ಅಂಕಣ ಬರಹ ರಾಮಕೃಷ್ಣ ಗುಂದಿ ಅವರ ಆತ್ಮಕಥೆ—41 ಆತ್ಮಾನುಸಂಧಾನ ಅಧ್ಯಾಪಕ ವೃತ್ತಿಯ ಆರಂಭದ ದಿನಗಳು ೧೯೭೫ ರ ಜುಲೈ ಒಂದರಂದು ನಾನು ಅಂಕೋಲೆಯ ಗೋಖಲೆ ಸೆಂಟನರಿ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕನಾಗಿ ಕರ್ತವ್ಯಕ್ಕೆ ಹಾಜರಾದೆ. ಅಂದು ನನ್ನ ಜೊತೆಯಲ್ಲಿಯೇ ನಮ್ಮ ನಾಡು ಮಾಸ್ಕೇರಿಯವರೇ ಆದ ಶ್ರೀ ಎನ್.ಎಚ್.ನಾಯಕ. ಜೀವಶಾಸ್ತ್ರ ವಿಭಾಗಕ್ಕೆ, ಅಂಕೋಲಾ ತಾಲೂಕಿನ ಬಾಸಗೋಡಿನ ಶ್ರೀ ವಿ.ಆರ್.ಕಾಮತ ರಸಾಯನ ಶಾಸ್ತ್ರ ವಿಭಾಗಕ್ಕೆ ಉಪನ್ಯಾಸಕರಾಗಿ ಸೇರಿದರು. ನಮ್ಮ ಕಾಲೇಜಿನ ಆಡಳಿತ ಕಚೇರಿಯಲ್ಲಿ ನಮ್ಮ ಹಾಜರಾತಿಯ ಪ್ರಕ್ರಿಯೆ ನಡೆಯುವಾಗ ಬಹುತೇಕ ಎಲ್ಲ ಸಿಬ್ಬಂದಿಗಳ ಕೌತುಕದ ದೃಷ್ಠಿಯೊಂದು ನನ್ನ ಮೇಲೆ ಇರುವುದು ಸ್ಪಷ್ಟವಾಗಿ ನನ್ನ ಗಮನಕ್ಕೆ ಬರುತ್ತ ನನಗೆ ಅತೀವ ಮುಜುಗರವನ್ನುಂಟು ಮಾಡುತ್ತಿತ್ತು. ಇತರರ ಅಂಕಪಟ್ಟಿ ಮತ್ತಿತರ ದಾಖಲಾತಿಗಳನ್ನು ಸಹಜವಾಗಿ ಪರಿಶೀಲಿಸಿ ಹಾಜರು ಪಡಿಸಿಕೊಳ್ಳುವ ಆಫೀಸು ಸಿಬ್ಬಂದಿ ನನ್ನನ್ನು ಅಪಾದ ಮಸ್ತಕ ಮತ್ತೆ ಮತ್ತೆ ಪರಿಶೀಲಿಸಿ ನನ್ನ ದೈಹಿಕ ಚಹರೆಯನ್ನು ಸೂಕ್ಷ್ಮವಾಗಿ ಗಮನಿಸುವುದನ್ನು ನೋಡುತ್ತಲೇ ನಾನು ಬೇಡ ಬೇಡವೆಂದರೂ ಬೆವೆತು ಹೋಗಿದ್ದೆ. ಕೇವಲ ಉಪ್ಪಿನಾಗರ, ಕಲ್ಲು ಕಣಿಗಳ ಕಾಯಕದಲ್ಲಿ ಬದುಕು ಕಟ್ಟಿಕೊಂಡ ಆಗೇರ ಸಮುದಾಯದ ಈ ಹುಡುಗ ತುಂಬಿದ ತರಗತಿಗಳನ್ನು ಹೇಗೆ ನಿಭಾಯಿಸಬಲ್ಲ? ಎಂಬ ಪ್ರಶ್ನೆಯ ಕುತೂಹಲದಲ್ಲಿಯೇ ಅವರೆಲ್ಲರೂ ನನ್ನ ಸಮಗ್ರ ಚಹರೆಯ ಪರೀಕ್ಷೆಗೆ ಇಳಿದಂತೆ ತೋರುತ್ತಿತ್ತು. ಅಚ್ಚರಿಯೆಂದರೆ ಈ ಪರಿಸರದ ಸೂಕ್ಷ್ಮ ವನ್ನು ನಾನು ಮಾತ್ರವೇ ಗಮನಿಸಿದೆ ಎನ್ನುವಂತೆಯೂ ಇರಲಿಲ್ಲ. ಕಚೇರಿಗೆ ಸಂಬಂಧಿಸದೆ ಅಲ್ಲಿದ್ದ ಇತರರಿಗೂ ಈ ಅನುಭವ ತಟ್ಟಿದೆ ಎಂಬುದು ನನಗೆ ಆ ಬಳಿಕ ತಿಳಿಯಿತು. ಬೇರೆ ಯಾವುದೋ ವೈಯಕ್ತಿಕ ಕಾರಣಕ್ಕಾಗಿ ಕಚೇರಿಗೆ ಬಂದ ಪ್ರಾಥಮಿಕ ಶಾಲಾ ಶಿಕ್ಷಕರೊಬ್ಬರು ಸನ್ನಿವೇಶದ ಸೂಕ್ಷ್ಮ ವನ್ನು ನನ್ನಂತೆಯೇ ಗ್ರಹಿಸಿದ್ದರು. ಕಚೇರಿಯಲ್ಲಿ ಕೌಂಟರಿನ ಆಚೆ ನಿಂತು ನಮ್ಮ ಹಾಜರಾತಿ ಪ್ರಕ್ರಿಯೆಯನ್ನು ಗಮನಿಸುತ್ತಿದ್ದ ಹಿರಿಯ ಶಿಕ್ಷಕ ಮಹನೀಯರಿಗೂ ಇದೇ ಅನುಭವವಾಗಿದ್ದು ನಮ್ಮ ತಂದೆಯವರನ್ನು ಭೇಟಿಯಾದಾಗ ಕಚೇರಿಯ ದೃಶ್ಯಾವಳಿಗಳನ್ನು ತಾವು ಕಂಡಂತೆಯೇ ವಿವರಿಸಿದ್ದಾರೆ. ಇದರ ಪರಿಣಾಮ ಅಂದಿನ ಸನ್ನಿವೇಶದ ಹಿಂದಿರುವ ಭಾವನೆಗಳು ಮತ್ತದರ ಕಾರಣಗಳು ಇಂದಿಗೂ ನನ್ನ ಸ್ಮರಣೆಯಲ್ಲಿ ಜೋಪಾನವಾಗಿಯೇ ಉಳಿದುಕೊಂಡವು. ಇದನ್ನು ನಾನಿಲ್ಲಿ ಪ್ರಸ್ತಾಪಿಸಲು ಕಾರಣವಿಷ್ಟೇ… ಅಂದಿನ ಸಾಮಾಜಿಕ ವಾಸ್ತವದಲ್ಲಿ ಸಮಾಜದ ಕಟ್ಟಕಡೆಯ ಸಮುದಾಯವನ್ನು ಗಮನಿಸುವ ರೀತಿಗಳು ಹೇಗಿದ್ದವು? ಮತ್ತು ಇಂಥಲ್ಲಿ ಅಧ್ಯಾಪಕ ವೃತ್ತಿಯನ್ನು ಆರಂಭಿಸುವ ನನ್ನಂಥವನ ಮುಂದಿರುವ ಸವಾಲುಗಳು ಯಾವವು? ಎಂಬುದನ್ನು ಗ್ರಹಿಸುವುದಕ್ಕಾಗಿ ಮಾತ್ರ ಇದನ್ನು ನಾನಿಲ್ಲಿ ಪ್ರಸ್ತಾಪಿಸಿದ್ದೇನೆ. ಅಧ್ಯಾಪಕ ವಲಯದಲ್ಲಿ ವ್ಯತಿರಿಕ್ತ ಎನ್ನಿಸುವ ಯಾವ ಸನ್ನಿವೇಶಗಳೂ ನನಗೆ ಕಾಣಿಸಲಿಲ್ಲ. ಬಹಳಷ್ಟು ಜನ ಅಧ್ಯಾಪಕರು ನನಗೆ ಪಾಠ ಹೇಳಿದ ಗುರುಗಳೇ ಆಗಿದ್ದರು. ಸಮಾನ ವಯಸ್ಕರಲ್ಲಿ ನನಗಿಂತ ಒಂದಾರು ತಿಂಗಳು ಮೊದಲೇ ಉಪನ್ಯಾಸಕರಾಗಿ ತೊಡಗಿಸಿಕೊಂಡ ಇಂಗ್ಲಿಷ್ ವಿಭಾಗದ ಎಸ್.ಎಚ್.ನಾಯಕ ಮತ್ತು ಎನ್.ವಿ.ನಾಯಕ ಪ್ರೀತಿಯ ಸ್ನೇಹಿತರೇ ಆದರು. ಇದೆಲ್ಲವೂ ನನಗೆ ಲವಲವಿಕೆಯಿಂದ ಅಧ್ಯಾಪಕ ವೃತ್ತಿಯಲ್ಲಿ ತೊಡಗಲು ಪ್ರೇರಣೆಯಾದವು. ತರಗತಿಗೆ ಪೂರಕವಾದ ಪಠ್ಯ-ಪುಸ್ತಕ ಮತ್ತು ವೇಳಾ ಪತ್ರಿಕೆ ಹಂಚುವಿಕೆಯಲ್ಲೂ ನನ್ನ ಹಿರಿಯ ಅಧ್ಯಾಪಕರು ನನ್ನ ವಿನಂತಿಯನ್ನು ಮನ್ನಿಸಿ ಅವಕಾಶ ನೀಡಿದರು. ವಿಭಾಗ ಮುಖ್ಯಸ್ಥರಾದ ವಿ.ಎ.ಜೋಷಿಯವರಾಗಲೀ, ಸಹ ಅಧ್ಯಾಪಕರಾದ ಕೇ.