ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಥಾಗುಚ್ಛ

ಸ್ವಾಭಿಮಾನಿ

ಪುಟ್ಟ ಕಥೆ ಸ್ವಾಭಿಮಾನಿ ಮಾಧುರಿ ಕೃಷ್ಣ ಸಂಬಂಧಿ ಮಹಿಳೆ…ಹನ್ನೆರಡಕ್ಕೆ ಮದುವೆಯಾಗಿತ್ತು. ಎಲ್ಲರೂ ಮೊದಲ ಮಗುವಿನ ಬರವಿನಲ್ಲಿದ್ದರೆ ಅಪ್ಪನಾಗುವವನು ಮಾಯ ! ಕಷ್ಟಪಟ್ಟು ಹುಡುಕಿ ಹುಡುಕಿ ಕರೆ ತರುತ್ತಿದ್ದರು.ಮೂರು ಮಕ್ಕಳಾದ ಮೇಲೆ ತಿಳಿವು ಬಂದದ್ದು ಇನ್ನೂ ಇಪ್ಪತ್ತರ ಗಡಿಯಲ್ಲೇ ಇದ್ದ ಯುವತಿ ಹೆಂಡತಿಗೆ. ಬಗಲಲ್ಲೆರಡು ಸೀರೆ ತುರುಕಿಕೊಂಡು ಕಾದೇ ಕಾದಳು. ಐದು ತಿಂಗಳ ಮೊಲೆಹಾಲು ಕುಡಿಯುತ್ತಿದ್ದ ಮಗುವನ್ನು ಕೆಳಗಿಳಿಸಿ ಸದ್ದಿಲ್ಲದೆ ಅಪರರಾತ್ರಿಯಲ್ಲಿ ಗಂಡನ ಹಿಂದೆ ಹೋದಳು.ಟಿಕೇಟು ಕೇಳಿದಾಗ ಮುಂದೆ ಮುದುಡಿ ಕುಳಿತ ಗಂಡನೆಡೆ ಕೈ ಮಾಡಿದಳು. ದೂರದ ತಮಿಳುನಾಡಿನಲ್ಲಿ ರೈಲಿಳಿದಾಗ ಗಂಡನನ್ನು ಗಲ್ಲಾದಲ್ಲಿ ಕೂರಿಸಿ ತಾನು ಕಾಫಿ ತಿಂಡಿ ಊಟ ತಯಾರಿಸುತ್ತ ಮೂರು ವರ್ಷಗಳ ಮೇಲೆ ಮಕ್ಕಳನ್ನು ಕರೆಸಿ ಕೊಂಡಳು. ಕೆಲವೇ ವರ್ಷಗಳಲ್ಲಿ ಒಬ್ಬ ಮಗ ಹೋಟೆಲ್ ಉದ್ಯಮಿ ಇನ್ನೊಬ್ಬ ಡಾಕ್ಟರ್ ,ಮತ್ತೊಬ್ಬ ಆಡಿಟರ್ …ಕೊನೆಯವಳಾಗಿ ಹುಟ್ಟಿದ ಮಗಳು ಕಾಲೇಜು ಪ್ರಾಧ್ಯಾಪಕಿ….. ಮನೆಯಲ್ಲಿ ಲಕ್ಷ್ಮಿ ಕಾಲು ಮುರಿದು ಕೊಂಡು ಬಿದ್ದಿದ್ದಾಳೆ. ತೊಂಭತ್ತರಲ್ಲಿರುವ ಆ ವೃದ್ಧೆ ಸ್ವಾಭಿಮಾನಿಯಾಗಿಯೇ ಉಳಿದಿದ್ದಾಳೆ. ಮಠವೊಂದರ ಲಿಫ್ಟ್ ನಲ್ಲಿ ಹತ್ತಿ ಮೇಲೇರಲು ಕೈ ಆಸರೆ ಸ್ವೀಕರಿಸಿದವಳು ಲಿಫ್ಟ್ ಐದನೇ ಮಹಡಿಯಲ್ಲಿ ನಿಂತ ಕ್ಷಣವೇ ಕೊಡವಿಕೊಂಡು ಊದಿಕೊಂಡಿದ್ದರೂ ಸ್ವಂತ ಕಾಲುಗಳಿಂದಲೇ ಮುಂದೆ ಮುಂದೆ ನಡೆದದ್ದು ಅಚ್ಚರಿ ಅಭಿಮಾನದಿಂದ ನೋಡುತ್ತಲೇ ಆಕೆಯ ಹಿಂದೆ ದೇವತಾಕಾರ್ಯ ನಡೆಯುವಲ್ಲಿಗೆ ನಾನೂ ಒಳ ಹೊಕ್ಕೆ. ಸಂಗಾತಿ. ಕಾಮ್ ನಲ್ಲಿ ಕವಯಿತ್ರಿ ವಿಶಾಲಾ ಆರಾಧ್ಯರ ‘ಬುದ್ಧನೊಂದಿಗೊಂದು ದಿನ’ ಕವಿತೆ ಓದಿದೆ…ಯಾರೂ ಕೇಳದೊಂದು ಪ್ರಶ್ನೆ ಅವರು ಗೌತಮ ಬುದ್ಧನಿಗೆ ಕೇಳಿದ್ದರು…’ ಆ ರಾತ್ರಿ ಯಶೋಧರೆಯೂ ನಿನ್ನನ್ನು  ಹಿಂಬಾಲಿಸಿ ಬಂದಿದ್ದರೆ ಏನಾಗುತಿತ್ತು ?.’ಏನೂ ಆಗಬಹುತಿತ್ತಲ್ಲವೇ ,ನನ್ನ ಕಣ್ಮುಂದೆ ಈ ಸಂಬಂಧಿ ಬಂದೇ ಬಂದು ನಿಂತಳು. ***************************************************

ಸ್ವಾಭಿಮಾನಿ Read Post »

ಕಥಾಗುಚ್ಛ

ವಿಭ್ರಮ

ಕಥೆ ವಿಭ್ರಮ ಮಧುರಾ   ಕರ್ಣಮ್ “ಚರಿ, ಇಪ್ಪ ಎನ್ನ ಪಣ್ಣಣು?” ಎಂದು  ದುಗುಡ ತುಂಬಿದ ಮುಖದಿಂದ ಕೇಳಿದಳು ಆಂಡಾಳು. “ಏನ್ಮಾಡೋದು? ಇದ್ದುದನ್ನು ಇದ್ದ ಹಾಗೇ ಪ್ರಾಮಾಣಿಕವಾಗಿ ನಿಜ ಹೇಳಿಬಿಡೋದು. ನಮ್ಮ ಮನಸ್ಸಿಗಾದ್ರೂ ನೆಮ್ಮದಿ ಇರುತ್ತೆ. ಎಷ್ಟು ದಿನಾಂತ ಸುಳ್ಳು ಪಳ್ಳು ಹೇಳಿ ಮುಚ್ಚಿಟ್ಕೊಳ್ಳೋಕಾಗುತ್ತೆ?” ಎಂದರು ವರದರಾಜ ಐಯ್ಯಂಗರ‍್ರು. “ಗುರುವಾಯೂರಪ್ಪಾ, ನಾನು ನಿಮ್ಮನ್ ಕೇಳ್ತಿದೀನಲ್ಲ, ನನಗೆ ಬುದ್ಧಿ ಇಲ್ಲ.” ಎಂದು ಕೂಗುತ್ತ ಒಳಗೋಡಿದಳು ಆಂಡಾಳು. ಅವಳಿಗೆ ಸಮಸ್ಯೆ ಎಲ್ಲರಿಗೂ ಗೊತ್ತಾಗುವದು ಬೇಡವಾಗಿತ್ತು. ಹಾವೂ ಸಾಯದಂತೆ ಕೋಲೂ ಮುರಿಯದಂತೆ ಮಧ್ಯದ ದಾರಿ ಹುಡುಕಬೇಕಾಗಿತ್ತು. ಐಯ್ಯಂಗಾರ‍್ರದೋ..ನೇರ ನಡೆ. ಸುಳ್ಳು ಅವರ ಜಾಯಮಾನದಲ್ಲೇ ಇಲ್ಲ.             ಅವರ ಮನೆಯಲ್ಲಿ ಈ ವಾಗ್ಯುದ್ಧ ಆರಂಭವಾಗಿ ತಿಂಗಳುಗಳೇ ಕಳೆದಿದ್ದವು. ಪರಿಹಾರ ಕಂಡಿರಲಿಲ್ಲ. ಕಾಣುವುದು ಅಷ್ಟು ಸುಲಭವೂ ಆಗಿರಲಿಲ್ಲ. ಇಷ್ಟು ದಿನ ನಿತ್ಯವೂ ಬಿಡದೆ ಗುರುವಾಯೂರಪ್ಪನ ದೇವಸ್ಥಾನಕ್ಕೆ ಹೋಗಿ ತಲೆ ಬಾಗದೇ ತುತ್ತು ಬಾಯಿಗಿಟ್ಟವರಲ್ಲ. ಅದರ ಫಲವೋ ಎಂಬಂತೆ ಒಬ್ಬನೇ ಮಗ ವೇಲು ಎಲ್ಲಾ ಪರೀಕ್ಷೆಗಳನ್ನೂ ಉತ್ತಮ ಅಂಕಗಳೊಂದಿಗೆ ಪಾಸು ಮಾಡಿದ್ದ. ಎಂಜಿನಿಯರಿಂಗ್ ಮುಗಿದು ಕ್ಯಾಂಪಸ್ ಸೆಲೆಕ್ಷನ್ ಕೂಡ ಆಗಿತ್ತು. ತಂದೆ ತಾಯಿಗಳ ಮುಖದಲ್ಲಿ ಸಂತೋಷ ಉಕ್ಕಿ ಹರಿದಿತ್ತು. ಆದರೆ ವೇಲು ಮುಂದೆ ಓದಲು ಉತ್ಸುಕನಾಗಿದ್ದ. ಜಿ.ಆರ್.ಇ. ಟೋಫೆಲ್ ಪರೀಕ್ಷೆಯಲ್ಲೂ ಒಳ್ಳೆ ಅಂಕಗಳನ್ನು ಗಳಿಸಿದ. ತಂದೆ ತಾಯಿಗಳ ಕಾಲಿಗೆ ಬಿದ್ದು ಸ್ಕಾಲರ್‌ಶಿಪ್‌ನೊಂದಿಗೆ ಎಜುಕೇಷನ್ ಲೋನೂ ತೆಗೆದುಕೊಂಡು ಅಮೆರಿಕಕ್ಕೆ ರವಾನೆಯಾದ. ಅಲ್ಲಿಂದಲೇ ಆಂಡಾಳುವಿಗೆ ವಿಭ್ರಮ ಆರಂಭವಾಗಿದ್ದು. ಸಂತಸ, ದು:ಖ ಎರಡೂ ಮೇಳೈಸಿದ ಸ್ಥಿತಿ. ಮಗ ಯಶಸ್ವಿಯಾಗಿ ಮುಂದುವರೆಯುತ್ತಿದ್ದಾನೆಂದು ಆನಂದಿಸಬೇಕೆಂದುಕೊಂಡವಳಿಗೆ ಮಗನನ್ನು ಅಗಲಿ ಇರಬೇಕೆನ್ನುವ ದು:ಖ. ಆದರೆ ಅದು  ತಾತ್ಕಾಲಿಕವಲ್ಲವೇ? ತಾನೇ ಸಂತೈಸಿಕೊಂಡಳು.              ವೇಲು ಎಂ.ಎಸ್. ಮುಗಿಸಿ ಅಲ್ಲೇ ಕೆಲಸಕ್ಕೆ ಸೇರಿದ. ಸಾಫ್ಟವೇರ್ ಉದ್ಯೋಗ. ಬದುಕು ಹಾರ್ಡೇ. ಎಜುಕೇಷನ್ ಲೋನ್ ತೀರಿಸಬೇಡವೇ? ಆದರೆ ಕೈತುಂಬ ಸಂಬಳ. ‘ಮೂರ‍್ನಾಲ್ಕು ವರ್ಷಗಳಲ್ಲಿ ಎಲ್ಲ ತೀರಿಸಿ ಬಂದ್ಬಿಡ್ತೀನಿ’ ಎಂದು ಭರವಸೆ ನೀಡಿದ. ಎರಡು ದಿನಕ್ಕೊಂದು ಬಾರಿಯಾದರೂ ಫೋನು. ಮಗನೊಡನೆ ಮಾತು, ಹರಟೆ, ನಗು ಎಲ್ಲವೂ ಸರಿಯಾಗಿತ್ತು. ತಂದೆ ತಾಯಿಗಳಿಬ್ಬರೂ ಅಮೆರಿಕಕ್ಕೆ ಬರಬೇಕೆಂದು ಅವನ ಆಸೆ .‘ನಮ್ಮ ಆಚಾರ,ವಿಚಾರಗಳು ಅಲ್ಲಿ ನಡೆಯುವದಿಲ್ಲ. ಬೇಡ.’ ಎಂಬ ಮಾತು ನಡೆಯಲಿಲ್ಲ. ಅವನ ಒತ್ತಾಯಕ್ಕೆ ಮಣಿದು ಹೋಗಿ ಆರು ತಿಂಗಳಿದ್ದು ಅವನಿಗೆ ಪೊಂಗಲ್, ಪುಳಿಯೋಗರೆ ಮಾಡಿ ಬಡಿಸಿ, ಮಾಡಲು ಕಲಿಸಿ ನಯಾಗರ ಜಲಪಾತ ನೋಡಿಕೊಂಡು ಬಂದದ್ದಾಯಿತು. ಬರುವಾಗ ಆಂಡಾಳು ಮೆಲ್ಲನೆ “ಒಂದು ತಿಂಗಳಾದ್ರೂ ರಜ ತೆಗೆದುಕೊಂಡು ಬಾ. ಹುಡುಗಿ ನೋಡಿಟ್ಟಿರ್ತೀನಿ. ಬಂದು ನೋಡಿ ನಿನಗಿಷ್ಟವಾದ ಹುಡುಗೀನ ಮದುವೆ ಮಾಡ್ಕೊಂಡು ಹೋಗು. ಅಂದ್ರೆ ನಮಗೆ ನಿಶ್ಚಿಂತೆ. ನಿನಗೆಷ್ಟು ದಿನ ಬೇಕೋ ಇಲ್ಲಿದ್ದುಕೊಂಡು ಸಾಕೆನಿಸಿದಾಗ ಬಾ”ಎಂದಳು.             ಅಷ್ಟೇ ಮೆತ್ತಗಿನ ಧ್ವನಿಯಲ್ಲಿ ಮಗರಾಯ “ಮಮ್ಮೀ, ಮದುವೇಂದ್ರೆ…ಇಲ್ಲಿ ನಾನೊಂದು ಹುಡುಗೀನ ಇಷ್ಟಪಟ್ಟಿದೀನಿ. ನೀನು ಬೇಜಾರು ಮಾಡ್ಕೋತೀಯಾಂತ ಮೊದಲೇ ಹೇಳಿರಲಿಲ್ಲ. ಮಿನಿ ನನ್ನ ಜೊತೆ ನಮ್ಮಾಫೀಸಿನಲ್ಲೇ ಕೆಲಸ ಮಾಡುತ್ತಾಳೆ. ದೆಹಲಿಯವಳು. ತುಂಬಾ ಜಾಣೆ. ನಮ್ಮಿಬ್ಬರ ಐಡಿಯಾಲಜಿ ಒಂದೇ ರೀತಿ ಇದೆ. ಆದರೆ ಮದುವೆ ಬಗ್ಗೆ ನಾವಿನ್ನೂ ಯೋಚಿಸಿಲ್ಲ. ಸದ್ಯಕ್ಕೆ ಒಳ್ಳೆ ಫ್ರೆಂಡ್ಸ ಅಷ್ಟೇ.” ಎಂದು ಶಾಕ್ ನೀಡಿದ್ದ.             ಆಂಡಾಳು ಒಂದು ಕ್ಷಣ ಗರ ಬಡಿದವರಂತೆ ನಿಂತಿದ್ದವಳು ಸಾವರಿಸಿಕೊಂಡು ಕಣ್ತುಂಬಿಕೊಂಡಳು. “ಅವಳು ನಿನಗಷ್ಟೇ ಹೆಂಡತಿಯಾಗ್ತಾಳೇ ಹೊರತು ನಮಗೆ ಸೊಸೆಯಾಗ್ತಾಳೋ ಇಲ್ಲವೋ ಗೊತ್ತಿಲ್ಲ. ಎಷ್ಟೆಲ್ಲಾ ಆಸೆ ಇಟ್ಕೊಂಡಿದ್ದೆ. ಏನೆಲ್ಲಾ ಕನಸು ಕಟ್ಟಿದ್ದೆ? ಒಳ್ಳೇ ಐಯ್ಯಂಗಾರ್ ಹುಡುಗೀನೇ ತಂದು ಭರ್ಜರಿಯಾಗಿ ಮದುವೆ ಮಾಡಬೇಕು. ಗುರುವಾಯೂರಪ್ಪನ ದೇವಸ್ಥಾನದಲ್ಲಿ ಒಂಬತ್ತು ಮೊಳದ ಮಡಸಾಲು ಸೀರೆ ಉಡಿಸಿ, ನಿಮ್ಮಿಬ್ಬರ ಕೈಲಿ ಪೂಜೆ ಮಾಡಿಸಿ..  ಎಲ್ಲಾ ಅವನಿಚ್ಛೆ. ಈಗಲೂ ಕಾಲ ಮಿಂಚಿಲ್ಲ. ನಿನಗಿಷ್ಟವಾಗೋ ಐಯ್ಯಂಗಾರ‍್ರ ಹುಡುಗೀನೇ ಮದುವೆಯಾಗು. ನಮ್ಮ ಬಗ್ಗೆಯೂ ಯೋಚಿಸು ಕಣ್ಣಾ.” ಎಂದು ಹೇಳಲಷ್ಟೇ ಸಾಧ್ಯವಾಗಿತ್ತು. ದಂಪತಿಗಳಿಬ್ಬರೂ ವಿಷಣ್ಣವದನರಾಗೇ ತಿರುಗಿ  ಬಂದಿದ್ದರು.             ಆಕಾಶವೇ ತಲೆಮೇಲೆ ಬಿದ್ದಂತೆ ಕುಳಿತ ಹೆಂಡತಿಯನ್ನು ಐಯ್ಯಂಗಾರ‍್ರೇ ಸಮಾಧಾನಿಸಬೇಕಾಗಿ ಬಂತು. “ಏನೋ ಹರಯದ ಆಕರ್ಷಣೆ ಕಣೆ. ಈ ವಯಸ್ಸಿನಲ್ಲಿ ಇವೆಲ್ಲ ಸಹಜ ತಾನೇ. ಏನು ಬರುತ್ತೋ ಅದನ್ನ ಎದುರಿಸೋ ಧೈರ‍್ಯ, ಶಕ್ತಿ ಕೊಡೂಂತ ಗುರುವಾಯೂರಪ್ಪನಲ್ಲಿ ಬೇಡಿಕೊಳ್ಳೋಣ.” ಎಂದು ಅಡ್ಡ ಗೋಡೆಯ ಮೇಲೆ ದೀಪವಿಟ್ಟಂತೆ ಹೇಳಿದ್ದರು. ಆಂಡಾಳು “ಇವನು ಜಾಣನಾಗಿರದೇ ಇದ್ರೇನೆ ಚೆನ್ನಾಗಿತ್ತು. ಏನೋ ಒದ್ಕೊಂಡು ಇಲ್ಲೇ ಕೆಲಸ ಮಾಡೋನು. ಒಳ್ಳೇ ಹುಡುಗಿ ನೋಡಿ ಮದುವೆ ಮಾಡಿ ಮೊಮ್ಮಕ್ಕಳನ್ನಾಡಿಸ್ಕೊಂಡು ಹಾಯಾಗಿ ಇರ್ತಾ ಇದ್ವಿ. ಇವನು ಸ್ಕಾಲರ್ ಆಗಿದ್ದೇ ನಮಗೆ ಕಷ್ಟವಾಯ್ತಾಂತ?” ಎಳೆಎಳೆಯಾಗಿ ನೋವು ಬಿಡಿಸಿಟ್ಟರು. ಐಯ್ಯಂಗರ‍್ರು “ಛೀ, ಬಿಡ್ತು ಅನ್ನು. ಅವರ ಏಳಿಗೆ ಮುಖ್ಯ ತಾನೇ. ನಮ್ಮ ಹಣೇಲಿ ಏನು ಬರ್ದಿದಾನೋ ಗುರುವಾಯೂರಪ್ಪ? ಸದ್ಯ, ಎಲ್ಲಾ ಚಿಂತೇನೂ ಅವನ ಮೇಲೆ ಹಾಕಿ ನಿಶ್ಚಿಂತರಾಗಿದ್ದು ಬಿಡೋಣ.” ಎಂದು ಸಂತೈಸಿದರು.             ದಿನಗಳು ಓಡುತ್ತಿದ್ದವು. ಪೊಂಗಲ್, ಆಡಿ ಶುಕ್ರವಾರ, ಜನ್ಮಾಷ್ಟಮಿ..  ಹೀಗೆ ಹಬ್ಬಗಳು, ಪೂಜೆಗಳು. ಮಡಸಾಲು ಸೀರೆಯುಟ್ಟು ಉದ್ದ ತಿಲಕವಿಟ್ಟ ಆಂಡಾಳು, ನಾಮ ತೀಡಿ ಮುಗುಟ ಉಟ್ಟ ಐಯ್ಯಂಗರ‍್ರ ಜೊತೆಯಲ್ಲಿ ನಿತ್ಯ ಬೆಳಿಗ್ಗೆ ಗುರುವಾಯೂರಪ್ಪನ ದೇವಸ್ಥಾನಕ್ಕೆ ಹೋಗುವದನ್ನು ತಪ್ಪಿಸಲಿಲ್ಲ. ಮುತ್ದೈದೆ  ಸಾವನ್ನೇ ಬಯಸುತ್ತ ಎದುರಿಗಿದ್ದ ಪಾರಿಜಾತ ವೃಕ್ಷದ ಹೂಗಳನ್ನಾಯ್ದು ನಿತ್ಯ ಸ್ವಾಮಿಗಿಟ್ಟು ಬೇಡಿಕೊಳ್ಳುವದನ್ನು ಮರೆಯಲಿಲ್ಲ. ಮೇಲುಕೋಟೆಯ ವೈರಮುಡಿ ಉತ್ಸವಕ್ಕೆ ಹೋಗಿ ತಲೆಬಾಗದೇ ಇರಲಿಲ್ಲ. ವೇಲು ಕೂಡ ವಾರಕ್ಕೆರಡು ಬಾರಿಯಾದರೂ ಫೋನು, ಚಾಟ್ ಮಾಡುವದನ್ನು ತಪ್ಪಿಸಲಿಲ್ಲ. ಗುರುವಾಯೂರಪ್ಪನೂ ಇವರನ್ನು ಕಡೆಗಣಿಸಲಿಲ್ಲ.             ಸಮಸ್ಯೆ ಚಿಕ್ಕದಾಗಿ ಕಾಣುವದು ಯಾವಾಗ? ಮೊದಲಿದ್ದ ಸಮಸ್ಯೆಗಿಂತ ದೊಡ್ಡದೇ ಎದುರಾದಾಗ. ಇಲ್ಲೂ ಹಾಗೇ ಆಯಿತು. ಒನ್ ಫೈನ್ ಡೇ ವೇಲು ತಾನು ಮಿನಿಯೊಂದಿಗೆ ‘ಲಿವಿಂಗ್ ಟುಗೆದರ್’ ಸಂಬಂಧ ಹೊಂದಿದ್ದೇನೆಂದು ಹೇಳಿದ. ದಂಪತಿಗಳಿಗೆ ಮತ್ತೊಂದು ಶಾಕ್. ‘ಕಲ್ಲಿಗಿಂತ ಇಟ್ಟಿಗೆಯೇ ಮೆದು’ ಎಂಬಂತೆ ಮದುವೆ ಇಲ್ಲದೇ ಒಟ್ಟಿಗೆ ಬಾಳುವುದಕ್ಕಿಂತ ‘ಮದುವೆಯಾದರೇ ಚೆನ್ನ’ ಎನಿಸಲಾರಂಭಿಸಿತು. ಇವರಿಗೆ ‘ಲಿವಿಂಗ್ ಟುಗೆದರ್’ ನ ಪರಿಕಲ್ಪನೆಯೇ ಭಯಾನಕ. ಭಾರತದಲ್ಲೂ ಆರಂಭವಾಗಿದ್ದರೂ ಚಿತ್ರತಾರೆಯರೂ, ಸೆಲಿಬ್ರಿಟಿಗಳಲ್ಲೇ ಹೆಚ್ಚಾಗಿತ್ತು. ಸಾಮಾನ್ಯರ ಮಟ್ಟಕ್ಕಿನ್ನೂ ದೂರವೇ. ಮಗನ ಜೊತೆ ಚರ್ಚೆ ಮಾಡಿ “ಮದುವೆ ಮಾಡಿಕೊಂಡು ಬಿಡಿ. ಇಲ್ಲವೇ ಇಲ್ಲಿ ಬನ್ನಿ. ನಾವೇ ಮಾಡುತ್ತೇವೆ.” ಎಂಬ ಆಯ್ಕೆಗಳನ್ನೂ ಕೊಟ್ಟರು.             ವೇಲು ಸ್ಪಷ್ಟವಾಗಿ “ನಿನಗೆ ಇಲ್ಲಿನ ಕಾನೂನು ಗೊತ್ತಿಲ್ಲ. ಮದುವೆ ಎಂಬ ಬಂಧನದ ನಂತರ ಸಂಬಂಧ ಸರಿಹೋಗದೇ ವಿಚ್ಛೇದನವಾದರೆ ಕಾಂಪನ್ಸೇಷನ್ ಕೊಡಲು ಜೀವಮಾನದಲ್ಲಿ ಕೂಡಿಟ್ಟದ್ದನ್ನೆಲ್ಲ ಸುರಿಯಬೇಕಾಗುತ್ತದೆ. ಬೀದಿಗೆ ಬಂದು ನಿಲ್ಲುತ್ತೇವೆ. ಆ ವಿಷಯದಲ್ಲಿ ಕಾನೂನು ತುಂಬ ಕಠಿಣ. ಅದಕ್ಕೆ ಇಲ್ಲಿ ಮದುವೆ ಇಲ್ಲದೇ ಒಟ್ಟಿಗೆ ವಾಸಿಸುವದು. ಅವಳಿಗೆ ಬೇಡವಾದರೆ ಅವಳು ‘ಬಾಯ್’ ಹೇಳಿ ಹೊರಡಬಹುದು. ನನಗೆ ಬೇಡವಾದರೆ ನಾನು ದೂರ ಹೋಗಬಹುದು. ಯಾವುದೇ ನಿರ್ಬಂಧವಿಲ್ಲ. ಈಗ ನನಗೆ ಕಂಪನಿ ಹೆಚ್ಚಿನ ಹೊಣೆ ಹೊರಿಸಿದೆ. ವಿಶೇಷ ತರಬೇತಿಗಾಗಿ ಜರ್ಮನಿಗೆ ಹೋಗಬೇಕು. ಮದುವೆಯ ಉರುಳಿಗೆ ಸಿಲುಕುವುದಿಲ್ಲ.”ಎಂದು ಖಡಾ ಖಂಡಿತವಾಗಿ ಹೇಳಿಬಿಟ್ಟ.             ಎಲ್ಲೋ ಬಂಡೆ ಬಿರುಕು ಬಿಟ್ಟ ಹಾಗೆ, ತಾವು ನಂಬಿಕೊಂಡು ಬಂದ ಮೌಲ್ಯಗಳು, ಸಂಬಂಧಗಳು ತಮ್ಮ ಮುಂದೆಯೇ ಜಾಳು ಜಾಳಾಗಿ ನೀರಲ್ಲಿ ಕರಗಿ ಹೋದಂತೆ ಭಾಸವಾಯಿತು ಇಬ್ಬರಿಗೂ. ಜನ್ಮ ಜನ್ಮಾಂತರದ ಸಂಬಂಧಕ್ಕೊಳಪಟ್ಟು ಇಬ್ಬರೂ ಹೊಂದಿಕೊಂಡು ಕಷ್ಟಸುಖಗಳಲ್ಲಿ ಸಮಭಾಗಿಯಾಗಿ ಒಬ್ಬರಿಗಾಗೇ ಇನ್ನೊಬ್ಬರು ಬಾಳುವ ಪರಿ ಎಲ್ಲಿ? ಬೇಕೆಂದಾಗ ಜೊತೆಗಿದ್ದು ಬೇಡವಾದಾಗ ದೂರವಾಗುವ ಬಗೆ ಎಲ್ಲಿ? ಅಜಗಜಾಂತರ. ಬೇಕೆಂದಾಗ ತೀಟೆ ತೀರಿಸಿಕೊಂಡು..  … ‘ಪಶುಸಮಾನ’ ಎನ್ನಿಸಿತು ಆಂಡಾಳುವಿಗಂತೂ. ಮಿನಿಯ ಜೊತೆ ಹರಕು ಮುರುಕು ಇಂಗ್ಲೀಷಿನಲ್ಲಿ ಹಿಂದಿ ಸೇರಿಸಿ ಮಾತನಾಡಿದಳು. “ಇಷ್ಟವಿದ್ದರೆ ಬೆಂಗಳೂರಿಗೆ ಬಂದು ಹಾಯಾಗಿರಬಹುದು.” ಎಂಬುದನ್ನು ಒತ್ತಿ ಹೇಳಿದಳು. “ಶಾದಿ ನೌ? ಬುಲ್‌ಶಿಟ್, ಹಮ್ ದೋನೋ ತೀನ ಚಾರ ಸಾಲ ತೊ ಸಾಥ ರೆಹಕೆ ದೋನೋಮೆ ಬನತಾ ಹೈ ಕ್ಯಾ ದೇಖತೆ ಹೈ. ಫಿರ್ ಶಾದಿ ಕೆ ಬಾರೆ ಮೆ ಸೋಚೇಂಗೆ( ಮದುವೆಯೇ? ಈಗಲೇ? ನಾವು ಮೂರ‍್ನಾಲ್ಕು ವರ್ಷಗಳಾದರೂ ಜೊತೆಗಿದ್ದು ಇಬ್ಬರ ಸ್ವಭಾವಗಳು ಹೊಂದಾಣಿಕೆಯಾಗುತ್ತವೋ ನೋಡುತ್ತೇವೆ. ನಂತರ ಮದುವೆಯ ಬಗ್ಗೆ ಯೋಚಿಸುತ್ತೇವೆ).” ಎಂದವಳು ಇವರನ್ನು ಪರಿಹಾಸ್ಯ ಮಾಡುತ್ತಲೇ ಫೋನಿಟ್ಟಳು.             ಎರಡನೇ ಸಮಸ್ಯೆಯೂ ಚಿಕ್ಕದಾಗುತ್ತ ಹೋಯಿತು. ವಾರಕ್ಕೊಮ್ಮೆಯಾದರೂ ವೇಲು ತಂದೆ, ತಾಯಿಗಳೊಂದಿಗೆ ಚಾಟ್ ಮಾಡುತ್ತಿದ್ದ. ಕೆಲವೊಮ್ಮೆ ಮಿನಿ ಕೂಡ ಮಾತನಾಡುತ್ತಿದ್ದಳು. ಎನೋ ಹೇಳಲಾಗದ ಬಂಧ ಮೆಲ್ಲನೆ ಬೆಸೆಯತ್ತಿತ್ತು. ಆಂಡಾಳ್ ‘ಪೊಂಗಲ್’ ಹಬ್ಬಕ್ಕೆ ರೇಷ್ಮೆ ಸೀರೆ ಕಳುಹಿಸಿದಳು. ಮಿನಿ ಅದನ್ನು ಸೊಟ್ಟ ಸೊಟ್ಟಗೇ ಉಟ್ಟು ವೆಬ್‌ಕ್ಯಾಮ್‌ನಲ್ಲಿ ಚಾಟ್ ಮಾಡುವಾಗಲೇ ತೋರಿಸಿದ್ದಳು. ‘ಎಲ್ಲ ಸರಿಯಾಗಿಲ್ಲ’ ಎಂಬ ವ್ಯಥೆಯೊಂದಿಗೆ ‘ಏನೋ ಒಂದು ನಡೆಯುತ್ತಿದೆ.’ ಎಂಬ ತುಸು ಸಮಾಧಾನ ಮಿಳಿತವಾಗಿ ಬದುಕು ಏರಿಳಿಯುತ್ತಿತ್ತು.             ಎರಡನೇ ಸಮಸ್ಯೆಯೂ ಕರಗಿ ಚಿಕ್ಕದಾಗಿದ್ದು ಮೂರನೇ ದೊಡ್ಡ ಸಮಸ್ಯೆ ಬಂದಾಗಲೇ. ಮಿನಿ ಮತ್ತು ವೇಲು ಬೆಂಗಳೂರಿಗೆ ಬರುವ ಯೋಚನೆ ಮಾಡಿದ್ದರು. “ಮಮ್ಮೀ, ಮಿನಿ ಸೌತ್ ಇಂಡಿಯಾನೇ ನೋಡಿಲ್ಲ. ಅವಳು ಹುಟ್ಟಿ ಬೆಳೆದಿದ್ದೆಲ್ಲ ಅಮೆರಿಕದಲ್ಲೇ. ಆಗಾಗ ದೆಹಲಿಗೆ ಹೋಗಿ ಬಂದು ಅಭ್ಯಾಸವಿದೆಯಷ್ಟೇ. ಇಬ್ಬರೂ ಜೊತೆಯಾಗಿ ಬಂದು ಎರಡು ತಿಂಗಳಿದ್ದು ಸೌತ್ ಇಂಡಿಯಾವನ್ನೆಲ್ಲ ಸುತ್ತಿ ಹೋಗುತ್ತೇವೆ.” ಎಂದಿದ್ದ ವೇಲು. ವಿಭ್ರಮ ಕಾಡಿತ್ತು ಆಂಡಾಳುವಿಗೆ. ಮಗ ಬರುತ್ತಾನೆಂದರೆ ಸಂತೋಷ. ಮಿನಿ ಬಂದರೂ ಸಂತಸವೇ. ಆದರೆ ಅವರ ಸಂಬಂಧದ ಬಗ್ಗೆ ಏನು ಹೇಳುವದು? ಗೆಳತಿಯೋ, ಪ್ರಿಯೆಯೋ, ಹೆಂಡತಿಯೋ..  ಅದೇ ಬೃಹತ್ ಸಮಸ್ಯೆಯಾಗಿಬಿಟ್ಟಿತು. ‘ಸೊಸೆ’ ಎನ್ನುವ ಹಾಗಿಲ್ಲ. ‘ಮಗನ ಸಹೋದ್ಯೋಗಿ, ಭಾರತ ನೋಡಲು ಬಂದಿದ್ದಾಳೆ’ ಎಂಬ ಹಸೀ ಸುಳ್ಳು ನಡೆಯಲ್ಲ. ಇಬ್ಬರೂ ಅಂಟಿಕೊಂಡೇ ಇರುವುದನ್ನು ನೋಡಿದರೆ ಯಾರಾದರೂ ಜೋಡಿ ಎಂದು ಹೇಳಿಯಾರು. ‘ಮಗನ ಗರ್ಲಫ್ರೆಂಡ್, ಜೊತೆ ಸಂಬಂಧ ಹೊಂದಿರುವವಳು’ ಎಂಬ ನಿಜವನ್ನು ಇಲ್ಲಿಯ ಸಮಾಜ ಅಷ್ಟು ಸುಲಭವಾಗಿ ಒಪ್ಪಲ್ಲ. ಹಾಗಿರುವಾಗ ನಿತ್ಯ ಹೋಗುವ ದೇವಸ್ಥಾನದಲ್ಲಿನ ಎಷ್ಟೊಂದು ಜನ ಗೆಳತಿಯರಿಗೆ ಏನು ಹೇಳಲಿ? ಸಂಜೆ ಹೋಗುವ ಪಾಠ, ಪ್ರವಚನಗಳಲ್ಲಿನ ಆತ್ಮೀಯರಿಗೆ ಏನು ಹೇಳಬೇಕು? ನೆರೆ ಹೊರೆ ಎಲ್ಲ ಏನು ತಿಳಿಯುತ್ತಾರೆ? ಏನೋ ಹೇಗೋ ಸುಧಾರಿಸಿಕೊಂಡು ಹೋಗಲು ಅದೇನು ಒಂದಿನವೇ? ಒಂದು ವಾರವೇ? ಎರಡು ತಿಂಗಳು, ಎಂದರೆ ಅರವತ್ತು ದಿನಗಳು.             ‘ಸೊಸೆ’ ಎನ್ನಲು ಮದುವೆ ಮಾಡಿಲ್ಲ. ಪಾಯಸದೂಟ ಹಾಕಿಲ್ಲ. ಹೋಗಲಿ, ‘ಅಲ್ಲೇ ಮದುವೆಯಾಗಿದ್ದಾರೆ’ಎಂದರೆ ಮಗ, ಮಿನಿ ಒಪ್ಪಬೇಕಲ್ಲ. ಕೊರಳಲ್ಲಿ ತಾಳಿ, ಹಣೆಯಲ್ಲಿ ಕುಂಕುಮ, ಸಿಂಧೂರ ಯಾವುದೂ ಇಲ್ಲ. “ಹೇಗೂ ಬಂದಿರುತ್ತೀರಿ. ಇಲ್ಲೇ ಮದುವೆ ಮಾಡಿ ಬಿಡುತ್ತೇವೆ.”ಎಂದಿದ್ದು ಇಬ್ಬರಿಗೂ ರುಚಿಸಿರಲಿಲ್ಲ. “ನಮಗೀಗ ಆ ಯೋಚನೆಯೇ ಇಲ್ಲ.” ಎಂದಿದ್ದರು. ಅವರು ಬರುವದು ಇನ್ನೂ ಐದು ತಿಂಗಳಿತ್ತು. ಐಯ್ಯಂಗಾರ್ ದಂಪತಿಗಳು ನಿತ್ಯ ಕುಲುಮೆಯಲ್ಲಿ ಬೇಯುತ್ತಿದ್ದರು. ಎರಡು ಸಂಸ್ಕೃತಿಗಳ ನಡುವಿನ ಅಂತರ ಏನೆಲ್ಲಾ ಪೀಕಲಾಟಗಳನ್ನು ಸೃಷ್ಟಿಸಬಲ್ಲುದು ಎಂಬ ಅರಿವಾಗಿತ್ತು ಅವರಿಗೆ. ಗುರುವಾಯೂರಪ್ಪನಿಗೂ ಇವರ ಕಷ್ಟ ಗೊತ್ತು. ಆದರೂ ಸುಮ್ಮನೆ ಮಂದಹಾಸ ಬೀರುತ್ತಿದ್ದ.             ಮೂರನೇ ಸಮಸ್ಯೆಗೆ ಹೊಂದಿಕೊಳ್ಳುವಷ್ಟರಲ್ಲಿ ನಾಲ್ಕನೇ ಸಮಸ್ಯೆ ಬಾಯಿ ತೆರೆದು ಕೂತಿತ್ತು. ವೇಲು ತಾವು ಬರುವ ದಿನಾಂಕವನ್ನು ನಿಶ್ಚಿತವಾಗಿ ತಿಳಿಸಿದ. ಜೊತೆಗೆ “ಮಮ್ಮಿ, ಮಿನಿ ಈಗ ಮೂರು ತಿಂಗಳ ಗರ್ಭಿಣಿ. ಅಲ್ಲಿಗೆ ಬರುವಾಗ ಫೋರ್ ಮಂತ್ಸ್ ಆಗಿರುತ್ತೆ. ವಿಶೇಷ ಆರೈಕೆ ಬೇಕಾಗಬಹುದು”ಎಂದ. ಮತ್ತದೇ ವಿಭ್ರಮ ಆಂಡಾಳ್‌ಗೆ. ಮೊಮ್ಮಗುವಿನ ಬರುವಿಕೆ ಸಂತಸ ತಂದರೂ ನಲಿಯಲಾಗುತ್ತಿಲ್ಲ. ದು:ಖಪಡಲೂ ಆಗುತ್ತಿಲ್ಲ. “ಈಗಲಾದರೂ ಮದುವೆಯಾಗಿ.” ಎಂದು ದಂಪತಿಗಳಿಬ್ಬರೂ

