ಯವಾಗದು

ಕೇಂದ್ರ ಕೃಷಿ ಕಾಯ್ದೆ ರೈತರಿಗೆ ಮಾರಕ ಹೇಗೆ? Read Post »

ಇತರೆ, ದಾರಾವಾಹಿ

ಆವರ್ತನ

ಇದು ಗುರುರಾಜ್ ಸನಿಲ್ ಅವರ ‘ಆವರ್ತನ’ ಎಂಬ ಸಾಮಾಜಿಕ ಕಾದಂಬರಿ. ಪ್ರಸ್ತುತ ಕಾಲಘಟ್ಟದ ಸಮಾಜದಲ್ಲಿ ನಮ್ಮ ಕೆಲವು ನಂಬಿಕೆ, ಆಚರಣೆಗಳು ಯಾವ ಯಾವ ರೀತಿಗಳಲ್ಲಿ ಜನಜೀವನ ಶೋಷಣೆಗೂ, ಹಸಿರು ಪರಿಸರ ಮತ್ತು ವನ್ಯಜೀವರಾಶಿಗಳ ಮಾರಣಹೋಮಕ್ಕೂ ಕಾರಣವಾಗುತ್ತಿವೆ ಎಂಬುದನ್ನು ಬಹಳ ಸಮೀಪದಿಂದ ಕಾಣುತ್ತ ಬಂದವರು ಇವರು.. ಹಾಗಾಗಿ ಅದೇ ಕಥಾವಸ್ತುವನ್ನು ಕಾದಂಬರಿ ಪ್ರಕಾರದಲ್ಲೂ ಆಯ್ದುಕೊಂಡು ಜನಜಾಗ್ರತಿ ಮೂಡಿಸುವುದು ಅಗತ್ಯ ಎಂದು ತೋರಿ ಈ ಕೃತಿಯನ್ನು ರಚಿಸಿದ್ದಾರೆ. ಇದು ಪುಸ್ತಕರೂಪದಲ್ಲಿ ಪ್ರಕಟವಾಗುವ ಮುನ್ನ ಸಂಗಾತಿಯ ಓದುಗರನ್ನು ತಲುಪಲೆಂದು ಪ್ರತಿ ಬಾನುವಾರ ಇದನ್ನು ಕಂತುಗಳಲ್ಲಿ ಪ್ರಕಟಿಸಲಾಗುತ್ತಿದೆ. ದಾರಾವಾಹಿ ಕ್ಷೇತ್ರದಲ್ಲಿ ಇದು ಸಂಗಾತಿಯ ಮೊದಲ ಪ್ರಯತ್ನ ಓದುಗರು ತಮ್ಮ ಅನಿಸಿಕೆ ತಿಳಿಸಬೇಕೆಂದು ಕೋರುತ್ತೇವೆ

ಆವರ್ತನ Read Post »

ಇತರೆ

ಪ್ರೇಮಪತ್ರ ಸ್ಪರ್ದೆ

ಪ್ರೇಮಪತ್ರ ಸ್ಪರ್ದೆ ಪಂಜು ಅಂತರ್ಜಾಲ ವಾರಪತ್ರಿಕೆ ವತಿಯಿಂದ 2021 ರ ಪ್ರೇಮ ಪತ್ರ ಸ್ಪರ್ಧೆಗೆ ನಿಮ್ಮ ಪ್ರೇಮ ಪತ್ರಗಳನ್ನು ಆಹ್ವಾನಿಸಲಾಗಿದೆ. ನಿಯಮಗಳು: ಪ್ರೇಮ ಪತ್ರ ನಿಮ್ಮ ಸ್ವಂತ ಬರಹವಾಗಿರಬೇಕುಕನಿಷ್ಟ 500 ಪದಗಳ ಬರಹವಾಗಿರಬೇಕುಫೇಸ್ ಬುಕ್ ಮತ್ತು‌ ಬ್ಲಾಗ್ ಸೇರಿದಂತೆ ಬೇರೆಲ್ಲೂ ಪ್ರಕಟವಾಗಿರಬಾರದು.ನಿಮ್ಮ ಬರಹವನ್ನು ಕಳುಹಿಸಿಕೊಡಬೇಕಾದ ಮಿಂಚಂಚೆ: editor.panju@gmail.com, smnattu@gmail.com ಮಿಂಚಂಚೆಯ ಸಬ್ಜೆಕ್ಟ್ ನಲ್ಲಿ “ಪಂಜು ಪ್ರೇಮ ಪತ್ರ ಸ್ಪರ್ಧೆ” ಎಂದು ತಿಳಿಸಲು ಮರೆಯದಿರಿ. ಮಿಂಚಂಚೆಯಲ್ಲಿ ನಿಮ್ಮ ಹೆಸರು, ವಿಳಾಸ, ಮೊಬೈಲ್ ಸಂಖ್ಯೆ, ನಿಮ್ಮ ಕಿರು ಪರಿಚಯ ಹಾಗು ಫೇಸ್ ಬುಕ್ ಲಿಂಕ್ ಕಳುಹಿಸಿ.. ಬರಹಗಳು ತಲುಪಬೇಕಾದ ಕೊನೆಯ ದಿನಾಂಕ: 10.02.2021 ಬಹುಮಾನಗಳು: ಮೊದಲ ಬಹುಮಾನ: 3000 ರೂಪಾಯಿ ಎರಡನೇ ಬಹುಮಾನ: 2000 ರೂಪಾಯಿ ಮೂರನೇ ಬಹುಮಾನ: 1000 ರೂಪಾಯಿ ಹಾಗು ತೀರ್ಪುಗಾರರ ಮೆಚ್ಚುಗೆ ಪಡೆದ ಐವರಿಗೆ ಸಮಾಧಾನಕರ ಬಹುಮಾನ ನೀಡಲಾಗುವುದು. ಈ ಪತ್ರಗಳನ್ನು ಪಂಜುವಿನಲ್ಲಿ ಪ್ರಕಟಣೆಗೆ ಬಳಸಿಕೊಳ್ಳುವ ಹಕ್ಕು ‘ಪಂಜು’ಗೆ ಇರುತ್ತದೆ. ***********************************************************************

ಪ್ರೇಮಪತ್ರ ಸ್ಪರ್ದೆ Read Post »

ಇತರೆ, ವರ್ತಮಾನ

ಹೀಗೊಂದು ಚಿಂತನೆ.