ವಿ. ನಾಯಕರಾಗಲೀ ಈರ್ವರೂ ನನಗೆ ಕಲಿಸಿದ ಗುರುಗಳೇ ಆದುದರಿಂದ ನನ್ನ ಕುರಿತು ಪ್ರೀತಿಯ ಸಹಕಾರ ಮತ್ತು ಮಾರ್ಗದರ್ಶನ ನೀಡುತ್ತಲೇ ನನ್ನ ನೆರವಿಗೆ ನಿಂತರು. ಆರಂಭದ ದಿನಗಳಲ್ಲಿ ಪ್ರತಿ ತರಗತಿಯ ಪಾಠಕ್ಕೆ ಬೇಕಾದ ಸಿದ್ಧತೆ, ಪೂರಕ ವಿಷಯಗಳ ಸಂಗ್ರಹ ಎಲ್ಲವನ್ನೂ ಟಿಪ್ಪಣಿಯಾಗಿ ಬರೆದುಕೊಂಡು ನನ್ನ ಇಬ್ಬರೂ ಗುರುಗಳಿಗೆ ತೋರಿಸಿ ಅವರ ಸಲಹೆ ಸೂಚನೆಗೊಂದಿಗೆ ಪರಿಷ್ಕರಿಸಿಕೊಂಡೇ ತರಗತಿಗೆ ಹೋಗುತ್ತಿದ್ದೆ. ಕನ್ನಡೇತರ ಹಿಂದಿ, ಸಂಸ್ಕೃತ, ಇಂಗ್ಲೀಷ್ ವಿಷಯಗಳ ಕುರಿತಾಗಿಯೂ ನನ್ನ ಹಿರಿಯ ಗುರುಗಳೊಡನೆ ಚರ್ಚಿಸುತ್ತಿದ್ದೆ. ಹಿಂದಿಯ ಕೆ.ಪಿ. ಕುಲಕರ್ಣಿ, ಸಂಸ್ಕೃತ ಮತ್ತು ಕ್ರೀಡಾ ವಿಷಯವಾಗಿ ಪ್ರೊ.ಎಂ.ಪಿ.ಭಟ್ಟ, ಇಂಗ್ಲೀಷಿಗೆ ಸಂಬಂಧಿಸಿ ಪ್ರೊ.ಎಂ.ಎನ್ ಡಂಬಳ್ ಮತ್ತು ಗೆಳೆಯ ಎಸ್.ಎಚ್.ನಾಯಕ ಅಗತ್ಯ ಮಾಹಿತಿಗಳನ್ನು ಎಲ್ಲ ಸಂದರ್ಭಗಳಲ್ಲೂ ನೀಡುತ್ತಿದ್ದರು. ನಾನೇ ಓದಿ ಸಂಗ್ರಹಿಸಿಕೊಳ್ಳಲು ಗ್ರಂಥ ಭಂಡಾರದಲ್ಲಿ ಸಮೃದ್ಧ ಪುಸ್ತಕ ಸಂಗ್ರಹವೂ ಇತ್ತು. ಅಲ್ಲಿನ ಗ್ರಂಥಪಾಲಕ ಎಸ್.ಆರ್.ಉಡುಪಿಯವರಾಗಲೀ, ಅವರ ಸಹಾಯಕರಾಗಿದ್ದ ಹಿರಿಯ ಲೇಖಕ ಶ್ಯಾಮ ಹುದ್ದಾರರಾಗಲಿ ನಾನು ಬಯಸಿದ ಪುಸ್ತಕವನ್ನು ಹುಡುಕಿಕೊಡುವಲ್ಲಿ ತುಂಬಾ ಮುತುವರ್ಜಿಯಿಂದ ಸಹಕರಿಸುತ್ತಿದ್ದರು. ಅಂದಿನ ದಿನಗಳಲ್ಲಿ ತರಗತಿಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಅಧಿಕವಾಗಿರುತ್ತಿತ್ತು. ಅದರಲ್ಲಿಯೂ ಕನ್ನಡ ವಿಷಯ ಆಯ್ಕೆಯಲ್ಲಿ ಎಲ್ಲ ವಿದ್ಯಾರ್ಥಿಗಳೂ ಆಸಕ್ತಿ ಹೊಂದಿರುತ್ತಿದ್ದರು. ಕೆಲವು ತರಗತಿಗಳಲ್ಲಿ ನೂರಕ್ಕೂ ಅಧಿಕ ವಿದ್ಯಾರ್ಥಿಗಳಿದ್ದರು. ಪಾಠ ಮುಗಿದು ಚರ್ಚೆಯ ಸಮಯವಿದ್ದರೆ ಹಲವರು ಹಲಬಗೆಯ ಪ್ರಶ್ನೆಗಳನ್ನು ಕೇಳುತ್ತಿದ್ದರು. ಇದಕ್ಕೆ ಸಮರ್ಪಕ ಉತ್ತರ ಹೇಳಲೂ ಸಿದ್ಧತೆ ಇರಬೇಕು. ಈ ಎಲ್ಲ ಎಚ್ಚರದಿಂದಲೇ ನಾನು ಹೆಜ್ಜೆ ಹೆಜ್ಜೆಗೂ ನನ್ನನ್ನು ಪರಿಷ್ಕರಿಸಿಕೊಳ್ಳುವುದು ಅನಿವಾರ್ಯವೂ ಆಯಿತು. ನನ್ನ ಯಕ್ಷಗಾನ ಕಲೆಯ ಅಭಿರುಚಿ ಮತ್ತು ಅನುಭವಗಳು ಸ್ಪಷ್ಟವಾದ ಮಾತುಗಾರಿಕೆಗೆ ನನ್ನಲ್ಲಿ ಆತ್ಮ ವಿಶ್ವಾಸ ಹೆಚ್ಚಿಸಿದ್ದೂ ಸುಳ್ಳಲ್ಲ. ಅದಕ್ಕೆ ಪೂರಕವಾಗಿ ದೈವಾನುಗ್ರಹದಿಂದ ದೊರೆತ ನನ್ನ ಕಂಠತ್ರಾಣವೂ ನಾನು ನನ್ನ ಪಾಠಕ್ರಮದಲ್ಲಿ ಶಿಸ್ತು ಮತ್ತು ಆಕರ್ಷಣೆಯನ್ನು ವೃದ್ಧಿಸಿಕೊಳ್ಳಲು ಸಹಕಾರಿಯಾಯಿತು. ಆದರೂ ಬಹುದೊಡ್ಡ ವಿದ್ಯಾರ್ಥಿ ಸಮುದಾಯದಲ್ಲಿ ನಮ್ಮ ಕಣ್ಣಳತೆಗೆ ಮೀರಿ ಅಲ್ಲಿ ಇಲ್ಲಿ ಆತಂಕಪಡುವ ಸಣ್ಣಪುಟ್ಟ ಕಿತಾಪತಿಗಳೂ ನಡೆಯುತ್ತಿದ್ದವು. ಒಂದೊಂದು ಗಂಟೆಯ ತರಗತಿ, ಒಂದಾದ ಮೇಲೊಂದರಂತೆ ದಿನವೂ ನಾಲ್ಕು ಗಂಟೆಗಳ ಕಾಲ ಪಾಠ ಮಾಡುವ ಧಾವಂತದಲ್ಲಿ ನಾನು ಬೆವೆತು ಹೋಗುತ್ತಿದ್ದೆ. ಇಂಥ ಸ್ಥಿತಿಯಲ್ಲಿ ತರಗತಿಯನ್ನು ಪ್ರವೇಶಿಸಿದ ನನ್ನನ್ನು ನೋಡಿ ಕೆಲವು ವಿದ್ಯಾರ್ಥಿಗಳು “ಅದೆ ಕಲ್ಲ ಖಣಿಗೆ ಹೋಗಿ ಸೀದಾ ಬಂದ ನೋಡು…..” ಎಂದೋ “ಉಪ್ಪಿನಾಗರದಲ್ಲಿ ಉಪ್ಪು ತೆಗೆದು ಹಾಕೇ ಬಂದನೇನೋ…” ಎಂದೂ ನನ್ನ ಜಾತಿ ಕಸುಬನ್ನು ಎತ್ತಿ ಉದ್ಗರಿಸುವುದನ್ನು ಕೆಲವು ವಿದ್ಯಾರ್ಥಿಗಳೇ ಬಂದು ನನಗೆ ಹೇಳುತ್ತಿದ್ದರು. ಅದನ್ನು ಕೇಳುವಾಗ ತುಂಬ ಸಂಕಟದ ಅನುಭವವಾಗುತ್ತಿದ್ದರೂ ಕ್ರಮೇಣ ಅವೆಲ್ಲ ‘ಸಾಮಾನ್ಯ’ವೆಂದೇ ಜೀರ್ಣಿಸಿಕೊಳ್ಳುವುದನ್ನು ರೂಢಿಮಾಡಿಕೊಂಡೆ. ಉದ್ಯೋಗ ಆರಂಭಿಸಿದ ಬಳಿಕ ಕೆಲವು ದಿನ ಊರಿಂದಲೇ ಬಸ್ಸಿನಲ್ಲಿ ಬಂದು ಹೋಗುತ್ತಿದ್ದೆ. ಆದರೆ ಅಂಕೋಲೆಯಲ್ಲಿಯೇ ಒಂದು ಬಾಡಿಗೆ ಮನೆಮಾಡಿಕೊಂಡು ಉಳಿಯುವುದು ತುಂಬಾ ಅನಿವಾರ್ಯವೆನ್ನಿಸಿತು. ಇದೇ ಉದ್ದೇಶದಿಂದ ಬಾಡಿಗೆ ಮನೆಯೊಂದರ ಅನ್ವೇಷಣೆಗೆ ತೊಡಗಿದೆ. ಹಲವಾರು ಕಡೆಗಳಲ್ಲಿ ವಿಚಾರಿಸಿದರೂ ಏನಾದರೊಂದು ಕಾರಣ ನೀಡಿ ವಿಷಾದ ವ್ಯಕ್ತಪಡಿಸುತ್ತಿದ್ದರು. ಬಹಳ ಪ್ರಯತ್ನದ ಬಳಿಕ ಜಾತೀಯ ಕಾರಣವೇ ಇಲ್ಲಿನ ನಿರಾಕರಣೆಯ ಹಿಂದಿನ ರಹಸ್ಯವೆಂದು ಅರಿವಾಯಿತು. ಆ ದಿನಗಳಲ್ಲಿ ನನ್ನ ಜಾತಿ ಬಂಧುಗಳಲ್ಲಿ ಸುವ್ಯವಸ್ಥಿತ ಮನೆಗಳೂ ಇರಲಿಲ್ಲ. ಬಹುತೇಕ ಹುಲ್ಲಿನ ಛಾವಣಿ ಹೊಂದಿದ ಗುಡಿಸಲುಗಳೇ ಅಧಿಕ ಸಂಖ್ಯೆಯಲ್ಲಿ ಇದ್ದವು. ಅಪರೂಪದ ಕೆಲವು ಹಂಚಿನ ಮನೆಗಳಿದ್ದರೂ ಬಾಡಿಗೆಗೆ ಬಿಟ್ಟುಕೊಡುವಷ್ಟು ಸ್ಥಳಾವಕಾಶಗಳೂ ಇರುತ್ತಿರಲಿಲ್ಲ. ಇದರಿಂದ ಮನೆ ದೊರಕಿಸುವುದೇ ದುಸ್ತರವಾಯಿತು. ಅಂಥ ಸಂದರ್ಭದಲ್ಲಿ ಅಂಕೋಲೆಯಲ್ಲಿ ಎಕ್ಸೆಸೈಜ್ ಗಾರ್ಡ ಆಗಿ ಕೆಲಸ ಮಾಡುತ್ತಿದ್ದ ಸಮೀಪದ ಹಾರವಾಡಾ ಊರಿನ ನಾಗಪ್ಪ ಆಗೇರ ಎಂಬ ಗ್ರಹಸ್ಥರು “ಜಾತಿಯ ಕಾರಣದಿಂದಲೇ ನಮಗೆ ಯಾರೂ ಮನೆ ಬಾಡಿಗೆ ಕೊಡಲು ಒಪ್ಪುವುದಿಲ್ಲ. ನೀವು ಮುಸ್ಲಿಂರ ಮನೆಗಳಲ್ಲಿ ಕೇಳಿ ನೋಡಿ ಸಿಗಬಹುದು…” ಎಂದು ಸಲಹೆ ನೀಡಿದರು. ನನಗೆ ಮುಸ್ಲಿಂ ಸಮುದಾಯದ ಕುರಿತು ಅಷ್ಟೊಂದು ಪ್ರೀತಿ-ವಿಶ್ವಾಸಗಳಿರಲಿಲ್ಲ. ಅದಕ್ಕೆ ಕಾರಣವೇನೋ ತಿಳಿಯದು. ಬಾಲ್ಯದಲ್ಲಿಯೇ ಬನವಾಸಿಯಲ್ಲಿ ಖಾಜಿ ಮಾಸ್ತರರ ಅನುಕಂಪವನ್ನೂ, ಮುಲ್ಕೀ ಅಭ್ಯಾಸ ಮಾಡುವಾಗ ಗಂಗಾವಳಿಯ ಅಬ್ದುಲ್ ಮಾಸ್ತರರ ಪ್ರೀತ್ಯಾದರಗಳನ್ನು ಅನುಭವಿಸಿದ್ದೆ ಆದರೂ ಮುಸ್ಲಿಂ ಸಮುದಾಯದ ಕುರಿತು ಕಾರಣವೇ ಇಲ್ಲದ ಭಯದಿಂದ ಆತಂಕ ಪಡುತ್ತಿದ್ದೆ. ಆದರೀಗ ಪರಿಸ್ಥಿತಿಯ ಅನಿವಾರ್ಯತೆಯಿಂದ ಮುಸ್ಲಿಂರು ಹೆಚ್ಚು ನೆಲೆಸಿದ “ಮುಲ್ಲಾಬಾಡ” ಎಂಬ ಏರಿಯಾದಲ್ಲಿ ಮನೆ ಹುಡುಕಲು ನಿರ್ಧರಿಸಿದೆ. ಕೊನೆಗೆ ಸ್ವಜಾತಿ ಬಂಧು ನಾಗಪ್ಪ ಆಗೇರ ಎಂಬ ಗೆಳೆಯನಿಂದಲೇ ಒಂದು ಮನೆ ದೊರಕಿಸುವಲ್ಲಿ ಸಫಲನಾದೆ. ಬಂದರ ರಸ್ತೆಯ ಒಂದು ಅಂಚಿನಿಂದ ಆರಂಭಗೊಳ್ಳುವ “ಮುಲ್ಲಾಬಾಡ” ಎಂಬ ಮುಸ್ಲಿಂರ ನೆಲೆಯಲ್ಲಿ “ನಿಜಾಮ ಸಾಬ ಮತ್ತು ಆಶಾಬಿ ನಿಜಾಮ ಖಾನ” ಎಂಬ ವೃದ್ದ ದಂಪತಿಗಳ ಬಾಡಿಗೆ ಮನೆಯೊಂದು ಸುಲಭವಾಗಿ ದೊರೆಯಿತು. ಮನೆಯ ಅಂಗಳದಲ್ಲಿಯೇ ಸಾರ್ವಜನಿಕ ಬಾವಿ, ಮನೆಯ ಹಿಂಭಾಗದಲ್ಲಿ ಶೌಚಗ್ರಹ ಇತ್ಯಾದಿ ಅನುಕೂಲಗಳಿದ್ದವು. ವೃದ್ಧ ನಿಜಾಮ ಸಾಹೇಬರು ಸನಿಹದ ಕುಂಬಾರಕೇರಿಯಲ್ಲಿ ಪಾತ್ರೆ ರಿಪೇರಿ, ಕಲಾಯಿ ಇತ್ಯಾದಿ ಮಾಡಿಕೊಡುವ ಸಣ್ಣ ವರ್ಕ್ಶಾಪ್ ಇಟ್ಟುಕೊಂಡಿದ್ದರು. ನನಗೆ ನೀಡಿದಂತೆಯೇ ಮತ್ತೆರಡು ಕುಟುಂಬಗಳಿಗೆ ಬಾಡಿಗೆ ಮನೆ ನೀಡಿದುದರಿಂದ ವೃದ್ಧ ದಂಪತಿಗಳಿಗೆ ಆದಾಯಕ್ಕೆ ಕೊರತೆಯೇನೂ ಇರಲಿಲ್ಲ. ಮೊಮ್ಮಕ್ಕಳಲ್ಲಿ ಹೈಸ್ಕೂಲು ಓದು ಮುಗಿಸಿದ ‘ನೂರಜಹಾನ’ ಎಂಬ ಹುಡುಗಿ ಅವಳ ತಮ್ಮ ‘ರಫೀಕ್ ಶೇಖ್’ ಎಂಬ ಪ್ರಾಥಮಿಕ ಶಾಲೆ ಕಲಿಯುವ ಹುಡುಗ ಅಜ್ಜ-ಅಜ್ಜಿಯ ಜೊತೆಯಲ್ಲೇ ಉಳಿದು ಅವರಿಗೆ ನೆರವಾಗುತ್ತಿದ್ದರು. ತಿಂಗಳಿಗೆ ಮೂವತ್ತು ರೂಪಾಯಿಗಳ ಬಾಡಿಗೆಯ ಕರಾರಿನ ಮೇಲೆ ನನ್ನ ಬಾಡಿಗೆ ಮನೆಯ ವಾಸ್ತವ್ಯ ಆರಂಭವಾಯಿತು. ************************** ರಾಮಕೃಷ್ಣ ಗುಂದಿ
ಸಾಧಕಿಯರ ಯಶೋಗಾಥೆ
‘ ಸಾಧಕಿಯರ ಯಶೋಗಾಥೆ’ ಮಾಲಿಕೆಯನ್ನು ಸಂಗಾತಿ ಓದುಗರಿಗಾಗಿ ಸರಣಿ ರೂಪದಲ್ಲಿ ಪ್ರಕಟಿಸಲಿದೆ. ಈ ಸರಣಿ ಮಾಲಿಕೆಯನ್ನು ಲೇಖಕಿ ಡಾ. ಸುರೇಖಾ ಜಿ ರಾಠೋಡ ಪ್ರತಿವಾರ ಬರೆಯಲಿದ್ದಾರೆ…
ಇದರ ಮೊದಲ ಕಂತು ನಿಮ್ಮ ಮುಂದಿದೆ
ಹೆಸರಿನಲ್ಲಿ ‘ಸಮಾಜಶಾಸ್ತ್ರಜ್ಞೆ’ ಎಂದು ಇರುವುದರಿಂದ ಆಕೆ ಯಾರು? ಎಂಬ ಕುತೂಹಲದೊಡನೆ ಕತೆಗೆ ಪ್ರವೇಶ ಪಡೆದರೆ, ‘ನನ್ನ ಕಾಲದಲ್ಲಿ ಹೀಗಿತ್ತೆ? ನಾಲ್ಕು ದಿನದ ಮದುವೆ. ಈಗಿನದೆಲ್ಲಾ ಎಂತದು, ಬರೀ ನಾಟಕದ ಹಾಗೆ’ ಎಂದು ಗೊಣಗುತ್ತಾ ಸಮಾಜದ ಬದಲಾವಣೆಯ ಬಗ್ಗೆ ತಮ್ಮ ಟೀಕೆ-ಟಿಪ್ಪಣಿಗೆ ತೊಡಗುವುದರಿಂದ ಎದುರಾಗುವ ವಾಗತ್ತೆಯೇ ಸಮಾಜಶಾಸ್ತ್ರಜ್ಞೆ ಇರಬಹುದೇ ಎಂದು ಸಂಶಯಪಡಬೇಕಾಗುತ್ತದೆ. ಆದರೆ ವಾಗತ್ತೆ ಹಾಗೆ ಸಂಶಯಪಡಲು ಒಂದು ನಿಮಿತ್ತ ಜೀವ.