ವಿಭ್ರಮ Read Post »

ಕಥಾಗುಚ್ಛ

ಬದಲಾವಣೆ

ಕಥೆ ವಿಜಯಶ್ರೀ ಹಾಲಾಡಿಯವರ ಹೊಸ ಕತೆ ಬದಲಾವಣೆ ಕುದಿಸಿ ಆರಿಸಿದ ನೀರಿಗೆ ತಂಪಿನ ಬೀಜವನ್ನು ಹಾಕಿ ರುಚಿಗೊಂಚೂರು ಬೆಲ್ಲ ಸೇರಿಸಿ ಚಮಚದಲ್ಲಿ ಕಲಕುತ್ತ ಕುಳಿತಿದ್ದಾಳೆ ಜುಬೇದಾ. ಫ್ಯಾನ್ ತಿರುಗುತ್ತಿದ್ದರೂ ಸೆಖೆಯೇನೂ ಕಮ್ಮಿಯಿಲ್ಲ, ಅಲ್ಲದೇ ಫ್ಯಾನಿಂದ ಬರುವುದೂ ಬಿಸಿಗಾಳಿಯೇ: ಏನೂ ಸುಖವಿಲ್ಲ. “ನೀನು ಕೆಲಸ ಎಂತ ಮಾಡುವುದು ಬೇಡ, ಸುಮ್ಮನೇ ರೆಸ್ಟ್ ತಕೋ. ಹೊತ್ತುಹೊತ್ತಿಗೆ ಸರಿಯಾಗಿ ತಿನ್ನು. ಪುನಃ ಆಸ್ಪತ್ರೆ ಸೇರಿದರೆ ನನ್ನಿಂದಾಗಲಿಕ್ಕಿಲ್ಲ” ಬೆಳಿಗ್ಗೆ ಅಂಗಡಿಗೆ ಹೋಗುವ ಮುಂಚೆ ಎಚ್ಚರಿಸಿ ಹೋಗಿದ್ದಾನೆ ರಹೀಮ. ಅದಲ್ಲದೆ “ಉಮ್ಮ, ನೀವು ಪೂರ್ತಿ ಗುಣವಾಗುವವರೆಗೆ ನಾನು ಕಾಲೇಜಿಂದ ಇಲ್ಲಿಗೇ ಬರುತ್ತೇನೆ. ಮತ್ತೆ ಅಕ್ಷಯನ ಹತ್ತಿರ ಹೋಗಬೇಕು ನಾನು. ಪಾಪ ಅಲ್ಲಿ ಅವನು ಒಬ್ಬನೇ ಆಗಿದ್ದಾನೆ” ಅನ್ವರ ಹೇಳಿದ್ದು ನೆನಪಾದಾಗ ಕಣ್ಣೀರು ಬರುವಂತಾಗಿ ತಟಕ್ಕನೇ ತಡೆಯಲು ಯತ್ನಿಸಿದಳು. “ಆಗದ್ದು ಹೋಗದ್ದು ಎಲ್ಲ ಯೋಚನೆ ಮಾಡುತ್ತ ಕುಳಿತದ್ದಕ್ಕೇ ಹುಷಾರಿಲ್ಲದೆ ಆಗುವುದು ನಿನಗೆ. ಸ್ವಲ್ಪ ನೆಮ್ಮದಿಯಾಗಿ ಇರು ನೋಡುವಾ ಮನೆಯಲ್ಲಿ” ಮೂರು ದಿನ ಆಸ್ಪತ್ರೆಯಲ್ಲಿದ್ದು ಡಿಸ್ಚರ್ಜ್ ಆಗಿ ಮನೆಗೆ ಬಂದ ಕೂಡಲೇ ರಹೀಮ ಹೇಳಿದ ಮಾತು. ತಾನೇನು ಬೇಕಂತ ಮಾಡಿಕೊಂಡಿದ್ದೇನ ಇದೆಲ್ಲ: ಹುಷಾರಿಲ್ಲದೆ ಹಾಸಿಗೆ ಹಿಡಿಯುವುದು ಯಾರಿಗಾದರೂ ಆಸೆಯಾ? “ಕರಾವಳಿಯ ಹವೆ ನಿಮಗೆ ಹಿಡಿಯುವುದಿಲ್ಲ ಅಮ್ಮ” ಅಂತ ಡಾಕ್ಟರ್ ಹೇಳಲಿಲ್ಲವಾ? ಮೊನ್ನೆ ಸ್ವಲ್ಪ ಟೆನ್ಷನ್ ಮಾಡಿಕೊಂಡದ್ದು ಹೌದು. ನಿಂತ ನೆಲವೇ ಕುಸಿದು ಬೀಳುತ್ತದೆ ಅನ್ನುವಾಗ ಯಾರಿಗಾದರೂ ಯೋಚನೆಯಾಗುವುದಿಲ್ಲವಾ? ಅನ್ವರ ಕೂಡಾ ಮನೆಬಿಟ್ಟು ಹೋಗಿದ್ದಾನೆ. ಹೊರಗಡೆ ಒಂದು ತರಕಾರಿ ತಕೊಳ್ಳುವ ಅಂತ ಹೋದರೂ ನಮ್ಮಂತವರ ಕಿವಿಗೆ ಬೀಳಬೇಕೆಂದೇ ಕೆಲವು ನಂಜಿನ ನಾಲಗೆಯವರು ಹೇಳುವುದು ಕೇಳುತ್ತದೆ. “ಈ ಸಾಯ್ಬರನ್ನೆಲ್ಲ ಪಾಕಿಸ್ತಾನಕ್ಕೆ ಓಡಿಸಬೇಕು ಮೊದಲು. ಆಗ ಎಲ್ಲವೂ ಸರಿಯಾಗುತ್ತದೆ” ಯಾ ಅಲ್ಲಾಹ್! ಎಂತಾ ಮಾತು! ನಾವು ಹೋಗುವುದಾದರೂ ಎಲ್ಲಿಗಂತ ಬೇಕಲ್ಲಾ. ಯಾವ ಕಾಲದಿಂದಲೂ ಇಲ್ಲಿಯೇ ಇದ್ದವರಲ್ವಾ ನಾವು…. ಈಗ ಹೋಗಿ, ಹೋಗಿ ಅಂತ ಹಂಗಿಸಿದರೆ….ಅದೂ ಅಲ್ಲದೆ ಆರಕ್ಕೇರದ ಮೂರಕ್ಕಿಳಿಯದ ನಮ್ಮಂತವರೆಲ್ಲ ಎಲ್ಲಿಗೋ ಹೋಗಿ ಹೇಗೆ ಬದುಕುವುದು? ದೊಡ್ಡ ದೊಡ್ಡ ದುಡ್ಡಿನವರಾದರೂ ಎದ್ದುಕೊಂಡು ಎಲ್ಲಿಗಾದರೂ ಹೋಗಿ ಜೀವನ ತೆಗೆದಾರು. ಛೇ, ಮೊದಲೆಲ್ಲ ಹೀಗಿರಲಿಲ್ಲಪ್ಪ. ನಾವೇ ಎಲ್ಲದರಲ್ಲೂ ತಗ್ಗಿ ನಡೆಯುತ್ತಿದ್ದುದು ಹೌದು: ಆದರೆ ಇಷ್ಟೆಲ್ಲ ಭಂಗ ಇರಲಿಲ್ಲ. ಈಗ ಸುಮಾರು ಆರೇಳು ವರ್ಷದಿಂದ ನಿಧಾನಕ್ಕೆ ಕುದಿಯುತ್ತಾ ಬಂದಿದೆ ವಾತಾವರಣ: ಈಗಂತೂ  ಸಿಡಿದೇ ಬಿಟ್ಟಿದೆ. ಮುಂದೆ ಹೇಗೋ ಏನೋ… ಯಾರಿಗೆ ಗೊತ್ತು!          ಒಂದೆರಡು ಹಣ್ಣಿನ ಹೋಳು, ಹಿಡಿ ಗಂಜಿ ತಿಂದು ರೂಮಿಗೆ ಬಂದು ಕುಳಿತಳು ಜುಬೇದಾ. ನಿಶ್ಶಕ್ತಿ ಕಮ್ಮಿಯಾಗಲು ಇನ್ನೊಂದು ವಾರವಾದರೂ ಬೇಕು. ಅದಲ್ಲದೆ ತಲೆತಿರುಗಿ ಬಿದ್ದು ಮಂಡೆ ಮಂಚಕ್ಕೆ ಜಪ್ಪಿ ಆದ ಗಾಯದ ನೋವು ಬೇರೆ. ಇತ್ತೀಚೆಗೆ ಸುಮಾರು ಸಮಯವಾಗಿತ್ತು ಸರಿಯಾಗಿ ಊಟವೇ ಸೇರದೆ. ಯಾವುದೂ ಬೇಡ ಅಂತಾಗಿದೆ ಅವಳಿಗೆ. ಟಿ.ವಿಯಲ್ಲಿ ತೋರಿಸುವ ವಿಧ ವಿಧ ವಾರ್ತೆಗಳು ಸುಮ್ಮನೇ ತಲೆಬಿಸಿ ಮಾಡುತ್ತವೆ. ‘ಪೌರತ್ವ ತಿದ್ದುಪಡಿ ಕಾಯ್ದೆ ಬರುತ್ತದೆ’ ಅಂತ ಆವತ್ತಿಂದ ಹೇಳುತ್ತಲೇ ಇದ್ದಾರೆ. ಅನ್ವರ, ಅಕ್ಷಯ ಕೂಡಾ ಇದನ್ನು ಮಾತಾಡುತ್ತಿದ್ದರು. ಆದರೆ ಟಿ.ವಿಯವರ ಬೊಬ್ಬೆ ಯಾವಾಗಲೂ ಇದ್ದದ್ದೇ. ಸತ್ಯ ಹೇಳುತ್ತಾರ, ಸುಳ್ಳು ಹೇಳುತ್ತಾರ ಒಂದೂ ತಿಳಿಯುವುದಿಲ್ಲ. ಈಗೀಗ ಅವರು ಸತ್ಯವೇ ತೋರಿಸಿದರೂ ನಮಗೆ ಸಂಶಯ ಬರುತ್ತದೆ. ಮನೆಕೆಲಸ ಮುಗಿದ ನಂತರ ವಾಟ್ಸಪ್ ನೋಡುವುದುಂಟು ಅವಳು. ಆದರೆ “ಅದರಲ್ಲಿ ಬರುವುದನ್ನೆಲ್ಲ ನಂಬಬೇಡಿ ಉಮ್ಮಾ, ಅಲ್ಲೂ ಹೆಚ್ಚಿನವೆಲ್ಲ ಸುಳ್ಳೇ ಇರುವುದು” ಅಂತ ಪದೇ ಪದೇ ಎಚ್ಚರಿಸುತ್ತಾನೆ ಅನ್ವರ. ಅದೂ ನಿಜವೇ, ಈಗೀಗಂತೂ ಅವರನ್ನು ಇವರು ಬಯ್ಯುವುದು, ಇವರನ್ನು ಅವರು ಬಯ್ಯುವುದು…ಇದೇ ಆಯಿತು ಜನಗಳದ್ದು. ಮೊನ್ನೆ ಒಂದು ಮೆಸೆಜ್ ಹಾಕಿದ್ದರು ಯಾರೋ “ಮುಸ್ಲಿಮರು ಜಾತ್ರೆಯಲ್ಲಿ ಮಜ್ಜಿಗೆ ವ್ಯವಸ್ಥೆ ಮಾಡಿದ್ದಾರೆ, ಅದನ್ನು ಕುಡಿಯಬೇಡಿ. ಮಕ್ಕಳಾಗದ ಹಾಗೆ ಔಷಧ ಹಾಕಿರುತ್ತಾರೆ ಅದರಲ್ಲಿ. ಅವರು ಕೊಟ್ಟದ್ದು ಏನೂ ತಿನ್ನಬೇಡಿ”. ಯಾ ಅಲ್ಲಾ! ಒಂದು ಒಳ್ಳೆಯ ಕೆಲಸವನ್ನೂ ಜನರು ಹೀಗೆ ಮಾತಾಡುತ್ತಾರೆಂದರೆ! ಇನ್ನೊಬ್ಬರು ವಾಟ್ಸಪ್ಪಲ್ಲಿ ಬಣ್ಣ ಬಣ್ಣ ಚಿತ್ರದೊಟ್ಟಿಗೆ ಹಾಕುವುದು…” ಮುಸ್ಲಿಮರ ಅಂಗಡಿಗಳಿಗೆ ಹೋಗಬೇಡಿ. ಅವರಿಗೆ ಯಾಕೆ ವ್ಯಾಪಾರ ಮಾಡಿಕೊಡುತ್ತೀರಿ? ಹಿಂದೂಗಳ ಅಂಗಡಿಯಲ್ಲೇ ಎಲ್ಲವನ್ನೂ ಖರೀದಿಸಿ. ಯಾರ್ಯಾರದ್ದೋ ಹೊಟ್ಟೆ ತುಂಬಿಸಿದ್ದು ಸಾಕು ನಾವು”. ಇಷ್ಟು ದ್ವೇಷ ಯಾಕೆ ಜನರಿಗೆ ಅಂತ ಅರ್ಥ ಆಗುವುದಿಲ್ಲ. ರಹೀಮನೂ ಹೇಳುತ್ತಿರುತ್ತಾನೆ “ಈಗ ವ್ಯಾಪಾರ ಪೂರಾ ಡಲ್” ಅಂತ. ಹೋಗಲಿ, ವ್ಯಾಪಾರದ ಮನೆ ಹಾಳಾಗಿ ಹೋಗಲಿ ಅನ್ನುವ ಅಂದರೆ ನೆರೆಕರೆ ಮನುಷ್ಯರ ಪ್ರೀತಿ, ವಿಶ್ವಾಸವೂ ರಂಪವಾಗಿ ಹೋಯಿತಲ್ಲ..ಜಾಹ್ನವಿ ಸರಿಯಾಗಿ ಮುಖ ನೋಡಿ ಮಾತಾಡಿ ಯಾವ ಕಾಲವಾಯಿತು!     ಎರಡು ತಿಂಗಳ ಹಿಂದೆ ನಡೆದದ್ದು ಈಗ ಎಣಿಸಿದರೂ ಮೈ ಕೊಡಕುತ್ತದೆ ಜುಬೇದಾಳಿಗೆ. ‘ಪೌರತ್ವ ತಿದ್ದುಪಡಿ ಕಾಯ್ದೆ’ ಬಂದರೆ ಭಾರೀ ಕಷ್ಟವಾಗುತ್ತದೆ. ತುಂಬಾ ದಾಖಲೆ ಕೇಳುತ್ತಾರೆ. ನಾವು ಹುಟ್ಟಿದ ಪ್ರಮಾಣ ಪತ್ರದಿಂದ ಹಿಡಿದು ನಮ್ಮ ಅಪ್ಪ ಅಮ್ಮನ ಹುಟ್ಟಿನ ದಾಖಲೆಯೂ ಬೇಕಾಗುತ್ತದೆ, ಆ ಸರ್ಟಿಫಿಕೇಟ್ ಎಲ್ಲ ಎಲ್ಲಿದೆ ನಮ್ಮ ಹತ್ತಿರ? ತೊಂದರೆಯಾಗಲಿಕ್ಕುಂಟು ಮುಂದೆ” ಎಂಬಂತಹ ಭಾಷಣಗಳು ಕಾಯ್ದೆಯ ವಿರುದ್ದ ಪ್ರತಿಭಟನೆಗಳು ಎಲ್ಲ ಆಯಿತು. ಆವತ್ತು ಭಾಬಿ ದೂರದ ದೆಹಲಿಯಿಂದ ಫೋನ್ ಮಾಡಿದ್ದರು. “ಜುಬೇದಾ, ಇಲ್ಲಿ ಬೆಳಗಾದರೆ ಹೇಗೋ ಏನೋ ಅಂಬಂತಹಾ ದಿನಗಳು ಬಂದಿವೆ. ಯೂನಿವರ್ಸಿಟಿಯಲ್ಲಿ ಓದುವ ಪಾಪದ ವಿದ್ಯಾರ್ಥಿಗಳಿಗೂ ಬಡಿದಿದ್ದಾರೆ. ನಿಮ್ಮಲ್ಲೂ ಶುರುವಾಗಬಹುದು, ನೀವಿರುವ ಪ್ರದೇಶ ಭಾರಿ ಸೂಕ್ಷ್ಮ  ಅಲ್ಲವಾ..ಜಾಗ್ರತೆಯಾಗಿರಿ”. ಆದರೆ ಕಡೆಗೆ ಅದದ್ದೇನು? ಇಷ್ಟೆಲ್ಲ ಹೇಳಿದ ಬಾಬಿಯ ಕಾಕನ ಮಗ ಅಶ್ರಫನೇ ಗೋಲಿಬಾರಿನಲ್ಲಿ ಪೋಲೀಸರ ಗುಂಡಿಗೆ ಸತ್ತುಹೋದ. ಜಿಲ್ಲಾ ಕೇಂದ್ರ ಇರುವುದು ನಮ್ಮಲ್ಲಿಂದ ಮೂವತ್ತು ಕಿಲೋಮೀಟರ್ ದೂರದಲ್ಲಿ. ಮೊದಲೇ ಕೋಮುಗಲಭೆಯ ಬಿಸಿಯಲ್ಲೇ ಇರುವ ಜಾಗ. ಈಗಂತೂ ಕೆಂಜಿರುವೆ ಕೊಟ್ಟೆಗೆ ಕಲ್ಲು ಹಾಕಿದ ಹಾಗಾಯ್ತು. ಬಾಬಿ ಫೋನ್ ಮಾಡಿದ ವಾರದೊಳಗೇ ಹೀಗೆಲ್ಲ ಆಯ್ತು. ಇಡೀ ಪೇಟೆಯೇ ಒಂದು ವಾರ ಬಂದಾಗಿ ಹೋಯ್ತು. ಜನರು ಹೆದರಿ ಮನೆ ಹೊರಗೆ ಕಾಲು ಹಾಕಲಿಲ್ಲ. ಅಶ್ರಫ್ ಮೂರು ಜನ ತಂಗಿಯರ ಮದುವೆ ಜವಾಬ್ದಾರಿ ಹೊತ್ತಿದ್ದ ಬೇಟಾ. ಅವನ ಉಮ್ಮ, ಬಾಪ್ಪರಿಗೆ ಪ್ರಾಯ ಆಗಿದೆ, ಆರೋಗ್ಯವೂ ಒಳ್ಳೆದಿಲ್ಲ…ಯಾವ ಕೆಲಸವೂ ಅವರಿಂದ ಸಾಗುವುದಿಲ್ಲ. ವಿಷಯ ಕೇಳಿದ ದಿನ ಬಾಬಿ ತುಂಬಾ ಅತ್ತರು. “ಎಳೆಮಕ್ಕಳು ಹೀಗೆ ಸತ್ತರೆ ನೋಡಿಕೊಂಡು ಇರುವುದು ಹೇಗೆ ನಾವು, ಇದು ದೊಡ್ಡ ಅನ್ಯಾಯ. ಪಾಪದವರನ್ನು ಕೇಳುವವರು ಯಾರೂ ಇಲ್ಲವಾ ಹಾಗಾದರೆ” ಅಂತ. ಅಶ್ರಫನ ಅಪ್ಪ ಅಮ್ಮನಂತೂ ಹೆದರಿಹೋಗಿದ್ದರಂತೆ. ” ಇನ್ನು ನಾವಿಲ್ಲಿ ಇರುವುದಿಲ್ಲ, ನೀನೇ ಕರೆದುಕೊಂಡು ಹೋಗು. ಅಲ್ಲೇ ದೆಹಲಿಯಲ್ಲೇ ರಸ್ತೆ ಬದಿ ಯಾವುದಾದರೂ ವ್ಯಾಪಾರ ಮಾಡಿಕೊಂಡು ಗಂಜಿಯಾದರೂ ತಿನ್ನುತ್ತೇವೆ. ನಮ್ಮ ಬೇಟನನ್ನು ಕೊಂದ ಈ ಊರು ನಮಗೆ ಬೇಡ” ಎಂದು ಹಟ ಹಿಡಿದು ಕೂತರಂತೆ. ಕಡೆಗೆ ಬಾಬ್ಬಿಯೇ ಅವರ ಸಂಸಾರವನ್ನು ದಿಲ್ಲಿಗೆ ಕರೆದೊಯ್ದರು….ಛೇ ಮೂರ್ನಾಲ್ಕು ತಿಂಗಳಲ್ಲಿ ಪರಿಸ್ಥಿತಿಯೇ ಬದಲಾಗಿಹೋಯಿತು. ಆ ದಿನ ಅನ್ವರ, ಅಕ್ಷಯ ಇಬ್ಬರೂ ಹೊರಟಿದ್ದರು ಅಶ್ರಫನ ಕೊನೆ ಮುಖ ನೋಡಲಿಕ್ಕೆ. ಆದರೆ ಅಕ್ಷಯನ ಅಮ್ಮ ಜಾಹ್ನವಿ ಅವನು ಹೋಗುವುದು ಬೇಡ ಎಂದು ತಡೆದರಂತೆ. “ಆಂಟೀ ಮೊದಲಾಗಿದ್ದರೆ ನೀವಾದರೂ ಒಂದು ಮಾತು ಹೇಳಿ ಅನ್ನಬಹುದಿತ್ತು. ಈಗ ನಿಮ್ಮಲ್ಲಿ ಮಾತೇ ಆಡುವುದಿಲ್ಲವಲ್ಲ ಅಮ್ಮ, ಏನಾಗಿದೆಯೋ ಗೊತ್ತಾಗುತ್ತಿಲ್ಲ ಅವರಿಗೆ. ಹೇಳಿಕೊಟ್ಟವರ ಮಾತು ಕೇಳಿ ಹೀಗಾದದ್ದು ನನ್ನಮ್ಮ” ಅಕ್ಷಯ ಸಿಟ್ಟಿನಲ್ಲಿ ಹೇಳಿದ್ದ. ಹೌದು, ಜಾಹ್ನವಿ ಯಾಕೆ ಹೀಗಾದರು? ಮೊದಲೆಲ್ಲ ಎರಡು ಮನೆಗಳ ನಡುವೆ ಕಂಪೌಂಡೇ ಇಲ್ಲ ಎಂಬ ಭಾವನೆ ಬರುತ್ತಿತ್ತು. ಈಗ ತಲೆಯೆತ್ತಿ ಅವರ ಮನೆ ಬಾಗಿಲು ದಿಟ್ಟಿಸಲೂ ಒಂತರಾ ಆಗುತ್ತದೆ. ಮನಸ್ಸಲ್ಲಿ ಇಷ್ಟೆಲ್ಲ ಯೋಚನೆಯಾದರೂ “ಹೋಗಲಿ ಮಗಾ, ಪಾಪ ಜಾಹ್ನವಿಯಕ್ಕ ಕೆಟ್ಟವರೇನಲ್ಲ, ಯಾಕೊ ಈಗೀಗ ನಮ್ಮನ್ನು ಕಂಡರೆ ಬೇಸರ ಅವರಿಗೆ. ನಾವು ಯಾರಿಗೂ ಬೇಡದವರಲ್ವಾ, ಅದಕ್ಕೇ ಹಾಗೆ” ಅಂದಿದ್ದಳು. “ನೀವು ತಲೆಬಿಸಿ ಮಾಡಬೇಡಿ ಆಂಟಿ. ಅಮ್ಮನನ್ನು ನಾನು ಸರಿಮಾಡುತ್ತೇನೆ. ನೀವು ಆರಾಮಿರಿ” ಎಷ್ಟು ಒಳ್ಳೆಯ ಹುಡುಗ ಅಕ್ಷಯ! ಅನ್ವರನ ಹಾಗೇ ಅವನನ್ನೂ ಮಗನಂತೆಯೇ ನೋಡಿಕೊಂಡದ್ದಲ್ವಾ ಸಣ್ಣದಿರುವಾಗ..ಆಗ ಕಾಲವೇ ಬೇರೆಯಿತ್ತು. ಜಾಹ್ನವಿಯಾಗಲಿ, ಅವರ ಗಂಡ ಸುರೇಶಣ್ಣನಾಗಲೀ ‘ಇವರು ಯಾರೋ ಮೂರನೆಯವರು’ ಅಂತ ತಮ್ಮನ್ನು ಕಂಡದ್ದೇ ಇಲ್ಲ. ನಮ್ಮ ಜುಬೇದಾ, ನಮ್ಮ ರಹೀಮ, ನಮ್ಮ ಅನ್ವರ್ ಎಂಬ ಮಾತೇ ಬರುತ್ತಿದ್ದುದು ಅವರ ಬಾಯಿಂದ. ಸುರೇಶಣ್ಣ ಹೆಚ್ಚುಕಮ್ಮಿ ಮೊದಲಿನ ಹಾಗೇ ಇದ್ದಾರೆ.  ಆದರೆ ಹೆಂಡತಿಯ ಮಾತು ಮೀರಲು ಆಗುವುದಿಲ್ಲ ಕಾಣುತ್ತದೆ ಅವರಿಗೆ. ಜಾಹ್ನವಿ ದೀದಿಗೆ ಬ್ಯಾಂಕಿನಲ್ಲಿ ಕೆಲಸವಾದರೆ, ಸುರೇಶಣ್ಣಂಗೆ ಎಲ್ ಐ ಸಿಯಲ್ಲಿ. ಅಕ್ಷಯನಿಗೆ ಐದು ವರ್ಷವಾಗುವವರೆಗೆ ಸುರೇಶಣ್ಣನ ಅಮ್ಮ ಇದ್ದರು ಮಗನ ಜೊತೆಗೆ.. ಕಡೆಗೆ ” ಮಗು ಶಾಲೆಗೆ ಹೋಗಲು ಸುರುಮಾಡಿತಲ್ಲ, ನಾನು ಊರಿಗೆ ಹೋಗುತ್ತೇನೆ” ಎಂದು ಅವರು ಹೊರಟುಹೋದ ನಂತರ ಅಷ್ಟು ಸಣ್ಣ ಮಗುವನ್ನು ನೋಡಿಕೊಳ್ಳುವವರಿಲ್ಲದೆ ಜಾಹ್ನವಿ ಭಂಗ ಬರುತ್ತಿರುವಾಗ “ನೀವೇನೂ ಯೋಚನೆ ಮಾಡಬೇಡಿ ದೀದಿ, ನಾನು ನೋಡಿಕೊಳ್ಳುತ್ತೇನೆ” ಅಂದದ್ದು ತಾನು. ಹಾಗೆ ಅಕ್ಷಯ ಮತ್ತು ಅನ್ವರ ಒಟ್ಟಿಗೆ ಆಟವಾಡುತ್ತಾ ದೊಡ್ಡದಾದದ್ದಲ್ವಾ…ಪ್ರಾಯವೂ ಹೆಚ್ಚು ಕಮ್ಮಿ ಒಂದೇ. ಅಕ್ಷಯ ಒಂದು ವರ್ಷಕ್ಕೆ ದೊಡ್ಡವನು ಅಷ್ಟೇ. ಮಕ್ಕಳಿಗೆ ಹಗಲುಹೊತ್ತಿನ ಊಟ ತಿಂಡಿ ಎಲ್ಲ ತಮ್ಮ ಮನೆಯಲ್ಲೇ ಆಗುತ್ತಿತ್ತು. ರಾತ್ರಿ ಮಾತ್ರ ಬಿಸಿಬಿಸಿಯಾಗಿ ಮಾಡಿದ ಅಡುಗೆಯನ್ನು ಬುತ್ತಿಪಾತ್ರದಲ್ಲಿ ಹಾಕಿ ತಮಗೂ ತಂದುಕೊಟ್ಟರೇ ಸಮಾಧಾನ ಆಗುತ್ತಿದ್ದುದು ಜಾಹ್ನವಿಗೆ. “ಆ ಜಾತಿ ಈ ಜಾತಿ ಮಣ್ಣು ಮಸಿ ಎಲ್ಲ ಸುಮ್ಮನೇ ಜುಬೇದಕ್ಕಾ, ಮುಖ್ಯ ನಮ್ಮ ನೀತಿ ಸರಿಯಿರಬೇಕು’ ಎನ್ನುತ್ತಿದ್ದರಲ್ಲ ಜಾಹ್ನವಿ. ಸುರೇಶಣ್ಣನಂತೂ “ಜನಿವಾರ ಒಂದು ಎಲ್ಲೋ ಕಪಾಟಿನ ಮೂಲೆಯಲ್ಲಿರಬೇಕು. ಅಮ್ಮ ಬಂದಾಗ ಹಾಕಿಕೊಳ್ಳುವುದು: ಪಾಪ ಅವರಿಗೆ ಬೇಸರ ಆಗಬಾರದಲ್ವಾ. ಅವರು ಅತ್ತಮುಖ ಹೋದಕೂಡಲೇ ನನ್ನ ಜನಿವಾರದ ಸವಾರಿ ಕಪಾಟಿಗೆ ಓಡುತ್ತದೆ” ಹೇಳಿ ನಗಾಡಿದ್ದೆಷ್ಟು ಸಲ! ಹೀಗೇ ನಡೆಯುತ್ತಿತ್ತು ಎಲ್ಲ…ಆದರೆ ಇದೆಲ್ಲ ಹೇಗಾಯ್ತೋ ಗೊತ್ತಾಗುತ್ತಿಲ್ಲ. ಮೊದಮೊದಲು ಜಾಹ್ನವಿ ವ್ಯಂಗ್ಯ ಮಾಡುವುದು, ಸಿಟ್ಟು ತೋರಿಸುವುದು ಮಾಡತೊಡಗಿದರು. ಆಮೇಲಾಮೇಲೆ ಅವರ ಮನೆಗೆ ನಾವೆಲ್ಲ ಹೋಗುವುದೇ ಇಷ್ಟವಿಲ್ಲವೆಂಬಂತೆ ವರ್ತನೆ ಶುರುವಾಯಿತು. ಅವರಂತೂ ಈಚೆ ಬರುವುದೇ ನಿಂತುಹೋಯಿತು. ಈಗ ಸುಮಾರು ಒಂದು ವರ್ಷವೇ ಕಳೆಯಿತು: ತಾನಾಗಲೀ, ರಹೀಮನಾಗಲೀ ಆ ಮನೆಗೆ ಕಾಲಿಡದೆ. ಮಕ್ಕಳಿಬ್ಬರು ಮಾತ್ರ ಒಟ್ಟಿಗೇ ಕಾಲೇಜಿಗೆ ಹೋಗಿ ಬರುತ್ತವೆ. ಅವುಗಳನ್ನು ನೋಡಿದರೆ ಮುದ್ದು ಉಕ್ಕಿಬರುತ್ತದೆ. ಅಣ್ಣತಮ್ಮಂದಿರಾದರೂ ಇಷ್ಟು ಹಚ್ಚಿಕೊಳ್ಳಲಿಕ್ಕಿಲ್ಲ. ಅವುಗಳಾದರೂ ತಣ್ಣಗಿರಲಿ, ಈ ದ್ವೇಷದ ಉರಿ ಅವುಗಳಿಗೆ ಬೇಡ ಎಂದರೆ ಈಗೀಗ ಅದಕ್ಕೂ ಬಂದೋಬಸ್ತು ಸುರುವಾಗಿ ಅದೇ ವಿಕೋಪಕ್ಕೆ ಹೋಗಿ ಅಕ್ಷಯ, ಅನ್ವರ ಇಬ್ಬರೂ ಮನೆಬಿಟ್ಟು ಹೋಗಿದ್ದಾರೆ. ಕಂಡವರೆಲ್ಲ ಕೇಳುತ್ತಾರೆ “ನಿಮ್ಮ ಮಗ ಏನು ಬೇರೆ ಹೋಗಿ ಕೂತದ್ದು? ನಿಮ್ಮಲ್ಲಿ ಕೋಪ ಮಾಡಿ ಹೋದದ್ದಾ!” ಏನಂತ ಉತ್ತರ ಕೊಡುವುದೆಂದು ಅರ್ಥವಾಗುವುದಿಲ್ಲ ಜುಬೇದಾಳಿಗೆ. *** ನಡುರಾತ್ರಿ ಮೀರುತ್ತಿದೆ: ಗಾಢಕತ್ತಲು. ಅಲ್ಲೆಲ್ಲೋ ಮರಗಳೆಡೆಯಲ್ಲಿ ಜೀರುಂಡೆ ನಾದ. ರೂಮಿನ ಬಾಗಿಲು ತೆಗೆದು ಹೊರಗಿನ ದಂಡೆಯಲ್ಲಿ ಬಂದು ಕುಳಿತಿದ್ದಾನೆ ಅಕ್ಷಯ. ಓದಬೇಕೆಂದು ಪುಸ್ತಕ ಹಿಡಿದರೆ ಓದಲಾಗದೆ, ನಿದ್ದೆಮಾಡುವ ಅಂದುಕೊಂಡು ಅದೂ ಸಾಧ್ಯವಾಗದೆ ಎದ್ದುಬಂದಿದ್ದಾನೆ. ಕಾಲೇಜಿನಲ್ಲೂ ಆವತ್ತು ಯಾವುದರ ಮೇಲೂ ಗಮನ ಕೇಂದ್ರೀಕರಿಸಲಾಗಲಿಲ್ಲ. ಅನ್ವರ್ ಆಗಲೇ ಮಲಗಿಯಾಗಿದೆ. ಜುಬೇದಾ ಆಂಟಿಗೆ ಹುಷಾರಿಲ್ಲವೆಂದು ಮನೆಗೆ ಹೋಗಿದ್ದವನು ನಿನ್ನೆ ತಾನೇ ಬಂದಿದ್ದಾನೆ. ಪಾಪ, ನಿನ್ನೆ ರಾತ್ರಿ “ಉಮ್ಮ ಉಮ್ಮ”

ಬದಲಾವಣೆ Read Post »

