ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ, ಜೀವನ

ಕಾಡುಗೊಲ್ಲ ಮತ್ತು ತೋಡ ಜನಾಂಗದ ಗುಡಿಸಲಿನಲ್ಲಿ ಸಾಮ್ಯತೆ

ಬುಡಕಟ್ಟು ಜನಾಂಗದ ಬಗ್ಗೆ ಬೆಳಕು ಚೆಲ್ಲುವ ಲೇಖನ ಕಾಡುಗೊಲ್ಲ ಮತ್ತು ತೋಡ ಜನಾಂಗದ ಗುಡಿಸಲಿನಲ್ಲಿ ಸಾಮ್ಯತೆ ಆಶಾ ಸಿದ್ದಲಿಂಗಯ್ಯ ಕಾಡುಗೊಲ್ಲ ಬುಡಕಟ್ಟು ಜನಾಂಗವು ತುಮಕೂರು, ಮತ್ತು ಚಿತ್ರದುರ್ಗ,ಜಿಲ್ಲೆಯಲ್ಲಿ ಹೆಚ್ಚಾಗಿ ನೆಲೆಗೊಂಡಿದ್ದಾರೆ ಉಳಿದಂತೆ   ದಾವಣಗೆರೆ, ಬಳ್ಳಾರಿ ಗಡಿಭಾಗ  ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ , ರಾಮನಗರ  , ಮಂಡ್ಯ, ಹಾಸನ, ಶಿವಮೊಗ್ಗ ಮತ್ತು ಚಿಕ್ಕಮಂಗಳೂರು ಜಿಲ್ಲೆಯಲ್ಲಿ  ವಿರಳವಾಗಿ ಕಾಣಸಿಗುತ್ತಾರೆ. ಒಟ್ಟಾರೆ ಕರ್ನಾಟಕದಲ್ಲಿ ಇವರ ಜನಸಂಖ್ಯೆ ಹತ್ತು ಲಕ್ಷ ಇದೆ. ಕಾಡುಗೊಲ್ಲರನ್ನು ಮುನ್ನೆಲೆಗೆ ತರಲು  ಮತ್ತು ಸರ್ಕಾರ ಅವರನ್ನು ಗುರುತಿಸಲು ಹಿಂದುಳಿದ  ವರ್ಗಗಳ ಶಾಶ್ವತ  ಆಯೋಗದ ಮಾಜಿ ಅಧ್ಯಕ್ಷರಾದ ಸಿ. ಎಸ್ ದ್ವಾರಕನಾಥ ರವರು, ಚಲನಚಿತ್ರ ನಟರಾದ ಚೇತನ್ ಅಹಿಂಸಾರವರು, ಮತ್ತು ಕಾಡುಗೊಲ್ಲ ಆಸ್ಮಿತೆ ಹೋರಾಟ ಸಮಿತಿಯ ಅಧ್ಯಕ್ಷರಾದ ಜಿ.ಕೆ. ನಾಗಣ್ಣರವರು ಇನ್ನು ಅನೇಕರು ಹೋರಾಟ ಮಾಡಿದ್ದಾರೆ. ಅವರ ಹೋರಾಟದಿಂದಾಗಿ  ಸರ್ಕಾರ ಕಾಡುಗೊಲ್ಲರನ್ನು ಪ್ರತ್ಯೇಕಿಸಿ ಕಾಡುಗೊಲ್ಲ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಿದೆ. .  ಸಂಧರ್ಭದಲ್ಲಿ ಕಾಡುಗೊಲ್ಲ ಹೋರಟಗಾರರಲ್ಲಿ ಹಿರಿಯರಾದಂತಹ ದಿವಗಂತ ನಾಗಪ್ಪರವರನ್ನು ಸ್ಮರಿಸಬೇಕು. ಈಗಲೂ ಕೂಡ ಕಾಡುಗೊಲ್ಲರ ಹಟ್ಟಿಗೆ ಹೋದರೆ ಈ ರೀತಿಯ ಗುಡಿಸಲುಗಳನ್ನು ಕಣ್ಣಾರೆ ನೋಡಬಹುದು. ಒಂದು ಕಡೆ ಮೂಢನಂಬಿಕೆಯಾದರೂ ಬುಡಕಟ್ಟು ಜೀವನವನ್ನು ಉಳಿಸಿಕೊಂಡಿರುವ ಜನಾಂಗ. ಇವತ್ತಿಗೂ ಕಾಡುಗೊಲ್ಲ ಜನಾಂಗದವರು ಬಾಣಂತಿಯರನ್ನು ಈ ಗುಡಿಸಲಿನಲ್ಲಿ 2 ವರೆ ತಿಂಗಳು ಬಿಡುತ್ತಾರೆ  ಇದು ಆಧುನಿಕ ನಾಗರೀಕ ಸಮಾಜಕ್ಕೆ ಮೂಡನಂಬಿಕೆಯಾಗಿ ಕಂಡರೂ  ಬುಡಕಟ್ಟು ಸಮುದಾಯವೋಂದು  ಆದಿಮಾನವನ ಅವಾಸಸ್ಥಾನವನ್ನು ನೆನಪಿಸಿಕೊಳ್ಳುವ ಸಾಂಕೇತಿಕವಾದ ಆಚರಣೆಯ ರೀತಿ ಕಾಣುತ್ತದೆ  ಇಂತಹ  ಅನಾದಿಕಾಲದ ಬುಡಕಟ್ಟು ಜೀವನವಿಧಾನವನ್ನು ಉಳಿಸಿಕೊಂಡು ಬರುತ್ತಿರುವ ಕರ್ನಾಟಕದ ಏಕೈಕ ಬುಡಕಟ್ಟು ಎಂದರೆ ಅದು ಕಾಡುಗೊಲ್ಲರು ಮಾತ್ರ  ಇದು ಕೆಲವೊಮ್ಮೆ ತನ್ನನ್ನೇ ತಾನು ಶೋಷಣೆ ಮಾಡಿಕೊಳ್ಳುವ ಕ್ರಮವಾಗಿಯೂ ಕಾಣುತ್ತೆ.  ಕಾಡುಗೊಲ್ಲರು ಅನಾದಿ ಕಾಲದಿಂದ ಪಾಲಿಸಿಕೊಂಡು ಬಂದಂತಹ ಧಾರ್ಮಿಕ ನಂಬಿಕೆಯನ್ನು ಗೌರವಿಸೋಣ. ಕಾಡುಗೊಲ್ಲರ ಆರಾಧ್ಯದೈವ ಜುಂಜಪ್ಪ, ಕಾಡುಗೊಲ್ಲರ ದೇವರ ಇಷ್ಟದ ಹೂವು ಸಾದ ಪುಷ್ಪ, ನಮ್ಮ ಬುಡಕಟ್ಟು ದೇವರುಗಳನ್ನು ಮುನ್ನೆಲೆಗೆ ತರೋಣ. ಗುಡಸಲಿನಲ್ಲಿ ಕಾಡಿನಲ್ಲಿ ಜನ್ಮ ತಳೆಯುವ ಕಾಡುಗೊಲ್ಲರ ಮಕ್ಕಳು ಕಷ್ಟ ಸಹಿಷ್ಣುತೆ ಹೊಂದಿರುತ್ತಾರೆ ಪ್ರಕೃತಿಯೊಂದಿಗೆ ನಿಕಟ ಸಂಪರ್ಕ ಹೊಂದಿರುತ್ತಾರೆ.ಕಷ್ಟವನ್ನು ಎದುರಿಸುವ ಅವರ ಗುಣ ಅವರ ಪ್ರಬುದ್ಧತೆಯನ್ನು ತೋರುತ್ತದೆ. ಬ್ರಾಹ್ಮಣ್ಯವನ್ನು ಮರುಪ್ರಶ್ನೆ ಮಾಡದೇ ಪಾಲಿಸುವ ಜನರು ಬುಡಕಟ್ಟು ಜನಾಂಗದ ಧಾರ್ಮಿಕ ಭಾವನೆಗಳ ನಂಬಿಕೆಯನ್ನು ಪ್ರಶ್ನಿಸುತ್ತಾರೆ. ಬುಡಕಟ್ಟು ಜನಾಂಗದ ಬಗ್ಗೆ ಅನ್ವೇಷಣೆ ಮಾಡುತ್ತ ಹೊದಂತೆ ಕಾಡಿನೊಂದಿಗೆ ಅವರ ಒಡನಾಟ ಪ್ರಕೃತಿಯೊಂದಗಿನ ಅವಿನಾಭಾವ ಸಂಬಂಧವನ್ನು ಪರಿಚಯಿಸುತ್ತದೆ. ಆಧುನಿಕ ಸಮಾಜದ ಜೀವನದ ಜಂಜಾಟದಲ್ಲಿ ನಾಲ್ಕು ಜನ ಏನಾನ್ನುತ್ತಾರೊ ಎಂಬ ಭಯದಲ್ಲಿ ಜನರನ್ನ ಮೆಚ್ಚಿಸುವ ಬಗ್ಗೆಯೇ ಯೋಚಿಸುತ್ತಾ ಜೀವನ ಸವೆಸುವ ಅದೆಷ್ಟೋ ಮಧ್ಯಮ ವರ್ಗದ ಜನ ನಮ್ಮ ನಡುವೆ ಇದ್ದಾರೆ. ಇದನ್ನೆಲ್ಲಾ ನೋಡಿದಾಗ ಬುಡಕಟ್ಟು ಜೀವನ ಶೈಲಿ, ಒತ್ತಡವಿಲ್ಲದ, ಪ್ರಕೃತಿ ಪರವಾದ ಜೀವನ ಪ್ರತಿಯೊಬ್ಬರಿಗೂ ಆದರ್ಶಮಯ. ಮನೆಗಳು ಮಾನವನು ನೆಲೆಸಲು ಉಪಯೋಗಿಸುವ ಕಟ್ಟಡ. ಸಾಮಾನ್ಯವಾಗಿ ಸುತ್ತಲೂ ಗೋಡೆಗಳು ಮತ್ತು ಮೇಲೊಂದು ಸೂರನ್ನು ಹೊಂದಿದ್ದು, ಪ್ರತಿಕೂಲ ವಾತಾವರಣಗಳಿಂದ ತಮ್ಮ ಒಳಗಿರುವವರನ್ನು ರಕ್ಷಿಸುತ್ತವೆ. ಒಂದು ಮನೆಯಲ್ಲಿರುವ ಸಾಮಾಜಿಕ ಘಟಕವನ್ನು ಮನೆಜನ ಎಂದು ಕರೆಯಲಾಗುತ್ತದೆ. ಮಾನವ ತಾತ್ಕಾಲಿಕವಾಗಿ ಇಲ್ಲವೇ ಶಾಶ್ವತವಾಗಿ ವಾಸಿಸಲು ಬಳಸುವ ನೈಸರ್ಗಿಕವಾದ ತಾಣ ಅಥವಾ ತಾನೇ ರಚಿಸಿದ ಆಸರೆ. ಮಾನವ ನಾಗರಿಕತೆಯ ವಿಕಾಸದೊಂದಿಗೆ ಗೃಹದ ವಿಕಾಸ ನಿಕಟವಾಗಿ ಹೆಣೆದುಕೊಂಡಿದೆ. ಮರದ ಪೊಟರೆ, ಕಲ್ಲುಬಂಡೆಗಳ ಸಂದು, ಗುಹೆಗಳಿಂದ ತೊಡಗಿ ಆಧುನಿಕ ಗಗನಚುಂಬಿ ಗೃಹಗಳ ವರೆಗಿನ ಇದರ ಬೆಳೆವಣಿಗೆ ಮಾನವ ಸಮಾಜದ ವಿಕಾಸದ ಒಂದು ಮುಖ. ತನಗಾಗಿ ತನ್ನವರಿಗಾಗಿ ವಾಸಸ್ಥಳವೊಂದನ್ನು ರಚಿಸಿಕೊಳ್ಳಬೇಕೆಂಬ ಕಲ್ಪನೆ ಮಾನವನಿಗೆ ಬಂದುದೇ ಸು.11000 ವರ್ಷಗಳ ಹಿಂದೆ, ಪ್ರ.ಶ.ಪು. ಸು. 9000 ಸುಮಾರಿಗೆ ಎನ್ನಬಹುದು. ಅದಕ್ಕೂ ಹಿಂದೆ ಆತ ತನ್ನ ಸುತ್ತಲಿನ ಪ್ರಾಕೃತಿಕ ಸನ್ನಿವೇಶಗಳನ್ನು ಅವಲಂಬಿಸಿದ್ದ. ಆಹಾರಕ್ಕಾಗಿ ಹಣ್ಣುಹಂಪಲುಗಳನ್ನು-ಅವು ಬೆಳೆದಷ್ಟು ಕಾಲ, ಪ್ರಾಯಶಃ ವರ್ಷದಲ್ಲಿ ಒಂದೆರಡು ತಿಂಗಳು-ತಿನ್ನುತ್ತಿದ್ದ. ಉಳಿದ ವೇಳೆಯಲ್ಲಿ ಸುತ್ತಲಿನಪ್ರಾಣಿಗಳೇ ಇವನ ಆಹಾರ. ಸ್ವಂತ ಜೀವಕ್ಕೆ ಅವುಗಳಿಂದ ಅಪಾಯ ಒದಗದಂತೆ ರಕ್ಷಣೆ ಪಡೆಯಲು ಮಾನವ ಮರದ ಪೊಟರೆಗಳಲ್ಲೋ ಬಂಡೆಗಳ ಸಂದುಗಳಲ್ಲೋ ರಾತ್ರಿಗಳನ್ನು ಕಳೆಯುತ್ತಿದ್ದ. ಸ್ವಾಭಾವಿಕವಾಗಿ ಗುಹೆಗಳೂ ಇವನ ತಂಗುದಾಣಗಳಾದುವು. ಆಹಾರಕ್ಕಾಗಿ ಅಲೆಮಾರಿಜೀವನವನ್ನು ಅವಲಂಬಿಸಿದ ಇವನಿಗೆ ಶಾಶ್ವತವಾದ ನೆಲೆಯ ಆವಶ್ಯಕತೆಯಿರಲಿಲ್ಲ. ಕ್ರಮೇಣ ಇವನ ಜೀವನಕ್ರಮದಲ್ಲಿ ಸುಧಾರಣೆಗಳಾದುವು. ಆಹಾರವನ್ನು ಹುಡುಕುವ ಶ್ರಮಕ್ಕೆ ಬದಲಾಗಿ ಆಹಾರವನ್ನು ತಾನೇ ಬೆಳೆಯುವ ವಿಧಾನವನ್ನು ಅರಿತುಕೊಂಡ. ಈ ಘಟನೆ ಮಾನವನ ಇತಿಹಾಸದಲ್ಲಿ ಅತಿ ಪ್ರಮುಖವಾದದ್ದು. ಅಂದಿನಿಂದ ಇವನು ಅಲೆಮಾರಿಜೀವನವನ್ನು ಮುಕ್ತಾಯಗೊಳಿಸಿ ಒಂದು ಕಡೆ ಸ್ಥಿರವಾಗಿ ನೆಲೆಸುವುದನ್ನು ಕಲಿತ. ತನ್ನೊಡನಿದ್ದ ಜನರೊಡನೆ ಗುಂಪುಗೂಡಿ ವಾಸಿಸಲಾರಂಭಿಸಿದ್ದು ಈ ಅವಧಿಯಲ್ಲಿ. ಕ್ರಮೇಣ ತಾನು, ತನ್ನದು ಎಂಬ ಮನೋಭಾವ ಬೆಳೆದು ಕುಟುಂಬ ಪದ್ಧತಿ ಆರಂಭವಾಯಿತು. ಕುಟುಂಬದವರೆಲ್ಲ ಒಂದು ಕಡೆ ಇರಬೇಕೆನಿಸಿದ್ದಾಗಲೇ ಏಕಾಂತತೆಯ ಆವಶ್ಯಕತೆಯೂ ಉಂಟಾಯಿತು. ಅದಕ್ಕಾಗಿ ಮನೆಯ ರಚನೆ ತಲೆದೋರಿತು. ಈ ಮನೆಗಳು ಕೇವಲ ಪ್ರಾರಂಭಿಕ ಸ್ಥಿತಿಯ ಗುಡಿಸಲುಗಳು ಮಾತ್ರ. ನೀಲಗಿರಿ ಬೆಟ್ಟಗಳಲ್ಲಿನ ತೋಡ ಜನಾಂಗದವರ ಗುಡಿಸಲಿನಂತೆಯೇ ಕಾಡುಗೊಲ್ಲರ ಗುಡಿಸಲು ಇದೆ. ಈಗಲೂ ಇದೇ ರೀತಿಯ ಗುಡಿಸಲುಗಳನ್ನು ನಾವು ನಮ್ಮ ಕಾಡುಗೊಲ್ಲ ಜನಾಂಗದ ಗುಡಿಸಲಿನಲ್ಲಿಯೂ ಕಾಣಬಹುದು. ಆದಿವಾಸಿತಾಣಗಳು ಪ್ರವಾಸತಾಣಗಳಾಗಲಿ. ಆ ಮೂಲಕ ಬುಡಕಟ್ಟು ಜನಾಂಗ ಮುನ್ನೆಲೆಗೆ ಬರಲಿ,ಅವರ ಅಭಿವೃದ್ಧಿ ಬಗ್ಗೆ ಸರಕಾರ ಗಮನ ಹರಿಸಲಿ. ************************************************

ಕಾಡುಗೊಲ್ಲ ಮತ್ತು ತೋಡ ಜನಾಂಗದ ಗುಡಿಸಲಿನಲ್ಲಿ ಸಾಮ್ಯತೆ Read Post »