ಅಂಕಣ ಬರಹ ರಾಮಕೃಷ್ಣ ಗುಂದಿ ಅವರ ಆತ್ಮಕಥೆ—40 ಆತ್ಮಾನುಸಂಧಾನ ಆಗೇರ ಸಮಾಜದ ತರುಣನಿಗೆ ಪ್ರಾಧ್ಯಾಪಕ ಹುದ್ದೆ”— ಎಂದು ಸುದ್ದಿಯಾದೆ : ಧಾರವಾಡ ಮತ್ತು ಕರ್ನಾಟಕ ವಿಶ್ವವಿದ್ಯಾಲಯದ ಆವರಣದಲ್ಲಿ ಕಳೆದ ಎರಡು ವರ್ಷಗಳು ಕಳೆದು ಹೋದದ್ದೇ ತಿಳಿಯಲಿಲ್ಲ. ಬಹುಪಾಲು ತಂಪಾಗಿಯೇ ಇರುವ ಪ್ರಾಕೃತಿಕ ಪರಿಸರ, ಬಯಲು ಸೀಮೆಯ ಆಪ್ತವೆನ್ನಿಸುವ ಕನ್ನಡ ಭಾಷೆಯ ಸೊಗಸು, ಮತ್ತೆ ಮತ್ತೆ ಕರ್ನಾಟಕ ವಿದ್ಯಾವರ್ಧಕ ಸಂಘದ, ಕನ್ನಡ ವಿಭಾಗದ ಕಾರ್ಯಕ್ರಮಗಳು, ಅಲ್ಲಿಗೆ ಬಂದು ಹೋಗುವ ಹಿರಿ-ಕಿರಿಯ ಲೇಖಕರು, ಕವಿಗಳು, ವಿದ್ವಾಂಸರು ಇವರನ್ನೆಲ್ಲ ನೋಡುವುದೇ ಕೇಳುವುದೇ ಒಂದು ಹೆಮ್ಮೆ ಮತ್ತು ಸೊಗಸು! ಬಹುತೇಕ ಕಾರ್ಯಕ್ರಮಗಳಲ್ಲಿ ಪ್ರತ್ಯಕ್ಷ ಕಾಣಸಿಗುವ ಬೇಂದ್ರೆ, ಕಣವಿ, ಪುಟ್ಟಪ್ಪ, ಚಂಪಾ, ಗಿರಡ್ಡಿ, ಪಟ್ಟಣ ಶೆಟ್ಟಿ ಮುಂತಾದ ಮಹನೀಯರ ಮಾತು ಕತೆಗಳೆಲ್ಲ ಎಷ್ಟು ಹರ್ಷದಾಯಕವಾಗಿದ್ದವೆಂದರೆ ನನ್ನ ಜೇಬಿನ ಖಾಲಿತನ ಎಂದೂ ನನಗೆ ಕಷ್ಟದಾಯಕವಾಗಿ ಕಾಡಲೇ ಇಲ್ಲ. ಎರಡು ವರ್ಷ ಪೂರ್ತಿ ಕಳೆಯಲು ನಮ್ಮ ತಂದೆಯವರಿಂದ ನಾನು ಪಡೆದದ್ದು ಕೇವಲ ಎಂಟುನೂರು ರೂಪಾಯಿಗಳು ಮಾತ್ರ. ನನ್ನ ಊಟಕ್ಕೆ, ಬಟ್ಟೆಗೆ ಸಾಕು ಎನ್ನಿಸುವಷ್ಟು ಸ್ಕಾಲರ್ ಶಿಪ್ ಸಿಗುತ್ತಿತ್ತಲ್ಲ? ಅಪ್ಪ ಕಳುಹಿಸಿದ ಅಷ್ಟೂ ಹಣಕ್ಕಾಗಿ ಅವರು ಪಟ್ಟ ಶ್ರಮ ಎಷ್ಟೆಂಬುದು ನನಗೆ ತಿಳಿಯದ ಸಂಗತಿಯೇನೂ ಅಲ್ಲ. ತಿಂಗಳಿಗೆ ದೊರೆಯುವ ಎಪ್ಪತ್ತೋ ಎಂಭತ್ತು ರೂಪಾಯಿಗಳ ಮಾಸ್ತರಿಕೆಯ ಸಂಬಳದಲ್ಲಿ ಸಾಲದ ಕಂತು ಕಳೆದು ಕೈಗೆ ಬರುವ ಕಾಸಿನಲ್ಲೇ ತಮ್ಮ ತಂಗಿಯರ ಹೊಟ್ಟೆ ಬಟ್ಟೆ ಓದು ಬರಹದ ಖರ್ಚು ಹೊಂದಿಸಲು ಅಪ್ಪ ಪಡಬಾರದ ಬವಣೆ ಪಡುತ್ತಿದ್ದರು. ಆದರೂ ನನ್ನ ಮೇಲಿನ ಭರವಸೆ ಮತ್ತು ವಿಶ್ವಾಸದಿಂದ ನನಗೆ ಓದಿನ ಅವಕಾಶ ಕಲ್ಪಿಸಿಕೊಟ್ಟ ಅಪ್ಪ ನನ್ನ ಪಾಲಿನ ನಿಜವಾದ ದೇವರೇ ಅಂದರೆ ಅತಿಶಯೋಕ್ತಿಯಲ್ಲ. ಮೊದಲ ವರ್ಷದ ಅಂಕಗಳಿಕೆಯ ಆಧಾರದಿಂದ ಅಂತಿಮ ವರ್ಷದ ಫಲಿತಾಂಶದಲ್ಲಿ ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣನಾಗುವ ವಿಶ್ವಾಸವಂತೂ ನನಗಿತ್ತು. ಕಾಲೇಜು ಉಪನ್ಯಾಸಕನಾಗಲು ಕನಿಷ್ಟ ಅರ್ಹತೆಗೆ ಅಷ್ಟು ಅಂಕಗಳು ಸಾಲುತ್ತಿದ್ದ ಕಾಲಮಾನ ಅದು. ಹೇಗೂ ನಾನು ಕಾಲೇಜು ಉಪನ್ಯಾಸಕನಾಗಬಹುದೆಂಬ ಆತ್ಮವಿಶ್ವಾಸದಿಂದಲೇ ಪ್ರೀತಿಯ ಧಾರವಾಡಕ್ಕೆ ವಿದಾಯ ಹೇಳಿದ್ದೆನಾದರೂ ಮನಸ್ಸಿನ ಮೂಲೆಯಲ್ಲಿ “ಇಲ್ಲಿಯೇ ಬಂದು ಉಪನ್ಯಾಸಕನಾಗಬೇಕು” ಎಂಬ ಕನಸೊಂದು ಅಂತರಂಗದಲ್ಲಿ ಚಿಗುರೊಡೆದಿತ್ತು. ಪರೀಕ್ಷೆಯ ಫಲಿತಾಂಶ ಮತ್ತು ನಿರೀಕ್ಷಿತ ಅಂಕಗಳು ಬಂದಾದ ಬಳಿಕ ಉದ್ಯೋಗ ಅನ್ವೇಷಣೆಯ ಪ್ರಯತ್ನದಲ್ಲೇ ಆರೇಳು ತಿಂಗಳು ಕಳೆದವು. ಅಂದು ತೀರಾ ಅಪರೂಪವಾಗಿ ನಮ್ಮೂರಿನಂಥ ಕುಗ್ರಾಮಗಳಿಗೆ ತಲುಪುವ ಪತ್ರಿಕೆಗಳಲ್ಲಿ ಉದ್ಯೋಗ ಜಾಹೀರಾತು ನೋಡುವುದು ಅದಕ್ಕೆ ಅರ್ಜಿ ಹಾಕಿ ಕಾಯುವುದು ಒಂದು ಆಟದಂತೆ ನಡೆಯುತ್ತಿತ್ತು. ಬೇಸರ ನೀಗಿಸುವ ಗೆಳೆಯರ ಗುಂಪು, ಆಚೀಚೆ ನಡೆಯುವ ಬಯಲಾಟಗಳ ವೀಕ್ಷಣೆ ಮತ್ತು ತೊಡಗುವಿಕೆಯಿಂದ ದಿನ ಕಳೆಯುವುದೆಂದೂ ಕಷ್ಟವಾಗುತ್ತಿರಲಿಲ್ಲ ಆಗಲೇ ನಾನು ಬಿ.