ಕಥಾಗುಚ್ಛ

ಕಥಾಯಾನ

‘ಬಾಳ ಬಣ್ಣ’  ವಸುಂಧರಾ ಕದಲೂರು       ಕುಸುಮಳಿಗೆ ವಿವಾಹದ ಏಳು ವರ್ಷದ ಅನಂತರ ಹುಟ್ಟಿದವನೇ ‘ಅಮರಕಿಶೋರ’. ಕುಸುಮಾಳದ್ದು ಮೂವತ್ತರ ಹರಯದಲ್ಲಾದ ವಿವಾಹ.    ತಡವಾದ ವಿವಾಹ ಜೊತೆಗೆ ತಡವಾಗಿಯೇ ಮಗು ಹುಟ್ಟಿದ್ದು. ಈ ಕಾರಣಕ್ಕೋ ಏನೋ ಮಗುವನ್ನು ಐದು ವರ್ಷ ಆಗೋವರೆಗೂ ನೆಲಕ್ಕೆ ಬಿಟ್ಟರೆಎಲ್ಲಿ ನವೆದು ಹೋಗುವುದೋ ಎಂದುಕೊಂಡು ಕೆಳಕ್ಕೆ ಬಿಡದೇ ಕಂಕುಳಲ್ಲಿಟ್ಟುಕೊಂಡು ಸಾಕಿದಳು. ಕಣ್ಣನ್ನು ರೆಪ್ಪೆಗಳು ಹೇಗೆ ಮುಚ್ಚಟೆಯಿಂದ ರಕ್ಷಿಸುತ್ತವೆಯೋ ಹಾಗೆ ಮಗನನ್ನು ನೋಡಿಕೊಳ್ಳುತ್ತಿದ್ದಳು.         ಮಗುವಿಗೆ ಹಸಿವಾಗಿ ಅದು ‘ಆ…’ ಎಂದು ಬಾಯ್ಬಿಡುವ ಮೊದಲೇ ತುಪ್ಪದಲ್ಲೇ ಅನ್ನ ಕಲಸಿ ಬಾಯಿಗಿಟ್ಟು ತಿನಿಸುತ್ತಿದ್ದಳು. ಯಾವುದಾದರೂ ಆಟದ ಸಾಮಾನು ಬೇಕೆನ್ನುತ್ತಾ ಕೈಚಾಚುವ ಮೊದಲೇ ಕೊಂಡು ಅದನ್ನವನ ಕೈಗಿತ್ತು ಸಂಭ್ರಮಿಸುತ್ತಿದ್ದಳು. ಆಕೆಯ ಪ್ರೀತಿಯಲ್ಲಿ  ಶ್ರೀಮಂತಿಕೆಯ ಅದ್ದೂರಿತನ ಇಲ್ಲದಿದ್ದರೂ, ಭಾವ ತೀವ್ರತೆಯ ಆಡಂಬರಕ್ಕೇನೂ ಕೊರತೆಯಿರಲಿಲ್ಲ. ಅವಳ ವಾರಿಗೆಯಲ್ಲೇ ಹೆತ್ತವರು ತಮ್ಮ ಮಕ್ಕಳನ್ನು ಎರಡು- ಎರಡೂವರೆ ವರ್ಷಕ್ಕೇ ಮಾಂಟೆಸ್ಸರಿಗೆ ಸೇರಿಸಿದರೆ, ಈಕೆ ಮಾತ್ರ ‘ಮನೆಯೇ ಮೊದಲ ಪಾಠಶಾಲೆ’ ಎಂದು ನಂಬಿ, ‘ಅಆಇಈ’, ‘ಎಬಿಸಿಡಿ’, ‘1234’ ಗಳ ಜೊತೆಗೆ ನರ್ಸರಿ ರೈಮ್ಸ್, ದೇವರ ನಾಮ, ಶ್ಲೋಕಗಳನ್ನು ಅಮರನಿಗೆ ಕಲಿಸುತ್ತಾ, ಅವನ ತೊದಲು ಬಾಯಿಂದ ಮತ್ತೆಮತ್ತೆ ಅದನ್ನು ಹೇಳಿಸಿ, ಮುದ್ದು ಮುದ್ದು ಉಚ್ಚಾರಣೆಗಳನು ಕೇಳಿ, ಮಗನೊಡನೆ ತಾನೂ ಮತ್ತೊಂದು ಮಗುವಾಗಿ ಆಡುತ್ತಾ ಖುಷಿಪಡುತ್ತಾ ದಿನದೂಡುತ್ತಿದ್ದಳು.    ಅಮ್ಮ ಹೇಳಿಕೊಡುವ ಪಾಠಗಳನ್ನು ಕಲಿಯುವುದರಲ್ಲಿ      ಚುರುಕಾಗಿದ್ದ ಅಮರನು, ಬಣ್ಣಗಳನ್ನು ಗುರುತಿಸಲು ಮಾತ್ರ ಪರದಾಡುತ್ತಿದ್ದ. ಅವನ ಈ ಸಮಸ್ಯೆ ಅರಿವಿಗೆ ಬಂದದ್ದೂ ಸಹ, ಕುಸುಮಾಳು ಅವನಿಗೆ ಕಲರ್ಸ್ಗಳ ಕುರಿತು ಪಾಠ ಮಾಡುವಾಗ. ಕಾಮನ ಬಿಲ್ಲಿನ ಬಣ್ಣಗಳ ಚಾರ್ಟನ್ನು ಗುರುತಿಸುವಾಗ ಅಮರ ಪದೇಪದೇ ವಿಫಲನಾಗುತ್ತಿದ್ದ. ಹಸಿರು, ಕೆಂಪು, ಹಸಿರು, ಹಳದಿ ಹೀಗೆ ಕೆಲವು ಛಾಯೆಯ ಬಣ್ಣಗಳನ್ನು ಗುರುತಿಸಲು ಕಷ್ಟಪಡುತ್ತಿದ್ದ. ಪದೇ ಪದೇ ತಿದ್ದಿ ಹೇಳಿಕೊಟ್ಟರೂ ಈ ಕೆಲವು ಬಣ್ಣಗಳನ್ನು ಪ್ರತ್ಯೇಕವಾಗಿ ಗುರುತಿಸಲು ಅಸಮರ್ಥನಾಗುತ್ತಿದ್ದ.    ಅಮರನು ಪದೇ ಪದೇ ತನ್ನನ್ನು ರೇಗಿಸಲು ಬೇಕೆಂದೇ ಹೀಗೆ ತುಂಟಾಟ ಮಾಡುತ್ತಿರಬಹುದಾ..? ಎಂದು ಆರಂಭದಲ್ಲಿ ನಿರ್ಲಕ್ಷಿಸಿದ್ದ ಕುಸುಮಾ, ಅದು ಆಟವಲ್ಲ, ಆತನ ಸಮಸ್ಯೆ ಎಂದು ತಿಳಿದು ಚಿಂತೆಗೆ ಒಳಗಾದಳು.  ಸಮಸ್ಯೆ ಸ್ವರೂಪ ತಿಳಿಯುತ್ತಿದ್ದಂತೇ ನೇತ್ರತಜ್ಞರ ಬಳಿ ಮಗುವನ್ನು ಕರೆದುಕೊಂಡು ಹೋದಳು.    ಮಗುವಿನ ಕಣ್ಣುಗಳನ್ನು ಅತ್ಯಾಧುನಿಕ ಉಪಕರಣಗಳ ಮೂಲಕ ಪರೀಕ್ಷಿಸಿದ ನೇತ್ರತಜ್ಞರು ‘ನೋಡಿ ಕುಸುಮ, ನಿಮ್ಮ ಮಗು ಅಮರನಿಗೆ ‘ಬಣ್ಣಗುರುಡು’ತನ ಅಂದರೆ colour blindness ಇದೆ’ ಎಂದು ಸ್ಪಷ್ಟಪಡಿಸಿದರು. ವಿಷಯ ತಿಳಿದು ಆಘಾತಕ್ಕೊಳಗಾದ ಕುಸುಮಾ ತನ್ನ ಮುದ್ದು ಮಗುವಿನ ಬದುಕು ಹೀಗೆ ಬಣ್ಣಗೆಟ್ಟಿತೇ ಎಂದು ಶೋಕಿಸಿದಳು.       ಮನೋವ್ಯಥೆಯಿಂದ ದುಃಖಿಸುತ್ತಿದ್ದ ಕುಸುಮಾಳನ್ನು ಸಂತೈಸಿದ ವೈದ್ಯರು, ಆಕೆಗೆ ‘ಬಣ್ಣಗುರುಡುತನ’ದ ಬಗ್ಗೆ ಕೂಲಂಕಷವಾಗಿ ವಿವರಿಸಿ, ‘’ಕೆಲವರಿಗೆ ಇಂತಹ ಕೆಲವು ಅಪರೂಪದ ಅನುವಂಶೀಯ ಕಾಯಿಲೆಗಳು ಬರುತ್ತವೆ. ಹಾಗೆ ಬರುವುದು ಯಾರದ್ದೋ ಅಪರಾಧದಿಂದಲ್ಲ. ನೀವು ಯಾವ ರೀತಿಯಲ್ಲೂ ಅಧೀರರಾಗಬೇಡಿ’’ ಎಂದು ಧೈರ್ಯ ತುಂಬಿದರು. ಜೊತೆಗೆ ಒಂದಷ್ಟು ಸಲಹೆ ನೀಡಿ ಮನೆಗೆ ಕಳುಹಿಸಿಕೊಟ್ಟರು.     ಆಸ್ಪತ್ರೆಯಿಂದ ಮನೆಗೆ ಮರಳಿದ ಕುಸುಮಾಳಿಗೆ, ಸಮಾಧಾನವೇ ಆಗಲಿಲ್ಲ. ಮಕ್ಕಳಿಲ್ಲದೇ ಹಲವು ವರ್ಷ ಬಣ್ಣಗೆಟ್ಟಿದ್ದ ತನ್ನ ಬದುಕಿಗೆ ಉಲ್ಲಾಸದ ಹೊಸಬೆಳಕನ್ನು ತಂದುಕೊಟ್ಟ ತನ್ನ ಮುದ್ದುಕಂದನ ಬದುಕು ಹೀಗೆ ವರ್ಣಹೀನವಾಯಿತಲ್ಲಾ… ಎಂದು ರೋಧಿಸಿದಳು.      ವೈದ್ಯರ ಸಲಹೆಯಂತೆ, ನಾಕಾರು ದಿನಗಳಾದ ಮೇಲೆ ಅಮರನಿಗೆಂದು ವಿಶೇಷವಾಗಿ ಆರ್ಡರ್ಮಾಡಿಸಿದ್ದ ಹೊಸ ಕನ್ನಡಕ ತರಲು ಹೋದಾಗ, “ಡಾಕ್ಟರ್ ‘ಡೇ ವಿಸಿಟಿಂಗ್’ ಮೇಲೆ ಆಸ್ಪತ್ರೆ ರೌಂಡ್ಸ್ ಗೆ ಹೋಗಿದ್ದಾರೆ. ಪ್ಲೀಸ್ ವೇಯ್ಟ್ ಮಾಡಿ” ಎಂದು ರಿಸೆಪ್ಷನಿಸ್ಟ್ ಹುಡುಗಿ ತಿಳಿಸಿದಳು. ಡಾಕ್ಟರ್ ಬರುವುದು ತಡವೆಂದು ತಿಳಿದ ಮೇಲೆ ಕುಸುಮಾ ವೇಯಿಟಿಂಗ್ ರೂಮಿನಲ್ಲಿ ಹೋಗಿ ಕುಳಿತಳು.              ಪದೇ ಪದೇ ಮಗನ ಪರಿಸ್ಥಿತಿಯ ಬಗ್ಗೆಯೇ ಯೋಚಿಸುತ್ತಾ ಒತ್ತಿ ಬರುತ್ತಿದ್ದ ದುಃಖಕ್ಕೆ ಬಿಕ್ಕಳಿಸುತ್ತಾ ಬಾಯಿಗೆ ಕರವಸ್ತ್ರ ಅಡ್ಡ ಹಿಡಿದುಕೊಂಡು ತಲೆತಗ್ಗಿಸಿ ಕುಳಿತಿದ್ದಳು. ವೇಯ್ಟಿಂಗ್ ರೂಮಿನಲ್ಲಿ ಇವಳಂತೆೇ ಡಾಕ್ಟರರನ್ನು ಕಾಣಲು ಬಂದಿದ್ದ ಹಲವರಿದ್ದರು.   ಸಣ್ಣವಯಸ್ಸಿನವರಾಗಿದ್ದ ಒಂದು ದಂಪತಿ ಜೋಡಿಯು,  ಕುಸುಮಾ ದುಃಖಿಸುವುದನ್ನು ನೋಡಿ ಹತ್ತಿರಬಂದು “ಅಳುತ್ತಿರುವುದು ಏಕೆ ?”ಎಂದು ಸಾಧಾನವಾಗಿ ಕಾರಣ ವಿಚಾರಿಸಿದರು. ಅವರ ಸಂತೈಸುವಿಕೆಯ ದನಿಯ ಮಾಂತ್ರಿಕ ಶಕ್ತಿಗೆ ಸಮಾಧಾನಗೊಂಡ ಕುಸುಮಾ ಬಿಕ್ಕಳಿಸುತ್ತಲೇ ತನ್ನ ದುಃಖದ ಕಾರಣ ತಿಳಿಸಿದಳು. ಆ ದಂಪತಿಗಳು ಆಕೆಯನ್ನು ಸಮಾಧಾನಿಸುತ್ತಾ, ‘’ನೋಡಿ, ಹೀಗೆ ಹೇಳುತ್ತಿದ್ದೇವೆಂದು ತಪ್ಪು ತಿಳಿಯಬೇಡಿ. ನಾವು ನಿಮಗಿಂತ ಸಣ್ಣವರೇ ಇರಬಹುದು. ಆದರೆ, ಬರೀ ಶೋಕಿಸುವುದರಿಂದ ಯಾವ ಪ್ರಯೋಜನವಿಲ್ಲ ಎಂದು ಮಾತ್ರ ಹೇಳಬಲ್ಲೆವು. ಸುಮ್ಮನೆ ಯೋಚಿಸುತ್ತಾ ಬೇಸರಪಡುತ್ತಾ ಕುಳಿತುಕೊಳ್ಳಬೇಡಿ. ವಿಜ್ಞಾನ ಮುಂದುವರೆದಿದೆ. ಹಲವು ಸಾಧನ- ಸಾಧ್ಯತೆಗಳಿವೆ. ನೀವು ಹೊಸ ಹುರುಪಿನಿಂದ ನಿಮ್ಮ ಮಗುವಿನ ಕನಸುಗಳಿಗೆ ಬಣ್ಣ ತುಂಬಿರಿ. ಮಗುವಿನ ಭವಿಷ್ಯವನ್ನು ವರ್ಣಹೀನ ಮಾಡಬೇಡಿ. ನಿಮ್ಮದೇನು ಅಂತಹ ದೊಡ್ಡ ಸಮಸ್ಯೆಯೇ ಅಲ್ಲ” ಎಂದು ನಿಧಾನವಾಗಿ ಸಂತೈಸಿ ತಮ್ಮ ಕುರ್ಚಿ ಬಳಿ ಮರಳಿ ಹೋದರು.    ‘’ನನ್ನದೇನು ದೊಡ್ಡ ಸಮಸ್ಯೆಯಲ್ಲವಾ..?! ನನ್ನ ದುಃಖ, ಹೊಟ್ಟೆ ಸಂಕಟ ಇವರಿಗೆ ಹೇಗೆ ತಿಳಿಯಬೇಕು? ಇವರ ಬಳಿ ನಾನು ಏಕಾದರು ನನ್ನ ಮಗನ ಸಮಸ್ಯೆ ಹೇಳಿಕೊಂಡೆನೋ..?!’’ ಎಂದುಕೊಂಡು ಕುಸುಮ ತನ್ನ ನೋವಿನ ಜೊತೆಗೆ ಈಗ ಕೋಪ ಅಸಮಾಧಾನಗಳನ್ನೂ ಹೊಂದಿದವಳಾಗಿ ಕುದಿಯತೊಡಗಿದಳು.    ಅವರು ಹೋಗಿ ಕುಳಿತ ಸ್ವಲ್ಪ ಹೊತ್ತಿನಲ್ಲೇ ಅವರ ಪಕ್ಕದ ಕುರ್ಚಿಯ ಬಳಿಯಲ್ಲಿ ಇರಿಸಲಾಗಿದ್ದ ಪ್ರಾಮ್ನಲ್ಲಿ ನಿದ್ರಿಸುತ್ತಿದ್ದ ಮಗುವೊಂದು ಎದ್ದು ಕಿಟಾರನೆ ಕಿರುಚಿ ರೋಧಿಸತೊಡಗಿತು. ಕುಸುಮಾಳ ಗಮನ ಆ ಮಗುವಿನತ್ತ ಹರಿಯಿತು. ಕ್ಷಣದ ಹಿಂದೆ ಯಾರನ್ನು ‘ತನ್ನ ಸಂಕಟ ಅರಿಯಲಾಗದವರು’ ಎಂದು ಮನಸ್ಸಿನಲ್ಲೇ ಜರಿದುಕೊಂಡಳೋ ಅದು ಅವರ ಮಗುವಾಗಿತ್ತು .       ದಂಪತಿಗಳು ಆ ಮಗುವನ್ನು ನಿಧಾನವಾಗಿ ಪ್ರಾಮ್ನಿಂದ ಮೇಲೆತ್ತಿಕೊಂಡು, ಬಹಳ ನಾಜೂಕಾಗಿ ಅದರ ಬಟ್ಟೆ ಸರಿಪಡಿಸುತ್ತಾ ಮೆಲ್ಲನೆ ದನಿಯಲ್ಲಿ ಸಂತೈಸಲು ತೊಡಗಿದರು. ಮಗುವಿನ ಮುಖ ತನ್ನತ್ತ ತಿರುಗುತ್ತಲೇ ಅದನ್ನು ಕಂಡ ಕುಸುಮ ಗರಬಡಿದಂತೆ ಸ್ಥಬ್ಧಳಾದಳು!        ‘ಅಮರನಿಗೆ ಕೆಲವೊಂದು ಬಣ್ಣ ಗುರುತಿಸಲು ತಿಳಿಯದಿದ್ದರೇನಂತೆ, ಕಡೇಪಕ್ಷ ಈ ಜಗತ್ತನ್ನಾದರೂ ಕಾಣುತ್ತಾನಲ್ಲಾ. ಈ ಅಮ್ಮನ ಮುಖವನ್ನಾದರೂ ನೋಡಿ ನಲಿಯುತ್ತಾನವನು. ಅವನಿಗೆ ಬಣ್ಣಗಳ ಬಗ್ಗೆ ತಿಳಿಯದಿದ್ದರೇನಂತೆ, ನನಗೆ ಅವನೇ ಕಾಮನಬಿಲ್ಲು. ನನ್ನ ಬಾಳಿಗೆ ಅವನೇ ಬಣ್ಣದೋಕುಳಿ, ಬಾಣಬಣ್ಣ’ ಎಂದು ತನ್ನ ಮನವನ್ನು ಸಂತೈಸಿಕೊಂಡಳು ಕುಸುಮ.    ಇನ್ನೂ ಅಳುತ್ತಲೇ ಇದ್ದ ಮಗುವನ್ನು ಸಂತೈಸಲು ಮನಸ್ಸಾಗಿ, ಕುಸುಮ ಅಮರನಿಗೆಂದು ಕೊಂಡಿದ್ದ ದೊಡ್ಡ ಕ್ಯಾಡ್ಬರೀಸ್ ಚಾಕ್ಲೇಟ್ ಅನ್ನು ಪರ್ಸಿನಿಂದ ತೆಗೆದು, ಅಳುತ್ತಿದ್ದ ಮಗುವಿನ ಬಳಿಗೆ ನಡೆದಳು. ಸ್ನೇಹದ ನಗೆ ಸೂಸುತ್ತಿದ್ದ ಆ ಮಗುವಿನ ಅಪ್ಪಅಮ್ಮನ ಕಣ್ಣುಗಳು ಕುಸುಮಾಳತ್ತ ತಿರುಗಿದಾಗ ಅಪಾರ ವಿಶ್ವಾಸದಲ್ಲಿ ಹೊಳೆಯುತ್ತಿದ್ದವು. ಆದರೆ, ಕಣ್ಣುಗಳಿರಬೇಕಾದ ಜಾಗದಲ್ಲಿ ಕೇವಲ ಎರಡು ಕುಳಿಗಳನ್ನು ಹೊಂದಿದ್ದ ಮಗುವನ್ನು ಅವರು ಎದೆಗವಚಿಕೊಂಡ ರೀತಿಯನ್ನು ಕಂಡಾಗ ಕುಸುಮಳಿಗೆ ‘ಎಲ್ಲಾ ತಾಯ್ತಂದೆಯರಿಗೂ ಅವರ ಮಗುವೇ ಅವರವರ ಬಾಳ ಬಣ್ಣ-  ಬಾಳ ಬೆಳಕು’ ಎಂಬ ಸತ್ಯ ಅರ್ಥವಾಗಿತ್ತು. ****************************

ಕಥಾಯಾನ Read Post »

ಕಥಾಗುಚ್ಛ

ಕಥಾಯಾನ

ಕನ್ನಡದ ಇಲಿ ವಸುಂಧರಾ ಕದಲೂರು ಅಮ್ಮನ ಕೈ ಹಿಡಿದು ಹಾಲಿನ ಬೂತಿನ ಬಳಿ ನಿಂತಿದ್ದ ಕಿಶೋರನಿಗೆ ಪಕ್ಕದ ಮೋರಿಯಿಂದ ಏನೋ ಚಲಿಸುತ್ತಿರುವುದು ಕಂಡಿತು.          ಅಮ್ಮನ ಕೈಯನ್ನು ಗಟ್ಟಿಯಾಗಿ ಹಿಡಿದವನೇ ಪುನಃ ಆ ಕಡೆಗೇ ನೋಡತೊಡಗಿದ. ಪುಳುಪುಳನೆ ಪುಳಕ್ಕೆಂದು ಬಿಲದಿಂದ ಹೊರಬಂದ ಇಲಿಯೊಂದು ಕಸದ ಡಬ್ಬದ  ಹೊರಗೆ ಚೆಲ್ಲಿದ್ದ ಹಾಲಿನ ಕವರ್ ಅನ್ನು ಸ್ವಲ್ಪ ಎಳೆಯಿತು.       ಬರೀ ಟಾಮ್ ಅಂಡ್ ಜರ್ರಿ ಕಾರ್ಟೂನಿನಲ್ಲಿ ಇಲಿ ನೋಡಿ ಗೊತ್ತಿದ್ದ ಕಿಶೋರ ನಿಜವಾದ ಇಲಿ ನೋಡಿ ಪುಳಕಿತನಾಗಿ ಬಿಟ್ಟ. ‘ಮಮ್ಮೀ ಸೀ… ದೇರ್ ಇಸ್ ಅ ‍ರ‍್ಯಾಟ್…!’ ಜೋರಾಗಿ ಕೈ ಜಗ್ಗಿದ.      ಕೋವಿಡ್ ನ ಸಲುವಾಗಿ ಮುಂದಿನ ವಾರ ಪೂರ  ಲಾಕ್ ಡೌನ್ ಎಂದು ಅನೌನ್ಸ್ ಮಾಡಿದ್ದರಿಂದ ಗಡಿಬಿಡಿಯಿಂದ ಮನೆಗೆ ಅಗತ್ಯದ ಸಾಮಾನು – ಸರಂಜಾಮು, ಸೊಪ್ಪು-  ತರಕಾರಿ, ಬೇಳೆ, ಮಾತ್ರೆ ಇತ್ಯಾದಿ ಇತ್ಯಾದಿ ಕೊಳ್ಳುತ್ತಾ ಗಡಿಬಿಡಿಯಿಂದ ಕೆಲಸ ಮಾಡಿಕೊಂಡಿದ್ದ ಕಿಶೋರನ ಅಮ್ಮ ಸುನಂದಾ ಹಾಲಿನ ಬೂತಿನ ಉದ್ದ ಕ್ಯೂ ನಲ್ಲಿ ನಿಂತಿದ್ದರೂ ‘ಮತ್ತೇನು ಬೇಕಿದೆ?’ ಎಂದು ಒಂದೇ ಸಮನೆ ಮನಸ್ಸಿನಲ್ಲೇ ಪ್ರಶ್ನಮ ಕೇಳಿಕೊಳ್ಳುತ್ತಿದ್ದಳು.      ಕಿಶೋರ ಕೈ ಜಗ್ಗುತ್ತಿದ್ದಂತೇ, ವಾಸ್ತವಕ್ಕೆ ಬಂದವಳೇ ‘ಏನ್ ಪುಟ್ಟಾ?’ ಎಂದು ಮಗನ ಮುಖ ನೋಡಿದಳು.      ‘ ಮಮ್ಮಾ ದೇರ್ ಇಸ್ ಅ ‍‍‍ರ‍್ಯಾಟ್! ಇಟ್ ವಾಸ್ ಸೋ ಕ್ಯೂಟ್…. !’ ಎಂದು ತಾನು ಕಂಡದ್ದು ಎಷ್ಟು ಕ್ಯೂಟ್ ಎನ್ನುವ ವಿಚಾರವನ್ನು ಕಣ್ಣಿನಲ್ಲೇ ಬಿಂಬಿಸುತ್ತಾ ಅಷ್ಟೇ ಮೋಹಕವಾದ ಉದ್ವೇಗದಿಂದ ಹೇಳಿದನು.       ಸುನಂದಾ, ‘ಎಲ್ಲಿ ಕಂಡೆ? ನನಗೂ ತೋರ್ಸು’ ಮಗನ ಉತ್ಸಾಹಕ್ಕೆ ತನ್ನ ಬೆರಗನ್ನೂ ಸೇರಿಸುತ್ತಾ ಕೇಳಿದಳು.         ‘ದೇರ್, ದೇರ್, ಇನ್ ಸೈಡ್ ದ ಹೋಲ್ ಮಮ್ಮಾ…! ವೇಯ್ಟ್ ಇಟ್ ವಿಲ್ ಕಮ್ಸ್ ಔಟ್..’ ಎಂದು ಕಸದ ಬುಟ್ಟಿಯ ಪಕ್ಕದಲ್ಲಿದ ಮೋರಿಯ ಬಳಿಯಿದ್ದ ಸಣ್ಣ ಬಿಲದತ್ತ ಕೈ ತೋರಿದ.     ಅಷ್ಟರಲ್ಲಿ ಆ ಇಲಿ ಪುನಃ ತನ್ನ ಪುಟ್ಟ ಚೂಪು ಮುಖ ಹೊರ ಮಾಡಿ ಒಂದೆರಡು ಕ್ಷಣ ಅವಲೋಕಿಸಿ ಬುಳಕ್ಕನೆ ಒಳ ಹೋಗಿ ಪುಳಕ್ಕನೆ ಹೊರಬಂದು ಯಾರೋ ಮುಕ್ಕಾಲುವಾಸಿ ತಿಂದು ಎಸೆದು ಹೋಗಿದ್ದ ಬಿಸ್ಕೆಟ್ಟಿನ ತುಂಡನ್ನು ಕಚ್ಚಿಕೊಂಡು ಬಿಲ ಸೇರಿತು. ಅದರತ್ತಲೇ ಕೈ ತೋರುತ್ತಾ.., ‘ಸೋ ಫಾಸ್ಟ್ , ಸೋ ಕ್ವಿಕ್…!!  ಹೌ ಕೆನ್ ಇಟ್ ಮೂವ್ಸ್  ಸೋ ಫಾಸ್ಟ್ ಮಮ್ಮಾ..?’ ಎಂದು ತಡೆರಹಿತನಾಗಿ ಕೇಳಿದನು.                   ಕಿಶೋರನ ಪ್ರಶ್ನೆಗಳಿಗೆ ಸುನಂದಾ ಉತ್ತರಿಸಲು ತೊಡಗಬೇಕು ಎನ್ನುವಾಗಲೇ ಅಂಗಡಿಯ ಮುಂದೆ ಸಾಮಾಜಿಕ ಅಂತರ ಕಾಪಾಡುವ ಸಲುವಾಗಿ ಬಣ್ಣದಲ್ಲಿ ಬರೆದ ಖಾಲಿ ಬಾಕ್ಸಿನಲ್ಲಿ ನಿಲ್ಲುವ ಸರದಿ ಅವಳಿಗೆ ಬಂದಿತು.         ಮಗುವಿನ ಕೈ ಹಿಡಿದು ಬಾಕ್ಸಿನೊಳಗೆ ಬಂದು ನಿಂತ ಸುನಂದಾ, ಗಲ್ಲದ ಮೇಲೆ ಜಾರಿದ್ದ ಮಗನ ಮಾಸ್ಕನ್ನು ಆತನ ಮೂಗು- ಬಾಯಿಯನ್ನು ಮುಚ್ಚುವಂತೆ ಸರಿಪಡಿಸಿದಳು.     ‘ಕಿಶೋರ್,  ನೀನು ಕೇಳೋ ಪ್ರಶ್ನೆಗೆಲ್ಲಾ ಉತ್ತರ ಹೇಳ್ತೀನಿ. ಆದ್ರೆ ನೀನು ಕನ್ನಡದಲ್ಲಿ ಮಾತನಾಡ್ಬೇಕು ಆಯ್ತಾ?’ ಎನ್ನುತ್ತಾ ‘ರ‍್ಯಾಟ್ ಗೆ ಕನ್ನಡದಲ್ಲಿ ಏನು ಹೇಳ್ತಾರೆ ಹೇಳು’ ಎಂದಳು.     ‘ವಾಟ್ ಇಸ್ ರ‍್ಯಾಟ್ ಇನ್ ಕನ್ನಡ?!’ ಯೋಚನೆಯಲ್ಲಿ ಮಗ್ನನಾಗಿದ್ದ ಕಿಶೋರನು ‘ಪ್ಲೀಸ್ ಯೂಸ್ ದ ಸ್ಯಾನಿಟೈಸರ್ ಬಿಫೋರ್ ಎಂಟರಿಂಗ್ ದ ಶಾಪ್ ಮ್ಯಾಡಂ’ ಎಂದು ಹೇಳಿದ ಅಂಗಡಿಯವನ ಮಾತು ಕೇಳಿ ‘ರ‍್ಯಾಟ್ ಗೆ ಕನ್ನಡದಲ್ಲಿ ಏನು ಹೇಳ್ತಾರೆ?’ ಅನ್ನೋದನ್ನು ಮರೆತು ಅಮ್ಮನನ್ನು ನೋಡಿದ.               **********

ಕಥಾಯಾನ Read Post »

