ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಪುಸ್ತಕ ಸಂಗಾತಿ

‘ ಬಯಲೊಳಗೆ ಬಯಲಾಗಿ’

ಪುಸ್ತಕ ಸಂಗಾತಿ ‘ ಬಯಲೊಳಗೆ ಬಯಲಾಗಿ’ ಕನ್ನಡ ಗಜಲ್ ಸಾಹಿತ್ಯ ಲೋಕದಲ್ಲಿ ಈಗಾಗಲೇ ಅಂತರ್ಜಾಲದ ಗುಂಪುಗಳ ಮೂಲಕ ಗಜಲ್ ಕಾರರಾಗಿ ಹೆಸರು ಮಾಡಿರುವ ಶ್ರೀ. ಲಕ್ಷ್ಮಿಕಾಂತ ಮಿರಜಕರ ಅವರು ಬಯಲೊಳಗೆ ಬಯಲಾಗಿ ತಮ್ಮ ಮೊದಲ ಗಜಲ್ ಸಂಕಲನವನ್ನು ಲೋಕಾರ್ಪಣೆಗೊಳಿಸಿದ್ದಾರೆ. ಹಾವೇರಿ ಜಿಲ್ಲೆಯ ಶ್ರೀ. ನೇತಾಜಿ ಹಾಗೂ ಶ್ರೀಮತಿ. ಲಕ್ಷ್ಮಿ ದಂಪತಿಯ ಪುತ್ರರಾದ ಲಕ್ಷ್ಮಿಕಾಂತ ಹುಟ್ಟೂರು ಶಿಗ್ಗಾಂವನಲ್ಲಿಯೇ ಪ್ರಾಥಮಿಕ, ಪ್ರೌಢ ಮತ್ತು ಪದವಿ ಶಿಕ್ಷಣವನ್ನು ಪೂರೈಸಿದವರು. ಬೆಂಗಳೂರಿನ ಎಂ. ವಿ. ಜೆ. ಶಿಕ್ಷಣ ಮಹಾವಿದ್ಯಾಲಯದಲ್ಲಿ ಬಿ. ಎಡ್. ಪದವಿ ಪಡೆದು ನಂತರ ಮೈಸೂರಿನ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದಿಂದ ಕನ್ನಡ ಎಂ.ಎ , ಹಂಪಿಯ ಕನ್ನಡ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮ ಹಾಗೂ ಮಾಧ್ಯಮ ಅಧ್ಯಯನ ಎಂ.ಎ ಪದವಿಗಳನ್ನು ಪೂರೈಸಿದ್ದಾರೆ. ಪ್ರಸ್ತುತ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದಲ್ಲಿ ಸಂಶೋಧನಾ ವಿದ್ಯಾರ್ಥಿಯಾಗಿದ್ದಾರೆ. ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲ್ಲೂಕಿನ ದೇವಸಮುದ್ರದ ಇಂದಿರಾಗಾಂಧಿ ವಸತಿ ಶಾಲೆಯಲ್ಲಿ ಪ್ರಭಾರ ಪ್ರಾಂಶುಪಾಲರಾಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ. ರಾಜ್ಯದ ಪ್ರಮುಖ ಪತ್ರಿಕೆಗಳಲ್ಲಿ ಲಕ್ಷ್ಮಿಕಾಂತ ಅವರ ಕಥೆ, ಕವನ ಮತ್ತು ಗಜಲ್ ಗಳು ಪ್ರಕಟಗೊಂಡಿವೆ. ನವೀನಚಂದ್ರ ಕಾವ್ಯ ಬಹುಮಾನ, ಗೋವಿಂದ ಪೈ ಸ್ಮಾರಕ ಕಾವ್ಯ ಬಹುಮಾನ , ಹಾವೇರಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಕಾವ್ಯ ಸ್ಪರ್ಧೆಯ ಬಹುಮಾನ ಹಾಗೂ ಅಕ್ಷರ ಐಸಿರಿ ಕಾವ್ಯ ಸ್ಪರ್ಧೆ ಬಹುಮಾನಗಳಿಗೆ ಭಾಜನರಾಗಿದ್ದಾರೆ. ಮೈಸೂರಿನ ಕರ್ನಾಟಕ ಕಾವಲು ಪಡೆ ಬಳಗದಿಂದ ೨೦೧೬ ನೇ ಸಾಲಿನ ‘ಆದರ್ಶ ಶಿಕ್ಷಕ ಪ್ರಶಸ್ತಿ’ , ಚಿತ್ರದುರ್ಗದ ಸಿರಿಗನ್ನಡ ಪ್ರಕಾಶನ ಬಳಗದಿಂದ ‘ಕನ್ನಡ ರತ್ನ ಶಿಕ್ಷಕ ಪ್ರಶಸ್ತಿ’, ಚಿತ್ರದುರ್ಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಿಂದ ೨೦೧೮ ನೇ ಸಾಲಿನ ‘ಉತ್ತಮ ಕನ್ನಡ ಶಿಕ್ಷಕ ಪ್ರಶಸ್ತಿ’ಗಳು ಲಭಿಸಿವೆ. ಗಜಲ್ ರಚನೆಯ ನಿಯಮಗಳ ಬಗ್ಗೆ ಆಳವಾಗಿ ಅಧ್ಯಯನ ಮಾಡಿದ ನಂತರವೇ ಲಕ್ಷ್ಮಿಕಾಂತ ಅವರ  ಮೊದಲ ಗಜಲ್ ಸಂಕಲನದ ಕನಸು ನನಸಾದುದು. ನೇತಾಜಿ ಪ್ರಕಾಶನದಿಂದ ಪ್ರಕಟಗೊಂಡಿರುವ ಬಯಲೊಳಗೆ ಬಯಲಾಗಿ ಕೃತಿಯಲ್ಲಿ ಒಟ್ಟು ೬೩ ಗಜಲ್ ಗಳಿವೆ. ಮುರದ್ಧಫ್ ಗಜಲ್ ಗಳೇ ಹೆಚ್ಚಾಗಿದ್ದು ಗೈರ್ ಮುರದ್ಧಫ್ , ಜುಲ್ ಕಾಫಿಯಾ ಮತ್ತು ಸಂಪೂರ್ಣ ಮತ್ಲಾ ಗಜಲ್ ಗಳೂ ಇವೆ. ಗಜಲ್ ಕ್ಷೇತ್ರದಲ್ಲಿ ಖ್ಯಾತನಾಮರಾದ ಶ್ರೀ. ಅಲ್ಲಾಗಿರಿರಾಜ್, ಕನಕಗಿರಿ ಅವರ ಮುನ್ನುಡಿ ಹಾಗೂ ಶ್ರೀಮತಿ. ಪ್ರೇಮಾ ಹೂಗಾರ ಅವರ ಬೆನ್ನುಡಿ ಇವೆ.ಸಂಕಲನಕ್ಕೆ ಮುಖಪುಟವೇ ಮುಖ್ಯ ಆಕರ್ಷಣೆಯಾಗಿದೆ. ಮುದ್ರಣ ಅಚ್ಚುಕಟ್ಟಾಗಿದ್ದು ಪ್ರತೀ ಗಜಲಿನ ಪುಟ ವಿನ್ಯಾಸ ಓದುಗರ ಮನಸೆಳೆಯುತ್ತದೆ. ಗಜಲ್ ಗಳು ಕೇವಲ ಪ್ರೇಮ, ಪ್ರೀತಿ , ಶೃಂಗಾರಗಳಿಗೆ ಸೀಮಿತವಾಗಿರದೇ ಗಾಂಧಿ, ಡಾ.ಅಂಬೇಡ್ಕರ್, ದಮನಿತರ ನೋವು, ಹೆಣ್ಣಿನ ಶೋಷಣೆ, ಅಸಮಾನತೆ, ಮನುಷ್ಯರ ಸ್ವಾರ್ಥ, ಬಲಹೀನರ ಅಸಹಾಯಕತೆ , ಕೋಮುವಾದ…ಹೀಗೆ ವಿವಿಧ ವ್ಯಕ್ತಿ , ವಿಷಯಗಳ ಬಗ್ಗೆ ಪರಿಣಾಮಕಾರಿಯಾಗಿ ರಚಿಸಲ್ಪಟ್ಟಿವೆ. ಅಗಲಿದ ಪ್ರೀತಿಯ ತಂದೆಯವರಿಗೆ ಈ ಸಂಕಲನವನ್ನು ಅರ್ಪಿಸಿರುವ ಲಕ್ಷ್ಮಿಕಾಂತ ಅವರೇ ತಮ್ಮ ನುಡಿಗಳಲ್ಲಿ ಹೇಳಿರುವಂತೆ ‘ ಬಯಲು ‘ ಎಂಬ ಪದಕ್ಕೆ ‘ ಖಾಲಿಯಾದ ಆವರಣ ‘ ಎಂಬ ಅರ್ಥವಿದ್ದರೂ ಶರಣರು ಈ ಪದವನ್ನು ಪರಮಾತ್ಮನಿಗೆ ಸಮೀಕರಿಸಿದ್ದಾರೆ. ‘ಬಯಲು’ ಎಂಬುದಕ್ಕೆ ಸೃಷ್ಟಿಯೆಂಬ ದೇವರು, ಸತ್ಯ, ಜ್ಞಾನ, ಆನಂದ, ಶಕ್ತಿ , ಮುಕ್ತಿ, ನಿರ್ವಾಣ, ಸಮಾಧಿ, ಶಿವತ್ವ, ಬುದ್ಧತ್ವ, ಬಸವತ್ವ…… ಇತ್ಯಾದಿ ಅರ್ಥಗಳಿದ್ದು ಪರಿಪೂರ್ಣವಾದ ಅನಂತ ಚೈತನ್ಯದ ಪ್ರತೀಕವಾಗಿದೆ. ಮನುಷ್ಯ ಸ್ಥಾವರನಾಗದೇ ಜಂಗಮನಾಗಿದ್ದು ಬಯಲೊಳಗೆ ಬಯಲಾಗಿ ಬೆರೆತು ಯಾವಾಗಲೂ ಬಯಲಾಗುವ ಗುಣವನ್ನು ಹೊಂದಿರಬೇಕೆಂಬ ಆಶಯದೊಂದಿಗೆ ಈ ಗಜಲ್ ಸಂಕಲನವನ್ನು ಹೊರತಂದಿರುವ ಲಕ್ಷ್ಮಿಕಾಂತ ಅವರು ಗಜಲ್ ರಚನೆಯ ಅಮಲಿನಲ್ಲಿ ಕಳೆದುಹೋಗಿದ್ದಾರೆ. ಅವುಗಳು ನೀಡಿದ ಸುಖ ಮತ್ತು ಪ್ರಶಾಂತ ಭಾವನೆಯನ್ನು ತನ್ಮಯತೆಯಿಂದ ಅನುಭವಿಸಿದ್ದಾರೆ. ಬದುಕನ್ನು ವಿವಿಧ ದೃಷ್ಟಿಕೋನಗಳಿಂದ ನೋಡುವುದನ್ನು ಕಲಿತಿದ್ದಾರೆ. ಬಯಲೊಳಗೆ ಬಯಲಾಗಿ ಸಂಕಲನದ ಗಜಲ್ ಗಳನ್ನು ಓದುತ್ತಿದ್ದಂತೆ ಓದುಗರೂ ಓದಿನ ನಶೆಯಲ್ಲಿ , ದೊರೆವ ಹಿತ ಸಂವೇದನೆಯಲ್ಲಿ ಕಳೆದುಹೋಗುವುದು ಸುಳ್ಳಲ್ಲ. ಮನಮುಟ್ಟುವ, ನನಗಿಷ್ಟವಾದ ಕೆಲವು ಗಜಲ್ ಗಳ ಸಾಲುಗಳನ್ನು ನಾನೀಗ ಉಲ್ಲೇಖಿಸುತ್ತಿದ್ದೇನೆ. ಜಗದ ಎಲ್ಲ ಜೀವಿಗಳಲ್ಲಿ ಕಷ್ಟವೂ ಇದೆ ಸುಖವೂ ಇದೆ ಹಣೆಯಲಿ ವಿಧಿ ಬರೆದ ನಸೀಬಿನ ಎದುರು ಎಲ್ಲರೂ ಒಂದೇ ( ಗಜಲ್ ೧ ) ಅರಿವೆಂಬ ಬಯಲೊಳಗೆ ಬಯಲಾಗಬೇಕಿದೆ ಸಾಕಿ ಭಕ್ತಿಯೆಂಬ ಬಯಲೊಳಗೆ ಶರಣನಾಗಬೇಕಿದೆ ಸಾಕಿ ( ಗಜಲ್ ೪ ) ಸುಲಭವಾಗಿ ಸ್ನೇಹ ಸಂಬಂಧಗಳ ಕಡಿದುಕೊಳ್ಳುತ್ತಾರೆ ಕಾಂತ ಮನಸ್ಸುಗಳ ನಡುವೆ ಗೋಡೆ ಕಟ್ಟಿದ್ದಾರೆ ಯಾರನ್ನು ದೂರದಲಿ ( ಗಜಲ್ ೮ ) ಪ್ರಕ್ಷುಬ್ಧ ಕಾಶ್ಮೀರ ಮತ್ತೆ ಪ್ರೇಮ ಕಾಶ್ಮೀರವಾಗಿ ಬದಲಾಗಲಿ ಇನ್ನಾದರೂ ಕಲ್ಲು ತೂರುವ ಕೈಗಳಲಿ ಶಾಂತಿ ಹೂವುಗಳು ಅರಳಲಿ ಇನ್ನಾದರೂ ( ಗಜಲ್ ೧೩ ) ಕನಸು ಮುರಿದಿದೆ ಮನಸು ಮುರಿದಿಲ್ಲ ರಟ್ಟೆ ಗಟ್ಟಿಯಿದೆ ಇನ್ನೂ ಕೆಸರಾದ ಭೂಮಿಯಲ್ಲೇ ಕಮಲ ಅರಳಿಸುವೆವು ಮುಳುಗಿಲ್ಲ ಬದುಕು ( ಗಜಲ್ ೧೯ ) ಜಾತಿ, ಧರ್ಮ ,ಅಂತಸ್ತು ಎಂದು ಹೆಚ್ಚು ಬೀಗಬೇಡ ಕಾಂತ ಇತಿಹಾಸ ನೆನಪಿಸಿಕೊಳ್ಳುವುದಿಲ್ಲ ಮನುಷ್ಯತ್ವ ಮರೆತರೆ ( ಗಜಲ್ ೨೨ ) ಬೆಳಕನೀಯುವ ದೀಪಕ್ಕೂ ಇದೆ ಉರಿಯುವ ಸಂಕಟ ನೋವುಂಡ ಮನವೇ ಮುಕ್ತವಾಗಿ ನಗುವುದು , ತಿಳಿಯಿತೇ ಸಖಿ ( ಗಜಲ್ ೨೮ ) ನೀನಿಲ್ಲದೆ ನನ್ನ ಹಗಲು ಇರುಳು ಕಳೆದಿಲ್ಲ ನಿನ್ನ ತೋಳಲಿ ಇರದ ದಿನ ಅದು ನನ್ನದಲ್ಲ ( ಗಜಲ್ ೩೪ ) ನೀನು ಬೆಳಗಿದ ದೀಪದ ಬೆಳಕನು ಆರಿಸಿದ್ದೇವೆ ಕ್ಷಮಿಸು ಗಾಂಧಿ ನೀನು ತೋರಿಸಿದ ಸರಿದಾರಿಯನ್ನು ತೊರೆದಿದ್ದೇವೆ, ಕ್ಷಮಿಸು ಗಾಂಧಿ ( ಗಜಲ್ ೪೦ ) ಒಳಕೊಳೆ ತೊಳೆಯುವ ಜೀವಕೆ ಹತ್ತಿದಾಗಬೇಕು ಭರವಸೆ ತುಂಬುವ ಜೀವಕೆ ಹತ್ತಿರಾಗಬೇಕು ( ಗಜಲ್ ೪೪  ) ಪ್ರೀತಿ ಬಿಟ್ಟು ಯಾವುದೂ ಶ್ರೇಷ್ಠವಲ್ಲ ಇಲ್ಲಿ ಒಬ್ಬರಿಗೆ ಒಬ್ಬರು ನೆರವಾಗಬೇಕು ಮನುಷ್ಯರಂತೆ ( ಗಜಲ್ ೫೦ ) ನಡೆಯುತ್ತ ಅಂದುಕೊಂಡ ಗಮ್ಯ ಸೇರುವ ಅಲೆಮಾರಿಯಂತೆ ನಾನು ಈಜುತ್ತ ಕಷ್ಟಗಳ ನದಿಯನ್ನು ದಾಟುವ ಸಾಹಸಿಯಂತೆ ನಾನು ( ಗಜಲ್ ೬೦ ) ಲಕ್ಷ್ಮಿಕಾಂತ ಅವರ ಬರವಣಿಗೆ ಶಕ್ತಿಯುತವಾಗಿರುವುದಷ್ಟೇ ಅಲ್ಲದೆ ಸಾಮಾಜಿಕ ಪಿಡುಗುಗಳ ಬಗ್ಗೆ ಸ್ಪಷ್ಟ ಚಿತ್ರಣವನ್ನು ಹಾಗೂ ಮೌಲ್ಯಯುತ ಸಂದೇಶವನ್ನು  ನೀಡುತ್ತಿರುವುದು ಅವರ ಹೆಗ್ಗಳಿಕೆಯಾಗಿದೆ. ಆದರೆ , ಕೆಲವು ಗಜಲ್ ಗಳ ಮಿಸ್ರಾಗಳು ಸ್ವತಂತ್ರವಾಗಿಲ್ಲದಿರುವುದು ಒಂದು ಸಣ್ಣ ಕೊರತೆ. ಮುಂದಿನ ದಿನಗಳಲ್ಲಿ ಇದನ್ನು ನೀಗಿಸಿಕೊಂಡು ಅವರು ಮತ್ತಷ್ಟು ಸತ್ವಯುತ ಗಜಲ್ ಸಂಕಲನಗಳನ್ನು ಹೊರತರುವ ಮೂಲಕ ಗಜಲ್ ರಚನೆಯ ಕಲಿಕಾರ್ಥಿಗಳಿಗೆ ಮಾರ್ಗದರ್ಶನ ನೀಡುವಂತಾಗಲೆಂದು ಪ್ರೀತಿಪೂರ್ವಕವಾಗಿ ಹಾರೈಸುತ್ತೇನೆ. ಆ ತಾಯಿ ಸರಸ್ವತಿಯ ಆಶೀರ್ವಾದ ಎಂದೂ ಕಾಂತ ನ ಮೇಲಿರಲಿ. ***************************                          ಎ . ಹೇಮಗಂಗಾ                         