ಚಿಂತನೆ ಹೀಗೊಂದು ಚಿಂತನೆ. ಗೋನವಾರ ಕಿಶನ್ ರಾವ್ “What is wonderful about great literature is that it transforms the man who reads it towards the condition of the man who wrote, and brings to birth in us also the creative impulse. ~E.M. Forster“ ಬೆಳಗಾಗೆದ್ದು ಕೈಯಲ್ಲಿ ಕಾಫಿ ಕಪ್ಪು ಹಿಡಿದು, ಅಂದಿನ ದಿನ ಪತ್ರಿಕೆ, ತಿರುವಿ ಹಾಕುತ್ತಿದ್ದೇವೆ ಎಂದು ಭಾವಿಸಿಕೊಳ್ಳಿ. ಪುಟ ತಿರುವುತ್ತ ಹೋಗುತ್ತೀದ್ದೀರಿ,ಅಲ್ಲೊಂದು ಕೊಲೆ,ಇಲ್ಲೊಂದು ಸಾವು,ಮಗದೊಂದು ಪುಟದಲ್ಲಿ ಅಪಘಾತ. ಎಲ್ಲದಕ್ಕೂ ನಿರ್ಲಿಪ್ತ ಭಾವ.ಪತ್ರಿಕೆ ಪಕ್ಕಕ್ಕಿಟ್ಟು ಮೊಬೈಲ್ ಕೈಗೆತ್ತಿಗೊಳ್ಳುವಿರಿ ಸಾಮಾಜಿಕ ಜಾಲತಾಣದಲ್ಲಿ ಒಂದು ಸಂದೇಶ. ಶ್ರೀ……….. ಯವರು ಇಂದು ಹೃದಯಾಘಾತದಿಂದ ನಿಧನರಾಗಿದ್ದಾರೆ.ಅನೇಕರ ಮರು ಸಂದೇಶಗಳು.ನೀವು ಸಹ ಒಂದು ಓಂ ಶಾಂತಿ ಎಂದು ಟಂಕಿಸಿ ಮುಂದೆ ಸಾಗುವಿರಿ.ಅಲ್ಲಿಯೂ ನಿರ್ಲಿಪ್ತ ಮನೋಭಾವ ! ಯೋಚಿಸಿ ನೋಡಿ. ಒಂದು ಸಾವಿನ ಸುದ್ದಿ ಮೂರು ವಿಧದ ಪರಿಣಾಮ ಬೀರುತ್ತದೆ ಅಲ್ಲವೆ ? ಸದರಿ ಶ್ರೀ ಯವರ ನಿಧನಕ್ಕೆ ನೇರ ಪರಿಣಾಮ ಹೊಂದಿದವರು ಅವರ ಹತ್ತಿರದ ದೂರದ ಸಂಬಂಧಿಕರು.ಎರಡನೆಯವರು ಆಪ್ತವಲಯ.ಅವರು ಸಾಧ್ಯವಾದರೆ, ದಹನ ಕಾರ್ಯದಲ್ಲಿ ಭಾಗಿಗಳಾಗುವರು. ಅನಾನುಕೂಲ, ಅನಾರೋಗ್ಯದಂತಹ ಬಲವಾದ ಕಾರಣಗಳಿದ್ದರೆ,ದೂರವಾಣಿಗಳ ಮುಖಾಂತರ ಸಂಪರ್ಕಿಸಿ ಸಂತಾಪ ಸೂಚಿಸುವರು.ಈ ಮೂರರನ್ನು ಮೀರಿದವರಿರುತ್ತಾರೆ.ಏನೂ, ಸಂಬಂಧ​ವಿಲ್ಲದವರು. ಪ್ರಪಂಚದ ಒಳಿತು-ಕೆಡುಕುಗಳ ಗೋಜು ಅವರಿಗೆ ಬೇಕಿಲ್ಲ.ತಮ್ಮ ಪಾಡಿಗೆ ತಾವು ಒಂದು ಗುಡ್ ಮಾರ್ನಿಂಗ್, ಗುಡ್ ಇವನಿಂಗ್ ಸಂದೇಶ ಹಾಕುತ್ತ ಹೋಗುತ್ತಿರುತ್ತಾರೆ.ವಿಚಿತ್ರ ಅಲ್ಲವೇ ಯಾಕೆ ಹೀಗೆ ? ಶ್ರೀ ಯವರ ಹೃದಯಾಘಾತದಿಂದ ದಿಂದ ಅವರ ಸಂಬಂಧಿಕರಿಗೆ ಮಾತ್ರ ಕೆಟ್ಟ ಸುದ್ದಿ. ಉಳಿದ ಕೆಲವರಿಗೆ ಅದು ಸುದ್ದಿಯೇ ಅಲ್ಲ.ನಗರದ ಯಾವುದೇ ವಿಸ್ತರಣೆಯಲ್ಲಿ ಉಂಟಾದ ಸಾವಿನ ಸುದ್ದಿ ನಮ್ಮಲ್ಲಿ ಅನೇಕರನ್ನು ನಿರ್ಭಾವುಕರನ್ನಾಗಿ ಮಾಡಬಲ್ಲದು. ಮನಸ್ಸಿಗೆ ಆಪ್ತವಾದ ಕೃತಿಗಳನ್ನು ಕುರಿತು ಯೋಚಿಸುವಾಗ, ಉದಾಹರಣೆಗೆ ಮಹಾಭಾರತ,ರಾಮಾಯಣ ಕಾವ್ಯಗಳಲ್ಲಿ, ಕುಂತಿ ಬೀರಿದ ಪ್ರಭಾವ ಮಾದ್ರಿ ಬೀರಲಿಲ್ಲ. ಸೀತೆ, ದ್ರೌಪದಿ, ಪ್ರಾಮುಖ್ಯರಾದಷ್ಟು ಊರ್ಮಿಳೆ, ಮಾಂಡವಿ,ಶೃತಕೀರ್ತಿ ಆಗಿಯೇ ಇಲ್ಲ. ಊರ್ಮಿಳೆಯ ಹೆಸರು ಅಲ್ಲಿ ಇಲ್ಲಿ ಒಂದಷ್ಟು ಚರ್ಚಿತವಾಗಿದ್ದರೆ, ಮಾಂಡವಿ ಶೃತಕೀರ್ತಿ ಹೆಸರು ಬಹಳಷ್ಟು ಜನ ಕೇಳಿಯೂ ಇರಲಿಕ್ಕಿಲ್ಲ. ಅಭಿಮನ್ಯುವಿನ ಸಾವಿನಷ್ಟು ಘಟೋತ್ಕಚನ ಸಾವು ಕಾಡಿಲ್ಲ. ಉಪಕಾರ್ ಚಿತ್ರದ ನಾಯಕ ಮನೋಜ ಕುಮಾರನ ಮೇಲೆ ತೋರಿದ ಪ್ರೀತಿ ಅನುಕಂಪ ನಮ್ಮ ಊರಿನ ರೈತನ ಮೇಲೆ ತೋರಿದ್ದೇವೆಯೇ ? ಉಹೂಂ! ಸಂದೇಹಗಳ ಸರ ಮಾಲೆ !! ಬೇಂದ್ರೆಯವರ ಕವಿತೆ ‘ರಾಮಾಯಣ’ದ ಈ ಸಾಲುಗಳನ್ನು ನೋಡಿ. ಲಕ್ಷ್ಮಣನಿಗೆ ವನವಾಸವು,ಉರ್ಮಿಳೆ ಕುರುಡುಗಳೆದ ಕ್ಷಣಕ್ಷಣಾ | ಬರಲಿಲ್ಲವು ಲೆಕ್ಕಕ್ಕೆ ವರುಷಗಳು ಹದಿನಾಲ್ಕು ಭಣಭಣಾ| ಭರತನು ಕಣ್ಣಿಗೆ ಕಾಣುವ ಅಳತೆಯೊಳಿದ್ದನು ತಾ ದಿನದಿನಾ| ತಪವು ಭರತಗೂ ಮಾಂಡವಿಗೂ ತಪ, ವಿರಹವೇ ಪಾರಾಯಣಾ | ಶತೃಘ್ನನು ಅರಮನೆಯೊಳಗಿದ್ದರೂ ಶೃತಕೀರ್ತಿಗೂ ರಣರಣಾ | ರಾಮನ ವಿರಹವು ಸೀತಾವಿರಹವು ತುಂಬಿದೆ ರಾಮಾಯಣಾ || ಸಣ್ಣವರತ್ತರೆ ಎಣಿಕೆಗೆ ಬಾರದು ಅಯ್ಯೋ ನಾರಾಯಣಾ || ಸಾಹಿತ್ಯ ಸಂಜೀವಿನಿ ಎಂದರೆ, ಬೇಂದ್ರೆ. ನಮ್ಮೆಲ್ಲರ ಪ್ರತಿ ಸಂದೇಹಗಳಿಗೆ, ಬೇಂದ್ರೆಯವರಲ್ಲಿ ಅವರ ಕವಿತೆಗಳಲ್ಲಿ ಮದ್ದಿದೆ.ಅದು ಬೇಂದ್ರೆ ತಾಕತ್ತು! ಸಾಹಿತ್ಯದ ತಾಕತ್ತು.ನಮ್ಮ ನೋವಿನ ಸಂಗತಿಗಳು ನಮಗೆ ಯಾವಾಗಾದರೂ ಸುಖವಾಗಿ-ಸುಂದರವಾಗಿ ಕಂಡಿವೆಯಾ ? ಅಥವಾ ಅವುಗಳನ್ನು ನಾವು, ಸುಖಿಸಿದ ನೆನಪಿದೆಯೇ ? ಇಲ್ಲವೆಂದಾದಲ್ಲಿ ಭಾರತದ ‘ದ್ರೌಪದಿ’,ರಾಮಾಯಣದ ‘ಸೀತೆ’,ಭಾಗವತದ ‘ಕಯಾದು’ ನಮಗೆ ಯಾಕೆ ಹತ್ತಿರವಾಗುತ್ತಾರೆ. ಈ ಕತೆಗಳು ಸಾಹಿತ್ಯಿಕವಾಗಿ ಸುಂದರ ಎನಿಸಿಕೊಂಡು ಓದಿಸಿಕೊಂಡು ಹೋಗುತ್ತವೆಯೇ ? ಯಾಕಿದ್ದೀತು? ಅದು ಸಾಹಿತ್ಯಕ್ಕಿರುವ ಸಶಕ್ತ ಪದಜಾಲ.ಮತ್ತದರಲ್ಲಿ ಅಡಕವಾಗಿರುವ ಸತ್ಯ.ಸ್ಪಷ್ಟವಾಯಿತಲ್ಲ ! ಒಂದು ಕೃತಿ ಅದು ಗದ್ಯ ಪದ್ಯ ವಿಮರ್ಶೆ ನಾಟಕ ಏನೇ ಆಗಿರಲಿ.ನಮ್ಮನ್ನು ಸೆಳೆಯುವ ಶಕ್ತಿ ಆ ಸತ್ಯಕ್ಕಿದೆ. ಅದೇ ಸಾಹಿತ್ಯದ ಕಾಣ್ಕೆ ಮತ್ತು ಅದರಲ್ಲಿರುವ ನೈಜತೆಗೆ ಹತ್ತಿರವಿರುವ ಪಾತ್ರ, ಪರಿಸರ,ಕಟ್ಟಿಕೊಡುವ ಕಲೆ,ಹಿಡಿದಿಟ್ಟ ಭಾಷೆ. ನೈಜತೆ ಅಥವಾ ನಾವು ಕರೆಯುವ ನಿರ್ಮಲಾಂತಃಕರಣ​ ಮತ್ತು ಅಷ್ಟೇ ಶುದ್ಧ​ವಾದ ಮನಕ್ಕೆ ನೀಡುವ ಪ್ರೀತಿ. ಈ ರೀತಿಯ ಪ್ರೀತಿಗೆ ಸಮಾನವಾದದ್ದು ಏನಾದರೂ ಇದ್ದೀತೆ ?ಖಂಡಿತ ಇರಲಾರದು.ಒಬ್ಬ ಲೇಖಕ ಬರೆಯುತ್ತಿರುವುದು ನೈಜತೆಯಿಂದ ಕೂಡಿಲ್ಲ ಎಂದು ಓದುಗನ ಅರಿವಿಗೆ ಬಂತೆಂದು ತಿಳಿಯಿರಿ ಅದು ನಮ್ಮ ನೆನಪಿನಿಂದ ಮಾಯ. ಅದು ಆ ಕೃತಿಯ ಮತ್ತು ಆ ಲೇಕಖನ ಸೋಲು ಹೌದು. ಒಂದು ಪುಸ್ತಕ ಓದುತ್ತಿದ್ದೇವೆ.ಅದರ ಚೌಕಟ್ಟು, ವಸ್ತು, ಪಾತ್ರಗಳು ನಮ್ಮನ್ನು ವಿಸ್ಮಯ ಲೋಕ​ಕ್ಕೆ ಕೊಂಡೊಯ್ಯುತ್ತ ತನ್ಮಯತೆ ಮೂಡಿಸಿದರೆ ಅ ಪುಸ್ತಕ ಯಶಸ್ಸು ಕಾಣಬಲ್ಲದು. ನಾಲ್ಕು ಜನರ ಬಾಯಲ್ಲಿ ಅದರ ಮಾತು ಬರಬಹುದು ಚರ್ಚೆಗೆ ಒಳಗಾಗಬಹುದು. ವಿಮರ್ಶಕ ಅದನ್ನು ತನ್ನ ಲೇಖನಗಳಲ್ಲಿ ಮಾದರಿ ಪುಸ್ತಕವಾಗಿ ಬಳಸಬಹುದು. ಎಲ್ಲದಕ್ಕೂ ಮೀರಿ ಒಳ್ಳೆಯ ಮಾರುಕಟ್ಟೆ ಪಡೆಯಬಹುದು. ಒಂದು ವೇಳೆ ಅದೇ ಪುಸ್ತಕದ ಪಾತ್ರಗಳ ಮಿತಿಯನ್ನು ದಾಟಿ ಲೇಖಕನೇ ಮಾತಾಡಿದ್ದರೆ ಅಂತಹ ಕೃತಿಗಳು ಅಪಮೌಲ್ಯ ಹೊಂದುತ್ತವೆ. ಇಲ್ಲಿ ಯಾವುದೇ ಒಬ್ಬ ಬರಹಗಾರ/ಕವಿ ಹೇಳುತ್ತಿರುವುದು ಸ್ವ​ಯಂ ಅವನವೇ ಆಗಿರಬೇಕೆ ? ಅವನ ಕಲ್ಪನೆ, ಪ್ರಯತ್ನಗಳಿಗೆ ಬೆಲೆ ಇಲ್ಲವೇ ? ಅದು ಹಾಗಲ್ಲ .   ಅಂತಹ ಕಲ್ಪನೆಯಲ್ಲೂ ಪ್ರಾಮಾಣಿಕತನ​ ಇದ್ದಾಗಲೇ ಸೃಜನಶೀಲತೆ ಗರಿಗೆದರಲು ಸಾಧ್ಯ. ಇಲ್ಲವಾದರೆ, ಅದು ಒಂದು ರೂಪಾಯಿಗೆ ಒಂದು ಆನೆಯ ಕಥೆ ! ಅಷ್ಟೆ !!  