ಕಥಾಗುಚ್ಛ

ಕೊರೊನಾ ಮತ್ತು ಕಲಾವಿದೆ ಬೇಗಂ…

ಕಥೆ ಕೊರೊನಾ ಮತ್ತು ಕಲಾವಿದೆ ಬೇಗಂ… ಮಲ್ಲಿಕಾರ್ಜುನ ಕಡಕೋಳ ಕೈ ಕಾಲುಗಳಲ್ಲಿ ಥರ್ಕೀ ಹುಟ್ಟಿದಂಗಾಗಿ ನಡುಗ ತೊಡಗಿದವು. ಮೈಯೆಲ್ಲ ಜಲ ಜಲ ಬೆವೆತು ಹೋಯ್ತು. ಎದೆಗುಂಡಿಗೆ ಹಿಂಡಿದಂಗಾಯ್ತು. ಎದ್ದು ಹೋಗಿ ನೀರಿನ ತಂಬಿಗೆ ತುಂಬಿಕೊಳ್ಳಬೇಕೆಂದು ರಗಡ ಪ್ರಯತ್ನ ಮಾಡಿದರೂ ಎದ್ದೇಳಲು ಸಾಧ್ಯವಾಗಲಿಲ್ಲ. ಯಾರಿಗಾದರೂ ಫೋನ್ ಮಾಡಬೇಕೆಂದ್ರೆ ಅವಳ ಡಬ್ಬಾ ಫೋನಲ್ಲಿ ದುಡ್ಡಿಲ್ಲ. ಎರಡು ತಿಂಗಳಿಂದ ಅದು ಬರೀ ಇನ್ಕಮಿಂಗ್ ಸೆಟ್ ಆಗಿತ್ತು. ” ದೈವಹೀನರಿಗೆ ದೇವರೇಗತಿ ” ಎಂಬ ಸಾಳುಂಕೆ ಕವಿಗಳ ನಾಟಕವೊಂದರ ಡೈಲಾಗ್ ನೆನಪಾಗಿ, ದೇವರನ್ನೇ ನೆನೆಯುತ್ತ ಹೋಳುಮೈಯಲ್ಲಿ ಮಲಗಿದ್ದ ಸ್ಥಿತಿಯಲ್ಲಿಯೇ ಅಲ್ಲಾಡದಂತೆ ಮಲಗಿದಳು ಚಾಂದಬೇಗಂ. ಮನುಷ್ಯರ ಬದುಕಿನ ಏನೆಲ್ಲವನ್ನೂ ಕಸಗೊಂಡು ಮೂರಾಬಟ್ಟೆ ಮಾಡುವ ಕರಾಳ ಕೊರೊನಾ ಉಪಟಳ ಕೇಳಿ, ಕೇಳಿ ಎದೆಝಲ್ ಎನಿಸಿಕೊಂಡಿದ್ದಳು. ಜೀವ ಕಾಠರಸಿ ಹೋಗಿತ್ತು. ನಿತ್ಯವೂ ಉಪವಾಸ, ವನವಾಸದಿಂದ ನೆಳ್ಳಿ ನೆಳ್ಳಿ ಸಾಯುವ ಬದಲು ಕೊರೊನಾ ಬಂದು ಪಟಕ್ಕಂತ ತನ್ನ ಪ್ರಾಣ ಕಸಗೊಂಡು ಹೋದರೆ ಸಾಕೆಂಬ ಕಠಿಣ ನಿರ್ಧಾರಕ್ಕೆ ಬಂದಿದ್ದಳು. ಹೀಂಗೆ ಎರಡು ತಿಂಗಳಕಾಲ ಆಕೆ ಒಂಟಿಯಾಗಿ ಮನೆಯಲ್ಲೇ ಇರುವಾಗ ಕೊರೊನಾ ಬರುವುದಾದರೂ ಹೇಗೆ.? ಇದೀಗ ತನಗೆ ಆಗುತ್ತಿರುವ ಹೃದಯ ಸಂಬಂಧಿ ದೈಹಿಕ ವೈಪರೀತ್ಯ ಕುರಿತು ಎಳ್ಳರ್ಧ ಕಾಳಿನಷ್ಟೂ ತಿಳಿವಳಿಕೆ ಅವಳದಲ್ಲ. ಜನಸಂಪರ್ಕವಿಲ್ಲದೇ ಹೀಗೆ ವಾರಗಟ್ಟಲೇ ಮನೆಯಲ್ಲಿ ಏಕಾಂಗಿಯಾಗಿ ನರಳುತ್ತಿರುವ ಆಕೆಗೆ ಹೊಟ್ಟೆತುಂಬಾ ಉಂಡ ನೆನಪಿಲ್ಲ. ಮಾರಿಕಾಂಬೆ ಜಾತ್ರೆ ಕ್ಯಾಂಪಿನ ನಾಟಕ ಶುರುವಾಗಿ ನಾಲ್ಕನೇ ದಿನಕ್ಕೆ ” ಕಂಪನಿ ಬಂದ್ “ಮಾಡಬೇಕೆಂಬ ಕೊರೊನಾ ಮಾರಿಯ ಲಾಕ್ ಡೌನ್ ಆರ್ಡರ್ ಬಂತು. ” ನೀವೆಲ್ಲ ನಿಮ್ನಿಮ್ಮ ಊರಿಗೆ ಹೋಗ್ರೀ ನಾಟ್ಕ ಚಾಲೂ ಆಗೋ ಮುಂದ ಹೇಳಿ ಕಳಿಸ್ತೀವಂತ ” ಜಂಭಯ್ಯ ಮಾಲೀಕರು ಮುಖದ ಮಾಸ್ಕ್ ಸರಿಸಿ, ಒಂದೇ ಉಸುರಲ್ಲಿ ಆದೇಶ ಹೊರಡಿಸಿ ಕಾರುಗಾಡಿಹತ್ತಿ ಹೊಂಟುಹೋದರು. ಲೈಟಿಂಗ್ ಹುಡುಗ ಸಾಜಿದ್ ಹತ್ತಿರ ಬಸ್ ಚಾರ್ಜ್ ಇಸ್ಗೊಂಡು ಊರಿಗೆ ಬಂದಳು ಬೇಗಮ್. ಹೌದು ನಾಟಕ ಕಂಪನಿ ಮಾಲೀಕರ ಬಳಿ ಮನವಿಮಾಡಿ ಹಣ ಪಡೆಯಲು ತಾನೇನು ಹೀರೊಯಿನ್, ಇಲ್ಲವೇ ಹಾಸ್ಯ ಕಲಾವಿದೆ ಅಲ್ಲವಲ್ಲ, ಎಂದು ತನ್ನೊಳಗೆ ತಾನೇ ಮಾತಾಡಿ ಕೊಂಡಳು. ಅಷ್ಟಕ್ಕೂ ವಯಸ್ಸಿನಲ್ಲಿ ತನಗಿಂತಲೂ ಚಿಕ್ಕವರಾದ ಕಂಪನಿ ಮಾಲೀಕ ಜಂಭಯ್ಯ, ಕಲಾವಿದರಿಂದ ಯಾವತ್ತೂ ಅಂತರ ಕಾಪಾಡಿಕೊಳ್ಳುತ್ತಿದ್ದರು. ಮಾಲೀಕರ ಹತ್ತಿರ ಸಲುಗೆಯಿಂದ ಮಾತಾಡುವ ಧೈರ್ಯ, ಕಂಪನಿ ಮ್ಯಾನೇಜರ್ ಯಡ್ರಾಮಿ ಮಲಕಣ್ಣರಿಗೆ ಮಾತ್ರ. ಅರವತ್ತರ ಆಸುಪಾಸಿನಲ್ಲಿರುವ ಚಾಂದಬೇಗಂ, ತಾಯಿ ಪಾತ್ರಕ್ಕೆ ಹೇಳಿ ಮಾಡಿಸಿದ ಕಲಾವಿದೆ. ಅದರಲ್ಲೂ ಕೌಟುಂಬಿಕ ನಾಟಕಗಳ ದುಃಖದ ಪಾತ್ರಗಳೆಂದರೆ ಆಕೆಗೆ ಖಂಡುಗ ಖುಷಿ. ಭಲೇ, ಭಲೇ ಕಟುಕರ ಕರುಳು ಚುರುಕೆನಿಸಿ ಕಣ್ಣೀರು ತರಿಸುವ ಅಭಿಜಾತ ಅಭಿನೇತ್ರಿ. ಹರೆಯದಲ್ಲಿ ಆಕೆ ಮಾಡಿದ ಹಿರೋಯಿನ್ ಪಾತ್ರ ನೋಡಿದವರಲ್ಲಿ ಇವತ್ತಿಗೂ ನೆನಪಿನ ಮಹಾಪುಳಕ. ಅಭಿಮಾನಿಗಳು ಆಕೆಯನ್ನು “ಚಾಂದನಿ” ಅಂತಲೇ ಕರೀತಿದ್ರು. ಹತ್ತಾರು ಟೀವಿ ಧಾರಾವಾಹಿಗಳಲ್ಲಿ, ಶತ ದಿನೋತ್ಸವ ಕಂಡ ನಾಕೈದು ಸಿನೆಮಾಗಳಲ್ಲೂ ಆಕೆಗೆ ಉತ್ತಮ ಅವಕಾಶಗಳೇ ಸಿಕ್ಕಿದ್ದವು. ದೂರದ ಬೆಂಗಳೂರಿನ ಟೀವಿ, ಸಿನೆಮಾ ಲೋಕದಿಂದ ಕೈತುಂಬಾ ರೊಕ್ಕ ಸಿಗಲಿಲ್ಲ. ಆದರೆ ಸಾರ್ವಜನಿಕವಾಗಿ ಆಕೆಗೆ ದೊಡ್ಡ ಹೆಸರು ಮಾತ್ರ ಸಿಕ್ಕಿತ್ತು. ಆ ಹೆಸರಿನಿಂದಾಗಿಯೇ ನಾಟಕ ಕಂಪನಿಗಳಲ್ಲಿ ಆಕೆಗೆ ಹೆಚ್ಚು ಅವಕಾಶ. ಟೀವಿ, ಸಿನೆಮಾ ತಾರೆಯೆಂಬ ಹೆಗ್ಗಳಿಕೆ ಕಂಪನಿ ಮಾಲೀಕರಿಗೆ ಮತ್ತು ಪ್ರೇಕ್ಷಕರಿಗೆ. ಅವಳ ಪತಿ ಕುಮಾರಣ್ಣ ಸಹಿತ ಹೆಸರಾಂತ ರಂಗನಟ. ಆತ ಕುಡಿದು, ಕುಡಿದು, ಕುಡಿದೇ ಪ್ರಾಣ ಬಿಟ್ಟಿದ್ದ. ಸಾಯುವ ದಿನವೂ ಕುಮಾರಣ್ಣ ಸೊಗಸಾಗಿ ವಿಲನ್ ರೋಲ್ ಮಾಡಿದ್ದ. ಇನ್ನೇನು ಊಟಕ್ಕೆ ಕುಳಿತು ಕೊಳ್ಳಬೇಕೆನ್ನುವಾಗ ಎದೆಗುಂಡಿಗೆ ಹಿಂಡಿ, ಜಲಜಲ ಬೆವೆತು ಹೃದಯಾಘಾತದಿಂದ ಒಂದೇ ಏಟಿಗೆ ತೀರಿಹೋಗಿದ್ದ. ಸಾಯುವ ಮುನ್ನ ಅವನು ಮಾಲೀಕರಲ್ಲಿ…” ನನ್ನ ಬೇಗಮ್ ಬದುಕಿರೋವರೆಗೂ ಪಾತ್ರ ಮಾಡ್ತಾಳೆ. ಕಂಪ್ನಿ ಬಿಡಿಸಬೇಡಿರೆಂದು ” ಅಂಗಲಾಚಿ ಬೇಡಿಕೊಂಡಿದ್ದ. ಹೆಂಡತಿಯ ತೊಡೆಯ ಮೇಲೆ ಪ್ರಾಣ ಬಿಟ್ಟಾಗ ಬೇಗಮ್ ಬಿಕ್ಕಿ ಬಿಕ್ಕಿ ಅಳುತ್ತಿದ್ದುದು ಕಂಡವರಿಗೆಲ್ಲ ಕರುಳು ಚುರುಕ್ಕೆಂದು ” ಪಾಪ ಇಬ್ಬರದು ಜಾತಿ ಬ್ಯಾರೇ ಬ್ಯಾರೇ ಆಗಿದ್ರು ಕುಮಾರಣ್ಣ ಪುಣ್ಯಮಾಡಿದ್ದ ಹಂಗ ನೋಡಕೊಂಡಳು ” ಅಂತ ಕಂಪನಿ ಕಲಾವಿದರೆಲ್ಲರೂ ಕಣ್ಣೀರು ಸುರಿಸಿದ್ರು. ಶಹರ ಮಾತ್ರವಲ್ಲ ದೇಶದ ತುಂಬೆಲ್ಲ ಲಾಕ್ಡೌನ್ ಘೋಷಣೆ ಆದಮೇಲಂತೂ ಬೇಗಮ್ಮಳದು ತುಂಬಾನೇ ಸಂಕಟದ ಬದುಕು. ವಾರವೊಪ್ಪತ್ತು ಅಕ್ಕಪಕ್ಕದವರು ನೆರವಾದರು. ಆಮೇಲೆ ಎದುರಾದುದು ಅವಳ ಕಣ್ಣೀರೂ ಬತ್ತಿ ಹೋಗುವಂಥ ಸಂಕಷ್ಟಗಳು. ಯಾವ ನಾಟಕದಲ್ಲೂ ಕಂಡೂ ಕೇಳರಿಯದ, ಯಾವ ಕವಿಕಲ್ಪನೆಗೂ ನಿಲುಕದ, ಊಹಿಸಲೂ ಸಾಧ್ಯವಾಗದ ನರಕಯಾತನೆ. ದೇವರುಕೊಟ್ಟ ಗಾಳಿ, ನಗರಸಭೆಯವರು ಬಿಡುತ್ತಿದ್ದ ಕೊಳಾಯಿ ನೀರೇ ಅವಳ ಪಾಲಿಗೆ ಅನ್ನ ಆಹಾರ ಏನೆಲ್ಲ ಆಗಿತ್ತು. ಮನೆ ಹೊರಗಡೆ ಹೋಗುವಂತಿಲ್ಲ. ಎಷ್ಟು ದಿನಾಂತ ನೀರು ಕುಡಿದು ಬದುಕಲು ಸಾಧ್ಯ.? ಬೀಪಿ, ಸಕ್ಕರೆ ಕಾಯಿಲೆಗೆ ಅವಳು ಸೇವಿಸುತ್ತಿದ್ದ ಗುಳಿಗೆಗಳು ಮುಗಿದು ತಿಂಗಳು ಮೇಲಾಯ್ತು. ಗುಳಿಗೆಗಳಿದ್ದರೂ ಉಪವಾಸದ ಖಾಲಿ ಹೊಟ್ಟೆಯಲ್ಲಿ ಗುಳಿಗೆ ನುಂಗುವುದು ದುಃಸಾಧ್ಯ. ಹೀಗೇ ಉಪವಾಸದಿಂದ ತಾನು ಸತ್ತು ಹೋಗುವುದು ಖಚಿತವೆಂದು, ಗಂಡನನ್ನು ಮನದಲ್ಲೇ ಮತ್ತೆ, ಮತ್ತೆ ನೆನೆದು ಕೊಂಡಳು. ಇದ್ದಕ್ಕಿದ್ದಂತೆ ರಾತ್ರಿ ಅವಳ ಫೋನ್ ರಿಂಗಾಯ್ತು. ಸಾವಿನ ಅಂಚಿನಲ್ಲಿರುವ ತನಗ್ಯಾರು ಫೋನ್ ಮಾಡ್ತಾರೆ ಅದು ಮೊಬೈಲ್ ಕಂಪನಿ ಕಾಲ್ ಇರಬಹುದೆಂದು ನಿರಾಸೆಯಿಂದ ಬೇಗ ಎತ್ತಿಕೊಳ್ಳಲಿಲ್ಲ. ” ಹಲೋ ನಾವು ಸಂಘದವರು ಮಾತಾಡ್ತಿದ್ದೀವಿ ನೀವು ಕಲಾವಿದೆ ಚಾಂದ್ ಬೇಗಮ್ ಹೌದಲ್ರೀ ? ” ಅದೆಷ್ಟೋ ದಿನಗಳ ನಂತರ ಆ ಕಡೆಯಿಂದ ಮೊದಲ ಬಾರಿಗೆ ಮನುಷ್ಯನ ಧ್ವನಿ ಕೇಳಿ, ಕಳೆದುಹೋದ ಪ್ರಾಣಪಕ್ಷಿ ಮರಳಿ ಬಂದಂಗಾಯ್ತು. ಹಾಸಿಗೆಯಿಂದ ಎದ್ದು ಕುಂತು ” ಹೌದ್ರೀ ನಾನೇ, ನಾನೇ ಬೇಗಮ್., ತಾವ್ಯಾರು ? ” ಕಣ್ತುಂಬಿ ಕೇಳಿದಳು.” ನಾವು ನಿಮ್ಮ ಅಭಿಮಾನಿಗಳು. ನಾಳೆ ನಿಮಗೆ ರೇಷನ್ ಕಿಟ್, ಚಪಾತಿ ಊಟ ತಗೊಂಡ ಬರ್ತಿದಿವಿ ನಿಮ್ಮನಿ ಅಡ್ರೆಸ್ ಹೇಳ್ರಿ”. ಕೇಳುತ್ತಿದ್ದಂತೆ, ಅಪರಿಮಿತ ಸಂತಸದ ಧ್ವನಿಯಲ್ಲಿ ವಿಳಾಸ ತಿಳಿಸಿದಳು.” ಅಬ್ಬಾ!! ದೇವರು ಇದ್ದಾನೆ ಎನ್ನುವುದಕ್ಕೆ ಇದಕ್ಕಿಂತ ದೊಡ್ಡ ಸಾಕ್ಷಿ ಬೇಕೇ? ” ತನಗೆ ತಾನೇ ಸಾಂತ್ವನ ಹೇಳಿಕೊಂಡಳು. ಬೆಳಕು ಹರಿಯುವುದನ್ನೇ ತದೇಕ ಚಿತ್ತದಿಂದ ಕಾಯತೊಡಗಿದಳು. ಊಟ, ನಿದ್ರೆ ಎಂಬೋದು ಕನಸಿನಲ್ಲೂ ಕಂಡಿರಲಿಲ್ಲ. ಯಾವ ಯಾವುದೋ ನಾಟಕಗಳ ಹತ್ತಾರು ನೃತ್ಯಗಳು, ಕಥನಗಳು, ಸಂಭಾಷಣೆಗಳು ಅವಳೆದುರು ಫ್ಲ್ಯಾಶ್ಬ್ಯಾಕ್ ತರಹ ಸುರುಳಿ ಸುರುಳಿಯಾಗಿ ಸುಳಿಯತೊಡಗಿದವು. ಹಸಿವಿನ ಪಾತ್ರಗಳನ್ನು ಅಭಿನಯಿಸಿ ತೋರಿಸಿದ ತನಗೆ ಹಸಿವನ್ನು ಸಾಕ್ಷಾತ್ ಬದುಕುತ್ತಿರುವ ಅಗ್ನಿಪರೀಕ್ಷೆಯ, ಕಟುಸತ್ಯದ ಅನುಭವ. ಅದ್ಯಾಕೋ ಜೋಂಪು ಹತ್ತಿದಂಗಾಯ್ತು. ಆ ಜೋಂಪಿನಲ್ಲೇ ಚಪಾತಿ ಊಟ, ರೇಷನ್ ಕಿಟ್ ಕಣ್ಮುಂದೆ ಬಂದು ನಿಂತವು. ಕೋಲ್ಮಿಂಚು ಹೊಡೆದಂಗಾಗಿ ಗಾಬರಿಯಿಂದ ಸವಂಡು ಮಾಡಿ ಎದ್ದುಕುಂತಳು. ಕಣ್ಣೊರೆಸಿಕೊಂಡು, ಹಾಳಾದದ್ದು ಹಾಳಪ್ಪುಗೆ, ಕನಸಿರಬೇಕು. ಇನ್ನೂ ಹೊತ್ತು ಹೊಂಟಿಲ್ಲ. ಆದರೂ ನಿದ್ದೆ ಮಾಡೋದೇ ಬ್ಯಾಡಂತ ನಾಟಕದ ಚೋಪಡಿಯೊಂದನ್ನು ಹಿಡಕೊಂಡು ಓದುತ್ತಾ ಕುಂತಳು. ಸಣ್ಣದೊಂದು ಸಪ್ಪಳಾದರೂ ಸಾಕು, ಸಂಘದವರು ಬಂದರೇನೋ ಎಂದು ಶಾಂತಳಾಗಿ ಕುಂತು ಬಾಗಿಲು ಬಡಿತದ ಸವುಂಡಿಗಾಗಿ ಕಾಯತೊಡಗಿದಳು. ಸಂಘದವರಿಗೆ, ಯಾವಾಗ ಬರ್ತೀರಂತ ಮತ್ತೊಮ್ಮೆ ಕೇಳಿ ಖಚಿತ ಪಡಿಸಿಕೊಳ್ಳಲು ಅವಳ ಡಬ್ಬಾ ಫೋನಲ್ಲಿ ರೊಕ್ಕಾ ಇಲ್ಲ. ಹೇಗಿದ್ದರೂ ನಾಳೆ ಸಂಘದವರು ಬರ್ತಾರೆ ಅವರ ಕಡೆಯಿಂದ ಮಿಸ್ ಕಾಲ್ ಕೊಡುವಷ್ಟಾದರೂ ಫೋನಿಗೆ ರೊಕ್ಕ ಹಾಕಿಸಿಕೊಂಡರಾಯಿತೆಂದು ಲೆಕ್ಕ ಹಾಕಿಕೊಂಡಳು. ಮುಂಜಾನೆ ಹತ್ತುಗಂಟೆಯಾದರೂ ಸಂಘದವರ ಸುಳಿವಿಲ್ಲ. ನನ್ನ ಹಣೆಬರಹ ಇಷ್ಟೇ. ನನಗೆ ಸಾವೇಗತಿ ಎಂದುಕೊಂಡು ಹಾಸಿಗೆ ಮೇಲೆ ಉರುಳಿ ಕೊಳ್ಳಬೇಕೆನ್ನುವಷ್ಟರಲ್ಲಿ ಜೀಪು, ಕಾರುಗಳ ಸವಂಡು, ಆಮೇಲೆ ಬಾಗಿಲು ಬಡಿದ ಸಪ್ಪಳಾಯಿತು. ” ಬೇಗಮ್ಮರೇ..ಚಾಂದಬೇಗಮ್ಮರೇ..” ದನಿ ಕೇಳಿದಾಗ ” ನನಗಿನ್ನು ನೂರು ವರ್ಷ ಆಯಸ್ಸು. ನಾನು ಸಾಯಲಾರೆ ” ಸಂತಸದ ನಿಟ್ಟುಸಿರು ಬಿಟ್ಟಳು. ಹೇರ್ ಡೈ ಇಲ್ಲದೇ ಪೂರ್ತಿ ಬೆಳ್ಳಗಾಗಿದ್ದ ತಲೆಗೂದಲು, ಅಸ್ತವ್ಯಸ್ತವಾಗಿದ್ದ ಸೀರೆ ಸರಿಪಡಿಸಿಕೊಂಡಳು. ಕನ್ನಡಕ ಧರಿಸಿ ಎದ್ದೇಳಬೇಕೆನ್ನುವಷ್ಟರಲ್ಲಿ ಕಣ್ಣಿಗೆ ಬವಳಿ ಬಂದಂಗಾಗಿ, ಒಂದರಗಳಿಗೆ ತಡೆದು ಬಾಗಿಲು ತೆರೆದು ಹೊರಬಂದಳು. ಮುರ್ನಾಲ್ಕು ಮಂದಿ ಮಹಿಳೆಯರು ಸೇರಿದಂತೆ ಏಳೆಂಟು ಮಂದಿ ಸಂಘದ ಕಾರ್ಯಕರ್ತರು, ಹತ್ತೊಂಬತ್ತನೇ ವಾರ್ಡಿನ ಮಾಜಿ ಕಾರ್ಪೋರೇಟರ್ ಕಟ್ಟೀಮನಿ, ಅವರ ಅನುಯಾಯಿಗಳು . ಅವರನ್ನೆಲ್ಲ ನೋಡಿದ ಅವಳಿಗೆ ಸಂಜೀವಿನಿ ಪರ್ವತವನ್ನೇ ನೋಡಿದಷ್ಟು ಸಂತಸ, ಸಂಭ್ರಮ ಪಟ್ಟಳು. ಅವರೆಲ್ಲ ಮುಖಕ್ಕೆ ಕಟ್ಟಿಕೊಂಡಿದ್ದ ಮಾಸ್ಕ್ ತೆಗೆದು ಎಲ್ಲರೂ ಸಾಲಾಗಿ ನಿಂತರು. ನಡುವೆ ನಿಲ್ಲಿಸಿದ್ದ ಕಲಾವಿದೆ ಚಾಂದಬೇಗಮ್ಮಳ ಕೈಗೆ ಚಪಾತಿ ಊಟದ ಬಾಕ್ಸ್, ಮುಂದೆ ರೇಷನ್ ಕಿಟ್ ಇಟ್ಟರು. ಫೋಟೋಗ್ರಾಫರ್ ಗಣೇಶನಿಗೆ ಫೋನ್ ಮೇಲೆ ಫೋನ್ ಮಾಡುತ್ತಲೇ ಇದ್ದರು. ಅರ್ಧಗಂಟೆ ಕಾಯ್ದು ಕಾಯ್ದು ಸುಸ್ತಾಗಿ ಮೊಬೈಲ್ ಫೋಟೋಗಳೇ ಗತಿಯಾದವು ಅನ್ನೋವಾಗ ಫೋಟೋಗ್ರಾಫರ್ ಬಂದ. ಬಗೆ ಬಗೆಯ ಏಳೆಂಟು ಫೋಟೊ ತೆಗೆಸಿಕೊಂಡರು. ಮಾಜಿ ಕಾರ್ಪೊರೇಟರ್ ಕಟ್ಟೀಮನಿ, ಬೇಗಮ್ ಅಭಿನಯಿಸಿದ ಸಿನೆಮಾ, ನಾಟಕಗಳ ಪಾತ್ರಗಳನ್ನು ಕೊಂಡಾಡಿದ. ಕಲಾವಿದೆಗೆ ಸಂತಸದ ಸಮುದ್ರದಲ್ಲಿ ತೇಲಿಹೋದ ಪರಮಾನಂದ. ಕೊರೊನಾ ಸಂತ್ರಸ್ತರಿಗೆ ಪ್ಯಾಕೇಜ್ ತಲುಪಿಸಲು ಕೊಟ್ಟ ಕಾರ್ಪೊರೇಟ್ ಕಂಪನಿಗೆ ನೆರವಿನ ವಿಡಿಯೋ ಮತ್ತು ಫೋಟೋ ತಲುಪಿಸಿದರೆ ಸಾಕಿತ್ತು. ಕಟ್ಟೀಮನಿ ಟೀಮ್ ಆ ಕೆಲಸವನ್ನು ಅಚ್ಚುಕಟ್ಟಾಗಿ ಮಾಡುತ್ತಿತ್ತು. ಸಂಘದವರೆಲ್ಲರೂ ತಮ್ಮ ಕಾರು, ಜೀಪುಗಳತ್ತ ಚಲಿಸುತ್ತಿದ್ದರು. ಇನ್ನೇನು ಬೇಗಮ್ ಮನೆಯೊಳಕ್ಕೆ ಕಾಲಿಡಬೇಕು. ಅಷ್ಟರಲ್ಲಿ ಅವರಲ್ಲೊಬ್ಬ ಓಡೋಡಿ ಬಂದು ಕಾರ್ಪೊರೇಟರಣ್ಣ ಹೇಳಿ ಕಳಿಸಿದ್ದು ” ಅಮ್ಮಾ ತಪ್ಪು ತಿಳ್ಕೊಬೇಡ್ರಿ, ಮುಂದಿನ ಓಣಿಯಲ್ಲಿ ಇನ್ನೊಬ್ಬ ಕಲಾವಿದೆ ಇದ್ದಾರೆ. ಅವರಿಗೂ ಚಪಾತಿ ಊಟದ ಬಾಕ್ಸ್ , ರೇಷನ್ ಕಿಟ್, ಕೊಟ್ಟಂಗ ಮಾಡಿ ಫೋಟೋ ತೆಗೆಸಿಕೊಂಡು ವಾಪಸ್ ನಿಮಗೇ ತಂದು ಕೊಡುವುದಾಗಿ” ಹೇಳಿ ಇಸ್ಗೊಂಡು ಹೋದ. ಹಾಗೆ ಹೋದವರು ಸಂಜೆ, ರಾತ್ರಿಯಾದರೂ ಮರಳಿ ಬರಲೇ ಇಲ್ಲ. ಊಟದ ಬಾಕ್ಸ್, ರೇಷನ್ ಕಿಟ್ ತರಲಿಲ್ಲ. ಕಲಾವಿದೆಯ ಉಪವಾಸಕ್ಕೆ ಅಂತ್ಯವಿಲ್ಲದಂತಾಯಿತು. ಹಿರಿಯ ರಂಗಚೇತನ ಚಾಂದಬೇಗಮ್ ತನ್ನೊಳಗಿನ ಎಲ್ಲ ಚೈತನ್ಯಗಳನ್ನು ಅಕ್ಷರಶಃ ಕಳಕೊಂಡಳು. ಸಂತ್ರಸ್ತ ಕಲಾವಿದೆಗೆ ನಕಲಿ ನೆರವಿನ ಪ್ರಕ್ರಿಯೆಯ ಮೊಬೈಲ್ ವಿಡಿಯೋ ಮಾಡಿಕೊಂಡಿದ್ದ ಸಂಘದ ಸದಸ್ಯನೊಬ್ಬನಿಂದ ವಿಡಿಯೋ ವೈರಲ್ಲಾಗಿ ಮರುದಿನ ಪತ್ರಿಕೆ, ಟೀವಿಗಳಲ್ಲಿ ಸಂತ್ರಸ್ತ ಹಿರಿಯ ಕಲಾವಿದೆಗೆ ಆಗಿರುವ ಅವಮಾನದ ಸಚಿತ್ರ ಕಥೆ, ಮೋಸದ ಜಾಲ ಬಯಲಾಯಿತು. ರಾಜ್ಯಾದ್ಯಂತ ದೊಡ್ಡ ಸುದ್ದಿಯಾಯಿತು. ಹಿರಿಯ ಕಲಾವಿದೆಗೆ ಆಗಿರುವ ಅನ್ಯಾಯ, ಅವಮಾನ ಖಂಡಿಸಿ ಹೇಳಿಕೆಗಳ ಮೇಲೆ ಹೇಳಿಕೆಗಳು ಕೇಳಿಬಂದವು. ಅದೆಲ್ಲವನ್ನು ಮೂಕವಿಸ್ಮಿತಳಾಗಿ ಗಮನಿಸಿದ ಕಿರುತೆರೆಯ ಹೆಸರಾಂತ ತಾರೆ ಮಹಾನಂದಾ ಒಂದುಲಕ್ಷ ಹಣದೊಂದಿಗೆ ಬಗೆ, ಬಗೆಯ ಊಟ, ತಿಂಡಿ, ತಿನಿಸು ಸಿದ್ದಪಡಿಸಿಕೊಂಡು, ಬೀಪಿ, ಶುಗರ್ ಕಾಯಿಲೆಗೆ ಸಂಬಂಧಿಸಿದ ಹತ್ತಾರು ಬಗೆಯ ಗುಳಿಗೆ ಪೊಟ್ಟಣಗಳ ಕಟ್ಟುಗಳು, ಒಂದು ಬಾಕ್ಸ್ ಕೊರೊನಾ ರಕ್ಷಾಕವಚದ ಮಾಸ್ಕ್ ಸಮೇತ ಕಾರಲ್ಲಿ ತನ್ನ ಗೆಳತಿಯರೊಂದಿಗೆ ಕಲಾವಿದೆ ಚಾಂದಬೇಗಮ್ಮಳನ್ನು ಹುಡುಕಿಕೊಂಡು ಗಣೇಶ ಪೇಟೆಯ ಅವರ ಮನೆ ಬಾಗಿಲಿಗೆ ಬಂದರು. ತನ್ನ ಜೀವಮಾನದಲ್ಲಿ ರಂಗಭೂಮಿಯ ಹಿರಿಯ ಕಲಾವಿದೆಗೆ ನೆರವಾಗುವ ಅವಕಾಶ, ಸಂತಸ, ಸಂಭ್ರಮ ಮಹಾನಂದಾಗೆ. ಮಹಾನಂದಾ ಮತ್ತು ಆಕೆಯ ಗೆಳತಿಯರು ನಾಕೈದು ಬಾರಿ ಜೋರಾಗೇ ಬಾಗಿಲು ಬಡಿದರೂ ಬಾಗಿಲು ತೆಗೆಯಲಿಲ್ಲ. ಅನುಮಾನಪಟ್ಟು ಅಕ್ಕಪಕ್ಕದ ಜನರನ್ನು ಕೇಳಿದರೂ ಅವರು ಸರಿಯಾದ ಮಾಹಿತಿ ಹೇಳಲಿಲ್ಲ. ಅಷ್ಟೊತ್ತಿಗೆ ಮಾಧ್ಯಮದವರು ಬಂದರು. ಆಗ ನೋಡಿ ಜನ ಒಬ್ಬೊಬ್ಬರೇ ಕ್ಯಾಮರಾ ಮುಂದೆ ಬರಲು ನಾಮುಂದು ತಾಮುಂದು ಎಂದು ಸೀರೆಯ ಸೆರಗು, ಅಂಗಿಯ ಕಾಲರು, ತಲೆಯ ಕ್ರಾಪು