ಎ ಪದವಿ ಪಡೆದ “ಗೋಖಲೆ ಸೆಂಟನರಿ ಕಾಲೇಜ್ ಅಂಕೋಲಾದಲ್ಲಿ ಕನ್ನಡ ಉಪನ್ಯಾಸಕರ ಹುದ್ದೆ ಖಾಲಿ ಇದೆ” ಎಂಬ ಜಾಹೀರಾತು ಕಣ್ಣಿಗೆ ರಾಚಿತು! ನನಗೆ ಇದು ಹಲವಾರು ಕಾರಣಗಳಿಂದ ಇಷ್ಟದ ಸಂಗತಿಯಾಗಲಿಲ್ಲ. ಏಕೆಂದರೆ ಗೋಖಲೆ ಸೆಂಟನರಿ ಕಾಲೇಜು ದಿನದಿಂದ ದಿನಕ್ಕೆ ಪ್ರತಿಷ್ಠೆಯ ದಿಕ್ಕಿನಲ್ಲಿ ಪ್ರಗತಿ ಹೊಂದುತ್ತ ನಡೆದಿತ್ತು. ಮಾನ್ಯ ದಿನಕರ ದೇಸಾಯಿಯವರ ಸಂಕಲ್ಪ ದಂತೆ ಎಲ್ಲ ವಿಧದಲ್ಲಿಯೂ ಜಿಲ್ಲೆಯಲ್ಲಿ ಪ್ರಮುಖ ವಿದ್ಯಾಸಂಸ್ಥೆಯಾಗಿ ಮುನ್ನಡೆಯುತ್ತಿತ್ತು. ಅಲ್ಲಿರುವ ಎಲ್ಲ ಅಧ್ಯಾಪಕರೂ ಅಧ್ಯಾಪಕ ವೃತ್ತಿಗೆ ಪರಿಪೂರ್ಣ ನ್ಯಾಯ ಸಲ್ಲಿಸುವ ವಿದ್ಯಾಸಂಪನ್ನರಾಗಿದ್ದರು. ಕೆಲವೇ ವರ್ಷಗಳಾದರೂ ವಿದ್ಯಾರ್ಥಿಯಾಗಿ ನಾನು ಜಿ.ಸಿ.ಕಾಲೇಜಿನಲ್ಲಿ ಕಂಡ ಶಿಸ್ತು ಘನಸ್ಥಿತಿಯ ಭಾಗವಾಗುವ ಅರ್ಹತೆ ನನಗೆ ಸಾಧ್ಯವಾಗಿದೆಯೆ? ಎಂಬ ಪ್ರಶ್ನೆ ಹುಟ್ಟಿದ ಕ್ಷಣದಿಂದ ನಾನು ಅಧೀರನಾದೆ. ಇನ್ನೊಂದು ಬಹುಮುಖ್ಯ ಸಂಗತಿಯೆಂದರೆ ಸಾವಿರಕ್ಕೂ ಅಧಿಕ ಸಂಖ್ಯೆಯ ವಿದ್ಯಾರ್ಥಿ ಸಮುದಾಯ. ಬಹುಪಾಲು ಮೇಲ್ವರ್ಗದ ಮೇಲ್ಜಾತಿಯ ಕುಟುಂಬದ ಮಕ್ಕಳು. ಅಂಥ ವಿದ್ಯಾರ್ಥಿ ಸಮುದಾಯವು ತೀರ ಕೆಳಸ್ತರದ ದಲಿತ ಆಗೇರ’ ಜಾತಿಯ ಹುಡುಗ ಪಾಠ ಹೇಳಲು ನಿಂತರೆ ಹೇಗೆ ಸ್ವೀಕರಿಸಬಹುದು?…. ಎಂಬಿತ್ಯಾದಿ ಪ್ರಶ್ನೆಗಳು ಭಯವಾಗಿ ಕಾಡತೊಡಗಿಸಿದಾಗ ನಾನು ಇಲ್ಲಿಗೆ ಅರ್ಜಿ ಹಾಕುವುದೇ ಬೇಡವೆಂದು ನಿರ್ಧರಿಸಿ ಸುಮ್ಮನಾದೆ. ಅದೇ ಸಮಯಕ್ಕೆ ನನ್ನ ತಮ್ಮ ನಾಗೇಶ, ಗೆಳೆಯ ಹೊನ್ನಪ್ಪ, ಗಣಪತಿ, ನಾರಾಯಣ ಮುಂತಾದವರು ಅದೇ ಕಾಲೇಜಿನಲ್ಲಿ ಪಿ.ಯು ತರಗತಿಗೆ ಪ್ರವೇಶ ಪಡೆದಿದ್ದರು. ನಮ್ಮ ಕನ್ನಡ ವಿಭಾಗದ ಮುಖ್ಯಸ್ಥರೂ, ನನ್ನ ಗುರುಗಳೂ ಆದ ಪ್ರೊ.ವಿ.ಎ.ಜೋಷಿಯವರಿಗೆ ನಾನು ಎಂ.ಎ ಪಾಸು ಮಾಡಿದ ಸಂಗತಿ ತಿಳಿದಿತ್ತಲ್ಲ? ಅವರು ನನ್ನ ಅರ್ಜಿ ಕಳಿಸುವಂತೆ ನನ್ನ ತಮ್ಮ ನಾಗೇಶನ ಮೂಲಕ ಸಂದೇಶ ಕಳಿಸುತ್ತಲೇ ಇದ್ದರು. ನಾನು “ಹಾಂ…ಹೂಂ” ಅನ್ನುತ್ತಲೇ ದಿನ ಕಳೆಯುತ್ತಿದ್ದೆ. ಕೊನೆಗೊಮ್ಮೆ ಸ್ವತಃ ನನ್ನ ಗುರು ಜೋಷಿಯವರೇ ಮಾದರಿ ಅರ್ಜಿಯೊಂದನ್ನು ಬರೆದು ಕಳುಹಿಸಿ ಅಂತೆಯೇ ಅರ್ಜಿ ಬರೆದು ಅಂಕಪಟ್ಟಿ ಜಾತಿ ಸರ್ಟಿಫಿಕೇಟ್ ಲಗ್ತಿಸಿ ಕಳಿಸುವಂತೆ ಕೊನೆಯ ಸಂದೇಶ ಕಳುಹಿಸಿದರು. ನನಗೇನೂ ಇಲ್ಲಿ ಉಪನ್ಯಾಸಕನಾಗುವ ಧ್ಯೇಯವಾಗಲೀ, ಆತ್ಮ ವಿಶ್ವಾಸವಾಗಲೀ ಖಂಡಿತವಾಗಿಯೂ ಇರಲಿಲ್ಲ. ನಾನು ಒತ್ತಾಯ ಪೂರ್ವಕವಾಗಿ ಇಲ್ಲಿಯೇ ಕೆಲಸ ಮಾಡಬೇಕೆಂದು ತಂದೆಯವರು ಕೂಡಾ ಬಯಸಲಿಲ್ಲ. ಅವರು ನಿರ್ಲಿಪ್ತರಾಗಿದ್ದರು. ಆದರೆ ನಾನು ಅರ್ಜಿ ಸಲ್ಲಿಸಿದ ಸಂಗತಿ ತಿಳಿದ ಬಳಿಕ ಅದಕ್ಕೆ ಪೂರಕ ಪ್ರಯತ್ನಗಳು ಬೇಕೆಂದು ಬಯಸಿ ತಮ್ಮ ಶಕ್ತ್ಯಾನುಸಾರ ಕೆಲವು ವ್ಯಕ್ತಿಗಳ ಪ್ರಭಾವ ಬಳಸುವ ಪ್ರಯತ್ನ ಮಾಡಿದರು. ಅವುಗಳಲ್ಲಿ ಮುಖ್ಯವಾದುದೆಂದರೆ ಕಾಲೇಜು ಪ್ರಾಚಾರ್ಯರಾದ ಕೆ.ಜಿ ನಾಯ್ಕರನ್ನು ಕಂಡು ಮಾತನಾಡುವುದು. ಅಪ್ಪ ಹನೇಹಳ್ಳಿಯಲ್ಲಿ ಹಾಸ್ಟೆಲ್ಲಿನಲ್ಲಿ ಇದ್ದು ಪ್ರಾಥಮಿಕ ಶಾಲೆಯಲ್ಲಿ ಓದುತ್ತಿರುವಾಗ ಅಪ್ಪನ ತರಗತಿಯಲ್ಲಿಯೇ ಹನೇಹಳ್ಳಿಯವರೇ ಆದ ಕೆ.ಜಿ.