ಓದು,ಸಿನೆಮಾ ಧಾರಾವಾಹಿ ಇನ್ನಾವುದೇ ಕಲೆ ಮತ್ತೊಂದು ಏನೇ ಆಗಿರಲಿ ಆನಂದ, ಸಾಮಾನ್ಯ ಜ್ಞಾನ ಅಥವಾ ಏನೋ ಒಂದು ಸಾಹಿತ್ಯಿಕ ಸಂವೇದನೆ ಒದಗಿಸಬೇಕು. ಕಾವ್ಯಕಲೆಯ ಸದ್ಯ ಪ್ರಯೋಜನ ಕವಿ ಸಹೃದಯರಿಬ್ಬರಿಗೂ ಏಕಕಾಲಕ್ಕೆ ಉಂಟಾಗಬೇಕು ಹಾಗಾದಾಗ ಮಾತ್ರವೇ ಸೌಂದರ್ಯದ ಅನುಭೂತಿ ಮತ್ತು ಸಾಹಿತ್ಯದ ಕೊನೆಯ ಮಜಲನ್ನು ತಲುಪಿದ ತೃಪ್ತಿ. ಇವೆಲ್ಲ ಒಂದು ಕೃತಿ/ಲೇಖಕನಿಂದ ಸಿಗದೇ ಹೋದಾಗ, ಅದು ಸಾರಸ್ವತ ವಲಯದಲ್ಲಿ ಕಳೆದು ಹೋಗುತ್ತದೆ. ಒಂದು ಕೃತಿಯಲ್ಲಿರುವ ಒಂದು ಪಾತ್ರ ನಮ್ಮನ್ನು ಚಿಂತನೆಗೆ ಒಳಪಡಿಸುತ್ತದೆ ಅದರಲ್ಲಿ ನಾವೂ ಒಂದು ಪಾತ್ರವಾಗಿ ಹೋಗುತ್ತೇವೆ. ಯಾವುದೋ ದೃಶ್ಯ/ಪ್ಯಾರಾ ನಮ್ಮ ಕಣ್ಣನ್ನು ಹನಿಗೂಡಿಸುವ ತಾಕತ್ತು ಹೊಂದಿರುತ್ತದೆ.ಜೀವಂತವಿರುವ ಮತ್ತು ಸನಿಹದ ಸಂಪರ್ಕ ಇರುವ ಸ್ನೇಹಿತನಿಗಿಂತ, ಕಾರಂತರ ಚೋಮ, ಅನಂತಮೂರ್ತಿಯವರ ಪ್ರಾಣೇಶಾಚಾರ್, ತ್ರಿವೇಣಿ ಯವರ ಕಾವೇರಿ ನಮಗೆ ಬಹಳ ಹತ್ತಿರವಾಗುತ್ತಾರೆ.ಇದು ಹೇಗೆ ?ಒಂದು ಅನಿಸಿಕೆಯ ಪ್ರಕಾರ ನಮ್ಮ ಮನಸ್ಸು ಇದಕ್ಕೆ ಕಾರಣ.ಕಾಲ್ಪನಿಕ ಪಾತ್ರಗಳು,ನಮ್ಮೊಂದಿಗೆ, ಯಾವುದೇ ರೀತಿಯ ಪೈಪೋಟಿಗೆ ಇಳಿಯಲಾರವು ಎನ್ನುವ ಧೈರ್ಯ.ಇನ್ನೂ ಒಂದು ವಿಶಿಷ್ಟ ಲಕ್ಷಣ ಎಂದರೆ ಆ ಪಾತ್ರ ನಾವೂ ಆಗುವ ಸದವಕಾಶ ಇಲ್ಲಿದೆ.ಕನಿಷ್ಠ ಕೆಲವು ಸಮಯವಾದರೂ ನಮ್ಮನ್ನು ನಮ್ಮಿಂದ ದೂರ ಕರೆದೊಯ್ಯುವ ತಾಕತ್ತು ಇರುವುದು.ಇದು ಒಂದು ರೀತಿಯ ಬಯಲು ಆಲಯದೊಳಗೋ ಆಲಯವು ಬಯಲೋಳಗೋ ಎನ್ನುವ ಉಭಯ ರೀತಿಯ ಲೋಕ. ಬದುಕಿನ ಲಕ್ಷಣ.ಸಾಹಿತ್ಯ ಕಲಿಸುವ ಬದುಕು,ಬದುಕು ಕಲಿಸುವ ವಿದ್ಯೆ . ಫ್ಲೋರಿಡಾ ದೇಶದ ಭೌಗೋಳಿಕ ಸಂಗತಿಗಳಿಗಿಂತ, ಅಟ್ಲಾಂಟಿಕ್ ಸಾಗರದ ತೀರ ಪ್ರದೇಶಕ್ಕಿಂತ ಅದನ್ನು ನೋಡಲು ಹೋಗುವ ದಾರಿಯಲ್ಲಿ ಕಂಡ ವಿಶಾಲವಾದ ನದಿ ಮತ್ತು ಅದಕ್ಕಿರುವ ಹೆಸರಾದ ‘ಇಂಡಿಯಾ ರಿವರ’ ಬೋರ್ಡ್ ಓದಿದಾಗ ಧಿಡೀರನೆ ಇಡೀ ಅಮೆರಿಕ ನಮ್ಮದಾಗಿಬಿಡುತ್ತದೆ. ಶ್ರೀಲಂಕಾದ ಮೇಲೆ ಟಿಪ್ಪಣಿ ಬರೆಯಿರಿ ಎಂದಾಗ, ಅದರ ರಾಜಧಾನಿ ಯಾವುದು? ಅಲ್ಲಿಯ ಜನಸಂಖ್ಯೆ ಎಷ್ಟು ? ಅಲ್ಲಿಯ ಉಷ್ಣತಾಮಾನಕ್ಕಿಂತ ಸೇತುಕಟ್ಟಿ ಶ್ರೀಲಂಕೆಗೆ ಹೋದ ರಾಮಾಯಣದಿಂದಾಗಿ ಶ್ರೀಲಂಕಾ ನಮ್ಮದಾಗಿಬಿಡುತ್ತದೆ. ಇದನ್ನು ನಮಗೆ ಲಿಸುವುದು,ಬಾಹ್ಯ ಸಂಗತಿಗಳಲ್ಲ ಭಾವನಾ ಪ್ರಪಂಚ. ಅದು ಸಾಹಿತ್ಯ ಎಂದೇ ಧೃಡವಾದ ನಂಬಿಕೆ. ನಂಬಿಕೆ ಹುಸಿಯಾಗಲಾರದು ಎನ್ನುವುದು ಸಹ ನಂಬಿಕೆಯೇ. ಎಲ್ಲ ನಂಬಬೇಕು ಎನ್ನುವ ಹಟವೂ ಸಲ್ಲ. ನಂಬದಿರ್ದನು ತಂದೆ ನಂಬಿದನು ಪ್ರಹ್ಲಾದ ನಂಬಿಯೂ ನಂಬದಿರುವ ಇಬ್ಬಂದಿ ನೀನು ಕಂಬದಿನೋ, ಬಿಂಬದಿನೋ ಮೋಕ್ಷ ಅವರಿಂಗಾಯ್ತು. ಸಿಂಬಳದ ನೊಣ ನೀನು – ಮಂಕುತಿಮ್ಮ.                     ***************************************************************     ಪರಾಮರ್ಶನ ಸೂಚಿ. ವಿನಯ :- ಬೇಂದ್ರೆಯವರ ಆಯ್ದ ಕವನಗಳು. ಮಂಕುತಿಮ್ಮನ ಕಗ್ಗ :- ಡಿ.ವಿ.ಜಿ