ಕೊರೊನಾ ಮತ್ತು ಕಲಾವಿದೆ ಬೇಗಂ… Read Post »

ಕಥಾಗುಚ್ಛ

ಕಥಾ ಯಾನ

ಕಥೆ ಸ್ವಾತಂತ್ರ್ಯ ಡಾ.ಪ್ರೇಮಲತ ಬಿ. ನನಗೀಗ ೧೯ ವರ್ಷ. ಕೆಲವೊಮ್ಮೆ ಆಲೋಚನಾ ಲಹರಿಯಿಂದ ನಾನು ಇತರರಿಗಿಂತ ವಿಭಿನ್ನ ಮಿಡಿತಗಳನ್ನು ಹೊಂದಿರುವಂತೆ ಅನಿಸಿದರೂ ತಾರುಣ್ಯದ ದಿನಗಳ ಎಲ್ಲ ಭಾವನೆಗಳ ಉಗಮದ ಪ್ರತಿ ಅನುಭವ ನನಗಾಗಿದೆ. ಮಧ್ಯಮವರ್ಗದ ಸಾಂಪ್ರದಾಯಿಕ ಕುಟುಂಬದಿಂದ ಬಂದಿರುವ ಕಾರಣದಿಂದಲೋ ಏನೋ, ಪ್ರೀತಿ-ಪ್ರೇಮದ ಅಲೆಗಳಲ್ಲಿ, ಡಿಸ್ಕೋ-ಕುಡಿತಗಳ ಅಮಲಿನಲ್ಲಿ ಕೊಚ್ಚಿಹೋಗುವ ಉನ್ಮಾದಕ್ಕಾಗಿ ಮನಸ್ಸು ತೀವ್ರವಾಗಿ ಮಿಡಿದಿಲ್ಲ. ಬದಲು ಸಮಾಜದಲ್ಲಿ ಮುಕ್ತತೆಯನ್ನು ಕಾಣುವ, ಸ್ವಾತಂತ್ರದ ಸಂಪೂರ್ಣ ಸ್ವೇಚ್ಚೆಗಾಗಿ ನನ್ನ ಮನಸ್ಸು ತುಮಲಗೊಳ್ಳುತ್ತದೆ. ಧೀಮಂತ ಯುವ ಶಕ್ತಿಯನ್ನು ಬಳಸಿ ಈ ಸಂಕುಚಿತ ಸಮಾಜವನ್ನು ಬದಲು ಮಾಡಬೇಕೆಂಬ ಉತ್ಕಟೇಚ್ಛೆ ನನ್ನಲ್ಲಿ ಯಥೇಚ್ಚವಾಗಿದೆ. ಒಬ್ಬ ಸುಂದರ ಯುವತಿಯನ್ನು ಕಂಡರೆ ಮನಸ್ಸು ಪುಳಕಗೊಳ್ಳುಷ್ಟೇ ಸಹಜವಾಗಿ ಸಮಾಜದಲ್ಲಿನ, ಅನೀತಿ, ಅಧರ್ಮ, ಲಂಚಕೋರತನ, ಶಿಕ್ಷಣದಲ್ಲಿರುವ ರಾಜಕೀಯ ಇವುಗಳನ್ನು ಕಂಡಾಗ ಕೆಡುಕೆನಿಸುತ್ತದೆ.ಧಮನಿ, ಧಮನಿಗಳಲ್ಲಿ ಹರಿವ ರಕ್ತ ಬಿಸಿಯಾಗಿ ಅಸಹಾಯಕತೆಯ ನಿಟ್ಟಿಸುರಾಗಿ ಹೊರಬಂದು ಆತ್ಮಸಾಕ್ಷಿ ನನ್ನನ್ನು ಹಿಂಸಿಸುತ್ತದೆ.ಬೆಟ್ಟಗಳನ್ನು ಹತ್ತಲು, ನದಿಗಳನ್ನು ಈಜಲು,ಬಯಲಿನಲ್ಲಿ ನಿರ್ಭಿಡೆಯಾಗಿ ಓಡಲು, ಕಾಡಿನಲ್ಲಿ ಒಂಟಿಯಾಗಿ  ಅಲೆಯಲು ಅದಮ್ಯ ಉತ್ಸಾಹ ಹೊಂದಿರುವ ನನ್ನಂತಹವರ ಮಿಡಿತಗಳು, ರಸ್ತೆಯಲ್ಲಿ ಸಂಕೋಚಪಡದೆ, ಹೆದರದೆ ನಡೆಯಲೂ ಆಗದಿರುವ ಈ ವ್ಯವಸ್ಥೆಯಲ್ಲಿ ಹಾಗೇ ತಣ್ಣಗಾಗಿಬಿಡುತ್ತವೆ. ಇದು ನಿರಾಶಾವಾದವಲ್ಲ. ಬದುಕಿನ ಕ್ರೂರ ಸತ್ಯ! ಇದಕ್ಕೆ ವಿರುದ್ಧವಾಗಿ ಸೊಲ್ಲೆತ್ತಿದರೆ ಆತ್ಮಹತ್ಯೆಯ ಹೆಸರಲ್ಲಿ ಅವರ ಹತ್ಯೆ. ಹಾಡುಹಗಲಲ್ಲೇ ಗುಂಡು. ವ್ಯವಸ್ಠಿತ ಜಾಲದ ಮಾಯೆಯಲ್ಲಿ ಎಲ್ಲ ಮಾಹಿತಿ,ಪರಿಣತಿಗಳ ವಿಪರ್ಯಾಸ. ಮಾಧ್ಯಮಗಳ ಹುಟ್ಟಡಗಿಸಿ, ಪರ-ವಿರೋಧಗಳ ಮಾರುಕಟ್ಟೆಯನ್ನು ಸೃಷ್ಟಿಸಿ ಅಪಹಾಸ್ಯವಾಗುತ್ತಿರುವ ಈ ದೇಶದ ಯುವ ತರುಣನಾಗಿ ನಾನೇನು ಮಾಡಬಲ್ಲೆ?? ಅಖಂಡವಾಗಿ ನಿಂತಿರುವ ದೊಡ್ಡ ದೇಶ ನನ್ನದು. ಆದರೆ ಇಲ್ಲಿ ಬದಲಾವಣೆಯ ಹರಿಕಾರರು ಯಾರದರೂ ಇದ್ದಾರೆಯೇ? ಅಂತವರಿಗಾಗಿ ನಾನು ಹುಡುಕಿ ಅಲೆಯಲೇ? ಈ ವ್ಯವಸ್ಥಿತ ಭ್ರಷ್ಟಾಚಾರ ನನ್ನ ಮನಸ್ಸುನ್ನು ಆಲೆಗಳೇ ಇಲ್ಲದಸಮುದ್ರವಾಗಿ ಯಾಂತ್ರಿಕತೆಯನ್ನು ರೂಢಿಸಿಕುಳ್ಳುವಂತೆ ಮಾಡುವ  ಮೊದಲು, ನನ್ನ ಭವಿಷ್ಯವನ್ನು ಹೇಗೆ ತಿರುಗಿಸಲಿ? ಇಂದಿನ ಸ್ವತಂತ್ರ ದಿನಾಚರಣೆಯ ಯಾವ ಭಾಷಣಕಾರರಲ್ಲೂ ನಾನು ಬದಲಾವಣೆಯ ಕಿಡಿಯಿರಲಿ, ಕಾವನ್ನೂ ಕಾಣಲಿಲ್ಲ.ಕಳೆದ ಹತ್ತು ವರ್ಷಗಳಲ್ಲಿ ಸ್ವಾತಂತ್ರ ದಿನಾಚರಣೆಯ ಬಗ್ಗೆ ಪುಳಕಿತಗೊಳ್ಳುವ ದಿನಗಳಿಂದ ಬದಲಾಗಿ, ನಿರಾಶಗೊಳ್ಳುವ ಆತಂಕಕ್ಕೆ ಸಿಲುಕಿಕುಳ್ಳುತ್ತಿದ್ದೇನೆ. ದೇವರೇ ರಕ್ಷಿಸು.”.. “ಹತ್ತಾರು ವರ್ಷದ ಅವೇ ಹಳೇ ಬಟ್ಟೆಗಳನ್ನು ಅದೇನಂತ ಹಾಕ್ಕೋತಿಯೋ?ಬಿಸಾಕಿ,ಬೇರೆ ಹೊಲಿಸಿಕೋ…. “ನಡುಮನೆಯಲ್ಲಿ ಬಟ್ಟೆ ಮಡಿಚಿಡುತ್ತಿದ್ದ ಅಮ್ಮ ಕೂಗಿದಳು. “ಅವೇನು ಹರಿದಿಲ್ಲವಲ್ಲಮ್ಮ..? ಹೊಸದ್ಯಾಕೆ ಬೇಕು?”-ಹರೆಯದ ದಿನಗಳನನ್ನ ಹಳೇ ದಿನಚರಿ ಪುಸ್ತಕದಲ್ಲಿ ಸ್ವತಂತ್ರ ದಿನಾಚರಣೆಯ ದಿನ ಬರೆದದ್ದನ್ನು ಓದುವುದನ್ನು ನಿಲ್ಲಿಸಿ, ತಲೆ ಎತ್ತಿ ಕೂಗಿ ದಬಕ್ಕನೆ ಇಹಲೋಕಕ್ಕೆ ಬಂದೆ.ಇವತ್ತು ಕೂಡ ಇನ್ನೊಂದು ಸ್ವತಂತ್ರ ದಿನಾಚರಣೆ. ಹಾಗೆಂದೇ ನನ್ನಲ್ಲಿ ಈ ತಾದಾನ್ಮ್ಯತೆ.  ಅಮ್ಮ ಹೇಳುತ್ತಿದ್ದುದು ಸರಿಯೆಂದು ಗೊತ್ತಿದ್ದರೂ ಹತ್ತು ವರ್ಷಗಳಿಂದ ಹೇಳುತ್ತಿದ್ದ ಅದೇ ಉತ್ತರ ಹೇಳಿದೆ.ಅಮ್ಮನಲ್ಲವೇ…..ದಬಾಯಿಸಿಬಿಡಬಹುದು! “ಈಗೆಲ್ಲ ಈ ತರದವನ್ನು ಜನ ಹಾಕ್ಕೊಳಲ್ಲ.ಫ್ಯಾಷನ್ ಬದಲಾಗಿದೆ. ಜನ ಆಡ್ಕೊಂಡ್ ನಗ್ತಾರೆ….” ಅಮ್ಮನೇನು ಬಿಡುವವಳಲ್ಲ. “ಆಡ್ಕೊಂಡ್ ನಗಲಿ ಬಿಡು.ನಾನು ಯಾರಿಗೇನು ತೊಂದರೆ ಮಾಡ್ತಿಲ್ವಲ್ಲ.ಈ ಜನರಿಗೆ ಯಾರು ಅವರಿಗೆ ಹಾನಿ ಮಾಡ್ತಿದ್ದಾರೆ ಅನ್ನೋ ಅರಿವಿದ್ರೆ ತಾನೆ..” “ಏನೋಪ್ಪ..,ಬೇಕಾದಷ್ಟು ದುಡೀತೀಯ.ವಯಸ್ಸಿದೆ,ಎಲ್ಲರಂಗಿರು ಅಂತ ಹೇಳಿದೆ… “ಅಮ್ಮ ಅಲ್ಲಿಗೆ ಸುಮ್ಮನಾದಳು. ಮನಸ್ಸಲ್ಲಿ ಏನೆಂದುಕೊಂಡಳೋ ಯಾರಿಗೆ ಗೊತ್ತು? ಭಾರತ ಬಿಟ್ಟು ೧೫ ವರ್ಷವಾಯ್ತು.ಇಪ್ಪತ್ತೈದು ವರ್ಷದ ವಯಸ್ಸಿನಲ್ಲಿ ಇದ್ದ ಆಕಾರದಲ್ಲೇ ಈಗಲೂ ಇದ್ದೇನೆ.ಮನಸ್ಥಿತಿ, ಕಾಲಗತಿಯಲ್ಲೂ….. ಹರಿಯದ ಬಟ್ಟೆಗಳನ್ನು ಎಸೆಯದೆ,ಬೆಳೆಸಿಕೊಂಡ ಭಾವನೆಗಳನ್ನು ಹರಿದುಕೊಳ್ಳದೆ ಗಡಿಯಾರದಂತೆ ಪ್ರತಿ ಆಗಷ್ಟ್ ಗೆ ಸರಿಯಾಗಿ ಭಾರತಕ್ಕೆ ಮರಳಿದ್ದೇನೆ. ಅದೇ ಹಳೆಯ ಬಟ್ಟೆಗಳನ್ನು ಅಲೆಮಾರಿನಿಂದ ತೆಗೆದು ಉಟ್ಟು, ಪರಕಾಯ ಪ್ರವೇಶ ಮಾಡಿದಂತೆ ಹುದುಗಿಕೊಂಡಿದ್ದೇನೆ.ಕಾಲಕ್ರಮದಲ್ಲಿ ನಾನೊಂದಾಗಿದ್ದಾಗ ನನಗನಿಸಿದ್ದ ಎಲ್ಲ ಭಾವನೆಗಳಿಗೆ ಮರುಜೀವ ನೀಡಿ ಅಪ್ಯಾಯಕರವಾದ ಹಲವು ಭಾವನೆಗಳನ್ನು ಮೆಲುಕು ಹಾಕಲು ತವಕಿಸುತ್ತೇನೆ. ೨ ನಡುಮನೆಯಲ್ಲಿ ಅಮ್ಮ ಮಾತನಾಡುತ್ತಿದ್ದಳು. “ಚೆನ್ನಾಗಿದ್ದೀರ? …ಹೌದು.. ಮಗ-ಸೊಸೆ ಬಂದು ಒಂದು ವಾರ ಆಯ್ತು. ಇಲ್ಲ. ಸೊಸೆ ಮಕ್ಕಳನ್ನು ಕರ್ಕೊಂಡು ಅವರಮ್ಮನಮನೆಗೆ ಹೋಗಿದ್ದಾಳೆ….ಇಂಗ್ಲೆಂಡಿನಲ್ಲೇ ಇರಲ್ವಂತೆ. ಬರ್ತೀನಿ ಅಂತಾನೆ ಇರ್ತಾನೆ..ಅದೇನು ಮಾಡ್ತಾನೋ ಗೊತ್ತಿಲ್ಲ… ನನಗೇನೋ ಬರ್ತಾನೆ  ಅನ್ನಿಸುತ್ತೆ.ಅದ್ರೂ ಹೇಳಕ್ಕಾಗಲ್ಲ…ದೇವರಿಟ್ಟಂತೆ ಅಗ್ಲಿ ಬಿಡಿ ಗಂಗ, ನನ್ನ ಕೈ ಲೇನಿದೆ ಹೇಳಿ…” ಅಮ್ಮ ತನ್ನ ಗೆಳತಿ ಗಂಗಾಂಬಿಕೆಯ  ದೂರವಾಣಿ ಕರೆಗೆ  ಕಿವಿಯೊಡ್ಡಿದ್ದಳು. ನನ್ನ ಅಕ್ಕ ಮತ್ತು ಭಾವ ಇದೇ ದೇಶದಲ್ಲಿದ್ದು ಅಮ್ಮನನ್ನು ನೋಡಿಕೊಳ್ಳುತ್ತಿರುವುದರಿಂದ ಅಮ್ಮನ ಬಗ್ಗೆ ಆತಂಕವಿಲ್ಲ, ಭಾವ ಅಮ್ಮನ ಕೊನೆಯ ತಮ್ಮನೂ ಆಗಿರುವುದರಿಂದ ಅಳಿಯ ಎಂಬ ಹಂಗಿಲ್ಲ. ಗಂಡುಮಗ ಜೊತೆಯಲ್ಲಿಲ್ಲದ ಕೊರತೆ ಅಮ್ಮನ ಮಾತಲ್ಲಿ ಕಾಣಿಸುತ್ತಿತ್ತು. ಆದರೆ, ನಿರಾಸೆಯನ್ನು ಹತ್ತಿಕ್ಕಿ, ನಿರುಮ್ಮಳವಾಗಿ ಗೆಳತಿಯ ಜೊತೆ ಅಮ್ಮ ಮಾತು ಮುಂದುವರಿಸಿದಳು. “ಬೆಂಗಳೂರಲ್ಲಿ ಬೇಕದಷ್ಟು ಆಸ್ತಿ ಮಾಡಿದ್ದಾರಲ್ಲ…ಹೌದು… ಒಂದು ಫ್ಲಾಟ್ ಇದೆ, ಮನೆ ಇದೆ.ಎರಡನ್ನೂ ಬಾಡಿಗೆಗೆ ಕೊಟ್ಟಿದ್ದಾನೆ.ಬೇಕಾದಷ್ಟು ಬಾಡಿಗೆ ಬರುತ್ತೆ.ಲಂಡನ್ನಿನಲ್ಲೇನು…ಅವರಿಗೆ ಬೇಕಾದಂತೆ ಸಂಬಳ…ಕೈಗೊಂದು,ಕಾಲಿಗೊಂದು ಆಳು…ಎರಡೆರಡು ಕಾರು…ಗೊತ್ತಲ್ಲ, ಆ ದೇಶದ ದುಡ್ಡಿಗೆ ಡಾಲರಿಗಿಂತ ಭಾರೀ ಬೆಲೆಯಂತಲ್ಲ……?“ ನಾಲ್ಕನೇ ತರಗತಿಗೆ ಓದು ನಿಲ್ಲಿಸಿ, ೧೬ ಕ್ಕೆಲ್ಲ ಮದುವೆಯಾದ ಅಮ್ಮನಿಗೆ ಯಾವ ಕೊರತೆಯೂ ಇರಲಿಲ್ಲ. ಕೈ ತುತ್ತು ನೀಡಿ ಬೆಳೆಸಿದ ಮಗನ ಅಗಲಿಕೆಯ ನೋವನ್ನು ಅವನ ದುಡ್ಡಿನ ಬಗೆಗಿನ ಬೊಗಳೆಯಲ್ಲಿ ಮುಳುಗಿಸಿ.ಗೆಳತಿಯ ಮುಂದೆ ತೇಲಿಬಿಡುತ್ತಿದ್ದಾಳೆ. ಸಂಬಂಧಗಳು ಸಮುದ್ರದ ಎರಡೆರಡು ದಿಕ್ಕಿನಲ್ಲಿ ಹರಡಿಕೊಂಡರೂ ಹಣದ ಮೇಲ್ಮೈ ಅಡಿ ಅಗಲಿಕೆಯ ನೋವನ್ನು ಬಚ್ಚಿಟ್ಟು ಸಮಾಜದಲ್ಲಿ ಮೂಗೆತ್ತಿ ನಡೆವ ಅಮ್ಮನ ಕುಶಲತೆಗೆ ತಲೆಬಾಗಬೇಕೇನೋ……! ಅಮ್ಮನನ್ನು ಬಿಗಿದಪ್ಪಿ ಬಾಚಿ ಕೂರಬೇಕೆಂದು ಎಷ್ಟೋ ಸಾರಿ ಅನ್ನಿಸುತ್ತದೆ,ತಂದೆ ತೀರಿದ ಮೇಲೆ ಮೊಮ್ಮಕ್ಕಳ ಸ್ಪರ್ಷ ಬಿಟ್ಟರೆ ಅವಳಿಗೆ ಬೇರಿಲ್ಲ. ಹಾಗೆ ಮಾಡಿದರೆ ಅವಳು ಕೊಸರಿಕೊಂಡರೂ ಒಳಗೊಳಗೆ ಸಂತಸ ಪಡುತ್ತಾಳೆಂದೂ ನನಗನಿಸಿದೆ. ಆದರೆ ಪರಸ್ಪರ ವರ್ಷಕ್ಕೊಮ್ಮೆ ಎದುರಾದಾಗ ಹಸ್ತವನ್ನು ಅದುಮಿಕ್ಕಿದ್ದಕ್ಕಿಂತ ಹೆಚ್ಚು ಮಾಡಿಲ್ಲ. ಪರದೇಶಿಯಾದ ನಾನು ಒಂದಿಷ್ಟೂ ಸ್ವದೇಶಿತನವನ್ನು ಬಿಟ್ಟಿಲ್ಲ. “ ಅಯ್ಯೋ ನೀನೇನೋ…ನೀನು, ನಿನ್ನ ಮಕ್ಳು ಎಲ್ಲ ಹೋಟೆಲಿನಲ್ಲಿ ನಮ್ಮ ತರಾನೇ ತಿಂದಿರಲ್ಲೋ…ಶಾರದಮ್ಮನ ಮಗಳು- ಗಂಡ ಅಮೆರಿಕದಿಂದ  ಬಂದಾಗ ನೀನು ನೋಡಬೇಕಿತ್ತು…. ಅವರ ಊಟದ ಕಟ್ಟುಪಾಡೇನು… ನೀರಿನ ವ್ಯವಸ್ಠೆಯೇನು…ಇಡೀ ಮೂರು ವಾರ ಅವರ ಮನೆಯಲ್ಲಿ ನಡೆದದ್ದು ಮುಂದಿನ ಮೂರು ತಿಂಗಳ ಕಾಲ ನಮ್ಮ ಮಹಿಳಾ ಸಂಘದಲ್ಲಿ ಚರ್ಚೆಯಾಯ್ತು…” ಅಂತ ಅಮ್ಮ ಒಮ್ಮೆ ಹೇಳಿದ್ದಳು.ಅಮ್ಮನ ಈ ಮಾತಲ್ಲಿ ನಿರಾಶೆಯ ಸುಳಿವಿತ್ತು ಎನ್ನುವಲ್ಲಿ ನನಗೆ ಸಂಶಯವಿರಲಿಲ್ಲ. ಅಮ್ಮ ನನ್ನ ಬಗ್ಗೆ ಏನು ತಾನೇ ಹೇಳಿಕೊಳ್ಳಲು ಸಾಧ್ಯವಿತ್ತು? ನನ್ನಲ್ಲಿ ಪರದೇಶದ ದುಡ್ಡಿನ ಯಾವ ಗತ್ತುಗಳೂ ಇರಲಿಲ್ಲ. ಒಮ್ಮೊಮ್ಮೆ ಈ ಜಟಿಲ ಸಮಾಜ ಪರದೇಶದಿಂದ ಬಂದ ಭಾರತೀಯರು ಪಾಸ್ಚಿಮಾತ್ಯರ ರೀತಿಯೇ ವರ್ತಿಸಲಿ ಎಂದು  ನಿರೀಕ್ಷಿಸುತ್ತದೆ. ಅದನ್ನು ನೋಡುವ ಅರೆಕ್ಷಣದ ಮನರಂಜನೆಯನ್ನು ಬಿಟ್ಟರೆ ಅದರಿಂದ ಇವರಿಗೆ ಗಿಟ್ಟುವುದಾದರೂ ಏನು?ಭಾರತೀಯತೆಯಲ್ಲಿ ಮೀಯಲು ಸಾವಿರಾರು ಮೈಲಿ ಹಾರಿಬರುವ ನಮಗೆ ಕೆಲವೊಮ್ಮೆ ನಿರಾಶೆ ಕಟ್ಟಿಟ್ಟ ಬುತ್ತಿ.ಪರದೇಶದಲ್ಲಿ ಭಾರತೀಯರಂತಿರುವ ನಮಗೆ,ಭಾರತಕ್ಕೆ ಮರಳಿದಾಗ ಪಾಶ್ಚಾತ್ಯರಂತೆ ವರ್ತಿಸಬೇಕಾದ ಹಿಂಸೆ ! ವಿದೇಶದಲ್ಲಿರುವಾಗ ಭಾರತೀಯರು ಎಂಬುದನ್ನು ಮರೆತು ಬಿಳಿಯರಿಗಿಂತ ಬೆಳ್ಳಗೆ ವರ್ತಿಸಿ,ಭಾರತದಲ್ಲೂ ಅದೇ ಚಮಕ್ ತೋರಿಸುವ ಭಾರತೀಯರು ಇವರಿಗೆ ಮಾದರಿ? ಭಾರತದ ಇಂದಿನ ಸಮಾಜದಲ್ಲಿ ಪಾಶ್ಚಾತ್ಯರ ಅಂಧ ಅನುಕರಣೆ ಊಟ, ಉಡಿಗೆ, ತೊಡಿಗೆಗಳಲ್ಲಿ ಹಾಸು ಹೊಕ್ಕಿದೆ. ಇತ್ತೀಚೆಗೆ ಗೆಳೆಯರ ಸಮಾವೇಶದಲ್ಲಿ ಅಮೆರಿಕಾದ ಉಡುಗೆ ತೊಟ್ಟು, ಸಂಜೆಯಲ್ಲಿ ಕರಿಕಪ್ಪು ಕನ್ನಡಕ ತೊಟ್ಟು, ಹೆಂಡತಿಗೆ ತುಂಡುಲಂಗ ಉಡಿಸಿಕೊಂಡು ಬಂದಿಳಿದ ಗೆಳೆಯ ರವಿಯ ಸಂಸಾರದ ಜೊತೆ ಫೊಟೋ ಕ್ಲಿಕ್ಕಿಸಿಕೊಳ್ಳಲು ಸಾಲುಗಟ್ಟಿ ಸರತಿಗೆ ಕಾದ ನನ್ನ ಭಾರತೀಯ ಮಿತ್ರರ ಬಗ್ಗೆ ಕನಿಕರವಾಯ್ತು,   ಮರುಕ್ಷಣ ಫೇಸ್ಬುಕ್ಕಿನಲ್ಲಿ, ವ್ಹಾಟ್ಸಪ್ಪಿನಲ್ಲಿ ಅಮೆರಿಕಾದ ತಮ್ಮ ಮಿತ್ರರ ಜೊತೆ ತೆಗೆಸಿಕೊಂಡ ಚಿತ್ರಗಳ ರವಾನೆ ಮಾಡುತ್ತಿದ್ದರು.ಭಾರತದಲ್ಲಾದರೂ ಭಾರತೀಯ ಉಡುಗೆ ಉಡುವ ಅವಕಾಶ ಇದೆ  ಎಂದು ತಿಳಿದು ಅಪ್ಪಟ ಭಾರತೀಯ ತೊಡುಗೆಯಲ್ಲಿದ್ದ ನಮ್ಮನ್ನು  ಕೇಳುವವರಿರಲಿಲ್ಲ. ಕನ್ನಡದಲ್ಲಿ ಮಾತಾಡುತ್ತಿದ್ದವರು ಬಹುಶಃ ನಾವಿಬ್ಬರೇ! ಊಟಕ್ಕೆ ಫ್ರೆಂಚ್ ಮೆನ್ಯು. ಜೊತೆಗೆ ಪಿಜ್ಜ, ಬರ್ಗರ್ರು ಗಳೇ…. ಮನೆ ಬಿಟ್ಟು ಹೊರಹೋದರೆ ಇಂಗ್ಲೆಂಡಿನಲ್ಲಿ ಇಂತವೇ ಊಟಗಳ ಹೊರತು ಇನ್ನೊಂದು ಸಿಗುವುದಿಲ್ಲ. ಭಾರತದಕ್ಕೆ ಬಂದಾಗಲೂ ಫ್ರೆಂಚ್,ಇಟಲಿಯ ಊಟ ಮಾಡಲು ನನಗೂ-ಸುಮಿಗೂ ಬೋರು ಹೊಡೆದಿತ್ತು. ತಮ್ಮ ಜಾನಿ –ವಾಕರ್ ಬಾಟಲ್ ಗಳನ್ನು ಮುಖದ ಮುಂದೆ ಹಿಡಿದುಕೊಂಡು ಫ್ಹೋಟೊ ಕ್ಲಿಕ್ಕಿಸಿಕೊಂಡು ರೊಯ್ಯನೆ ವಾಟ್ಸಪ್ಪಿಗೆ ರವಾನಿಸುವುದನ್ನು ಮಾತ್ರ ಮರೆಯದ ಗೆಳೆಯರು ಸಂತೋಷವಾಗಿರುವುದನ್ನು ಬಿಟ್ಟು ತೋರಿಕೆಯ ಆಟಗಳಲ್ಲಿ ಸಂತೋಷ ಕಾಣುವುದನ್ನು ಕಂಡೆವು. ಬಾಯಿ ತುಂಬಾ ಮನಸ್ಪೂರ್ವಕವಾಗಿ ಮಾತಾಡಿ , ಹಳೆಯ ದಿನಗಳನ್ನು ನೆನೆದು ಮನಸಾರೆ ನಗೋಣ ಅಂತ ಬಂದ ನನಗೆ ಪೆಚ್ಚಾದದ್ದು ಸುಮಿಗೂ ತಿಳಿಯಿತೇನೋ. ಅವಳು ಅದನ್ನು ತೋರಿಸಲಿಲ್ಲ. ನೂರಾರು ವರ್ಷಗಳ ತಮ್ಮ ಸಾಮಾಜಿಕ ದಿನಚರಿಯಲ್ಲಿ ಸಹಜವಾಗಿ ಮುಳುಗಿರುವ ಪಾಶ್ಚಿಮಾತ್ಯರು…ಅವರ ಅಂಧ ಅನುಕರಣೆಯಲ್ಲಿ ಅಂತಹಃಕರಣ ಕಳೆದುಕೊಳ್ಳುತ್ತಿರುವ ಭಾರತೀಯ ಸಮಾಜಕ್ಕೆ ಏನಾಗಿದೆ…?ಪ್ರತಿ ಆಂಗ್ಲನಲ್ಲಿ ತಾನು ಆಂಗ್ಲನೆಂದು ಇರುವ ಹೆಮ್ಮೆ,ಭಾರತೀಯನಲ್ಲಿ ಆಳವಾಗಿ ಬೇರು ಬಿಟ್ಟಿರುವ ಕೀಳಿರಿಮೆಗಳ ವ್ಯತ್ಯಾಸ ಡಣಾಡಾಳಾಗಿ ಕಾಣುತ್ತದೆ.ಇದನ್ನೇ ಬಳಸಿಕೊಂಡು ಕಳೆದ ಹತ್ತು ವರ್ಷಗಳಲ್ಲಿ ಕುಸಿಯುತ್ತಿರುವ ತಮ್ಮ ದೇಶದ ಮಾರುಕಟ್ಟೆಗಳನ್ನು ಮತ್ತೆ ಬೆಳೆಸಿಕೊಳ್ಳಲು ಭಾರತದಂತಹ ದೇಶಗಳಿಗೆ ಬರುತ್ತಿರುವ ಮಾರುಕಟ್ಟೆಯ ಸರದಾರರು ಭಾರತೀಯರಿಗೆ ಮೂಗುದಾರ ಹಾಕಿ ಗುಲಾಮಗಿರಿಗೆ ತೊಡಗಿಸಿಕೊಳ್ಳುತ್ತಿದ್ದಾರೆ. ಕತ್ತೆಗಳಿಗೆ ಕೋಲಿದ್ದವನೇ ಮಾಲೀಕ…. ಮನಸ್ಸು ಹಿಂದಕ್ಕೆ ಓಡಿತು….  ಗಾಂಧೀಜಿಯ ಆತ್ಮ ಚರಿತ್ರೆ ನನ್ನ ಮೆಲೆ ಗಾಢ ಪರಿಣಾಮ ಬೀರಿತ್ತು. ಇಂಗ್ಲೆಂಡಿಗೆ ಹೊರಟಾಗ  ಯಾವ ಪರಿಸ್ಥಿ ತಿಯಲ್ಲೂ ಬದಲಾಗದ ಹಠಮಾರಿ ಸ್ವಭಾವದ ಗಾಂಧಿಗೆ ಇಂಗ್ಲೆಂಡಿನಲ್ಲಿ ಓದಿನ ಬಳಿಕವೇ ಭಾರತದ ಸ್ವತಂತ್ರದ ಅರಿವು ಮೂಡಿತೆಂಬ ಸಮಜಾಯಷಿ ಹೇಳಿಕೊಂಡಿದ್ದೆ.ತರಭೇತಿಯ ನೆಪದಲ್ಲಿ ಹೊರಟು, ಹೊಟ್ಟೆ ಪಾಡಿನ ಹೆಸರಲ್ಲಿ ಇನ್ನೂ ಪರದೇಶದಲ್ಲೇಇದ್ದೇನೆ.ಯಾವ ಗಿಂಬಳವೂ ಇಲ್ಲದೆ, ತೆರಿಗೆ ವಂಚಿಸದೆ ಕೂಡಿಟ್ಟ ಪ್ರತಿ ಪೌಂಡನ್ನು ಭಾರತದ ರೂಪಾಯಿಯಾಗಿಸಿ ಭಾರತದಲ್ಲಿ ನೆಲವನ್ನು ಕೊಂಡು ಭಾರತೀಯನಾಗಿ ಹಿಂತಿರುಗುವ ಕನಸನ್ನು ಮುಂದುವರಿಸಿದ್ದೇನೆ.ಆದರೆ ಕಾರಣವೇ ಇಲ್ಲದೆ ಸಾವಿರಾರು ಪಟ್ಟು ಜಿಗಿದ ಭಾರತದ ಕರಾಳ ಮಾರುಕಟ್ಟೆಗೆ ನನ್ನ ದುಡಿಮೆ ಸಾಕಾಗಲಿಲ್ಲ.ತೆಗೆದ ಸಾಲಗಳಿಗೆ ಈಗಲೂ ಹಣ ತುಂಬುತ್ತಿದ್ದೇನೆ… ಮನೆಯಿಂದ ನಡೆದು ಹತ್ತಿರದಲ್ಲಿರುವ ಸ್ಟೇಡಿಯಂ ತಲುಪಿದೆ. ಜನಜಂಗುಳಿ ಸೇರಿತ್ತು. ಹಲವಾರು ಪೋಷಕ ವೃಂದದ ಜೊತೆ ಇದ್ದವರೆಲ್ಲ ಬರೀ ಪಡ್ಡೆ ಹುಡುಗರು. ಸ್ವಯಂ ಸೇವಕರು, ನಿವೃತ್ತರಾದ ಶಿಕ್ಷಕರು, ಬಿಳೀ ಟೋಪಿ ತೊಟ್ಟ ದೇಶ ಭಕ್ತರು ನಿಧಾನವಾಗಿ ಇಲ್ಲಿಗೆ ಬರುವುದನ್ನು ನಿಲ್ಲಿಸಿದ್ದಾರೇನೋ? “ಎಕ್, ದೋ,ತೀನ್..ಚಾ..ರ್…” ರಂಗು ರಂಗಿನ ಬಣ್ಣದ ಬಟ್ಟೆ ತೊಟ್ಟ ವಿವಿಧ ಶಾಲೆಗಳ ಮಕ್ಕಳು ಸ್ವತಂತ್ರ ದಿನಾಚರಣೆಯ ಕವಾಯತಿನಲ್ಲಿ ತೊಡಗಿಕೊಂಡಿದ್ದರು. ಈ ದಿನ ನಾನು ಪ್ರತಿ ವರ್ಷದಂತೆ ಸ್ಟೇಡಿಯಂನಲ್ಲಿ ತಪ್ಪದೆ ಹಾಜರ್. ಒಂದೊಮ್ಮೆ ನಾನು ಈ ಮಕ್ಕಳಲ್ಲಿ ಒಬ್ಬನಾಗಿದ್ದೆ. ಹೀಗೇ ಕವಾಯತು ಮಾಡಿ, ನಮ್ಮ ಭಾರತದ ಬಗ್ಗೆ ಹೆಮ್ಮೆಯಿಂದ ಬೀಗಿದ್ದೆ. “ನಿಮಗೇಕೆ ಕೊಡಬೇಕು ಕಪ್ಪ…., ನೀವೇನು ಇಷ್ಟರಾ..ಒಡೆಯರಾ…” -ಎಂದು ಕೇಳುವ ಕಿತ್ತೂರು ರಾಣಿಯ ಪಾಠವನ್ನು ಓದುವಾಗ ಕಣ್ಣೀರು ಹಾಕಿದ್ದೆ. ಈಗ ಪ್ರತಿ ವರ್ಷಕ್ಕೊಮ್ಮೆ ಇಂಗ್ಲೆಂಡಿನ ಜನತೆಗೆ ಸೇವೆ ಸಲ್ಲಿಸಿ ಗಳಿಸಿದ ದುಡ್ಡಿನಲ್ಲಿ ಸ್ವತಂತ್ರ ಭಾರತದ ಮಾರುಕಟ್ಟೆಯಲ್ಲಿ ಸಿಗದ ಸೌಲಭ್ಯಗಳಿಗಾಗಿ, ನಿಯತ್ತಿಗಾಗಿ, ಸಮಾನತೆಗಾಗಿ ತಪ್ಪದೆ ಕಪ್ಪವನ್ನು(ತೆರಿಗೆ) ಕಟ್ಟಿ ಧನ್ಯನಾಗುತ್ತಿದ್ದೇನೆ.ಇದು ನಾನು  ಭಾರತದ ಪಟ್ಟಭದ್ರ ಹಿತಾಸಕ್ತಿಗಳಿಂದ ಗಳಿಸಿದ ಮುಕ್ತಿಗಾಗಿಯೂ ಇರಬಹುದು! ಎಲ್ಲರೂ  ಆಶೆಗಳನ್ನು ಕೈಬಿಟ್ಟಿದ್ದಾರೆ. ಮಾಧ್ಯಮಗಳು ರಾಜಕೀಯದ ಉಧ್ಯಮಿಗಳ ಕೈ ವಶವಾಗಿದೆ! ನ್ಯಾಯಾಲಯಗಳು ಕಣ್ಣಿಲ್ಲದೆ ಕೆಲಸ ಮಾಡುತ್ತಿವೆ.ಪೋಲಿಸರು ತಮಗೇ ದಕ್ಕಿರದ ನ್ಯಾಯ, ಸ್ವಾತಂತ್ರಗಳಿಗೆ ಹೋರಾಡುವಲ್ಲಿ ಕೂಡ ಹತಾಶರಾಗಿ ರಾಜೀನಾಮೆ ಕೊಡುತ್ತಿದ್ದಾರೆ.ಶಿಕ್ಷಣ ಖರೀದಿಗಿದೆ.ಹೊಸದಾಗಿ ಹರಿದಾಡುತ್ತಿರುವ ವಾಣಿಜ್ಯ ಬೆಳವಣಿಗೆಗೆ ಪ್ರತಿಯಾಗಿ ಬೆಳೆಯದ ಸೌಲಭ್ಯಗಳಿಂದ ಇಡೀ ವ್ಯವಸ್ಥೆ ನಲುಗಿದೆ. ಇವರ ಮಧ್ಯೆ ದೇವರ ಹೆಸರಿನ ದೊಡ್ಡ ದಂಧೆ ನಡೆದಿದೆ.