ಇತರೆ, ಪ್ರಬಂಧ

ಎಲೆಗಳ ಬಲೆಯಲ್ಲಿ…

ಲಲಿತ ಪ್ರಬಂಧ ಎಲೆಗಳ ಬಲೆಯಲ್ಲಿ…                                                             ಟಿ.ಎಸ್.ಶ್ರವಣಕುಮಾರಿ ಈ ಹದಿಮೂರು ಎಲೆಗಳಿಗೊಂದು ವಿಶಿಷ್ಟ ಆಕರ್ಷಣೆಯಿದೆ, ಸೆಳೆತವಿದೆ. ಕೆಲವರು ರಮ್ಮಿ, ಬ್ರಿಡ್ಜ್‌, ಮೂರೆಲೆ ಎನ್ನುತ್ತಾ ಇಸ್ಪೀಟಿನ ಹಿಂದೆ ಬಿದ್ದರೆ, ಇನ್ನು ಕೆಲವರು ಸಾಲಿಟೇರ್‌, ಫ್ರೀಸೆಲ್‌ ಎನ್ನುತ್ತಾ ಕಂಪ್ಯೂಟರಿನಲ್ಲಿ ಅದೇ ಹದಿಮೂರು ಎಲೆಗಳಲ್ಲಿ ಅಡಗಿಕೊಂಡಿರುತ್ತಾರೆ. ʻಅಂದರ್‌ ಬಾಹರ್‌ ಅಂದರ್‌ ಬಾಹರ್‌ʼ ಎಂದು ಕೋರಸ್‌ನಲ್ಲಿ ಗುನುಗುತ್ತ ʻಎಕ್ಕ ರಾಜ ರಾಣಿ ನನ್ನ ಕೈಯೊಳಗೆ, ಹಿಡಿಮಣ್ಣು ನಿನ್ನ ಬಾಯೊಳಗೆʼ ಎಂದು ಹಾಡುತ್ತ ಜಾಕಿ ಚಲನಚಿತ್ರದಲ್ಲಿ ಪುನೀತ್‌ ರಾಜ್‌ಕುಮಾರ್‌ ತನ್ನೆಲ್ಲಾ ಅಭಿಮಾನಿಗಳನ್ನೂ ವಶೀಕರಣ ಮಾಡಿಕೊಂಡಿದ್ದು ಸುಳ್ಳಲ್ಲ. ಅದೇನೋ ಚಲನಚಿತ್ರ… ಅವನು ಗೆದ್ದರೂ, ಸೋತರೂ ಅವನ ಮಡಿಲಲ್ಲಿ ಲಕ್ಷ್ಮಿ ಬಂದು ಕೂರುತ್ತಾಳೆ; ಆದರೆ ಅವನಂತೆ ಆಡಹೊರಟ ಜನಸಾಮಾನ್ಯರ ಬಳಿ ಅವಳು ಸಿಕ್ಕಂತೆ ಮಾಡಿ ತಪ್ಪಿಸಿಕೊಳ್ಳುವುದೇ ಹೆಚ್ಚು. ಅವಳು ಸಿಕ್ಕಿಕೊಳ್ಳುತ್ತಾಳೋ ಇಲ್ಲವೋ ತಿಳಿಯದು, ಆಡುವವರಂತೂ ಈ ಎಕ್ಕ, ರಾಜ, ರಾಣಿ, ಜೋಕರ್‌ ಎಂಬ ರಂಭೆ, ಊರ್ವಶಿ, ಮೇನಕೆ, ತಿಲೋತ್ತಮೆಯರ ಬಲೆಯಲ್ಲಿ ಬಿದ್ದು ತಮ್ಮನ್ನೇ ಸಂತೋಷದಿಂದ, ಸ್ವಾನುರಾಗದಿಂದ ಅರ್ಪಣೆ ಮಾಡಿಕೊಂಡಿರುತ್ತಾರೆ. ಇಸ್ಪೀಟಾಟಕ್ಕೆ ಕಾರಣಗಳು ಹಲವಾರು. ಹೊತ್ತು ಕಳೆಯುವುದಕ್ಕಾಗಿ ಎಂದು ಶುರುವಾಗುವ ನರ್ತನ ಹಲವು ಭಾವಭಂಗಿಗಳನ್ನು ತೋರುತ್ತಾ ಆಡುಗರನ್ನು ತನ್ನೆಡೆಗೆ ಸೆಳೆಯುತ್ತದೆ. ಬೇಸರ ನೀಗಲು… ಗೆದ್ದ ಖುಷಿಯ ಅಮಲು… ಸೋತು ಕಳೆದದ್ದನ್ನು ಕಳೆದಲ್ಲೇ ಛಲದಿಂದ ಮರಳಿ ಹುಡುಕಲು… ಗೆಳೆಯರು ಸಿಕ್ಕ ಖುಷಿಯಲ್ಲಿ… ಆಟದ ಆಕರ್ಷಣೆಯಲ್ಲಿ… ಹೀಗೆ ಹಲವು ವಿನ್ಯಾಸಗಳಲ್ಲಿ ಇಸ್ಪೀಟಿನ ರಾಣಿ ತನ್ನ ರಸಿಕರನ್ನು ಗುಲಾಮರನ್ನಾಗಿ ಮಾಡಿಕೊಳ್ಳಲು ತವಕಿಸುತ್ತಿರುತ್ತಾಳೆ. ಒಮ್ಮೆ ಇವಳ ಮೋಹದಲ್ಲಿ ಸಿಲುಕಿಕೊಂಡವರಿಗೆ ಬುದ್ದಿಯ ಅಂಕುಶವಿಲ್ಲದಿದ್ದರೆ ಅದರಿಂದ ಮುಕ್ತಿಯಿಲ್ಲ. ಅದೆಷ್ಟೋ ಮಂದಿ ಮನೆ, ಮಠ, ಹೆಂಡತಿ-ಮಕ್ಕಳು, ಬಂಧು-ಬಾಂದವರನ್ನು ಕಳೆದುಕೊಂಡು ಬೀದಿ ಪಾಲಾಗಿರುವವರನ್ನು ನಮ್ಮ ಹತ್ತಿರದ ಸ್ನೇಹ ವಲಯದಲ್ಲೇ, ನೆಂಟರಿಷ್ಟರಲ್ಲೇ ಕಂಡಿದ್ದೇನೆ. ʻಊರಿಗೊಂದು ಹೊಲಗೇರಿʼ ಎನ್ನುವ ಗಾದೆಗಿಂತ ʻಊರಿಗೊಂದಾದರೂ ಇಸ್ಪೀಟಿನ ಅಡ್ಡಾʼ ಎನ್ನುವ ಮಾತೇ ಹೆಚ್ಚು ಸಮಂಜಸವೆನಿಸುತ್ತದೆ. ದೊಡ್ಡ ಪಟ್ಟಣಗಳಲ್ಲಾದರೆ ಇಸ್ಪೀಟು ಕ್ಲಬ್ಬು. ಇದರ ಪರಾಕಾಷ್ಠೆಯನ್ನು ನಾನು ನೋಡಿದ್ದು ಅಮೇರಿಕಾದ ಲಾಸ್‌ ವೇಗಾಸ್‌ನ ಕ್ಯಾಸಿನೋಗಳಲ್ಲಿ. ಅಲ್ಲಿನ ಜೂಜಿನ ಅಡ್ಡಾಗಳಲ್ಲಿ ಬೈಗು ಬೆಳಗೆನ್ನದೆ ಮಂದಿ ತಮ್ಮ ಮುಂದಿನ ಪರದೆಯಲ್ಲಿ ಮುಳುಗಿಹೋಗಿರುತ್ತಾರೆ, ಕಳೆದು ಹೋಗಿರುತ್ತಾರೆ!! ನನ್ನ ಈ ಲೇಖನದ ಉದ್ದೇಶ ಮನೆಮಠ ಕಳೆದುಕೊಂಡವರ ಕರುಣಾಜನಕ ಕತೆಗಳನ್ನು ಹೇಳುವುದಂತೂ ಖಂಡಿತವಾಗಿಯೂ ಅಲ್ಲ. ಒಂದು ಕಾಲದಲ್ಲಿ ಇದು ಬಂಧುಬಳಗದ ನಡುವಿನ ಸೇತುವಾಗಿ ಜನಗಳನ್ನು ಹಿಡಿದಿಡುತ್ತಿದ್ದ ಆಕರ್ಷಣೆಯ ಸಾಧನವಾಗಿದ್ದುದರ ಬಗ್ಗೆ ಕೆಲವು ಪ್ರಸಂಗಗಳನ್ನು ಹೇಳಬೇಕೆಂದಷ್ಟೆ. ಒಂದು ಕಾಲ ಎಂದರೆ ಎಲ್ಲೋ ಹೋಗಿಬಿಡಬೇಡಿ. ನಾನು ಹುಟ್ಟುವುದಕ್ಕೂ ಮುಂಚೆಯೇ ಇತ್ತೋ…? ನನಗೆ ತಿಳಿಯದು. ಅಂತೂ ಒಂದೈವತ್ತು, ಅರವತ್ತು ವರ್ಷಗಳ ಹಿಂದೆ ಎಂದುಕೊಂಡರೆ ಸಾಕು. ಮದುವೆಮನೆಯಲ್ಲಿ ಸೇರುತ್ತಿದ್ದ ನೆಂಟರಿಷ್ಟರು, ಬಂಧು ಬಳಗ ಸೇರಿರುವ ಖುಷಿಗೆ, ದಿಬ್ಬಣ ಮದುವೆ ಮನೆಗೆ ಕಾಲಿಟ್ಟ ಅನತಿಕಾಲದಲ್ಲೇ ತಮಗೊಂದು ಸೂಕ್ತವಾದ ಹೆಚ್ಚಾಗಿ ಯಾರ ಗಮನಕ್ಕೂ ಬಾರದಂತ (ಕಾಫಿ, ಕುರುಕಲು ತಿಂಡಿಗಳ ಪೂರೈಕೆಗೆ ಅನುವಾಗಿರುವಂತ) ಕೋಣೆಯನ್ನು ಆಕ್ರಮಿಸಿಕೊಂಡು ಜಮಖಾನೆ ಹಾಸಿಕೊಂಡು ಇಸ್ಪೀಟಿನ ಕಟ್ಟನ್ನು ಬಿಚ್ಚಿದರೆಂದರೆ, ಗಂಡಿನ ಕಡೆಯವರು, ಹೆಣ್ಣಿನ ಕಡೆಯವರು ಎಂಬ ಭೇದಭಾವವಿಲ್ಲದೆ ಆಟ ಅವಿಶ್ರಾಂತವಾಗಿ ಮುಂದುವರೆದಿರುತ್ತಿತ್ತು. ಅವರ ಭಕ್ತಿ ಪರವಶತೆಯನ್ನು ಕೆಡಿಸಲು ನಿದ್ರಾದೇವಿಯಿಂದಲೂ ಸಾಧ್ಯವಿರಲಿಲ್ಲ ಬಿಡಿ! ಇಂತಲ್ಲಿ ದುಡ್ಡಿನ ಮೊತ್ತ ಹೆಚ್ಚಲ್ಲ. ಆಟವನ್ನು ರಂಗೇರಿಸಲು ಬೇಕಾದಷ್ಟು ಮಾತ್ರ… ಗೆದ್ದರೆ ಹತ್ತು… ಸೋತರೆ ಹತ್ತು… ಎನ್ನುವ ಹಾಗೆ…  ಒಡವೆ, ವಸ್ತು, ಮನೆ ಮಠಗಳನ್ನು ಒತ್ತೆ ಇಡುವಂತ ಅಮಲಲ್ಲ. ಖುಷಿಗಾಗಿ ಖುಷಿ.. ಮೋಜಿಗಾಗಿ ಮೋಜು. ಇಸ್ಪೀಟೊಂದು ಖಯಾಲಿಯಷ್ಟೇ. ನನ್ನೊಬ್ಬ ದೊಡ್ಡಮ್ಮನ ಮಗನ ಮದುವೆಯಲ್ಲಿ ಹಿರಿಯಾಕೆಯೊಬ್ಬರು ಮದುವೆ ಹುಡುಗನ ಅಕ್ಕನನ್ನು “ಏನೇ ವಿಜ್ಜಮ್ಮ ನಿನ್ನ ಯಜಮಾನರು ಕಾಣುತ್ತಿಲ್ಲ, ತೀರ ಮೈದುನನ ಮದುವೆಗೂ ಬರಲಿಲ್ಲವೇ?” ಎಂದಿದ್ದರು. “ಅಯ್ಯೋ ಬಂದಿದ್ದಾರೆ ಚಿಕ್ಕಮ್ಮ, ಭಜನೆಯಲ್ಲಿ ಮುಳುಗಿಹೋಗಿದಾರೆ ಅಷ್ಟೇ” ಎಂದಳು ವಿಜಯ. ಮಹಾ ಭಕ್ತಳಾದ ಆಕೆ “ಅಯ್ಯೋ ಯಾವಾಗಿಂದ ನಡೀತಿದ್ಯೆ. ಎಲ್ಲಿ? ನಂಗೊತ್ತಾಗ್ಲಿಲ್ವೆ… ಅದೆಲ್ಲಿ ತೋರ‍್ಸು ಬಾರೆ ಸ್ವಲ್ಪ” ಎನ್ನುತ್ತಾ ಅವಳ ದುಂಬಾಲು ಬಿದ್ದರು. “ಅದು ನೀವು ಮಾಡೋ ಭಜನೆ ಅಲ್ಲ ಬಿಡಿ” ಎನ್ನುತ್ತಾ ಯಾರೋ ಕರೆದರೆಂದು ಅಲ್ಲಿಂದ ಜಾರಿಕೊಂಡಿದ್ದಳು. ಆಕೆ ಬಿಟ್ಟಾರೆಯೇ ಕಂಡಕಂಡವರನ್ನೆಲ್ಲಾ “ಭಜನೆ ನಡೀರಿರೋದು ಎಲ್ಲಿ?” ಎಂದು ತಲೆ ತಿಂದಾಗ ಯಾರೋ ಪುಣ್ಯಾತ್ಮರು ನಡೆಯುತ್ತಿದ್ದ ಕೋಣೆಯ ಬಾಗಿಲಿಗೆ ಕರೆದೊಯ್ದು ತೋರಿಸಿದರು. “ಅಯ್ಯೋ.. ಈ ಅನಿಷ್ಟಾನ ವಿಜ್ಜು ಭಜನೆ ಅಂದಳಲ್ಲಾ” ಎಂದು ಮಮ್ಮಲ ಮರುಗಿದರು. ನನ್ನ ಮದುವೆಯ ನಿಷ್ಕರ್ಷೆಯಾಗುವಾಗ ನಮ್ಮ ಮಾವನವರು “ನಮ್ಮದು ಒಂದು ಬೇಡಿಕೆ ಇದೆ” ಎಂದಿದ್ದರು. ʻಇದುವರೆಗೂ ಏನನ್ನೂ ಕೇಳದವರು ಈಗ ಏನೋ ಬೇಡಿಕೆ ಇಡುತ್ತಿದ್ದಾರಲ್ಲʼ ಎನ್ನುವ ಪ್ರಶ್ನೆಯನ್ನು ನಮ್ಮ ತಾಯಿ, ತಂದೆಯರ ಮುಖದಲ್ಲಿ ನೋಡಿದವರೇ “ಇನ್ನೇನಿಲ್ಲ; ನಮ್ಮ ಕಡೆ ಬರುವ ನೆಂಟರಿಷ್ಟರಲ್ಲಿ ಕೆಲವರಿಗೆ ಇಸ್ಪೀಟಿನ ಖಯಾಲಿ. ರಾತ್ರಿ ಹಗಲು ಅನ್ನದೆ ಮದುವೆ ಮನೆಯಲ್ಲಿ ಇದ್ದಷ್ಟು ಹೊತ್ತೂ ಆಡುತ್ತಿರುತ್ತಾರೆ. ಆಗಾಗ ಅವರಿಗೆ ಕಾಫಿಯೊಂದನ್ನು ಕೊಟ್ಟರೆ ಸಾಕು. ಅವರು ಊಟ, ತಿಂಡೀನೂ ಕೇಳಲ್ಲ” ಎಂದು ದುಗುಡಗೊಂಡಿದ್ದವರ ಮುಖಗಳಲ್ಲಿ ನಗೆಯರಳಿಸಿದ್ದರು. ಅವರು ಹೇಳಿದ್ದರಲ್ಲಿ ಅತಿಶಯೋಕ್ತಿಯೇನಿರಲಿಲ್ಲ ಬಿಡಿ; ಹುಷಾರು ತಪ್ಪಿದ್ದ ಎಂಟು ತಿಂಗಳ ಮಗುವನ್ನು ಡಾಕ್ಟರ ಬಳಿಗೆ ಕರೆದೊಯ್ಯಲು ನನ್ನ ವಾರಗಿತ್ತಿ, ಆಟದಲ್ಲೇ ಮುಳುಗಿಹೋಗಿದ್ದ ಭಾವನನ್ನು ಆಡುತ್ತಿರುವಲ್ಲಿಗೇ ಹೋಗಿ ಎಬ್ಬಿಸಿ ಕರೆದುಕೊಂಡು (ಎಳೆದುಕೊಂಡು?) ಬರಬೇಕಾಯಿತು! ಮದುವೆ ಮುಗಿಸಿಕೊಂಡು ಹಿಂತಿರುಗುವ ಮುನ್ನ (ಯಾವ ಹೊತ್ತಿಗೆ ಯಾವ ಭಕ್ಷ್ಯ ಬಡಿಸಿದ್ದರೆಂದು ಅವರು ಗಮನಿಸಿದ್ದರೋ ಇಲ್ಲವೋ) ಅವರ ಆಟವು ಸಾಂಗವಾಗಿ ನಡೆಯಲು ಸಹಕರಿಸಿ ನಿಯತವಾಗಿ ಕಾಫಿತಿಂಡಿಗಳನ್ನು ಪೂರೈಸಿದವರೆಲ್ಲರಿಗೂ ಕೃತಜ್ಞತೆಯನ್ನು ಅರ್ಪಿಸಿ ತೃಪ್ತರಾಗಿ ಹೊರಟರು. ಇನ್ನು ನನ್ನ ನಾದಿನಿಯ ಮದುವೆಯಲ್ಲಿ ಬೀಗರೌತಣವಾದ ತಕ್ಷಣ ನಾವು ಛತ್ರವನ್ನು ಬಿಟ್ಟುಕೊಡಬೇಕಿತ್ತು. ಸಂಜೆ ಅಲ್ಲಿ ಇನ್ನೊಂದು ಕಡೆಯವರ ಆರತಕ್ಷತೆ ನಡೆಯುವುದಿತ್ತು. ಹಾಗಾಗಿ ನಾವು ಬೆಳಗಿನಿಂದಲೇ ಸಾಧ್ಯವಾದಷ್ಟು ನಮ್ಮ ಸಾಮಾನು ಸರಂಜಾಮುಗಳನ್ನು ಸಾಗಿಸುತ್ತಾ ನಾವು ಹೊರಡುವಾಗ ತೆಗೆದುಕೊಂಡು ಹೋಗಬಹುದಾದಷ್ಟನ್ನು ಮಾತ್ರ ಉಳಿಸಿಕೊಂಡಿದ್ದೆವು. ಊಟವಾದ ತಕ್ಷಣ ಪರಸ್ಪರ ಬೀಳ್ಕೊಂಡು ಅಲ್ಲಿಂದ ಗಂಡು ಹೆಣ್ಣು ಇಬ್ಬರ ಕಡೆಯವರೂ ಹೊರಟರೂ ಇನ್ನೂ ಇಸ್ಪೀಟಿನಾಟ ಮುಗಿದಿರಲಿಲ್ಲ. ಛತ್ರದವರು ಜಮಖಾನೆಯನ್ನೂ ವಶಕ್ಕೆ ತೆಗೆದುಕೊಂಡ ಮೇಲೂ ನೆಲದ ಮೇಲೇ ಇನ್ನೊಂದಿಷ್ಟು ಕಾಲ ಆಟವನ್ನು ಮುಂದುವರೆಸುತ್ತಿದ್ದವರು ಸಂಜೆಯ ಕಾರ್ಯಕ್ರಮದವರು ತಮ್ಮ ಸರಕುಗಳನ್ನೆಲ್ಲಾ ತೆಗೆದುಕೊಂಡು ಬಂದು ಎಬ್ಬಿಸಿದಾಗ, ನಮ್ಮ ಕಡೆಯವರೆಲ್ಲರೂ ಛತ್ರ ಬಿಟ್ಟು ಬಹಳ ಸಮಯವಾಗಿದೆಯೆನ್ನುವುದನ್ನು ಮನಗಂಡು ಮನಸ್ಸಿಲ್ಲದ ಮನಸ್ಸಿನಿಂದ ಎದ್ದರಂತೆ! ಹಾಗೆ ಎಬ್ಬಿಸದೇ ʻಏನೋ ಪಾಪ ಆಡಿಕೊಂಡಿರಲಿʼ ಎಂದು ಬಿಟ್ಟಿದ್ದರೆ, ಆ ಮದುವೆ ಮುಗಿದದ್ದೂ ಗೊತ್ತಾಗುತ್ತಿರಲಿಲ್ಲ ಎನ್ನುವುದು ನನ್ನ ಪ್ರಾಮಾಣಿಕ ಅನಿಸಿಕೆ! ಬೆಂಗಳೂರು ವಿಶ್ವವಿದ್ಯಾಲಯದ ಉಪಕುಲಪತಿಗಳಾಗಿದ್ದ ಡಾ|| ಡಿ. ಶಂಕರನಾರಾಯಣ್‌ ಅವರು ನನ್ನ ಅತ್ತೆಯ ಸ್ವಂತ ತಮ್ಮ, ನನ್ನ ಪತಿಗೆ ಸೋದರಮಾವ. ಅವರ ಓದುವ ಕಾಲದಲ್ಲಿ ನಮ್ಮ ಮಾವನವರು ಅವರಿಗೆ ತುಂಬಾ ಸಹಾಯ ಮಾಡಿದ್ದರಂತೆ. ದೆಹಲಿಯ ಯು.ಜಿ.ಸಿ.ಯಲ್ಲಿ ಕಾರ್ಯದರ್ಶಿಯಾಗಿದ್ದ ಕಾಲದಲ್ಲಿ ಅವರು ಬೆಂಗಳೂರಿಗೆ ಬಂದಾಗೆಲ್ಲಾ ಅವರ ಕಛೇರಿಯ ಕೆಲಸವು ಮುಗಿದ ನಂತರ ಒಂದಷ್ಟಾದರೂ ಸಮಯವನ್ನು ಇಲ್ಲಿದ್ದ ಬಂಧುಬಾಂಧವರೊಡನೆ ಇಸ್ಪೀಟಾಟದಲ್ಲಿ ಕಳೆದು ತೆರಳುತ್ತಿದ್ದರು. ಅವರ ವೇಳಾಪಟ್ಟಿ ಸಕ್ಕರೆಯ ಜಾಡು ಹಿಡಿಯುವ ಇರುವೆಯಂತೆ ಪ್ರಿಯ ಬಂಧುಗಳೆಲ್ಲರಿಗೂ ತಿಳಿದು ಒಟ್ಟಾಗಿ ಸೇರಿ ಇಸ್ಪೀಟಿನ ಕಟ್ಟಿಗೆ ಬಂಧ ವಿಮೋಚನೆ ಮಾಡಿ ಆನಂದ ಮಹೋತ್ಸವವನ್ನು ಆಚರಿಸುತ್ತಿದ್ದರು. ಅಂತೆಯೇ ಆ ಕಾಲದಲ್ಲಿ ನಮ್ಮ ಬಂಧು, ಬಳಗದಲ್ಲಿ ಯಾರು ದೆಹಲಿಗೆ ಹೋದರೂ ಅವರ ಮನೆಯಲ್ಲೇ ವಾರ(ತಿಂಗಳು)ಗಟ್ಟಲೆ ಉಳಿದುಕೊಂಡು ದೆಹಲಿಯ ಸುತ್ತಮುತ್ತಲನ್ನು ನೋಡಿಕೊಂಡು ಬರುತ್ತಿದ್ದರು. ಬೆಳಗ್ಗೆಯೆಲ್ಲಾ ಪ್ರೇಕ್ಷಣೀಯ ಸ್ಥಳಗಳ ದರ್ಶನ; ಸಂಜೆಯಾಯಿತೆಂದರೆ ಇಸ್ಪೀಟ್‌ ರಾಣಿಯ ನರ್ತನ! ನನ್ನ ಮಾವನವರು ತೀರಿಕೊಂಡಾಗ ಈ ಸೋದರಮಾವ ದೆಹಲಿಯಿಂದ ಗುಬ್ಬಿಗೆ ಬಂದಿದ್ದವರು, “ವಾಸಣ್ಣ ಸತ್ತ ಜಾಗದಲ್ಲಿ ನಾವು ನಿದ್ದೆ ಮಾಡಿದರೆ ಅವನ ಆತ್ಮಕ್ಕೆ ಶಾಂತಿ ಸಿಗೋದಿಲ್ಲ. ಹಾಗಾಗಿ ನಾವೆಲ್ಲರೂ ಕ್ರಿಯಾ ಕಲಾಪಗಳು ಮುಗಿದು ಈ ಕೋಣೆಗೆ ಬಾಗಿಲು ಹಾಕುವ ತನಕ (ಮಾವನವರು ಸತ್ತ ಘಳಿಗೆ ಕೆಟ್ಟ ನಕ್ಷತ್ರವಾದ್ದರಿಂದ ಐದು ತಿಂಗಳು ಬಾಗಿಲು ಹಾಕಬೇಕಿತ್ತು) ದುಃಖವನ್ನು ಮರೆತು, ದಣಿವರಿಯದೆ ಇಸ್ಪೀಟಾಡಿ, ತನ್ಮೂಲಕ ಗತಿಸಿದ ಹಿರಿಯರಿಗೆ ಗೌರವವನ್ನು ಕೊಡೋಣ” ಎನ್ನುವ ಠರಾವನ್ನು ಹೊರಡಿಸಿದರು. ಅಷ್ಟು ಹಿರಿಯರ ಬಾಯಿಂದ ಬಂದ ಅಂತಹ ಮುತ್ತಿನಂತ ಅದ್ಭುತ ಮಾತಿಗೆ ಎಂತಾದರೂ ಅಗೌರವವನ್ನು ಸೂಚಿಸಲಾದೀತೇ…?! ಸುಮಾರು ಮೂರ್ನಾಲ್ಕು ಚದುರಡಿಯಿರುವ ಆ ಕೋಣೆಯಲ್ಲಿ ಪಠಪಠಪಠಣ ಆರಂಭವಾಯಿತು. ನೆಂಟರು ಬಂದ ಹಾಗೆಲ್ಲಾ ವೃತ್ತ ದೊಡ್ಡದಾಗುತ್ತಾ ಹೋಯಿತು. ಆಟದ ಖಯಾಲಿಯಿರುವ ಒಬ್ಬಿಬ್ಬರು ಹೆಂಗಸರೂ ಹಿಂದೆ ಬೀಳದೆ ಸೇರಿಕೊಂಡರು. ಊರಿನ ಹಿರಿಯರು, ವಾಸಣ್ಣನ ಆತ್ಮೀಯರೂ ಕೈ ಹಾಕದಿದ್ದರೆ ಅಪಚಾರವಲ್ಲವೇ! ಅವರೂ ತಮ್ಮ ಸೇವೆ ಸಲ್ಲಿಸಲು ಎಲೆಗಳನ್ನು ಹಿಡಿದರು. ಹಿರಿಯರ ಜೊತೆಗೆ ಎಲೆಗಳನ್ನು ಹಿಡಿಯುವಷ್ಟು ದಾಷ್ಟ್ಯವಿಲ್ಲದಿದ್ದರೂ ಕಿರಿಯರೂ ತಮ್ಮ ಕೈಲಾದಷ್ಟು ಆಡಿ ಸತ್ತ ಹಿರಿಯ ಚೇತನಕ್ಕೆ ಶಾಂತಿ ಕೋರಬೇಡವೇ. ಅಲ್ಲೇ ಇನ್ನೊಂದು ಗುಂಪು ಹುಟ್ಟಿಕೊಂಡಿತು. ಹಾಗೆಯೇ ಮತ್ತೊಂದು ಗುಂಪಾಯಿತು. ಜಾಗ ಸಾಲದೆ ವಾಸಣ್ಣನ ಪ್ರತೀಕವಾಗಿ ಉರಿಯುತ್ತಿದ್ದ ದೀಪ ಜನ ಬಂದ ಬಂದ ಹಾಗೆ ನಿಧಾನವಾಗಿ ಸರಿ ಸರಿಯುತ್ತಾ ಅಂತೂ ಆ ದೊಡ್ಡ ಕೋಣೆಯ ಮೂಲೆಯಲ್ಲಿ ಜಾಗ ಮಾಡಿಕೊಂಡಿತು. ಅಂತೂ ಕಡೆಗೊಂದು ದಿನ ಕಿಟಕಿಯ ಕಟ್ಟೆಯನ್ನೇರಿ ಕುಳಿತು ಕೋಣೆಯ ತುಂಬಾ ಕೇಳುವ ಎಲೆಗಳ ಇನಿದಾದ ಶಬ್ದದ ಆನಂದಕ್ಕೆ ತಲೆತೂಗುತ್ತಾ ಸಾಕ್ಷಿಯಾಗತೊಡಗಿತು. ಹೀಗೆ ತನ್ನ ಪ್ರತಿಷ್ಠಿತ ತಮ್ಮನ ಸೂಚನೆಯ ಮೇರೆಗೆ ಬಂದವರೆಲ್ಲಾ ಗಂಡನ ಆತ್ಮಕ್ಕೆ ಎಷ್ಟೊಂದು ಹಿತವಾಗಿ, ಅವಿರತವಾಗಿ ಶಾಂತಿ ಕೋರುತ್ತಿರುವಾಗ ಪಾಪ ನಮ್ಮತ್ತೆ…, ಇದು ತನ್ನ ಗಂಡನ ಸಾವೆಂಬುದನ್ನೂ ಮರೆತು ಆಗಾಗ ಆ ಗುಂಪಿಗೆ ಕಾಫಿ ಬೆರಸಿಕೊಡುವುದಕ್ಕೆ ನಿಲ್ಲಬೇಕಾಯಿತು… ನಿಂತರು! ಎನ್ನುವುದು ನಮ್ಮ ಗುಬ್ಬಿಯ ಮನೆಯ ಚರಿತ್ರೆಯ ಪುಟಗಳಲ್ಲಿ ದಾಖಲಾಗಿಹೋಗಿದೆ! ಅಂತೂ ನನ್ನ ಮಾವನವರ ಆತ್ಮಕ್ಕೆ ತೃಪ್ತಿಯಾಯಿತೇ? ಆಗಿರಬಹುದು…. ಏಕೆಂದರೆ ಇಸ್ಪೀಟಾಟದಿಂದ ಆಯಿತೋ ಇಲ್ಲವೋ, ಸದಾ ಮನೆತುಂಬ ಜನರಿರಬೇಕು ಎನ್ನುವುದು ಅವರ ಒಂದು ಸ್ಥಿರವಾದ ಆಸೆ. ಊಟ, ತಿಂಡಿಯ ಹೊತ್ತಿನಲ್ಲಿ ಅದೆಷ್ಟು ಊಟದೆಲೆ ಬೀಳುತ್ತಿತ್ತೋ ಅಷ್ಟು ಖುಷಿ ಅವರಿಗೆ. ಹಳೆಯ ತಲೆಮಾರಿನ ಅನಿರ್ಬಂಧಿತ, ಅಮಾಯಕ ಮುಗ್ಧ ಪ್ರೀತಿ, ವಿಶ್ವಾಸದ ಪ್ರತೀಕದಂತಿದ್ದವರಿಗೆ ಮನೆಯೆಲ್ಲಾ ಸದಾ ಗಿಲಿಗಿಲಿಗುಟ್ಟುತ್ತಿರಬೇಕು; ನಗುವಿಂದ ತುಂಬಿರಬೇಕು ಎನ್ನುವ ಮಹದಾಸೆ. ತಮ್ಮ ಜೀವಿತಾವಧಿಯಲ್ಲಿ ಯಾರಿಗೂ ʻಕಾಫಿ ಬೇಕೆʼ ಎಂದು ಕೇಳಿ ಕೊಟ್ಟವರಲ್ಲ; ʻಈಗ ತಾನೆ ಕುಡಿದು ಬಂದೆ, ಬೇಡʼ ಎಂದರೂ ಅದು ನಿಮ್ಮನೆಯ ಕಾಫಿ, ನಮ್ಮನೆಯದು ಆಗಿಲ್ಲʼ ಎನ್ನುತ್ತಾ ʻಹೆಂಗಸರಿಗೆ ಅರಿಶಿನ ಕುಂಕುಮ ಕೊಡುವುದು ಎಷ್ಟು ಮುಖ್ಯವೋ, ಮನೆಗೆ ಬಂದವರಿಗೆ ಕಾಫಿ ಕೊಡುವುದೂ ಅಂತದೇ ಸತ್ಸಂಪ್ರದಾಯʼ ಎಂದು ಬಲವಾಗಿ ನಂಬಿ ಅಂತೆಯೇ ನಡೆದುಕೊಂಡಿದ್ದವರು. ಅವರು ಸತ್ತ ದಿನ ಐವತ್ತು ಲೀಟರ್‌ ಹಾಲು, ನಂತರ ದಿನವೂ ಮೂವತ್ತು ಲೀಟರ್ ಹಾಲು ಬರಿಯ ಕಾಫಿಗೇ ಖರ್ಚಾಯಿತು ಎಂದರೆ ಅವರಿಗೆ ಖಂಡಿತವಾಗಿಯೂ ತೃಪ್ತಿಯಾಗಿರಲೇ ಬೇಕು! ಕಾಫಿಯ ಕತೆಯೇ ಇಷ್ಟಾದರೆ, ಇನ್ನು ಊಟ, ತಿಂಡಿಯ ವಿವರಣೆ ಬೇಕಿಲ್ಲ ಅಂದುಕೊಳ್ಳುತ್ತೇನೆ. ಅಷ್ಟು ದಿನಗಳೂ ಭಾವಮೈದುನನ ವರಸೆಯವರಾದ ವೆಂಕಟರಾಮು ಆ ಜವಾಬ್ದಾರಿಯನ್ನು ಹೊತ್ತು ಸಮರ್ಥವಾಗಿ ನಿರ್ವಹಿಸಿ, ಅಡುಗೆಯ ಕೆಲಸವಾದ ನಂತರ ತಾವೂ ಮುಂದಿನ ಕೋಣೆಯ ಪವಿತ್ರ ಪತ್ರಗಳಿಗೊಂದು ಕೈಹಾಕಿ ತಮ್ಮ ಶ್ರದ್ಧಾಂಜಲಿಯನ್ನೂ ಅರ್ಪಿಸಿ ಕೃತಾರ್ಥರಾದರು!! “ಪಾಪ, ಅವನೂ ಸ್ವಲ್ಪ ಹೊತ್ತು ಆಡಲಿ” ಎನ್ನುವ ಸದುದ್ದೇಶದಿಂದ ಮರುದಿನಕ್ಕೆ ಬೇಕಾಗುವ ತರಕಾರಿಯನ್ನು ಮನೆಯ ಹೆಂಗಸರು ಹೆಚ್ಚಿ ಅಣಿಮಾಡಿ ಆತನ ಈ ಪವಿತ್ರ ಕೈಂಕರ್ಯಕ್ಕೆ ತಮ್ಮ ಸಹಾಯ ಹಸ್ತವನ್ನು ಚಾಚುತ್ತಿದ್ದರು. ನಮ್ಮ ಅತ್ತೆಯ

ಎಲೆಗಳ ಬಲೆಯಲ್ಲಿ… Read Post »

ಇತರೆ, ಪ್ರಬಂಧ

ವಿಚಿತ್ರ ಆಸೆಗಳು…ಹೀಗೊಂದಷ್ಟು,

ಲಲಿತ ಪ್ರಬಂಧ ವಿಚಿತ್ರ  ಆಸೆಗಳು…ಹೀಗೊಂದಷ್ಟು, ಸಮತಾ ಆರ್. “ಕಕ್ ಕಕ್ ಕಕ್ ಕೊಕ್ಕೋಕ್ಕೊ” ಅಂತ ಒಂದು ಬಿಳಿ,ಬೂದು,ಕೆಂಪು ಬಣ್ಣದ ರೆಕ್ಕೆ ಪುಕ್ಕಗಳ,ಅಂಗೈ ಅಗಲದ ಜುಟ್ಟಿದ್ದ,ಕಮ್ಮಿ ಅಂದರೂ ನಾಲ್ಕೈದು ಕೆಜಿ ತೂಗುತ್ತಿದ್ದ ಗಿರಿರಾಜ ಹುಂಜ ವೊಂದು ಹೆಜ್ಜೆಯ ಮೇಲೆ ಹೆಜ್ಜೆ ಇಡುತ್ತಾ ಗತ್ತಿನಿಂದ ,ಅತ್ತಿಂದಿತ್ತ ಇತ್ತಿಂದತ್ತ ಓಡಾಡುತ್ತಿದ್ದಾಗ,ಸುತ್ತ ನಾಲ್ಕೈದು ಮಕ್ಕಳನ್ನು ಸಾಮಾಜಿಕ ಅಂತರದಲ್ಲಿ ಕೂರಿಸಿಕೊಂಡು ವಿದ್ಯಾಗಮ ಕಾರ್ಯಕ್ರಮದ ಅಡಿಯಲ್ಲಿ ಕಲಿಸುತ್ತಿದ್ದ ನನಗೆ ಎಷ್ಟು ಪ್ರಯತ್ನ ಪಟ್ಟರೂ ಆ ಹುಂಜನಿಂದ ಕಣ್ಣು ಕೀಳ ಲಾಗಲಿಲ್ಲ. ನನ್ನಿಂದ ಅನತಿ ದೂರದಲ್ಲಿ ಕುಳಿತಿದ್ದ ನನ್ನ ಸಹೋದ್ಯೋಗಿ ಗೆಳತಿ ನಾನು ಹುಂಜವನ್ನೆ ನೋಡುತ್ತಿರುವುದನ್ನು ಕಂಡು,ನನ್ನ ಕೋಳಿ ಪ್ರೀತಿ ಅರಿತಿದ್ದ ಆಕೆ”ಮೇಡಂ ,ಕೋಳಿ ಅನಾಟಮಿ ಆಮೇಲೆ ಮಾಡಿದ್ರಾಯಿತು,ಈಗ ಮಕ್ಕಳ ಕಡೆ ಗಮನ ಕೊಡಿ” ಎಂದು ನಕ್ಕಾಗ ನಾಚಿಕೆ ಎನಿಸಿ ಮತ್ತೆ ಪಾಠದ ಕಡೆ ಮರಳಿದೆ. ಇದಾಗಿದ್ದು ಹೇಗೆಂದರೆ, ಕರೋನ ಕಾರಣ ದಿಂದಾಗಿ,ಶಾಲೆಗಳು ತೆರೆಯಲಾಗದೆ ಶಿಕ್ಷಕರೇ ಮಕ್ಕಳಿರುವ ಕಡೆ ಹೋಗಿ ಕಲಿಸುವ ವಿದ್ಯಾಗಮ ಎನ್ನುವ ಕಾರ್ಯಕ್ರಮದಡಿಯಲ್ಲಿ,ನನಗೆ ಮತ್ತು ನನ್ನ ಗೆಳತಿಗೆ  ಹಂಚಿಕೆಯಾದ ಏರಿಯಾಗಳಲ್ಲಿ, ಒಂದು ವಿಶಾಲವಾದ ತೋಟದ ಮನೆಯ ಅಂಗಳದಲ್ಲಿ ಮಕ್ಕಳ ಕೂರಿಸಲು ಒಂದು ವರಾಂಡ  ಬಳಸಿಕೊಳ್ಳಲು ಅವಕಾಶ ಸಿಕ್ಕಿತು.  ತೋಟದ ಮನೆ ಅಂದ ಮೇಲೆ ಕೇಳಬೇಕೆ,ಎಲ್ಲೆಲ್ಲೂ ಹಸಿರು,ಶುದ್ಧವಾದ ಗಾಳಿ,ಬೆಳಕು,ಕಲಿಕೆಗೆ ಒಳ್ಳೆಯ ವಾತಾವರಣ ಅನ್ನಿಸಿ,ನಾವಿಬ್ಬರೂ  ಬೇರೆ ಬೇರೆ ಗುಂಪು ಗಳಲ್ಲಿ ಕುಳಿತು ಕಲಿಸುತ್ತಿದ್ದಾಗಲೇ ಆ ಹುಂಜ ಬಂದು ನಮ್ಮ ಮನ ಸೆಳೆದದ್ದು. ಅಂತೂ ತರಗತಿಗಳ ಮುಗಿಸಿ ನಾವಿಬ್ಬರೂ ಮರಳಿ ಹಿಂದಿರುಗುವಾಗ ನಾನು ನನ್ನ ಗೆಳತಿಗೆ”ಅಲ್ಲರಿ, ತೋಟದ ಮನೆ ಇದ್ರೆ ಎಷ್ಟು ಚಂದ ಅಲ್ವಾ,ಹಸು,ಕುರಿ,ಕೋಳಿ ,ನಾಯಿ ,ಬೆಕ್ಕು ಎಲ್ಲಾ ಸಾಕೊಂಡು ಇರಬಹುದಿತ್ತು.ದಿನ ನಿತ್ಯ ಮನೆ ಕೆಲಸ,ಹೊರಗಿನ ಕೆಲಸ ಅಂತ ದಣಿಯೋದಕ್ಕಿಂತ ಎಷ್ಟೋ ವಾಸಿ”ಎಂದು ಕೊರಗಿದಾಗ ಅವರು”ಹೌದಪ್ಪ,ನನಗಂತೂ ಗಿಡ,ಮರ,ಪ್ರಾಣಿ,ಪಕ್ಷಿ ಎಲ್ಲಾ ಇರೋ ಮನೆ ಬೇಕು ಅನಿಸುತ್ತೆ, ಈ ಕಾಲದಲ್ಲಿ ಅದೆಲ್ಲ ನಮ್ಮ ಕೈ ಗೆಟುಕದ ಆಸೆಗಳೆ ಬಿಡಿ,ಈಗಿನ ರೇಟ್ ನಲ್ಲಿ ತೋಟದ ಮನೆ ಮಾಡಿದ ಹಾಗೆಯೇ”ಎಂದವರು, “ಮೇಡಂ ನನಗೆ ಒಂದು ವಿಚಿತ್ರ ಆಸೆಯಿತ್ತು,ಯಾರಿಗೂ ಹೇಳಿಲ್ಲ,ನಿಮಗೆ ಹೇಳ್ತೀನಿ ,ನಗೋದಿಲ್ಲ ತಾನೇ”ಎಂದಾಗ,ನನಗೆ ಕುತೂಹಲ ತಡೆಯಲಾರದೆ,”ಛೆ ಖಂಡಿತ ಇಲ್ಲ,ಅದೇನು ಹೇಳಿ “ಎಂದೆ. “ಅದೂ,ನನಗೆ ಚಿಕ್ಕಂದರಿಂದ ಒಂದು ಕೋಳಿ ಫಾರ್ಮ್ ಮಾಡೋ ಆಸೆ ಇದೆ,ಚೆನ್ನಾಗಿ ಕೋಳಿ ಸಾಕಿ,ಒಂದು ಆಪೆ ಆಟೋದಲ್ಲಿ ಹಾಕ್ಕೊಂಡು,ಅಂಗಡಿ ಅಂಗಡಿಗೆ,ನಾನೇ ಆಪೆ ಓಡಿಸ್ಕೊಂಡು ಹೋಗಿ ಸಪ್ಲೈ ಮಾಡ್ಕೊಂಡು,ವ್ಯವಹಾರ ಮಾಡ್ಬೇಕು ಅನ್ನಿಸುತ್ತಿತ್ತು,”ಎಂದಾಗ, ನಗೋದಿಲ್ಲ ಅಂತ ಹೇಳಿದ್ರೂ ನನ್ನಿಂದ ತಡೆಯಲಾರದೆ ನಗು ಕಟ್ಟೆಯೊಡೆದು ಹರಿಯಲಾರಂಭಿಸಿತು. ಅವರೂ ನಗುತ್ತಾ”ನೋಡಿದ್ರ ನಾನ್ ಹೇಳ್ಳಿಲ್ವ,ವಿಚಿತ್ರ ಆಸೆ ಅಂತಾ”ಅಂತ ಹೇಳಿ ತಾವೂ ನಗುವಿಗೆ ಜೊತೆಯಾದರು. ಮಾರನೆಯದಿನ ಶಾಲೆಯಲ್ಲೂ ಇದೇ ವಿಷಯದ ಚರ್ಚೆ ಮತ್ತು ನಗು.ಎಲ್ಲರ  ಮನದಾಳದ ಆಸೆಗಳು ಹೇಳಿಕೊಳ್ಳ ಲು ಆಗದಿರುವುವು ಆಚೆ ಬರಲಾರಂಭಿಸಿದವು. ನನ್ನ ಸಹೋದ್ಯೋಗಿಯೊಬ್ಬರು ಮೆಲು ಮಾತಿನ,ಮೃದು ಸ್ವಭಾವದ, ಸಾಂಪ್ರದಾಯಿಕ ಉಡುಗೆ ತೊಡುಗೆಗಳ,ದೇವರು ದಿಂಡಿರ ಮೇಲೆ ಅಪಾರ ನಂಬಿಕೆ ಭಕ್ತಿ ಹೊಂದಿರುವ  ಮಹಿಳೆ.ಅವರ ಆಸೆ ಮಾತ್ರ,ಅವರ ಬಾಯಲ್ಲೇ ಕೇಳಿದಂತೆ”ನನಗಂತೂ ಒಂದು ಬುಲ್ಲೆಟ್ ಬೈಕ್ ತೊಗೊಂಡು, ಬ್ಯಾಕ್ ಪ್ಯಾಕ್ ಹಾಕ್ಕೊಂಡು ಇಡೀ ಪ್ರಪಂಚ ಸುತ್ತಬೇಕು ಅನ್ನೋ ಆಸೆ ಇದೆ”ಎನ್ನುವುದನ್ನು ಕೇಳಿ,ಸಾಂಪ್ರದಾಯಿಕ ಮನಸ್ಸಲ್ಲಿ  ಆಧುನಿಕತೆಗೆ ತುಡಿಯುವ ಚೈತನ್ಯವೂ ಇದೆ ಎನ್ನಿಸಿ ಖುಷಿಯಾಯಿತು. ಮರುದಿನ ಗೆಳತಿಯೊಬ್ಬಳು ಕರೆಮಾಡಿ ಹರಟುತ್ತಿದ್ದಾಗ ಅವಳಿಗೆ ಈ ಆಸೆಗಳ ವಿಷಯಗಳ ಹೇಳಿದಾಗ ಅವಳು”ಅಯ್ಯೋ ಅದಕ್ಕೇನು,ನನಗಂತೂ ದಿನಕ್ಕೊಂದು ರೀತಿಯ ವಿಚಿತ್ರ ಆಸೆಗಳು ಬರುತ್ತವೆ,ಯಾರ ಹತ್ತಿರ ಹೇಳೋದು? ನನಗೆ ನಾನೇ ಸಮಾಧಾನ ಮಾಡಿಕೊಂಡು ಸುಮ್ಮನಾಗುತ್ತೇನೆ.ಮೊನ್ನೆ ದಿನ ಏನಾಯಿತು ಗೊತ್ತಾ ನನ್ನ ಗಂಡನ ಸ್ನೇಹಿತರೊಬ್ಬರ ಕುಟುಂಬ ಮೊದಲ ಬಾರಿ ನಮ್ಮ ಮನೆಗೆ ಯಾವುದೋ ಊರಿಂದ ಬರುತ್ತಾ ಇದ್ದರು,ನಾನು ಅಡಿಗೆ ಎಲ್ಲಾ ಮಾಡಿಕೊಂಡು ಸತ್ಕಾರ ಮಾಡಲು ರೆಡಿಯಾಗಿದ್ದೆ . ಮಧ್ಯಾಹ್ನದಷ್ಟರಲ್ಲಿ ಅವರೆಲ್ಲ ಬಂದು ನನ್ನ ಗಂಡ ಪರಸ್ಪರ ಪರಿಚಯ ಕೂಡ ಮಾಡಿ ಕೊಟ್ಟರು, ಇವರ ಆ ಸ್ನೇಹಿತ ಎಷ್ಟು ಮುದ್ದು ಮುದ್ದಾಗಿದ್ದ ಅಂದರೆ ನನಗೆ ಇದ್ದಕ್ಕಿದ್ದಂತೆ ಆ ಮನುಷ್ಯನನ್ನು ನೋಡಿ ಚಿಕ್ಕ ಮಕ್ಕಳನ್ನು ನೋಡಿದರೆ ಎತ್ತಿಕೊಳ್ಳಬೇಕು ಅನ್ನೋ ಆಸೆಯಾಗುವುದಿಲ್ಲವ ಆ ರೀತಿ ಅನ್ನಿಸಿಬಿಟ್ಟಿತು. ಈ ಹುಚ್ಚಿಗೇನು ಹೇಳುವುದು.ನನ್ನ ಗಂಡನಿಗೆ ಹೇಳುವ ಧೈರ್ಯ ನನಗಾಗಲಿಲ್ಲ.ಬಚ್ಚಲು ಮನೆಗೆ ಹೋಗಿ ಜೋರಾಗಿ ನಕ್ಕು ಸುಮ್ಮನಾದೆ” ಎಂದಾಗ ಸೋಜಿಗ ವೆನಿಸಿ”ಅಲ್ಲ ಕಣೇ ಯಾಕೆ ಹಾಗನ್ನಿಸಿದ್ದು,ನೀನು ನೋಡಿದರೆ ಗೌರಮ್ಮನ ಹಾಗೆ ಇರ್ತಿಯಾ ಯಾವಾಗಲೂ,ಅದು ಯಾಕೆ ಅವನ ಮೇಲೆ ಹಾಗೆ ಅನ್ನಿಸಿತು”ಅಂದಿದಕ್ಕೆ,”ಗೊತ್ತಿಲ್ಲ ಕಣೆ,ಏನೋ ಆ ಕ್ಷಣ ಹಾಗನ್ನಿಸಿತು,ಆಮೇಲೆ ಅವರೆಲ್ಲ ಹೋದ ಮೇಲೆ ಏನೂ ಅನ್ನಿಸಲಿಲ್ಲ”ಎಂದು ಸುಮ್ಮನಾದಳು. ಹುಡುಕುತ್ತಾ ಹೋದರೆ ಪ್ರತಿಯೊಬ್ಬರಲ್ಲೂ ಈ ರೀತಿ ” ಯಾರಿಗಾದರೂ ಹೇಳಿದರೆ  ನಗೆಪಾಟಲಿಗೆ ಈಡಾಗುವೆನೇನೋ ” ಅನ್ನಿಸುವ,ಮುಗ್ದ,ವಿಚಿತ್ರ ಬಯಕೆಗಳು ಇದ್ದೇ ಇರುತ್ತವೆ.ಮಕ್ಕಳಂತೂ ಬಿಡಿ, ಕೇಳುತ್ತಾ ಹೋದರೆ ಒಂದು ಕಿನ್ನರ ಪ್ರಪಂಚವನ್ನೇ ಸೃಷ್ಟಿ ಮಾಡುವಷ್ಟು ಕಥೆಗಳ ಹೇಳಿಯಾರು. ನನ್ನ ಮಕ್ಕಳಿಬ್ಬರೂ ಚಿಕ್ಕವರಿದ್ದಾಗ ನನ್ನ ಮನೆ ಕೆಲಸದ ಸಹಾಯಕ್ಕೆ ಸಾವಿತ್ರಮ್ಮ ಅಂತ ಒಬ್ಬರು ಮಹಿಳೆ ಬರುತ್ತಿದ್ದರು.ನನ್ನ ಶಾಲೆ ಮನೆಯಿಂದ ದೂರ ಇದ್ದುದರಿಂದ ದಿನವೂ ಬೆಳಿಗ್ಗೆ ಎದ್ದು ತರಾತುರಿಯಲ್ಲಿ ಹೊರಟು ಹೋಗುವ ಧಾವಂತದಲ್ಲಿರುತ್ತಿದ್ದ ನಾನು ಮಕ್ಕಳ ಮಾತುಗಳ ಕಡೆಗೆ ಅಷ್ಟು ಗಮನ ನೀಡಲು ಆಗದೆ,ಸುಮ್ಮನೆ ಅವರು ಹೇಳಿದ್ದಕ್ಕೆಲ್ಲಾ “ಹೂಂ”  ಗುಟ್ಟಿ ಕೊಂಡು ಇರುತ್ತಿದ್ದೆ.ಅವರು ಹೇಳಿದ್ದಕ್ಕೆ ಸರಿಯಾದ ಉತ್ತರ ನನ್ನಿಂದ ಬಾರದ ಕಾರಣ ಅವರ ಗಮನವೆಲ್ಲ ಸಾವಿತ್ರಮ್ಮನ ಕಡೆ ತಿರುಗಿತು. ಅವಳೋ ಕೆಲಸ ಮಾಡಿಕೊಂಡೇ ಮಕ್ಕಳ ಜೊತೆ ಮಾತೇ ಮಾತು.”ಹೌದಾ ಪುಟ್ಟಾ,ಆಮೇಲೆ,ಓಹ್ ಹಂಗಾ,ಅಯ್ಯೋ ನಂಗೆ ಗೊತ್ತೇ ಇರಲಿಲ್ಲ”ಹೀಗೆ ಮಕ್ಕಳ ಜೊತೆ ಮಕ್ಕಳಾಗಿ ಮಾತನಾಡುತ್ತಾ ಇರುತಿದ್ದವಳನ್ನು ಮಕ್ಕಳಿಬ್ಬರೂ ಬಹಳ ಹಚ್ಚಿಕೊಂಡು ಬಿಟ್ಟಿದ್ದರು.