‘ ಬಯಲೊಳಗೆ ಬಯಲಾಗಿ’ Read Post »

ಪುಸ್ತಕ ಸಂಗಾತಿ

ಜೋಗದ ಸಿರಿ ಬೆಳಕಿನಲ್ಲಿ

ಪುನರ್ವಸು’ ನಿಸ್ಸಂಶಯವಾಗಿ ನಾನು ಓದಿದ ಶ್ರೇಷ್ಠ ಕೃತಿಗಳಲ್ಲಿ ಒಂದು. ಶರಾವತಿ ವಿದ್ಯುತ್ ಯೋಜನೆ – ಜೋಗ್ ಪ್ರಾಜೆಕ್ಟ್ ಕುರಿತಾದ ಈ ಕಾದಂಬರಿ ನಮಗೆ ತಿಳಿದಿರದ ಬಹಳಷ್ಟು ವಿಷಯಗಳನ್ನು ಮನದಟ್ಟು ಮಾಡಿಸುತ್ತದೆ.

ಜೋಗದ ಸಿರಿ ಬೆಳಕಿನಲ್ಲಿ Read Post »

ಪುಸ್ತಕ ಸಂಗಾತಿ

ನಾನು ಓದಿದ ಪುಸ್ತಕ

“ಐ ಕಾಂಟ್ ಬ್ರೀದ್” ಕವನ ಸಂಕಲನವು ಮೌಲಿಕವಾಗಿದೆ.ಬದುಕಿನ ಮರ್ಮವನು ತಿಳಿಸುವ,ನಯನಾಜೂಕಿನ ಕ್ರಾಂತಿ ಬಿಂಬಿಸಿದಂತೆ ಮಹೇಶ ಬಳ್ಳಾರಿ ಇವರ ವಿನಯ ಗುಣಗಳು ಇಲ್ಲಿ ಮೆರೆದಿವೆ

ನಾನು ಓದಿದ ಪುಸ್ತಕ Read Post »