ನಾಯ್ಕ ಓದುತ್ತಿದ್ದರಂತೆ. ಈ ಬಾಲ್ಯ ಸ್ನೇಹದ ನೆನಪು. ಈಗ ಪ್ರಯೋಜನಕ್ಕೆ ಬರಬಹುದೆಂಬ ಆಸೆಯಿಂದ ನಾನು ಉಪನ್ಯಾಸಕ ಹುದ್ದೆಗೆ ಅರ್ಜಿ ಸಲ್ಲಿಸಿದ ಕೆಲವೇ ದಿನಗಳಲ್ಲಿ ಅಪ್ಪ ಅಂಕೋಲೆಯ ಲಕ್ಷ್ಮೇಶ್ವರ ಭಾಗದಲ್ಲಿ ಇರುವ ಕೆ.ಜಿ.ನಾಯ್ಕರ ಮನೆಯನ್ನು ಹುಡುಕಿ ಹೊರಟರು. ಅವರಿಗೆ ವಿಷಯವನ್ನು ವಿವರಿಸಿ ತುಂಬಾ ಹೆಮ್ಮೆಯಿಂದ ಮಗನ ಕುರಿತು ಹೇಳಿ ಸಹಾಯ ಮಾಡುವಂತೆ ವಿನಂತಿಸಿ ಬಂದರು. “ಇಂಟ್ರೂ ಚೆನ್ನಾಗಿ ಮಾಡ್ಲಿಕೆ ಹೇಳು… ಒಳ್ಳೇ ತಯಾರಿಲಿ ರ್ಲಿ…” ಎಂಬ ಸಂದೇಶ ನೀಡಿ ಅವರು ಅಪ್ಪನನ್ನು ಬೀಳ್ಕೊಟ್ಟಿದ್ದರು. “ಇದು ಆಗ್ತದೆ” ಎಂಬ ವಿಶ್ವಾಸದಲ್ಲೇ ಅಪ್ಪ ಮನೆಗೆ ಬಂದಿದ್ದರು. ನಮ್ಮ ನೆರೆಯ ಅಡಿಗೋಣ ಎಂಬ ಊರಿನಲ್ಲಿ ಗೌರವಾನ್ವಿತ ಹಿರಿಯ ವ್ಯಕ್ತಿಯೊಬ್ಬರಿದ್ದರು. ಅವರು ಪಟೇಲ ನಾರಾಯಣ ನಾಯಕರು. ನಾರಾಯಣ ನಾಯಕರು ಊರಿನ ಪಟೇಲರಾಗಿ ಗೌರವದಿಂದ ಕಾರ್ಯನಿರ್ವಹಿಸುತ್ತಿದ್ದರು. ಅದರ ಜೊತೆಗೆ ಗಿಡಮೂಲಿಕೆಗಳ ಆಯುರ್ವೇದ ಔಷಧಿಯ ಕುರಿತಾಗಿಯೂ ಪರಿಣತಿ ಹೊಂದಿದ್ದರು. ಸುತ್ತಲಿನ ಹಳ್ಳಿಗಳಿಗೂ ಇಂಥ ಔಷಧಿಗಳನ್ನು ಪೂರೈಸುತ್ತ ಜನಾನುರಾಗಿಯಾಗಿದ್ದರು. ಈ ಗೌರವಗಳ ಜೊತೆಯಲ್ಲಿಯೇ ಯಕ್ಷಗಾನದ ಕಟ್ಟಾ ಅಭಿಮಾನಿಯಾದ ನಾಯಕರು ಯಕ್ಷಗಾನ ತಾಳಮದ್ದಳೆಯಲ್ಲಿ ಸೊಗಸಾಗಿ ಅರ್ಥ ಹೇಳುವ ಕಲಾ ಸಂಪನ್ನತೆಯನ್ನು ಪಡೆದಿದ್ದರು. ಇತ್ತೀಚಿನ ಕೆಲ ವರ್ಷಗಳಲ್ಲಿ ನಾನು ಯಕ್ಷಗಾನ ಪಾತ್ರಗಳನ್ನು ಮಾಡುತ್ತ, ಹೊಸ ಪ್ರಸಂಗಗಳನ್ನು ಬರೆದು ಪ್ರದರ್ಶನ ನಡೆಸಿದುದನ್ನು ಕಣ್ಣಾರೆ ಕಂಡ ನಾರಾಯಣ ನಾಯಕರು ನಮ್ಮ ತಂದೆಯವರ ಮುಂದೆ ಹಲವು ಬಾರಿ ನನ್ನ ಪ್ರತಿಭೆಯ ಕುರಿತು ಪ್ರಶಂಸೆಯ ಮಾತುಗಳನ್ನು ಆಡಿದ್ದರು. ಬಹಳ ವಿಶೇಷ ಸಂಗತಿಯೆಂದರೆ, ಅಡಿಗೋಣದ ಈ ಗೌರವಾನ್ವಿತ ಹಿರಿಯರಾದ ನಾರಾಯಣ ನಾಯಕರ ಹಿರಿಯ ಮಗಳನ್ನೇ ಜಿ.ಸಿ.ಕಾಲೇಜಿನ ವರ್ತಮಾನದ ಪ್ರಾಚಾರ್ಯರಾದ ಕೆ.ಜಿ.ನಾಯ್ಕ ಅವರು ಕೈ ಹಿಡಿದಿದ್ದರು. ಇದನ್ನು ಅರಿತಿದ್ದ ತಂದೆಯವರು, ಅಡಿಗೋಣ ನಾರಾಯಣ ನಾಯಕರಿಂದಲೂ ಅವರ ಅಳಿಯ ಕೆ.ಜಿ.ನಾಯ್ಕರಿಗೆ ಒಂದು ಮಾತು ಹೇಳಿಸಬಹುದೆಂದು ಯೋಚಿಸಿ ನಾಯಕರ ಮನೆಗೂ ಹೋಗಿ ವಿಷಯವನ್ನು ನಿವೇದಿಸಿ ನನ್ನ ಕುರಿತು ವಿನಂತಿಸಿ ಬಂದರು. ಕೆ.ಜಿ.ನಾಯ್ಕರ ಗಾಂಭೀರ್ಯ ಮತ್ತು ಶಿಸ್ತನ್ನು ವಿದ್ಯಾರ್ಥಿಯಾಗಿ ಗಮನಿಸಿದ್ದ ನನಗೆ ಮಾವನಿಂದ ಅವರು ಪ್ರಭಾವಿತರಾಗಬಹುದೆಂಬ ವಿಶ್ವಾಸವೇನೂ ಕಾಣಲಿಲ್ಲ. ಅಷ್ಟಕ್ಕೂ ಇಷ್ಟು ಜವಾಬ್ದಾರಿಯ ಕೆಲಸವನ್ನು ಕೇವಲ ನಮ್ಮ ಮೇಲಿನ ಪ್ರೀತಿಗಾಗಿ ನಾರಾಯಣ ನಾಯಕರು ಮೈಮೇಲೆ ಎಳೆದುಕೊಳ್ಳುತ್ತಾರೆ ಎಂಬ ವಿಶ್ವಾಸವೂ ನನಗಿರಲಿಲ್ಲ. ತಂದೆಯವರು ತಮ್ಮ ಪಾಲಿನ ಪ್ರಯತ್ನ ತನ್ನ ಕರ್ತವ್ಯವೇ ಎಂಬ ನಿಷ್ಠೆಯಿಂದ ನಿರ್ವಹಿಸುತ್ತಿದ್ದಾರೆ ಎಂದಷ್ಟೆ ನಾನು ಭಾವಿಸಿದ್ದೆ. ನಿಜವಾಗಿ ನನ್ನ ಅಂತರಾತ್ಮದಲ್ಲಿ ನಾನು ಅಂಕೋಲೆಯ ಕಾಲೇಜಿನಲ್ಲಿ ಉಪನ್ಯಾಸಕನಾಗುವುದಾಗಲೀ, ಒಂದುವೇಳೆ ಆಯ್ಕೆಯಾದರೂ ನಾನಿಲ್ಲಿ ಕರ್ತವ್ಯ ನಿರ್ವಹಿಸುವುದು ಖಂಡಿತ ಸಾಧ್ಯವೇ ಇಲ್ಲವೆಂದೂ ನನಗೆ ದೃಢವಾಗಿತ್ತು. ಇದೇ ಕಾರಣದಿಂದ ನನಗೆ ಸಂದರ್ಶನಕ್ಕೆ ಹೋಗಲು ಅಂಜಿಕೆಯೇನೂ ಆಗಲಿಲ್ಲ. ಹಲವು ಬಾರಿ “ನಾನು ಸಂದರ್ಶನಕ್ಕೆ ಹೋಗದೇ ಇರುವುದೇ ಸರಿ” ಎಂದೂ ಯೋಚಿಸುತ್ತಿದ್ದೆ. ಅದನ್ನು ನನ್ನ ತಮ್ಮಂದಿರು, ಗೆಳೆಯರ ಮುಂದೆ ಬಾಯಿಬಿಟ್ಟು ಹೇಳುತ್ತಿದ್ದೆ. ಕಾಲೇಜಿನಲ್ಲಿ ಜೋಷಿ ಗುರುಗಳು ನನ್ನ ತಮ್ಮ ಕಂಡಾಗಲೆಲ್ಲ ಸಂದರ್ಶನದ ನೆನಪು ಮಾಡುತ್ತಲೇ ಇರುತ್ತಿದ್ದರಂತೆ. ಒಂದು ಬಾರಿ ನನ್ನ ತಮ್ಮನೇ ಗುರುಗಳ ಮುಂದೆ ನನ್ನ ಉದ್ದೇಶವನ್ನು ಬಾಯಿಬಿಟ್ಟು ಹೇಳಿದ್ದಾನೆ. ಗುರುಗಳು ಹಠ ಬಿಡದೇ ಎಚ್ಚರಿಕೆ ನೀಡಿ, “ಏನ್ ಹುಚ್ ಅದಾನವ…..