ಅವರಿಗೆ ಗೊತ್ತಿದ್ದ ಭೂಮಿ ಮೇಲಿರೋ ವಿಷಯವನ್ನೆಲ್ಲ ಅವಳ ಕಿವಿಗೆ ತುಂಬಬೇಕು.ನನಗೆ ಕೆಲವು ಬಾರಿ ಅವರ ಕುಚೇಷ್ಟೆಯ ಮಾತುಗಳಿಗೆ ರೇಗಿ ಹೋದರೂ ಅವಳು ಮಾತ್ರ ಒಂದು ದಿನವೂ ಬೇಸರಿಸಿದವಳೇ  ಅಲ್ಲ. ಆಗ ಒಂದು ದಿನ ಸಂಜೆ ಸುಮ್ಮನೆ ಕುಳಿತಿದ್ದಾಗ ಮಕ್ಕಳನ್ನು “ದೊಡ್ಡವರಾದ ಮೇಲೆ ಏನಾಗಬೇಕು ಅನ್ನೋ ಆಸೆ ಇದೆ “ಎಂದು ಕೆಣಕಿದೆ,ನನ್ನ ಮಗಳು ಪಟ್ ಅಂತ  ” ನಾನಂತೂ ದೊಡ್ಡವಳಾದ ಮೇಲೆ ಮನೆ ಮನೆಗೆ ಹೋಗಿ ಪಾತ್ರೆ ತೊಳೆಯುವ ಸಾವಿತ್ರಮ್ಮ ಆಗ್ತೀನಿ”ಅಂತ ಘೋಷಿಸಿಯೆ ಬಿಟ್ಟಳು.  ಆ ಉತ್ತರವನ್ನು ಕೇಳಿ ನಿಬ್ಬೆರಗಾದ ನನಗೆ ನಗು ತಡೆಯದಾದರೂ, ಮಕ್ಕಳ ನಿಷ್ಕಲ್ಮಶ ಮನಸ್ಸನ್ನು ಪ್ರೀತಿ  ಸೆಳೆಯುವಷ್ಟು ಮತ್ತೇನೂ ಸೆಳೆಯದು ಅನ್ನಿಸಿತು. ಮಾರನೇ ದಿನ ಸಾವಿತ್ರಮ್ಮನಿಗೆ ಹೇಳಿದಾಗ ಅವಳ ಕಣ್ಣಾಲಿಗಳು ತುಂಬಿ ಬಂದು”ಅಯ್ಯೋ ನನ್ನ ಕಂದಾ” ಎಂದು ಮಗಳ ಮುದ್ದಿಸಿದ್ದೇ ಮುದ್ದಿಸಿದ್ದು. ಇನ್ನು ಶಾಲೆಯಲ್ಲಿ ಮಕ್ಕಳನ್ನು “ದೊಡ್ಡವರಾದ ಮೇಲೆ ಏನಾಗಬೇಕು  ಅಂದುಕೊಂಡಿದ್ದೀರಿ ಎಂದು ಹೇಳಿ” ಎಂದು ಕೇಳಿದರೆ,ದೊಡ್ಡ ಮಕ್ಕಳಾದರೆ,”ಡಾಕ್ಟರ್,ಎಂಜಿನಿಯರ್, ಆರ್ಮಿ,ಡ್ರೈವರ್,ಪೊಲೀಸ್ ,ಟೀಚರ್”ಅಂತೆಲ್ಲ ಉತ್ತರ ಹೇಳಿದರೆ,ಚಿಕ್ಕವರಲ್ಲಿ, ಹುಡುಗರೆಲ್ಲ ದೊಡ್ಡ  ಲಾರಿಯಿಂದ ಶುರುವಾಗಿ ರೈಲಿನವರೆಗೆ ಪ್ರಪಂಚದಲ್ಲಿರುವ ಎಲ್ಲಾ ವಾಹನಗಳನ್ನು ಓಡಿಸುವವರೆ.ಕೋಳಿ ,ಮೀನಂಗಡಿ ಇಡುವವರು, ಐಸ್ಕ್ರೀಮ್ ಡಬ್ಬದಲ್ಲಿ ಹೊತ್ತು ಮಾರುವವರು,ಸೈಕಲ್ ರಿಪೇರಿ,ಮೊಬೈಲ್ ರಿಪೇರಿ ಅಂಗಡಿ ಇಡುವವರು ಎಲ್ಲಾ ಸಿಕ್ಕರು.ಹುಡುಗಿಯರಲ್ಲಿ ಮಾತ್ರ ಬಹಳಷ್ಟು ಜನಕ್ಕೆಅವರ ಟೀಚರ್ ಥರ ಆಗೋ ಆಸೆ. ಇಷ್ಟೆಲ್ಲಾ ಹೇಳಿ ಇನ್ನು ನನ್ನ ಆಸೆ ಹೇಳದೆ ಇದ್ದರೆ ಹೇಗೆ.ಆಗಿನ್ನೂ ಹೈಸ್ಕೂಲ್ ನಲ್ಲಿದ್ದೆ.ಅಪಾರ ಓದುವ ಹುಚ್ಚಿದ್ದ ಅಪ್ಪ ತರುವ ಪುಸ್ತಕಗಳನ್ನೆಲ್ಲಾ ನಾನೂ ಓದುವ ಚಪಲ.ಒಂದು ದಿನ ಅಪ್ಪ ಒಂದು ಚಿಕ್ಕ ಪುಸ್ತಕ ತಂದು ಅದನ್ನು ಓದಲು ಕುಳಿತವರು ಮುಗಿಯುವ ತನಕ ಮೇಲೇಳಲೆ ಇಲ್ಲ. ಮಾರನೇ ದಿನ ನಾನು ‘ ಇದ್ಯಾವ ಪುಸ್ತಕ’ ಅನ್ನೋ ಕುತೂಹಲದಿಂದಾಗಿ ನೋಡಿದರೆ,ಅದು ಜಪಾನಿನ ಕೃಷಿ ವಿಜ್ಞಾನಿ ಮಸನೊಬು ಫುಕುವೋಕ ರವರ ,ಪೂರ್ಣಚಂದ್ರ ತೇಜಸ್ವಿಯವರು ಅನುವಾದಿಸಿದ್ದ “ಒಂದು  ಹುಲ್ಲೆಸಳ  ಕ್ರಾಂತಿ”ಪುಸ್ತಕ. ಓದಲು ಕುಳಿತಿದ್ದೆ ಬಂತು,ಮುಗಿಸುವ ತನಕ   ಕೈಬಿಡಲು    ಮನಸ್ಸಾಗಲಿಲ್ಲ.  ಆ ಪುಸ್ತಕ ಒಳಗೊಂಡಿದ್ದ , ಫುಕುವೊಕರವರ, ‘ನಿಸರ್ಗದೊಂದಿಗೆ ಹೊಂದಿಕೊಂಡು ಮನುಷ್ಯ ನೆಮ್ಮದಿ ಯಾಗಿ ಹೇಗೆ ಬದುಕಬಹುದೆಂಬ ವಿಚಾರ ಧಾರೆ,ಅವರ ನೈಸರ್ಗಿಕ ಕೃಷಿ ಪದ್ಧತಿ ಅನುಭವಗಳು , ಮನುಷ್ಯ ಹೇಗೆ ಪ್ರಕೃತಿಯ ಒಂದು ಭಾಗ ಮಾತ್ರ ‘ ಎಂದೆಲ್ಲ ವಿವರಿಸಿದ್ದ ವಿಷಯಗಳು  ,ಆಗ ಎಷ್ಟು ಇಷ್ಟವಾಯಿತೆಂದರೆ ತೊಗೊ ಅವತ್ತಿನಿಂದಲೆ ಕನಸು ಮನಸ್ಸಲ್ಲೆಲ್ಲ ನನ್ನದೇ  ಆದ ಒಂದು ನೈಸರ್ಗಿಕ ಕೃಷಿ ಪದ್ಧತಿಯ ತೋಟ ಕಾಡ ಲಾರಂಭಿಸಿತು.ಆದರೆ ಯಾರಿಗಾದರೂ ಹೇಳುವುದುಂಟ! ಶಾಲೆಯಲ್ಲಿ ಆಗ ಒಂದು ಪರೀಕ್ಷೆಯಲ್ಲಿ ಕೇಳಿದ್ದ “ನಿಮ್ಮ ಭವಿಷ್ಯದ ಕನಸು “ಅನ್ನೋ ಬಗ್ಗೆ ಪ್ರಬಂಧ ಬರೆಯಲು ಹೇಳಿದ್ದಾಗ, ಪುಟಗಟ್ಟಲೆ ನನ್ನ ತೋಟದ ಕನಸಿನ ಬಗ್ಗೆ ಬರೆದಿದ್ದು ಬರೆದಿದ್ದೇ.ಆದರೆ ಆ ಕನಸು ನನಸಾಗುವುದು ಸಾಧ್ಯವೇ? ತವರು ಮನೆ ಜಮೀನು ಅಣ್ಣ ತಮ್ಮಂದಿರದ್ದು,ಗಂಡನ ಮನೆ ಜಮೀನು ಗಂಡನದ್ದು.ಆಸೆಯ ಹೇಳಿದರೆ ಸಿಗುವ ಉತ್ತರ “ನಿನಗೆ ತಲೆ ಕೆಟ್ಟಿದೆ”ಅಂತ. ಬಹುಶಃ ಕನಸು ಕಾಣುವುದು,ಆಸೆಗಳ ಪಡುವುದು ಹೆಣ್ಣು ಗಂಡುಗಳಿಬ್ಬರಿಗೂ ಸಾಮಾನ್ಯವಾಗಿ ಬಂದಿರುವ ಗುಣಗಳೇ.  ಆದರೆ ಗಂಡು ಮಕ್ಕಳ ಆಸೆ ಕನಸುಗಳೆಂದೂ ವಿಚಿತ್ರ ವೆನಿಸುವುದಿಲ್ಲ. ಏನಾದರೂ ಭಿನ್ನ ಮಾರ್ಗದಲ್ಲಿ ಯೋಚಿಸಿ ಅದನ್ನು ಸಾಕಾರ ಮಾಡಿಕೊಳ್ಳಲು ಹೊರಟರೆ ಅವರು ಕಷ್ಟ ಪಟ್ಟು ಕೆಲಸ ಮಾಡಿದರೆ ಸಾಕು, ಅಂದುಕೊಂಡಿದ್ದೆಲ್ಲ ಸಿಕ್ಕರೂ ಸಿಗಬಹುದು.ಆದರೆ ಹೆಣ್ಣು ಮಕ್ಕಳ ಅಸಾಮಾನ್ಯ ಕನಸುಗಳು ಬಾಯಿಂದ ಆಚೆ ಬರಲೂ ಅಸಾಧ್ಯ ಧೈರ್ಯ ಬೇಕು,ಅಕಸ್ಮಾತ್ ಹೇಳಿಕೊಂಡರೂ ಅದನ್ನು ಸಹಜವಾಗಿ ಸ್ವೀಕರಿಸುವುದು ಎಲ್ಲರಿಂದ ಆಗದು. ಬಹುಶಃ ಮೇಲ್ವರ್ಗದವರಲ್ಲಿ, ಇಲ್ಲವೇ ಎಲ್ಲೋ ಕೆಲವರು  ಅದೃಷ್ಟವಂತರಾಗಿದ್ದಲ್ಲಿ, ಗಟ್ಟಿ ಎದೆಯ  ಧೈರ್ಯಶಾಲಿ ಗಳಾಗಿದ್ದಲ್ಲಿ, ಇಲ್ಲವೇ ಪ್ರೋತ್ಸಾಹಿಸುವ ಪೋಷಕರಿದ್ದರೆ ಮಾತ್ರ ವಿಚಿತ್ರ ಕನಸುಗಳು ನನಸಾಗುವುದು ಸಾಧ್ಯವೇನೋ.     ಬಹುತೇಕ ಹೆಣ್ಣು ಮಕ್ಕಳಿಗೆ ಸಮಾಜ ನಿರ್ಮಿಸಿರುವ ಚೌಕಟ್ಟಿನೊಳಗೆ,ಆರಾಮದಾಯಕ ಕ್ಷೇತ್ರಗಳಲ್ಲೇ ತಮ್ಮ ತಮ್ಮ ಜೀವನ ರೂಪಿಸಿಕೊಳ್ಳುವ ಸಲಹೆ ಸೂಚನೆಗಳು ಸಿಗುವುದೇ ಹೆಚ್ಚು.ಅದರಾಚೆ ಯೋಚಿಸಿದರೆ ಕೆಲವು “ಅದು ಹೆಂಗಸರಿಗೆ ಸಾಧ್ಯವಿಲ್ಲ,ಅವರಿಂದಾಗದು”ಎಂದಾದರೆ, ಹಲವು  ನಗೆಪಾಟಲಿಗೆ ಒಳಗಾಗುವ ವಿಷಯಗಳೇ. ಎಲ್ಲೋ ಅಲ್ಲೊಂದಿಷ್ಟು ಇಲ್ಲೊಂದಿಷ್ಟು ಹೊರತಾದ ಉದಾಹರಣೆಗಳು  ಸಿಗಬಹುದೇನೋ.            ಅನಿವಾರ್ಯವಾಗಿ ಬೇರೆ ದಾರಿ ಕಾಣದೆ ಜೀವನೋಪಾಯಕ್ಕಾಗಿ ಕೆಲವು ಹೆಂಗಸರು ಗಂಡಸರು ಮಾಡುವ ವೃತ್ತಿಗಳನ್ನು,ಉದಾಹರಣೆಗೆ,ಆಟೋ ಡ್ರೈವರ್, ಬಸ್, ಟ್ರೈನ್  ಡ್ರೈವರ್ ಗಳಂತಹ ಕೆಲಸ ಕೈಗೊಂಡಿರುವ ಉದಾಹರಣೆಗಳಿವೆ,ಆದರೆ ಅದೇ ವೃತ್ತಿ ಕೈಗೊಂಡು ಮಾಡುತ್ತೇನೆ ಅನ್ನುವ ಮನೋಭಾವ ಹೆಂಗಸರಲ್ಲಿಯೇ  ಬರುವುದು ಅಪರೂಪದಲ್ಲಿ ಅಪರೂಪವೇ.ಅದನ್ನು ಸಹಜವಾಗಿ ಯಾರೂ ತೆಗೆದುಕೊಳ್ಳುವುದಿಲ್ಲ.ಯಾರಾದರೂ ಹುಡುಗಿ ಪೈಲಟ್ ಆದರೆ ಇಲ್ಲವೇ ಸೈನ್ಯ ಸೇರಿದರೆ ಅದು ದೊಡ್ಡ ಸಾಧನೆ ಎಂದು ಬಿಂಬಿಸುವುದುದಕ್ಕಿಂತ ಸಹಜವಾಗಿ ಯಾಕೆ ತೆಗೆದುಕೊಳ್ಳಬಾರದು. ಎಲ್ಲಾ ರೀತಿಯ ವಿದ್ಯಾಭ್ಯಾಸದ ಕೋರ್ಸ್ ಗಳು,ವೃತ್ತಿ ಪರ ತರಬೇತಿಗಳು,ಉದ್ಯೋಗಗಳು ಎಲ್ಲರಿಗೂ ಸಮಾನ ಅನ್ನುವ ಮನೋಭಾವ ಸಹಜವಾಗಿ  ಮಕ್ಕಳಲ್ಲಿ ಯಾಕೆ ಬೆಳೆಸಬಾರದು.? ಆ ಸಮಾನತೆಯ ಸಮಾಜ ನಿರ್ಮಾಣ ಬಹುಶಃ ಸಧ್ಯಕ್ಕಂತೂ ಸಾಧ್ಯವಿಲ್ಲ. ಅಲ್ಲಿಯವರೆಗೆ  ಇರುವ ಕನಸುಗಳ,  ಆಸೆಗಳ   ಅದುಮಿ. ಇಟ್ಟುಕೊಳ್ಳಲಾದೀತೇ. ಅವುಗಳಿಗೆ ಪರ್ಯಾಯವಾಗಿ ಬೇರೆ ಹವ್ಯಾಸಗಳ ಬೆಳೆಸಿಕೊಂಡು ಖುಷಿ ಪಡುವವರು ಇದ್ದಾರೆ.ಬುಲ್ಲೆಟ್ ಓಡಿಸಲಾಗದಿದ್ದರೂ ಸ್ಕೂಟಿ,ಕಾರ್ ಓಡಿಸುವುmದು ಕಲಿತು ಓಡಾಡುವುದು ಇದ್ದೇ ಇದೆ. ಪುಕುವೋಕಾನ ತೋಟ ನನ್ನ ಮನೆಯ ಬಾಲ್ಕನಿಯ ಕುಂಡಗಳಲ್ಲಿ ಅರಳುತ್ತಿದೆ.ನಾನಂತೂ ಕುಂಡದಲ್ಲಿ ಇರುವ ಗಿಡಗಳ ಜೊತೆಗೆ ಬೇರೆ ಯಾವ ಗಿಡ ಹುಟ್ಟಿದರೂ ಅದ ಕೀಳಲಾರೆ.ಗಿಡಗಳಿಗೆ ರೋಗ ,ಕೀಟ ಬಾಧೆ ತಗುಲಿದರೆ ಯಾವ ಕೀಟನಾಶಕಗಳ ಕೂಡ ಬಳಸುವುದಿಲ್ಲ.ಗಿಡ ಗಟ್ಟಿಯಾಗಿದ್ದರೆ ತಾನೇ ಬದುಕುತ್ತದೆ ಇಲ್ಲದೇ ಹೋದರೆ ಇನ್ನೊಂದು ಗಿಡಕ್ಕೆ ದಾರಿ ಮಾಡಿಕೊಟ್ಟು ಮಣ್ಣು ಸೇರುತ್ತದೆ. ಈ ರೀತಿ ವರುಷಗಟ್ಟಲೆ ಕುಂಡದ ಸೀಮಿತ ಮಣ್ಣು,ಬಾಲ್ಕನಿಯ ಕೊಂಚ