ಪುಸ್ತಕ ಸಂಗಾತಿ

ಕಾವ್ಯವೆಂಬ ಕಾವು ಆರದ ಮಗ್ಗಲು

ಪುಸ್ತಕ ಸಂಗಾತಿ ಕಾವ್ಯವೆಂಬ ಕಾವು ಆರದ ಮಗ್ಗಲು ಕಾವ್ಯವೆಂಬುದು ಕಾಣುವ ಜಗತ್ತಿನೊಳಗಿನ ಕಾಣದ ಅನುಭೂತಿಯನ್ನು ಹುಡುಕುವ ಪಯಣ. ಈ ವ್ಯಕ್ತದೊಳಗಿನ ಅವ್ಯಕ್ತವನ್ನು ಹುಡುಕುವ ತಳಮಳವು ಅಲ್ಲಮನಾದಿಯಾಗಿ ನಮ್ಮ ಪರಂಪರೆಯಲ್ಲೇ ಹರಿದುಬಂದಿದೆ. ಇದಕ್ಕೆ ಆಕಾರಕೊಡುವ ಹೊಸ ಬಗೆ, ಹೊಸ ಬನಿಯಿಂದಾಗಿ ತೇಜಾವತಿಯವರ ಕವಿತೆಗಳು ನಮ್ಮೊಳಗೆ ನಿಚ್ಚಳ ಬಿಂಬವೊಂದನ್ನು ಮೂಡಿಸುತ್ತವೆ. ಕವಿತೆಯೆಂದರೆ ಮಣ್ಣಿನೊಳಗೆ ಬೀಜ ಬೆರೆತು ಮೊಳೆತು ಎಸಳೊಡೆದು ದಳಗಳಾಗಿ ಅರಳಿ ಮಿಡಿಯಾಗಿ ಕಾಯಾಗಿ ಮಾಗಿದ ಹಣ್ಣಿನಂತೆ…. (ಕವಿತೆ) ಕವಿತೆ ಅವ್ಯಕ್ತದ ದಾಹವಾಗಿದ್ದರೂ ಅದು ಅನುಭವಗಳ ಮೈಯೊಳಗೇ ಅರಳುವ ವಿದ್ಯಮಾನ. ಬೀಜ ಮೊಳೆತು ದಳಗಳಾಗಿ ಅರಳಿ,ಹಣ್ಣಾಗಿ ಮಾಗುವ ಈ ವಿಕಸನದ ಕ್ರಿಯೆ ಜೀವಂತ. ಭವದಿಂದ ಅನುಭವ, ಅನುಭವದಿಂದ ಅನುಭಾವ. ಈ ಗುಟ್ಟು ಕವಿತೆಯನ್ನು ಒಳಗೊಳಗೇ ಮಾಗಿಸುತ್ತದೆ. ತೇಜಾವತಿಯವರ ಕವಿತೆಗಳಲ್ಲಿ ಹೀಗೆ ಹಿಗ್ಗುವ ಮಹತ್ವಾಕಾಂಕ್ಷೆಯಿದೆ. ಆ ದಾರಿಯಲ್ಲಿ ಅವರ ಹಸಿಹೆಜ್ಜೆಗಳು ಮೂಡುತ್ತಿವೆ. ಕವಿತೆ ಹದಗೊಂಡ ತನ್ನೊಳಗನ್ನು ಕಾಣಿಸಲು ಭಾಷೆಯು ಸೂಕ್ಷ್ಮಗೊಳ್ಳಬೇಕು. ಕಣ್ಣಿನಾಚೆಯ ಸತ್ಯವನ್ನು ಕವಿಯು ಕಾಣಲು ಪ್ರಜ್ಞೆಯು ಸೂಕ್ಷ್ಮಗೊಳ್ಳಬೇಕು. ಇಂಥ ಸೂಕ್ಷ್ಮತೆಯಿಂದ ಕಂಪಿಸುವ ಹಲವು ಕವಿತೆಗಳು ಈ ಸಂಕಲನದಲ್ಲಿವೆ. ಕವಿ ತನ್ನ ಪ್ರಜ್ಞೆಯನ್ನು ಬೆಳಕಾಗಿಸಿ ಕತ್ತಲನ್ನು, ದುಃಖವನ್ನು ಸದಾ ದಾಟಲು ಪ್ರಯತ್ನಿಸುತ್ತಿರುತ್ತಾಳೆ/ತ್ತಾನೆ. ಅಂಥ ಬೆಳಕಿನ ಕಾವು ಆರದಂತೆ ಕಾಪಿಟ್ಟುಕೊಳ್ಳುವ ನಿಗಿನಿಗಿ ಹಂಬಲವು ಇಲ್ಲಿನ ಕವಿತೆಗಳನ್ನು ಸದಾ ಎಚ್ಚರದಲ್ಲಿ ಇರಿಸಿದೆ. ಸುತ್ತುವರಿದ ಸಮಾಜದ ಚೌಕಟ್ಟುಗಳು, ತೋರಿಕೆಯ ಬದುಕಿನ ಬಂಧನದಾಚೆಗೆ ತೂರಿಬರಲು ತಪಿಸುವ ಆರ್ದ್ರ ದನಿಯೊಂದು ಇಲ್ಲಿ ನಿನದಿಸುತ್ತದೆ. ತೇಜಾವತಿಯವರ ಕವಿತೆಗಳು ಸ್ಮೃತಿ, ಎಚ್ಚರ ಹಾಗೂ ಇದನ್ನು ಮೀರಿದ ಇನ್ನೇನನ್ನೋ ಹಿಡಿಯುವ ಸನ್ನಾಹದಲ್ಲಿ ಬೆರಗು ಮೂಡಿಸುತ್ತವೆ. ಚಲಿಸುವ ಕಾಲದ ಬಿಂಬಗಳನ್ನು ರೂಪಕಗಳಲ್ಲಿ ಸೆರೆಹಿಡಿಯಲು ಹವಣಿಸುತ್ತಾರೆ. “ಊರುಗಳೇ ತಲೆದಿಂಬಾದವು” ಎಂಬ ಕವಿತೆ ಇಂಥ ಬೆರಗಲ್ಲಿ ಹುಟ್ಟಿದ್ದು. ಪ್ರೀತಿ -ಸ್ನೇಹಗಳ ಸೆಳೆತದಲ್ಲಿ ಹಿಗ್ಗುತ್ತ ಹರಿಯುವ ಬದುಕಲ್ಲಿ ಅದನ್ನು ನಿರ್ಬಂಧಿಸುವ ವರ್ತಮಾನದ ಸೂಕ್ಷ್ಮತೆಯನ್ನು ತೇಜಾವತಿಯವರ ಕವಿತೆ ಪ್ರಶ್ನಿಸುತ್ತ ಪ್ರತಿರೋಧಿಸುತ್ತ ಹರಿಯುತ್ತವೆ. ಬೀಸುವ ಗಾಳಿ, ಹರಿಯುವ ನದಿ, ಕೊರೆಯುವ ಹಿಮಗಲ್ಲಿಗಿಲ್ಲದ ಧರ್ಮದ ಹಂಗು ನಮಗೆಲ್ಲ ಯಾಕೆ? ಎಂದು ಆರ್ತವಾಗಿ ಕೇಳುತ್ತಾರೆ. ಮನುಷ್ಯನ ಪ್ರಜ್ಞೆಯನ್ನು ಪ್ರಕೃತಿಯ ಅನಿರ್ಬಂಧಿತ ಪ್ರಜ್ಞೆಯಲ್ಲಿ ಕರಗಿಸುವ ನುಡಿಗಳಿಂದ ಕವಿತೆ ಒಳಗಿನ ಸ್ವಾತಂತ್ರ್ಯದ ಝರಿಯನ್ನು ಶೋಧಿಸಿಕೊಳ್ಳುತ್ತದೆ. ಘೋಷಣೆಗಿಳಿಯದೇ, ಕಾದಾಡದೇ ಎಲ್ಲವನ್ನೂ ಮೀರುವ ಸಂಯಮದ ದನಿಯೇ ಇಲ್ಲಿ ಕಸುವುಗೊಂಡಿದೆ. ಸುತ್ತಲಿನ ದಿಗ್ಬಂಧನಗಳನ್ನು ಕಳಚಿ ನಿರಾಳವಾಗುವ ದಾರಿಗಳನ್ನು ಹುಡುಕುವ ಮಾಧ್ಯಮವೂ ಇಲ್ಲಿ ಕವಿತೆಯೇ ಆಗಿದೆ. ಒಂದು ದಿನ ಬೀಗ ಹಾಕಿಕೊಂಡಿದ್ದ ಬಾಯಿಗೆ ನಾಲಿಗೆ ಬಂದಿತು ಒಳಗಿಟ್ಟುಕೊಂಡಿದ್ದ ಕೆಂಡ ದುಃಖದ ಮಡುವಲ್ಲಿ  ಕರಗಿಹೋಯಿತು.. (ನೀರ ಮೇಲಿನ ಪಾದ) ತೇಜಾವತಿಯವರ ಕವಿತೆಯಲ್ಲಿರುವ ಬೆಳಕಿನ ಹಂಬಲ, ಆಶಾವಾದ, ಭವಿಷ್ಯದ ಕುರಿತ ಕನಸುಗಳು…. ಇವೆಲ್ಲ ಕತ್ತಲ ಗರ್ಭದಲ್ಲಿಯೇ ಬೆಳಕಿನ ಬೀಜಗಳನ್ನು ಊರುತ್ತವೆ. ಅದರ ಅಪಾರ ಸಾಧ್ಯತೆಗಳನ್ನು ಕನಸುತ್ತವೆ. ಕಾವ್ಯವು ಕಾವು ಆರದ ಮಗ್ಗಲಾಗಿ ಅವರಿಗೆ ಕಾಣಿಸುವುದೇ ಚೇತೋಹಾರಿ. ಬಾ… ಭವಿಷ್ಯದ ನಕ್ಷತ್ರಗಳಾಗೋಣ ಕಾವು ಆರದ ಮಗ್ಗಲುಗಳು ಎಡಬಿಡದೆ ಕಾಡಿಸುತ್ತವೆ ನಿನ್ನನ್ನೇ… ಬದುಕಿನ ಎಲ್ಲ ಮರ್ಮರಗಳಿಗೆ ಕಿವಿಯಾಗುತ್ತಲೇ ದಿವ್ಯವಾದುದೊಂದು ನಮ್ಮನ್ನು ಕಾಡದೇ ಹೋದರೆ, ನಮ್ಮ ಕನಸುಗಳನ್ನು ಹಸಿಯಾಗಿ ಉಳಿಸದೇ ಹೋದರೆ ಕಾವ್ಯ ಹಳಹಳಿಕೆಯಾಗುತ್ತದೆ. ತೇಜಾವತಿಯವರ ಕಾವ್ಯ ಜೀವಂತವಾಗಿರುವುದೇ ಅದರ ಚಲಿಸುವ ಚೈತನ್ಯದಿಂದ ಹಾಗೂ ಸದಾ ಹಿಗ್ಗುವ ಹಂಬಲದಿಂದ. ****************************************** ಡಾ. ಗೀತಾ ವಸಂತ