ಹೀಗೊಂದು ಚಿಂತನೆ. Read Post »

ಇತರೆ, ಜೀವನ

ಯಶಸ್ಸು ಮತ್ತು ಸಾಧನೆ

ಲೇಖನ ಯಶಸ್ಸು ಮತ್ತು ಸಾಧನೆ ಮಾಲಾ ಕಮಲಾಪುರ್ ಪ್ರತಿಯೊಬ್ಬ ಮನುಷ್ಯನು ಯಶಸ್ಸನ್ನು ಬಯಸುತ್ತಾನೆ. ಅತ್ತ್ಯುತ್ತಮ ಗುಣ ಮಟ್ಟದ ಜೀವನ ವನ್ನು ಅನುಭವಿಸಲು ಹಂಬಲಿಸುತ್ತಾನೆ. ಆದರೆ ಅದನ್ನು ಸಾಧಿಸಿ ಅಂಥ ಜೀವನ ನಡೆಸುವವರು ಕೆಲವರು ಮಾತ್ರ ಬಲವಾದ ನಂಬಿಕೆ ವಿಶ್ವಾಸ ಇದ್ದವರು ಹಿಡಿದ ಕಾರ್ಯ ವನ್ನು ಸಾಧಿಸಿಯೇ ತೀರುತ್ತಾರೆ. ಇಂಥವರಿಗೆ ಕಾಲು ಎಳೆಯುವವರು ಸಾವಿರಾರು.ಎಲ್ಲಿ ಸಾಧನೆ ಮಟ್ಟ ಇರುತ್ತದೆಯೋ ಅಲ್ಲಿ ಟೀಕಿಸುವವರು ನಮ್ಮ ಹಿಂದೆಯೇ ಇರುವರು . ನಾವುಹಿಂದೆ ನೋಡದೆ ಮುಂದೆ ಸಾಗುತ್ತ ಹೋಗಬೇಕು ಹಿತೈಷಿಗಳ ಮಾರ್ಗ ದರ್ಶನಇದ್ದರೆ ಸಾಕು ನಾವು ಗುರಿ ಮುಟ್ಟುವುದರಲ್ಲಿ ಸಂಶಯವೇ ಇಲ್ಲಾ.ಅಬ್ರಹಾಂಲಿಂಕನ್ ಜೀವನದಲ್ಲಿ ಸಾಕಷ್ಟು ನೋವು ಸಂಕಟ ಜನರ ಅಸೂಹೆ ಇವೆಲ್ಲದರ ನಡುವೆ ದೃತಿ ಗೆಡದೆ ಸಂಪೂರ್ಣ ಆತ್ಮ ವಿಶ್ವಾಸ ದಿಂದ ತಮ್ಮ ಗುರಿ ತಲುಪಿದರು.ಮುಖ್ಯ ವಾಗಿ ನಮ್ಮಲ್ಲಿ ಪ್ರಾಮಾಣಿಕತೆ ಇದ್ದು ಸರಳ ಭಾವನೆ ಇದ್ದಾಗ ನಮಗೆ ದೇವರಲ್ಲಿ ಅಚಲವಾದ ಭಕ್ತಿ ವಿಶ್ವಾಸ ಇದ್ದರೆ ನಾವು ನಮ್ಮ ಗುರಿ ಮುಟ್ಟುತ್ತೇವೆ.ವಿನಯ ಮತ್ತು ಸೌಜನ್ಯ ಸ್ವಭಾವ ನಮ್ಮ ಮನಸಿನ ಕನ್ನಡಿ ನಾವು ಮತ್ತೊಬ್ಬರಾಗುವದು ಬೇಡ ನಾವು ನಾವಾದರೆ ಸಾಕು ನಮ್ಮ ಜೀವನ ದಲ್ಲಿ ಅದೆಷ್ಟೋ ಆನಂದ ಅನುಭವಿಸುತ್ತವೆ. ಇದನ್ನು ನೋಡಿ ಕೆಲವರು ಅಸೂಹೆ ಮಾಡಿ ಕುಹಕ ನಗು ತೋರಿಸಿದರು ನಾವು ನಿರ್ಲಕ್ಷಿಸಬೇಕು ಅದೊಂದೇ ದಾರಿ. ಮುಖ್ಯವಾಗಿ ನಾವು ಮಾಡುವ ಕೆಲಸ ಕಾರ್ಯ ಮತ್ತು ಯಾವುದೇ ವಿದ್ಯೆ ಯಲ್ಲಿ ವಿಚಾರದಲ್ಲಿ ನಿಖರ ಮತ್ತು ದಿಟ್ಟ ವಿಚಾರವೇ ನಮಗೆ ಇದ್ದರೆ ಸಾಕು. ನಮ್ಮಲ್ಲಿ ಆತ್ಮ ವಿಶ್ವಾಸವೇ ನಮ್ಮನ್ನು ಎತ್ತಿ ಹಿಡಿಯುತ್ತದೆ. ನಾವು ಯಾವುದೇ ಸನ್ಮಾರ್ಗದಲ್ಲಿ ಇದ್ದಾಗ ನಮ್ಮ ಮನಸು ಯಾರಿಗೂ ಬಗ್ಗುವುದಿಲ್ಲ ನಾವು ಯಾವುದೇ ಕಲೆ ಮತ್ತು ವಿದ್ಯೆ ಕಲಿಯಬೇಕಾದರೆ ವಯಸ್ಸು ಬೇಕಾಗಿಲ್ಲ ನಮ್ಮ ದೇಹಕ್ಕೆ ವಯಸ್ಸಾದರೂ ನಮ್ಮ ಮನಸ್ಸಿಗೆ ಆಗಿರುವುದಿಲ್ಲ. ನಮ್ಮಲ್ಲಿ ಸದ್ರಡ ಮನಸ್ಸು ವಿವೇಚನಾ ಶಕ್ತಿ, ಸಾಧಿಸುವ ಸಂಕಲ್ಪವೇ ನಮ್ಮ ಯಶಸ್ಸಿನ ಮೆಟ್ಟಲುಗಳು.ಇದಕ್ಕೆ ಉದಾಹರಣೆ ಯಾಗಿ ನೋಡಬೇಕೆಂದರೆ ಅಕ್ಷರ ಕಲಿಯದೆ ನಿಸ್ವಾರ್ಥ ಮನಸ್ಸಿನಿಂದ ಸೇವೆ ಮಾಡಿದ ಸಾಲು ಮರದ ತಿಮ್ಮಕ್ಕ ಅದೆಷ್ಟು ಗಿಡ ಮರಗಳನ್ನು ಮಕ್ಕಳಂತೆ ಪ್ರೀತಿಸಿ ಬೆಳೆಸಿದವರು ಮುಪ್ಪು ವಯಸ್ಸಿನಲ್ಲೂ ಹುರುಪು ಅವರಿಗೆ.ಅವರ ಸೇವೆ ಇಡೀ ಜಗತ್ತು ಬೆರಗಾಗುವಂತೆ ನೋಡುತ್ತಿದೆ. ಹಿಂದೆ ನಮ್ಮೆಲ್ಲರ ಪೂರ್ವಜರು ಯಾವುದೇ ಪೈಪೋಟಿ ಮಾಡದೇ ಅಚಲ ನಿರ್ಧಾರ ಮತ್ತು ನಿಷ್ಕಲ್ಮಶ ಮನಸ್ಸು, ನಿಸ್ವಾರ್ಥ ಸೇವಾ ಮನೋಭಾವದಿಂದ, ಯಾರಿಗೂ ಮನಸ್ಸನ್ನು ನೋಯಿಸದೆ ಬದುಕಿನಲ್ಲಿ ತನ್ನದೇ ಛಾಪು ಮೂಡಿಸಿದವರು.ನಾವು ಸಮಯಕ್ಕೆ ಮತ್ತು ನಮಗೆ ದಾರಿತೋರಿಸುವ ಗುರುಗಳಿಗೆ ಬೆಲೆ ಕೊಟ್ಟಾಗ ನಮ್ಮ ಜೀವನ ಸ್ವಲ್ಪ ಮಟ್ಟಿಗಾದರೂ ಸಾರ್ಥಕವಾದಿತು.ನಾವು ಒಂದಿಷ್ಟು ಅವರ ಮಾರ್ಗ ದಲ್ಲಿ ಸಾಗೋಣ. ಇದ್ದುದರಲ್ಲಿ ನೈಜ ಸುಖ, ಶಾಂತಿ ಪಡೆಯೋಣ.ಸಾತ್ವಿಕ ವಿಚಾರ, ಸಂತೃಪ್ತಿ ಮತ್ತು ಸಕಾರಾತ್ಮ ವಿಚಾರ ಇವು ನಮ್ಮ ಯಶಸ್ಸಿಗೆ ಬೆಳಕು ತೋರಿಸುವ ದಾರಿ ದೀಪಗಳೆಂದರೆ ತಪ್ಪಾಗದು. ********************************