ಕಥಾ ಯಾನ Read Post »

ಕಥಾಗುಚ್ಛ

ನೂರು ಪದಗಳಮೂರು ಕಥೆಗಳು

ಕಥೆಗಳು ಡಾ.ಪ್ರೇಮಲತ ಬಿ. ಸಮಸ್ಯೆ ಆ ಮನೆಯಲ್ಲಿದ್ದ ಎಲ್ಲರೂ ಚಿಂತಾಕ್ರಾಂತರಾಗಿದ್ದರು. ವಿಷಯವೂ ಗಂಭೀರದ್ದೇ ಆಗಿತ್ತು. ಸಮಸ್ಯೆಯ ಜಾಡನ್ನಿಡಿದು ಅದು ಹೇಗೆ ಶುರುವಾಯ್ತು, ಹೇಗೆ ಬೆಳೆಯಿತು ಎಂದು ಮತ್ತೆ ಮತ್ತೆ ಎಷ್ಟು ಯೋಚಿಸಿದರೂ ಅದಕ್ಕೊಂದು ಉತ್ತಮ ಪರಿಹಾರ ಹೊಳೆದಿರಲಿಲ್ಲ. ಒಂದು ರೀತಿಯ ಒಪ್ಪಂದಮಾಡಿಸಿದರೆ, ನಿಮ್ಮಿ ಮತ್ತು ಶೈಲಜಾರ ಬದುಕು ಹಸನಾಗುತ್ತಿತ್ತು ಆದರೆ ರಾಘವನಿಗೆ ಘೋರ ಅನ್ಯಾಯವಾಗುತ್ತಿತ್ತು. ರಾಘವನ ಕಡೆ ವಾಲಿದರೆ ಇಡೀ ಸ್ತ್ರೀ ಕುಲಕ್ಕೇ ಮಸಿ ಬಳೆವಂತ ಪರಿಹಾರ ಹೇಳಿದ ಪಾಪ  ವೆಂಕಣ್ಣಯ್ಯನ ಹೆಗಲೇರಿ ಕಾಡುತ್ತಿತ್ತು. ಈ ಸಂದಿಗ್ದದಲ್ಲಿ ದಿನಕ್ಕೊಂದು ರೀತಿಯಲ್ಲಿ ಸಮಸ್ಯೆ ಬಗೆಹರಿಸಲು ವೆಂಕಣ್ಣಯ್ಯ ಯೋಚಿಸುತ್ತಿದ್ದರಾದರೂ ಅದನ್ನು ನಿಜವಾಗಿ ಕಾರ್ಯರೂಪಕ್ಕೆ ಇಳಿಸಲು ಅವರಲ್ಲಿ ಧೈರ್ಯ ಸಾಲುತ್ತಿರಲಿಲ್ಲ.  ಬದುಕೇ ಹೀಗಲ್ಲವೇ? ಅದೇನು ಪರಿಹಾರವನ್ನು ದೃಷ್ಟಿಯಲ್ಲಿಟ್ಟುಕೊಂಡೇ ಶುರುವಾಗುತ್ತವೇನು? ಬದುಕನ್ನು ಕಟ್ಟುತ್ತ ಕಟ್ಟುತ್ತ ದಾರಿ ಕಂಡುಕೊಳ್ಳುತ್ತ ಸಾಗಬೇಕು. ಒಳ್ಳೇ ಪೇಚಿನಲ್ಲಿ ಸಿಕ್ಕಿಬಿಟ್ಟೆನಲ್ಲ?ಎಂದುಕೊಂಡರು. ಹಾಗಂತ ಅಂತ್ಯದಲ್ಲಾದರೂಸಮಸ್ಯೆಗೆ ಒಂದು ಒಳ್ಳೆಯ ಪರಿಹಾರ ಇಲ್ಲದಿದ್ದರೆ ಏನು ಚೆನ್ನಾಗಿರುತ್ತದೆ? ವೆಂಕಣ್ಣಯ್ಯ ಐವತ್ತನೇ ವಯಸ್ಸಿನಲ್ಲಿ ಹೊಸದಾಗಿ ಕಥೆ ಬರೆಯಲು ಶುರುಮಾಡಿದ್ದು ತಾನೇ? ಅದೂ ಮೊದಲ ಕಥೆ! ———- ರಕ್ಷಣೆ-ಭಕ್ಷಣೆ ಯಾಕೋ ಬಟ್ಟೆಚೀಲ ವಾಪಸ್ತಂದೆ? ಹೋಗೋದ್ರೊಳಗೆ ತುಂಕೂರಿಗೆ ಕರ್ಕೊಂಡೋಗ್ಬಿಟ್ಟಿದ್ರು… ಅಯ್ಯೋ ಹಾಕ್ಕೊಳ್ಳೋಕೆ ಒಂದುಬಟ್ಟೆಇಲ್ಲ, ಕೈಯಲ್ಲೊಂದು ಕಾಸಿರ್ಲಿಲ್ಲ..ಈಗೇನ್ಮಾಡೋದು? ಅದಿರ್ಲಿ..ಈಗನಮ್ಮನ್ನೂ ಚೆಕ್ಮಾಡೋಕೆ ಬರ್ತಾರೆ ಅನ್ನಿಸುತ್ತೆ. ನಾವೇನ್ಮಾಡಿದ್ದೀವಿ ಅಂತ? ಜೊತೇಲಿದ್ವಲ್ಲಅದಕ್ಕೆ… ಮನೇಸುತ್ತ ತಗಡು ಹೊಡೀಬಹುದು.. ಯಾಕೆ ?ತಗಡುಹೊಡಿದ್ರೆ ..ಏನಾಗುತ್ತೆ? ನೋಟೀಸೂ ಅಂಟಿಸಬಹುದು.. ನಂದೀಶ…ಅವೆಲ್ಲ ಯಾಕೇಂತ ಹೇಳೋ?  ಯಾರಿಗ್ಗೊತ್ತು…ಸಾಬರೇನಾದ್ರೂ ಆಗಿದ್ರೆಇಬ್ಬರುಪೋಲೀಸರ್ನುಕಾವಲುಹಾಕ್ತಿದ್ರುಗೊತ್ತಾ?…ಇಲ್ದಿದ್ರೆ ಅವರು ತಪ್ಪಿಸ್ಕೊಂಡು ಓಡಾಡ್ತಾರಂತೆ… ನಾವು ಹಂಗ್ಮಾಡಲ್ಲ ಅಂತ ಬರಕೊಟ್ರೆ?ನಮ್ಮನ್ನೆಲ್ಲ ಕೂಡಾಕಿದ್ರೆ ಅಮ್ಮಂಗ್ ಬಟ್ಟೆ ಕೊಡೋರ್ಯಾರು? ನಿಮ್ಮಜ್ಜಿಗೆ ಫೋನ್ ಮಾಡಕ್ಕೂ ಬರಲ್ವಲ್ಲೋ?ಎಷ್ಟು ಹೆದರ್ಕೊಂಡಿರತ್ತೋ… ಜ್ವರ -ಕೆಮ್ಮು ಅಂತ ಕರ್ಕೊಂಡು ಹೋಗಿದ್ದೇ ತಪ್ಪಾಯ್ತು… ಕೈಕಾಲೇ ಆಡ್ತಿಲ್ಲ ಕಣೋ… ಒಂದೇ ಸಮನೆ ಅತ್ತಳು ಸುಭದ್ರ. –ಮರುದಿನ- ಸುಭದ್ರ-ಅಯ್ಯೋ …..ಪೋಲೀಸ್ರು.. ಈಗ್ನಮ್ಮನ್ನೂ ಕರ್ಕೊಂಡೋಗ್ತಾರೇನೋ?… ಪೋಲಿಸ್ರು-ಅಮ್ಮಾ….. ಅದೇನಂದ್ರೇ.. ಆಸ್ಪತ್ರೇಲಿ ನಿಮ್ಮವ್ವ..ಕೊರೋನಾ ಮಾರಿಗ್ ಹೆದರ್ಕೊಂಡು ಉಟ್ಕೊಂಡಿದ್ದ ಸೀರೇಲೇ ನೇಣು  ಹಾಕ್ಕೊಂಡು ಬಿಟ್ಟವ್ರೆ……… ಸ್ವಲ್ಪ ಸಮಾಧಾನ ಮಾಡ್ಕಳಿ ತಾಯಿ…. ———– ನೊಸ್ಟಾಲ್ಜಿಯ  ಮಳೆ ಬಂದು ಬಿಟ್ಟ ಸಂಜೆ,ತಂಪಾದ ಗಾಳೀಲಿ ಸುಟ್ಟ ಮುಸುಕಿದ ಜೋಳದ ವಾಸನೆ…, ಸ್ಟೇಡಿಯಂ ಮೆಟ್ಟಿಲ ಮೇಲೆ ಕೂತು,ಬೆಚ್ಚಗಿನಉಪ್ಪು-ಖಾರ, ಮಸಾಲೆ ಹಚ್ಚಿದ ಮುಸುಕಿನ ಜೋಳನ ಕಚ್ಚಿ, ಕಚ್ಚಿ ಜಗಿದು ತಿನ್ನುತ್ತ ಅದರ ಹಾಲನ್ನು  ಚಪ್ಪರಿಸೋದು ಎಂಥ ಮಜಾ…  “ ಅದಕ್ಕಿನ್ನ ಮಜಾ ಅಂದ್ರೆ, ಸ್ಕೂಲ್ ಮುಂದೆ ತಳ್ಳೋಗಾಡೀ ರಾಮಕ್ಕ ಅದೆಲ್ಲಿಂದನೋ ತರ್ತಿದ್ದ ಹಸಿರು ಕಿರು ಗಿತ್ತಳೆ ಹಣ್ಣುಗಳು. ಅದನ್ನು ಮಧ್ಯಕ್ಕೆ ಹೋಳು ಮಾಡಿ, ಚೆನ್ನಾಗಿ ಉಪ್ಪು-ಖಾರ ಹಚ್ಚಿ ಕೊಡೋಳು, ಬಾಯಿಗಿಡೋಕೆ ಮುನ್ನವೇ ಚುಳ್ಳಂತ ನಾಲ್ಗೇ ಕೆಳಗೆ ನೀರು ತುಂಬ್ಕೊಳ್ಳೋದು, ಮೊದಲು ಅದನ್ನು ನೆಕ್ಕೋದು, ಆಮೇಲೆ ಅದರ ಹುಳೀ ಸಮೇತ ನಾಲ್ಗೇ ಮೇಲೆ ಹಿಂಡಿಕೊಳ್ಳೋದು.. ಆಮೇಲೆ ಅದರ ತೊಳೆಗಳನ್ನು ಕಚ್ಚಿ, ಕಚ್ಚಿ ತಿನ್ನೋದು…ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ ಅನ್ನಂಗಿರೋದು ಈಗ ಅವನ್ನು ನೆನಸ್ಕೊಂಡ್ರೆ ಬಾಯಲ್ಲಿ ನೀರು ಬರುತ್ತೆ ಆದ್ರೆ ಉಳಿದಿರೋ ಹಲ್ಲೆಲ್ಲ ಚುಳ್ಳಂತ ನಡುಗಿಬಿಡ್ತವೆ ಬಿಡು ಮಾರಾಯ್ತಿ.. “.ಎಂದ ಶಾಮಣ್ಣ. ಕಟ್ಟಿಸಿಕೊಂಡ ಹಲ್ಲು ಸೆಟ್ಟನ್ನು ಕಟ-ಕಟನೆಂದು ಆಡಿಸಿ ಪಕ-ಪಕನೆ ನಕ್ಕಳು ಪಂಕಜಮ್ಮ. ****************************

ನೂರು ಪದಗಳಮೂರು ಕಥೆಗಳು Read Post »