ಕಾವ್ಯವೆಂಬ ಕಾವು ಆರದ ಮಗ್ಗಲು Read Post »

ಪುಸ್ತಕ ಸಂಗಾತಿ

‘ ಗಾಲಿಬ್ ಸ್ಮೃತಿ’

ಸುಮಾರು ಇಪ್ಪತ್ತು ಷೇರ್ ಗಳನ್ನು ಹೊಂದಿರುವ ೯೦ ನೇ ಗಜಲ್ ತನ್ನ ಮಗನ ಸಾರ್ಥಕ ಬಾಳಿಗಾಗಿ ಜೀವ ಸವೆಸಿ ಕೊನೆಗೆ ಒಂಟಿತನದಲ್ಲಿ ನರಳುತ್ತಾ ತಾನು ತೊರೆದಿದ್ದ ಮದಿರೆಗೇ ದಾಸನಾಗುವ ತಂದೆಯ ಕರುಣಾಜನಕ ಕಥೆಯನ್ನು ಕಟ್ಟಿಕೊಡುತ್ತದೆ.

‘ ಗಾಲಿಬ್ ಸ್ಮೃತಿ’ Read Post »

ಪುಸ್ತಕ ಸಂಗಾತಿ

ಮೌನೇಶ್ವರರ ವಚನ ವಿಚಾರ : ಡಾ ವೀರೇಶ ಬಡಿಗೇರ

ಮೌನೇಶ್ವರರ ಲೋಕದೃಷ್ಟಿ ಅತಿ ಮುಖ್ಯವಾ ದುದು.ಅವರು ಆಲೋಚಿಸದ ವಿಷಯಗಳೇ ಇಲ್ಲ .ಜಗತ್ತಿನಲ್ಲಿ ತಂದೆ ತಾಯಿಗಳು‌ ಮಕ್ಕಳನ್ನು ಹಡೆದರೆ ಮುಗಿಯಲಿಲ್ಲ.ಅವರು ಯೋಗ್ಯರಾಗಿ ಬಾಳುವಂತೆ ಸಂಸ್ಕಾರ ಕೊಡುವದೂ ಅಗತ್ಯ.ಅದು ಅವರ ಜವಾಬ್ದಾರಿ‌ ಕೂಡಾ.ಮಕ್ಕಳನ್ನು ಹೇಗೆ ಬೆಳೆಸಬೇಕು ಎನ್ನುವ‌ ಕುರಿತು ಮೌನೇಶ್ವರರು