ಯಶಸ್ಸು ಮತ್ತು ಸಾಧನೆ Read Post »

ಇತರೆ, ಜೀವನ

ಆತ್ಮ ವಿಶ್ವಾಸವಿರಲಿ…

ಲೇಖನ ಆತ್ಮ ವಿಶ್ವಾಸವಿರಲಿ… ರಶ್ಮಿ ಹೆಗಡೆ ಕ್ರಿ.ಶ 1306 ರಲ್ಲಿ ಸ್ಕಾಟ್ ಲ್ಯಾಂಡನ್ನು ಆಳುತ್ತಿದ್ದ ರಾಬರ್ಟ್ ಬ್ರೂಸ್ ಎಂಬ ದೊರೆ ತನ್ನ ಧೈರ್ಯ  ಧೈರ್ಯ,ಶೌರ್ಯಕ್ಕೆ ಹೆಸರಾಗಿದ್ದ. ಒಮ್ಮೆ ಇಂಗ್ಲೆಂಡಿನ ದೊರೆ ತನ್ನ ಸುಸಜ್ಜಿತವಾದ ಸೈನ್ಯದೊಂದಿಗೆ ಸ್ಕಾಟ್ ಲ್ಯಾಂಡ್ ಮೇಲೆ ದಾಳಿ ನಡೆಸಿದ. ಬ್ರಿಟಿಷ್ ಸೈನ್ಯದೆದುರು ಬಹಳ ಚಿಕ್ಕದಾಗಿದ್ದರೂ,ಹೋರಾಟ ಮನೋಭಾವ ಹೊಂದಿದ್ದ ತನ್ನ ಸೈನ್ಯವನ್ನು ಬ್ರೂಸ್ ಆರು ಬಾರಿ ಮುನ್ನಡೆಸಿದ. ದುರದೃಷ್ಟವೆಂಬಂತೆ ಆರು ಬಾರಿಯೂ ಆತನ ತುಕಡಿ ಸೋಲುಂಡಿತ್ತು,ರಾಜ್ಯವನ್ನು ಉಳಿಸಿಕೊಳ್ಳುವ ಎಲ್ಲ ಎಲ್ಲ ಭರವಸೆಗಳನ್ನೂ ಕಳೆದುಕೊಂಡಿತು.ಚದುರಿದ ಸೈನ್ಯದಲ್ಲಿ ಉಳಿದ ಕೆಲವೇ ಕೆಲವು ಸೈನಿಕರೂ ಜೀವದ ಆಸೆಗಾಗಿ ರಣರಂಗದಿಂದ ದೂರ ಸರಿದರು.ಸೋಲನ್ನೇ ಅರಿಯದ ಬ್ರೂಸ್ ಆತ್ಮಸ್ಥೈರ್ಯ ಕಳೆದುಕೊಂಡು ಕಂಗಾಲಾದ. ಜೀವ ಉಳಿಸಿಕೊಳ್ಳಲು ತಲೆಮರೆಸಿಕೊಂಡ. ಗುಡ್ಡ ಬೆಟ್ಟ, ಕಣಿವೆಗಳಲ್ಲಿ ಏಕಾಂಗಿಯಾಗಿ ಅಲೆಯತೊಡಗಿದ.ಹೀಗಿದ್ದಾಗ ಒಮ್ಮೆ ಜೋರಾಗಿ ಮಳೆ ಸುರಿಯಲಾರಂಭಿಸಲು ಬ್ರೂಸ್ ಒಂದು ಗುಹೆಯಲ್ಲಿ ಬಂದು ಆಶ್ರಯ ಪಡೆದ. ನಡೆದಿದ್ದನ್ನು ಮೆಲುಕುಹಾಕುತ್ತ ಕುಳಿತಿದ್ದ ಬ್ರೂಸ್ ನನ್ನು ನಾಜೂಕಾಗಿ ಬಲೆ ನೇಯುತ್ತಿರುವ ಪುಟ್ಟ ಜೇಡವೊಂದು ಆಕರ್ಷಿಸಿತು.ನೇಯುವಾಗ ಪ್ರತಿಬಾರಿಯೂ ವಿಫಲಗೊಂಡು ಬೀಳುತ್ತಿದ್ದ ಜೇಡ ಮತ್ತೆ ಮೇಲೇರುತ್ತಿತ್ತು.  ಪ್ರತಿಬಾರಿ ಬಿದ್ದಾಗಲೂ ಮೊದಲಿಗಿಂತ ಹೆಚ್ಚಿನ ಎಚ್ಚರಿಕೆವಹಿಸುತ್ತಿದ್ದ ಜೇಡ ಕೊನೆಗೂ ಬಲೆ ನೇಯುವುದರಲ್ಲಿ  ಯಶಸ್ವಿಯಾಯಿತು. ಸೋಲಿಗೆ ಹೆದರದೆ,ಆತ್ಮವಿಶ್ವಾಸ ತೊರೆಯದೆ,ಸತತವಾಗಿ ಪ್ರಯತ್ನಿಸಿ,ಸೋಲನ್ನೇ ಸೋಲಿಸಿದ ಜೇಡದ ಆತ್ಮಬಲ ಹಾಗೂ ಕಾರ್ಯವೈಖರಿ ಬ್ರೂಸ್  ಮನಸ್ಸಿನ ಮೇಲೆ ಗಾಢವಾದ ಪರಿಣಾಮ ಬೀರಿತು. ಬ್ರೂಸ್ ತನ್ನ ವೈಫಲ್ಯಕ್ಕೆ ತಾನೇ ಸವಾಲೊಡ್ಡಿದ. ಅಷ್ಟು ಚಿಕ್ಕ ಕೀಟವೇ ಸೋಲನೊಪ್ಪಿಕೊಳ್ಳದಿರುವಾಗ ತಾನೇಕೆ ತನ್ನ ಪತನವನ್ನು ಒಪ್ಪಿಕೊಳ್ಳಲಿ ಎಂದು ಯೋಚಿಸುತ್ತ,ಹೊಸ ಹುರುಪಿನೊಂದಿಗೆ ಹೊಸ ವ್ಯಕ್ತಿಯಾಗಿ ಗುಹೆಯನ್ನು ತೊರೆದ. ಮತ್ತೆ ಸೈನ್ಯವನ್ನು ಕಟ್ಟಲು ನಿರ್ಧರಿಸಿ ಜನರನ್ನು ಸೇರಿಸಿದ. ಮೊದಲಿಗಿಂತ ಹೆಚ್ಚು ಬಲಿಷ್ಠವಾದ ಸೈನ್ಯ ಕಟ್ಟಿದ. ಮತ್ತದೇ ಬ್ರಿಟಿಷ್ ದೊರೆಯೊಂದಿಗೆ ಹೋರಾಡಿ ತನ್ನ ರಾಜ್ಯವನ್ನು ಮರಳಿ ಪಡೆದ. ಬ್ರಿಟಿಷರಿಂದ ಸ್ಕಾಟ್ಲೆಂಡ್ ನ್ನು ಮುಕ್ತಗೊಳಿಸಿ ಹೊಸ ಇತಿಹಾಸವನ್ನೇ ರಚಿಸಿದ. ” ಆಗದು ಎಂದು ಕೈಕಟ್ಟಿ ಕುಳಿತರೆ ಸಾಗದು ಕೆಲಸವು ಮುಂದೆ,ಮನಸೊಂದಿದ್ದರೆ ಮಾರ್ಗವು ಉಂಟು ಕೆಚ್ಚೆದೆ ಇರಬೇಕೆಂದೆಂದೂ”ಎಂಬ ಸಾಲುಗಳು ಇಂದಿಗೂ ಸತ್ಯ.ಯಶಸ್ಸಿನ ಮೂಲ ಮಂತ್ರವೆಂದರೆ ಅದು ‘ಆತ್ಮವಿಶ್ವಾಸ’. ಸಾಧನೆಯ ಹಾದಿಯಲ್ಲಿ ನಡೆಯುವವನಿಗೆ ತೊಡಕುಗಳು ಅನೇಕ.  ಕಲ್ಲು ಮುಳ್ಳು,ಬಿಸಿಲು ಬವಣೆಗಳಿರದ ದಾರಿ ಯಾವುದಿದ್ದೀತು? ಅದೆಷ್ಟೋ ಬಾರಿ ಸಾಧನೆಯತ್ತ ಸಾಗುವ ಮೊದಲ ಹೆಜ್ಜೆಗಳು ತಡವರಿಸಿದಾಗ,ಭಯಪಟ್ಟು,ಮುನ್ನಡೆವ ಭರವಸೆ ಕಳೆದುಕೊಂಡು ಮುಂದೆ ಹೆಜ್ಜೆ ಇಡುವುದನ್ನೇ ನಿಲ್ಲಿಸಿ ಬಿಡುತ್ತೇವೆ. ಹಾಗಂತ ಮುನ್ನಡೆವ ಶಕ್ತಿ ಇಲ್ಲವೆಂದಲ್ಲ,ಆ ಶಕ್ತಿಯ ಪರಿಚಯ ನಮಗೇ ಇರುವುದಿಲ್ಲವಷ್ಟೇ! ಜೀವನದಲ್ಲಿ  ಗುರಿಯೊಂದಿದ್ದರೆ ಸಾಲದು, ಗುರಿಯತ್ತ ಪಯಣಿಸಲು ಬೇಕಾದ ಸಮಚಿತ್ತ,ತಾಳ್ಮೆ ಹಾಗೂ ಏಕಾಗ್ರತೆಯ ಜೊತೆಗೆ ಮುಖ್ಯವಾಗಿ ಇರಬೇಕಾದ್ದು ‘ಆತ್ಮವಿಶ್ವಾಸ’.   “ಧೈರ್ಯಮ್ ಸರ್ವತ್ರ ಸಾಧನಂ” ಎಂದು ಆತ್ಮವಿಶ್ವಾಸದಿಂದ ಎದ್ದು ನಿಂತು ಧೈರ್ಯದಿಂದ ಪ್ರಯಾಣ ಮುಂದುವರೆಸುವ ಗುಣ ನಮ್ಮೆಲ್ಲರಲ್ಲಿದ್ದರೆ ಯಾವ ಸಾಧನೆಯೂ ಎಟುಕದ ನಕ್ಷತ್ರವಾಗಲಾರದು. ಯಶಸ್ಸಿನ ಹೆಬ್ಬಯಕೆಯ ಜೊತೆ ಆತ್ಮವಿಶ್ವಾಸವೂ ಜೊತೆಗಿದ್ದಾಗ, ಸ್ವಸಾಮರ್ಥ್ಯದ ಮೇಲಿನ ನಂಬಿಕೆಯು ವಿಫಲತೆಯ ತೀವ್ರ ಭಯವನ್ನು ಮೆಟ್ಟಿನಿಂತಾಗ ಖಂಡಿತವಾಗಿ ಯಶಸ್ಸು ನಮ್ಮದಾಗುತ್ತದೆ **************************************

ಆತ್ಮ ವಿಶ್ವಾಸವಿರಲಿ… Read Post »

ಇತರೆ, ಜೀವನ

ಕಾನೂನು, ಮಹಿಳೆ ಮತ್ತು ಅರಿವು

ಅಂಜಲಿ ರಾಮಣ್ಣ ಬರೆಯುತ್ತಾರೆ
ಇದು ನನಗೆ ಕಲಿಸಿದ್ದು ಎರಡು ಪಾಠ. ಒಂದು ಹೆಂಗಸು ಮನಸ್ಸು ಮಾಡಿದರೆ, ಬುದ್ಧಿಯ ಮೂಲಕ ಗಳಿಸಿಕೊಂಡ ಆತ್ಮವಿಶ್ವಾಸ ಇದ್ದರೆ ಯಾರದ್ದೇ ಆಗಿರಲಿ, ಯಾವುದೇ ರೀತಿಯ ಮುಜುಗರವನ್ನು ಹೋಗಲಾಡಿಸಬಲ್ಲಳು

ಕಾನೂನು, ಮಹಿಳೆ ಮತ್ತು ಅರಿವು Read Post »