ವಿಚಿತ್ರ ಆಸೆಗಳು…ಹೀಗೊಂದಷ್ಟು, Read Post »

ಇತರೆ, ಗಜಲ್ ವಿಶೇಷ

ಗಜಲ್ ಸಾಹಿತ್ಯ ಮತ್ತು ಸವಾಲುಗಳು

ಲೇಖನ ಗಜಲ್ ಸಾಹಿತ್ಯ ಮತ್ತು ಸವಾಲುಗಳು ಡಾ. ಮಲ್ಲಿನಾಥ ಎಸ್.ತಳವಾರ ಪ್ರಕೃತಿಯನ್ನೊಮ್ಮೆ ಅವಲೋಕಿಸಿದಾಗ ‘ಮನುಷ್ಯ’ ನ ವಿಕಾಸ ದಿಗ್ಭ್ರಮೆಯನ್ನು ಮೂಡಿಸುತ್ತದೆ. ಅದೊಂದು ರೀತಿಯಲ್ಲಿ ಪವಾಡವೇ ಸರಿ ! ಎಲ್ಲ ಪ್ರಾಣಿ ಸಂಕುಲಗಳಿಂದ ಆತನು ವಿಭಿನ್ನವೆನಿಸಿದ್ದು ಮಾತ್ರ ಭಾಷೆಯ ಬಳಕೆಯಿಂದ. ತನ್ನ ಭಾವನೆಗಳನ್ನು ಸಶಕ್ತವಾಗಿ ಅಭಿವ್ಯಕ್ತಿಪಡಿಸಲು ‘ಭಾಷೆ’ ಯನ್ನು ಸಾಧನವನ್ನಾಗಿ ಮಾರ್ಪಡಿಸಿಕೊಂಡನು. ಈ ಭಾಷೆಯ ಉದಯದೊಂದಿಗೆ ಸಾಹಿತ್ಯವೂ ಉದಯವಾಯಿತು ಎನ್ನಬಹುದು. “ಭಾಷೆಯ ಉದಯವೆಂದರೆ ಸಾಹಿತ್ಯದ ಉದಯವೆ ಸರಿ” ( ಕನ್ನಡ ಸಾಹಿತ್ಯ ಚರಿತ್ರೆ, ಪು- ೦೧) ಎಂಬ ರಂ. ಶ್ರೀ. ಮುಗುಳಿಯವರ ಮಾತು ಇದನ್ನೇ ಪುಷ್ಟಿಕರಿಸುತ್ತದೆ.  ಜ್ಞಾನ ಸಂಪಾದನೆ ಮತ್ತು ಜ್ಞಾನ ಪ್ರಸಾರಗಳ ಅತ್ಯಂತ ಪ್ರಬಲ ಪರಿಣಾಮಕಾರಿ ಮಾಧ್ಯಮವೇ ಸಾಹಿತ್ಯ. ಇದು ಆಹ್ಲಾದಕರವೂ, ಆಕರ್ಷಕವೂ, ಜೀವನ ಸೌಂದರ್ಯದಾಯಕವೂ, ಸಂಸ್ಕೃತಿ ಸಂಪನ್ನವೂ, ಬುದ್ಧಿ ಮನಸ್ಸುಗಳ ವರ್ಧಕವೂ ಆಗಿದೆ. ಈ ನೆಲೆಯಲ್ಲಿ “ರಸಾನುಭವದ ಸುಂದರವಾದ ಅಭಿವ್ಯಕ್ತಿಯೇ ಸಾಹಿತ್ಯ”.(ರಂ. ಶ್ರೀ. ಮುಗುಳಿ,  ಕನ್ನಡ ಸಾಹಿತ್ಯ ಚರಿತ್ರೆ, ಪು- ೦೧) ಪಾದರಸದಂತೆ ಪರಿವರ್ತನಶೀಲವಾದ ಪ್ರಪಂಚದ ಜ್ಞಾನ, ವಿಜ್ಞಾನ, ಸಂಸ್ಕೃತಿಗಳನ್ನು ತಲೆಮಾರಿನಿಂದ ತಲೆಮಾರಿಗೆ ಪಸರಿಸುತ್ತ, ಮನುಕುಲದ ಜೀವನವನ್ನು ಪುಷ್ಟಿಕರಿಸುತ್ತ, ತುಷ್ಟಿಗೊಳಿಸುತ್ತ, ವಿಕಾಸಗೊಳಿಸುತ್ತ, ಪರಿಪೂರ್ಣತೆಯ ಕಡೆಗೆ ಕರೆದೊಯ್ಯುವುದೇ ಸಾಹಿತ್ಯದ ಪರಮಗುರಿ.       ಸಾಹಿತ್ಯವೂ ಬದುಕಿನಂತೆಯೇ ಬೆಳೆಯುತ್ತದೆ. ಅದರಲ್ಲಿಯೂ ನಮ್ಮ ಬಾಳಿನಲ್ಲಿ ಇರುವಂತೆಯೇ ಏಳುಬೀಳುಗಳು, ಸಂಪ್ರದಾಯಗಳು, ಅವುಗಳ ವಿರುದ್ಧ ಕ್ರಾಂತಿ… ಇವೆಲ್ಲವೂ ಉಂಟು. ಸಾಹಿತ್ಯ ಆಗಸದಷ್ಟು ವಿಶಾಲ, ಸಾಗರದಷ್ಟು ಆಳವಾದ ಹರವು ಹೊಂದಿದೆ. ವಿಷಯವಸ್ತು, ಶೈಲಿ, ಅಭಿವ್ಯಕ್ತಿಯ ಹಿನ್ನೆಲೆಯಲ್ಲಿ ಸಾಹಿತ್ಯವು ಹತ್ತು ಹಲವಾರು ಪ್ರಕಾರಗಳನ್ನು ಹೊಂದಿದೆ. ಜೀವನ ಬದಲಾದಂತೆ ಸಾಹಿತ್ಯವೂ ಬದಲಾಗುತ್ತದೆ. ಹೊಸದಾದುದು ಕಾಲ ಕಳೆದಂತೆ ಹಳೆಯದೆನಿಸಿಕೊಂಡು ಸಂಪ್ರದಾಯವಾಗಿಬಿಡುತ್ತದೆ. ಅದರ ವಿರುದ್ಧ ಕ್ರಾಂತಿಯಾಗಿ, ದಂಗೆಯಾಗಿ ಹಳೆಯದರ ಸ್ಥಾನಕ್ಕೆ ಹೊಸದು ಬಂದು ನಿಲ್ಲುತ್ತದೆ. ಈ ಹೊಸದು ಕೂಡ ಮುಂದೆ ಮತ್ತೊಂದು ಹೊಸದಕ್ಕೆ ದಾರಿ ಮಾಡಿಕೊಡುತ್ತದೆ. ಕನ್ನಡ ಸಾಹಿತ್ಯ ಚರಿತ್ರೆಯನ್ನು ಗಮನಿಸಿದರೂ- ಚಂಪೂ, ವಚನ, ರಗಳೆ, ಷಟ್ಪದಿ, ಸಾಂಗತ್ಯ…. ಮುಂತಾದ ಅನೇಕ ರೀತಿಗಳ ಮೂಲಕ ಸಾಹಿತ್ಯ ಬೆಳೆದು ಬಂದಿದೆ. “ಒಂದು ನಿರ್ದಿಷ್ಟ ಸಾಹಿತ್ಯ ಪರಂಪರೆಯು ತನ್ನ ಸಾಧ್ಯತೆಗಳನ್ನು ತೀರಿಸಿಕೊಂಡು ಜಡವಾಗುವ ಹೊತ್ತಿಗೆ ಇನ್ನೊಂದು ಸಾಹಿತ್ಯ ಪರಂಪರೆಯ ಉಗಮಕ್ಕೆ ಕಾರಣವಾದ ಅಂಶಗಳನ್ನು ತನ್ನ ಒಡಲಲ್ಲಿ ಧರಿಸಿಕೊಂಡಿರುತ್ತದೆ” (ಶ್ರೀಧರ್ ಹೆಗಡೆ ಭದ್ರನ್ (ಸಂ) ; ಸಾಹಿತ್ಯ ಚಳುವಳಿಗಳು; ಪು- ೪೩) ಎಂಬ ಪುರುಷೋತ್ತಮ ಬಿಳಿಮಲೆಯವರ ಮಾತು ಸಾಹಿತ್ಯದ ಎಲ್ಲ ಪ್ರಕಾರಗಳಿಗೂ, ಎಲ್ಲ ಘಟ್ಘಗಳಿಗೂ ಅನ್ವಯಿಸುತ್ತದೆ. ಈ ಸಾಹಿತ್ಯಕ್ಕೆ ಭಾಷೆಯ, ಗಡಿಯ ಹಂಗು ಇಲ್ಲ. ಇದೊಂದು ‘ಸರ್ವಾಂತರ್ಯಾಮಿ’. ಇದಕ್ಕೊಂದು ಉತ್ತಮ ಉದಾಹರಣೆಯೆಂದರೆ ‘ಗಜಲ್’. ಈ ಗಜಲ್ ನಷ್ಟು ವಿಶ್ವವ್ಯಾಪಿಯಾದ ಸಾಹಿತ್ಯದ ಮತ್ತೊಂದು ಪ್ರಕಾರವನ್ನು ಜಗತ್ತಿನ ಮತ್ಯಾವುದೇ ಸಾಹಿತ್ಯದಲ್ಲಿಯೂ‌ ಕಾಣಲಾಗದು..! ಇದು ಅರೆಬಿಕ್, ಫಾರಸಿ ಮತ್ತು ಭಾರತೀಯ ಸಂಸ್ಕೃತಿಗಳ ಹದವಾದ ಮಿಶ್ರಣವಾಗಿದೆ.      ‘ಗಜಲ್’ ಉರ್ದು ಕಾವ್ಯದ ಅತ್ಯಂತ ಜನಪ್ರಿಯ ಹಾಗೂ ಗಂಭೀರ ಸಾಹಿತ್ಯ ರೂಪ. ಇದನ್ನು ಉರ್ದು ಕಾವ್ಯದ ರಾಣಿ ಎಂದು ಕರೆಯುತ್ತಾರೆ. “ಗಜಲ್ ಉರ್ದು ಕಾವ್ಯದ ಕೆನೆ; ಘನತೆ, ಗೌರವ, ಪ್ರತಿಷ್ಠೆಗಳ ಪ್ರತೀಕ. ಗಜಲ್ ಪ್ರೇಮ ಸಾಮ್ರಾಜ್ಞಿ, ರಸಜಲಧಿ, ಬದುಕಿನ ರುಚಿ ಮತ್ತು ಬಟ್ಟೆ; ಆತ್ಮಾನಂದದ ತಂಬೆಳಕು” ಎಂದಿದ್ದಾರೆ ಶಾಂತರಸರು. (ಗಜಲ್ ಮತ್ತು ಬಿಡಿ ದ್ವಿಪದಿ : ಪು- ೪೩) ಗಜಲ್ ಅತ್ಯುತ್ತಮವೂ ಸುಖತಮವೂ ಆದ ಮನಸ್ಸಿನ ಸೌಂದರ್ಯಯೋಗಿ. ಜೀವಮಾನದ ಸುಖತಮವಾದ ಅತ್ಯುತ್ತಮ ಮುಹೂರ್ತಗಳಲ್ಲಿ ಹಾಡುವ ಆತ್ಮ ಗೀತಾಂಜಲಿಯಾಗಿದೆ. ನಮ್ಮ ಹೃದಯವನ್ನು ವಿಕಸಿತವಾಗುವಂತೆ ಮಾಡಿ ಜಗತ್ತನ್ನು ನಮಗೆ ಒಲಿಸುತ್ತದೆ. ಅದರ ದಿವ್ಯ ಸ್ಪರ್ಶದಿಂದ ಸರ್ವವೂ ಮನೋಹರವಾಗಿ ಪರಿಣಮಿಸುತ್ತದೆ. ಮಿಂಚಿ ಮಾಯವಾಗುವ ಪರಮಾನಂದವನ್ನು ಅವಿಚ್ಛಿನ್ನವಾಗುವಂತೆ ಮಾಡುತ್ತದೆ.      ಫಾರಸಿ ಮೂಲದಿಂದ ಹರಿದು ಬಂದ ಈ ಗಜಲ್ ಗಂಗೋತ್ರಿ ಭಾರತೀಯ ಭಾಷೆಗಳಲ್ಲಿ ಉರ್ದು, ಸಿಂಧಿ, ಗುಜರಾತಿ, ಪಂಜಾಬಿ, ಹಿಂದಿ, ಮರಾಠಿ, ಕನ್ನಡ ಹಾಗೂ ಇನ್ನಿತರ ಭಾಷೆಗಳಲ್ಲಿಯೂ ಸಮೃದ್ಧ ಕಾವ್ಯ ಕೃಷಿಗೆ ಕಾರಣವಾಗಿದೆ. ಇದು ತನ್ನದೇ ಆದ ಲಯ, ನಿಯಮ ಹಾಗೂ ಲಕ್ಷಣಗಳನ್ನು ಹೊಂದಿದೆ. ಇದರ ಕುರಿತು ಶಾಂತರಸ, ಜಂಬಣ್ಣ ಅಮರಚಿಂತ, ಸಿದ್ದರಾಮ ಹಿರೇಮಠ, ಚಿದಾನಂದ ಸಾಲಿ, ಗಿರೀಶ್ ಜಕಾಪುರೆ, ಶ್ರೀದೇವಿ ಕೆರೆಮನೆ, ಅಲ್ಲಗಿರಿರಾಜ…. ಮುಂತಾದ ಗಜಲ್ ಗಾರುಡಿಗರು ಅನುಷಂಗಿಕವಾಗಿ ಚರ್ಚಿಸಿದ್ದರಾದರೂ ‘ಸಮಗ್ರ ಆಕರ ಗ್ರಂಥ’ ದ ಕೊರತೆ ನವ ಉತ್ಸಾಹಿ ‘ಗಜಲ್ ಗೋ’ ರವರನ್ನು ಕಾಡುತ್ತಿದೆ. ಅಂತೆಯೇ ಇಂದು ‘ಗಜಲ್ ಗೋಯಿ’ ತುಂಬಾ ಸವಾಲಿನಿಂದ ಕೂಡಿದೆ. “ಗಜಲ್ ಸಹಜವಾಗಿ ಒಲಿಯುವುದಿಲ್ಲ. ಮನಬಂದಂತೆ ಬರೆಯಲು ಇದು ಮುಕ್ತ ಛಂದವೂ ಅಲ್ಲ. ಇಲ್ಲಿ ನಿಯೋಜಿತವಾದ ಛಂದಸ್ಸು ಇದೆ. ಹಲವಾರು ಪ್ರಕಾರದ ವೃತ್ತಗಳು ಇವೆ. ಅವು ಯಾವುದನ್ನು ನಾವು ಕನ್ನಡದವರು ಗಮನಿಸುತ್ತಿಲ್ಲ” ( ಶ್ರೀಮತಿ ಪ್ರಭಾವತಿ ಎಸ್. ದೆಸಾಯಿ : ಭಾವಗಂಧಿ: ಪು- ೧೨) ಎಂದು ಗಿರೀಶ್ ಜಕಾಪುರೆಯವರು ಆತಂಕ ವ್ಯಕ್ತಪಡಿಸಿದ್ದಾರೆ. ಕನ್ನಡ ಸಾರಸ್ವತ ಲೋಕದಲ್ಲಿ ಇಂದು ಗಜಲ್ ಪರಂಪರೆ ಹುಲುಸಾಗಿ ಬೆಳೆಯುತ್ತಿದೆಯಾದರೂ ಛಂದೋ ನಿಯಮವನ್ನು ಪಾಲಿಸದೆ ಇರುವುದು ಆತಂಕದ ಜೊತೆಗೆ ವಿಷಾದವನ್ನು ಮೂಡಿಸುತ್ತಿದೆ. ಈ ಬಗ್ಗೆ ಕವಿ ಮಜಹರ್ ಇಮಾಮ್ ಅವರ ಒಂದು ಷೇರ್ ಅನ್ನು ಇಲ್ಲಿ ಗಮನಿಸಬಹುದು.  “ಕಹನೆ ಕೊ ಯೆ ಗಜಲ್ ಹೈ, ಕ್ಯಾ ಗಜಲ್ ಹೈ ಜಿಸೆ ನಜ್ಮ್ ಕಹಾ ನ ಜಾಯೆ, ನ ತರಾನಾ ಕಹಾ ಜಾಯೆ” ಇದರಲ್ಲಿ ಅವರು ಗಜಲ್ ಹೆಸರಿನಲ್ಲಿ ಬರುತ್ತಿರುವ ಗಜಲ್ ಅಲ್ಲದ ಕಾವ್ಯದ ಬಗ್ಗೆ ಬರೆಯುತ್ತ ಇಂತಹ ರಚನಾ ವಿಧಾನವನ್ನು ಖಂಡಿಸಿದ್ದಾರೆ.         ‘ಗಜಲ್’ ಎಂದರೆ ಒಂದು ಅರ್ಥ ನಲ್ಲೆಯೊಂದಿಗೆ ಸಂವಾದ, ಮತ್ತೊಂದು ಅರ್ಥ ಸಿಕ್ಕಿಬಿದ್ದ ಜಿಂಕೆಯ ಆಕ್ರಂದನ. ಈ ಎರಡೂ ಅರ್ಥಗಳ ಭಾವನಾ ವಿಶೇಷಗಳೂ ಗಜಲ್ ಪ್ರಕಾರದೊಳಗೆ ಆಳವಾಗಿ ಬೇರೂರಿವೆ. ಈ ಕಾರಣಕ್ಕಾಗಿಯೇ “ಗಜಲ್ ಎಂದರೆ ಪ್ರೇಮಗೀತೆ ಮಾತ್ರ ಎಂಬ ತಪ್ಪು ಕಲ್ಪನೆ ವ್ಯಾಪಕವಾಗಿ ಹರಡಿರುವುದು” (ಡಿ. ಆರ್. ನಾಗರಾಜ್ (ಸಂ) ; ಉರ್ದು ಸಾಹಿತ್ಯ ; ಪು- XXVI) ಎಂಬ ಡಿ. ಆರ್. ನಾಗರಾಜ್ ರವರ ಮಾತು ಉಲ್ಲೇಖನೀಯ. ಪ್ರೇಮ ಎನ್ನುವುದು ಒಂದು ಭಾಷೆ, ಒಂದು ನಿರ್ದಿಷ್ಟ ಮನಸ್ಥಿತಿ. ಅಲ್ಲಿ ಎಲ್ಲ ವಸ್ತುಗಳು, ತಾತ್ವಿಕ ಸಂಗತಿಗಳು, ಅನುಭವಗಳು ಶೋಧನೆಗೆ ಒಳಗಾಗುತ್ತವೆ. ಈ ಹಿನ್ನೆಲೆಯಲ್ಲಿ “ಜಗದಲ್ಲಿರುವುದು ವಿರಹದ ನೋವೊಂದೆ ಅಲ್ಲ, ಇನ್ನೆಷ್ಟೋ ನೋವುಗಳಿವೆ” ಎಂಬ ಫೈಜ್ ಅಹ್ಮದ್ ಫೈಜ್ ರವರ ಹೇಳಿಕೆ ಮಹತ್ವವನ್ನು ಪಡೆದುಕೊಳ್ಳುತ್ತದೆ.      ಮಿರ್ಜಾ ಗಾಲಿಬ್ ಉರ್ದು ಗಜಲ್ ಪರಂಪರೆಯ ಹೆಮ್ಮೆಯ ವಾರಸುದಾರರು. ಗಾಲಿಬ್ ನ ಉರ್ದು ‘ದಿವಾನ್’ ದಲ್ಲಿ ಹತ್ತು ಹಲವು ವೈವಿಧ್ಯಮಯ ವಿಷಯಗಳ ಸಂಗಮವಿದೆ. ಅವುಗಳಲ್ಲಿ ಕೆಲವೊಂದು ಉದಾಹರಣೆಗಾಗಿ… “ಸಮಸ್ತ ವಿಶ್ವದ ವಸ್ತುಕೋಟಿಯಲಿ ನೀನಿಲ್ಲದೆ ಇಲ್ಲಾ ಅದರೂ ಒಂದು ವಸ್ತುವು ನಿನಗೆ ಸಮ-ಸಾಟಿಯೆ ಅಲ್ಲಾ” “ನನ್ನ ದೃಷ್ಟಿಯಲ್ಲಿ ಜಗವೆಂಬುದು ಮಕ್ಕಳ ಚೆಲ್ಲಾಟ ನನ್ನ ಎದುರಿನಲಿ ಹಗಲೂ ಇರುಳೂ ನಡೆಯುವ ನಗೆಯಾಟ” “ಕಾಯಿಲೆ ಬಿದ್ದರೆ ನೋಡಿಕೊಳ್ಳಲಿಕ್ಕೆ ಯಾರೂ ಬೇಡ ನನ್ನ ಬಳಿ ಕೊನೆಯುಸಿರೆಳೆದರೆ ಅತ್ತು ಕರೆಯಲಿಕೆ ಯಾರೂ ಇರದಿರಲಿ”  “ಬದುಕಿನ ತಳಹದಿಯಲ್ಲಿಯೆ ಅವಿತಿವೆ ನಾಶದ ಬೀಜಗಳು ರೈತನ ಬೆವರೇ ಸಿಡಿಲಾಗುತ ಬೆಳೆ ಸುಡುವುದು ಸುಗ್ಗಿಯೊಳು”      ಗಜಲ್ ಮಾನವ ಪ್ರೇರಿತ, ನಿಸರ್ಗದ ಆಧಾರಿತ ಎಲ್ಲ ವಿಷಯಗಳನ್ನು ತನ್ನ ಮಡಿಲಲ್ಲಿಕೊಟ್ಟುಕೊಂಡು ಕಾವು ಕೊಡುತಿದೆ. ಯಾವ ವಿಷಯವೇಯಾದರೂ ಹೇಳುವ ರೀತಿ ಮಾತ್ರ ಕೋಮಲ ಹಾಗೂ ಹೃದಯ ತಟ್ಟುವಂತೆ ಇರಬೇಕು.‌ಆದರೆ ಹಿರಿಯ ತಲೆಗಳು ಮಾತ್ರ ಗಜಲ್ ಎಂದರೆ ಪ್ರೀತಿ, ಪ್ರೇಮ, ಪ್ರಣಯ, ವಿರಹ, ಭಕ್ತಿ, ಅಧ್ಯಾತ್ಮ… ಕುರಿತು ಬರೆಯಬೇಕು ಎನ್ನುತ್ತಾರೆ.      ‘ರದೀಫ್’ ಗಜಲ್ ಗೆ ಗೇಯತೆಯನ್ನು ನೀಡುತ್ತದೆ. ಲಾಲಿತ್ಯ ಹೆಚ್ಚಿದಷ್ಟು ಭಾವ ತೀವ್ರತೆ ಉದಯಿಸಿ ಸಂಗೀತದ ಲೋಕಕ್ಕೆ ನಮ್ಮನ್ನು ಕರೆದೊಯ್ಯುತ್ತದೆ. ಆದರೆ ಅದರ ಬಳಕೆ ಮಾತ್ರ ಔಚಿತ್ಯದಿಂದ ಕೂಡಿರಬೇಕು. ಅದು ಅನಗತ್ಯವಾಗಿರದೆ ಇಡೀ ಗಜಲ್ ಗೆ ಮೆರುಗು ನೀಡುವಂತಿರಬೇಕು. ಆದರೆ ಗಜಲ್ ಗಳಲ್ಲಿ ರದೀಫ್ ಗಳ ಆಯ್ಕೆಯ ಬಗ್ಗೆಯೇ ಸಾಕಷ್ಟು ಗೊಂದಲಗಳಿವೆ. ರದೀಫ್ ಗಳು ಸಹೃದಯ ಓದುಗರನ್ನು ಯೋಚನೆಗೆ ಹಚ್ಚುವಂತಿರಬೇಕು. ಸಖಿ, ಸಖಾ, ಗೆಳೆಯ, ಗೆಳತಿ, ಮಿತ್ರ, ಸಾಕಿ, ಗಾಲಿಬ್, ನಾವು, ನೀವು… ಇಂತಹ ರದೀಫ್ ಗಳನ್ನು ಹೇರಳವಾಗಿ ಬಳಸಲಾಗುತ್ತಿದೆ. ಇದರಿಂದ ಕೆಲವೊಮ್ಮೆ ಗಜಲ್ ನ ಧ್ವನಿಯ ರಸಭಂಗವಾಗುವ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ..! ರದೀಫ್ ನ ಬಳಕೆ ಪ್ರತಿ ಗಜಲ್ ನಲ್ಲಿಯೂ ಭಿನ್ನವಾಗಿರಬೇಕು. ಇಲ್ಲದಿದ್ದರೆ ಅದು ಕೇವಲ ‘ಏಕತಾನತೆ’ಯನ್ನು ಉಂಟು ಮಾಡುತ್ತದೆಯಷ್ಟೇ..! ರದೀಫ್… ಇಡೀ ಗಜಲ್ ಗೆ ದಿಕ್ಸೂಚಿಯಾಗಿ ಕೆಲಸ ಮಾಡುತ್ತದೆ. ಯಾವ ರದೀಫ್ ಕೂಡ ಒತ್ತಾಯಪೂರ್ವಕವಾಗಿ ಬರಬಾರದು, ಉಸಿರಿನಂತೆ ಸರಳವಾಗಿ, ಸುಲಲಿತವಾಗಿ ಬರಬೇಕು ; ಬರದೇ ಇದ್ದರೂ ನಡೆದೀತು! ಏಕೆಂದರೆ ಗಜಲ್ ಗೆ ರದೀಫ್ ಅನಿವಾರ್ಯವಲ್ಲ, ಅವಶ್ಯಕತೆಯಷ್ಟೆ. ಇದನ್ನು ಗಜಲ್ ಛಂದಶಾಸ್ತ್ರಜ್ಞರಾದ ಅಲ್ಲಾಮ ಅಖ್ಲಾಕ್ ದೆಹಲವಿಯವರು ತಮ್ಮ ‘ಘನ ಶಾಯರಿ’ ಕೃತಿಯಲ್ಲಿ ರದೀಫ್ ಕುರಿತು ಹೀಗೆ ಹೇಳಿದ್ದಾರೆ. “ರದೀಫ್ ಇಲ್ಲದಿದ್ದರೂ ನಡೆದೀತು, ಕಾಫಿಯಾ ಇಲ್ಲದಿದ್ದರೆ ಅದು ಗಜಲ್ ಆಗುವುದಿಲ್ಲ”. ಇದೇ ಅರ್ಥದ ಮಾತುಗಳನ್ನು ಮಮ್ತಾಜ್ ಉರ್ರಷಿದ್ ರವರು ತಮ್ಮ ‘ಇಲ್ಮ್ ಕಾಫಿಯಾ’ ಪುಸ್ತಕದಲ್ಲಿ ಹೇಳಿದ್ದಾರೆ. ಇದು ‘ಕವಾಫಿ’ ಯ ಮಹತ್ವ, ಅನಿವಾರ್ಯತೆಯನ್ನು ಸಾರುತ್ತದೆ. ಗಜಲ್ ಗೋ ರದೀಫ್ ಬಳಸುವುದಕ್ಕಿಂತ ಮುಂಚೆ ಅದರ ಪ್ರಕಾರ, ಅದರ ಅರ್ಥ, ಸಾಧ್ಯತೆಗಳನ್ನು ಅರಿಯುವ ಪ್ರಯತ್ನ ಮಾಡಬೇಕು. ರದೀಫ್ ನಲ್ಲಿ ಚೋಟಿ ರದೀಫ್, ಮಜಲಿ ರದೀಫ್ ಹಾಗೂ ಲಂಬಿ ರದೀಫ್ ಎಂಬ ಮೂರು ಪ್ರಕಾರಗಳಿವೆ. ರದೀಫ್ ಇಲ್ಲದೆ ಗಜಲ್ ಗಳ ಸೃಷ್ಟಿಕಾರ್ಯ ನಡೆದಿದೆ. ಫಿರಾಖ್ ಮತ್ತು ಅಲ್ಲಮಾ ಇಕ್ಬಾಲ್ ರಂತಹ ಮಹಾಕವಿಗಳು ರದೀಫ್ ರಹಿತ ಗಜಲ್ ಗಳನ್ನು ರಚಿಸಿದ್ದಾರೆ. ಇದಕ್ಕೆ ಗೈರ್ ಮುರದ್ದಫ್ ಗಜಲ್/ಕಾಫಿಯಾನ ಗಜಲ್ ಎಂದು ಕರೆಯುತ್ತಾರೆ.       ಕಾಫಿಯಾ.. ಗಜಲ್ ನ ಜೀವಾಳ. ಇದು ಕನ್ನಡ ಕಾವ್ಯಗಳಲ್ಲಿ ಬರುವಂತಹ ‘ಪ್ರಾಸ’ ಅಲ್ಲ. ಇದೊಂದು ಸಾಮಾನ್ಯ ಅಂತ್ಯ ಪದವಾಗಿರದೆ ಬದಲಾವಣೆ ಬಯಸುವ ಒಳಪ್ರಾಸವಾಗಿದೆ. “ರದೀಫ್ ಇಲ್ಲದೆಯೂ ಗಜಲ್ ರಚನೆ ಸಾಧ್ಯವಿದೆ. ಆದರೆ ಕಾಫಿಯಾ ಇಲ್ಲದೆ ಗಜಲ್ ರಚನೆ ಸಾಧ್ಯವಿಲ್ಲ” (ಗಿರೀಶ್ ಜಕಾಪುರೆ ; ಸಾವಿರ ಕಣ್ಣಿನ ನವಿಲು; ಪು- ೧೮) ಎಂದು ಗಿರೀಶ್ ಜಕಾಪುರೆಯವರು ಹೇಳಿರುವುದು ಗಜಲ್ ಪರಂಪರೆಯನ್ನು ಪ್ರತಿನಿಧಿಸುತ್ತದೆ. ಹಾಗಂತ ‘ಕಾಫಿಯಾ’ ಅನಾವಶ್ಯಕವಾಗಿ, ಪ್ರಾಸದ ನೆಪದಲ್ಲಿ ಬಳಕೆಯಾಗಬಾರದು. ಅದೊಂದು ಸುಂದರ ಸ್ವತಂತ್ರ ಪದ, ಶಬ್ಬವಾಗಿರಬೇಕು. ಕಾಫಿಯಾದ ಕೊನೆಯ ಅಕ್ಷರ ‘ರವಿ’ ಮಾತ್ರ ಇಲ್ಲಿ ಮುಖ್ಯವಾಗುವುದಿಲ್ಲ, ಅದರೊಂದಿಗೆ ಕಾಫಿಯಾದ  ಹಲವು ಪ್ರಕಾರಗಳೂ ಮುಖ್ಯವಾಗುತ್ತವೆ. ಏಕ ಅಲಾಮತ್, ಬಹು ಅಲಾಮತ್, ರೌಫ್, ಕೈದ್, ತಶೀಶ್…. ಮುಂತಾದವುಗಳ ಪರಿಚಯ ಅಗತ್ಯವೆನಿಸುತ್ತದೆ. ಇದುವೆ, ಅದುವೆ… ಇವುಗಳು ಕಾಫಿಯಾ ಆಗುವುದಿಲ್ಲ. ಸೂರ್ಯನೆ, ಅವನೆ, ನೀನೆ, ಏನೆ… ಇವುಗಳೂ ಕವಾಫಿ ಅಲ್ಲ. ಕೇವಲ ‘ರವಿ/ರವೀಶ್’ ನ ಅನುಕರಣೆಯಿಂದ ಕಾಫಿಯಾ ಪರಿಫೂರ್ಣವಾಗುವುದಿಲ್ಲ. ಪ್ರತಿ ‘ಕವಾಫಿ’ ಯಲ್ಲಿ ಅರ್ಥ ಹೊಂದಾಣಿಕೆಯ ಜೊತೆಗೆ ವಚನ, ಕಾಲ, ಲಿಂಗ, ಪ್ರತ್ಯಯಗಳಲ್ಲಿಯೂ ಹೊಂದಾಣಿಕೆ ಇರಬೇಕು, ಇರಲೆಬೇಕು. ಆದರೆ ಹೆಚ್ಚಿನ ಗಜಲ್ ಗಳು ‘ಕವಾಫಿ’ಗೆ ಅವಮಾನ ಮಾಡುತ್ತಿರುವಂತೆ ಭಾಸವಾಗುತ್ತದೆ. ಇದರಿಂದಾಗಿಯೇ ಗಜಲ್ ಗಳು ಹೃದ್ಯವೆನಿಸದೆ ಕೇವಲ ಸಂಖ್ಯೆಯ ಸೌಧಗಳಾಗುತ್ತಿವೆ…!!        ಗಜಲ್ ನ ಪ್ರತಿಯೊಂದು ‘ಷೇರ್’ ಗಜಲ್ ನ ಪ್ರತ್ಯೇಕ ಒಂದು ಅಂಗವಿದ್ದಂತೆ. ಅದು

ಗಜಲ್ ಸಾಹಿತ್ಯ ಮತ್ತು ಸವಾಲುಗಳು Read Post »

ಇತರೆ

ಪ್ರಶಸ್ತಿ ಘೋಷಣೆ

ಪ್ರಶಸ್ತಿ ಘೋಷಣೆ ಉತ್ತರ ಸಾಹಿತ್ಯ ವೇದಿಕೆ ಶಿಗ್ಗಾಂವ ಪ್ರಶಸ್ತಿಗಳು ಉತ್ತರ ಸಾಹಿತ್ಯ ವೇದಿಕೆ ಶಿಗ್ಗಾಂವ ಇವರ ವತಿಯಿಂದ ಪ್ರತಿ ವರ್ಷ ಸಾಹಿತ್ಯ,ಶಿಕ್ಷಣ,ಸಮಾಜಸೇವೆಯಲ್ಲಿ ಸೇವೆ ಸಲ್ಲಿಸಿದ ನಾಡಿನ ಹಿರಿಯ ಸಾಧಕರಿಗೆ ಪ್ರಶಸ್ತಿ ಪ್ರಧಾನ ಮಾಡಿಕೊಂಡು ಬರಲಾಗುತ್ತಿದೆ 2019-20 ನೇ ಸಾಲಿನಲ್ಲಿಕನಕ ಶರೀಫ ಪುರಸ್ಕಾರ 1-ಬಿ.ಶ್ರೀನಿವಾಸ-2019 ದಾವಣಗೆರೆ2-ಅಲ್ಲಾಗಿರಿರಾಜ-2020 ಕೊಪ್ಪಳ ಡಾ.ಹಿರೇಮಲ್ಲೂರ ಈಶ್ವರನ್ ಶಿಕ್ಷಕ ಪುರಸ್ಕಾರ 1-ಡಾ.ವಾಯ್.ಎಂ.ಯಾಕೊಳ್ಳಿ-2019 ಬೆಳಗಾವಿ2-ಜಿ.ಎಸ್.ಬಿಜಾಪುರ-2020 ಬಾಗಲಕೋಟೆ ಡಾ.ಅರಟಾಳ ರುದ್ರಗೌಡರ ಸಾಮಾಜಿಕ ಸೇವಾ ಪುರಸ್ಕಾರ 1-ಡಾ.ಹನುಮಂತಪ್ಪ ಪಿ.ಎಚ್.2019 ಶಿಗ್ಗಾಂವ2-ಅಕ್ಷತಾ ಕೆ.ಸಿ.2020 ಹಾವೇರಿ. ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಜನೇವರಿ 2021 ನೇ ಮಾಹೆಯಲ್ಲಿ ನಡೆಸುವುದಾಗಿ ಉತ್ತರ ಸಾಹಿತ್ಯ ವೇದಿಕೆಯ ರಂಜಾನ ಕಿಲ್ಲೆದಾರ ಅವರು ತಿಳಿಸಿದ್ದಾರೆ.