ಕಥಾಗುಚ್ಛ

ಸಹನೆಯ ತೇರು

ಕಥೆ ಸುಧಾ ಹಡಿನಬಾಳ.            ರೀ, ನಿನ್ನೆ  ಅವರೆಲ್ಲಾ ನಗ್ ನಗ್ತಾ ಮಾತಾಡ್ತಿರ್ವಾಗ ನೀವ್ಯಾಕ್ರಿ ಮಂಕಾಗಿ ಕುತಿದ್ರಿ? ನೀವೂ ನಗ್ತಾ ಮಾತಾಡ್ತಾ ಇದ್ರೆ ನಂಗೆ ಎಷ್ಟು ಖುಷಿ ಆಗ್ತಿತ್ತು ಗೊತ್ತಾ’ ಎನ್ನುತ್ತ ನಿನ್ನೆಯ ಅಮ್ಮನ ಮನೆ ಸಡಗರದ ಗುಂಗಲ್ಲೇ ಗಂಡನ ಕೊರಳಿಗೆ ಜೋತು ಬಿದ್ದು ಲಲ್ಲೆಗರೆದಳು ಸ್ವಾತಿ. ಅಷ್ಟೇ ನಿರ್ದಾಕ್ಷಿಣ್ಯವಾಗಿ ಅವಳ ಕೈಗಳನ್ನು ತಳ್ಳಿ ‘ ಒಹೋ, ನಿನ್ ತರನೆ ಕಂಡವರ ಜೊತೆ ಎಲ್ಲಾ ಹಲ್ ಕಿರ್ದು ನಗ್ಬೇಕಿತ್ತಾ? ನಿಂಗೆ ನೀನು ಮದುವೆ ಆಗಿರೋಳು ಅನ್ನೋದೆ ಮರ್ತು ಹೋದಂತಿದೆ. ನಂಗಿದೆಲ್ಲ ಒಂಚೂರು ಇಷ್ಟ ಆಗೋದಿಲ್ಲ. ಈಗ್ಲೆ ಹಿಂಗಿರೋಳು ಮದುವೆಗೆ ಮುಂಚೆ ಹೇಗಿದ್ಯೊ ಏನ್ ಕತೆನೊ. ಇನ್ಮುಂದೆ ಅಲ್ಲಿ ಹೋಗಿ  ಮೊದಲಿಂತರ ಇರೋ ಕನಸು ಕಾಣ್ಬೇಡ ಹಾಂ’ ಎನ್ನುತ್ತಾ ಬೋರಲಾಗಿ ಮುಸುಕು ಎಳೆದುಕೊಂಡ. ಗಂಡನ ಮಾತಿನ ತೀಕ್ಷ್ಣತೆಗೆ, ಒಳಾರ್ಥಕ್ಕೆ ಸ್ವಾತಿ ನಲುಗಿ ಹೋದಳು.          ‌‌ ‌‌‌ ‌‌‌                   ಸ್ವಾತಿ ಕಿಲಕಿಲ ನಗುವ ಉತ್ಸಾಹದ ಚಿಲುಮೆಯಾಗಿದ್ದವಳು. ಇಡೀ ಊರಿಗೆ ಯುವರಾಣಿ ಹಾಗೆ ರಾಜಾರಸ್ಸಾಗಿ ಸಮುದ್ರ, ಹೊಲ- ಗದ್ದೆ ಹೀಗೆ ಎಲ್ಲೆಡೆ ತನ್ನ ಓರಗೆಯವರು, ಊರ ಹೈಕಳ ದಂಡು ಕಟ್ಟಿಕೊಂಡು ನಾಟಕ, ಡಾನ್ಸ ಅಂತ ನಲಿದಾಡ್ತಾ ಇರೊ ನವಿಲು ಅವಳು. ಅಪ್ಪನ ಜೊತೆ ಕತ್ತಿ ಹಿಡಿದು ತೋಟಕ್ಕೆ ಬಿಟ್ರು ಸೈ, ಅಡುಗೆ ಮನೆಯಲ್ಲಿ ಎಂಟಾಳಿಗೆ ಅಡಿಗೆ ಮಾಡಿ ಬಡಿಸೋಕು ಜೈ ಅಂತಿರೋಳು. ಹೆಸರಿಗೆ ತಕ್ಕ ಹಾಗೆ ಅಪರೂಪದ ಸ್ವಾತಿ ಮುತ್ತು. ಇಂತ ಮಗಳನ್ನ ಒಲ್ಲದ ಮನಸ್ಸಿನಿಂದ ಒಳ್ಳೆಯ ಸಂಬಂಧ , ಒಬ್ಬನೇ ಮಗ, ಅಲ್ಲೂ ರಾಜಕುಮಾರಿ ತರ ಇರ್ಬಹುದು ಅಂತ ಹೆತ್ತವರು ಮಹೇಶನಿಗೆ ಧಾರೆ ಎರೆದು ಕೊಟ್ಟರು. ಊರು – ಕೇರಿಯ  ಪ್ರೀತಿ,ಆಶೀರ್ವಾದದೊಂದಿಗೆ  ಬೆಳಕಿನ ಕಿರಣವಾಗಿ, ಮಹೇಶನ ಭಾಗ್ಯವಾಗಿ ಮನೆ ತುಂಬಿ ಬಂದವಳು ಸ್ವಾತಿ.ಆದರೆ ಅವನಿಗದು ಬೇಕಿರಲಿಲ್ಲ. ಹೇಳಿಕೊಳ್ಳಲೇನೂ ಕೊರತೆ ಇಲ್ಲ. ಮಿತಭಾಷಿ ಅತ್ತೆ, ಆಳು- ಕಾಳು , ತೋಟ, ಸ್ವಂತ ಟ್ಯಾಕ್ಸಿ ಓಡಿಸುವ ಗಂಡ. ಆದರೆ ಮದುವೆ ಸ್ವಾತಿಯ ಪಾಲಿಗೆ ಮಧುರ ಅನುಭವ ನೀಡಲಿಲ್ಲ.; ಸರಸ- ಸಲ್ಲಾಪದ ರಸ ನಿಮಿಷಗಳಾಗಿರಲಿಲ್ಲ. ಮಹೇಶನಿಗೆ ಹೆಂಡತಿಯಲ್ಲಿ ಯಾವ ಆಸಕ್ತಿ ಇಲ್ಲ. ಬೇಕಾದಾಗ ಮಡಿಲಿಗೆ ಬಂದರೆ ಮುಗಿಯಿತು. ಪಿಸು ಮಾತು, ಬಿಸಿಯಪ್ಪುಗೆ ಬೇಕಿರಲಿಲ್ಲ. ಅವಳ ಕಿಲಕಿಲ ನಗು ಅವನಿಗೆ ವರ್ಜ್ಯ. ಅದಕ್ಕೆ ಮದುವೆಯಾದ ಹೊಸದರಲ್ಲೇ ಬ್ರೇಕ್ ಹಾಕಿದ್ದ. ಅವಳ ಸೌಮ್ಯ ವದನ, ಸಹನೆಯನ್ನು ಕೆಣಕಿ ಕೊಂಕು ತೆಗೆಯುತ್ತಿದ್ದ.ಯಾವುದಕ್ಕೂ ಸೊಲ್ಲೆತ್ತದ ಸ್ವಾತಿ ಹೆಚ್ಚು – ಕಮ್ಮಿ ನಗುವುದನ್ನೇ ಮರೆತಿದ್ದಳು.ಗಂಡನ ವಿಚಿತ್ರ ವರ್ತನೆಗೆ ಕಾರಣ ಗೊತ್ತಿಲ್ಲದೆ ತಡಕಾಡುತ್ತಿದ್ದಳು. ಕಾಲ ಹೀಗೆ ಉರುಳುತ್ತಿರಲು ಸ್ವಾತಿಯ ಮಡಿಲಲ್ಲಿ ಮುದ್ದು ಕೂಸೊಂದು ಅರಳಿತ್ತು. ಮೂರು ತಿಂಗಳ ಕೂಸಿನೊಂದಿಗೆ ಮರಳಿ ಬಂದ ಸ್ವಾತಿ ಗಂಡನ ನಡೆಯಲ್ಲಿನ ಏರುಪೇರನ್ನು ಗುರುತಿಸಿದಳು. ಮೊದಲಿನಂತೆ ಮನೆಗೆ ಸರಿಯಾಗಿ ಬರುತ್ತಿಲ್ಲ. ಬಂದರೂ ತಡವಾಗಿ ಕುಡಿದು ಬರುತ್ತಿದ್ದ.ಪ್ರಶ್ನಿಸಿದರೆ ಏರು ದನಿಯಲ್ಲಿ ಗದರಿ ರಂಪಾಟ ಮಾಡಿ ಬಾಯಿ ಮುಚ್ಚಿಸುತ್ತಿದ್ದ. ಒಂದಿನ ಅಕ್ಕಿ ಗೇರುವಾಗ ಸ್ವಾತಿಯ ಅಸಹಾಯಕ ಮೌನವನ್ನು ಗ್ರಹಿಸಿ ಮನೆಯಾಳು ಮಂಜಮ್ಮ ಸತ್ಯ ಬಾಯ್ಬಿಟ್ಟಳು. ಗಂಡನ ಈ ಅನೈತಿಕ ಸಂಬಂಧವನ್ನು ಸಹಿಸಲಾರದೆ ಮುದ್ದು ಮಗಳ ಮುಂದೆ ಕಣ್ಣೀರಾಗುವುದೊಂದೆ ಸಮಾಧಾನದ ಕ್ಷಣ.ಇನ್ನೇನು ಮಾಡಿಯಾಳು? ಅವಳ ಸಹನೆ ಎಲ್ಲವನ್ನೂ ಮೌನವಾಗಿ ಒಪ್ಪಿಕೊಂಡಿತ್ತು. ಎಲ್ಲಕ್ಕೂ ಕಾಲವೆ ಪಾಠ ಕಲಿಸುತ್ತದಲ್ಲವೆ?            ‌‌‌                                ಅದೊಂದು  ರಾತ್ರಿ ಕುಡಿದ ಅಮಲಿನಲ್ಲಿ ಟ್ಯಾಕ್ಸಿ ಓಡಿಸಿಕೊಂಡು ಬರುವಾಗ ನಿಂತ ಲಾರಿಗೆ ಗುದ್ದಿಕೊಂಡು ಮಣಿಪಾಲ ಸೇರಿದ. ತಲೆಗೆ ಬಲವಾಗಿ ಏಟು ಬಿದ್ದ ಕಾರಣ ಮೆದುಳು ದೇಹದ ಮೇಲಿನ ಹಿಡಿತ ಕಳೆದುಕೊಂಡಿತ್ತು. ವೈದ್ಯರೆ ಅಸಹಾಯಕರಾಗಿ ಇರುವಷ್ಟು ದಿನ ಹೀಗೆ ಮನೆಯಲ್ಲಿ ಇರಲಿ ; ಬೇರಾವ ಚಿಕಿತ್ಸೆಯೂ ಇಲ್ಲ ಎಂದಾಗ ಜೀವಂತ ಶವದಂತೆ ಮನೆ ಸೇರಿದ್ದ.. ಸ್ವಾತಿ ಟೊಂಕ ಕಟ್ಡಿ ಈ ಅಗ್ನಿ ಪರೀಕ್ಷೆಯನ್ನೂ ಎದುರಿಸಿದಳು. ಬಿದ್ದಲ್ಲೆ ಬಿದ್ದು ನಾರುವ ಎಲ್ಲವೂ ಸರಿ ಇದ್ದಾಗ ಗುರ್ ಎಂದು ಗೂಳಿಯಂತೆ ಗುಟುರುವ ಗಂಡನ ಕೊಳಕು ಬಳಿದು ,ಕುಂಡೆ ತೊಳೆದು ಕಲ್ಲಾಗಿದ್ದಳು. ಹೀಗೆ ನಾಲ್ಕು ವರ್ಷ ಕಳೆಯಿತು. ಆರಕ್ಕೇರಲಿಲ್ಲ ಮೂರಕ್ಕಿಳಿಯಲಿಲ್ಲ ಅವನ ಆರೋಗ್ಯ. ಅದೊಂದು ಮಳೆಗಾಲದ ರಾತ್ರಿ ಉಣಿಸಿ ಕಂಬಳಿ ಹೊದೆಸಿ ತುಸು ದೂರದಲ್ಲಿ ಮಲಗಿದ್ದಳು ಸ್ವಾತಿ. ಇದ್ದಕ್ಕಿದ್ದಂತೆ ಕೆಮ್ಮಲಾರಂಭಿಸಿದ ಗಂಡನ ತಲೆ ,ಬೆನ್ನು ನೀವುತ್ತಾ ನೀರು ಕುಡಿಸಲು ಮುಂದಾದ ಮಡದಿಯ ಕೈಯಲ್ಲೆ ಕತ್ತು ವಾಲಿಸಿ ಉಸಿರು ನಿಲ್ಲಿಸಿಬಿಟ್ಡ. ಬತ್ತಿ ಹೋದ ಅವಳ ಕಂಗಳಲ್ಲಿ ಮತ್ತೆ ನೀರು ಜಿನುಗಲಿಲ್ಲ. ಬೆಳಗಾಯಿತು. ಅಕ್ಕ- ಪಕ್ಕದವರು ,ಬಂಧು- ಬಳಗದ ಹಿರೀಕರು  ಸೇರಿದರು. ಎಲ್ಲಾ ಕ್ರಿಯಾಕರ್ಮ ಮುಗಿಸಿ ಸ್ವಾತಯನ್ನು ಹೊರಗೆ ಕರೆದರು. ಮುಂದಿನ ತಯಾರಿಗಾಗಿ  ಹೆಂಗಳೆಯರು ಶುರುವಿಟ್ಟುಕೊಂಡರು. ನೀರವ ಮೌನದ ನಡುವೆ ಆ ಮನೆಯ   ಹಿರಿಯಾಳು ಬೋಳು ಬೋಳಾಗಿದ್ದ ಬಾಲ ವಿಧವೆ ಮಂಜಮ್ಮ ಏರು ದನಿಯಲ್ಲಿ  ಮೊದಲ ಬಾರಿಗೆ ದನಿ ಎತ್ತಿದಳು.” ನಿಲ್ಸಿ, ಏನು ಮೊಕ ನೋಡ್ತಿವ್ರಿ; ಸ್ವಾತವ್ವ ಈ ಮನೆಗೆ ಬೆಳದಿಂಗಳ ಚಂದ್ರನಂತೆ ನಗ್ತಾ ಬಂದೋರು. ಆದ್ರೆ ಒಂದಿನ ನೆಮ್ಮದಿ ಕಾಣ್ಲಿಲ್ಲ ಅವರು. ನಮ್ ನಡುವಿನ ಸಹನೆಯ ತೇರು ಸ್ವಾತವ್ವ. ಮತ್ತೆ ಕೆಣಕ್ಬೇಡಿ ಅವರ ಸಹನೆಯ ಹಾಂ, ಅವ್ರನ್ನು ನೆಮ್ಮದಿಯಾಗಿ ಅವ್ರಿಷ್ಡದಂತೆ ಇರೋದಕ್ಕೆ ಬಿಟ್ಬಿಡಿ. ನೀವು ಒಳಗೆ ಹೋಗ್ರಿ ಸ್ವಾತವ್ವ’ ಎನ್ನುತ್ತಿದ್ದಂತೆ ಸ್ವಾತಿ ಸೆರಗು ಬಾಯಿಗೆ ಅಡ್ಡಲಾಗಿ ಹಿಡಿದು ಒಳಗೆ ನಡೆದಳು.  **********************          ‌      ‌   ‌   ‌                                                                            ‌                   

ಸಹನೆಯ ತೇರು Read Post »

ಕಥಾಗುಚ್ಛ

ಧಾರವಾಡದ ಹೇಮಾಮಾಲಿನಿ

ಸಣ್ಣ ಕಥೆ ಬಸವರಾಜ ಹೂಗಾರ ಆಕೆ ಒಡೆದ ಪ್ರತಿಮೆಯಂತಿದ್ದಳು. ಬಿದ್ದ ಪ್ರತಿಮೆಯ ಯಾವುದೇ ಚೂರಾದ ಸಂಗತಿಯನ್ನು ಎತ್ತಿಕೊಂಡರೂ ಅಲ್ಲಿಂದ ಬಿಂಬಗಳು ಕಾಣಿಸುತ್ತಿದ್ದವು . ಆಕೆ ಹೆಚ್ಚು ಪ್ರೇಮದ ಕುರಿತು ಮಾತನಾಡುತ್ತಿದ್ದಳು ಆಕೆಯ ಡ್ರೆಸ್ಸಿನದೇ ಒಂದು ವಿಚಿತ್ರ ಡಿಸೈನ್ .ಕಟ್ಟಿಕೊಂಡ ಬಣ್ಣದ ಬಟ್ಟೆಯ ತುಣುಕುಗಳು ,ಬೊಚ್ಚು ಬಾಯಿ ,ಅರ್ಧ ಗೌನೊ ,ಬಣ್ಣದ ಗಗ್ಗರಿಯನ್ನೊ ಉಟ್ಟುಕೊಂಡು ಬಗಲಿಗೆ ಜೋಳಿಗೆ ಏರಿಸಿ ತನ್ನಷ್ಟಕ್ಕೆ ತಾನೇ ಮಾತಾಡಿಕೊಳ್ಳುತ್ತಾ ಕೆಲವು ಸಾರಿ ದಿವ್ಯ ಮೌನ ವಹಿಸುತ್ತಾ ಚಿಂದಿ ಆಯುತ್ತಿದ್ದರೆ, ಅದು ಧಾರವಾಡ ಗೊತ್ತಿದ್ದವರಾಗಿದ್ದರೆ‌  ಖಂಡಿತ  ಆಕೆ ಹೇಮಾಮಾಲಿನಿ.                ಬಾಸೆಲ್ ಮಿಷನ್ ಸ್ಕೂಲ್ ರಸ್ತೆಯಲ್ಲಿಯೋ, ಅಥವಾ ಎಲ್ಐಸಿ ಮುಂದೆಯೊ ಆಕೆ ನಡೆದು ಹೋಗುತ್ತಿದ್ದರೆ ನೋಡುವ ಹುಡುಗರಿಗೆ ತಮಾಷೆ, ಹುಡುಗರ ಹಾಸ್ಟೆಲ್ ಸುತ್ತಮುತ್ತ ಆಕೆ ಬಂದರೆ ಆಕೆಯ ಬಾಯಲ್ಲಿ ಬೈಗುಳ ಕೇಳಬೇಕಿತ್ತು . ಸ್ವರ್ಗಕ್ಕೆ ಮೂರೇ ಗೇಣು. ಅಷ್ಟು ಚಂದದ ಬೈಗುಳಗಳು.ಹುಡುಗ-ಹುಡುಗಿಯರ ಕುರಿತಾಗಿ ಆಕೆ ಬೈಯುತ್ತಿದ್ದಳು.  ಯಾರಿಗೆ  ಬೈಯುತ್ತಾಳೊ? ಯಾಕಾಗಿ ಬೈಯುತ್ತಾಳೊ? ಒಬ್ಬರಿಗೂ ಅರ್ಥವಾಗುತ್ತಿರಲಿಲ್ಲ .ಹಲಕಟ್ಟ ಭಾಷೆಯಲ್ಲಿ ಆಕೆ ಬೈಯುತ್ತಿದ್ದರೆ ನೀವು  ತಕ್ಷಣವೇ ಚೆನ್ನಾಗಿ ಮಾತನಾಡಿಸಿದರೆ ಸಾಕು ಪ್ರೀತಿಯ ಹಾದಿಗೆ ಬರುತ್ತಿದ್ದಳು .ನಾವು ಎಷ್ಟೋ ಸಾರಿ ಆಕೆಯನ್ನು ‘ಏನ್ ಮೇಡಂ ,ತುಂಬ ಸಿಟ್ಟಾಗೆದ್ದೀರಿ? ಎಂದರೆ ಆಕೆ ಗೆಳತಿ ಗೆಳೆಯನಿಗೆ ಹೇಳುವ ಅಕ್ಕರೆಯ ಮಾತುಗಳಂತೆ ತನ್ನ ಕಾಡಿಸಿದವರ, ತಾನು ಅವರನ್ನು ಸೋಲಿಸಿದ ಕಥೆ ಹೇಳುತ್ತಿದ್ದಳು .ಅದಕ್ಕೆ ಆರಂಭ ಅಂತ್ಯ ಇರುತ್ತಿರಲಿಲ್ಲ.ಚಿಂದಿ‌ ಆಯುವಾಗ ನೋಟುಗಳು ಸಿಕ್ಕ ಕತೆ, ತಾನು ಬೆಳಗ್ಗೆ ನಾಷ್ಟಾ ಮಾಡಿದ ಕತೆ ,ಒಬ್ಬರ ಹತ್ತಿರ ಇಟ್ಟ ಗಂಟಿನ ಕತೆ,ಯಾವುದೋ ಹುಡುಗಿ ಇನ್ನಾವುದೋ ಹುಡುಗನಿಗೆ ಮೋಸ ಮಾಡಿದ ಕತೆ ,ಕೈಕೊಟ್ಟು ಹೋದರೂ ಪ್ರಾಮಾಣಿಕವಾಗಿ ನಡಕೊಂಡ ವ್ಯಥೆ, ಆಕೆ  ಲೊಚಗುಟ್ಟುತ್ತ ಮುಂದೆ ಹೋಗುತ್ತಿದ್ದರೆ ಆಕೆಯನ್ನು ನೋಡಿದ ಯಾರಾದರೂ ಇದು ಪ್ರೇಮದ ಕೇಸೆ ಎನ್ನುತ್ತಿದ್ದರು. ಆಕೆಯನ್ನು ಸಿಟ್ಟಿಗೆಬ್ಬಿಸಿ ಜೀವನದಲ್ಲಿ ಯಾರಿಂದಲೂ ಬೈಸಿಕೊಳ್ಳದವರು ಹಲಕಟ್ಟ ಬೈಗುಳ ಬೈಸಿಕೊಂಡ ದೊಡ್ಡಪಡೆಯೇ ಕರ್ನಾಟಕದಲ್ಲಿ ಇದೆ. ಹಾದಿಯಲ್ಲಿ ಹೊರಟರೆ ‘ನೋಡಲೇ ಅಲ್ಲಿ ,ಹೇಮಾ ಬರಕತ್ತ್ಯಾಳ ಎನ್ನುವವರೆ.  ಆಕೆ ಇಂಗ್ಲಿಷ್ ಮಾತನಾಡುತ್ತಿದ್ದಳು. ಧಾರವಾಡ ಆಧುನಿಕತೆಗೆ ಕಣ್ಣು ತೆರೆಯುತ್ತಿರುವಾಗಲೇ ಧಾರವಾಡದ ಆಧುನಿಕ ಹೆಂಗಸರಂತಿದ್ದಳು.ಕೇಳುಗರಿಗೆ ಕರುಣೆಯ ಲೆಕ್ಕದಲ್ಲಿ ಹುಷಾರಿನ ಪಾಠ ಹೇಳುತ್ತಿದ್ದಳು .ವಯಸ್ಸಿನ ಹೆಂಗಸಾಗಿದ್ದರೂ ಕಾಲೇಜಿನ ಹುಡುಗ-ಹುಡುಗಿಯರಿಗೆ ಯಾಕೆ   ಆಕರ್ಷಣೀಯ ಕೇಂದ್ರವಾಗಿದ್ದಳು?ಕಳೆದುಕೊಂಡಿದ್ದನ್ನ ಹುಡುಕುತ್ತಿದ್ದಳೊ? ಸಿಗುವದಿಲ್ಲ‌ ಎಂದು ಗೊತ್ತಿದ್ದರೂ ಕನವರಿಸುತ್ತಿದ್ದಳೊ? ಪುರುಷರ  ದೌರ್ಜನ್ಯಕ್ಕೆ ಒಳಗಾಗಿದ್ದಳೊ?  ಆಕೆಯನ್ನು ಯಾರು ಈ ಪರಿಸ್ಥಿತಿಗೆ ತಂದಿಟ್ಟರೋ ಗೊತ್ತಿಲ್ಲ. ಆಕೆ ಯಾಕೆ ಹುಚ್ಚಿಯಾಗಿ ತಿರುಗುತ್ತಿದ್ದಾರೆ ಎನ್ನುವುದು ಬಹುತೇಕ ಧಾರವಾಡದ ಜನಕ್ಕೆ ಗೊತ್ತಿಲ್ಲ .ಧಾರವಾಡದ ಒಡೆದ ಪ್ರತಿಬಿಂಬದಂತೆ ಆಕೆ ಬದುಕಿದಳು .ಮೋಸ ಮಾಡಿದವರ  ಕ್ರೌರ್ಯದ ಗಾಯಗಳು ಆಕೆಯ ದೇಹದ ಮೇಲೆ ತುಂಬಾ ಗಾಯ ಮಾಡಿದ್ದವು .ಆ ಗಾಯದ ಗೀರುಗಳನ್ನ ಆಕೆ ಮುಟ್ಟಿಮುಟ್ಟಿ ನೋಡಿಕೊಳ್ಳುತ್ತಿದ್ದಳು .ಅದು ಕೆಲವರಿಗೆ ತಮಾಷೆಯಾಗಿತ್ತು .ಇನ್ನು ಕೆಲವರಿಗೆ ನೋವಿನ ಪರಿಭಾಷೆಯಾಗಿತ್ತು. ಆಕೆ ಭಿಕ್ಷೆ ಬೇಡಲಿಲ್ಲ .ಯಾರಿಗೂ ಜೀ ಎನ್ನಲಿಲ್ಲ.  ಆಕೆ ಎಲ್ಲಿ ಮಲಗುತ್ತಿದ್ದಳೊ?ಗೊತ್ತಿಲ್ಲ .ಪೂರ್ಣ ಹುಚ್ಚಿಯೋ ಅದೂ ಗೊತ್ತಿಲ್ಲ .ಉದ್ದೇಶಪೂರ್ವಕವಾಗಿಯೇ ಅಂತ ವ್ಯಕ್ತಿತ್ವವನ್ನು ಆವಗಾಹಿಸಿಕೊಂಡಳೋ  ಗೊತ್ತಿಲ್ಲ .ಧಾರವಾಡದಲ್ಲಿ ಓದಿ ಅಲ್ಲಿಯೇ ಕೆಲಸ ಮಾಡುತ್ತಿದ್ದಾಗ ಒಂದು ಸಲ ಆಕೆ ಎಲ್ಲಿರಬಹುದೆಂದು ಹುಡುಕುತ್ತಿದ್ದೆ. ಒಂದು ಸರ್ಕಾರಿ ಆಶ್ರಮದಲ್ಲಿ ಆಕೆ ಸಿಕ್ಕಳು .ಇಳಿವಯಸ್ಸಿನವರ ಜೊತೆಗೆ ಆಕೆ ಬದುಕುತ್ತಿದ್ದಳು. ಮೊದಲಿನ ಹಾಗೆ ಆಕೆಯ ಹತ್ತಿರ ಆವೇಶವಿರಲಿಲ್ಲ. ಸಮಾಧಾನವಿತ್ತು. ಸಹಜತೆ ಇತ್ತು .ಜೊತೆಗೆ ಫೋಟೋ ತೆಗೆಸಿಕೊಂಡೆ.’ಬಾಳ ಸಂತೋಷಪಾ,ಹುಡುಕಿಕೊಂಡು ಬಂದಿಯಲ್ಲ ಅಷ್ಟೇ ಸಾಕು ,ಬಾಳ ಜನ ಅದಾರ  ನೆನಪು ಮಾಡ್ಕೋತಾರ ‘ಅಂದಳು .ನಿನ್ನ ಫ್ರೆಂಡ್ಸ್ ಗೆ ಕೇಳಿದೆ‌ ಅಂತ ಹೇಳು ಅಂದಳು. ಧಾರವಾಡವೆಂಬ ಇಡೀ ಧಾರವಾಡದ ಹುಡುಗ-ಹುಡುಗಿಯರಿಗೆ ಹೇಮಮಾಲಿನಿ ಪರಿಚಿತರೆ .ಅದು ಆಕೆಯ ನಿಜವಾದ ಹೆಸರಲ್ಲ. ವಯಸ್ಸಾದಾರೂ ಆಕೆಯನ್ನು ನೋಡಿದರೆ ಒಂದು ಕಾಲಕ್ಕೆ ಸುಂದರಿಯಾಗಿದ್ದಿರಬೇಕು ಎಂದೆನಿಸುತ್ತಿತ್ತು.ಹಳೇ ಜಮಾನಾ ಆಕೆಯನ್ನು ಆ ಹೆಸರನಿಂದ ಕರೆದಿರಬೇಕು.ದಾಟಿ ಹೋಗುವ ಕಾಲದಲ್ಲಿ ಇಂಥವರು ನಮ್ಮ ನಡುವೆ ಬಂದು ಹೋಗುತ್ತಾರೆ .ನಮ್ಮದಲ್ಲದ ದುರಂತಕ್ಕೆ ಪ್ರತಿಮೆ ಯಾಗುತ್ತಾರೆ .ಆಕೆ ಕಳೆದುಕೊಂಡ ಸಂಗತಿಗಳನ್ನು ಧಾರವಾಡದ ಬೀದಿ ಬೀದಿಯಲ್ಲಿ ಹುಡುಕುತ್ತಿದ್ದಳು. ಹುಡುಗ ಹುಡುಗಿಯರು ,ಹೆಚ್ಚಾಗಿ ನಿವೃತ್ತರು ಕಾಣುವ ಧಾರವಾಡದಲ್ಲಿ ಜಿಟಿ ಮಳೆ , ಮಿರ್ಚಿ ಬಜಿ ಚಾ , ಅಲ್ಲಲ್ಲಿ ಒಡೆದ ಹೇಮಾಮಾಲಿನಿಯ  ನೆನಪಿನ ಬಿಂಬಗಳು.ಯಾರ ಕನಸುಗಳಿಗೆ ಯಾರು ಬಣ್ಣ ಬಳಿಯುತ್ತಾರೋ? ,ಎಲ್ಲೋ ಕಳೆದುಕೊಂಡಿದ್ದನ್ನ ಇನ್ನೆಲ್ಲಿ ಹುಡುಕುತ್ತಾರೆಯೋ?ಹೇಮಾಮಾಲಿನಿ ಸತ್ತಳಂತೆ ಅಂತಾ ಸುದ್ದಿ ಗೊತ್ತಾದಾಗ ಇದೆಲ್ಲ ನೆನಪಾಯಿತು .ಹೋಗಿ ಬಾ ಹೇಮಾ ನಿನ್ನಂಥ ಲವ್ವರ್ ಗಳು ಎಷ್ಟೋ  ಜನ ಇನ್ನೂ ಧಾರವಾಡದಲ್ಲಿ ಇದ್ದಾರೆ.          ***********************

ಧಾರವಾಡದ ಹೇಮಾಮಾಲಿನಿ Read Post »

You cannot copy content of this page

Scroll to Top