ಮೌನೇಶ್ವರರ ವಚನ ವಿಚಾರ : ಡಾ ವೀರೇಶ ಬಡಿಗೇರ Read Post »

ಪುಸ್ತಕ ಸಂಗಾತಿ

ಕಾಡುವ ಕಾಮೋಲ

“ವಿಮೋಚನೆ” ಪ್ರೇಮ, ತ್ಯಾಗ, ಮೋಸ, ಹತ್ಯೆಯ ಸಿನಿಮೀಯ ಮಾದರಿಯ ಕಥೆಯಾದರೆ, ‘ಮಗ್ದಷ್ಟೇ ಬದ್ಕು’, ‘ಸಾಬೀತು’ ಸಿರಸಿ, ಧಾರವಾಡದ ವಿಶಿಷ್ಟ ಪ್ರಾದೇಶಿಕ ಭಾಷೆಯ ಸೊಗಡಿಗಾಗಿ ಓದಿಸಿಕೊಳ್ಳುವ ಕಥೆಗಳು..ಕೇತಕಿ, ಗೂಡು, ಆಯಿ ಸಹ ಉತ್ತಮ ಕಥೆಗಳು..

ಕಾಡುವ ಕಾಮೋಲ Read Post »

ಪುಸ್ತಕ ಸಂಗಾತಿ

ಸೌಗಂಧಿಕಾ ಒಂದು ಅವಲೋಕನ

ಈ ಬಗೆಯ ಹಲವು ಉತ್ತಮ ಕವಿತೆಗಳ ಮುತ್ತಿನ ಮಾಲೆ “ಸೌಗಂಧಿಕಾ”. ಇಲ್ಲಿ ವೈವಿಧ್ಯಮಯ ವರ್ಣನೆಗಳಿಲ್ಲ, ವಯ್ಯಾರವಿಲ್ಲ. ಸರಳ ಸುಂದರ ಸುಭಗ, ಬಂಧುರವಿದು. ಇಲ್ಲಿನವು ಓದಿದಂತೆಲ್ಲಾ ಒಲವು ಮೂಡಿಸುವಂತಹ ಕವನಗಳು

ಸೌಗಂಧಿಕಾ ಒಂದು ಅವಲೋಕನ Read Post »

ಪುಸ್ತಕ ಸಂಗಾತಿ

ಜೇನು ಮಲೆಯ ಹೆಣ್ಣು

‘ ನಿಚ್ಚಂ ಪೊಸತು’ ಆಯ್ದ ಸಂಗಂ ಕವಿತೆಗಳನ್ನು ಕನ್ನಡದಲ್ಲಿ ಓದುವಾಗ ಭಾಷೆ ಕೋಶಗಳನ್ನು ಮೀರಿದ ಕಾಲಮಾನಗಳನ್ನು ಮೀರಿದ ಅನುಭವವಾಯಿತು ಎಂದು ಕವಿಯೇ ಹೇಳಿದ್ದಾರೆ. ಅಂಥ ದಿವ್ಯತೆ ಇಲ್ಲಿನ ಶಬ್ದಗಳಲ್ಲಿ ಸೆರೆಯಾಗಿದೆ.

ಜೇನು ಮಲೆಯ ಹೆಣ್ಣು Read Post »