ಇಂಟ್ರೂಕ್ ಬಂದ್ರ ಅವನ್ನೆ ಆಯ್ಕೆ ಮಾಡ್ತಾರಂತ ಯಾರು ಹೇಳ್ಯಾರವಂಗ? ಏನೂ ತಾನೊಬ್ನೇ ಅಂಥಾ ಮೆರಿಟ್ ಇದ್ದಾವರಂಗ ಆಡ್ತಾನ…. ಬಾಯಿ ಮುಚಗೊಂಡ ಅಟಂಡಾಗನ್ನು ಅವಗ$$$$….” ಎಂದು ತಮ್ಮದೇ ಶೈಲಿಯಲ್ಲಿ ದಬಾಯಿಸಿ ಕಳಿಸಿದ್ದರಂತೆ. ಸಂದರ್ಶನದ ದಿನಾಂಕ ಬಂತು. “ಯಾವ ಬಿಢೆಯೂ ಇಲ್ಲದೆ ಗೊತ್ತಿದ್ದ ಪ್ರಶ್ನೆಗೆ ಉತ್ತರಿಸಿ ಬರಬೇಕು. ಇಲ್ಲಿ ನೌಕರಿ ಮಾಡುವ ಆಸೆಯಂತೂ ಇಲ್ಲ, ಧೈರ್ಯ ಮೊದಲೇ ಇಲ್ಲ!” ಎಂದು ನಾನು ಗಟ್ಟಿ ಮನಸ್ಸು ಮಾಡಿದ್ದರಿಂದ ಧೈರ್ಯದಿಂದಲೇ ಸಂದರ್ಶನಕ್ಕೆ ಹೋದೆ. ಕನ್ನಡಕ್ಕೆ ಏಳೆಂಟು ಜನ ಅಭ್ಯರ್ಥಿಗಳಿದ್ದರೂ ನನಗೆ ಪರಿಚಿತರಾದ ಸುತ್ತಲಿನ ಅಭ್ಯರ್ಥಿಗಳೇ ಆಗಿದ್ದರು. ಅಂಕಗಳಲ್ಲಿ ಪೈಪೋಟಿಯಿಲ್ಲ. ಒಬ್ಬನೇ ಒಬ್ಬ ಯುವಕ ತುಂಬ ಸುಂದರನಾಗಿದ್ದ. ಎತ್ತರದ ಆಳ್ತನ, ಆಕರ್ಷಕವಾಗಿ ಡ್ರೆಸ್ ಮಾಡಿಕೊಂಡಿದ್ದ. ಅವನ ಚೆನ್ನಾಗಿ ಪಾಲಿಶ್ ಮಾಡಿದ ಶೂ ಗಳು, ಕೊರಳಿಗೆ ಕಟ್ಟಿದ ಟೈ’ ಎಲ್ಲವೂ ಅಂಕೋಲೆಯ ಈ ಪರಿಸರದಿಂದ ಭಿನ್ನವಾಗಿ ಆತ ಬೇರೆಯೇ ಆಗಿ ಕಾಣುತ್ತಿದ್ದ. ನಾನು ಆಚೀಚೆ ವಿಚಾರಿಸಿದಾಗ ಆತ ಬೆಂಗಳೂರ-ಬಾಂಬೇ ಕಡೆಯಲ್ಲಿ ಎಂ.ಎ ಓದಿ ಬಂದವನಂತಲೂ, ಪ್ರಥಮ ದರ್ಜೆಯಲ್ಲಿಯೇ ಉತ್ತೀರ್ಣನಾಗಿರುವನೆಂದೂ, ಆದರೆ ಮೂಲತಃ ನಮ್ಮದೇ ಹನೇಹಳ್ಳಿಯವನೆಂದೂ ತಿಳಿಯಿತು. (ಹೆಸರು ಮರೆತಿದ್ದೇನೆ ಆದರೆ ಆತ ಗಾಂವಕರ ಎಂಬ ಸರ್ ನೇಮ್ ಹೊಂದಿದ್ದು ನೆನಪಿನಲ್ಲಿದೆ) ಯಾವ ಲೆಕ್ಕದಲ್ಲಿಯೂ ಈತ ಯೋಗ್ಯ ಆಯ್ಕೆಯಾಗುತ್ತಾನೆ ಎಂದು ನಿರುಮ್ಮಳನಾಗಿ ಸಂದರ್ಶನದ ಸರತಿಗಾಗಿ ಕಾದೆ. ಕೆನರಾ ವೆಲಫೇರ ಟ್ರಸ್ಟಿನ ಅಧ್ಯಕ್ಷರಾದ ಡಾ. ದಿನಕರ ದೇಸಾಯಿ, ಕಾರ್ಯದರ್ಶಿಗಳಾದ ದಯಾನಂದ ನಾಡಕರ್ಣಿ, ವಾಮನ ಪೈ ಮೊದಲಾದ ಸದಸ್ಯರೊಂದಿಗೆ ಪ್ರಾಚಾರ್ಯ ಕೆ.ಜಿ.ನಾಯ್ಕ, ವಿಷಯ ತಜ್ಞರಾಗಿ ವಿಭಾಗ ಮುಖ್ಯಸ್ಥ ಪ್ರೊ.ಜೋಷಿ ಮುಂತಾದ ಮಹನೀಯರನ್ನು ಒಳಗೊಂಡ ಸಂದರ್ಶನ ಸಮಿತಿಯ ಮುಂದೆ ಹೇಗೂ ಧೈರ್ಯ ಮಾಡಿ ನಿಂತೆ. ಆಗೇರರು-ಹಾಲಕ್ಕಿ-ಮುಂತಾದ ಹಿಂದುಳಿದ ಸಮುದಾಯವನ್ನು ಅತಿಯಾಗಿ ಹಚ್ಚಿಕೊಂಡಿದ್ದ ದೇಸಾಯಿಯವರಿಗೆ ನಾನು ಆಗೇರ ಜಾತಿಯಲ್ಲಿ ಹುಟ್ಟಿ ಮೊದಲ ಎಂ.ಎ ಪದವೀಧರನೆಂಬುದೇ ಅಚ್ಚರಿ ಆನಂದದ ಸಂಗತಿ ಎನಿಸಿದ್ದು ಅವರ ಮುಖಭಾವ ಮಾತುಗಳಲ್ಲೇ ವ್ಯಕ್ತವಾಯಿತು. ಜೋಷಿಯವರು ವಿಷಯಕ್ಕೆ ಸಂಬಂಧಿಸಿದಂತೆ ಸಾಹಿತ್ಯ ಚರಿತ್ರೆಯ ಕುರಿತಾಗಿಯೇ ಪ್ರಶ್ನೆ-ಉಪಪ್ರಶ್ನೆಗಳನ್ನು ಕೇಳಿ ಉತ್ತರ ಪಡೆದುಕೊಂಡರು. ಪ್ರಾಚಾರ್ಯ ಕೆ.ಜಿ ನಾಯ್ಕರು ಮಾತ್ರ ಯಕ್ಷಗಾನವನ್ನು ಬಿಟ್ಟು ಬೇರೆ ಏನನ್ನು ಕೇಳಲಿಲ್ಲ. ಯಕ್ಷಗಾನ ಕಲೆಯ ಕುರಿತು, ಯಕ್ಷಗಾನದ ಛಂದಸ್ಸು ಇತ್ಯಾದಿಗಳಿಂದ ಪ್ರಸಂಗ ರಚನೆಯ ಕೌಶಲ್ಯ, ನಾನು ಇದುವರೆಗೆ ಮಾಡಿದ ಪಾತ್ರಗಳು, ಹಿಮ್ಮೇಳದ ಯಾವ ವಾದ್ಯ ನುಡಿಸಬಲ್ಲೆ ಇತ್ಯಾದಿ ಪ್ರಶ್ನೆಗಳನ್ನೇ ಬಿಟ್ಟೂ ಬಿಡದೇ ಕೇಳಿ ನನ್ನಲ್ಲಿ ಪ್ರತಿ ಹಂತದಲ್ಲೂ ಉತ್ತರಿಸುವ