ಪ್ರಶಸ್ತಿ ಘೋಷಣೆ Read Post »

ಇತರೆ, ಲಹರಿ

” ನಮ್ಮೊಳಗಿನ ಸತ್ಯ ನಾವ ಹುಡುಕಬೇಕು”

” ನಮ್ಮೊಳಗಿನ ಸತ್ಯ ನಾವ ಹುಡುಕಬೇಕು” ರಶ್ಮಿ ಎಸ್. ನಮ್ಮನ್ಯಾಗ ಮಾತ್ರ ಪ್ರೀತಿಯ ದೀಪ ಜಗಮಗಸಾತಿತ್ತು… ಕಾರಣ ಡಿ. 6,7,8 ಬಾಬರಿ ಮಸೀದಿ ಪ್ರಕರಣ ಆದಾಗ ಇಡೀ ದೇಶ ಕೋಮು ದಳ್ಳುರಿಯೊಳಗ ಧಗಧಗಿಸುತ್ತಿತ್ತು… ನಮ್ಮನ್ಯಾಗ ಮಾತ್ರ ಪ್ರೀತಿಯ ದೀಪ ಜಗಮಗಸಾತಿತ್ತು… ಕಾರಣ … ಮುಗಲ ಮಾರಿಯೊಳಗ ದೇವರ ನಗಿ ನೋಡ್ಕೊಂತ… ನನ್ನ ತಾಯಾ, (ದೊಡ್ಡಪ್ಪ) ಅಂಗಳದೊಳಗ ಅರಾಮ ಕುರ್ಚಿ ಹಾಕ್ಕೊಂಡು ಆಕಾಶ ನೋಡ್ಕೊಂತ ಕುಂತಾರ ಅಂದ್ರ ಏನೋ ಚಿಂತಿ ಕಾಡ್ತದ ಅಂತನೇ ಅರ್ಥ. ಅವಾಗ ನಾವು ಯಾರೂ ಅವರೊಟ್ಟಿಗೆ ಮಾತಾಡ್ತಿರಲಿಲ್ಲ. ಬೇವಿನ ಮರದ ನೆರಳಾಗ ಕುಂತು ನೀಲಿ ಆಕಾಶದೊಳಗ ಹಾದು ಹೋಗುವ ಬಿಳೀ ಮುಗಿಲು ನೋಡ್ಕೊಂತ ಅವರ ಕೈ ಲೆಕ್ಕಾ ಹಾಕ್ತಿದ್ವು. ಅವರ ಹೆಂಡತಿ ಜಿಯಾ, ಮೊಮ್ಮಾ ಅಂತ ಕರೀತಿದ್ವಿ. ಕುರ್ಚಿಯಿಂದ ‘ಜಿಯಾ… ಚಾಯ್‌.. ಪಿಲಾತೆ’ ಅಂತ ಕೇಳಿದ್ರ ಸಾಕು, (ಉತ್ತರ ಸಿಕ್ತು ಅಂತನೇ ಅರ್ಥ.) ಛಾ ತರೂತನಾನೂ ಅವರ ಗುಡಾಣದಂಥ ಹೊಟ್ಟಿ ಮ್ಯಾಲೆ ನನ್ನ ಕೂಸಿನ್ಹಂಗ ಮಲಗಿಸಿಕೊಂಡು ಗುಳುಗುಳು ಮಾಡೋರು. ನನ್ನ ನಗಿ ಅಲಿಅಲಿಯಾಗಿ ಹರಡ್ತಿತ್ತು. ಏಳುವರಿ ಅಡಿ ಎತ್ತರದ ಅಜಾನುಬಾಹು ನನ್ನ ತಾಯಾ. ಅವರ ಕರಡಿ ಅಪ್ಪುಗೆಯೊಳಗ ನಾನು ಮಾತ್ರ ಯಾವತ್ತಿಗೂ ಕೂಸೇ. ಯಾರಿಗೂ ಇರಲಾರದ ಸಲಗಿ ನನಗ ಇತ್ತು. ‘ಆಸ್‌ಮಾನ್‌ಸೆ ಕ್ಯಾ ಆಪ್‌ಕೊ ಅಲ್ಲಾತಾಲಾ ನೆ ಜವಾಬ್‌ ದಿಯಾ?’ (ಆಕಾಶದಿಂದ ಆ ದೇವರು ನಿಮಗ ಉತ್ತರ ಕೊಟ್ರೇನು?) ಅಂತ ಕೇಳಿದ್ರ ಅದಕ್ಕೂ ಗುಳುಗುಳು ಮಾಡೂದೆ ಉತ್ತರ ಆಗಿರ್ತಿತ್ತು. ನಾವೆಷ್ಟೇ ದೊಡ್ಡವರು ಆಗಿದ್ರೂ ಈ ಕರಡಿ ಅಪ್ಪುಗೆ, ಈ ಗುಳುಗುಳು ಮತ್ತು ಅವರ ಮಡಿಲೊಳಗ ಮಗುವಾಗಿ ಮಲಗುವ ವಾತ್ಸಲ್ಯದಿಂದ ಮಾತ್ರ ಯಾವತ್ತೂ ವಂಚಿತರಾಗಿರಲಿಲ್ಲ. ಆದ್ರ ನಾವು ಬೆಳದ್ಹಂಗ ನಮ್ಮ ಪ್ರಶ್ನೆಗಳು ಭಿನ್ನ ಆಗಿರ್ತಿದ್ದವು. ಬ್ಯಾಸಗಿ ರಾತ್ರಿ ಅದು. ಸ್ವಚ್ಛ ಆಕಾಶ. ಚುಕ್ಕಿ ಅಲ್ಲಲ್ಲೇ ಮಿಣಮಿಣ ಅಂತಿದ್ವು. ದೊಡ್ಡ ಅಂಗಳ. ಬೇವಿನ ಮರ, ತೆಂಗಿನ ಮರ, ಬದಾಮಿ ಮರದ ನೆರಳನಾಗ ನಾವೆಲ್ಲ ಕುಂತು ಆಕಾಶ ನೋಡ್ತಿದ್ವಿ. ಹೋಳಿ ಹುಣ್ಣಿವಿ ಸಮೀಪ ಇತ್ತು. ಒಂದೆರಡೇ ಮೋಡದ ತುಂಡುಗಳು ದುಡುದುಡು ಓಡಿ ಹೊಂಟಿದ್ವು. ಅದೇ ಆಗ ಕಾಲು ಬಂದ ಉಡಾಳ ಕೂಸಿನ್ಹಂಗ. ಅವಾಗ ತಾಯಾನ ಮಡಿಲೊಳಗ ಕುಂತು ದ್ರಾಕ್ಷಿ ತಿನ್ಕೊಂತ.. ‘ಖರೇನೆ ನಿಮಗ ದೇವ್ರು ಉತ್ರಾ ಕೊಡ್ತಾನ? ಖರೇನೆ ದೇವರ ಮನಿ ಆಕಾಶದೊಳಗ ಐತೇನು? ನನಗೂ ಒಮ್ಮೆ ತೋರಸ್ರಿ…’ ಎಲ್ಲಾ ಪ್ರಶ್ನೆಗೂ ಉತ್ತರ ಕೊಡೂಕಿಂತ ಮೊದಲು ಉದ್ದಾನುದ್ದ ದ್ರಾಕ್ಷಿ ಆರಸಿ ಬಾಯಿಗೆ ಹಾಕ್ತಿದ್ರು. ಆಮೇಲೆ ತಾಯಾ ಮಾತಾಡಾಕ ಸುರು ಮಾಡಿದ್ರು. ‘ದೇವರು ಆಕಾಶದೊಳಗ ಇರೂದಿಲ್ಲ. ದೇವರು ನಮ್ಮೊಳಗ ಇರ್ತಾನ. ನಮ್ಮ ಮನಸಿನಾಗ ಇರ್ತಾನ. ಮನಸನ್ನು ಆಕಾಶದಷ್ಟು ವಿಷಾಲ ಮಾಡಿಕೊಂಡು ಅವನಿಗೆ ನಮ್ಮೊಳಗೇ ಹುಡುಕಬೇಕು. ಅವಾಗ ಮನಸ ಮ್ಯಾಲೆ ಕವಿದಿರುವ ಮೋಡಗಳೆಲ್ಲ ಚದುರಿ ಹೋಗ್ತಾವ. ನಮ್ಮ ಚಿಂತಿನೂ ಹಂಗೆ. ನಮ್ಮನ್ನೇ ನಾವು ನೋಡ್ಕೋಬೇಕು. ನಮ್ಮನ್ನ ಆವರಿಸಿರುವ ಮೋಡಗಳು ಚದರುವ ಹಂಗ ಮಾಡಬೇಕು. ಆಗ ಪರಿಹಾರದ ಚುಕ್ಕಿಯ ಹೊಳಹು ನಮಗೇ ಹೊಳೀತಾವ’ ನಮ್ಮೊಳಗಿನ ದೇವರನ್ನು ಹುಡುಕುವ ಪರಿ ಮಾತ್ರ ನಾವೇ ಕಂಡುಕೋಬೇಕು. ನಮ್ಮ ದೇವರನ್ನು ನಾವೇ ಕಾಣಬೇಕು ಅಂದ್ರು. ‘ಅಂದ್ರ, ನಿಮ್ಮ ದೇವರು ಬ್ಯಾರೆ, ನನ್ನ ದೇವರು ಬ್ಯಾರೆ ಏನು’ ಅಂದೆ. ‘ದೇವರು ಅಂದ್ರ ಅದೊಂದು ಸತ್ಯ. ನಿನ್ನ ಸತ್ಯವೇ ಬೇರೆ, ನನ್ನ ಸತ್ಯವೇ ಬೇರೆ. ಒಂದು ಪರಿಪೂರ್ಣ ಸತ್ಯವಾಗಿರೂದು ಸಾಧ್ಯವೇ ಇಲ್ಲ. ಒಂದು ಸತ್ಯಕ್ಕೆ ನಾಲ್ಕಲ್ಲ ಹದಿನಾರು ಆಯಾಮ ಇರ್ತಾವ. ಒಂದು ಇನ್ನೊಂದಕ್ಕ ಸತ್ಯ ಅಲ್ಲ ಅಂತ ಅನ್ನಸಬಹುದು’. ‘ಹಂಗಾದ್ರ ಎಲ್ಲಾನೂ ಸತ್ಯ ಅಲ್ಲ, ಎಲ್ಲಾನೂ ಸುಳ್ಳಲ್ಲ ಅಂತ ಅಂತೀರೇನು? ಯಾರಿಗೂ ಕೆಡುಕಾಗದೇ ಇರೂದು ಸತ್ಯ. ನಮ್ಮೊಳಗಿನ ಸತ್ಯವನ್ನು ನಾವೇ ಹುಡುಕಬೇಕು.’ ಹಿಂಗೇ ಸೂಫಿ ಸಂತನಹಂಗ ಮಾತಾಡತಿದ್ದ ತಾಯಾಗ ಸಿಟ್ಟು ಬಂದ್ರ ಮಾತ್ರ ಅವರೇ ಹೇಳೂಹಂಗ ಹೈವಾನ್‌ ಆಗ್ತಿದ್ರು. ಸಿಕ್ಕಿದ್ದು ತೊಗೊಂಡು ಆಳಮಕ್ಕಳಿಗೆ ಹೊಡೀತಿದ್ರು. ಅವರ ಆ ಅವತಾರ ಮಾತ್ರ ದಿಗಿಲು ಹುಟ್ಟಸ್ತಿತ್ತು. ಯಾಕ ಅವಾಗ ಅವರೊಳಗಿನ ದೇವರು ಮಲಗಿರ್ತಿದ್ದ? ಅಥವಾ ಅವರೇ ಹೇಳುಹಂಗ ಆ ದೇವರೇ ಇಲ್ಲವಾಗ್ತಿದ್ದನಾ? ಗೊತ್ತಿಲ್ಲ. ಈಗ ಹೇಳಾಕ ಅವರಿಲ್ಲ. ಆದ್ರ ಅವರು ತೋರಿದ ಆ ದಾರಿ ಈಗಲೂ ಭಾಳಷ್ಟು ಸಲೆ ಖರೆ ಅನ್ನಸ್ತದ. ನಮ್ಮ ಜೀವನದಾಗ ಒಂದು ಹಂತ ಎಂಥಾದ್ದು ಬರ್ತದ ಅಂದ್ರ, ‘ಎಲ್ಲಾರಿಗೆ ನಾವು ಬ್ಯಾಡಾಗೇವಿ. ನಾವಿರಲಿಲ್ಲಂದ್ರೂ ಎಲ್ಲಾನೂ ನಡದು ಹೋಗ್ತದ. ನಾವು ಎಲ್ಲಿಯೂ ಅನಿವಾರ್ಯ ಅಲ್ಲ. ನಾವಿರಲಿಲ್ಲ ಅಂದ್ರ ನಮಗಿರುವ ಕಷ್ಟಗಳು ನಮಗಷ್ಟೇ ಇರೂದಿಲ್ಲ. ಆದ್ರ ಉಳದೋರು ಆರಾಮ ಇರ್ತಾರ’ ಅನ್ನೂದೊಂದು ಭಾವ ಗಟ್ಟಿಯಾಗಾಕ ಸುರುಮಾಡ್ತದ. ಇದೊಂಥರ ನಮ್ಮ ಜೀವನಾಸಕ್ತಿ, ಆಸ್ಥೆಯನ್ನೇ ಕೊಂದು ಬಿಡ್ತದ. ಏನು ಮಾಡಿದ್ರೂ ಅಷ್ಟೆ, ಎಷ್ಟು ಮಾಡಿದ್ರೂ ಅಷ್ಟೆ… ಯಾರಿಗರೆ ಯಾಕ ಮಾಡಬೇಕು?’ ಇಂಥವೇ ಅಸಮಾಧಾನಗಳು ಗೂಡು ಕಟ್ತಾವ. ಈ ಗೂಡಿನೊಳಗ ಸಾವನ್ನು ಪ್ರೀತಿಸುವ ಸೈತಾನ ವಾಸಸ್ತಾನ. ಜೀವದ ಹಕ್ಕಿಯನ್ನ ತನ್ನ ಗೂಡಿನೊಳಗ ಮೆತ್ತನೆಯ ಹಾಸು ಮಾಡಿಕೊಂಡು ಮಲಗಿ ಬಿಡ್ತಾನ. ಅದು ಕೊಸರಾಡ್ತದ. ಒದ್ದಾಡ್ತದ. ಉಸಿರುಗಟ್ಕೊಂಡು, ಬದುಕಾಕ ಒಂದು ಸಣ್ಣ ಎಳಿ ಸಿಕ್ರೂ ಸಾಕು ಅಂತ ಪಿಳಿಪಿಳಿ ಕಣ್ಣು ಬಿಟ್ಕೊಂಡು ಕುಂತಿರ್ತದ. ನಿದ್ದಿ ಅನ್ನೂದು ಅದಕ್ಕ ಬಂಗಾರದ್ಹಂಗ ಭಾಳ ತುಟ್ಟಿ. ಹಿಂಗಾದಾಗಲೆಲ್ಲ ಎಲ್ಲಾರು ಮಲಕ್ಕೊಂಡ ಮ್ಯಾಲೆ ಬಾಲ್ಕನಿಗೆ ಬಂದು ನಿಂದರ್ತೀನಿ. ಸ್ವಚ್ಛ ಮುಗಲನಾಗ ಮೋಡಗಳೂ ಓಡತಿರ್ತಾವ. ಕೆಲವೊಮ್ಮೆ ಮಂದ. ಕೆಲವೊಮ್ಮೆ ಅಗ್ದಿ ಚುರುಕಾಗಿ. ನಮ್ಮ ಪರಿಸ್ಥಿತಿಗೆ ಕಾರಣ ಹುಡುಕೂದೇ ಆಕಾಶ ನೋಡ್ಕೋಂತ ಮನಸಿನೊಳಗ ಹಣಕಿ ಹಾಕ್ತೀವಿ. ಯಾರಿಗೂ ನಾವು ಅನಿವಾರ್ಯವಿಲ್ಲ ಅಂತ ಅಂದ್ಕೊಂಡ ಕ್ಷಣದ್ಹಂಗೇ ಒಂದರೆ ನಿಮಿಷ ಮರುದಿನದ ಬೆಳಗು ನಾನಿಲ್ಲದೆ, ನನ್ನ ಗಂಡ, ಮಕ್ಕಳಿಗೆ ಹೆಂಗಿರಬಹುದು, ನಾನಿಲ್ಲದ ಸತ್ಯವನ್ನು ನನ್ನ ಹೆತ್ತವರು ಹೆಂಗ ಒಪ್ಕೊಬಹುದು ಅನ್ನೂ ಪ್ರಶ್ನೆಗಳು ಈ ಮೋಡದೊಂದಿಗೆ ಹಾದು ಹೋಗ್ತಾವ. ಮತ್ತ ಹಂಗೇ ಆಕಾಶ ಸ್ವಚ್ಛ ಆಗ್ತದ. ಮನಸೂ. ಕೆಲವೊಮ್ಮೆ ಆಕಾಶದೊಳಗ ಎಲ್ಲೊ ಚುಕ್ಕಿಯಾಗಿ ನನ್ನನ್ನ ನೋಡ್ತಿರುವ ತಾಯಾ, ಮೊಮ್ಮಾ ನೆನಪಾಗ್ತಾರ. ಎಂಥ ಸಂದಿಗ್ಧ ಪರಿಸ್ಥಿತಿಯೊಳಗೂ ನಮ್ಮ ಇರುವಿಕೆಗೊಂದು ಅರ್ಥ ಅದ. ಆ ಪರಿಸ್ಥಿತಿಯೂ ನಮ್ಮ ಜೀವಕ್ಕ, ಜೀವನಕ್ಕ ಒಂದು ಅರ್ಥ ನೀಡ್ತದ. ಈ ಅರ್ಥದ ಹೊಳಹು ಹೊಳದಾಗ ಆಕಾಶದಾಗ ಬೂದು ಬಣ್ಣ ಹೋಗಿ, ತಿಳಿ ಗುಲಾಬಿ ಬಣ್ಣ ಮೂಡ್ತಿರ್ತದ. ಜೊತಿಗೆ ಸೂರ್ಯನೂ ಹುಟ್ಟತಿರ್ತಾನ. ಅದರೊಟ್ಟಿಗೆ ನಾವೂ ಮತ್ತ ಹುಟ್ಟಿ ಬರಬೇಕು. ಆ ಹೊಸ ಹೊಳಹಿನೊಂದಿಗೆ. ನಮ್ಮ ಸತ್ಯದ ದೇವರು ನಮಗ ಕಾಣುವ ಹೊತ್ತದು. ಮುಗಿಲಮಾರಿಯೊಳಗ ದೇವರು ನಕ್ಕು ಮುಂದ ಸಾಗೂ ಹೊತ್ತದು. ನೋಡುವ ಕಣ್ಣುಬೇಕು. ಹುಡುಕುವ ಮನಸು ಬೇಕು. ತಾಯಾನ್ಹಂಗ..! …*******************************************************

” ನಮ್ಮೊಳಗಿನ ಸತ್ಯ ನಾವ ಹುಡುಕಬೇಕು” Read Post »

ಇತರೆ, ವರ್ತಮಾನ

ಡಾ.ಬಿ.ಆರ್.ಅಂಬೇಡ್ಕರ್ ರ ಕೊನೆಯ ಸಂದೇಶ..!