ಪುಸ್ತಕ ಸಂಗಾತಿ

ನಿರುತ್ತರ

ಪುಸ್ತಕ ಸಂಗಾತಿ ಒಂದೇ ಗುಟುಕಿಗೆ ಅಮಲೇರುವ ಕಾವ್ಯ ಅರಿವಿನ ಹರಿಗೋಲು ಮೂಲಕ ಕಾವ್ಯದ ಪಯಣ ಆರಂಭಿಸಿದ ಕೆ‌.ಬಿ.ವೀರಲಿಂಗನಗೌಡರು ಹಲವು ಅಗ್ನಿದಿವ್ಯ ಗಳನ್ನು ದಾಟಿಕೊಂಡು ಬಂದಿರುವವರು ಸದ್ಯ ಸಾಸಿವೆಯೊಳಗೆ ಸಾಗರ ಕಾಣುವ ಅವರ ಕವಿತೆಗಳು ಹುಸಿ ಲೋಕದ ವರ್ತಮಾನದ ತಲ್ಲಣಗಳಿಗೆ ಮುಖಾಮುಖಿಯಾಗುತ್ತವೆ ಹೇಳುವ ಸಾಲು ಎರಡಾದರೂ ದೀರ್ಘ ಕವಿತೆಯ ಎಲ್ಲ ಕಸುವನ್ನು ಆ ಸಾಲುಗಳಲ್ಲಿ ತುಂಬಿದ್ದಾರೆ, ಅಕ್ಕನಿಗೆ ಚನ್ನಮಲ್ಲಿಕಾರ್ಜುನನಂತೆ ,ಕೆ.ಬಿ ಅವರು ‘ಸಾಕಿ’ ಎನ್ನುವ ತಮ್ಮ ಆತ್ಮಸಂಗಾತದ ದನಿಯನ್ನು ನಿವೇದಿಸಿಕೊಳ್ಳುವ ಮುಖೇನ ಲೋಕಕ್ಕೆ ಹೇಳಬೇಕಾದ ಎಲ್ಲ ಸಂಕಟಗಳ ದ್ರವ್ಯ ಕಾವ್ಯದಲ್ಲಿ ಅಡಗಿದೆ ಬಯಲ ಹದಗೊಳಿಸಿ ಪ್ರೀತಿಯನ್ನು ಹರಡುವ ಸಂತನಂತೆ ಕಾಣುತ್ತಾರೆಸಾಕಿ ಪ್ರೀತಿಯೆಂದರೆ/ ಗುಟ್ಟಾಗಿ ಗುನುಗುವುದಲ್ಲ/ಸುಟ್ಟ ರೊಟ್ಟಿಯಂತಾಗುವುದು ಎನ್ನುವಲ್ಲಿ ಪ್ರೀತಿಗಿರಬೇಕಾದ ಗಟ್ಟಿತನ,ಸುಟ್ಟ ರೊಟ್ಟಿಯ ಅನುಭವ ದ್ರವ್ಯ,ಪ್ರೀತಿ ,ರೊಟ್ಟಿ ಎನ್ನುವುದು ಸದ್ಯದ ತುರ್ತು, ಮಾನವತೆಯ ಬದುಕಿನ ಪ್ರತೀಕ ಕೆ.ಬಿ ಅವರ ಕಾವ್ಯದ ಗಟ್ಟಿ ನಿಲುವಿನ ಉತ್ತರವಾಗಿದೆ ಪ್ರೀತಿಯ ಶಕ್ತಿ ಅದು ಅಸ್ಸೀಮ ಬಯಲು ಅಕ್ಕ ಹೇಳಿದಂತೆ ಸೀಮಿಯಲ್ಲಿದ ನಿಸ್ಸಿಮಂಗೆ ಒಲಿದನವ್ವಂತೆ,ಪಿನಿಕ್ಸ ಹಕ್ಕಿಯಂತಾಗುವುದು,ಶರಣಾಗುವುದಲ್ಲ,ಶರಣ ಸಂಸ್ಕೃತಿಗೆ ಅಣೆಯಾಗುತ್ತಾರೆ ಪ್ರೀತಿಯಂತೆ ಮುದ್ದಾಡುವುದಲ್ಲ ಕಾವ್ಯದ ಕೊನೆಯಲ್ಲಿ ಹೇಳುವ ಮಾತ್ರ ಅಲೌಕಿಕತೆಯೆಡೆಗೆ ನಮ್ಮನ್ನು ಕರೆದುಕೊಂಡು ಹೋಗುತ್ತದೆ” ಎದ್ದು ಹೋಗಿ ಬುದ್ಧನಾಗುವುದು ಎನ್ನುವಲ್ಲಿ ಕಾವ್ಯವನ್ನು ಗರಡಿ ಮನೆಗೆ ಕರೆತರುತ್ತಾರೆಸಾಕಿ /ಕುಡಿಯುತ್ತಿದ್ದೇನೆ/ನಿರುತ್ತರದಲಿ ಕುಳಿತು/ಅಮೂರ್ತ ಅರ್ಥವಾಗದ್ದಕ್ಕೆ ಕವಿ ಸಾಕಿಗೆ ನಿವೇದಿಸಿಕೊಳ್ಳುವುದು , ಕುಡಿಯುವುದು ಏಕೆ ಅಂದರೆ ಅಮೂರ್ತ ಅರ್ಥವಾಗದ್ದಕ್ಕೆ,ಎಲ್ಲರ ಹುಡುಕಾಟವೂ ಅಮೂರ್ತ ವೇ ಎಷ್ಟೂ ಅರೆದು, ಮುರಿದು,ತೊರೆದು,ಕರಗಿ,ಮರುಗಿದರು ಅದು ಇನ್ನೂ ಮುಖಾಮುಖಿಯಾಗಿಲ್ಲ ಅಮೂರ್ತ ವನ್ನು ಮೂರ್ತವಾಗಿಸುವುದು ಕವಿಯೇ ಹೇಳಿದಂತೆ ಪ್ರೇಮವನ್ನು ಕುಡಿಯಬೇಕಾಗಿದೆ ಅದು ಲೋಕವನ್ನು ತಿಳಿಗೊಳಿಸುತ್ತದೆ ಸಾಕಿ/ ಕವಿತೆಯೆಂದರೆ/ಬೆಳೆಯುವುದಲ್ಲ/ ಬೇರಾಗಿ ಕೆಳಗಿಳಿಯುವುದು ಸಾಕಿ/ಕವಿತೆಯೆಂದರೆ/ ಹೊಸೆಯುವುದಲ್ಲ/ಒಲವ ಬೆಸೆಯುವುದು ಕವಿ ಎಲ್ಲಿಯೂ ಈ ಪ್ರೇಮವನ್ನು ಬಿಟ್ಟಿಲ್ಲ ಎಲ್ಲಿ ಪ್ರೇಮವನ್ನು ತೊರೆಯುತ್ತವೆಯೊ ಅಲ್ಲಿ ಅಶಾಂತಿ ,ಯುದ್ಧ ಕ್ಕೆ ದಾರಿಯಾಗುತ್ತದೆ ಎನ್ನುವ ಎಚ್ಚರಿಕೆಯನ್ನಿಟ್ಟುಕೊಂಡೆ ಒಲವ ಬೆಸೆಯಲು ಹಡದಿ ಹಾಸುತ್ತಾರೆ ಬಯಲ ಹಣತೆಯೆದುರು ಕತ್ತಲೆಯನ್ನೇ ಬೆತ್ತಲಾಗಿಸುತ್ತಾರೆಒಲವಿನೆದುರು ಕನಸನ್ನು ಶುಚಿಗೊಳಿಸುತ್ತಾರೆ******************************** ಹೆಬಸೂರ ರಂಜಾನ್

ನಿರುತ್ತರ Read Post »

You cannot copy content of this page

Scroll to Top