ಇತರೆ, ಜೀವನ

ನೀರು ಕುಡಿಯಿರಿ

ಲೇಖನ ನೀರು ಕುಡಿಯಿರಿ ಆಶಾ ಸಿದ್ದಲಿಂಗಯ್ಯ ಜನರು ತಮ್ಮ ಬ್ಯುಸಿ ಶೆಡ್ಯೂಲ್ ನಲ್ಲಿ ನೀರನ್ನು ಕುಡಿಯುವುದೇ ಮರೆತಿದ್ದಾರೆ ಆದರೆ ನೀರು ಆರೋಗ್ಯಕ್ಕೆ ಅತ್ಯವಶ್ಯಕ.. ನಮ್ಮ ಉಳಿವಿಗಾಗಿ ನೀರು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಬಾಯಾರಿಕೆಯನ್ನು ನೀಗಿಸುವುದಕ್ಕೆ ಮಾತ್ರವಲ್ಲ, ದೇಹ ಸರಿಯಾಗಿ ಕೆಲಸ ಮಾಡಲು ಹಾಗೂ ರೋಗ ಮುಕ್ತವಾಗಿಡಲು ನೀರು ಅಗತ್ಯ. ದೇಹದ ತೂಕ ಇಳಿಸಲು ಸಹ ನೀರು ಕುಡಿಯುವುದು ಸಹಾಯಕಾರಿ. ಬಿಸಿನೀರು ಕುಡಿದರೆ ದೇಹದ ತೂಕ ಕಡಿಮೆ ಆಗಲು ಸಹಾಯ ಆಗುತ್ತಾ? ನಮ್ಮ ದೇಹದ ಸುಮಾರು 70% ರಷ್ಟು ನೀರಿನಿಂದ ಕೂಡಿದೆ ಹಾಗೂ ದೇಹದ ವ್ಯವಸ್ಥೆಯು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವಂತೆ ಮಾಡುತ್ತದೆ, ಆದ್ದರಿಂದ ಪ್ರತಿಯೊಬ್ಬ ವ್ಯಕ್ತಿಯು ಪ್ರತಿದಿನ 2-3 ಲೀಟರ್ ನೀರನ್ನು ಸೇವಿಸುವುದು ಅತ್ಯಗತ್ಯ. ತಣ್ಣನೆ ಮತ್ತು ಬಿಸಿನೀರು ಎರಡೂ ತಮ್ಮದೇ ಆದ ಬಾಧಕಗಳನ್ನು ಹೊಂದಿವೆ. ತೀವ್ರವಾದ ವರ್ಕೌಟ್‌ ನಂತರ ತಣ್ಣಗಾಗಲು ಒಂದು ಲೋಟ ತಣ್ಣೀರು ನಿಮಗೆ ಸಹಾಯ ಮಾಡುತ್ತದೆ, ಆದರೆ ಬಿಸಿನೀರು ದೇಹದಿಂದ ಟಾಕ್ಸಿನ್‌ ಹೊರಹಾಕಲು ಸಹಾಯ ಮಾಡುವುದರೊಂದಿಗೆ ಆಹಾರವನ್ನು ಉತ್ತಮವಾಗಿ ಜೀರ್ಣಿಸಿಕೊಳ್ಳಲು ಅನುವು ಮಾಡಿಕೊಡುತ್ತದೆ. ಇದಲ್ಲದೆ, ಕುಡಿಯುವ ನೀರು ವಿಶೇಷವಾಗಿ ಬಿಸಿನೀರು ತೂಕ ಕರಗಿಸಲು ಸಹಾಯ ಮಾಡುತ್ತದೆ. ಅದು ನಿಜವೇ? ಹೆಚ್ಚು ನೀರು ಕುಡಿಯುವುದರಿಂದ ಒಬ್ಬ ವ್ಯಕ್ತಿಯು ತೂಕ ಕಳೆದು ಕೊಳ್ಳುತ್ತಾನೆ. ಇದಕ್ಕೆ  ಕಾರಣವೆಂದರೆ ನೀರು ಹೊಟ್ಟೆ ತುಂಬಿರುವ ಫೀಲ್‌ ನೀಡುತ್ತದೆ, ಪೋಷಕಾಂಶಗಳನ್ನು ಹೀರಿಕೊಳ್ಳಲು ದೇಹಕ್ಕೆ ಸಹಕರಿಸುತ್ತದೆ. ವಿಷಕಾರಿ ತ್ಯಾಜ್ಯವನ್ನು ಹೊರಹಾಕುತ್ತದೆ, ಎಂದು ಸಂಶೋಧನೆಯೊಂದು ಹೇಳಿದೆ. 2003ರಲ್ಲಿ ಪ್ರಕಟವಾದ ಮತ್ತೊಂದು ಅಧ್ಯಯನದ ಪ್ರಕಾರ, ಬಿಸಿನೀರನ್ನು ಕುಡಿಯುವುದರಿಂದ ತೂಕ ಇಳಿಸುವ ಪ್ರಕ್ರಿಯೆಯನ್ನು ಹೆಚ್ಚಿಸಬಹುದು. ಊಟಕ್ಕೆ ಮುಂಚಿತವಾಗಿ 500 ಮಿಲಿ ನೀರನ್ನು ಕುಡಿಯುವುದು ಮೆಟಾಬಾಲಿಸಮ್‌  30% ಹೆಚ್ಚಿಸುತ್ತದೆ. ಪ್ರತಿದಿನ ಬೆಳಿಗ್ಗೆ ಅಥವಾ ದಿನವಿಡೀ ಬಿಸಿ ಅಥವಾ ಬೆಚ್ಚಗಿನ ನೀರನ್ನು ಕುಡಿಯುವುದರಿಂದ ತೂಕ ಇಳಿಸುವ ಪ್ರಕ್ರಿಯೆಗೆ ಮೂರು ವಿಧಗಳಲ್ಲಿ ಸಹಾಯವಾಗುತ್ತದೆ. ಬಿಸಿನೀರು ಕುಡಿಯುವುದರಿಂದ ನಿಮ್ಮ ದೇಹದ ಉಷ್ಣತೆ ಬದಲಾಗುತ್ತದೆ. ನೀರಿನ ಬೆಚ್ಚಗಿನ ತಾಪಮಾನವನ್ನು ಸರಿದೂಗಿಸಲು, ನಮ್ಮ ದೇಹವು ಆಂತರಿಕ ತಾಪಮಾನವನ್ನು ಕಡಿಮೆ ಮಾಡುತ್ತದೆ ಮತ್ತು ಚಯಾಪಚಯವನ್ನು ಸಕ್ರಿಯಗೊಳಿಸುತ್ತದೆ. ದೇಹದಲ್ಲಿನ ಕೊಬ್ಬನ್ನು ಒಡೆಯುತ್ತದೆ ಮತ್ತು ಅವುಗಳನ್ನು ಅಣುಗಳಾಗಿ ಪರಿವರ್ತಿಸುತ್ತದೆ, ಇದರಿಂದಾಗಿ ನಿಮ್ಮ ಜೀರ್ಣಾಂಗ ವ್ಯವಸ್ಥೆಗೆ ಫ್ಯಾಟ್‌ ಬರ್ನ್‌ ಸುಲಭಗೊಳಿಸುತ್ತದೆ. ಹಸಿವನ್ನು ನೀಗಿಸಲು ಬೆಚ್ಚಗಿನ ನೀರು ಸಹಾಯ ಮಾಡುತ್ತದೆ. ನಿಮ್ಮ ಊಟಕ್ಕೆ 30 ನಿಮಿಷಗಳ ಮೊದಲು ಒಂದು ಲೋಟ ಬೆಚ್ಚಗಿನ ನೀರನ್ನು ಕುಡಿದರೆ ನಿಮ್ಮ ಕ್ಯಾಲೊರಿ ಬರ್ನ್ ಆಗುವುದರಲ್ಲಿ ಅನುಮಾನವೇ ಇಲ್ಲ. ಜೀರ್ಣಕ್ರಿಯೆಯ ಪ್ರಕ್ರಿಯೆಯ ಸುಗಮವಾಗಿಸಲು ನೀರು ಏಜೆಂಟ್ ಆಗಿ ಕಾರ್ಯನಿರ್ವಹಿಸುತ್ತದೆ. ಇದು ನಮಗೆ  ಜೀರ್ಣಿಸಿಕೊಳ್ಳಲು ಕಷ್ಟಪಡುವ ಆಹಾರ ಕಣಗಳನ್ನು ಸಹ ಕರಗಿಸಿ ಜೀರ್ಣಕ್ರಿಯೆಯನ್ನು ಸುಗಮಗೊಳಿಸುತ್ತದೆ. ಬಿಸಿನೀರು ನರಮಂಡಲವನ್ನು ಶಾಂತಗೊಳಿಸುತ್ತದೆ. ನಮ್ಮ ನರಮಂಡಲವು ಶಾಂತವಾಗಿದ್ದಾಗ, ನಾವು ಕಡಿಮೆ ನೋವುಗಳನ್ನು ಅನುಭವಿಸುವುದಲ್ಲದೆ, ದಿನವಿಡೀ ಶಾಂತವಾಗಿರಲು ನಮಗೆ ಸಹಾಯ ಮಾಡುತ್ತದೆ. ಮಲಬದ್ಧತೆಯನ್ನು ನಿವಾರಿಸಲು ಸಹಾಯ ಮಾಡುತ್ತದೆ. ಬಿಸಿನೀರು ನಿಮ್ಮ ಕರುಳನ್ನು ಸಂಕುಚಿತಗೊಳಿಸುತ್ತದೆ, ಇದು ಕರುಳಿನಲ್ಲಿನ ಅಡಚಣೆಯನ್ನು ಕಡಿಮೆ ಮಾಡಿ ಮಲ ವಿಸರ್ಜನೆ ಸುಲಭಗೊಳಿಸುತ್ತದೆ. ಕುಡಿಯುವ ನೀರು ವ್ಯಕ್ತಿಯ ದೇಹದ ಉಷ್ಣತೆಯನ್ನು ಹೆಚ್ಚಿಸಿ ಬೆವರುವಂತೆ ಮಾಡುತ್ತದೆ. ಬೆವರುವಿಕೆಯ ರಂಧ್ರಗಳಿಂದ ಟಾಕ್ಸಿನ್‌ ಹೊರಹಾಕುತ್ತದೆ ************************************************************************