ಡಾ.ಬಿ.ಆರ್.ಅಂಬೇಡ್ಕರ್ ರ ಕೊನೆಯ ಸಂದೇಶ..! ಕೆ.ಶಿವು.ಲಕ್ಕಣ್ಣವರ ‘ಮಹಾನಾಯಕ’ ಡಾ.ಬಿ.ಆರ್.ಅಂಬೇಡ್ಕರ್ ರ ಕೊನೆಯ ಸಂದೇಶ..! ಡಿ. 6 ದೇಶದ ಮಹಾನಾಯಕ ಅಂಬೇಡ್ಕರ್ ಅವರನ್ನು ಕಳೆದುಕೊಂಡ ದಿನ. ಅವರ ಕೊನೆಯ ಸಂದೇಶವನ್ನು ಪ್ರತಿಯೊಬ್ಬರು ತಿಳಿಯಬೇಕು ಅಂದು ಡಿಸೆಂಬರ್  6, 1956. ಇಡೀ ಭಾರತದಲ್ಲಿ ಕಣ್ಣೀರ ಕೋಡಿ ಹರಿದ ದಿನ. ಕತ್ತಲಲ್ಲಿದ್ದ ಭಾರತಕ್ಕೆ ಬೆಳಕಿನ ಕಿರಣ ನೀಡಿ, ವಿಶ್ವವೇ ಬೆರಗಾಗುವಂತೆ ಮಾಡಿದ್ದ, ಆಧುನಿಕ ಭಾರತದ ನಿರ್ಮಾತೃ, ಸಂವಿಧಾನ ಶಿಲ್ಪಿ, ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರು ನಿಬ್ಬಾಣ ಹೊಂದಿದ ದಿನ. ಭಾರತದ ಕಣ್ತೆರೆಸಿ, ಸಮಾನತೆಯ ಬೀಜ ಬಿತ್ತಿ ಹೋದ ಆ ಮಹಾನಾಯಕನ ಹೋರಾಟದ ಫಲವನ್ನು ಇಡೀ ಭಾರತವೇ ಇಂದು ಉಣ್ಣುತ್ತಿದೆ. ಡಾ.ಬಿ.ಆರ್.ಅಂಬೇಡ್ಕರ್ ರವರು 14ನೇ ಏಪ್ರಿಲ್, 1891 ಮಧ್ಯಪ್ರದೇಶದ ಮಾಹೋ ಎಂಬ ಮಿಲಿಟರಿ ಕ್ಯಾಂಪ್ ನಲ್ಲಿ ಹುಟ್ಟಿದರು. ಈ ದೇಶವನ್ನು ಉತ್ತಮ ದಾರಿಗೆ ಕೊಂಡೊಯ್ಯಲೆಂದೇ ಅವರು ಈ ಭಾರತದಲ್ಲಿ ಜನಿಸಿದರು ಎಂದೇ ಹೇಳಬಹುದು. ಅಂಬೇಡ್ಕರ್ ಅವರು  ಭಾರತದಲ್ಲಿ ಜನಿಸದೇ ಇರುತ್ತಿದ್ದರೆ, ಇಂದು ಭಾರತದ ಪರಿಸ್ಥಿತಿ ಏನಾಗಿರುತ್ತಿತ್ತು ಎನ್ನುವುದನ್ನು ಯೋಚಿಸಲೂ ಸಾಧ್ಯವಾಗುತ್ತಿರಲಿಲ್ಲ. ಭಾರತದ ಬೀದಿಗಳಲ್ಲಿ ಚಿನ್ನ, ರತ್ನ, ವಜ್ರ ವೈಢೂರ್ಯಗಳನ್ನು ಮಾರಾಟ ಮಾಡಲಾಗುತ್ತಿತ್ತು ಎನ್ನುವ ಇತಿಹಾತಿಹಾಸವನ್ನು ನಾವು ಓದಿದ್ದೇವೆ. ಆದರೆ, ಅದೇ ಭಾರತದಲ್ಲಿ ಮನುಷ್ಯನನ್ನು ಮನುಷ್ಯನಂತೆ ಕಾಣಲಾಗುತ್ತಿರಲಿಲ್ಲ ಎನ್ನುವ ಸತ್ಯವನ್ನೂ ನಾವು ಒಪ್ಪಿಕೊಂಡಿದ್ದೇವೆ. ಇಂದು ಭಾರತದಲ್ಲಿ ಇಷ್ಟರ ಮಟ್ಟಿಗೆ ಸಮಾನತೆ, ನೆಮ್ಮದಿ ಇದೆ ಎಂದರೆ, ಅಂಬೇಡ್ಕರ್ ಅವರು ನೀಡಿದ ಪವಿತ್ರ ಸಂವಿಧಾನದಿಂದ ಮಾತ್ರವೇ ಅದು ಸಾಧ್ಯವಾಗಿದೆ. ಎಲ್ಲ ನಾಯಕರು ಬ್ರಿಟಿಷರಿಂದ ದೇಶಕ್ಕೆ ಸ್ವಾತಂತ್ರ ಸಿಗಬೇಕೆಂದು ಹೋರಾಟ ಮಾಡಿದರೆ, ಡಾ.ಬಿ.ಆರ್.ಅಂಬೇಡ್ಕರ್ ಅವರು ದೇಶದೊಳಗೆ ಜನರು ಸ್ವತಂತ್ರವಾಗಿ ಬದುಕಬೇಕು ಎಂದು ಕನಸು ಕಂಡರು ಅದಕ್ಕಾಗಿ ಹೋರಾಟ ಮಾಡಿದರು. ಜಾತಿವಾದಿಗಳು, ಮನುವಾದಿಗಳ ನೂರಾರು ಸಂಚನ್ನು ಮುರಿದು, ಪವಿತ್ರವಾದ ಸಂವಿಧಾನವನ್ನು ಈ ದೇಶಕ್ಕೆ ಅರ್ಪಿಸಿದರು. ಭಾರತವು ಎರಡು ಹೋಳಾಗಿ ಭಾರತ-ಪಾಕಿಸ್ತಾನವಾದಾಗ ಅಂಬೇಡ್ಕರ್ ಅವರು ಕೂಡ, ನಮಗೂ ಪ್ರತ್ಯೇಕ ರಾಷ್ಟ್ರ ಬೇಕು ಎಂದು ಹೋರಾಡಬಹುದಿತ್ತು. ಆದರೆ ಅವರು ಹಾಗೆ ಮಾಡಲಿಲ್ಲ. ಯಾಕೆಂದರೆ, ಅಂಬೇಡ್ಕರ್ ಅವರಂತಹ ರಾಷ್ಟ್ರವಾದಿ ಇಂದಿಗೂ ಯಾರೂ ಇಲ್ಲ. ಮುಂದೆಯೂ ಬರಲು ಸಾಧ್ಯವಿಲ್ಲ ಅಂಬೇಡ್ಕರ್ ಅವರು ಅಪ್ಪಟ ದೇಶಪ್ರೇಮಿಯಾಗಿದ್ದರು. ಅವರು ರಾಷ್ಟ್ರದ ಬಗ್ಗೆ ಏನು ಹೇಳುತ್ತಿದ್ದರೆಂದರೆ, “ನಾನು ಮೊದಲನೆಯದಾಗಿ ಮತ್ತು ಕೊನೆಯದಾಗಿಯೂ ಇಂಡಿಯನ್”(ಭಾರತೀಯ). ಡಿಸೆಂಬರ್ 6 ಭಾರತ ದೇಶಕ್ಕೆ ದುಃಖದ ದಿನ. ಇಡೀ ಜಗ್ಗತ್ತು ಕಂಡಿರದ ಮಹಾಮಾನವತಾವಾದಿ, ಹೋರಾಟಗಾರ ಅಂಬೇಡ್ಕರ್ ಅವರ ಪರಿನಿಬ್ಬಾಣ ದಿನವಾಗಿದೆ. ಡಾ.ಬಿ.ಆರ್.ಅಂಬೇಡ್ಕರ್ ಅವರ ಕೊನೆಯ ದಿನಗಳ ಬಗ್ಗೆ Last few years of Dr. Ambedkar  ಎಂಬ ಕೃತಿಯಲ್ಲಿ ಅವರ ಆಪ್ತ ಕಾರ್ಯದರ್ಶಿ ನಾನಕ್ ಚಂದ್ ರತ್ತು ಅವರು ಬರೆದಿದ್ದಾರೆ. ನಾನಕ್ ಚಂದ್ ರತ್ತು ಅವರಿಗೆ ಆ ದಿನ ಎಂದೂ ಮರೆಯದ ದಿನವಾಗಿತ್ತು. ಅಂದು 1956ರ ಜುಲೈ 31ರ ಮಂಗಳವಾರ. ಸಮಯ 5:30ರ ವೇಳೆಗೆ ನಾನಕ್ ಚಂದ್ ಕೆಲವು ಪತ್ರಗಳನ್ನು ಹೊಂದಿಸಿಡುತ್ತಿದ್ದರು.  ಆ ಸಮಯದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಅಸ್ವಸ್ಥರಾದರು. ಅದನ್ನು ಗಮನಿಸಿದ ರತ್ತು, ಅಂಬೇಡ್ಕರ್ ಅವರನ್ನು ವಿಚಾರಿಸಿದ ಬಳಿಕ, ಹೀಗೆ ಕೇಳಿದರು. “ ಸರ್…  ನೀವು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಖಿನ್ನತೆಗೆ ಒಳಗಾಗುತ್ತಿದ್ದೀರಿ, ಅದು ಯಾಕೆ ಎಂದು ನನಗೆ ತಿಳಿಯಬೇಕು ಎಂದು ಕೇಳುತ್ತಾರೆ.  ಅಂದು ಬಾಬಾ ಸಾಹೇಬರು ನೀಡಿರುವ ಉತ್ತರವನ್ನು ಇಂದು ಅವರ ಸಮುದಾಯ ಗಂಭೀರವಾಗಿ ತೆಗೆದುಕೊಂಡಿದ್ದರೆ, ಬಹುಶಃ ಇಂದಿಗೂ ದಲಿತ ಸಮುದಾಯ ಹಿಂದಿನ ಅದೇ ಸ್ಥಿತಿಯಲ್ಲಿ ಇರುತ್ತಿರಲಿಲ್ಲವೋ ಏನೋ… ನಾನಕ್ ಚಂದ್ ರತ್ತು ಅವರ ಪ್ರಶ್ನೆಗೆ ಉತ್ತರಿಸಲು ಆರಂಭಿಸಿದ ಅಂಬೇಡ್ಕರರು, ನಾನು ಬದುಕಿರುವಾಗಲೇ ನನ್ನ ಜೀವನದ ಗುರಿಯನ್ನು ಮುಟ್ಟಲು ಸಾಧ್ಯವಾಗಲಿಲ್ಲ. ನನ್ನ ಜನರು ದೇಶದ ಆಳುವ ವರ್ಗವಾಗಬೇಕು ಎಂದು ನಾನು ಬಯಸಿದ್ದೆ. ರಾಜಕೀಯ ಅಧಿಕಾರವನ್ನು ಸಮಾನತೆಯ ಆಧಾರದಲ್ಲಿ ಹಂಚಿಕೊಳ್ಳಬೇಕು ಎಂದು ನಾನು ಬಯಸಿದ್ದೆ. ಆದರೆ ಅದರ ಸಾಧ್ಯತೆಗಳು ನನಗೆ ಗೋಚರಿಸುತ್ತಿಲ್ಲ. ನಾನೇ ಏನಾದರೂ ಮಾಡುತ್ತೇನೆ ಎಂದು ಮುಂದುವರಿಯ ಬೇಕೆಂದುಕೊಂಡರೆ, ನನ್ನನ್ನು ಅನಾರೋಗ್ಯ ಬಾಧಿಸುತ್ತಿದೆ. ಈ ಅನಾರೋಗ್ಯದ ಕಾರಣದಿಂದಾಗಿ ನಾನು ನಿಶ್ಯಕ್ತನಾಗಿದ್ದೇನೆ.  ನಾನು ಈವರೆಗೆ ಏನೆಲ್ಲ ಸಾಧಿಸಿದ್ದೇನೋ ಅದರ ಫಲವನ್ನು ಪಡೆದ ನನ್ನವರು ಕೆಲವೇ ಮಂದಿ ಅನುಭವಿಸುತ್ತಿದ್ದಾರೆ. ಶಿಕ್ಷಣ ಪಡೆದವರು  ವಂಚನೆ ಮಾಡಿಕೊಂಡು ಅಯೋಗ್ಯರಾಗಿದ್ದಾರೆ. ತಮ್ಮ ವೈಯಕ್ತಿಕ ಹಿತಾಸಕ್ತಿಗಳನ್ನೇ ಸಾಧಿಸಿಕೊಂಡ ಇವರು ನನ್ನ ನಿರೀಕ್ಷೆಗಳನ್ನು ಸುಳ್ಳು ಮಾಡಿದ್ದಾರೆ. ಮೀಸಲಾತಿ ಪಡೆದುಕೊಂಡು ಸರ್ಕಾರಿ ಕೆಲಸ ಪಡೆದವರು ತಮ್ಮ ಸ್ವಾರ್ಥ ಸಾಧನೆಯನ್ನೇ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಸಮುದಾಯದ ಸೇವೆ ಮಾಡಲು ಯಾರೂ ಮುಂದೆ ಬರುತ್ತಿಲ್ಲ.  ಹಳ್ಳಿಗಳಲ್ಲಿ ಇನ್ನೂ ಜನರು ಶೋಷಣೆಯನ್ನು ಅನುಭವಿಸುತ್ತಿದ್ದಾರೆ.  ಆರ್ಥಿಕವಾಗಿ ದುಸ್ಥಿತಿಯಲ್ಲಿದ್ದಾರೆ.  ಈ ರೀತಿಯಾಗಿರುವ ಅನಕ್ಷರಸ್ಥ ವಿಶಾಲ ಜನಸಮುದಾಯದತ್ತ ಗಮನಹರಿಸಬೇಕು ಎಂದು ನಾನು ಯೋಚಿಸುತ್ತಿದೆ. ಆದರೆ, ನನಗೆ ಇರುವುದು ಇನ್ನು ಕೆಲವೇ ದಿನಗಳು ಎಂದು ಬಾಬಾ ಸಾಹೇಬರು ನೋವು ಪಟ್ಟರು. ಅಂಬೇಡ್ಕರ್ ಅವರ ನೋವು ಇಂದಿಗೂ ನಿಜವೇ ಆಗಿದೆ ಅಲ್ಲವೇ? ಬಹಳಷ್ಟು ದಲಿತರು ಇಂದಿಗೂ ಉತ್ತಮ ಸ್ಥಿತಿವಂತರಾಗಿ ತಾವು, ತಮ್ಮ ಸಂಬಂಧಿಕರು ಎಂದೇ ನೋಡುತ್ತಿದ್ದಾರೆ. ತಮ್ಮ ಸಮುದಾಯದ ಒಂದಿಷ್ಟು ಮಕ್ಕಳನ್ನು ದತ್ತುಪಡೆದು ಅವರ ಶಿಕ್ಷಣಕ್ಕೆ ನೆರವು ನೀಡುವ ನೌಕರರು ಎಂದು ಎಷ್ಟು ಜನ ಇದ್ದಾರೆ ಎಂದು ಕೇಳಿದರೆ, ಕೇವಲ ಬೆರಳೆಣಿಕೆಯ ನೌಕರರು ಮಾತ್ರವೇ ಸಿಗುತ್ತಾರೆ. ನಿರುದ್ಯೋಗಿ ಯುವಕರಿಗೆ ಉದ್ಯೋಗ ನೀಡಲು ಸಹಾಯ ಮಾಡುವ ನೌಕರರು ಎಷ್ಟು ಜನರಿದ್ದಾರೆ ಎಂದು ಯೋಚಿಸಿದರೆ, ಅಲ್ಲಿಯೂ ಕೇವಲ ಬೆರಳೆಣಿಕೆಯ ಜನರು ಸಿಗುತ್ತಾರೆ. ಸಮರ್ಥರು ಕೈಕಟ್ಟಿ ಕುಳಿತಿದ್ದರೆ, ಸಾಧಾರಣ ಸ್ಥಿತಿವಂತರು ಇಂದು ಸಮಾಜ ಸುಧಾರಣೆ ಮಾಡಬೇಕು ಎಂದು ಹೊರಟಿದ್ದಾರೆ.  ಆದರೆ ಅವರಲ್ಲಿ ಶಕ್ತಿ ಇಲ್ಲ. ಇಂತಹ ಸ್ಥಿತಿಯಲ್ಲಿ ಇಂದು ಸಮುದಾಯ ಅಧೋಗತಿಯತ್ತ ಪ್ರಯಾಣಿಸುತ್ತಿದೆ. ಅಂಬೇಡ್ಕರ್ ಅವರು ಇಂತಹ ದುಸ್ಥಿತಿಯನ್ನು ನೆನೆದು ಅಂದು ಕಣ್ಣೀರು ಹಾಕಿದ್ದರು. ತನ್ನ ಸಮುದಾಯ ಆಳುವ ವರ್ಗವಾಗಬೇಕು. ಎಷ್ಟೋ ವರ್ಷಗಳಿಂದ ಭಾರತದಲ್ಲಿ ಪ್ರಾಣಿಗಳಿಗಿಂತಲೂ ಕೀಳಾಗಿ ನಡೆಸಲಾಗಿದ್ದ ಅಸ್ಪೃಶ್ಯ ಸಮುದಾಯವನ್ನು  ಮೇಲೆತ್ತಬೇಕು, ಅವರು ಸ್ವಾಭಿಮಾನದಿಂದ ಬದುಕುವಂತಾಗಬೇಕು. ಅವರು ಸ್ವಾಭಿಮಾನದಿಂದ ಬದುಕುವಂತಾಗಬೇಕಾದರೆ ಅವರು ಆಳುವ ವರ್ಗವಾಗಬೇಕು ಎಂದು ಅವರು ನಿರೀಕ್ಷಿಸಿದ್ದರು. ಆದರೆ, ಸಮುದಾಯದಲ್ಲಿ ಅಭಿವೃದ್ಧಿ ಹೊಂದಿದವರು ಅವರ ಸ್ವಾರ್ಥವನ್ನು ಇಂದಿಗೂ ನೋಡುತ್ತಿದ್ದಾರೆಯೇ ಹೊರತು, ಸಮುದಾಯದ ಅಭಿವೃದ್ಧಿಗೆ ಅವರಿಂದ ಯಾವುದೇ ಸಹಾಯವೂ ಸಿಗುತ್ತಿಲ್ಲ. ಹೀಗಾಗಿಯೇ ಇಂದಿಗೂ  ಈ ಸಮುದಾಯದ ಬಡವರು  ಶೈಕ್ಷಣಿಕ ರಾಜಕೀಯವಾಗಿ ಮೇಲೆ ಬರಲಾಗದೇ ತನ್ನ ಸಮುದಾಯದ ಒಳಗೆಯೇ ನಿರ್ಲಕ್ಷ್ಯಕ್ಕೊಳಗಾಗಿದ್ದಾರೆ. ಅಂಬೇಡ್ಕರ್ ಅವರು ತಮ್ಮ ಮನಸ್ಸಿನಲ್ಲಿದ್ದ ನೋವನ್ನು ರತ್ತು ಬಳಿಯಲ್ಲಿ ಹೇಳುತ್ತಾ,  “ಬುದ್ಧ ಮತ್ತು ಕಾರ್ಲ್ ಮಾರ್ಕ್ಸ್”, “ಪ್ರಾಚೀನ ಭಾರತದಲ್ಲಿ ಕ್ರಾಂತಿ ಮತ್ತು ಪ್ರತಿಕ್ರಾಂತಿ”, ಹಿಂದೂ ಧರ್ಮದ ಒಗಟುಗಳು ಎನ್ನುವ ನನ್ನ ಎಲ್ಲಾ ಕೃತಿಗಳನ್ನು ಜೀವಿತಾವಧಿಯಲ್ಲಿಯೇ ಪ್ರಕಟಿಸಬೇಕು ಎಂದು ನಾನು ಬಯಸಿದ್ದೆ. ಆದರೆ ಅವುಗಳನ್ನು ಹೊರತರಲೂ ನನ್ನಿಂದ ಸಾಧ್ಯವಾಗುತ್ತಿಲ್ಲವಲ್ಲ, ಅದು ಮುಂದೆಂದಾದರೂ ಪ್ರಕಟವಾಗಬಹುದು ಎಂದು ನಾನು ಅಂದುಕೊಂಡರೂ ಆ ಸಾಧ್ಯತೆಗಳು ನನಗೆ ಕಾಣುತ್ತಿಲ್ಲ.  ನನ್ನ ಚಳುವಳಿಯನ್ನು ಶೋಷಿತ ಸಮುದಾಯದಿಂದ ಬಂದು ಯಾರಾದರೂ ಮುನ್ನಡೆಸುತ್ತಾರೆ ಎಂದು ನಾನು ನಿರೀಕ್ಷಿಸಿದ್ದೆ. ಆದರೆ ಅಂತಹವರು ಯಾರೂ ನನಗೆ ಈ ಸಂದರ್ಭದಲ್ಲಿ ಕಾಣುತ್ತಿಲ್ಲ. ನಾನು ಯಾರ ಮೇಲೆ ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದೆನೋ, ಅವರು ಈ ಜವಾಬ್ದಾರಿಯ ಬಗ್ಗೆ ಗಮನ ಹರಿಸುತ್ತಿಲ್ಲ.  ಅವರು ನಾಯಕತ್ವಕ್ಕಾಗಿ, ಅಧಿಕಾರಕ್ಕಾಗಿ ತಮ್ಮಲೇ ಹೋರಾಡುತ್ತಿದ್ದಾರೆ. ನನ್ನ ದೇಶದ ಜನತೆಗೆ ಸೇವೆ ಸಲ್ಲಿಸುವ ಆಸೆ ನನಗೆ ಇನ್ನೂ ಇದೆ. ಪೂರ್ವಾಗ್ರಹ ಪೀಡಿತ ಜಾತಿ ಎಂಬ ರೋಗವನ್ನು ಅಂಟಿಸಿಕೊಂಡಿರುವ ಜನರೇ ಇಲ್ಲಿ ತುಂಬಿದ್ದಾರೆ. ಈ ದೇಶದಲ್ಲಿ ನನ್ನಂತಹವರು ಜನಿಸುವುದು ಮಹಾಪಾಪ. ಹಾಗೆಯೇ ಈಗಿರುವ ವ್ಯವಸ್ಥೆಯಲ್ಲಿ ದೇಶಕ್ಕೆ ಸಂಬಂಧಪಟ್ಟಂತೆ ಯಾರಾದರೊಬ್ಬರು ತಮ್ಮ ವೈಯಕ್ತಿಕ ಅಭಿಪ್ರಾಯಗಳನ್ನು ಮಂಡಿಸುವುದು ತುಂಬಾ ಕಷ್ಟ. ಏಕೆಂದರೆ ಇಲ್ಲಿಯ ಜನರು ಈ ದೇಶದ ಪ್ರಧಾನಿ(ನೆಹರು)ಗೆ ಒಗ್ಗದಂತಹ ಯಾವುದೇ ವಿಚಾರಗಳನ್ನು ಕೇಳುವ ತಾಳ್ಮೆಯನ್ನು ಹೊಂದಿಲ್ಲ. ಈ ದೇಶ ಇನ್ನೆಲ್ಲಿಗೆ ಹೋಗಿ ಮುಳುಗುತ್ತದೆಯೋ ಎಂದು ಅವರು ಸಂಕಟ ಅನುಭವಿಸುತ್ತಾರೆ. ಅಂಬೇಡ್ಕರ್ ಅವರ ಧ್ವನಿಯಲ್ಲಿ ಕಂಪನ ಆರಂಭವಾಗುತ್ತದೆ  “ಧೈರ್ಯ ತಂದುಕೋ ರತ್ತು, ನೀನು ಎದೆಗುಂದ ಬೇಡ, ಜೀವನ ಯಾವಗಲಾದರೂ ಕೊನೆಗೊಳ್ಳಲೇ ಬೇಕು.  ನನ್ನ ಜನರಿಗೆ ಹೇಳು ನಾನು ಇಲ್ಲಿಯವರೆಗೆ ಏನನ್ನು ಸಾಧಿಸಿದ್ದೇನೋ, ಅದನ್ನು ನನ್ನ ಶತ್ರುಗಳ ವಿರುದ್ಧ ಹೋರಾಡುತ್ತಾ, ಹಲವಾರು ಸಮಸ್ಯೆಗಳನ್ನು ಎದುರಿಸುತ್ತಾ, ನಿರಂತರವಾಗಿ ನೋವುಗಳ ಸರಮಾಲೆಯನ್ನೇ ಅನುಭವಿಸುತ್ತಾ ಸಾಧಿಸಿದ್ದೇನೆ. ಈ ವಿಮೋಚನ ರಥವನ್ನು ಈಗ ಅದು ಎಲ್ಲಿದೆಯೋ ಅಲ್ಲಿಯವರೆಗೆ ತಂದಿದ್ದೇನೆ. ಏನೇ  ಆದರೂ  ಈ ರಥ ಮುನ್ನಡೆಯಲೇ ಬೇಕು. ರಥವನ್ನು ಮುನ್ನಡೆಸಲು ಸಾಧ್ಯವಾಗದಿದ್ದರೆ. ಅದು ಎಲ್ಲಿದೆಯೋ ಅಲ್ಲಿಯೇ ಇರಲು ಬಿಡಿ. ಯಾವುದೇ ಕಾರಣಕ್ಕೂ ಅದನ್ನು ಹಿಂದಕ್ಕೆ ಸರಿಯಲು ಬಿಡಬೇಡಿ ಇದು ನನ್ನ ಕೊನೆಯ ಸಂದೇಶ, ಇದನ್ನು ನನ್ನ ಜನರಿಗೆ ತಲುಪಿಸು ಎಂದು ಹೇಳುತ್ತಾರೆ.  ಇದು ಅಂಬೇಡ್ಕರರ ಕೊನೆಯ ಮಾತುಗಳು. ಅಂದು ರತ್ತು ಜೊತೆಗೆ ಇಷ್ಟೆಲ್ಲ ಮಾತುಗಳನ್ನಾಡಿದ್ದ, ಡಾ.ಬಿ.ಆರ್.ಅಂಬೇಡ್ಕರ್ ಅವರು ನಿದ್ದೆಗೆ ಜಾರಿದ್ದರು. ಮರುದಿನ ಅಂಬೇಡ್ಕರ್ ಅವರು ಎದ್ದೇಳಲೇ ಇಲ್ಲ. ಅಂಬೇಡ್ಕರ್ ಅವರು ನಿಧನರಾಗಿದ್ದರು. ಇಡೀ ದೇಶವೇ ಸ್ತಬ್ಧವಾಗಿತ್ತು. ಅಂಬೇಡ್ಕರ್ ಅವರ ಕಾಲಿಗೆ ಅಡ್ಡವಾಗುತ್ತ, ಪ್ರತಿನಿತ್ಯ ತೊಂದರೆ ಕೊಡುತ್ತಿದ್ದ ದೊಡ್ಡ ದೊಡ್ಡ ನಾಯಕರು ಎನಿಸಿಕೊಂಡಿದ್ದವರೆಲ್ಲರೂ ಆ ದಿನ ಕಣ್ಣೀರು ಹಾಕಿದರು. ಅಂಬೇಡ್ಕರ್ ಎಂದರೆ ಅವರೊಂದು ವ್ಯಕ್ತಿಯಾಗಿರಲಿಲ್ಲ, ಅವರು ಈ ದೇಶದ  ಶಕ್ತಿಯಾಗಿದ್ದರು. ಅದು ಅಂದಿಗೂ ಇಂದಿಗೂ ಎಂದೆಂದಿಗೂ…. # ಈ ಕೃತಿಯನ್ನು ನಾನಕ್ ಚಂದ್ ರತ್ತು ಅವರು ಬರೆದಿದ್ದಾರೆ… *********************************************************

ಡಾ.ಬಿ.ಆರ್.ಅಂಬೇಡ್ಕರ್ ರ ಕೊನೆಯ ಸಂದೇಶ..! Read Post »

ಇತರೆ, ಜೀವನ

ದೊಡ್ಡವರ ಮನೆಯ ಸಣ್ಣ ಕತೆ

ಅನುಭವ ದೊಡ್ಡವರ ಮನೆಯ ಸಣ್ಣ ಕತೆ ವೀಣಾ ನಿರಂಜನ್ ಈ ದೊಡ್ಡವರ ಮನೆಯ ಕತೆಗಳು ಬಹಳ ಸ್ವಾರಸ್ಯಕರವಾಗಿರುತ್ತವೆ. ನಾನು ಇಲ್ಲಿ ಹೇಳ ಹೊರಟಿರುವುದು ಒಂದು ಸ್ಯಾಂಪಲ್ ಅಷ್ಟೇ. ಆ ದಿನ ಮನೆ ಮಂದಿಯೆಲ್ಲ ಸಡಗರದಿಂದ ಓಡಾಡುತ್ತಿದ್ದರು. ಮನೆಯ ಮಗನ ಹುಟ್ಟುಹಬ್ಬ ಎಂದರೆ ಕೇಳಬೇಕೆ. ಶೇಖರ್ ಬಾಬು ಬೆಳಿಗ್ಗೆಯೇ ಮಗನಿಗೆ ಇಂಪೋರ್ಟೆಡ್ ಶಾಂಪೂ, ಸೋಪು ಹಾಕಿ ಹಿತವಾಗಿ ಸ್ನಾನ ಮಾಡಿಸಿದರು. ಮಕ್ಕಳಿಬ್ಬರೂ ಸಂಭ್ರಮದಿಂದ ತಂದೆಗೆ ನೆರವಾದರು. ಶರಾವತಿ ಸಂಜೆ ಪಾರ್ಟಿಗೆ ಯಾರ್ಯಾರನ್ನು ಕರೆಯಬೇಕು, ಏನೇನು ಆರ್ಡರ್ ಮಾಡಬೇಕು ಅದೆಲ್ಲವನ್ನೂ ಸಿದ್ಧ ಮಾಡಿ ಕೊಳ್ಳುತ್ತಿದ್ದಳು. ನಡು ನಡುವೆ ಮಗನನ್ನು ಮಾತನಾಡಿಸುತ್ತ ಮಾತಲ್ಲೇ ಮುದ್ದುಗರೆಯುತ್ತಿದ್ದಳು. ಹಾಗೆಯೇ ತಿಂಡಿ ತಯಾರಿಸುತ್ತಿದ್ದ ಶರಾವತಿ ತರಕಾರಿ ಮಾರಲು ಬಂದವನೊಡನೆ ಐವತ್ತು ರೂಪಾಯಿಗೆ ಚೆನ್ನಾಗಿ ಚೌಕಾಶಿ ಮಾಡಿ ಕೊಂಡಳು. ಮಗನಿಗೆ ಸಾವಿರಾರು ರೂಪಾಯಿಗಳ ಇಂಪೋರ್ಟೆಡ್ ಫುಡ್ ನಿಂದ ಬ್ರೆಕ್ ಫಾಸ್ಟ್ ತಯಾರಿಸಿದಳು. ಅದು ಇಂಪೋರ್ಟೆಡ್ ಅಲ್ವಾ, ನೀಟಾಗಿ ಜಬರ್ದಸ್ತಾಗಿ ಪ್ಯಾಕ್ ಮಾಡಿದ ಫುಡ್. ಅದರಲ್ಲಿ ಚೌಕಾಶಿ ಇರುವುದಿಲ್ಲ. ಇದರ ಮಧ್ಯೆಯೇ ಕೆಲಸಕ್ಕೆ ಬಂದ ಹೊನ್ನಮ್ಮಳಿಗೆ ಮಹಡಿ ಮೇಲಿನ ರೂಂಗಳನ್ನು, ಬಾಲ್ಕನಿ, ಫೊರ್ಟಿಕೊ ಎಲ್ಲವನ್ನೂ ಗುಡಿಸಿ ಒರೆಸುವಂತೆ ನಿರ್ದೇಶಿಸಿದಳು. ಹಾಗೇ ವಾರಕ್ಕೆ ಒಂದೆರಡು ಸಲ ಮಾತ್ರ ಆ ಕೆಲಸವಾದ್ದರಿಂದ ಹೊನ್ನಮ್ಮನ ಸಂಬಳವನ್ನು ತುಸು ಎಳೆದಾಡಿ ಇಷ್ಟು ಅಂತ ಗೊತ್ತು ಮಾಡಿದಳು. ಸಂಜೆಯಾಗುತ್ತಿದ್ದಂತೆ ಬಂದವರಿಗೆಂದು ಆರ್ಡರ್ ಮಾಡಿದ ಅಗ್ಗದ ಕೇಕು, ಮನೆಗೆಂದು ಆರ್ಡರ್ ಮಾಡಿದ ಪೇಸ್ಟ್ರಿ ಎಲ್ಲವೂ ಬಂದವು. ಮಕ್ಕಳು ಹೊಸ ಬಟ್ಟೆ ತೊಟ್ಟು ಸಡಗರದಿಂದ ಓಡಾಡುತ್ತಿದ್ದರು. ಅತಿಥಿಗಳು ಬಂದು ಸೇರಿದ ಮೇಲೆ ಭರ್ಜರಿ ಪಾರ್ಟಿ ನಡೆಯಿತು. ಬರ್ಥಡೇ ಬಾಯ್ ಜೊತೆಗೆ ಮನೆಯವರ, ಅತಿಥಿಗಳ ಫೋಟೋ ಶೂಟ್ ಆಯಿತು. ಎಲ್ಲರೂ ಡಿನ್ನರ್ ಗೆಂದು ಕುಳಿತಾಗ ಒಂದು ಅಹಿತಕರ ಘಟನೆ ನಡೆದು ಬಿಟ್ಟಿತು. ಮೇಲೆ ಓಪನ್ ಬಾಲ್ಕನಿಯಲ್ಲಿ ನಡೆಯುತ್ತಿದ್ದ ಡಿನ್ನರ್ ಗೆ ಎಲ್ಲಿಂದಲೋ ಮೂರು ಕೋತಿಗಳು ಪ್ರತ್ಯಕ್ಷವಾಗಿ ಕಿಸ್ ಕಿಸ್ ಎಂದು ಗುರುಗುಟ್ಟ ತೊಡಗಿದವು. ಶೇಖರ್ ಬಾಬು ಮಗನನ್ನು ಕೋತಿಗಳನ್ನು ಓಡಿಸಲು ಛೂ ಬಿಟ್ಟರು. ಕೋತಿಗಳು ಅವನನ್ನು ನೋಡಿ ಮತ್ತೊಮ್ಮೆ ಕಿಸ್ ಎಂದವು. ಅವನು ಹೆದರಿ ಶರಾವತಿಯ ಕಾಲ ಬುಡದಲ್ಲಿ ಸುತ್ತುತ್ತಾ ಕುಂಯ್ ಗೂಡ ತೊಡಗಿದ. ಶೇಖರ್ ಬಾಬು ಒಮ್ಮೆಲೇ ಕೋಪದಿಂದ ಗುಡುಗಿದರು, ” ಥೂ  ನೀನೆಂಥ ನಾಯಿಯೋ ಬೊಗಳೋ ಬೊಗಳು”. ಅತಿಥಿಗಳು ಉಕ್ಕಿ ಬರುವ ನಗೆಯನ್ನು ತಡೆಯುತ್ತ ಸಭ್ಯತೆ ಮೆರೆದರು. ಶರಾವತಿ ಕಣ್ಣಂಚಿನ ನೀರು ತುಳುಕುವುದನ್ನು ತಡೆದಳು! ************************************************************************

ದೊಡ್ಡವರ ಮನೆಯ ಸಣ್ಣ ಕತೆ Read Post »