ನಮ್ಮ ನಡುವಿನ ಜೀವಪರ ಕಾಳಜಿಯ ಕವಯಿತ್ರಿ ವಿಜಯಶ್ರೀ ಹಾಲಾಡಿಯವರು ಸಂಗಾತಿಗಾಗಿ ಬರೆಯುತ್ತಿದ್ದಾರೆ. ಅಂಕಣದ ಮೊದಲ ಕಂತು ನಿಮ್ಮ ಮುಂದಿದೆ. ಪ್ರತಿ ತಿಂಗಳ ಎರಡನೇ ಮತ್ತು ನಾಲ್ಕನೇ ಶನಿವಾರ ಈ ಅಂಕಣ ಪ್ರಕಟವಾಗಲಿದೆ
ದಾನದೊಡನೆ ಸಿಗುವ ಸಾಧನಗಳನ್ನು ದಾನಕೊಟ್ಟವರ ಯೋಗ್ಯತೆ ಅಳೆಯಲು ಮಾಪಕವಾಗಿ ಬಳಸುವ ಮಂದಿಯೇ ಈಗ ಹೆಚ್ಚು. ಹೇಗೋ ಬಂದು ಸೇರಿಬಿಟ್ಟ ತಮಗೆ ಇಷ್ಟವಾಗದ ದಾನದ ವಸ್ತುವನ್ನು ಹಾಗೆಯೇ ಮತ್ತೊಂದು ನೆಪ ಮಾಡಿ ಮತ್ತೊಬ್ಬರಿಗೆ ದಾಟಿಸುವುದು ಈಗಿನವರ ಚಾಣಾಕ್ಷತನ. ಆದ್ದರಿಂದಲೇ ನಾವು ‘ಧರ್ಮಕ್ಕೆ ದಟ್ಟಿ ಕೊಟ್ಟರೆ ಹಿತ್ತಲಿಗೆ ಹೋಗಿ ಮೊಳಹಾಕುವುದು’
ನಾಡಿನ ಕ್ರಾಂತಿಕಾರಿ ಕವಿ, ರೈತ ಚಳುವಳಿಯ ನಾಯಕ, ಉತ್ತರ ಕನ್ನಡ ಜಿಲ್ಲೆಯಲ್ಲಿ ಕೆನರಾವೆಲ್ಫೇರ್ ಟ್ರಸ್ಟ್ ಶಿಕ್ಷಣ ಸಂಸ್ಥೆಯ ಮೂಲಕ ಅಕ್ಷರ ಸೂಯನನ್ನು ಬೆಳಗಿಸಿದ ಮಾನ್ಯ ಡಾ|| ದಿನಕರ ದೇಸಾಯಿಯವರ ಕೃಪಾ ದೃಷ್ಟಿಗೆ ಪಾತ್ರನಾದ ಬಾಲಕ ಸಣ್ಣು ಅವರ ಆಶ್ರಯದಲ್ಲೇ ಇದ್ದುಕೊಂಡು ಇಂಟರ್ ಮೀಡಿಯೇಟ್ ವರೆಗೆ ಶಿಕ್ಷಣ ಪಡೆದದ್ದು ಬಹುದೊಡ್ಡ ಅದೃಷ್ಟವೇ ಸರಿ.
ಕೊಟ್ಟ ಮಾತು, ವಾಗ್ದಾನ, ವಚನ, ಆಣೆ, ಮಾತುಕೊಡು ಇವೆಲ್ಲಾ ಪ್ರತಿಜ್ಞೆ ಪದದ ಸಮಾನಾರ್ಥಕಗಳು. ಆದರೆ ಎಲ್ಲವೂ ಪ್ರತಿಜ್ಞೆಯೇ ಆಗುವುದಿಲ್ಲ. ಹರಕೆ, ವ್ರತ, ಅಂದುಕೊಳ್ಳುವುದು, ಇಚ್ಛೆ, ಶಪಥ, ಆಸೆ, ಬಯಕೆ ಎಂಬಿತ್ಯಾದಿ ನಾನಾರ್ಥಗಳನ್ನು ಆರೋಪಿಸಬಹುದಾದರೂ ಪ್ರತಿಜ್ಞೆಯ ತೂಕವೇ ಬೇರೆ. ಅಂದುಕೊಂಡಂತೆ ನಡೆದುಕೊಂಡರೆ!! ವಾಗ್ದಾನ ಮುರಿದವರೆಷ್ಟು ಮಂದಿಯಿಲ್ಲ? ಯಾವುದೋ ಆವೇಶ, ಉದ್ವೇಗ, ಚಿತಾವಣೆಗೆ ಒಳಗಾಗಿ ಪ್ರತಿಜ್ಞೆ ಮಾಡಿ ಮುಂದೆ ಪೇಚಿಗೆ ಸಿಲುಕಿ ಪಜೀತಿ ಪಟ್ಟವರು ಹಲವಾರು ಮಂದಿ ಇರುತ್ತಾರೆ.
ಪೂರ್ಣಚಂದ್ರ ತೇಜಸ್ವಿ ಅವರು ‘ಮರವೆನ್ನುವ ಕಾರ್ಖಾನೆ’ ಎಂಬ ಬರಹದಲ್ಲಿ “ಮರಗಳು ತಮ್ಮ ಜಟಿಲವಾದ ಬೇರಿನ ಜಾಲದಿಂದ ನೂರಾರು ಅಡಿ ಎತ್ತರಕ್ಕೆ ನೆಲದಿಂದ ನೀರನ್ನೆತ್ತುತ್ತವೆ. ಒಂದು ಸಾಧಾರಣ ಮರ ಎಲೆಗಳ ಮುಖಾಂತರ ಜೈವಿಕ ಕ್ರಿಯೆಯಲ್ಲಿ ಆವಿಯಾಗಿ ಬಿಡುಗಡೆ ಮಾಡುವ ನೀರಿನ ಪ್ರಮಾಣ ದಿನಕ್ಕೆ ಐವತ್ತು ಲೀಟರ್! ಈ ಕ್ರಿಯೆಯಲ್ಲಿ ಒಂದು ಮರ ತಿಂಗಳಿಗೆ ಸರಾಸರಿ ಹದಿನಾಲ್ಕು ಟನ್ ನೀರನ್ನು ನೆಲದಾಳದಿಂದ ಮೇಲಕ್ಕೆತ್ತಿ ವಾತಾವರಣಕ್ಕೆ ಬಿಡುಗಡೆ ಮಾಡುತ್ತದೆ”
ಕೆಲವೇ ದಿನಗಳಲ್ಲಿ ಒಂದು ದಿನ “ನಾಗಮ್ಮತ್ತೆ ರಾತ್ರಿ ಮಲಗಿದವಳು ಮುಂಜಾನೆ ನಾಪತ್ತೆಯಾಗಿದ್ದಾಳೆ” ಎಂಬ ಆತಂಕದ ಸುದ್ದಿ ತಂದರು. ಅಪ್ಪ ನಮ್ಮ ದಾಯಾದಿ ಇಬ್ಬರು ಚಿಕ್ಕಪ್ಪಂದಿರೊಂದಿಗೆ ಹಿಲ್ಲೂರಿಗೆ ಹೋದರು. ಅಲ್ಲಿ ಮತ್ತೆರಡು ದಿನಗಳವರೆಗೆ ಬೆಟ್ಟ, ಗುಡ್ಡ, ನದಿ, ಕೆರೆ, ಬಾವಿ ಇತ್ಯಾದಿ ಎಲ್ಲ ಕಡೆಗಳಲ್ಲಿಯೂ ಹುಡುಕಾಟ ಮಾಡಿದ್ದಾರೆ. ಆಗಲೂ ಮಂತ್ರವಾದಿಗಳು “ಅವಳು ಬದುಕಿದ್ದಾಳೆ… ಉತ್ತರ ದಿಕ್ಕಿನಲ್ಲಿ ಇದ್ದಾಳೆ…” ಇತ್ಯಾದಿ ಭವಿಷ್ಯ ನುಡಿದು ಹುಡುಕಾಟದ ತಂಡವನ್ನು ಅಲೆದಾಡಿಸಿ ನೋಡಿದರಲ್ಲದೆ ಅತ್ತೆಯು ಎಲ್ಲಿಯೂ ಕಾಣಸಿಗಲಿಲ್ಲ.