ನೀರು ಕುಡಿಯಿರಿ Read Post »

ಇತರೆ, ಮಕ್ಕಳ ವಿಭಾಗ

ಪ್ರತಿಫಲ

ಮಕ್ಕಳ ಕಥೆ ಪ್ರತಿಫಲ ಬಸವರಾಜ ಕಾಸೆ ದಿನವೂ ಏನಾದರೂ ಒಂದು ಒಳ್ಳೆಯ ಕೆಲಸ ಮಾಡಿ ಅದನ್ನು ಬರೆದುಕೊಂಡು ಬರಬೇಕು ಎಂದು ಕ್ಲಾಸ್ ಟೀಚರ್ ಹೇಳುತ್ತಿದ್ದರು. ಆದರೆ ಅವಕಾಶ ಇದ್ದಾಗಲೂ ಅಂತಹ ಕೆಲಸವನ್ನು ಯಾವ ಮಕ್ಕಳು ಮಾಡುತ್ತಿರಲಿಲ್ಲ. ಅದರಲ್ಲಿ ವಿಶೇಷವಾಗಿ ಚೂಟಿ ಮಾಡುತ್ತಾನೆ ಇರಲಿಲ್ಲ. ಆದರೆ ದಿನವೂ “ಇಂದು ರಸ್ತೆಯಲ್ಲಿ ಬಿದ್ದ ಮುಳ್ಳು ತೆಗೆದು ಹಾಕಿದೆ”, “ಕಲ್ಲು ತೆಗೆದು ಹಾಕಿದೆ”, “ವೃದ್ಧರಿಗೆ ರಸ್ತೆ ದಾಟಲು ಸಹಾಯ ಮಾಡಿದೆ”, “ಮನೆ ಕಸ ಗುಡಿಸಿದೆ”, “ಅಮ್ಮನಿಗೆ ಅಡುಗೆಯಲ್ಲಿ ನೆರವಾದೆ” ಹೀಗೆ ಸುಮ್ಮಸುಮ್ಮನೆ ಏನಾದರೂ ಬರೆದುಕೊಂಡು ಹೋಗುತ್ತಿದ್ದಳು. ಚೂಟಿಯ ಗೆಳತಿಯಾದ ಪುಟ್ಟಿಯು ನಿಜವಾಗಿಯೂ ಮಾಡುವ ಮನಸ್ಸು ಹೊಂದಿದ್ದಳು ಮತ್ತು ಗಮನಕ್ಕೆ ಬಂದರೆ ಮಾಡುತ್ತಿದ್ದಳು. ಆದರೆ ಇದನ್ನೆಲ್ಲಾ ಎಷ್ಟೋ ಸಲ ಚೂಟಿಯೇ ತಡೆದಿದ್ದಳು. ಅವತ್ತು ಒಂದು ದಿನ ಚೂಟಿ ಮತ್ತು ಪುಟ್ಟಿ ರಸ್ತೆಯಲ್ಲಿ ಹೋಗುತ್ತಿದ್ದಾಗ ಯಾರೋ ಮಾವಿನ ಹಣ್ಣು ತಿನ್ನುತಿರುವದನ್ನು ಕಂಡು ಇವರಿಬ್ಬರಿಗೂ ತಿನ್ನಬೇಕು ಎನಿಸಿತು. ಆದರೆ ಇಬ್ಬರ ಬಳಿಯೂ ದುಡ್ಡು ಇರಲಿಲ್ಲ. ಹಾಗೆ ಆಸೆಗಣ್ಣಿನಲ್ಲಿ ಮುಂದೆ ಮುಂದೆ ಬರುವಾಗ ಅಲ್ಲಿ ಒಬ್ಬಳು ಅಜ್ಜಿ ರಸ್ತೆ ದಾಟಲಾಗದೆ ತಲೆ ಮೇಲೆ ಬುಟ್ಟಿ ಹೊತ್ತು ನಿಂತಿದ್ದಳು. ಒಂದಾದ ಮೇಲೆ ಒಂದು ವಿಪರೀತ ವಾಹನಗಳ ಓಡಾಟ. “ಪಾಪ, ನೋಡೇ… ಆ ಅಜ್ಜಿಗೆ ಸಹಾಯ ಮಾಡೋಣ, ಬಾ ಆ ಕಡೆ ಹೋಗೋಣ” ಎಂದರೂ “ಹೋಗೇ, ಯಾರು ಬರತಾರೆ” ಎಂದಳು. ಆಗ ಪುಟ್ಟಿ ಒಬ್ಬಳೇ ಹೋಗಿ ಮೆಲ್ಲಗೆ ಅಜ್ಜಿಯ ಕೈ ಹಿಡಿದು ರಸ್ತೆ ದಾಟಿಸಿದಳು. “ಸ್ವಲ್ಪ ಬುಟ್ಟಿ ಇಳಿಸು ಮರಿ ಹಾಗೆ” ಎಂದಾಗ ಅಜ್ಜಿ, ಪುಟ್ಟಿ ಇಳಿಸಿದಳು. ನೋಡಿದರೆ ಆ ಬುಟ್ಟಿ ತುಂಬಾ ಮಾವಿನ ಹಣ್ಣು “ತಗೋ, ತಿನ್ನು” ಅಂತ ಅಜ್ಜಿ ಕೊಟ್ಟರೂ “ಬೇಡ ಬೇಡ” ಎಂದು ಆಮೇಲೆ ತೆಗೆದುಕೊಂಡಳು. ದೂರದಲ್ಲಿಯೇ ನಿಂತು ನೋಡತಾ ಚೂಟಿ ಹೊಟ್ಟೆಕಿಚ್ಚು ಪಟ್ಟುಕೊಂಡು ಮುಖ ಉದಿಸಿಕೊಂಡಳು. “ಅಜ್ಜಿ ಅವಳು ನನ್ನ ಪ್ರೇಂಡ್” ಎಂದಾಗ ಅವಳನ್ನು “ಬಾ ಇಲ್ಲಿ, ಮಾವಿನ ಹಣ್ಣು ತಗೋ” ಎಂದಾಗ ಆಸೆಗಣ್ಣಿನಿಂದ ಓಡಿ ಬರಲು ಕಾಲಿಗೆ ಮುಳ್ಳು ಚುಚ್ಚಿತು. “ಯಾರಾದರೂ ಸೈಡಿಗೆ ಈ ಮುಳ್ಳು ಹಾಕಿದರೆ ನನ್ನ ಕಾಲಿಗೆ ಹೀಗೆ ಆಗ್ತಾ ಇರಲಿಲ್ಲ” ಎಂದು ಬೈಯಿಕೊಂಡಳು. ಹಾಗೆ ಕುಂಟುತ್ತಾ ಬಂದ ಅವಳಿಗೂ ಅಜ್ಜಿ ಮಾವಿನ ಹಣ್ಣು ನೀಡಿದಳು. ಅದರಿಂದ ಸಂತುಷ್ಟಳಾದ ಚೂಟಿ “ನಾವು ಇನ್ನೊಬ್ಬರಿಗೆ ಸಹಾಯ ಮಾಡಿದರೆ ನಮಗೂ ಮತ್ತೆ ಯಾರೋ ಸಹಾಯ ಮಾಡುತ್ತಾರೆ, ಒಳ್ಳೆಯ ಕೆಲಸಕ್ಕೆ ಒಳ್ಳೆಯ ಪ್ರತಿಫಲ” ಎಂದು ಖುಷಿಗೊಂಡು ತನ್ನ ನಡವಳಿಕೆಯನ್ನು ಬದಲಿಸಿಕೊಳ್ಳಬೇಕು ಎಂದು ನಿರ್ಧರಿಸಿ ಮಾವಿನ ಹಣ್ಣು ತಿಂದಳು ***********************************************

ಪ್ರತಿಫಲ Read Post »

You cannot copy content of this page

Scroll to Top