ಇತರೆ, ಪ್ರಬಂಧ

ಪಾರಿಜಾತ ಗಿಡ

ಲಲಿತ ಪ್ರಬಂಧ ಪಾರಿಜಾತ ಗಿಡ ವಿದ್ಯಾ ಶ್ರೀ ಎಸ್ ಅಡೂರ್. ಪಾರಿಜಾತ ಹೂವಿನ ಮರ ಎಂದರೆ ಚಿಕ್ಕಂದಿನಿಂದಲೂ ನನಗೆ ಅದೆಂತದೋ  ಒಂದು  ರೀತಿಯ ಪ್ರೀತಿ.ಅದೊಂದು ದೇವಲೋಕದ ಸುವಸ್ತು, ಕೃಷ್ಣ ತನ್ನ ಮಡದಿ ಸತ್ಯಭಾಮೆಗಾಗಿ ತಂದ ಹೂವು ಎಂದೆಲ್ಲ  ಅರ್ದಂಬರ್ದ ಕಥೆಗಳು ಕಲಸುಮೇಲೋಗರ ವಾಗಿ ಒಂದು ಅಲೌಕಿಕ ಆಕರ್ಷಣೆ ಯಾಗಿ ಬೆಳೆದಿದೆ.             ಕೆಲವು ವರ್ಷಗಳ ಹಿಂದೆ ಎಲ್ಲೋ ನೆಂಟರ ಮನೆಗೆ ಹೋಗಿದ್ದಾಗ ಒಂದು ಗೆಲ್ಲು ಕೇಳಿ ತಂದು ಮನೆಯ ಹಿತ್ತಿಲಲ್ಲಿ ನೆಟ್ಟಿದ್ದೆ. ಕಾಲಮಾನ ಕ್ಕೆ ಅನುಗುಣವಾಗಿ ಅದು ಮಣ್ಣಿನೊಳಗೆ ಬೇರಿಳಿಸಿ, ಚಿಗುರಿ,ನಿಧಾನವಾಗಿ ತನ್ನ ಪಾಡಿಗೆ ಬೆಳೆದು, ಈಗ ಅಗಾಧವಾಗಿ ಹಬ್ಬಿ ನಿಂತಿದೆ. ಸಂಜೆಯಾದರೆ ಸಾಕು ಮೈಯೆಲ್ಲ ಮುತ್ತು ಸುರಿದಂತೆ ಮೊಗ್ಗು ತುಂಬಿಕೊಂಡು ಗಾಳಿಗೆ ತೊಯ್ದಾಡುತ್ತದೆ. ಮುಸ್ಸಂಜೆಯ ವೇಳೆಯಲ್ಲಿ ಮೈಮೇಲೆ ಬೆಣ್ಣೆ ಚೆಲ್ಲಿದಂತೆ, ಮಂಜು ಮುಸುಕಿದಂತೆ, ಹೂವುಗಳೆಲ್ಲಾ ಅರಳಿ ಹೊಳೆಯತೊಡಗುತ್ತವೆ. ಹುಣ್ಣಿಮೆಯ ಮತ್ತು ಅದರ ಆಚೆ ಈಚೆ ಗಿನ ರಾತ್ರಿ ಗಳಲ್ಲಿ ದೇವಲೋಕವೇ ಭೂಮಿಗಿಳಿದಂತೆ ತನ್ನ ಮಂದ ಘಮ ದೊಂದಿಗೆ ಮನಕ್ಕೆ ಮುದ ನೀಡುತ್ತದೆ.             ಹಿಂದೆಲ್ಲ ಮನೆಯ ಹಿತ್ತಿಲಲ್ಲಿ ಇದ್ದ ಈ ಮರ ಈಗ ಕೆಲ ವರ್ಷಗಳ ಹಿಂದೆ ಹಳೆ ಮನೆ ಕೆಡವಿ ಹೊಸ ಮಾಳಿಗೆ ಮನೆ ಕಟ್ಟಿ, ಮಾಳಿಗೆ ಮೇಲೆ ನನಗೊಂದು ರೂಮು ಅಂತ ಮಾಡಿ, ಅದಕ್ಕೊಂದು ಬಾಲ್ಕನಿ ಅಂತ ಮಾಡಿ ಕೊಂಡು,ಸಂಜೆಯ ವೇಳೆಗೆ ಅಲ್ಲಿ ಒಂದು ಕುರ್ಚಿ ಹಾಕಿ ಕೂತರೆ, ಎಲ!ಕೈಗೆಟುಕುವ ದೂರ ದಲ್ಲಿ “ಪಾರಿಜಾತ ಹೂವಿನ ಮರ “.ಆನಂತರದ  ದಿನಗಳಲ್ಲಿ ಅದೆಷ್ಟು ಸಂಜೆ ನಾನು ಅದರ ಸೌಂದರ್ಯ, ಘಮ ಸವಿದಿಲ್ಲ??.ನನ್ನ ರೂಮಿನ ಕಿಟಕಿ ತೆರೆದರೆ ನೇರ ನನ್ನ ಮಂಚಕ್ಕೇ ಕಾಣುವ ಮರ, ಅದೆಷ್ಟು ದಿನ ತನ್ನ ಘಮದಿಂದಲೇ ನನ್ನನ್ನು ಲಾಲಿ ಹಾಡಿ ಮಲಗಿಸಿಲ್ಲ??ನನ್ನ ಅದೆಷ್ಟು ಒಂಟಿ ಸಂಜೆಗಳನ್ನು ನಾನು ಅದರ ಜೊತೆಗೆ ಕಳೆದಿಲ್ಲ??ಲೆಕ್ಕ…….ನನಗೂ ಇಲ್ಲ……ಅದಕ್ಕೂ ಇಲ್ಲ..        ಬೆಳಗಾದರೆ ಸಾಕು, ಸಣ್ಣ ಸಣ್ಣ ಹಕ್ಕಿ ಗಳು  ಅದೇನೋ ದೊಡ್ಡ ಆಲದಮರ ವೇನೋ ಎಂಬಂತೆ, ನನ್ನ ಪಾರಿಜಾತ ಗಿಡದ ಕೊಂಬೆಯಿಂದ ಕೊಂಬೆಗೆ ಹಾರುತ್ತ,ಜಿಗಿಯುತ್ತ ಸಂಭ್ರಮ ಪಡುವಾಗ ಬೆಳ್ಳನೆಯ ಪಾರಿಜಾತ ಹೂವುಗಳು ಹಿಮದ ಮಳೆಯಂತೆ ನೆಲಕ್ಕೆ ಉದುರುವುದ ನೋಡುವುದೇ ಒಂದು ಸೊಬಗು. ನನ್ನ ಬೆಳಿಗಿನ ಅವಶ್ಯ ಕೆಲಸ ಗಳನ್ನು ಪೂರೈಸಿ,ದೇವರ ಪೂಜೆಗೆ ಹೂವು ಕೊಯ್ಯಲು ಹೊರಟು, ಪಾರಿಜಾತ ಮರದ ಅಡಿಗೆ ಬಂದರೆ, ಬೆಳ್ಳನೆಯ ಹೂವಿನ ಹಾಸು ನೆಲದ ತುಂಬೆಲ್ಲಾ…….ಆ ಸುಂದರ ನೋಟ,..ಘಮ..ಮನಸಿಗೆ ನೀಡುವ ಖುಷಿ ಕೋಟಿಕೊಟ್ಟರೂ ಸಿಗದು.                 ಇತ್ತೀಚೆಗೆ ನನ್ನ ಯಜಮಾನರಿಗೆ  ಅಂಗಳ ದೊಡ್ಡದು ಮಾಡುವ ಮನಸ್ಸಾಗಿ, ಮನೆಯ ಸುತ್ತಲ ಗಿಡ ಗಳನ್ನೆಲ್ಲಾ ತೆಗೆಯಬೇಕು ಎಂದುಬಿಟ್ಟರು. ಅವರು ಹೇಳುವಂತೆ ಅದನ್ನು ಕಡಿದು, ಗೆಲ್ಲು ಬೇರೆ ಕಡೆ ಊರಿದರೆ ಇನ್ನೊಂದು ಗಿಡ ತಯಾರಾಗುತ್ತದೆ. ವಿಷಯವೇನೋ ಸರಿ. ಆದರೆ ನಾನು ಹಾಗೆ ಭಾವಿಸಲು ಹೇಗೆ ಸಾಧ್ಯ?? … ಅದರ ಸಾನ್ನಿಧ್ಯ ಕ್ಕೆ ನಾನು ಹೇಗೆ ಚಡಪಡಿಸುತ್ತೇನೋ.ಹಾಗೆಯೇ..ಅದೂ ನನ್ನ ಇರುವಿಕೆಯನ್ನು ಬಯಸುತ್ತದೆ…ಎಂದು ನನಗೆ ಗೊತ್ತಿದ್ದಮೇಲೆ….               ಬದಲಾಗುವ ಜಗತ್ತು, ಕಾಲಮಾನ, ಮನುಷ್ಯನ ನಡುವೆ, ಉದ್ದುದ್ದ…ಅಗಲಗಲ…..ಬೆಳೆದು, ಬಂದು ನನ್ನ ಬಾಲ್ಕನಿ ಬಳಿ ಇಣುಕಲು ಕಲಿತ ಒಂದು ಯಃಕಶ್ಚಿತ್ ‘ಪಾರಿಜಾತ ಗಿಡ ‘ ,ಆಚೆ ಈಚೆ ಹೋಗಲು ಯಾಕೆ ಕಲಿತಿಲ್ಲ!!? ಕಲಿತಿದ್ದರೆ ಸ್ವಲ್ಪ ಬದಿಗೆ ಕರೆದು ಕೂರಿಸಬಹುದಿತ್ತಲ್ಲ, ಎಂದು ಅನಿಸುತ್ತದೆ ನನಗೆ. ಮತ್ತೆ ಅನಿಸುತ್ತದೆ….ಅದರ ಪುಣ್ಯ, ಅದು ಇನ್ನೂ ಪಾರಿಜಾತ ಗಿಡ ವಾಗಿಯೇ ಉಳಿದಿದೆ. ಮನುಷ್ಯನಂತೆ ಬುಧ್ಧಿ ಬೆಳೆದು ಅಸಂಬದ್ಧ ಗಳಲ್ಲಿ ಸಿಕ್ಕಿಹಾಕಿಕೊಂಡಿಲ್ಲ. ಉಳಿದರೂ ಪಾರಿಜಾತ ಗಿಡ ವಾಗಿ ಯೇ…ಅಳಿದರೂ ಪಾರಿಜಾತ ಗಿಡ ವಾಗಿ ಯೇ…             ಮನುಷ್ಯನ ಜೀವನ ತೀರ ವ್ಯಾವಹಾರಿಕ ವಾಗಿ ಉಳಿದಿರುವ, ದಿನಕ್ಕೊಂದು ಐವತ್ತು ಮುಖವಾಡಗಳನ್ನು ಹಾಕಿ ಅಸಲಿಯತ್ತು ಮರೆಮಾಡುವ, ನೈಜತೆಗೆ ಬೆಲೆಯೇ ಇಲ್ಲದ ಇಂದಿನ ಕಾಲಮಾನ ದಲ್ಲಿ “ಪಾರಿಜಾತ ಗಿಡ ,ಪಾರಿಜಾತ ಗಿಡ ವಾಗಿ ಯೇ ಉಳಿದದ್ದು ಅದರ ತಪ್ಪೇ??”ಎಂದು ಯೋಚಿಸತೊಡಗಿದೆ…. ************************************

ಪಾರಿಜಾತ ಗಿಡ Read Post »

ಇತರೆ

ಜಿ. ಪಿ. ರಾಜರತ್ನಂ ಜನ್ಮದಿನ

ಇಂದು ಕನ್ನಡದ ಧೀಮಂತ ಸಾಹಿತಿ ಪ್ರೊ.ಜಿ.ಪಿ.ರಾಜರತ್ನಂ ಅವರು ಜನಿಸಿದ ದಿನ ಬಾಲ್ಯ ‘ಜಿ. ಪಿ. ರಾಜರತ್ನಂ'(೧೯೦೪-೧೯೭೯) ರವರು ಮೂಲತಃ ಚಾಮರಾಜ ನಗರ ಜಿಲ್ಲೆಯ ಗುಂಡ್ಲುಪೇಟೆಯವರು. ಇವರ ಪೂರ್ವಜರು ತಮಿಳುನಾಡಿನ “ನಾಗಪಟ್ಟಣ”ಕ್ಕೆ ಸೇರಿದ ತಿರುಕ್ಕಣ್ಣಾಪುರ ಎಂಬ ಅಗ್ರಹಾರದಿಂದ ೧೯೦೬ ರಲ್ಲಿ ಮೈಸೂರಿಗೆ ಬಂದರು. ಹೆಸರಾಂತ ಗುಂಡ್ಲು ಪಂಡಿತ ವಂಶ ದಲ್ಲಿ ಡಿಸೆಂಬರ್ ೦೫, ೧೯೦೪ರಂದು ರಾಮನಗರದಲ್ಲಿ ಜನಿಸಿದರು. ಮೊದಲಿಗೆ ಇವರ ಹೆಸರು ಜಿ.ಪಿ.ರಾಜಯ್ಯಂಗಾರ್ ಎಂದಿತ್ತು. ಇವರು ಲೋಯರ್ ಸೆಕೆಂಡರಿ ಓದುತ್ತಿದ್ದಾಗ ಚೇಷ್ಟೆಗಾಗಿ ಶಾಲೆಯ ಗುಮಾಸ್ತರನ್ನು ಪುಸಲಾಯಿಸಿ ತಮ್ಮ ಹೆಸರನ್ನು ಜಿ.ಪಿ.ರಾಜರತ್ನಂ ಎಂದು ತಿದ್ದಿಕೊಂಡಿದ್ದರು. ತಂದೆ ಆ ಭಾಗದಲ್ಲಿ ಉತ್ತಮ ಶಿಕ್ಷಕರೆಂದು ಹೆಸರು ಮಾಡಿದ್ದ ಜಿ.ಪಿ.ಗೋಪಾಲಕೃಷ್ಣ ಅಯ್ಯಂಗಾರ್. ತಾಯಿಯ ಪ್ರೀತಿ ಇಲ್ಲದೆ ಬೆಳೆದ ರಾಜರತ್ನಂಗೆ, ತಂದೆಯೇ ಎಲ್ಲವೂ ಆಗಿದ್ದರು. ಅಜ್ಜಿಯ ಅಕ್ಕರೆಯಲ್ಲೂ ರಾಜರತ್ನಂ ಬೆಳೆದರು. ತಂದೆ ಬಡ ಮೇಸ್ಟ್ರು. ಸ್ವಾತಂತ್ರ್ಯ ಪೂರ್ವದಲ್ಲೇ (೧೯೩೧ರಲ್ಲಿ) ರಾಜರತ್ನಂ ಎಂ.ಎ (ಕನ್ನಡ)ದಲ್ಲಿ ಮುಗಿಸಿ, ಶಿಶು ವಿಹಾರ ಹಾಗೂ ತಂದೆಯ ಶಾಲೆಯಲ್ಲಿ ಆರಂಭಿಕ ಮೇಸ್ಟ್ರು ಆದರು. ಇದರ ಅನುಭವದ ಫಲವೇ ಮಕ್ಕಳ ಕುರಿತು ಬರೆದ `ತುತ್ತೂರಿ’ ಶಿಶುಗೀತೆ ಸಂಕಲನ ‘. ಕ್ರಮೇಣ ಆ ಕೆಲಸ ತೃಪ್ತವಾಗದೆ ಹೈದರಾಬಾದಿಗೂ ಕೆಲಸ ಹುಡುಕಿ ಹೋಗಿದ್ದುಂಟು. ಅಲ್ಲಿಂದ ನಿರಾಶರಾಗಿ ಬೆಂಗಳೂರಿಗೆ ಬಂದು ಜನಗಣತಿ ಕಛೇರಿಯಲ್ಲಿ ಕೆಲಸಕ್ಕೆ ಪ್ರಯತ್ನಿಸಿದರು. ಆದರೆ ಅಲ್ಲಿದ್ದ ಮಾಸ್ತಿ ವೆಂಕಟೇಶ ಅಯ್ಯಂಗಾರ್ ರು ರಾಜರತ್ನಂರವರಿಗೆ ‘ಸಾಹಿತ್ಯ ಸೇವೆ’ ಮುಂದುವರೆಸಲು ಉಪದೇಶಿಸಿದರು. ಅದರ ಫಲವೇ ಮುಂದೆ ‘ರಾಜರತ್ನಂ’ ಅವರಿಂದ ‘ಉತ್ತಮ ಸಾಹಿತ್ಯ ನಿರ್ಮಾಣ’ಕ್ಕೆ ದಾರಿಯಾಯಿತು. ಬೌದ್ಧ ಸಾಹಿತ್ಯ ಇಂಥ ಉಪಯುಕ್ತ ಸಾಹಿತ್ಯದಲ್ಲೊಂದು ‘ಮಿಂಚು’. ಮಡದಿಯ ಸಾವಿನಿಂದ ಧೃತಿಗೆಟ್ಟರು ರಾಜರತ್ನಂ ಅವರಿಗೆ ವೈವಾಹಿಕ ಜೀವನದಲ್ಲಿ ಸಾಕಷ್ಟು ನೋವುಂಟಾಯಿತು. ಪತ್ನಿ ಲಲಿತಮ್ಮ ಕಾಯಿಲೆ ಬಿದ್ದವರು ಹುಷಾರಾಗಲೇ ಇಲ್ಲ, ವಿಧಿವಶರಾದರು. ಅವರ ನೆನಪು ಹಸಿರಾಗಿದ್ದಾಗಲೇ ಸೀತಮ್ಮ ಅವರ ‘ಬಾಳನಂದಾದೀಪ’ವಾಗಿ ಬಂದರು. ಬದುಕು ಸ್ಥಿರವಾಯಿತು. ಕಷ್ಟ ಕಾರ್ಪಣ್ಯಗಳ ನಡುವೆ ೧೯೩೮ರಲ್ಲಿ ‘ಕನ್ನಡ ಪಂಡಿತ ಹುದ್ದೆ’, ರಾಜರತ್ನಂ ಅವರನ್ನು ಹುಡುಕಿ ಬಂತು. ಮೈಸೂರು, ಬೆಂಗಳೂರು, ಶಿವಮೊಗ್ಗ, ತುಮಕೂರುಗಳಲ್ಲಿ ಅಧ್ಯಾಪಕರಾಗಿ, ಮೆಚ್ಚಿನ ಮೇಸ್ಟ್ರು ಆಗಿ ಖ್ಯಾತರಾದರು. ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ವಿದ್ಯಾರ್ಥಿಗಳ ಲೇಖನಗಳ ಸಂಕಲನ ವಿದ್ಯಾರ್ಥಿ ವಿಚಾರ ವಿಲಾಸ ಪ್ರಕಟಿಸುವುದರ ಮೂಲಕ ನೂರಾರು ವಿದ್ಯಾರ್ಥಿಗಳಿಗೆ ಸಾಹಿತ್ಯ ಸೃಷ್ಟಿಯಲ್ಲಿ ಪ್ರೇರಕ ಶಕ್ತಿಯಾದರು. ಪ್ರೊ| ಎ.ಆರ್.ಕೃಷ್ಣಶಾಸ್ತ್ರಿ ಸ್ಥಾಪಿಸಿದ್ದ ಸೆಂಟ್ರಲ್ ಕಾಲೇಜಿನ ಕರ್ಣಾಟಕ ಸಂಘದ ಸಕ್ರಿಯ ಚಟುವಟಿಕೆಗಳಲ್ಲಿ ಭಾಗವಹಿಸಿ ಅದಕ್ಕೊಂದು ಘನತೆ ತಂದರು. ಜಿ.ಪಿ.ರಾಜರತ್ನಂ, ೧೯೭೬ರಲ್ಲಿ ದ.ಕ.ಜಿಲ್ಲಾ ಸಾಹಿತ್ಯ ಸಮ್ಮೇಳನ ಹಾಗೂ ಶಿವಮೊಗ್ಗ ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದರು. ೧೯೬೯ರಲ್ಲೇ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದಿದ್ದರು. ೧೯೭೭ರಲ್ಲಿ ಮೈಸೂರು ವಿಶ್ವವಿದ್ಯಾಲಯದ ಡಾಕ್ಟರೇಟ್ ಪದವಿ ಲಭಿಸಿತು. ೧೯೭೮ರಲ್ಲಿ ‘ದೆಹಲಿಯಲ್ಲಿ ಸುವರ್ಣ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ’, ೧೯೭೯ರಲ್ಲಿ ಧರ್ಮಸ್ಥಳ ಸಾಹಿತ್ಯ ಸಮ್ಮೇಳನದಲ್ಲಿ ಮಕ್ಕಳ ಸಾಹಿತ್ಯಗೋಷ್ಠಿ ಅಧ್ಯಕ್ಷತೆ ವಹಿಸಿದ್ದರು. ರಾಜರತ್ನಂ ಅವರ ಸಾಹಿತ್ಯ ಸೇವೆಗೆ ಎರಡು ಮುಖ. ಒಂದು ಸಾಹಿತ್ಯ ಸೃಷ್ಟಿ, ಎರಡು ಸಾಹಿತ್ಯ ಪರಿಚಾರಿಕೆ. ಕಾವ್ಯನಾಮ “”ಭ್ರಮರ”” ಎಂಬುದು ಇವರ ಕಾವ್ಯನಾಮವಾಗಿತ್ತು. ಕೆಲವು ಪದ್ಯದ ಸಾಲುಗಳು         ಮಕ್ಕಳ ಕವನ ನಾಯಿಮರಿ ನಾಯಿಮರಿ ತಿಂಡಿ ಬೇಕೆ? ತಿಂಡಿ ಬೇಕು ತೀರ್ಥ ಬೇಕು ಎಲ್ಲ ಬೇಕು.. ನಾಯಿಮರಿ ನಿನಗೆ ತಿಂಡಿ ಏಕೆ ಬೇಕು? ತಿಂದು ಗಟ್ಟಿಯಾಗಿ ಮನೆಯ ಕಾಯಬೇಕು ನಾಯಿಮರಿ ಕಳ್ಳ ಬಂದರೇನು ಮಾಡುವೆ? ಲೊಳ್ ಲೊಳ್ ಬೊವ್ ಎಂದು ಕೂಗಿ ಆಡುವೆ ಜಾಣಮರಿ ತಾಳು ಹೋಗಿ ತಿಂಡಿ ತರುವೆನು ತಾ ನಿನ್ನ ಮನೆಯ ನಾನು ಕಾಯುತಿರುವೆನು. ಕನ್ನಡ ಪದಗೊಳ್ ಯೆಂಡ ಯೆಡ್ತಿ ಕನ್ನಡ್ ಪದಗೊಳ್ ಅಂದ್ರೆ ರತ್ನಂಗ್ ಪ್ರಾಣ! ಬುಂಡೇನ್ ಎತ್ತಿ ಕುಡದ್ಬುಟ್ಟಾಂದ್ರೆ ತಕ್ಕೊ! ಪದಗೊಳ್ ಬಾಣ! ಬಗವಂತ ಏನ್ರ ಬೂಮೀಗ್ ಇಳಿದು ನನ್ ತಾಕ್ ಬಂದಾಂತ್ ಅನ್ನು; ಪರ್ ಗಿರೀಕ್ಸೆ ಮಾಡ್ತಾನ್ ಔನು ಬಕ್ತನ್ ಮೇಲ್ ಔನ್ ಕಣ್ಣು! ರತ್ನನ್ ಪರ್ಪಂಚ ಯೇಳ್ಕೊಳ್ಳಾಕ್ ಒಂದ್ ಊರು ತಲೇಮೇಗ್ ಒಂದ್ ಸೂರು ಮಲಗಾಕೆ ಭೂಮ್ತಾಯಿ ಮಂಚ ಕೈ ಯಿಡದೋಳ್ ಪುಟ್ನಂಜಿ ನೆಗನೆಗತ ಉಪ್ಗಂಜಿ ಕೊಟ್ರಾಯ್ತು ರತ್ನನ್ ಪರ್ಪಂಚ ಕೃತಿಗಳು ತುತ್ತೂರಿ ರತ್ನನ ಪದಗಳು ಎಂಡಕುಡುಕ ರತ್ನ ನಾಗನ ಪದಗಳು ಬುದ್ಧನ ಜಾತಕಗಳು ಧರ್ಮದಾನಿ ಬುದ್ಧ ಭಗವಾನ್ ಮಹಾವೀರ ಮಹಾವೀರನ ಮಾತುಕತೆ ಕಡಲೆಪುರಿ ಗುಲಗಂಜಿ ಕಂದನ ಕಾವ್ಯ ಮಾಲೆ ರಾಜರತ್ನಂ ತಮ್ಮನ್ನು ತಾವೇ ‘ಸಾಹಿತ್ಯ ಪರಿಚಾರಕ’ ಎಂದು ಕರೆದುಕೊಳ್ಳುತ್ತಿದ್ದರು. ಇದರಿಂದ ಅವರ ಉದ್ದೇಶ ಸ್ಪಷ್ಟವಾಗಿತ್ತು- ಭಾಷಣದ ಮತ್ತು ಕೃತಿ ಪ್ರಕಟಣೆ ಮೂಲಕ ಜನರ ಬಳಿಗೆ ಸಾಹಿತ್ಯ ಕೊಂಡೊಯ್ಯುವುದಾಗಿತ್ತು. ಹೀಗಾಗಿ ‘ಜಿ.ಪಿ.ರಾಜರತ್ನಂ,’ ಕನ್ನಡ ಸಾಹಿತ್ಯದಲ್ಲಿ ವಿಶಿಷ್ಟ ಸಂವೇದನೆಯನ್ನುಂಟು ಮಾಡಿದವರು. ವಿದಾಯ  ೧೯೭೯ರ ಮಾರ್ಚ್ ತಿಂಗಳ ೧೩ ರಂದು ನಿಧನರಾದರು. ********************************* ಇಂಗಳಗಿ ದಾವಲಮಲೀಕ

ಜಿ. ಪಿ. ರಾಜರತ್ನಂ ಜನ್ಮದಿನ Read Post »

You cannot copy content of this page

Scroll to Top